[ನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ಸೃಷ್ಟಿವಿಷಯಕ ರಾಜನ ಪ್ರಶ್ನೆ ಶ್ರೀಶುಕಮಹಾಮುನಿಗಳ ಕಥಾರಂಭ
(ಶ್ಲೋಕ - 1)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ವೈಯಾಸಕೇರಿತಿ ವಚಸ್ತತ್ತ್ವನಿಶ್ಚಯಮಾತ್ಮನಃ ।
ಉಪಧಾರ್ಯ ಮತಿಂ ಕೃಷ್ಣೇ ಔತ್ತರೇಯಃ ಸತೀಂ ವ್ಯಧಾತ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ ಶೌನಕಾದಿ ಮಹರ್ಷಿ ಗಳೇ! ಪರಮಾತ್ಮತತ್ತ್ವದ ಬಗೆಗೆ ನಿಶ್ಚಯವನ್ನುಂಟು ಮಾಡುವ ಶ್ರೀಶುಕಮಹಾಮುನಿಗಳ ಉಪದೇಶವನ್ನು ಕೇಳಿದೊಡನೆಯೇ, ಪರೀಕ್ಷಿದ್ರಾಜನು ತನ್ನ ಪರಿಶುದ್ಧವಾದ ಬುದ್ಧಿಯನ್ನು ಅನನ್ಯ ಭಾವದಿಂದ ಭಗವಾನ್ ಶ್ರೀಕೃಷ್ಣನ ಚರಣಾರವಿಂದಗಳಲ್ಲಿ ಸಮರ್ಪಿಸಿಬಿಟ್ಟನು. ॥ 1 ॥
(ಶ್ಲೋಕ - 2)
ಮೂಲಮ್
ಆತ್ಮಜಾಯಾಸುತಾಗಾರಪಶುದ್ರವಿಣಬಂಧುಷು ।
ರಾಜ್ಯೇ ಚಾವಿಕಲೇ ನಿತ್ಯಂ ವಿರೂಢಾಂ ಮಮತಾಂ ಜಹೌ ॥
ಅನುವಾದ
ಶರೀರ, ಪತ್ನೀ, ಪುತ್ರರು, ಅರಮನೆ, ಪಶು, ಧನ, ಬಂಧು-ಮಿತ್ರರು ಮತ್ತು ನಿಷ್ಕಂಟಕರಾಜ್ಯ ಇವುಗಳಲ್ಲಿ ಉಂಟಾಗಿದ್ದ ದೃಢವಾದ ಮಮತೆಯನ್ನು, ಅವನು ಒಂದೇ ಕ್ಷಣದಲ್ಲಿ ತ್ಯಜಿಸಿಬಿಟ್ಟನು. ॥ 2 ॥
(ಶ್ಲೋಕ - 3)
ಮೂಲಮ್
ಪಪ್ರಚ್ಛ ಚೇಮಮೇವಾರ್ಥಂ ಯನ್ಮಾಂ ಪೃಚ್ಛಥ ಸತ್ತಮಾಃ ।
ಕೃಷ್ಣಾನುಭಾವಶ್ರವಣೇ ಶ್ರದ್ದಧಾನೋ ಮಹಾಮನಾಃ ॥
(ಶ್ಲೋಕ - 4)
ಮೂಲಮ್
ಸಂಸ್ಥಾಂ ವಿಜ್ಞಾಯ ಸಂನ್ಯಸ್ಯ ಕರ್ಮ ತ್ರೈವರ್ಗಿಕಂ ಚ ಯತ್ ।
ವಾಸುದೇವೇ ಭಗವತಿ ಆತ್ಮಭಾವಂ ದೃಢಂ ಗತಃ ॥
ಅನುವಾದ
ಎಲೈ ಮುನಿಶ್ರೇಷ್ಠರೇ ! ಮಹಾತ್ಮ ನಾದ ಪರೀಕ್ಷಿದ್ರಾಜನು ತನ್ನ ಮೃತ್ಯುವಿನ ನಿಶ್ಚಿತ ಸಮಯವನ್ನು ಅರಿತಿದ್ದನು. ಅದಕ್ಕಾಗಿ ಅವನು ಧರ್ಮ, ಅರ್ಥ, ಕಾಮ ಇವು ಗಳಿಗೆ ಸಂಬಂಸಿದ ಎಲ್ಲ ಕರ್ಮಗಳನ್ನು ಸಂನ್ಯಾಸ ಮಾಡಿದನು. ಬಳಿಕ ಭಗವಾನ್ ಶ್ರೀಕೃಷ್ಣನಲ್ಲಿ ಆತ್ಮಭಾವವನ್ನು ಹೊಂದಿ, ಪೂರ್ಣಶ್ರದ್ಧೆಯಿಂದ ಭಗವಾನ್ ಶ್ರೀಕೃಷ್ಣನ ಮಹಿಮೆಯನ್ನು ಕೇಳಲು ಅವನು ಶ್ರೀಶುಕಮುನಿಗಳಲ್ಲಿ ಪ್ರಶ್ನೆಯನ್ನು ಮಾಡಿದನು. ಅದನ್ನೇ ನೀವುಗಳೂ ನನ್ನಲ್ಲಿ ಕೇಳುತ್ತಿದ್ದೀರಲ್ಲ ! ॥ 3-4 ॥
