೦೪

[ನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಮಹರ್ಷಿ ವೇದವ್ಯಾಸರ ವಿಷಾದ ಅವರ ಬಳಿಗೆ ನಾರದರ ಆಗಮನ

(ಶ್ಲೋಕ - 1)

ಮೂಲಮ್ (ವಾಚನಮ್)

ವ್ಯಾಸ ಉವಾಚ

ಮೂಲಮ್

ಇತಿ ಬ್ರುವಾಣಂ ಸಂಸ್ತೂಯ ಮುನೀನಾಂ ದೀರ್ಘಸತ್ರಿಣಾಮ್ ।
ವೃದ್ಧಃ ಕುಲಪತಿಃ ಸೂತಂ ಬಹ್ವಚಃ ಶೌನಕೋಬ್ರವೀತ್ ॥

ಅನುವಾದ

ಶ್ರೀವೇದವ್ಯಾಸರು ಹೇಳುತ್ತಾರೆ — ಆ ದೀರ್ಘಕಾಲದ ಸತ್ರಯಾಗದಲ್ಲಿ ನೆರೆದಿದ್ದ ಮುನಿಗಳಲ್ಲಿ ಜ್ಞಾನದಲ್ಲೂ ವಯಸ್ಸಿನಲ್ಲೂ ವೃದ್ಧರಾದ ಋಗ್ವೇದೀ ಕುಲಪತಿ ಶೌನಕರು ಅಲ್ಲಿ ಪ್ರವಚನ ಮಾಡುತ್ತಿದ್ದ ಸೂತಪುರಾಣಿಕರನ್ನು ಅಭಿನಂದಿಸಿ ಹೀಗೆ ಪ್ರಾರ್ಥಿಸಿಕೊಂಡರು.॥1॥

(ಶ್ಲೋಕ - 2)

ಮೂಲಮ್ (ವಾಚನಮ್)

ಶೌನಕ ಉವಾಚ

ಮೂಲಮ್

ಸೂತ ಸೂತ ಮಹಾಭಾಗ ವದ ನೋ ವದತಾಂ ವರ ।
ಕಥಾಂ ಭಾಗವತೀಂ ಪುಣ್ಯಾಂ ಯದಾಹ ಭಗವಾನ್ ಶುಕಃ ॥

ಅನುವಾದ

ಶೌನಕರು ಕೇಳಿದರು — (ಅವರು ಹೆಚ್ಚಿನ ಆದರಭಾವದಿಂದ ಎರಡುಬಾರಿ ಸಂಬೋಧಿಸಿ ಹೇಳುತ್ತಾರೆ.) ಸೂತ ಪುರಾಣಿಕರೇ! ಸೂತರೇ! ನೀವು ಪ್ರವಚನ ಮಾಡುವವರಲ್ಲಿ ಶ್ರೇಷ್ಠರಾಗಿದ್ದು, ಮಹಾಭಾಗ್ಯಶಾಲಿಗಳಾಗಿದ್ದೀರಿ. ಭಗವಾನ್ ಶ್ರೀಶುಕಮಹಾಮುನಿಗಳು ಹೇಳಿರುವ ಭಗವಂತನ ಪುಣ್ಯ ಮಯ ಕಥೆಯನ್ನು ದಯಮಾಡಿ ನಮಗೆ ಹೇಳಿರಿ.॥2॥

(ಶ್ಲೋಕ - 3)

ಮೂಲಮ್

ಕಸ್ಮಿನ್ ಯುಗೇ ಪ್ರವೃತ್ತೇಯಂ ಸ್ಥಾನೇ ವಾ ಕೇನ ಹೇತುನಾ ।
ಕುತಃ ಸಂಚೋದಿತಃ ಕೃಷ್ಣಃ ಕೃತವಾನ್ ಸಂಹಿತಾಂ ಮುನಿಃ ॥

ಅನುವಾದ

ಆ ಕಥೆಯು ಯಾವ ಯುಗದಲ್ಲಿ, ಯಾವ ಸ್ಥಾನದಲ್ಲಿ, ಯಾವ ಕಾರಣದಿಂದ ನಡೆದಿತ್ತು? ಯಾರ ಪ್ರೇರಣೆಯಿಂದ ಮುನಿಶ್ರೇಷ್ಠರಾದ ಶ್ರೀಕೃಷ್ಣದ್ವೈಪಾಯನರು ಈ ಪರಮ ಹಂಸರ ಪುರಾಣಸಂಹಿತೆಯನ್ನು ರಚಿಸಿದರು? ॥3॥

(ಶ್ಲೋಕ - 4)

ಮೂಲಮ್

ತಸ್ಯ ಪುತ್ರೋ ಮಹಾಯೋಗೀ ಸಮದೃಙ್ನಿರ್ವಿಕಲ್ಪಕಃ ।
ಏಕಾಂತಮತಿರುನ್ನಿದ್ರೋ ಗೂಢೋ ಮೂಢ ಇವೇಯತೇ ॥

ಅನುವಾದ

ಅವರ ಪುತ್ರರಾದ ಶುಕಮಹಾಮುನಿಗಳು ದೊಡ್ಡ ಯೋಗಿಗಳೂ, ಸಮದೃಷ್ಟಿಯುಳ್ಳವರೂ, ಭೇದಭಾವರಹಿತರೂ, ಅಜ್ಞಾನ-ನಿದ್ದೆಯಿಂದ ಎಚ್ಚತ್ತವರೂ, ನಿರಂತರ ಏಕಮಾತ್ರ ಪರಮಾತ್ಮನಲ್ಲಿ ಸ್ಥಿತರಾಗಿರುವವರೂ ಆಗಿದ್ದಾರೆ. ತನ್ನ ಮಹಿಮೆಯನ್ನು ಪ್ರಕಟಪಡಿಸಿಕೊಳ್ಳದೆ ಮೂಢನಂತೆ ಕಂಡು ಬರುತ್ತಾರೆ.॥4॥

