೦೮

[ಎಂಟನೆಯ ಅಧ್ಯಾಯ]

ಭಾಗಸೂಚನಾ

ಬ್ರಹ್ಮದೇವರ ಉತ್ಪತ್ತಿ

(ಶ್ಲೋಕ - 1)

ಮೂಲಮ್ (ವಾಚನಮ್)

ಮೈತ್ರೇಯ ಉವಾಚ

ಮೂಲಮ್

ಸತ್ಸೇವನೀಯೋ ಬತ ಪೂರುವಂಶೋ
ಯಲ್ಲೋಕಪಾಲೋ ಭಗವತ್ಪ್ರಧಾನಃ ।
ಬಭೂವಿಥೇಹಾಜಿತಕೀರ್ತಿಮಾಲಾಂ
ಪದೇ ಪದೇ ನೂತನಯಸ್ಯಭೀಕ್ಷ್ಣಮ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ ಎಲೈ ವಿದುರನೇ ! ನೀನು ಭಗವದ್ಭಕ್ತರಲ್ಲಿ ಪ್ರಧಾನನೂ, ಲೋಕಪಾಲಕನೂ ಆ ಯಮ ಧರ್ಮನೇ ಆಗಿರುವಿ. ನೀನು ಪುರುವಂಶದಲ್ಲಿ ಹುಟ್ಟಿದ್ದರಿಂದ ಆ ವಂಶವು ಸಾಧು-ಸತ್ಪುರುಷರಿಗೆ ಸೇವ್ಯವಾಗಿ ಬಿಟ್ಟಿದೆ. ಎಂತಹ ಧನ್ಯನು ನೀನು ! ಶ್ರೀಹರಿಯ ಕೀರ್ತಿಮಯ ಮಾಲೆಯನ್ನು ಪ್ರತಿ ಯೊಂದು ಪದದಲ್ಲಿಯೂ ನಿರಂತರವಾಗಿ ಹೊಸದಾಗಿಸುತ್ತಿದ್ದೀಯೆ. ॥ 1 ॥

(ಶ್ಲೋಕ - 2)

ಮೂಲಮ್

ಸೋಹಂ ನೃಣಾಂ ಕ್ಷುಲ್ಲಸುಖಾಯ ದುಃಖಂ
ಮಹದ್ಗತಾನಾಂ ವಿರಮಾಯ ತಸ್ಯ ।
ಪ್ರವರ್ತಯೇ ಭಾಗವತಂ ಪುರಾಣಂ
ಯದಾಹ ಸಾಕ್ಷಾದ್ಭಗವಾನೃಷಿಭ್ಯಃ ॥

ಅನುವಾದ

ಈಗ ನಾನು ಕ್ಷುದ್ರವಾದ ವಿಷಯಸುಖದ ಕಾಮನೆಯಿಂದ ಮಹಾದುಃಖವನ್ನು ಅನುಭವಿಸುತ್ತಿರುವ ಜನರ ದುಃಖವನ್ನು ತೊಲ ಗಿಸುವುದಕ್ಕಾಗಿ ಶ್ರೀಮದ್ಭಾಗವತ ಮಹಾ ಪುರಾಣವನ್ನು ಪ್ರಾರಂಭಿ ಸುತ್ತೇನೆ. ಇದನ್ನು ಸ್ವಯಂ ಸಂಕರ್ಷಣ ಭಗವಂತನು ಸನಕಾದಿ ಮಹರ್ಷಿಗಳಿಗೆ ಉಪದೇಶಿಸಿದ್ದನು. ॥ 2 ॥

(ಶ್ಲೋಕ - 3)

ಮೂಲಮ್

ಆಸೀನಮುರ್ವ್ಯಾಂ ಭಗವಂತಮಾದ್ಯಂ
ಸಂಕರ್ಷಣಂ ದೇವಮಕುಂಠಸತ್ತ್ವಮ್ ।
ವಿವಿತ್ಸವಸ್ತತ್ತ್ವಮತಃ ಪರಸ್ಯ
ಕುಮಾರಮುಖ್ಯಾ ಮುನಯೋನ್ವಪೃಚ್ಛನ್ ॥

ಅನುವಾದ

ಅಖಂಡ ಜ್ಞಾನಸಂಪನ್ನ ಆದಿದೇವ ಭಗವಾನ್ ಸಂಕರ್ಷಣನು ಪಾತಾಳದಲ್ಲಿ ವಿರಾಜಮಾನನಾಗಿದ್ದನು. ಸನತ್ಕುಮಾರಾದಿ ಋಷಿ ಗಳು ಅವನಿಂದ ಪರಮಪುರುಷೋತ್ತಮ ಪರಬ್ರಹ್ಮತತ್ತ್ವವನ್ನು ತಿಳಿಯಲಿಕ್ಕಾಗಿ ಪ್ರಶ್ನಿಸಿದರು. ॥ 3 ॥

(ಶ್ಲೋಕ - 4)

ಮೂಲಮ್

ಸ್ವಮೇವ ಧಿಷ್ಣ್ಯಂ ಬಹು ಮಾನಯಂತಂ
ಯಂ ವಾಸುದೇವಾಭಿಧಮಾಮನಂತಿ ।
ಪ್ರತ್ಯಗ್ಧೃತಾಕ್ಷಾಂಬುಜಕೋಶಮೀಷ-
ದುನ್ಮೀಲಯಂತಂ ವಿಬುಧೋದಯಾಯ ॥

ಅನುವಾದ

ಸ್ವಾಮಿ ಸಂಕರ್ಷಣನು ಆಗ ತನಗೆ ಆಶ್ರಯನಾಗಿರುವ ಹಾಗೂ ವೇದಗಳು ಯಾರನ್ನು ವಾಸು ದೇವನೆಂದು ನಿರೂಪಿಸುವವೋ ಆ ಪರಮಾತ್ಮನನ್ನೇ ಮನಸ್ಸಿನಲ್ಲಿ ಆರಾಧಿಸುತ್ತಿದ್ದನು. ಧ್ಯಾನದಲ್ಲಿ ಮುಳುಗಿದ್ದ ಆತನ ಕಮಲಸದೃಶ ವಾದ ಕಣ್ಣುಗಳು ಮುಚ್ಚಿದ್ದವು. ಋಷಿಗಳ ಪ್ರಶ್ನೆಯನ್ನು ಕೇಳಿ ಸನತ್ಕುಮಾರಾದಿ ಜ್ಞಾನಿಗಳ ಆನಂದಕ್ಕಾಗಿ ಅರೆತೆರೆದ ಕಣ್ಣುಗಳಿಂದ ಅವರನ್ನು ನೋಡಿದನು. ॥ 4 ॥

(ಶ್ಲೋಕ - 5)

