೦೬

[ಆರನೆಯ ಅಧ್ಯಾಯ]

ಭಾಗಸೂಚನಾ

ವಿರಾಟ್ಸ್ವರೂಪದ ವಿಭೂತಿಗಳ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ವಾಚಾಂ ವಹ್ನೇರ್ಮುಖಂ ಕ್ಷೇತ್ರಂ ಛಂದಸಾಂ ಸಪ್ತ ಧಾತವಃ ।
ಹವ್ಯಕವ್ಯಾಮೃತಾನ್ನಾನಾಂ ಜಿಹ್ವಾ ಸರ್ವರಸಸ್ಯ ಚ ॥

ಅನುವಾದ

ಬ್ರಹ್ಮದೇವರು ಹೇಳುತ್ತಾರೆ ದೇವರ್ಷಿನಾರದನೇ ! ಆ ವಿರಾಟ್ಪುರುಷನ ಮುಖದಿಂದ ವಾಣಿಯೂ, ವಾಣಿಯ ಅಷ್ಠಾತೃ ದೇವತೆ ಅಗ್ನಿಯೂ ಉತ್ಪತ್ತಿಯಾದುವು. ಗಾಯತ್ರೀ, ಉಷ್ಣಿಕ್, ಅನುಷ್ಟುಪ್, ಬೃಹತೀ, ಪಂಕ್ತಿ, ತ್ರಿಷ್ಟುಪ್, ಜಗತೀ ಎಂಬ ಏಳು ಛಂದಸ್ಸುಗಳು ಆತನ ಏಳು ಧಾತುಗಳಿಂದ ಉದ್ಭವಿಸಿದವು. ಮನುಷ್ಯರು, ಪಿತೃದೇವತೆಗಳು ಮತ್ತು ದೇವತೆಗಳು ಇವರುಗಳಿಗೆ ಭೋಜ್ಯವಾಗಿರುವ ಅಮೃತಮಯ ಅನ್ನವೂ ಎಲ್ಲ ಪ್ರಕಾರದ ಸರ ಗಳೂ, ರಸನೇಂದ್ರಿಯ ಹಾಗೂ ಅದರ ಅಷ್ಠಾತೃ ದೇವತೆ ವರುಣನು ಆತನ ನಾಲಿಗೆಯಿಂದ ಉತ್ಪನ್ನನಾದನು. ॥ 1 ॥

(ಶ್ಲೋಕ - 2)

ಮೂಲಮ್

ಸರ್ವಾಸೂನಾಂ ಚ ವಾಯೋಶ್ಚ ತನ್ನಾಸೇ ಪರಮಾಯನೇ ।
ಅಶ್ವಿನೋರೋಷೀನಾಂ ಚ ಘ್ರಾಣೋ ಮೋದಪ್ರಮೋದಯೋಃ ॥

ಅನುವಾದ

ಅವನ ಮೂಗಿನ ಹೊಳ್ಳೆಗಳಿಂದ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಈ ಐದು ಪ್ರಾಣಗಳೂ, ಅವುಗಳ ದೇವತೆಯಾದ ಪ್ರಾಣ ದೇವರೂ (ವಾಯು) ಮತ್ತು ಘ್ರಾಣೇಂದ್ರಿಯದಿಂದ ಅಶ್ವಿನೀ ಕುಮಾರರೂ, ಸಮಸ್ತ ಔಷಗಳೂ ಹಾಗೂ ಸಾಮಾನ್ಯ ಹಾಗೂ ವಿಶೇಷ ಗಂಧ ಗಳೂ ಉತ್ಪನ್ನವಾದುವು. ॥ 2 ॥

(ಶ್ಲೋಕ - 3)

ಮೂಲಮ್

ರೂಪಾಣಾಂ ತೇಜಸಾಂ ಚಕ್ಷುರ್ದಿವಃ ಸೂರ್ಯಸ್ಯ ಚಾಕ್ಷಿಣೇ ।
ಕರ್ಣೌ ದಿಶಾಂ ಚ ತೀರ್ಥಾನಾಂ ಶ್ರೋತ್ರಮಾಕಾಶಶಬ್ದಯೋಃ ।
ತದ್ಗಾತ್ರಂ ವಸ್ತು ಸಾರಾಣಾಂ ಸೌಭಗಸ್ಯ ಚ ಭಾಜನಮ್ ॥

ಅನುವಾದ

ಅವನ ನೇತ್ರೇಂದ್ರಿಯವು ರೂಪ ಮತ್ತು ತೇಜಸ್ಸುಗಳಿಗೂ ಹಾಗೂ ನೇತ್ರಗೊಳಕವು ಸ್ವರ್ಗಕ್ಕೂ, ಸೂರ್ಯನಿಗೂ ಜನ್ಮಸ್ಥಾನವಾಗಿದೆ. ಸಮಸ್ತ ದಿಕ್ಕುಗಳು ಮತ್ತು ಪವಿತ್ರಗೊಳಿಸುವ ತೀರ್ಥಗಳೂ ಕಿವಿಗಳಿಂದಲೂ ಹಾಗೂ ಆಕಾಶ- ಶಬ್ದಗಳು ಆತನ ಶ್ರೋತ್ರೇಂದ್ರಿಯದಿಂದಲೂ ಹೊರಹೊಮ್ಮಿದವು. ಆತನ ಶರೀರವು ಪ್ರಪಂಚದ ಎಲ್ಲ ವಸ್ತುಗಳ ಸಾರ, ಸೌಂದರ್ಯದ ಕೋಶವಾಗಿದೆ. ॥ 3 ॥

(ಶ್ಲೋಕ - 4)

ಮೂಲಮ್

ತ್ವಗಸ್ಯ ಸ್ಪರ್ಶವಾಯೋಶ್ಚ ಸರ್ವಮೇಧಸ್ಯ ಚೈವ ಹಿ ।
ರೋಮಾಣ್ಯುದ್ಭಿಜ್ಜ ಜಾತೀನಾಂ ಯೈರ್ವಾ ಯಜ್ಞಸ್ತು ಸಂಭೃತಃ ॥

ಅನುವಾದ

ಸಮಸ್ತ ಯಜ್ಞಗಳೂ ಸ್ಪರ್ಶ ಮತ್ತು ವಾಯುವೂ ಆತನ ತ್ವಗಿಂದ್ರಿಯದಿಂದ ಉದ್ಭವಿಸಿದವು. ಅವನ ರೋಮಗಳು ಎಲ್ಲ ಉದ್ಭಿಜ್ಜ-ವೃಕ್ಷಗಳಿಗೆ ಅಥವಾ ಯಜ್ಞೋಪ ಯೋಗೀ ಅರಳಿ, ಅತ್ತಿ, ಕಗ್ಗಲಿ, ಮುತ್ತುಗ ಮುಂತಾದ ವನಸ್ಪತಿಗಳಿಗೆ ಉತ್ಪತ್ತಿಸ್ಥಾನವು. ॥ 4 ॥

(ಶ್ಲೋಕ - 5)

ಮೂಲಮ್

ಕೇಶಶ್ಮಶ್ರುನಖಾನ್ಯಸ್ಯ ಶಿಲಾಲೋಹಾಭ್ರವಿದ್ಯುತಾಮ್ ।
ಬಾಹವೋ ಲೋಕಪಾಲಾನಾಂ ಪ್ರಾಯಶಃ ಕ್ಷೇಮಕರ್ಮಣಾಮ್ ॥

ಅನುವಾದ

ಅವನ ರೋಮ - ಗಡ್ಡ - ಮೀಸೆ ಮತ್ತು ಉಗುರುಗಳಿಂದ ಮೇಘ, ಮಿಂಚು, ಶಿಲೆ, ಕಬ್ಬಿಣ ಮುಂತಾದ ಧಾತುಗಳೂ ಹಾಗೂ ಅವನ ಭುಜಗಳಿಂದ ಜಗತ್ತನ್ನು ರಕ್ಷಿಸುವ ಲೋಕಪಾಲರು ಪ್ರಕಟರಾದರು. ॥ 5 ॥

(ಶ್ಲೋಕ - 6)

ಮೂಲಮ್

ವಿಕ್ರಮೋ ಭೂರ್ಭುವಃ ಸ್ವಶ್ಚ ಕ್ಷೇಮಸ್ಯ ಶರಣಸ್ಯ ಚ ।
ಸರ್ವಕಾಮವರಸ್ಯಾಪಿ ಹರೇಶ್ಚರಣ ಆಸ್ಪದಮ್ ॥

ಅನುವಾದ

ಅವನು ನಡೆದಾಡು ವುದು ಭೂಃ, ಭುವಃ ಸುವಃ ಮೂರೂ ಲೋಕಗಳಿಗೆ ಆಶ್ರಯವು. ಶರಣಾಗತರ ರಕ್ಷಣೆ, ಭಯನಿವಾರಣೆ ಮತ್ತು ಸಮಸ್ತ ಇಷ್ಟಾರ್ಥ ಗಳ ಈಡೇರಿಕೆಗಳಿಗೂ ಆ ಶ್ರೀಹರಿಯ ಚರಣಕಮಲಗಳೇ ಆಶ್ರಯವು. ॥ 6 ॥

