೧೧

[ಹನ್ನೊಂದನೆಯ ಅಧ್ಯಾಯ]

ಭಾಗಸೂಚನಾ

ದ್ವಾರಕೆಯಲ್ಲಿ ಶ್ರೀಕೃಷ್ಣನಿಗೆ ರಾಜೋಚಿತ ಸ್ವಾಗತ

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಆನರ್ತಾನ್ಸ ಉಪವ್ರಜ್ಯ ಸ್ವ ದ್ಧಾಂಜನಪದಾನ್ ಸ್ವಕಾನ್ ।
ದಧ್ಮೌ ದರವರಂ ತೇಷಾಂ ವಿಷಾದಂ ಶಮಯನ್ನಿವ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿಗಳೇ! ಭಗವಾನ್ ಶ್ರೀಕೃಷ್ಣನು ತನ್ನ ಸಮೃದ್ಧವಾದ ಆನರ್ತದೇಶಕ್ಕೆ ತಲುಪಿ ಅಲ್ಲಿ ತನ್ನ ಶ್ರೇಷ್ಠವಾದ ಪಾಂಚಜನ್ಯ ಶಂಖ ವನ್ನೂದಿದನು. ಆ ದಿವ್ಯ ಶಂಖ ಧ್ವನಿಯನ್ನು ಕೇಳಿ ದೊಡನೆಯೇ ಅಲ್ಲಿಯ ಜನರ ವಿರಹ ವೇದನೆ ಉಪಶಮನ ವಾದಂತಾಯಿತು.॥1॥

(ಶ್ಲೋಕ - 2)

ಮೂಲಮ್

ಸ ಉಚ್ಚಕಾಶೇ ಧವಲೋದರೋ ದರೋ-
ಪ್ಯುರುಕ್ರಮಸ್ಯಾಧರಶೋಣಶೋಣಿಮಾ ।
ದಾಧ್ಮಾಯಮಾನಃ ಕರಕಂಜಸಂಪುಟೇ
ಯಥಾಬ್ಜಷಂಡೇ ಕಲಹಂಸ ಉತ್ಸ್ವನಃ ॥

ಅನುವಾದ

ಭಗವಂತನು ತನ್ನ ಕರಕಮಲದಲ್ಲಿ ಹಿಡಿದು ಊದುತ್ತಿದ್ದ ಆ ಶುಭ್ರವಾದ ಶಂಖಕ್ಕೆ ಆತನ ಕೆಂದುಟಿಯ ಸಂಬಂಧದಿಂದ ಕೆಂಪುಬಣ್ಣವು ಬಂದು ಅದು ಕೆಂದಾವರೆಯ ಸರೋವರದಲ್ಲಿ ವಿಹರಿಸುತ್ತಾ ಮಧುರ ಧ್ವನಿ ಮಾಡುವ ರಾಜಹಂಸದಂತೆ ಶೋಭಿಸುತ್ತಿತ್ತು.॥2॥

(ಶ್ಲೋಕ - 3)

ಮೂಲಮ್

ತಮುಪಶ್ರುತ್ಯ ನಿನದಂ ಜಗದ್ಭಯಭಯಾವಹಮ್ ।
ಪ್ರತ್ಯುದ್ಯಯುಃ ಪ್ರಜಾಃ ಸರ್ವಾ ಭರ್ತೃದರ್ಶನಲಾಲಸಾಃ ॥

ಅನುವಾದ

ಜಗತ್ತಿನ ಸಕಲ ಭಯಗಳನ್ನು ಹೋಗಲಾಡಿಸುವ ಆ ಶಂಖನಾದವನ್ನು ಕೇಳಿದ ಪ್ರಜಾಜನರೆಲ್ಲರೂ ತಮ್ಮ ಪ್ರಭುವಾದ ಶ್ರೀಕೃಷ್ಣನ ದರ್ಶನದ ಲಾಲಸೆಯಿಂದ ಅವನನ್ನು ಇದಿರ್ಗೊಳ್ಳಲು ನಗರದ ಹೊರಭಾಗಕ್ಕೆ ಬಂದರು.॥3॥

(ಶ್ಲೋಕ - 4)

ಮೂಲಮ್

ತತ್ರೋಪನೀತಬಲಯೋ ರವೇರ್ದೀಪಮಿವಾದೃತಾಃ ।
ಆತ್ಮಾರಾಮಂ ಪೂರ್ಣಕಾಮಂ ನಿಜಲಾಭೇನ ನಿತ್ಯದಾ ॥

ಅನುವಾದ

ಸೂರ್ಯನು ಸ್ವಯಂಪ್ರಕಾಶನಾಗಿ ತೇಜೋನಿಧಿಯಾಗಿದ್ದರೂ ಭಕ್ತಜನರು ಪ್ರೀತ್ಯಾದರಗಳಿಂದ ಅವನಿಗೆ ದೀಪದಾನ ಮಾಡುವಂತೆ ಆ ಪ್ರಜಾಜನರು ಆತ್ಮಾರಾಮನಾಗಿ, ಆತ್ಮಲಾಭದಿಂದಲೇ ನಿತ್ಯಸಂತುಷ್ಟನಾದ ಭಗವಾನ್ ಶ್ರೀಕೃಷ್ಣನಿಗೆ ಬಗೆ-ಬಗೆಯ ಕಾಣಿಕೆಗಳನ್ನು ಅರ್ಪಿಸುತ್ತಾ ಸ್ವಾಗತಿಸಿದರು.॥4॥

(ಶ್ಲೋಕ - 5)

ಮೂಲಮ್

ಪ್ರೀತ್ಯುತುಲ್ಲಮುಖಾಃ ಪ್ರೋಚುರ್ಹರ್ಷಗದ್ಗದಯಾ ಗಿರಾ ।
ಪಿತರಂ ಸರ್ವಸುಹೃದಮವಿತಾರವಿವಾರ್ಭಕಾಃ ॥

ಅನುವಾದ

ಎಲ್ಲರ ಮುಖ-ಕಮಲಗಳು ಪ್ರೇಮದಿಂದ ಅರಳಿದವು. ಅವರೆಲ್ಲರೂ ಹರ್ಷಗದ್ಗದ ವಾಣಿಯಿಂದ ಎಲ್ಲರ ಸುಹೃದನೂ, ಸಂರಕ್ಷನೂ ಆದ ಭಗವಾನ್ ಶ್ರೀಕೃಷ್ಣನನ್ನು ಸಣ್ಣ ಬಾಲಕರು ತೊದಲು ಮಾತಿನಿಂದ ತಂದೆಯ ಬಳಿ ಮಾತಾಡುವಂತೆ ಸ್ತುತಿಸಲು ತೊಡಗಿದರು.॥5॥

(ಶ್ಲೋಕ - 6)

ಮೂಲಮ್

ನತಾಃ ಸ್ಮ ತೇ ನಾಥ ಸದಾಂಘ್ರಿಪಂಕಜಂ
ವಿರಿಂಚವೈರಿಂಚ್ಯಸುರೇಂದ್ರವಂದಿತಮ್ ।
ಪರಾಯಣಂ ಕ್ಷೇಮಮಿಹೇಚ್ಛತಾಂ ಪರಂ
ನ ಯತ್ರ ಕಾಲಃ ಪ್ರಭವೇತ್ಪರಃ ಪ್ರಭುಃ ॥