ಮೂಲಮ್

ಸ್ವರ್ಧುನ್ಯುದಾರ್ದ್ರೈಃ ಸ್ವಜಟಾಕಲಾಪೈಃ
ರುಪಸ್ಪೃಶಂತಶ್ಚರಣೋಪಧಾನಮ್ ।
ಪದ್ಮಂ ಯದರ್ಚಂತ್ಯಹಿರಾಜಕನ್ಯಾಃ
ಸಪ್ರೇಮನಾನಾಬಲಿಭಿರ್ವರಾರ್ಥಾಃ ॥

ಅನುವಾದ

ಸನಕಾದಿ ಮಹರ್ಷಿಗಳು ಮಂದಾಕಿನಿಯ ಜಲದಿಂದ ಒದ್ದೆ ಯಾದ ತಮ್ಮ ಜಟೆಗಳಿಂದ ಆ ಆದಿಶೇಷ ಸ್ವಾಮಿಯ ಪಾದಪೀಠ ರೂಪವಾದ ಪದ್ಮವನ್ನು ಮುಟ್ಟಿ ನಮಸ್ಕರಿಸಿದರು. ನಾಗರಾಜ ಕುಮಾರಿಯರು ತಮ್ಮ ಅಭೀಷ್ಟ ವರವನ್ನು ಪಡೆಯಲಿಕ್ಕಾಗಿ ಪ್ರೇಮದಿಂದ ಬಗೆ-ಬಗೆಯಾದ ಕಾಣಿಕೆಗಳನ್ನು ಸಮರ್ಪಿಸುತ್ತಾ ಪೂಜಿಸುತ್ತಿದ್ದ ಪವಿತ್ರವಾದ ಪದ್ಮಪೀಠವದು. ॥ 5 ॥

(ಶ್ಲೋಕ - 6)

ಮೂಲಮ್

ಮುಹುರ್ಗೃಣಂತೋ ವಚಸಾನುರಾಗ-
ಸ್ಖಲತ್ಪದೇನಾಸ್ಯ ಕೃತಾನಿ ತಜ್ಜ್ಞಾಃ ।
ಕಿರೀಟಸಾಹಸ್ರಮಣಿಪ್ರವೇಕ-
ಪ್ರದ್ಯೋತಿತೋದ್ದಾಮಣಾಸಹಸ್ರಮ್ ॥

ಅನುವಾದ

ಅವನ ಲೀಲೆಗಳ ಮರ್ಮವನ್ನು ತಿಳಿದಿದ್ದ ಶ್ರೇಷ್ಠಮಹರ್ಷಿಗಳು ಪ್ರೇಮದಿಂದ ಗದ್ಗದವಾಣಿಯಿಂದ ಅವನ ದಿವ್ಯ ಲೀಲೆಗಳನ್ನು ಮತ್ತೆ-ಮತ್ತೆ ಹಾಡಿ ಹೊಗಳುತ್ತಿದ್ದರು. ಹರಡಿಕೊಂಡು ಮೇಲಕ್ಕೆ ಎತ್ತಿದ ಸ್ವಾಮಿಯ ಸಾವಿರ ಹೆಡೆಗಳು, ಕಿರೀಟಗಳ ಸಾವಿರಾರು ರತ್ನಶ್ರೇಷ್ಠಗಳಿಂದ ಹೊರ ಹೊಮ್ಮುತ್ತಿದ್ದ ಕಿರಣಗಳಿಂದ ಥಳ-ಥಳಿಸುತ್ತಿದ್ದುವು. ॥ 6 ॥

(ಶ್ಲೋಕ - 7)

ಮೂಲಮ್

ಪ್ರೋಕ್ತಂ ಕಿಲೈತದ್ಭಗವತ್ತಮೇನ
ನಿವೃತ್ತಿಧರ್ಮಾಭಿರತಾಯ ತೇನ ।
ಸನತ್ಕುಮಾರಾಯ ಸ ಚಾಹ ಪೃಷ್ಟಃ
ಸಾಂಖ್ಯಾಯನಾಯಾಂಗ ಧೃತವ್ರತಾಯ ॥

ಅನುವಾದ

ಸಂಕರ್ಷಣ ಭಗವಂತನು ನಿವೃತ್ತಿಪರಾಯಣರಾದ ಸನತ್ಕುಮಾರರಿಗೆ ಈ ಶ್ರೀಮದ್ಭಾಗವತವನ್ನು ಉಪದೇಶಿಸಿದ್ದನೆಂಬುದು ಪ್ರಸಿದ್ಧವಾಗಿದೆ. ಅನಂತರ ಆ ಮಹರ್ಷಿವರ್ಯರು ತಮ್ಮನ್ನು ಪ್ರಶ್ನೆಮಾಡಿದ ವ್ರತನಿಷ್ಠರಾದ ಸಾಂಖ್ಯಾಯನ ಮುನಿಗಳಿಗೆ ಅದನ್ನು ಉಪದೇಶ ಮಾಡಿದರು. ॥ 7 ॥

(ಶ್ಲೋಕ - 8)

ಮೂಲಮ್

ಸಾಂಖ್ಯಾಯನಃ ಪಾರಮಹಂಸ್ಯಮುಖ್ಯೋ
ವಿವಕ್ಷಮಾಣೋ ಭಗವದ್ವಿಭೂತೀಃ ।
ಜಗಾದ ಸೋಸ್ಮದ್ಗುರವೇನ್ವಿತಾಯ
ಪರಾಶರಾಯಾಥ ಬೃಹಸ್ಪತೇಶ್ಚ ॥

ಅನುವಾದ

ಪರಮಹಂಸರಲ್ಲಿ ಶ್ರೇಷ್ಠರಾದ ಶ್ರೀಸಾಂಖ್ಯಾಯನರಿಗೆ ಶ್ರೀಭಗವಂತನ ವಿಭೂತಿಗಳನ್ನು ವರ್ಣಿಸ ಬೇಕೆಂಬ ಇಚ್ಛೆಯುಂಟಾದಾಗ ಅವರು ಇದನ್ನು ತಮ್ಮ ಆಪ್ತರೂ, ವಿಧೇಯರೂ, ಶಿಷ್ಯರೂ ಆದ ನಮ್ಮ ಪರಮಗುರುಗಳಾದ ಪರಾಶರರಿಗೂ ಮತ್ತು ಬೃಹಸ್ಪತಿಗೂ ಉಪದೇಶಿಸಿದರು. ॥ 8 ॥

(ಶ್ಲೋಕ - 9)

ಮೂಲಮ್

ಪ್ರೋವಾಚ ಮಹ್ಯಂ ಸ ದಯಾಲುರುಕ್ತೋ
ಮುನಿಃ ಪುಲಸ್ತ್ಯೇನ ಪುರಾಣಮಾದ್ಯಮ್ ।
ಸೋಹಂ ತವೈತತ್ಕಥಯಾಮಿ ವತ್ಸ
ಶ್ರದ್ಧಾಲವೇ ನಿತ್ಯಮನುವ್ರತಾಯ ॥

