೧೦

[ಹತ್ತನೆಯ ಅಧ್ಯಾಯ]

ಭಾಗಸೂಚನಾ

ಶ್ರೀಮದ್ಭಾಗವತದ ಹತ್ತು ಲಕ್ಷಣಗಳು

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಅತ್ರ ಸರ್ಗೋ ವಿಸರ್ಗಶ್ಚ ಸ್ಥಾನಂ ಪೋಷಣಮೂತಯಃ ।
ಮನ್ವಂತರೇಶಾನುಕಥಾ ನಿರೋಧೋ ಮುಕ್ತಿರಾಶ್ರಯಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ ಪರೀಕ್ಷಿತನೇ ! ಈ ಶ್ರೀಮದ್ಭಾಗವತದಲ್ಲಿ ಸರ್ಗ, ವಿಸರ್ಗ, ಸ್ಥಾನ, ಪೋಷಣ, ಊತಿ, ಮನ್ವಂತರ, ಈಶಾನುಕಥಾ, ನಿರೋಧ, ಮುಕ್ತಿ ಮತ್ತು ಆಶ್ರಯ ಎಂಬ ಹತ್ತು ವಿಷಯಗಳ ವರ್ಣನೆ ಇದೆ. ॥ 1 ॥

(ಶ್ಲೋಕ - 2)

ಮೂಲಮ್

ದಶಮಸ್ಯ ವಿಶುದ್ಧ್ಯರ್ಥಂ ನವಾನಾಮಿಹ ಲಕ್ಷಣಮ್ ।
ವರ್ಣಯಂತಿ ಮಹಾತ್ಮಾನಃ ಶ್ರುತೇನಾರ್ಥೇನ ಚಾಂಜಸಾ ॥

ಅನುವಾದ

ಇದರಲ್ಲಿ ಹತ್ತನೆ ಯದಾದ ‘ಆಶ್ರಯತತ್ತ್ವ’ವನ್ನು ಸರಿಯಾಗಿ ನಿಶ್ಚಯಿಸಲಿಕ್ಕಾಗಿ ಕೆಲವೆಡೆ ಶ್ರುತಿಗಳಿಂದ, ಕೆಲವೆಡೆ ತಾತ್ಪರ್ಯದಿಂದ, ಕೆಲವೆಡೆ ಎರಡರ ಅನುಕೂಲವಾದ ಅನುಭವದಿಂದ ಮಹಾತ್ಮರು ಉಳಿದ ಒಂಭತ್ತು ವಿಷಯಗಳನ್ನು ಸುಗಮವಾಗಿ ವರ್ಣಿಸಿರುವರು. ॥ 2 ॥

(ಶ್ಲೋಕ - 3)

ಮೂಲಮ್

ಭೂತಮಾತ್ರೇಂದ್ರಿಯಯಾಂ ಜನ್ಮ ಸರ್ಗ ಉದಾಹೃತಃ ।
ಬ್ರಹ್ಮಣೋ ಗುಣವೈಷಮ್ಯಾದ್ವಿಸರ್ಗಃ ಪೌರುಷಃ ಸ್ಮೃತಃ ॥ 3 ॥

ಅನುವಾದ

ಈಶ್ವರನ ಪ್ರೇರಣೆಯಿಂದ ಗುಣಗಳಲ್ಲಿ ಕ್ಷೋಭೆ ಉಂಟಾಗಿ ರೂಪಾಂತರವಾದಾಗ ಉತ್ಪತ್ತಿಯಾದ ಆಕಾಶಾದಿ ಪಂಚಭೂತ ಗಳೂ, ಶಬ್ದಾದಿ ತನ್ಮಾತ್ರೆಗಳೂ, ಇಂದ್ರಿಯಗಳೂ, ಅಹಂಕಾರ ಮತ್ತು ಮಹತ್ತತ್ತ್ವ ಇವುಗಳ ಉತ್ಪತ್ತಿಯನ್ನು ‘ಸರ್ಗ’ ಎಂದು ಕರೆಯುತ್ತಾರೆ. (ಗುಣಗಳ ಸಾಮ್ಯಾವಸ್ಥ್ಥೆ ಇರುವತನಕ ಏನೂ ಆಗುವುದಿಲ್ಲ.) ಪ್ರಕೃತಿಯಲ್ಲಿ ಗೊಂದಲ ಉಂಟಾದಾಗಲೇ ಸೃಷ್ಟಿ ಯಾಗುತ್ತದೆ. ಇದನ್ನೇ ಸರ್ಗವೆಂದು ಹೇಳುತ್ತಾರೆ. ಆ ವಿರಾಟ್ ಪುರುಷನಿಂದ ಉತ್ಪನ್ನರಾದ ಬ್ರಹ್ಮದೇವರಿಂದ ನಿರ್ಮಾಣಗೊಂಡ ವಿಭಿನ್ನ ಚರಾಚರ ಸೃಷ್ಟಿಯನ್ನು ‘ವಿಸರ್ಗ ಎಂದು ಹೇಳುವರು. ॥ 3 ॥

(ಶ್ಲೋಕ - 4)

ಮೂಲಮ್

ಸ್ಥಿತಿರ್ವೈಕುಂಠವಿಜಯಃ ಪೋಷಣಂ ತದನುಗ್ರಹಃ ।
ಮನ್ವಂತರಾಣಿ ಸದ್ಧರ್ಮ ಊತಯಃ ಕರ್ಮವಾಸನಾಃ ॥

ಅನುವಾದ

ಈ ವಿಶ್ವದ ಉತ್ಪತ್ತಿ, ಸ್ಥಿತಿ, ಸಂಹಾರ ಇವು ಮೂರೂ ಲೀಲಾ ರೂಪವಾಗಿ ಭಗವಂತನಿಂದ ಕ್ರಮವಾಗಿ ನಡೆಯುತ್ತಾ ಇರುತ್ತದೆ. ಈ ಮೂರರಲ್ಲಿ (ಸ್ಥಿತಿ) ಪಾಲಿಸುವುದು, ಜಗತ್ತಿನ ಸ್ಥಿತಿಯು ಇರು ವುದಕ್ಕಾಗಿಯೇ ಭಗವಾನ್ ವಿಷ್ಣುವಿನ ಮೂಲಕವೇ ಇದರ ಪೋಷಣೆ ನಡೆಯುತ್ತದೆ. ಇದರಿಂದ ಭಗವಂತನ ಕೃಪೆ ಮತ್ತು ಅವನ ಶ್ರೇಷ್ಠತೆ ಸಿದ್ಧವಾಗುತ್ತದೆ. ಅದಕ್ಕಾಗಿ ಈ ವಿಶ್ವವನ್ನು ಪಾಲನೆ- ಸಂರಕ್ಷಿಸುವುದು ‘ಸ್ಥಿತಿ’ ಎಂದು ಹೇಳಲಾಗಿದೆ. ಜೊತೆಗೆ ಭಗವಂತ ನಿಂದ ಸುರಕ್ಷಿತವಾದ ಸೃಷ್ಟಿಯಲ್ಲಿ ಭಕ್ತರನ್ನು ಪೋಷಿಸುವುದನ್ನು ‘ಪೋಷಣ’ ಎಂದು ಹೇಳುತ್ತಾರೆ. ಪ್ರಜಾಪಾಲನೆರೂಪವಾದ ಶುದ್ಧ ಕರ್ಮವನ್ನು ಅನುಷ್ಠಾನಮಾಡುವ ಮನ್ವಂತರಗಳ ಅಪತಿಗಳ ಸದ್ಧರ್ಮವನ್ನು ‘ಮನ್ವಂತರ ’ ಎಂದು ಹೇಳಲಾಗಿದೆ. ಕರ್ಮ ಬಂಧನದಲ್ಲಿ ತೊಡಗಿಸುವ ಜೀವಿಗಳ ಕರ್ಮವಾಸನೆಯನ್ನು ‘ಊತಿ’ ಎಂಬುದಾಗಿ ಹೇಳಿದೆ. ॥ 4 ॥

(ಶ್ಲೋಕ - 5)

ಮೂಲಮ್

ಅವತಾರಾನುಚರಿತಂ ಹರೇಶ್ಚಾಸ್ಯಾನುವರ್ತಿನಾಮ್ ।
ಸತಾಮೀಶಕಥಾಃ ಪ್ರೋಕ್ತಾ ನಾನಾಖ್ಯಾನೋಪಬೃಂಹಿತಾಃ ॥

ಅನುವಾದ

ಬಗೆ-ಬಗೆಯ ಉಪಾ ಖ್ಯಾನಗಳಿಂದ ಶ್ರೀಭಗವಂತನ ಅವತಾರ ಕಥೆಗಳನ್ನು ಮತ್ತು ಅವನ ಭಕ್ತರ ಚರಿತ್ರೆಗಳನ್ನು ‘ಈಶಾನುಕಥಾ’ ಎಂದು ಕರೆಯುತ್ತಾರೆ. ಇದನ್ನು ಹಾಡಿ-ಶ್ರವಣಿಸಿ ಜೀವನು ಬ್ರಹ್ಮಸ್ವರೂಪವನ್ನು ಪಡೆದು ಕೊಳ್ಳುವನು. ॥ 5 ॥

(ಶ್ಲೋಕ - 6)

