೦೮

[ಎಂಟನೆಯ ಅಧ್ಯಾಯ]

ಭಾಗಸೂಚನಾ

ಗರ್ಭದಲ್ಲಿ ಪರೀಕ್ಷಿತನ ರಕ್ಷಣೆ, ಕುಂತಿಯು ಮಾಡಿದ ಶ್ರೀಕೃಷ್ಣನ ಸ್ತುತಿ, ಧರ್ಮರಾಜನ ಪಶ್ಚಾತ್ತಾಪ

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಅಥ ತೇ ಸಂಪರೇತಾನಾಂ ಸ್ವಾನಾಮುದಕಮಿಚ್ಛತಾಮ್ ।
ದಾತುಂ ಸಕೃಷ್ಣಾ ಗಂಗಾಯಾಂ ಪುರಸ್ಕೃತ್ಯ ಯಯುಃ ಸಿಯಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಋಷಿಗಳೇ! ಅನಂತರ ಪಾಂಡವರು-ತಿಲೋದಕವನ್ನು ಬಯಸುತ್ತಿದ್ದ ಸ್ವಜನರಿಗೆ ತರ್ಪಣವನ್ನು ಕೊಡುವುದಕ್ಕಾಗಿ ಶ್ರೀಕೃಷ್ಣನೊಡನೆ ಸ್ತ್ರೀಯರನ್ನು ಮುಂದಿಟ್ಟುಕೊಂಡು ಗಂಗಾನದಿಯ ತೀರಕ್ಕೆ ಬಂದರು.॥1॥

(ಶ್ಲೋಕ - 2)

ಮೂಲಮ್

ತೇ ನಿನೀಯೋದಕಂ ಸರ್ವೇ ವಿಲಪ್ಯ ಚ ಭೃಶಂ ಪುನಃ ।
ಆಪ್ಲುತಾ ಹರಿಪಾದಾಬ್ಜ ರಜಃಪೂತಸರಿಜ್ಜಲೇ ॥

ಅನುವಾದ

ಅಲ್ಲಿ ಅವರೆಲ್ಲರೂ ಮೃತಬಂಧುಗಳಿಗೆ ಜಲ ತರ್ಪಣಗಳನ್ನು ಇತ್ತು, ಅವರನ್ನು ನೆನೆದುಕೊಂಡು ವಿಲಾಪಿಸ ತೊಡಗಿದರು. ಬಳಿಕ ಶ್ರೀಭಗವಂತನ ಪಾದಾಬ್ಜಧೂಳಿಯಿಂದ ಪರಿಶುದ್ಧವಾದ ಗಂಗಾತೀರ್ಥದಲ್ಲಿ ಮತ್ತೊಮ್ಮೆ ಸ್ನಾನಮಾಡಿದರು.॥2॥

(ಶ್ಲೋಕ - 3)

ಮೂಲಮ್

ತತ್ರಾಸೀನಂ ಕುರುಪತಿಂ ಧೃತರಾಷ್ಟ್ರಂ ಸಹಾನುಜಮ್ ।
ಗಾಂಧಾರೀಂ ಪುತ್ರಶೋಕಾರ್ತಾಂ ಪೃಥಾಂ ಕೃಷ್ಣಾಂ ಚ ಮಾಧವಃ ॥

(ಶ್ಲೋಕ - 4)

ಮೂಲಮ್

ಸಾಂತ್ವಯಾಮಾಸ ಮುನಿಭಿರ್ಹತಬಂಧೂನ್ ಶುಚಾರ್ಪಿತಾನ್ ।
ಭೂತೇಷು ಕಾಲಸ್ಯ ಗತಿಂ ದರ್ಶಯನ್ನ ಪ್ರತಿಕ್ರಿಯಾಮ್ ॥

ಅನುವಾದ

ಅಲ್ಲಿ ಕುಳಿತ್ತಿದ್ದ ಭೀಮಾರ್ಜನಾದಿ ತಮ್ಮಂದಿರಿಂದೊಡಗೂಡಿ ಧರ್ಮರಾಜನನ್ನು, ಧೃತರಾಷ್ಟನನ್ನೂ, ಪುತ್ರಶೋಕದಿಂದ ಪೀಡಿತರಾಗಿದ್ದ ಗಾಂಧಾರೀ-ಕುಂತೀ-ದ್ರೌಪದಾದೇವಿಯನ್ನು ಶ್ರೀಕೃಷ್ಣ ಪರಮಾತ್ಮನು ಧೌಮ್ಯಾದಿ ಮಹರ್ಷಿಗಳೊಡನೆ ಸಮಾಧಾನ ಪಡಿಸಿದನು. ‘ಪ್ರಪಂಚದಲ್ಲಿ ಎಲ್ಲ ಪ್ರಾಣಿಗಳು ಕಾಲಕ್ಕೆ ಅಧೀನರಾಗಿದ್ದಾರೆ. ಮೃತ್ಯುವಿನಿಂದ ಯಾರನ್ನು ಯಾರೂ ತಪ್ಪಿಸಲಾರನು.’ ಎಂದು ತಿಳಿಸಿ ಬಂಧು ಮರಣದಿಂದ ಶೋಕಿಸುತ್ತಿರುವ ಅವರನ್ನು ಸಾಂತ್ವನಗೊಳಿಸಿದನು.॥3-4॥

(ಶ್ಲೋಕ - 5)

ಮೂಲಮ್

ಸಾಧಯಿತ್ವಾಜಾತಶತ್ರೋಃ ಸ್ವಂ ರಾಜ್ಯಂ ಕಿತವೈರ್ಹೃತಮ್ ।
ಘಾತಯಿತ್ವಾಸತೋ ರಾಜ್ಞಃ ಕಚಸ್ಪರ್ಶಕ್ಷತಾಯುಷಃ ॥

ಅನುವಾದ

ಈ ರೀತಿ ಭಗವಾನ್ ಶ್ರೀಕೃಷ್ಣನು ಅಜಾತಶುತ್ರುವಾದ ಮಹಾರಾಜ ಯುಧಿಷ್ಠಿರನಿಗೆ, ಧೂರ್ತರು ಅವನಿಂದ ಮೋಸದಿಂದ ಕಸಿದುಕೊಂಡಿದ್ದ ರಾಜ್ಯವನ್ನು ಹಿಂದಕ್ಕೆ ಕೊಡಿಸಿದನು ಮತ್ತು ದ್ರೌಪದಿಯ ಕೇಶ ಪಾಶಗಳಿಗೆ ಕೈಹಾಕಿದ, ಆಯುಸ್ಸು ಕ್ಷೀಣ ಹೊಂದಿದ್ದ ದುಷ್ಟರಾಜರನ್ನು ಸಂಹಾರ ಮಾಡಿಸಿದನು.॥5॥

(ಶ್ಲೋಕ - 6)

ಮೂಲಮ್

ಯಾಜಯಿತ್ವಾಶ್ವಮೇಧೈಸ್ತಂ ತ್ರಿಭಿರುತ್ತಮಕಲ್ಪಕೈಃ ।
ತದ್ಯಶಃ ಪಾವನಂ ದಿಕ್ಷು ಶತಮನ್ಯೋರಿವಾತನೋತ್ ॥

ಅನುವಾದ

ಜೊತೆಗೆ ಯುಧಿಷ್ಠಿರ ಮಹಾರಾಜನಿಂದ ಉತ್ತಮ ಸಾಮಗ್ರಿ ಸಂಪತ್ತು ಮತ್ತು ಉತ್ತಮ ಋತ್ವಿಜರಿಂದ ಮೂರು ಅಶ್ವಮೇಧ ಯಜ್ಞಗಳನ್ನು ಮಾಡಿಸಿದನು. ಅವನ ಕೀರ್ತಿಯು ನೂರು ಯಜ್ಞ ಮಾಡಿದ ಇಂದ್ರನ ಕೀರ್ತಿಯಂತೆ ಎಲ್ಲೆಡೆ ಹರಡುವಂತೆ ಮಾಡಿದನು.॥6॥

(ಶ್ಲೋಕ - 7)

ಮೂಲಮ್

ಆಮಂತ್ರ್ಯ ಪಾಂಡುಪುತ್ರಾಂಶ್ಚ ಶೈನೇಯೋದ್ಧವಸಂಯುತಃ ।
ದ್ವೈಪಾಯನಾದಿಭಿರ್ವಿಪ್ರೈಃ ಪೂಜಿತೈಃ ಪ್ರತಿಪೂಜಿತಃ ॥

(ಶ್ಲೋಕ - 8)

ಮೂಲಮ್

ಗಂತುಂ ಕೃತಮತಿರ್ಬ್ರಹ್ಮನ್ ದ್ವಾರಕಾಂ ರಥಮಾಸ್ಥಿತಃ ।
ಉಪಲೇಭೇಭಿಧಾವಂತೀಮುತ್ತರಾಂ ಭಯವಿಹ್ವಲಾಮ್ ॥