ಅನುವಾದ

ಇದಾದ ಬಳಿಕ ಪರಮ ದಯಾಳುಗಳಾದ ಪರಾಶರರು ಪುಲಸ್ತ್ಯ ಮುನಿಗಳಿಂದ ಆಶೀರ್ವಾದ ಪಡೆದು ಆ ಆದಿಪುರಾಣವನ್ನು ನನಗೆ ಉಪದೇಶಮಾಡಿದರು. ವತ್ಸಾ ! ನೀನು ಶ್ರದ್ಧಾಳುವೂ, ನಿಷ್ಠೆಯಿಂದ ಅನುಸರಿಸುತ್ತಿರುವ ಭಕ್ತನೂ ಆಗಿರುವುದರಿಂದ ಈಗ ಅದೇ ಪುರಾಣವನ್ನು ನಾನು ನಿನಗೆ ಉಪದೇಶಿಸುತ್ತೇನೆ. ॥ 9 ॥

(ಶ್ಲೋಕ - 10)

ಮೂಲಮ್

ಉದಾಪ್ಲುತಂ ವಿಶ್ವಮಿದಂ ತದಾಸೀದ್
ಯನ್ನಿದ್ರಯಾಮೀಲಿತದೃಙ್ ನ್ಯಮೀಲಯತ್ ।
ಅಹೀಂದ್ರತಲ್ಪೇಧಿಶಯಾನ ಏಕಃ
ಕೃತಕ್ಷಣಃ ಸ್ವಾತ್ಮರತೌ ನಿರೀಹಃ ॥

ಅನುವಾದ

ಸೃಷ್ಟಿಯ ಮೊದಲು ಈ ಜಗತ್ತೆಲ್ಲವೂ ನೀರಿನಲ್ಲಿ ಮುಳುಗಿ ಹೋಗಿತ್ತು. ಆಗ ಶ್ರೀಮನ್ನಾರಾಯಣನೊಬ್ಬನೇ ಶೇಷತಲ್ಪದಲ್ಲಿ ಪವಡಿಸಿದ್ದನು. ಯೋಗನಿದ್ರೆಯಲ್ಲಿ ಕಣ್ಣುಮುಚ್ಚಿಕೊಂಡಿದ್ದರೂ ಆತನ ಜ್ಞಾನಶಕ್ತಿಯು ಮಾತ್ರ ಸಂಪೂರ್ಣವಾಗಿ ಎಚ್ಚರವಾಗಿಯೇ ಇತ್ತು. ಆತನು ಆತ್ಮಾನಂದದಲ್ಲೇ ಮಗ್ನನಾಗಿದ್ದನು. ಯಾವ ಸಂಕಲ್ಪವೂ, ಕ್ರಿಯೆಯೂ ಇಲ್ಲದೆ ಸ್ವಾಮಿಯು ತಾನೇ-ತಾನಾಗಿ ಜಲದಲ್ಲಿ ಮಲಗಿದ್ದನು. ॥ 10 ॥

(ಶ್ಲೋಕ - 11)

ಮೂಲಮ್

ಸೋಂತಃಶರೀರೇರ್ಪಿತಭೂತಸೂಕ್ಷ್ಮಃ
ಕಾಲಾತ್ಮಿಕಾಂ ಶಕ್ತಿಮುದೀರಯಾಣಃ ।
ಉವಾಸ ತಸ್ಮಿನ್ಸಲಿಲೇ ಪದೇ ಸ್ವೇ
ಯಥಾನಲೋ ದಾರುಣಿ ರುದ್ಧವೀರ್ಯಃ ॥

ಅನುವಾದ

ಆಗ ಕಟ್ಟಿಗೆಯಲ್ಲಿ ಅಡಗಿರುವ ಬೆಂಕಿಯಂತೆ-ಸಕಲ ಭೂತ ಗಳೂ ಆತನ ದೇಹದಲ್ಲಿ ಸೂಕ್ಷ್ಮರೂಪದಲ್ಲಿ ಅಡಗಿ ಕೊಂಡಿದ್ದವು. ಎಲ್ಲ ಶಕ್ತಿಗಳನ್ನೂ ಲಯಗೊಳಿಸಿ ಕೊಂಡಿದ್ದರೂ ಸೃಷ್ಟಿಕಾಲ ಬಂದಾಗ ತನ್ನನ್ನು ಎಚ್ಚರಿಸಲು ಕಾಲಶಕ್ತಿಯೊಂದನ್ನು ಮಾತ್ರ ಅವನು ಎಚ್ಚರವಾಗಿ ಇರಿಸಿಕೊಂಡಿದ್ದನು. ॥ 11 ॥

(ಶ್ಲೋಕ - 12)

ಮೂಲಮ್

ಚತುರ್ಯುಗಾನಾಂ ಚ ಸಹಸ್ರಮಪ್ಸು
ಸ್ವಪನ್ಸ್ವಯೋದೀರಿತಯಾ ಸ್ವಶಕ್ತ್ಯಾ ।
ಕಾಲಾಖ್ಯಯಾಸಾದಿತಕರ್ಮತಂತ್ರೋ
ಲೋಕಾನಪೀತಾನ್ ದದೃಶೇ ಸ್ವದೇಹೇ ॥

ಅನುವಾದ

ಹೀಗೆ ಸ್ವಾಮಿಯು ತನ್ನ ಸ್ವರೂಪವಾದ ಚಿತ್ಶಕ್ತಿಯೊಂದಿಗೆ ಒಂದು ಸಾವಿರ ಚತುರ್ಯುಗ ಗಳವರೆಗೆ ನೀರಿನಲ್ಲಿ ಪವಡಿಸಿದಾಗ ಆತನಿಂದಲೇ ನೇಮಿಸಲ್ಪಟ್ಟ ಕಾಲಶಕ್ತಿಯು ಅವನನ್ನು ಜೀವಿಗಳ ಕರ್ಮಗಳನ್ನು ಪ್ರವೃತ್ತಿಗಾಗಿ ಪ್ರೇರೇಪಿಸಿದಾಗ ಅವನು ತನ್ನ ಶರೀರದಲ್ಲಿ ಲೀನವಾದ ಅನಂತ ಲೋಕಗಳನ್ನು ನೋಡಿದನು. ॥ 12 ॥

(ಶ್ಲೋಕ - 13)

ಮೂಲಮ್

ತಸ್ಯಾರ್ಥಸೂಕ್ಷ್ಮಾಭಿನಿವಿಷ್ಟದೃಷ್ಟೇ-
ರಂತರ್ಗತೋರ್ಥೋ ರಜಸಾ ತನೀಯಾನ್ ।
ಗುಣೇನ ಕಾಲಾನುಗತೇನ ವಿದ್ಧಃ
ಸೂಷ್ಯಂಸ್ತದಾಭಿದ್ಯತ ನಾಭಿದೇಶಾತ್ ॥