ಅನುವಾದ

‘‘ಪ್ರಭೋ! ನಿನ್ನ ಚರಣಕಮಲಗಳಿಗೆ ಸದಾ ನಮ್ಮ ನಮಸ್ಕಾರಗಳು. ಬ್ರಹದೇವರು, ಬ್ರಹ್ಮಪುತ್ರರಾದ ಸನಕಾದಿಗಳು, ಇಂದ್ರನೇ ಮೊದಲಾದವರೂ ಕೂಡ ವಂದಿಸುವ ಪಾದಾರವಿಂದಗಳಿವು. ಸಮಸ್ತ ಜಗತ್ತಿನ ಮೇಲೂ ಪ್ರಭುತ್ವವನ್ನು ನಡೆಸುವ ಕಾಲನ ಪ್ರಭಾವಕ್ಕು ಒಳಪಡದೆ, ಪರಮ ಶ್ರೇಯಸ್ಸನ್ನು ಬಯಸುವವರಿಗೆ ಪರಮಾ ಶ್ರಯವಾಗಿರುವ ಪವಿತ್ರ ಪಾದಗಳಿಗೆ ವಂದನೆಗಳು.॥6॥

(ಶ್ಲೋಕ - 7)

ಮೂಲಮ್

ಭವಾಯ ನಸ್ತ್ವಂ ಭವ ವಿಶ್ವಭಾವನ
ತ್ವಮೇವ ಮಾತಾಥ ಸುಹೃತ್ಪತಿಃ ಪಿತಾ ।
ತ್ವಂ ಸದ್ಗುರುರ್ನಃ ಪರಮಂ ಚ ದೈವತಂ
ಯಸ್ಯಾನುವೃತ್ತ್ಯಾ ಕೃತಿನೋ ಬಭೂವಿಮ ॥

ಅನುವಾದ

ವಿಶ್ವಭಾವನನೇ! ಜಗದ್ರಕ್ಷಕನೇ! ನೀನೇ ನಮ್ಮ ತಂದೆ, ತಾಯಿ, ಸುಹೃದ್, ಒಡೆಯನಾಗಿರುವೆ. ನೀನೇ ನಮಗೆ ಸದ್ಗುರು ಮತ್ತು ಪರಮ ಆರಾಧ್ಯನಾಗಿರುವೆ. ನಿನ್ನ ಚರಣಗಳ ಸೇವೆಯಿಂದ ನಾವು ಕೃತಾರ್ಥರಾಗಿದ್ದೇವೆ. ನೀನೇ ನಮ್ಮ ಶ್ರೇಯಸ್ಸನ್ನು ಮಾಡುವವನಾಗು.॥7॥

(ಶ್ಲೋಕ - 8)

ಮೂಲಮ್

ಅಹೋ ಸನಾಥಾ ಭವತಾ ಸ್ಮ ಯದ್ವಯಂ
ತ್ರೈವಿಷ್ಟಪಾನಾಮಪಿ ದೂರದರ್ಶನಮ್ ।
ಪ್ರೇಮಸ್ಮಿತಸ್ನಿಗ್ಧನಿರೀಕ್ಷಣಾನನಂ
ಪಶ್ಯೇಮ ರೂಪಂ ತವ ಸರ್ವಸೌಭಗಮ್ ॥

ಅನುವಾದ

ಆಹಾ! ನಿನ್ನ ಸರ್ವಸೌಂದರ್ಯ ಸಾರವಾದ ರೂಪದ ದರ್ಶನ ಪಡೆದು, ನಿನ್ನನ್ನು ಒಡೆಯನಾಗಿ ಪಡೆದು ಅನಾಥರಾದ ನಾವು ಸನಾಥರಾದೆವು. ದೇವತೆಗಳಿಗೂ ದುರ್ಲಭವಾದ ಪ್ರೇಮ ಭರಿತವಾಗಿರುವ ಮಂದಹಾಸದಿಂದಲೂ, ಸ್ನೇಹಪೂರ್ಣವಾದ ನೋಟದಿಂದಲೂ ಕಂಗೊಳಿಸುವ ನಿನ್ನ ಮುಖ ಕಮಲವನ್ನು ನಾವು ಸದಾ ದರ್ಶಿಸುತ್ತಿದ್ದೇವಲ್ಲ! ॥8॥

(ಶ್ಲೋಕ - 9)

ಮೂಲಮ್

ಯರ್ಹ್ಯಂಬುಜಾಕ್ಷಾಪಸಸಾರ ಭೋ ಭವಾನ್
ಕುರೂನ್ಮಧೂನ್ವಾಥ ಸುಹೃದ್ದಿದೃಕ್ಷಯಾ ।
ತತ್ರಾಬ್ದ ಕೋಟಿಪ್ರತಿಮಃ ಕ್ಷಣೋ ಭವೇದ್
ರವಿಂ ವಿನಾಕ್ಷ್ಣೋರಿವ ನಸ್ತವಾಚ್ಯುತ ॥

ಅನುವಾದ

ಪುಂಡರೀಕಾಕ್ಷನೇ! ಅಚ್ಯುತನೇ! ನೀನು ಪ್ರೀತಿಯ ನೆಂಟರಿಷ್ಟರನ್ನು ನೋಡುವುದಕ್ಕೆಂದು ಹಸ್ತಿನಾವತಿಗೋ, ಮಥುರೆಗೋ (ವ್ರಜ ಮಂಡಲ) ಹೋರಟು ಹೋದರೆ ಆಗ ನೀನಿಲ್ಲದೆ ಸೂರ್ಯನ ಬೆಳಕನ್ನು ಕಾಣದ ಕಣ್ಣುಗಳಂತೆ ಒಂದೊಂದು ಕ್ಷಣವನ್ನು ಕೋಟಿ-ಕೋಟಿ ವರ್ಷಗಳಂತೆ ಕಳೆಯ ಬೇಕಾಗುವುದು.’’ ॥9॥

(ಶ್ಲೋಕ - 10)

ಮೂಲಮ್

ಇತಿ ಚೋದೀರಿತಾ ವಾಚಃ ಪ್ರಜಾನಾಂ ಭಕ್ತವತ್ಸಲಃ ।
ಶೃಣ್ವಾನೋನುಗ್ರಹಂ ದೃಷ್ಟ್ಯಾ ವಿತನ್ವನ್ಪ್ರಾವಿಶತ್ಪುರೀಮ್ ॥

ಅನುವಾದ

ಭಕ್ತವತ್ಸಲ ಭಗವಾನ್ ಶ್ರೀಕೃಷ್ಣನು ಪ್ರಜೆಗಳ ಇಂತಹ ಸವಿಮಾತುಗಳನ್ನು ಕೇಳಿ, ತನ್ನ ಕೃಪಾ ದೃಷ್ಟಿಯಿಂದ ಅವರ ಮೇಲೆ ಅನುಗ್ರಹದ ಮಳೆಗರೆಯುತ್ತಾ ದ್ವಾರಕೆಯನ್ನು ಪ್ರವೇಶಿಸಿದನು.॥10॥

