[ಮೊದಲನೆಯ ಅಧ್ಯಾಯ]
ಭಾಗಸೂಚನಾ
ಉದ್ಧವ ವಿದುರರ ಸಮಾಗಮ ಸಂಭಾಷಣೆ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಮೇತತ್ಪುರಾ ಪೃಷ್ಟೋ ಮೈತ್ರೇಯೋ ಭಗವಾನ್ಕಿಲ ।
ಕ್ಷತಾ ವನಂ ಪ್ರವಿಷ್ಟೇನ ತ್ಯಕ್ತ್ವಾ ಸ್ವಗೃಹಮೃದ್ಧಿಮತ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ ಪರೀಕ್ಷಿತನೇ! ನೀನು ಕೇಳಿರುವ ಮಾತನ್ನೇ ಹಿಂದೆ ತನ್ನ ಸುಖ-ಸಮೃದ್ಧಿಯಿಂದ ಕೂಡಿದ ಮನೆಯನ್ನು ತ್ಯಜಿಸಿ ಕಾಡಿಗೆ ಹೋಗಿರುವ ವಿದುರನು ಮೈತ್ರೇಯರಲ್ಲಿ ಕೇಳಿದ್ದನು.॥1॥
(ಶ್ಲೋಕ - 2)
ಮೂಲಮ್
ಯದ್ವಾ ಅಯಂ ಮನ ಕೃದ್ವೋ ಭಗವಾನಖಿಲೇಶ್ವರಃ ।
ಪೌರವೇಂದ್ರಗೃಹಂ ಹಿತ್ವಾ ಪ್ರವಿವೇಶಾತ್ಮಸಾತ್ಕೃತಮ್ ॥
ಅನುವಾದ
ಸರ್ವೇಶ್ವರನಾದ ಭಗವಾನ್ ಶ್ರೀಕೃಷ್ಣನು ಪಾಂಡವರ ದೂತನಾಗಿ ಹಸ್ತಿನಾವತಿಗೆ ಹೋಗಿದ್ದಾಗ, ದುರ್ಯೋಧನನ ಅರಮನೆಯನ್ನು ಬಿಟ್ಟು, ಭಕ್ತಶ್ರೇಷ್ಠನಾದ ವಿದುರನನ್ನು ತನ್ನವನೆಂದೇ ತಿಳಿದು, ಅವನು ಕರೆಯದೆಯೇ ಆತನ ಮನೆಗೆ ಹೋಗಿದ್ದನು.॥2॥
(ಶ್ಲೋಕ - 3)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಕುತ್ರ ಕ್ಷತ್ತುರ್ಭಗವತಾ ಮೈತ್ರೇಯೇಣಾಸ ಸಂಗಮಃ ।
ಕದಾ ವಾ ಸಹ ಸಂವಾದ ಏತದ್ವರ್ಣಯ ನಃ ಪ್ರಭೋ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು ‘‘ಮಹಾತ್ಮರೇ! ಭಗವಾನ್ ಮೈತ್ರೇಯರೊಂದಿಗೆ ವಿದುರನ ಸಮಾಗಮ ಎಲ್ಲಿ ಆಯಿತು ? ಯಾವಾಗ ಆಗಿತ್ತು? ಎಂಬುದನ್ನು ತಿಳಿಸುವ ಕೃಪೆಮಾಡಿರಿ.॥3॥
(ಶ್ಲೋಕ - 4)
ಮೂಲಮ್
ನ ಹ್ಯಲ್ಪಾರ್ಥೋದಯಸ್ತಸ್ಯ ವಿದುರಸ್ಯಾಮಲಾತ್ಮನಃ ।
ತಸ್ಮಿನ್ವರೀಯಸಿ ಪ್ರಶ್ನಃ ಸಾಧುವಾದೋಪಬೃಂಹಿತಃ ॥
ಅನುವಾದ
ಪ್ರಶ್ನೆ ಮಾಡಿದವನು ಮಹಾತ್ಮನಾದ ವಿದುರನು. ಉತ್ತರ ಹೇಳಿ ದವರು ಮಹಾನುಭಾವರಾದ ಮೈತ್ರೇಯರು. ಅಂದ ಮೇಲೆ ಅದು ಅಲ್ಪ ಪ್ರಯೋಜನವುಳ್ಳ ಪ್ರಶ್ನೆಯಾಗಿರಲಾರದು. ಅತ್ಯಂತ ಮಹತ್ವ ಪೂರ್ಣವಾದ, ಪುರುಷಾರ್ಥಗಳನ್ನು ಕೈಗೂಡಿಸುವ ಪ್ರಶ್ನೆಯೇ ಆಗಿರಬೇಕು. ಭಗವಂತನ ಸಚ್ಚರಿತ್ರೆಗಳಿಂದ ಕೂಡಿರಬೇಕು. ಮಹಾತ್ಮರ ಶ್ಲಾಘನೆಗೆ ಪಾತ್ರವಾಗಿರಬೇಕು.॥4॥
(ಶ್ಲೋಕ - 5)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಸ ಏವಮೃಷಿವರ್ಯೋಯಂ ಪೃಷ್ಟೋ ರಾಜ್ಞಾ ಪರೀಕ್ಷಿತಾ ।
ಪ್ರತ್ಯಾಹ ತಂ ಸುಬಹುವಿತ್ ಪ್ರೀತಾತ್ಮಾ ಶ್ರೂಯತಾಮಿತಿ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ ಶೌನಕರೇ! ಸರ್ವಜ್ಞ ರಾದ ಶುಕಮಹಾಮುನಿಗಳು ರಾಜನ ಪ್ರಶ್ನೆಯನ್ನು ಕೇಳಿ ಸಂತೋಷ ಗೊಂಡು ಆತನಿಗೆ ಹೇಳತೊಡಗಿದರು.॥5॥
(ಶ್ಲೋಕ - 6)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಯದಾ ತು ರಾಜಾ ಸ್ವಸುತಾನಸಾಧೂನ್
ಪುಷ್ಣನ್ನಧರ್ಮೇಣ ವಿನಷ್ಟ ದೃಷ್ಟಿಃ ।
ಭ್ರಾತುರ್ಯವಿಷ್ಠಸ್ಯ ಸುತಾನ್ವಿಬಂಧೂನ್
ಪ್ರವೇಶ್ಯ ಲಾಕ್ಷಾಭವನೇ ದದಾಹ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ ಪರೀಕ್ಷಿದ್ರಾಜನೇ! ದೃಷ್ಟಿಹೀನನಾದ ಕುರುರಾಜ ಧೃತರಾಷ್ಟ್ರನು ಅನ್ಯಾಯದಿಂದ ದುಷ್ಟ ರಾಗಿದ್ದ ತನ್ನ ಮಕ್ಕಳನ್ನು ಪಾಲನೆ-ಪೋಷಣೆ ಮಾಡುತ್ತಾ, ತಮ್ಮನ ಮಕ್ಕಳಾಗಿದ್ದ, ಅನಾಥರಾಗಿದ್ದ ಪಾಂಡವರನ್ನು ಅರಗಿನಾಲಯಕ್ಕೆ ಕಳಿಸಿ ಬೆಂಕಿ ಹಚ್ಚಿಸಿದ್ದನು.॥6॥
(ಶ್ಲೋಕ - 7)
ಮೂಲಮ್
ಯದಾ ಸಭಾಯಾಂ ಕುರುದೇವದೇವ್ಯಾಃ
ಕೇಶಾಭಿಮರ್ಶಂ ಸುತಕರ್ಮ ಗರ್ಹ್ಯಮ್ ।