(ಶ್ಲೋಕ - 7)

ಮೂಲಮ್

ಅಪಾಂ ವೀರ್ಯಸ್ಯ ಸರ್ಗಸ್ಯ ಪರ್ಜನ್ಯಸ್ಯ ಪ್ರಜಾಪತೇಃ ।
ಪುಂಸಃ ಶಿಶ್ನ ಉಪಸ್ಥಸ್ತು ಪ್ರಜಾತ್ಯಾನಂದನಿರ್ವೃತೇಃ ॥

ಅನುವಾದ

ಆ ವಿರಾಟ್ ಪುರುಷನ ಲಿಂಗವು ಜಲ, ವೀರ್ಯ, ಸೃಷ್ಟಿ, ಮೇಘ ಮತ್ತು ಪ್ರಜಾಪತಿದೇವತೆಗೆ ಆಧಾರವು. ಅವನ ಜನನೇಂದ್ರಿಯವು ಸಂತಾನೋತ್ಪತ್ತಿಗೆ ಸುಖದ ಸ್ಥಾನವು ॥ 7 ॥

(ಶ್ಲೋಕ - 8)

ಮೂಲಮ್

ಪಾಯುರ್ಯಮಸ್ಯ ಮಿತ್ರಸ್ಯ ಪರಿಮೋಕ್ಷಸ್ಯ ನಾರದ ।
ಹಿಂಸಾಯಾ ನಿರ್ಋತೇರ್ಮೃತ್ಯೋರ್ನಿರಯಸ್ಯ ಗುದಃ ಸ್ಮೃತಃ ॥

ಅನುವಾದ

ನಾರದಾ ! ಆ ವಿರಾಟ್ಪುರುಷನ ಪಾಯು-ಇಂದ್ರಿಯವು ಯಮ ನಿಗೂ, ಮಿತ್ರನಿಗೂ ಮಲವಿಸರ್ಜನೆಗೂ ಆಶ್ರಯವಾಗಿದೆ ಮತ್ತು ಗುದದ್ವಾರವು ಹಿಂಸೆಗೂ, ಮೃತ್ಯುದೇವತೆಗೂ, ನರಕಕ್ಕೂ ಉತ್ಪತ್ತಿ ಸ್ಥಾನವು. ॥ 8 ॥

(ಶ್ಲೋಕ - 9)

ಮೂಲಮ್

ಪರಾಭೂತೇರಧರ್ಮಸ್ಯ ತಮಸಶ್ಚಾಪಿ ಪಶ್ಚಿಮಃ ।
ನಾಡ್ಯೋ ನದನದೀನಾಂ ತು ಗೋತ್ರಾಣಾಮಸ್ಥಿಸಂಹತಿಃ ॥

ಅನುವಾದ

ಆತನ ಬೆನ್ನಿನಿಂದ ಪರಾಜಯ, ಅಧರ್ಮ, ಅಜ್ಞಾನಗಳೂ, ನಾಡಿಗಳಿಂದ ನದೀ-ನದಗಳೂ, ಮೂಳೆಗಳಿಂದ ಪರ್ವತಗಳೂ ನಿರ್ಮಾಣವಾದುವು. ॥ 9 ॥

(ಶ್ಲೋಕ - 10)

ಮೂಲಮ್

ಅವ್ಯಕ್ತರಸಸಿಂಧೂನಾಂ ಭೂತಾನಾಂ ನಿಧನಸ್ಯ ಚ ।
ಉದರಂ ವಿದಿತಂ ಪುಂಸೋ ಹೃದಯಂ ಮನಸಃ ಪದಮ್ ॥

ಅನುವಾದ

ಅವ್ಯಕ್ತ ಅರ್ಥಾತ್ ಮೂಲಪ್ರಕೃತಿ, ರಸವೆಂಬ ಧಾತು, ಸಮುದ್ರಗಳೂ, ಸಮಸ್ತ ಪ್ರಾಣಿ ಗಳೂ ಮತ್ತು ಅವುಗಳ ಮೃತ್ಯುವೂ ಅವನ ಉದರದಲ್ಲಿ ಅಡಗಿದೆ. ಅವನ ಹೃದಯವೇ ಮನಸ್ಸಿನ ಜನ್ಮಭೂಮಿಯು. ॥ 10 ॥

(ಶ್ಲೋಕ - 11)

ಮೂಲಮ್

ಧರ್ಮಸ್ಯ ಮಮ ತುಭ್ಯಂ ಚ ಕುಮಾರಾಣಾಂ ಭವಸ್ಯ ಚ ।
ವಿಜ್ಞಾನಸ್ಯ ಚ ಸತ್ತ್ವಸ್ಯ ಪರಸ್ಯಾತ್ಮಾ ಪರಾಯಣಮ್ ॥

ಅನುವಾದ

ನಾರದಾ ! ಧರ್ಮಕ್ಕೂ, ನನಗೂ, ನಿನಗೂ, ಸನಕಾದಿಗಳಿಗೂ, ಶಂಕರ ನಿಗೂ, ವಿಜ್ಞಾನಕ್ಕೂ, ಅಂತಃಕರಣಕ್ಕೂ, ಹೀಗೆ ಎಲ್ಲಕ್ಕೂ ಉದ್ಗಮ ಸ್ಥಾನ ಪರಮಾತ್ಮನೇ ಆಗಿದ್ದಾನೆ. ಅವನೇ ಎಲ್ಲರ ಆತ್ಮನಾಗಿರು ವನು. ॥ 11 ॥

(ಶ್ಲೋಕ - 12)

ಮೂಲಮ್

ಅಹಂ ಭವಾನ್ಭವಶ್ಚೈವ ತ ಇಮೇ ಮುನಯೋಗ್ರಜಾಃ ।
ಸುರಾಸುರನರಾ ನಾಗಾಃ ಖಗಾ ಮೃಗಸರೀಸೃಪಾಃ ॥

(ಶ್ಲೋಕ - 13)

ಮೂಲಮ್

ಗಂಧರ್ವಾಪ್ಸರಸೋ ಯಕ್ಷಾ ರಕ್ಷೋಭೂತಗಣೋರಗಾಃ ।
ಪಶವಃ ಪಿತರಃ ಸಿದ್ಧಾ ವಿದ್ಯಾಧ್ರಾಶ್ಚಾರಣಾ ದ್ರುಮಾಃ ॥

(ಶ್ಲೋಕ - 14)

ಮೂಲಮ್

ಅನ್ಯೇ ಚ ವಿವಿಧಾ ಜೀವಾ ಜಲಸ್ಥಲನಭೌಕಸಃ ।
ಗ್ರಹರ್ಕ್ಷಕೇತವಸ್ತಾರಾಸ್ತಡಿತಃ ಸ್ತನಯಿತ್ನವಃ ॥

(ಶ್ಲೋಕ - 15)

ಮೂಲಮ್

ಸರ್ವಂ ಪುರುಷ ಏವೇದಂ ಭೂತಂ ಭವ್ಯಂ ಭವಚ್ಚ ಯತ್ ।
ತೇನೇದಮಾವೃತಂ ವಿಶ್ವಂ ವಿತಸ್ತಿಮತಿಷ್ಠತಿ ॥

ಅನುವಾದ

ಹೆಚ್ಚೇನು ಹೇಳಲಿ ! ನಾನೂ, ನೀನೂ, ನಿನ್ನ ಅಣ್ಣಂದಿರಾದ ಸನಕಾದಿಗಳೂ, ದೇವಾಸುರ-ಮನುಷ್ಯರೂ ನಾಗ-ಪಕ್ಷಿ-ಮೃಗಗಳೂ, ತೆವಳುವ ಪ್ರಾಣಿಗಳೂ, ಗಂಧರ್ವರೂ, ಅಪ್ಸರೆಯರೂ, ಯಕ್ಷರೂ, ರಾಕ್ಷಸರೂ, ಭೂತ-ಪ್ರೇತಗಳೂ, ಸರ್ಪಗಳೂ, ಪಶುಗಳೂ, ಪಿತೃದೇವತೆಗಳೂ, ಸಿದ್ಧರೂ, ವಿದ್ಯಾಧರರೂ, ಚಾರಣರೂ, ವೃಕ್ಷಗಳೂ, ಆಕಾಶ-ನೀರು-ನೆಲಗಳಲ್ಲಿ ವಾಸಿಸುವ ಇತರ ನಾನಾಜೀವಿಗಳೂ, ಗ್ರಹ-ನಕ್ಷತ್ರಗಳೂ, ಬಾಲವುಳ್ಳ ತಾರೆ ಗಳೂ, ಚುಕ್ಕೆಗಳೂ, ತಾರೆಗಳೂ, ಮಿಂಚು-ಮೋಡಗಳೂ ಇವೆಲ್ಲವೂ ಆ ವಿರಾಟ್ಪುರುಷನ ಅವಯವಗಳು. ಭೂತ-ಭವಿಷ್ಯ-ವರ್ತ ಮಾನಗಳಿಗೆ ಸೇರಿದ ಎಲ್ಲವೂ ಆತನೇ. ಇವೆಲ್ಲವನ್ನು ಎಲ್ಲೆಡೆ ಗಳಿಂದಲೂ ಆವರಿಸಿ ತುಂಬಿರುವನಲ್ಲದೆ ಹತ್ತು ಅಂಗುಲಗಳಷ್ಟು * ಮೇಲೆ ಇದನ್ನು ಮೀರಿಯೂ ಇದ್ದಾನೆ. ॥ 12-15 ॥