(ಶ್ಲೋಕ - 5)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಸಮೀಚೀನಂ ವಚೋ ಬ್ರಹ್ಮನ್ಸರ್ವಜ್ಞಸ್ಯ ತವಾನಘ ।
ತಮೋ ವಿಶೀರ್ಯತೇ ಮಹ್ಯಂ ಹರೇಃ ಕಥಯತಃ ಕಥಾಮ್ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು ಬ್ರಹ್ಮರ್ಷಿಗಳೇ ! ಸರ್ವಜ್ಞರೂ, ಪರಮಪವಿತ್ರರೂ ಆದ ಮಹಾತ್ಮರೇ ! ತಮ್ಮ ಮಾತು ಅತ್ಯಂತ ಶ್ರೇಷ್ಠ ಹಾಗೂ ಸಮುಚಿತವಾಗಿದೆ. ತಾವು ಶ್ರೀಭಗವಂತನ ಕಥೆಯನ್ನು ಹೇಳುತ್ತಿರುವಂತೆ ನನ್ನ ಅಜ್ಞಾನದ ತೆರೆಯೂ ಕಳಚಿಕೊಳ್ಳುತ್ತಿದೆ. ಜ್ಞಾನದ ಬೆಳಕನ್ನು ಕಾಣುತ್ತಿದ್ದೇನೆ. ॥ 5 ॥
(ಶ್ಲೋಕ - 6)
ಮೂಲಮ್
ಭೂಯ ಏವ ವಿವಿತ್ಸಾಮಿ ಭಗವಾನಾತ್ಮಮಾಯಯಾ ।
ಯಥೇದಂ ಸೃಜತೇ ವಿಶ್ವಂ ದುರ್ವಿಭಾವ್ಯಮೀಶ್ವರೈಃ ॥
ಅನುವಾದ
ಶ್ರೀಭಗವಂತನು ತನ್ನ ಮಾಯೆಯಿಂದ ಈ ಜಗತ್ತನ್ನು ಹೇಗೆ ಸೃಷ್ಟಿಮಾಡುತ್ತಾನೆ ಎಂಬುದನ್ನು ಇನ್ನೂ ವಿಸ್ತಾರವಾಗಿ ತಿಳಿಯಬಯಸುತ್ತೇನೆ. ಈ ಸೃಷ್ಟಿಯು ಅತ್ಯಂತ ರಹಸ್ಯಮಯವಾಗಿದೆ. ಬ್ರಹ್ಮಾದಿ ದೇವತೆಗಳಿಗೂ ಇದನ್ನು ತಿಳಿಯಲು ಕಷ್ಟವಾಗಿದೆ. ॥6॥
(ಶ್ಲೋಕ - 7)
ಮೂಲಮ್
ಯಥಾ ಗೋಪಾಯತಿ ವಿಭುರ್ಯಥಾ ಸಂಯಚ್ಛತೇ ಪುನಃ ।
ಯಾಂ ಯಾಂ ಶಕ್ತಿಮುಪಾಶ್ರಿತ್ಯ ಪುರುಶಕ್ತಿಃ ಪರಃ ಪುಮಾನ್ ।
ಆತ್ಮಾನಂ ಕ್ರೀಡಯನ್ಕ್ರೀಡನ್ಕರೋತಿ ವಿಕರೋತಿ ಚ ॥
ಅನುವಾದ
