[ಆರನೆಯ ಅಧ್ಯಾಯ]
ಭಾಗಸೂಚನಾ
ನಾರದರ ಪೂರ್ವಚರಿತ್ರೆಯು ಮುಂದುವರಿದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಏವಂ ನಿಶಮ್ಯ ಭಗವಾನ್ದೇವರ್ಷೇರ್ಜನ್ಮ ಕರ್ಮ ಚ ।
ಭೂಯಃ ಪಪ್ರಚ್ಛ ತಂ ಬ್ರಹ್ಮನ್ ವ್ಯಾಸಃ ಸತ್ಯವತೀಸುತಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿಗಳೇ! ದೇವರ್ಷಿ ನಾರದರ ಜನ್ಮ-ಕರ್ಮಗಳ ವಿಷಯವನ್ನು ಕೇಳಿದ ಸತ್ಯವತಿನಂದನ ಭಗವಾನ್ ಶ್ರೀವೇದವ್ಯಾಸರು ಮತ್ತೆ ಅವರನ್ನು ಇಂತು ಪ್ರಶ್ನಿಸಿದರು.॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ವ್ಯಾಸ ಉವಾಚ
ಮೂಲಮ್
ಭಿಕ್ಷುಭಿರ್ವಿಪ್ರವಸಿತೇ ವಿಜ್ಞಾನಾದೇಷ್ಟೃಭಿಸ್ತವ ।
ವರ್ತಮಾನೋ ವಯಸ್ಯಾದ್ಯೇ ತತಃ ಕಿಮಕರೋದ್ಭವಾನ್ ॥
ಅನುವಾದ
ಶ್ರೀವೇದವ್ಯಾಸರು ಕೇಳುತ್ತಾರೆ — ದೇವರ್ಷಿಗಳೇ! ತಮಗೆ ಜ್ಞಾನೋಪದೇಶ ಮಾಡಿದ ಯತಿಗಳು ಹೋದ ಬಳಿಕ ನೀವೇನು ಮಾಡಿದಿರಿ? ಆಗ ತಾವಿನ್ನೂ ತುಂಬಾ ಬಾಲ್ಯಾವಸ್ಥೆಯಲ್ಲಿದ್ದಿರಬಹುದು.॥2॥
(ಶ್ಲೋಕ - 3)
ಮೂಲಮ್
ಸ್ವಾಯಂಭುವ ಕಯಾ ವೃತ್ತ್ಯಾ ವರ್ತಿತಂ ತೇ ಪರಂ ವಯಃ ।
ಕಥಂ ಚೇದಮುದಸ್ರಾಕ್ಷೀಃ ಕಾಲೇ ಪ್ರಾಪ್ತೇ ಕಲೇವರಮ್ ॥
ಅನುವಾದ
ಸ್ವಾಯಂಭುವ! ತಮ್ಮ ಆಯುಷ್ಯದ ಉಳಿದ ಭಾಗವನ್ನು ಹೇಗೆ ಕಳೆದಿರಿ? ಮತ್ತೆ ಮೃತ್ಯುವಿನ ಸಮಯದಲ್ಲಿ ನೀವು ಯಾವ ವಿಧದಿಂದ ಶರೀರವನ್ನು ತ್ಯಜಿಸಿದಿರಿ? ॥3॥
(ಶ್ಲೋಕ - 4)
ಮೂಲಮ್
ಪ್ರಾಕ್ಕಲ್ಪವಿಷಯಾಮೇತಾಂ ಸ್ಮೃತಿಂ ತೇ ಸುರಸತ್ತಮ ।
ನ ಹ್ಯೇಷ ವ್ಯವಧಾತ್ಕಾಲ ಏಷ ಸರ್ವನಿರಾಕೃತಿಃ ॥
ಅನುವಾದ
ದೇವರ್ಷಿ ಮುನಿಶ್ರೇಷ್ಠರೇ! ಕಾಲವಾದರೋ ಎಲ್ಲ ವಸ್ತುಗಳನ್ನು ನಾಶಮಾಡಿ ಬಿಡುತ್ತದೆ. ಹಾಗಿದ್ದರೂ ನಿಮ್ಮ ಜನ್ಮಾಂತರದ ನೆನಪು ಅಳಿಯದೆ ಹೇಗೆ ಉಳಿಯಿತು? ॥4॥
(ಶ್ಲೋಕ - 5)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಭಿಕ್ಷುಭಿರ್ವಿಪ್ರವಸಿತೇ ವಿಜ್ಞಾನಾದೇಷ್ಟೃಭಿರ್ಮಮ ।
ವರ್ತಮಾನೋ ವಯಸ್ಯಾದ್ಯೇ ತತ ಏತದಕಾರಷಮ್ ॥
ಅನುವಾದ
ನಾರದರು ಹೇಳಿದರು — ನನಗೆ ಜ್ಞಾನೋಪದೇಶ ಮಾಡಿದ ಯೋಗಿಗಳು ಹೊರಟುಹೋದಾಗ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ನಾನು ಹೇಗೆ ಜೀವನ ನಡೆಸಿದೆ ಎಂಬುದನ್ನು ಕೇಳಿ ॥5॥
(ಶ್ಲೋಕ - 6)
