೦೩

[ಮೂರನೆಯ ಅಧ್ಯಾಯ]

ಭಾಗಸೂಚನಾ

ಕಾಮನೆಗಳಿಗೆ ತಕ್ಕಂತೆ ಬೇರೆ-ಬೇರೆ ದೇವತೆಗಳ ಉಪಾಸನೆ ಮತ್ತು ಭಗವದ್ಭಕ್ತಿಯ ಪ್ರಧಾನತೆಯ ನಿರೂಪಣೆ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಮೇತನ್ನಿಗದಿತಂ ಪೃಷ್ಟವಾನ್ಯದ್ಭವಾನ್ ಮಮ ।
ನೃಣಾಂ ಯನ್ಮ್ರಿಯಮಾಣಾನಾಂ ಮನುಷ್ಯೇಷು ಮನೀಷಿಣಾಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ ಮರಣಕಾಲವು ಸಮೀಪಿಸಿದಾಗ ಬುದ್ಧಿವಂತನಾದ ಮನುಷ್ಯನು ಏನು ಮಾಡ ಬೇಕು ? ಎಂದು ನೀನು ಪ್ರಶ್ನಿಸಿದುದಕ್ಕೆ ನಾನು ಉತ್ತರ ಹೇಳಿಯಾಯಿತು. ॥ 1 ॥

(ಶ್ಲೋಕ - 2)

ಮೂಲಮ್

ಬ್ರಹ್ಮವರ್ಚಸಕಾಮಸ್ತು ಯಜೇತ ಬ್ರಹ್ಮಣಸ್ಪತಿಮ್ ।
ಇಂದ್ರಮಿಂದ್ರಿಯಕಾಮಸ್ತು ಪ್ರಜಾಕಾಮಃ ಪ್ರಜಾಪತೀನ್ ॥

ಅನುವಾದ

ಲೌಕಿಕವನ್ನು ಬಯಸುವವರು ಯಾವ-ಯಾವ ದೇವತೆಯಲ್ಲಿ ಏನೇನನ್ನು ಬೇಡಬೇಕೆಂಬುದನ್ನು ಈಗ ಹೇಳುತ್ತೇನೆ ಬ್ರಹ್ಮವರ್ಚಸ್ಸನ್ನು ಬಯಸುವವನು ಬ್ರಹ್ಮಣಸ್ಪತಿಯನ್ನೂ, ಇಂದ್ರಿಯಗಳ ವಿಶೇಷಶಕ್ತಿಯನ್ನು ಇಚ್ಛಿಸುವವನು ಇಂದ್ರನನ್ನೂ, ಸಂತಾನದ ಅಪೇಕ್ಷೆ ಉಳ್ಳವರು ಪ್ರಜಾಪತಿಗಳನ್ನು ಉಪಾಸಿಸಬೇಕು. ॥ 2 ॥

(ಶ್ಲೋಕ - 3)

ಮೂಲಮ್

ದೇವೀಂ ಮಾಯಾಂ ತು ಶ್ರೀಕಾಮ
ಸ್ತೇಜಸ್ಕಾಮೋ ವಿಭಾವಸುಮ್ ।
ವಸುಕಾಮೋ ವಸೂನ್ ರುದ್ರಾನ್
ವೀರ್ಯಕಾಮೋಥ ವೀರ್ಯವಾನ್ ॥

ಅನುವಾದ

ಸಂಪತ್ತಿಗಾಗಿ ಶ್ರೀದೇವಿಯನ್ನೂ, ತೇಜಸ್ಸಿಗಾಗಿ ಅಗ್ನಿ ಯನ್ನೂ, ಧನಕ್ಕಾಗಿ ವಸುಗಳನ್ನೂ, ವೀರ್ಯವನ್ನು ಬಯಸುವವರು ರುದ್ರರನ್ನೂ ಉಪಾಸನೆಮಾಡಬೇಕು. ॥ 3 ॥

(ಶ್ಲೋಕ - 4)

ಮೂಲಮ್

ಅನ್ನಾದ್ಯಕಾಮಸ್ತ್ವದಿತಿಂ ಸ್ವರ್ಗಕಾಮೋದಿತೇಃ ಸುತಾನ್ ।
ವಿಶ್ವಾನ್ ದೇವಾನ್ರಾಜ್ಯಕಾಮಃ ಸಾಧ್ಯಾನ್ಸಂಸಾಧಕೋ ವಿಶಾಮ್ ॥

