೧೭

[ಹದಿನೇಳನೆಯ ಅಧ್ಯಾಯ]

ಭಾಗಸೂಚನಾ

ಪರೀಕ್ಷಿದ್ರಾಜನು ಕಲಿಪುರುಷನನ್ನು ನಿಗ್ರಹಿಸಿದುದು

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ತತ್ರ ಗೋಮಿಥುನಂ ರಾಜಾ ಹನ್ಯಮಾನಮನಾಥವತ್ ।
ದಂಡಹಸ್ತಂ ಚ ವೃಷಲಂ ದದೃಶೇ ನೃಪಲಾಂಛನಮ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕರೇ! ಪರೀಕ್ಷಿದ್ರಾಜನು ಅಲ್ಲಿಗೆ ಬಂದು ನೋಡುತ್ತಾನೆ ಒಬ್ಬ ಶೂದ್ರನು ರಾಜವೇಷ ಧಾರಿಯಾಗಿ ಕೈಯಲ್ಲಿ ದೊಣ್ಣೆಯನ್ನು ಹಿಡಿದುಕೊಂಡು ಅನಾಥರಂತೆ ಇರುವ ಒಂದು ಹಸು, ಎತ್ತು ಜೋಡಿಯನ್ನು ಹೊಡೆಯುತ್ತಿದ್ದನು.॥1॥

(ಶ್ಲೋಕ - 2)

ಮೂಲಮ್

ವೃಷಂ ಮೃಣಾಲಧವಲಂ ಮೇಹಂತಮಿವ ಬಿಭ್ಯತಮ್ ।
ವೇಪಮಾನಂ ಪದೈಕೇನ ಸೀದಂತಂ ಶೂದ್ರತಾಡಿತಮ್ ॥

ಅನುವಾದ

ತಾವರೆಯ ದಂಟಿನಂತಿದ್ದ ಆ ಎತ್ತು ಒಂಟಿಕಾಲಿನ ಮೇಲೆ ನಿಂತು ಗಡ-ಗಡ ನಡುಗುತ್ತಾ ಆ ಘಾತುಕನ ಏಟಿನಿಂದ ಪೀಡಿತ ವಾಗಿ ಮೂತ್ರವಿಸರ್ಜನೆ ಮಾಡುತ್ತಿತ್ತು.॥2॥

(ಶ್ಲೋಕ - 3)

ಮೂಲಮ್

ಗಾಂ ಚ ಧರ್ಮದುಘಾಂ ದೀನಾಂ ಭೃಶಂ ಶೂದ್ರಪದಾಹತಾಮ್ ।
ವಿವತ್ಸಾಂ ಸಾಶ್ರುವದನಾಂ ಕ್ಷಾಮಾಂ ಯವಸಮಿಚ್ಛತೀಮ್ ॥

ಅನುವಾದ

ಹಸುವು ಧರ್ಮೋಪಯೋಗಿ ಹಾಲು, ತುಪ್ಪ ಮುಂತಾದ ಹವಿಸ್ಸು ಪದಾರ್ಥಗಳನ್ನು ಕೊಡುತ್ತದೆ. ಅದರ ಗೋಮಯವೂ ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಇಂತಹ ಹಸುವು ಪದೇ-ಪದೇ ಶೂದ್ರನ ಒದೆಯನ್ನು ತಿನ್ನುತ್ತಾ ಅತ್ಯಂತ ದೀನಳಾಗಿದ್ದಳು. ಮೊದಲೇ ಬಡಕ ಲಾಗಿದ್ದು, ಕರುವೂ ಅದರ ಬಳಿಯಲ್ಲಿ ಇರಲಿಲ್ಲ. ಅದಕ್ಕೆ ಹಸಿವು ಬಾಧಿಸುತ್ತಿತ್ತು. ಕಣ್ಣುಗಳಿಂದ ನೀರು ಹರಿಯುತ್ತಿತ್ತು.॥3॥

(ಶ್ಲೋಕ - 4)

ಮೂಲಮ್

ಪಪ್ರಚ್ಛ ರಥಮಾರೂಢಃ ಕಾರ್ತಸ್ವರಪರಿಚ್ಛದಮ್ ।
ಮೇಘಗಂಭೀರಯಾ ವಾಚಾ ಸಮಾರೋಪಿತಕಾರ್ಮುಕಃ ॥

ಅನುವಾದ

ಸ್ವರ್ಣಾಲಂಕೃತ ರಥದಲ್ಲಿ ಕುಳಿತಿದ್ದ ರಾಜಾ ಪರೀಕ್ಷಿತನು ತನ್ನ ಧನುಸ್ಸಿಗೆ ಬಾಣಹೂಡಿ ಮೇಘಗಂಭೀರ ವಾದ ವಾಣಿಯಿಂದ ಹೀಗೆ ಪ್ರಶ್ನಿಸಿದನು.॥4॥

(ಶ್ಲೋಕ - 5)

ಮೂಲಮ್

ಕಸ್ತ್ವಂ ಮಚ್ಛರಣೇ ಲೋಕೇ ಬಲಾದ್ಧಂಸ್ಯಬಲಾನ್ಬಲೀ ।
ನರದೇವೋಸಿ ವೇಷೇಣ ನಟವತ್ಕರ್ಮಣಾದ್ವಿಜಃ ॥

ಅನುವಾದ

ಎಲವೋ! ನೀನಾರು? ಬಲಶಾಲಿಯಾಗಿದ್ದುಕೊಂಡು ನನ್ನ ರಾಜ್ಯದಲ್ಲಿ ನನ್ನ ರಕ್ಷಣೆಯಲ್ಲಿರುವ ಈ ದುರ್ಬಲ ಪ್ರಾಣಿಗಳನ್ನು ಬಲಾತ್ಕಾರವಾಗಿ ಏಕೆ ಹೊಡೆಯುತ್ತಿರುವೆ? ನಟನಂತೆ ರಾಜನ ವೇಷವನ್ನು ಧರಿಸಿದ್ದೀಯಾ, ಆದರೆ ಕರ್ಮದಿಂದ ಶೂದ್ರನಂತೆ ಕಂಡು ಬರುವೆಯಲ್ಲ! ॥5॥

(ಶ್ಲೋಕ - 6)

ಮೂಲಮ್

ಕಸ್ತ್ವಂ ಕೃಷ್ಣೇ ಗತೇ ದೂರಂ ಸಹ ಗಾಂಡೀವಧನ್ವನಾ ।
ಶೋಚ್ಯೋಸ್ಯಶೋಚ್ಯಾನ್ರಹಸಿ ಪ್ರಹರನ್ವಧಮರ್ಹಸಿ ॥

ಅನುವಾದ

ಗಾಂಡೀವ ಧನುರ್ಧರನಾದ ಅರ್ಜುನನೊಡನೆ ಭಗವಾನ್ ಶ್ರೀಕೃಷ್ಣನೂ ಪರಂಧಾಮಕ್ಕೆ ತೆರಳಿದ ಬಳಿಕ ನಿರಪರಾಧಿಗಳನ್ನು ಇಂತಹ ಏಕಾಂತಸ್ಥಳದಲ್ಲಿ ಹಿಂಸೆಪಡಿಸುವ ನೀನು ಅಪರಾಧಿಯೇ ಆಗಿದ್ದು, ಮರಣದಂಡನೆಗೆ ಅರ್ಹನಾಗಿರುವೆ.॥6॥

