[ಎಂಟನೆಯ ಅಧ್ಯಾಯ]
ಭಾಗಸೂಚನಾ
ಪರೀಕ್ಷಿದ್ರಾಜನು ಮಾಡಿದ ವಿವಿಧ ಪ್ರಶ್ನೆಗಳು
(ಶ್ಲೋಕ - 1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಬ್ರಹ್ಮಣಾ ಚೋದಿತೋ ಬ್ರಹ್ಮನ್ಗುಣಾಖ್ಯಾನೇಗುಣಸ್ಯ ಚ ।
ಯಸ್ಮೈ ಯಸ್ಮೈ ಯಥಾ ಪ್ರಾಹ ನಾರದೋ ದೇವದರ್ಶನಃ ॥
ಅನುವಾದ
ಪರೀಕ್ಷಿದ್ರಾಜನು ಹೇಳಿದನು ಬ್ರಾಹ್ಮಣೋತ್ತಮರೇ ! ದೇವಋಷಿ ನಾರದರು ದೇವಸಾಕ್ಷಾತ್ಕಾರ ಸಂಪನ್ನರು. ಅವರ ದರ್ಶನ ದೇವರ ದರ್ಶನಕ್ಕೆ ಸಮವಾದುದು. ಆ ಮಹಾತ್ಮರಿಗೆ ಬ್ರಹ್ಮದೇವರು ‘‘ವತ್ಸಾ ! ನಾರದಾ ! ಗುಣಾತೀತನಾದ ಪರ ಮಾತ್ಮನ ಕಲ್ಯಾಣಗುಣಗಳನ್ನು ಲೋಕಕ್ಕೆ ವರ್ಣನೆಮಾಡು’’ ಎಂದು ಪ್ರೇರಣೆ ಮಾಡಿದುದಾಗಿ ಹೇಳಿದಿರಿ. ॥ 1 ॥
(ಶ್ಲೋಕ - 2)
ಮೂಲಮ್
ಏತದ್ವೇದಿತುಮಿಚ್ಛಾಮಿ ತತ್ತ್ವಂ ವೇದವಿದಾಂ ವರ ।
ಹರೇರದ್ಭುತವೀರ್ಯಸ್ಯ ಕಥಾ ಲೋಕಸುಮಂಗಲಾಃ ॥
ಅನುವಾದ
ಅವರು - ಯಾರಿಗೆ ಹಾಗೂ ಯಾವ ರೂಪದಲ್ಲಿ ಉಪದೇಶ ಮಾಡಿದರು ? ಎಂಬುದನ್ನು ತಿಳಿಸಿರಿ. ಅದ್ಭುತವಾದ ಶಕ್ತಿಗಳಿಗೆ ಆಶ್ರಯನಾಗಿರುವ ಭಗವಂತನ ಕಥೆಗಳು ಲೋಕಕ್ಕೆ ಪರಮಮಂಗಳವನ್ನು ಉಂಟು ಮಾಡುವವು. ಆತನ ವಿಷಯವಾಗಿಯೂ ತಿಳಿಸಿರಿ. ॥ 2 ॥
(ಶ್ಲೋಕ - 3)
ಮೂಲಮ್
ಕಥಯಸ್ವ ಮಹಾಭಾಗ ಯಥಾಹಮಖಿಲಾತ್ಮನಿ ।
ಕೃಷ್ಣೇ ನಿವೇಶ್ಯ ನಿಃಸಂಗಂ ಮನಸ್ತ್ಯಕ್ಷ್ಯೇ ಕಲೇವರಮ್ ॥
ಅನುವಾದ
ಶುಕಮಹಾತ್ಮರೇ ! ತಾವು ವೇದಜ್ಞರಲ್ಲಿಯೂ ಶ್ರೇಷ್ಠರಾದವರು. ಸಂಗರಹಿತವಾದ ನನ್ನ ಮನಸ್ಸು ಸರ್ವಾತ್ಮಕವಾದ ಶ್ರೀಕೃಷ್ಣನಲ್ಲಿ ತನ್ಮಯವಾಗಿಸಿ ಶರೀರವನ್ನು ಬಿಡಬೇಕೆಂದಿರುವ ನನಗೆ ಭಗವದ್ವಿಷ ಯವನ್ನು ವರ್ಣಿಸಿರಿ. ॥ 3 ॥
(ಶ್ಲೋಕ - 4)
ಮೂಲಮ್