ಅನುವಾದ

ಇದಾದ ಬಳಿಕ ಭಗವಾನ್ ಶ್ರೀಕೃಷ್ಣನು ದ್ವಾರಕೆಗೆ ಹೋಗಲು ವಿಚಾರ ಮಾಡಿದನು. ಅದಕ್ಕಾಗಿ ಪಾಂಡವರಿಂದ ಬೀಳ್ಕೊಂಡು, ದ್ವೈಪಾಯನ ವ್ಯಾಸರೇ ಮುಂತಾದ ಬ್ರಾಹ್ಮಣರನ್ನು ಸತ್ಕರಿಸಿ ತಾನೂ ಸತ್ ಕೃತನಾದನು. ಅವನು ದ್ವಾರಕೆಗೆ ಹೊರಡಲು ಉದ್ಧವ, ಸಾತ್ಯಕಿಯರೊಡನೆ ರಥವನ್ನೇರಿದನು. ಆಗಲೇ ಅಭಿಮನ್ಯುವಿನ ಪತ್ನೀ ಉತ್ತರೆಯು ಭಯದಿಂದ ಕಳವಳಗೊಂಡು ಎದುರಿಗೆ ಓಡಿ ಬರುತ್ತಿರುವುದನ್ನು ನೋಡಿದನು.॥7-8॥

(ಶ್ಲೋಕ - 9)

ಮೂಲಮ್ (ವಾಚನಮ್)

ಉತ್ತರೋವಾಚ

ಮೂಲಮ್

ಪಾಹಿ ಪಾಹಿ ಮಹಾಯೋಗಿನ್ ದೇವದೇವ ಜಗತ್ಪತೇ ।
ನಾನ್ಯಂ ತ್ವದಭಯಂ ಪಶ್ಯೇ ಯತ್ರ ಮೃತ್ಯುಃ ಪರಸ್ಪರಮ್ ॥

ಅನುವಾದ

ಉತ್ತರೆಯು ಪ್ರಭುವನ್ನು ಹೀಗೆ ಪ್ರಾರ್ಥಿಸತೊಡಗಿದಳು — ‘ದೇವಾಧಿದೇವಾ! ಜಗತ್ಪತಿಯೇ! ಮಹಾಯೋಗಿಯೇ! ಕಾಪಾಡು! ಕಾಪಾಡು! ನಿನ್ನನ್ನು ಬಿಟ್ಟು ನನಗೆ ಬೇರೆ ಯಾರೂ ಅಭಯನೀಡಲಾರರು. ಏಕೆಂದರೆ, ಇಲ್ಲಿ ಎಲ್ಲರೂ ಪರಸ್ಪರ ಮೃತ್ಯುವಿಗೆ ಕಾರಣರಾಗುತ್ತಿದ್ದಾರೆ.॥9॥

(ಶ್ಲೋಕ - 10)

ಮೂಲಮ್

ಅಭಿದ್ರವತಿ ಮಾಮೀಶ ಶರಸ್ತಪ್ತಾಯಸೋ ವಿಭೋ ।
ಕಾಮಂ ದಹತು ಮಾಂ ನಾಥ ಮಾ ಮೇ ಗರ್ಭೋ ನಿಪಾತ್ಯತಾಮ್ ॥

ಅನುವಾದ

ಪ್ರಭೋ! ನೀನು ಸರ್ವಶಕ್ತಿಯುಳ್ಳವನಾಗಿರುವೆ. ಕಾದಕಬ್ಬಿಣದ ಬಾಣವೊಂದು ನನ್ನನ್ನು ಅಟ್ಟಿಸಿಕೊಂಡು ಬರುತ್ತಿದೆ. ಇದು ಬೇಕಾದರೆ ನನ್ನನ್ನು ಸುಟ್ಟು ಹಾಕಲಿ. ಆದರೆ ನನ್ನ ಗರ್ಭವನ್ನು ನಾಶಪಡಿಸದಂತೆ ಅನುಗ್ರಹಿಸು ಸ್ವಾಮಿ!॥10॥

(ಶ್ಲೋಕ - 11)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಉಪಧಾರ್ಯ ವಚಸ್ತಸ್ಯಾ ಭಗವಾನ್ಭಕ್ತವತ್ಸಲಃ ।
ಅಪಾಂಡವಮಿದಂ ಕರ್ತುಂ ದ್ರೌಣೇರಸಮಬುಧ್ಯತ ॥

ಅನುವಾದ

ಸೂತಪುರಾಣಿಕರು ಹೇಳುತ್ತಿದ್ದಾರೆ — ಭಕ್ತವತ್ಸಲ ಭಗವಾನ್ ಶ್ರೀಕೃಷ್ಣನು ಆಕೆಯ ಗೋಳಾಟವನ್ನು ಕೆಳಿದೊಡನೆಯೇ- ‘ಅಶ್ವತ್ಥಾಮನು ಪಾಂಡವರ ವಂಶವನ್ನೇ ನಿರ್ಬೀಜವನ್ನಾಗಿ ಮಾಡಲು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿರುವನು’ ಎಂದು ಅರಿತುಕೊಂಡನು.॥11॥

(ಶ್ಲೋಕ - 12)

ಮೂಲಮ್

ತರ್ಹ್ಯೇವಾಥ ಮುನಿಶ್ರೇಷ್ಠ ಪಾಂಡವಾಃ ಪಂಚ ಸಾಯಕಾನ್ ।
ಆತ್ಮನೋಭಿಮುಖಾಂದೀಪ್ತಾನಾಲಕ್ಷ್ಯಾಸಾಣ್ಯುಪಾದದುಃ ॥

ಅನುವಾದ

ಶೌನಕರೇ! ಅದೇ ಸಮಯದಲ್ಲಿ ಉರಿಯುತ್ತಿರುವ ಐದು ಬಾಣಗಳು ತಮ್ಮ ಕಡೆಗೆ ಬರುತ್ತಿರುವುದನ್ನು ಕಂಡು ಪಾಂಡವರು ಅದನ್ನು ಎದುರಿಸಲು ತಮ್ಮ-ತಮ್ಮ ಅಸ್ತ್ರಗಳನ್ನು ಎತ್ತಿಕೊಂಡರು.॥12॥

(ಶ್ಲೋಕ - 13)

ಮೂಲಮ್

ವ್ಯಸನಂ ವೀಕ್ಷ್ಯ ತತ್ತೇಷಾಮನನ್ಯವಿಷಯಾತ್ಮನಾಮ್ ।
ಸುದರ್ಶನೇನ ಸ್ವಾಸೇಣ ಸ್ವಾನಾಂ ರಕ್ಷಾಂ ವ್ಯಧಾದ್ವಿಭುಃ ॥

ಅನುವಾದ

ತನಗೆ ಶರಣು ಬಂದಿದ್ದ ಅನನ್ಯ ಭಕ್ತರಿಗೆ ದೊಡ್ಡ ವಿಪತ್ತು ಬಂದಿರುವುದನ್ನು ಕಂಡು, ಸರ್ವಶಕ್ತನಾದ ಭಗವಾನ್ ಶ್ರೀಕೃಷ್ಣನು ತನ್ನ ದಿವ್ಯವಾದ ಸುದರ್ಶನದಿಂದ ಅವರನ್ನು ಕಾಪಾಡಿದನು.॥13॥

(ಶ್ಲೋಕ - 14)

ಮೂಲಮ್

ಅಂತಃಸ್ಥಃ ಸರ್ವಭೂತಾನಾಮಾತ್ಮಾ ಯೋಗೇಶ್ವರೋ ಹರಿಃ ।
ಸ್ವಮಾಯಯಾವೃಣೋದ್ಗರ್ಭಂ ವೈರಾಟ್ಯಾಃ ಕುರುತಂತವೇ ॥

ಅನುವಾದ

ಸರ್ವಪ್ರಾಣಿಗಳ ಅಂತರ್ಯಾಮಿಯಾಗಿರುವ ಯೋಗೇಶ್ವರನಾದ ಶ್ರೀಕೃಷ್ಣನು ಕುರುವಂಶದ ಕುಡಿಯನ್ನು ಉಳಿಸುವುದಕ್ಕಾಗಿ ಉತ್ತರೆಯ ಗರ್ಭವನ್ನು ತನ್ನ ಮಾಯಾಕವಚದಿಂದ ಆವರಿಸಿ ಬಿಟ್ಟನು.॥14॥

(ಶ್ಲೋಕ - 15)

ಮೂಲಮ್

ಯದ್ಯಪ್ಯಸಂ ಬ್ರಹ್ಮಶಿರಸ್ತ್ವಮೋಘಂ ಚಾಪ್ರತಿಕ್ರಿಯಮ್ ।
ವೈಷ್ಣವಂ ತೇಜ ಆಸಾದ್ಯ ಸಮಶಾಮ್ಯದ್ಭೃಗೂದ್ವಹ ॥

