೦೦೦ ಸೂ ರಾಯಪರಬಲ ...{Loading}...
ಸೂ. ರಾಯಪರಬಲ ಮದನಹರ ರಿಪು
ರಾಯಕುರವರರು ಸಹಿತ ಪಾಂಡವ
ರಾಯಕಟಕವ ಕೊಂದನಶ್ವತ್ಥಾಮ ರಜನಿಯಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನಾ: ವಿರೋಧಿರಾಜಸೈನ್ಯಕ್ಕೆ ರುದ್ರನಂತಿರುವ ಅಶ್ವತ್ಥಾಮನು ಶತ್ರುರಾಜರಾದ ಪಾಂಡವರ ಮಕ್ಕಳ ಸಹಿತ ಪಾಂಡವರಾಯರ ಸೈನ್ಯವನ್ನು ರಾತ್ರಿಯಲ್ಲಿ ಕೊಂದ.
ಪದಾರ್ಥ (ಕ.ಗ.ಪ)
ಪರಬಲ-ಶತ್ರುಸೈನ್ಯ, ಮದನಹರ-ಕಾಮನನ್ನು ಕೊಂದವ, ಶಿವ, ಕಟಕ-ಸೈನ್ಯ, ರಜನಿ-ರಾತ್ರಿ.
ಮೂಲ ...{Loading}...
ಸೂ. ರಾಯಪರಬಲ ಮದನಹರ ರಿಪು
ರಾಯಕುರವರರು ಸಹಿತ ಪಾಂಡವ
ರಾಯಕಟಕವ ಕೊಂದನಶ್ವತ್ಥಾಮ ರಜನಿಯಲಿ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಚಿತ್ತದ ಚಟುಳ ಪಣದ ಚ
ಡಾಳತನವನು ಸಂಗರದೊಳುದ್ದಾಮ ಸತ್ವದಲಿ
ಪಾಳೆಯವ ಸಾರಿದರು ವಿಟಪಲ
ತಾಳಿವಿಶ್ರಮ ತಿಮಿರಗಹನವಿ
ಶಾಲ ವಟಕುಜವಿರಲು ಕಂಡರು ನಿಲಿಸಿದರು ರಥವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೃತರಾಷ್ಟ್ರರಾಜನೇ, ಪ್ರತಿಜ್ಞೆಯನ್ನು ಬೇಗ ಪೂರೈಸುವ ಆತುರದಿಂದ ಹೊರಟ ನಿನ್ನ ವೀರರ ಆಲೋಚನೆಯನ್ನು ಮತ್ತು ಅವರ ಶೌರ್ಯದ ಪರಿಯನ್ನು ಕೇಳು. ಇವರು (ಕೃಪಾಶ್ವತ್ಥಾಮ ಕೃತವರ್ಮರು) ಪಾಂಡವರ ಪಾಳೆಯವನ್ನು ಸಮೀಪಿಸಿದರು. ಆ ಕತ್ತಲಿನಲ್ಲಿ ಕೊಂಬೆಗಳು ಮತ್ತು ಬಳ್ಳಿಗಳಿಂದ ತುಂಬಿದ್ದ ವಿಶಾಲವಾದ ಆಲದ ಮರವನ್ನು ಕಂಡು ರಥವನ್ನು ನಿಲ್ಲಿಸಿದರು.
ಪದಾರ್ಥ (ಕ.ಗ.ಪ)
ಚಟುಳ-ಚುರುಕು, ವೇಗ, ಪಣದ-ಪ್ರತಿಜ್ಞೆಯ, ಚಡಾಳ-ಹೆಚ್ಚಳ, ಉದ್ದಾಮ-ಹೆಚ್ಚಿದ, ಸತ್ವ-ಶೌರ್ಯ, ವಿಟಪ-ಮರದಕೊಂಬೆ, ಲತಾಳಿ-ಬಳ್ಳಿಗಳ ಸಮೂಹ, ವಿಶ್ರಮ-ಶ್ರಮವನ್ನು ನೀಗಲು, ತಿಮಿರ-ಕತ್ತಲು, ಗಹನ-ಹೆಚ್ಚಾದ, ತೀವ್ರವಾದ, ವಟಕುಜ-ಆಲದಮರ.
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಚಿತ್ತದ ಚಟುಳ ಪಣದ ಚ
ಡಾಳತನವನು ಸಂಗರದೊಳುದ್ದಾಮ ಸತ್ವದಲಿ
ಪಾಳೆಯವ ಸಾರಿದರು ವಿಟಪಲ
ತಾಳಿವಿಶ್ರಮ ತಿಮಿರಗಹನವಿ
ಶಾಲ ವಟಕುಜವಿರಲು ಕಂಡರು ನಿಲಿಸಿದರು ರಥವ ॥1॥
೦೦೨ ನಿಲುವೆವಿಲ್ಲಿ ...{Loading}...
ನಿಲುವೆವಿಲ್ಲಿ ವಿರೋಧಿಸಂತತಿ
ಯುಲುಹನಾಲಿಸಬಹುದು ಕೋಟಾ
ವಳಯವಿದೆ ಹತ್ತಿರೆಯೆನುತ ಗುರುಸೂನು ರಥವಿಳಿಯೆ
ಇಳಿದರಿಬ್ಬರು ಸೂತರಿಗೆ ಕೈ
ಕೊಳಿಸಿದರು ಕುದುರೆಗಳನಾ ಕಲು
ನೆಲದೊಳೊರಗಿದರವರು ಸಮರಶ್ರಮದ ಭಾರದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಲ್ಲಿ ನಿಲ್ಲೋಣ. ಶತ್ರುಗಳ ಗುಂಪಿನ ಶಬ್ದವನ್ನು ಕೇಳಿಸಿಕೊಳ್ಳಬಹುದು. ಪಾಳೆಯದ ಕೋಟೆಗಳು ಹತ್ತಿರವೇ ಇವೆ - ಎನ್ನುತ್ತಾ ಅಶ್ವತ್ಥಾಮ ರಥದಿಂದ ಇಳಿಯಲು, ಕೃಪ, ಕೃತವರ್ಮರಿಬ್ಬರೂ ರಥದಿಂದ ಇಳಿದು ಕುದುರೆಗಳನ್ನು ಸೂತರ ವಶಕ್ಕೆ ಕೊಟ್ಟರು ಯುದ್ಧದ ಶ್ರಮದಿಂದಾದ ಆಯಾಸದಿಂದಾಗಿ ಅವರು ಕಲ್ಲುನೆಲದ ಮೇಲೆಯೇ ಮಲಗಿದರು.
ಪದಾರ್ಥ (ಕ.ಗ.ಪ)
ವಿರೋಧಿಸಂತತಿ-ಶತ್ರುಗಳ ಬಳಗ, ಉಲುಹು-ಶಬ್ದ, ಕೋಟಾವಳಿ-ಕೋಟೆಗಳಸಾಲು (ಕೋಟ-ಗೋಡೆ) ಸಮರಶ್ರಮದ ಭಾರ-ಯುದ್ಧದಿಂದಾದ ಆಯಾಸ, ಕೈಕೊಳಿಸು-ಹಸ್ತಾಂತರಿಸು, ವಶಕ್ಕೆಕೊಡು, ಒರಗು-ಮಲಗು.
ಮೂಲ ...{Loading}...
ನಿಲುವೆವಿಲ್ಲಿ ವಿರೋಧಿಸಂತತಿ
ಯುಲುಹನಾಲಿಸಬಹುದು ಕೋಟಾ
ವಳಯವಿದೆ ಹತ್ತಿರೆಯೆನುತ ಗುರುಸೂನು ರಥವಿಳಿಯೆ
ಇಳಿದರಿಬ್ಬರು ಸೂತರಿಗೆ ಕೈ
ಕೊಳಿಸಿದರು ಕುದುರೆಗಳನಾ ಕಲು
ನೆಲದೊಳೊರಗಿದರವರು ಸಮರಶ್ರಮದ ಭಾರದಲಿ ॥2॥
೦೦೩ ಒಳಗೆ ತೊಳಲಿಕೆಯುಕ್ಕಡಕೆ ...{Loading}...
ಒಳಗೆ ತೊಳಲಿಕೆಯುಕ್ಕಡಕೆ ಕಳ
ವಳಿಸಿ ಹಾಯಿದರೊಮ್ಮೆ ಮತ್ತಂ
ತೆಲೆಮಿಡುಕದಾಲಿಸಿ ನಿಧಾನಿಸಿ ಸಾರಿದರು ಮರನ
ಬಳಲಿಕೆಯ ಬೇಸರಿನೊಳಾ ಕೃಪ
ಮಲಗಿದನು ಕೃತವರ್ಮನೊಲೆದಾ
ಗುಳಿಸಿ ತೂಕಡಿಸಿದನು ತೆಗೆದುದು ನಿದ್ರೆ ತನುಮನವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಮನಸ್ಸು ಹೊಯ್ದಾಡುತ್ತಿತ್ತು. ಕಳವಳಗೊಂಡು ಪಾಳೆಯದ ಪಹರೆಯ ಸ್ಥಳಕ್ಕೆ ಮುಂದೆ ನುಗ್ಗಿ ಹೋದರು. ಪುನಃ ನಿಶ್ಶಬ್ಧವಾಗಿ ಆಲಿಸುತ್ತಾ ಆಲೋಚಿಸಿ, ಮರದ ಸಮೀಪಕ್ಕೆ ಹೋದರು. ಆಯಾಸದಿಂದಾದ ಬೇಸರಿಕೆಯಿಂದ ಆ ಕೃಪಾಚಾರ್ಯ ಮಲಗಿದ. ಕೃತವರ್ಮ ತಲೆಯನ್ನು ತೂಗುತ್ತಾ ಆಕಳಿಸಿ ತೂಕಡಿಸಿದನು. ನಿದ್ರೆಯು ಅವರ ದೇಹ ಮನಸ್ಸುಗಳನ್ನು ಆಕ್ರಮಿಸಿತು.
ಪದಾರ್ಥ (ಕ.ಗ.ಪ)
ತೊಳಲಿಕೆ-ಆಯಾಸ, ಉಕ್ಕಡಕೆ-ಪಹರೆಯ ನೆಲೆಗೆ, ಹಾಯಿದರು-ಮುನ್ನಗ್ಗಿದ್ದರು, ಎಲೆಮಿಡುಕದೆ-ನಿಶ್ಶಬ್ದವಾಗಿ, ನಿಧಾನಿಸು-ಆಲೋಚಿಸು, ಸಾವಧಾನವಾಗಿರು, ಸಾರು-ಸಮೀಪಿಸು, ಒಲೆದು-ತೂಗಿ, ತಲೆದೂಗಿ, ಆಗುಳಿಸಿ-ಆಕಳಿಸಿ, ತೆಗೆದುದು-ಆವರಿಸಿತು, ಆಕ್ರಮಿಸಿತು.
ಮೂಲ ...{Loading}...
ಒಳಗೆ ತೊಳಲಿಕೆಯುಕ್ಕಡಕೆ ಕಳ
ವಳಿಸಿ ಹಾಯಿದರೊಮ್ಮೆ ಮತ್ತಂ
ತೆಲೆಮಿಡುಕದಾಲಿಸಿ ನಿಧಾನಿಸಿ ಸಾರಿದರು ಮರನ
ಬಳಲಿಕೆಯ ಬೇಸರಿನೊಳಾ ಕೃಪ
ಮಲಗಿದನು ಕೃತವರ್ಮನೊಲೆದಾ
ಗುಳಿಸಿ ತೂಕಡಿಸಿದನು ತೆಗೆದುದು ನಿದ್ರೆ ತನುಮನವ ॥3॥
೦೦೪ ಕುಸಿದು ಜೊಮ್ಮಿನ ...{Loading}...
ಕುಸಿದು ಜೊಮ್ಮಿನ ಜಾಡ್ಯದಲಿ ಝೊಂ
ಪಿಸಿದರಿಬ್ಬರು ರಾಯಗರುಡಿಯ
ಜಸದ ರಹಿಯಲಿ ಸ್ವಾಮಿಕಾರ್ಯದ ಹೊತ್ತಹೊರಿಗೆಯಲಿ
ಉಸುರು ಮಿಡುಕದೆ ನಿದ್ರೆ ನೆನಹಿನ
ಮುಸುಕನುಗಿಯದೆಯಿಷ್ಟಸಿದ್ಧಿಯ
ವಿಷಮ ಸಮಸಂಧಿಗಳ ಸರಿವಿನೊಳಿರ್ದನಾ ದ್ರೌಣಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೂಕಡಿಕೆಯ ಆಲಸ್ಯದಿಂದ ಕೃಪಕೃತವರ್ಮರಿಬ್ಬರೂ ಕುಸಿದರು. ರಾಜರ ಗರಡಿಯ ಆಚಾರ್ಯತ್ವದ ಯಶಸ್ಸಿನ ಸಡಗರದಿಂದ , ಸ್ವಾಮಿಕಾರ್ಯವನ್ನು ಸಾಧಿಸುವ ಹೊಣೆಗಾರಿಕೆಯಿಂದಾಗಿ, ಮೆಲ್ಲಗೆ ಉಸಿರಾಡುತ್ತಿದ್ದ, ನಿದ್ರೆಯು ಬಾರದಂತೆ ತಡೆಯುತ್ತಿದ್ದ ಅಶ್ವತ್ಥಾಮನು, ತನ್ನ ಇಷ್ಟಾರ್ಥವು ನೆರವೇರುವುದೋ ಇಲ್ಲವೋ ಎಂಬ ಹೊಯ್ದಾಟದ ಮನಸ್ಥಿತಿಯಲ್ಲಿದ್ದ.
ಪದಾರ್ಥ (ಕ.ಗ.ಪ)
ಜೊಮ್ಮು-ತೂಕಡಿಕೆ, ಝೊಂಪಿಸು-ಮೈಮರೆ, ರಾಯಗರುಡಿಯ-ರಾಜನಗರುಡಿಯ (ರಾಜಕಾರ್ಯದ?) ಜಸ-ಯಶಸ್ಸು, ರಹಿ-ಸಡಗರ, ಸಂಭ್ರಮ , ಹೊರಿಗೆ-ಹೊಣೆ, ಉಗಿ-ಕೀಳು, ಸೆಳೆ, ವಿಷಮ-ವಿರೋಧ, ಸಮ-ಹೊಂದಿಕೆ ಸರಿವು-ಸರುವು-ಮೃಗಗಳು ಓಡಾಡುವ ಜಾಗ, ಸಣ್ಣದಾದ ಕಿಂಡಿ.
ಪಾಠಾನ್ತರ (ಕ.ಗ.ಪ)
ಜಹಿ - ರಹಿ
ಶಲ್ಯಗದಾಪರ್ವ, ಮೈ.ವಿ.ವಿ.
ಮೂಲ ...{Loading}...
ಕುಸಿದು ಜೊಮ್ಮಿನ ಜಾಡ್ಯದಲಿ ಝೊಂ
ಪಿಸಿದರಿಬ್ಬರು ರಾಯಗರುಡಿಯ
ಜಸದ ರಹಿಯಲಿ ಸ್ವಾಮಿಕಾರ್ಯದ ಹೊತ್ತಹೊರಿಗೆಯಲಿ
ಉಸುರು ಮಿಡುಕದೆ ನಿದ್ರೆ ನೆನಹಿನ
ಮುಸುಕನುಗಿಯದೆಯಿಷ್ಟಸಿದ್ಧಿಯ
ವಿಷಮ ಸಮಸಂಧಿಗಳ ಸರಿವಿನೊಳಿರ್ದನಾ ದ್ರೌಣಿ ॥4॥
೦೦೫ ಭಾಗ ಬೀತುದು ...{Loading}...
ಭಾಗ ಬೀತುದು ರಜನಿಯಲಿ ಸರಿ
ಭಾಗವಿದ್ದುದು ಮೇಲೆ ತತ್ಕ್ಷಣ
ಗೂಗೆ ಬಂದುದದೊಂದು ವಟಕುಜದಗ್ರಭಾಗದಲಿ
ಕಾಗೆಗಳ ಗೂಡುಗಳ ಹೊಯ್ದು ವಿ
ಭಾಗಿಸಿತು ತುಂಡದಲಿ ಬಿದ್ದವು
ಕಾಗೆ ಸುಭಟನ ಸಮ್ಮುಖದಲಿ ಸಹಸ್ರಸಂಖ್ಯೆಯಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾತ್ರಿಯ ಒಂದು ಭಾಗ ಕಳೆದು ಮತ್ತೊಂದು ಸರಿಭಾಗವು ಬಾಕಿಯಿತ್ತು. ಆಲದ ಮರದ ತುದಿಯಲ್ಲಿ ಒಂದು ಗೂಬೆಯು ಬಂದಿತು. ಕಾಗೆಗಳ ಗೂಡುಗಳನ್ನು ಹೊಡೆದು ಕೊಕ್ಕಿನಿಂದ ತುಂಡು ಮಾಡಿತು. ಕಾಗೆಗಳು ಸಾವಿರಸಂಖ್ಯೆಯಲ್ಲಿ ವೀರಭಟನಾದ ಅಶ್ವತ್ಥಾಮನ ಮುಂದೆ ಬಿದ್ದುವು.
ಪದಾರ್ಥ (ಕ.ಗ.ಪ)
ಬೀತುದು-ಕಳೆಯಿತು, ರಜನಿ-ರಾತ್ರಿ, ವಟಕುಜ-ಆಲದಮರ, ವಿಭಾಗಿಸು-ತುಂಡು ಮಾಡು, ತುಂಡ-ಹಕ್ಕಿಯ ಕೊಕ್ಕು.
ಮೂಲ ...{Loading}...
ಭಾಗ ಬೀತುದು ರಜನಿಯಲಿ ಸರಿ
ಭಾಗವಿದ್ದುದು ಮೇಲೆ ತತ್ಕ್ಷಣ
ಗೂಗೆ ಬಂದುದದೊಂದು ವಟಕುಜದಗ್ರಭಾಗದಲಿ
ಕಾಗೆಗಳ ಗೂಡುಗಳ ಹೊಯ್ದು ವಿ
ಭಾಗಿಸಿತು ತುಂಡದಲಿ ಬಿದ್ದವು
ಕಾಗೆ ಸುಭಟನ ಸಮ್ಮುಖದಲಿ ಸಹಸ್ರಸಂಖ್ಯೆಯಲಿ ॥5॥
೦೦೬ ಇದು ಮದೀಯ ...{Loading}...
ಇದು ಮದೀಯ ಮನೋರಥದ ಸೌ
ಹೃದದವೊಲು ಸಂಕಲ್ಪಕಾರ್ಯಾ
ಭ್ಯುದಯ ಸೂಚಕವಾಯ್ತು ನಿದ್ರಾಮುದ್ರಿತೇಕ್ಷಣರ
ಪದವ ಹಿಡಿದಲ್ಲಾಡಿಸಿದಡೆ ಮೈ
ಬೆದರುತೇನೇನೆನುತ ನಿದ್ರಾ
ಮದವಿಘೂರ್ಣನವಡಗಿ ಕುಳ್ಳಿರ್ದರು ಮಹಾರಥರು ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ನನ್ನ ಮನಸ್ಸಿನ ಆಶಯಕ್ಕೆ ಸಮಾನವಾದ ಘಟನೆಯಂತೆ ನನ್ನ ಸಂಕಲ್ಪದ ಕಾರ್ಯದ ಅಭ್ಯುದಯದ ಸೂಚನೆಯಾಯಿತು ಎಂದುಕೊಂಡ ಅಶ್ವತ್ಥಾಮನು ನಿದ್ರೆಯಿಂದ ಮುದ್ರಿಸಿದಂತೆ ಇದ್ದ (ಬಿಗಿಯಾಗಿ ಮುಚ್ಚಿದ) ಕಣ್ಣುಗಳನ್ನುಳ್ಳ ಕೃಪ - ಕೃತವರ್ಮರ ಕಾಲುಗಳನ್ನು ಹಿಡಿದು ಅಲುಗಿಸಲು, ಗಾಬರಿಯಿಂದ ‘ಏನೇನು’ ಎನ್ನುತ್ತ, ನಿದ್ರೆಯ ಜಡತ್ವ ಮತ್ತು ಗೊರಕೆಯು ನಿಂತು ಆ ಇಬ್ಬರು ಮಹಾರಥರು ಎದ್ದು ಕುಳಿತರು.
