[ಐದನೆಯ ಅಧ್ಯಾಯ]
ಭಾಗಸೂಚನಾ
ವ್ಯಾಸ-ನಾರದರ ಸಂವಾದ, ಭಗವಂತನ ಯಶ ಕೀರ್ತನೆಯ ಮಹಿಮೆ, ನಾರದರ ಪೂರ್ವಜನ್ಮ ವೃತ್ತಾಂತ
(ಶ್ಲೋಕ - 1)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಅಥ ತಂ ಸುಖಮಾಸೀನ ಉಪಾಸೀನಂ ಬೃಹಚ್ಛ್ರವಾಃ ।
ದೇವರ್ಷಿಃ ಪ್ರಾಹ ವಿಪ್ರರ್ಷಿಂ ವೀಣಾಪಾಣಿಃ ಸ್ಮಯನ್ನಿವ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಅನಂತರ ಮಹಾ ಯಶಸ್ವಿಗಳಾದ, ವೀಣಾಪಾಣಿಗಳಾದ ದೇವಋಷಿ ನಾರದರು ನಸು ನಗುತ್ತಾ ಸುಖಾಸೀನರಾಗಿ, ತಮ್ಮ ಬಳಿಯಲ್ಲಿ ಕುಳಿತುಕೊಂಡ ಬ್ರಹ್ಮರ್ಷಿ ವೇದವ್ಯಾಸರನ್ನು ಹೀಗೆ ಕೇಳಿದರು ॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಪಾರಾಶರ್ಯ ಮಹಾಭಾಗ ಭವತಃ ಕಚ್ಚಿದಾತ್ಮನಾ ।
ಪರಿತುಷ್ಯತಿ ಶಾರೀರ ಆತ್ಮಾ ಮಾನಸ ಏವ ವಾ ॥
ಅನುವಾದ
ನಾರದರು ಪ್ರಶ್ನಿಸಿದರು — ಮಹಾಭಾಗರಾದ ಪರಾಶರ ಪುತ್ರರೇ! ನಿಮ್ಮ ಶರೀರ-ಮನಸ್ಸುಗಳು ತಮ್ಮ ಕರ್ಮಗಳಿಂದ, ಚಿಂತನದಿಂದ ಸಂತುಷ್ಟವಾಗಿವೆಯಷ್ಟೆ? ॥2॥
(ಶ್ಲೋಕ - 3)
ಮೂಲಮ್
ಜಿಜ್ಞಾಸಿತಂ ಸುಸಂಪನ್ನಮಪಿ ತೇ ಮಹದದ್ಭುತಮ್ ।
ಕೃತವಾನ್ ಭಾರತಂ ಯಸ್ತ್ವಂ ಸರ್ವಾರ್ಥಪರಿಬೃಂಹಿತಮ್ ॥
ಅನುವಾದ
ಏಕೆಂದರೆ, ನೀವು ಎಲ್ಲ ಪುರುಷಾರ್ಥಗಳಿಂದಲೂ ಪರಿಪೂರ್ಣವಾಗಿರುವ ಪರಮಾದ್ಭುತವಾದ ಮಹಾಭಾರತವನ್ನು ರಚಿಸಿರುವಿರಿ. ಇದರಿಂದ ನಿಮ್ಮ ಆಕಾಂಕ್ಷೆಯು ಪೂರ್ಣವಾಗಿ ಕೈಗೂಡಿರಬೇಕಲ್ಲ! ॥3॥
(ಶ್ಲೋಕ - 4)
ಮೂಲಮ್
ಜಿಜ್ಞಾಸಿತಮೀತಂ ಚ ಯತ್ತದ್ಬ್ರಹ್ಮ ಸನಾತನಮ್ ।
ತಥಾಪಿ ಶೋಚಸ್ಯಾತ್ಮಾನಮಕೃತಾರ್ಥ ಇವ ಪ್ರಭೋ ॥
ಅನುವಾದ
ಇದಲ್ಲದೆ ನೀವು ಸನಾತನವಾದ ಬ್ರಹ್ಮತತ್ತ್ವವನ್ನು ಕುರಿತು ವೇದಾಂತಸೂತ್ರಗಳಲ್ಲಿ ಬಹಳಷ್ಟು ವಿಚಾರಮಾಡಿ, ಅದನ್ನು ಚೆನ್ನಾಗಿ ಅರಿತುಕೊಂಡಿರುವಿರಿ. ಹಾಗಿದ್ದರೂ ನೀವು ಕೃತಕೃತ್ಯರಾಗದೇ ಇರುವ ಓರ್ವ ಸಾಧಾರಣ ಮನುಷ್ಯನಂತೆ ಸ್ವವಿಷಯದಲ್ಲಿ ಏಕೆ ಶೋಕಿಸುತ್ತಿದ್ದೀರಿ? ॥4॥
(ಶ್ಲೋಕ - 5)
ಮೂಲಮ್ (ವಾಚನಮ್)
ವ್ಯಾಸ ಉವಾಚ
ಮೂಲಮ್
ಅಸ್ತ್ಯೇವ ಮೇ ಸರ್ವಮಿದಂ ತ್ವಯೋಕ್ತಂ
ತಥಾಪಿ ನಾತ್ಮಾ ಪರಿತುಷ್ಯತೇ ಮೇ ।
ತನ್ಮೂಲಮವ್ಯಕ್ತಮಗಾಧಬೋಧಂ
ಪೃಚ್ಛಾಮಹೇ ತ್ವಾತ್ಮಭವಾತ್ಮಭೂತಮ್ ॥
ಅನುವಾದ
ವೇದವ್ಯಾಸರು ಹೇಳಿದರು — ನಾರದರೇ! ನೀವು ನನ್ನ ವಿಷಯದಲ್ಲಿ ಹೇಳಿರುವುದೆಲ್ಲವೂ ನಿಜವೇ. ಇದರಲ್ಲಿ ಸಂದೇಹವೇ ಇಲ್ಲ. ಆದರೂ ನನ್ನ ಹೃದಯವು ಸಂತುಷ್ಟವಾಗಿಲ್ಲ. ಇದಕ್ಕೇನು ಕಾರಣವೆಂಬುದು ತಿಳಿಯುತ್ತಿಲ್ಲ. ನಿಮ್ಮ ಜ್ಞಾನವು ಅಗಾಧವಾಗಿದೆ. ತಾವು ಸಾಕ್ಷಾತ್ ಬ್ರಹ್ಮ ದೇವರ ಮಾನಸಪುತ್ರರು. ಅದಕ್ಕಾಗಿ ನಾನು ನಿಮ್ಮಲ್ಲೇ ಇದರ ಕಾರಣವನ್ನು ಕೇಳುತ್ತಿದ್ದೇನೆ. ತಾವು ಅದನ್ನು ತಿಳಿಸಬೇಕು.॥5॥
(ಶ್ಲೋಕ - 6)
ಮೂಲಮ್
ಸ ವೈ ಭವಾನ್ ವೇದ ಸಮಸ್ತಗುಹ್ಯ-
ಮುಪಾಸಿತೋ ಯತ್ಪುರುಷಃ ಪುರಾಣಃ ।
ಪರಾವರೇಶೋ ಮನಸೈವ ವಿಶ್ವಂ
ಸೃಜತ್ಯವತ್ಯತ್ತಿ ಗುಣೈರಸಂಗಃ ॥
ಅನುವಾದ
ದೇವರ್ಷಿಗಳೇ! ತಾವು ಎಲ್ಲ ರಹಸ್ಯಗಳನ್ನು ಬಲ್ಲವರು. ಏಕೆಂದರೆ, ಕಾರ್ಯಕಾರಣಗಳಿಗೆ ನಿಯಾಮಕನಾದ ಭಗವಂತನು ಪ್ರಪಂಚದ ಸೃಷ್ಟಿ, ಸ್ಥಿತಿ, ಲಯಗಳನ್ನು ಅದರ ಗುಣಗಳಿಗೆ ಅಂಟಿಕೊಳ್ಳದೆಯೇ ತನ್ನ ಸಂಕಲ್ಪಮಾತ್ರದಿಂದಲೇ ಮಾಡುತ್ತಿರುವ ಪುರಾಣಪುರುಷನನ್ನು ನೀವು ಉಪಾಸಿಸಿದ್ದೀರಿ.॥6॥
