೧೨

[ಹನ್ನೆರಡನೆಯ ಅಧ್ಯಾಯ]

ಭಾಗಸೂಚನಾ

ಪರೀಕ್ಷಿದ್ರಾಜನ ಜನನ

(ಶ್ಲೋಕ - 1)

ಮೂಲಮ್ (ವಾಚನಮ್)

ಶೌನಕ ಉವಾಚ

ಮೂಲಮ್

ಅಶ್ವತ್ಥಾಮ್ನೋಪಸೃಷ್ಟೇನ ಬ್ರಹ್ಮಶೀರ್ಷ್ಣೋರುತೇಜಸಾ ।
ಉತ್ತರಾಯಾ ಹತೋ ಗರ್ಭ ಈಶೇನಾಜೀವಿತಃ ಪುನಃ ॥

ಅನುವಾದ

ಶೌನಕರು ಕೇಳುತ್ತಿದ್ದಾರೆ — ಸೂತಪುರಾಣಿಕರೇ! ಅಶ್ವತ್ಥಾಮನು ಪ್ರಯೋಗಿಸಿದ ಪರಮ ತೇಜಸ್ವೀ ಬ್ರಹ್ಮಶಿರೋಸ್ತ್ರದಿಂದ ಉತ್ತರೆಯ ಗರ್ಭವನ್ನು ನಾಶಪಡಿಸಿದ್ದನು. ಆದರೆ ಭಗವಂತನು ಅವನನ್ನು ಪುನಃ ಬದುಕಿಸಿದ್ದನು ಎಂದು ನಾವು ಕೇಳಿದ್ದೇವೆ.॥1॥

(ಶ್ಲೋಕ - 2)

ಮೂಲಮ್

ತಸ್ಯ ಜನ್ಮ ಮಹಾಬುದ್ಧೇಃ ಕರ್ಮಾಣಿ ಚ ಮಹಾತ್ಮನಃ ।
ನಿಧನಂ ಚ ಯಥೈವಾಸೀತ್ಸ ಪ್ರೇತ್ಯ ಗತವಾನ್ ಯಥಾ ॥

(ಶ್ಲೋಕ - 3)

ಮೂಲಮ್

ತದಿದಂ ಶ್ರೋತುಮಿಚ್ಛಾಮೋ ಗದಿತುಂ ಯದಿ ಮನ್ಯಸೇ ।
ಬ್ರೂಹಿ ನಃ ಶ್ರದ್ದಧಾನಾನಾಂ ಯಸ್ಯ ಜ್ಞಾನಮದಾಚ್ಛುಕಃ ॥

ಅನುವಾದ

ಆ ಗರ್ಭದಿಂದ ಹುಟ್ಟಿದ ಮಹಾಜ್ಞಾನಿಯೂ, ಮಹಾತ್ಮನೂ ಆದ ಪರೀಕ್ಷಿದ್ರಾಜನಿಗೆ ಶುಕ ಮಹಾಮುನಿಗಳು ಜ್ಞಾನೋಪದೇಶ ಮಾಡಿದ್ದರಲ್ಲ! ಅವನ ಜನ್ಮ, ಕರ್ಮ, ಮೃತ್ಯು, ಅನಂತರ ಅವನಿಗೆ ಪ್ರಾಪ್ತವಾದ ಗತಿ ಹೀಗೆಲ್ಲವನ್ನೂ ನಿಮಗೆ ಸರಿಯೆನಿಸಿದರೆ ನಮಗೆ ತಿಳಿಸಿರಿ. ನಾವುಗಳು ಶ್ರದ್ಧೆಯಿಂದ ಕೇಳ ಬಯಸುತ್ತೇವೆ.॥2-3॥

(ಶ್ಲೋಕ - 4)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಅಪೀಪಲದ್ಧರ್ಮರಾಜಃ ಪಿತೃವದ್ರಂಜಯನ್ಪ್ರಜಾಃ ।
ನಿಃಸ್ಪೃಹಃ ಸರ್ವಕಾಮೇಭ್ಯಃ ಕೃಷ್ಣಪಾದಾಬ್ಜ ಸೇವಯಾ ॥

ಅನುವಾದ

ಸೂತಪುರಾಣಿಕರೆಂದರು — ಶೌನಕಾದಿಗಳೇ! ಧರ್ಮರಾಜಾಯುಧಿಷ್ಠಿರನು ಪ್ರಜೆಗಳನ್ನು ಸಂತೋಷಪಡಿಸುತ್ತಾ, ತಂದೆಯಂತೆ ಅವರನ್ನು ಪಾಲಿಸುತ್ತಿದ್ದನು. ಭಗವಾನ್ ಶ್ರೀಕೃಷ್ಣನ ಪಾದಾರವಿಂದಗಳ ಸೇವನೆಯಿಂದ ಅವನು ಸಮಸ್ತ ಭೋಗಗಳಿಂದ ನಿಃಸ್ಪೃಹನಾಗಿದ್ದನು.॥4॥

(ಶ್ಲೋಕ - 5)

ಮೂಲಮ್

ಸಂಪದಃ ಕ್ರತವೋ ಲೋಕಾ ಮಹಿಷೀ ಭ್ರಾತರೋ ಮಹೀ ।
ಜಂಬೂದ್ವೀಪಾಪತ್ಯಂ ಚ ಯಶಶ್ಚ ತ್ರಿದಿವಂ ಗತಮ್ ॥

ಅನುವಾದ

ಶೌನಕಾದ್ಯರೇ! ಧರ್ಮನಂದನನು ಅತುಳ ಸಂಪತ್ತಿನಿಂದ, ದೊಡ್ಡ-ದೊಡ್ಡ ಯಜ್ಞಗಳನ್ನು ಮಾಡಿ ಶ್ರೇಷ್ಠವಾದ ಲೋಕಗಳನ್ನು ಗಳಿಸಿದ್ದನು. ಅವನಿಗೆ ರಾಣಿಯರೂ, ಒಡ ಹುಟ್ಟಿದವರೂ ಅನುಕೂಲರಾಗಿದ್ದರು. ಇಡೀ ಜಂಬೂದ್ವೀಪಕ್ಕೆ ಒಡೆಯನಾಗಿದ್ದು, ಅವನ ಕೀರ್ತಿಯು ಸ್ವರ್ಗವನ್ನೂ ವ್ಯಾಪಿಸಿತ್ತು.॥5॥