ಅನುವಾದ

ಹೇರಳವಾದ ಅನ್ನವನ್ನು ಪಡೆಯಲು ಅದಿತಿದೇವಿಯನ್ನೂ, ಸ್ವರ್ಗಕಾಮನೆಗಾಗಿ ಅದಿತಿಯ ಪುತ್ರರಾದ ದೇವತೆಗಳನ್ನೂ, ರಾಜ್ಯದ ಅಭಿಲಾಷೆ ಯುಳ್ಳವನು ವಿಶ್ವೇದೇವತೆಗಳನ್ನೂ, ಪ್ರಜೆಗಳನ್ನು ತನಗೆ ಅನುಕೂಲ ರನ್ನಾಗಿ ಮಾಡಿಕೊಳ್ಳಲು ಸಾಧ್ಯದೇವತೆಗಳನ್ನು ಆರಾಸಬೇಕು. ॥ 4 ॥

(ಶ್ಲೋಕ - 5)

ಮೂಲಮ್

ಆಯುಷ್ಕಾಮೋಶ್ವಿನೌ ದೇವೌ ಪುಷ್ಟಿ ಕಾಮ ಇಲಾಂ ಯಜೇತ್ ।
ಪ್ರತಿಷ್ಠಾಕಾಮಃ ಪುರುಷೋ ರೋದಸೀ ಲೋಕಮಾತರೌ ॥

ಅನುವಾದ

ಆಯುಸ್ಸನ್ನು ಇಚ್ಛಿಸುವವನು ಅಶ್ವಿನೀಕುಮಾರರನ್ನೂ, ಪುಷ್ಟಿಗಾಗಿ ಪೃಥ್ವಿಯನ್ನೂ, ಪ್ರತಿಷ್ಠೆಯನ್ನು ಬಯಸುವವರು ಲೋಕದ ತಂದೆ-ತಾಯಿಗಳಾದ ದ್ಯಾವಾ-ಪೃಥ್ವಿಗಳನ್ನು ಆರಾಸ ಬೇಕು. ॥ 5 ॥

(ಶ್ಲೋಕ - 6)

ಮೂಲಮ್

ರೂಪಾಭಿಕಾಮೋ ಗಂಧರ್ವಾನ್ ಸೀಕಾಮೋಪ್ಸರ ಉರ್ವಶೀಮ್ ।
ಆಪತ್ಯಕಾಮ–ಃ ಸರ್ವೇಷಾಂ ಯಜೇತ ಪರಮೇಷ್ಠಿನಮ್ ॥

ಅನುವಾದ

ಸೌಂದರ್ಯಕ್ಕಾಗಿ ಗಂಧರ್ವರನ್ನೂ, ಪತ್ನಿಯ ಆಸೆಯಿದ್ದರೆ ಊರ್ವಶಿ ಎಂಬ ಅಪ್ಸರೆಯನ್ನೂ, ಎಲ್ಲರಿಗೂ ಅಪತಿ ಯಾಗಬೇಕೆಂಬ ಆಸೆಯಿದ್ದರೆ ಪರಮೇಷ್ಠಿ ಬ್ರಹ್ಮದೇವರನ್ನೂ ಉಪಾಸಿಸಬೇಕು. ॥ 6 ॥

(ಶ್ಲೋಕ - 7)

ಮೂಲಮ್

ಯಜ್ಞಂ ಯಜೇದ್ಯಶಸ್ಕಾಮಃ ಕೋಶಕಾಮಃ ಪ್ರಚೇತಸಮ್ ।
ವಿದ್ಯಾಕಾಮಸ್ತು ಗಿರಿಶಂ ದಾಂಪತ್ಯಾರ್ಥ ಉಮಾಂ ಸತೀಮ್ ॥

ಅನುವಾದ

ಯಶಸ್ಸಿಗಾಗಿ ಯಜ್ಞಪುರುಷನನ್ನೂ, ಕೋಶದ ಆಸೆಯುಳ್ಳವನು ವರುಣನನ್ನೂ, ವಿದ್ಯಾಕಾಮನೆಗಾಗಿ ಶಂಕರನನ್ನೂ, ದಾಂಪತ್ಯಪ್ರೇಮ ಬಯಸುವವರು ಉಮಾದೇವಿ ಯನ್ನು ಪೂಜಿಸಬೇಕು. ॥ 7 ॥

