೦೦೦ ಸೂ ಗಣ್ಡುಗಲಿ ...{Loading}...
ಸೂ. ಗಂಡುಗಲಿ ಕದನ ಪ್ರಚಂಡನ
ಖಂಡ ಭುಜಬಲ ಧರ್ಮಸುತ ಮುಂ
ಕೊಂಡು ರಣದಲಿ ಕಾದಿ ಗೆಲಿದನು ಮಾದ್ರ ಭೂಪತಿಯ
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನಾ : ಗಂಡುಗಲಿ, ಕದನಪ್ರಚಂಡ, ಅಖಂಡ ಭುಜಬಲನಾದ ಧರ್ಮರಾಯನು ಉತ್ಸಾಹದಿಂದ ಯುದ್ಧದಲ್ಲಿ ಹೋರಾಡಿ ಮಾದ್ರಭೂಪತಿಯಾದ ಶಲ್ಯನನ್ನು ಗೆದ್ದ.
ಪದಾರ್ಥ (ಕ.ಗ.ಪ)
ಪ್ರಚಂಡ-ಅಸಾಮಾನ್ಯ, ಭಯಂಕರ, ಅಖಂಡ-ಚ್ಯುತಿಯಿಲ್ಲದ, ಮುಂಕೊಂಡು-ಉತ್ಸಾಹಿಸಿ.
ಮೂಲ ...{Loading}...
ಸೂ. ಗಂಡುಗಲಿ ಕದನ ಪ್ರಚಂಡನ
ಖಂಡ ಭುಜಬಲ ಧರ್ಮಸುತ ಮುಂ
ಕೊಂಡು ರಣದಲಿ ಕಾದಿ ಗೆಲಿದನು ಮಾದ್ರ ಭೂಪತಿಯ
೦೦೧ ಒಳಗೆ ಢಗೆ ...{Loading}...
ಒಳಗೆ ಢಗೆ ನಗೆ ಹೊರಗೆ ಕಳವಳ
ವೊಳಗೆ ಹೊರಗೆ ನವಾಯಿ ಡಿಳ್ಳಸ
ವೊಳಗೆ ಹೊರಗೆ ಸಘಾಡಮದ ಬಲುಬೇಗೆಯೊಳಗೊಳಗೆ
ಬಲುಹು ಹೊರಗೆ ಪರಾಭವದ ಕಂ
ದೊಳಗೆ ಕಡುಹಿನ ಕಲಿತನದ ಹಳ
ಹಳಿಕೆ ಹೊರಗೆ ಮಹೀಶ ಹದನಿದು ನಿನ್ನ ನಂದನನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳಗೆ ಕಾವು, ಹೊರಗೆ ನಗೆ, ಒಳಗೆ ಕಳವಳ, ಹೊರಗೆ ಠೀವಿ; ಒಳಗೆ ಗಾಬರಿ, ಹೊರಗೆ ಘಾಡವಾದ ಮದ; ಒಳಗೆ ಅತಿಹೆಚ್ಚಾದ ಬೆಂಕಿ, ಹೊರಗೆ ಗಟ್ಟಿತನ; ಒಳಗೆ ಸೋಲಿನಿಂದ ಕಳೆಗುಂದಿದ ಸ್ಥಿತಿ, ಹೊರಗೆ ಪರಾಕ್ರಮದ ಶೌರ್ಯದ ಆವೇಶ. ಇದು ನಿನ್ನ ಮಗನಾದ ದುರ್ಯೋಧನನ ಸ್ಥಿತಿ - ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಢಗೆ-ತಾಪ , ಕಾವು, ನವಾಯಿ-ಠೀವಿ, ಡಿಳ್ಳಿಸ-ಗಾಬರಿ ಬೇಗೆ-ಬೆಂಕಿ, ಬಲುಹು-ಶಕ್ತಿ, ಪರಾಭವ-ಸೋಲು, ಕಂದು-ಕಳೆಗುಂದು, ಕಡುಹು-ಪರಾಕ್ರಮ, ಕಲಿತನ-ಶೌರ್ಯ, ಹಳಹಳಿಕೆ-ಆವೇಶ, ಹದನು-ಸ್ಥಿತಿ, ಕಾರಣ
ಟಿಪ್ಪನೀ (ಕ.ಗ.ಪ)
ಸೋತು ಹೋಗುತ್ತಿದ್ದರೂ ಸೋತಿಲ್ಲವೆಂದು ಹೊರಗೆ ಸುಳ್ಳುಧೈರ್ಯವನ್ನು ಪ್ರಕಟಿಸುತ್ತಿರುವ ಸುಯೋಧನನ ಮನಃ ಸ್ಥಿತಿಯನ್ನು ಕವಿ ಇಲ್ಲಿ ಸೊಗಸಾಗಿ ವಿವರಿಸಿದ್ದಾನೆ.
ಮೂಲ ...{Loading}...
ಒಳಗೆ ಢಗೆ ನಗೆ ಹೊರಗೆ ಕಳವಳ
ವೊಳಗೆ ಹೊರಗೆ ನವಾಯಿ ಡಿಳ್ಳಸ
ವೊಳಗೆ ಹೊರಗೆ ಸಘಾಡಮದ ಬಲುಬೇಗೆಯೊಳಗೊಳಗೆ
ಬಲುಹು ಹೊರಗೆ ಪರಾಭವದ ಕಂ
ದೊಳಗೆ ಕಡುಹಿನ ಕಲಿತನದ ಹಳ
ಹಳಿಕೆ ಹೊರಗೆ ಮಹೀಶ ಹದನಿದು ನಿನ್ನ ನಂದನನ ॥1॥
೦೦೨ ನೆಗ್ಗಿದನು ಗಾಙ್ಗೇಯನಮರರೊ ...{Loading}...
ನೆಗ್ಗಿದನು ಗಾಂಗೇಯನಮರರೊ
ಳೊಗ್ಗಿದನು ಕಲಿದ್ರೋಣನೆನ್ನವ
ನಗ್ಗಳಿಕೆಗೂಣೆಯವ ಬೆರಸಿದನೆನ್ನ ಬಿಂಬದಲಿ
ಉಗ್ಗಡದ ರಣವಿದಕೆ ಶಲ್ಯನ
ನಗ್ಗಿಸುವನೀ ಕೌರವೇಶ್ವರ
ನೆಗ್ಗ ನೋಡುವೆನೆಂಬವೊಲು ರವಿಯಡರ್ದನಂಬರವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮ ನುಗ್ಗಾಗಿದ್ದಾನೆ, ದ್ರೋಣ ದೇವತೆಗಳಲ್ಲಿ ಸೇರಿ ಹೋದ (ಮರಣ ಹೊಂದಿದ), ನನ್ನವನಾದ, ನನ್ನ ಮಗ (ಕರ್ಣ) ನನ್ನ ಬಿಂಬಕ್ಕೆ ಕುಂದನ್ನು ಸೇರಿಸಿದ. ಈ ಯುದ್ಧವು ಅತಿಶಯವಾದುದು, ಇದಕ್ಕೆ ಸೇನಾಧಿಪತಿಯಾಗಿ ಮಾಡುವುದರ ಮೂಲಕ ಕೌರವ ಶಲ್ಯನನ್ನು ಗೌರವಿಸುತ್ತಿದ್ದಾನೆ, ದುರ್ಯೋಧನನ ದಡ್ಡತನವನ್ನು ನೋಡುತ್ತೇನೆಂಬಂತೆ ಸೂರ್ಯ ಆಕಾಶಕ್ಕೆ ಬಂದ.
ಪದಾರ್ಥ (ಕ.ಗ.ಪ)
ನೆಗ್ಗು-ನುಗ್ಗಾಗು ಒಗ್ಗು-ಗುಂಪಿನಲ್ಲಿ ಸೇರು ಅಗ್ಗಳಿಕೆ-ಹಿರಿಮೆ ಊಣಯ- ಕುಂದು ಉಗ್ಗಡ-ಅತಿಶಯವಾದ, ಅಗ್ಗಿಸು-ಗೌರವಿಸು, ಅಡರು-ಹತ್ತು.
ಟಿಪ್ಪನೀ (ಕ.ಗ.ಪ)
ನೆಗ್ಗಿದನು ಗಾಂಗೇಯ -ಭೀಷ್ಮನ ಶರಶಯನ ಅಮರರೊಳಗ್ಗಿದನು ಕಲಿದ್ರೋಣ-ದ್ರೋಣನ ಮರಣ
ಎನ್ನವನಗ್ಗಳಿಕೆಗೂಣೆಯವ ಬೆರಸಿದನು-ಕರ್ಣನ ಮರಣ
ಮೂಲ ...{Loading}...
ನೆಗ್ಗಿದನು ಗಾಂಗೇಯನಮರರೊ
ಳೊಗ್ಗಿದನು ಕಲಿದ್ರೋಣನೆನ್ನವ
ನಗ್ಗಳಿಕೆಗೂಣೆಯವ ಬೆರಸಿದನೆನ್ನ ಬಿಂಬದಲಿ
ಉಗ್ಗಡದ ರಣವಿದಕೆ ಶಲ್ಯನ
ನಗ್ಗಿಸುವನೀ ಕೌರವೇಶ್ವರ
ನೆಗ್ಗ ನೋಡುವೆನೆಂಬವೊಲು ರವಿಯಡರ್ದನಂಬರವ ॥2॥
೦೦೩ ಸೂಳವಿಸಿದುವು ಸನ್ನೆಯಲಿ ...{Loading}...
ಸೂಳವಿಸಿದುವು ಸನ್ನೆಯಲಿ ನಿ
ಸ್ಸಾಳ ದಳಪತಿ ಕುರುಬಲದ ದೆ
ಖ್ಖಾಳವನು ನೋಡಿದನು ತೂಗಾಡಿದನು ಮಣಿಶಿರವ
ಆಳು ನೆರೆದಿರೆ ನಾಲ್ಕು ದಿಕ್ಕಿನ
ಮೂಲೆ ನೆರೆಯದು ಮುನ್ನವೀಗಳು
ಪಾಳೆಯದ ಕಡೆವೀಡಿಗೈದದು ಶಿವಶಿವಾಯೆಂದ ॥3॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧ ಪ್ರಾರಂಭಿಸಲು ಸೂಚನೆಯಾದ ಕೂಡಲೆ ನಿಸ್ಸಾಳವೆಂಬ ವಾದ್ಯಗಳು ಜೋರಾಗಿ ಶಬ್ದಮಾಡಿದವು. ಸೇನಾಪತಿಯಾದ ಶಲ್ಯ ಕೌರವ ಬಲದ ವೈಭವವನ್ನು ನೋಡಿದನು; ತನ್ನ ಮಣಿಖಚಿತ ಕಿರೀಟವುಳ್ಳ ತಲೆಯನ್ನು ತೂಗಾಡಿದ. ಯುದ್ಧ ಪ್ರಾರಂಭದ ಮೊದಲ ದಿನಗಳಲ್ಲಿ ಸೈನಿಕರು ಯುದ್ಧರಂಗದಲ್ಲಿ ಸೇರಿದರೆ ನಾಲ್ಕೂ ದಿಕ್ಕುಗಳ ಮೂಲೆಗಳೇ ಸಾಲುತ್ತಿರಲಿಲ್ಲ; ಆದರೆ ಈಗ ತಮ್ಮ ಪಾಳೆಯದ ಕಡೆಯಭಾಗದ ಬೀಡಾರಗಳವರೆಗಾದರೂ ಸೈನ್ಯವಿಲ್ಲ; ಶಿವಶಿವಾ! ಎಂದ.
ಪದಾರ್ಥ (ಕ.ಗ.ಪ)
ಸೂಳವಿಸು-ಧ್ವನಿಮಾಡು, ಬಾಜಿಸು ಸನ್ನೆ-ಸೌಂಜ್ಞೆ, ಸೂಚನೆ ನಿಸ್ಸಾಳ- ಒಂದು ರಣವಾದ್ಯ, ದೆಖ್ಖಾಳ-ಆಡಂಬರ, ವೈಭವ, ಕಡೆವೀಡು-ಕಡೆಯ ಬೀಡಾರ.
ಮೂಲ ...{Loading}...
ಸೂಳವಿಸಿದುವು ಸನ್ನೆಯಲಿ ನಿ
ಸ್ಸಾಳ ದಳಪತಿ ಕುರುಬಲದ ದೆ
ಖ್ಖಾಳವನು ನೋಡಿದನು ತೂಗಾಡಿದನು ಮಣಿಶಿರವ
ಆಳು ನೆರೆದಿರೆ ನಾಲ್ಕು ದಿಕ್ಕಿನ
ಮೂಲೆ ನೆರೆಯದು ಮುನ್ನವೀಗಳು
ಪಾಳೆಯದ ಕಡೆವೀಡಿಗೈದದು ಶಿವಶಿವಾಯೆಂದ ॥3॥
೦೦೪ ಗಜಕೆ ಗುಳವನು ...{Loading}...
ಗಜಕೆ ಗುಳವನು ಬೀಸಿ ವಾಜಿ
ವ್ರಜವ ಹಲ್ಲಣಿಸಿದರು ಗಾಲಿಯ
ಗಜರು ಘೀಳಿಡೆ ನೊಗನ ಹೆಗಲಲಿ ಕುಣಿದವಶ್ವಚಯ
ಭುಜದ ಹೊಯ್ಲಿನ ಹರಿಗೆಗಳ ಗಜ
ಬಜದ ಬಿಲುಜೇವಡೆಯ ರವದ
ಕ್ಕಜದ ಕಾಲಾಳೊದಗಿತವನೀಪತಿಯ ಸನ್ನೆಯಲಿ ॥4॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಸನ್ನೆ ಮಾಡಲು ಆನೆಯ ಮೇಲೆ ಪಾವುಡವನ್ನು ಬೀಸಿ ಹೊದಿಸಿದರು; ಕುದುರೆಗಳಿಗೆ ಜೀನುಗಳನ್ನು ಕಟ್ಟಿದರು, ರಥದ ಗಾಲಿಗಳು ಜೋರಾಗಿ ಶಬ್ದ ಮಾಡುವಂತೆ ಹೆಗಲ ಮೇಲಿನ ನೊಗಸಹಿತ ಕುದುರೆಗಳು ಕುಣಿದವು. ಭುಜಗಳನ್ನು ಅಪ್ಪಳಿಸುತ್ತ, ಗುರಾಣಿಗಳನ್ನು ತೋರಿಸುತ್ತಾ ಗಜಬಜಿಸಿ ಬಿಲ್ಲಿನ ಝೇಂಕಾರ ಮಾಡುತ್ತ ಆಶ್ಚರ್ಯಕರ ರೀತಿಯಲ್ಲಿ ಕಾಲಾಳುಗಳು ಕೂಡಿಬಂತು.
ಪದಾರ್ಥ (ಕ.ಗ.ಪ)
ಗುಳ-ಆನೆ ಕುದುರೆಗಳ ಬೆನ್ನ ಮೇಲೆ ಹಾಕುವ ಪಾವುಡ (ಬಟ್ಟೆ), ವಾಜಿವ್ರಜ-ಕುದುರೆಗಳ, ಸಮೂಹ ಹಲ್ಲಣಿಸು-ಜೀನನ್ನು ಕಟ್ಟು (‘ಹಲ್ಲಣ’ವೆಂಬ ನಾಮಪದದಿಂದ, ಕ್ರಿಯಾಪದವನ್ನು ಸಾಧಿಸಿರುವ ರೀತಿಗೆ ಉದಾಹರಣೆ)
ಗಜರು-ಶಬ್ದ
ಘೀಳಿಡು-ಜೋರಾಗಿ ಶಬ್ದಮಾಡು
ಅಶ್ವಚಯ-ಕುದುರೆಗಳ ಸಮೂಹ,
ಹೊಯ್ಲು-ಬೀಸುವಿಕೆ, ಅಪ್ಪಳಿಸುವಿಕೆ
ಹರಿಗೆ-ಹಲಗೆ, ಡಾಲು, ಗುರಾಣಿ
ಜೇವಡೆ-ಝೇಂಕಾರ ಮಾಡು,
ರವ-ಶಬ್ಧ,
ಅಕ್ಕಜ-ಆಶ್ಚರ್ಯ
ಮೂಲ ...{Loading}...
ಗಜಕೆ ಗುಳವನು ಬೀಸಿ ವಾಜಿ
ವ್ರಜವ ಹಲ್ಲಣಿಸಿದರು ಗಾಲಿಯ
ಗಜರು ಘೀಳಿಡೆ ನೊಗನ ಹೆಗಲಲಿ ಕುಣಿದವಶ್ವಚಯ
ಭುಜದ ಹೊಯ್ಲಿನ ಹರಿಗೆಗಳ ಗಜ
ಬಜದ ಬಿಲುಜೇವಡೆಯ ರವದ
ಕ್ಕಜದ ಕಾಲಾಳೊದಗಿತವನೀಪತಿಯ ಸನ್ನೆಯಲಿ ॥4॥
೦೦೫ ಮೊರೆವ ಕಹಳಾರವದ ...{Loading}...
ಮೊರೆವ ಕಹಳಾರವದ ಡಿಂಡಿಮ
ಮುರಜ ಗೋಮುಖ ಪಟಹ ಜರ್ಝರ
ಕರಡೆ ಪಣವ ಮೃದಂಗ ಡಮರುಗ ಢಕ್ಕೆ ಡವುಡೆಗಳ
ಬಿರಿಯೆ ನೆಲನಳ್ಳಿರಿವ ವಾದ್ಯದ
ಹರುಷತರ ನಿರ್ಘೋಷದಬ್ಬರ
ಜರಿಹಿತಡಕಿಲು ಜಗದ ಜೋಡಿಯನರಸ ಕೇಳ್ ಎಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊರೆಯುತ್ತಿರುವ ಕಹಳೆಗಳ ಶಬ್ದ, ಡಿಂಡಿಮ, ಮುರಜ, ಗೋಮುಖ, ಪಟಹ, ಜರ್ಝರ, ಕರಡೆ, ಪಣವ, ಮೃದಂಗ, ಡಮರುಗ, ಢಕ್ಕೆ, ಡವುಡೆಗಳೆಂಬ ವಿವಿಧ ರಣವಾದ್ಯಗಳ ಶಬ್ದದಿಂದ ನೆಲವೇ ಬಿರಿದು ಹೋಯಿತು. ಸಂತೋಷದಿಂದ ನುಡಿಸುವ ವಾದ್ಯಗಳ ಧ್ವನಿಯ ಅಬ್ಬರದಿಂದ ಒಂದು ಜಗತ್ತಿಗೂ ಮತ್ತೊಂದು ಜಗತ್ತಿಗೂ ಇದ್ದ ಕೊಂಡಿ ಕಳಚಿ ಭೂಮಿ ಜರುಗಿತು-ಎಂದು ಸಂಜಯ ಧೃತರಾಷ್ಟ್ರನಿಗೆ ಯುದ್ಧ ವಾದ್ಯಗಳ ಭೀಕರ ಶಬ್ದವನ್ನು ವರ್ಣಿಸಿದ.
ಪದಾರ್ಥ (ಕ.ಗ.ಪ)
ಕಹಳಾರವ-ಕಹಳೆಯ ಶಬ್ದ,
ಅಳ್ಳಿರಿವ-ವಿಶೇಷವಾಗಿಶಬ್ದಮಾಡುವ,
ನಿರ್ಘೋಷ-ಭೀಕರ ಶಬ್ದ, ಜರಿಹಿ-ಜರುಗಿ,
ಅಡಕಲು-ಒಟ್ಟಿರುವುದು,
ಜಗದಜೋಡಿ-ಒಂದಕ್ಕೊಂದು ಸೇರಿಕೊಂಡಿರುವ ಜಗತ್ತುಗಳು, ಬ್ರಹ್ಮಾಂಡಗಳು
ಟಿಪ್ಪನೀ (ಕ.ಗ.ಪ)
ಈ ಷಟ್ಟದಿಯಲ್ಲಿ ಯುದ್ಧದ ಸಮಯದಲ್ಲಿ ಸೈನಿಕರಲ್ಲಿ ಉತ್ಸಾಹವನ್ನು ತುಂಬಿಸಲು ಬಾಜಿಸುವ ಅನೇಕ ರೀತಿಯ ವಾದ್ಯಗಳನ್ನು ಕವಿ ಹೆಸರಿಸಿದ್ದಾನೆ.
ಮೂಲ ...{Loading}...
ಮೊರೆವ ಕಹಳಾರವದ ಡಿಂಡಿಮ
ಮುರಜ ಗೋಮುಖ ಪಟಹ ಜರ್ಝರ
ಕರಡೆ ಪಣವ ಮೃದಂಗ ಡಮರುಗ ಢಕ್ಕೆ ಡವುಡೆಗಳ
ಬಿರಿಯೆ ನೆಲನಳ್ಳಿರಿವ ವಾದ್ಯದ
ಹರುಷತರ ನಿರ್ಘೋಷದಬ್ಬರ
ಜರಿಹಿತಡಕಿಲು ಜಗದ ಜೋಡಿಯನರಸ ಕೇಳೆಂದ ॥5॥
೦೦೬ ಮುರಿದ ಬಲುಗುದುರೆಗಳ ...{Loading}...
