[ಹತ್ತೊಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಪರೀಕ್ಷಿದ್ರಾಜನ ಪ್ರಾಯೋಪವೇಶ, ಶುಕಮಹಾಮುನಿಯ ಆಗಮನ
(ಶ್ಲೋಕ - 1)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಮಹೀಪತಿಸ್ತ್ವಥ ತತ್ಕರ್ಮ ಗರ್ಹ್ಯಂ
ವಿಚಿಂತಯನ್ನಾತ್ಮಕೃತಂ ಸುದುರ್ಮನಾಃ ।
ಅಹೋ ಮಯಾ ನೀಚಮನಾರ್ಯವತ್ಕೃತಂ
ನಿರಾಗಸಿ ಬ್ರಹ್ಮಣಿ ಗೂಢತೇಜಸಿ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿಗಳೇ! ರಾಜಧಾನಿಗೆ ಬಂದ ರಾಜಾಪರೀಕ್ಷಿತನಿಗೆ ತನ್ನ ಆ ನಿಂದನೀಯ ಕರ್ಮಕ್ಕಾಗಿ ಭಾರೀ ಪಶ್ಚಾತ್ತಾಪವಾಯಿತು. ಅವನಿಗೆ ತುಂಬಾ ಬೇಸರವಾಗಿ ಅಂದುಕೊಂಡನು ಅಯ್ಯೋ! ನಾನು ನಿರಪರಾಧಿಯೂ, ಗೂಢವಾದ ಬ್ರಹ್ಮತೇಜಸ್ಸಿನಿಂದ ತುಂಬಿದ್ದ ಮಹಾತ್ಮನೂ ಆದ ಬ್ರಾಹ್ಮಣನೊಂದಿಗೆ ಅನಾರ್ಯನಂತೆ ನೀಚ ಕಾರ್ಯವನ್ನು ಎಸೆಗಿಬಿಟ್ಟೆನಲ್ಲ! ॥1॥
(ಶ್ಲೋಕ - 2)
ಮೂಲಮ್
ಧ್ರುವಂ ತತೋ ಮೇ ಕೃತದೇವಹೇಲನಾ-
ದ್ದುರತ್ಯಯಂ ವ್ಯಸನಂ ನಾತಿದೀರ್ಘಾತ್ ।
ತದಸ್ತು ಕಾಮಂ ತ್ವಘನಿಷ್ಕೃತಾಯ ಮೇ
ಯಥಾ ನ ಕುರ್ಯಾಂ ಪುನರೇವಮದ್ಧಾ ॥
ಅನುವಾದ
ಹೀಗೆ ದೈವಾಪಚಾರವನ್ನು ಮಾಡಿದ್ದರಿಂದ ಅತಿಶೀಘ್ರವಾಗಿ ದಾಟಲಶಕ್ಯವಾದ ಅತಿದೊಡ್ಡ ವಿಪತ್ತು ನಿಶ್ಚಯವಾಗಿಯೂ ಒದಗುವುದು. ನಾನೂ ಅದನ್ನೇ ಬಯಸುತ್ತೇನೆ. ಏಕೆಂದರೆ, ಅದರಿಂದ ನನ್ನ ಪಾಪದ ಪ್ರಾಯಶ್ಚಿತ್ತವಾದೀತು. ಮತ್ತೆ ಎಂದಿಗೂ ಇಂತಹ ಕಾರ್ಯವನ್ನು ಮಾಡುವ ದುಃಸಾಹಸವಾಗಲಾರದು.॥2॥
(ಶ್ಲೋಕ - 3)
ಮೂಲಮ್
ಅದ್ಯೈವ ರಾಜ್ಯಂ ಬಲಮೃದ್ಧಕೋಶಂ
ಪ್ರಕೋಪಿತಬ್ರಹ್ಮಕುಲಾನಲೋ ಮೇ ।
ದಹತ್ವಭದ್ರಸ್ಯ ಪುನರ್ನ ಮೇಭೂತ್
ಪಾಪೀಯಸೀ ೀರ್ದ್ವಿಜದೇವಗೋಭ್ಯಃ ॥
ಅನುವಾದ
ಬ್ರಾಹ್ಮಣರ ಕ್ರೋಧಾಗ್ನಿಯು ಇಂದೇ ನನ್ನ ರಾಜ್ಯ, ಸೇನೆ, ತುಂಬಿದ ಭಂಡಾರ ಇವೆಲ್ಲವನ್ನು ಸುಟ್ಟು ಹಾಕಲಿ. ಮುಂದೆಂದಿಗೂ ದುಷ್ಟನಾದ ನನ್ನಲ್ಲಿ ಬ್ರಾಹ್ಮಣರು, ದೇವತೆಗಳು, ಗೋವುಗಳು ಇವರ ಕುರಿತು ಇಂತಹ ಪಾಪ ಬುದ್ಧಿಯು ಉಂಟಾಗದಿರಲಿ.॥3॥
(ಶ್ಲೋಕ - 4)
ಮೂಲಮ್
ಸ ಚಿಂತಯನ್ನಿತ್ಥಮಥಾಶೃಣೋದ್ಯಥಾ
ಮುನೇಃ ಸುತೋಕ್ತೋ ನಿರ್ಋತಿಸ್ತಕ್ಷಕಾಖ್ಯಃ ।
ಸ ಸಾಧು ಮೇನೇ ನ ಚಿರೇಣ ತಕ್ಷಕಾ-
ನಲಂ ಪ್ರಸಕ್ತಸ್ಯ ವಿರಕ್ತಿಕಾರಣಮ್ ॥
ಅನುವಾದ
ಅವನು ಹೀಗೆ ಚಿಂತಿಸುತ್ತಿರುವಾಗಲೇ ಶಮೀಕ ಮಹರ್ಷಿಗಳು ‘ಗೌರಮುಖ’ನೆಂಬ ಶಿಷ್ಯನ ಮೂಲಕ ಹೇಳಿಕಳಿಸಿದರು ‘‘ಋಷಿಪುತ್ರನಾದ ಶೃಂಗಿಯ ಶಾಪದಿಂದ ಪ್ರೇರಿತನಾದ ತಕ್ಷಕನು ಇಂದಿನಿಂದ ಏಳನೆಯ ದಿನ ಮೃತ್ಯುವಿಗೆ ಕಾರಣನಾಗುವನು’ ಎಂಬ ಸಮಾಚಾರವು ಅವನ ಕಿವಿಗೆ ಬಿತ್ತು. ಅದನ್ನು ಕೇಳಿ ರಾಜನು ‘ಆ ತಕ್ಷಕನೆಂಬ ಬೆಂಕಿಯು ರಾಜಕಾರ್ಯಗಳಲ್ಲಿ ಮತ್ತು ಭೋಗಗಳಲ್ಲಿ ಆಸಕ್ತನಾಗಿರುವ ನನಗೆ ವೈರಾಗ್ಯಕ್ಕೆ ಕಾರಣವಾಯಿತು’ ಎಂದು ಭಾವಿಸಿಕೊಂಡನು.॥4॥
(ಶ್ಲೋಕ - 5)
ಮೂಲಮ್
ಅಥೋ ವಿಹಾಯೇಮಮಮುಂ ಚ ಲೋಕಂ
ವಿಮರ್ಶಿತೌ ಹೇಯತಯಾ ಪುರಸ್ತಾತ್ ।
ಕೃಷ್ಣಾಂಘ್ರಿಸೇವಾಮಮನ್ಯಮಾನ
