೦೬

[ಆರನೆಯ ಅಧ್ಯಾಯ]

ಭಾಗಸೂಚನಾ

ವಿರಾಟ್ಶರೀರದ ಉತ್ಪತ್ತಿ

(ಶ್ಲೋಕ - 1)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ಇತಿ ತಾಸಾಂ ಸ್ವಶಕ್ತೀನಾಂ ಸತೀನಾಮಸಮೇತ್ಯ ಸಃ ।
ಪ್ರಸುಪ್ತಲೋಕತಂತ್ರಾಣಾಂ ನಿಶಾಮ್ಯ ಗತಿಮೀಶ್ವರಃ ॥

(ಶ್ಲೋಕ - 2)

ಮೂಲಮ್

ಕಾಲಸಂಜ್ಞಾಂ ತದಾ ದೇವೀಂ ಬಿಭ್ರಚ್ಛಕ್ತಿಮುರುಕ್ರಮಃ ।
ತ್ರಯೋವಿಂಶತಿತತ್ತ್ವಾನಾಂ ಗಣಂ ಯುಗಪದಾವಿಶತ್ ॥

ಅನುವಾದ

ಮೈತ್ರೇಯ ಮಹರ್ಷಿಗಳು ಹೇಳಿದರು ಮಹಾತ್ಮನಾದ ವಿದುರನೇ! ತನ್ನ ಮಹತ್ತತ್ತ್ವವೇ ಮುಂತಾದ ಶಕ್ತಿಗಳು ಹೀಗೆ ಒಂದಕ್ಕೊಂದು ಸೇರದೆ ಬೇರೆಯಾಗಿದ್ದ ಕಾರಣ ಸೃಷ್ಟಿಕಾರ್ಯವನ್ನು ಮುಂದರಿಸಲು ಅಸಮರ್ಥವಾಗಿದ್ದುದನ್ನು ಕಂಡು ಆ ಸರ್ವಶಕ್ತ ನಾದ ಭಗವಂತನು ಕಾಲಶಕ್ತಿಯನ್ನು ಸ್ವೀಕರಿಸಿ ಮಹತ್ತತ್ತ್ವ, ಅಹಂ ಕಾರ, ಪಂಚಭೂತ, ಪಂಚತನ್ಮಾತ್ರೆಗಳು, ಮನಸ್ಸು ಸಹಿತ ಹನ್ನೊಂದು ಇಂದ್ರಿಯಗಳು ಈ ಇಪ್ಪತ್ತಮೂರು ತತ್ತ್ವಗಳ ಸಮುದಾಯವನ್ನು ಒಟ್ಟಿಗೆ ಒಳಹೊಕ್ಕನು.॥1-2॥

(ಶ್ಲೋಕ - 3)

ಮೂಲಮ್

ಸೋನುಪ್ರವಿಷ್ಟೋ ಭಗವಾಂಶ್ಚೇಷ್ಟಾ ರೂಪೇಣ ತಂ ಗಣಮ್ ।
ಭಿನ್ನಂ ಸಂಯೋಜಯಾಮಾಸ ಸುಪ್ತಂ ಕರ್ಮ ಪ್ರಬೋಧಯನ್ ॥

ಅನುವಾದ

ಹೀಗೆ ಒಳಹೊಕ್ಕು ಮಹಾ ಪ್ರಭುವು ಪ್ರಸುಪ್ತವಾಗಿದ್ದ ಜೀವಿಗಳ ಅದೃಷ್ಟ ಕರ್ಮಗಳನ್ನು ಎಚ್ಚರಗೊಳಿಸಿ ಮತ್ತೆ ಪರಸ್ಪರ ದೂರವಾಗಿದ್ದ ಆ ತತ್ತ್ವಸಮೂಹವನ್ನು ತನ್ನ ಕ್ರಿಯಾಶಕ್ತಿಯ ಮೂಲಕ ಒಂದುಗೂಡಿಸಿದನು.॥3॥

(ಶ್ಲೋಕ - 4)

ಮೂಲಮ್

ಪ್ರಬುದ್ಧ ಕರ್ಮಾ ದೈವೇನ ತ್ರಯೋವಿಂಶತಿಕೋ ಗಣಃ ।
ಪ್ರೇರಿತೋಜನಯತ್ಸ್ವಾಭಿರ್ಮಾತ್ರಾಭಿರಧಿಪೂರುಷಮ್ ॥

ಅನುವಾದ

ಹೀಗೆ ಭಗವಂತನು ಅದೃಷ್ಟವನ್ನು ಕಾರ್ಯೋನ್ಮುಖಗೊಳಿಸಿದಾಗ ಆ ಇಪ್ಪತ್ತಮೂರು ತತ್ತ್ವಗಳ ಸಮೂಹವು ಭಗವಂತನ ಪ್ರೇರಣೆ ಯಿಂದ ತಮ್ಮ ಅಂಶಗಳಿಂದ ಅಧಿಪುರುಷ-ವಿರಾಟ್ಪುರುಷನನ್ನು ಸೃಷ್ಟಿಸಿದವು.॥4॥

(ಶ್ಲೋಕ - 5)

ಮೂಲಮ್

ಪರೇಣ ವಿಶತಾ ಸ್ವಸ್ಮಿನ್ಮಾತ್ರಯಾ ವಿಶ್ವಸೃಗ್ಗಣಃ ।
ಚುಕ್ಷೋಭಾನ್ಯೋನ್ಯಮಾಸಾದ್ಯ ಯಸ್ಮಿಲ್ಲೋಕಾಶ್ಚರಾಚರಾಃ ॥

ಅನುವಾದ

ಅರ್ಥಾತ್-ಭಗವಂತನು ಅಂಶರೂಪದಿಂದ ತನ್ನ ಆ ಶರೀರದಲ್ಲಿ ಪ್ರವೇಶಿಸಿದಾಗ ಆ ವಿಶ್ವರಚನೆ ಮಾಡುವ ಮಹತ್ತತ್ತ್ವಾದಿ ಸಮುದಾಯವು ಒಂದರೊಳಗೆ ಒಂದು ಬೆರೆತು ಪರಿಣಾಮಹೊಂದಿತು. ಈ ತತ್ತ್ವಗಳ ಪರಿಣಾಮವೇ ವಿರಾಟ್ ಪುರುಷನಾಗಿದ್ದಾನೆ. ಅದರಲ್ಲೇ ಚರಾಚರ ಜಗತ್ತು ಇರುವುದು.॥5॥

(ಶ್ಲೋಕ - 6)