(ಶ್ಲೋಕ - 6)

ಮೂಲಮ್

ಕಿಂ ತೇ ಕಾಮಾಃ ಸುರಸ್ಪಾರ್ಹಾ ಮುಕುಂದಮನಸೋ ದ್ವಿಜಾಃ ।
ಅಜಹ್ರುರ್ಮುದಂ ರಾಜ್ಞಃ ಕ್ಷುತಸ್ಯ ಯಥೇತರೇ ॥

ಅನುವಾದ

ದೇವತೆಗಳೂ ಆಸೆ ಪಡಬಹುದಾದ ಭೋಗಸಮೃದ್ಧಿಯನ್ನು ಅವನು ಹೊಂದಿದ್ದನು. ಆದರೂ ಹಸಿದಿರುವ ಮನುಷ್ಯನಿಗೆ ಭೋಜನವಲ್ಲದೆ ಬೇರೆ ಯಾವುದೂ ರುಚಿಸದಂತೆಯೇ, ಅವನಿಗೆ ಭಗವಂತನಲ್ಲದೆ ಬೇರೆ ಯಾವ ಸುಖಸಂಪತ್ತು ರುಚಿಸುತ್ತಿರಲಿಲ್ಲ.॥6॥

(ಶ್ಲೋಕ - 7)

ಮೂಲಮ್

ಮಾತುರ್ಗರ್ಭಗತೋ ವೀರಃ ಸ ತದಾ ಭೃಗುನಂದನ ।
ದದರ್ಶ ಪುರುಷಂ ಕಂಚಿದ್ದಹ್ಯಮಾನೋಸ ತೇಜಸಾ ॥

ಅನುವಾದ

ಎಲೈ ಭಾರ್ಗವರೇ! ಉತ್ತರೆಯ ಗರ್ಭದಲ್ಲಿದ್ದ ವೀರಶಿಶು ಪರೀಕ್ಷಿತ್ತು ಅಶ್ವತ್ಥಾಮನ ಬ್ರಹ್ಮಾಸ್ತ್ರದ ತೇಜದಿಂದ ಸುಡುತ್ತಿರುವಾಗ, ಅದು ತನ್ನ ಕಣ್ಣಮುಂದೆ ಒಂದು ಜೋತಿರ್ಮಯ ಪುರುಷನನ್ನು ಕಂಡಿತು.॥7॥

(ಶ್ಲೋಕ - 8)

ಮೂಲಮ್

ಅಂಗುಷ್ಠಮಾತ್ರಮಮಲಂ ಸುರತ್ಪುರಟವೌಲಿನಮ್ ।
ಅಪೀಚ್ಯದರ್ಶನಂ ಶ್ಯಾಮಂ ತಡಿದ್ವಾಸಸಮಚ್ಯುತಮ್ ॥

(ಶ್ಲೋಕ - 9)

ಮೂಲಮ್

ಶ್ರೀಮದ್ದೀರ್ಘಚತುರ್ಬಾಹುಂ ತಪ್ತಕಾಂಚನಕುಂಡಲಮ್ ।
ಕ್ಷತಜಾಕ್ಷಂ ಗದಾಪಾಣಿಮಾತ್ಮನಃ ಸರ್ವತೋದಿಶಮ್ ।
ಪರಿಭ್ರಮಂತಮುಲ್ಕಾಭಾಂ ಭ್ರಾಮಯಂತಂ ಗದಾಂ ಮುಹುಃ ॥

ಅನುವಾದ

ಆ ಪುರುಷನು ಅಂಗುಷ್ಠಗಾತ್ರದಷ್ಟಿದ್ದರೂ ಅವನ ತೇಜಸ್ಸು ಅತ್ಯದ್ಭುತವಾಗಿದ್ದು, ನಿರ್ಮಲವಾಗಿತ್ತು. ಅವನು ಸುಂದರ ಶ್ಯಾಮಲ ಶರೀರಿಯಾಗಿದ್ದು, ಮಿಂಚಿನಂತೆ ಹೊಳೆಯುವ ಪೀತಾಂಬರವನ್ನು ಧರಿಸಿದ್ದನು. ತಲೆಯಲ್ಲಿ ಥಳ-ಥಳಿಸುವ ಸ್ವರ್ಣ ಕಿರೀಟವಿತ್ತು. ಆ ನಿರ್ವಿಕಾರ ಪುರುಷನಿಗೆ ಅತಿ ಸುಂದರವಾದ ನೀಳವಾಗಿದ್ದ ನಾಲ್ಕು ತೋಳುಗಳಿದ್ದವು. ಅವನ ಕಿವಿಗಳಲ್ಲಿ ಪುಟವಿಟ್ಟ ಚಿನ್ನದ ಸುಂದರ ಕುಂಡಲಗಳು ಹೊಳೆಯುತ್ತಿದ್ದವು. ಕಣ್ಣುಗಳು ರಕ್ತದಂತೆ ಕೆಂಪಾಗಿದ್ದವು. ಕೈಯಲ್ಲಿ ಧರಿಸಿದ ಉರಿಯುವ ಕೊಳ್ಳಿಯಂತಿರುವ ಗದೆಯನ್ನು ಮತ್ತೆ-ಮತ್ತೆ ತಿರುಹುತ್ತಿದ್ದನು.॥8-9॥

(ಶ್ಲೋಕ - 10)