(ಶ್ಲೋಕ - 5)

ಮೂಲಮ್

ದೃಷ್ಟ್ವಾನುಯಾಂತಮೃಷಿಮಾತ್ಮಜಮಪ್ಯನಗ್ನಂ
ದೇವ್ಯೋ ಹ್ರಿಯಾ ಪರಿದಧುರ್ನ ಸುತಸ್ಯ ಚಿತ್ರಮ್ ।
ತದ್ವೀಕ್ಷ್ಯ ಪೃಚ್ಛತಿ ಮುನೌ ಜಗದುಸ್ತವಾಸ್ತಿ
ಸೀಪುಂಭಿದಾ ನ ತು ಸುತಸ್ಯ ವಿವಿಕ್ತದೃಷ್ಟೇಃ ॥

ಅನುವಾದ

ಅವರು ಪರಿವ್ರಾಜಕರಾಗಿ ಮನೆಯಿಂದ ಹೊರಟು ಬಿಟ್ಟಾಗ ತಂದೆ ವೇದವ್ಯಾಸರು ಅವರನ್ನು ಅಗಲಿರಲಾರದೆ ಹಿಂಬಾಲಿಸಿದರು. ಮಾರ್ಗದಲ್ಲಿ ಆಗ ಸ್ತ್ರೀಯರು ಸ್ನಾನ ಮಾಡುತ್ತಿದ್ದರು. ಶುಕಮಹರ್ಷಿಯು ದಿಗಂಬರನಾಗಿ ಹೋಗುತ್ತಿದ್ದರೂ ಆ ಸ್ತ್ರೀಯರು ಬಟ್ಟೆಯನ್ನುಟ್ಟುಕೊಳ್ಳಲಿಲ್ಲ. ಆದರೆ ವಸ್ತ್ರಧರಿಸಿದ್ದ ವೃದ್ಧರಾದ ವ್ಯಾಸರನ್ನು ನೋಡಿದೊಡನೆಯೇ ಲಜ್ಜೆಯಿಂದ ಅವರು ಬಟ್ಟೆಗಳನ್ನು ಧರಿಸಿದ್ದರು. ಈ ಆಶ್ಚರ್ಯವನ್ನು ನೋಡಿ ವ್ಯಾಸರು ಆ ಸ್ತ್ರೀಯರಲ್ಲಿ ಇದರ ಕಾರಣ ಕೇಳಿದಾಗ ಅವರು ಉತ್ತರಿಸಿದರು - ‘ಮಹಾತ್ಮರೇ! ನಿಮ್ಮ ದೃಷ್ಟಿಯಲ್ಲಿ ಇನ್ನೂ ಸ್ತ್ರೀ-ಪುರುಷರೆಂಬ ಭೇದವಿದೆ, ಅರ್ಥಾತ್ ದ್ವೈತಬುದ್ಧಿ ಇದೆ. ಆದರೆ ನಿಮ್ಮ ಪುತ್ರರ ಶುದ್ಧ ದೃಷ್ಟಿಯಲ್ಲಿ ಈ ಭೇದವು ಇಲ್ಲವಲ್ಲ! ಅವರು ಬ್ರಹ್ಮಮಯ ದೃಷ್ಟಿಯಿಂದ ಎಲ್ಲದರಲ್ಲಿ ಏಕಮಾತ್ರ ಪರಬ್ರಹ್ಮನನ್ನೇ ನೋಡುತ್ತಾರೆ.’ ॥5॥

(ಶ್ಲೋಕ - 6)

ಮೂಲಮ್

ಕಥಮಾಲಕ್ಷಿತಃ ಪೌರೈಃ ಸಂಪ್ರಾಪ್ತಃ ಕುರುಜಾಂಗಲಾನ್ ।
ಉನ್ಮತ್ತಮೂಕಜಡವದ್ವಿಚರನ್ ಗಜಸಾಹ್ವಯೇ ॥

ಅನುವಾದ

ಇಂತಹ ಅತ್ಮೈಕ ದೃಷ್ಟಿಯುಳ್ಳ ಮಹಾತ್ಮನು ಹುಚ್ಚನಂತೆಯೂ, ಮೂಗನಂತೆಯೂ, ಜಡನಂತೆಯೂ ಕುರುಜಾಂಗಲ ದೇಶವನ್ನು ಸೇರಿ ಹಸ್ತಿನಾಪುರದಲ್ಲಿ ಓಡಾಡುತ್ತಿದ್ದಾಗ ಅಲ್ಲಿನ ಪುರವಾಸಿಗಳು ಇವರನ್ನು ಹೇಗೆ ಗುರುತಿಸಿದರು? ॥6॥