ಶ್ವಣ್ವತಃ ಶ್ರದ್ಧಯಾ ನಿತ್ಯಂ ಗೃಣತಶ್ಚ ಸ್ವಚೇಷ್ಟಿತಮ್ ।
ಕಾಲೇನ ನಾತಿದೀರ್ಘೇಣ ಭಗವಾನ್ವಿಶತೇ ಹೃದಿ ॥
ಅನುವಾದ
ಭಗವಂತನ ದಿವ್ಯಲೀಲೆಗಳನ್ನು ದಿನ-ದಿನವೂ ಶ್ರದ್ಧೆಯಿಂದ ಶ್ರವಣಿಸುವವರ, ಸಂಕೀರ್ತನೆ ಮಾಡುವವರ ಹೃದಯದಲ್ಲಿ ಅವನು ಶೀಘ್ರವಾಗಿ ಪ್ರವೇಶಿಸಿ ಅಲ್ಲೇ ಪ್ರಗಟನಾಗುತ್ತಾನೆ. ॥ 4 ॥
(ಶ್ಲೋಕ - 5)
ಮೂಲಮ್
ಪ್ರವಿಷ್ಟಃ ಕರ್ಣರಂಧ್ರೇಣ ಸ್ವಾನಾಂ ಭಾವಸರೋರುಹಮ್ ।
ಧುನೋತಿ ಶಮಲಂ ಕೃಷ್ಣಃ ಸಲಿಲಸ್ಯ ಯಥಾ ಶರತ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಕಿವಿಗಳ ರಂಧ್ರಗಳ ಮೂಲಕ ಭಕ್ತರ ಭಾವಮಯ ಹೃದಯಕಮಲವನ್ನು ಪ್ರವೇಶಿಸಿ ಅಲ್ಲಿ ಬೆಳಗುತ್ತಾನೆ. ಶರದೃತುವು ಬಗ್ಗಡವಾದ ನೀರಿನ ಕೆಸರು-ಕೊಳೆಯನ್ನು ಹೋಗಲಾಡಿಸುವಂತೆ ಭಕ್ತರ ಮನಸ್ಸಿನ ಕಶ್ಮಲವನ್ನು ಹೋಗಲಾಡಿಸುತ್ತಾನೆ. ॥ 5 ॥
(ಶ್ಲೋಕ - 6)
ಮೂಲಮ್
ಧೌತಾತ್ಮಾ ಪುರುಷಃ ಕೃಷ್ಣಪಾದಮೂಲಂ ನ ಮುಂಚತಿ ।
ಮುಕ್ತಸರ್ವಪರಿಕ್ಲೇಶಃ ಪಾಂಥಃ ಸ್ವಶರಣಂ ಯಥಾ ॥
ಅನುವಾದ
ದಾರಿಯಲ್ಲಿ ಒದಗಿದ ಎಲ್ಲ ಕಷ್ಟ-ಕಾರ್ಪಣ್ಯಗಳನ್ನೂ ದಾಟಿ ಮನೆಗೆ ಹಿಂದಿರುಗಿದವನು ಹೇಗೆ ತನ್ನ ಮನೆಯನ್ನು ಬಿಟ್ಟುಹೋಗುವುದಿಲ್ಲವೋ ಹಾಗೆಯೇ ಭಗವಂತನ ಪ್ರವೇಶದಿಂದ ಹೃದಯಶುದ್ಧಿಯನ್ನು ಪಡೆದ ಸುಕೃ ತಿಯು ಶ್ರೀಕೃಷ್ಣಪರಮಾತ್ಮನ ಚರಣಕಮಲಗಳನ್ನು ಕ್ಷಣಕಾಲವೂ ತೊರೆಯುವುದಿಲ್ಲ. ॥ 6 ॥
(ಶ್ಲೋಕ - 7)
ಮೂಲಮ್
ಯದಧಾತುಮತೋ ಬ್ರಹ್ಮನ್ ದೇಹಾರಂಭೋಸ್ಯ ಧಾತುಭಿಃ ।
ಯದೃಚ್ಛಯಾ ಹೇತುನಾ ವಾ ಭವಂತೋ ಜಾನತೇ ಯಥಾ ॥
ಅನುವಾದ