ಮುರಿದ ಬಲುಗುದುರೆಗಳ ಬಾದಣ
ಗೊರೆದ ಮಯ್ಯಾನೆಗಳ ಹತ್ತಿಗೆ
ಹರಿದ ಗಾಲಿಯ ರಥವ ಚಿನಕಡಿವಡೆದ ಕಾಲಾಳ
ಅರುಹಿದರು ಭೂಪತಿಗೆ ಸೇನೆಯ
ಲರಸಿ ತೆಗೆದಾಯತ ಚತುರ್ಬಲ
ಹೊರಗೆ ನಿಂದುದು ಹೊಗೆದೆಗೆದ ಕೇಸುರಿಯ ತಿರುಳಂತೆ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಯಗೊಂಡಿರುವ ದೊಡ್ಡ ಕುದುರೆಗಳ, ತೂತು ಬಿದ್ದಿರುವ ದೇಹದ ಆನೆಗಳ, ಜೋಡಣೆಗಳು ಮುರಿದಿರುವ ಚಕ್ರಗಳುಳ್ಳ ರಥಗಳ, ತುಂಡುತುಂಡಾಗಿ ಕತ್ತರಿಸಲ್ಪಟ್ಟಿರುವ ಕಾಲಾಳುಗಳ ಸ್ಥಿತಿಯನ್ನು ದುರ್ಯೋಧನನಿಗೆ ತಿಳಿಸಿದರು. ಅಂತಹ ಸೈನ್ಯದಲ್ಲಿಯೇ ಇದ್ದುದರಲ್ಲಿ ಉತ್ತಮವಾಗಿರುವುದನ್ನು ಆಯ್ದುಕೊಂಡು ಸಿದ್ಧಗೊಳಿಸಿದ ಚತುರಂಗಬಲವು, ಮೆತ್ತಿಕೊಂಡಿದ್ದ ಹೊಗೆಯ ಕಪ್ಪನ್ನು ತೆಗೆದ ಪ್ರಜ್ವಲವಾಗಿ ಉರಿಯುತ್ತಿರುವ ಕೆಂಪು ಜ್ವಾಲೆಗಳಂತೆ ಪ್ರತ್ಯೇಕವಾಗಿ ನಿಂತಿತು.
ಪದಾರ್ಥ (ಕ.ಗ.ಪ)
ಮುರಿದ-ಬಾಗಿದ, ತಿರುಗಿದ, ಗಾಯಗೊಂಡ ಬಾದಣಗೊರೆದ-ತೂತು ಮಾಡಿದ, ಹತ್ತಿಗೆ-ಸೇರಿಕೆಯಾದ ಜಾಗ, ಚಿನಕಡಿವಡೆದ-ಸಣ್ಣ ತುಂಡುಗಳಾಗಿ ಕತ್ತರಿಸಿದ, ಆಯತ-ಸಿದ್ಧವಾದ, ನೀಳವಾದ, ವಿಸ್ತಾರವಾದ, ಹೊಗೆದೆಗೆದ-ಹೊಗೆಯಿಂದಾದ ಕಪ್ಪನ್ನು ತೆಗೆದು ಶುದ್ಧೀಕರಿಸಿದ, ಕೇಸುರಿ-ಕೆಂಪಾದ ಜ್ವಾಲೆ.
ಟಿಪ್ಪನೀ (ಕ.ಗ.ಪ)
ಯುದ್ಧದ ಕಡೆಯ ದಿನಗಳಲ್ಲಿ ಸೈನಿಕರ, ಆನೆಕುದುರೆ-ರಥಗಳ, ಸಹಜವಾದ ದುಃಸ್ಥಿತಿಯನ್ನು ಕವಿ ವರ್ಣಿಸಿದ್ದಾನೆ. ಅಂತಹವುಗಳಲ್ಲಿ ಇದ್ದುದರಲ್ಲಿ ಉತ್ತಮವಾದುದನ್ನು ಆಯ್ದು ಯುದ್ಧಕ್ಕೆ ಸಿದ್ಧಗೊಳಿಸುತ್ತಿರುವ ದುರ್ಯೋಧನನ ದುಃಸ್ಥಿತಿ ಮನಸ್ಸಿಗೆ ನಾಟುತ್ತದೆ.
ಮೂಲ ...{Loading}...
ಮುರಿದ ಬಲುಗುದುರೆಗಳ ಬಾದಣ
ಗೊರೆದ ಮಯ್ಯಾನೆಗಳ ಹತ್ತಿಗೆ
ಹರಿದ ಗಾಲಿಯ ರಥವ ಚಿನಕಡಿವಡೆದ ಕಾಲಾಳ
ಅರುಹಿದರು ಭೂಪತಿಗೆ ಸೇನೆಯ
ಲರಸಿ ತೆಗೆದಾಯತ ಚತುರ್ಬಲ
ಹೊರಗೆ ನಿಂದುದು ಹೊಗೆದೆಗೆದ ಕೇಸುರಿಯ ತಿರುಳಂತೆ ॥6॥
೦೦೭ ಹತ್ತು ಸಾವಿರದೇಳುನೂರರು ...{Loading}...
ಹತ್ತು ಸಾವಿರದೇಳುನೂರರು
ವತ್ತು ಗಜ ಹನ್ನೊಂದು ಸಾವಿರ
ಹತ್ತಿದವು ರಥವೆರಡು ಲಕ್ಕವನೆಣಿಸಿದರು ಹಯವ
ಪತ್ತಿ ಮೂರೇ ಕೋಟಿಯದು ಕೈ
ವರ್ತಿಸಿತು ದಳಪತಿಗೆ ಸಾಗರ
ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧಕ್ಕಾಗಿ, ಅಳಿದುಳಿದುದರಲ್ಲಿ ಆಯ್ಕೆಯಾದ ಸೈನ್ಯವನ್ನು ಲೆಕ್ಕಹಾಕಿದರೆ, ಹತ್ತುಸಾವಿರದ ಏಳುನೂರು ಅರವತ್ತು ಆನೆಗಳು, ಹನ್ನೊಂದು ಸಾವಿರ ರಥಗಳು, ಎರಡು ಲಕ್ಷ ಕುದುರೆಗಳು, ಮೂರು ಕೋಟಿ ಕಾಲಾಳುಗಳು ದಳಪತಿಯಾದ ಶಲ್ಯನಿಗೆ ದೊರಕಿದುವು. ಸಮುದ್ರ ಬತ್ತಿದಾಗ ಅಲ್ಲಲ್ಲಿ ನಿಂತ ನೀರಿನಂತೆ ಕುರುಸೇನೆಯು ಕಾಣುತ್ತಿತ್ತು.
ಪದಾರ್ಥ (ಕ.ಗ.ಪ)
ಹತ್ತಿದವು-ಲೆಕ್ಕಕೆ ಸಿಕ್ಕಿದವು, ಪತ್ತಿ-ಕಾಲಾಳು (ಒಂದು ರಥ, ಒಂದುಆನೆ, ಮೂರು ಕುದುರೆ, ಮತ್ತು ಐದು ಕಾಲಾಳುಗಳಿಂದ ಕೂಡಿದ ಒಂದು ಸೈನ್ಯದ ತುಕಡಿ- ಎಂಬ ಅರ್ಥವಿದೆ) ಕೈವರ್ತಿಸು-ವಶವಾಗು, ಸಿಕ್ಕು.
ಟಿಪ್ಪನೀ (ಕ.ಗ.ಪ)
ಸಮುದ್ರ ಬತ್ತಿ ಹೋದಾಗ ಉಳಿದ ಸಣ್ಣ ನೀರಿನ ಹಳ್ಳದಂತೆ ಕುರುಸೇನೆ ಕಾಣುತ್ತಿತ್ತು-ಎಂಬ ಉಪಮಾಲಂಕಾರ, ಆಗಿನ ದುರ್ಯೋಧನನ ದುರ್ಗತಿಯನ್ನು ಸೊಗಸಾಗಿ ಸೂಚಿಸುತ್ತದೆ.
ಮೂಲ ...{Loading}...
ಹತ್ತು ಸಾವಿರದೇಳುನೂರರು
ವತ್ತು ಗಜ ಹನ್ನೊಂದು ಸಾವಿರ
ಹತ್ತಿದವು ರಥವೆರಡು ಲಕ್ಕವನೆಣಿಸಿದರು ಹಯವ
ಪತ್ತಿ ಮೂರೇ ಕೋಟಿಯದು ಕೈ
ವರ್ತಿಸಿತು ದಳಪತಿಗೆ ಸಾಗರ
ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ ॥7॥
೦೦೮ ವೈರಿಬಲದೊಳಗಾರು ಸಾವಿರ ...{Loading}...
ವೈರಿಬಲದೊಳಗಾರು ಸಾವಿರ
ತೇರು ಗಜಘಟೆ ಮೂರು ಸಾವಿರ
ವಾರುವಂಗಳನೆಣಿಸಿ ತೆಗೆದರು ಹತ್ತು ಸಾವಿರವ
ವೀರಭಟರಾಯ್ತೊಂದು ಕೋಟಿ ಮ
ಹೀರಮಣ ಕೇಳುಭಯಬಲ ವಿ
ಸ್ತಾರ ಹದಿನೆಂಟೆನಿಸಿದಕ್ಷೋಹಿಣಿಯ ಶೇಷವಿದು ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಶೆರಿಗಳಾದ ಪಾಂಡವರ ಸೈನ್ಯದಲ್ಲಿ ಆರು ಸಾವಿರ ರಥಗಳು ಮತ್ತು ಮೂರುಸಾವಿರ ಆನೆಗಳು, ಹತ್ತುಸಾವಿರ ಕುದುರೆಗಳು, ವೀರ ಕಾಲಾಳುಗಳು ಒಂದು ಕೋಟಿ ಹೀಗೆ ಚತುರಂಗ ಬಲವನ್ನು ಆಯ್ಕೆ ಮಾಡಿಕೊಂಡರು. ಧೃತರಾಷ್ಟ್ರನೇ ಕೇಳು ಎರಡೂ ಪಕ್ಷಗಳ ಸೈನ್ಯದ ವಿಸ್ತಾರವಿದು; ಹದಿನೆಂಟು ಅಕ್ಷೋಹಿಣಿಯಲ್ಲಿ ಉಳಿದುದು ಇಷ್ಟೆ!
ಪದಾರ್ಥ (ಕ.ಗ.ಪ)
ಗಜಘಟೆ-ಆನೆಗಳ ಹಿಂಡು, ವಾರುವ-ಕುದುರೆ, ಶೇಷ-ಉಳಿದಿರುವುದು.
ಟಿಪ್ಪನೀ (ಕ.ಗ.ಪ)
ಒಂದು ಅಕ್ಷೋಹಿಣಿಯ ಲೆಕ್ಕಾಚಾರ ಹೀಗಿದೆ:-
1ರಥ + 1ಆನೆ + 3ಕುದುರೆ + 5 ಕಾಲಾಳು -1 ಪತ್ತಿ
3 ಪತ್ತಿ - 1 ಸೇನಾಮುಖ
3 ಸೇನಾಮುಖ- 1 ಗುಲ್ಮ
3 ಗುಲ್ಮ - 1 ಗಣ
3 ಗಣ - 1 ವಾಹಿನಿ
3 ವಾಹಿನಿ - 1 ಪೃತನಾ
3 ಪೃತನಾ -1 ಚಮೂ
3 ಚಮೂ -1 ಅನೀಕಿನಿ
10 ಅನೀಕಿನಿ - 1 ಅಕ್ಷೋಹಿಣಿ
ಎಂದರೆ 21870 ರಥ, 21870 ಆನೆ, 65610 ಕುದುರೆ 1,09350 ಕಾಲಾಳು
(ಈ ವಿವರಗಳನ್ನು ಎ.ಆರ್.ಕೃಷ್ಣ ಶಾಸ್ತ್ರಿಗಳ ವಚನ ಭಾರತದಿಂದ ತೆಗೆದುಕೊಳ್ಳಲಾಗಿದೆ)
ಮೂಲ ...{Loading}...
ವೈರಿಬಲದೊಳಗಾರು ಸಾವಿರ
ತೇರು ಗಜಘಟೆ ಮೂರು ಸಾವಿರ
ವಾರುವಂಗಳನೆಣಿಸಿ ತೆಗೆದರು ಹತ್ತು ಸಾವಿರವ
ವೀರಭಟರಾಯ್ತೊಂದು ಕೋಟಿ ಮ
ಹೀರಮಣ ಕೇಳುಭಯಬಲ ವಿ
ಸ್ತಾರ ಹದಿನೆಂಟೆನಿಸಿದಕ್ಷೋಹಿಣಿಯ ಶೇಷವಿದು ॥8॥
೦೦೯ ಶಕುನಿ ಮೋಹರಿಸಿದನು ...{Loading}...
ಶಕುನಿ ಮೋಹರಿಸಿದನು ಸವiಸ
ಪ್ತಕರು ಬೇರೊಡ್ಡಿದರು ಕೃತವ
ರ್ಮಕ ಕೃಪಾಶ್ವತ್ಥಾಮರೊದಗಿದರೊಂದು ಬಾಹೆಯಲಿ
ಸಕಲ ಬಲ ಮಾದ್ರೇಶ್ವರನ ಹೇ
ಳಿಕೆಯಲೊಯ್ಯಾರಿಸಿತು ಕುರುಬಲ
ನಿಕರ ತಳಿತುದು ತರವಿಡಿದು ಕಳನೊಂದು ಮೂಲೆಯಲಿ ॥9॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿ ತನ್ನ ಸೈನ್ಯದ ಗುಂಪಿನೊಂದಿಗೆ ಮುತ್ತಿದ. ಸಮಸಪ್ತಕರು ಪ್ರತ್ಯೇಕವಾಗಿ ತಮ್ಮ ಸೈನ್ಯ ಸಮೇತ ಒಟ್ಟಾದರು; ಕೃತವರ್ಮ, ಕೃಪ, ಅಶ್ವತ್ಥಾಮರು ಒಂದು ಭಾಗದಿಂದ ಒದಗಿ ಬಂದರು. ಸಮಸ್ತ ಸೈನ್ಯವೂ ಶಲ್ಯನ ಆದೇಶದಂತೆ ಸೊಗಸಾಗಿ ಕಾಣುವಂತೆ ಸೇರಿತು. ಕುರುಬಲ ಸಮೂಹವು ಯುದ್ಧಭೂಮಿಯ ಒಂದು ಮೂಲೆಯಲ್ಲಿ ನಿUದಿತ ರೀತಿಯಲ್ಲಿ ಗುಂಪುಗೂಡಿತು.
ಪದಾರ್ಥ (ಕ.ಗ.ಪ)
ಮೋಹರಿಸು-ಗುಂಪುಗೂಡು, ಹೆಚ್ಚಾಗು ಬಾಹೆ-ಹೊರಗೆ, ಒಂದು ಭಾಗದಲ್ಲಿ
ಒಯ್ಯಾರಿಸು-ಸೊಗಸಾಗಿ ಕಾಣು,
ನಿಕರ-ಸಮೂಹ,
ತರವಿಡಿದು-ನಿರ್ದಿಷ್ಟ, ಸ್ಥಳಗಳಲ್ಲಿ-ರೂಪದಲ್ಲಿ,
ಕಳ-ಯದ್ಧಭೂಮಿ
ಮೂಲ ...{Loading}...
ಶಕುನಿ ಮೋಹರಿಸಿದನು ಸವiಸ
ಪ್ತಕರು ಬೇರೊಡ್ಡಿದರು ಕೃತವ
ರ್ಮಕ ಕೃಪಾಶ್ವತ್ಥಾಮರೊದಗಿದರೊಂದು ಬಾಹೆಯಲಿ
ಸಕಲ ಬಲ ಮಾದ್ರೇಶ್ವರನ ಹೇ
ಳಿಕೆಯಲೊಯ್ಯಾರಿಸಿತು ಕುರುಬಲ
ನಿಕರ ತಳಿತುದು ತರವಿಡಿದು ಕಳನೊಂದು ಮೂಲೆಯಲಿ ॥9॥
೦೧೦ ಇದಿರಲೌಕಿತು ಗಾಳಿ ...{Loading}...
ಇದಿರಲೌಕಿತು ಗಾಳಿ ಪಟ್ಟದ
ಮದಗಜಾವಳಿ ಮುಗ್ಗಿದುವು ಧ್ವಜ
ವದಿರಿದವು ಹೊಡೆಗೆಡೆದು ಹೊಳೆದುದು ತೇರು ದಳಪತಿಯ
ಬಿದಿರಿದವು ತಡಿಸಹಿತ ಥಟ್ಟಿನ
ಕುದುರೆ ಮೈಗಳಲಾಯುಧದ ಕಿಡಿ
ಯುದುರಿದವು ಕುರುಬಲದಲದ್ಭುತವಾಯ್ತು ನಿಮಿಷದಲಿ ॥10॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರು ಸೈನ್ಯದ ಮುಂಭಾಗದಲ್ಲಿ ಗಾಳಿ ರಭಸವಾಗಿ ಬೀಸಿತು. ಪಟ್ಟದ ಆನೆಗಳು ಮುಗ್ಗರಿಸಿದವು. ಬಾವುಟಗಳು ಅಳ್ಳಾಡಿದುವು. ಸೇನಾನಾಯಕನಾದ ಶಲ್ಯನ ರಥ ಗಾಳಿಯ ಹೊಡೆತಕ್ಕೆ ಸಿಕ್ಕಿ ಥಳಥಳಿಸುತ್ತಾ ಕೆಳಗೆ ಬಿತ್ತು. ಸೈನ್ಯದ ಕುದುರೆಗಳು ಜೀನುಗಳ ಸಹಿತವಾಗಿ ಮೈಯ್ಯನ್ನು ಕೊಡಹಿ ಜಾಡಿಸಿದುವು. ಸೈನಿಕರ ಮೈಮೇಲೆ ಆಯುಧಗಳ ಕಿಡಿಗಳು ಉದುರಿದುವು. ಒಂದೇ ನಿಮಿಷದಲ್ಲಿ ಕೌರವ ಸೇನೆಯಲ್ಲಿ ಅದ್ಭುತಗಳುಂಟಾದುವು.
ಪದಾರ್ಥ (ಕ.ಗ.ಪ)
ಔಕು-ರಭಸವಾಗಿ ಬೀಸು, ಒತ್ತಡದಿಂದ ಬೀಸು, ಮುಗ್ಗು-ಮುಂದಕ್ಕೆ ಬೀಳು, ಮುಗ್ಗರಿಸು ಹೊಡೆಗೆಡೆ-ಹೊಡೆದು ಕೆಳಕ್ಕೆ ಬೀಳಿಸು, ಬಿದಿರು-ಕೊಡಹು, ಜಾಡಿಸು ತಡಿ-ಜೀನು, ಥಟ್ಟು-ಸೈನ್ಯ
ಟಿಪ್ಪನೀ (ಕ.ಗ.ಪ)
ಆನೆಗಳು ಮುಗ್ಗರಿಸುವುದೇ ಮುಂತಾಗಿ ಈ ಷಟ್ಪದಿಯಲ್ಲಿ ಹೇಳಿರುವ ಘಟನೆಗಳು ಉತ್ಪಾತ-ಅಪಶಕುನ ಸೂಚಕಗಳು.
ಮೂಲ ...{Loading}...
ಇದಿರಲೌಕಿತು ಗಾಳಿ ಪಟ್ಟದ
ಮದಗಜಾವಳಿ ಮುಗ್ಗಿದುವು ಧ್ವಜ
ವದಿರಿದವು ಹೊಡೆಗೆಡೆದು ಹೊಳೆದುದು ತೇರು ದಳಪತಿಯ
ಬಿದಿರಿದವು ತಡಿಸಹಿತ ಥಟ್ಟಿನ
ಕುದುರೆ ಮೈಗಳಲಾಯುಧದ ಕಿಡಿ
ಯುದುರಿದವು ಕುರುಬಲದಲದ್ಭುತವಾಯ್ತು ನಿಮಿಷದಲಿ ॥10॥
೦೧೧ ಬನ್ದುದಾ ಮೋಹರ ...{Loading}...
ಬಂದುದಾ ಮೋಹರ ಬಲೌಘದ
ಮುಂದೆ ಪಾಠಕರವರ ಕಾಹಿಗೆ
ಹಿಂದೆ ಬಿಲ್ಲಾಳವರ ಸುಯ್ದಾನದಲಿ ಸಬಳಿಗರು
ಹಿಂದೆ ತುರಗ ಸಮೂಹವಲ್ಲಿಂ
ಹಿಂದೆ ಗಜಘಟೆ ಗಜದ ಬಳಿಯಲಿ
ಸಂದಣಿಸಿದುದು ರಾಯದಳ ಮಣಿರಥ ನಿಕಾಯದಲಿ ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಕಡೆಯ ಯುದ್ಧದ ಸೇನಾಸಮೂಹದ ಮುಂದೆ ಹೊಗಳುಭಟ್ಟರು, ಅವರ ರಕ್ಷಣೆಗೆ ಅವರ ಹಿಂದೆ ಬಿಲ್ಲಾಳುಗಳು, ಅವರ ರಕ್ಷಣೆಗಾಗಿ ಈಟಿಗಳಂತಹ ಆಯುಧಗಳನ್ನು ಹಿಡಿದ ಸೈನ್ಯಿಕರ ಸಮೂಹ, ಅದಕ್ಕೂ ಹಿಂದೆ ಕುದುರೆಗಳ ಸಮೂಹ, ಅದಕ್ಕೂ ಹಿಂದೆ ಆನೆಗಳ ಸಮೂಹ, ಆನೆಗಳ ಸಮೀಪದಲ್ಲಿ ರಾಜರ ಸಮೂಹವು ಮಣಿಖಚಿತ ರಥಗಳಲ್ಲಿ ಬರುತ್ತಿತ್ತು.
ಪದಾರ್ಥ (ಕ.ಗ.ಪ)
ಮೋಹರ-ಸೈನ್ಯ, ಔಘ-ಸಮೂಹ, ಪಾಠಕರು-ಹೊಗಳುಭಟ್ಟರು, ಕಾಹು-ರಕ್ಷಣೆ, ಸುಯ್ದಾನ-ರಕ್ಷಣೆ, ಸಬಳಿಗ-ಈಟಿಯಂತಹ ಆಯುಧವನ್ನು ಹಿಡಿದಿರುವವ, ನಿಕಾಯ-ಸಮೂಹ, ವರ್ಗ
ಮೂಲ ...{Loading}...
ಬಂದುದಾ ಮೋಹರ ಬಲೌಘದ
ಮುಂದೆ ಪಾಠಕರವರ ಕಾಹಿಗೆ
ಹಿಂದೆ ಬಿಲ್ಲಾಳವರ ಸುಯ್ದಾನದಲಿ ಸಬಳಿಗರು
ಹಿಂದೆ ತುರಗ ಸಮೂಹವಲ್ಲಿಂ
ಹಿಂದೆ ಗಜಘಟೆ ಗಜದ ಬಳಿಯಲಿ
ಸಂದಣಿಸಿದುದು ರಾಯದಳ ಮಣಿರಥ ನಿಕಾಯದಲಿ ॥11॥
೦೧೨ ಅರಸನೆಡವಙ್ಕದಲಿ ಸಾತ್ಯಕಿ ...{Loading}...
