[ಹದಿನೆಂಟನೆಯ ಅಧ್ಯಾಯ]
ಭಾಗಸೂಚನಾ
ಪರೀಕ್ಷಿದ್ರಾಜನಿಗೆ ಶೃಂಗೀ ಋಷಿಯ ಶಾಪ ಒದಗಿದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಯೋ ವೈ ದ್ರೌಣ್ಯಸ ವಿಪ್ಲುಷ್ಟೋ ನ ಮಾತುರುದರೇ ಮೃತಃ ।
ಅನುಗ್ರಹಾದ್ ಭಗವತಃ ಕೃಷ್ಣಸ್ಯಾದ್ಭುತಕರ್ಮಣಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿಗಳೇ! ಅದ್ಭುತ ಕರ್ಮಗಳುಳ್ಳ ಶ್ರೀಕೃಷ್ಣಪರಮಾತ್ಮನ ಕೃಪೆಯಿಂದ ರಾಜಾ ಪರೀಕ್ಷಿತನು ತನ್ನ ತಾಯಿಯ ಗರ್ಭದಲ್ಲಿ ಅಶ್ವತ್ಥಾಮನ ಬ್ರಹ್ಮಾಸ್ತ್ರದಿಂದ ದಹಿಸುತ್ತಿದ್ದರೂ ಸಾಯದೆ ಉಳಿದುಕೊಂಡನು.॥1॥
(ಶ್ಲೋಕ - 2)
ಮೂಲಮ್
ಬ್ರಹ್ಮಕೋಪೋತ್ಥಿತಾದ್ಯಸ್ತು ತಕ್ಷಕಾತ್ಪ್ರಾಣವಿಪ್ಲವಾತ್ ।
ನ ಸಮ್ಮುಮೋಹೋರುಭಯಾದ್ಭಗವತ್ಯರ್ಪಿತಾಶಯಃ ॥
ಅನುವಾದ
ಬ್ರಾಹ್ಮಣ ಶಾಪದಿಂದ ಪ್ರೇರಿತನಾಗಿ ತಕ್ಷಕನು ಕಚ್ಚಲು ಬಂದಾಗಲೂ ಆತನು ಪ್ರಾಣನಾಶವಾಗುವುದೆಂಬ ಭಯದಿಂದ ಮೋಹಕ್ಕೆ ಒಳಗಾಗಲಿಲ್ಲ. ಏಕೆಂದರೆ, ಅವನು ತನ್ನ ಚಿತ್ತವನ್ನು ಭಗವಾನ್ ಶ್ರೀಕೃಷ್ಣನ ಪಾದಾರವಿಂದಗಳಲ್ಲಿ ಸಮರ್ಪಣೆ ಮಾಡಿಬಿಟ್ಟಿದ್ದನು. ॥2॥
(ಶ್ಲೋಕ - 3)
ಮೂಲಮ್
ಉತ್ಸೃಜ್ಯ ಸರ್ವತಃ ಸಂಗಂ ವಿಜ್ಞಾತಾಜಿತಸಂಸ್ಥಿತಿಃ ।
ವೈಯಾಸಕೇರ್ಜಹೌ ಶಿಷ್ಯೋ ಗಂಗಾಯಾಂ ಸ್ವಂ ಕಲೇವರಮ್ ॥
ಅನುವಾದ
ಅವನು ಸರ್ವಸಂಗ ಪರಿತ್ಯಾಗ ಮಾಡಿ ಗಂಗಾತೀರಕ್ಕೆ ಹೋಗಿ ಶ್ರೀಶುಕಮಹಾಮುನಿಗಳಿಂದ ಉಪದೇಶ ಪಡೆದು ಭಗವಂತನ ಸ್ವರೂಪವನ್ನರಿತುಕೊಂಡು ತನ್ನ ಶರೀರವನ್ನು ತ್ಯಜಿಸಿ ಬಿಟ್ಟನು. ॥3॥
(ಶ್ಲೋಕ - 4)
ಮೂಲಮ್
ನೋತ್ತಮಶ್ಲೋಕವಾರ್ತಾನಾಂ ಜುಷತಾಂ ತತ್ಕಥಾಮೃತಮ್ ।
ಸ್ಯಾತ್ಸಂಭ್ರಮೋಂತಕಾಲೇಪಿ ಸ್ಮರತಾಂ ತತ್ಪದಾಂಬುಜಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಲೀಲಾಕಥೆಗಳನ್ನು ಹೇಳುತ್ತ ಕೇಳುತ್ತ ಆ ಕಥಾಮೃತವನ್ನು ಸೇವಿಸುತ್ತಾ, ಅವನ ಪಾದಾರವಿಂದಗಳನ್ನು ಸ್ಮರಿಸುತ್ತಾ ಇರುವ ಸುಕೃತಿಗಳಿಗೆ ಪ್ರಾಣಾಂತ್ಯಕಾಲದಲ್ಲಿಯೂ ಗಾಬರಿ, ಗಲಿಬಿಲಿಗಳು ಉಂಟಾಗುವುದಿಲ್ಲ. ॥4॥
(ಶ್ಲೋಕ - 5)
ಮೂಲಮ್
ತಾವತ್ಕಲಿರ್ನ ಪ್ರಭವೇತ್ ಪ್ರವಿಷ್ಟೋಪೀಹ ಸರ್ವತಃ ।
ಯಾವದೀಶೋ ಮಹಾನುರ್ವ್ಯಾಮಾಭಿಮನ್ಯವ ಏಕರಾಟ್ ॥
ಅನುವಾದ
ಪೃಥ್ವಿಯಲ್ಲಿ ಅಭಿಮನ್ಯು ನಂದನ ಪರೀಕ್ಷಿದ್ರಾಜನು ಚಕ್ರವರ್ತಿಯಾಗಿದ್ದವರೆಗೆ ಎಲ್ಲೆಡೆ ಕಲಿಯು ವ್ಯಾಪ್ತನಾಗಿದ್ದರೂ ಅವನ ಆಟವೇನೂ ನಡೆಯಲಿಲ್ಲ.॥5॥
(ಶ್ಲೋಕ - 6)
ಮೂಲಮ್
ಯಸ್ಮಿನ್ನಹನಿ ಯರ್ಹ್ಯೇವ ಭಗವಾನುತ್ಸಸರ್ಜಗಾಮ್ ।
ತದೈವೇಹಾನುವೃತ್ತೋಸಾವಧರ್ಮಪ್ರಭವಃ ಕಲಿಃ ॥
ಅನುವಾದ
ಶ್ರೀಕೃಷ್ಣನು ಯಾವದಿನ, ಯಾವ ಕ್ಷಣದಲ್ಲಿ ಭೂಲೋಕವನ್ನು ತ್ಯಜಿಸಿದನೋ, ಆಗಿನಿಂದಲೇ ಅಧರ್ಮದ ಮೂಲಕಾರಣವಾದ ಕಲಿಯು ಪ್ರವೇಶಮಾಡಿ ಬಿಟ್ಟಿತ್ತಾದರೂ ಪರೀಕ್ಷಿತನು ಅದನ್ನು ಹತೋಟಿಯಲ್ಲಿ ಇಟ್ಟುಕೊಂಡಿದ್ದನು.॥6॥
(ಶ್ಲೋಕ - 7)
ಮೂಲಮ್
ನಾನುದ್ವೇಷ್ಟಿ ಕಲಿಂ ಸಮ್ರಾಟ್ಸಾರಂಗ ಇವ ಸಾರಭುಕ್ ।
ಕುಶಲಾನ್ಯಾಸು ಸಿದ್ಧ್ಯಂತಿ ನೇತರಾಣಿ ಕೃತಾನಿ ಯತ್ ॥
ಅನುವಾದ
