೦೯

[ಒಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಬ್ರಹ್ಮದೇವರು ಭಗವದ್ಧಾಮವನ್ನು ದರ್ಶಿಸಿದುದು, ಅವರಿಗೆ ಭಗವಂತನಿಂದ ಚತುಃಶ್ಲೋಕೀ ಭಾಗವತದ ಉಪದೇಶ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಆತ್ಮಮಾಯಾಮೃತೇ ರಾಜನ್ ಪರಸ್ಯಾನುಭವಾತ್ಮನಃ ।
ನ ಘಟೇತಾರ್ಥಸಂಬಂಧಃ ಸ್ವಪ್ನದ್ರಷ್ಟುರಿವಾಂಜಸಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ ರಾಜೇಂದ್ರಾ ! ಸ್ವಪ್ನದಲ್ಲಿ ನೋಡಲಾಗುವ ಪದಾರ್ಥಗಳೊಂದಿಗೆ ಅದನ್ನು ನೋಡುವವನಿಗೆ ಯಾವ ಸಂಬಂಧವೂ ಇರುವುದಿಲ್ಲ. ಹಾಗೆಯೇ ದೇಹಾತೀತನಾಗಿ ಅನುಭವಸ್ವರೂಪನಾದ ಆತ್ಮನಿಗೆ ದೃಶ್ಯ ಪದಾ ರ್ಥಗಳೊಡನೆ ಯಾವ ಸಂಬಂಧವೂ ಇರುವುದಿಲ್ಲ. ಮಾಯೆಯ ಕಾರಣದಿಂದಲೇ ಸಂಬಂಧವಿರುವಂತೆ ಅನಿಸುತ್ತದೆ. ॥ 1 ॥

(ಶ್ಲೋಕ - 2)

ಮೂಲಮ್

ಬಹುರೂಪ ಇವಾಭಾತಿ ಮಾಯಯಾ ಬಹುರೂಪಯಾ ।
ರಮಮಾಣೋ ಗುಣೇಷ್ವಸ್ಯಾ ಮಮಾಹಮಿತಿ ಮನ್ಯತೇ ॥

ಅನುವಾದ

ಮಾಯೆಯು ಬಹುರೂಪವುಳ್ಳದ್ದು. ಅದರಿಂದ ಆತ್ಮನು ವಿವಿಧ ರೂಪಗಳುಳ್ಳವನಂತೆ ಕಂಡುಬರುತ್ತಾನೆ. ಮಾಯಾ ಗುಣಗಳಲ್ಲಿ ರಮಿಸತೊಡಗಿದಾಗ ‘ಇದು ನಾನು, ಇದು ನನ್ನದು’ ಹೀಗೆ ತಿಳಿಯತೊಡಗುತ್ತಾನೆ. ॥ 2 ॥

(ಶ್ಲೋಕ - 3)

ಮೂಲಮ್

ಯರ್ಹಿ ವಾವ ಮಹಿಮ್ನಿ ಸ್ವೇ ಪರಸ್ಮಿನ್ಕಾಲಮಾಯಯೋಃ ।
ರಮೇತ ಗತಸಮ್ಮೋಹಸ್ತ್ಯಕ್ತ್ವೋದಾಸ್ತೇ ತದೋಭಯಮ್ ॥

ಅನುವಾದ

ವಾಸ್ತವವಾಗಿ ಜೀವಿಯ ಸ್ವರೂಪವು ನಿರ್ಗುಣ-ನಿರಾಕಾರವಾಗಿದೆ. (ಸಟಿಕ ಮಣಿಯು ಪೂರ್ಣ ಶುಭ್ರವಾಗಿದ್ದು, ಅದರ ಬಳಿಯಲ್ಲಿ ಇಟ್ಟ ವಸ್ತುವಿನ ಬಣ್ಣ ಅದರಲ್ಲಿ ಕಂಡುಬರುತ್ತದೆ. ಹಾಗೆಯೇ ಜೀವನು ತನ್ನ ಮಹಿಮೆಯಲ್ಲಿ ಸ್ಥಿತನಾಗಿದ್ದಾಗ ಅವನ ಮೇಲೆ ಕಾಲ ಮತ್ತು ಮಾಯೆಯ ಪ್ರಭಾವ ಬೀಳುವುದಿಲ್ಲ.) ಮೋಹವನ್ನು ತ್ಯಜಿಸಿ ‘ನಾನು-ನನ್ನದು’ ಇವೆರ ಡನ್ನೂ ಬಿಟ್ಟುಬಿಡುತ್ತಾನೆ. ಪೂರ್ಣವಾಗಿ ಉದಾಸೀನನಾಗುತ್ತಾನೆ. ಆಗ ಅವನು ತನ್ನ ಆತ್ಮನಲ್ಲೇ ರಮಮಾಣನಾಗುತ್ತಾನೆ. ॥ 3 ॥

(ಶ್ಲೋಕ - 4)

ಮೂಲಮ್

ಆತ್ಮತತ್ತ್ವವಿಶುದ್ಧ್ಯರ್ಥಂ ಯದಾಹ ಭಗವಾನೃತಮ್ ।
ಬ್ರಹ್ಮಣೇ ದರ್ಶಯನ್ ರೂಪಮವ್ಯಲೀಕವ್ರತಾದೃತಃ ॥

ಅನುವಾದ

ಆತ್ಮತತ್ತ್ವದ ಜ್ಞಾನಕ್ಕಾಗಿ ಬ್ರಹ್ಮದೇವರು ನಿಷ್ಕಪಟವಾದ ತಪಸ್ಸನ್ನಾಚ ರಿಸಿದಾಗ ಪ್ರಸನ್ನನಾದ ಭಗವಂತನು ಆತನಿಗೆ ತನ್ನ ಸ್ವರೂಪದ ದರ್ಶನಮಾಡಿಸಿ, ಆತ್ಮತತ್ತ್ವದ ಜ್ಞಾನಕ್ಕಾಗಿ ಅವರಿಗೆ ಪರಮ ಸತ್ಯ ವನ್ನು ಉಪದೇಶಮಾಡಿದನು. ಅಯ್ಯಾ ! ಅದನ್ನು ನಾನು ನಿನಗೆ ಹೇಳುತ್ತೇನೆ. ॥ 4 ॥

(ಶ್ಲೋಕ - 5)

ಮೂಲಮ್

ಸ ಆದಿದೇವೋ ಜಗತಾಂ ಪರೋ ಗುರುಃ
ಸ್ವಷ್ಣ್ಯಮಾಸ್ಥಾಯ ಸಿಸೃಕ್ಷಯೈಕ್ಷತ ।
ತಾಂ ನಾಧ್ಯಗಚ್ಛದ್ದೃಶಮತ್ರಸಮ್ಮತಾಂ
ಪ್ರಪಂಚನಿರ್ಮಾಣವಿರ್ಯಯಾ ಭವೇತ್ ॥

ಅನುವಾದ

ಮೂರೂ ಲೋಕಗಳ ಪರಮಗುರುಗಳಾದ ಆದಿದೇವ ಬ್ರಹ್ಮದೇವರು ತಮ್ಮ ಜನ್ಮಸ್ಥಾನವಾದ ಕಮಲದ ಮೇಲೆ ಕುಳಿತು ಕೊಂಡು ಸೃಷ್ಟಿಮಾಡಬೇಕೆಂಬ ಇಚ್ಛೆಯಿಂದ ವಿಚಾರ ಮಾಡ ತೊಡಗಿದರು. ಆದರೆ ಸೃಷ್ಟಿಯನ್ನು ಮಾಡುವುದಕ್ಕೆ ಬೇಕಾದ ದೃಷ್ಟಿಯಾಗಲೀ, ವಿಧಾನವಾಗಲೀ ಅವರಿಗೆ ದೊರಕಲಿಲ್ಲ. ॥ 5 ॥

(ಶ್ಲೋಕ - 6)

ಮೂಲಮ್

ಸ ಚಿಂತಯನ್ ದ್ವ್ಯಕ್ಷರಮೇಕದಾಂಭ-
ಸ್ಯುಪಾಶೃಣೋದ್ವರ್ಗದಿತಂ ವಚೋ ವಿಭುಃ ।
ಸ್ಪರ್ಶೇಷು ಯತ್ ಷೋಡಶಮೇಕವಿಂಶಂ
ನಿಷ್ಕಿಂಚನಾನಾಂ ನೃಪ ಯದ್ಧನಂ ವಿದುಃ ॥

