[ಹದಿನಾರನೆಯ ಅಧ್ಯಾಯ]
ಭಾಗಸೂಚನಾ
ಪರೀಕ್ಷಿದ್ರಾಜನ ದಿಗ್ವಿಜಯ ಮತ್ತು ಧರ್ಮ-ಪೃಥ್ವೀ ಸಂವಾದ
(ಶ್ಲೋಕ - 1)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ತತಃ ಪರೀಕ್ಷಿದ್ವಜವರ್ಯಶಿಕ್ಷಯಾ
ಮಹೀಂ ಮಹಾಭಾಗವತಃ ಶಶಾಸ ಹ ।
ಯಥಾ ಹಿ ಸೂತ್ಯಾಮಭಿಜಾತಕೋವಿದಾಃ
ಸಮಾದಿಶನ್ವಿಪ್ರ ಮಹದ್ಗುಣಸ್ತಥಾ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಬ್ರಾಹ್ಮಣೋತ್ತಮ ರಾದ ಶೌನಕರೇ! ಪಾಂಡವರ ಮಹಾಪ್ರಸ್ಥಾನದ ಬಳಿಕ ಪರಮ ಭಾಗವತೋತ್ತಮನಾದ ಪರೀಕ್ಷಿದ್ರಾಜನು ಬ್ರಾಹ್ಮಣ ಶ್ರೇಷ್ಠರ ಉಪದೇಶದಂತೆ ಭೂಮಿಯನ್ನು ಆಳತೊಡಗಿದನು. ಆತನ ಜನ್ಮಸಮಯದಲ್ಲಿ ಜ್ಯೋತಿರ್ವಿದ್ವಾಂಸರು ಅವನ ಸಂಬಂಧವಾಗಿ ಹೇಳಿದ್ದ ಶ್ರೇಷ್ಠ ಗುಣಗಳೆಲ್ಲವೂ ಅವನಲ್ಲಿ ಪೂರ್ಣವಾಗಿ ಕಂಡು ಬಂದವು.॥1॥
ಮೂಲಮ್
(ಶ್ಲೋಕ - 2)
ಸ ಉತ್ತರಸ್ಯ ತನಯಾಮುಪಯೇಮ ಇರಾವತೀಮ್ ।
ಜನಮೇಜಯಾದೀಂಶ್ಚತುರಸ್ತಸ್ಯಾಮುತ್ಪಾದಯತ್ಸುತಾನ್ ॥
ಅನುವಾದ
ಅವನು ತನ್ನ ಸೋದರಮಾವನಾದ ಉತ್ತರನ ಪುತ್ರೀ ‘ಇರಾವತಿ’ ಎಂಬು ವಳೊಡನೆ ವಿವಾಹವಾದನು. ಆಕೆಯಲ್ಲಿ ಜನಮೇಜಯನೇ ಮೊದಲಾದ ನಾಲ್ಕು ಪುತ್ರರನ್ನು ಪಡೆದನು.॥2॥
(ಶ್ಲೋಕ - 3)
ಮೂಲಮ್
ಆಜಹಾರಾಶ್ವಮೇಧಾಂಸೀನ್ ಗಂಗಾಯಾಂ ಭೂರಿದಕ್ಷಿಣಾನ್ ।
ಶಾರದ್ವತಂ ಗುರುಂ ಕೃತ್ವಾ ದೇವಾ ಯತ್ರಾಕ್ಷಿಗೋಚರಾಃ ॥
ಅನುವಾದ
ಕೃಪಾಚಾರ್ಯರನ್ನು ಆಚಾರ್ಯನನ್ನಾಗಿಸಿಕೊಂಡು ಗಂಗಾ ತೀರದಲ್ಲಿ ಮೂರು ಅಶ್ವಮೇಧಯಜ್ಞಗಳನ್ನು ಮಾಡಿದನು. ಆ ಎಲ್ಲ ಯಜ್ಞಗಳಲ್ಲಿಯೂ ಬ್ರಾಹ್ಮಣರಿಗೆ ಹೇರಳವಾಗಿ ದಕ್ಷಿಣೆ ಕೊಡಲಾಯಿತು. ಆ ಯಾಗಗಳಲ್ಲಿ ದೇವತೆಗಳು ಪ್ರತ್ಯಕ್ಷವಾಗಿ ಬಂದು ತಮ್ಮ-ತಮ್ಮ ಹವಿರ್ಭಾಗಗಳನ್ನು ಸ್ವೀಕರಿಸುತ್ತಿದ್ದರು.॥3॥
(ಶ್ಲೋಕ - 4)
ಮೂಲಮ್
ನಿಜಗ್ರಾಹೌಜಸಾ ವೀರಃ ಕಲಿಂ ದಿಗ್ವಿಜಯೇ ಕ್ವಚಿತ್ ।
ನೃಪಲಿಂಗಧರಂ ಶೂದ್ರಂ ಘ್ನಂತಂ ಗೋಮಿಥುನಂ ಪದಾ ॥
ಅನುವಾದ
ಒಮ್ಮೆ ಅವನು ದಿಗ್ವಿಜಯ ಮಾಡುತ್ತಿದ್ದಾಗ ಒಂದೆಡೆಯಲ್ಲಿ ಶೂದ್ರನ ರೂಪದಲ್ಲಿ ಕಲಿಯುಗವು ರಾಜವೇಷವನ್ನು ತೊಟ್ಟು ಒಂದು ಗೋವು ಮತ್ತು ಒಂದು ಎತ್ತು ಈ ಜೋಡಿಯನ್ನು ಕಾಲಿನಿಂದ ಒದೆಯುತ್ತಿರುವುದನ್ನು ನೋಡಿದನು. ಆಗ ಪರೀಕ್ಷಿತನು ಅವನನ್ನು ಪರಾಕ್ರಮದಿಂದ ನಿಗ್ರಹಿಸಿದನು.॥4॥
(ಶ್ಲೋಕ - 5)
ಮೂಲಮ್ (ವಾಚನಮ್)
ಶೌನಕ ಉವಾಚ
ಮೂಲಮ್
ಕಸ್ಯ ಹೇತೋರ್ನಿಜಗ್ರಾಹ ಕಲಿಂ ದಿಗ್ವಿಜಯೇ ನೃಪಃ ।
ನೃದೇವಚಿಹ್ನಧೃಕ್ಶೂದ್ರಃಕೋಸೌ ಗಾಂ ಯಃ ಪದಾಹನತ್ ॥
(ಶ್ಲೋಕ - 6)
ಮೂಲಮ್
ತತ್ಕಥ್ಯತಾಂ ಮಹಾಭಾಗ ಯದಿ ಕೃಷ್ಣಕಥಾಶ್ರಯಮ್ ।
ಅಥವಾಸ್ಯ ಪದಾಂಭೋಜಮಕರಂದಲಿಹಾಂ ಸತಾಮ್ ।
ಕಿಮನ್ಯೈರಸದಾಲಾಪೈರಾಯುಷೋ ಯದಸದ್ವ್ಯಯಃ ॥