ಪರೀಕ್ಷಿದ್ರಾಜನು ದುಂಬಿಯಂತೆ ಸಾರವನ್ನು ಗ್ರಹಿಸುವ ಸ್ವಭಾವವುಳ್ಳವನಾಗಿದ್ದುದರಿಂದಲೇ, ಅವನಿಗೆ ಕಲಿಯುಗದ ಮೇಲೆ ಯಾವ ದ್ವೇಷವೂ ಇರಲಿಲ್ಲ. ಏಕೆಂದರೆ, ಇದರಲ್ಲಿ ಮಹಾನ್ ಗುಣವೊಂದಿದೆ. ಪುಣ್ಯ ಕರ್ಮಗಳಾದರೋ ಸಂಕಲ್ಪಮಾತ್ರದಿಂದಲೇ ಫಲಕಾರಿಯಾಗುತ್ತವೆ; ಆದರೆ ಪಾಪಕರ್ಮದ ಫಲವು ಶರೀರದಿಂದ ಮಾಡಿದಾಗಲೇ ಸಿಗುವುದು. ಸಂಕಲ್ಪಮಾತ್ರದಿಂದಲ್ಲ.॥7॥
(ಶ್ಲೋಕ - 8)
ಮೂಲಮ್
ಕಿಂ ನು ಬಾಲೇಷು ಶೂರೇಣ ಕಲಿನಾ ಧೀರಭೀರುಣಾ ।
ಅಪ್ರಮತ್ತಃ ಪ್ರಮತ್ತೇಷು ಯೋ ವೃಕೋ ನೃಷು ವರ್ತತೇ ॥
ಅನುವಾದ
ಈ ಕಲಿಯು ತೋಳದಂತೆ. ತೋಳವು ಬಾಲಕರ ಮೇಲೆ ಪರಾಕ್ರಮ ತೋರಿದರೂ ಧೈರ್ಯವುಳ್ಳ ಶೂರ-ವೀರರಿಗೆ ಭಯಪಡುತ್ತದೆ. ಹಾಗೆಯೇ ಕಲಿಪುರುಷನು ಪ್ರಮಾದಿ ಜನರನ್ನು ತನ್ನ ವಶಪಡಿಸಿಕೊಳ್ಳುವುದರಲ್ಲಿ ಸದಾ ಎಚ್ಚರವಾಗಿರುತ್ತಾನೆ.॥8॥
(ಶ್ಲೋಕ - 9)
ಮೂಲಮ್
ಉಪವರ್ಣಿತಮೇತದ್ವಃ ಪುಣ್ಯಂ ಪಾರೀಕ್ಷಿತಂ ಮಯಾ ।
ವಾಸುದೇವಕಥೋಪೇತಮಾಖ್ಯಾನಂ ಯದಪೃಚ್ಛತ ॥
ಅನುವಾದ
ಶೌನಕಾದಿ ಋಷಿಗಳೇ! ನೀವು ಕೇಳಿದಂತೆ ಶ್ರೀಭಗವಂತನ ಕಥೆಯಿಂದ ಕೂಡಿದ ಪವಿತ್ರವಾದ ಪರೀಕ್ಷಿದ್ರಾಜನ ಕಥೆಯನ್ನು ನಿಮಗೆ ವರ್ಣಿಸಿದೆ.॥9॥
(ಶ್ಲೋಕ - 10)
ಮೂಲಮ್
ಯಾ ಯಾಃ ಕಥಾ ಭಗವತಃ ಕಥನೀಯೋರುಕರ್ಮಣಃ ।
ಗುಣಕರ್ಮಾಶ್ರಯಾಃ ಪುಂಭಿಃ ಸಂಸೇವ್ಯಾಸ್ತಾ ಬುಭೂಷುಭಿಃ ॥
ಅನುವಾದ
ಕೀರ್ತಿಸಲು ಯೋಗ್ಯವಾದ, ಆಶ್ಚರ್ಯಕರವಾದ, ನಾನಾ ದಿವ್ಯಲೀಲೆಗಳನ್ನು ನಡೆಸಿದ ಭಗವಾನ್ ಶ್ರೀಕೃಷ್ಣನ ದಿವ್ಯಗುಣಗಳನ್ನೂ, ದಿವ್ಯಕರ್ಮಗಳನ್ನೂ ಹೇಳುವ ಯಾವ ಯಾವ ದಿವ್ಯಕಥೆಗಳುಂಟೋ ಅವೆಲ್ಲವನ್ನೂ ಶ್ರೇಯಸ್ಸನ್ನು ಬಯಸುವ ಪುರುಷರು ಸೇವಿಸಬೇಕು.॥10॥
(ಶ್ಲೋಕ - 11)
ಮೂಲಮ್ (ವಾಚನಮ್)
ಋಷಯ ಊಚುಃ
ಮೂಲಮ್
ಸೂತ ಜೀವ ಸಮಾಃ ಸೌಮ್ಯ ಶಾಶ್ವತೀರ್ವಿಶದಂ ಯಶಃ ।
ಯಸ್ತ್ವಂ ಶಂಸಸಿ ಕೃಷ್ಣಸ್ಯ ಮರ್ತ್ಯಾನಾಮಮೃತಂ ಹಿ ನಃ ॥
ಅನುವಾದ
ಋಷಿಗಳು ಕೇಳಿದರು — ಸೌಮ್ಯ ಸ್ವಭಾವವುಳ್ಳ ಸೂತಪುರಾಣಿಕರೇ! ನೀವು ಶಾಶ್ವತಕಾಲದವರೆಗೆ ಜೀವಿಸಿರಿ. ಏಕೆಂದರೆ, ಮೃತ್ಯುವಿನ ಪ್ರವಾಹದಲ್ಲಿ ಬಿದ್ದಿರುವ ನಮಗೆ ನೀವು ಭಗವಾನ್ ಶ್ರೀಕೃಷ್ಣನ ಅಮೃತಮಯವಾದ ಧವಳ ಕೀರ್ತಿಯನ್ನು ಶ್ರವಣಮಾಡಿಸುತ್ತಿರುವಿರಿ.॥11॥
(ಶ್ಲೋಕ - 12)
ಮೂಲಮ್
ಕರ್ಮಣ್ಯಸ್ಮಿನ್ನನಾಶ್ವಾಸೇ ಧೂಮಧೂಮ್ರಾತ್ಮನಾಂ ಭವಾನ್ ।
ಆಪಾಯಯತಿ ಗೋವಿಂದಪಾದಪದ್ಮಾಸವಂ ಮಧು ॥
ಅನುವಾದ
ಬಹಳ ಕಾಲ ಯಜ್ಞವನ್ನು ಮಾಡುತ್ತಾ-ಮಾಡುತ್ತಾ ಅದರ ಹೊಗೆಯಿಂದ ನಮ್ಮ ಶರೀರಗಳು ಬೂದು ಬಣ್ಣಕ್ಕೆ ತಿರುಗಿತು. ಆದರೂ ಆ ಕರ್ಮಗಳ ಫಲವು ದೊರೆಯುವುದೆಂಬ ವಿಶ್ವಾಸವಿಲ್ಲ. ನೀವಾದರೋ ಈಗಲೇ ನಮಗೆ ಭಗವಾನ್ ಶ್ರೀಕೃಷ್ಣಚಂದ್ರನ ಚರಣಕಮಲಗಳ ದಿವ್ಯೋನ್ಮಾದಕರವಾದ ಮಕರಂದವನ್ನು ಪಾನಮಾಡಿಸಿ ತೃಪ್ತಿಯನ್ನುಂಟು ಮಾಡುತ್ತಿದ್ದೀರಿ. ಇದರಿಂದ ನಮಗೆ ಆಧ್ಯಾತ್ಮಿಕ ಶಾಂತಿಯು ಪ್ರತ್ಯಕ್ಷವಾಗಿ ಅನುಭವಕ್ಕೆ ಬಂದಿದೆ.॥12॥
(ಶ್ಲೋಕ - 13)
ಮೂಲಮ್
ತುಲಯಾಮ ಲವೇನಾಪಿ ನ ಸ್ವರ್ಗಂ ನಾಪುನರ್ಭವಮ್ ।
ಭಗವತ್ಸಂಗಿ ಸಂಗಸ್ಯ ಮರ್ತ್ಯಾನಾಂ ಕಿಮುತಾಶಿಷಃ ॥
ಅನುವಾದ
ಭಗವದ್ಭಕ್ತರ ಲವಕಾಲ ಮಾತ್ರ ಸತ್ಸಂಗದಿಂದ ಉಂಟಾದ ಸೌಖ್ಯವನ್ನು ಸ್ವರ್ಗಕ್ಕಾಗಲೀ, ಮೋಕ್ಷಕ್ಕಾಗಲೀ ಹೋಲಿಸಲಾಗುವುದಿಲ್ಲ. ಹಾಗಿರುವಾಗ ತುಚ್ಛವಾದ ಮಾನುಷಭೋಗಗಳ ವಿಷಯದಲ್ಲಿ ಹೇಳುವುದೇನಿದೆ? ॥13॥
(ಶ್ಲೋಕ - 14)
ಮೂಲಮ್