ಟಿಪ್ಪನೀ
  • ದಶಾಂಗುಲ ಇದೊಂದು ಉಪಲಕ್ಷಣವಾಗಿದೆ. ಹೆಬ್ಬೆರಳು ಮತ್ತು ತೋರುಬೆರಳು ಚಾಚಿದಾಗ ಅದರ ಮಧ್ಯಭಾಗವನ್ನು ಪ್ರಾವೇಶಮಾತ್ರವೆಂಬ ಸಂಜ್ಞೆ ಇದೆ. ಇದೇ ಸಾಮಾನ್ಯ 10 ಅಂಗುಲವೆಂದು ತಿಳಿಯಲಾಗಿದೆ. ಇದಲ್ಲದೇ ದಶಾಂಗುಲ ನ್ಯಾಯವೆಂದೂ ಹೇಳಲಾಗಿದೆ ಬ್ರಹ್ಮಾಂಡದ ಏಳು ಆವರಣಗಳನ್ನು ವರ್ಣಿಸುವಾಗ ವೇದಾಂತ ಪ್ರಕ್ರಿಯೆಯಲ್ಲಿ ಹೀಗೆ ತಿಳಿಯಲಾಗಿದೆ ಪೃಥ್ವಿಗಿಂತ ಹತ್ತುಪಟ್ಟು ಜಲವಿದೆ. ಜಲದ ಹತ್ತುಪಟ್ಟು ಅಗ್ನಿಯೂ, ಅಗ್ನಿಗಿಂತ ಹತ್ತುಪಟ್ಟು ವಾಯುವೂ, ವಾಯುವಿನಿಂದ ಹತ್ತುಪಟ್ಟು ಆಕಾಶವೂ, ಆಕಾಶಕ್ಕಿಂತ ಹತ್ತುಪಟ್ಟು ಅಹಂಕಾರವೂ, ಅಹಂಕಾರಕ್ಕಿಂತ ಹತ್ತುಪಟ್ಟು ಮಹತ್ತತ್ತ್ವವೂ, ಮಹತ್ತತ್ತ್ವಕ್ಕಿಂತ ಹತ್ತು ಪಟ್ಟು ಮೂಲಪ್ರಕೃತಿ ದೊಡ್ಡದಾಗಿದೆ. ಆ ಪ್ರಕೃತಿಯು ಭಗವಂತನ ಕೇವಲ ಒಂದು ಪಾದದಲ್ಲಿದೆ. ಈ ಪ್ರಕಾರ ಭಗವಂತನ ಮಹತ್ವ ಪ್ರಕಟಿಸಲಾಗಿದೆ. ಇದು ದಶಾಂಗುಲ-ನ್ಯಾಯವೆಂದು ಹೇಳಲಾಗಿದೆ.
    ಹತ್ತು ಅಂಗುಲಗಳಿಗೂ ಮೀರಿದ್ದಾನೆ ಎಂದರೆ ಈ ವಿಶ್ವಕ್ಕಿಂತಲೂ ತುಂಬಾ ಮೇಲಿರುವವನು. ಎಲ್ಲವನ್ನೂ ತುಂಬಿ ಮೀರಿರುವನು ಎಂದು ಆಕ್ಯದಲ್ಲಿ ಮಾತ್ರವೇ ತಾತ್ಪರ್ಯ. ಅಪರಿಚ್ಛಿನ್ನನಾದ ಅವನು ಕೇವಲ ಹತ್ತು ಅಂಗುಲಗಳಷ್ಟು ದೊಡ್ಡವನು ಎಂದರೆ ಪರಿಮಾಣದ ನಿರ್ದೇಶವಲ್ಲ (ಶ್ರೀಧರೀಯ).

(ಶ್ಲೋಕ - 16)

ಮೂಲಮ್

ಸ್ವಷ್ಣ್ಯಂ ಪ್ರತಪನ್ಪ್ರಾಣೋ ಬಹಿಶ್ಚ ಪ್ರತಪತ್ಯಸೌ ।
ಏವಂ ವಿರಾಜಂ ಪ್ರತಪಂಸ್ತಪತ್ಯಂತರ್ಬಹಿಃ ಪುಮಾನ್ ॥

ಅನುವಾದ

ಪ್ರಾಣ ವೆಂಬ ಸೂರ್ಯನು ತನ್ನ ಮಂಡಲವನ್ನು ಪ್ರಕಾಶಿಸುತ್ತಾ , ಒಳಗೂ, ಹೊರಗೂ ವಿಶ್ವದ ಎಲ್ಲೆಡೆ ಪ್ರಕಾಶವನ್ನು ಹರಡುತ್ತಾನೆ. ಹಾಗೆಯೇ ಪುರಾಣಪುರುಷ ಪರಮಾತ್ಮನೂ ಕೂಡ ಸಮಗ್ರ ವಿರಾಟ್ ಪುರುಷನನ್ನು (ಬ್ರಹ್ಮಾಂಡವನ್ನು) ಪ್ರಕಾಶಿಸುತ್ತಾ , ಅದರ ಒಳಗೆ- ಹೊರಗೆ ಎಲ್ಲೆಡೆಗಳಲ್ಲಿಯೂ ಪ್ರಕಾಶಿತನಾಗಿದ್ದಾನೆ. ॥ 16 ॥

(ಶ್ಲೋಕ - 17)

ಮೂಲಮ್

ಸೋಮೃತಸ್ಯಾಭಯಸ್ಯೇಶೋ ಮರ್ತ್ಯಮನ್ನಂ ಯದತ್ಯಗಾತ್ ।
ಮಹಿಮೈಷ ತತೋ ಬ್ರಹ್ಮನ್ಪುರುಷಸ್ಯ ದುರತ್ಯಯಃ ॥

ಅನುವಾದ

ಮುನಿ ವರ್ಯಾ ! ಮನುಷ್ಯನ ಕ್ರಿಯೆ ಮತ್ತು ಸಂಕಲ್ಪದಿಂದ ಏನೆಲ್ಲ ಉಂಟಾಗುತ್ತದೋ, ಅದಕ್ಕಿಂತಲೂ ಆ ಪರಮಾತ್ಮನು ಮೀರಿಇದ್ದು, ಅಮೃತ ಹಾಗೂ ಅಭಯಪದ (ಮೋಕ್ಷಪದ)ದ ಸ್ವಾಮಿಯಾಗಿರು ವನು. ಅವನ ಮಹಿಮೆಯ ಪಾರವನ್ನು ಯಾರೂ ಹೊಂದ ಲಾರರು. ॥ 17 ॥

(ಶ್ಲೋಕ - 18)

ಮೂಲಮ್

ಪಾದೇಷು ಸರ್ವಭೂತಾನಿ ಪುಂಸಃ ಸ್ಥಿತಿಪದೋ ವಿದುಃ ।
ಅಮೃತಂ ಕ್ಷೇಮಮಭಯಂ ತ್ರಿಮೂರ್ಧ್ನೋಧಾಯಿ ಮೂರ್ಧಸು ॥

