೦೨

[ಎರಡನೆಯ ಅಧ್ಯಾಯ]

ಭಾಗಸೂಚನಾ

ಭಗವತ್ಕಥೆ ಮತ್ತು ಭಗವದ್ಭಕ್ತಿಯ ಮಾಹಾತ್ಮ್ಯ

(ಶ್ಲೋಕ - 1)

ಮೂಲಮ್ (ವಾಚನಮ್)

ವ್ಯಾಸ ಉವಾಚ

ಮೂಲಮ್

ಇತಿ ಸಂಪ್ರಶ್ನ ಸಂಹೃಷ್ಟೋ ವಿಪ್ರಾಣಾಂ ರೌಮಹರ್ಷಣಿಃ ।
ಪ್ರತಿಪೂಜ್ಯ ವಚಸ್ತೇಷಾಂ ಪ್ರವಕ್ತುಮುಪಚಕ್ರಮೇ ॥

ಅನುವಾದ

ಶ್ರೀವ್ಯಾಸರು ಹೇಳುತ್ತಾರೆ — ಶೌನಕಾದಿ ಬ್ರಹ್ಮವಾದಿಗಳಾದ ಮಹರ್ಷಿಗಳ ಈ ಪ್ರಶ್ನೆಯನ್ನು ಕೇಳಿ ರೋಮಹರ್ಷಣ ಪುತ್ರರಾದ ಉಗ್ರಶ್ರವ ಪುರಾಣಿಕರಿಗೆ ಬಹಳ ಆನಂದವಾಯಿತು. ಅವರು ಋಷಿಗಳ ಈ ಮಂಗಳಮಯ ಪ್ರಶ್ನೆಯನ್ನು ಅಭಿನಂದಿಸಿ ಶ್ರೀಗುರು ದೇವತಾ ನಮಸ್ಕಾರಪೂರ್ವಕ ಹೀಗೆ ಹೇಳಲುಪಕ್ರಮಿಸಿದರು.॥1॥

(ಶ್ಲೋಕ - 2)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಯಂ ಪ್ರವ್ರಜಂತಮನುಪೇತಮಪೇತಕೃತ್ಯಂ
ದ್ವೈಪಾಯನೋ ವಿರಹಕಾತರ ಆಜುಹಾವ ।
ಪುತ್ರೇತಿ ತನ್ಮಯತಯಾ ತರವೋಭಿನೇದು-
ಸ್ತಂ ಸರ್ವಭೂತಹೃದಯಂ ಮುನಿಮಾನತೋಸ್ಮಿ ॥

ಅನುವಾದ

ಸೂತಪುರಾಣಿಕರು ಹೇಳಿದರು — ಸಮಸ್ತ ಪ್ರಾಣಿಗಳ ಆತ್ಮ ಸ್ವರೂಪರಾದ ಶ್ರೀಶುಕಮಹಾಮುನಿಗೆ ನಮಸ್ಕಾರವು. ಸಂಸಾರ ಸಂಬಂಧವನ್ನು ಕೂಡಿಕೊಳ್ಳದೆ ಎಲ್ಲ ಕರ್ಮಗಳಿಂದಲೂ ಬಿಡುಗಡೆಹೊಂದಿ ಕೃತಕೃತ್ಯರಾಗಿದ್ದ, ಜ್ಞಾನ-ವೈರಾಗ್ಯನಿಧಿಗಳಾದ ಈ ಮಹಾತ್ಮನು ಸರ್ವಸಂಗ ಪರಿತ್ಯಾಗ ಮಾಡಿ ಒಬ್ಬಂಟಿಗನಾಗಿ ಮನೆಯಿಂದ ಹೊರಟುಬಿಟ್ಟಾಗ ತಂದೆಯಾದ ವೇದವ್ಯಾಸರು ಪುತ್ರವಿಯೋಗದಿಂದ ತಲ್ಲಣಿಸುತ್ತಾ ಓ ಪುತ್ರಾ! ಓ ಪುತ್ರಾ! ಎಂದು ಕೂಗತೊಡಗಿದರು. ಆಗ ಅಲ್ಲಿದ್ದ ವೃಕ್ಷಗಳೇ ತನ್ಮಯತೆಯಿಂದ ಕೂಡಿ ಅವರ ಪರವಾಗಿ ‘ಭೋಃ’ ಎಂದು ಓಗೊಟ್ಟವು. ಇಂತಹ ಎಲ್ಲರ ಹೃದಯದಲ್ಲಿ ವಿರಾಜಮಾನರಾಗಿ ಆತ್ಮರೂಪರಾಗಿರುವ ಗುರು ಶ್ರೀಶುಕಮಹಾಮುನಿಗೆ ನಾನು ವಂದಿಸುತ್ತೇನೆ. ॥2॥

(ಶ್ಲೋಕ - 3)

ಮೂಲಮ್

ಯಃ ಸ್ವಾನುಭಾವಮಖಿಲಶ್ರುತಿಸಾರಮೇಕ-
ಮಧ್ಯಾತ್ಮದೀಪಮತಿತಿತೀರ್ಷತಾಂ ತಮೋಂಧಮ್ ।
ಸಂಸಾರಿಣಾಂ ಕರುಣಯಾಹ ಪುರಾಣಗುಹ್ಯಂ
ತಂ ವ್ಯಾಸಸೂನುಮುಪಯಾಮಿ ಗುರುಂ ಮುನೀನಾಮ್ ॥