ಅನುವಾದ

ಪರೀಕ್ಷಿತನೇ! ಒಂದು ದಿನ ಅವರು ಹೀಗೆ ಚಿಂತಿಸುತ್ತಿರುವಾಗ ಪ್ರಳಯಸಮುದ್ರದಿಂದ ಎರಡು ಅಕ್ಷರಗಳು ಎರಡು ಬಾರಿ ಕೇಳಿ ಬಂತು. ಅದು ವ್ಯಂಜನಗಳಲ್ಲಿರುವ ಹದಿನಾರನೆಯ ಮತ್ತು ಇಪ್ಪ ತ್ತೊಂದನೆಯ ವರ್ಣಗಳ ಸೇರುವಿಕೆಯಿಂದಾದ ‘ತಪ’ ಎಂಬುದು. ಈ ತಪಸ್ಸನ್ನೇ ತ್ಯಾಗಿಗಳ ಧನವೆಂದು ಮಹಾತ್ಮರು ಹೇಳುತ್ತಾರೆ. ॥ 6 ॥

(ಶ್ಲೋಕ - 7)

ಮೂಲಮ್

ನಿಶಮ್ಯ ತದ್ವಕ್ತೃದಿದೃಕ್ಷಯಾ ದಿಶೋ
ವಿಲೋಕ್ಯ ತತ್ರಾನ್ಯದಪಶ್ಯಮಾನಃ ।
ಸ್ವಷ್ಣ್ಯಮಾಸ್ಥಾಯ ವಿಮೃಶ್ಯ ತದ್ಧಿತಂ
ತಪಸ್ಯುಪಾದಿಷ್ಟ ಇವಾದಧೇ ಮನಃ ॥

ಅನುವಾದ

ಆ ಪದವನ್ನು ಕೇಳಿದ ಬ್ರಹ್ಮದೇವರು ಇದನ್ನು ಯಾರು ಹೇಳಿದರು ? ಎಂದು ಸುತ್ತಲೂ ನೋಡಿದನು. ಆದರೆ ಯಾರೊ ಬ್ಬರೂ ಕಾಣಲಿಲ್ಲ. ಆಗ ಅವರು ತಮ್ಮ ಕಮಲಾಸನದಲ್ಲಿ ಕುಳಿತು ‘ಹೇಗೂ ನನಗೆ ತಪಸ್ಸು ಮಾಡಬೇಕೆಂಬ ಆಜ್ಞೆಯು ನೇರವಾಗಿ ಬಂದಿದೆ. ಅದನ್ನು ಮಾಡುವುದೇ ಹಿತವೆಂದು ನಿಶ್ಚಯಿಸಿ ಮನಸ್ಸನ್ನು ತಪಸ್ಸಿನಲ್ಲಿ ತೊಡಗಿಸಿದರು. ॥ 7 ॥

(ಶ್ಲೋಕ - 8)

ಮೂಲಮ್

ದಿವ್ಯಂ ಸಹಸ್ರಾಬ್ದಮಮೋಘದರ್ಶನೋ
ಜಿತಾನಿಲಾತ್ಮಾ ವಿಜಿತೋಭಯೇಂದ್ರಿಯಃ ।
ಅತಪ್ಯತ ಸ್ಮಾಖಿಲಲೋಕತಾಪನಂ
ತಪಸ್ತಪೀಯಾಂಸ್ತಪತಾಂ ಸಮಾಹಿತಃ ॥

ಅನುವಾದ

ಬ್ರಹ್ಮದೇವರು ಎಲ್ಲ ತಪಸ್ವಿಗಳ ಲ್ಲಿಯೂ ದೊಡ್ಡ ತಪಸ್ವಿಗಳಾಗಿದ್ದಾರೆ. ಅವರ ಜ್ಞಾನವು ಅಮೋಘ ವಾಗಿದೆ. ಅವರು ಆಗ ಒಂದು ಸಾವಿರ ದಿವ್ಯವರ್ಷಗಳವರೆಗೆ ಏಕಾಗ್ರವಾದ ಚಿತ್ತದಿಂದ ತಮ್ಮ ಪ್ರಾಣ, ಮನಸ್ಸು, ಕರ್ಮೇಂದ್ರಿಯ, ಜ್ಞಾನೇಂದ್ರಿಯಗಳನ್ನು ವಶಪಡಿಸಿಕೊಂಡು ಸಮಸ್ತ ಲೋಕ ಗಳನ್ನು ಪ್ರಕಾಶಗೊಳಿಸುವ ಸಾಮರ್ಥ್ಯವನ್ನು ಪಡೆಯುವ ಅದ್ಭುತ ವಾದ ತಪಸ್ಸನ್ನು ಆಚರಿಸಿದರು. ॥ 8 ॥

(ಶ್ಲೋಕ - 9)

ಮೂಲಮ್

ತಸ್ಮೈ ಸ್ವಲೋಕಂ ಭಗವಾನ್ ಸಭಾಜಿತಃ
ಸಂದರ್ಶಯಾಮಾಸ ಪರಂ ನ ಯತ್ಪರಮ್ ।
ವ್ಯಪೇತಸಂಕ್ಲೇಶವಿಮೋಹಸಾಧ್ವಸಂ
ಸ್ವದೃಷ್ಟವದ್ಭಿರ್ವಿಬುಧೈರಭಿಷ್ಟುತಮ್ ॥

ಅನುವಾದ

ಅವರ ತಪಸ್ಸಿನಿಂದ ಪ್ರಸನ್ನನಾದ ಶ್ರೀಭಗವಂತನು ಅವರಿಗೆ ಎಲ್ಲಕ್ಕಿಂತ ಶ್ರೇಷ್ಠವೂ, ಅದಕ್ಕಿಂತ ಮಿಗಿಲಾಗಿ ಇನ್ನೊಂದು ಇಲ್ಲ ದಿರುವ ತನ್ನ ಸರ್ವಶ್ರೇಷ್ಠವಾದ ಲೋಕವನ್ನು ತೋರಿದನು. ಆ ಲೋಕದಲ್ಲಿ ಯಾವುದೇ ರೀತಿಯ ಕ್ಲೇಶ, ಮೋಹ, ಭಯ ಇವುಗಳಿಲ್ಲ. ಅದರ ಸಂದರ್ಶನದ ಸೌಭಾಗ್ಯ ಎಂದಾದರೂ ಒಂದು ಬಾರಿ ದೊರೆ ತರೂ ದೇವತೆಗಳು ಅದನ್ನು ಪದೇ-ಪದೇ ಸ್ತುತಿಸುತ್ತಾರೆ. ॥ 9 ॥

(ಶ್ಲೋಕ - 10)

ಮೂಲಮ್

ಪ್ರವರ್ತತೇ ಯತ್ರ ರಜಸ್ತಮಸ್ತಯೋಃ
ಸತ್ತ್ವಂ ಚ ಮಿಶ್ರಂ ನ ಚ ಕಾಲವಿಕ್ರಮಃ ।
ನ ಯತ್ರ ಮಾಯಾ ಕಿಮುತಾಪರೇ ಹರೇ-
ರನುವ್ರತಾ ಯತ್ರ ಸುರಾಸುರಾರ್ಚಿತಾಃ ॥

ಅನುವಾದ

ಅಲ್ಲಿ ರಜೋಗುಣ, ತಮೋಗುಣ ಮತ್ತು ಇವುಗಳಿಂದ ಮಿಶ್ರವಾದ ಸತ್ತ್ವಗುಣವೂ ಇಲ್ಲ. ಅಲ್ಲಿ ಕಾಲದ ಬೇಳೆ ಬೇಯುವುದಿಲ್ಲ. ಮಾಯೆಯು ಹೆಜ್ಜಯಿಡುವುದಿಲ್ಲ. ಹಾಗಿರುವಾಗ ಮಾಯೆಯ ಸಂತಾನಗಳು ಹೇಗೆ ಪ್ರವೇಶಿಸಿಯಾವು? ಅಲ್ಲಿ ದೇವತೆಗಳಿಂದಲೂ, ದೈತ್ಯರಿಂದಲೂ ಆರಾಸಲ್ಪಡುತ್ತಿರುವ ಭಗವಂತನ ಪಾರ್ಷದರು ವಾಸಿಸುತ್ತಾರೆ. ॥ 10 ॥

(ಶ್ಲೋಕ - 11)

ಮೂಲಮ್

ಶ್ಯಾಮಾವದಾತಾಃ ಶತಪತ್ರಲೋಚನಾಃ
ಪಿಶಂಗವಸಾಃ ಸುರುಚಃ ಸುಪೇಶಸಃ ।
ಸರ್ವೇ ಚತುರ್ಬಾಹವ ಉನ್ಮಿಷನ್ಮಣಿ-
ಪ್ರವೇಕನಿಷ್ಕಾಭರಣಾಃ ಸುವರ್ಚಸಃ ।
ಪ್ರವಾಲವೈದೂರ್ಯಮೃಣಾಲವರ್ಚಸಃ
ಪರಿಸುರತ್ಕುಂಡಲವೌಲಿಮಾಲಿನಃ ॥

