೦೯

[ಒಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಬ್ರಹ್ಮದೇವರು ಮಾಡಿದ ಭಗವತ್ಸ್ತೋತ್ರ

(ಶ್ಲೋಕ - 1)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಜ್ಞಾತೋಸಿ ಮೇದ್ಯ ಸುಚಿರಾನ್ನನು ದೇಹಭಾಜಾಂ
ನ ಜ್ಞಾಯತೇ ಭಗವತೋ ಗತಿರಿತ್ಯವದ್ಯಮ್ ।
ನಾನ್ಯತ್ತ್ವದಸ್ತಿ ಭಗವನ್ನಪಿ ತನ್ನ ಶುದ್ಧಂ
ಮಾಯಾಗುಣವ್ಯತಿಕರಾದ್ಯದುರುರ್ವಿಭಾಸಿ ॥

ಅನುವಾದ

ಶ್ರೀಬ್ರಹ್ಮದೇವರು ಹೇಳಿದರು ಲೋಕೇಶ್ವರನೇ ! ಬಹು ಕಾಲದ ನಂತರ ನಿನ್ನ ದರ್ಶನವನ್ನು ಪಡೆದು ನಾನು ಧನ್ಯನಾದೆನು. ನಿನ್ನ ಈ ದಿವ್ಯಸ್ವರೂಪವನ್ನು ದೇಹಧಾರಿಗಳಾದ ಜೀವರು ತಿಳಿಯದೇ ಹೋದರಲ್ಲ ! ಎಂತಹ ದೌರ್ಭಾಗ್ಯ ! ಓ ಭಗವಂತಾ ! ನೀನಲ್ಲದೆ ಬೇರೆ ಯಾವ ವಸ್ತುವೂ ಇಲ್ಲವೇ ಇಲ್ಲ. ಕಂಡುಬರುವ ವಸ್ತುವು ಸ್ವರೂಪತಃ ಸತ್ಯವಾದುದಲ್ಲ. ಏಕೆಂದರೆ, ಮಾಯೆಯ ಗುಣಗಳು ಕ್ಷೋಭಿತವಾದ ಕಾರಣ ಕೇವಲ ನೀನೇ ಅನೇಕ ರೂಪಗಳಲ್ಲಿ ಕಂಡು ಬರುವೆ. ॥ 1 ॥

(ಶ್ಲೋಕ - 2)

ಮೂಲಮ್

ರೂಪಂ ಯದೇತದವಬೋಧರಸೋದಯೇನ
ಶಶ್ವನ್ನಿವೃತ್ತತಮಸಃ ಸದನುಗ್ರಹಾಯ ।
ಆದೌ ಗೃಹೀತಮವತಾರಶತೈಕಬೀಜಂ
ಯನ್ನಾಭಿಪದ್ಮಭವನಾದಹಮಾವಿರಾಸಮ್ ॥

ಅನುವಾದ

ಓ ಭಗವಂತನೇ ! ನೀನು ಸದಾ ಜ್ಞಾನಪ್ರಕಾಶದಿಂದ ಬೆಳಗುತ್ತಿರು ವವನು. ಆದ್ದರಿಂದ ಅಜ್ಞಾನವು ನಿನ್ನಿಂದ ಸದಾ ದೂರವಾಗಿ ರುತ್ತದೆ. ಯಾವ ನಾಭಿಕಮಲದಿಂದ ನಾನು ಜನಿಸಿದ್ದೇನೋ ಅಂತಹ ನಿನ್ನ ಈ ದಿವ್ಯ ದೇಹವು ನೂರಾರು ಅವತಾರಗಳಿಗೆ ಮೂಲ ಕಾರಣವಾದುದು. ಸತ್ಪುರುಷರ ಮೇಲೆ ಕೃಪೆದೋರಿ ಅವರನ್ನು ಅನುಗ್ರಹಿಸುವುದಕ್ಕಾಗಿ ಈ ಮೊಟ್ಟಮೊದಲನೆಯ ಅವತಾರವನ್ನು ತಾಳಿರುವೆ. ॥ 2 ॥

(ಶ್ಲೋಕ - 3)

ಮೂಲಮ್

ನಾತಃ ಪರಂ ಪರಮ ಯದ್ಭವತಃ ಸ್ವರೂಪ-
ಮಾನಂದಮಾತ್ರಮವಿಕಲ್ಪಮವಿದ್ಧವರ್ಚಃ ।
ಪಶ್ಯಾಮಿ ವಿಶ್ವಸೃಜಮೇಕಮವಿಶ್ವಮಾತ್ಮನ್
ಭೂತೇಂದ್ರಿಯಾತ್ಮಕಮದಸ್ತ ಉಪಾಶ್ರಿತೋಸ್ಮಿ ॥

ಅನುವಾದ

ಪರಮಾತ್ಮಾ ! ನಿನ್ನ ಆನಂದೈಕಮಯವೂ, ಭೇದರಹಿತವೂ, ಅಖಂಡತೇಜೋಮಯವೂ ಆದ ಸ್ವರೂಪವನ್ನು ನಾನು ಈ ದಿವ್ಯರೂಪದಿಂದ ಭಿನ್ನವೆಂದು ತಿಳಿಯುವುದಿಲ್ಲ. ಆದುದ ರಿಂದ ನಾನು ವಿಶ್ವದ ರಚನೆ ಮಾಡುವವನಾದರೂ ವಿಶ್ವಾತೀತ ವಾಗಿರುವ, ಅದ್ವಿತೀಯವಾಗಿರುವ ಸಮಸ್ತ ಭೂತಗಳಿಗೂ, ಇಂದ್ರಿಯ ಗಳಿಗೂ ಅಧಿಷ್ಠಾನವಾಗಿರುವ ಈ ದಿವ್ಯರೂಪವನ್ನು ಶರಣು ಹೊಂದುತ್ತೇನೆ. ॥ 3 ॥

(ಶ್ಲೋಕ - 4)

ಮೂಲಮ್

ತದ್ವಾ ಇದಂ ಭುವನಮಂಗಲ ಮಂಗಲಾಯ
ಧ್ಯಾನೇ ಸ್ಮ ನೋ ದರ್ಶಿತಂ ತ ಉಪಾಸಕಾನಾಮ್ ।
ತಸ್ಮೈ ನಮೋ ಭಗವತೇನುವಿಧೇಮ ತುಭ್ಯಂ
ಯೋನಾದೃತೋ ನರಕಭಾಗ್ಭಿರಸತ್ಪ್ರಸಂಗೈಃ ॥

ಅನುವಾದ

ಜಗತ್ಕಲ್ಯಾಣಮೂರ್ತಿಯೇ ! ನಿನ್ನ ಉಪಾಸಕನಾಗಿರುವ ನನ್ನ ಹಿತಕ್ಕೋಸ್ಕರವೇ ಧ್ಯಾನದಲ್ಲಿ ನನಗೆ ಈ ನಿನ್ನ ದಿವ್ಯರೂಪವನ್ನು ತೋರಿಸಿರುವೆ. ಪಾಪಾತ್ಮರೂ ವಿಷಯಾ ಸಕ್ತರೂ ಆದ ಜೀವಿಗಳು ಮಾತ್ರವೇ ಇದನ್ನು ತಿರಸ್ಕರಿಸುತ್ತಾರೆ. ನಾನಾದರೋ ನಿನ್ನನ್ನು ಈ ದಿವ್ಯ ರೂಪದಲ್ಲಿಯೇ ನೋಡುತ್ತಾ ಮತ್ತೆ-ಮತ್ತೆ ನಮಸ್ಕರಿಸುತ್ತೇನೆ. ॥ 4 ॥

(ಶ್ಲೋಕ - 5)

ಮೂಲಮ್

ಯೇ ತು ತ್ವದೀಯಚರಣಾಂಬುಜಕೋಶಗಂಧಂ
ಜಿಘ್ರಂತಿ ಕರ್ಣವಿವರೈಃ ಶ್ರುತಿವಾತನೀತಮ್ ।
ಭಕ್ತ್ಯಾ ಗೃಹೀತಚರಣಃ ಪರಯಾ ಚ ತೇಷಾಂ
ನಾಪೈಷಿ ನಾಥ ಹೃದಯಾಂಬುರುಹಾತ್ಸ್ವಪುಂಸಾಮ್ ॥

ಅನುವಾದ

ನನ್ನ ಸ್ವಾಮಿಯೇ ! ವೇದ ಗಳೆಂಬ ವಾಯುವಿನಿಂದ ತಂದಿರುವ ನಿನ್ನ ಪಾದಗಳೆಂಬ ಕಮಲ ಕೋಶದ ಕಂಪನ್ನು ತಮ್ಮ ಕಿವಿಗಳಿಂದ ಸುಕೃತಿಗಳು ಸ್ವೀಕರಿಸುತ್ತಾರೆ. ಅಂತಹ ಭಕ್ತೋತ್ತಮರ ಹೃದಯಕಮಲದಿಂದ ಎಂದಿಗೂ ನೀನು ದೂರವಾಗುವುದಿಲ್ಲ. ಏಕೆಂದರೆ ಅವರು ತಮ್ಮ ಪರಾಭಕ್ತಿಯೆಂಬ ಹಗ್ಗದಿಂದ ನಿನ್ನ ಪಾದಪದ್ಮಗಳನ್ನು ಕಟ್ಟಿಹಾಕಿಕೊಂಡಿರುವರು. ॥ 5 ॥