ಅರಸನೆಡವಂಕದಲಿ ಸಾತ್ಯಕಿ
ನರ ನಕುಲ ಸಹದೇವ ಸೋಮಕ
ವರ ಯುಧಾಮನ್ಯೂತ್ತಮೌಜಸ ಸೃಂಜಯಾದಿಗಳು
ನೆರೆದುದಾ ಬಲವಂಕದಲಿ ತನು
ಜರು ವೃಕೋದರ ದ್ರುಪದಸುತ ದು
ರ್ಧರ ಶಿಖಂಡಿ ಪ್ರಮುಖ ಘನಪಾಂಚಾಲ ಪರಿವಾರ ॥12॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಎಡಭಾಗದಲ್ಲಿ ಸಾತ್ಯಕಿ, ಅರ್ಜುನ, ನಕುಲ, ಸಹದೇವ, ಸೋಮಕ, ಯುಧಾಮನ್ಯು, ಉತ್ತಮೌಂಜಸ, ಸೃಂಜಯ ಮುಂತಾದವರಿದ್ದರೆ, ಬಲಭಾಗದಲ್ಲಿ ಪಾಂಡವರ ಮಕ್ಕಳು, ಭೀಮ ಮತ್ತು ಧೃಷ್ಟದ್ಯುಮ್ನ, ವೀರಶಿಖಂಡಿ ಮುಂತಾದ ಪಾಂಚಾಲರ ಪರಿವಾರ ಸೇರಿತ್ತು.
ಪದಾರ್ಥ (ಕ.ಗ.ಪ)
ಎಡವಂಕ-ಎಡಭಾಗ, ಬಲವಂಕ-ಬಲಭಾಗ, ದುರ್ಧರ-ಕಠಿಣ, ಎದುರಿಸಲಾಗದ
ಮೂಲ ...{Loading}...
ಅರಸನೆಡವಂಕದಲಿ ಸಾತ್ಯಕಿ
ನರ ನಕುಲ ಸಹದೇವ ಸೋಮಕ
ವರ ಯುಧಾಮನ್ಯೂತ್ತಮೌಜಸ ಸೃಂಜಯಾದಿಗಳು
ನೆರೆದುದಾ ಬಲವಂಕದಲಿ ತನು
ಜರು ವೃಕೋದರ ದ್ರುಪದಸುತ ದು
ರ್ಧರ ಶಿಖಂಡಿ ಪ್ರಮುಖ ಘನಪಾಂಚಾಲ ಪರಿವಾರ ॥12॥
೦೧೩ ಆಯತಿಕೆಯಲಿ ಬನ್ದು ...{Loading}...
ಆಯತಿಕೆಯಲಿ ಬಂದು ಪಾಂಡವ
ರಾಯದಳ ಮೋಹರಿಸಿ ನಿಂದುದು
ರಾಯರಿಬ್ಬರ ಬೀಸುಗೈಗಳ ಸನ್ನೆ ಸಮವಾಗೆ
ತಾಯಿಮಳಲನು ತರುಬಿದಬುಧಿಯ
ದಾಯಿಗರು ತಾವಿವರೆನಲು ಬಿಡೆ
ನೋಯಬೆರಸಿದುದುಭಯಬಲ ಬಲುಖತಿಯ ಬಿಂಕದಲಿ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರಾಜರ ಸೈನ್ಯವು ಉಚಿತಕ್ರಮದಲ್ಲಿ ಬಂದು ಗುಂಪಾಗಿ ನಿಂತುಕೊಂಡಿತು. ಉಭಯ ಪಕ್ಷಗಳ ರಾಜರೂ ಸೈನ್ಯಕ್ಕೆ ತಮ್ಮ ಕೈಗಳನ್ನು ಬೀಸುವುದು ಸಮವಾಯಿತು. ತಳದಲ್ಲಿರುವ ಮರಳನ್ನು ಸಮುದ್ರವು ತಂದು ದಡಕ್ಕೆ ನೂಕುವಂತೆ, ಪಾಂಡವ ಕೌರವರಿಬ್ಬರು ನೆಲಕ್ಕೆ ತಾವು ಹಕ್ಕುದಾರರೆಂಬುದನ್ನು ಸಾಧಿಸಲು ತಮ್ಮ ಸೈನ್ಯಗಳನ್ನು ಅಟ್ಟುತ್ತಿದ್ದಾರೆಂಬಂತೆ ಕೋಪದ ಸುಮ್ಮಾನದಲ್ಲಿ ತಮ್ಮ ತಮ್ಮ ಸೈನ್ಯಗಳನ್ನು ಮುನ್ನಡೆಸುತ್ತಿದ್ದರು.
ಪದಾರ್ಥ (ಕ.ಗ.ಪ)
ಆಯತಿಕೆ-ಉಚಿತಕ್ರಮ, ತಾಯಿಮಳಲು-ಸಮುದ್ರದ-ಜಲಾಶಯದ ತಳದಲ್ಲಿರುವ ಮರಳು, ತರುಬಿದ-ದಬ್ಬಿಕೊಂಡುಬಂದ, ದಾಯಿಗರು-ಹಕ್ಕುದಾರರು, ಖತಿ-ಕೋಪ, ಬಿಂಕ-ಬಿಗುಮಾನ, ಬೆರಸಿದುದು-ಎದುರಾದುದು, ಒಟ್ಟಾದುದು.
ಮೂಲ ...{Loading}...
ಆಯತಿಕೆಯಲಿ ಬಂದು ಪಾಂಡವ
ರಾಯದಳ ಮೋಹರಿಸಿ ನಿಂದುದು
ರಾಯರಿಬ್ಬರ ಬೀಸುಗೈಗಳ ಸನ್ನೆ ಸಮವಾಗೆ
ತಾಯಿಮಳಲನು ತರುಬಿದಬುಧಿಯ
ದಾಯಿಗರು ತಾವಿವರೆನಲು ಬಿಡೆ
ನೋಯಬೆರಸಿದುದುಭಯಬಲ ಬಲುಖತಿಯ ಬಿಂಕದಲಿ ॥13॥
೦೧೪ ಕೇಣವಿಲ್ಲದೆ ಭಟರ ...{Loading}...
ಕೇಣವಿಲ್ಲದೆ ಭಟರ ಹಾಣಾ
ಹಾಣಿ ಮಸಗಿತು ಖಣಿಖಟಿಲ ಯು
ಯ್ದಾಣೆಗಳ ಬಿರುಗಿಡಿಯ ಹಿರಿಯುಬ್ಬಣದ ಹೊಯ್ಲುಗಳ
ಹೂಣಿಕೆಯ ಸಬಳಿಗರೊಳಿಮ್ಮೈ
ಗಾಣಿಕೆಯ ಬಲುಸೂತರಥಿಕರ
ಜಾಣತಿಯ ಬಿಲ್ಲವರ ಧಾಳಾಧೂಳಿ ಬಲುಹಾಯ್ತು ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಯವಿಲ್ಲದೆ, ಯೋಧರು ಪರಸ್ಪರ ಉಗ್ರ ಹೋರಾಟ ಪ್ರಾರಂಭಿಸಿದರು. ಹೊಡೆಯಲು ಬಳಸುವ ಆಯುಧಗಳ ಬಿರುಸಾದ ನೂಕುವಿಕೆಯಿಂದ, ಖಣಿಖಟಿಲೆಂಬ ಶಬ್ದದಿಂದ, ಭಯಂಕರ ಕಿಡಿಗಳನ್ನುಗುಳುವ ಹಿರಿಯುಬ್ಬಣಗಳೆಂಬ ಆಯುಧಗಳ ಹೊಡೆತಗಳಿಂದ, ಗಟ್ಟಿಗರಾದ, ಈಟಿಗಳನ್ನು ಹಿಡಿದ ಯೋಧರಲ್ಲಿ ಒಬ್ಬರು ಇಬ್ಬರಾದರೋ ಎಂಬಷ್ಟು ಪ್ರತಾಪದ, ಶಕ್ತಿವಂತರಾದ ಸೂತರ ಮತ್ತು ರಥಿಕರ, ಜಾಣ್ಮೆಯಿಂದ ಬಾಣ ಬಿಡುವ ಬಿಲ್ಲಾಳುಗಳ ಧಾಳಾಧೂಳಿ ಭಯಂಕರವಾಯಿತು.
ಪದಾರ್ಥ (ಕ.ಗ.ಪ)
ಕೇಣ-ಭಯ, ಸಂಕೋಚ
ಹಾಣಾಹಾಣಿ-ಹಣಾಹಣಿ, ಉಗ್ರಹೋರಾಟ,
ಹೊಯ್ದಾಣಿ-ಒಂದು ಆಯುಧ,
ಬಿರುಗಿಡಿ-ಭಯಂಕರ ಕಿಡಿ,
ಹಿರಿಯುಬ್ಬಣ- ಒಂದು ಆಯುಧ,
ಹೊಯ್ಲು-ಹೊಡೆತ, ಹೂಣಿಕೆ-ಶಕ್ತಿ, ಸಬಳಿಗ-ಸಬಳವೆಂಬ ಆಯುಧ ಹಿಡಿದವ,
ಇಮ್ಮೈ-ಎರಡು ಮೈ ಸೂತ-ಸಾರಥ್ಯ ಮಾಡುವವ,
ಜಾಣತಿ-ಜಾಣ್ಮೆ, ಬಿಲ್ಲವರು-ಬಿಲ್ಲು ಹಿಡಿದು ಯುದ್ಧ ಮಾಡುವವರು, ಧಾಳಾಧೂಳಿ-ತೀವ್ರ ಹೋರಾಟ, ಧೂಳು ಏಳುವಂತೆ ಧಾಳಿ ಮಾಡುವುದು
ಪಾಠಾನ್ತರ (ಕ.ಗ.ಪ)
ಹಿರಿಯಬ್ಬಣ - ಹಿರಿಯುಬ್ಬಣ
ಟಿಪ್ಪನೀ (ಕ.ಗ.ಪ)
ಜಾಣತಿ - ಜ್ಯಾಣತಿ ಇರಬಹುದೆ?
ಜ್ಯಾ + ಅಣತಿ - ಬಿಲ್ಲಿನ ಠೇಂಕಾರ
ಮೂಲ ...{Loading}...
ಕೇಣವಿಲ್ಲದೆ ಭಟರ ಹಾಣಾ
ಹಾಣಿ ಮಸಗಿತು ಖಣಿಖಟಿಲ ಯು
ಯ್ದಾಣೆಗಳ ಬಿರುಗಿಡಿಯ ಹಿರಿಯುಬ್ಬಣದ ಹೊಯ್ಲುಗಳ
ಹೂಣಿಕೆಯ ಸಬಳಿಗರೊಳಿಮ್ಮೈ
ಗಾಣಿಕೆಯ ಬಲುಸೂತರಥಿಕರ
ಜಾಣತಿಯ ಬಿಲ್ಲವರ ಧಾಳಾಧೂಳಿ ಬಲುಹಾಯ್ತು ॥14॥
೦೧೫ ರಾವುತರು ಸೆಲ್ಲಿಸಿದರಗ್ಗದ ...{Loading}...
ರಾವುತರು ಸೆಲ್ಲಿಸಿದರಗ್ಗದ
ಮಾವುತರನಾನೆಗಳ ತುಡುಕಿ ಹ
ಯಾವಳಿಯ ಬೀಸಿದರು ರಥಿಕರು ಹಾಯ್ಸಿದರು ರಥವ
ಆ ವರೂಥವನೇಳನೆಂಟ ಗ
ಜಾವಳಿಗಳಿಟ್ಟವು ಗಜಸ್ಕಂ
ಧಾವಲಂಬವ ಸೆಕ್ಕಿದರು ಸುರಗಿಯಲಿ ಸಮರಥರು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವಾರೋಹಿಗಳು ಶ್ರೇಷ್ಠರಾದ ಮಾವುತರುಗಳನ್ನು ಶಲ್ಯದಿಂದಿರಿದರು. ರಥಿಕರು ಆನೆಗಳನ್ನು ತಾಗಿ ಕುದುರೆಗಳನ್ನು ಓಡಿಸಿ, ರಥಗಳನ್ನು ಮುನ್ನುಗ್ಗಿಸಿದರು. ಏಳೆಂಟು ರಥಗಳನ್ನು ಆನೆಗಳ ಸಮೂಹವು ಪುಡಿಗುಟ್ಟಿದವು. ಸಮರಥರಾದವರು ಆನೆಗಳ ಕುತ್ತಿಗೆ-ಎದೆಗೆ ತಮ್ಮ ಕತ್ತಿಗಳನ್ನು ನಾಟಿಸಿದರು.
ಪದಾರ್ಥ (ಕ.ಗ.ಪ)
ರಾವುತ-ಕುದುರೆ ಸವಾರ, ಸೆಲ್ಲಿಸು-ಶಲ್ಯದಿಂದಿರಿ, ಮಾವುತ-ಆನೆಸವಾರ, ವರೂಥ-ರಥ, ಗಜಸ್ಕಂಧಾವಲಂಬ-ಆನೆಯ ಕುತ್ತಿಗೆಗೆ ಆಸರೆಯಾಗಿರುವುದು (ಎದೆಯಭಾಗ), ಸೆಕ್ಕು-ಸಿಕ್ಕಿಸು, ನಾಟಿಸು, ಸುರಗಿ-ಕತ್ತಿ, ಸಮರಥ-ಗದಾಪರ್ವದ 9ನೆಯ ಸಂಧಿಯ 9ನೆಯ ಪದ್ಯದ ಟಿಪ್ಪಣಿಯನ್ನು ನೋಡಿ.
ಮೂಲ ...{Loading}...
ರಾವುತರು ಸೆಲ್ಲಿಸಿದರಗ್ಗದ
ಮಾವುತರನಾನೆಗಳ ತುಡುಕಿ ಹ
ಯಾವಳಿಯ ಬೀಸಿದರು ರಥಿಕರು ಹಾಯ್ಸಿದರು ರಥವ
ಆ ವರೂಥವನೇಳನೆಂಟ ಗ
ಜಾವಳಿಗಳಿಟ್ಟವು ಗಜಸ್ಕಂ
ಧಾವಲಂಬವ ಸೆಕ್ಕಿದರು ಸುರಗಿಯಲಿ ಸಮರಥರು ॥15॥
೦೧೬ ಒರಲೆ ಗಜ ...{Loading}...
ಒರಲೆ ಗಜ ದಾಡೆಗಳ ಕೈಗಳ
ಹರಿಯಹೊಯ್ದರು ಪಾರಕರು ಮು
ಕ್ಕುರಿಕಿದರೆ ಸಬಳಿಗರು ಕೋದೆತ್ತಿದರು ಕರಿಘಟೆಯ
ತರುಬಿದರೆ ಕಡಿನಾಲ್ಕ ತೋರಿಸಿ
ಮೆರೆದರುರೆ ರಾವುತರು ರಾವ್ತರ
ತರುಬಿದರು ತನಿಚೂಣಿ ಮಸಗಿತು ತಾರುಥಟ್ಟಿನಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದ ಕಡೆಯಲ್ಲಿದ್ದ ಯೋಧರು ಆನೆಗಳ ದಂತಗಳು ಮತ್ತು ಸೊಂಡಿಲುಗಳನ್ನು ಕತ್ತರಿಸಿ ಹಾಕಲು ಆನೆಗಳು ನೋವಿನಿಂದ ಕೂಗಿದುವು. ಕತ್ತಿಗುರಾಣಿಗಳನ್ನು ಹಿಡಿದವರು ಮುಗಿಬಿದ್ದರೆ ಸಬಳವನ್ನು ಹಿಡಿದ ಯೋಧರು ಆನೆಗಳ ಮೈಯೊಳಕ್ಕೆ ಸಬಳವನ್ನು ತಿವಿದು ಅವುಗಳನ್ನು ಎಬ್ಬಿಸಿದರು. ಅಟ್ಟಿಸಿಕೊಂಡು ಬಂದವರನ್ನು ಕತ್ತರಿಸಿಹಾಕಿ, ಕುದುರೆಸವಾರರು, ಕುದುರೆ ಸವಾರರನ್ನು ಎದುರಿಸಿದರು. ಮುಂಭಾಗದ ಸೇನಾ ಸಮೂಹದಲ್ಲಿ ಸೈನಿಕರು ಕೋಲಾಹಲದ ಶಬ್ದ ಮಾಡಿದರು.
ಪದಾರ್ಥ (ಕ.ಗ.ಪ)
ಒರಲೆ-ದೈನ್ಯಧ್ವನಿಮಾಡಲು, ಕೂಗಲು
ದಾಡೆ-ದಂತ, ಕೈ-ಸೊಂಡಿಲು,
ಪಾರಕರು-ಕತ್ತಿಗುರಾಣಿ ಹಿಡಿದವರು (ಪಾರಕ-ಹರಿಗೆ, ಗುರಾಣಿ)
ಪಾರೆ - ಹಾರ ಪಾರಕ- ಹಾರಕ
ಮುಕ್ಕುರುಕು-ಮುಗಿಬೀಳು,
ಕೋದು-ತೂತುಮಾಡಿ, ಪೋಣಿಸಿ,
ಕಡಿನಾಲ್ಕ-ನಾಲ್ಕುತುಂಡಾಗಿ ಕತ್ತರಿಸಿ,
ತನಿಚೂಣಿ-ಉತ್ಸಾಹದಲ್ಲಿರುವ ಸೇನೆಯ ಮುಂಭಾಗ,
ತಾರು-ಸಮೂಹ,
ಥಟ್ಟು-ಸೈನ್ಯ
ಮೂಲ ...{Loading}...
ಒರಲೆ ಗಜ ದಾಡೆಗಳ ಕೈಗಳ
ಹರಿಯಹೊಯ್ದರು ಪಾರಕರು ಮು
ಕ್ಕುರಿಕಿದರೆ ಸಬಳಿಗರು ಕೋದೆತ್ತಿದರು ಕರಿಘಟೆಯ
ತರುಬಿದರೆ ಕಡಿನಾಲ್ಕ ತೋರಿಸಿ
ಮೆರೆದರುರೆ ರಾವುತರು ರಾವ್ತರ
ತರುಬಿದರು ತನಿಚೂಣಿ ಮಸಗಿತು ತಾರುಥಟ್ಟಿನಲಿ ॥16॥
೦೧೭ ಅರಸ ಕೇಳೈ ...{Loading}...
ಅರಸ ಕೇಳೈ ಹೊಕ್ಕ ಚೂಣಿಯ
ನೆರಡು ಬಲದಲಿ ಕಾಣೆನಗ್ಗದ
ದೊರೆಗಳನುವಾಯ್ತಾಚೆಯಲಿ ಧರ್ಮಜನ ನೇಮದಲಿ
ಗುರುಜ ಕೃಪ ಕೃತವರ್ಮ ಯವನೇ
ಶ್ವರ ಸುಶರ್ಮ ಸುಬಾಹು ಶಕುನಿಗ
ಳುರವಣಿಸಿತೀಚೆಯಲಿ ಶಲ್ಯನ ಬೆರಳ ಸನ್ನೆಯಲಿ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು! ಉತ್ಸಾಹದಿಂದ ವಿರೋಧಿಸೇನೆಯೊಳಕ್ಕೆ ನುಗ್ಗಿದ ಸೈನ್ಯವು ಎರಡೂ ಬಲಗಳಲ್ಲಿ ನಿರ್ನಾಮವಾಗುತ್ತಿದ್ದುವು. ಆ ಪಕ್ಷದಲ್ಲಿ ಧರ್ಮರಾಯನ ಆದೇಶದಂತೆ ಶ್ರೇಷ್ಠರಾಜರುಗಳು ಸಿದ್ಧರಾದರು. ಈ ಪಕ್ಷದಲ್ಲಿ ಶಲ್ಯನ ಬೆರಳ ಸನ್ನೆಯಲ್ಲಿ, ಅಶ್ವತ್ಥಾಮ, ಕೃಪ, ಕೃತವರ್ಮ, ಯವನೇಶ್ವರ, ಸುಶರ್ಮ, ಸುಬಾಹು, ಶಕುನಿಗಳು ಉತ್ಸಾಹದಿಂದ ಯುದ್ಧಕ್ಕೆ ಸಿದ್ಧರಾದರು
ಪದಾರ್ಥ (ಕ.ಗ.ಪ)
ಚೂಣಿ-ಸೈನ್ಯದ ಮುಂಭಾಗ, ಉರವಣಿಸು-ಉತ್ಸಾಹದಿಂದ ಸಿದ್ದವಾಗು.
ಮೂಲ ...{Loading}...
ಅರಸ ಕೇಳೈ ಹೊಕ್ಕ ಚೂಣಿಯ
ನೆರಡು ಬಲದಲಿ ಕಾಣೆನಗ್ಗದ
ದೊರೆಗಳನುವಾಯ್ತಾಚೆಯಲಿ ಧರ್ಮಜನ ನೇಮದಲಿ
ಗುರುಜ ಕೃಪ ಕೃತವರ್ಮ ಯವನೇ
ಶ್ವರ ಸುಶರ್ಮ ಸುಬಾಹು ಶಕುನಿಗ
ಳುರವಣಿಸಿತೀಚೆಯಲಿ ಶಲ್ಯನ ಬೆರಳ ಸನ್ನೆಯಲಿ ॥17॥
೦೧೮ ನಿಲಿಸಿದರು ನಿನ್ನವರು ...{Loading}...
