೧೪

[ಹದಿನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಅಪಶಕುನಗಳನ್ನು ಕಂಡು ಯುಧಿಷ್ಠಿರನ ಆಶಂಕೆ, ಅರ್ಜುನನು ದ್ವಾರಕೆಯಿಂದ ಮರಳಿದುದು

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಸಂಪ್ರಸ್ಥಿತೇ ದ್ವಾರಕಾಯಾಂ ಜಿಷ್ಣೌ ಬಂಧುದಿದೃಕ್ಷಯಾ ।
ಜ್ಞಾತುಂ ಚ ಪುಣ್ಯಶ್ಲೋಕಸ್ಯ ಕೃಷ್ಣಸ್ಯ ಚ ವಿಚೇಷ್ಟಿತಮ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಎಲೈ ಶೌನಕಾದಿಗಳೇ! ದ್ವಾರಕೆಯಲ್ಲಿದ್ದ ನೆಂಟರಿಷ್ಟರನ್ನು ನೋಡಿಬರುವ ಬಯಕೆಯಿಂದಲೂ, ಪುಣ್ಯಕೀರ್ತಿಯಾದ ಭಗವಾನ್ ಶ್ರೀಕೃಷ್ಣನ ದಿವ್ಯಚೇಷ್ಟಿತಗಳನ್ನು ವಿಶೇಷವಾಗಿ ತಿಳಿಯುವ ಅಪೇಕ್ಷೆಯಿಂದಲೂ ಅರ್ಜುನನು ದ್ವಾರಕೆಗೆ ಹೋಗಿದ್ದನು.॥1॥

(ಶ್ಲೋಕ - 2)

ಮೂಲಮ್

ವ್ಯತೀತಾಃ ಕತಿಚಿನ್ಮಾಸಾಸ್ತದಾ ನಾಯಾತ್ತತೋರ್ಜುನಃ ।
ದದರ್ಶ ಘೋರರೂಪಾಣಿ ನಿಮಿತ್ತಾನಿ ಕುರೂದ್ವಹಃ ॥

ಅನುವಾದ

ಅನೇಕ ತಿಂಗಳುಗಳು ಕಳೆದು ಹೋದರೂ ಅರ್ಜುನನು ಹಿಂದಿರುಗದಿದ್ದಾಗ, ಧರ್ಮರಾಜ ಯುಧಿಷ್ಠಿರನಿಗೆ ಭೀಕರವಾದ ಅಪಶಕುನಗಳು ಕಾಣಿಸತೊಡಗಿದವು.॥2॥

(ಶ್ಲೋಕ - 3)

ಮೂಲಮ್

ಕಾಲಸ್ಯ ಚ ಗತಿಂ ರೌದ್ರಾಂ
ವಿಪರ್ಯಸ್ತರ್ತುಧರ್ಮಿಣಃ ।
ಪಾಪೀಯಸೀಂ ನೃಣಾಂ ವಾರ್ತಾಂ
ಕ್ರೋಧಲೋಭಾನೃತಾತ್ಮನಾಮ್ ॥

ಅನುವಾದ

ಋತುಗಳ ಧರ್ಮಗಳು ಅದಲು-ಬದಲಾಗುವ ಭೀಕರವಾದ ಕಾಲದ ನಡೆಯನ್ನು ಅವನು ಕಂಡನು. ಜನರು ಜೀವನದಲ್ಲಿ ಕ್ರೋಧ, ದುರಾಸೆ, ಅಸತ್ಯಗಳಿಂದ ತುಂಬಿದವರಾಗಿ ತಮ್ಮ ಜೀವನ ನಿರ್ವಹಣೆಗಾಗಿ ಪಾಪದಿಂದ ತುಂಬಿದ ವ್ಯಾಪಾರ ಮಾಡತೊಡಗಿರುವರು.॥3॥

(ಶ್ಲೋಕ - 4)

ಮೂಲಮ್

ಜಿಹ್ಮಪ್ರಾಯಂ ವ್ಯವಹೃತಂ ಶಾಠ್ಯಮಿಶ್ರಂ ಚ ಸೌಹೃದಮ್ ।
ಪಿತೃಮಾತೃಸುಹೃದ್ಭ್ರಾತೃದಂಪತೀನಾಂ ಚ ಕಲ್ಕನಮ್ ॥

ಅನುವಾದ

ಕಪಟ ವ್ಯವಹಾರ ಮಾಡುವುದೂ, ಕೃತ್ರಿಮವಾದ ಸ್ನೇಹವನ್ನು ತೋರುವುದೂ, ತಂದೆ-ತಾಯಿ, ಹತ್ತಿರದ ನೆಂಟರು, ಅಣ್ಣ-ತಮ್ಮಂದಿರು, ಪತಿ-ಪತ್ನೀಯರು ಪರಸ್ಪರ ಜಗಳಗಂಟರಾಗುವುದನ್ನು ಕಂಡನು.॥4॥

(ಶ್ಲೋಕ - 5)

ಮೂಲಮ್

ನಿಮಿತ್ತಾನ್ಯತ್ಯರಿಷ್ಟಾನಿ ಕಾಲೇ ತ್ವನುಗತೇ ನೃಣಾಮ್ ।
ಲೋಭಾದ್ಯಧರ್ಮಪ್ರಕೃತಿಂ ದೃಷ್ಟ್ವೋವಾಚಾನುಜಂ ನೃಪಃ ॥

ಅನುವಾದ

ಕಲಿಕಾಲವು ಬಂದಿದ್ದರಿಂದ ಜನರ ಸ್ವಭಾವವೇ ಲೋಭ, ದಂಭವೇ ಮುಂತಾದ ಅಧರ್ಮಗಳಿಂದ ಕೂಡಿರುವುದನ್ನು ನೋಡಿದನು. ಪ್ರಕೃತಿಯಲ್ಲಿಯೂ ಅತ್ಯಂತ ಅರಿಷ್ಟ ಸೂಚಕ ಅಪಶಕುನಗಳು ಆಗತೊಡಗಿದವು. ಇದೆಲ್ಲವನ್ನು ನೋಡಿದ ಧರ್ಮರಾಯನು ತಮ್ಮನಾದ ಭೀಮಸೇನನನಲ್ಲಿ ಹೀಗೆ ಹೇಳಿದನು.॥5॥

(ಶ್ಲೋಕ - 6)

ಮೂಲಮ್ (ವಾಚನಮ್)

ಯುಧಿಷ್ಠಿರ ಉವಾಚ

ಮೂಲಮ್

ಸಂಪ್ರೇಷಿತೋ ದ್ವಾರಕಾಯಾಂ ಜಿಷ್ಣುರ್ಬಂಧುದಿದೃಕ್ಷಯಾ ।
ಜ್ಞಾತುಂ ಚ ಪುಣ್ಯಶ್ಲೋಕಸ್ಯ ಕೃಷ್ಣಸ್ಯ ಚ ವಿಚೇಷ್ಟಿತಮ್ ॥