(ಶ್ಲೋಕ - 11)

ಮೂಲಮ್

ಮಧುಭೋಜದಶಾರ್ಹಾರ್ಹಕುಕುರಾಂಧಕವೃಷ್ಣಿಭಿಃ ।
ಆತ್ಮತುಲ್ಯ ಬಲೈರ್ಗುಪ್ತಾಂ ನಾಗೈರ್ಭೋಗವತೀಮಿವ ॥

ಅನುವಾದ

ನಾಗಗಳು ಪಾತಾಳದ ಭೋಗವತಿ ನಗರಿಯನ್ನು ರಕ್ಷಿಸುವಂತೆ, ಎಣೆಯಿಲ್ಲದ ಪರಾಕ್ರಮವುಳ್ಳ ಮಧು, ಭೋಜ, ದಾಶಾರ್ಹ, ಅರ್ಹ, ಕುಕುರ, ಅಂಧಕ, ವೃಷಿವಂಶೀಯರು ಭಗವಂತನ ಆ ದ್ವಾರಕೆಯನ್ನು ಸಂರಕ್ಷಿಸುತ್ತಿದ್ದರು. ಭಗವಂತ ನಿಂದಲೇ ಅವರಿಗೆ ಈ ಶಕ್ತಿಯು ಪ್ರಾಪ್ತವಾಗಿತ್ತು.॥11॥

(ಶ್ಲೋಕ - 12)

ಮೂಲಮ್

ಸರ್ವರ್ತುಸರ್ವವಿಭವಪುಣ್ಯವೃಕ್ಷಲತಾಶ್ರಮೈಃ ।
ಉದ್ಯಾನೋಪವನಾರಾಮೈರ್ವೃತಪದ್ಮಾಕರಶ್ರಿಯಮ್ ॥

ಅನುವಾದ

ಆ ದ್ವಾರಕಾಪುರಿಯು ಎಲ್ಲ ಋತುಗಳಲ್ಲಿಯೂ ಸಮಸ್ತ ವೈಭವ ಸಂಪನ್ನವಾಗಿದ್ದು, ಪವಿತ್ರ ವೃಕ್ಷ, ಲತಾಕುಂಜಗಳಿಂದ ಕೂಡಿತ್ತು. ಅಲ್ಲಲ್ಲಿ ಫಲಗಳಿಂದ ತುಂಬಿದ ಉದ್ಯಾನಗಳೂ, ಹೂದೋಟಗಳೂ, ಕ್ರೀಡಾವನಗಳಿದ್ದು, ನಡು-ನಡುವೆ ತಾವರೆಕೊಳಗಳಿಂದ ನಗರದ ಶೋಭೆ ಹೆಚ್ಚಿಸುತ್ತಿದ್ದವು.॥12॥

(ಶ್ಲೋಕ - 13)

ಮೂಲಮ್

ಗೋಪುರದ್ವಾರಮಾರ್ಗೇಷು ಕೃತಕೌತುಕತೋರಣಾಮ್ ।
ಚಿತ್ರಧ್ವಜಪತಾಕಾಗ್ರೈರಂತಃ ಪ್ರತಿಹತಾತಪಾಮ್ ॥

ಅನುವಾದ

ನಗರದ ಮಹಾದ್ವಾರಗಳೂ, ರಾಜಮಾರ್ಗಗಳೂ ರಮಣೀಯವಾದ ತಳಿರು-ತೋರಣಗಳಿಂದ ಸಿಂಗರಿಸಿದ್ದರು. ಊರೊಳಗೆ ಬಿಸಿಲು ಬೀಳದಂತೆ ಚಪ್ಪರಗಳನ್ನಿಟ್ಟು, ಚಿತ್ರ-ವಿಚಿತ್ರವಾದ ಧ್ವಜ-ಪತಾಕೆಗಳು ಕಂಗೊಳಿಸುತ್ತಿದ್ದವು.॥13॥

(ಶ್ಲೋಕ - 14)

ಮೂಲಮ್

ಸಮ್ಮಾರ್ಜಿತಮಹಾಮಾರ್ಗರಥ್ಯಾಪಣಕಚತ್ವರಾಮ್ ।
ಸಿಕ್ತಾಂ ಗಂಧಜಲೈರುಪ್ತಾಂ ಲಪುಷ್ಪಾಕ್ಷತಾಂಕುರೈಃ ॥

ಅನುವಾದ

ರಾಜಮಾರ್ಗಗಳೂ, ರಥ ಬೀದಿಗಳೂ, ಅಂಗಡೀ ಬೀದಿಗಳೂ, ಅಂಗಳಗಳೂ ಗುಡಿಸಿ-ಸಾರಿಸಿ, ರಂಗವಲ್ಲಿಯನ್ನಿಟ್ಟು ಸುಗಂಧ ದ್ರವ್ಯಗಳನ್ನು ಸಿಂಪಡಿಸಿ ಅಲಂಕರಿಸಿದ್ದರು. ಭಗವಂತನ ಸ್ವಾಗತಕ್ಕಾಗಿ ಎರಚಿದ ಫಲ-ಪುಷ್ಪ, ಅಕ್ಷತೆ, ಚಿಗುರುಗಳು ಎಲ್ಲ ಕಡೆ ಚೆಲ್ಲಾಪಿಲ್ಲಿಯಾಗಿದ್ದವು.॥14॥

(ಶ್ಲೋಕ - 15)

ಮೂಲಮ್

ದ್ವಾರಿ ದ್ವಾರಿ ಗೃಹಾಣಾಂ ಚ ದಧ್ಯಕ್ಷತಲೇಕ್ಷುಭಿಃ ।
ಅಲಂಕೃತಾಂ ಪೂರ್ಣಕುಂಭೈರ್ಬಲಿಭಿರ್ಧೂಪದೀಪಕೈಃ ॥

ಅನುವಾದ

ಪ್ರತಿಯೊಂದು ಮನೆಯ ಬಾಗಿಲಲ್ಲಿಯೂ ಮೊಸರು, ಅಕ್ಷತೆ, ಹಣ್ಣುಗಳು, ಕಬ್ಬು, ಜಲಪೂರಿತ ಕಲಶಗಳು, ಕಾಣಿಕೆ ಮೊದಲಾದ ವಸ್ತುಗಳೂ, ಧೂಪದೀಪ ಮುಂತಾದ ಪೂಜಾ ದ್ರವ್ಯಗಳನ್ನು ಇರಿಸಿ ಅಲಂಕರಿಸಿದ್ದರು.॥15॥

(ಶ್ಲೋಕ - 16)

ಮೂಲಮ್

ನಿಶಮ್ಯ ಪ್ರೇಷ್ಠಮಾಯಾಂತಂ ವಸುದೇವೋ ಮಹಾಮನಾಃ ।
ಅಕ್ರೂರಶ್ಚೋಗ್ರಸೇನಶ್ಚ ರಾಮಶ್ಚಾದ್ಭುತವಿಕ್ರಮಃ ॥

(ಶ್ಲೋಕ - 17)