(ಶ್ಲೋಕ - 7)

ಮೂಲಮ್

ಕಥಂ ವಾ ಪಾಂಡವೇಯಸ್ಯ ರಾಜರ್ಷೇರ್ಮುನಿನಾ ಸಹ ।
ಸಂವಾದಃ ಸಮಭೂತ್ತಾತ ಯತ್ರೈಷಾ ಸಾತ್ವತೀ ಶ್ರುತಿಃ ॥

ಅನುವಾದ

ಪಾಂಡವನಂದನ ರಾಜರ್ಷಿ ಪರೀಕ್ಷಿತನಿಗೆ ಈ ಮೌನೀ ಶುಕಯೋಗಿಗಳಲ್ಲಿ ಹೇಗೆ ಸಂವಾದ ನಡೆಯಿತು? ಅವರು ಈ ಭಾಗವತಸಂಹಿತೆ ಹೇಗೆ ಹೇಳಿದರು? ॥7॥

(ಶ್ಲೋಕ - 8)

ಮೂಲಮ್

ಸ ಗೋದೋಹನಮಾತ್ರಂ ಹಿ ಗೃಹೇಷು ಗೃಹಮೇನಾಮ್ ।
ಅವೇಕ್ಷತೇ ಮಹಾಭಾಗಸ್ತೀರ್ಥೀಕುರ್ವಂಸ್ತದಾಶ್ರಮಮ್ ॥

ಅನುವಾದ

ಆ ಮಹಾಪುರುಷ ಶುಕಮಹಾಮುನಿಗಳು ಗೃಹಸ್ಥರ ಮನೆಗಳನ್ನು ತೀರ್ಥ-ಸ್ವರೂಪವನ್ನಾಗಿಸಲು ಹಸುವು ಹಾಲು ಕರೆಯುವಷ್ಟು ಹೊತ್ತು ಮಾತ್ರ ಅಲ್ಲಿ ನಿಲ್ಲುತ್ತಿದ್ದರು.॥8॥

(ಶ್ಲೋಕ - 9)

ಮೂಲಮ್

ಅಭಿಮನ್ಯುಸುತಂ ಸೂತ ಪ್ರಾಹುರ್ಭಾಗವತೋತ್ತಮಮ್ ।
ತಸ್ಯ ಜನ್ಮ ಮಹಾಶ್ಚರ್ಯಂ ಕರ್ಮಾಣಿ ಚ ಗೃಣೀಹಿ ನಃ ॥

ಅನುವಾದ

ಸೂತಪುರಾಣಿಕರೇ! ಅಭಿಮನ್ಯುನಂದನ ರಾಜಾಪರೀಕ್ಷಿತನು ಪರಮಭಾಗವತೋತ್ತಮನಾಗಿದ್ದನೆಂದು ನಾವು ಕೇಳಿದ್ದೇವೆ. ಅವನ ಅತ್ಯಂತ ಆಶ್ಚರ್ಯಮಯ ಜನ್ಮ ಮತ್ತು ಕರ್ಮಗಳನ್ನೂ ಕೂಡ ವರ್ಣಿಸುವವರಾಗಿರಿ. ॥9॥

(ಶ್ಲೋಕ - 10)

ಮೂಲಮ್

ಸ ಸಮ್ರಾಟ್ ಕಸ್ಯ ವಾ ಹೇತೋಃ ಪಾಂಡೂನಾಂ ಮಾನವರ್ಧನಃ ।
ಪ್ರಾಯೋಪವಿಷ್ಟೋ ಗಂಗಾಯಾಮನಾದೃತ್ಯಾರಾಟ್ ಶ್ರಿಯಮ್ ॥

ಅನುವಾದ

ಅವನಾದರೋ ಪಾಂಡವ ವಂಶದ ಗೌರವವನ್ನು ಹೆಚ್ಚಿಸುವ ಸಾಮ್ರಾಟನಾಗಿದ್ದನು. ಅವನು ಯಾವಕಾರಣಕ್ಕಾಗಿ ಸಾಮ್ರಾಜ್ಯ ಲಕ್ಷ್ಮೀಯನ್ನು ಪರಿತ್ಯಜಿಸಿ ಗಂಗಾತೀರದಲ್ಲಿ ಆಮರಣಾಂತ ನಿರಶನ ವ್ರತವನ್ನು ಕೈಗೊಂಡು ಏಕೆ ಕುಳಿತಿದ್ದನು? ॥10॥

(ಶ್ಲೋಕ - 11)

ಮೂಲಮ್

ನಮಂತಿ ಯತ್ಪಾದನಿಕೇತಮಾತ್ಮನಃ
ಶಿವಾಯ ಹಾನೀಯ ಧನಾನಿ ಶತ್ರವಃ ।
ಕಥಂ ಸ ವೀರಃ ಶ್ರಿಯಮಂಗ ದುಸ್ತ್ಯಜಾಂ
ಯುವೈಷತೋತ್ಸ್ರಷ್ಟುಮಹೋ ಸಹಾಸುಭಿಃ ॥