ಕೋ ನಾಮ ತೃಪ್ಯೇದ್ ರಸವಿತ್ಕಥಾಯಾಂ
ಮಹತ್ತಮೈಕಾಂತಪರಾಯಣಸ್ಯ ।
ನಾಂತಂ ಗುಣಾನಾಮಗುಣಸ್ಯ ಜಗ್ಮು-
ರ್ಯೋಗೇಶ್ವರಾ ಯೇ ಭವಪಾದ್ಮಮುಖ್ಯಾಃ ॥
ಅನುವಾದ
ಮಹನೀಯರಾದ ಏಕಮಾತ್ರ ಜೀವನ ಸರ್ವಸ್ವನಾದ ಶ್ರೀಕೃಷ್ಣನ ಲೀಲಾಕಥೆಗಳಿಂದ ತೃಪ್ತನಾಗದಿರುವ ರಸಮರ್ಮಜ್ಞನು ಯಾರಿರಬಹುದು! ಸಮಸ್ತ ಪ್ರಾಕೃತ ಗುಣಗಳಿಂದ ಅತೀತನಾದ ಭಗವಂತನ ಅಚಿಂತ್ಯ, ಅನಂತ ಕಲ್ಯಾಣಗುಣಗಳ ಪಾರವನ್ನು ಬ್ರಹ್ಮರುದ್ರಾದಿ ದೊಡ್ಡ-ದೊಡ್ಡ ಯೋಗೇಶ್ವರರೂ ಕಾಣಲಾರರು. ॥14॥
(ಶ್ಲೋಕ - 15)
ಮೂಲಮ್
ತನ್ನೋ ಭವಾನ್ವೈ ಭಗವತ್ಪ್ರಧಾನೋ
ಮಹತ್ತಮೈಕಾಂತ ಪರಾಯಣಸ್ಯ ।
ಹರೇರುದಾರಂ ಚರಿತಂ ವಿಶುದ್ಧಂ
ಶುಶ್ರೂಷತಾಂ ನೋ ವಿತನೋತು ವಿದ್ವನ್ ॥
ಅನುವಾದ
ಎಲೈ ಜ್ಞಾನ ಶಿರೋಮಣಿಯೇ! ಭಗವಂತನನ್ನೇ ಜೀವನದ ಧ್ರುವತಾರೆಯನ್ನಾಗಿ ಭಾವಿಸಿರುವ ನೀವು ಸತ್ಪುರುಷರ ಏಕಮಾತ್ರ ಆಶ್ರಯನಾದ ಶ್ರೀಭಗವಂತನ ಉದಾರವೂ, ಪರಿಶುದ್ಧವೂ ಆದ ಚರಿತ್ರವನ್ನು ಇನ್ನೂ ವಿಸ್ತಾರವಾಗಿ ವರ್ಣಿಸಿ ಹೇಳಿರಿ.॥15॥
(ಶ್ಲೋಕ - 16)
ಮೂಲಮ್
ಸ ವೈ ಮಹಾಭಾಗವತಃ ಪರೀಕ್ಷಿದ್
ಯೇನಾಪವರ್ಗಾಖ್ಯಮದಭ್ರಬುದ್ಧಿಃ ।
ಜ್ಞಾನೇನ ವೈಯಾಸಕಿಶಬ್ದಿತೇನ
ಭೇಜೇ ಖಗೇಂದ್ರಧ್ವಜಪಾದಮೂಲಮ್ ॥
(ಶ್ಲೋಕ - 17)
ಮೂಲಮ್
ತನ್ನಃ ಪರಂ ಪುಣ್ಯ ಮಸಂವೃತಾರ್ಥ-
ಮಾಖ್ಯಾನಮತ್ಯದ್ಭುತಯೋಗನಿಷ್ಠಮ್ ।
ಆಖ್ಯಾಹ್ಯನಂತಾಚರಿತೋಪಪನ್ನಂ
ಪಾರೀಕ್ಷಿತಂ ಭಾಗವತಾಭಿರಾಮಮ್ ॥
ಅನುವಾದ
ಭಗವಂತನ ಪರಮಪ್ರೇಮಿ ಮಹಾಬುದ್ಧಿವಂತನಾದ ಪರೀಕ್ಷಿತನು ಶ್ರೀಶುಕಮಹಾಮುನಿಗಳಿಂದ ಕೇಳಿದ ಜ್ಞಾನದಿಂದ ಮೋಕ್ಷ ಸ್ವರೂಪೀ ಭಗವಂತನ ಚರಣಕಮಲಗಳನ್ನು ಪಡೆದುಕೊಂಡನು. ಆ ಜ್ಞಾನವನ್ನು ಹಾಗೂ ಪರೀಕ್ಷಿತನ ಪರಮ ಪವಿತ್ರ ಆಖ್ಯಾನವನ್ನು ದಯವಿಟ್ಟು ವರ್ಣಿಸಿರಿ. ಏಕೆಂದರೆ, ಅದರಲ್ಲಿ ಯಾವ ಮಾತು ಮರೆಯಾಗಿರಲಿಕ್ಕಿಲ್ಲ ಮತ್ತು ಭಗವತ್ ಪ್ರೇಮದ ಅದ್ಭುತ ಯೋಗನಿಷ್ಠೆಯ ನಿರೂಪಣೆಯೂ ಇರಬಹುದು. ಅದರಲ್ಲಿ ಹೆಜ್ಜೆ-ಹೆಜ್ಜೆಗೆ ಭಗವಾನ್ ಶ್ರೀಕೃಷ್ಣನ ದಿವ್ಯಲೀಲೆಗಳ ವರ್ಣನೆ ಇರಬಹುದು. ಭಗವಂತನ ಪ್ರಿಯಭಕ್ತರಿಗೆ ಅಂತಹ ಪ್ರಸಂಗವನ್ನು ಕೇಳುವುದರಲ್ಲಿ ಬಹಳ ರಸ ದೊರೆಯುತ್ತದೆ.॥16-17॥
(ಶ್ಲೋಕ - 18)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಅಹೋ ವಯಂ ಜನ್ಮಭೃತೋದ್ಯ ಹಾಸ್ಮ
ವೃದ್ಧಾನುವೃತ್ತ್ಯಾಪಿ ವಿಲೋಮಜಾತಾಃ ।
ದೌಷ್ಕುಲ್ಯಮಾಂ ವಿಧುನೋತಿ ಶೀಘ್ರಂ
ಮಹತ್ತಮಾನಾಮಭಿಧಾನಯೋಗಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಆಹಾ! ವಿಲೋಮ ಜಾತಿಯಾದ* ಸೂತಕುಲದಲ್ಲಿ ಹುಟ್ಟಿದ್ದರೂ ಮಹಾತ್ಮರ ಸೇವೆ ಮಾಡಿದ ಕಾರಣ ಇಂದು ನನ್ನ ಜನ್ಮ ಸಫಲವಾಯಿತು. ಏಕೆಂದರೆ, ಮಹಾತ್ಮರೊಡನೆ ಸಂಭಾಷಿಸುವುದರಿಂದಲೇ ದುಷ್ಕುಲದಲ್ಲಿ ಹುಟ್ಟಿದ ಮನೋವ್ಯಥೆಯು ಬೇಗನೆ ತೊಲಗಿ ಹೋಗುತ್ತದೆ.॥18॥
ಟಿಪ್ಪನೀ
- ಉಚ್ಚ-ವರ್ಣದ ಸ್ತ್ರೀಯಲ್ಲಿ ನಿಮ್ನ ವರ್ಣದ ಪುರುಷನಿಂದ ಹುಟ್ಟಿದ ಸಂತಾನವು ‘ವಿಲೋಮಜಾತ’ ಎನಿಸುತ್ತದೆ. ಸೂತಜಾತಿಯ ಉತ್ಪತ್ತಿಯೂ ಹೀಗೆಯೇ ಬ್ರಾಹ್ಮಣ ತಾಯಿ, ಕ್ಷತ್ರಿಯ ತಂದೆ ಇವರಿಂದ ಉಂಟಾದ್ದರಿಂದ ಅದನ್ನು ಶಾಸ್ತ್ರಗಳಲ್ಲಿ ‘ವಿಲೋಮಜಾತಿ’ ಎಂದು ತಿಳಿಯಲಾಗಿದೆ.