ಅನುವಾದ

ಸೂಕ್ಷ್ಮರೂಪದಲ್ಲಿರುವ ಲಿಂಗಶರೀರಾದಿಗಳಲ್ಲಿ ಭಗವಂತನ ದೃಷ್ಟಿಯು ಬೀಳಲು ಆಗ ಆತನ ಮನೋಗತವಾದ ಅರ್ಥವು ಕಾಲಶಕ್ತಿಯನ್ನು ಆಶ್ರಯಿಸಿದ ರಜೋಗುಣದಿಂದ ಪ್ರೇರಣೆಗೊಂಡು ಸೃಷ್ಟಿರಚನೆಗಾಗಿ ಅವನ ನಾಭಿಸ್ಥಾನದಿಂದ ಹೊರಗೆ ಉದ್ಭವಿಸಿತು. ॥ 13 ॥

(ಶ್ಲೋಕ - 14)

ಮೂಲಮ್

ಸ ಪದ್ಮಕೋಶಃ ಸಹಸೋದತಿಷ್ಠತ್
ಕಾಲೇನ ಕರ್ಮಪ್ರತಿಬೋಧನೇನ ।
ಸ್ವರೋಚಿಷಾ ತತ್ಸಲಿಲಂ ವಿಶಾಲಂ
ವಿದ್ಯೋತಯನ್ನರ್ಕ ಇವಾತ್ಮಯೋನಿಃ ॥

ಅನುವಾದ

ಕರ್ಮಶಕ್ತಿ ಯನ್ನು ಎಚ್ಚರಗೊಳಿಸುವ ಕಾಲದ ಮೂಲಕ ಮಹಾವಿಷ್ಣುವಿನ ನಾಭಿಯಿಂದ ಪ್ರಕಟಗೊಂಡ ಆ ಸೂಕ್ಷ್ಮತತ್ತ್ವವು ಕಮಲದ ಮೊಗ್ಗಿನ ರೂಪದಲ್ಲಿ ಒಡನೆಯೇ ಮೇಲಕ್ಕೆದ್ದು ಸೂರ್ಯಸದೃಶವಾದ ತನ್ನ ತೇಜಸ್ಸಿನಿಂದ ಆ ಅಪಾರವಾದ ಜಲರಾಶಿಯನ್ನು ಪ್ರಕಾಶ ಗೊಳಿಸಿತು. ॥ 14 ॥

(ಶ್ಲೋಕ - 15)

ಮೂಲಮ್

ತಲ್ಲೋಕಪದ್ಮಂ ಸ ಉ ಏವ ವಿಷ್ಣುಃ
ಪ್ರಾವೀವಿಶತ್ಸರ್ವಗುಣಾವಭಾಸಮ್ ।
ತಸ್ಮಿನ್ಸ್ವಯಂ ವೇದಮಯೋ ವಿಧಾತಾ
ಸ್ವಯಂಭುವಂ ಯಂ ಸ್ಮ ವದಂತಿ ಸೋಭೂತ್ ॥

ಅನುವಾದ

ಸಮಸ್ತ ಗುಣಗಳಿಗೂ ಪ್ರಕಾಶಕವಾದ ಆ ಸರ್ವಜಗದ್ರೂಪವಾದ ಕಮಲವನ್ನು ಭಗವಂತನು ಅಂತ ರ್ಯಾಮಿರೂಪದಲ್ಲಿ ಪ್ರವೇಶಿಸಿದನು. ಆಗ ಸರ್ವವೇದಮಯ ರಾಗಿ ಸೃಷ್ಟಿಕರ್ತರಾಗಿ ‘ಸ್ವಯಂಭೂ’ ಎಂದು ಜ್ಞಾನಿಗಳಿಂದ ಕರೆಯಲ್ಪಡುವ ಬ್ರಹ್ಮದೇವರು ಅದರಿಂದ ಹುಟ್ಟಿಕೊಂಡರು. ॥ 15 ॥

ಮೂಲಮ್

(ಶ್ಲೋಕ - 16)
ತಸ್ಯಾಂ ಸ ಚಾಮ್ಭೋರುಹಕರ್ಣಿಕಾಯಾ-
ಮವಸ್ಥಿತೋ ಲೋಕಮಪಶ್ಯಮಾನಃ ।
ಪರಿಕ್ರಮನ್ ವ್ಯೋಮ್ನಿ ವಿವೃತ್ತನೇತ್ರ-
ಶ್ಚತ್ವಾರಿ ಲೇಭೇನುದಿಶಂ ಮುಖಾನಿ ॥

ಅನುವಾದ

ಆ ಕಮಲದ ಕರ್ಣಿಕೆಯ ಮಧ್ಯದಲ್ಲಿ ಕುಳಿತಿದ್ದ ಬ್ರಹ್ಮದೇವರಿಗೆ ಯಾವ ಲೋಕವೂ ಕಾಣದಿರಲು ಅವರು ಆಕಾಶದಲ್ಲಿ ಕಣ್ಣನ್ನರಳಿಸಿ ಕೊಂಡು ನಾಲ್ಕೂ ಕಡೆಗೆ ಹೊರಳಿಸಿದಾಗ ಅವರಿಗೆ ನಾಲ್ಕು ದಿಕ್ಕು ಗಳಲ್ಲಿಯೂ ನಾಲ್ಕು ಮುಖಗಳು ಪ್ರಕಟಗೊಂಡವು. ॥ 16 ॥

(ಶ್ಲೋಕ - 17)

ಮೂಲಮ್

ತಸ್ಮಾದ್ಯುಗಾಂತಶ್ವ ಸನಾವಘೂರ್ಣ-
ಜಲೋರ್ಮಿಚಕ್ರಾತ್ಸಲಿಲಾದ್ವಿರೂಢಮ್ ।
ಉಪಾಶ್ರಿತಃ ಕಂಜಮು ಲೋಕತತ್ತ್ವಂ
ನಾತ್ಮಾನಮದ್ಧಾವಿದದಾದಿದೇವಃ ॥

ಅನುವಾದ

ಆಗ ಪ್ರಳಯಕಾಲದ ಪ್ರಚಂಡವಾಯುವಿನ ಹೊಡೆತಗಳಿಂದ ಚಿಮ್ಮುತ್ತಿದ್ದ ಜಲರಾಶಿಯಿಂದ ಉದ್ಭವಿಸಿದ ಕಮಲದ ಮೇಲೆ ವಿರಾಜಮಾನರಾದ ಆ ಆದಿಬ್ರಹ್ಮದೇವರಿಗೆ ತಾನು ಯಾರು ? ಮತ್ತು ಆ ಲೋಕತತ್ತ್ವರೂಪೀ ಕಮಲದ ರಹಸ್ಯವು ಏನೂ ತಿಳಿಯಲಿಲ್ಲ. ॥ 17 ॥

(ಶ್ಲೋಕ - 18)