ಅನುವಾದ

ಶತ್ರುರಾಜರು ತಮ್ಮ ಒಳಿತಿಗಾಗಿ ರಾಶಿ-ರಾಶಿಯಾದ ಧನವನ್ನು ತಂದೊಪ್ಪಿಸಿ ಆತನ ಪಾದಪೀಠಕ್ಕೆ ನಮಸ್ಕರಿಸುತ್ತಿದ್ದರು. ಇನ್ನೂ ಪ್ರಾಯದ ವಯಸ್ಸಿನಲ್ಲಿದ್ದ ಮಹಾವೀರನು. ಹೀಗಿದ್ದರೂ ತೊರೆಯಲು ಕಷ್ಟವಾದ ಅಖಂಡ ಐಶ್ವರ್ಯವನ್ನೂ, ತನ್ನ ಪ್ರಾಣವನ್ನೂ ತೊರೆದುಬಿಡಲು ಅವನು ಏಕೆ ನಿಶ್ಚಯಿಸಿದನು? ॥11॥

(ಶ್ಲೋಕ - 12)

ಮೂಲಮ್

ಶಿವಾಯ ಲೋಕಸ್ಯ ಭವಾಯ ಭೂತಯೇ
ಯ ಉತ್ತಮಶ್ಲೋಕಪರಾಯಣಾ ಜನಾಃ ।
ಜೀವಂತಿ ನಾತ್ಮಾರ್ಥಮಸೌ ಪರಾಶ್ರಯಂ
ಮುಮೋಚ ನಿರ್ವಿದ್ಯ ಕುತಃ ಕಲೇವರಮ್ ॥

ಅನುವಾದ

ಭಗವಂತನಲ್ಲಿ ಆಶ್ರಿತರಾದ ಸತ್ಪುರುಷರು ಜೀವನವಿಡೀ ಪ್ರಪಂಚದ ಮಂಗಳ, ಶ್ರೇಯಸ್ಸು, ಅಭ್ಯುದಯಗಳಿಗಾಗಿಯೇ ಬಾಳುವರು. ಅವರಿಗೆ ಅದರಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ. ಹೀಗೆ ಪರೋಪಕಾರಕ್ಕಾಗಿಯೇ ಮೀಸಲಾಗಿದ್ದ ತನ್ನ ಪವಿತ್ರವಾದ ದೇಹದಲ್ಲಿಯೂ ವಿರಕ್ತನಾಗಿ ಅದನ್ನು ಏಕೆ ತ್ಯಾಗ ಮಾಡಿದನು? ॥12॥

(ಶ್ಲೋಕ - 13)

ಮೂಲಮ್

ತತ್ಸರ್ವಂ ನಃ ಸಮಾಚಕ್ಷ್ವ ಪೃಷ್ಟೋ ಯದಿಹ ಕಿಂಚನ ।
ಮನ್ಯೇ ತ್ವಾಂ ವಿಷಯೇ ವಾಚಾಂ ಸ್ನಾತಮನ್ಯತ್ರ ಛಾಂದಸಾತ್ ॥

ಅನುವಾದ

ವೇದವಾಙ್ಮಯವೊಂದನ್ನು ಬಿಟ್ಟು ಉಳಿದ ಎಲ್ಲ ಶಾಸ್ತ್ರಗಳಲ್ಲಿಯೂ ನೀವು ಪಾರಂಗತರಾಗಿರುವಿ. ಸೂತಪುರಾಣಿಕರೇ! ನಮ್ಮ ಎಲ್ಲ ಪ್ರಶ್ನೆಗಳಿಗೆ ದಯಮಾಡಿ ಉತ್ತರಿಸುವವರಾಗಿರಿ.॥13॥

(ಶ್ಲೋಕ - 14)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ದ್ವಾಪರೇ ಸಮನುಪ್ರಾಪ್ತೇ ತೃತೀಯೇ ಯುಗಪರ್ಯಯೇ ।
ಜಾತಃ ಪರಾಶರಾದ್ಯೋಗೀ ವಾಸವ್ಯಾಂ ಕಲಯಾ ಹರೇಃ ॥

ಅನುವಾದ

ಸೂತಪುರಾಣಿಕರು ಹೇಳಿದರು — ಮಹರ್ಷಿಗಳೇ! ಈ ಚತುರ್ಯುಗಚಕ್ರದಲ್ಲಿ ಮೂರನೆಯದಾದ ದ್ವಾಪರ ಯುಗದಲ್ಲಿ ಶ್ರೀಭಗವಂತನ ಕಲಾವತಾರವಾದ ಮಹಾಯೋಗಿ ವೇದವ್ಯಾಸರು ಪರಾಶರ-ಸತ್ಯವತಿಯಲ್ಲಿ ಆವಿರ್ಭವಿಸಿದರು. ॥14॥

(ಶ್ಲೋಕ - 15)

ಮೂಲಮ್

ಸ ಕದಾಚಿತ್ಸರಸ್ವತ್ಯಾ ಉಪಸ್ಪೃಶ್ಯ ಜಲಂ ಶುಚಿಃ ।
ವಿವಿಕ್ತದೇಶ ಆಸೀನ ಉದಿತೇ ರವಿಮಂಡಲೇ ॥

ಅನುವಾದ

ಒಂದು ದಿನ ಅವರು ಸೂರ್ಯೋದಯದಲ್ಲಿ ಸರಸ್ವತೀ ನದಿಯ ಪವಿತ್ರವಾದ ತೀರ್ಥದಲ್ಲಿ ಸ್ನಾನಾಹ್ನಿಕಗಳನ್ನು ಪೂರೈಸಿಕೊಂಡು, ಪವಿತ್ರವಾದ ಏಕಾಂತ ಸ್ಥಾನದಲ್ಲಿ ಕುಳಿತಿದ್ದರು.॥15॥