ನ ವಾರಯಾಮಾಸ ನೃಪಃ ಸ್ನುಷಾಯಾಃ
ಸ್ವಾಸ್ರೈರ್ಹರಂತ್ಯಾಃ ಕುಚಕುಂಕುಮಾನಿ ॥
ಅನುವಾದ
ತನ್ನ ಸೊಸೆಯಾಗಿದ್ದ, ಮಹಾ ರಾಜಾ ಯುಷ್ಠಿರನ ಧರ್ಮಪತ್ನಿಯಾದ ದ್ರೌಪದಿಯ ತುರುಬನ್ನು ದುಷ್ಟ ದುಃಶಾಸನನು ತುಂಬಿದ ಸಭೆಯಲ್ಲಿ ಎಳೆದಾಗ ಆಕೆಯ ಕಣ್ಣುಗಳಿಂದ ಹರಿದ ಕಂಬನಿಧಾರೆಯು ಆಕೆಯ ಎದೆಗೆ ಹಚ್ಚಿ ಕೊಂಡಿದ್ದ ಕುಂಕುಮಕೇಸರಿಯು ತೊಳೆದುಹೋಗುತ್ತಿತ್ತು. ಆದರೂ ಧೃತರಾಷ್ಟ್ರನು ನೀಚನಾಗಿದ್ದ ತನ್ನ ಪುತ್ರನನ್ನು ಕುಮಾರ್ಗದಿಂದ ತಡೆಯಲಿಲ್ಲ.॥7॥
(ಶ್ಲೋಕ - 8)
ಮೂಲಮ್
ದ್ಯೂತೇ ತ್ವಧರ್ಮೇಣ ಜಿತಸ್ಯ ಸಾಧೋಃ
ಸತ್ಯಾವಲಂಬಸ್ಯ ವನಾಗತಸ್ಯ ।
ನ ಯಾಚತೋದಾತ್ಸಮಯೇನ ದಾಯಂ
ತಮೋ ಜುಷಾಣೋ ಯದಜಾತಶತ್ರೋಃ ॥
ಅನುವಾದ
ಸತ್ಯಸಂಧನೂ, ಸಾಧುವೂ ಆಗಿದ್ದ ಧರ್ಮ ನಂದನನನ್ನು ದುರುಳ ದುರ್ಯೋಧನನು ಕಪಟ ದ್ಯೂತದಲ್ಲಿ ಗೆದ್ದು ಕಾಡಿಗೆ ಅಟ್ಟಿದನು. ಅವನು ಅಲ್ಲಿ ಹನ್ನೆರಡು ವರ್ಷದ ವನವಾಸವನ್ನೂ, ಒಂದು ವರ್ಷದ ಅಜ್ಞಾತವಾಸವನ್ನೂ ಮುಗಿಸಿ ಬಂದು ನ್ಯಾಯೋಚಿತವಾದ ತನ್ನ ಭಾಗದ ರಾಜ್ಯವನ್ನು ಕೇಳಿ ಕೊಂಡರೂ ಮೋಹಾಂಧನಾಗಿ ಅಜಾತಶತ್ರುವಾದ ಧರ್ಮರಾಜನಿಗೆ ಕೊಡದೆ ತಿರಸ್ಕರಿಸಿದನು.॥8॥
(ಶ್ಲೋಕ - 9)
ಮೂಲಮ್
ಯದಾ ಚ ಪಾರ್ಥಪ್ರಹಿತಃ ಸಭಾಯಾಂ
ಜಗದ್ಗುರುರ್ಯಾನಿ ಜಗಾದ ಕೃಷ್ಣಃ ।
ನ ತಾನಿ ಪುಂಸಾನುಮೃತಾಯನಾನಿ
ರಾಜೋರು ಮೇನೇ ಕ್ಷತಪುಣ್ಯಲೇಶಃ ॥
ಅನುವಾದ
ಧರ್ಮರಾಜನಿಂದ ಕಳುಹಿಸ ಲ್ಪಟ್ಟ ಜಗದ್ಗುರು ಭಗವಾನ್ ಶ್ರೀಕೃಷ್ಣನು ಕೌರವರ ಸಭೆಯಲ್ಲಿ ಭೀಷ್ಮಾದಿ ಸತ್ಪುರುಷರಿಗೆ ಅಮೃತದಂತಿರುವ ಮಧುರ ಹಿತವಚನ ವನ್ನು ಹೇಳಿದನು. ಆದರೆ ಎಲ್ಲ ಪುಣ್ಯವನ್ನು ಕಳಕೊಂಡಿದ್ದ ಕುರುರಾಜನು ಅವನ್ನು ಆದರಿಸಲಿಲ್ಲ.॥9॥
(ಶ್ಲೋಕ - 10)
ಮೂಲಮ್
ಯದೋಪಹೂತೋ ಭವನಂ ಪ್ರವಿಷ್ಟೋ
ಮಂತ್ರಾಯ ಪೃಷ್ಟಃ ಕಿಲ ಪೂರ್ವಜೇನ ।
ಅಥಾಹ ತನ್ಮಂತ್ರದೃಶಾಂ ವರೀಯಾನ್
ಯನ್ಮಂತ್ರಿಣೋ ವೈದುರಿಕಂ ವದಂತಿ ॥
ಅನುವಾದ
ಮಂತ್ರಾಲೋಚನೆ- ಸಲಹೆಗಾಗಿ ವಿದುರನನ್ನು ಧೃತರಾಷ್ಟ್ರನು ಬರಮಾಡಿಕೊಂಡಾಗ, ಅವನು ಅರಮನೆಗೆ ಹೋದನು. ಅಣ್ಣ ಧೃತರಾಷ್ಟ್ರನು ಕೇಳಿದಾಗ ಮಂತ್ರಿಗಳಲ್ಲಿ ಶ್ರೇಷ್ಠನಾದ ಮಹಾತ್ಮಾ ವಿದುರನು ನೀಡಿದ ಮಂತ್ರಾಲೋಚನೆಯ ನೀತಿಗಳನ್ನು ನೀತಿಶಾಸಜ್ಞರು ‘ವಿದುರನೀತಿ’ ಎಂದು ಕರೆಯುತ್ತಾರೆ.॥10॥
(ಶ್ಲೋಕ - 11)
ಮೂಲಮ್
ಅಜಾತಶತ್ರೋಃ ಪ್ರತಿಯಚ್ಛ ದಾಯಂ
ತಿತಿಕ್ಷತೋ ದುರ್ವಿಷಹಂ ತವಾಗಃ ।
ಸಹಾನುಜೋ ಯತ್ರ ವೃಕೋದರಾಹಿಃ
ಶ್ವಸನ್ರುಷಾ ಯತ್ತ್ವಮಲಂ ಬಿಭೇಷಿ ॥
ಅನುವಾದ
ವಿದುರನೆಂದನು ಅಣ್ಣಯ್ಯ! ಅಜಾತ ಶತ್ರುವಾದ, ಮಹಾತ್ಮ ನಾದ ಯುಷ್ಠಿರನಿಗೆ ನೀನು ಆತನ ಹಕ್ಕಿನ ರಾಜ್ಯವನ್ನು ಕೊಟ್ಟು ಬಿಡು. ಅವನು ಸಹಿಸಲು ಯೋಗ್ಯವಲ್ಲದ ಅಪರಾಧಗಳನ್ನೂ ಸಹಿಸಿಕೊಂಡಿರುವನು. ಭೀಮಸೇನನೆಂಬ ಕಾಲಸರ್ಪಕ್ಕೆ ನೀನೂ ಗಡ-ಗಡ ನಡುಗುತ್ತಿರುವೆ. ಅವನು ತನ್ನ ತಮ್ಮಂದಿರೊಡನೆ ಸೇಡು ತೀರಿಸಿಕೊಳ್ಳಲು ಕ್ರೋಧಾವೇಶದಿಂದ ಬುಸುಗುಟ್ಟುತ್ತಿರುವನು.॥11॥
(ಶ್ಲೋಕ - 12)
ಮೂಲಮ್
ಪಾರ್ಥಾಂಸ್ತು ದೇವೋ ಭಗವಾನ್ ಮುಕುಂದೋ
ಗೃಹೀತವಾನ್ ಸಕ್ಷಿತಿದೇವದೇವಃ ।
ಆಸ್ತೇ ಸ್ವಪುರ್ಯಾಂ ಯದುದೇವದೇವೋ
ವಿನಿರ್ಜಿತಾಶೇಷನೃದೇವದೇವಃ ॥
ಅನುವಾದ