ಪೂಜ್ಯರೇ! ಜೀವಕ್ಕೆ ಪಂಚಭೂತಗಳ ಸಂಬಂಧವು ಕಿಂಚಿತ್ತೂ ಇಲ್ಲ. ಆದರೂ ಆತನ ಶರೀರವು ಪಂಚ-ಭೂತಗಳಿಂದಲೇ ನಿರ್ಮಿತವಾಗುವುದು. ಇದು ಸ್ವಾಭಾವಿಕವಾಗಿಯೇ ಹೀಗೆ ಆಗುವುದೋ ಅಥವಾ ಯಾವುದಾದರೂ ಕಾರಣಕ್ಕೆ ವಶವಾಗಿ ಹೀಗೆ ಆಗುವುದೋ ? ಈ ರಹಸ್ಯವು ತಮಗೆ ತಿಳಿದೇ ಇದೆ. ॥ 7 ॥
(ಶ್ಲೋಕ - 8)
ಮೂಲಮ್
ಆಸೀದ್ ಯದುದರಾತ್ಪದ್ಮಂ ಲೋಕಸಂಸ್ಥಾನಲಕ್ಷಣಮ್ ।
ಯಾವಾನಯಂ ವೈ ಪುರುಷ ಇಯತ್ತಾವಯವೈಃ ಪೃಥಕ್ ।
ತಾವಾನಸಾವಿತಿ ಪ್ರೋಕ್ತಃ ಸಂಸ್ಥಾವಯವವಾನಿವ ॥
ಅನುವಾದ
ಭಗವಂತನ ನಾಭಿಯಿಂದ ಒಂದು ಕಮಲವು ಉಂಟಾಯಿತು ಮತ್ತು ಅದರಿಂದ ಲೋಕಗಳ ಸೃಷ್ಟಿಯಾಯಿತು ಎಂದು ತಾವು ಹೇಳಿದಿರಿ. ಈ ಜೀವಿಯು ತನ್ನ ಸೀಮಿತ ಅವಯವಗಳಿಂದ ಪರಿಚ್ಛಿನ್ನವಿರುವಂತೆಯೇ ಪರಮಾತ್ಮನನ್ನೂ ಕೂಡ ಸೀಮಿತ ಅವಯವಗಳಿಂದ ಪರಿಚ್ಛಿನ್ನದಂತೆ ನೀವು ವರ್ಣಿಸಿದಿರಿ. ಇದು ಹೇಗೆ ಹೊಂದುತ್ತದೆ ? ॥ 8 ॥
(ಶ್ಲೋಕ - 9)
ಮೂಲಮ್
ಅಜಃ ಸೃಜತಿ ಭೂತಾನಿ ಭೂತಾತ್ಮಾ ಯದನುಗ್ರಹಾತ್ ।
ದದೃಶೇ ಯೇನ ತದ್ರೂಪಂ ನಾಭಿಪದ್ಮ ಸಮುದ್ಭವಃ ॥
(ಶ್ಲೋಕ - 10)
ಮೂಲಮ್
ಸ ಚಾಪಿ ಯತ್ರ ಪುರುಷೋ ವಿಶ್ವಸ್ಥಿತ್ಯುದ್ಭವಾಪ್ಯಯಃ ।
ಮುಕ್ತ್ವಾತ್ಮ ಮಾಯಾಂ ಮಾಯೇಶಃ ಶೇತೇ ಸರ್ವಗುಹಾಶಯಃ ॥
ಅನುವಾದ
ಯಾರ ಕೃಪೆಯಿಂದ ಸರ್ವಭೂತ ಮಯ ಬ್ರಹ್ಮದೇವರು ಪ್ರಾಣಿಗಳನ್ನು ಸೃಷ್ಟಿಸುತ್ತಾರೋ, ಯಾರ ನಾಭಿಕಮಲದಿಂದಲೇ ಹುಟ್ಟಿದರೋ ಆತನ ಕೃಪೆಯಿಂದಲೇ ಬ್ರಹ್ಮದೇವರಿಗೆ ಆತನ ರೂಪವನ್ನು ಸಂದರ್ಶಿಸಲು ಸಾಧ್ಯ ವಾಯಿತೇ ? ಅಂತಹ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನೂ, ಸರ್ವಾಂತರ್ಯಾಮಿಯೂ, ಮಾಯೆಗೆ ಅಪತಿಯೂ ಆದ ಪರಮಪುರುಷ ಪರಮಾತ್ಮನೂ ಕೂಡ ತನ್ನ ಮಾಯೆಯನ್ನು ತ್ಯಜಿಸಿ ಯಾವುದರಲ್ಲಿ, ಯಾವ ರೂಪದಿಂದ ಮಲಗುತ್ತಾನೆ ? ॥ 9-10 ॥