ಮೂಲಮ್

ಪ್ರದ್ಯುಮ್ನಶ್ಚಾರುದೇಷ್ಣಶ್ಚ ಸಾಂಬೋ ಜಾಂಬವತೀಸುತಃ ।
ಪ್ರಹರ್ಷವೇಗೋಚ್ಛಶಿತಶಯನಾಸನಭೋಜನಾಃ ॥

(ಶ್ಲೋಕ - 18)

ಮೂಲಮ್

ವಾರಣೇಂದ್ರಂ ಪುರಸ್ಕೃತ್ಯ ಬ್ರಾಹ್ಮಣೈಃ ಸಸುಮಂಗಲೈಃ ।
ಶಂಖತೂರ್ಯನಿನಾದೇನ ಬ್ರಹ್ಮಘೋಷೇಣ ಚಾದೃತಾಃ ।
ಪ್ರತ್ಯುಜ್ಜಗ್ಮೂ ರಥೈರ್ಹೃಷ್ಟಾಃ ಪ್ರಣಯಾಗತಸಾಧ್ವಸಾಃ ॥

ಅನುವಾದ

ತಮ್ಮ ಪ್ರಿಯತಮ ಭಗವಾನ್ ಶ್ರೀಕೃಷ್ಣನು ಬಂದಿರುವನೆಂದು ಕೇಳಿದೊಡನೆಯೇ ಮಹಾತ್ಮನಾದ ವಸುದೇವ, ಅಕ್ರೂರ, ಉಗ್ರಸೇನ, ಅದ್ಭುತ ಪರಾಕ್ರಮವುಳ್ಳ ಬಲರಾಮ, ಪ್ರದ್ಯುಮ್ನ, ಚಾರುದೇಷ್ಣ, ಜಾಂಬವತಿನಂದನ ಸಾಂಬ ಇವರೆಲ್ಲರೂ ಉಕ್ಕಿ ಬಂದ ತಮ್ಮ ಸಂತೋಷದ ಭರದಲ್ಲಿ ನಿದ್ರೆ, ವಿಶ್ರಾಂತಿ, ಭೋಜನಗಳೇ ಮುಂತಾದ ದಿನನಿತ್ಯ ಕರ್ಮಗಳನ್ನು ಮರೆತು, ಪಟ್ಟದಾನೆಯನ್ನು ಮುಂದಿಟ್ಟು ಕೊಂಡು, ಮಂಗಳದ್ರವ್ಯಯುಕ್ತರಾದ ಬ್ರಾಹ್ಮಣರೊಡನೆ ಶಂಖವನ್ನೂ, ಕೊಂಬು, ಕಹಳೆ ಮುಂತಾದ ಮಂಗಳ ವಾದ್ಯಗಳನ್ನು ಮೊಳಗಿಸುತ್ತಾ, ವೇದಘೋಷಗಳೊಡನೆ ರಥವನ್ನೇರಿ ಹೊರಟು ಆದರ ಬುದ್ಧಿಯಿಂದ ಭಗವಂತನನ್ನು ಇದಿರುಗೊಂಡರು.॥16-18॥

(ಶ್ಲೋಕ - 19)

ಮೂಲಮ್

ವಾರಮುಖ್ಯಾಶ್ಚ ಶತಶೋ ಯಾನೈಸ್ತದ್ದರ್ಶನೋತ್ಸುಕಾಃ ।
ಲಸತ್ಕುಂಡಲನಿರ್ಭಾತಕಪೋಲವದನಶ್ರಿಯಃ ॥

ಅನುವಾದ

ಹಾಗೆಯೇ ಭಗವಾನ್ ಶ್ರೀಕೃಷ್ಣನ ದರ್ಶನಕ್ಕಾಗಿ ಮುಂಗುರುಗಳಿಂದ ಅಲಂಕೃತವಾದ, ಕರ್ಣಕುಂಡಲ ಕಾಂತಿಯಿಂದ ಶೋಭಿಸುವ ಸುಂದರ ವದನಾರವಿಂದದಿಂದ ಕೂಡಿದ ಸಾವಿರಾರು ವಾರಾಂಗನೆಯರು ಪಲ್ಲಕ್ಕಿಗಳನ್ನೇರಿ ಭಗವಂತನನ್ನು ಇದಿರ್ಗೊಳ್ಳಲು ಹೊರಟರು.॥19॥

(ಶ್ಲೋಕ - 20)

ಮೂಲಮ್

ನಟನರ್ತಕಗಂಧರ್ವಾಃ ಸೂತಮಾಗಧವಂದಿನಃ ।
ಗಾಯಂತಿ ಚೋತ್ತಮಶ್ಲೋಕಚರಿತಾನ್ಯದ್ಭುತಾನಿ ಚ ॥

ಅನುವಾದ

ರಸಾಭಿನಯ ಸಮರ್ಥರಾದ ನಟರೂ, ನರ್ತಕರೂ, ಗಾಯಕರೂ, ಪೌರಾಣಿಕರೂ, ಸೂತ-ವಂದಿಮಾಗಧರೂ ಭಗವಾನ್ ಶ್ರೀಕೃಷ್ಣನ ದಿವ್ಯಾದ್ಭುತವಾದ ಕಥೆಗಳನ್ನು ಹಾಡುತ್ತಾ ಹೊರಟರು.॥20॥

(ಶ್ಲೋಕ - 21)

ಮೂಲಮ್

ಭಗವಾಂಸ್ತತ್ರ ಬಂಧೂನಾಂ ಪೌರಾಣಾಮನುವರ್ತಿನಾಮ್ ।
ಯಥಾವಿಧ್ಯುಪಸಂಗಮ್ಯ ಸರ್ವೇಷಾಂ ಮಾನಮಾದಧೇ ॥

ಅನುವಾದ

ಭಗವಾನ್ ಶ್ರೀಕೃಷ್ಣನು ನೆಂಟರಿಷ್ಟರನ್ನೂ, ನಾಗರಿಕರನ್ನೂ, ಸೇವಕರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಬೇರೆ- ಬೇರೆಯಾಗಿ ಸಂಧಿಸಿ, ಎಲ್ಲರನ್ನೂ ಸನ್ಮಾನಿಸಿದನು.॥21॥

(ಶ್ಲೋಕ - 22)

ಮೂಲಮ್

ಪ್ರಹ್ವಾಭಿವಾದನಾಶ್ಲೇಷಕರಸ್ಪರ್ಶಸ್ಮಿತೇಕ್ಷಣೈಃ ।
ಆಶ್ವಾಸ್ಯ ಚಾಶ್ವಪಾಕೇಭ್ಯೋ ವರೈಶ್ಚಾಭಿಮತೈರ್ವಿಭುಃ ॥

(ಶ್ಲೋಕ - 23)

ಮೂಲಮ್

ಸ್ವಯಂ ಚ ಗುರುಭಿರ್ವಿಪ್ರೈಃ ಸದಾರೈಃ ಸ್ಥವಿರೈರಪಿ ।
ಆಶೀರ್ಭಿರ್ಯುಜ್ಯಮಾನೋನ್ಯೈರ್ವಂದಿಭಿಶ್ಚಾವಿಶತ್ಪುರಮ್ ॥

