[ಹದಿಮೂರನೆಯ ಅಧ್ಯಾಯ]
ಭಾಗಸೂಚನಾ
ವಿದುರನ ಉಪದೇಶದಂತೆ ಧೃತರಾಷ್ಟ್ರ ಮತ್ತು ಗಾಂಧಾರಿಯ ವನಗಮನ
(ಶ್ಲೋಕ - 1)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ವಿದುರಸ್ತೀರ್ಥಯಾತ್ರಾಯಾಂ ಮೈತ್ರೇಯಾದಾತ್ಮನೋ ಗತಿಮ್ ।
ಜ್ಞಾತ್ವಾಗಾದ್ಧಾಸ್ತಿನಪುರಂ ತಯಾವಾಪ್ತವಿವಿತ್ಸಿತಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಮಹರ್ಷಿಗಳೇ! ಮಹಾತ್ಮನಾದ ವಿದುರನು ತೀರ್ಥಯಾತ್ರೆಯ ಸಮಯ ದಲ್ಲಿ ಮೈತ್ರೇಯ ಮಹರ್ಷಿಗಳಿಂದ ಆತ್ಮಜ್ಞಾನವನ್ನು ಪಡೆದು ಕೊಂಡು ಹಸ್ತಿನಾವತಿಗೆ ಮರಳಿದನು. ಆತ್ಮಜ್ಞಾನದಿಂದ ತಿಳಿಯಬೇಕಾದ ಅವನ ಅರಿವು ಪೂರ್ಣವಾಗಿತ್ತು.॥1॥
(ಶ್ಲೋಕ - 2)
ಮೂಲಮ್
ಯಾವತಃ ಕೃತವಾನ್ ಪ್ರಶ್ನಾನ್ ಕ್ಷತ್ತಾ ಕೌಷಾರವಾಗ್ರತಃ ।
ಜಾತೈಕಭಕ್ತಿರ್ಗೋವಿಂದೇ ತೇಭ್ಯಶ್ಚೋಪರರಾಮ ಹ ॥
ಅನುವಾದ
ಗೋವಿಂದನಲ್ಲಿ ಅನನ್ಯ ಭಕ್ತಿಯನ್ನು ಹೊಂದಿದ್ದ ಅವನು ಮೊದಲೇ ಕೃತಕೃತ್ಯನಾಗಿದ್ದನು. ಮೈತ್ರೇಯರು ಅವನು ಕೇಳಿದ್ದ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದರು. ಅವರ ಉತ್ತರ ವನ್ನು ಕೇಳಿ ಮತ್ತೆ ಯಾವ ಪ್ರಶ್ನೆಯನ್ನು ಮಾಡದೆ ಅವನು ಶಾಂತನಾಗಿದ್ದನು.॥2॥
(ಶ್ಲೋಕ - 3)
ಮೂಲಮ್
ತಂ ಬಂಧುಮಾಗತಂ ದೃಷ್ಟ್ವಾ ಧರ್ಮಪುತ್ರಃ ಸಹಾನುಜಃ ।
ಧೃತರಾಷ್ಟ್ರೋ ಯುಯುತ್ಸುಶ್ಚ ಸೂತಃ ಶಾರದ್ವತಃ ಪೃಥಾ ॥
(ಶ್ಲೋಕ - 4)
ಮೂಲಮ್
ಗಾಂಧಾರೀ ದ್ರೌಪದೀ ಬ್ರಹ್ಮನ್ಸುಭದ್ರಾ ಚೋತ್ತರಾ ಕೃಪೀ ।
ಅನ್ಯಾಶ್ಚ ಜಾಮಯಃ ಪಾಂಡೋರ್ಜ್ಞಾತಯಃ ಸಸುತಾಃ ಸಿಯಃ ॥
(ಶ್ಲೋಕ - 5)
ಮೂಲಮ್
ಪ್ರತ್ಯುಜ್ಜಗ್ಮುಃ ಪ್ರಹರ್ಷೇಣ ಪ್ರಾಣಂ ತನ್ವ ಇವಾಗತಮ್ ।
ಅಭಿಸಂಗಮ್ಯ ವಿವತ್ಪರಿಷ್ವಂಗಾಭಿವಾದನೈಃ ॥
(ಶ್ಲೋಕ - 6)
ಮೂಲಮ್
ಮುಮುಚುಃ ಪ್ರೇಮಬಾಷ್ಪೌಘಂ ವಿರಹೌತ್ಕಂಠ್ಯಕಾತರಾಃ ।
ರಾಜಾ ತಮರ್ಹಯಾಂಚಕ್ರೇ ಕೃತಾಸನಪರಿಗ್ರಹಮ್ ॥
ಅನುವಾದ
ಶೌನಕರೇ! ಆಪ್ತ ಬಂಧುವಾದ ಚಿಕ್ಕಪ್ಪ ವಿದುರನು ಬಂದಿರುವುದನ್ನು ನೋಡಿದೊಡನೆ ಸೋದರ ಸಹಿತನಾದ ಧರ್ಮರಾಜ, ಧೃತರಾಷ್ಟ್ರ, ಯುಯುತ್ಸು, ಸಂಜಯ, ಕೃಪಾಚಾರ್ಯರು, ಕುಂತೀ, ಗಾಂಧಾರೀ, ದ್ರೌಪದೀ, ಸುಭದ್ರೆ, ಉತ್ತರೆ, ಕೃಪಿ ಹಾಗೂ ಪಾಂಡವ ಪರಿವಾರದ ಬೇರೆ ಎಲ್ಲ ನರ-ನಾರಿಯರೂ ಜ್ಞಾತಿಗಳೂ, ತಮ್ಮ ಪುತ್ರರೊಂದಿಗೆ ಇತರ ಸ್ತ್ರೀಯರೂ ಅತ್ಯಂತ ಸಂತೋಷದಿಂದ ಮೃತ ಶರೀರಕ್ಕೆ ಚೈತನ್ಯ ಉಂಟಾಗುವಂತೆ ಅವನನ್ನು ಎದುರುಗೊಂಡರು. ಆತನನ್ನು ಸ್ವಾಗತಿಸಿ, ಯಥೋಚಿತವಾಗಿ ಆಲಿಂಗನ, ನಮಸ್ಕಾರಗಳೊಡನೆ ಬರಮಾಡಿಕೊಂಡರು. ಅವನ ಅಗಲಿಕೆಯಿಂದ ಉಂಟಾಗಿದ್ದ ದುಃಖದಿಂದ ಕಳವಳಗೊಂಡಿದ್ದ ಅವರೆಲ್ಲರೂ ಆನಂದಬಾಷ್ಪಗಳನ್ನು ಹರಿಸಿದರು. ಯುಧಿಷ್ಠಿರನು ಅವನನ್ನು ಆಸನದಲ್ಲಿ ಕುಳ್ಳಿರಿಸಿ ಯಥೋಚಿತವಾಗಿ ಸತ್ಕರಿಸಿದನು. ॥3-6॥
(ಶ್ಲೋಕ - 7)
ಮೂಲಮ್
ತಂ ಭುಕ್ತವಂತಂ ವಿಶ್ರಾಂತಮಾಸೀನಂ ಸುಖಮಾಸನೇ ।
ಪ್ರಶ್ರಯಾವನತೋ ರಾಜಾ ಪ್ರಾಹ ತೇಷಾಂ ಚ ಶೃಣ್ವತಾಮ್ ॥
ಅನುವಾದ
ಅವನು ಭೋಜನ ಮಾಡಿ ವಿಶ್ರಾಂತಿ ಪಡೆದು ಸುಖವಾಗಿ ಕುಳಿತಿದ್ದ ಸಮಯದಲ್ಲಿ ವಿನಯದಿಂದ ತಲೆ ಬಾಗಿ ಅಲ್ಲಿರುವವರಿಗೆಲ್ಲ ಕೇಳಿಸುವಂತೆ ಅವರಲ್ಲಿ ಇಂತು ಪ್ರಶ್ನಿಸಿದನು.॥7॥
(ಶ್ಲೋಕ - 8)
ಮೂಲಮ್ (ವಾಚನಮ್)
ಯುಧಿಷ್ಠಿರ ಉವಾಚ
ಮೂಲಮ್
ಅಪಿ ಸ್ಮರಥ ನೋ ಯುಷ್ಮತ್ಪಕ್ಷಚ್ಛಾಯಾಸಮೇತಾನ್ ।
ವಿಪದ್ಗಣಾದ್ವಿಷಾಗ್ನ್ಯಾದೇರ್ಮೋಚಿತಾ ಯತ್ಸಮಾತೃಕಾಃ ॥
ಅನುವಾದ
ಯುಧಿಷ್ಠಿರನೆಂದನು — ‘‘ಚಿಕ್ಕಪ್ಪಾ! ಕೌರವರು ನಮ್ಮ ಮೇಲೆ ಪ್ರಯೋಗಮಾಡಿದ ವಿಷ, ಅರಗಿನ ಮನೆಯ ಅಗ್ನಿ ಪ್ರಕರಣ ಮುಂತಾದ ವಿಪತ್ಪರಂಪರೆಯಿಂದ ಪಕ್ಷಿಗಳು ತಮ್ಮ ಮೊಟ್ಟೆಗಳನ್ನು ರೆಕ್ಕೆಗಳೊಳಗೆ ಇಟ್ಟುಕೊಂಡು ರಕ್ಷಿಸಿ, ಶಾಖಕೊಟ್ಟು, ಬೆಳೆಸುವಂತೆ ನಮ್ಮನ್ನೂ ನಮ್ಮ ತಾಯಿಯನ್ನೂ ಕಾಪಾಡಿದಿರಿ. ಹೀಗೆ ನಿಮ್ಮ ಪ್ರೀತಿ-ಅಭಿಮಾನಗಳ ನೆರಳಿ ನಲ್ಲೇ ಬೆಳೆದು ದೊಡ್ಡವರಾದ ನಮ್ಮನು ನೆನಪುಮಾಡಿಕೊಳ್ಳುತ್ತಿದ್ದಿರಷ್ಟೇ!॥8॥
(ಶ್ಲೋಕ - 9)
ಮೂಲಮ್
ಕಯಾ ವೃತ್ಯಾವರ್ತಿತಂ ವಶ್ಚರದ್ಭಿಃ ಕ್ಷಿತಿಮಂಡಲಮ್ ।
ತೀರ್ಥಾನಿ ಕ್ಷೇತ್ರಮುಖ್ಯಾನಿ ಸೇವಿತಾನೀಹ ಭೂತಲೇ ॥
ಅನುವಾದ
ತೀರ್ಥಯಾತ್ರೆಯ ಸಮಯದಲ್ಲಿ ನೀವು ಭೂಮಿಯಲ್ಲಿ ಸಂಚರಿಸುತ್ತಾ ಹೇಗೆ ಜೀವನ ನಿರ್ವಹಿಸಿದಿರಿ? ಯಾವ-ಯಾವ ಮುಖ್ಯವಾದ ಕ್ಷೇತ್ರಗಳಿಗೂ, ತೀರ್ಥಗಳಿಗೂ ಹೋಗಿ ಸೇವಿಸಿದಿರಿ? ॥9॥
