[ನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ಉದ್ಧವನೊಡನೆ ಸಂಭಾಷಣೆ ವಿದುರನು ಮೈತ್ರೇಯರ ಬಳಿಗೆ ತೆರಳಿದುದು
(ಶ್ಲೋಕ -1)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ಅಥ ತೇ ತದನುಜ್ಞಾತಾ ಭುಕ್ತ್ವಾ ಪೀತ್ವಾ ಚ ವಾರುಣೀಮ್ ।
ತಯಾ ವಿಭ್ರಂಶಿತಜ್ಞಾನಾ ದುರುಕ್ತೈರ್ಮರ್ಮ ಪಸ್ಪೃಶುಃ ॥
ಅನುವಾದ
ಉದ್ಧವನು ಹೇಳುತ್ತಿದ್ದಾನೆ ಓ ಮಹಾತ್ಮನೇ! ಮತ್ತೆ ಬ್ರಾಹ್ಮಣರ ಅಪ್ಪಣೆಪಡೆದು ಯಾದವರು ಭೋಜನ ಮಾಡಿದರು. ಮತ್ತೆ ವಾರುಣೀ ಎಂಬ ಮದ್ಯವನ್ನು ಕುಡಿದು, ಅದರಿಂದ ಜ್ಞಾನ ಗೆಟ್ಟು ದುರ್ವಚನಗಳನ್ನಾಡುತ್ತಾ ಪರಸ್ಪರ ಹೃದಯಕ್ಕೆ ನೋವ ನ್ನುಂಟುಮಾಡುವ ಮಾತುಗಳನ್ನಾಡತೊಡಗಿದರು.॥1॥
(ಶ್ಲೋಕ - 2)
ಮೂಲಮ್
ತೇಷಾಂ ಮೈರೇಯದೋಷೇಣ ವಿಷಮೀಕೃತಚೇತಸಾಮ್ ।
ನಿಮ್ಲೋಚತಿ ರವಾವಾಸೀದ್ವೇಣೂನಾಮಿವ ಮರ್ದನಮ್ ॥
ಅನುವಾದ
ಮದಿರೆಯ ಮತ್ತಿನಿಂದ ಅವರ ಬುದ್ಧಿಯು ಕೆಟ್ಟುಹೋಗಿ ಬಿದಿರು ಗಳ ಪರಸ್ಪರ ಘರ್ಷಣೆಯಿಂದ ಬೆಂಕಿಹತ್ತಿಕೊಳ್ಳುವಂತೆ ಸೂರ್ಯಾಸ್ತ ವಾಗುತ್ತಿದ್ದಂತೆ ಅವರಲ್ಲಿ ಹೊಡೆದಾಟ-ಬಡಿದಾಟ ಪ್ರಾರಂಭ ವಾಯಿತು.॥2॥
(ಶ್ಲೋಕ - 3)
ಮೂಲಮ್
ಭಗವಾನ್ ಸ್ವಾತ್ಮಮಾಯಾಯಾ ಗತಿಂ ತಾಮವಲೋಕ್ಯ ಸಃ ।
ಸರಸ್ವತೀಮುಪಸ್ಪೃಶ್ಯ ವೃಕ್ಷಮೂಲಮುಪಾವಿಶತ್ ॥
ಅನುವಾದ
ಭಗವಂತನು ತನ್ನ ಮಾಯೆಯ ವಿಚಿತ್ರವಾದ ಆ ಗತಿಯನ್ನು ನೋಡಿ ಸರಸ್ವತಿನದಿಯ ಜಲದಿಂದ ಆಚಮನಗೈದು ಒಂದು ಅಶ್ವತ್ಥವೃಕ್ಷದ ಬುಡದಲ್ಲಿ ಕುಳಿತುಬಿಟ್ಟನು.॥3॥
(ಶ್ಲೋಕ -4)
ಮೂಲಮ್
ಅಹಂ ಚೋಕ್ತೋ ಭಗವತಾ ಪ್ರಪನ್ನಾರ್ತಿಹರೇಣ ಹ ।
ಬದರೀಂ ತ್ವಂ ಪ್ರಯಾಹೀತಿ ಸ್ವಕುಲಂ ಸಂಜಿಹೀರ್ಷುಣಾ ॥
ಅನುವಾದ
ಆಶ್ರಿತರ ದುಃಖವನ್ನು ದೂರಮಾಡುವಂತಹ ಭಗವಾನ್ ಶ್ರೀಕೃಷ್ಣನು ತನ್ನ ಕುಲವನ್ನು ಉಪಸಂಹಾರ ಮಾಡಬೇಕೆಂದು ಸಂಕಲ್ಪಿಸಿ, ನನಗೆ ಬದರಿಕಾಶ್ರಮಕ್ಕೆ ಹೋಗಬೇಕೆಂದು ಮೊದಲೇ ಅಪ್ಪಣೆ ಮಾಡಿದ್ದನು.॥4॥
(ಶ್ಲೋಕ - 5)
ಮೂಲಮ್
ಅಥಾಪಿ ತದಭಿಪ್ರೇತಂ ಜಾನನ್ನಹಮರಿಂದಮ ।
ಪೃಷ್ಠತೋನ್ವಗಮಂ ಭರ್ತುಃ ಪಾದವಿಶ್ಲೇಷಣಾಕ್ಷಮಃ ॥
ಅನುವಾದ
ವಿದುರನೇ! ಆತನ ಆಶಯವು ನನಗೆ ತಿಳಿದಿದ್ದರೂ ನಾನು ಸ್ವಾಮಿಯ ಚರಣಾರವಿಂದಗಳ ಅಗಲಿಕೆಯನ್ನು ಸಹಿಸಲಾರದೆ ಆತನನ್ನೇ ಹುಡುಕುತ್ತಾ ಪ್ರಭಾಸಕ್ಷೇತ್ರಕ್ಕೆ ಹಿಂಬಾಲಿಸಿದೆನು.॥5॥
(ಶ್ಲೋಕ - 6)