(ಶ್ಲೋಕ - 8)

ಮೂಲಮ್

ಧರ್ಮಾರ್ಥ ಉತ್ತಮಶ್ಲೋಕಂ ತಂತುಂ ತನ್ವನ್ ಪಿತೃ ನ್ಯಜೇತ್ ।
ರಕ್ಷಾಕಾಮಃ ಪುಣ್ಯಜನಾನೋಜಸ್ಕಾಮೋ ಮರುದ್ಗಣಾನ್ ॥

ಅನುವಾದ

ಧರ್ಮವನ್ನು ಸಂಪಾದಿಸಲು ಉತ್ತಮಶ್ಲೋಕನಾದ ವಿಷ್ಣುವನ್ನೂ, ವಂಶಪರಂಪರೆಯನ್ನು ಬಯಸುವವನು ಪಿತೃಗಳನ್ನೂ, ಪೀಡೆಗಳ ರಕ್ಷಣೆಗಾಗಿ ಯಕ್ಷರನ್ನೂ, ಬಲಶಾಲಿಯಾಗಲು ಮರುದ್ದೇವತೆಗಳನ್ನೂ ಪೂಜಿಸಬೇಕು. ॥ 8 ॥

(ಶ್ಲೋಕ - 9)

ಮೂಲಮ್

ರಾಜ್ಯಕಾಮೋ ಮನೂನ್ದೇವಾನ್ನಿರ್ಋತಿಂ ತ್ವಭಿಚರನ್ಯಜೇತ್ ।
ಕಾಮಕಾಮೋ ಯಜೇತ್ಸೋಮಂ ಅಕಾಮಃ ಪುರುಷಂ ಪರಮ್ ॥

ಅನುವಾದ

ರಾಜ್ಯಕಾಮನೆಯುಳ್ಳವನು ಮನ್ವಂತರಗಳಿಗೆ ಒಡೆಯರಾದ ಮನುಗಳನ್ನೂ, ಆಭಿಚಾರಿಕ ಕರ್ಮಗಳಿಗಾಗಿ ನಿರ್ಋತಿಯನ್ನೂ, ಕಾಮಭೋಗಗಳಿಗೆ ಚಂದ್ರನನ್ನೂ, ನಿಷ್ಕಾಮಭಾವವನ್ನು ಪಡೆ ಯುವ ಆಸೆಯುಳ್ಳವರು ಪರಮಪುರುಷ ಶ್ರೀಮನ್ನಾರಾಯಣ ನನ್ನೂ ಆರಾಸಬೇಕು. ॥ 9 ॥

(ಶ್ಲೋಕ - 10)

ಮೂಲಮ್

ಅಕಾಮಃ ಸರ್ವಕಾಮೋ ವಾ ಮೋಕ್ಷಕಾಮ ಉದಾರೀಃ ।
ತೀವ್ರೇಣ ಭಕ್ತಿಯೋಗೇನ ಯಜೇತ ಪುರುಷಂ ಪರಮ್ ॥

ಅನುವಾದ

ಉದಾರವಾದ ಮನಸ್ಸುಳ್ಳ ಬುದ್ಧಿ ವಂತನಾದ ಮನುಷ್ಯನು ನಿಷ್ಕಾಮನಾಗಿರಲೀ, ಸಕಾಮನಾಗಿರಲೀ, ಅಥವಾ ಮೋಕ್ಷಕಾಮನಾಗಿರಲೀ, ಅವನು ತೀವ್ರವಾದ ಭಕ್ತಿ ಯೋಗದಿಂದ ಆ ಭಗವಂತನಾದ ಶ್ರೀಪುರುಷೋತ್ತಮನನ್ನೇ ಆರಾಸಬೇಕು. ॥ 10 ॥

(ಶ್ಲೋಕ - 11)