ಮೂಲಮ್

ನಿರೋಧೋಸ್ಯಾನುಶಯನಮಾತ್ಮನಃ ಸಹ ಶಕ್ತಿಭಿಃ ।
ಮುಕ್ತಿರ್ಹಿತ್ವಾ ನ್ಯಥಾ ರೂಪಂ ಸ್ವರೂಪೇಣ ವ್ಯವಸ್ಥಿತಿಃ ॥

ಅನುವಾದ

ಭಗವಂತನು ಯೋಗನಿದ್ರೆಯಲ್ಲಿ ಮಲಗಿರು ವಾಗ ಜೀವನು ತನ್ನ ಉಪಾಗಳೊಡನೆ ಆತನಲ್ಲಿ ಲಯಹೊಂದು ವುದೇ ‘ನಿರೋಧ’ವಾಗಿದೆ. ಅಜ್ಞಾನ ಕಲ್ಪಿತ ಕರ್ತೃತ್ವ, ಭೋಕ್ತೃತ್ವ ಮುಂತಾದ ಅನಾತ್ಮಭಾವವನ್ನು ಪರಿತ್ಯಜಿಸಿ ತನ್ನ ವಾಸ್ತವಿಕ ಸ್ವರೂಪ ವಾದ ಪರಮಾತ್ಮನಲ್ಲಿ ನೆಲೆಗೊಳ್ಳುವುದೇ ‘ಮುಕ್ತಿ’ಯಾಗಿದೆ. ॥ 6 ॥

(ಶ್ಲೋಕ - 7)

ಮೂಲಮ್

ಆಭಾಸಶ್ಚ ನಿರೋಧಶ್ಚ ಯತಶ್ಚಾಧ್ಯವಸೀಯತೇ ।
ಸ ಆಶ್ರಯಃ ಪರಂ ಬ್ರಹ್ಮ ಪರಮಾತ್ಮೇತಿ ಶಬ್ದ್ಯತೇ ॥

ಅನುವಾದ

ಪರೀಕ್ಷಿದ್ರಾಜನೇ ! ಈ ಚರಾಚರ ಜಗತ್ತಿನ ಉತ್ಪತ್ತಿ, ಸ್ಥಿತಿ, ಲಯಗಳು ಯಾವ ತತ್ತ್ವದಿಂದ ಪ್ರಕಾಶಿತವಾಗುತ್ತವೆಯೋ ಆ ಪರಬ್ರಹ್ಮವೇ ‘ಆಶ್ರಯ’ ಎನಿಸುತ್ತದೆ. ಅದನ್ನೇ ಪರಮಾತ್ಮನೆಂದು ಶಾಸಗಳು ಕರೆ ಯುತ್ತವೆ. ಆ ಪರಬ್ರಹ್ಮನೇ ಎಲ್ಲರ ಆಶ್ರಯವಾಗಿದ್ದಾನೆ. ಈ ಆಶ್ರಯತತ್ತ್ವವನ್ನು ತಿಳಿಯಲಿಕ್ಕಾಗಿಯೇ ಇತರ ಒಂಭತ್ತು ತತ್ತ್ವ ಗಳನ್ನು ನಿರೂಪಿಸಲಾಗಿದೆ. ॥ 7 ॥

(ಶ್ಲೋಕ - 8)

ಮೂಲಮ್

ಯೋಧ್ಯಾತ್ಮಿಕೋಯಂ ಪುರುಷಃ ಸೋಸಾವೇವಾದೈವಿಕಃ ।
ಯಸ್ತತ್ರೋಭಯವಿಚ್ಛೇದಃ ಪುರುಷೋ ಹ್ಯಾಭೌತಿಕಃ ॥

(ಶ್ಲೋಕ - 9)

ಮೂಲಮ್

ಏಕಮೇಕತರಾಭಾವೇ ಯದಾ ನೋಪಲಭಾಮಹೇ ।
ತ್ರಿತಯಂ ತತ್ರ ಯೋ ವೇದ ಸ ಆತ್ಮಾ ಸ್ವಾಶ್ರಯಾಶ್ರಯಃ ॥

ಅನುವಾದ

ಯಾವ ಪುರುಷನು ಆಧ್ಯಾತ್ಮಿಕ (ಜೀವ)ನೆಂದು ಹೇಳಲಾಗಿದೆಯೋ ಅವನನ್ನೇ ಅದೈವ (ಇಂದ್ರಿಯಗಳ ದೇವತೆಗಳು) ಎಂದೂ ಹೇಳುತ್ತಾರೆ. ಹೀಗೆಯೇ ವಾಸ್ತವವಾಗಿ ನೋಡಿದರೆ ಆಭೌತಿಕವೂ ಅವನೇ ಆಗಿದ್ದಾನೆ. ಆದರೆ ಪಾಂಚಭೌತಿಕ ಸ್ಥೂಲದೇಹದ ಕುರಿತು ಆತ್ಮಬುದ್ಧಿ ಉಂಟಾದ ಕಾರಣ ಜೀವನು ಈ ದೇಹವನ್ನು ಬೇರೆ ಎಂದು ತಿಳಿಯುತ್ತಾನೆ. ಆಧ್ಯಾತ್ಮಿಕ ಹಾಗೂ ಆದೈವಿಕಗಳನ್ನು ಬೇರೆ ಎಂದು ತಿಳಿಯುತ್ತಾನೆ. ಏಕೆಂದರೆ, ಈ ಮೂರರಲ್ಲಿ ಯಾವುದೇ ಒಂದು ಇಲ್ಲದಿದ್ದರೆ ಒಂದು ಮತ್ತೊಂದರ ಜ್ಞಾನ ಉಂಟಾಗುವುದಿಲ್ಲ. (ಉದಾಹರಣೆಗಾಗಿ ಜೀವಾತ್ಮನೇ ಇಲ್ಲದಿದ್ದರೆ ಆದೈವಿಕ ಮತ್ತು ಆಭೌತಿಕ ಎರಡನ್ನೂ ತಿಳಿಯ ಲಾಗುವುದಿಲ್ಲ. ಇದೇ ಪ್ರಕಾರ ಇಂದ್ರಿಯಗಳ ದೇವತೆಗಳು ಇಲ್ಲ ದಿದ್ದರೂ ನಾವು ಉಳಿದ ಎರಡನ್ನು ತಿಳಿಯಲಾರೆವು. ಹಾಗೆಯೇ ಶರೀರ ಇಲ್ಲದಿದ್ದರೂ ನಾವು ಅವೆರಡನ್ನು ತಿಳಿಯಲಾರೆವು. ಮೂರೂ ಸೇರಿಯೇ ಒಂದು- ಮತ್ತೊಂದನ್ನು ತಿಳಿಯಲಾಗುತ್ತದೆ.) ಈ ಮೂರನ್ನೂ ತಿಳಿಯುವವನೇ ಪರಮಾತ್ಮನು. ಇವು ಮೂರೂ ಪರಮಾತ್ಮನದೇ ಸ್ವರೂಪವಾಗಿವೆ. ಓರ್ವ ಪರ ಮಾತ್ಮನಲ್ಲದೆ ಏನೂ ಇಲ್ಲ. ಅವನ ಆಶ್ರಯದಲ್ಲೇ ಎಲ್ಲವೂ ಇದೆ. ಆದ್ದರಿಂದ ಪರಮಾತ್ಮ ನನ್ನೇ ಆಶ್ರಯತತ್ತ್ವವೆಂದು ಹೇಳಲಾಗಿದೆ. ॥ 8-9 ॥

(ಶ್ಲೋಕ - 10)

ಮೂಲಮ್

ಪುರುಷೋಂಡಂ ವಿನಿರ್ಭಿದ್ಯ ಯದಾಸೌ ಸ ವಿನಿರ್ಗತಃ ।
ಆತ್ಮನೋಯನಮನ್ವಿಚ್ಛನ್ನ ಪೊಸ್ರಾಕ್ಷೀಚ್ಛುಚಿಃ ಶುಚೀಃ ॥

ಅನುವಾದ

ಹಿಂದೆ ಹೇಳಿದ ವಿರಾಟ್ಪುರುಷನು ಬ್ರಹ್ಮಾಂಡವನ್ನು ಭೇದಿಸಿ ಹೊರಟಾಗ ಅವನು ತನಗೆ ನೆಲಸುವುದಕ್ಕೆ ಸ್ಥಾನವನ್ನು ಹುಡುಕ ತೊಡಗಿದನು. ಅದಕ್ಕಾಗಿ ಶುದ್ಧಸಂಕಲ್ಪನಾದ ಆ ಪುರುಷರೂಪನು ಪರಿಶುದ್ಧವಾದ ‘ಜಲ’ವನ್ನು ಸೃಷ್ಟಿಸಿದನು. ॥10॥

(ಶ್ಲೋಕ - 11)

ಮೂಲಮ್

ತಾಸ್ವವಾತ್ಸೀತ್ ಸ್ವಸೃಷ್ಟಾಸು ಸಹಸ್ರಪರಿವತ್ಸರಾನ್ ।
ತೇನ ನಾರಾಯಣೋ ನಾಮ ಯದಾಪಃ ಪುರುಷೋದ್ಭವಾಃ ॥

ಅನುವಾದ

ವಿರಾಟ್ ಪುರುಷರೂಪನಾದ ‘ನರ’ನಿಂದ ಉತ್ಪನ್ನವಾದ್ದರಿಂದ ಜಲಕ್ಕೆ ‘ನಾರ’ ಎಂದು ಹೆಸರಾಯಿತು. ತಾನೇ ನಿರ್ಮಿಸಿದ ಆ ನಾರವನ್ನು ನೆಲೆಯನ್ನಾಗಿ ಮಾಡಿಕೊಂಡು ಅದರಲ್ಲಿ ಆತನು ಸಾವಿರಾರು ವರ್ಷ ಗಳವರೆವಿಗೂ ಪವಡಿಸಿದ್ದರಿಂದ ಅವನು ‘ನಾರಾಯಣ’ ಎನಿಸಿದನು. ॥ 11 ॥