ಮೂಲಮ್
ಅದ್ರಾಕ್ಷಮೇಕಮಾಸೀನಂ ವಿಚಿನ್ವಂದಯಿತಂ ಪತಿಮ್ ।
ಶ್ರೀನಿಕೇತಂ ಸರಸ್ವತ್ಯಾಂ ಕೃತಕೇತಮಕೇತನಮ್ ॥
ಅನುವಾದ
ಅಲ್ಲಿ ಎಲ್ಲರಿಗೂ ಆಶ್ರಯನಾಗಿ ಯಾರ ಆಶ್ರಯಕ್ಕೂ ಒಳಗಾಗದೆ ಇರುವ ಪ್ರಿಯತಮ ಶ್ರೀಲಕ್ಷ್ಮೀನಿವಾಸನಾದ ಮಹಾಪ್ರಭುವು ಸರಸ್ವತೀನದಿಯ ತೀರದಲ್ಲಿ ಒಬ್ಬಂಟಿಗನಾಗಿ ಕುಳಿತಿರುವುದನ್ನು ನಾನು ನೋಡಿದೆನು.॥6॥
(ಶ್ಲೋಕ - 7)
ಮೂಲಮ್
ಶ್ಯಾಮಾವದಾತಂ ವಿರಜಂ ಪ್ರಶಾಂತಾರುಣಲೋಚನಮ್ ।
ದೋರ್ಭಿಶ್ಚತುರ್ಭಿರ್ವಿದಿತಂ ಪೀತಕೌಶಾಂಬರೇಣ ಚ ॥
ಅನುವಾದ
ಶ್ಯಾಮಲವರ್ಣದಿಂದ ಕಂಗೊಳಿಸು ತ್ತಿರುವ ಶುದ್ಧವಾದ ಸತ್ತ್ವಮಯನಾದ ಸುಂದರ ಶ್ರೀಮೂರ್ತಿ, ಪ್ರಸನ್ನವಾಗಿ ಕೆಂಬಣ್ಣದಿಂದ ಹೊಳೆಯುತ್ತಿರುವ ನೇತ್ರಕಮಲಗಳು, ಶೋಭಾಯಮಾನವಾದ ಚತುರ್ಭುಜಗಳು, ಥಳ-ಥಳಿಸುತ್ತಿರುವ ರೇಷ್ಮೆಯ ಪೀತಾಂಬರ ಇವುಗಳಿಂದ ಕೂಡಿದ ಆತನನ್ನು ದೂರದಿಂದಲೇ ನಾನು ಗುರುತಿಸಿದೆನು.॥7॥
(ಶ್ಲೋಕ - 8)
ಮೂಲಮ್
ವಾಮ ಊರಾವಶ್ರಿತ್ಯ ದಕ್ಷಿಣಾಂಘ್ರಿಸರೋರುಹಮ್ ।
ಅಪಾಶ್ರಿತಾರ್ಭಕಾಶ್ವತ್ಥಮಕೃಶಂ ತ್ಯಕ್ತಪಿಪ್ಪಲಮ್ ॥
ಅನುವಾದ
ಸ್ವಾಮಿಯು ಒಂದು ಸಣ್ಣ ಅರಳೀಮರವನ್ನು ಒರಗಿಕೊಂಡು ಎಡತೊಡೆಯಮೇಲೆ ಬಲ ಗಾಲನ್ನು ಇರಿಸಿ ಸುಖಾಸೀನನಾಗಿದ್ದನು. ಆಹಾರತ್ಯಾಗ ಮಾಡಿದ್ದರೂ ಅವನು ಆನಂದದಿಂದ ಪುಷ್ಟನಾಗಿಯೇ ಪ್ರಕಾಶಿಸುತ್ತಿದ್ದನು.॥8॥
(ಶ್ಲೋಕ - 9)
ಮೂಲಮ್
ತಸ್ಮಿನ್ಮಹಾಭಾಗವತೋ ದ್ವೈಪಾಯನಸುಹೃತ್ಸಖಾ ।
ಲೋಕಾನನುಚರನ್ ಸಿದ್ಧ ಆಸಸಾದ ಯದೃಚ್ಛಯಾ ॥
ಅನುವಾದ
ಇಂತಹ ಭಗವದ್ರೂಪವನ್ನು ನಾನು ಕಣ್ಣಾರೆ ನೋಡುತ್ತಿರುವಂತೆ ವೇದವ್ಯಾಸರ ಪ್ರಿಯಮಿತ್ರರೂ, ಪರಮಭಾಗವತರೂ, ಸಿದ್ಧರೂ ಆಗಿದ್ದ ಮೈತ್ರೇಯ ಮಹರ್ಷಿಗಳು ಅಲ್ಲಿಗೆ ಆಕಸ್ಮಿಕವಾಗಿ ಬಂದು ಸೇರಿದರು.॥9॥
(ಶ್ಲೋಕ - 10)
ಮೂಲಮ್
ತಸ್ಯಾನುರಕ್ತಸ್ಯ ಮುನೇರ್ಮುಕುಂದಃ
ಪ್ರಮೋದಭಾವಾನತಕಂಧರಸ್ಯ ।
ಆಶೃಣ್ವತೋ ಮಾಮನುರಾಗಹಾಸ-
ಸಮೀಕ್ಷಯಾ ವಿಶ್ರಮಯನ್ನುವಾಚ ॥
ಅನುವಾದ
ಮೈತ್ರೇಯರಾದರೋ ಭಗವಂತನ ಅನುರಾಗೀ ಭಕ್ತರಾಗಿದ್ದರು. ಆನಂದ ಮತ್ತು ಭಕ್ತಿಭಾವದಿಂದ ಅವರ ಕತ್ತು ಬಾಗಿತ್ತು. ಶ್ರೀಹರಿಯು ಅವರ ಎದುರಿಗೇ ತನ್ನ ಮಂದಹಾಸ ಶೋಭಿತವಾದ ಕಟಾಕ್ಷದಿಂದ ನನ್ನನ್ನು ಆನಂದಗೊಳಿಸುತ್ತಾ ಇಂತೆಂದನು.॥10॥
(ಶ್ಲೋಕ - 11)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ವೇದಾಹಮಂತರ್ಮನಸೀಪ್ಸಿತಂ ತೇ