ಅನುವಾದ

ಶೌನಕಾದಿ ಋಷಿಗಳಿರಾ! ಬ್ರಹ್ಮಶಿರೋಸ್ತ್ರವೆಂಬುದು ಅಮೋಘವಾದುದೇ. ಅದನ್ನು ನಿವಾರಿಸುವ ಪ್ರತ್ಯಸ್ತ್ರವಿಲ್ಲವೆಂಬುದೂ ನಿಜವೇ. ಆದರೂ ಭಗವಾನ್ ಶ್ರೀಕೃಷ್ಣನ ತೇಜದ ಇದಿರು ಅದು ಶಾಂತವಾಯಿತು.॥15॥

(ಶ್ಲೋಕ - 16)

ಮೂಲಮ್

ಮಾ ಮಂಸ್ಥಾ ಹ್ಯೇತದಾಶ್ಚರ್ಯಂ ಸರ್ವಾಶ್ಚರ್ಯಮಯೇಚ್ಯುತೇ ।
ಯ ಇದಂ ಮಾಯಯಾ ದೇವ್ಯಾ ಸೃಜತ್ಯವತಿ ಹಂತ್ಯಜಃ ॥

ಅನುವಾದ

ಭೃಗುಕುಲತಿಲಕರೇ! ಇದೇನೋ ದೊಡ್ಡ ಅಚ್ಚರಿಯೆಂದು ತಿಳಿಯಬಾರದು. ಏಕೆಂದರೆ, ಭಗವಾನ್ ಶ್ರೀಕೃಷ್ಣನು ಸರ್ವಾಶ್ಚರ್ಯಮಯನಾದವನು. ತಾನು ಜನ್ಮರಹಿತನಾಗಿಯೇ ಇದ್ದು, ತನ್ನ ಮಾಯಾ ಶಕ್ತಿಯಿಂದ ಈ ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಮಾಡುವ ಸರ್ವಶಕ್ತಿಮಯನು ಪರಮಾತ್ಮನು. ॥16॥

(ಶ್ಲೋಕ - 17)

ಮೂಲಮ್

ಬ್ರಹ್ಮತೇಜೋವಿನಿರ್ಮುಕ್ತೈರಾತ್ಮಜೈಃ ಸಹ ಕೃಷ್ಣಯಾ ।
ಪ್ರಯಾಣಾಭಿಮುಖಂ ಕೃಷ್ಣಮಿದಮಾಹ ಪೃಥಾ ಸತೀ ॥

ಅನುವಾದ

ಭಗವಾನ್ ಶ್ರೀಕೃಷ್ಣನು ದ್ವಾರಕೆಗೆ ಹೊರಟಾಗ ಬ್ರಹ್ಮಾಸ್ತ್ರದ ಜ್ವಾಲೆಯಿಂದ ಮುಕ್ತರಾದ ತನ್ನ ಪುತ್ರರೊಡನೆಯೂ, ದ್ರೌಪದಿಯೊಡನೆಯೂ ಕೂಡಿ ಸಾಧ್ವಿಯಾದ ಕುಂತೀ ದೇವಿಯು ಹೀಗೆ ಪ್ರಾರ್ಥಿಸಿದಳು.॥17॥

(ಶ್ಲೋಕ - 18)

ಮೂಲಮ್ (ವಾಚನಮ್)

ಕುಂತ್ಯುವಾಚ

ಮೂಲಮ್

ನಮಸ್ಯೇ ಪುರುಷಂ ತ್ವಾದ್ಯಮೀಶ್ವರಂ ಪ್ರಕೃತೇಃ ಪರಮ್ ।
ಅಲಕ್ಷ್ಯಂ ಸರ್ವಭೂತಾನಾಮಂತರ್ಬಹಿರವಸ್ಥಿತಮ್ ॥

ಅನುವಾದ

ಕುಂತೀದೇವಿಯು ಹೇಳಿದಳು — ನೀನು ಸಮಸ್ತ ಜೀವಿಗಳ ಒಳಗೂ-ಹೊರಗೂ ಪೂರ್ಣವಾಗಿ ವ್ಯಾಪಿಸಿಕೊಂಡಿರುವೆ. ಆದರೂ ಇಂದ್ರಿಯಗಳಿಂದ ಹಾಗೂ ವೃತ್ತಿಗಳಿಂದ ನೋಡಲಾಗುವುದಿಲ್ಲ. ಏಕೆಂದರೆ ನೀನು ಪ್ರಕೃತಿಯನ್ನು ಮೀರಿನಿಂತ ಆದಿಪುರುಷ ಪರಮೇಶ್ವರನಾಗಿರುವೆ. ನಾನು ನಿನಗೆ ನಮಸ್ಕರಿಸುತ್ತೇನೆ.॥18॥

(ಶ್ಲೋಕ - 19)

ಮೂಲಮ್

ಮಾಯಾಜವನಿಕಾಚ್ಛನ್ನಮಜ್ಞಾಧೋಕ್ಷಜಮವ್ಯಯಮ್ ।
ನ ಲಕ್ಷ್ಯಸೇ ಮೂಢದೃಶಾ ನಟೋ ನಾಟ್ಯಧರೋ ಯಥಾ ॥

ಅನುವಾದ

ಇಂದ್ರಿಯಗಳಿಗೆ ಗೋಚರಿಸದೆ ಮಾಯೆಯೆಂಬ ಪರದೆಯೊಳಗೆ ತನ್ನನ್ನು ಮರೆಸಿಕೊಂಡಿರುವವನೂ, ಸರ್ವಜ್ಞನೂ ಆದ ನಿನ್ನನ್ನು ಅಜ್ಞಳಾದ ನಾನು ಹೇಗೆ ತಿಳಿಯಬಲ್ಲೆನು? ವೇಷವನ್ನು ಧರಿಸಿರುವ ಚತುರನಟನಂತೆ ಅಭಿನಯಿಸುತ್ತಿರುವ ನಿನ್ನನ್ನು ಮೂಢದೃಷ್ಟಿಯುಳ್ಳವರು ಹೇಗೆ ತಾನೇ ಗುರುತಿಸಬಲ್ಲರು?॥19॥

(ಶ್ಲೋಕ - 20)

ಮೂಲಮ್

ತಥಾ ಪರಮಹಂಸಾನಾಂ ಮುನೀನಾಮಮಲಾತ್ಮನಾಮ್ ।
ಭಕ್ತಿಯೋಗವಿಧಾನಾರ್ಥಂ ಕಥಂ ಪಶ್ಯೇಮ ಹಿ ಸಿಯಃ ॥

ಅನುವಾದ

ನೀನು ಶುದ್ಧ ಹೃದಯವುಳ್ಳ ವಿಚಾರಶೀಲ ಜೀವನ್ಮುಕ್ತರಾದ ಪರಮ ಹಂಸರ ಹೃದಯದಲ್ಲಿ ನಿನ್ನ ಪರಾಭಕ್ತಿಯನ್ನು ಮೂಡಿಸಲು ಅವತರಿಸಿರುವೆ. ಇಂತಹ ನಿನ್ನನ್ನು ನಮ್ಮಂತಹ ಪಾಮರ ಸ್ತ್ರೀಯರು ಹೇಗೆ ತಾನೇ ಗುರುತಿಸಬಲ್ಲರು? ॥20॥

(ಶ್ಲೋಕ - 21)

ಮೂಲಮ್

ಕೃಷ್ಣಾಯ ವಾಸುದೇವಾಯ ದೇವಕೀನಂದನಾಯ ಚ ।
ನಂದಗೋಪಕುಮಾರಾಯ ಗೋವಿಂದಾಯ ನಮೋ ನಮಃ ॥

ಅನುವಾದ

ಶ್ರೀಕೃಷ್ಣನಿಗೆ, ವಾಸುದೇವನಿಗೆ, ದೇವಕೀ ನಂದನನಿಗೆ, ನಂದಗೋಪಕುಮಾರನಿಗೆ, ಗೋವಿಂದನಿಗೆ, ನಮೋ ನಮಃ. ನಮ್ಮ ಅನಂತ ವಂದನೆಗಳು.॥21॥

(ಶ್ಲೋಕ - 22)

ಮೂಲಮ್

ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ ।
ನಮಃ ಪಂಕಜನೇತ್ರಾಯ ನಮಸ್ತೇ ಪಂಕಜಾಂಘ್ರಯೇ ॥

ಅನುವಾದ

ಪದ್ಮನಾಭನಿಗೆ, ಪದ್ಮಮಾಲಾಧರನಿಗೆ, ಪದ್ಮಾಕ್ಷನಿಗೆ, ಪದ್ಮಪಾದನಾಗಿರುವ ಶ್ರೀಕೃಷ್ಣಾ! ನಿನಗೆ ಮತ್ತೆ-ಮತ್ತೆ ನಮಸ್ಕಾರಗಳು.॥22॥

(ಶ್ಲೋಕ - 23)