ಪದಾರ್ಥ (ಕ.ಗ.ಪ)
ಮದೀಯ-ನನ್ನ, ಮನೋರಥ-ಮನಸ್ಸಿನ ಆಶೆ, ಅಭಿಲಾಷೆ, ಸಂಹೃದಯ-ಸಮಾನ ಹೃದಯ, ಸಮಾನ ಭಾವ, ಸಂಕಲ್ಪ ಕಾರ್ಯಾಭ್ಯುದಯ ಸೂಚಕ-ಅಂದುಕೊಂಡ ಕೆಲಸದಲ್ಲಿ ಸಫಲತೆಯ ನಿರೀಕ್ಷೆ, ನಿದ್ರಾಮುದ್ರಿತೇಕ್ಷಣರು-ನಿದ್ರೆಯಿಂದ ಬಿಗಿಯಾಗಿ ಕಣ್ಣು ಮುಚ್ಚಿದ್ದವರು, ನಿದ್ರಾಮದ-ನಿದ್ರೆಯಿಂದಾದ ಜಡತ್ವ, ವಿಘೂರ್ಣನ-ಜೋರಾದ ಶಬ್ದ -ಗೊರಕೆ.
ಮೂಲ ...{Loading}...
ಇದು ಮದೀಯ ಮನೋರಥದ ಸೌ
ಹೃದದವೊಲು ಸಂಕಲ್ಪಕಾರ್ಯಾ
ಭ್ಯುದಯ ಸೂಚಕವಾಯ್ತು ನಿದ್ರಾಮುದ್ರಿತೇಕ್ಷಣರ
ಪದವ ಹಿಡಿದಲ್ಲಾಡಿಸಿದಡೆ ಮೈ
ಬೆದರುತೇನೇನೆನುತ ನಿದ್ರಾ
ಮದವಿಘೂರ್ಣನವಡಗಿ ಕುಳ್ಳಿರ್ದರು ಮಹಾರಥರು ॥6॥
೦೦೭ ಏನು ಗುರುಸುತ ...{Loading}...
ಏನು ಗುರುಸುತ ಕಾರ್ಯದನುಸಂ
ಧಾನವೇನೆನೆ ವಾಯಸಂಗಳ
ನಾ ನಿಶಾಟನನಿರಿವುತದೆ ಗೂಡುಗಳಗಬ್ಬರಿಸಿ
ಈ ನಿದರುಶನದಿಂದ ಪಾಂಡವ
ಸೇನೆಯನು ಕಗ್ಗೊಲೆಯೊಳಗೆ ಕೊಲ
ಲೇನು ಹೊಲ್ಲೆಹ ಮಾವ ಎಂದನು ಗುರುಸುತನು ಕೃಪಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ಅಶ್ವತ್ಥಾಮ, ಮುಂದಿನ ಕೆಲಸದ ವ್ಯವಸ್ಥೆಯೇನು ಎನ್ನಲು, ಗೂಡುಗಳನ್ನು ಅಪ್ಪಳಿಸಿ (ಕಾಗೆಗಳನ್ನು ಆ ಗೂಬೆಯು) ಇರಿಯುತ್ತಿದೆ. ಈ ನಿದರ್ಶನದಿಂದ ಪಾಂಡವ ಸೈನ್ಯವನ್ನು ಕಗ್ಗೊಲೆ ಮಾಡಿದರೆ, ಅದು ನೀಚ ಕೆಲಸವೇನು ಮಾವ - ಎಂದು ಅಶ್ವತ್ಥಾಮ ಕೃಪನನ್ನು ಕೇಳಿದ.
ಪದಾರ್ಥ (ಕ.ಗ.ಪ)
ಅನುಸಂಧಾನ-ಕಾರ್ಯಸಾಧನೆಯ ಕ್ರಮ, ವಾಯಸ-ಕಾಗೆ, ನಿಶಾಟನ-ರಾತ್ರಿಯಲ್ಲಿ ಸಂಚರಿಸುವುದು (ಇಲ್ಲಿ ಗೂಬೆ) ಗಬ್ಬರಿಸಿ-ಅಪ್ಪಳಿಸಿ, ಕಗ್ಗೊಲೆ-ಭೀಕರವಾದ ಕೊಲೆ, ಹೊಲ್ಲೆಹ-ನೀಚತನ.
ಪಾಠಾನ್ತರ (ಕ.ಗ.ಪ)
- ‘ಗೂಡುಗಳನಬ್ಬರಿಸಿ’ ಎಂಬಲ್ಲಿ ‘ಅಬ್ಬರಿಸಿಕೊಂದಿತು’ ಎಂಬರ್ಥಬರುತ್ತದೆ’. ‘ಗೂಬೆ- ಅಬ್ಬರಿಸಿತು - ಎಂಬುದು ಸರಿಯಾದ ಅಭಿವ್ಯಕ್ತಿಯಲ್ಲ. ಅದು ಗೂಡುಗಳಗಬ್ಬರಿಸಿ’ ಎಂದಿರಬೇಕು ‘ಗಬ್ಬರಿಸು’ ಎಂದರೆ ‘ಮೇಲೆ ಬೀಳು’ ಅಪ್ಪಳಿಸು’ ಎಂಬರ್ಥಗಳಿದ್ದು, ಈ ಸಂದರ್ಭಕ್ಕೆ ಸರಿ ಹೊಂದುತ್ತದೆ. ಈ ಪಾಠವನ್ನು ಪ್ರೊ.ಎಂ.ವಿ.ಸೀತಾರಾಮಯ್ಯವನರು ಸಂಪಾದಿಸಿರುವ ಬಿ.ಎಂ.ಶ್ರೀ. ಪ್ರತಿಷ್ಠಾನವು ಪ್ರಕಟಿಸಿರುವ ‘ಕುಮಾರವ್ಯಾಸ ಭಾರತ ಸಂಗ್ರಹ’ದಿಂದ ಸ್ವೀಕರಿಸಿದೆ.
ಮೂಲ ...{Loading}...
ಏನು ಗುರುಸುತ ಕಾರ್ಯದನುಸಂ
ಧಾನವೇನೆನೆ ವಾಯಸಂಗಳ
ನಾ ನಿಶಾಟನನಿರಿವುತದೆ ಗೂಡುಗಳಗಬ್ಬರಿಸಿ
ಈ ನಿದರುಶನದಿಂದ ಪಾಂಡವ
ಸೇನೆಯನು ಕಗ್ಗೊಲೆಯೊಳಗೆ ಕೊಲ
ಲೇನು ಹೊಲ್ಲೆಹ ಮಾವ ಎಂದನು ಗುರುಸುತನು ಕೃಪಗೆ ॥7॥
೦೦೮ ಲೇಸಲೈ ಕೃತವರ್ಮ ...{Loading}...
ಲೇಸಲೈ ಕೃತವರ್ಮ ಬಳಿಕೇ
ನಾಸುರದ ಕಗ್ಗೊಲೆಗೆ ರಾಜಾ
ದೇಶದಲಿ ನಾವ್ ಬಂದೆವೀ ಪಾಂಡವರ ಪಾಳೆಯಕೆ
ಘಾಸಿಯಾಗರು ಪಾಂಡು ಸುತರಿಗೆ
ವಾಸುದೇವನ ಕಾಹು ಘನ ಕಾ
ಳಾಸ ತಪ್ಪಿದ ಬಳಿಕ ನಮಗಪಕೀರ್ತಿ ಬಹುದೆಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃತವರ್ಮ ಒಳ್ಳೆಯದಾಯಿತು! (ನಿಷೇಧಾರ್ಥದಲ್ಲಿ) ಬಳಿಕ ಭಯಂಕರವಾದ ಈ ಕಗ್ಗೊಲೆಗೆ ರಾಜಾದೇಶದಲ್ಲಿ ನಾವು ಈ ಪಾಂಡವರ ಪಾಳಯಕ್ಕೆ ಬಂದೆವೇ. ಅವರು ಘಾಸಿಗೊಳ್ಳುವುದಿಲ್ಲ. ಪಾಂಡವರಿಗೆ ಕೃಷ್ಣನ ರಕ್ಷಣೆ ದೊಡ್ಡದಾದುದು. ನಮ್ಮ ಈ ಕಾರ್ಯದ ಬಿಗಿ ತಪ್ಪಿದಮೇಲೆ ನಮಗೆ ಅಪಕೀರ್ತಿ ಬರುತ್ತದೆ - ಎಂದು ಕೃಪಾಚಾರ್ಯ ನುಡಿದ.
ಪದಾರ್ಥ (ಕ.ಗ.ಪ)
ಆಸುರದ-ಭಯಂಕರವಾದ , ಘಾಸಿ-ನೋವು, ಆಘಾತ, ಕಾಹು-ರಕ್ಷಣೆ, ಘನ-ದೊಡ್ಡದು, ಕಾಳಾಸ-ಬಿಗಿ, ಬೆಸುಗೆ.
ಮೂಲ ...{Loading}...
ಲೇಸಲೈ ಕೃತವರ್ಮ ಬಳಿಕೇ
ನಾಸುರದ ಕಗ್ಗೊಲೆಗೆ ರಾಜಾ
ದೇಶದಲಿ ನಾವ್ ಬಂದೆವೀ ಪಾಂಡವರ ಪಾಳೆಯಕೆ
ಘಾಸಿಯಾಗರು ಪಾಂಡು ಸುತರಿಗೆ
ವಾಸುದೇವನ ಕಾಹು ಘನ ಕಾ
ಳಾಸ ತಪ್ಪಿದ ಬಳಿಕ ನಮಗಪಕೀರ್ತಿ ಬಹುದೆಂದ ॥8॥
೦೦೯ ಕ್ರತುಹರನ ಸಮಜೋಳಿ ...{Loading}...
ಕ್ರತುಹರನ ಸಮಜೋಳಿ ಗಂಗಾ
ಸುತನ ಜಯಿಸಿದರವರ ತೂಕದ
ವಿತvಬಲರೈ ಭಾವನವರೊಗ್ಗಿದರು ದಿವಿಜರಲಿ
ಅತಿರಥರೊಳಗ್ಗಳೆಯ ರಾಧಾ
ಸುತ ಸುಯೋಧನ ಮಾದ್ರಪತಿಯೀ
ವ್ಯತಿಕರದೊಳೇನಾದರಿದು ಮುರಹರನ ಕೃತಿಯೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವನಿಗೆ ಸಮಾನರಾದ ಭೀಷ್ಮನನ್ನು ಪಾಂಡವರು ಗೆದ್ದರು. ಅವರ ತೂಕಕ್ಕೆ ಸಮನಾದ, ಶ್ರೇಷ್ಠರೂ ಬಲಶಾಲಿಗಳೂ ಆದ ನಮ್ಮ ಭಾವನವರು (ದ್ರೋಣ) ದೇವತೆಗಳೊಂದಿಗೆ ಸೇರಿಹೋದರು. ಅತಿರಥರಲ್ಲಿ ಶ್ರೇಷ್ಠರಾದ ರಾಧಾತನಯ, ಸುಯೋಧನ, ಮಾದ್ರಪತಿ ಈ ಯುದ್ಧದಲ್ಲಿ ಏನಾದರು? ಇದು ಕೃಷ್ಣನ ಕೆಲಸ ಎಂದು ಕೃಪಾಚಾರ್ಯ ಹೇಳಿದ.
ಪದಾರ್ಥ (ಕ.ಗ.ಪ)
ಕ್ರತುಹರ-ಯಾಗವನ್ನು ನಾಶಮಾಡಿದವನು, ಶಿವ (ದಕ್ಷನ ಯಜ್ಞವನ್ನು ಶಿವ ನಾಶಮಾಡಿದ) ಸಮಜೋಳಿ-ಸಮ ಜೋಡಿ,
ವಿತತ-ಶ್ರೇಷ್ಠರು,
ಒಗ್ಗಿದರು-ಸೇರಿದರು,
ದಿವಿಜ-ದೇವತೆ,
ಅತಿರಥ-ಟಿಪ್ಪಣಿಯನ್ನು ನೋಡಿ, ಅಗ್ಗಳೆಯ-ಶ್ರೇಷ್ಠನಾದ,
ರಾಧಾಸುತ-ಕರ್ಣ, ಮಾದ್ರಪತಿ-ಮಾದ್ರ ದೇಶದ ಒಡೆಯ ಶಲ್ಯ, ವ್ಯತಿಕರ-ವೃತ್ತಾಂತ (ಈ ಸಂದರ್ಭದಲ್ಲಿ ‘ಯುದ್ಧ’ ಎಂಬ ಅರ್ಥ)
ಟಿಪ್ಪನೀ (ಕ.ಗ.ಪ)
ಅತಿರಥ-ಒಬ್ಬನೇ ಅಸಂಖ್ಯಾತ ಸೈನಿಕರನ್ನು ಎದುರಿಸಿ ಹೊರಾಡ ಬಲ್ಲವನು
ಮಹಾರಥ-ಹತ್ತುಸಾವಿರ ಮಂದಿಯನ್ನು ಏಕಾಕಿಯಾಗಿ ಪ್ರತಿಭಟಿಸಬಲ್ಲವನು
ಅರ್ಧರಥ-ಐದು ಸಾವಿರ ಸೈನಿಕರನ್ನು ಪ್ರತಿಭಟಿಸುವ ಸಾಮಥ್ರ್ಯವುಳ್ಳವನು
ಸಮರಥ-ಅತಿರಥ, ಮಹಾರಥ, ಅರ್ಧರತರಿಗಿಂತ ಕೆಳದರ್ಜೆಯವನು. ಒಮ್ಮೊಗೆ ಒಬ್ಬನನ್ನಷ್ಟೇ ಎದುರಿಸಿ ಕಾದಬಲ್ಲವನು.
(ಪ್ರೊ. ಪಿ.ಸುಬ್ರಾಯಭಟ್ ಅವರ “ಗದಾಯುದ್ಧ ದರ್ಪಣಂ” ಗ್ರಂಥದ ತೃತೀಯಾಶ್ವಾಸಂ - 50ನೆಯ ಪದ್ಯದ ಟಿಪ್ಪಣಿಯಿಂದ)
ಮೂಲ ...{Loading}...
ಕ್ರತುಹರನ ಸಮಜೋಳಿ ಗಂಗಾ
ಸುತನ ಜಯಿಸಿದರವರ ತೂಕದ
ವಿತvಬಲರೈ ಭಾವನವರೊಗ್ಗಿದರು ದಿವಿಜರಲಿ
ಅತಿರಥರೊಳಗ್ಗಳೆಯ ರಾಧಾ
ಸುತ ಸುಯೋಧನ ಮಾದ್ರಪತಿಯೀ
ವ್ಯತಿಕರದೊಳೇನಾದರಿದು ಮುರಹರನ ಕೃತಿಯೆಂದ ॥9॥
೦೧೦ ಇರಿಸನಿಲ್ಲಿ ಮುರಾರಿ ...{Loading}...
ಇರಿಸನಿಲ್ಲಿ ಮುರಾರಿ ಕೌಂತೇ
ಯರನಿದೊಂದು ನಿಧಾನ ಮೇಣಿ
ಲ್ಲಿರಿಸಿದಡೆ ಕೊಲಲೀಯನಡ್ಡೈಸುವನು ಚಕ್ರದಲಿ
ಇರುಳು ಹಗಲಡವಿಯಲಿ ಮನೆಯಲಿ
ಶರಧಿಯಲಿ ಪರ್ವತದಲಗ್ನಿಯ
ಲಿರಲಿ ತನ್ನವರಲ್ಲಿ ಹರಿಗವಧಾನ ಬಲುಹೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಲ್ಲಿ ಪಾಂಡವರನ್ನು ಕೃಷ್ಣ ಇರಿಸಿರುವುದಿಲ್ಲ. ಇದೊಂದು ವಿಚಾರ. ಒಂದು ವೇಳೆ ಇಲ್ಲಿರಿಸಿದ್ದರೆ, ಅವರನ್ನು ಕೊಲ್ಲಲು ಬಿಡುವುದಿಲ್ಲ. ತನ್ನ ಚಕ್ರದಿಂದ ತಡೆಯುತ್ತಾನೆ. ಹಗಲು ರಾತ್ರಿಯಲ್ಲಿ, ಕಾಡಿನಲ್ಲಿ, ಮನೆಯಲ್ಲಿ, ಸಮುದ್ರದಲ್ಲಿ. ಪರ್ವತದಲ್ಲಿ, ಅಗ್ನಿಯಲ್ಲಿ, ಹೀಗೆ ಎಲ್ಲೇ ಇರಲಿ, ತನ್ನವರಲ್ಲಿ ಕೃಷ್ಣನಿಗಿರುವ ಎಚ್ಚರಿಕೆ ಹಿರಿದಾದುದು.
ಪದಾರ್ಥ (ಕ.ಗ.ಪ)
ನಿಧಾನ-ವಿಚಾರ, ಅಡ್ಡೈಸು-ತಡೆ, ಅಡ್ಡಿಪಡಿಸು, ಇರುಳು-ರಾತ್ರಿ, ಅಡವಿ-ಕಾಡು, ಶರಧಿ-ಸಮುದ್ರ, ಅವಧಾನ-ಎಚ್ಚರಿಕೆ, ಬಲುಹು-ಹೆಚ್ಚು.
ಮೂಲ ...{Loading}...
ಇರಿಸನಿಲ್ಲಿ ಮುರಾರಿ ಕೌಂತೇ
ಯರನಿದೊಂದು ನಿಧಾನ ಮೇಣಿ
ಲ್ಲಿರಿಸಿದಡೆ ಕೊಲಲೀಯನಡ್ಡೈಸುವನು ಚಕ್ರದಲಿ
ಇರುಳು ಹಗಲಡವಿಯಲಿ ಮನೆಯಲಿ
ಶರಧಿಯಲಿ ಪರ್ವತದಲಗ್ನಿಯ
ಲಿರಲಿ ತನ್ನವರಲ್ಲಿ ಹರಿಗವಧಾನ ಬಲುಹೆಂದ ॥10॥
೦೧೧ ಮರಹಿನಲಿ ಮುಡುಹುವುದು ...{Loading}...