ನಿಲಿಸಿದರು ನಿನ್ನವರು ಬಲದ
ಗ್ಗಳೆಯರನು ಬಿರುದಾವಳಿಯ ಮೂ
ದಲಿಸಿದರು ವಿಮಲಾನ್ವಯಾಗತ ವಿಕ್ರಮೋನ್ನತರ
ಬಲನೆಡನ ಮಡಿವೆರಳ ಮುಡಿಮುಂ
ದಲೆಯ ಲಘುವಾಗದಿರಿ ಶಸ್ತ್ರಾ
ವಳಿಯ ಬಾಯ್ದುತ್ತುಗಳ ಸೆಳೆಯದಿರೆಂದರುಬ್ಬಿನಲಿ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಪಕ್ಷದವರು, ಸೈನ್ಯದ ಶ್ರೇಷ್ಠರನ್ನು ನಿಲ್ಲಿಸಿದರು, ಶ್ರೇಷ್ಠ ವಂಶಪಾರಂಪರೆಯಿಂದ ಬಂದ ಬಲಶಾಲಿಗಳ ಬಿರುದುಗಳನ್ನು ಮೂದಲಿಸಿದರು, ಯುದ್ಧದಲ್ಲಿ ನಿಮ್ಮ ಎಡಬಲಗಳನ್ನು ನೋಡುವುದು, ಬೆರಳು ಮಡಿಸಿ ಬಾಯಲ್ಲಿಡುವುದು, ಮುಡಿ-ಮುಂದಲೆಗಳ ಕೂದಲುಗಳನ್ನು ಬಿಟ್ಟುಕೊಳ್ಳುವುದು (ಮುಕ್ತ ಕೇಶಿಗಳಾಗುವುದು) ಮುಂತಾದ ಕೆಲಸಗಳಿಂದ ಕೀಳಾಗದಿರಿ. ಶಸ್ತ್ರಗಳ ಬಾಯಿ ತುತ್ತುಗಳನ್ನು ಸೆಳೆದುಕೊಳ್ಳಬೇಡಿ ಎಂದು ಗರ್ವದಿಂದ ಸೈನಿಕರಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಅಗ್ಗಳೆಯರನು-ಶ್ರೇಷ್ಠರಾದವರನ್ನು, ಅನ್ವಯ-ವಂಶ, ಮಡಿವೆರಳು-ಮಡಿಸಿದ ಬೆರಳು, ಉಬ್ಬಿನಲಿ-ಪರಾಕ್ರಮದಲ್ಲಿ, ಗರ್ವದಲ್ಲಿ.
ಟಿಪ್ಪನೀ (ಕ.ಗ.ಪ)
ಬಲನೆಡನ ಮಡಿವೆರಳ ಮುಡಿ ಮುಂದಲೆಯ ಲಘುವಾಗದಿರಿ-ಯುದ್ಧ ಮಾಡುವಾಗ ಎಡಬಲಗಳನ್ನು ನೋಡುವುದು, ಬೆರಳನ್ನು ಮಡಿಸಿ ಬಾಯೊಳಗಿಡುವುದು, ತಲೆಗೂದಲನ್ನು ಕೆದರಿಕೊಳ್ಳುವುದು ಇವೆಲ್ಲವೂ ಯುದ್ಧಕ್ಕೆ ಹೆದರಿ ಶರಣಾಗುವವರ ಲಕ್ಷಣ. ಅದರಿಂದ ಮಾನಭಂಗವಾಗುತ್ತದೆಂಬುದು ಯುದ್ಧನೀತಿ. ಹಾಗಾಗಬೇಡಿ ಎಂಬುದು ಇಲ್ಲಿ ಸೈನ್ಯಿಕರಿಗೆ ನೀಡಿದ ಉಪದೇಶ.
ಮೂಲ ...{Loading}...
ನಿಲಿಸಿದರು ನಿನ್ನವರು ಬಲದ
ಗ್ಗಳೆಯರನು ಬಿರುದಾವಳಿಯ ಮೂ
ದಲಿಸಿದರು ವಿಮಲಾನ್ವಯಾಗತ ವಿಕ್ರಮೋನ್ನತರ
ಬಲನೆಡನ ಮಡಿವೆರಳ ಮುಡಿಮುಂ
ದಲೆಯ ಲಘುವಾಗದಿರಿ ಶಸ್ತ್ರಾ
ವಳಿಯ ಬಾಯ್ದುತ್ತುಗಳ ಸೆಳೆಯದಿರೆಂದರುಬ್ಬಿನಲಿ ॥18॥
೦೧೯ ದೊರೆಯೊಳೊಬ್ಬನ ಹಾನಿ ...{Loading}...
ದೊರೆಯೊಳೊಬ್ಬನ ಹಾನಿ ಭಟರೆ
ಲ್ಲರಿಗೆ ದೊರೆ ದೊರೆ ತತ್ತರುಳಿದರು
ನೆರವು ಬಹುದೋರಂದವೊಮ್ಮುಖವೊಂದು ಸಂಕೇತ
ಉರವಣಿಸದಿರಿ ಕಂಡ ಮುಖದಲಿ
ಕರಿ ತುರಗ ರಥ ಪತ್ತಿ ರಣಕು
ಬ್ಬರಿಸದಿರಿ ಕೃತಸಮಯವೆಂದರು ಸಾರಿ ಸುಭಟರಿಗೆ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದಲ್ಲಿನ ಒಬ್ಬ ದೊರೆಗೆ ಹಾನಿಯಾದರೆ, (ಸೋತರೆ ಅಥವ ಸತ್ತರೆ) ಅವನ ಸೈನ್ಯದ ಎಲ್ಲ ಭಟರಿಗೂ ಆದ ಹಾನಿಗೆ ಸಮ-ಅವನ ಸೈನ್ಯ ಅನಾಥವಾಗುತ್ತದೆಯಾದ್ದರಿಂದ, ನಾಯಕನಿಲ್ಲದ ಅವರ ಹೋರಾಟ ವ್ಯರ್ಥವಾಗುತ್ತದೆ. ಕಂಡ ಕೂಡಲೇ ಆನೆ, ಕುದುರೆ, ರಥ, ಪತ್ತಿ ಮುಂತಾದ ಸೇನೆಗಳ ವಿರುದ್ಧ ಅತ್ಯುತ್ಸಾಹದ ಯುದ್ಧ ಬೇಡ. ಸರಿಯಾದ ಸಮಯವನ್ನು ನೋಡಿ, ಯುದ್ಧದಲ್ಲಿ ದೊರೆ ಸಂಕಷ್ಟದಲ್ಲಿ ಸಿಲುಕಿದರೆ ಉಳಿದವರ ನೆರವು ಬರತಕ್ಕದ್ದು. ಒಂದು ರೀತಿ, ಒಂದು ದಿಕ್ಕು, ಒಂದು ಸಂಕೇತದಲ್ಲಿ ಸರಿಯಾದ ಸಮಯದಲ್ಲಿ ಯುದ್ಧ ಮಾಡಬೇಕೆಂದು ಸುಭಟರಿಗೆ ಸಾರಿ ಹೇಳಿದರು.
ಪದಾರ್ಥ (ಕ.ಗ.ಪ)
ತತ್ತರೆ-ಸಂಕಷ್ಟದಲ್ಲಿ ಸಿಲುಕಿದರೆ, ಉರವಣಿಸು-ಉತ್ಸಾಹದಿಂದ ಮೇಲೆಬೀಳು, ಕೃತಸಮಯ-ಕೆಲಸವಾಗಬೇಕಾದ ಸಮಯ
ಮೂಲ ...{Loading}...
ದೊರೆಯೊಳೊಬ್ಬನ ಹಾನಿ ಭಟರೆ
ಲ್ಲರಿಗೆ ದೊರೆ ದೊರೆ ತತ್ತರುಳಿದರು
ನೆರವು ಬಹುದೋರಂದವೊಮ್ಮುಖವೊಂದು ಸಂಕೇತ
ಉರವಣಿಸದಿರಿ ಕಂಡ ಮುಖದಲಿ
ಕರಿ ತುರಗ ರಥ ಪತ್ತಿ ರಣಕು
ಬ್ಬರಿಸದಿರಿ ಕೃತಸಮಯವೆಂದರು ಸಾರಿ ಸುಭಟರಿಗೆ ॥19॥
೦೨೦ ನೂಕಿದರು ನಿನ್ನವರು ...{Loading}...
ನೂಕಿದರು ನಿನ್ನವರು ಹಿನ್ನೆಲೆ
ಯಾಕೆವಾಳರ ಜೋಕೆಯಲಿ ರಣ
ವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ
ವ್ಯಾಕುಲರ ಬಯ್ಬಯ್ದು ಚಪಲಾ
ನೀಕ ಚಂಡಿಸಿ ಚಂಡಪಾತ ನಿ
ರಾಕರಿಷ್ಣುಗಳೊಕ್ಕಲಿಕ್ಕಿತು ದಳದ ಮಧ್ಯದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ! ನಿನ್ನ ಪಕ್ಷದ ಸೈನಿಕರು, ಅವರ ಹಿಂದೆ ಕಾವಲಿಗಾಗಿದ್ದ ವೀರರೊಂದಿಗೆ ಮುಂದೆ ಮುಂದೆ ಸಾಗಿದರು, ರಣವು ಆನೆ-ಕುದುರೆಗಳ ಮೈಯಲ್ಲಿ ರಕ್ತವನ್ನು ಓಕರಿಸಿಕೊಂಡಿತು. ಯುದ್ಧದ ಅಪಜಯದಿಂದ ಕುಗ್ಗಿ ವ್ಯಾಕುಲಗೊಂಡವರನ್ನು ಬೈದು ಚಂಚಲಚಿತ್ತರನ್ನು ಹಠದಿಂದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿ, ಬಿರುಗಾಳಿಯನ್ನು ತಿರಸ್ಕರಿಸುವ ವೇಗದಿಂದ ಮುನ್ನುಗ್ಗುವವರು ಸೈನ್ಯದಲ್ಲಿ ನೆಲೆನಿಂತರು.
ಪದಾರ್ಥ (ಕ.ಗ.ಪ)
ಆಕೆವಾಳರು-ಶೂರರು, ಅರುಣಾಂ¨ು-ಕೆಂಪುನೀರು-ರಕ್ತ, ಚಪಲಾನೀಕ-ಚಂಚಲವಾದ ಸೈನ್ಯ, ಬಂಡಿಸಿ-ಬೈದು,
ಚಂಡಪಾತ ನಿರಾಕರಿಷ್ಣುಗಳು-ಚಂಡಮಾರುತವನ್ನು ತಿರಸ್ಕರಿಸುವವರು, ವೀರಾಧಿವೀರರು, ದಳ-ಸೈನ್ಯ, ಒಕ್ಕಲಿಕ್ಕು-ಬೀಡಾರಮಾಡು, ಸ್ಥಾಪಿತವಾಗು
ಮೂಲ ...{Loading}...
ನೂಕಿದರು ನಿನ್ನವರು ಹಿನ್ನೆಲೆ
ಯಾಕೆವಾಳರ ಜೋಕೆಯಲಿ ರಣ
ವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ
ವ್ಯಾಕುಲರ ಬಯ್ಬಯ್ದು ಚಪಲಾ
ನೀಕ ಚಂಡಿಸಿ ಚಂಡಪಾತ ನಿ
ರಾಕರಿಷ್ಣುಗಳೊಕ್ಕಲಿಕ್ಕಿತು ದಳದ ಮಧ್ಯದಲಿ ॥20॥
೦೨೧ ಕವಿದುದೊನ್ದೇ ಸೂಠಿಯಲಿ ...{Loading}...
ಕವಿದುದೊಂದೇ ಸೂಠಿಯಲಿ ರಿಪು
ನಿವಹ ನಿಬ್ಬರದಬ್ಬರದ ಶರ
ಲವಣೆಗಳ ಲಾವಣಿಗೆಗಳ ಲಂಬನದ ಲಂಘನದ
ಪವನಜನ ಪಡಿಬಲದಲೌಕಿದ
ನವನಿಪತಿ ಸಹದೇವ ನಕುಲರ
ಸವಡಿರಥ ಸಮ್ಮುಖಕೆ ಬಿಟ್ಟವು ಮಾದ್ರಭೂಪತಿಯ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿವೇಗದ ಅಬ್ಬರದ ಬಾಣಗಳ, ಬಾಣಸಮೂಹದ ಚಮತ್ಕಾರಗಳ, ಬಿಲ್ಲಿನಿಂದ ಹೊರಟನಂತರ ಸ್ವಯಂ ವಿಸ್ತಾರವಾಗುವ, ನೆಗೆದು ಹಾರಿ ಹೋಗುವ ಬಾಣಗಳ ಪ್ರಯೋಗದೊಂದಿಗೆ ಶತ್ರುಸಮೂಹವು ಒಂದೇ ವೇಗದಲ್ಲಿ ಮುತ್ತಿತ್ತು. ಭೀಮನ ನಾಯಕತ್ವದ ಸೈನ್ಯದ ಬೆಂಬಲದಿಂದ ಧರ್ಮರಾಯ, ಸಹದೇವ ಮತ್ತು ನಕುಲರ ರಥಜೋಡಿಗಳು ಮಾದ್ರಭೂಪತಿಯಾದ ಶಲ್ಯನ ಎದುರು ಹೋದುವು.
ಪದಾರ್ಥ (ಕ.ಗ.ಪ)
ಸೂಠಿ-ವೇಗ, ರಿಪುನಿವಹ-ಶತ್ರುಸಮೂಹ, ನಿಬ್ಬರ-ಅತಿವೇಗ, ಶರಲವಣೆ-ಬಾಣಗಳ ಚಮತ್ಕಾರ, ಲಾವಣಿಗೆ-ಜೋರಿನ, ವೇಗದ, ಪಡಿಬಲ-ಎದುರು ಸೈನ್ಯ, ಸವಡಿ-ಜೋಡಿ
ಟಿಪ್ಪನೀ (ಕ.ಗ.ಪ)
ಲವಣೆಗಳ, ಲಾವಣಿಗೆಗಳ, ಲಂಬನದ, ಲಂಘನದ ಎಂಬಲ್ಲಿ ಅನುಪ್ರಾಸವೆಂಬ ಶಬ್ದಾಲಂಕಾರವಿದೆ. ಇಲ್ಲಿ ‘ಲ’ಕಾರ ಆವೃತ್ತಿಯಿದೆ. ಅಕ್ಷರಗಳ ಆವೃತ್ತಿಯೇ ಅನುಪ್ರಾಸ.
ಮೂಲ ...{Loading}...
ಕವಿದುದೊಂದೇ ಸೂಠಿಯಲಿ ರಿಪು
ನಿವಹ ನಿಬ್ಬರದಬ್ಬರದ ಶರ
ಲವಣೆಗಳ ಲಾವಣಿಗೆಗಳ ಲಂಬನದ ಲಂಘನದ
ಪವನಜನ ಪಡಿಬಲದಲೌಕಿದ
ನವನಿಪತಿ ಸಹದೇವ ನಕುಲರ
ಸವಡಿರಥ ಸಮ್ಮುಖಕೆ ಬಿಟ್ಟವು ಮಾದ್ರಭೂಪತಿಯ ॥21॥
೦೨೨ ಆರಿವರು ಸಹದೇವ ...{Loading}...
ಆರಿವರು ಸಹದೇವ ನಕುಲರೆ
ಭಾರಿಯಾಳುಗಳಹಿರಲೇ ಬಿಲು
ಗಾರರಲ್ಲಾ ಕಳಶಸಿಂಧನ ಕೋಲ ಮಕ್ಕಳಲೇ
ಸೈರಿಸಿದರೊಪ್ಪುವುದಲೇ ಜು
ಜ್ಝಾರತನಕಾಭರಣವಹುದೆನು
ತಾರುಭಟೆಯಲಿ ಶಲ್ಯ ಹಳಚಿದನರ್ಜುನಾನುಜರ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾರಿವರು ಸಹದೇವ ನಕುಲರೆಂಬುವರೆ! ನೀವಿಬ್ಬರೂ ಭಾರಿ ಆಳುಗಳಾಗಿದ್ದೀರಲ್ಲವೆ! ಶ್ರೇಷ್ಠಬಿಲ್ಲುಗಾರರಲ್ಲವೆ! ಕಳಶಧ್ವಜನಾದ ದ್ರೋಣನ ಧನುರ್ವಿದ್ಯಾ ಶಿಷ್ಯರಲ್ಲವೆ! ಇಷ್ಟು ವೇಗವಾಗಿ ಮೇಲೆ ಬೀಳುವ ಬದಲು ಸ್ವಲ್ಪ ಸೆೈರಿಸಿದರೆ ನಿಮ್ಮ ವೀರತ್ವಕ್ಕೆ ಒಪ್ಪುವುದಿಲ್ಲವೆ! ಸೈರಣೆಯೇ ಶೌರ್ಯಕ್ಕೆ ಆಭರಣವಲ್ಲವೆ! ಎಂದು ಹೇಳುತ್ತಾ ಆರ್ಭಟಿಸಿದ ಶಲ್ಯ ಅರ್ಜುನನ ತಮ್ಮಂದಿರಾದ ನಕುಲ ಸಹದೇವರ ವಿರುದ್ಧ ರಭಸದಿಂದ ಯುದ್ಧಕ್ಕೆ ತೊಡಗಿದ.
ಪದಾರ್ಥ (ಕ.ಗ.ಪ)
ಸಿಂಧ-ಧ್ವಜ, ಬಾವುಟ,
ಕೋಲ-ಬಾಣದ, ಶಸ್ತ್ರವಿದ್ಯೆಯ,
ಜಜ್ಝಾರತನ-ಶೌರ್ಯ,
ಹಳಚು-ಮೇಲೆ ಬೀಳು, ಯುದ್ಧಮಾಡು.
ಮೂಲ ...{Loading}...
ಆರಿವರು ಸಹದೇವ ನಕುಲರೆ
ಭಾರಿಯಾಳುಗಳಹಿರಲೇ ಬಿಲು
ಗಾರರಲ್ಲಾ ಕಳಶಸಿಂಧನ ಕೋಲ ಮಕ್ಕಳಲೇ
ಸೈರಿಸಿದರೊಪ್ಪುವುದಲೇ ಜು
ಜ್ಝಾರತನಕಾಭರಣವಹುದೆನು
ತಾರುಭಟೆಯಲಿ ಶಲ್ಯ ಹಳಚಿದನರ್ಜುನಾನುಜರ ॥22॥
೦೨೩ ಪಡಿತಳಿಸಿ ಸಹದೇವ ...{Loading}...
ಪಡಿತಳಿಸಿ ಸಹದೇವ ನಕುಲರ
ನಡೆಗಲಸಿತರ್ಜುನನ ರಥ ನರ
ನೊಡನೆ ಹೊಕ್ಕನು ಭೀಮನುರು ಪಾಂಚಾಲಬಲ ಸಹಿತ
ಜಡಿವ ನಿಸ್ಸಾಳದಲಿ ಜಗ ಕಿವಿ
ಗೆಡೆ ಯುಧಿಷ್ಠರರಾಯನೌಕಿದ
ನೆಡಬಲನ ಕೊಂಡರು ಯುಯುತ್ಸು ಶಿಖಂಡಿ ಸೃಂಜಯರು ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವ ನಕುಲರನ್ನು ಅರ್ಜುನನ ರಥ ಸ್ಥಳಾಂತರಿಸಿತು. ಭೀಮನು ಅರ್ಜುನನೊಂದಿಗೆ ವೀರಪಾಂಚಾಲರ ಸೈನ್ಯಸಹಿತವಾಗಿ ಯುದ್ಧರಂಗವನ್ನು ಹೊಕ್ಕನು. ನಿಸ್ಸಾಳವಾದ್ಯಗಳ ಧ್ವನಿಯಿಂದ ಜಗತ್ತೇ ಕಿವುಡಾದಂತಾಯಿತು, ಯುಧಿಷ್ಠಿರರಾಯನು ಉತ್ಸಾಹದಿಂದ ಯುದ್ಧಕ್ಕೆ ಮುನ್ನುಗ್ಗಿದ; ಯುಯುತ್ಸು, ಶಿಖಂಡಿ, ಸೃಂಜಯರುಗಳು ಯುಧಿಷ್ಠಿರನ ಎಡಬಲದಲ್ಲಿ ಸೇರಿಕೊಂಡರು.