ಮೂಲಮ್

ಅಸತೇಜಃ ಸ್ವಗದಯಾ ನೀಹಾರಮಿವ ಗೋಪತಿಃ ।
ವಿಧಮಂತಂ ಸಂನಿಕರ್ಷೇ ಪರ್ಯೈಕ್ಷತ ಕ ಇತ್ಯಸೌ ॥

ಅನುವಾದ

ಸೂರ್ಯನು ತನ್ನ ಕಿರಣಗಳಿಂದ ಮಂಜನ್ನು ಹೊಡೆದೋಡಿಸುವಂತೆ, ಅವನು ಆ ಗದೆಯಿಂದ ಬ್ರಹ್ಮಾಸದ ತೇಜವನ್ನು ಬಡಿದಟ್ಟುತ್ತಿದ್ದನು. ತನ್ನ ಸಮಿಪದಲ್ಲಿದ್ದ ಆ ಪುರುಷನನ್ನು ನೋಡಿ ಆ ಗರ್ಭಸ್ಥ ಶಿಶುವು ‘ಇವನಾರು?’ ಎಂದು ಯೋಚಿಸ ತೊಡಗಿತು.॥10॥

(ಶ್ಲೋಕ - 11)

ಮೂಲಮ್

ವಿಧೂಯ ತದಮೇಯಾತ್ಮಾ ಭಗವಾನ್ ಧರ್ಮಗುಬ್ವಿಭುಃ ।
ಮಿಷತೋ ದಶಮಾಸ್ಯಸ್ಯ ತತ್ರೈವಾಂತರ್ದಧೇ ಹರಿಃ ॥

ಅನುವಾದ

ಹೀಗೆ ಗರ್ಭಸ್ಥ ಶಿಶುವು ನೋಡುತ್ತಿರುವಂತೆಯೇ ಧರ್ಮರಕ್ಷಕ ಅಪ್ರಮೇಯ ಭಗವಾನ್ ಶ್ರೀಕೃಷ್ಣನು ಬ್ರಹ್ಮಾಸ್ತ್ರದ ತೇಜಸ್ಸನ್ನು ಶಮನಗೊಳಿಸಿ ಅಲ್ಲಿಯೇ ಅಂತರ್ಧಾನ ಹೊಂದಿದನು.॥11॥

(ಶ್ಲೋಕ - 12)

ಮೂಲಮ್

ತತಃ ಸರ್ವಗುಣೋದರ್ಕೇ ಸಾನುಕೂಲಗ್ರಹೋದಯೇ ।
ಜಜ್ಞೇ ವಂಶಧರಃ ಪಾಂಡೋರ್ಭೂಯಃ ಪಾಂಡುರಿವೌಜಸಾ ॥

ಅನುವಾದ

ಅನಂತರ ಎಲ್ಲ ಗ್ರಹಗಳೂ ಅನುಕೂಲವಾಗಿ, ಎಲ್ಲ ಸದ್ಗುಣಗಳೂ ಕುಡಿ ಸುಫಲಪ್ರದವಾದವಾಗಿದ್ದ ಶುಭ ಸಮಯದಲ್ಲಿ ಪಾಂಡುವಿನ ವಂಶದ ಕುಡಿಯಾದ ಸುಪುತ್ರನ ಜನನವಾಯಿತು. ಆ ಶಿಶುವು ತನ್ನ ತೇಜಸ್ಸಿನಿಂದ ಪಾಂಡುರಾಜನೇ ಮರಳಿ ಹುಟ್ಟಿ ಬಂದಂತೆ ಬೆಳಗುತ್ತಿತ್ತು.॥12॥

(ಶ್ಲೋಕ - 13)

ಮೂಲಮ್

ತಸ್ಯ ಪ್ರೀತಮನಾ ರಾಜಾ ವಿಪ್ರೈರ್ಧೌಮ್ಯಕೃಪಾದಿಭಿಃ ।
ಜಾತಕಂ ಕಾರಯಾಮಾಸ ವಾಚಯಿತ್ವಾ ಚ ಮಂಗಲಮ್ ॥

ಅನುವಾದ

ಮೊಮ್ಮಗನು ಹುಟ್ಟಿದ ಸಮಾಚಾರವನ್ನು ಕೇಳಿ ಯುಧಿಷ್ಠಿರನ ಮನಸ್ಸಿಗೆ ಬಹಳ ಸಂತೋಷವಾಯಿತು. ಅವನು ಧೌಮ್ಯ-ಕೃಪಾಚಾರ್ಯರೇ ಮುಂತಾದ ಬ್ರಾಹ್ಮಣರಿಂದ ಮಗುವಿಗೆ ಮಂಗಳ ವಾಚನಮಾಡಿಸಿ, ಜಾತಕರ್ಮ ಸಂಸ್ಕಾರವನ್ನು ನೆರವೇರಿಸಿದನು. ॥13॥

(ಶ್ಲೋಕ - 14)

ಮೂಲಮ್

ಹಿರಣ್ಯಂ ಗಾಂ ಮಹೀಂ ಗ್ರಾಮಾನ್ಹಸ್ತ್ಯಶ್ವಾನ್ನೃಪತಿರ್ವರಾನ್ ।
ಪ್ರಾದಾತ್ಸ್ವನ್ನಂ ಚ ವಿಪ್ರೇಭ್ಯಃ ಪ್ರಜಾತೀರ್ಥೇ ಸ ತೀರ್ಥವಿತ್ ॥

ಅನುವಾದ

ದಾನಕ್ಕೆ ಯೋಗ್ಯವಾದ ದೇಶ-ಕಾಲ-ಪಾತ್ರಗಳಾವುವು ಎಂಬುದನ್ನರಿತ್ತಿದ್ದ ಮಹಾರಾಜ ಯುಧಿಷ್ಠಿರನು ಪ್ರಜಾತೀರ್ಥ* ಎಂಬ ಸಮಯದಲ್ಲಿ, ಅರ್ಥಾತ್-ಹೊಕ್ಕಳು ಬಳ್ಳಿ ಕತ್ತರಿಸುವ ಮೊದಲೇ ಬ್ರಾಹ್ಮಣರಿಗೆ, ಸುವರ್ಣ, ಗೋ, ಭೂಮಿ, ಗ್ರಾಮಗಳನ್ನು, ಉತ್ತಮ ಜಾತಿಯ ಆನೆ-ಕುದುರೆಗಳನ್ನು ದಾನಮಾಡಿ ಮೃಷ್ಟಾನ್ನ ಭೋಜನವನ್ನು ಮಾಡಿಸಿದನು. ॥14॥