ಮೂಲಮ್

ಯಥಾ ಹೃಷಿಕೇಶ ಖಲೇನ ದೇವಕೀ
ಕಂಸೇನ ರುದ್ಧಾತಿಚಿರಂ ಶುಚಾರ್ಪಿತಾ ।
ವಿಮೋಚಿತಾಹಂ ಚ ಸಹಾತ್ಮಜಾ ವಿಭೋ
ತ್ವಯೈವ ನಾಥೇನ ಮುಹುರ್ವಿಪದ್ಗಣಾತ್ ॥

(ಶ್ಲೋಕ - 24)

ಮೂಲಮ್

ವಿಷಾನ್ಮಹಾಗ್ನೇಃ ಪುರುಷಾದದರ್ಶನಾ-
ದಸತ್ಸಭಾಯಾ ವನವಾಸಕೃಚ್ಛ್ರತಃ ।
ಮೃಧೇ ಮೃಧೇನೇಕಮಹಾರಥಾಸತೋ
ದ್ರೌಣ್ಯಸತಶ್ಚಾಸ್ಮ ಹರೇಭಿರಕ್ಷಿತಾಃ ॥

ಅನುವಾದ

ಹೃಷೀಕೇಶಾ! ಪ್ರಭೋ! ಹಿಂದೆ ದುಷ್ಟಕಂಸನಿಂದ ಸೆರೆಯಲ್ಲಿಟ್ಟಿದ್ದ, ಚಿರಕಾಲ ಶೋಕಗ್ರಸ್ತಳಾಗಿದ್ದ ದೇವಕಿಯನ್ನು ನೀನು ಕಾಪಾಡಿದಂತೆಯೇ ಪುತ್ರರೊಂದಿಗೆ ನನ್ನನ್ನೂ ಕೂಡ ನೀನು ಪದೇ-ಪದೇ ವಿಪತ್ತುಗಳಿಂದ ರಕ್ಷಿಸಿರುವೆ. ನೀನೇ ನಮ್ಮ ಸ್ವಾಮಿಯಾಗಿರುವೆ. ನೀನೇ ಸರ್ವಶಕ್ತಿಯುಳ್ಳವನು. ಶ್ರೀಕೃಷ್ಣಾ! ವಿಷದಿಂದ, ಲಾಕ್ಷಾಗೃಹದ ಭಯಾನಕ ಬೆಂಕಿಯಿಂದ, ಹಿಡಿಂಬಾದಿ ರಾಕ್ಷಸರ ದೃಷ್ಟಿಯಿಂದ, ದುಷ್ಟರ ದ್ಯೂತಸಭೆಯಿಂದ, ವನವಾಸದ ವಿಪತ್ತುಗಳಿಂದ, ಯುದ್ಧದ ಪ್ರತಿಯೊಂದು ಘಟ್ಟದಲ್ಲಿಯೂ ಮಹಾರಥರು ಪ್ರಯೋಗಿಸಿದ ಶಸ್ತ್ರಾಸ್ತ್ರಗಳಿಂದ ಕಾಪಾಡಿದೆ. ಹೀಗೆ ಎಷ್ಟೊಂದು ಹೇಳಲಿ? ಈಗ ಈ ಅಶ್ವತ್ಥಾಮನನ ಬ್ರಹ್ಮಾಸ್ತ್ರದಿಂದಲೂ ಕೂಡ ನೀನು ನಮ್ಮನ್ನು ಕಾಪಾಡಿರುವೆ.॥23-24॥

(ಶ್ಲೋಕ - 25)

ಮೂಲಮ್

ವಿಪದಃ ಸಂತು ನಃ ಶಶ್ವತ್ತತ್ರ ತತ್ರ ಜಗದ್ಗುರೋ ।
ಭವತೋ ದರ್ಶನಂ ಯತ್ಸ್ಯಾದಪುನರ್ಭವದರ್ಶನಮ್ ॥

ಅನುವಾದ

ಜಗದ್ಗುರುವೇ! ನಮ್ಮ ಜೀವನದಲ್ಲಿ ವಿಪತ್ತುಗಳು ಪದೇ-ಪದೇ ಬರುತ್ತಿರಲಿ. ಏಕೆಂದರೆ, ವಿಪತ್ತುಗಳಲ್ಲಿಯೂ ನಿಶ್ಚಿತವಾಗಿ ನಿನ್ನ ದರ್ಶನ ಆಗುತ್ತಾ ಇರುತ್ತದೆ. ನಿನ್ನ ದರ್ಶನವಾದ ಮೇಲೆ ಮತ್ತೆ ಜನ್ಮ-ಮೃತ್ಯುವಿನ ಚಕ್ರದಲ್ಲಿ ಬೀಳಬೇಕಾಗುವುದಿಲ್ಲ.॥25॥

(ಶ್ಲೋಕ - 26)

ಮೂಲಮ್

ಜನ್ಮೈಶ್ವರ್ಯಶ್ರುತಶ್ರೀಭಿರೇಧಮಾನಮದಃ ಪುಮಾನ್ ।
ನೈವಾರ್ಹತ್ಯಭಿಧಾತುಂ ವೈ ತ್ವಾಮಕಿಂಚನಗೋಚರಮ್ ॥

ಅನುವಾದ

ನೀನು ಅಕಿಂಚನರಿಗೆ ಗೋಚರನಾಗುವವನು. ಕುಲಮದ, ಅಧಿಕಾರಮದ, ವಿದ್ಯಾಮದ, ಸಂಪತ್ತಿನಮದ-ಮುಂತಾದವುಗಳಿಂದ ಬೀಗುವ ಮನುಷ್ಯನಿಗೆ ನಿನ್ನ ನಾಮಸ್ಮರಣೆಯನ್ನು ಮಾಡುವ ಅರ್ಹತೆಯೂ ಹೇಗೆ ಉಂಟಾದೀತು? ॥26॥

(ಶ್ಲೋಕ - 27)

ಮೂಲಮ್

ನಮೋಕಿಂಚನವಿತ್ತಾಯ ನಿವೃತ್ತಗುಣವೃತ್ತಯೇ ।
ಆತ್ಮಾರಾಮಾಯ ಶಾಂತಾಯ ಕೈವಲ್ಯಪತಯೇ ನಮಃ ॥

ಅನುವಾದ

ನೀನು ನಿಷ್ಕಾಮ ಭಕ್ತರ ಪರಮಧನವಾಗಿರುವೆ. ತ್ರಿಗುಣಗಳನ್ನು ಅವುಗಳ ಕಾರ್ಯಗಳನ್ನು ಮೀರಿರುವವನಾಗಿರುವೆ. ಆತ್ಮಾರಾಮನೂ, ಪ್ರಶಾಂತನೂ, ಕೈವಲ್ಯ ಮೋಕ್ಷಕ್ಕೆ ಅಧಿಪತಿಯೂ ಆದ ನಿನಗೆ ನಮಸ್ಕರಿಸುತ್ತೇನೆ.॥27॥

(ಶ್ಲೋಕ - 28)

ಮೂಲಮ್

ಮನ್ಯೇ ತ್ವಾಂ ಕಾಲಮೀಶಾನಮನಾದಿನಿಧನಂ ವಿಭುಮ್ ।
ಸಮಂ ಚರಂತಂ ಸರ್ವತ್ರ ಭೂತಾನಾಂ ಯನ್ಮಿಥಃ ಕಲಿಃ ॥

ಅನುವಾದ

ಅನಾದಿಯೂ, ಅನಂತನೂ, ಸರ್ವವ್ಯಾಪಕನೂ, ಎಲ್ಲರ ನಿಯಾಮಕನೂ, ಕಾಲರೂಪೀ ಪರಮೇಶ್ವರನೂ ನೀನೇ ಆಗಿರುವೆ ಎಂದು ನಾನು ತಿಳಿಯುತ್ತೇನೆ. ಪ್ರಪಂಚದ ಸಮಸ್ತ ಪ್ರಾಣಿ, ಪದಾರ್ಥಗಳು ಪರಸ್ಪರ ವೈಷಮ್ಯದಿಂದ ಘರ್ಷಣೆ ಮಾಡುತ್ತಿದ್ದರೂ ನೀನು ಎಲ್ಲದರಲ್ಲಿ ಸಮಾನರೂಪದಿಂದ ಸಂಚರಿಸುತ್ತಿರುವೆ.॥28॥

(ಶ್ಲೋಕ - 29)

ಮೂಲಮ್

ನ ವೇದ ಕಶ್ಚಿದ್ಭಗವಂಶ್ಚಿಕೀರ್ಷಿತಂ
ತವೇಹಮಾನಸ್ಯ ನೃಣಾಂ ವಿಡಂಬನಮ್ ।
ನ ಯಸ್ಯ ಕಶ್ಚಿದ್ದಯಿತೋಸ್ತಿ ಕರ್ಹಿಚಿದ್
ದ್ವೇಷ್ಯಶ್ಚ ಯಸ್ಮಿನ್ವಿಷಮಾ ಮತಿರ್ನೃಣಾಮ್ ॥