(ಶ್ಲೋಕ - 7)

ಮೂಲಮ್

ತ್ವಂ ವಾ ಮೃಣಾಲಧವಲಃ ಪಾದೈರ್ನ್ಯೂನಃ ಪದಾ ಚರನ್ ।
ವೃಷರೂಪೇಣ ಕಿಂ ಕಶ್ಚಿದ್ದೇವೋ ನಃ ಪರಿಖೇದಯನ್ ॥

ಅನುವಾದ

ರಾಜನು ಆ ವೃಷಭರೂಪೀ ಧರ್ಮನಲ್ಲಿ ಪ್ರಶ್ನಿಸಿದನು ಕಮಲದ ದಂಟಿನಂತೆ ಶುಭ್ರವಾದ ಬಣ್ಣದಿಂದ ಕಂಗೊಳಿಸುತ್ತಿರುವ ನೀನಾರು? ಮೂರು ಕಾಲುಗಳನ್ನು ಕಳೆದುಕೊಂಡು ಒಂಟಿ ಕಾಲಿನಿಂದಲೇ ನಡೆಯುತ್ತಿದ್ದು ನಮ್ಮನ್ನು ಖೇದಗೊಳಿಸುತ್ತಿರುವ ಯಾವನಾದರೂ ದೇವತೆಯಾಗಿರುವೆಯಾ?॥7॥

(ಶ್ಲೋಕ - 8)

ಮೂಲಮ್

ನ ಜಾತು ಪೌರವೇಂದ್ರಾಣಾಂ ದೋರ್ದಂಡಪರಿರಂಭಿತೇ ।
ಭೂತಲೇನುಪತಂತ್ಯಸ್ಮಿನ್ ವಿನಾ ತೇ ಪ್ರಾಣಿನಾಂ ಶುಚಃ ॥

ಅನುವಾದ

ಪುರುವಂಶದ ಅರಸರ ಬಾಹುದಂಡದಿಂದ ಸಂರಕ್ಷಿತವಾದ ಈ ಭೂಮಂಡಲದಲ್ಲಿ ನಿನ್ನನ್ನು ಹೊರತುಪಡಿಸಿ ಬೇರೆ ಯಾವ ಪ್ರಾಣಿಯೂ ದುಃಖದಿಂದ ಕಣ್ಣೀರು ಹರಿಸುವುದಿಲ್ಲ.॥8॥

ಮೂಲಮ್

(ಶ್ಲೋಕ - 9)
ಮಾ ಸೌರಭೇಯಾನುಶುಚೋ ವ್ಯೇತು ತೇ ವೃಷಲಾದ್ಭಯಮ್ ।
ಮಾ ರೋದೀರಂಬ ಭದ್ರಂ ತೇ ಖಲಾನಾಂ ಮಯಿ ಶಾಸ್ತರಿ ॥

ಅನುವಾದ

ಎಲೈ ವೃಷಭವೇ! ಈಗ ನೀನು ದುಃಖ ಪಡದೆ ಈ ಧರ್ಮಘಾತುಕನಿಂದ ನಿರ್ಭಯನಾಗಿರು. ಅಮ್ಮಾ ಗೋಮಾತೇ! ದುಷ್ಟರಿಗೆ ಶಾಸನ ಮಾಡುವಂತಹ ನಾನೇ ಇಲ್ಲಿರುವಾಗ ನೀನು ಅಳಬೇಡ. ನಿನಗೆ ಮಂಗಳವಾಗಲಿ. ॥9॥

(ಶ್ಲೋಕ - 10)

ಮೂಲಮ್

ಯಸ್ಯ ರಾಷ್ಟ್ರೇ ಪ್ರಜಾಃ ಸರ್ವಾಸಸ್ಯಂತೇ ಸಾಧ್ವ್ಯಸಾಧುಭಿಃ ।
ತಸ್ಯ ಮತ್ತಸ್ಯ ನಶ್ಯಂತಿ ಕೀರ್ತಿರಾಯುರ್ಭಗೋ ಗತಿಃ ॥

ಅನುವಾದ

ದೇವೀ! ಯಾವ ರಾಜನ ರಾಜ್ಯದಲ್ಲಿ ಪ್ರಜೆಗಳು ದುಷ್ಟರ ಉಪದ್ರವದಿಂದ ಹೆದರುತ್ತಾರೋ, ಅಂತಹ ಮೈಮರೆತ ರಾಜನ ಕೀರ್ತಿ, ಐಶ್ವರ್ಯ, ಆಯುಸ್ಸು ಮತ್ತು ಪರಲೋಕಗಳು ನಾಶವಾಗುತ್ತವೆ.॥10॥

(ಶ್ಲೋಕ - 11)

ಮೂಲಮ್

ಏಷ ರಾಜ್ಞಾಂ ಪರೋ ಧರ್ಮೋ ಹ್ಯಾರ್ತಾನಾಮಾರ್ತಿನಿಗ್ರಹಃ ।
ಅತ ಏನಂ ವಷ್ಯಾಮಿ ಭೂತದ್ರುಹಮಸತ್ತಮಮ್ ॥

ಅನುವಾದ

ಪೀಡಿತರ ದುಃಖವನ್ನು ದೂರ ಮಾಡುವುದೇ ರಾಜರ ಪರಮಧರ್ಮವಾಗಿದೆ. ಈ ಮಹಾದುಷ್ಟನೂ, ಪ್ರಾಣಿಗಳನ್ನು, ಪೀಡಿಸುವವನೂ ಆದ ಇವನನ್ನು ನಾನು ಈಗಲೇ ಕೊಂದುಬಿಡುವೆನು. ॥11॥

(ಶ್ಲೋಕ - 12)

ಮೂಲಮ್

ಕೋವೃಶ್ಚತ್ತವ ಪಾದಾಂಸೀನ್ಸೌರಭೇಯ ಚತುಷ್ಪದ ।
ಮಾ ಭೂವಂಸ್ತ್ವಾದೃಶಾ ರಾಷ್ಟ್ರೇ ರಾಜ್ಞಾಂ ಕೃಷ್ಣಾನುವರ್ತಿನಾಮ್ ॥

ಅನುವಾದ

ಎಲೈ ವೃಷಭವೇ! ನೀನು ನಾಲ್ಕು ಕಾಲುಗಳುಳ್ಳ ಪ್ರಾಣಿಯು. ನಿನ್ನ ಮೂರು ಕಾಲುಗಳನ್ನು ಯಾರು ಮುರಿದು ಹಾಕಿದರು? ಶ್ರೀಕೃಷ್ಣನ ಅನುಯಾಯಿಗಳಾಗಿರುವ ರಾಜರ ಆಳ್ವಿಕೆಗೆ ಒಳಪಟ್ಟ ರಾಜ್ಯಗಳಲ್ಲಿ ಎಂದೂ ಯಾರೂ ನಿನ್ನಂತೆ ದುಃಖಿಗಳಾಗ ಕೂಡದು. ॥12॥

ಮೂಲಮ್

(ಶ್ಲೋಕ - 13)
ಆಖ್ಯಾಹಿ ವೃಷ ಭದ್ರಂ ವಃ ಸಾಧೂನಾಮಕೃತಾಗಸಾಮ್ ।
ಆತ್ಮವೈರೂಪ್ಯಕರ್ತಾರಂ ಪಾರ್ಥಾನಾಂ ಕೀರ್ತಿದೂಷಣಮ್ ॥