ಅನುವಾದ
ಶೌನಕರು ಕೇಳಿದರು — ಸೂತಪುರಾಣಿಕರೇ! ‘ಪರೀಕ್ಷಿದ್ರಾಜನು ದಿಗ್ವಿಜಯದ ಸಮಯದಲ್ಲಿ ಕಲಿಪುರುಷ ನನ್ನು ಶಿಕ್ಷಿಸಿ, ಏಕೆ ಬಿಟ್ಟುಬಿಟ್ಟನು? ಕೊಲ್ಲಲಿಲ್ಲವೇಕೆ? ಏಕೆಂದರೆ, ಗೋವನ್ನು ಕಾಲಿನಿಂದ ಒದ್ದವನು ರಾಜನವೇಷ ತೊಟ್ಟುಕೊಂಡಿದ್ದರೂ ಅವನು ಅಧಮನಾದ ಶೂದ್ರನೇ ಆಗಿದ್ದನು. ಈ ಪ್ರಸಂಗವು ಭಗವಾನ್ ಶ್ರೀಕೃಷ್ಣನ ಲೀಲೆಗಳಿಗೆ ಸಂಬಂಧಪಟ್ಟಿದ್ದರೆ, ಅಥವಾ ಭಗವಂತನ ಚರಣಕಮಲಗಳ ಮಕರಂದವನ್ನು ಪಾನಮಾಡುವ ರಸಿಕಮಹಾನುಭಾವರೊಂದಿಗೆ ಸಂಬಂಧ ಇರುವುದಾದರೆ ಅವಶ್ಯವಾಗಿ ಹೇಳಿರಿ. ಬೇರೆ ವ್ಯರ್ಥವಾದ ಮಾತುಗಳಿಂದೇನಾಗಬೇಕು? ಅದರಲ್ಲಿ ಆಯುಸ್ಸು ವ್ಯರ್ಥವಾಗಿ ನಷ್ಟವಾಗುತ್ತದೆ.॥5-6॥
(ಶ್ಲೋಕ - 7)
ಮೂಲಮ್
ಕ್ಷುದ್ರಾಯುಷಾಂ ನೃಣಾಮಂಗ ಮರ್ತ್ಯಾನಾಮೃತಮಿಚ್ಛತಾಮ್ ।
ಇಹೋಪಹೂತೋ ಭಗಾವಾನ್ಮೃತ್ಯುಃ ಶಾಮಿತ್ರಕರ್ಮಣಿ ॥
ಅನುವಾದ
ಪೂಜ್ಯ ಸೂತರೇ! ಕೆಲವರಿಗೆ ಮೋಕ್ಷವನ್ನು ಪಡೆಯುವ ಇಚ್ಛೆ ಇದ್ದರೂ, ಅವರು ಅಲ್ಪಾಯುಸ್ಸುಳ್ಳವರಾಗಿ ಕಾಲನಿಗೆ ತುತ್ತಾ ಗುತ್ತಾರೆ. ಅಂತಹವರ ಶ್ರೇಯಸ್ಸಿಗಾಗಿಯೇ ಋತ್ವಿಜರು ಭಗವಾನ್ ಯಮದೇವರನ್ನು ಇಲ್ಲಿಗೆ ಆಹ್ವಾನಿಸಿ, ಶಾಮಿತ್ರ ಕರ್ಮದಲ್ಲಿ ನೇಮಿಸಿ ಬಿಟ್ಟಿದ್ದಾರೆ.॥7॥
(ಶ್ಲೋಕ - 8)
ಮೂಲಮ್
ನ ಕಶ್ಚಿನ್ಮ್ರಿಯತೇ ತಾವದ್ಯಾವದಾಸ್ತ ಇಹಾಂತಕಃ ।
ಏತದರ್ಥಂ ಹಿ ಭಗವಾನಾಹೂತಃ ಪರಮರ್ಷಿಭಿಃ ।
ಅಹೋ ನೃಲೋಕೇ ಪೀಯೇತ ಹರಿಲೀಲಾಮೃತಂ ವಚಃ ॥
ಅನುವಾದ
ಯಮರಾಜನು ಇಲ್ಲಿ ಈ ಕರ್ಮದಲ್ಲಿ ನಿಯುಕ್ತನಾಗಿರುವವರೆಗೆ ಯಾರ ಮೃತ್ಯುವೂ ಆಗಲಾರದು. ಮೃತ್ಯುವಿನಿಂದ ಗ್ರಸ್ತರಾದ ಮರ್ತ್ಯಲೋಕದ ಜೀವಿಗಳೂ ಕೂಡ ಭಗವಂತನ ಅಮೃತ ತುಲ್ಯ ಲೀಲಾ-ಕಥೆಗಳನ್ನು ಪಾನಮಾಡಬಹುದು ಎಂದು ಮಹರ್ಷಿಗಳು ಭಗವಾನ್ ಯಮನನ್ನು ಇಲ್ಲಿ ಕರೆಸಿದ್ದಾರೆ.॥8॥
(ಶ್ಲೋಕ - 9)
ಮೂಲಮ್
ಮಂದಸ್ಯ ಮಂದಪ್ರಜ್ಞಸ್ಯ ವಯೋ ಮಂದಾಯುಷಶ್ಚ ವೈ ।
ನಿದ್ರಯಾ ಹ್ರೀಯತೇ ನಕ್ತಂ ದಿವಾ ಚ ವ್ಯರ್ಥಕರ್ಮಭಿಃ ॥
ಅನುವಾದ
ಈ ಯುಗದಲ್ಲಿ ಮನುಷ್ಯರಿಗೆ ಆಯುಸ್ಸು ಕಡಿಮೆ, ಜೊತೆಗೆ ತಿಳಿವಳಿಕೆಯೂ ಅಲ್ಪವೇ. ಇಂತಹ ಸ್ಥಿತಿಯಲ್ಲಿ ಜಗತ್ತಿನ ಮಂದಭಾಗ್ಯರಾದ ವಿಷಯೀ ಜನರ ಆಯುಸ್ಸು ನಿದ್ದೆಯಲ್ಲಿ ರಾತ್ರಿಯು, ವ್ಯರ್ಥಕರ್ಮಗಳಲ್ಲಿ ಹಗಲು ಹೀಗೆ ವ್ಯರ್ಥವಾಗಿಯೇ ಕಳೆದುಹೋಗುತ್ತಿದೆ.॥9॥
(ಶ್ಲೋಕ - 10)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಯದಾ ಪರೀಕ್ಷಿತ್ಕುರುಜಾಂಗಲೇವಸತ್
ಕಲಿಂ ಪ್ರವಿಷ್ಟಂ ನಿಜಚಕ್ರವರ್ತಿತೇ ।
ನಿಶಮ್ಯ ವಾರ್ತಾಮನತಿಪ್ರಿಯಾಂ ತತಃ
ಶರಾಸನಂ ಸಂಯುಗಶೌಂಡಿರಾದದೇ ॥
ಅನುವಾದ