ಅನುವಾದ

ಭಗವಂತನೇ! ನೀನು ಮನುಷ್ಯರಂತೆ ಲೀಲೆಗಳನ್ನು ಮಾಡಿದಾಗ ನೀನು ಏನು ಮಾಡಲು ಬಯಸುವೆ ಎಂಬುದು ಯಾರೂ ತಿಳಿಯಲಾರರು. ನಿನಗೆ ಎಂದಿಗೂ ಯಾರೂ ಪ್ರಿಯರು ಇಲ್ಲ, ಅಪ್ರಿಯರೂ ಇಲ್ಲ. ನಿನ್ನ ಸಂಬಂಧದಲ್ಲಿ ಜನರ ಬುದ್ಧಿಯು ವಿಷಮವಾಗಿರುತ್ತದೆ.॥29॥

(ಶ್ಲೋಕ - 30)

ಮೂಲಮ್

ಜನ್ಮ ಕರ್ಮ ಚ ವಿಶ್ವಾತ್ಮನ್ನಜಸ್ಯಾಕರ್ತುರಾತ್ಮನಃ ।
ತಿರ್ಯಂಗ್ನೃಷಿಷು ಯಾದಃಸು ತದತ್ಯಂತವಿಡಂಬನಮ್ ॥

ಅನುವಾದ

ವಿಶ್ವದ ಆತ್ಮರೂಪನಾಗಿರುವವನೇ! ನೀನು ಜನ್ಮ-ಕರ್ಮರಹಿತನಾದ ಶುದ್ಧಾತ್ಮ ಸ್ವರೂಪನೇ ಆಗಿದ್ದರೂ ಲೋಕದ ವಿಡಂಬನೆಗಾಗಿ ಪಶು-ಪಕ್ಷಿ ಮುಂತಾದ ತಿರ್ಯಕ್ ಜಂತುಗಳಲ್ಲಿಯೂ, ಮನುಷ್ಯರಲ್ಲಿಯೂ, ಮುನಿಗಳಲ್ಲಿಯೂ, ಜಲಚರಾದಿ ಪ್ರಾಣಿಗಳಲ್ಲಿಯೂ ಜನ್ಮತಳೆದು ಆ ಯೋನಿಗಳಿಗೆ ಅನುರೂಪವಾದ ದಿವ್ಯ ಕರ್ಮಗಳನ್ನು ಮಾಡುತ್ತಿರುವೆ. ಇದೆಂತಹ ನಿನ್ನ ಲೀಲೆಯು? ॥30॥

(ಶ್ಲೋಕ - 31)

ಮೂಲಮ್

ಗೋಪ್ಯಾದದೇ ತ್ವಯಿ ಕೃತಾಗಸಿ ದಾಮ ತಾವದ್
ಯಾ ತೇ ದಶಾಶ್ರುಕಲಿಲಾಂಜನಸಂಭ್ರಮಾಕ್ಷಮ್ ।
ವಕಂ ನಿನೀಯ ಭಯಭಾವನಯಾ ಸ್ಥಿತಸ್ಯ
ಸಾ ಮಾಂ ವಿಮೋಹಯತಿ ಭೀರಪಿ ಯದ್ಬಿಭೇತಿ ॥

ಅನುವಾದ

ನೀನು ಬಾಲ್ಯದಲ್ಲಿ ತುಂಟತನದಲ್ಲಿ ಗಡಿಗೆಯನ್ನು ಒಡೆದಾಗ ಯಶೋದೆಯು ನಿನ್ನನ್ನು ಕಟ್ಟಿ ಹಾಕಲು ಕೈಯಲ್ಲಿ ಹಗ್ಗವನ್ನೆತ್ತಿಕೊಂಡು ಬಂದಾಗ, ನೀನು ಹೆದರಿದವನಂತೆ ನಟಿಸುತ್ತಿರುವಾಗ ಕಣ್ಣೀರು ಸುರಿಯುತ್ತಿತ್ತು. ಕಣ್ಣಿಗೆ ಹಚ್ಚಿದ ಕಾಡಿಗೆಯೆಲ್ಲ ಗಲ್ಲಕ್ಕೆ ಮೆತ್ತಿಕೊಂಡಿತ್ತು. ಕಣ್ಣುಗಳು ಚಂಚಲವಾಗಿದ್ದವು, ಮುಖವನ್ನು ತಗ್ಗಿಸಿಕೊಂಡಿದ್ದೆ. ನಿನ್ನ ಈ ಸ್ಥಿತಿಯ-ಲೀಲೆಯ ಧ್ಯಾನ ಮಾಡುತ್ತಾ ನಾನು ಪರವಶಳಾಗಿ ಹೋಗುತ್ತೇನೆ. ಯಾರ ಕುರಿತು ಭಯವೂ ಭಯ ಪಡುತ್ತಿದೆಯೋ ಅಂತಹವನ ಇದು ಸ್ಥಿತಿ! ಎಂತಹ ಸೋಜಿಗವಿದು? ॥31॥

(ಶ್ಲೋಕ - 32)

ಮೂಲಮ್

ಕೇಚಿದಾಹುರಜಂ ಜಾತಂ ಪುಣ್ಯಶ್ಲೋಕಸ್ಯ ಕೀರ್ತಯೇ ।
ಯದೋಃ ಪ್ರಿಯಸ್ಯಾನ್ವವಾಯೇ ಮಲಯಸ್ಯೇವ ಚಂದನಮ್ ॥

ಅನುವಾದ

ನೀನು ಜನ್ಮ ರಹಿತನಾಗಿದ್ದರೂ ಏಕೆ ಜನ್ಮ ತಾಳಿದೆ? ಎಂಬುದಕ್ಕೆ ಕೆಲವು ಮಹಾಪುರುಷರು ಹೀಗೆ ಹೇಳುತ್ತಾರೆ- ‘‘ಮಲಯ ಪರ್ವತದ ಕೀರ್ತಿಯನ್ನು ಹರಡುವುದಕ್ಕಾಗಿ ಅಲ್ಲಿ ಗಂಧದ ಮರಗಳು ಹುಟ್ಟುವಂತೆಯೇ ಪುಣ್ಯಶ್ಲೋಕನೂ, ಪ್ರಿಯಭಕ್ತೋತ್ತಮನೂ ಆದ ಯದುಮಹಾರಾಜನ ಕೀರ್ತಿಯನ್ನು ವಿಸ್ತಾರಪಡಿಸಲಿಕ್ಕಾಗಿ ನೀನು ಅವನ ವಂಶದಲ್ಲಿ ಅವತರಿಸಿರುವೆ.’’ ॥32॥

(ಶ್ಲೋಕ - 33)

ಮೂಲಮ್

ಅಪರೇ ವಸುದೇವಸ್ಯ ದೇವಕ್ಯಾಂ ಯಾಚಿತೋಭ್ಯಗಾತ್ ।
ಅಜಸ್ತ್ವಮಸ್ಯ ಕ್ಷೇಮಾಯ ವಧಾಯ ಚ ಸುರದ್ವಿಷಾಮ್ ॥

ಅನುವಾದ

ಮತ್ತೆ ಕೆಲವರು ಹೇಳುತ್ತಾರೆ- ‘ಹಿಂದಿನ ಜನ್ಮದಲ್ಲಿ ಸುತಪಾ ಮತ್ತು ಪೃಶ್ನಿ ಎಂಬ ರೂಪದಲ್ಲಿದ್ದ ವಸುದೇವ-ದೇವಕಿಯರು ಪಡೆದ ವರದಂತೆ ನೀನು ಜನ್ಮರಹಿತನಾದರೂ ಅವರಲ್ಲಿ ಪುತ್ರನಾಗಿ ಅವತರಿಸಿದೆ. ದೇವತೆಗಳ ಯಾಚನೆಯಂತೆ ಈ ಲೋಕಗಳ ಕ್ಷೇಮಕ್ಕಾಗಿಯೂ, ದೈತ್ಯರ ನಾಶಕ್ಕಾಗಿಯೂ ನೀನು ಜನ್ಮ ತಾಳಿದೆ.’ ॥33॥

(ಶ್ಲೋಕ - 34)

ಮೂಲಮ್

ಭಾರಾವತಾರಣಾಯಾನ್ಯೇ ಭುವೋ ನಾವ ಇವೋದಧೌ ।
ಸೀದಂತ್ಯಾ ಭೂರಿಭಾರೇಣ ಜಾತೋ ಹ್ಯಾತ್ಮಭುವಾರ್ಥಿತಃ ॥

ಅನುವಾದ

ಇನ್ನು ಕೆಲವರು ಹೀಗೂ ಹೇಳುತ್ತಾರೆ - ‘ಈ ಭೂಮಿಯು ಅಧರ್ಮದ ಭಾರದಿಂದ ಕಡುಪೀಡಿತಳಾಗಿ ಸಮುದ್ರದ ಮಧ್ಯದಲ್ಲಿ ಮುಳುಗುತ್ತಿರುವಾಗ ಬ್ರಹ್ಮದೇವರ ಪ್ರಾರ್ಥನೆಯಂತೆ ಭೂಭಾರವನ್ನು ಇಳುಹಲು ನೀನು ಅವತರಿಸಿದೆ.’’ ॥34॥

