[ಮೂರನೆಯ ಅಧ್ಯಾಯ]
ಭಾಗಸೂಚನಾ
ಭಗವಂತನ ಅವತಾರಗಳ ವರ್ಣನೆ
(ಶ್ಲೋಕ - 1)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಜಗೃಹೇ ಪೌರುಷಂ ರೂಪಂ ಭಗವಾನ್ಮಹದಾದಿಭಿಃ ।
ಸಂಭೂತಂ ಷೋಡಶಕಲಮಾದೌ ಲೋಕಸಿಸೃಕ್ಷಯಾ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಸೃಷ್ಟಿಯ ಆದಿಯಲ್ಲಿ ಭಗವಂತನಿಗೆ ಲೋಕಗಳನ್ನು ಸೃಷ್ಟಿಸಬೇಕೆಂಬ ಇಚ್ಛೆ ಉಂಟಾಯಿತು. ಒಡನೆಯೇ ಅವನು ಮಹತ್ತತ್ತ್ವ, ಅಹಂಕಾರ ಮತ್ತು ಪಂಚತನ್ಮಾತ್ರೆಗಳಿಂದ ನಿರ್ಮಿತವಾದ ಹತ್ತು ಇಂದ್ರಿಯಗಳು, ಮನಸ್ಸು, ಪಂಚ-ಭೂತಗಳು ಹೀಗೆ ಹದಿನಾರು ಕಲೆಗಳಿಂದ ಕೂಡಿದ ವಿರಾಟ್ರೂಪವನ್ನು ಸ್ವೀಕರಿಸಿದನು.॥1॥
(ಶ್ಲೋಕ - 2)
ಮೂಲಮ್
ಯಸ್ಯಾಂಭಸಿ ಶಯಾನಸ್ಯ ಯೋಗನಿದ್ರಾಂ ವಿತನ್ವತಃ ।
ನಾಭಿಹ್ರದಾಂಬುಜಾದಾಸೀದ್ ಬ್ರಹ್ಮಾ ವಿಶ್ವಸೃಜಾಂ ಪತಿಃ ॥
ಅನುವಾದ
ಸೃಷ್ಟಿಕಾರಣವಾದ ಜಲದಲ್ಲಿ ಪವಡಿಸಿ ಯೋಗನಿದ್ರೆಯನ್ನು ಮಾಡುತ್ತಿದ್ದ ಅವನ ನಾಭಿಸರೋವರದಲ್ಲಿ ಹುಟ್ಟಿದ ಕಮಲದಿಂದಲೇ ಪ್ರಜಾಪತಿಗಳಿಗೆ ಅಧಿಪತಿಯಾದ ಬ್ರಹ್ಮದೇವರು ಹುಟ್ಟಿದರು.॥2॥
(ಶ್ಲೋಕ - 3)
ಮೂಲಮ್
ಯಸ್ಯಾವಯವಸಂಸ್ಥಾನೈಃ ಕಲ್ಪಿತೋ ಲೋಕವಿಸ್ತರಃ ।
ತದ್ವೈ ಭಗವತೋ ರೂಪಂ ವಿಶುದ್ಧಂ ಸತ್ತ್ವಮೂರ್ಜಿತಮ್ ॥
ಅನುವಾದ
ಭಗವಂತನ ಆ ವಿರಾಟ್ರೂಪದ ಅಂಗ-ಉಪಾಂಗಗಳಲ್ಲಿಯೇ ಸಮಸ್ತ ಲೋಕಗಳ ಕಲ್ಪನೆ ಮಾಡಲಾಯಿತು. ಈ ಪ್ರಕಾರದಿಂದ ಈ ವಿಶ್ವಬ್ರಹ್ಮಾಂಡವು ಭಗವಂತನದೇ ಸಗುಣ ಸಾಕಾರರೂಪವಾಗಿದೆ. ಭಗವಂತನ ವಿಶುದ್ಧ ಸತ್ತ್ವಮಯ ಆ ವಿರಾಟ್ರೂಪವು ಪರಮಶ್ರೇಷ್ಠವಾದುದು. ॥3॥
(ಶ್ಲೋಕ - 4)
ಮೂಲಮ್
ಪಶ್ಯನ್ತ್ಯದೋ ರೂಪಮದಭ್ರಚಕ್ಷುಷಾ
ಸಹಸ್ರಪಾದೋರುಭುಜಾನನಾದ್ಭುತಮ್ ।
ಸಹಸ್ರಮೂರ್ಧಶ್ರವಣಾಕ್ಷಿನಾಸಿಕಂ
ಸಹಸ್ರವೌಲ್ಯಂಬರಕುಂಡಲೋಲ್ಲಸತ್ ॥
ಅನುವಾದ
ಈ ಸಮಗ್ರ ವಿಶ್ವವನ್ನು ಜ್ಞಾನಿಗಳು ತಮ್ಮ ದಿವ್ಯ ಜ್ಞಾನಸಂಪನ್ನ ದೃಷ್ಟಿಯಿಂದ ಭಗವಂತನದೇ ಸ್ವರೂಪವೆಂದು ಭಾವಿಸುತ್ತಾರೆ. ‘ವಾಸುದೇವಃ ಸರ್ವಮ್’ ಹೀಗೆ ಅನೇಕ ರೂಪಗಳಲ್ಲಿ ಒಬ್ಬನೇ ಭಗವಂತನನ್ನು ದರ್ಶಿಸುತ್ತಾ ಆನಂದಪಡುತ್ತಾರೆ. ಭಗವಂತನು ಎಂತಹ ಲೀಲೆಯನ್ನು ಮಾಡಿರುವನು, ಎಂದು ಅನುಭವಿಸುತ್ತಾರೆ. ಭಗವಂತನ ಆ ವಿರಾಟ್ರೂಪವು ಸಾವಿರಾರು ಪಾದಗಳಿಂದ, ತೊಡೆಗಳಿಂದ ತೋಳುಗಳಿಂದ ಮತ್ತು ಮುಖಗಳಿಂದ ಕೂಡಿ ಅದ್ಭುತವಾಗಿತ್ತು. ಅದರಲ್ಲಿ ಸಾವಿರಾರು ತಲೆಗಳು, ಕಿವಿಗಳು, ಕಣ್ಣುಗಳು, ಮೂಗುಗಳು ಇವುಗಳಿಂದ ವಿರಾಜಮಾನವಾಗಿ, ಸಾವಿರಾರು ಕಿರೀಟಗಳು, ವಸ್ತ್ರಗಳು, ಕುಂಡಲಗಳು ಇವುಗಳಿಂದ ಕಂಗೊಳಿಸುತ್ತಿರುವುದು. ಹಾಗೂ ಆಶ್ಚರ್ಯಮಯವಾಗಿ ನಾನಾ ವಸ್ತುಗಳನ್ನು, ಭೋಗಗಳನ್ನು ಅನುಭವಿಸುತ್ತಾನೆ.॥4॥
(ಶ್ಲೋಕ - 5)
ಮೂಲಮ್
ಏತನ್ನಾನಾವತಾರಾಣಾಂ ನಿಧಾನಂ ಬೀಜಮವ್ಯಯಮ್ ।
ಯಸ್ಯಾಂಶಾಂಶೇನ ಸೃಜ್ಯಂತೇ ದೇವತಿರ್ಯಙ್ನರಾದಯಃ ॥
ಅನುವಾದ