ಮರಹಿನಲಿ ಮುಡುಹುವುದು ಧರ್ಮದ
ಹೊರಿಗೆಯಲ್ಲದು ನಿದ್ರೆಗೈದರ
ನಿರಿವುದೇನಿದು ಪಂಥವೇ ಪೌರಾಣಮಾರ್ಗದಲಿ
ಅರಿಯದಾರಂಭಿಸಿದೆವಿದರಲಿ
ಪರಿಸಮಾಪ್ತಿಯ ಕಂಡೆವಾದಡೆ
ನೆರೆ ಕೃತಾರ್ಥರು ವಿಘ್ನಶತವಡ್ಡೈಸದಿರವೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮರವೆಯಲ್ಲಿದ್ದಾಗ (ನಿದ್ರೆಯಲ್ಲಿದ್ದಾಗ) ಸಂಹಾರ ಮಾಡುವುದು ಧರ್ಮವಲ್ಲ. ನಿದ್ರೆ ಮಾಡಿದವರನ್ನು ಕೊಲ್ಲುವುದು ಪುರಾಣಮಾರ್ಗದಲ್ಲಿ ಹೇಳಿರುವ ಕ್ರಮವೇ? ತಿಳಿಯದೆ ಪ್ರಾರಂಭಿಸಿದ್ದೇವೆ. ಇದರಲ್ಲಿ ಮುಕ್ತಾಯವನ್ನು ಕಂಡುಕೊಂಡೆವಾದರೆ ನಾವು ವಿಶೇಷವಾಗಿ ಕೃತಾರ್ಥರಾಗುತ್ತೇವೆ. ನೂರಾರು ವಿಘ್ನಗಳು ಅಡ್ಡ ಬರದಿರುವುದಿಲ್ಲ - ಎಂದು ಕೃಪ ನುಡಿದ.
ಪದಾರ್ಥ (ಕ.ಗ.ಪ)
ಮರಹು-ಪ್ರಜ್ಞೆ ಇಲ್ಲದ್ದು, ನಿದ್ರೆಯಲ್ಲಿರುವುದು, ಮುಡುಹು-ಕೊಲ್ಲು, ಹೊರಿಗೆ-ಕೆಲಸ, ಜವಾಬ್ದಾರಿ, ಪಂಥ-ಮಾರ್ಗ, ವಿಘ್ನಶತ-ನೂರು ವಿಘ್ನಗಳು
ಮೂಲ ...{Loading}...
ಮರಹಿನಲಿ ಮುಡುಹುವುದು ಧರ್ಮದ
ಹೊರಿಗೆಯಲ್ಲದು ನಿದ್ರೆಗೈದರ
ನಿರಿವುದೇನಿದು ಪಂಥವೇ ಪೌರಾಣಮಾರ್ಗದಲಿ
ಅರಿಯದಾರಂಭಿಸಿದೆವಿದರಲಿ
ಪರಿಸಮಾಪ್ತಿಯ ಕಂಡೆವಾದಡೆ
ನೆರೆ ಕೃತಾರ್ಥರು ವಿಘ್ನಶತವಡ್ಡೈಸದಿರವೆಂದ ॥11॥
೦೧೨ ತಪ್ಪದಾಚಾರಿಯನ ನುಡಿ ...{Loading}...
ತಪ್ಪದಾಚಾರಿಯನ ನುಡಿ ಮೇ
ಲಪ್ಪುದನು ದೈವಾಭಿಯೋಗದೊ
ಳೊಪ್ಪವಿಡುವುದು ರಜನಿಯಲಿ ಕಳ್ಳೇರ ಕದನದಲಿ
ಒಪ್ಪದಿದು ಸೌಭಟ ವಿಧಾನಕೆ
ನೊಪ್ಪಿತಹುದಿದರಿಂದ ರಿಪುಗಳ
ತಪ್ಪಿಸುವನಸುರಾರಿಯೆಂದನು ನಗುತ ಕೃತವರ್ಮ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಪಾಚಾರ್ಯನ ಮಾತುಗಳು ತಪ್ಪುವುದಿಲ್ಲ. ರಾತ್ರಿಯಲ್ಲಿನ ಕಳ್ಳಯುದ್ಧದಲ್ಲಿ ಮುಂದೆ ಆಗುವುದನ್ನು ದೈವವು ಒತ್ತಾಯದಿಂದ ಸರಿಪಡಿಸುತ್ತದೆ. ಸುಭಟರಾದವರು ನಡೆದುಕೊಳ್ಳಬೇಕಾದ ರೀತಿಗೆ ಇದು ಸರಿಯಾದುದಲ್ಲ. ಇದರಿಂದ ಶತ್ರುಗಳಾದ ಪಾಂಡವರನ್ನು ಕೃಷ್ಣ ತಪ್ಪಿಸುತ್ತಾನೆ - ಎಂದು ಕೃತವರ್ಮ ನಗುತ್ತಾ ಹೇಳಿದ.
ಪದಾರ್ಥ (ಕ.ಗ.ಪ)
ಮೇಲಪ್ಪುದು-ಮುಂದೆ ಆಗುವುದು, ದೈವಾಭಿಯೋಗ-ದೈವದ ಒತ್ತಾಯ, ವಿಧಿಯ ಬಲವಂತ, ಒಪ್ಪವಿಡು-ಸರಿಪಡಿಸು, ರಜನಿ-ರಾತ್ರಿ, ಕಳ್ಳೇರು-ಕಳ್ಳಯುದ್ಧ, ಸೌಭಟ-ಸುಭಟ, ನೊಪ್ಪಿತ- ಹಗುರ, ಬೆಲೆಯಿಲ್ಲದ.
ಮೂಲ ...{Loading}...
ತಪ್ಪದಾಚಾರಿಯನ ನುಡಿ ಮೇ
ಲಪ್ಪುದನು ದೈವಾಭಿಯೋಗದೊ
ಳೊಪ್ಪವಿಡುವುದು ರಜನಿಯಲಿ ಕಳ್ಳೇರ ಕದನದಲಿ
ಒಪ್ಪದಿದು ಸೌಭಟ ವಿಧಾನಕೆ
ನೊಪ್ಪಿತಹುದಿದರಿಂದ ರಿಪುಗಳ
ತಪ್ಪಿಸುವನಸುರಾರಿಯೆಂದನು ನಗುತ ಕೃತವರ್ಮ ॥12॥
೦೧೩ ಆದಡಿರಿ ನೀವಿಬ್ಬರಿಲ್ಲಿ ...{Loading}...
ಆದಡಿರಿ ನೀವಿಬ್ಬರಿಲ್ಲಿ ವಿ
ವಾದ ನಿಮ್ಮೊಡನೇಕೆ ಜನಪರಿ
ವಾದ ಭಯವೆಮಗಿಲ್ಲ ಸಾರಥಿ ರಥವ ತಾಯೆನುತ
ಕೈದುಗಳ ಸಂವರಿಸಿ ರಥದಲಿ
ಹಾಯ್ದು ಹೊರವಡೆ ಭೋಜಕೃಪರನು
ವಾದರೆಮಗೇನೆನುತ ಬಂದರು ಪಾಳೆಯದ ಹೊರಗೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗಾದರೆ ನೀವಿಬ್ಬರೂ ಇಲ್ಲಿಯೇ ಇರಿ. ನಮಗೆ ವಿವಾದವೇಕೆ. ಜನರ ವಾದವಿವಾದಗಳ ಭಯ ನಮಗಿಲ್ಲ. ಸಾರಥಿ, ರಥವ ಕೊಂಡು ಬಾ - ಎನ್ನುತ್ತಾ ಅಶ್ವತ್ಥಾಮನು ಆಯುಧಗಳನ್ನು ರಥದಲ್ಲಿ ಓರಣವಾಗಿಟ್ಟು ವೇಗದಿಂದ ಹೊರಡಲು, ಕೃತವರ್ಮ ಮತ್ತು ಕೃಪರು ನಾವೂ ಸಿದ್ಧವಾದರೆ ತಪ್ಪೇನು? - ಎನ್ನುತ್ತಾ ಪಾಂಡವರ ಪಾಳೆಯದ ಸಮೀಪಕ್ಕೆ ಬಂದರು.
ಪದಾರ್ಥ (ಕ.ಗ.ಪ)
ಜನಪರಿವಾದ-ಜನವಾದಿಸುವ ವಿಚಾರ, ಕೈದು-ಆಯುಧ, ಸಂವರಿಸು-ಸೇರಿಸು, ಓರಣವಾಗಿಡು
ಪಾಠಾನ್ತರ (ಕ.ಗ.ಪ)
ಭೋಜಕೃಪರನುವಾದಡೆಮಗೇನೆನುತ -> ಭೋಜಕೃಪರನುವಾದರೆಮಗೇನೆನುತ
ಮೂಲ ...{Loading}...
ಆದಡಿರಿ ನೀವಿಬ್ಬರಿಲ್ಲಿ ವಿ
ವಾದ ನಿಮ್ಮೊಡನೇಕೆ ಜನಪರಿ
ವಾದ ಭಯವೆಮಗಿಲ್ಲ ಸಾರಥಿ ರಥವ ತಾಯೆನುತ
ಕೈದುಗಳ ಸಂವರಿಸಿ ರಥದಲಿ
ಹಾಯ್ದು ಹೊರವಡೆ ಭೋಜಕೃಪರನು
ವಾದರೆಮಗೇನೆನುತ ಬಂದರು ಪಾಳೆಯದ ಹೊರಗೆ ॥13॥
೦೧೪ ಮುರಿದು ಕೋಟೆಯನೊನ್ದು ...{Loading}...
ಮುರಿದು ಕೋಟೆಯನೊಂದು ಕಡೆಯಲಿ
ತೆರಹುಮಾಡಿ ಮಹಾರಥರು ಜನ
ವರಿಯದವೊಲೊಳಹೊಕ್ಕು ಹೆಬ್ಬಾಗಿಲಲಿ ರಥವಿಳಿದು
ತರವಳರ ತೊಳಲಿಕೆಯ ಮೇಲೆ
ಚ್ಚರಿಕೆ ಮಸುಳಿಸೆ ಮಧ್ಯರಾತ್ರಿಯೊ
ಳಿರಿತದಂಘವಣೆಯಲಿ ಪರುಠವಿಸಿದನು ಗುರುಸೂನು ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಭಾಗದಲ್ಲಿ ಕೋಟೆಯನ್ನು ಮುರಿದು ತೆರಹು ಮಾಡಿ ಈ ಮಹಾರಥರುಗಳು ಜನಕ್ಕೆ ತಿಳಿಯದಂತೆ ಒಳಕ್ಕೆ ಪ್ರವೇಶಿಸಿ ಹೆಬ್ಬಾಗಿಲಲ್ಲಿ ರಥದಿಂದಿಳಿದರು ಕಾವಲುಗಾರರು ಬಳಲಿಕೆಯಿಂದ ಮಲಗಿರಲು ಮಧ್ಯರಾತ್ರಿಯಲ್ಲಿ ಅಶ್ವತ್ಥಾಮನು ತನ್ನ ಇರಿತದ ಕೆಲಸದಲ್ಲಿ ತೊಡಗಿದ.
ಪದಾರ್ಥ (ಕ.ಗ.ಪ)
ತೆರಹು-ಜಾಗಬಿಡಿಸುವುದು, ತರವಳ-ತಳವರ, ತಳವಾರ, ಮಸುಳಿಸು-ಅಳಿಸು, ಮುಸುಕುಹಾಕು, ಅಂಘವಣೆ-ಕೆಲಸ, ಸಿದ್ಧತೆ, ಪರುಠವಿಸು-ತೊಡಗು.
ಟಿಪ್ಪನೀ (ಕ.ಗ.ಪ)
- ‘ತರವಳ’ ಎಂಬಲ್ಲಿ ಅಕ್ಷರಪಲ್ಲಟವಾಗಿದೆ ಪ್ರಾಸಸ್ಥಾನದಲ್ಲಿ ‘ರ’ಕಾರವಿರಬೇಕಾದುದರಿಂದ ಈ ಬದಲಾವಣೆ. ಕಾಗದ - ಕಾದಗ, ಅಗಸ-ಅಸಗ ಮುಂತಾದ ಉದಾಹರಣೆಗಳನ್ನು ಹೋಲಿಸಿಬಹುದು.
ಮೂಲ ...{Loading}...
ಮುರಿದು ಕೋಟೆಯನೊಂದು ಕಡೆಯಲಿ
ತೆರಹುಮಾಡಿ ಮಹಾರಥರು ಜನ
ವರಿಯದವೊಲೊಳಹೊಕ್ಕು ಹೆಬ್ಬಾಗಿಲಲಿ ರಥವಿಳಿದು
ತರವಳರ ತೊಳಲಿಕೆಯ ಮೇಲೆ
ಚ್ಚರಿಕೆ ಮಸುಳಿಸೆ ಮಧ್ಯರಾತ್ರಿಯೊ
ಳಿರಿತದಂಘವಣೆಯಲಿ ಪರುಠವಿಸಿದನು ಗುರುಸೂನು ॥14॥
೦೧೫ ಎರಡು ಬಾಗಿಲ ...{Loading}...
ಎರಡು ಬಾಗಿಲ ಪಾಳೆಯಕೆ ಕೃಪ
ನಿರಲಿ ಮೂಡಲು ಪಶ್ಚಿಮಾಂಗದೊ
ಳಿರಲಿ ಕೃತವರ್ಮಕನು ಬಾಗಿಲೊಳಾಂತ ರಿಪುಜನವ
ಕರಿ ತುರಗ ರಥ ಪತ್ತಿಗಳ ಸಂ
ಹರಿಸುವುದು ನೀವಿಲ್ಲಿ ಮಧ್ಯದೊ
ಳರಸು ಮೊತ್ತಕೆ ಮಿತ್ತು ತಾನಹೆನೆಂದು ಕೈಗೊಂಡ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಳೆಯದ ಎರಡು ಬಾಗಿಲುಗಳ ಪೈಕಿ ಪೂರ್ವದ ಬಾಗಿಲನ್ನು ಕಾಯಲು ಕೃಪಾಚಾರ್ಯನಿರಲಿ, ಪಶ್ಚಿಮದ ಬಾಗಿಲನ್ನು ಕಾಯಲು ಕೃತವರ್ಮನಿದ್ದು, ಬಾಗಿಲಿಗೆ ಬರುವ ಶತ್ರುಜನವನ್ನು ಆನೆ, ಕುದುರೆ, ರಥ, ಸೈನ್ಯಗಳನ್ನು ಸಂಹರಿಸುವುದು. ಅರಸುಗಳ ಸಮೂಹಕ್ಕೆ ನಾನು ಮೃತ್ಯುವಾಗುತ್ತೇನೆಂದು. ಅಶ್ವತ್ಥಾಮ ಕೆಲಸವನ್ನು ಪ್ರಾರಂಭಿಸಿದ.
ಪದಾರ್ಥ (ಕ.ಗ.ಪ)
ಮೂಡಲು-ಸೂರ್ಯಮೂಡುವ ದಿಕ್ಕು, ಪೂರ್ವದಿಕ್ಕು, ಆಂತ-ಎದುರು ಬಂದ, ಪತ್ತಿ-ಅಕ್ಷೋಹಿಣಿ ಸೈನ್ಯದ ಒಂದು ಭಾಗ, ಅರಸುಮೊತ್ತ-ರಾಜರ ಸಮೂಹ, ಮಿತ್ತು-ಮೃತ್ಯು (ಸಂ)
ಮೂಲ ...{Loading}...
ಎರಡು ಬಾಗಿಲ ಪಾಳೆಯಕೆ ಕೃಪ
ನಿರಲಿ ಮೂಡಲು ಪಶ್ಚಿಮಾಂಗದೊ
ಳಿರಲಿ ಕೃತವರ್ಮಕನು ಬಾಗಿಲೊಳಾಂತ ರಿಪುಜನವ
ಕರಿ ತುರಗ ರಥ ಪತ್ತಿಗಳ ಸಂ
ಹರಿಸುವುದು ನೀವಿಲ್ಲಿ ಮಧ್ಯದೊ
ಳರಸು ಮೊತ್ತಕೆ ಮಿತ್ತು ತಾನಹೆನೆಂದು ಕೈಗೊಂಡ ॥15॥
೦೧೬ ಎರಡು ಬಾಗಿಲೊಳಿವರನಿಬ್ಬರ ...{Loading}...
ಎರಡು ಬಾಗಿಲೊಳಿವರನಿಬ್ಬರ
ನಿರಿಸಿ ಚಾಪವ ಮಿಡಿದು ಬಾಣವ
ತಿರುಹುತೊಬ್ಬನೆ ರಥವ ಬಿಟ್ಟನು ರಾಜಬೀದಿಯಲಿ
ಅರಸ ಕೇಳದುಭುತವನಾ ನಡು
ವಿರುಳು ನೃಪವೀಥಿಯಲಿ ನಿಂದುದು
ಧರೆಗೆ ಗಗನಕೆ ಕೀಲನಿಕ್ಕಿದವೊಲು ಮಹಾಭೂತ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡು ಬಾಗಿಲಿನಲ್ಲಿ ಈ ಇಬ್ಬರನ್ನು ನಿಲ್ಲಿಸಿ, ಬಿಲ್ಲನ್ನು ಮಿಡಿದು, ಬಾಣವನ್ನು ತಿರುಹುತ್ತಾ ಒಬ್ಬನೇ ರಾಜಬೀದಿಯಲ್ಲಿ ರಥವನ್ನು ಬಿಟ್ಟುಕೊಂಡು ಬಂದನು. ಧೃತರಾಷ್ಟನೇ ಅದ್ಭುತವನ್ನು ಕೇಳು, ನಡುವಿರುಳು ರಾಜಬೀದಿಯಲ್ಲಿ ಭೂಮಿಗೂ ಆಕಾಶಕ್ಕೂ ಕೊಂಡಿಯನ್ನು ಹಾಕಿದಂತೆ ಒಂದು ಮಹಾಭೂತವು ನಿಂತಿತು.
ಪದಾರ್ಥ (ಕ.ಗ.ಪ)
ಚಾಪವಮಿಡಿದು-ಬಿಲ್ಲನ್ನು ಝೇಂಕರಿಸಿ, ಕೀಲನಿಕ್ಕು-ಒಂದು ಮಾಡಿ.
ಮೂಲ ...{Loading}...
ಎರಡು ಬಾಗಿಲೊಳಿವರನಿಬ್ಬರ
ನಿರಿಸಿ ಚಾಪವ ಮಿಡಿದು ಬಾಣವ
ತಿರುಹುತೊಬ್ಬನೆ ರಥವ ಬಿಟ್ಟನು ರಾಜಬೀದಿಯಲಿ
ಅರಸ ಕೇಳದುಭುತವನಾ ನಡು
ವಿರುಳು ನೃಪವೀಥಿಯಲಿ ನಿಂದುದು
ಧರೆಗೆ ಗಗನಕೆ ಕೀಲನಿಕ್ಕಿದವೊಲು ಮಹಾಭೂತ ॥16॥
೦೧೭ ನಿಟಿಲನಯನದ ಜಡಿವ ...{Loading}...