(ಶ್ಲೋಕ - 10)
ಮೂಲಮ್
ಭವದ್ವಿಧಾ ಭಾಗವತಾಸ್ತೀರ್ಥಭೂತಾಃ ಸ್ವಯಂ ವಿಭೋ ।
ತೀರ್ಥೀಕುರ್ವಂತಿ ತೀರ್ಥಾನಿ ಸ್ವಾಂತಃಸ್ಥೇನ ಗದಾಭೃತಾ ॥
ಅನುವಾದ
ಪೂಜ್ಯರೇ! ಭಗವಂತನ ಪ್ರಿಯಭಕ್ತರಾದ ನಿಮ್ಮಂತಹವರು ಸ್ವಯಂ ತೀರ್ಥ ಸ್ವರೂಪರೇ ಆಗಿದ್ದೀರಿ. ತಮ್ಮ ಹೃದಯದಲ್ಲಿ ವಿರಾಜಮಾನನಾದ ಭಗವಂತನ ಮೂಲಕ ತೀರ್ಥಗಳನ್ನೂ ಮಹಾತೀರ್ಥವಾಗಿಸುವವರು ನೀವು. ಏಕೆಂದರೆ, ನಿಮ್ಮಂತಹ ಸಂತರು ಗದಾಧಾರಿ ಭಗವಂತನನ್ನು ತಮ್ಮ ಹೃದಯದಲ್ಲಿ ಧರಿಸಿಕೊಂಡಿರುವಿರಿ.॥10॥
(ಶ್ಲೋಕ - 11)
ಮೂಲಮ್
ಅಪಿ ನಃ ಸುಹೃದಸ್ತಾತ ಬಾಂಧವಾಃ ಕೃಷ್ಣದೇವತಾಃ ।
ದೃಷ್ಟಾಃ ಶ್ರುತಾ ವಾ ಯದವಃ ಸ್ವಪುರ್ಯಾಂ ಸುಖಮಾಸತೇ ॥
ಅನುವಾದ
ಚಿಕ್ಕಪ್ಪನವರೇ! ನೀವು ತೀರ್ಥಯಾತ್ರೆ ಮಾಡುತ್ತಾ ದ್ವಾರಕೆಗೂ ಅವಶ್ಯವಾಗಿ ಹೋಗಿರಬಹುದು. ಅಲ್ಲಿ ನಮ್ಮ ಸುಹೃದರೂ ಹಾಗೂ ಬಂಧುಗಳಾದ ಯಾದವರು, ಅವರ ಏಕಮಾತ್ರ ಆರಾಧ್ಯ ದೇವನಾದ ಶ್ರೀಕೃಷ್ಣನು ತಮ್ಮ ನಗರದಲ್ಲಿ ಸುಖವಾಗಿದ್ದಾರಲ್ಲ? ತಾವು ಹೋಗಿ ನೋಡದಿದ್ದರೂ ಅವಶ್ಯವಾಗಿ ಸಮಾಚಾರ ಕೇಳಿರಬಹುದು’’ ಎಂದು ಕೇಳಿದನು.॥11॥
(ಶ್ಲೋಕ - 12)
ಮೂಲಮ್
ಇತ್ಯುಕ್ತೋ ಧರ್ಮರಾಜೇನ ಸರ್ವಂ ತತ್ಸಮವರ್ಣಯತ್ ।
ಯಥಾನುಭೂತಂ ಕ್ರಮಶೋ ವಿನಾ ಯದುಕುಲಕ್ಷಯಮ್ ॥
ಅನುವಾದ
ಯುಧಿಷ್ಠಿರನು ಇಂತು ಕೇಳಲಾಗಿ ವಿದುರನು ತಾನು ಕಂಡು, ಕೇಳಿ, ಅನುಭವಿಸಿದಂತೆಯೇ ಎಲ್ಲ ವಿಷಯಗಳನ್ನು ಕ್ರಮವಾಗಿ ವರ್ಣಿಸಿದನು. ಕೇವಲ ಯದುವಂಶೀಯರ ವಿನಾಶದ ಮಾತನ್ನು ಮಾತ್ರ ಹೇಳಲಿಲ್ಲ.॥12॥
(ಶ್ಲೋಕ - 13)
ಮೂಲಮ್
ನನ್ವಪ್ರಿಯಂ ದುರ್ವಿಷಹಂ ನೃಣಾಂ ಸ್ವಯಮುಪಸ್ಥಿತಮ್ ।
ನಾವೇದಯತ್ ಸಕರುಣೋ ದುಃಖಿತಾಂದ್ರಷ್ಟುಮಕ್ಷಮಃ ॥
ಅನುವಾದ
ಕರುಣಾ ಪೂರ್ಣ ಹೃದಯನಾದ ವಿದುರನು — ಯಾದವರ ಸಂಹಾರದ ಮಾತನ್ನು ಕೇಳಿ ಪಾಂಡವರಿಗೆ ಅತೀವ ಕಷ್ಟ ವಾದೀತು ಹಾಗೂ ಪಾಂಡವರನ್ನು ದುಃಖಿತರನ್ನಾಗಿ ನೋಡಲು ಬಯಸುತ್ತಿರಲಿಲ್ಲ. ಅದಕ್ಕಾಗಿ ಅವನು ಈ ಅಪ್ರಿಯ, ಅಸಹ್ಯ ಘಟನೆಯನ್ನು ಪಾಂಡವರಿಗೆ ಹೇಳಲಿಲ್ಲ. ಏಕೆಂದರೆ, ಅದಾದರೋ ತಾನಾಗಿ ತಿಳಿದುಬರುವ ವಿಚಾರವಷ್ಟೇ. ॥13॥
(ಶ್ಲೋಕ - 14)
ಮೂಲಮ್
ಕಂಚಿತ್ಕಾಲಮಥಾವಾತ್ಸೀತ್ಸತ್ಕೃತೋ ದೇವವತ್ಸುಖಮ್ ।
ಭ್ರಾತುರ್ಜ್ಯೇಷ್ಠಸ್ಯ ಶ್ರೇಯಸ್ಕೃತ್ಸರ್ವೇಷಾಂ ಪ್ರೀತಿಮಾವಹನ್ ॥
ಅನುವಾದ
ಪಾಂಡವರು ವಿದುರನನ್ನು ದೇವರಂತೆ ಸೇವೆ-ಸತ್ಕಾರ ಮಾಡುತ್ತಿದ್ದರು. ಅವರು ಕೆಲದಿನಗಳವರೆಗೆ ಹಿರಿಯಣ್ಣ ಧೃತರಾಷ್ಟ್ರನ ಶ್ರೇಯಸ್ಸನ್ನು ಬಯಸುತ್ತಾ ಸುಖವಾಗಿ ಹಸ್ತಿನಾಪುರದಲ್ಲೇ ಇದ್ದರು.॥14॥
(ಶ್ಲೋಕ - 15)
ಮೂಲಮ್
ಅಬಿಭ್ರದರ್ಯಮಾ ದಂಡಂ ಯಥಾವದಘಕಾರಿಷು ।
ಯಾವದ್ದಧಾರ ಶೂದ್ರತ್ವಂ ಶಾಪಾದ್ವರ್ಷಶತಂ ಯಮಃ ॥
ಅನುವಾದ
ವಿದುರನಾದರೋ ಸಾಕ್ಷಾತ್ ಯಮಧರ್ಮನೇ ಆಗಿದ್ದರು. ಮಾಂಡವ್ಯ ಋಷಿಯ ಶಾಪದಿಂದ ಇವರು ನೂರು ವರ್ಷಗಳವರೆಗೆ ಶೂದ್ರರಂತೆ ಇದ್ದರು.* ಅಲ್ಲಿಯವರೆಗೂ ಯಮನ ತಂದೆ ಯಾದ ಸೂರ್ಯ ದೇವನೇ ಪಾಪಿಗಳಿಗೆ ದಂಡನೆಯನ್ನು ವಿಧಿಸುವ ಅಧಿಕಾರವನ್ನು ನಿರ್ವಹಿಸುತ್ತಿದ್ದನು. ॥15॥
ಟಿಪ್ಪನೀ
- ಹಿಂದೊಮ್ಮೆ ಧ್ಯಾನಾಸಕ್ತರಾಗಿದ್ದ ಮಾಂಡವ್ಯ ಮಹರ್ಷಿಗಳ ಆಶ್ರಮದಲ್ಲಿ ಕೆಲವು ಕಳ್ಳರು ರಾಜಭಟರ ಕೈಗೆ ಸಿಕ್ಕಿಬಿದ್ದರು. ಕಳ್ಳರ ಕೆಲಸದಲ್ಲಿ ಮಾಂಡವ್ಯ ಮಹರ್ಷಿಗಳದೂ ಪಾತ್ರವಿರಬೇಕೆಂದು ಭಾವಿಸಿ ರಾಜನು ಮಾಂಡವ್ಯರಿಗೆ ಶೂಲಕ್ಕೇರಿಸುವ ದಂಡವನ್ನು ವಿಧಿಸಿದನು. ತನ್ನ ತಪ್ಪನ್ನು ತಿಳಿದೊಡನೆ ರಾಜನು ಮಹರ್ಷಿಗಳನ್ನು ಶೂಲದಿಂದ ಇಳಿಸಿ, ಅವರ ಕ್ಷಮಾಪಣೆಯನ್ನು ಯಾಚಿಸಿದನು. ಮಾಂಡವ್ಯರು ಯಮಧರ್ಮನ ಬಳಿಗೆ ಹೋಗಿ ನನಗೆ ಯಾವ ಪಾಪಕ್ಕಾಗಿ ಈ ದಂಡನೆಯು ಒದಗಿತೆಂದು ಪ್ರಶ್ನಿಸಲು, ಅವನು ‘‘ನೀವು ಬಾಲ್ಯದಲ್ಲಿ ಒಂದು ಚಿಟ್ಟೆಯನ್ನು ದರ್ಭಾಗ್ರದಿಂದ ಚುಚ್ಚಿದ್ದಕ್ಕಾಗಿ ನಿಮಗಿಂದು ಈ ಶಿಕ್ಷೆ ಒದಗಿತು’’ ಎಂದು ಉತ್ತರಿಸಿದರು. ಆಗ ಮಹರ್ಷಿಗಳು ಕ್ರುದ್ಧರಾಗಿ ‘ನಾನು ಬಾಲ್ಯದಲ್ಲಿ ಅರಿಯದೆ ಅಪರಾಧ ಮಾಡಿರಬಹುದು. ಅದೂ ಅಲ್ಲದೆ ಆ ಸಣ್ಣ ಅಪರಾಧಕ್ಕೆ ಇಷ್ಟೊಂದು ಕಠೋರವಾದ ಶಿಕ್ಷೆಯನ್ನು ವಿಧಿಸಿದ್ದರಿಂದ ನೀನು ಇಲ್ಲಿರಲು ಯೋಗ್ಯನಲ್ಲ. ನೂರು ವರ್ಷಗಳ ಕಾಲ ಶೂದ್ರಯೋನಿಯಲ್ಲಿರು’ ಎಂದು ಯಮನಿಗೆ ಶಪಿಸಿದರು. ಮಾಂಡವ್ಯರ ಈ ಶಾಪದಿಂದ ಯಮಧರ್ಮನು ವಿದುರನ ರೂಪದಲ್ಲಿ ಅವತರಿಸಿದ್ದನು.