ಉಪಾವಿಶತ್ಪ್ರಾಯಮಮರ್ತ್ಯನದ್ಯಾಮ್ ॥
ಅನುವಾದ
ಅನಂತರ ಅವನು ರಾಜ್ಯವಾಳುತ್ತಿರುವಾಗಲೇ ಈ ಲೋಕ ಮತ್ತು ಪರಲೋಕಗಳ ಭೋಗಗಳನ್ನು ತುಚ್ಛವೂ, ತ್ಯಾಜ್ಯವೂ ಎಂದು ತಿಳಿದಿದ್ದನು. ಈಗ ಅವನ್ನು ಸ್ವರೂಪತಃ ತ್ಯಾಗಗೈದು ಭಗವಾನ್ ಶ್ರೀಕೃಷ್ಣನ ಚರಣಕಮಲಗಳ ಸೇವೆಯನ್ನೇ ಪರಮೋತ್ತಮವಾದುದು ಎಂದು ನಿಶ್ಚಯಿಸಿ, ದೇವನದಿ ಗಂಗೆಯ ದಡದಲ್ಲಿ ಕುಳಿತು ಪ್ರಾಯೋಪವೇಶ ವ್ರತವನ್ನು ಕೈಗೊಂಡನು.॥5॥
(ಶ್ಲೋಕ - 6)
ಮೂಲಮ್
ಯಾ ವೈ ಲಸಚ್ಛ್ರೀತುಲಸೀವಿಮಿಶ್ರ-
ಕೃಷ್ಣಾಂಘ್ರಿರೇಣ್ವಭ್ಯಕಾಂಬುನೇತ್ರೀ ।
ಪುನಾತಿ ಲೋಕಾನುಭಯತ್ರ ಸೇಶಾನ್
ಕಸ್ತಾಂ ನ ಸೇವೇತ ಮರಿಷ್ಯಮಾಣಃ ॥
ಅನುವಾದ
ಯಾವ ದೇವನದಿಯು ಘಮ-ಘಮಿಸುತ್ತಿರುವ ತುಲಸೀದಳಗಳು ಬೆರೆತ ಶ್ರೀಕೃಷ್ಣನ ಪಾದಧೂಳಿಯಿಂದ ಪರಮ ಪವಿತ್ರವಾಗಿರುವ ಜಲದಿಂದ ಪ್ರವಹಿಸುತ್ತಾ ಲೋಕಪಾಲರ ಸಹಿತವಾದ ಸಮಸ್ತ ಲೋಕಗಳನ್ನು ಒಳಗೂ-ಹೊರಗೂ ಪಾವನಗೊಳಿಸುತ್ತಿದೆಯೋ, ಅಂತಹ ಲೋಕಪಾವನೆಯಾದ ಗಂಗೆಯನ್ನು ಮರಣಕಾಲದಲ್ಲಿ ಯಾರು ತಾನೇ ಸೇವಿಸಲಾರನು? ॥6॥
(ಶ್ಲೋಕ - 7)
ಮೂಲಮ್
ಇತಿ ವ್ಯವಚ್ಛಿದ್ಯ ಸ ಪಾಂಡವೇಯಃ
ಪ್ರಾಯೋಪವೇಶಂ ಪ್ರತಿ ವಿಷ್ಣುಪದ್ಯಾಮ್ ।
ದಧ್ಯೌ ಮುಕುಂದಾಂಘ್ರಿಮನನ್ಯಭಾವೋ
ಮುನಿವ್ರತೋ ಮುಕ್ತಸಮಸ್ತಸಂಗಃ ॥
ಅನುವಾದ
ಹೀಗೆ ಪಾಂಡವಕುಲತಿಲಕನು ಗಂಗಾನದಿಯ ತೀರದಲ್ಲಿ ಆಮರಣಾಂತ ಉಪವಾಸದ ನಿಶ್ಚಯಗೈದು ಸರ್ವಸಂಗ ಪರಿತ್ಯಾಗ ಮಾಡಿ ಮುನಿಧರ್ಮವನ್ನು ಹಿಡಿದು, ಅನನ್ಯಭಾವದಿಂದ ಶ್ರೀಕೃಷ್ಣನ ಚರಣಾರವಿಂದಗಳನ್ನು ಧ್ಯಾನಿಸತೊಡಗಿದನು.॥7॥
(ಶ್ಲೋಕ - 8)
ಮೂಲಮ್
ತತ್ರೋಪಜಗ್ಮುರ್ಭುವನಂ ಪುನಾನಾ
ಮಹಾನುಭಾವಾ ಮುನಯಃ ಸಶಿಷ್ಯಾಃ ।
ಪ್ರಾಯೇಣ ತೀರ್ಥಾಭಿಗಮಾಪದೇಶೈಃ
ಸ್ವಯಂ ಹಿ ತೀರ್ಥಾನಿ ಪುನಂತಿ ಸಂತಃ ॥
ಅನುವಾದ
ಆಗಲೇ ತ್ರಿಲೋಕಗಳನ್ನು ಪವಿತ್ರಗೊಳಿಸುವ ಮಹಾನುಭಾವರಾದ ಅನೇಕ ಮಹರ್ಷಿಗಳು ಶಿಷ್ಯ ಸಮೇತರಾಗಿ ಅಲ್ಲಿಗೆ ಆಗಮಿಸಿದರು. ಸಾಧು-ಸಂತರು ಪ್ರಾಯಶಃ ತೀರ್ಥಯಾತ್ರೆಯ ನೆಪದಲ್ಲಿ ಆ ತೀರ್ಥಸ್ಥಾನಗಳನ್ನು ಪವಿತ್ರಮಾಡುತ್ತಾರೆ.॥8॥
(ಶ್ಲೋಕ - 9)
ಮೂಲಮ್
ಅತ್ರಿರ್ವಸಿಷ್ಠಶ್ಚ್ಯವನಃ ಶರದ್ವಾ-
ನರಿಷ್ಟನೇಮಿರ್ಭೃಗುರಂಗಿರಾಶ್ಚ ।
ಪರಾಶರೋ ಗಾಸುತೋಥ ರಾಮ
ಉತಥ್ಯ ಇಂದ್ರಪ್ರಮದೇಧ್ಮವಾಹೌ ॥
(ಶ್ಲೋಕ - 10)
ಮೂಲಮ್
ಮೇಧಾತಿಥಿರ್ದೇವಲ ಆರ್ಷ್ಟಿಷೇಣೋ
ಭಾರದ್ವಾಜೋ ಗೌತಮಃ ಪಿಪ್ಪಲಾದಃ ।
ಮೈತ್ರೇಯ ಔರ್ವಃ ಕವಷಃ ಕುಂಭಯೋನಿ-
ರ್ದ್ವೈಪಾಯನೋ ಭಗವಾನ್ನಾರದಶ್ಚ ॥
(ಶ್ಲೋಕ - 11)
ಮೂಲಮ್
ಅನ್ಯೇ ಚ ದೇವರ್ಷಿಬ್ರಹ್ಮರ್ಷಿವರ್ಯಾ
ರಾಜರ್ಷಿವರ್ಯಾ ಅರುಣಾದಯಶ್ಚ ।
ನಾನಾರ್ಷೇಯಪ್ರವರಾನ್ಸಮೇತಾ-
ನಭ್ಯರ್ಚ್ಯ ರಾಜಾ ಶಿರಸಾ ವವಂದೇ ॥
ಅನುವಾದ