ಅನುವಾದ

ಅವರ ಶರೀರಗಳು ಉಜ್ವಲವಾದ ಕಾಂತಿ ಯಿಂದೊಡಗೂಡಿ ಶ್ಯಾಮಲವರ್ಣದಿಂದಲೂ, ಕಮಲದಂತೆ ಕೋಮಲವಾದ ಕಣ್ಣುಗಳಿಂದಲೂ, ಪೀತಾಂಬರದಿಂದಲೂ ಶೋಭಿ ಸುತ್ತಿವೆ. ಅವರ ಒಂದೊಂದು ಅಂಗದಿಂದಲೂ ಸೌಂದರ್ಯಾ ಮೃತವು ಹೊರಸೂಸುತ್ತಿದೆ. ಅವರು ಕೋಮಲ ಮೂರ್ತಿ ಗಳಾಗಿದ್ದು, ಎಲ್ಲರಿಗೂ ಚತುರ್ಭುಜಗಳಿವೆ. ಅವರು ಮಹಾ ತೇಜಸ್ವಿ ಗಳಾಗಿದ್ದು ರತ್ನಘಟಿತವಾದ ಚಿನ್ನದ ಪ್ರಭೆಯಿಂದ ಹೊಳೆಯುವ ಭೂಷಣಗಳನ್ನು ಧರಿಸಿದ್ದಾರೆ. ಹವಳ, ವೈಡೂರ್ಯಮಣಿ ಮತ್ತು ಕಮಲದ ಉಜ್ವಲವಾದ ತಂತುವಿಗೆ ಸಮಾನವಾದ ಕಾಂತಿಯಿಂದ ಥಳ-ಥಳಿಸುತ್ತಿದ್ದಾರೆ. ಅವರ ಕಿವಿಗಳಲ್ಲಿ ಕುಂಡಲಗಳೂ, ಶಿರಸ್ಸಿನಲ್ಲಿ ಕಿರೀಟವೂ, ಕಂಠದಲ್ಲಿ ದಿವ್ಯಮಾಲೆಗಳೂ ರಾರಾಜಿಸುತ್ತಿವೆ. ॥ 11 ॥

(ಶ್ಲೋಕ - 12)

ಮೂಲಮ್

ಭ್ರಾಜಿಷ್ಣುಭಿರ್ಯಃ ಪರಿತೋ ವಿರಾಜತೇ
ಲಸದ್ವಿಮಾನಾವಲಿಭಿರ್ಮಹಾತ್ಮನಾಮ್ ।
ವಿದ್ಯೋತಮಾನಃ ಪ್ರಮದೋತ್ತಮಾದ್ಯುಭಿಃ
ಸವಿದ್ಯುದಭ್ರಾವಲಿಭಿರ್ಯಥಾ ನಭಃ ॥

ಅನುವಾದ

ಮಿಂಚಿನಿಂದ ಕೂಡಿದ ಮೋಡಗಳಿಂದ ಶೋಭಿಸುವ ಆಕಾಶ ದಂತೆಯೇ ಆ ಲೋಕವು ಕಮನೀಯ ಕಾಮಿನಿಯರ ಕಾಂತಿ ಯಿಂದ ಕೂಡಿದ, ಮಹಾತ್ಮರ ದಿವ್ಯ ತೇಜೋಮಯ ವಿಮಾನ ಗಳಿಂದ ಎಲ್ಲ ಕಡೆಗಳಲ್ಲಿಯೂ ಶೋಭಾಯಮಾನವಾಗಿದೆ. ॥ 12 ॥

(ಶ್ಲೋಕ - 13)

ಮೂಲಮ್

ಶ್ರೀರ್ಯತ್ರ ರೂಪಿಣ್ಯುರುಗಾಯಪಾದಯೋಃ
ಕರೋತಿ ಮಾನಂ ಬಹುಧಾ ವಿಭೂತಿಭಿಃ ।
ಪ್ರೇಂಖಂ ಶ್ರಿತಾ ಯಾ ಕುಸುಮಾಕರಾನುಗೈ-
ರ್ವಿಗೀಯಮಾನಾ ಪ್ರಿಯಕರ್ಮ ಗಾಯತೀ ॥

ಅನುವಾದ

ಆ ವೈಕುಂಠಲೋಕದಲ್ಲಿ ದಿವ್ಯ, ರೂಪ-ಲಾವಣ್ಯ ಸಂಪನ್ನೆ ಯಾದ ಮಹಾಲಕ್ಷ್ಮಿಯು ತನ್ನ ಬಗೆ-ಬಗೆಯ ವಿಭೂತಿಗಳ ಮೂಲಕ ಭಗವಂತನ ಶ್ರೀಚರಣಕಮಲಗಳನ್ನು ನಾನಾ ಪ್ರಕಾರ ದಿಂದ ಸೇವೆ ಮಾಡುತ್ತಾ ಇದ್ದಾಳೆ. ಕೆಲವೊಮ್ಮೆ ಅವಳು ಉಯ್ಯಾ ಲೆಯ ಮೇಲೆ ಕುಳಿತು ತನ್ನ ಪ್ರಿಯತಮನಾದ ಭಗವಂತನ ಲೀಲೆ ಗಳನ್ನು ಗಾಯನ ಮಾಡತೊಡಗುವಳು. ಆಗ ಆಕೆಯ ಸೌಂದರ್ಯ- ಸುವಾಸನೆಗಳಿಂದ ಉನ್ಮತ್ತರಾದ ಭಕ್ತರೂಪಿಗಳಾದ ದುಂಬಿಗಳು ತಾವೂ ಶ್ರೀಲಕ್ಷ್ಮೀದೇವಿಯ ಗುಣಗಳನ್ನು ಗಾನ ಮಾಡತೊಡಗುತ್ತವೆ. ॥ 13 ॥

(ಶ್ಲೋಕ - 14)

ಮೂಲಮ್

ದದರ್ಶ ತತ್ರಾಖಿಲಸಾತ್ವತಾಂ ಪತಿಂ
ಶ್ರಿಯಃ ಪತಿಂ ಯಜ್ಞಪತಿಂ ಜಗತ್ಪತಿಮ್ ।
ಸುನಂದನಂದಪ್ರಬಲಾರ್ಹಣಾದಿಭಿಃ
ಸ್ವಪಾರ್ಷದಮುಖ್ಯೈಃ ಪರಿಸೇವಿತಂ ವಿಭುಮ್ ॥

ಅನುವಾದ

ಆ ದಿವ್ಯಲೋಕದಲ್ಲಿ ಸಮಸ್ತಭಕ್ತರ ಸಂರಕ್ಷಕನೂ, ಲಕ್ಷ್ಮೀ ಪತಿಯೂ, ಯಜ್ಞಪತಿಯೂ, ವಿಶ್ವಪತಿಯೂ ಆದ ಭಗವಂತನು ವಿರಾಜಿಸುತ್ತಿರುವುದನ್ನು ಬ್ರಹ್ಮದೇವರು ನೋಡಿದರು. ನಂದ, ಸುನಂದ, ಪ್ರಬಲ, ಅರ್ಹಣ ಮುಂತಾದ ಪಾರ್ಷದ ಮುಖ್ಯರು ಆ ಪ್ರಭುವನ್ನು ಸೇವಿಸುತ್ತಿದ್ದರು. ॥ 14 ॥

(ಶ್ಲೋಕ - 15)

ಮೂಲಮ್

ಭೃತ್ಯಪ್ರಸಾದಾಭಿಮುಖಂ ದೃಗಾಸವಂ
ಪ್ರಸನ್ನಹಾಸಾರುಣಲೋಚನಾನನಮ್ ।
ಕಿರೀಟಿನಂ ಕುಂಡಲಿನಂ ಚತುರ್ಭುಜಂ
ಪೀತಾಂಬರಂ ವಕ್ಷಸಿ ಲಕ್ಷಿತಂ ಶ್ರಿಯಾ ॥

ಅನುವಾದ

ಮಹಾಪ್ರಭುವಿನ ಮುಖ ಕಮಲವು ಭಕ್ತರಿಗೆ ಅನುಗ್ರಹತೋರುವ ಮಧುರವಾದ ಮುಗುಳ್ನಗೆ ಯಿಂದ ರಮಣೀಯವಾಗಿದೆ. ಕಣ್ಣುಗಳಲ್ಲಿ ಸುಂದರವಾದ ಕೆಂಪು ಬಣ್ಣದ ಕಾಂತಿ, ಕಡುಮೋಹಕವಾದ, ಮಧುರವಾದ ಕಡೆಗಣ್ಣ ನೋಟ ಇವು ಕೂಡಲೇ ಪ್ರೇಮೀ ಭಕ್ತರಿಗೆ ತನ್ನ ಸರ್ವಸ್ವವನ್ನೂ ಕೊಟ್ಟುಬಿಡುತ್ತವೋ ಎಂಬಂತೆ ಕಾಣುತ್ತಿದೆ. ತಲೆಯಲ್ಲಿ ಕಿರೀಟವೂ, ಕಿವಿಗಳಲ್ಲಿ ಕುಂಡಲಗಳೂ, ಮೈಮೇಲೆ ಪೀತಾಂಬರವೂ ಹೊಳೆ ಯುತ್ತಿದೆ. ವಕ್ಷಃಸ್ಥಳದಲ್ಲಿ ಒಂದು ಸ್ವರ್ಣರೇಖೆಯಂತೆ ಶ್ರೀಲಕ್ಷ್ಮೀ ದೇವಿಯು ವಿರಾಜಿಸುತ್ತಿದ್ದಾಳೆ. ಭಗವಂತನಿಗೆ ಅಂದವಾದ ನಾಲ್ಕು ಭುಜಗಳಿವೆ. ॥ 15 ॥