ಅನುವಾದ

ಈ ಶ್ರೀಮದ್ಭಾಗವತವು ಅತ್ಯಂತ ಗೋಪನೀಯ ರಹಸ್ಯಾತ್ಮಕ ಪುರಾಣವಾಗಿದೆ. ಇದು ಭಗವತ್ಸ್ವರೂಪದ ಅನುಭವ ಮಾಡಿಸುವಂತಹುದು ಹಾಗೂ ಸಮಸ್ತ ವೇದಗಳ ಸಾರವಾಗಿದೆ. ಸಂಸಾರ ಚಕ್ರದಲ್ಲಿ ಸಿಕ್ಕಿಕೊಂಡು ಘೋರ ಅಜ್ಞಾ ನಾಂಧಕಾರದಿಂದ ದಾಟಿ ಹೋಗಲೂ ಬಯಸುವ ಜನರಿಗಾಗಿ ಇದು ಆಧ್ಯಾತ್ಮಿಕ ತತ್ತ್ವಗಳನ್ನು ಪ್ರಕಾಶಿಸುವ ಒಂದು ಅದ್ವಿತೀಯ ದೀಪವಾಗಿದೆ. ನಿಜವಾಗಿ ಅಂತಹವರ ಮೇಲೆ ಕರುಣೆತೋರಿ ದೊಡ್ಡ-ದೊಡ್ಡ ಮುನಿಗಳಿಗೂ, ಆಚಾರ್ಯರಾದ ಶ್ರೀಶುಕಮಹರ್ಷಿಗಳು ಇದನ್ನು ವರ್ಣಿಸಿರುವರು. ನಾನು ಅವರನ್ನು ಶರಣುಹೊಂದುತ್ತೇನೆ. ॥3॥

(ಶ್ಲೋಕ - 4)

ಮೂಲಮ್

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ ।
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ॥

ಅನುವಾದ

ಮನುಷ್ಯರಲ್ಲಿ ಸರ್ವಶ್ರೇಷ್ಠರಾದ ಭಗವದವತಾರಿಗಳಾದ ನರ-ನಾರಾಯಣ ಋಷಿಗಳನ್ನೂ, ಸರಸ್ವತೀ ದೇವಿಯನ್ನೂ, ಗುರುಗಳಾದ ವೇದವ್ಯಾಸರನ್ನೂ ನಮಸ್ಕರಿಸಿ ಅನಂತರ ಸಂಸಾರ ಮತ್ತು ಅಂತಃಕರಣದ ಸಮಸ್ತ ವಿಕಾರಗಳ ಮೇಲೆ ವಿಜಯ ಪಡೆಯುವಂತಹ ಶ್ರೀಮದ್ಭಾಗವತ ಮಹಾಪುರಾಣ ವನ್ನು ವಾಚನ ಮಾಡಬೇಕು. ॥4॥

(ಶ್ಲೋಕ - 5)

ಮೂಲಮ್

ಮುನಯಃ ಸಾಧು ಪೃಷ್ಟೋಹಂ ಭವದ್ಭಿರ್ಲೋಕಮಂಗಲಮ್ ।
ಯತ್ಕೃತಃ ಕೃಷ್ಣ ಸಂಪ್ರಶ್ನೋ ಯೇನಾತ್ಮಾ ಸುಪ್ರಸೀದತಿ ॥

ಅನುವಾದ

ಮಹರ್ಷಿಗಳೇ! ನೀವು ಸಮಸ್ತ ವಿಶ್ವದ ಮಂಗಳ ಕ್ಕಾಗಿಯೇ ಈ ಸುಂದರವಾದ ಪ್ರಶ್ನೆಯನ್ನು ಕೇಳಿರುವಿರಿ. ಏಕೆಂದರೆ, ನೀವು ಶ್ರೀಕೃಷ್ಣನ ವಿಷಯವಾಗಿ ಪ್ರಶ್ನಿಸಿರುವಿರಿ. ಇದರಿಂದ ಆತ್ಮ-ಮನೋಬುದ್ಧಿಗಳೆಲ್ಲವೂ ಪರಿಶುದ್ಧವಾಗಿ ಪ್ರಸನ್ನವಾಗುವುವು.॥5॥

(ಶ್ಲೋಕ - 6)

ಮೂಲಮ್

ಸ ವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿರಧೋಕ್ಷಜೇ ।
ಅಹೈತುಕ್ಯಪ್ರತಿಹತಾ ಯಯಾತ್ಮಾ ಸಂಪ್ರಸೀದತಿ ॥

ಅನುವಾದ

ಭಗವಾನ್ ಶ್ರೀಕೃಷ್ಣನಲ್ಲಿ ಭಕ್ತಿ ಉಂಟಾಗುವಂತಹ ಧರ್ಮವೇ ಮನುಷ್ಯರಿಗೆ ಸರ್ವಶ್ರೇಷ್ಠವಾಗಿದೆ. ನಿರ್ವ್ಯಾಜವೂ, ನಿತ್ಯನಿರಂತರವೂ ಆದ ದೃಢಭಕ್ತಿಯಿಂದಲೇ ಹೃದಯವು ಆನಂದಸ್ವರೂಪೀ ಪರಮಾತ್ಮನ ಪ್ರಾಪ್ತಿಮಾಡಿಕೊಂಡು ಕೃತಕೃತ್ಯವಾಗುತ್ತದೆ.॥6॥

(ಶ್ಲೋಕ - 7)

ಮೂಲಮ್

ವಾಸುದೇವೇ ಭಗವತಿ ಭಕ್ತಿಯೋಗಃ ಪ್ರಯೋಜಿತಃ ।
ಜನಯತ್ಯಾಶು ವೈರಾಗ್ಯಂ ಜ್ಞಾನಂ ಚ ಯದಹೈತುಕಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನಲ್ಲಿ ಭಕ್ತಿಯುಂಟಾಗುತ್ತಲೇ, ಅನನ್ಯ ಪ್ರೇಮದಿಂದ ಚಿತ್ತವು ಅದರಲ್ಲಿ ತೊಡಗಿದಾಗಲೇ ಭಗವತ್ಕೃಪೆಯಿಂದ ನಿಷ್ಕಾಮ ಜ್ಞಾನವೂ, ವೈರಾಗ್ಯವೂ ಆವಿರ್ಭವಿಸುತ್ತದೆ.॥7॥

(ಶ್ಲೋಕ - 8)

ಮೂಲಮ್

ಧರ್ಮಃ ಸ್ವನುಷ್ಠಿತಃ ಪುಂಸಾಂ ವಿಷ್ವಕ್ಸೇನಕಥಾಸು ಯಃ ।
ನೋತ್ಪಾದಯೇದ್ಯದಿ ರತಿಂ ಶ್ರಮ ಏವ ಹಿ ಕೇವಲಮ್ ॥