(ಶ್ಲೋಕ - 11)
ಮೂಲಮ್
ಪುರುಷಾವಯವೈರ್ಲೋಕಾಃ ಸಪಾಲಾಃ ಪೂರ್ವಕಲ್ಪಿತಾಃ ।
ಲೋಕೈರಮುಷ್ಯಾವಯವಾಃ ಸಪಾಲೈರಿತಿ ಶುಶ್ರುಮ ॥
ಅನುವಾದ
ವಿರಾಟ್ಪುರುಷನ ಅಂಗಗಳಿಂದ ಲೋಕಗಳೂ ಮತ್ತು ಲೋಕ ಪಾಲರೂ ಉಂಟಾದರೆಂದು ಮೊದಲು ಹೇಳಿದಿರಿ, ಅನಂತರ ಆತನ ಅಂಗಗಳನ್ನು ಲೋಕಗಳ ಮತ್ತು ಲೋಕಪಾಲಕರ ರೂಪದಲ್ಲಿ ಕಲ್ಪಿಸಿಕೊಳ್ಳಬೇಕೆಂದೂ ಉಪದೇಶಿಸಿದಿರಿ. ಇವೆರಡೂ ಮಾತುಗಳ ತಾತ್ಪರ್ಯವೇನು ? ॥ 11 ॥
(ಶ್ಲೋಕ - 12)
ಮೂಲಮ್
ಯಾವಾನ್ಕಲ್ಪೋ ವಿಕಲ್ಪೋ ವಾ ಯಥಾ ಕಾಲೋನುಮೀಯತೇ ।
ಭೂತಭವ್ಯಭವಚ್ಛಬ್ದ ಆಯುರ್ಮಾನಂ ಚ ಯತ್ ಸತಃ ॥
ಅನುವಾದ
ಮಹಾಕಲ್ಪಗಳು ಮತ್ತು ಅವುಗಳೊಳಗಿನ ಅವಾಂತರ ಕಲ್ಪಗಳು ಎಷ್ಟು ? ಭೂತ, ಭವಿಷ್ಯ, ವರ್ತಮಾನ ಕಾಲಗಳ ಅನುಮಾನ ಹೇಗೆ ಮಾಡಲಾಗುತ್ತದೆ ? ಸ್ಥೂಲ ದೇಹಾಭಿಮಾನಿಗಳಾದ ಜೀವರ ಆಯುಸ್ಸಿನ ಅಳತೆ ಎಷ್ಟು ? ॥ 12 ॥
(ಶ್ಲೋಕ - 13)
ಮೂಲಮ್
ಕಾಲಸ್ಯಾನುಗತಿರ್ಯಾ ತು ಲಕ್ಷ್ಯತೇಣ್ವೀ ಬೃಹತ್ಯಪಿ ।
ಯಾವತ್ಯಃ ಕರ್ಮಗತಯೋ ಯಾದೃಶೀರ್ದ್ವಿಜಸತ್ತಮ ॥
ಅನುವಾದ
ಬ್ರಾಹ್ಮಣಶ್ರೇಷ್ಠರೇ ! ಕಾಲದ ಸೂಕ್ಷ್ಮಗತಿಗಳಾದ ತ್ರುಟಿ ಮುಂತಾದುವನ್ನೂ, ಸ್ಥೂಲಗತಿಗಳಾದ ವರ್ಷವೇ ಮುಂತಾದವುಗಳನ್ನೂ ತಿಳಿಯುವುದು ಹೇಗೆ ? ಬಗೆ- ಬಗೆಯಾದ ಕರ್ಮಗಳಿಗೆ ತಕ್ಕಂತೆ ಜೀವಿಗಳಿಗೆ ಎಷ್ಟು ಗತಿಗಳು ಮತ್ತು ಎಂತಹ ಗತಿಗಳೂ ಆಗುತ್ತವೆ ? ॥ 13 ॥
(ಶ್ಲೋಕ - 14)
ಮೂಲಮ್
ಯಸ್ಮಿನ್ಕರ್ಮಸಮಾವಾಯೋ ಯಥಾ ಯೇನೋಪಗೃಹ್ಯತೇ ।
ಗುಣಾನಾಂ ಗುಣಿನಾಂ ಚೈವ ಪರಿಣಾಮಮಭೀಪ್ಸತಾಮ್ ॥
ಅನುವಾದ