ಮೂಲಮ್
ಏಕಾತ್ಮಜಾ ಮೇ ಜನನೀ ಯೋಷಿನ್ಮೂಢಾ ಚ ಕಿಂಕರೀ ।
ಮಯ್ಯಾತ್ಮಜೇನನ್ಯಗತೌ ಚಕ್ರೇ ಸ್ನೇಹಾನುಬಂಧನಮ್ ॥
ಅನುವಾದ
ನನ್ನ ತಾಯಿಗೆ ನಾನೊಬ್ಬನೇ ಮಗನು. ಆಕೆಯು ಹೆಂಗಸಾಗಿದ್ದು, ಜೊತೆಗೆ ತಿಳಿವಳಿಕೆ ಇಲ್ಲದವಳೂ, ದಾಸಿಯೂ ಆಗಿದ್ದಳು. ನನಗೂ ಆಕೆಯನ್ನು ಬಿಟ್ಟು ಬೇರಾವ ಗತಿಯೂ ಇರಲಿಲ್ಲ. ಅವಳು ನನ್ನನ್ನು ತನ್ನ ಸ್ನೇಹಪಾಶದಿಂದ ಕಟ್ಟಿಹಾಕಿದ್ದಳು.॥6॥
(ಶ್ಲೋಕ - 7)
ಮೂಲಮ್
ಸಾಸ್ವತಂತ್ರಾ ನ ಕಲ್ಪಾಸೀದ್ಯೋಗಕ್ಷೇಮಂ ಮಮೇಚ್ಛತೀ ।
ಈಶಸ್ಯ ಹಿ ವಶೇ ಲೋಕೋ ಯೋಷಾ ದಾರುಮಯೀ ಯಥಾ ॥
ಅನುವಾದ
ಅವಳು ನನ್ನ ಯೋಗಕ್ಷೇಮದ ಕುರಿತು ಬಹಳ ಚಿಂತಿಸುತ್ತಿದ್ದರೂ ಪರಾಧೀನಳಾದ ಕಾರಣ ಏನನ್ನೂ ಮಾಡಲಾರದವಳಾಗಿದ್ದಳು. ಸೂತ್ರದ ಬೊಂಬೆಯು ಕುಣಿಸುವವನ ಅಧೀನವಿದ್ದು; ಅವನ ಇಚ್ಛೆಯಂತೆ ಕುಣಿಯುವ ಹಾಗೆಯೇ ಈ ಇಡೀ ಪ್ರಪಂಚವು ಈಶ್ವರನ ಅಧೀನದಲ್ಲಿದೆ.॥7॥
(ಶ್ಲೋಕ - 8)
ಮೂಲಮ್
ಅಹಂ ಚ ತದ್ಬ್ರಹ್ಮಕುಲೇ ಊಷಿವಾಂಸ್ತದಪೇಕ್ಷಯಾ ।
ದಿಗ್ದೇಶಕಾಲಾವ್ಯತ್ಪನ್ನೋ ಬಾಲಕಃ ಪಂಚಹಾಯನಃ ॥
ಅನುವಾದ
ನಾನೂ ಕೂಡ ನನ್ನ ತಾಯಿಯ ಸ್ನೇಹಬಂಧನದಲ್ಲಿ ಬಂಧಿತನಾಗಿ ಆ ಬ್ರಾಹ್ಮಣರ ವಸತಿಯಲ್ಲೇ ಇರುತ್ತಿದ್ದೆ. ಐದು ವರ್ಷ ವಯಸ್ಸಾದಾಗ ನನಗೆ ದಿಶೆ-ದೇಶ-ಕಾಲ ಸಂಬಂಧವಾಗಿ ಏನೂ ಅರಿವಿರಲಿಲ್ಲ.॥8॥
(ಶ್ಲೋಕ - 9)
ಮೂಲಮ್
ಏಕದಾ ನಿರ್ಗತಾಂ ಗೇಹಾದ್ದುಹಂತೀಂ ನಿಶಿ ಗಾಂ ಪಥಿ ।
ಸರ್ಪೋದಶತ್ಪದಾ ಸ್ಪೃಷ್ಟಃ ಕೃಪಣಾಂ ಕಾಲಚೋದಿತಃ ॥
ಅನುವಾದ
ಹೀಗಿರುವಾಗ ಒಂದು ದಿನ ರಾತ್ರಿ ನನ್ನ ತಾಯಿಯು ಹಾಲುಕರೆಯಲು ಮನೆಯಿಂದ ಹೊರಗೆ ಹೋಗುವಾಗ ದಾರಿಯಲ್ಲಿ ಆಕೆಯ ಕಾಲು ಒಂದು ಹಾವಿಗೆ ತಗುಲಿತು. ಅದು ಆ ಬಡಪಾಯಿಯನ್ನು ಕಚ್ಚಿಬಿಟ್ಟಿತು. ಇದರಲ್ಲಿ ಸರ್ಪದ್ದೇನು ತಪ್ಪಿದೆ? ಮೃತ್ಯುವಿನ ಪ್ರೇರಣೆಯೇ ಹೀಗಿತ್ತು.॥9॥
(ಶ್ಲೋಕ - 10)
ಮೂಲಮ್
ತದಾ ತದಹಮೀಶಸ್ಯ ಭಕ್ತಾನಾಂ ಶಮಭೀಪ್ಸತಃ ।
ಅನುಗ್ರಹಂ ಮನ್ಯಮಾನಃ ಪ್ರಾತಿಷ್ಠಂ ದಿಶಮುತ್ತರಾಮ್ ॥
ಅನುವಾದ
ಭಕ್ತರ ಮಂಗಳವನ್ನೇ ಬಯಸುವ ಭಗವಂತನು ಹೀಗೆ ಅನುಗ್ರಹವೇ ಮಾಡಿರುವನು ಎಂದು ನಾನು ತಿಳಿದು ಉತ್ತರ ದಿಕ್ಕಿನ ಕಡೆಗೆ ಹೊರಟು ಬಿಟ್ಟೆನು.॥10॥
(ಶ್ಲೋಕ - 11)
ಮೂಲಮ್
ಸೀತಾಂಜನಪದಾಂಸ್ತತ್ರ ಪುರಗ್ರಾಮವ್ರಜಾಕರಾನ್ ।
