೦೭

[ಏಳನೆಯ ಅಧ್ಯಾಯ]

ಭಾಗಸೂಚನಾ

ಮೈತ್ರೇಯ - ವಿದುರರ ಸಂವಾದ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಬ್ರುವಾಣಂ ಮೈತ್ರೇಯಂ ದ್ವೈಪಾಯನಸುತೋ ಬುಧಃ ।
ಪ್ರೀಣಯನ್ನಿವ ಭಾರತ್ಯಾ ವಿದುರಃ ಪ್ರತ್ಯಭಾಷತ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ - ಪರೀಕ್ಷಿದ್ರಾಜನೇ ! ಮೈತ್ರೇಯರ ಇಂತಹ ನಿರೂಪಣೆಯನ್ನು ಕೇಳಿ ವ್ಯಾಸಪುತ್ರ ನಾದ ವಿದುರನು ತನ್ನ ಮಧುರವಾಣಿಯಿಂದ ಅವರನ್ನು ಸಂತೋಷ ಪಡಿಸುತ್ತಾ ಹೀಗೆ ವಿಜ್ಞಾಪಿಸಿಕೊಂಡನು ॥ 1 ॥

(ಶ್ಲೋಕ - 2)

ಮೂಲಮ್ (ವಾಚನಮ್)

ವಿದುರ ಉವಾಚ

ಮೂಲಮ್

ಬ್ರಹ್ಮನ್ಕಥಂ ಭಗವತಶ್ಚಿನ್ಮಾತ್ರಸ್ಯಾವಿಕಾರಿಣಃ ।
ಲೀಲಯಾ ಚಾಪಿ ಯುಜ್ಯೇರನ್ನಿರ್ಗುಣಸ್ಯ ಗುಣಾಃ ಕ್ರಿಯಾಃ ॥

ಅನುವಾದ

ವಿದುರನು ಕೇಳಿದನು - ಬ್ರಾಹ್ಮಣಶ್ರೇಷ್ಠರೇ! ಶ್ರೀಭಗವಂತ ನಾದರೋ ಕೇವಲ ಜ್ಞಾನಸ್ವರೂಪನು, ನಿರ್ವಿಕಾರನು ಮತ್ತು ಸತ್ತ್ವಾದಿ ತ್ರಿಗುಣರಹಿತನು. ಆತನಿಗೆ ಲೀಲಾರ್ಥವಾಗಿಯಾದರೂ ಗುಣಗಳೊಡನೆ, ಕ್ರಿಯೆಗಳೊಡನೆ ಸಂಬಂಧ ಹೇಗೆ ಉಂಟಾಗುವುದು ? ॥ 2 ॥

(ಶ್ಲೋಕ - 3)

ಮೂಲಮ್

ಕ್ರೀಡಾಯಾಮುದ್ಯಮೋರ್ಭಸ್ಯ ಕಾಮಶ್ಚಿಕ್ರೀಡಿಷಾನ್ಯತಃ ।
ಸ್ವತಸ್ತೃಪ್ತಸ್ಯ ಚ ಕಥಂ ನಿವೃತ್ತಸ್ಯ ಸದಾನ್ಯತಃ ॥

ಅನುವಾದ

ಬಾಲಕರಲ್ಲಾದರೋ ಕಾಮನೆ ಹಾಗೂ ಬೇರೆ ಯವರೊಡನೆ ಆಡಬೇಕೆಂಬ ಇಚ್ಛೆ ಇರುತ್ತದೆ. ಅದರಿಂದ ಅವರು ಆಟಕ್ಕಾಗಿ ಪ್ರಯತ್ನಿಸುತ್ತಾರೆ. ಆದರೆ ಭಗವಂತನಾದರೋ ಸ್ವತಃ ನಿತ್ಯತೃಪ್ತನು, ಪೂರ್ಣಕಾಮನು, ಸದಾ ನಿರ್ಲಿಪ್ತನು. ಹೀಗಿರುವಾಗ ಅವನು ಕ್ರೀಡಿಸಲಿಕ್ಕಾಗಿಯೇ ಏಕೆ ಸಂಕಲ್ಪಮಾಡುವನು ? ॥ 3 ॥

(ಶ್ಲೋಕ - 4)

ಮೂಲಮ್

ಅಸ್ರಾಕ್ಷೀದ್ಭಗವಾನ್ವಿಶ್ವಂ ಗುಣಮಯ್ಯಾತ್ಮಮಾಯಯಾ ।
ತಯಾ ಸಂಸ್ಥಾಪಯತ್ಯೇತದ್ಭೂಯಃ ಪ್ರತ್ಯಪಿಧಾಸ್ಯತಿ ॥

ಅನುವಾದ

ಭಗವಂತನು ತನ್ನ ತ್ರಿಗುಣಮಯಿ ಮಾಯೆಯಿಂದ ಜಗತ್ತನ್ನು ರಚಿಸಿರುವನು. ಅದರಿಂದಲೇ ಇದನ್ನು ಪಾಲಿಸುತ್ತಿರುವನು. ಕೊನೆಗೆ ಅದರಿಂದಲೇ ಸಂಹಾರ ಮಾಡುವನು. ॥ 4 ॥

(ಶ್ಲೋಕ - 5)

ಮೂಲಮ್

ದೇಶತಃ ಕಾಲತೋ ಯೋಸಾವವಸ್ಥಾತಃ ಸ್ವತೋನ್ಯತಃ ।
ಅವಿಲುಪ್ತಾವಬೋಧಾತ್ಮಾ ಸ ಯುಜ್ಯೇತಾಜಯಾ ಕಥಮ್ ॥

ಅನುವಾದ

ಭಗವಂತನ ಜ್ಞಾನಕ್ಕೆ ದೇಶ-ಕಾಲ-ಅವಸ್ಥೆಗಳಿಂದಾಗಲೀ, ತನ್ನಿಂದಾಗಲೀ, ಬೇರೆ ನಿಮಿತ್ತದಿಂದಾಗಲೀ ಎಂದಿಗೂ ಲೋಪವಿಲ್ಲ. ಹಾಗಿರುವಾಗ ಅವನಿಗೆ ಮಾಯೆಯೊಡನೆ ಸಂಯೋಗವಾದರೂ ಹೇಗೆ ಉಂಟಾಯಿತು? ॥ 5 ॥

(ಶ್ಲೋಕ - 6)

ಮೂಲಮ್

ಭಗವಾನೇಕ ಏವೈಷ ಸರ್ವಕ್ಷೇತ್ರೇಷ್ವವಸ್ಥಿತಃ ।
ಅಮುಷ್ಯ ದುರ್ಭಗತ್ವಂ ವಾ ಕ್ಲೇಶೋ ವಾ ಕರ್ಮಭಿಃ ಕುತಃ ॥