ಭಗವಂತನು ಈ ವಿಶ್ವವನ್ನು ಹೇಗೆ ರಕ್ಷಿಸುತ್ತಾನೆ ? ಮತ್ತೆ ಹೇಗೆ ಸಂಹರಿಸುತ್ತಾನೆ ? ಅನಂತ ಶಕ್ತಿಯುಳ್ಳ ಆ ಪರಮಾತ್ಮನು ಯಾವ-ಯಾವ ಶಕ್ತಿಗಳನ್ನು ಆಶ್ರಯಿಸಿ ಈ ಸೃಷ್ಟಿ, ಸ್ಥಿತಿ, ಲಯರೂಪಗಳಲ್ಲಿ ತಾನೇ ಆಟಿಕೆಗಳಾಗಿ ಆಟವಾಡುತ್ತಾನೆ ? ಮಕ್ಕಳು ಆಟಕ್ಕಾಗಿ ಮಣ್ಣಿನಿಂದ ಮನೆಗಳನ್ನು ಕಟ್ಟುವಂತೆ ಈ ಬ್ರಹ್ಮಾಂಡಗಳನ್ನು ರಚಿಸಿ, ಅವುಗಳನ್ನು ನಾಶಪಡಿಸುವ ಆಟವನ್ನು ಹೇಗೆ ಆಡುತ್ತಾನೆ ? ಹೀಗೆ ಮಾಡುವಾಗಲೂ ಅವನಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲವಲ್ಲ ! ಅವನು ಇದರಿಂದ ಅಸಂಗನಾಗಿಯೇ ಇರುವನಲ್ಲ ! ॥ 7 ॥
(ಶ್ಲೋಕ - 8)
ಮೂಲಮ್
ನೂನಂ ಭಗವತೋ ಬ್ರಹ್ಮನ್ ಹರೇರದ್ಭುತಕರ್ಮಣಃ ।
ದುರ್ವಿಭಾವ್ಯಮಿವಾಭಾತಿ ಕವಿಭಿಶ್ಚಾಪಿ ಚೇಷ್ಟಿತಮ್ ॥
ಅನುವಾದ
ಭಗವಾನ್ ಶ್ರೀಹರಿಯ ಲೀಲೆಗಳು ನಿಜ ವಾಗಿಯೂ ಅದ್ಭುತ-ಅಚಿಂತ್ಯವಾಗಿವೆ. ಅವನ ಲೀಲೆಗಳ ರಹಸ್ಯ ವನ್ನು ತಿಳಿಯುವುದು ಮಹಾಜ್ಞಾನಿಗಳಿಗೂ ಅತ್ಯಂತ ಕಷ್ಟವೇ ಸರಿ. ॥ 8 ॥
(ಶ್ಲೋಕ - 9)
ಮೂಲಮ್
ಯಥಾ ಗುಣಾಂಸ್ತು ಪ್ರಕೃತೇರ್ಯುಗಪತ್ಕ್ರಮಶೋಪಿ ವಾ ।
ಬಿಭರ್ತಿ ಭೂರಿಶಸ್ತ್ವೇಕಃ ಕುರ್ವನ್ ಕರ್ಮಾಣಿ ಜನ್ಮಭಿಃ ॥
ಅನುವಾದ
ಒಬ್ಬಂಟಿಗನೇ ಆದ ಭಗವಂತನು ಅನೇಕ ಕರ್ಮ ಗಳನ್ನು ಮಾಡಲು ಪುರುಷರೂಪದಿಂದ ಪ್ರಕೃತಿಯ ಭಿನ್ನ-ಭಿನ್ನ ವಾದ ಗುಣಗಳನ್ನು ಒಟ್ಟಿಗೆ ಧರಿಸುತ್ತಾನೋ ? ಅಥವಾ ಅನೇಕ ಅವತಾರಗಳನ್ನು ತಾಳಿ ಅವುಗಳನ್ನು ಕ್ರಮಶಃ ಧರಿಸಿಕೊಳ್ಳು ತ್ತಾನೋ ? ॥ 9 ॥
(ಶ್ಲೋಕ - 10)
ಮೂಲಮ್
ವಿಚಿಕಿತ್ಸಿತಮೇತನ್ಮೇ ಬ್ರವೀತು ಭಗವಾನ್ಯಥಾ ।
ಶಾಬ್ದೇ ಬ್ರಹ್ಮಣಿ ನಿಷ್ಣಾತಃ ಪರಸ್ಮಿಂಶ್ಚ ಭವಾನ್ಖಲು ॥
ಅನುವಾದ
ಪೂಜ್ಯರಾದ ನೀವು ಶಬ್ದಬ್ರಹ್ಮ ವೇದ ಮತ್ತು ಪರಬ್ರಹ್ಮ ಪರಮಾತ್ಮತತ್ತ್ವ ಇವೆರಡೂ ವಿಷಯಗಳಲ್ಲಿ ನಿಷ್ಣಾತ ರಾದವರು. ಆದ್ದರಿಂದ ನನ್ನ ಸಂದೇಹವನ್ನು ದಯಮಾಡಿ ನಿವಾರಣೆ ಮಾಡಬೇಕು. ॥ 10 ॥
(ಶ್ಲೋಕ - 11)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಇತ್ಯುಪಾಮಂತ್ರಿತೋ ರಾಜ್ಞಾ ಗುಣಾನುಕಥನೇ ಹರೇಃ ।
