[ಒಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಯುಧಿಷ್ಠಿರಾದಿಗಳು ಭೀಷ್ಮರ ಬಳಿಗೆ ಹೋದುದು, ಶ್ರೀಕೃಷ್ಣಸ್ತುತಿ ಪೂರ್ವಕ ಭೀಷ್ಮ ನಿರ್ಯಾಣ
(ಶ್ಲೋಕ - 1)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಇತಿ ಭೀತಃ ಪ್ರಜಾದ್ರೋಹಾತ್ಸರ್ವಧರ್ಮವಿವಿತ್ಸಯಾ ।
ತತೋ ವಿನಶನಂ ಪ್ರಾಗಾದ್ ಯತ್ರ ದೇವವ್ರತೋಪತತ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಹೀಗೆ ತನ್ನಿಂದ ಪ್ರಜಾದ್ರೋಹವಾಯಿತೆಂದು ಹೆದರಿದ ಧರ್ಮರಾಜನು ಧರ್ಮ ರಹಸ್ಯವನ್ನು ತಿಳಿದುಕೊಳ್ಳುವ ಇಚ್ಛೆಯಿಂದ ಭೀಷ್ಮ ಪಿತಾಮಹರು ಶರಶಯ್ಯೆಯಲ್ಲಿ ಪವಡಿಸಿದ್ದ ಕುರುಕ್ಷೇತ್ರಕ್ಕೆ ಹೋದನು.॥1॥
(ಶ್ಲೋಕ - 2)
ಮೂಲಮ್
ತದಾ ತೇ ಭ್ರಾತರಃ ಸರ್ವೇ ಸದಶ್ವೈಃ ಸ್ವರ್ಣಭೂಷಿತೈಃ ।
ಅನ್ವಗಚ್ಛನ್ ರಥೈರ್ವಿಪ್ರಾ ವ್ಯಾಸಧೌಮ್ಯಾದಯಸ್ತಥಾ ॥
ಅನುವಾದ
ಆಗ ಅವನ ಒಡಹುಟ್ಟಿದವರೆಲ್ಲರೂ ಒಳ್ಳೆಯ ಅಶ್ವಗಳು ಹೂಡಿದ ಸುವರ್ಣಾಲಂಕೃತವಾದ ರಥಗಳಲ್ಲಿ ಕುಳಿತುಕೊಂಡು ಯುಧಿಷ್ಠಿರನನ್ನು ಹಿಂಬಾಲಿಸಿದರು. ಅವರೊಂದಿಗೆ ವೇದವ್ಯಾಸರು, ಧೌಮ್ಯರೆ ಮುಂತಾದ ಮಹರ್ಷಿಗಳೂ ಬ್ರಾಹ್ಮಣರೂ ಹೋದರು.॥2॥
(ಶ್ಲೋಕ - 3)
ಮೂಲಮ್
ಭಗವಾನಪಿ ವಿಪ್ರರ್ಷೇ ರಥೇನ ಸಧನಂಜಯಃ ।
ಸ ತೈರ್ವ್ಯರೋಚತ ನೃಪಃ ಕುಬೇರ ಇವ ಗುಹ್ಯಕೈಃ ॥
ಅನುವಾದ
ಶೌನಕರೇ! ಅರ್ಜುನನೊಡನೆ ಭಗವಾನ್ ಶ್ರೀಕೃಷ್ಣನೂ ರಥವನ್ನೇರಿ ಹೊರಟನು. ಅವರೆಲ್ಲರಿಂದೊಡಗೂಡಿದ ಮಹಾರಾಜ ಯುಧಿಷ್ಠಿರನು ಯಕ್ಷಮಂಡಲಿಯಿಂದ ಸುತ್ತುವರಿದು ಕುಬೇರನಂತೆ ಕಂಗೊಳಿಸುತ್ತಿದ್ದನು.॥3॥
(ಶ್ಲೋಕ - 4)
ಮೂಲಮ್
ದೃಷ್ಟ್ವಾ ನಿಪತಿತಂ ಭೂವೌ ದಿವಶ್ಚ್ಯುತಮಿವಾಮರಮ್ ।
ಪ್ರಣೇಮುಃ ಪಾಂಡವಾ ಭೀಷ್ಮಂ ಸಾನುಗಾಃ ಸಹ ಚಕ್ರಿಣಾ ॥
ಅನುವಾದ
ಸ್ವರ್ಗದಿಂದ ಜಾರಿಬಿದ್ದ ದೇವತೆಯಂತೆ ಭೂಮಿಯಲ್ಲಿ ಪವಡಿಸಿದ್ದ ದೇವವ್ರತರಾದ ಭೀಷ್ಮರನ್ನು ಕಂಡು ಪರಿವಾರ ಸಹಿತ ಪಾಂಡವರು, ಶ್ರೀಕೃಷ್ಣ ಪರಮಾತ್ಮನಿಂದೊಡಗೂಡಿ ಅವರಿಗೆ ನಮಸ್ಕಾರ ಮಾಡಿದರು.॥4॥
(ಶ್ಲೋಕ - 5)
ಮೂಲಮ್
ತತ್ರ ಬ್ರಹ್ಮರ್ಷಯಃ ಸರ್ವೇ ದೇವರ್ಷಯಶ್ಚ ಸತ್ತಮ ।
ರಾಜರ್ಷಯಶ್ಚ ತತ್ರಾಸನ್ದ್ರಷ್ಟುಂ ಭರತಪುಂಗವಮ್ ॥
ಅನುವಾದ
ಶೌನಕಾದಿಗಳೇ! ಆಗಲೇ ಭರತಕುಲತಿಲಕರಾದ ಭೀಷ್ಮ ಪಿತಾಮಹರನ್ನು ಸಂದರ್ಶಿಸಲು ಎಲ್ಲ ಬ್ರಹ್ಮರ್ಷಿಗಳೂ, ದೇವರ್ಷಿಗಳೂ, ರಾಜರ್ಷಿಗಳೂ ಅಲ್ಲಿಗೆ ಆಗಮಿಸಿದರು.॥5॥
(ಶ್ಲೋಕ - 6)
ಮೂಲಮ್
ಪರ್ವತೋ ನಾರದೋ ಧೌಮ್ಯೋ ಭಗವಾನ್ಬಾದರಾಯಣಃ ।
ಬೃಹದಶ್ವೋ ಭರದ್ವಾಜಃ ಸಶಿಷ್ಯೋ ರೇಣುಕಾಸುತಃ ॥
(ಶ್ಲೋಕ - 7)
ಮೂಲಮ್
ವಸಿಷ್ಠ ಇಂದ್ರಪ್ರಮದಸಿತೋ ಗೃತ್ಸಮದೋಸಿತಃ ।
ಕಕ್ಷೀವಾನ್ಗೌತಮೋತ್ರಿಶ್ಚ ಕೌಶಿಕೋಥ ಸುದರ್ಶನಃ ॥
(ಶ್ಲೋಕ - 8)
ಮೂಲಮ್
ಅನ್ಯೇ ಚ ಮುನಯೋ ಬ್ರಹ್ಮನ್ಬ್ರಹ್ಮರಾತಾದಯೋಮಲಾಃ ।
ಶಿಷ್ಯೈರುಪೇತಾ ಆಜಗ್ಮುಃ ಕಶ್ಯಪಾಂಗಿರಸಾದಯಃ ॥
ಅನುವಾದ
ಪರ್ವತರೂ, ನಾರದರೂ, ಧೌಮ್ಯರೂ, ಭಗವಾನ್ ವೇದವ್ಯಾಸರೂ, ಬೃಹದಶ್ವರೂ, ಭರದ್ವಾಜರೂ, ಶಿಷ್ಯರಿಂದೊಡಗೂಡಿ ಪರಶುರಾಮರೂ, ವಸಿಷ್ಠರೂ, ಇಂದ್ರಪ್ರಮದರೂ, ತ್ರಿತರೂ, ಗೃತ್ಸಮದರೂ, ಅಸಿತರೂ, ಕಕ್ಷೀವಂತರೂ, ಗೌತಮರೂ, ಅತ್ರಿಗಳೂ, ವಿಶ್ವಾಮಿತ್ರರೂ, ಸುದರ್ಶನರೂ, ಬ್ರಹ್ಮರತರಾದ ಶುಕ ಮಹಾಮುನಿಗಳೂ, ಕಶ್ಯಪರೂ, ಅಂಗೀರಸರೂ ಮೊದಲಾದ ಶುದ್ಧಾತ್ಮರಾದ ಮಹರ್ಷಿಗಳು ಶಿಷ್ಯರಸಮೇತರಾಗಿ ಅಲ್ಲಿಗೆ ಆಗಮಿಸಿದರು.॥6-8॥