ನಿಟಿಲನಯನದ ಜಡಿವ ಜೂಟದ
ಜಟೆಯ ಫೂತ್ಕೃತಿಯುರಿಯ ನಾಸಾ
ಪುಟದ ವೈಕಕ್ಷಕದ ವಿಷಧರಪತಿಯ ವಾಸುಗಿಯ
ಚಟುಳ ಚಪಳಪ್ರಭೆಯ ಘನಸಂ
ಘಟಿತವೆನೆ ಗರ್ಗರದ ಘೋರ
ಸ್ಫುಟರವದ ರೌದ್ರಾಭಿರತಿಯಲಿ ರಂಜಿಸಿತು ಭೂತ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಫಾಲನೇತ್ರನ ರೌದ್ರತೆ, ತೂಗಾಡುವ ಜುಟ್ಟು, ಜಡೆಗಟ್ಟಿದ ಕೂದಲು, ಮೂಗಿನ ಹೊಳ್ಳೆಗಳಿಂದ ಫೂತ್ಕರಿಸಿ ಹೊರಬರುತ್ತಿರುವ ಉರಿ, ವಿಷಸರ್ಪದಂತಿರುವ ಜನಿವಾರ, ವಾಸುಕಿಯ ಅಪ್ರತಿಮ ಪ್ರಭೆ - ಇವೆಲ್ಲವುಗಳ ಸೇರ್ಪಡೆಯೋ ಎಂಬಂತೆ ಇದ್ದ ಭಯಂಕರವಾದ ಆ ಭೂತವು ಘೋರವಾದ ಶಬ್ದವನ್ನು ಮಾಡುತ್ತಾ ಅವನ ಎದುರಿನಲ್ಲಿ ನಿಂತಿತ್ತು.
ಪದಾರ್ಥ (ಕ.ಗ.ಪ)
ನಿಟಿಲ-ಹಣೆ, ನಯನ-ಕಣ್ಣು, ಜಡಿವ-ತೂಗುವ, ಬಾರಿಸುವ, ಜೂಟ-ಜುಟ್ಟು, ಜಟೆ-ಸಿಕ್ಕಾದ ಕೂದಲು, ಫೂತ್ಕೃತಿ-ಸರ್ಪವು ರೋಷದಿಂದ ಉಸಿರು ಬಿಡುವ ಶಬ್ದ, ನಾಸಾಪುಟ-ಮೂಗಿನ ಹೊಳ್ಳೆ, ವೈಕಕ್ಷಕ-ಜನಿವಾರ, ವಿಷಧರಪತಿ-ವಿಷವನ್ನುಳ್ಳ ಸರ್ಪಗಳ ರಾಜ, ಸರ್ಪರಾಜ, ವಾಸುಗಿ-ವಾಸುಕಿ, ಸರ್ಪರಾಜ, ಚಟುಳ-ಚುರುಕು, ಚಪಳ-ಚಂಚಲ, ಪ್ರಭೆ-ಕಾಂತಿ, ಘನ ಸಂಘಟಿತ-ದೊಡ್ಡ ಸೇರ್ಪಡೆ, ಗರ್ಗರ-ಗರಗರ ಶಬ್ದ, ಸ್ಫುಟರವ-ಸ್ಪಷ್ಟವಾದ ಶಬ್ದ, ರೌದ್ರಾಭಿರತಿ-ರೌದ್ರಭಾವ.
ಮೂಲ ...{Loading}...
ನಿಟಿಲನಯನದ ಜಡಿವ ಜೂಟದ
ಜಟೆಯ ಫೂತ್ಕೃತಿಯುರಿಯ ನಾಸಾ
ಪುಟದ ವೈಕಕ್ಷಕದ ವಿಷಧರಪತಿಯ ವಾಸುಗಿಯ
ಚಟುಳ ಚಪಳಪ್ರಭೆಯ ಘನಸಂ
ಘಟಿತವೆನೆ ಗರ್ಗರದ ಘೋರ
ಸ್ಫುಟರವದ ರೌದ್ರಾಭಿರತಿಯಲಿ ರಂಜಿಸಿತು ಭೂತ ॥17॥
೦೧೮ ಬೆಚ್ಚಿದನೆ ಭಾರಣೆಯ ...{Loading}...
ಬೆಚ್ಚಿದನೆ ಭಾರಣೆಯ ಭೂತವ
ನೆಚ್ಚು ಬೊಬ್ಬಿರಿದಾರಿದನು ಮಗು
ಳೆಚ್ಚನೈದಾರೇಳುನೂರೈನೂರು ಸಾವಿರವ
ಎಚ್ಚು ಹಾಯ್ದಂಬುಗಳು ಭೂತದ
ಬಿಚ್ಚುಗಂಗಳ ಕೊಂಡದುರಿಯಲಿ
ಬಚ್ಚಿಸಿದ ಗರಿ ಸೀದು ಸೀಕರಿಯೋಗಿ ನಿಮಿಷದಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂತಕ್ಕೆ ಹೆದರಲಿಲ್ಲ. ಭಯಂಕರವಾದ ಭೂತಕ್ಕೆ ಹೊಡೆದು ಬೊಬ್ಬರಿದು ಗರ್ಜಿಸಿದ. ಪುನಃ ಸಾವಿರಾರು ಸಂಖ್ಯೆಯಲ್ಲಿ ಹೊಡೆದ ಬಾಣಗಳು, ಬಾಣದ ಗರಿಗಳು ಅಗಲವಾಗಿ ತೆರೆದ ಕೊಂಡದ ಉರಿಯ ಕೊಂಡದಂತಿದ್ದ ಭೂತದ ಕಣ್ಣುಗಳಲ್ಲಿ ನಿಮಿಷದಲ್ಲಿ ಸೀದು ಕರಿಕಲಾದುವು.
ಪದಾರ್ಥ (ಕ.ಗ.ಪ)
ಬೆಚ್ಚು-ಬೆದರು, ಹೆದರು, ಭಾರಣೆ-ಭಯಂಕರವಾದ, ಹಿರಿದಾದ, ಬಿಚ್ಚುಗಂಗಳು-ಅಗಲವಾಗಿ ತೆರೆದಿರುವ ಕಣ್ಣುಗಳು, ಕೊಂಡ-ಬೆಂಕಿಯನ್ನು ಉರಿಸುವ ಗುಂಡಿ, ಕುಂಡ, ಬಚ್ಚಿಸು - ? ಸೀದು-ಉರಿಯಿಂದ ಕಪ್ಪಾಗಿ, ಸೀಕರಿ-ಕರಕಲಾಗುವುದು
ಮೂಲ ...{Loading}...
ಬೆಚ್ಚಿದನೆ ಭಾರಣೆಯ ಭೂತವ
ನೆಚ್ಚು ಬೊಬ್ಬಿರಿದಾರಿದನು ಮಗು
ಳೆಚ್ಚನೈದಾರೇಳುನೂರೈನೂರು ಸಾವಿರವ
ಎಚ್ಚು ಹಾಯ್ದಂಬುಗಳು ಭೂತದ
ಬಿಚ್ಚುಗಂಗಳ ಕೊಂಡದುರಿಯಲಿ
ಬಚ್ಚಿಸಿದ ಗರಿ ಸೀದು ಸೀಕರಿಯೋಗಿ ನಿಮಿಷದಲಿ ॥18॥
೦೧೯ ಉಗಿದು ಮನ್ತ್ರಾಸ್ತ್ರವನು ...{Loading}...
ಉಗಿದು ಮಂತ್ರಾಸ್ತ್ರವನು ತಿರುವಿಂ
ದುಗುಳಿಚಿದಡಾ ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾದಿದೇವಿಯರು
ಉಗಿದನೊರೆಯಲಡಾಯುಧವನು
ಬ್ಬೆಗದಲಪ್ಪಳಿಸಿದಡೆ ಕಯ್ಯಿಂ
ಜಗುಳ್ದು ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂತ್ರಾಸ್ತ್ರವನ್ನು ಸೆಳೆದುಕೊಂಡು ಬಿಲ್ಲಿನ ಹೆದೆಯಿಂದ ಪ್ರಯೋಗ ಮಾಡಿದರೆ, ಆ ಭೂತದ ಪಾದಗಳಿಗೆ ಆ ಶಸ್ತ್ರದ ಅಧಿದೇವತೆಯರು ಕೈಮುಗಿದು, ನಮಸ್ಕರಿಸಿದರು. ಒರೆಯಿಂದ ಸೆಳೆದುಕೊಂಡು ಖಡ್ಗದಿಂದ ಹೊಡೆದರೆ, ಖಡ್ಗ ಕೈಯಿಂದ ಜಾರಿ ಬಿತ್ತು. ಅವನ ಅಬ್ಬರ ಭಯದ ಅಧಿಕ್ಯದಲ್ಲಿ ಮುಳುಗಿಹೋಯಿತು.
ಪದಾರ್ಥ (ಕ.ಗ.ಪ)
ಉಗಿದು-ಸೆಳೆದು, ಮಂತ್ರಾಸ್ತ್ರ-ಆಯಾ ಅಧಿದೇವತೆಯನ್ನು ಸ್ಮರಿಸಿ, ಮಂತ್ರಿಸಿ ಪ್ರಯೋಗಿಸುವ ಅಸ್ತ್ರ, ತಿರುವು-ಬಿಲ್ಲಿನಹೆದೆ, ಒರೆ-ಕತ್ತಿಯನ್ನು ಇಡುವ ಚರ್ಮದ ಚೀಲ, ಅಡಾಯುಧ-ಒಂದು ಬಗೆಯ ಖಡ್ಗ, ಕತ್ತಿ, ಉಬ್ಬೆಗೆ-ಉದ್ದೇಗ(ಸಂ), ಜಗುಳ್ದು-ಜಾರಿ, ಝಂಕೆ-ಅಬ್ಬರ, ಝಾಡಿ-ಆಧಿಕ್ಯ
ಮೂಲ ...{Loading}...
ಉಗಿದು ಮಂತ್ರಾಸ್ತ್ರವನು ತಿರುವಿಂ
ದುಗುಳಿಚಿದಡಾ ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾದಿದೇವಿಯರು
ಉಗಿದನೊರೆಯಲಡಾಯುಧವನು
ಬ್ಬೆಗದಲಪ್ಪಳಿಸಿದಡೆ ಕಯ್ಯಿಂ
ಜಗುಳ್ದು ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ ॥19॥
೦೨೦ ಕಾಕಮುಖದ ಮಯೂರ ...{Loading}...
ಕಾಕಮುಖದ ಮಯೂರ ಟಿಟ್ಟಿಭ
ಕೋಕವದನದ ಹಂಸ ಕಂಕ ಬ
ಳಾಕವಕ್ತ್ರದ ಗೌಜು ಗೀಜಗ ಚಾತಕಾನನದ
ಘೂಕಮುಖದ ಸೃಗಾಲ ಶಾರ್ದೂ
ಲಾಕೃತಿಯ ಬಹುವಿಧದ ರೂಪದ
ನೇಕ ಭೂತವ್ರಾತ ನೆರೆದುದು ಭೂಪ ಕೇಳ್ ಎಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಗೆಯ ಮುಖದ, ನವಿಲು, ಟಿಟ್ಟಿಭ, ಕೋಗಿಲೆ, ಹಂಸ , ಕಂಕ, ಬಳಾಕ, ಗೌಜು, ಗೀಜಗ, ಚಾತಕ,ಗೂಬೆಯ, ನರಿ, ಹುಲಿಗಳ ಆಕೃತಿಯ ಭೂತಸಮೂಹವು ಅಲ್ಲಿ ಸೇರಿದುವು - ರಾಜನೇ ಕೇಳು - ಎಂದು ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ಕಾಕ-ಕಾಗೆ, ಮಯೂರ-ನವಿಲು, ಟಿಟ್ಟಿಭ-ಒಂದು ಪಕ್ಷಿ, ಕೋಕ-ಚಕ್ರವಾಕ, ಕಂಕ-ರಣಹದ್ದು, ನಾರಾಯಣಪಕ್ಷಿ, ಬಳಾಕ-ಒಂದು ಪಕ್ಷಿ, ವಕ್ತ್ರ-ಮುಖ, ಗೌಜು-ಗೌಜಲಹಕ್ಕಿ, ಗೀಜಗ-ಒಂದು ಪಕ್ಷಿ, ಘೂಕ-ಗೂಬೆ, ಸೃಗಾಲ-ನರಿ, ಶಾರ್ದೂಲ-ಹುಲಿ
ಮೂಲ ...{Loading}...
ಕಾಕಮುಖದ ಮಯೂರ ಟಿಟ್ಟಿಭ
ಕೋಕವದನದ ಹಂಸ ಕಂಕ ಬ
ಳಾಕವಕ್ತ್ರದ ಗೌಜು ಗೀಜಗ ಚಾತಕಾನನದ
ಘೂಕಮುಖದ ಸೃಗಾಲ ಶಾರ್ದೂ
ಲಾಕೃತಿಯ ಬಹುವಿಧದ ರೂಪದ
ನೇಕ ಭೂತವ್ರಾತ ನೆರೆದುದು ಭೂಪ ಕೇಳೆಂದ ॥20॥
೦೨೧ ಇದು ವಿರೂಪಾಕ್ಷನ ...{Loading}...
ಇದು ವಿರೂಪಾಕ್ಷನ ಮನಃಕ್ಷೋ
ಭದ ವಿಕಾರವಲಾ ಪಿನಾಕಿಯ
ಪದವ ಹಿಡಿದೋಲೈಸುವೆನು ಸರ್ವಾಂಗಯಜ್ಞದಲಿ
ಇದಕುಪಾಯವ ಬಲ್ಲೆನೆಂದು
ಬ್ಬಿದನು ಬೊಬ್ಬಿರಿದಾರಿ ತೋಡಿದ
ನುದರವಹ್ನಿಯನಿದಿರೊಳಗ್ನಿತ್ರಯವ ನಿರ್ಮಿಸಿದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ವಿರೂಪಾಕ್ಷನಾದ ಶಿವನ ಮನಃಕ್ಷೋಭೆಯಿಂದಾದ ವಿಕಾರವಲ್ಲವೇ. ಶಿವನ ಪಾದವನ್ನು ಹಿಡಿದು ಸರ್ವಾಂಗ ಯಜ್ಞದಲ್ಲಿ ಅವನನ್ನು ಸೇವಿಸುತ್ತೇನೆ. ಇದಕ್ಕೆ ಸರಿಯಾದ ಉಪಾಯವನ್ನು ನಾನು ಬಲ್ಲೆನೆನ್ನುತ್ತ ಹರ್ಷಿತನಾದ. ಬೊಬ್ಬಿರಿದು ಗರ್ಜಿಸಿ ತನ್ನ ಹೊಟ್ಟೆಯೊಳಗಿನ ಅಗ್ನಿಯನ್ನು ಕಾರಿದನು. ಇದಿರಿನಲ್ಲಿ ಮೂರುತೆರನಾದ ಅಗ್ನಿಯನ್ನು ಸ್ಥಾಪಿಸಿದ.
ಪದಾರ್ಥ (ಕ.ಗ.ಪ)
ಮನಃಕ್ಷೋಭೆ-ಮನಸ್ಸಿನ ತೊಳಲಾಟ, ವಿಕಾರ-ಕೆಟ್ಟಸ್ವರೂಪ, ಪಿನಾಕಿ-ಪಿನಾಕವೆಂಬ ಧನಸ್ಸನ್ನುಳ್ಳವನು, ಶಿವ, ಓಲೈಸು-ಸೇವಿಸು, ಸರ್ವಾಂಗಯಜ್ಞ-ಸಂಪೂರ್ಣ ದೇಹವನ್ನೇ ಅಗ್ನಿಗೊಪ್ಪಿಸುವ ಯಜ್ಞ, ಬೊಬ್ಬಿರಿದು-ಜೋರಾಗಿ ಕೂಗಿ, ಆರಿ-ಗರ್ಜಿಸಿ, ಉದರವಹ್ನಿ-ಹೊಟ್ಟೆಯೊಳಗಿನ ಅಗ್ನಿ, ಕಿಚ್ಚು, ಕೋಪ, ಕ್ರೋಧ, ಅಗ್ನಿತ್ರಯ-ಆಹವನೀಯ, ಗಾರ್ಹಪತ್ಯ, ದಕ್ಷಿಣ ಎಂಬ ಮೂರು ಬಗೆಯ ಅಗ್ನಿ.
ಮೂಲ ...{Loading}...
ಇದು ವಿರೂಪಾಕ್ಷನ ಮನಃಕ್ಷೋ
ಭದ ವಿಕಾರವಲಾ ಪಿನಾಕಿಯ
ಪದವ ಹಿಡಿದೋಲೈಸುವೆನು ಸರ್ವಾಂಗಯಜ್ಞದಲಿ
ಇದಕುಪಾಯವ ಬಲ್ಲೆನೆಂದು
ಬ್ಬಿದನು ಬೊಬ್ಬಿರಿದಾರಿ ತೋಡಿದ
ನುದರವಹ್ನಿಯನಿದಿರೊಳಗ್ನಿತ್ರಯವ ನಿರ್ಮಿಸಿದ ॥21॥
೦೨೨ ಸೆರೆನರಙ್ಗಳ ದರ್ಭೆ ...{Loading}...
ಸೆರೆನರಂಗಳ ದರ್ಭೆ ಮಿದುಳಿನ
ಚರು ಕಪಾಲದ ಪಾತ್ರೆಯೆಲುವಿನ
ಬೆರಳ ಸಮಿಧೆ ವಿಶಾಳದನುಮಜ್ಜೆಗಳ ಪೃಷದಾಜ್ಯ
ಅರುಣಜಲದಾಜ್ಯಾಹುತಿಯ ವಿ
ಸ್ತರವ ವಿರಚಿಸಿ ನಿಗಮಮಂತ್ರೋ
ಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಟಲ ನರಗಳು ಮತ್ತು ದೇಹದ ಇತರ ನರಗಳೇ ದರ್ಭೆ, ಮಿದುಳೇ ಹವಿಸ್ಸು, ಕಪಾಲವೇ ಪಾತ್ರೆ, ಬೆರಳ ಮೂಳೆಗಳೇ ಸಮಿತ್ತು, ಅತಿಶಯವಾದ ಮಜ್ಜೆಯೇ ಹೋಮದ ತುಪ್ಪ, ರಕ್ತವೇ ತುಪ್ಪದ ಆಹುತಿ - ಎಂಬ ರೀತಿಯಲ್ಲಿ ಯಜ್ಞವನ್ನು ರಚಿಸಿ, ವೇದಮಂತ್ರಗಳನ್ನು ಉಚ್ಚರಿಸುತ್ತಾ ಪೂರ್ಣಾಹುತಿಗೆ ತನ್ನ ದೇಹವನ್ನೇ ಅರ್ಪಿಸಿದ.
ಪದಾರ್ಥ (ಕ.ಗ.ಪ)
ಸೆರೆ-ಗಂಟಲಿನ ನರ, ಚರು-ಹವಿಸ್ಸು, ಸಮಿಧೆ-ಸಮಿತ್ತು (ಸಂ), ಅನುವಜ್ಜೆ-ಮೂಳೆಯೊಂದಿಗೆ ಬರುವ ರಸ, ಪೃಷ-ಯಜ್ಞ, ಆಜ್ಯ-ತುಪ್ಪ, ಅರುಣಜಲ-ರಕ್ತ, ನಿಗಮ-ವೇದ.
ಮೂಲ ...{Loading}...
ಸೆರೆನರಂಗಳ ದರ್ಭೆ ಮಿದುಳಿನ
ಚರು ಕಪಾಲದ ಪಾತ್ರೆಯೆಲುವಿನ
ಬೆರಳ ಸಮಿಧೆ ವಿಶಾಳದನುಮಜ್ಜೆಗಳ ಪೃಷದಾಜ್ಯ
ಅರುಣಜಲದಾಜ್ಯಾಹುತಿಯ ವಿ
ಸ್ತರವ ವಿರಚಿಸಿ ನಿಗಮಮಂತ್ರೋ
ಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ ॥22॥
೦೨೩ ಮೆಚ್ಚಿದನು ಮದನಾರಿ ...{Loading}...
