[ಮೊದಲನೆಯ ಅಧ್ಯಾಯ]
ಭಾಗಸೂಚನಾ
ಧ್ಯಾನವಿಧಿ ಮತ್ತು ಶ್ರೀಭಗವಂತನ ವಿರಾಟ್ಸ್ವರೂಪದ ವರ್ಣನೆ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ವರೀಯಾನೇಷ ತೇ ಪ್ರಶ್ನಃ ಕೃತೋ ಲೋಕಹಿತೋ ನೃಪ ।
ಆತ್ಮವಿತ್ಸಮ್ಮತಃ ಪುಂಸಾಂ ಶ್ರೋತವ್ಯಾದಿಷು ಯಃ ಪರಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು - ‘‘ಪರೀಕ್ಷಿದ್ರಾಜನೇ! ನೀನು ಲೋಕಹಿತಕ್ಕಾಗಿ ಕೇಳಿರುವ ಪ್ರಶ್ನೆಯು ತುಂಬಾ ಶ್ರೇಷ್ಠವಾ ದುದು. ಮನುಷ್ಯರ ಶ್ರವಣ, ಕೀರ್ತನ, ಸ್ಮರಣೆ ಮುಂತಾದವುಗಳು ಏನೇನುಂಟೋ, ಅವುಗಳಲ್ಲಿ ಅತ್ಯಂತ ಉತ್ತಮವಾದುದು ಇದು. ಆತ್ಮಜ್ಞಾನಿಗಳಿಗೆ ಸಮ್ಮತವಾದುದು ಈ ಪ್ರಶ್ನೆ.॥1॥
(ಶ್ಲೋಕ - 2)
ಮೂಲಮ್
ಶ್ರೋತವ್ಯಾದೀನಿ ರಾಜೇಂದ್ರ ನೃಣಾಂ ಸಂತಿ ಸಹಸ್ರಶಃ ।
ಅಪಶ್ಯತಾಮಾತ್ಮತತ್ತ್ವಂ ಗೃಹೇಷು ಗೃಹಮೇಧಿನಾಮ್ ॥
ಅನುವಾದ
ರಾಜೇಂದ್ರನೇ! ಅತ್ಮತತ್ತ್ವವನ್ನರಿಯದೆ ಮನೆಯ ಕೆಲಸ-ಕಾರ್ಯಗಳಲ್ಲಿಯೇ ಮಗ್ನರಾದ ಗೃಹಸ್ಥರಿಗೆ ಕೇಳಲು, ಯೋಚಿಸಲು, ಮಾಡಲು ಸಾವಿರಾರು ವಿಷಯಗಳಿರುತ್ತವೆ.॥2॥
(ಶ್ಲೋಕ - 3)
ಮೂಲಮ್
ನಿದ್ರಯಾ ಹ್ರಿಯತೇ ನಕ್ತಂ ವ್ಯವಾಯೇನ ಚ ವಾ ವಯಃ ।
ದಿವಾ ಚಾರ್ಥೇಹಯಾ ರಾಜನ್ಕುಟುಂಬ ಭರಣೇನ ವಾ ॥
ಅನುವಾದ
ಅವರ ಆಯುಸ್ಸೆಲ್ಲಾ ಇವುಗಳಲ್ಲೇ ಕಳೆದುಹೋಗುತ್ತದೆ. ಅವರ ರಾತ್ರಿಯು ನಿದ್ದೆ ಯಲ್ಲೋ, ಸೀಪ್ರಸಂಗದಲ್ಲೋ ಕಳೆದುಹೋದರೆ ಹಗಲು ಹಣ ಸಂಪಾದನೆಯ ಹಗರಣಗಳಲ್ಲಿ, ಕುಟುಂಬ ಪೋಷಣೆಯಲ್ಲಿ ಕಳೆದುಹೋಗುತ್ತದೆ.॥3॥
(ಶ್ಲೋಕ - 4)
ಮೂಲಮ್
ದೇಹಾಪತ್ಯಕಲತ್ರಾದಿಷ್ವಾತ್ಮಸೈನ್ಯೇಷ್ವಸತ್ಸ್ವಪಿ ।
ತೇಷಾಂ ಪ್ರಮತ್ತೋ ನಿಧನಂ ಪಶ್ಯನ್ನಪಿ ನ ಪಶ್ಯತಿ ॥
ಅನುವಾದ
ಸಂಸಾರದಲ್ಲಿ ಮನುಷ್ಯನಿಗೆ ಅತ್ಯಂತ ಘನಿಷ್ಠ ಸಂಬಂಧವೆಂದು ಹೇಳಲಾಗುವ ಶರೀರ, ಪತ್ನೀ, ಪುತ್ರ ಮುಂತಾದವುಗಳು ಏನೆಲ್ಲ ಇದೆಯೋ, ಅವೆಲ್ಲ ಅಸತ್ಪದಾರ್ಥಗಳು. ಆದರೆ ಜೀವಿಯು ಹಗಲು-ಇರುಳು ಅವೆಲ್ಲವೂ ಸಾವಿಗೆ ಈಡಾಗುವುದನ್ನು ನೋಡುತ್ತಾ ಇದ್ದರೂ ಎಚ್ಚರವಾಗದಷ್ಟು ಮೋಹದಲ್ಲಿ ಹುಚ್ಚನಾಗಿರುತ್ತಾನೆ.॥4॥
(ಶ್ಲೋಕ - 5)
ಮೂಲಮ್
ತಸ್ಮಾದ್ಭಾರತ ಸರ್ವಾತ್ಮಾ ಭಗವಾನೀಶ್ವರೋ ಹರಿಃ ।
ಶ್ರೋತವ್ಯಃ ಕೀರ್ತಿತವ್ಯಶ್ಚ ಸ್ಮರ್ತವ್ಯಶ್ಚೇಚ್ಛತಾಭಯಮ್ ॥
ಅನುವಾದ
ಅದಕ್ಕಾಗಿ ಪರೀಕ್ಷಿತನೇ! ಅಭಯಪದವನ್ನು ಪಡೆಯಲಿಚ್ಛಿಸುವವನಾದರೋ ಸರ್ವಾತ್ಮಾ ಸರ್ವಶಕ್ತಿಯುಳ್ಳ ಭಗವಾನ್ ಶ್ರೀಕೃಷ್ಣನ ಲೀಲೆಗಳನ್ನೇ ಶ್ರವಣ, ಕೀರ್ತನ, ಸ್ಮರಣೆ ಮಾಡಬೇಕು. ಹೀಗೆ ಮಾಡುವುದರಿಂದ ಅವನಿಗೆ ಭಗವಂತನಲ್ಲಿ ತದಾಕಾರ ವೃತ್ತಿಯುಂಟಾಗಿ ಸುಲಭವಾಗಿ ಪರಮಾತ್ಮನ ಪ್ರಾಪ್ತಿಯುಂಟಾಗುತ್ತದೆ.॥5॥
(ಶ್ಲೋಕ - 6)
ಮೂಲಮ್
ಏತಾವಾನ್ ಸಾಂಖ್ಯ ಯೋಗಾಭ್ಯಾಂ ಸ್ವಧರ್ಮಪರಿನಿಷ್ಠಯಾ ।
ಜನ್ಮಲಾಭಃ ಪರಃ ಪುಂಸಾಮಂತೇ ನಾರಾಯಣಸ್ಮೃತಿಃ ॥
ಅನುವಾದ
ಜ್ಞಾನಯೋಗದಿಂದಾಗಲೀ, ಭಕ್ತಿಯೋಗದಿಂದಾಗಲೀ, ಸ್ವಧರ್ಮ ನಿಷ್ಠೆಯಿಂದಾಗಲೀ ಹೇಗಾದರೂ ಅಂತ್ಯಕಾಲದಲ್ಲಿ ನಾರಾಯಣ ಸ್ಮರಣೆ ಉಂಟಾಗುವಂತೆ ಮಾಡಿ ಕೊಳ್ಳುವುದೇ ಮನುಷ್ಯ ಜೀವನದ ಪರಮಲಾಭವಾಗಿದೆ. ಆದ್ದರಿಂದ ಮೇಲೆ ಹೇಳಿದ ಈ ಮೂರರಲ್ಲಿ, ಯಾವುದೇ ಯೋಗದ ಮೂಲಕ ತನ್ನನ್ನು ಭಗವಂತನಲ್ಲಿ ತೊಡಗಿಸಿಕೊಳ್ಳಬೇಕು.॥6॥
(ಶ್ಲೋಕ - 7)
ಮೂಲಮ್
ಪ್ರಾಯೇಣ ಮುನಯೋ ರಾಜನ್ನಿವೃತ್ತಾ ವಿಧಿಷೇಧತಃ ।
ನೈರ್ಗುಣ್ಯಸ್ಥಾ ರಮಂತೇ ಸ್ಮ ಗುಣಾನುಕಥನೇ ಹರೇಃ ॥
ಅನುವಾದ