ಹೀಗೆ ಪರಮಾತ್ಮನೇ ಈ ವಿಶ್ವದ ಅವಿನಾಶಿ ಬೀಜ ಅರ್ಥಾತ್ ಕಾರಣನಾಗಿದ್ದಾನೆ. ಅವನೇ ಅನೇಕ ಅವತಾರಗಳನ್ನು ಧರಿಸುತ್ತಾನೆ. ಇದು ಅವನಿಗೆ ಒಂದು ಲೀಲೆಯೇ ಆಗಿದೆ. ಅವನ ಈ ರೂಪವು ಸಮಸ್ತ ಅವತಾರಗಳ ಗಣಿ ಯಾಗಿದೆ. ಅವನು ತನ್ನ ಒಂದಂಶದಿಂದಲೇ ದೇವತೆ, ತಿರ್ಯಗ್, ಮನುಷ್ಯ ಮೊದಲಾದವರನ್ನು ನಿರ್ಮಿಸುತ್ತಾನೆ. (ಅವನ ಸಂಕಲ್ಪ ಮಾತ್ರದಿಂದಲೇ ಅನಂತಕೋಟಿ ಬ್ರಹ್ಮಾಂಡಗಳು ಉಂಟಾಗುತ್ತವೆ. ಅನಂತನಾದ ಅವನನ್ನು ಯಾರಾದರೂ ಹೇಗೆ ವರ್ಣಿಸಬಲ್ಲರು?) ॥5॥
(ಶ್ಲೋಕ - 6)
ಮೂಲಮ್
ಸ ಏವ ಪ್ರಥಮಂ ದೇವಃ ಕೌಮಾರಂ ಸರ್ಗಮಾಸ್ಥಿತಃ ।
ಚಚಾರ ದುಶ್ಚರಂ ಬ್ರಹ್ಮಾ ಬ್ರಹ್ಮಚರ್ಯಮಖಂಡಿತಮ್ ॥
ಅನುವಾದ
ಆ ಮಹಾಪ್ರಭುವೇ ಮೊದಲು ‘ಕೌಮಾರ’ ಎಂಬ ಸೃಷ್ಟಿಯನ್ನು ಕೈಗೊಂಡು ಸನಕ, ಸನಂದನ, ಸನಾತನ, ಸನತ್ಕುಮಾರರೆಂಬ ಬ್ರಾಹ್ಮಣರೂಪದಲ್ಲಿ ಅವತರಿಸಿ, ಅತ್ಯಂತ ಕಠಿಣವೂ, ಅಖಂಡವೂ ಆದ ಬ್ರಹ್ಮಚರ್ಯವನ್ನು ಆಚರಿಸಿದನು. ॥6॥
(ಶ್ಲೋಕ - 7)
ಮೂಲಮ್
ದ್ವಿತೀಯಂ ತು ಭವಾಯಾಸ್ಯ ರಸಾತಲಗತಾಂ ಮಹೀಮ್ ।
ಉದ್ಧರಿಷ್ಯನ್ನುಪಾದತ್ತಯಜ್ಞೇಶಃ ಸೌಕರಂ ವಪುಃ ॥
ಅನುವಾದ
ಎರಡನೆಯ ಅವತಾರವಾಗಿ ಆ ಯಜ್ಞೇಶನು ಲೋಕಕಲ್ಯಾಣಕ್ಕಾಗಿ ರಸಾತಳದಲ್ಲಿ ಹುದುಗಿದ್ದ ಭೂಮಿಯನ್ನು ಉದ್ಧರಿಸುವುದಕ್ಕಾಗಿ ವರಾಹರೂಪವನ್ನು ತಾಳಿದನು.॥7॥
(ಶ್ಲೋಕ - 8)
ಮೂಲಮ್
ತೃತೀಯಮೃಷಿಸರ್ಗಂ ಚ ದೇವರ್ಷಿತ್ವಮುಪೇತ್ಯ ಸಃ ।
ತಂತ್ರಂ ಸಾತ್ವತಮಾಚಷ್ಟ ನೈಷ್ಕರ್ಮ್ಯಂ ಕರ್ಮಣಾಂ ಯತಃ ॥
ಅನುವಾದ
ಋಷಿಸೃಷ್ಟಿಯಲ್ಲಿ ಅವನು ದೇವರ್ಷಿನಾರದರ ರೂಪದಲ್ಲಿ ಮೂರನೆಯ ಬಾರಿ ಅವತರಿಸಿ, ನಿಷ್ಕಾಮ ಕರ್ಮದ ಆಚರಣೆಯಿಂದ ಮುಕ್ತಿಯನ್ನು ಬೋಧಿಸುವ ‘ನಾರದ ಪಾಂಚರಾತ್ರ’ ಎಂದು ಪ್ರಸಿದ್ಧವಾಗಿರುವ ಸಾತ್ವತ ತಂತ್ರವನ್ನು ಉಪದೇಶಿಸಿದನು.॥8॥
(ಶ್ಲೋಕ - 9)
ಮೂಲಮ್
ತುರ್ಯೇ ಧರ್ಮಕಲಾಸರ್ಗೇ ನರನಾರಾಯಣಾವೃಷೀ ।
ಭೂತ್ವಾತ್ಮೋಪಶಮೋಪೇತಮಕರೋದ್ ದುಶ್ಚರಂ ತಪಃ ॥
ಅನುವಾದ
ನಾಲ್ಕನೆಯದಾದ ಧರ್ಮಕಲಾ ಎಂಬ ಸೃಷ್ಟಿಯಲ್ಲಿ ಭಗವಂತನು ಧರ್ಮನ ಪತ್ನಿಯಾದ ಮೂರ್ತಿಯ ಗರ್ಭದಿಂದ ನರ-ನಾರಾಯಣ ಮಹರ್ಷಿಗಳ ರೂಪದಲ್ಲಿ ಅವತರಿಸಿದನು. ಈ ಅವತಾರದಲ್ಲಿ ಅವನು ಮನಸ್ಸು ಇಂದ್ರಿಯಗಳ ಸಂಯಮದ ಆತ್ಮಶಾಂತಿಯೊಡನೆ ಅತಿಕಠಿಣವಾದ ತಪಸ್ಸನ್ನು ಮಾಡಿತೋರಿದನು.॥9॥
(ಶ್ಲೋಕ - 10)
ಮೂಲಮ್
ಪಂಚಮಃ ಕಪಿಲೋ ನಾಮ ಸಿದ್ಧೇಶಃ ಕಾಲವಿಪ್ಲುತಮ್ ।
ಪ್ರೋವಾಚಾಸುರಯೇ ಸಾಂಖ್ಯಂ ತತ್ತ್ವಗ್ರಾಮವಿನಿರ್ಣಯಮ್ ॥
ಅನುವಾದ
ಐದನೇ ಅವತಾರದಲ್ಲಿ ಸ್ವಾಮಿಯು ಸಿದ್ಧರ ಒಡೆಯನಾದ ಕಪಿಲರೂಪದಿಂದ ಅವತರಿಸಿ ಕಾಲಮಹಿಮೆಯಿಂದ ಲುಪ್ತವಾಗಿ ಹೋಗಿದ್ದ ತತ್ತ್ವಸಮೂಹಗಳ ಸ್ವರೂಪವನ್ನು ನಿರ್ಣಯಿಸುವ ಸಾಂಖ್ಯವೆಂಬ ಶಾಸ್ತ್ರವನ್ನು ವರ್ಣಿಸಿ, ಅದನ್ನು ‘ಆಸುರಿ’ ಎಂಬ ಬ್ರಾಹ್ಮಣನಿಗೆ ಉಪದೇಶಿಸಿದನು.॥10॥
(ಶ್ಲೋಕ - 11)
ಮೂಲಮ್
ಷಷ್ಠೇ ಅತ್ರೇರಪತ್ಯತ್ವಂ ವೃತಃ ಪ್ರಾಪ್ತೋನಸೂಯಯಾ
ಆನ್ವೀಕ್ಷಿಕೀಮಲರ್ಕಾಯ ಪ್ರಹ್ಲಾದಾದಿಭ್ಯ ಊಚಿವಾನ್ ॥
ಅನುವಾದ
ಅನಸೂಯೆಯು ಬೇಡಿದ ವರವನ್ನು ಈಡೇರಿಸಲು ಆರನೆಯ ಅವತಾರದಲ್ಲಿ ಭಗವಂತನು ಅತ್ರಿಪುತ್ರ ದತ್ತಾತ್ರೇಯನಾಗಿ ಅವತರಿಸಿದನು. ಇದರಲ್ಲಿ ಅವನು ಅಲರ್ಕ, ಪ್ರಹ್ಲಾದ ಮುಂತಾದವರಿಗೆ ಬ್ರಹ್ಮಜ್ಞಾನವನ್ನು ಉಪದೇಶಿಸಿದನು.॥11॥