ಅನುವಾದ

ಯುಧಿಷ್ಠಿರನೆಂದ — ‘‘ಭೀಮಸೇನ! ‘ಬಂಧುಗಳ ಯೋಗ-ಕ್ಷೇಮಗಳನ್ನು ವಿಚಾರಿಸಿಕೊಂಡು, ಪುಣ್ಯಕೀರ್ತಿಯಾದ ಶ್ರೀಕೃಷ್ಣನು ಯಾವ ಲೀಲೆಗಳನ್ನು ಮಾಡುತ್ತಿದ್ದಾನೆ ಎಂಬುದನ್ನು ತಿಳಿದು ಬಾ’ ಎಂದು ನಾವು ಅರ್ಜುನನನ್ನು ದ್ವಾರಕೆಗೆ ಕಳುಹಿಸಿದ್ದೆವು.॥6॥

(ಶ್ಲೋಕ - 7)

ಮೂಲಮ್

ಗತಾಃ ಸಪ್ತಾಧುನಾ ಮಾಸಾ ಭೀಮಸೇನ ತವಾನುಜಃ ।
ನಾಯಾತಿ ಕಸ್ಯ ವಾ ಹೇತೋರ್ನಾಹಂ ವೇದೇದಮಂಜಸಾ ॥

ಅನುವಾದ

ಅವನು ಅಲ್ಲಿಗೆ ಹೋಗಿ ಇಂದಿಗೆ ಏಳು ತಿಂಗಳುಗಳು ಕಳೆದುವು. ಇಷ್ಟು ಸಮಯವಾದರೂ ಅವನೇಕೆ ಹಿಂದಿರುಗಿಲ್ಲವೆಂಬುದು ಸರಿಯಾಗಿ ತಿಳಿಯುತ್ತಿಲ್ಲವಲ್ಲಾ! ॥7॥

(ಶ್ಲೋಕ - 8)

ಮೂಲಮ್

ಅಪಿ ದೇವರ್ಷಿಣಾದಿಷ್ಟಃ ಸ ಕಾಲೋಯಮುಪಸ್ಥಿತಃ ।
ಯದಾತ್ಮನೋಂಗಮಾಕ್ರೀಡಂ ಭಗವಾನುತ್ಸಿಸೃಕ್ಷತಿ ॥

ಅನುವಾದ

ಭಗವಂತನಾದ ಶ್ರೀಕೃಷ್ಣ ಪರಮಾತ್ಮನು ತನ್ನ ಮನುಷ್ಯಲೀಲೆಗಳಿಗೆ ಆಧಾರವಾಗಿರುವ ಮಾನುಷದೇಹವನ್ನು ಉಪಸಂಹಾರ ಮಾಡಿಕೊಳ್ಳಲು ಬಯಸುವ ಕಾಲ ಬರುತ್ತಿದೆಯೆಂದು ದೇವರ್ಷಿ ನಾರದರು ಸೂಚಿಸಿದ್ದರು. ಆ ಕಾಲವು ಬಂದುಬಿಟ್ಟಿಲ್ಲ ತಾನೇ! ॥8॥

(ಶ್ಲೋಕ - 9)

ಮೂಲಮ್

ಯಸ್ಮಾನ್ನಃ ಸಂಪದೋ ರಾಜ್ಯಂ ದಾರಾಃ ಪ್ರಾಣಾಃ ಕುಲಂ ಪ್ರಜಾಃ ।
ಆಸನ್ಸಪತ್ನವಿಜಯೋ ಲೋಕಾಶ್ಚ ಯದನುಗ್ರಹಾತ್ ॥

ಅನುವಾದ

ಯಾವನ ಅನುಗ್ರಹದಿಂದಲೇ ನನಗೆ ಸಂಪತ್ತು, ರಾಜ್ಯ, ಪತ್ನೀ, ಪ್ರಾಣ, ಕುಲ, ಪ್ರಜೆಗಳು, ಶತ್ರುವಿಜಯ ಇವೆಲ್ಲವೂ ದೊರೆತವೋ, ಆ ಸ್ವಾಮಿಯು ತನ್ನ ದೇಹವನ್ನು ಉಪ ಸಂಹಾರಮಾಡಿಕೊಳ್ಳುವ ಸಮಯವು ಬಂದಿಲ್ಲ ತಾನೇ? ॥9॥

(ಶ್ಲೋಕ - 10)

ಮೂಲಮ್

ಪಶ್ಯೋತ್ಪಾತಾನ್ನರವ್ಯಾಘ್ರ ದಿವ್ಯಾನ್ಭೌಮಾನ್ಸದೈಹಿಕಾನ್ ।
ದಾರುಣಾನ್ಶಂಸತೋದೂರಾದ್ಭಯಂ ನೋ ಬುದ್ಧಿಮೋಹನಮ್ ॥

ಅನುವಾದ

ನರೋತ್ತಮನೇ! ಆಕಾಶದಲ್ಲಿ ಉಲ್ಕಾಪಾತವೇ ಮುಂತಾದವುಗಳು, ಭೂಮಿಯಲ್ಲಿ ಭೂಕಂಪವೇ ಮುಂತಾ ದವುಗಳು, ಶರೀರದಲ್ಲಿ ರೋಗಗಳೇ ಮುಂತಾದ ಅಪಶಕುನ ಗಳೂ ಕಾಣಿಸುತ್ತಿರುವುದನ್ನು ನೋಡು. ಇವು ಶೀಘ್ರದಲ್ಲಿಯೇ ನಮ್ಮ ಬುದ್ಧಿಗೆ ಮೋಹವನ್ನುಂಟುಮಾಡುವ ಯಾವುದೋ ಉತ್ಪಾತವುಂಟಾಗುವುದೆಂಬುದನ್ನು ಸೂಚಿಸುತ್ತವೆ. ॥10॥

(ಶ್ಲೋಕ - 11)

ಮೂಲಮ್

ಊರ್ವಕ್ಷಿಬಾಹವೋ ಮಹ್ಯಂ ಸುರಂತ್ಯಂಗ ಪುನಃ ಪುನಃ ।
ವೇಪಥುಶ್ಚಾಪಿ ಹೃದಯೇ ಆರಾದ್ದಾಸ್ಯಂತಿ ವಿಪ್ರಿಯಮ್ ॥

ಅನುವಾದ

ಪ್ರಿಯ ಭೀಮಸೇನಾ! ನನ್ನ ಎಡತೊಡೆ, ಎಡಗಣ್ಣು ಮತ್ತು ಎಡತೋಳುಗಳು ಮತ್ತೆ-ಮತ್ತೆ ಅದುರುತ್ತಿದ್ದು ಹೃದಯವೂ ನಡುಗುತ್ತಿದೆ. ಅತ್ಯಲ್ಪ ಕಾಲದಲ್ಲಿಯೇ ಯಾವುದೋ ಅಪ್ರಿಯವಾದ ಸಮಾಚಾರ ಬರಲಿದೆಯೆಂಬುದನ್ನು ಇವು ಹೇಳುತ್ತಿವೆ.॥11॥

