೧೫

[ಹದಿನೈದನೆಯ ಅಧ್ಯಾಯ]

ಭಾಗಸೂಚನಾ

ಶ್ರೀಕೃಷ್ಣನ ವಿರಹದಿಂದ ವ್ಯಥೆಗೊಂಡ ಪಾಂಡವರು ಪರೀಕ್ಷಿತನಿಗೆ ಪಟ್ಟಗಟ್ಟಿ ಸ್ವರ್ಗಕ್ಕೆ ತೆರಳಿದುದು

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಏವಂ ಕೃಷ್ಣಸಖಃ ಕೃಷ್ಣೋ ಭ್ರಾತ್ರಾ ರಾಜ್ಞಾ ವಿಕಲ್ಪಿತಃ ।
ನಾನಾಶಂಕಾಸ್ಪದಂ ರೂಪಂ ಕೃಷ್ಣವಿಶ್ಲೇಷಕರ್ಶಿತಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಎಲೈ ಶೌನಕಾದಿ ಮಹರ್ಷಿಗಳೇ! ಭಗವಾನ್ ಶ್ರೀಕೃಷ್ಣನ ನೆಚ್ಚಿನ ಗೆಳೆಯನಾದ ಅರ್ಜುನನು ಮೊದಲೇ ಶ್ರೀಕೃಷ್ಣವಿರಹದಿಂದ ಕೃಶನಾಗಿದ್ದನು. ಆತನ ವಿಷಾದಗ್ರಸ್ತವಾದ ಮುಖಮುದ್ರೆಯನ್ನು ನೋಡಿ ಯುಧಿಷ್ಠಿರನು ಅನೇಕ ಪ್ರಕಾರದ ಆಶಂಕೆಗಳನ್ನು ಪಡುತ್ತಾ ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದನು.॥1॥

(ಶ್ಲೋಕ - 2)

ಮೂಲಮ್

ಶೋಕೇನ ಶುಷ್ಯದ್ವದನಹೃತ್ಸರೋಜೋ ಹತಪ್ರಭಃ ।
ವಿಭುಂ ತಮೇವಾನುಧ್ಯಾಯನ್ನಾಶಕ್ನೋತ್ಪ್ರತಿಭಾಷಿತುಮ್ ॥

ಅನುವಾದ

ಅರ್ಜುನನ ಮುಖಕಮಲ ಮತ್ತು ಹೃದಯಕಮಲಗಳು ದುಃಖದಿಂದ ಬಾಡಿಹೋಗಿದ್ದವು. ಅವನು ಭಗವಾನ್ ಶ್ರೀಕೃಷ್ಣನ ಧ್ಯಾನದಲ್ಲಿ ಮುಳುಗಿ ಹೋಗಿದ್ದರಿಂದ ಅಣ್ಣನ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡದಾದನು.॥2॥

(ಶ್ಲೋಕ - 3)

ಮೂಲಮ್

ಕೃಚ್ಛ್ರೇಣ ಸಂಸ್ತಭ್ಯ ಶುಚಃ ಪಾಣಿನಾಮೃಜ್ಯ ನೇತ್ರಯೋಃ ।
ಪರೋಕ್ಷೇಣ ಸಮುನ್ನದ್ಧಪ್ರಣಯೌತ್ಕಂಠ್ಯಕಾತರಃ ॥

(ಶ್ಲೋಕ - 4)

ಮೂಲಮ್

ಸಖ್ಯಂ ಮೈತ್ರೀಂ ಸೌಹೃದಂ ಚ ಸಾರಥ್ಯಾದಿಷು ಸಂಸ್ಮರನ್ ।
ನೃಪಮಗ್ರಜಮಿತ್ಯಾಹ ಬಾಷ್ಪಗದ್ಗದಯಾ ಗಿರಾ ॥

ಅನುವಾದ

ಶ್ರೀಕೃಷ್ಣನಲ್ಲಿದ್ದ ಪರಮಪ್ರೇಮಕ್ಕೆ ಪರವಶನಾಗಿ ಆತನ ಅಗಲಿಕೆಯನ್ನು ತಾಳಲಾರದೆ ಕಂಗೆಟ್ಟು ತತ್ತರಿಸಿ ಹೋಗಿದ್ದನು. ಹೇಗೋ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ಕಷ್ಟದಿಂದ ತಡೆದುಕೊಂಡು ಕಣ್ಣುಗಳಿಂದ ಸುರಿಯುತ್ತಿದ್ದ ಜಲಧಾರೆಯನ್ನು ಕೈಯಿಂದ ಒರೆಸಿಕೊಂಡು, ಸಾರಥ್ಯವೇ ಮುಂತಾದ ಕಾರ್ಯಗಳ ಸಮಯದಲ್ಲಿ ಶ್ರೀಭಗವಂತನು ತನ್ನಲ್ಲಿ ತೋರುತ್ತಿದ್ದ ಸ್ನೇಹ, ಸಲಿಗೆ, ಹೃದಯೈಕ್ಯ ಚಿಂತನೆಗಳನ್ನು ಬಾರಿ-ಬಾರಿಗೂ ನೆನೆಯುತ್ತಾ ಬಾಷ್ಪದಿಂದ ಗದ್ಗದವಾಗಿದ್ದ ಧ್ವನಿಯಿಂದ ಅಣ್ಣನಾದ ಧರ್ಮರಾಜನಿಗೆ ಹೀಗೆ ಉತ್ತರಿಸಿದನು-॥3-4॥

(ಶ್ಲೋಕ - 5)

ಮೂಲಮ್ (ವಾಚನಮ್)

ಅರ್ಜುನ ಉವಾಚ

ಮೂಲಮ್

ವಂಚಿತೋಹಂ ಮಹಾರಾಜ ಹರಿಣಾ ಬಂಧುರೂಪಿಣಾ ।
ಯೇನ ಮೇಪಹೃತಂ ತೇಜೋ ದೇವವಿಸ್ಮಾಪನಂ ಮಹತ್ ॥

ಅನುವಾದ

ಅರ್ಜುನನು ಹೇಳಿದನು — ಮಹಾರಾಜಾ! ಬಂಧುವಿನ ರೂಪವನ್ನು ಧರಿಸಿ ಬಂದ ಶ್ರೀಹರಿಯು ನನಗೆ ಮೋಸ ಮಾಡಿದನು. ದೊಡ್ಡ-ದೊಡ್ಡ ದೇವತೆಗಳನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತಿದ್ದ ನನ್ನ ತೇಜಸ್ಸು-ಪರಾಕ್ರಮಗಳನ್ನು ಕಿತ್ತುಕೊಂಡನು.॥5॥

(ಶ್ಲೋಕ - 6)

ಮೂಲಮ್

ಯಸ್ಯ ಕ್ಷಣವಿಯೋಗೇನ ಲೋಕೋ ಹ್ಯಪ್ರಿಯದರ್ಶನಃ ।
ಉಕ್ಥೇನ ರಹಿತೋ ಹ್ಯೇಷ ಮೃತಕಃ ಪ್ರೋಚ್ಯತೇ ಯಥಾ ॥

ಅನುವಾದ

ಪ್ರಾಣವು ಹೋದೊಡನೆಯೇ ಈ ದೇಹವು ಶವದ ರೂಪವನ್ನು ತಾಳಿ ಅಸಹ್ಯವಾಗಿಬಿಡುವಂತೆ, ಅವನ ಕ್ಷಣ ಮಾತ್ರದ ವಿಯೋಗದಿಂದ ಈ ಜಗತ್ತು ಅಪ್ರಿಯವಾಗಿ ಕಾಣ ತೊಡಗುತ್ತದೆ. ॥6॥

(ಶ್ಲೋಕ - 7)

ಮೂಲಮ್

ಯತ್ಸಂಶ್ರಯಾದ್ರುಪದಗೇಹಮುಪಾಗತಾನಾಂ
ರಾಜ್ಞಾಂ ಸ್ವಯಂವರಮುಖೇ ಸ್ಮರದುರ್ಮದಾನಾಮ್ ।
ತೇಜೋ ಹೃತಂ ಖಲು ಮಯಾಭಿಹತಶ್ಚ ಮತ್ಸ್ಯಃ
ಸಜ್ಜೀಕೃತೇನ ಧನುಷಾಗತಾ ಚ ಕೃಷ್ಣಾ ॥

ಅನುವಾದ

ಯಾರ ಆಸರೆಯಿಂದ ದ್ರೌಪದೀ ಸ್ವಯಂವರಕ್ಕೆ ದ್ರುಪದನಲ್ಲಿಗೆ ಬಂದ ಕಾಮೋನ್ಮತ್ತ ರಾಜರುಗಳ ತೇಜಸ್ಸನ್ನು ನಾನು ಕಸಿದುಕೊಳ್ಳುತ್ತಾ ಧನುಷ್ಯಕ್ಕೆ ಬಾಣಹೂಡಿ ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪದಿಯನ್ನು ಪಡೆದನೋ, ಆ ಮಹಾಪುರುಷನು ನನಗೆ ಮೋಸ ಮಾಡಿದನು.॥7॥

(ಶ್ಲೋಕ - 8)

ಮೂಲಮ್

ಯತ್ಸನ್ನಿಧಾವಹಮುಖಾಂಡವಮಗ್ನಯೇದಾ-
ಮಿಂದ್ರಂ ಚ ಸಾಮರಗಣಂ ತರಸಾ ವಿಜಿತ್ಯ ।
ಲಬ್ಧಾ ಸಭಾ ಮಯಕೃತಾದ್ಭುತಶಿಲ್ಪಮಾಯಾ
ದಿಗ್ಭ್ಯೋಹರನ್ನೃಪತಯೋ ಬಲಿಮಧ್ವರೇ ತೇ ॥