(ಶ್ಲೋಕ - 16)

ಮೂಲಮ್

ಅಧ್ಯರ್ಹಣೀಯಾಸನಮಾಸ್ಥಿತಂ ಪರಂ
ವೃತಂ ಚತುಃಷೋಡಶಪಂಚ ಶಕ್ತಿಭಿಃ ।
ಯುಕ್ತಂ ಭಗೈಃ ಸೆ್ವೈರಿತರತ್ರ ಚಾಧ್ರುವೈಃ
ಸ್ವ ಏವ ಧಾಮನ್ ರಮಮಾಣಮೀಶ್ವರಮ್ ॥

ಅನುವಾದ

ಪ್ರಭುವು ಅಮೂಲ್ಯವೂ, ಸರ್ವೋ ತ್ತಮವೂ ಆದ ಆಸನದಲ್ಲಿ ಬೆಳಗುತ್ತಿದ್ದಾನೆ. ಪುರುಷ, ಪ್ರಕೃತಿ, ಮಹತ್ತತ್ತ್ವ, ಅಹಂಕಾರ, ಮನಸ್ಸು, ಹತ್ತು ಇಂದ್ರಿಯಗಳು, ಪಂಚ ತನ್ಮಾತ್ರೆಗಳು, ಪಂಚಭೂತಗಳು ಹೀಗೆ ಇಪ್ಪತ್ತೈದು ಶಕ್ತಿಗಳು ಮೂರ್ತೀಭವಿಸಿ ಆತನ ನಾಲ್ಕೂ ಕಡೆಗಳಲ್ಲಿ ನಿಂತುಕೊಂಡಿವೆ. ಸಮಗ್ರವಾದ ಐಶ್ವರ್ಯ, ಧರ್ಮ, ಕೀರ್ತಿ, ಶ್ರೀ, ಜ್ಞಾನ ಮತ್ತು ವೈರಾಗ್ಯ ಎಂಬ ನಿತ್ಯಸಿದ್ಧವಾದ ಸ್ವರೂಪ ಶಕ್ತಿಗಳಿಂದ ಸ್ವಾಮಿಯು ಕೂಡಿಕೊಂಡಿರುತ್ತಾನೆ. ಅವನನ್ನು ಬಿಟ್ಟು ಬೇರೆ ಯಾವುದ ರಲ್ಲಿಯೂ ಕೂಡ ಅವು ನಿತ್ಯವಾಗಿ ಇರುವುದಿಲ್ಲ. ಸರ್ವೇಶ್ವರನಾದ ಆ ಪ್ರಭುವು ಸದಾಕಾಲ ತನ್ನ ಆನಂದಮಯ ಸ್ವರೂಪದಲ್ಲೇ ನಿರಂತರವಾಗಿ ಮುಳುಗಿರುತ್ತಾನೆ. ॥ 16 ॥

(ಶ್ಲೋಕ - 17)

ಮೂಲಮ್

ತದ್ದರ್ಶನಾಹ್ಲಾದಪರಿಪ್ಲುತಾಂತರೋ
ಹೃಷ್ಯತ್ತನುಃ ಪ್ರೇಮಭರಾಶ್ರುಲೋಚನಃ ।
ನನಾಮ ಪಾದಂಬುಜಮಸ್ಯ ವಿಶ್ವಸೃಗ್
ಯತ್ಪಾರಮಹಂಸ್ಯೇನ ಪಥಾಗಮ್ಯತೇ ॥

ಅನುವಾದ

ಆತನನ್ನು ನೋಡಿ ದೊಡನೆಯೇ ಬ್ರಹ್ಮದೇವರ ಹೃದಯವು ಉಕ್ಕೇರುವ ಆನಂದ ದಿಂದ ತುಂಬಿಹೋಯಿತು. ದೇಹವು ರೋಮಾಂಚಿತವಾಗಿ, ಕಣ್ಣು ಗಳಲ್ಲಿ ಆನಂದಾಶ್ರುಗಳು ಚಿಮ್ಮಿಬಂದವು. ಪರಮಹಂಸರಿಗೆ ನಿವೃತ್ತಿ ಮಾರ್ಗದಿಂದಲೇ ದೊರೆಯುವ ಭಗವಂತನ ಶ್ರೀಪಾದಪದ್ಮಗಳಿಗೆ ಬ್ರಹ್ಮದೇವರು ಮತ್ತೊಮ್ಮೆ ತಲೆಬಾಗಿ ನಮಸ್ಕರಿಸಿದರು. ॥ 17 ॥

(ಶ್ಲೋಕ - 18)

ಮೂಲಮ್

ತಂ ಪ್ರೀಯಮಾಣಂ ಸಮುಪಸ್ಥಿತಂ ತದಾ
ಪ್ರಜಾವಿಸರ್ಗೇ ನಿಜಶಾಸನಾರ್ಹಣಮ್ ।
ಬಭಾಷ ಈಷತ್ ಸ್ಮಿತಶೋಚಿಷಾ ಗಿರಾ
ಪ್ರಿಯಃ ಪ್ರಿಯಂ ಪ್ರೀತಮನಾಃ ಕರೇ ಸ್ಪೃಶನ್ ॥

ಅನುವಾದ

ಬ್ರಹ್ಮದೇವರಿಗೆ ಪ್ರಿಯನಾದ ಆ ಭಗವಂತನು ತನ್ನ ಪ್ರಿಯಪುತ್ರನು ಪ್ರಜಾಸೃಷ್ಟಿಮಾಡಲು ತನ್ನ ಶಾಸನವನ್ನು ಸ್ವೀಕರಿಸುವುದಕ್ಕೆ ಯೋಗ್ಯ ನೆಂದು ತಿಳಿದು, ಅತ್ಯಂತ ಪ್ರಸನ್ನನಾಗಿ ಪ್ರೀತಿತುಂಬಿದ ಮನಸ್ಸಿನಿಂದ ಆತನನ್ನು ಕೈಯಿಂದ ನೇವರಿಸುತ್ತಾ ಮೃದುವಾದ ಮಂದಹಾಸ ದಿಂದ ಶೋಭಿಸುತ್ತಿರುವ ಮಾತಿನಿಂದ ಹೀಗೆಂದನು ॥ 18 ॥

(ಶ್ಲೋಕ - 19)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ತ್ವಯಾಹಂ ತೋಷಿತಃ ಸಮ್ಯಗ್ವೇದಗರ್ಭ ಸಿಸೃಕ್ಷಯಾ ।
ಚಿರಂ ಭೃತೇನ ತಪಸಾ ದುಸ್ತೋಷಃ ಕೂಟಯೋಗಿನಾಮ್ ॥

ಅನುವಾದ

ಶ್ರೀಭಗವಂತನು ನುಡಿದನು ಬ್ರಹ್ಮನೇ ! ನಿನ್ನ ಹೃದಯ ದಲ್ಲಾದರೋ ಸಮಸ್ತ ವೇದಗಳ ಜ್ಞಾನವು ತುಂಬಿದೆ. ನೀನು ಸೃಷ್ಟಿರಚನೆಯ ಇಚ್ಛೆಯಿಂದ ಚಿರಕಾಲ ತಪಸ್ಸುಮಾಡಿ ನನ್ನನ್ನು ಚೆನ್ನಾಗಿ ಸಂತೋಷಪಡಿಸಿರುವೆ. ಮನಸ್ಸಿನಲ್ಲಿ ಕಪಟವನ್ನಿಟ್ಟುಕೊಂಡು ಯೋಗ ಸಾಧನೆ ಮಾಡುವವರು ಎಂದಿಗೂ ನನ್ನನ್ನು ಪ್ರಸನ್ನ ಗೊಳಿಸಲಾರರು. ॥ 19 ॥

(ಶ್ಲೋಕ - 20)

ಮೂಲಮ್

ವರಂ ವರಯ ಭದ್ರಂ ತೇ ವರೇಶಂ ಮಾಭಿವಾಂಛಿತಮ್ ।
ಬ್ರಹ್ಮನ್ ಶ್ರೇಯಃ ಪರಿಶ್ರಾಮಃ ಪುಂಸೋ ಮದ್ದರ್ಶನಾವಃ ॥