ಪದಾರ್ಥ (ಕ.ಗ.ಪ)
ಪಡಿತಳಿಸು-ಆಕ್ರಮಿಸು, ಸ್ಥಳಾಂತರಿಸು ಅಡೆಗಲಸು-ಸ್ತಬ್ಧರನ್ನಾಗಿಸು, ನಿಸ್ಸಾಳ-ಒಂದು ರಣವಾದ್ಯ, ಕಿವಿಗೆಡೆ-ಕಿವುಡಾಗಲು
ಟಿಪ್ಪನೀ (ಕ.ಗ.ಪ)
ಶೈಬ್ಯ - ಶೈಬ್ಯ ಎಂಬ ಹೆಸರಿನವರು ಮಹಾಭಾರತದಲ್ಲಿ ಏಳೆಂಟು ಮಂದಿ ಇದ್ದಾರೆ. ಶೈಭ್ಯ ಎಂಬ ಹೆಸರಿನ ಸ್ತ್ರೀಯರೂ ಹಲವರಿದ್ದಾರೆ. ಅವರಲ್ಲಿ ಒಬ್ಬಳು ಶ್ರೀಕೃಷ್ಣನ ಅಷ್ಟಮಹಿಷಿಯರಲ್ಲಿ ಒಬ್ಬಳಾದ ಅನುವಿಂದೆ. ಅಲ್ಲದೆ ಶೈಬ್ಯ ಎನ್ನುವುದು ಅರ್ಜುನನ ರಥಾಶ್ವಗಳಲ್ಲಿ ಒಂದು ಕುದುರೆಯ ಹೆಸರೂ ಆಗಿದೆ. ಬಹುಶಃ ಶಿಬಿಯ ಸಾಮ್ರಾಜ್ಯದಿಂದ ಬಂದ ಕಾರಣಕ್ಕೆ ಶೈಬ್ಯ ಎಂದು ಹೆಸರು ಅಂಟಿಕೊಂಡಿರಬಹುದು. ಷೋಡಶ ಚಕ್ರವರ್ತಿಗಳಲ್ಲಿ ಪ್ರಸಿದ್ಧ ದೊರೆಯಾಗಿದ್ದ ಶಿಬಿಯ ವಂಶದ ಉಶೀನರನ ಮೊಮ್ಮಗನಾದ ಶೈಬ್ಯನ ಬಗೆಗೆ ಇಲ್ಲಿ ಹೇಳಲಾಗಿದೆ. ಧರ್ಮರಾಯನ ಮಾವನೆಂದು ಆದಿಪರ್ವದಲ್ಲಿ ಹೇಳಲಾಗಿದೆ. ಶೈಬ್ಯನಿಗೆ ಗೋವಾಸನ ಎಂಬ ಹೆಸರೂ ಇದ್ದಂತೆ ಕಾಣುತ್ತದೆ. ಇವನ ಮಗಳಾದ ದೇವಿಕೆಯನ್ನು ವರಿಸಿ ಧರ್ಮರಾಯನು ಯೌಧೇಯ ಎಂಬ ಮಗನನ್ನು ಪಡೆದಿದ್ದ. ಭೀಷ್ಮಪರ್ವದ 23ನೆಯ ಅಧ್ಯಾಯದಲ್ಲಿ ಕೌರವನು ಭೀಷ್ಮರಿಗೆ ತನ್ನ ಕಡೆಯ ವೀರರ ವಿಷಯ ಹೇಳಿ ಪಾಂಡವರ ಕಡೆಯವರನ್ನೂ ಪರಿಚಯಿಸುವಾಗ ‘‘ಅತ್ರಶೂರಾ ಮಹೇಷ್ವಾಸಾ ಭೀಮಾರ್ಜುನ ಸಮೋಯುಧಿಃ’’ ಎನ್ನುತ್ತಾನೆ. ಮನುಷ್ಯರಲ್ಲಿ ಶ್ರೇಷ್ಠನಾದ ಧನುರ್ಧರ, ಯುದ್ಧ ಭಯಂಕರ, ಭೀಮಾರ್ಜುನರಿಗೆ ಸಮಾನನಾದವನು, ಮಹಾರಥಿ ಎಂದೆಲ್ಲ ಕೀರ್ತಿಸುತ್ತಾನೆ. ನೀಲಕಮಲ ವರ್ಣದ, ಸುವರ್ಣ ಭೂಷಣಗಳಿಂದ ಶೋಭಿತನಾದ, ವಿಚಿತ್ರವಾದ ಮಾಲೆಯನ್ನು ಧರಿಸಿ ಯುದ್ದಕ್ಕೆ ನಿಂತಿದ್ದ ಈ ವೀರನ ಬಗೆಗೆ ವ್ಯಾಸರು ಅನೇಕ ಬಾರಿ ಪ್ರಶಂಸೆ ಮಾಡಿದ್ದಾರೆ.
ಶೈಬ್ಯರಾಜನು ಧರ್ಮರಾಯನು ನಡೆಸುತ್ತಿದ್ದ ರಾಜಸಭೆಗಳಲ್ಲಿ ಭಾಗವಹಿಸುತ್ತದೆಂದು ಸಭಾಪರ್ವದಲ್ಲಿ ಹೇಳಲಾಗಿದೆ. ಉದ್ದಕ್ಕೂ ಈತನು ಪಾಂಡವರ ಮೇಲೆ ಅಪಾರ ಅಭಿಮಾನವನ್ನು ಇರಿಸಿಕೊಂಡು ಬಂದಿದ್ದಾನೆ. ಪಾಂಡವರ ಅಜ್ಞಾತವಾಸವು ಮುಗಿದು ವಿರಾಟರಾಜನ ಮಗಳಾದ ಉತ್ತರೆಯೊಂದಿಗೆ ಅಬಿಮನ್ಯುವಿನ ಮದುವೆ ನಿಶ್ಚಯವಾದಾಗ ಆಹ್ವಾನಿತನಾಗಿ ಶೈಬ್ಯರಾಜನು ಉಪಪ್ಲಾವ್ಯ ನಗರಕ್ಕೆ ಬಂದ. ಮದುವೆಗೆ ಹಾಜರಿ ಹಾಕುವುದ ಒಂದು ನೆಪ. ಯುದ್ದ ಘಟಿಸಿದರೆ ಸಹಾಯ ಮಾಡುವುದೇ ಅವನ ಗುರಿ. ಆದುದರಿಂದ ಶೈಬ್ಯನು ಒಂದು ಅಕ್ಷೋಹಿಣಿ ಸೇನೆಯನ್ನು ಕೂಡಿಸಿಕೊಂಡೇ ಧರ್ಮರಾಯನ ಬಳಿಗೆ ಬಂದಿದ್ದ. ಧರ್ಮರಾಯನ ಇನ್ನೊಬ್ಬ ಅಭಿಮಾನಿ ಕಾಶಿರಾಜನನ್ನೂ ಜೊತೆಗೆ ಕರೆ ತಂದಿದ್ದ. ಯುದ್ಧ ಆರಂಭವಾದಾಗ ಧರ್ಮರಾಯನು ನಿರ್ಮಿಸಿದ ಕ್ರೌಂಚವ್ಯೂಹದ ರಕ್ಷಣೆಗೆಂದು ಕಾಶಿರಾಜನೊಂದಿಗೆ ಮೂವತ್ತು ಸಾವಿರ ಸೇನೆಯೊಂದಿಗೆ ಸಿದ್ಧನಾಗಿ ನಿಂತಿದ್ದ. ಕೌರವರ ಕಡೆಯ ಕೃತವರ್ಮನ ಎದುರಿಗೆ ಯುದ್ದಕ್ಕೆ ನಿಲ್ಲಬೇಕೆಂಬ ಸೂಚನೆಯನ್ನು ಶಿರಸಾವಹಿಸಿ ಯುದ್ಧ ಮಾಡಿದ. ದ್ರೋಣಪರ್ವದಲ್ಲಿ ಶೈಬ್ಯನ ಸಾಹಸಪೂರ್ಣ ಹೋರಾಟದ ವಿವರಗಳಿವೆ. ಸ್ವತಃ ದ್ರೋಣರ ಎದುರಿಗೇ ನಿಂತು ಹೋರಾಡಿದ ಕೀರ್ತಿಯೂ ಈತನಿಗೆ ಸಲ್ಲುತ್ತದೆ.
ಮಹಾಭಾರತ ಗ್ರಂಥದಲ್ಲಿಯೇ ಹಲವಾರು ಶೈಬ್ಯರ ಉಲ್ಲೇಖವಿರುವುದರಿಂದ ಸ್ವಲ್ಪ ಗೊಂದಲಕ್ಕೆ ಅವಕಾಶವಾಗಿದೆ. ಉದಾಹರಣೆಗೆ ಯುದ್ಧದಲ್ಲಿ ಕೌರವ ಪಕ್ಷದಲ್ಲಿದ್ದು ಭೀಷ್ಮರಿಗೆ ಸಹಾಯಕನಾಗಿ ನಿಂತು ಅವರು ರಚಿಸಿದ ‘ಸರ್ವತೋಭದ್ರ’ ಎಂಬ ವ್ಯೂಹದ ಮುಂಚೂಣಿಯಲ್ಲಿ ನಿಂತು ಪಾಂಡವರ ಎದುರು ನಿಂತು ಯುದ್ಧ ಮಾಡಿದ ಶೈಬ್ಯನೇ ಬೇರೆ ಎಂದು ಗುರುತಿಸಿದರೆ ಈ ಬಗೆಯ ಗೊಂದಲಕ್ಕೆ ಅವಕಾಶವಿರುವುದಿಲ್ಲ.ಯುಯುತ್ಸುವು ಧೃತರಾಷ್ಟ್ರನಿಗೆ ವೇಶ್ಯಾಂಗನೆಯಲ್ಲಿ ಹುಟ್ಟಿದವನು. ಯುದ್ಧದ ಪ್ರಾರಂಭದ ದಿನ ಕೌರವ ಪಕ್ಷವನ್ನು ತೊರೆದು ಪಾಂಡವ ಪಕ್ಷಕ್ಕೆ ಸೇರಿಕೊಂಡ. ಭೀಷ್ಮಪರ್ವದ ಎರಡನೆಯ ಸಂಧಿಯಲ್ಲಿ ಯುಯುತ್ಸುವು ಪಾಂಡವರ ಕಡೆಗೆ ಪಕ್ಷಾಂತರ ಮಾಡಿದ ಪ್ರಸ್ತಾಪ ಬರುತ್ತದೆ.
ಸೃಂಜಯ-ಸೃಂಜಯ ಒಬ್ಬ ಅರಸು. ಶೈಬ್ಯ ರಾಜನ ಮಗ. ಈತ ಕೇಕಯ ರಾಜ ಪುತ್ರಿಯನ್ನು ಮದುವೆಯಾಗಿ ಸುವರ್ಣಷ್ಟೀವಿಯೆಂಬ ಪುತ್ರನನ್ನೂ ದಮಯಂತಿ ಅಥವಾ ಸುಕುಮಾರಿಯೆಂಬ ಹೆಸರಿನ ಮಗಳನ್ನೂ ಪಡೆದ (ಭಾರ. ಸಭಾ.-. ಸುವರ್ಣಷ್ಟೀವಿಯ ದೇಹದಿಂದ ಬೇಕಾದಷ್ಟು ಚಿನ್ನ ದಿನದಿನವೂ ಹೊರಡುತ್ತಿದ್ದ ಕಾರಣ ಇವನ ದೇಹವೆಲ್ಲ ಚಿನ್ನವಾಗಿರಬಹುದೆಂಬ ಭಾವನೆಯಿಂದ ಕಳ್ಳರು ಇವನನ್ನು ಕೊಂದರು. ಸೃಂಜಯ ಪುತ್ರಶೋಕದಿಂದ ಮರುಗುತ್ತಿರುವಾಗ ನಾರದ ಅವನಿಗೆ ಷೋಡಷಶಮಹಾರಾಜರ ಚರಿತ್ರೆಯನ್ನು ವಿವರಿಸಿದ (ಭಾರ. ದ್ರೋ. 55-70). ಈತನ ಮಗಳಾದ ಸುಕುಮಾರಿಯನ್ನು ನಾರದ ಮದುವೆಯಾಗಿದ್ದ. ನೋಡು-ದಮಯಂತಿ, ನಾರದ, ಸುಕುಮಾರಿ (ಭಾರ. ಶಾಚಿತಿ 29. ದೇ.ಭಾಗ. 6-2 (ಪುರಾಣನಾಮ ಚೂಡಾಮಣಿ)
ಆದರೆ ಮೇಲ್ಕಂಡ ವಿವರಗಳಿಂದ ಈತನು ಈ ಸಂದರ್ಭದಲ್ಲಿ ಉಲ್ಲೇಖಗೊಂಡಿರುವ ಸೃಂಜಯರಿಗೆ ಸಂಬಂಧಿಸಿದವನಲ್ಲವೆಂದು ತೋರುತ್ತದೆ.
ಮೂಲ ...{Loading}...
ಪಡಿತಳಿಸಿ ಸಹದೇವ ನಕುಲರ
ನಡೆಗಲಸಿತರ್ಜುನನ ರಥ ನರ
ನೊಡನೆ ಹೊಕ್ಕನು ಭೀಮನುರು ಪಾಂಚಾಲಬಲ ಸಹಿತ
ಜಡಿವ ನಿಸ್ಸಾಳದಲಿ ಜಗ ಕಿವಿ
ಗೆಡೆ ಯುಧಿಷ್ಠರರಾಯನೌಕಿದ
ನೆಡಬಲನ ಕೊಂಡರು ಯುಯುತ್ಸು ಶಿಖಂಡಿ ಸೃಂಜಯರು ॥23॥
೦೨೪ ಏರಿತೊಬ್ಬನ ಮೇಲೆ ...{Loading}...
ಏರಿತೊಬ್ಬನ ಮೇಲೆ ರಿಪುರಥ
ವಾರು ಸಾವಿರ ಮತ್ತಗಜಘಟೆ
ಮೂರು ಸಾವಿರ ಹತ್ತು ಸಾವಿರ ತುರಗದಳ ಸಹಿತ
ತೂರುವಂಬಿನ ತುಂಡಿಸುವ ಬಿ
ಟ್ಟೇರುಗಳ ಚೂರಿಸುವ ಸಬಳದ
ಗೀರುಗಳ ಕಾಲಾಳು ಕವಿದುದು ಶಲ್ಯನಳವಿಯಲಿ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನೊಬ್ಬನ ವಿರುದ್ಧವಾಗಿ ಆರುಸಾವಿರ ಶತ್ರುರಥಗಳು ಮೂರುಸಾವಿರ ಮದಿಸಿದ ಆನೆಗಳ ಸಮೂಹ ಮತ್ತು ಹತ್ತುಸಾವಿರ ಕುದುರೆಗಳ ಸೈನ್ಯಸಹಿತವಾಗಿ, ತೂರಿಬರುತ್ತಿರುವ ಬಾಣಗಳ, ತುಂಡು ಮಾಡಲು ಶಕ್ತವಾದ ಉದ್ದದ ಈಟಿಗಳ, ಇರಿಯುವ ಸಬಳಗಳ ಗೀರುಗಳನ್ನುಳ್ಳ ಕಾಲಾಳುಗಳು ಶಲ್ಯನ ಸಮೀಪದಲ್ಲಿ ಗುಂಪುಗೂಡಿದವು.
ಪದಾರ್ಥ (ಕ.ಗ.ಪ)
ಮತ್ತಗಜಘಟೆ-ಮದಿಸಿದ ಆನೆಗಳ ಗುಂಪು, ಬಿಟ್ಟೇರು-ಉದ್ದವಾದ ಈಟಿ, ಸಬಳ-ಈಟಿಯಂತಹ ಆಯುಧ, ಅಳವಿ-ಸಮೀಪ.
ಮೂಲ ...{Loading}...
ಏರಿತೊಬ್ಬನ ಮೇಲೆ ರಿಪುರಥ
ವಾರು ಸಾವಿರ ಮತ್ತಗಜಘಟೆ
ಮೂರು ಸಾವಿರ ಹತ್ತು ಸಾವಿರ ತುರಗದಳ ಸಹಿತ
ತೂರುವಂಬಿನ ತುಂಡಿಸುವ ಬಿ
ಟ್ಟೇರುಗಳ ಚೂರಿಸುವ ಸಬಳದ
ಗೀರುಗಳ ಕಾಲಾಳು ಕವಿದುದು ಶಲ್ಯನಳವಿಯಲಿ ॥24॥
೦೨೫ ದಳಪತಿಯ ಮುಕ್ಕುರುಕಿದರು ...{Loading}...
ದಳಪತಿಯ ಮುಕ್ಕುರುಕಿದರು ಪಡಿ
ಬಲವ ಬರಹೇಳೆನುತ ಚಾಚಿದ
ಹಿಳುಕುಗೆನ್ನೆಯ ಹೊಗರುಮೋರೆಯ ಬಿಗಿದ ಹುಬ್ಬುಗಳ
ಕಳಶಜನ ಸುತನೌಕಿದನು ಕೃಪ
ನಳವಿಗೊಟ್ಟನು ಸುಬಲಸುತನಿ
ಟ್ಟಳಿಸಿದನು ಕರ್ಣಾತ್ಮಜರು ಕೈಕೊಂಡರೊಗ್ಗಿನಲಿ ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- . ಎದುರುಪಕ್ಷದವರಾದ ಪಾಂಡವರನ್ನು ಬರಹೇಳು ಎಂದು ಹೇಳುತ್ತಾ, ಬಿಲ್ಲಿಗೆ ಹೂಡಿ ಎಳೆದು ಹಿಡಿದ ಬಾಣದ ಬುಡವು ಕೆನ್ನೆಗೆ ತಾಗುತ್ತಿರಲು, ಕಾಂತಿಯುಕ್ತವಾದ ಮುಖದ, ಗಂಟಿಕ್ಕಿದ ಹುಬ್ಬುಗಳ ಅಶ್ವತ್ಥಾಮನು ಯುದ್ಧಕ್ಕೆ ಸಿದ್ಧನಾದನು, ಕೃಪನು ಯುದ್ಧಕ್ಕೆ ಸಿದ್ಧನಾದನು, ಸುಬಲನ ಮಗನಾದ ಶಕುನಿಯು ಈ ಗುಂಪಿಗೆ ಬಂದು ಸೇರಿದ. ಕರ್ಣನ ಮಕ್ಕಳು ಒಟ್ಟಾಗಿ ಬಂದು ಯುದ್ಧವನ್ನು ಕೈಗೊಂಡರು. ಇವರೆಲ್ಲ ಸೇನಾಪತಿಯಾದ ಶಲ್ಯನನ್ನು ಅವನ ರಕ್ಷಣೆಗಾಗಿ ಸುತ್ತುವರಿದರು
ಪದಾರ್ಥ (ಕ.ಗ.ಪ)
ಮುಕ್ಕುರುಕು-ಮುತ್ತು, ಆವರಿಸು ಪಡಿಬಲ-ಪ್ರತಿಬಲ, ಎದುರುಸೈನ್ಯ ಹಿಳುಕು- ಬಾಣದ ತುದಿ, ಬಾಣದ ಬುಡ, ಹೊಗರು-ಪ್ರಕಾಶ, ಕಾಂತಿ,
ಇಟ್ಟಳಿಸು-ಇಟ್ಟಣಿಸು-ಗುಂಪಾಗು
ಒಗ್ಗು-ಒಟ್ಟುಗೂಡು, ಸಾಲುಗಟ್ಟು
ಮೂಲ ...{Loading}...
ದಳಪತಿಯ ಮುಕ್ಕುರುಕಿದರು ಪಡಿ
ಬಲವ ಬರಹೇಳೆನುತ ಚಾಚಿದ
ಹಿಳುಕುಗೆನ್ನೆಯ ಹೊಗರುಮೋರೆಯ ಬಿಗಿದ ಹುಬ್ಬುಗಳ
ಕಳಶಜನ ಸುತನೌಕಿದನು ಕೃಪ
ನಳವಿಗೊಟ್ಟನು ಸುಬಲಸುತನಿ
ಟ್ಟಳಿಸಿದನು ಕರ್ಣಾತ್ಮಜರು ಕೈಕೊಂಡರೊಗ್ಗಿನಲಿ ॥25॥
೦೨೬ ನೆತ್ತಿಯಗತೆಗಳಙ್ಕುಶದ ಬೆರ ...{Loading}...
ನೆತ್ತಿಯಗತೆಗಳಂಕುಶದ ಬೆರ
ಳೊತ್ತುಗಿವಿಗಳ ಕರದ ಪರಿಘದ
ಮತ್ತಗಜಘಟೆಗಳನು ನೂಕಿದರೆಂಟು ಸಾವಿರವ
ಸುತ್ತು ಝಲ್ಲಿಯ ಝಲ್ಲರಿಯ ಬಲು
ಹತ್ತುಗೆಯ ಬಿರುಬುಗಳ ತೇರಿನ
ಹತ್ತು ಸಾವಿರ ಹೊದರುದೆಗೆದವು ಶಲ್ಯನೆಡಬಲಕೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂಕುಶಗಳಿಂz ನೆತ್ತಿಯ ಮೇಲೆ ಕುತ್ತುತ್ತಾ, ಬೆರಳಿಂದ ಕಿವಿಗಳನ್ನು ಒತ್ತುತ್ತಾ, ಎಂಟುಸಾವಿರ ಮದಿಸಿದ ಆನೆಗಳನ್ನು ಕಬ್ಬಿಣದ ಸಲಾಕೆಯನ್ನು ಹಿಡಿದ ಸೈನಿಕರು ಯುದ್ಧಕ್ಕೆ ಅಟ್ಟಿದರು. ಸುತ್ತಿ ಕಟ್ಟಿರುವ ಜಾಲರಿಗಳ, ತೋರಣಗಳ, ಒಟ್ಟುಗೂಡಿ ಸೇರಿರುವ, ಬಲುಗಟ್ಟಿಯಾದ ಹತ್ತುಸಾವಿರ ತೇರುಗಳು ಶಲ್ಯನ ಎಡಬಲಭಾಗಗಳಲ್ಲಿ ಹೊಳೆ ಹೊಳೆಯುತ್ತಾ ಬಂದು ನಿಂತವು.
ಪದಾರ್ಥ (ಕ.ಗ.ಪ)
ಪರಿಘ-ಕಬ್ಬಿಣದ ಸಲಾಕೆ, ಝಲ್ಲಿ-ಜಾಲರಿ, ಸಾಲು, ಸಮೂಹ, ಝಲ್ಲರಿ-ತೋರಣ, ಹತ್ತುಗೆ-ಸೇರಿಕೆ, ಹೊಂದಿಕೆ ಬಿರುಬು-ಕಾಠಿಣ್ಯ, ಗಟ್ಟಿಯಾದ, ಹೊದರುದೆಗೆ-ಪ್ರಕಾಶಿಸು
ಮೂಲ ...{Loading}...
ನೆತ್ತಿಯಗತೆಗಳಂಕುಶದ ಬೆರ
ಳೊತ್ತುಗಿವಿಗಳ ಕರದ ಪರಿಘದ
ಮತ್ತಗಜಘಟೆಗಳನು ನೂಕಿದರೆಂಟು ಸಾವಿರವ
ಸುತ್ತು ಝಲ್ಲಿಯ ಝಲ್ಲರಿಯ ಬಲು
ಹತ್ತುಗೆಯ ಬಿರುಬುಗಳ ತೇರಿನ
ಹತ್ತು ಸಾವಿರ ಹೊದರುದೆಗೆದವು ಶಲ್ಯನೆಡಬಲಕೆ ॥26॥
೦೨೭ ಮೂರು ಕೋಟಿ ...{Loading}...