ಹೃಷೀಕೇಶಮನುಸ್ಮೃತ್ಯ ಪ್ರತಿವಕ್ತುಂ ಪ್ರಚಕ್ರಮೇ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ ರಾಜಾಪರೀಕ್ಷಿತನು ಭಗವಂತನ ಗುಣಗಳನ್ನು ವರ್ಣಿಸಲಿಕ್ಕಾಗಿ ಈ ರೀತಿ ಪ್ರಾರ್ಥಿಸಿದಾಗ ಶುಕಮುನಿಗಳು ಭಗವಾನ್ ಶ್ರೀಕೃಷ್ಣನನ್ನು ಮತ್ತೆ-ಮತ್ತೆ ಸ್ಮರಿಸುತ್ತಾ ತನ್ನ ಪ್ರವಚನವನ್ನು ಪ್ರಾರಂಭಿಸಿದರು. ॥ 11 ॥
(ಶ್ಲೋಕ - 12)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ನಮಃ ಪರಸ್ಮೈ ಪುರುಷಾಯ ಭೂಯಸೇ
ಸದುದ್ಭವಸ್ಥಾನನಿರೋಧಲೀಲಯಾ ।
ಗೃಹೀತಶಕ್ತಿತ್ರಿತಯಾಯ ದೇಹಿನಾ-
ಮಂತರ್ಭವಾಯಾನುಪಲಕ್ಷ್ಯವರ್ತ್ಮನೇ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ ಆ ಭಗವಾನ್ ಪುರುಷೋತ್ತಮನ ಚರಣಕಮಲಗಳಲ್ಲಿ ನನ್ನ ಕೋಟಿ, ಕೋಟಿ ಪ್ರಣಾಮಗಳು. ಅವನು ವಿಶ್ವದ ಸೃಷ್ಟಿ, ಸ್ಥಿತಿ, ಪ್ರಳಯ ಇವುಗಳ ಲೀಲೆಯನ್ನು ನಡೆಸಲು ಸತ್ತ್ವ, ರಜ, ತಮೋಗುಣರೂಪವಾದ ಮೂರು ಶಕ್ತಿಗಳನ್ನು ಸ್ವೀಕರಿಸಿ, ಬ್ರಹ್ಮ, ವಿಷ್ಣು, ಮಹೇಶ್ವರರ ರೂಪ ಗಳನ್ನು ಧರಿಸಿಕೊಳ್ಳುವನು. ಅವನು ಸಮಸ್ತ ಚರಾಚರಪ್ರಾಣಿಗಳ ಹೃದಯದಲ್ಲಿ ಅಂತರ್ಯಾಮಿಯಾಗಿ ವಿರಾಜಿಸುತ್ತಿದ್ದಾನೆ. ಅವನನ್ನು ಪಡೆಯುವ ಮಾರ್ಗವು ಬುದ್ಧಿಯ ವಿಷಯವಲ್ಲ. ಅವನು ಸ್ವತಃ ಅನಂತನಾಗಿದ್ದು, ಅವನ ಮಹಿಮೆಯೂ ಅನಂತವಾಗಿದೆ. ॥ 12 ॥
(ಶ್ಲೋಕ - 13)
ಮೂಲಮ್
ಭೂಯೋ ನಮಃ ಸದ್ವ ಜಿನಚ್ಛಿದೇಸತಾ-
ಮಸಂಭವಾಯಾಖಿಲಸತ್ತ್ವ ಮೂರ್ತಯೇ ।
ಪುಂಸಾಂ ಪುನಃ ಪಾರಮಹಂಸ್ಯ ಆಶ್ರಮೇ
ವ್ಯವಸ್ಥಿತಾನಾಮನುಮೃಗ್ಯದಾಶುಷೇ ॥
ಅನುವಾದ
ಸಾಧು-ಸಂತರ ದುಃಖಗಳನ್ನು ಹೋಗಲಾಡಿಸಿ ಅವರಿಗೆ ತನ್ನ ಪ್ರೇಮವನ್ನು ಕರುಣಿಸುವವನೂ, ದುಷ್ಟರನ್ನು ದಮನಗೈದು ಅವರಿಗೆ ಮುಕ್ತಿಯನ್ನು ಕೊಡುವವನೂ, ಪರಮಹಂಸಾಶ್ರಮದಲ್ಲಿ ಇರುವವರ ಅಭೀಷ್ಟವಾದ ವಸ್ತುವನ್ನು ಅನುಗ್ರಹಿಸುವವನೂ, ಸರ್ವಸಮನಾಗಿದ್ದು ಸರ್ವರಿಗೂ ಕಲ್ಯಾಣವನ್ನುಂಟುಮಾಡು ವವನೂ ಆದ ಆ ಪರಮಾತ್ಮನಿಗೆ ಪುನಃ ಪುನಃ ನಮಸ್ಕರಿಸುತ್ತೇನೆ. ॥ 13 ॥