ಮೂಲಮ್

ಏತಾವಾನೇವ ಯಜತಾಮಿಹ ನಿಃಶ್ರೇಯಸೋದಯಃ ।
ಭಗವತ್ಯಚಲೋ ಭಾವೋ ಯದ್ ಭಾಗವತಸಂಗತಃ ॥

ಅನುವಾದ

ಭಗವಂತನ ಪ್ರೇಮೀಭಕ್ತರ ಸಂಗಮಾಡಿ, ಭಗವಂತನಲ್ಲಿ ಅವಿಚಲವಾದ ಭಕ್ತಿಯನ್ನು ಪಡೆದು ಕೊಳ್ಳುವುದ ರಲ್ಲೇ ಎಲ್ಲ ಸಾಧಕರಿಗೆ ಎಲ್ಲಕ್ಕಿಂತ ದೊಡ್ಡದಾದ ಹಿತವಿದೆ. ॥ 11 ॥

(ಶ್ಲೋಕ - 12)

ಮೂಲಮ್

ಜ್ಞಾನಂ ಯದಾಪ್ರತಿನಿವೃತ್ತ ಗುಣೋರ್ಮಿಚಕ್ರ-
ಮಾತ್ಮಪ್ರಸಾದ ಉತ ಯತ್ರ ಗುಣೇಷ್ವಸಂಗಃ ।
ಕೈವಲ್ಯ ಸಮ್ಮತಪಥಸ್ತ್ವಥ ಭಕ್ತಿಯೋಗಃ
ಕೋ ನಿರ್ವೃತೋ ಹರಿಕಥಾಸು ರತಿಂ ನ ಕುರ್ಯಾತ್ ॥

ಅನುವಾದ

ಇಂತಹ ಸತ್ಪುರುಷರ ಸತ್ಸಂಗದಲ್ಲಿ ನಡೆಯುವ ಭಗವಂತನ ಲೀಲಾ-ಕಥೆಗಳಿಂದ ಸಂಸಾರಸಾಗರದ ತ್ರಿಗುಣಮಯ ಅಲೆಗಳ ಹೊಡೆತಗಳು ಶಾಂತವಾಗಿ, ಹೃದಯವು ಶುದ್ಧವಾಗಿ ಆನಂದದ ಅನುಭವವಾಗುವಂತಹ ದುರ್ಲಭಜ್ಞಾನದ ಪ್ರಾಪ್ತಿಯಾಗುತ್ತದೆ. ಇದರಿಂದ ಇಂದ್ರಿಯಗಳಲ್ಲಿ ಆಸಕ್ತಿಯು ಉಳಿಯದೆ ಕೈವಲ್ಯ ಮೋಕ್ಷಕ್ಕೆ ಸರ್ವಸಮ್ಮತವಾದ ಭಕ್ತಿಯೋಗವು ಪ್ರಾಪ್ತವಾಗುತ್ತದೆ. ಶ್ರೀಭಗವಂತನ ರಸಮಯವಾದ ಹರಿಕಥೆಗಳ ರುಚಿಹತ್ತಿದ ಬಳಿಕ ಯಾರಿಗೆ ತಾನೇ ಅದರಲ್ಲಿ ಭಕ್ತಿಯುಂಟಾಗುವುದಿಲ್ಲ ? ॥ 12 ॥

(ಶ್ಲೋಕ - 13)

ಮೂಲಮ್ (ವಾಚನಮ್)

ಶೌನಕ ಉವಾಚ

ಮೂಲಮ್

ಇತ್ಯಭಿವ್ಯಾಹೃತಂ ರಾಜಾ ನಿಶಮ್ಯ ಭರತರ್ಷಭಃ ।
ಕಿಮನ್ಯತ್ಪೃಷ್ಟವಾನ್ಭೂಯೋ ವೈಯಾಸಕಿಮೃಷಿಂ ಕವಿಮ್ ॥

ಅನುವಾದ

ಶೌನಕರು ಕೇಳುತ್ತಾರೆ ಸೂತಪುರಾಣಿಕರೇ ! ಶುಕಮಹಾ ಮುನಿಗಳು ಹೇಳಿದ ಮಾತನ್ನು ಕೇಳಿದ ಭರತಕುಲತಿಲಕನಾದ ಪರೀಕ್ಷಿದ್ರಾಜನು ಜ್ಞಾನಿಶ್ರೇಷ್ಠರೂ, ವರ್ಣನಕಲಾನಿಪುಣರೂ ಆದ ವ್ಯಾಸಪುತ್ರರನ್ನು ಮತ್ತೇನು ಪ್ರಶ್ನಿಸಿದರು ? ॥ 13 ॥