(ಶ್ಲೋಕ - 35)

ಮೂಲಮ್

ಭವೇಸ್ಮಿನ್ ಕ್ಲಿಶ್ಯಮಾನಾನಾಮವಿದ್ಯಾಕಾಮಕರ್ಮಭಿಃ ।
ಶ್ರವಣಸ್ಮರಣಾರ್ಹಾಣಿ ಕರಿಷ್ಯನ್ನಿತಿ ಕೇಚನ ॥

ಅನುವಾದ

‘ಈ ಸಂಸಾರದಲ್ಲಿ ಅಜ್ಞಾನ, ಕಾಮನೆ, ಅನಾದಿಕರ್ಮ ಇವುಗಳ ಕಟ್ಟಿಗೆ ಸಿಲುಕಿ ಕಷ್ಟ ಪಡುತ್ತಿರುವ ಜನರ ಉದ್ಧಾರಕ್ಕಾಗಿ ಅವರಿಗೆ ಶ್ರವಣ-ಸ್ಮರಣೆಗಳಿಗೆ ಶುಭಾಲಂಬನವಾಗುವ ದಿವ್ಯವಾದ ಲೀಲೆಗಳನ್ನು ನಡೆಸುವ ಉದ್ದೇಶದಿಂದ ನೀನು ಅವತರಿಸಿರುವೆ’ ಎಂದು ಕೆಲವು ಮಹಾತ್ಮರು ಹೇಳುತ್ತಾರೆ.॥35॥

(ಶ್ಲೋಕ - 36)

ಮೂಲಮ್

ಶೃಣ್ವಂತಿ ಗಾಯಂತಿ ಗೃಣಂತ್ಯಭೀಕ್ಷ್ಣ ಶಃ
ಸ್ಮರಂತಿ ನಂದಂತಿ ತವೇಹಿತಂ ಜನಾಃ ।
ತ ಏವ ಪಶ್ಯಂತ್ಯಚಿರೇಣ ತಾವಕಂ
ಭವಪ್ರವಾಹೋಪರಮಂ ಪದಾಂಬುಜಮ್ ॥

ಅನುವಾದ

ನಿನ್ನ ಭಾಗ್ಯ ಶಾಲಿಗಳಾದ ಭಕ್ತರು ಪದೇ-ಪದೇ ನಿನ್ನ ಚರಿತ್ರವನ್ನು ಶ್ರವಣಿಸುತ್ತಾ, ಕೀರ್ತಿಸುತ್ತಾ, ಸ್ಮರಿಸುತ್ತಾ ಆನಂದಿತರಾಗಿರುತ್ತಾರೆ. ಅಂತಹವರೇ ಜನ್ಮ-ಮರಣದ ಪ್ರವಾಹವನ್ನು ಎಂದೆಂದಿಗೂ ತಡೆಗಟ್ಟುವ ನಿನ್ನ ದಿವ್ಯವಾದ ಅಡಿದಾವರೆಗಳನ್ನು ಶೀಘ್ರವಾಗಿ ಸಾಕ್ಷಾತ್ಕರಿಸಿಕೊಳ್ಳುವರು.॥36॥

(ಶ್ಲೋಕ - 37)

ಮೂಲಮ್

ಅಪ್ಯದ್ಯ ನಸ್ತ್ವಂ ಸ್ವಕೃತೇಹಿತ ಪ್ರಭೋ
ಜಿಹಾಸಸಿ ಸ್ವಿತ್ಸುಹೃದೋನುಜೀವಿನಃ ।
ಯೇಷಾಂ ನ ಚಾನ್ಯದ್ಭವತಃ ಪದಾಂಬುಜಾತ್
ಪರಾಯಣಂ ರಾಜಸು ಯೋಜಿತಾಂಹಸಾಮ್ ॥

ಅನುವಾದ

ಭಕ್ತರ ಎಲ್ಲ ಇಷ್ಟಾರ್ಥಗಳನ್ನು ಈಡೇರಿಸುವ ಕಲ್ಪವೃಕ್ಷವೇ! ಪ್ರಭುವೇ! ನಿನ್ನವರಾಗಿ ನಿನ್ನ ಸಂಬಂಧಿಗಳಾಗಿ, ನಿನ್ನನ್ನೇ ಅವಲಂಬಿಸಿ ಬಾಳುತ್ತಿರುವ ನಮ್ಮನ್ನು ಈಗಲೇ ಬಿಟ್ಟು ಹೊರಟು ಹೋಗಲು ಬಯಸುವೆಯಾ? ನಮಗೆ ನಿನ್ನ ಚರಣಾರವಿಂದಗಳಲ್ಲದೆ ಬೇರೆ ಯಾವ ಆಸರೆಯೂ ಇಲ್ಲ. ಭೂಮಿಯಲ್ಲಿರುವ ರಾಜರೆಲ್ಲರೂ ನಮಗೆ ವಿರೋಧಿಗಳಾಗಿದ್ದಾರೆ ಎಂಬುದು ನಿನಗೆ ತಿಳಿದೇ ಇದೆ. ॥37॥

(ಶ್ಲೋಕ - 38)

ಮೂಲಮ್

ಕೇ ವಯಂ ನಾಮರೂಪಾಭ್ಯಾಂ ಯದುಭಿಃ ಸಹ ಪಾಂಡವಾಃ ।
ಭವತೋದರ್ಶನಂ ಯರ್ಹಿ ಹೃಷೀಕಾಣಾಮಿವೇಶಿತುಃ ॥

ಅನುವಾದ

ಆತ್ಮನು ಎಲ್ಲ ಇಂದ್ರಿಯಗಳಿಗೆ ಧಾರಕನೂ ಪ್ರೇರಕನು ಅವನಲ್ಲದೆ ಇಂದ್ರಿಯಗಳಿಗೆ ಶಕ್ತಿ, ಅಸ್ತಿತ್ವ ಎಲ್ಲಿಯದು? ಹಾಗೆಯೇ ನಿನ್ನ ದಿವ್ಯದರ್ಶನವಾಗದಿದ್ದರೆ ಯದುವಂಶಿಯರ ಹಾಗೂ ಪಾಂಡವರ ನಾಮ-ರೂಪ-ಅಸ್ತಿತ್ವ, ಶಕ್ತಿ, ಇವುಗಳು ಹೇಗೆ ಇರಬಲ್ಲವು? ॥38॥

(ಶ್ಲೋಕ - 39)

ಮೂಲಮ್

ನೇಯಂ ಶೋಭಿಷ್ಯತೇ ತತ್ರ ಯಥೇದಾನೀಂ ಗದಾಧರ ।
ತ್ವತ್ಪದೈರಂಕಿತಾ ಭಾತಿ ಸ್ವಲಕ್ಷಣವಿಲಕ್ಷಿತೈಃ ॥

ಅನುವಾದ

ಪ್ರಭೋ! ಗದಾಧರ! ನಿನ್ನ ದಿವ್ಯ ಚರಣಾರವಿಂದಗಳ ವಿಲಕ್ಷಣವಾದ ಚಿಹ್ನೆಗಳಿಂದ ಈ ಕುರುಜಾಂಗಲ ಪ್ರದೇಶವು ಎಷ್ಟು ಶೋಭಾಯಮಾನವಾಗಿದೆಯೋ, ನೀನು ಇಲ್ಲಿಂದ ಹೊರಟುಹೋದ ಬಳಿಕ ಆ ಕಾಂತಿಯು ಇಲ್ಲವಾಗುವುದು.॥39॥

(ಶ್ಲೋಕ - 40)

ಮೂಲಮ್

ಇಮೇ ಜನಪದಾಃ ಸ್ವದ್ಧಾಃ ಸುಪಕ್ವೌಷವೀರುಧಃ ।
ವನಾದ್ರಿನದ್ಯುದನ್ವಂತೋ ಹ್ಯೇಧಂತೇ ತವ ವೀಕ್ಷಿತೈಃ ॥

ಅನುವಾದ

ನಿನ್ನ ಕೃಪಾಕಟಾಕ್ಷದ ಪ್ರಭಾವದಿಂದಲೇ ಈ ದೇಶವು ಪಕ್ವವಾದ ಸಮೃದ್ಧಿಗಳಿಂದ, ಧಾನ್ಯ ಮತ್ತು ಫಲಪುಷ್ಪಭರಿತವಾದ ಗಿಡ-ಮರ-ಬಳ್ಳಿಗಳ ಸಂಪತ್ತುಗಳಿಂದ ಸಮೃದ್ಧವಾಗಿದೆ. ಅರಣ್ಯ-ಗಿರಿ-ನದೀ-ಸಮುದ್ರಗಳೂ ನಿನ್ನ ದೃಷ್ಟಿಯಿಂದ ವೃದ್ಧಿಯನ್ನು ಪಡೆದಿರುವವು.॥40॥