ಅನುವಾದ

ಧರ್ಮವನ್ನು ಸರಿಯಾಗಿ ಅನುಷ್ಠಾನ ಮಾಡಿದ ಮೇಲೆಯೂ ಮನುಷ್ಯನ ಹೃದಯದಲ್ಲಿ ಭಗವಂತನ ಲೀಲಾಕಥೆಗಳಲ್ಲಿ ಅನುರಾಗವು ಉದಯಿಸದಿದ್ದರೆ ಅದು ಧರ್ಮವೇ ಅಲ್ಲ. ಕೇವಲ ಶ್ರಮವಷ್ಟೇ.॥8॥

(ಶ್ಲೋಕ - 9)

ಮೂಲಮ್

ಧರ್ಮಸ್ಯ ಹ್ಯಾಪವರ್ಗ್ಯಸ್ಯ ನಾರ್ಥೋರ್ಥಾಯೋಪಕಲ್ಪತೇ ।
ನಾರ್ಥಸ್ಯ ಧರ್ಮೈಕಾಂತಸ್ಯ ಕಾಮೋ ಲಾಭಾಯ ಹಿ ಸ್ಮೃತಃ ॥

ಅನುವಾದ

ಕೆಲವು ಜನರು ತಮ್ಮ ಕಾಮನೆಯನ್ನೇ ಲಕ್ಷದಲ್ಲಿಟ್ಟುಕೊಂಡು ಧರ್ಮವನ್ನು ಆಚರಿಸುತ್ತಾರೆ; ಅದುಸರಿಯಾದುದಲ್ಲ. ಕಾರಣ, ನಿಷ್ಕಾಮಭಾವದಿಂದ ಭಗವತ್ ಪ್ರೀತ್ಯರ್ಥವಾಗಿ ಮಾಡಿದ ಧರ್ಮಾಚರಣೆಯೇ ಮೋಕ್ಷಪ್ರದವಾಗಿದೆ. ಹಾಗೆಯೇ ಇನ್ನೂ ಕೆಲವರು ತಮ್ಮ ಅರ್ಥ(ಧನ)ವನ್ನು ತಮ್ಮ ಕಾಮನೆಯ ಪೂರ್ತಿಗಾಗಿ ವ್ಯಯಿಸುತ್ತಾರೆ; ಅದೂ ಸರಿಯಲ್ಲ. ಅದನ್ನು ಲೋಕಕಲ್ಯಾಣಕ್ಕಾಗಿ ಅರ್ಥಾತ್ ಇತರ ಜನರ ಸೇವೆಯಲ್ಲಿ ಭಗವತ್ ಪ್ರೀತ್ಯರ್ಥ ಸದ್ವಿನಿಯೋಗ ಮಾಡಿದರೆ ಅದೇ ಧನವು ಮೋಕ್ಷಪ್ರದವಾಗುವುದು. ಆದ್ದರಿಂದ ಧರ್ಮಾನುಷ್ಠಾನವನ್ನು ಭಗವತ್ ಪ್ರೀತ್ಯರ್ಥವಾಗಿ ಆಚರಿಸಿ, ದ್ರವ್ಯವನ್ನು ಸತ್ಕಾರ್ಯಗಳಲ್ಲಿ, ಜನತಾ-ಜನಾರ್ದನನ ಸೇವೆಯಲ್ಲಿ ತೊಡಗಿಸಬೇಕು.॥9॥

(ಶ್ಲೋಕ - 10)

ಮೂಲಮ್

ಕಾಮಸ್ಯ ನೇಂದ್ರಿಯಪ್ರೀತಿರ್ಲಾಭೋ ಜೀವೇತ ಯಾವತಾ ।
ಜೀವಸ್ಯ ತತ್ತ್ವ ಜಿಜ್ಞಾಸಾ ನಾರ್ಥೋ ಯಶ್ಚೇಹ ಕರ್ಮಭಿಃ ॥

ಅನುವಾದ

ಭೋಗವಿಲಾಸದ ಫಲವು ಇಂದ್ರಿಯಗಳನ್ನು ತೃಪ್ತಪಡಿಸುವದಷ್ಟೇ ಅಲ್ಲ, ಕೇವಲ ಜೀವನ ನಿರ್ವಾಹವೇ ಅದರ ಪ್ರಯೋಜನ. ಜೀವನದ ಫಲವು ತತ್ತ್ವಜಿಜ್ಞಾಸೆಯೇ ಆಗಿದೆ. ಅನೇಕ ಕರ್ಮಗಳನ್ನಾಚರಿಸಿ ಸ್ವರ್ಗಾದಿಗಳನ್ನು ಪಡೆಯುವುದು ಜೀವನದ ಗುರಿಯಲ್ಲ.॥10॥

(ಶ್ಲೋಕ - 11)

ಮೂಲಮ್

ವದಂತಿ ತತ್ತತ್ತ್ವವಿದಸ್ತತ್ತ್ವಂ ಯಜ್ಜ್ಞಾನಮದ್ವಯಮ್ ।
ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ ॥

ಅನುವಾದ

ಜ್ಞಾತಾ, ಜ್ಞೇಯ ಇವುಗಳ ಭೇದರಹಿತವಾದ ಅಖಂಡ ಅದ್ವಿತೀಯ ಸಚ್ಚಿದಾನಂದ ಪರಬ್ರಹ್ಮಸ್ವರೂಪದ ಅದ್ವೈತ ಜ್ಞಾನವನ್ನೇ ಜ್ಞಾನವೆಂದು ತತ್ತ್ವಜ್ಞರು ಹೇಳುತ್ತಾರೆ. ಅದನ್ನೇ ಕೆಲವರು ಬ್ರಹ್ಮವೆಂದೂ, ಕೆಲವರು ಪರಮಾತ್ಮನೆಂದೂ, ಕೆಲವರು ಭಗವಂತನೆಂದೂ ಹೇಳುತ್ತಾರೆ.॥11॥

(ಶ್ಲೋಕ - 12)