ಟಿಪ್ಪನೀ
  • ಹೊಕ್ಕಳುಬಳ್ಳಿ ಕತ್ತರಿಸುವುದಕ್ಕೆ ಮೊದಲು ಸೂತಕವಿರುವುದಿಲ್ಲ.
    ‘ಯಾವನ್ನಚ್ಛಿಧ್ಯತೇ ನಾಳಂ ತಾವನ್ನಾಪ್ನೋತಿ ಸೂತಕಮ್ । ಛಿನ್ನೇ ನಾಳೇ ತತಃ ಪಶ್ಚಾತ್ ಸೂತಕಂ ತು ವಿಧೀಯತೇ ॥
    ಈ ಸಮಯಕ್ಕೆ ಪ್ರಜಾತೀರ್ಥವೆಂದು ಹೇಳುತ್ತಾರೆ. ಈ ಸಮಯದಲ್ಲಿ ಕೊಡುವ ದಾನದ ಫಲವು ಅಕ್ಷಯವಾಗುತ್ತದೆ ಎಂದು ಸ್ಮೃತಿಗಳು ಹೇಳುತ್ತವೆ. ‘‘ಪುತ್ರೇ ಜಾತೇ ವ್ಯತೀಪಾತೇ ದತ್ತಂ ಭವತಿ ಚಾಕ್ಷಯಮ್’’ - ಎಂದರೆ ಪುತ್ರೋತ್ಪತ್ತಿ ಮತ್ತು ವ್ಯತೀಪಾತದ ಸಮಯದಲ್ಲಿ ಕೊಟ್ಟ ದಾನವು ಅಕ್ಷಯವಾಗುತ್ತದೆ.

(ಶ್ಲೋಕ - 15)

ಮೂಲಮ್

ತಮೂಚುರ್ಬ್ರಾಹ್ಮಣಾಸ್ತುಷ್ಟಾ ರಾಜಾನಂ ಪ್ರಶ್ರಯಾನ್ವಿತಮ್ ।
ಏಷ ಹ್ಯಸ್ಮಿನ್ಪ್ರಜಾತಂತೌ ಪುರೂಣಾಂ ಪೌರವರ್ಷಭ ॥

(ಶ್ಲೋಕ - 16)

ಮೂಲಮ್

ದೈವೇನಾಪ್ರತಿಘಾತೇನ ಶುಕ್ಲೇ ಸಂಸ್ಥಾಮುಪೇಯುಷಿ ।
ರಾತೋ ವೋನುಗ್ರಹಾರ್ಥಾಯ ವಿಷ್ಣುನಾ ಪ್ರಭವಿಷ್ಣುನಾ ॥

ಅನುವಾದ

ಇವುಗಳಿಂದ ಸಂತೋಷಗೊಂಡ ಬ್ರಾಹ್ಮಣರು ಅತ್ಯಂತ ವಿನಯಶಾಲಿ ಯಾದ ಯುಧಿಷ್ಠಿರನಲ್ಲಿ ಹೀಗೆಂದರು ‘‘ಪುರುವಂಶ ಶಿರೋಮಣಿಯೇ! ನಿವಾರಿಸಲು ಅಸಾಧ್ಯವಾದ ಕಾಲದ ಗತಿಯಂತೆ ಪವಿತ್ರವಾದ ಈ ಕುರುವಂಶವು ಇನ್ನೇನು ವಿನಾಶಹೊಂದಿ ಬಿಡುವುದೋ ಎನ್ನುವಷ್ಟರಲ್ಲಿ ಸರ್ವ ಸಮರ್ಥನಾದ ಭಗವಾನ್ ಶ್ರೀಮಹಾವಿಷ್ಣುವು ನಿಮ್ಮ ಮೇಲೆ ಕೃಪೆಗೈದು ನಿಮಗೆ ಈ ಬಾಲಕನನ್ನು ದಯಪಾಲಿಸಿ ಅವನನ್ನು ಸಂರಕ್ಷಿಸಿದ್ದಾನೆ. ॥15-16॥

(ಶ್ಲೋಕ - 17)

ಮೂಲಮ್

ತಸ್ಮಾನ್ನಾಮ್ನಾ ವಿಷ್ಣುರಾತ ಇತಿ ಲೋಕೇ ಬೃಹಚ್ಛ್ರವಾಃ ।
ಭವಿಷ್ಯತಿ ನ ಸಂದೇಹೋ ಮಹಾಭಾಗವತೋ ಮಹಾನ್ ॥

ಅನುವಾದ

ಆದ್ದರಿಂದ ಇವನಿಗೆ ‘ವಿಷ್ಣುರಾತ’ (ವಿಷ್ಣುವಿನಿಂದ ರಕ್ಷಿತನಾದವನು) ಎಂಬ ಹೆಸರಾಗುವುದು. ನಿಃಸಂದೇಹವಾಗಿ ಈ ಬಾಲಕನು ಲೋಕದಲ್ಲಿ ಮಹಾಯಶಸ್ವಿಯೂ, ಪರಮ ಭಗವದ್ಭಕ್ತನೂ ಆದ ಮಹಾಪುರುಷನಾಗುವನು. ॥17॥

(ಶ್ಲೋಕ - 18)

ಮೂಲಮ್ (ವಾಚನಮ್)

ಯುಷ್ಠಿರ ಉವಾಚ

ಮೂಲಮ್

ಅಪ್ಯೇಷ ವಂಶ್ಯಾನ್ರಾಜರ್ಷೀನ್ಪುಣ್ಯಶ್ಲೋಕಾನ್ಮಹಾತ್ಮನಃ ।
ಅನುವರ್ತಿತಾ ಸ್ವಿದ್ಯಶಸಾ ಸಾಧುವಾದೇನ ಸತ್ತಮಾಃ ॥