ಖೇಟಖರ್ವಟವಾಟೀಶ್ಚ ವನಾನ್ಯುಪವನಾನಿ ಚ ॥
(ಶ್ಲೋಕ - 12)
ಮೂಲಮ್
ಚಿತ್ರಧಾತುವಿಚಿತ್ರಾದ್ರೀನಿಭಭಗ್ನಭುಜದ್ರುಮಾನ್ ।
ಜಲಾಶಯಾನ್ ಶಿವಜಲಾನ್ನಲಿನೀಃ ಸುರಸೇವಿತಾಃ ॥
(ಶ್ಲೋಕ - 13)
ಮೂಲಮ್
ಚಿತ್ರಸ್ವನೈಃ ಪತ್ರರಥೈರ್ವಿಭ್ರಮದ್ಭ್ರಮರಶ್ರಿಯಃ ।
ನ ಲವೇಣುಶರಸ್ತಂಬಕುಶಕೀಚಕಗಹ್ವರಮ್ ॥
(ಶ್ಲೋಕ - 14)
ಮೂಲಮ್
ಏಕ ಏವಾತಿಯಾತೋಹಮದ್ರಾಕ್ಷಂ ವಿಪಿನಂ ಮಹತ್ ।
ಘೋರಂ ಪ್ರತಿಭಯಾಕಾರಂ ವ್ಯಾಲೋಲೂಕಶಿವಾಜಿರಮ್ ॥
ಅನುವಾದ
ಹೀಗೆ ಒಬ್ಬಂಟಿಗನಾಗಿ ಹೋಗುತ್ತಿದ್ದ ನನಗೆ ದಾರಿಯಲ್ಲಿ ಅನೇಕ ಧನ-ಧಾನ್ಯ ಸಂಪನ್ನ ದೇಶಗಳೂ, ನಗರಗಳೂ, ಗ್ರಾಮಗಳೂ, ಗೊಲ್ಲರ ದೊಡ್ಡಿಗಳೂ, ಬಗೆ-ಬಗೆಯ ಗಣಿಗಳೂ, ರೈತರ ಕೊಪ್ಪಲೂ, ನದಿಗಳೂ, ಪರ್ವತ ತಪ್ಪಲಿನ ಸಣ್ಣ ಊರುಗಳೂ, ಶಿಬಿರಗಳೂ, ದೊಡ್ಡ ಮರಗಳ ತೋಪುಗಳೂ, ಅರಣ್ಯಗಳೂ, ಉದ್ಯಾನವನಗಳೂ, ಬಣ್ಣ-ಬಣ್ಣದ ಧಾತುಗಳಿಂದ ಕಂಗೊಳಿಸುವ ವಿಚಿತ್ರವಾದ ಪರ್ವತಗಳೂ ಕಾಣಿಸಿದವು. ಕೆಲವು ಕಡೆಗಳಲ್ಲಿ ಆನೆಗಳಿಂದ ಮುರಿಯಲ್ಪಟ್ಟ ರೆಂಬೆಗಳುಳ್ಳ ಕಾಡುಮರಗಳನ್ನೂ ನೋಡಿದೆನು. ಬಗೆ-ಬಗೆಯ ಚಿಲಿಪಿಲಿಗುಟ್ಟುವ ಪಕ್ಷಿಗಳಿಂದಲೂ, ಝೇಂಕರಿಸುವ ದುಂಬಿಗಳಿಂದಲೂ ಕೂಡಿದ, ದೇವತಾ ಪೂಜೆಗೆ ಉಪಯೋಗಿಯಾದ ಕಮಲಪುಷ್ಪಗಳಿಂದ ನಳ ನಳಿಸುತ್ತಿದ್ದ ತಣ್ಣೀರಿನಿಂದ ತುಂಬಿದ ತಾವರೆಕೊಳಗಳೂ ನನಗೆ ಸಿಕ್ಕಿದವು. ಇದೆಲ್ಲವನ್ನೂ ನೋಡುತ್ತಾ ನಾನು ಬಹಳ ದೂರ ಸಾಗಿದಾಗ ನನಗೆ ಒಂದು ಘೋರವಾದ ಗೊಂಡಾರಣ್ಯವು ಸಿಕ್ಕಿತು. ಅದರಲ್ಲಿ ಬಗೆ-ಬಗೆಯ ಜೊಂಡು ಹುಲ್ಲುಗಳು, ಬೆತ್ತಗಳೂ, ದರ್ಭೆಗಳ ಪೊದೆಗಳು, ಗಾಳಿಗೆ ಶಬ್ದ ಮಾಡುತ್ತಿದ್ದ ಬಿದಿರಮೆಳೆಗಳು ಇವುಗಳಿಂದ ದಟ್ಟವಾಗಿ, ಭೀಕರವಾಗಿ ಕಾಣುತ್ತಿತ್ತು. ಭಯಂಕರ ಆಕಾರದ ಹಾವುಗಳು, ಗೂಬೆ, ನರಿಗಳು ಮುಂತಾದವುಗಳ ವಾಸಸ್ಥಳವಾದ ಭಯಾನಕ ಗೊಂಡಾರಣ್ಯವನ್ನು ಕಂಡೆನು.॥11-14॥
(ಶ್ಲೋಕ - 15)
ಮೂಲಮ್
ಪರಿಶ್ರಾಂತೇಂದ್ರಿಯಾತ್ಮಾಹಂ ತೃಟ್ಪರೀತೋ ಬುಭುಕ್ಷಿತಃ ।
ಸ್ನಾತ್ವಾ ಪೀತ್ವಾ ಹ್ರದೇ ನದ್ಯಾ ಉಪಸ್ಪೃಷ್ಟೋ ಗತಶ್ರಮಃ ॥
ಅನುವಾದ
ನನ್ನ ದೇಹೇಂದ್ರಿಯಗಳು ನಡೆದು-ನಡೆದು ಬಳಲಿ ಹೋಗಿದ್ದವು. ಜೊತೆಗೆ ತಡೆಯಲಾರದಷ್ಟು ಹಸಿವು-ಬಾಯಾರಿಕೆಗಳು ನನ್ನನ್ನು ಬಾಧಿಸುತ್ತಿದ್ದವು. ಆಗ ಅಲ್ಲಿದ್ದ ನದಿಯೊಂದರಲ್ಲಿ ಸ್ನಾನಮಾಡಿ, ನೀರುಕುಡಿದು, ಆಚಮನ ಮಾಡಿ ಆಯಾಸವನ್ನು ಪರಿಹರಿಸಿಕೊಂಡೆ.॥15॥