ಅನುವಾದ

ಅವನ ಸಾನ್ನಿಧ್ಯದ ಬಲದಿಂದಲೇ ನಾನು ಸಮಸ್ತ ದೇವತೆಗಳೊಂದಿಗೆ ದೇವೇಂದ್ರನನ್ನು ಸೋಲಿಸಿ ಅಗ್ನಿ ದೇವನ ತೃಪ್ತಿಗಾಗಿ ಖಾಂಡವವನವನ್ನು ಸಮರ್ಪಿಸಿದೆನೋ, ದಾನವ ಶಿಲ್ಪಿಯಾದ ಮಯನ ಅದ್ಭುತ ಕಲಾಕೌಶಲ್ಯದಿಂದ ಕೂಡಿದ ಸಭೆಯನ್ನು ಸಂಪಾದಿಸಿದೆನೋ, ನಾನಾದಿಕ್ಕುಗಳಿಂದ ಆಗಮಿಸಿದ ಅರಸರು ನಿನಗೆ ಯಜ್ಞದಲ್ಲಿ ಹೇರಳವಾಗಿ ಕಾಣಿಕೆಗಳನ್ನು ಅರ್ಪಿಸಿದರೋ, ಆ ತೇಜೋಮೂರ್ತಿಯಿಂದ ನಾನು ವಂಚಿತನಾದೆನು.॥8॥

(ಶ್ಲೋಕ - 9)

ಮೂಲಮ್

ಯತ್ತೇಜಸಾ ನೃಪಶಿರೋಂಘ್ರಿಮಹನ್ಮಖಾರ್ಥೇ
ಆರ್ಯೋನುಜಸ್ತವ ಗಜಾಯುತಸತ್ತ್ವವೀರ್ಯಃ ।
ತೇನಾಹೃತಾಃ ಪ್ರಮಥನಾಥಮಖಾಯ ಭೂಪಾ
ಯನ್ಮೋಚಿತಾಸ್ತದನಯನ್ಬಲಿಮಧ್ವರೇ ತೇ ॥

ಅನುವಾದ

ಹತ್ತುಸಾವಿರ ಆನೆಗಳ ಬಲ-ಪರಾಕ್ರಮಗಳಿಂದ ಸಂಪನ್ನನಾದ, ನಿನ್ನ ತಮ್ಮನಾದ ಆರ್ಯಭೀಮಸೇನನು ರಾಜರ ತಲೆಗಳನ್ನು ತಿರಸ್ಕಾರದಿಂದ ಮೆಟ್ಟಿದ್ದ ಜರಾಸಂಧನನ್ನು ಯಾರ ಶಕ್ತಿಯಿಂದ ಸಂಹರಿಸಿ ಆತನು ಭೈರವಯಜ್ಞದಲ್ಲಿ ಬಲಿಯನ್ನಾಗಿ ಅರ್ಪಿಸಲು ಸಂಕಲ್ಪಿಸಿದ್ದ ರಾಜರೆಲ್ಲರನ್ನು ಬಂಧನ ಮುಕ್ತಗೊಳಿಸಿ, ಅವರೆಲ್ಲರೂ ನಿನ್ನ ಯಜ್ಞದಲ್ಲಿ ಅಪಾರವಾದ ಕಪ್ಪ-ಕಾಣಿಕೆಗಳನ್ನು ಕೊಡುವಂತೆ ಮಾಡಿದನೋ, ಆ ಶಕ್ತಿಧರನು ನನ್ನನ್ನು ತೊರೆದುಹೋದನು.॥9॥

(ಶ್ಲೋಕ - 10)

ಮೂಲಮ್

ಪತ್ನ್ಯಾಸ್ತವಾಮಖಕ್ಲೃಪ್ತಮಹಾಭಿಷೇಕ-
ಶ್ಲಾಘಿಷ್ಠಚಾರುಕಬರಂ ಕಿತವೈಃ ಸಭಾಯಾಮ್ ।
ಸ್ಪೃಷ್ಟಂ ವಿಕೀರ್ಯ ಪದಯೋಃ ಪತಿತಾಶ್ರುಮುಖ್ಯಾ
ಯಸ್ತತ್ ಸಿಯೋಕೃತ ಹತೇಶವಿಮುಕ್ತಕೇಶಾಃ ॥

ಅನುವಾದ

ರಾಜಸೂಯ ಯಜ್ಞದ ಅಭಿಷೇಕ ಜಲದಿಂದ ಪವಿತ್ರವಾಗಿದ್ದ ದ್ರೌಪದಿಯ ಸಿರಿ ಮುಡಿಯನ್ನು ದುರಾತ್ಮರು ತುಂಬಿದ ಸಭೆಯಲ್ಲಿ ಮುಟ್ಟುವ ಸಾಹಸವನ್ನು ಮಾಡಿದಾಗ ಆಕೆಯು ಕೆದರಿದ ತಲೆಗೂದಲುಗಳಿಂದ ತುಂಬಿದ ಕಣ್ಣೀರಿನಿಂದ ಶ್ರೀಕೃಷ್ಣನ ಚರಣಗಳಲ್ಲಿ ಬಿದ್ದು ಬೇಡಿಕೊಂಡಾಗ, ಅವನು ಅವರಮುಂದೆ ಘೋರ ಅಪಮಾನದ ಪ್ರತೀಕಾರ ಮಾಡುವ ಪ್ರತಿಜ್ಞೆಯನ್ನು ಮಾಡಿ ಆ ಧೂರ್ತರ ಸ್ತ್ರೀಯರನ್ನು ವಿಧವೆಯರನ್ನಾಗಿ ಮಾಡಿ ತಮ್ಮ ಮುಡಿಯನ್ನು ತಾವೇ ಬಿಚ್ಚುಕೊಳ್ಳುವಂತೆ ಮಾಡಿದ ಆ ಸತ್ಯ ಸಂಕಲ್ಪನೂ, ಸಮರ್ಥನೂ ಆದ ಸ್ವಾಮಿಯು ನನ್ನನ್ನು ತೊರೆದು ಹೋದನು. ॥10॥

(ಶ್ಲೋಕ - 11)

ಮೂಲಮ್

ಯೋ ನೋ ಜುಗೋಪ ವನ ಏತ್ಯ ದುರಂತ ಕೃಚ್ಛ್ರಾದ್
ದುರ್ವಾಸಸೋರಿವಿಹಿತಾದಯುತಾಗ್ರಭುಗ್ಯಃ ।
ಶಾಕಾನ್ನಶಿಷ್ಟಮುಪಯುಜ್ಯ ಯತಸಿ ಲೋಕೀಂ
ತೃಪ್ತಾಮಮಂಸ್ತ ಸಲಿಲೇ ವಿನಿಮಗ್ನಸಂಘಃ ॥

ಅನುವಾದ

ದುಷ್ಟ ದುರ್ಯೋಧನನಿಂದ ಪ್ರೇರಿತರಾದ ದುರ್ವಾಸ ಮಹರ್ಷಿಗಳು ತಮ್ಮ ಹತ್ತು ಸಾವಿರ ಶಿಷ್ಯರೊಡನೆ ಭೋಜನ ಮಾಡಲು ಅಕಾಲದಲ್ಲಿ ಅತಿಥಿಯಾಗಿ ಬಂದಾಗ ಯಾವ ಆಪದ್ಬಾಂಧವನು ಅರಣ್ಯಕ್ಕೆ ಬಂದು ದ್ರೌಪದಿಯು ತಿಂದು ಉಳಿದಿದ್ದ ಸೊಪ್ಪಿನ ಚೂರನ್ನು ತಿಂದು ತೃಪ್ತಿಯಾಯಿತೆಂದು ಹೇಳಿದನೋ, ಸ್ನಾನಕ್ಕೆಂದು ನೀರಿನಲ್ಲಿ ಮುಳುಗಿದ್ದ ಮಹರ್ಷಿಗಳ ಗುಂಪು ಶ್ರೀಕೃಷ್ಣನ ತೃಪ್ತಿಯಿಂದ ಮೂರುಲೋಕಕ್ಕೂ ತೃಪ್ತಿಯಾಗಿದೆ ಎಂದು ನುಡಿಯುವಂತೆ ಮಾಡಿ ಅವರ ಶಾಪದಿಂದ ನಮ್ಮನ್ನು ಸಂರಕ್ಷಿಸಿದನೋ, ಆ ಸ್ವಾಮಿಯು ನಮ್ಮನ್ನು ವಂಚಿಸಿಹೋದನು. ॥11॥

(ಶ್ಲೋಕ - 12)

ಮೂಲಮ್

ಯತ್ತೇಜಸಾಥ ಭಗವಾನ್ಯು ಶೂಲಪಾಣಿ-
ರ್ವಿಸ್ಮಾಪಿತಃ ಸಗಿರಿಜೋಸಮದಾನ್ನಿಜಂ ಮೇ ।
ಅನ್ಯೇಪಿ ಚಾಹಮಮುನೈವ ಕಲೇವರೇಣ
ಪ್ರಾಪ್ತೋ ಮಹೇಂದ್ರಭವನೇ ಮಹದಾಸನಾರ್ಧಮ್॥