(ಶ್ಲೋಕ - 41)

ಮೂಲಮ್

ಅಥ ವಿಶ್ವೇಶ ವಿಶ್ವಾತ್ಮನ್ವಿಶ್ವಮೂರ್ತೇ ಸ್ವಕೇಷು ಮೇ ।
ಸ್ನೇಹಪಾಶಮಿಮಂ ಛಿಂ ದೃಢಂ ಪಾಂಡುಷು ವೃಷ್ಣಿಷು ॥

ಅನುವಾದ

ವಿಶ್ವೇಶ್ವರನೂ, ವಿಶ್ವಾತ್ಮನೂ, ವಿಶ್ವಮೂರ್ತಿಯೂ ಆಗಿರುವ ಪ್ರಭುವೇ! ಸ್ವಜನರಾದ ಈ ಪಾಂಡವರಲ್ಲಿ ಹಾಗೂ ಯಾದವರಲ್ಲಿ ನನಗೆ ದೃಢವಾದ ಮಮತೆ ಬೆಳೆದು ಬಿಟ್ಟಿದೆ. ಈ ಪ್ರಾಕೃತವಾದ ಸ್ನೇಹಪಾಶವನ್ನು ಕತ್ತರಿಸಿ ಹಾಕಿಬಿಡು.॥41॥

(ಶ್ಲೋಕ - 42)

ಮೂಲಮ್

ತ್ವಯಿ ಮೇನನ್ಯವಿಷಯಾ ಮತಿರ್ಮಧುಪತೇಸಕೃತ್ ।
ರತಿಮುದ್ವಹತಾಂ ತದ್ವದ್ಗಂಗೇವೌಘಮುದನ್ವತಿ ॥

ಅನುವಾದ

ಪರಮಾನಂದ ಸ್ವರೂಪನಾದ ಮಧುಪತಿಯೇ! ಗಂಗೆಯ ಅಖಂಡ ಪ್ರವಾಹವು ಸಮುದ್ರದಲ್ಲೇ ಸದಾ ಹೋಗಿ ಸೇರುವಂತೆಯೇ ನನ್ನ ಬುದ್ದಿಯೂ ಅತ್ತ-ಇತ್ತ ಎಲ್ಲಿಯೂ ಹರಿಯದೆ ನಿನ್ನಲ್ಲಿಯೇ ಪ್ರೇಮ ರಸ ಪೂರ್ಣಪ್ರವಾಹವಾಗಿ ಸದಾಹರಿಯುತ್ತಿರಲಿ ಹಾಗೂ ಅಲ್ಲಿಯೇ ಶಾಶ್ವತವಾಗಿ ನೆಲೆಸಲಿ. ॥42॥

(ಶ್ಲೋಕ - 43)

ಮೂಲಮ್

ಶ್ರೀಕೃಷ್ಣ ಕೃಷ್ಣಸಖ ವೃಷ್ಣ್ಯೃಷಭಾವನಿಧ್ರುಗ್
ರಾಜನ್ಯವಂಶದಹನಾನಪವರ್ಗವೀರ್ಯ ।
ಗೋವಿಂದ ಗೋದ್ವಿಜಸುರಾರ್ತಿಹರಾವತಾರ
ಯೋಗೇಶ್ವರಾಖಿಲಗುರೋ ಭಗವನ್ನಮಸ್ತೇ ॥

ಅನುವಾದ

ಶ್ರೀಕಷ್ಣಾ! ಅರ್ಜುನನ ಪ್ರಿಯ ಮಿತ್ರನೇ! ಯದುವಂಶ ಶಿರೋಮಣಿಯೇ! ಭೂಮಿಗೆ ಭಾರವಾಗಿರುವ ರಾಜವೇಶಧಾರಿಗಳಾದ ದೈತ್ಯರ ಸಂಹಾರಕ್ಕಾಗಿ ಬೆಂಕಿಯಂತಿರುವವನೇ! ಅನಂತವೀರ್ಯನೇ! ಗೋವಿಂದಾ! ಗೋ, ದ್ವಿಜ, ದೇವತೆಗಳ ದುಃಖವನ್ನು ಹರಿಸಲು ಅವತರಿಸಿದ ಸ್ವಾಮಿಯೇ! ಯೋಗೇಶ್ವರನೇ! ಚರಾಚರದ ಗುರುವೇ! ಭಗವಂತನೇ! ನಿನಗೆ ಪದೇ-ಪದೇ ನಮಸ್ಕರಿಸುತ್ತಿದ್ದೇನೆ.॥43॥

(ಶ್ಲೋಕ - 44)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಪೃಥಯೇತ್ಥಂ ಕಲಪದೈಃ ಪರಿಣೂತಾಖಿಲೋದಯಃ ।
ಮಂದಂ ಜಹಾಸ ವೈಕುಂಠೋ ಮೋಹಯನ್ನಿವ ಮಾಯಯಾ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಕುಂತೀದೇವಿಯು ಹೀಗೆ ಮಧುರವಾದ ಶಬ್ದಗಳಿಂದ ಭಗವಂತನ ಹೆಚ್ಚಿನ ಲೀಲೆಗಳನ್ನು ವರ್ಣಿಸಿದಳು. ಇದನ್ನು ಕೇಳಿ ಭಗವಾನ್ ಶ್ರೀಕೃಷ್ಣನು ತನ್ನ ಮಾಯೆಯಿಂದ, ಆಕೆಯನ್ನು ಮೋಹಗೊಳಿಸುವಂತೆ ಮಧುರ ಮಂದಹಾಸವನ್ನು ಬೀರಿದನು.॥44॥

(ಶ್ಲೋಕ - 45)

ಮೂಲಮ್

ತಾಂ ಬಾಢಮಿತ್ಯುಪಾಮಂತ್ರ್ಯ ಪ್ರವಿಶ್ಯ ಗಜಸಾಹ್ವಯಮ್ ।
ಸಿಯಶ್ಚ ಸ್ವಪುರಂ ಯಾಸ್ಯನ್ ಪ್ರೇಮ್ಣಾ ರಾಜ್ಞಾ ನಿವಾರಿತಃ ॥

ಅನುವಾದ

‘ಅತ್ತೆ! ಹಾಗೆಯೇ ಆಗಲಿ’ ಎಂದು ಕುಂತಿಗೆ ಹೇಳಿ ಹಸ್ತಿನಾಪುರದ ಅರಮನೆಗೆ ಹಿಂದಿರುಗಿದನು. ಅಲ್ಲಿ ಸುಭದ್ರೆಯೇ ಮುಂತಾದ ಸ್ತ್ರೀಯರಿಂದ ಬೀಳ್ಕೊಂಡು ಹೊರಡಲನುವಾದಾಗ ರಾಜಾಯುಧಿಷ್ಠಿರನು ಪರಮಪ್ರೇಮದಿಂದ ತಡೆಗಟ್ಟಿದನು.॥45॥

(ಶ್ಲೋಕ - 46)

ಮೂಲಮ್

ವ್ಯಾಸಾದ್ಯೈರೀಶ್ವರೇಹಾಜ್ಞೈಃ ಕೃಷ್ಣೇನಾದ್ಭುತಕರ್ಮಣಾ ।
ಪ್ರಬೋತೋಪೀತಿಹಾಸೈರ್ನಾಬುಧ್ಯತ ಶುಚಾರ್ಪಿತಃ ॥

ಅನುವಾದ

ಧರ್ಮರಾಜನು ಬಂಧು-ಮಿತ್ರರ ಮರಣದಿಂದ ಅತ್ಯಂತ ಶೋಕಾಕುಲನಾಗಿದ್ದನು. ಭಗವಂತನ ಲೀಲೆಯ ಮರ್ಮವನ್ನರಿತ ವ್ಯಾಸಾದಿ ಮಹರ್ಷಿಗಳೂ ಹಾಗೂ ಸ್ವಯಂ ಅದ್ಭುತ ಚರಿತನಾದ ಭಗವಾನ್ ಶ್ರೀಕೃಷ್ಣನೂ ಕೂಡ ಅನೇಕ ಇತಿಹಾಸಗಳನ್ನು ಹೇಳಿ ಆತನನ್ನು ಸಾಂತ್ವನಗೊಳಿಸಲು ಪ್ರಯತ್ನಿಸಿದರೂ ಆತನಿಗೆ ಸಮಾಧಾನವಾಗಲಿಲ್ಲ. ಅವನ ಶೋಕವು ದೂರವಾಗಲಿಲ್ಲ.॥46॥

(ಶ್ಲೋಕ - 47)