ಅನುವಾದ

ಕೆಲವರಿಗೆ ತಲೆಬಾಗಿ ವಂದಿಸಿ, ಕೆಲವರನ್ನು ಮಾತಿನಿಂದ ಅಭಿನಂದಿಸಿ, ಕೆಲವರನ್ನು ಅಪ್ಪಿಕೊಂಡು, ಕೆಲವರ ಕೈಕುಲುಕಿ, ಕೆಲವರನ್ನು ಕಂಡು ಮುಗುಳ್ನಗೆ ಬೀರಿ, ಇನ್ನು ಕೆಲವರನ್ನು ನೋಟದಿಂದಲೇ ಗೌರವಿಸಿದನು. ಪ್ರಭುವು ಪ್ರತಿಯೊಬ್ಬರಿಗೂ ಬೇಕಾದ ವರಗಳನ್ನು ಕೊಟ್ಟು ಅನುಗ್ರಹಿಸಿದನು. ಹೀಗೆ ಚಾಂಡಾಲರವರೆಗಿನ ಎಲ್ಲ ವರ್ಗದ ಜನರನ್ನು ಸಂತೋಷ ಗೊಳಿಸಿ, ಗುರು ಜನರಿಂದ, ವೃದ್ಧರಾದ ಸಪತ್ನೀಕ ಬ್ರಾಹ್ಮಣರಿಂದ ಹಾಗೂ ಇತರರಿಂದಲೂ ಆಶೀರ್ವಾದಗಳನ್ನು ಪಡೆದು, ಹೊಗಳುಭಟರಿಂದ ಬಿರುದಾವಳಿಗಳನ್ನು ಕೇಳುತ್ತಾ, ಎಲ್ಲರಿಂದೊಡಗೂಡಿ ಭಗವಾನ್ ಶ್ರೀಕೃಷ್ಣನು ನಗರವನ್ನು ಪ್ರವೇಶಿಸಿದನು.॥22-23॥

(ಶ್ಲೋಕ - 24)

ಮೂಲಮ್

ರಾಜಮಾರ್ಗಂ ಗತೇ ಕೃಷ್ಣೇ ದ್ವಾರಕಾಯಾಃ ಕುಲಸಿಯಃ ।
ಹರ್ಮ್ಯಾಣ್ಯಾರುರುಹುರ್ವಿಪ್ರ ತದೀಕ್ಷಣಮಹೋತ್ಸವಾಃ ॥

ಅನುವಾದ

ಶೌನಕರೇ! ಭಗವಂತನು ರಾಜಮಾರ್ಗದಲ್ಲಿ ಹೋಗುತ್ತಿದ್ದಾಗ ದ್ವಾರಕಾನಗರದ ಕುಲಸ್ತ್ರೀಯರು ಅವನ ದರ್ಶನವನ್ನೇ ಪರಮಾನಂದಮಹೋತ್ಸವವನ್ನಾಗಿ ಭಾವಿಸಿ ತಮ್ಮ-ತಮ್ಮ ಮನೆಯ ಉಪ್ಪರಿಗೆಗಳನ್ನು ಏರಿದರು.॥24॥

(ಶ್ಲೋಕ - 25)

ಮೂಲಮ್

ನಿತ್ಯಂ ನಿರೀಕ್ಷಮಾಣಾನಾಂ ಯದಪಿ ದ್ವಾರಕೌಕಸಾಮ್ ।
ನೈವ ತೃಪ್ಯಂತಿ ಹಿ ದೃಶಃ ಶ್ರಿಯೋ ಧಾಮಾಂಗಮಚ್ಯುತಮ್ ॥

(ಶ್ಲೋಕ - 26)

ಮೂಲಮ್

ಶ್ರಿಯೋ ನಿವಾಸೋ ಯಸ್ಯೋರಃ
ಪಾನಪಾತ್ರಂ ಮುಖಂ ದೃಶಾಮ್ ।
ಬಾಹವೋ ಲೋಕಪಾಲಾನಾಂ
ಸಾರಂಗಾಣಾಂ ಪದಾಂಬುಜಮ್ ॥

ಅನುವಾದ

ಭಗವಂತನ ದಿವ್ಯಮಂಗಳ ವಿಗ್ರಹದ ಶೋಭೆಯನ್ನು ಏನೆಂದು ಹೇಳೋಣ? ಅವನ ವಕ್ಷಃಸ್ಥಳವೂ ಮೂರ್ತಿಮಂತ ಸೌಂದರ್ಯಲಕ್ಷ್ಮಿಯ ನಿವಾಸ ಸ್ಥಾನವೇ ಆಗಿತ್ತು. ಅವನ ಮುಖಾರವಿಂದವು ಕಣ್ಣುಗಳಿಂದ ಪಾನ ಮಾಡಲು ಸೌಂದರ್ಯಸುಧೆಯಿಂದ ತುಂಬಿದ ಪ್ರಾತ್ರೆಯೋಪಾದಿಯಲ್ಲಿತ್ತು. ಅವನ ಭುಜಗಳಾದರೋ ಲೋಕಪಾಲಕರಿಗೆ ಶಕ್ತಿಯನ್ನು ತುಂಬುವಂತಿದ್ದವು. ಅವನ ಚರಣಕಮಲಗಳು ಭಕ್ತರೆಂಬ ಪರಮಹಂಸರ ಆಶ್ರಯಸ್ಥಾನವಾಗಿದ್ದವು. ಅವನ ಒಂದೊಂದು ಅವಯವಗಳು ಕಾಂತಿಯ ತೌರುಮನೆಯಂತಿದ್ದು, ಅಂತಹ ಭಗವಂತನ ಕಾಂತಿಯನ್ನು ಸದಾ ನೋಡುತ್ತಿದ್ದರೂ ದ್ವಾರಕಾ ನಿವಾಸಿಗಳಿಗೆ ಕ್ಷಣಕಾಲವೂ ತೃಪ್ತಿಯುಂಟಾಗುತ್ತಿರಲಿಲ್ಲ. ॥25-26॥

(ಶ್ಲೋಕ - 27)

ಮೂಲಮ್

ಸಿತಾತಪತ್ರವ್ಯಜನೈರುಪಸ್ಕೃತಃ
ಪ್ರಸೂನವರ್ಷೈರಭಿವರ್ಷಿತಃ ಪಥಿ ।
ಪಿಶಂಗವಾಸಾ ವನಮಾಲಯಾ ಬಭೌ
ಘನೋ ಯಥಾರ್ಕೋಡುಪಚಾಪವೈದ್ಯುತೈಃ ॥