ಅನುವಾದ

ಯಾವಾತನ ಪ್ರತಾಪದಿಂದ ಯುದ್ಧದಲ್ಲಿ ಪಾರ್ವತೀಸಹಿತ ಪರಮೇಶ್ವರನು ಆಶ್ಚರ್ಯಗೊಂಡು ಪಾಶುಪತಾಸ್ತ್ರವನ್ನು ನನಗೆ ಕರುಣಿಸಿದ್ದನೋ, ಇತರ ದೇವತೆಗಳೂ ತಮ್ಮ-ತಮ್ಮ ಅಸ್ತ್ರಗಳನ್ನು ದಯ ಪಾಲಿಸಿದರೋ, ನಾನು ಸಶರೀರನಾಗಿಯೇ ಮಹೇಂದ್ರನ ಸಭೆಗೆ ಹೋಗಿ ಆತನ ಅರ್ಧಾಸನದಲ್ಲಿ ಕುಳಿತುಕೊಳ್ಳುವ ಗೌರವ ಪಡೆದೆನೋ ಆತನಿಂದ ನಾನು ವಂಚಿತನಾದೆ.॥12॥

(ಶ್ಲೋಕ - 13)

ಮೂಲಮ್

ತತ್ರೈವ ಮೇ ವಿಹರತೋ ಭುಜದಂಡಯುಗ್ಮಂ
ಗಾಂಡೀವಲಕ್ಷಣಮರಾತಿವಧಾಯ ದೇವಾಃ ।
ಸೇಂದ್ರಾಃ ಶ್ರಿತಾ ಯದನುಭಾವಿತಮಾಜಮೀಢ
ತೇನಾಹಮದ್ಯ ಮುಷಿತಃ ಪುರುಷೇಣ ಭೂಮ್ನಾ ॥

ಅನುವಾದ

ಅಣ್ಣಾ! ನಾನು ಆಗ ಸ್ವರ್ಗದಲ್ಲಿ ವಿಹರಿಸುತ್ತಿದ್ದಾಗ ಯಾರ ಅನುಗ್ರಹದಿಂದ ಪ್ರಭಾವಿತವಾದ ಗಾಂಡೀವ ಧನುಸ್ಸನ್ನು ಹಿಡಿದುಕೊಂಡಿದ್ದ ನನ್ನ ಎರಡೂ ತೋಳುಗಳನ್ನು ಇಂದ್ರಸಹಿತರಾದ ದೇವತೆಗಳೆಲ್ಲರೂ ನಿವಾತಕವಚರೇ ಮುಂತಾದ ದೈತ್ಯರನ್ನು ಕೊಲ್ಲಲು ಆಶ್ರಯಿಸಿದ್ದರೋ ಆ ಪುರುಷೋತ್ತಮ ಶ್ರೀಕೃಷ್ಣನು ಇಂದು ನನಗೆ ಮೋಸ ಮಾಡಿದನು.॥13॥

(ಶ್ಲೋಕ - 14)

ಮೂಲಮ್

ಯದ್ಬಾಂಧವಃ ಕುರುಬಲಾಬ್ಧಿಮನಂತಪಾರ-
ಮೇಕೋ ರಥೇನ ತತರೇಹಮತಾರ್ಯಸತ್ತ್ವಮ್ ।
ಪ್ರತ್ಯಾಹೃತಂ ಬಹು ಧನಂ ಚ ಮಯಾ ಪರೇಷಾಂ
ತೇಜಾಸ್ಪದಂ ಮಣಿಮಯಂ ಚ ಹೃತಂ ಶಿರೋಭ್ಯಃ ॥

ಅನುವಾದ

ಜಯಿಸಲಸಾಧ್ಯವಾದ ಸತ್ತ್ವದಿಂದ ಕೂಡಿದ್ದ ಅಪಾರವಾದ ಕೌರವಸೇನಾ ಸಾಗರವನ್ನು ನಾನು ಯಾರ ಬಂಧುತ್ವದ ಬಲದಿಂದ ಏಕಾಕಿಯಾಗಿಯೇ ರಥದಿಂದ ದಾಟಿದೆನೋ, ಯಾವಾತನ ಸಹಾಯದಿಂದಲೇ ನಾನು ಶತ್ರುಗಳಿಂದ ರಾಜಾ ವಿರಾಟನ ಎಲ್ಲ ಗೋಸಂಪತ್ತನ್ನು ಹಿಂದಕ್ಕೆ ಮರಳಿಸಿಕೊಟ್ಟು, ಜೊತೆಗೆ ಅವರ ಹೊಳೆಯುವ ಮಣಿಮಯ ಕಿರೀಟ ಹಾಗೂ ಅಲಂಕಾರಗಳನ್ನು ಕಿತ್ತುಕೊಂಡೆನೋ, ಅಂತಹ ಶಕ್ತಿನಿಧಿಯಾದ ಪ್ರಭುವು ಕಣ್ಮರೆಯಾದನು.॥14॥

(ಶ್ಲೋಕ - 15)

ಮೂಲಮ್

ಯೋ ಭೀಷ್ಮ ಕರ್ಣಗುರುಶಲ್ಯಚಮೂಷ್ವದಭ್ರ-
ರಾಜನ್ಯವರ್ಯರಥಮಂಡಲಮಂಡಿತಾಸು ।
ಅಗ್ರೇಚರೋ ಮಮ ವಿಭೋ ರಥಯೂಥಪಾನಾ-
ಮಾಯುರ್ಮನಾಂಸಿ ಚ ದೃಶಾ ಸಹ ಓಜ ಆರ್ಚ್ಛತ್ ॥

ಅನುವಾದ

ರಾಜೇಂದ್ರನೇ! ಅಗಣಿತ ಸಂಖ್ಯೆಯಲ್ಲಿದ್ದ ರಾಜರ ರಥಗಳಿಂದ ಕೂಡಿದ್ದ ಭೀಷ್ಮ, ಕರ್ಣ, ದ್ರೋಣ, ಶಲ್ಯ ಹಾಗೂ ಇತರ ರಾಜರುಗಳ ಮುಂದೆ ಸಂಚರಿಸುತ್ತಾ ಯಾರು ಆ ಅತಿರಥ, ಮಹಾರಥರ ಮನಸ್ಸು, ಆಯುಸ್ಸು, ಶಕ್ತಿ ಇವುಗಳನ್ನು ದೃಷ್ಟಿಮಾತ್ರದಿಂದಲೇ ಅಪಹರಿಸಿದ್ದನೋ ಆ ಯಾದವ ಪತಿಯು ಮರೆಯಾದನು. ॥15॥

(ಶ್ಲೋಕ - 16)

ಮೂಲಮ್

ಯದ್ದೋಷು ಮಾ ಪ್ರಣಿಹಿತಂ ಗುರುಭೀಷ್ಮಕರ್ಣ-
ನಪ್ತೃತ್ರಿಗರ್ತಶಲಸೈಂಧವಬಾಹ್ಲಿಕಾದ್ಯೈಃ ।
ಅಸಾಣ್ಯಮೋಘಮಹಿಮಾನಿ ನಿರೂಪಿತಾನಿ
ನೋ ಪಸ್ಪೃಶುರ್ನೃಹರಿದಾಸಮಿವಾಸುರಾಣಿ ॥

ಅನುವಾದ

ಯಾರ ಬಾಹುಗಳ ನೆರಳಿನಲ್ಲಿ ಸುರಕ್ಷಿತನಾಗಿದ್ದ ನನ್ನ ಮೇಲೆ ಆಚಾರ್ಯ ದ್ರೋಣರು, ಪಿತಾಮಹ ಭೀಷ್ಮರು, ಕರ್ಣ, ಭೂರಿಶ್ರವ, ಸುಶರ್ಮಾ, ಶಲ್ಯ, ಜಯದ್ರಥ, ಬಾಹ್ಲಿಕ ಮುಂತಾದವರು ಪ್ರಯೋಗಿಸಿದ್ದ ಅಮೋಘವಾದ ಅಸ್ತ್ರಗಳು ನನ್ನನ್ನು ಮುಟ್ಟಲಾರದೆ, ಹಿರಣ್ಯಕಶಿಪು ಮುಂತಾದ ದೈತ್ಯರ ಅಸ್ತ್ರ-ಶಸ್ತ್ರಗಳು ಭಗವದ್ಭಕ್ತ ಪ್ರಹ್ಲಾದನಿಗೆ ಮುಟ್ಟಲಾರದೆ ವಿಫಲವಾದಂತೆ ವಿಫಲವಾಗಿಸಿದನೋ ಅಂತಹ ಅನಂತ ಶಕ್ತಿನಿಧಿಯೂ ಆಶ್ರಿತರಕ್ಷಕನೂ ಆದ ಪ್ರಭುವು ತನ್ನನ್ನು ಉಪಸಂಹಾರ ಮಾಡಿಕೊಂಡನು. ॥16॥

(ಶ್ಲೋಕ - 17)

ಮೂಲಮ್

ಸೌತ್ಯೇ ವೃತಃ ಕುಮತಿನಾತ್ಮದ ಈಶ್ವರೋ ಮೇ
ಯತ್ಪಾದಪದ್ಮಮಭವಾಯ ಭಜಂತಿ ಭವ್ಯಾಃ ।
ಮಾಂ ಶ್ರಾಂತವಾಹಮರಯೋ ರಥಿನೋ ಭುವಿಷ್ಠಂ
ನ ಪ್ರಾಹರನ್ಯದನುಭಾವನಿರಸ್ತಚಿತ್ತಾಃ ॥