(ಶ್ಲೋಕ - 9)
ಮೂಲಮ್
ತಾನ್ಸಮೇತಾನ್ ಮಹಾಭಾಗಾನುಪಲಭ್ಯ ವಸೂತ್ತಮಃ ।
ಪೂಜಯಾಮಾಸ ಧರ್ಮಜ್ಞೋ ದೇಶಕಾಲವಿಭಾಗವಿತ್ ॥
ಅನುವಾದ
ದೇಶ-ಕಾಲದ ವಿಭಾಗವನ್ನು ತಿಳಿದವರಾದ, ಧರ್ಮಜ್ಞರಾದ, ವಸುದೇವತೆಯ ಅವತಾರವಾಗಿದ್ದ ಭೀಷ್ಮ ಪಿತಾಮಹರು ಅಲ್ಲಿ ನೆರೆದಿದ್ದ ಮಹಾಭಾಗ್ಯ ಶಾಲಿಗಳಾದ ಮುನಿಶ್ರೇಷ್ಠರೆಲ್ಲರನ್ನೂ ಸ್ವಾಗತಿಸಿ ಮನಸ್ಸಿನಿಂದ ಪೂಜಿಸಿದರು.॥9॥
(ಶ್ಲೋಕ - 10)
ಮೂಲಮ್
ಕೃಷ್ಣಂ ಚ ತತ್ಪ್ರಭಾವಜ್ಞ ಆಸೀನಂ ಜಗದೀಶ್ವರಮ್ ।
ಹೃದಿಸ್ಥಂ ಪೂಜಯಾಮಾಸ ಮಾಯಯೋಪಾತ್ತವಿಗ್ರಹಮ್ ॥
ಅನುವಾದ
ಹಾಗೆಯೇ ಶ್ರೀಕೃಷ್ಣನ ಪ್ರಭಾವವನ್ನು ಅರಿತಿದ್ದ ಆ ಮಹಾತ್ಮರು ಅಲ್ಲಿಯೇ ಕುಳಿತ್ತಿದ್ದ ಮಾಯಾಮಾನುಷರೂಪಧಾರಿಯಾಗಿದ್ದ, ಹೃದಯಾಂತರ್ಯಾಮಿಯಾದ, ಜಗದೀಶ್ವರನಾದ ಭಗವಾನ್ ಶ್ರೀಕೃಷ್ಣನನ್ನು ಒಳಗೂ-ಹೊರಗೂ ಪೂಜಿಸಿದರು.॥10॥
(ಶ್ಲೋಕ - 11)
ಮೂಲಮ್
ಪಾಂಡುಪುತ್ರಾನುಪಾಸೀನಾನ್ಪ್ರಶ್ರಯಪ್ರೇಮಸಂಗತಾನ್ ।
ಅಭ್ಯಾಚಷ್ಟಾನುರಾಗಾಸ್ರೈರೀಂಭೂತೇನ ಚಕ್ಷುಷಾ ॥
ಅನುವಾದ
ಪಾಂಡವರು ತುಂಬಾ ವಿನಯ, ಪ್ರೇಮದೊಂದಿಗೆ ಭೀಷ್ಮ ಪಿತಾಮಹರ ಬಳಿಯಲ್ಲಿ ಕುಳಿತರು. ಅವರನ್ನು ನೋಡಿ ಭೀಷ್ಮರ ಕಣ್ಣುಗಳು ಪ್ರೇಮಗಂಬನಿಗಳಿಂದ ತುಂಬಿ ಬಂದವು. ಪಾಂಡವರನ್ನು ನೋಡುತ್ತಾ ಹೀಗೆಂದರು.॥11॥
(ಶ್ಲೋಕ - 12)
ಮೂಲಮ್
ಅಹೋ ಕಷ್ಟಮಹೋನ್ಯಾಯ್ಯಂ ಯದ್ಯೂಯಂ ಧರ್ಮನಂದನಾಃ ।
ಜೀವಿತುಂ ನಾರ್ಹಥ ಕ್ಲಿಷ್ಟಂ ವಿಪ್ರಧರ್ಮಾಚ್ಯುತಾಶ್ರಯಾಃ ॥
ಅನುವಾದ
ಧರ್ಮಪುತ್ರರೇ! ನೀವುಗಳು ಬ್ರಾಹ್ಮಣರನ್ನೂ, ಧರ್ಮವನ್ನೂ, ಮತ್ತು ಭಗವಂತನನ್ನು ಆಶ್ರಯಿಸಿದ್ದರೂ ಇಷ್ಟು ಕಷ್ಟದಿಂದ ಬದುಕ ಬೇಕಾಯಿತಲ್ಲ! ಅಯ್ಯೋ! ಎಂತಹ ಕಷ್ಟ, ಅನ್ಯಾಯ ನಿಮಗೆ ಒದಗಿತಲ್ಲ! ಇಂತಹ ಕಷ್ಟ-ಕಾರ್ಪಣ್ಯಗಳ ಬದುಕಿಗೆ ನೀವು ತಕ್ಕವರಲ್ಲ.॥12॥
(ಶ್ಲೋಕ - 13)
ಮೂಲಮ್
ಸಂಸ್ಥಿತೇತಿರಥೇ ಪಾಂಡೌ ಪೃಥಾ ಬಾಲಪ್ರಜಾವಧೂಃ ।
ಯುಷ್ಮತ್ಕೃತೇ ಬಹೂನ್ ಕ್ಲೇಶಾನ್ ಪ್ರಾಪ್ತಾ ತೋಕವತೀ ಮುಹುಃ ॥
ಅನುವಾದ
ಅತಿರಥನಾದ ಪಾಂಡುವು ಅಕಾಲದಲ್ಲಿ ಸ್ವರ್ಗಸ್ಥನಾದಾಗ ನಿಮಗಿನ್ನು ಎಳೆಯ ವಯಸ್ಸು. ಆಗ ಕುಂತಿಯು ನಿಮಗಾಗಿ ಎಷ್ಟು ಕಷ್ಟಪಡ ಬೇಕಾಯಿತು! ನೀವೂ ಕೂಡ ಎಷ್ಟೊಂದು ಕಷ್ಟವನ್ನು ಅನುಭವಿಸಿದಿರಿ.॥13॥
(ಶ್ಲೋಕ - 14)
ಮೂಲಮ್
ಸರ್ವಂ ಕಾಲಕೃತಂ ಮನ್ಯೇ ಭವತಾಂ ಚ ಯದಪ್ರಿಯಮ್ ।
ಸಪಾಲೋ ಯದ್ವಶೇ ಲೋಕೋ ವಾಯೋರಿವ ಘನಾವಲಿಃ ॥
ಅನುವಾದ
ಮೋಡಗಳು ವಾಯುವಿನ ವಶವಿರುವಂತೆ, ಲೋಕಪಾಲರಿಂದ ಕೂಡಿದ ಇಡೀ ಜಗತ್ತೇ ಕಾಲಕ್ಕೆ ಅಧೀನವಾಗಿದೆ. ಆದ್ದರಿಂದ ನಿಮಗೆ ಜೀವನದಲ್ಲೊದಗಿದ ಆ ಅಪ್ರಿಯಘಟನೆಗಳೆಲ್ಲವೂ ಆ ಕಾಲನ ಲೀಲೆಯೇ ಆಗಿವೆ ಎಂದು ನಾನು ತಿಳಿಯುತ್ತೇನೆ.॥14॥
(ಶ್ಲೋಕ - 15)
ಮೂಲಮ್
ಯತ್ರ ಧರ್ಮಸುತೋ ರಾಜಾ ಗದಾಪಾಣಿರ್ವೃಕೋದರಃ ।
ಕೃಷ್ಣೋಸೀ ಗಾಂಡಿವಂ ಚಾಪಂ ಸುಹೃತ್ಕೃಷ್ಣಸ್ತತೋ ವಿಪತ್ ॥
ಅನುವಾದ
ಹಾಗಿಲ್ಲದಿದ್ದರೆ, ಸಾಕ್ಷಾತ್ ಧರ್ಮಪುತ್ರ ಯುಧಿಷ್ಠಿರನೇ ರಾಜನಾಗಿದ್ದಾಗ, ಗದಾಪಾಣಿಯಾದ ಭೀಮಸೇನನೂ ಮತ್ತು ಧನುರ್ಧಾರಿಯಾದ ಅರ್ಜುನನು ರಕ್ಷಕರಾಗಿರುವಾಗ, ಸಾಕ್ಷಾತ್ ಶ್ರೀಕೃಷ್ಣಪರಮಾತ್ಮನೇ ಗೆಳೆಯನಾಗಿರುವಾಗಲೂ ವಿಪತ್ತುಗಳು ಒದಗುವುದುಂಟೇ? ॥15॥
(ಶ್ಲೋಕ - 16)
ಮೂಲಮ್
ನ ಹ್ಯಸ್ಯ ಕರ್ಹಿಚಿದ್ರಾಜನ್ಪುಮಾನ್ವೇದವಿತ್ಸಿತಮ್ ।
ಯದ್ವಿಜಿಜ್ಞಾಸಯಾ ಯುಕ್ತಾ ಮುಹ್ಯಂತಿ ಕವಯೋಪಿ ಹಿ ॥