ಮೂಲಮ್

ಹಿರಣ್ಮಯಃ ಸ ಪುರುಷಃ ಸಹಸ್ರಪರಿವತ್ಸರಾನ್ ।
ಆಂಡಕೋಶ ಉವಾಸಾಪ್ಸು ಸರ್ವಸತ್ತ್ವೋಪಬೃಂಹಿತಃ ॥

ಅನುವಾದ

ಆ ಹಿರಣ್ಮಯನಾದ ವಿರಾಟ್ಪುರುಷನು ಸಮಸ್ತ ಜೀವ ರಾಶಿಗಳನ್ನು ತನ್ನಲ್ಲಿರಿಸಿಕೊಂಡು ಜಲರಾಶಿಯ ಮಧ್ಯದಲ್ಲಿರುವ ಬ್ರಹ್ಮಾಂಡವೆಂಬ ಕೋಶದಲ್ಲಿ ಒಂದು ಸಾವಿರ ದಿವ್ಯವರ್ಷ ಗಳವರೆಗೆ ವಾಸಿಸುತ್ತಿದ್ದನು.॥6॥

(ಶ್ಲೋಕ - 7)

ಮೂಲಮ್

ಸ ವೈ ವಿಶ್ವಸೃಜಾಂ ಗರ್ಭೋ ದೇವಕರ್ಮಾತ್ಮಶಕ್ತಿಮಾನ್ ।
ವಿಬಭಾಜಾತ್ಮನಾತ್ಮಾನಮೇಕಧಾ ದಶಧಾ ತ್ರಿಧಾ ॥

ಅನುವಾದ

ಅನಂತರ ಭಗವಂತನ ಜ್ಞಾನ, ಕ್ರಿಯೆ ಮತ್ತು ಆತ್ಮಶಕ್ತಿಗಳಿಂದ ಸಂಪನ್ನನಾದ ಆ ತತ್ತ್ವಗರ್ಭನಾದ ವಿರಾಟ್ಪುರುಷನು ತನ್ನನ್ನು ತಾನೇ ವಿಭಾಗ ಮಾಡಿಕೊಂಡನು. ಒಂದು ಹೃದಯರೂಪವಾಗಿಯೂ, ಹತ್ತುಪ್ರಾಣಗಳ ರೂಪ ವಾಗಿಯೂ, ಆಧ್ಯಾತ್ಮಿಕ, ಆಧಿದೈವಿಕ, ಆದಿಭೌತಿಕಗಳೆಂಬ ಮೂರು ರೀತಿಯಾಗಿ ವಿಭಾಗಿಸಿಕೊಂಡನು.॥7॥

(ಶ್ಲೋಕ - 8)

ಮೂಲಮ್

ಏಷ ಹ್ಯಶೇಷಸತ್ತ್ವಾನಾಮಾತ್ಮಾಂಶಃ ಪರಮಾತ್ಮನಃ ।
ಆದ್ಯೋವತಾರೋ ಯತ್ರಾಸೌ ಭೂತಗ್ರಾಮೋ ವಿಭಾವ್ಯತೇ ॥

ಅನುವಾದ

ಈ ವಿರಾಟ್ ಪುರುಷನೇ ಪ್ರಥಮ ಜೀವನಾದ ಕಾರಣ ಸಮಸ್ತ ಜೀವರ ಆತ್ಮಾ, ಜೀವರೂಪನಾದ್ದರಿಂದ ಪರಮಾತ್ಮನ ಅಂಶ ಮತ್ತು ಶ್ರೀಭಗವಂತನ ಮೊದಲನೆಯ ಅಭಿವ್ಯಕ್ತಿ ಆಗಿರುವುದರಿಂದ ಅವನ ಮೊದಲನೆಯ ಅವತಾರವಾಗಿದೆ. ಈ ಸಮಸ್ತ ಭೂತ ಸಮುದಾಯವು ಇದರಲ್ಲೇ ಪ್ರಕಾಶಗೊಳ್ಳುವುದು.॥8॥

(ಶ್ಲೋಕ - 9)

ಮೂಲಮ್

ಸಾಧ್ಯಾತ್ಮಃ ಸಾಧಿದೈವಶ್ಚ ಸಾಧಿಭೂತ ಇತಿ ತ್ರಿಧಾ ।
ವಿರಾಟ್ ಪ್ರಾಣೋ ದಶವಿಧ ಏಕಧಾ ಹೃದಯೇನ ಚ ॥

ಅನುವಾದ

ಇವನು ಅಧಾತ್ಮ, ಅಧಿಭೂತ, ಅಧಿದೈವರೂಪದಿಂದ ಮೂರು ಬಗೆಯಾಗಿಯೂ, ಪ್ರಾಣರೂಪದಿಂದ ಹತ್ತು ಬಗೆಯಾಗಿಯೂ, ಹೃದಯ ರೂಪದಿಂದ ಒಂದು* ಬಗೆ ಯಾಗಿಯೂ ಇರುವನೆಂದು ತಿಳಿಯಬೇಕು. ॥ 9 ॥

ಟಿಪ್ಪನೀ
  • ಹತ್ತು ಇಂದ್ರಿಯಗಳೊಡನೆ ಮನಸ್ಸು ಅಧ್ಯಾತ್ಮವಾಗಿದೆ, ಇಂದ್ರಿಯಾದಿಗಳ ವಿಷಯಗಳು ಅಧಿಭೂತ, ಇಂದ್ರಿಯಗಳ ಅಧಿಷ್ಠಾತೃ ದೇವತೆಗಳು ಅಧಿದೈವವಾಗಿದೆ. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎಂಬ ಐದು ಪ್ರಾಣಗಳು, ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯಗಳೆಂಬ ಐದು ಉಪಪ್ರಾಣಗಳು, ಹೀಗೆ ಒಟ್ಟಿಗೆ ಹತ್ತು ಪ್ರಾಣಗಳು.