(ಶ್ಲೋಕ - 19)
ಮೂಲಮ್
ಕುತಃ ಪುನರ್ಗೃಣತೋ ನಾಮ ತಸ್ಯ
ಮಹತ್ತಮೈಕಾಂತಪರಾಯಣಸ್ಯ ।
ಯೋನಂತ ಶಕ್ತಿರ್ಭಗವಾನನಂತೋ
ಮಹದ್ಗುಣತ್ವಾದ್ಯಮನಂತ ಮಾಹುಃ ॥
ಅನುವಾದ
ಮತ್ತೆ ಸತ್ಪುರುಷರ ಏಕಮಾತ್ರ ಆಶ್ರಯನಾದ ಭಗವಂತನ ನಾಮವನ್ನು ಕೊಂಡಾಡುವವರ ಬಗ್ಗೆ ಹೇಳುವುದೇನಿದೆ? ಭಗವಂತನ ಶಕ್ತಿಯು ಅನಂತವಾಗಿದೆ, ಅವನು ಸ್ವಯಂ ಅನಂತನಾಗಿದ್ದಾನೆ. ವಾಸ್ತವವಾಗಿ ಅವನ ಗುಣಗಳ ಅನಂತತೆಯಿಂದಲೇ ಅವನನ್ನು ಅನಂತನೆಂದು ಹೇಳುತ್ತಾರೆ.॥19॥
(ಶ್ಲೋಕ - 20)
ಮೂಲಮ್
ಏತಾವತಾಲಂ ನನು ಸೂಚಿತೇನ
ಗುಣೈರಸಾಮ್ಯಾನತಿಶಾಯನಸ್ಯ ।
ಹಿತ್ವೇತರಾನ್ಪ್ರಾರ್ಥಯತೋ ವಿಭೂತಿ-
ರ್ಯಸ್ಯಾಂಘ್ರಿರೇಣುಂ ಜುಷತೇನಭೀಪ್ಸೋಃ॥
ಅನುವಾದ
ಭಗವಂತನ ಗುಣಗಳ ಸಮತೆಯನ್ನೂ ಕೂಡ ಯಾರೂ ಮಾಡಲಾರರೆಂದಾಗ, ಅವನಿಗಿಂತ ಹೆಚ್ಚಿ ನವರಾದರೋ ಹೇಗೆ ಆಗಬಲ್ಲರು? ‘‘ಲಕ್ಷ್ಮೀದೇವಿಯು ತನ್ನನ್ನು ಪಡೆದುಕೊಳ್ಳುವ ಇಚ್ಛೆಯಿಂದ ಪ್ರಾರ್ಥಿಸುವ ಬ್ರಹ್ಮಾದಿ ದೇವತೆಗಳನ್ನು ಕಣ್ಣೆತ್ತಿಯೂ ನೋಡದೆ, ಭಗವಂತನು ಬಯಸದಿದ್ದರೂ ಅವನ ಚರಣರಜವನ್ನು ಸೇವಿಸುತ್ತಿರುವಳಲ್ಲ! ಅವನ ಗುಣಗಳ ವಿಶೇಷತೆಯನ್ನು ತಿಳಿಸುವುದಕ್ಕಾಗಿ ಇಷ್ಟು ಹೇಳುವುದು ಸಾಕಾಗಿದೆ.॥20॥
(ಶ್ಲೋಕ - 21)
ಮೂಲಮ್
ಅಥಾಪಿ ಯತ್ಪಾದನಖಾವಸೃಷ್ಟಂ
ಜಗದ್ವಿರಿಂಚೋಪಹೃತಾರ್ಹಣಾಂಭಃ ।
ಸೇಶಂ ಪುನಾತ್ಯನ್ಯತಮೋ ಮುಕುಂದಾತ್
ಕೋ ನಾಮ ಲೋಕೇ ಭಗವತ್ಪದಾರ್ಥಃ ॥
ಅನುವಾದ
ಬ್ರಹ್ಮದೇವರು ಯಾರ ಶ್ರೀಪಾದಪದ್ಮಗಳನ್ನು ತೊಳೆದಾಗ ಅವನ ಪಾದನಖದಿಂದ ಉದ್ಭವಿಸಿದ ತೀರ್ಥವೇ ಗಂಗೆಯಾಗಿ ಪ್ರವಹಿಸಿತೋ, ಅದು ಶಿವನನ್ನು ಮತ್ತು ಇಡೀ ಜಗತ್ತನ್ನು ಪವಿತ್ರಗೊಳಿಸುತ್ತದೆ. ಇಂತಹ ಸ್ಥಿತಿಯಿರುವಾಗ ತ್ರಿಭುವನದಲ್ಲಿ ಶ್ರೀಕೃಷ್ಣನಲ್ಲದೆ ಬೇರೆ ಯಾರು ‘ಭಗವಾನ್’ ಎಂಬ ಶಬ್ದಕ್ಕೆ ಸಂಪೂರ್ಣವಾಗಿ ಅನ್ವರ್ಥ ವಿಷಯನಾಗಬಲ್ಲನು? ॥21॥
(ಶ್ಲೋಕ - 22)
ಮೂಲಮ್
ಯತ್ರಾನುರಕ್ತಾಃ ಸಹಸೈವ ೀರಾ
ವ್ಯಪೋಹ್ಯ ದೇಹಾದಿಷು ಸಂಗಮೂಢಮ್ ।
ವ್ರಜಂತಿ ತತ್ಪಾರಮಹಂಸ್ಯಮಂತ್ಯಂ
ಯಸ್ಮಿನ್ನ ಹಿಂಸೋಪಶಮಃ ಸ್ವಧರ್ಮಃ ॥
ಅನುವಾದ
ಭಗವಂತನಲ್ಲಿ ಪರಮಪ್ರೇಮವನ್ನು ಪಡೆದ ಧೀರರು ಶರೀರ ಮುಂತಾದವುಗಳಲ್ಲಿ ನೆಟ್ಟಿದ್ದ ಆಸಕ್ತಿಯನ್ನು ಕೂಡಲೇ ತೊರೆದು ಅಹಿಂಸೆ ಮತ್ತು ಉಪಶಾಂತಿಗಳನ್ನೇ ತನ್ನ ಧರ್ಮವನ್ನಾಗಿ ಹೊಂದಿರುವ, ಜೀವನದ ಕಟ್ಟಕಡೆಯ ಆಶ್ರಯವಾದ ಪರಮಹಂಸ ಧರ್ಮವನ್ನು ಯಾವನ ನಿರಂತರ ಧ್ಯಾನಕ್ಕೋಸ್ಕರ ಹೊಂದುತ್ತಾರೋ ಅಂತಹ ಮುಕುಂದನು ತಾನೇ ‘ಭಗವಾನ್’ ಶಬ್ದಕ್ಕೆ ಪೂರ್ಣವಾದ ಅರ್ಥವಾಗುತ್ತಾನೆ.॥22॥
(ಶ್ಲೋಕ - 23)
ಮೂಲಮ್
ಅಹಂ ಹಿ ಪೃಷ್ಟೋರ್ಯಮಣೋ ಭವದ್ಭಿ-
ರಾಚಕ್ಷ ಆತ್ಮಾವಗಮೋತ್ರ ಯಾವಾನ್ ।
ನಭಃ ಪತಂತ್ಯಾತ್ಮ ಸಮಂ ಪತತಿಣ-
ಸ್ತಥಾ ಸಮಂ ವಿಷ್ಣುಗತಿಂ ವಿಪಶ್ಚಿತಃ ॥
ಅನುವಾದ
ಎಲೈ, ಸೂರ್ಯಸದೃಶರಾದ ಮಹಾತ್ಮರೇ! ನೀವು ನನ್ನಲ್ಲಿ ಕೇಳ ಬೇಕೆಂದಿರುವ ವಿಷಯದ ಬಗೆಗೆ ನನಗೆ ತಿಳಿದಷ್ಟನ್ನು ಪ್ರಾಮಾಣಿಕವಾಗಿ ಹೇಳುತ್ತೇನೆ. ಪಕ್ಷಿಗಳಿಗೆ ತಮ್ಮ-ತಮ್ಮ ಶಕ್ತಿಗೆ ತಕ್ಕಂತೆ ಆಕಾಶದಲ್ಲಿ ಹಾರಲು ಸಾಧ್ಯವಿರುವಂತೆಯೇ ವಿದ್ವಾಂಸರಿಗೂ ಕೂಡ ಶ್ರೀಭಗವಂತನ ಮಹಿಮೆಯನ್ನು ತಮ್ಮ ಶಕ್ತಿಗನುಗುಣವಾಗಿಯೇ ತಿಳಿದು ವರ್ಣಿಸಲು ಸಾಧ್ಯವಾಗುತ್ತದೆ.॥23॥