ಬ್ರಾಹ್ಮಣರಿಗೂ, ದೇವತೆಗಳಿಗೂ ಆರಾಧ್ಯದೈವನಾದ ಭಗವಾನ್ ಶ್ರೀಕೃಷ್ಣನು ಪಾಂಡವರನ್ನು ತನ್ನವರನ್ನಾಗಿಸಿ ಕೊಂಡು ಕಾಪಾಡುತ್ತಿದ್ದಾನೆ. ಯಾದವವೀರರೆಲ್ಲರ ಆರಾಧ್ಯದೇವನಾದ ಅವನು ಈಗ ತನ್ನ ರಾಜಧಾನಿ ದ್ವಾರಕೆಯಲ್ಲೇ ಇದ್ದಾನೆ. ಆದ್ದರಿಂದ ನೀನು ಪಾಂಡವರೊಂದಿಗೆ ವಿರೋಧವನ್ನು ಕಟ್ಟಿಕೊಳ್ಳಬೇಡ. ಅವನು ಭೂಮಿಯಲ್ಲಿರುವ ರಾಜಾರಾಜರೆಲ್ಲರನ್ನೂ ಸೋಲಿಸಿರುವ ಅಜಿತನಾದ ಸ್ವಾಮಿಯು.॥12॥
(ಶ್ಲೋಕ - 13)
ಮೂಲಮ್
ಸ ಏಷ ದೋಷಃ ಪುರುಷದ್ವಿಡಾಸ್ತೇ
ಗೃಹಾನ್ ಪ್ರವಿಷ್ಟೋ ಯಮಪತ್ಯಮತ್ಯಾ ।
ಪುಷ್ಣಾಸಿ ಕೃಷ್ಣಾದ್ವಿಮುಖೋ ಗತಶ್ರೀಃ
ತ್ಯಜಾಶ್ವಶೈವಂ ಕುಲಕೌಶಲಾಯ ॥
ಅನುವಾದ
ಯಾವನನ್ನು ತನ್ನ ಪುತ್ರನೆಂದು ತಿಳಿದು, ಆತನ ಮಾತುಗಳಿಗೆಲ್ಲ ಹೂಂಗುಟ್ಟುತ್ತಾ ಪೋಷಿಸುತ್ತಿ ರುವೆಯೋ ಆ ದುರ್ಯೋಧನನಾದರೋ ದೋಷಗಳೇ ಮೂರ್ತಿ ಭವಿಸಿ ನಿನ್ನ ಅರಮನೆಯನ್ನು ಹೊಕ್ಕು ಕುಳಿತಿರುವನು. ಸರ್ವಭೂತ ಸುಹೃದನಾದ ಭಗವಾನ್ ಶ್ರೀಕೃಷ್ಣನಲ್ಲಿ ದ್ವೇಷಬುದ್ಧಿಯಿಂದ ಕೂಡಿ ರುವ ಆತನನ್ನು ಪೋಷಿಸುತ್ತಿರುವ ನೀನು ನಿನ್ನ ಭಾಗ್ಯವನ್ನು ಕಳೆದು ಕೊಂಡು ಬಿಟ್ಟಿರುವೆ ಆದ್ದರಿಂದ ನೀನು ನಿನ್ನ ಕುಲದ ಕುಶಲವನ್ನು ಬಯಸುವೆಯಾದರೆ ಈ ದುಷ್ಟನನ್ನು ಕೂಡಲೇ ತೊರೆದುಬಿಡು.॥13॥
(ಶ್ಲೋಕ - 14)
ಮೂಲಮ್
ಇತ್ಯೂಚಿವಾಂಸ್ತತ್ರ ಸುಯೋಧನೇನ
ಪ್ರವೃದ್ಧಕೋಪಸುರಿತಾಧರೇಣ ।
ಅಸತ್ಕೃತಃ ಸತ್ ಸ್ಪೃಹಣೀಯಶೀಲಃ
ಕ್ಷತ್ತಾ ಸಕರ್ಣಾನುಜ ಸೌಬಲೇನ ॥
(ಶ್ಲೋಕ - 15)
ಮೂಲಮ್
ಕ ಏನಮತ್ರೋಪಜುಹಾವ ಜಿಹ್ಮಂ
ದಾಸ್ಯಾಃ ಸುತಂ ಯದ್ಬಲಿನೈವ ಪುಷ್ಟಃ ।
ತಸ್ಮಿನ್ಪ್ರತೀಪಃ ಪರಕೃತ್ಯ ಆಸ್ತೇ
ನಿರ್ವಾಸ್ಯತಾಮಾಶು ಪುರಾಚ್ಛ್ವಸಾನಃ ॥
ಅನುವಾದ
ಸತ್ಪುರುಷರಿಗೆ ಪ್ರಿಯವಾದ ಶೀಲಸ್ವಭಾವವುಳ್ಳ ವಿದುರನ ಆ ಮಾತನ್ನು ಕೇಳಿ ಕರ್ಣ, ದುಃಶಾಸನ, ಶಕುನಿ ಇವರುಗಳಿಂದ ಕೂಡಿದ ದುರ್ಯೋಧನನು ಕ್ರೋಧದಿಂದ ಕಿಡಿ-ಕಿಡಿಯಾದನು. ಸಿಟ್ಟಿನಿಂದ ಅವನ ತುಟಿಗಳು ಅದುರುತ್ತಿದ್ದವು. ಅವನು ವಿದುರ ನನ್ನು ತಿರಸ್ಕರಿಸುತ್ತಾ ‘‘ಈ ವಕ್ರಬುದ್ಧಿಯ ದಾಸೀಪುತ್ರನನ್ನು ಇಲ್ಲಿಗೆ ಕರೆಸಿದವರಾರು ? ನಮ್ಮ ಮನೆಯ ಕೂಳನ್ನೇ ತಿಂದು- ಬೆಳೆದು, ನಮಗೆ ವಿರೋಯಾಗಿ, ಶತ್ರುಗಳಿಗೆ ಹಿತವನ್ನು ಬಯಸು ತ್ತಿರುವ ಕೃತಘ್ನನೀತನು. ಇವನನ್ನು ಕೊಲ್ಲದೆ ನಮ್ಮ ನಗರದಿಂದ ಹೊರಗೆ ಹಾಕಿರಿ.॥14-15॥
(ಶ್ಲೋಕ - 16)
ಮೂಲಮ್
ಸ ಇತ್ಥಮತ್ಯುಲ್ಬಣಕರ್ಣಬಾಣೈ-
ರ್ಭ್ರಾತುಃ ಪುರೋ ಮರ್ಮಸು ತಾಡಿತೋಪಿ ।
ಸ್ವಯಂ ಧನುರ್ದ್ವಾರಿ ನಿಧಾಯ ಮಾಯಾಂ
ಗತವ್ಯಥೋಯಾದುರು ಮಾನಯಾನಃ ॥
ಅನುವಾದ
ಕಿವಿಗಳಿಗೆ ಶೂಲದಂತಿರುವ ಮರ್ಮಭೇದಕವಾದ ಮಾತುಗಳನ್ನು ವಿದುರನು ಅಣ್ಣನ ಎದುರಿ ನಲ್ಲೇ ಕೇಳಬೇಕಾಯಿತು. ಆದರೆ ಮಂತ್ರಿ ಶ್ರೇಷ್ಠನಾದ ವಿದುರನು ಆ ಯೋಗಿರಾಜನು ಅವುಗಳಿಂದ ಬೇಸರಗೊಳ್ಳದೆ ‘ಭಗವಂತನ ಮಾಯೆಯು ಪ್ರಬಲವಾದುದು’ ಎಂದು ಭಾವಿಸಿ, ತನ್ನ ಬಲಿಷ್ಠ ವಾದ ಧನುಸ್ಸನ್ನು ರಾಜದ್ವಾರದಲ್ಲಿ ಬಿಟ್ಟು ಹಸ್ತಿನಾವತಿಯಿಂದ ಹೊರಟುಹೋದನು.॥16॥
(ಶ್ಲೋಕ - 17)
ಮೂಲಮ್
ಸ ನಿರ್ಗತಃ ಕೌರವಪುಣ್ಯಲಬ್ಧೋ
ಗಜಾಹ್ವಯಾತ್ತೀರ್ಥಪದಃ ಪದಾನಿ ।
ಅನ್ವಾಕ್ರಮತ್ಪುಣ್ಯಚಿಕೀರ್ಷಯೋರ್ವ್ಯಾಂ
ಸ್ವಷ್ಠಿತೋ ಯಾನಿ ಸಹಸ್ರಮೂರ್ತಿಃ ॥
ಅನುವಾದ
ಕೌರವರಿಗೆ ವಿದುರನಂತಹ ಮಹಾತ್ಮನು ಅವರ ಪುಣ್ಯಪುಂಜದ ಲವಾಗಿಯೇ ದೊರಕಿದ್ದನು. ಅವನು ಹೊರಡಲು ಕೌರವರ ಭಾಗ್ಯವೇ ಅವನೊಡನೆ ಹೋದಂ ತಾಯಿತು. ಆ ಮಹಾತ್ಮನು ಪುಣ್ಯಸಂಪಾದನೆಗಾಗಿ ಭೂಮಂಡಲ ದಲ್ಲಿ ಶ್ರೀಹರಿ, ಬ್ರಹ್ಮ, ರುದ್ರ, ಅನಂತ ಮುಂತಾದ ಅನೇಕ ರೂಪಗಳಲ್ಲಿ ವಿರಾಜಮಾನನಾದ ತೀರ್ಥಪಾದನಾದ ಭಗವಂತನ ಪುಣ್ಯಕ್ಷೇತ್ರಗಳಲ್ಲಿ ಸಂಚರಿಸ ತೊಡಗಿದನು.॥17॥