(ಶ್ಲೋಕ - 16)

ಮೂಲಮ್

ಪರಾವರಜ್ಞಃ ಸ ಋಷಿಃ ಕಾಲೇನಾವ್ಯಕ್ತರಂಹಸಾ ।
ಯುಗಧರ್ಮವ್ಯತಿಕರಂ ಪ್ರಾಪ್ತಂ ಭುವಿ ಯುಗೇ ಯುಗೇ ॥

(ಶ್ಲೋಕ - 17)

ಮೂಲಮ್

ಭೌತಿಕಾನಾಂ ಚ ಭಾವಾನಾಂ ಶಕ್ತಿಹ್ರಾಸಂ ಚ ತತ್ಕೃತಮ್ ।
ಅಶ್ರದ್ದಧಾನಾನ್ನಿಃ ಸತ್ತ್ವಾಂದುರ್ಮೇಧಾನ್ ಹ್ರಸಿತಾಯುಷಃ ॥

(ಶ್ಲೋಕ - 18)

ಮೂಲಮ್

ದುರ್ಭಗಾಂಶ್ಚ ಜನಾನ್ ವೀಕ್ಷ್ಯ ಮುನಿರ್ದಿವ್ಯೇನ ಚಕ್ಷುಷಾ ।
ಸರ್ವವರ್ಣಾಶ್ರಮಾಣಾಂ ಯದ್ದಧ್ಯೌ ಹಿತಮಮೋಘದೃಕ್ ॥

ಅನುವಾದ

ಪರಾವರತತ್ತ್ವಗಳನ್ನೂ, ಭೂತ-ಭವಿಷ್ಯಗಳನ್ನೂ ಅರಿತಿದ್ದ ಆ ಮಹರ್ಷಿಗಳು ಕಾಲದ ವೇಗದಿಂದ ಪ್ರತಿಯೊಂದು ಯುಗಗಳಲ್ಲಿಯೂ ಧರ್ಮ-ಸಾಂಕರ್ಯವುಂಟಾಗುತ್ತಿರುವುದನ್ನು, ಇದರ ಪ್ರಭಾವದಿಂದ ಭೌತಿಕವಸ್ತುಗಳಲ್ಲಿ ಸಹಜ ಶಕ್ತಿಯು ಕುಂದುತ್ತಿರುವುದನ್ನು, ಮನುಷ್ಯರಲ್ಲಿ ಅಶ್ರದ್ಧೆ, ಸತ್ತ್ವಹೀನತೆ, ಬುದ್ಧಿಹೀನತೆ, ಅಲ್ಪಾಯು ಭಾಗ್ಯಹೀನತೆಗಳುಂಟಾಗುತ್ತಿರುವುದನ್ನು ತಮ್ಮ ದಿವ್ಯಜ್ಞಾನ ದೃಷ್ಟಿಯಿಂದ ಅರಿತುಕೊಂಡು, ಎಲ್ಲ ವರ್ಣಗಳ, ಆಶ್ರಮಗಳ ಜನರಿಗೆ ಹೇಗೆ ಹಿತವುಂಟಾದೀತು? ಎಂದು ಆಲೋಚಿಸತೊಡಗಿದರು. ॥16-18॥

(ಶ್ಲೋಕ - 19)

ಮೂಲಮ್

ಚಾತುರ್ಹೋತ್ರಂ ಕರ್ಮ ಶುದ್ಧಂ ಪ್ರಜಾನಾಂ ವೀಕ್ಷ್ಯ ವೈದಿಕಮ್ ।
ವ್ಯದಧಾದ್ಯಜ್ಞಸಂತತ್ಯೈ ವೇದಮೇಕಂ ಚತುರ್ವಿಧಮ್ ॥

(ಶ್ಲೋಕ - 20)

ಮೂಲಮ್

ಋಗ್ಯಜುಃಸಾಮಾಥರ್ವಾಖ್ಯಾ ವೇದಾಶ್ಚತ್ವಾರ ಉದ್ಧೃತಾಃ ।
ಇತಿಹಾಸಪುರಾಣಂ ಚ ಪಂಚಮೋ ವೇದ ಉಚ್ಯತೇ ॥

ಅನುವಾದ

ವೇದೋಕ್ತವಾಗಿ ನಾಲ್ಕು ಹೋತೃಗಳಿಂದ ಕೂಡಿದ ಯಜ್ಞಕರ್ಮವನ್ನು ಆಚರಿಸಿದರೆ ಜನರ ಹೃದಯ ಶುದ್ಧವಾಗುತ್ತದೆ ಎಂದು ಯೋಚಿಸಿದ ಅವರು ಯಜ್ಞಗಳನ್ನು ವಿಸ್ತಾರವಾಗಿ ಅನುಷ್ಠಾನಕ್ಕೆ ತರಲು ಸಹಾಯಕವಾಗಲೆಂದು ಅಖಂಡ ವಾಗಿದ್ದ ವೇದವನ್ನು ಋಕ್, ಯಜುಸ್ಸು, ಸಾಮ ಮತ್ತು ಅಥರ್ವ ಎಂಬ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿದರು. ಇತಿಹಾಸ ಮತ್ತು ಪುರಾಣಗಳನ್ನು ಐದನೆಯ ವೇದವೆಂದು ಹೇಳಲಾಗುತ್ತದೆ. ॥19-20॥