(ಶ್ಲೋಕ - 12)
ಮೂಲಮ್
ತತಃ ಸಪ್ತಮ ಆಕೂತ್ಯಾಂ ರುಚೇರ್ಯಜ್ಞೋಭ್ಯಜಾಯತ ।
ಸ ಯಾಮಾದ್ಯೈಃ ಸುರಗಣೈರಪಾತ್ಸ್ವಾಯಂಭುವಾಂತರಮ್ ॥
ಅನುವಾದ
ಏಳನೆಯ ಅವತಾರ ಯಜ್ಞಾವತಾರ. ರುಚಿಯೆಂಬ ಪ್ರಜಾಪತಿಯ ಪತ್ನಿ ಆಕೂತಿಯ ಗರ್ಭದಿಂದ ಜನಿಸಿ, ತನ್ನ ಪುತ್ರರಾದ ‘ಯಾಮ’ ಮುಂತಾದ ದೇವತೆಗಳೊಡನೆ ಸ್ವಾಯಂಭುವ ಮನ್ವಂತರವನ್ನು ರಕ್ಷಿಸಿದನು.॥12॥
(ಶ್ಲೋಕ - 13)
ಮೂಲಮ್
ಅಷ್ಟಮೇ ಮೇರುದೇವ್ಯಾಂ ತು ನಾಭೇರ್ಜಾತ ಉರುಕ್ರಮಃ ।
ದರ್ಶಯನ್ ವರ್ತ್ಮ ೀರಾಣಾಂ ಸರ್ವಾಶ್ರಮನಮಸ್ಕೃತಮ್ ॥
ಅನುವಾದ
ಎಂಟನೆಯ ಬಾರಿ ಭಗವಂತನು ನಾಭಿ ರಾಜನ ಪತ್ನಿಯಾದ ಮೇರುದೇವಿಯಲ್ಲಿ ಋಷಭದೇವನ ರೂಪದಲ್ಲಿ ಅವತರಿಸಿ, ಎಲ್ಲ ಆಶ್ರಮಗಳಿಗೂ ವಂದನೀಯವಾಗಿರುವ ಪರಮಹಂಸ ಮಾರ್ಗವನ್ನು ಆಚರಿಸಿ, ತೋರಿಸಿಕೊಟ್ಟನು.॥13॥
(ಶ್ಲೋಕ - 14)
ಮೂಲಮ್
ಋಷಿಭಿರ್ಯಾಚಿತೋ ಭೇಜೇ ನವಮಂ ಪಾರ್ಥಿವಂ ವಪುಃ ।
ದುಗ್ಧೇಮಾಮೋಷೀರ್ವಿಪ್ರಾಸ್ತೇನಾಯಂ ಸ ಉಶತ್ತಮಃ ॥
ಅನುವಾದ
ಋಷಿಗಳ ಪ್ರಾರ್ಥನೆಯಂತೆ ಅವನು ತನ್ನ ಒಂಭತ್ತನೆಯ ಅವತಾರವಾಗಿ ಪೃಥು ಮಹಾರಾಜನ ರೂಪದಲ್ಲಿ ಕಾಣಿಸಿಕೊಂಡನು. ಶೌನಕಾದಿ ಋಷಿಗಳೇ! ಈ ಅವತಾರದಲ್ಲಿ ಅವನು ಪೃಥ್ವಿಯಿಂದ ಸಮಸ್ತ ಔಷಧಿಗಳನ್ನು ಕರೆದು ಜಗತ್ತಿಗೆ ಅತ್ಯಂತ ಕಲ್ಯಾಣವನ್ನುಂಟು ಮಾಡಿದನು.॥14॥
(ಶ್ಲೋಕ - 15)
ಮೂಲಮ್
ರೂಪಂ ಸ ಜಗೃಹೇ ಮಾತ್ಸ್ಯಂ ಚಾಕ್ಷುಷೋದಸಂಪ್ಲವೇ ।
ನಾವ್ಯಾರೋಪ್ಯ ಮಹೀಮಯ್ಯಾಮಪಾದ್ವೈವಸ್ವತಂ ಮನುಮ್ ॥
ಅನುವಾದ
ಚಾಕ್ಷುಷ ಮನ್ವಂತರದ ಕೊನೆಯಲ್ಲಿ ತ್ರಿಲೋಕಗಳು ಸಮುದ್ರದಲ್ಲಿ ಮುಳುಗಿ ಹೋಗಿದ್ದಾಗ ಆತನು ಮತ್ಸ್ಯರೂಪದಲ್ಲಿ ಹತ್ತನೆಯ ಅವತಾರವನ್ನು ಕೈಗೊಂಡನು. ಇದರಲ್ಲಿ ಭಗವಂತನು ಮುಂದಿನ ಮನ್ವಂತರದ ಅಧಿಪತಿಯಾದ ವೈವಸ್ವತ ಮನುವನ್ನು ಪೃಥ್ವಿರೂಪವಾದ ನೌಕೆಯಲ್ಲಿ ಕುಳ್ಳಿರಿಸಿ ಕಾಪಾಡಿದನು.॥15॥
(ಶ್ಲೋಕ - 16)
ಮೂಲಮ್
ಸುರಾಸುರಾಣಾಮುದಂ ಮಥ್ನ ತಾಂ ಮಂದರಾಚಲಮ್ ।
ದಧ್ರೇ ಕಮಠರೂಪೇಣ ಪೃಷ್ಠ ಏಕಾದಶೇ ವಿಭುಃ ॥
ಅನುವಾದ
ದೇವ-ದಾನವರು ಸಮುದ್ರವನ್ನು ಕಡೆಯುತ್ತಿದ್ದಾಗ ಭಗವಂತನು ಹನ್ನೊಂದನೆಯ ಅವತಾರ ವಾಗಿ ‘ಕೂರ್ಮ’ ರೂಪದಲ್ಲಿ ಕಾಣಿಸಿಕೊಂಡು ಮಂದರ ಪರ್ವತವನ್ನು ತನ್ನ ಬೆನ್ನಮೇಲೆ ಹೊತ್ತನು.॥16॥
(ಶ್ಲೋಕ - 17)
ಮೂಲಮ್
ಧಾನ್ವಂತರಂ ದ್ವಾದಶಮಂ ತ್ರಯೋದಶಮಮೇವ ಚ ।
ಅಪಾಯಯತ್ಸುರಾನನ್ಯಾನ್ಮೋಹಿನ್ಯಾ ಮೋಹಯನ್ ಸಿಯಾ ॥
ಅನುವಾದ
ಹನ್ನೆರಡನೆಯ ಬಾರಿ ಧನ್ವಂತರಿ ರೂಪದಲ್ಲಿ ಅಮೃತವನ್ನೆತ್ತಿಕೊಂಡು ಸಮುದ್ರದಿಂದ ಅವತರಿಸಿದನು. ಹದಿಮೂರನೆಯ ಅವತಾರವಾಗಿ ಮೋಹಿನೀ ರೂಪದಲ್ಲಿ ಕಾಣಿಸಿಕೊಂಡು ದೈತ್ಯರನ್ನು ಮೋಹವಶರನ್ನಾಗಿ ಮಾಡಿ, ದೇವತೆಗಳಿಗೆ ಅಮೃತವನ್ನು ಉಣಿಸಿದನು.॥17॥
(ಶ್ಲೋಕ - 18)
ಮೂಲಮ್
ಚತುರ್ದಶಂ ನಾರಸಿಂಹಂ ಬಿಭ್ರದ್ದೈತ್ಯೇಂದ್ರಮೂರ್ಜಿತಮ್ ।
ದದಾರ ಕರಜೈರ್ವಕ್ಷಸ್ಯೇರಕಾಂ ಕಟಕೃದ್ಯಥಾ ॥
ಅನುವಾದ