ಅನುವಾದ

ಭಗವಂತನೊಬ್ಬನೇ ಸಮಸ್ತ ಕ್ಷೇತ್ರಗಳಲ್ಲಿಯೂ ಸಾಕ್ಷಿರೂಪದಿಂದ ಇರುತ್ತಾನೆ. ಮತ್ತೆ ಅವನಿಗೆ ದುರ್ಭಾಗ್ಯವಾಗಲೀ, ಯಾವುದಾದರೂ ಕರ್ಮದಿಂದುಂಟಾದ ಕ್ಲೇಶವಾಗಲೀ ಹೇಗಾಗಬಲ್ಲದು ? ॥ 6 ॥

(ಶ್ಲೋಕ - 7)

ಮೂಲಮ್

ಏತಸ್ಮಿನ್ಮೇ ಮನೋ ವಿದ್ವನ್ ಖಿದ್ಯತೇಜ್ಞಾನಸಂಕಟೇ ।
ತನ್ನಃ ಪರಾಣುದ ವಿಭೋ ಕಶ್ಮಲಂ ಮಾನಸಂ ಮಹತ್ ॥

ಅನುವಾದ

ಮಹಾತ್ಮರೇ ! ಈ ಅಜ್ಞಾನ ಸಂಕಟದಲ್ಲಿ ಬಿದ್ದು ನನ್ನ ಮನಸ್ಸು ಖಿನ್ನವಾಗುತ್ತಿದೆ. ತಾವು ಕೃಪೆಮಾಡಿ ನನ್ನ ಮನಸ್ಸಿನ ಈ ಅಜ್ಞಾನಮೋಹವನ್ನು ನಿವಾರಣೆ ಮಾಡಬೇಕೆಂದು ಕೇಳಿ ಕೊಳ್ಳುತ್ತೇನೆ. ॥ 7 ॥

(ಶ್ಲೋಕ - 8)

ಮೂಲಮ್

ಶ್ರೀಶುಕ ಉವಾಚ
ಸ ಇತ್ಥಂ ಚೋದಿತಃ ಕ್ಷತಾ ತತ್ತ್ವಜಿಜ್ಞಾಸುನಾ ಮುನಿಃ ।
ಪ್ರತ್ಯಾಹ ಭಗವಚ್ಚಿತ್ತಃ ಸ್ಮಯನ್ನಿವ ಗತಸ್ಮಯಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ ರಾಜನೇ ! ತತ್ತ್ವ ಜಿಜ್ಞಾಸುವಾದ ವಿದುರನ ಈ ಪ್ರಶ್ನೆಯನ್ನು ಕೇಳಿ ಅಹಂಕಾರರಹಿತ ರಾದ ಶ್ರೀಮೈತ್ರೇಯರು ಭಗವಂತನನ್ನು ಸ್ಮರಿಸುತ್ತಾ ಮುಗುಳ್ನಕ್ಕು ಹೀಗೆ ಉತ್ತರಿಸಿದರು. ॥ 8 ॥

(ಶ್ಲೋಕ - 9)

ಮೂಲಮ್

ಮೈತ್ರೇಯ ಉವಾಚ
ಸೇಯಂ ಭಗವತೋ ಮಾಯಾ ಯನ್ನಯೇನ ವಿರುಧ್ಯತೇ ।
ಈಶ್ವರಸ್ಯ ವಿಮುಕ್ತಸ್ಯ ಕಾರ್ಪಣ್ಯಮುತ ಬಂಧನಮ್ ॥

ಅನುವಾದ

ಶ್ರೀಮೈತ್ರೇಯರು ಹೇಳುತ್ತಾರೆ - ವಿದುರನೇ! ಎಲ್ಲರ ಸ್ವಾಮಿಯೂ, ನಿತ್ಯಮುಕ್ತನೂ ಆದ ಪರಮಾತ್ಮನಿಗೆ ದೀನತೆ, ಬಂಧನ ಉಂಟಾಗುವುದೆಂದರೆ ಅವಶ್ಯವಾಗಿ ಯುಕ್ತಿಗೆ ವಿರುದ್ಧವಾಗಿದೆ. ಆದರೆ ವಸ್ತುತಃ ಇದೇ ಭಗವಂತನ ಮಾಯೆಯಾಗಿದೆ.॥9॥

(ಶ್ಲೋಕ - 10)

ಮೂಲಮ್

ಯದರ್ಥೇನ ವಿನಾಮುಷ್ಯ ಪುಂಸ ಆತ್ಮವಿಪರ್ಯಯಃ ।
ಪ್ರತೀಯತ ಉಪದ್ರಷ್ಟುಃ ಸ್ವಶಿರಶ್ಛೇದನಾದಿಕಃ ॥

ಅನುವಾದ

ಸ್ವಪ್ನವನ್ನು ಕಾಣುವವನಿಗೆ ತನ್ನ ತಲೆಯೇ ಕತ್ತರಿಸಿದಂತೆ ಅನುಭವ ಉಂಟಾಗಬಹುದು. ಆದರೆ ನಿಜವಾಗಿ ಏನೂ ಆಗಿರುವುದಿಲ್ಲ. ಆದರೂ ಅಜ್ಞಾನದಿಂದ ಅವನು ಸತ್ಯ ವೆಂದೇ ತಿಳಿದು ಗಾಬರಿಪಡುವಂತೆ ಈ ಜೀವನಿಗೆ ಬಂಧನಾದಿಗಳು ಯಾವುದೂ ಇಲ್ಲದಿದ್ದರೂ ಅಜ್ಞಾನವಶದಿಂದ ಹಾಗೇ ಇರುವಂತೆ ಕಂಡುಬರುತ್ತದೆ. ॥ 10 ॥

(ಶ್ಲೋಕ - 11)

ಮೂಲಮ್

ಯಥಾ ಜಲೇ ಚಂದ್ರಮಸಃ ಕಂಪಾದಿಸ್ತತ್ಕೃತೋ ಗುಣಃ ।
ದೃಶ್ಯತೇಸನ್ನಪಿ ದ್ರಷ್ಟುರಾತ್ಮನೋನಾತ್ಮನೋ ಗುಣಃ ॥