ಪರೀಕ್ಷಿ ದ್ರಾಜನೇ! ನಿರ್ಗುಣ ಬ್ರಹ್ಮನಲ್ಲಿ ನೆಲೆಗೊಂಡಿರುವ, ವಿಧಿ-ನಿಷೇಧ ಗಳನ್ನು ಮೀರಿರುವ ದೊಡ್ಡ-ದೊಡ್ಡ ಋಷಿ-ಮುನಿಗಳೂ ಕೂಡ ಪ್ರಾಯಶಃ ಭಗವಂತನ ಅನಂತಕಲ್ಯಾಣಗುಣಗಳನ್ನು ವರ್ಣಿಸುವು ದರಲ್ಲೇ ರಮಿಸುತ್ತಿರುತ್ತಾರೆ. (ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತಃ ಪರಸ್ಪರಮ್ ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ ॥) (ಭಗವದ್ಗೀತೆ 10/9) ॥7॥
(ಶ್ಲೋಕ - 8)
ಮೂಲಮ್
ಇದಂ ಭಾಗವತಂ ನಾಮ ಪುರಾಣಂ ಬ್ರಹ್ಮಸಮ್ಮಿತಮ್ ।
ಅಧೀತವಾನ್ದ್ವಾಪರಾದೌ ಪಿತುರ್ದ್ವೈಪಾಯನಾದಹಮ್ ॥
ಅನುವಾದ
ಅಂತಹ ಮಹಾಮಹಿಮೆಯ ದಿವ್ಯ ಪ್ರಬಂಧವಾಗಿ ವೇದ ಸದೃಶವೂ, ಬ್ರಹ್ಮರೂಪವೂ ಆಗಿರುವ ಈ ಭಾಗವತವೆಂಬ ಮಹಾ ಪುರಾಣ ವನ್ನು ನಾನು ದ್ವಾಪರಯುಗದ ಪ್ರಾರಂಭದಲ್ಲಿ ನನ್ನ ತೀರ್ಥರೂಪ ರಾದ ಶ್ರೀಕೃಷ್ಣದ್ವೈಪಾಯನರಿಂದ ಅಧ್ಯಯನ ಮಾಡಿದೆ.॥8॥
(ಶ್ಲೋಕ - 9)
ಮೂಲಮ್
ಪರಿನಿಷ್ಠಿತೋಪಿ ನೈರ್ಗುಣ್ಯ ಉತ್ತಮಶ್ಲೋಕಲೀಲಯಾ ।
ಗೃಹೀತಚೇತಾ ರಾಜರ್ಷೇ ಆಖ್ಯಾನಂ ಯದಧೀತವಾನ್ ॥
ಅನುವಾದ
ರಾಜರ್ಷಿಯೇ ! ನಾನು ನಿರ್ಗುಣಸ್ವರೂಪನಾದ ಪರಮಾತ್ಮನಲ್ಲಿ ನಿಷ್ಠೆಯುಳ್ಳವನು. ಆದರೂ ಪುಣ್ಯಕೀರ್ತಿಯಾದ ಭಗವಾನ್ ಶ್ರೀಕೃಷ್ಣನ ಮಧುರಲೀಲೆಗಳು ಬಲವಂತವಾಗಿ ನನ್ನ ಮನಸ್ಸನ್ನು ಸೂರೆಗೊಂಡವು. ಆದ್ದರಿಂದ ನಾನು ಈ ಪುರಾಣವನ್ನು ಅಧ್ಯಯನ ಮಾಡಿದೆ.*॥9॥
ಟಿಪ್ಪನೀ
- ಈ ಭಾಗವತ ಪುರಾಣವನ್ನು ತನ್ನ ಪುತ್ರನಾದ ಶುಕಮುನಿಗೆ ಉಪದೇಶಿಸಬೇಕೆಂಬ ಇಚ್ಛೆಯು ವ್ಯಾಸರಲ್ಲಿ ಪ್ರಬಲವಾಗಿತ್ತು. ಆದರೆ ಅವನಾದರೋ ಪೂರ್ಣ ವೈರಾಗ್ಯವುಳ್ಳವನಾಗಿದ್ದನು. ಯಾವುದೇ ಮಮತೆ ಅವನಿಗೆ ಎಲ್ಲಿಯೂ ಇರಲಿಲ್ಲ. ಒಮ್ಮೆ ವೇದವ್ಯಾಸರ ಶಿಷ್ಯರು ಭಾಗವತದ ಶ್ಲೋಕಗಳನ್ನು ಹಾಡುತ್ತಿದ್ದರು. ಅದನ್ನು ಶುಕಮುನಿಯು ಕೇಳಿದರು
ಅಹೋ ಬಕೀ ಯಂ ಸ್ತನಕಾಲಕೂಟಂ ಜಿಘಾಂಸಯಾ ಪಾಯಯದಪ್ಯಸಾಧ್ವೀ
ಲೇಭೇ ಗತಿಂ ಧಾತ್ರ್ಯುಚಿತಾಂ ತತೋನ್ಯಂ ಕಂ ವಾ ದಯಾಲುಂ ಶರಣಂ ವ್ರಜೇಮ ॥
(ಭಾಗವತ 3/2/23)
ಬರ್ಹಾಪೀಡಂ ನಟವರವಪುಃ ಕರ್ಣಯೋಃ ಕರ್ಣಿಕಾರಂ ಬಿಭ್ರದ್ ವಾಸಃ ಕನಕಕಪಿಶಂ ವೈಜಯಂತೀಂ ಚ ಮಾಲಾಮ್
ರಂಧ್ರಾನ್ ವೇಣೋರಧರ ಸುಧಯಾ ಪೂರಯನ್ ಗೋಪವೃಂದೈಃ ವೃಂದಾರಣ್ಯಂ ಸ್ವಪದರಮಣಂ ಪ್ರಾವಿಶದ್ ಗೀತಕೀರ್ತಿಃ ॥
(ಭಾಗವತ 10/21/5)
ಈ ಎರಡು ಶ್ಲೋಕಗಳು ಕೇಳುತ್ತಲೇ ಶುಕರು ಭಗವಂತನ ಲೀಲಾಮೃತದಲ್ಲಿ ಮುಳುಗಿಹೋದರು ಹಾಗೂ ಈ ಗ್ರಂಥದ ಕಡೆಗೆ ಸೆಳೆಯಲ್ಪಟ್ಟರು. ಮತ್ತೆ ಪೂಜ್ಯರಾದ ತಂದೆಯಿಂದ ಈ ಗ್ರಂಥವನ್ನು ಪೂರ್ಣವಾಗಿ ಅಧ್ಯಯನಮಾಡಿದರು.
ಈ ಭಾಗವತ ಗ್ರಂಥರತ್ನದ ಭಾವಗಳನ್ನು ತಿಳಿದು-ಅರಿತುಕೊಂಡು ಮನನ-ಚಿಂತನೆ ಮಾಡುವುದರಿಂದ ಭಗವಂತನ ಕುರಿತು ಭಕ್ತಿಯು ಬೆಳೆಯುತ್ತಾ ಹೋಗುತ್ತದೆ. ಭಕ್ತನ ಉದ್ಧಾರದಲ್ಲಿ ಯಾವುದೇ ಶಂಕೆ ಇರುವುದಿಲ್ಲ. ಏಕೆಂದರೆ, ಭಕ್ತನ ಉದ್ಧಾರವನ್ನು ಸಾಕ್ಷಾತ್ ಭಗವಂತನೇ ಮಾಡುತ್ತಾನೆ. ಹೀಗೆ ಗೀತೆಯಲ್ಲಿ ಭಗವಂತನೇ ಹೇಳಿರುವನು-
ತೇಷಾ ಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್ ಭವಾಮಿ ನಚಿರಾತ್ಪಾರ್ಥ ಮಯ್ಯಾವೇಶಿತಚೇತಸಾಮ್ ॥
(ಭಗವದ್ಗೀತೆ 12/7)
ಆದ್ದರಿಂದ ಭಾಗವತದ ಮುಖ್ಯ-ಮುಖ್ಯ ಶ್ಲೋಕಗಳನ್ನು ಪದೇ-ಪದೇ ಓದುತ್ತಾ ಇರುವ ಅಭ್ಯಾಸವಿರಿಸಿಕೊಳ್ಳಬೇಕು. ಇದರಿಂದ ಭಗವತ್ಪ್ರಾಪ್ತಿಯಲ್ಲಿ ಬಹಳ ಸಹಾಯವಾಗುತ್ತದೆ. ಹೊಸ-ಹೊಸ ಭಾವಗಳು ಉಂಟಾಗುತ್ತವೆ. ಭಗವಂತನ ವಿಶೇಷಕೃಪೆಯ ಅನುಭವವಾಗತೊಡಗುತ್ತದೆ.