ಮೂಲಮ್

ತಚ್ಛ್ರದ್ದಧಾನಾ ಮುನಯೋ ಜ್ಞಾನವೈರಾಗ್ಯಯುಕ್ತಯಾ ।
ಪಶ್ಯಂತ್ಯಾತ್ಮನಿ ಚಾತ್ಮಾನಂ ಭಕ್ತ್ಯಾ ಶ್ರುತಗೃಹೀತಯಾ ॥

ಅನುವಾದ

ಆ ಪರಮಾತ್ಮ ತತ್ತ್ವದಲ್ಲಿ ಶ್ರದ್ಧೆಯುಳ್ಳ ಮುನಿಗಳು ಭಾಗವತ-ಶ್ರವಣದಿಂದ ಪ್ರಾಪ್ತವಾದ ಜ್ಞಾನ-ವೈರಾಗ್ಯಯುಕ್ತ ಭಕ್ತಿಯ ಮೂಲಕ ತಮ್ಮ ಹೃದಯದಲ್ಲಿ ಆ ಪರಮಾತ್ಮನನ್ನು ಕಂಡುಕೊಳ್ಳುತ್ತಾರೆ.॥12॥

(ಶ್ಲೋಕ - 13)

ಮೂಲಮ್

ಅತಃ ಪುಂಭಿರ್ದ್ವಿಜಶ್ರೇಷ್ಠಾ ವರ್ಣಾಶ್ರಮವಿಭಾಗಶಃ ।
ಸ್ವನುಷ್ಠಿತಸ್ಯ ಧರ್ಮಸ್ಯ ಸಂಸಿದ್ಧಿರ್ಹರಿತೋಷಣಮ್ ॥

ಅನುವಾದ

ಶೌನಕಾದಿ ಋಷಿಗಳಿರಾ! ಆದ್ದರಿಂದ ತಮ್ಮ-ತಮ್ಮ ವರ್ಣಾಶ್ರಮಗಳನುಸಾರವಾಗಿ ಮನುಷ್ಯರು ಆಚರಿಸುವ ಧರ್ಮದ ಅನುಷ್ಠಾನದ ಪೂರ್ಣ ಸಿದ್ಧಿಯು ಭಗವಂತನು ಪ್ರಸನ್ನನಾಗುವುದರಲ್ಲೇ ಇದೆ.॥13॥

(ಶ್ಲೋಕ - 14)

ಮೂಲಮ್

ತಸ್ಮಾದೇಕೇನ ಮನಸಾ ಭಗವಾನ್ ಸಾತ್ವತಾಂ ಪತಿಃ ।
ಶ್ರೋತವ್ಯಃ ಕೀರ್ತಿತವ್ಯಶ್ಚ ಧ್ಯೇಯಃ ಪೂಜ್ಯಶ್ಚ ನಿತ್ಯದಾ ॥

ಅನುವಾದ

ಆದುದರಿಂದ ಏಕಾಗ್ರ ಮನಸ್ಸಿನಿಂದ ಭಕ್ತವತ್ಸಲನಾದ ಭಗವಂತನನ್ನೇ ನಿತ್ಯ-ನಿರಂತರ ಶ್ರವಣ, ಕೀರ್ತನ, ಮತ್ತು ಧ್ಯಾನದ ಮೂಲಕ ಆರಾಧಿಸಬೇಕು.॥14॥

(ಶ್ಲೋಕ - 15)

ಮೂಲಮ್

ಯದನುಧ್ಯಾಸಿನಾ ಯುಕ್ತಾಃ ಕರ್ಮಗ್ರಂಥಿನಿಬಂಧನಮ್ ।
ಛಿಂದಂತಿ ಕೋವಿದಾಸ್ತಸ್ಯ ಕೋ ನ ಕುರ್ಯಾತ್ಕಥಾರತಿಮ್ ॥

ಅನುವಾದ

ಕರ್ಮಗಳ ಕಗ್ಗಂಟು ಬಹಳ ಬಿಗಿಯಾದುದು. ಆದರೆ ವಿಚಾರವಂತ ಪುರುಷರು ಭಗವಂತನ ಧ್ಯಾನವೆಂಬ ಕತ್ತಿಯಿಂದ ಅದನ್ನು ಕತ್ತರಿಸಿ ಬಿಡುತ್ತಾರೆ. ಇಂತಹ ಭಗವಂತನ ಪುಣ್ಯಮಯ ಕಥೆಯಲ್ಲಿ ಜ್ಞಾನಿಗಳು ಪ್ರೇಮವಿರಿಸದೆ ಇರುವರೇ? ಅಂದರೆ, ಅವರು ನಿರಂತರ ಕಥಾಮೃತವನ್ನೇ ಪಾನ ಮಾಡುತ್ತಾ ಅದರಲ್ಲೇ ಮಗ್ನರಾಗಿರುತ್ತಾರೆ.॥15॥

(ಶ್ಲೋಕ - 16)

ಮೂಲಮ್

ಶುಶ್ರೂಷೋಃ ಶ್ರದ್ದಧಾನಸ್ಯ ವಾಸುದೇವಕಥಾರುಚಿಃ ।
ಸ್ಯಾನ್ಮಹತ್ಸೇವಯಾ ವಿಪ್ರಾಃ ಪುಣ್ಯತೀರ್ಥನಿಷೇವಣಾತ್ ॥

ಅನುವಾದ

ಶೌನಕಾದಿ ಮಹರ್ಷಿಗಳಿರಾ! ಪವಿತ್ರ ತೀರ್ಥಗಳ ಸೇವನೆಯಿಂದ ಮಹಾತ್ಮರ ಸೇವೆ ದೊರೆಯುತ್ತದೆ. ಮತ್ತೆ ಶ್ರವಣದ ಇಚ್ಛೆ, ಬಳಿಕ ಶ್ರದ್ಧೆ, ಅನಂತರ ವಾಸುದೇವನ ಕಥೆಯಲ್ಲಿ ರುಚಿ ಉಂಟಾಗುತ್ತದೆ.॥16॥

(ಶ್ಲೋಕ - 17)