ಮೂರು ಕೋಟಿ ಪದಾತಿಯಲಿ ದೊರೆ
ಯೇರಿದನಲೈ ನಿನ್ನ ಮಗನು
ಬ್ಬೇರಿರಾವ್ತರು ಹೊಕ್ಕರೆರಡೇ ಲಕ್ಕ ತೇಜಿಯಲಿ
ಕೀರಿದರು ಮಾರೊಡ್ಡನಿವರವ
ರೇರಿ ಹೊಯ್ದರು ನಿನ್ನವರನೊಗು
ವೇರ ಬಾಯ್ಗಳ ರುಧಿರಜಲವದ್ದುದು ಚತುರ್ಬಲವ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂರುಕೋಟಿ ಪದಾತಿಬಲಗಳೊಂದಿಗೆ ನಿನ್ನ ಮಗನಾದ ದೊರೆ ದುರ್ಯೋಧನ ಯುದ್ಧಕ್ಕೆ ಅನುವಾದ. ಅವನೊಂದಿಗೆ ಉತ್ಸಾಹಿತರಾದ ಎರಡು ಲಕ್ಷ ರಾವುತರು ಸಿದ್ಧರಾದರು; ನಿನ್ನವರು ಎದುರು ಸೈನ್ಯವನ್ನು ಗೀರಿಹಾಕಿದರು; ಅವರು ನಿನ್ನವರನ್ನು ಮೇಲೆ ಬಿದ್ದು ಹೊಡದುಹಾಕಿದರು. ಗಾಯಗಳ ಬಾಯಿಗಳಿಂದ ಸೋರುವ ರಕ್ತವು ಚತುರಂಗಬಲವನ್ನೂ ಮುಳುಗಿಸಿತು.
ಪದಾರ್ಥ (ಕ.ಗ.ಪ)
ಪದಾತಿ-ಕಾಲುದಳ, ಉಬ್ಬೇರು-ಉತ್ಸಾಹಿಸು, ರಾವ್ತರು-ರಾವುತರು, ಅಶ್ವದಳ,
ಲಕ್ಕ-ಲಕ್ಷ, ಕೀರು-ಗೀರು,
ಮಾರೊಡ್ಡು-ಎದುರು ಸೈನ್ಯ,
ಏರಬಾಯiï-ಗಾಯದ ಬಾಯಿ, ಗಾಯದಿಂದ ರಕ್ತ ಸುರಿಯುವ ಜಾಗ
ರುಧಿರ-ರಕ್ತ
ಮೂಲ ...{Loading}...
ಮೂರು ಕೋಟಿ ಪದಾತಿಯಲಿ ದೊರೆ
ಯೇರಿದನಲೈ ನಿನ್ನ ಮಗನು
ಬ್ಬೇರಿರಾವ್ತರು ಹೊಕ್ಕರೆರಡೇ ಲಕ್ಕ ತೇಜಿಯಲಿ
ಕೀರಿದರು ಮಾರೊಡ್ಡನಿವರವ
ರೇರಿ ಹೊಯ್ದರು ನಿನ್ನವರನೊಗು
ವೇರ ಬಾಯ್ಗಳ ರುಧಿರಜಲವದ್ದುದು ಚತುರ್ಬಲವ ॥27॥
೦೨೮ ತಪ್ಪಿಸಿದ ಮೈಮೈಗಳಲಿ ...{Loading}...
ತಪ್ಪಿಸಿದ ಮೈಮೈಗಳಲಿ ಹರಿ
ತಪ್ಪ ರಕ್ತವ ಸುರಿದು ಕೆಂಧೂ
ಳುಪ್ಪರಿಸಿದುದು ಚಟುಳ ಚಾತುರ್ಬಲದ ಪದಹತಿಗೆ
ಅಪ್ಪಿದುದು ಕೆಂಧೂಳಿನೊಡ್ಡಿನ
ತರ್ಪಣದ ತನಿರಕ್ತವೆರಡರ
ದರ್ಪವಡಗದು ನಿಮಿಷದಲಿ ನರನಾಥ ಕೇಳ್ ಎಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಷ್ಟು ತಡೆಯೊಡ್ಡಿದರೂ ತಪ್ಪಿಸಿಕೊಂಡು ದೇಹದಿಂದ ಸುರಿಯುವ ರಕ್ತವನ್ನು ಹೀರಿಕೊಂಡು, ಕೆಂಧೂಳು ಚತುರ್ಬಲದ ಪಾದಗಳ ಬಲವಾದ ತುಳಿತದಿಂದ ಮೇಲಕ್ಕೆ ಹಾರಿತು. ಸೈನ್ಯದಲ್ಲಿ ತರ್ಪಣದಂತೆ ಸುರಿಯುತ್ತಿದ್ದ ತನಿರಕ್ತವು ಸೈನ್ಯದ ಪದಹತಿಯಿಂದ ಎದ್ದ ಕೆಂಧೂಳನ್ನು ಅಪ್ಪಿಕೊಂಡಿತು. ಧೂಳು ಮತ್ತು ರಕ್ತದ ಆಟಾಟೋಪ ಅಡಗಲೇ ಇಲ್ಲ-ಧೃತರಾಷ್ಟ್ರ ಕೇಳು, ಎಂದು ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ಸುರಿದು-ಹೀರಿಕೊಂಡು, ಉಪ್ಪರಿಸು-ಮೇಲಕ್ಕೆ ಹಾರು, ಚಟುಳ-ನಡುಗುವ, ತೀಕ್ಷ್ಣವಾದ, ಹರಿತವಾದ, ಒಡ್ಡು-ಸೈನ್ಯ
ಪಾಠಾನ್ತರ (ಕ.ಗ.ಪ)
ಕೆಂಧೂಳಿನೊಡ್ಡಿನ ಎಂಬಲ್ಲಿ ಅನ್ವಯಾರ್ಥ ಅಸ್ಪಷ್ಟವಾಗಿದೆ. “ಅಪ್ಪಿದುದು ಕೆಂಧೂಳನೊಡ್ಡಿನ …..” ಎಂಬ ಪಾಠವೇ ಸರಿಯಿದೆ (‘ಶಲ್ಯಗದಾಪರ್ವಗಳು’ ಗ್ರಂಥದ ಒಂದು ಪಾಠಾಂತರ).
ಟಿಪ್ಪನೀ (ಕ.ಗ.ಪ)
ಯುದ್ಧಭೂಮಿಯಲ್ಲಿನ ರಕ್ತ ಮತ್ತು ಧೂಳು ಇವರೆರಡರ ಮೇಲಾಟವನ್ನು ಕವಿ ಇಲ್ಲಿ ನಿರೂಪಿಸಿದ್ದಾನೆ. ಯುದ್ಧವರ್ಣನೆಯ ಉತ್ಸಾಹ ಇಲ್ಲಿ ಎದ್ದು ಕಾಣುತ್ತದೆ.
ಮೂಲ ...{Loading}...
ತಪ್ಪಿಸಿದ ಮೈಮೈಗಳಲಿ ಹರಿ
ತಪ್ಪ ರಕ್ತವ ಸುರಿದು ಕೆಂಧೂ
ಳುಪ್ಪರಿಸಿದುದು ಚಟುಳ ಚಾತುರ್ಬಲದ ಪದಹತಿಗೆ
ಅಪ್ಪಿದುದು ಕೆಂಧೂಳಿನೊಡ್ಡಿನ
ತರ್ಪಣದ ತನಿರಕ್ತವೆರಡರ
ದರ್ಪವಡಗದು ನಿಮಿಷದಲಿ ನರನಾಥ ಕೇಳೆಂದ ॥28॥
೦೨೯ ತೆಗೆದರರ್ಜುನನನು ಸುಶರ್ಮನ ...{Loading}...
ತೆಗೆದರರ್ಜುನನನು ಸುಶರ್ಮನ
ವಿಗಡ ರಥಿಕರು ಭೀಮಸೇನನ
ನುಗಿದನಿತ್ತಲು ನಿನ್ನ ಮಗನಾ ಸಾತ್ಯಕಿಯ ರಥವ
ಹೊಗರುಗಣೆಯಲಿ ಮುಸುಕಿದನು ಹೂ
ಣಿಗನಲೇ ಗುರುಸೂನು ನಕುಲನ
ತೆಗೆಸಿದನು ತೂರಂಬಿನಲಿ ತೆರಳದೆ ಕೃಪಾಚಾರ್ಯ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಶರ್ಮನ ವೀರ ರಥಿಕರು ಅರ್ಜುನನನ್ನು ಹಿಮ್ಮೆಟ್ಟಿಸಿದರು. ನಿನ್ನ ಮಗನಾದ ದುರ್ಯೋಧನ ಭೀಮನನ್ನು ಯುದ್ಧಭೂಮಿಯಿಂದ ಎಳೆದು ಹಾಕಿದ. ಪರಾಕ್ರಮಿಯಾದ ಅಶ್ವತ್ಥಾಮ ಸಾತ್ಯಕಿಯ ರಥವನ್ನು ಕಿಡಿಸೂಸುವ ಬಾಣಗಳಿಂದ ಮುಸುಕಿದ. ತೂರಿಬರುವ ಬಾಣಗಳನ್ನು ಎದುರಿಸಿ, ಅವುಗಳಿಂದಾಗಿ ಹಿಮ್ಮಟ್ಟದೆ ಕೃಪಾಚಾರ್ಯನು ನಕುಲನನ್ನು ಯುದ್ಧರಂಗದಿಂದ ಓಡಿಸಿದ.
ಪದಾರ್ಥ (ಕ.ಗ.ಪ)
ವಿಗಡ-ವೀರ, ಉಗಿ-ಸೆಳೆ, ಎಳೆ, ಎಳೆದು ಬೀಸಾಡು, ಹೊಗರು-ಪ್ರಕಾಶ, ಕಿಡಿ, ಗಣೆ-ಕಣೆ, ಬಾಣ, ಹೂಣಿಗ-ಪರಾಕ್ರಮಿ, ತೂರಂಬು-ತೂರಿಬರುವ ಬಾಣಗಳು.
ಮೂಲ ...{Loading}...
ತೆಗೆದರರ್ಜುನನನು ಸುಶರ್ಮನ
ವಿಗಡ ರಥಿಕರು ಭೀಮಸೇನನ
ನುಗಿದನಿತ್ತಲು ನಿನ್ನ ಮಗನಾ ಸಾತ್ಯಕಿಯ ರಥವ
ಹೊಗರುಗಣೆಯಲಿ ಮುಸುಕಿದನು ಹೂ
ಣಿಗನಲೇ ಗುರುಸೂನು ನಕುಲನ
ತೆಗೆಸಿದನು ತೂರಂಬಿನಲಿ ತೆರಳದೆ ಕೃಪಾಚಾರ್ಯ ॥29॥
೦೩೦ ಹಳಚಿದನು ದಳಪತಿಯನವನಿಪ ...{Loading}...
ಹಳಚಿದನು ದಳಪತಿಯನವನಿಪ
ತಿಲಕನೆಚ್ಚನು ನೂರು ಶರದಲಿ
ಕಳಚಿ ಕಯ್ಯೊಡನೆಚ್ಚು ಬೇಗಡೆಗಳೆದನವನಿಪನ
ಅಳುಕಲರಿವುದೆ ಸಿಡಿಲ ಹೊಯ್ಲಲಿ
ಕುಲಕುಧರವೀ ಧರ್ಮಸುತನ
ಗ್ಗಳಿಕೆಗುಪ್ಪಾರತಿಗಳಾದುವು ಶಲ್ಯನಂಬುಗಳು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಳಪತಿಯಾದ ಶಲ್ಯನನ್ನು ಧರ್ಮರಾಯನು ಎದುರಿಸಿ ಅವನನ್ನು ನೂರು ಬಾಣಗಳಲ್ಲಿ ಪ್ರಹರಿಸಿದ. ಶಲ್ಯ ತನ್ನ ಕೈಯಲ್ಲಿದ್ದ ಆಯುಧಗಳನ್ನು ಧರ್ಮಜನ ಮೇಲೆ ಬೀಸಿ ಎಸೆದು ಅವನ ಮುಖದ ಕಾಂತಿಯನ್ನು ಕಳೆದ. ಸಿಡಿಲು ಹೊಡೆದರೆ ಕುಲಗಿರಿ ಹೆದರುತ್ತದೆಯೆ? ಧರ್ಮರಾಯನ ಹಿರಿಮೆಗೆ ಎತ್ತಿದ ಕಿರು ಆರತಿಗಳಂತೆ ಶಲ್ಯನ ಬಾಣಗಳು ಧರ್ಮಜನ ಮುಖಕಾಂತಿಯನ್ನು ಹೆಚ್ದಿಸಿದವು.
ಪದಾರ್ಥ (ಕ.ಗ.ಪ)
ಬೇಗಡೆ-ಕಾಂತಿ, ಹೊಳೆಯುವ ಬಣ್ಣದ ತಗಡು, ಮುಸುಕು,
ಕುಲಕುಧರ-ಕುಲಪರ್ವತ (ಇದೇ ಪರ್ವದ ಒಂದನೇ ಸಂಧಿಯ ಎರಡನೆಯ ಪದ್ಯದ ಶಬ್ದಾರ್ಥವನ್ನು ನೋಡಿ)
ಉಪ್ಪಾರತಿ-ಕಿರುಆರತಿ; ಆರತಿಯ ನಂತರ ಉಪ್ಪು ನಿವಾಳಿಸುವುದು
ಮೂಲ ...{Loading}...
ಹಳಚಿದನು ದಳಪತಿಯನವನಿಪ
ತಿಲಕನೆಚ್ಚನು ನೂರು ಶರದಲಿ
ಕಳಚಿ ಕಯ್ಯೊಡನೆಚ್ಚು ಬೇಗಡೆಗಳೆದನವನಿಪನ
ಅಳುಕಲರಿವುದೆ ಸಿಡಿಲ ಹೊಯ್ಲಲಿ
ಕುಲಕುಧರವೀ ಧರ್ಮಸುತನ
ಗ್ಗಳಿಕೆಗುಪ್ಪಾರತಿಗಳಾದುವು ಶಲ್ಯನಂಬುಗಳು ॥30॥
೦೩೧ ಅರಸ ಕೇಳೈ ...{Loading}...
ಅರಸ ಕೇಳೈ ಮುಳಿದ ಮಾದ್ರೇ
ಶ್ವರನ ಖತಿಯೋ ಕಂಪಿತ ಯಮನು
ಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ
ಉರಿದನಗ್ಗದ ರೋಷದಲಿ ಹೊಗೆ
ಹೊರಳಿಗಟ್ಟಿತು ಸುಯ್ಲಿನಲಿ ಸಂ
ವರಿಸಿಕೊಳು ಕೌಂತೇಯ ಎನುತೆಚ್ಚನು ಮಹೀಪತಿಯ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ಧರ್ಮಜನನ್ನು ಸೋಲಿಸಲು ಸಾಧ್ಯವಾಗದ ಮಾದ್ರೇಶನಾದ ಶಲ್ಯನ ಕೋಪವೋ ಅಥವ ಕೋಪಗೊಂಡ ಯಮನ ಅಬ್ಬರದ ಕೋಪವೋ ಅಥವ ಕಾಲರುದ್ರನ ಹಣೆಯ ಕಣ್ಣಿನಿಂದ ಹೊರಸೂಸುವ ದೊಡ್ಡ ಬೆಂಕಿಯ ಉಂಡೆಯೋ! ಶಲ್ಯ ಅದ್ಭುತವಾದ ರೋಷದಿಂದ ಉರಿದುಹೋದ; ಅದರಿಂದಾಗಿ ಬಂದ ಹೊಗೆ ಹೊದರುಗಟ್ಟಿತು. ಬಿಸಿಯುಸಿರಿನಿಂದ ಮಾತಾಡಿದ ಶಲ್ಯ “ಇದನ್ನು ಸಹಿಸಿಕೋ ಧರ್ಮರಾಯ!” ಎನ್ನುತ್ತ ಬಾಣಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಖತಿ-ಕೋಪ,
ಕುಪಿತ-ಕೋಪಗೊಂಡ,
ಕಾಲರುದ್ರ-ಪ್ರಳಯಕಾಲದ ರುದ್ರ,
ಹೆಗ್ಗಿಡಿ-ದೊಡ್ಡ ಕಿಡಿ, ಕೆಂಡದ ಉಂಡೆ,
ಹೊರಳಿಗಟ್ಟು-ಒಂದುಗೂಡು, ಗುಂಪಾಗು, ಸುಯ್ಲು-ಉಸಿರು, ಸಂವರಿಸು-ಸೈರಿಸು, ತಡೆದುಕೊಳ್ಳು.
ಮೂಲ ...{Loading}...
ಅರಸ ಕೇಳೈ ಮುಳಿದ ಮಾದ್ರೇ
ಶ್ವರನ ಖತಿಯೋ ಕಂಪಿತ ಯಮನು
ಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ
ಉರಿದನಗ್ಗದ ರೋಷದಲಿ ಹೊಗೆ
ಹೊರಳಿಗಟ್ಟಿತು ಸುಯ್ಲಿನಲಿ ಸಂ
ವರಿಸಿಕೊಳು ಕೌಂತೇಯ ಎನುತೆಚ್ಚನು ಮಹೀಪತಿಯ ॥31॥
೦೩೨ ಮುನ್ದಣಮ್ಬಿನ ಮೊನೆಯನೊದೆದವು ...{Loading}...
ಮುಂದಣಂಬಿನ ಮೊನೆಯನೊದೆದವು
ಹಿಂದಣಂಬುಗಳವರ ಮೊನೆಗಳ
ಹಿಂದಣಂಬಿನ ಹಿಳುಕು ಹೊಕ್ಕವು ಮುಂಚಿದಂಬುಗಳ
ಹಿಂದಣವು ಹಿಂದಿಕ್ಕಿದವು ಮಿಗೆ
ಹಿಂದಣಂಬುಗಳೆಂಜಲಿಸಿ ಬಳಿ
ಸಂದವುಳಿದಂಬುಗಳೆನಲು ಕವಿದೆಚ್ಚನವನಿಪನ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ಹೋದ ಬಾಣಗಳ ತುದಿಯನ್ನು ಅವುಗಳ ಹಿಂದಿನಿಂದ ಹೋದ ಬಾಣಗಳು ಒದ್ದುವು; ಆ ಹಿಂದಿನ ಬಾಣಗಳ ಬುಡಗಳನ್ನು ಅವುಗಳ ನಂತರ ಹೋದ ಬಾಣಗಳು ಸೇರಿಕೊಂಡವು. ಅವಕ್ಕಿಂತ ಮುಂಚೆ ವೇಗವಾಗಿ ಹೋದ ಬಾಣಗಳನ್ನು ಹಿಂದೆ ಬಂದ ಬಾಣಗಳು ಹಿಂದಿಕ್ಕಿದವು. ಹಿಂದಿನ ಬಾಣಗಳನ್ನು ಎಂಜಲು ಮಾಡಿ ಉಳಿದ ಬಾಣಗಳು ಸಮೀಪಿಸಿದುವು ಎಂಬಂತೆ ಶಲ್ಯನು ಬಾಣಗಳಿಂದ ಧರ್ಮಜನು ಮುಚ್ಚಿಹೋಗುವಂತೆ ಹೊಡೆದ.
ಪದಾರ್ಥ (ಕ.ಗ.ಪ)
ಅಂಬು-ಬಾಣ, ಮೊನೆ-ತುದಿ, ಹಿಳುಕು-ಬಾಣದ ಹಿಂಭಾಗ, ಬಳಿಸಂದುವು-ಸಮೀಪಕ್ಕೆ ಬಂದುವು
ಮೂಲ ...{Loading}...
ಮುಂದಣಂಬಿನ ಮೊನೆಯನೊದೆದವು
ಹಿಂದಣಂಬುಗಳವರ ಮೊನೆಗಳ
ಹಿಂದಣಂಬಿನ ಹಿಳುಕು ಹೊಕ್ಕವು ಮುಂಚಿದಂಬುಗಳ
ಹಿಂದಣವು ಹಿಂದಿಕ್ಕಿದವು ಮಿಗೆ
ಹಿಂದಣಂಬುಗಳೆಂಜಲಿಸಿ ಬಳಿ
ಸಂದವುಳಿದಂಬುಗಳೆನಲು ಕವಿದೆಚ್ಚನವನಿಪನ ॥32॥
೦೩೩ ತೋಡಿ ನೆಟ್ಟವು ...{Loading}...
ತೋಡಿ ನೆಟ್ಟವು ಸೀಸಕವನೊಡೆ
ದೋಡಿದವು ಕವಚದಲಿ ಕುದುರೆಯ
ಜೋಡು ಹಕ್ಕರಿಕೆಯಲಿ ತಳಿತವು ಹಿಳುಕು ಹರಹಿನಲಿ
ಕೂಡೆ ರಥದಲಿ ಸಿಂಧದಲಿ ಮೈ
ಗೂಡಿ ಗಾಲಿಗಳಲಿ ವರೂಥದ
ಲೀಡಿರಿದವಂಬುಗಳು ಕಲಿಮಾದ್ರೇಶನೆಸುಗೆಯಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನ ಬಿಲ್ಲಿನಿಂದ ಹೊರಟ ಬಾಣಗಳು ಶತ್ರುಗಳ ಉಕ್ಕಿನ ಶಿರಸ್ತ್ರಾಣಗಳನ್ನು ಕೊರೆದುವು, ಕವಚಗಳನ್ನು ಒಡೆದುಕೊಂಡು ದಾರಿ ಮಾಡಿ ದೇಹದ ಮತ್ತೊಂದು ಬದಿಯಿಂದ ಓಡಿದುವು. ಕುದುರೆಯ ಕವಚ, ಜೀನುಗಳಲ್ಲಿ ಬಾಣಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊಕ್ಕವು. ಧರ್ಮರಾಯನ ರಥದಲ್ಲಿ, ಬಾವುಟದಲ್ಲಿ, ರಥಚಕ್ರಗಳಲ್ಲಿ, ರಥದಲ್ಲಿ ವೀರಶಲ್ಯನ ಬಾಣಾವಳಿಗಳು ತುಂಬಿ ಹೋದುವು.
ಪದಾರ್ಥ (ಕ.ಗ.ಪ)
ಸೀಸಕ-ಶಿರಸ್ತ್ರಾಣ, ಜೋಡು-ಕವಚ, ಅಂಗರಕ್ಷೆ, ಹಕ್ಕರಿಕೆ-ಕುದುರೆಯ ಹಲ್ಲಣ (ಪಕ್ಷರಕ್ಷ-ಸಂ) ತಳಿತವು-ಪ್ರಕಾಶಿಸಿದವು, ಹಿಳುಕು-ಬಾಣದ ಹಿಂದಿನ ಭಾಗ, ಸಿಂಧ-ಬಾವುಟ, ವರೂಥ-ರಥ, ಈಡಿರಿ-ತುಂಬಿಹೋಗು
ಮೂಲ ...{Loading}...