ಅನುವಾದ

್ವಾರಕೆಯ ರಾಜಪಥದಲ್ಲಿ ಹೋಗುತ್ತಿದ್ದ ಶ್ರೀಕೃಷ್ಣ ಮೇಲೆ ಬೆಳ್ಗೊಡೆಯನ್ನು ಹಿಡಿದಿದ್ದು, ಇಕ್ಕಡೆಗಳಲ್ಲಿಯೂ ಚಾಮರಗಳನ್ನು ಬೀಸುತ್ತಿದ್ದರು. ಎಲ್ಲೆಡೆಗಳಿಂದ ಪುಷ್ಪವೃಷ್ಟಿಯಾಗುತ್ತಿತ್ತು. ಮಿಂಚಿನಂತೆ ಹೊಳೆಯುತ್ತಿದ್ದ ಪೀತಾಂಬರವನ್ನೂ, ಸೊಬಗು-ಸುವಾಸೆಗಳಿಂದ ಕೂಡಿದ ವನಮಾಲೆಯನ್ನು ಧರಿಸಿದ್ದನು. ಹೀಗೆ ಎಲ್ಲ ಅಲಂಕಾರ - ವೈಭವಗಳಿಂದ ಕೂಡಿದ್ದ ಶ್ಯಾಮಲಮೂರ್ತಿಯಾದ ಸ್ವಾಮಿಯು ಏಕಕಾಲದಲ್ಲಿ ಸೂರ್ಯ, ಚಂದ್ರ, ಕಾಮನಬಿಲ್ಲು, ಮಿಂಚು, ಇವೆಲ್ಲವುಗಳಿಂದ ಶೋಭಿಸುವ ನೀಲಮೇಘದಂತೆ ಶೋಭಿಸುತ್ತಿದ್ದನು.॥27॥

(ಶ್ಲೋಕ - 28)

ಮೂಲಮ್

ಪ್ರವಿಷ್ಟಸ್ತು ಗೃಹಂ ಪಿತ್ರೋಃ ಪರಿಷ್ವಕ್ತಃ ಸ್ವಮಾತೃಭಿಃ ।
ವವಂದೇ ಶಿರಸಾ ಸಪ್ತ ದೇವಕೀಪ್ರಮುಖಾ ಮುದಾ ॥

(ಶ್ಲೋಕ - 29)

ಮೂಲಮ್

ತಾಃ ಪುತ್ರಮಂಕಮಾರೋಪ್ಯ ಸ್ನೇಹಸ್ನುತಪಯೋಧರಾಃ ।
ಹರ್ಷವಿಹ್ವಲಿತಾತ್ಮಾನಃ ಸಿಷಿಚುರ್ನೇತ್ರಜೈರ್ಜಲೈಃ ॥

ಅನುವಾದ

ಭಗವಂತನು ಮೊಟ್ಟಮೊದಲು ತನ್ನ ತಂದೆ-ತಾಯಿಯರಿದ್ದ ಅರಮನೆಯನ್ನು ಪ್ರವೇಶಿಸಿ, ಅಲ್ಲಿ ಅವನು ಪರಮಾನಂದದಿಂದ ದೇವಕಿಯೇ ಮೊದಲಾದ ಏಳು ಮಂದಿ ತಾಯಂದಿರನ್ನು ಅವರ ಚರಣಗಳಲ್ಲಿ ಶಿರವನ್ನಿಟ್ಟು ನಮಸ್ಕರಿಸಿದನು. ಆಗ ಆ ಎಲ್ಲ ಮಾತೆಯರೂ ಆತನನ್ನು ಆಲಿಂಗಿಸಿಕೊಂಡು ತೊಡೆಯ ಮೇಲೆ ಕುಳ್ಳಿರಿಸಿಕೊಂಡರು. ಪ್ರೀತಿ ವಾತ್ಸಲ್ಯದ ಕಾರಣ ಅವರ ಸ್ತನಗಳಿಂದ ಹಾಲಿನ ಧಾರೆಯೇ ಹರಿಯತೊಡಗಿತು. ಅವರ ಹೃದಯ ಹರ್ಷ ವಿಹ್ವಲವಾಗಿ ಆನಂದ ಬಾಷ್ಪಗಳಿಂದ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿದರು.॥28-29॥

(ಶ್ಲೋಕ - 30)

ಮೂಲಮ್

ಅಥಾವಿಶತ್ಸ್ವಭವನಂ ಸರ್ವಕಾಮಮನುತ್ತಮಮ್ ।
ಪ್ರಾಸಾದಾ ಯತ್ರ ಪತ್ನೀನಾಂ ಸಹಸ್ರಾಣಿ ಚ ಷೋಡಶ ॥

ಅನುವಾದ

ಎಲ್ಲ ತಾಯಂದಿರ ಅಪ್ಪಣೆ ಪಡೆದು ಅವನು ಸಮಸ್ತ ಭೋಗಸಾಮಗ್ರಿಗಳಿಂದ ಸಂಪನ್ನವಾದ, ಸರ್ವೋತ್ತಮವಾಗಿದ್ದ ತನ್ನ ಅರಮನೆಯನ್ನು ಹೊಕ್ಕನು. ಅಲ್ಲಿ ಅವನ ಹದಿನಾರುಸಾವಿರ ಪತ್ನಿಯರಿಗೂ ಬೇರೆ-ಬೇರೆ ಭವನಗಳಿದ್ದವು.॥30॥

(ಶ್ಲೋಕ - 31)

ಮೂಲಮ್

ಪತ್ನ್ಯಃ ಪತಿಂ ಪ್ರೋಷ್ಯ ಗೃಹಾನುಪಾಗತಂ
ವಿಲೋಕ್ಯ ಸಂಜಾತಮನೋಮಹೋತ್ಸವಾಃ ।
ಉತ್ತಸ್ಥು ರಾರಾತ್ಸಹಸಾಸನಾಶಯಾತ್
ಸಾಕಂ ವ್ರತೈರ್ವ್ರೀಡಿತಲೋಚನಾನನಾಃ ॥

ಅನುವಾದ

ಬಹಳ ದಿನಗಳ ಪ್ರವಾಸದ ಬಳಿಕ ಅರಮನೆಗೆ ಹಿಂದಿರುಗಿದ ಪ್ರಾಣನಾಥನನ್ನು ಕಂಡು ರಾಣಿಯರ ಹೃದಯಗಳು ಆನಂದೋತ್ಸಾಹಗಳಿಂದ ತುಂಬಿ ಬಂದುವು. ಆತನು ತಮ್ಮ ಬಳಿಗೆ ಬಂದಿರುವುದನ್ನು ನೋಡಿದ ಕೂಡಲೇ ಎಲ್ಲರೂ ಒಮ್ಮಿಂದೊಮ್ಮೆಗೆ ಧ್ಯಾನದಿಂದ ವಿಮುಖರಾಗಿ ಎದ್ದು ನಿಂತರು. ಅವರು ತಮ್ಮ-ತಮ್ಮ ಆಸನಗಳನ್ನು ಬಿಟ್ಟಿದ್ದಲ್ಲದೆ ವಿರಹಿಣೀ ಸ್ತ್ರೀಯರ ಅಲಂಕಾರ ತ್ಯಾಗವೇ ಮುಂತಾದ ವ್ರತಗಳನ್ನೂ* ತ್ಯಜಿಸಿದರು. ಆಗ ಅವರ ಮುಖ, ನೇತ್ರಗಳಲ್ಲಿ ಲಜ್ಜೆಯು ಆವರಿಸಿ ಬಿಟ್ಟಿತು.॥31॥