ಅನುವಾದ

ಈ ಬಂಧನವೇ ಮುಂತಾದ ತೋರಿಕೆ ಗಳು ಈಶ್ವರನಲ್ಲಿ ಏಕೆ ಆಗುವುದಿಲ್ಲ ? ಅಂದರೆ ನೀರಿನಲ್ಲಿ ಬಿದ್ದ ಚಂದ್ರನ ಬಿಂಬವು ಅಲ್ಲಾಡಿದಂತೆ ಕಂಡುಬಂದರೂ ಆಕಾಶ ದಲ್ಲಿರುವ ಚಂದ್ರನಲ್ಲಿ ಕಂಪನವಿರುವುದಿಲ್ಲ. ಹಾಗೆಯೇ ದೇಹಾಭಿ ಮಾನೀ ಜೀವನಲ್ಲೇ ದೇಹಾದಿ ಮಿಥ್ಯಾಧರ್ಮಗಳ ತೋರಿಕೆ ಕಂಡುಬರುತ್ತದೆ. ಪರಮಾತ್ಮನಲ್ಲಿ ಇಲ್ಲ. ॥ 11 ॥

(ಶ್ಲೋಕ - 12)

ಮೂಲಮ್

ಸ ವೈ ನಿವೃತ್ತಿಧರ್ಮೇಣ ವಾಸುದೇವಾನುಕಂಪಯಾ ।
ಭಗವದ್ಭಕ್ತಿಯೋಗೇನ ತಿರೋಧತ್ತೇ ಶನೈರಿಹ ॥

ಅನುವಾದ

ನಿಷ್ಕಾಮ ಭಾವದಿಂದ ಧರ್ಮಗಳನ್ನು ಆಚರಿಸಿದಾಗ ಭಗವತ್ಕೃಪೆಯಿಂದ ಪ್ರಾಪ್ತವಾದ ಭಕ್ತಿಯೋಗದ ಮೂಲಕ ಈ ಮಿಥ್ಯಾಪ್ರತೀತಿಗಳು ನಿಧಾನವಾಗಿ ತೊಲಗಿಹೋಗುತ್ತವೆ. ॥ 12 ॥

(ಶ್ಲೋಕ - 13)

ಮೂಲಮ್

ಯದೇಂದ್ರಿಯೋಪರಾಮೋಥ ದ್ರಷ್ಟ್ರಾತ್ಮನಿ ಪರೇ ಹರೌ ।
ವಿಲೀಯಂತೇ ತದಾ ಕ್ಲೇಶಾಃ ಸಂಸುಪ್ತಸ್ಯೇವ ಕೃತ್ಸ್ನಶಃ ॥

ಅನುವಾದ

ಸಮಸ್ತ ಇಂದ್ರಿಯಗಳು ವಿಷಯಗಳಿಂದ ಹಿಮ್ಮೆಟ್ಟಿ ಸಾಕ್ಷಿಸ್ವರೂಪವಾದ ಶ್ರೀಹರಿಯಲ್ಲಿ ನಿಶ್ಚಲವಾಗಿ ನೆಲೆಗೊಂಡಾಗ ಗಾಢನಿದ್ದೆಯಲ್ಲಿ ಮಲಗಿದ ಮನುಷ್ಯ ನಂತೆ ಜೀವಿಯ ರಾಗ-ದ್ವೇಷಾದಿ ಎಲ್ಲ ಕ್ಲೇಶಗಳು ಪೂರ್ಣವಾಗಿ ನಾಶಹೊಂದುವವು.॥13॥

ಮೂಲಮ್

(ಶ್ಲೋಕ - 14)
ಅಶೇಷಸಂಕ್ಲೇಶಶಮಂ ವಿಧತ್ತೇ
ಗುಣಾನುವಾದಶ್ರವಣಂ ಮುರಾರೇಃ ।
ಕುತಃ ಪುನಸ್ತಚ್ಚರಣಾರವಿಂದ-
ಪರಾಗಸೇವಾರತಿರಾತ್ಮಲಬ್ಧಾ ॥

ಅನುವಾದ

ಶ್ರೀಕೃಷ್ಣಪರಮಾತ್ಮನ ಗುಣಗಳ ವರ್ಣನೆಯನ್ನೂ, ಶ್ರವಣವನ್ನೂ ಮಾಡುತ್ತಿದ್ದರೆ ಸಮಸ್ತ ದುಃಖ ರಾಶಿಯೂ ಶಾಂತವಾಗಿ ಬಿಡುವುದು. ಹೀಗಿರುವಾಗ ನಮ್ಮ ಹೃದಯದಲ್ಲಿ ಅವನ ಪಾದಾರವಿಂದಗಳ ಧೂಳನ್ನು ಸೇವಿಸ ಬೇಕೆಂಬ ಪರಮಪ್ರೇಮವು ಜಾಗ್ರತಗೊಂಡರೆ ಮತ್ತೆ ಹೇಳುವುದೇನಿದೆ? ॥ 14 ॥

(ಶ್ಲೋಕ - 15)

ಮೂಲಮ್

ವಿದುರ ಉವಾಚ
ಸಂಛಿನ್ನಃ ಸಂಶಯೋ ಮಹ್ಯಂ ತವ ಸೂಕ್ತಾಸಿನಾ ವಿಭೋ ।
ಉಭಯತ್ರಾಪಿ ಭಗವನ್ಮನೋ ಮೇ ಸಂಪ್ರಧಾವತಿ ॥

ಅನುವಾದ

ವಿದುರನೆಂದನು ಮಹಾತ್ಮರೇ ! ನನ್ನ ಪ್ರಶ್ನೆಗೆ ಉತ್ತರವಾಗಿ ತಾವು ಹೇಳಿದ ಸೂಕ್ತಿಯೆಂಬ ಖಡ್ಗದಿಂದ ನನ್ನ ಸಂದೇಹವು ಸಮೂಲವಾಗಿ ಕತ್ತರಿಸಿಹೋಯಿತು. ಈಗ ನನ್ನ ಮನಸ್ಸು ಪರ ಮಾತ್ಮನ ಸ್ವತಂತ್ರತೆ ಮತ್ತು ಜೀವಿಯ ಪರತಂತ್ರತೆ ಎಂಬ ಎರಡು ವಿಷಯಗಳನ್ನು ಚೆನ್ನಾಗಿ ತಿಳಿದುಕೊಂಡಿದೆ. ॥ 15 ॥

(ಶ್ಲೋಕ - 16)

ಮೂಲಮ್

ಸಾಧ್ವೇತದ್ವ್ಯಾಹೃತಂ ವಿದ್ವನ್ನಾತ್ಮಮಾಯಾಯನಂ ಹರೇಃ ।
ಆಭಾತ್ಯಪಾರ್ಥಂ ನಿರ್ಮೂಲಂ ವಿಶ್ವಮೂಲಂ ನ ಯದ್ಬಹಿಃ ॥