(ಶ್ಲೋಕ - 16)
ಮೂಲಮ್
ಯುಧಿಷ್ಠಿರೋ ಲಬ್ಧರಾಜ್ಯೋದೃಷ್ಟ್ವಾ ಪೌತ್ರಂ ಕುಲಂಧರಮ್ ।
ಭ್ರಾತೃಭಿರ್ಲೋಕಪಾಲಾಭೈರ್ಮುಮುದೇ ಪರಯಾ ಶ್ರಿಯಾ ॥
ಅನುವಾದ
ರಾಜ್ಯವು ಮರಳಿ ಪ್ರಾಪ್ತವಾಗಿ ಲೋಕಪಾಲಕರಂತೆ ತನ್ನ ಸಹೋದರರೊಂದಿಗೆ ರಾಜಾಯುಧಿಷ್ಠಿರನು ವಂಶದ ಕುಡಿ ಯಾದ ಪರೀಕ್ಷಿತನನ್ನು ನೋಡುತ್ತಾ ತಮ್ಮ ಅತುಲ ಸಂಪತ್ತಿನಿಂದ ಆನಂದವಾಗಿ ಇರತೊಡಗಿದನು.॥16॥
(ಶ್ಲೋಕ - 17)
ಮೂಲಮ್
ಏವಂ ಗೃಹೇಷು ಸಕ್ತಾನಾಂ ಪ್ರಮತ್ತಾನಾಂ ತದೀಹಯಾ ।
ಅತ್ಯಕ್ರಾಮದವಿಜ್ಞಾತಃ ಕಾಲಃ ಪರಮದುಸ್ತರಃ ॥
ಅನುವಾದ
ಹೀಗೆ ಗೃಹಸ್ಥ ಜೀವನದ ಕಾರ್ಯಗಳಲ್ಲಿ ಆಸಕ್ತರಾಗಿ ಮೈಮರೆತಿದ್ದ ಪಾಂಡವರಿಗೆ, ಅವರು ನೋಡುತ್ತಿದ್ದಂತೆಯೇ ಯಾವುದನ್ನು ಯಾರೂ ಅತಿಕ್ರಮಿಸಲಾರರೋ ಅಂತಹ ದುಸ್ತರ ಕಾಲವು ಹತ್ತಿರ ಬಂದೇ ಬಿಟ್ಟಿತು.॥17॥
(ಶ್ಲೋಕ - 18)
ಮೂಲಮ್
ವಿದುರಸ್ತದಭಿಪ್ರೇತ್ಯ ಧೃತರಾಷ್ಟ್ರಮಭಾಷತ ।
ರಾಜನ್ನಿರ್ಗಮ್ಯತಾಂ ಶೀಘ್ರಂ ಪಶ್ಯೇದಂ ಭಯಮಾಗತಮ್ ॥
ಅನುವಾದ
ಆಗ ಕಾಲದ ಗತಿಯನ್ನು ಪರಿಶೀಲಿಸಿದ ವಿದುರನು ಅಣ್ಣನಾದ ಧೃತರಾಷ್ಟ್ರನ ಬಳಿಗೆ ಹೋಗಿ ಹೇಳಿದನು ‘‘ಮಹಾರಾಜಾ! ಭಯಂಕರವಾದ ಕಾಲವು ಬಂದು ಬಿಟ್ಟಿದೆ. ಆದುದರಿಂದ ನೀನು ಶೀಘ್ರವಾಗಿ ಇಲ್ಲಿಂದ ಹೊರಟು ಬಿಡು. ॥18॥
(ಶ್ಲೋಕ - 19)
ಮೂಲಮ್
ಪ್ರತಿಕ್ರಿಯಾ ನ ಯಸ್ಯೇಹ ಕುತಶ್ಚಿತ್ಕರ್ಹಿಚಿತ್ಪ್ರಭೋ ।
ಸ ಏವ ಭಗವಾನ್ಕಾಲಃ ಸರ್ವೇಷಾಂ ನಃ ಸಮಾಗತಃ ॥
ಅನುವಾದ
ಪ್ರಭೋ! ಯಾರಿಂದಲೂ ಪರಿಹರಿಸಲಾರದ, ತಡೆಯಲಾರದ, ಬದಲಾಯಿಸಲಾರದ ಆ ಸರ್ವ ಸಮರ್ಥವಾದ ಕಾಲವು ನಮ್ಮೆಲ್ಲರ ತಲೆಯ ಮೇಲೆ ಸುತ್ತುತ್ತಿದೆ.॥19॥
(ಶ್ಲೋಕ - 20)
ಮೂಲಮ್
ಯೇನ ಚೈವಾಭಿಪನ್ನೋಯಂ ಪ್ರಾಣೈಃ ಪ್ರಿಯತಮೈರಪಿ ।
ಜನಃ ಸದ್ಯೋ ವಿಯುಜ್ಯೇತ ಕಿಮುತಾನ್ಯೈರ್ಧನಾದಿಭಿಃ ॥
ಅನುವಾದ
ಕಾಲಕ್ಕೆ ವಶೀಭೂತನಾದ ಜೀವನು ತನಗೆ ಪ್ರಿಯವಾಗಿರುವ ಪ್ರಾಣಗಳನ್ನು ನೋಡು ನೋಡುತ್ತಲೇ ತೊರೆಯ ಬೇಕಾಗಿರುವಾಗ ಇನ್ನು ಹಣ, ಜನ ಮುಂತಾದ ವಸ್ತುಗಳ ಬಗ್ಗೆ ಹೇಳುವುದೇನಿದೆ? ॥20॥
(ಶ್ಲೋಕ - 21)
ಮೂಲಮ್
ಪಿತೃಭ್ರಾತೃಸುಹೃತ್ಪುತ್ರಾ ಹತಾಸ್ತೇ ವಿಗತಂ ವಯಃ ।
ಆತ್ಮಾ ಚ ಜರಯಾ ಗ್ರಸ್ತಃ ಪರಗೇಹಮುಪಾಸಸೇ ॥
ಅನುವಾದ
ನಿಮ್ಮ ಚಿಕ್ಕಪ್ಪ, ದೊಡ್ಡಪ್ಪ, ತಂದೆ, ಸಹೋದರ, ಸಂಬಂಧಿಗಳು, ಪುತ್ರರು ಹೀಗೆ ಎಲ್ಲರೂ ಹತರಾದರು. ನೀವೂ ಮುದುಕರಾಗಿ ವಯಸ್ಸು ಸಂದು ಹೋಯಿತು. ಬೇರೆಯವರ ಮನೆಯಲ್ಲಿ ವಾಸಿಸುತ್ತಿದ್ದೀಯೆ.॥21॥
(ಶ್ಲೋಕ - 22)
ಮೂಲಮ್
ಅಹೋ ಮಹೀಯಸೀ ಜಂತೋರ್ಜೀವಿತಾಶಾ ಯಯಾ ಭವಾನ್ ।
ಭೀಮಾಪವರ್ಜಿತಂ ಪಿಂಡ ಮಾದತ್ತೇ ಗೃಹಪಾಲವತ್ ॥
ಅನುವಾದ
ಅಬ್ಬಾ! ಈ ಪ್ರಾಣಿಗಳಿಗೆ ಹೇಗಾದರೂ ಬದುಕಿರ ಬೇಕೆಂಬ ಆಸೆ ಎಷ್ಟು ಪ್ರಬಲವಾಗಿದೆ! ಅದರಿಂದಲೇ ನೀನು ಭೀಮಸೇನನು ಅಸಡ್ಡೆಯಿಂದ ಹಾಕಿದ ಕೂಳನ್ನು ತಿನ್ನುತ್ತಾ ನಾಯಿಯಂತೆ ಬದುಕಿದ್ದೀಯೆ.॥22॥
(ಶ್ಲೋಕ - 23)
ಮೂಲಮ್
ಅಗ್ನಿರ್ನಿಸೃಷ್ಟೋ ದತ್ತಶ್ಚ ಗರೋ ದಾರಾಶ್ಚ ದೂಷಿತಾಃ ।
ಹೃತಂ ಕ್ಷೇತ್ರಂ ಧನಂ ಯೇಷಾಂ ತದ್ದತ್ತೈರಸುಭಿಃ ಕಿಯತ್ ॥
ಅನುವಾದ
ಯಾರನ್ನು ನೀನು ಬೆಂಕಿಯಿಂದ ಸುಡಬೇಕೆಂದು ಬಯಸಿದೆಯೋ, ವಿಷವನ್ನಿಕ್ಕಿ ಸಾಯಿಸಲು ಇಚ್ಛಿಸಿದೆಯೋ, ತುಂಬಿದ ಸಭೆಯಲ್ಲಿ ಯಾರ ಪತ್ನಿಗೆ ಅಪಮಾನ ಮಾಡಿದೆಯೋ, ಯಾರ ಭೂಮಿಯನ್ನು ಕಿತ್ತುಕೊಂಡೆಯೋ, ಅವರೇ ಇಂದು ಹಾಕಿದ ಕೂಳಿನಿಂದ ಬದುಕಿರುವ ಪ್ರಾಣಗಳಿಗೆ ಗೌರವವಿದೆಯೇ? ॥23॥
(ಶ್ಲೋಕ - 24)
ಮೂಲಮ್
ತಸ್ಯಾಪಿ ತವ ದೇಹೋಯಂ ಕೃಪಣಸ್ಯ ಜಿಜೀವಿಷೋಃ ।