(ಶ್ಲೋಕ - 16)
ಮೂಲಮ್
ತಸ್ಮಿನ್ನಿರ್ಮನುಜೇರಣ್ಯೇ ಪಿಪ್ಪಲೋಪಸ್ಥ ಆಸ್ಥಿತಃ ।
ಆತ್ಮನಾತ್ಮಾನಮಾತ್ಮಸ್ಥಂ ಯಥಾಶ್ರುತಮಚಿಂತಯಮ್ ॥
ಅನುವಾದ
ಅನಂತರ ಆ ನಿರ್ಜನವಾದ ಅರಣ್ಯದಲ್ಲಿ ಒಂದು ಅರಳೀಮರದ ಬುಡದಲ್ಲಿ ಕುಳಿತು ಅಂತರ್ಯಾಮಿಯಾದ ಪರಮಾತ್ಮನ ಸ್ವರೂಪವನ್ನು ಆ ಯೋಗಿಗಳಿಂದ ಕೇಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದೆನು.॥16॥
(ಶ್ಲೋಕ - 17)
ಮೂಲಮ್
ಧ್ಯಾಯತಶ್ಚರಣಾಂಭೋಜಂ ಭಾವನಿರ್ಜಿತಚೇತಸಾ ।
ಔತ್ಕಂಠ್ಯಾಶ್ರುಕಲಾಕ್ಷಸ್ಯ ಹೃದ್ಯಾಸೀನ್ಮೇ ಶನೈರ್ಹರಿಃ ॥
ಅನುವಾದ
ಭಾವಪೂರ್ಣವಾಗಿ ಏಕಾಗ್ರಚಿತ್ತದಿಂದ ಭಗವಂತನ ಪಾದಾರವಿಂದಗಳನ್ನು ಧ್ಯಾನಿಸುತ್ತಿರುವಾಗ ಆತನ ದರ್ಶನದ ಉತ್ಕಂಠತೆಯಿಂದ ಕಣ್ಣುಗಳಲ್ಲಿ ಆನಂದಾಶ್ರುಗಳು ತುಂಬಿಬಂದವು. ಆಗಲೇ ನನ್ನ ಹೃದಯದಲ್ಲಿ ಶ್ರೀಹರಿಯು ಪ್ರಕಟನಾದನು.॥17॥
(ಶ್ಲೋಕ - 18)
ಮೂಲಮ್
ಪ್ರೇಮಾತಿಭರನಿರ್ಭಿನ್ನಪುಲಕಾಂಗೋತಿನಿರ್ವೃತಃ ।
ಆನಂದಸಂಪ್ಲವೇ ಲೀನೋ ನಾಪಶ್ಯಮುಭಯಂ ಮುನೇ ॥
ಅನುವಾದ
ಮಹರ್ಷಿಯೇ! ಆಗ ಪ್ರೇಮಭಾವದ ಉದ್ರೇಕದಿಂದ ನಾನು ರೋಮಾಂಚಿತನಾಗಿ ಅನಿರ್ವಚ ನೀಯವಾದ ಸುಖವನ್ನು ಅನುಭವಿಸಿದೆನು. ಆನಂದದ ಪ್ರವಾಹದಲ್ಲಿ ಮುಳುಗಿ ಹೋಗಿದ್ದ ನನಗೆ ಒಳಗೂ ಹೊರಗೂ ಏನೂ ಕಾಣಿಸದೆ ಹೋಯಿತು. ತದಾಕಾರ ವೃತ್ತಿಯುಂಟಾಯಿತು.॥18॥
(ಶ್ಲೋಕ - 19)
ಮೂಲಮ್
ರೂಪಂ ಭಗವತೋ ಯತ್ತನ್ಮನಃಕಾಂತಂ ಶುಚಾಪಹಮ್ ।
ಅಪಶ್ಯನ್ ಸಹಸೊತ್ತಸ್ಥೇ ವೈಕ್ಲವ್ಯಾದ್ದುರ್ಮನಾ ಇವ ॥
ಅನುವಾದ
ಆಗ ಮನಸ್ಸಿಗೆ ಅತ್ಯಂತ ರಮಣೀಯವಾದ, ಸರ್ವಶೋಕಗಳನ್ನು ಹೋಗಲಾಡಿಸುವ ಶ್ರೀಭಗವಂತನ ಆ ರೂಪವು ಇದ್ದಕ್ಕಿದ್ದಂತೆ ಕಣ್ಮರೆಯಾಗಲು ನನಗೆ ಬಹಳ ಕಳವಳವುಂಟಾಯಿತು. ನಾನು ತಡೆಯಲಾರದ ಬೇಗುದಿಯಿಂದ ಥಟ್ಟನೆ ಮೇಲೆದ್ದುನಿಂತೆ.॥19॥
(ಶ್ಲೋಕ - 20)
ಮೂಲಮ್
ದಿದೃಕ್ಷುಸ್ತದಹಂ ಭೂಯಃ ಪ್ರಣಿಧಾಯ ಮನೋ ಹೃದಿ ।
ವೀಕ್ಷ್ಯಮಾಣೋಪಿ ನಾಪಶ್ಯಮವಿತೃಪ್ತ ಇವಾತುರಃ ॥
ಅನುವಾದ
ಆ ದಿವ್ಯ ಮಂಗಳರೂಪವನ್ನು ಮತ್ತೆ ದರ್ಶಿಸಬೇಕೆಂದು ಬಯಸಿದೆ. ಆದರೆ ಮನಸ್ಸನ್ನು ಹಿಂದಿನಂತೆ ಹೃದಯದಲ್ಲಿ, ನೆಲೆಗೊಳಿಸಿ ಪದೇ-ಪದೇ ದರ್ಶನಕ್ಕಾಗಿ ಪ್ರಯತ್ನಿಸಿದರೂ ನಾನು ಅವನನ್ನು ನೋಡದೆ ಹೋದಾಗ ಅತೃಪ್ತನಂತೆ, ರೋಗ ಬಂದವನಂತೆ ನರಳತೊಡಗಿದೆ.॥20॥