ಅನುವಾದ

ಜ್ಞಾನಿ ಶ್ರೇಷ್ಠರೇ ! ‘ಜೀವಿಯಲ್ಲಿ ಕಂಡುಬರುವ ಕ್ಲೇಶಾದಿಗಳ ಆಧಾರ ಕೇವಲ ಭಗವಂತನ ಮಾಯೆಯೇ ಆಗಿದೆ ’ ಎಂದು ತಾವು ತಿಳಿಸಿದುದು ಸರಿಯಾಗಿಯೇ ಇದೆ. ಆ ಕ್ಲೇಶವು ಮಿಥ್ಯಾ ಹಾಗೂ ಆಧಾರರಹಿತವಾಗಿದೆ. ಏಕೆಂದರೆ, ಈ ವಿಶ್ವದ ಮೂಲಕಾರಣವು ಮಾಯೆಯಲ್ಲದೆ ಬೇರೆ ಏನೂ ಇಲ್ಲ. ॥ 16 ॥

(ಶ್ಲೋಕ - 17)

ಮೂಲಮ್

ಯಶ್ಚ ಮೂಢತಮೋ ಲೋಕೇ ಯಶ್ಚ ಬುದ್ಧೇಃ ಪರಂ ಗತಃ ।
ತಾವುಭೌ ಸುಖಮೇಧೇತೇ ಕ್ಲಿಶ್ಯತ್ಯಂತರಿತೋ ಜನಃ ॥

ಅನುವಾದ

ಈ ಪ್ರಪಂಚದಲ್ಲಿ ಎರಡು ವರ್ಗದ ಜನರೇ ಸುಖವಾಗಿರುತ್ತಾರೆ (1) ಏನೂ ಅರಿಯದ (ಅಜ್ಞಾನದಿಂದ ಕೂಡಿದ) ಕಡುಮೂರ್ಖರು. (2) ಬುದ್ಧಿ ಮುಂತಾದವುಗಳಿಂದ ಮೀರಿರುವ ಶ್ರೀಭಗವಂತನನ್ನು ಹೊಂದಿದವರು. ನಡುವಿನ ಶ್ರೇಣಿಯ ಜನರು ಸಂಶಯಗಳಿಗೆ ವಶರಾಗಿ ದುಃಖಪಡುತ್ತಿರುತ್ತಾರೆ. ॥ 17 ॥

(ಶ್ಲೋಕ - 18)

ಮೂಲಮ್

ಅರ್ಥಾಭಾವಂ ವಿನಿಶ್ಚಿತ್ಯ ಪ್ರತೀತಸ್ಯಾಪಿ ನಾತ್ಮನಃ ।
ತಾಂ ಚಾಪಿ ಯುಷ್ಮಚ್ಚರಣಸೇವಯಾಹಂ ಪರಾಣುದೇ ॥

ಅನುವಾದ

ಪೂಜ್ಯರೇ! ಈ ಅನಾತ್ಮ ವಸ್ತುಗಳು ವಾಸ್ತವವಾಗಿ ಇಲ್ಲವೇ ಇಲ್ಲ. ಕೇವಲ ಕಂಡುಬರುತ್ತವಷ್ಟೆ ಎಂಬ ನಿಶ್ಚಯವು ನಿಮ್ಮ ಕೃಪೆಯಿಂದ ನನಗೆ ಉಂಟಾಯಿತು. ಈಗ ನಿಮ್ಮ ಚರಣಗಳ ಸೇವೆಯ ಪ್ರಭಾವದಿಂದ ಆ ಪ್ರತೀತಿಗಳನ್ನು ಹೋಗಲಾಡಿಸಿಕೊಳ್ಳುವೆನು.॥18॥

(ಶ್ಲೋಕ - 19)

ಮೂಲಮ್

ಯತ್ಸೇವಯಾ ಭಗವತಃ ಕೂಟಸ್ಥಸ್ಯ ಮಧುದ್ವಿಷಃ ।
ರತಿರಾಸೋ ಭವೇತ್ತೀವ್ರಃ ಪಾದಯೋರ್ವ್ಯಸನಾರ್ದನಃ ॥

ಅನುವಾದ

ಈ ತಮ್ಮ ಚರಣಗಳ ಸೇವೆಯಿಂದ ನಿತ್ಯಸಿದ್ಧ ಭಗವಾನ್ ಮಧುಸೂದನನ ಚರಣಕಮಲದಲ್ಲಿ ಉತ್ಕಟಪ್ರೇಮ ಮತ್ತು ಆನಂದದ ವೃದ್ಧಿ ಯಾಗುತ್ತದೆ. ಅದು ಹುಟ್ಟು ಸಾವುಗಳನ್ನು ನಾಶಮಾಡಿ ಬಿಡುತ್ತದೆ. ॥ 19 ॥

(ಶ್ಲೋಕ - 20)

ಮೂಲಮ್

ದುರಾಪಾ ಹ್ಯಲ್ಪತಪಸಃ ಸೇವಾ ವೈಕುಂಠ ವರ್ತ್ಮಸು ।
ಯತ್ರೋಪಗೀಯತೇ ನಿತ್ಯಂ ದೇವದೇವೋ ಜನಾರ್ದನಃ ॥

ಅನುವಾದ

ಭಗವದ್ಭಕ್ತರಾದ ಮಹಾತ್ಮರೇ ಭಗವತ್ ಪ್ರಾಪ್ತಿಯ ಸಾಕ್ಷಾತ್ ಮಾರ್ಗವಾಗಿದ್ದಾರೆ. ಅವರಲ್ಲಿ ಸದಾಕಾಲ ದೇವದೇವನಾದ ಶ್ರೀಹರಿಯ ಗುಣಗಾನವಾಗುತ್ತಾ ಇರುತ್ತದೆ. ಅಂತಹ ಮಹಾತ್ಮರ ಸೇವಾಭಾಗ್ಯವು ಅಲ್ಪಪುಣ್ಯವುಳ್ಳವರಿಗೆ ದೊರಕಲಾರದು. ॥ 20 ॥

(ಶ್ಲೋಕ - 21)

ಮೂಲಮ್

ಸೃಷ್ಟ್ವಾಗ್ರೇ ಮಹದಾದೀನಿ ಸವಿಕಾರಾಣ್ಯನುಕ್ರಮಾತ್ ।
ತೇಭ್ಯೋ ವಿರಾಜಮುದ್ಧೃತ್ಯ ತಮನು ಪ್ರಾವಿಶದ್ವಿಭುಃ ॥