(ಶ್ಲೋಕ - 12)

ಮೂಲಮ್

ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ ।
ಯದನುಗ್ರಹತಃ ಸಂತಿ ನ ಸಂತಿ ಯದುಪೇಕ್ಷಯಾ ॥

ಅನುವಾದ

ಭಗವಂತನಾದ ಆ ನಾರಾಯಣನ ಅನುಗ್ರಹ ದಿಂದಲೇ ದ್ರವ್ಯ, ಕರ್ಮ, ಕಾಲ, ಸ್ವಭಾವ ಮತ್ತು ಜೀವ ಮುಂತಾ ದವುಗಳು ತಮ್ಮ-ತಮ್ಮ ಕಾರ್ಯಗಳನ್ನು ನಡೆಸುತ್ತವೆ. ಆತನು ಉಪೇಕ್ಷೆ ಮಾಡಿದರೆ ಅವುಗಳಿಗೆ ಅಸ್ತಿತ್ವವೇ ಇಲ್ಲ. (ಮಹತ್ತಿನಿಂದ ಪೃಥ್ವಿವರೆಗಿನ ದ್ರವ್ಯಗಳು, ಪ್ರಾಣಿಗಳಿಗೆ ಜನ್ಮಾದಿಗಳಿಗೆ ಕಾರಣ ವಾದ ಕರ್ಮ, ಸತ್ವಾದಿಗುಣಗಳ ಬದಲಾವಣೆಗೆ ಕಾರಣವಾದ ಕಾಲ, ಪ್ರಕೃತಿಯ ಪರಿಣಾಮಹೊಂದುವಿಕೆಯೇ ಮುಂತಾದ ಸ್ವಭಾವ, ಸುಖ-ದುಃಖಾದಿಗಳನ್ನು ಅನುಭವಿಸುವ ಜೀವ-ಇವೆಲ್ಲ ದರ ಅಸ್ತಿತ್ವವು ಆ ನಾರಾಯಣನಿಂದಲೇ.) ॥ 12 ॥

(ಶ್ಲೋಕ - 13)

ಮೂಲಮ್

ಏಕೋ ನಾನಾತ್ವಮನ್ವಿಚ್ಛನ್ ಯೋಗತಲ್ಪಾತ್ಸಮುತ್ಥಿತಃ ।
ವೀರ್ಯಂ ಹಿರಣ್ಮಯಂ ದೇವೋ ಮಾಯಯಾ ವ್ಯಸೃಜತಿಧಾ ॥

(ಶ್ಲೋಕ - 14)

ಮೂಲಮ್

ಅದೈವಮಥಾಧ್ಯಾತ್ಮಮಭೂತಮಿತಿ ಪ್ರಭುಃ ।
ಯಥೈಕಂ ಪೌರುಷಂ ವೀರ್ಯಂ ತ್ರಿಧಾಭಿದ್ಯತ ತಚ್ಛಣು ॥

ಅನುವಾದ

ಆ ಅದ್ವಿತೀಯ ಭಗವಾನ್ ನಾರಾಯಣನು ಯೋಗನಿದ್ರೆಯಿಂದ ಎಚ್ಚೆತ್ತು ತಾನು ಅನೇಕವಾಗಬೇಕೆಂದು ಸಂಕಲ್ಪಿಸಿದಾಗ, ತನ್ನ ಮಾಯೆಯಿಂದ ಅಖಿಲಬ್ರಹ್ಮಾಂಡದ ಬೀಜಸ್ವರೂಪ ತನ್ನ ಸುವರ್ಣಮಯ ವೀರ್ಯ ವನ್ನು ಅದೈವ, ಅಧ್ಯಾತ್ಮ, ಅಭೂತ ಎಂಬ ಮೂರು ಭಾಗವಾಗಿ ವಿಂಗಡಿಸಿದನು. (ಅವುಗಳಲ್ಲಿ ದಿಕ್ಕು ಮುಂತಾದ ಅಭಿಮಾನಿ ದೇವತೆಗಳಿಂದ ಕೂಡಿದ ಹನ್ನೊಂದು ಇಂದ್ರಿಯಗಳ ಅಷ್ಠಾತೃ ದೇವತೆಗಳು ಅದೈವವೆಂದೂ, ಜೀವನು ಅಧ್ಯಾತ್ಮನೆಂದೂ, ಪೃಥ್ವಿಯೇ ಮುಂತಾದವುಗಳಲ್ಲಿರುವ ಗಂಧವೇ ಮುಂತಾದ ಗುಣಗಳು ಅಭೂತವೆಂದೂ ಕರೆಯಲ್ಪಡುವವು.) ವಿರಾಟ್ಪುರುಷನ ಒಂದೇ ವೀರ್ಯವು ಹೀಗೆ ಮೂರು ವಿಭಾಗವಾಗಿ ವಿಭಜಿಸಲ್ಪಟ್ಟಿತು. ಮುಂದೇನಾಯಿತೆಂಬುದನ್ನು ಹೇಳುತ್ತೇನೆ, ಕೇಳು. ॥ 13-14 ॥

(ಶ್ಲೋಕ - 15)

ಮೂಲಮ್

ಅಂತಃಶರೀರ ಆಕಾಶಾತ್ ಪುರುಷಸ್ಯ ವಿಚೇಷ್ಟತಃ ।
ಓಜಃ ಸಹೋ ಬಲಂ ಜಜ್ಞೇ ತತಃ ಪ್ರಾಣೋ ಮಹಾನಸುಃ ॥

ಅನುವಾದ

ಆ ವಿರಾಟ್ಪುರುಷನು ಕ್ರಿಯಾಶಕ್ತಿಯಿಂದ ದೇಹವನ್ನು ಅಲ್ಲಾ ಡಿಸಿದಾಗ, ಆ ದೇಹದಲ್ಲಿದ್ದ ಅಕಾಶದಿಂದ ಇಂದ್ರಿಯಶಕ್ತಿ, ಮನಶ್ಶಕ್ತಿ, ಶರೀರಶಕ್ತಿಗಳು ಉಂಟಾದುವು. ಅವುಗಳಿಂದ ಅವೆಲ್ಲದರ ಪ್ರಭು ವಾದ ಸೂತ್ರಾತ್ಮಕವಾದ ಮಹಾಪ್ರಾಣನು ಹುಟ್ಟಿದನು. ॥ 15 ॥

(ಶ್ಲೋಕ - 16)

ಮೂಲಮ್

ಅನು ಪ್ರಾಣಂತಿ ಯಂ ಪ್ರಾಣಾಃ ಪ್ರಾಣಂತಂ ಸರ್ವಜಂತುಷು ।
ಅಪಾನಂತಮಪಾನಂತಿ ನರದೇವಮಿವಾನುಗಾಃ ॥

ಅನುವಾದ

ಸೇವಕರು ತಮ್ಮ ಪ್ರಭುವಿನ ಹಿಂದೆ-ಹಿಂದೆಯೇ ನಡೆಯುವಂತೆ ಶರೀರದಲ್ಲಿ ಎಲ್ಲ ಇಂದ್ರಿಯಗಳು ಪ್ರಾಣದ ಹಿಂದೆ-ಹಿಂದೆ ನಡೆ ಯುತ್ತವೆ. ಎಲ್ಲರ ಶರೀರಗಳಲ್ಲಿ ಪ್ರಾಣವು ಬಲಯುಕ್ತವಾಗಿದ್ದರೆ, ಇಂದ್ರಿಯಗಳಿಗೆ ಬಲ. ಅದು ಬಲಹೀನವಾದರೆ ಇಂದ್ರಿಯಗಳೂ ಬಲಹೀನರಾಗುತ್ತವೆ. ॥ 16 ॥

(ಶ್ಲೋಕ - 17)

ಮೂಲಮ್

ಪ್ರಾಣೇನ ಕ್ಷಿಪತಾ ಕ್ಷುತ್ತೃಡಂತರಾ ಜಾಯತೇ ಪ್ರಭೋಃ ।
ಪಿಪಾಸತೋ ಜಕ್ಷತಶ್ಚ ಪ್ರಾಙ್ಮುಖಂ ನಿರಭಿದ್ಯತ ॥

ಅನುವಾದ

ಪ್ರಾಣವಾಯುವು ವೇಗವಾಗಿ ಬಂದು-ಹೋಗತೊಡಗಿದಾಗ ವಿರಾಟ್ ಪುರುಷನಿಗೆ ಹಸಿವು- ಬಾಯಾರಿಕೆಯ ಅನುಭವವಾಯಿತು. ಆಹಾರ-ಪಾನೀಯಗಳ ಇಚ್ಛೆ ಉಂಟಾಗುತ್ತಲೇ ಮೊಟ್ಟಮೊದಲಿಗೆ ಅವನ ಶರೀರದಲ್ಲಿ ಬಾಯಿ ಪ್ರಕಟವಾಯಿತು. ॥ 17 ॥

(ಶ್ಲೋಕ - 18)