ಮೂಲಮ್

ಆಹ ರಾಜಾ ಧರ್ಮಸುತಶ್ಚಿಂತಯನ್ಸುಹೃದಾಂ ವಧಮ್ ।
ಪ್ರಾಕೃತೇನಾತ್ಮನಾ ವಿಪ್ರಾಃ ಸ್ನೇಹಮೋಹವಶಂ ಗತಃ ॥

(ಶ್ಲೋಕ - 48)

ಮೂಲಮ್

ಅಹೋ ಮೇ ಪಶ್ಯತಾಜ್ಞಾನಂ ಹೃದಿ ರೂಢಂ ದುರಾತ್ಮನಃ ।
ಪಾರಕ್ಯಸ್ಯೈವ ದೇಹಸ್ಯ ಬಹ್ವ್ಯೋ ಮೇಕ್ಷೌಹಿಣೀರ್ಹತಾಃ ॥

ಅನುವಾದ

ಶೌನಕಾದಿ ಮಹರ್ಷಿಗಳೇ! ಧರ್ಮಪುತ್ರನಾದ ಮಹಾರಾಜಾ ಯುಧಿಷ್ಠಿರನನ್ನು ಪ್ರಾಕೃತವಾದ ಮನಸ್ಸು ಸ್ನೇಹ-ಮೋಹಗಳಲ್ಲಿ ಬಲವಾಗಿ ಬಂಧಿಸಿಬಿಟ್ಟಿತ್ತು. ಅದರಿಂದ ಪರವಶನಾದ ಆತನು ಬಂಧು-ಮಿತ್ರರ ವಧೆಯನ್ನೇ ಕುರಿತು ಚಿಂತಿಸುತ್ತಾ ಹೀಗೆಂದುಕೊಂಡನು — ಅಯ್ಯೋ! ದುರಾತ್ಮನಾದ ನನ್ನ ಹೃದಯದಲ್ಲಿ ಎಂತಹ ಅಜ್ಞಾನ ಬೇರೂರಿದೆ? ನಾಯಿ-ನರಿಗಳಿಗೆ ಆಹಾರವಾದ ಈ ಅನಾತ್ಮದೇಹಕ್ಕಾಗಿ ನಾನು ಅನೇಕ ಅಕ್ಷೌಹಿಣೀ* ಸೈನ್ಯವನ್ನು ಬಲಿಗೊಟ್ಟೆನು! ॥47-48॥

ಟಿಪ್ಪನೀ
  • ಒಂದು ಅಕ್ಷೌಹಿಣಿ ಎಂದರೆ - 21,870 ರಥಗಳು, 21870 ಆನೆಗಳು, 1,09, 350 ಕಾಲಾಳುಗಳು, 65, 610 ಕುದುರೆಸವಾರರು. ಇಷ್ಟು ಸೇನೆ ಸೇರಿದರೆ ಒಂದು ಅಕ್ಷೌಹಿಣಿ ಆಗುತ್ತದೆ.

(ಶ್ಲೋಕ - 49)

ಮೂಲಮ್

ಬಾಲದ್ವಿಜಸುಹೃನ್ಮಿತ್ರಪಿತೃಭ್ರಾತೃಗುರುದ್ರುಹಃ ।
ನ ಮೇ ಸ್ಯಾನ್ನಿರಯಾನ್ಮೋಕ್ಷೋ ಹ್ಯಪಿ ವರ್ಷಾಯುತಾಯುತೈಃ ॥

ಅನುವಾದ

ನಾನು ಬಾಲಕರು, ಬ್ರಾಹ್ಮಣರು, ನೆಂಟರಿಷ್ಟರು, ತಂದೆ-ಅಣ್ಣ-ತಮ್ಮಂದಿರ ಸ್ಥಾನದಲ್ಲಿರುವವರು, ಗುರು ಜನರು-ಹೀಗೆ ಇವರಿಗೆಲ್ಲ ದ್ರೋಹ ಮಾಡಿದೆನು. ಇಂತಹ ಮಹಾಪಾಪವನ್ನು ಮಾಡಿದ ನನಗೆ ಕೋಟ್ಯಂತರ ವರ್ಷಗಳು ಕಳೆದರೂ ನರಕದಿಂದ ಬಿಡಗಡೆಯಾಗದು.॥49॥

(ಶ್ಲೋಕ - 50)

ಮೂಲಮ್

ನೈನೋ ರಾಜ್ಞಃ ಪ್ರಜಾಭರ್ತು-
ರ್ಧರ್ಮಯುದ್ಧೇ ವಧೋ ದ್ವಿಷಾಮ್ ।
ಇತಿ ಮೇ ನ ತು ಬೋಧಾಯ
ಕಲ್ಪತೇ ಶಾಸನಂ ವಚಃ ॥

ಅನುವಾದ

‘ರಾಜನು ಪ್ರಜೆಗಳ ರಕ್ಷಣೆಗಾಗಿ ಧರ್ಮಯುದ್ಧದಲ್ಲಿ ಶತ್ರುಗಳನ್ನು ಕೊಂದರೆ ಅದರಿಂದ ಅವನಿಗೆ ಪಾಪತಟ್ಟದು’ ಎಂಬ ಶಾಸ್ತ್ರವಚನವಿದ್ದರೂ ಇದರಿಂದ ನನಗೆ ಸಮಾಧಾನ ಆಗುತ್ತಿಲ್ಲ. ॥50॥

(ಶ್ಲೋಕ - 51)

ಮೂಲಮ್

ಸೀಣಾಂ ಮದ್ಧತಬಂಧೂನಾಂ
ದ್ರೋಹೋ ಯೋಸಾವಿಹೋತ್ಥಿತಃ ।
ಕರ್ಮಭಿರ್ಗೃಹಮೇೀಯೈರ್ನಾಹಂ
ಕಲ್ಪೋ ವ್ಯಪೋಹಿತುಮ್ ॥

ಅನುವಾದ

ಈ ಯುದ್ಧದಲ್ಲಿ ನಾನು ಕೊಂದುಹಾಕಿರುವ ನೆಂಟರಿಷ್ಟರನ್ನು ಕಳೆದುಕೊಂಡು ಕೊರಗುತ್ತಿರುವ ಹೆಂಗಸರಿಗೆ ನನ್ನಿಂದಾದ ದ್ರೋಹವನ್ನು ತೊಡೆದು ಹಾಕುವುದಕ್ಕೆ ಗೃಹಸ್ಥರು ಆಚರಿಸಲು ಯೋಗ್ಯವಾದ ಯಾವುದೇ ಯಜ್ಞ ಯಾಗಾದಿಗಳಿಂದಲೂ ಸಾಧ್ಯವಿಲ್ಲ.॥51॥

(ಶ್ಲೋಕ - 52)

ಮೂಲಮ್

ಯಥಾ ಪಂಕೇನ ಪಂಕಾಂಭಃ ಸುರಯಾ ವಾ ಸುರಾಕೃತಮ್ ।
ಭೂತಹತ್ಯಾಂ ತಥೈವೈಕಾಂ ನ ಯಜ್ಞೈರ್ಮಾಷ್ಟುಮರ್ಹತಿ ॥

ಅನುವಾದ

ಕೆಸರಿನಿಂದ ಕೊಳಕಾದ ನೀರನ್ನು ಕೆಸರಿನಿಂದಲೇ ತೊಳೆಯಲಾಗುವುದಿಲ್ಲ. ಮದ್ಯದಿಂದ ಉಂಟಾದ ಅಪವಿತ್ರತೆಯನ್ನು ಮದ್ಯದಿಂದಲೇ ಹೋಗಲಾಡಿಸಲಾಗುವುದಿಲ್ಲ. ಹಾಗೆಯೇ ಪ್ರಾಣಿಹಿಂಸೆಯಿಂದಲೇ ಕೂಡಿದ ಅನೇಕ ಯಜ್ಞಗಳಿಂದಲೂ ಒಂದು ಪ್ರಾಣಿ ಹತ್ಯೆಯ ಪಾಪದ ಪ್ರಾಯಶ್ಚಿತ್ತವೂ ಆಗಲಾರದು. ಹಾಗಿರುವಾಗ ಇಷ್ಟೊಂದು ಪಾಪವನ್ನು ಹೋಗಲಾಡಿಸಬಹುದೇ? ಹೀಗೆ ಯುಧಿಷ್ಠಿರನು ಮನಸ್ಸಿನಲ್ಲಿ ಬಹಳ ವ್ಯಥೆಪಡುತ್ತಿದ್ದನು.॥52॥

ಅನುವಾದ (ಸಮಾಪ್ತಿಃ)

ಎಂಟನೆಯ ಅಧ್ಯಾಯವು ಮುಗಿಯಿತು.॥8॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ಕುಂತೀಸ್ತುತಿರ್ಯುಷ್ಠಿರಾನುತಾಪೋ ನಾಮಾಷ್ಟಮೋಽಧ್ಯಾಯಃ ॥8॥