ದದಾಮಿಯತ್ತದ್ ದುರವಾಪಮನ್ಯೈಃ ।
ಸತೇ ಪುರಾ ವಿಶ್ವಸೃಜಾಂ ವಸೂನಾಂ
ಮತ್ಸಿದ್ಧಿಕಾಮೇನ ವಸೋ ತ್ವಯೇಷ್ಟಃ ॥
ಅನುವಾದ
ಶ್ರೀಭಗವಂತನು ಹೇಳಿದನು ನಿನ್ನ ಆಂತರಿಕ ಅಭಿಲಾಷೆ ಏನೆಂಬುದನ್ನು ನಾನು ಬಲ್ಲೆನು. ಆದ್ದರಿಂದ ಇತರರಿಗೆ ಅತ್ಯಂತ ದುರ್ಲಭವಾದ ಸಾಧನೆಯೊಂದನ್ನು ನಿನಗೆ ಕೊಡುವೆನು. ಉದ್ಧವಾ ! ನೀನು ಹಿಂದಿನ ಜನ್ಮದಲ್ಲಿ ವಸುದೇವತೆಯಾಗಿದ್ದೆ. ಪ್ರಜಾಪತಿಗಳೂ ಮತ್ತು ವಸುದೇವತೆಗಳೂ ಕೂಡಿ ಯಜ್ಞದಿಂದ ನನ್ನನ್ನು ಪಡೆಯುವ ಇಚ್ಛೆಯಿಂದ ನೀವು ನನ್ನನ್ನು ಆರಾಸಿದ್ದೀರಿ.॥11॥
(ಶ್ಲೋಕ - 12)
ಮೂಲಮ್
ಸ ಏಷ ಸಾಧೋ ಚರಮೋ ಭವಾನಾ-
ಮಾಸಾದಿತಸ್ತೇ ಮದನುಗ್ರಹೋ ಯತ್ ।
ಯನ್ಮಾಂ ನೃಲೋಕಾನ್ ರಹ ಉತ್ಸೃಜಂತಂ
ದಿಷ್ಟ್ಯಾ ದದೃಶ್ವಾನ್ ವಿಶದಾನುವೃತ್ತ್ಯಾ ॥
ಅನುವಾದ
ಎಲೈ ಸಾಧುಶ್ರೇಷ್ಠನೇ! ಪ್ರಪಂಚದಲ್ಲಿ ನಿನಗೆ ಇದೇ ಅಂತಿಮ ಜನ್ಮ ವಾಗಿದೆ. ಏಕೆಂದರೆ, ಇದರಲ್ಲಿ ನೀನು ನನ್ನ ಅನುಗ್ರಹವನ್ನು ಪಡೆದು ಕೊಂಡಿರುವೆ. ಈಗ ನಾನು ಮರ್ತ್ಯಲೋಕವನ್ನು ಬಿಟ್ಟು ನನ್ನ ಸ್ವಧಾಮಕ್ಕೆ ತೆರಳಲು ನಿಶ್ಚಯಿಸಿರುವೆನು. ಇಂತಹ ಸಮಯದಲ್ಲಿ ನೀನು ಏಕಾಂತದಲ್ಲಿ ಅನನ್ಯಭಕ್ತಿಯಿಂದ ನನ್ನ ದರ್ಶನ ಪಡೆದೆ. ಇದು ನಿನ್ನ ಮಹದ್ಭಾಗ್ಯವೇ ಸರಿ.॥12॥
(ಶ್ಲೋಕ - 13)
ಮೂಲಮ್
ಪುರಾ ಮಯಾ ಪ್ರೋಕ್ತಮಜಾಯ ನಾಭ್ಯೇ
ಪದ್ಮೇ ನಿಷಣ್ಣಾಯ ಮಮಾದಿಸರ್ಗೇ ।
ಜ್ಞಾನಂ ಪರಂ ಮನ್ಮಹಿಮಾವಭಾಸಂ
ಯತ್ಸೂರಯೋ ಭಾಗವತಂ ವದಂತಿ ॥
ಅನುವಾದ
ಹಿಂದೆ ಪದ್ಮಕಲ್ಪದ ಪ್ರಾರಂಭದಲ್ಲಿ ನಾನು ಕಮಲಭವನಾದ ಬ್ರಹ್ಮನಿಗೆ ನನ್ನ ಮಹಿಮೆಯನ್ನು ಪ್ರಕಟಪಡಿಸುವಂತಹ ಶ್ರೇಷ್ಠತಮವಾದ ಜ್ಞಾನ ವನ್ನು ಉಪದೇಶ ಮಾಡಿದ್ದೆನು. ಅದನ್ನು ಜ್ಞಾನಿಗಳು ‘ಭಾಗವತ’ ಎಂದು ಕರೆಯುತ್ತಾರೆ. ನಿನಗೂ ಅದನ್ನೇ ಅನುಗ್ರಹಿಸುತ್ತೇನೆ.॥13॥
(ಶ್ಲೋಕ -14)
ಮೂಲಮ್
ಇತ್ಯಾದೃತೋಕ್ತಃ ಪರಮಸ್ಯ ಪುಂಸಃ
ಪ್ರತಿಕ್ಷಣಾನುಗ್ರಹಭಾಜನೋಹಮ್ ।
ಸ್ನೇಹೋತ್ಥರೋಮಾ ಸ್ಖಲಿತಾಕ್ಷರಸ್ತಂ
ಮುಂಚನ್ ಶುಚಃ ಪ್ರಾಂಜಲಿರಾಬಭಾಷೇ ॥
ಅನುವಾದ
ವಿದುರನೇ ! ಪರಮಪುರುಷನು ನನಗೆ ಹೀಗೆ ಅಪ್ಪಣೆ ಕೊಡಿಸಿದನು. ಆತನ ಕೃಪಾರಸವು ಪ್ರತಿಕ್ಷಣದಲ್ಲೂ ನನ್ನ ಮೇಲೆ ಹರಿದುಬರುತ್ತಿತ್ತು. ಆತನ ಪ್ರೀತ್ಯಾದರಪೂರ್ಣವಾದ ಮಾತು ಗಳನ್ನು ಕೇಳಿ ನಾನು ಸ್ನೇಹವಶನಾಗಿ ರೋಮಾಂಚಿತನಾದೆ. ನನ್ನ ವಾಣಿ ಗದ್ಗದವಾಯಿತು. ಕಣ್ಣುಗಳಿಂದ ಆನಂದಾಶ್ರುಗಳು ಹರಿಯತೊಡಗಿದವು. ಕೈ ಜೋಡಿಸಿಕೊಂಡು ನಾನು ಅವನಲ್ಲಿ ಹೀಗೆ ಬಿನ್ನೈಸಿಕೊಂಡೆನು.॥14॥