ಸೂತಪುರಾಣಿಕರು ಹೇಳಿದರು — ಶೌನಕರೇ! ರಾಜಾಪರೀಕ್ಷಿತನು ಕುರುಜಾಂಗಲ ದೇಶದಲ್ಲಿ ಚಕ್ರವರ್ತಿಯಾಗಿದ್ದಾಗ ತನ್ನ ಚಕ್ರಾಧಿಪತ್ಯಕ್ಕೆ ಒಳಪಟ್ಟ ದೇಶದಲ್ಲಿ ಕಲಿ ಪುರುಷನು ಪ್ರವೇಶಿಸಿರುವನೆಂದು ಕೇಳಿದನು. ಆ ಅಪ್ರಿಯ ಸಮಾಚಾರವನ್ನು ಕೇಳಿ ಆತನಿಗೆ ದುಃಖವಾಯಿತಾದರೂ, ಆ ದುಷ್ಟನಾದ ಕಲಿಯೊಡನೆ ಯುದ್ಧ ಮಾಡಿ ಅವನನ್ನು ನಿಗ್ರಹಿಸುವ ಅವಕಾಶ ಸಿಕ್ಕಿತಲ್ಲ ಎಂದು ಸಮಾಧಾನಪಟ್ಟು, ಆ ಯುದ್ಧವೀರನು ಕೈಯಲ್ಲಿ ಧನುಸ್ಸನ್ನೆತ್ತಿಕೊಂಡನು.॥10॥
(ಶ್ಲೋಕ - 11)
ಮೂಲಮ್
ಸ್ವಲಂಕೃತಂ ಶ್ಯಾಮತುರಂಗಯೋಜಿತಂ
ರಥಂ ಮೃಗೇಂದ್ರಧ್ವಜಮಾಶ್ರಿತಃ ಪುರಾತ್ ।
ವೃತೋ ರಥಾಶ್ವದ್ವಿಪಪತ್ತಿಯುಕ್ತಯಾ
ಸ್ವಸೇನಯಾ ದಿಗ್ವಿಜಯಾಯ ನಿರ್ಗತಃ ॥
ಅನುವಾದ
ಚೆನ್ನಾಗಿ ಸಿಂಗರಿಸಲ್ಪಟ್ಟಿದ್ದ, ಸಿಂಹಧ್ವಜದಿಂದ ಕೂಡಿದ ಶ್ಯಾಮಲ ವರ್ಣದ ಕುದುರೆಗಳನ್ನು ಹೂಡಿದ್ದ ರಥವನ್ನೇರಿ, ರಥಾಶ್ವ ಗಜಪದಾತಿಗಳೆಂಬ ಚತುರಂಗಬಲವನ್ನು ಕೂಡಿಕೊಂಡು ದಿಗ್ವಿಜಯಕ್ಕಾಗಿ ನಗರದಿಂದ ಹೊರವಂಟನು.॥11॥
(ಶ್ಲೋಕ - 12)
ಮೂಲಮ್
ಭದ್ರಾಶ್ವಂ ಕೇತುಮಾಲಂ ಚ ಭಾರತಂ ಚೋತ್ತರಾನ್ ಕುರೂನ್ ।
ಕಿಂಪುರುಷಾದೀನಿ ವರ್ಷಾಣಿ ವಿಜಿತ್ಯ ಜಗೃಹೇ ಬಲಿಮ್ ॥
ಅನುವಾದ
ಅವನು ಭದ್ರಾಶ್ವ ಕೇತುಮಾಲ, ಭಾರತ, ಉತ್ತರ ಕುರು, ಕಿಂಪುರುಷವರ್ಷ ಮುಂತಾದ ಪ್ರದೇಶಗಳನ್ನೆಲ್ಲ ಜಯಿಸಿ, ಅಲ್ಲಿಯ ರಾಜರಿಂದ ಕಪ್ಪ-ಕಾಣಿಕೆಗಳನ್ನು ಪಡೆದುಕೊಂಡನು. ॥12॥
(ಶ್ಲೋಕ - 13)
ಮೂಲಮ್
ತತ್ರ ತತ್ರೋಪಶೃಣ್ವಾನಃ ಸ್ವಪೂರ್ವೇಷಾಂ ಮಹಾತ್ಮನಾಮ್ ।
ಪ್ರಗೀಯಮಾಣಂ ಚ ಯಶಃ ಕೃಷ್ಣಮಾಹಾತ್ಮ್ಯಸೂಚಕಮ್ ॥
ಅನುವಾದ
ಆ ದೇಶಗಳಲ್ಲಿ ಸಂಚರಿಸುತ್ತಿದ್ದಾಗ ಎಲ್ಲೆಡೆಗಳಲ್ಲಿಯೂ ಅವನಿಗೆ ತನ್ನ ವಂಶದ ಪೂರ್ವಜರಾದ ಮಹಾಪುರುಷರ ಕೀರ್ತಿಯು ಕಿವಿಗೆ ಬೀಳುತ್ತಿತ್ತು. ಅಲ್ಲದೆ ಆ ಕೀರ್ತಿಗಾನದಿಂದ ಪದೇ-ಪದೇ ಭಗವಾನ್ ಶ್ರೀಕೃಷ್ಣನ ಮಹಿಮೆಯೂ ಪ್ರಕಟವಾಗುತಿತ್ತು.॥13॥
(ಶ್ಲೋಕ - 14)
ಮೂಲಮ್
ಆತ್ಮಾನಂ ಚ ಪರಿತ್ರಾತಮಶ್ವತ್ಥಾಮ್ನೋಸ ತೇಜಸಃ ।
ಸ್ನೇಹಂ ಚ ವೃಷ್ಣಿ ಪಾರ್ಥಾನಾಂ ತೇಷಾಂ ಭಕ್ತಿಂ ಚ ಕೇಶವೇ ॥
ಅನುವಾದ
ಇದರೊಂದಿಗೆ ಅಶ್ವತ್ಥಾಮನು ಪ್ರಯೋಗಿಸಿದ ಬ್ರಹ್ಮಾಸ್ತ್ರ ತೇಜಸ್ಸಿನಿಂದ ಭಗವಾನ್ ಶ್ರೀಕೃಷ್ಣನು ತನ್ನನ್ನು ಕಾಪಾಡಿದ ವೃತ್ತಾಂತ, ಪಾಂಡವರಿಗೆ ಭಗವಾನ್ ಶ್ರೀಕೃಷ್ಣನಲ್ಲಿದ್ದ ಭಕ್ತಿ ಮತ್ತು ಯಾದವರಿಗೂ ಪಾಂಡವರಿಗೂ ಇದ್ದ ಸ್ನೇಹಸಂಬಂಧ ಇವುಗಳ ಸಮಾಚಾರವು ಕಿವಿಗೆ ಬೀಳುತ್ತಿತ್ತು.॥14॥
(ಶ್ಲೋಕ - 15)
ಮೂಲಮ್
ತೇಭ್ಯಃ ಪರಮಸಂತುಷ್ಟಃ ಪ್ರೀತ್ಯುಜ್ಜೃಂಭಿತಲೋಚನಃ ।
ಮಹಾಧನಾನಿ ವಾಸಾಂಸಿ ದದೌ ಹಾರಾನ್ಮಹಾಮನಾಃ ॥
ಅನುವಾದ