(ಶ್ಲೋಕ - 12)

ಮೂಲಮ್

ಶಿವೈಷೋದ್ಯಂತಮಾದಿತ್ಯಮಭಿರೌತ್ಯನಲಾನನಾ ।
ಮಾಮಂಗ ಸಾರಮೇಯೋಯಮಭಿರೇಭತ್ಯಭೀರುವತ್ ॥

ಅನುವಾದ

ನೋಡು! ಆ ಹೆಣ್ಣು ನರಿಯು ಉದಯವಾಗುತ್ತಲೇ ಸೂರ್ಯನ ಕಡೆಗೆ ನೋಡುತ್ತಾ ಊಳಿಡುತ್ತಿದೆ. ಅದರ ಬಾಯಿಂದ ಬೆಂಕಿಯ ಜ್ವಾಲೆಯೂ ಬರುತ್ತಿದೆಯಲ್ಲಾ! ಆ ನಾಯಿಯು ತನಗಾವ ಭಯವೂ ಇಲ್ಲವೇನೋ ಎಂಬಂತೆ ನನ್ನ ಕಡೆ ನೋಡಿ ಬೊಗುಳುತ್ತಿದೆ.॥12॥

(ಶ್ಲೋಕ - 13)

ಮೂಲಮ್

ಶಸ್ತಾಃ ಕುರ್ವಂತಿ ಮಾಂ ಸವ್ಯಂ ದಕ್ಷಿಣಂ ಪಶವೋಪರೇ ।
ವಾಹಾಂಶ್ಚ ಪುರುಷವ್ಯಾಘ್ರ ಲಕ್ಷಯೇ ರುದತೋ ಮಮ ॥

ಅನುವಾದ

ಓ ಪುರುಷಶ್ರೇಷ್ಠನೇ! ಹಸುವೇ ಮುಂತಾದ ಉತ್ತಮ ಪಶುಗಳು ನನ್ನನ್ನು ತಮ್ಮ ಎಡಗಡೆಗೆ ಬಿಟ್ಟುಕೊಂಡು ಅಪ್ರದಕ್ಷಿಣಾಕಾರವಾಗಿಯೂ, ಕತ್ತೆಯೇ ಮುಂತಾದ ಅಶುಭವಾದ ಪ್ರಾಣಿಗಳು ನನ್ನನ್ನು ತಮ್ಮ ಬಲಗಡೆಗೆ ಬಿಟ್ಟುಕೊಂಡು ಪ್ರದಕ್ಷಿಣಾಕಾರವಾಗಿಯೂ ಸುತ್ತುತ್ತಿವೆ. ನನ್ನ ಕುದುರೆಯೇ ಮುಂತಾದ ವಾಹನಗಳು ಅಳುತ್ತಿರುವಂತೆ ನನಗೆ ಕಾಣಿಸುತ್ತಿದೆ.॥13॥

(ಶ್ಲೋಕ - 14)

ಮೂಲಮ್

ಮೃತ್ಯುದೂತಃ ಕಪೋತೋಯಮುಲೂಕಃ ಕಂಪಯನ್ಮನಃ ।
ಪ್ರತ್ಯುಲೂಕಶ್ಚ ಕುಹ್ವಾನೈರನಿದ್ರೌ ಶೂನ್ಯಮಿಚ್ಛತಃ ॥

ಅನುವಾದ

ಮೃತ್ಯುವಿನ ದೂತರಂತಿರುವ ಪಾರಿವಾಳ, ಗೂಬೆ ಮತ್ತು ಗೂಬೆಯ ಶತ್ರುಗಳಾದ ಕಾಗೆಗಳು ರಾತ್ರಿಯ ವೇಳೆಯಲ್ಲಿ ಕರ್ಣಕಠೋರ ವಾದ ಶಬ್ದಗಳಿಂದ ನನ್ನ ಮನಸ್ಸನ್ನು ನಡುಗಿಸುತ್ತಾ ಶೂನ್ಯವಾಗಿಸಲು ಬಯಸುತ್ತಿವೆ. ಸ್ವತಃ ತಾವೂ ಸುಖವಾಗಿ ನಿದ್ರಿಸುವುದಿಲ್ಲ ಹಾಗೂ ಬೇರೆಯವರ ನಿದ್ದೆಯನ್ನೂ ಹಾಳುಮಾಡುತ್ತಿವೆ.॥14॥

(ಶ್ಲೋಕ - 15)

ಮೂಲಮ್

ಧೂಮ್ರಾದಿಶಃ ಪರಿಧಯಃ ಕಂಪತೇ ಭೂಃ ಸಹಾದ್ರಿಭಿಃ ।
ನಿರ್ಘಾತಶ್ಚ ಮಹಾಂಸ್ತಾತ ಸಾಕಂ ಚ ಸ್ತನಯಿತ್ನುಭಿಃ ॥

ಅನುವಾದ

ದಿಕ್ಕು ಗಳು ಹೊಗೆಯು ತುಂಬಿದಂತೆ ಕಂದುಬಣ್ಣವನ್ನು ತಾಳಿವೆ. ಸೂರ್ಯ ಮತ್ತು ಚಂದ್ರರ ಸುತ್ತಲೂ ಮಂಡಲಗಳು ಬಾರಿ- ಬಾರಿಗೂ ಕಾಣಿಸಿಕೊಳ್ಳುತ್ತಿವೆ. ಭೂಮಿಯು ಪರ್ವತಸಹಿತವಾಗಿ ನಡುಗುತ್ತಿದೆ. ಮೋಡಗಳು ಜೋರಾಗಿ ಗುಡುಗುತ್ತಿದ್ದು ಮಿಂಚು- ಸಿಡಿಲುಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿವೆ.॥15॥

(ಶ್ಲೋಕ - 16)

ಮೂಲಮ್

ವಾಯುರ್ವಾತಿ ಖರಸ್ಪರ್ಶೋ ರಜಸಾ ವಿಸೃಜಂಸ್ತಮಃ ।
ಅಸೃಗ್ ವರ್ಷಂತಿ ಜಲದಾ ಬೀಭತ್ಸಮಿವ ಸರ್ವತಃ ॥

ಅನುವಾದ

ಶರೀರವನ್ನು ಕೊರೆಯುವ ಬಿರುಗಾಳಿಯು ಧೂಳಿನಿಂದ ಕಗ್ಗತ್ತಲೆಯನ್ನು ಹರ ಡುತ್ತಾ ಬೀಸುತ್ತಿದೆ. ಮೇಘಗಳು ಎಲ್ಲೆಡೆಗಳಲ್ಲೂ ಭೀಕರದೃಶ್ಯವನ್ನುಂಟು ಮಾಡುತ್ತಾ ರಕ್ತವನ್ನು ಸುರಿಸುತ್ತಿವೆ.॥16॥