ಮೆಚ್ಚಿದನು ಮದನಾರಿ ಹೋಮದ
ಕಿಚ್ಚು ತುಡುಕದ ಮುನ್ನ ತೆಗೆದನು
ಬಿಚ್ಚುಜಡೆಗಳ ಜಹ್ನುಸುತೆಯಲಿ ನಾದಿದನು ಭಟನ
ಎಚ್ಚ ಶರವಿದೆ ಖಡ್ಗವಿದೆ ಕೋ
ಮುಚ್ಚುಮರೆಯೇಕಿನ್ನು ಸುತರಲಿ
ಚೊಚ್ಚಿಲವ ನೀನೆಂದು ಮೈದಡವಿದನು ಶಶಿಮೌಳಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಶ್ವರ ಅಶ್ವತ್ಥಾಮನನ್ನು ಮೆಚ್ಚಿಕೊಂಡ. ಹೋಮದ ಬೆಂಕಿಯು ತಾಗುವ ಮೊದಲೇ ಶಿವ ಅವನನ್ನು ತೆಗೆದು ತನ್ನ ಬಿಚ್ಚಿದ ಜಡೆಗಳ ನಡುವೆ ಇದ್ದ ಗಂಗಾಜಲದಲ್ಲಿ ವೀರಭಟನಾದ ಅಶ್ವತ್ಥಾಮನನ್ನು ನೆನೆಸಿದನು. ನೀನು ನನಗೆ ಹೊಡೆದ ಬಾಣಗಳಿವೆ, ಖಡ್ಗವಿದೆ. ಇವುಗಳನ್ನು ತೆಗೆದುಕೋ ಇನ್ನು ಮುಚ್ಚುಮರೆಯೇ (ಭೂತದ ರೂಪದಲ್ಲಿರುವ ಶಿವನೆಂಬ ವಿಚಾರದಲ್ಲಿ) ನನ್ನ ಮಕ್ಕಳಲ್ಲಿ ನೀನು ಹಿರಿಯವ - ಎಂದು ಶಿವ, ಅಶ್ವತ್ಥಾಮನ ಮೈದಡವಿದ.
ಪದಾರ್ಥ (ಕ.ಗ.ಪ)
ಮದನಾರಿ-ಕಾಮನ ಶತ್ರು, ಶಿವ, ಕಿಚ್ಚು-ಬೆಂಕಿಯ ಉರಿ, ತುಡುಕು-ತಾಗು, ಬಾರಿಸು, ಜಹ್ನುಸುತೆ-ಜಾಹ್ನವಿ, ಗಂಗೆ, ನಾದು-ನನÉಸು, ಚೊಚ್ಚಲವ-ಮೊದಲನೆಯ ಮಗ, ಶಶಿಮೌಳಿ-ಚಂದ್ರನನ್ನು ಶಿರದಲ್ಲಿ ಧರಿಸಿರುವವನು, ಶಿವ.
ಮೂಲ ...{Loading}...
ಮೆಚ್ಚಿದನು ಮದನಾರಿ ಹೋಮದ
ಕಿಚ್ಚು ತುಡುಕದ ಮುನ್ನ ತೆಗೆದನು
ಬಿಚ್ಚುಜಡೆಗಳ ಜಹ್ನುಸುತೆಯಲಿ ನಾದಿದನು ಭಟನ
ಎಚ್ಚ ಶರವಿದೆ ಖಡ್ಗವಿದೆ ಕೋ
ಮುಚ್ಚುಮರೆಯೇಕಿನ್ನು ಸುತರಲಿ
ಚೊಚ್ಚಿಲವ ನೀನೆಂದು ಮೈದಡವಿದನು ಶಶಿಮೌಳಿ ॥23॥
೦೨೪ ಸಾರಥಿಗಳೊಳಗೆನಿಸಿದನು ಭೂ ...{Loading}...
ಸಾರಥಿಗಳೊಳಗೆನಿಸಿದನು ಭೂ
ಭಾರಭಂಜಕನಸುರಹರನೀ
ಭಾರ ಬಿದ್ದುದು ನಮಗೆ ಪಾಂಚಾಲಪ್ರಬದ್ಧಕರ
ತೀರಿತಿದು ನಿಮ್ಮಲ್ಲಿ ನಮ್ಮ ವಿ
ಹಾರವೊಡಬೆಚ್ಚಿತು ರಿಪುವ್ರಜ
ಮಾರಣಾಧ್ವರಕೃತಿಯ ನೀ ಕೈಕೊಳಿಸು ಹೋಗೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಭಾರವನ್ನು ನಾಶಮಾಡಬೇಕಾದ ಕೃಷ್ಣ ಸಾರಥಿಗಳೊಳಗೆ ಒಬ್ಬನಾದ. ಪಾಂಚಾಲ ಪ್ರಬದ್ಧಕರನ್ನು ಸಂಹರಿಸುವ ಈ ಭಾರ ನಮ್ಮ ಮೇಲೆ ಬಿತ್ತು. ಈ ಭಾರ ಈಗ ತೀರಿತು. ನಿಮ್ಮೊಂದಿಗೆ ನಮ್ಮ ಸಹವಾಸ ಬೆಸುಗೆ ಹಾಕಿದಂತಾಯಿತು. ಶತ್ರುಸಮೂಹದ ಮಾರಣಯಜ್ಞದ ಕೆಲಸವನ್ನು ನೀನು ಕೈಗೊಳ್ಳು ಹೋಗು - ಎಂದು ಶಿವ ಅಶ್ವತ್ಥಾಮನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಭೂಭಾರಭಂಜಕ-ಭೂಮಿಯ ಭಾರವನ್ನು ನಾಶ ಮಾಡುವವನು, ಕೃಷ್ಣ, ವಿಷ್ಣು, ತೀರಿತಿದು-ಪೂರ್ಣವಾಯಿತು, ಮುಗಿಯಿತು, ಒಡಬೆಚ್ಚು-ಬಿಗಿಯಾಗಿ ಕೂಡು, ಬೆಸುಗೆ ಹಾಕಿದಂತಿರು, ರಿಪುವ್ರಜ-ಶತ್ರುಸಮೂಹ, ಮಾರಣಾಧ್ವರ-ಮರಣವನ್ನು ತರುವ ಯಾಗ, ಕೈಕೊಳಿಸು-ಕೈಗೆತ್ತಿಕೊ.
ಟಿಪ್ಪನೀ (ಕ.ಗ.ಪ)
- ಪಾಂಚಾಲ ಪ್ರಬದ್ಧಕರು -ಪಾಂಚಾಲದೇಶದ ರಾಜನಾದ ದ್ರುಪದನ ಮಕ್ಕಳು ಮತ್ತು ಅವರುಗಳ ಸೈನ್ಯ, ಪರಿವಾರ ಇತ್ಯಾದಿಗಳಲ್ಲಿ ಗಟ್ಟಿಯಾಗಿ ಉಳಿದವರು.
ಮೂಲ ...{Loading}...
ಸಾರಥಿಗಳೊಳಗೆನಿಸಿದನು ಭೂ
ಭಾರಭಂಜಕನಸುರಹರನೀ
ಭಾರ ಬಿದ್ದುದು ನಮಗೆ ಪಾಂಚಾಲಪ್ರಬದ್ಧಕರ
ತೀರಿತಿದು ನಿಮ್ಮಲ್ಲಿ ನಮ್ಮ ವಿ
ಹಾರವೊಡಬೆಚ್ಚಿತು ರಿಪುವ್ರಜ
ಮಾರಣಾಧ್ವರಕೃತಿಯ ನೀ ಕೈಕೊಳಿಸು ಹೋಗೆಂದ ॥24॥
೦೨೫ ಎನೆ ಪುರಾರಿಯ ...{Loading}...
ಎನೆ ಪುರಾರಿಯ ಪದಯುಗಕೆ ಗುರು
ತನುಜ ಮೈಯಿಕ್ಕಿದನು ಬೀಳ್ಕೊಂ
ಡನು ತಿರೋಹಿತನಾದನೀಶ್ವರನೀತನನು ಕಳುಹಿ
ಧನುವ ಕೊಂಡನು ಧೂರ್ಜಟಿಯ ರೂ
ಹಿನ ಮಹಾರಥ ರಥವನೇರಿದ
ನನುವರದ ರೌರವವನಂಘೈಸಿದನು ರಜನಿಯಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವ ಹೀಗೆ ಹೇಳಲು ಅವನ ಪಾದಗಳಿಗೆ ಅಶ್ವತ್ಥಾಮ ನಮಸ್ಕರಿಸಿದ. ಶಿವ ಬೀಳ್ಕೊಂಡು ಅಂತರ್ಧಾನನಾದ. ಅವನನ್ನು ಕಳುಹಿಸಿ ಈಶ್ವರನ ರೂಪಿನ ಮಹಾರಥನಾದ ಅಶ್ವತ್ಥಾಮ ಬಿಲ್ಲನ್ನು ತೆಗೆದುಕೊಂಡು ರಾತ್ರಿಯಲ್ಲಿ ಘೋರ ಕಾರ್ಯವನ್ನು ಮಾಡಲು ಸಿದ್ಧನಾದ.
ಪದಾರ್ಥ (ಕ.ಗ.ಪ)
ಪುರಾರಿ-ಮೂರು ಪುರಗಳನ್ನು ನಾಶಮಾಡಿದವನು, ತ್ರಿಪುರಾರಿ, ಶಿವ, ತಿರೋಹಿತ-ಮಾಯವಾಗು, ಮರೆಯಾಗು, ಅನುವರ-ಯುದ್ಧ, ರೌರವ-ಒಂದು ಘೋರನರಕ, ಅಂಘೈಸು-ಕಾರ್ಯಪ್ರವೃತ್ತನಾಗು, ಅಂಗೀಕರಿಸು, ರಜನಿ-ರಾತ್ರಿ
ಟಿಪ್ಪನೀ (ಕ.ಗ.ಪ)
ಪುರಾರಿ ———– -ಶಿವನು ತ್ರಿಪುರ ಸಂಹಾರ ಮಾಡಿದ ಪ್ರಸಂಗವನ್ನು ಕರ್ಣಪರ್ವದ 6 ಮತ್ತು 7ನೆಯ ಸಂಧಿಗಳಲ್ಲಿ ನೋಡಬಹುದು.
ಮೂಲ ...{Loading}...
ಎನೆ ಪುರಾರಿಯ ಪದಯುಗಕೆ ಗುರು
ತನುಜ ಮೈಯಿಕ್ಕಿದನು ಬೀಳ್ಕೊಂ
ಡನು ತಿರೋಹಿತನಾದನೀಶ್ವರನೀತನನು ಕಳುಹಿ
ಧನುವ ಕೊಂಡನು ಧೂರ್ಜಟಿಯ ರೂ
ಹಿನ ಮಹಾರಥ ರಥವನೇರಿದ
ನನುವರದ ರೌರವವನಂಘೈಸಿದನು ರಜನಿಯಲಿ ॥25॥
೦೨೬ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ರಾಜಬೀದಿಯೊ
ಳುರವಣಿಸಿ ಗುರುಸೂನು ರಥದಲಿ
ಬರುತ ಕಂಡನಲೈ ಯುಧಿಷ್ಠಿರ ರಾಜಮಂದಿರವ
ಇರರು ಪಾಂಡವರಿಲ್ಲಿ ಮೇಣವ
ರಿರಲಿ ಬಳಿಕಾರೈವೆನಯ್ಯನ
ಹರಿಬ ಹೋಗಲಿ ಮುನ್ನ ಕೊಲುವೆನು ದ್ರುಪದನಂದನನ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು ರಾಜಬೀದಿಯಲಿ ಉತ್ಸಾಹದಿಂದ ಅಶ್ವತ್ಥಾಮ ರಥದಲ್ಲಿ ಬರುತ್ತಾ ಯುಧಿಷ್ಠಿರನ ಅರಮನೆಯನ್ನು ಕಂಡ. ಇಲ್ಲಿ ಪಾಂಡವರು ಇರುವುದಿಲ್ಲ. ಒಂದುವೇಳೆ ಅವರು ಇದ್ದರೂ ಸಹ, ಆನಂತರ ನೋಡುತ್ತೇನೆ. ಅಪ್ಪನ ಸಾವಿನ ಸೇಡು ತೀರಲಿ; ಅದಕ್ಕಾಗಿ ಮೊದಲು ಧೃಷ್ಟದ್ಯುಮ್ನನನ್ನು ಕೊಲ್ಲುತ್ತೇನೆ.
ಪದಾರ್ಥ (ಕ.ಗ.ಪ)
ಉರವಣಿಸು-ಉತ್ಸಾಹಿಸು, ವೇಗವಾಗಿ ಮೇಲೆ ಬೀಳು, ಆರೈವೆ-ನೋಡುವೆ, ವಿಚಾರಿಸುವೆ, ಹರಿಬ-ಸೇಡು, ಕೆಲಸ, ದ್ರುಪದನಂದನ-ದ್ರುಪದರಾಜನ ಮಗ, ಧೃಷ್ಟದ್ಯುಮ್ನ.
ಮೂಲ ...{Loading}...
ಧರಣಿಪತಿ ಕೇಳ್ ರಾಜಬೀದಿಯೊ
ಳುರವಣಿಸಿ ಗುರುಸೂನು ರಥದಲಿ
ಬರುತ ಕಂಡನಲೈ ಯುಧಿಷ್ಠಿರ ರಾಜಮಂದಿರವ
ಇರರು ಪಾಂಡವರಿಲ್ಲಿ ಮೇಣವ
ರಿರಲಿ ಬಳಿಕಾರೈವೆನಯ್ಯನ
ಹರಿಬ ಹೋಗಲಿ ಮುನ್ನ ಕೊಲುವೆನು ದ್ರುಪದನಂದನನ ॥26॥
೦೨೭ ಎನ್ದು ರಾಯನ ...{Loading}...
ಎಂದು ರಾಯನ ಗುಡಿಯ ಗೂಢದ
ಮಂದಿರದ ಬಲವಂಕವೀಧಿಯ
ಮುಂದೆ ಧೃಷ್ಟದ್ಯುಮ್ನನರಮನೆಗಾಗಿ ವಹಿಲದಲಿ
ಬಂದು ಬಾಗಿಲ ಮುರಿದು ಕಾಹಿನ
ಮಂದಿಯನು ನಿಡುನಿದ್ರೆಗೈಸಿದ
ನಂದು ಮಿಣ್ಣನೆ ಹೊಕ್ಕನಾತನ ಸೆಜ್ಜೆಯೋವರಿಯ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಹೇಳುತ್ತಾ, ಧರ್ಮರಾಯನ ಬಾವುಟವಿರುವ ಗುಪ್ತಮಂದಿರದ ಬಲಭಾಗದ ದಾರಿಯಲ್ಲಿ ಮುಂದೆ ಧೃಷ್ಟದ್ಯುಮ್ನನ ಅರಮನೆಯ ಕಡೆಗೆ ಬೇಗಬೇಗ ಬಂದು, ಬಾಗಿಲನ್ನು ಮುರಿದು, ಕಾವಲು ಜನವನ್ನು ಸಂಹರಿಸಿ ನಿಶ್ಶಬ್ದವಾಗಿ ಅವನ ಮಲಗುವ ಕೋಣೆಯನ್ನು ಹೊಕ್ಕನು.
ಪದಾರ್ಥ (ಕ.ಗ.ಪ)
ಗುಡಿ-ಬಾವುಟ, ಗೂಢದ-ಗುಪ್ತವಾದ, ಬಲವಂಕ-ಬಲಭಾಗ, ವೀಧಿ-ಬೀದಿ, ವಹಿಲ-ವೇಗ, ಶೀಘ್ರ, ಕಾಹಿನಮಂದಿ-ಕಾವಲಿನ ಜನ, ನಿಡುನಿದ್ರೆಗೈಸಿ-ಕೊಂದುಹಾಕಿ, ಮಿಣ್ಣನೆ-ಶಬ್ದವಿಲ್ಲದೆ, ಏನೂ ತಿಳಿಯದವನಂತೆ, ಸಜ್ಜೆಯೋವರಿ-ಮಲಗುವ ಕೋಣೆ (ಓವರಿ-ಮೂಲೆ, ಕೋಣೆ)
ಮೂಲ ...{Loading}...
ಎಂದು ರಾಯನ ಗುಡಿಯ ಗೂಢದ
ಮಂದಿರದ ಬಲವಂಕವೀಧಿಯ
ಮುಂದೆ ಧೃಷ್ಟದ್ಯುಮ್ನನರಮನೆಗಾಗಿ ವಹಿಲದಲಿ
ಬಂದು ಬಾಗಿಲ ಮುರಿದು ಕಾಹಿನ
ಮಂದಿಯನು ನಿಡುನಿದ್ರೆಗೈಸಿದ
ನಂದು ಮಿಣ್ಣನೆ ಹೊಕ್ಕನಾತನ ಸೆಜ್ಜೆಯೋವರಿಯ ॥27॥
೦೨೮ ತೊಳತೊಳಗುವಿಕ್ಕೆಲದ ದೀಪದ ...{Loading}...
ತೊಳತೊಳಗುವಿಕ್ಕೆಲದ ದೀಪದ
ಬೆಳಗಿನಲಿ ಮಣಿರುಚಿಯ ಚಿತ್ರಾ
ವಳಿಯ ಮೇಲ್ಕಟ್ಟಿನಲಿ ಲಲಿತಸ್ತರಣ ಮಧ್ಯದಲಿ
ಹೊಳೆಹೊಳೆವ ನವರತ್ನಭೂಷಣ
ಕಳಿತಕಾಯನ ಕಂಡು ರೋಷ
ಪ್ರಳಯ ಭೈರವರೂಪನೊದೆದನು ವಾಮಪಾದದಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೊಳತೊಳಗಿ ಪ್ರಕಾಶಿಸುತ್ತಿರುವ ಎರಡೂ ಕಡೆಗಳ ದೀಪಗಳ ಬೆಳಕಿನಲ್ಲಿ, ರತ್ನಗಳ ಕಾಂತಿಯನ್ನುಳ್ಳ ಚಿತ್ರಗಳ ಕಟ್ಟುಗಳಲ್ಲಿ, ಮೃದುವಾದ ಹಾಸಿಗೆಯ ಮಧ್ಯದಲ್ಲಿ, ಹೊಳೆ ಹೊಳೆಯುತ್ತಿರುವ ನವರತ್ನಗಳಿಂದ ಅಲಂಕೃತವಾದ ಸುಂದರ ಶರೀರದ ಧೃಷ್ಟದ್ಯುಮ್ನನನ್ನು ಕಂಡು ರೋಷದಿಂದ ಪ್ರಳಯಕಾಲದ ರುದ್ರರೂಪನಾದ ಅಶ್ವತ್ಥಾಮನು ಅವನನ್ನು ಎಡಗಾಲಿನಿಂದ ಒದ್ದ.
ಪದಾರ್ಥ (ಕ.ಗ.ಪ)
ತೊಳತೊಳಗುವ-ಪ್ರಕಾಶಿಸುವ, ಇಕ್ಕೆಲ-ಎರಡೂ ಬದಿ, ಮಣಿರುಚಿ-ರತ್ನಗಳ ಕಾಂತಿ, ಮೇಲ್ಕಟ್ಟು-ಚಿತ್ರಗಳಿಗೆ ಹಾಕುವ ಮರದ ಚೌಕಟ್ಟು, ಲಲಿತಸ್ತರಣ-ಮೆದುವಾದ ಹಾಸಿಗೆ, ನವರತ್ನ ಭೂಷಣಕಳಿತ ಕಾಯ-ನವರತ್ನಗಳಿಂದ ಅಲಂಕೃತವಾದ ಸುಂದರ ಶರೀರ, ವಾಮಪಾದ-ಎಡಗಾಲು.