(ಶ್ಲೋಕ - 7)
ಮೂಲಮ್
ತ್ವಂ ಪರ್ಯಟನ್ನರ್ಕ ಇವ ತ್ರಿಲೋಕೀ-
ಮಂತಶ್ಚರೋ ವಾಯುರಿವಾತ್ಮಸಾಕ್ಷೀ
ಪರಾವರೇ ಬ್ರಹ್ಮಣಿ ಧರ್ಮತೋ ವ್ರತೈಃ ।
ಸ್ನಾತಸ್ಯ ಮೇ ನ್ಯೂನಮಲಂ ವಿಚಕ್ಷ್ವ ॥
ಅನುವಾದ
ನೀವು ಸೂರ್ಯನಂತೆ ತ್ರಿಲೋಕಗಳಲ್ಲಿ ಸಂಚರಿಸುತ್ತಿರುವಿರಿ. ಯೋಗಬಲದಿಂದ ಪ್ರಾಣವಾಯುವಿನಂತೆ ಎಲ್ಲರ ಒಳಗಡೆಯೂ ಇದ್ದು ಅಂತಃಕರಣಗಳ ಸಾಕ್ಷಿಯಾಗಿರುವಿರಿ. ಧಾರ್ಮಿಕವಾದ ವ್ರತ-ನಿಯಮ-ನಿಷ್ಠೆಗಳಿಂದ ಪರಬ್ರಹ್ಮ ಮತ್ತು ಶಬ್ದಬ್ರಹ್ಮ ಇವೆರಡರಲ್ಲೂ ನಿಷ್ಣಾತನಾಗಿರುವ ನಾನು ಪರಮಾನಂದದಲ್ಲಿ ಮುಳುಗಿರ ಬೇಕಾಗಿತ್ತು. ಆದರೆ ಹೀಗೆ ನನಗೆ ಅನುಭವವೇಕೆ ಆಗುತ್ತಿಲ್ಲ! ನನ್ನಲ್ಲಿರುವ ಈ ಕೊರತೆಯನ್ನು ತಾವೇ ದಯವಿಟ್ಟು ತಿಳಿಸಿರಿ.॥7॥
(ಶ್ಲೋಕ - 8)
ಮೂಲಮ್ (ವಾಚನಮ್)
ಶ್ರೀನಾರದ ಉವಾಚ
ಮೂಲಮ್
ಭವತಾನುದಿತಪ್ರಾಯಂ ಯಶೋ ಭಗವತೋಮಲಮ್ ।
ಯೇನೈವಾಸೌ ನ ತುಷ್ಯೇತ ಮನ್ಯೇ ತದ್ದರ್ಶನಂ ಖಿಲಮ್ ॥
ಅನುವಾದ
ಶ್ರೀನಾರದರೆಂದರು — ವೇದವ್ಯಾಸರೇ! ನೀವು ಬಹುಮಟ್ಟಿಗೆ ಶ್ರೀಭಗವಂತನ ಪರಿಶುದ್ಧವಾದ ಕೀರ್ತಿಯನ್ನು ವರ್ಣಿಸಿಲ್ಲವೆಂದೇ ತೋರುತ್ತದೆ. ಭಗವಂತನು ಸಂತೋಷ ಪಡುವುದು ಅವನ ಕೀರ್ತಿಯ ವರ್ಣನೆಯಿಂದಲೇ. ಅದನ್ನು ಬಿಟ್ಟು ಬೇರೆ ಯಾವ ದರ್ಶನದಿಂದಲೂ ಅವನಿಗೆ ಸಂತೋಷವಾಗುವುದಿಲ್ಲ. ಅವನಿಗೆ ಸಂತೋಷವಾಗದಿರುವ ದರ್ಶನಗಳೆಲ್ಲವೂ ಶೂನ್ಯವೆಂದೇ ನನ್ನ ಭಾವನೆ.॥8॥
(ಶ್ಲೋಕ - 9)
ಮೂಲಮ್
ಯಥಾ ಧರ್ಮಾದಯಶ್ಚಾರ್ಥಾ ಮುನಿವರ್ಯಾನುಕೀರ್ತಿತಾಃ ।
ನ ತಥಾ ವಾಸುದೇವಸ್ಯ ಮಹಿಮಾ ಹ್ಯನುವರ್ಣಿತಃ ॥
ಅನುವಾದ
ಮುನಿವರ್ಯರೇ! ನೀವು ಧರ್ಮವೇ ಮುಂತಾದ ಪುರುಷಾರ್ಥಗಳನ್ನು ಎಷ್ಟು ವಿಸ್ತಾರವಾಗಿ ವರ್ಣಿಸಿರುವಿರೋ, ಅಷ್ಟು ವಿಸ್ತಾರವಾಗಿ ವಾಸುದೇವನ ಮಹಿಮೆಯನ್ನು ವರ್ಣಿಸಿಲ್ಲವಷ್ಟೆ! ॥9॥
(ಶ್ಲೋಕ - 10)
ಮೂಲಮ್
ನ ಯದ್ವಚಶ್ಚಿತ್ರಪದಂ ಹರೇರ್ಯಶೋ
ಜಗತ್ಪವಿತ್ರಂ ಪ್ರಗೃಣೀತ ಕರ್ಹಿಚಿತ್ ।
ತದ್ವಾಯಸಂ ತೀರ್ಥಮುಶಂತಿ ಮಾನಸಾ
ನ ಯತ್ರ ಹಂಸಾ ನಿರಮಂತ್ಯುಶಿಕ್ ಕ್ಷಯಾಃ ॥
ಅನುವಾದ
ಒಂದು ಸಾಹಿತ್ಯವು ಪದ, ಅಕ್ಷರ ವಿನ್ಯಾಸ, ರಸ, ಅಲಂಕಾರ ಇವುಗಳಿಂದ ಕೂಡಿ ಅತ್ಯಂತ ಆಕರ್ಷಕವಾಗಿರಬಹುದು. ಆದರೆ ಜಗತ್ತನ್ನೇ ಪಾವನಗೊಳಿಸುವ ಪರಮಾತ್ಮನ ಕೀರ್ತಿಯನ್ನು ಎಲ್ಲಿಯೂ ಕೊಂಡಾಡದೆ ಇದ್ದರೆ ಅದು ಅಪವಿತ್ರವೇ. ಯಾವ ಜಲಾಶಯದಲ್ಲಿ ಮಾನಸ ಸರೋವರದ ಹಂಸಗಳು ವಿಹರಿಸುವುದಿಲ್ಲವೋ ಅದನ್ನು ಕಾಕತೀರ್ಥವೆಂದು ಭಾವಿಸುತ್ತಾರೆ. ಭಾವುಕರಾದ ಪರಮ ಹಂಸರು ರಮಿಸದೇ ಇರುವ ಸಾಹಿತ್ಯವು ಅದಕ್ಕೆ ಸಮಾನವೆನಿಸುವುದು.॥10॥
(ಶ್ಲೋಕ - 11)
ಮೂಲಮ್
ತದ್ವಾಗ್ವಿಸರ್ಗೋ ಜನತಾಘವಿಪ್ಲವೋ
ಯಸ್ಮಿನ್ಪ್ರತಿಶ್ಲೋಕಮಬದ್ಧವತ್ಯಪಿ ।
ನಾಮಾನ್ಯನಂತಸ್ಯ ಯಶೋಂಕಿತಾನಿ ಯತ್
ಶೃಣ್ವಂತಿ ಗಾಯಂತಿ ಗೃಣಂತಿ ಸಾಧವಃ ॥
ಅನುವಾದ
ಇದಕ್ಕೆ ಪ್ರತಿಯಾಗಿ ಯಾವುದಾದರೂ ವಾಕ್ಯರಚನೆಯಲ್ಲಿ, ಲೋಕದೃಷ್ಟಿಯಿಂದ ಪ್ರತಿ ಶ್ಲೋಕದಲ್ಲಿ ಅಚ್ಯುತನ ಕೀರ್ತಿಯನ್ನು ಸೂಚಿಸುವ ನಾಮಗಳಿದ್ದರೆ ಆ ವಾಣಿಯು ಜನರ ಎಲ್ಲ ಪಾಪಗಳನ್ನು ನಾಶ ಮಾಡಿಬಿಡುತ್ತದೆ. ಏಕೆಂದರೆ, ಸತ್ಪುರುಷರು ಇಂತಹ ವಾಣಿಯನ್ನೇ ಶ್ರವಣ, ಕೀರ್ತನ, ಗಾಯನ ಮಾಡುತ್ತಾರೆ.॥11॥