ಅನುವಾದ

ಯುಧಿಷ್ಠಿರನೆಂದನು ಪೂಜ್ಯರೇ! ಈ ಬಾಲಕನು ತನ್ನ ಉಜ್ವಲವಾದ ಕೀರ್ತಿಯಿಂದ ನಮ್ಮ ವಂಶದ ಪುಣ್ಯಶ್ಲೋಕರಾದ ಮಹಾತ್ಮರಾದ ರಾಜರ್ಷಿಗಳನ್ನು ಅನುಸರಿಸುತ್ತಾನಷ್ಟೇ? ಎಂದು ಕೇಳಿದನು.॥18॥

(ಶ್ಲೋಕ - 19)

ಮೂಲಮ್ (ವಾಚನಮ್)

ಬ್ರಾಹ್ಮಣಾ ಊಚುಃ

ಮೂಲಮ್

ಪಾರ್ಥ ಪ್ರಜಾವಿತಾ ಸಾಕ್ಷಾದಿಕ್ಷ್ವಾಕುರಿವ ಮಾನವಃ ।
ಬ್ರಹ್ಮಣ್ಯಃ ಸತ್ಯಸಂಧಶ್ಚ ರಾಮೋ ದಾಶರಥಿರ್ಯಥಾ ॥

ಅನುವಾದ

ಬ್ರಾಹ್ಮಣರೆಂದರು — ಎಲೈ ಕುಂತೀನಂದನನೇ! ಇವನು ಮನು ಪುತ್ರನಾದ ಇಕ್ಷ್ವಾಕು ಮಹಾರಾಜನಂತೆ ತನ್ನ ಪ್ರಜೆಗಳನ್ನು ಪಾಲಿಸುವನು. ಹಾಗೂ ದಶರಥನಂದನ ಭಗವಾನ್ ಶ್ರೀರಾಮನಂತೆ ಬ್ರಾಹ್ಮಣ ಭಕ್ತನೂ, ಸತ್ಯ ಪ್ರತಿಜ್ಞನೂ ಆಗುವನು. ॥19॥

(ಶ್ಲೋಕ - 20)

ಮೂಲಮ್

ಏಷ ದಾತಾ ಶರಣ್ಯಶ್ಚ ಯಥಾ ಹ್ಯೌಶೀನರಃ ಶಿಬಿಃ ।
ಯಶೋ ವಿತನಿತಾ ಸ್ವಾನಾಂ ದೌಷ್ಯಂತಿರಿವ ಯಜ್ವನಾಮ್ ॥

ಅನುವಾದ

ಇವನು ಉಶೀನರ ಅರಸನಾದ ಶಿಬಿಯಂತೆ ದಾನಕೊಡುವವನೂ, ಶರಣಾಗತ ವತ್ಸಲನೂ ಆಗುವನು.ಯಜ್ಞಗಳನ್ನಾಚರಿಸುವವರಲ್ಲಿ ದುಷ್ಯಂತ ಪುತ್ರ ಭರತನಂತೆ ಆಗಿ ತನ್ನ ವಂಶದ ಕೀರ್ತಿಯನ್ನು ಹರಡುವನು.॥20॥

(ಶ್ಲೋಕ - 21)

ಮೂಲಮ್

ಧನ್ವಿನಾಮಗ್ರಣೀರೇಷ ತುಲ್ಯಶ್ಚಾರ್ಜುನಯೋರ್ದ್ವಯೋಃ ।
ಹುತಾಶ ಇವ ದುರ್ಧರ್ಷಃ ಸಮುದ್ರ ಇವ ದುಸ್ತರಃ ॥

ಅನುವಾದ

ಧನುರ್ಧಾರಿಗಳಲ್ಲಿ ಕಾರ್ತವೀರ್ಯಾರ್ಜುನನಿಗೂ, ತನ್ನ ತಾತನಾದ ಅರ್ಜುನನಿಗೂ ಸಮಾನವಾಗಿ ಅಗ್ರಗಣ್ಯನಾಗುವನು. ಅಗ್ನಿಯಂತೆ ಎದುರಿಸಲು ಅಶಕ್ಯವಾದ ಪ್ರತಾಪವುಳ್ಳವನೂ, ಸಮುದ್ರದಂತೆ ಅತಿಕ್ರಮಿಸಲು ಅಸಾಧ್ಯನೂ ಆಗುವನು.॥21॥

(ಶ್ಲೋಕ - 22)

ಮೂಲಮ್

ಮೃಗೇಂದ್ರ ಇವ ವಿಕ್ರಾಂತೋ ನಿಷೇವ್ಯೋ ಹಿಮವಾನಿವ ।
ತಿತಿಕ್ಷುರ್ವಸುಧೇವಾಸೌ ಸಹಿಷ್ಣುಃ ಪಿತರಾವಿವ ॥

ಅನುವಾದ

ಸಿಂಹದಂತೆ ಮಹಾ ಪರಾಕ್ರಮಿಯೂ, ಹಿಮಾಲಯದಂತೆ ಸರ್ವರಿಗೂ ಆಶ್ರಯನೂ, ಪೃಥ್ವಿಯಂತೆ ಕ್ಷಮಾಗುಣಶಾಲಿಯೂ, ಪ್ರಜೆಗಳ ವಿಷಯ ದಲ್ಲಿ ತಂದೆ-ತಾಯಿಯರಂತೆ ಸಹನಶೀಲನೂ ಆಗುವನು.॥22॥

(ಶ್ಲೋಕ - 23)