ಅನುವಾದ

ಸಮಸ್ತ ಲೋಕಗಳು ಭಗವಂತನ ಒಂದು ಪಾದ (ಅಂಶ) ಮಾತ್ರವಾಗಿದೆ ಹಾಗೂ ಅವನ ಅಂಶಮಾತ್ರ ಸ್ಥಿತಿ ಪದದಲ್ಲಿ ಸಮಸ್ತ ಪ್ರಾಣಿಗಳು ವಾಸಿಸುತ್ತವೆ. ವಿರಾಟಪುರುಷನ ರ್ಮ್ನೂಯಲ್ಲಿ ಮೂರು ಲೋಕಗಳಿವೆ. ಅವುಗಳಲ್ಲಿನ ಜನೋ ಲೋಕದಲ್ಲಿ ಅಮೃತ ತಪೋಲೋಕದಲ್ಲಿ ಕ್ಷೇಮ ಮತ್ತು ಸತ್ಯ ಲೋಕದಲ್ಲಿ ಅಭಯಪದವಿದೆ. ಈ ಮೂರೂ ಲೋಕಗಳು ವಿರಾಟ್ ಪುರುಷನ ರ್ಮ್ನೂಯಲ್ಲಿ ಇರುವುದರಿಂದ ಅವನನ್ನು ತ್ರಿಮೂರ್ಧಾ ಎಂದು ಹೇಳಲಾಗಿದೆ. ॥ 18 ॥

(ಶ್ಲೋಕ - 19)

ಮೂಲಮ್

ಪಾದಾಸಯೋ ಬಹಿಶ್ಚಾಸನ್ನ ಪ್ರಜಾನಾಂ ಯ ಆಶ್ರಮಾಃ ।
ಅಂತಸಿಲೋಕ್ಯಾಸ್ತ್ವಪರೋ ಗೃಹಮೇಧೋಬೃಹದ್ವ್ರತಃ ॥

ಅನುವಾದ

ಜನೋಲೋಕ, ತಪೋಲೋಕ, ಸತ್ಯಲೋಕ ಇವುಗಳಲ್ಲಿ ಅವಿ ವಾಹಿತರೂ, ಬ್ರಹ್ಮಚಾರಿಗಳೂ, ವಾನಪ್ರಸ್ಥರೂ, ಸಂನ್ಯಾಸಿಗಳೂ ವಾಸಿಸುತ್ತಾರೆ. ಇದು ಅವನ ಹೊರಗಿನ ಪಾದವಾಗಿದೆ. ದೀರ್ಘ ಕಾಲೀನ ಬ್ರಹ್ಮಚರ್ಯರಹಿತರಾದ ಗೃಹಸ್ಥರು ಭೂಲೋಕ, ಭುವ ರ್ಲೋಕ, ಸ್ವರ್ಲೋಕಗಳೊಳಗೇ ವಾಸಿಸುತ್ತಾರೆ. ಇದು ಅವನ ಒಳಗಿನ ಪಾದವಾಗಿದೆ. ಭಗವಂತನ ಹತ್ತು ಅಂಗುಲದಲ್ಲೇ ಇದೆಲ್ಲ ಪ್ರಪಂಚವಿದೆ. ಆದರೆ ಭಗವಂತನು ಅವೆಲ್ಲಕ್ಕಿಂತ ಅತೀತನಾಗಿ ದ್ದಾನೆ. ॥ 19 ॥

(ಶ್ಲೋಕ - 20)

ಮೂಲಮ್

ಸೃತೀ ವಿಚಕ್ರಮೇ ವಿಷ್ವಂಙ್ ಸಾಶನಾನಶನೇ ಉಭೇ ।
ಯದವಿದ್ಯಾ ಚ ವಿದ್ಯಾ ಚ ಪುರುಷಸ್ತೂಭಯಾಶ್ರಯಃ ॥

ಅನುವಾದ

ಭಗವಂತನು ಮನುಷ್ಯರಿಗಾಗಿ ಎರಡು ಮಾರ್ಗ ವನ್ನು ಹೇಳಿರುವನು. ಅವುಗಳಲ್ಲಿ ಅವನು ಯಾವುದರಲ್ಲಿಯೂ ನಡೆಯಬಲ್ಲನು. ಒಂದು ಸ+ಅಶನ, ಅರ್ಥಾತ್ ಸಕಾಮ ಅನುಷ್ಠಾನ. ಇನ್ನೊಂದು ಅನ+ಅಶನ, ಅರ್ಥಾತ್ ನಿಷ್ಕಾಮ ಅನುಷ್ಠಾನ. ಇದರಲ್ಲಿ ಸಕಾಮ ಮಾರ್ಗವನ್ನು ಅವಿದ್ಯೆ ಮತ್ತು ನಿಷ್ಕಾಮ ಮಾರ್ಗ ವನ್ನು ವಿದ್ಯೆ ಎಂದು ಹೇಳಲಾಗಿದೆ. ನಿಷ್ಕಾಮಕರ್ಮದಲ್ಲಿ ಪರಮಾತ್ಮನ ಉಪಾಸನಾ ಪದ್ಧತಿಯಿಂದ ಕ್ರಿಯೆ ನಡೆಯುತ್ತದೆ. ಸಕಾಮದಲ್ಲಿ ಕರ್ಮಗಳು ವಿಸ್ತಾರವಾಗಿವೆ. ಅವು ಅವಿದ್ಯಾ ಮೂಲಕವಾಗಿವೆ. ಕ್ಷೇತ್ರಜ್ಞ ಜೀವಾತ್ಮನು ಎರಡರಲ್ಲಿನ ಯಾವುದೇ ಮಾರ್ಗವನ್ನು ಹಿಡಿಯಬಲ್ಲನು. ಎರಡೂ ಮಾರ್ಗಗಳ ಆಧಾರ ಈ ವಿರಾಟ್ ಪುರುಷ ಪರಮಾತ್ಮನೇ ಆಗಿದ್ದಾನೆ. ॥ 20 ॥

(ಶ್ಲೋಕ - 21)

ಮೂಲಮ್

ಯಸ್ಮಾದಂಡಂ ವಿರಾಡ್ ಜಜ್ಞೇ ಭೂತೇಂದ್ರಿಯಗುಣಾತ್ಮಕಃ ।
ತದ್ದ್ರವ್ಯಮತ್ಯಗಾದ್ವಿಶ್ವಂ ಗೋಭಿಃ ಸೂರ್ಯ ಇವಾತಪನ್ ॥

ಅನುವಾದ

ಏಕೆಂದರೆ, ಆ ವಿರಾಟ್ ಪುರುಷನಿಂದಲೇ ಭೂತಗಳು, ಇಂದ್ರಿಯಗಳು, ಗುಣಗಳುಳ್ಳ ಈ ಬ್ರಹ್ಮಾಂಡವೂ ಉತ್ಪನ್ನವಾಗಿದೆ. ಆ ಪುರಾಣಪುರುಷ ಪರಮಾತ್ಮನು ಸಮಸ್ತ ವಸ್ತುಗಳಿಂದ ಅತೀತನಾಗಿದ್ದಾನೆ. ಸೂರ್ಯನು ಬೆಳಗುತ್ತಾ ತನ್ನ ಕಿರಣಗಳಿಂದ ವಿಶ್ವವೆಲ್ಲವನ್ನು ಪ್ರಕಾಶಿಸುತ್ತಿದ್ದು, ವಿಶ್ವದಿಂದ ಬೇರೆಯೇ ಆಗಿದ್ದಾನೆ. ಹಾಗೆಯೇ ಪರಮಾತ್ಮನು ಸಮಗ್ರ ವಿಶ್ವ ವನ್ನು ನಿರ್ಮಿಸಿ, ಅದನ್ನು ಪ್ರಕಾಶಿಸುತ್ತಿರುವನು. ಆದರೆ ಅವನು ಇದರಿಂದ ಅತೀತನೇ ಆಗಿದ್ದಾನೆ. ॥ 21 ॥

(ಶ್ಲೋಕ - 22)

ಮೂಲಮ್

ಯದಾಸ್ಯ ನಾಭ್ಯಾನ್ನಲಿನಾದಹಮಾಸಂ ಮಹಾತ್ಮನಃ ।
ನಾವಿದಂ ಯಜ್ಞಸಂಭಾರಾನ್ಪುರುಷಾವಯವಾದೃತೇ ॥

ಅನುವಾದ

ಮಹಾತ್ಮನಾದ ಆ ವಿರಾಟ್ ಪುರುಷನ ನಾಭಿಕಮಲದಿಂದ ನಾನು ಜನಿಸಿದಾಗ ನನಗೆ ಯಜ್ಞಮಾಡುವುದಕ್ಕೆ ಆ ಪುರುಷನ ಅಂಗಗಳನ್ನು ಬಿಟ್ಟು ಬೇರೆ ಯಾವ ಸಾಮಗ್ರಿಯೂ ದೊರೆಯಲಿಲ್ಲ. ॥ 22 ॥

(ಶ್ಲೋಕ - 23)