ಆಗ ಅಲ್ಲಿಗೆ ಅತ್ರಿ, ವಸಿಷ್ಠ, ಚ್ಯವನ, ಶರದ್ವಾನ್, ಅರಿಷ್ಟನೇಮಿ, ಭೃಗು, ಅಂಗಿರಾ, ಪರಾಶರ, ವಿಶ್ವಾಮಿತ್ರ, ಪರಶುರಾಮ, ಉತಥ್ಯ, ಇಂದ್ರಪ್ರಮದ, ಇಧ್ಮವಾಹ, ಮೇಧಾತಿಥಿ, ದೇವಲ, ಆರ್ಷ್ಟಿಷೇಣ, ಭಾರದ್ವಾಜ, ಗೌತಮ, ಪಿಪ್ಪಲಾದ, ಮೈತ್ರೇಯ, ಔರ್ವ, ಕವಷ, ಅಗಸ್ತ್ಯ, ಭಗವಾನ್ ವ್ಯಾಸರು, ದೇವರ್ಷಿ ನಾರದರು ಹಾಗೂ ಇವರಲ್ಲದೆ ಇನ್ನೂ ಅನೇಕ ಶ್ರೇಷ್ಠ ದೇವರ್ಷಿಗಳು, ಮಹರ್ಷಿಗಳು, ಅರುಣಾದಿ ರಾಜರ್ಷಿಯರು ಆಗಮಿಸಿದರು. ಹೀಗೆ ನಾನಾಗೋತ್ರದ ಮುಖ್ಯ-ಮುಖ್ಯ ಋಷಿಗಳನ್ನು ಒಂದೆಡೆ ನೋಡಿದ ಪರೀಕ್ಷಿದ್ರಾಜನು ಎಲ್ಲರಿಗೂ ಯಥಾಯೋಗ್ಯ ಸತ್ಕಾರಗೈದು, ಅವರ ಚರಣಗಳಲ್ಲಿ ಶಿರವನ್ನಿಟ್ಟು ಸಾಷ್ಟಾಂಗ ನಮಸ್ಕಾರ ಮಾಡಿದನು.॥9-11॥
(ಶ್ಲೋಕ - 12)
ಮೂಲಮ್
ಸುಖೋಪವಿಷ್ಟೇಷ್ವಥ ತೇಷು ಭೂಯಃ
ಕೃತಪ್ರಣಾಮಃ ಸ್ವಚಿಕೀರ್ಷಿತಂ ಯತ್ ।
ವಿಜ್ಞಾಪಯಾಮಾಸ ವಿವಿಕ್ತಚೇತಾ
ಉಪಸ್ಥಿತೋಗ್ರೇಭಿಗೃಹೀತಪಾಣಿಃ ॥
ಅನುವಾದ
ಅನಂತರ ಅವರೆಲ್ಲರೂ ಸುಖಾಸೀನರಾಗಿ ಕುಳಿತುಕೊಳ್ಳಲು ಮಹಾರಾಜಾ ಪರೀಕ್ಷಿತನು ಪುನಃ ಅವರನ್ನು ವಂದಿಸಿ,ಅವರ ಮುಂದೆ ಕೈಜೋಡಿಸಿಕೊಂಡು ನಿಂತು, ಶುದ್ಧವಾದ ಮನಸ್ಸಿನಿಂದ ತಾನು ಮುಂದೆ ಕೈಗೊಳ್ಳಬೇಕೆಂದಿದ್ದ ಕಾರ್ಯ ನಿಶ್ಚಯವನ್ನು ಹೀಗೆ ವಿಜ್ಞಾಪನೆ ಮಾಡಿಕೊಂಡನು.॥12॥
(ಶ್ಲೋಕ - 13)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಅಹೋ ವಯಂ ಧನ್ಯತಮಾ ನೃಪಾಣಾಂ
ಮಹತ್ತಮಾನುಗ್ರಹಣೀಯಶೀಲಾಃ ।
ರಾಜ್ಞಾಂ ಕುಲಂ ಬ್ರಾಹ್ಮಣಪಾದಶೌಚಾದ್
ದೂರಾದ್ವಿ ಸೃಷ್ಟಂ ಬತ ಗರ್ಹ್ಯಕರ್ಮ ॥
ಅನುವಾದ
ಪರೀಕ್ಷಿದ್ರಾಜನು ಹೇಳಿದನು — ಆಹಾ! ಎಂತಹ ಧನ್ಯತೆ! ತಮ್ಮಂತಹ ಶ್ರೇಷ್ಠತಮರಾದ ಮಹಾತ್ಮರ ಅನುಗ್ರಹಕ್ಕೆ ಪಾತ್ರನಾದ ನಾನೇ ರಾಜರಲ್ಲಿ ಅತಿ ಧನ್ಯನು. ಬ್ರಹ್ಮಜ್ಞಾನಿಗಳಾದ ಬ್ರಾಹ್ಮಣರ ಪಾದತೀರ್ಥದಿಂದ ಪರಿಶುದ್ಧರಾಗದೆ ದೂರರಾದ ರಾಜರ ಕುಲವು ನೀಚಕರ್ಮಕ್ಕೆ ತುತ್ತಾಗುವುದು. ಇದು ಎಷ್ಟು ದುಃಖದ ಸಂಗತಿಯಾಗಿದೆ.॥13॥
(ಶ್ಲೋಕ - 14)
ಮೂಲಮ್
ತಸ್ಯೈವ ಮೇಘಸ್ಯ ಪರಾವರೇಶೋ
ವ್ಯಾಸಕ್ತಚಿತ್ತಸ್ಯ ಗೃಹೇಷ್ವಭೀಕ್ಷ್ಣಮ್ ।
ನಿರ್ವೇದಮೂಲೋ ದ್ವಿಜಶಾಪರೂಪೋ
ಯತ್ರ ಪ್ರಸಕ್ತೋ ಭಯಮಾಶು ಧತ್ತೇ ॥
ಅನುವಾದ
ನಾನೂ ಅಪರಾಧೀ ರಾಜನೇ ಆಗಿದ್ದೇನೆ. ನಿರಂತರ ದೇಹ-ಗೇಹಗಳಲ್ಲೇ ಆಸಕ್ತನಾದ ಕಾರಣ ನಾನೂ ಪಾಪರೂಪವೇ ಆಗಿದ್ದೇನೆ. ಇದರಿಂದ ಸಾಕ್ಷಾತ್ ಭಗವಂತನೇ ಬ್ರಾಹ್ಮಣರ ಶಾಪರೂಪದಿಂದ ನನ್ನ ಮೇಲೆ ಕೃಪೆಮಾಡಲು ಆಗಮಿಸಿದ್ದಾನೆ. ಈ ಶಾಪವು ವೈರಾಗ್ಯವನ್ನುಂಟು ಮಾಡುವುದಾಗಿದೆ. ಏಕೆಂದರೆ, ಇಂತಹ ಶಾಪದಿಂದ ಸಂಸಾರಾಸಕ್ತ ಪುರುಷರು ಭಯಗೊಂಡು ವಿರಕ್ತರಾಗುತ್ತಿರುತ್ತಾರೆ.॥14॥
(ಶ್ಲೋಕ - 15)
ಮೂಲಮ್
ತಂ ಮೋಪಯಾತಂ ಪ್ರತಿಯಂತು ವಿಪ್ರಾ
ಗಂಗಾ ಚ ದೇವೀ ಧೃತಚಿತ್ತಮೀಶೇ ।
ದ್ವಿಜೋಪಸೃಷ್ಟಃ ಕುಹಕಸ್ತಕ್ಷಕೋ ವಾ
ದಶತ್ವಲಂ ಗಾಯತ ವಿಷ್ಣುಗಾಥಾಃ ॥
ಅನುವಾದ
ಎಲೈ ಬ್ರಾಹ್ಮಣ ಶ್ರೇಷ್ಠರೇ! ಹೀಗೆ ಭಗವಂತನಲ್ಲಿ ನೆಟ್ಟ ಮನಸ್ಸುಳ್ಳ ನಾನು ನಿಮ್ಮಲ್ಲಿ ಶರಣಾಗಿದ್ದೇನೆಂದು ತಿಳಿಯಿರಿ. ಗಂಗಾಮಾತೆಯೂ ಹಾಗೇ ತಿಳಿಯಲಿ, ಬ್ರಾಹ್ಮಣನಿಂದ ಪ್ರೇರಿತನಾಗಿ ಬರುವ ವಂಚಕನಾದ ತಕ್ಷಕನೇ ಬಂದು ನನ್ನನ್ನು ಕಚ್ಚಿದರೂ ಸರಿಯೇ. ನೀವು ಮಾತ್ರ ಬಿಡದೇ ನನ್ನ ಮುಂದೆ ಶ್ರೀವಿಷ್ಣುವಿನ ಕೀರ್ತನೆಗಳನ್ನು ಹಾಡುತ್ತಿರಿ.॥15॥
