೧೧

[ಹನ್ನೊಂದನೆಯ ಅಧ್ಯಾಯ]

ಭಾಗಸೂಚನಾ

ಮನ್ವಂತರವೇ ಮುಂತಾದ ಕಾಲವಿಭಾಗದ ವರ್ಣನೆ

(ಶ್ಲೋಕ - 1)

ಮೂಲಮ್

ಮೈತ್ರೇಯ ಉವಾಚ
ಚರಮಃ ಸದ್ವಿಶೇಷಾಣಾಮನೇಕೋಸಂಯುತಃ ಸದಾ ।
ಪರಮಾಣುಃ ಸ ವಿಜ್ಞೇಯೋ ನೃಣಾಮೈಕ್ಯಭ್ರಮೋ ಯತಃ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ವಿದುರನೇ ! ಈಗ ನಿನಗೆ ಕಾಲದ ವಿಶೇಷ ಸ್ವರೂಪಗಳನ್ನು ವರ್ಣಿಸುವೆನು; ಕೇಳು. ಅವು ಗಳಲ್ಲಿ ಮೊದಲನೆಯದು ಪರಮಾಣುವು. ಈ ಪರಮಾಣು ಪೃಥ್ವಿಯೇ ಮುಂತಾದ ಕಾರ್ಯವರ್ಗದ ಸೂಕ್ಷ್ಮತಮವಾದ ಅಂಶ. ಇನ್ನು ಮುಂದೆ ವಿಭಾಗಮಾಡಲಾಗದಿರುವ ಅಂಶ. ಬದಲಾವಣೆ ಹೊಂ ದದೆ ಇರುವ ಮತ್ತು ಇತರ ಪರಮಾಣುಗಳೊಡನೆ ಸಂಯೋಗ ವನ್ನು ಹೊಂದಲಾರದ ಅಂಶ. ಇಂತಹ ಅನೇಕ ಪರಮಾಣುಗಳು ಪರಸ್ಪರವಾಗಿ ಕೂಡಿರುವಾಗಲೇ ಮನುಷ್ಯರಿಗೆ ಭ್ರಮೆಯಿಂದ ಪರಮಾಣುಸಮುದಾಯ ರೂಪವಾದ ಒಂದು ಅವಯವ ಇದೆ ಎಂದು ತೋರಿಬರುತ್ತದೆ.॥1॥

(ಶ್ಲೋಕ - 2)

ಮೂಲಮ್

ಸತ ಏವ ಪದಾರ್ಥಸ್ಯ ಸ್ವರೂಪಾವಸ್ಥಿ ತಸ್ಯ ಯತ್ ।
ಕೈವಲ್ಯಂ ಪರಮಮಹಾನವಿಶೇಷೋ ನಿರಂತರಃ ॥

ಅನುವಾದ

ಈ ಪರಮಾಣುವು ಯಾವುದರ ಸೂಕ್ಷ್ಮತಮವಾದ ಅಂಶವಾಗಿದೆಯೋ ಅಂತಹ ಪೃಥ್ವಿವ್ಯಾದಿ ಕಾರ್ಯಗಳ ಏಕತೆಯೇ, ಸಮುದಾಯವೇ, ಸಮಗ್ರರೂಪವೇ ಪರಮ ಮಹತ್ತು ಎನಿಸುವುದು. ಆಗ ಅದರಲ್ಲಿ ಪ್ರಳಯವೇ ಮುಂತಾದ ಅವಸ್ಥಾಭೇದಗಳ ಸ್ಪೂರ್ತಿ ಇರುವುದಿಲ್ಲ. ಹೊಸಕಾಲ, ಹಳೆಯಕಾಲ ಇತ್ಯಾದಿ ಕಾಲಭೇದಗಳು ತಿಳಿದುಬರುವುದಿಲ್ಲ. ಘಟ-ಪಟಾದಿ ವಸ್ತುಭೇದಗಳ ಕಲ್ಪನೆಯೂ ತೋರುವುದಿಲ್ಲ.॥2॥

(ಶ್ಲೋಕ - 3)

ಮೂಲಮ್

ಏವಂ ಕಾಲೋಪ್ಯನುಮಿತಃ ಸೌಕ್ಷ್ಮ್ಯೇ ಸ್ಥೌಲ್ಯೇ ಚ ಸತ್ತಮ ।
ಸಂಸ್ಥಾನಭುಕ್ತ್ಯಾ ಭಗವಾನವ್ಯಕ್ತೋ ವ್ಯಕ್ತಭುಗ್ವಿಭುಃ ॥

ಅನುವಾದ

ಸಾಧುಶ್ರೇಷ್ಠನೇ ! ಹೀಗೆ ವಸ್ತುವಿನ ಸೂಕ್ಷ್ಮತಮ ಮತ್ತು ಮಹತ್ತಮ ಸ್ವರೂಪವನ್ನು ತಿಳಿಸಿದೆನಲ್ಲ ! ಇದರಂತೆಯೇ ಪರ ಮಾಣು ಮುಂತಾದ ಅವಸ್ಥೆಗಳಲ್ಲಿ ವ್ಯಾಪ್ತವಾಗಿ ಪದಾರ್ಥಗಳನ್ನು ಭೋಗಿಸುವಂತಹವನೂ, ಸೃಷ್ಟ್ಯಾದಿಗಳಲ್ಲಿ ಸಮರ್ಥನೂ, ಅವ್ಯಕ್ತ ಸ್ವರೂಪನೂ ಆದ ಭಗವಾನ್ ಕಾಲನ ಸೂಕ್ಷ್ಮತೆ ಮತ್ತು ಸ್ಥೂಲತೆಯ ಅನುಮಾನ ಮಾಡಬಹುದಾಗಿದೆ.॥3॥

(ಶ್ಲೋಕ - 4)

ಮೂಲಮ್

ಸ ಕಾಲಃ ಪರಮಾಣುರ್ವೈ ಯೋ ಭುಂಕ್ತೇ ಪರಮಾಣುತಾಮ್ ।
ಸತೋವಿಶೇಷಭುಗ್ಯಸ್ತು ಸ ಕಾಲಃ ಪರಮೋ ಮಹಾನ್ ॥

ಅನುವಾದ

ಪ್ರಪಂಚದಲ್ಲಿ ಪರಮಾಣು ವಿನಂತಹ ಸೂಕ್ಷ್ಮವಾದ ಅವಸ್ಥೆಯಲ್ಲಿ ವ್ಯಾಪಕವಾಗಿರುವ ಕಾಲವನ್ನು ಸೂಕ್ಷ್ಮತಮ ಕಾಲವೆಂದು ಅರಿಯಬೇಕು. ಸೃಷ್ಟಿಯಿಂದಾರಂಭಿಸಿ ಪ್ರಳಯದವರೆಗೆ ಅದರ ಎಲ್ಲ ಅವಸ್ಥೆಗಳನ್ನು ಅನುಭವಿಸುವ ಕಾಲವೇ ಪರಮ ಮಹತ್ಕಾಲವು.॥4॥

(ಶ್ಲೋಕ - 5)