ಅಂತಹ ಚರಿತ್ರವನ್ನು ತನಗೆ ಹೇಳುತ್ತಿದ್ದ ಜನರ ವಿಷಯದಲ್ಲಿ ಅವನಿಗೆ ತುಂಬಾ ಪ್ರಸನ್ನತೆ ಉಂಟಾಗಿ, ಕಣ್ಣುಗಳು ಪ್ರೇಮದಿಂದ ಅರಳುತ್ತಿದ್ದವು. ಪರಮೋದಾರಿಯಾದ ಅವನು ಅವರಿಗೆ ಬಹುಮೂಲ್ಯವಾದ ವಸ್ತ್ರ-ರತ್ನಹಾರಗಳನ್ನು ಬಹುಮಾನವಾಗಿ ನೀಡುತ್ತಿದ್ದನು. ॥15॥
(ಶ್ಲೋಕ - 16)
ಮೂಲಮ್
ಸಾರಥ್ಯ ಪಾರಷದಸೇವನಸಖ್ಯ ದೌತ್ಯ-
ವೀರಾಸನಾನುಗಮನಸ್ತವನಪ್ರಣಾಮಾನ್ ।
ಸ್ನಿಗ್ಧೇಷು ಪಾಂಡುಷು ಜಗತ್ಪ್ರಣತಿಂ ಚ ವಿಷ್ಣೋ-
ರ್ಭಕ್ತಿಂ ಕರೋತಿ ನೃಪತಿಶ್ಚರಣಾರವಿಂದೇ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಪ್ರೇಮ ಪರವಶನಾಗಿ ಪಾಂಡವರಿಗೆ ಸಾರಥ್ಯವನ್ನು ಮಾಡಿದ, ಅವರ ಸಭಾಸದನಾದ, ಇಷ್ಟಾನುಸಾರವಾಗಿ ಅವರ ಇತರ ಸೇವೆಗಳನ್ನೂ ಮಾಡಿದ, ಸ್ನೇಹಿತನಾಗಿದ್ದುದಲ್ಲದೆ ದೂತನ ಕೆಲಸವನ್ನು ಮಾಡಿದನು. ವೀರಾಸನದಲ್ಲಿ ಕುಳಿತಿದ್ದು ಖಡ್ಗಧಾರಿಯಾಗಿ ಕಾವಲು ಕಾಯುತ್ತಿದ್ದ, ಅನುಸರಣೆಮಾಡಿ ಹೊಗಳುತ್ತಿದ್ದ, ನಮಸ್ಕರಿಸುತ್ತಿದ್ದ, ಆ ಪ್ರಿಯತಮರಾದ ಪಾಂಡವರಿಗೆ ಇಡೀ ಜಗತ್ತೇ ತಲೆಬಾಗುವಂತೆ ಮಾಡಿದ ಇವೇ ಮುಂತಾದ ವಿಷಯಗಳನ್ನು ಕೇಳಿ, ಆತನಿಗೆ ಭಗವಾನ್ ಶ್ರೀಕೃಷ್ಣನ ಚರಣಕಮಲಗಳಲ್ಲಿ ಭಕ್ತಿಯು ಇನ್ನೂ ಹೆಚ್ಚುತ್ತಿತ್ತು. ॥16॥
(ಶ್ಲೋಕ - 17)
ಮೂಲಮ್
ತಸ್ಯೈವಂ ವರ್ತಮಾನಸ್ಯ ಪೂರ್ವೇಷಾಂ ವೃತ್ತಿಮನ್ವಹಮ್ ।
ನಾತಿದೂರೇ ಕಿಲಾಶ್ಚರ್ಯಂ ಯದಾಸೀತ್ತನ್ನಿಬೋಧ ಮೇ ॥
ಅನುವಾದ
ಹೀಗೆ ಅವನು ಪ್ರತಿದಿನವೂ ಪಾಂಡವರ ಆಚರಣೆಗಳನ್ನು ಅನುಸರಿಸುತ್ತಾ ದಿಗ್ವಿಜಯ ಮಾಡುತ್ತಿದ್ದನು. ಆಗಲೇ ಒಂದುದಿನ ಅವನ ಶಿಬಿರದಿಂದ ಸ್ವಲ್ಪ ದೂರದಲ್ಲಿಯೇ ಒಂದು ಆಶ್ಚರ್ಯಕರವಾದ ಘಟನೆಯು ನಡೆಯಿತು. ಅದನ್ನು ನಾನು ನಿಮಗೆ ಹೇಳುತ್ತೇನೆ.॥17॥
(ಶ್ಲೋಕ - 18)
ಮೂಲಮ್
ಧರ್ಮಃ ಪದೈಕೇನ ಚರನ್ವಿಚ್ಛಾಯಾಮುಪಲಭ್ಯ ಗಾಮ್ ।
ಪೃಚ್ಛತಿ ಸ್ಮಾಶ್ರುವದನಾಂ ವಿವತ್ಸಾಮಿವ ಮಾತರಮ್ ॥
ಅನುವಾದ
ಧರ್ಮವು ಒಂದು ವೃಷಭ ರೂಪವನ್ನು ಧರಿಸಿ ಒಂಟಿಕಾಲಿನಿಂದ ಸಂಚರಿಸುತ್ತಿತ್ತು. ದಾರಿಯಲ್ಲಿ ಅದಕ್ಕೆ ಧೇನುವಿನ ರೂಪವನ್ನು ತಾಳಿದ್ದ ಭೂದೇವಿಯ ಭೇಟಿಯಾಯಿತು. ಆ ಧೇನುವು ಮಗು ವನ್ನು ಕಳಕೊಂಡ ತಾಯಿಯಂತೆ ಕಣ್ಣೀರಿಡುತ್ತಾ ಕಳೆಗುಂದಿ ಕಳವಳಗೊಳ್ಳುತ್ತಿರುವುದನ್ನು ಕಂಡು ಧರ್ಮ ವೃಷಭವು ಆಕೆಯನ್ನು ಕೇಳತೊಡಗಿತು.॥18॥
(ಶ್ಲೋಕ - 19)
ಮೂಲಮ್ (ವಾಚನಮ್)
ಧರ್ಮ ಉವಾಚ
ಮೂಲಮ್
ಕಚ್ಚಿದ್ಭದ್ರೇನಾಮಯಮಾತ್ಮನಸ್ತೇ
ವಿಚ್ಛಾಯಾಸಿ ಮ್ಲಾಯತೇಷನ್ಮುಖೇನ ।
ಆಲಕ್ಷಯೇ ಭವತೀಮಂತರಾಂ
ದೂರೇ ಬಂಧುಂ ಶೋಚಸಿ ಕಂಚನಾಂಬ ॥
ಅನುವಾದ
ಧರ್ಮವು ಹೇಳಿತು ಮಂಗಳಾಂಗಿಯೇ! ನಿನ್ನ ಮುಖವು ಸ್ವಲ್ಪ ಮಲಿನವಾಗಿರುವಂತೆ ಕಾಣುತ್ತಿದ್ದು, ನೀನು ಕಳೆಗುಂದಿರುವೆ. ನಿನಗೆ ಯಾವುದೋ ದುಃಖವಿರಬೇಕೆಂದು ತೋರುತ್ತದೆ. ನಿನ್ನ ನೆಂಟರಿಷ್ಟರು ಯಾರಾದರೂ ದೂರ ದೇಶಕ್ಕೆ ಹೋಗಿದ್ದು, ಅವರ ಬಗೆಗೆ ಚಿಂತಿಸುತ್ತಿದ್ದೀಯೇನಮ್ಮಾ? ॥19॥