(ಶ್ಲೋಕ - 24)
ಮೂಲಮ್
ಏಕದಾ ಧನುರುದ್ಯಮ್ಯ ವಿಚರನ್ಮೃಗಯಾಂ ವನೇ ।
ಮೃಗಾನನುಗತಃ ಶ್ರಾಂತಃ ಕ್ಷುತಸ್ತೃಷಿತೋ ಭೃಶಮ್ ॥
ಅನುವಾದ
ಒಂದುದಿನ ಆ ಪರೀಕ್ಷಿದ್ರಾಜನು ಬಿಲ್ಲನ್ನೆತ್ತಿಕೊಂಡು ಬೇಟೆಯಾಡಲು ಕಾಡಿಗೆ ಹೋದನು. ಮೃಗಗಳ ಹಿಂದೆ ಓಡುತ್ತಾ-ಓಡುತ್ತಾ ಬಳಲಿ, ಅವನಿಗೆ ಹಸಿವು-ಬಾಯಾರಿಕೆಗಳುಂಟಾದವು.॥24॥
(ಶ್ಲೋಕ - 25)
ಮೂಲಮ್
ಜಲಾಶಯಮಚಕ್ಷಾಣಃ ಪ್ರವಿವೇಶ ತಮಾಶ್ರಮಮ್ ।
ದದರ್ಶ ಮುನಿಮಾಸೀನಂ ಶಾಂತಂ ಮೀಲಿತಲೋಚನಮ್ ॥
ಅನುವಾದ
ನೀರು ಕುಡಿಯಲು ಯಾವುದೇ ಜಲಾಶಯವೂ ಕಾಣಿಸದಿರಲು ಆತನು ಹತ್ತಿರದ ಒಂದು ಋಷ್ಯಾಶ್ರಮವನ್ನು ಹೊಕ್ಕನು. ಅಲ್ಲಿ ಕಣ್ಣು ಮುಚ್ಚಿಕೊಂಡು ಧ್ಯಾನಸ್ಥರಾಗಿ ಶಾಂತಭಾವದಿಂದ ಕುಳಿತಿದ್ದ ಓರ್ವ ಮುನಿಯನ್ನು ಕಂಡನು.॥25॥
(ಶ್ಲೋಕ - 26)
ಮೂಲಮ್
ಪ್ರತಿರುದ್ಧೇಂದ್ರಿಯಪ್ರಾಣಮನೋಬುದ್ಧಿ ಮುಪಾರತಮ್ ।
ಸ್ಥಾನತ್ರಯಾತ್ಪರಂ ಪ್ರಾಪ್ತಂ ಬ್ರಹ್ಮಭೂತಮವಿಕ್ರಿಯಮ್ ॥
ಅನುವಾದ
ಅವರು ಇಂದ್ರಿಯ, ಪ್ರಾಣ, ಮನಸ್ಸು, ಬುದ್ಧಿಗಳೆಲ್ಲವನ್ನು ತಡೆಗಟ್ಟಿ ಸಂಸಾರಾತೀತ ಸ್ಥಿತಿಯಲ್ಲಿದ್ದರು. ಜಾಗ್ರತ್, ಸ್ವಪ್ನ, ಸುಷುಪ್ತಿ ಮೂರೂ ಸ್ಥಿತಿಯನ್ನು ದಾಟಿ ನಿರ್ವಿಕಾರ ಬ್ರಹ್ಮರೂಪೀ ತುರೀಯಾ ವಸ್ಥೆಯಲ್ಲಿ ಸ್ಥಿತರಾಗಿದ್ದರು.॥26॥
(ಶ್ಲೋಕ - 27)
ಮೂಲಮ್
ವಿಪ್ರಕೀರ್ಣಜಟಾಚ್ಛನ್ನಂ ರೌರವೇಣಾಜಿನೇನ ಚ ।
ವಿಶುಷ್ಯತ್ತಾಲುರುದಕಂ ತಥಾಭೂತಮಯಾಚತ ॥
ಅನುವಾದ
ಕೆದರಿದ ಜಟೆಗಳಿಂದ ಅವರ ದೇಹ ಮುಚ್ಚಿಹೋಗಿತ್ತು. ಅವರು ಕೃಷ್ಣಾಜಿನವನ್ನು ಹೊದ್ದಿದ್ದರು. ಅಂತಹ ಸಮಾಧಿಸ್ಥ ಮುನಿಗಳಲ್ಲಿ ನಾಲಿಗೆ-ಗಂಟಲು ಒಣಗಿಹೋಗಿದ್ದ ರಾಜನು ನೀರನ್ನು ಕೇಳಿದನು. ॥27॥
(ಶ್ಲೋಕ - 28)
ಮೂಲಮ್
ಅಲಬ್ಧ ತೃಣಭೂಮ್ಯಾದಿರಸಂಪ್ರಾಪ್ತಾರ್ಘ್ಯಸೂನೃತಃ ।
ಅವಜ್ಞಾತಮಿವಾತ್ಮಾನಂ ಮನ್ಯಮಾನಶ್ಚು ಕೋಪ ಹ ॥
ಅನುವಾದ
ಆದರೆ ಅವನಿಗೆ ಅಲ್ಲಿ ಕುಳಿತುಕೊಳ್ಳಲು ಹುಲ್ಲಿನ ಆಸನವೂ ದೊರೆಯಲಿಲ್ಲ. ಭೂಮಿಯಲ್ಲಿ ಕುಳಿತುಕೊಳ್ಳಲೂ ಕೂಡ ಯಾರೂ ಹೇಳಲಿಲ್ಲ. ಅರ್ಘ್ಯವೇ ಮುಂತಾದ ಉಪಚಾರವಾಗಲೀ, ಕಡೆಗೆ ಒಂದು ಸವಿಮಾತಾದರೂ ದೊರೆಯದಿದ್ದಾಗ, ತನಗೆ ಅಪಮಾನವಾಯಿತೆಂದು ಭಾವಿಸಿ ಆತನು ಬಹಳ ಕೋಪಗೊಂಡನು.॥28॥
(ಶ್ಲೋಕ - 29)
ಮೂಲಮ್
ಅಭೂತಪೂರ್ವಃ ಸಹಸಾಕ್ಷುತ್ತೃಡ್ ಭ್ಯಾಮರ್ದಿತಾತ್ಮನಃ ।
ಬ್ರಾಹ್ಮಣಂ ಪ್ರತ್ಯಭೂದ್ಬ್ರಹ್ಮನ್ಮತ್ಸರೋ ಮನ್ಯುರೇವ ಚ ॥
ಅನುವಾದ
ಶೌನಕರೇ! ಹಸಿವು-ಬಾಯಾರಿಕೆಯಿಂದ ಪೀಡಿತನಾಗಿದ್ದ ಅವನಿಗೆ ಇದ್ದಕ್ಕಿದ್ದಂತೆ ಆ ಬ್ರಾಹ್ಮಣನ ಮೇಲೆ ಅಸೂಯೆಯೂ, ಕ್ರೋಧವೂ ಉಂಟಾದವು. ಅವನ ಜೀವನದಲ್ಲಿ ಮೊಟ್ಟ ಮೊದಲನೆಯದಾಗಿ ಇಂತಹ ಘಟನೆಯಾಗಿತ್ತು.॥29॥
ಮೂಲಮ್
(ಶ್ಲೋಕ - 30)
ಸ ತು ಬ್ರಹ್ಮಋಷೇರಂಸೇ ಗತಾಸುಮುರಗಂ ರುಷಾ ।
ವಿನಿರ್ಗಚ್ಛಂಧನುಷ್ಕೋಟ್ಯಾ ನಿಧಾಯ ಪುರಮಾಗಮತ್ ॥
ಅನುವಾದ
ಅಲ್ಲಿಂದ ಮರಳುವಾಗ ಅವನು ಸಿಟ್ಟಿನಿಂದ ಒಂದು ಸತ್ತು ಬಿದ್ದಿದ್ದ ಹಾವನ್ನು ಧನುಸ್ಸಿನ ತುದಿಯಿಂದ ಎತ್ತಿ ಆ ಬ್ರಹ್ಮರ್ಷಿಯ ಕೊರಳಿಗೆ ಹಾಕಿ, ತನ್ನ ರಾಜಧಾನಿಗೆ ಹಿಂತಿರುಗಿದನು.॥30॥
(ಶ್ಲೋಕ - 31)
ಮೂಲಮ್
ಏಷ ಕಿಂ ನಿಭೃತಾಶೇಷಕರಣೋ ಮೀಲಿತೇಕ್ಷಣಃ ।
ಮೃಷಾ ಸಮಾರಾಹೋಸ್ವಿತ್ಕಿಂ ನು ಸ್ಯಾತ್ಕ್ಷತ್ರಬಂಧುಭಿಃ ॥
ಅನುವಾದ