ಅನುವಾದ

ವೃಷಭೋತ್ತಮಾ! ನಿನಗೆ ಮಂಗಳವಾಗಲೀ, ನಿನ್ನಂತಹ ನಿರಪರಾಧೀ ಸಾಧುವಿನ ಅಂಗಭಂಗವನ್ನಾಗಿ ಮಾಡಿ, ಪಾಂಡವರ ಕೀರ್ತಿಗೆ ಕಳಂಕ ತಂದಿರುವ ಆ ದುಷ್ಟನು ಯಾರು? ॥13॥

(ಶ್ಲೋಕ - 14)

ಮೂಲಮ್

ಜನೇನಾಗಸ್ಯಘಂ ಯುಂಜನ್ಸರ್ವತೋಸ್ಯ ಚ ಮದ್ಭಯಮ್ ।
ಸಾಧೂನಾಂ ಭದ್ರಮೇವ ಸ್ಯಾದಸಾಧುದಮನೇ ಕೃತೇ ॥

ಅನುವಾದ

ನಿರಪರಾಧಿಗಳಾದ ಪ್ರಾಣಿಗಳನ್ನು ಹಿಂಸಿಸುವವನು ಎಲ್ಲೇ ಇದ್ದರೂ ಆತನು ನನಗೆ ಭಯಪಡುತ್ತಲೇ ಇರಬೇಕಾಗುವುದು. ದುಷ್ಟರನ್ನು ದಮನ ಮಾಡಿದಾಗಲೇ ಸಾಧುಗಳಿಗೆ ಶ್ರೇಯಸ್ಸಾಗುವುದಲ್ಲವೇ? ॥14॥

(ಶ್ಲೋಕ - 15)

ಮೂಲಮ್

ಅನಾಗಸ್ಸ್ವಿಹ ಭೂತೇಷು ಯ ಆಗಸ್ಕೃನ್ನಿರಂಕುಶಃ ।
ಆಹರ್ತಾಸ್ಮಿ ಭುಜಂ ಸಾಕ್ಷಾದಮರ್ತ್ಯಸ್ಯಾಪಿ ಸಾಂಗದಮ್ ॥

ಅನುವಾದ

ನಿರಂಕುಶನಾಗಿ ನಡೆಯುತ್ತಾ ನಿರಪರಾಧಿಗಳಾದ ಪ್ರಾಣಿಗಳಿಗೆ ಹಿಂಸೆಕೊಡುವವನು ದೇವ ಪುರುಷನೇ ಆಗಿದ್ದರೂ ನಾನು ಆತನ ತೋಳ್ಬಳೆಗಳಿಂದಲಂಕೃತವಾದ ಭುಜವನ್ನು ಕತ್ತರಿಸಿ ಹಾಕುವೆನು. ॥15॥

(ಶ್ಲೋಕ - 16)

ಮೂಲಮ್

ರಾಜ್ಞೋ ಹಿ ಪರಮೋ ಧರ್ಮಃ ಸ್ವಧರ್ಮಸ್ಥಾನುಪಾಲನಮ್ ।
ಶಾಸತೋನ್ಯಾನ್ಯಥಾಶಾಸಮನಾಪದ್ಯುತ್ಪಥಾನಿಹ ॥

ಅನುವಾದ

ಆಪತ್ಕಾಲವೊಂದನ್ನು ಬಿಟ್ಟು ಬೇರೆ ಸಮಯಗಳಲ್ಲಿ ಮರ್ಯಾದೆ ಮೀರಿ ವರ್ತಿಸುವವರನ್ನು ಶಾಸ್ತ್ರಾನುಸಾರವಾಗಿ ದಂಡಿಸುತ್ತಾ, ತಮ್ಮ ಧರ್ಮದಲ್ಲಿರುವವರನ್ನು ಕಾಪಾಡುತ್ತಾ ಇರುವುದೇ ರಾಜರ ಪರಮಧರ್ಮವಾಗಿದೆ. ॥16॥

(ಶ್ಲೋಕ - 17)

ಮೂಲಮ್ (ವಾಚನಮ್)

ಧರ್ಮ ಉವಾಚ

ಮೂಲಮ್

ಏತದ್ವಃ ಪಾಂಡವೇಯಾನಾಂ ಯುಕ್ತಮಾರ್ತಾಭಯಂ ವಚಃ ।
ಯೇಷಾಂ ಗುಣಗಣೈಃ ಕೃಷ್ಣೋ ದೌತ್ಯಾದೌ ಭಗವಾನ್ಕೃತಃ ॥

ಅನುವಾದ

ಧರ್ಮವೃಷಭವು ಹೇಳಿತು — ಮಹಾರಾಜನೇ! ಕಲ್ಯಾಣ ಗುಣಗಳನ್ನು ಮೆಚ್ಚಿ ಭಗವಂತನಾದ ಶ್ರೀಕೃಷ್ಣನು ದೌತ್ಯವೇ ಮುಂತಾದ ಸೇವೆಯನ್ನು ಮಾಡಿದಂತಹ ಮಹಾತ್ಮರಾದ ಪಾಂಡವರ ವಂಶಜನಾದ ನೀನು ದುಃಖಿತರಿಗೆ ಈ ರೀತಿ ಆಶ್ವಾಸನೆಯನ್ನೀಯುವುದು ಯುಕ್ತವೇ ಆಗಿದೆ. ॥17॥

(ಶ್ಲೋಕ - 18)

ಮೂಲಮ್

ನ ವಯಂ ಕ್ಲೇಶಬೀಜಾನಿ ಯತಃ ಸ್ಯುಃ ಪುರುಷರ್ಷಭ ।
ಪುರುಷಂ ತಂ ವಿಜಾನೀಮೋ ವಾಕ್ಯಭೇದವಿಮೋಹಿತಾಃ ॥

ಅನುವಾದ

ಪುರುಷಶ್ರೇಷ್ಠನೇ! ಶಾಸ್ತ್ರಗಳಲ್ಲಿ ಹೇಳಿರುವ ಬಗೆ-ಬಗೆಯ ಮಾತುಗಳು ನಮ್ಮನ್ನು ಮೋಹಗೊಳಿಸುವುದರಿಂದ ನಮ್ಮ ಈ ಕ್ಲೇಶಕ್ಕೆ ಯಾರು ಕಾರಣನೆಂಬುದು ನಮಗೆ ತಿಳಿಯುತ್ತಿಲ್ಲ. ॥18॥

(ಶ್ಲೋಕ - 19)

ಮೂಲಮ್

ಕೇಚಿದ್ವಿಕಲ್ಪವಸನಾ ಆಹುರಾತ್ಮಾನಮಾತ್ಮನಃ ।
ದೈವಮನ್ಯೇ ಪರೇ ಕರ್ಮ ಸ್ವಭಾವಮಪರೇ ಪ್ರಭುಮ್ ॥

ಅನುವಾದ

ಯಾವುದೇ ದೈವವನ್ನು ಸ್ವೀಕರಿಸದವರು ತಾವೇ-ತಮ್ಮನ್ನು ತಮ್ಮ ದುಃಖದ ಕಾರಣವೆಂದು ಹೇಳುತ್ತಾರೆ. ಕೆಲವರು ಪ್ರಾರಬ್ಧವನ್ನು ಕಾರಣವೆಂದು ಹೇಳಿದರೆ, ಕೆಲವರು ಕರ್ಮವನ್ನು ಕಾರಣವೆಂದು ಹೇಳುತ್ತಾರೆ. ಕೆಲವರು ಸ್ವಭಾವವನ್ನು, ಕೆಲವರು ಈಶ್ವರನನ್ನು ದುಃಖಗಳ ಕಾರಣವೆಂದು ಹೇಳುತ್ತಾರೆ. ॥19॥