ಹದಿನಾಲ್ಕನೆಯ ಅವತಾರದಲ್ಲಿ ಅವನು ನರಸಿಂಹರೂಪದಲ್ಲಿ ಪ್ರಕಟನಾಗಿ ಮಹಾಬಲಶಾಲಿಯಾದ ದೈತ್ಯರಾಜ ಹಿರಣ್ಯಕಶಿಪುವಿನ ಎದೆಯನ್ನು ಚಾಪೆನೇಯುವವರು ಜೊಂಡನ್ನು ಸೀಳುವಂತೆ ತನ್ನ ಉಗುರುಗಳಿಂದ ಅನಾಯಾಸವಾಗಿ ಸೀಳಿ ಹಾಕಿದನು.॥18॥
(ಶ್ಲೋಕ - 19)
ಮೂಲಮ್
ಪಂಚದಶಂ ವಾಮನಕಂ ಕೃತ್ವಾಗಾದಧ್ವರಂ ಬಲೇಃ ।
ಪದತ್ರಯಂ ಯಾಚಮಾನಃ ಪ್ರತ್ಯಾದಿತ್ಸುಸಿವಿಷ್ಟಪಮ್ ॥
ಅನುವಾದ
ಹದಿನೈದನೆಯ ಅವತಾರದಲ್ಲಿ ಭಗವಂತನು ವಾಮನರೂಪವನ್ನು ಧರಿಸಿ, ಸ್ವರ್ಗದ ರಾಜ್ಯವನ್ನು ದೇವತೆಗಳಿಗೆ ಹಿಂದಕ್ಕೆ ಕೊಡಿಸಲು ಚಕ್ರವರ್ತಿ ಬಲಿರಾಜನ ಯಜ್ಞ ಭೂಮಿಗೆ ಹೋಗಿ, ಮೂರು ಹೆಜ್ಜೆ ಭೂಮಿಯನ್ನು ಬೇಡಿ ಬಲಿಯಿಂದ ಸ್ವರ್ಗದ ರಾಜ್ಯವನ್ನು ಇಂದ್ರನಿಗೆ ದಯ ಪಾಲಿಸಿದನು. (ಬಲಿಚಕ್ರವರ್ತಿಯೂ, ಆತ್ಮ ನಿವೇದನ ಗೈದು ಭಗವಂತನ ಅಖಂಡ ಭಕ್ತಿಯನ್ನು ಪಡೆದನು. ಹೀಗೆ ಭಕ್ತರ ಭಕ್ತನಾದ ಭಗವಂತನು ತನ್ನ ಪ್ರೇಮೀಭಕ್ತ ಬಲಿಗೆ ಎಂತಹ ಗೌರವ ಕೊಡಿಸಿದನು. ‘ಪುಣ್ಯಶ್ಲೋಕೋ ಬಲೀರಾಜಾ’ ಹೀಗೆ ಅವನು ಪ್ರಸಿದ್ಧನಾದನು.) ॥19॥
(ಶ್ಲೋಕ - 20)
ಮೂಲಮ್
ಅವತಾರೇ ಷೋಡಶಮೇ ಪಶ್ಯನ್ ಬ್ರಹ್ಮದ್ರುಹೋ ನೃಪಾನ್ ।
ತ್ರಿಃಸಪ್ತಕೃತ್ವಃ ಕುಪಿತೋ ನಿಃಕ್ಷತ್ರಾಮಕರೋನ್ಮಹೀಮ್ ॥
ಅನುವಾದ
ಹದಿನಾರನೆಯ ಪರಶುರಾಮಾವತಾರದಲ್ಲಿ ರಾಜರು ಬ್ರಾಹ್ಮಣದ್ರೋಹಿಗಳಾಗಿರುವುದನ್ನು ನೋಡಿ ಕ್ರುದ್ಧನಾಗಿ ಅವನು ಪೃಥ್ವಿಯನ್ನು ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯಶೂನ್ಯವಾಗುವಂತೆ ಮಾಡಿದನು.॥20॥
(ಶ್ಲೋಕ - 21)
ಮೂಲಮ್
ತತಃ ಸಪ್ತದಶೇ ಜಾತಃ ಸತ್ಯವತ್ಯಾಂ ಪರಾಶರಾತ್ ।
ಚಕ್ರೇ ವೇದತರೋಃ ಶಾಖಾ ದೃಷ್ಟ್ವಾ ಪುಂಸೋಲ್ಪಮೇಧಸಃ ॥
ಅನುವಾದ
ಇದಾದ ಬಳಿಕ ಹದಿನೇಳನೆಯ ಅವತಾರದಲ್ಲಿ ಅವನು ಪರಾಶರರ ಮೂಲಕ ಸತ್ಯವತೀದೇವಿಯ ಗರ್ಭದಿಂದ ವೇದವ್ಯಾಸ ರೂಪದಲ್ಲಿ ಕಾಣಿಸಿಕೊಂಡನು. ಆಗ ಜನರ ಜ್ಞಾನ ಮತ್ತು ಧಾರಣಾಶಕ್ತಿಯು ಕಡಿಮೆಯಾಗಿರುವುದನ್ನು ನೋಡಿ ವೇದವೃಕ್ಷವನ್ನು ನಾನಾ ಶಾಖೆಗಳ ರೂಪದಲ್ಲಿ ವಿಂಗಡಿಸಿದನು.॥21॥
(ಶ್ಲೋಕ - 22)
ಮೂಲಮ್
ನರದೇವತ್ವಮಾಪನ್ನಃ ಸುರಕಾರ್ಯಚಿಕೀರ್ಷಯಾ ।
ಸಮುದ್ರನಿಗ್ರಹಾದೀನಿ ಚಕ್ರೇ ವೀರ್ಯಾಣ್ಯತಃ ಪರಮ್ ॥
ಅನುವಾದ
ಹದಿನೆಂಟನೆಯ ಬಾರಿ ಭಗವಂತನು ದೇವತೆಗಳ ಕಾರ್ಯವನ್ನು ನೆರವೇರಿಸಲು ರಾಜನಾಗಿ ರಾಮರೂಪದಿಂದ ಅವತರಿಸಿ, ಸೇತುಬಂಧನ, ರಾವಣವಧೆ ಮುಂತಾದ ಪರಾಕ್ರಮಪೂರ್ಣ ಅನೇಕ ಲೀಲೆಗಳನ್ನು ಮಾಡಿದನು. (ಅವುಗಳನ್ನು ಹಾಡಿಕೊಂಡು ಜನರು ಭಕ್ತಿಯನ್ನು ಪಡೆದು ಭಗವದ್ಧಾಮಕ್ಕೆ ತೆರಳುತ್ತಾರೆ.) ॥22॥
(ಶ್ಲೋಕ - 23)
ಮೂಲಮ್
ಏಕೋನವಿಂಶೇ ವಿಂಶತಿಮೇ ವೃಷ್ಣಿಷು ಪ್ರಾಪ್ಯ ಜನ್ಮನೀ ।
ರಾಮಕೃಷ್ಣಾವಿತಿ ಭುವೋ ಭಗವಾನಹರದ್ಭರಮ್ ॥
ಅನುವಾದ
ಹತ್ತೊಂಭತ್ತನೆಯ ಮತ್ತು ಇಪ್ಪತ್ತನೆಯ ಅವತಾರಗಳಲ್ಲಿ ಅವನು ಯದುವಂಶದಲ್ಲಿ ಬಲರಾಮ ಹಾಗೂ ಶ್ರೀಕೃಷ್ಣ ಎಂಬ ಹೆಸರುಗಳಿಂದ ಪ್ರಕಟಗೊಂಡು ಭೂಮಿಯ ಭಾರವನ್ನು ಇಳಿಸಿದನು.॥23॥
(ಶ್ಲೋಕ - 24)
ಮೂಲಮ್
ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್ ।
ಬುದ್ಧೋ ನಾಮ್ನಾಜನಸುತಃ ಕೀಕಟೇಷು ಭವಿಷ್ಯತಿ ॥
ಅನುವಾದ
ಮತ್ತೆ ಕಲಿಯುಗವು ಬಂದಾಗ ಅವನು ಮಗಧ ದೇಶದಲ್ಲಿ ದೇವದ್ವೇಷಿಗಳಾದ ದೈತ್ಯರನ್ನು ಮೋಹಗೊಳಿಸುವುದಕ್ಕಾಗಿ ಅಜನ ಎಂಬುವನಲ್ಲಿ ಪುತ್ರರೂಪದಲ್ಲಿ ಬುದ್ಧಾವತಾರವನ್ನು ತಾಳುವನು.॥24॥
(ಶ್ಲೋಕ - 25)
ಮೂಲಮ್
ಅಥಾಸೌ ಯುಗಸಂಧ್ಯಾಯಾಂ ದಸ್ಯುಪ್ರಾಯೇಷು ರಾಜಸು ।
ಜನಿತಾ ವಿಷ್ಣು ಯಶಸೋ ನಾಮ್ನಾ ಕಲ್ಕಿರ್ಜಗತ್ಪತಿಃ ॥
ಅನುವಾದ
ಇದು ಕಳೆದು ಬಹಳ ದಿನಗಳ ಬಳಿಕ ಕಲಿಯುಗದ ಕೊನೆಯಲ್ಲಿ ರಾಜರೆಲ್ಲರೂಸಾಮಾನ್ಯವಾಗಿ ಲೂಟಿಗಾರರಾಗುವರು. ಆಗ ಜಗತ್ತಿನ ರಕ್ಷಕನಾದ ಭಗವಂತನು ವಿಷ್ಣುಯಶನೆಂಬ ಬ್ರಾಹ್ಮಣನ ಮನೆಯಲ್ಲಿ ಕಲ್ಕಿಯ ರೂಪದಲ್ಲಿ ಅವತಾರ ಮಾಡುವನು.* ॥25॥
ಟಿಪ್ಪನೀ
- ಇಲ್ಲಿ ಇಪ್ಪತ್ತೆರಡು ಅವತಾರಗಳನ್ನು ಮಾತ್ರ ಲೆಕ್ಕಿಸಿವೆ. ಆದರೆ ಭಗವಂತನ ಅವತಾರಗಳು ಇಪ್ಪತ್ತನಾಲ್ಕೆಂದು ಪ್ರಸಿದ್ಧವಾಗಿದೆ. ಹಾಗಾದರೆ ಇನ್ನುಳಿದ ಎರಡು ಅವತಾರಗಳಾವುವು? ಎಂದರೆ ಹಂಸ ಮತ್ತು ಹಯಗ್ರೀವ ಅವತಾರಗಳು. (ಕೆಲವು ವಿದ್ವಾಂಸರ ಅಭಿಪ್ರಾಯದಲ್ಲಿ ಮೇಲ್ಕಂಡ ಇಪ್ಪತ್ತೆರಡು ಅವತಾರಗಳಲ್ಲಿ ರಾಮ-ಕೃಷ್ಣರನ್ನು ಬಿಟ್ಟು ಉಳಿದ ಇಪ್ಪತ್ತು ಅವತಾರಗಳೊಡನೆ ಅವತಾರ ಮೂಲವಾದ ಶ್ರೀಕೃಷ್ಣಪರಮಾತ್ಮನ ಕೇಶಾವತಾರ, ಸುತಪಾ ಮತ್ತು ಪ್ರಶ್ನಿದೇವಿಯನ್ನು ಅನುಗ್ರಹಿಸಿದ ಅವತಾರ. ಬಲರಾಮಾವತಾರ ಮತ್ತು ಪರಬ್ರಹ್ಮಾವತಾರ ಎಂಬ ನಾಲ್ಕು ಅವತಾರಗಳನ್ನು ಸೇರಿಸಿ ಇಪ್ಪತ್ತನಾಲ್ಕು ಅವತಾರಗಳ ಪರಿಗಣನೆ ಮಾಡಿದ್ದಾರೆ. ಶ್ರೀಕೃಷ್ಣನು ಅವತಾರವೇ ಅಲ್ಲ. ಅವನು ಸಾಕ್ಷಾತ್ ಪರಬ್ರಹ್ಮ ಪರಮಾತ್ಮ ಪರವಾಸುದೇವ.)
(ಶ್ಲೋಕ - 26)
ಮೂಲಮ್
ಅವತಾರಾ ಹ್ಯಸಂಖ್ಯೇಯಾ ಹರೇಃ ಸತ್ತ್ವ ನಿಧೇರ್ದ್ವಿಜಾಃ ।
ಯಥಾವಿದಾಸಿನಃ ಕುಲ್ಯಾಃ ಸರಸಃ ಸ್ಯುಃ ಸಹಸ್ರಶಃ ॥
ಅನುವಾದ
ಶೌನಕಾದಿ ಮಹರ್ಷಿಗಳೇ! ಇಷ್ಟು ಮಾತ್ರವೇ ಅವನ ಅವತಾರಗಳೆಂದು ತಿಳಿಯಬೇಡಿರಿ. ವಾಸ್ತವವಾಗಿ ಭಗವಂತನ ಅವತಾರಗಳಿಗೆ ಲೆಕ್ಕವೇ ಇಲ್ಲ. ಎಂದಿಗೂ ಬತ್ತದೆ ಇರುವ ಅಗಾಧ ಸರೋವರದಿಂದ ಸಾವಿರಾರು ಕಾಲುವೆಗಳು ಹರಿದುಬರುವಂತೆ ಸತ್ತ್ವಗುಣಕ್ಕೆ ನಿಧಿಯಾದ ಶ್ರೀಹರಿಯಿಂದ ಅಸಂಖ್ಯ ಅವತಾರಗಳು ಉಂಟಾಗುತ್ತಾ ಇರುತ್ತವೆ. ॥26॥
(ಶ್ಲೋಕ - 27)
ಮೂಲಮ್
ಋಷಯೋ ಮನವೋ ದೇವಾ ಮನುಪುತ್ರಾ ಮಹೌಜಸಃ ।
ಕಲಾಃ ಸರ್ವೇ ಹರೇರೇವ ಸಪ್ರಜಾಪತಯಸ್ತಥಾ ॥
ಅನುವಾದ
ಋಷಿಗಳು, ಮನುಗಳು, ದೇವತೆಗಳು, ಪ್ರಜಾಪತಿಗಳು, ಮನುಪುತ್ರರು ಹಾಗೂ ಮಹಾಶಕ್ತಿ ಶಾಲಿಗಳು ಯಾರು-ಯಾರು ಇದ್ದಾರೋ ಇವರೆಲ್ಲರೂ ಕೂಡ ಶ್ರೀಹರಿಯ ವಿಭೂತಿಗಳೇ, ಅಂಶಗಳೇ ಆಗಿವೆ.॥27॥
(ಶ್ಲೋಕ - 28)
ಮೂಲಮ್
ಏತೇ ಚಾಂಶಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಮ್ ।
ಇಂದ್ರಾರಿವ್ಯಾಕುಲಂ ಲೋಕಂ ಮೃಡಯಂತಿ ಯುಗೇ ಯುಗೇ ॥
ಅನುವಾದ