(ಶ್ಲೋಕ - 20)
ಮೂಲಮ್
ಪಾದೈರ್ನ್ಯೂನಂ ಶೋಚಸಿ ಮೈಕಪಾದ-
ಮಾತ್ಮಾನಂ ವಾ ವೃಷಲೈರ್ಭೋಕ್ಷ್ಯಮಾಣಮ್ ।
ಆಹೋ ಸುರಾದೀನ್ಹೃತಯಜ್ಞ ಭಾಗಾನ್
ಪ್ರಜಾ ಉತಸ್ವಿನ್ಮಘವತ್ಯವರ್ಷತಿ ॥
ಅನುವಾದ
‘ಈತನಿಗೆ ಮೂರು ಕಾಲುಗಳು ಮುರಿದುಹೋಗಿ ಒಂಟಿಕಾಲಿನಿಂದ ನಡೆಯುವ ಸ್ಥಿತಿ ಬಂದಿದೆಯಲ್ಲ’ ಎಂದು ನನ್ನ ಬಗೆಗೇನಾದರೂ ಚಿಂತಿಸುತ್ತಿಲ್ಲವಲ್ಲ! ಅಥವಾ ‘ಧರ್ಮ ನಾಶಕರು ನನ್ನನ್ನು ಆಳುತ್ತಿದ್ದಾರಲ್ಲ!’ ಎಂದು ನಿನ್ನ ಕುರಿತು ದುಃಖಪಡುತ್ತಿದ್ದೀಯಾ? ‘ದೇವತೆಗಳಿಗೆ ಯಜ್ಞದ ಹವಿರ್ಭಾಗಗಳು ದೊರಕುತ್ತಿಲ್ಲ’ ಎಂದು ಅವರ ಬಗೆಗೆ ಶೋಕವೇ? ಅಥವಾ ಸಕಾಲದಲ್ಲಿ ಮಳೆ-ಬೆಳೆಗಳಿಲ್ಲದೆ ಕಷ್ಟ ಪಡುತ್ತಿರುವ ಪ್ರಜೆಗಳ ಕುರಿತು ದುಃಖಪಡುತ್ತಿರುವೆಯಾ? ॥20॥
(ಶ್ಲೋಕ - 21)
ಮೂಲಮ್
ಅರಕ್ಷ್ಯಮಾಣಾಃ ಸಿಯ ಉರ್ವಿ ಬಾಲಾನ್
ಶೋಚಸ್ಯಥೋ ಪುರುಷಾದೈರಿವಾರ್ತಾನ್ ।
ವಾಚಂ ದೇವೀಂ ಬ್ರಹ್ಮಕುಲೇ ಕುಕರ್ಮ-
ಣ್ಯಬ್ರಹ್ಮಣ್ಯೇ ರಾಜಕುಲೇ ಕುಲಾಗ್ರ್ಯಾನ್ ॥
ಅನುವಾದ
ರಾಕ್ಷಸರಂತಿರುವ ದುಷ್ಟರಿಂದ ಪೀಡಿತರಾಗಿ ರಕ್ಷಣೆಯಿಲ್ಲದ ಹೆಂಗಸರ ಕುರಿತಾಗಲೀ, ಪೀಡೆಗೊಳಗಾಗಿರುವ ಬಾಲಕರ ವಿಷಯದಲ್ಲಾಗಲೀ ನಿನಗೆ ದುಃಖವಾಗುತ್ತಿದೆಯಾ? ವಿದ್ಯಾದೇವಿಯು ಕುಕರ್ಮಿಗಳಾದ ಬ್ರಾಹ್ಮಣರ ಕೈಗೆ ಸಿಕ್ಕಿ, ದುರವಸ್ಥೆಗೆ ಒಳಗಾಗಿರುವುದನ್ನೋ, ಅಥವಾ ಬ್ರಾಹ್ಮಣರು ಬ್ರಹ್ಮದ್ರೋಹಿಗಳಾದ ರಾಜರನ್ನು ಸೇವಿಸುತ್ತಿರುವುದನ್ನೋ ನೋಡಿ ನೀನು ಕಳವಳಪಡುತ್ತಿರುವೆಯಾ? ॥21॥
(ಶ್ಲೋಕ - 22)
ಮೂಲಮ್
ಕಿಂ ಕ್ಷತ್ರಬಂಧೂನ್ಕಲಿನೋಪಸೃಷ್ಟಾನ್
ರಾಷ್ಟ್ರಾಣಿ ವಾ ತೈರವರೋಪಿತಾನಿ ।
ಇತಸ್ತತೋ ವಾಶನಪಾನವಾಸಃ
ಸ್ನಾನವ್ಯವಾಯೋನ್ಮುಖಜೀವಲೋಕಮ್ ॥
ಅನುವಾದ
‘ಈಗಿನ ಕಾಲದಲ್ಲಿ ರಾಜರು ಹೆಸರಿಗೆ ಮಾತ್ರ ರಾಜರಾಗಿದ್ದು ಕಲಿಯಿಂದ ಪ್ರಭಾವಿತರಾಗಿ ರಾಷ್ಟ್ರಗಳನ್ನು ನಾಶಪಡಿಸುತ್ತಿದ್ದಾರಲ್ಲ!’ ಎಂದು ಆ ಕ್ಷತ್ರಿಯಾಧಮರ ವಿಷಯದಲ್ಲಿ ನೀನು ಶೋಕಿಸುತ್ತಿರುವೆಯಾ? ಅಥವಾ ಕಂಡ-ಕಂಡಲ್ಲಿ ತಿನ್ನುವುದು, ಕುಡಿಯುವುದು, ಉಡುವುದು, ಸ್ನಾನಮಾಡುವುದು, ಭೋಗಿಸುವುದು ಮುಂತಾದವುಗಳಲ್ಲಿ ಶಾಸ್ತ್ರೀಯ ನಿಯಮಗಳನ್ನು ಪಾಲಿಸದೆ ಸ್ವೇಚ್ಛಾಚಾರಿಗಳಾದ ಜನರ ಕುರಿತು ಚಿಂತೆಪಡುತ್ತಿರುವೆಯಾ? ॥22॥
(ಶ್ಲೋಕ - 23)
ಮೂಲಮ್
ಯದ್ವಾಂಬ ತೇ ಭೂರಿಭರಾವತಾರ-
ಕೃತಾವತಾರಸ್ಯ ಹರೇರ್ಧರಿತ್ರಿ ।
ಅಂತರ್ಹಿತಸ್ಯ ಸ್ಮರತೀ ವಿಸೃಷ್ಟಾ
ಕರ್ಮಾಣಿ ನಿರ್ವಾಣವಿಲಂಬಿತಾನಿ ॥
ಅನುವಾದ