(ಶ್ಲೋಕ - 12)
ಮೂಲಮ್
ನೈಷ್ಕರ್ಮ್ಯಮಪ್ಯಚ್ಯುತಭಾವವರ್ಜಿತಂ
ನ ಶೋಭತೇ ಜ್ಞಾನಮಲಂ ನಿರಂಜನಮ್ ।
ಕುತಃ ಪುನಃ ಶಶ್ವದಭದ್ರಮೀಶ್ವರೇ
ನ ಚಾರ್ಪಿತಂ ಕರ್ಮ ಯದಪ್ಯಕಾರಣಮ್ ॥
ಅನುವಾದ
ನಾವು ಸಂಧ್ಯಾವಂದನಾದಿ ಕರ್ಮಗಳನ್ನು ಕರ್ತವ್ಯವೆಂದು ಭಾವಿಸಿಯೇ ಮಾಡುತ್ತೇವೆ. ಜೊತೆಗೆ ಕರ್ತೃತ್ವದ ಭಾವವೂ ಇರುವುದಿಲ್ಲ. ಆದರೆ ಅದೂ ಕೂಡ ಭಗವಂತನ ಭಕ್ತಿಭಾವದಿಂದ ರಹಿತವಾಗಿದ್ದರೆ ಶೋಭಿಸುವುದಿಲ್ಲ. ಇದೇ ರೀತಿಯಿಂದ ಶಾಸ್ತ್ರಜ್ಞಾನದಲ್ಲಿಯೂ ಕೂಡ ಭಗವಂತನ ಭಕ್ತಿಯ ಭಾವನೆಯಿಲ್ಲದಿದ್ದರೆ ಅದೂ ಕೂಡ ಶೋಭಿಸುವುದಿಲ್ಲ. ಆದ್ದರಿಂದ ತನ್ನ ಎಲ್ಲ ಕರ್ಮಗಳು ಹಾಗೂ ಶಾಸ್ತ್ರಗಳ ಅಭ್ಯಾಸವನ್ನು ಭಗವದ್ಭಕ್ತಿಯಿಂದ ಕೂಡಿಯೇ ಮಾಡಬೇಕು. ಭಕ್ತಿಯುಕ್ತ ಕರ್ಮ ಮತ್ತು ಜ್ಞಾನವು ಅನಂತ ಫಲವನ್ನು ಕೊಡುವುದಾಗಿದೆ. ಮತ್ತೆ ಕಾಮನೆಯಿಂದ ಮಾಡಲಾಗುವ ಕರ್ಮವನ್ನಾದರೋ ಯಾವಾಗಲೂ ಅಶುಭವೆಂದೇ ತಿಳಿಯಲಾಗಿದೆ; ಅದರ ಕುರಿತು ಹೇಳುವುದೇನಿದೆ? ಹೀಗೆಯೇ ನಿಷ್ಕಾಮಭಾವದಿಂದ ಮಾಡಿದ ಕರ್ಮವೂ ಕೂಡ ಭಗವಂತನಿಗೆ ಅರ್ಪಿಸದಿದ್ದರೆ ಶೋಭಿಸುವುದಿಲ್ಲ. ಆದ್ದರಿಂದ ಸಾಧಕನು ಮಾಡುವ ಎಲ್ಲ ಕ್ರಿಯೆಗಳನ್ನು ಭಗವಂತನ ಭಕ್ತಿಯಿಂದ ಭಾವಿತನಾಗಿ ಮಾಡಬೇಕು.॥12॥
(ಶ್ಲೋಕ - 13)
ಮೂಲಮ್
ಅಥೋ ಮಹಾಭಾಗ ಭವಾನಮೋಘದೃಕ್
ಶುಚಿಶ್ರವಾಃ ಸತ್ಯರತೋ ಧೃತವ್ರತಃ ।
ಉರುಕ್ರಮಸ್ಯಾಖಿಲಬಂಧಮುಕ್ತಯೇ
ಸಮಾನಾನುಸ್ಮರ ತದ್ವಿಚೇಷ್ಟಿತಮ್ ॥
ಅನುವಾದ
ಮಹಾಭಾಗರೇ! ತಾವು ಅಮೋಘವಾದ ದೃಷ್ಟಿಯುಳ್ಳವರು. ಪವಿತ್ರವಾದ ಕೀರ್ತಿಯನ್ನು ಗಳಿಸಿದವರು. ಸತ್ಯಪರಾಯಣರೂ, ದೃಢವ್ರತವುಳ್ಳವರೂ ಆಗಿದ್ದೀರಿ. ಆದುದರಿಂದ ಸಮಸ್ತ ಜೀವಿಗಳನ್ನು ಬಂಧನಮುಕ್ತಗೊಳಿಸಲಿಕ್ಕಾಗಿ, ಆ ಅಚಿಂತ್ಯ ಶಕ್ತಿಯುಳ್ಳ ಭಗವಂತನ ಲೀಲೆಗಳನ್ನು ಸಮಾಧಿಯಲ್ಲಿ ಅನುಸಂಧಾನ ಮಾಡಿರಿ.॥13॥
(ಶ್ಲೋಕ - 14)
ಮೂಲಮ್
ತತೋನ್ಯಥಾ ಕಿಂಚನ ಯದ್ವಿವಕ್ಷತಃ
ಪೃಥಗ್ದೃಶಸ್ತತ್ಕೃತರೂಪನಾಮಭಿಃ ।
ನ ಕುತ್ರಚಿತ್ ಕ್ವಾಪಿ ಚ ದುಃಸ್ಥಿತಾ ಮತಿ-
ರ್ಲಭೇತ ವಾತಾಹತನೌರಿವಾಸ್ಪದಮ್ ॥
ಅನುವಾದ
ಭಗವಂತನನ್ನು ವರ್ಣಿಸದೆ ಬೇರೆ ಯಾವುದನ್ನೋ ವರ್ಣಿಸಲು ಬಯಸುವವನು ತನ್ನ ಆ ಇಚ್ಛೆಯಿಂದ ನಿರ್ಮಿತವಾದ ಅನೇಕ ನಾಮರೂಪಗಳ ಸುಳಿಗೆ ಸಿಕ್ಕಿಹಾಕಿಕೊಳ್ಳುವನು. ಅವನ ಬುದ್ಧಿಯು ಭೇದ ಭಾವದಿಂದ ಭರಿತವಾಗುವುದು. ಅದು ದುಃಸ್ಥಿತಿಗೆ ಒಳಗಾಗಿ ಬಿರುಗಾಳಿಗೆ ಸಿಕ್ಕಿದ ಹಡಗಿನಂತೆ ಎಂದೂ, ಎಲ್ಲಿಯೂ ನೆಲೆಯನ್ನು ಕಾಣದೆ ಹೋಗುವುದು.॥14॥
(ಶ್ಲೋಕ - 15)
ಮೂಲಮ್
ಜುಗುಪ್ಸಿತಂ ಧರ್ಮಕೃತೇನುಶಾಸತಃ
ಸ್ವಭಾವರಕ್ತಸ್ಯ ಮಹಾನ್ ವ್ಯತಿಕ್ರಮಃ ।
ಯದ್ವಾಕ್ಯತೋ ಧರ್ಮ ಇತೀತರಃ ಸ್ಥಿತೋ
ನ ಮನ್ಯತೇ ತಸ್ಯ ನಿವಾರಣಂ ಜನಃ ॥
ಅನುವಾದ
ಸಂಸಾರಿಗಳಾದ ಜನರು ಸ್ವಾಭಾವಿಕವಾಗಿಯೇ ವಿಷಯಗಳಲ್ಲಿ ಆಸಕ್ತರಾಗಿರುತ್ತಾರೆ. ಧರ್ಮದ ಹೆಸರಿನಲ್ಲಿ ನೀವೇ ಅವರಿಗೆ ನಿಂದಿತ (ಪಶು ಹಿಂಸಾಯುಕ್ತ) ಸಕಾಮಕರ್ಮ ಮಾಡಲು ಆಜ್ಞೆಯನ್ನು ಕೊಟ್ಟಿರುವಿರಿ. ಈ ಮಾತು ವಿಪರೀತವಾಯಿತು. ಏಕೆಂದರೆ, ಮೂರ್ಖ ಜನರು ನಿಮ್ಮ ವಚನಗಳಿಂದ ಹಿಂದೆ ಹೇಳಿದ ನಿಂದಿತ ಕರ್ಮವನ್ನೇ ಧರ್ಮವೆಂದು ತಿಳಿದುಕೊಂಡು ‘ಇದೇ ಧರ್ಮವಾಗಿದೆ’ ಹೀಗೆ ನಿಶ್ಚಯಿಸಿಕೊಂಡು, ಅದರ ನಿಷೇಧ ಮಾಡುವ ವಚನಗಳನ್ನು ಸರಿಯಾಗಿ ತಿಳಿಯುವುದಿಲ್ಲ.॥15॥