(ಶ್ಲೋಕ - 6)

ಮೂಲಮ್

ತಾವದ್ಭಯಂ ದ್ರವಿಣಗೇಹಸುಹೃನ್ನಿಮಿತ್ತಂ
ಶೋಕಃ ಸ್ಪೃಹಾ ಪರಿಭವೋ ವಿಪುಲಶ್ಚ ಲೋಭಃ ।
ತಾವನ್ಮಮೇತ್ಯ ಸದವಗ್ರಹ ಆರ್ತಿಮೂಲಂ
ಯಾವನ್ನ ತೇಂಘ್ರಿಮಭಯಂ ಪ್ರವೃಣೀತ ಲೋಕಃ ॥

ಅನುವಾದ

ಪರಮಾತ್ಮನೇ ! ಮನುಷ್ಯನು ಅಭಯಪ್ರದವಾದ ನಿನ್ನ ಚರಣಾರವಿಂದಗಳ ಆಸರೆಯನ್ನು ಪಡೆಯುವವರೆಗೆ ಅವನಿಗೆ ಧನ, ಮನೆ, ಬಂಧುಗಳ ಕಾರಣದಿಂದ ಉಂಟಾಗುವ ಭಯ, ಶೋಕ, ದುರಾಸೆ, ದೈನ್ಯ, ಕಡುಲೋಭ ಮುಂತಾದವುಗಳು ತೊಂದರೆ ಕೊಡುತ್ತಾ ಇರುತ್ತವೆ ಮತ್ತು ದುಃಖಕ್ಕೆ ಏಕಮಾತ್ರ ಕಾರಣವಾದ ಅಹಂಕಾರ-ಮಮಕಾರಗಳ ದುರಾಗ್ರಹವು ಇರುತ್ತದೆ. ॥ 6 ॥

(ಶ್ಲೋಕ - 7)

ಮೂಲಮ್

ದೈವೇನ ತೇ ಹತಧಿಯೋ ಭವತಃ ಪ್ರಸಂಗಾ-
ತ್ಸರ್ವಾಶುಭೋಪಶಮನಾದ್ವಿಮುಖೇಂದ್ರಿಯಾ ಯೇ ।
ಕುರ್ವಂತಿ ಕಾಮಸುಖಲೇಶಲವಾಯ ದೀನಾ
ಲೋಭಾಭಿಭೂತಮನಸೋಕುಶಲಾನಿ ಶಶ್ವತ್ ॥

ಅನುವಾದ

ದೇವದೇವನೇ ! ಮೂರ್ಖರು ಎಲ್ಲ ಅಮಂಗಳಗಳನ್ನು ನಾಶ ಪಡಿಸುವ ನಿನ್ನ ಶ್ರವಣ-ಕೀರ್ತನೆ ಮುಂತಾದ ಸತ್ಪ್ರಸಂಗಗಳಿಂದ ಇಂದ್ರಿಯಗಳನ್ನು ಬೇರೆಡೆ ಸೆಳೆದು ಅಣುಮಾತ್ರವಾದ ವಿಷಯ ಸುಖಗಳನ್ನೇ ಬಯಸುತ್ತಾ, ದೀನರಾಗಿ, ಮನಸ್ಸಿನಲ್ಲಿ ಆಸೆಪಡುತ್ತಾ ದುಷ್ಟಕರ್ಮಗಳಲ್ಲಿ ತೊಡಗುತ್ತಾರೆ. ಅದೃಷ್ಟದಿಂದ ವಿವೇಕವನ್ನು ಕಳೆದುಕೊಂಡ ಅಂತಹವರು ನಿಜವಾಗಿ ಬಡಪಾಯಿಗಳು. ॥ 7 ॥

(ಶ್ಲೋಕ - 8)

ಮೂಲಮ್

ಕ್ಷುತ್ತೃಟ್ತ್ರಿಧಾತುಭಿರಿಮಾ ಮುಹುರರ್ದ್ಯಮಾನಾಃ
ಶೀತೋಷ್ಣವಾತವರ್ಷೈರಿತರೇತರಾಚ್ಚ ।
ಕಾಮಾಗ್ನಿನಾಚ್ಯುತ ರುಷಾ ಚ ಸುದುರ್ಭರೇಣ
ಸಂಪಶ್ಯತೋ ಮನ ಉರುಕ್ರಮ ಸೀದತೇ ಮೇ ॥

ಅನುವಾದ

ಓ ಅಚ್ಯುತಾ ! ತ್ರಿವಿಕ್ರಮ ! ಈ ಜನರು ಹಸಿವು, ಬಾಯಾರಿಕೆ, ವಾತ, ಪಿತ್ತ, ಕ, ಚಳಿ, ಸೆಕೆ, ಗಾಳಿ-ಮಳೆಗಳಿಂದಲೂ, ಪರಸ್ಪರ ಒಬ್ಬರಿಂ ದೊಬ್ಬರು ಹಾಗೂ ಕಾಮಾಗ್ನಿಯಿಂದಲೂ, ಸಹಿಸಲಸದಳವಾದ ಕ್ರೋಧವೆಂಬ ಅಗ್ನಿಯಿಂದಲೂ ಮತ್ತೆ-ಮತ್ತೆ ಕಷ್ಟಪಡುತ್ತಿರುವು ದನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ವಿಷಾದವಾಗುತ್ತದೆ. ॥ 8 ॥

(ಶ್ಲೋಕ - 9)

ಮೂಲಮ್

ಯಾವತ್ಪೃಥಕ್ತ್ವಮಿದಮಾತ್ಮನ ಇಂದ್ರಿಯಾರ್ಥ-
ಮಾಯಾಬಲಂ ಭಗವತೋ ಜನ ಈಶ ಪಶ್ಯೇತ್ ।
ತಾವನ್ನ ಸಂಸೃತಿರಸೌ ಪ್ರತಿಸಂಕ್ರಮೇತ
ವ್ಯರ್ಥಾಪಿ ದುಃಖನಿವಹಂ ವಹತೀ ಕ್ರಿಯಾರ್ಥಾ ॥

ಅನುವಾದ

ಎಲೈ ಪ್ರಭುವೇ ! ಮನುಷ್ಯನು ಎಲ್ಲಿಯವರೆಗೆ ಇಂದ್ರಿಯ ಮತ್ತು ಅವುಗಳ ವಿಷಯರೂಪವಾದ ಮಾಯೆಯ ಪ್ರಭಾವದಿಂದ ನಿನ್ನಿಂದ ತನ್ನನ್ನು ಬೇರೆಯಾಗಿ ನೋಡುತ್ತಾನೋ, ಅಲ್ಲಿಯವರೆಗೂ ಆತನಿಗೆ ಈ ಸಂಸಾರಚಕ್ರದಿಂದ ಬಿಡುಗಡೆಯಾಗುವುದಿಲ್ಲ. ಈ ಜಗತ್ತು ಮಿಥ್ಯೆಯಾಗಿದ್ದರೂ ಕರ್ಮಲವನ್ನು ಭೋಗಿಸುವ ಕ್ಷೇತ್ರ ವಾದ್ದರಿಂದ ಅವನನ್ನು ನಾನಾಪ್ರಕಾರದ ದುಃಖಗಳಲ್ಲಿ ಸಿಕ್ಕಿಸುತ್ತಾ ಇರುತ್ತದೆ. ॥ 9 ॥

(ಶ್ಲೋಕ - 10)

ಮೂಲಮ್

ಅಹ್ನ್ಯಾಪೃತಾರ್ತಕರಣಾ ನಿಶಿ ನಿಃಶಯಾನಾ
ನಾನಾಮನೋರಥಧಿಯಾ ಕ್ಷಣಭಗ್ನನಿದ್ರಾಃ ।
ದೈವಾಹತಾರ್ಥರಚನಾ ಋಷಯೋಪಿ ದೇವ
ಯುಷ್ಮತ್ಪ್ರಸಂಗವಿಮುಖಾ ಇಹ ಸಂಸರಂತಿ ॥