ಮೂಲಮ್

ಪಿತಾಮಹಸಮಃ ಸಾಮ್ಯೇ ಪ್ರಸಾದೇ ಗಿರಿಶೋಪಮಃ ।
ಆಶ್ರಯಃ ಸರ್ವಭೂತಾನಾಂ ಯಥಾ ದೇವೋ ರಮಾಶ್ರಯಃ ॥

ಅನುವಾದ

ಇವನು ಸಮಭಾವದಲ್ಲಿ ಬ್ರಹ್ಮದೇವರಿಗೂ, ಅನುಗ್ರಹ ಮಾಡುವುದರಲ್ಲಿ ಈಶ್ವರನಿಗೂ, ಸರ್ವಪ್ರಾಣಿ ಗಳನ್ನು ಆಸರೆಯನ್ನಿತ್ತು ರಕ್ಷಿಸುವುದರಲ್ಲಿ ಲಕ್ಷ್ಮೀಪತಿಗೂ ಸಮಾನನಾಗುವನು.॥23॥

(ಶ್ಲೋಕ - 24)

ಮೂಲಮ್

ಸರ್ವಸದ್ಗುಣಮಾಹಾತ್ಮ್ಯೇ ಏಷ ಕೃಷ್ಣಮನುವ್ರತಃ ।
ರಂತಿದೇವ ಇವೋದಾರೋ ಯಯಾತಿರಿವ ಧಾರ್ಮಿಕಃ ॥

ಅನುವಾದ

ಸಮಸ್ತ ಶ್ರೇಷ್ಠ ಗುಣಗಳ ಮಹಾತ್ಮ್ಯವನ್ನು ಹೊಂದಿರುವ ವಿಷಯದಲ್ಲಿ ಶ್ರೀಕೃಷ್ಣ ಪರಮಾತ್ಮನನ್ನು ಅನುಸರಿಸುವನು. ರಂತಿದೇವನಂತೆ ಉದಾರನೂ, ಯಯಾತಿಯಂತೆ ಧಾರ್ಮಿಕನೂ ಆಗುವನು.॥24॥

(ಶ್ಲೋಕ - 25)

ಮೂಲಮ್

ಧೃತ್ಯಾ ಬಲಿಸಮಃ ಕೃಷ್ಣೇ ಪ್ರಹ್ಲಾದ ಇವ ಸದ್ಗ್ರಹಃ ।
ಆಹರ್ತೈಷೋಶ್ವಮೇಧಾನಾಂ ವೃದ್ಧಾನಾಂ ಪರ್ಯುಪಾಸಕಃ ॥

ಅನುವಾದ

ಧೈರ್ಯದಲ್ಲಿ ಬಲಿಚಕ್ರವರ್ತಿಯಂತೆಯೂ, ಭಗವಾನ್ ಶ್ರೀಕೃಷ್ಣನ ಭಕ್ತಿಯ ನಿಷ್ಠೆಯಲ್ಲಿ ಪ್ರಹ್ಲಾದನಂತೆಯೂ ಆಗುವನು. ಇವನು ಅನೇಕ ಅಶ್ವಮೇಧ ಯಜ್ಞಗಳನ್ನು ಮಾಡುವನು. ಗುರು-ಹಿರಿಯರ ಸೇವೆಯನ್ನು ನಿಷ್ಠೆಯಿಂದ ಮಾಡುವನು.॥25॥

(ಶ್ಲೋಕ - 26)

ಮೂಲಮ್

ರಾಜರ್ಷೀಣಾಂ ಜನಯಿತಾ ಶಾಸ್ತಾ ಚೋತ್ಪಥಗಾಮಿನಾಮ್ ।
ನಿಗ್ರಹೀತಾ ಕಲೇರೇಷ ಭುವೋ ಧರ್ಮಸ್ಯ ಕಾರಣಾತ್ ॥

ಅನುವಾದ

ಇವನ ವಂಶದಲ್ಲಿ ರಾಜರ್ಷಿಗಳು ಜನಿಸುವರು. ಮರ್ಯಾದೆ ಮೀರಿ ನಡೆಯುವವರನ್ನು ಈತನು ದಂಡಿಸುವನು. ಭೂಮಿಯಲ್ಲಿ ಧರ್ಮವನ್ನು ಸ್ಥಾಪಿಸಲಿಕ್ಕಾಗಿ ಕಲಿಯುಗವನ್ನು ನಿಗ್ರಹಿಸುವನು.॥26॥

(ಶ್ಲೋಕ - 27)

ಮೂಲಮ್

ತಕ್ಷಕಾದಾತ್ಮನೋ ಮೃತ್ಯುಂ ದ್ವಿಜಪುತ್ರೋಪಸರ್ಜಿತಾತ್ ।
ಪ್ರಪತ್ಸ್ಯತ ಉಪಶ್ರುತ್ಯ ಮುಕ್ತಸಂಗಃ ಪದಂ ಹರೇಃ ॥

ಅನುವಾದ

ಕೊನೆಗೆ ಬ್ರಾಹ್ಮಣ ಪುತ್ರನ ಶಾಪದಿಂದ ತನಗೆ ತಕ್ಷಕನಿಂದ ಸಾವು ಒದಗುವುದೆಂಬುದನ್ನು ತಿಳಿದು ಸರ್ವಸಂಗಪರಿತ್ಯಾಗ ಮಾಡಿ ಶ್ರೀಹರಿಗೆ ಶರಣಾಗುವನು.॥27॥

(ಶ್ಲೋಕ - 28)

ಮೂಲಮ್

ಜಿಜ್ಞಾಸಿತಾತ್ಮಯಾಥಾತ್ಮ್ಯೋ ಮುನೇರ್ವ್ಯಾಸಸುತಾದಸೌ ।
ಹಿತ್ವೇದಂ ನೃಪ ಗಂಗಾಯಾಂ ಯಾಸ್ಯತ್ಯದ್ಧಾಕುತೋಭಯಮ್ ॥