(ಶ್ಲೋಕ - 15)
ಮೂಲಮ್
ಕೋ ನ್ವೀಶ ತೇ ಪಾದಸರೋಜಭಾಜಾಂ
ಸುದುರ್ಲಭೋರ್ಥೇಷು ಚತುರ್ಷ್ವಪೀಹ ।
ತಥಾಪಿ ನಾಹಂ ಪ್ರವೃಣೋಮಿ ಭೂಮನ್
ಭವತ್ಪದಾಂಭೋಜನಿಷೇವಣೋತ್ಸುಕಃ ॥
ಅನುವಾದ
ಸ್ವಾಮಿ ! ನಿನ್ನ ಚರಣಕಮಲಗಳನ್ನು ಸೇವಿಸುವ ಮನುಷ್ಯನಿಗೆ ಈ ಜಗತ್ತಿನಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳಲ್ಲಿ ಯಾವುದೂ ದುರ್ಲಭವಲ್ಲ. ಆದರೆ ನನಗೆ ಅವುಗಳ ಯಾವುದೇ ಇಚ್ಛೆಯಿಲ್ಲ. ನಾನಾದರೋ ಕೇವಲ ನಿನ್ನ ಚರಣಕಮಲಗಳ ಸೇವೆಗಾಗಿಯೇ ಕಾತರನಾಗಿರುತ್ತೇನೆ.॥15॥
(ಶ್ಲೋಕ - 16)
ಮೂಲಮ್
ಕರ್ಮಾಣ್ಯನೀಹಸ್ಯ ಭವೋಭವಸ್ಯ ತೇ
ದುರ್ಗಾಶ್ರಯೋಥಾರಿಭಯಾತ್ಪಲಾಯನಮ್ ।
ಕಾಲಾತ್ಮನೋ ಯತ್ಪ್ರಮದಾಯುತಾಶ್ರಯಃ
ಸ್ವಾತ್ಮನ್ರತೇಃ ಖಿದ್ಯತಿ ೀರ್ವಿದಾಮಿಹ ॥
ಅನುವಾದ
ಪ್ರಭೋ ! ನೀನು ನಿಃಸ್ಪೃಹ ನಾಗಿದ್ದರೂ ಕರ್ಮಗಳನ್ನು ಆಚರಿಸುತ್ತಿರುವೆ. ಜನ್ಮರಹಿತನಾದರೂ ಜನ್ಮತಾಳುತ್ತಿರುವೆ. ಕಾಲಾತ್ಮನೇ ಆಗಿದ್ದರೂ ಶತ್ರುವಿಗೆ ಹೆದರಿದವ ನಂತೆ ಪಲಾಯನಮಾಡಿ ಕೋಟೆಯಲ್ಲಿ ಅಡಗಿಕೊಳ್ಳುವೆ. ಸ್ವಾತ್ಮಾ ರಾಮನಾಗಿದ್ದರೂ ಹದಿನಾರುಸಾವಿರ ಸೀಯರೊಡನೆ ಕ್ರೀಡಿಸುವೆ. ನಿನ್ನ ಈ ವಿಚಿತ್ರ ಚರಿತ್ರವನ್ನು ನೋಡಿ ವಿದ್ವಾಂಸರ ಬುದ್ಧಿಯೂ ಭ್ರಮಿತವಾಗುತ್ತದೆ.॥16॥
(ಶ್ಲೋಕ - 17)
ಮೂಲಮ್
ಮಂತ್ರೇಷು ಮಾಂ ವಾ ಉಪಹೂಯ ಯತ್ತ್ವ-
ಮಕುಂಠಿತಾಖಂಡಸದಾತ್ಮಬೋಧಃ ।
ಪೃಚ್ಛೇಃ ಪ್ರಭೋ ಮುಗ್ಧ ಇವಾಪ್ರಮತ್ತಃ
ತನ್ನೋ ಮನೋ ಮೋಹಯತೀವ ದೇವ ॥
ಅನುವಾದ
ಸರ್ವಜ್ಞನಾಗಿ ಸದಾ ಅಕುಂಠಿತ ವಾದ ಅಖಂಡಜ್ಞಾನವನ್ನು ಹೊಂದಿದ್ದರೂ ನೀನು ಸಾಮಾನ್ಯ ಮನುಷ್ಯನಂತೆ ಕಾರ್ಯಾಲೋಚನೆಯಲ್ಲಿ ನನ್ನನ್ನು ಕರೆಸಿ ಸಲಹೆ ಕೇಳುತ್ತಿದ್ದೆ. ಈ ಲೀಲೆಯು ನನ್ನ ಮನಸ್ಸಿಗೆ ಭ್ರಾಂತಿಯನ್ನುಂಟು ಮಾಡುತ್ತಿದೆ.॥17॥
(ಶ್ಲೋಕ - 18)
ಮೂಲಮ್
ಜ್ಞಾನಂ ಪರಂ ಸ್ವಾತ್ಮರಹಃಪ್ರಕಾಶಂ
ಪ್ರೋವಾಚ ಕಸ್ಮೈ ಭಗವಾನ್ ಸಮಗ್ರಮ್ ।
ಅಪಿ ಕ್ಷಮಂ ನೋ ಗ್ರಹಣಾಯ ಭರ್ತ-
ರ್ವದಾಂಜಸಾ ಯದ್ ವೃಜಿನಂ ತರೇಮ ॥
ಅನುವಾದ