ಮೂಲ ...{Loading}...
ತೊಳತೊಳಗುವಿಕ್ಕೆಲದ ದೀಪದ
ಬೆಳಗಿನಲಿ ಮಣಿರುಚಿಯ ಚಿತ್ರಾ
ವಳಿಯ ಮೇಲ್ಕಟ್ಟಿನಲಿ ಲಲಿತಸ್ತರಣ ಮಧ್ಯದಲಿ
ಹೊಳೆಹೊಳೆವ ನವರತ್ನಭೂಷಣ
ಕಳಿತಕಾಯನ ಕಂಡು ರೋಷ
ಪ್ರಳಯ ಭೈರವರೂಪನೊದೆದನು ವಾಮಪಾದದಲಿ ॥28॥
೦೨೯ ಘಳಿಲನೆದ್ದನಿದಾರು ನಿದ್ರೆಯ ...{Loading}...
ಘಳಿಲನೆದ್ದನಿದಾರು ನಿದ್ರೆಯ
ನಳಿದವನ ತಿವಿಯೆನುತ ಮುಂದಣ
ವಿಳಯರುದ್ರನ ರಹಿಯ ರೌದ್ರದ ರಣಭಯಂಕರನ
ನಿಲವ ಕಂಡನಡಾಯುಧವ ತಾ
ಹಲಗೆಯಾವೆಡೆಯೆಂಬವನ ಮುಂ
ದಲೆಯ ಹಿಡಿದಡಗೆಡಹಿ ಕುಸುಕಿರಿದರಿಯನಸಬಡಿದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃಷ್ಟದ್ಯುಮ್ನ ಧಡಕ್ಕನೆ ಎದ್ದ, ಇದಾರು, ನಿದ್ರೆಯನ್ನು ಕೆಡಿಸಿದವನನ್ನು ತಿವಿ ಎನ್ನುತ್ತಾ, ಮುಂದೆ ನಿಂತಿರುವ ಪ್ರಳಯಕಾಲದ ರುದ್ರನ ರೀತಿಯಲ್ಲಿದ್ದ ರಣಭಯಂಕರನ ನಿಲುವನ್ನು ಕಂಡನು. ಖಡ್ಗವನ್ನು ತಾ, ಗುರಾಣಿ ಎಲ್ಲಿದೆ ಎಂದ ಧೃಷ್ಟದ್ಯಮ್ನನ ಮುಂದಲೆಯನ್ನು ಹಿಡಿದು ಅಡ್ಡಬೀಳಿಸಿ ಮುಷ್ಟಿಯಿಂದ ತಿವಿದು ಅಶ್ವತ್ಥಾಮನು ಸದೆಬಡಿದ.
ಪದಾರ್ಥ (ಕ.ಗ.ಪ)
ಘಳಿಲನೆ-ತಕ್ಷಣ, ಗಡಿಬಿಡಿಯಿಂದ, ವಿಳಯರುದ್ರ-ಪ್ರಳಯಕಾಲದರುದ್ರ, ರಹಿ-ರೀತಿ, ಹಲಗೆ-ಗುರಾಣಿ, ಅಡಗೆಡಹು-ಅಡ್ಡಬೀಳಿಸು, ಕುಸುರಿದನು-ಮುಷ್ಟಿಯಿಂದ ಗುದ್ದಿ ತಿವಿದನು, ಅಸಬಡಿ-ಸದೆಬಡಿ.
ಮೂಲ ...{Loading}...
ಘಳಿಲನೆದ್ದನಿದಾರು ನಿದ್ರೆಯ
ನಳಿದವನ ತಿವಿಯೆನುತ ಮುಂದಣ
ವಿಳಯರುದ್ರನ ರಹಿಯ ರೌದ್ರದ ರಣಭಯಂಕರನ
ನಿಲವ ಕಂಡನಡಾಯುಧವ ತಾ
ಹಲಗೆಯಾವೆಡೆಯೆಂಬವನ ಮುಂ
ದಲೆಯ ಹಿಡಿದಡಗೆಡಹಿ ಕುಸುಕಿರಿದರಿಯನಸಬಡಿದ ॥29॥
೦೩೦ ಉಗಿದು ಬಿಲ್ಲಿನ ...{Loading}...
ಉಗಿದು ಬಿಲ್ಲಿನ ತಿರುವ ಕೊರಳಲಿ
ಬಿಗಿಯೆ ಭಯದಲಿ ದ್ರುಪದಸುತ ಬೆರ
ಳುಗಳ ಬಾಯಲಿ ಬೇಡಿಕೊಂಡನು ದ್ರೋಣನಂದನನ
ಉಗಿದಡಾಯ್ದದಲೆನ್ನ ಶಿರವನು
ತೆಗೆದು ಕಳೆಯೈ ಶಸ್ತ್ರಘಾತದಿ
ನುಗುಳಿಸಸುವನು ತನಗೆ ವೀರಸ್ವರ್ಗವಹುದೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲಿನ ಹಗ್ಗವನ್ನು ಸೆಳೆದು ಕೊರಳಿಗೆ ಬಿಗಿಯಲು, ಧೃಷ್ಟದ್ಯುಮ್ನ ಭಯದಿಂದ ಬಾಯಲ್ಲಿ ಬೆರಳುಗಳನ್ನಿಟ್ಟು (ದೈನ್ಯದಿಂದ) “ಸೆಳೆದ ಖಡ್ಗದಿಂದ ನನ್ನ ತಲೆಯನ್ನು ಕತ್ತರಿಸಿ ಕಳೆ. ಶಸ್ತ್ರದ ಹೊಡೆತದಿಂದ ನನ್ನ ಪ್ರಾಣವನ್ನು ತೆಗೆ. ನನಗೆ ವೀರಸ್ವರ್ಗ ಸಿಕ್ಕುತ್ತದೆ.” ಎಂದು ಅಶ್ವತ್ಥಾಮನನ್ನು ಬೇಡಿಕೊಂಡ.
ಪದಾರ್ಥ (ಕ.ಗ.ಪ)
ಉಗಿದು-ಸೆಳೆದು, ತಿರುವು-ಬಿಲ್ಲಿನ ಹೆದೆ, ಹುರಿ, ಹಗ್ಗ, ಬೆರಳುಗಳ ಬಾಯಲಿ-ಬಾಯೊಳಗೆ ಬೆರಳಿಟ್ಟು, ದೈನ್ಯದಿಂದ, ಅಡಾಯ್ದ -ಖಡ್ಗ, ಉಗುಳಿಸಸುವನು-ಪ್ರಾಣವನ್ನು ಹೊರಕ್ಕೆ ಹಾಕಿಸು, ಪ್ರಾಣತೆಗೆ.
ಮೂಲ ...{Loading}...
ಉಗಿದು ಬಿಲ್ಲಿನ ತಿರುವ ಕೊರಳಲಿ
ಬಿಗಿಯೆ ಭಯದಲಿ ದ್ರುಪದಸುತ ಬೆರ
ಳುಗಳ ಬಾಯಲಿ ಬೇಡಿಕೊಂಡನು ದ್ರೋಣನಂದನನ
ಉಗಿದಡಾಯ್ದದಲೆನ್ನ ಶಿರವನು
ತೆಗೆದು ಕಳೆಯೈ ಶಸ್ತ್ರಘಾತದಿ
ನುಗುಳಿಸಸುವನು ತನಗೆ ವೀರಸ್ವರ್ಗವಹುದೆಂದ ॥30॥
೦೩೧ ಅಕಟ ಗುರುಹತ್ಯಾ ...{Loading}...
ಅಕಟ ಗುರುಹತ್ಯಾ ಮಹಾಪಾ
ತಕಿಯೆ ನಿನಗೇ ಸ್ವರ್ಗ ದೇವ
ಪ್ರಕರ ನಿನ್ನನು ಹೊಗಿಸಿದಡೆ ಸುಡುವೆನು ಸುರಾಲಯವ
ಕ್ರಕಚ ಕುಂಭೀಪಾಕಮುಖ ನಾ
ರಕದೊಳರಮನೆ ನಿನಗೆ ಕೌಕ್ಷೇ
ಯಕದ ಹತಿ ಗಡ ತನಗೆನುತ ಕಟ್ಟಿದನು ತಿರುವಿನಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ, ಗುರುಹತ್ಯಾ ಮಹಾಪಾತಕಿಯೆ, ನಿನಗೇ ಸ್ವರ್ಗ ? ದೇವಸಮೂಹವು ನಿನಗೇನಾದರೂ ಸ್ವರ್ಗಕ್ಕೆ ಪ್ರವೇಶ ನೀಡಿದರೆ ಸ್ವರ್ಗವನ್ನೇ ಸುಡುತ್ತೇನೆ. ಕ್ರಕಚ ಮತ್ತು ಕುಂಭೀಪಾಕವೇ ಮೊದಲಾದ ನರಕಗಳೇ ನಿನಗೆ ಅರಮನೆ. ನಿನಗೆ ಖಡ್ಗದ ಹೊಡೆತವೇ - ಎನ್ನುತ್ತ ಬಿಲ್ಲಿನ ಹಗ್ಗದಲ್ಲಿ ಧೃಷ್ಟದ್ಯುಮ್ನನನ್ನು ಕಟ್ಟಿದನು.
ಪದಾರ್ಥ (ಕ.ಗ.ಪ)
ದೇವಪ್ರಕರ-ದೇವಸಮೂಹ, ಸುರಾಲಯ-ಸ್ವರ್ಗ, ಕ್ರಕಚ ಮತ್ತು ಕುಂಭೀಪಾಕ-ಎರಡು ನರಕಗಳು, ಕೌಕ್ಷೇಯಕ-ಖಡ್ಗ, ,ತಿರುವು-ಬಿಲ್ಲಿನ ಹಗ್ಗ.
ಮೂಲ ...{Loading}...
ಅಕಟ ಗುರುಹತ್ಯಾ ಮಹಾಪಾ
ತಕಿಯೆ ನಿನಗೇ ಸ್ವರ್ಗ ದೇವ
ಪ್ರಕರ ನಿನ್ನನು ಹೊಗಿಸಿದಡೆ ಸುಡುವೆನು ಸುರಾಲಯವ
ಕ್ರಕಚ ಕುಂಭೀಪಾಕಮುಖ ನಾ
ರಕದೊಳರಮನೆ ನಿನಗೆ ಕೌಕ್ಷೇ
ಯಕದ ಹತಿ ಗಡ ತನಗೆನುತ ಕಟ್ಟಿದನು ತಿರುವಿನಲಿ ॥31॥
೦೩೨ ಉರಲ ಹತ್ತಿಸಿ ...{Loading}...
ಉರಲ ಹತ್ತಿಸಿ ಸೆಳೆಯೆ ಗೋಣಲಿ
ಗುರುಗುರಿಸಲಸು ಜಾರಿದುದು ಬೊ
ಬ್ಬಿರಿದು ಹೊಕ್ಕನು ಕದವನೊದೆದು ಶಿಖಂಡಿಯರಮನೆಯ
ತರಿದನಾತನನುತ್ತಮೌಂಜಸ
ನರಸಿ ಹೊಯ್ದನು ಹೊಕ್ಕು ಬಾಗಿಲ
ಮುರಿದು ಮೈಯರಿಹಿಸಿ ಯುಧಾಮನ್ಯುವ ವಿದಾರಿಸಿದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊರಳಿಗೆ ಉರಲನ್ನು ಹಾಕಿ ಎಳೆಯಲು, ಗಂಟಲಲ್ಲಿ ಗುರುಗುರು ಶಬ್ದವಾಗುತ್ತ ಧೃಷ್ಟದ್ಯುಮ್ನನ ಪ್ರಾಣ ಜಾರಿತು. ಆನಂತರ ಅಶ್ವತ್ಥಾಮ ಬೊಬ್ಬಿರಿದು ಬಾಗಿಲನ್ನು ಒಡೆದು ಶಿಖಂಡಿಯ ಅರಮನೆಯನ್ನು ಹೊಕ್ಕ. ಅವನನ್ನು ತರಿದು ಹಾಕಿದ. ಉತ್ತಮೌಂಜಸನನ್ನು ಹುಡುಕಿ ಹೊಡೆದ. ಯುಧಾಮನ್ಯುವಿನ ಕೋಣೆಯ ಬಾಗಿಲನ್ನು ಮುರಿದು ಹೊಕ್ಕು ಅವನನ್ನು ಎಚ್ಚರಿಸಿ ಸೀಳಿಹಾಕಿದ.
ಪದಾರ್ಥ (ಕ.ಗ.ಪ)
ಉರಲು-ನೇಣು, ಗೋಣು-ಕೊರಲು, ಅಸು-ಪ್ರಾಣ, ಕದ-ಬಾಗಿಲು, ಮೈಯರಿಹಿಸಿ-ಎಚ್ಚರಿಸಿ, ವಿದಾರಿಸು-ಸೀಳು
ಟಿಪ್ಪನೀ (ಕ.ಗ.ಪ)
- ಶಿಖಂಡಿ-ದ್ರುಪದನ ಒಬ್ಬ ಮಗ. ಅವನನ್ನು ಪಾಂಡವರು ಮುಂದಿಟ್ಟುಕೊಂಡು ಭೀಷ್ಮ ಶಸ್ತ್ರ ತ್ಯಾಗ ಮಾಡುವಂತೆ ಮಾಡಿ ಅವನನ್ನು ಶರಶಯನಕ್ಕೆ ಒಳಗು ಮಾಡಿದರು. (ಭೀಷ್ಮ ಪರ್ವದ 10ನೆಯ ಸಂಧಿಯ, 1 ರಿಂದ 9 ರ ವರೆಗಿನ ಪದ್ಯಗಳನ್ನು ನೋಡಿ) 2) ಉತ್ತಮೌಂಜಸ ದ್ರುಪದನ ಮತ್ತೊಬ್ಬ ಮಗ 3)ಯುಧಾಮನ್ಯು-ಪಾಂಚಾಲದೇಶದ ಅರಸು.
ಮೂಲ ...{Loading}...
ಉರಲ ಹತ್ತಿಸಿ ಸೆಳೆಯೆ ಗೋಣಲಿ
ಗುರುಗುರಿಸಲಸು ಜಾರಿದುದು ಬೊ
ಬ್ಬಿರಿದು ಹೊಕ್ಕನು ಕದವನೊದೆದು ಶಿಖಂಡಿಯರಮನೆಯ
ತರಿದನಾತನನುತ್ತಮೌಂಜಸ
ನರಸಿ ಹೊಯ್ದನು ಹೊಕ್ಕು ಬಾಗಿಲ
ಮುರಿದು ಮೈಯರಿಹಿಸಿ ಯುಧಾಮನ್ಯುವ ವಿದಾರಿಸಿದ ॥32॥
೦೩೩ ಗಜಬಜವಿದೇನೆನುತ ನಿದ್ರೆಯ ...{Loading}...
ಗಜಬಜವಿದೇನೆನುತ ನಿದ್ರೆಯ
ಮಜಡರೊಳಗೊಳಗರಿದರೀತನ
ಭುಜಬಲಕೆ ಮಲೆತವರ ಕಾಣೆನು ಸೃಂಜಯಾದಿಗಳ
ರಜನಿಯಲಿ ರೌಕುಳವ ಮಾಡಿದ
ನಜಿತಸಾಹಸನಿತ್ತ ದ್ರುಪದಾ
ತ್ಮಜೆಯ ಭವನದ ಹೊರೆಗೆ ಬಂದನು ಪಾಂಡವರನರಸಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಜಬಜ ಶಬ್ದವಿದೇನೆನ್ನುತ್ತ ನಿದ್ರೆಯ ಜಡದಲ್ಲಿದ್ದವರು ಒಳಗೊಳಗೇ ಅಶ್ವತ್ಥಾಮನ ಕೃತ್ಯವನ್ನು ತಿಳಿದರು. ಆದರೆ ಇವನ ಭುಜಬಲವನ್ನು ಸೃಂಜಯಾದಿಗಳು ಕೂಡಾ ಎದುರಿಸಿ ನಿಲ್ಲಲಿಲ್ಲ. ರಾತ್ರಿಯಲ್ಲಿ ಅಬ್ಬರವನ್ನು ಮಾಡಿದ ನಂತರ ಸೋಲಿಲ್ಲದ ಸಾಹಸಿಯಾದ ಅಶ್ವತ್ಥಾಮನು ಪಾಂಡವರನ್ನು ಹುಡುಕುತ್ತಾ ದ್ರೌಪದಿಯ ಭವನದ ಸಮೀಪಕ್ಕೆ ಬಂದ.
ಪದಾರ್ಥ (ಕ.ಗ.ಪ)
ಮಜಡ-ಜಡ, ಮಲೆತವರ-ಎದುರಿಸಿ ನಿಂದವರ, ರಜನಿ-ರಾತ್ರಿ, ರೌಕುಳ-ಅಬ್ಬರ, ಅಜಿತಸಾಹಸ-ಸೋಲಿಲ್ಲದ ಸಾಹಸಿ, ದ್ರುಪದಾತ್ಮಜೆ-ದ್ರೌಪದಿ, ಹೊರೆಗೆ-ಸಮೀಪಕ್ಕೆ, ಅರಸಿ-ಹುಡುಕುತ್ತಾ
ಮೂಲ ...{Loading}...
ಗಜಬಜವಿದೇನೆನುತ ನಿದ್ರೆಯ
ಮಜಡರೊಳಗೊಳಗರಿದರೀತನ
ಭುಜಬಲಕೆ ಮಲೆತವರ ಕಾಣೆನು ಸೃಂಜಯಾದಿಗಳ
ರಜನಿಯಲಿ ರೌಕುಳವ ಮಾಡಿದ
ನಜಿತಸಾಹಸನಿತ್ತ ದ್ರುಪದಾ
ತ್ಮಜೆಯ ಭವನದ ಹೊರೆಗೆ ಬಂದನು ಪಾಂಡವರನರಸಿ ॥33॥
೦೩೪ ಇದು ಯುಧಿಷ್ಠಿರ ...{Loading}...
ಇದು ಯುಧಿಷ್ಠಿರ ರಾಜಗೃಹವೆಂ
ದೊದೆದು ಕದವನು ಕಾಹಿನವರನು
ಸದೆದು ಹೊಕ್ಕನು ಸಜ್ಜೆಯಲಿ ಧರ್ಮಜನ ನಂದನನ
ಒದೆದಡೆದ್ದನು ಸುರಗಿಯಲಿ ಕಾ
ದಿದನು ಖಡುಗವ ಜಡಿದು ನಿಮಿಷಾ
ರ್ಧದಲಿ ತಲೆಯನು ನೆಗಹಿ ಪ್ರತಿವಿಂಧ್ಯಕನನಸುಗಳೆದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಯುಧಿಷ್ಠಿರನ ಅರಮನೆಯೆಂದು ಕದವನ್ನು ಒದೆದು, ಕಾವಲಿನವರನ್ನು ಬಡಿದು ಒಳಹೊಕ್ಕನು. ಮಲಗುವ ಕೋಣೆಯಲ್ಲಿ ಧರ್ಮರಾಯನ ಮಗನನ್ನು ಒದೆದರೆ ಅವನು ಎದ್ದು ಕತ್ತಿಯನ್ನು ಹಿಡಿದು ಕಾದಿದನು. ಅಶ್ವತ್ಥಾಮ ಖಡ್ಗವನ್ನು ಬಡಿದು, ನಿಮಷಾರ್ಧದಲ್ಲಿ ತಲೆಯನ್ನು ಎತ್ತಿಹಿಡಿದು ಪ್ರತಿವಿಂಧ್ಯಕನ ಪ್ರಾಣವನ್ನು ತೆಗೆದ.