(ಶ್ಲೋಕ - 10)

ಮೂಲಮ್

ಸ್ಮರನ್ ವಿಶ್ವಸೃಜಾಮೀಶೋ ವಿಜ್ಞಾಪಿತಮಧೋಕ್ಷಜಃ ।
ವಿರಾಜಮತಪತ್ ಸ್ವೇನ ತೇಜಸೈಷಾಂ ವಿವೃತ್ತಯೇ ॥

ಅನುವಾದ

ಮತ್ತೆ ವಿಶ್ವರಚನೆಯನ್ನು ಮಾಡುವ ಮಹತ್ತತ್ತ್ವಾದಿಗಳ ಅಧಿಪತಿಯಾದ ಶ್ರೀಭಗವಂತನು ಆ ತತ್ತ್ವಗಳ ಪ್ರಾರ್ಥನೆಯನ್ನು ನೆನೆದು ಅವುಗಳ ವೃತ್ತಿಗಳನ್ನು ಎಚ್ಚರಿಸಲಿಕ್ಕಾಗಿ ತನ್ನ ಚೈತನ್ಯ ರೂಪ ವಾದ ತೇಜಸ್ಸಿನಿಂದ ಆ ವಿರಾಟ್ಪುರುಷನನ್ನು ಪ್ರಕಾಶಿತಗೊಳಿಸಿ, ಎಚ್ಚರಿಸಿದನು. ॥ 10 ॥

(ಶ್ಲೋಕ - 11)

ಮೂಲಮ್

ಅಥ ತಸ್ಯಾಭಿತಪ್ತಸ್ಯ ಕತಿ ಚಾಯತನಾನಿ ಹ ।
ನಿರಭಿದ್ಯಂತ ದೇವಾನಾಂ ತಾನಿ ಮೇ ಗದತಃ ಶೃಣು ॥

ಅನುವಾದ

ಆತನು ಎಚ್ಚರಗೊಂಡೊಡನೆಯೇ ದೇವತೆ ಗಳಿಗೋಸ್ಕರ ಎಷ್ಟು ಸ್ಥಾನಗಳು ಪ್ರಕಟಗೊಂಡವು ಎಂಬುದನ್ನು ಹೇಳುತ್ತೇನೆ, ಕೇಳು. ॥ 11 ॥

(ಶ್ಲೋಕ - 12)

ಮೂಲಮ್

ತಸ್ಯಾಗ್ನಿರಾಸ್ಯಂ ನಿರ್ಭಿನ್ನಂ ಲೋಕಪಾಲೋವಿಶತ್ಪದಮ್ ।
ವಾಚಾ ಸ್ವಾಂಶೇನ ವಕ್ತವ್ಯಂ ಯಯಾಸೌ ಪ್ರತಿಪದ್ಯತೇ ॥

ಅನುವಾದ

ಮೊಟ್ಟಮೊದಲಿಗೆ ಆ ವಿರಾಟ್ ಪುರುಷನ ಮುಖವು ಪ್ರಕಟವಾಯಿತು. ಅದರಲ್ಲಿ ಲೋಕಪಾಲ ನಾದ ಅಗ್ನಿಯು ತನ್ನ ಅಂಶವಾದ ವಾಗಿಂದ್ರಿಯದೊಡನೆ ಪ್ರವೇಶ ಮಾಡಿದನು. ಅದರಿಂದಲೇ ಈ ಜೀವವು ಮಾತನಾಡುತ್ತಾನೆ. ॥ 12 ॥

(ಶ್ಲೋಕ - 13)

ಮೂಲಮ್

ನಿರ್ಭಿನ್ನಂ ತಾಲು ವರುಣೋ ಲೋಕಪಾಲೋವಿಶದ್ಧರೇಃ ।
ಜಿಹ್ವಯಾಂಶೇನ ಚ ರಸಂ ಯಯಾಸೌ ಪ್ರತಿಪದ್ಯತೇ ॥

ಅನುವಾದ

ಮತ್ತೆ ವಿರಾಟ್ಪುರುಷನ ದವಡೆ ಉತ್ಪನ್ನವಾಯಿತು. ಅದರಲ್ಲಿ ಲೋಕಪಾಲನಾದ ವರುಣನು ತನ್ನ ಅಂಶ ರಸನೇಂದ್ರಿಯ ಸಹಿತ ಸ್ಥಿತನಾದನು. ಅದರಿಂದ ಜೀವವು ರಸಗಳನ್ನು ಗ್ರಹಿಸುತ್ತದೆ. ॥ 13 ॥

(ಶ್ಲೋಕ - 14)

ಮೂಲಮ್

ನಿರ್ಭಿನ್ನೇ ಅಶ್ವಿನೌ ನಾಸೇ ವಿಷ್ಣೋರಾವಿಶತಾಂ ಪದಮ್ ।
ಘ್ರಾಣೇನಾಂಶೇನ ಗಂಧಸ್ಯ ಪ್ರತಿಪತ್ತಿರ್ಯತೋ ಭವೇತ್ ॥

ಅನುವಾದ

ಇದಾದ ಬಳಿಕ ಆ ವಿರಾಟ್ಪುರುಷನ ಮೂಗು ಹೊಳ್ಳೆಗಳು ಪ್ರಕಟವಾದುವು. ಇಬ್ಬರು ಅಶ್ವಿನೀಕುಮಾರರು ತಮ್ಮ ಅಂಶವಾದ ಘ್ರಾಣೇಂದ್ರಿಯದೊಡನೆ ಅವುಗಳನ್ನು ಹೊಕ್ಕರು. ಅದರಿಂದ ಜೀವಿಯು ವಾಸನೆಯನ್ನು ಗ್ರಹಿಸುತ್ತದೆ. ॥ 14 ॥

(ಶ್ಲೋಕ - 15)

ಮೂಲಮ್

ನಿರ್ಭಿನ್ನೇ ಅಕ್ಷಿಣೀ ತ್ವಷ್ಟಾ ಲೋಕಪಾಲೋವಿಶದ್ವಿಭೋಃ ।
ಚಕ್ಷುಷಾಂಶೇನ ರೂಪಾಣಾಂ ಪ್ರತಿಪತ್ತಿರ್ಯತೋ ಭವೇತ್ ॥

ಅನುವಾದ

ಹೀಗೆಯೇ ಆ ವಿರಾಟ್ಪುರುಷನ ದೇಹದಲ್ಲಿ ಕಣ್ಣುಗಳು ಪ್ರಕಟಗೊಂಡಾಗ, ಅವುಗಳಲ್ಲಿ ತಮ್ಮ ಅಂಶನೇತ್ರೇಂದ್ರಿಯಸಹಿತ ಲೋಕಪತಿ ಸೂರ್ಯನು ಪ್ರವೇಶಿಸಿದನು. ಆ ನೇತ್ರೇಂದ್ರಿಯದಿಂದ ಜೀವನಿಗೆ ವಿವಿಧ ರೂಪಗಳ ಅರಿವು ಉಂಟಾಗುತ್ತದೆ. ॥ 15 ॥

(ಶ್ಲೋಕ - 16)

ಮೂಲಮ್

ನಿರ್ಭಿನ್ನಾ ನ್ಯಸ್ಯ ಚರ್ಮಾಣಿ ಲೋಕಪಾಲೋನಿಲೋವಿಶತ್ ।
ಪ್ರಾಣೇನಾಂಶೇನ ಸಂಸ್ಪರ್ಶಂ ಯೇನಾಸೌ ಪ್ರತಿಪದ್ಯತೇ ॥