(ಶ್ಲೋಕ - 20)

ಮೂಲಮ್

ಅಪ್ರತರ್ಕ್ಯಾದನಿರ್ದೇಶ್ಯಾದಿತಿ ಕೇಷ್ವಪಿ ನಿಶ್ಚಯಃ ।
ಅತ್ರಾನುರೂಪಂ ರಾಜರ್ಷೇ ವಿಮೃಶಸ್ವಮನೀಷಯಾ ॥

ಅನುವಾದ

ಯಾವ ತರ್ಕ-ವಿತರ್ಕಗಳಿಗೂ ನಿಲುಕದೆ, ಯಾವ ಮಾತಿಗೂ ಗೋಚರವಾಗದೆ ಇರುವ ಯಾವುದೋ ಒಂದು ವಸ್ತುವಿನಿಂದಲೇ ಎಲ್ಲವೂ ನಡೆಯುವುದು ಎಂದು ಕೆಲವರು ನಿರ್ಧರಿಸುತ್ತಾರೆ. ರಾಜರ್ಷಿಯೇ! ಇವುಗಳಲ್ಲಿ ಯಾವುದು ಸರಿ ಎಂಬುದನ್ನು ನಿನ್ನ ಬುದ್ಧಿಯಿಂದ ವಿಮರ್ಶೆ ಮಾಡಿ ಹೇಳು. ನನಗಂತೂ ಈ ವಿಷಯದಲ್ಲಿ ಏನೂತಿಳಿದಿಲ್ಲ.॥20॥

(ಶ್ಲೋಕ - 21)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಏವಂ ಧರ್ಮೇ ಪ್ರವದತಿ ಸ ಸಮ್ರಾಡ್ ದ್ವಿಜಸತ್ತಮ ।
ಸಮಾಹಿತೇನ ಮನಸಾ ವಿಖೇದಃ ಪರ್ಯಚಷ್ಟ ತಮ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಋಷಿಶ್ರೇಷ್ಠ ಶೌನಕರೇ! ಧರ್ಮಪುರುಷನ ಈ ಧರ್ಮಪ್ರವಚನವನ್ನು ಕೇಳಿ ಚಕ್ರವರ್ತಿಯು ಪ್ರಸನ್ನನಾಗಿ ಖೇದರಹಿತನಾದನು. ॥21॥

(ಶ್ಲೋಕ - 22)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಧರ್ಮಂ ಬ್ರವೀಷಿ ಧರ್ಮಜ್ಞ ಧರ್ಮೋಸಿ ವೃಷರೂಪಧೃಕ್ ।
ಯದಧರ್ಮಕೃತಃ ಸ್ಥಾನಂ ಸೂಚಕಸ್ಯಾಪಿ ತದ್ಭವೇತ್ ॥

ಅನುವಾದ

ಪರೀಕ್ಷಿದ್ರಾಜನು ಹೇಳಿದನು — ಧರ್ಮಜ್ಞನಾದ ವೃಷಭವೇ! ನೀನು ಧರ್ಮದ ಉಪದೇಶವನ್ನು ಕೊಡುತ್ತಿರುವುದನ್ನು ನೋಡಿ ಖಂಡಿತವಾಗಿಯೂ ನೀನು ವೃಷಭ ರೂಪದಲ್ಲಿರುವ ಧರ್ಮವೇ ಆಗಿರುವೆ. (ನೀನು ನಿನಗೆ ದುಃಖ ಕೊಡುವವನ ಹೆಸರನ್ನು ಏಕೆ ಹೇಳಲಿಲ್ಲ ಎಂದರೆ) ಅಧರ್ಮವನ್ನು ಆಚರಿಸಿದವನಿಗೆ ದೊರೆಯುವ ನರಕಾದಿ ಸ್ಥಾನಗಳು ಆತನ ಹೆಸರನ್ನು ಸೂಚಿಸುವವನಿಗೂ ದೊರೆಯುತ್ತವೆ. ॥22॥

ಮೂಲಮ್

(ಶ್ಲೋಕ - 23)
ಅಥವಾ ದೇವಮಾಯಾಯಾ ನೂನಂ ಗತಿರಗೋಚರಾ ।
ಚೇತಸೋ ವಚಸಶ್ಚಾಪಿ ಭೂತಾನಾಮಿತಿ ನಿಶ್ಚಯಃ ॥

ಅನುವಾದ

ಅಥವಾ ‘ಪರಮಾತ್ಮನ ಮಾಯೆಯ ಸ್ವರೂಪವನ್ನೂ, ಗತಿಯನ್ನೂ ಪ್ರಾಣಿಗಳ ಮನಸ್ಸಿನಿಂದಾಗಲೀ, ಮಾತಿನಿಂದಾಗಲೀ ನಿರೂಪಿಸುವುದು ಶಕ್ಯವೇ ಇಲ್ಲ’ ಎಂಬುದೇ ನಿಶ್ಚಿತ ಸಿದ್ಧಾಂತವಾಗಿದೆ. ॥23॥

(ಶ್ಲೋಕ - 24)

ಮೂಲಮ್

ತಪಃ ಶೌಚಂ ದಯಾ ಸತ್ಯಮಿತಿ ಪಾದಾಃ ಕೃತೇ ಕೃತಾಃ ।
ಅಧರ್ಮಾಂಶೈಸಯೋ ಭಗ್ನಾಃ ಸ್ಮಯಸಂಗಮದೈಸ್ತವ ॥

ಅನುವಾದ

‘‘ಧರ್ಮದೇವನೇ! ಕೃತಯುಗದಲ್ಲಿ ನಿನಗೆ ತಪಸ್ಸು, ಪವಿತ್ರತೆ, ದಯೆ, ಸತ್ಯ ಎಂಬ ನಾಲ್ಕು ಪಾದಗಳು ಇದ್ದವು. ಅವುಗಳಲ್ಲಿ ಈಗ ಮೂರುಪಾದಗಳು ಅಧರ್ಮದ ಅಂಶಗಳಾದ ಅಹಂಕಾರ, ಆಸಕ್ತಿ, ಮದ ಇವುಗಳಿಂದ ಮುರಿದು ಹೋದುವು. ॥24॥

(ಶ್ಲೋಕ - 25)

ಮೂಲಮ್

ಇದಾನೀಂ ಧರ್ಮ ಪಾದಸ್ತೇ ಸತ್ಯಂ ನಿರ್ವರ್ತಯೇದ್ಯತಃ ।
ತಂ ಜಿಘೃಕ್ಷತ್ಯಧರ್ಮೋಯಮನೃತೇನೈತಃ ಕಲಿಃ ॥

ಅನುವಾದ

ಈ ನಾಲ್ಕನೆಯ ಪಾದವಾದ ‘ಸತ್ಯ’ವೆಂಬುದು ಮಾತ್ರ ಉಳಿದಿದೆ. ಅದರ ಬಲದಿಂದಲೇ ನೀನು ಬದುಕಿರುವೆ. ಅಸತ್ಯದಿಂದ ಪೋಷಿತವಾದ ಅಧರ್ಮ ರೂಪವಾದ ಕಲಿಯುಗವು ಆ ಪಾದವನ್ನು ನುಂಗಿಹಾಕಲು ಪ್ರಯತ್ನಿಸುತ್ತಿದೆ.॥25॥