(ಶ್ಲೋಕ - 16)
ಮೂಲಮ್
ವಿಚಕ್ಷಣೋಸ್ಯಾರ್ಹತಿ ವೇದಿತುಂ ವಿಭೋ-
ರನಂತಪಾರಸ್ಯ ನಿವೃತ್ತಿತಃ ಸುಖಮ್ ।
ಪ್ರವರ್ತಮಾನಸ್ಯ ಗುಣೈರನಾತ್ಮನ-
ಸ್ತತೋ ಭವಾಂದರ್ಶಯ ಚೇಷ್ಟಿತಂ ವಿಭೋಃ ॥
ಅನುವಾದ
ತಾವು ವಿದ್ವಾಂಸರಾಗಿದ್ದೀರಿ. ಅನಂತವೀರ್ಯನಾದ ಭಗವಂತನ ಅಲೌಕಿಕ ಲೀಲೆಗಳ ಕುರಿತು ತಾವು ತಿಳಿದೇ ಇದ್ದೀರಿ. ಜೊತೆಗೆ ವೈರಾಗ್ಯದಿಂದ ಉಂಟಾಗುವ ಆನಂದಾನುಭವದ ಕುರಿತು ನಿಮಗೆ ಜ್ಞಾನವಿದೆ. ಆದ್ದರಿಂದ ಸ್ವರೂಪಜ್ಞಾನಕ್ಕೆ ಬಾಧಕವಾದ ಗುಣಗಳಲ್ಲೇ ಪ್ರವೃತ್ತರಾದ ಸಂಸಾರೀಜನರ ಮೇಲೆ ಕರುಣೆದೋರಿ ಭಗವಂತನ ಅಲೌಕಿಕ ಲೀಲೆಗಳ ದರ್ಶನ ಮಾಡಿಸಿರಿ. ಇದರಿಂದ ಅವರು ಭಗವಂತನ ಭಕ್ತಿಯಲ್ಲಿ ತೊಡಗಿ ತಮ್ಮ ಆತ್ಮಸ್ವರೂಪದ ಸಾಕ್ಷಾತ್ಕಾರಮಾಡಿಕೊಳ್ಳುವರು.॥16॥
(ಶ್ಲೋಕ - 17)
ಮೂಲಮ್
ತ್ಯಕ್ತ್ವಾ ಸ್ವಧರ್ಮಂ ಚರಣಾಂಬುಜಂ ಹರೇ-
ರ್ಭಜನ್ನಪಕ್ವೋಥ ಪತೇತ್ತತೋ ಯದಿ ।
ಯತ್ರ ಕ್ವ ವಾಭದ್ರಮಭೂದಮುಷ್ಯ ಕಿಂ
ಕೋ ವಾರ್ಥ ಆಪ್ತೋಭಜತಾಂ ಸ್ವಧರ್ಮತಃ ॥
ಅನುವಾದ
ಯಾವನಾದರೂ ಮನುಷ್ಯನು ಕಾಮ್ಯಕರ್ಮಗಳ ಅನುಷ್ಠಾನವನ್ನು ಬಿಟ್ಟು ಭಗವಂತನ ಭಕ್ತಿಯನ್ನು ಆಚರಿಸುತ್ತಾ ಇರುವಾಗ, ಆ ಭಕ್ತಿಯು ಪರಿಪಕ್ವವಾಗದೆ ನಡುವಿನಲ್ಲೇ ದೇಹಪಾತವಾದರೂ ಆ ಭಕ್ತನಿಗೆ ಅಮಂಗಲವಾಗಬಲ್ಲುದೇ? ಅರ್ಥಾತ್ ಸದಾಕಾಲ ಅವನಿಗೆ ಶುಭವೇ ಆಗುತ್ತದೆ. ಹೀಗೆಯೇ ಯಾರಾದರೂ ಕಾಮ್ಯಕರ್ಮವನ್ನು ಅನುಷ್ಠಾನ ಮಾಡುತ್ತಾ ಭಗವಂತನಿಂದ ವಿಮುಖನಾದರೆ ಅವನಿಗೆ ಏನಾದರೂ ವಿಶೇಷ ಲಾಭವಾಗಿದೆಯೇ? ಅರ್ಥಾತ್ ನಿಷ್ಕಾಮ ಭಾವದಿಂದ ಭಗವಂತನ ಭಕ್ತಿಯನ್ನು ಮಾಡುವುದು ಮತ್ತು ಭಗವಂತನ ಲೀಲೆಗಳನ್ನು ಚಿಂತಿಸುವುದು ಶ್ರೇಯಸ್ಸಿನ ಉಪಾಯವಾಗಿದೆ. ಇದರಿಂದ ಭಗವಂತನ ಸ್ಮೃತಿ ನಿರಂತರ ಇರಬಲ್ಲದು ಎಂಬುದೂ ತಾವು ತಿಳಿದಿರುವಿರಿ. ಆದ್ದರಿಂದ ಜನರ ಪರಮಶ್ರೇಯಸ್ಸಿಗಾಗಿ ನೀವು ಭಗವಂತನ ಲೀಲೆಗಳನ್ನೇ ಗಾನಮಾಡಿರಿ. ಇದೇ ಲೋಕಕ್ಕೆ ಮಂಗಲಕರವಾಗಿದೆ.॥17॥
(ಶ್ಲೋಕ - 18)
ಮೂಲಮ್
ತಸ್ಯೈವ ಹೇತೋಃ ಪ್ರಯತೇತ ಕೋವಿದೋ
ನ ಲಭ್ಯತೇ ಯದ್ಭ್ರಮತಾಮುಪರ್ಯಧಃ ।
ತಲ್ಲಭ್ಯತೇ ದುಃಖವದನ್ಯತಃ ಸುಖಂ
ಕಾಲೇನ ಸರ್ವತ್ರ ಗಭೀರರಂಹಸಾ ॥
ಅನುವಾದ
ಬ್ರಹ್ಮಲೋಕದಿಂದ ಕೆಳಗಿನ ಲೋಕಗಳವರೆಗೆ ಎಲ್ಲೇ ಸುತ್ತಾಡುತ್ತಾ ಇದ್ದರೂ ಅವರಿಗೆ ಪರಮಾನಂದದ ಸುಖವು ದೊರೆಯಲಾರದು. (ಆದರೆ, ಗೋಪಿಯರು ಭಗವಂತನನ್ನು ಪಡೆಯಲು ಅವನ ಭಜನೆಯನ್ನೇ ಮಾಡಿದರು. ಮನೆ ವಾರ್ತೆಗಳನ್ನು ಬಿಟ್ಟು ಬಿಟ್ಟರು. ಭಗವಂತನಲ್ಲಿ ಅವರಿಗೆ ತದಾಕಾರ ವೃತ್ತಿ ಉಂಟಾಯಿತು. ಈ ವಿಧವಾಗಿ ಭಗವಂತನ ಭಜನೆ ಮಾಡುವವರೇ ಶ್ರೇಷ್ಠರಾಗಿರುತ್ತಾರೆ.) ಸಂಸಾರದ ಸುಖ-ದುಃಖಗಳಾದರೋ ಕಾಲಗತಿಯ ಪ್ರಭಾವದಿಂದ ಒಂದಾದ ಮೇಲೊಂದರಂತೆ ತಾನಾಗಿಯೇ ಬಂದುಹೋಗುತ್ತಾ ಇರುತ್ತವೆ. ಅವುಗಳಿಗಾಗಿ ಯಾವುದೇ ವಿಶೇಷ ಪ್ರಯತ್ನ ಮಾಡದೆ, ಬುದ್ಧಿವಂತರಾದವರು ಭಗವಂತನ ಭಕ್ತಿಯನ್ನು ಮಾಡಬೇಕು.॥18॥
(ಶ್ಲೋಕ - 19)
ಮೂಲಮ್
ನ ವೈ ಜನೋ ಜಾತು ಕಥಂಚನಾವ್ರಜೇ-