(ಶ್ಲೋಕ - 16)
ಮೂಲಮ್
ಪುನಶ್ಚ ಭೂಯಾದ್ಭಗವತ್ಯನಂತೇ
ರತಿಃ ಪ್ರಸಂಗಶ್ಚ ತದಾಶ್ರಯೇಷು ।
ಮಹತ್ಸು ಯಾಂ ಯಾಮುಪಯಾಮಿ ಸೃಷ್ಟಿಂ
ಮೈತ್ರ್ಯಸ್ತು ಸರ್ವತ್ರ ನಮೋ ದ್ವಿಜೇಭ್ಯಃ ॥
ಅನುವಾದ
ಕರ್ಮವಶದಿಂದ ಮುಂದೆ ನಾನು ಎಷ್ಟುಬಾರಿ ಹುಟ್ಟಿದರೂ ಆ ಎಲ್ಲ ಜನ್ಮಗಳಲ್ಲಿಯೂ ನನಗೆ ಶ್ರೀಭಗವಂತನಲ್ಲೇ ಭಕ್ತಿಯು ನೆಲಸಲಿ. ಆತನನ್ನು ಆಶ್ರಯಿಸಿದ ಮಹಾತ್ಮರ ಸಂಗವು ದೊರೆಯುತ್ತಿರಲಿ. ಎಲ್ಲರಲ್ಲಿಯೂ ಸ್ನೇಹಭಾವವಿರುವಂತೆ ನೀವು ಆಶೀರ್ವದಿಸಿರಿ. ಬ್ರಾಹ್ಮಣಶ್ರೇಷ್ಠರಾದ ನಿಮ್ಮೆಲ್ಲರಿಗೂ ನಮೋ ನಮಃ ॥16॥
(ಶ್ಲೋಕ - 17)
ಮೂಲಮ್
ಇತಿ ಸ್ಮ ರಾಜಾಧ್ಯವಸಾಯಯುಕ್ತಃ
ಪ್ರಾಚೀನಮೂಲೇಷು ಕುಶೇಷು ೀರಃ ।
ಉದಙ್ಮುಖೋ ದಕ್ಷಿಣಕೂಲ ಆಸ್ತೇ
ಸಮುದ್ರಪತ್ನ್ಯಾಃ ಸ್ವ ಸುತನ್ಯಸ್ತಭಾರಃ ॥
ಅನುವಾದ
ಹೀಗೆ ದೃಢನಿಶ್ಚಯಮಾಡಿದ ಧೀರನಾದ ಆ ರಾಜೇಂದ್ರನು ರಾಜ್ಯಭಾರವನ್ನು ಪುತ್ರನಾದ ಜನಮೇಜಯನಿಗೆ ಒಪ್ಪಿಸಿ, ಗಂಗಾ ನದಿಯ ದಕ್ಷಿಣತೀರದಲ್ಲಿ ಪೂರ್ವಾಗ್ರವಾಗಿ ಹಾಸಿದ ದರ್ಭೆಗಳ ಮೇಲೆ ಉತ್ತರಾಭಿಮುಖವಾಗಿ ಕುಳಿತುಕೊಂಡನು.॥17॥
(ಶ್ಲೋಕ - 18)
ಮೂಲಮ್
ಏವಂ ಚ ತಸ್ಮಿನ್ನರದೇವದೇವೇ
ಪ್ರಾಯೋಪವಿಷ್ಟೇ ದಿವಿ ದೇವಸಂಘಾಃ ।
ಪ್ರಶಸ್ಯ ಭೂವೌ ವ್ಯಕಿರನ್ಪ್ರಸೂನೈ-
ರ್ಮುದಾ ಮುಹುರ್ದುಂದುಭಯಶ್ಚ ನೇದುಃ ॥
ಅನುವಾದ
ಏಕಛತ್ರ ಚಕ್ರವರ್ತಿ ಪರೀಕ್ಷಿತನು ಹೀಗೆ ಪ್ರಾಯೋಪವೇಶವ್ರತವನ್ನು ಕೈಗೊಂಡು ಕುಳಿತುಕೊಂಡಾಗ, ದೇವಲೋಕದಲ್ಲಿದ್ದ ದೇವತೆಗಳು ಆತನನ್ನು ಆನಂದದಿಂದ ಪ್ರಶಂಸಿಸುತ್ತಾ ಭೂಮಿಯ ಮೇಲೆ ಹೂಮಳೆಯನ್ನು ಸುರಿಸಿದರು. ದೇವದುಂದುಭಿಗಳು ಮತ್ತೆ-ಮತ್ತೆ ಮೊಳಗತೊಡಗಿದವು.॥18॥
(ಶ್ಲೋಕ - 19)
ಮೂಲಮ್
ಮಹರ್ಷಯೋ ವೈ ಸಮುಪಾಗತಾ ಯೇ
ಪ್ರಶಸ್ಯ ಸ್ವಾತ್ಯನುಮೋದಮಾನಾಃ ।
ಊಚುಃ ಪ್ರಜಾನುಗ್ರಹಶೀಲಸಾರಾ
ಯದುತ್ತಮಶ್ಲೋಕಗುಣಾಭಿರೂಪಮ್॥
ಅನುವಾದ
ಹಾಗೆಯೇ ಅಲ್ಲಿ ನೆರೆದಿದ್ದ ಮಹರ್ಷಿಗಳೆಲ್ಲರೂ ಭಲೇ! ಭಲೇ! ಎಂದು ಹೇಳಿ ಪರೀಕ್ಷಿತನ ನಿಶ್ಚಯವನ್ನು ಪ್ರಶಂಸಿಸಿದರು ಹಾಗೂ ಅನು ಮೋದಿಸಿದರು. ಋಷಿಗಳಾದರೋ ಸ್ವಭಾವದಿಂದಲೇ ಜನರಮೇಲೆ ಅನುಗ್ರಹದ ಮಳೆಗರೆಯುತ್ತಾರೆ. ಇಷ್ಟೇ ಅಲ್ಲ ಅವರ ಎಲ್ಲ ಶಕ್ತಿಯೂ ಲೋಕಕ್ಕೆ ಕೃಪೆದೋರಲೆಂದೇ ಇರುತ್ತದೆ. ಆ ಮಹಾತ್ಮರು ಭಗವಾನ್ ಶ್ರೀಕೃಷ್ಣನ ಗುಣಗಳಿಂದ ಪ್ರಭಾವಿತನಾದ ಪರೀಕ್ಷಿತನಿಗೆ ಅನುಗುಣವಾಗಿ ಮಾತನ್ನಾಡಿದರು.॥19॥
(ಶ್ಲೋಕ - 20)
ಮೂಲಮ್
ನ ವಾ ಇದಂ ರಾಜರ್ಷಿವರ್ಯ ಚಿತ್ರಂ
ಭವತ್ಸು ಕೃಷ್ಣಂ ಸಮನುವ್ರತೇಷು ।
ಯೇಧ್ಯಾಸನಂ ರಾಜಕಿರೀಟಜುಷ್ಟಂ
ಸದ್ಯೋ ಜಹುರ್ಭಗವತ್ಪಾರ್ಶ್ವಕಾಮಾಃ ॥
ಅನುವಾದ
‘ರಾಜರ್ಷಿಶ್ರೇಷ್ಠನೇ! ಭಗವಾನ್ ಶ್ರೀಕೃಷ್ಣನ ಸೇವಕನೂ, ಅನುಯಾಯಿಯೂ, ಪಾಂಡುವಂಶೀಯನೂ ಆದ ನಿನಗೆ ಇದು ಆಶ್ಚರ್ಯದ ಮಾತಲ್ಲ. ಏಕೆಂದರೆ, ನೀವೆಲ್ಲ ಭಗವಂತನ ಸನ್ನಿಧಿಯನ್ನು ಪಡೆಯಲಿಕ್ಕಾಗಿ ಸಮಸ್ತ ಸಾಮಂತರಾಜರ ಕಿರೀಟಗಳಿಂದ ಸೇವಿತವಾದ ರಾಜಸಿಂಹಾಸನವನ್ನು ಕ್ಷಣಾರ್ಧದಲ್ಲಿ ತ್ಯಜಿಸಿಬಿಟ್ಟಿರಿ.॥20॥