ಈ ಮುನಿಯು ನಿಜವಾಗಿ ಕಣ್ಣುಮುಚ್ಚಿ ತನ್ನೆಲ್ಲ ಇಂದ್ರಿಯಗಳನ್ನು ತಡೆಗಟ್ಟಿ ಸಮಾಧಿಯಲ್ಲಿದ್ದನೋ, ಅಥವಾ ‘ಈ ರಾಜನಿಂದ ತನಗೇನಾಗಬೇಕು’ ಎಂದು ತಾತ್ಸಾರದಿಂದ ಸಮಾಧಿಯನ್ನು ನಟಿಸುತ್ತಿದ್ದನೋ? ಮುಂತಾಗಿ ಆಲೋಚಿಸುತ್ತಾ ಆತನು ಹೊರಟು ಹೋದನು.॥31॥
(ಶ್ಲೋಕ - 32)
ಮೂಲಮ್
ತಸ್ಯ ಪುತ್ರೋತಿತೇಜಸ್ವೀ ವಿಹರನ್ಬಾಲಕೋರ್ಭಕೈಃ ।
ರಾಜ್ಞಾಘಂ ಪ್ರಾಪಿತಂ ತಾತಂ ಶ್ರುತ್ವಾ ತತ್ರೇದಮಬ್ರವೀತ್ ॥
ಅನುವಾದ
ಆ ಮಹಾಮುನಿಯ ಹೆಸರು ಶಮೀಕ. ಅವರ ಪುತ್ರ ‘ಶೃಂಗೀ’ ಎಂಬುವನು ಮಹಾತೇಜಸ್ವಿಯಾಗಿದ್ದನು. ಇತರ ಋಷಿಕುಮಾರರೊಡನೆ ಆಟವಾಡುತ್ತಿದ್ದಾಗ ಅವನಿಗೆ-ರಾಜನು ತನ್ನ ತಂದೆಯ ವಿಷಯದಲ್ಲಿ ಕೆಟ್ಟವ್ಯವಹಾರ ಮಾಡಿದ್ದು ತಿಳಿಯಿತು. ಆಗ ಅವನು ಕಿಡಿ-ಕಿಡಿಯಾಗಿ ಹೀಗೆಂದನು ॥32॥
(ಶ್ಲೋಕ - 33)
ಮೂಲಮ್
ಅಹೋ ಅಧರ್ಮಃ ಪಾಲಾನಾಂ ಪೀವ್ನಾಂ ಬಲಿಭುಜಾಮಿವ ।
ಸ್ವಾಮಿನ್ಯಘಂ ಯದ್ದಾಸಾನಾಂ ದ್ವಾರಪಾನಾಂ ಶುನಾಮಿವ ॥
ಅನುವಾದ
‘ಛೇ! ಎಂತಹ ಅಧರ್ಮವಾಯಿತು! ಬೀದಿಯಲ್ಲಿ ಹಾಕಿದ ಬಲಿಯನ್ನವನ್ನು ತಿಂದು ಬದುಕುವ ಕಾಗೆಯಂತೆಯೂ, ಬಾಗಿಲನ್ನು ಕಾಯುವ ನಾಯಿಯಂತೆಯೂ, ದಾಸರಂತೆಯೂ ಇರಬೇಕಾಗಿದ್ದ ಈ ಕ್ಷತ್ರಿಯಾಧಮರು ಕೊಬ್ಬಿ ಹೀಗೆ ಸ್ವಾಮಿದ್ರೋಹ ಮಾಡುವುದೇ? ॥33॥
(ಶ್ಲೋಕ - 34)
ಮೂಲಮ್
ಬ್ರಾಹ್ಮಣೈಃ ಕ್ಷತ್ರಬಂಧುರ್ಹಿ ದ್ವಾರಪಾಲೋ ನಿರೂಪಿತಃ ।
ಸ ಕಥಂ ತದ್ಗೃಹೇ ದ್ವಾಃಸ್ಥಃ ಸಭಾಂಡಂ ಭೋಕ್ತುಮರ್ಹತಿ ॥
ಅನುವಾದ
ಇಂತಹ ಕ್ಷತ್ರಿಯರನ್ನು ಬ್ರಾಹ್ಮಣರು ಬಾಗಿಲು ಕಾಯುವ ಕೆಲಸಕ್ಕೆ ನೇಮಿಸಿರುವರು. ಅವರು ಬಾಗಿಲಲ್ಲೇ ಇರಬೇಕೆ ಹೊರತು ಒಳಗೆ ನುಗ್ಗಿ ಪಾತ್ರೆಯಲ್ಲಿರುವ ಅನ್ನವನ್ನು ತಿನ್ನಲು ಹೇಗೆ ಅರ್ಹರಾದಾರು? ॥34॥
(ಶ್ಲೋಕ - 35)
ಮೂಲಮ್
ಕೃಷ್ಣೇ ಗತೇ ಭಗವತಿ ಶಾಸ್ತರ್ಯುತ್ಪಥಗಾಮಿನಾಮ್ ।
ತದ್ಭಿನ್ನಸೇತೂನದ್ಯಾಹಂ ಶಾಸ್ಮಿ ಪಶ್ಯತ ಮೇ ಬಲಮ್ ॥
ಅನುವಾದ
ದುರ್ಮಾರ್ಗದಲ್ಲಿ ನಡೆಯುವವರನ್ನು ಶಿಕ್ಷಿಸುತ್ತಿದ್ದ ಭಗವಾನ್ ಶ್ರೀಕೃಷ್ಣನು ಪರಂಧಾಮವನ್ನು ಹೊಂದಿದ ಬಳಿಕ ಎಲ್ಲೆಮೀರಿ ನಡೆಯುತ್ತಿರುವ ಇವರಿಗೆ ನಾನೇ ಶಿಕ್ಷೆಯನ್ನು ವಿಧಿಸುತ್ತೇನೆ. ನನ್ನ ತಪೋಬಲವನ್ನಾದರೂ ನೋಡಲಿ.’’ ॥35॥
(ಶ್ಲೋಕ - 36)
ಮೂಲಮ್
ಇತ್ಯುಕ್ತ್ವಾ ರೋಷತಾಮ್ರಾಕ್ಷೋ ವಯಸ್ಯಾನೃಷಿ ಬಾಲಕಃ ।
ಕೌಶಿಕ್ಯಾಪ ಉಪಸ್ಪೃಶ್ಯ ವಾಗ್ವಜ್ರಂ ವಿಸಸರ್ಜ ಹ ॥
ಅನುವಾದ
ತನ್ನ ಸಂಗಡಿಗರೊಂದಿಗೆ ಹೀಗೆ ನುಡಿದು ಆ ಮುನಿಕುಮಾರನು ಕೋಪದಿಂದ ಕೆಂಪೇರಿದ ಕಣ್ಣುಗಳುಳ್ಳವನಾಗಿ ಕೌಶಿಕೀ ನದಿಯ ನೀರಿನಲ್ಲಿ ಆಚಮನಮಾಡಿ ತನ್ನ ಮಾತೆಂಬ ವಜ್ರವನ್ನು ಹೀಗೆ ಪ್ರಯೋಗಿಸಿದನು.॥36॥
(ಶ್ಲೋಕ - 37)
ಮೂಲಮ್
ಇತಿ ಲಂಘಿತಮರ್ಯಾದಂ ತಕ್ಷಕಃ ಸಪ್ತಮೇಹನಿ ।
ದಂಕ್ಷ್ಯತಿ ಸ್ಮ ಕುಲಾಂಗಾರಂ ಚೋದಿತೋ ಮೇ ಪಿತೃ ದ್ರುಹಮ್ ॥
ಅನುವಾದ
‘ಕುಲಗೆಡುಕನಾದ ಆ ಪರೀಕ್ಷಿದ್ರಾಜನು ನನ್ನ ಪೂಜ್ಯನಾದ ತಂದೆಗೆ ಅಪಮಾನಮಾಡಿ, ಮೇರೆ ಮೀರಿ ನಡೆದಿದ್ದಾನೆ. ಆದ್ದರಿಂದ ನನ್ನ ಪ್ರೇರಣೆಯಂತೆ ಇಂದಿನಿಂದ ಏಳನೆಯ ದಿನ ತಕ್ಷಕ ಸರ್ಪವು ಅವನನ್ನು ಕಚ್ಚಿಬಿಡಲಿ.’ ॥37॥
(ಶ್ಲೋಕ - 38)
ಮೂಲಮ್
ತತೋಭ್ಯೇತ್ಯಾಶ್ರಮಂ ಬಾಲೋ ಗಲೇ ಸರ್ಪಕಲೇವರಮ್ ।
ಪಿತರಂ ವೀಕ್ಷ್ಯ ದುಃಖಾರ್ತೋ ಮುಕ್ತಕಂಠೋ ರುರೋದ ಹ ॥