ಅನುವಾದ

ಮತ್ತೆ ಆ ವಿರಾಟ್ಪುರುಷನಲ್ಲಿ ತ್ವಚೆ, ತೊಗಲು ಉತ್ಪನ್ನವಾಯಿತು. ಅದರಲ್ಲಿ ತನ್ನ ಅಂಶ ತ್ವಗಿಂದ್ರಿಯಸಹಿತ ಲೋಕಪಾಲನಾದ ವಾಯುವು ಒಳಹೊಕ್ಕನು. ಆ ತ್ವಗಿಂದ್ರಿಯದಿಂದ ಜೀವಿಯು ಸ್ಪರ್ಶವನ್ನು ಅನುಭವಿಸುವನು. ॥ 16 ॥

(ಶ್ಲೋಕ - 17)

ಮೂಲಮ್

ಕರ್ಣಾವಸ್ಯ ವಿನಿರ್ಭಿನ್ನೌ ಧಿಷ್ಣ್ಯಂ ಸ್ವಂ ವಿವಿಶುರ್ದಿಶಃ ।
ಶ್ರೋತ್ರೇಣಾಂಶೇನ ಶಬ್ದಸ್ಯ ಸಿದ್ಧಿಂ ಯೇನ ಪ್ರಪದ್ಯತೇ ॥

ಅನುವಾದ

ಆ ವಿರಾಟ್ಪುರುಷನಲ್ಲಿ ಕಿವಿಯ ಬಿಲಗಳು ಪ್ರಕಟವಾದಾಗ ಅದರಲ್ಲಿ ತನ್ನ ಅಂಶ ಶ್ರವಣೇಂದ್ರಿಯಸಹಿತ ದಿಕ್ಕುಗಳು ಪ್ರವೇಶಿಸಿದವು. ಆ ಶ್ರವಣೇಂದ್ರಿಯ ದಿಂದ ಜೀವಿಗೆ ಶಬ್ದದ ಜ್ಞಾನ ಉಂಟಾಗುತ್ತದೆ. ॥ 17 ॥

(ಶ್ಲೋಕ - 18)

ಮೂಲಮ್

ತ್ವಚಮಸ್ಯ ವಿನಿರ್ಭಿನ್ನಾಂ ವಿವಿಶುರ್ಧಿಷ್ಣ್ಯಮೋಷಧೀಃ ।
ಅಂಶೇನ ರೋಮಭಿಃ ಕಂಡೂಂ ಯೈರಸೌ ಪ್ರತಿಪದ್ಯತೇ ॥

ಅನುವಾದ

ಮತ್ತೆ ವಿರಾಟ್ಪುರುಷನಲ್ಲಿ ಚರ್ಮವು ಉತ್ಪನ್ನವಾಯಿತು. ಅದರಲ್ಲಿ ತನ್ನ ಅಂಶ ರೋಮಗಳೊಡನೆ ಔಷಧಿಗಳು ಸ್ಥಿತವಾದುವು. ಆ ರೋಮಗಳಿಂದಲೇ ಜೀವಿಗಳಿಗೆ ತುರಿಕೆ ಮುಂತಾದವುಗಳ ಅನುಭವವಾಗುವುದು. ॥ 18 ॥

(ಶ್ಲೋಕ - 19)

ಮೂಲಮ್

ಮೇಢ್ರಂ ತಸ್ಯ ವಿನಿರ್ಭಿನ್ನಂ ಸ್ವಧಿಷ್ಣ್ಯಂ ಕ ಉಪಾವಿಶತ್ ।
ರೇತಸಾಂಶೇನ ಯೇನಾಸಾವಾನಂದಂ ಪ್ರತಿಪದ್ಯತೇ ॥

ಅನುವಾದ

ಈಗ ಆ ವಿರಾಟ್ಪುರುಷನ ಶ್ರೀವಿಗ್ರಹದಲ್ಲಿ ಲಿಂಗವು ಉತ್ಪನ್ನವಾಯಿತು. ತನ್ನ ಆಶ್ರಯವಾದ ಅದನ್ನು ಪ್ರಜಾಪತಿಯು ತನ್ನ ಅಂಶವಾದ ವೀರ್ಯದೊಡನೆ ಪ್ರವೇಶಿಸಿದನು. ಇದರಿಂದ ಜೀವವು ಆನಂದವನ್ನು ಅನುಭವಿಸು ವನು. ॥ 19 ॥

(ಶ್ಲೋಕ - 20)

ಮೂಲಮ್

ಗುದಂ ಪುಂಸೋ ವಿನಿರ್ಭಿನ್ನಂ ಮಿತ್ರೋ ಲೋಕೇಶ ಆವಿಶತ್ ।
ಪಾಯುನಾಂಶೇನ ಯೇನಾಸೌ ವಿಸರ್ಗಂ ಪ್ರತಿಪದ್ಯತೇ ॥

ಅನುವಾದ

ಮತ್ತೆ ವಿರಾಟ್ಪುರುಷನಲ್ಲಿ ಗುದವು ಪ್ರಕಟ ಗೊಳ್ಳಲು ಲೋಕಪಾಲ ಮಿತ್ರನು ತನ್ನ ಅಂಶ ಪಾಯು-ಇಂದ್ರಿಯ ದೊಡನೆ ಅದರಲ್ಲಿ ಹೊಕ್ಕನು. ಈ ಇಂದ್ರಿಯದಿಂದಲೇ ಜೀವನು ಮಲತ್ಯಾಗ ಮಾಡುವನು. ॥ 20 ॥

(ಶ್ಲೋಕ - 21)

ಮೂಲಮ್

ಹಸ್ತಾವಸ್ಯ ವಿನಿರ್ಭಿನ್ನಾವಿಂದ್ರಃ ಸ್ವರ್ಪತಿರಾವಿಶತ್ ।
ವಾರ್ತಯಾಂಶೇನ ಪುರುಷೋ ಯಯಾ ವೃತ್ತಿಂ ಪ್ರಪದ್ಯತೇ ॥

ಅನುವಾದ

ಇದಾದನಂತರ ಅವನಲ್ಲಿ ಕೈಗಳು ಮೂಡಿದುವು. ಆಗ ದೇವರಾಜ ಇಂದ್ರನು ತನ್ನ ಅಂಶ ಗ್ರಹಣತ್ಯಾಗರೂಪವಾದ ಶಕ್ತಿಯೊಡನೆ ಅವುಗಳಲ್ಲಿ ಪ್ರವೇಶ ಮಾಡಿದನು. ಈ ಶಕ್ತಿಯಿಂದಲೇ ಜೀವವು ತನ್ನ ಕೊಡುವಿಕೆ, ಪಡೆಯುವಿಕೆ, ಹಿಡಿದುಕೊಳ್ಳುವಿಕೆ ಎಂಬ ತನ್ನ ಜೀವನೋಪಾಯ ವನ್ನು ಸಾಧಿಸುವುದು. ॥ 21 ॥