(ಶ್ಲೋಕ - 21)
ಮೂಲಮ್
ಸರ್ವೇ ವಯಂ ತಾವದಿಹಾಸ್ಮಹೇದ್ಯ
ಕಲೇವರಂ ಯಾವದಸೌ ವಿಹಾಯ ।
ಲೋಕಂ ಪರಂ ವಿರಜಸ್ಕಂ ವಿಶೋಕಂ
ಯಾಸ್ಯತ್ಯಯಂ ಭಾಗವತಪ್ರಧಾನಃ ॥
ಅನುವಾದ
‘‘ಈ ಪರಮ ಭಾಗವತೋತ್ತಮನಾದ ಪರೀಕ್ಷಿದ್ರಾಜನು ತನ್ನ ನಶ್ವರವಾದ ದೇಹವನ್ನು ತ್ಯಜಿಸಿ, ಮಾಯಾದೋಷದಿಂದಲೂ, ಶೋಕದಿಂದಲೂ ರಹಿತನಾಗಿ ಭಗವದ್ಧಾಮವನ್ನು ಹೊಂದುವವರೆಗೂ ಇಲ್ಲಿಯೇ ಇರೋಣ’ ಎಂದು ಅವರು ನಿಶ್ಚಯಿಸಿದರು.॥21॥
(ಶ್ಲೋಕ - 22)
ಮೂಲಮ್
ಆಶ್ರುತ್ಯ ತದೃಷಿಗಣವಚಃ ಪರೀಕ್ಷಿತ್
ಸಮಂ ಮಧುಚ್ಯುದ್ಗುರು ಚಾವ್ಯಲೀಕಮ್ ।
ಆಭಾಷತೈನಾನಭಿನಂದ್ಯ ಯುಕ್ತಾನ್
ಶುಶ್ರೂಷಮಾಣಶ್ಚರಿತಾನಿ ವಿಷ್ಣೋಃ ॥
ಅನುವಾದ
ಮಹಾಯೋಗಿಗಳಾದ ಆ ಮಹರ್ಷಿಗಳ ಮಧುರವೂ, ಗಂಭೀರವೂ, ಸತ್ಯವೂ, ಸಮವೂ ಆದ ಆ ಮಾತುಗಳನ್ನು ಕೇಳಿ, ಪರೀಕ್ಷಿದ್ರಾಜನು ಅವರನ್ನು ಅಭಿನಂದಿಸಿ ಶ್ರೀಭಗವಂತನ ಮನೋಹರವಾದ ಚರಿತ್ರವನ್ನು ಕೇಳುವ ಇಚ್ಛೆಯಿಂದ ಋಷಿಗಳನ್ನು ಇಂತು ಪ್ರಶ್ನಿಸಿದನು. ॥22॥
(ಶ್ಲೋಕ - 23)
ಮೂಲಮ್
ಸಮಾಗತಾಃ ಸರ್ವತ ಏವ ಸರ್ವೇ
ವೇದಾ ಯಥಾ ಮೂರ್ತಿಧರಾಸಿ ಪೃಷ್ಠೇ ।
ನೇಹಾಥವಾಮುತ್ರ ಚ ಕಶ್ಚನಾರ್ಥ
ಋತೇ ಪರಾನುಗ್ರಹಮಾತ್ಮಶೀಲಮ್ ॥
ಅನುವಾದ
ಎಲೈ ಮಹಾತ್ಮರೇ! ಎಲ್ಲ ಕಡೆಗಳಿಂದಲೂ ಇಲ್ಲಿಗೆ ದಯಮಾಡಿಸಿರುವ ತಾವು ಸತ್ಯಲೋಕದಲ್ಲಿರುವ ಸಾಕಾರವಾದ ವೇದಗಳಿಗೆ ಸಮಾನರಾಗಿದ್ದೀರಿ. ಇತರರ ಮೇಲೆ ಅನುಗ್ರಹ ತೋರುವುದು ನಿಮ್ಮ ಸಹಜ ಸ್ವಭಾವವೇ ಆಗಿದ್ದು, ನಿಮಗೆ ಇದನ್ನು ಬಿಟ್ಟು ಇಹಲೋಕದಲ್ಲಿ ಅಥವಾ ಪರಲೋಕದಲ್ಲಿ ಬೇರೆಯಾವ ಸ್ವಾರ್ಥವೂ ಇಲ್ಲ.॥23॥
(ಶ್ಲೋಕ - 24)
ಮೂಲಮ್
ತತಶ್ಚ ವಃ ಪೃಚ್ಛ್ಯಮಿಮಂ ವಿಪೃಚ್ಛೇ
ವಿಶ್ರಭ್ಯ ವಿಪ್ರಾ ಇತಿಕೃತ್ಯತಾಯಾಮ್ ।
ಸರ್ವಾತ್ಮನಾ ಮ್ರಿಯಾಮಾಣೈಶ್ಚ ಕೃತ್ಯಂ
ಶುದ್ಧಂ ಚ ತತ್ರಾಮೃಶತಾಭಿಯುಕ್ತಾಃ ॥
ಅನುವಾದ
ಬ್ರಾಹ್ಮಣಶ್ರೇಷ್ಠರೇ! ನಿಮ್ಮ ಮೇಲೆ ಪೂರ್ಣವಾದ ನಂಬಿಕೆಯನ್ನಿಟ್ಟು ನಾನು ನನ್ನ ಕರ್ತವ್ಯದ ಬಗ್ಗೆ ಎರಡು ಪ್ರಶ್ನೆಗಳನ್ನು ಕೇಳುತ್ತೇನೆ. ವಿದ್ವಾಂಸರಾದ ನೀವೆಲ್ಲರೂ ಪರಸ್ಪರವಾಗಿ ವಿಚಾರಮಾಡಿ ತಿಳಿಸಿರಿ. ಎಲ್ಲರೂ ಎಲ್ಲ ಅವಸ್ಥೆಗಳಲ್ಲಿಯೂ ಮತ್ತು ವಿಶೇಷವಾಗಿ ಮರಣ ಸಮಯವು ಹತ್ತಿರವಾಗಿರುವಾಗಲು ಅಂತಃಕರಣ ಹಾಗೂ ಶರೀರದಿಂದ ಮಾಡಬೇಕಾದ ಶುದ್ಧಕರ್ಮವು ಯಾವುದು?* ॥24॥
ಟಿಪ್ಪನೀ
- ಇಲ್ಲಿ ರಾಜನು ಮಹರ್ಷಿಗಳಲ್ಲಿ ಎರಡು ಪ್ರಶ್ನೆಗಳನ್ನು ಕೇಳಿರುವನು (1) ಜೀವನು ಸದಾಕಾಲ ಮಾಡಬೇಕಾದ ಕರ್ತವ್ಯವೇನು? (2) ಸ್ವಲ್ಪಕಾಲದಲ್ಲೇ ಮರಣಹೊಂದಲಿರುವವರು ಮಾಡಬೇಕಾದ ಕರ್ತವ್ಯಗಳೇನು? ಇದೇ ಎರಡು ಪ್ರಶ್ನೆಗಳನ್ನು ಅವನು ಶುಕಮಹಾಮುನಿಗಳಲ್ಲಿಯೂ ಕೇಳುವನು. ಆ ಎರಡು ಪ್ರಶ್ನೆಗಳ ಉತ್ತರವನ್ನೇ ಎರಡನೇ ಸ್ಕಂಧದಿಂದ ಹನ್ನೆರಡನೇ ಸ್ಕಂಧದವರೆಗೆ ವಿಸ್ತಾರವಾಗಿ ನೀಡಲಾಗಿದೆ.