ಮೂಲಮ್

ಶೃಣ್ವತಾಂ ಸ್ವಕಥಾಂ ಕೃಷ್ಣಃ ಪುಣ್ಯಶ್ರವಣಕೀರ್ತನಃ ।
ಹೃದ್ಯಂತಃಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ಸತಾಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನ ಕಥೆಗಳ ಶ್ರವಣ-ಕೀರ್ತನಗಳು ಅತ್ಯಂತ ಪುಣ್ಯಕರವಾದುವು. ಅವುಗಳನ್ನು ಕೇಳುವ ಸುಕೃತಿಗಳ ಹೃದಯದೊಳಗೆ ಸತ್ಪುರುಷರ ಸುಹೃತ್ತಾಗಿರುವ ಸ್ವಾಮಿಯು ಕುಳಿತು ಅವರ ಎಲ್ಲ ಅಶುಭಗಳನ್ನು ನಾಶಮಾಡಿಬಿಡುತ್ತಾನೆ.॥17॥

(ಶ್ಲೋಕ - 18)

ಮೂಲಮ್

ನಷ್ಟಪ್ರಾಯೇಷ್ವಭದ್ರೇಷು ನಿತ್ಯಂ ಭಗವದಾಶ್ರಯಾತ್ ।
ಭಗವತ್ಯುತ್ತಮಶ್ಲೋಕೇ ಭಕ್ತಿರ್ಭವತಿ ನೈಷ್ಠಿಕೀ ॥

ಅನುವಾದ

ಶ್ರೀಮದ್ಭಾಗವತವನ್ನು ಅಥವಾ ಭಗವದ್ಭಕ್ತರನ್ನು ನಿರಂತರ ಸೇವಿಸುವುದರಿಂದ ಅಶುಭಗಳೆಲ್ಲವೂ ನಾಶವಾದಾಗ ಪುಣ್ಯಕೀರ್ತಿಯಾದ ಶ್ರೀಕೃಷ್ಣಪರಮಾತ್ಮನಲ್ಲಿ ಸ್ಥಿರವಾದ ಭಕ್ತಿಯುಂಟಾಗುವುದು.॥18॥

(ಶ್ಲೋಕ - 19)

ಮೂಲಮ್

ತದಾ ರಜಸ್ತಮೋಭಾವಾಃ ಕಾಮಲೋಭಾದಯಶ್ಚ ಯೇ ।
ಚೇತ ಏತೈರನಾವಿದ್ಧಂ ಸ್ಥಿತಂ ಸತ್ತ್ವೇ ಪ್ರಸೀದತಿ ॥

ಅನುವಾದ

ಆಗ ರಜೋಗುಣ-ತಮೋಗುಣಗಳ ಭಾವಗಳಾದ ಕಾಮ, ಕ್ರೋಧ, ಲೋಭ ಮುಂತಾದ ಎಲ್ಲ ವಿಕಾರಗಳು ಕಳೆದುಕೊಂಡ ಚಿತ್ತವು ಸತ್ತ್ವ ಗುಣದಲ್ಲಿ ಸ್ಥಿತವಾಗಿ ನಿರ್ಮಲವಾಗುತ್ತದೆ.॥19॥

(ಶ್ಲೋಕ - 20)

ಮೂಲಮ್

ಏವಂ ಪ್ರಸನ್ನಮನಸೋ ಭಗವದ್ಭಕ್ತಿಯೋಗತಃ ।
ಭಗವತ್ತತ್ತ್ವ ವಿಜ್ಞಾನಂ ಮುಕ್ತಸಂಗಸ್ಯ ಜಾಯತೇ ॥

ಅನುವಾದ

ಹೀಗೆ ಭಗವಂತನ ಭಕ್ತಿಯೋಗದಿಂದ ಮನಸ್ಸು ಪ್ರಸನ್ನವಾಗಿ ನಿಸ್ಸಂಗನಾದವನಿಗೆ ಶ್ರೀಭಗವತ್ತತ್ತ್ವದ ಅನುಭವ ಜ್ಞಾನವು ತಾನಾಗಿಯೇ ಉಂಟಾಗುವುದು.॥20॥

(ಶ್ಲೋಕ - 21)

ಮೂಲಮ್

ಭಿದ್ಯತೇ ಹೃದಯಗ್ರಂಥಿಶ್ಛಿದ್ಯಂತೇ ಸರ್ವಸಂಶಯಾಃ ।
ಕ್ಷೀಯಂತೇ ಚಾಸ್ಯ ಕರ್ಮಾಣಿ ದೃಷ್ಟ ಏವಾತ್ಮನೀಶ್ವರೇ ॥

ಅನುವಾದ

ಆತ್ಮಸ್ವರೂಪೀ ಭಗವಂತನ ಸಾಕ್ಷಾತ್ಕಾರವಾಗುತ್ತಲೇ ಹೃದಯದ ಗಂಟು ಕತ್ತರಿಸಿ ಹೋಗುವುದು. ಎಲ್ಲ ಸಂಶಯಗಳೂ ಅಳಿದು ಹೋಗುತ್ತವೆ. ಅವನ ಕರ್ಮಬಂಧನಗಳೆಲ್ಲವೂ ನಶಿಸಿ ಹೋಗುವುವು.॥21॥

(ಶ್ಲೋಕ - 22)

ಮೂಲಮ್

ಅತೋ ವೈ ಕವಯೋ ನಿತ್ಯಂ ಭಕ್ತಿಂ ಪರಮಯಾ ಮುದಾ ।
ವಾಸುದೇವೇ ಭಗವತಿ ಕುರ್ವಂತ್ಯಾತ್ಮಪ್ರಸಾದನೀಮ್ ॥

ಅನುವಾದ

ಆದ್ದರಿಂದಲೇ ಬುದ್ಧಿವಂತರು ನಿತ್ಯ-ನಿರಂತರ ಬಹಳ ಆನಂದದಿಂದ ಭಗವಾನ್ ಶ್ರೀಕೃಷ್ಣನಲ್ಲಿ ಪ್ರೇಮಾಭಕ್ತಿಯನ್ನು ಆಚರಿಸುತ್ತಾ ಆಧ್ಯಾತ್ಮಿಕ ಪ್ರಸನ್ನತೆಯನ್ನು ಪಡೆದುಕೊಳ್ಳುತ್ತಾರೆ.॥22॥