ಅನುವಾದ

ಶ್ರೇಷ್ಠರಾದ ಸಾಧು ಸಜ್ಜನರು ಸಂಸಾರದಿಂದ ಮುಕ್ತರಾಗಲು ಯಾರ ಚರಣ ಕಮಲಗಳನ್ನು ಭಜಿಸುತ್ತಾರೋ, ಅಂತಹ ಭಕ್ತಜನರಿಗೆ ತನ್ನನ್ನೇ ಪೂರ್ಣವಾಗಿ ಕೊಟ್ಟುಕೊಂಡು ಬಿಡುವನೋ, ಆ ಭಗವಂತನನ್ನು ಕುಬುದ್ಧಿಯಿಂದ ನಾನು ‘ಯುದ್ಧದಲ್ಲಿ ಸಾರಥಿಯಾಗು’ ಎಂದು ಅತ್ಯಲ್ಪ ಕೆಲಸಕ್ಕಾಗಿ ಕೇಳಿ ಬಳಸಿಕೊಂಡುಬಿಟ್ಟೆನಲ್ಲ? ಅಯ್ಯೋ! ನನ್ನ ಕುದುರೆಗಳು ಬಳಲಿದ ಸಮಯದಲ್ಲಿ ನಾನು ರಥದಿಂದ ಕೆಳಗಿಳಿದು ನಿಂತಿರುವಾಗಲೂ ಕೂಡ ಮಹಾರಥಿಗಳಾದ ಶತ್ರುಗಳು ಕೂಡ ನನ್ನ ಮೇಲೆ ಬಾಣ ಪ್ರಯೋಗಿಸಲು ಸಮರ್ಥರಾಗಲಿಲ್ಲ. ಏಕೆಂದರೆ, ಶ್ರೀಕೃಷ್ಣನ ಪ್ರಭಾವದಿಂದ ಅವರ ಬುದ್ಧಿಯು ಅಪಹರಿಸಲ್ಪಟ್ಟಿತ್ತು. ॥17॥

(ಶ್ಲೋಕ - 18)

ಮೂಲಮ್

ನರ್ಮಾಣ್ಯುದಾರರುಚಿರಸ್ಮಿತಶೋಭಿತಾನಿ
ಹೇ ಪಾರ್ಥ ಹೇರ್ಜುನ ಸಖೇ ಕುರುನಂದನೇತಿ ।
ಸಂಜಲ್ಪಿತಾನಿ ನರದೇವ ಹೃದಿಸ್ಪೃಶಾನಿ
ಸ್ಮರ್ತುರ್ಲುಠಂತಿ ಹೃದಯಂ ಮಮ ಮಾಧವಸ್ಯ ॥

ಅನುವಾದ

ಅಣ್ಣಾ! ಆಟದ ಸಮಯದಲ್ಲಿ ಆತನು ಹೇಳುತ್ತಿದ್ದ ‘ಪಾರ್ಥಾ! ಅರ್ಜುನಾ! ಸಖನೇ! ಕುರುನಂದನಾ!’ ಇವೇ ಮುಂತಾದ ಉದಾರವಾದ, ರಮಣೀಯವಾದ, ನಸುನಗೆ ಗೂಡಿದ, ಹೃದಯ ಸ್ಪರ್ಶಿಯಾದ ಮಾತುಗಳು ಸ್ಮರಣೆಗೆ ಬಂದು ನನ್ನ ಹೃದಯವು ಸೂರೆಗೊಳ್ಳುತ್ತಿದೆ. ಓರ್ವ ಸಾಮಾನ್ಯ ವ್ಯಕ್ತಿಯು ಸತ್ತುಹೋದಾಗ ಮನುಷ್ಯನು ಎಷ್ಟು ದುಃಖಿತನಾಗುತ್ತಾನೆ ಎಂಬುದು ನಿನಗೆ ತಿಳಿದೇ ಇದೆ. ಹೀಗಿರುವಾಗ ನಮ್ಮ ಸರ್ವಸ್ವನಾದ ಪ್ರಭುವು ಈಗಿಲ್ಲದಿರುವಾಗ ಎಷ್ಟು ದುಃಖವಾಗಬೇಡ? ॥18॥

(ಶ್ಲೋಕ - 19)

ಮೂಲಮ್

ಶಯ್ಯಾಸನಾಟನವಿಕತ್ಥ ನಭೋಜನಾದಿ-
ಷ್ವೈಕ್ಯಾದ್ವಯಸ್ಯ ಋತವಾನಿತಿ ವಿಪ್ರಲಬ್ಧಃ ।
ಸಖ್ಯುಃ ಸಖೇವ ಪಿತೃ ವತ್ತನಯಸ್ಯ ಸರ್ವಂ
ಸೇಹೇ ಮಹಾನ್ಮಹಿತಯಾ ಕುಮತೇರಘಂ ಮೇ ॥

ಅನುವಾದ

ಮಲಗುವಾಗ, ಕುಳಿತುಕೊಳ್ಳುವಾಗ, ತಿರುಗಾಡುವಾಗ, ಆತ್ಮಶ್ಲಾಘನೆ ಮಾಡಿಕೊಳ್ಳುವಾಗ, ಭೋಜನ ಮಾಡುವಾಗ, ನಾವಿಬ್ಬರೂ ಜೊತೆಯಲ್ಲಿರುವಾಗ ಹೃದಯೈಕ್ಯವಿದ್ದುದರಿಂದ ‘ಮಿತ್ರಾ! ನೀನೇ ತುಂಬಾ ದೊಡ್ಡವನೋ?’ ಎಂದು ನಾನು ತಿರಸ್ಕಾರದ ಮಾತುಗಳನ್ನಾಡಿದರೂ, ಅವನು ಮಹಾಮಹಿಮನಾಗಿದ್ದುದರಿಂದ ಮಿತ್ರನ ತಪ್ಪನ್ನು ಮಿತ್ರನೂ, ಮಗನ ಅಪರಾಧವನ್ನು ತಂದೆಯೂ ಸಹಿಸಿಕೊಳ್ಳುವಂತೆ ದುರ್ಬುದ್ಧಿಯಾದ ನನ್ನ ಎಲ್ಲ ಅಪರಾಧಗಳನ್ನೂ ಸಹಿಸಿಕೊಂಡಿದ್ದನೋ ಅಂತಹ ಕರುಣಾಮೂರ್ತಿಯು ಕಣ್ಮರೆಯಾದನು. ॥19॥

(ಶ್ಲೋಕ - 20)

ಮೂಲಮ್

ಸೋಹಂ ನೃಪೇಂದ್ರ ರಹಿತಃ ಪುರುಷೋತ್ತಮೇನ
ಸಖ್ಯಾ ಪ್ರಿಯೇಣ ಸುಹೃದಾ ಹೃದಯೇನ ಶೂನ್ಯಃ ।
ಅಧ್ವನ್ಯುರುಕ್ರಮಪರಿಗ್ರಹಮಂಗ ರಕ್ಷನ್
ಗೋಪೈರಸದ್ಭಿರಬಲೇವ ವಿನಿರ್ಜಿತೋಸ್ಮಿ ॥

ಅನುವಾದ

ರಾಜೇಂದ್ರ! ಮಿತ್ರಶ್ರೇಷ್ಠನೂ, ಪ್ರಿಯಮಿತ್ರನೂ, ಸುಹೃದನೂ ಆದ ಆ ಪುರುಷೋತ್ತಮನನ್ನು ಕಳೆದುಕೊಂಡು ಶೂನ್ಯ ಹೃದಯನಾಗಿ ನಾನು ಆ ಭಗವಂತನ ಪತ್ನಿಯರನ್ನು ದ್ವಾರಕೆಯಿಂದ ಜೋಪಾನವಾಗಿ ತರುತ್ತಿದ್ದಾಗ ಮಾರ್ಗಮಧ್ಯದಲ್ಲಿ ಕೆಲವು ಕೀಳುಮಟ್ಟದ ಗೊಲ್ಲರು ನನ್ನನ್ನು ಒಂದು ಅಬಲೆಯಂತೆ ಸೋಲಿಸಿಬಿಟ್ಟರು. ಆ ಸ್ತ್ರೀಯರನ್ನು ಸಂರಕ್ಷಿಸಲಾರದೆ ಹೋದೆನು.॥20॥

(ಶ್ಲೋಕ - 21)

ಮೂಲಮ್

ತದ್ವೈ ಧನುಸ್ತ ಇಷವಃ ಸ ರಥೋ ಹಯಾಸ್ತೇ
ಸೋಹಂ ರಥೀ ನೃಪತಯೋ ಯತ ಆನಮಂತಿ ।
ಸರ್ವಂ ಕ್ಷಣೇನ ತದಭೂದಸದೀಶರಿಕ್ತಂ
ಭಸ್ಮನ್ಹುತಂ ಕುಹಕರಾದ್ಧಮಿವೋಪ್ತಮೂಷ್ಯಾಮ್ ॥

ಅನುವಾದ

ಯಾವುದರ ಮುಂದೆ ದೊಡ್ಡ-ದೊಡ್ಡ ರಾಜರೂ ತಲೆ ತಗ್ಗಿಸುತ್ತಿದ್ದರೋ ಅದೇ ಗಾಂಡೀವ ಧನುಸ್ಸು, ಅದೇ ಬಾಣಗಳು, ಅದೇ ರಥ, ಅದೇ ಕುದುರೆಗಳು, ಅತಿರಥಿಯಾದ ನಾನೂ ಆ ಹಿಂದಿನವನೇ. ಆದರೆ ಶ್ರೀಕೃಷ್ಣನನ್ನು ಕಳಕೊಂಡಿದ್ದರಿಂದ ಅವೆಲ್ಲವೂ ಕ್ಷಣಮಾತ್ರದಲ್ಲಿ-ಬೂದಿಯಲ್ಲಿ ಮಾಡಿದ ಹೋಮದಂತೆ, ನೀಚನಿಗೆ ಮಾಡಿದ ಸೇವೆಯಂತೆ, ಮರುಭೂಮಿಯಲ್ಲಿ ಬಿತ್ತಿದ ಬೀಜದಂತೆ ವ್ಯರ್ಥವಾಗಿ ಹೋದುವು.॥21॥