ಮೂಲಮ್

ಅಣುರ್ದ್ವೌ ಪರಮಾಣೂ ಸ್ಯಾತ ಸರೇಣುಸ ಯಃ ಸ್ಮೃತಃ ।
ಜಾಲಾರ್ಕರಶ್ಮ್ಯವಗತಃ ಖಮೇವಾನುಪತನ್ನಗಾತ್ ॥

ಅನುವಾದ

ಎರಡು ಪರಮಾಣುಗಳು ಸೇರಿ ಒಂದು ‘ಅಣು’ವಾಗುತ್ತದೆ. ಮೂರು ಅಣುಗಳು ಸೇರಿ ಒಂದು ‘ತೃಸರೇಣು’ ಆಗುವುದು. ಇದು ಕಿಟಕಿಯ ಮೂಲಕ ಬರುವ ಸೂರ್ಯಕಿರಣದಲ್ಲಿ ಆಕಾಶದಲ್ಲಿ ಹಾರಿಹೋಗುತ್ತಾ ಭೂಮಿಗಿಳಿಯುವ ಕಣಗಳಂತೆ ಕಾಣುತ್ತದೆ.॥5॥

(ಶ್ಲೋಕ - 6)

ಮೂಲಮ್

ತ್ರಸರೇಣುತ್ರಿಕಂ ಭುಂಕ್ತೇ ಯಃ ಕಾಲಃ ಸ ತ್ರುಟಿಃ ಸ್ಮೃತಃ ।
ಶತಭಾಗಸ್ತು ವೇಧಃ ಸ್ಯಾತ್ತೈಸಿಭಿಸ್ತು ಲವಃ ಸ್ಮೃತಃ ॥

ಅನುವಾದ

ಇಂತಹ ಮೂರು ತೃಸರೇಣುಗಳನ್ನು ದಾಟಲು ಸೂರ್ಯನಿಗೆ ತಗಲುವ ಸಮಯವನ್ನು ‘ತ್ರುಟಿ’ ಎಂದು ಹೇಳುತ್ತಾರೆ. ತ್ರುಟಿಯ ನೂರುಪಟ್ಟು ಕಾಲವು ‘ವೇಧ’ ಎಂತಲೂ, ಮೂರು ವೇಧಗಳು ಒಂದು ‘ಲವ’ ಎಂದೂ ಹೇಳುತ್ತಾರೆ.॥6॥

(ಶ್ಲೋಕ - 7)

ಮೂಲಮ್

ನಿಮೇಷಸಿಲವೋ ಜ್ಞೇಯ ಆಮ್ನಾತಸ್ತೇ ತ್ರಯಃ ಕ್ಷಣಃ ।
ಕ್ಷಣಾನ್ಪಂಚ ವಿದುಃ ಕಾಷ್ಠಾಂ ಲಘು ತಾ ದಶ ಪಂಚ ಚ ॥

ಅನುವಾದ

ಮೂರು ‘ಲವ’ಗಳಿಗೆ ಒಂದು ‘ನಿಮೇಷ’ ಮತ್ತು ಮೂರು ನಿಮೇಷಗಳಿಗೆ ಒಂದು ‘ಕ್ಷಣ’ವೆಂತಲೂ, ಐದು ಕ್ಷಣಗಳಿಗೆ ಒಂದು ‘ಕಾಷ್ಠಾ’ ವೆಂತಲೂ, ಹದಿನೈದು ಕಾಷ್ಠಾಗಳಿಗೆ ಒಂದು ‘ಲಘು’ ಎಂತಲೂ ಹೇಳುತ್ತಾರೆ.॥7॥

(ಶ್ಲೋಕ - 8)

ಮೂಲಮ್

ಲಘೂನಿ ವೈ ಸಮಾಮ್ನಾತಾ ದಶ ಪಂಚ ಚ ನಾಡಿಕಾ ।
ತೇ ದ್ವೇ ಮುಹೂರ್ತಃ ಪ್ರಹರಃ ಷಡ್ಯಾಮಃ ಸಪ್ತ ವಾ ನೃಣಾಮ್ ॥

ಅನುವಾದ

ಹದಿನೈದು ಲಘುಗಳಿಗೆ ಒಂದು ‘ನಾಡಿಕಾ’ (ದಂಡ), ಎನ್ನುತ್ತಾರೆ. ಎರಡು ನಾಡಿಕೆಗಳ ಕಾಲವನ್ನು ಒಂದು ‘ಮುಹೂರ್ತ’ ಎನ್ನುತ್ತಾರೆ. ದಿವಸವು ಕುಗ್ಗುವುದು ಮತ್ತು ಹಿಗ್ಗುವುದು ಇದಕ್ಕನು ಸಾರ ಆರು ಅಥವಾ ಏಳು ನಾಡಿಕೆಗಳ ಕಾಲವು ಒಂದು ‘ಪ್ರಹರ’ ಎನಿಸುತ್ತದೆ. (ಇದರಲ್ಲಿ ಹಗಲು ಮತ್ತು ರಾತ್ರಿಗಳ ಸಂಧಿಕಾಲದಲ್ಲಿ ಬರುವ ಎರಡು ಮುಹೂರ್ತಗಳು ಲೆಕ್ಕಕ್ಕೆ ಬರುವುದಿಲ್ಲ.) ಮನುಷ್ಯರ ಹಗಲು ಅಥವಾ ರಾತ್ರಿಯ ನಾಲ್ಕನೆಯ ಒಂದು ಭಾಗವಾಗಿರುವ ಇದನ್ನು ‘ಯಾಮ’ ಎಂದೂ ಹೇಳುತ್ತಾರೆ.॥8॥

(ಶ್ಲೋಕ - 9)

ಮೂಲಮ್

ದ್ವಾದಶಾರ್ಧಪಲೋನ್ಮಾನಂ ಚತುರ್ಭಿಶ್ಚತುರಂಗುಲೈಃ ।
ಸ್ವರ್ಣಮಾಷೈಃ ಕೃತಚ್ಛಿದ್ರಂ ಯಾವತ್ಪ್ರಸ್ಥಜಲಪ್ಲುತಮ್ ॥

ಅನುವಾದ

ಇಪ್ಪತ್ತು ಗುಲಗುಂಜಿ ತೂಕವುಳ್ಳ ಚಿನ್ನದಿಂದ ನಾಲ್ಕು ಅಂಗುಲ ಪ್ರಮಾಣದ ಸೂಜಿಯನ್ನು ಮಾಡಿ, ಅದರಿಂದ ಆರು ಪಲಗಳ ತೂಕವುಳ್ಳ ತಾಮ್ರದ ಪಾತ್ರೆಯ ಕೆಳಗಡೆಯಲ್ಲಿ ರಂಧ್ರವನ್ನು ಕೊರೆದು, ಅದನ್ನು ಒಂದು ಸೇರು ನೀರುಳ್ಳ ಮತ್ತೊಂದು ಪಾತ್ರೆಯಲ್ಲಿ ಇಡಬೇಕು. ಆಗ ಕೆಳಗಿನ ರಂಧ್ರದಿಂದ ನೀರು ಮೇಲಕ್ಕೆ ಉಕ್ಕಿ ಆ ಪಾತ್ರೆಯು ಮುಳುಗಿಹೋಗುವ ಅಷ್ಟು ಕಾಲವನ್ನು ‘ನಾಡಿಕಾ’ ಎಂದು ಹೇಳುತ್ತಾರೆ.॥9॥

(ಶ್ಲೋಕ - 10)