ಅನುವಾದ

ಬ್ರಹ್ಮನೇ ! ನಿನಗೆ ಮಂಗಳವಾಗಲಿ. ನಿನಗೆ ಇಷ್ಟವಾದ ವರವನ್ನು ಬೇಡಿಕೋ. ಬೇಡಿದ ವಸ್ತುಗಳನ್ನು ಕೊಡುವ ಸಾಮರ್ಥ್ಯ ನನಗಿದೆ. ನನ್ನ ದರ್ಶನವಾಗುವವರೆಗೆ ಮನುಷ್ಯರಿಗೆ ತಪಸ್ಸೇ ಮುಂತಾದ ಸಾಧನೆಗಳ ಪರಿಶ್ರಮವಿರುತ್ತದೆ. ನನ್ನ ದರ್ಶನವಾದಾಗ ಅದೇ ಪರಿಶ್ರಮಗಳ ಲವೆಂದು ತಿಳಿ. ಬಳಿಕ ಯಾವುದೇ ಪರಿಶ್ರಮಗಳು ಇರುವುದಿಲ್ಲ. ಏಕೆಂದರೆ, ಜೀವರ ಸಮಸ್ತ ಶ್ರೇಯಸ್ಸಿನ ಸಾಧನೆಗಳ ವಿಶ್ರಾಮ-ಪರ್ಯವಸಾನ ನನ್ನ ದರ್ಶನದಲ್ಲೇ ಇದೆ. ॥ 20 ॥

(ಶ್ಲೋಕ - 21)

ಮೂಲಮ್

ಮನೀಷಿತಾನುಭಾವೋಯಂ ಮಮ ಲೋಕಾವಲೋಕನಮ್ ।
ಯದುಪಶ್ರುತ್ಯ ರಹಸಿ ಚಕರ್ಥ ಪರಮಂ ತಪಃ ॥

ಅನುವಾದ

ನೀನು ನನ್ನನ್ನು ನೋಡದೆಯೇ ನನ್ನ ವಾಣಿಯನ್ನು ಕೇಳಿ, ಇಷ್ಟು ತೀವ್ರವಾದ ತಪಸ್ಸನ್ನು ಆಚರಿಸಿದೆ. ಅದರಿಂದಲೇ ನಿನಗೆ ನನ್ನ ಇಚ್ಛೆಯಿಂದ ನನ್ನ ಲೋಕದ ದರ್ಶನವಾಯಿತು. ॥ 21 ॥

(ಶ್ಲೋಕ - 22)

ಮೂಲಮ್

ಪ್ರತ್ಯಾದಿಷ್ಟಂ ಮಯಾ ತತ್ರ ತ್ವಯಿ ಕರ್ಮವಿಮೋಹಿತೇ ।
ತಪೋ ಮೇ ಹೃದಯಂ ಸಾಕ್ಷಾದಾತ್ಮಾಹಂ ತಪಸೋನಘ ॥

ಅನುವಾದ

ಆಗ ನೀನು ಸೃಷ್ಟಿರಚನೆಯ ಕಾರ್ಯದಲ್ಲಿ ಕಿಂಕರ್ತವ್ಯ ಮೂಢ ನಾಗಿದ್ದೆ. ಇದರಿಂದಲೇ ನಿನಗೆ ನಾನೇ ತಪಸ್ಸನ್ನಾಚರಿಸಲು ಅಪ್ಪಣೆ ಕೊಟ್ಟಿದ್ದೆ. ಪಾಪರಹಿತನೇ ! ತಪಸ್ಸು ನನ್ನ ಹೃದಯವಾಗಿದೆ. ನಾನೇ ತಪಸ್ಸಿನ ಆತ್ಮಾ ಆಗಿದ್ದೇನೆ. ॥ 22 ॥

(ಶ್ಲೋಕ - 23)

ಮೂಲಮ್

ಸೃಜಾಮಿ ತಪಸೈವೇದಂ ಗ್ರಸಾಮಿ ತಪಸಾ ಪುನಃ ।
ಬಿಭರ್ಮಿ ತಪಸಾ ವಿಶ್ವಂ ವೀರ್ಯಂ ಮೇ ದುಶ್ಚರಂ ತಪಃ ॥

ಅನುವಾದ

ನಾನು ತಪಸ್ಸಿನಿಂದಲೇ ಈ ಜಗತ್ತನ್ನು ಸೃಷ್ಟಿಸುತ್ತೇನೆ. ತಪಸ್ಸಿನಿಂದಲೇ ಇದನ್ನು ಧರಿಸಿ- ಪಾಲಿಸುತ್ತೇನೆ. ಮತ್ತೆ ತಪಸ್ಸಿನಿಂದಲೇ ನನ್ನಲ್ಲಿ ಲೀನಗೊಳಿಸಿಕೊಳ್ಳು ತ್ತೇನೆ. ತಪಸ್ಸೇ ನನ್ನ ಒಂದು ದಾಟಲಶಕ್ಯವಾದ ಶಕ್ತಿಯಾಗಿದೆ. ॥ 23 ॥

(ಶ್ಲೋಕ - 24)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ಭಗವನ್ ಸರ್ವಭೂತಾನಾಮಧ್ಯಕ್ಷೋವಸ್ಥಿತೋ ಗುಹಾಮ್ ।
ವೇದ ಹ್ಯಪ್ರತಿರುದ್ಧೇನ ಪ್ರಜ್ಞಾನೇನ ಚಿಕೀರ್ಷಿತಮ್ ॥

ಅನುವಾದ

ಬ್ರಹ್ಮದೇವರು ಹೇಳಿದರು ಭಗವಂತನೇ ! ನೀನೇ ಸಮಸ್ತ ಪ್ರಾಣಿಗಳ ಅಂತಃಕರಣದಲ್ಲಿ ಸಾಕ್ಷೀರೂಪದಿಂದ ವಿರಾಜಿಸುತ್ತಿರುವೆ. ನಾನು ಏನು ಮಾಡಲು ಬಯಸುತ್ತಿರುವೆ ಎಂಬುದನ್ನು ನೀನು ನಿನ್ನ ಅಪ್ರತಿಹತವಾದ ಜ್ಞಾನದಿಂದ ತಿಳಿದೇ ಇದ್ದೀಯೆ. ॥ 24 ॥

(ಶ್ಲೋಕ - 25)

ಮೂಲಮ್

ತಥಾಪಿ ನಾಥಮಾನಸ್ಯ ನಾಥ ನಾಥಯ ನಾಥಿತಮ್ ।
ಪರಾವರೇ ಯಥಾ ರೂಪೇ ಜಾನೀಯಾಂ ತೇ ತ್ವರೂಪಿಣಃ ॥

ಅನುವಾದ

ಮಹಾಪ್ರಭೂ ! ರೂಪರಹಿತವಾಗಿರುವ ನಿನ್ನ ಪರರೂಪ ಮತ್ತು ಅಪರರೂಪ (ಸಗುಣ-ನಿರ್ಗುಣ) ಗಳೆರಡನ್ನೂ ತಿಳಿಯಬೇಕೆಂಬ ನನ್ನ ಬೇಡಿಕೆಯನ್ನು ಈಡೇರಿಸಲು ಪ್ರಾರ್ಥಿಸುತ್ತೇನೆ. ॥ 25 ॥

(ಶ್ಲೋಕ - 26)

ಮೂಲಮ್

ಯಥಾತ್ಮ ಮಾಯಾಯೋಗೇನ ನಾನಾಶಕ್ತ್ಯುಪಬೃಂಹಿತಮ್ ।
ವಿಲುಂಪನ್ ವಿಸೃಜನ್ ಗೃಹ್ಣನ್ ಬಿಭ್ರದಾತ್ಮಾನಮಾತ್ಮನಾ ॥

(ಶ್ಲೋಕ - 27)