ಅನುವಾದ
ಧರ್ಮನಂದನನೇ! ಕಾಲರೂಪಿಯಾದ ಈ ಶ್ರೀಕೃಷ್ಣನು ಯಾವಾಗ ಏನನ್ನು ಮಾಡಬಯಸುತ್ತಾನೆ ಎಂಬುದನ್ನು ಯಾರೂ ಅರಿಯರು. ಅದನ್ನರಿಯಲು ಬಯಸಿ ದೊಡ್ಡ ದೊಡ್ಡ ಜ್ಞಾನಿಗಳೂ ಕೂಡ ಆ ವಿಷಯದಲ್ಲಿ ಮೋಹಿತರಾಗುವರು.॥16॥
(ಶ್ಲೋಕ - 17)
ಮೂಲಮ್
ತಸ್ಮಾದಿದಂ ದೈವತಂತ್ರಂ ವ್ಯವಸ್ಯ ಭರತರ್ಷಭ ।
ತಸ್ಯಾನುವಿಹಿತೋನಾಥಾ ನಾಥ ಪಾಹಿ ಪ್ರಜಾಃ ಪ್ರಭೋ ॥
ಅನುವಾದ
ಭರತಶ್ರೇಷ್ಠನೇ! ಪ್ರಪಂಚದ ಎಲ್ಲ ಘಟನೆಗಳು ಭಗವಂತನ ಇಚ್ಛೆಗೆ ಅಧೀನವಾಗಿವೆ. ಇದನ್ನರಿತು ಅದಕ್ಕನುಗುಣವಾಗಿ ನಡೆಯುತ್ತಾ ಅನಾಥರಾಗಿರುವ ಪ್ರಜೆಗಳನ್ನು ಪಾಲಿಸು. ಏಕೆಂದರೆ, ಈಗ ನೀನೇ ಇವರಿಗೆ ಒಡೆಯನಾಗಿರುವೆ, ಇದಕ್ಕೆ ಸಮರ್ಥನಾಗಿರುವೆ.॥17॥
(ಶ್ಲೋಕ - 18)
ಮೂಲಮ್
ಏಷ ವೈ ಭಗವಾನ್ಸಾಕ್ಷಾದಾದ್ಯೋ ನಾರಾಯಣಃ ಪುಮಾನ್ ।
ಮೋಹಯನ್ಮಾಯಯಾ ಲೋಕಂ ಗೂಢಶ್ಚರತಿ ವೃಷ್ಣಿಷು ॥
ಅನುವಾದ
ಈ ಶ್ರೀಕೃಷ್ಣಪರಮಾತ್ಮನಾದರೋ ಸಾಕ್ಷಾತ್ ಭಗವಂತನಾಗಿದ್ದಾನೆ. ಎಲ್ಲಕ್ಕೂ ಆದಿಕಾರಣನಾಗಿದ್ದು, ಪರಮ ಪುರುಷ ನಾರಾಯಣನಾಗಿರುವನು. ತನ್ನ ಮಾಯೆಯಿಂದ ಜನರನ್ನು ಮೋಹಗೊಳಿಸುತ್ತಾ ಯಾದವರಲ್ಲಿ ಅಡಗಿಕೊಂಡು ಮಾನವ ರೂಪದಿಂದ ಲೀಲೆಮಾಡುತ್ತಿರುವನು.॥18॥
(ಶ್ಲೋಕ - 19)
ಮೂಲಮ್
ಅಸ್ಯಾನುಭಾವಂ ಭಗವಾನ್ವೇದ ಗುಹ್ಯತಮಂ ಶಿವಃ ।
ದೇವರ್ಷಿರ್ನಾರದಃ ಸಾಕ್ಷಾದ್ಭಗವಾನ್ಕಪಿಲೋ ನೃಪ ॥
ಅನುವಾದ
ಇವನ ಪ್ರಭಾವವು ಅತ್ಯಂತ ಗಹನ ಹಾಗೂ ರಹಸ್ಯ ಪೂರ್ಣವಾಗಿದೆ. ಯುಧಿಷ್ಠಿರಾ! ಅದನ್ನು ಭಗವಾನ್ ಶಿವನು, ದೇವರ್ಷಿ ನಾರದರು ಮತ್ತು ಸಾಕ್ಷಾತ್ ಭಗವಂತನಾದ ಕಪಿಲ ಮಹರ್ಷಿ ಇವರುಗಳು ಮಾತ್ರವೇ ಬಲ್ಲರು.॥19॥
(ಶ್ಲೋಕ - 20)
ಮೂಲಮ್
ಯಂ ಮನ್ಯಸೇ ಮಾತುಲೇಯಂ ಪ್ರಿಯಂ ಮಿತ್ರಂ ಸುಹೃತ್ತಮಮ್ ।
ಅಕರೋಃ ಸಚಿವಂ ದೂತಂ ಸೌಹೃದಾದಥ ಸಾರಥಿಮ್ ॥
ಅನುವಾದ
ನೀನು ಯಾರನ್ನು ನಿನ್ನ ಸೋದರಮಾವನ ಮಗ, ಪ್ರಿಯಮಿತ್ರ, ಶ್ರೇಷ್ಠತಮ ಆಪ್ತನೆಂದೂ ತಿಳಿದುಕೊಂಡು, ಪ್ರೇಮವಶದಿಂದ ನಿನ್ನ ಮಂತ್ರಿಯನ್ನಾಗಿಯೂ, ದೂತನನ್ನಾಗಿಯೂ, ಸಾರಥಿಯನ್ನಾಗಿಯೂ ಮಾಡಿಕೊಳ್ಳುವುದರಲ್ಲಿ ಸಂಕೋಚಪಡಲಿಲ್ಲವೋ-ಅವನು ಸಾಕ್ಷಾತ್ ಪೂರ್ಣಬ್ರಹ್ಮ ಪರಮಾತ್ಮನಾಗಿದ್ದಾನೆ.॥20॥
(ಶ್ಲೋಕ - 21)
ಮೂಲಮ್
ಸರ್ವಾತ್ಮನಃ ಸಮದೃಶೋ ಹ್ಯದ್ವಯಸ್ಯಾನಹಂಕೃತೇಃ ।
ತತ್ಕೃತಂ ಮತಿವೈಷಮ್ಯಂ ನಿರವದ್ಯಸ್ಯ ನ ಕ್ವಚಿತ್ ॥
ಅನುವಾದ
ಆತನು ಸರ್ವಾತ್ಮನೂ, ಸಮದರ್ಶಿಯೂ, ಅದ್ವಿತೀಯನೂ, ಅಹಂಕಾರ ರಹಿತನೂ, ಆದ ನಿಷ್ಪಾಪ ಪರಮಾತ್ಮನು. ಉಚ್ಚ ನೀಚ-ಕಾರ್ಯಗಳ ಕುರಿತು ಎಂದೂ ಯಾವುದೇ ವಿಷಮತೆ ತೋರದೆ ಅವನು ಸರ್ವಾತ್ಮನಾಗಿ ಸಮದರ್ಶಿಯಾಗಿದ್ದಾನೆ.॥21॥
(ಶ್ಲೋಕ - 22)
ಮೂಲಮ್
ತಥಾಪ್ಯೇಕಾಂತಭಕ್ತೇಷು ಪಶ್ಯ ಭೂಪಾನುಕಂಪಿತಮ್ ।
ಯನ್ಮೇಸೂಂಸ್ತ್ಯಜತಃ ಸಾಕ್ಷಾತ್ಕೃಷ್ಣೋ ದರ್ಶನಮಾಗತಃ ॥
ಅನುವಾದ
ಯುಧಿಷ್ಠಿರಾ! ಹೀಗೆ ಸರ್ವತ್ರ ಸಮದರ್ಶಿಯಾಗಿದ್ದರೂ ಅವನು ತನ್ನ ಅನನ್ಯ ಪ್ರೇಮೀ ಭಕ್ತರಮೇಲೆ ಎಷ್ಟೊಂದು ಕೃಪೆ ಮಾಡುತ್ತಿರುವನು ನೋಡಿದೆಯಲ್ಲ! ನಾನು ಪ್ರಾಣತ್ಯಾಗ ಮಾಡಲು ಹೊರಟಿರುವ ಇಂತಹ ಸಮಯದಲ್ಲಿ ಈ ಭಗವಾನ್ ಶ್ರೀಕೃಷ್ಣನು ನನಗೆ ಸಾಕ್ಷಾತ್ ದರ್ಶನ ಕೊಡಲು ಬಂದಿರುವನಲ್ಲ! ॥22॥
(ಶ್ಲೋಕ - 23)
ಮೂಲಮ್
ಭಕ್ತ್ಯಾವೇಶ್ಯ ಮನೋ ಯಸ್ಮಿನ್ವಾಚಾ ಯನ್ನಾಮ ಕೀರ್ತಯನ್ ।
ತ್ಯಜನ್ಕಲೇವರಂ ಯೋಗೀ ಮುಚ್ಯತೇ ಕಾಮಕರ್ಮಭಿಃ ॥
ಅನುವಾದ