(ಶ್ಲೋಕ - 21)
ಮೂಲಮ್
ಏವಂ ಯತಂತಂ ವಿಜನೇ ಮಾಮಾಹಾಗೋಚರೋ ಗಿರಾಮ್ ।
ಗಂಭೀರಶ್ಲಕ್ಷ್ಣಯಾ ವಾಚಾ ಶುಚಃ ಪ್ರಶಮಯನ್ನಿವ ॥
ಅನುವಾದ
ಹೀಗೆ ನಿರ್ಜನವಾದ ಅರಣ್ಯದಲ್ಲಿ ಆತನ ದರ್ಶನಕ್ಕಾಗಿ ಪುನಃ ಪುನಃ ಪ್ರಯತ್ನಿಸುತ್ತಿದ್ದ ನನ್ನನ್ನು ಕುರಿತು ಮಾತಿಗೆ ನಿಲುಕದ ಮಹಾಪ್ರಭುವು ನನ್ನ ಶೋಕವನ್ನು ಶಮನಗೊಳಿಸಲು ಗಂಭೀರವೂ, ಮೃದುವೂ ಆದ ಮಾತಿನಿಂದ ಹೀಗೆಂದನು.॥21॥
(ಶ್ಲೋಕ - 22)
ಮೂಲಮ್
ಹಂತಾಸ್ಮಿಂಜನ್ಮನಿ ಭವಾನ್ಮಾ ಮಾಂ ದ್ರಷ್ಟುಮಿಹಾರ್ಹತಿ ।
ಅವಿಪಕ್ವ ಕಷಾಯಾಣಾಂ ದುರ್ದರ್ಶೋಹಂ ಕುಯೋಗಿನಾಮ್ ॥
ಅನುವಾದ
‘‘ಅಪ್ಪಾ! ಇದೇ ಜನ್ಮದಲ್ಲಿ ನೀನು ಮತ್ತೊಮ್ಮೆ ನನ್ನ ದರ್ಶನ ಮಾಡಲಾರೆ. ಏಕೆಂದರೆ, ಮನಸ್ಸಿನ ವಾಸನೆಗಳು ಶಾಂತವಾಗದೇ ಇರುವ ಅಪಕ್ವವಾದ ಮನಸ್ಸುಳ್ಳ, ಯೋಗಿಗಳಿಗೆ ನನ್ನ ದರ್ಶನವು ಅತ್ಯಂತ ದುರ್ಲಭವು.॥22॥
(ಶ್ಲೋಕ - 23)
ಮೂಲಮ್
ಸಕೃದ್ಯದ್ದರ್ಶಿತಂ ರೂಪಮೇತತ್ಕಾಮಾಯ ತೇನಘ ।
ಮತ್ಕಾಮಃ ಶನಕೈಃ ಸಾಧುಃ ಸರ್ವಾನ್ಮುಂಚತಿ ಹೃಚ್ಛಯಾನ್ ॥
ಅನುವಾದ
ಪುಣ್ಯಾತ್ಮನಾದ ಬಾಲಕನೇ! ನಿನ್ನ ಹೃದಯದಲ್ಲಿ ನನ್ನನ್ನು ಪಡೆಯುವ ಹಂಬಲವನ್ನು ಜಾಗ್ರತವಾಗಿಸಲೆಂದೇ ನಾನು ಒಂದು ಬಾರಿ ನಿನಗೆ ನನ್ನ ರೂಪವನ್ನು ತೋರಿದ್ದೆ. ನನ್ನನ್ನು ಪಡೆಯಬೇಕೆಂಬ ಉತ್ಕಟವಾದ ಆಕಾಂಕ್ಷೆಯಿಂದ ಸಾಧಕನ ಹೃದಯದಲ್ಲಿ ಹುದುಗಿದ್ದ ಎಲ್ಲ ವಾಸನೆಗಳು ಸ್ವಲ್ಪ-ಸ್ವಲ್ಪವಾಗಿ ತೊಲಗಿಹೋಗುತ್ತವೆ. ಅನಂತರ ನನ್ನ ಪ್ರಾಪ್ತಿಯಲ್ಲಿ ವಿಳಂಬವಾಗುವುದಿಲ್ಲ.॥23॥
(ಶ್ಲೋಕ - 24)
ಮೂಲಮ್
ಸತ್ಸೇವಯಾ ದೀರ್ಘಯಾ ತೇ ಜಾತಾ ಮಯಿ ದೃಢಾ ಮತಿಃ ।
ಹಿತ್ವಾವದ್ಯಮಿಮಂ ಲೋಕಂ ಗಂತಾ ಮಜ್ಜನತಾಮಸಿ ॥
ಅನುವಾದ
ನೀನು ಸ್ವಲ್ಪಕಾಲ ಮಾಡಿದ ಸಾಧು-ಸಂತರ ಸೇವೆಯಿಂದ ನಿನ್ನ ಚಿತ್ತವು ನನ್ನಲ್ಲಿ ಸ್ಥಿರಗೊಂಡಿದೆ. ಈಗ ನೀನು ಈ ಪ್ರಾಕೃತ ಶರೀರವನ್ನು ತ್ಯಜಿಸಿ ನನ್ನ ಕೃಪೆಯಿಂದ ಬೇಗನೇ ನನ್ನ ಪಾರ್ಷದನಾಗಿ ಬಿಡುವೆ.॥24॥
(ಶ್ಲೋಕ - 25)
ಮೂಲಮ್
ಮತಿರ್ಮಯಿ ನಿಬದ್ಧೇಯಂ ನ ವಿಪದ್ಯೇತ ಕರ್ಹಿಚಿತ್ ।
ಪ್ರಜಾಸರ್ಗನಿರೋಧೇಪಿ ಸ್ಮೃತಿಶ್ಚ ಮದನುಗ್ರಹಾತ್ ॥
ಅನುವಾದ