ಮೂಲಮ್

ಯಾಮಾಶ್ಚತ್ವಾರಶ್ಚತ್ವಾರೋ ಮರ್ತ್ಯಾನಾಮಹನೀ ಉಭೇ ।
ಪಕ್ಷಃ ಪಂಚದಶಾಹಾನಿ ಶುಕ್ಲಃ ಕೃಷ್ಣಶ್ಚ ಮಾನದ ॥

ಅನುವಾದ

ವಿದುರನೇ ! ಮೇಲೆ ಹೇಳಿದ ನಾಲ್ಕು ಯಾಮಗಳು ಹಗಲೆಂತಲೂ, ನಾಲ್ಕು ಯಾಮಗಳು ರಾತ್ರಿಯೆಂತಲೂ ಮನುಷ್ಯಮಾನದ ಪ್ರಕಾರ ತಿಳಿಯಬೇಕು. ಇಂತಹ ಹದಿನೈದು ಹಗಲು-ರಾತ್ರಿಗಳು ಸೇರಿದರೆ ಒಂದು ‘ಪಕ್ಷ’ವಾಗುತ್ತದೆ. ಈ ಪಕ್ಷಗಳಲ್ಲಿ ‘ಶುಕ್ಲ’, ‘ಕೃಷ್ಣ’ ಎಂಬ ಎರಡು ವಿಭಾಗಗಳಿವೆ.॥10॥

(ಶ್ಲೋಕ - 11)

ಮೂಲಮ್

ತಯೋಃ ಸಮುಚ್ಚಯೋ ಮಾಸಃ ಪಿತೃಣಾಂ ತದಹರ್ನಿಶಮ್ ।
ದ್ವೌ ತಾವೃತುಃ ಷಡಯನಂ ದಕ್ಷಿಣಂ ಚೋತ್ತರಂ ದಿವಿ ॥

ಅನುವಾದ

ಇವೆರಡೂ ಪಕ್ಷಗಳು ಸೇರಿದರೆ ಮನುಷ್ಯರ ಒಂದು ‘ಮಾಸ ’ವಾಗುತ್ತದೆ. ಪಿತೃಗಳಿಗೆ ಒಂದು ದಿನ (ಹಗಲಿರುಳು)ವಾಗುತ್ತದೆ. ಎರಡು ತಿಂಗಳುಗಳ ಒಂದು ‘ಋತು’ ಮತ್ತು ಆರು ತಿಂಗಳ ಒಂದು ಅಯನವಾಗುತ್ತದೆ. ಅಯನಗಳಲ್ಲಿ ಉತ್ತರಾಯಣ ಮತ್ತು ದಕ್ಷಿಣಾಯನ ಎಂಬ ಎರಡು ಭೇದಗಳುಂಟು.॥11॥

(ಶ್ಲೋಕ - 12)

ಮೂಲಮ್

ಅಯನೇ ಚಾಹನೀ ಪ್ರಾಹುರ್ವತ್ಸರೋ ದ್ವಾದಶ ಸ್ಮೃತಃ ।
ಸಂವತ್ಸರಶತಂ ನೃಣಾಂ ಪರಮಾಯುರ್ನಿರೂಪಿತಮ್ ॥

ಅನುವಾದ

ಇವೆರಡು ಅಯನಗಳು ಸೇರಿದರೆ ದೇವತೆಗಳ ಒಂದು ದಿವಸ (ಅಹೋರಾತ್ರಿ)ವಾಗುತ್ತದೆ. ಮನುಷ್ಯ ಮಾನದಲ್ಲಿ ಹನ್ನೆರಡು ತಿಂಗಳುಗಳಿಗೆ ಒಂದು ವರ್ಷವು. ಇಂತಹ ನೂರು ವರ್ಷಗಳೇ ಮನುಷ್ಯನ ಪರಮಾಯುಸ್ಸು ಎಂದು ಹೇಳಲಾಗಿದೆ.॥12॥

(ಶ್ಲೋಕ - 13)

ಮೂಲಮ್

ಗ್ರಹರ್ಕ್ಷತಾರಾಚಕ್ರಸ್ಥಃ ಪರಮಾಣ್ವಾದಿನಾ ಜಗತ್ ।
ಸಂವತ್ಸರಾವಸಾನೇನ ಪರ್ಯೇತ್ಯನಿಮಿಷೋ ವಿಭುಃ ॥

ಅನುವಾದ

ಚಂದ್ರನೇ ಮೊದಲಾದ ಗ್ರಹರು, ಅಶ್ವಿನ್ಯಾದಿ ನಕ್ಷತ್ರಗಳು, ಸಮಸ್ತ ತಾರಾಮಂಡಲದ ಅಧಿಷ್ಠಾತೃ ನಾದ ಕಾಲಸ್ವರೂಪೀ ಭಗವಾನ್ ಸೂರ್ಯನು ಪರಮಾಣು ವಿನಿಂದ ಹಿಡಿದು ಸಂವತ್ಸರಪರ್ಯಂತವಾದ ಕಾಲದಲ್ಲಿ ದ್ವಾದಶ ರಾಶಿರೂಪೀ ಸಮಸ್ತ ಭುವನಕೋಶವನ್ನು ನಿರಂತರ ಪ್ರದಕ್ಷಿಣೆ ಮಾಡುತ್ತಾ ಇರುತ್ತಾನೆ.॥13॥

(ಶ್ಲೋಕ - 14)

ಮೂಲಮ್

ಸಂವತ್ಸರಃ ಪರಿವತ್ಸರ ಇಡಾವತ್ಸರ ಏವ ಚ ।
ಅನುವತ್ಸರೋ ವತ್ಸರಶ್ಚ ವಿದುರೈವಂ ಪ್ರಭಾಷ್ಯತೇ ॥

ಅನುವಾದ

ಸೂರ್ಯ, ಬೃಹಸ್ಪತಿ, ಸವನ, ಚಂದ್ರ, ನಕ್ಷತ್ರ ಸಂಬಂಧೀ ತಿಂಗಳುಗಳ ಭೇದದಿಂದ ಈ ವರ್ಷ ವನ್ನು ಸಂವತ್ಸರ, ಪರಿವತ್ಸರ, ಇಡಾವತ್ಸರ, ಅನುವತ್ಸರ ಮತ್ತು ವತ್ಸರ ಹೀಗೆ ಹೇಳಲಾಗುತ್ತದೆ.॥14॥

(ಶ್ಲೋಕ - 15)

ಮೂಲಮ್

ಯಃ ಸೃಜ್ಯಶಕ್ತಿಮುರುಧೋಚ್ಛ್ವಸಯನ್ ಸ್ವಶಕ್ತ್ಯಾ
ಪುಂಸೋಭ್ರಮಾಯ ದಿವಿ ಧಾವತಿ ಭೂತಭೇದಃ ।
ಕಾಲಾಖ್ಯಯಾ ಗುಣಮಯಂ ಕ್ರತುಭಿರ್ವಿತನ್ವಂ-
ಸ್ತಸ್ಮೈ ಬಲಿಂ ಹರತ ವತ್ಸರಪಂಚಕಾಯ ॥