ಮೂಲಮ್

ಮುಖತಸ್ತಾಲು ನಿರ್ಭಿನ್ನಂ ಜಿಹ್ವಾ ತತ್ರೋಪಜಾಯತೇ ।
ತತೋ ನಾನಾರಸೋ ಜಜ್ಞೇ ಜಿಹ್ವಯಾ ಯೋಗಮ್ಯತೇ ॥

ಅನುವಾದ

ಅದರಿಂದ ಅಣ್ಣಾಲಿಗೆಯೂ, ಅನಂತರ ರಸನೇಂದ್ರಿಯ (ನಾಲಿಗೆ) ಪ್ರಕಟವಾದುವು. ಇದಾದ ಬಳಿಕ ನಾಲಿಗೆಯು ಗ್ರಹಿಸುವ ಅನೇಕ ಪ್ರಕಾರದ ರಸಗಳು ಉತ್ಪನ್ನ ವಾದುವು. ॥ 18॥

(ಶ್ಲೋಕ - 19)

ಮೂಲಮ್

ವಿವಕ್ಷೋರ್ಮುಖತೋ ಭೂಮ್ನೋ ವಹ್ನಿರ್ವಾಗ್ ವ್ಯಾಹೃತಂ ತಯೋಃ ।
ಜಲೇ ವೈ ತಸ್ಯ ಸುಚಿರಂ ನಿರೋಧಃ ಸಮಜಾಯತ ॥

ಅನುವಾದ

ಅವನಿಗೆ ಮಾತಾಡಲು ಇಚ್ಛೆ ಉಂಟಾದಾಗ ವಾಕ್ ಇಂದ್ರಿಯ, ಅದರ ಅಷ್ಠಾನ ದೇವತೆ ಅಗ್ನಿ ಮತ್ತು ಅದರ ವಿಷಯ ಮಾತಾಡುವುದು ಇವು ಮೂರೂ ಪ್ರಕಟವಾದುವು. ಬಳಿಕ ಬಹಳ ದಿವಸಗಳವರೆಗೆ ಆ ಜಲದಲ್ಲೇ ಇದ್ದುಬಿಟ್ಟನು. ॥ 19 ॥

(ಶ್ಲೋಕ - 20)

ಮೂಲಮ್

ನಾಸಿಕೇ ನಿರಭಿದ್ಯೇತಾಂ ದೋಧೂಯತಿ ನಭಸ್ವತಿ ।
ತತ್ರ ವಾಯುರ್ಗಂಧ ವಹೋ ಘ್ರಾಣೋ ನಸಿ ಜಿಘೃಕ್ಷತಃ ॥

ಅನುವಾದ

ಶ್ವಾಸದ ವೇಗದಿಂದ ‘ಮೂಗಿನ ಹೊಳ್ಳೆಗಳು’ ಪ್ರಕಟ ವಾದುವು. ಅವನಿಗೆ ಮೂಸುವ ಇಚ್ಛೆಯಾದಾಗ ಮೂಗು ಘ್ರಾಣೇಂದ್ರಿ ಯವೂ, ಗಂಧವನ್ನು ಹರಡುವಂತಹ ಅದರ ದೇವತೆ ವಾಯು ದೇವರೂ ಪ್ರಕಟಗೊಂಡರು. ॥ 20 ॥

(ಶ್ಲೋಕ - 21)

ಮೂಲಮ್

ಯದಾತ್ಮನಿ ನಿರಾಲೋಕಮಾತ್ಮಾನಂ ಚ ದಿದೃಕ್ಷತಃ ।
ನಿರ್ಭಿನ್ನೇ ಹ್ಯಕ್ಷಿಣೀ ತಸ್ಯ ಜ್ಯೋತಿಶ್ಚಕ್ಷುರ್ಗುಣಗ್ರಹಃ ॥

ಅನುವಾದ

ಮೊದಲು ಆತನ ದೇಹ ದಲ್ಲಿ ಪ್ರಕಾಶವಿರಲಿಲ್ಲ. ಮತ್ತೆ ಅವನಿಗೆ ತನ್ನನ್ನು ಇತರರನ್ನೂ ನೋಡ ಬೇಕೆಂಬ ಇಚ್ಛೆ ಉಂಟಾದಾಗ ಕಣ್ಣುಗುಡ್ಡೆಗಳೂ, ಅದರ ಅಭಿಮಾನಿ ಸೂರ್ಯನು ಮತ್ತು ನೇತ್ರೇಂದ್ರಿಯವು ಪ್ರಕಟವಾಯಿತು. ಇದರಿಂದಲೇ ರೂಪದ ಗ್ರಹಣ ಸಾಧ್ಯವಾಯಿತು. ॥ 21 ॥

(ಶ್ಲೋಕ - 22)

ಮೂಲಮ್

ಬೋಧ್ಯಮಾನಸ್ಯ ಋಷಿಭಿರಾತ್ಮನಸ್ತಜ್ಜಿಘೃಕ್ಷತಃ ।
ಕರ್ಣೌ ಚ ನಿರಭಿದ್ಯೇತಾಂ ದಿಶಃ ಶ್ರೋತ್ರಂ ಗುಣಗ್ರಹಃ ॥

ಅನುವಾದ

ಅನಂತರ ವೇದರೂಪೀ ಋಷಿಗಳು ವಿರಾಟ್ಪುರುಷನನ್ನು ಸ್ತೋತ್ರ ಗಳಿಂದ ಎಚ್ಚರಿಸತೊಡಗಿದಾಗ ಅವನಿಗೆ ಕೇಳಬೇಕೆಂಬ ಇಚ್ಛೆ ಯಾಯಿತು. ಆಗಲೇ ಕಿವಿಗಳು, ಅದರ ಅಭಿಮಾನಿದೇವತೆಗಳು ದಿಕ್ಕುಗಳು ಮತ್ತು ಶ್ರೋತ್ರೇಂದ್ರಿಯವು ಪ್ರಕಟವಾಯಿತು. ॥ 22 ॥

(ಶ್ಲೋಕ - 23)

ಮೂಲಮ್

ವಸ್ತು ನೋ ಮೃದುಕಾಠಿನ್ಯಲಘುಗುರ್ವೊಷ್ಣ ಶೀತತಾಮ್ ।
ಜಿಘೃಕ್ಷತಸ್ತ್ವಙ್ನೆರ್ಭಿನ್ನಾ ತಸ್ಯಾಂ ರೋಮಮಹೀರುಹಾಃ ।
ತತ್ರ ಚಾಂತರ್ಬಹಿರ್ವಾತಸ್ತ್ವಚಾ ಲಬ್ಧಗುಣೋ ವೃತಃ ॥

ಅನುವಾದ

ಬಳಿಕ ಅವನು ವಸ್ತುಗಳ ಮೃದುತ್ವ, ಕಾಠಿನ್ಯ, ಲಘುತ್ವ, ಗುರುತ್ವ, ಉಷ್ಣತೆ, ಶೈತ್ಯ ಮುಂತಾದವುಗಳನ್ನು ಅರಿಯಲು ಬಯಸಿದಾಗ ಅವನ ಶರೀರದಲ್ಲಿ ಚರ್ಮ ಪ್ರಕಟವಾಯಿತು. ಪೃಥ್ವಿಯಿಂದ ಮರ ಗಳು ಹುಟ್ಟುವಂತೆ ಆ ಚರ್ಮದಿಂದ ರೋಮಗಳೂ ಮತ್ತು ಅದರ ಒಳಗೂ-ಹೊರಗೂ ವ್ಯಾಪಿಸಿರುವ ವಾಯುವು ಪ್ರಕಟವಾಯಿತು. ಸ್ಪರ್ಶವನ್ನು ಗ್ರಹಿಸುವ ತ್ವಗ್ಇಂದ್ರಿಯವೂ ಜೊತೆ-ಜೊತೆಯಲ್ಲೇ ಶರೀರದಲ್ಲಿ ಎಲ್ಲ ಕಡೆಗಳಲ್ಲಿ ಬಂದು ಸುತ್ತಿಕೊಂಡಿತು. ಅದರಿಂದ ಅವನಿಗೆ ಸ್ಪರ್ಶದ ಅನುಭವವಾಗತೊಡಗಿತು. ॥ 23 ॥

(ಶ್ಲೋಕ - 24)

ಮೂಲಮ್

ಹಸ್ತೌ ರುರುಹತುಸ್ತಸ್ಯ ನಾನಾಕರ್ಮಚಿಕೀರ್ಷಯಾ ।
ತಯೋಸ್ತು ಬಲಮಿಂದ್ರಶ್ಚ ಆದಾನಮುಭಯಾಶ್ರಯಮ್ ॥

ಅನುವಾದ

ಅವನಿಗೆ ನಾನಾಕರ್ಮಗಳನ್ನು ಮಾಡಬೇಕೆಂಬ ಇಚ್ಛೆ ಉಂಟಾದಾಗ ಅವನ ಕೈಗಳು ಮೂಡಿದವು. ಆ ಕೈಗಳಲ್ಲಿ ಪದಾರ್ಥಗಳನ್ನು ಗ್ರಹಣ ಮಾಡುವ ಶಕ್ತಿಯಾದ ಹಸ್ತೇಂದ್ರಿಯವೂ ಅದರ ಅಭಿಮಾನಿ ದೇವತೆಯಾದ ಇಂದ್ರನೂ ಪ್ರಕಟನಾದನು. ಆ ಇಬ್ಬರ ಆಶ್ರಯ ದಿಂದ ತೆಗೆದುಕೊಳ್ಳುವ ಹಿಡಿದುಕೊಳ್ಳುವ ಕರ್ಮವೂ ಪ್ರಕಟ ವಾಯಿತು. ॥ 24 ॥