(ಶ್ಲೋಕ - 21)

ಮೂಲಮ್

ತತ್ರರ್ಗ್ವೇದಧರಃ ಪೈಲಃ ಸಾಮಗೋ ಜೈಮಿನಿಃ ಕವಿಃ ।
ವೈಶಂಪಾಯನ ಏವೈಕೋ ನಿಷ್ಣಾತೋ ಯಜುಷಾಮುತ ॥

ಅನುವಾದ

ಇವುಗಳಲ್ಲಿ ಋಗ್ವೇದವನ್ನು ಪೈಲರು ಅಧ್ಯಯನ ಮಾಡಿ ಅದರ ಪ್ರವರ್ತಕರಾದರು. ಯಜುರ್ವೇದವನ್ನು ವೈಶಂಪಾಯನರೋರ್ವರೇ ಅಧ್ಯಯನ ಗೈದು ಅದರಲ್ಲಿ ಪಾರಂಗತರಾದರು. ವಿದ್ವಾಂಸರಾದ ಜೈಮಿನಿ ಮಹರ್ಷಿಗಳು ಸಾಮವೇದದಲ್ಲಿ ನಿಷ್ಣಾತರಾದರು.॥21॥

(ಶ್ಲೋಕ - 22)

ಮೂಲಮ್

ಅಥರ್ವಾಂಗಿರಸಾಮಾಸೀತ್ಸುಮಂತುರ್ದಾರುಣೋ ಮುನಿಃ ।
ಇತಿಹಾಸಪುರಾಣಾನಾಂ ಪಿತಾ ಮೇ ರೋಮಹರ್ಷಣಃ ॥

ಅನುವಾದ

ದರುಣಪುತ್ರರಾದ ಸುಮಂತು ಮುನಿಗಳು ಅಥರ್ವವೇದದಲ್ಲಿ ಪ್ರವೀಣರಾಗಿ ಅದರ ಪ್ರವರ್ತಕರಾದರು. ನನ್ನ ತಂದೆಯವರಾದ ರೋಮಹರ್ಷಣರು ಇತಿಹಾಸ ಮತ್ತು ಪುರಾಣಗಳಲ್ಲಿ ಪ್ರಾವೀಣ್ಯವನ್ನು ಪಡೆದು ಪ್ರವರ್ತಕರಾದರು.॥22॥

(ಶ್ಲೋಕ - 23)

ಮೂಲಮ್

ತ ಏತ ಋಷಯೋ ವೇದಂ ಸ್ವಂ ಸ್ವಂ ವ್ಯಸ್ಯನ್ನನೇಕಧಾ ।
ಶಿಷ್ಯೈಃ ಪ್ರಶಿಷ್ಯೈಸ್ತಚ್ಛಿಷ್ಯೈರ್ವೇದಾಸ್ತೇ ಶಾಖಿನೋಭವನ್ ॥

ಅನುವಾದ

ಇವರೆಲ್ಲ ಋಷಿಗಳು ತಮ್ಮ ತಮ್ಮ ವೇದಶಾಖೆಗಳನ್ನು ಇನ್ನೂ ಅನೇಕ ಶಾಖೆಗಳನ್ನಾಗಿ ವಿಭಜಿಸಿದರು. ಹೀಗೆ ಶಿಷ್ಯ-ಪ್ರಶಿಷ್ಯರು ಮತ್ತು ಅವರ ಶಿಷ್ಯರ ಮೂಲಕ ವೇದಗಳಿಗೆ ಬಹು ಶಾಖೆಗಳಾದುವು.॥23॥

(ಶ್ಲೋಕ - 24)

ಮೂಲಮ್

ತ ಏವ ವೇದಾ ದುರ್ಮೇಧೈರ್ಧಾರ್ಯಂತೇ ಪುರುಷೈರ್ಯಥಾ ।
ಏವಂ ಚಕಾರ ಭಗವಾನ್ ವ್ಯಾಸಃ ಕೃಪಣವತ್ಸಲಃ ॥

ಅನುವಾದ

ದೀನವತ್ಸಲರೂ, ಪರಮ ಪೂಜ್ಯರೂ ಆದ ಭಗವಾನ್ ವೇದವ್ಯಾಸರು ಸ್ಮರಣೆ-ಧಾರಣೆಗಳ ಶಕ್ತಿಯು ಅತಿ ಕಡಿಮೆಯಾಗಿರುವ ಜನರೂ ಕೂಡ ಅವುಗಳನ್ನು ಧರಿಸಿ ಕೃತಾರ್ಥರಾಗುವಂತೆ ವೇದವಾಙ್ಮಯವನ್ನು ವಿಭಾಗ ಮಾಡಿದರು.॥24॥

(ಶ್ಲೋಕ - 25)