(ಶ್ಲೋಕ - 22)

ಮೂಲಮ್

ಪಾದಾವಸ್ಯ ವಿನಿರ್ಭಿನ್ನೌ ಲೋಕೇಶೋ ವಿಷ್ಣುರಾವಿಶತ್ ।
ಗತ್ಯಾ ಸ್ವಾಂಶೇನ ಪುರುಷೋ ಯಯಾ ಪ್ರಾಪ್ಯಂ ಪ್ರಪದ್ಯತೇ ॥

ಅನುವಾದ

ಇವನಲ್ಲಿ ಚರಣಗಳು ಉತ್ಪನ್ನ ವಾದಾಗ ಲೋಕೇಶ್ವರನಾದ, ವಿಷ್ಣುವು ತನ್ನ ಶಕ್ತಿಯಾದ ಗತಿ ಯೊಡನೆ ಅದನ್ನು ಪ್ರವೇಶಿಸಿದನು. ಆ ಗಮನ ಶಕ್ತಿಯಿಂದಲೇ ಜೀವವು ತನ್ನ ಗಮ್ಯಸ್ಥಾನಕ್ಕೆ ತಲುಪುವುದು. ॥ 22 ॥

(ಶ್ಲೋಕ - 23)

ಮೂಲಮ್

ಬುದ್ಧಿಂ ಚಾಸ್ಯ ವಿನಿರ್ಭಿನ್ನಾಂ ವಾಗೀಶೋ ಧೀಷ್ಣ್ಯಮಾವಿಶತ್ ।
ಬೋಧೇನಾಂಶೇನ ಬೋದ್ಧವ್ಯಂ ಪ್ರತಿಪತ್ತಿರ್ಯತೋ ಭವೇತ್ ॥

ಅನುವಾದ

ಆಮೇಲೆ ಆ ದೇಹದಲ್ಲಿ ಬುದ್ಧಿಯು ಉತ್ಪನ್ನವಾಗಲು ವಾಗೀಶನಾದ ಬೃಹ ಸ್ಪತಿಯು ತನ್ನ ಅಂಶವಾದ ಬುದ್ಧಿಶಕ್ತಿಯೊಡನೆ ಅದರಲ್ಲಿ ಪ್ರವೇಶಿಸಿ ದನು. ಈ ಬುದ್ಧಿಶಕ್ತಿಯಿಂದಲೇ ಜೀವವು ತಿಳಿಯಬೇಕಾದ ವಿಷಯಗಳನ್ನು ತಿಳಿದುಕೊಳ್ಳುವುದು. ॥ 23 ॥

(ಶ್ಲೋಕ - 24)

ಮೂಲಮ್

ಹೃದಯಂ ಚಾಸ್ಯ ನಿರ್ಭಿನ್ನಂ ಚಂದ್ರಮಾ ಧಿಷ್ಣ್ಯಮಾವಿಶತ್ ।
ಮನಸಾಂಶೇನ ಯೇನಾಸೌ ವಿಕ್ರಿಯಾಂ ಪ್ರತಿಪದ್ಯತೇ ॥

ಅನುವಾದ

ಮತ್ತೆ ಇದರಲ್ಲಿ ಹೃದ ಯವು ಪ್ರಕಟಗೊಂಡಿತು. ಅದರಲ್ಲಿ ತನ್ನ ಅಂಶವಾದ ಮನಸ್ಸಿ ನೊಡನೆ ಚಂದ್ರನು ನೆಲೆಗೊಂಡನು. ಈ ಮನಶ್ಶಕ್ತಿಯಿಂದಲೇ ಜೀವವು ಸಂಕಲ್ಪ-ವಿಕಲ್ಪಾದಿ ವಿಕಾರಗಳನ್ನು ಹೊಂದುವನು. ॥ 24 ॥

(ಶ್ಲೋಕ - 25)

ಮೂಲಮ್

ಆತ್ಮಾನಂ ಚಾಸ್ಯ ನಿರ್ಭಿನ್ನಮಭಿಮಾನೋವಿಶತ್ಪದಮ್ ।
ಕರ್ಮಣಾಂಶೇನ ಯೇನಾಸೌ ಕರ್ತವ್ಯಂ ಪ್ರತಿಪದ್ಯತೇ ॥

ಅನುವಾದ

ಇದಾದ ಬಳಿಕ ವಿರಾಟ್ಪುರುಷನಲ್ಲಿ ಅಹಂಕಾರ ಉತ್ಪನ್ನ ವಾಯಿತು. ತನಗೆ ಆಶ್ರಯವಾದ ಇದರೊಳಗೆ ತನ್ನ ಕ್ರಿಯಾಶಕ್ತಿ ಸಹಿತ ಅದರ ಅಭಿಮಾನಿಯಾದ ರುದ್ರದೇವರು ಪ್ರವೇಶ ಮಾಡಿದರು. ಇದರಿಂದ ಜೀವನು ತನ್ನ ಕರ್ತವ್ಯವನ್ನು ಸ್ವೀಕರಿಸುತ್ತಾನೆ. ॥ 25 ॥

(ಶ್ಲೋಕ - 26)

ಮೂಲಮ್

ಸತ್ತ್ವಂ ಚಾಸ್ಯ ವಿನಿರ್ಭಿನ್ನಂ ಮಹಾಂಧಿಷ್ಣ್ಯಮುಪಾವಿಶತ್ ।
ಚಿತ್ತೇನಾಂಶೇನ ಯೇನಾಸೌ ವಿಜ್ಞಾನಂ ಪ್ರತಿಪದ್ಯತೇ ॥

ಅನುವಾದ

ಈಗ ಇದರಲ್ಲಿ ಚಿತ್ತವು ಪ್ರಕಟಗೊಂಡಿತು. ಅದರಲ್ಲಿ ಚಿತ್ಶಕ್ತಿಯೊಡನೆ ಮಹತ್ತತ್ತ್ವವು (ಬ್ರಹ್ಮಾ) ಸ್ಥಿತವಾಯಿತು.ಈ ಚಿತ್ತಶಕ್ತಿಯಿಂದಲೇ ಜೀವವು ವಿಜ್ಞಾನ (ಚೈತನ್ಯ)ವನ್ನು ಪಡೆಯುವುದು. ॥ 26 ॥

(ಶ್ಲೋಕ - 27)