ಅನುವಾದ

ಕೊನೆಗೆ ವ್ಯಾಸಪುತ್ರರಾದ ಶುಕಮಹಾಮುನಿಗಳಿಂದ ಆತ್ಮಸ್ವರೂಪದ ಯಥಾರ್ಥ ಜ್ಞಾನವನ್ನು ಪಡೆದು ಗಂಗಾತೀರದಲ್ಲಿ ದೇಹ ತ್ಯಾಗಮಾಡಿ ನಿಶ್ಚಯವಾಗಿಯೂ ಅಭಯಪದವನ್ನು ಅರ್ಥಾತ್ ಭಗವದ್ಧಾಮವನ್ನು ಪಡೆಯುವನು.॥28॥

(ಶ್ಲೋಕ - 29)

ಮೂಲಮ್

ಇತಿ ರಾಜ್ಞ ಉಪಾದಿಶ್ಯ ವಿಪ್ರಾ ಜಾತಕಕೋವಿದಾಃ ।
ಲಬ್ಧಾಪಚಿತಯಃ ಸರ್ವೇ ಪ್ರತಿಜಗ್ಮುಃ ಸ್ವಕಾನ್ ಗೃಹಾನ್ ॥

ಅನುವಾದ

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರವೀಣರಾದ ಬ್ರಾಹ್ಮಣರು ಧರ್ಮ ರಾಜನಿಗೆ ಆ ಬಾಲಕನ ಭವಿಷ್ಯವನ್ನು ತಿಳಿಸಿ, ಯಥೋಚಿತ ಸಂಭಾವನೆಯನ್ನು ಪಡೆದು ತಮ್ಮ-ತಮ್ಮ ಮನೆಗಳಿಗೆ ತೆರಳಿದರು.॥29॥

(ಶ್ಲೋಕ - 30)

ಮೂಲಮ್

ಸ ಏಷ ಲೋಕೇ ವಿಖ್ಯಾತಃ ಪರೀಕ್ಷಿದಿತಿ ಯತ್ಪ್ರಭುಃ ।
ಗರ್ಭೇ ದೃಷ್ಟಮನುಧ್ಯಾಯನ್ಪರೀಕ್ಷೇತ ನರೇಷ್ವಿಹ ॥

ಅನುವಾದ

ಆ ರಾಜಕುಮಾರನೇ ಮುಂದೆ ‘ಪರೀಕ್ಷಿತ’ ಎಂಬ ಹೆಸರಿನಿಂದ ವಿಖ್ಯಾತನಾದನು. ತಾನು ತಾಯಿಯ ಗರ್ಭದಲ್ಲಿದ್ದಾಗ ಸಂದರ್ಶಿಸಿದ್ದ ಪರಮಪುರುಷನನ್ನೇ ಸ್ಮರಿಸುತ್ತಾ-ಅವನು ಯಾರಾಗಿರಬಹುದು? ಎಲ್ಲಿರಬಹುದು? ಎಂದು ಪರೀಕ್ಷಿಸುತ್ತಿದ್ದುದರಿಂದ ಅವನಿಗೆ ಆ ಹೆಸರು ಅನ್ವರ್ಥಕವಾಯಿತು.॥30॥

(ಶ್ಲೋಕ - 31)

ಮೂಲಮ್

ಸ ರಾಜಪುತ್ರೋ ವವೃಧೇ ಆಶು ಶುಕ್ಲ ಇವೋಡುಪಃ ।
ಆಪೂರ್ಯಮಾಣಃ ಪಿತೃಭಿಃ ಕಾಷ್ಠಾಭಿರಿವ ಸೋನ್ವಹಮ್ ॥

ಅನುವಾದ

ಆ ರಾಜಕುಮಾರನು ತನ್ನ ಗುರು-ಹಿರಿಯರಿಂದ ಪೋಷಿಸಲ್ಪಡುತ್ತಾ ಶುಕ್ಲಪಕ್ಷದಲ್ಲಿ ತನ್ನ ಕಲೆಗಳಿಂದ ವೃದ್ಧಿಸುವ ಚಂದ್ರನಂತೆ ಶೀಘ್ರದಲ್ಲೇ ಬೆಳೆದು ದೊಡ್ಡವನಾದನು.॥31॥

(ಶ್ಲೋಕ - 32)

ಮೂಲಮ್

ಯಕ್ಷ್ಯಮಾಣೋಶ್ವಮೇಧೇನ ಜ್ಞಾತಿದ್ರೋಹಜಿಹಾಸಯಾ ।
ರಾಜಾ ಲಬ್ಧಧನೋ ದಧ್ಯಾವನ್ಯತ್ರ ಕರದಂಡಯೋಃ ॥

ಅನುವಾದ

ಆಗಲೇ ರಾಜಾಯುಧಿಷ್ಠಿರನಿಗೆ ಸ್ವಜನ ಸಂಹಾರದ ಪ್ರಾಯಶ್ಚಿತ್ತವಾಗಿ ಅಶ್ವಮೇಧವನ್ನು ಮಾಡುವ ಮನಸ್ಸಾಯಿತು. ಆದರೆ ಅದಕ್ಕಾಗಿ ಪ್ರಜೆಗಳಿಂದ ಕಂದಾಯ ಮತ್ತು ದಂಡಗಳ ರೂಪದಲ್ಲಿ ದೊರೆಯುತ್ತಿದ್ದ ಧನವನ್ನು ಬಿಟ್ಟು ಬೇರಾವ ಧನವೂ ಇಲ್ಲದಿರುವುದರಿಂದ ಅವನು ಚಿಂತಾಕ್ರಾಂತನಾದನು.॥32॥

(ಶ್ಲೋಕ - 33)

ಮೂಲಮ್

ತದಭಿಪ್ರೇತಮಾಲಕ್ಷ್ಯ ಭ್ರಾತರೋಚ್ಯುತಚೋದಿತಾಃ ।
ಧನಂ ಪ್ರಹೀಣಮಾಜಹ್ರುರುದೀಚ್ಯಾಂ ದಿಶಿ ಭೂರಿಶಃ ॥

ಅನುವಾದ

ಆಗ ಅವನ ಅಭಿಪ್ರಾಯವನ್ನರಿತ ಭಗವಾನ್ ಶ್ರೀಕೃಷ್ಣನ ಪ್ರೇರಣೆಯಂತೆ ಅವನ ಸೋದರರು ಉತ್ತರದಿಕ್ಕಿಗೆ ಹೋಗಿ ಮರುತ್ತರಾಜನೂ,* ಬ್ರಾಹ್ಮಣರೂ ಹಿಂದೆ ಬಿಟ್ಟುಹೋದ ಹೇರಳವಾದ ಧನವನ್ನು ತಂದರು. ॥33॥