ದೇವತೆಗಳು, ಮನುಷ್ಯರು ಮುಂತಾದ ಯೋನಿಗಳು, ಸತ್ತ್ವ, ರಜ, ತಮೋ ಗುಣಗಳ ಲವಾಗಿಯೇ ದೊರೆಯುತ್ತವೆ. ಅವುಗಳನ್ನು ಬಯಸುವ ಜೀವಿಗಳು ಯಾವ-ಯಾವ ಯೋನಿಯನ್ನು ಪಡೆಯಲಿಕ್ಕಾಗಿ ಯಾವ-ಯಾವ ಪ್ರಕಾರದಿಂದ ಯಾವ-ಯಾವ ಕರ್ಮಗಳನ್ನು ಸ್ವೀಕರಿಸುತ್ತಾರೆ ? ॥ 14 ॥
(ಶ್ಲೋಕ - 15)
ಮೂಲಮ್
ಭೂಪಾತಾಲಕಕುಬ್ವ್ಯೋಮಗ್ರಹನಕ್ಷತ್ರಭೂಭೃತಾಮ್ ।
ಸರಿತ್ಸಮುದ್ರದ್ವೀಪಾನಾಂ ಸಂಭವಶ್ಚೈತದೋಕಸಾಮ್ ॥
ಅನುವಾದ
ಪೃಥ್ವಿ, ಪಾತಾಳ, ದಿಕ್ಕುಗಳು, ಆಕಾಶ, ಗ್ರಹ, ನಕ್ಷತ್ರ, ಪರ್ವತ, ನದೀ, ಸಮುದ್ರ, ದ್ವೀಪಗಳು ಮತ್ತು ಅವುಗಳಲ್ಲಿ ವಾಸಿಸುವ ಜೀವರ ಉತ್ಪತ್ತಿಯು ಹೇಗಾಗುತ್ತದೆ ? ॥ 15 ॥
(ಶ್ಲೋಕ - 16)
ಮೂಲಮ್
ಪ್ರಮಾಣಮಂಡಕೋಶಸ್ಯ ಬಾಹ್ಯಾಭ್ಯಂತರಭೇದತಃ ।
ಮಹತಾಂ ಚಾನುಚರಿತಂ ವರ್ಣಾಶ್ರಮವಿನಿಶ್ಚಯಃ ॥
ಅನುವಾದ
ಬ್ರಹ್ಮಾಂಡದ ಪರಿಮಾಣವೇನು ? ಅದರ ಒಳಗಿನ- ಹೊರಗಿನ ಪರಿಮಾಣವೆಷ್ಟು ? ಜೊತೆಗೆ ಮಹಾಪುರುಷರ ಚರಿತ್ರೆ, ವರ್ಣಾಶ್ರಮಗಳ ಭೇದಗಳೂ ಮತ್ತು ಅವುಗಳ ಧರ್ಮವನ್ನು ನಿರೂಪಣೆ ಮಾಡಿರಿ. ॥ 16 ॥
ಮೂಲಮ್
ಯುಗಾನಿ ಯುಗಮಾನಂ ಚ ಧರ್ಮೋ ಯಶ್ಚ ಯುಗೇ ಯುಗೇ ।
ಅವತಾರಾನುಚರಿತಂ ಯದಾಶ್ಚರ್ಯತಮಂ ಹರೇಃ ॥
(ಶ್ಲೋಕ - 17)
ಅನುವಾದ
ಯುಗಗಳ ಭೇದ, ಅವುಗಳ ಪರಿ ಮಾಣ, ಅವುಗಳ ಬೇರೆ-ಬೇರೆ ಧರ್ಮಗಳು, ಹಾಗೂ ಭಗವಂತನ ನಾನಾ ಅವತಾರಗಳ ಪರಮಾಶ್ಚರ್ಯಮಯ ಚರಿತ್ರೆಗಳನ್ನು ಹೇಳಿರಿ. ॥ 17 ॥
(ಶ್ಲೋಕ - 18)
ಮೂಲಮ್
ನೃಣಾಂ ಸಾಧಾರಣೋ ಧರ್ಮಃ ಸವಿಶೇಷಶ್ಚ ಯಾದೃಶಃ ।
ಶ್ರೇಣೀನಾಂ ರಾಜರ್ಷೀಣಾಂ ಚ ಧರ್ಮಃ ಕೃಚ್ಛ್ರೇಷು ಜೀವತಾಮ್ ॥
ಅನುವಾದ
ಮನುಷ್ಯರ ಸಾಧಾರಣ ಮತ್ತು ವಿಶೇಷ ಧರ್ಮ ಗಳು ಯಾವು-ಯಾವವು ? ಬೇರೆ-ಬೇರೆ ವ್ಯವಸಾಯವುಳ್ಳ ಜನರ, ರಾಜರ್ಷಿಗಳ ಮತ್ತು ವಿಪತ್ತುಗಳಿಗೆ ಸಿಲುಕಿದ ಜನರ ಧರ್ಮಗಳನ್ನೂ ಉಪದೇಶಿಸಿರಿ. ॥ 18 ॥