(ಶ್ಲೋಕ - 25)

ಮೂಲಮ್

ಗತಿಂ ಜಿಗೀಷತಃ ಪಾದೌ ರುರುಹಾತೇಭಿಕಾಮಿಕಾಮ್ ।
ಪದ್ಭ್ಯಾಂ ಯಜ್ಞಃ ಸ್ವಯಂ ಹವ್ಯಂ ಕರ್ಮಭಿಃ ಕ್ರಿಯತೇ ನೃಭಿಃ ॥

ಅನುವಾದ

ಅವನಿಗೆ ಬಯಸಿದಲ್ಲಿಗೆ ಹೋಗಬೇಕೆಂಬ ಇಚ್ಛೆಯುಂಟಾದಾಗ ಅವನ ಶರೀರದಲ್ಲಿ ಕಾಲುಗಳು ಮೂಡಿ ದವು. ಚರಣಗಳ ಜೊತೆಗೆ ಚರಣೇಂದ್ರಿಯದ ಅಷ್ಠಾನ ದೇವತೆ ಯಾದ ಯಜ್ಞಪುರುಷ ಭಗವಾನ್ ವಿಷ್ಣುವು ಕಾಣಿಸಿಕೊಂಡನು. ಆ ಚರಣಗಳಲ್ಲಿ ನಡಿಗೆಯೆಂಬ ಕರ್ಮವು ಪ್ರಕಟವಾಯಿತು. ಮನುಷ್ಯನು ಇದೇ ಚರಣೇಂದ್ರಿಯದಿಂದ ನಡೆಯುತ್ತಾ ಯಜ್ಞ ಸಾಮಗ್ರಿಯನ್ನು ಸಂಗ್ರಹಿಸುತ್ತಾನೆ. ॥ 25 ॥

(ಶ್ಲೋಕ - 26)

ಮೂಲಮ್

ನಿರಭಿದ್ಯತ ಶಿಶ್ನೋ ವೈ ಪ್ರಜಾನಂದಾ ಮೃತಾರ್ಥಿನಃ ।
ಉಪಸ್ಥ ಆಸೀತ್ಕಾಮಾನಾಂ ಪ್ರಿಯಂ ತದುಭಯಾಶ್ರಯಮ್ ॥

ಅನುವಾದ

ಅನಂತರ ಅವನಿಗೆ ಸಂತಾನ, ರತಿಸುಖ, ಸಂತತಿಯಿಂದುಂಟಾಗುವ ಸ್ವರ್ಗಾದಿಭೋಗ ಗಳನ್ನು ಅನುಭವಿಸ ಬೇಕೆಂಬ ಬಯಕೆ ಉಂಟಾದಾಗ ವಿರಾಟ್ ಪುರುಷನ ಶರೀರದಲ್ಲಿ ಲಿಂಗದ ಉತ್ಪತ್ತಿಯಾಯಿತು. ಅದರಲ್ಲಿ ಉಪಸ್ಥೇಂದ್ರಿಯವೂ ಅದರ ಅಭಿಮಾನಿದೇವತೆ ಪ್ರಜಾಪತಿಯು ಹಾಗೂ ಇವೆರಡನ್ನು ಆಶ್ರಯಿಸಿರುವ ಕಾಮಸುಖವು ಉಂಟಾಯಿತು. ॥ 26 ॥

(ಶ್ಲೋಕ - 27)

ಮೂಲಮ್

ಉತ್ಸಿಸೃಕ್ಷೋರ್ಧಾತುಮಲಂ ನಿರಭಿದ್ಯತ ವೈ ಗುದಮ್ ।
ತತಃ ಪಾಯುಸ್ತತೋ ಮಿತ್ರ ಉತ್ಸರ್ಗ ಉಭಯಾಶ್ರಯಃ ॥

ಅನುವಾದ

ಆತನಿಗೆ ಮಲತ್ಯಾಗದ ಇಚ್ಛೆಯಾದಾಗ ಗುದದ್ವಾರ ಪ್ರಕಟವಾಯಿತು. ಅನಂತರ ಅದರಲ್ಲಿ ಪಾಯು-ಇಂದ್ರಿಯ ಮತ್ತು ಮಿತ್ರದೇವತೆಯೂ ಉತ್ಪನ್ನರಾದರು. ಇವೆರಡರಿಂದಲೇ ಮಲತ್ಯಾಗದ ಕ್ರಿಯೆಯು ನಡೆಯುವುದು. ॥ 27 ॥

(ಶ್ಲೋಕ - 28)

ಮೂಲಮ್

ಆಸಿಸೃಪ್ಸೋಃ ಪುರಃ ಪುರ್ಯಾ ನಾಭಿದ್ವಾರಮಪಾನತಃ ।
ತತ್ರಾಪಾನಸ್ತತೋ ಮೃತ್ಯುಃ ಪೃಥಕ್ತ್ವಮುಭಯಾಶ್ರಯಮ್ ॥

ಅನುವಾದ

ಬಳಿಕ ವಿರಾಟ್ಪುರುಷನಿಗೆ ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಹೋಗಬೇಕೆಂಬ ಅಭಿಲಾಷೆ ಉಂಟಾಗಲು, ಆಗ ಹೊಕ್ಕಳಿನ ದ್ವಾರವು ಪ್ರಕಟವಾಯಿತು. ಅದರಿಂದ ಅಪಾನವೂ, ಮೃತ್ಯು ದೇವತೆಯೂ ಪ್ರಕಟಗೊಂಡರು. ಅವರಿಬ್ಬರ ಆಶ್ರಯದಿಂದಲೇ ಪ್ರಾಣಾಪಾನಗಳ ಅಗಲಿಕೆ ಅಂದರೆ ಮೃತ್ಯುವು ಆಗುವುದು. ॥ 28 ॥

(ಶ್ಲೋಕ - 29)

ಮೂಲಮ್

ಆದಿತ್ಸೋರನ್ನಪಾನಾನಾಮಾಸನ್ ಕುಕ್ಷ್ಯಂತ್ರನಾಡಯಃ ।
ನದ್ಯಃ ಸಮುದ್ರಾಶ್ಚ ತಯೋಸ್ತುಷ್ಟಿಃ ಪುಷ್ಟಿಸ್ತದಾಶ್ರಯೇ ॥

ಅನುವಾದ

ವಿರಾಟ್ಪುರುಷನಿಗೆ ಅನ್ನ-ಪಾನೀಯಗಳನ್ನು ಸ್ವೀಕರಿಸ ಬೇಕೆಂಬ ಇಚ್ಛೆಯುಂಟಾದಾಗ ಹೊಟ್ಟೆಯೆಂಬ ಇಂದ್ರಿಯಸ್ಥಾನವು, ಕರುಳು-ನರಗಳೆಂಬ ಇಂದ್ರಿಯಗಳು ಉಂಟಾದುವು. ಜೊತೆಗೇ ಹೊಟ್ಟೆಯ ದೇವತೆ ಸಮುದ್ರವೂ, ನಾಡಿಗಳ ದೇವತೆ ನದಿಗಳೂ ಹಾಗೂ ತುಷ್ಟಿ ಮತ್ತು ಪುಷ್ಟಿ ಇವೆರಡೂ, ಅವುಗಳ ಆಶ್ರಿತ ವಿಷಯಗಳೂ ಉತ್ಪನ್ನವಾದುವು. ॥ 29 ॥

(ಶ್ಲೋಕ - 30)

ಮೂಲಮ್

ನಿದಿಧ್ಯಾಸೋರಾತ್ಮಮಾಯಾಂ ಹೃದಯಂ ನಿರಭಿದ್ಯತ ।
ತತೋ ಮನಸ್ತತಶ್ಚಂದ್ರಃ ಸಂಕಲ್ಪಃ ಕಾಮ ಏವ ಚ ॥

ಅನುವಾದ

ಬಳಿಕ ಆ ವಿರಾಟ್ ಪುರುಷನು ತನ್ನ ಮಾಯಾಶಕ್ತಿಯನ್ನು ಕುರಿತು ವಿಚಾರಮಾಡಲು ಬಯಸಿದಾಗ ಹೃದಯವೆಂಬ ಇಂದ್ರಿಯವುಂಟಾಯಿತು. ಅದರಿಂದ ಮನಸ್ಸೆಂಬ ಇಂದ್ರಿಯವೂ, ಅದರ ದೇವತೆಯಾದ ಚಂದ್ರನೂ ಮತ್ತು ವಿಷಯ ಕಾಮನೆ-ಸಂಕಲ್ಪಗಳೆಂಬ ವಿಷಯಗಳೂ ಉತ್ಪನ್ನ ವಾದುವು. (ಹೀಗೆ ಸಮಷ್ಟಿರೂಪವಾದ ವಿರಾಟ್ಪುರುಷನಿಂದ ಆಧ್ಯಾತ್ಮಿಕ, ಅದೈವಿಕ, ಆಭೌತಿಕಗಳೆಂಬ ಭೇದಾನುಸಾರ ವ್ಯಷ್ಟಿ ರೂಪವಾಗಿ ಅವಯವಗಳು ಉಂಟಾದುವು. ಇನ್ನು ಅವುಗಳ ಅಂಶಗಳ ಉತ್ಪತ್ತಿಯನ್ನು ಹೇಳುವೆನು ಕೇಳು.) ॥ 30 ॥