ಪರೈತ್ಯನಿಚ್ಛತೋ ಜೀರ್ಣೋ ಜರಯಾ ವಾಸಸೀ ಇವ ॥
ಅನುವಾದ
ಇಷ್ಟಿದ್ದರೂ ನೀನು ಬದುಕಬೇಕೆಂದು ಬಯಸುವೆಯಲ್ಲ! ನಿನ್ನ ಅಜ್ಞಾನ ಮೇರೆ ಮೀರಿಹೋಗಿದೆ. ಆದರೆ ನೀನು ಬಯಸುವುದರಿಂದ ಏನಾದೀತು? ಹಳೆಯ ಬಟ್ಟೆಯಂತೆ ಮುದಿತನದಿಂದ ಈ ಶರೀರವು ಬಯಸದೆಯೇ ಕ್ಷೀಣಿಸಿದೆ.॥24॥
(ಶ್ಲೋಕ - 25)
ಮೂಲಮ್
ಗತಸ್ವಾರ್ಥಮಿಮಂ ದೇಹಂ ವಿರಕ್ತೋ ಮುಕ್ತಬಂಧನಃ ।
ಅವಿಜ್ಞಾತಗತಿರ್ಜಹ್ಯಾತ್ಸ ವೈ ೀರ ಉದಾಹೃತಃ ॥
ಅನುವಾದ
ಈಗ ಈ ಶರೀರದಿಂದ ನಿನ್ನ ಯಾವುದೇ ಸ್ವಾರ್ಥವು ಸಾಧಿಸಲಾರದು. ಇದರಲ್ಲಿ ಇನ್ನು ಸಿಕ್ಕಿ ಮೋಸ ಹೋಗಬೇಡ. ಇದರ ಮಮತೆಯನ್ನು ಕತ್ತರಿಸಿ ಬಿಡು. ಪ್ರಪಂಚದ ಸಂಬಂಧಿಗಳಿಂದ ವಿರಕ್ತನಾಗಿ ಯಾರಿಗೂ ತಿಳಿಯದಂತೆ ತನ್ನ ಶರೀರವನ್ನು ತ್ಯಜಿಸುವವನು ಧೀರನು.॥25॥
(ಶ್ಲೋಕ - 26)
ಮೂಲಮ್
ಯಃ ಸ್ವಕಾತ್ಪರತೋ ವೇಹ ಜಾತನಿರ್ವೇದ ಆತ್ಮವಾನ್ ।
ಹೃದಿ ಕೃತ್ವಾ ಹರಿಂ ಗೇಹಾತ್ಪ್ರವ್ರಜೇತ್ಸ ನರೋತ್ತಮಃ ॥
ಅನುವಾದ
ತನ್ನ ಅರಿವಿನಿಂದಾಗಲೀ, ಬೇರೆಯವರ ಸಲಹೆಯಿಂದಾಗಲಿ, ಈ ಸಂಸಾರವು ದುಃಖರೂಪವೆಂದು ತಿಳಿದು ಇದರಿಂದ ವಿರಕ್ತನಾಗುವವನು, ತನ್ನ ಅಂತಃಕರಣವನ್ನೂ ವಶಪಡಿಸಿಕೊಂಡು ಹೃದಯದಲ್ಲಿ ಭಗವಂತನನ್ನು ಧರಿಸಿ ಸಂನ್ಯಾಸಿಯಾಗಿ ಮನೆಬಿಟ್ಟು ಹೊರಡುವವನು ಮನುಷ್ಯರಲ್ಲಿ ಉತ್ತಮನು.॥26॥
(ಶ್ಲೋಕ - 27)
ಮೂಲಮ್
ಅಥೋದೀಚೀಂ ದಿಶಂ ಯಾತು ಸ್ವೈರಜ್ಞಾತಗತಿರ್ಭವಾನ್ ।
ಇತೋರ್ವಾಕ್ಪ್ರಾಯಶಃ ಕಾಲಃ ಪುಂಸಾಂ ಗುಣವಿಕರ್ಷಣಃ ॥
ಅನುವಾದ
ಮುಂದೆ ಬರಲಿರುವ ಕಾಲವು ಪ್ರಾಯಶಃ ಮನುಷ್ಯರ ಗುಣಗಳ ಮಟ್ಟವನ್ನಿಳಿಸುವುದೇ ಆಗಿದೆ. ಅದಕ್ಕಾಗಿ ನೀನು ತನ್ನ ಕುಟುಂಬದವರಿಗೆ ತಿಳಿಯದೆ ಉತ್ತರಾಖಂಡಕ್ಕೆ ಹೊರಟು ಹೋಗು.’’ ॥27॥
(ಶ್ಲೋಕ - 28)
ಮೂಲಮ್
ಏವಂ ರಾಜಾ ವಿದುರೇಣಾನುಜೇನ
ಪ್ರಜ್ಞಾಚಕ್ಷುರ್ಬೋತ ಆಜಮೀಢಃ ।
ಛಿತ್ತ್ವಾ ಸ್ವೇಷು ಸ್ನೇಹಪಾಶಾಂದ್ರಢಿಮ್ನೋ
ನಿಶ್ಚಕ್ರಾಮ ಭ್ರಾತೃಸಂದರ್ಶಿತಾಧ್ವಾ ॥
ಅನುವಾದ
ತಮ್ಮನಾದ ವಿದುರನು ಧೃತರಾಷ್ಟ್ರನಿಗೆ ಹೀಗೆ ತಿಳಿಸಿದಾಗ ಅವನ ಜ್ಞಾನದ ಕಣ್ಣು ತೆರೆಯಿತು. ಅವನು ಬಂಧು-ಬಾಂಧವ, ಮಿತ್ರರಲ್ಲಿಟ್ಟಿದ್ದ ದೃಢವಾದ ಸ್ನೇಹಪಾಶವನ್ನು ಕತ್ತರಿಸಿ ತಮ್ಮನು ತೋರಿದ ಮಾರ್ಗ ವನ್ನನುಸರಿಸಿ ಹೊರಟು ಬಿಟ್ಟನು.॥28॥
(ಶ್ಲೋಕ - 29)
ಮೂಲಮ್
ಪತಿಂ ಪ್ರಯಾಂತಂ ಸುಬಲಸ್ಯ ಪುತ್ರೀ
ಪತಿವ್ರತಾ ಚಾನುಜಗಾಮ ಸ್ವಾೀ ।
ಹಿಮಾಲಯಂ ನ್ಯಸ್ತದಂಡಪ್ರಹರ್ಷಂ
ಮನಸ್ವಿನಾಮಿವ ಸತ್ಸಂಪ್ರಹಾರಃ ॥
ಅನುವಾದ
ಶೂರನಿಗೆ ಧರ್ಮಯುದ್ಧದಲ್ಲಿ ಬೀಳುವ ಏಟುಗಳು ಸಂತೋಷವುಂಟು ಮಾಡುವಂತೆ, ಪತಿಯು ಸಂನ್ಯಾಸಿಗಳಿಗೆ ಪರಮಸುಖ ದಾಯಕ ಹಿಮಾಲಯದ ಯಾತ್ರೆಯನ್ನು ಕೈಗೊಂಡಿರುವುದನ್ನು ನೋಡಿ ಪತಿವ್ರತೆಯಾದ ಸುಬಲ ನಂದಿನೀ ಗಾಂಧಾರಿಯು ಪತಿಯನ್ನನುಸರಿಸಿ ಹೊರಟುಬಿಟ್ಟಳು.॥29॥
(ಶ್ಲೋಕ - 30)
ಮೂಲಮ್
ಅಜಾತಶತ್ರುಃ ಕೃತಮೈತ್ರೋ ಹುತಾಗ್ನಿ-
ರ್ವಿಪ್ರಾನ್ನತ್ವಾ ತಿಲಗೋಭೂಮಿರುಕ್ಮೈಃ ।
ಗೃಹಂ ಪ್ರವಿಷ್ಟೋ ಗುರುವಂದನಾಯ
ನ ಚಾಪಶ್ಯತ್ಪಿತರೌ ಸೌಬಲೀಂ ಚ ॥
ಅನುವಾದ
ಅಜಾತಶತ್ರುವಾದ ಯುಧಿಷ್ಠಿರನು ಪ್ರಾತಃಕಾಲ ಸಂಧ್ಯಾ ವಂದನೆ, ಅಗ್ನಿಹೋತ್ರಾದಿ ನಿತ್ಯಕರ್ಮಗಳನ್ನು ಪೂರೈಸಿ, ಬ್ರಾಹ್ಮಣರಿಗೆ ನಮಸ್ಕರಿಸಿ, ಅವರಿಗೆ ಎಳ್ಳು, ಗೋವು, ಭೂಮಿ, ಸುವರ್ಣ ಮುಂತಾದವುಗಳನ್ನು ದಾನಮಾಡಿದನು. ಅನಂತರ ಗುರು-ಹಿರಿಯರಿಗೆ ವಂದಿಸುವುದಕ್ಕಾಗಿ ಅರಮನೆಗೆ ಹೋಗಲು, ಅಲ್ಲಿ ಅವನಿಗೆ ಧೃತರಾಷ್ಟ್ರ, ವಿದುರ, ಗಾಂಧಾರಿಯರ ದರ್ಶನವಾಗಲಿಲ್ಲ.॥30॥
(ಶ್ಲೋಕ - 31)
ಮೂಲಮ್