(ಶ್ಲೋಕ - 18)
ಮೂಲಮ್
ಪುರೇಷು ಪುಣ್ಯೋಪವನಾದ್ರಿಕುಂಜೇ-
ಷ್ವಪಂಕತೋಯೇಷು ಸರಿತ್ಸರಸ್ಸು ।
ಅನಂತಲಿಂಗೈಃ ಸಮಲಂಕೃತೇಷು
ಚಚಾರ ತೀರ್ಥಾಯತನೇಷ್ವನನ್ಯಃ ॥
ಅನುವಾದ
ಭಗವಂತನ ದಿವ್ಯಮಂಗಳವಿಗ್ರಹಗಳು ಕಂಗೊಳಿಸುವ ಪುಣ್ಯತೀರ್ಥಕ್ಷೇತ್ರಗಳ ಲ್ಲಿಯೂ, ನಗರಗಳಲ್ಲೂ, ಪವಿತ್ರ ವನಗಳಲ್ಲೂ, ಪರ್ವತಗಳಲ್ಲೂ, ನಿಕುಂಜಗಳಲ್ಲೂ, ನಿರ್ಮಲಜಲದಿಂದ ತುಂಬಿದ ನದೀ, ಸರೋವರ ಗಳಲ್ಲೂ ಏಕಾಕಿಯಾಗಿಯೇ ಸಂಚರಿಸುತ್ತಿದ್ದನು.॥18॥
(ಶ್ಲೋಕ - 19)
ಮೂಲಮ್
ಗಾಂ ಪರ್ಯಟನ್ಮೇಧ್ಯವಿವಿಕ್ತವೃತ್ತಿಃ
ಸದಾಪ್ಲುತೋಧಃಶಯನೋವಧೂತಃ ।
ಅಲಕ್ಷಿತಃ ಸ್ವೈರವಧೂತವೇಷೋ
ವ್ರತಾನಿ ಚೇರೆ ಹರಿತೋಷಣಾನಿ ॥
ಅನುವಾದ
ಬಂಧು-ಮಿತ್ರಾದಿಗಳು ತನ್ನನ್ನು ಗುರುತಿಸದಿರಲೆಂದು ಅವಧೂತ ವೇಶದಲ್ಲೇ ಸಂಚರಿಸುತ್ತಿದ್ದನು. ಶರೀರಕ್ಕೆ ಅಲಂಕಾರ ಮಾಡಿ ಕೊಳ್ಳದೆ, ಶುದ್ಧವಾದ ಸಾತ್ವಿಕ ಆಹಾರವನ್ನೇ ಭಗವತ್ಪ್ರಸಾದವೆಂದು ಸ್ವೀಕರಿಸುತ್ತಿದ್ದನು. ಬರೀನೆಲದಲ್ಲಿ ಮಲಗುತ್ತಾ, ತೀರ್ಥಗಳಲ್ಲಿ ಸ್ನಾನಮಾಡುತ್ತಾ, ಶ್ರೀಭಗವಂತನನ್ನು ಸಂತೋಷಪಡಿಸುವಂತಹ ವ್ರತಗಳನ್ನು ಆಚರಿಸುತ್ತಾ ಶುದ್ಧವಾದ ವೃತ್ತಿಯಿಂದ ಜೀವನ ನಿರ್ವಹಿಸುತ್ತಿದ್ದನು.॥19॥
(ಶ್ಲೋಕ - 20)
ಮೂಲಮ್
ಇತ್ಥಂ ವ್ರಜನ್ಭಾರತಮೇವ ವರ್ಷಂ
ಕಾಲೇನ ಯಾವದ್ಗತವಾನ್ ಪ್ರಭಾಸಮ್ ।
ತಾವಚ್ಛಶಾಸ ಕ್ಷಿತಿಮೇಕಚಕ್ರಾ-
ಮೇಕಾತಪತ್ರಾಮಜಿತೇನ ಪಾರ್ಥಃ ॥
ಅನುವಾದ
ಹೀಗೆ ವಿದುರನು ಭರತವರ್ಷದಲ್ಲೆಲ್ಲ ಸಂಚರಿಸುತ್ತಾ ಪ್ರಭಾಸ ಕ್ಷೇತ್ರಕ್ಕೆ ಬಂದನು. ಆ ವೇಳೆಗೆ ಭಗವಾನ್ ಶ್ರೀಕೃಷ್ಣನ ಸಹಾಯ ದಿಂದ ಯುಷ್ಠಿರನು ಅಖಂಡ ಭೂಮಂಡಲದ ಏಕಛತ್ರಾಪತಿಯಾಗಿ ರಾಜ್ಯವಾಳುತ್ತಿದ್ದನು.॥20॥
(ಶ್ಲೋಕ - 21)
ಮೂಲಮ್
ತತ್ರಾಥ ಶುಶ್ರಾವ ಸುಹೃದ್ವಿನಷ್ಟಿಂ
ವನಂ ಯಥಾ ವೇಣುಜವಹ್ನಿಸಂಶ್ರಯಮ್ ।
ಸಂಸ್ಪರ್ಧಯಾ ದಗ್ಧಮಥಾನುಶೋಚನ್
ಸರಸ್ವತೀಂ ಪ್ರತ್ಯಗಿಯಾಯ ತೂಷ್ಣೀಮ್ ॥
ಅನುವಾದ
ಬಿದಿರುಮೆಳೆಗಳು ಪರಸ್ಪರ ಘರ್ಷಣೆಯಿಂದ ಇಡೀ ಬಿದಿರಿನಕಾಡು ಸುಟ್ಟು ಬೂದಿ ಯಾಗುವಂತೆ ತನ್ನ ಬಂಧು-ಮಿತ್ರರು ತಮ್ಮ ಅಂತಃಕಲಹದಿಂದ ಪರಸ್ಪರ ಹೊಡೆದಾಡಿ ನಾಶವಾದ ಸಮಾಚಾರವು ಆತನಿಗೆ ಅಲ್ಲೇ ತಿಳಿಯಿತು. ಇದನ್ನು ಕೇಳಿ ದುಃಖಿಸುತ್ತಾ ವೌನವಾಗಿ ಸರಸ್ವತೀ ನದೀ ತೀರಕ್ಕೆ ತಲುಪಿದರು.॥21॥
(ಶ್ಲೋಕ - 22)
ಮೂಲಮ್
ತಸ್ಯಾಂ ತ್ರಿತಸ್ಯೋಶನಸೋ ಮನೋಶ್ಚ
ಪೃಥೋರಥಾಗ್ನೇರಸಿತಸ್ಯ ವಾಯೋಃ ।
ತೀರ್ಥಂ ಸುದಾಸಸ್ಯ ಗವಾಂ ಗುಹಸ್ಯ
ಯಚ್ಛ್ರಾದ್ಧದೇವಸ್ಯ ಸ ಆಸೀಷೇವೇ ॥
ಅನುವಾದ
ಅಲ್ಲಿ ಅವನು ತ್ರಿತ, ಉಶನಾ, ಮನು, ಪೃಥು, ಅಗ್ನಿ, ಅಸಿತ, ವಾಯು, ಸುದಾಸ, ಗೌ, ಗುಹ, ಶ್ರಾದ್ಧದೇವ ಎಂಬ ಹೆಸರುಗಳಿಂದ ಪ್ರಸಿದ್ಧವಾದ ಹನ್ನೊಂದು ತೀರ್ಥಗಳನ್ನು ಸೇವಿಸಿದನು.॥22॥
(ಶ್ಲೋಕ - 23)
ಮೂಲಮ್
ಅನ್ಯಾನಿ ಚೇಹ ದ್ವಿಜದೇವದೇವೈಃ
ಕೃತಾನಿ ನಾನಾಯತನಾನಿ ವಿಷ್ಣೋಃ ।
ಪ್ರತ್ಯಂಗ ಮುಖ್ಯಾಂಕಿತಮಂದಿರಾಣಿ
ಯದ್ದರ್ಶನಾತ್ಕೃಷ್ಣಮನುಸ್ಮರಂತಿ ॥
ಅನುವಾದ
ಅವುಗಳನ್ನಲ್ಲದೆ ಭೂಮಿ ಯಲ್ಲಿ ಬ್ರಾಹ್ಮಣರಿಂದಲೂ, ದೇವತೆಗಳಿಂದಲೂ ಸ್ಥಾಪಿತವಾದ ಇನ್ನೂ ಅನೇಕ ಭಗವಾನ್ ವಿಷ್ಣುವಿನ ಮಂದಿರಗಳನ್ನು ದರ್ಶಿಸಿದನು. ಅವುಗಳ ಶಿಖರದಲ್ಲಿ ಭಗವಂತನ ಪ್ರಧಾನ ಆಯುಧಶ್ರೇಷ್ಠ ಸುದರ್ಶನ ಚಕ್ರದಿಂದ ಅಲಂಕೃತವಾಗಿದ್ದು, ದರ್ಶನಮಾತ್ರ ದಿಂದಲೇ ಶ್ರೀಕೃಷ್ಣನ ಸ್ಮರಣೆಯಾಗುವಂತಹ ದಿವ್ಯಮಂದಿರ ಗಳನ್ನೂ ಸೇವಿಸಿದನು.॥23॥