(ಶ್ಲೋಕ - 17)

ಮೂಲಮ್

ಸೂರ್ಯಂ ಹತಪ್ರಭಂ ಪಶ್ಯ ಗ್ರಹಮರ್ದಂ ಮಿಥೋ ದಿವಿ ।
ಸಸಂಕುಲೈರ್ಭೂತಗಣೈರ್ಜ್ವಲಿತೇ ಇವ ರೋದಸೀ ॥

ಅನುವಾದ

ಸೂರ್ಯ-ಚಂದ್ರರ ಪ್ರಭೆಗಳು ಮಂಕಾಗಿಬಿಟ್ಟಿವೆ. ಆಕಾಶದಲ್ಲಿ ಗ್ರಹಗಳು ಒಂದ ಕ್ಕೊಂದು ಘರ್ಷಣೆ ಹೊಂದುತ್ತಿವೆ. ಭೂತಗಣಗಳು ಒಟ್ಟಾಗಿ ಗುಂಪುಗೂಡಿ ಭೂಮಿ-ಆಕಾಶಗಳಲ್ಲಿ ಬೆಂಕಿಹಚ್ಚಿರುವಂತೆ ಕಾಣುತ್ತಿದೆಯಲ್ಲಾ!॥17॥

(ಶ್ಲೋಕ - 18)

ಮೂಲಮ್

ನದ್ಯೋ ನದಾಶ್ಚ ಕ್ಷುಭಿತಾಃ ಸರಾಂಸಿ ಚ ಮನಾಂಸಿ ಚ ।
ನ ಜ್ವಲತ್ಯಗ್ನಿರಾಜ್ಯೇನ ಕಾಲೋಯಂ ಕಿಂ ವಿಧಾಸ್ಯತಿ ॥

ಅನುವಾದ

ನದಿಗಳೂ, ನದಗಳೂ, ಸರೋವರಗಳೂ, ಮತ್ತು ಅಂತೆಯೇ ಜನರ ಮನಸ್ಸುಗಳೂ ಕಲಕಿಹೋಗುತ್ತಿವೆ. ತುಪ್ಪದ ಧಾರೆಯನ್ನು ಸುರಿದರೂ ಅಗ್ನಿಯು ಉರಿಯುತ್ತಿಲ್ಲ. ಈ ಎಲ್ಲ ಅಶುಭಲಕ್ಷಣಗಳಿಂದ ಕೂಡಿದ ಕಾಲವು ಏನು ಲವನ್ನು ತರುತ್ತದೆಯೋ ಕಾಣೆ.॥18॥

(ಶ್ಲೋಕ - 19)

ಮೂಲಮ್

ನ ಪಿಬಂತಿ ಸ್ತನಂ ವತ್ಸಾ ನ ದುಹ್ಯಂತಿ ಚ ಮಾತರಃ ।
ರುದಂತ್ಯಶ್ರುಮುಖಾ ಗಾವೋ ನ ಹೃಷ್ಯಂತ್ಯೃಷಭಾ ವ್ರಜೇ ॥

ಅನುವಾದ

ಎಳೆಯ ಕರುಗಳು ತಾಯಿಯ ಹಾಲನ್ನೂ ಕುಡಿಯುತ್ತಿಲ್ಲ ; ಆಕಳುಗಳೂ ಅವುಗಳಿಗೆ ಹಾಲನ್ನು ಕೊಡುತ್ತಿಲ್ಲ. ಗೋಶಾಲೆಯಲ್ಲಿ ಗೋವುಗಳು ಕಣ್ಣೀರುಗರೆಯುತ್ತಿವೆ. ಹಾಗೆಯೇ ಕೊಟ್ಟಿಗೆಯಲ್ಲಿ ಎತ್ತುಗಳೂ ಸಂತೋಷಪಡುತ್ತಿಲ್ಲ.॥19॥

(ಶ್ಲೋಕ - 20)

ಮೂಲಮ್

ದೈವತಾನಿ ರುದಂತೀವ ಸ್ವಿದ್ಯಂತಿ ಹ್ಯುಚ್ಚಲಂತಿ ಚ ।
ಇಮೇ ಜನಪದಾ ಗ್ರಾಮಾಃ ಪುರೋದ್ಯಾನಾಕರಾಶ್ರಮಾಃ ।
ಭ್ರಷ್ಟಶ್ರಿಯೋ ನಿರಾನಂದಾಃ ಕಿಮಘಂ ದರ್ಶಯಂತಿ ನಃ ॥

ಅನುವಾದ

ದೇವತಾಮೂರ್ತಿಗಳು ಅಳುತ್ತಿವೆಯೋ ಎಂಬಂತಿವೆ. ಬೆವರು ಸುರಿಸುತ್ತಿದ್ದು ಅಲುಗಾಡುತ್ತಿರುವಂತೆಯೂ ಕಾಣುತ್ತಿವೆ. ಈ ದೇಶಗಳೂ ಹಳ್ಳಿಗಳೂ, ಪಟ್ಟಣಗಳೂ ಉದ್ಯಾನವನಗಳೂ, ಗಣಿಗಳೂ ಮತ್ತು ಆಶ್ರಮಗಳೂ ಕಾಂತಿಹೀನವಾಗಿ ಆನಂದರಹಿತ ವಾಗಿವೆ. ಇವೆಲ್ಲಾ ಯಾವ ಕಷ್ಟವನ್ನು ಸೂಚಿಸುತ್ತವೆಯೋ ತಿಳಿಯದಾಗಿದೆ.॥20॥

(ಶ್ಲೋಕ - 21)

ಮೂಲಮ್

ಮನ್ಯ ಏತೈರ್ಮಹೋತ್ಪಾತೈರ್ನೂನಂ ಭಗವತಃ ಪದೈಃ ।
ಅನನ್ಯಪುರುಷಶ್ರೀಭಿರ್ಹೀನಾ ಭೂರ್ಹತಸೌಭಗಾ ॥

ಅನುವಾದ

ಈ ದೊಡ್ಡ-ದೊಡ್ಡ ಉತ್ಪಾತಗಳನ್ನು ನೋಡಿದರೆ ಭೂದೇವಿಯು ಅಸಾಧಾರಣವಾದ ದಿವ್ಯಲಕ್ಷಣ ಗಳಿಂದ ಅಲಂಕೃತವಾದ ಶ್ರೀಭಗವಂತನ ಅಡಿದಾವರೆಗಳನ್ನಗಲಿ ತನ್ನ ಎಲ್ಲ ಸೌಭಾಗ್ಯಗಳನ್ನೂ ಕಳೆದುಕೊಂಡು ಬಿಟ್ಟಿರುವಳೋ ಏನೋ !’’॥21॥

(ಶ್ಲೋಕ - 22)

ಮೂಲಮ್

ಇತಿ ಚಿಂತಯತಸ್ತಸ್ಯ ದೃಷ್ಟಾರಿಷ್ಟೇನ ಚೇತಸಾ ।
ರಾಜ್ಞಃ ಪ್ರತ್ಯಾಗಮದ್ಬ್ರಹ್ಮನ್ಯದುಪುರ್ಯಾಃ ಕಪಿಧ್ವಜಃ ॥