(ಶ್ಲೋಕ - 19)
ಮೂಲಮ್
ತತ್ತ್ವಾನಾಂ ಪರಿಸಂಖ್ಯಾನಂ ಲಕ್ಷಣಂ ಹೇತುಲಕ್ಷಣಮ್ ।
ಪುರುಷಾರಾಧನವಿರ್ಯೋಗಸ್ಯಾಧ್ಯಾತ್ಮಿಕಸ್ಯ ಚ ॥
ಅನುವಾದ
ತತ್ತ್ವಗಳ ಸಂಖ್ಯೆ ಎಷ್ಟು ? ಅವುಗಳ ಸ್ವರೂಪ ಹಾಗೂ ಲಕ್ಷಣಗಳಾವವು? ಭಗ ವಂತನ ಆರಾಧನೆಯ ಮತ್ತು ಆಧ್ಯಾತ್ಮಯೋಗದ ವಿಧಾನವೇನು ? ॥ 19 ॥
(ಶ್ಲೋಕ - 20)
ಮೂಲಮ್
ಯೋಗೇಶ್ವರೈಶ್ವರ್ಯಗತಿರ್ಲಿಂಗಭಂಗಸ್ತು ಯೋಗಿನಾಮ್ ।
ವೇದೋಪವೇದಧರ್ಮಾಣಾಮಿತಿಹಾಸಪುರಾಣಯೋಃ ॥
ಅನುವಾದ
ಯೋಗೇಶ್ವರರಿಗೆ ಯಾವ-ಯಾವ ಸಿದ್ಧಿಗಳು ದೊರ ಕುತ್ತವೆ ? ಅವರಿಗೆ ಕಡೆಯಲ್ಲಿ ಯಾವ ಗತಿ ಸಿಗುತ್ತದೆ? ಯೋಗಿಗಳ ಲಿಂಗ ಶರೀರಗಳ ಭಂಗ ಹೇಗೆ ಆಗುತ್ತದೆ? ವೇದ, ಉಪವೇದ, ಧರ್ಮಶಾಸ , ಇತಿಹಾಸ ಮತ್ತು ಪುರಾಣಗಳ ಸ್ವರೂಪ ಹಾಗೂ ತಾತ್ಪರ್ಯವೇನು ? ॥ 20 ॥
(ಶ್ಲೋಕ - 21)
ಮೂಲಮ್
ಸಂಪ್ಲವಃ ಸರ್ವಭೂತಾನಾಂ ವಿಕ್ರಮಃ ಪ್ರತಿಸಂಕ್ರಮಃ ।
ಇಷ್ಟಾ ಪೂರ್ತಸ್ಯ ಕಾಮ್ಯಾನಾಂ ತ್ರಿವರ್ಗಸ್ಯ ಚ ಯೋ ವಿಃ ॥
ಅನುವಾದ
ಸಮಸ್ತ ಪ್ರಾಣಿಗಳ ಉತ್ಪತ್ತಿ, ಸ್ಥಿತಿ, ಪ್ರಳಯ ಹೇಗಾಗುತ್ತದೆ ? ಯಜ್ಞಯಾಗಾದಿ ವೈದಿಕ ಇಷ್ಟಕರ್ಮ ಗಳೂ, ಬಾವಿ ತೊಡಿಸುವುದೇ ಮುಂತಾದ ಪೂರ್ತಕರ್ಮಗಳೂ, ಕಾಮ್ಯಕರ್ಮಗಳೂ ಹಾಗೂ ಧರ್ಮ, ಅರ್ಥ, ಕಾಮ ಇವುಗಳನ್ನು ಸಾಸುವ ವಿಯೇನು ? ॥ 21 ॥
(ಶ್ಲೋಕ - 22)
ಮೂಲಮ್
ಯಶ್ಚಾನುಶಾಯಿನಾಂ ಸರ್ಗಃ ಪಾಖಂಡಸ್ಯ ಚ ಸಂಭವಃ ।
ಆತ್ಮನೋ ಬಂಧಮೋಕ್ಷೌ ಚ ವ್ಯವಸ್ಥಾನಂ ಸ್ವರೂಪತಃ ॥
ಅನುವಾದ
ಪ್ರಳಯ ಕಾಲದ ಪ್ರಕೃತಿಯಲ್ಲಿ ಲೀನವಾಗಿದ್ದ ಜೀವರ ಉತ್ಪತ್ತಿ ಹೇಗಾಗುತ್ತದೆ ? ಪಾಷಂಡದ ಉತ್ಪತ್ತಿ ಹೇಗಾಗುತ್ತದೆ ? ಆತ್ಮನ ಬಂಧ-ಮೋಕ್ಷಗಳ ಸ್ವರೂಪವೇನು ? ಅವನು ತನ್ನ ಸ್ವರೂಪದಲ್ಲಿ ಹೇಗೆ ನೆಲೆಗೊಳ್ಳುವನು ? ॥ 22 ॥