ಮೂಲಮ್

ಕ್ರೀಡಸ್ಯಮೋಘಸಂಕಲ್ಪ ಊರ್ಣನಾಭಿರ್ಯಥೋರ್ಣುತೇ ।
ತಥಾ ತದ್ವಿಷಯಾಂ ಧೇಹಿ ಮನೀಷಾಂ ಮಯಿ ಮಾಧವ ॥

ಅನುವಾದ

ನೀನು ಮಾಯೆಗೆ ಸ್ವಾಮಿಯಾಗಿರುವೆ. ಸತ್ಯಸಂಕಲ್ಪನು. ಜೇಡರ ಹುಳವು ತನ್ನ ಬಾಯಿಂದ ಬಲೆಯನ್ನು ಹೆಣೆದು ಅದರಲ್ಲಿ ಆಟ ವಾಡುತ್ತಾ ಕೊನೆಗೆ ಅದನ್ನು ತನ್ನಲ್ಲಿಯೇ ಲಯಗೊಳಿಸಿಕೊಳ್ಳು ವಂತೆ, ನೀನೂ ನಿನ್ನ ಮಾಯಾಶಕ್ತಿಯಿಂದ ನಾನಾಶಕ್ತಿಸಂಪನ್ನವಾದ ಈ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳನ್ನು ಮಾಡಲಿಕ್ಕಾಗಿ ನಿನ್ನನ್ನೇ ಅನೇಕ ರೂಪಗಳನ್ನಾಗಿಸಿಕೊಂಡು ಕ್ರೀಡಿಸುತ್ತಿರುವೆ. ಇದನ್ನು ನೀನು ಹೇಗೆ ಮಾಡುವೆ ? ಎಂಬ ಮರ್ಮವನ್ನು ತಿಳಿಯಬಲ್ಲ ಜ್ಞಾನವನ್ನು ನನಗೆ ದಯಪಾಲಿಸು. ॥ 26-27 ॥

(ಶ್ಲೋಕ - 28)

ಮೂಲಮ್

ಭಗವಚ್ಛಿಕ್ಷಿತಮಹಂ ಕರವಾಣಿ ಹ್ಯತಂದ್ರಿತಃ ।
ನೇಹಮಾನಃ ಪ್ರಜಾಸರ್ಗಂ ಬಧ್ಯೇಯಂ ಯದನುಗ್ರಹಾತ್ ॥

ಅನುವಾದ

ನಾನು ಎಚ್ಚರವಾಗಿದ್ದು ನಿನ್ನ ಆಜ್ಞೆ ಯನ್ನು ಪಾಲನೆಮಾಡುವಂತೆಯೂ, ಸೃಷ್ಟಿಯನ್ನು ಮಾಡು ವಾಗಲೂ ಕರ್ತೃತ್ವದ ಅಭಿಮಾನದಿಂದ ಬಂತನಾಗದಂತೆ ನನ್ನ ಮೇಲೆ ಕೃಪೆಮಾಡು. ॥ 28 ॥

(ಶ್ಲೋಕ - 29)

ಮೂಲಮ್

ಯಾವತ್ಸಖಾ ಸಖ್ಯುರಿವೇಶ ತೇ ಕೃತಃ
ಪ್ರಜಾವಿಸರ್ಗೇ ವಿಭಜಾಮಿ ಭೋ ಜನಮ್ ।
ಅವಿಕ್ಲವಸ್ತೇ ಪರಿಕರ್ಮಣಿ ಸ್ಥಿತೋ
ಮಾ ಮೇ ಸಮುನ್ನದ್ಧ ಮದೋಜಮಾನಿನಃ ॥

ಅನುವಾದ

ಪ್ರಭೋ ! ನೀನು ಪರಮಪ್ರೀತಿ ಯಿಂದ ನನ್ನ ಕೈಯನ್ನು ಹಿಡಿದುಕೊಂಡು ನನ್ನನ್ನು ಮಿತ್ರನಂತೆ ಸ್ವೀಕರಿಸಿರುವೆ. ಆದ್ದರಿಂದ ನಾನು ಈ ಸೃಷ್ಟಿರಚನೆಯೆಂಬ ನಿನ್ನ ಸೇವೆಯನ್ನು ಮಾಡುವಾಗಲೂ, ಎಚ್ಚರಿಕೆಯಿಂದ ಹಿಂದಿನ ಕಲ್ಪದ ಗುಣ-ಕರ್ಮಗಳಿಗೆ ತಕ್ಕಂತೆ ಜೀವಿಗಳನ್ನು ವಿಭಾಜಿಸುವಾಗಲೂ ಎಲ್ಲಾದರೂ ನನ್ನ ಜನ್ಮ-ಕರ್ಮಗಳಿಂದ ಸ್ವತಂತ್ರನೆಂದು ತಿಳಿದು ಕೊಂಡು ಅಭಿಮಾನಕ್ಕೆ ಒಳಗಾಗದಂತೆ ಅನುಗ್ರಹಿಸು. ॥ 29 ॥

(ಶ್ಲೋಕ - 30)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಜ್ಞಾನಂ ಪರಮಗುಹ್ಯಂ ಮೇ ಯದ್ವಿಜ್ಞಾ ನಸಮನ್ವಿತಮ್ ।
ಸರಹಸ್ಯಂ ತದಂಗಂ ಚ ಗೃಹಾಣ ಗದಿತಂ ಮಯಾ ॥

ಅನುವಾದ

ಭಗವಂತನು ಹೇಳಿದನು ವಿರಂಚಿಯೇ ! ನನ್ನ ಪರಮ ಗೋಪನೀಯ, ವಿಜ್ಞಾನಸಹಿತ ಜ್ಞಾನದ ಕುರಿತು ನಿನಗೆ ನಾನು ಹೇಳುತ್ತಿದ್ದೇನೆ. ಅದರ ರಹಸ್ಯ ಮತ್ತು ಅಂಗಗಳ ಸಹಿತ ವರ್ಣಿ ಸುವೆನು. ಸಾವಧಾನವಾಗಿ ಕೇಳು. ॥ 30 ॥

(ಶ್ಲೋಕ - 31)

ಮೂಲಮ್

ಯಾವಾನಹಂ ಯಥಾಭಾವೋ ಯದ್ರೂಪಗುಣಕರ್ಮಕಃ ।
ತಥೈವ ತತ್ತ್ವವಿಜ್ಞಾನಮಸ್ತು ತೇ ಮದನುಗ್ರಹಾತ್ ॥

ಅನುವಾದ

ನನ್ನ ವಿಸ್ತಾರವೆಷ್ಟು ? ನನ್ನ ಲಕ್ಷಣವೇನು ? ನನಗೆ ಯಾವ-ಯಾವ ರೂಪಗಳೂ, ಗುಣ ಗಳೂ, ಕರ್ಮಗಳೂ ಇವೆಯೋ ಅವೆಲ್ಲದರ ತಾತ್ತ್ವಿಕ ವಾದ ಜ್ಞಾನವು ನಿನಗೆ ನನ್ನ ಅನುಗ್ರಹದಿಂದ ಉಂಟಾಗಲೀ. ॥ 31 ॥

(ಶ್ಲೋಕ - 32)

ಮೂಲಮ್

ಅಹಮೇವಾಸಮೇವಾಗ್ರೇ ನಾನ್ಯದ್ ಯತ್ಸದಸತ್ಪರಮ್ ।
ಪಶ್ಚಾದಹಂ ಯದೇತಚ್ಚ ಯೋವಶಿಷ್ಯೇತ ಸೋಸ್ಮ್ಯಹಮ್ ॥

ಅನುವಾದ

ಸೃಷ್ಟಿಗೆ ಮೊದಲು ಕೇವಲ ನಾನೇ ಇದ್ದೆ. ನಾನಲ್ಲದೆ ಸ್ಥೂಲ ವಾಗಲೀ, ಸೂಕ್ಷ್ಮವಾಗಲೀ, ಎರಡರ ಕಾರಣವಾದ ಅಜ್ಞಾನ ವಾಗಲೀ ಇರಲಿಲ್ಲ. ಸೃಷ್ಟಿಯು ಉಂಟಾದ ಮೇಲೆ ಏನೆಲ್ಲ ಈ ದೃಶ್ಯ ವರ್ಗವಿದೆಯೋ ಆದೆಲ್ಲವೂ ನಾನೇ ಆಗಿದ್ದೇನೆ. ‘ಸತ್ (ಅಕ್ಷರ)’ ‘ಅಸತ್ (ಕ್ಷರ)’ ಅದರಿಂದ ಆಚೆ (ಪುರುಷೋತ್ತಮ) ಇರುವು ದೆಲ್ಲವೂ ನಾನೇ ಆಗಿದ್ದೇನೆ. ಇವೆಲ್ಲದರ ನಾಶವಾದ ಬಳಿಕವೂ ಉಳಿಯುವುದೆಲ್ಲವೂ ನಾನೇ ಆಗಿದ್ದೇನೆ. ॥ 32 ॥

(ಶ್ಲೋಕ - 33)

ಮೂಲಮ್

ಋತೇರ್ಥಂ ಯತ್ಪ್ರತೀಯೇತ ನ ಪ್ರತೀಯೇತ ಚಾತ್ಮನಿ ।
ತದ್ವಿದ್ಯಾದಾತ್ಮನೋ ಮಾಯಾಂ ಯಥಾಭಾಸೋ ಯಥಾ ತಮಃ ॥