ಟಿಪ್ಪನೀ
  • ಪತಿಯು ವಿದೇಶಕ್ಕೆ ಹೋಗಿದ್ದಾಗ ಪತ್ನೀಯಾದವಳು ಈ ನಿಯಮಗಳನ್ನು ಪಾಲಿಸಬೇಕು -
    ಕ್ರೀಡಾಂ ಶರೀರಸಂಸ್ಕಾರಂ ಸಮಾಜೋತ್ಸವದರ್ಶನಮ್ । ಹಾಸ್ಯಂ ಪರಗೃಹೇ ಯಾನಂ ತ್ಯಜೇತ್ ಪ್ರೋಷಿತಭರ್ತೃಕಾ ॥
    (ಯಾಜ್ಞವಲ್ಕ್ಯ ಸ್ಮೃತಿ)
    ಪತಿಯು ವಿದೇಶವಾಸಕ್ಕೆ ಹೋಗಿದ್ದಾಗ ಪತ್ನಿಯು ಆಟ-ಪಾಟಗಳಲ್ಲಿ ಭಾಗವಹಿಸಬಾರದು. ಅಲಂಕಾರಾದಿ ಶರೀರ ಸಂಸ್ಕಾರ ಮಾಡಿಕೊಳ್ಳಬಾರದು. ಸಾಮಾಜಿಕ ಉತ್ಸವಾದಿಗಳಲ್ಲಿ ಭಾಗವಹಿಸಬಾರದು. ಹಾಸ್ಯ-ವಿನೋದಗಳಲ್ಲಿ ಭಾಗವಹಿಸಬಾರದು. ಪರಗೃಹಕ್ಕೆ ಹೋಗಬಾರದು. ಈ ಐದನ್ನು ತ್ಯಜಿಸಬೇಕು.

(ಶ್ಲೋಕ - 32)

ಮೂಲಮ್

ತಮಾತ್ಮಜೈರ್ದೃಷ್ಟಿ ಭಿರಂತರಾತ್ಮನಾ
ದುರಂತಭಾವಾಃ ಪರಿರೇಭಿರೇ ಪತಿಮ್ ।
ನಿರುದ್ಧಮಪ್ಯಾಸ್ರವದಂಬು ನೇತ್ರಯೋ-
ರ್ವಿಲಜ್ಜತೀನಾಂ ಭೃಗುವರ್ಯ ವೈಕ್ಲವಾತ್ ॥

ಅನುವಾದ

ಶ್ರೀಭಗವಂತನ ಕುರಿತು ಅವರ ಭಾವವು ತುಂಬಾ ಗಂಭೀರವಾಗಿತ್ತು. ಅವರು ಮೊದಲಿಗೆ ಮನಸ್ಸಿನಿಂದಲೂ, ಬಳಿಕ ಪ್ರೇಮಪೂರ್ಣ ನೋಟದಿಂದಲೂ, ಅನಂತರ ಮಕ್ಕಳ ನೆಪದಿಂದ ಶರೀರದಿಂದಲೂ ಪ್ರಾಣಕಾಂತನನ್ನು ಆಲಿಂಗಿಸಿ ಕೊಂಡರು. ಶೌನಕರೇ! ಆಗ ಅವರ ಕಣ್ಣುಗಳಲ್ಲಿ ಪ್ರೇಮಾಶ್ರುಗಳು ತುಂಬಿ ಬಂದಿದ್ದರೂ ಸಂಕೋಚದಿಂದ ಅವರು ಎಷ್ಟೇ ತಡೆದರೂ ವಿವಶತೆಯ ಕಾರಣ ಕೊನೆಗೆ ಹರಿದೇ ಬಿಟ್ಟವು.॥32॥

(ಶ್ಲೋಕ - 33)

ಮೂಲಮ್

ಯದ್ಯಪ್ಯಸೌ ಪಾರ್ಶ್ವಗತೋ ರಹೋಗತ-
ಸ್ತಥಾಪಿ ತಸ್ಯಾಂಘ್ರಿಯುಗಂ ನವಂ ನವಮ್ ।
ಪದೇ ಪದೇ ಕಾ ವಿರಮೇತ ತತ್ಪದಾ-
ಚ್ಚಲಾಪಿ ಯಚ್ಛ್ರೀರ್ನ ಜಹಾತಿ ಕರ್ಹಿಚಿತ್ ॥

ಅನುವಾದ

ಸರ್ವವ್ಯಾಪಕನೂ, ಅನಂತ ಶಕ್ತಿ ಪರಿಪೂರ್ಣನೂ ಆದ ಭಗವಾನ್ ಶ್ರೀಕೃಷ್ಣನು ಏಕಾಂತದಲ್ಲಿ ಯಾವಾಗಲೂ ಅವರ ಬಳಿಯಲ್ಲೇ ಇದ್ದರೂ, ಅವನ ಚರಣ ಕಮಲಗಳು ಅವರಿಗೆ ಹೆಜ್ಜೆ-ಹೆಜ್ಜೆಗೆ ಹೊಸ-ಹೊಸದಾಗಿಯೇ ಕಾಣುತ್ತಿದ್ದವು. ಸ್ವಭಾವದಿಂದಲೇ ಚಂಚಲಳಾದ ಲಕ್ಷ್ಮೀದೇವಿಯು ಯಾರನ್ನು ಒಂದು ಕ್ಷಣವಾದರೂ ಬಿಟ್ಟಿರುವುದಿಲ್ಲವೋ ಅಂತಹವನ ಸನ್ನಿಧಿಯಿಂದ ಯಾವ ಸ್ತ್ರೀಯು ತೃಪ್ತಳಾಗಬಲ್ಲಳು? ॥33॥

(ಶ್ಲೋಕ - 34)

ಮೂಲಮ್

ಏವಂ ನೃಪಾಣಾಂ ಕ್ಷಿತಿಭಾರಜನ್ಮನಾ-
ಮಕ್ಷೌಹಿಣೀಭಿಃ ಪರಿವೃತ್ತತೇಜಸಾಮ್ ।
ವಿಧಾಯ ವೈರಂ ಶ್ವಸನೋ ಯಥಾನಲಂ
ಮಿಥೋ ವಧೇನೋಪರತೋ ನಿರಾಯುಧಃ ॥

ಅನುವಾದ

ವಾಯುವು ಬಿದಿರುಗಳ ಘರ್ಷಣೆಯಿಂದ ದಾವಾ ನಲವನ್ನು ಉಂಟುಮಾಡಿ, ಅವನ್ನೇ ಸುಟ್ಟುಬಿಡುವಂತೆಯೇ, ಭೂಮಿಗೆ ಭಾರವಾದ, ಬಲಿಷ್ಠ ರಾಜರಲ್ಲಿ ಪರಸ್ಪರ ವೈರಾಗ್ನಿಯನ್ನು ಉಂಟು ಮಾಡಿ ಸ್ವತಃ ಶಸ್ತ್ರ ಧರಿಸದೆಯೇ ಭಗವಾನ್ ಶ್ರೀಕೃಷ್ಣನು ಅವರನ್ನು, ಅನೇಕ ಅಕ್ಷೌಹಿಣೀ ಸೇನೆ ಸಹಿತ ಒಬ್ಬರಿಂದೊಬ್ಬರನ್ನು ಕೊಲ್ಲಿಸಿ ಬಿಟ್ಟನು. ಬಳಿಕವೇ ತಾನು ವಿರಮಿಸಿದನು. ॥34॥

(ಶ್ಲೋಕ - 35)