ಭಕ್ತಿಭಾವದಿಂದ ಇವನಲ್ಲಿ ತಮ್ಮ ಮನಸ್ಸನ್ನು ತೊಡಗಿಸುತ್ತಾ, ವಾಣಿಯಿಂದ ಇವನ ನಾಮ ಸಂಕೀರ್ತನೆ ಮಾಡುತ್ತಾ, ದೇಹತ್ಯಾಗ ಮಾಡುವ ಭಗವತ್ ಪರಾಯಣ ಯೋಗೀಪುರುಷರು ಕಾಮನೆಗಳಿಂದ ಮತ್ತು ಕರ್ಮ ಬಂಧನದಿಂದ ಬಿಡುಗಡೆ ಹೊಂದುವರು.॥23॥
(ಶ್ಲೋಕ - 24)
ಮೂಲಮ್
ಸ ದೇವದೇವೋ ಭಗವಾನ್ಪ್ರತೀಕ್ಷತಾಂ
ಕಲೇವರಂ ಯಾವದಿದಂ ಹಿನೋಮ್ಯಹಮ್ ।
ಪ್ರಸನ್ನಹಾಸಾರುಣಲೋಚನೋಲ್ಲಸ-
ನ್ಮುಖಾಂಬುಜೋ ಧ್ಯಾನಪಥಶ್ಚತುರ್ಭುಜಃ ॥
ಅನುವಾದ
ಅಂತಹ ದೇವಾಧಿದೇವನಾದ ಭಗವಂತನು ತನ್ನ ಪ್ರಸನ್ನವಾದ ಮಂದಹಾಸದಿಂದಲೂ ನಸುಗೆಂಪಾದ ಕಣ್ಣುಗಳಿಂದಲೂ, ಉಲ್ಲಸಿತ ಮುಖ ಕಮಲದಿಂದಲೂ, ಚತುರ್ಭಜಗಳಿಂದಲೂ ಕೂಡಿದ ಕೇವಲ ಯೋಗಿಗಳ ಧ್ಯಾನಕ್ಕೆ ಗೋಚರನಾಗುವ ಈ ಶ್ರೀಕೃಷ್ಣ ಪರಮಾತ್ಮನು ನಾನು ಶರೀರವನ್ನು ತ್ಯಜಿಸುವ ತನಕ ನನ್ನ ಕಡೆಗೆ ದೃಷ್ಟಿಯನ್ನು ಬೀರಲಿ.॥24॥
(ಶ್ಲೋಕ - 25)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಯುಷ್ಠಿರಸ್ತದಾಕರ್ಣ್ಯ ಶಯಾನಂ ಶರಪಂಜರೇ ।
ಅಪೃಚ್ಛದ್ವಿವಿಧಾನ್ ಧರ್ಮಾನೃಷೀಣಾಂ ಚಾನುಶೃಣ್ವತಾಮ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶರಶಯ್ಯೆಯಲ್ಲಿ ಪವಡಿಸಿದ್ದ ಭೀಷ್ಮಪಿತಾಮಹರ ಮಾತನ್ನು ಕೇಳಿದ ಬಳಿಕ ಯುಧಿಷ್ಠಿರನು ನಾನಾಬಗೆಯಾದ ಧರ್ಮಗಳ ರಹಸ್ಯವನ್ನು ಅಲ್ಲಿ ನೆರೆದಿದ್ದ ಋಷಿಗಳ ಸಮ್ಮುಖದಲ್ಲಿ ಆ ಮಹಾತ್ಮರಿಂದ ಕೇಳಿಕೊಂಡನು. ॥25॥
(ಶ್ಲೋಕ - 26)
ಮೂಲಮ್
ಪುರುಷಸ್ವಭಾವವಿಹಿತಾನ್ಯಥಾವರ್ಣಂ ಯಥಾಶ್ರಮಮ್ ।
ವೈರಾಗ್ಯರಾಗೋಪಾಭ್ಯಾಮಾಮ್ನಾತೋಭಯಲಕ್ಷಣಾನ್ ॥
(ಶ್ಲೋಕ - 27)
ಮೂಲಮ್
ದಾನಧರ್ಮಾನ್ರಾಜಧರ್ಮಾನ್ಮೋಕ್ಷಧರ್ಮಾನ್ವಿಭಾಗಶಃ ।
ಸೀಧರ್ಮಾನ್ ಭಗವದ್ಧರ್ಮಾನ್ಸಮಾಸವ್ಯಾಸಯೋಗತಃ ॥
(ಶ್ಲೋಕ - 28)
ಮೂಲಮ್
ಧರ್ಮಾರ್ಥಕಾಮಮೋಕ್ಷಾಂಶ್ಚ ಸಹೋಪಾಯಾನ್ಯಥಾ ಮುನೇ ।
ನಾನಾಖ್ಯಾನೇತಿಹಾಸೇಷು ವರ್ಣಯಾಮಾಸ ತತ್ತ್ವವಿತ್ ॥
ಅನುವಾದ
ಆಗ ತತ್ತ್ವಜ್ಞರಾದ ಭೀಷ್ಮ ಪಿತಾಮಹರು ವರ್ಣ ಮತ್ತು ಆಶ್ರಮಗಳಿಗೆ ಅನುಗುಣವಾಗಿ ಪುರುಷರ ಸ್ವಾಭಾವಿಕ ಧರ್ಮಗಳನ್ನೂ, ವೈರಾಗ್ಯವನ್ನು ಮತ್ತು ರಾಗದ ಕಾರಣದಿಂದ ವಿಭಿನ್ನ ರೂಪದಿಂದ ಹೇಳಿರುವ ನಿವೃತ್ತಿ ಹಾಗೂ ಪ್ರವೃತ್ತಿರೂಪೀ ದ್ವಿವಿಧ ಧರ್ಮಗಳನ್ನೂ, ದಾನಧರ್ಮಗಳನ್ನೂ, ರಾಜಧರ್ಮ, ಮೋಕ್ಷ ಧರ್ಮ, ಸ್ತ್ರೀಧರ್ಮ, ಭಗವದ್ಧರ್ಮ ಇವೆಲ್ಲವುಗಳನ್ನು ಬೇರೆ-ಬೇರೆಯಾಗಿ ಸಂಕ್ಷೇಪವಾಗಿಯೂ, ವಿಸ್ತಾರವಾಗಿಯೂ ವರ್ಣಿಸಿದರು. ಶೌನಕರೇ! ಇದರೊಂದಿಗೆ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಈ ಪುರುಷಾರ್ಥಗಳನ್ನು ಪಡೆಯುವ ಸಾಧನೆಗಳನ್ನೂ, ಅನೇಕ ಉಪಾಖ್ಯಾನಗಳನ್ನೂ ಮತ್ತು ಇತಿಹಾಸವನ್ನೂ ತಿಳಿಸುತ್ತಾ ವಿಭಾಗಶಃ ವರ್ಣಿಸಿದರು.॥26-28॥
(ಶ್ಲೋಕ - 29)
ಮೂಲಮ್
ಧರ್ಮಂ ಪ್ರವದತಸ್ತಸ್ಯ ಸ ಕಾಲಃ ಪ್ರತ್ಯುಪಸ್ಥಿತಃ ।
ಯೋ ಯೋಗಿನಶ್ಛಂದ ಮೃತ್ಯೋರ್ವಾಂಛಿತಸ್ತೂತ್ತರಾಯಣಃ ॥
ಅನುವಾದ
ಇಚ್ಛಾಮರಣಿಗಳಾದ ಆ ಭೀಷ್ಮ ಪಿತಾಮಹರು ಹೀಗೆ ಧರ್ಮವನ್ನು ಕುರಿತು ಪ್ರವಚನ ಮಾಡುತ್ತಿರುವಂತೆಯೇ ಅವರು ಭಗವತ್ಪರಾಯಣರಾದ ಯೋಗಿಗಳು ದೇಹತ್ಯಾಗಕ್ಕಾಗಿ ಕಾಯುವ ಪವಿತ್ರವಾದ ಉತ್ತರಾಯಣ ಕಾಲವು ಬಂದು ಬಿಟ್ಟಿತು.॥29॥
(ಶ್ಲೋಕ - 30)
ಮೂಲಮ್
ತದೋಪಸಂಹೃತ್ಯ ಗಿರಃ ಸಹಸ್ರಣೀ-
ರ್ವಿಮುಕ್ತಸಂಗಂ ಮನ ಆದಿಪೂರುಷೇ ।
ಕೃಷ್ಣೇ ಲಸತ್ಪೀತಪಟೇ ಚತುರ್ಭುಜೇ
ಪುರಃಸ್ಥಿತೇಮೀಲಿತದೃಗ್ವ್ಯಧಾರಯತ್ ॥
ಅನುವಾದ