ಅನುವಾದ

ವಿದುರನೇ ! ಈ ಐದು ವಿಧ ವಾದ ವರ್ಷಗಳನ್ನೂ ಪ್ರವರ್ತಿಸುತ್ತಿರುವ ಭಗವಾನ್ ಸೂರ್ಯ ನನ್ನು ನೀವು ಉಪಚಾರಾದಿಗಳನ್ನು ಸಮರ್ಪಿಸಿ ಪೂಜೆಮಾಡಿರಿ. ಈ ಸೂರ್ಯದೇವನು ಪಂಚಭೂತಗಳಲ್ಲಿ ತೇಜಃಸ್ವರೂಪನಾಗಿದ್ದಾನೆ. ತನ್ನ ಕಾಲಶಕ್ತಿಯಿಂದ ಬೀಜವೇ ಮುಂತಾದ ಪದಾರ್ಥಗಳನ್ನು ಮೊಳಕೆಯಾಗುವ ಶಕ್ತಿಯನ್ನು ಅನೇಕ ಪ್ರಕಾರದಿಂದ ಕಾರ್ಯೋ ನ್ಮುಖಗೊಳಿಸುತ್ತಾನೆ. ಇವನು ಪುರುಷರ ಮೋಹನಿವೃತ್ತಿಗಾಗಿ ಅವರ ಆಯುಸ್ಸನ್ನು ಕ್ಷಯಗೊಳಿಸುತ್ತಾ ಆಕಾಶದಲ್ಲಿ ವಿಚರಿಸುತ್ತಾ ಇರು ತ್ತಾನೆ. ಇವನೇ ಸಕಾಮ ಪುರುಷರಿಗೆ ಯಜ್ಞಾದಿ ಕರ್ಮಗಳಿಂದ ಪ್ರಾಪ್ತವಾಗುವ ಸ್ವರ್ಗಾದಿ ಮಂಗಲಮಯ ಲಗಳನ್ನು ವಿಸ್ತರಿಸುತ್ತಾನೆ. ॥14-15॥

(ಶ್ಲೋಕ - 16)

ಮೂಲಮ್ (ವಾಚನಮ್)

ವಿದುರ ಉವಾಚ

ಮೂಲಮ್

ಪಿತೃದೇವಮನುಷ್ಯಾಣಾಮಾಯುಃ ಪರಮಿದಂ ಸ್ಮೃತಮ್ ।
ಪರೇಷಾಂ ಗತಿಮಾಚಕ್ಷ್ವ ಯೇ ಸ್ಯುಃ ಕಲ್ಪಾದ್ಬಹಿರ್ವಿದಃ ॥

ಅನುವಾದ

ವಿದುರನೆಂದನು ಮುನಿವರ್ಯರೇ ! ತಾವು ದೇವತೆಗಳ, ಪಿತೃಗಳ, ಮನುಷ್ಯರ ಪರಮಾಯುಷ್ಯವನ್ನು ವರ್ಣಿಸಿದಿರಿ. ಇನ್ನು ಮೂರು ಲೋಕಗಳ ಹೊರಗಿದ್ದು, ಕಲ್ಪಕಾಲಕ್ಕಿಂತಲೂ ಹೆಚ್ಚು ಕಾಲದ ವರೆಗೆ ಇರುವ ಜ್ಞಾನಿಶ್ರೇಷ್ಠರಾದ ಸನಕಾದಿಮುನಿಗಳ ಆಯುಸ್ಸು ಎಷ್ಟೆಂಬುದನ್ನು ತಿಳಿಸಿರಿ.॥16॥

ಮೂಲಮ್

(ಶ್ಲೋಕ - 17)
ಭಗವಾನ್ ವೇದ ಕಾಲಸ್ಯ ಗತಿಂ ಭಗವತೋ ನನು ।
ವಿಶ್ವಂ ವಿಚಕ್ಷತೇ ಧೀರಾ ಯೋಗರಾದ್ಧೇನ ಚಕ್ಷುಷಾ ॥

ಅನುವಾದ

ನೀವು ಭಗವಂತನ ಕಾಲಗತಿ ಯನ್ನು ಚೆನ್ನಾಗಿ ತಿಳಿದಿರುವಿರಿ. ಏಕೆಂದರೆ, ಧೀರರಾದ ಜ್ಞಾನಿಗಳು ತಮ್ಮ ಯೋಗಸಿದ್ಧವಾದ ದೃಷ್ಟಿಯಿಂದ ಇಡೀ ವಿಶ್ವವನ್ನೇ ನೋಡ ಬಲ್ಲರು.॥17॥

(ಶ್ಲೋಕ - 18)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಕೃತಂ ತ್ರೇತಾ ದ್ವಾಪರಂ ಚ ಕಲಿಶ್ಚೇತಿ ಚತುರ್ಯುಗಮ್ ।
ದಿವ್ಯೈರ್ದ್ವಾದಶಭಿರ್ವರ್ಷೈಃ ಸಾವಧಾನಂ ನಿರೂಪಿತಮ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ಎಲೈ ವಿದುರನೇ! ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಎಂಬ ಈ ನಾಲ್ಕು ಯುಗಗಳು ತಮ್ಮ ಸಂಧ್ಯಾಕಾಲ ಮತ್ತು ಸಂಧ್ಯಾಂಶ ಗಳೊಡನೆ ಕೂಡಿ ದೇವತೆಗಳ ಹನ್ನೆರಡುಸಾವಿರ ವರ್ಷಗಳವರೆಗೆ ಇರುತ್ತವೆ ಎಂದು ಹೇಳಲಾಗಿದೆ.॥18॥

(ಶ್ಲೋಕ - 19)

ಮೂಲಮ್

ಚತ್ವಾರಿ ತ್ರೀಣಿ ದ್ವೇ ಚೈಕಂ ಕೃತಾದಿಷು ಯಥಾಕ್ರಮಮ್ ।
ಸಂಖ್ಯಾತಾನಿ ಸಹಸ್ರಾಣಿ ದ್ವಿಗುಣಾನಿ ಶತಾನಿ ಚ ॥

ಅನುವಾದ

ಈ ಕೃತಯುಗವೇ ಮುಂತಾದ ನಾಲ್ಕು ಯುಗಗಳಲ್ಲಿ ಕ್ರಮವಾಗಿ ನಾಲ್ಕು, ಮೂರು, ಎರಡು ಮತ್ತು ಒಂದು ಸಾವಿರ ದಿವ್ಯವರ್ಷಗಳಿರುತ್ತವೆ. ಪ್ರತಿ ಯೊಂದರಲ್ಲಿಯೂ ಎಷ್ಟೆಷ್ಟು ಸಾವಿರ ವರ್ಷಗಳಿರುತ್ತವೋ ಅವಕ್ಕೆ, ಎರಡರಷ್ಟು ನೂರು ವರ್ಷಗಳು ಅವುಗಳ ಸಂಧ್ಯಾಕಾಲ ಮತ್ತು ಸಂಧ್ಯಾಂಶಗಳಲ್ಲಿ ಇರುತ್ತವೆ.* ॥19॥