ಇವೆಲ್ಲ ಅವತಾರಗಳಾದರೋ ಭಗವಂತನ ಅಂಶಾವತಾರ ಅಥವಾ ಕಲಾವತಾರಗಳು. ಆದರೆ ಭಗವಾನ್ ಶ್ರೀಕೃಷ್ಣನಾದರೋ ಅವತಾರಮಾಡಿದ ಸಾಕ್ಷಾದ್ಭಗವಂತನೇ ಆಗಿದ್ದಾನೆ. ದೈತ್ಯರ ಅತ್ಯಾಚಾರಗಳಿಂದ ಜನರು ಪೀಡಿತರಾದಾಗ ಯುಗ-ಯುಗಗಳಲ್ಲಿ ಅನೇಕ ರೂಪಗಳಿಂದ ಪ್ರಕಟಗೊಂಡು ಅವರನ್ನು ರಕ್ಷಿಸುವನು.॥28॥
(ಶ್ಲೋಕ - 29)
ಮೂಲಮ್
ಜನ್ಮ ಗುಹ್ಯಂ ಭಗವತೋ ಯ ಏತತ್ಪ್ರಯತೋ ನರಃ ।
ಸಾಯಂ ಪ್ರಾತರ್ಗೃಣನ್ ಭಕ್ತ್ಯಾ ದುಃಖಗ್ರಾಮಾದ್ವಿಮುಚ್ಯತೇ ॥
ಅನುವಾದ
ಭಗವಂತನ ದಿವ್ಯ ಜನ್ಮಗಳ ಈ ಕಥೆಯು ಅತ್ಯಂತ ರಹಸ್ಯಮಯ ಗೋಪನೀಯವಾಗಿದೆ. ಏಕಾಗ್ರಚಿತ್ತದಿಂದ ಸಾಯಂಕಾಲ-ಬೆಳಿಗ್ಗೆ ಪ್ರೇಮದಿಂದ ಪಠಿಸುವವರು ಎಲ್ಲ ದುಃಖಗಳಿಂದ ಬಿಡುಗಡೆ ಹೊಂದುವರು.॥29॥
(ಶ್ಲೋಕ - 30)
ಮೂಲಮ್
ಏತದ್ರೂಪಂ ಭಗವತೋ ಹ್ಯರೂಪಸ್ಯ ಚಿದಾತ್ಮನಃ ।
ಮಾಯಾಗುಣೈರ್ವಿರಚಿತಂ ಮಹದಾದಿಭಿರಾತ್ಮನಿ ॥
ಅನುವಾದ
ಪ್ರಾಕೃತ ಸ್ವರೂಪರಹಿತ ಚಿನ್ಮಯ ಭಗವಂತನ ಈ ಸ್ಥೂಲ ಜಗದಾಕಾರವಾದ ರೂಪವು ಅವನ ಮಾಯೆಯ ಮಹತ್ತತ್ತ್ವಾದಿ ಗುಣಗಳಿಂದ ಭಗವಂತನಲ್ಲೇ ಕಲ್ಪಿತವಾಗಿದೆ.॥30॥
(ಶ್ಲೋಕ - 31)
ಮೂಲಮ್
ಯಥಾ ನಭಸಿ ಮೇಘೌಘೋ ರೇಣುರ್ವಾ ಪಾರ್ಥಿವೋನಿಲೇ ।
ಏವಂ ದ್ರಷ್ಟರಿ ದೃಶ್ಯತ್ವಮಾರೋಪಿತಮಬುದ್ಧಿಭಿಃ ॥
ಅನುವಾದ
ಆಕಾಶದಲ್ಲಿ ಉಂಟಾದ ಮೋಡಗಳು ಆಕಾಶವನ್ನೇ ಮುಚ್ಚಿ ಬಿಡುವವು. ಗಾಳಿಯಿಂದ ಎದ್ದ ಧೂಳು ಗಾಳಿಯನ್ನೇ ಧೂಳಿ ಧೂಸರಿತವಾಸುತ್ತದೆ. ಹಾಗೆಯೇ ಆತ್ಮನಿಂದ ಉತ್ಪನ್ನವಾದ ದೃಶ್ಯ ಪ್ರಪಂಚವು ವಾಸ್ತವವಾಗಿ ಪರಮಾತ್ಮನ ಸಗುಣ ರೂಪವೇ ಆಗಿದೆ. ಹೀಗಿದ್ದರೂ ಅವಿವೇಕೀ ಜನರು ಎಲ್ಲರ ಸಾಕ್ಷಿಯಾದ ಆತ್ಮನಲ್ಲಿ ಸ್ಥೂಲವಾದ ದೃಶ್ಯ ಜಗತ್ತನ್ನು ಆರೋಪಿಸುತ್ತಾರೆ. ॥31॥
(ಶ್ಲೋಕ - 32)
ಮೂಲಮ್
ಅತಃ ಪರಂ ಯದವ್ಯಕ್ತಮವ್ಯೆಢಗುಣವ್ಯೆಹಿತಮ್ ।
ಅದೃಷ್ಟಾಶ್ರುತವಸ್ತುತ್ವಾತ್ ಸಜೀವೋ ಯತ್ಪುನರ್ಭವಃ ॥
ಅನುವಾದ
ಈ ಸುಗುಣದಿಂದ ಅತೀತನಾದ ಪರಮಾತ್ಮನ ನಿರ್ಗುಣ ನಿರಾಕಾರ ಸ್ವರೂಪದೊಂದಿಗೆ ಗುಣಗಳ ಯಾವುದೇ ಸಂಪರ್ಕವಿಲ್ಲ ಹಾಗೂ ಅವನಿಗೆ ಕರಚರಣಾದಿ ಅವಯಗಳೂ ಇಲ್ಲ. ಜೀವನೂ ಕೂಡ ಪರಮಾತ್ಮನದೇ ಅಂಶನಾದ ವಾಸ್ತವವಾಗಿ ನಿರ್ಗುಣನೇ ಆಗಿದ್ದಾನೆ. ಆದರೆ ಮಾಯೆಯಿಂದ ಭ್ರಮಿತನಾಗಿದ್ದರಿಂದ ಅವನು ಜನ್ಮ-ಮರಣದ ಚಕ್ರದಲ್ಲಿ ಸಿಲುಕಿಕೊಳ್ಳುವನು.॥32॥
(ಶ್ಲೋಕ - 33)
ಮೂಲಮ್
ಯತ್ರೇಮೇ ಸದಸದ್ರೂಪೇ ಪ್ರತಿಷಿದ್ಧೇ ಸ್ವಸಂವಿದಾ ।
ಅವಿದ್ಯಯಾತ್ಮನಿ ಕೃತೇ ಇತಿ ತದ್ಬ್ರಹ್ಮದರ್ಶನಮ್ ॥
ಅನುವಾದ
ಜೀವಿಗೆ ಸ್ವಸ್ವರೂಪ ಜ್ಞಾನ ಉಂಟಾದಾಗ, ಅಜ್ಞಾನದಿಂದಾಗಿ ಪರಮಾತ್ಮನಲ್ಲಿ ಕಂಡು ಬರುತ್ತಿದ್ದ ಜಗತ್ತು ಇಲ್ಲವಾಗುತ್ತದೆ. ಜೊತೆಗೆ ಸರ್ವತ್ರ ಪರಮಾತ್ಮನ ದರ್ಶನವೇ ಆಗುತ್ತದೆ. ಈ ಸ್ಥಿತಿಯಲ್ಲಿ ಮಾಯೆ ಮತ್ತು ಅದರ ಅಂಶಭೂತ ಜಗತ್ತಿನ ಅಸ್ತಿತ್ವವೂ ಇರುವುದಿಲ್ಲ. ಜೀವನು ಸ್ವಯಂ ಬ್ರಹ್ಮಸ್ವರೂಪನಾಗುತ್ತಾನೆ.॥33॥
(ಶ್ಲೋಕ - 34)
ಮೂಲಮ್
ಯದ್ಯೇಷೋಪರತಾ ದೇವೀ ಮಾಯಾ ವೈಶಾರದೀ ಮತಿಃ ।
ಸಂಪನ್ನ ಏವೇತಿ ವಿದುರ್ಮಹಿಮ್ನಿ ಸ್ವೇ ಮಹೀಯತೇ ॥
ಅನುವಾದ