ಅನುವಾದ

ದೇವಾ ! ಅಜ್ಞರಾದ ಇತರರ ಮಾತಿರಲಿ ಋಷಿ-ಮುನಿ ಗಳೂ ಕೂಡ ನಿನ್ನ ಕಥಾಪ್ರಸಂಗಕ್ಕೆ ವಿಮುಖರಾದರೆ ಸಂಸಾರ ಬಂಧನಕ್ಕೆ ಒಳಗಾಗಬೇಕಾಗುತ್ತದೆ. ಅವರು ಹಗಲಿನಲ್ಲಿ ಬಗೆ- ಬಗೆಯ ವಿಷಯವ್ಯಾಪಾರಗಳಲ್ಲಿ ಆಸಕ್ತರಾಗಿರುವುದರಿಂದ ಅವರ ಚಿತ್ತವು ವಿಕ್ಷಿಪ್ತವಾಗಿರುತ್ತದೆ. ರಾತ್ರಿಯಲ್ಲಿ ಅವರು ಪ್ರಜ್ಞೆಯಿಲ್ಲದೆ ನಿದ್ದೆಯಲ್ಲಿ ಬಿದ್ದುಕೊಂಡಿರುತ್ತಾರೆ. ಅಂತಹ ಸಮಯದಲ್ಲೂ ಅವರು ನಾನಾರೀತಿಯ ಮನೋರಥಗಳಿಂದ ಪೀಡಿತರಾಗಿ ಕ್ಷಣ- ಕ್ಷಣಕ್ಕೂ ನಿದ್ರಾಭಂಗವನ್ನು ಹೊಂದುತ್ತಾರೆ. ದೈವವಶದಿಂದ ಅವರ ಅರ್ಥಸಿದ್ಧಿಯ ಉದ್ಯೋಗಗಳೆಲ್ಲವೂ ವಿಲವಾಗುತ್ತಾ ಇರುತ್ತವೆ. ॥ 10 ॥

(ಶ್ಲೋಕ - 11)

ಮೂಲಮ್

ತ್ವಂ ಭಾವಯೋಗಪರಿಭಾವಿತಹೃತ್ಸರೋಜ
ಆಸ್ಸೇ ಶ್ರುತೇಕ್ಷಿತಪಥೋ ನನು ನಾಥ ಪುಂಸಾಮ್ ।
ಯದ್ಯದ್ಧಿಯಾ ತ ಉರುಗಾಯ ವಿಭಾವಯಂತಿ
ತತ್ತದ್ವಪುಃ ಪ್ರಣಯಸೇ ಸದನುಗ್ರಹಾಯ ॥

ಅನುವಾದ

ಸ್ವಾಮಿ ! ಶ್ರವಣ ಮನನಾದಿಗಳಿಂದ ನಿನ್ನ ಮಾರ್ಗವನ್ನು ತಿಳಿದು, ಅನನ್ಯವಾದ ಭಕ್ತಿಯೋಗದಿಂದ ಮನಸ್ಸನ್ನು ಪರಿಶುದ್ಧ ಗೊಳಿಸಿಕೊಂಡಿರುವವರ ಹೃದಯಕಮಲದಲ್ಲಿ ನೀನು ವಾಸ ಮಾಡುತ್ತಿರುವೆ. ಪುಣ್ಯಕೀರ್ತಿಯಾದ ಪ್ರಭುವೇ ! ನಿನ್ನ ಭಕ್ತಜನರು ಯಾವ-ಯಾವ ಭಾವನೆಯಿಂದ ನಿನ್ನನ್ನು ಚಿಂತನೆಮಾಡುತ್ತಾರೋ, ಅವರನ್ನು ಅನುಗ್ರಹಿಸಲಿಕ್ಕಾಗಿ ನೀನು ಆಯಾ ರೂಪವನ್ನೇ ಧರಿಸು ತ್ತೀಯೆ. ॥ 11 ॥

(ಶ್ಲೋಕ - 12)

ಮೂಲಮ್

ನಾತಿಪ್ರಸೀದತಿ ತಥೋಪಚಿತೋಪಚಾರೈ-
ರಾರಾಧಿತಃ ಸುರಗಣೈರ್ಹೃದಿ ಬದ್ಧಕಾಮೈಃ ।
ಯತ್ಸರ್ವಭೂತದಯಯಾಸದಲಭ್ಯಯೈಕೋ
ನಾನಾಜನೇಷ್ವವಹಿತಃ ಸುಹೃದಂತರಾತ್ಮಾ ॥

ಅನುವಾದ

ಭಗವಂತಾ ! ನೀನು ಅದ್ವಿತೀಯನಾಗಿದ್ದು, ಸಮಸ್ತ ಪ್ರಾಣಿಗಳ ಅಂತಃಕರಣದಲ್ಲಿ ಸ್ಥಿತನಾಗಿ ಅವರ ಪರಮಹಿತ ಕಾರಿ ಅಂತರಾತ್ಮನಾಗಿರುವೆ. ದುರ್ಜನರಿಗೆ ಅಸಾಧ್ಯವಾಗಿರುವ ‘ಭೂತದಯೆ’ಯಿಂದ ನೀನು ಎಷ್ಟು ಪ್ರಸನ್ನನಾಗುವೆಯೋ, ಅಷ್ಟು ನಾನಾ ಕಾಮನೆಗಳಿಂದ ಬಗೆ-ಬಗೆಯ ಉಪಚಾರಗಳ ಮೂಲಕ ನಿನ್ನನ್ನು ಆರಾಧಿಸುವ ದೇವತೆಗಳ ಪೂಜೆಯಿಂದಲೂ ಪ್ರಸನ್ನನಾಗು ವುದಿಲ್ಲ. ॥ 12 ॥

(ಶ್ಲೋಕ - 13)

ಮೂಲಮ್

ಪುಂಸಾಮತೋ ವಿವಿಧಕರ್ಮಭಿರಧ್ವರಾದ್ಯೈ-
ರ್ದಾನೇನ ಚೋಗ್ರತಪಸಾ ವ್ರತಚರ್ಯಯಾ ಚ ।
ಆರಾಧನಂ ಭಗವತಸ್ತವ ಸತ್ಕ್ರಿಯಾರ್ಥೋ
ಧರ್ಮೋರ್ಪಿತಃ ಕರ್ಹಿಚಿದ್ಧ್ರಿಯತೇ ನ ಯತ್ರ ॥

ಅನುವಾದ

ನಿನಗೆ ಸಮರ್ಪಿಸಲ್ಪಟ್ಟ ಕರ್ಮಗಳಿಗೆ ಎಂದೂ ನಾಶವಿಲ್ಲ. ಅವು ಅಕ್ಷಯವಾಗುತ್ತವೆ. ಆದುದರಿಂದ ಯಜ್ಞ, ದಾನ, ಕಠಿಣ ತಪಸ್ಸು, ವ್ರತಾದಿಗಳು ಮುಂತಾದ ನಾನಾ ಪ್ರಕಾರದ ಕರ್ಮಗಳ ಮೂಲಕ ನಿನ್ನ ಪ್ರಸನ್ನತೆಯನ್ನು ಪಡೆಯುವುದೇ ಸರ್ವೋತ್ತಮವಾದ ಕರ್ಮಲವು. ಏಕೆಂದರೆ, ನಿನ್ನ ಪ್ರಸನ್ನತೆ ಯುಂಟಾದ ಬಳಿಕ ಯಾವ ಲವು ತಾನೇ ದುರ್ಲಭ ವಾದುದು ? ॥ 13 ॥

(ಶ್ಲೋಕ - 14)

ಮೂಲಮ್

ಶಶ್ವತ್ಸ್ವರೂಪಮಹಸೈವ ನಿಪೀತಭೇದ-
ಮೋಹಾಯ ಬೋಧಧಿಷಣಾಯ ನಮಃ ಪರಸ್ಮೈ ।
ವಿಶ್ವೋದ್ಭವಸ್ಥಿತಿಲಯೇಷು ನಿಮಿತ್ತಲೀಲಾ-
ರಾಸಾಯ ತೇ ನಮ ಇದಂ ಚಕೃಮೇಶ್ವರಾಯ ॥

ಅನುವಾದ

ನೀನು ಸದಾ ನಿನ್ನ ಸ್ವರೂಪ ಪ್ರಕಾಶ ದಿಂದಲೇ ಪ್ರಾಣಿಗಳ ಭೇದಭ್ರಮವಾದ ಅಂಧಕಾರವನ್ನು ನಾಶ ಮಾಡುತ್ತಾ ಇರುತ್ತೀಯೆ. ವಿದ್ಯೆಯೆಂಬ ಜ್ಞಾನಸ್ವರೂಪನೂ, ಜ್ಞಾನಕ್ಕೆ ಅಧಿಷ್ಠಾನವಾಗಿರುವ ಸಾಕ್ಷಾತ್ ಪರಮಪುರುಷನೂ ಆದ ನಿನಗೆ ನಾನು ವಂದಿಸುತ್ತೇನೆ. ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳ ನಿಮಿತ್ತ ವಾಗಿ ನಡೆಯುವ ಮಾಯಾಲೀಲೆಯು ನಿನ್ನ ಆಟವೇ ಆಗಿದೆ. ಇಂತಹ ಪ್ರಭುವಾದ ನಿನಗೆ ಮತ್ತೆ-ಮತ್ತೆ ನಮಸ್ಕಾರಗಳು. ॥ 14 ॥

(ಶ್ಲೋಕ - 15)