ಸ್ವಾಮೀ! ನಿನ್ನ ಸ್ವರೂಪದ ಗೂಢರಹಸ್ಯ ವನ್ನು ಪ್ರಕಾಶಪಡಿಸುವ ಶ್ರೇಷ್ಠತಮವಾದ ಯಾವ ಜ್ಞಾನವನ್ನು ಬ್ರಹ್ಮದೇವರಿಗೆ ಉಪದೇಶಿಸಿರುವೆಯೋ, ಅದನ್ನು ಗ್ರಹಿಸುವ ಯೋಗ್ಯತೆ ನನಗಿದ್ದರೆ ಉಪದೇಶಿಸು. ಅದರಿಂದ ಸಂಸಾರ ಬಂಧನ ಗಳನ್ನು ಕಳೆದುಕೊಂಡು ಕೃತಾರ್ಥನಾಗುವೆನು.॥18॥
(ಶ್ಲೋಕ - 19)
ಮೂಲಮ್
ಇತ್ಯಾವೇದಿತಹಾರ್ದಾಯ ಮಹ್ಯಂ ಸ ಭಗವಾನ್ಪರಃ ।
ಆದಿದೇಶಾರವಿಂದಾಕ್ಷ ಆತ್ಮನಃ ಪರಮಾಂ ಸ್ಥಿತಿಮ್ ॥
ಅನುವಾದ
ಹೀಗೆ ನಾನು ನನ್ನ ಹೃದಯದ ಭಾವವನ್ನು ಅರಿಕೆ ಮಾಡಿಕೊಳ್ಳಲು ಆ ಪರಮಪುರುಷನಾದ ಪುಂಡರೀಕಾಕ್ಷನು ನನಗೆ ತನ್ನ ಸ್ವರೂಪದ ಪರಮಸ್ಥಿತಿಯನ್ನು ಉಪದೇಶಿಸಿದನು.॥19॥
(ಶ್ಲೋಕ - 20)
ಮೂಲಮ್
ಸ ಏವಮಾರಾತಪಾದತೀರ್ಥಾ-
ದೀತತತ್ತ್ವಾತ್ಮವಿಬೋಧಮಾರ್ಗಃ ।
ಪ್ರಣಮ್ಯ ಪಾದೌ ಪರಿವೃತ್ಯ ದೇವ-
ಮಿಹಾಗತೋಹಂ ವಿರಹಾತುರಾತ್ಮಾ ॥
ಅನುವಾದ
ಆ ತೀರ್ಥಪಾದನಾದ ಪರಮಗುರು ಶ್ರೀಕೃಷ್ಣನಿಂದ ಹೀಗೆ ಆತ್ಮ ತತ್ತ್ವಜ್ಞಾನ ಪಡೆಯುವ ಸಾಧನೆಯನ್ನು ತಿಳಿದುಕೊಂಡು, ಆತನ ಅಡಿದಾವರೆಗಳಿಗೆ ಮಣಿದು, ಪ್ರದಕ್ಷಿಣೆಮಾಡಿ ನಾನು ಇಲ್ಲಿಗೆ ಬಂದಿರುವೆನು. ಆತನ ಅಗಲುವಿಕೆಯಿಂದ ನನ್ನ ಚಿತ್ತವು ತುಂಬಾ ಕಳವಳದಿಂದ ತುಂಬಿದೆ.॥20॥
(ಶ್ಲೋಕ - 21)
ಮೂಲಮ್
ಸೋಹಂ ತದ್ದರ್ಶನಾಹ್ಲಾದವಿಯೋಗಾರ್ತಿಯುತಃ ಪ್ರಭೋ ।
ಗಮಿಷ್ಯೇ ದಯಿತಂ ತಸ್ಯ ಬದರ್ಯಾಶ್ರಮಮಂಡಲಮ್ ॥
(ಶ್ಲೋಕ - 22)
ಮೂಲಮ್
ಯತ್ರ ನಾರಾಯಣೋ ದೇವೋ ನರಶ್ಚ ಭಗವಾನೃಷಿಃ ।
ಮೃದು ತೀವ್ರಂ ತಪೋ ದೀರ್ಘಂ ತೇಪಾತೇ ಲೋಕಭಾವನೌ ॥
ಅನುವಾದ
ಆ ಭಗವಂತನ ದರ್ಶನವೆಂಬ ಆನಂದವನ್ನು ಅನುಭವಿಸಿದ್ದ ನಾನು ಈಗ ಆತನ ಅಗಲಿಕೆಯ ದುಃಖವನ್ನೂ ಅನುಭವಿಸುತ್ತಿದ್ದೇನೆ. ಇನ್ನು ನಾನು ಅವನ ಅಪ್ಪಣೆ ಯಂತೆ ಆತನಿಗೆ ಪ್ರಿಯವಾದ ಬದರಿಕಾಶ್ರಮಕ್ಕೆ ಹೋಗುತ್ತೇನೆ. ಭಗವಾನ್ ನಾರಾಯಣ ಮತ್ತು ನರ ಇವರಿಬ್ಬರು ಋಷಿಗಳು ಲೋಕಾನುಗ್ರಹ ಮಾಡುವುದಕ್ಕಾಗಿ ಕಠಿಣ ತಪಸನ್ನಾಚರಿಸು ತ್ತಿದ್ದಾರೆ.॥21-22॥
(ಶ್ಲೋಕ - 23)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯುದ್ಧವಾದುಪಾಕರ್ಣ್ಯ ಸುಹೃದಾಂ ದುಃಸಹಂ ವಧಮ್ ।
ಜ್ಞಾನೇನಾಶಮಯತ್ಕ್ಷತ್ತಾ ಶೋಕಮುತ್ಪತಿತಂ ಬುಧಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ ಮಹರಾಜಾ! ಹೀಗೆ ಉದ್ಧವನ ಬಾಯಿಂದ ಪ್ರಿಯಬಂಧುಗಳ ವಿನಾಶದ ಸಹಿಸ ಲಾರದ ಸಮಾಚಾರವನ್ನು ಕೇಳಿ ಪರಮಜ್ಞಾನೀ ವಿದುರನಿಗೆ ಉಂಟಾದ ಶೋಕವನ್ನು ಅವನು ಜ್ಞಾನದ ಮೂಲಕ ಶಾಂತವಾಗಿಸಿ ಕೊಂಡನು.॥23॥