  • ಕೃತಯುಗದಲ್ಲಿ 4,000 ದಿವ್ಯವರ್ಷಗಳು ಯುಗದ್ದು ಮತ್ತು 800 ಸಂಧ್ಯಾ ಹಾಗೂ ಸಂಧ್ಯಾಂಶದ ಒಟ್ಟು 4,800 ದಿವ್ಯವರ್ಷಗಳು. ಹಾಗೆಯೇ ತ್ರೇತಾಯುಗದಲ್ಲಿ 3,600 ದಿವ್ಯವರ್ಷಗಳು (3,000 + 600). ದ್ವಾಪರಯುಗದಲ್ಲಿ 2,400 ದಿವ್ಯವರ್ಷಗಳು (2000 + 400). ಕಲಿಯುಗದಲ್ಲಿ 1,200 ದಿವ್ಯವರ್ಷಗಳು (1,000 + 200) ಇರುತ್ತವೆ. ಮನುಷ್ಯರ ಒಂದು ವರ್ಷವು ದೇವತೆಗಳ ಒಂದು ದಿನ. ಆದ್ದರಿಂದ ದೇವತೆಗಳ ಒಂದು ವರ್ಷ ಮನುಷ್ಯರ 360 ವರ್ಷಗಳಿಗೆ ಸರಿಯಾದುದು. ಇದೇ ರೀತಿ ಮನುಷ್ಯಮಾನದಂತೆ ಕಲಿಯುಗದಲ್ಲಿ 4,32,000 ವರ್ಷಗಳು. ಇದಕ್ಕೆ ಎರಡರಷ್ಟು ದ್ವಾಪರಯುಗದಲ್ಲೂ, ಮೂರರಷ್ಟು ತ್ರೇತಾಯುಗದಲ್ಲೂ, ನಾಲ್ಕರಷ್ಟು ಕೃತಯುಗಲ್ಲೂ ವರ್ಷಗಳು ಆಗುತ್ತವೆಯೆಂದು ತಿಳಿಯಬೇಕು.

(ಶ್ಲೋಕ - 20)

ಮೂಲಮ್

ಸಂಧ್ಯಾಂ ಶಯೋರಂತರೇಣ ಯಃ ಕಾಲಃ ಶತಸಂಖ್ಯಯೋಃ ।
ತಮೇವಾಹುರ್ಯುಗಂ ತಜ್ಜ್ಞಾ ಯತ್ರ ಧರ್ಮೋ ವಿಧೀಯತೇ ॥

ಅನುವಾದ

ಯುಗದ ಪ್ರಾರಂಭದಲ್ಲಿ ಸಂಧ್ಯೆ ಮತ್ತು ಅಂತ್ಯದಲ್ಲಿ ಸಂಧ್ಯಾಂಶವಿರುತ್ತದೆ. ಇದರ ವರ್ಷ ಗಣನೆಯು ನೂರಾರು ಸಂಖ್ಯೆಯಲ್ಲಿರುತ್ತವೆ. ಇದರ ನಡುವಿನ ಕಾಲವನ್ನು ಕಾಲದ ಜ್ಞಾನವುಳ್ಳವರು ಯುಗವೆಂದು ಹೇಳಿರುವರು. ಪ್ರತಿಯೊಂದು ಯುಗದಲ್ಲಿಯೂ ಒಂದೊಂದು ವಿಶೇಷಧರ್ಮದ ವಿಧಾನ ಮಾಡಲಾಗಿದೆ.॥20॥

(ಶ್ಲೋಕ - 21)

ಮೂಲಮ್

ಧರ್ಮಶ್ಚತುಷ್ಪಾನ್ಮನುಜಾನ್ ಕೃತೇ ಸಮನುವರ್ತತೇ ।
ಸ ಏವಾನ್ಯೇಷ್ವಧರ್ಮೇಣ ವ್ಯೇತಿ ಪಾದೇನ ವರ್ಧತಾ ॥

ಅನುವಾದ

ಕೃತಯುಗದ ಮನುಷ್ಯರಲ್ಲಿ ಧರ್ಮವು ತನ್ನ ನಾಲ್ಕು ಪಾದಗಳಿಂದಲೂ ಕೂಡಿರುತ್ತದೆ. ಇತರ ಯುಗಗಳಲ್ಲಿ ಕ್ರಮವಾಗಿ ಅಧರ್ಮವು ವೃದ್ಧಿಹೊಂದುವುದರಿಂದ ಧರ್ಮದ ಒಂದೊಂದು ಚರಣವು ಕ್ಷೀಣವಾಗುತ್ತದೆ.॥21॥

(ಶ್ಲೋಕ - 22)

ಮೂಲಮ್

ತ್ರಿಲೋಕ್ಯಾ ಯುಗಸಾಹಸ್ರಂ ಬಹಿರಾಬ್ರಹ್ಮಣೋ ದಿನಮ್ ।
ತಾವತ್ಯೇವ ನಿಶಾ ತಾತ ಯನ್ನಿಮೀಲತಿ ವಿಶ್ವಸೃಕ್ ॥

ಅನುವಾದ

ಪ್ರಿಯ ವಿದುರನೇ ! ಈ ತ್ರೈಲೋಕ್ಯದ ಹೊರಗೆ ಮಹರ್ಲೋಕ ದಿಂದ ಬ್ರಹ್ಮಲೋಕದವರೆಗೂ ಇರುವ ಲೋಕಗಳಲ್ಲಿ ಒಂದು ಸಾವಿರ ಚತುರ್ಯುಗದ ಒಂದು ಹಗಲು ಮತ್ತು ಇಷ್ಟೇ ದೊಡ್ಡ ರಾತ್ರೆಯು ಇರುತ್ತದೆ. ಆ ರಾತ್ರಿಭಾಗದಲ್ಲಿ ಜಗತ್ಕರ್ತೃವಾದ ಬ್ರಹ್ಮದೇವರು ಶಯನಿಸುತ್ತಾರೆ.॥22॥

(ಶ್ಲೋಕ - 23)

ಮೂಲಮ್

ನಿಶಾವಸಾನ ಆರಬ್ಧೋ ಲೋಕಕಲ್ಪೋನುವರ್ತತೇ ।
ಯಾವದ್ದಿನಂ ಭಗವತೋ ಮನೂನ್ಭುಂಜಂಶ್ಚತುರ್ದಶ ॥

ಅನುವಾದ

ಆ ರಾತ್ರಿಯು ಮುಗಿಯುತ್ತಲೇ ಈ ಲೋಕದ ಕಲ್ಪವು ಪ್ರಾರಂಭವಾಗುತ್ತದೆ. ಅಂದರೆ ಬ್ರಹ್ಮದೇವರು ಮತ್ತೆ ಸೃಷ್ಟಿಯನ್ನು ಪ್ರಾರಂಭಿಸುತ್ತಾರೆ. ಬ್ರಹ್ಮದೇವರ ದಿನವಿರುವವರೆಗೆ ಇದೇ ಕ್ರಮ ನಡೆಯುತ್ತಾ ಇರುತ್ತದೆ. ಈ ಒಂದು ಕಲ್ಪದಲ್ಲಿ ಹದಿನಾಲ್ಕು ಮನುಗಳು ಆಗಿಹೋಗುತ್ತಾರೆ.॥23॥

(ಶ್ಲೋಕ - 24)

ಮೂಲಮ್

ಸ್ವಂ ಸ್ವಂ ಕಾಲಂ ಮನುರ್ಭುಂಕ್ತೇ ಸಾಧಿಕಾಂ ಹ್ಯೇಕಸಪ್ತತಿಮ್ ।
ಮನ್ವಂತರೇಷು ಮನವಸ್ತದ್ವಂಶ್ಯಾ ಋಷಯಃ ಸುರಾಃ ।
ಭವಂತಿ ಚೈವ ಯುಗಪತ್ಸುರೇಶಾಶ್ಚಾನು ಯೇ ಚ ತಾನ್ ॥