ಪದಾರ್ಥ (ಕ.ಗ.ಪ)
ರಾಜಗೃಹ-ಅರಮನೆ, ಕದ-ಬಾಗಿಲು, ಕಾಹಿನವರು-ಕಾವಲಿನವರು, ಸದೆದು-ಬಡಿದು, ಹೊಡೆದು, ಸಜ್ಜೆ-ಮಲಗುವ ಕೋಣೆ, ಹಾಸಿಗೆ, ಧರ್ಮಜನನಂದನ-ಧರ್ಮರಾಯನ ಮಗ, ಪ್ರತಿವಿಂಧ್ಯ, ಸುರಗಿ-ಕತ್ತಿ, ನೆಗಹಿ-ಎತ್ತಿಹಿಡಿದು, ಅಸುಗಳೆದ-ಪ್ರಾಣವನ್ನು ತೆಗೆದ
ಮೂಲ ...{Loading}...
ಇದು ಯುಧಿಷ್ಠಿರ ರಾಜಗೃಹವೆಂ
ದೊದೆದು ಕದವನು ಕಾಹಿನವರನು
ಸದೆದು ಹೊಕ್ಕನು ಸಜ್ಜೆಯಲಿ ಧರ್ಮಜನ ನಂದನನ
ಒದೆದಡೆದ್ದನು ಸುರಗಿಯಲಿ ಕಾ
ದಿದನು ಖಡುಗವ ಜಡಿದು ನಿಮಿಷಾ
ರ್ಧದಲಿ ತಲೆಯನು ನೆಗಹಿ ಪ್ರತಿವಿಂಧ್ಯಕನನಸುಗಳೆದ ॥34॥
೦೩೫ ಜನಪ ಕೇಳೈ ...{Loading}...
ಜನಪ ಕೇಳೈ ಬಳಿಕ ಸುತಸೋ
ಮನನು ಶ್ರುತಕೀರ್ತಿಯ ಶತಾನೀ
ಕನನು ಶ್ರುತವರ್ಮನನು ತರಿದನು ದ್ರೌಪದೀಸುತರ
ಜನಪರೈವರ ತಲೆಗಳೆಂದೇ
ಕನಕರಥದೊಳಗಿರಿಸಿ ಹೊಕ್ಕನು
ಮನೆಮನೆಗಳಲಿ ಸವರಿದನು ಸೋಮಪ್ರಬದ್ಧಕರ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೇ ಕೇಳು. ನಂತರ ದ್ರೌಪದಿಯ ಮಕ್ಕಳಾದ ಸುತಸೋಮನನ್ನು, ಶ್ರುತಕೀರ್ತಿಯನ್ನು ಶತಾನೀಕನನ್ನು, ಶ್ರುತವರ್ಮನನ್ನು ತರಿದು ಹಾಕಿದ. ಪಾಂಡವರೈವರ ತಲೆಗಳೆಂದೇ ತಿಳಿದು ಅವನ್ನು ತನ್ನ ಚಿನ್ನದ ರಥದಲ್ಲಿರಿಸಿ, ಮನೆಮೆನಗಳಿಗೆ ಹೊಕ್ಕು ಸೋಮಪ್ರಬದ್ಧಕರನ್ನು ಸವರಿಹಾಕಿದ.
ಪದಾರ್ಥ (ಕ.ಗ.ಪ)
ಸುತಸೋಮ, ಶ್ರುತಕೀರ್ತಿ, ಶತಾನೀಕ, ಶ್ರುತವರ್ಮ, ಇವರುಗಳು ಭೀಮ, ಅರ್ಜುನ, ನಕುಲ, ಸಹದೇವರಿಂದ ದ್ರೌಪದಿಯಲ್ಲಿ ಜನಿಸಿದರು, ಕನಕರಥ-ಚಿನ್ನದ ರಥ, ಸವರು-ಕತ್ತರಿಸು, ಕೊಲ್ಲು
ಟಿಪ್ಪನೀ (ಕ.ಗ.ಪ)
‘ಸೋಮ ಪ್ರಬದ್ಧಕ’ ಎಂಬ ಶಬ್ಧವು ಯಾರನ್ನು ಸೂಚಿಸುತ್ತದೆಂಬುದು ಸ್ಪಷ್ಟವಾಗುವುದಿಲ್ಲ.
ಮೂಲ ...{Loading}...
ಜನಪ ಕೇಳೈ ಬಳಿಕ ಸುತಸೋ
ಮನನು ಶ್ರುತಕೀರ್ತಿಯ ಶತಾನೀ
ಕನನು ಶ್ರುತವರ್ಮನನು ತರಿದನು ದ್ರೌಪದೀಸುತರ
ಜನಪರೈವರ ತಲೆಗಳೆಂದೇ
ಕನಕರಥದೊಳಗಿರಿಸಿ ಹೊಕ್ಕನು
ಮನೆಮನೆಗಳಲಿ ಸವರಿದನು ಸೋಮಪ್ರಬದ್ಧಕರ ॥35॥
೦೩೬ ಸೀಳ ಬಡಿದನು ...{Loading}...
ಸೀಳ ಬಡಿದನು ಸಮರಥರ ಪಾಂ
ಚಾಳ ರಾವುತರನು ಮಹಾರಥ
ಜಾಲವನು ಜೋದರನು ಭಾರಿಯ ಪಾರಕವ್ರಜದ
ಸಾಲ ಹೊಯ್ದನು ಹುಯ್ಯಲಿಗೆ ಹೊಗು
ವಾಳ ತರಿದನು ಖಡ್ಗಮುಷ್ಟಿಯ
ಕಾಲಭೈರವ ಬೀದಿವರಿದನು ಕೇರಿಕೇರಿಯಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮರಥರುಗಳನ್ನು ಸೀಳಿದನು. ಪಾಂಚಾಲರ ರಾವುತರನ್ನು, ಮಹಾರಥರ ಸಮೂಹವನ್ನು, ಯೋಧರನ್ನು, ಭಾರಿಯ ಕಾವಲಿನವರ ಸಮೂಹದ ಸಾಲುಗಳನ್ನು ಹೊಡೆದನು. ಹುಯ್ಯಲಿನ ಶಬ್ದದಿಂದ ಎಚ್ಚತ್ತು ಓಡಿಹೋಗುತ್ತಿದ್ದವರನ್ನು ತರಿದುಹಾಕಿದ. ಮುಷ್ಟಿಯಲ್ಲಿ ಖಡ್ಗವನ್ನು ಹಿಡಿದ ಕಾಲಭೈರವ ರೂಪದ ಅಶ್ವತ್ಥಾಮ ಕೇರಿ ಕೇರಿಗಳಲ್ಲಿ ಸ್ವೇಚ್ಛೆಯಿಂದ ತಿರುಗಿದ.
ಪದಾರ್ಥ (ಕ.ಗ.ಪ)
ಸೀಳಬಡಿ-ಸೀಳಿ ಹೋಗುವಂತೆ ಹೊಡೆ, ರಾವುತ-ಕುದುರೆ ಸವಾರ, ಜೋಧ-ಯೋಧ(ಸಂ) ಪಾರಕವ್ರಜ-ಕಾವಲಿನವರ ಸಮೂಹ, ಹುಯ್ಯಲು-ಕಿರುಚಾಟ, ಕೂಗಾಟ, ಕಾಲಭೈರವ-ಪ್ರಳಯಕಾಲದ ರುದ್ರ, ಬೀದಿವರಿ-ಸ್ವೇಚ್ಛೆಯಿಂದ ತಿರುಗು.
ಮೂಲ ...{Loading}...
ಸೀಳ ಬಡಿದನು ಸಮರಥರ ಪಾಂ
ಚಾಳ ರಾವುತರನು ಮಹಾರಥ
ಜಾಲವನು ಜೋದರನು ಭಾರಿಯ ಪಾರಕವ್ರಜದ
ಸಾಲ ಹೊಯ್ದನು ಹುಯ್ಯಲಿಗೆ ಹೊಗು
ವಾಳ ತರಿದನು ಖಡ್ಗಮುಷ್ಟಿಯ
ಕಾಲಭೈರವ ಬೀದಿವರಿದನು ಕೇರಿಕೇರಿಯಲಿ ॥36॥
೦೩೭ ಎಲೆಲೆ ಕವಿ ...{Loading}...
ಎಲೆಲೆ ಕವಿ ಕಳ್ಳೇರುಕಾರನ
ತಲೆಯ ಹೊಯ್ಹೊಯ್ಯೆನುತ ನಿದ್ರಾ
ಕುಳರು ಗರ್ಜಿಸುತಾಗುಳಿಸಿ ತೂಕಡಿಸಿದರು ಮರಳಿ
ಕೆಲಕೆಲಬರರೆ ನಿದ್ರೆಗಳ ಕಳ
ವಳಿಗರೊರೆಗಳ ಕೊಂಡಡಾಯ್ದವ
ನೆಲಕೆ ಬಿಸುಟರು ಬತ್ತಳಿಕೆಯಲಿ ಹೂಡಿದರು ಧನುವ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೆ, ಮೇಲೆ ಬೀಳಿ. ಕದ್ದು ಯುದ್ಧಮಾಡಲು ಬಂದಿರುವವನ ತಲೆಯನ್ನು ಹೊಡೆ ಹೊಡೆ ಎನ್ನುತ್ತಾ ನಿದ್ರೆಯಲ್ಲಿದ್ದವರು ಗರ್ಜಿಸುತ್ತಾ ಆಕಳಿಸಿ ಪುನಃ ತೂಕಡಿಸಿದರು. ಅರೆ ನಿದ್ರೆಯಲ್ಲಿದ್ದು ಕಳವಳಿಸುತ್ತಿದ್ದ ಕೆಲವರು, ಒರೆಗಳನ್ನು ಹಿಡಿದು ಕತ್ತಿಯನ್ನು ನೆಲಕ್ಕೆ ಬಿಸುಟರು, ಬತ್ತಳಿಕೆಯಲ್ಲಿ ಬಿಲ್ಲನ್ನು ಹೂಡಿದರು.
ಪದಾರ್ಥ (ಕ.ಗ.ಪ)
ಕವಿ-ಮುತ್ತಿಕೊಳ್ಳು, ಮೇಲೆಬೀಳು, ಕಳ್ಳೇರುಕಾರ-ಕಳ್ಳತನದಲ್ಲಿ ಯುದ್ಧಕ್ಕೆ ಬಂದವನು, ನಿದ್ರಾಕುಳರು-ನಿದ್ರೆಯಲ್ಲಿದ್ದವರು, ಆಗುಳಿಸು-ಆಕಳಿಸು, ಕಳವಳಿಗರು-ಕಳವಳಗೊಂಡವರು.
ಟಿಪ್ಪನೀ (ಕ.ಗ.ಪ)
“ಒರೆಗಳ ಕೊಂಡಡಾಯ್ಧವ……………”
ಒರೆಯಿಂದ ಕತ್ತಿಯನ್ನು ಹಿರಿದು, ಒರೆಯನ್ನು ಬಿಸುಡುವ ಬದಲಿಗೆ ಒರೆಯನ್ನು ಕೈಗೆ ತೆಗೆದುಕೊಂಡು ಕತ್ತಿಯನ್ನು ಬಿಸುಡಿದ್ದಾರೆ. ಹಾಗೆಯೇ ಬಾಣವನ್ನು ಬಿಲ್ಲಿನಲ್ಲಿ ಹೂಡುವ ಬದಲಿಗೆ ಬಿಲ್ಲನ್ನು ಬತ್ತಳಿಕೆಯಲ್ಲಿ ಹೂಡಿದ್ದಾರೆ. ಇವು ಸೈನಿಕರ ಅರೆನಿದ್ರೆಯ ಮತ್ತು ಗಾಬರಿಯ ಪರಿಣಾಮಗಳು. ಮುಂದಿನ ಪದ್ಯದಲ್ಲಿಯೂ ಈ ವಿರೋಧಾಭಾಸವನ್ನು ಕವಿ ಸೊಗಸಾಗಿ ಚಿತ್ರಿಸಿದ್ದಾನೆ.
ಮೂಲ ...{Loading}...
ಎಲೆಲೆ ಕವಿ ಕಳ್ಳೇರುಕಾರನ
ತಲೆಯ ಹೊಯ್ಹೊಯ್ಯೆನುತ ನಿದ್ರಾ
ಕುಳರು ಗರ್ಜಿಸುತಾಗುಳಿಸಿ ತೂಕಡಿಸಿದರು ಮರಳಿ
ಕೆಲಕೆಲಬರರೆ ನಿದ್ರೆಗಳ ಕಳ
ವಳಿಗರೊರೆಗಳ ಕೊಂಡಡಾಯ್ದವ
ನೆಲಕೆ ಬಿಸುಟರು ಬತ್ತಳಿಕೆಯಲಿ ಹೂಡಿದರು ಧನುವ ॥37॥
೦೩೮ ಗಜವ ಹಲ್ಲಣಿಸಿದರು ...{Loading}...
ಗಜವ ಹಲ್ಲಣಿಸಿದರು ವಾಜಿ
ವ್ರಜಕೆ ರೆಂಚೆಯ ಹಾಯ್ಕಿದರು ಗಜ
ಬಜವಿದೇನೇನುತ ಗಾಲಿಗೆ ಬಿಗಿದು ಕುದುರೆಗಳ
ರಜನಿ ಬಂದುದೆ ಹಗಲು ಹೋಯಿತೆ
ಗಜಬಜದೊಳಕಟೆನುತ ಸುಭಟ
ವ್ರಜಸುವಿಹ್ವಳಕರಣರಿರಿದಾಡಿದರು ತಮ್ಮೊಳಗೆ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳಿಗೆ ಜೀನುಗಳನ್ನು ಹಾಕಿದರು, ಕುದುರೆಗಳಿಗೆ ಆನೆಗಳ ಮೇಲೆ ಹೊದಿಸುವ ಬಟ್ಟೆಗಳನ್ನು ಹಾಕಿದರು, ಇದೇನು ಗಜಬಜ ಎನ್ನುತ್ತಾ ಕುದುರೆಗಳನ್ನು ರಥದ ಗಾಲಿಗೆ ಕಟ್ಟಿದರು. ಈ ಗಲಿಬಿಯಲ್ಲಿ ರಾತ್ರಿ ಬಂದಿತೇ, ಹಗಲು ಹೋಯಿತೇ (ಅದು ನಿಜವಾಗಿ ರಾತ್ರಿ) ಅಯ್ಯೋ - ಎನ್ನುತ್ತಾ ವಿಹ್ವಲರಾದ ಸುಭಟರುಗಳು, ತಮ್ಮ ತಮ್ಮೊಳಗೇ ಇರಿದಾಡಿದರು.
ಪದಾರ್ಥ (ಕ.ಗ.ಪ)
ಹಲ್ಲಣಿಸು-ಹಲ್ಲಣವನ್ನು ತೊಡಿಸು, ಕುದುರೆಗೆ ಜೀನು ತೊಡಿಸು, ರಂಚೆ-ಆನೆಯ ಮೇಲೆ ಹಾಕುವ ಹಾಸಿಗೆ - ಬಟ್ಟೆ, ಗಾಲಿ-ಚಕ್ರ, ರಜನಿ-ರಾತ್ರಿ, ವ್ರಜ-ಸಮೂಹ, ಸುವಿಹ್ವಲಕರಣರು-ವಿಹ್ವಲಗೊಂಡ ಮನಸ್ಸಿನವರು.
ಟಿಪ್ಪನೀ (ಕ.ಗ.ಪ)
ಇದೇ ಸಂದರ್ಭವನ್ನು ರನ್ನ ಕವಿಯ ‘ಗದಾಯುದ್ಧಂ’ ಕಾವ್ಯದ 9ನೆಯ ಆಶ್ವಾಸದ ಇಪ್ಪತ್ತನೆಯ ಪದ್ಯದ ವಚನದಲ್ಲಿನ ವಿವರಕ್ಕೆ ಹೋಲಿಸಬಹುದು. ಅಲ್ಲಿ ಅದ್ಭುತವಾಗಿ ರೋಚಕವಾಗಿ ನಿರೂಪಿತವಾಗಿದೆ. ತೀ.ನಂ.ಶ್ರೀ.ಯವರ ‘ಗದಾಯುದ್ಧ ಸಂಗ್ರಹಂ’.
ಮೂಲ ...{Loading}...
ಗಜವ ಹಲ್ಲಣಿಸಿದರು ವಾಜಿ
ವ್ರಜಕೆ ರೆಂಚೆಯ ಹಾಯ್ಕಿದರು ಗಜ
ಬಜವಿದೇನೇನುತ ಗಾಲಿಗೆ ಬಿಗಿದು ಕುದುರೆಗಳ
ರಜನಿ ಬಂದುದೆ ಹಗಲು ಹೋಯಿತೆ
ಗಜಬಜದೊಳಕಟೆನುತ ಸುಭಟ
ವ್ರಜಸುವಿಹ್ವಳಕರಣರಿರಿದಾಡಿದರು ತಮ್ಮೊಳಗೆ ॥38॥
೦೩೯ ಲಾಯದಲಿ ಹೊಕ್ಕಿರಿದು ...{Loading}...
ಲಾಯದಲಿ ಹೊಕ್ಕಿರಿದು ಕುದುರೆಯ
ಬೀಯ ಮಾಡಿದನಂತಕಂಗೆಯ
ಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ
ರಾಯದಳ ಧರೆಯಂತೆ ನವಖಂ
ಡಾಯಮಾನವಿದಾಯ್ತು ಪಾಂಡವ
ರಾಯ ಕಟಕವ ಕೊಂದನಶ್ವತ್ಥಾಮ ಬೇಸರದೆ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲಾಯವನ್ನು ಪ್ರವೇಶಿಸಿ ಕುದುರೆಗಳನ್ನು ಇರಿದು ಯಮನಿಗೆ ಊಟಮಾಡಿಸಿದನು. ಖಡ್ಗದ ಹರಿತವಾದ ಅಲಗಿನಿಂದ ಆನೆಗಳನ್ನು ಯಮನಿಗೆ ಕೊಟ್ಟನು. ರಾಜನ ಸೈನ್ಯವು ಭೂಮಿಯ ಮೇಲಿನ ಅನೇಕ ಖಂಡಗಳಿದ್ದಂತೆ (ಭೂಭಾಗಗಳಿದ್ದಂತೆ) ಛಿದ್ರಛಿದ್ರವಾಯಿತು. ಪಾಂಡವ ಸೈನ್ಯವನ್ನು ಅಶ್ವತ್ಥಾಮ ಬೇಸರವಿಲ್ಲದೇ ಕೊಂದ.