ಮೂಲಮ್

ಕ ಏಷ ಯೋಸಾವಹಮಬ್ಜಪೃಷ್ಠ
ಏತತ್ಕುತೋ ವಾಬ್ಜಮನನ್ಯದಪ್ಸು ।
ಅಸ್ತಿ ಹ್ಯಧಸ್ತಾದಿಹ ಕಿಂಚನೈತ-
ದಧಿಷ್ಠಿ ತಂ ಯತ್ರ ಸತಾ ನು ಭಾವ್ಯಮ್ ॥

ಅನುವಾದ

ಈ ಕಮಲದ ಕರ್ಣಿಕೆಯಲ್ಲಿ ಕುಳಿತಿರುವ ನಾನು ಯಾರು ? ಈ ಪದ್ಮವು ನೀರಿನಲ್ಲಿ ಹುಟ್ಟಲು ಕಾರಣವೇನು ? ಹಾಗಾದರೆ ಇದರ ಕೆಳಗಡೆ ಇದಕ್ಕೆ ಆಧಾರವಾಗಿರುವ ಯಾವುದೋ ಒಂದು ವಸ್ತು ಇರಲೇಬೇಕಲ್ಲವೇ ? ಎಂದು ಅವರು ಆಲೋಚನೆ ಮಾಡಿದರು. ॥ 18 ॥

(ಶ್ಲೋಕ - 19)

ಮೂಲಮ್

ಸ ಇತ್ಥಮುದ್ವೀಕ್ಷ್ಯ ತದಬ್ಜನಾಲ-
ನಾಡೀಭಿರಂತರ್ಜಲಮಾವಿವೇಶ ।
ನಾರ್ವಾಗ್ಗತಸ್ತತ್ಖರನಾಲನಾಲ-
ನಾಭಿಂ ವಿಚಿನ್ವಂಸ್ತದವಿಂದತಾಜಃ ॥

ಅನುವಾದ

ಹೀಗೆ ಆಲೋಚಿಸಿದ ಅವರು ಆ ಕಮಲನಾಳದ ಸೂಕ್ಷ್ಮ ರಂಧ್ರಗಳ ಮೂಲಕವಾಗಿ ಆ ನೀರಿನಲ್ಲಿ ಒಳಹೊಕ್ಕು ಅದರ ತಳವನ್ನು ಹುಡುಕಿದರು. ಹಾಗೇ ಹುಡುಕುತ್ತಾ ಆ ನಾಳದ ನಾಭಿ ಪ್ರದೇಶದ ಒಳಗೆ ಬಂದರೂ ಅವರಿಗೆ ಅದರ ಆಧಾರವು ದೊರೆಯದೆ ಹೋಯಿತು. ॥ 19 ॥

(ಶ್ಲೋಕ - 20)

ಮೂಲಮ್

ತಮಸ್ಯಪಾರೇ ವಿದುರಾತ್ಮಸರ್ಗಂ
ವಿಚಿನ್ವತೋಭೂತ್ಸುಮಹಾಂಸಿಣೇಮಿಃ ।
ಯೋ ದೇಹಭಾಜಾಂ ಭಯಮೀರಯಾಣಃ
ಪರೀಕ್ಷಿಣೋತ್ಯಾಯುರಜಸ್ಯ ಹೇತಿಃ ॥

ಅನುವಾದ

ವಿದುರನೇ ! ಹೀಗೆ ಅಪಾರವಾದ ಕಗ್ಗತ್ತಲೆಯಲ್ಲಿ ತನ್ನ ಉತ್ಪತ್ತಿ ಸ್ಥಾನವನ್ನು ಹುಡುಕುತ್ತಿರಲು ಬ್ರಹ್ಮದೇವರಿಗೆ ಬಹಳ ಕಾಲವು ಕಳೆದು ಹೋಯಿತು. ಆ ಸಮಯವೇ ಪ್ರಾಣಿಗಳಿಗೆ ಭಯವನ್ನುಂಟು ಮಾಡುತ್ತಾ ಅವರ ಆಯುಸ್ಸನ್ನು ಕ್ಷೀಣಗೊಳಿಸುತ್ತಿರುವ ಶ್ರೀಭಗ ವಂತನ ಕಾಲಚಕ್ರವೆಂದು ತಿಳಿ. ॥ 20 ॥

(ಶ್ಲೋಕ - 21)

ಮೂಲಮ್

ತತೋ ನಿವೃತ್ತೋಪ್ರತಿಲಬ್ಧಕಾಮಃ
ಸ್ವಧಿಷ್ಣ್ಯಮಾಸಾದ್ಯ ಪುನಃ ಸ ದೇವಃ ।
ಶನೈರ್ಜಿತಶ್ವಾಸನಿವೃತ್ತಚಿತ್ತೋ
ನ್ಯಷೀದದಾರೂಢಸಮಾಧಿಯೋಗಃ ॥

ಅನುವಾದ

ಹೀಗೆ ಎಷ್ಟು ಹುಡುಕಿ ದರೂ ತನ್ನ ನೆಲೆಯು ಸಿಕ್ಕದಿರಲು ಬ್ರಹ್ಮದೇವರು ವಿಲ ಮನೋ ರಥರಾಗಿ ಅಲ್ಲಿಂದ ಹಿಂದಿರುಗಿ ತಮಗೆ ಆಧಾರವಾಗಿದ್ದ ಕಮಲದ ಮೇಲೆ ಕುಳಿತು ನಿಧಾನವಾಗಿ ಪ್ರಾಣವಾಯುವನ್ನು ಜಯಿಸಿ ಚಿತ್ತದ ಸಂಕಲ್ಪ-ವಿಕಲ್ಪಗಳನ್ನು ತೊರೆದು ಸಮಾಧಿಸ್ಥರಾದರು. ॥ 21 ॥

(ಶ್ಲೋಕ - 22)

ಮೂಲಮ್

ಕಾಲೇನ ಸೋಜಃ ಪುರುಷಾಯುಷಾಭಿ-
ಪ್ರವೃತ್ತಯೋಗೇನ ವಿರೂಢಬೋಧಃ ।
ಸ್ವಯಂ ತದಂತರ್ಹೃದಯೇವಭಾತ-
ಮಪಶ್ಯತಾಪಶ್ಯತ ಯನ್ನ ಪೂರ್ವಮ್ ॥

ಅನುವಾದ

ಹೀಗೆ ಬ್ರಹ್ಮದೇವರಿಗೆ ಪುರುಷನ ಪೂರ್ಣಾಯುಷ್ಯವಾದ ದಿವ್ಯ ವಾದ ನೂರು ವರ್ಷಗಳ ಕಾಲದವರೆಗೆ ಯೋಗಾಭ್ಯಾಸ ಮಾಡಿದ್ದ ರಿಂದ ಜ್ಞಾನೋದಯವಾಗಲು ಆ ಹಿಂದೆ ಎಷ್ಟು ಹುಡುಕಿದರೂ ಕಾಣದಿರುವ ಆ ಸ್ಥಾನವು ತಮ್ಮ ಅಂತಃಕರಣದಲ್ಲೇ ಬೆಳಗುತ್ತಿರು ವುದನ್ನು ಅವರು ನೋಡಿದರು. ॥ 22 ॥