ಆಗ ಸಾವಿರಾರು ರಥಿಕರ ಮುಂದಾಳಾಗಿದ್ದ ಭೀಷ್ಮಪಿತಾಮಹರು ವಾಣಿಯನ್ನು ಸಂಯಮಗೈದು (ಮೌನವಹಿಸಿ) ಮುಂದುಗಡೆ ಕಂಗೊಳಿಸುತ್ತಿದ್ದ ಚತುರ್ಭುಜನೂ, ಪೀತಾಂಬರ ವಿರಾಜಿತನೂ ಆದ ಆದಿಪುರುಷನಾದ ಭಗವಾನ್ ಶ್ರೀಕೃಷ್ಣನನ್ನು ಎವೆಯಿಕ್ಕದ ಕಣ್ಣುಗಳಿಂದ ದೃಷ್ಟಿಸುತ್ತಾ, ತಮ್ಮ ಸಂಗರಹಿತವಾದ ಮನಸ್ಸನ್ನು ಅವನಲ್ಲಿ ನೆಲೆಗೊಳಿಸಿದರು. ॥30॥
(ಶ್ಲೋಕ - 31)
ಮೂಲಮ್
ವಿಶುದ್ಧಯಾ ಧಾರಣಯಾ ಹತಾಶುಭ-
ಸ್ತದೀಕ್ಷಯೈವಾಶುಗತಾಯುಧವ್ಯಥಃ ।
ನಿವೃತ್ತಸರ್ವೇಂದ್ರಿಯವೃತ್ತಿವಿಭ್ರಮ-
ಸ್ತುಷ್ಟಾವ ಜನ್ಯಂ ವಿಸೃಜಂಜನಾರ್ದನಮ್ ॥
ಅನುವಾದ
ಹೀಗೆ ಶ್ರೀಭಗವಂತನನ್ನು ದೃಢವಾಗಿ ಧರಿಸಿದ ಧಾರಣಾಯೋಗದಿಂದ ಅವರ ಎಲ್ಲ ಅಶುಭಗಳು ತೊಲಗಿ ಹೋಗಿ, ಅವರಿಗೆ ಶಸ್ತ್ರಾಸ್ತ್ರಗಳಿಂದ ಉಂಟಾಗಿದ್ದ ಎಲ್ಲ ನೋವುಗಳು ಅವನ ಕೃಪಾಕಟಾಕ್ಷ ಮಾತ್ರದಿಂದ ಒಡನೆಯೇ ಕಳೆದು ಹೋದುವು. ಈಗ ಶರೀರವನ್ನು ತ್ಯಜಿಸುವ ಸಮಯ, ಅವರು ಇಂದ್ರಿಯ ವ್ಯಾಪಾರಗಳ ಅಲೆದಾಟವನ್ನು ನಿಲ್ಲಿಸಿ ಪ್ರೇಮದಿಂದ ಭಗವಂತನನ್ನು ಇಂತು ಸ್ತುತಿಸಿದರು.॥31॥
(ಶ್ಲೋಕ - 32)
ಮೂಲಮ್ (ವಾಚನಮ್)
ಶ್ರೀಭೀಷ್ಮ ಉವಾಚ
ಮೂಲಮ್
ಇತಿ ಮತಿರುಪಕಲ್ಪಿತಾ ವಿತೃಷ್ಣಾ
ಭಗವತಿ ಸಾತ್ವತಪುಂಗವೇ ವಿಭೂಮ್ನಿ ।
ಸ್ವಸುಖಮುಪಗತೇ ಕ್ವಚಿದ್ವಿಹರ್ತುಂ
ಪ್ರಕೃತಿಮುಪೇಯುಷಿ ಯದ್ಭವಪ್ರವಾಹಃ ॥
ಅನುವಾದ
ಶ್ರೀಭೀಷ್ಮಪಿತಾಮಹರು ಹೇಳುತ್ತಾರೆ — ಅನೇಕ ಸಾಧನೆಗಳ ಅನುಷ್ಠಾನಗಳಿಂದ ಅತ್ಯಂತ ಶುದ್ಧವಾದ ಹಾಗೂ ಕಾಮನಾರಹಿತವಾದ ಬುದ್ಧಿಯನ್ನು ಈಗ ಮೃತ್ಯುವಿನ ಸಮಯದಲ್ಲಿ ನಾನು - ಯದುಕುಲಶಿರೋಮಣಿಯೂ, ಮಹಾಮಹಿಮನೂ, ಅನಂತನೂ ಆದ ಭಗವಾನ್ ಶ್ರೀಕೃಷ್ಣನ ಚರಣಾರವಿಂದಗಳಲ್ಲಿ ಸಮರ್ಪಿಸುತ್ತಿದ್ದೇನೆ. ಈತನು ಸದಾ ತನ್ನ ಸಹಜಾನಂದ ಸ್ವರೂಪದಲ್ಲಿ ನೆಲೆ ಗೊಂಡಿದ್ದುಕೊಂಡೇ, ತನ್ನ ಸಂಕಲ್ಪದಂತೆ ಲೀಲಾವಿಹಾರಕ್ಕಾಗಿ ಪ್ರಕೃತಿಯೊಡನೆ ಕೂಡಿದಾಗ ಈ ಸೃಷ್ಟಿ ಪರಂಪರೆಯು ನಡೆಯುತ್ತದೆ.॥32॥
(ಶ್ಲೋಕ - 33)
ಮೂಲಮ್
ತ್ರಿಭುವನಕಮನಂ ತಮಾಲವರ್ಣಂ
ರವಿಕರಗೌರವರಾಂಬರಂ ದಧಾನೇ ।
ವಪುರಲಕಕುಲಾವೃತಾನನಾಬ್ಜಂ
ವಿಜಯಸಖೇ ರತಿರಸ್ತು ಮೇನವದ್ಯಾ ॥
ಅನುವಾದ
ಹೊಂಗೆಯ ಎಲೆಗಳಂತೆ ಶ್ಯಾಮಲ ವರ್ಣದ ಅಂಗಕಾಂತಿಯಿಂದ ಕಂಗೊಳಿಸುವ, ಸೂರ್ಯನ ಹೊಂಗಿರಣಗಳಂತೆ ಹೊಳೆಯುವ ಪೀತಾಂಬರವನ್ನು ಧರಿಸಿರುವ, ಮುಖ ಕಮಲದ ಮೇಲೆ ಗುಂಗುರು-ಗುಂಗುರಾದ ಮುಂಗುರುಳುಗಳು ಜೋಲಾಡುತ್ತಿರುವ ದಿವ್ಯಮಂಗಳ ವಿಗ್ರಹವುಳ್ಳ, ತ್ರಿಭುವನೈಕ ಸುಂದರನಾದ, ಅರ್ಜುನಮಿತ್ರನಾದ ಶ್ರೀಕೃಷ್ಣನಲ್ಲಿ ನನ್ನ ನಿರುಪಾಧಿಕವಾದ ಪ್ರೇಮವು ನೆಲೆಗೊಳ್ಳಲಿ. ॥33॥
(ಶ್ಲೋಕ - 34)
ಮೂಲಮ್
ಯು ತುರಗರಜೋವಿಧೂಮ್ರವಿಷ್ವಕ್
ಕಚಲುಲಿತಶ್ರಮವಾರ್ಯಲಂಕೃತಾಸ್ಯೇ ।
ಮಮ ನಿಶಿತಶರೈರ್ವಿಭಿದ್ಯಮಾನ-
ತ್ವಚಿ ವಿಲಸತ್ಕವಚೇಸ್ತು ಕೃಷ್ಣ ಆತ್ಮಾ ॥
ಅನುವಾದ
ರಣರಂಗದಲ್ಲಿ ರಾರಾಜಿಸುತ್ತಿದ್ದ ಆತನ ಮೋಹನ ಮೂರ್ತಿಯು ನನಗೆ ನೆನಪಾಗುತ್ತದೆ. ಅವನ ಮುಖದ ಮೇಲೆ ಕೆದರಿ ಹೋಗಿದ್ದ ಮುಂಗುರುಳುಗಳು ಕುದುರೆಗಳ ಕಾಲಿನಿಂದೆದ್ದ ಧೂಳಿಯಿಂದ ಧೂಸರ ವರ್ಣವಾಗಿ ಬಿಟ್ಟಿತ್ತು. ಆಯಾಸದ ಬೆವರಿನ ಹನಿಗಳು ಅಲ್ಲಲ್ಲಿ ಅಂಟಿಕೊಂಡು ಶೋಭಿಸುತ್ತಿದ್ದವು. ನನ್ನ ತೀಕ್ಷ್ಣವಾದ ಬಾಣಗಳು ಚರ್ಮದ ಮೇಲೆ ನಾಟಿ ಗಾಯಗಳನ್ನುಂಟುಮಾಡಿವೆ. ಇಷ್ಟೆಲ್ಲಾ ಇದ್ದರೂ ಕುಂದದ ಸೌಂದರ್ಯದಿಂದ ರಮಣೀಯವಾಗಿ ಕಂಗೊಳಿಸುತ್ತಿರುವ ಆ ಕವಚಧಾರಿಯಾದ ಶ್ರೀಕೃಷ್ಣನಲ್ಲಿ ನನ್ನ ಆತ್ಮವು ಸಮರ್ಪಿತವಾಗಲಿ.॥34॥