(ಶ್ಲೋಕ - 24)
ಮೂಲಮ್
ಸ ತಂ ಮಹಾಭಾಗವತಂ ವ್ರಜಂತಂ ಕೌರವರ್ಷಭಃ ।
ವಿಶ್ರಂಭಾದಭ್ಯಧತ್ತೇದಂ ಮುಖ್ಯಂ ಕೃಷ್ಣಪರಿಗ್ರಹೇ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಭಕ್ತ ಪರಿವಾರದಲ್ಲಿ ಮುಖ್ಯನಾಗಿದ್ದ ಆ ಭಾಗವತೋತ್ತಮನು ಬದರಿಕಾಶ್ರಮದ ಕಡೆಗೆ ಹೊರಟಾಗ ಕುರುಶ್ರೇಷ್ಠ ವಿದುರನು ಶ್ರದ್ಧಾಪೂರ್ವಕವಾಗಿ ಅವನಲ್ಲಿ ಕೇಳಿದನು.॥24॥
(ಶ್ಲೋಕ - 25)
ಮೂಲಮ್ (ವಾಚನಮ್)
ವಿದುರ ಉವಾಚ
ಮೂಲಮ್
ಜ್ಞಾನಂ ಪರಂ ಸ್ವಾತ್ಮರಹಃಪ್ರಕಾಶಂ
ಯದಾಹ ಯೋಗೇಶ್ವರ ಈಶ್ವರಸ್ತೇ ।
ವಕ್ತುಂ ಭವಾನ್ನೋರ್ಹತಿ ಯದ್ಧಿ ವಿಷ್ಣೋ-
ರ್ಭೃತ್ಯಾಃ ಸ್ವಭೃತ್ಯಾರ್ಥಕೃತಶ್ಚರಂತಿ ॥
ಅನುವಾದ
ವಿದುರನೆಂದನು ಎಲೈ ಉದ್ಧವನೇ! ಯೋಗೇಶ್ವರ ಭಗವಾನ್ ಶ್ರೀಕೃಷ್ಣನು ತನ್ನ ಸ್ವರೂಪದ ಗೂಢವಾದ ರಹಸ್ಯವನ್ನು ಪ್ರಕಟಗೊಳಿಸುವಂತಹ ಯಾವ ಪರಮ ಜ್ಞಾನವನ್ನು ನಿನಗೆ ಹೇಳಿದನೋ, ಅದನ್ನು ನಮಗೂ ಹೇಳಿರಿ. ಏಕೆಂದರೆ ಭಗವಂತನ ಸೇವಕರಾದರೋ ತಮ್ಮ ಸೇವಕರ ಕಾರ್ಯವನ್ನು ಸಿದ್ಧಗೊಳಿಸುವು ದಕ್ಕಾಗಿಯೇ ಸಂಚರಿಸುತ್ತಿರುತ್ತಾರೆ.॥25॥
(ಶ್ಲೋಕ - 26)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ನನು ತೇ ತತ್ತ್ವಸಂರಾಧ್ಯ ಋಷಿಃ ಕೌಷಾರವೋಂತಿ ಮೇ ।
ಸಾಕ್ಷಾದ್ಭಗವತಾದಿಷ್ಟೋ ಮರ್ತ್ಯಲೋಕಂ ಜಿಹಾಸತಾ ॥
ಅನುವಾದ
ಉದ್ಧವನು ಹೇಳಿದನು ಮಹಾತ್ಮನೇ! ಮೈತ್ರೇಯ ಮಹರ್ಷಿ ಗಳ ಸೇವೆ ಮಾಡಿಯೇ ನೀನು ಆ ತತ್ತ್ವಜ್ಞಾನವನ್ನು ಪಡೆಯಬೇಕು. ಈ ಮರ್ತ್ಯಲೋಕವನ್ನು ಬಿಡುವ ಮುನ್ನ ಭಗವಂತನೇ ಆ ತತ್ತ್ವ ಜ್ಞಾನವನ್ನು ನಿನಗೆ ಉಪದೇಶಮಾಡಬೇಕೆಂದು ಅವರಿಗೆ ನನ್ನೆದು ರಿಗೇ ಅಪ್ಪಣೆ ಮಾಡಿರುವನು.॥26॥
(ಶ್ಲೋಕ - 27)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತಿ ಸಹ ವಿದುರೇಣ ವಿಶ್ವಮೂರ್ತೇ-
ರ್ಗುಣಕಥಯಾ ಸುಧಯಾ ಪ್ಲಾವಿತೋರುತಾಪಃ ।
ಕ್ಷಣಮಿವ ಪುಲಿನೇ ಯಮಸ್ವಸುಸ್ತಾಂ
ಸಮುಷಿತ ಔಪಗವಿರ್ನಿಶಾಂ ತತೋಗಾತ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ ಪರೀಕ್ಷಿದ್ರಾ ಜನೇ! ಹೀಗೆ ವಿದುರನೊಡನೆ ವಿಶ್ವಮೂರ್ತಿಯಾದ ಶ್ರೀಕೃಷ್ಣಪರ ಮಾತ್ಮನ ಗುಣಗಳ ಸಂಕೀರ್ತನೆ ಮಾಡಿದ್ದರಿಂದ ಉದ್ಧವನ ಆ ಮಹಾವಿಯೋಗ ಸಂತಾಪವು ಆ ಕಥಾಮೃತದಿಂದ ಶಮನ ಗೊಂಡಿತು. ಯಮುನಾನದೀ ತೀರದಲ್ಲಿ ಆ ರಾತ್ರಿಯು ಅವನಿಗೆ ಒಂದು ಕ್ಷಣದಂತೆ ಕಳೆದುಹೋಯಿತು. ಮತ್ತೆ ಬೆಳಗಾಗುತ್ತಲೇ ಅವನು ಅಲ್ಲಿಂದ ಹೊರಟುಬಿಟ್ಟನು.॥27॥