(ಶ್ಲೋಕ - 14)

ಮೂಲಮ್

ಏತಚ್ಛುಶ್ರೂಷತಾಂ ವಿದ್ವನ್ಸೂತ ನೋರ್ಹಸಿ ಭಾಷಿತುಮ್ ।
ಕಥಾ ಹರಿಕಥೋದರ್ಕಾಃ ಸತಾಂ ಸ್ಯುಃ ಸದಸಿ ಧ್ರುವಮ್ ॥

ಅನುವಾದ

ಮಹಾತ್ಮರಾದ ಸೂತರೇ ! ನೀವಾದರೋ ಎಲ್ಲವನ್ನೂ ಬಲ್ಲವರಾಗಿದ್ದೀರಿ. ಸತ್ಪು ರುಷರು ಸೇರಿದ ಸಭೆಯಲ್ಲಿ ಭಗವಂತನ ಕಥಾಮೃತದ ಆಸ್ವಾದನೆ ಯಲ್ಲೇ ಪರ್ಯವಸಾನ ಹೊಂದುವ ಮಾತುಗಳೇ ನಡೆಯುವುವು ತಾನೇ ? ನಾವುಗಳು ಅದನ್ನು ಪ್ರೇಮದಿಂದ ಕೇಳಲಿಚ್ಛಿಸುವೆವು. ನೀವು ದಯವಿಟ್ಟು ಹೇಳುವವರಾಗಿರಿ. ॥ 14 ॥

(ಶ್ಲೋಕ - 15)

ಮೂಲಮ್

ಸ ವೈ ಭಾಗವತೋ ರಾಜಾ ಪಾಂಡವೇಯೋ ಮಹಾರಥಃ ।
ಬಾಲಕ್ರೀಡನಕೈಃ ಕ್ರೀಡನ್ ಕೃಷ್ಣಕ್ರೀಡಾಂ ಯ ಆದದೇ ॥

ಅನುವಾದ

ಪಾಂಡವಕುಲ ನಂದನನಾದ ಮಹಾರಥೀ ಪರೀಕ್ಷಿದ್ರಾಜನು ಪರಮ ಭಾಗವತೋ ತ್ತಮನಾಗಿದ್ದನು. ಬಾಲ್ಯದಲ್ಲಿ ಆಟವಾಡುವಾಗಲೂ ಶ್ರೀಕೃಷ್ಣನ ಸಂಬಂಧವಾದ ಆಟಗಳಿಂದಲೇ ಹೆಚ್ಚಿನ ರಸವನ್ನು ಅನುಭವಿಸುತ್ತಿದ್ದನು. ॥ 15 ॥

(ಶ್ಲೋಕ - 16)

ಮೂಲಮ್

ವೈಯಾಸಕಿಶ್ಚ ಭಗವಾನ್ ವಾಸುದೇವಪರಾಯಣಃ ।
ಉರುಗಾಯಗುಣೋದಾರಾಃ ಸತಾಂ ಸ್ಯುರ್ಹಿ ಸಮಾಗಮೇ ॥

ಅನುವಾದ

ಭಗವನ್ಮಯ ಶ್ರೀಶುಕಮಹಾಮುನಿಗಳೂ ಕೂಡ ಹುಟ್ಟಿದಂದಿನಿಂದಲೇ ಭಗವತ್ಪರಾಯಣರಾಗಿದ್ದರು. ಇಂತಹ ಸತ್ಪುರುಷರ ಸಮಾಗಮವಾದಾಗ ಭಗವಂತನ ಮಂಗಳಮಯ ಗುಣಗಳ ದಿವ್ಯ ಚರ್ಚೆಯೇ ಅವಶ್ಯವಾಗಿ ನಡೆದಿರಬೇಕು. ॥ 16 ॥

(ಶ್ಲೋಕ - 17)

ಮೂಲಮ್

ಆಯುರ್ಹರತಿ ವೈ ಪುಂಸಾಂ ಉದ್ಯನ್ನಸ್ತಂ ಚ ಯನ್ನಸೌ ।
ತಸ್ಯರ್ತೇ ಯತ್ಕ್ಷಣೋ ನೀತ ಉತ್ತಮಶ್ಲೋಕವಾರ್ತಯಾ ॥