ಮೂಲಮ್

ತೇಷು ಯಜ್ಞಸ್ಯ ಪಶವಃ ಸವನಸ್ಪತಯಃ ಕುಶಾಃ ।
ಇದಂ ಚ ದೇವಯಜನಂ ಕಾಲಶ್ಚೋರುಗುಣಾನ್ವಿತಃ ॥

ಅನುವಾದ

ಆಗ ನಾನು ಅವನ ಅಂಗಗಳಲ್ಲೇ ಯಜ್ಞದ ಪಶು, ಯೂಪ ಸ್ತಂಭ, ಕುಶ, ಯಜ್ಞಭೂಮಿ, ಯಜ್ಞಕ್ಕೆ ಯೋಗ್ಯವಾದ ಉತ್ತಮ ಕಾಲವನ್ನು ಕಲ್ಪಿಸಿಕೊಂಡೆನು. ॥ 23 ॥

(ಶ್ಲೋಕ - 24)

ಮೂಲಮ್

ವಸ್ತೂನ್ಯೋಷಧಯಃ ಸ್ನೇಹಾ ರಸಲೋಹಮೃದೋ ಜಲಮ್ ।
ಋಚೋ ಯಜೂಂಷಿ ಸಾಮಾನಿ ಚಾತುರ್ಹೋತ್ರಂ ಚ ಸತ್ತಮ ॥

(ಶ್ಲೋಕ - 25)

ಮೂಲಮ್

ನಾಮಧೇಯಾನಿ ಮಂತ್ರಾಶ್ಚ ದಕ್ಷಿಣಾಶ್ಚ ವ್ರತಾನಿ ಚ ।
ದೇವತಾನುಕ್ರಮಃ ಕಲ್ಪಃ ಸಂಕಲ್ಪಸ್ತಂತ್ರಮೇವ ಚ ॥

(ಶ್ಲೋಕ - 26)

ಮೂಲಮ್

ಗತಯೋ ಮತಯಃ ಶ್ರದ್ಧಾ ಪ್ರಾಯಶ್ಚಿತ್ತಂ ಸಮರ್ಪಣಮ್ ।
ಪುರುಷಾವಯವೈರೇತೇ ಸಂಭಾರಾಃ ಸಂಭೃತಾ ಮಯಾ ॥

ಅನುವಾದ

ಋಷಿಶ್ರೇಷ್ಠನೇ ! ಯಜ್ಞಕ್ಕೆ ಆವಶ್ಯಕವಾದ ಪಾತ್ರೆ ಮುಂತಾದ ವಸ್ತುಗಳು, ಗೋದಿ, ಅಕ್ಕಿ ಮುಂತಾದ ಓಷಗಳು, ತುಪ್ಪವೇ ಮುಂತಾದ ಜಿಡ್ಡು ಪದಾರ್ಥಗಳು, ಆರು ರಸಗಳು, ಕಬ್ಬಿಣ, ಮಣ್ಣು, ನೀರು, ಋಕ್ಕು, ಯಜುಸ್ಸು, ಸಾಮ ಗಳು, ಚಾತುರ್ಹೋತ್ರ, ಯಜ್ಞಗಳ ನಾಮಧೇಯಗಳು, ಮಂತ್ರ ಗಳು, ದಕ್ಷಿಣೆ, ವ್ರತ, ದೇವತೆಗಳ ಹೆಸರುಗಳು, ಕಲ್ಪಗ್ರಂಥಗಳು, ಸಂಕಲ್ಪ, ತಂತ್ರ, ಗತಿ, ಮತಿ, ಶ್ರದ್ಧೆ, ಪ್ರಾಯಶ್ಚಿತ್ತ ಮತ್ತು ಸಮ ರ್ಪಣೆ ಗಳೆಂಬ ಈ ಎಲ್ಲ ಯಜ್ಞಸಾಮಗ್ರಿಗಳನ್ನು ಆ ಪುರುಷನ ಅಂಗಗಳಿಂದಲೇ ಸಂಗ್ರಹಿಸಿದೆನು. ॥ 24-26 ॥

(ಶ್ಲೋಕ - 27)

ಮೂಲಮ್

ಇತಿ ಸಂಭೃತಸಂಭಾರಃ ಪುರುಷಾವಯವೈರಹಮ್ ।
ತಮೇವ ಪುರುಷಂ ಯಜ್ಞಂ ತೇನೈವಾಯಜಮೀಶ್ವರಮ್ ॥

ಅನುವಾದ

ಹೀಗೆ ಆ ವಿರಾಟ್ಪುರುಷನ ಅಂಗಗಳಿಂದಲೇ ಸಂಗ್ರಹಿಸಿದ ಎಲ್ಲ ಸಾಮಗ್ರಿ ಗಳಿಂದ ನಾನು ಆ ಯಜ್ಞರೂಪಿಯಾದ ಪರಮಾತ್ಮನನ್ನು ಯಜ್ಞದ ಮೂಲಕ ಪೂಜಿಸಿದೆನು. ॥ 27 ॥

(ಶ್ಲೋಕ - 28)

ಮೂಲಮ್

ತತಸ್ತೇ ಭ್ರಾತರ ಇಮೇ ಪ್ರಜಾನಾಂ ಪತಯೋ ನವ ।
ಅಯಜನ್ ವ್ಯಕ್ತಮವ್ಯಕ್ತಂ ಪುರುಷಂ ಸುಸಮಾಹಿತಾಃ ॥

ಅನುವಾದ

ಅನಂತರ ನಿನ್ನ ಸೋದರರಾದ ಒಂಭತ್ತು ಮಂದಿ ಪ್ರಜಾಪತಿಗಳೂ ಏಕಾಗ್ರಚಿತ್ತದಿಂದ ವ್ಯಕ್ತ ಮತ್ತು ಅವ್ಯಕ್ತ ಸ್ವರೂಪನಾದ, ವಿರಾಟ್ ಮತ್ತು ಅಂತರ್ಯಾಮಿರೂಪ ನಾದ ಆ ಪುರುಷನನ್ನು ಆರಾಸಿದರು. ॥ 28 ॥

(ಶ್ಲೋಕ - 29)

ಮೂಲಮ್

ತತಶ್ಚ ಮನವಃ ಕಾಲೇ ಈಜಿರೇ ಋಷಯೋಪರೇ ।
ಪಿತರೋ ವಿಬುಧಾ ದೈತ್ಯಾ ಮನುಷ್ಯಾಃ ಕ್ರತುಭಿರ್ವಿಭುಮ್ ॥

ಅನುವಾದ

ಇದಾದ ಬಳಿಕ ಆಗಾಗ ಮನುಗಳು, ಋಷಿಗಳು, ಪಿತೃಗಳು, ದೇವತೆಗಳು, ದೈತ್ಯರು, ಮನುಷ್ಯರು ಯಜ್ಞಗಳ ಮೂಲಕ ಆ ಭಗವಂತನ ಆರಾಧನೆಯನ್ನು ಮಾಡಿದರು. ॥ 29 ॥

(ಶ್ಲೋಕ - 30)

ಮೂಲಮ್

ನಾರಾಯಣೇ ಭಗವತಿ ತದಿದಂ ವಿಶ್ವಮಾಹಿತಮ್ ।
ಗೃಹೀತಮಾಯೋರುಗುಣಃ ಸರ್ಗಾದಾವಗುಣಃ ಸ್ವತಃ ॥

ಅನುವಾದ

ನಾರದಾ ! ಈ ಇಡೀ ವಿಶ್ವವು ಆ ಭಗವಂತ ನಾದ ನಾರಾಯಣನಲ್ಲಿಯೇ ನೆಲೆಗೊಂಡಿದೆ. ಸ್ವಯಂ ಗುಣಾತೀತ ನಾಗಿದ್ದರೂ ಸೃಷ್ಟಿಯ ಪ್ರಾರಂಭದಲ್ಲಿ ತನ್ನ ಮಾಯಾಶಕ್ತಿಯಿಂದ ತ್ರಿಗುಣಗಳನ್ನು ಸೇಚ್ಛೆಯಿಂದ ಸ್ವೀಕರಿಸುವನು. ॥ 30 ॥

(ಶ್ಲೋಕ - 31)

ಮೂಲಮ್

ಸೃಜಾಮಿ ತನ್ನಿಯುಕ್ತೋಹಂ ಹರೋ ಹರತಿ ತದ್ವಶಃ ।
ವಿಶ್ವಂ ಪುರುಷರೂಪೇಣ ಪರಿಪಾತಿ ತ್ರಿಶಕ್ತಿಧೃಕ್ ॥

ಅನುವಾದ

ಅವನ ಪ್ರೇರಣೆಯಿಂದಲೇ ನಾನು ಈ ವಿಶ್ವವನ್ನು ರಚಿಸುತ್ತೇನೆ. ಅವನಿಗೆ ಈನನಾಗಿಯೇ ರುದ್ರನು ಇದನ್ನು ಸಂಹರಿಸುತ್ತಾನೆ. ಅವನು ಸ್ವತಃ ವಿಷ್ಣುರೂಪದಿಂದ ಇದನ್ನು ಪಾಲಿಸುತ್ತಾನೆ. ಏಕೆಂದರೆ, ಅವನೇ ಸತ್ತ್ವ, ರಜ, ತಮಸ್ಸು ಎಂಬ ಮೂರು ಶಕ್ತಿಗಳನ್ನು ಸ್ವೀಕರಿಸಿರು ವನು. ॥ 31 ॥