ತತ್ರ ಸಂಜಯಮಾಸೀನಂ ಪಪ್ರಚ್ಛೋದ್ವಿಗ್ನಮಾನಸಃ ।
ಗಾವಲ್ಗಣೇ ಕ್ವ ನಸ್ತಾತೋ ವೃದ್ಧೋ ಹೀನಶ್ಚ ನೇತ್ರಯೋಃ ॥
ಅನುವಾದ
ಯುಧಿಷ್ಠಿರನು ಕಳವಳಗೊಂಡು ಅಲ್ಲೇ ಕುಳಿತಿದ್ದ ಸಂಜಯನನ್ನು ‘‘ಸಂಜಯಾ! ವೃದ್ಧರೂ, ಅಂಧರೂ ಆದ ದೊಡ್ಡಪ್ಪ ಧೃತರಾಷ್ಟ್ರರೆಲ್ಲಿ? ॥31॥
(ಶ್ಲೋಕ - 32)
ಮೂಲಮ್
ಅಂಬಾ ಚ ಹತಪುತ್ರಾರ್ತಾ ಪಿತೃವ್ಯಃ ಕ್ವ ಗತಃ ಸುಹೃತ್ ।
ಅಪಿ ಮಯ್ಯಕೃತಪ್ರಜ್ಞೇ ಹತಬಂಧುಃ ಸ ಭಾರ್ಯಯಾ ।
ಆಶಂಸಮಾನಃ ಶಮಲಂ ಗಂಗಾಯಾಂ ದುಃಖಿತೋಪತತ್ ॥
ಅನುವಾದ
ಪುತ್ರಶೋಕದಿಂದ ಪೀಡಿತಳಾಗಿ ಕೊರಗುತ್ತಿದ್ದ ದೊಡ್ಡಮ್ಮ ಗಾಂಧಾರಿಯವರು, ಪರಮ ಹಿತೈಷಿಗಳಾದ ಚಿಕ್ಕಪ್ಪ ವಿದುರರು ಎಲ್ಲಿಗೆ ಹೋದರು? ದೊಡ್ಡಪ್ಪನವರು ತನ್ನ ಪುತ್ರರ-ಬಂಧುಗಳ ಮರಣದಿಂದ ದುಃಖಿಗಳಾಗಿದ್ದರು. ಮಂದಬುದ್ಧಿಯಾದ ನನ್ನಲ್ಲಿ ಎಲ್ಲಾದರೂ ತಪ್ಪನ್ನು ಶಂಕಿಸಿ ಅವರು ತಾಯಿ ಗಾಂಧಾರಿಯೊಂದಿಗೆ ಗಂಗಾನದಿಯಲ್ಲೇನಾದರೂ ಧುಮುಕಿ ಬಿಟ್ಟರೇ? ॥32॥
(ಶ್ಲೋಕ - 33)
ಮೂಲಮ್
ಪಿತುರ್ಯುಪರತೇ ಪಾಂಡೌ ಸರ್ವಾನ್ನಃ ಸುಹೃದಃ ಶಿಶೂನ್ ।
ಅರಕ್ಷತಾಂ ವ್ಯಸನತಃ ಪಿತೃವ್ಯೌ ಕ್ವ ಗತಾವಿತಃ ॥
ಅನುವಾದ
ನಮ್ಮ ತಂದೆ ಪಾಂಡುವು ಸ್ವರ್ಗಸ್ಥರಾದಾಗ ನಾವುಗಳು ಇನ್ನೂ ಸಣ್ಣ ಮಕ್ಕಳಾಗಿದ್ದೆವು. ಆಗ ಈ ದೊಡ್ಡಪ್ಪ-ಚಿಕ್ಕಪ್ಪ ಇವರುಗಳೇ ನಮ್ಮನ್ನು ನಾನಾ ದುಃಖಗಳಿಂದ ಪಾರುಗೊಳಿಸಿ, ಪ್ರೀತಿಯಿಂದ ಕಾಪಾಡಿದ್ದರು. ಅಯ್ಯೋ! ಅವರು ಈಗ ಎಲ್ಲಿಗೆ ಹೋದರೋ ತಿಳಿಯದಲ್ಲಾ!’’ ಎಂದು ಕೇಳಿದನು.॥33॥
(ಶ್ಲೋಕ - 34)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಕೃಪಯಾ ಸ್ನೇಹವೈಕ್ಲವ್ಯಾತ್ಸೂತೋ ವಿರಹಕರ್ಶಿತಃ ।
ಆತ್ಮೇಶ್ವರಮಚಕ್ಷಾಣೋ ನ ಪ್ರತ್ಯಾಹಾತಿಪೀಡಿತಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕರೇ! ಸಂಜಯನು ತನ್ನ ಪ್ರಭುವಾದ ಧೃತರಾಷ್ಟ್ರನನ್ನು ಕಾಣದೆ ಕರುಣೆ-ಸ್ನೇಹಗಳಿಂದ ಕುಗ್ಗಿ ಅಗಲಿಕೆಯ ದುಃಖದಿಂದ ಕೊರಗುತ್ತಾ ಯುಧಿಷ್ಠಿರನಿಗೆ ಯಾವ ಉತ್ತರವನ್ನೂ ಕೊಡದಾದನು.॥34॥
(ಶ್ಲೋಕ - 35)
ಮೂಲಮ್
ವಿಮೃಜ್ಯಾಶ್ರೂಣಿ ಪಾಣಿಭ್ಯಾಂ ವಿಷ್ಟಭ್ಯಾತ್ಮಾನಮಾತ್ಮನಾ ।
ಅಜಾತಶತ್ರುಂ ಪ್ರತ್ಯೂಚೇ ಪ್ರಭೋಃ ಪಾದಾವನುಸ್ಮರನ್ ॥
ಅನುವಾದ
ಅನಂತರ ಕೈಗಳಿಂದ ಕಣ್ಣೀರ ಧಾರೆಯನ್ನು ಒರೆಸಿಕೊಂಡು, ಸ್ವಲ್ಪ-ಸ್ವಲ್ಪವಾಗಿ ತನಗೆ ತಾನೇ ಸಮಾಧಾನ ತಂದುಕೊಂಡು ತನ್ನ ಪ್ರಭುವಿನ ಪಾದಗಳನ್ನು ಸ್ಮರಿಸುತ್ತಾ ಯುಧಿಷ್ಠಿರನ ಬಳಿ ಇಂತೆಂದನು ॥35॥
(ಶ್ಲೋಕ - 36)
ಮೂಲಮ್ (ವಾಚನಮ್)
ಸಂಜಯ ಉವಾಚ
ಮೂಲಮ್
ನಾಹಂ ವೇದ ವ್ಯವಸಿತಂ ಪ್ರಿತ್ರೋರ್ವಃ ಕುಲನಂದನ ।
ಗಾಂಧಾರ್ಯಾ ವಾ ಮಹಾಬಾಹೋ ಮುಷಿತೋಸ್ಮಿ ಮಹಾತ್ಮಭಿಃ ॥
ಅನುವಾದ
ಸಂಜಯ ಹೇಳಿದನು — ಕುರುಕುಲನಂದನನೇ! ನಿಮ್ಮ ದೊಡ್ಡಪ್ಪ-ದೊಡ್ಡಮ್ಮನವರ ಸಂಕಲ್ಪವೇನಿತ್ತೋ! ಅವರೇನು ನಿಶ್ಚಯಿಸಿದ್ದರೋ? ನನಗೇನೂ ತಿಳಿಯದು. ಮಹಾಬಾಹುವೇ! ಆ ಮಹಾತ್ಮರು ನನಗೆ ಮೋಸಮಾಡಿ ಹೊರಟು ಹೋದರು.॥36॥
(ಶ್ಲೋಕ - 37)
ಮೂಲಮ್
ಅಥಾಜಗಾಮ ಭಗವಾನ್ನಾರದಃ ಸಹತುಂಬುರುಃ ।
ಪ್ರತ್ಯುತ್ಥಾಯಾಭಿವಾದ್ಯಾಹ ಸಾನುಜೋಭ್ಯರ್ಚಯನ್ನಿವ ॥
ಅನುವಾದ
ಸಂಜಯನು ಹೀಗೆ ಹೇಳುತ್ತಿರುವಂತೆಯೇ ತುಂಬುರು ಸಮೇತ ಪೂಜ್ಯರಾದ ದೇವರ್ಷಿ ನಾರದರು ಅಲ್ಲಿಗೆ ಆಗಮಿಸಿದರು. ಮಹಾರಾಜಾ ಧರ್ಮನಂದನನು ತಮ್ಮಂದಿರೊಂದಿಗೆ ಎದ್ದು ಅವರನ್ನು ವಂದಿಸಿ, ಯಥೋಚಿತವಾಗಿ ಪೂಜಿಸಿ, ಕೈಜೋಡಿಸಿಕೊಂಡು ಇಂತೆಂದನು.॥37॥
(ಶ್ಲೋಕ - 38)
ಮೂಲಮ್ (ವಾಚನಮ್)
ಯುಧಿಷ್ಠಿರ ಉವಾಚ