ಅನುವಾದ

ಮನುಷ್ಯರ ಜೀವನದಲ್ಲಿ ಭಗವಾನ್ ಶ್ರೀಕೃಷ್ಣನ ಅನಂತಕಲ್ಯಾಣ ಗುಣಗಳ ಗಾನ-ಶ್ರವಣದಲ್ಲಿ ಕಳೆಯುವ ಕಾಲವೇ ಸಾರ್ಥಕವಾದ ಕಾಲವು. ಬೇರೆ ರೀತಿಯಲ್ಲಿ ಕಳೆದ ಆಯುಸ್ಸು ವ್ಯರ್ಥವೇ ಸರಿ. ಭಗವಾನ್ ಭಾಸ್ಕರನು ಪ್ರತಿದಿನವೂ ಉದಯಾಸ್ತದಿಂದ ಅವರ ಆಯುಸ್ಸನ್ನು ಕಸಿದುಕೊಳ್ಳುವನು. ॥ 17 ॥

(ಶ್ಲೋಕ - 18)

ಮೂಲಮ್

ತರವಃ ಕಿಂ ನ ಜೀವಂತಿ ಭಸಾಃ ಕಿಂ ನ ಶ್ವಸಂತ್ಯುತ ।
ನ ಖಾದಂತಿ ನ ಮೇಹಂತಿ ಕಿಂ ಗ್ರಾಮಪಶವೋಪರೇ ॥

(ಶ್ಲೋಕ - 19)

ಮೂಲಮ್

ಶ್ವವಿಡ್ವರಾಹೋಷ್ಟ್ರಖರೈಃ ಸಂಸ್ತುತಃ ಪುರುಷಃ ಪಶುಃ ।
ನ ಯತ್ಕರ್ಣಪಥೋಪೇತೋ ಜಾತು ನಾಮ ಗದಾಗ್ರಜಃ ॥

ಅನುವಾದ

ವೃಕ್ಷಗಳು ಜೀವಿಸು ತ್ತಿಲ್ಲವೇ ? ಕಮ್ಮಾರನ ಚರ್ಮದ ತಿದಿಯು ಉಸಿರಾಡುವು ದಿಲ್ಲವೇ ? ಗ್ರಾಮದ ಸಾಕುಪ್ರಾಣಿಗಳು ಮನುಷ್ಯರಂತೆ ತಿಂದುಂಡು ಬದುಕುವುದಿಲ್ಲವೇ ? ಶ್ರೀಕೃಷ್ಣನ ಕಥಾ ಮೃತವು ಯಾವಾಗಲೂ ಕಿವಿಗೆ ಬೀಳದಿರುವ ನರಪಶುವು ನಾಯಿ, ಹಂದಿ, ಒಂಟೆ, ಕತ್ತೆಗಳಿಗಿಂತಲೂ ನೀಚವೆಂದು ತಿಳಿಯಬೇಕು. ॥ 18-19 ॥

(ಶ್ಲೋಕ - 20)

ಮೂಲಮ್

ಬಿಲೇ ಬತೋರುಕ್ರಮವಿಕ್ರಮಾನ್ ಯೇ
ನ ಶೃಣ್ವತಃ ಕರ್ಣಪುಟೇ ನರಸ್ಯ ।
ಜಿಹ್ವಾಸತೀ ದಾರ್ದುರಿಕೇವ ಸೂತ
ನ ಚೋಪಗಾಯತ್ಯುರುಗಾಯಗಾಥಾಃ ॥

ಅನುವಾದ

ಸೂತಪುರಾಣಿಕರೇ ! ಭಗವಾನ್ ಶ್ರೀಕೃಷ್ಣನ ದಿವ್ಯಕಥೆಯನ್ನು ಕೇಳದೆ ಇರುವ ಮನುಷ್ಯನ ಕಿವಿಗಳು ಇಲಿಗಳ ಬಿಲದಂತೆ ಯಲ್ಲವೇ? ಹಾಗೆಯೇ ಆ ಭಗವಂತನ ಲೀಲಾ-ಕಥೆಗಳನ್ನು ಹಾಡದವನ ನಾಲಿಗೆಯು ಕಪ್ಪೆಗಳ ನಾಲಿಗೆಗೆ ಸಮಾನವಲ್ಲವೇ? ॥ 20॥