ನನ್ನನ್ನು ಪಡೆಯಬೇಕೆಂಬ ನಿನ್ನಲ್ಲಿ ನೆಲೆಸಿದ ಈ ದೃಢನಿಶ್ಚಯವು ಎಂದಿಗೂ ಕದಲಲಾರದು. ಸಮಸ್ತ ಸೃಷ್ಟಿಯು ಪ್ರಳಯವಾಗಿ ಹೋದರೂ ನನ್ನ ಕೃಪೆಯಿಂದ ನಿನ್ನಲ್ಲಿರುವ ನನ್ನ ಸ್ಮೃತಿಯು ಹಾಗೆಯೇ ಇರುವುದು.’’ ॥25॥
(ಶ್ಲೋಕ - 26)
ಮೂಲಮ್
ಏತಾವದುಕ್ತ್ವೋಪರರಾಮ ತನ್ಮಹದ್
ಭೂತಂ ನಭೋಲಿಂಗಮಲಿಂಗಮೀಶ್ವರಮ್ ।
ಅಹಂ ಚ ತಸ್ಮೈ ಮಹತಾಂ ಮಹೀಯಸೇ
ಶೀರ್ಷ್ಣಾವನಾಮಂ ವಿದಧೇನುಕಂಪಿತಃ ॥
ಅನುವಾದ
ಇಷ್ಟು ಹೇಳಿ ಆಕಾಶದಂತೆ ಅವ್ಯಕ್ತ ಸರ್ವಶಕ್ತಿಯುಳ್ಳ ಮಹಾನ್ ಪರಮಾತ್ಮನು ಮೌನವಾದನು. ನಾನೂ ಕೂಡ ಆ ಪರಮಕೃಪೆಯನ್ನು ಮನಗಂಡು ಮಹತೋಮಹಿಮನಾದ ಆ ಭಗವಂತನಿಗೆ ತಲೆಬಾಗಿ ನಮಸ್ಕರಿಸಿದೆನು.॥26॥
(ಶ್ಲೋಕ - 27)
ಮೂಲಮ್
ನಾಮಾನ್ಯನಂತಸ್ಯ ಹತತ್ರಪಃ ಪಠನ್
ಗುಹ್ಯಾನಿ ಭದ್ರಾಣಿ ಕೃತಾನಿ ಚ ಸ್ಮರನ್ ।
ಗಾಂ ಪರ್ಯಟಂಸ್ತುಷ್ಟ ಮನಾ ಗತಸ್ಪೃಹಃ
ಕಾಲಂ ಪ್ರತೀಕ್ಷನ್ವಿಮದೋ ವಿಮತ್ಸರಃ ॥
ಅನುವಾದ
ಆವಾಗಿನಿಂದ ನಾನು ನಾಚಿಕೆ-ಸಂಕೋಚ ಬಿಟ್ಟು ಶ್ರೀಭಗವಂತನ ರಹಸ್ಯಮಯವೂ, ಮಂಗಳಮಯವೂ ಆದ ನಾಮಂಗಳನ್ನು, ಲೀಲೆಗಳನ್ನು ಕೀರ್ತಿಸುತ್ತಾ, ಸ್ಮರಿಸುತ್ತಾ ಭೂಮಿಯಲ್ಲಿ ಸಂಚರಿಸುತ್ತಾ, ಮದ-ಮಾತ್ಸರ್ಯ, ಆಸೆಗಳನ್ನು ತೊರೆದು ಸಂತುಷ್ಟ ಮನಸ್ಸಿನಿಂದ ಕೂಡಿ ಕಾಲವನ್ನು ಎದುರುನೋಡುತ್ತಾ ಇರತೊಡಗಿದೆನು.॥27॥
(ಶ್ಲೋಕ - 28)
ಮೂಲಮ್
ಏವಂ ಕೃಷ್ಣಮತೇರ್ಬ್ರಹ್ಮನ್ನಸಕ್ತಸ್ಯಾಮಲಾತ್ಮನಃ ।
ಕಾಲಃ ಪ್ರಾದುರಭೂತ್ಕಾಲೇ ತಡಿತ್ಸೌದಾಮನೀ ಯಥಾ ॥
ಅನುವಾದ
ಬ್ರಹ್ಮರ್ಷಿಗಳೇ! ಹೀಗೆ ಶ್ರೀಕೃಷ್ಣಭಾವದಿಂದ ತುಂಬಿದ ಮತಿಯುಳ್ಳವನಾಗಿ, ನಿರ್ಲಿಪ್ತನಾಗಿ, ಪರಿಶುದ್ಧವಾದ ಹೃದಯದಿಂದ ಕಾಲತಳ್ಳುತ್ತಿರುವಾಗಲೇ ವರ್ಷಾಕಾಲದಲ್ಲಿ ದಿಢೀರನೆ ಸುಳಿಯುವ ಮಿಂಚಿನಂತೆ ನಾನು ನಿರೀಕ್ಷಿಸುತ್ತಿದ್ದ ಕಾಲವು ಬಂದೇ ಬಿಟ್ಟಿತು.॥28॥
(ಶ್ಲೋಕ - 29)
ಮೂಲಮ್
ಪ್ರಯುಜ್ಯಮಾನೇ ಮಯಿ ತಾಂ ಶುದ್ಧಾಂ ಭಾಗವತೀಂ ತನುಮ್ ।
ಆರಬ್ಧಕರ್ಮನಿರ್ವಾಣೋ ನ್ಯಪತತ್ಪಾಂಚಭೌತಿಕಃ ॥
ಅನುವಾದ
ಪರಿಶುದ್ಧವಾದ ಶ್ರೀಭಗವಂತನ ಪಾರ್ಷದ ಶರೀರವನ್ನು ಹೊಂದುವ ಸಮಯ ಬಂದೊಡನೆಯೇ ಪ್ರಾರಬ್ಧ ಕರ್ಮವು ಕಳೆದು ಹೋದುದರಿಂದ ಪಾಂಚಭೌತಿಕ ಶರೀರವು ಕಳಚಿಬಿದ್ದು ಹೋಯಿತು.॥29॥
(ಶ್ಲೋಕ - 30)
ಮೂಲಮ್
ಕಲ್ಪಾಂತ ಇದಮಾದಾಯ ಶಯಾನೇಂಭಸ್ಯುದನ್ವತಃ ।
ಶಿಶಯಿಷೋರನುಪ್ರಾಣಂ ವಿವಿಶೇಂತರಹಂ ವಿಭೋಃ ॥
ಅನುವಾದ