(ಶ್ಲೋಕ - 22)

ಮೂಲಮ್

ರಾಜಂಸ್ತ್ವಯಾಭಿಪೃಷ್ಟಾನಾಂ ಸುಹೃದಾಂ ನಃ ಸುಹೃತ್ಪುರೇ ।
ವಿಪ್ರಶಾಪವಿಮೂಢಾನಾಂ ನಿಘ್ನತಾಂ ಮುಷ್ಟಿಭಿರ್ಮಿಥಃ ॥

(ಶ್ಲೋಕ - 23)

ಮೂಲಮ್

ವಾರುಣೀಂ ಮದಿರಾಂ ಪೀತ್ವಾ ಮದೋನ್ಮಥಿತಚೇತಸಾಮ್ ।
ಅಜಾನತಾಮಿವಾನ್ಯೋನ್ಯಂ ಚತುಃಪಂಚಾವಶೇಷಿತಾಃ ॥

ಅನುವಾದ

ಮಹಾರಾಜನೇ! ದ್ವಾರಕಾವಾಸಿಗಳಾದ ನಮ್ಮ ಸುಹೃದ್-ಸಂಬಂಧಿಗಳ ಕುರಿತು ನೀನು ಕುಶಲಪ್ರಶ್ನೆ ಮಾಡಿದ್ದೆ. ಆ ಯಾದವರೆಲ್ಲರೂ ಬ್ರಾಹ್ಮಣರ ಶಾಪದಿಂದ ಬುದ್ಧಿಯನ್ನೂ ಕಳಕೊಂಡು ‘ವಾರುಣೀ’ ಎಂಬ ಮದ್ಯವನ್ನು ಕುಡಿದು ಮದೋನ್ಮತ್ತರಾಗಿ ಅಪರಿಚಿತರಂತೆ ಒಬ್ಬರು ಮತ್ತೊಬ್ಬರನ್ನು ಮುಷ್ಟಿಗಳಿಂದಲೂ, ಶಸ್ತ್ರಾಸ್ತ್ರಗಳಿಂದಲೂ ಪರಸ್ಪರ ಹೊಡೆದಾಡಿಕೊಂಡು ಸತ್ತುಹೋದರು. ಅವರಲ್ಲಿ ಕೇವಲ ನಾಲ್ಕೈದು ಮಂದಿ ಮಾತ್ರ ಉಳಿದಿರುವರು.॥22-23॥

(ಶ್ಲೋಕ - 24)

ಮೂಲಮ್

ಪ್ರಾಯೇಣೈತದ್ ಭಗವತ ಈಶ್ವರಸ್ಯ ವಿಚೇಷ್ಟಿತಮ್ ।
ಮಿಥೋ ನಿಘ್ನಂತಿ ಭೂತಾನಿ ಭಾವಯಂತಿ ಚ ಯನ್ಮಿಥಃ ॥

ಅನುವಾದ

ಪ್ರಪಂಚದ ಪ್ರಾಣಿಗಳು ಪರಸ್ಪರ ಪಾಲನೆ- ಪೋಷಣೆಯನ್ನೂ ಮಾಡುತ್ತವೆ, ಪರಸ್ಪರ ಹೊಡೆದಾಡಿ ಸತ್ತೂ ಹೋಗುತ್ತಾರೆ. ನಿಜವಾಗಿ ಇದು ಸರ್ವಶಕ್ತಿ ಶಾಲಿಯಾದ ಭಗವಂತನ ಲೀಲೆಯೇ ಆಗಿದೆ.॥24॥

(ಶ್ಲೋಕ - 25)

ಮೂಲಮ್

ಜಲೌಕಸಾಂ ಜಲೇ ಯದ್ವನ್ಮಹಾಂತೋದಂತ್ಯಣೀಯಸಃ ।
ದುರ್ಬಲಾನ್ ಬಲಿನೋ ರಾಜನ್ಮಹಾಂತೋ ಬಲಿನೋ ಮಿಥಃ ॥

(ಶ್ಲೋಕ - 26)

ಮೂಲಮ್

ಏವಂ ಬಲಿಷ್ಠೈರ್ಯದುಭಿರ್ಮಹದ್ಭಿರಿತರಾನ್ವಿಭುಃ ।
ಯದೂನ್ಯದುಭಿರನ್ಯೋನ್ಯಂ ಭೂಭಾರಾನ್ಸಂಜಹಾರ ಹ ॥

ಅನುವಾದ

ನೀರಿನಲ್ಲಿ ಬದುಕುವ ಮೀನು ಮುಂತಾದ ಜಲಚರ ಪ್ರಾಣಿಗಳಲ್ಲಿ ದೊಡ್ಡದು-ಚಿಕ್ಕದನ್ನು ನುಂಗಿಹಾಕುವಂತೆ, ಜನರಲ್ಲಿಯೂ ಬಲಶಾಲಿಗಳು ದುರ್ಬಲರನ್ನು ಕೊಂದುಹಾಕುತ್ತಾರೆ. ಇಬ್ಬರೂ ಬಲಶಾಲಿಗಳಾಗಿದ್ದರೆ ಪರಸ್ಪರವಾಗಿ ಹೊಡೆದಾಡಿ ಕೊಂಡು ಸಾಯುತ್ತಾರೆ. ಹೀಗೆಯೇ ಭಗವಂತನು ಮಹಾಬಲಿಷ್ಠರಾಗಿದ್ದ ಯಾದವರ ಮೂಲಕ ಇತರ ರಾಜರನ್ನು ಸಂಹಾರಮಾಡಿಸಿ, ಕೊನೆಗೆ ಆ ಯದುವಂಶೀಯರಲ್ಲೇ ಒಬ್ಬರು ಮತ್ತೊಬ್ಬರನ್ನು ಕೊಂದು ಹಾಕುವಂತೆ ಮಾಡಿ ಪೂರ್ಣವಾಗಿ ಭೂಭಾರವನ್ನು ಇಳಿಸಿದನು. ॥25-26॥

(ಶ್ಲೋಕ - 27)

ಮೂಲಮ್

ದೇಶಕಾಲಾರ್ಥಯುಕ್ತಾನಿ ಹೃತ್ತಾಪೋಪಶಮಾನಿ ಚ ।
ಹರಂತಿ ಸ್ಮರತಶ್ಚಿತ್ತಂ ಗೋವಿಂದಾಭಿಹಿತಾನಿ ಮೇ ॥

ಅನುವಾದ

ಭಗವಾನ್ ಶ್ರೀಕೃಷ್ಣನು ನನಗೆ ಮಾಡಿದ ಉಪದೇಶವು ಸಮಯ, ಸನ್ನಿವೇಶ, ಸಂದರ್ಭ, ಉದ್ದೇಶಗಳಿಗೆ ಅನುಗುಣವಾಗಿ ಹೃದಯದ ಸಂತಾಪವನ್ನು ಶಾಂತಗೊಳಿಸುವಂತಿತ್ತು. ಅದು ಸ್ಮರಣೆಗೆ ಬಂದು ನನ್ನ ಚಿತ್ತವು ಸೂರೆಗೊಳ್ಳುತ್ತದೆ.’’ ॥27॥

(ಶ್ಲೋಕ - 28)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಏವಂ ಚಿಂತಯತೋ ಜಿಷ್ಣೋಃ ಕೃಷ್ಣಪಾದಸರೋರುಹಮ್ ।
ಸೌಹಾರ್ದೇನಾತಿಗಾಢೇನ ಶಾಂತಾಸೀದ್ವಿಮಲಾ ಮತಿಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಹೀಗೆ ಭಗವಾನ್ ಶ್ರೀಕೃಷ್ಣನ ಅಡಿದಾವರೆಗಳನ್ನು ಪ್ರಗಾಢವಾದ ಭಕ್ತಿಯಿಂದ ಸ್ಮರಿಸುತ್ತಿರುವಂತೆಯೇ ಅರ್ಜುನನ ಬುದ್ಧಿಯು ತಿಳಿಯಾಗಿ, ಪ್ರಶಾಂತವಾಗಿ ಬಿಟ್ಟಿತು.॥28॥

(ಶ್ಲೋಕ - 29)

ಮೂಲಮ್

ವಾಸುದೇವಾಂಘ್ರ್ಯನುಧ್ಯಾನಪರಿಬೃಂಹಿತರಂಹಸಾ ।
ಭಕ್ತ್ಯಾ ನಿರ್ಮಥಿತಾಶೇಷಕಷಾಯಷಣೋರ್ಜುನಃ ॥

ಅನುವಾದ

ಭಗವಾನ್ ಶ್ರೀಕೃಷ್ಣನ ಚರಣಕಮಲಗಳನ್ನು ಹಗಲಿರುಳು ಚಿಂತಿಸುವುದರಿಂದ ಅವನಲ್ಲಿ ಪ್ರೇಮಾಭಕ್ತಿಯು ಹೆಚ್ಚಾಗಿ ಬೆಳೆಯಿತು. ಭಕ್ತಿಯ ಆವೇಶವು ಅವನ ಹೃದಯವನ್ನು ಮಥಿಸಿ, ಅದರಿಂದ ಎಲ್ಲ ವಿಕಾರಗಳನ್ನೂ ತೊಳೆದುಹಾಕಿತು.॥29॥

(ಶ್ಲೋಕ - 30)