(ಶ್ಲೋಕ - 14)
ಮೂಲಮ್
ನಮೋ ನಮಸ್ತೇಸ್ತ್ವ ೃಷಭಾಯ ಸಾತ್ವತಾಂ
ವಿದೂರಕಾಷ್ಠಾಯ ಮುಹುಃ ಕುಯೋಗಿನಾಮ್ ।
ನಿರಸ್ತಸಾಮ್ಯಾತಿಶಯೇನ ರಾಧಸಾ
ಸ್ವಧಾಮನಿ ಬ್ರಹ್ಮಣಿ ರಂಸ್ಯತೇ ನಮಃ ॥
ಅನುವಾದ
ಅವನು ಬಹಳ ಭಕ್ತವತ್ಸಲನಾಗಿರುವನು. ಹಟದಿಂದ ಭಕ್ತಿಹೀನ ಸಾಧನೆ ಮಾಡುವವರು ಅವನ ನೆರಳನ್ನೂ ಮುಟ್ಟ ಲಾರರು. ಅವನಂತೆ ಯಾರಿಗೂ ಐಶ್ವರ್ಯ ಇಲ್ಲದಿರುವಾಗ ಅವನಿಗಿಂತ ಹೆಚ್ಚಿಗೆ ಹೇಗಿದ್ದೀತು ? ಇಂತಹ ಐಶ್ವರ್ಯದಿಂದ ಕೂಡಿದವನಾಗಿ ನಿರಂತರವಾಗಿ ಬ್ರಹ್ಮಸ್ವರೂಪವಾದ ತನ್ನ ಧಾಮ ದಲ್ಲಿ ವಿಹರಿಸುತ್ತಿರುವ ಆ ಭಗವಾನ್ ಶ್ರೀಕೃಷ್ಣನಿಗೆ ಪದೇ-ಪದೇ ನಮಸ್ಕಾರಗಳು. ॥ 14 ॥
(ಶ್ಲೋಕ - 15)
ಮೂಲಮ್
ಯತ್ಕೀರ್ತನಂ ಯತ್ಸ್ಮರಣಂ ಯದೀಕ್ಷಣಂ
ಯದ್ವಂದನಂ ಯಚ್ಛ್ರವಣಂ ಯದರ್ಹಣಮ್ ।
ಲೋಕಸ್ಯ ಸದ್ಯೋ ವಿಧುನೋತಿ ಕಲ್ಮಷಂ
ತಸ್ಮೈ ಸುಭದ್ರಶ್ರವಸೇ ನಮೋ ನಮಃ ॥
ಅನುವಾದ
ಯಾರ ಕೀರ್ತನೆ, ಸ್ಮರಣೆ, ದರ್ಶನ, ವಂದನೆ, ಶ್ರವಣ, ಪೂಜೆಗಳು ಜೀವರ ಪಾಪಗಳನ್ನು ತತ್ಕ್ಷಣದಲ್ಲೇ ನಾಶಮಾಡುತ್ತವೆಯೋ, ಅಂತಹ ಪುಣ್ಯಕೀರ್ತಿಯಾದ ಭಗವಾನ್ ಶ್ರೀಕೃಷ್ಣನಿಗೆ ನಮೋ ನಮಃ ॥ 15 ॥
(ಶ್ಲೋಕ - 16)
ಮೂಲಮ್
ವಿಚಕ್ಷಣಾ ಯಚ್ಚರಣೋಪಸಾದನಾತ್
ಸಂಗಂ ವ್ಯದಸ್ಯೋಭಯತೋಂತರಾತ್ಮನಃ ।
ವಿಂದಂತಿ ಹಿ ಬ್ರಹ್ಮಗತಿಂ ಗತಕ್ಲಮಾ-
ಸ್ತಸ್ಮೈ ಸುಭದ್ರಶವಸೇ ನಮೋ ನಮಃ ॥
ಅನುವಾದ
ವಿವೇಕಿಗಳು ಯಾರ ಚರಣ ಕಮಲಗಳಲ್ಲಿ ಶರಣಾಗತರಾಗಿ ತಮ್ಮ ಹೃದಯದಿಂದ ಇಹಲೋಕ- ಪರಲೋಕಗಳ ಆಸಕ್ತಿಯನ್ನು ಕಿತ್ತೊಗೆಯುವರೋ, ಯಾವುದೇ ಪರಿಶ್ರಮವಿಲ್ಲದೆ ಬ್ರಹ್ಮಪದವನ್ನು ಪಡೆದುಕೊಳ್ಳುವರೋ, ಆ ಮಂಗಳಕೀರ್ತಿಯಾದ ಭಗವಾನ್ ಶ್ರೀಕೃಷ್ಣನಿಗೆ ಅನೇಕ ಬಾರಿ ನಮಸ್ಕಾರಗಳು. ॥ 16 ॥
(ಶ್ಲೋಕ - 17)
ಮೂಲಮ್
ತಪಸ್ವಿನೋ ದಾನಪರಾ ಯಶಸ್ವಿನೋ
ಮನಸ್ವಿನೋ ಮಂತ್ರವಿದಃ ಸುಮಂಗಲಾಃ ।
ಕ್ಷೇಮಂ ನ ವಿಂದಂತಿ ವಿನಾ ಯದರ್ಪಣಂ
ತಸ್ಮೈ ಸುಭದ್ರಶ್ರವಸೇ ನಮೋ ನಮಃ ॥
ಅನುವಾದ
ಎಷ್ಟೇ ದೊಡ್ಡ ತಪಸ್ವಿಗಳಾಗಲೀ, ದಾನಿಗಳಾಗಲೀ, ಯಶಸ್ವಿಗಳಾಗಲೀ, ಪ್ರಶಸ್ತಮನಸ್ಸುಳ್ಳವರಾಗಲೀ, ಮಂತ್ರಜ್ಞರಾಗಲೀ, ಸದಾಚಾರಿಗಳಾಗಲೀ ತಮ್ಮ ಸಾಧನೆ ಯನಾನ್ನು ಹಾಗೂ ತಮ್ಮನ್ನೂ ಆತನ ಚರಣಾರವಿಂದಗಳಲ್ಲಿ ಸಮರ್ಪಣೆಮಾಡದೆ ಹೋದರೆ ಅವರಿಗೆ ಶ್ರೇಯಸ್ಸು ದೊರೆಯ ಲಾರದು. ಅಂತಹ ಕಲ್ಯಾಣಕೀರ್ತಿಯುಳ್ಳ ಭಗವಂತನಿಗೆ ಕೋಟಿ- ಕೋಟಿ ನಮಸ್ಕಾರಗಳು. ॥ 17 ॥
(ಶ್ಲೋಕ - 18)
ಮೂಲಮ್
ಕಿರಾತಹೂಣಾಂಧ್ರಪುಲಿಂದಪುಲ್ಕಸಾ
ಆಭೀರಕಂಕಾಯವನಾಃ ಖಸಾದಯಃ ।
ಯೇನ್ಯೇ ಚ ಪಾಪಾ ಯದುಪಾಶ್ರಯಾಶ್ರಯಾಃ
ಶುದ್ಧ್ಯಂತಿ ತಸ್ಮೈ ಪ್ರಭವಿಷ್ಣವೇ ನಮಃ ॥
ಅನುವಾದ
ಕಿರಾತರಾಗಲೀ, ಹೂಣ ರಾಗಲೀ, ಆಂಧ್ರರಾಗಲೀ, ಪುಲಿಂದರಾಗಲೀ, ಪುಲ್ಕಸರಾಗಲೀ, ಆಭೀರರಾಗಲೀ, ಕಂಕರಾಗಲೀ, ಯವನರಾಗಲೀ, ಖಸರಾಗಲೀ, ಇತರ ಯಾವುದೇ ಜಾತಿಯವರೇ ಆಗಲೀ, ಎಂತಹ ಪಾಪಿಷ್ಠನೇ ಆಗಲೀ, ಯಾರ ಶರಣಾಗತ ಭಕ್ತರಲ್ಲಿ ಶರಣಾದರೆ ಪವಿತ್ರ ರಾಗುವರೋ, ಅಂತಹ ಸರ್ವಶಕ್ತಿಯುಳ್ಳ ಭಗವಂತನಿಗೆ ನಮಸ್ಕಾರವು. ॥ 18 ॥
(ಶ್ಲೋಕ - 19)
ಮೂಲಮ್
ಸ ಏಷ ಆತ್ಮಾತ್ಮವತಾಮೀಶ್ವರ-
ಸಯೀಮಯೋ ಧರ್ಮಮಯಸ್ತಪೋಮಯಃ ।
ಗತವ್ಯಲೀಕೈರಜಶಂಕರಾದಿಭಿ-
ರ್ವಿತರ್ಕ್ಯಲಿಂಗೋ ಭಗವಾನ್ಪ್ರಸೀದತಾಮ್ ॥
ಅನುವಾದ
ಆತ್ಮಜ್ಞಾನಿಗಳ ಆತ್ಮಸ್ವರೂಪನಾಗಿಯೂ, ಭಕ್ತರಿಗೆ ಸ್ವಾಮಿಯಾಗಿಯೂ, ಕರ್ಮಕಾಂಡಿಗಳಿಗೆ ವೇದಮೂರ್ತಿ ಯಾಗಿಯೂ, ಧಾರ್ಮಿಕರಿಗೆ ಧರ್ಮಸ್ವರೂಪನೂ ಆಗಿ, ತಪಸ್ವಿಗಳಿಗೆ ತಪಃಸ್ವರೂಪಿಯಾಗಿ, ಅವನೇ ಆಗಿದ್ದಾನೆ. ಬ್ರಹ್ಮ ರುದ್ರಾದಿ ದೇವತೆಗಳೂ ಕೂಡ ತಮ್ಮ ಶುದ್ಧ ಹೃದಯದಿಂದ ಅವನ ಸ್ವರೂಪವನ್ನೇ ಚಿಂತಿಸುತ್ತಾ ಆಶ್ಚರ್ಯಚಕಿತರಾಗಿ ನೋಡುತ್ತಾ ಇರುತ್ತಾರೆ. ಅಂತಹ ಆ ಭಗವಂತನು ನನ್ನ ಮೇಲೆ ಅನುಗ್ರಹದ ಮಳೆಗರೆಯಲಿ. ॥ 19 ॥