(ಶ್ಲೋಕ - 23)

ಮೂಲಮ್

ಸತ್ತ್ವಂ ರಜಸ್ತಮ ಇತಿ ಪ್ರಕೃತೇರ್ಗುಣಾಸ್ತೈ-
ರ್ಯುಕ್ತಃ ಪರಃ ಪುರುಷ ಏಕ ಇಹಾಸ್ಯ ಧತ್ತೇ ।
ಸ್ಥಿತ್ಯಾದಯೇ ಹರಿವಿರಿಂಚಿಹರೇತಿ ಸಂಜ್ಞಾಃ
ಶ್ರೇಯಾಂಸಿ ತತ್ರ ಖಲು ಸತ್ತ್ವ ತನೋರ್ನೃಣಾಂ ಸ್ಯುಃ ॥

ಅನುವಾದ

ಸತ್ತ್ವ, ರಜ, ತಮ ಎಂಬ ಪ್ರಕೃತಿಯ ಮೂರು ಗುಣಗಳು. ಇವುಗಳನ್ನು ಸ್ವೀಕರಿಸಿ ಪರಮಪುರುಷನೊಬ್ಬನೇ ಈ ವಿಶ್ವದ ಸೃಷ್ಟಿ, ಸ್ಥಿತಿ, ಪ್ರಳಯ ಕಾರ್ಯಗಳನ್ನು ಮಾಡುವುದಕ್ಕಾಗಿ ಕ್ರಮವಾಗಿ ವಿಷ್ಣು, ಬ್ರಹ್ಮ ಮತ್ತು ರುದ್ರ ಎಂಬ ಹೆಸರುಗಳನ್ನು ಹೊಂದುತ್ತಾನೆ. ಆದರೂ ಅವುಗಳಲ್ಲಿ ಸತ್ತ್ವಗುಣವನ್ನು ಸ್ವೀಕರಿಸುವ ಶ್ರೀಹರಿಯಿಂದಲೇ ಮನುಷ್ಯರಿಗೆ ಪರಮ ಶ್ರೇಯಸ್ಸು ಉಂಟಾಗುವುದು.॥23॥

(ಶ್ಲೋಕ - 24)

ಮೂಲಮ್

ಪಾರ್ಥಿವಾದ್ದಾರುಣೋ ಧೂಮಸ್ತಸ್ಮಾದಗ್ನಿಸಯೀಮಯಃ ।
ತಮಸಸ್ತು ರಜಸ್ತಸ್ಮಾತ್ಸತ್ತ್ವಂ ಯದ್ಬ್ರಹ್ಮದರ್ಶನಮ್ ॥

ಅನುವಾದ

ಭೂಮಿಯ ವಿಕಾರವಾದ ಕಟ್ಟಿಗೆಗಿಂತಲೂ ಅದರಿಂದುಂಟಾದ ಹೊಗೆಯು ಶ್ರೇಷ್ಠ. ಅದಕ್ಕಿಂತಲೂ ಅಗ್ನಿಯು ಶ್ರೇಷ್ಠವಾದುದು. ಏಕೆಂದರೆ, ವೇದೋಕ್ತ ಯಜ್ಞ-ಯಾಗಾದಿಗಳ ಮೂಲಕ ಅಗ್ನಿಯು ಸದ್ಗತಿ ಕೊಡುವಂತಹುದು. ಹಾಗೆಯೇ ತಮೋಗುಣಕ್ಕಿಂತ ರಜೋಗುಣವು ಶ್ರೇಷ್ಠ. ರಜೋಗುಣಕ್ಕಿಂತಲೂ ಸತ್ತ್ವಗುಣವು ಶ್ರೇಷ್ಠವಾದುದು. ಏಕೆಂದರೆ ಅದು ಬ್ರಹ್ಮಸಾಕ್ಷಾತ್ಕಾರಕ್ಕೆ ಕಾರಣವಾಗುವುದು.॥24॥

(ಶ್ಲೋಕ - 25)

ಮೂಲಮ್

ಭೇಜಿರೇ ಮುನಯೋಥಾಗ್ರೇ ಭಗವಂತಮಧೋಕ್ಷಜಮ್ ।
ಸತ್ತ್ವಂ ವಿಶುದ್ಧಂ ಕ್ಷೇಮಾಯ ಕಲ್ಪಂತೇ ಯೇನು ತಾನಿಹ ॥

ಅನುವಾದ

ಪ್ರಾಚೀನಯುಗದಲ್ಲಿ ಮಹಾತ್ಮರು ತಮ್ಮ ಶ್ರೇಯಸ್ಸಿಗಾಗಿ ಶುದ್ಧಸತ್ತ್ವಮಯನಾದ ಭಗವಾನ್ ವಿಷ್ಣುವನ್ನು ಆರಾಧಿಸುತ್ತಿದ್ದರು. ಈಗಲೂ ಆ ಋಷಿಗಳನ್ನು ಹಿಂಬಾಲಿಸುವ ಜನರು ಅವರಂತೆಯೇ ಆತ್ಮಕಲ್ಯಾಣಕ್ಕೆ ಭಾಗಿಗಳಾಗುತ್ತಾರೆ.॥25॥

(ಶ್ಲೋಕ - 26)