ಬ್ರಹ್ಮ ಸ್ವರೂಪನಾದ ಬಳಿಕ ಸಂಸಾರ ಚಕ್ರದಲ್ಲಿ ಸುತ್ತಿಸು ತ್ತಿರುವ ಮಾಯೆ ನಿವೃತ್ತವಾಗುತ್ತದೆ. ಇದರಿಂದ ಜೀವನು ಪರಮಾನಂದಮಯನಾಗಿ ತನ್ನ ವಾಸ್ತವಿಕ ಸ್ವರೂಪದಲ್ಲಿ ಪ್ರತಿಷ್ಠಿತನಾಗುತ್ತಾನೆ.॥34॥
(ಶ್ಲೋಕ - 35)
ಮೂಲಮ್
ಏವಂ ಜನ್ಮಾನಿ ಕರ್ಮಾಣಿ ಹ್ಯಕರ್ತುರಜನಸ್ಯ ಚ ।
ವರ್ಣಯಂತಿ ಸ್ಮ ಕವಯೋ ವೇದಗುಹ್ಯಾನಿ ಹೃತ್ಪತೇಃ ॥
ಅನುವಾದ
ಪರಮಾತ್ಮನು ವಾಸ್ತವವಾಗಿ ಅಜನ್ಮಾ ಹಾಗೂ ಆಕರ್ತೃನಾಗಿದ್ದರೂ ಕೂಡ ಅವನ ಜನ್ಮ-ಕರ್ಮಗಳ ರಹಸ್ಯವು ವೇದಗಳಿಗೂ ಅತ್ಯಂತ ರಹಸ್ಯಮಯ ವಾಗಿದೆ, ಅರ್ಥಾತ್ ಅಗಮ್ಯವಾಗಿದೆ ಎಂದು ತತ್ತ್ವಜ್ಞಾನಿಗಳು ಅದನ್ನೂ ವರ್ಣಿಸುತ್ತಾರೆ.॥35॥
(ಶ್ಲೋಕ - 36)
ಮೂಲಮ್
ಸ ವಾ ಇದಂ ವಿಶ್ವಮಮೋಘಲೀಲಃ
ಸೃಜ್ಯತ್ಯವತ್ಯತ್ತಿ ನ ಸಜ್ಜತೇಸ್ಮಿನ್ ।
ಭೂತೇಷು ಚಾಂತರ್ಹಿತ ಆತ್ಮತಂತ್ರಃ
ಷಾಡ್ವರ್ಗಿಕಂ ಜಿಘ್ರತಿ ಷಡ್ಗುಣೇಶಃ ॥
ಅನುವಾದ
ಜ್ಞಾನ, ಬಲ, ಐಶ್ವರ್ಯ, ವೀರ್ಯ, ಶಕ್ತಿ, ತೇಜಸ್ಸುಗಳೆಂಬ ಈ ಆರು ಅಸಾಧಾರಣ ಗುಣಗಳಿಂದ ಸಂಪನ್ನನಾಗಿ ಅಮೋಘವಾದ ಲೀಲೆಗಳನ್ನು ನಡೆಸುವ ಆ ಭಗವಂತನೇ ಲೀಲಾಜಾಲವಾಗಿ ಈ ವಿಶ್ವವೆಲ್ಲವನ್ನೂ ಸೃಷ್ಟಿಸುತ್ತಾನೆ, ರಕ್ಷಿಸುತ್ತಾನೆ, ಸಂಹರಿಸುತ್ತಾನೆ. ಆದರೂ ಇದರಲ್ಲಿ ಅಂಟಿಕೊಳ್ಳುವುದಿಲ್ಲ. ಅವನು ಪರಮ ಸ್ವತಂತ್ರನು. ಪ್ರಾಣಿಗಳ ಹೃದಯದಲ್ಲಿ ಅಡಗಿದ್ದು ಆರು ಇಂದ್ರಿಯಗಳ ವಿಷಯಗಳನ್ನು ಅವನೇ ಅನುಭವಿಸುತ್ತಿದ್ದರೂ ಅದರಿಂದ ಲಿಪ್ತನಾಗುವುದಿಲ್ಲ.॥36॥
(ಶ್ಲೋಕ - 37)
ಮೂಲಮ್
ನ ಚಾಸ್ಯ ಕಶ್ಚಿನ್ನಿಪುಣೇನ ಧಾತು-
ರವೈತಿ ಜಂತುಃ ಕುಮನೀಷ ಊತೀಃ ।
ನಾಮಾನಿ ರೂಪಾಣಿ ಮನೋವಚೋಭಿಃ
ಸಂತನ್ವತೋ ನಟಚರ್ಯಾಮಿವಾಜ್ಞಃ ॥
ಅನುವಾದ
ಐಂದ್ರಜಾಲಿಕನು ಅಥವಾ ನಟನು ತನ್ನ ಸಂಕಲ್ಪದಿಂದಲೂ, ಮಾತುಗಳಿಂದಲೂ ಮಾಡುವ ಅದ್ಭುತ ಚಮತ್ಕಾರಗಳನ್ನು ಮೂರ್ಖಮನುಷ್ಯನು ಅರಿಯಲಾರನು. ಹಾಗೆಯೇ ದುರ್ಬುದ್ಧಿಯುಳ್ಳ ಜೀವರು-ಭಗವಂತನು ತನ್ನ ಸಂಕಲ್ಪದಿಂದಲೂ, ವೇದವಚನಗಳಿಂದಲೂ ಪ್ರಕಟಪಡಿಸುವ ನಾನಾ ನಾಮಗಳನ್ನೂ, ರೂಪಗಳನ್ನೂ, ಲೀಲೆಗಳನ್ನೂ, ತಮ್ಮ ಮನಸ್ಸು ಮಾತುಗಳಿಂದಲೂ ಬುದ್ಧಿ ಸೂಕ್ಷ್ಮತೆಯಿಂದಲೂ ಅರಿಯಲಾರರು.॥37॥
(ಶ್ಲೋಕ - 38)
ಮೂಲಮ್
ಸ ವೇದ ಧಾತುಃ ಪದವೀಂ ಪರಸ್ಯ
ದುರಂತ ವೀರ್ಯಸ್ಯ ರಥಾಂಗಪಾಣೇಃ ।
ಯೋಮಾಯಯಾ ಸಂತತಯಾನುವೃತ್ತ್ಯಾ
ಭಜೇತ ತತ್ಪಾದಸರೋಜಗಂಧಮ್ ॥
ಅನುವಾದ
ಚಕ್ರಪಾಣಿ ಭಗವಂತನ ಶಕ್ತಿ, ಪರಾಕ್ರಮಗಳು ಅನಂತವಾಗಿವೆ. ಅದರ ಆಳವನ್ನು ಯಾರೂ ತಿಳಿಯಲಾರರು. ಅವನು ಇಡೀ ಜಗತ್ತಿನ ನಿರ್ಮಾತೃವಾಗಿದ್ದರೂ ಅದರಿಂದ ಸರ್ವಥಾ ಅತೀತನಾಗಿದ್ದಾನೆ. ಅವನ ಸ್ವರೂಪವನ್ನು ಅಥವಾ ಅವನ ಲೀಲೆಗಳ ರಹಸ್ಯವನ್ನು ನಿತ್ಯ ನಿರಂತರವಾಗಿ ನಿಷ್ಕಪಟ ಭಾವದಿಂದ ಅವನ ಅಡಿದಾವರೆಗಳ ಗಂಧವನ್ನು ಸೇವಿಸುವವನು ನಿಷ್ಕಾಮವಾದ ಸೇವಾ ಭಾವದಿಂದ ಅವನ ಚರಣಗಳನ್ನು ಚಿಂತಿಸುತ್ತಿರುವ ಭಕ್ತಶ್ರೇಷ್ಠನೇ ಅರಿಯಬಲ್ಲನು.॥38॥
(ಶ್ಲೋಕ - 39)
ಮೂಲಮ್
ಅಥೇಹ ಧನ್ಯಾ ಭಗವಂತ ಇತ್ಥಂ
ಯದ್ವಾ ಸುದೇವೇಖಿಲಲೋಕನಾಥೇ ।
ಕುರ್ವಂತಿ ಸರ್ವಾತ್ಮಕಮಾತ್ಮಭಾವಂ
ನ ಯತ್ರ ಭೂಯಃ ಪರಿವರ್ತ ಉಗ್ರಃ ॥
ಅನುವಾದ