ನ್ಮುಕುಂದಸೇವ್ಯನ್ಯವದಂಗ ಸಂಸೃತಿಮ್ ।
ಸ್ಮರನ್ಮುಕುಂದಾಙ್ಘುರ್ಯೃಪಗೂಹನಂ ಪುನ-
ರ್ವಿಹಾತುಮಿಚ್ಛೇನ್ನ ರಸಗ್ರಹೋ ಯತಃ ॥
ಅನುವಾದ
ಮಹರ್ಷಿಗಳೇ! ಶ್ರೀಕೃಷ್ಣ ಪರಮಾತ್ಮನ ಪಾದಾರವಿಂದಗಳನ್ನು ಸೇವಿಸುವವನು ಎಂದಿಗೂ ಯಾವ ರೀತಿಯಲ್ಲೂ ಇತರ ಕರ್ಮಿಗಳಂತೆ ಈ ಸಂಸಾರ ಬಂಧನದಲ್ಲಿ ಬೀಳುವುದಿಲ್ಲ. ಒಂದು ಸಲ ಭಕ್ತಿರಸದ ಸವಿಯನ್ನು ಅನುಭವಿಸಿದವನು ಭಗವಂತನ ಚರಣಕಮಲಗಳ ಆಲಿಂಗನವನ್ನು ಸ್ಮರಿಸುತ್ತಾ ಮತ್ತೆ ಅದನ್ನು ಬಿಡದೆ ಪರಮಾನಂದದ ಸಾಗರದಲ್ಲೇ ಯಾವಾಗಲೂ ಮುಳುಗಿರುತ್ತಾನೆ.॥19॥
(ಶ್ಲೋಕ - 20)
ಮೂಲಮ್
ಇದಂ ಹಿ ವಿಶ್ವಂ ಭಗವಾನಿವೇತರೋ
ಯತೋ ಜಗತ್ಸ್ಥಾನನಿರೋಧಸಂಭವಾಃ ।
ತದ್ಧಿ ಸ್ವಯಂ ವೇದ ಭವಾಂಸ್ತಥಾಪಿ ವೈ
ಪ್ರಾದೇಶಮಾತ್ರಂ ಭವತಃ ಪ್ರದರ್ಶಿತಮ್ ॥
ಅನುವಾದ
ಈ ವಿಶ್ವವು ಭಗವಂತನದೇ ಸಾಕಾರ ಸ್ವರೂಪವಾಗಿದೆ. ಎಲ್ಲ ಪ್ರಾಣಿಗಳ ರೂಪದಲ್ಲಿ ಅವನೇ ಇರುವನು. ಹೀಗಿದ್ದರೂ ಅವನು ಇದರಿಂದ ಮೇಲೆ ಅರ್ಥಾತ್ ಅತೀತನಾಗಿದ್ದಾನೆ. ಅವನಿಂದಲೇ ಈ ವಿಶ್ವದ ಉತ್ಪತ್ತಿ, ಸ್ಥಿತಿ, ಸಂಹಾರ ಲೀಲೆಯು ನಡೆಯುತ್ತಾ ಇದೆ. ನೀವಾದರೋ ಆ ಪ್ರಭುವಿನ ಕುರಿತು ಎಲ್ಲವನ್ನು ಬಲ್ಲವರಾಗಿದ್ದೀರಿ. ಹೀಗಿದ್ದರೂ ನಾನು ನಿಮಗೆ ಸಂಕೇತಮಾತ್ರ ಮಾಡಿರುವೆನು. ಆದ್ದರಿಂದ ನೀವು ಭಗವಂತನ ಲೀಲೆಗಳನ್ನು ಹಾಗೂ ಅವನ ಗುಣಗಳನ್ನು ವರ್ಣಿಸಿರಿ.॥20॥
(ಶ್ಲೋಕ - 21)
ಮೂಲಮ್
ತ್ವಮಾತ್ಮನಾತ್ಮಾನಮವೇಹ್ಯಮೋಘದೃಕ್
ಪರಸ್ಯ ಪುಂಸಃ ಪರಮಾತ್ಮನಃ ಕಲಾಮ್ ।
ಅಜಂ ಪ್ರಜಾತಂ ಜಗತಃ ಶಿವಾಯ ತ-
ನ್ಮಹಾನುಭಾವಾಭ್ಯುದಯೋಗಣ್ಯತಾಮ್ ॥
ಅನುವಾದ
ಮಹಾಮಹಿಮರೇ! ನಿಮ್ಮ ದೃಷ್ಟಿಯು ಅಮೋಘವಾದುದು. ನೀವು ಪರಮಪುರುಷ-ಪರಮಾತ್ಮನ ಕಲಾವತಾರವೇ ಆಗಿದ್ದೀರಿ; ಇದನ್ನು ತಾವು ಅರಿತುಕೊಳ್ಳಿ. ಜನ್ಮ ರಹಿತವಾಗಿದ್ದರೂ ತಾವು ಜಗತ್ತಿನ ಕಲ್ಯಾಣಕ್ಕಾಗಿ ಜನ್ಮವನ್ನು ಪಡೆದಿರುವಿರಿ. ಅದರಿಂದ ನೀವು ವಿಶೇಷವಾಗಿ ಭಗವಂತನ ಲೀಲೆಗಳನ್ನು ಕೀರ್ತನೆ ಮಾಡಿರಿ.॥21॥
(ಶ್ಲೋಕ - 22)
ಮೂಲಮ್
ಇದಂ ಹಿ ಪುಂಸಸ್ತಪಸಃ ಶ್ರುತಸ್ಯ ವಾ
ಸ್ವಿಷ್ಟಸ್ಯ ಸೂಕ್ತಸ್ಯ ಚ ಬುದ್ಧಿದತ್ತಯೋಃ ।
ಅವಿಚ್ಯುತೋರ್ಥಃ ಕವಿಭಿರ್ನಿರೂಪಿತೋ
ಯದುತ್ತಮಶ್ಲೋಕಗುಣಾನುವರ್ಣನಮ್ ॥
ಅನುವಾದ
ಪುಣ್ಯಕೀರ್ತಿಯಾದ ಶ್ರೀಭಗವಂತನ ದಿವ್ಯಗುಣಗಳನ್ನು, ಲೀಲೆಗಳನ್ನು ವರ್ಣನೆ ಮಾಡುವುದೇ ಮನುಷ್ಯರು ಆಚರಿಸುವ ತಪಸ್ಸು, ವೇದಾಧ್ಯಯನ, ಯಜ್ಞಾನುಷ್ಠಾನ, ಸ್ವಾಧ್ಯಾಯ, ಜ್ಞಾನ ಮತ್ತು ದಾನ ಇವೆಲ್ಲಕ್ಕೂ ಪರಮ ಪ್ರಯೋಜನವೆಂದು ಜ್ಞಾನಿಗಳು ನಿರೂಪಿಸಿದ್ದಾರೆ.॥22॥
(ಶ್ಲೋಕ - 23)
ಮೂಲಮ್
ಅಹಂ ಪುರಾತೀತಭವೇಭವಂ ಮುನೇ
ದಾಸ್ಯಾಸ್ತು ಕಸ್ಯಾಶ್ಚನ ವೇದವಾದಿನಾಮ್ ।
ನಿರೂಪಿತೋ ಬಾಲಕ ಏವ ಯೋಗಿನಾಂ
ಶುಶ್ರೂಷಣೇ ಪ್ರಾವೃಷಿ ನಿರ್ವಿವಿಕ್ಷತಾಮ್ ॥
ಅನುವಾದ
ಮಹಾಮುನಿಗಳೇ! (ಭಗವಂತನ ಗುಣಗಾನ, ಶ್ರವಣ ಮುಂತಾದವುಗಳಿಂದಲೇ ಆ ಪರಮಾತ್ಮನ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ನನ್ನ ಚರಿತ್ರೆಯೇ ಒಂದು ಉದಾಹರಣೆಯಾಗಿದೆ.) ಹಿಂದಿನ ಕಲ್ಪದಲ್ಲಿ, ನನ್ನ ಹಿಂದಿನ ಜೀವನದಲ್ಲಿ ನಾನು ವೇದವಾದಿಗಳಾದ ಬ್ರಾಹ್ಮಣರ ಓರ್ವ ದಾಸಿಯ ಪುತ್ರನಾಗಿದ್ದೆನು, ಆ ಯೋಗಿಗಳು ವರ್ಷಾ ಋತುವಿನಲ್ಲಿ ಒಂದೆಡೆ ಚಾತುರ್ಮಾಸ್ಯ ಮಾಡುತ್ತಿದ್ದರು. ನಾನು ಬಾಲಕನಾಗಿರುವಾಗಲೇ ನನ್ನ ತಾಯಿಯು ಆ ಯೋಗಿಗಳ ಶುಶ್ರೂಷೆಯಲ್ಲಿ ನನ್ನನ್ನು ನೇಮಿಸಿದ್ದಳು.॥23॥