ಮೂಲಮ್

ಸೀಶೂದ್ರದ್ವಿಜಬಂಧೂನಾಂ ತ್ರಯೀ ನ ಶ್ರುತಿಗೋಚರಾ
ಕರ್ಮಶ್ರೇಯಸಿ ಮೂಢಾನಾಂ ಶ್ರೇಯ ಏವಂ ಭವೇದಿಹ ।
ಇತಿ ಭಾರತಮಾಖ್ಯಾನಂ ಕೃಪಯಾ ಮುನಿನಾ ಕೃತಮ್ ॥

ಅನುವಾದ

ಸ್ತ್ರೀಯರು, ಶೂದ್ರರು, ಪತಿತದ್ವಿಜರು ವೇದಶ್ರವಣಕ್ಕೆ ಅಧಿಕಾರಿಗಳಲ್ಲವಾದ್ದರಿಂದ ಅವರು ಶ್ರೇಯಸ್ಕರವಾದ ವೈದಿಕ ಶಾಸ್ತ್ರೋಕ್ತ ಕರ್ಮಗಳ ಆಚರಣೆಗಳಲ್ಲಿ ತಪ್ಪುಮಾಡಿ ಬಿಡುತ್ತಾರೆ. ಈಗ ಅವರಿಗೂ ಕೂಡ ಇದರ ಮೂಲಕ ಶ್ರೇಯಸ್ಸು ಉಂಟಾಗಲೆಂದು ಯೋಚಿಸಿ ಪರಮಕರುಣೆಯಿಂದ ವ್ಯಾಸ ಮುನೀಂದ್ರರು ಮಹಾಭಾರತವೆಂಬ ಇತಿಹಾಸವನ್ನು ರಚಿಸಿದರು.॥25॥

(ಶ್ಲೋಕ - 26)

ಮೂಲಮ್

ಏವಂ ಪ್ರವೃತ್ತಸ್ಯ ಸದಾ ಭೂತಾನಾಂ ಶ್ರೇಯಸಿ ದ್ವಿಜಾಃ ।
ಸರ್ವಾತ್ಮಕೇನಾಪಿ ಯದಾ ನಾತುಷ್ಯದ್ಧೃದಯಂ ತತಃ ॥

ಅನುವಾದ

ಶೌನಕಾದಿ ಮಹರ್ಷಿಗಳೇ! ಹೀಗೆ ಅವರು ತಮ್ಮ, ಸರ್ವಶಕ್ತಿಗಳಿಂದ ಸದಾಕಾಲ ಪ್ರಾಣಿಗಳ ಶ್ರೇಯಸ್ಸಿಗಾಗಿಯೇ ತತ್ಪರರಾಗಿದ್ದರೂ ಕೂಡ ಅವರ ಹೃದಯಕ್ಕೆ ಪೂರ್ಣವಾದ ನೆಮ್ಮದಿ ಉಂಟಾಗಲಿಲ್ಲ.॥26॥

(ಶ್ಲೋಕ - 27)

ಮೂಲಮ್

ನಾತಿಪ್ರಸೀದದ್ಧೃದಯಃ ಸರಸ್ವತ್ಯಾಸ್ತಟೇ ಶುಚೌ ।
ವಿತರ್ಕಯನ್ ವಿವಿಕ್ತಸ್ಥ ಇದಂ ಪ್ರೋವಾಚ ಧರ್ಮವಿತ್ ॥

ಅನುವಾದ

ಅವರ ಮನಸ್ಸು ಸ್ವಲ್ಪ ಖಿನ್ನವಾದಂತಾಯಿತು. ಸರಸ್ವತೀ ನದಿಯ ತೀರದ ಏಕಾಂತದಲ್ಲಿ ಕುಳಿತುಕೊಂಡು ವಿಚಾರ-ಚಿಂತನೆ ಮಾಡುತ್ತಾ ಹೀಗೆ ಹೇಳಿಕೊಂಡರು - ॥27॥

(ಶ್ಲೋಕ - 28)

ಮೂಲಮ್

ಧೃತವ್ರತೇನ ಹಿ ಮಯಾ ಛಂದಾಂಸಿ ಗುರವೋಗ್ನಯಃ ।
ಮಾನಿತಾ ನಿರ್ವ್ಯಲೀಕೇನ ಗೃಹೀತಂ ಚಾನುಶಾಸನಮ್ ॥

ಅನುವಾದ

‘‘ನಾನು ನಿಷ್ಕಪಟಭಾವದಿಂದ ಬ್ರಹ್ಮಚರ್ಯಾದಿ ವ್ರತಗಳನ್ನು ಪಾಲಿಸುತ್ತಾ ವೇದಗಳನ್ನೂ, ಗುರು-ಜನರನ್ನೂ, ಅಗ್ನಿಯನ್ನೂ ಗೌರವದಿಂದ ಉಪಾಸನೆ ಮಾಡಿದ್ದೇನೆ. ಅವರ ಆಜ್ಞೆಯನ್ನೂ ಶಿರಸಾ ವಹಿಸಿದ್ದೇನೆ.॥28॥

(ಶ್ಲೋಕ - 29)

ಮೂಲಮ್

ಭಾರತವ್ಯಪದೇಶೇನ ಹ್ಯಾಮ್ನಾಯಾರ್ಥಶ್ಚ ದರ್ಶಿತಃ ।
ದೃಶ್ಯತೇ ಯತ್ರ ಧರ್ಮಾದಿ ಸೀಶೂದ್ರಾದಿಭಿರಪ್ಯುತ ॥