(ಶ್ಲೋಕ - 32)

ಮೂಲಮ್

ಇತಿ ತೇಭಿಹಿತಂ ತಾತ ಯಥೇದಮನುಪೃಚ್ಛಸಿ ।
ನಾನ್ಯದ್ಭಗವತಃ ಕಿಂಚಿದ್ಭಾವ್ಯಂ ಸದಸದಾತ್ಮಕಮ್ ॥

ಅನುವಾದ

ಮಗು ! ನೀನು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿರುವೆನು. ಒಟ್ಟಿನಲ್ಲಿ ಹೇಳುವುದಾದರೆ ಆ ಭಗವಂತನನ್ನು ಬಿಟ್ಟು ಸದ್ರೂಪವಾಗಲೀ, ಅಸದ್ರೂಪವಾಗಲೀ, ಕಾರ್ಯ-ಕಾರಣ ವಾಗಲೀ ಯಾವ ವಸ್ತುವೂ ಇಲ್ಲ, ಎಂದು ತಿಳಿ.* ॥ 32 ॥

ಟಿಪ್ಪನೀ
  • ಗೀತೆಯಲ್ಲಿ ಭಗವಂತನು ಹೇಳಿರುವನು
    ಮತ್ತಃ ಪರತರಂ ನಾನ್ಯತ್ಕಿಂಚಿದಸ್ತಿ ಧನಂಜಯ ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ ॥ (ಭಗವದ್ಗೀತೆ 7/7)
    ಹೇ ಧನಂಜಯನೇ ! ನನಗಿಂತ ಭಿನ್ನವಾದ ಯಾವುದೇ ಪರಮ ಕಾರಣವು ಇಲ್ಲವಾಗಿದೆ. ಈ ಸಂಪೂರ್ಣ ಜಗತ್ತು ಸೂತ್ರದಲ್ಲಿ ನೂಲಿನ ಮಣಿಗಳಂತೆ ನನ್ನಲ್ಲಿ ಪೋಣಿಸಲ್ಪಟ್ಟಿದೆ.

(ಶ್ಲೋಕ - 33)

ಮೂಲಮ್

ನ ಭಾರತೀ ಮೇಂಗ ಮೃಷೋಪಲಕ್ಷ್ಯತೇ
ನ ವೈ ಕ್ವಚಿನ್ಮೇ ಮನಸೋ ಮೃಷಾ ಗತಿಃ ।
ನ ಮೇ ಹೃಷೀಕಾಣಿ ಪತಂತ್ಯಸತ್ಪಥೇ
ಯನ್ಮೇ ಹೃದೌತ್ಕಂಠ್ಯವತಾ ಧೃತೋ ಹರಿಃ ॥

ಅನುವಾದ

ಪ್ರಿಯ ನಾರದನೇ! ನಾನು ಪ್ರೇಮಪೂರ್ಣ ಹೃದಯದಿಂದ ಭಗವಂತನ ಸ್ಮರಣೆಯಲ್ಲಿ ಮಗ್ನನಾಗಿರುತ್ತೇನೆ. ಇದರಿಂದಲೇ ನನ್ನ ಮಾತು ಎಂದಿಗೂ ಸುಳ್ಳಾಗುವುದು ಕಂಡುಬರುವುದಿಲ್ಲ. ನನ್ನ ಮನಸ್ಸಿನ ಸಂಕಲ್ಪವು ಎಂದೂ ಅಸತ್ಯವಾಗುವುದಿಲ್ಲ. ನನ್ನ ಇಂದ್ರಿಯಗಳು ಎಂದಿಗೂ ಮರ್ಯಾದೆ ಮೀರಿ ದುರ್ಮಾರ್ಗದಲ್ಲಿ ಪ್ರವರ್ತಿಸು ವುದಿಲ್ಲ. ॥ 33 ॥

(ಶ್ಲೋಕ - 34)

ಮೂಲಮ್

ಸೋಹಂ ಸಮಾಮ್ನಾಯಮಯಸ್ತಪೋಮಯಃ
ಪ್ರಜಾಪತೀನಾಮಭಿವಂದಿತಃ ಪತಿಃ ।
ಆಸ್ಥಾಯ ಯೋಗಂ ನಿಪುಣಂ ಸಮಾಹಿತ-
ಸ್ತಂ ನಾಧ್ಯಗಚ್ಛಂ ಯತ ಆತ್ಮಸಂಭವಃ ॥ 34 ॥

ಅನುವಾದ

ನಾನು ವೇದಮಯನಾಗಿದ್ದೇನೆ. ತಪೋಮಯ ನಾಗಿದ್ದೇನೆ ; ದೊಡ್ಡ-ದೊಡ್ಡ ಪ್ರಜಾಪತಿಗಳಿಂದಲೂ ನಮಸ್ಕರಿಸಲ್ಪ ಡುತ್ತಿರುವ ಪ್ರಜಾಪತಿ ಸಾರ್ವಭೌಮನಾಗಿದ್ದೇನೆ. ಆದರೆ ಇಂತಹ ನನಗೂ ಸಂಪೂರ್ಣ ಯೋಗನಿಷ್ಠೆಯನ್ನು ಆಚರಿಸಿದಾಗಲೂ ನನ್ನ ಮೂಲಕಾರಣನಾದ ಆ ಪರಮಾತ್ಮನ ಸ್ವರೂಪವನ್ನು ತಿಳಿಯಲು ಮೊದಲು ಸಾಧ್ಯವಾಗಲಿಲ್ಲ. ॥ 34 ॥

(ಶ್ಲೋಕ - 35)

ಮೂಲಮ್

ನತೋಸ್ಮ್ಯಹಂ ತಚ್ಚರಣಂ ಸಮೀಯುಷಾಂ
ಭವಚ್ಛಿದಂ ಸ್ವಸ್ತ್ಯಯನಂ ಸುಮಂಗಲಮ್ ।
ಯೋ ಹ್ಯಾತ್ಮಮಾಯಾವಿಭವಂ ಸ್ಮ ಪರ್ಯಗಾದ್
ಯಥಾ ನಭಃ ಸ್ವಾಂತಮಥಾಪರೇ ಕುತಃ ॥ 35 ॥

ಅನುವಾದ

(ಏಕೆಂದರೆ, ಅವನಾದರೋ ಏಕಮಾತ್ರ ಭಕ್ತಿಯಿಂದಲೇ ದೊರೆಯುವನು.) ನಾನಾದರೋ ಪರಮ ಮಂಗಲಮಯನಾದ ಹಾಗೂ ಶರಣುಬಂದ ಭಕ್ತರ ಭವ ಬಂಧನವನ್ನು ಧ್ವಂಸಮಾಡುವ ಕ್ಷೇಮಪ್ರದನಾದ ಭಗವಂತನ ಚರಣಗಳಿಗೇ ನಮಸ್ಕರಿಸುತ್ತೇನೆ. ಅವನಲ್ಲಿ ಶರಣಾಗಿದ್ದೇನೆ. ಅನಂತ ಅಪಾರ ಆಕಾಶಕ್ಕೆ ಮೇರೆಯೇ ಇಲ್ಲದಿರುವಂತೆ ಭಗವಂತನ ಅನಂತ ಮಹಿಮೆಗೆ ಪಾರವಿಲ್ಲ. ಆತನ ಮಾಯೆಯ ವೈಭವವು ಅಪಾರ ವಾದುದು, ಅನಂತವಾದುದು. ಆಕಾಶವು ತನ್ನ ಅನಂತತೆಯನ್ನು ತಾನು ತಿಳಿಯದಂತೆಯೇ ಅವನೂ ಕೂಡ ತನ್ನ ಮಹಿಮೆಯ ವಿಸ್ತಾರವನ್ನು ಅರಿಯನು. ಹೀಗಿರುವಾಗ ಇತರರು ಹೇಗೆ ಅರಿಯ ಬಲ್ಲರು ? ॥ 35 ॥

(ಶ್ಲೋಕ - 36)

ಮೂಲಮ್

ನಾಹಂ ನ ಯೂಯಂ ಯದೃತಾಂ ಗತಿಂ ವಿದು-
ರ್ನ ವಾಮದೇವಃ ಕಿಮುತಾಪರೇ ಸುರಾಃ ।
ತನ್ಮಾಯಯಾ ಮೋಹಿತಬುದ್ಧಯಸ್ತ್ವಿದಂ
ವಿನಿರ್ಮಿತಂ ಚಾತ್ಮಸಮಂ ವಿಚಕ್ಷ್ಮಹೇ ॥ 36 ॥