ಪದಾರ್ಥ (ಕ.ಗ.ಪ)
ಲಾಯ-ಕುದುರೆ ಆನೆಗಳನ್ನು ಕಟ್ಟುವ ಜಾಗ, ಬೀಯ-ಆಹಾರ, ಊಟ, ವ್ಯಯ (ಸಂ) ಅಂತಕ-ಯಮ, ಅಡಾಯುಧ-ಕತ್ತಿ, ಧಾರೆ-ಹರಿತವಾದ ಅಲಗು, ಕುಂಜರವ್ರಜ-ಆನೆಗಳ ಸಮೂಹ, ನವಖಂಡಾಯಮಾನ-ಛಿದ್ರಛಿದ್ರ, ಕಟಕ-ಸೈನ್ಯ
ಮೂಲ ...{Loading}...
ಲಾಯದಲಿ ಹೊಕ್ಕಿರಿದು ಕುದುರೆಯ
ಬೀಯ ಮಾಡಿದನಂತಕಂಗೆಯ
ಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ
ರಾಯದಳ ಧರೆಯಂತೆ ನವಖಂ
ಡಾಯಮಾನವಿದಾಯ್ತು ಪಾಂಡವ
ರಾಯ ಕಟಕವ ಕೊಂದನಶ್ವತ್ಥಾಮ ಬೇಸರದೆ ॥39॥
೦೪೦ ದೊರೆಗಳೇನಾದರೊ ಯುಧಿಷ್ಠಿರ ...{Loading}...
ದೊರೆಗಳೇನಾದರೊ ಯುಧಿಷ್ಠಿರ
ನರ ವೃಕೋದರ ನಕುಲ ಸಹದೇ
ವರು ಮುರಾಂತಕ ಸಾತ್ಯಕಿಗಳೊಳಗಿಹರೆ ರೌರವಕೆ
ಹರನ ಖತಿಯೋ ಲಯಕೃತಾಂತನ
ವಿರಸಕೃತಿಯೋ ಸರ್ವದಳಸಂ
ಹರಣಕೇನು ನಿಮಿತ್ತವೆಂದುದು ಭೂಸುರವ್ರಾತ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಗಳು ಏನಾದರೋ, ಧರ್ಮರಾಯ, ಅರ್ಜುನ, ಭೀಮ, ನಕುಲ ಸಹದೇವರು, ಕೃಷ್ಣ, ಸಾತ್ಯಕಿ ಇವರುಗಳು ಒಳಗಿದ್ದಾರೆಯೆ. ಈ ರೌರವ ನರಕಕ್ಕೆ ಶಿವನ ಕೋಪ ಕಾರಣವೋ ಅಥವ ಪ್ರಳಯಕಾಲದ ಯಮನ ಕೋಪದ ಕೆಲಸವು ಕಾರಣವೋ. ಸಂಪೂರ್ಣ ಸೈನ್ಯದ ನಾಶಕ್ಕೆ ಏನು ಕಾರಣವಿರಬಹುದು - ಎಂದು ಬ್ರಾಹ್ಮಣ ಸಮೂಹವು ಆಶ್ಚರ್ಯಗೊಂಡಿತು.
ಪದಾರ್ಥ (ಕ.ಗ.ಪ)
ರೌರವ-ಒಂದು ಘೋರ ನರಕ, ಖತಿ-ಕೋಪ, ಲಯಕೃತಾಂತ-ಪ್ರಳಯ ಕಾಲದ ಯಮ, ವಿರಸ-ಕೋಪ
ಮೂಲ ...{Loading}...
ದೊರೆಗಳೇನಾದರೊ ಯುಧಿಷ್ಠಿರ
ನರ ವೃಕೋದರ ನಕುಲ ಸಹದೇ
ವರು ಮುರಾಂತಕ ಸಾತ್ಯಕಿಗಳೊಳಗಿಹರೆ ರೌರವಕೆ
ಹರನ ಖತಿಯೋ ಲಯಕೃತಾಂತನ
ವಿರಸಕೃತಿಯೋ ಸರ್ವದಳಸಂ
ಹರಣಕೇನು ನಿಮಿತ್ತವೆಂದುದು ಭೂಸುರವ್ರಾತ ॥40॥
೦೪೧ ಉಳಿದುದೇಳಕ್ಷೋಹಿಣೀದಳ ದೊಳಗೆ ...{Loading}...
ಉಳಿದುದೇಳಕ್ಷೋಹಿಣೀದಳ
ದೊಳಗೆ ನಾರೀನಿಕರ ವಿಪ್ರಾ
ವಳಿ ಕುಶೀಲವ ಸೂತ ಮಾಗಧ ವಂದಿಸಂದೋಹ
ಸುಳಿವ ಕಾಣೆನು ಕೈದುವಿಡಿದರ
ನುಳಿದು ಜೀವಿಸಿದಾನೆ ಕುದುರೆಗ
ಳೊಳಗೆ ಜವಿಯಿಲ್ಲೇನನಂಬೆನು ಜನಪ ಕೇಳ್ ಎಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಏಳು ಅಕ್ಷೋಹಿಣಿ ಸೈನ್ಯದಲ್ಲಿ ಮಹಿಳೆಯರ ಸಮೂಹ, ಬ್ರಾಹ್ಮಣ ಸಮೂಹ, ಸ್ತುತಿಪಾಠಕರು, ಸೂತರು, ಹೊಗಳುಭಟ್ಟರು ಮಾತ್ರ. ಬದುಕಿ ಉಳಿದರು. ಆಯುಧಗಳನ್ನು ಹಿಡಿದವರ ಸುಳಿವನ್ನು ಕಾಣೆ. ಬದುಕಿ ಉಳಿದ ಆನೆ ಕುದುರೆಗಳಲ್ಲಿ ಚಲನೆಯಿಲ್ಲ. ಇನ್ನು ಏನು ಹೇಳಲಿ ದೊರೆಯೇ ಕೇಳು ಎಂದು ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ಅಕ್ಷೋಹಿಣಿ: ಗದಾಪರ್ವದ 2 ಸಂಧಿಯ 8ನೆಯ - ಪದ್ಯದ ಟಿಪ್ಪಣಿಯನ್ನು ನೋಡಿ. ನಾರೀನಿಕರ-ಹೆಂಗಸರ ಸಮೂಹ, ವಿಪ್ರಾವಳಿ-ಬ್ರಾಹ್ಮಣ ಸಮೂಹ, ಕುಶೀಲವ-ಸ್ತುತಿಪಾಠಕರು, ಸೂತ, ಮಾಗಧ, ವಂದಿ-ಹೊಗಳುಭಟ್ಟರು (ಈ ಪದಗಳ ವಿವರಣೆಗೆ ಇದೇ ಪರ್ವದ 8ನೆಯ ಸಂಧಿಯ 42ನೆಯ ಪದ್ಯದ ಟಿಪ್ಪಣಿಯನ್ನು ನೋಡಿ) ಸಂದೋಹ-ಸಮೂಹ, ಜವಿ-ಚಲನೆ
ಮೂಲ ...{Loading}...
ಉಳಿದುದೇಳಕ್ಷೋಹಿಣೀದಳ
ದೊಳಗೆ ನಾರೀನಿಕರ ವಿಪ್ರಾ
ವಳಿ ಕುಶೀಲವ ಸೂತ ಮಾಗಧ ವಂದಿಸಂದೋಹ
ಸುಳಿವ ಕಾಣೆನು ಕೈದುವಿಡಿದರ
ನುಳಿದು ಜೀವಿಸಿದಾನೆ ಕುದುರೆಗ
ಳೊಳಗೆ ಜವಿಯಿಲ್ಲೇನನಂಬೆನು ಜನಪ ಕೇಳೆಂದ ॥41॥
೦೪೨ ಕೂಡೆ ಕಟ್ಟಿತು ...{Loading}...
ಕೂಡೆ ಕಟ್ಟಿತು ಕಿಚ್ಚು ತೆರಪಿನ
ಲೋಡುವಡೆ ಗುರುಸುತನ ಶರ ಮಿ
ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ
ಕೂಡೆ ಮಮ್ಮಳಿಯೋದುದೀ ಶರ
ಝಾಡಿಯಲಿ ಚತುರಂಗಬಲವ
ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಮ್ಮೆಗೇ ಬೆಂಕಿ ಸುತ್ತುವರಿಯಿತು. ಖಾಲಿಯಾಗಿರುವ ಜಾಗದಲ್ಲಿ (ಬೆಂಕಿಯಿಲ್ಲದೆಡೆ) ಓಡಿಹೋಗಬೇಕೆಂದರೆ ಅಶ್ವತ್ಥಾಮನ ಬಾಣ, ಅದನ್ನು ಮೀರಿ ಓಡಬೇಕೆಂದರೆ ಬಾಗಿಲುಗಳಲ್ಲಿ ಕೃಪವರ್ಮ ಮತ್ತು ಕೃಪರ ಹೊಡೆತ. ಈ ಬಾಣಗಳ ಹೊಡೆತದಿಂದ ಚತುರಂಗ ಬಲವೆಲ್ಲವೂ ರೂಪುಗೆಟ್ಟು ಸಾವಿಗೀಡಾಯಿತು. ಯುಧಿಷ್ಠಿರ ರಾಜನ ಪರಿವಾರ ನಡುಗಿಹೋಯಿತು, ಇನ್ನು ಏನು ಹೇಳಲಿ.
ಪದಾರ್ಥ (ಕ.ಗ.ಪ)
ಕೂಡೆ-ಕೂಡಲೆ, ತತ್ಕ್ಷಣ, ಕಟ್ಟಿತು-ಸುತ್ತುವರಿಯಿತು, ತೆರಪು-ಖಾಲಿ ಜಾಗ, ಎಸುಗೆ-ಎಸೆತ, ಹೊಡೆತ, ಮುಮ್ಮಳಿಯೋದುದು-ರೂಪಳಿದ ಸಾವಿಗೀಡಾಯಿತು, ಝೂಡಿ-ಹೊಡೆತ, ಅಕ್ಕಾಡು-ಅಳ್ಕಾಡು, ನಡುಗು.
ಮೂಲ ...{Loading}...
ಕೂಡೆ ಕಟ್ಟಿತು ಕಿಚ್ಚು ತೆರಪಿನ
ಲೋಡುವಡೆ ಗುರುಸುತನ ಶರ ಮಿ
ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ
ಕೂಡೆ ಮಮ್ಮಳಿಯೋದುದೀ ಶರ
ಝಾಡಿಯಲಿ ಚತುರಂಗಬಲವ
ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ ॥42॥
೦೪೩ ಬಸಿವ ರಕುತದಡಾಯುಧದ ...{Loading}...
ಬಸಿವ ರಕುತದಡಾಯುಧದ ನೆಣ
ವಸೆಯ ತೊಂಗಲುಗರುಳ ಬಂಧದ
ವಸನ ಕೈಮೈಗಳ ಕಠೋರಭ್ರುಕುಟಿ ಭೀಷಣದ
ಮುಸುಡ ಹೊಗರಿನ ದಂತದಂಶಿತ
ದಶನವಾಸದ ವೈರಿಹಿಂಸಾ
ವ್ಯಸನ ವೀರಾವೇಶಿ ಬಂದನು ಕೃಪನ ಸಮ್ಮುಖಕೆ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಕ್ತ ಸೋರುತ್ತಿರುವ ಖಡ್ಗದ, ಕೊಬ್ಬು ಮೆತ್ತಿದ ಗೊಂಚಲುಗರುಳು ಸಿಕ್ಕಿಕೊಂಡಿರುವ ಬಟ್ಟೆ ಮತ್ತು ಕೈ ಮೈಗಳ, ಉಗ್ರವಾದ ಹುಬ್ಬುಗಂಟಿನ ಭೀಕರತೆಯ, ಮುಖದ ಪ್ರಕಾಶದ, ಹಲ್ಲುಗಳಿಂದ ಕಚ್ಚಲ್ಪಟ್ಟ ತುಟಿಗಳ, ವೈರಿ ಹಿಂಸೆಯ ವ್ಯಸನಿಯೂ ವೀರಾವೇಶಿಯೂ ಆದ ಅಶ್ವತ್ಥಾಮ ಕೃಪಾಚಾರ್ಯನ ಸಮ್ಮಖಕ್ಕೆ ಬಂದ.
ಪದಾರ್ಥ (ಕ.ಗ.ಪ)
ಬಸಿವ-ಸೋರುತ್ತಿರುವ, ನೆಣವಸೆ-ಕೊಬ್ಬು , ತೊಂಗಲು-ಗೊಂಚಲು, ಬಂಧದ-ಸಿಕ್ಕಿಕೊಂಡಿರುವ, ವಸನ-ಬಟ್ಟೆ, ಭ್ರುಕುಟಿ-ಹುಬ್ಬು, ಮುಸುಡು-ಮುಖ, ಹೊಗರು-ಪ್ರಕಾಶ, ದಂತದಂಶಿತ-ಹಲ್ಲುಗಳಿಂದ ಕಚ್ಚಲ್ಪಟ್ಟ, ದಶನವಾಸ-ತುಟಿ, ವ್ಯಸನ-ಗೀಳು, ಆಸಕ್ತಿ.
ಮೂಲ ...{Loading}...
ಬಸಿವ ರಕುತದಡಾಯುಧದ ನೆಣ
ವಸೆಯ ತೊಂಗಲುಗರುಳ ಬಂಧದ
ವಸನ ಕೈಮೈಗಳ ಕಠೋರಭ್ರುಕುಟಿ ಭೀಷಣದ
ಮುಸುಡ ಹೊಗರಿನ ದಂತದಂಶಿತ
ದಶನವಾಸದ ವೈರಿಹಿಂಸಾ
ವ್ಯಸನ ವೀರಾವೇಶಿ ಬಂದನು ಕೃಪನ ಸಮ್ಮುಖಕೆ ॥43॥
೦೪೪ ಹೇಳಿದನು ಸೃಞ್ಜಯವಧೆಯ ...{Loading}...
ಹೇಳಿದನು ಸೃಂಜಯವಧೆಯ ಪಾಂ
ಚಾಲ ರಾಜಕುಮಾರವರ್ಗದ
ಮೌಳಿಗಳ ಬಲಿಗೊಟ್ಟ ಪರಿಯನು ಖಡ್ಗಪೂತನಿಗೆ
ಪಾಳೆಯದೊಳರಸಿದೆನು ಪಾಂಡುನೃ
ಪಾಲತನುಜರನವರು ಕೆಡುವರೆ
ಮೇಲುಗಾಹಿನ ವೀರನಾರಾಯಣನ ಕರುಣದಲಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮ ಕೃಪನಿಗೆ ಸೃಂಜಯ ವಧೆಯನ್ನು ಹೇಳಿದನು. ಪಾಂಚಾಲ ರಾಜಕುಮಾರರನ್ನು ಖಡ್ಗವೆಂಬ ಪೂತನಿಗೆ (ರಾಕ್ಷನಿಗೆ) ಬಲಿಕೊಟ್ಟರೀತಿಯನ್ನು ಹೇಳಿದನು. ಪಾಳೆಯದಲ್ಲಿ ಪಾಂಡುರಾಜನ ಮಕ್ಕಳನ್ನು ಹುಡುಕಿದೆ. ಆದರೆ ಅವರ ಮೇಲುಗಾಹಿನಲ್ಲಿರುವ ವೀರನಾರಾಯಣನ (ಕೃಷ್ಣನ) ಕರುಣೆಯಿಂದಾಗಿ, ಅವರು ಕೆಡುವುದಿಲ್ಲ.
ಪದಾರ್ಥ (ಕ.ಗ.ಪ)
ಮೌಳಿ-ತಲೆ, ಖಡ್ಗಪೂತನಿ-ಖಡ್ಗವೆಂಬರಾಕ್ಷಸಿ, (‘ಪೂತನಿ’ ಯೆಂಬುದು ಕೃಷ್ಣನು ಶಿಶುವಾಗಿದ್ದಾಗ ಅವನಿಗೆ ವಿಷದ ಮೊಲೆವಾಲನ್ನು ಕುಡಿಸಿ ಕೊಲ್ಲಲು ಬಂದ ರಾಕ್ಷಸಿ. ಈ ಹೆಸರನ್ನು ಸಾಮಾನ್ಯೀಕರಿಸಿ ‘ರಾಕ್ಷಸಿ ಎಂಬರ್ಥದಲ್ಲಿ ಇಲ್ಲಿ ಉಪಯೋಗಿಸಲಾಗಿದೆ) ಮೇಲುಗಾಹು-ಮೇಲಿನಿಂದ ಕಾಯುವ, ಕಾಪಾಡುವ.
ಟಿಪ್ಪನೀ (ಕ.ಗ.ಪ)
- “ಪಾಳೆಯದೊಳರಸಿದೆನು ಪಾಂಡು ನೃಪಾಲ ತನುಜರನವರು ಕೆಡುವರೆ ಮೇಲುಗಾಹಿನ ವೀರನಾರಾಯಣ ಕರುಣದಲಿ” ಎಂದು ಅಶ್ವತ್ಥಾಮ ಪಾಂಡವರನ್ನು ಹುಡುಕಿದ್ದಾಗಿ ಹೇಳುತ್ತಾನೆ. ಅವರು ಸಿಕ್ಕಲಿಲ್ಲವೆಂಬುದು ಇದರ ವಿವರಣೆ. ಆದರೆ ಇದೇ ಸಂಧಿಯ ಪದ್ಯ. 35ರಲ್ಲಿ “ತರಿದನು ದ್ರೌಪದೀಸುತರ ….. ಜನಪರೈವರ ತಲೆಗಳೆಂದೇ ಕನಕರಥದೊಳಗಿರಿಸಿ ಹೊಕ್ಕನು ………” ಎಂದು ಹೇಳಿರುವಲ್ಲಿ, ದ್ರೌಪದಿಯ ಐದು ಜನ ಮಕ್ಕಳನ್ನು ಪಾಂಡವರೆಂದೇ ಭಾವಿಸಿ, ಅವರನ್ನು ಅಶ್ವತ್ಥಾಮ ತರಿದು ಹಾಕಿದ ಎಂದು ಅರ್ಥವಾಗುತ್ತದೆ. ಈ ವ್ಯತ್ಯಾಸಕ್ಕೆ ಕಾರಣ ಸ್ಪಷ್ಟವಾಗುವುದಿಲ್ಲ. ಮುಂದೆ 10ನೆಯ ಸಂಧಿಯ 6 - 7ನೆಯ ಪದ್ಯಗಳಲ್ಲಿ ಅಶ್ವತ್ಥಾಮ ಪಾಂಡವರ ಐದು ಜನ ಮಕ್ಕಳನ್ನು ಕೊಂದುದಾಗಿಯೂ, ಪಾಂಡವರು, ಸಿಕ್ಕಿಲಿಲ್ಲವಾಗಿಯೂ ಕೃಪನು ದುರ್ಯೋಧನನಿಗೆ ತಿಳಿಸುತ್ತಾನೆ.
ಮೂಲ ...{Loading}...
ಹೇಳಿದನು ಸೃಂಜಯವಧೆಯ ಪಾಂ
ಚಾಲ ರಾಜಕುಮಾರವರ್ಗದ
ಮೌಳಿಗಳ ಬಲಿಗೊಟ್ಟ ಪರಿಯನು ಖಡ್ಗಪೂತನಿಗೆ
ಪಾಳೆಯದೊಳರಸಿದೆನು ಪಾಂಡುನೃ
ಪಾಲತನುಜರನವರು ಕೆಡುವರೆ
ಮೇಲುಗಾಹಿನ ವೀರನಾರಾಯಣನ ಕರುಣದಲಿ ॥44॥