ಮೂಲಮ್

ಯಸ್ಯಾವತಾರಗುಣಕರ್ಮವಿಡಂಬನಾನಿ
ನಾಮಾನಿ ಯೇಸುವಿಗಮೇ ವಿವಶಾ ಗೃಣಂತಿ ।
ತೇ ನೈಕಜನ್ಮಶಮಲಂ ಸಹಸೈವ ಹಿತ್ವಾ
ಸಂಯಾಂತ್ಯಪಾವೃತಮೃತಂ ತಮಜಂ ಪ್ರಪದ್ಯೇ ॥

ಅನುವಾದ

ಮರಣಕಾಲದಲ್ಲಿ ನಿನ್ನ ಅವತಾರ, ಗುಣ ಮತ್ತು ಕರ್ಮ ಗಳನ್ನು ಸೂಚಿಸುವ ವಾಸುದೇವಾ, ದೇವಕೀನಂದನಾ, ಜನಾರ್ದನಾ, ಮುರಾರಿ ಹೀಗೆ ಇನ್ನೂ ದಿವ್ಯನಾಮಗಳನ್ನು ಆಕಸ್ಮಿಕ ವಾಗಿಯೋ, ವಿವಶತೆ ಯಿಂದಲೋ ಉಚ್ಚರಿಸುವ ಜನರು ಅನೇಕ ಜನ್ಮಗಳ ಪಾಪಗಳನ್ನು ಒಡನೆಯೇ ಕಳಕೊಂಡು ಮಾಯೆಯೇ ಮುಂತಾದ ಆವರಣರಹಿತವಾದ ಬ್ರಹ್ಮಪದವನ್ನು ಪಡೆಯುವರು. ಅಂತಹ ಅಜನೂ, ನಿತ್ಯನೂ, ಶಾಶ್ವತನೂ ಆದ ನಿನ್ನನ್ನು ಶರಣುಹೊಂದುತ್ತೇನೆ. ॥ 15 ॥

(ಶ್ಲೋಕ - 16)

ಮೂಲಮ್

ಯೋ ವಾ ಅಹಂ ಚ ಗಿರಿಶಶ್ಚ ವಿಭುಃ ಸ್ವಯಂ ಚ
ಸ್ಥಿತ್ಯುದ್ಭವಪ್ರಲಯಹೇತವ ಆತ್ಮಮೂಲಮ್ ।
ಭಿತ್ತ್ವಾ ತ್ರಿಪಾದ್ವವೃಧ ಏಕ ಉರುಪ್ರರೋಹ-
ಸ್ತಸ್ಮೈ ನಮೋ ಭಗವತೇ ಭುವನದ್ರುಮಾಯ ॥

ಅನುವಾದ

ಭಗವಂತನೇ ! ವಿಶ್ವವೃಕ್ಷನಾಗಿ ವಿರಾಜಿಸುತ್ತಿರುವ ನಿನಗೆ ನಮಸ್ಕಾರವು. ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರಾದ ನಾನೂ, ಸ್ವಯಂ ನೀನು ಮತ್ತು ರುದ್ರನು ಎಂಬ ತ್ರಿಮೂರ್ತಿಗಳು ಆ ವೃಕ್ಷದ ಮೂರು ಪ್ರಧಾನ ಶಾಖೆಗಳು. ಪ್ರಜಾಪತಿಗಳು, ಮನುಗಳು ಮುಂತಾದವರು ಕಿರು ಕೊಂಬೆಗಳು. ಇದರ ಮೂಲವಾದರೋ ನೀನೇ ಆಗಿದ್ದೀಯೆ. ಹೀಗೆ ಮೂಲಪ್ರಕೃತಿಯನ್ನು ಸ್ವೀಕರಿಸಿ, ತ್ರಿಗುಣಾತ್ಮಕವಾಗಿ ವಿಭಾಗಿಸಿ ಕೊಂಡು ವಿಸ್ತಾರವಾಗಿ ಹಬ್ಬಿರುವ ವಿಶ್ವವೃಕ್ಷರೂಪನಾದ ನಿನಗೆ ನಮೋ ನಮಃ ॥ 16॥

(ಶ್ಲೋಕ - 17)

ಮೂಲಮ್

ಲೋಕೋ ವಿಕರ್ಮನಿರತಃ ಕುಶಲೇ ಪ್ರಮತ್ತಃ
ಕರ್ಮಣ್ಯಯಂ ತ್ವದುದಿತೇ ಭವದರ್ಚನೇ ಸ್ವೇ ।
ಯಸ್ತಾವದಸ್ಯ ಬಲವಾನಿಹ ಜೀವಿತಾಶಾಂ
ಸದ್ಯಚ್ಛಿನತ್ತ್ಯನಿಮಿಷಾಯ ನಮೋಸ್ತು ತಸ್ಮೈ ॥

ಅನುವಾದ

ಪ್ರಭೋ ! ಭಗವಂತನ ಆರಾಧನೆಯೇ ಜನರಿಗೆ ಶ್ರೇಯಸ್ಕರವಾದ ಸ್ವಧರ್ಮವೆಂದು ನೀನು ತಿಳಿಸಿರುವೆ. ಆದರೂ ಅವರು ಈ ವಿಷಯದಲ್ಲಿ ಉದಾಸೀನರಾಗಿ ಸದಾ ನಿಷಿದ್ಧವಾದ ಕರ್ಮಗಳಲ್ಲಿಯೇ ತೊಡಗಿರುತ್ತಾರೆ. ಹೀಗೆ ಪ್ರಮಾದೀ ಜೀವರ ಬದುಕುವ ಆಸೆಯನ್ನು ಸದಾ ಸಾವಧಾನ ವಾಗಿದ್ದುಕೊಂಡು ಶೀಘ್ರವಾಗಿ ಕತ್ತರಿಸಿ ಹಾಕುತ್ತಿರುವ ಮಹಾಬಲ ಶಾಲಿಯಾದ ಕಾಲವೂ ನಿನ್ನ ರೂಪವೇ ಆಗಿದೆ. ಆ ಮಹಾಕಾಲ ನಾದ ನಿನಗೆ ನಮಸ್ಕಾರಗಳು. ॥ 17 ॥

ಮೂಲಮ್

(ಶ್ಲೋಕ - 18)
ಯಸ್ಮಾದ್ಭಿಭೇಮ್ಯಹಮಪಿ ದ್ವಿಪರಾರ್ಧಧಿಷ್ಣ್ಯ-
ಮಧ್ಯಾಸಿತಃ ಸಕಲಲೋಕನಮಸ್ಕೃತಂ ಯತ್ ।
ತೇಪೇ ತಪೋ ಬಹುಸವೋವರುರುತ್ಸಮಾನ-
ಸ್ತಸ್ಮೈ ನಮೋ ಭಗವತೇಧಿಮಖಾಯ ತುಭ್ಯಮ್ ॥

ಅನುವಾದ

ಎರಡು ಪರಾರ್ಧಗಳ ಆಯುಸ್ಸು ಇದ್ದು, ಸಮಸ್ತ ಲೋಕಗಳಿಂದಲೂ ನಮಸ್ಕೃತನಾಗಿ, ಸತ್ಯಲೋಕಕ್ಕೆ ಒಡೆಯನಾಗಿದ್ದರೂ ನಾನು ನಿನ್ನ ಆ ಕಾಲರೂಪಕ್ಕೆ ಹೆದರುತ್ತೇನೆ. ಅದರಿಂದ ಬದುಕುಳಿಯಲು ಮತ್ತು ನಿನ್ನನ್ನು ಹೊಂದುವುದಕ್ಕಾಗಿ ನಾನು ಇಷ್ಟುಕಾಲ ತಪಸ್ಸನ್ನಾಚರಿಸಿದ್ದೇನೆ. ಅಧಿಯಜ್ಞರೂಪದಲ್ಲಿ ಈ ತಪಸ್ಸಿಗೆ ಸಾಕ್ಷಿಯಾಗಿರುವ ನಿನಗೆ ನಾನು ನಮಸ್ಕರಿಸುತ್ತೇನೆ. ॥ 18 ॥

(ಶ್ಲೋಕ - 19)

ಮೂಲಮ್

ತಿರ್ಯಙ್ಮನುಷ್ಯವಿಬುಧಾದಿಷು ಜೀವಯೋನಿ-
ಷ್ವಾತ್ಮೇಚ್ಛಯಾತ್ಮಕೃತಸೇತುಪರೀಪ್ಸಯಾ ಯಃ ।
ರೇಮೇ ನಿರಸ್ತರತಿರಪ್ಯವರುದ್ಧದೇಹ-
ಸ್ತಸ್ಮೈ ನಮೋ ಭಗವತೇ ಪುರುಷೋತ್ತಮಾಯ ॥