(ಶ್ಲೋಕ - 20)
ಮೂಲಮ್
ಶ್ರಿಯಃ ಪತಿರ್ಯಜ್ಞಪತಿಃ ಪ್ರಜಾಪತಿ-
ಯಾರ್ಂ ಪತಿರ್ಲೋಕಪತಿರ್ಧರಾಪತಿಃ ।
ಪತಿರ್ಗತಿಶ್ಚಾಂಧಕವೃಷ್ಣಿ ಸಾತ್ವತಾಂ
ಪ್ರಸೀದತಾಂ ಮೇ ಭಗವಾನ್ಸತಾಂ ಪತಿಃ ॥
ಅನುವಾದ
ಶ್ರೀದೇವಿಯ ಪತಿಯೂ, ಯಜ್ಞಗಳ ಅಪತಿಯೂ, ಪ್ರಜಾಪತಿಯೂ, ಬುದ್ಧಿಗಳ ಒಡೆಯನೂ, ಸರ್ವಲೋಕ ಪತಿಯೂ, ಧರಾಪತಿಯೂ, ಯದುಕುಲದಲ್ಲಿ ಅವತರಿಸಿ ಅಂಧಕ, ವೃಷ್ಣಿ, ಸಾತ್ವತರೇ ಮುಂತಾದ ಯಾದವರ ರಕ್ಷಕನೂ, ಪರಮಗತಿಯೂ ಆಗಿ ಬೆಳಗಿದ ಭಕ್ತವತ್ಸಲನೂ, ಸಾಧು-ಸಂತರ ಸರ್ವಸ್ವನೂ ಆದ ಶ್ರೀಕೃಷ್ಣನು ನನ್ನ ಮೇಲೆ ಪ್ರಸನ್ನನಾಗಲೀ. ॥ 20 ॥
(ಶ್ಲೋಕ - 21)
ಮೂಲಮ್
ಯದಂಘ್ರ್ಯಭಿಧ್ಯಾನಸಮಾಧೌತಯಾ
ಯಾನುಪಶ್ಯಂತಿ ಹಿ ತತ್ತ್ವ ಮಾತ್ಮನಃ ।
ವದಂತಿ ಚೈತತ್ಕವಯೋ ಯಥಾರುಚಂ
ಸ ಮೇ ಮುಕುಂದೋ ಭಗವಾನ್ಪ್ರಸೀದತಾಮ್ ॥
ಅನುವಾದ
ಜ್ಞಾನಿಗಳು ಯಾವನ ಪಾದಾರವಿಂದ ಗಳ ಧ್ಯಾನಸಮಾಯಿಂದಲೇ ಶುದ್ಧವಾದ ಬುದ್ಧಿಯಿಂದ ಆತ್ಮ ತತ್ತ್ವವನ್ನು ಸಾಕ್ಷಾತ್ಕರಿಸಿಕೊಳ್ಳುವರೋ, ತಮ್ಮ ಬುದ್ಧಿ ಮತ್ತು ಅಭಿ ರುಚಿಗನುಗುಣವಾಗಿ ಯಾರ ಸ್ವರೂಪವನ್ನು ವರ್ಣಿಸುತ್ತಾರೋ, ಅಂತಹ ಭಕ್ತಿ, ಮುಕ್ತಿ, ಸ್ತೋತ್ರಶಕ್ತಿ ಪ್ರದಾತನಾದ ಭಗವಾನ್ ಶ್ರೀಕೃಷ್ಣನು ನನಗೆ ಅನುಗ್ರಹಿಸಲಿ. ॥ 21 ॥
(ಶ್ಲೋಕ - 22)
ಮೂಲಮ್
ಪ್ರಚೋದಿತಾ ಯೇನ ಪುರಾ ಸರಸ್ವತೀ
ವಿತನ್ವತಾಜಸ್ಯ ಸತೀಂ ಸ್ಮೃತಿಂ ಹೃದಿ ।
ಸ್ವಲಕ್ಷಣಾ ಪ್ರಾದುರಭೂತ್ಕಿಲಾಸ್ಯತಃ
ಸ ಮೇ ಋಷೀಣಾಮೃಷಭಃ ಪ್ರಸೀದತಾಮ್ ॥
ಅನುವಾದ
ಸೃಷ್ಟಿ ಸಮಯದಲ್ಲಿ ಯಾರು ಬ್ರಹ್ಮದೇವರ ಹೃದಯದಲ್ಲಿ ಸ್ಮೃತಿಯನ್ನು ಜಾಗ್ರತಗೊಳಿ ಸಲು ಜ್ಞಾನದ ಅಷ್ಠಾತ್ರಿಯಾದ ಸರಸ್ವತಿಯನ್ನು ಪ್ರೇರಣೆ ಮಾಡಿದನೋ, ಆ ಬ್ರಹ್ಮನ ಮುಖದಿಂದ ಶಿಕ್ಷಾ, ವ್ಯಾಕರಣಾದಿ ಆರು ಅಂಗಗಳಿಂದ ಕೂಡಿದ ವೇದಸರಸ್ವತಿಯನ್ನು ಪ್ರಕಟಗೊಳಿಸಿದನೋ, ಅಂತಹ ಜ್ಞಾನಿಗಳಲ್ಲಿ ಶ್ರೇಷ್ಠನಾದ ಭಗವಂತನು ನನಗೆ ಪ್ರಸನ್ನನಾಗಲಿ. ॥22॥