ಆ ಕಲ್ಪದ ಕೊನೆಯಲ್ಲಿ ಭಗವಂತನಾದ ಶ್ರೀಮನ್ನಾರಾಯಣನು ಪ್ರಳಯಕಾಲದ ಸಮುದ್ರ ಜಲದಲ್ಲಿ ನಿದ್ರೆ ಮಾಡಲು ಸಂಕಲ್ಪಿಸಿದನು. ಆಗ ಬ್ರಹ್ಮದೇವರು ತನ್ನ ಸೃಷ್ಟಿಯನ್ನು ಉಪಸಂಹಾರಗೈದು ಪರಮಾತ್ಮನಲ್ಲಿ ಸೇರಿಕೊಳ್ಳುವಾಗ ನಾನೂ ಅವರ ಉಸಿರಿನೊಡನೆ ಉಸಿರಾಗಿ ಭಗವಂತನ ಹೃದಯವನ್ನು ಪ್ರವೇಶಿಸಿಬಿಟ್ಟೆನು.॥30॥
(ಶ್ಲೋಕ - 31)
ಮೂಲಮ್
ಸಹಸ್ರಯುಗಪರ್ಯಂತೇ ಉತ್ಥಾಯೇದಂ ಸಿಸೃಕ್ಷತಃ ।
ಮರೀಚಿಮಿಶ್ರಾ ಋಷಯಃ ಪ್ರಾಣೇಭ್ಯೋಹಂ ಚ ಜಜ್ಞಿರೇ ॥
ಅನುವಾದ
ಒಂದುಸಾವಿರ ಚತುರ್ಯುಗಗಳು ಕಳೆದ ಬಳಿಕ ಬ್ರಹ್ಮನು ಎಚ್ಚರಗೊಂಡು ಪುನಃ ಸೃಷ್ಟಿಯನ್ನು ಮಾಡಲು ಇಚ್ಛಿಸಿದಾಗ ಅವನ ಪ್ರಾಣಗಳ ಮೂಲಕ ಮರೀಚ್ಯಾದಿ ಋಷಿಗಳೊಂದಿಗೆ ನಾನೂ ಪ್ರಕಟಗೊಂಡೆನು.॥31॥
(ಶ್ಲೋಕ - 32)
ಮೂಲಮ್
ಅಂತರ್ಬಹಿಶ್ಚ ಲೋಕಾಂಸೀನ್ಪರ್ಯೇಮ್ಯಸ್ಕಂದಿತವ್ರತಃ ।
ಅನುಗ್ರಹಾನ್ಮಹಾವಿಷ್ಣೋರವಿಘಾತಗತಿಃ ಕ್ವಚಿತ್ ॥
ಅನುವಾದ
ಅಂದಿನಿಂದ ನಾನು ಭಗವಂತನ ಕೃಪೆಯಿಂದ ಮೂರು ಲೋಕಗಳಲ್ಲಿಯೂ ಒಳಗೂ, ಹೊರಗೂ ಯಾವ ಅಡೆ-ತಡೆಯಿಲ್ಲದೆ ಸಂಚರಿಸುತ್ತಿರುವೆನು, ಭಗವದ್ಭಜನರೂಪೀ ಜೀವನದ ನನ್ನ ವ್ರತವು ಅಖಂಡವಾಗಿ ನಡೆಯುತ್ತಾ ಇದೆ.॥32॥
(ಶ್ಲೋಕ - 33)
ಮೂಲಮ್
ದೇವದತ್ತಾಮಿಮಾಂ ವೀಣಾಂ ಸ್ವರಬ್ರಹ್ಮವಿಭೂಷಿತಾಮ್ ।
ಮೂರ್ಛಯಿತ್ವಾ ಹರಿಕಥಾಂ ಗಾಯಮಾನಶ್ಚರಾಮ್ಯಹಮ್ ॥
ಅನುವಾದ
ಭಗವಂತನು ಅನುಗ್ರಹಿಸಿರುವನಾದ ಬ್ರಹ್ಮನಿಂದ ಅಲಂಕೃತವಾದ ಈ ‘ಮಹತೀ’ ಎಂಬ ವೀಣೆಯನ್ನು ನುಡಿಸುತ್ತಾ ಶ್ರೀಹರಿಯ ದಿವ್ಯಲೀಲಾಕಥೆಗಳನ್ನು ಹಾಡುತ್ತಾ ಸಂಚರಿಸುತ್ತಿದ್ದೇನೆ.॥33॥
(ಶ್ಲೋಕ - 34)
ಮೂಲಮ್
ಪ್ರಗಾಯತಃ ಸ್ವವೀರ್ಯಾಣಿ ತೀರ್ಥಪಾದಃ ಪ್ರಿಯಶ್ರವಾಃ ।
ಆಹೂತ ಇವ ಮೇ ಶೀಘ್ರಂ ದರ್ಶನಂ ಯಾತಿ ಚೇತಸಿ ॥
ಅನುವಾದ
ಸ್ತೋತ್ರಪ್ರಿಯನೂ, ತೀರ್ಥಗಳಿಗೆ ಆಶ್ರಯವಾದ ಪವಿತ್ರಪಾದನೂ ಆಗಿರುವ ಶ್ರೀಭಗವಂತನ ಅದ್ಭುತವಾದ ಲೀಲಾವಿಲಾಸಗಳನ್ನು ನಾನು ಗಾನಮಾಡ ತೊಡಗಿದಾಗ ಆ ಪ್ರಭುವು ಕೂಗಿ ಕರೆಯಲ್ಪಟ್ಟವನಂತೆ ಒಡನೆಯೇ ನನ್ನ ಹೃದಯಕ್ಕೆ ಬಂದು ದಿವ್ಯ ದರ್ಶನವನ್ನು ದಯಪಾಲಿಸುತ್ತಾನೆ.॥34॥
(ಶ್ಲೋಕ - 35)
ಮೂಲಮ್
ಏತದ್ಧ್ಯಾತುರಚಿತ್ತಾನಾಂ ಮಾತ್ರಾಸ್ಪರ್ಶೇಚ್ಛಯಾ ಮುಹುಃ ।
ಭವಸಿಂಧುಪ್ಲವೋ ದೃಷ್ಟೋ ಹರಿಚರ್ಯಾನುವರ್ಣನಮ್ ॥
ಅನುವಾದ