ಅನುವಾದ

ನಾನು, ನನ್ನ ಮಕ್ಕಳಾದ ನೀವೂ, ದೇವ ದೇವನಾದ ವಾಮದೇವನೂ ಅವನ ಸತ್ಯಸ್ವರೂಪವನ್ನು ತಿಳಿಯೆವು. ಹೀಗಿರುವಾಗ ಇತರ ದೇವತೆಗಳು ಹೇಗೆ ಅರಿಯಬಲ್ಲರು ? ಆತನ ಮಾಯೆಯಿಂದ ಮೋಹಿತರಾದ ನಾವು ಆತನನ್ನು ತಿಳಿಯುವು ದಿರಲಿ, ಆತನು ನಿರ್ಮಿಸಿದ ಜಗತ್ತಿನ ಸ್ವರೂಪವನ್ನು ಸರಿಯಾಗಿ ತಿಳಿಯಲಾರೆವು. ನಮ್ಮ-ನಮ್ಮ ಬುದ್ಧಿಯ ಮಟ್ಟಕ್ಕೆ ತಕ್ಕಂತೆ ಅದನ್ನು ವರ್ಣಿಸುತ್ತಿದ್ದೇವೆ. ವಾಸ್ತವವಾಗಿ ಆ ತತ್ತ್ವವನ್ನು ವಾಣಿ ಮತ್ತು ಬುದ್ಧಿಯ ಮೂಲಕ ವರ್ಣಿಸಲಾಗುವುದಿಲ್ಲ. ॥ 36 ॥*

ಟಿಪ್ಪನೀ
  • ಕುರುಡರು ಆನೆಯನ್ನು ಕಂಡ ಇದೊಂದು ದೃಷ್ಟಾಂತ ಒಮ್ಮೆ ಮೂರುಜನ ಕುರುಡರು ಒಟ್ಟಿಗೆ ಹೋಗುತ್ತಿದ್ದರು. ಅವರಿಗೆ ದಾರಿಯಲ್ಲಿ ಒಂದು ಆನೆ ಸಿಕ್ಕಿತು. ಒಬ್ಬನು ಆನೆಯ ಕಾಲನ್ನು ಮುಟ್ಟಿ ಹೇಳಿದನು ಆನೆಯೆಂದರೆ ಕಂಭವಾಗಿದೆ. ಇನ್ನೊಬ್ಬನು ಕಿವಿಯನ್ನು ಮುಟ್ಟಿ ಆನೆಯೆಂದರೆ ಮೊರವಾಗಿದೆ ಎಂದು ಹೇಳಿದನು. ಮೂರನೆಯವನು ಆನೆಯ ಸೊಂಡಿಲನ್ನು ಮುಟ್ಟಿ ಆನೆಯೆಂದರೆ ದೊಡ್ಡ ಹೆಬ್ಬಾವಿನಂತಿದೆ ಎಂದು ಹೇಳಿದನು. ಆನೆಯ ವಿಷಯದಲ್ಲಿ ಮೂವರೂ ಕುರುಡರು ತಮ್ಮ-ತಮ್ಮ ಬುದ್ಧಿಗನುಸಾರವಾದ ಅಭಿಪ್ರಾಯವಿರುವಂತೆಯೇ, ಆ ಪರಬ್ರಹ್ಮ ಪರಮಾತ್ಮನ ವಿಷಯದಲ್ಲಿ ಬೇರೆ-ಬೇರೆ ಮಾನ್ಯತೆಯ ಭೇದವಿರುತ್ತದೆ. ನಿಜವಾಗಿ ಆ ತತ್ತ್ವವನ್ನು ಮಾತಿನಿಂದ ವರ್ಣಿಸಲು ಆಗುವುದೇ ಇಲ್ಲ.

(ಶ್ಲೋಕ - 37)

ಮೂಲಮ್

ಯಸ್ಯಾವತಾರಕರ್ಮಾಣಿ ಗಾಯಂತಿ ಹ್ಯಸ್ಮದಾದಯಃ ।
ನ ಯಂ ವಿದಂತಿ ತತ್ತ್ವೇನ ತಸ್ಮೈ ಭಗವತೇ ನಮಃ ॥

ಅನುವಾದ

ನಾವು ಕೇವಲ ಆತನ ಅವತಾರಗಳನ್ನು ಮಾತ್ರ ಗಾನಮಾಡ ಬಲ್ಲೆವೇ ಹೊರತು, ಅವನ ತತ್ತ್ವವನ್ನು ತಿಳಿಯಲಾರೆವು. ಅಂತಹ ಭಗವಂತನ ಶ್ರೀಚರಣಗಳಲ್ಲಿ ನಾನು ನಮಸ್ಕರಿಸುತ್ತೇನೆ. ॥ 37 ॥

(ಶ್ಲೋಕ - 38)

ಮೂಲಮ್

ಸ ಏಷ ಆದ್ಯಃ ಪುರುಷಃ ಕಲ್ಪೇ ಕಲ್ಪೇ ಸೃಜತ್ಯಜಃ ।
ಆತ್ಮಾತ್ಮನ್ಯಾತ್ಮನಾತ್ಮಾನಂ ಸಂಯಚ್ಛತಿ ಚ ಪಾತಿ ಚ ॥

ಅನುವಾದ

ಆತನು ಜನ್ಮರಹಿತನಾದ ಆದಿಪುರುಷನು. ಪ್ರತಿಯೊಂದು ಕಲ್ಪದಲ್ಲಿಯೂ ತನ್ನನ್ನು-ತಾನೇ ಸೃಷ್ಟಿಸಿಕೊಂಡು, ರಕ್ಷಿಸಿಕೊಳ್ಳುತ್ತಾ, ಉಪ ಸಂಹಾರ ವನ್ನೂ ಮಾಡಿಕೊಳ್ಳುತ್ತಾನೆ. ॥ 38 ॥

(ಶ್ಲೋಕ - 39)

ಮೂಲಮ್

ವಿಶುದ್ಧಂ ಕೇವಲಂ ಜ್ಞಾನಂ ಪ್ರತ್ಯಕ್ ಸಮ್ಯಗವಸ್ಥಿತಮ್ ।
ಸತ್ಯಂ ಪೂರ್ಣಮನಾದ್ಯಂತಂ ನಿರ್ಗುಣಂ ನಿತ್ಯಮದ್ವಯಮ್ ॥

ಅನುವಾದ

ಅವನು ಮಾಯಾಲೇಶ ವಿಲ್ಲದ ಶುದ್ಧಜ್ಞಾನ ಸ್ವರೂಪನು. ಅಂತರಾತ್ಮನಾದ ಆತ್ಮನಾಗಿ ಬೆಳಗುತ್ತಿರುವವನೂ, ಸತ್ಯವೂ, ಪರಿಪೂರ್ಣನೂ, ಆದ್ಯಂತರಹಿತನೂ, ಗುಣಾತೀತನೂ, ನಿತ್ಯನೂ, ಅದ್ವಿತೀಯನೂ ಆದ ಪರಮಾತ್ಮನೇ ಅವನು. ॥ 39 ॥

(ಶ್ಲೋಕ - 40)

ಮೂಲಮ್

ಋಷೇ ವಿದಂತಿ ಮುನಯಃ ಪ್ರಶಾಂತಾತ್ಮೇಂದ್ರಿಯಾಶಯಾಃ ।
ಯದಾ ತದೇವಾಸತ್ತರ್ಕೈಸ್ತಿರೋೀಯೇತ ವಿಪ್ಲುತಮ್ ॥

ಅನುವಾದ

ಮಹರ್ಷಿಯೇ ! ಮಹಾತ್ಮರು ತಮ್ಮ ಅಂತಃ ಕರಣ, ಇಂದ್ರಿಯಗಳು ಮತ್ತು ಶರೀರವನ್ನು ಪ್ರಶಾಂತ ಗೊಳಿಸಿ ಕೊಂಡಾಗ ಅವನ ಸಾಕ್ಷಾತ್ಕಾರವಾಗುತ್ತದೆ. ಆದರೆ ಕೆಟ್ಟ ತರ್ಕಗಳ ಮುಸುಕು ಹಾಕಿಕೊಂಡಾಗ ಅವನು ಮರೆಯಾಗುತ್ತಾನೆ. ॥ 40 ॥

(ಶ್ಲೋಕ - 41)