ಅನುವಾದ

ಪೂಜ್ಯರೇ ! ಸೃಷ್ಟಿಯ ಪ್ರಾರಂಭದಲ್ಲಿ ಭಗವಂತನು ಕ್ರಮವಾಗಿ ಮಹತ್ತು ಮುಂತಾದ ತತ್ತ್ವಗಳನ್ನು ಹಾಗೂ ಅದರ ವಿಕಾರಗಳನ್ನು ರಚಿಸಿ ಮತ್ತೆ ಅವುಗಳ ಅಂಶಗಳಿಂದ ವಿರಾಟ್ಪುರುಷನನ್ನು ನಿರ್ಮಿಸಿದನು. ಅನಂತರ ತಾನೇ ಅದರಲ್ಲಿ ಪ್ರವೇಶಿಸಿದನು ಎಂದು ತಾವು ತಿಳಿಸಿದಿರಿ. ॥ 21 ॥

(ಶ್ಲೋಕ - 22)

ಮೂಲಮ್

ಯಮಾಹುರಾದ್ಯಂ ಪುರುಷಂ ಸಹಸ್ರಾಂಘ್ರ್ಯೂರುಬಾಹುಕಮ್ ।
ಯತ್ರ ವಿಶ್ವ ಇಮೇ ಲೋಕಾಃ ಸವಿಕಾಶಂ ಸಮಾಸತೇ ॥

ಅನುವಾದ

ಆ ವಿರಾಟ್ಪುರುಷನಿಗೆ ಸಾವಿರಾರು ಕಾಲುಗಳು, ಮೊಣಕಾಲುಗಳೂ, ಬಾಹುಗಳು ಇವೆ. ಆತನನ್ನೇ ವೇದಗಳು ಆದಿಪುರುಷನೆಂದು ಕರೆಯುತ್ತವೆ. ವಿಸ್ತಾರಗೊಂಡ ಈ ಸಮಸ್ತಲೋಕಗಳು ಆತನಲ್ಲಿಯೇ ಅಡಕವಾಗಿವೆ. ॥ 22 ॥

(ಶ್ಲೋಕ - 23)

ಮೂಲಮ್

ಯಸ್ಮಿಂದಶವಿಧಃ ಪ್ರಾಣಃ ಸೇಂದ್ರಿಯಾರ್ಥೆಂದ್ರಿಯಸಿವೃತ್ ।
ತ್ವಯೇರಿತೋ ಯತೋ ವರ್ಣಾಸ್ತದ್ವಿಭೂತೀರ್ವದಸ್ವ ನಃ ॥

(ಶ್ಲೋಕ - 24)

ಮೂಲಮ್

ಯತ್ರ ಪುತ್ರೈಶ್ಚ ಪೌತ್ರೈಶ್ಚ ನಪ್ತೃಭಿಃ ಸಹ ಗೋತ್ರಜೈಃ ।
ಪ್ರಜಾ ವಿಚಿತ್ರಾಕೃತಯ ಆಸನ್ಯಾಭಿರಿದಂ ತತಮ್ ॥

ಅನುವಾದ

ಇಂದ್ರಿಯ ವಿಷಯಗಳಿಂದಲೂ, ತ್ರಿಗುಣಗಳಿಂದಲೂ ಕೂಡಿದ ಇಂದ್ರಿಯಬಲ, ಮನೋಬಲ, ಶಾರೀರಿಕಬಲಗಳೊಂದಿಗೆ ಹತ್ತು ವಿಧವಾದ ಪ್ರಾಣಗಳೂ ಆತನಲ್ಲಿಯೇ ಸೇರಿಕೊಂಡಿವೆ. ಬ್ರಾಹ್ಮಣಾದಿ ವರ್ಣಗಳೂ ಆತನಿಂದಲೇ ಹುಟ್ಟಿದವು ಎಂಬು ದನ್ನೂ ವರ್ಣಿಸಿದಿರಿ. ಈಗ ನನಗೆ ಆ ಪರಮಾತ್ಮನ ಬ್ರಹ್ಮಾದಿ ವಿಭೂತಿಗಳನ್ನು ತಿಳಿಸಿರಿ. ಈ ಇಡೀ ಬ್ರಹ್ಮಾಂಡವನ್ನು ತುಂಬಿ ಕೊಂಡಿರುವ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳೇ ಮುಂತಾದ ಬಂಧುಗಳೊಡನೆ ಕೂಡಿದ ಎಲ್ಲ ಪ್ರಜೆಗಳೂ ಆ ವಿಭೂತಿ ಯಿಂದಲೇ ಉಂಟಾದವರಲ್ಲವೇ ! ॥ 23-24 ॥

(ಶ್ಲೋಕ - 25)

ಮೂಲಮ್

ಪ್ರಜಾಪತೀನಾಂ ಸ ಪತಿಶ್ಚಕ್ಲೃಪೇ ಕಾನ್ ಪ್ರಜಾಪತೀನ್ ।
ಸರ್ಗಾಂಶ್ಚೈವಾನುಸರ್ಗಾಂಶ್ಚ ಮನೂನ್ಮನ್ವಂತರಾಧಿಪಾನ್ ॥

ಅನುವಾದ

ಆ ವಿರಾಟ್ ಪುರುಷನು ಬ್ರಹ್ಮಾದಿ ಪ್ರಜಾಪತಿಗಳಿಗೂ ಪ್ರಭುವು. ಅವನು ಯಾವ-ಯಾವ ಪ್ರಜಾಪತಿಗಳನ್ನು ಸೃಷ್ಟಿಸಿದನು ? ಸೃಷ್ಟಿ, ಉಪಸೃಷ್ಟಿ ಮತ್ತು ಮನ್ವಂತರಾಧಿಪತಿಗಳನ್ನು ಯಾವ ಕ್ರಮದಿಂದ ಸೃಷ್ಟಿಸಿದನು ? ॥ 25 ॥

(ಶ್ಲೋಕ - 26)

ಮೂಲಮ್

ಏತೇಷಾಮಪಿ ವಂಶಾಂಶ್ಚ ವಂಶಾನುಚರಿತಾನಿ ಚ ।
ಉಪರ್ಯಧಶ್ಚ ಯೇ ಲೋಕಾ ಭೂಮೇರ್ಮಿತ್ರಾತ್ಮಜಾಸತೇ ॥

(ಶ್ಲೋಕ - 27)

ಮೂಲಮ್

ತೇಷಾಂ ಸಂಸ್ಥಾಂ ಪ್ರಮಾಣಂ ಚ ಭೂರ್ಲೋಕಸ್ಯ ಚ ವರ್ಣಯ ।
ತಿರ್ಯಂಗ್ಮಾನುಷದೇವಾನಾಂ ಸರೀಸೃಪಪತತಿಣಾಮ್ ।
ವದ ನಃ ಸರ್ಗಸಂವ್ಯೆಹಂ ಗಾರ್ಭಸ್ವೇದದ್ವಿಜೋದ್ಭಿದಾಮ್ ॥