ಮೂಲಮ್

ಮುಮುಕ್ಷವೋ ಘೋರರೂಪಾನ್ ಹಿತ್ವಾ ಭೂತಪತೀನಥ ।
ನಾರಾಯಣಕಲಾಃ ಶಾಂತಾ ಭಜಂತಿ ಹ್ಯನಸೂಯವಃ ॥

ಅನುವಾದ

ಈ ಸಂಸಾರ ಸಾಗರವನ್ನು ದಾಟಲು ಬಯಸುವವರು ಯಾರನ್ನು ನಿಂದಿಸದೆ, ಯಾರಲ್ಲಿಯೂ ದೋಷವನ್ನು ನೋಡದೆ ಘೋರರೂಪವುಳ್ಳ ತಮೋಗುಣೀ ರಜೋಗುಣೀ ಭೈರವಾದಿ ಭೂತಪತಿಗಳನ್ನು ಉಪಾಸನೆ ಮಾಡದೆ, ಸತ್ತ್ವಗುಣೀ ಭಗವಾನ್ ವಿಷ್ಣುವನ್ನು ಮತ್ತು ಅವನ ಅಂಶಕಲಾ ಸ್ವರೂಪಗಳನ್ನೇ ಭಜಿಸುತ್ತಾರೆ. ಅವರ ಚಿತ್ತವು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಾದಿಗಳಿಂದ ರಹಿತವಾಗಿ ಪರಮ ಶಾಂತಿಯನ್ನು ಪಡೆಯುತ್ತದೆ.॥26॥

(ಶ್ಲೋಕ - 27)

ಮೂಲಮ್

ರಜಸ್ತಮಃಪ್ರಕೃತಯಃ ಸಮಶೀಲಾ ಭಜಂತಿ ವೈ ।
ಪಿತೃಭೂತಪ್ರಜೇಶಾದೀನ್ ಶ್ರೀಯೈಶ್ವರ್ಯ ಪ್ರಜೇಪ್ಸವಃ ॥

ಅನುವಾದ

ಆದರೆ ರಜೋಗುಣೀ, ತಮೋಗುಣೀ ಸ್ವಭಾವವುಳ್ಳವರು ಧನ, ಐಶ್ವರ್ಯ, ಸಂತಾನದ ಕಾಮನೆಯಿಂದ ಭೂತಗಳು, ಪಿತೃಗಳು, ಪ್ರಜಾಪತಿಗಳು ಇವರನ್ನು ಉಪಾಸಿಸುತ್ತಾರೆ. ಏಕೆಂದರೆ, ಈ ಜನರ ಸ್ವಭಾವವೂ ಅವರಂತೇ(ಭೂತಾದಿ)ಇರುತ್ತದೆ.॥27॥

(ಶ್ಲೋಕ - 28)

ಮೂಲಮ್

ವಾಸುದೇವಪರಾ ವೇದಾ ವಾಸುದೇವಪರಾ ಮಖಾಃ ।
ವಾಸುದೇವಪರಾ ಯೋಗಾ ವಾಸುದೇವಪರಾಃ ಕ್ರಿಯಾಃ ॥

ಅನುವಾದ

ವೇದಗಳ ತಾತ್ಪರ್ಯ ವಾಸುದೇವ ಶ್ರೀ ಕೃಷ್ಣನೇ ಆಗಿದ್ದಾನೆ. ಯಜ್ಞಗಳ ಉದ್ದೇಶವೂ ಶ್ರೀಕೃಷ್ಣನೇ ಆಗಿದ್ದಾನೆ. ಯೋಗಗಳು ಶ್ರೀಕೃಷ್ಣನಿಗಾಗಿಯೇ ಮಾಡಲಾಗುತ್ತವೆ. ಸಮಸ್ತ ಕರ್ಮಗಳ ಪರಿಸಮಾಪ್ತಿಯು ವಾಸುದೇವ ಶ್ರೀಕೃಷ್ಣನಲ್ಲೇ ಇದೆ.॥28॥

(ಶ್ಲೋಕ - 29)

ಮೂಲಮ್

ವಾಸುದೇವಪರಂ ಜ್ಞಾನಂ ವಾಸುದೇವಪರಂ ತಪಃ ।
ವಾಸುದೇವಪರೋ ಧರ್ಮೋ ವಾಸುದೇವಪರಾ ಗತಿಃ ॥

ಅನುವಾದ

ಜ್ಞಾನದಿಂದ ವಾಸುದೇವ ಶ್ರೀಕೃಷ್ಣನ ಪ್ರಾಪ್ತಿಯೇ ಆಗುತ್ತದೆ. ತಪಸ್ಸು ಶ್ರೀಕೃಷ್ಣನ ಪ್ರಸನ್ನತೆಗಾಗಿಯೇ ಮಾಡಲಾಗುತ್ತದೆ. ಶ್ರೀಕೃಷ್ಣನಿಗಾಗಿಯೇ ಧರ್ಮಗಳ ಅನುಷ್ಠಾನ ನಡೆಯುತ್ತದೆ. ಎಲ್ಲ ಗತಿಗಳು ಶ್ರೀಕೃಷ್ಣನಲ್ಲೇ ಸೇರಿ ಹೋಗುವುವು.॥29॥

(ಶ್ಲೋಕ - 30)

ಮೂಲಮ್

ಸ ಏವೇದಂ ಸಸರ್ಜಾಗ್ರೇ ಭಗವಾನಾತ್ಮ ಮಾಯಯಾ ।
ಸದಸದ್ರೂಪಯಾ ಚಾಸೌ ಗುಣಮಯ್ಯಾಗುಣೋ ವಿಭುಃ ॥

ಅನುವಾದ

ತ್ರಿಗುಣಾತೀತನಾದ ಭಗವಾನ್ ಶ್ರೀಕೃಷ್ಣನೇ ಹಿಂದೆ ವ್ಯಕ್ತಾವ್ಯಕ್ತ ಸ್ವರೂಪವಾದ ತ್ರಿಗುಣಾತ್ಮಕವಾದ ತನ್ನ ಮಾಯೆಯಿಂದ ಈ ಜಗತ್ತನ್ನು ಸೃಷ್ಟಿ ಮಾಡಿದನು.॥30॥

(ಶ್ಲೋಕ - 31)