(ಶ್ಲೋಕ - 24)
ಮೂಲಮ್
ತೇ ಮಯ್ಯಪೇತಾಖಿಲಚಾಪಲೇರ್ಭಕೇ
ದಾಂತೇಧೃತಕ್ರೀಡನಕೇನುವರ್ತಿನಿ ।
ಚಕ್ರುಃ ಕೃಪಾಂ ಯದ್ಯಪಿ ತುಲ್ಯದರ್ಶನಾಃ
ಶುಶ್ರೂಷಮಾಣೇ ಮುನಯೋಲ್ಪಭಾಷಿಣಿ ॥
ಅನುವಾದ
ನಾನು ಬಾಲಕನಾಗಿದ್ದರೂ ಚಾಪಲ್ಯರಹಿತನಾಗಿದ್ದು, ಜಿತೇಂದ್ರಿಯನಾಗಿದ್ದೆ. ಆಟಗಳಲ್ಲಿ ಆಸಕ್ತಿಯಿಲ್ಲದೆ, ಮಿತಭಾಷಿಯಾಗಿದ್ದು, ಅವರ ಆಜ್ಞಾನುಸಾರ ಸೇವೆ ಮಾಡುತ್ತಿದ್ದೆ. ನನ್ನ ಈ ಶೀಲ-ಸ್ವಭಾವವನ್ನು ನೋಡಿ ಸಮದರ್ಶಿಗಳಾದ ಮುನಿಗಳು ಸೇವಕನಾದ ನನ್ನಮೇಲೆ ಪರಮಾನುಗ್ರಹ ಮಾಡಿದರು.॥24॥
(ಶ್ಲೋಕ - 25)
ಮೂಲಮ್
ಉಚ್ಛಿಷ್ಟಲೇಪಾನನುಮೋದಿತೋ ದ್ವಿಜೈಃ
ಸಕೃತ್ಸ್ಮ ಭುಂಜೇ ತದಪಾಸ್ತಕಿಲ್ಬಿಷಃ ।
ಏವಂ ಪ್ರವೃತ್ತಸ್ಯ ವಿಶುದ್ಧಚೇತಸ-
ಸ್ತದ್ಧರ್ಮ ಏವಾತ್ಮರುಚಿಃ ಪ್ರಜಾಯತೇ ॥
ಅನುವಾದ
ನಾನು ಅವರ ಅನುಮತಿಪಡೆದು ಅವರ ಅಡಿಗೆಯ ಪಾತ್ರೆಯಲ್ಲಿ ಅಂಟಿಕೊಂಡಿದ್ದ ಪಾಕಶೇಷವನ್ನು ಪ್ರಸಾದವೆಂದು ಭಾವಿಸಿ ದಿನಕ್ಕೆ ಒಂದು ಬಾರಿ ಮಾತ್ರ ಸೇವಿಸುತ್ತಿದ್ದೆ. ಅದರಿಂದ ನನ್ನ ಪಾಪಗಳೆಲ್ಲವೂ ತೊಳೆದು ಹೋದುವು. ಹೀಗೆ ಅವರ ಸೇವೆಮಾಡುತ್ತಾ-ಮಾಡುತ್ತಾ ನನ್ನ ಹೃದಯವು ಶುದ್ಧವಾಗಿ ಆ ಯೋಗಿಗಳು ಹೇಗೆ ಭಜನೆ-ಪೂಜೆ ಮಾಡುತ್ತಿದ್ದರೋ ಅದರಲ್ಲೇ ನನಗೂ ಅಭಿರುಚಿ ಉಂಟಾಯಿತು.॥25॥
(ಶ್ಲೋಕ - 26)
ಮೂಲಮ್
ತತ್ರಾನ್ವಹಂ ಕೃಷ್ಣಕಥಾಃ ಪ್ರಗಾಯತಾ-
ಮನುಗ್ರಹೀಣಾಶೃಣವಂ ಮನೋಹರಾಃ ।
ತಾಃ ಶ್ರದ್ಧಯಾ ಮೇನುಪದಂ ವಿಶೃಣ್ವತಃ
ಪ್ರಿಯಶ್ರವಸ್ಯಂಗ ಮಮಾಭವದ್ರುಚಿಃ ॥
ಅನುವಾದ
ವ್ಯಾಸಮಹರ್ಷಿಗಳೇ! ಆ ಸತ್ಸಂಗದಲ್ಲಿ ಲೀಲಾಗಾನ ಪರಾಯಣರಾದ ಮಹಾತ್ಮರ ಅನುಗ್ರಹದಿಂದ ಪ್ರತಿದಿನವು ನಾನು ಶ್ರೀಕೃಷ್ಣನ ಮನೋಹರ ಕಥೆಗಳನ್ನು ಕೇಳುತ್ತಿದ್ದೆ. ಶ್ರದ್ಧಾಪೂರ್ವಕ ಒಂದೊಂದು ಪದವನ್ನು ಶ್ರವಣಿಸುತ್ತಾ ಇರುವಾಗ ಪ್ರಿಯಕೀರ್ತಿಯುಳ್ಳ, ಸ್ತೋತ್ರಪ್ರಿಯನಾದ ಭಗವಂತನಲ್ಲಿ ನನಗೆ ಅಭಿರುಚಿ ಉಂಟಾಯಿತು. ಹೀಗೆ ಆ ಮಹಾನುಭಾವರ ಸತ್ಸಂಗದಿಂದ ನನಗೆ ಅದ್ಭುತಲಾಭವಾಯಿತು. ಇದೆಲ್ಲವೂ ಆ ಮಹಾತ್ಮರ ಅಸೀಮ ಕೃಪೆಯೆಂದೇ ನಾನು ಭಾವಿಸುತ್ತೇನೆ.॥26॥
(ಶ್ಲೋಕ - 27)
ಮೂಲಮ್
ತಸ್ಮಿಂಸ್ತದಾ ಲಬ್ಧರುಚೇರ್ಮಹಾಮುನೇ
ಪ್ರಿಯಶ್ರವಸ್ಯಸ್ಖಲಿತಾ ಮತಿರ್ಮಮ ।
ಯಯಾಹಮೇತತ್ಸದಸತ್ಸ್ವ ಮಾಯಯಾ
ಪಶ್ಯೇ ಮಯಿ ಬ್ರಹ್ಮಣಿ ಕಲ್ಪಿತಂ ಪರೇ ॥
ಅನುವಾದ
ಮಹಾಮುನೇ! ಭಗವಂತನಲ್ಲಿ ಅಭಿರುಚಿ ಉಂಟಾದಾಗ ಆ ಮನೋಹರ ಕೀರ್ತಿಯುಳ್ಳ ಪ್ರಭುವಿನಲ್ಲಿ ನನ್ನ ಬುದ್ಧಿಯು ನಿಶ್ಚಲವಾಗಿ ನೆಲೆಸಿತು. ಆ ಬುದ್ಧಿಯಿಂದ ನಾನು ಈ ಸದಸದಾತ್ಮಕವಾದ ಜಗತ್ತೆಲ್ಲವೂ ಪರಬ್ರಹ್ಮಸ್ವರೂಪೀ ನನ್ನ ಆತ್ಮನಲ್ಲೇ ಮಾಯೆಯಿಂದ ಕಲ್ಪಿತವಾಗಿರುವಂತೆ ನೋಡ ತೊಡಗಿದೆನು.॥27॥
(ಶ್ಲೋಕ - 28)
ಮೂಲಮ್
ಇತ್ಥಂ ಶರತ್ಪ್ರಾವೃಷಿಕಾವೃತೂ ಹರೇ-
ರ್ವಿಶೃಣ್ವತೋ ಮೇನುಸವಂ ಯಶೋಮಲಮ್ ।
ಸಂಕೀರ್ತ್ಯಮಾನಂ ಮುನಿಭಿರ್ಮಹಾತ್ಮಭಿ-
ರ್ಭಕ್ತಿಃ ಪ್ರವೃತ್ತಾತ್ಮ ರಜಸ್ತಮೋಪಹಾ ॥
ಅನುವಾದ