ಮೂಲಮ್

ಶೀರ್ಷ್ಣೋಸ್ಯ ದ್ಯೌರ್ಧರಾ ಪದ್ಭ್ಯಾಂ ಖಂ ನಾಭೇರುದಪದ್ಯತ ।
ಗುಣಾನಾಂ ವೃತ್ತಯೋ ಯೇಷು ಪ್ರತೀಯಂತೇ ಸುರಾದಯಃ ॥

ಅನುವಾದ

ಈ ವಿರಾಟ್ ಪುರುಷನ ತಲೆಯಿಂದ ಸ್ವರ್ಗ ಲೋಕ, ಕಾಲುಗಳಿಂದ ಪೃಥ್ವಿ ಮತ್ತು ನಾಭಿಯಿಂದ ಅಂತರಿಕ್ಷ (ಆಕಾಶ) ಉತ್ಪನ್ನವಾಯಿತು. ಇವುಗಳಲ್ಲಿ ಕ್ರಮವಾಗಿ ಸತ್ತ್ವ, ರಜ, ತಮ ಈ ಮೂರು ಗುಣಗಳ ಪರಿಣಾಮಸ್ವರೂಪೀ ದೇವತೆಗಳು, ಮನುಷ್ಯರು, ಪ್ರೇತಾದಿಗಳು ಕಂಡುಬರುತ್ತವೆ. ॥ 27 ॥

ಮೂಲಮ್

(ಶ್ಲೋಕ - 28)
ಆತ್ಯಂತಿಕೇನ ಸತ್ತ್ವೇನ ದಿವಂ ದೇವಾಃ ಪ್ರಪೇದಿರೇ ।
ಧರಾಂ ರಜಃಸ್ವಭಾವೇನ ಪಣಯೋ ಯೇ ಚ ತಾನನು ॥

(ಶ್ಲೋಕ - 29)

ಮೂಲಮ್

ತಾರ್ತೀಯೇನ ಸ್ವಭಾವೇನ ಭಗವನ್ನಾಭಿಮಾಶ್ರಿತಾಃ ।
ಉಭಯೋರಂತರಂ ವ್ಯೋಮ ಯೇ ರುದ್ರಪಾರ್ಷದಾಂ ಗಣಾಃ ॥

ಅನುವಾದ

ಇವುಗಳಲ್ಲಿ ದೇವತೆಗಳು ಸತ್ತ್ವಗುಣದ ಹೆಚ್ಚಳದಿಂದ ಸ್ವರ್ಗಲೋಕದಲ್ಲಿಯೂ, ಮನುಷ್ಯ ಮತ್ತು ಅವನ ಉಪಯೋಗೀ ಹಸುವೇ ಮುಂತಾದ ಜೀವಿಗಳು ರಜೋಗುಣದ ಪ್ರಧಾನತೆಯಿಂದಾಗಿ ಪೃಥ್ವಿಯಲ್ಲಿಯೂ, ತಾಮಸ ಸ್ವಭಾವವುಳ್ಳ ರುದ್ರನ ಪಾರ್ಷದರು (ಭೂತ-ಪ್ರೇತಾದಿಗಳು) ಎರಡರ ನಡುವಿನಲ್ಲಿ ಇರುವ ಭಗವಂತನ ನಾಭಿಯ ಸ್ಥಾನದಲ್ಲಿ ಅಂತರಿಕ್ಷ ಲೋಕದಲ್ಲಿಯೂ ವಾಸಮಾಡುತ್ತವೆ. ॥ 28-29 ॥

ಮೂಲಮ್

(ಶ್ಲೋಕ - 30)
ಮುಖತೋವರ್ತತ ಬ್ರಹ್ಮ ಪುರುಷಸ್ಯ ಕುರೂದ್ವಹ ।
ಯಸ್ತೂನ್ಮುಖತ್ವಾದ್ವರ್ಣಾನಾಂ ಮುಖ್ಯೋಭೂದ್ಬ್ರಾಹ್ಮಣೋ ಗುರುಃ ॥

ಅನುವಾದ

ಮಹಾತ್ಮನಾದ ವಿದುರನೇ ! ವೇದಗಳೂ ಮತ್ತು ಬ್ರಾಹ್ಮಣರೂ ಭಗವಂತನ ಮುಖದಿಂದ ಪ್ರಕಟಗೊಂಡಿದ್ದರಿಂದಲೇ ಬ್ರಾಹ್ಮಣರು ಸಕಲವರ್ಣಗಳಲ್ಲೂ ಶ್ರೇಷ್ಠರು ಹಾಗೂ ಸರ್ವವರ್ಣಗಳಿಗೂ ಗುರುವೆನಿಸಿದರು. ॥ 30 ॥

(ಶ್ಲೋಕ - 31)

ಮೂಲಮ್

ಬಾಹುಭ್ಯೋವರ್ತತ ಕ್ಷತ್ರಂ ಕ್ಷತ್ರಿಯಸ್ತದನುವ್ರತಃ ।
ಯೋ ಜಾತಸಾಯತೇ ವರ್ಣಾನ್ಪೌರುಷಃ ಕಂಚಕಕ್ಷತಾತ್ ॥

ಅನುವಾದ

ಆತನ ಭುಜಗಳಿಂದ ಕ್ಷತ್ರಿಯ ವೃತ್ತಿಯೂ ಮತ್ತು ಅದನ್ನು ಅವಲಂಬಿಸಿರುವ ಕ್ಷತ್ರಿಯವರ್ಣವೂ ಉತ್ಪನ್ನ ವಾಯಿತು. ವಿರಾಟ್ಪುರುಷನ ಅಂಶವಾಗಿ ಜನಿಸಿದ ಕಾರಣ ಇವರು ಎಲ್ಲ ವರ್ಣಗಳನ್ನು ಶತ್ರುಗಳು, ಕಳ್ಳ-ಕಾಕರರೇ ಮುಂತಾದ ಉಪದ್ರವಗಳಿಂದ ರಕ್ಷಣೆ ಮಾಡುತ್ತಾರೆ. ॥ 31 ॥

(ಶ್ಲೋಕ - 32)

ಮೂಲಮ್

ವಿಶೋವರ್ತಂತ ತಸ್ಯೋರ್ವೋರ್ಲೋಕವೃತ್ತಿ ಕರೀರ್ವಿಭೋಃ ।
ವೈಶ್ಯಸ್ತದುದ್ಭವೋ ವಾರ್ತಾಂ ನೃಣಾಂ ಯಃ ಸಮವರ್ತಯತ್ ॥