(ಶ್ಲೋಕ - 10)
ಮೂಲಮ್
ತದಹಂ ತೇಭಿಧಾಸ್ಯಾಮಿ ಮಹಾಪೌರುಷಿಕೋ ಭವಾನ್ ।
ಯಸ್ಯ ಶ್ರದ್ದಧತಾಮಾಶು ಸ್ಯಾನ್ಮುಕುಂದೇ ಮತಿಃ ಸತೀ ॥
ಅನುವಾದ
ನೀನು ಭಗವಂತನ ಪರಮಭಕ್ತನಾದ್ದರಿಂದ ನಿನಗೆ ಇದನ್ನು ನಾನು ಹೇಳುತ್ತೇನೆ. ಇದರಲ್ಲಿ ಶ್ರದ್ಧೆಯನ್ನಿಡುವವರ ಚಿತ್ತವೃತ್ತಿಗಳು ಶುದ್ಧವಾಗಿ ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ಅನನ್ಯ ಭಕ್ತಿಯಿಂದ ಬೇಗನೇ ತೊಡಗಿಕೊಳ್ಳುವವು.॥10॥
(ಶ್ಲೋಕ - 11)
ಮೂಲಮ್
ಏತನ್ನಿರ್ವಿದ್ಯ ಮಾನಾನಾಮಿಚ್ಛ ತಾಮಕುತೋಭಯಮ್ ।
ಯೋಗಿನಾಂ ನೃಪ ನಿರ್ಣೀತಂ ಹರೇರ್ನಾಮಾನುಕೀರ್ತನಮ್ ॥
ಅನುವಾದ
ಎಲೈ ರಾಜನೇ! ಲೋಕ-ಪರಲೋಕದ ಯಾವುದೇ ವಸ್ತುವನ್ನು ಬಯಸುವವರಿಗೆ, ಸಂಸಾರದಲ್ಲಿ ದುಃಖಗಳನ್ನನುಭವಿಸಿ ವೈರಾಗ್ಯ ಹೊಂದಿದವರಿಗೆ, ನಿರ್ಭಯವಾದ ಮೋಕ್ಷಪದವನ್ನು ಪಡೆಯಲು ಬಯಸುವ ಸಾಧಕರಿಗೆ ಹಾಗೂ ಯೋಗಸಂಪನ್ನ ಸಿದ್ಧ ಜ್ಞಾನಿಗಳಿಗೂ ಕೂಡ ಭಗವನ್ನಾಮಕೀರ್ತನರೂಪವಾದ ಈ ಪುರಾಣವು ಶ್ರೇಯಸ್ಕರವೆಂದು ಸಮಸ್ತ ಶಾಸಗಳಲ್ಲಿ ನಿಶ್ಚಯಿಸಲ್ಪಟ್ಟಿದೆ.॥11॥
(ಶ್ಲೋಕ - 12)
ಮೂಲಮ್
ಕಿಂ ಪ್ರಮತ್ತಸ್ಯ ಬಹುಭಿಃ ಪರೋಕ್ಷೈರ್ಹಾಯನೈರಿಹ ।
ವರಂ ಮುಹೂರ್ತಂ ವಿದಿತಂ ಘಟೇತ ಶ್ರೇಯಸೇ ಯತಃ ॥
ಅನುವಾದ
ತಮ್ಮ ಶ್ರೇಯಸ್ಸಾಧನೆಯಲ್ಲಿ ಎಚ್ಚರವಿಲ್ಲದವರು ಎಷ್ಟೇ ವರ್ಷಗಳು ಬದುಕಿದ್ದರೂ ಏನು ಲಾಭ? ಅವರಿಗರಿವಿಲ್ಲದಂತೆಯೇ ಅವರ ಆಯುಸ್ಸು ವ್ಯರ್ಥವಾಗಿ ಕಳೆದುಹೋಗುವುದು. ಶ್ರೇಯ ಸ್ಸಾಧನೆಯ ವಿಷಯದಲ್ಲಿ ಸಾವಧಾನವಾಗಿದ್ದು, ಜ್ಞಾನಪೂರ್ವಕ ವಾಗಿ ಒಂದು ಮುಹೂರ್ತ ಕಾಲ ಬದುಕಿದ್ದರೂ ಅದು ಸಲವೇ ಆಗುವುದು. ಏಕೆಂದರೆ, ಜೀವನು ಬಯಸಿದರೆ ತನ್ನ ಶ್ರೇಯಸ್ಸನ್ನು ಒಂದೇ ಗಳಿಗೆಯಲ್ಲಿ ಮಾಡಿಕೊಳ್ಳಬಲ್ಲನು.॥12॥
(ಶ್ಲೋಕ - 13)
ಮೂಲಮ್
ಖಟ್ವಾಂಗೋ ನಾಮ ರಾಜರ್ಷಿರ್ಜ್ಞಾತ್ವೇಯತ್ತಾ ಮಿಹಾಯುಷಃ ।
ಮುಹೂರ್ತಾತ್ಸರ್ವಮುತ್ಸೃಜ್ಯ ಗತವಾನಭಯಂ ಹರಿಮ್ ॥
ಅನುವಾದ
ರಾಜರ್ಷಿ ಖಟ್ವಾಂಗನು ತನ್ನ ಆಯುಸ್ಸಿನ ಸಮಾಪ್ತಿಯ ಸಮಯವನ್ನರಿತು ಎರಡೇ ಘಳಿಗೆಯಲ್ಲಿ ಸರ್ವಸಂಗಪರಿತ್ಯಾಗಿಯಾಗಿ ಭಗವಂತನ ಅಭಯಪದವನ್ನು ಪಡೆದುಕೊಂಡನು.॥13॥
(ಶ್ಲೋಕ - 14)
ಮೂಲಮ್
ತವಾಪ್ಯೇತರ್ಹಿ ಕೌರವ್ಯ ಸಪ್ತಾಹಂ ಜೀವಿತಾವಧಿಃ ।
ಉಪಕಲ್ಪಯ ತತ್ಸರ್ವಂ ತಾವದ್ಯತ್ಸಾಂಪರಾಯಿಕಮ್ ॥
ಅನುವಾದ
ಪರೀಕ್ಷಿದ್ರಾಜನೇ ! ಈಗಲಾದರೋ ನಿನ್ನ ಜೀವನದ ಅವಧಿ ಏಳುದಿನಗಳಿವೆ. ಅಷ್ಟರೊಳಗೆ ನೀನು ನಿನ್ನ ಪರಲೋಕವನ್ನು ಸುಧಾರಿಸಿ ಪರಮಪದವನ್ನು ಪಡೆಯುವಂತಹ ಉಪಾಯವನ್ನು ಮಾಡು.॥14॥
(ಶ್ಲೋಕ - 15)
ಮೂಲಮ್
ಅಂತಕಾಲೇ ತು ಪುರುಷ ಆಗತೇ ಗತಸಾಧ್ವಸಃ ।
ಛಿಂದ್ಯಾದಸಂಗ ಶಸೇಣ ಸ್ಪೃಹಾಂ ದೇಹೇನು ಯೇ ಚ ತಮ್ ॥
ಅನುವಾದ