(ಶ್ಲೋಕ - 24)
ಮೂಲಮ್
ತತಸ್ತ್ವತಿವ್ರಜ್ಯ ಸುರಾಷ್ಟ್ರಮೃದ್ಧಂ
ಸೌವೀರಮತ್ಸ್ಯಾನ್ಕುರುಜಾಂಗಲಾಂಶ್ಚ ।
ಕಾಲೇನ ತಾವದ್ಯಮುನಾಮುಪೇತ್ಯ
ತತ್ರೋದ್ಧವಂ ಭಾಗವತಂ ದದರ್ಶ ॥
ಅನುವಾದ
ಅಲ್ಲಿಂದ ಹೊರಟು ಅವನು ಧನ-ಧಾನ್ಯಗಳಿಂದ ಸಮೃದ್ಧವಾಗಿದ್ದ ಸೌರಾಷ್ಟ್ರ, ಸೌವೀರ, ಮತ್ಸ್ಯ, ಕುರುಜಾಂಗಲವೇ ಮುಂತಾದ ದೇಶಗಳಲ್ಲಿ ಸಂಚರಿ ಸುತ್ತಾ ಕೆಲದಿನಗಳಲ್ಲಿ ಯಮುನಾನದೀ ತೀರಕ್ಕೆ ಹೋದಾಗ ಅಲ್ಲಿ ಆತನಿಗೆ ಪರಮಭಾಗವತೋತ್ತಮ ಉದ್ಧವನ ಸಂದರ್ಶನ ವಾಯಿತು.॥24॥
(ಶ್ಲೋಕ - 25)
ಮೂಲಮ್
ಸ ವಾಸುದೇವಾನುಚರಂ ಪ್ರಶಾಂತಂ
ಬೃಹಸ್ಪತೇಃ ಪ್ರಾಕ್ ತನಯಂ ಪ್ರತೀತಮ್ ।
ಆಲಿಂಗ್ಯ ಗಾಢಂ ಪ್ರಣಯೇನ ಭದ್ರಂ
ಸ್ವಾನಾಮಪೃಚ್ಛದ್ಭಗವತ್ಪ್ರಜಾನಾಮ್ ॥
ಅನುವಾದ
ಆ ಉದ್ಧವನಾದರೋ ಭಗವಂತನಾದ ವಾಸುದೇವನ ಪ್ರಖ್ಯಾತ ಸೇವಕನು. ಪ್ರಶಾಂತವಾದ ಸ್ವಭಾವವುಳ್ಳವನು. ಹಿಂದೆ ಬೃಹಸ್ಪತಿಯವರ ಶಿಷ್ಯನೆಂಬ ಪ್ರಸಿದ್ಧಿಯುಳ್ಳ ನೀತಿಶಾಸವಿಶಾರದನು. ವಿದುರನು ಅವರನ್ನು ನೋಡುತ್ತಲೇ ಪ್ರೀತಿಯಿಂದ ಗಾಢವಾಗಿ ಆಲಿಂಗಿಸಿಕೊಂಡನು. ಮತ್ತೆ ಭಗವಂತನಾದ ಶ್ರೀಕೃಷ್ಣನ ಮತ್ತು ಅವನ ಆಶ್ರಿತರಾದ ತನ್ನ ಸ್ವಜನರ ಕುರಿತು ಕ್ಷೇಮ-ಸಮಾಚಾರ ಕೇಳಿದನು.॥25॥
(ಶ್ಲೋಕ - 26)
ಮೂಲಮ್
ಕಚ್ಚಿತ್ಪುರಾಣೌ ಪುರುಷೌ ಸ್ವನಾಭ್ಯ-
ಪಾದ್ಮಾನುವೃತ್ತ್ಯೇಹ ಕಿಲಾವತೀರ್ಣೌ ।
ಆಸಾತ ಉರ್ವ್ಯಾಃ ಕುಶಲಂ ವಿಧಾಯ
ಕೃತಕ್ಷಣೌ ಕುಶಲಂ ಶೂರಗೇಹೇ ॥
ಅನುವಾದ
ಉದ್ಧವನೇ! ವಸುದೇವನ ಮನೆಯಲ್ಲಿ ಪುರಾಣಪುರುಷರಾದ ಶ್ರೀಕೃಷ್ಣ-ಬಲರಾಮರು ಕುಶಲರಾಗಿದ್ದಾರಲ್ಲ ? ತನ್ನ ನಾಭಿಕಮಲ ದಿಂದ ಹುಟ್ಟಿದ ಬ್ರಹ್ಮದೇವರ ಪ್ರಾರ್ಥನೆಯಂತೆ ಈ ಭುವಿಯಲ್ಲಿ ಅವತರಿಸಿ, ಭೂಭಾರವನ್ನು ಇಳುಹಿ, ಅದರ ಕ್ಷೇಮವನ್ನು ಸಾಸಿ ತಾವೂ ಆನಂದವಾಗಿ ಕ್ಷೇಮವಾಗಿದ್ದಾರಲ್ಲ?॥26॥
(ಶ್ಲೋಕ - 27)
ಮೂಲಮ್
ಕಚ್ಚಿತ್ಕುರೂಣಾಂ ಪರಮಃ ಸುಹೃನ್ನೋ
ಭಾಮಃ ಸ ಆಸ್ತೇ ಸುಖಮಂಗ ಶೌರಿಃ ।
ಯೋ ವೈ ಸ್ವಸೃಣಾಂ ಪಿತೃವದ್ದದಾತಿ
ವರಾನ್ವದಾನ್ಯೋ ವರತರ್ಪಣೇನ ॥
ಅನುವಾದ
ಕುರುವಂಶಿ ಗಳಾದ ನಮಗೆ ಪರಮ ಸ್ನೇಹಿತನಾಗಿರುವ ಶೂರಸೇನನ ಪುತ್ರನಾದ ಪೂಜ್ಯ ವಸುದೇವನು ಕುಶಲನಾಗಿದ್ದಾನೆಯೇ ? ತಂದೆಯಂತೆ ಕೊಡುಗೈಯುಳ್ಳವನಾಗಿ ತನ್ನ ಸೋದರಿಯರಿಗೂ, ಅವರ ಪತಿ ಗಳಿಗೂ ತೃಪ್ತಿಯುಂಟಾಗುವಂತೆ ಅವರು ಬಯಸಿದ ಬಳುವಳಿ ಗಳನ್ನು ಧಾರಾಳವಾಗಿ ಕೊಡುತ್ತಿದ್ದ ವಸುದೇವನು ಸೌಖ್ಯವೇ?॥27॥
(ಶ್ಲೋಕ - 28)
ಮೂಲಮ್
ಕಚ್ಚಿದ್ವರೂಥಾಪತಿರ್ಯದೂನಾಂ
ಪ್ರದ್ಯುಮ್ನ ಆಸ್ತೇ ಸುಖಮಂಗ ವೀರಃ ।
ಯಂ ರುಕ್ಮಿಣೀ ಭಗವತೋಭಿಲೇಭೇ
ಆರಾಧ್ಯ ವಿಪ್ರಾನ್ ಸ್ಮರಮಾದಿಸರ್ಗೇ ॥
ಅನುವಾದ
ಪ್ರಿಯ ಉದ್ಧವನೇ! ಯಾದವರ ಸೇನಾಪತಿಯಾದ ಮಹಾವೀರನಾದ ಪ್ರದ್ಯುಮ್ನನು ಸುಖವಾಗಿದ್ದಾನಷ್ಟೇ ? ರುಕ್ಮಿಣೀ ದೇವಿಯು ಬ್ರಾಹ್ಮಣರನ್ನು ಆರಾಸಿ, ಪೂರ್ವಜನ್ಮದಲ್ಲಿ ಮನ್ಮಥ ನಾಗಿದ್ದವನನ್ನು ಭಗವಂತನಿಂದ ಸತ್ಪುತ್ರನಾಗಿ ಪಡೆದ ಆ ಪ್ರದ್ಯು ಮ್ನನ ಕುಶಲವನ್ನು ವಿಚಾರಿಸುತ್ತಿದ್ದೇನೆ.॥28॥
(ಶ್ಲೋಕ - 29)
ಮೂಲಮ್
ಕಚ್ಚಿತ್ಸುಖಂ ಸಾತ್ವತವೃಷ್ಣಿ ಭೋಜ-
ದಾಶಾರ್ಹಕಾಣಾಮಪಃ ಸ ಆಸ್ತೇ ।
ಯಮಭ್ಯಷಿಂಚಚ್ಛತಪತ್ರನೇತ್ರೋ
ನೃಪಾಸನಾಶಾಂ ಪರಿಹೃತ್ಯ ದೂರಾತ್ ॥
ಅನುವಾದ
ಸಾತ್ವತ, ವೃಷ್ಣಿ, ಭೋಜ, ದಾಶಾರ್ಹ ಮೊದಲಾದ ಯದುವಂಶೀಯರ ಅಪತಿ ಯಾದ ಉಗ್ರಸೇನ ಮಹಾರಾಜರು ಕ್ಷೇಮವಾಗಿರುವರೇ? ಸಿಂಹಾಸನದ ಆಸೆಯನ್ನು ಸರ್ವಥಾ ತ್ಯಾಗಮಾಡಿದ್ದ ಅವರನ್ನು ಕಮಲನಯನ ಭಗವಾನ್ ಶ್ರೀಕೃಷ್ಣನು ಪುನಃ ರಾಜಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕಮಾಡಿದ್ದನಲ್ಲ?॥29॥