ಅನುವಾದ

ಸ್ವಾಮೀ ! ನೀನು ಪೂರ್ಣಕಾಮನು. ಯಾವ ವಿಷಯ ಸುಖದ ಇಚ್ಛೆ ಇಲ್ಲದಿದ್ದರೂ ನೀನೇ ನಿರ್ಮಿಸಿದ ಧರ್ಮಸೇತುವನ್ನು ಸಂರಕ್ಷಿಸುವುದಕ್ಕಾಗಿ, ಪಶು, ಪಕ್ಷಿ, ಮನುಷ್ಯ, ದೇವತೆ ಮುಂತಾದ ಜೀವಯೋನಿಗಳಲ್ಲಿ ಸ್ವೇಚ್ಛೆಯಿಂದ ಶರೀರ ಗಳನ್ನು ಧರಿಸಿ ಅನೇಕ ಲೀಲೆಗಳನ್ನು ನಡೆಸಿದ್ದೀಯೆ. ಅಂತಹ ಪುರುಷೋತ್ತಮ ಭಗವಂತನಾದ ನಿನಗೆ ನಮಸ್ಕಾರವು. ॥ 19 ॥

ಮೂಲಮ್

(ಶ್ಲೋಕ - 20)
ಯೋವಿದ್ಯಯಾನುಪಹತೋಪಿ ದಶಾರ್ಧವೃತ್ತ್ಯಾ
ನಿದ್ರಾಮುವಾಹ ಜಠರೀಕೃತಲೋಕಯಾತ್ರಃ ।
ಅಂತರ್ಜಲೇಹಿಕಶಿಪುಸ್ಪರ್ಶಾನುಕೂಲಾಂ
ಭೀಮೋರ್ಮಿಮಾಲಿನಿ ಜನಸ್ಯ ಸುಖಂ ವಿವೃಣ್ವನ್ ॥

ಅನುವಾದ

ಪ್ರಭೋ ! ನೀನು ಅವಿದ್ಯಾ, ಅಸ್ಮಿತಾ, ರಾಗ, ದ್ವೇಷ ಮತ್ತು ಅಭಿ ನಿವೇಶ ಈ ಅಜ್ಞಾನಕ್ಕೆ ಕಾರಣವಾದ ಐದು ಕ್ಲೇಶಗಳಿಗೆ ಸ್ವಲ್ಪವೂ ವಶಪಡದವನು. ಆದರೂ ಇಡೀ ವಿಶ್ವವನ್ನು ಉದರದಲ್ಲಿ ಅಡಗಿಸಿ ಕೊಂಡು ಭಯಂಕರವಾದ ಅಲೆಗಳ ಮಾಲೆಗಳಿಂದ ಕ್ಷೋಭೆ ಗೊಂಡ ಪ್ರಳಯ ಜಲರಾಶಿಯಲ್ಲಿ ಆದಿಶೇಷನೆಂಬ ಕೋಮಲ ವಾದ ಹಾಸಿಗೆಯಲ್ಲಿ ಪವಡಿಸಿದ್ದೀಯೆ. ಹಿಂದಿನ ಕಲ್ಪದ ಕರ್ಮ ಪರಂಪರೆಯಿಂದ ಬಳಲಿದ ಅನಂತ ಜೀವರುಗಳಿಗೆ ವಿಶ್ರಾಂತಿ ಕೊಡುವುದಕ್ಕಾಗಿಯೇ ಈ ನಿನ್ನ ಶಯನಲೀಲೆಯಾಗಿದೆ. ॥ 20 ॥

(ಶ್ಲೋಕ - 21)

ಮೂಲಮ್

ಯನ್ನಾಭಿಪದ್ಮಭವನಾದಹಮಾಸಮೀಢ್ಯ
ಲೋಕತ್ರಯೋಪಕರಣೋ ಯದನುಗ್ರಹೇಣ ।
ತಸ್ಮೈ ನಮಸ್ತ ಉದರಸ್ಥಭವಾಯ ಯೋಗ-
ನಿದ್ರಾವಸಾನವಿಕಸನ್ನಲಿನೇಕ್ಷಣಾಯ ॥

ಅನುವಾದ

ಸ್ವಾಮಿಯೇ ! ನಿನ್ನ ನಾಭಿಕಮಲರೂಪೀ ಭವನದಲ್ಲಿ ನಾನು ಜನಿಸಿ ದ್ದೇನೆ. ಈ ಸಮಸ್ತ ವಿಶ್ವವು ನಿನ್ನ ಉದರದಲ್ಲಿ ಅಡಗಿದೆ. ನಿನ್ನ ಅನುಗ್ರಹದಿಂದಲೇ ನಾನು ಮೂರು ಲೋಕಗಳನ್ನು ಸೃಷ್ಟಿಮಾಡಿ ಉಪಕರಿಸುವ ಸಾಮರ್ಥ್ಯವನ್ನು ಪಡೆದಿರುವೆನು. ಈಗ ಯೋಗ ನಿದ್ರೆಯು ಮುಗಿದುಹೋದ ವೇಳೆಯಲ್ಲಿ ಅರಳುತ್ತಿರುವ ತಾವರೆ ಯಂತಹ ಕಣ್ಣುಗಳಿಂದ ಕಂಗೊಳಿಸುತ್ತಿರುವ ನಿನಗೆ ನಮಸ್ಕಾರಗಳು. ॥ 21 ॥

(ಶ್ಲೋಕ - 22)

ಮೂಲಮ್

ಸೋಯಂ ಸಮಸ್ತಜಗತಾಂ ಸುಹೃದೇಕ ಆತ್ಮಾ
ಸತ್ತ್ವೇನ ಯನ್ಮೃಡಯತೇ ಭಗವಾನ್ಭಗೇನ ।
ತೇನೈವ ಮೇ ದೃಶಮನುಸ್ಪೃಶತಾದ್ಯಥಾಹಂ
ಸ್ರಕ್ಷ್ಯಾಮಿ ಪೂರ್ವವದಿದಂ ಪ್ರಣತಪ್ರಿಯೋಸೌ ॥

ಅನುವಾದ

ನೀನು ಸಮಸ್ತ ಜಗತ್ತಿನ ಏಕಮಾತ್ರ ಸುಹೃದನೂ, ಆತ್ಮನೂ, ಶರಣ್ಯನೂ ಭಕ್ತಪ್ರಿಯನೂ ಆಗಿರುವ ನಿನಗೆ ನಮಸ್ಕಾರವು. ಹಿಂದಿನ ಕಲ್ಪದಲ್ಲಿ ಇದ್ದಹಾಗೆ ಈ ಜಗತ್ತನ್ನು ಸೃಷ್ಟಿಸಲು ಬಯಸಿದ್ದೇನೆ. ಅದಕ್ಕೆ ಬೇಕಾದ ಬುದ್ಧಿಯನ್ನು ಅನುಗ್ರಹಿಸು. ಯಾವ ಜ್ಞಾನ ಮತ್ತು ಐಶ್ವರ್ಯಗಳಿಂದ ವಿಶ್ವಕ್ಕೆ ಆನಂದವನ್ನು ತುಂಬುತ್ತಿರುವೆಯೋ, ಅದು ನನ್ನ ಬುದ್ಧಿಯಲ್ಲಿ ಸೇರಿಕೊಳ್ಳುವಂತೆ ಮಾಡು. ॥ 22 ॥

(ಶ್ಲೋಕ - 23)

ಮೂಲಮ್

ಏಷ ಪ್ರಪನ್ನವರದೋ ರಮಯಾತ್ಮಶಕ್ತ್ಯಾ
ಯದ್ಯತ್ಕರಿಷ್ಯತಿ ಗೃಹೀತಗುಣಾವತಾರಃ ।
ತಸ್ಮಿನ್ ಸ್ವವಿಕ್ರಮಮಿದಂ ಸೃಜತೋಪಿ ಚೇತೋ
ಯುಂಜೀತ ಕರ್ಮಶಮಲಂ ಚ ಯಥಾ ವಿಜಹ್ಯಾಮ್ ॥

ಅನುವಾದ

ಶ್ರೀಪತಿಯೇ ! ಭಕ್ತವಾಂಛಾ ಕಲ್ಪತರುವೇ ? ನಿನ್ನ ಶಕ್ತಿಸ್ವರೂಪಳೇ ಆದ ಶ್ರೀಲಕ್ಷ್ಮೀದೇವಿಯಿಂದೊಡಗೂಡಿ ಅನೇಕ ಗುಣಾವತಾರ ಗಳನ್ನು ಮಾಡಿ, ಹಲವಾರು ಅದ್ಭುತ ಕರ್ಮಗಳಲ್ಲೇ ನಾನು ಮಾಡುತ್ತಿರುವ ಈ ಜಗತ್ಸೃಷ್ಟಿಯ ಉದ್ಯಮವೂ ಒಂದಾಗಿದೆ. ಆದ್ದರಿಂದ ಈ ಸೃಷ್ಟಿಸಮಯದಲ್ಲಿ ನನ್ನ ಚಿತ್ತಕ್ಕೆ ಪ್ರೇರಣೆಯನ್ನು ನೀಡು ; ಅದಕ್ಕೆ ಶಕ್ತಿಯನ್ನು ತುಂಬು. ಅದರಿಂದ ನಾನು ಸೃಷ್ಟಿರಚನಾ ವಿಷಯದಲ್ಲಿ ಅಭಿಮಾನರೂಪೀ ಕಶ್ಮಲದಿಂದ ದೂರ ವುಳಿಯುವಂತಾಗಲಿ. ॥ 23 ॥