ಅಂತ್ಯಕಾಲ ಬಂದಾಗ ಮನುಷ್ಯನು ಏನು ಮಾಡಬೇಕು ? ಎಂದು ಕೇಳಿರುವೆಯಲ್ಲ ? ಆಗ ಅವನು ಗಾಬರಿಗೊಳ್ಳಬಾರದು. ನಿರ್ಭಯನಾಗಿದ್ದು, ವೈರಾಗ್ಯವೆಂಬ ಶಸದಿಂದ ಶರೀರದಲ್ಲಿ ಹಾಗೂ ಅದಕ್ಕೆ ಸಂಬಂಧಪಟ್ಟವರ ಕುರಿತೂ ಇರುವ ಮಮತೆಯನ್ನು ಕಡಿದುಹಾಕಬೇಕು. ಎಲ್ಲ ರೀತಿಯ ಸ್ಪೃಹೆಯನ್ನು ತ್ಯಾಗ ಮಾಡಿ ಏಕಮಾತ್ರ ಪರಮಾತ್ಮನಲ್ಲೇ ಮನಸ್ಸನ್ನು ತೊಡಗಿಸಬೇಕು.॥15॥
(ಶ್ಲೋಕ - 16)
ಮೂಲಮ್
ಗೃಹಾತ್ಪ್ರವ್ರಜಿತೋ ಧೀರಃ ಪುಣ್ಯತೀರ್ಥಜಲಾಪ್ಲುತಃ ।
ಶುಚೌ ವಿವಿಕ್ತ ಆಸೀನೋ ವಿಧಿವತ್ಕಲ್ಪಿತಾಸನೇ ॥
ಅನುವಾದ
ಧೈರ್ಯವಾಗಿ ಮನೆಯನ್ನು ಬಿಟ್ಟು ಪುಣ್ಯತೀರ್ಥದಲ್ಲಿ ಸ್ನಾನಮಾಡಿ, ಪವಿತ್ರವೂ, ಏಕಾಂತವೂ ಆದ ಸ್ಥಾನದಲ್ಲಿ ವಿಧಿಪೂರ್ವಕ ಆಸನವನ್ನು ಹಾಕಿ ಕುಳಿತುಕೊಳ್ಳಬೇಕು. ಹಾಗೂ ಧ್ಯಾನ ದಲ್ಲಿ ಮಗ್ನನಾಗಬೇಕು.॥16॥
(ಶ್ಲೋಕ - 17)
ಮೂಲಮ್
ಅಭ್ಯಸೇನ್ಮನಸಾ ಶುದ್ಧಂ ತ್ರಿವೃದ್ಬ್ರಹ್ಮಾಕ್ಷರಂ ಪರಮ್ ।
ಮನೋ ಯಚ್ಛೇಜ್ಜಿತಶ್ವಾಸೋ ಬ್ರಹ್ಮಬೀಜಮವಿಸ್ಮರನ್ ॥
ಅನುವಾದ
ಅನಂತರ ಅಕಾರ, ಉಕಾರ, ಮಕಾರಗಳೆಂಬ ಮೂರು ಮಾತ್ರೆಗಳಿಂದ ಕೂಡಿದ ಪರಮಪವಿತ್ರ ವಾದ ಓಂಕಾರವನ್ನು ಮನಸ್ಸಿನಲ್ಲೇ ಜಪಿಸಬೇಕು. ಪ್ರಾಣವಾಯು ವನ್ನು ವಶಪಡಿಸಿಕೊಂಡು ಬ್ರಹ್ಮಬೀಜ ಪ್ರಣವವನ್ನು ಕಿಂಚಿತ್ತಾದರೂ ಮರೆಯದೆ ಮನಸ್ಸನ್ನು ನಿಗ್ರಹ ಮಾಡಿ ನಿರಂತರವಾಗಿ ಪರಮಾತ್ಮನ ನಾಮಜಪವನ್ನು ಮಾಡಬೇಕು.॥17॥
(ಶ್ಲೋಕ - 18)
ಮೂಲಮ್
ನಿಯಚ್ಛೇದ್ವಿಷಯೇಭ್ಯೋಕ್ಷಾನ್ಮನಸಾ ಬುದ್ಧಿಸಾರಥಿಃ ।
ಮನಃ ಕರ್ಮಭಿರಾಕ್ಷಿಪ್ತಂ ಶುಭಾರ್ಥೇ ಧಾರಯೇದ್ಧಿಯಾ ॥
ಅನುವಾದ
ಶುದ್ಧಬುದ್ಧಿಯ ಸಹಾಯ ದಿಂದ ಮನಸ್ಸಿನ ಮೂಲಕ ಇಂದ್ರಿಯಗಳನ್ನು ವಿಷಯಗಳಿಂದ ಹಿಮ್ಮೆಟ್ಟಿಸಬೇಕು. ಕರ್ಮದ ವಾಸನೆಯಿಂದ ಉಂಟಾದ ಚಂಚಲ ಮನಸ್ಸನ್ನು ವಿಚಾರದ ಮೂಲಕ ಸಮಜಾಯಿಸಿ ಮನಸ್ಸಿನ ಅಮನೀ* ಭಾವವನ್ನು ಹೊಂದಬೇಕು. ಮನಸ್ಸು ಶಾಂತವಾಗುತ್ತಲೇ ಬುದ್ಧಿಯ ಸಹಾಯದಿಂದ ಪರಮಾತ್ಮನ ಸ್ವರೂಪವನ್ನು ಚಿಂತಿಸುವ ಅಭ್ಯಾಸಮಾಡಬೇಕು. ಹೀಗೆ ಪುನಃ ಪುನಃ ಅಭ್ಯಾಸ ಮಾಡುತ್ತಿ ರುವುದರಿಂದ ಮನಸ್ಸು ಪರಮಾತ್ಮನ ಚಿಂತನದಲ್ಲಿ ತೊಡಗುತ್ತದೆ ಹಾಗೂ ಭಗವದ್ಭಕ್ತಿಯ ಪ್ರಭಾವದಿಂದ ಶುದ್ಧ ಬುದ್ಧಿಯಲ್ಲಿ ಪರಬ್ರಹ್ಮ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ.॥18॥
ಟಿಪ್ಪನೀ
- ಅಮನೀಭಾವದ ತಾತ್ಪರ್ಯ ಮನಸ್ಸಿಗೆ ಪದೇ-ಪದೇ ಕೇಳಿರಿ, ಎಲೈ ಮನಸ್ಸೆ ನಿನಗೇನುಬೇಕು? ನನಗೇನೂ ಬೇಡ ಎಂಬ ಉತ್ತರ ಹೇಳಬೇಕು. ಹೀಗೆ ಮೇಲಿಂದ ಮೇಲೆ ಕೇಳುತ್ತಾ ಇರುವುದರಿಂದ ಮನಸ್ಸಿನ ಸಂಕಲ್ಪ-ವಿಕಲ್ಪಗಳ ವೃತ್ತಿಗಳು ನಿಧಾನವಾಗಿ ನಿಂತುಹೋಗುತ್ತದೆ. ಇದಕ್ಕೆ ಅಮನೀ ಭಾವವೆಂದು ಹೇಳುತ್ತಾರೆ. ಮನಸ್ಸೇ ಇಂದ್ರಿಯಗಳನ್ನು ಕ್ಷುಬ್ಧಗೊಳಿಸುತ್ತದೆ. ಅದೇ ಅಮನೀಭಾವ ಪಡೆದಿದ್ದರಿಂದ ಇತರ ಇಂದ್ರಿಯಗಳ ಮೇಲೆ ಸುಲಭವಾಗಿ ಹತೋಟಿ ಬಂದುಬಿಡುತ್ತದೆ.