ಮೂಲಮ್

ಆದ್ಯೋವತಾರಃ ಪುರುಷಃ ಪರಸ್ಯ
ಕಾಲಃ ಸ್ವಭಾವಃ ಸದಸನ್ಮನಶ್ಚ ।
ದ್ರವ್ಯಂ ವಿಕಾರೋ ಗುಣ ಇಂದ್ರಿಯಾಣಿ
ವಿರಾಟ್ ಸ್ವರಾಟ್ ಸ್ಥಾಸ್ನು ಚರಿಷ್ಣು ಭೂಮ್ನಃ ॥

ಅನುವಾದ

ಪರಮಾತ್ಮನ ಮೊದಲನೆಯ ಅವತಾರವೇ ಈ ವಿರಾಟ್ ಪುರುಷನದು. ಕಾಲ, ಸ್ವಭಾವ, ಕಾರ್ಯ, ಕಾರಣ, ಮನಸ್ಸು, ಪಂಚ-ಭೂತಗಳು, ಅಹಂಕಾರ, ತ್ರಿಗುಣಗಳು, ಇಂದ್ರಿಯಗಳು, ಬ್ರಹ್ಮಾಂಡಶರೀರ, ಅದರ ಅಭಿಮಾನಿ ದೇವತೆ, ಸ್ಥಾವರ-ಜಂಗಮ ಜೀವರು ಇವೆಲ್ಲವೂ ಆ ಭಗವಾನ್ ಅನಂತನದೇ ರೂಪ ಗಳಾಗಿವೆ. ಇವೆಲ್ಲ ರೂಪಗಳಲ್ಲಿದ್ದರೂ ವಾಸ್ತವವಾಗಿ ಅವನು ಒಬ್ಬನೇ ಆಗಿದ್ದಾನೆ. ಅವನ ಮಹಿಮೆಗೆ ಪಾರವಿಲ್ಲ. ಆದ್ದರಿಂದ ಅನಂತನಾಗಿದ್ದಾನೆ, ಸರ್ವವ್ಯಾಪಿಯೂ, ಭೂಮನೂ ಅರ್ಥಾತ್ ಮಹತ್ತಾಗಿದ್ದಾನೆ. ॥ 41 ॥

(ಶ್ಲೋಕ - 42)

ಮೂಲಮ್

ಅಹಂ ಭವೋ ಯಜ್ಞ ಇಮೇ ಪ್ರಜೇಶಾ
ದಕ್ಷಾದಯೋ ಯೇ ಭವದಾದಯಶ್ಚ ।
ಸ್ವರ್ಲೋಕಪಾಲಾಃ ಖಗಲೋಕಪಾಲಾ
ನೃಲೋಕಪಾಲಾಸ್ತಲಲೋಕಪಾಲಾಃ ॥

(ಶ್ಲೋಕ - 43)

ಮೂಲಮ್

ಗಂಧರ್ವವಿದ್ಯಾಧರಚಾರಣೇಶಾ
ಯೇ ಯಕ್ಷರಕ್ಷೋರಗನಾಗನಾಥಾಃ ।
ಯೇ ವಾ ಋಷೀಣಾಮೃಷಭಾಃ ಪಿತೃಣಾಂ
ದೈತ್ಯೇಂದ್ರ ಸಿದ್ಧೇಶ್ವರದಾನವೇಂದ್ರಾಃ ।
ಅನ್ಯೇಚಯೇ ಪ್ರೇತಪಿಶಾಚಭೂತ -
ಕೂಷ್ಮಾಂಡಯಾದೋಮೃಗಪಕ್ಷ್ಯೀಶಾಃ ॥

(ಶ್ಲೋಕ - 44)

ಮೂಲಮ್

ಯತ್ಕಿಂ ಚ ಲೋಕೇ ಭಗವನ್ಮಹಸ್ವ-
ದೋಜಃಸಹಸ್ವದ್ಬಲವತ್ ಕ್ಷಮಾವತ್ ।
ಶ್ರೀಹ್ರೀವಿಭೂತ್ಯಾತ್ಮವದದ್ಭುತಾರ್ಣಂ
ತತ್ತ್ವಂ ಪರಂ ರೂಪವದಸ್ವರೂಪಮ್ ॥

ಅನುವಾದ

ನಾನು, ಶಂಕರನು, ಯಜ್ಞಪುರುಷ ನಾದ ವಿಷ್ಣು, ದಕ್ಷನೇ ಮುಂತಾದ ಪ್ರಜಾಪತಿಗಳು, ನೀನು ಮತ್ತು ನಿನ್ನಂತಹ ದಿವ್ಯ ಮಹರ್ಷಿಗಳು, ಸ್ವರ್ಗಾಪತಿಗಳು, ದಿವ್ಯಪಕ್ಷಿಗಳ ಅಪತಿಗಳು, ನರಪತಿಗಳು, ಪಾತಾಳವೇ ಮುಂತಾದ ಕೆಳಗಿನ ಲೋಕಗಳ ಪಾಲಕರು, ಗಂಧರ್ವ-ವಿದ್ಯಾಧರ-ಚಾರಣರ ಅನಾಯಕರು, ಯಕ್ಷ-ರಾಕ್ಷಸ-ಸರ್ಪ-ನಾಗಜಾತಿಗಳ ನಾಯ ಕರು, ಮಹರ್ಷಿಗಳು, ಪಿತೃಪತಿಗಳು, ದೈತ್ಯೇಂದ್ರರು, ಸಿದ್ಧೇಶ್ವರರು, ದಾನವ ಅರಸುಗಳು ಮತ್ತು ಭೂತ-ಪ್ರೇತ-ಪಿಶಾಚ-ಕೂಷ್ಮಾಂಡ, ಜಲಜಂತುಗಳು, ಮೃಗಗಳು, ಪಕ್ಷಿಗಳ ಒಡೆಯರು, ಐಶ್ವರ್ಯ, ತೇಜಸ್ಸು, ಇಂದ್ರಿಯಬಲ, ಮನೋಬಲ, ಶರೀರಬಲ ಅಥವಾ ಕ್ಷಮೆಯಿಂದ ಸಂಪನ್ನನಾಗಿರುವ ಎಲ್ಲ ವಸ್ತುಗಳು ಅಥವಾ ವಿಶೇಷವಾದ ಸೌಂದರ್ಯ, ಲಜ್ಜೆ, ವೈಭವ ಮತ್ತು ವಿಭೂತಿಗಳಿಂದ ಬೆಳಗುತ್ತಿರುವ, ಅದ್ಭುತವಾದ ರೂಪ-ಸಂಪತ್ತುಗಳಿಂದ ಖ್ಯಾತ ವಾದುವುಗಳೂ, ರೂಪರಹಿತನಾಗಿ ಅತಿಶಯವನ್ನು ಪಡೆದಿರು ವವರೂ, ಮುಂತಾದ ಎಲ್ಲರೂ, ಎಲ್ಲವೂ ಆ ಪರಮತತ್ತ್ವಮಯ ಭಗವತ್ಸ್ವರೂಪಗಳೇ ಆಗಿವೆ. ॥ 42-44 ॥

(ಶ್ಲೋಕ - 45)

ಮೂಲಮ್

ಪ್ರಾಧಾನ್ಯತೋ ಯಾನೃಷ ಅಮನಂತಿ
ಲೀಲಾವತಾರಾನ್ಪುರುಷಸ್ಯ ಭೂಮ್ನಃ ।
ಆಪೀಯತಾಂ ಕರ್ಣಕಷಾಯಶೋಷಾ-
ನನುಕ್ರಮಿಷ್ಯೇ ತ ಇಮಾನ್ಸುಪೇಶಾನ್ ॥

ಅನುವಾದ

ನಾರದನೇ ! ಇವು ಗಳಲ್ಲದೆ ಆ ಪರಮಪುರುಷನ ಪರಮ ಪವಿತ್ರವಾದ ಮತ್ತು ಪ್ರಧಾನವಾದ ಅನೇಕ ಲೀಲಾವತಾರಗಳು ಶಾಸಗಳಲ್ಲಿ ವರ್ಣಿತ ವಾಗಿವೆ. ಅವು ಕಿವಿಗಳಿಗೆ ಇಂಪಾಗಿ ಕಿವಿಗಳ ಕೊಳೆಯನ್ನು ತೊಳೆದು ಹಾಕುವ ದಿವ್ಯಚರಿತ್ರಗಳು. ಅವುಗಳನ್ನು ಕ್ರಮವಾಗಿ ನಾನು ವರ್ಣಿಸುತ್ತೇನೆ ; ಸಾವಧಾನವಾಗಿ ಶ್ರವಣಿಸು.’’ ॥ 45 ॥

ಅನುವಾದ (ಸಮಾಪ್ತಿಃ)

ಆರನೆಯ ಅಧ್ಯಾಯವು ಮುಗಿಯಿತು. ॥6॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಿತೀಯಸ್ಕಂಧೇ ಷಷ್ಠೋಽಧ್ಯಾಯಃ ॥6॥

ಅನುವಾದ