ಹೀಗೆ ಶರದ್ಋತು ಮತ್ತು ವರ್ಷಾಋತುವಿನ ನಾಲ್ಕುತಿಂಗಳುಗಳ ಅವಧಿಯಲ್ಲಿ ಪ್ರತಿದಿನವೂ ಮೂರೂ ಹೊತ್ತು ಆ ಮಹಾತ್ಮರಾದ ಮುನಿಗಳು ಶ್ರೀಹರಿಯ ನಿರ್ಮಲವಾದ ಕೀರ್ತಿಯನ್ನು ಸಂಕೀರ್ತನ ಮಾಡುತ್ತಿದ್ದರು. ಪ್ರೇಮದಿಂದ ಪ್ರತಿಯೊಂದು ಮಾತನ್ನು ಕೇಳುತ್ತಿದ್ದ ನನ್ನ ಹೃದಯದಲ್ಲಿ ರಜೋಗುಣ, ತಮೋಗುಣಗಳನ್ನು ನಾಶಮಾಡುವಂತಹ ಭಕ್ತಿಯು ಉದಯಿಸಿತು.॥28॥
(ಶ್ಲೋಕ - 29)
ಮೂಲಮ್
ತಸ್ಯೈವಂ ಮೇನುರಕ್ತಸ್ಯ ಪ್ರಶ್ರಿತಸ್ಯ ಹತೈನಸಃ ।
ಶ್ರದ್ಧಧಾನಸ್ಯ ಬಾಲಸ್ಯ ದಾಂತಸ್ಯಾನುಚರಸ್ಯ ಚ ॥
ಅನುವಾದ
ನಾನು ಆ ಯೋಗಿಗಳಲ್ಲಿ ಅತ್ಯಂತ ಅನುರಕ್ತನಾಗಿದ್ದೆನು. ವಿನಯಶಾಲಿಯಾಗಿದ್ದೆನು. ಅವರ ಸೇವೆಯಿಂದ ನನ್ನ ಪಾಪಗಳೆಲ್ಲವೂ ನಾಶಹೊಂದಿದವು. ನನ್ನ ಹೃದಯದಲ್ಲಿ ಶ್ರದ್ಧೆಯೂ, ಇಂದ್ರಿಯಗಳಲ್ಲಿ ಸಂಯಮವೂ ಇದ್ದು, ಶರೀರ, ವಾಣಿ, ಮನಸ್ಸುಗಳಿಂದ ನಾನು ಅವರ ಆಜ್ಞಾಕಾರಿಯಾಗಿದ್ದೆ.॥29॥
(ಶ್ಲೋಕ - 30)
ಮೂಲಮ್
ಜ್ಞಾನಂ ಗುಹ್ಯತಮಂ ಯತ್ತತ್ಸಾಕ್ಷಾದ್ಭಗವತೋದಿತಮ್ ।
ಅನ್ವವೋಚನ್ ಗಮಿಷ್ಯಂತಃ ಕೃಪಯಾ ದೀನವತ್ಸಲಾಃ ॥
ಅನುವಾದ
ಆ ದೀನವತ್ಸಲರಾದ ಮಹಾತ್ಮರು ಅಲ್ಲಿಂದ ಹೊರಡುವಾಗ ಸ್ವಯಂ ಭಗವಂತನೇ ತನ್ನ ಶ್ರೀಮುಖದಿಂದ ಉಪದೇಶ ಮಾಡಿದ್ದ ರಹಸ್ಯವಾದ ಜ್ಞಾನವನ್ನು ನನಗೆ ಪರಮಕೃಪೆಯಿಂದ ಉಪದೇಶಿಸಿದರು.॥30॥
(ಶ್ಲೋಕ - 31)
ಮೂಲಮ್
ಯೆನೈವಾಹಂ ಭಗವತೋ ವಾಸುದೇವಸ್ಯ ವೇಧಸಃ ।
ಮಾಯಾನುಭಾವಮವಿದಂ ಯೇನ ಗಚ್ಛಂತಿ ತತ್ಪದಮ್ ॥
ಅನುವಾದ
ಆ ಉಪದೇಶದಿಂದಲೇ ಜಗತ್ತಿನ ನಿರ್ಮಾತೃವಾದ ಭಗವಾನ್ ಶ್ರೀಕೃಷ್ಣನ ಮಾಯೆಯ ಪ್ರಭಾವವನ್ನು ನಾನು ಅರಿಯುವಂತಾಯಿತು. ಅದನ್ನರಿತರೆ ಅವನ ಪರಮಪದದ ಪ್ರಾಪ್ತಿಯಾಗುವುದು, ಆತ್ಮಸ್ವರೂಪದ ಜ್ಞಾನ ಉಂಟಾಗುವುದು.॥31॥
(ಶ್ಲೋಕ - 32)
ಮೂಲಮ್
ಏತತ್ಸಂಸೂಚಿತಂ ಬ್ರಹ್ಮಂಸ್ತಾಪತ್ರಯಚಿಕಿತ್ಸಿತಮ್ ।
ಯದೀಶ್ವರೇ ಭಗವತಿ ಕರ್ಮ ಬ್ರಹ್ಮಣಿ ಭಾವಿತಮ್ ॥
ಅನುವಾದ
ಬ್ರಹ್ಮರ್ಷಿಗಳೇ! ಪುರುಷೋತ್ತಮನಾದ ಭಗವಾನ್ ಶ್ರೀಕೃಷ್ಣನ ಕುರಿತು ಸಮಸ್ತ ಕರ್ಮಗಳನ್ನು ಸಮರ್ಪಿಸುವುದೇ ನಮ್ಮ ತಾಪತ್ರಯಗಳನ್ನು ನಾಶಪಡಿಸುವ ದಿವ್ಯೌಷಧವು. ಈ ರಹಸ್ಯವನ್ನು ನಾನು ತಿಳಿದು ನಿಮಗೂ ಸೂಚಿಸಿದ್ದೇನೆ.॥32॥
(ಶ್ಲೋಕ - 33)
ಮೂಲಮ್
ಆಮಯೋ ಯಶ್ಚ ಭೂತಾನಾಂ ಜಾಯತೇ ಯೇನ ಸುವ್ರತ ।
ತದೇವ ಹ್ಯಾಮಯಂ ದ್ರವ್ಯಂ ನ ಪುನಾತಿ ಚಿಕಿತ್ಸಿತಮ್ ॥
ಅನುವಾದ
ಸಾಧುಶಿರೋಮಣಿಗಳೇ! ಪ್ರಾಣಿಗಳಿಗೆ ಯಾವ ಪದಾರ್ಥದ ಸೇವನೆಯಿಂದ ಯಾವ ರೋಗ ಉಂಟಾಗುವುದೋ, ಅದೇ ಪದಾರ್ಥವನ್ನು ಚಿಕಿತ್ಸಾವಿಧಿಗೆ ಅನುಸಾರವಾಗಿ ಪ್ರಯೋಗಿಸಿದರೆ ಆ ರೋಗವನ್ನು ದೂರಮಾಡುವುದಲ್ಲ!॥33॥
(ಶ್ಲೋಕ - 34)
ಮೂಲಮ್
ಏವಂ ನೃಣಾಂ ಕ್ರಿಯಾಯೋಗಾಃ ಸರ್ವೇ ಸಂಸೃತಿಹೇತವಃ ।
ತ ಏವಾತ್ಮವಿನಾಶಾಯ ಕಲ್ಪಂತೇ ಕಲ್ಪಿತಾಃ ಪರೇ ॥
ಅನುವಾದ
ಹೀಗೆಯೇ ಎಲ್ಲ ಕರ್ಮಗಳು ಮನುಷ್ಯನನ್ನು ಜನ್ಮ-ಮರಣಗಳ ಸಂಸಾರಚಕ್ರದಲ್ಲಿ ಕೆಡಹುವುದಿದ್ದರೂ, ಅವುಗಳನ್ನೂ ಭಗವಂತನಿಗೆ ಸಮರ್ಪಿಸಿದಾಗ ಅವುಗಳ ಕರ್ಮತ್ವವೇ ಕಳೆದುಹೋಗುತ್ತದೆ. ಮತ್ತೆ ಆ ಕರ್ಮಗಳು ಜೀವನನ್ನು ಬಂಧಿಸಲಾರವು.॥34॥
(ಶ್ಲೋಕ - 35)
ಮೂಲಮ್
ಯದತ್ರ ಕ್ರಿಯತೇ ಕರ್ಮ ಭಗವತ್ಪರಿತೋಷಣಮ್ ।