(ಶ್ಲೋಕ - 19)
ಮೂಲಮ್
ತತ್ರೈಕಾವಯವಂ ಧ್ಯಾಯೇದವ್ಯಚ್ಛಿನ್ನೇನ ಚೇತಸಾ ।
ಮನೋ ನಿರ್ವಿಷಯಂ ಯುಕ್ತ್ವಾ ತತಃ ಕಿಂಚನ ನ ಸ್ಮರೇತ್ ।
ಪದಂ ತತ್ಪರಮಂ ವಿಷ್ಣೋರ್ಮನೋ ಯತ್ರ ಪ್ರಸೀದತಿ ॥
ಅನುವಾದ
ಆ ದಿವ್ಯ ಮಂಗಳವಿಗ್ರಹದಲ್ಲಿ ಯಾವುದಾದರೂ ಒಂದು ಅವಯವವನ್ನು ಸ್ಥಿರವಾದ ಚಿತ್ತದಿಂದ ಚೆನ್ನಾಗಿ ಧ್ಯಾನಿಸಬೇಕು. ಹೀಗೆ ಒಂದೊಂದೇ ಅವಯವವನ್ನು ಧ್ಯಾನಮಾಡುತ್ತಾ-ಮಾಡುತ್ತಾ ವಿಷಯವಾಸನಾ ರಹಿತವಾದ ಮನಸ್ಸನ್ನು ಮತ್ತೆ ಯಾವ ವಿಷಯದ ಕುರಿತು ಚಿಂತಿಸದಂತೆ ಪೂರ್ಣವಾಗಿ ಭಗವಂತನಲ್ಲಿ ತಲ್ಲೀನಗೊಳಿಸಬೇಕು. ಅದೇ ವಿಷ್ಣುವಿನ ಪರಮಪದವು. ಅದನ್ನು ಪಡೆದರೇನೇ ಮನಸ್ಸು ಪರಮಾನಂದಭರಿತವಾಗಿ ಪ್ರಸನ್ನವಾಗುವುದು.॥19॥
(ಶ್ಲೋಕ - 20)
ಮೂಲಮ್
ರಜಸ್ತಮೋಭ್ಯಾಮಾಕ್ಷಿಪ್ತಂ ವಿಮೂಢಂ ಮನ ಆತ್ಮನಃ ।
ಯಚ್ಛೇದ್ಧಾರಣಯಾ ಧೀರೋ ಹಂತಿ ಯಾ ತತ್ಕೃತಂ ಮಲಮ್ ॥
ಅನುವಾದ
ಹಾಗೆ ಭಗವಂತನ ಧ್ಯಾನಮಾಡುವಾಗ ಮನಸ್ಸು ರಜೋಗುಣದಿಂದ ಚಂಚಲವಾದರೆ, ಅಥವಾ ತಮೋಗುಣದಿಂದ ಮೂಢವಾದರೆ ಆಗ ಗಾಬರಿಪಡಬಾರದು. ಧೈರ್ಯದೊಂದಿಗೆ ಯೋಗಧಾರಣೆ ಯಿಂದ ಅದನ್ನು ವಶಪಡಿಸಿಕೊಳ್ಳಬೇಕು. ಅದರಿಂದ ಅವನ ಮಲ, ವಿಕ್ಷೇಪ, ಆವರಣರೂಪವಾದ ಮೂರೂ ಮಲಗಳು ತೊರೆದು ಮನಸ್ಸು ನಿರ್ಮಲವಾಗುವುದು. ಆಗ ಪರಮಾತ್ಮನ ಚಿಂತನೆಯು ಸಹಜವಾಗಿ ಆಗತೊಡಗುತ್ತದೆ.॥20॥
(ಶ್ಲೋಕ - 21)
ಮೂಲಮ್
ಯಸ್ಯಾಂ ಸಂಧಾರ್ಯಮಾಣಾಯಾಂ ಯೋಗಿನೋ ಭಕ್ತಿಲಕ್ಷಣಃ ।
ಆಶು ಸಂಪದ್ಯತೇ ಯೋಗ ಆಶ್ರಯಂ ಭದ್ರಮೀಕ್ಷತಃ ॥
ಅನುವಾದ
ಧಾರಣೆಯಿಂದ ಸ್ಥಿರ ನಾದ ಯೋಗಿಯು ಧ್ಯಾನದಿಂದ ತನ್ನ ಪರಮ ಮಂಗಲಮಯ ಆಶ್ರಯನಾದ ಭಗವಂತನನ್ನು ನೋಡುತ್ತಿದ್ದರೆ ಶೀಘ್ರವಾಗಿ ಅವನಿಗೆ ಭಕ್ತಿಯೋಗವು ಸಿದ್ಧಿಸುವುದು.’’ ॥21॥
(ಶ್ಲೋಕ - 22)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಯಥಾ ಸಂಧಾರ್ಯತೇ ಬ್ರಹ್ಮನ್ ಧಾರಣಾ ಯತ್ರ ಸಮ್ಮತಾ ।
ಯಾದೃಶೀ ವಾ ಹರೇದಾಶು ಪುರುಷಸ್ಯ ಮನೋಮಲಮ್ ॥
ಅನುವಾದ
ಪರೀಕ್ಷಿತನು ಕೇಳಿದನು ಬ್ರಹ್ಮರ್ಷಿಯೇ ! ಈ ಧಾರಣೆ ಯನ್ನು ಯಾವ ಸಾಧನೆಯಿಂದ, ಯಾವ ವಸ್ತುವಿನಲ್ಲಿ ಹೇಗೆ ಮಾಡಲಾಗುತ್ತದೆ. ಮನುಷ್ಯನ ಮನೋಮಲವನ್ನು ಶೀಘ್ರವಾಗಿ ನಾಶಪಡಿಸುವ ಈ ಧಾರಣೆಯ ಸ್ವರೂಪವೇನು? ದಯಮಾಡಿ ಅಪ್ಪಣೆ ಕೊಡಿಸಬೇಕು.॥22॥
(ಶ್ಲೋಕ - 23)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಜಿತಾಸನೋ ಜಿತಶ್ವಾಸೋ ಜಿತಸಂಗೋ ಜಿತೇಂದ್ರಿಯಃ ।
ಸ್ಥೂಲೇ ಭಗವತೋ ರೂಪೇ ಮನಃ ಸಂಧಾರಯೇದ್ಧಿಯಾ ॥
ಅನುವಾದ
ಶ್ರೀಶುಕಯೋಗಿಗಳು ಹೇಳುತ್ತಾರೆ ಮಹಾರಾಜಾ! ಮೊಟ್ಟ ಮೊದಲಿಗೆ ಆಸನವನ್ನು ಸ್ಥಿರಗೊಳಿಸಬೇಕು. ಮತ್ತೆ ಪ್ರಾಣಾಯಾಮ ದ ಮೂಲಕ ಇಂದ್ರಿಯಗಳನ್ನು ಜಯಿಸಿ, ಎಲ್ಲಿಯೂ ಆಸಕ್ತಿಯನ್ನು ಇಡಬಾರದು. ಹೀಗಾದ ಬಳಿಕ ಇರುವ ದೃಶ್ಯವರ್ಗವನ್ನು ಭಗವಂತ ನದೇ ಸ್ಥೂಲ ವಿರಾಟ್ ಶರೀರವೆಂದು ಭಾವಿಸಿ, ಇದನ್ನೇ ಬ್ರಹ್ಮ ವೆಂದು ತಿಳಿಯಬೇಕು. ಸಮಗ್ರ ವಿಶ್ವವು ಇದೇ ನಿರ್ಗುಣ- ನಿರಾಕಾರ ಪರಮಾತ್ಮನ ಸಗುಣ-ಸಾಕಾರ ವಿಗ್ರಹವಾಗಿದೆ ಎಂದು ಧಾರಣೆ ಮಾಡಬೇಕು. ಹೀಗೆ ಭಾವಿಸಿ ಸರ್ವತ್ರ ಬ್ರಹ್ಮನನ್ನೇ ನೋಡ ಬೇಕು.॥23॥
(ಶ್ಲೋಕ - 24)
ಮೂಲಮ್
ವಿಶೇಷಸ್ತಸ್ಯ ದೇಹೋಯಂ ಸ್ಥವಿಷ್ಠಶ್ಚ ಸ್ಥವೀಯಸಾಮ್ ।
ಯತ್ರೇದಂ ದೃಶ್ಯತೇ ವಿಶ್ವಂ ಭೂತಂ ಭವ್ಯಂ ಭವಚ್ಚ ಸತ್ ॥
ಅನುವಾದ