ಮೂಲಮ್

ಸ ಏಷ ನರಲೋಕೇಸ್ಮಿನ್ನವತೀರ್ಣಃ ಸ್ವಮಾಯಯಾ ।
ರೇಮೇ ಸೀರತ್ನ ಕೂಟಸ್ಥೋ ಭಗವಾನ್ ಪ್ರಾಕೃತೋ ಯಥಾ ॥

ಅನುವಾದ

ಸಾಕ್ಷಾತ್ ಪರಮೇಶ್ವರನೇ ತನ್ನ ಲೀಲೆಯಿಂದ ಈ ಮರ್ತ್ಯ ಲೋಕದಲ್ಲಿ ಅವತರಿಸಿದ್ದನು. ಸಾವಿರಾರು ರಮಣಿಯರ ಮಧ್ಯದಲ್ಲಿದ್ದು ಅವನು ಸಾಧಾರಣ ಮನುಷ್ಯರಂತೆ ಕ್ರೀಡಿಸಿದನು. ॥35॥

(ಶ್ಲೋಕ - 36)

ಮೂಲಮ್

ಉದ್ದಾಮಭಾವಪಿಶುನಾಮಲವಲ್ಗುಹಾಸ-
ವ್ರೀಡಾವಲೋಕನಿಹತೋಮದನೋಪಿ ಯಾಸಾಮ್ ।
ಸಮ್ಮುಹ್ಯ ಚಾಪಮಜಹಾತ್ಪ್ರಮದೋತ್ತಮಾಸ್ತಾ
ಯಸ್ಯೇಂದ್ರಿಯಂ ವಿಮಥಿತುಂ ಕುಹಕೈರ್ನ ಶೇಕುಃ ॥

(ಶ್ಲೋಕ - 37)

ಮೂಲಮ್

ತಮಯಂ ಮನ್ಯತೇ ಲೋಕೋ ಹ್ಯಸಂಗಮಪಿ ಸಂಗಿನಮ್ ।
ಆತ್ಮೌಪಮ್ಯೇನ ಮನುಜಂ ವ್ಯಾಪೃಣ್ವಾನಂ ಯತೋಬುಧಃ ॥

ಅನುವಾದ

ಯಾವ ಮೋಹನಾಂಗಿಯರ ಗಂಭೀರವಾದ ಭಾವವನ್ನು ಸೂಚಿಸುವ ಮಧುರ ಮಂದಹಾಸಗಳಿಗೂ, ಲಜ್ಜೆಯಿಂದೊಡಗೊಂಡ ಕಡೆಗಣ್ಣ ನೋಟಗಳಿಗೂ ಸೋತು ತ್ರಿಲೋಕವಿಜಯಿಯಾದ ಮನ್ಮಥನೂ ಕೂಡ ತನ್ನ ಪಂಚಬಾಣಗಳನ್ನು ಧನುಷ್ಯವನ್ನು ಪರಿತ್ಯಜಿಸಿದನೋ, ಅಂತಹ ಕಮನೀಯರಾದ ಕಾಮಿನಿಯರು ತಮ್ಮ ಕಾಮ ವಿಲಾಸಗಳಿಂದ ಯಾರ ಮನಸ್ಸಿನಲ್ಲಿ ಸ್ವಲ್ಪವೂ ಕ್ಷೊಭೆಯನ್ನು ಉಂಟು ಮಾಡಲು ಅಸಮರ್ಥರಾದರೋ, ಅಂತಹ ನಿರ್ಲಿಪ್ತನಾದ ಶ್ರೀಕೃಷ್ಣನನ್ನು ಸಾಂಸಾರಿಕ ಜನರು ತಮ್ಮಂತೆಯೇ ಕರ್ಮ ಮಾಡುತ್ತಿರುವುದನ್ನು ನೋಡಿ, ಇವನು ಆಸಕ್ತ ಪುರುಷನೆಂದು ತಿಳಿಯುವುದು ಅವರ ಮೂರ್ಖತೆಯೇ ಆಗಿದೆ.॥36-37॥

(ಶ್ಲೋಕ - 38)

ಮೂಲಮ್

ಏತದೀಶನಮೀಶಸ್ಯ ಪ್ರಕೃತಿಸ್ಥೋಪಿ ತದ್ಗುಣೈಃ ।
ನ ಯುಜ್ಯತೇ ಸದಾತ್ಮಸ್ಥೈರ್ಯಥಾ ಬುದ್ಧಿಸ್ತದಾಶ್ರಯಾ ॥

ಅನುವಾದ

ಭಗವಂತನು ಪ್ರಕೃತಿಯಲ್ಲಿ ಸ್ಥಿತನಾಗಿದ್ದುಕೊಂಡರೂ ಅದರ ಗುಣಗಳಿಂದ ಲಿಪ್ತನಾಗದಿರುವುದೇ ಅಲ್ಲವೇ ಅವನ ಈಶ್ವರತ್ವವು. ಆತನ ಶಕ್ತಿಯ ಅಗ್ಗಳಿಕೆ. ಭಗವಂತನಲ್ಲಿ ಶರಣಾದ ಭಕ್ತರ ಬುದ್ಧಿಯೂ ಕೂಡ ತನ್ನಲ್ಲಿರುವ ಪ್ರಾಕೃತಗುಣಗಳಿಂದ ಲಿಪ್ತವಾಗುವುದಿಲ್ಲ.॥38॥

(ಶ್ಲೋಕ - 39)

ಮೂಲಮ್

ತಂ ಮೇನಿರೇಬಲಾ ಮೂಢಾಃ ಸೈಣಂ ಚಾನುವ್ರತಂ ರಹಃ ।
ಅಪ್ರಮಾಣವಿದೋ ಭರ್ತುರೀಶ್ವರಂ ಮತಯೋ ಯಥಾ ॥

ಅನುವಾದ

ಬುದ್ಧಿಗಳು ಬುದ್ಧ್ಯತೀತನಾದ ಪರಮಾತ್ಮನನ್ನು ಹೇಗೆ ಅರಿಯಲಾರದೋ, ಹಾಗೆಯೇ ಆ ಸ್ತ್ರೀಯರೂ ಕೂಡ ಭಗವಂತನ ದೈವತ್ವವನ್ನರಿಯದ ಮೂಢರು. ತಮ್ಮ ಪತಿಯಾದ ಶ್ರೀಕೃಷ್ಣನ ನಿಜಸ್ವರೂಪವನ್ನು ಅರಿಯಲಾರದೇ ಆತನನ್ನು ಸ್ತ್ರೀಯರಿಗೆ ಅಧೀನನಾಗಿ ಅವರೊಡನೆ ಕಲೆತು-ವಿಹರಿಸುವ ದುರ್ಬಲ ಪ್ರಕೃತಿಯವನೆಂದು ಭಾವಿಸುತ್ತಿದ್ದರು.॥39॥

ಅನುವಾದ (ಸಮಾಪ್ತಿಃ)

ಹನ್ನೊಂದನೆಯ ಅಧ್ಯಾಯವು ಮುಗಿಯಿತು.॥11॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ಶ್ರೀಕೃಷ್ಣದ್ವಾರಕಾಪ್ರವೇಶೋ ನಾಮೈಕಾದಶೋಽಧ್ಯಾಯಃ ॥11॥