ಮೂಲಮ್

ತಯಾ ವಿಲಸಿತೇಷ್ವೇಷು ಗುಣೇಷು ಗುಣವಾನಿವ ।
ಅಂತಃಪ್ರವಿಷ್ಟ ಆಭಾತಿ ವಿಜ್ಞಾನೇನ ವಿಜೃಂಭಿತಃ ॥

ಅನುವಾದ

ತನ್ನ ಆ ಮಾಯಾ ಪ್ರಕೃತಿಯಿಂದ ವಿಕಾಸಗೊಂಡ ಈ ತ್ರಿಗುಣಗಳಲ್ಲಿ ಸೇರಿದ್ದರೂ ಅವನು ಗುಣಾತೀತನಾಗಿದ್ದು ಗುಣಯುಕ್ತನಾಗಿರುವಂತೆ ತೋರುತ್ತಾನೆ. ನಿಜವಾಗಿಯಾದರೋ ಅವನು ಪರಿಪೂರ್ಣ ವಿಜ್ಞಾನಾನಂದಘನನಾಗಿದ್ದಾನೆ.॥31॥

(ಶ್ಲೋಕ - 32)

ಮೂಲಮ್

ಯಥಾ ಹ್ಯವಹಿತೋ ವಹ್ನಿರ್ದಾರುಷ್ವೇಕಃ ಸ್ವಯೋನಿಷು ।
ನಾನೇವ ಭಾತಿ ವಿಶ್ವಾತ್ಮಾ ಭೂತೇಷು ಚ ತಥಾ ಪುಮಾನ್ ॥

ಅನುವಾದ

ಅಗ್ನಿಯಾದರೋ ವಸ್ತುತಃ ಒಂದೇ ಆಗಿದೆ; ಆದರೆ ಅದು ಅನೇಕ ರೀತಿಯ ಕಟ್ಟಿಗೆಗಳಲ್ಲಿರುವಾದಾಗ ಅನೇಕವಿರುವಂತೆ ತಿಳಿಯುತ್ತದೆ. ಹಾಗೆಯೇ ಎಲ್ಲ ಆತ್ಮರೂಪೀ ಭಗವಂತನಾದರೋ ಒಬ್ಬನೇ ಇದ್ದು, ಪ್ರಾಣಿಗಳ ಅನೇಕತೆಯಿಂದಾಗಿ ಅವುಗಳ ಅಂತರ್ಯಾಮಿಯಾಗಿರುವುದರಿಂದ ಅನೇಕದಂತೆ ಕಂಡು ಬರುತ್ತಾನೆ.॥32॥

(ಶ್ಲೋಕ - 33)

ಮೂಲಮ್

ಅಸೌ ಗುಣಮಯೈರ್ಭಾವೈರ್ಭೂತಸೂಕ್ಷ್ಮೇಂದ್ರಿಯಾತ್ಮಭಿಃ ।
ಸ್ವನಿರ್ಮಿತೇಷು ನಿರ್ವಿಷ್ಟೋ ಭುಂಕ್ತೇ ಭೂತೇಷು ತದ್ಗುಣಾನ್ ॥

ಅನುವಾದ

ಭಗವಂತನೇ ಸೂಕ್ಷ್ಮಭೂತ-ತನ್ಮಾತ್ರೆ, ಇಂದ್ರಿಯಗಳು ಮತ್ತು ಅಂತಃಕರಣ ಮುಂತಾದ ಗುಣಗಳ ವಿಕಾರಭೂತ ಭಾವಗಳ ಮೂಲಕ ನಾನಾ ಪ್ರಕಾರದ ಯೋನಿಗಳನ್ನು ನಿರ್ಮಿಸುತ್ತಾನೆ ಮತ್ತು ಅವುಗಳಲ್ಲಿ ಬೇರೆ-ಬೇರೆ ಜೀವಿಗಳ ರೂಪದಲ್ಲಿ ಪ್ರವೇಶಿಸಿ, ಆಯಾಯಾ ಯೋನಿಗಳನುರೂಪವಾಗಿ ವಿಷಯಗಳನ್ನು ಭೋಗಿಸುವಂತೆ ಕಾಣುತ್ತಾನೆ.॥33॥

(ಶ್ಲೋಕ - 34)

ಮೂಲಮ್

ಭಾವಯತ್ಯೇಷ ಸತ್ತ್ವೇನ ಲೋಕಾನ್ ವೈ ಲೋಕಭಾವನಃ ।
ಲೀಲಾವತಾರಾನುರತೋ ದೇವತಿರ್ಯಙ್ನರಾದಿಷು ॥

ಅನುವಾದ

ಅವನೇ ಸಮಸ್ತ ಲೋಕಗಳನ್ನು ರಚಿಸುತ್ತಾನೆ ಹಾಗೂ ದೇವತೆ, ಪಶು-ಪಕ್ಷಿ, ಮನುಷ್ಯಾದಿ ಯೋನಿಗಳಲ್ಲಿ ಲೀಲಾವತಾರವನ್ನು ಎತ್ತಿ ಸತ್ತ್ವಗುಣದ ಮೂಲಕ ಜೀವಿಗಳನ್ನು ಪಾಲಿಸಿ-ಪೋಷಿಸುತ್ತಾನೆ. (ಅವನ ಅವತಾರಧಾರಣದ ಲೀಲೆಗಳನ್ನು ಗಾಯನ, ಚಿಂತನೆ, ಸ್ಮರಣೆಮಾಡುತ್ತಾ ಜೀವನು ತದ್ರೂಪನಾಗುತ್ತಾನೆ. ತನ್ನ ಲಕ್ಷ್ಯವಾದ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ. ಇದು ಭಗವಂತನ ಪರಮಾನುಗ್ರಹವಾಗಿದೆ. ಭಗವಂತನ ಎಲ್ಲ ಲೀಲೆಗಳು ಲೋಕಕಲ್ಯಾಣಕ್ಕಾಗಿಯೇ ಇರುತ್ತವೆ.)॥34॥

ಅನುವಾದ (ಸಮಾಪ್ತಿಃ)

ಎರಡನೆಯ ಅಧ್ಯಾಯವು ಮುಗಿಯಿತು. ॥2॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಪ್ರಥಮಸ್ಕಂಧೇ ನೈಮಿಷೀಯೋಪಾಖ್ಯಾನೇ ದ್ವಿತೀಯೋಽಧ್ಯಾಯಃ ॥2॥