ತೋಡಿ ನೆಟ್ಟವು ಸೀಸಕವನೊಡೆ
ದೋಡಿದವು ಕವಚದಲಿ ಕುದುರೆಯ
ಜೋಡು ಹಕ್ಕರಿಕೆಯಲಿ ತಳಿತವು ಹಿಳುಕು ಹರಹಿನಲಿ
ಕೂಡೆ ರಥದಲಿ ಸಿಂಧದಲಿ ಮೈ
ಗೂಡಿ ಗಾಲಿಗಳಲಿ ವರೂಥದ
ಲೀಡಿರಿದವಂಬುಗಳು ಕಲಿಮಾದ್ರೇಶನೆಸುಗೆಯಲಿ ॥33॥
೦೩೪ ದೊರೆಗೆ ಬಲುಹೋ ...{Loading}...
ದೊರೆಗೆ ಬಲುಹೋ ಸಮರ ಶಲ್ಯನ
ಶರವಳೆಗೆ ಹಿಡಿ ಕೊಡೆಯನೆನಲ
ಬ್ಬರದೊಳಗೆ ಗಬ್ಬರಿಸೆ ನೆಲ ಗಾಲಿಗಳ ಘಲ್ಲಣೆಗೆ
ಸರಳ ಹೊದೆಗಳ ತುಂಬಿ ರಥ ಸಾ
ವಿರದಲಾ ಪಾಂಚಾಲಬಲವು
ಪ್ಪರಗುಡಿಯ ಸಿಂಧದ ಸಘಾಡದಲೈದಿತರಿಭಟನ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನಿಗೆ ಶಲ್ಯನೊಂದಿಗಿನ ಯುದ್ಧ ಬಹುದೊಡ್ಡದಾಯಿತು. ಶಲ್ಯನ ಬಾಣದ ಮಳೆಗೆ ಕೊಡೆಯನ್ನು ಹಿಡಿಯಿರಿ-ಎನ್ನುತ್ತಾ ಅಬ್ಬರಿಸಿ ಮುತ್ತಲು, ಓಡುತ್ತಿದ್ದ ರಥದ ಗಾಲಿಗಳು ನೆಲವನ್ನು ಘಟ್ಟಿಸಲು, ಬಾಣಗಳ ಕಟ್ಟುಗಳನ್ನು ತುಂಬಿ ಸಾವಿರ ರಥಗಳೊಂದಿಗೆ ಪಾಂಚಾಲ ಬಲವು ರಥದ ಬಾವುಟಗಳನ್ನು ಮೇಲೆತ್ತಿಕಟ್ಟಿ ಗರ್ವದಿಂದ ಶತ್ರುರಾಜನಾದ ಶಲ್ಯನ ಮೇಲೆ ಆಕ್ರಮಣ ಮಾಡಿತು.
ಪದಾರ್ಥ (ಕ.ಗ.ಪ)
ಶರವಳೆ-ಬಾಣಗಳ ಮಳೆ, ಘಲ್ಲಣೆ-ಘಟ್ಟಿಸು, ಹೊದೆ-ಕಟ್ಟುಗಳು, ಪೊದೆ, ಸಮೂಹ ಉಪ್ಪರಗುಡಿ-ಮೇಲೆ ಹಾರುವ ಬಾವುಟ
ಮೂಲ ...{Loading}...
ದೊರೆಗೆ ಬಲುಹೋ ಸಮರ ಶಲ್ಯನ
ಶರವಳೆಗೆ ಹಿಡಿ ಕೊಡೆಯನೆನಲ
ಬ್ಬರದೊಳಗೆ ಗಬ್ಬರಿಸೆ ನೆಲ ಗಾಲಿಗಳ ಘಲ್ಲಣೆಗೆ
ಸರಳ ಹೊದೆಗಳ ತುಂಬಿ ರಥ ಸಾ
ವಿರದಲಾ ಪಾಂಚಾಲಬಲವು
ಪ್ಪರಗುಡಿಯ ಸಿಂಧದ ಸಘಾಡದಲೈದಿತರಿಭಟನ ॥34॥
೦೩೫ ಪೂತುರೇ ಪಾಞ್ಚಾಲ ...{Loading}...
ಪೂತುರೇ ಪಾಂಚಾಲ ಬಲ ಬಂ
ದಾತುಕೊಂಡುದೆ ಧರ್ಮಪುತ್ರನ
ಘಾತಿಯನು ಘಟ್ಟಿಸಿದರೇ ತುಷ್ಟಿಸಿದನೇ ನೃಪತಿ
ಈತಗಳ ಕೊಳ್ಳೆನುತ ಶರಸಂ
ಘಾತವನು ಕವಿಸಿದನು ಮಾದ್ರೀ
ಜಾತರಡಹಾಯಿದರು ಶಲ್ಯನ ರಥದ ಸಮ್ಮುಖಕೆ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲರೇ, ಪಾಂಚಾಲ ಸೈನ್ಯವು ಬಂದು ಧರ್ಮಜನನ್ನು ತಮ್ಮ ಆಸರೆಗೆ ತೆಗೆದುಕೊಂಡರೇ, ಅವನಿಗುಂಟಾದ ಆಪತ್ತನ್ನು ಬಡಿದು ಕೆಡಹಿದರೇ, ಧರ್ಮಜ ತೃಪ್ತಿಹೊಂದಿದನೇ, ಎನ್ನುತ್ತಾ ಶಲ್ಯನು ಇವುಗಳನ್ನು ಕೊಳ್ಳು-ಎನ್ನುತ್ತಾ ಬಾಣಗಳನ್ನು ತೂರಿ ಧರ್ಮಜನನ್ನು ಮುಚ್ಚಿಬಿಟ್ಟಿನು. ಕೂಡಲೇ ಮಾದ್ರೀಜಾತರಾದ ನಕುಲಸಹದೇವರು ಶಲ್ಯನ ರಥದ ಮುಂದಕ್ಕೆ ಎರಗಿದರು.
ಪದಾರ್ಥ (ಕ.ಗ.ಪ)
ಪೂತುರೇ-ಭಲೇ, ಘಟ್ಟಿಸು-ಹೊಡೆ, ಬಡಿ ತುಷ್ಟಿಸು-ತೃಪ್ತಿಪಡು, ಸಂತೋಷಿಸು
ಮೂಲ ...{Loading}...
ಪೂತುರೇ ಪಾಂಚಾಲ ಬಲ ಬಂ
ದಾತುಕೊಂಡುದೆ ಧರ್ಮಪುತ್ರನ
ಘಾತಿಯನು ಘಟ್ಟಿಸಿದರೇ ತುಷ್ಟಿಸಿದನೇ ನೃಪತಿ
ಈತಗಳ ಕೊಳ್ಳೆನುತ ಶರಸಂ
ಘಾತವನು ಕವಿಸಿದನು ಮಾದ್ರೀ
ಜಾತರಡಹಾಯಿದರು ಶಲ್ಯನ ರಥದ ಸಮ್ಮುಖಕೆ ॥35॥
೦೩೬ ಮಕ್ಕಳಿರ ನಿಮಗೇಕೆ ...{Loading}...
ಮಕ್ಕಳಿರ ನಿಮಗೇಕೆ ರಣವಿದು
ಮಕ್ಕಳಾಟಿಕೆಯಾಯ್ತಲಾ ಹಿಂ
ದಿಕ್ಕಿದಿರಲಾ ದೊರೆಯ ಧೂಳಿಯ ಬೆನ್ನ ತಡೆದಿರಲಾ
ಎಕ್ಕಸರದಲಿ ನಿಮ್ಮ ರಾಯನ
ನಿಕ್ಕಿ ಭೀಮಾರ್ಜುನರಿಗೌತಣ
ವಿಕ್ಕುವೆನು ಬರಹೇಳೆನುತ ತೂಳಿದನು ಮಾದ್ರೇಶ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಕ್ಕಳಿರಾ, ನಿಮಗೇಕೆ ಈ ಯುದ್ಧ; ಯುದ್ಧವೆಂಬುದು ಮಕ್ಕಳಾಟವಾಯಿತಲ್ಲ! ನಿಮ್ಮ ದೊರೆ ಧರ್ಮಜನನ್ನು ಹಿಂದೆಹಾಕಿ ನೀವು ಮುಂದೆ ಬಂದಿರಲ್ಲಾ! ಧೂಳು ಅಟ್ಟಿಸಿಕೊಂಡು ಹೋಗಲು ಓಡುತ್ತಿದ್ದ ಧರ್ಮಜನ ಬೆನ್ನಿಗೆ ಧೂಳು ಮುತ್ತುವುದನ್ನು ತಡೆದಿರಲ್ಲವೆ! (ರಣಭೂಮಿಗೆ ಬೆನ್ನು ತೋರಿಸಿ ಓಡುತ್ತಿದ್ದ ಧರ್ಮರಾಯನನ್ನು ನೀವು ನಿಲ್ಲಿಸಿದಿರಿ-ಎಂದು ಭಾವ) ಒಂದೇ ಏಟಿಗೆ ನಿಮ್ಮ ರಾಜನನ್ನು ಸಂಹರಿಸಿ, ಭೀಮಾರ್ಜುನರಿಗೆ ಆ ದೃಶ್ಯವನ್ನು ನೋಡುವ ಔತಣ ನೀಡುತ್ತೇನೆ-ಅವರನ್ನು ಬರಹೇಳು-ಎನ್ನುತ್ತಾ ಶಲ್ಯ, ನಕುಲ ಸಹದೇವರನ್ನು ಹಿಮ್ಮೆಟ್ಟಿಸಿದ.
ಪದಾರ್ಥ (ಕ.ಗ.ಪ)
ಎಕ್ಕಸರ-ಒಂದೇ ಬಾಣ, ತೂಳಿದನು-ಹಿಮ್ಮಟ್ಟಿಸಿದನು, ಓಡಿಸಿದನು.
ಮೂಲ ...{Loading}...
ಮಕ್ಕಳಿರ ನಿಮಗೇಕೆ ರಣವಿದು
ಮಕ್ಕಳಾಟಿಕೆಯಾಯ್ತಲಾ ಹಿಂ
ದಿಕ್ಕಿದಿರಲಾ ದೊರೆಯ ಧೂಳಿಯ ಬೆನ್ನ ತಡೆದಿರಲಾ
ಎಕ್ಕಸರದಲಿ ನಿಮ್ಮ ರಾಯನ
ನಿಕ್ಕಿ ಭೀಮಾರ್ಜುನರಿಗೌತಣ
ವಿಕ್ಕುವೆನು ಬರಹೇಳೆನುತ ತೂಳಿದನು ಮಾದ್ರೇಶ ॥36॥
೦೩೭ ದಳಪತಿಯ ದುವ್ವಾಳಿ ...{Loading}...
ದಳಪತಿಯ ದುವ್ವಾಳಿ ಪಾಂಡವ
ಬಲವ ಕೆದರಿತು ಕಲ್ಪಮೇಘದ
ಹೊಲಿಗೆ ಹರಿದವೊಲಾಯ್ತು ಮಾದ್ರೇಶ್ವರನ ಶರಜಾಲ
ಅಳುಕದಿರಿ ಬದ್ದರದ ಬಂಡಿಯ
ನಿಲಿಸಿ ಹರಿಗೆಯ ಪಾಠಕರು ಕೈ
ಕೊಳಲಿ ಮುಂದಣ ನೆಲನನೆನುತುಬ್ಬರಿಸಿತರಿಸೇನೆ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಳಪತಿಯಾದ ಶಲ್ಯನ ಮೇಲಾಟ ಪಾಂಡವಸೈನ್ಯವನ್ನು ಚಲ್ಲಾಪಿಲ್ಲಿಮಾಡಿತು. ಪ್ರಳಯಕಾಲದ ಮೋಡದ ಹೊಲಿಗೆಗಳು ಹರಿದು ಹೋದಂತೆ ಶಲ್ಯನ ಬಾಣಗಳ ಮಳೆಕರೆಯಿತು; ಹೆದರಬೇಡಿ, ಗಟ್ಟಿಮುಟ್ಟಾದ ವಾಹನಗಳನ್ನು ನಿಲ್ಲಿಸಿಕೊಳ್ಳಿ, ಗುರಾಣಿಗಳನ್ನು ಹಿಡಿದಿರುವ ಹೊಗಳುಭಟ್ಟರುಗಳು ಮುಂದಿನ ನೆಲವನ್ನು ಆಕ್ರಮಿಸಲಿ ಎಂದು ಶತ್ರುಸೈನ್ಯವು ಕೋಲಾಹಲ ಮಾಡಿತು.
ಪದಾರ್ಥ (ಕ.ಗ.ಪ)
ದುವ್ವಾಳಿ-ಮೇಲೆ ಬೀಳುವುದು, ಕುದುರೆಯನ್ನು ವೇಗವಾಗಿ ಓಡಿಸುವುದು,
ಕಲ್ಪಮೇಘ-ಪ್ರಳಯಕಾಲದ ಮೋಡ,
ಬದ್ದರ-ಭದ್ರ(ಸಂ), ಗಟ್ಟಿಮುಟ್ಟಾದ,
ಹರಿಗೆ-ಹಲಗೆ, ಗುರಾಣಿ,
ಪಾಠಕ-ಭಟ್ಟಂಗಿ
ಟಿಪ್ಪನೀ (ಕ.ಗ.ಪ)
(ಇನ್ನು ಗೆಲವು ನಮ್ಮದು. ಹೊಗಳುಭಟ್ಟರು ಮುಂಭಾಗಕ್ಕೆ ಬಂದು ತಮ್ಮ ಕೆಲಸಕ್ಕೆ ಸಿದ್ಧರಾಗಲಿ-ಎಂದು ಭಾವ)
ಮೂಲ ...{Loading}...
ದಳಪತಿಯ ದುವ್ವಾಳಿ ಪಾಂಡವ
ಬಲವ ಕೆದರಿತು ಕಲ್ಪಮೇಘದ
ಹೊಲಿಗೆ ಹರಿದವೊಲಾಯ್ತು ಮಾದ್ರೇಶ್ವರನ ಶರಜಾಲ
ಅಳುಕದಿರಿ ಬದ್ದರದ ಬಂಡಿಯ
ನಿಲಿಸಿ ಹರಿಗೆಯ ಪಾಠಕರು ಕೈ
ಕೊಳಲಿ ಮುಂದಣ ನೆಲನನೆನುತುಬ್ಬರಿಸಿತರಿಸೇನೆ ॥37॥
೦೩೮ ಅರಸ ಕೇಳೈ ...{Loading}...
ಅರಸ ಕೇಳೈ ಬಳಿಕ ಶಲ್ಯನ
ಶರಹತಿಗೆ ಬಿಚ್ಚಿದವು ಹೂಡಿದ
ಹರಿಗೆಯಿಬ್ಬಗಿಯಾದವಾ ಬದ್ಧರದ ಬಂಡಿಗಳು
ಸರಳುಗಳ ಬಳಿಸರಳು ಬೆಂಬಳಿ
ಸರಳ ಹಿಂದಣ ಸರಳುಗಳ ಪಡಿ
ಸರಳ ಸಾರದ ಸೋನೆ ಸದೆದುದು ವೈರಿವಾಹಿನಿಯ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು! ಶಲ್ಯನ ಬಾಣದ ಏಟಿಗೆ, ಹೂಡಿದ ಹಲಗೆಗಳು ಬಿಟ್ಟುಕೊಂಡವು. ಗಟ್ಟಿಮುಟ್ಟಾದ ಬಂಡಿಗಳು ಎರಡು ಭಾಗವಾದುವು. ಬಾಣಗಳ ನಂತರದ ಬಾಣಗಳು, ಹಿಂದೆ ಬರುವ ಬಾಣಗಳು, ಅವುಗಳಿಗೆ ಪ್ರತಿಯಾದ ಬಾಣಗಳ ಸಾರವೇ ಸೋನೆಯಂತೆ ಸುರಿಯಿತು, ವೈರಿ ಸೇನೆಗಳನ್ನು ಸದೆದುಹಾಕಿತು.
ಪದಾರ್ಥ (ಕ.ಗ.ಪ)
ಹರಿಗೆ-ಹಲಗೆ, ಗುರಾಣಿ, ಬದ್ದರ-ಭದ್ರ(ಸಂ)
ಮೂಲ ...{Loading}...
ಅರಸ ಕೇಳೈ ಬಳಿಕ ಶಲ್ಯನ
ಶರಹತಿಗೆ ಬಿಚ್ಚಿದವು ಹೂಡಿದ
ಹರಿಗೆಯಿಬ್ಬಗಿಯಾದವಾ ಬದ್ಧರದ ಬಂಡಿಗಳು
ಸರಳುಗಳ ಬಳಿಸರಳು ಬೆಂಬಳಿ
ಸರಳ ಹಿಂದಣ ಸರಳುಗಳ ಪಡಿ
ಸರಳ ಸಾರದ ಸೋನೆ ಸದೆದುದು ವೈರಿವಾಹಿನಿಯ ॥38॥
೦೩೯ ಘಾಯವಡೆದನು ದ್ರುಪದಸುತ ...{Loading}...
ಘಾಯವಡೆದನು ದ್ರುಪದಸುತ ಪೂ
ರಾಯದೇರಿನಲೋಡಿದರು ಮಾ
ದ್ರೇಯರುಬ್ಬಟೆ ಮುರಿದು ಬೆಬ್ಬಳೆವೋದನವನೀಶ
ರಾಯದಳ ದೆಸೆಗೆಟ್ಟುದೊಗ್ಗಿನ
ನಾಯಕರು ನುಗ್ಗಾಯ್ತು ಯಾದವ
ರಾಯ ಕಂಡನು ರಥವನಡಹಾಯ್ಸಿದನು ಫಲುಗುಣನ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರುಪದನ ಮಗ ಗಾಯಗೊಂಡ, ನಕಲುಸಹದೇವರುಗಳು ತಮ್ಮ ಮೈಮೇಲಿನ ಅಸಂಖ್ಯಾತ ಗಾಯಗಳಿಂದಾಗಿ, ಓಡಿಹೋದರು. ಮಾದ್ರೇಯರಾದ ನಕುಲಸಹೇವರ ಅಹಂಕಾರ ಮುರಿದು ಧರ್ಮಜನು ಗಾಬರಿಗೊಂಡ. ರಾಯನ ಸೈನ್ಯ ದಿಕ್ಕಾಪಾಲಾಗಿ ಓಡಿತು. ಒಟ್ಟಾಗಿ ಶಿಸ್ತಿನಿಂದಿದ್ದ ನಾಯಕರು ನುಗ್ಗಾದರು. ಇಂತಹ ದುಃಸ್ಥಿತಿಯನ್ನು ಕಂಡ ಕೃಷ್ಣ ಅರ್ಜುನನ ರಥವನ್ನು ಶಲ್ಯನಕಡೆಗೆ ಓಡಿಸಿದ.
ಪದಾರ್ಥ (ಕ.ಗ.ಪ)
ಪೂರಾಯ-ಹೆಚ್ಚಾದ, ಏರು-ಗಾಯ, ಬೆಬ್ಬಳೆ-ಗಾಬರಿ, ಒಗ್ಗಿನ-ಒಟ್ಟಾಗಿ ಸಾಲಾಗಿ ನಡೆಯುವ ಸೈನ್ಯದ, ನುಗ್ಗು-ಜರ್ಝರಿತವಾಗು
ಮೂಲ ...{Loading}...
ಘಾಯವಡೆದನು ದ್ರುಪದಸುತ ಪೂ
ರಾಯದೇರಿನಲೋಡಿದರು ಮಾ
ದ್ರೇಯರುಬ್ಬಟೆ ಮುರಿದು ಬೆಬ್ಬಳೆವೋದನವನೀಶ
ರಾಯದಳ ದೆಸೆಗೆಟ್ಟುದೊಗ್ಗಿನ
ನಾಯಕರು ನುಗ್ಗಾಯ್ತು ಯಾದವ
ರಾಯ ಕಂಡನು ರಥವನಡಹಾಯ್ಸಿದನು ಫಲುಗುಣನ ॥39॥
೦೪೦ ಎಲೆಲೆ ಹನುಮನ ...{Loading}...
ಎಲೆಲೆ ಹನುಮನ ಹಳವಿಗೆಯ ರಥ
ಹೊಳೆಯುತದೆ ದಳಪತಿಗೆ ಕಾಳೆಗ
ಬಲುಹು ಬರ ಹೇಳುವುದು ಗೌತಮ ಗುರುಸುತಾದಿಗಳ
ಬಲವ ಕರೆ ಸಮಸಪ್ತಕರನಿ
ಟ್ಟಳಿಸಿ ನೂಕಲಿ ಕರ್ಣಸುತನೆಂ
ದುಲಿದು ಹೊಕ್ಕನು ನಿನ್ನ ಮಗನೈನೂರು ರಥಸಹಿತ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೆ! ಆಂಜನೇಯನನ್ನು ಬಾವುಟದಲ್ಲಿ ಉಳ್ಳ ರಥ (ಅರ್ಜುನನರಥ) ಹೊಳೆಯುತ್ತಿದೆ. ಸೇನಾಪತಿಯಾದ ಶಲ್ಯನಿಗೆ ಈ ಯುದ್ಧ ಬಲು ಕಷ್ಟ. ಗೌತಮ, ಅಶ್ವತ್ಥಾಮಾದಿಗಳನ್ನು ಕೂಡಲೇ ಬರಹೇಳಿ. ಸಮಸಪ್ತಕರ ಸೈನ್ಯವನ್ನು ಕರೆ! ಕರ್ಣನ ಮಗನು ತನ್ನ ಸೈನ್ಯದೊಂದಿಗೆ ಬರಲಿ ಎಂದು ಹೇಳುತ್ತ ನಿನ್ನ ಮಗನಾದ ದುರ್ಯೋಧನ ಐನೂರು ರಥಗಳ ಸಹಿತ ಶಲ್ಯನ ಸಮೀಪದ ಯುದ್ಧರಂಗವನ್ನು ಹೊಕ್ಕನು.