(ಶ್ಲೋಕ - 30)
ಮೂಲಮ್
ಕಚ್ಚಿದ್ಧರೇಃ ಸೌಮ್ಯ ಸುತಃ ಸದೃಕ್ಷ
ಆಸ್ತೇಗ್ರಣೀ ರಥಿನಾಂ ಸಾಧು ಸಾಂಬಃ ।
ಅಸೂತ ಯಂ ಜಾಂಬವತೀ ವ್ರತಾಢ್ಯಾ
ದೇವಂ ಗುಹಂ ಯೋಂಬಿಕಯಾ ಧೃತೋಗ್ರೇ ॥
ಅನುವಾದ
ತನ್ನ ತಂದೆ ಯಾದ ಶ್ರೀಕೃಷ್ಣನಿಗೆ ಸಮಾನನಾದ, ಸಮಸ್ತ ರಥಿಗಳಿಗೂ ಅಗ್ರಗಣ್ಯ ನಾಗಿರುವ ಸಾಂಬನು ಕುಶಲವಷ್ಟೇ ? ಇವನು ಮೊದಲು ಪಾರ್ವತೀ ದೇವಿಗೆ ಪುತ್ರನಾಗಿದ್ದ ಕುಮಾರಸ್ವಾಮಿಯಾಗಿದ್ದನು. ಜಾಂಬ ವತಿಯು ಅನೇಕ ವ್ರತಗಳನ್ನಾಚರಿಸಿ ಆತನನ್ನು ಪುತ್ರನನ್ನಾಗಿ ಪಡೆದು ಕೊಂಡಿದ್ದಳು.॥30॥
(ಶ್ಲೋಕ - 31)
ಮೂಲಮ್
ಕ್ಷೇಮಂ ಸ ಕಚ್ಚಿದ್ಯುಯುಧಾನ ಆಸ್ತೇ
ಯಃ ಾಲ್ಗುನಾಲ್ಲಬ್ಧ ಧನೂರಹಸ್ಯಃ ।
ಲೇಭೇಂಜ ಸಾಧೋಕ್ಷಜಸೇವಯೈವ
ಗತಿಂ ತದೀಯಾಂ ಯತಿಭಿರ್ದುರಾಪಾಮ್ ॥
ಅನುವಾದ
ಅರ್ಜುನನಿಂದ ಸರಹಸ್ಯವಾದ ಧನು ರ್ವಿದ್ಯೆಯ ಶಿಕ್ಷಣವನ್ನು ಪಡೆದ ವೀರಾವೀರನಾದ ಯುಯುಧಾ ನನು (ಸಾತ್ಯಕಿ) ಸೌಖ್ಯವಷ್ಟೇ? ಮಹಾಯೋಗಿಗಳಿಗೂ ದುರ್ಲಭ ವಾದ ಭಾಗವತಯೋಗದ ಸಿದ್ಧಿಯನ್ನು ಶ್ರೀಕೃಷ್ಣನ ಸೇವೆಯಿಂದಲೇ ಅನಾಯಾಸವಾಗಿ ಪಡೆದುಕೊಂಡಿದ್ದ ಸುಕೃತಿಯವನು.॥31॥
(ಶ್ಲೋಕ - 32)
ಮೂಲಮ್
ಕಚ್ಚಿದ್ಬುಧಃ ಸ್ವಸ್ತ್ಯನಮೀವ ಆಸ್ತೇ
ಶ್ವಲ್ಕಪುತ್ರೋ ಭಗವತ್ಪ್ರಪನ್ನಃ ।
ಯಃ ಕೃಷ್ಣ ಪಾದಾಂಕಿತಮಾರ್ಗಪಾಂಸು-
ಷ್ವಚೇಷ್ಟತ ಪ್ರೇಮವಿಭಿನ್ನಧೈರ್ಯಃ ॥
ಅನುವಾದ
ಭಗವಂತನ ಶರಣಾಗತನೂ, ನಿರ್ಮಲ ಭಕ್ತಿನಿಯೂ ವಿದ್ವನ್ಮ ಣಿಯೂ ಆದ ಅಕ್ರೂರನು ಕ್ಷೇಮವಿದ್ದಾನೆಯೇ ? ನಂದ ಗೋಕುಲಕ್ಕೆ ಹೋಗುತ್ತಿದ್ದಾಗ ಅಲ್ಲಿನ ಭೂಮಿಯ ರಜದಲ್ಲಿ ಶ್ರೀಕೃಷ್ಣ ಪರಮಾತ್ಮನ ಅಂಕಿತವಾದ ಪದಚಿಹ್ನೆಗಳನ್ನು ಕಂಡು ಪ್ರೇಮ ಪರವಶನಾಗಿ ಉರುಳುಸೇವೆ ಮಾಡಿದ ಭಾಗವತೋತ್ತಮ ನವನು.॥32॥
(ಶ್ಲೋಕ - 33)
ಮೂಲಮ್
ಕಚ್ಚಿಚ್ಛಿವಂ ದೇವಕಭೋಜಪುತ್ರ್ಯಾ
ವಿಷ್ಣುಪ್ರಜಾಯಾ ಇವ ದೇವಮಾತುಃ ।
ಯಾ ವೈ ಸ್ವಗರ್ಭೇಣ ದಧಾರ ದೇವಂ
ತ್ರಯೀ ಯಥಾ ಯಜ್ಞ ವಿತಾನಮರ್ಥಮ್ ॥
ಅನುವಾದ
ಭೋಜ ವಂಶಜಳಾದ ದೇವಕನ ಸುಪುತ್ರೀ ದೇವಕೀದೇವಿಯು ಕುಶಲವಷ್ಟೇ? ಆಕೆಯು ದೇವಮಾತೆಯಾದ ಅದಿತಿಯಂತೆ ಸಾಕ್ಷಾತ್ ಮಹಾವಿಷ್ಣುವಿನ ಮಾತೆಯಾದ ಮಹಾಭಾಗ್ಯ ಶಾಲಿನಿಯು. ‘ತ್ರಯೀ’ ಎನಿಸಿದ ವೇದವಿದ್ಯೆಯು ತನ್ನ ಮಂತ್ರ ಗಳಲ್ಲಿ ಯಜ್ಞವಿಸ್ತಾರರೂಪವಾದ ಅರ್ಥವನ್ನು ಧರಿಸುವಂತೆ, ತನ್ನ ಗರ್ಭದಲ್ಲಿ ಭಗವಾನ್ ಶ್ರೀಕೃಷ್ಣನನ್ನು ಧರಿಸಿದ್ದ ಸುಕೃತಶಾಲಿನಿ.॥33॥
(ಶ್ಲೋಕ - 34)
ಮೂಲಮ್
ಅಪಿಸ್ವಿದಾಸ್ತೇ ಭಗವಾನ್ಸುಖಂ ವೋ
ಯಃ ಸಾತ್ವತಾಂ ಕಾಮದುಘೋನಿರುದ್ಧಃ ।
ಯಮಾಮಮಂತಿ ಸ್ಮ ಹ ಶಬ್ದಯೋನಿಂ
ಮನೋಮಯಂ ಸತ್ತ್ವತುರೀಯತತ್ತ್ವಮ್ ॥
ಅನುವಾದ
ಭಕ್ತಜನರ ಎಲ್ಲ ಕಾಮನೆಗಳನ್ನು ಈಡೇರಿಸುವ ಭಗವಾನ್ ಅನಿರುದ್ಧನು ಕ್ಷೇಮವಿದ್ದಾನೆಯೇ? ಆತನನ್ನು ವೇದಗಳ ಆದಿ ಕಾರಣನೆಂದೂ, ವೇದವೇದ್ಯನೆಂದೂ, ಅಂತಃಕರಣದ ನಾಲ್ಕನೆಯ ಅಂಶವಾದ ಮನದ ಅಷ್ಠಾತೃವೆಂದೂ ಶಾಸಗಳು ಸಾರುತ್ತಿವೆ.॥34॥
(ಶ್ಲೋಕ - 35)
ಮೂಲಮ್
ಅಪಿಸ್ವಿದನ್ಯೇ ಚ ನಿಜಾತ್ಮದೈವ-
ಮನನ್ಯವೃತ್ತ್ಯಾ ಸಮನುವ್ರತಾ ಯೇ ।
ಹೃದೀಕಸತ್ಯಾತ್ಮಜಚಾರುದೇಷ್ಣ-
ಗದಾದಯಃ ಸ್ವಸ್ತಿ ಚರಂತಿ ಸೌಮ್ಯ ॥
ಅನುವಾದ