(ಶ್ಲೋಕ - 26)

ಮೂಲಮ್

ಇಯಂ ಚ ಭೂರ್ಭಗವತಾ ನ್ಯಾಸಿತೋರುಭರಾ ಸತೀ ।
ಶ್ರೀಮದ್ಭಿಸ್ತತ್ಪದನ್ಯಾಸೈಃ ಸರ್ವತಃ ಕೃತಕೌತುಕಾ ॥

ಅನುವಾದ

ಈ ಗೋಮಾತೆಯು ಸಾಕ್ಷಾತ್ ಭೂಮಿತಾಯಿಯಾಗಿದ್ದು, ಶ್ರೀಕೃಷ್ಣಪರಮಾತ್ಮನು ಈಕೆಯ ಮೇಲಿದ್ದ ಮಹಾಭಾರವನ್ನು ಇಳಿಸಿ ಈಕೆಗೆ ಆನಂದವನ್ನುಂಟುಮಾಡಿದ್ದನು. ಆತನ ಸೌಂದರ್ಯನಿಧಿಯಾದ ಚರಣ ಚಿಹ್ನೆಗಳಿಂದ ಈಕೆಗೆ ಎಲ್ಲೆಡೆಗಳಲ್ಲಿಯೂ ಅಲಂಕಾರ, ಆನಂದೋತ್ಸವಗಳು ಸಂಪನ್ನವಾಗಿದ್ದವು.॥26॥

(ಶ್ಲೋಕ - 27)

ಮೂಲಮ್

ಶೋಚತ್ಯಶ್ರುಕಲಾ ಸ್ವಾೀ ದುರ್ಭಗೇವೋಜ್ಝಿತಾಧುನಾ ।
ಅಬ್ರಹ್ಮಣ್ಯಾ ನೃಪವ್ಯಾಜಾಃ ಶೂದ್ರಾ ಭೋಕ್ಷ್ಯಂತಿ ಮಾಮಿತಿ ॥

ಅನುವಾದ

ಈಗ ಆತನ ಅಗಲಿಕೆಯಿಂದ ಈ ಸಾಧ್ವಿಯು ದುರ್ಭಾರ್ಗ್ಯವತಿಯಂತೆ ಕಣ್ಣೀರುಸುರಿಸುತ್ತಾ ಅಯ್ಯೋ! ಇನ್ನು ಮುಂದೆ ಬ್ರಾಹ್ಮಣದ್ರೋಹಿಗಳಾದ ಶೂದ್ರರು ರಾಜವೇಷಧಾರಿಗಳಾಗಿ ನನ್ನನ್ನು ಆಳುವರಲ್ಲ!’ ಎಂದು ಚಿಂತೆಪಡುತ್ತಿದ್ದಾಳೆ.’’ ॥27॥

(ಶ್ಲೋಕ - 28)

ಮೂಲಮ್

ಇತಿ ಧರ್ಮಂ ಮಹೀಂ ಚೈವ ಸಾಂತ್ವಯಿತ್ವಾ ಮಹಾರಥಃ ।
ನಿಶಾತಮಾದದೇ ಖಡ್ಗಂ ಕಲಯೇಧರ್ಮಹೇತವೇ ॥

ಅನುವಾದ

ಮಹಾರಥಿಯಾದ ಪರೀಕ್ಷಿದ್ರಾಜನು ಹೀಗೆ ಧರ್ಮದೇವನನ್ನೂ, ಭೂದೇವಿಯನ್ನೂ ಸಮಾಧಾನಪಡಿಸಿದನು. ಅನಂತರ ಅಧರ್ಮಕ್ಕೆ ಕಾರಣನಾಗಿರುವ ಕಲಿಪುರುಷನನ್ನು ಕೊಲ್ಲುವುದಕ್ಕಾಗಿ ತೀಕ್ಷ್ಣವಾದ ಖಡ್ಗವನ್ನೆತ್ತಿದನು.॥28॥

(ಶ್ಲೋಕ - 29)

ಮೂಲಮ್

ತಂ ಜಿಘಾಂಸುಮಭಿಪ್ರೇತ್ಯ ವಿಹಾಯ ನೃಪಲಾಂಛನಮ್ ।
ತತ್ಪಾದಮೂಲಂ ಶಿರಸಾ ಸಮಗಾದ್ಭಯವಿಹ್ವಲಃ ॥

ಅನುವಾದ

ಪರೀಕ್ಷಿದ್ರಾಜನು ತನ್ನನ್ನು ಈಗ ಸಂಹರಿಸಲು ಬಯಸುತ್ತಿರುವನೆಂದು ತಿಳಿದ ಕಲಿಪುರುಷನು ಒಡನೆಯೇ ತನ್ನ ರಾಜವೇಷವನ್ನು ಕಳಚಿಹಾಕಿ ಭಯದಿಂದ ಕಳವಳಗೊಂಡು, ತಲೆಯನ್ನು ಆತನ ಪಾದಗಳಲ್ಲಿ ಇರಿಸಿ ಆತನಲ್ಲಿ ಶರಣಾದನು. ॥29॥

(ಶ್ಲೋಕ - 30)

ಮೂಲಮ್

ಪತಿತಂ ಪಾದಯೋರ್ವೀಕ್ಷ್ಯ ಕೃಪಯಾ ದೀನವತ್ಸಲಃ ।
ಶರಣ್ಯೋ ನಾವೀಚ್ಛ್ಲೋಕ್ಯ ಆಹ ಚೇದಂ ಹಸನ್ನಿವ ॥

ಅನುವಾದ

ಪರೀಕ್ಷಿತನಾದರೋ ಮಹಾಯಶಸ್ವಿಯೂ, ದೀನವತ್ಸಲನೂ, ಶರಣಾಗತರಕ್ಷಕನೂ ಆಗಿದ್ದುದರಿಂದ ಕಲಿಪುರುಷನು ತನ್ನ ಕಾಲಿಗೆ ಬಿದ್ದಿರುವುದನ್ನು ನೋಡಿ, ಅವನನ್ನು ಸಾಯಿಸದೆ ಕರುಣೆ ತೋರಿದನು. ಅವನು ಕಿರುನಗೆಯನ್ನು ಬೀರುತ್ತಾ ಕಲಿಪುರುಷನಲ್ಲಿ ಇಂತೆಂದನು. ॥30॥

(ಶ್ಲೋಕ - 31)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ನ ತೇ ಗುಡಾಕೇಶಯಶೋಧರಾಣಾಂ
ಬದ್ಧಾಂಜಲೇರ್ವೈ ಭಯಮಸ್ತಿ ಕಿಂಚಿತ್ ।
ನ ವರ್ತಿತವ್ಯಂ ಭವತಾ ಕಥಂಚನ
ಕ್ಷೇತ್ರೇ ಮದೀಯೆ ತ್ವಮಧರ್ಮಬಂಧುಃ ॥