(ಶ್ಲೋಕ - 23)
ಮೂಲಮ್
ಯಥಾತ್ಮ ತಂತ್ರೋ ಭಗವಾನ್ವಿಕ್ರೀಡತ್ಯಾತ್ಮಮಾಯಯಾ ।
ವಿಸೃಜ್ಯ ವಾ ಯಥಾ ಮಾಯಾಮುದಾಸ್ತೇ ಸಾಕ್ಷಿವದ್ವಿಭುಃ ॥
ಅನುವಾದ
ಭಗವಂತನಾದರೋ ಪರಮ ಸ್ವತಂತ್ರನಾಗಿದ್ದಾನೆ. ಅವನು ತನ್ನ ಮಾಯೆಯೊಡನೆ ಹೇಗೆ ಕ್ರೀಡಿಸುತ್ತಾನೆ ಮತ್ತು ಅದನ್ನು ಬಿಟ್ಟು ಸಾಕ್ಷಿಯಂತೆ ಉದಾಸೀನ ಹೇಗಾಗುತ್ತಾನೆ ? ॥ 23 ॥
(ಶ್ಲೋಕ - 24)
ಮೂಲಮ್
ಸರ್ವಮೇತಚ್ಚ ಭಗವನ್ ಪೃಚ್ಛತೇ ಮೇನುಪೂರ್ವಶಃ ।
ತತ್ತ್ವತೋರ್ಹಸ್ಯುದಾಹರ್ತುಂ ಪ್ರಪನ್ನಾಯ ಮಹಾಮುನೇ ॥
ಅನುವಾದ
ಪೂಜ್ಯರಾದ ಮಹಾಮುನಿಗಳೇ ! ಶರಣಾಗತನಾಗಿರುವ ನಾನು ತಮ್ಮಲ್ಲಿ ಅರಿಕೆಮಾಡಿಕೊಂಡಿರುವ ಈ ಎಲ್ಲ ಪ್ರಶ್ನೆಗಳಿಗೂ ಕ್ರಮವಾಗಿ ಉತ್ತರಿಸುವ ಕೃಪೆಮಾಡಬೇಕು. ತಾತ್ತ್ವಿಕವಾಗಿ ಅವುಗಳನ್ನು ನಿರೂಪಣೆ ಮಾಡಿರಿ. ॥ 24 ॥
(ಶ್ಲೋಕ - 25)
ಮೂಲಮ್
ಅತ್ರ ಪ್ರಮಾಣಂ ಹಿ ಭವಾನ್ಪರಮೇಷ್ಠೀ ಯಥಾತ್ಮ ಭೂಃ ।
ಪರೇ ಚೇಹಾನುತಿಷ್ಠಂತಿ ಪೂರ್ವೇಷಾಂ ಪೂರ್ವಜೈಃ ಕೃತಮ್ ॥
ಅನುವಾದ
ಈ ವಿಷಯದಲ್ಲಿ ತಾವಾದರೋ ಸ್ವಯಂಭುವಾದ ಬ್ರಹ್ಮದೇವರಂತೆ ಪರಮಪ್ರಮಾಣರಾಗಿರುವಿರಿ. ಇತರರು ತಮ್ಮ ಪೂರ್ವಪರಂಪರೆಯಿಂದ ಕೇಳಿ ಬಂದಂತೆ ಅನುಷ್ಠಾನ ಮಾಡುವರು. ॥ 25 ॥
(ಶ್ಲೋಕ - 26)
ಮೂಲಮ್
ನ ಮೇಸವಃ ಪರಾಯಂತಿ ಬ್ರಹ್ಮನ್ನನಶನಾದಮೀ ।
ಪಿಬತೋಚ್ಯುತಪೀಯೂಷಮನ್ಯತ್ರ ಕುಪಿತಾದ್ವಜಾತ್ ॥
ಅನುವಾದ