ಎಲೈ ಸೌಮ್ಯನೇ! ತಮ್ಮ ಆತ್ಮದೈವತನಾದ ಭಗವಾನ್ ಶ್ರೀಕೃಷ್ಣನನ್ನು ಅನನ್ಯ ಭಾವದಿಂದ ಅನುಸರಿಸುತ್ತಿರುವ ಹೃದೀಕ, ಸತ್ಯಭಾಮಾಪುತ್ರ ಚಾರುದೇಷ್ಣ , ಗದನೇ ಮುಂತಾದವರೆಲ್ಲರೂ ಕುಶಲವಾಗಿದ್ದಾರಷ್ಟೇ?॥35॥
(ಶ್ಲೋಕ - 36)
ಮೂಲಮ್
ಅಪಿ ಸ್ವದೋರ್ಭ್ಯಾಂ ವಿಜಯಾಚ್ಯುತಾಭ್ಯಾಂ
ಧರ್ಮೇಣ ಧರ್ಮಃ ಪರಿಪಾತಿ ಸೇತುಮ್ ।
ದುರ್ಯೋಧನೋತಪ್ಯತ ಯತ್ಸಭಾಯಾಂ
ಸಾಮ್ರಾಜ್ಯಲಕ್ಷ್ಮ್ಯಾ ವಿಜಯಾನುವೃತ್ತ್ಯಾ ॥
ಅನುವಾದ
ಮಹಾರಾಜ ಯುಷ್ಠಿರನು ಅರ್ಜುನ ಮತ್ತು ಶ್ರೀಕೃಷ್ಣರೆಂಬ ತನ್ನೆರಡು ಭುಜಗಳ ಬಲದಿಂದ ಧರ್ಮಪೂರ್ವಕ ಧರ್ಮಸೇತು ವನ್ನು ಕಾಪಾಡುತ್ತಿದ್ದಾನಲ್ಲ? ಮಯನಿರ್ಮಿತವಾದ ಮಹಾಸಭೆ ಯಲ್ಲಿ ಆತನ ರಾಜ್ಯವೈಭವವನ್ನೂ, ಐಶ್ವರ್ಯವನ್ನೂ ನೋಡಿದ ದುರ್ಯೋಧನನು ಅಸೂಯಾಸಂತಾಪಕ್ಕೆ ಒಳಗಾಗಿದ್ದನು.॥36॥
(ಶ್ಲೋಕ - 37)
ಮೂಲಮ್
ಕಿಂ ವಾ ಕೃತಾಘೇಷ್ವಘಮತ್ಯಮರ್ಷೀ
ಭೀಮೋಹಿವದ್ದೀರ್ಘತಮಂ ವ್ಯಮುಂಚತ್ ।
ಯಸ್ಯಾಂಘ್ರಿಪಾತಂ ರಣಭೂರ್ನ ಸೇಹೇ
ಮಾರ್ಗಂ ಗದಾಯಾಶ್ಚರತೋ ವಿಚಿತ್ರಮ್ ॥
ಅನುವಾದ
ಅಪರಾಗಳ ವಿಷಯದಲ್ಲಿ ಕಡುಕೋಪವುಳ್ಳ ಭೀಮ ಸೇನನು ಸರ್ಪದಂತೆ ಅತಿದೀರ್ಘ ಕಾಲದಿಂದ ಇಟ್ಟುಕೊಂಡಿದ್ದ ರೋಷವನ್ನು ಬಿಟ್ಟು ಬಿಟ್ಟಿದ್ದಾನೆಯೇ? ಅವನು ಗದಾಯುದ್ಧದಲ್ಲಿ ಅದ್ಭುತವಾಗಿ ಗದೆಯನ್ನು ತಿರುಹುತ್ತಾ ಓಡಾಡುತ್ತಿರುವಾಗ ಆತನ ಪಾದಗಳ ಭಾರವನ್ನು ಯುದ್ಧಭೂಮಿಗೆ ಸಹಿಸಲಾಗುತ್ತಿರಲಿಲ್ಲ.॥37॥
(ಶ್ಲೋಕ - 38)
ಮೂಲಮ್
ಕಚ್ಚಿದ್ಯಶೋಧಾ ರಥಯೂಥಪಾನಾಂ
ಗಾಂಡೀವಧನ್ವೋಪರತಾರಿರಾಸ್ತೇ ।
ಅಲಕ್ಷಿತೋ ಯಚ್ಛರಕೂಟಗೂಢೋ
ಮಾಯಾಕಿರಾತೋ ಗಿರಿಶಸ್ತುತೋಷ ॥
ಅನುವಾದ
ಯಾವನ ಬಾಣಗಳ ರಾಶಿಯಲ್ಲಿ ಮರೆಯಾಗಿ ಕಣ್ಣಿಗೇ ಕಾಣಿಸದೇ ಹೋಗಿದ್ದ ಮಾಯಾಕಿರಾತವೇಷಧಾರೀ ಶಿವನು ಸುಪ್ರಸನ್ನನಾಗಿದ್ದನೋ, ಅಂತಹ ಅತಿರಥಿಯೂ, ರಥಿಗಳ ಮತ್ತು ಸೇನಾಪತಿಗಳ ಕೀರ್ತಿಯನ್ನು ವೃದ್ಧಿಪಡಿಸುವವನೂ ಆದ ಗಾಂಡೀವ ಧಾರಿಯಾದ ಅರ್ಜುನನು ಕ್ಷೇಮವಾಗಿದ್ದಾನೆಯೇ? ಈಗಲಂತೂ ಆತನ ಸಕಲಶತ್ರುಗಳೂ ಶಾಂತರಾಗಿ ಬಿಟ್ಟಿರಬೇಕಲ್ಲ?॥38॥
(ಶ್ಲೋಕ - 39)
ಮೂಲಮ್
ಯಮಾವುತಸ್ವಿತ್ತನಯೋ ಪೃಥಾಯಾಃ
ಪಾರ್ಥೈರ್ವೃತೌ ಪಕ್ಷ್ಮಭಿರಕ್ಷಿಣೀವ ।
ರೇಮಾತ ಉದ್ದಾಯ ಮೃಧೇ ಸ್ವರಿಕ್ಥಂ
ಪರಾತ್ಸುಪರ್ಣಾವಿವ ವಜ್ರಿವಕಾತ್ ॥
ಅನುವಾದ
ಕಣ್ಣುಗಳು ರೆಪ್ಪೆಗಳಿಂದ ರಕ್ಷಿತವಾಗಿರುವಂತೆ, ಕುಂತೀಪುತ್ರರಿಂದ ಸದಾ ರಕ್ಷಿತರಾದ ಮತ್ತು ಕುಂತೀದೇವಿಯೂ ಮುದ್ದಿನಿಂದ ಸಾಕಿದ ಮಾದ್ರಿಯ ಅವಳಿ ಮಕ್ಕಳಾದ ನಕುಲ-ಸಹದೇವರು ಕ್ಷೇಮವಾಗಿ ದ್ದಾರೆಯೇ? ಮಹಾಪರಾಕ್ರಮಿಗಳಾದ ಅವರಿಬ್ಬರು ಗರುಡನು ಇಂದ್ರನ ಮುಖದಿಂದ ಅಮೃತವನ್ನು ಕಿತ್ತುಕೊಂಡಂತೆ, ಯುದ್ಧದಲ್ಲಿ ಶತ್ರುವಿನಿಂದ ರಾಜ್ಯವನ್ನು ಕಿತ್ತುಕೊಂಡಿರುವರು.॥39॥
(ಶ್ಲೋಕ - 40)
ಮೂಲಮ್
ಅಹೋ ಪೃಥಾಪಿ ್ರಯತೇರ್ಭಕಾರ್ಥೇ
ರಾಜರ್ಷಿವರ್ಯೇಣ ವಿನಾಪಿ ತೇನ ।
ಯಸ್ತ್ವೇಕವೀರೋರಥೋ ವಿಜಿಗ್ಯೇ
ಧನುರ್ದ್ವಿತೀಯಃ ಕಕುಭಶ್ಚತಸ್ರಃ ॥
ಅನುವಾದ
ಅಯ್ಯೋ! ಕುಂತಿಯಾದರೋ ರಾಜರ್ಷಿಶ್ರೇಷ್ಠನಾದ ಪಾಂಡುವಿನ ಅಗಲಿಕೆಯಿಂದ ಮೃತಪ್ರಾಯಳಾಗಿದ್ದರೂ, ಈ ಪುತ್ರರಿಗಾಗಿ ತನ್ನ ಪ್ರಾಣಗಳನ್ನು ಉಳಿಸಿಕೊಂಡಳು. ರಥಿಗಳಲ್ಲಿ ಶ್ರೇಷ್ಠನಾಗಿದ್ದ ಪಾಂಡುವೂ ಅನುಪಮ ವೀರನು. ಒಂದೇ ಧನುಸ್ಸಿ ನಿಂದ ಒಬ್ಬಂಟಿಗನಾಗಿಯೇ ನಾಲ್ಕೂ ದಿಕ್ಕುಗಳನ್ನು ಗೆದ್ದು ಬಂದಿದ್ದನು. ಅಂತಹ ವೀರನ ಪತ್ನಿ ಕುಂತಿಯು ಕ್ಷೇಮದಿಂದಿರುವಳೇ ?॥40॥
(ಶ್ಲೋಕ - 41)
ಮೂಲಮ್
ಸೌಮ್ಯಾನುಶೋಚೇತಮಧಃಪತಂತಂ
ಭ್ರಾತ್ರೇ ಪರೇತಾಯ ವಿದುದ್ರುಹೇ ಯಃ ।