ಮೂಲಮ್

ಗೀತಂ ಭಗವತಾ ಜ್ಞಾನಂ ಯತ್ತತ್ಸಂಗ್ರಾಮಮೂರ್ಧನಿ ।
ಕಾಲಕರ್ಮತಮೋರುದ್ಧಂ ಪುನರಧ್ಯಗಮದ್ವಿಭುಃ ॥

ಅನುವಾದ

ಯುದ್ಧದ ಪ್ರಾರಂಭದಲ್ಲಿ ಭಗವಂತನು ಅವನಿಗೆ ಮಾಡಿದ ಗೀತೋಪದೇಶದ ಜ್ಞಾನವು-ಕಾಲ, ಕರ್ಮ, ತಮೋ ಗುಣಗಳ ಪ್ರಭಾವದಿಂದ ಅಲ್ಲಿಯವರೆಗೆ ಮರೆಯಾಗಿದ್ದು, ಈಗ ಮತ್ತೆ ಪುನಃ ಅವನ ಸ್ಮೃತಿಪಥವನ್ನು ಬೆಳಗಿತು.॥30॥

ಮೂಲಮ್

(ಶ್ಲೋಕ - 31)
ವಿಶೋಕೋ ಬ್ರಹ್ಮಸಂಪತ್ತ್ಯಾ ಸಂಛಿನ್ನದ್ವೈತಸಂಶಯಃ ।
ಲೀನಪ್ರಕೃತಿನೈರ್ಗುಣ್ಯಾದಲಿಂಗತ್ವಾದಸಂಭವಃ ॥

ಅನುವಾದ

ಬ್ರಹ್ಮ ಜ್ಞಾನದ ಪ್ರಾಪ್ತಿಯಿಂದ ಮಾಯೆಯ ಆವರಣವು ಕಳಚಿಬಿತ್ತು. ತ್ರಿಗುಣಾತೀತ ಅವಸ್ಥೆಯು ಅವನಿಗೆ ಉಂಟಾಯಿತು. ದ್ವೈತದ ಸಂಶಯವು ನಿವೃತ್ತ ವಾಯಿತು. ಸೂಕ್ಷ್ಮಶರೀರ (ಲಿಂಗಶರೀರ) ಭಂಗವಾಯಿತು. ಅವನು ಶೋಕ ಹಾಗೂ ಹುಟ್ಟು-ಸಾವುಗಳ ಚಕ್ರದಿಂದ ಪೂರ್ಣವಾಗಿ ಬಿಡುಗಡೆಹೊಂದಿದನು.॥31॥

ಮೂಲಮ್

(ಶ್ಲೋಕ - 32)
ನಿಶಮ್ಯ ಭಗವನ್ಮಾರ್ಗಂ ಸಂಸ್ಥಾಂ ಯದುಕುಲಸ್ಯ ಚ ।
ಸ್ವಃಪಥಾಯ ಮತಿಂ ಚಕ್ರೇ ನಿಭೃತಾತ್ಮಾ ಯುಷ್ಠಿರಃ ॥

ಅನುವಾದ

ಶ್ರೀಭಗವಂತನು ಸ್ವಧಾಮಕ್ಕೆ ತೆರಳಿದ ವೃತ್ತಾಂತವನ್ನು ಹಾಗೂ ಯದುಕುಲ ಸಂಹಾರದ ಸಮಾಚಾರವನ್ನು ಕೇಳಿ ಯುಧಿಷ್ಠಿರನು ನಿಶ್ಚಲಬುದ್ಧಿಯಿಂದ ಸ್ವರ್ಗಾರೋಹಣವನ್ನು ನಿಶ್ಚಯಿಸಿದನು. ॥32॥

(ಶ್ಲೋಕ - 33)

ಮೂಲಮ್

ಪೃಥಾಪ್ಯನುಶ್ರುತ್ಯ ಧನಂಜಯೋದಿತಂ
ನಾಶಂ ಯದೂನಾಂ ಭಗವದ್ಗತಿಂ ಚ ತಾಮ್ ।
ಏಕಾಂತಭಕ್ತ್ಯಾ ಭಗವತ್ಯಧೋಕ್ಷಜೇ
ನಿವೇಶಿತಾತ್ಮೋಪರರಾಮ ಸಂಸೃತೇಃ ॥

ಅನುವಾದ

ಕುಂತೀದೇವಿಯೂ ಕೂಡ ಯದುವಂಶದ ಕ್ಷಯವನ್ನು ಮತ್ತು ಭಗವಂತನ ಸ್ವಧಾಮ ಗಮನವನ್ನು ಕೇಳಿ ಅನನ್ಯ ಭಕ್ತಿಯಿಂದ ತನ್ನ ಹೃದಯವನ್ನು ಭಗವಾನ್ ಶ್ರೀಕೃಷ್ಣನಲ್ಲಿ ತೊಡಗಿಸಿ ಸಂಸಾರ ಬಂಧನದಿಂದ ಎಂದೆಂದಿಗೂ ಬಿಡುಗಡೆಹೊಂದಿದಳು.॥33॥

ಮೂಲಮ್

(ಶ್ಲೋಕ - 34)
ಯಯಾಹರದ್ಭುವೋ ಭಾರಂ ತಾಂ ತನುಂ ವಿಜಹಾವಜಃ ।
ಕಂಟಕಂ ಕಂಟಕೇನೇವ ದ್ವಯಂ ಚಾಪೀಶಿತುಃ ಸಮಮ್ ॥

ಅನುವಾದ

ಜನ್ಮರಹಿತನಾದ ಭಗವಂತನು ‘ಮುಳ್ಳಿನಿಂದಲೇ ಮುಳ್ಳನ್ನು ತೆಗೆದು, ಕೊನೆಗೆ ಎರಡನ್ನೂ ಎಸೆದುಬಿಡುವಂತೆ ‘ಲೋಕದೃಷ್ಟಿಯಲ್ಲಿ ಯಾವ ಯಾದವ ಶರೀರವನ್ನು ಪ್ರಕಟಪಡಿಸಿ ಅದರಿಂದ ಭೂಭಾರವನ್ನು ಇಳಿಸಿದನೋ, ಆ ಶರೀರವನ್ನೂ ತ್ಯಜಿಸಿಬಿಟ್ಟನು. ಭಗವಂತನ ದೃಷ್ಟಿಯಲ್ಲಿ ಅವೆರಡೂ ಸಮಾನವೇ ಆಗಿವೆಯಷ್ಟೆ!॥34॥

(ಶ್ಲೋಕ - 35)

ಮೂಲಮ್

ಯಥಾ ಮತ್ಸ್ಯಾದಿರೂಪಾಣಿ ಧತ್ತೇಜಹ್ಯಾದ್ಯಥಾ ನಟಃ ।
ಭೂಭಾರಃ ಕ್ಷಪಿತೋ ಯೇನ ಜಹೌ ತಚ್ಚ ಕಲೇವರಮ್ ॥

ಅನುವಾದ

ಓರ್ವ ನಟನಂತೆ ಮತ್ಸ್ಯಾದಿ ಅವತಾರ ಶರೀರಗಳನ್ನು ಸ್ವೀಕರಿಸುವ ಭಗವಂತನು ಭೂಭಾರವನ್ನಿಳುಹಲು ಯಾದವ ದೇಹದಿಂದ ಭೂಮಿಗೆ ಇಳಿದಿದ್ದನೋ, ಆ ಶರೀರವನ್ನೂ ಮರೆ ಮಾಡಿದನು.॥35॥

(ಶ್ಲೋಕ - 36)

ಮೂಲಮ್

ಯದಾ ಮುಕುಂದೋ ಭಗವಾನಿಮಾಂ ಮಹೀಂ
ಜಹೌ ಸ್ವತನ್ವಾ ಶ್ರವಣೀಯಸತ್ಕಥಃ ।
ತದಾಹರೇವಾಪ್ರತಿಬುದ್ಧಚೇತಸಾ-
ಮಧರ್ಮಹೇತುಃ ಕಲಿರನ್ವವರ್ತತ ॥

ಅನುವಾದ

ಶ್ರವಣಮಂಗಳವಾದ ದಿವ್ಯಲೀಲೆಗಳನ್ನು ಯಾವ ದೇಹದಿಂದ ನಡೆಸಿದ್ದನೋ, ಆ ದೇಹವನ್ನು ಭಗವಂತನು ಭೂಮಿಯಲ್ಲಿ ತ್ಯಜಿಸಿದ ದಿನದಿಂದಲೇ ಅವಿವೇಕಿಗಳನ್ನು ಅಧರ್ಮದಲ್ಲಿ ಸಿಲುಕಿಸುವಂತಹ ಕಲಿ ಯುಗವು ಪ್ರಾರಂಭವಾಯಿತು.॥36॥

(ಶ್ಲೋಕ - 37)

ಮೂಲಮ್

ಯುಷ್ಠಿರಸ್ತತ್ಪರಿಸರ್ಪಣಂ ಬುಧಃ
ಪುರೇ ಚ ರಾಷ್ಟ್ರೇ ಚ ಗೃಹೇ ತಥಾತ್ಮನಿ ।
ವಿಭಾವ್ಯ ಲೋಭಾನೃತಜಿಹ್ಮಹಿಂಸನಾ-
ದ್ಯಧರ್ಮಚಕ್ರಂ ಗಮನಾಯ ಪರ್ಯಧಾತ್ ॥

ಅನುವಾದ

ವಿವೇಕಿಯಾದ ಧರ್ಮರಾಜನು ತನ್ನ ರಾಜಧಾನಿಯಲ್ಲಿಯೂ, ರಾಷ್ಟ್ರದಲ್ಲಿಯೂ, ಮನೆ-ಮನೆಗಳಲ್ಲಿಯೂ, ಮನಸ್ಸಿನಲ್ಲಿಯೂ ದುರಾಸೆ, ಅಸತ್ಯ, ಕಾಪಟ್ಯ, ಹಿಂಸೆ ಮುಂತಾದ ಅಧರ್ಮ ಚಕ್ರವನ್ನು ನಡೆಸುವ ಕಲಿಪುರುಷನ ಆಕ್ರಮಣವನ್ನೂ ವಿಸ್ತಾರವನ್ನೂ ಗಮನಿಸಿದಾಗ ಮಹಾಪ್ರಸ್ಥಾನವನ್ನು ನಿಶ್ಚಯಿಸಿದನು. ॥37॥