(ಶ್ಲೋಕ - 23)

ಮೂಲಮ್

ಮೃಣಾಲಗೌರಾಯತಶೇಷಭೋಗ-
ಪರ್ಯಂಕ ಏಕಂ ಪುರುಷಂ ಶಯಾನಮ್ ।
ಣಾತಪತ್ರಾಯುತಮೂರ್ಧರತ್ನ-
ದ್ಯುಭಿರ್ಹತಧ್ವಾಂತಯುಗಾಂತತೋಯೇ ॥

ಅನುವಾದ

ಎಂತಹ ದಿವ್ಯದರ್ಶನ ವದು ! ಆ ಪ್ರಳಯಜಲದಲ್ಲಿ ಕಮಲನಾಳದಂತೆ ಬೆಳ್ಳಗೆ ಹೊಳೆ ಯುತ್ತಿದ್ದ ವಿಶಾಲವಾದ ಆದಿ ಶೇಷನ ದಿವ್ಯದೇಹವೆಂಬ ಹಾಸಿಗೆ ಯಮೇಲೆ ಭಗವಾನ್ ಪುರುಷೋತ್ತಮನು ಒಬ್ಬಂಟಿಗನಾಗಿ ಪವಡಿಸಿದ್ದಾನೆ. ಆದಿಶೇಷನ ಹತ್ತು ಸಾವಿರ ಹೆಡೆಗಳು ಕೊಡೆಯಂತೆ ಮೇಲಕ್ಕೆ ಬಿಚ್ಚಿಕೊಂಡು ಹರಡಿ ಕೊಂಡಿವೆ. ಆತನ ಹೆಡೆಗಳ ಮೇಲೆ ಕಿರೀಟಗಳು ಕಂಗೋಳಿಸುತ್ತಿದ್ದು ಅದರಲ್ಲಿ ಕೆತ್ತಿದ್ದ ನವರತ್ನಗಳ ಕಾಂತಿಯಿಂದ ನಾಲ್ಕೂ ದಿಕ್ಕುಗಳ ಕತ್ತಲೆಯೂ ತೊಲಗಿಹೋಗಿದೆ. ॥ 23 ॥

(ಶ್ಲೋಕ - 24)

ಮೂಲಮ್

ಪ್ರೇಕ್ಷಾಂ ಕ್ಷಿಪಂತಂ ಹರಿತೋಪಲಾದ್ರೇಃ
ಸಂಧ್ಯಾಭ್ರನೀವೇರುರುರುಕ್ಮಮೂರ್ಧ್ನಃ ।
ರತ್ನೋದಧಾರೌಷಧಿಸೌಮನಸ್ಯ
ವನಸ್ರಜೋ ವೇಣುಭುಜಾಂಘ್ರಿಪಾಂಘ್ರೇಃ ॥

ಅನುವಾದ

ಶ್ರೀಭಗವಂತನು ತನ್ನ ಶರೀರದ ಶ್ಯಾಮಲಕಾಂತಿಯಿಂದ ನೀಲಮರಕತಮಣಿಪರ್ವತದ ಕಾಂತಿಯನ್ನು ನಾಚಿಸುತ್ತಿದ್ದಾನೆ. ಆತನ ನಡುವಿನ ಪೀತಾಂಬರವು ಪರ್ವತದ ತಪ್ಪಲಿನಲ್ಲಿ ಹರಡಿ ರುವ ಸಂಧ್ಯಾಕಾಲದ ಹೊಂಬಣ್ಣದ ಮೋಡದ ಕಾಂತಿಯನ್ನು ಮಲಿನಗೊಳಿಸುತ್ತಿದೆ. ಆತನ ತಲೆಯ ಮೇಲೆ ಜಗ-ಜಗಿಸುತ್ತಿರುವ ಸ್ವರ್ಣಕಿರೀಟವು ಸ್ವರ್ಣಪರ್ವತದ ಶಿಖರಗಳ ಗರ್ವವನ್ನು ಭಂಜಿಸುತ್ತಿದೆ. ಅವನು ಧರಿಸಿದ ವನಮಾಲೆಯು ಪರ್ವತದ ರತ್ನಗಳ, ಜಲಪಾತದ, ಔಷಧಿಗಳ, ಪುಷ್ಪಗಳ ಶೋಭೆಯನ್ನು ಪರಾಜಯಗೊಳಿಸುತ್ತಿದೆ. ಆತನ ಭುಜ ದಂಡವು ಪರ್ವತದಲ್ಲಿ ಬೆಳೆದ ವೇಣುದಂಡವನ್ನೂ, ಚರಣಗಳು ಅಲ್ಲಿ ಕಂಗೊಳಿಸುತ್ತಿರುವ ಇತರ ವೃಕ್ಷಗಳನ್ನೂ ತಿರಸ್ಕರಿಸುತ್ತವೆ. ॥ 24 ॥

(ಶ್ಲೋಕ - 25)

ಮೂಲಮ್

ಆಯಾಮತೋ ವಿಸ್ತರತಃ ಸ್ವಮಾನ-
ದೇಹೇನ ಲೋಕತ್ರಯಸಂಗ್ರಹೇಣ ।
ವಿಚಿತ್ರದಿವ್ಯಾಭರಣಾಂಶುಕಾನಾಂ
ಕೃತಶ್ರಿಯಾಪಾಶ್ರಿತವೇಷದೇಹಮ್ ॥

ಅನುವಾದ

ಆತನ ದಿವ್ಯ ಮಂಗಳ ವಿಗ್ರಹವು ಮೂರು ಲೋಕಗಳನ್ನೂ ಒಳಗೊಳ್ಳುವ ಉದ್ದಗಲ ಗಳಿಂದ ಕೂಡಿ ತನ್ನ ಕಾಂತಿಯಿಂದ ಬಗೆ-ಬಗೆಯ ದಿವ್ಯ ವಸಾ ಭರಣಗಳಿಗೆ ಕಾಂತಿಯನ್ನು ತುಂಬುತ್ತಿದ್ದರೂ ಪೀತಾಂಬರಾದಿ ತನ್ನ ವೇಷ-ಭೂಷಣಗಳಿಂದ ಸುಸಜ್ಜಿತವಾಗಿದೆ. ॥ 25 ॥

(ಶ್ಲೋಕ - 26)

ಮೂಲಮ್

ಪುಂಸಾಂ ಸ್ವಕಾಮಾಯ ವಿವಿಕ್ತಮಾರ್ಗೈ-
ರಭ್ಯರ್ಚ್ಯತಾಂ ಕಾಮದುಘಾಂಘ್ರಿಪದ್ಮಮ್ ।
ಪ್ರದರ್ಶಯಂತಂ ಕೃಪಯಾ ನಖೇಂದು-
ಮಯೂಖಭಿನ್ನಾಂಗುಲಿಚಾರುಪತ್ರಮ್ ॥