ಅನುವಾದ

ಪ್ರತಿಯೊಬ್ಬ ಮನುವೂ ದೇವಮಾನದ (ಚತುರ್ಯುಗ) ಎಪ್ಪತ್ತೊಂದು ಯುಗಗಳವರೆಗೆ ಮತ್ತು ಸ್ವಲ್ಪ ಹೆಚ್ಚುಕಾಲ ತನ್ನ ಅಧಿಕಾರವನ್ನು ನಡೆಸುತ್ತಾನೆ. ಪ್ರತಿಯೊಂದು ಮನ್ವಂತರದಲ್ಲಿಯೂ ಬೇರೆ-ಬೇರೆ ಮನುವಂಶಗಳ ರಾಜರೂ, ಸಪ್ತರ್ಷಿಗಳೂ, ದೇವತಾಗಣಗಳೂ, ಇಂದ್ರರೂ ಮತ್ತು ಅವರ ಅನುಯಾಯಿಗಳಾದ ಗಂಧರ್ವಾದಿಗಳೂ ಒಟ್ಟಿಗೆ ಇದ್ದು ತಮ್ಮ ಅಧಿಕಾರಗಳನ್ನು ಅನುಭವಿಸುತ್ತಾರೆ.॥24॥

(ಶ್ಲೋಕ - 25)

ಮೂಲಮ್

ಏಷ ದೈನಂದಿನಃ ಸರ್ಗೋ ಬ್ರಾಹ್ಮಸೈಲೋಕ್ಯವರ್ತನಃ ।
ತಿರ್ಯಙನೃಪಿತೃದೇವಾನಾಂ ಸಂಭವೋ ಯತ್ರ ಕರ್ಮಭಿಃ ॥

ಅನುವಾದ

ಇದು ಬ್ರಹ್ಮದೇವರ ದಿನಂಪ್ರತಿಯ ಸೃಷ್ಟಿಯ ವಿಚಾರ. ಇದರಲ್ಲಿಯೇ ಮೂರು ಲೋಕಗಳ ರಚನೆಯೂ ಆಗುವುದು. ಅದರಲ್ಲಿ ತಮ್ಮ-ತಮ್ಮ ಕರ್ಮಾನುಸಾರ ಪಶು-ಪಕ್ಷಿ, ಮನುಷ್ಯ, ಪಿತೃಗಳು, ದೇವತೆಗಳು ಇವರುಗಳ ಉತ್ಪತ್ತಿಯಾಗುತ್ತದೆ.॥25॥

(ಶ್ಲೋಕ - 26)

ಮೂಲಮ್

ಮನ್ವಂತರೇಷು ಭಗವಾನ್ ಬಿಭ್ರತ್ಸಸ್ತ್ವಂ ಸ್ವಮೂರ್ತಿಭಿಃ ।
ಮನ್ವಾದಿಭಿರಿದಂ ವಿಶ್ವಮವತ್ಯುದಿತಪೌರುಷಃ ॥

ಅನುವಾದ

ಈ ಮನ್ವಂತರಗಳಲ್ಲಿ ಭಗವಂತನು ಸತ್ತ್ವಗುಣವನ್ನಾ ಶ್ರಯಿಸಿ ತನ್ನ ಮನುವೇ ಮುಂತಾದ ಮೂರ್ತಿಗಳ ಮೂಲಕ ಪೌರುಷವನ್ನು ಪ್ರಕಟಿಸುತ್ತಾ ಈ ವಿಶ್ವವನ್ನು ಪಾಲಿಸುತ್ತಾನೆ.॥26॥

(ಶ್ಲೋಕ - 27)

ಮೂಲಮ್

ತಮೋಮಾತ್ರಾಮುಪಾದಾಯ ಪ್ರತಿಸಂರುದ್ಧವಿಕ್ರಮಃ ।
ಕಾಲೇನಾನುಗತಾಶೇಷ ಆಸ್ತೇ ತೂಷ್ಣೀಂ ದಿನಾತ್ಯಯೇ ॥

ಅನುವಾದ

ಕಾಲಕ್ರಮದಲ್ಲಿ ತಮ್ಮ ಹಗಲು ಮುಗಿದೊಡನೆಯೇ ಬ್ರಹ್ಮ ದೇವರು ತಮೋಗುಣದ ಸಂಪರ್ಕಹೊಂದಿ, ತಮ್ಮ ಸೃಷ್ಟಿರಚನಾ ರೂಪೀ ಪೌರುಷವನ್ನು ಸ್ಥಗಿತಗೊಳಿಸಿ ನಿಶ್ಚೇಷ್ಟಿತರಾಗುತ್ತಾರೆ.॥27॥

(ಶ್ಲೋಕ - 28)

ಮೂಲಮ್

ತಮೇವಾನ್ವಪಿಧೀಯಂತೇ ಲೋಕಾ ಭೂರಾದಯಸಯಃ ।
ನಿಶಾಯಾಮನುವೃತ್ತಾಯಾಂ ನಿರ್ಮುಕ್ತಶಶಿಭಾಸ್ಕರಮ್ ॥

ಅನುವಾದ

ಆಗ ಇಡೀ ವಿಶ್ವವು ಅವರಲ್ಲೇ ಲೀನವಾಗುತ್ತದೆ. ಸೂರ್ಯಚಂದ್ರರೇ ಇಲ್ಲದ ಪ್ರಳಯರಾತ್ರಿಯು ಬರುವುದು. ಭೂಃ, ಭುವಃ, ಸುವಃ ಎಂಬ ಮೂರು ಲೋಕಗಳೂ ಆ ಬ್ರಹ್ಮದೇವರ ಶರೀರದಲ್ಲಿ ಅಡಗಿಕೊಳ್ಳುವುವು.॥28॥

(ಶ್ಲೋಕ - 29)

ಮೂಲಮ್

ತ್ರಿಲೋಕ್ಯಾಂ ದಹ್ಯಮಾನಾಯಾಂ ಶಕ್ತ್ಯಾ ಸಂಕರ್ಷಣಾಗ್ನಿನಾ ।
ಯಾಂತ್ಯೂಷ್ಮಣಾ ಮಹರ್ಲೋಕಾಜ್ಜನಂ ಭೃಗ್ವಾದಯೋರ್ದಿತಾಃ ॥

ಅನುವಾದ

ಆಗಲೇ ಮೂರು ಲೋಕಗಳೂ ಆದಿಶೇಷದೇವರ ಬಾಯಿಯಿಂದ ಹೊರಬರುವ ಅಗ್ನಿರೂಪೀ ಭಗ ವಂತನ ಶಕ್ತಿಯಿಂದ ಸುಡಲು ತೊಡಗುವುದು. ಅದರ ಬೇಗೆಯನ್ನು ತಾಳಲಾರದೆ ಭೃಗುವೇ ಮುಂತಾದ ಮುನೀಶ್ವರರು ಮಹರ್ಲೋಕ ದಿಂದ ಜನೋಲೋಕಕ್ಕೆ ಹೋಗಿಬಿಡುವರು.॥29॥

(ಶ್ಲೋಕ - 30)