ಅನುವಾದ

ಪರೀಕ್ಷಿದ್ರಾಜನು ಹೇಳಿದನು — ‘ನೀನು ಕೈಜೋಡಿಸಿಕೊಂಡು ಶರಣಾಗತನಾಗಿದ್ದೀಯೆ. ಆದ್ದರಿಂದ ಅರ್ಜುನನ ಯಶಸ್ವೀ ವಂಶದಲ್ಲಿ ಜನಿಸಿದ ವೀರರಿಂದ ನಿನಗೆ ಯಾವ ಭಯವೂ ಇಲ್ಲ. ಆದರೆ ನೀನು ಅಧರ್ಮಕ್ಕೆ ಸಹಾಯಕನಾಗಿರುವುದರಿಂದ ನನ್ನ ರಾಜ್ಯದಲ್ಲಿ ಖಂಡಿತವಾಗಿ ಇರಕೂಡದು. ॥31॥

(ಶ್ಲೋಕ - 32)

ಮೂಲಮ್

ತ್ವಾಂ ವರ್ತಮಾನಂ ನರದೇವದೇಹೇ-
ಷ್ವನುಪ್ರವೃತ್ತೋಯಮಧರ್ಮಪೂಗಃ ।
ಲೋಭೋನೃತಂ ಚೌರ್ಯಮನಾರ್ಯಮಂಹೋ
ಜ್ಯೇಷ್ಠಾ ಚ ಮಾಯಾ ಕಲಹಶ್ಚ ದಂಭಃ ॥

ಅನುವಾದ

ನೀನು ರಾಜರ ಶರೀರಗಳಲ್ಲಿ ಇರುವುದರಿಂದಲೇ ಲೋಭ, ಅಸತ್ಯ, ಕಳ್ಳತನ, ದುಷ್ಟತನ, ಸ್ವಧರ್ಮತ್ಯಾಗ, ದಾರಿದ್ರ್ಯ, ಕಪಟ, ಕಲಹ, ದಂಭ ಮತ್ತು ಇತರ ಪಾಪಗಳು ಬೆಳೆಯುತ್ತಿವೆ. ॥32॥

(ಶ್ಲೋಕ - 33)

ಮೂಲಮ್

ನ ವರ್ತಿತವ್ಯಂ ತದಧರ್ಮಬಂಧೋ
ಧರ್ಮೇಣ ಸತ್ಯೇನ ಚ ವರ್ತಿತವ್ಯೇ ।
ಬ್ರಹ್ಮಾವರ್ತೇ ಯತ್ರ ಯಜಂತಿ ಯಜ್ಞೈ-
ರ್ಯಜ್ಞೇಶ್ವರಂ ಯಜ್ಞವಿತಾನವಿಜ್ಞಾಃ ॥

ಅನುವಾದ

ಆದುದರಿಂದ ಎಲೈ ಅಧರ್ಮದ ಮಿತ್ರನೇ! ನೀನು ಈ ಬ್ರಹ್ಮಾವರ್ತ ದೇಶದಲ್ಲಿ ಒಂದು ಕ್ಷಣವೂ ಇರಬಾರದು. ಏಕೆಂದರೆ, ಇದು ಸತ್ಯ, ಧರ್ಮಗಳ ನಿವಾಸಸ್ಥಾನವಾಗಿದೆ. ಈ ಕ್ಷೇತ್ರದಲ್ಲಿ ಯಜ್ಞವಿಧಿಯನ್ನರಿತ ಮಹಾತ್ಮರು ಯಜ್ಞದ ಮೂಲಕ ಯಜ್ಞಪುರುಷನಾದ ಭಗವಂತನನ್ನು ಆರಾಧಿಸುತ್ತಾರೆ. ॥33॥

(ಶ್ಲೋಕ - 34)

ಮೂಲಮ್

ಯಸ್ಮಿನ್ಹರಿರ್ಭಗವಾನಿಜ್ಯಮಾನ
ಇಜ್ಯಾಮೂರ್ತಿರ್ಯಜತಾಂ ಶಂ ತನೋತಿ ।
ಕಾಮಾನಮೋಘಾನ್ ಸ್ಥಿರಜಂಗಮಾನಾ-
ಮಂತರ್ಬಹಿರ್ವಾಯುರಿವೈಷ ಆತ್ಮಾ ॥

ಅನುವಾದ

ಈ ದೇಶದಲ್ಲಿ ಭಗವಂತನಾದ ಶ್ರೀಹರಿಯು ಯಜ್ಞರೂಪದಲ್ಲಿ ವಾಸಿಸುತ್ತಿರುವನು. ಯಜ್ಞಗಳ ಮೂಲಕ ಪೂಜೆಯನ್ನು ಸ್ವೀಕರಿಸಿ, ಯಜ್ಞ ಮಾಡುವವರಿಗೆ ಸನ್ಮಂಗಳವನ್ನು ಉಂಟುಮಾಡುತ್ತಾನೆ. ಸರ್ವಾತ್ಮನಾಗಿರುವ ಆ ಸ್ವಾಮಿಯು ವಾಯುವಿನಂತೆ ಸಮಸ್ತ ಚರಾಚರ ಪ್ರಾಣಿಗಳ ಒಳ-ಹೊರಗೂ ಏಕರಸವಾಗಿ ತುಂಬಿದ್ದು, ಅವರ ಕಾಮನೆಗಳನ್ನು ಪೂರ್ಣಗೊಳಿಸುತ್ತಾನೆ. ॥34॥

(ಶ್ಲೋಕ - 35)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಪರೀಕ್ಷಿತೈವಮಾದಿಷ್ಟಃ ಸ ಕಲಿರ್ಜಾತವೇಪಥುಃ ।
ತಮುದ್ಯತಾಸಿಮಾಹೇದಂ ದಂಡಪಾಣಿಮಿವೋದ್ಯತಮ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಪರೀಕ್ಷಿದ್ರಾಜನ ಆಜ್ಞೆಯನ್ನು ಕೇಳಿ ಕಲಿಪುರುಷನು ನಡುಗಿ ಹೋದನು. ಯಮರಾಜನಂತೆ ಕೊಲ್ಲಲು ಖಡ್ಗವನ್ನೆತ್ತಿಕೊಂಡು ನಿಂತಿದ್ದ ಪರೀಕ್ಷಿತನಲ್ಲಿ ಕಲಿಯು ಹೀಗೆ ವಿನಂತಿಸಿಕೊಂಡನು. ॥35॥

(ಶ್ಲೋಕ - 36)

ಮೂಲಮ್ (ವಾಚನಮ್)

ಕಲಿರುವಾಚ

ಮೂಲಮ್

ಯತ್ರ ಕ್ವಚನ ವತ್ಸ್ಯಾಮಿ ಸಾರ್ವಭೌಮ ತವಾಜ್ಞಯಾ ।
ಲಕ್ಷಯೇ ತತ್ರ ತತ್ರಾಪಿ ತ್ವಾಮಾತ್ತೇಷುಶರಾಸನಮ್ ॥