(ಶ್ಲೋಕ - 23)
ಮೂಲಮ್
ಭೂತೈರ್ಮಹದ್ಭಿರ್ಯ ಇಮಾಃ ಪುರೋ ವಿಭು-
ರ್ನಿರ್ಮಾಯ ಶೇತೇ ಯದಮೂಷು ಪೂರುಷಃ ।
ಭುಂಕ್ತೇ ಗುಣಾನ್ ಷೋಡಶ ಷೋಡಶಾತ್ಮಕಃ
ಸೋಲಂಕೃಷೀಷ್ಟ ಭಗವಾನ್ವಚಾಂಸಿ ಮೇ ॥
ಅನುವಾದ
ಭಗವಂತನೇ ಪಂಚಭೂತಗಳಿಂದ ಈ ಶರೀರಗಳನ್ನು ನಿರ್ಮಾಣಗೈದು ಇವುಗಳಲ್ಲಿ ಜೀವರೂಪದಿಂದ ಮಲಗಿರುತ್ತಾನೆ. ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ಪ್ರಾಣಗಳು, ಒಂದು ಮನಸ್ಸು ಹೀಗೆ ಹದಿನಾರು ಕಲೆಗಳಿಂದ ಕೂಡಿಕೊಂಡು ಇವುಗಳ ಮೂಲಕ ಹದಿನಾರು ವಿಷಯಗಳನ್ನು ಭೋಗಿಸುತ್ತಾನೆ. ಆ ಸರ್ವಭೂತಮಯನಾದ ಭಗವಂತನು ತನ್ನ ಗುಣಗಳಿಂದ ನನ್ನ ವಾಣಿಯನ್ನು ಅಲಂಕರಿಸಲಿ. ॥ 23 ॥
(ಶ್ಲೋಕ - 24)
ಮೂಲಮ್
ನಮಸ್ತಸ್ಮೈ ಭಗವತೇ ವಾಸುದೇವಾಯ ವೇಧಸೇ ।
ಪಪುರ್ಜ್ಞಾನಮಯಂ ಸೌಮ್ಯಾ ಯನ್ಮುಖಾಂಬುರುಹಾಸವಮ್ ॥
ಅನುವಾದ
ಆ ವಾಸುದೇವನ ಅವತಾರವಾದ, ಸರ್ವಜ್ಞರಾದ, ಭಗವಾನ್ ವೇದ ವ್ಯಾಸರಿಗೆ ನಮಸ್ಕಾರಗಳು. ಆ ಮಹಾನುಭಾವರ ಮುಖಕಮಲದಿಂದ ಮಕರಂದದಂತೆ ಹರಿಯುತ್ತಿರುವ ಜ್ಞಾನ ಸುಧೆಯನ್ನೇ ಅಲ್ಲವೇ ಸಾಧು-ಸತ್ಪುರುಷರು ಸದಾ ಪಾನಮಾಡುತ್ತಿರುವುದು!॥24॥
(ಶ್ಲೋಕ - 25)
ಮೂಲಮ್
ಏತದೇವಾತ್ಮಭೂ ರಾಜನ್ ನಾರದಾಯ ವಿಪೃಚ್ಛತೇ ।
ವೇದಗರ್ಭೋಭ್ಯಧಾತ್ಸಾಕ್ಷಾದ್ ಯದಾಹ ಹರಿರಾತ್ಮನಃ ॥
ಅನುವಾದ
ಓ ರಾಜೇಂದ್ರನೇ! ಇದನ್ನು ಸಾಕ್ಷಾತ್ ಶ್ರೀಮನ್ನಾರಾಯಣನು ಬ್ರಹ್ಮದೇವರಿಗೆ ಉಪದೇಶಮಾಡಿದ್ದನು. ತಮ್ಮನ್ನು ಪ್ರಶ್ನೆಮಾಡಿದ ನಾರದರಿಗೆ ಬ್ರಹ್ಮದೇವರು ಅದನ್ನು ಉಪದೇಶಿಸಿದರು. ಅದನ್ನೇ ನಾನು ನಿನಗೆ ಈಗ ಉಪದೇಶಿಸುತ್ತಿದ್ದೇನೆ.॥25॥
ಅನುವಾದ (ಸಮಾಪ್ತಿಃ)
ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಿತೀಯಸ್ಕಂಧೇ ಚತುರ್ಥೋಽಧ್ಯಾಯಃ ॥4॥