ವಿಶೇಷ ರೂಪದಿಂದ ಕಂಡುಬರುವ ಹಿಂದೆ ಇದ್ದ, ಈಗ ಇರುವ, ಮುಂದೆ ಇರಬಹುದಾದ ಈ ವಿಶ್ವವು ಅತ್ಯಂತ ದೊಡ್ಡದಾದ ಪರಮಾತ್ಮನ ಸ್ಥೂಲದೇಹವಾಗಿದೆ ಎಂದು ಭಾವಿಸ ಬೇಕು. ಎಲ್ಲ ಕಾಲಗಳಲ್ಲಿ ಇರುವ ಇದೊಂದು ಪರಮಾತ್ಮನ ಸ್ಥೂಲ ರೂಪವಾಗಿದೆ. ಆ ನಿರ್ಗುಣ-ನಿರಾಕಾರ ಪರಬ್ರಹ್ಮ ಪರಮಾತ್ಮನು ತನ್ನ ಸಂಕಲ್ಪದಿಂದಲೇ ತನ್ನಲ್ಲೇ ಸೃಷ್ಟಿಯನ್ನು ನಿರ್ಮಿಸಿದನು ಮತ್ತು ಅವನೇ ಈ ರೂಪನಾಗಿ ಅನೇಕ ರೂಪಗಳಲ್ಲಿ ಪ್ರಕಾಶಿತನಾಗುತ್ತಿ ದ್ದಾನೆ ಎಂದು ಭಾವಿಸಬೇಕು. ಹೀಗೆ ಭಾವಿಸಿ ಸರ್ವತ್ರ ಬ್ರಹ್ಮವೊಂದನ್ನೇ ನೋಡಬೇಕು.॥24॥
(ಶ್ಲೋಕ - 25)
ಮೂಲಮ್
ಆಂಡಕೋಶೇ ಶರೀರೇಸ್ಮಿನ್ಸಪ್ತಾವರಣಸಂಯುತೇ ।
ವೈರಾಜಃ ಪುರುಷೋ ಯೋಸೌ ಭಗವಾನ್ ಧಾರಣಾಶ್ರಯಃ ॥
ಅನುವಾದ
ಜಲ, ಅಗ್ನಿ, ವಾಯು, ಆಕಾಶ, ಅಹಂಕಾರ, ಮಹತ್ತತ್ತ್ವ ಮತ್ತು ಪ್ರಕೃತಿ ಹೀಗೆ ಏಳು ಆವರಣ ಗಳಿಂದ ಸುತ್ತುವರಿಯಲ್ಪಟ್ಟ ಈ ಬ್ರಹ್ಮಾಂಡವೆಂಬ ಶರೀರದಲ್ಲಿ ಇರುವ ವಿರಾಟ್ಪುರುಷನನ್ನು ವೈರಾಜನೆಂಬ ಹೆಸರಿನಿಂದ ಹೇಳಲಾಗಿದೆ. (‘ವಿವಿಧಂ ರಾಜತೇ ಶೋಭತೇ ಇತಿ ವಿರಾಟ್’ ಅರ್ಥಾತ್ ಆ ಪರಮಾತ್ಮನೇ ಅನೇಕ ರೂಪಗಳಲ್ಲಿ ವಿಲಸಿತನಾಗಿದ್ದಾನೆ.) ಈ ಭಾವನೆಯಿಂದ ಈ ವಿಶ್ವವನ್ನು ಭಗವಂತನದೇ ಸ್ಥೂಲ ವಿರಾಟ್ರೂಪವೆಂದು ತಿಳಿದು ಸರ್ವತ್ರ ಭಗವಂತನನ್ನೇ ಈ ಪ್ರಕಾರದಿಂದ ಧಾರಣೆ ಮಾಡಬೇಕು.॥25॥
(ಶ್ಲೋಕ - 26)
ಮೂಲಮ್
ಪಾತಾಲಮೇತಸ್ಯ ಹಿ ಪಾದಮೂಲಂ
ಪಠಂತಿ ಪಾರ್ಷ್ಣಿಪ್ರಪದೇ ರಸಾತಲಮ್ ।
ಮಹಾತಲಂ ವಿಶ್ವ ಸೃಜೋಥ ಗುಲ್ಫೌ
ತಲಾತಲಂ ವೈ ಪುರುಷಸ್ಯ ಜಂಘೇ ॥
ಅನುವಾದ
ತತ್ತ್ವಜ್ಞರಾದ ವರು ಅವನನ್ನು ಹೀಗೆ ವರ್ಣಿಸುತ್ತಾರೆ ಪಾತಾಳವು ಆ ವಿರಾಟ್ ಪುರುಷನ ಪಾದಮೂಲವು. ಆತನ ಹಿಮ್ಮಡಿ ಮತ್ತು ತುದಿಗಾಲುಗಳು ರಸಾತಲವು. ಆತನ ಎರಡೂ ಹರಡುಗಳು ಮಹಾತಲ ಲೋಕವು. ತಲಾತಲವು ಆ ವಿರಾಟ್ಪುರುಷನ ಮೊಣಕಾಲುಗಳು.॥26॥
(ಶ್ಲೋಕ - 27)
ಮೂಲಮ್
ದ್ವೇ ಜಾನುನೀ ಸುತಲಂ ವಿಶ್ವಮೂರ್ತೇ-
ರೂರುದ್ವಯಂ ವಿತಲಂ ಚಾತಲಂ ಚ ।
ಮಹೀತಲಂ ತಜ್ಜ ಘನಂ ಮಹೀಪತೇ
ನಭಸ್ತಲಂ ನಾಭಿಸರೋ ಗೃಣಂತಿ ॥
ಅನುವಾದ
ಆ ವಿಶ್ವಮೂರ್ತಿಯ ಎರಡು ಮಂಡಿಗಳೇ ಸುತಲ ಲೋಕವು. ವಿತಲ ಮತ್ತು ಅತಲಲೋಕಗಳು ಅವನ ಎರಡು ತೊಡೆಗಳು. ಭೂತಲವು ಸೊಂಟದ ಮುಂಭಾಗವಾಗಿದೆ. ಮಹಾರಾಜಾ ! ಆತನ ಹೊಕ್ಕುಳೇ ಭುವರ್ಲೋಕ (ಅಂತರಿಕ್ಷ).॥27॥
(ಶ್ಲೋಕ - 28)
ಮೂಲಮ್
ಉರಃಸ್ಥಲಂ ಜ್ಯೋತಿರನೀಕಮಸ್ಯ
ಗ್ರೀವಾ ಮಹರ್ವದನಂ ವೈ ಜನೋಸ್ಯ ।
ತಪೋ ರರಾಟೀಂ ವಿದುರಾದಿಪುಂಸಃ
ಸತ್ಯಂ ತು ಶೀರ್ಷಾಣಿ ಸಹಸ್ರಶೀಷ್ಣಃ ॥
ಅನುವಾದ
ಆದಿ ಪುರುಷನಾದ ಆ ಪರಮಾತ್ಮನ ಎದೆಯನ್ನು ಸ್ವರ್ಗಲೋಕವೆಂದೂ, ಕತ್ತನ್ನು ಮಹರ್ಲೋಕವೆಂದೂ, ಮುಖವನ್ನು ಜನೋಲೋಕವೆಂದೂ, ಹಣೆಯನ್ನು ತಪೋಲೋಕವೆಂದೂ ಹೇಳುತ್ತಾರೆ. ಆ ಸಾವಿರ ತಲೆಗಳುಳ್ಳ ಪುರುಷನ ಶಿರಸ್ಸುಗಳ ಸಮೂಹವೇ ಸತ್ಯ ಲೋಕವು.॥28॥
(ಶ್ಲೋಕ - 29)
ಮೂಲಮ್
ಇಂದ್ರಾದಯೋ ಬಾಹವ ಆಹುರುಸ್ರಾಃ
ಕರ್ಣೌ ದಿಶಃ ಶ್ರೋತ್ರಮಮುಷ್ಯ ಶಬ್ದಃ ।
ನಾಸತ್ಯದಸ್ರೌ ಪರಮಸ್ಯ ನಾಸೇ
ಘ್ರಾಣೋಸ್ಯ ಗಂಧೋ ಮುಖಮಗ್ನಿರಿದ್ಧಃ ॥
ಅನುವಾದ
ಇಂದ್ರಾದಿ ದೇವತೆಗಳು ಆತನ ಭುಜಗಳು, ಆತನಿಗೆ ದಿಕ್ಕುಗಳೇ ಕಿವಿಗಳು. ಶಬ್ದವೇ ಶ್ರವಣೇಂದ್ರಿಯಗಳು. ಅಶ್ವಿನೀದೇವತೆಗಳೇ ಪರಮಪುರುಷನ ಮೂಗುಹೊಳ್ಳೆಗಳು. ಗಂಧವು ಆತನ ಘ್ರಾಣೇಂದ್ರಿಯವು. ಉರಿಯುತ್ತಿರುವ ಅಗ್ನಿಯೇ ಆತನ ಮುಖ.॥29॥
(ಶ್ಲೋಕ - 30)
ಮೂಲಮ್
ದ್ಯೌ ರಕ್ಷಿಣೀ ಚಕ್ಷುರಭೂತ್ಪತಂಗಃ