ಅನುವಾದ

ಶ್ರೀಭಗವಂತನ ಎರಡು ತೊಡೆಗಳಿಂದ ಎಲ್ಲ ಜನರ ನಿರ್ವಾಹ ಮಾಡುವಂತಹ ವೈಶ್ಯವೃತ್ತಿ ಉತ್ಪನ್ನವಾಯಿತು ಮತ್ತು ಅವುಗಳಿಂದಲೇ ವೈಶ್ಯವರ್ಣದ ಪ್ರಾದುರ್ಭಾವವಾಯಿತು. ಈ ವರ್ಣವು ತನ್ನ ವೃತ್ತಿಯಿಂದ ಎಲ್ಲ ಜೀವಿಗಳ ಜೀವನ ನಿರ್ವಾಹ ನಡೆಸುತ್ತದೆ. ॥ 32 ॥

(ಶ್ಲೋಕ - 33)

ಮೂಲಮ್

ಪದ್ಭ್ಯಾಂ ಭಗವತೋ ಜಜ್ಞೇ ಶುಶ್ರೂಷಾ ಧರ್ಮಸಿದ್ಧಯೇ ।
ತಸ್ಯಾಂ ಜಾತಃ ಪುರಾ ಶೂದ್ರೋ ಯದ್ವ ತ್ಯಾ ತುಷ್ಯತೇ ಹರಿಃ ॥

ಅನುವಾದ

ಮತ್ತೆ ಎಲ್ಲ ಧರ್ಮಗಳ ಸಿದ್ಧಿಗಾಗಿ ಭಗವಂತನ ಚರಣಗಳಿಂದ ಸೇವಾವೃತ್ತಿ ಪ್ರಕಟವಾಯಿತು ಮತ್ತು ಅವುಗಳಿಂದಲೇ ಮೊಟ್ಟಮೊದಲು ಆ ವೃತ್ತಿಯ ಅಧಿಕಾರಿ ಶೂದ್ರವರ್ಣವೂ ಪ್ರಕಟಗೊಂಡಿತು. ಅವರ ವೃತ್ತಿಯಿಂದಲೇ ಶ್ರೀಹರಿಯು ಪ್ರಸನ್ನನಾಗುತ್ತಾನೆ.* ॥ 33 ॥

ಟಿಪ್ಪನೀ
  • ‘‘ತಸ್ಯಾಂ ಜಾತಃ ಪುರಾ ಶೂದ್ರೋ ಯದ್ವತ್ಯಾ ತುಷ್ಯತೇ ಹರಿಃ ॥’’ ಎಲ್ಲ ಧರ್ಮಗಳ ಸಿದ್ಧಿಗೂ ಮೂಲಭೂತವಾದುದು ಸೇವೆ. ಸೇವೆಯಿಲ್ಲದೆ ಯಾವ ಧರ್ಮವೂ ಈಡೇರುವುದಿಲ್ಲ. ಆದ್ದರಿಂದ ಎಲ್ಲ ಧರ್ಮಗಳಿಗೂ ಮೂಲವಾದ ಸೇವೆಯೇ ವೃತ್ತಿಯಾಗಿರುವ ಶೂದ್ರನು ಎಲ್ಲ ವರ್ಣಗಳಲ್ಲೂ ಶ್ರೇಷ್ಠನೇ. ಬ್ರಾಹ್ಮಣನ ಧರ್ಮವಿರುವುದು ಮೋಕ್ಷಕ್ಕಾಗಿ. ಕ್ಷತ್ರಿಯರ ಧರ್ಮವಿರುವುದು ಭೋಗಕ್ಕೋಸ್ಕರವಾಗಿ. ವೈಶ್ಯಧರ್ಮವಿರುವುದು ಹಣಸಂಪಾದನೆಗಾಗಿ. ಹೀಗೆ ಮೊದಲನೆ ಮೂರು ವರ್ಣಗಳ ಧರ್ಮಗಳು ಇತರ ಪುರುಷಾರ್ಥಗಳಿಗಿದ್ದರೆ, ಶೂದ್ರನಧರ್ಮ ತನ್ನ ಪುರುಷಾರ್ಥಕ್ಕಾಗಿ ಇದೆ. ಆದ್ದರಿಂದ ಇವನ ವೃತ್ತಿಯಿಂದಲೇ ಶ್ರೀಭಗವಂತನು ಪ್ರಸನ್ನನಾಗುವನು.
ಮೂಲಮ್

(ಶ್ಲೋಕ - 34)
ಏತೇ ವರ್ಣಾಃ ಸ್ವಧರ್ಮೇಣ ಯಜಂತಿ ಸ್ವಗುರುಂ ಹರಿಮ್ ।
ಶ್ರದ್ಧಯಾತ್ಮವಿಶುದ್ಧ್ಯರ್ಥಂ ಯಜ್ಜಾತಾಃ ಸಹ ವೃತ್ತಿಭಿಃ ॥

ಅನುವಾದ

ಈ ನಾಲ್ಕೂ ವರ್ಣಗಳೂ ಕೂಡ ತಮ್ಮ-ತಮ್ಮ ವೃತ್ತಿಗಳೊಡನೆ ಯಾರಿಂದ ಹುಟ್ಟಿದವೋ ಆ ಪರಮಗುರುವಾದ ಶ್ರೀಹರಿಯನ್ನು ಚಿತ್ತಶುದ್ಧಿಗಾಗಿ ತಮ್ಮ-ತಮ್ಮ ಧರ್ಮಗಳಿಂದ ಶ್ರದ್ಧಾಪೂರ್ವಕ ಆರಾಧಿಸುತ್ತವೆ. ॥ 34 ॥

ಮೂಲಮ್

(ಶ್ಲೋಕ - 35)
ಏತತ್ಕ್ಷತ್ತರ್ಭಗವತೋ ದೈವಕರ್ಮಾತ್ಮರೂಪಿಣಃ ।
ಕಃ ಶ್ರದ್ದದ್ಧ್ಯಾದುಪಾಕರ್ತುಂ ಯೋಗಮಾಯಾಬಲೋದಯಮ್ ॥

ಅನುವಾದ

ವಿದುರನೇ! ಈ ವಿರಾಟ್ಪುರುಷನು ಕಾಲ, ಕರ್ಮ, ಸ್ವಭಾವ ಶಕ್ತಿಗಳಿಂದ ಕೂಡಿ ಭಗವಂತನ ಯೋಗ ಮಾಯೆಯ ಪ್ರಭಾವವನ್ನು ಪ್ರಕಟಪಡಿಸುವವನು. ಈತನ ಸ್ವರೂಪವನ್ನು ಪೂರ್ಣವಾಗಿ ವರ್ಣಿಸಲು ಯಾರಿಗೆ ತಾನೇ ಸಾಧ್ಯ ? ॥ 35 ॥

(ಶ್ಲೋಕ - 36)