(ಶ್ಲೋಕ - 38)

ಮೂಲಮ್

ಸ್ವರಾಟ್ ಪೌತ್ರಂ ವಿನಯಿನಮಾತ್ಮನಃ ಸುಸಮಂ ಗುಣೈಃ ।
ತೋಯನೀವ್ಯಾಃ ಪತಿಂ ಭೂಮೇರಭ್ಯಷಿಂಚದ್ಗಜಾಹ್ವಯೇ ॥

ಅನುವಾದ

ಆ ಸಾರ್ವಭೌಮನು ವಿನಯ ಸಂಪನ್ನನಾಗಿದ್ದ, ಗುಣಸಂಪತ್ತಿನಿಂದ ತನ್ನನ್ನೇ ಸರಿ ಹೋಲುತ್ತಿದ್ದ ಮೊಮ್ಮಗನಾದ ಪರೀಕ್ಷಿತನನ್ನು ಸಮುದ್ರ ಪರ್ಯಂತವಾದ ಭೂಮಿಯ ಸಾಮ್ರಾಜ್ಯಪದವಿಯಲ್ಲಿ ಕುಳ್ಳಿರಿಸಿ ಹಸ್ತಿನಾವತಿಯಲ್ಲಿ ಪಟ್ಟಾಭಿಷೇಕ ಮಾಡಿದನು.॥38॥

(ಶ್ಲೋಕ - 39)

ಮೂಲಮ್

ಮಥುರಾಯಾಂ ತಥಾ ವಜ್ರಂ ಶೂರಸೇನಪತಿಂ ತತಃ ।
ಪ್ರಾಜಾಪತ್ಯಾಂ ನಿರೂಪ್ಯೇಷ್ಟಿ ಮಗ್ನೀನಪಿಬದೀಶ್ವರಃ ॥

ಅನುವಾದ

ಹಾಗೆಯೇ ಆ ಪ್ರಭುವು ಮಥುರೆಯಲ್ಲಿ ಶೂರಸೇನ ದೇಶದ ಅಧಿಪತಿಯಾಗಿ ಅನಿರುದ್ಧನ ಪುತ್ರನಾದ ವಜ್ರನಾಭನಿಗೆ ಪಟ್ಟಕಟ್ಟಿದನು. ಅನಂತರ ತಾನು ಪ್ರಾಜಾಪತ್ಯವೆಂಬ ಇಷ್ಟಿಯನ್ನು ಮಾಡಿ ಆಹವನೀಯವೇ ಮುಂತಾದ ಅಗ್ನಿಗಳನ್ನು ತನ್ನಲ್ಲಿಯೇ ಲಯಗೊಳಿಸಿಕೊಂಡು ಗೃಹಸ್ಥಾಶ್ರಮದಿಂದ ಮುಕ್ತನಾಗಿ ಸಂನ್ಯಾಸವನ್ನು ಸ್ವೀಕರಿಸಿದನು.॥39॥

(ಶ್ಲೋಕ - 40)

ಮೂಲಮ್

ವಿಸೃಜ್ಯ ತತ್ರ ತತ್ಸರ್ವಂ ದುಕೂಲವಲಯಾದಿಕಮ್ ।
ನಿರ್ಮಮೋ ನಿರಹಂಕಾರಃ ಸಂಛಿನ್ನಾಶೇಷಬಂಧನಃ ॥

ಅನುವಾದ

ಯುಧಿಷ್ಠಿರನು ತನ್ನ ಅಮೂಲ್ಯವಾದ ವಸ್ತ್ರ-ಆಭೂಷಣಗಳನೆಲ್ಲ ಅಲ್ಲಿಯೇ ತ್ಯಜಿಸಿ, ಅಹಂಕಾರ-ಮಮಕಾರಗಳನ್ನು ತೊರೆದು ಎಲ್ಲ ಸಾಂಸಾರಿಕ ಬಂಧನಗಳನ್ನು ಕತ್ತರಿಸಿ ಹಾಕಿದನು.॥40॥

(ಶ್ಲೋಕ - 41)

ಮೂಲಮ್

ವಾಚಂ ಜುಹಾವ ಮನಸಿ ತತ್ಪ್ರಾಣ ಇತರೇ ಚ ತಮ್ ।
ಮೃತ್ಯಾವಪಾನಂ ಸೋತ್ಸರ್ಗಂ ತಂ ಪಂಚತ್ವೇ ಹ್ಯಜೋಹವೀತ್ ॥

ಅನುವಾದ

ಅವನು ದೃಢಭಾವನೆಯಿಂದ ವಾಣಿಯನ್ನು ಮನಸ್ಸಿನಲ್ಲಿಯೂ, ಮನಸ್ಸನ್ನು ಪ್ರಾಣದಲ್ಲಿಯೂ, ಪ್ರಾಣವನ್ನು ಅಪಾನದಲ್ಲಿಯೂ, ಅಪಾನವನ್ನು ಅದರ ಕ್ರಿಯೆಗಳೊಂದಿಗೆ ಮೃತ್ಯುವಿನಲ್ಲಿ ಹಾಗೂ ಮೃತ್ಯುವನ್ನು ಪಂಚಭೂತ ಶರೀರದಲ್ಲಿ ಲೀನಗೊಳಿಸಿಕೊಂಡನು.॥41॥

(ಶ್ಲೋಕ - 42)

ಮೂಲಮ್

ತ್ರಿತ್ವೇ ಹುತ್ವಾಥ ಪಂಚತ್ವಂ ತಚ್ಚೈಕತ್ವೇಜುಹೋನ್ಮುನಿಃ ।
ಸರ್ವಮಾತ್ಮನ್ಯಜುಹವೀದ್ ಬ್ರಹ್ಮಣ್ಯಾತ್ಮಾನಮವ್ಯಯೇ ॥

ಅನುವಾದ

ಹೀಗೆ ಶರೀರವನ್ನು ಮೃತ್ಯುರೂಪೀ ಎಂದು ಅನುಭವಿಸುತ್ತಾ ಅವನು ಅದನ್ನು ತ್ರಿಗುಣಗಳ ಸಮುದಾಯದಲ್ಲಿ ವಿಲಯ ಗೊಳಿಸಿ, ತ್ರಿಗುಣಗಳನ್ನು ಮೂಲಪ್ರಕೃತಿಯಲ್ಲಿಯೂ, ಸರ್ವಕಾರಣರೂಪೀ ಪ್ರಕೃತಿಯನ್ನು ಆತ್ಮನಲ್ಲಿಯೂ, ಆತ್ಮ ವನ್ನು ಅವಿನಾಶೀ ಬ್ರಹ್ಮನಲ್ಲಿ ವಿಲೀನಗೊಳಿಸಿದನು. ಆಗ ಅವನಿಗೆ ಈ ದೃಶ್ಯಪ್ರಪಂಚವೆಲ್ಲವೂ ಬ್ರಹ್ಮಸ್ವರೂಪವಾಗಿದೆ ಎಂಬ ಅನುಭವ ಆಗತೊಡಗಿತು.॥42॥

(ಶ್ಲೋಕ - 43)

ಮೂಲಮ್

ಚೀರವಾಸಾ ನಿರಾಹಾರೋ ಬಂಧವಾಙ್ಮುಕ್ತಮೂರ್ಧಜಃ ।
ದರ್ಶಯನ್ನಾತ್ಮನೋ ರೂಪಂ ಜಡೋನ್ಮತ್ತಪಿಶಾಚವತ್ ॥

ಅನುವಾದ

ಅನಂತರ ಅವನು ನಾರುಮಡಿಯನ್ನುಟ್ಟು, ಅನ್ನ-ಪಾನಾದಿಗಳನ್ನು ತ್ಯಜಿಸಿ, ಮೌನವಹಿಸಿದನು. ಕೂದಲುಗಳನ್ನು ಬಿಚ್ಚಿ ಕೆದರಿ ಕೊಂಡು ಜಡನಂತೆಯೂ, ಪಿಶಾಚಿಯಂತೆಯೂ ರೂಪ, ವೇಷ, ಕೃತಿಗಳಿಂದ ಕಾಣಿಸಿಕೊಳ್ಳತೊಡಗಿದನು.॥43॥

(ಶ್ಲೋಕ - 44)

ಮೂಲಮ್

ಅನಪೇಕ್ಷಮಾಣೋ ನಿರಗಾದಶೃಣ್ವನ್ ಬರೋ ಯಥಾ ।
ಉದೀಚೀಂ ಪ್ರವಿವೇಶಾಶಾಂ ಗತಪೂರ್ವಾಂ ಮಹಾತ್ಮಭಿಃ ।
ಹೃದಿ ಬ್ರಹ್ಮ ಪರಂ ಧ್ಯಾಯನ್ನಾವರ್ತೇತ ಯತೋ ಗತಃ ॥