ಪಕ್ಷ್ಮಾಣಿ ವಿಷ್ಣೋರಹನೀ ಉಭೇ ಚ ।
ತದ್ಭ್ರೂವಿಜೃಂಭಃ ಪರಮೇಷ್ಠಿಧಿಷ್ಣ್ಯ-
ಮಾಪೋಸ್ಯ ತಾಲೂ ರಸ ಏವ ಜಿಹ್ವಾ ॥
ಅನುವಾದ
ದ್ಯುಲೋಕವು ಆ ಮಹಾವಿಷ್ಣುವಿನ ನೇತ್ರಗಳು. ಅವುಗಳಲ್ಲಿ ನೋಡುವ ಶಕ್ತಿಯೇ ಸೂರ್ಯನು. ಎರಡು ರೆಪ್ಪೆಗಳೇ ಹಗಲು-ರಾತ್ರಿಗಳು. ಆತನ ಹುಬ್ಬುಗಳ ವಿಲಾಸವೇ ಬ್ರಹ್ಮಲೋಕವು. ನೀರು ಆತನ ದವಡೆಗಳು. ರಸವೇ ಆತನ ನಾಲಿಗೆ ಯೆಂದು ತಿಳಿಯಬೇಕು.॥30॥
(ಶ್ಲೋಕ - 31)
ಮೂಲಮ್
ಛಂದಾಂಸ್ಯನಂತಸ್ಯ ಶಿರೋ ಗೃಣಂತಿ
ದಂಷ್ಟ್ರಾ ಯಮಃ ಸ್ನೇಹಕಲಾ ದ್ವಿಜಾನಿ ।
ಹಾಸೋ ಜನೋನ್ಮಾದಕರೀ ಚ ಮಾಯಾ
ದುರಂತಸರ್ಗೋ ಯದಪಾಂಗಮೋಕ್ಷಃ ॥
ಅನುವಾದ
ವೇದಗಳನ್ನು ಆ ಅನಂತನ ಬ್ರಹ್ಮರಂಧ್ರಸ್ಥಾನವೆಂದು ಹೇಳುತ್ತಾರೆ. ಆತನ ಕೋರೆದಾಡೆಯು ಯಮರಾಜನು. ಎಲ್ಲ ಬಗೆಯ ಸ್ನೇಹರೂಪವಾದ ಕಲೆಗಳು ಅರ್ಥಾತ್ ಪ್ರೇಮ ಮತ್ತು ಮುಕ್ತಿಯ ವಿತರಣಕೇಂದ್ರವೇ ಆತನ ದಂತಗಳು ಮತ್ತು ಜಗತ್ತನ್ನು ಮೋಹಗೊಳಿಸುವ ಮಾಯೆಯು ಆತನ ಮುಗುಳ್ನಗೆಯು. ಈ ಅನಂತವಾದ ಸೃಷ್ಟಿಯು ಆತನ ಕಡೆಗಣ್ಣನೋಟವು.॥31॥
(ಶ್ಲೋಕ - 32)
ಮೂಲಮ್
ವ್ರೀಡೋತ್ತರೋಷ್ಠೋಧರ ಏವ ಲೋಭೋ
ಧರ್ಮಃ ಸ್ತನೋಧರ್ಮಪಥೋಸ್ಯ ಪೃಷ್ಠಮ್ ।
ಕಸ್ತಸ್ಯ ಮೇಢ್ರಂ ವೃಷಣೌ ಚ ಮಿತ್ರೌ
ಕುಕ್ಷಿಃ ಸಮುದ್ರಾ ಗಿರಯೋಸ್ಥಿಸಂಘಾಃ ॥
ಅನುವಾದ
ಲಜ್ಜೆಯು ಅವನ ಮೇಲ್ದುಟಿ, ಆತನ ಕೆಳದುಟಿಯೇ ಲೋಭವು. ಧರ್ಮವು ಸ್ತನಗಳು, ಅಧರ್ಮವು ಬೆನ್ನು. ಪ್ರಜಾಪತಿಯೇ ಆತನ ಜನನೇಂದ್ರಿಯವು. ಮಿತ್ರಾ ವರುಣರೇ ವೃಷಣಗಳು. ಸಮುದ್ರಗಳು ಆತನ ಹೊಟ್ಟೆ, ಪರ್ವತಗಳು ಮೂಳೆಗಳು.॥32॥
(ಶ್ಲೋಕ - 33)
ಮೂಲಮ್
ನದ್ಯೋಸ್ಯ ನಾಡ್ಯೋಥ ತನೂರುಹಾಣಿ
ಮಹೀರುಹಾ ವಿಶ್ವತನೋರ್ನೃಪೇಂದ್ರ ।
ಅನಂತ ವೀರ್ಯಃ ಶ್ವಸಿತಂ ಮಾತರಿಶ್ವಾ
ಗತಿರ್ವಯಃ ಕರ್ಮ ಗುಣಪ್ರವಾಹಃ ॥
ಅನುವಾದ
ರಾಜೇಂದ್ರನೇ! ವಿಶ್ವಮೂರ್ತಿಯಾದ ಆ ವಿರಾಟಪುರುಷನ ನಾಡಿಗಳೇ ನದಿಗಳು. ಮೈಗೂದಲುಗಳೇ ವೃಕ್ಷಗಳು. ಅನಂತ ಬಲಸಂಪನ್ನನಾದ ವಾಯುವೇ ಆತನ ಉಸಿರು. ಕಾಲವು ಅವನ ನಡಿಗೆ, ಗುಣಗಳ ಹರಿದಾಟವೇ ಅವನ ಕರ್ಮವು.॥33॥
(ಶ್ಲೋಕ - 34)
ಮೂಲಮ್
ಈಶಸ್ಯ ಕೇಶಾನ್ವಿದುರಂಬುವಾಹಾನ್
ವಾಸಸ್ತು ಸಂಧ್ಯಾಂ ಕುರುವರ್ಯ ಭೂಮ್ನಃ ।
ಅವ್ಯಕ್ತ ಮಾಹುರ್ಹೃದಯಂ ಮನಶ್ಚ
ಸ ಚಂದ್ರಮಾಃ ಸರ್ವವಿಕಾರಕೋಶಃ ॥
ಅನುವಾದ
ಪರೀಕ್ಷಿತನೇ! ಮೋಡಗಳನ್ನು ಅವನ ಕೇಶ ಗಳೆಂದು ಹೇಳುತ್ತಾರೆ. ಸಂಧ್ಯೆಯು ಆ ಅನಂತನ ವಸವು. ಅವ್ಯಕ್ತ (ಮೂಲಪ್ರಕೃತಿ)ವನ್ನು ಅವನ ಹೃದಯವೆಂದು ಹೇಳುತ್ತಾರೆ. ಎಲ್ಲ ವಿಕಾರಗಳ ಕೋಶವಾದ ಮನಸ್ಸೇ ಚಂದ್ರನು.॥34॥
(ಶ್ಲೋಕ - 35)
ಮೂಲಮ್
ವಿಜ್ಞಾನಶಕ್ತಿಂ ಮಹಿಮಾಮನಂತಿ
ಸರ್ವಾತ್ಮನೋಂತಃಕರಣಂ ಗಿರಿತ್ರಮ್ ।
ಅಶ್ವಾಶ್ವತರ್ಯುಷ್ಟ್ರ ಗಜಾ ನಖಾನಿ
ಸರ್ವೇ ಮೃಗಾಃ ಪಶವಃ ಶ್ರೋಣಿದೇಶೇ ॥
ಅನುವಾದ
ಮಹತ್ತತ್ತ್ವ ವನ್ನು ಆ ಸರ್ವಾತ್ಮಕನಾದ ಸ್ವಾಮಿಯ ಚಿತ್ತವೆನ್ನುತ್ತಾರೆ. ರುದ್ರದೇವ ರನ್ನು ಅಹಂಕಾರವೆನ್ನುತ್ತಾರೆ. ಕುದುರೆ, ಹೇಸರಗತ್ತೆ, ಒಂಟೆ, ಆನೆ ಗಳು ಅವನ ಉಗುರುಗಳು, ಅರಣ್ಯವಾಸಿಗಳಾದ ಎಲ್ಲ ಮೃಗಗಳೂ ಆತನ ನಡುವಿನಲ್ಲಿವೆ.॥35॥
(ಶ್ಲೋಕ - 36)
ಮೂಲಮ್
ವಯಾಂಸಿ ತದ್ವ್ಯಾಕರಣಂ ವಿಚಿತ್ರಂ
ಮನುರ್ಮನೀಷಾ ಮನುಜೋ ನಿವಾಸಃ ।
ಗಂಧರ್ವವಿದ್ಯಾಧರಚಾರಣಾಪ್ಸರಃ-
ಸ್ವರಸ್ಮೃತೀರಸುರಾನೀಕವೀರ್ಯಃ ॥
ಅನುವಾದ