ನಿರಂತರ ವಿಷಯ ಭೋಗಗಳ ಕಾಮನೆಯಿಂದ ಚಿತ್ತವು ಆತುರವಾದ ಜನರಿಗಾಗಿ ಭಗವಂತನ ಲೀಲೆಗಳ ಕೀರ್ತನೆಯು ಸಂಸಾರ ಸಾಗರದಿಂದ ಪಾರಾಗಿ ಹೋಗಲು ಹಡಗಿನಂತಿದೆ. ಇದು ನನ್ನ ಅನುಭವವಾಗಿದೆ.॥35॥
(ಶ್ಲೋಕ - 36)
ಮೂಲಮ್
ಯಮಾದಿಭಿರ್ಯೋಗಪಥೈಃ ಕಾಮಲೋಭಹತೋ ಮುಹುಃ ।
ಮುಕುಂದಸೇವಯಾ ಯದ್ವತ್ತಥಾತ್ಮಾದ್ಧಾ ನ ಶಾಮ್ಯತಿ ॥
ಅನುವಾದ
ಕಾಮ-ಲೋಭಾದಿ ಏಟುಗಳಿಂದ ಪದೇ-ಪದೇ ಗಾಯಗೊಂಡ ಹೃದಯವು ಶ್ರೀಕೃಷ್ಣನ ಸೇವೆಯಿಂದ ಪ್ರತ್ಯಕ್ಷ ಶಾಂತಿಯನ್ನು ಅನುಭವಿಸುವುದು. ಯಮ-ನಿಯಮಾದಿ ಯೋಗಮಾರ್ಗದಿಂದಲೂ ಅಂತಹ ಶಾಂತಿಯು ದೊರೆಯಲಾರದು.॥36॥
(ಶ್ಲೋಕ - 37)
ಮೂಲಮ್
ಸರ್ವಂ ತದಿದಮಾಖ್ಯಾತಂ ಯತ್ಪೃಷ್ಟೋಹಂ ತ್ವಯಾನಘ ।
ಜನ್ಮಕರ್ಮರಹಸ್ಯಂ ಮೇ ಭವತಶ್ಚಾತ್ಮತೋಷಣಮ್ ॥
ಅನುವಾದ
ಪುಣ್ಯಾತ್ಮರೇ ನಿಮ್ಮ ಪ್ರಶ್ನೆಗಳಿಗೆ ಉತ್ತರವಾಗಿ ನನ್ನ ಜನ್ಮ-ಕರ್ಮ ಮತ್ತು ಸಾಧನೆಯ ರಹಸ್ಯಗಳನ್ನು ನಿರೂಪಿಸಿದ್ದೇನೆ. ನಿಮ್ಮ ಆತ್ಮ ತುಷ್ಟಿಗೆ ಉಪಾಯವನ್ನೂ ತಿಳಿಸಿರುವೆನು.॥37॥
(ಶ್ಲೋಕ - 38)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಏವಂ ಸಂಭಾಷ್ಯ ಭಗವಾನ್ನಾರದೋ ವಾಸವೀಸುತಮ್ ।
ಆಮಂತ್ರ್ಯ ವೀಣಾಂ ರಣಯನ್ ಯಯೌ ಯಾದೃಚ್ಛಿಕೋ ಮುನಿಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳೇ! ಹೀಗೆ ಪರಮಪೂಜ್ಯರಾದ ದೇವಋಷಿ ನಾರದರು ವ್ಯಾಸರೊಡನೆ ಸಂಭಾಷಣೆ ನಡೆಸಿ, ಅವರ ಅನುಮತಿಯನ್ನು ಪಡೆದುಕೊಂಡು, ವೀಣೆಯನ್ನು ನುಡಿಸುತ್ತಾ ಇಷ್ಟ ಬಂದಲ್ಲಿಗೆ ಸಂಚರಿಸಲು ಹೊರಟುಹೋದರು.॥38॥
(ಶ್ಲೋಕ - 39)
ಮೂಲಮ್
ಅಹೋ ದೇವರ್ಷಿರ್ಧನ್ಯೋಯಂ ಯತ್ಕೀರ್ತಿಂ ಶಾರ್ಙ್ಗಧನ್ವನಃ ।
ಗಾಯನ್ಮಾದ್ಯನ್ನಿದಂ ತಂತ್ರ್ಯಾ ರಮಯತ್ಯಾತುರಂ ಜಗತ್ ॥
ಅನುವಾದ
ಆಹಾ! ದೇವರ್ಷಿನಾರದರು ಎಷ್ಟು ಧನ್ಯರು!! ಯಾವಾಗಲೂ ತಮ್ಮ ದಿವ್ಯ ವೀಣೆಯ ಮೂಲಕ ಶಾರ್ಙ್ಗಪಾಣಿಯಾದ ಭಗವಂತನ ಕೀರ್ತನೆಯನ್ನು ಹಾಡುತ್ತಾ ತಾವು ಆನಂದ ಮಗ್ನರಾಗುವುದಲ್ಲದೆ ತಾಪತ್ರಯಗಳಿಂದ ಬೆಂದು ಬಳಲಿದ ಜಗತ್ತನ್ನು ಆನಂದಪರವಶವನ್ನಾಗಿ ಮಾಡುತ್ತಿದ್ದಾರಲ್ಲವೇ? ॥39॥
ಅನುವಾದ (ಸಮಾಪ್ತಿಃ)
ಆರನೆಯ ಅಧ್ಯಾಯವು ಮುಗಿಯಿತು. ॥6॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ವ್ಯಾಸನಾರದಸಂವಾದೇ ಷಷ್ಠೋಽಧ್ಯಾಯಃ ॥6॥