ಭೂದೇವಿಯೇ! ನಿನ್ನ ಮೇಲೆ ಬಿದ್ದಿರುವ ಅತ್ಯಧಿಕ ಅಧರ್ಮದ ಭಾರವನ್ನು ಇಳಿಸುವುದಕ್ಕಾಗಿ ಅವತರಿಸಿ ಈಗ ತನ್ನನ್ನು ಉಪಸಂಹಾರಮಾಡಿಕೊಂಡಿರುವ ಭಗವಾನ್ ಶ್ರೀಕೃಷ್ಣನ ಮೋಕ್ಷಾಲಂಬನವಾದ ದಿವ್ಯಲೀಲೆಗಳನ್ನು ನೆನೆಸಿಕೊಂಡು ‘ಅಂತಹ ಸ್ವಾಮಿಯು ಕಣ್ಮರೆಯಾದನಲ್ಲ!’ ಎಂದು ಶೋಕಿಸುತ್ತಿರುವೆಯಾ? ॥23॥
(ಶ್ಲೋಕ - 24)
ಮೂಲಮ್
ಇದಂ ಮಮಾಚಕ್ಷ್ವ ತವಾಮೂಲಂ
ವಸುಂಧರೇ ಯೇನ ವಿಕರ್ಶಿತಾಸಿ ।
ಕಾಲೇನ ವಾ ತೇ ಬಲಿನಾಂ ಬಲೀಯಸಾ
ಸುರಾರ್ಚಿತಂ ಕಿಂ ಹೃತಮಂಬ ಸೌಭಗಮ್ ॥
ಅನುವಾದ
ದೇವಿ! ನೀನಾದರೋ ಧನ-ರತ್ನಗಳ ಗಣಿಯಾಗಿರುವೆ. ಏತಕ್ಕೆ ಇಷ್ಟು ಕೃಶಳಾಗಿ ಕೊರಗುತ್ತಿದ್ದೀಯೇ? ಬಲಶಾಲಿಗಳಲ್ಲಿ ಅತ್ಯಂತ ಬಲಿಷ್ಠನಾದ ಕಾಲನು ದೇವತೆಗಳಿಗೂ ಪೂಜ್ಯಳಾಗಿರುವ ನಿನ್ನ ಸೌಭಾಗ್ಯವನ್ನು ಅಪಹರಿಸಿದ್ದಾನೆಯೇ? ನನಗೆ ತಿಳಿಸು.॥24॥
(ಶ್ಲೋಕ - 25)
ಮೂಲಮ್ (ವಾಚನಮ್)
ಧರಣ್ಯುವಾಚ
ಮೂಲಮ್
ಭವಾನ್ಹಿ ವೇದ ತತ್ಸರ್ವಂ ಯನ್ಮಾಂ ಧರ್ಮಾನುಪೃಚ್ಛಸಿ ।
ಚತುರ್ಭಿರ್ವರ್ತಸೇ ಯೇನ ಪಾದೈರ್ಲೋಕಸುಖಾವಹೈಃ ॥
(ಶ್ಲೋಕ - 26)
ಮೂಲಮ್
ಸತ್ಯಂ ಶೌಚಂ ದಯಾ ಕ್ಷಾಂತಿಸ್ತ್ಯಾಗಃ ಸಂತೋಷ ಆರ್ಜವಮ್ ।
ಶಮೋ ದಮಸ್ತಪಃ ಸಾಮ್ಯಂ ತಿತಿಕ್ಷೋಪರತಿಃ ಶ್ರುತಮ್ ॥
(ಶ್ಲೋಕ - 27)
ಮೂಲಮ್
ಜ್ಞಾನಂ ವಿರಕ್ತಿರೈಶ್ವರ್ಯಂ ಶೌರ್ಯಂ ತೇಜೋ ಬಲಂ ಸ್ಮೃತಿಃ ।
ಸ್ವಾತಂತ್ರ್ಯಂ ಕೌಶಲಂ ಕಾಂತಿರ್ಧೈರ್ಯಂ ಮಾರ್ದವಮೇವ ಚ ॥
(ಶ್ಲೋಕ - 28)
ಮೂಲಮ್
ಪ್ರಾಗಲ್ಭ್ಯಂ ಪ್ರಶ್ರಯಃ ಶೀಲಂ ಸಹ ಓಜೋ ಬಲಂ ಭಗಃ ।
ಗಾಂಭೀರ್ಯಂ ಸ್ಥೈರ್ಯಮಾಸ್ತಿಕ್ಯಂ ಕೀರ್ತಿರ್ಮಾನೋನಹಂಕೃತಿಃ ॥
(ಶ್ಲೋಕ - 29)
ಮೂಲಮ್
ಏತೇ ಚಾನ್ಯೇ ಚ ಭಗವನ್ನಿತ್ಯಾ ಯತ್ರ ಮಹಾಗುಣಾಃ ।
ಪ್ರಾರ್ಥ್ಯಾ ಮಹತ್ತ್ವ ಮಿಚ್ಛದ್ಭಿರ್ನ ವಿಯಂತಿ ಸ್ಮ ಕರ್ಹಿಚಿತ್ ॥
(ಶ್ಲೋಕ - 30)
ಮೂಲಮ್
ತೇನಾಹಂ ಗುಣಪಾತ್ರೇಣ ಶ್ರೀನಿವಾಸೇನ ಸಾಂಪ್ರತಮ್ ।
ಶೋಚಾಮಿ ರಹಿತಂ ಲೋಕಂ ಪಾಪ್ಮನಾ ಕಲಿನೇಕ್ಷಿತಮ್ ॥
ಅನುವಾದ
ಪೃಥ್ವಿಯು ಹೇಳತೊಡಗಿದಳು ಧರ್ಮದೇವನೇ! ನೀನು ನನ್ನಲ್ಲಿ ಕೇಳಿರುವ ಎಲ್ಲ ಪ್ರಶ್ನೆಗಳ ಉತ್ತರಗಳು ನಿನಗೆ ತಿಳಿದೇ ಇದೆ. ಯಾರ ಅವಲಂಬನೆಯಿಂದ ನೀನು ಲೋಕಗಳಿಗೆ ಸುಖವನ್ನುಂಟುಮಾಡುವ ನಿನ್ನ ನಾಲ್ಕು ಚರಣಗಳಿಂದಲೂ ನಡೆಯುತ್ತಿದ್ದೆಯೋ, ಅಂತಹ ಭಗವಂತನ ಅವತಾರವು ಸಮಾಪ್ತಿಯಾಯಿತಲ್ಲಾ! ಎಂದು ಶೋಕ ಪಡುತ್ತಿದ್ದೇನೆ. ಸತ್ಯ, ಶುಚಿತ್ವ, ದಯೆ, ಕ್ಷಮೆ, ತ್ಯಾಗ, ಸಂತೋಷ, ಸರಳತೆ, ಒಳ-ಹೊರ ಇಂದ್ರಿಯಗಳ ನಿಗ್ರಹ, ತಪಸ್ಸು, ಸಮತೆ, ಸೈರಣೆ, ಉಪರತಿ, ಶಾಸ್ತ್ರವಿಚಾರ, ಜ್ಞಾನ, ವೈರಾಗ್ಯ, ಐಶ್ವರ್ಯ, ಪರಾಕ್ರಮ, ತೇಜಸ್ಸು, ಬಲ, ಸ್ಮೃತಿ, ಸ್ವಾತಂತ್ರ್ಯ ಕೌಶಲ, ಕಾಂತಿ, ಧೈರ್ಯ, ಕೋಮಲತೆ, ನಿರ್ಭಯತ್ವ, ವಿನಯ, ಶೀಲ, ಸಾಹಸ, ಉತ್ಸಾಹ, ಬಲ, ಸೌಭಾಗ್ಯ ಗಾಂಭೀರ್ಯ, ಸ್ಥಿರತ್ವ, ಆಸ್ತಿಕತೆ, ಕೀರ್ತಿ, ಗೌರವ, ನಿರಹಂಕಾರತೆ ಮುಂತಾದ ಈ ಮೂವತ್ತೊಂಭತ್ತು ಅಪ್ರಾಕೃತ ಗುಣಗಳು ಹಾಗೂ ಮಹತ್ವಾಕಾಂಕ್ಷೀ ಮಹಾಪುರುಷರು ಅಪೇಕ್ಷಿಸುವ (ಶರಣಾಗತ ವತ್ಸಲತೆ) ದಿವ್ಯಗುಣಗಳು ಮತ್ತು ಇನ್ನೂ ಅನಂತಕಲ್ಯಾಣಗುಣಗಳು ಕೊಂಚವೂ ಕ್ಷೀಣಿಸದೇ ಯಾವನಲ್ಲಿ ಸದಾ ನೆಲೆಗೊಂಡಿರುವೆಯೋ, ಅಂತಹ ಶ್ರೀನಿವಾಸನಾದ ಶ್ರೀಕೃಷ್ಣನು ತನ್ನ ಲೀಲೆಯನ್ನು ಉಪಸಂಹಾರ ಮಾಡಿಕೊಂಡುಬಿಟ್ಟನಲ್ಲ! ಹಾಗೂ ಈ ಜಗತ್ತು ಪಾಪಮಯನಾದ ಕಲಿಯ ಕೆಟ್ಟದೃಷ್ಟಿಗೆ ಲಕ್ಷ್ಯವಾಗಿ ಬಿಟ್ಟಿತಲ್ಲ! ಎಂದು ನಾನು ಶೋಕಗ್ರಸ್ತಳಾಗಿದ್ದೇನೆ. ॥25-30॥
ಮೂಲಮ್
(ಶ್ಲೋಕ - 31)
ಆತ್ಮಾನಂ ಚಾನುಶೋಚಾಮಿ ಭವಂತಂ ಚಾಮರೋತ್ತಮಮ್ ।
ದೇವಾನ್ ಪಿತೃನೃಷೀನ್ ಸಾಧೂನ್ ಸರ್ವಾನ್ ವರ್ಣಾಂಸ್ತಥಾಶ್ರಮಾನ್ ॥
ಅನುವಾದ
ಹಾಗೆಯೇ ಶೋಚನೀಯ ಸ್ಥಿತಿಯಲ್ಲಿರುವ ನನ್ನ ಕುರಿತು, ದೇವಶ್ರೇಷ್ಠನಾದ ನಿನ್ನ ಕುರಿತು, ಆಶ್ರಯಹೀನರಾದ ದೇವತೆಗಳ ಕುರಿತೂ, ಪಿತೃಗಳೂ, ಋಷಿಗಳೂ, ಸಾಧು-ಸಜ್ಜನರೂ, ಎಲ್ಲ ವರ್ಣಗಳೂ, ಆಶ್ರಮಗಳೂ ಇವುಗಳ ಕುರಿತಾಗಿಯೂ ದುಃಖಪಡುತ್ತಿದ್ದೇನೆ.॥31॥
(ಶ್ಲೋಕ - 32)
ಮೂಲಮ್
ಬ್ರಹ್ಮಾದಯೋ ಬಹುತಿಥಂ ಯದಪಾಂಗಮೋಕ್ಷ-
ಕಾಮಾಸ್ತಪಃ ಸಮಚರನ್ಭಗವತ್ಪ್ರಪನ್ನಾಃ ।
ಸಾ ಶ್ರೀಃ ಸ್ವವಾಸಮರವಿಂದವನಂ ವಿಹಾಯ
ಯತ್ಪಾದಸೌಭಗಮಲಂ ಭಜತೇನುರಕ್ತಾ ॥
(ಶ್ಲೋಕ - 33)
ಮೂಲಮ್
ತಸ್ಯಾಹಮಬ್ಜ ಕುಲಿಶಾಂಕುಶಕೇತುಕೇತೈಃ
ಶ್ರೀಮತ್ಪದೈರ್ಭಗವತಃ ಸಮಲಂಕೃತಾಂಗೀ ।
ತ್ರೀನತ್ಯರೋಚ ಉಪಲಭ್ಯ ತತೋ ವಿಭೂತಿಂ
ಲೋಕಾನ್ಸ ಮಾಂ ವ್ಯಸೃಜದುತ್ಸ್ಮಯತೀಂ ತದಂತೇ ॥
ಅನುವಾದ
ಯಾರ ಕೃಪಾಕಟಾಕ್ಷವನ್ನು ಪಡೆಯುವುದಕ್ಕಾಗಿ ಬ್ರಹ್ಮನೇ ಮುಂತಾದ ದೇವತೆಗಳು ಭಗವಂತನಲ್ಲಿ ಶರಣಾಗಿ ಬಹುಕಾಲದವರೆಗೆ ತಪಸ್ಸನ್ನಾಚರಿಸುತ್ತಿದ್ದರೋ, ಅಂತಹ ಲಕ್ಷ್ಮೀದೇವಿಯೂ ತನ್ನ ನಿವಾಸಸ್ಥಾನವಾಗಿರುವ ಕಮಲವನ್ನು ಬಿಟ್ಟು ಪರಮಪ್ರೇಮದಿಂದ ಯಾರ ಚರಣ ಕಮಲಗಳ ಸೊಬಗನ್ನು ಸೇವಿಸುತ್ತಿರುವಳೋ, ಅಂತಹ ಭಗವಂತನ ಕಮಲ, ವಜ್ರಾಯುಧ, ಅಂಕುಶ, ಧ್ವಜಗಳೇ ಮುಂತಾದ ದಿವ್ಯ ಚಿಹ್ನೆಗಳಿಂದ ಕೂಡಿದ ಶ್ರೀಪಾದಪದ್ಮಗಳ ವಿನ್ಯಾಸದಿಂದ ಅಲಂಕೃತಳಾಗಿ ಮಹಾವೈಭವವನ್ನು ಪಡೆದು, ಮೂರು ಲೋಕಗಳನ್ನೂ ಮೀರಿಸಿದ ಕಾಂತಿಯಿಂದ ಗರ್ವಪಡುತ್ತಾ ಮೆರೆಯುತ್ತಿದ್ದ ನನ್ನನ್ನು ಆ ಭಗವಂತನು ಕೈಬಿಟ್ಟು ಹೋದನಲ್ಲ! ॥32-33॥
ಮೂಲಮ್
(ಶ್ಲೋಕ - 34)
ಯೋ ವೈ ಮಮಾತಿಭರಮಾಸುರವಂಶರಾಜ್ಞಾ-
ಮಕ್ಷೌಹಿಣೀಶತಮಪಾನುದದಾತ್ಮತಂತ್ರಃ ।
ತ್ವಾಂ ದುಃಸ್ಥಮೂನಪದಮಾತ್ಮ ನಿ ಪೌರುಷೇಣ
ಸಂಪಾದಯನ್ಯದುಷು ರಮ್ಯಮಬಿಭ್ರದಂಗಮ್ ॥
ಅನುವಾದ