ಮೂಲಮ್
ನಾಹಂ ವೇದ ಗತಿಂ ಪಿತ್ರೋರ್ಭಗವನ್ ಕ್ವ ಗತಾವಿತಃ ।
ಅಂಬಾ ವಾ ಹತಪುತ್ರಾರ್ತಾ ಕ್ವ ಗತಾ ಚ ತಪಸ್ವಿನೀ ॥
ಅನುವಾದ
ಯುಧಿಷ್ಠಿರನೆಂದ — ‘ಪೂಜ್ಯರೇ! ನಮ್ಮ ದೊಡ್ಡಪ್ಪ-ಚಿಕ್ಕಪ್ಪ ಇವರುಗಳ ಸಮಾಚಾರವಾಗಲೀ, ಅವರಿಬ್ಬರ ಹಾಗೂ ಪುತ್ರಶೋಕದಿಂದ ವ್ಯಾಕುಲಳಾದ ತಪಸ್ವಿನೀ ತಾಯಿ ಗಾಂಧಾರಿಯೂ ಇಲ್ಲಿಂದ ಎಲ್ಲಿಗೆ ಹೋದರೋ ಎಂಬ ಸಮಾಚಾರ ನನಗೆ ತಿಳಿಯದಾಗಿದೆ.॥38॥
(ಶ್ಲೋಕ - 39)
ಮೂಲಮ್
ಕರ್ಣಧಾರ ಇವಾಪಾರೇ ಭಗವಾನ್ಪಾರದರ್ಶಕಃ ।
ಅಥಾಬಭಾಷೇ ಭಗವಾನ್ನಾರದೋ ಮುನಿಸತ್ತಮಃ ॥
ಅನುವಾದ
ಮಹಾತ್ಮರೇ! ಅಪಾರವಾದ ಸಮುದ್ರದಲ್ಲಿ ದಡ ಮುಟ್ಟಿಸುವ ನಾವಿಕನಂತೆ ನೀವು ನಮ್ಮ ಭಾಗ್ಯೋದಯದಿಂದಲೇ ಇಲ್ಲಿಗೆ ಆಗಮಿಸಿದ್ದೀರಿ.’ ಆಗ ಭಗವಂತನ ಪರಮಭಕ್ತರಾದ ನಾರದ ಮಹರ್ಷಿಗಳು ಇಂತೆಂದರು.॥39॥
(ಶ್ಲೋಕ - 40)
ಮೂಲಮ್
ಮಾ ಕಂಚನ ಶುಚೋ ರಾಜನ್ಯದೀಶ್ವರವಶಂ ಜಗತ್ ।
ಲೋಕಾಃ ಸಪಾಲಾ ಯಸ್ಯೇಮೇ ವಹಂತಿ ಬಲಿಮೀಶಿತುಃ ।
ಸ ಸಂಯುನಕ್ತಿ ಭೂತಾನಿ ಸ ಏವ ವಿಯುನಕ್ತಿ ಚ ॥
ಅನುವಾದ
ಧರ್ಮರಾಜಾ! ನೀನು ಯಾರ ವಿಷಯದಲ್ಲಿಯೂ ಶೋಕಿಸಬಾರದು. ಏಕೆಂದರೆ, ಜಗತ್ತೆಲ್ಲವೂ ಈಶ್ವರಾಧೀನವಾಗಿದೆ. ಸಮಸ್ತ ಲೋಕಗಳೂ, ಲೋಕಪಾಲರೂ ಈ ಮಹಾಪ್ರಭುವಿನ ಆಣತಿಯಂತೆ ನಡೆಯುತ್ತವೆ. ಅವನೇ ಎಲ್ಲ ಪ್ರಾಣಿಗಳನ್ನು ಅವುಗಳ ಕರ್ಮಗಳಿಗೆ ಅನುಗುಣವಾಗಿ ಕೆಲವೊಮ್ಮೆ ಕೂಡಿಸುವನು. ಕೆಲವೊಮ್ಮೆ ಅಗಲಿಸುವನು.॥40॥
(ಶ್ಲೋಕ - 41)
ಮೂಲಮ್
ಯಥಾ ಗಾವೋ ನಸಿ ಪ್ರೋತಾಸ್ತಂತ್ಯಾಂ ಬದ್ಧಾಃ ಸ್ವದಾಮಭಿಃ ।
ವಾಕ್ತಂತ್ಯಾಂ ನಾಮಭಿರ್ಬದ್ಧಾ ವಹಂತಿ ಬಲಿಮೀಶಿತುಃ ॥
ಅನುವಾದ
ಎತ್ತುಗಳು ಮೂಗಿನಲ್ಲಿ ಪೋಣಿಸಿದ ಮೂಗುದಾರಗಳಿಂದಲೂ, ಇತರ ದಪ್ಪಹಗ್ಗಗಳಿಂದ ಕಟ್ಟುಬಿದ್ದು ಅಲುಗಾಡಲೂ ಸ್ವಾತಂತ್ರ್ಯವಿಲ್ಲದೆ ತಮ್ಮ ಯಜಮಾನನ ಅಪ್ಪಣೆಯಂತೆ ನಡೆಯುವಂತೆಯೇ, ಮನುಷ್ಯನು ನಾಮ-ರೂಪಗಳೆಂಬ ಪಾಶಗಳಿಂದ, ಮಾತುಗಳೆಂಬ ತಂತುವಿನಲ್ಲಿ ಬಂಧಿತನಾಗಿ ಭಗವಂತನ ಆಜ್ಞೆಯಂತೆ ಅನುಸರಿಸುವನು.॥41॥
(ಶ್ಲೋಕ - 42)
ಮೂಲಮ್
ಯಥಾ ಕ್ರೀಡೋಪಸ್ಕರಾಣಾಂ ಸಂಯೋಗವಿಗಮಾವಿಹ ।
ಇಚ್ಛಯಾ ಕ್ರಿಡಿತುಃ ಸ್ಯಾತಾಂ ತಥೈವೇಶೇಚ್ಛಯಾ ನೃಣಾಮ್ ॥
ಅನುವಾದ
ಈ ಲೋಕದಲ್ಲಿ ಆಟಗಾರನ ಇಷ್ಟದಂತೆ ಆಟಿಕೆಗಳು ಒಂದಾಗುತ್ತವೆ, ಬೇರ್ಪಡುತ್ತವೆ. ಹಾಗೆಯೇ ಭಗವಂತನ ಇಚ್ಛೆಯಿಂದಲೇ ಮನುಷ್ಯರ ಸೇರುವಿಕೆ, ಅಗಲುವಿಕೆ ಇವೆಲ್ಲಾ ಉಂಟಾಗುತ್ತಾ ಇರುತ್ತದೆ.॥42॥
(ಶ್ಲೋಕ - 43)
ಮೂಲಮ್
ಯನ್ಮನ್ಯಸೇ ಧ್ರುವಂ ಲೋಕಮಧ್ರುವಂ ವಾ ನ ಚೋಭಯಮ್ ।
ಸರ್ವಥಾ ನ ಹಿ ಶೋಚ್ಯಾಸ್ತೇ ಸ್ನೇಹಾದನ್ಯತ್ರ ಮೋಹಜಾತ್ ॥
ಅನುವಾದ
ನೀವುಗಳು ಜೀವರೂಪದಿಂದ ನಿತ್ಯ ಅಥವಾ ದೇಹರೂಪದಿಂದ ಅನಿತ್ಯ, ಇಲ್ಲವೇ ಜಡರೂಪದಿಂದ ಅನಿತ್ಯ, ಚೇತನರೂಪದಿಂದ ನಿತ್ಯ, ಅಥವಾ ಶುದ್ಧಬ್ರಹ್ಮರೂಪದಲ್ಲಿ ನಿತ್ಯ-ಅನಿತ್ಯ ಏನನ್ನೂ ಭಾವಿಸದಿದ್ದರೂ, ಯಾವುದೇ ಅವಸ್ಥೆಯಲ್ಲಿಯೂ ಮೋಹಜನ್ಯ ಆಸಕ್ತಿಯಲ್ಲದೆ ಶೋಕಿಸಲು ಯಾವ ಕಾರಣವೂ ಇಲ್ಲ.॥43॥
(ಶ್ಲೋಕ - 44)
ಮೂಲಮ್
ತಸ್ಮಾಜ್ಜಹ್ಯಂಗ ವೈಕ್ಲವ್ಯಮಜ್ಞಾನಕೃತಮಾತ್ಮನಃ ।
ಕಥಂ ತ್ವನಾಥಾಃ ಕೃಪಣಾ ವರ್ತೇರಂಸ್ತೇ ಚ ಮಾಂ ವಿನಾ ॥
ಅನುವಾದ
ಆದುದರಿಂದ ಧರ್ಮನಂದನಾ! ‘ಅನಾಥರೂ, ದೀನರೂ ಆಗಿರುವ ಅವರು ನನ್ನನ್ನು ಬಿಟ್ಟು ಹೇಗೆ ತಾನೇ ಬದುಕಿಯಾರು?’ ಎಂಬ ಮನಸ್ಸಿನ ಕೊರಗನ್ನು ಬಿಡು. ಅದು ಅಜ್ಞಾನಮೂಲವಾಗಿದೆ. ॥44॥
(ಶ್ಲೋಕ - 45)
ಮೂಲಮ್
ಕಾಲಕರ್ಮಗುಣಾೀನೋ ದೇಹೋಯಂ ಪಾಂಚಭೌತಿಕಃ ।
ಕಥಮನ್ಯಾಂಸ್ತು ಗೋಪಾಯೇತ್ಸರ್ಪಗ್ರಸ್ತೋ ಯಥಾ ಪರಮ್ ॥