ಮೂಲಮ್

ತಾವತಿಭುವನಂ ಸದ್ಯಃ ಕಲ್ಪಾಂತೈಧಿತಸಿಂಧವಃ ।
ಪ್ಲಾವಯಂತ್ಯುತ್ಕಟಾಟೋಪಚಂಡವಾತೇರಿತೋರ್ಮಯಃ ॥

ಅನುವಾದ

ಅಷ್ಟರಲ್ಲಿ ಸಪ್ತ ಸಮುದ್ರಗಳೂ ಪ್ರಳಯಕಾಲದ ಪ್ರಚಂಡಮಾರುತದಿಂದ ಉಕ್ಕೇರಿ ಮಹಾತರಂಗಗಳಿಂದ ತ್ರೈಲೋಕ್ಯವನ್ನೂ ಮುಳುಗಿಸಿ ಬಿಡುವುವು.॥30॥

(ಶ್ಲೋಕ - 31)

ಮೂಲಮ್

ಅಂತಃ ಸ ತಸ್ಮಿನ್ ಸಲಿಲ ಆಸ್ತೇನಂತಾಸನೋ ಹರಿಃ ।
ಯೋಗನಿದ್ರಾನಿಮೀಲಾಕ್ಷಃ ಸ್ತೂಯಮಾನೋ ಜನಾಲಯೈಃ ॥

ಅನುವಾದ

ಆಗ ಆ ಪ್ರಳಯಜಲದಲ್ಲಿ ಶ್ರೀಭಗವಂತನು ಶೇಷಶಾಯಿಯಾಗಿ ಯೋಗನಿದ್ರೆಯಲ್ಲಿ ಕಣ್ಣುಗಳನ್ನು ಮುಚ್ಚಿ ಕೊಂಡು ಪವಡಿಸುವನು. ಆ ಸಮಯದಲ್ಲಿ ಜನೋಲೋಕ ದಲ್ಲಿರುವ ಮುನಿಗಳು ಆತನನ್ನು ಸ್ತುತಿಸುತ್ತಿರುವರು.॥31॥

(ಶ್ಲೋಕ - 32)

ಮೂಲಮ್

ಏವಂ ವಿಧೈರಹೋರಾತ್ರೈಃ ಕಾಲಗತ್ಯೋಪಲಕ್ಷಿತೈಃ ।
ಅಪಕ್ಷಿತಮಿವಾಸ್ಯಾಪಿ ಪರಮಾಯುರ್ವಯಃಶತಮ್ ॥

ಅನುವಾದ

ಹೀಗೆ ಕಾಲಗತಿಗೆ ಒಳಪಟ್ಟಿರುವ ಇಂತಹ ಹಗಲು-ರಾತ್ರಿಗಳಿಂದಲೇ ಬ್ರಹ್ಮದೇವರ ಪೂರ್ಣಾಯುಸ್ಸಾಗಿರುವ ನೂರು ವರ್ಷಗಳು ಕಳೆದಂತಾಗುವುದು.॥32॥

(ಶ್ಲೋಕ - 33)

ಮೂಲಮ್

ಯದರ್ಧಮಾಯುಷಸ್ತಸ್ಯ ಪರಾರ್ಧಮಭಿಧೀಯತೇ ।
ಪೂರ್ವಃ ಪರಾರ್ಧೋಪಕ್ರಾಂತೋ ಹ್ಯಪರೋದ್ಯ ಪ್ರವರ್ತತೇ ॥

ಅನುವಾದ

ಬ್ರಹ್ಮದೇವರ ಆಯುಸ್ಸಿನ ಅರ್ಧಭಾಗಕ್ಕೆ (ಅಂದರೆ ಅವರ 50 ವರ್ಷಗಳ ಕಾಲಕ್ಕೆ) ಒಂದು ‘ಪರಾರ್ಧ’ವೆಂದು ಹೇಳುತ್ತಾರೆ. ಇಷ್ಟರವರೆಗೆ ಮೊದಲನೆಯ ಪರಾರ್ಧವು ಮುಗಿದು, ಎರಡನೆಯ ಪರಾರ್ಧವು ನಡೆಯುತ್ತಿದೆ.॥33॥

(ಶ್ಲೋಕ - 34)

ಮೂಲಮ್

ಪೂರ್ವಸ್ಯಾದೌ ಪರಾರ್ಧಸ್ಯ ಬ್ರಾಹ್ಮೋ ನಾಮ ಮಹಾನಭೂತ್ ।
ಕಲ್ಪೋ ಯತ್ರಾಭವದ್ಬ್ರಹ್ಮಾ ಶಬ್ದಬ್ರಹ್ಮೇತಿ ಯಂ ವಿದುಃ ॥

ಅನುವಾದ

ಹಿಂದಿನ ಪರಾರ್ಧದ ಪ್ರಾರಂಭದಲ್ಲಿ ಮೊಟ್ಟ ಮೊದಲು ‘ಬ್ರಾಹ್ಮ’ವೆಂಬ ಮಹಾಕಲ್ಪವಿತ್ತು. ಅದರಲ್ಲೇ ಬ್ರಹ್ಮದೇವರ ಉತ್ಪತ್ತಿಯಾಗಿತ್ತು. ಜ್ಞಾನಿಗಳು ಅವರನ್ನು ಶಬ್ದಬ್ರಹ್ಮವೆಂದು ಹೇಳುತ್ತಾರೆ.॥34॥

(ಶ್ಲೋಕ - 35)

ಮೂಲಮ್

ತಸ್ಯೈವ ಚಾಂತೇ ಕಲ್ಪೋಭೂದ್ಯಂ ಪಾದ್ಮಮಭಿಚಕ್ಷತೇ ।
ಯದ್ಧರೇರ್ನಾಭಿಸರಸ ಆಸೀಲ್ಲೋಕಸರೋರುಹಮ್ ॥

ಅನುವಾದ

ಅದೇ ಪರಾರ್ಧದ ಕಡೆಯ ಭಾಗದ ಕಲ್ಪವನ್ನು ‘ಪಾದ್ಮಕಲ್ಪ’ ವೆನ್ನುತ್ತಾರೆ. ಇದರಲ್ಲಿ ಭಗವಂತನ ನಾಭಿಸರೋವರದಿಂದ ಸರ್ವಲೋಕಮಯ ಕಮಲವು ಪ್ರಕಟವಾಗಿತ್ತು. ॥ 35 ॥

(ಶ್ಲೋಕ - 36)

ಮೂಲಮ್

ಅಯಂ ತು ಕಥಿತಃ ಕಲ್ಪೋ ದ್ವಿತೀಯಸ್ಯಾಪಿ ಭಾರತ ।
ವಾರಾಹ ಇತಿ ವಿಖ್ಯಾತೋ ಯತ್ರಾಸೀತ್ಸೂಕರೋ ಹರಿಃ ॥

ಅನುವಾದ

ಭರತರ್ಷಭನೇ ! ಈಗ ನಡೆಯುತ್ತಿರುವ ಕಲ್ಪವನ್ನು ಎರಡನೇ ಪರಾರ್ಧದ ಪ್ರಾರಂಭದ್ದೆಂದು ಹೇಳ ಲಾಗುತ್ತದೆ. ಇದರಲ್ಲಿ ಶ್ರೀಭಗವಂತನು ವರಾಹರೂಪವನ್ನು ಸ್ವೀಕರಿಸಿದ್ದರಿಂದ ಇದನ್ನು ‘ವಾರಾಹಕಲ್ಪ’ವೆಂದು ಕರೆಯುತ್ತಾರೆ.॥36॥