ಶೌನಕಾದಿ ಋಷಿಗಳಿರಾ! ಈ ಲೋಕದಲ್ಲಿ ಪೂಜ್ಯರಾದ ನೀವೇ ಧನ್ಯರು, ಸೌಭಾಗ್ಯಶಾಲಿಗಳು. ಏಕೆಂದರೆ, ನೀವು ಅಖಿಲಲೋಕಗಳಿಗೂ ಒಡೆಯನಾದ ಆ ಪರವಾಸುದೇವನಲ್ಲೇ ಸರ್ವಪ್ರಕಾರಗಳಿಂದಲೂ, ಆತ್ಮ ಭಾವವನ್ನು ಸಮರ್ಪಣೆ ಮಾಡಿರುವಿರಿ. ಹೀಗೆ ಮಾಡುವವರಿಗೆ ಈ ಭಯಂಕರವಾದ ಸಂಸಾರದಲ್ಲಿ ಮರಳಿ ಹುಟ್ಟಬೇಕಾಗುವುದಿಲ್ಲ.॥39॥
(ಶ್ಲೋಕ - 40)
ಮೂಲಮ್
ಇದಂ ಭಾಗವತಂ ನಾಮ ಪುರಾಣಂ ಬ್ರಹ್ಮಸಮ್ಮಿತಮ್ ।
ಉತ್ತಮಶ್ಲೋಕಚರಿತಂ ಚಕಾರ ಭಗವಾನೃಷಿಃ ॥
ಅನುವಾದ
ಭಗವಾನ್ ವೇದವ್ಯಾಸರು ವೇದಗಳಿಗೆ ಸಮಾನವಾಗಿರುವ, ಪುಣ್ಯಶ್ಲೋಕನಾದ ಪರಮಾತ್ಮನ ಚರಿತ್ರೆಯಿಂದ ಪರಿಪೂರ್ಣವಾದ ಈ ಭಾಗವತವೆಂಬ ಪುರಾಣವನ್ನು ರಚಿಸಿದರು.॥40॥
(ಶ್ಲೋಕ - 41)
ಮೂಲಮ್
ನಿಃಶ್ರೇಯಸಾಯ ಲೋಕಸ್ಯ ಧನ್ಯಂ ಸ್ವಸ್ತ್ಯಯನಂ ಮಹತ್ ।
ತದಿದಂ ಗ್ರಾಹಯಾಮಾಸ ಸುತಮಾತ್ಮ ವತಾಂ ವರಮ್ ॥
ಅನುವಾದ
ಅವರು ಅತ್ಯಂತ ಮಹತ್ತ್ವ ಪೂರ್ಣವೂ, ಮಂಗಳಕರವೂ ಆದ ಈ ಧನ್ಯವಾದ ಗ್ರಂಥರತ್ನವನ್ನು ಲೋಕದ ಪರಮ ಕಲ್ಯಾಣಕ್ಕಾಗಿ ಆತ್ಮಜ್ಞಾನಿಗಳಲ್ಲಿ ಶ್ರೇಷ್ಠರಾದ ತಮ್ಮ ಪುತ್ರರಾದ ಶುಕಮಹರ್ಷಿಗಳಿಗೆ ಬೋಧಿಸಿದರು. ॥41॥
(ಶ್ಲೋಕ - 42)
ಮೂಲಮ್
ಸರ್ವವೇದೇತಿಹಾಸಾನಾಂ ಸಾರಂ ಸಾರಂ ಸಮುದ್ಧೃತಮ್ ।
ಸ ತು ಸಂಶ್ರಾವಯಾಮಾಸ ಮಹಾರಾಜಂ ಪರೀಕ್ಷಿತಮ್ ॥
ಅನುವಾದ
ಇದರಲ್ಲಿ ಎಲ್ಲ ವೇದ-ಇತಿಹಾಸಗಳ ಸಾರ ಸಂಗ್ರಹಮಾಡಲಾಗಿದೆ. ಶುಕಮಹಾಮುನಿಗಳು ರಾಜಾ ಪರೀಕ್ಷಿತನಿಗೆ ಇದನ್ನು ಶ್ರವಣ ಮಾಡಿಸಿದರು. ॥42॥
(ಶ್ಲೋಕ - 43)
ಮೂಲಮ್
ಪ್ರಾಯೋಪವಿಷ್ಟಂ ಗಂಗಾಯಾಂ ಪರೀತಂ ಪರಮರ್ಷಿಭಿಃ ।
ಕೃಷ್ಣೇ ಸ್ವಧಾಮೋಪಗತೇ ಧರ್ಮಜ್ಞಾನಾದಿಭಿಃ ಸಹ ॥
(ಶ್ಲೋಕ - 44)
ಮೂಲಮ್
ಕಲೌ ನಷ್ಟದೃಶಾಮೇಷ ಪುರಾಣಾರ್ಕೋಧುನೋದಿತಃ ।
ತತ್ರ ಕೀರ್ತಯತೋ ವಿಪ್ರಾ ವಿಪ್ರರ್ಷೇರ್ಭೂರಿತೇಜಸಃ ॥
(ಶ್ಲೋಕ - 45)
ಮೂಲಮ್
ಅಹಂ ಚಾಧ್ಯಗಮಂ ತತ್ರ ನಿವಿಷ್ಟಸ್ತದನುಗ್ರಹಾತ್ ।
ಸೋಹಂ ವಃ ಶ್ರಾವಯಿಷ್ಯಾಮಿ ಯಥಾೀತಂ ಯಥಾಮತಿ ॥
ಅನುವಾದ
ಆ ಸಮಯದಲ್ಲಿ ಅವನು ಮಹರ್ಷಿಗಳಿಂದ ಸುತ್ತುವರಿದು ಆಮರಣ ನಿರಶನ ವ್ರತವನ್ನು ಕೈಗೊಂಡು ಗಂಗಾತೀರದಲ್ಲಿ ಕುಳಿತಿದ್ದನು. ಭಗವಾನ್ ಶ್ರೀಕೃಷ್ಣನು ಧರ್ಮ, ಜ್ಞಾನಾದಿಗಳೊಂದಿಗೆ ತನ್ನ ಪರಮಧಾಮಕ್ಕೆ ತೆರಳಿದಾಗ ಈ ಕಲಿಯುಗದಲ್ಲಿ ಅಜ್ಞಾನ ರೂಪೀ ಅಂಧಕಾರದಿಂದ ಕುರುಡಾಗಿದ್ದ ಜನರಿಗಾಗಿ ಈ ಪುರಾಣರೂಪೀ ಸೂರ್ಯನು ಅಲ್ಲಿ ಪ್ರಕಟಗೊಂಡನು. ಶೌನಕಾದಿ ಮಹರ್ಷಿಗಳೇ ಮಹಾ ತೇಜಸ್ವೀ ಶ್ರೀಶುಕಮಹಾಮುನಿಗಳು ಅಲ್ಲಿ ಈ ಪುರಾಣದ ಕಥೆಯನ್ನು ಹೇಳುತ್ತಿದ್ದಾಗ ನಾನೂ ಅಲ್ಲಿ ಕುಳಿತಿದ್ದೆ. ಅಲ್ಲೇ ನಾನು ಅವರ ಕೃಪಾಪೂರ್ಣ ಅನುಮತಿಯಿಂದ ಇದರ ಅಧ್ಯಯನ ಮಾಡಿದೆ. ನಾನು ಅದನ್ನು ಅಲ್ಲಿ ಹೇಗೆ ಅಧ್ಯಯನ ಮಾಡಿದ್ದೇನೋ ಹಾಗೆಯೇ ನಿಮಗೆ ಯಥಾಮತಿಯಾಗಿ ಹೇಳುವೆನು; ಕೇಳಿರಿ. ॥43-45॥
ಅನುವಾದ (ಸಮಾಪ್ತಿಃ)
ಮೂರನೆಯ ಅಧ್ಯಾಯವು ಮುಗಿಯಿತು. ॥3॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ನೈಮಿಷೀಯೋಪಾಖ್ಯಾನೇ ತೃತೀಯೋಽಧ್ಯಾಯಃ ॥3॥