ಅನುವಾದ
ಈ ಪಾಂಚ ಭೌತಿಕ ಶರೀರವು ಕಾಲ, ಕರ್ಮ, ಗುಣಗಳ ವಶದಲ್ಲಿದೆ. ಹೆಬ್ಬಾವಿನ ಬಾಯಲ್ಲಿ ಸಿಕ್ಕಿಬಿದ್ದಿರುವ ಮನುಷ್ಯನಂತೆ ಈ ಪರಾಧೀನ ಶರೀರವು ಬೇರೆಯವರನ್ನು ಹೇಗೆ ಕಾಪಾಡ ಬಲ್ಲದು? ॥45॥
(ಶ್ಲೋಕ - 46)
ಮೂಲಮ್
ಅಹಸ್ತಾನಿ ಸಹಸ್ತಾ ನಾಮಪದಾನಿ ಚತುಷ್ಪದಾಮ್ ।
ಲ್ಗೂನಿ ತತ್ರ ಮಹತಾಂ ಜೀವೋ ಜೀವಸ್ಯ ಜೀವನಮ್ ॥
ಅನುವಾದ
ಲೋಕದಲ್ಲಿ ಕೈಗಳಿಲ್ಲದ ಪ್ರಾಣಿಗಳು ಕೈಗಳುಳ್ಳ ಪ್ರಾಣಿಗಳ ಆಹಾರವು. ನಾಲ್ಕು ಕಾಲುಗಳುಳ್ಳ ಪ್ರಾಣಿಗಳಿಗೆ ಕಾಲುಗಳಿಲ್ಲದವು (ತೃಣಾದಿ) ಮತ್ತು ಅವು ಗಳಲ್ಲಿಯೂ ಸಣ್ಣಜೀವಿಗಲು ದೊಡ್ಡ ಜೀವಿಗಳ ಆಹಾರವಾಗಿದೆ.॥46॥
(ಶ್ಲೋಕ - 47)
ಮೂಲಮ್
ತದಿದಂ ಭಗವಾನ್ರಾಜನ್ನೇಕ ಆತ್ಮಾತ್ಮನಾಂ ಸ್ವದೃಕ್ ।
ಅಂತರೋನಂತರೋ ಭಾತಿ ಪಶ್ಯ ತಂ ಮಾಯಯೋರುಧಾ ॥
ಅನುವಾದ
ಮಹಾರಾಜಾ! ಈ ಸಮಸ್ತ ರೂಪಗಳಲ್ಲಿ ಜೀವಿಗಳ ಒಳ-ಹೊರಗೆ ಅವನೊಬ್ಬನೇ ಸ್ವಯಂ ಪ್ರಕಾಶ ಭಗವಂತನು ಸಮಸ್ತ ಆತ್ಮಗಳ ಆತ್ಮನಾಗಿರುವನು. ಮಾಯೆಯಿಂದಾಗಿ ಅನೇಕ ಪ್ರಕಾರದಿಂದ ಪ್ರಕಟನಾಗು ತ್ತಿದ್ದಾನೆ. ನೀನು ಕೇವಲ ಅವನನ್ನೇ ನೋಡು.॥47॥
(ಶ್ಲೋಕ - 48)
ಮೂಲಮ್
ಸೋಯಮದ್ಯ ಮಹಾರಾಜ
ಭಗವಾನ್ ಭೂತಭಾವನಃ ।
ಕಾಲರೂಪೋವತೀರ್ಣೋ-
ಸ್ಯಾಮಭಾವಾಯ ಸುರದ್ವಿಷಾಮ್ ॥
ಅನುವಾದ
ಮಹಾರಾಜನೇ! ಸರ್ವಭೂತಗಳನ್ನು ಸೃಷ್ಟಿಸಿ, ರಕ್ಷಿಸುವ ಭೂತ ಭಾವನನಾದ ಕಾಲರೂಪಿಯಾದ ಆ ಭಗವಂತನೇ ಈಗ ದೇವ ದ್ರೋಹಿಗಳನ್ನು ಸಂಹರಿಸುವುದಕ್ಕಾಗಿ ಶ್ರೀಕೃಷ್ಣನ ರೂಪದಲ್ಲಿ ಅವತರಿಸಿರುವನು.॥48॥
(ಶ್ಲೋಕ - 49)
ಮೂಲಮ್
ನಿಷ್ಪಾದಿತಂ ದೇವಕೃತ್ಯಮವಶೇಷಂ ಪ್ರತೀಕ್ಷತೇ ।
ತಾವದ್ಯೂಯಮವೇಕ್ಷಧ್ವಂ ಭವೇದ್ಯಾವದಿಹೇಶ್ವರಃ ॥
ಅನುವಾದ
ಈಗ ಅವನು ದೇವತೆಗಳ ಕಾರ್ಯವನ್ನು ಪೂರ್ಣಗೊಳಿಸಿರುವನು. ಇನ್ನು ಸ್ವಲ್ಪವೇ ಕೆಲಸ ಬಾಕಿ ಇರುವುದರಿಂದ ಅವನು ನಿಂತಿರುವನು. ಆ ಪ್ರಭುವು ಇಲ್ಲಿ ಇರುವ ತನಕ ನೀವುಗಳೂ ಅವನ ಪ್ರತೀಕ್ಷೆಮಾಡುತ್ತಾ ಕಾಲಕಳೆಯುತ್ತಾ ಇರಿ.॥49॥
ಮೂಲಮ್
(ಶ್ಲೋಕ - 50)
ಧೃತರಾಷ್ಟ್ರಃ ಸಹ ಭ್ರಾತ್ರಾ ಗಾಂಧಾರ್ಯಾ ಚ ಸ್ವಭಾರ್ಯಯಾ ।
ದಕ್ಷಿಣೇನ ಹಿಮವತ ಋಷೀಣಾಮಾಶ್ರಮಂ ಗತಃ ॥
(ಶ್ಲೋಕ - 51)
ಮೂಲಮ್
ಸ್ರೋತೋಭಿಃ ಸಪ್ತಭಿರ್ಯಾ ವೈ ಸ್ವರ್ಧುನೀ ಸಪ್ತಧಾ ವ್ಯಧಾತ್ ।
ಸಪ್ತಾನಾಂ ಪ್ರೀತಯೇ ನಾನಾ ಸಪ್ತಸ್ರೋತಃ ಪ್ರಚಕ್ಷತೇ ॥
ಅನುವಾದ
ಧರ್ಮನಂದನಾ! ನಿಮ್ಮ ದೊಡ್ಡಪ್ಪನು ತಮ್ಮನೊಡನೆ ಹಾಗೂ ಪತ್ನಿಯೊಡನೆ ಈಗಾಗಲೇ ಹಿಮಾಲಯದ ದಕ್ಷಿಣ ಭಾಗದಲ್ಲಿ ದೇವ ಗಂಗೆಯು ಸಪ್ತರ್ಷಿಗಳಿಗೆ ಸಂತೋಷವನ್ನುಂಟುಮಾಡಲು ಏಳು ಧಾರೆಯಾಗಿ ವಿಭಾಗಗೊಂಡವಳಾಗಿ ಹರಿಯುವ ‘ಸಪ್ತಸ್ರೋತ’ (ಸಪ್ತರ್ಷಿ ಧಾಮ) ಎಂದು ಪ್ರಸಿದ್ಧವಾದ ಜಾಗದಲ್ಲಿ ಋಷಿಗಳ ಆಶ್ರಮಕ್ಕೆ ಹೊರಟುಹೋಗಿದ್ದಾನೆ.॥50-51॥
(ಶ್ಲೋಕ - 52)
ಮೂಲಮ್
ಸ್ನಾತ್ವಾನುಸವನಂ ತಸ್ಮಿನ್ಹುತ್ವಾ ಚಾಗ್ನೀನ್ಯಥಾವಿ ।
ಅಬ್ಭಕ್ಷ ಉಪಶಾಂತಾತ್ಮಾ ಸ ಆಸ್ತೇ ವಿಗತೈಷಣಃ ॥
ಅನುವಾದ
ಅವನು ಅಲ್ಲಿ ತ್ರಿಕಾಲಸ್ನಾನ ಮಾಡಿ, ವಿಧಿಪೂರ್ವಕ ಅಗ್ನಿಹೋತ್ರವನ್ನು ಆಚರಿಸುತ್ತಾ, ಕೇವಲ ಜಲಾಹಾರಿಯಾಗಿ, ಪ್ರಶಾಂತನಾಗಿ ಸರ್ವಕಾಮನೆಗಳನ್ನೂ ತೊರೆದು ವಾಸಿಸುತ್ತಿದ್ದಾನೆ. ॥52॥
(ಶ್ಲೋಕ - 53)
ಮೂಲಮ್
ಜಿತಾಸನೋ ಜಿತಶ್ವಾಸಃ ಪ್ರತ್ಯಾಹೃತಷಡಿಂದ್ರಿಯಃ ।
ಹರಿಭಾವನಯಾ ಧ್ವಸ್ತರಜಃಸತ್ತ್ವ ತಮೋಮಲಃ ॥
ಅನುವಾದ