ನೀನು ನಿನ್ನ ಮೂರು ಚರಣಗಳು ಊನವಾಗಿ ಹೋದದ್ದರಿಂದ ಮನಸ್ಸಿನಲ್ಲೇ ಬೇಯುತ್ತಿದ್ದೆ; ಆದ್ದರಿಂದ ತನ್ನ ಪುರುಷಾರ್ಥದಿಂದ ನಿನ್ನನ್ನು ತನ್ನೊಳಗೆಯೇ ಪುನಃ ಎಲ್ಲ ಅಂಗಗಳಿಂದ ಪೂರ್ಣ ಹಾಗೂ ಸ್ವಸ್ಥಮಾಡುವುದಕ್ಕಾಗಿ ಆ ಅತ್ಯಂತ ರಮಣೀಯ ಶ್ಯಾಮಸುಂದರ ವಿಗ್ರಹನು ಯದುವಂಶದಲ್ಲಿ ಅವತರಿಸಿ, ಸಾವಿರಾರು ಅಕ್ಷೌಹಿಣೀ ಸೇನೆಯ ರೂಪದಿಂದಿದ್ದ ಅಸುರವಂಶೀ ರಾಜರನ್ನು ನಾಶಮಾಡಿ ನನ್ನ ಭಾರೀ ದೊಡ್ಡ ಭಾರವನ್ನು ಇಳಿಸಿದನು. ಏಕೆಂದರೆ ಅವನು ಪರಮ ಸ್ವತಂತ್ರನಾಗಿದ್ದನು.॥34॥
(ಶ್ಲೋಕ - 35)
ಮೂಲಮ್
ಕಾ ವಾ ಸಹೇತ ವಿರಹಂ ಪುರುಷೋತ್ತಮಸ್ಯ
ಪ್ರೇಮಾವಲೋಕರುಚಿರಸ್ಮಿತವಲ್ಗುಜಲ್ಪೈಃ ।
ಸ್ಥೈರ್ಯಂ ಸಮಾನಮಹರನ್ಮಧುಮಾನಿನೀನಾಂ
ರೋಮೋತ್ಸವೋ ಮಮ ಯದಂಘ್ರಿವಿಟಂಕಿತಾಯಾಃ ॥
ಅನುವಾದ
ಅಂತಹ ಆ ಕೃಪಾಳು ದಯಾ ನಿಧಾನ ಭಗವಾನ್ ಪುರುಷೋತ್ತಮ ಶ್ಯಾಮಸುಂದರನ ವಿರಹವನ್ನು ಯಾರು ತಾನೇ ಸಹಿಸಬಲ್ಲನು? ಅವನು ನನ್ನ ಮೇಲೆ ನಡೆದಾಡುತ್ತಿದ್ದಾಗ ನನಗೆ ರೋಮಾಂಚವಾಗುತ್ತಿತ್ತು. ಅವನ ಚರಣಗಳ ದಿವ್ಯ ಚಿಹ್ನೆಗಳು ನನ್ನ ಮೇಲೆ ಅಂಕಿತವಾಗುವಾಗ ನಾನು ಅತ್ಯಂತ ಶೋಭಿತಳಾಗುತ್ತಿದ್ದೆ. ಈಗ ಅವನು ಇಲ್ಲದುದರಿಂದ ನನಗೆ ಬಹಳ ದುಃಖವಾಗುತ್ತಾ ಇದೆ. ಹೀಗೆಯೇ ದ್ವಾರಕೆಯಲ್ಲಿ ಹದಿನಾರು ಸಾವಿರಕ್ಕಿಂತಲೂ ಹೆಚ್ಚಾಗಿಯೇ ಇದ್ದ ಸ್ತ್ರೀಯರೆಲ್ಲರೂ ಶ್ರೀಕೃಷ್ಣನನ್ನು ತಮ್ಮ ಪ್ರೇಮಕಟಾಕ್ಷದಿಂದ, ರುಚಿರ ಹಾಸ್ಯಪೂರ್ಣ ದೃಷ್ಟಿಯಿಂದ ಮತ್ತು ಮಧುರ ಭಾಷಣದಿಂದ ಪ್ರಸನ್ನಗೊಳಿಸುತ್ತಿದ್ದರು. ಭಗವಂತನೂ ಕೂಡ ಅವರನ್ನು ಹಾಗೆಯೇ ಆನಂದ ಗೊಳಿಸುತ್ತಿದ್ದನು. ಎಲ್ಲರ ಮನೆಗಳಲ್ಲಿ ಬೇರೆ-ಬೇರೆ ರೂಪಗಳನ್ನು ಧರಿಸಿ ಇರುತ್ತಿದ್ದನು. ಇದರಿಂದ ಅವನ ರಾಣಿಯರಿಗೆ ನಾವು ಶ್ರೀಕೃಷ್ಣನನ್ನು ಪ್ರೇಮಿಸುವಷ್ಟೇ ಅವನೂ ನಮ್ಮನ್ನು ಪ್ರೇಮಿಸುತ್ತಿರುವನು ಮತ್ತು ನಮ್ಮಲ್ಲಿ ಮತ್ತು ಶ್ರೀಕೃಷ್ಣನಲ್ಲಿ ಪರಸ್ಪರ ಪ್ರೇಮದ ಸಮಾನತೆ ಇದೆ ಎಂದು ತಿಳಿದು ಗರ್ವಪಡುತ್ತಿದ್ದರು. ಭಗವಂತನು ಅವರ ಗರ್ವವನ್ನೂ ಕೂಡ ನಾಶಪಡಿಸಲಿಕ್ಕಾಗಿ ಅವನು ತನ್ನ ಶ್ರೀವಿಗ್ರಹವನ್ನು ಈಗ ಅಂತರ್ಧಾನಗೊಳಿಸಿರುವನು.॥35॥
(ಶ್ಲೋಕ - 36)
ಮೂಲಮ್
ತಯೋರೇವಂ ಕಥಯತೋಃ ಪೃಥಿವೀಧರ್ಮಯೋಸ್ತದಾ ।
ಪರೀಕ್ಷಿನ್ನಾಮ ರಾಜರ್ಷಿಃ ಪ್ರಾಪ್ತಃ ಪ್ರಾಚೀಂ ಸರಸ್ವತೀಮ್ ॥
ಅನುವಾದ
ಹೀಗೆ ಧರ್ಮವೂ, ಪೃಥ್ವಿಯೂ ಪರಸ್ಪರವಾಗಿ ಮಾತನಾಡುತ್ತಿದ್ದಾಗ ಆ ಕಾಲಕ್ಕೆ ಸರಿಯಾಗಿ ರಾಜರ್ಷಿ ಶ್ರೇಷ್ಠನಾದ ಪರೀಕ್ಷಿದ್ರಾಜನು ಸರಸ್ವತೀ ನದಿಯ ಪೂರ್ವ ತೀರಕ್ಕೆ ಬಂದು ತಲುಪಿದನು.॥36॥
ಅನುವಾದ (ಸಮಾಪ್ತಿಃ)
ಹದಿನಾರನೆಯ ಅಧ್ಯಾಯವು ಮುಗಿಯಿತು.॥16॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇಪೃಥ್ವೀಧರ್ಮಸಂವಾದೋ ನಾಮ ಷೋಡಶೋಽಧ್ಯಾಯಃ ॥16॥