ಅನುವಾದ
ಹೀಗೆ ಶಾಪಕೊಟ್ಟ ಬಳಿಕ ಆ ಬಾಲಕನು ತನ್ನ ಆಶ್ರಮಕ್ಕೆ ಬಂದು, ತನ್ನ ತಂದೆಯ ಕೊರಳಿನಲ್ಲಿ ಸತ್ತ ಹಾವನ್ನು ಕಂಡು ಗಟ್ಟಿಯಾಗಿ ಅಳತೊಡಗಿದನು.॥38॥
(ಶ್ಲೋಕ - 39)
ಮೂಲಮ್
ಸ ವಾ ಆಂಗಿರಸೋ ಬ್ರಹ್ಮನ್ ಶ್ರುತ್ವಾ ಸುತವಿಲಾಪನಮ್ ।
ಉನ್ಮಿಲ್ಯ ಶನಕೈರ್ನೇತ್ರೇ ದೃಷ್ಟ್ವಾ ಸ್ವಾಂಸೇ ಮೃತೋರಗಮ್ ॥
ಅನುವಾದ
ಎಲೈ ಶೌನಕರೇ! ಆ ಆಂಗೀರಸ ಗೋತ್ರದ ಮುನಿವರ್ಯ ಶಮೀಕರು ಪುತ್ರನ ಅಳುವಿನ ಧ್ವನಿಯನ್ನು ಕೇಳಿ, ಎಚ್ಚರಗೊಂಡು ಮೆಲ್ಲನೆ ಕಣ್ಣುತೆರೆದು ನೋಡಿದಾಗ ತನ್ನ ಕೊರಳಿನಲ್ಲಿ ನೇತಾಡುತ್ತಿದ್ದ ಸತ್ತ ಹಾವನ್ನು ನೋಡಿದನು.॥39॥
(ಶ್ಲೋಕ - 40)
ಮೂಲಮ್
ವಿಸೃಜ್ಯ ಪುತ್ರಂ ಪಪ್ರಚ್ಛ ವತ್ಸ ಕಸ್ಮಾದ್ಧಿ ರೋದಿಷಿ ।
ಕೇನ ವಾ ತೇಪಕೃತಮಿತ್ಯುಕ್ತಃ ಸ ನ್ಯವೇದಯತ್ ॥
ಅನುವಾದ
ಅದನ್ನು ಕಿತ್ತೆಸೆದು ತನ್ನ ಪುತ್ರನಲ್ಲಿ ಕೇಳಿದರು ಮಗೂ! ನೀನು ಏಕೆ ಆಳುತ್ತಿರುವೆ? ಯಾರು ನಿನಗೆ ಅಪಕಾರ ಮಾಡಿದರು? ಎಂದು ಕೇಳಲಾಗಿ ಶೃಂಗಿಯು ಎಲ್ಲ ವೃತ್ತಾಂತವನ್ನು ಅರುಹಿದನು.॥40॥
(ಶ್ಲೋಕ - 41)
ಮೂಲಮ್
ನಿಶಮ್ಯ ಶಪ್ತಮತದರ್ಹಂ ನರೇಂದ್ರಂ
ಸ ಬ್ರಾಹ್ಮಣೋ ನಾತ್ಮಜಮಭ್ಯನಂದತ್ ।
ಅಹೋ ಬತಾಂಹೋ ಮಹದಜ್ಞ ತೇ ಕೃತ-
ಮಲ್ಪೀಯಸಿ ದ್ರೋಹ ಉರುರ್ದಮೋ ಧೃತಃ ॥
ಅನುವಾದ
ರಾಜನಿಗೆ ಶಾಪಕೊಟ್ಟ ಸಮಾಚಾರ ಕೇಳಿ ಆ ಬ್ರಹ್ಮರ್ಷಿಯು ತನ್ನ ಪುತ್ರನನ್ನು ಅಭಿನಂದಿಸಲಿಲ್ಲ. ಅವರ ದೃಷ್ಟಿಯಲ್ಲಿ ಪರೀಕ್ಷಿತನು ಶಾಪಕ್ಕೆ ಯೋಗ್ಯನಾಗಿರಲಿಲ್ಲ. ಅಯ್ಯೋ! ಎಂತಹ ಪಾಪಕಾರ್ಯವನ್ನು ಮಾಡಿದೆ? ಮೂರ್ಖಬಾಲಕನೇ! ಒಂದು ಸಣ್ಣ ಅಪರಾಧಕ್ಕಾಗಿ ನೀನು ಎಷ್ಟು ದೊಡ್ಡ ದಂಡವನ್ನು ವಿಧಿಸಿದೆ? ॥41॥
(ಶ್ಲೋಕ - 42)
ಮೂಲಮ್
ನ ವೈ ನೃಭಿರ್ನರದೇವಂ ಪರಾಖ್ಯಂ
ಸಮ್ಮಾತುಮರ್ಹಸ್ಯವಿಪಕ್ವಬುದ್ಧೇ ।
ಯತ್ತೇಜಸಾ ದುರ್ವಿಷಹೇಣ ಗುಪ್ತಾ
ವಿಂದಂತಿ ಭದ್ರಾಣ್ಯಕುತೋಭಯಾಃ ಪ್ರಜಾಃ ॥
ಅನುವಾದ
ಎಲೈ ದುಡುಕುಬುದ್ಧಿಯವನೇ! ನಿನ್ನ ಬುದ್ಧಿಯು ಪರಿಪಕ್ವವಾಗಿಲ್ಲ. ಆ ರಾಜನಾದರೋ ಮಹಾವಿಷ್ಣು ಸ್ವರೂಪನು. ಅವನನ್ನು ಸಾಮಾನ್ಯ ಮನುಷ್ಯನೆಂದು ತಿಳಿಯಬಾರದು. ತಡೆಯಲಸಾಧ್ಯವಾದ ಆತನ ತೇಜಸ್ಸಿನಿಂದಲೇ ಈ ಪ್ರಜೆಗಳೆಲ್ಲರೂ ಸುರಕ್ಷಿತರಾಗಿ, ನಿರ್ಭಯದಿಂದ, ನೆಮ್ಮದಿಯಾಗಿ ಬದುಕುತ್ತಿದ್ದಾರೆ.॥42॥
ಮೂಲಮ್
(ಶ್ಲೋಕ - 43)
ಅಲಕ್ಷ್ಯಮಾಣೇ ನರದೇವನಾಮ್ನಿ
ರಥಾಂಗಪಾಣಾವಯಮಂಗ ಲೋಕಃ ।
ತದಾ ಹಿ ಚೌರಪ್ರಚುರೋ ವಿನಂಕ್ಷ್ಯ-
ತ್ಯರಕ್ಷ್ಯಮಾಣೋವಿವರೂಥವತ್ಕ್ಷಣಾತ್ ॥
ಅನುವಾದ
ಯಾವಾಗ ರಾಜನ ರೂಪವನ್ನು ಧರಿಸಿ ಭಗವಂತನು ಭೂಮಿಯಲ್ಲಿ ಕಾಣಿಸಿಕೊಳ್ಳುವುದಿಲ್ಲವೋ, ಆಗ ಕಳ್ಳ-ಕಾಕರು ಹೆಚ್ಚಿ, ಕಾವಲಿಲ್ಲದ ಕುರಿ ಮಂದೆಯಂತೆ ಈ ಲೋಕವು ಕ್ಷಣಮಾತ್ರದಲ್ಲಿ ನಶಿಸಿ ಹೋದೀತು.॥43॥
(ಶ್ಲೋಕ - 44)
ಮೂಲಮ್
ತದದ್ಯ ನಃ ಪಾಪಮುಪೈತ್ಯನನ್ವಯಂ
ಯನ್ನಷ್ಟನಾಥಸ್ಯ ವಸೋರ್ವಿಲುಂಪಕಾತ್ ।
ಪರಸ್ಪರಂ ಘ್ನಂತಿ ಶಪಂತಿ ವೃಂಜತೇ
ಪಶೂನ ಸೀಯೋರ್ಥಾನ್ಪುರುದಸ್ಯವೋ ಜನಾಃ ॥
ಅನುವಾದ
ದೈವಸ್ವರೂಪೀ ರಾಜನನ್ನು ಕಳಕೊಂಡರೆ ಲೋಕಕ್ಕೆ ಮಹಾ ಅನರ್ಥವೊದಗುವುದು. ಲೂಟಿ, ದರೋಡೆಗಳೂ, ಪರಸ್ಪರ ಹೊಡೆದಾಟ-ಬಡಿದಾಟಗಳೂ, ಬೈಗುಳಗಳು ಹೆಚ್ಚುತ್ತವೆ. ದನ-ಕರುಗಳೇ ಮುಂತಾದ ಪಶುಗಳೂ, ಹೆಂಗಸರೂ, ಧನ-ಕನಕಾದಿ ಸಂಪತ್ತುಗಳೂ ಕೊಳ್ಳೆ ಹೋಗುತ್ತವೆ.॥44॥