ಅವನೀಗ ಆಸನ ಜಯವನ್ನು ಸಾಧಿಸಿ, ಪ್ರಾಣ ವಾಯುವನ್ನು ಹತೋಟಿಗೆ ತಂದುಕೊಂಡು, ತನ್ನ ಆರೂ ಇಂದ್ರಿಯಗಳನ್ನು ತಮ್ಮ ವಿಷಯಗಳಿಂದ ಹಿಂದಕ್ಕೆಳೆದುಕೊಂಡು ಭಗವಂತನ ಧಾರಣೆಯಿಂದ ತಮೋಗುಣ, ರಜೋಗುಣ ಮತ್ತು ಸತ್ತ್ವಗುಣ ಇವುಗಳ ಮಲಗಳನ್ನು ಕಳೆದುಕೊಂಡಿರುವನು.॥53॥
(ಶ್ಲೋಕ - 54)
ಮೂಲಮ್
ವಿಜ್ಞಾನಾತ್ಮನಿ ಸಂಯೋಜ್ಯ ಕ್ಷೇತ್ರಜ್ಞೇ ಪ್ರವಿಲಾಪ್ಯ ತಮ್ ।
ಬ್ರಹ್ಮಣ್ಯಾತ್ಮಾನಮಾಧಾರೇ ಘಟಾಂಬರಮಿವಾಂಬರೇ ॥
(ಶ್ಲೋಕ - 55)
ಮೂಲಮ್
ಧ್ವಸ್ತಮಾಯಾಗುಣೋದರ್ಕೋ ನಿರುದ್ಧ ಕರಣಾಶಯಃ ।
ನಿವರ್ತಿತಾಖಿಲಾಹಾರ ಆಸ್ತೇ ಸ್ಥಾಣುರಿವಾಚಲಃ ।
ತಸ್ಯಾಂತರಾಯೋ ಮೈವಾಭೂಃ ಸಂನ್ಯಸ್ತಾಖಿಲಕರ್ಮಣಃ ॥
ಅನುವಾದ
ಅವನು ಅಹಂಕಾರವನ್ನು ಬುದ್ಧ್ಯಾತ್ಮನಲ್ಲಿಯೂ, ಬುದ್ಧ್ಯಾತ್ಮನನ್ನು ಕ್ಷೇತ್ರಜ್ಞನಾದ ಜೀವಾತ್ಮನಲ್ಲಿಯೂ ಆ ಜೀವಾತ್ಮನನ್ನು ಘಟಾಕಾಶವು ಮಹಾಕಾಶದಲ್ಲಿ ಲೀನವಾಗುವಂತೆ ಸರ್ವಾಧಿಷ್ಠಾನವಾದ ಬ್ರಹ್ಮನಲ್ಲಿ ಒಂದಾಗಿಸಿ ಬಿಟ್ಟಿರುವನು. ಅವನು ತನ್ನ ಸಮಸ್ತ ಇಂದ್ರಿಯಗಳನ್ನೂ, ಮನಸ್ಸನ್ನೂ ತಡೆದು ವಿಷಯಗಳನ್ನು ಹೊರಗಿನಿಂದಲೇ ತಡೆಗಟ್ಟಿರುವನು. ಮಾಯೆಯ ಗುಣಗಳಿಂದ ಉಂಟಾಗುವ ಪರಿಣಾಮಗಳನ್ನು ಸರ್ವಥಾ ಇಲ್ಲವಾಗಿಸಿದ್ದಾನೆ. ಸಮಸ್ತ ಕರ್ಮಗಳನ್ನು ಸಂನ್ಯಾಸಮಾಡಿ ಈಗ ನೆಟ್ಟಕಂಬದಂತೆ ನಿಶ್ಚಲವಾಗಿ ಕುಳಿತಿರುವನು. ಆದ್ದರಿಂದ ನೀನು ಅವನ ಶ್ರೇಯಸ್ಸಿನಲ್ಲಿ ಅಡ್ಡಿಯಾಗ ಬೇಡ.* ॥54-55॥
ಟಿಪ್ಪನೀ
- ದೇವರ್ಷಿ ನಾರದರು ತ್ರಿಕಾಲದರ್ಶಿಗಳು. ಅವರು ಧೃತರಾಷ್ಟ್ರನ ಭವಿಷ್ಯ ಜೀವನವನ್ನು ವರ್ತಮಾನದಂತೆ, ಪ್ರತ್ಯಕ್ಷ ನೋಡುವವನಂತೆ ವರ್ಣಿಸುತ್ತಿದ್ದಾರೆ. ಧೃತರಾಷ್ಟನು ಹಿಂದಿನ ರಾತ್ರಿಯಲ್ಲೇ ಹಸ್ತಿನಾವತಿಯಿಂದ ಹೊರಟುಹೋಗಿದ್ದನು. ಆದ್ದರಿಂದ ಈ ವರ್ಣನೆಯು ಭವಿಷ್ಯದೆಂದು ತಿಳಿದುಕೊಳ್ಳಬೇಕು.
(ಶ್ಲೋಕ - 56)
ಮೂಲಮ್
ಸ ವಾ ಅದ್ಯತನಾದ್ರಾಜನ್ಪರತಃ ಪಂಚಮೇಹನಿ ।
ಕಲೇವರಂ ಹಾಸ್ಯತಿ ಸ್ವಂ ತಚ್ಚ ಭಸ್ಮೀಭವಿಷ್ಯತಿ ॥
ಅನುವಾದ
ಧರ್ಮರಾಜಾ! ಇಂದಿನಿಂದ ಐದನೆಯ ದಿನ ಧೃತರಾಷ್ಟ್ರನು ತನ್ನ ಶರೀರವನ್ನು ತ್ಯಜಿಸಿ ಬಿಡುವನು. ಆ ದೇಹವು ಒಡನೆಯೇ ಸುಟ್ಟು ಬೂದಿಯಾಗುವುದು. ॥56॥
(ಶ್ಲೋಕ - 57)
ಮೂಲಮ್
ದಹ್ಯಮಾನೇಗ್ನಿ ಭಿರ್ದೇಹೇ ಪತ್ಯುಃ ಪತ್ನೀ ಸಹೋಟಜೇ ।
ಬಹಿಃ ಸ್ಥಿತಾ ಪತಿಂ ಸ್ವಾೀ ತಮಗ್ನಿ ಮನುವೇಕ್ಷ್ಯತಿ ॥
ಅನುವಾದ
ಗಾರ್ಹಪತ್ಯಾದಿ ಅಗ್ನಿಗಳ ಮೂಲಕ ಪರ್ಣಕುಟಿಯೊಂದಿಗೆ ಸುಡುತ್ತಿರುವ ತನ್ನ ಪತಿಯ ಮೃತದೇಹವನ್ನು ಕಂಡು ಹೊರಗೆ ನಿಂತಿರುವ ಪತಿವ್ರತೆಯಾದ ಗಾಂಧಾರಿಯು ಪತಿಯನ್ನು ಅನುಸರಿಸಿ ಆ ಅಗ್ನಿಯನ್ನು ಪ್ರವೇಶಿಸುವಳು. ॥57॥
(ಶ್ಲೋಕ - 58)
ಮೂಲಮ್
ವಿದುರಸ್ತು ತದಾಶ್ಚರ್ಯಂ ನಿಶಾಮ್ಯ ಕುರುನಂದನ ।
ಹರ್ಷಶೋಕಯುತಸ್ತಸ್ಮಾದ್ಗಂತಾ ತೀರ್ಥನಿಷೇವಕಃ ॥
ಅನುವಾದ
ಧರ್ಮರಾಜಾ! ತನ್ನ ಅಣ್ಣನ ಆಶ್ಚರ್ಯಮಯ ಮೋಕ್ಷವನ್ನು ನೋಡಿದ ವಿದುರನು ಹರ್ಷಿತನಾಗಿ, ವಿಯೋಗವನ್ನು ಸಹಿಸದೆ ದುಃಖಿತನಾಗುತ್ತಾ, ಅಲ್ಲಿಂದ ತೀರ್ಥ ಯಾತ್ರೆಗಾಗಿ ಹೊರಟುಹೋಗುವನು.॥58॥
(ಶ್ಲೋಕ - 59)
ಮೂಲಮ್
ಇತ್ಯುಕ್ತ್ವಾಥಾರುಹತ್ಸ್ವರ್ಗಂ ನಾರದಃ ಸಹತುಂಬುರುಃ ।
ಯುಷ್ಠಿರೋ ವಚಸ್ತಸ್ಯ ಹೃದಿ ಕೃತ್ವಾಜಹಾಚ್ಛುಚಃ ॥
ಅನುವಾದ
ದೇವರ್ಷಿ ನಾರದರು ಹೀಗೆ ಹೇಳಿ ತುಂಬುರುವಿನೊಡನೆ ಸ್ವರ್ಗ ಲೋಕಕ್ಕೆ ಹೊರಟು ಹೋದರು. ಯುಧಿಷ್ಠಿರನು ಅವರ ಉಪದೇಶಗಳನ್ನು ಹೃದಯಂಗಮವಾಗಿಸಿಕೊಂಡು ಶೋಕ-ಮೋಹಗಳನ್ನು ತೊರೆದು ಬಿಟ್ಟನು.॥59॥
ಅನುವಾದ (ಸಮಾಪ್ತಿಃ)
ಹದಿಮೂರನೆಯ ಅಧ್ಯಾಯವು ಮುಗಿಯಿತು.॥13॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ತ್ರಯೋದಶೋಽಧ್ಯಾಯಃ ॥13॥