ಅನುವಾದ

ಮೈತ್ರೇಯರೇ ! ಆ ಮನುಗಳ ವಂಶ ಗಳನ್ನೂ, ಆ ವಂಶಗಳಿಗೆ ಸೇರಿದ ರಾಜರ ಚರಿತ್ರೆಗಳನ್ನೂ ವರ್ಣಿ ಸಿರಿ. ಭೂಮಿಗೆ ಮೇಲೆ ಯಾವ ಲೋಕಗಳಿವೆ ? ಕೆಳಗೆ ಯಾವ ಲೋಕಗಳಿವೆ ? ಭೂಲೋಕದ ವಿಸ್ತಾರವೇನು ? ಸ್ಥಿತಿಯೇನು ? ಎಂಬುದನ್ನೂ ವಿವರಿಸಿರಿ. ತಿರ್ಯಕ್, ಮನುಷ್ಯರು, ದೇವತೆಗಳು, ತೆವಳುವ ಪ್ರಾಣಿಗಳು, ಪಕ್ಷಿಗಳು, ಜರಾಯುಜ, ಸ್ವೇದಜ, ಅಂಡಜ, ಉದ್ಭಿಜ್ಜ ಈ ನಾಲ್ಕು ಪ್ರಕಾರದ ಪ್ರಾಣಿಗಳ ಉತ್ಪತ್ತಿ ಕ್ರಮ ವನ್ನೂ ತಿಳಿಸಿರಿ. ॥ 26-27 ॥

(ಶ್ಲೋಕ - 28)

ಮೂಲಮ್

ಗುಣಾವತಾರೈರ್ವಿಶ್ವಸ್ಯ ಸರ್ಗಸ್ಥಿತ್ಯಪ್ಯಯಾಶ್ರಯಮ್ ।
ಸೃಜತಃ ಶ್ರೀನಿವಾಸಸ್ಯ ವ್ಯಾಚಕ್ಷ್ವೋದಾರವಿಕ್ರಮಮ್ ॥

ಅನುವಾದ

ಶ್ರೀಹರಿಯು ಸೃಷ್ಟಿಮಾಡುವಾಗ ಜಗತ್ತಿನ ಉತ್ಪತ್ತಿ, ಸ್ಥಿತಿ, ಸಂಹಾರಕ್ಕಾಗಿ ತನ್ನ ಗುಣಾವತಾರವಾದ ಬ್ರಹ್ಮಾ, ವಿಷ್ಣು, ಮಹೇಶ್ವರ ರೂಪಗಳಲ್ಲಿಯೂ, ಇತರ ಅವತಾರ ರೂಪಗಳಲ್ಲಿಯೂ ಯಾವ ಮಂಗಳಕರವಾದ ಲೀಲೆಗಳನ್ನು ಮಾಡಿದನು ? ಎಂಬುದನ್ನು ವರ್ಣಿಸಿರಿ. ॥ 28 ॥

(ಶ್ಲೋಕ - 29)

ಮೂಲಮ್

ವರ್ಣಾಶ್ರಮವಿಭಾಗಾಂಶ್ಚ ರೂಪಶೀಲಸ್ವಭಾವತಃ ।
ಋಷೀಣಾಂ ಜನ್ಮಕರ್ಮಾದಿ ವೇದಸ್ಯ ಚ ವಿಕರ್ಷಣಮ್ ॥

(ಶ್ಲೋಕ - 30)

ಮೂಲಮ್

ಯಜ್ಞಸ್ಯ ಚ ವಿತಾನಾನಿ ಯೋಗಸ್ಯ ಚ ಪಥಃ ಪ್ರಭೋ ।
ನೈಷ್ಕರ್ಮ್ಯಸ್ಯ ಚ ಸಾಂಖ್ಯಸ್ಯ ತಂತ್ರಂ ವಾ ಭಗವತ್ಸ್ಮೃತಮ್ ॥

(ಶ್ಲೋಕ - 31)

ಮೂಲಮ್

ಪಾಖಂಡಪಥವೈಷಮ್ಯಂ ಪ್ರತಿಲೋಮನಿವೇಶನಮ್ ।
ಜೀವಸ್ಯ ಗತಯೋ ಯಾಶ್ಚ ಯಾವತೀರ್ಗುಣಕರ್ಮಜಾಃ ॥

ಅನುವಾದ

ವೇಷ, ಆಚಾರ, ಸ್ವಭಾವಗಳಿಗೆ ಅನುಸಾರವಾಗಿ ವರ್ಣಾಶ್ರಮಗಳ ವಿಭಾಗ, ಋಷಿಗಳ ಜನ್ಮ-ಕರ್ಮಾದಿಗಳೂ, ವೇದಗಳ ವಿಭಾಗ, ಯಜ್ಞಗಳ ವಿಸ್ತಾರ, ಯೋಗದ ಮಾರ್ಗ, ಜ್ಞಾನಮಾರ್ಗ ಮತ್ತು ಅದಕ್ಕೆ ಸಾಧನವಾದ ಸಾಂಖ್ಯಮಾರ್ಗ ಹಾಗೂ ಶ್ರೀಭಗವಂತನು ಉಪ ದೇಶಿಸಿದ ನಾರದ ಪಾಂಚರಾತ್ರಾದಿ ತಂತ್ರಶಾಸಗಳನ್ನೂ, ವಿಭಿನ್ನ ಪಾಷಂಡ ಮತಗಳ ಮಾರ್ಗಭೇದಗಳನ್ನೂ, ಅದರ ಪ್ರಚಾರದಿಂದ ಉಂಟಾ ಗುವ ವೈಷಮ್ಯವನ್ನೂ, ಪ್ರತಿಲೋಮ ವರ್ಣಗಳ ಸೃಷ್ಟಿ, ಸ್ಥಿತಿಗಳನ್ನೂ, ಬೇರೆ-ಬೇರೆ ಗುಣಗಳಿಂದಲೂ ಕರ್ಮಗಳಿಂದಲೂ ಜೀವರಿಗೆ ಉಂಟಾಗುವ ಬಗೆ-ಬಗೆಯಗತಿಯನ್ನೂ ನಿರೂಪಿಸಿರಿ. ॥ 29-31 ॥

(ಶ್ಲೋಕ - 32)

ಮೂಲಮ್

ಧರ್ಮಾರ್ಥಕಾಮಮೋಕ್ಷಾಣಾಂ ನಿಮಿತ್ತಾನ್ಯವಿರೋಧತಃ ।
ವಾರ್ತಾಯಾ ದಂಡ ನೀತೇಶ್ಚ ಶ್ರುತಸ್ಯ ಚ ವಿಧಿಂ ಪೃಥಕ್ ॥