ಅನುವಾದ

ಕಲಿಪುರುಷನು ಹೇಳಿದನು — ಸಾರ್ವಭೌಮನೇ! ನಿನ್ನ ಆಜ್ಞೆಯಂತೆ ನಾನು ಎಲ್ಲೇ ಇರಲು ಬಯಸಿದರೂ ಅಲ್ಲೆಲ್ಲಾ ಧನುಸ್ಸಿನಲ್ಲಿ ಬಾಣವನ್ನು ಹೂಡಿನಿಂತಿರುವ ನಿನ್ನ ಮೂರ್ತಿಯೇ ಕಾಣುತ್ತಿರುತ್ತದೆ. ॥36॥

(ಶ್ಲೋಕ - 37)

ಮೂಲಮ್

ತನ್ಮೇ ಧರ್ಮಭೃತಾಂ ಶ್ರೇಷ್ಠ ಸ್ಥಾನಂ ನಿರ್ದೇಷ್ಟುಮರ್ಹಸಿ ।
ಯತ್ರೈವ ನಿಯತೋ ವತ್ಸ್ಯ ಆತಿಷ್ಠಂಸ್ತೇನುಶಾಸನಮ್ ॥

ಅನುವಾದ

ಧಾರ್ಮಿಕ ಶಿರೋಮಣಿಯೇ! ನಾನು ನಿನ್ನ ಆಜ್ಞೆಯನ್ನು ಪಾಲಿಸುತ್ತಾ ನಿಯತವಾಗಿ ವಾಸಿಸಬಹುದಾದ ಸ್ಥಾನವು ಯಾವುದೆಂಬುದನ್ನು ದಯಮಾಡಿ ನಿರ್ದೇಶಿಸು. ॥37॥

(ಶ್ಲೋಕ - 38)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಅಭ್ಯರ್ಥಿತಸ್ತದಾ ತಸ್ಮೈ ಸ್ಥಾನಾನಿ ಕಲಯೇ ದದೌ ।
ದ್ಯೂತಂ ಪಾನಂ ಸಿಯಃ ಸೂನಾ ಯತ್ರಾಧರ್ಮಶ್ಚತುರ್ವಿಧಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಕಲಿಪುರುಷನ ಈ ಪ್ರಾರ್ಥನೆಯನ್ನು ಸ್ವೀಕರಿಸಿ ರಾಜಾಪರೀಕ್ಷಿತನು ಆತನಿಗೆ ಸ್ಥಿರವಾಗಿ ವಾಸಮಾಡಲು ಜೂಜು, ಮದ್ಯಪಾನ, ಅಧಾರ್ಮಿಕವಾದ ಸ್ತ್ರೀಸಂಗ, ಮತ್ತು ಹಿಂಸೆ ಎಂಬ ನಾಲ್ಕು ಜಾಗಗಳನ್ನು ನಿರ್ದೇಶಿಸಿದನು. ಈ ನಾಲ್ಕು ಸ್ಥಾನಗಳಲ್ಲಿ ಕ್ರಮವಾಗಿ ಅಸತ್ಯ, ಮದ, ಆಸಕ್ತಿ, ನಿರ್ದಯತೆ ಎಂಬ ನಾಲ್ಕು ಬಗೆಯ ಅಧರ್ಮಗಳು ವಾಸಿಸುತ್ತವೆ. ॥38॥

(ಶ್ಲೋಕ - 39)

ಮೂಲಮ್

ಪುನಶ್ಚ ಯಾಚಮಾನಾಯ ಜಾತರೂಪಮದಾತ್ಪ್ರಭುಃ ।
ತತೋನೃತಂ ಮದಂ ಕಾಮಂ ರಜೋ ವೈರಂ ಚ ಪಂಚಮಮ್ ॥

ಅನುವಾದ

ಇವುಗಳಲ್ಲದೆ ಇನ್ನು ಕೆಲವು ಸ್ಥಾನಗಳನ್ನು ತನ್ನ ವಾಸಕ್ಕಾಗಿ ದಯಪಾಲಿಸಬೇಕೆಂದು ಕಲಿಪುರುಷನು ಕೇಳಿದಾಗ, ಸಮರ್ಥನಾದ ಪರೀಕ್ಷಿದ್ರಾಜನು ಅವನಿಗೆ ವಾಸಕ್ಕಾಗಿ ಇನ್ನೊಂದು ಸ್ಥಾನ ‘ಸುವರ್ಣ’ (ಚಿನ್ನ)ವನ್ನು ನಿರ್ದೇಶಿಸಿದನು. ಹೀಗೆ ಕಲಿಪುರುಷನಿಗೆ ಅಸತ್ಯ, ಮದ, ಕಾಮ, ವೈರ ಮತ್ತು ರಜೋಗುಣ ಎಂಬ ಐದು ಸ್ಥಾನಗಳಾದವು. ॥39॥

(ಶ್ಲೋಕ - 40)

ಮೂಲಮ್

ಅಮೂನಿ ಪಂಚ ಸ್ಥಾನಾನಿ ಹ್ಯಧರ್ಮಪ್ರಭವಃ ಕಲಿಃ ।
ಔತ್ತರೇಯೇಣ ದತ್ತಾನಿ ನ್ಯವಸತ್ತನ್ನಿ ದೇಶಕೃತ್ ॥

ಅನುವಾದ

ಪರೀಕ್ಷಿದ್ರಾಜನು ತನಗೆ ಕೊಟ್ಟ ಆ ಐದು ಸ್ಥಾನಗಳಲ್ಲೇ ಕಲಿಯು, ಅವನ ಅಪ್ಪಣೆಯನ್ನು ಪಾಲಿಸುತ್ತಾ ವಾಸಿಸ ತೊಡಗಿದನು. ॥40॥

(ಶ್ಲೋಕ - 41)

ಮೂಲಮ್

ಅಥೈತಾನಿ ನ ಸೇವೇತ ಬುಭೂಷುಃ ಪುರುಷಃ ಕ್ವಚಿತ್ ।
ವಿಶೇಷತೋ ಧರ್ಮಶೀಲೋ ರಾಜಾ ಲೋಕಪತಿರ್ಗುರುಃ ॥

ಅನುವಾದ

ಆದ್ದರಿಂದ ಆತ್ಮಕಲ್ಯಾಣವನ್ನು ಬಯಸುವ ಪುರುಷನು ಈ ಐದು ಸ್ಥಾನಗಳನ್ನು ಎಂದಿಗೂ ಸೇವಿಸಬಾರದು. ವಿಶೇಷವಾಗಿ ಧರ್ಮಶೀಲರಾದ ರಾಜರು, ಪ್ರಜಾನಾಯಕರು, ಧರ್ಮೋಪದೇಶಮಾಡುವ ಗುರು ಜನರು ತುಂಬಾ ಎಚ್ಚರಿಕೆಯಿಂದ ಇವುಗಳನ್ನು ತ್ಯಜಿಸಬೇಕು. ॥41॥

(ಶ್ಲೋಕ - 42)

ಮೂಲಮ್

ವೃಷಸ್ಯ ನಷ್ಟಾಂಸಿನ್ಪಾದಾಂಸ್ತಪಃ ಶೌಚಂ ದಯಾಮಿತಿ ।
ಪ್ರತಿಸಂದಧ ಆಶ್ವಾಸ್ಯ ಮಹೀಂ ಚ ಸಮವರ್ಧಯತ್ ॥

ಅನುವಾದ

ಅನಂತರ ಪರೀಕ್ಷಿದ್ರಾಜನು ವೃಷಭರೂಪದಲ್ಲಿದ್ದ ಧರ್ಮಕ್ಕೆ, ತಪಸ್ಸು, ಶೌಚ, ದಯೆ ಎಂಬ ಮೂರು ಪಾದಗಳನ್ನು ಜೋಡಿಸಿಕೊಟ್ಟು ಸಮಾಧಾನ ಪಡಿಸಿದನು. ಭೂದೇವಿಯನ್ನು ಸಮಾಧಾನಗೊಳಿಸಿ ಆಕೆಯನ್ನು ಸಲಹಿದನು. ॥42॥