ಮೂಲಮ್

ಅಥಾಪಿ ಕೀರ್ತಯಾಮ್ಯಂಗ ಯಥಾಮತಿ ಯಥಾಶ್ರುತಮ್ ।
ಕೀರ್ತಿಂ ಹರೇಃ ಸ್ವಾಂ ಸತ್ಕರ್ತುಂ ಗಿರಮನ್ಯಾಭಿಧಾಸತೀಮ್ ॥

ಅನುವಾದ

ಪ್ರಿಯ ವಿದುರನೇ! ಆದರೂ ಇತರ ವ್ಯಾವ ಹಾರಿಕ ಚರ್ಚೆಗಳಿಂದ ಕಲುಷಗೊಂಡಿರುವ ನನ್ನ ವಾಣಿಯನ್ನು ಪವಿತ್ರಗೊಳಿಸಲು, ನನ್ನ ಬುದ್ಧಿಗೂ, ಶ್ರೀಗುರುಗಳ ಬಾಯಿಂದ ಕೇಳಿ ರುವುದಕ್ಕೂ, ಅನುಗುಣವಾಗಿ ಶ್ರೀಹರಿಯ ಸುಕೀರ್ತಿಯನ್ನು ವರ್ಣಿಸುತ್ತೇನೆ. ॥ 36 ॥

(ಶ್ಲೋಕ - 37)

ಮೂಲಮ್

ಏಕಾಂತಲಾಭಂ ವಚಸೋ ನು ಪುಂಸಾಂ
ಸುಶ್ಲೋಕವೌಲೇರ್ಗುಣವಾದಮಾಹುಃ ।
ಶ್ರುತೇಶ್ಚ ವಿದ್ವದ್ಭಿರುಪಾಕೃತಾಯಾಂ
ಕಥಾಸುಧಾಯಾಮುಪಸಂಪ್ರಯೋಗಮ್ ॥

ಅನುವಾದ

ಪುಣ್ಯಕೀರ್ತಿ ಶಿರೋಮಣಿಯಾದ ಶ್ರೀಹರಿಯ ಗುಣಗಾನಮಾಡುವುದೇ ಮನುಷ್ಯರ ವಾಣಿಗೆ ಹಾಗೂ ವಿದ್ವಾಂಸರ ಬಾಯಿಂದ ಭಗವಂತನ ಕಥಾಮೃತವನ್ನು ಪಾನ ಮಾಡುವುದೇ ಅವರ ಕಿವಿಗಳಿಗೆ ಪರಮಲಾಭವಾಗಿದೆ ಎಂದು ಮಹಾಪುರುಷರ ಸಿದ್ಧಾಂತವಾಗಿದೆ. ॥ 37 ॥

(ಶ್ಲೋಕ - 38)

ಮೂಲಮ್

ಆತ್ಮನೋವಸಿತೋ ವತ್ಸ ಮಹಿಮಾ ಕವಿನಾದಿನಾ ।
ಸಂವತ್ಸರಸಹಸ್ರಾಂತೇ ಧಿಯಾ ಯೋಗವಿಪಕ್ವಯಾ ॥

ಅನುವಾದ

ವತ್ಸ ವಿದುರಾ ! ನಾವು ಮಾತ್ರವಲ್ಲ ; ಆದಿಕವಿಯಾದ ಶ್ರೀಬ್ರಹ್ಮದೇವರೂ ಕೂಡ ಒಂದು ಸಾವಿರ ದಿವ್ಯವರ್ಷಗಳವರೆಗೆ ತಮ್ಮ ಯೋಗದಿಂದ ಪರಿ ಪಕ್ವವಾದ ಬುದ್ದಿಯಿಂದ ವಿಚಾರಮಾಡಿದರೂ ಅಪ್ರಮೇಯನಾದ ಆತನ ಮಹಿಮೆಯ ಪಾರವನ್ನು ಕಾಣಲಾರದೇ ಹೋದನು. ॥ 38 ॥

(ಶ್ಲೋಕ - 39)

ಮೂಲಮ್

ಅತೋ ಭಗವತೋ ಮಾಯಾ ಮಾಯಿನಾಮಪಿ ಮೋಹಿನೀ ।
ಯತ್ಸ್ವಯಂ ಚಾತ್ಮವರ್ತ್ಮಾತ್ಮಾ ನ ವೇದ ಕಿಮುತಾಪರೇ ॥

ಅನುವಾದ

ಭಗವಂತನ ಮಾಯೆಯು ದೊಡ್ಡ-ದೊಡ್ಡ ಮಾಯಾವಿ ಗಳನ್ನೂ ಮರುಳುಗೊಳಿಸುವ ಸಾಮರ್ಥ್ಯವುಳ್ಳದ್ದು. ಅಘಟಿತ ಘಟನಾಸಾಮರ್ಥ್ಯವುಳ್ಳ ಅದರ ಭ್ರಾಮಕಗತಿಯು ಅನಂತವಾಗಿದೆ. ಆದ್ದರಿಂದ ಸ್ವಯಂ ಭಗವಂತನೇ ಅದರ ಆಳ ತಿಳಿಯದೆ ಹೋದನು. ಮತ್ತೆ ಇತರರ ಮಾತಾದರೂ ಏನು ? ॥ 39 ॥

(ಶ್ಲೋಕ - 40)

ಮೂಲಮ್

ಯತೋಪ್ರಾಪ್ಯ ನ್ಯವರ್ತಂತ ವಾಚಶ್ಚ ಮನಸಾ ಸಹ ।
ಅಹಂ ಚಾನ್ಯ ಇಮೇ ದೇವಾಸ್ತಸ್ಮೈ ಭಗವತೇ ನಮಃ ॥

ಅನುವಾದ

ಯಾವುದನ್ನು ಮುಟ್ಟಲಾರದೆ ಮನಸ್ಸು ಮಾತಿನೊಡನೆ ಹಿಂದಿರುಗಿ ಬಿಡುವುದೋ, ಯಾವುದರ ಪಾರವನ್ನು (ಕೊನೆಯನ್ನು) ಕಾಣುವ ವಿಷಯದಲ್ಲಿ ಬ್ರಹ್ಮ-ರುದ್ರಾದಿ ಇತರ ದೇವತೆಗಳೂ ಸಮರ್ಥರಾಗದೇ ಹೋದರೋ ಆ ಭಗವಂತನಿಗೆ ನಮ್ಮ ನಮಸ್ಕಾರಗಳು. ॥ 40 ॥

ಅನುವಾದ (ಸಮಾಪ್ತಿಃ)

ಆರನೆಯ ಅಧ್ಯಾಯವು ಮುಗಿಯಿತು. ॥6॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಷಷ್ಠೋಽಧ್ಯಾಯಃ ॥6॥