(ಶ್ಲೋಕ - 23)

ಮೂಲಮ್

ತಂ ಪಾದಯೋರ್ನಿಪತಿತಮಯಥಾಪೂರ್ವಮಾತುರಮ್ ।
ಅಧೋವದನಮಬ್ಬಿನ್ದೂನ್ಸೃಜಂತಂ ನಯನಾಬ್ಜಯೋಃ ॥

(ಶ್ಲೋಕ - 24)

ಮೂಲಮ್

ವಿಲೋಕ್ಯೋದ್ವಿಗ್ನಹೃದಯೋ ವಿಚ್ಛಾಯಮನುಜಂ ನೃಪಃ ।
ಪೃಚ್ಛತಿ ಸ್ಮ ಸುಹೃನ್ಮಧ್ಯೇ ಸಂಸ್ಮರನ್ನಾರದೇರಿತಮ್ ॥

ಅನುವಾದ

ಶೌನಕರೇ ! ಮಹಾರಾಜ ಯುಷ್ಠಿರನು ಆ ಭಯಂಕರವಾದ ಉತ್ಪಾತಗಳನ್ನು ನೋಡಿ ಮನಸ್ಸಿನಲ್ಲಿ ಚಿಂತೆಪಡುತ್ತಿರುವಾಗಲೇ ಅರ್ಜುನನು ದ್ವಾರಕೆಯಿಂದ ಹಿಂದಿರುಗಿ ಬಂದನು. ಬಂದೊ ಡನೆಯೇ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಅರ್ಜುನನು ಹಿಂದೆಂದೂ ಕಾಣದ ರೀತಿಯಲ್ಲಿ ಮಹಾದುಃಖದಿಂದ ಮುಖ ವನ್ನು ತಗ್ಗಿಸಿಕೊಂಡು ಕಣ್ಣೀರುಸುರಿಸುತ್ತಾ ಕಳೆಗುಂದಿರುವುದನ್ನು ಕಂಡು ಧರ್ಮರಾಜನಿಗೆ ಮಿತಿಮೀರಿದ ಗಾಬರಿಯುಂಟಾಯಿತು. ಆತನು ನಾರದರು ಹೇಳಿದ್ದ ಮಾತನ್ನೇ ಸ್ಮರಿಸುತ್ತಾ ಅಲ್ಲಿ ನೆರೆದಿದ್ದ ಬಂಧು-ಮಿತ್ರರ ಮಧ್ಯದಲ್ಲಿಯೇ ಅರ್ಜುನನನ್ನು ಹೀಗೆ ಪ್ರಶ್ನಿಸಿದನು.॥22-24॥

(ಶ್ಲೋಕ - 25)

ಮೂಲಮ್ (ವಾಚನಮ್)

ಯುಧಿಷ್ಠಿರ ಉವಾಚ

ಮೂಲಮ್

ಕಚ್ಚಿದಾನರ್ತಪುರ್ಯಾಂ ನಃ ಸ್ವಜನಾಃ ಸುಖಮಾಸತೇ ।
ಮಧುಭೋಜದಶಾರ್ಹಾರ್ಹಸಾತ್ವತಾಂಧಕವೃಷ್ಣಯಃ ॥

ಅನುವಾದ

ಯುಷ್ಠಿರನು ಹೇಳಿದನು ‘‘ಅರ್ಜುನಾ! ದ್ವಾರಕಾನಗರಿ ಯಲ್ಲಿ ನಮ್ಮ ನೆಂಟರಿಷ್ಟರಾದ ಮಧು, ಭೋಜ, ದಶಾರ್ಹ, ಆರ್ಹ, ಸಾತ್ವತ, ಅಂಧಕ ಮತ್ತು ವೃಷ್ಣಿಗಳೆಂಬ ಯಾದವರೆಲ್ಲಾ ಸುಖವಾಗಿದ್ದಾರಷ್ಟೇ!॥25॥

(ಶ್ಲೋಕ - 26)

ಮೂಲಮ್

ಶೂರೋ ಮಾತಾಮಹಃ ಕಚ್ಚಿತ್ಸ್ವಸ್ತ್ಯಾಸ್ತೇ ವಾಥ ಮಾರಿಷಃ ।
ಮಾತುಲಃ ಸಾನುಜಃ ಕಚ್ಚಿತ್ಕುಶಲ್ಯಾನಕದುಂದುಭಿಃ ॥

ಅನುವಾದ

ನಮ್ಮ ಮಾನ್ಯ ಮಾತಾಮಹನಾದ ಶೂರಸೇನಮಹಾರಾಜನು ಕುಶಲವಾಗಿದ್ದಾನೆಯೇ? ಸೋದರ ಮಾವನಾದ ವಸುದೇವನೂ ಮತ್ತು ಅವನ ತಮ್ಮನೂ ಕ್ಷೇಮವೇ?॥26॥

(ಶ್ಲೋಕ - 27)

ಮೂಲಮ್

ಸಪ್ತಸ್ವಸಾರಸ್ತತ್ಪತ್ನ್ಯೋ ಮಾತುಲಾನ್ಯಃ ಸಹಾತ್ಮಜಾಃ ।
ಆಸತೇ ಸಸ್ನುಷಾಃ ಕ್ಷೇಮಂ ದೇವಕೀಪ್ರಮುಖಾಃ ಸ್ವಯಮ್ ॥

ಅನುವಾದ

ಅವನ ಪತ್ನಿಯರೂ, ನಮ್ಮ ಸೋದರತ್ತೆಯರೂ ಆದ ದೇವಕಿಯೇ ಮುಂತಾದ ಏಳುಮಂದಿ ಸೋದರಿಯರೂ ತಮ್ಮ ಪುತ್ರರೊಡನೆಯೂ, ಸೊಸೆಗಳೊಡನೆಯೂ ಸೌಖ್ಯವಾಗಿದ್ದಾರೆಯೇ?॥27॥

(ಶ್ಲೋಕ - 28)

ಮೂಲಮ್

ಕಚ್ಚಿದ್ರಾಜಾಹುಕೋ ಜೀವತ್ಯಸತ್ಪುತ್ರೋಸ್ಯ ಚಾನುಜಃ ।
ಹೃದೀಕಃ ಸಸುತೋಕ್ರೂರೋ ಜಯಂತಗದಸಾರಣಾಃ ॥

(ಶ್ಲೋಕ - 29)

ಮೂಲಮ್

ಆಸತೇ ಕುಶಲಂ ಕಚ್ಚಿದ್ಯೇ ಚ ಶತ್ರುಜಿದಾದಯಃ ।
ಕಚ್ಚಿದಾಸ್ತೇ ಸುಖಂ ರಾಮೋ ಭಗವಾನ್ಸಾತ್ವತಾಂ ಪ್ರಭುಃ ॥