(ಶ್ಲೋಕ - 24)

ಮೂಲಮ್

ನಾಭಿಹ್ರದಾದಿಹ ಸತೋಮ್ಭಸಿ ಯಸ್ಯ ಪುಂಸೋ
ವಿಜ್ಞಾನಶಕ್ತಿರಹಮಾಸಮನಂತಶಕ್ತೇಃ ।
ರೂಪಂ ವಿಚಿತ್ರಮಿದಮಸ್ಯ ವಿವೃಣ್ವತೋ ಮೇ
ಮಾ ರೀರಿಷೀಷ್ಟ ನಿಗಮಸ್ಯ ಗಿರಾಂ ವಿಸರ್ಗಃ ॥

ಅನುವಾದ

ಈ ಪ್ರಳಯ ಜಲರಾಶಿಯಲ್ಲಿ ಮಲಗಿದ ಅನಂತಶಕ್ತಿಯಾದ ನಿನ್ನ ನಾಭಿಕಮಲದಿಂದ ಜನಿಸಿರುವ ನಾನು ನಿನ್ನ ವಿಜ್ಞಾನಶಕ್ತಿಯೇ ಆಗಿದ್ದೇನೆ. ಮಹತ್ತತ್ತ್ವದ ಅಭಿಮಾನಿ ದೇವತೆಯೇ ಆಗಿದ್ದೇನೆ. ಆದುದರಿಂದ ಜಗತ್ತಿನ ವಿಚಿತ್ರರೂಪವನ್ನು ವಿಸ್ತರಿಸುವಾಗ ನನ್ನ ವೇದವಾಣಿಯ ಉಚ್ಚಾರಣೆಯು ಲುಪ್ತವಾಗ ದಂತೆ ಅನುಗ್ರಹಿಸು. ॥ 24 ॥

(ಶ್ಲೋಕ - 25)

ಮೂಲಮ್

ಸೋಸಾವದಭ್ರಕರುಣೋ ಭಗವಾನ್ವಿವೃದ್ಧ-
ಪ್ರೇಮಸ್ಮಿತೇನ ನಯನಾಂಬುರುಹಂ ವಿಜೃಮ್ಭನ್ ।
ಉತ್ಥಾಯ ವಿಶ್ವವಿಜಯಾಯ ಚ ನೋ ವಿಷಾದಂ
ಮಾಧ್ವ್ಯಾ ಗಿರಾಪನಯತಾತ್ಪುರುಷಃ ಪುರಾಣಃ ॥

ಅನುವಾದ

ನೀನು ಪರಮ ಕರುಣಾಪೂರ್ಣ ನಾದ ಪುರಾಣಪುರುಷನು. ಪ್ರೇಮಪ್ರವಾಹವನ್ನು ಸೂಸುವ ಕಿರುನಗೆಯಿಂದ ಶೋಭಿಸುತ್ತಿರುವ ಕಮಲಸದೃಶವಾದ ಕಣ್ಣು ಗಳನ್ನು ತೆರೆದು ವಿಶ್ವಸೃಷ್ಟಿಯ ವಿಜಯಕ್ಕಾಗಿ ಎದ್ದು ಸವಿನುಡಿ ಗಳಿಂದ ನನ್ನ ವಿಷಾದವನ್ನು ತೊಡೆದುಹಾಕಿಬಿಡು. ॥ 25 ॥

(ಶ್ಲೋಕ - 26)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಸ್ವಸಂಭವಂ ನಿಶಾಮ್ಯೈವಂ ತಪೋವಿದ್ಯಾಸಮಾಧಿಭಿಃ ।
ಯಾವನ್ಮನೋವಚಃ ಸ್ತುತ್ವಾ ವಿರರಾಮ ಸ ಖಿನ್ನವತ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ವಿದುರನೇ ! ಬ್ರಹ್ಮ ದೇವರು ಹೀಗೆ ತಪಸ್ಸು, ಜ್ಞಾನ, ವಿದ್ಯೆ ಮತ್ತು ಸಮಾಧಿಯ ಮೂಲಕ ತನ್ನ ಉತ್ಪತ್ತಿಸ್ಥಾನವಾದ ಶ್ರೀನಾರಾಯಣನನ್ನು ಕಂಡು, ತಮ್ಮ ಮನಸ್ಸು ಮತ್ತು ಮಾತುಗಳ ಶಕ್ತ್ಯನುಸಾರ ಆತನನ್ನು ಸ್ತುತಿಸಿ, ಆಯಾಸ ಗೊಂಡವರಂತೆ ವೌನವನ್ನು ತಳೆದರು. ॥ 26 ॥

ಮೂಲಮ್

(ಶ್ಲೋಕ - 27)
ಅಥಾಭಿಪ್ರೇತಮನ್ವೀಕ್ಷ್ಯ ಬ್ರಹ್ಮಣೋ ಮಧುಸೂದನಃ ।
ವಿಷಣ್ಣಚೇತಸಂ ತೇನ ಕಲ್ಪವ್ಯತಿಕರಾಂಭಸಾ ॥

(ಶ್ಲೋಕ - 28)

ಮೂಲಮ್

ಲೋಕಸಂಸ್ಥಾನವಿಜ್ಞಾನ ಆತ್ಮನಃ ಪರಿಖಿದ್ಯತಃ ।
ತಮಾಹಾಗಾಧಯಾ ವಾಚಾ ಕಶ್ಮಲಂ ಶಮಯನ್ನಿವ ॥

ಅನುವಾದ

ಬ್ರಹ್ಮನು ಈ ಪ್ರಳಯ ಜಲರಾಶಿಯಿಂದ ತುಂಬಾ ಗಾಬರಿಗೊಂಡಿರುವನು. ಸೃಷ್ಟಿಯ ವಿಷಯದಲ್ಲಿ ನಿಶ್ಚಯವಾದ ವಿಚಾರವು ಹೊಳೆಯದೇ ಅವನ ಚಿತ್ತಕ್ಕೆ ತುಂಬಾ ಕಳವಳ ಉಂಟಾಗಿದೆ ಎಂಬುದಾಗಿ ಭಗವಾನ್ ಮಧುಸೂದನನು ನೋಡಿದನು. ಅವನ ಆಶಯವನ್ನು ಅರಿತು ಭಗವಂತನು ತನ್ನ ಗಂಭೀರವಾದ ವಾಣಿಯಿಂದ ಆತನ ಖೇದವನ್ನು ಶಮನಗೊಳಿಸುತ್ತಾ ಹೇಳತೊಡಗಿದನು. ॥ 27-28 ॥

(ಶ್ಲೋಕ - 29)

ಮೂಲಮ್

ಶ್ರೀಭಗವಾನುವಾಚ
ಮಾ ವೇದಗರ್ಭ ಗಾಸ್ತಂದ್ರೀಂ ಸರ್ಗ ಉದ್ಯಮಮಾವಹ ।
ತನ್ಮಯಾಪಾದಿತಂ ಹ್ಯಗ್ರೇ ಯನ್ಮಾಂ ಪ್ರಾರ್ಥಯತೇ ಭವಾನ್ ॥

ಅನುವಾದ

ಶ್ರೀಭಗವಂತನು ಹೇಳಿದನು ವತ್ಸ, ವೇದಗರ್ಭನೇ ! ನೀನು ವಿಷಾದಕ್ಕೆ ವಶನಾಗಿ ಆಲಸ್ಯವನ್ನು ಹೊಂದಬೇಡ. ಸೃಷ್ಟಿ ವಿಷಯ ದಲ್ಲಿ ತತ್ಪರನಾಗು. ನೀನು ನನ್ನಿಂದ ಬಯಸುವ ಜ್ಞಾನವನ್ನಾದರೋ ನಿನಗೆ ಈ ಮೊದಲೇ ಕೊಟ್ಟದ್ದಾಗಿದೆ. ॥ 29 ॥

(ಶ್ಲೋಕ - 30)

ಮೂಲಮ್

ಭೂಯಸ್ತ್ವಂ ತಪ ಆತಿಷ್ಠ ವಿದ್ಯಾಂ ಚೈವ ಮದಾಶ್ರಯಾಮ್ ।
ತಾಭ್ಯಾಮಂತರ್ಹೃದಿ ಬ್ರಹ್ಮನ್ ಲೋಕಾಂದ್ರಕ್ಷಸ್ಯಪಾವೃತಾನ್ ॥