ಅನುವಾದ

ಮಹಾಭಾರತವನ್ನು ರಚಿಸುವುದರ ಮೂಲಕ ಸ್ತ್ರೀಯರು, ಶೂದ್ರಾದಿಗಳೂ ಕೂಡ ತಮ್ಮ-ತಮ್ಮ ಧರ್ಮಕರ್ಮಗಳ ಅರಿವನ್ನು ಪಡೆಯುವಂತೆ ವೇದಾರ್ಥಗಳನ್ನು ಪ್ರಕಾಶಪಡಿಸಿದ್ದೇನೆ.॥29॥

(ಶ್ಲೋಕ - 30)

ಮೂಲಮ್

ತಥಾಪಿ ಬತ ಮೇ ದೈಹ್ಯೋ ಹ್ಯಾತ್ಮಾ ಚೈವಾತ್ಮನಾ ವಿಭುಃ ।
ಅಸಂಪನ್ನ ಇವಾಭಾತಿ ಬ್ರಹ್ಮವರ್ಚಸ್ಯಸತ್ತಮಃ ॥

ಅನುವಾದ

ನಾನು ಬ್ರಹ್ಮತೇಜದಿಂದ ಸಂಪನ್ನನೂ, ಸಮರ್ಥನೂ ಆಗಿದ್ದರೂ ನನ್ನ ದೇಹದಲ್ಲಿರುವ ಆತ್ಮವು ಪೂರ್ಣ ತೃಪ್ತಿಯನ್ನು ಪಡೆದಿಲ್ಲವೆಂದೇ ಅನುಭವವಾಗುತ್ತದೆಯಲ್ಲ! ॥30॥

(ಶ್ಲೋಕ - 31)

ಮೂಲಮ್

ಕಿಂ ವಾ ಭಾಗವತಾ ಧರ್ಮಾ ನ ಪ್ರಾಯೇಣ ನಿರೂಪಿತಾಃ ।
ಪ್ರಿಯಾಃ ಪರಮಹಂಸಾನಾಂ ತ ಏವ ಹ್ಯಚ್ಯುತಪ್ರಿಯಾಃ ॥

ಅನುವಾದ

ಪ್ರಾಯಶಃ ನಾನು ಪರಮಹಂಸರಿಗೆ ಪ್ರಿಯವಾಗಿರುವ ಭಾಗವತ ಧರ್ಮಗಳನ್ನು ಪ್ರತಿಪಾದನೆ ಮಾಡಿಲ್ಲ. ಆ ಧರ್ಮಗಳು ತಾನೇ ಅಚ್ಯುತನಿಗೂ ಪ್ರಿಯವಾಗಿರುವುದು! ಇವುಗಳನ್ನು ಪ್ರಧಾನವಾಗಿ ಪ್ರತಿಪಾದನೆ ಮಾಡದೇ ಇರುವುದೇ ನನ್ನ ಅತೃಪ್ತಿಗೆ ಕಾರಣವಿರಬಹುದೇ?’’ ॥31॥

(ಶ್ಲೋಕ - 32)

ಮೂಲಮ್

ತಸ್ಯೈವಂ ಖಿಲಮಾತ್ಮಾನಂ ಮನ್ಯಮಾನಸ್ಯ ಖಿದ್ಯತಃ ।
ಕೃಷ್ಣಸ್ಯ ನಾರದೋಭ್ಯಾಗಾದಾಶ್ರಮಂ ಪ್ರಾಗುದಾಹೃತಮ್ ॥

ಅನುವಾದ

ಹೀಗೆ ತಮ್ಮನ್ನು ಅಪೂರ್ಣರೆಂಬಂತೆ ಭಾವಿಸಿಕೊಂಡು ಶ್ರೀಕೃಷ್ಣದ್ವೈಪಾಯನರು ಖೇದ ಪಡುತ್ತಿರುವಂತೆ ಆ ಆಶ್ರಮಕ್ಕೆ ದೇವಋಷಿನಾರದರು ದಯ ಮಾಡಿಸಿದರು.॥32॥

(ಶ್ಲೋಕ - 33)

ಮೂಲಮ್

ತಮಭಿಜ್ಞಾಯ ಸಹಸಾ ಪ್ರತ್ಯುತ್ಥಾಯಾಗತಂ ಮುನಿಃ ।
ಪೂಜಯಾಮಾಸ ವಿವನ್ನಾರದಂ ಸುರಪೂಜಿತಮ್ ॥

ಅನುವಾದ

ಹೀಗೆ ಆಗಮಿಸಿದ ಅವರನ್ನು ಕಂಡೊಡನೆಯೇ ವ್ಯಾಸಮುನೀಂದ್ರರು ಸಂಭ್ರಮದಿಂದ ಎದ್ದು ನಿಂತು ದೇವತೆಗಳಿಂದಲೂ ಪೂಜಿತರಾದ ದೇವರ್ಷಿ ನಾರದರನ್ನು ವಿಧಿಪೂರ್ವಕವಾಗಿ ಪೂಜಿಸಿದರು.॥33॥

ಅನುವಾದ (ಸಮಾಪ್ತಿಃ)

ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ನೈಮಿಷೀಯೋಪಾಖ್ಯಾನೇ ಚತುರ್ಥೋಽಧ್ಯಾಯಃ ॥4॥