ಅನುವಾದ

ದುಷ್ಟನಾಗಿದ್ದ ಕಂಸನ ತಂದೆ ಉಗ್ರಸೇನ ಮಹಾರಾಜನು ತನ್ನ ತಮ್ಮ ದೇವಕನೊಡನೆ ಕುಶಲವಾಗಿದ್ದಾನೆಯೇ ? ಹಾಗೆಯೇ ಹೃದೀಕ, ಅವನ ಪುತ್ರನಾದ ಕೃತವರ್ಮಾ, ಅಕ್ರೂರ, ಜಯಂತ, ಗದ, ಸಾರಣ ಮತ್ತು ಶತ್ರುಜಿತ್ ಮುಂತಾದ ಯಾದವವೀರರು ಕ್ಷೇಮವಾಗಿದ್ದಾರಷ್ಟೇ? ಯಾದವರ ಪ್ರಭುವಾದ, ಪೂಜ್ಯನಾದ ಬಲರಾಮದೇವನೂ ಸುಖವಾಗಿದ್ದಾನೆಯೇ?॥28-29॥

(ಶ್ಲೋಕ - 30)

ಮೂಲಮ್

ಪ್ರದ್ಯುಮ್ನಃ ಸರ್ವವೃಷ್ಣೀನಾಂ ಸುಖಮಾಸ್ತೇ ಮಹಾರಥಃ ।
ಗಂಭೀರರಯೋನಿರುದ್ಧೋ ವರ್ಧತೇ ಭಗವಾನುತ ॥

ಅನುವಾದ

ಯದುವಂಶದ ಸರ್ವಶ್ರೇಷ್ಠಮಹಾರಥಿಯಾದ ಪ್ರದ್ಯುಮ್ನನು ಸುಖವಾಗಿದ್ದಾನೆಯೇ ? ಯುದ್ಧದಲ್ಲಿ ಗಂಭೀರವಾದ ವೇಗ- ಚಟುವಟಿಕೆಗಳುಳ್ಳ ಪೂಜ್ಯನಾದ ಅನಿರುದ್ಧನು ಆನಂದವಾಗಿ ದ್ದಾನೆಯೇ?॥30॥

(ಶ್ಲೋಕ - 31)

ಮೂಲಮ್

ಸುಷೇಣಶ್ಚಾರುದೇಷ್ಣಶ್ಚ ಸಾಂಬೋ ಜಾಂಬವತೀಸುತಃ ।
ಅನ್ಯೇ ಚ ಕಾರ್ಷ್ಣಿಪ್ರವರಾಃ ಸಪುತ್ರಾ ಋಷಭಾದಯಃ ॥

ಅನುವಾದ

ಸುಷೇಣ, ಚಾರುದೇಷ್ಣ, ಜಾಂಬವತೀ ಪುತ್ರನಾದ ಸಾಂಬ ಮತ್ತು ಋಷಭರೇ ಮುಂತಾದ ಶ್ರೀಕೃಷ್ಣನ ಇತರ ಪುತ್ರರೂ, ಅವರ ಪುತ್ರರೂ ಎಲ್ಲರೂ ಕುಶಲರಾಗಿರುವರಷ್ಟೇ?॥31॥

(ಶ್ಲೋಕ - 32)

ಮೂಲಮ್

ತಥೈವಾನುಚರಾಃ ಶೌರೇಃ ಶ್ರುತದೇವೋದ್ಧವಾದಯಃ ।
ಸುನಂದನಂದ ಶೀರ್ಷಣ್ಯಾ ಯೇ ಚಾನ್ಯೇ ಸಾತ್ವತರ್ಷಭಾಃ ॥

(ಶ್ಲೋಕ - 33)

ಮೂಲಮ್

ಅಪಿ ಸ್ವಸ್ತ್ಯಾ ಸತೇ ಸರ್ವೇ ರಾಮಕೃಷ್ಣಭುಜಾಶ್ರಯಾಃ ।
ಅಪಿ ಸ್ಮರಂತಿ ಕುಶಲಮಸ್ಮಾಕಂ ಬದ್ಧಸೌಹೃದಾಃ ॥

ಅನುವಾದ

ಭಗವಾನ್ ಶ್ರೀಕೃಷ್ಣನ ಸೇವಕರಾಗಿರುವ ಶ್ರುತದೇವ, ಉದ್ಧವರೇ ಮುಂತಾದ ಯಾದವ ಶ್ರೇಷ್ಠರೂ, ನಂದ-ಸುನಂದರೇ ಮುಂತಾದವರೂ, ಪೂಜ್ಯರಾದ ಶ್ರೀಬಲರಾಮ ಮತ್ತು ಶ್ರೀಕೃಷ್ಣ ದೇವರ ಬಾಹುಬಲದಿಂದ ಸಂರಕ್ಷಿತರಾಗಿರುವ ಇತರರೂ ಎಲ್ಲರೂ ಸೌಖ್ಯವಾಗಿದ್ದಾರೆಯೇ? ನಮ್ಮಲ್ಲಿ ಪ್ರೀತಿ-ವಿಶ್ವಾಸಗಳುಳ್ಳ ಇವರೆ ಲ್ಲರೂ ಆಗಾಗ್ಯೆ ನಮ್ಮ ಯೋಗ-ಕ್ಷೇಮಗಳನ್ನು ನೆನಪುಮಾಡಿ ಕೊಳ್ಳುತ್ತಿದ್ದಾರೆಯೇ?॥32-33॥

(ಶ್ಲೋಕ - 34)

ಮೂಲಮ್

ಭಗವಾನಪಿ ಗೋವಿಂದೋ ಬ್ರಹ್ಮಣ್ಯೋ ಭಕ್ತವತ್ಸಲಃ ।
ಕಚ್ಚಿತ್ಪುರೇ ಸುಧರ್ಮಾಯಾಂ ಸುಖಮಾಸ್ತೇ ಸುಹೃದ್ವತಃ ॥

ಅನುವಾದ

ಭಕ್ತವತ್ಸಲನೂ, ಬ್ರಾಹ್ಮಣರಿಗೆ ಪ್ರಿಯನೂ, ಆದ ಭಗವಾನ್ ಶ್ರೀಕೃಷ್ಣನು ತಮ್ಮ ಸ್ವಜನರೊಂದಿಗೆ ದ್ವಾರಕೆಯ ಸುಧರ್ಮಾಸಭೆ ಯಲ್ಲಿ ಸುಖವಾಗಿ ಇರುವನಷ್ಟೇ?॥34॥

(ಶ್ಲೋಕ - 35)

ಮೂಲಮ್

ಮಂಗಲಾಯ ಚ ಲೋಕಾನಾಂ
ಕ್ಷೇಮಾಯ ಚ ಭವಾಯ ಚ ।
ಆಸ್ತೇ ಯದುಕುಲಾಂಭೋಧಾ-
ವಾದ್ಯೋನಂತಸಖಃ ಪುಮಾನ್ ॥

(ಶ್ಲೋಕ - 36)