ಪರಮ ಪೂಜ್ಯರೇ ! ನನ್ನ ಹಸಿವು-ಬಾಯಾರಿಕೆಗಳ ಬಗ್ಗೆ ಚಿಂತಿಸದಿರಿ. ಕ್ರುದ್ಧನಾದ ಬ್ರಾಹ್ಮಣನ ಶಾಪವಲ್ಲದೆ ನನ್ನ ಪ್ರಾಣಗಳು ಹೋಗಲಾರವು. ಏಕೆಂದರೆ, ನಾನು ತಮ್ಮ ಮುಖಾರವಿಂದದಿಂದ ಸೂಸುತ್ತಿರುವ ಭಗವಂತನ ಅಮೃತಮಯ ಲೀಲಾಕಥೆಗಳನ್ನು ಪಾನ ಮಾಡುತ್ತಿದ್ದೇನೆ. ॥ 26 ॥
(ಶ್ಲೋಕ - 27)
ಮೂಲಮ್
ಸೂತ ಉವಾಚ
ಸ ಉಪಾಮಂತ್ರಿತೋ ರಾಜ್ಞಾ ಕಥಾಯಾಮಿತಿ ಸತ್ಪತೇಃ ।
ಬ್ರಹ್ಮರಾತೋ ಭೃಶಂ ಪ್ರೀತೋ ವಿಷ್ಣುರಾತೇನ ಸಂಸದಿ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ ಶೌನಕಾದಿ ಋಷಿಗಳೇ! ವಿಷ್ಣುರಾತ ಪರೀಕ್ಷಿದ್ರಾಜನು ಸಂತ-ಸತ್ಪುರುಷರ ಸಭೆಯಲ್ಲಿ ಭಗವಂತನ ಲೀಲಾಕಥೆಯನ್ನು ಕೇಳಲು ಹೀಗೆ ಪ್ರಾರ್ಥಿಸಿದಾಗ, ಬ್ರಹ್ಮರಾತ ಶ್ರೀಶುಕಮಹಾಮುನಿಗಳಿಗೆ ಬಹಳ ಸಂತೋಷವಾಯಿತು. ॥ 27 ॥
(ಶ್ಲೋಕ - 28)
ಮೂಲಮ್
ಪ್ರಾಹ ಭಾಗವತಂ ನಾಮ ಪುರಾಣಂ ಬ್ರಹ್ಮಸಮ್ಮಿತಮ್ ।
ಬ್ರಹ್ಮಣೇ ಭಗವತ್ಪ್ರೋಕ್ತಂ ಬ್ರಹ್ಮಕಲ್ಪ ಉಪಾಗತೇ ॥
ಅನುವಾದ
ಅವರು ಅವನಿಗೆ ಬ್ರಹ್ಮಕಲ್ಪದ ಪ್ರಾರಂಭದಲ್ಲಿ ಸ್ವಯಂ ಭಗವಂತನೇ ಬ್ರಹ್ಮದೇವರಿಗೆ ಕರುಣಿಸಿದ್ದ ವೇದತುಲ್ಯವಾದ ಶ್ರೀಮದ್ಭಾಗವತಮಹಾಪುರಾಣವನ್ನು ಹೇಳಿದರು. ॥ 28 ॥
(ಶ್ಲೋಕ - 29)
ಮೂಲಮ್
ಯದ್ಯತ್ಪರೀಕ್ಷಿದೃಷಭಃ ಪಾಂಡೂನಾಮನುಪೃಚ್ಛತಿ ।
ಆನುಪೂರ್ವ್ಯೇಣ ತತ್ಸರ್ವಮಾಖ್ಯಾತುಮುಪಚಕ್ರಮೇ ॥
ಅನುವಾದ
ಪಾಂಡವಕುಲತಿಲಕನಾದ ಪರೀಕ್ಷಿತನು ಯಾವ-ಯಾವ ಪ್ರಶ್ನೆಗಳನ್ನು ತಮ್ಮ ಮುಂದೆ ಇಟ್ಟಿದ್ದನೋ ಅವೆಲ್ಲವುಗಳಿಗೆ ಶ್ರೀಶುಕ ಮುನಿಗಳು ಕ್ರಮವಾಗಿ ಉತ್ತರಿಸತೊಡಗಿದರು. ॥ 29 ॥
ಅನುವಾದ (ಸಮಾಪ್ತಿಃ)
ಎಂಟನೆಯ ಅಧ್ಯಾಯವು ಮುಗಿಯಿತು. ॥8॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಿತೀಯಸ್ಕಂಧೇ ಪ್ರಶ್ನ ವಿರ್ನಾಮಾಷ್ಟಮೋಽಧ್ಯಾಯಃ॥8॥