(ಶ್ಲೋಕ - 43)

ಮೂಲಮ್

ಸ ಏಷ ಏತರ್ಹ್ಯಧ್ಯಾಸ್ತ ಆಸನಂ ಪಾರ್ಥಿವೋಚಿತಮ್ ।
ಪಿತಾಮಹೇನೋಪನ್ಯಸ್ತಂ ರಾಜ್ಞಾರಣ್ಯಂ ವಿವಿಕ್ಷತಾ ॥

ಅನುವಾದ

ಆ ಪರೀಕ್ಷಿದ್ರಾಜನೇ ತನ್ನ ಪಿತಾಮಹನು ಅರಣ್ಯಕ್ಕೆ ತೆರಳುವಾಗ ತನಗೆ ಕೊಟ್ಟ ರಾಜಸಿಂಹಾಸನದ ಮೇಲೆ ಈಗಲೂ ಬೆಳಗುತ್ತಿದ್ದಾನೆ. ॥43॥

(ಶ್ಲೋಕ - 44)

ಮೂಲಮ್

ಆಸ್ತೇಧುನಾ ಸ ರಾಜರ್ಷಿಃ ಕೌರವೇಂದ್ರಃ ಶ್ರೀಯೋಲ್ಲಸನ್ ।
ಗಜಾಹ್ವಯೇ ಮಹಾಭಾಗಶ್ಚಕ್ರವರ್ತೀ ಬೃಹಚ್ಛ್ರವಾಃ ॥

ಅನುವಾದ

ಪರಮ ಯಶಸ್ವಿಯೂ, ಸೌಭಾಗ್ಯ ಸಂಪನ್ನನೂ ಆದ ಆ ಚಕ್ರವರ್ತಿ ರಾಜರ್ಷಿಯು ಹಸ್ತಿನಾವತಿಯಲ್ಲಿ ಕೌರವಕುಲದ ರಾಜ್ಯಲಕ್ಷ್ಮಿಯಿಂದ ರಾರಾಜಿಸುತ್ತಿದ್ದಾನೆ. ॥44॥

(ಶ್ಲೋಕ - 45)

ಮೂಲಮ್

ಇತ್ಥಂಭೂತಾನುಭಾವೋಯಮಭಿಮನ್ಯುಸುತೋ ನೃಪಃ ।
ಯಸ್ಯ ಪಾಲಯತಃ ಕ್ಷೋಣೀಂ ಯೂಯಂ ಸತ್ರಾಯ ದೀಕ್ಷಿತಾಃ ॥

ಅನುವಾದ

ಅಭಿಮನ್ಯುನಂದನ ರಾಜಾ ಪರೀಕ್ಷಿತನ ಪ್ರಭಾವ ಹೀಗಿದೆ. ಆ ಮಹಾನುಭಾವನು ರಾಜ್ಯವನ್ನಾಳುವ ಸಮಯದಲ್ಲಿಯೇ ನೀವು ದೀರ್ಘಕಾಲ ನಡೆಯುವ ಈ ಸತ್ರಯಾಗದಲ್ಲಿ ದೀಕ್ಷಿತರಾಗಿರುವಿರಿ.* ॥45॥

ಟಿಪ್ಪನೀ
  • 43ರಿಂದ 45ರವರೆಗಿನ ಶ್ಲೋಕಗಳಲ್ಲಿ ಪರೀಕ್ಷಿದ್ರಾಜನನ್ನು ವರ್ತಮಾನದಂತೆ ವರ್ಣಿಸಲಾಗಿದೆ. ‘‘ವರ್ತಮಾನಸಾಮೀಪ್ಯೇ ವರ್ತಮಾನವದ್ವಾ’’ (ಪಾ-ಸೂ-3/3/131) ಎಂಬ ಪಾಣಿನಿಯ ಸೂತ್ರದಂತೆ ವರ್ತಮಾನದ ನಿಕಟವರ್ತಿ ಭೂತ ಮತ್ತು ನಿಕಟವರ್ತಿ ಭವಿಷ್ಯತ್ತಿಗಾಗಿ ವರ್ತಮಾನದ ಪ್ರಯೋಗಮಾಡಬಹುದು. ಶ್ರೀವಲ್ಲಭಾಚಾರ್ಯರು ತಮ್ಮ ಟೀಕೆಯಲ್ಲಿ ಬರೆದಿರುವರು ಆಗ ಪರೀಕ್ಷಿದ್ರಾಜನು ಭೌತಿಕವಾಗಿ ಮೃತನಾಗಿದ್ದರೂ, ಆತನ ಕೀರ್ತಿ ಹಾಗೂ ಪ್ರಭಾವಗಳು ವರ್ತಮಾನದಂತೆ ವಿದ್ಯಮಾನವಾಗಿದ್ದವು. ಅವನ ಕುರಿತು ಅತ್ಯಂತ ಶ್ರದ್ಧೆಯನ್ನು ಉಂಟುಮಾಡಲು ಅವನ ಅಂತರವನ್ನು ಇಲ್ಲಿ ಇಲ್ಲವಾಗಿಸಿದೆ. ಅವನಿಗೆ ಭಗವಂತನ ಸಾಯುಜ್ಯ ಪ್ರಾಪ್ತವಾಗಿತ್ತು. ಇದಕ್ಕಾಗಿಯೂ ಸೂತಪುರಾಣಿಕರು ಆತನನ್ನು ತಮ್ಮ ಎದುರಿಗೆ ನೋಡುತ್ತಿದ್ದರು. ಕೇವಲ ಅವರಿಗೆ ಮಾತ್ರವಲ್ಲ ಅಲ್ಲಿದ್ದ ಎಲ್ಲರಿಗೂ ಹಾಗೆಯೇ ಅನುಭವವಾಗುತ್ತಿತ್ತು. ‘‘ಆತ್ಮಾ ವೈ ಪುತ್ರನಾಮಾಸಿ’’ ಎಂಬ ಶ್ರುತಿಗನುಸಾರ ಜನಮೇಜಯನ ರೂಪದಲ್ಲಿಯೂ ಅವನೇ ರಾಜಸಿಂಹಾಸನದಲ್ಲಿ ಕುಳಿತಿದ್ದನು. ಇವೆಲ್ಲ ಕಾರಣಗಳಿಂದ ವರ್ತಮಾನದಂತೆ ಅವನ ವರ್ಣನೆಯು ಕಥಾರಸವನ್ನು ಪುಷ್ಟಗೊಳಿಸುತ್ತದೆ.
ಅನುವಾದ (ಸಮಾಪ್ತಿಃ)

ಹದಿನೇಳನೆಯ ಅಧ್ಯಾಯವು ಮುಗಿಯಿತು. ॥17॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ಕಲಿನಿಗ್ರಹೋ ನಾಮ ಸಪ್ತದಶೋಽಧ್ಯಾಯಃ ॥17॥