(ಶ್ಲೋಕ - 45)
ಮೂಲಮ್
ತದಾರ್ಯಧರ್ಮಶ್ಚ ವಿಲೀಯತೇ ನೃಣಾಂ
ವರ್ಣಾಶ್ರಮಾಚಾರಯುತಸ ಯೀಮಯಃ ।
ತತೋರ್ಥಕಾಮಾಭಿನಿವೇಶಿತಾತ್ಮನಾಂ
ಶುನಾಂ ಕಪೀನಾಮಿವ ವರ್ಣಸಂಕರಃ ॥
ಅನುವಾದ
ಆಗ ವರ್ಣಾಶ್ರಮಗಳಿಂದ ಕೂಡಿದ ಆರ್ಯಧರ್ಮವು ಲೋಪವಾಗುವುದು. ಹಣದ ಲೋಭ ಮತ್ತು ಕಾಮವಾಸನೆಗಳಿಗೆ ಒಳಗಾಗಿ ಜನರು ನಾಯಿ, ಕಪಿಗಳು ಸೇರುವಿಕೆಯಂತೆ ಉಚ್ಛಂಖಲರಾಗಿ ವರ್ಣಸಂಕರ ಉಂಟಾಗುವುದು. ॥45॥
(ಶ್ಲೋಕ - 46)
ಮೂಲಮ್
ಧರ್ಮಪಾಲೋ ನರಪತಿಃ ಸ ತು ಸಮ್ರಾಡ್ ಬೃಹಚ್ಛ್ರವಾಃ ।
ಸಾಕ್ಷಾನ್ಮಹಾಭಾಗವತೋ ರಾಜರ್ಷಿರ್ಹಯಮೇಧಯಾಟ್ ।
ಕ್ಷುತ್ತೃಟ್ಶ್ರಮಯುತೋ ದೀನೋ ನೈವಾಸ್ಮಚ್ಛಾಪಮರ್ಹತಿ ॥
ಅನುವಾದ
ಚಕ್ರವರ್ತಿ ಪರೀಕ್ಷಿದ್ರಾಜನಾದರೋ ಮಹಾಯಶಸ್ವೀ, ಧರ್ಮಧುರಂಧರನಾಗಿದ್ದಾನೆ. ಅವನು ಅನೇಕ ಅಶ್ವಮೇಧ ಯಜ್ಞಗಳನ್ನು ಆಚರಿಸಿರುವನು. ಭಗವಂತನ ಪ್ರಿಯಭಕ್ತನಾದ ರಾಜರ್ಷಿಯಾದ ಅವನು ಹಸಿವು-ಬಾಯಾರಿಕೆಯಿಂದ ಬಳಲಿದವನಾಗಿ ನಮ್ಮ ಆಶ್ರಮಕ್ಕೆ ಬಂದಿದ್ದನು. ಅವನು ಖಂಡಿತವಾಗಿಯೂ ನಮ್ಮ ಶಾಪಕ್ಕೆ ಯೋಗ್ಯನಾಗಿರಲಿಲ್ಲ.॥46॥
(ಶ್ಲೋಕ - 47)
ಮೂಲಮ್
ಅಪಾಪೇಷು ಸ್ವಭೃತ್ಯೇಷು ಬಾಲೇನಾಪಕ್ವಬುದ್ಧಿನಾ ।
ಪಾಪಂ ಕೃತಂ ತದ್ಭಗವಾನ್ಸರ್ವಾತ್ಮಾ ಕ್ಷಂತುಮರ್ಹತಿ ॥
ಅನುವಾದ
ತಿಳಿವಳಿಕೆಯಿಲ್ಲದ ಈ ಬಾಲಕನು ನಮ್ಮ ಸೇವೆಮಾಡುತ್ತಿದ್ದ ನಿಷ್ಪಾಪಿಯಾದ ರಾಜನಿಗೆ ಅಪರಾಧವನ್ನೆಸಗಿದ್ದಾನೆ. ಸರ್ವಾತ್ಮನಾದ ಭಗವಂತನು ಕೃಪೆಯಿಟ್ಟು ಇವನನ್ನು ಕ್ಷಮಿಸಲಿ.॥47॥
(ಶ್ಲೋಕ - 48)
ಮೂಲಮ್
ತಿರಸ್ಕೃತಾ ವಿಪ್ರಲಬ್ಧಾಃ ಶಪ್ತಾಃ ಕ್ಷಿಪ್ತಾ ಹತಾ ಅಪಿ ।
ನಾಸ್ಯ ತತ್ಪ್ರತಿಕುರ್ವಂತಿ ತದ್ಭಕ್ತಾಃ ಪ್ರಭವೋಪಿ ಹಿ ॥
ಅನುವಾದ
ಭಗವಂತನ ಭಕ್ತರಲ್ಲಿ ಶಕ್ತಿಯಿದ್ದರೂ ಅವರು ಸೇಡುತೀರಿಸಿಕೊಳ್ಳಲು ಹೋಗುವುದಿಲ್ಲ. ಇತರರಿಂದ ತಮಗೆ ಅಪಮಾನ, ಮೋಸ, ಬೈಗುಳ, ಆಕ್ಷೇಪಣೆ, ಹೊಡೆದಾಟ, ಬಡಿದಾಟ ಮುಂತಾದವುಗಳಾದರೂ ಅವುಗಳನ್ನು ಸಹಿಸಿಕೊಳ್ಳುತ್ತಾರೆ.॥48॥
(ಶ್ಲೋಕ - 49)
ಮೂಲಮ್
ಇತಿ ಪುತ್ರಕೃತಾಘೇನ ಸೋನುತಪ್ತೋ ಮಹಾಮುನಿಃ ।
ಸ್ವಯಂ ವಿಪ್ರಕೃತೋ ರಾಜ್ಞಾ ನೈವಾಘಂ ತದಚಿಂತಯತ್ ॥
ಅನುವಾದ
ಶಮೀಕ ಮಹರ್ಷಿಗಳಿಗೆ ತನ್ನ ಪುತ್ರನು ಮಾಡಿದ ಅಪರಾಧಕ್ಕಾಗಿ ತುಂಬಾ ಪಶ್ಚಾತ್ತಾಪವಾಯಿತು. ಪರೀಕ್ಷಿದ್ರಾಜನು ತಮಗೆ ಮಾಡಿದ್ದ ಅಪಮಾನವನ್ನಾದರೋ ಅವರು ಮನಸ್ಸಿಗೆ ಹಚ್ಚಿಕೊಳ್ಳಲೇ ಇಲ್ಲ.॥49॥
(ಶ್ಲೋಕ - 50)
ಮೂಲಮ್
ಪ್ರಾಯಶಃ ಸಾಧವೋ ಲೋಕೇ
ಪರೈರ್ದ್ವಂದ್ವೇಷು ಯೋಜಿತಾಃ ।
ನ ವ್ಯಥಂತಿ ನ ಹೃಷ್ಯಂತಿ
ಯತ ಆತ್ಮಾಗುಣಾಶ್ರಯಃ ॥
ಅನುವಾದ
ಸಾಧು-ಸಂತರ ಸ್ವಭಾವವೇ ಹೀಗೆ. ಜಗತ್ತಿನಲ್ಲಿ ಇತರರು ಅವರನ್ನು ನಿಂದಾ-ಸ್ತುತಿ ಮುಂತಾದ ದ್ವಂದ್ವಗಳಿಗೆ ಈಡುಮಾಡಿದರೂ ಅವರು ಸಾಮಾನ್ಯವಾಗಿ ಹರ್ಷಿತರಾಗುವುದಿಲ್ಲ, ವ್ಯಥೆಪಡುವುದಿಲ್ಲ, ಏಕೆಂದರೆ, ಅವರು ಆತ್ಮಸ್ವರೂಪವನ್ನರಿತು ಅದರಲ್ಲಿ ನೆಲೆಸಿರುತ್ತಾರೆ. ಆತ್ಮನು ತ್ರಿಗುಣಾತೀತನಲ್ಲವೇ? ॥50॥
ಅನುವಾದ (ಸಮಾಪ್ತಿಃ)
ಹದಿನೆಂಟನೆಯ ಅಧ್ಯಾಯವು ಮುಗಿಯಿತು. ॥18॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ವಿಪ್ರಶಾಪೋಪಲಂಭನಂ ನಾಮಾಷ್ಟಾದಶೋಽಧ್ಯಾಯಃ ॥18॥