(ಶ್ಲೋಕ - 31)

ಮೂಲಮ್

ತ್ವಕ್ಚರ್ಮಮಾಂಸರುರಮೇದೋಮಜ್ಜಾಸ್ಥಿಧಾತವಃ ।
ಭೂಮ್ಯಪ್ತೇಜೋಮಯಾಃ ಸಪ್ತ ಪ್ರಾಣೋ ವ್ಯೋಮಾಂಬುವಾಯುಭಿಃ ॥

ಅನುವಾದ

ಆ ವಿರಾಟ್ಪುರುಷನ ಶರೀರದಲ್ಲಿ ಪೃಥ್ವಿ, ಜಲ, ತೇಜಸ್ಸುಗಳಿಂದ ತ್ವಕ್, ಚರ್ಮ, ಮಾಂಸ, ರಕ್ತ, ಮೇದಸ್ಸು, ಮಜ್ಜೆ, ಅಸ್ತಿಗಳೆಂಬ ಏಳು ಧಾತುಗಳು ಪ್ರಕಟಗೊಂಡವು. ಹಾಗೆಯೇ ಆಕಾಶ, ಜಲ, ವಾಯುಗಳಿಂದ ಪ್ರಾಣಗಳ ಉತ್ಪತ್ತಿಯೂ ಆಯಿತು.॥31॥

(ಶ್ಲೋಕ - 32)

ಮೂಲಮ್

ಗುಣಾತ್ಮಕಾನೀಂದ್ರಿಯಾಣಿ ಭೂತಾದಿಪ್ರಭವಾ ಗುಣಾಃ ।
ಮನಃ ಸರ್ವವಿಕಾರಾತ್ಮಾ ಬುದ್ಧಿರ್ವಿಜ್ಞಾನರೂಪೀಣೀ ॥

ಅನುವಾದ

ಶ್ರೋತ್ರಾದಿ ಎಲ್ಲ ಇಂದ್ರಿಯಗಳು ಶಬ್ದಾದಿ ವಿಷಯಗಳನ್ನು ಗ್ರಹಣ ಮಾಡುವಂತಹ ಆ ವಿಷಯಗಳು ಅಹಂಕಾರದಿಂದ ಉತ್ಪನ್ನವಾಗಿವೆ. ಮನಸ್ಸು-ಕಾಮ, ಸಂಕಲ್ಪ, ವಿಕಲ್ಪ ಮುಂತಾದ ಎಲ್ಲ ವಿಕಾರಗಳ ಉತ್ಪತ್ತಿ ಸ್ಥಾನವಾಗಿದೆ. ಬುದ್ಧಿಯು ಸಮಸ್ತ ಪದಾರ್ಥಗಳ ಅರಿವನ್ನು ಉಂಟುಮಾಡುತ್ತದೆ. ॥32॥

(ಶ್ಲೋಕ - 33)

ಮೂಲಮ್

ಏತದ್ಭಗವತೋ ರೂಪಂ ಸ್ಥೂಲಂ ತೇ ವ್ಯಾಹೃತಂ ಮಯಾ ।
ಮಹ್ಯಾದಿಭಿಶ್ಚಾವರಣೈರಷ್ಟಭಿರ್ಬಹಿರಾವೃತಮ್ ॥

ಅನುವಾದ

ಹೀಗೆ ಭಗವಂತನ ಈ ಸ್ಥೂಲರೂಪವನ್ನು ನಿನಗೆ ವರ್ಣಿಸಿರುವೆನು. ಇದು ಹೊರಗಡೆಯಿಂದ ಪೃಥಿವೀ, ಜಲ, ತೇಜಸ್ಸು, ವಾಯು, ಆಕಾಶ, ಅಹಂಕಾರ, ಮಹತ್ತತ್ತ್ವ ಮತ್ತು ಪ್ರಕೃತಿ ಈ ಎಂಟು ಆವರಣಗಳಿಂದ ಸುತ್ತು ವರಿದಿದೆ. ॥33॥

(ಶ್ಲೋಕ - 34)

ಮೂಲಮ್

ಅತಃ ಪರಂ ಸೂಕ್ಷ್ಮತಮಮವ್ಯಕ್ತಂ ನಿರ್ವಿಶೇಷಣಮ್ ।
ಅನಾದಿಮಧ್ಯನಿಧನಂ ನಿತ್ಯಂ ವಾಙ್ಮನಸಃ ಪರಮ್ ॥

ಅನುವಾದ

ಈ ಸ್ಥೂಲರೂಪಕ್ಕಿಂತ ಪರವಾದ, ಉತ್ತಮ ವಾದ ಭಗವಂತನ ಸೂಕ್ಷ್ಮರೂಪವಿದೆ. ಇದು ಅವ್ಯಕ್ತವೂ, ನಿರ್ವಿ ಶೇಷವೂ, ಆದಿ-ಮಧ್ಯಾಂತರರಹಿತವೂ, ನಿತ್ಯವೂ ಆದುದು. ಮಾತು-ಮನಸ್ಸುಗಳಿಗೆ ಅಗೋಚರವಾದುದು. ॥ 34 ॥

(ಶ್ಲೋಕ - 35)

ಮೂಲಮ್

ಅಮುನೀ ಭಗವದ್ರೂಪೇ ಮಯಾ ತೇ ಅನುವರ್ಣಿತೇ ।
ಉಭೇ ಅಪಿ ನ ಗೃಹ್ಣಂತಿ ಮಾಯಾಸೃಷ್ಟೇ ವಿಪಶ್ಚಿತಃ ॥

ಅನುವಾದ

ನಾನು ನಿನಗೆ ಈವರೆಗೆ ವರ್ಣಿಸಿದ ಭಗವಂತನ ಸ್ಥೂಲ-ಸೂಕ್ಷ್ಮ ವ್ಯಕ್ತ-ಅವ್ಯಕ್ತಗಳೆರಡೂ ಮಾಯೆಯಿಂದ ರಚಿತವಾಗಿವೆ. ಅದರಿಂದ ವಿದ್ವಾಂಸರಾದವರು ಇವೆರಡನ್ನೂ ಸ್ವೀಕರಿಸುವುದಿಲ್ಲ. ॥ 35 ॥

(ಶ್ಲೋಕ - 36)

ಮೂಲಮ್

ಸ ವಾಚ್ಯವಾಚಕತಯಾ ಭಗವಾನ್ ಬ್ರಹ್ಮರೂಪಧೃಕ್ ।
ನಾಮರೂಪಕ್ರಿಯಾ ಧತ್ತೇ ಸಕರ್ಮಾಕರ್ಮಕಃ ಪರಃ ॥

ಅನುವಾದ

(ಇನ್ನು ಭಗವಂತನ ಗುಣ ಕರ್ಮಗಳನ್ನು ಹೇಳುತ್ತೇನೆ ) ನಿಜವಾಗಿ ಭಗವಂತನು ನಿಷ್ಕ್ರಿಯನಾಗಿದ್ದಾನೆ. ತನ್ನ ಶಕ್ತಿ (ಸಂಕಲ್ಪ) ಯಿಂದಲೇ ಸಕ್ರಿಯನಾಗುತ್ತಾನೆ. ಮತ್ತೆ ಅವನೇ ಬ್ರಹ್ಮನ ಅಥವಾ ವಿರಾಟ್ ರೂಪವನ್ನು ಧರಿಸಿ, ವಾಚ್ಯ-ವಾಚಕ, ಶಬ್ದ ಮತ್ತು ಅದರ ಅರ್ಥ ಇವುಗಳ ರೂಪದಲ್ಲಿ ಪ್ರಕಟನಾಗುತ್ತಾನೆ. ಬಳಿಕ ಅನೇಕ ನಾಮ, ರೂಪ, ಕ್ರಿಯೆಗಳನ್ನು ಸ್ವೀಕರಿಸುತ್ತಾನೆ. ವಾಸ್ತವವಾಗಿ ಅವನು ಪರಬ್ರಹ್ಮನಾಗಿದ್ದಾನೆ. ನಿರ್ಗುಣ, ನಿರಾಕಾರ, ಭಗವಂತ ನಾಗಿದ್ದಾನೆ. ॥ 36 ॥

(ಶ್ಲೋಕ - 37)

ಮೂಲಮ್

ಪ್ರಜಾಪತೀನ್ಮನೂನ್ ದೇವಾನೃಷೀನ್ ಪಿತೃಗಣಾನ್ಪೃಥಕ್ ।
ಸಿದ್ಧಚಾರಣಗಂಧರ್ವಾನ್ ವಿದ್ಯಾಧ್ರಾಸುರಗುಹ್ಯಕಾನ್ ॥

(ಶ್ಲೋಕ - 38)

ಮೂಲಮ್

ಕಿನ್ನರಾಪ್ಸರಸೋ ನಾಗಾನ್ ಸರ್ಪಾನ್ ಕಿಂಪುರುಷೋರಗಾನ್ ।
ಮಾತೃ ರಕ್ಷಃಪಿಶಾಚಾಂಶ್ಚ ಪ್ರೇತಭೂತವಿನಾಯಕಾನ್ ॥

(ಶ್ಲೋಕ - 39)

ಮೂಲಮ್

ಕೂಷ್ಮಾಂಡೋನ್ಮಾದವೇತಾಲಾನ್ಯಾತುಧಾನಾನ್ಗ್ರಹಾನಪಿ ।
ಖಗಾನ್ಮೃಗಾನ್ಪಶೂನ್ವಕ್ಷಾನ್ಗಿರೀನ್ನೃಪ ಸರೀಸೃಪಾನ್ ॥