(ಶ್ಲೋಕ - 35)
ಮೂಲಮ್
ಸಪದಿ ಸಖಿವಚೋ ನಿಶಮ್ಯ ಮಧ್ಯೇ
ನಿಜಪರಯೋರ್ಬಲಯೋ ರಥಂ ನಿವೇಶ್ಯ ।
ಸ್ಥಿತವತಿ ಪರಸೈನಿಕಾಯುರಕ್ಷ್ಣಾ
ಹೃತವತಿ ಪಾರ್ಥಸಖೇ ರತಿರ್ಮಮಾಸ್ತು ॥
ಅನುವಾದ
ತನ್ನ ಮಿತ್ರನಾದ ಅರ್ಜುನನ ಮಾತನ್ನು ಕೇಳಿ, ಒಡನೆಯೇ ಸ್ವಸೈನ್ಯ ಮತ್ತು ಶತ್ರುಸೈನ್ಯಗಳ ಮಧ್ಯದಲ್ಲಿ ರಥವನ್ನು ನಿಲ್ಲಿಸಿದವನಾಗಿ, ಕೇವಲ ತನ್ನ ದೃಷ್ಟಿಯಿಂದಲೇ ಶತ್ರುಸೈನಿಕರ ಆಯುಸ್ಸನ್ನು ಕಸಿದು ಬಿಟ್ಟಿರುವ ಪಾರ್ಥ ಸಖನಾದ ಭಗವಾನ್ ಶ್ರೀಕೃಷ್ಣನಲ್ಲಿ ನನಗೆ ಪರಮಪ್ರೇಮವಿರಲಿ.॥35॥
(ಶ್ಲೋಕ - 36)
ಮೂಲಮ್
ವ್ಯವಹಿತಪೃತನಾಮುಖಂ ನಿರೀಕ್ಷ್ಯ
ಸ್ವಜನವಧಾದ್ವಿಮುಖಸ್ಯ ದೋಷಬುದ್ಧ್ಯಾ ।
ಕುಮತಿಮಹರದಾತ್ಮವಿದ್ಯಯಾ ಯ-
ಶ್ಚರಣರತಿಃ ಪರಮಸ್ಯ ತಸ್ಯ ಮೇಸ್ತು ॥
ಅನುವಾದ
ಅರ್ಜುನನು ದೂರದಿಂದ ಕೌರವ ಸೇನೆಯ ಮುಖ್ಯಸ್ಥರಾದ ನಮ್ಮನ್ನು ನೋಡಿದಾಗ ಯುದ್ಧಮಾಡುವುದು ಪಾಪವೆಂದು ತಿಳಿದು, ಅವನು ಸ್ವಜನ ವಧೆಯಿಂದ ವಿಮುಖನಾದನು. ಆಗ ಯಾವ ಜ್ಞಾನಮೂರ್ತಿಯು ಶ್ರೀಗೀತೆಯೆಂಬ ಆತ್ಮವಿದ್ಯೆಯನ್ನು ಉಪದೇಶಿಸಿ, ಅವನ ಮೋಹವನ್ನು ಹೋಗಲಾಡಿಸಿದನೋ ಅಂತಹ ಪರಮ ಪುರುಷ ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ನನ್ನ ಪ್ರೀತಿಯು ಸ್ಥಿರವಾಗಿರಲಿ.॥36॥
(ಶ್ಲೋಕ - 37)
ಮೂಲಮ್
ಸ್ವನಿಗಮಮಪಹಾಯ ಮತ್ಪ್ರತಿಜ್ಞಾಮ್
ಋತಮಕರ್ತುಮವಪ್ಲುತೋ ರಥಸ್ಥಃ ।
ಧೃತರಥಚರಣೋಭ್ಯಯಾಚ್ಚಲದ್ಗು-
ರ್ಹರಿರಿವ ಹಂತುಮಿಭಂ ಗತೋತ್ತರೀಯಃ ॥
ಅನುವಾದ
‘ಶ್ರೀಕೃಷ್ಣನು ಯುದ್ಧದಲ್ಲಿ ಶಸ್ತ್ರವನ್ನು ಧರಿಸುವಂತೆ ಮಾಡಿಬಿಡುತ್ತೇನೆ’ ಎಂದು ನಾನು ಪ್ರತಿಜ್ಞೆ ಮಾಡಿದ್ದೆ. ‘ನಾನು ಯುದ್ಧದಲ್ಲಿ ಶಸ್ತ್ರವನ್ನು ಹಿಡಿಯುವುದಿಲ್ಲ’ ಎಂದು ಶ್ರೀ ಕೃಷ್ಣನು ಪ್ರತಿಜ್ಞೆ ಮಾಡಿದ್ದನು ಆದರೆ ಭಕ್ತನಾದ ನನ್ನ ಪ್ರತಿಜ್ಞೆಯನ್ನು ನಿಜವಾಗಿಸುವುದಕ್ಕಾಗಿ ತನ್ನ ಶಪಥವನ್ನೇ ಮುರಿದು, ಸ್ವಾಮಿಯು ರಥದಿಂದ ಕೆಳಗೆ ಧುಮುಕಿ, ಸಿಂಹವು ಆನೆಯನ್ನು ಸಂಹರಿಸಲು ಅದರ ಮೇಲೆ ಎರಗುವಂತೆ, ಚಕ್ರವನ್ನೆತ್ತಿಕೊಂಡು ನನ್ನ ಮೇಲೆರಗಲು ರಭಸದಿಂದ ಧಾವಿಸಿ ಬರುತ್ತಿರುವಾಗ ಭೂಮಿಯು ನಡುಗಿತು. ಹೆಗಲಲ್ಲಿ ಹೊತ್ತ ಉತ್ತರೀಯವು ಜಾರಿಬಿತ್ತು ಇಂತಹ ಶ್ರೀಕೃಷ್ಣನಲ್ಲಿ ನನ್ನ ಪ್ರೀತಿಯು ಸ್ಥಿರವಾಗಲಿ. ॥37॥
(ಶ್ಲೋಕ - 38)
ಮೂಲಮ್
ಶಿತವಿಶಿಖಹತೋ ವಿಶೀರ್ಣದಂಶಃ
ಕ್ಷತಜಪರಿಪ್ಲುತಆತತಾಯಿನೋ ಮೇ ।
ಪ್ರಸಭಮಭಿಸಸಾರ ಮದ್ವಧಾರ್ಥಂ
ಸ ಭವತು ಮೇ ಭಗವಾನ್ಗತಿರ್ಮುಕುಂದಃ ॥
ಅನುವಾದ
ಆತ ತಾಯಿಯಾದ ನಾನು ತೀಕ್ಷ್ಣವಾದ ಬಾಣಗಳನ್ನು ಹೊಡೆದು ಅವನ ಕವಚವನ್ನು ತುಂಡರಿಸಿದ್ದೆ. ಅದರಿಂದ ಅವನ ಇಡೀ ಶರೀರವು ರಕ್ತದಿಂದ ತೊಯ್ದು ಹೋಗಿತ್ತು. ಅರ್ಜುನನು ತಡೆಯುತ್ತಿದ್ದರೂ ಕೇಳದೆ ನನ್ನನ್ನು ಕೊಂದೇ ಹಾಕುವೆನೆಂದು ಬಲವಂತವಾಗಿ ನನ್ನನ್ನು ಅನುಗ್ರಹಿಸಲು ನನ್ನ ಕಡೆಗೆ ಓಡಿ ಬಂದಂತಹ ಭಕ್ತವತ್ಸಲನಾದ ಭಗವಾನ್ ಶ್ರೀಕೃಷ್ಣನೇ ನನಗೆ ಗತಿಯಾಗಲಿ; ಆಶ್ರಯವಾಗಲಿ.॥38॥
(ಶ್ಲೋಕ - 39)
ಮೂಲಮ್
ವಿಜಯರಥಕುಟುಂಬ ಆತ್ತತೋತ್ರೇ
ಧೃತಹಯರಶ್ಮಿನಿ ತಚ್ಛ್ರಿಯೇಕ್ಷಣೀಯೇ ।
ಭಗವತಿ ರತಿರಸ್ತು ಮೇ ಮುಮೂರ್ಷೋ-
ರ್ಯಮಿಹ ನಿರೀಕ್ಷ್ಯ ಹತಾ ಗತಾಃ ಸರೂಪಮ್ ॥
ಅನುವಾದ