ಟಿಪ್ಪನೀ
  • ಹಿಂದೆ ಮಹಾರಾಜಾ ಮರುತ್ತನು ಒಂದು ಅದ್ಭುತವಾದ ಯಜ್ಞವನ್ನು ಮಾಡಿದ್ದನು. ಅದರಲ್ಲವನು ಉಪಯೋಗಿಸಿದ್ದ ಎಲ್ಲ ಪಾತ್ರೆಗಳು ಸುವರ್ಣಮಯವೇ ಆಗಿದ್ದವು. ಯಜ್ಞವು ಮುಗಿದ ನಂತರ ಅವನು ಪಾತ್ರೆಗಳನ್ನು ಉತ್ತರದಿಕ್ಕಿನಲ್ಲಿ ಎಸೆದುಬಿಟ್ಟಿದ್ದನು. ಅವನು ಆಗ ಬ್ರಾಹ್ಮಣರಿಗೆ ದಾನಮಾಡಿನ ಧನವೂ ಎಷ್ಟು ಹೆಚ್ಚಾಗಿತ್ತೆಂದರೆ, ಅವರದನ್ನು ಕೊಂಡೊಯ್ಯಲು ಸಾಧ್ಯವಾಗದೇ ಆ ಉತ್ತರದಿಕ್ಕಿನಲ್ಲೇ ಬಿಟ್ಟುಹೋದರು. ಇತರರು ಬಿಟ್ಟುಹೋದ ಹಣದ ಮೇಲೆ ರಾಜನಿಗೆ ಪೂರ್ಣ ಅಧಿಕಾರವಿರುವುದರಿಂದ ಭಗವಂತನು ಆ ಹಣವನ್ನು ತರಿಸಿ, ಧರ್ಮರಾಜನ ಯಜ್ಞ ಮಾಡಿಸಿದನು.

(ಶ್ಲೋಕ - 34)

ಮೂಲಮ್

ತೇನ ಸಂಭೃತಸಂಭಾರೋ ಧರ್ಮಪುತ್ರೋ ಯುಷ್ಠಿರಃ ।
ವಾಜಿಮೇಧೈಸಿಭಿರ್ಭೀತೋ ಯಜ್ಞೈಃ ಸಮಯಜದ್ಧರಿಮ್ ॥

ಅನುವಾದ

ಅದರಿಂದ ಯಜ್ಞದ್ರವ್ಯಗಳನ್ನು ಸಂಪಾದಿಸಿ ಧರ್ಮಭೀರುವಾದ ಧರ್ಮರಾಜನು ಮೂರು ಅಶ್ವಮೇಧ ಯಜ್ಞಗಳ ಮೂಲಕ ಭಗವಂತನನ್ನು ಆರಾಸಿದನು. ॥34॥

(ಶ್ಲೋಕ - 35)

ಮೂಲಮ್

ಆಹೂತೋ ಭಗವಾನ್ರಾಜ್ಞಾ ಯಾಜಯಿತ್ವಾ ದ್ವಿಜೈರ್ನೃಪಮ್ ।
ಉವಾಸ ಕತಿಚಿನ್ಮಾಸಾನ್ಸುಹೃದಾಂ ಪ್ರಿಯಕಾಮ್ಯಯಾ ॥

ಅನುವಾದ

ಯುಧಿಷ್ಠಿರನ ಆಹ್ವಾನದಂತೆ ಅಲ್ಲಿಗೆ ದಯಮಾಡಿಸಿದ ಭಗವಂತನು ಬ್ರಾಹ್ಮಣರ ಮೂಲಕ ಅವನ ಯಜ್ಞವನ್ನು ಸಾಂಗವಾಗಿ ನಡೆಯಿಸಿ, ಸುಹೃದರಾದ ಪಾಂಡವರ ಸಂತೋಷಕ್ಕಾಗಿ ಕೆಲವು ತಿಂಗಳು ಅಲ್ಲೇ ಉಳಿದನು. ॥35॥

(ಶ್ಲೋಕ - 36)

ಮೂಲಮ್

ತತೋ ರಾಜ್ಞಾಭ್ಯನುಜ್ಞಾತಃ ಕೃಷ್ಣಯಾ ಸಹ ಬಂಧುಭಿಃ ।
ಯಯೌ ದ್ವಾರವತೀಂ ಬ್ರಹ್ಮನ್ಸಾರ್ಜುನೋ ಯದುಭಿರ್ವೃತಃ ॥

ಅನುವಾದ

ಶೌನಕರೇ! ಅನಂತರ ಬಂಧುಸಹಿತ ಧರ್ಮರಾಜನ ಮತ್ತು ದ್ರೌಪದಿಯ ಅನುಮತಿಯನ್ನು ಪಡೆದು, ಅರ್ಜುನನೊಂದಿಗೆ, ಯಾದವರಿಂದ ಸುತ್ತುವರಿದು ಭಗವಾನ್ ಶ್ರೀಕೃಷ್ಣನು ದ್ವಾರಕೆಯ ಕುರಿತು ಪ್ರಯಾಣ ಬೆಳೆಸಿದನು.॥36॥

ಅನುವಾದ (ಸಮಾಪ್ತಿಃ)

ಹನ್ನೆರಡನೆಯ ಅಧ್ಯಾಯವು ಮುಗಿಯಿತು. ॥12॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ಪರೀಕ್ಷಿಜ್ಜನ್ಮಾದ್ಯುತ್ಕರ್ಷೋ ನಾಮ ದ್ವಾದಶೋಽಧ್ಯಾಯಃ ॥12॥