ಬಗೆ-ಬಗೆಯ ಪಕ್ಷಿಗಳು ಆತನ ಅದ್ಭುತವಾದ ರಚನಾಕೌಶಲ್ಯ, ಸ್ವಾಯಂಭುವ ಮನುವೇ ಆತನ ಬುದ್ಧಿಯು. ಮನುವಿನ ಸಂತಾನವಾದ ಮನುಷ್ಯರೇ ಅವನ ವಾಸ ಸ್ಥಾನ. ಗಂಧರ್ವರು, ವಿದ್ಯಾಧರರು, ಚಾರಣರು, ಅಪ್ಸರಾಸೀಯರು ಅವನ ಶಡ್ಜವೇ ಮುಂತಾದ ಸಪ್ತಸ್ವರಗಳ ಸ್ಮೃತಿಗಳು. ದೈತ್ಯರ ಸೇನೆಯೇ ಆತನ ವೀರ್ಯವು.॥36॥
(ಶ್ಲೋಕ - 37)
ಮೂಲಮ್
ಬ್ರಹ್ಮಾನನಂ ಕ್ಷತ್ರಭುಜೋ ಮಹಾತ್ಮಾ
ವಿಡೂರುರಂಘ್ರಿಶ್ರಿತಕೃಷ್ಣವರ್ಣಃ ।
ನಾನಾಭಿಧಾಭೀಜ್ಯಗಣೋಪಪನ್ನೋ
ದ್ರವ್ಯಾತ್ಮಕಃ ಕರ್ಮ ವಿತಾನಯೋಗಃ ॥
ಅನುವಾದ
ಆತನಿಗೆ ಬ್ರಾಹ್ಮಣರು ಮುಖ, ಕ್ಷತ್ರಿಯರು ಭುಜಗಳು, ವೈಶ್ಯರು ತೊಡೆಗಳು, ಶೂದ್ರರು ಕಾಲುಗಳು. ಇಂದ್ರ, ವರುಣ, ಕುಬೇರ ಮುಂತಾದ ದೇವತೆಗಳನ್ನು ಉದ್ದೇಶಿಸಿ ಯಜ್ಞಮಾಡುತ್ತಾರೆ. ಆ ದೇವತಾ ರೂಪನೂ ಅವನೇ. ದೇವತೆಗಳಿಂದ ಸಂಪನ್ನವಾಗುವ ಯಜ್ಞ ಕ್ರಿಯೆಯೂ ಅವನೇ. ಯಜ್ಞಗಳಿಂದ ದೊರೆಯುವ ವಸ್ತುವೂ ಪರಮಾತ್ಮನೇ. (ಬ್ರಹ್ಮಾರ್ಪಣಂ ಬ್ರಹ್ಮಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್ ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ ॥) (ಭಗವದ್ಗೀತೆ 4/24).॥37॥
(ಶ್ಲೋಕ - 38)
ಮೂಲಮ್
ಇಯಾನಸಾವೀಶ್ವರವಿಗ್ರಹಸ್ಯ
ಯಃ ಸನ್ನಿವೇಶಃ ಕಥಿತೋ ಮಯಾ ತೇ ।
ಸಂಧಾರ್ಯತೇಸ್ಮಿನ್ವಪುಷಿ ಸ್ಥವಿಷ್ಠೇ
ಮನಃ ಸ್ವಬುದ್ಧ್ಯಾ ನ ಯತೋಸ್ತಿ ಕಿಂಚಿತ್ ॥ 38 ॥
ಅನುವಾದ
ಪ್ರಿಯ ಪರೀಕ್ಷಿತನೇ ! ಭಗವಂತನ ಈ ವಿರಾಟ್ಸ್ವರೂಪವನ್ನು ನಾನು ನಿನಗೆ ವರ್ಣಿಸಿದೆ. ಈ ವಿರಾಟ್ ಬ್ರಹ್ಮಾಂಡವು ಆ ಪರಮಾತ್ಮನದೇ ಸ್ಥೂಲರೂಪವಾಗಿದೆ. ಇದರಲ್ಲಿ ಬೇರೆ-ಬೇರೆಯಾಗಿ ಭಗವಂತನ ಅವಯವಗಳನ್ನು ಕಲ್ಪಿಸಿ, ಭಗವಂತನ ಸಗುಣರೂಪವನ್ನು ನೋಡಬೇಕು. ಅವನ ವಿಶ್ವ ನಿರ್ಮಾಣದ ಕಲಾಕೌಶಲ್ಯವನ್ನು ಅರಿಯುತ್ತಾ ಭಗವಂತನ ಆಶ್ಚರ್ಯಮಯ ಲೀಲೆಗಳನ್ನು ದರ್ಶಿಸುತ್ತಾ ಚಿಂತಿಸಬೇಕು. ಹೀಗೆ ಚಿಂತಿಸುತ್ತಾ-ಚಿಂತಿಸುತ್ತಾ ಬುದ್ಧಿಯ ಮೂಲಕ ಮನಸ್ಸಿನಲ್ಲಿ ಪರ ಮಾತ್ಮನೊಬ್ಬನಲ್ಲದೆ ಬೇರೆ ಏನೂ ಇಲ್ಲ ಎಂಬ ನಿಶ್ಚಯವನ್ನು ಧರಿಸಿ ಕೊಳ್ಳಬೇಕು. ಅವನೇ ಲೀಲೆಯಿಂದ ಇಷ್ಟು ರೂಪಗಳನ್ನು ತನ್ನಲ್ಲಿ ಕಲ್ಪಿಸಿರುವನು.॥38॥
(ಶ್ಲೋಕ - 39)
ಮೂಲಮ್
ಸ ಸರ್ವಧೀವೃತ್ತ್ಯನುಭೂತಸರ್ವ
ಆತ್ಮಾ ಯಥಾ ಸ್ವಪ್ನಜನೇಕ್ಷಿತೈಕಃ ।
ತಂ ಸತ್ಯಮಾನಂದನಿಧಿಂ ಭಜೇತ
ನಾನ್ಯತ್ರ ಸಜ್ಜೇದ್ಯತ ಆತ್ಮಪಾತಃ ॥ 39 ॥
ಅನುವಾದ
ಆ ಪರಮಾತ್ಮನೇ ಸಮಸ್ತ ಪ್ರಾಣಿಗಳ ಬುದ್ಧಿಯೇ ಮುಂತಾದ ವೃತ್ತಿಗಳಿಂದ ಎಲ್ಲ ಪದಾರ್ಥಗಳನ್ನು ಹಾಗೂ ವಿಷಯಗಳನ್ನು ಅನು ಭವಿಸುತ್ತಾನೆ. ಅವನೇ ಎಲ್ಲರ ಆತ್ಮನಾಗಿದ್ದಾನೆ. ಅವನು ಏಕನೂ, ಅದ್ವಿತೀಯನೂ ಆಗಿರುವನು. ಸ್ವಪ್ನವನ್ನು ಕಾಣುವವನು ತನ್ನೊಳ ಗೆಯೇ ಸ್ವಪ್ನಜಗತ್ತಿನಲ್ಲಿ ತಾನೂ ಸೇರಿ ಎಲ್ಲರೀತಿಯ ಪದಾರ್ಥ ಗಳನ್ನು ಕಲ್ಪಿಸುತ್ತಾನೆ. ಹಾಗೆಯೇ ಪರಮಾತ್ಮನೂ ಈ ಜಗತ್ತನ್ನು ತನ್ನಲ್ಲಿ ಕಲ್ಪಿಸಿಕೊಳ್ಳುವನು. ಪರಮಾತ್ಮನು ವಾಸ್ತವವಾಗಿ ಸತ್ಯಸ್ವರೂಪ ನಾಗಿದ್ದಾನೆ. ಆನಂದದ ಅಪಾರ ಸಮುದ್ರನಾಗಿದ್ದಾನೆ. ಅವನನ್ನೇ ಭಜಿಸಬೇಕು. ಸಾಂಸಾರಿಕ ವಿಷಯಗಳಲ್ಲಿ ರಮಿಸ ಬಾರದು. ಏಕೆಂದರೆ, ಅದರಲ್ಲಿನ ಆಸಕ್ತಿಯೇ ಪತನದ ಕಾರಣವಾಗಿದೆ. ಭಗವಂತನ ಭಕ್ತಿ ಮಾಡುವುದರಲ್ಲೇ ಜೀವಿಯ ಕಲ್ಯಾಣವಿದೆ.॥39॥
ಅನುವಾದ (ಸಮಾಪ್ತಿಃ)
ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಿತೀಯಸ್ಕಂಧೇ ಮಹಾಪುರುಷಸಂಸ್ಥಾನುವರ್ಣನಂ ನಾಮ ಪ್ರಥಮೋಽಧ್ಯಾಯಃ ॥1॥