(ಶ್ಲೋಕ - 28)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ನಿಧನಮುಪಗತೇಷು ವೃಷ್ಣಿಭೋಜೇ-
ಷ್ವರಥಯೂಥಪಯೂಥಪೇಷು ಮುಖ್ಯಃ ।
ಸ ತು ಕಥಮವಶಿಷ್ಟ ಉದ್ಧವೋ ಯದ್
ಹರಿರಪಿ ತತ್ಯಜ ಆಕೃತಿಂ ತ್ರ್ಯೀಶಃ ॥
ಅನುವಾದ
ರಾಜಾಪರೀಕ್ಷಿತನು ಕೇಳಿದನು ಪೂಜ್ಯರೇ! ವೃಷ್ಣಿವಂಶ ಮತ್ತು ಭೋಜವಂಶಗಳ ಮಹಾರಥಿಗಳೂ, ನಾಯಕ-ಮಹಾ ನಾಯಕರೆಲ್ಲರೂ ನಾಶಹೊಂದಿಬಿಟ್ಟರು. ಮೂರುಲೋಕಗಳ ಒಡೆಯ ನಾದ ಶ್ರೀಹರಿಯೂ ಕೂಡ ತನ್ನ ರೂಪವನ್ನು ಮರೆಮಾಡಬೇಕಾ ಯಿತು. ಹೀಗಿರುವಾಗ ಆ ಯಾದವವಂಶದ ನಾಯಕರಲ್ಲೊಬ್ಬ ನಾದ ಉದ್ಧವನು ಮಾತ್ರ ಹೇಗೆ ಉಳಿದುಕೊಂಡನು?॥28॥
(ಶ್ಲೋಕ - 29)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಬ್ರಹ್ಮಶಾಪಾಪದೇಶೇನ ಕಾಲೇನಾಮೋಘವಾಂಛಿತಃ ।
ಸಂಹೃತ್ಯ ಸ್ವಕುಲಂ ನೂನಂ ತ್ಯಕ್ಷ್ಯನ್ ದೇಹಮಚಿಂತಯತ್ ॥
ಅನುವಾದ
ಶ್ರೀಶುಕಮಹರ್ಷಿಗಳು ಹೇಳುತ್ತಾರೆ ರಾಜನೇ! ತನ್ನ ಇಚ್ಛೆಯು ಎಂದೂ ವ್ಯರ್ಥವಾಗದಿರುವ ಆ ಶ್ರೀಹರಿಯು ಬ್ರಾಹ್ಮಣರ ಶಾಪ ರೂಪೀಕಾಲದ ನೆಪದಿಂದ ತನ್ನ ಕುಲವನ್ನು ಸಂಹಾರಮಾಡಿಸಿ, ತನ್ನ ಲೀಲಾ ಸಂವರಣ ಮಾಡುವ ಸಮಯದಲ್ಲಿ ಹೀಗೆ ಯೋಚಿಸಿದನು.॥29॥
(ಶ್ಲೋಕ - 30)
ಮೂಲಮ್
ಅಸ್ಮಾಲ್ಲೋಕಾದುಪರತೇ ಮಯಿ ಜ್ಞಾನಂ ಮದಾಶ್ರಯಮ್ ।
ಅರ್ಹತ್ಯುದ್ಧವ ಏವಾದ್ಧಾ ಸಂಪ್ರತ್ಯಾತ್ಮವತಾಂ ವರಃ ॥
ಅನುವಾದ
‘ಈಗ ನಾನು ಈ ಲೋಕವನ್ನು ಬಿಟ್ಟು ಹೊರಟು ಹೋದ ಬಳಿಕ ನನ್ನ ಜ್ಞಾನವನ್ನು ಗ್ರಹಿಸಲು ಯೋಗ್ಯನಾದ ಅಕಾರಿಯೆಂದರೆ ಸಂಯಮಿಗಳಲ್ಲಿ ಶ್ರೇಷ್ಠನಾದ ಉದ್ಧವ ನೊಬ್ಬನೇ!॥30॥
(ಶ್ಲೋಕ - 31)
ಮೂಲಮ್
ನೋದ್ಧವೋಣ್ವಪಿ ಮನ್ನ್ಯೂನೋ ಯದ್ಗುಣೈರ್ನಾರ್ದಿತಃ ಪ್ರಭುಃ ।
ಅತೋ ಮದ್ವಯುನಂ ಲೋಕಂ ಗ್ರಾಹಯನ್ನಿಹ ತಿಷ್ಠತು ॥
ಅನುವಾದ
ಈತನು ನನಗಿಂತ ಅಣುಮಾತ್ರವೂ ಕಡಿಮೆ ಯವನಲ್ಲ. ಏಕೆಂದರೆ, ಇವನು ವಿಷಯಗಳ ಬಾಧೆಗೆ ಎಂದಿಗೂ ತುತ್ತಾದವನಲ್ಲ. ಆದ್ದರಿಂದ ಈತನು ಜನರಿಗೆ ನನ್ನ ಜ್ಞಾನದ ಬಗೆಗೆ ತಿಳಿವಳಿಕೆ ನೀಡುತ್ತಾ ಇಲ್ಲಿಯೇ ಇರಲಿ.॥31॥
(ಶ್ಲೋಕ - 32)
ಮೂಲಮ್