(ಶ್ಲೋಕ - 33)

ಮೂಲಮ್

ಶ್ರಾದ್ಧಸ್ಯ ಚ ವಿಧಿಂ ಬ್ರಹ್ಮನ್ ಪಿತೃಣಾಂ ಸರ್ಗಮೇವ ಚ ।
ಗ್ರಹನಕ್ಷತ್ರತಾರಾಣಾಂ ಕಾಲಾವಯವಸಂಸ್ಥಿತಿಮ್ ॥

ಅನುವಾದ

ಮಹಾತ್ಮರೇ ! ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ, ಪರಸ್ಪರ ವಿರೋಧ ಬರದಂತೆ ಸಾಧಿಸುವ ಮಾರ್ಗಗಳನ್ನೂ, ವಾಣಿಜ್ಯ, ದಂಡನೀತಿ ಮತ್ತು ಶಾಸಶ್ರವಣದ ವಿಧಿಗಳನ್ನೂ, ಶ್ರಾದ್ಧದ ವಿಧಿಯನ್ನೂ, ಪಿತೃದೇವತೆಗಳ ಸೃಷ್ಟಿಯನ್ನೂ, ಹಾಗೆಯೇ ಕಾಲಚಕ್ರದಲ್ಲಿ ಗ್ರಹ, ನಕ್ಷತ್ರ, ತಾರಾಗಣಗಳ ಸ್ಥಿತಿಗಳನ್ನೂ, ಬೇರೆ-ಬೇರೆಯಾಗಿ ವರ್ಣಿಸಿರಿ. ॥ 32-33 ॥

(ಶ್ಲೋಕ - 34)

ಮೂಲಮ್

ದಾನಸ್ಯ ತಪಸೋ ವಾಪಿ ಯಚ್ಚೇಷ್ಟಾ ಪೂರ್ತಯೋಃ ಲಮ್ ।
ಪ್ರವಾಸಸ್ಥಸ್ಯ ಯೋ ಧರ್ಮೋ ಯಶ್ಚ ಪುಂಸ ಉತಾಪದಿ ॥

ಅನುವಾದ

ದಾನ, ತಪಸ್ಸು, ಇಷ್ಟಾ- ಪೂರ್ತಕರ್ಮಗಳ ಲವೇನು? ಪ್ರವಾಸ ಹಾಗೂ ಆಪತ್ಕಾಲದಲ್ಲಿ ಮನುಷ್ಯನು ಯಾವ ಧರ್ಮವನ್ನು ಆಚ ರಿಸಬೇಕು ? ॥ 34 ॥

(ಶ್ಲೋಕ - 35)

ಮೂಲಮ್

ಯೇನ ವಾ ಭಗವಾಂಸ್ತುಷ್ಯೇದ್ಧರ್ಮಯೋನಿರ್ಜನಾರ್ದನಃ ।
ಸಂಪ್ರಸೀದತಿ ವಾ ಯೇಷಾಮೇತದಾಖ್ಯಾಹಿ ಚಾನಘ ॥

ಅನುವಾದ

ಪುಣ್ಯಾತ್ಮರಾದ ಮೈತ್ರೇಯರೇ ! ಧರ್ಮಕ್ಕೆ ಮೂಲ ಕಾರಣನಾದ ಭಗವಾನ್ ಜನಾರ್ದನನು ಯಾವ ಆಚರಣೆ ಗಳಿಂದ ಸಂತುಷ್ಟನಾಗುತ್ತಾನೆ ? ಯಾರ ಮೇಲೆ ಅನುಗ್ರಹ ತೋರು ವನು ? ಎಂಬುದನ್ನೂ ವರ್ಣಿಸಿರಿ. ॥ 35 ॥

(ಶ್ಲೋಕ - 36)

ಮೂಲಮ್

ಅನುವ್ರತಾನಾಂ ಶಿಷ್ಯಾಣಾಂ ಪುತ್ರಾಣಾಂ ಚ ದ್ವಿಜೋತ್ತಮ ।
ಅನಾಪೃಷ್ಟಮಪಿ ಬ್ರೂಯುರ್ಗುರವೋ ದೀನವತ್ಸಲಾಃ ॥

ಅನುವಾದ

ದ್ವಿಜಶ್ರೇಷ್ಠರೇ ! ದೀನವತ್ಸಲರಾದ ಗುರುಗಳು, ತಮಗೆ ವಿಧೇಯರಾಗಿರುವ ಶಿಷ್ಯರಿಗೂ ಮತ್ತು ಪುತ್ರರಿಗೂ ಕೇಳದೆಯೇ ಹಿತೋಪದೇಶ ಮಾಡುತ್ತಾರೆ. ॥ 36 ॥

ಮೂಲಮ್

(ಶ್ಲೋಕ - 37)
ತತ್ತ್ವಾನಾಂ ಭಗವಂಸ್ತೇಷಾಂ ಕತಿಧಾ ಪ್ರತಿಸಂಕ್ರಮಃ ।
ತತ್ರೇಮಂ ಕ ಉಪಾಸೀರನ್ ಕ ಉ ಸ್ವಿದನುಶೇರತೇ ॥

ಅನುವಾದ

ಪೂಜ್ಯರೇ ! ಮಹದಾದಿ ತತ್ತ್ವಗಳ ಪ್ರಳಯಗಳು ಎಷ್ಟು ಪ್ರಕಾರಗಳಾಗಿವೆ ? ಶ್ರೀಭಗವಂತನು ಯೋಗನಿದ್ರೆಯಲ್ಲಿರು ವಾಗ ಅವುಗಳಲ್ಲಿ ಯಾವ-ಯಾವ ತತ್ತ್ವಗಳು ಅವನ ಸೇವೆ ಮಾಡುತ್ತವೆ ? ಯಾವ-ಯಾವ ತತ್ತ್ವಗಳು ಅವನಲ್ಲಿ ಲಯ ಹೊಂದುತ್ತವೆ ? ॥ 37 ॥

(ಶ್ಲೋಕ - 38)

ಮೂಲಮ್

ಪುರುಷಸ್ಯ ಚ ಸಂಸ್ಥಾನಂ ಸ್ವರೂಪಂ ವಾ ಪರಸ್ಯ ಚ ।
ಜ್ಞಾನಂ ಚ ನೈಗಮಂ ಯತ್ತದ್ಗುರುಶಿಷ್ಯಪ್ರಯೋಜನಮ್ ॥