(ಶ್ಲೋಕ - 21)

ಮೂಲಮ್

ಭಾರಃ ಪರಂ ಪಟ್ಟ ಕಿರೀಟಜುಷ್ಟ-
ಮಪ್ಯುತ್ತಮಾಂಗಂ ನ ನಮೇನ್ಮುಕುಂದಮ್ ।
ಶಾವೌ ಕರೌ ನೋ ಕುರುತಃ ಸಪರ್ಯಾಂ
ಹರೇರ್ಲಸತ್ಕಾಂಚನಕಂಕಣೌ ವಾ ॥

ಅನುವಾದ

ಭಗವಾನ್ ಮುಕುಂದನ ಚರಣಗಳಿಗೆ ಎರಗದಿರುವ ತಲೆಯು ರೇಶ್ಮೆಯ ರುಮಾಲು, ರತ್ನಕಿರೀಟಗಳಿಂದ ಕೂಡಿದ್ದರೂ ಕೇವಲ ಹೊರೆಯೆಂದೇ ಭಾವಿಸಬೇಕು. ಶ್ರೀಭಗವಂತನ ಸೇವೆ-ಪೂಜೆಗಳನ್ನು ಮಾಡದ ಕೈಗಳು ಥಳ-ಥಳಿಸುವ ಚಿನ್ನದ ಕಂಕಣಗಳಿಂದ ಕೂಡಿದ್ದರೂ ಹೆಣದ ಕೈಗಳಂತೆ ಆಗಿವೆ. ॥ 21 ॥

(ಶ್ಲೋಕ - 22)

ಮೂಲಮ್

ಬರ್ಹಾಯಿತೇ ತೇ ನಯನೇ ನರಾಣಾಂ
ಲಿಂಗಾನಿ ವಿಷ್ಣೋರ್ನ ನಿರೀಕ್ಷ ತೋ ಯೇ ।
ಪಾದೌ ನೃಣಾಂ ತೌ ದ್ರುಮಜನ್ಮಭಾಜೌ
ಕ್ಷೇತ್ರಾಣಿ ನಾನುವ್ರಜತೋ ಹರೇರ್ಯೌ ॥

ಅನುವಾದ

ಭಗವಂತನ ಸ್ಮರಣೆ ಕೊಡಿಸುವಂತಹ ಮೂರ್ತಿ, ತೀರ್ಥ, ನದಿಗಳನ್ನು ದರ್ಶಿಸದೇ ಇರುವ ಕಣ್ಣುಗಳು ನವಿಲುಗರಿಯ ಕಣ್ಣುಗಳಂತೆ ಇವೆ. ಭಗವಂತನ ದಿವ್ಯ ಕ್ಷೇತ್ರಗಳಿಗೆ ಹೋಗದಿರುವ ಕಾಲುಗಳು ಮರ ಗಾಲುಗಳೇ ಸರಿ. ಅಥವಾ ವೃಕ್ಷಜಾತಿಯ ಜೀವಿಗಳಿಗೆ ಸಮಾನವಾದ ಕಾಲುಗಳು. ವೃಕ್ಷಗಳಲ್ಲಿ ಚೈತನ್ಯವಿದ್ದರೂ ಅವು ನಡೆಯಲಾರವು. ॥ 22 ॥

(ಶ್ಲೋಕ - 23)

ಮೂಲಮ್

ಜೀವಚ್ಛವೋ ಭಾಗವತಾಂಘ್ರಿರೇಣುಂ
ನ ಜಾತು ಮರ್ತ್ಯೋಭಿಲಭೇತ ಯಸ್ತು ।
ಶ್ರೀವಿಷ್ಣುಪದ್ಯಾ ಮನುಜಸ್ತುಲಸ್ಯಾಃ
ಶ್ವಸಂಚ್ಛವೋ ಯಸ್ತು ನ ವೇದ ಗಂಧಮ್ ॥