ನಿರ್ಯಾಪಿತೋ ಯೇನ ಸುಹೃತ್ಸ್ವಪುರ್ಯಾ
ಅಹಂ ಸ್ವಪುತ್ರಾನ್ಸಮನುವ್ರತೇನ ॥
ಅನುವಾದ
ಎಲೈ ಸೌಮ್ಯನೇ! ಅಧಃಪತನ ಹೊಂದಿದ ಧೃತರಾಷ್ಟ್ರ ನಿಗಾಗಿ ನನಗೆ ಮತ್ತೆ-ಮತ್ತೆ ದುಃಖವುಂಟಾಗುತ್ತದೆ. ಅವನು ಪಾಂಡವರ ರೂಪದಲ್ಲಿ ಸ್ವರ್ಗಸ್ಥನಾದ ತನ್ನ ತಮ್ಮ ಪಾಂಡು ವಿನೊಂದಿಗೂ ದ್ರೋಹವೆಸಗಿರುವನು. ದುಷ್ಟರಾದ ತನ್ನ ಪುತ್ರರ ಎಲ್ಲ ಕೆಲಸದಲ್ಲಿಯೂ ಹೂಂಗುಟ್ಟುತ್ತಾ, ಹಿತಚಿಂತಕನಾದ ನನ್ನನ್ನು ನಗರಿಯಿಂದ ಹೊರಹಾಕಿಸಿದ್ದನು.॥41॥
(ಶ್ಲೋಕ - 42)
ಮೂಲಮ್
ಸೋಹಂ ಹರೇರ್ಮರ್ತ್ಯವಿಡಂಬನೇನ
ದೃಶೋ ನೃಣಾಂ ಚಾಲಯತೋ ವಿಧಾತುಃ ।
ನಾನ್ಯೋಪಲಕ್ಷ್ಯಃ ಪದವೀಂ ಪ್ರಸಾದಾ-
ಚ್ಚರಾಮಿ ಪಶ್ಯನ್ ಗತವಿಸ್ಮಯೋತ್ರ ॥
ಅನುವಾದ
ಅಯ್ಯಾ ! ಆದರೆ ಈ ಕುರಿತು ನನಗೆ ದುಃಖವಾಗಲೀ, ಆಶ್ಚರ್ಯವಾಗಲೀ ಇಲ್ಲ. ಜಗತ್ತನ್ನು ಸೃಷ್ಟಿಸಿ, ಧರಿಸಿಕೊಂಡಿರುವ ಭಗವಾನ್ ಶ್ರೀಕೃಷ್ಣನೇ ಮನುಷ್ಯರಂತೆ ಲೀಲೆಗಳನ್ನು ನಡೆಸಿ ಜನರ ಮನೋವೃತ್ತಿಗಳನ್ನು ಭ್ರಮಿಸಿಬಿಟ್ಟಿರು ವನು ಎಂಬುದು ನನಗೆ ತಿಳಿದಿದೆ. ಆದ್ದರಿಂದ ನಾನು ಆತನ ಕೃಪೆಯಿಂದ ಅವನ ಮಹಿಮೆಗಳನ್ನು ನೋಡುತ್ತಾ, ಬೇರೆಯವರ ದೃಷ್ಟಿಯಿಂದ ದೂರವುಳಿದು ಆನಂದವಾಗಿ ಸಂಚರಿಸುತ್ತಿರುವೆನು.॥42॥
(ಶ್ಲೋಕ - 43)
ಮೂಲಮ್
ನೂನಂ ನೃಪಾಣಾಂ ತ್ರಿಮದೋತ್ಪಥಾನಾಂ
ಮಹೀಂ ಮುಹುಶ್ಚಾಲಯತಾಂ ಚಮೂಭಿಃ ।
ವಧಾತ್ಪ್ರಪನ್ನಾರ್ತಿಜಿಹೀರ್ಷಯೇಶೋ-
ಪ್ಯುಪೈಕ್ಷತಾಘಂ ಭಗವಾನ್ಕುರೂಣಾಮ್ ॥
ಅನುವಾದ
ಕೌರವರು ತನ್ನಲ್ಲಿ ತುಂಬಾ ಅಪರಾಧಗಳನ್ನು ಮಾಡಿದ್ದರೂ ಭಗವಂತನು ಅವರನ್ನು ಒಡನೆಯೇ ಶಿಕ್ಷಿಸದೆ - ಧನಮದ, ವಿದ್ಯಾಮದ, ಜಾತಿಮದಗಳೆಂಬ ಮೂರು ಮದಗಳಿಂದ ಕೊಬ್ಬಿ ಕುರುಡರಾಗಿ ದುರ್ಮಾರ್ಗವನ್ನು ಹಿಡಿದು, ತಮ್ಮ ಸೈನ್ಯಗಳಿಂದ ಮತ್ತೆ-ಮತ್ತೆ ಭೂಮಿಯನ್ನು ನಡುಗಿಸುತ್ತಿದ್ದ ದುಷ್ಟರಾಜರನ್ನೂ ಅವ ರೊಡನೆ ನಾಶಮಾಡಿ, ಶರಣಾಗತರ ದುಃಖವನ್ನು ದೂರಮಾಡಿ ದನು.॥43॥
(ಶ್ಲೋಕ - 44)
ಮೂಲಮ್
ಅಜಸ್ಯ ಜನ್ಮೋತ್ಪಥನಾಶನಾಯ
ಕರ್ಮಾಣ್ಯ ಕರ್ತುರ್ಗ್ರಹಣಾಯ ಪುಂಸಾಮ್ ।
ನನ್ವನ್ಯಥಾ ಕೋರ್ಹತಿ ದೇಹಯೋಗಂ
ಪರೋ ಗುಣಾನಾಮುತ ಕರ್ಮತಂತ್ರಮ್ ॥
ಅನುವಾದ
ಉದ್ಧವನೇ! ಭಗವಾನ್ ಶ್ರೀಕೃಷ್ಣನು ಜನ್ಮ-ಕರ್ಮ ಗಳಿಂದ ರಹಿತನಾಗಿದ್ದರೂ ದುಷ್ಟರ ನಾಶವನ್ನು ಮಾಡುವುದಕ್ಕಾಗಿ ಮತ್ತು ಭಕ್ತ ಜನರನ್ನು ತನ್ನ ಕಡೆಗೆ ಆಕರ್ಷಿತಗೊಳಿಸಲು ಅವನ ದಿವ್ಯ ಜನ್ಮ-ಕರ್ಮಗಳಾಗುತ್ತವೆ. ಇಲ್ಲದಿದ್ದರೆ, ಭಗವಂತನ ಮಾತೇನು! ಗುಣಾತೀತರಾದ ಬೇರೆ ಜನರೂ ಕೂಡ ಈ ಕರ್ಮಾೀನ ದೇಹದ ಬಂಧನದಲ್ಲಿ ಬೀಳಲು ಬಯಸುವಂತಹವರು ಯಾರಿದ್ದಾರೆ?॥44॥
(ಶ್ಲೋಕ - 45)
ಮೂಲಮ್
ತಸ್ಯ ಪ್ರಪನ್ನಾಖಿಲಲೋಕಪಾನಾ-
ಮವಸ್ಥಿ ತಾನಾಮನುಶಾಸನೇ ಸ್ವೇ ।
ಅರ್ಥಾಯ ಜಾತಸ್ಯ ಯದುಷ್ವಜಸ್ಯ
ವಾರ್ತಾಂ ಸಖೇ ಕೀರ್ತಯ ತೀರ್ಥಕೀರ್ತೇಃ ॥
ಅನುವಾದ
ಆದ್ದರಿಂದ ಎಲೈ ಮಿತ್ರನೇ! ಜನ್ಮರಹಿತನಾಗಿದ್ದರೂ ತನ್ನಲ್ಲಿ ಶರಣುಬಂದ ಸಮಸ್ತ ಲೋಕ ಪಾಲಕರಿಗೂ ಮತ್ತು ತನ್ನ ಅನು ಶಾಸನಕ್ಕೆ ವಿಧೇಯರಾಗಿ ನಡೆಯುವ ಭಕ್ತರಿಗೂ ಪ್ರಿಯವನ್ನುಂಟು ಮಾಡುವುದಕ್ಕಾಗಿ ಯದುಕುಲದಲ್ಲಿ ಸ್ವೇಚ್ಛೆಯಿಂದ ಅವತರಿಸಿದ ಪವಿತ್ರ ಕೀರ್ತಿಯುಳ್ಳ ಶ್ರೀಕೃಷ್ಣನ ಸಮಾಚಾರವನ್ನು ನನಗೆ ತಿಳಿಸು.॥45॥
ಅನುವಾದ (ಸಮಾಪ್ತಿಃ)
ಮೊದಲನೆಯ ಅಧ್ಯಾಯವು ಮುಗಿಯಿತು.॥1॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ
ವಿದುರೋದ್ಧವಸಂವಾದೇ ಪ್ರಥಮೋಽಧ್ಯಾಯಃ॥1॥