ಅನುವಾದ

ಜೀವದ ತತ್ತ್ವವೇನು ? ಪರಮ ಪುರುಷನ ಸ್ವರೂಪವೇನು ? ಉಪನಿಷತ್ ಪ್ರತಿಪಾದಿತ ಜ್ಞಾನದ ಸ್ವರೂಪ ಮತ್ತು ಗುರು-ಶಿಷ್ಯರ ಪಾರಸ್ಪರಿಕ ಪ್ರಯೋಜನವೇನು ? ॥ 38 ॥

(ಶ್ಲೋಕ - 39)

ಮೂಲಮ್

ನಿಮಿತ್ತಾನಿ ಚ ತಸ್ಯೇಹ ಪ್ರೋಕ್ತಾನ್ಯನಘ ಸೂರಿಭಿಃ ।
ಸ್ವತೋ ಜ್ಞಾನಂ ಕುತಃ ಪುಂಸಾಂ ಭಕ್ತಿರ್ವೈರಾಗ್ಯಮೇವ ವಾ ॥

ಅನುವಾದ

ಪುಣ್ಯಾತ್ಮರೇ ! ಆ ಜ್ಞಾನದ ಪ್ರಾಪ್ತಿಗಾಗಿ ವಿದ್ವಾಂಸರು ಯಾವ-ಯಾವ ಉಪಾಯಗಳನ್ನು ಹೇಳಿರುವರು ? ಏಕೆಂದರೆ, ಮನುಷ್ಯ ರಿಗೆ ಜ್ಞಾನ, ಭಕ್ತಿ, ವೈರಾಗ್ಯಗಳು ತಾವೇ-ತಾವಾಗಿ ಉಂಟಾಗ ಲಾರದಷ್ಟೇ ? ॥ 39 ॥

(ಶ್ಲೋಕ - 40)

ಮೂಲಮ್

ಏತಾನ್ಮೇ ಪೃಚ್ಛತಃ ಪ್ರಶ್ನಾನ್ ಹರೇಃ ಕರ್ಮವಿವಿತ್ಸಯಾ ।
ಬ್ರೂಹಿ ಮೇಜ್ಞಸ್ಯ ಮಿತ್ರತ್ವಾದಜಯಾ ನಷ್ಟಚಕ್ಷುಷಃ ॥

ಅನುವಾದ

ಬ್ರಾಹ್ಮಣ ಶ್ರೇಷ್ಠರೇ ! ಮಾಯಾ-ಮೋಹ ದಿಂದಾಗಿ ನನ್ನ ವಿಚಾರದೃಷ್ಟಿಯು ನಷ್ಟವಾಗಿ ಬಿಟ್ಟಿದೆ. ನಾನು ಅಜ್ಞನಾಗಿದ್ದೇನೆ. ತಾವೋ ನನ್ನ ಪರಮ ಹಿತೈಷಿಗಳು. ಆದ್ದರಿಂದ ಶ್ರೀಹರಿಲೀಲೆಯ ಜ್ಞಾನವನ್ನು ಪಡೆಯುವ ಇಚ್ಛೆಯಿಂದ ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರವನ್ನು ದಯಪಾಲಿಸಿರಿ. ॥ 40 ॥

ಮೂಲಮ್

(ಶ್ಲೋಕ - 41)
ಸರ್ವೇ ವೇದಾಶ್ಚ ಯಜ್ಞಾಶ್ಚ ತಪೋ ದಾನಾನಿ ಚಾನಘ ।
ಜೀವಾಭಯಪ್ರದಾನಸ್ಯ ನ ಕುರ್ವೀರನ್ ಕಲಾಮಪಿ ॥

ಅನುವಾದ

ಪುಣ್ಯಾತ್ಮರಾದ ಮೈತ್ರೇಯರೇ ! ಸಮಸ್ತ ವೇದಗಳ ಅಧ್ಯಯನ, ಯಜ್ಞ, ತಪಸ್ಸು, ದಾನಾದಿಗಳಿಂದ ಉಂಟಾಗುವ ಪುಣ್ಯವು ಭಗ ವತ್ತತ್ತ್ವದ ಉಪದೇಶದಿಂದ ಜೀವಿಯನ್ನು ಜನ್ಮ-ಮೃತ್ಯು ಭಯ ದಿಂದ ಬಿಡಿಸಿ ಅವನನ್ನು ನಿರ್ಭಯನನ್ನಾಗಿಸುವುದರಲ್ಲಿ ಉಂಟಾ ಗುವ ಪುಣ್ಯದ ಹದಿನಾರನೆಯ ಒಂದು ಭಾಗಕ್ಕೂ ಸಾಟಿಯಾಗ ಲಾರದು. ॥ 41 ॥

ಮೂಲಮ್

(ಶ್ಲೋಕ - 42)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸ ಇತ್ಥಮಾಪೃಷ್ಟ ಪುರಾಣಕಲ್ಪಃ
ಕುರುಪ್ರಧಾನೇನ ಮುನಿಪ್ರಧಾನಃ ।
ಪ್ರವೃದ್ಧಹರ್ಷೋ ಭಗವತ್ಕಥಾಯಾಂ
ಸಂಚೋದಿತಸ್ತಂ ಪ್ರಹಸನ್ನಿವಾಹ ॥

ಅನುವಾದ

ಶ್ರೀಶುಕಮಹರ್ಷಿಗಳು ಹೇಳುತ್ತಾರೆ ಎಲೈ ರಾಜೇಂದ್ರಾ ! ಕುರುಶ್ರೇಷ್ಠನಾದ ವಿದುರನು ಹೀಗೆ ಪುರಾಣದ ವಿಷಯದಲ್ಲಿ ಪ್ರಶ್ನೆ ಮಾಡಿದಾಗ, ಮುನಿಶ್ರೇಷ್ಠರಾದ ಮೈತ್ರೇಯರಿಗೆ ತುಂಬಾ ಸಂತೋಷ ವಾಯಿತು. ಶ್ರೀಭಗವಂತನ ಕಥೆಯನ್ನು ಹೇಳಲು ಪ್ರೇರಣೆ ಬಂದದ್ದ ರಿಂದ ಹರ್ಷಗೊಂಡು ನಸುನಗುತ್ತಾ ಆತನಿಗೆ ಹೀಗೆ ಹೇಳ ತೊಡಗಿದರು. ॥ 42 ॥

ಅನುವಾದ (ಸಮಾಪ್ತಿಃ)

ಏಳನೆಯ ಅಧ್ಯಾಯವು ಮುಗಿಯಿತು. ॥7॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಸಪ್ತಮೋಽಧ್ಯಾಯಃ ॥7॥