ಏವಂ ತ್ರಿಲೋಕಗುರುಣಾ ಸಂದಿಷ್ಟಃ ಶಬ್ದಯೋನಿನಾ ।
ಬದರ್ಯಾಶ್ರಮಮಾಸಾದ್ಯ ಹರಿಮೀಜೇ ಸಮಾನಾ ॥
ಅನುವಾದ
ವೇದಗಳಿಗೆ ಮೂಲಕಾರಣನಾದ ಮತ್ತು ವೇದೈಕವೇದ್ಯನಾದ ಜಗದ್ಗುರು ಶ್ರೀಕೃಷ್ಣನಿಂದ ಹೀಗೆ ಆಜ್ಞೆಪಡೆದ ಮಹಾತ್ಮನಾದ ಉದ್ಧವನು ಬದರಿಕಾಶ್ರಮಕ್ಕೆ ಹೋಗಿ ಸಮಾಯೋಗದಿಂದ ಶ್ರೀಹರಿಯನ್ನು ಆರಾಸತೊಡಗಿದನು.॥32॥
(ಶ್ಲೋಕ - 33)
ಮೂಲಮ್
ವಿದುರೋಪ್ಯುದ್ಧವಾಚ್ಛ್ರುತ್ವಾ ಕೃಷ್ಣಸ್ಯ ಪರಮಾತ್ಮನಃ ।
ಕ್ರೀಡಯೋಪಾತ್ತದೇಹಸ್ಯ ಕರ್ಮಾಣಿ ಶ್ಲಾಘಿತಾನಿ ಚ ॥
(ಶ್ಲೋಕ - 34)
ಮೂಲಮ್
ದೇಹನ್ಯಾಸಂ ಚ ತಸ್ಯೈವಂ ೀರಾಣಾಂ ಧೈರ್ಯವರ್ಧನಮ್ ।
ಅನ್ಯೇಷಾಂ ದುಷ್ಕರತರಂ ಪಶೂನಾಂ ವಿಕ್ಲವಾತ್ಮನಾಮ್ ॥
(ಶ್ಲೋಕ - 35)
ಮೂಲಮ್
ಆತ್ಮಾನಂ ಚ ಕುರುಶ್ರೇಷ್ಠ ಕೃಷ್ಣೇನ ಮನಸೇಕ್ಷಿತಮ್ ।
ಧ್ಯಾಯನ್ ಗತೇ ಭಾಗವತೇ ರುರೋದ ಪ್ರೇಮವಿಹ್ವಲಃ ॥
ಅನುವಾದ
ಕುರುಶ್ರೇಷ್ಠ ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಲೀಲೆಯಿಂದಲೇ ತನ್ನ ದಿವ್ಯ ಮಂಗಳ ವಿಗ್ರಹವನ್ನು ಈ ಲೋಕದಲ್ಲಿ ಪ್ರಕಟಿಸಿದ್ದನು. ಅದನ್ನು ಮರೆಸಿ ಕೊಂಡದ್ದೂ ಲೀಲಾಮಾತ್ರವೇ. ಆತನು ಅಂತರ್ಧಾನಹೊಂದಿದ ಈ ಘಟನೆಯು ೀರ ಪುರುಷರಿಗೆ ಧೈರ್ಯವನ್ನೂ, ಉತ್ಸಾಹ ವನ್ನೂ ತುಂಬುತ್ತದೆ. ಆದರೆ ಪಶುಸಮಾನರಾದ ಹೇಡಿಗಳಿಗೆ ಅತ್ಯಂತ ದುಷ್ಕರವಾಗಿದೆ. ಪರಮ ಭಾಗವತೋತ್ತಮನಾದ ಉದ್ಧ ವನ ಬಾಯಿಂದ ಭಗವಂತನ ಶ್ರೇಷ್ಠವಾದ ಕರ್ಮಗಳನ್ನೂ, ಅಂತ ರ್ಧಾನಹೊಂದಿದ ವೃತ್ತಾಂತವನ್ನೂ ವಿದುರನು ಹೀಗೆ ಕೇಳಿದನು. ಹಾಗೆಯೇ ಪರಂಧಾಮ ಹೊಂದುವ ಸಮಯದಲ್ಲಿ ಸ್ವಾಮಿಯು ತನ್ನನ್ನು ನೆನೆಸಿಕೊಂಡನು ಎಂದು ಕೇಳಿ ವಿದುರನು ಉದ್ಧವನು ಹೊರಟುಹೋದ ಬಳಿಕ ಪ್ರೇಮಪರವಶನಾಗಿ ರೋದಿಸತೊಡಗಿದನು.॥33-35॥
(ಶ್ಲೋಕ - 36)
ಮೂಲಮ್
ಕಾಲಿಂದ್ಯಾಃ ಕತಿಭಿಃ ಸಿದ್ಧ ಅಹೋಭಿರ್ಭರತರ್ಷಭಃ ।
ಪ್ರಾಪದ್ಯತ ಸ್ವಃಸರಿತಂ ಯತ್ರ ಮಿತ್ರಾಸುತೋ ಮುನಿಃ ॥
ಅನುವಾದ
ಅನಂತರ ಆ ಸಾಧುಶಿರೋಮಣಿಯು ಯಮುನಾನದಿಯ ತೀರದಿಂದ ಹೊರಟು, ಕೆಲವು ದಿನಗಳಲ್ಲೇ ಶ್ರೀಮೈತ್ರೇಯ ಮಹರ್ಷಿಗಳು ತಂಗಿದ್ದ ಗಂಗಾನದೀತೀರವನ್ನು ತಲುಪಿದನು.॥36॥
ಅನುವಾದ (ಸಮಾಪ್ತಿಃ)
ನಾಲ್ಕನೆಯ ಅಧ್ಯಾಯವು ಮುಗಿಯಿತು.॥4॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ವಿದುರೋದ್ಧವಸಂವಾದೇ ಚತುರ್ಥೋಽಧ್ಯಾಯಃ.॥4॥