ಮೂಲಮ್

ಯದ್ಬಾಹುದಂಡಗುಪ್ತಾಯಾಂ ಸ್ವಪುರ್ಯಾಂ ಯದವೋರ್ಚಿತಾಃ ।
ಕ್ರೀಡಂತಿ ಪರಮಾನಂದಂ ಮಹಾಪೌರುಷಿಕಾ ಇವ ॥

ಅನುವಾದ

ಆ ಆದಿಪುರುಷನು ಬಲರಾಮನೊಂದಿಗೆ ಲೋಕದ ಮಂಗಳಕ್ಕೋಸ್ಕರವಾಗಿಯೂ ಕ್ಷೇಮಕ್ಕೋಸ್ಕರವಾಗಿಯೂ ಯದುವಂಶವೆಂಬ ಕ್ಷೀರಸಾಗರದಲ್ಲಿ ಅವತರಿಸಿರುವನು. ಅವನ ಬಾಹುಬಲದಿಂದಲೇ ಸುರಕ್ಷಿತವಾದ ತಮ್ಮ ದ್ವಾರಕಾಪುರಿಯಲ್ಲಿ ಯದುವಂಶೀಯರು ಲೋಕದಲ್ಲಿ ಸಂಭಾವಿತರಾಗಿ ಮಹಾಪುರುಷ ನಾರಾಯಣನ ಪಾರ್ಷದರಂತೆ ಸುಖ-ಶಾಂತಿಗಳಿಂದ ವಿಹರಿಸುತ್ತಿರುವರಲ್ಲ?॥35-36॥

(ಶ್ಲೋಕ - 37)

ಮೂಲಮ್

ಯತ್ಪಾದಶುಶ್ರೂಷಣಮುಖ್ಯಕರ್ಮಣಾ
ಸತ್ಯಾದಯೋ ದ್ವ್ಯಷ್ಟ ಸಹಸ್ರಯೋಷಿತಃ ।
ನಿರ್ಜಿತ್ಯ ಸಂಖ್ಯೇ ತ್ರಿದಶಾಸ್ತದಾಶಿಷೋ
ಹರಂತಿ ವಜ್ರಾಯುಧವಲ್ಲಭೋಚಿತಾಃ ॥

ಅನುವಾದ

ಸತ್ಯಭಾಮೆಯೇ ಮುಂತಾದ ಹದಿನಾರು ಸಾವಿರಮಂದಿ ರಾಣಿಯರೂ ಮುಖ್ಯವಾಗಿ ಭಗವಂತನ ಚರಣಸೇವೆಯಲ್ಲೇ ನಿರತರಾಗಿದ್ದು, ಇಂದ್ರಾದಿ ದೇವತೆಗಳನ್ನು ಯುದ್ಧದಲ್ಲಿ ಸೋಲಿಸಿ, ಶಚೀದೇವಿಯ ಭೋಗಕ್ಕೆ ಯೋಗ್ಯವಾದ ಪಾರಿಜಾತವೇ ಮುಂತಾದ ತಮ್ಮ ಇಷ್ಟವಾದ ವಸ್ತುಗಳನ್ನು ಅವನಿಂದ ಪಡೆದು ಅನುಭವಿಸುತ್ತಿದ್ದಾರಲ್ಲ? ॥37॥

(ಶ್ಲೋಕ - 38)

ಮೂಲಮ್

ಯದ್ಬಾಹುದಂಡಾಭ್ಯುದಯಾನುಜೀವಿನೋ
ಯದುಪ್ರವೀರಾ ಹ್ಯಕುತೋಭಯಾ ಮುಹುಃ ।
ಅಕ್ರಮಂತ್ಯಂಘ್ರಿಭಿರಾಹೃತಾಂ ಬಲಾತ್
ಸಭಾಂ ಸುಧರ್ಮಾಂ ಸುರಸತ್ತಮೋಚಿತಾಮ್ ॥

ಅನುವಾದ

ಯದುವಂಶೀಯ ವೀರರು ಶ್ರೀಕೃಷ್ಣನ ಬಾಹು ದಂಡಗಳ ಪ್ರಭಾವದಿಂದ ಸುರಕ್ಷಿತವಾಗಿ, ನಿರ್ಭಯರಾಗಿ, ಬಲಪೂರ್ವಕವಾಗಿ ತಂದಿರುವ ದೇವಶ್ರೇಷ್ಠರಿಗೆ ಮಾತ್ರವೇ ಭೋಗ್ಯವಾದ ಸುಧರ್ಮ ಸಭೆಯನ್ನು ತಮ್ಮ ಚರಣಗಳಿಂದ ಆಕ್ರಮಿಸುವರಲ್ಲ!॥38॥

(ಶ್ಲೋಕ - 39)

ಮೂಲಮ್

ಕಚ್ಚಿತ್ತೇನಾಮಯಂ ತಾತ ಭ್ರಷ್ಟತೇಜಾ ವಿಭಾಸಿ ಮೇ ।
ಅಲಬ್ಧಮಾನೋವಜ್ಞಾತಃ ಕಿಂ ವಾ ತಾತ ಚಿರೋಷಿತಃ ॥

ಅನುವಾದ

ಅಯ್ಯಾ ಅರ್ಜುನಾ! ನೀನು ದೇಹಾರೋಗ್ಯದಿಂದ ಚೆನ್ನಾಗಿದ್ದಿಯಲ್ಲ? ನೀನು ತುಂಬಾ ಕಳೆಗುಂದಿರುವವನಂತೆ ಕಾಣಿಸುತ್ತಿದ್ದಿಯಲ್ಲ? ಅಲ್ಲಿ ಬಹಳ ದಿನಗಳವರೆಗೆ ನಿಂತರೆ ನಿನಗೆ ತಕ್ಕ ಮಾನ-ಮರ್ಯಾದೆಗಳಲ್ಲಿ ಏನಾದರೂ ಕೊರತೆ ಉಂಟಾಗಲಿಲ್ಲವಲ್ಲ? ಯಾರಾದರೂ ನಿನಗೆ ಅಪಮಾನ ಮಾಡಲಿಲ್ಲವಲ್ಲ?॥39॥

(ಶ್ಲೋಕ - 40)

ಮೂಲಮ್

ಕಚ್ಚಿನ್ನಾಭಿಹತೋಭಾವೈಃ ಶಬ್ದಾದಿಭಿರಮಂಗಲೈಃ ।
ನ ದತ್ತಮುಕ್ತಮರ್ಥಿಭ್ಯ ಆಶಯಾ ಯತ್ಪ್ರತಿಶ್ರುತಮ್ ॥