ಅನುವಾದ

ಪರಮಾತ್ಮನ ಸತ್ತೆಯಲ್ಲದೆ ಕಂಡುಬರುವುದೆಲ್ಲವೂ ಮಾಯೆಯ ಆಟವಾಗಿದೆ. ಹಾಗೆಯೇ ಆತ್ಮತತ್ತ್ವದ ದರ್ಶನವಾದಾಗ ಮಾಯೆಯು ಕಂಡು ಬರುವುದಿಲ್ಲ. ಆದರೆ ಮಾಯೆಯಾದರೋ ಇಲ್ಲವೇ ಇಲ್ಲ. ಏಕೆಂದರೆ, ವಿದ್ಯೆ ಮತ್ತು ಅವಿದ್ಯೆಗಳೆಂಬ ಎರಡೂ ಭಗವಂತನ ಶಕ್ತಿಗಳಾಗಿವೆ. ತಮ ಅರ್ಥಾತ್ ರಾಹುಗ್ರಹದ ಗಣನೆ ನವಗ್ರಹರಲ್ಲಿ ಆಗುತ್ತದೆ, ಆದರೆ ಅದು ಆಕಾಶದಲ್ಲಿ ಕಾಣುವುದಿಲ್ಲ. ಹಾಗೆಯೇ ಈ ವಿಶ್ವವು ವಾಸ್ತವವಾಗಿ ಇಲ್ಲದಿದ್ದರೂ ಕಂಡುಬರುತ್ತದೆ. ಆದ್ದ ರಿಂದ ಇದೇ ನನ್ನ ಮಾಯೆ ಎಂದು ತಿಳಿ. ಅದಕ್ಕಾಗಿ ಪರಮಾತ್ಮ ತತ್ತ್ವದ ಅನುಭೂತಿಯನ್ನು ಪಡೆಯಲು ವಿದ್ಯೆಯ ಮೂಲಕ ಅವಿದ್ಯೆಯನ್ನು ನಿರಾಕರಿಸಬೇಕು. ॥ 33 ॥

(ಶ್ಲೋಕ - 34)

ಮೂಲಮ್

ಯಥಾ ಮಹಾಂತಿ ಭೂತಾನಿ ಭೂತೇಷೂಚ್ಚಾವಚೇಷ್ವನು ।
ಪ್ರವಿಷ್ಟಾನ್ಯಪ್ರವಿಷ್ಟಾನಿ ತಥಾ ತೇಷು ನ ತೇಷ್ವಹಮ್ ॥

ಅನುವಾದ

ಹೇಗೆ ಪ್ರಾಣಿಗಳ ಸಣ್ಣ-ದೊಡ್ಡ ಶರೀರಗಳಲ್ಲಿ (ಆಕಾಶಾದಿ) ಪಂಚಭೂತಗಳು ಸೇರಿ ಕೊಂಡಿವೆ ಮತ್ತು ಸೇರಿಕೊಂಡೂ ಇಲ್ಲ. ಹಾಗೆಯೇ ಅವುಗಳಲ್ಲಿ (ಪ್ರಾಣಿಗಳಲ್ಲಿ) ನಾನು ಸೇರಿಕೊಂಡಿದ್ದರೂ ನಿಜವಾಗಿ ಅವುಗಳಲ್ಲಿ ನಾನು ಸೇರಿಕೊಂಡಿಲ್ಲ. ॥ 34 ॥

(ಶ್ಲೋಕ - 35)

ಮೂಲಮ್

ಏತಾವದೇವ ಜಿಜ್ಞಾಸ್ಯಂ ತತ್ತ್ವಜಿಜ್ಞಾಸುನಾತ್ಮನಃ ।
ಅನ್ವಯವ್ಯತಿರೇಕಾಭ್ಯಾಂ ಯತ್ ಸ್ಯಾತ್ಸರ್ವತ್ರ ಸರ್ವದಾ ॥

ಅನುವಾದ

ಪರಮಾತ್ಮನ ತತ್ತ್ವವನ್ನು ತಿಳಿ ಯುವ ಇಚ್ಛೆಯುಳ್ಳವನಿಗೆ ವಿರೂಪದಿಂದ ಅರ್ಥಾತ್ ‘ಪರ ಮಾತ್ಮನು ಹೀಗಿದ್ದಾನೆ, ಹಾಗಿದ್ದಾನೆ ’ ಈ ಭಾವದಿಂದ ಹಾಗೂ ನಿಷೇಧ ರೂಪದಿಂದ ಅರ್ಥಾತ್ ‘ಪರಮಾತ್ಮನು ಹೀಗೂ ಇಲ್ಲ, ಹಾಗೂ ಇಲ್ಲ’ ಈ ಭಾವದಿಂದ ಪರಮಾತ್ಮನು ಎಲ್ಲ ದೇಶಗಳಲ್ಲಿ , ಎಲ್ಲ ಕಾಲಗಳಲ್ಲಿ ಇದ್ದಾನೆ ಇಷ್ಟೇ ತಿಳಿಯುವ ಆವಶ್ಯಕತೆ ಇದೆ. ॥ 35 ॥

(ಶ್ಲೋಕ - 36)

ಮೂಲಮ್

ಏತನ್ಮತಂ ಸಮಾತಿಷ್ಠ ಪರಮೇಣ ಸಮಾನಾ ।
ಭವಾನ್ಕಲ್ಪವಿಕಲ್ಪೇಷು ನ ವಿಮುಹ್ಯತಿ ಕರ್ಹಿಚಿತ್ ॥

ಅನುವಾದ

ಬ್ರಹ್ಮನೇ ! ನೀನು ಅವಿಚಲ ಸಮಾಯ ಮೂಲಕ ನನ್ನ ಈ ಸಿದ್ಧಾಂತದಲ್ಲಿ ಪೂರ್ಣನಿಷ್ಠೆಯನ್ನಿಡು. ಇದರಿಂದ ನಿನಗೆ ಕಲ್ಪ-ಕಲ್ಪಾಂತರ ಗಳಲ್ಲಿ ವಿವಿಧ ಪ್ರಕಾರದ ಸೃಷ್ಟಿಯನ್ನು ಮಾಡುತ್ತಿದ್ದರೂ ನೀನು ಎಂದೂ ಮೋಹಿತನಾಗಲಾರೆ. (ಆದ್ದರಿಂದ ಸಾಧಕನು ಸಚ್ಚಿದಾನಂದ ಘನ ಪರಮಾತ್ಮನೊಬ್ಬನೇ ಎಲ್ಲ ದೇಶಗಳಲ್ಲಿ , ಎಲ್ಲ ಕಾಲಗಳಲ್ಲಿ ಇದ್ದಾನೆ. ಅವನಿಂದ ಬೇರೆಯಾದುದು ಯಾವುದೂ ಇಲ್ಲ ಎಂಬು ದನ್ನು ನಿಶ್ಚಯಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಅವನು ಶೋಕ, ಮೋಹ ಮುಂತಾದ ವಿಕಾರಗಳಿಂದ ಮತ್ತು ಅವಿದ್ಯೆಯೇ ಮೊದಲಾದ ಕ್ಲೇಶಗಳಿಂದ ಮುಕ್ತನಾಗಿ ಪರಮ ಶಾಂತಿಸ್ವರೂಪ ನಾದ ಪರಮಾತ್ಮನನ್ನು ಪಡೆದುಕೊಳ್ಳಬಲ್ಲನು.) ॥ 36 ॥

(ಶ್ಲೋಕ - 37)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸಂಪ್ರದಿಶ್ಯೈವಮಜನೋ ಜನಾನಾಂ ಪರಮೇಷ್ಠಿನಮ್ ।
ಪಶ್ಯತಸ್ತಸ್ಯ ತದ್ರೂಪಮಾತ್ಮನೋ ನ್ಯರುಣದ್ಧರಿಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ ಪರೀಕ್ಷಿತನೇ ! ಜನ್ಮರಹಿತವಾದ ಶ್ರೀಮನ್ನಾರಾಯಣನು ಜನರಲ್ಲಿ , ಉತ್ತಮಾಪತ್ಯ ವನ್ನು ಪಡೆದ ಬ್ರಹ್ಮದೇವರಿಗೆ ಹೀಗೆ ಉಪದೇಶಮಾಡಿ ಅವರು ನೋಡುತ್ತಿರುವಂತೆಯೇ ಅಂತರ್ಧಾನಹೊಂದಿದನು. ॥ 37 ॥

(ಶ್ಲೋಕ - 38)