ಅನುವಾದ

ಭಗವದ್ಭಕ್ತರಾದ ಸಂತರ ಚರಣಧೂಳಿಯನ್ನು ಎಂದೂ ತಲೆಯಮೇಲೆ ಮುಡಿದುಕೊಳ್ಳದ ಮನುಷ್ಯನು ಬದುಕಿ ದ್ದರೂ ಶವಕ್ಕೆ ಸಮಾನನು. ಶ್ರೀಕೃಷ್ಣನ ಚರಣಗಳಿಗೆ ಅರ್ಪಿಸಿದ ತುಳಸಿಯನ್ನು ಆಘ್ರಾಣಿಸದ ಮನುಷ್ಯನು ಉಸಿರಾಡುತ್ತಿದ್ದರೂ ಹೆಣದಂತೆಯೇ ಆಗಿದ್ದಾನೆ. ॥ 23 ॥

(ಶ್ಲೋಕ - 24)

ಮೂಲಮ್

ತದಶ್ಮಸಾರಂ ಹೃದಯಂ ಬತೇದಂ
ಯದ್ಗೃಹ್ಯಮಾಣೈರ್ಹರಿನಾಮಧೇಯೈಃ ।
ನ ವಿಕ್ರಿಯೇತಾಥ ಯದಾ ವಿಕಾರೋ
ನೇತ್ರೇ ಜಲಂ ಗಾತ್ರರುಹೇಷು ಹರ್ಷಃ ॥

ಅನುವಾದ

ಸೂತಪುರಾಣಿಕರೇ ! ಭಗ ವಾನ್ ಶ್ರೀಹರಿಯ ದಿವ್ಯನಾಮಗಳ ಶ್ರವಣ-ಸಂಕೀರ್ತನೆಗಳು ನಡೆಯುತ್ತಿದ್ದರೂ ಯಾರ ಹೃದಯವು ಕರಗುವುದಿಲ್ಲವೋ ಅದರ ಪರಿಣಾಮವಾಗಿ ಕಣ್ಣುಗಳಲ್ಲಿ ಆನಂದಬಾಷ್ಪಗಳು ಒಸರುವುದಿಲ್ಲವೋ, ಹರ್ಷದ ರೋಮಾಂಚನ ಉಂಟಾಗುವುದಿಲ್ಲವೋ, ಅದು ವಾಸ್ತವ ಹೃದಯವಾಗಿರದೆ ಕಬ್ಬಿಣದ ತುಂಡೇ ಆಗಿದೆ. ॥ 24 ॥

(ಶ್ಲೋಕ - 25)

ಮೂಲಮ್

ಅಥಾಭಿಧೇಹ್ಯಂಗ ಮನೋನುಕೂಲಂ
ಪ್ರಭಾಷಸೇ ಭಾಗವತಪ್ರಧಾನಃ ।
ಯದಾಹ ವೈಯಾಸಕಿರಾತ್ಮವಿದ್ಯಾ-
ವಿಶಾರದೋ ನೃಪತಿಂ ಸಾಧು ಪೃಷ್ಟಃ ॥

ಅನುವಾದ

ಮಹಾತ್ಮರೇ ! ನಿಮ್ಮ ಮಧುರವಾದ ವಾಣಿಯು ಮನಸ್ಸಿಗೆ ರಮಣೀಯವಾಗಿ, ಅತ್ಯಂತ ಹಿತಕರವಾಗಿದೆ. ಪರೀಕ್ಷಿದ್ರಾಜನು ಶ್ರದ್ಧಾ-ಭಕ್ತಿಗಳಿಂದ ಕೇಳಿದ ಪ್ರಶ್ನೆಗಳಿಗೆ ಭಗವಂತನ ಪರಮಭಕ್ತರಾದ ಆತ್ಮವಿದ್ಯಾ ವಿಶಾರದ ರಾದ ಶ್ರೀಶುಕಮಹಾಮುನಿಗಳು ಏನು ಅಪ್ಪಣೆ ಕೊಡಿಸಿದರೋ ಅದನ್ನು ನಮಗೆ ದಯಮಾಡಿ ಹೇಳುವವರಾಗಿರಿ. ॥ 25 ॥

ಅನುವಾದ (ಸಮಾಪ್ತಿಃ)

ಮೂರನೆಯ ಅಧ್ಯಾಯವು ಮುಗಿಯಿತು. ॥3॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಿತೀಯಸ್ಕಂಧೇ ತೃತೀಯೋಽಧ್ಯಾಯಃ ॥3॥