ಅರ್ಜುನನ ರಥದ ಸಾರಥಿಯಾಗಿ ಒಂದು ಕೈಯಲ್ಲಿ ಚಾವಟಿಗೆಯನ್ನೂ, ಮತ್ತೊಂದು ಕೈಯಲ್ಲಿ ಕುದುರೆಗಳ ವಾಘೆಗಳನ್ನು ಹಿಡಿದುಕೊಂಡು, ಆ ವೇಷದಲ್ಲಿಯೂ ಅತ್ಯಂತ ರಮಣೀಯದರ್ಶನನಾಗಿದ್ದ ಪ್ರಭುವನ್ನು ನೋಡುತ್ತಾ ಮಹಾಭಾರತ ಯುದ್ಧದಲ್ಲಿ ಮಡಿದವರೆಲ್ಲರೂ ಆತನ ಸಾರೂಪ್ಯ ಮುಕ್ತಿಯನ್ನೇ ಪಡೆದರೋ, ಅಂತಹ ಪಾರ್ಥಸಾರಥಿ ಭಗವಾನ್ ಶ್ರೀಕೃಷ್ಣನಲ್ಲಿ ಮರಣಾಸನ್ನನಾದ ನನಗೆ ಪರಮ ಪ್ರೀತಿ ಉಂಟಾಗಲಿ.॥39॥
(ಶ್ಲೋಕ - 40)
ಮೂಲಮ್
ಲಲಿತಗತಿವಿಲಾಸವಲ್ಗುಹಾಸ-
ಪ್ರಣಯನಿರೀಕ್ಷಣಕಲ್ಪಿತೋರುಮಾನಾಃ ।
ಕೃತಮನುಕೃತವತ್ಯ ಉನ್ಮದಾಂಧಾಃ
ಪ್ರಕೃತಿಮಗನ್ಕಿಲ ಯಸ್ಯ ಗೋಪವಧ್ವಃ ॥
ಅನುವಾದ
ಯಾರ ಹಾವ-ಭಾವಗಳಿಂದ ಕೂಡಿದ ವಿಲಾಸ, ಮಧುರವಾದ ಮಂದಹಾಸ, ಬೆಡಗು, ಬಿನ್ನಾಣ, ಪ್ರೇಮಯುಕ್ತವಾದ ಕಡೆಗಣ್ಣ ನೋಟದಿಂದ ಅತ್ಯಂತ ಸಮ್ಮಾನಿತರಾದ ಗೋಪಿಯರು ರಾಸಲೀಲೆಯಲ್ಲಿ ಅವನು ಅಂತರ್ಧಾನನಾದಾಗ ಪ್ರೇಮೋನ್ಮತ್ತರಾಗಿ ಅವನ ಆ ದಿವ್ಯಲೀಲೆಗಳನ್ನು ಅನುಕರಣೆ ಮಾಡುತ್ತಾ ತನ್ಮಯರಾಗಿ ಬಿಟ್ಟರೋ, ಅಂತಹ ಭಗವಾನ್ ಶ್ರೀಕೃಷ್ಣನಲ್ಲಿ ನನಗೆ ಪರಮ ಪ್ರೇಮವು ಉಂಟಾಗಲಿ.॥40॥
(ಶ್ಲೋಕ - 41)
ಮೂಲಮ್
ಮುನಿಗಣನೃಪವರ್ಯಸಂಕುಲೇಂತಃ-
ಸದಸಿ ಯುಷ್ಠಿರರಾಜಸೂಯ ಏಷಾಮ್ ।
ಅರ್ಹಣಮುಪಪೇದ ಈಕ್ಷಣೀಯೋ
ಮಮ ದೃಶಿಗೋಚರ ಏಷ ಆವಿರಾತ್ಮಾ ॥
ಅನುವಾದ
ಮಹಾಮುನಿಗಳೂ. ರಾಜಶ್ರೇಷ್ಠರೂ ನೆರೆದಿದ್ದ ಧರ್ಮರಾಜನ ರಾಜಸೂಯ ಯಜ್ಞದ ಸಭೆಯಲ್ಲಿ ಮೊಟ್ಟಮೊದಲಿಗೆ ಯಾರ ಅಗ್ರಪೂಜೆಯು ನನ್ನ ಕಣ್ಣಮುಂದೆಯೇ ನಡೆಯಿತೋ, ಅಂತಹ ಸರ್ವರಿಗೂ ಆತ್ಮಸ್ವರೂಪನಾದ ಭಗವಾನ್ ಶ್ರೀಕೃಷ್ಣನೇ ಇಂದು ನನ್ನ ಮೃತ್ಯುಸಮಯದಲ್ಲಿ ನನ್ನೆದುರಿನಲ್ಲೆ ದರ್ಶನ ನೀಡುತ್ತಿರುವನಲ್ಲ! ಅವನಲ್ಲಿ ನನಗೆ ಅಖಂಡವಾದ ಪ್ರೇಮ ಉಂಟಾಗಲಿ.॥41॥
(ಶ್ಲೋಕ - 42)
ಮೂಲಮ್
ತಮಿಮಮಹಮಜಂ ಶರೀರಭಾಜಾಂ
ಹೃದಿ ಹೃದಿ ಷ್ಠಿತಮಾತ್ಮಕಲ್ಪಿತಾನಾಮ್ ।
ಪ್ರತಿದೃಶಮಿವ ನೈಕಧಾರ್ಕಮೇಕಂ
ಸಮಗತೋಸ್ಮಿ ವಿಧೂತಭೇದಮೋಹಃ ॥
ಅನುವಾದ
ಒಬ್ಬನೇ ಸೂರ್ಯನು ಬೇರೆ-ಬೇರೆ ಕಣ್ಣುಗಳಿಗೆ ಅನೇಕ ರೂಪಿಯಾಗಿ ತೋರುವಂತೆಯೇ ಅಜನ್ಮನಾದ ಭಗವಾನ್ ಶ್ರೀಕೃಷ್ಣನು ತನ್ನಿಂದಲೇ ರಚಿತವಾದ ಅನೇಕ ಶರೀರಧಾರಿಗಳ ಹೃದಯಗಳಲ್ಲಿ ಅಂತರ್ಯಾಮಿಯಾಗಿ ಅನೇಕ ರೂಪಗಳಂತೆ ಕಂಡು ಬರುತ್ತಿದ್ದಾನೆ. ವಾಸ್ತವವಾಗಿ ಓರ್ವನೇ ಎಲ್ಲರಲ್ಲಿ ವಿರಾಜಮಾನನಾಗಿದ್ದಾನೆ. ಅಂತಹ ಭಗವಂತನನ್ನು ನಾನು ಭೇದ-ಭ್ರಮರಹಿತನಾಗಿ ಪಡೆದುಕೊಂಡು ಏಕಾತ್ಮ ಭಾವವುಂಟಾದವನಾಗಿ, ಅವನ ಎದುರಿನಲ್ಲೇ ಶರೀರತ್ಯಾಗ ಮಾಡುತ್ತಿದ್ದೇನೆ.* ॥42॥
ಟಿಪ್ಪನೀ
- ಶರಶಯ್ಯೆಯಲ್ಲಿ ಮಲಗಿದ ಭೀಷ್ಮಪಿತಾಮಹರು ವಿಷ್ಣುಸಹಸ್ರನಾಮದ ಮೂಲಕ ಅತ್ಯಂತ ಆದರ, ಶ್ರದ್ಧೆಯಿಂದ ಭಗವಂತನನ್ನು ಸ್ತುತಿಸಿದ್ದರು. ಭಕ್ತರಲ್ಲಿ ಇದರ ಕುರಿತು ಅತ್ಯಾದರವಿದೆ. ಭಾಗವತವನ್ನು ಓದುವವರು ಈ ಭೀಷ್ಮಸ್ತುತಿಯನ್ನು ಪದೇ-ಪದೇ ಓದುತ್ತಾರೆ. ಮಹಾಭಾರತದಲ್ಲಿ ಭೀಷ್ಮರು ಮಾಡಿದ ಸ್ತುತಿಯು ‘ಭೀಷ್ಮಸ್ತವರಾಜ’ ಎಂಬ ಹೆಸರಿನಿಂದ ಖ್ಯಾತವಾಗಿದೆ. ಭಕ್ತರಾದವರಲ್ಲಿ ಇದರ ಕುರಿತು ಬಹಳ ಆದರವಿದೆ. ಈ ಸ್ತುತಿಗಳಲ್ಲಿ ಭಗವಂತನ ಪ್ರಭಾವ, ಲೀಲೆಗಳನ್ನು ಭೀಷ್ಮರು ಅಲೌಕಿಕವಾಗಿ ವರ್ಣಿಸಿರುವರು. ಭಕ್ತಜನರು ವಿಷ್ಣುಸಹಸ್ರನಾಮವನ್ನು ಅತ್ಯಂತ ಶ್ರದ್ಧೆಯಿಂದ ಪಠಿಸುತ್ತಾರೆ. ಸ್ತೋತ್ರವು ಶ್ಲೋಕಗಳಲ್ಲಿರುವುದರಿಂದ ಅದು ಕಂಠಸ್ಥವೂ ಆಗುತ್ತದೆ. ಆದ್ದರಿಂದ ಈ ಸ್ತೋತ್ರಗಳನ್ನು ಭಕ್ತಿ-ಶ್ರದ್ಧೆಯಿಂದ ಪಾರಾಯಣ ಮಾಡುವ ಅಭ್ಯಾಸವಿರಿಸಿಕೊಳ್ಳಬೇಕು.