ಅನುವಾದ

ಪರೀಕ್ಷಿದ್ರಾಜನೇ ! ಮರೀಚಿಯೇ ಮುಂತಾದ ನವಪ್ರಜಾಪತಿಗಳೂ, ಸ್ವಾಯಂಭುವನೇ ಆದಿ ಹದಿನಾಲ್ಕು ಮನು ಗಳೂ, ಇಂದ್ರಾದಿದೇವತೆಗಳೂ, ಋಷಿಗಳೂ, ಪಿತೃಗಳೂ, ಸಿದ್ಧರೂ, ಚಾರಣರೂ, ಗಂಧರ್ವರೂ, ವಿದ್ಯಾಧರರೂ, ಅಸುರರೂ, ಯಕ್ಷರೂ, ಕಿನ್ನರರೂ, ಅಪ್ಸರೆಯರೂ, ನಾಗರೂ, ಸರ್ಪಗಳೂ, ಕಿಂ ಪುರುಷರೂ, ಉರಗರೂ, ಮಾತೃಕೆಯರೂ, ರಾಕ್ಷಸರೂ, ಪಿಶಾಚಿ ಗಳೂ, ಪ್ರೇತಗಳೂ, ಭೂತಗಳೂ, ವಿನಾಯಕರೂ, ಕೂಷ್ಮಾಂಡರೂ, ಉನ್ಮಾದರೂ, ಬೇತಾಳರೂ, ಯಾತುಧಾನರೂ, ಗ್ರಹರೂ, ಪಕ್ಷಿಗಳೂ, ಮೃಗಗಳೂ, ಪಶುಗಳೂ, ವೃಕ್ಷಗಳೂ, ಪರ್ವತಗಳೂ, ಸರೀಸೃಪ ಗಳೂ ಮುಂತಾದ ಪ್ರಪಂಚದಲ್ಲಿರುವ ನಾಮ-ರೂಪಗಳೆಲ್ಲವೂ ಭಗವಂತನದೇ ಆಗಿವೆ. ॥ 37-39 ॥

(ಶ್ಲೋಕ - 40)

ಮೂಲಮ್

ದ್ವಿವಿಧಾಶ್ಚತುರ್ವಿಧಾ ಯೇನ್ಯೇ ಜಲಸ್ಥಲನಭೌಕಸಃ ।
ಕುಶಲಾಕುಶಲಾ ಮಿಶ್ರಾಃ ಕರ್ಮಣಾಂ ಗತಯಸ್ತ್ವಿಮಾಃ ॥

ಅನುವಾದ

ಜಗತ್ತಿನಲ್ಲಿ ಸ್ಥಾವರ- ಜಂಗಮವೆಂಬ ಇಬ್ಬಗೆಯ ಹಾಗೂ ಜರಾಯುಜ, ಅಂಡಜ, ಸ್ವೇದಜ, ಉದ್ಭಿಜ್ಜವೆಂಬ ಭೇದದಿಂದ ನಾಲ್ಕು ಪ್ರಕಾರದ ಜಲಚರ, ಸ್ಥಳಚರ, ನಭಚರ ಎಷ್ಟು ಪ್ರಾಣಿಗಳಿವೆಯೋ ಅವೆಲ್ಲವುಗಳ ಶುಭ-ಅಶುಭ ಮತ್ತು ಮಿಶ್ರಿತ ಕರ್ಮಗಳನುಸಾರ ಗತಿಯುಂಟಾ ಗುತ್ತದೆ. ॥ 40 ॥

(ಶ್ಲೋಕ - 41)

ಮೂಲಮ್

ಸತ್ತ್ವಂ ರಜಸ್ತಮ ಇತಿ ತಿಸ್ರಃ ಸುರನೃನಾರಕಾಃ ।
ತತ್ರಾಪ್ಯೇಕೈಕಶೋ ರಾಜನ್ ಭಿದ್ಯಂತೇ ಗತಯಸಿಧಾ ।
ಯದೈಕೈಕತರೋನ್ಯಾಭ್ಯಾಂ ಸ್ವಭಾವ ಉಪಹನ್ಯತೇ ॥

ಅನುವಾದ

ಸತ್ತ್ವಗುಣದ ಪ್ರಧಾನತೆಯಿಂದ ದೇವತಾ ಯೋನಿಯೂ, ರಜೋಗುಣದ ಪ್ರಧಾನತೆಯಿಂದ ಮನುಷ್ಯ ಯೋನಿಯೂ, ತಮೋಗುಣದ ಪ್ರಧಾನತೆಯಿಂದ ನಾರಕೀಯ ಯೋನಿಗಳೂ ದೊರೆಯುತ್ತವೆ. ಈ ಗುಣಗಳಲ್ಲಿಯೂ ಒಂದು ಗುಣವು ಇನ್ನೆರಡು ಗುಣಗಳಿಂದ ಆಕ್ರಮಿಸಲ್ಪಟ್ಟಾಗ ಪ್ರತಿ ಯೊಂದರ ಮೂರು-ಮೂರು ಭೇದಗಳಾಗುವವು. ॥ 41 ॥

(ಶ್ಲೋಕ - 42)

ಮೂಲಮ್

ಸ ಏವೇದಂ ಜಗದ್ಧಾತಾ ಭಗವಾಂಧರ್ಮರೂಪಧೃಕ್ ।
ಪುಷ್ಣಾತಿ ಸ್ಥಾಪಯನ್ ವಿಶ್ವಂ ತಿರ್ಯಙ್ನರಸುರಾತ್ಮಭಿಃ ॥

ಅನುವಾದ

ಆ ಭಗವಂತನೇ ಧರ್ಮಮಯ ವಿಷ್ಣುರೂಪವನ್ನು ಸ್ವೀಕರಿಸಿ, ದೇವತೆ, ಮನುಷ್ಯ, ಪಶು-ಪಕ್ಷಿ ಮುಂತಾದ ರೂಪಗಳಲ್ಲಿ ಅವತರಿಸಿ ವಿಶ್ವದ ಪಾಲನೆ- ಪೋಷಣೆಗಳನ್ನು ಮಾಡುತ್ತಾನೆ. ॥ 42 ॥

(ಶ್ಲೋಕ - 43)

ಮೂಲಮ್

ತತಃ ಕಾಲಾಗ್ನಿ ರುದ್ರಾತ್ಮಾ ಯತ್ಸೃಷ್ಟಮಿದಮಾತ್ಮನಃ ।
ಸಂನಿಯಚ್ಛತಿ ಕಾಲೇನ ಘನಾನೀಕಮಿವಾನಿಲಃ ॥

ಅನುವಾದ

ಪ್ರಳಯ ಸಮಯ ಬಂದಾಗ ಆ ಭಗವಂತನೇ ಕಾಲಾಗ್ನಿಸ್ವರೂಪೀ ರುದ್ರನ ರೂಪವನ್ನು ಸ್ವೀಕರಿಸಿ ವಾಯುವು ಮೇಘಮಾಲೆಯನ್ನು ತನ್ನಲ್ಲಿ ಲಯಗೊಳಿಸಿಕೊಳ್ಳುವಂತೆ ತಾನೇ ಸೃಷ್ಟಿಸಿದ ವಿಶ್ವವನ್ನು ಉಪ ಸಂಹಾರಮಾಡಿಕೊಂಡುಬಿಡುತ್ತಾನೆ. ॥ 43 ॥

(ಶ್ಲೋಕ - 44)

ಮೂಲಮ್

ಇತ್ಥಂಭಾವೇನ ಕಥಿತೋ ಭಗವಾನ್ ಭಗವತ್ತಮಃ ।
ನೇತ್ಥಂಭಾವೇನ ಹಿ ಪರಂ ದ್ರಷ್ಟುಮರ್ಹಂತಿ ಸೂರಯಃ ॥

ಅನುವಾದ

ಪರೀಕ್ಷಿದ್ರಾಜನೇ ! ಅಚಿಂತ್ಯ ಐಶ್ವರ್ಯವುಳ್ಳ ಭಗವಂತನನ್ನು ಭಾಗವತೋತ್ತಮರು ಇದೇ ರೀತಿಯಲ್ಲಿ ವರ್ಣಿಸಿರುವರು. ಆದರೆ ತತ್ತ್ವಜ್ಞಾನಿಗಳು ಮಾತ್ರ ಕೇವಲ ಸೃಷ್ಟಿ, ಸ್ಥಿತಿ, ಲಯಗಳನ್ನು ಮಾಡುವಷ್ಟೇ ರೂಪದಲ್ಲಿ ಅವನನ್ನು ಸಂದರ್ಶಿಸಲು ಬಯಸುವುದಿಲ್ಲ. ಏಕೆಂದರೆ ಅವನಾದರೋ ಇದರಿಂದ ಅತೀತನೂ ಆಗಿದ್ದಾನೆ, ಗುಣಾತೀತನಾಗಿದ್ದಾನೆ, ಎಲ್ಲಕ್ಕಿಂತ ಮಹತ್ತಾಗಿದ್ದಾನೆ ಎಂದು ತಿಳಿಯುತ್ತಾರೆ. ॥ 44 ॥

(ಶ್ಲೋಕ - 45)