(ಶ್ಲೋಕ - 25)
ಮೂಲಮ್
ತತ್ರಾಭವದ್ಭಗವಾನ್ವ್ಯಾಸಪುತ್ರೋ
ಯದೃಚ್ಛಯಾ ಗಾಮಟಮಾನೋನಪೇಕ್ಷಃ ।
ಅಲಕ್ಷ್ಯಲಿಂಗೋ ನಿಜಲಾಭತುಷ್ಟೋ
ವೃತಶ್ಚ ಬಾಲೈ ರವಧೂತವೇಷಃ ॥
ಅನುವಾದ
ಅದೇ ಸಮಯಕ್ಕೆ ಸರಿಯಾಗಿ ಭೂಮಿಯಲ್ಲಿ ಸ್ವಚ್ಛಂದವಾಗಿ ಸಂಚಾರಮಾಡುತ್ತಿದ್ದ, ವಿರಕ್ತಶಿಖಾಮಣಿಗಳಾದ ವ್ಯಾಸಪುತ್ರ ಭಗವಾನ್ ಶ್ರೀಶುಕಮಹಾಮುನಿಗಳು ಅಲ್ಲಿ ಕಾಣಿಸಿಕೊಂಡರು. ಆ ಮಹಾತ್ಮರಾದರೋ ಪರಮಾತ್ಮನ ಲಾಭದಿಂದ ಸದಾ ಸಂತುಷ್ಟರಾಗಿದ್ದರು. ವರ್ಣ ಅಥವಾ ಆಶ್ರಮಗಳಿಗೆ ಸಂಬಂಧಪಟ್ಟ ಯಾವ ಹೊರ ಚಿಹ್ನೆಗಳೂ ಇಲ್ಲದೆ ಅವಧೂತವೇಷದಲ್ಲಿದ್ದರು. ಹುಡುಗರೂ, ಹೆಂಗಸರೂ ಅವರ ಸುತ್ತಲೂ ನೆರೆದಿದ್ದರು.॥25॥
(ಶ್ಲೋಕ - 26)
ಮೂಲಮ್
ತಂ ದ್ವ್ಯಷ್ಟವರ್ಷಂ ಸುಕುಮಾರಪಾದ-
ಕರೋರುಬಾಹ್ವಂ ಸಕಪೋಲಗಾತ್ರಮ್ ।
ಚಾರ್ವಾಯತಾಕ್ಷೋನ್ನ ಸತುಲ್ಯಕರ್ಣ-
ಸುಭ್ರ್ವಾನನಂ ಕಂಬು ಸುಜಾತಕಂಠಮ್ ॥
(ಶ್ಲೋಕ - 27)
ಮೂಲಮ್
ನಿಗೂಢಜತ್ರುಂ ಪೃಥುತುಂಗವಕ್ಷಸ-
ಮಾವರ್ತನಾಭಿಂ ವಲಿವಲ್ಗೂದರಂ ಚ ।
ದಿಗಂಬರಂ ವಕ ವಿಕೀರ್ಣಕೇಶಂ
ಪ್ರಲಂಬಬಾಹುಂ ಸ್ವಮರೋತ್ತಮಾಭಮ್ ॥
ಅನುವಾದ
ಹದಿನಾರು ವರ್ಷದ ತಾರುಣ್ಯದಿಂದ ಅವರು ಚೆಲುವಿನ ಗಣಿಯಾಗಿದ್ದರು. ಅವರ ಕೈ-ಕಾಲುಗಳು, ಮೊಣಕಾಲುಗಳು, ಭುಜಗಳು, ಕೆನ್ನೆಗಳು ಹಾಗೂ ಉಳಿದ ಎಲ್ಲ ಅಂಗಗಳು ಸುಕುಮಾರವಾಗಿದ್ದವು. ಅಂದ-ಚೆಂದಗಳಿಂದ ಕೂಡಿದ ವಿಶಾಲವಾದ ನೇತ್ರಗಳು, ಎತ್ತರವಾದ ಮೂಗು, ಸಮವಾದ ಕಿವಿಗಳು, ರಮಣೀಯವಾದ ಹುಬ್ಬುಗಳಿಂದ ಕಂಗೊಳಿಸುವ ಮುಖ, ಶಂಖದಂತೆ ಸುಂದರವಾದ ಕಂಠ, ಮುಚ್ಚಿದ ಹೆಗಲುಸಂದುಗಳು, ವಿಶಾಲವೂ-ಉನ್ನತವೂಆದ ಎದೆ, ಸುಳಿಯನ್ನು ಹೋಲುವ ಹೊಕ್ಕಳು, ತ್ರಿವಳಿಗಳಿಂದ ಕೂಡಿದ ಉದರ ಪ್ರದೇಶ, ಉದ್ದವಾದ ತೋಳುಗಳು ಮತ್ತು ಮುಖದ ಮೇಲೆ ಕೆದರಿ ಹರಡಿದ್ದ ಕೂದಲುಗಳಿಂದ ಮನಮೋಹಕವಾದ ಮೂರ್ತಿಯಾಗಿ, ದಿಗಂಬರರಾಗಿ, ಅವರು ದೇವೋತ್ತಮರಂತೆ ರಾರಾಜಿಸುತ್ತಿದ್ದರು. ॥26-27॥
(ಶ್ಲೋಕ - 28)
ಮೂಲಮ್
ಶ್ಯಾಮಂ ಸದಾಪೀಚ್ಯವಯೋಂಗ ಲಕ್ಷ್ಮ್ಯಾ
ಸೀಣಾಂ ಮನೋಜ್ಞಂ ರುಚಿರಸ್ಮಿತೇನ ।
ಪ್ರತ್ಯುತ್ಥಿ ತಾಸ್ತೇ ಮುನಯಃ ಸ್ವಾಸನೇಭ್ಯ-
ಸ್ತಲ್ಲಕ್ಷಣಜ್ಞಾ ಅಪಿ ಗೂಢವರ್ಚಸಮ್ ॥
ಅನುವಾದ
ಶ್ಯಾಮಲವಾದ ಶರೀರ ಕಾಂತಿ, ರೂಪ-ಲಾವಣ್ಯ ಮತ್ತು ಮಧುರ ಮಂದಹಾಸಗಳಿಂದ ಸ್ತ್ರೀಯರ ಕಣ್ಮನಗಳನ್ನು ಸದಾ ಸೆಳೆಯುತ್ತಿದ್ದರು. ತಮ್ಮ ಬ್ರಹ್ಮತೇಜಸ್ಸನ್ನು ಅಡಗಿಸಿಟ್ಟುಕೊಂಡಿದ್ದರೂ, ಅದರ ಲಕ್ಷಣಗಳನ್ನರಿತ ಮುನಿಗಳು ಅವರನ್ನು ಗುರುತಿಸಿದರು. ಒಡನೆಯೇ ಎಲ್ಲರೂ ತಮ್ಮ-ತಮ್ಮ ಆಸನಗಳನ್ನು ಬಿಟ್ಟು ಅವರನ್ನು ಗೌರವಿಸಲು ಎದ್ದುನಿಂತರು.॥28॥
(ಶ್ಲೋಕ - 29)
ಮೂಲಮ್
ಸ ವಿಷ್ಣುರಾತೋತಿಥಯ ಆಗತಾಯ
ತಸ್ಮೈ ಸಪರ್ಯಾಂ ಶಿರಸಾಜಹಾರ ।
ತತೋ ನಿವೃತ್ತಾ ಹ್ಯಬುಧಾಃ ಸಿಯೋರ್ಭಕಾ
ಮಹಾಸನೇ ಸೋಪವಿವೇಶ ಪೂಜಿತಃ ॥
ಅನುವಾದ