(ಶ್ಲೋಕ - 43)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಕೃಷ್ಣ ಏವಂ ಭಗವತಿ ಮನೋವಾಗ್ದೃಷ್ಟಿವೃತ್ತಿಭಿಃ ।
ಆತ್ಮನ್ಯಾತ್ಮಾನಮಾವೇಶ್ಯ ಸೋಂತಃಶ್ವಾಸ ಉಪಾರಮತ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಹೀಗೆ ಭೀಷ್ಮ ಪಿತಾಮಹರು ಆತ್ಮಸ್ವರೂಪನಾದ ಶ್ರೀಕೃಷ್ಣನಲ್ಲಿ ಮನಸ್ಸು, ವಾಣಿ, ಮಾತು, ದೃಷ್ಟಿ ಇವುಗಳ ಮೂಲಕ ತನ್ನನ್ನು ಸಮರ್ಪಿಸಿಕೊಂಡು, ಪ್ರಾಣವಾಯುವನ್ನು ಅವನಲ್ಲೇ ವಿಲೀನಗೊಳಿಸಿದರು; ಶರೀರ ಶಾಂತವಾಯಿತು.॥43॥
(ಶ್ಲೋಕ - 44)
ಮೂಲಮ್
ಸಂಪದ್ಯಮಾನಮಾಜ್ಞಾಯ ಭೀಷ್ಮಂ ಬ್ರಹ್ಮಣಿ ನಿಷ್ಕಲೇ ।
ಸರ್ವೇ ಬಭೂವುಸ್ತೇ ತೂಷ್ಣೀಂ ವಯಾಂಸೀವ ದಿನಾತ್ಯಯೇ ॥
ಅನುವಾದ
ಅವರು ಹೀಗೆ ನಿಷ್ಕಲವಾದ ಬ್ರಹ್ಮನಲ್ಲಿ ಲಯಹೊಂದುತ್ತಿರುವುದನ್ನು ನೋಡಿ, ಸಂಜೆಯಾದಾಗ ಪಕ್ಷಿಗಳ ಕಲರವವು ಶಾಂತವಾಗುವಂತೆ ಎಲ್ಲ ಜನರು ಮೌನರಾದರು.॥44॥
(ಶ್ಲೋಕ - 45)
ಮೂಲಮ್
ತತ್ರ ದುಂದುಭಯೋ ನೇದುರ್ದೇವಮಾನವವಾದಿತಾಃ ।
ಶಶಂಸುಃ ಸಾಧವೋ ರಾಜ್ಞಾಂ ಖಾತ್ಪೇತುಃ ಪುಷ್ಪವೃಷ್ಟಯಃ ॥
ಅನುವಾದ
ಆಗಲೇ ಮನುಷ್ಯರೂ, ದೇವತೆಗಳೂ ದುಂದುಭಿಯೇ ಮುಂತಾದ ವಾದ್ಯಗಳನ್ನು ಮೊಳಗಿಸಿದರು. ಸಾಧು-ಸಜ್ಜನರಾದ ರಾಜರು ಭೀಷ್ಮರನ್ನು ಪ್ರಶಂಶಿಸಿದರು. ಆಕಾಶದಿಂದ ಹೂಮಳೆ ಸುರಿಯಿತು.॥45॥
(ಶ್ಲೋಕ - 46)
ಮೂಲಮ್
ತಸ್ಯ ನಿರ್ಹರಣಾದೀನಿ ಸಂಪರೇತಸ್ಯ ಭಾರ್ಗವ ।
ಯುಷ್ಠಿರಃ ಕಾರಯಿತ್ವಾ ಮುಹೂರ್ತಂ ದುಃಖಿತೋಭವತ್ ॥
ಅನುವಾದ
ಶೌನಕರೇ! ನಿಷ್ಕಳಂಕವೂ, ನಿರುಪಾಧಿಕವೂ ಆದ ಬ್ರಹ್ಮನಲ್ಲಿ ಐಕ್ಯವನ್ನು ಪಡೆದ ಆ ಮಹಾತ್ಮರ ಮೃತಶರೀರಕ್ಕೆ ಅಂತ್ಯ ಕ್ರಿಯೆಯನ್ನು ನೆರವೇರಿಸಿ, ಧರ್ಮರಾಜನು ಸ್ವಲ್ಪಕಾಲ ಶೋಕ ಮಗ್ನನಾಗಿ ಕುಳಿತನು.॥46॥
(ಶ್ಲೋಕ - 47)
ಮೂಲಮ್
ತುಷ್ಟುವುರ್ಮುನಯೋ ಹೃಷ್ಟಾಃ ಕೃಷ್ಣಂ ತದ್ಗುಹ್ಯನಾಮಭಿಃ ।
ತತಸ್ತೇ ಕೃಷ್ಣಹೃದಯಾಃ ಸ್ವಾಶ್ರಮಾನ್ಪ್ರಯಯುಃ ಪುನಃ ॥
ಅನುವಾದ
ಅಲ್ಲಿ ನೆರೆದಿದ್ದ ಮುನಿಗಳೆಲ್ಲರೂ ಶ್ರೀಕೃಷ್ಣ ಪರಮಾತ್ಮನನ್ನು ಅವನ ರಹಸ್ಯಮಯ ದಿವ್ಯನಾಮಗಳಿಂದ ಸ್ತುತಿಸಿದ ಬಳಿಕ ಕೃಷ್ಣಮಯವಾದ ಹೃದಯಗಳಿಂದ ತಮ್ಮ ತಮ್ಮ ಆಶ್ರಮಗಳಿಗೆ ತೆರಳಿದರು.॥47॥
(ಶ್ಲೋಕ - 48)
ಮೂಲಮ್
ತತೋ ಯುಷ್ಠಿರೋ ಗತ್ವಾ ಸಹಕೃಷ್ಣೋ ಗಜಾಹ್ವಯಮ್ ।
ಪಿತರಂ ಸಾಂತ್ವಯಾಮಾಸ ಗಾಂಧಾರೀಂ ಚ ತಪಸ್ವಿನೀಮ್ ॥
ಅನುವಾದ
ಅನಂತರ ಯುಧಿಷ್ಠಿರನೂ ಕೂಡ ಭಗವಾನ್ ಶ್ರೀಕೃಷ್ಣನೊಂದಿಗೆ ಹಸ್ತಿನಾಪುರಕ್ಕೆ ಬಂದು, ದೊಡ್ಡಪ್ಪನಾದ ಧೃತರಾಷ್ಟ್ರನನ್ನೂ, ತಪಸ್ವಿನಿಯಾದ ಗಾಂಧಾರಿಯನ್ನು ಸಮಾಧಾನ ಪಡಿಸಿದನು.॥48॥
(ಶ್ಲೋಕ - 49)
ಮೂಲಮ್
ಪಿತ್ರಾ ಚಾನುಮತೋ ರಾಜಾ ವಾಸುದೇವಾನುಮೋದಿತಃ ।
ಚಕಾರ ರಾಜ್ಯಂ ಧರ್ಮೇಣ ಪಿತೃಪೈತಾಮಹಂ ವಿಭುಃ ॥
ಅನುವಾದ
ಮತ್ತೆ ಧೃತರಾಷ್ಟ್ರನ ಅಪ್ಪಣೆಯಂತೆ, ಭಗವಾನ್ ಶ್ರೀವಾಸುದೇವನ ಅನುಮತಿಯಿಂದ ಯುಧಿಷ್ಠಿರರಾಜನು ತನ್ನ ವಂಶಪರಂಪರೆಯಿಂದ ಬಂದ ರಾಜ್ಯವನ್ನು ಧರ್ಮದಿಂದ ಆಳತೊಡಗಿದನು.॥49॥
ಅನುವಾದ (ಸಮಾಪ್ತಿಃ)
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ಯುಷ್ಠಿರರಾಜ್ಯಪ್ರಲಂಭೋ ನಾಮ ನವಮೋಽಧ್ಯಾಯಃ ॥9॥