ಅನುವಾದ

ಶ್ರೀಭಗವಂತನು ತನ್ನ ಇಷ್ಟಾರ್ಥಗಳ ಸಿದ್ಧಿಗಾಗಿ ನಾನಾಮಾರ್ಗಗಳಿಂದ ಆರಾಧಿಸುತ್ತಿರುವ ಭಕ್ತಜನರಿಗೆ ಪರಮ ಕರುಣೆಯಿಂದ ಅವರ ಎಲ್ಲ ಇಷ್ಟಗಳಿಗೂ ಕಲ್ಪತರುವಿನಂತಿರುವ ತನ್ನ ಪಾದಾರವಿಂದಗಳ ದರ್ಶನವನ್ನು ದಯಪಾಲಿಸುತ್ತಿರುವನು. ಆ ದಿವ್ಯ ಪಾದಪದ್ಮಗಳ ಎಸಳುಗಳು ಕಾಲುಗುರುಗಳೆಂಬ ತಿಂಗಳು ಬೆಳಕಿನ ಕಾಂತಿಯಿಂದ ಬಿಡಿ-ಬಿಡಿಯಾಗಿ ಕಂಗೊಳಿಸುತ್ತಿವೆ. ॥ 26 ॥

(ಶ್ಲೋಕ - 27)

ಮೂಲಮ್

ಮುಖೇನ ಲೋಕಾರ್ತಿಹರಸ್ಮಿತೇನ
ಪರಿಸ್ಫುರತ್ಕುಂಡಲಮಂಡಿತೇನ ।
ಶೋಣಾಯಿತೇನಾಧರಬಿಂಬಭಾಸಾ
ಪ್ರತ್ಯರ್ಹಯಂತಂ ಸುನಸೇನ ಸುಭ್ರ್ವಾ ॥

ಅನುವಾದ

ಸ್ವಾಮಿಯ ಸುಂದರವಾದ ಮೂಗು, ಚೆಲುವಾದ ಹುಬ್ಬು ಗಳು, ಕಿವಿಗಳಲ್ಲಿ ಹೊಳೆಯುತ್ತಿರುವ ಕುಂಡಲಗಳ ಕಾಂತಿ, ತೊಂಡೆಯ ಹಣ್ಣಿನಂತೆ ಕೆಂಪಾದ ತುಟಿಗಳ ಸೊಬಗು ಹಾಗೂ ಸಕಲ ಲೋಕಗಳ ಪೀಡೆಗಳನ್ನು ಪರಿಹರಿಸುವ ಮಂದಹಾಸದಿಂದ ಶೋಭಿಸುತ್ತಿರುವ ಮುಖಾರವಿಂದದಿಂದ ಉಪಾಸಕರನ್ನು ಸಂಭಾವಿಸಿ ಅಭಿವಂದನೆ ಮಾಡುತ್ತಿದ್ದಾನೆ. ॥ 27 ॥

(ಶ್ಲೋಕ - 28)

ಮೂಲಮ್

ಕದಂಬಕಿಂಜಲ್ಕಪಿಶಂಗವಾಸಸಾ
ಸ್ವಲಂಕೃತಂ ಮೇಖಲಯಾ ನಿತಂಬೇ ।
ಹಾರೇಣ ಚಾನಂತಧನೇನ ವತ್ಸ
ಶ್ರೀವತ್ಸವಕ್ಷಃಸ್ಥಲವಲ್ಲಭೇನ ॥

ಅನುವಾದ

ವತ್ಸಾ ! ಆತನ ಸೊಂಟ ದಲ್ಲಿ ಕದಂಬ ಕುಸುಮದ ಕೇಸರದಂತೆ ಹೊಂಬಣ್ಣದಿಂದ ಹೊಳೆ ಯುತ್ತಿರುವ ಉಡಿಗೆ ಮತ್ತು ಚಿನ್ನದ ಉಡಿದಾರಗಳೂ, ವಕ್ಷಃಸ್ಥಳ ದಲ್ಲಿ ಅಮೂಲ್ಯವಾದ ಹಾರಗಳೂ, ಹೊಂಬಣ್ಣದ ರೇಖೆಗಳುಳ್ಳ ಶ್ರೀವತ್ಸಲಾಂಛನವು ಅಪೂರ್ವವಾದ ಕಾಂತಿಯಿಂದ ಶೋಭಿ ಸುತ್ತಿವೆ. ॥ 28 ॥

(ಶ್ಲೋಕ - 29)

ಮೂಲಮ್

ಪರಾರ್ಧ್ಯಕೇಯೂರಮಣಿಪ್ರವೇಕ-
ಪರ್ಯಸ್ತದೋರ್ದಂಡಸಹಸ್ರಶಾಖಮ್ ।
ಅವ್ಯಕ್ತಮೂಲಂ ಭುವನಾಂಘ್ರಿಪೇಂದ್ರ-
ಮಹೀಂದ್ರಭೋಗೈರಧಿವೀತವಲ್ಶಮ್ ॥

ಅನುವಾದ

ಶ್ರೀಭಗವಂತನು ಆಳವಾಗಿ ಅವ್ಯಕ್ತವಾದ ಬೇರುಗಳುಳ್ಳ ಮಹಾಚಂದನವೃಕ್ಷದ ಬೆಡಗನ್ನು ಬೀರುತ್ತಿದ್ದಾನೆ. ಅಮೂಲ್ಯವಾದ ಕಂಕಣ ಕೇಯೂರಗಳಿಂದಲೂ, ಪರಮೋತ್ಕೃಷ್ಟ ವಾದ ಮಣಿಗಳಿಂದಲೂ ಮೆರೆಯುತ್ತಿರುವ ಆತನ ವಿಶಾಲವಾದ ಭುಜದಂಡಗಳೇ ಆ ವೃಕ್ಷದ ಸಾವಿರಾರು ಶಾಖೆಗಳು. ಶ್ರೀದೇಹ ವನ್ನು ಬಳಸಿರುವ ಆದಿಶೇಷನ ದೇಹವೇ ವೃಕ್ಷವನ್ನು ಸುತ್ತಿಕೊಂಡಿ ರುವ ಮಹಾಸರ್ಪಗಳು. ॥ 29 ॥

(ಶ್ಲೋಕ - 30)

ಮೂಲಮ್

ಚರಾಚರೌಕೋ ಭಗವನ್ಮಹೀಧ್ರ-
ಮಹೀಂದ್ರಬಂಧುಂ ಸಲಿಲೋಪಗೂಢಮ್ ।
ಕಿರೀಟಸಾಹಸ್ರಹಿರಣ್ಯಶೃಂಗ-
ಮಾವಿರ್ಭವತ್ಕೌಸ್ತುಭರತ್ನಗರ್ಭಮ್ ॥