ಅನುವಾದ

ನೀನು ಮತ್ತೊಮ್ಮೆ ತಪಸ್ಸನ್ನಾಚರಿಸು ಮತ್ತು ಭಾಗವತ ಜ್ಞಾನದ ಅನುಷ್ಠಾನ ಮಾಡು. ಅದರ ಮೂಲಕ ನೀನು ಎಲ್ಲ ಲೋಕಗಳನ್ನು ಸ್ಪಷ್ಟವಾಗಿ ನಿನ್ನ ಅಂತಃಕರಣದಲ್ಲಿ ನೋಡುವೆಯಂತೆ. ॥ 30 ॥

(ಶ್ಲೋಕ - 31)

ಮೂಲಮ್

ತತ ಆತ್ಮನಿ ಲೋಕೇ ಚ ಭಕ್ತಿಯುಕ್ತಃ ಸಮಾಹಿತಃ ।
ದ್ರಷ್ಟಾಸಿ ಮಾಂ ತತಂ ಬ್ರಹ್ಮನ್ಮಯಿ ಲೋಕಾಂಸ್ತ್ವಮಾತ್ಮನಃ ॥

ಅನುವಾದ

ಮತ್ತೆ ಭಕ್ತಿಯುಕ್ತನಾಗಿ, ಏಕಾಗ್ರಚಿತ್ತನಾಗಿ ನೀನು ನನ್ನಲ್ಲೇಸಮಸ್ತಲೋಕಗಳನ್ನು ಮತ್ತು ವ್ಯಾಪ್ತವಾಗಿರುವುದನ್ನು ನೋಡುವೆ ಹಾಗೂ ನಿನ್ನಲ್ಲೇ ಸಮಸ್ತ ಲೋಕಗಳೂ ಮತ್ತು ನಾನೂ ವ್ಯಾಪಿಸಿರುವುದನ್ನೂ ನೋಡುವೆ. ॥ 31 ॥

(ಶ್ಲೋಕ - 32)

ಮೂಲಮ್

ಯದಾ ತು ಸರ್ವಭೂತೇಷು ದಾರುಷ್ವಗ್ನಿಮಿವ ಸ್ಥಿತಮ್ ।
ಪ್ರತಿಚಕ್ಷೀತ ಮಾಂ ಲೋಕೋ ಜಹ್ಯಾತ್ತರ್ಹ್ಯೇವ ಕಶ್ಮಲಮ್ ॥

ಅನುವಾದ

ಕಟ್ಟಿಗೆಯಲ್ಲಿ ಬೆಂಕಿಯು ಅಡಗಿ ವ್ಯಾಪಿಸಿ ಕೊಂಡಿರುವಂತೆ ನಾನು ಸಮಸ್ತ ಭೂತಗಳಲ್ಲಿಯೂ ಅಡಗಿ ವ್ಯಾಪಿಸಿ ಕೊಂಡಿರುವುದನ್ನು ಸಾಕ್ಷಾತ್ಕರಿಸಿಕೊಂಡಾಗಲೇ ಜೀವಿಯು ಅಜ್ಞಾನ ರೂಪವಾದ ಕಶ್ಮಲದಿಂದ ಮುಕ್ತನಾಗುವನು. ॥ 32 ॥

(ಶ್ಲೋಕ - 33)

ಮೂಲಮ್

ಯದಾ ರಹಿತಮಾತ್ಮಾನಂ ಭೂತೇಂದ್ರಿಯಗುಣಾಶಯೈಃ ।
ಸ್ವರೂಪೇಣ ಮಯೋಪೇತಂ ಪಶ್ಯನ್ ಸ್ವಾರಾಜ್ಯಮೃಚ್ಛತಿ ॥

ಅನುವಾದ

ಅವನು ತನ್ನನ್ನು-ಭೂತಗಳು, ಇಂದ್ರಿಯಗಳು, ಗುಣಗಳು, ಅಂತಃಕರಣ ಇವುಗಳಿಂದ ರಹಿತನಾಗಿ ಸ್ವಸ್ವರೂಪದಿಂದ ನನ್ನಿಂದ ಅಭಿನ್ನನೆಂದು ನೋಡಿದಾಗ ಮೋಕ್ಷವನ್ನು ಪಡೆಯುವನು. ॥ 33 ॥

(ಶ್ಲೋಕ - 34)

ಮೂಲಮ್

ನಾನಾಕರ್ಮವಿತಾನೇನ ಪ್ರಜಾ ಬಹ್ವೀಃ ಸಿಸೃಕ್ಷತಃ ।
ನಾತ್ಮಾವಸೀದತ್ಯಸ್ಮಿಂಸ್ತೇ ವರ್ಷೀಯಾನ್ಮದನುಗ್ರಹಃ ॥

ಅನುವಾದ

ಬ್ರಹ್ಮನೇ ! ನಿನ್ನ ಮೇಲೆ ನನ್ನ ಪೂರ್ಣವಾದ ಅನುಗ್ರಹವಿದೆ. ಆದುದರಿಂದ ನಾನಾ ಪ್ರಕಾರದ ಕರ್ಮಸಂಸ್ಕಾರಗಳಿಗೆ ಅನುಗುಣವಾಗಿ ಅನೇಕ ಪ್ರಕಾರಗಳಾದ ಜೀವರನ್ನು ಸೃಷ್ಟಿಸಲು ಬಯಸಿದರೂ ನಿನ್ನ ಮನಸ್ಸು ಕೊಂಚವೂ ಮೋಹಿತವಾಗಲಾರದು. ॥ 34 ॥

(ಶ್ಲೋಕ - 35)

ಮೂಲಮ್

ಋಷಿಮಾದ್ಯಂ ನ ಬಧ್ನಾತಿ ಪಾಪೀಯಾಂಸ್ತ್ವಾಂ ರಜೋಗುಣಃ ।
ಯನ್ಮನೋ ಮಯಿ ನಿರ್ಬದ್ಧಂ ಪ್ರಜಾಃ ಸಂಸೃಜತೋಪಿ ತೇ ॥

ಅನುವಾದ

ನೀನು ಮಂತ್ರ ದ್ರಷ್ಟಾರರಲ್ಲಿ ಮೊದಲಿಗನಾಗಿ ಆದಿಋಷಿಯಾಗಿರುವೆ. ಪ್ರಜೆಗಳನ್ನು ಸೃಷ್ಟಿಮಾಡುತ್ತಿರುವಾಗಲೂ ನಿನ್ನ ಮನಸ್ಸು ನನ್ನಲ್ಲೇ ನೆಟ್ಟಿರುವುದರಿಂದ ಪಾಪಿಷ್ಠವಾದ ರಜೋಗುಣವು ನಿನ್ನನ್ನು ಬಂಧಿಸಲಾರದು. ॥ 35 ॥

(ಶ್ಲೋಕ - 36)

ಮೂಲಮ್

ಜ್ಞಾತೋಹಂ ಭವತಾ ತ್ವದ್ಯ ದುರ್ವಿಜ್ಞೇಯೋಪಿ ದೇಹಿನಾಮ್ ।
ಯನ್ಮಾಂ ತ್ವಂ ಮನ್ಯಸೇಯುಕ್ತಂ ಭೂತೇಂದ್ರಿಯಗುಣಾತ್ಮಭಿಃ ॥

ಅನುವಾದ

ವತ್ಸ ! ಭೂತಗಳು, ಇಂದ್ರಿಯಗಳು, ಗುಣಗಳು, ಅಂತಃಕರಣ ಇವುಗಳಿಂದ ನಾನು ರಹಿತನಾಗಿರು ವೆನೆಂದು ನೀನು ತಿಳಿದುಕೊಂಡಿರುವೆ. ಆದ್ದರಿಂದ ಸಾಮಾನ್ಯ ದೇಹಿಗಳಿಗೆ ತಿಳಿಯಲು ಅತಿ ಕಷ್ಟವಾಗಿರುವ ನನ್ನ ನಿಜಸ್ವರೂಪವನ್ನು ನೀನು ತಿಳಿದುಕೊಂಡುಬಿಟ್ಟಿರುವೆ. ॥ 36 ॥

(ಶ್ಲೋಕ - 37)

ಮೂಲಮ್

ತುಭ್ಯಂ ಮದ್ವಿಚಿಕಿತ್ಸಾಯಾಮಾತ್ಮಾ ಮೇ ದರ್ಶಿತೋಬಹಿಃ ।
ನಾಲೇನ ಸಲಿಲೇ ಮೂಲಂ ಪುಷ್ಕರಸ್ಯ ವಿಚಿನ್ವತಃ ॥

ಅನುವಾದ

‘ನನಗೆ ಯಾವು ದಾದರೂ ಆಶ್ರಯವಿದೆಯೋ, ಇಲ್ಲವೋ’ ಎಂಬ ಸಂದೇಹದಿಂದ ನೀನು ಕಮಲನಾಳದ ಮೂಲಕ ಜಲದಲ್ಲಿ ಪ್ರವೇಶಿಸಿ ಅದರ ಮೂಲವನ್ನು ಹುಡುಕುತ್ತಿದ್ದೆ. ಅದಕ್ಕಾಗಿ ನಾನು ನಿನಗೆ ನನ್ನ ಸ್ವರೂಪವನ್ನು ನಿನ್ನ ಅಂತಃಕರಣದಲ್ಲೇ ತೋರಿಸಿರುವೆನು. ॥ 37 ॥