ಅನುವಾದ

ಮತ್ತೆ ಅವನು ಕುರುಡನಂತೆ ಯಾವುದನ್ನೂ ನೋಡದೆ, ಕಿವುಡನಂತೆ ಯಾವುದನ್ನೂ ಕೇಳದೆ ಮನೆಯಿಂದ ಹೊರಟು ಬಿಟ್ಟನು. ಯಾವುದನ್ನು ಪಡೆದ ಬಳಿಕ ಮತ್ತೆ ಸಂಸಾರಕ್ಕೆ ಮರಳುವಿಕೆ ಇರುವುದಿಲ್ಲವೋ ಅಂತಹ ಪರಬ್ರಹ್ಮನನ್ನು ಧ್ಯಾನಿಸುತ್ತಾ, ಮಹಾತ್ಮರೆಲ್ಲರೂ ಮಹಾಪ್ರಸ್ಥಾನ ಮಾಡಿದ ಉತ್ತರದಿಕ್ಕಿನ ಕಡೆಗೆ ಹೊರಟನು.॥44॥

(ಶ್ಲೋಕ - 45)

ಮೂಲಮ್

ಸರ್ವೇ ತಮನು ನಿರ್ಜಗ್ಮುರ್ಭ್ರಾತರಃ ಕೃತನಿಶ್ಚಯಾಃ ।
ಕಲಿನಾಧರ್ಮಮಿತ್ರೇಣ ದೃಷ್ಟ್ವಾ ಸ್ಪೃಷ್ಟಾಃ ಪ್ರಜಾ ಭುವಿ ॥

ಅನುವಾದ

ಈಗ ಪೃಥ್ವಿಯಲ್ಲಿ ಎಲ್ಲ ಜನರನ್ನು ಅಧರ್ಮದ ಸಹಾಯಕ ಕಲಿಯುಗವು ಪ್ರಭಾವಿತಗೊಳಿಸಿದೆ ಎಂದು ಭೀಮಸೇನ, ಅರ್ಜುನನೇ ಮೊದಲಾದ ಧರ್ಮಜನ ತಮ್ಮಂದಿರು ನೋಡಿ, ಆ ಶ್ರೀಕೃಷ್ಣಪರಮಾತ್ಮನ ಚರಣಗಳ ಪ್ರಾಪ್ತಿಯ ದೃಢನಿಶ್ಚಯಗೈದು ತಮ್ಮ ಅಣ್ಣನೊಡನೆ ಹಿಂದೆ-ಹಿಂದೆ ನಡೆದುಬಿಟ್ಟರು.॥45॥

(ಶ್ಲೋಕ - 46)

ಮೂಲಮ್

ತೇ ಸಾಧುಕೃತಸರ್ವಾರ್ಥಾ ಜ್ಞಾತ್ವಾತ್ಯಂತಿಕಮಾತ್ಮನಃ ।
ಮನಸಾ ಧಾರಯಾಮಾಸುರ್ವೈಕುಂಠಚರಣಾಂಬುಜಮ್ ॥

ಅನುವಾದ

ಅವರೆಲ್ಲರೂ ಜೀವನದ ಎಲ್ಲ ಲಾಭಗಳನ್ನು ಚೆನ್ನಾಗಿ ಪಡೆದುಕೊಂಡಿದ್ದರು. ಇನ್ನು ನಮಗೆ ಭಗವಾನ್ ಶ್ರೀಕೃಷ್ಣನ ಚರಣಕಮಲಗಳೇ ಪರಮ ಪುರುಷಾರ್ಥವೆಂದು ನಿಶ್ಚಯಿಸಿಕೊಂಡು ಅವರು ಅವನ್ನು ಹೃದಯದಲ್ಲಿ ಧರಿಸಿಕೊಂಡರು.॥46॥

(ಶ್ಲೋಕ - 47)

ಮೂಲಮ್

ತದ್ಧ್ಯಾನೋದ್ರಿಕ್ತಯಾ ಭಕ್ತ್ಯಾ ವಿಶುದ್ಧಷಣಾಃ ಪರೇ ।
ತಸ್ಮಿನ್ನಾರಾಯಣಪದೇ ಏಕಾಂತ ಮತಯೋ ಗತಿಮ್ ॥

(ಶ್ಲೋಕ - 48)

ಮೂಲಮ್

ಅವಾಪುರ್ದುರವಾಪಾಂ ತೇ ಅಸದ್ಭಿರ್ವಿಷಯಾತ್ಮಭಿಃ ।
ವಿಧೂತಕಲ್ಮಷಾಸ್ಥಾನೇ ವಿರಜೇನಾತ್ಮನೈವ ಹಿ ॥

ಅನುವಾದ

ಪಾಂಡವರ ಹೃದಯದಲ್ಲಿ ಭಗವಾನ್ ಶ್ರೀಕೃಷ್ಣನ ಚರಣಕಮಲಗಳ ಧ್ಯಾನದಿಂದ ಭಕ್ತಿಭಾವವು ಉಕ್ಕಿಬಂತು. ಅವರ ಬುದ್ಧಿಗಳು ಪೂರ್ಣ ರೂಪದಿಂದ ಶುದ್ಧವಾಗಿ ಪುಣ್ಯಾತ್ಮರು ಸ್ಥಿರವಾಗಿ ನೆಲೆಸುವ ಆ ಭಗವಾನ್ ಶ್ರೀಕೃಷ್ಣನ ಸರ್ವೋತ್ತಮವಾದ ಸ್ವರೂಪದಲ್ಲಿ ಅನನ್ಯ ಭಾವದಿಂದ ಸ್ಥಿರವಾದುವು. ಫಲ ಸ್ವರೂಪವಾಗಿ ವಿಷಯಾಸಕ್ತ ದುಷ್ಟ ಜನರು ಎಂದೂ ಪಡೆಯಲಾರದ ಗತಿಯನ್ನು ವಿಶುದ್ಧ ಅಂತಃ ಕರಣದಿಂದ ಅವರು ಪಡೆದುಕೊಂಡರು.॥47-48॥

(ಶ್ಲೋಕ - 49)

ಮೂಲಮ್

ವಿದುರೋಪಿ ಪರಿತ್ಯಜ್ಯ ಪ್ರಭಾಸೇ ದೇಹಮಾತ್ಮವಾನ್ ।
ಕೃಷ್ಣಾವೇಶೇನ ತಚ್ಚಿತ್ತಃ ಪಿತೃಭಿಃ ಸ್ವಕ್ಷಯಂ ಯಯೌ ॥

ಅನುವಾದ

ಸಂಯಮಿ ಹಾಗೂ ಶ್ರೀಕೃಷ್ಣನ ಪ್ರೇಮದಿಂದ ಮುಗ್ಧನಾದ ಭಗವನ್ಮಯ ವಿದುರನೂ ಕೂಡ ತನ್ನ ಶರೀರವನ್ನು ಪ್ರಭಾಸಕ್ಷೇತ್ರದಲ್ಲಿ ತ್ಯಜಿಸಿ ಬಿಟ್ಟನು. ಆಗ ಅವನನ್ನು ಕರೆದುಕೊಂಡು ಹೋಗಲು ಬಂದ ಪಿತೃಗಳೊಂದಿಗೆ ಅವನು ತನ್ನ ಲೋಕ (ಯಮ ಲೋಕ)ಕ್ಕೆ ಹೊರಟು ಹೋದನು.॥49॥

(ಶ್ಲೋಕ - 50)

ಮೂಲಮ್

ದ್ರೌಪದೀ ಚ ತದಾಜ್ಞಾಯ ಪತೀನಾಮನಪೇಕ್ಷತಾಮ್ ।
ವಾಸುದೇವೇ ಭಗವತಿ ಹ್ಯೇಕಾಂತಮತಿರಾಪ ತಮ್ ॥

ಅನುವಾದ

ಈಗ ಪಾಂಡವರು ನಿರಪೇಕ್ಷರಾಗಿದ್ದಾರೆಂದು ದ್ರೌಪದಿಯು ಗಮನಿಸಿ, ಅವಳು ಅನನ್ಯ ಭಕ್ತಿಯಿಂದ ಭಗವಾನ್ ಶ್ರೀಕೃಷ್ಣನನ್ನೇ ಚಿಂತಿಸುತ್ತಾ, ಅವನನ್ನು ಪಡೆದುಕೊಂಡಳು.॥50॥

ಮೂಲಮ್

(ಶ್ಲೋಕ - 51)
ಯಃ ಶ್ರದ್ಧಯೈ ತದ್ಭಗವತ್ಪ್ರಿಯಾಣಾಂ
ಪಾಂಡೋಃ ಸುತಾನಾಮಿತಿ ಸಂಪ್ರಯಾಣಮ್ ।
ಶೃಣೋತ್ಯಲಂ ಸ್ವಸ್ತ್ಯಯನಂ ಪವಿತ್ರಂ
ಲಬ್ಧ್ವಾ ಹರೌ ಭಕ್ತಿಮುಪೈತಿ ಸಿದ್ಧಿಮ್ ॥

ಅನುವಾದ

ಪರಮಪವಿತ್ರವೂ, ಮಂಗಳಕರವೂ ಆದ ಭಗವಂತನ ಪ್ರಿಯ ಭಕ್ತರಾದ ಪಾಂಡವರ ಮಹಾಪ್ರಯಾಣದ ಈ ಕಥೆಯನ್ನು ಶ್ರದ್ಧೆಯಿಂದ ಕೇಳುವವನು ನಿಶ್ಚಯವಾಗಿ ಭಗವಂತನ ಭಕ್ತಿ ಮತ್ತು ಮುಕ್ತಿಗಳನ್ನು ಪಡೆದುಕೊಳ್ಳುವನು.॥51॥

ಅನುವಾದ (ಸಮಾಪ್ತಿಃ)

ಹದಿನೈದನೆಯ ಅಧ್ಯಾಯವು ಮುಗಿಯಿತು.॥15॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ಪಾಂಡವಸ್ವರ್ಗಾರೋಹಣಂ ನಾಮ ಪಂಚದಶೋಽಧ್ಯಾಯಃ ॥15॥