ಅನುವಾದ

ದುರ್ಭಾವಪೂರ್ಣವಾದ ಅಮಂಗಳವಾದ ಮಾತುಗಳನ್ನಾಡಿ ಯಾರಾದರೂ ನಿನ್ನ ಮನಸ್ಸನ್ನು ನೋಯಿಸಿದರೇ? ಅಥವಾ ಆಸೆಯಿಂದ ಬಯಸಿ ಬಂದವರಿಗೆ ಮಾಡಿದ ವಾಗ್ದಾನವನ್ನಾಗಲೀ, ನೀನಾಗಿಯೇ ಕೊಡುವುದಾಗಿ ಹೇಳಿದ್ದ ಪ್ರತಿಜ್ಞಾವಚನವನ್ನಾಗಲೀ ನಡೆಸಿಕೊಡದೆ ಹೋದೆಯಾ? ॥40॥

(ಶ್ಲೋಕ - 41)

ಮೂಲಮ್

ಕಚ್ಚಿತ್ತ್ವಂ ಬ್ರಾಹ್ಮಣಂ ಬಾಲಂ
ಗಾಂ ವೃದ್ಧಂ ರೋಗಿಣಂ ಸಿಯಮ್ ।
ಶರಣೋಪಸೃತಂ ಸತ್ತ್ವಂ
ನಾತ್ಯಾಕ್ಷೀಃ ಶರಣಪ್ರದಃ ॥

ಅನುವಾದ

ಶರಣು ಬಂದವರನ್ನು ಕೈಬಿಡದೇ ಕಾಪಾಡುವ ಸ್ವಭಾವ ನಿನ್ನದು. ನಿನ್ನಲ್ಲಿ ಶರಣಾಗತರಾದ ಬ್ರಾಹ್ಮಣನನ್ನಾಗಲೀ, ಮಗುವನ್ನಾಗಲೀ, ಗೋವನ್ನಾಗಲೀ, ವೃದ್ಧನನ್ನಾಗಲೀ, ರೋಗಿಯನ್ನಾಗಲೀ, ಅಬಲೆಯಾದ ಸ್ತ್ರೀಯನ್ನಾಗಲಿ, ಅಥವಾ ಬೇರೆ ಯಾವುದೇ ಪ್ರಾಣಿಯನ್ನಾಗಲೀ ಕಾಪಾಡದೆ ಕೈಬಿಡಲಿಲ್ಲ ತಾನೇ? ॥41॥

(ಶ್ಲೋಕ - 42)

ಮೂಲಮ್

ಕಚ್ಚಿತ್ತ್ವಂ ನಾಗಮೋಗಮ್ಯಾಂ ಗಮ್ಯಾಂ ವಾಸ್ಕೃತಾಂ ಸಿಯಮ್ ।
ಪರಾಜಿತೋ ವಾಥ ಭವಾನ್ನೋತ್ತಮೈರ್ನಾಸಮೈಃ ಪಥಿ ॥

ಅನುವಾದ

ನೀನು ಸೇರಬಾರದ ಹೆಂಗಸಿನೊಂದಿಗೆ ಸೇರಿ ರಮಿಸಲಿಲ್ಲ ತಾನೇ? ಅಥವಾ ಸೇರಲು ಯೋಗ್ಯಳಾಗಿದ್ದರೂ ಆಕೆಯನ್ನು ಸತ್ಕರಿಸದೆ ಆಕೆಯೊಡನೆ ಸೇರಿ ರಮಿಸಲಿಲ್ಲ ತಾನೇ? ದಾರಿಯಲ್ಲಿ ನಿನ್ನಿಂದ ಕೆಳಮಟ್ಟದವರಿಂದಾಗಲೀ, ಸಮಾನರಾದವರಿಂದಾಗಲೀ ಯುದ್ಧದಲ್ಲಿ ಸೋಲಲಿಲ್ಲ ತಾನೇ? ॥42॥

(ಶ್ಲೋಕ - 43)

ಮೂಲಮ್

ಅಪಿ ಸ್ವಿತ್ಪರ್ಯಭುಂಕ್ಥಾಸ್ತ್ವಂ ಸಂಭೋಜ್ಯಾನ್ವ ದ್ಧ ಬಾಲಕಾನ್ ।
ಜುಗುಪ್ಸಿತಂ ಕರ್ಮ ಕಿಂಚಿತ್ಕೃತವಾನ್ನ ಯದಕ್ಷಮಮ್ ॥

ಅನುವಾದ

ಅಥವಾ ಮೊದಲು ಊಟಮಾಡಲು ಅರ್ಹರಾದ ಬಾಲಕರನ್ನಾಗಲೀ, ಮುದುಕರನ್ನಾಗಲೀ ಬಿಟ್ಟು ನೀನು ಒಬ್ಬನೇ ಅವರಿಗಿಂತ ಮೊದಲು ಊಟಮಾಡಿಲ್ಲ ತಾನೇ? ನಿನಗೆ ಯೋಗ್ಯವಲ್ಲದ ನಿಂದಿತವಾದ ಯಾವ ಕೆಲಸವನ್ನೂ ನೀನು ಮಾಡಿಲ್ಲ ಎಂಬುದರ ಕುರಿತು ನನಗೆ ವಿಶ್ವಾಸವಿದೆ.॥43॥

(ಶ್ಲೋಕ - 44)

ಮೂಲಮ್

ಕಚ್ಚಿತ್ಪ್ರೇಷ್ಠತಮೇನಾಥ ಹೃದಯೇನಾತ್ಮಬಂಧುನಾ ।
ಶೂನ್ಯೋಸ್ಮಿ ರಹಿತೋ ನಿತ್ಯಂ ಮನ್ಯಸೇ ತೇನ್ಯಥಾ ನ ರುಕ್ ॥

ಅನುವಾದ

ಅಥವಾ ಅತ್ಯಂತ ಪ್ರಿಯತಮನೂ, ಅಭಿನ್ನಹೃದಯನೂ, ಪರಮ ಸುಹೃತ್ತನೂ ಆದ ಭಗವಾನ್ ಶ್ರೀಕೃಷ್ಣನಿಂದ ನೀನು ಅಗಲಿದ ಕಾರಣದಿಂದ ‘ಇನ್ನು ನಾನು ಎಂದೆಂದಿಗೂ ಶೂನ್ಯನೇ’ ಎಂದು ಭಾವಿಸುತ್ತಾ ಈ ರೀತಿಯಾಗಿರುವೆಯಾ? ಇದಾವುದೂ ಇಲ್ಲದಿದ್ದರೆ ನಿನಗೆ ಇಂತಹ ಮನೋವ್ಯಥೆ ಉಂಟಾಗುವುದಕ್ಕೆ ಬೇರಾವ ಕಾರಣವೂ ಇರಲಾರದು.॥44॥

ಅನುವಾದ (ಸಮಾಪ್ತಿಃ)

ಹದಿನಾಲ್ಕನೆಯ ಅಧ್ಯಾಯವು ಮುಗಿಯಿತು.॥14॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ಯುಷ್ಠಿರವಿತರ್ಕೋ ನಾಮ ಚತುರ್ದಶೋಽಧ್ಯಾಯಃ ॥14॥