(ಶ್ಲೋಕ - 38)

ಮೂಲಮ್

ಯಚ್ಚಕರ್ಥಾಂಗಮತ್ಸ್ತೋತ್ರಂ ಮತ್ಕಥಾಭ್ಯುದಯಾಂಕಿತಮ್ ।
ಯದ್ವಾ ತಪಸಿ ತೇ ನಿಷ್ಠಾ ಸ ಏಷ ಮದನುಗ್ರಹಃ ॥

ಅನುವಾದ

ಪ್ರಿಯಪುತ್ರನೇ! ನೀನು ಮಾಡಿರುವ ನನ್ನ ಕಥಾವೈಭವದಿಂದ ಕೂಡಿದ ಸ್ತುತಿ ಮತ್ತು ನಿನಗಿರುವ ತಪೋನಿಷ್ಠೆ ಇವೂ ನನ್ನ ಅನುಗ್ರಹದಿಂದಲೇ ಉಂಟಾಗಿದೆ. ॥ 38 ॥

ಮೂಲಮ್

(ಶ್ಲೋಕ - 39)
ಪ್ರೀತೋಹಮಸ್ತು ಭದ್ರಂ ತೇ ಲೋಕಾನಾಂ ವಿಜಯೇಚ್ಛಯಾ ।
ಯದಸ್ತೌಷೀರ್ಗುಣಮಯಂ ನಿರ್ಗುಣಂ ಮಾನುವರ್ಣಯನ್ ॥

ಅನುವಾದ

ಲೋಕಗಳನ್ನು ಸೃಷ್ಟಿ ಸುವ ಇಚ್ಛೆಯಿಂದ ನೀನು ನನ್ನನ್ನು ಸಗುಣನಾಗಿಯೂ, ನಿರ್ಗುಣ ನಾಗಿಯೂ ವರ್ಣಿಸಿ ಸ್ತೋತ್ರ ಮಾಡಿರುವುದರಿಂದ ನಾನು ಅತ್ಯಂತ ಸಂತುಷ್ಟನಾಗಿರುವೆನು. ನಿನಗೆ ಮಂಗಳವಾಗಲಿ. ॥ 39 ॥

(ಶ್ಲೋಕ - 40)

ಮೂಲಮ್

ಯ ಏತೇನ ಪುಮಾನ್ನಿತ್ಯಂ ಸ್ತುತ್ವಾ ಸ್ತೋತ್ರೇಣ ಮಾಂ ಭಜೇತ್ ।
ತಸ್ಯಾಶು ಸಂಪ್ರಸೀದೇಯಂ ಸರ್ವಕಾಮವರೇಶ್ವರಃ ॥

ಅನುವಾದ

ಸ್ವಯಂಭುವೇ! ಸಮಸ್ತ ಮನೋರಥಗಳನ್ನು ಈಡೇರಿಸುವ ಸಾಮರ್ಥ್ಯವುಳ್ಳ ಈಶ್ವರನು ನಾನು. ನೀನು ಮಾಡಿದ ಈ ಸ್ತೋತ್ರದ ಮೂಲಕ ಪ್ರತಿದಿನವೂ ನನ್ನನ್ನು ಭಜಿಸುವವನಿಗೆ ನಾನು ಬೇಗನೇ ಪ್ರಸನ್ನನಾಗುತ್ತೇನೆ. ॥ 40 ॥

(ಶ್ಲೋಕ - 41)

ಮೂಲಮ್

ಪೂರ್ತೇನ ತಪಸಾ ಯಜ್ಞೈರ್ದಾನೈರ್ಯೋಗಸಮಾಧಿನಾ ।
ರಾದ್ಧಂ ನಿಃಶ್ರೇಯಸಂ ಪುಂಸಾಂ ಮತ್ಪ್ರೀತಿಸ್ತತ್ತ್ವವಿನ್ಮತಮ್ ॥

ಅನುವಾದ

ಕೊಳ-ಬಾವಿ ಮುಂತಾದುವುಗಳನ್ನು ತೋಡಿಸುವ ಪೂರ್ತ, ತಪಸ್ಸು, ಯಜ್ಞ, ಯೋಗ, ಸಮಾಧಿ ಮುಂತಾದ ಸಾಧನೆಗಳಿಂದ ದೊರೆಯುವ ಪರಮ ಮಂಗಳಮಯ ಫಲವು ನನ್ನ (ಭಗವಂತನ) ಪ್ರಸನ್ನತೆಯೇ ಆಗಿದೆ ಎಂದು ತತ್ತ್ವಜ್ಞಾನಿಗಳ ಅಭಿಪ್ರಾಯವಾಗಿದೆ.॥41॥

(ಶ್ಲೋಕ - 42)

ಮೂಲಮ್

ಅಹಮಾತ್ಮಾತ್ಮನಾಂ ಧಾತಃ ಪ್ರೇಷ್ಠಃ ಸಂಪ್ರೇಯಸಾಮಪಿ ।
ಅತೋ ಮಯಿ ರತಿಂ ಕುರ್ಯಾದ್ದೇಹಾದಿರ್ಯತ್ಕೃತೇ ಪ್ರಿಯಃ ॥

ಅನುವಾದ

ವಿಧಾತನೇ! ನಾನು ಎಲ್ಲ ಆತ್ಮಗಳಿಗೂ ಆತ್ಮನಾಗಿರುವೆನು. ಪತ್ನೀ, ಪುತ್ರಾದಿ ಪ್ರಿಯವಸ್ತುಗಳಿಂದಲೂ ಪ್ರಿಯನಾದವನು. ದೇಹಿಗಳಿಗೆ ದೇಹಾದಿಗಳು ನನಗೋಸ್ಕರವೇ ಪ್ರಿಯವಾಗಿವೆ. ಆದುದರಿಂದ ಪ್ರಿಯಕ್ಕೂ, ಪ್ರಿಯತಮನಾಗಿರುವ ನನ್ನನ್ನೇ ಪ್ರೇಮಿಸಬೇಕು. ॥ 42 ॥

(ಶ್ಲೋಕ - 43)

ಮೂಲಮ್

ಸರ್ವವೇದಮಯೇನೇದಮಾತ್ಮನಾತ್ಮಾತ್ಮಯೋನಿನಾ ।
ಪ್ರಜಾಃ ಸೃಜ ಯಥಾಪೂರ್ವಂ ಯಾಶ್ಚ ಮಯ್ಯನುಶೇರತೇ ॥

ಅನುವಾದ

ಬ್ರಹ್ಮನೇ ! ಮೂರು ಲೋಕಗಳನ್ನು ಮತ್ತು ಈಗ ನನ್ನಲ್ಲಿ ಲೀನವಾದ ಪ್ರಜೆಗಳನ್ನು ಹಿಂದಿನ ಕಲ್ಪದಲ್ಲಿ ಅವು ಹೇಗಿದ್ದವೋ ಹಾಗೆಯೇ- ನನ್ನಿಂದ ಉತ್ಪನ್ನವಾದ ನಿನ್ನ ಸರ್ವವೇದಮಯ ಸ್ವರೂಪದಿಂದ ಸ್ವತಃ ರಚಿಸು. ॥ 43 ॥

(ಶ್ಲೋಕ - 44)

ಮೂಲಮ್

ಮೈತ್ರೇಯ ಉವಾಚ
ತಸ್ಮಾ ಏವಂ ಜಗತ್ಸ್ರಷ್ಟ್ರೇ ಪ್ರಧಾನಪುರುಷೇಶ್ವರಃ ।
ವ್ಯಜ್ಯೇದಂ ಸ್ವೇನ ರೂಪೇಣ ಕಂಜನಾಭಸ್ತಿರೋದಧೇ ॥

ಅನುವಾದ

ಮೈತ್ರೇಯರು ಹೇಳುತ್ತಾರೆ - ಪ್ರಕೃತಿ ಮತ್ತು ಪುರುಷರಿಗೂ ಪ್ರಭುವಾದ ಭಗವಾನ್ ಪದ್ಮನಾಭನು ಸೃಷ್ಟಿಕರ್ತರಾದ ಬ್ರಹ್ಮದೇವರಿಗೆ ಹೀಗೆ ಜಗತ್ತಿನ ಸೃಷ್ಟಿಕ್ರಮವನ್ನು ವ್ಯಕ್ತಪಡಿಸಿ, ಜಯವಾಗಲೀ ಎಂದು ಆಶೀರ್ವದಿಸಿ ತನ್ನ ನಿಜರೂಪವನ್ನು ಕಣ್ಮರೆಯಾಗಿಸಿದನು. ॥ 44 ॥

ಅನುವಾದ (ಸಮಾಪ್ತಿಃ)

ಒಂಭತ್ತನೆಯ ಅಧ್ಯಾಯವು ಮುಗಿಯಿತು. ॥9॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ನವಮೋಽಧ್ಯಾಯಃ ॥9॥