ಜ್ಞಾನಂ ಯತ್ತದೀನಂ ಹಿ ಭಕ್ತಿಯೋಗಸಮನ್ವಿತಮ್ ॥
ಅನುವಾದ
ಆದ್ದರಿಂದ ಭಗವತ್ ಪ್ರೀತ್ಯರ್ಥವಾಗಿ ಮಾಡಲಾಗುವ ಕರ್ಮದಿಂದ ಜ್ಞಾನ ಮತ್ತು ಭಕ್ತಿ ಎರಡೂ ಪ್ರಾಪ್ತವಾಗುತ್ತವೆ. ಆ ಜ್ಞಾನವನ್ನು ಭಕ್ತಿ ಯೋಗಯುಕ್ತಜ್ಞಾನ ಎಂದು ಹೇಳಲಾಗಿದೆ.॥35॥
(ಶ್ಲೋಕ - 36)
ಮೂಲಮ್
ಕುರ್ವಾಣಾ ಯತ್ರ ಕರ್ಮಾಣಿ ಭಗವಚ್ಛಿಕ್ಷಯಾಸಕೃತ್ ।
ಗೃಣಂತಿ ಗುಣನಾಮಾನಿ ಕೃಷ್ಣಸ್ಯಾನುಸ್ಮರಂತಿ ಚ ॥
ಅನುವಾದ
ಆ ಭಗವದರ್ಥ ಕರ್ಮಮಾರ್ಗದಲ್ಲಿ ಭಗವಂತನ ಆಜ್ಞಾನುಸಾರವಾಗಿ ಆಚರಣವಿಟ್ಟುಕೊಂಡು ಜನರು ಪದೇ-ಪದೇ ಭಗವಾನ್ ಶ್ರೀಕೃಷ್ಣನ ಗುಣ-ನಾಮಗಳನ್ನು ಕೀರ್ತಿಸುತ್ತಾ, ಸ್ಮರಿಸುತ್ತಾ ಇರುತ್ತಾರೆ.॥36॥
(ಶ್ಲೋಕ - 37)
ಮೂಲಮ್
ನಮೋ ಭಗವತೇ ತುಭ್ಯಂ ವಾಸುದೇವಾಯ ೀಮಹಿ ।
ಪ್ರದ್ಯುಮ್ನಾಯಾನಿರುದ್ಧಾಯ ನಮಃ ಸಂಕರ್ಷಣಾಯ ಚ ॥
ಅನುವಾದ
ಹಾಗೂ ಆಗಾಗ ಭಗವಂತನನ್ನು ಹೀಗೆ ಸ್ತುತಿಸುತ್ತಾ ಇರುತ್ತಾರೆ ಪ್ರಭೋ! ಭಗವಾನ್ ವಾಸುದೇವನಾದ ನಿನಗೆ ನಮಸ್ಕಾರವು. ನಾವು ನಿನ್ನನ್ನೇ ಧ್ಯಾನಿಸುತ್ತೇವೆ. ಪ್ರದ್ಯುಮ್ನನೂ, ಅನಿರುದ್ಧನೂ, ಸಂಕರ್ಷಣನೂ ಆಗಿರುವ ನಿನಗೆ ನಮೋ ನಮಃ ॥37॥
(ಶ್ಲೋಕ - 38)
ಮೂಲಮ್
ಇತಿ ಮೂರ್ತ್ಯಭಿಧಾನೇನ ಮಂತ್ರ ಮೂರ್ತಿಮಮೂರ್ತಿಕಮ್ ।
ಯಜತೇ ಯಜ್ಞಪುರುಷಂ ಸ ಸಮ್ಯಗ್ದರ್ಶನಃ ಪುಮಾನ್ ॥
ಅನುವಾದ
ಹೀಗೆ ಭಗವಂತನ ಚತುರ್ವ್ಯೂಹ ಮೂರ್ತಿಗಳ ನಾಮಸಂಕೀರ್ತನೆಯನ್ನು ಮಾಡುತ್ತಾ, ಪ್ರಾಕೃತಮೂರ್ತಿ ರಹಿತನೂ, ಅಪ್ರಾಕೃತ ಮಂತ್ರಮೂರ್ತಿಯೂ ಆಗಿರುವ ಭಗವಾನ್ ಯಜ್ಞಪುರುಷನನ್ನು ಪೂಜೆಮಾಡುವವನೇ ಯಥಾರ್ಥ ಜ್ಞಾನಿಯು.॥38॥
(ಶ್ಲೋಕ - 39)
ಮೂಲಮ್
ಇಮಂ ಸ್ವನಿಗಮಂ ಬ್ರಹ್ಮನ್ನವೇತ್ಯ ಮದನುಷ್ಠಿತಮ್ ।
ಅದಾನ್ಮೇಜ್ಞಾನಮೈಶ್ವರ್ಯಂ ಸ್ವಸ್ಮಿನ್ ಭಾವಂ ಚ ಕೇಶವಃ ॥
ಅನುವಾದ
ಬ್ರಹ್ಮರ್ಷಿಗಳೇ! ಹೀಗೆ ನಾನು ಭಗವಂತನ ಆಜ್ಞೆಯಂತೆ ಭಕ್ತಿಭಾವದಿಂದ ನಡೆದುಕೊಂಡೆನು. ಅವನಿಗೆ ಅರ್ಪಿತವಾಗಿ ಕರ್ಮಗಳನ್ನು ಆಚರಿಸಿದೆನು. ಇದರಿಂದ ಪ್ರಸನ್ನಗೊಂಡ ಭಗವಾನ್ ಕೇಶವನು ನನಗೆ ಆತ್ಮಜ್ಞಾನ, ಐಶ್ವರ್ಯ ಮತ್ತು ತನ್ನ ಭಾವರೂಪೀ ಪ್ರೇಮಾ ಭಕ್ತಿಯನ್ನು ಕರುಣಿಸಿದನು.॥39॥
(ಶ್ಲೋಕ - 40)
ಮೂಲಮ್
ತ್ವಮಪ್ಯದಭ್ರಶ್ರುತ ವಿಶ್ರುತಂ ವಿಭೋಃ
ಸಮಾಪ್ಯತೇ ಯೇನ ವಿದಾಂ ಬುಭುತ್ಸಿತಮ್ ।
ಆಖ್ಯಾಹಿ ದುಃಖೈರ್ಮುಹುರರ್ದಿತಾತ್ಮನಾಂ
ಸಂಕ್ಲೇಶನಿರ್ವಾಣಮುಶಂತಿ ನಾನ್ಯಥಾ ॥
ಅನುವಾದ
ಜ್ಞಾನನಿಧಿಗಳೇ! ನಿಮ್ಮ ಜ್ಞಾನವು ಪೂರ್ಣವಾಗಿದೆ. ನೀವು ಭಗವಂತನದೇ ಕೀರ್ತಿಯನ್ನೂ, ಅವನ ಪ್ರೇಮಮಯ ದಿವ್ಯಲೀಲೆಗಳನ್ನು ವರ್ಣಿಸಿರಿ. ಅವನ ಸ್ಮರಣೆ-ಕೀರ್ತನೆ-ಚಿಂತನೆ ಮಾಡುತ್ತಾ ಇರುವುದರಿಂದ ತಿಳಿದುಕೊಳ್ಳಬೇಕಾದುದು ಯಾವುದೂ ಉಳಿಯುವುದಿಲ್ಲ. ಇದರಿಂದ ದೊಡ್ಡ-ದೊಡ್ಡ ಜ್ಞಾನಿಗಳ ಜಿಜ್ಞಾಸೆಯೂ ಪೂರ್ಣವಾಗುತ್ತದೆ. ನಾನಾ ದುಃಖಗಳಿಂದ ಮತ್ತೆ-ಮತ್ತೆ ಸಂಕಷ್ಟಕ್ಕೆ ಈಡಾಗುವವರ ದುಃಖಗಳು ಇದರಿಂದ ಶಮನವಾಗುವುವು. ಇದನ್ನು ಬಿಟ್ಟರೆ ನೆಮ್ಮದಿಗೆ ಬೇರೆ ಯಾವ ಉಪಾಯವೂ ಇಲ್ಲ.॥40॥
ಅನುವಾದ (ಸಮಾಪ್ತಿಃ)
ಐದನೆಯ ಅಧ್ಯಾಯವು ಮುಗಿಯಿತು. ॥5॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ವ್ಯಾಸನಾರದಸಂವಾದೇ ಪಂಚಮೋಽಧ್ಯಾಯಃ ॥5॥