ಮೂಲಮ್

ನಾಸ್ಯ ಕರ್ಮಣಿ ಜನ್ಮಾದೌ ಪರಸ್ಯಾನುವೀಯತೇ ।
ಕರ್ತೃತ್ವಪ್ರತಿಷೇಧಾರ್ಥಂ ಮಾಯಯಾರೋಪಿತಂ ಹಿ ತತ್ ॥

ಅನುವಾದ

ಸೃಷ್ಟಿರಚನಾದಿ ಕರ್ಮಗಳನ್ನು ಹೇಳಿ ಪೂರ್ಣ ಪರ ಮಾತ್ಮನಲ್ಲಿ ಕರ್ಮ ಅಥವಾ ಕರ್ತೃತ್ವದ ಸಂಬಂಧವನ್ನು ಆರೋಪಿಸಿ ನಿರೂಪಿಸಲಿಲ್ಲ. ಅದಾದರೋ ಮಾಯೆಯಿಂದ ಆರೋಪಿತನಾದ ಕಾರಣ ಕರ್ತೃತ್ವದ ನಿಷೇಧಮಾಡಲೆಂದೇ ನಿರೂಪಿಸಲಾಗಿದೆ. ॥ 45 ॥

(ಶ್ಲೋಕ - 46)

ಮೂಲಮ್

ಅಯಂ ತು ಬ್ರಹ್ಮಣಃ ಕಲ್ಪಃ ಸವಿಕಲ್ಪ ಉದಾಹೃತಃ ।
ವಿಃ ಸಾಧಾರಣೋ ಯತ್ರ ಸರ್ಗಾಃ ಪ್ರಾಕೃತವೈಕೃತಾಃ ॥

ಅನುವಾದ

ಇದನ್ನು ನಾನು ಬ್ರಹ್ಮದೇವರ ಮಹಾಕಲ್ಪದ ಅವಾಂತರ ಕಲ್ಪಗಳೊಡನೆ ವರ್ಣಿಸುವೆನು. ಎಲ್ಲ ಕಲ್ಪಗಳಲ್ಲಿ ಸೃಷ್ಟಿಯೂ ಒಂದೇ ರೀತಿ ಇರುತ್ತದೆ. ಆದರೆ ಇಷ್ಟು ಭಾಗದಲ್ಲಿ ಮಾತ್ರ ವ್ಯತ್ಯಾಸ ವಿರುತ್ತದೆ ಮಹಾಕಲ್ಪದ ಪ್ರಾರಂಭದಲ್ಲಿ ಪ್ರಕೃತಿಯಿಂದ ಕ್ರಮವಾಗಿ ಮಹತ್ತ ತ್ತ್ವಾದಿಗಳ ಉತ್ಪತ್ತಿಯಾಗುತ್ತದೆ ಮತ್ತು ಕಲ್ಪಗಳ ಪ್ರಾರಂಭ ದಲ್ಲಿ ಪ್ರಾಕೃತ ಸೃಷ್ಟಿಯಾದರೋ ಹಾಗೆಯೇ ಇರುತ್ತದೆ. ಚರಾಚರ ಪ್ರಾಣಿಗಳ ವೈಕೃತಿಕ ಸೃಷ್ಟಿಯು ಹೊಸದಾಗಿ ಆಗುತ್ತದೆ. ॥ 46 ॥

(ಶ್ಲೋಕ - 47)

ಮೂಲಮ್

ಪರಿಮಾಣಂ ಚ ಕಾಲಸ್ಯ ಕಲ್ಪಲಕ್ಷಣವಿಗ್ರಹಮ್ ।
ಯಥಾ ಪುರಸ್ತಾದ್ವ್ಯಾಖ್ಯಾಸ್ಯೇ ಪಾದ್ಮಂ ಕಲ್ಪಮಥೋ ಶೃಣು ॥

ಅನುವಾದ

ರಾಜೇಂದ್ರಾ! ಕಾಲದ ಪರಿಮಾಣ, ಕಲ್ಪ ಮತ್ತು ಅದರ ಅಂತರ್ಗತ ಮನ್ವಂತರಗಳ ವರ್ಣನೆ ಮುಂದೆ ಮಾಡಲಾ ಗುವುದು. ಈಗ ನೀನು ಪಾದ್ಮಕಲ್ಪದ ವರ್ಣನೆಯನ್ನು ಸಾವಧಾನವಾಗಿ ಕೇಳು. ॥ 47 ॥

(ಶ್ಲೋಕ - 48)

ಮೂಲಮ್ (ವಾಚನಮ್)

ಶೌನಕ ಉವಾಚ

ಮೂಲಮ್

ಯದಾಹ ನೋ ಭವಾನ್ಸೂತ ಕ್ಷತ್ತಾ ಭಾಗವತೋತ್ತಮಃ ।
ಚಚಾರ ತೀರ್ಥಾನಿ ಭುವಸ್ತ್ಯಕ್ತ್ವಾ ಬಂಧೂನ್ಸುದುಸ್ತ್ಯಜಾನ್ ॥

ಅನುವಾದ

ಶೌನಕರು ಕೇಳಿದರು ಸೂತಪುರಾಣಿಕರೇ! ಭಗವಂತನ ಪರಮಭಕ್ತ ವಿದುರನು ತೊರೆಯಲು ಕಷ್ಟಸಾಧ್ಯರಾದ ಬಂಧು ಗಳನ್ನು ತೊರೆದು ತೀರ್ಥಯಾತ್ರೆ ಮಾಡುತ್ತಿದ್ದನು ಎಂದು ನೀವು ನಮಗೆ ಹೇಳಿರುವಿರಿ. ॥ 48 ॥

(ಶ್ಲೋಕ - 49)

ಮೂಲಮ್

ಕುತ್ರ ಕೌಷಾರವೇಸ್ತಸ್ಯ ಸಂವಾದೋಧ್ಯಾತ್ಮ ಸಂಶ್ರಿತಃ ।
ಯದ್ವಾ ಸ ಭಗವಾಂಸ್ತಸ್ಮೈ ಪೃಷ್ಟಸ್ತತ್ತ್ವ ಮುವಾಚ ಹ ॥

ಅನುವಾದ

ಆ ಯಾತ್ರೆಯಲ್ಲಿ ಮೈತ್ರೇಯ ಋಷಿಗಳೊಂದಿಗೆ ಅಧ್ಯಾತ್ಮಿಕ ವಿಷಯವಾಗಿ ಸಂಭಾಷಣೆ ನಡೆಯಿತು. ಅವನು ಪ್ರಶ್ನಿಸಿದಾಗ ಮೈತ್ರೇಯರು ಯಾವ ತತ್ತ್ವವನ್ನು ಉಪದೇಶಿಸಿದರು ? ॥ 49 ॥

(ಶ್ಲೋಕ - 50)

ಮೂಲಮ್

ಬ್ರೂಹಿ ನಸ್ತದಿದಂ ಸೌಮ್ಯ ವಿದುರಸ್ಯ ವಿಚೇಷ್ಟಿತಮ್ ।
ಬಂಧು ತ್ಯಾಗನಿಮಿತ್ತಂ ಚ ತಥೈವಾಗತವಾನ್ಪುನಃ ॥

ಅನುವಾದ

ಸೂತಪುರಾಣಿಕರೇ! ನಿಮ್ಮ ಸ್ವಭಾವವು ತುಂಬಾ ಸೌಮ್ಯವಾಗಿದೆ. ನೀವು ವಿದುರನ ಆ ಚರಿತ್ರೆಯನ್ನು ನಮಗೆ ಹೇಳಿರಿ. ಅವರು ಬಂಧು-ಮಿತ್ರರನ್ನು ಏಕೆ ಬಿಟ್ಟು ಹೋದರು? ಮತ್ತೆ ಪುನಃ ಅವರ ಬಳಿಗೆ ಏಕೆ ಮರಳಿದರು ? ॥ 50 ॥

(ಶ್ಲೋಕ - 51)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ರಾಜ್ಞಾ ಪರೀಕ್ಷಿತಾ ಪೃಷ್ಟೋ ಯದವೋಚನ್ಮಹಾಮುನಿಃ ।
ತದ್ವೋಭಿಧಾಸ್ಯೇ ಶೃಣುತ ರಾಜ್ಞಃ ಪ್ರಶ್ನಾನುಸಾರತಃ ॥

ಅನುವಾದ

ಸೂತಪುರಾಣಿಕರು ಹೇಳಿದರು ಶೌನಕಾದಿ ಮಹರ್ಷಿಗಳೇ! ರಾಜಾ ಪರೀಕ್ಷಿತನೂ ಇದೇ ಮಾತನ್ನು ಕೇಳಿದ್ದನು. ಅವನ ಪ್ರಶ್ನೆಗಳ ಉತ್ತರದಲ್ಲಿ ಶ್ರೀಶುಕಮಹಾಮುನಿಗಳು ಹೇಳಿದುದನ್ನೇ ನಾನು ನಿಮಗೆ ಹೇಳುವೆನು. ಸಾವಧಾನವಾಗಿ ಕೇಳಿರಿ. ॥ 51 ॥

ಅನುವಾದ (ಸಮಾಪ್ತಿಃ)

ಹತ್ತನೆಯ ಅಧ್ಯಾಯವು ಮುಗಿಯಿತು. ॥10॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಿತೀಯಸ್ಕಂಧೇ ಪುರುಷಸಂಸ್ಥಾನುವರ್ಣನಂ ನಾಮ ದಶಮೋಽಧ್ಯಾಯಃ ॥10॥
ಎರಡನೆಯ ಸ್ಕಂಧವು ಸಂಪೂರ್ಣವಾಯಿತು.