ಅನುವಾದ

ಮಹಾ ಜಲರಾಶಿಯಲ್ಲಿ ಶೇಷ ದೇವರಿಗೆ ಆಶ್ರಯನಾಗಿರುವ ಆದಿದೇವ ಶ್ರೀಮನ್ನಾ ರಾಯಣನು ನೀರಿನಿಂದ ಆವೃತವಾಗಿರುವ ಪರ್ವತರಾಜನಂತೆ ರಾರಾಜಿಸುತ್ತಿ ದ್ದಾನೆ. ಗಿರಿಯು ನಾನಾ ಜೀವರುಗಳಿಗೆ ಆಸರೆಯಾಗಿರುವಂತೆ ಆತನು ಚರಾಚರ ಜೀವಿಗಳಿಗೆಲ್ಲ ಆಶ್ರಯನಾಗಿದ್ದಾನೆ. ಶೇಷದೇವರ ಹೆಡೆಗಳಲ್ಲಿ ಬೆಳಗುತ್ತಿರುವ ಸಹಸ್ರಾರು ಕಿರೀಟಗಳೇ ಪರ್ವತದ ಹೊನ್ನಿನಂತೆ ಹೊಳೆಯುವ ಶಿಖರಗಳು. ಆತನ ವಕ್ಷಃಸ್ಥಳದಲ್ಲಿ ಬೆಳಗುತ್ತಿರುವ ಕೌಸ್ತುಭಮಣಿಯೇ ಪರ್ವತಗರ್ಭದಲ್ಲಿ ಪ್ರಕಟ ಗೊಂಡ ಮಹಾರತ್ನ. ॥ 30 ॥

(ಶ್ಲೋಕ - 31)

ಮೂಲಮ್

ನಿವೀತಮಾಮ್ನಾಯಮಧುವ್ರತಶ್ರಿಯಾ
ಸ್ವಕೀರ್ತಿಮಯ್ಯಾ ವನಮಾಲಯಾ ಹರಿಮ್ ।
ಸೂರ್ಯೇಂದುವಾಯ್ವಗ್ನ್ಯಗಮಂ ತ್ರಿಧಾಮಭಿಃ
ಪರಿಕ್ರಮತ್ಪ್ರಾಧನಿಕೈರ್ದುರಾಸದಮ್ ॥

ಅನುವಾದ

ಪ್ರಭುವಿನ ಕಂಠದಲ್ಲಿ ವೇದಗಳೆಂಬ ದುಂಬಿಗಳು ಉಲಿಯುತ್ತಿರುವ ಕೀರ್ತಿರೂಪವಾದ ವನಮಾಲೆಯು ಮೆರೆಯುತ್ತಿದೆ. ಸೂರ್ಯ, ಚಂದ್ರ, ವಾಯು, ಅಗ್ನಿಗಳೇ ಮುಂತಾದ ದೇವತೆಗಳೂ ಅವನ ಬಳಿಗೆ ತಲುಪಲಾರರು. ಮೂರು ಲೋಕಗಳ ಲ್ಲಿಯೂ ಅಡೆ-ತಡೆಗಳಿಲ್ಲದೇ ಸಂಚರಿಸುವ ಸುದರ್ಶನ ಚಕ್ರವೇ ಮುಂತಾದ ಆಯುಧಗಳೂ ಆತನ ಸುತ್ತಲೂ ಓಡಾಡುತ್ತಿವೆ. ಇದ ರಿಂದಾಗಿ ಅವನ ಬಳಿಗೆ ತಲುಪುವುದು ಕಠಿಣವಾಗಿದೆ. ॥ 31 ॥

(ಶ್ಲೋಕ - 32)

ಮೂಲಮ್

ತರ್ಹ್ಯೇವ ತನ್ನಾಭಿಸರಃಸರೋಜ-
ಮಾತ್ಮಾನಮಂಭಃ ಶ್ವಸನಂ ವಿಯಚ್ಚ ।
ದದರ್ಶ ದೇವೋ ಜಗತೋ ವಿಧಾತಾ
ನಾತಃ ಪರಂ ಲೋಕವಿಸರ್ಗದೃಷ್ಟಿಃ ॥

ಅನುವಾದ

ಆಗ ವಿಶ್ವರಚನೆಯ ಇಚ್ಛೆಯುಳ್ಳ ಲೋಕವಿಧಾತಾ ಬ್ರಹ್ಮ ದೇವರಿಗೆ ಶ್ರೀಭಗವಂತನ ನಾಭಿಸರೋವರದಿಂದ ಪ್ರಕಟಗೊಂಡ ಕಮಲ, ಜಲ, ಆಕಾಶ, ವಾಯು ಮತ್ತು ತನ್ನ ಶರೀರ ಎಂಬ ಐದು ಪದಾರ್ಥಗಳು ಕಾಣಿಸಿದವು. ಸೃಷ್ಟಿಯನ್ನು ರಚಿಸಲು ಈ ಐದಲ್ಲದೆ ಬೇರಾವ ಪದಾರ್ಥಗಳೂ ಅವರಿಗೆ ಕಾಣಿಸಲಿಲ್ಲ. ॥ 32 ॥

ಮೂಲಮ್

(ಶ್ಲೋಕ - 33)
ಸ ಕರ್ಮಬೀಜಂ ರಜಸೋಪರಕ್ತಃ
ಪ್ರಜಾಃ ಸಿಸೃಕ್ಷನ್ನಿಯದೇವ ದೃಷ್ಟ್ವಾ ।
ಅಸ್ತೌದ್ವಿಸರ್ಗಾಭಿಮುಖಸ್ತಮೀಡ್ಯ-
ಮವ್ಯಕ್ತವರ್ತ್ಮನ್ಯಭಿವೇಶಿತಾತ್ಮಾ ॥

ಅನುವಾದ

ರಜೋಗುಣದಿಂದ ವ್ಯಾಪ್ತರಾದ ಬ್ರಹ್ಮದೇವರು ಪ್ರಜೆಯನ್ನು ರಚಿಸಲು ಬಯಸುತ್ತಿದ್ದರು. ಸೃಷ್ಟಿಯ ಕಾರಣರೂಪೀ ಈ ಐದು ಪದಾರ್ಥಗಳನ್ನು ನೋಡಿದಾಗ ಲೋಕರಚನೆಗಾಗಿ ಉತ್ಸುಕರಾದ ಕಾರಣ ಬ್ರಹ್ಮದೇವರು ಅಚಿಂತ್ಯಗತಿಯಾದ ಶ್ರೀಹರಿಯಲ್ಲಿ ಚಿತ್ತ ವನ್ನು ತೊಡಗಿಸಿ ಆ ಪರಮಪೂಜನೀಯ ಪ್ರಭುವನ್ನು ಸ್ತುತಿಸ ತೊಡಗಿದರು. ॥ 33 ॥

ಅನುವಾದ (ಸಮಾಪ್ತಿಃ)

ಎಂಟನೆಯ ಅಧ್ಯಾಯವು ಮುಗಿಯಿತು. ॥8॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಅಷ್ಟಮೋಽಧ್ಯಾಯಃ ॥8॥