(ಶ್ಲೋಕ - 37)

ಮೂಲಮ್

ಕಾಲೋಯಂ ದ್ವಿಪರಾರ್ಧಾಖ್ಯೋ ನಿಮೇಷ ಉಪಚರ್ಯತೇ ।
ಅವ್ಯಾಕೃತಸ್ಯಾನಂತಸ್ಯ ಅನಾದೇರ್ಜಗದಾತ್ಮನಃ ॥

ಅನುವಾದ

ಈ ಎರಡು ಪರಾರ್ಧಗಳು ಅವ್ಯಕ್ತನೂ, ಅನಂತನೂ, ಅನಾದಿಯೂ, ವಿಶ್ವಾತ್ಮನೂ ಆಗಿರುವ ಶ್ರೀಹರಿಗೆ ಒಂದು ‘ನಿಮೇಷ’ ಕಾಲಮಾತ್ರ ಆಗುವುದು.॥37॥

(ಶ್ಲೋಕ - 38)

ಮೂಲಮ್

ಕಾಲೋಯಂ ಪರಮಾಣ್ವಾದಿರ್ದ್ವಿಪರಾರ್ಧಾಂತ ಈಶ್ವರಃ ।
ನೈವೇಷಿತುಂ ಪ್ರಭುರ್ಭೂಮ್ನ ಈಶ್ವರೋ ಧಾಮಮಾನಿನಾಮ್ ॥

ಅನುವಾದ

ಪರಮಾಣುವಿನಿಂದ ಹಿಡಿದು ಎರಡು ಪರಾರ್ಧಕಾಲ ಪರ್ಯಂತ ಹಬ್ಬಿರುವ ಈ ಮಹಾಕಾಲವು ಸರ್ವಸ ಮರ್ಥವಾಗಿದ್ದರೂ, ಸರ್ವಾತ್ಮನಾಗಿರುವ ಶ್ರೀಹರಿಯ ಮೇಲೆ ಯಾವ ಅಧಿಕಾರವನ್ನೂ ನಡೆಸಲಾರದು. ದೇಹಾದಿಗಳಲ್ಲಿ ಅಭಿ ಮಾನವನ್ನಿಟ್ಟಿರುವ ಜೀವಿಗಳ ಮೇಲೆ ಮಾತ್ರವೇ ಅದರ ಶಾಸನವು ನಡೆಯುವುದು.॥38॥

(ಶ್ಲೋಕ - 39)

ಮೂಲಮ್

ವಿಕಾರೈಃ ಸಹಿತೋ ಯುಕ್ತೈರ್ವಿಶೇಷಾದಿಭಿರಾವೃತಃ ।
ಆಂಡಕೋಶೋ ಬಹಿರಯಂ ಪಂಚಾಶತ್ಕೋಟಿವಿಸ್ತೃತಃ ॥

(ಶ್ಲೋಕ - 40)

ಮೂಲಮ್

ದಶೋತ್ತರಾಧಿಕೈರ್ಯತ್ರ ಪ್ರವಿಷ್ಟಃ ಪರಮಾಣುವತ್ ।
ಲಕ್ಷ್ಯತೇಂತರ್ಗತಾಶ್ಚಾನ್ಯೇ ಕೋಟಿಶೋ ಹ್ಯಂಡರಾಶಯಃ ॥

(ಶ್ಲೋಕ - 41)

ಮೂಲಮ್

ತದಾಹುರಕ್ಷರಂ ಬ್ರಹ್ಮ ಸರ್ವಕಾರಣಕಾರಣಮ್ ।
ವಿಷ್ಣೋರ್ಧಾಮ ಪರಂ ಸಾಕ್ಷಾತ್ಪುರುಷಸ್ಯ ಮಹಾತ್ಮನಃ ॥

ಅನುವಾದ

ಪ್ರಕೃತಿ, ಮಹತ್ತತ್ತ್ವ, ಅಹಂಕಾರ ಮತ್ತು ಪಂಚ ತನ್ಮಾತ್ರೆಗಳು ಈ ಎಂಟು ಪ್ರಕೃತಿಗಳಿಂದೊಡಗೂಡಿದ ಹತ್ತು ಇಂದ್ರಿಯಗಳೂ, ಮನಸ್ಸು ಹಾಗೂ ಪಂಚಭೂತಗಳು ಎಂಬ ಈ ಹದಿನಾರು ವಿಕಾರ ಗಳು ಸೇರಿ ನಿರ್ಮಿತವಾಗಿರುವ ಈ ಬ್ರಹ್ಮಾಂಡಕೋಶವು ಒಳಗಡೆ ಯಿಂದ ಐವತ್ತು ಕೋಟಿ ಯೋಜನಗಳಷ್ಟು ವಿಸ್ತಾರವಾಗಿದೆ ಮತ್ತು ಇದರ ಹೊರಗಡೆ ನಾಲ್ಕೂ ಕಡೆಗಳಲ್ಲಿಯೂ ಏಳು ಆವರಣ ಗಳುಂಟು. ಆ ಆವರಣಗಳು ಇದಕ್ಕಿಂತಲೂ ಒಂದು ತುಂಬಾ ದೊಡ್ಡವು. ಅವುಗಳಲ್ಲಿ ಮುಂದು-ಮುಂದಿನದು ಹಿಂದು-ಹಿಂದಿನದ ಕ್ಕಿಂತಲೂ ಹತ್ತರಷ್ಟು ವಿಸ್ತಾರವಾಗಿದೆ. ಆದರೆ ಇಷ್ಟು ಮಹಾವಿಸ್ತಾರ ವಾಗಿರುವ ಇವೆಲ್ಲವೂ ಯಾರಲ್ಲಿ ಪರಮಾಣುಗಳಂತೆ ಕಾಣು ತ್ತಿವೆಯೋ ಮತ್ತು ಇಂತಹ ಕೋಟಿ-ಕೋಟಿ ಬ್ರಹ್ಮಾಂಡರಾಶಿಗಳು ಯಾರಲ್ಲಿ ಅಡಗಿ ವೆಯೋ, ಅಂತಹ ಪ್ರಧಾನವೇ (ಪ್ರಕೃತಿಯೇ) ಮುಂತಾದ ಸಮಸ್ತ ಕಾರಣಗಳಿಗೂ ಮಹಾಕಾರಣನಾಗಿರುವವನೇ ಅಕ್ಷರಬ್ರಹ್ಮನೆನಿಸಿದ ಪುರಾಣಪುರುಷನಾದ ಸಾಕ್ಷಾತ್ ಪರಮಾತ್ಮನಾದ ಭಗವಾನ್ ಶ್ರೀಮಹಾವಿಷ್ಣುವಿನ ಶ್ರೇಷ್ಠಸ್ವರೂಪವಾಗಿದೆ.॥39-41॥

ಅನುವಾದ (ಸಮಾಪ್ತಿಃ)

ಹನ್ನೊಂದನೆಯ ಅಧ್ಯಾಯವು ಮುಗಿಯಿತು. ॥11॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಏಕಾದಶೋಽಧ್ಯಾಯಃ ॥11॥

ಸೂಚನಾ