ಮೂಲಮ್

ಅಂತರ್ಹಿತೇಂದ್ರಿಯಾರ್ಥಾಯ ಹರಯೇ ವಿಹಿತಾಂಜಲಿಃ ।
ಸರ್ವಭೂತಮಯೋ ವಿಶ್ವಂ ಸಸರ್ಜೇದಂ ಸ ಪೂರ್ವವತ್ ॥

ಅನುವಾದ

ಬ್ರಹ್ಮ ದೇವರು ತನ್ನ ಕಣ್ಮುಂದೆಯೇ ಅದೃಶ್ಯನಾದ ಭಗವಂತನಿಗೆ ಕೈಜೋಡಿಸಿ ನಮಸ್ಕಾರಮಾಡಿ, ಆತನ ಅನುಗ್ರಹದಿಂದ ಹಿಂದಿನ ಕಲ್ಪದಲ್ಲಿ ಇದ್ದ ಹಾಗೆ ಪುನಃ ಈ ವಿಶ್ವವನ್ನು ಸೃಷ್ಟಿಮಾಡಿದರು. ॥ 38 ॥

(ಶ್ಲೋಕ - 39)

ಮೂಲಮ್

ಪ್ರಜಾಪತಿರ್ಧರ್ಮಪತಿರೇಕದಾ ನಿಯಮಾನ್ ಯಮಾನ್ ।
ಭದ್ರಂ ಪ್ರಜಾನಾಮನ್ವಿಚ್ಛನ್ನಾತಿಷ್ಠತ್ಸ್ವಾರ್ಥಕಾಮ್ಯಯಾ ॥

ಅನುವಾದ

ಒಮ್ಮೆ ಧರ್ಮಪತಿಗಳಾದ ಆ ಪ್ರಜಾಪತಿ ಬ್ರಹ್ಮದೇವರು ಎಲ್ಲ ಪ್ರಜೆಗಳಿಗೆ ಕಲ್ಯಾಣವು ಉಂಟಾಗಲೆಂಬ ಸ್ವಾರ್ಥವನ್ನು ಸಾಸಲು ವಿಪೂರ್ವಕ ವಾಗಿ ಯಮ-ನಿಯಮಗಳನ್ನು ಆಚರಿಸಿದರು. ॥ 39 ॥

(ಶ್ಲೋಕ - 40)

ಮೂಲಮ್

ತಂ ನಾರದಃ ಪ್ರಿಯತಮೋ ರಿಕ್ಥಾದಾನಾಮನುವ್ರತಃ ।
ಶುಶ್ರೂಷಮಾಣಃ ಶೀಲೇನ ಪ್ರಶ್ರಯೇಣ ದಮೇನ ಚ ॥

(ಶ್ಲೋಕ - 41)

ಮೂಲಮ್

ಮಾಯಾಂ ವಿವಿದಿಷನ್ವಿಷ್ಣೋರ್ಮಾಯೇಶಸ್ಯ ಮಹಾಮುನಿಃ ।
ಮಹಾಭಾಗವತೋ ರಾಜನ್ಪಿತರಂ ಪರ್ಯತೋಷಯತ್ ॥

ಅನುವಾದ

ಆಗಲೇ ಅವರ ಪ್ರಿಯಪುತ್ರನಾದ ದೇವರ್ಷಿ ನಾರದರು ಮಾಯಾಪತಿ ಭಗವಂತನ ಮಾಯೆಯ ತತ್ತ್ವವನ್ನು ಅರಿಯುವ ಇಚ್ಛೆಯಿಂದ ಜಿತೇಂದ್ರಿಯನಾಗಿ, ಸದಾಚಾರ ಸಂಪನ್ನನಾಗಿ ಅವರ ಸೇವೆ ಮಾಡು ತ್ತಿದ್ದನು. ಪರಮ ಭಾಗವತೋತ್ತಮನಾದ ನಾರದ ಮಹರ್ಷಿಯು ಹೀಗೆ ಬಹುಕಾಲ ಸೇವಿಸುತ್ತಾ ಬ್ರಹ್ಮದೇವರನ್ನು ಸಂತೋಷಪಡಿಸಿ ದನು. ॥ 40-41 ॥

(ಶ್ಲೋಕ - 42)

ಮೂಲಮ್

ತುಷ್ಟಂ ನಿಶಾಮ್ಯ ಪಿತರಂ ಲೋಕಾನಾಂ ಪ್ರಪಿತಾಮಹಮ್ ।
ದೇವರ್ಷಿಃ ಪರಿಪಪ್ರಚ್ಛ ಭವಾನ್ಯನ್ಮಾನುಪೃಚ್ಛತಿ ॥

ಅನುವಾದ

ಪರೀಕ್ಷಿದ್ರಾಜನೇ ! ಲೋಕಪಿತಾಮಹರಾದ ಬ್ರಹ್ಮದೇವರು ಪ್ರಸನ್ನ ರಾಗಿರುವುದನ್ನು ನೋಡಿ ನಾರದಮುನಿಯು ನೀನು ಈಗ ನನ್ನಲ್ಲಿ ಪ್ರಶ್ನಿಸಿದಂತೆ, ಅದೇ ವಿಷಯವನ್ನು ಕುರಿತು ಪ್ರಶ್ನಿಸಿದನು. ॥ 42 ॥

(ಶ್ಲೋಕ - 43)

ಮೂಲಮ್

ತಸ್ಮಾ ಇದಂ ಭಾಗವತಂ ಪುರಾಣಂ ದಶಲಕ್ಷಣಮ್ ।
ಪ್ರೋಕ್ತಂ ಭಗವತಾ ಪ್ರಾಹ ಪ್ರೀತಃ ಪುತ್ರಾಯ ಭೂತಕೃತ್ ॥

ಅನುವಾದ

ಅವನ ಪ್ರಶ್ನೆಯಿಂದ ಇನ್ನೂ ಸಂತುಷ್ಟರಾಗಿ ಬ್ರಹ್ಮದೇವರು ತನಗೆ ಭಗವಂತನು ಉಪದೇಶಿಸಿದ್ದ ಹತ್ತು ಲಕ್ಷಣ ಗಳಿಂದ ಕೂಡಿದ ಶ್ರೀಮದ್ಭಾಗವತ ಪುರಾಣವನ್ನು ತನ್ನ ಪ್ರಿಯಪುತ್ರ ನಿಗೆ ಉಪದೇಶಿಸಿದರು. ॥ 43 ॥

(ಶ್ಲೋಕ - 44)

ಮೂಲಮ್

ನಾರದಃ ಪ್ರಾಹ ಮುನಯೇ ಸರಸ್ವತ್ಯಾಸ್ತಟೇ ನೃಪ ।
ಧ್ಯಾಯತೇ ಬ್ರಹ್ಮ ಪರಮಂ ವ್ಯಾಸಾಯಾಮಿತತೇಜಸೇ ॥

ಅನುವಾದ

ಪರೀಕ್ಷಿತನೇ ! ಅನಂತರ ನಾರದಮಹರ್ಷಿಯು ಸರಸ್ವತೀನದಿಯ ತೀರದಲ್ಲಿ ಕುಳಿತು ಪರ ಬ್ರಹ್ಮವನ್ನು ಧ್ಯಾನಿಸುತ್ತಿದ್ದ ಮಹಾತೇಜಸ್ವಿಗಳಾದ ವ್ಯಾಸಮುನಿ ಗಳಿಗೆ ಅದನ್ನು ಹಾಗೆಯೇ ಉಪದೇಶಮಾಡಿದರು. ವ್ಯಾಸಮಹಾ ಮುನಿಗಳು ಅದನ್ನು ನನಗೆ ಉಪದೇಶಿಸಿದರು. ॥ 44 ॥

(ಶ್ಲೋಕ - 45)

ಮೂಲಮ್

ಯದುತಾಹಂ ತ್ವಯಾ ಪೃಷ್ಟೋ ವೈರಾಜಾತ್ಪುರುಷಾದಿದಮ್ ।
ಯಥಾಸೀತ್ತದುಪಾಖ್ಯಾಸ್ಯೇ ಪ್ರಶ್ನಾನನ್ಯಾಂಶ್ಚ ಕೃತ್ಸ್ನಶಃ ॥

ಅನುವಾದ

ನೀನು ನನ್ನಲ್ಲಿ ವಿರಾಟ್ಪುರುಷ ನಿಂದ ಈ ಜಗತ್ತಿನ ಉತ್ಪತ್ತಿ ಹೇಗಾಯಿತು? ಎಂದು ಪ್ರಶ್ನಿಸಿದೆಯಲ್ಲ ! ಆ ಪ್ರಶ್ನೆಗೂ ಹಾಗೂ ನೀನು ಕೇಳಿದ ಇತರ ಪ್ರಶ್ನೆಗಳಿಗೂ ಈ ಭಾಗವತ ಪುರಾಣದ ರೂಪದಲ್ಲಿ ನಾನು ಉತ್ತರಿಸುವೆನು. ॥ 45 ॥

ಅನುವಾದ (ಸಮಾಪ್ತಿಃ)

ಒಂಭತ್ತನೆಯ ಅಧ್ಯಾಯವು ಮುಗಿಯಿತು. ॥ 9 ॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಿತೀಯಸ್ಕಂಧೇ ನವಮೋಽಧ್ಯಾಯಃ ॥9॥