ವಿಷ್ಣುರಾತ ಪರೀಕ್ಷಿದ್ರಾಜನು ಅತಿಥಿಯಾಗಿ ದಯಮಾಡಿಸಿದ್ದ ಅವರಿಗೆ ತಲೆಬಾಗಿ ನಮಸ್ಕರಿಸಿ ಪೂಜಿಸಿದನು. ಅವರ ಸ್ವರೂಪವನ್ನು ಅರಿಯದ ಬಾಲಕರು, ಸ್ತ್ರೀಯರೂ ಅವರ ಈ ಮಹಿಮೆಯನ್ನು ನೋಡಿ ಹಿಂದಿರುಗಿ ಹೊರಟು ಹೋದರು. ಆಗ ಎಲ್ಲರಿಂದ ಸನ್ಮಾನಿತರಾದ ಶ್ರೀಶುಕಮಹಾಮುನಿಗಳು ಶ್ರೇಷ್ಠವಾದ ಆಸನದಲ್ಲಿ ಮಂಡಿಸಿದರು. ॥29॥
(ಶ್ಲೋಕ - 30)
ಮೂಲಮ್
ಸ ಸಂವೃತಸ್ತತ್ರ ಮಹಾನ್ಮಹೀಯಸಾಂ
ಬ್ರಹ್ಮರ್ಷಿರಾಜರ್ಷಿದೇವರ್ಷಿಸಂಘೈಃ ।
ವ್ಯರೋಚತಾಲಂ ಭಗವಾನ್ಯಥೇಂದು-
ರ್ಗ್ರಹರ್ಕ್ಷತಾರಾನಿಕರೈಃ ಪರೀತಃ ॥
ಅನುವಾದ
ಬ್ರಹ್ಮರ್ಷಿಗಳೂ, ರಾಜರ್ಷಿಗಳೂ ಇವರ ಸಮೂಹದಿಂದ ಆವೃತರಾದ ಮಹಾತೇಜಸ್ವಿಗಳೂ, ಅತಿಪೂಜ್ಯರೂ, ಆದ ಶುಕಮಹಾಮುನಿಗಳು ಗ್ರಹ-ನಕ್ಷತ್ರ ತಾರಾಮಂಡಲಗಳಿಂದ ಸುತ್ತುವರಿದ ಭಗವಾನ್ ಚಂದ್ರನಂತೆ ಶೋಭಾಯಮಾನರಾಗಿದ್ದರು. ॥30॥
(ಶ್ಲೋಕ - 31)
ಮೂಲಮ್
ಪ್ರಶಾಂತಮಾಸೀನಮಕುಂಠಮೇಧಸಂ
ಮುನಿಂ ನೃಪೋ ಭಾಗವತೋಭ್ಯುಪೇತ್ಯ ।
ಪ್ರಣಮ್ಯ ಮೂರ್ಧ್ನಾವಹಿತಃ ಕೃತಾಂಜಲಿ-
ರ್ನತ್ವಾ ಗಿರಾ ಸೂನೃತಯಾನ್ವಪೃಚ್ಛತ್ ॥
ಅನುವಾದ
ಪ್ರಶಾಂತರಾಗಿ ಕುಳಿತಿದ್ದ, ಅದ್ಭುತ ಮೇಧಾ ಸಂಪನ್ನರಾದ ಆ ಶುಕಮಹಾಮುನಿಗಳ ಬಳಿಗೆ ಪರಮಭಾಗವತೋತ್ತಮನಾದ ಆ ರಾಜರ್ಷಿಯು ಬಂದು ಸಾವಧಾನವಾಗಿ ಅವರಿಗೆ ತಲೆಬಾಗಿ ನಮಸ್ಕಾರ ಮಾಡಿ ಸತ್ಯವೂ ಪ್ರಿಯವೂ ಆದ ವಾಣಿಯಿಂದ ಅವರಲ್ಲಿ ಹೀಗೆ ಅರಿಕೆಮಾಡಿಕೊಂಡನು.॥31॥
(ಶ್ಲೋಕ - 32)
ಮೂಲಮ್ (ವಾಚನಮ್)
ಪರೀಕ್ಷಿದುವಾಚ
ಮೂಲಮ್
ಅಹೋ ಅದ್ಯ ವಯಂ ಬ್ರಹ್ಮನ್ಸತ್ಸೇವ್ಯಾಃ ಕ್ಷತ್ರಬಂಧವಃ ।
ಕೃಪಯಾತಿಥಿರೂಪೇಣ ಭವದ್ಭಿಸ್ತೀರ್ಥಕಾಃ ಕೃತಾಃ ॥
ಅನುವಾದ
ಪರೀಕ್ಷಿದ್ರಾಜನು ಹೇಳಿದನು — ಬ್ರಹ್ಮವಿತ್ತಮರಾದ ಮುನಿವರ್ಯರೇ! ಆಹಾ! ಈಗ ನಾವು ಧನ್ಯರಾದೆವು. ಕ್ಷತ್ರಿಯಾಧಮರಾದ ನಾವೂ ಕೂಡ ಈಗ ಸತ್ಸಂಗಕ್ಕೆ ಅಧಿಕಾರಿಗಳಾದೆವು. ಸಾಧು-ಸಜ್ಜನರ ಸಮಾಜದಲ್ಲಿ ಸೇರಿ ಕೊಂಡೆವು. ತಾವು ಕೃಪೆಯಿಟ್ಟು ಅತಿಥಿಗಳಾಗಿ ಇಲ್ಲಿಗೆ ಬಂದು ನಮ್ಮನ್ನೆಲ್ಲರನ್ನೂ ತೀರ್ಥದಂತೆ ಪವಿತ್ರರನ್ನಾಗಿ ಮಾಡಿದಿರಿ.॥32॥
ಮೂಲಮ್
(ಶ್ಲೋಕ - 33)
ಯೇಷಾಂ ಸಂಸ್ಮರಣಾತ್ಪುಂಸಾಂ ಸದ್ಯಃ ಶುದ್ಧ್ಯಂತಿ ವೈ ಗೃಹಾಃ ।
ಕಿಂ ಪುನರ್ದರ್ಶನಸ್ಪರ್ಶಪಾದ ಶೌಚಾಸನಾದಿಭಿಃ ॥
ಅನುವಾದ
ನಿಮ್ಮಂತಹವರ ಸ್ಮರಣಮಾತ್ರದಿಂದಲೇ ಗೃಹಸ್ಥರ ಮನೆಗಳು ಪವಿತ್ರವಾಗುವುವು. ಹೀಗಿರುವಾಗ ನಿಮ್ಮ ನೇರವಾದ ದರ್ಶನ, ಸ್ಪರ್ಶನ, ಪಾದಪ್ರಕ್ಷಾಳನ, ಆಸನ ಸಮರ್ಪಣೆ ಮುಂತಾದವುಗಳ ಅವಕಾಶ ಸಿಕ್ಕಿದಾಗ ಹೇಳುವುದೇನಿದೆ? ॥33॥
(ಶ್ಲೋಕ - 34)
ಮೂಲಮ್
ಸಾಂನ್ನಿಧ್ಯಾತ್ತೇ ಮಹಾಯೋಗಿನ್ಪಾತಕಾನಿ ಮಹಾಂತ್ಯಪಿ ।
ಸದ್ಯೋ ನಶ್ಶಂತಿ ವೈ ಪುಂಸಾಂ ವಿಷ್ಣೋರಿವ ಸುರೇತರಾಃ ॥
ಅನುವಾದ
ಮಹಾಯೋಗಿಗಳೇ! ಮಹಾವಿಷ್ಣುವಿನ ಮುಂದೆ ದೈತ್ಯರು ನಾಶಹೊಂದುವಂತೆ ತಮ್ಮ ಸಾನ್ನಿಧ್ಯಮಾತ್ರದಿಂದಲೇ ಮಹಾಪಾತಕಗಳೂ ಕೂಡ ಒಡನೆಯೇ ಧ್ವಂಸವಾಗಿ ಬಿಡುತ್ತವೆ.॥34॥
(ಶ್ಲೋಕ - 35)
ಮೂಲಮ್
ಅಪಿ ಮೇ ಭಗವಾನ್ ಪ್ರೀತಃ ಕೃಷ್ಣಃ ಪಾಂಡುಸುತಪ್ರಿಯಃ ।
ಪೈತೃಷ್ವಸೇಯಪ್ರೀತ್ಯರ್ಥಂ ತದ್ಗೋತ್ರಸ್ಯಾತ್ತಬಾಂಧವಃ ॥
ಅನುವಾದ
ಪಾಂಡವರಿಗೆ ಮಿತ್ರನಾದ ಭಗವಾನ್ ಶ್ರೀಕೃಷ್ಣನು ನಿಜವಾಗಿಯೂ ನನ್ನ ಮೇಲೆ ಅತ್ಯಂತ ಪ್ರಸನ್ನನಾಗಿರುವನು. ತನ್ನ ಸೋದರತ್ತೆಯ ಮಕ್ಕಳಿಗೆ ಪ್ರಿಯವನ್ನುಂಟುಮಾಡಿದ ಭಗವಂತನು ಪಾಂಡವರವಂಶದಲ್ಲಿ ಹುಟ್ಟಿದ ನನ್ನ ಮೇಲೂ ಆತ್ಮೀಯವಾದ ವ್ಯವಹಾರವನ್ನು ಮಾಡಿರುವನು. ॥35॥
(ಶ್ಲೋಕ - 36)
ಮೂಲಮ್
ಅನ್ಯಥಾ ತೇವ್ಯಕ್ತಗತೇರ್ದರ್ಶನಂ ನಃ ಕಥಂ ನೃಣಾಮ್ ।
ನಿತರಾಂ ಮ್ರಿಯಮಾಣಾನಾಂ ಸಂಸಿದ್ಧಸ್ಯ ವನೀಯಸಃ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಕರುಣೆಯಿಲ್ಲದಿದ್ದರೆ ತಮ್ಮಂತಹ ಏಕಾಂತ ಜೀವಿಗಳೂ, ಗೂಢ ಸಂಚಾರಿಗಳೂ ಆದ ಮಹಾತ್ಮರೂ ತಾವಾಗಿಯೇ ದಯಮಾಡಿಸಿ ಮರಣವು ಸಮೀಪಿಸುವ ನಮ್ಮಂತಹ ಪ್ರಾಕೃತ ಮನುಷ್ಯರಿಗೆ ದರ್ಶನಕೊಡುತ್ತಿದ್ದರೇ? ॥36॥
(ಶ್ಲೋಕ - 37)
ಮೂಲಮ್
ಅತಃ ಪೃಚ್ಛಾಮಿ ಸಂಸಿದ್ಧಿಂ ಯೋಗಿನಾಂ ಪರಮಂ ಗುರುಮ್ ।
ಪುರುಷಸ್ಯೇಹ ಯತ್ಕಾರ್ಯಂ ಮ್ರಿಯಮಾಣಸ್ಯ ಸರ್ವಥಾ ॥
ಅನುವಾದ
ತಾವಾದರೋ ಯೋಗಿಗಳಿಗೂ ಪರಮಗುರುಗಳಾಗಿದ್ದೀರಿ. ಆದ್ದರಿಂದ ‘ಸರ್ವಥಾ ಮರಣಾಸನ್ನನಾದ ಪುರುಷನು ಏನು ಮಾಡಬೇಕು?’ ಈ ಕುರಿತು ಸಿದ್ಧಿಯ ಸ್ವರೂಪ ಮತ್ತು ಸಾಧನೆಯ ಸಂಬಂಧವಾಗಿ ನಿಮ್ಮಲ್ಲಿ ಪ್ರಶ್ನಿಸುತ್ತಿದ್ದೇನೆ. ॥37॥
(ಶ್ಲೋಕ - 38)
ಮೂಲಮ್
ಯಚ್ಛ್ರೋತವ್ಯಮಥೋ ಜಪ್ಯಂ ಯತ್ಕರ್ತವ್ಯಂ ನೃಭಿಃ ಪ್ರಭೋ ।
ಸ್ಮರ್ತವ್ಯಂ ಭಜನೀಯಂ ವಾ ಬ್ರೂಹಿ ಯದ್ವಾ ವಿಪರ್ಯಯಮ್ ॥
ಅನುವಾದ
ಮಹಾತ್ಮರೇ! ಮನುಷ್ಯನಾದವನು ಏನು ಮಾಡ ಬೇಕು? ಯಾವುದನ್ನು ಶ್ರವಣಿಸಬೇಕು, ಯಾರ ಜಪ, ಯಾರ ಸ್ಮರಣೆ, ಯಾರ ಭಜನೆ ಮಾಡಬೇಕು? ಹಾಗೂ ಯಾವುದನ್ನು ತ್ಯಜಿಸಬೇಕು? ॥38॥
(ಶ್ಲೋಕ - 39)
ಮೂಲಮ್
ನೂನಂ ಭಗವತೋ ಬ್ರಹ್ಮನ್ ಗೃಹೇಷು ಗೃಹಮೇನಾಮ್ ।
ನ ಲಕ್ಷ್ಯತೇ ಹ್ಯವಸ್ಥಾನಮಪಿ ಗೋದೋಹನಂ ಕ್ವಚಿತ್ ॥
ಅನುವಾದ
ಬ್ರಹ್ಮತೇಜೋಮಯರಾದ ಪೂಜ್ಯರೇ! ತಮ್ಮ ದರ್ಶನವು ಅತ್ಯಂತ ದುರ್ಲಭವಾದುದು. ಏಕೆಂದರೆ ತಾವು ಗೃಹಸ್ಥರ ಮನೆಗಳಲ್ಲಾಗಲೀ, ಅಥವಾ ಬೇರೆಡೆಗಳಲ್ಲಾಗಲೀ, ಹಸುವು ಹಾಲು ಕರೆವಷ್ಟು ಹೊತ್ತು ಸಹ ನಿಲ್ಲುವುದನ್ನು ಪ್ರಾಯಶಃ ನೋಡಲು ಶಕ್ಯವಿಲ್ಲ.॥39॥
(ಶ್ಲೋಕ - 40)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಏವಮಾಭಾಷಿತಃ ಪೃಷ್ಟಃ ಸ ರಾಜ್ಞಾ ಶ್ಲಕ್ಷ್ಣಯಾ ಗಿರಾ ।
ಪ್ರತ್ಯಭಾಷತ ಧರ್ಮಜ್ಞೋ ಭಗವಾನ್ಬಾದರಾಯಣಿಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕರೇ! ಆ ಸಾರ್ವಭೌಮನು ಹೀಗೆ ಅತಿಮಧುರವಾದ ವಾಣಿಯಿಂದ ಸಂಭಾಷಿಸಿ, ಪ್ರಶ್ನೆಮಾಡಲು, ಸಕಲಧರ್ಮಗಳ ಮರ್ಮ ವನ್ನು ಅರಿತಿದ್ದ ವ್ಯಾಸನಂದನರಾದ ಭಗವಾನ್ ಶುಕಮಹಾಮುನಿಗಳು ಆತನಿಗೆ ಹೀಗೆ ಉತ್ತರಿಸತೊಡಗಿದರು.॥40॥
ಅನುವಾದ (ಸಮಾಪ್ತಿಃ)
ಹತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು.॥19॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ಶುಕಾಗಮನಂ ನಾಮೈಕೋನವಿಂಶೋಽಧ್ಯಾಯಃ ॥19॥
ಮೊದಲನೆಯ ಸ್ಕಂಧವು ಸಂಪೂರ್ಣವಾಯಿತು.