ಪದಾರ್ಥ (ಕ.ಗ.ಪ)
ಹಳವಿಗೆ-ಬಾವುಟ, ಇಟ್ಟಳಿಸು-ಗುಂಪಾಗು, ಜೊತೆಸೇರು
ಟಿಪ್ಪನೀ (ಕ.ಗ.ಪ)
ಹನುಮನ ಹಳವಿಗೆಯ ರಥ:ಪೂರ್ವಕಥೆ:ಅರಣ್ಯ ಪರ್ವದ 10ನೆಯ ಸಂಧಿಯ ಪದ್ಯ 40-44ನ್ನು ನೋಡಿ.
ಮೂಲ ...{Loading}...
ಎಲೆಲೆ ಹನುಮನ ಹಳವಿಗೆಯ ರಥ
ಹೊಳೆಯುತದೆ ದಳಪತಿಗೆ ಕಾಳೆಗ
ಬಲುಹು ಬರ ಹೇಳುವುದು ಗೌತಮ ಗುರುಸುತಾದಿಗಳ
ಬಲವ ಕರೆ ಸಮಸಪ್ತಕರನಿ
ಟ್ಟಳಿಸಿ ನೂಕಲಿ ಕರ್ಣಸುತನೆಂ
ದುಲಿದು ಹೊಕ್ಕನು ನಿನ್ನ ಮಗನೈನೂರು ರಥಸಹಿತ ॥40॥
೦೪೧ ಉಲಿದು ಕೌರವ ...{Loading}...
ಉಲಿದು ಕೌರವ ಸರ್ವದಳ ಮುಂ
ಕೊಳಿಸಿ ನೂಕಿತು ಶಲ್ಯನನು ಪಡಿ
ತಳಿಸಿ ಹೊಕ್ಕುದು ಕರ್ಣಸುತ ಕೃಪ ಗುರುಸುತಾದಿಗಳು
ಪ್ರಳಯದಿನದಲಿ ಪಂಟಿಸುವ ಸಿಡಿ
ಲಳಿದುದೆನೆ ಬಹುವಿಧದ ವಾದ್ಯದ
ಮೊಳಗುಗಳ ತುದಿ ತುಡುಕಿತಾ ಬ್ರಹ್ಮಾಂಡಮಂಡಲವ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರ ಸಕಲಸೈನ್ಯವೂ ಉತ್ಸಾಹದಿಂದ ಶಲ್ಯನನ್ನು ಮುಂದಿಟ್ಟುಕೊಂಡು ಅವನಿಗೆ ಒತ್ತಾಸೆಯಾಗಿ ನಿಂತಿತು. ಕರ್ಣನ ಮಗ, ಕೃಪ, ಅಶ್ವತ್ಥಾಮನೇ ಮೊದಲಾದವರು ಒಟ್ಟಾಗಿ ರಣಭೂಮಿಗೆ ಪ್ರವೇಶ ಮಾಡಿದರು. ಪ್ರಳಯ ಕಾಲದಲ್ಲಿ ಅಟಾಟೋಪದಿಂದ ಎಲ್ಲ ದಿಕ್ಕುಗಳಲ್ಲೂ ವ್ಯಾಪಿಸುವ ಸಿಡಿಲಿನ ಶಬ್ದವನ್ನು ನಾಚಿಸುವಂತೆ ಅನೇಕ ವಿಧವಾದ ವಾದ್ಯಗಳ ಭೋರ್ಗರೆತವು ಬ್ರಹ್ಮಾಂಡ ಮಂಡಲವನ್ನೇ ಆಕ್ರಮಿಸಿದುವು.
ಪದಾರ್ಥ (ಕ.ಗ.ಪ)
ಮುಂಕೊಳಿಸು-ಮುಂದುವರಿ, ಮುಂದಾಗು, ಪಡಿತಳಿಸು-ಒಟ್ಟಾಗು, ಸೇರಿಕೋ, ಪಂಟಿಸು-ಅಟಾಟೋಪದಿಂದ ಮುನ್ನುಗ್ಗು, ತುಡುಕು-ಆಕ್ರಮಿಸು, ಬಲವಂತವಾಗಿ ಹಿಡಿ.
ಮೂಲ ...{Loading}...
ಉಲಿದು ಕೌರವ ಸರ್ವದಳ ಮುಂ
ಕೊಳಿಸಿ ನೂಕಿತು ಶಲ್ಯನನು ಪಡಿ
ತಳಿಸಿ ಹೊಕ್ಕುದು ಕರ್ಣಸುತ ಕೃಪ ಗುರುಸುತಾದಿಗಳು
ಪ್ರಳಯದಿನದಲಿ ಪಂಟಿಸುವ ಸಿಡಿ
ಲಳಿದುದೆನೆ ಬಹುವಿಧದ ವಾದ್ಯದ
ಮೊಳಗುಗಳ ತುದಿ ತುಡುಕಿತಾ ಬ್ರಹ್ಮಾಂಡಮಂಡಲವ ॥41॥
೦೪೨ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಭೀಮಸೇನನ
ಕರಿಘಟೆಗಳಿಟ್ಟಣಿಸಿದವು ಮೋ
ಹರಿಸಿದವು ಸಾತ್ಯಕಿಯ ರಥವಾ ದ್ರೌಪದೀಸುತರ
ಬಿರುದ ಭಟರೌಕಿದರು ರಾಯನ
ಧುರದ ಧೀವಸಿಗಳು ನಿಹಾರದ
ಲುರವಣಿಸಿದರು ಶಲ್ಯನಂಬಿನ ಮಳೆಯ ಮನ್ನಿಸದೆ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ! ಭೀಮಸೇನನ ಗಜಸಮೂಹಗಳು ಒಟ್ಟಾಗಿ ಸೇರಿದವು, ಸಾತ್ಯಕಿಯ ರಥವು ದ್ರೌಪದಿಯ ಮಕ್ಕಳನ್ನು ಒಟ್ಟುಗೂಡಿತು. ಬಿರುದಾಂಕಿತರಾದ ವೀರರು ಉತ್ಸಾಹದಿಂದ ಯುದ್ಧಕ್ಕೆ ಇಳಿದರು. ದುರ್ಯೋಧನನ ಶತ್ರುಗಳ ಕಡೆಯ ವೀರಸೈನಿಕರು ಶಲ್ಯನ ಬಾಣಗಳ ಮಳೆಯನ್ನು ಲೆಕ್ಕಿಸದೆ, ಅದನ್ನು ಶೂನ್ಯವೆಂದು ಭಾವಿಸಿ, ಉತ್ಸಾಹದಿಂದ ಯುದ್ಧಕ್ಕೆ ಧುಮಿಕಿದರು.
ಪದಾರ್ಥ (ಕ.ಗ.ಪ)
ಇಟ್ಟಣಿಸು-ಒಂದುಗೂಡು, ದಟ್ಟೆಸು, ಮೋಹರಿಸು-ಗುಂಪುಗೂಡು, ಧೀವಸಿ-ಶತ್ರು, ನಿಹಾರ-ಶೂನ್ಯ, ಆಕಾರ
ಟಿಪ್ಪನೀ (ಕ.ಗ.ಪ)
ದ್ರೌಪದೀಸುತರು ಐದುಜನ ಪಾಂಡವರಿಗೆ ದ್ರೌಪದಿಯಲ್ಲಿ ಜನಸಿದವರು. ಅವರ ಹೆಸರುಗಳು: ಶ್ರುತಸೋಮಕ ಪ್ರತಿವಿಂದ್ಯ ಶ್ರುತಕೀರ್ತಿ ಶ್ರುತಸೇನ ಶತಾನೀಕ (ಆದಿಪರ್ವ ಸಂಧಿ 20, ಪದ್ಯ-4.)
ಮೂಲ ...{Loading}...
ಧರಣಿಪತಿ ಕೇಳ್ ಭೀಮಸೇನನ
ಕರಿಘಟೆಗಳಿಟ್ಟಣಿಸಿದವು ಮೋ
ಹರಿಸಿದವು ಸಾತ್ಯಕಿಯ ರಥವಾ ದ್ರೌಪದೀಸುತರ
ಬಿರುದ ಭಟರೌಕಿದರು ರಾಯನ
ಧುರದ ಧೀವಸಿಗಳು ನಿಹಾರದ
ಲುರವಣಿಸಿದರು ಶಲ್ಯನಂಬಿನ ಮಳೆಯ ಮನ್ನಿಸದೆ ॥42॥
೦೪೩ ತರಹರಿಸಿದುದು ಪಾರುದಳ ...{Loading}...
ತರಹರಿಸಿದುದು ಪಾರುದಳ ತಲೆ
ವರಿಗೆಯಲಿ ಮೊಗದಡ್ಡವರಿಗೆಯ
ಲರರೆ ರಾವುತೆನುತ್ತ ನೂಕಿತು ಬಿಟ್ಟ ಸೂಠಿಯಲಿ
ತುರಗದಳ ಮೊಗರಂಬದಲಿ ಮೊಗ
ವರಿಗೆಗಳಲಾರೋಹಕರು ಚ
ಪ್ಪರಿಸಿ ಚಾಚಿದರಾನೆಗಳನಾ ಶಲ್ಯನಿದಿರಿನಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇಲೆ ನುಗ್ಗುವ ಸೈನ್ಯ ತತ್ತರಿಸಿತು, ತಲೆ-ಮುಖಗಳಿಗೆ ರಕ್ಷಣೆಯನ್ನು ಪಡೆಯುತ್ತಾ, ಅರರೆ! ಜಾಗ್ರತೆಯೆಂದು ಕೂಗುತ್ತಾ ಒಂದೇ ವೇಗದಿಂದ ಸೈನ್ಯ ಮುಂದೆ ಹೋಯಿತು. ಅಶ್ವದಳವು ಮೊಗವಾಡ ಸಹಿತವಾಗಿ ಮತ್ತು ಮುಖರಕ್ಷಣೆಗಳೊಂದಿಗೆ ಆನೆಗಳ ಸವಾರರು ಆನೆಗಳನ್ನು ಚಪ್ಪರಿಸಿ ಉತ್ಸಾಹಿಸುತ್ತಾ ಶಲ್ಯನ ಎದುರಿನಲ್ಲಿ ಆನೆಗಳನ್ನು ನುಗ್ಗಿಸಿದರು.
ಪದಾರ್ಥ (ಕ.ಗ.ಪ)
ತರಹರಿಸು-ತತ್ತರಿಸು, ತಲೆವರಿಗೆ-ತಲೆಗೆ ರಕ್ಷಣೆ ನೀಡುವ ಸಾಧನ, ಅಡ್ಡವರಿಗೆ-ಎದುರುಗುರಾಣಿ, ಮೊಗರಂಬ-ಮೊಗವಾಡ
ಮೂಲ ...{Loading}...
ತರಹರಿಸಿದುದು ಪಾರುದಳ ತಲೆ
ವರಿಗೆಯಲಿ ಮೊಗದಡ್ಡವರಿಗೆಯ
ಲರರೆ ರಾವುತೆನುತ್ತ ನೂಕಿತು ಬಿಟ್ಟ ಸೂಠಿಯಲಿ
ತುರಗದಳ ಮೊಗರಂಬದಲಿ ಮೊಗ
ವರಿಗೆಗಳಲಾರೋಹಕರು ಚ
ಪ್ಪರಿಸಿ ಚಾಚಿದರಾನೆಗಳನಾ ಶಲ್ಯನಿದಿರಿನಲಿ ॥43॥
೦೪೪ ಚೂರಿಸುವ ಮೊಗಸೂನಿಗೆಯ ...{Loading}...
ಚೂರಿಸುವ ಮೊಗಸೂನಿಗೆಯ ಕೊ
ಲ್ಲಾರಿಗಳ ಶರಬಂಡಿಗಳ ಹೊಂ
ದೇರು ಕವಿದುವು ಕೋಲಕೋಲಾಹಲದ ತೋಹಿನಲಿ
ವೀರರುಬ್ಬಿನ ಬೊಬ್ಬೆಗಳ ಜು
ಜ್ಝಾರರೇರಿತು ಸರಳ ಧಾರಾ
ಸಾರದಲಿ ದಕ್ಕಡರು ಬಿಲ್ಲವರಾಂತರರಿ ಭಟನ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿತವಾದ ಚೂರಿ, ಭರ್ಜಿಗಳೇ ಮುಂತಾದ ಆಯುಧಗಳಿಂದ ತುಂಬಿದ ಗಾಡಿಗಳು, ಬಾಣಗಳನ್ನು ತುಂಬಿದ ಗಾಡಿಗಳು-ಚಿನ್ನದ ರಥಗಳು ಕೋಲಾಹಲವನ್ನುಂಟುಮಾಡುತ್ತ ಶತ್ರುಸೈನಿಕರನ್ನು ಆಕ್ರಮಿಸಿದುವು. ವೀರಭಟರ ಉತ್ಸಾಹದ ಪ್ರವಾಹದಲ್ಲಿ, ವೀರರಾದ ಶತ್ರುಸೈನಿಕರು ಶಲ್ಯನನ್ನು ಆಕ್ರಮಿಸಿದರು.
ಪದಾರ್ಥ (ಕ.ಗ.ಪ)
ಚೂರಿಸು-ಇರಿ, ಸೂನಿಗೆ-ಕಠಾರಿ, ಭರ್ಜಿ, ಕೊಲ್ಲಾರಿಗಳು-ಬಂಡಿಗಳು, ಕೋಲ-ಬಾಣದ,
ತೋಹು-ಸಂಚು, ಮುತ್ತಿಗೆ,
ಜಜ್ಝಾರ-ವೀರ,
ಧಾರಾಸಾರ-ಪ್ರವಾಹ,
ದಕ್ಕಡರು-ಧೈರ್ಯಶಾಲಿಗಳು
ಮೂಲ ...{Loading}...
ಚೂರಿಸುವ ಮೊಗಸೂನಿಗೆಯ ಕೊ
ಲ್ಲಾರಿಗಳ ಶರಬಂಡಿಗಳ ಹೊಂ
ದೇರು ಕವಿದುವು ಕೋಲಕೋಲಾಹಲದ ತೋಹಿನಲಿ
ವೀರರುಬ್ಬಿನ ಬೊಬ್ಬೆಗಳ ಜು
ಜ್ಝಾರರೇರಿತು ಸರಳ ಧಾರಾ
ಸಾರದಲಿ ದಕ್ಕಡರು ಬಿಲ್ಲವರಾಂತರರಿ ಭಟನ ॥44॥
೦೪೫ ಕಡಿದು ಬಿಸುಟನು ...{Loading}...
ಕಡಿದು ಬಿಸುಟನು ತಲೆವರಿಗೆಗಳ
ಲಡಸಿದಾ ಪಯದಳವನೊಗ್ಗಿನ
ತುಡುಕುಗುದುರೆಯ ಖುರವ ತರಿದನು ನಗದ ನಾಟಕದ
ಗಡಣದಾನೆಯ ಥಟ್ಟನುಪ್ಪರ
ಗುಡಿಯ ರಥವಾಜಿಗಳ ರುಧಿರದ
ಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮ ತಲೆಗಳನ್ನು ಉಳಿಸಿಕೊಳ್ಳಲು ವಿಶಿಷ್ಟವಾದ ಗುರಾಣಿಗಳ ಮೊರೆಹೋಗಿರುವ ಪದಾತಿಬಲದವರನ್ನು ಶಲ್ಯ ಕಡಿದು ಬಿಸುಟ. ಸಾಲುಸಾಲಾಗಿ ಬರುತ್ತಿದ್ದ ತುಂಟ ಕುದುರೆಗಳ ಕಾಲುಗಳನ್ನು ಕತ್ತರಿಸಿಹಾಕಿದ. ಬೆಟ್ಟಗಳ ಆಕೃತಿಯಲ್ಲಿ ತೋರುವ ಆನೆಗಳ ಸಮೂಹವನ್ನು, ಉನ್ನತಮಟ್ಟದಲ್ಲಿ ಹಾರಾಡುತ್ತಿದ್ದ ಧ್ವಜಗಳನ್ನುಳ್ಳ ಕುದುರೆಗಳನ್ನು ತರಿದು ಹಾಕಿದ. ಅವುಗಳ ರಕ್ತದ ಕಡಲಿನಲ್ಲಿ ಶತ್ರುಸೈನ್ಯವನ್ನು ಮುಳುಗಿಸಿದ.
ಪದಾರ್ಥ (ಕ.ಗ.ಪ)
ತಲೆವರಿಗೆ-ತಲೆಯಢೌಲು, ಗುರಾಣಿ
ಪಯದಳ-ಪದಾತಿಬಲ, ಪಾಯದಳ,
ನಗ-ಬೆಟ್ಟ,
ಉಪ್ಪರಗುಡಿ-ಮೇಲೆ ಹಾರುತ್ತಿರುವ ಬಾವುಟ
ಮೂಲ ...{Loading}...
ಕಡಿದು ಬಿಸುಟನು ತಲೆವರಿಗೆಗಳ
ಲಡಸಿದಾ ಪಯದಳವನೊಗ್ಗಿನ
ತುಡುಕುಗುದುರೆಯ ಖುರವ ತರಿದನು ನಗದ ನಾಟಕದ
ಗಡಣದಾನೆಯ ಥಟ್ಟನುಪ್ಪರ
ಗುಡಿಯ ರಥವಾಜಿಗಳ ರುಧಿರದ
ಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ ॥45॥
೦೪೬ ಮುರಿದುದೈ ಚತುರಙ್ಗಬಲ ...{Loading}...
ಮುರಿದುದೈ ಚತುರಂಗಬಲ ನಿ
ನ್ನಿರಿತವಾವೆಡೆ ಧರ್ಮಸುತ ಕೈ
ಮರೆದಲಾ ಕಲಿಭೀಮಪಾರ್ಥರ ಬಿಂಕ ಬೀತುದಲಾ
ಮೆರೆಯಿ ಮದವನು ಮಾವತನವದು
ಹೊರಗಿರಲಿ ಸಹದೇವ ನಕುಲರ
ನರಿಯಬಹುದಿನ್ನೆನುತ ಹೊಕ್ಕನು ಶಲ್ಯ ಪರಬಲವ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚತುರಂಗ ಬಲವೂ ಮುರಿದುಹೋಗಿದೆ. ಧರ್ಮಜ ನಿನ್ನ ಯುದ್ಧ ಇನ್ನು ಯಾವ ಕಡೆಯಿಂದ, ನಿನ್ನ ತೋಳಬಲ ಮರೆತುಹೋಯಿತಲ್ಲಾ, ನಿನ್ನ ವೀರರಾದ ಭೀಮಾರ್ಜುನರ ಬಿಂಕ ಮುಗಿದು ಹೋಯಿತಲ್ಲಾ. ಯುದ್ಧದಲ್ಲಿ ನಿನ್ನ ಮದ, ಶಕ್ತಿಯನ್ನು ತೋರಿಸು. ಮಾವತನವನ್ನು ಯುದ್ಧಭೂಮಿಯಲ್ಲಿ ನೆನಸಿಕೊಳ್ಳಬೇಡ. ಇನ್ನು ನಕುಲಸಹೇವರ ಶಕ್ತಿಯನ್ನು ತಿಳಿಯುಬಹುದೆನ್ನುತ್ತಾ ಶಲ್ಯ ಶತ್ರುಸೈನ್ಯದ ಒಳಹೊಕ್ಕ.
ಪದಾರ್ಥ (ಕ.ಗ.ಪ)
ಬಿಂಕ-ಗರ್ವ, ಅಹಂಕಾರ, ಬೀತುದು-ಮುಗಿಯಿತು
ಟಿಪ್ಪನೀ (ಕ.ಗ.ಪ)
ಮಾವತನವದು ಹೊರಗಿರಲಿ-ಶಲ್ಯ ಪಾಡವರ ಸೋದರಮಾವ; ಮಾದ್ರಿಯ ಅಣ್ಣ. ಆದರೆ ಅವನು ದುರ್ಯೋಧನನ ಮೋಸದ ಚಾತುರ್ಯಕ್ಕೆ ಸಿಕ್ಕಿ ಅವನೊಂದಿಗೆ ಸೇರಿ ಪಾಂಡವರ ವಿರುದ್ಧ ಯುದ್ಧ ಮಾಡಬೇಕಗಿದೆ. (ಉದ್ಯೋಗಪರ್ವ, 2ನೇ ಸಂಧಿ, 6 ರಿಂದ 17ರವರೆಗಿನ ಪದ್ಯಗಳು). ‘ದಂಡಿನಲ್ಲಿ ಸೋದರಮಾವನೇ’ ಎಂಬ ಗಾದೆಗೆ ಇದೇ ಮೂಲವಾಗಿರಬಹುದು.
ಮೂಲ ...{Loading}...
ಮುರಿದುದೈ ಚತುರಂಗಬಲ ನಿ
ನ್ನಿರಿತವಾವೆಡೆ ಧರ್ಮಸುತ ಕೈ
ಮರೆದಲಾ ಕಲಿಭೀಮಪಾರ್ಥರ ಬಿಂಕ ಬೀತುದಲಾ
ಮೆರೆಯಿ ಮದವನು ಮಾವತನವದು
ಹೊರಗಿರಲಿ ಸಹದೇವ ನಕುಲರ
ನರಿಯಬಹುದಿನ್ನೆನುತ ಹೊಕ್ಕನು ಶಲ್ಯ ಪರಬಲವ ॥46॥
೦೪೭ ಸುರನದೀಸುತನೆಸುಗೆ ದ್ರೋಣನ ...{Loading}...
ಸುರನದೀಸುತನೆಸುಗೆ ದ್ರೋಣನ
ಶರಚಮತ್ಕೃತಿ ಕರ್ಣನಂಬಿನ
ಹರಹು ಹೇರಿತು ದಳಪತಿಯ ಶರಸೋನೆ ಸಾರವಲಾ
ದೊರೆಯ ಸುಯ್ದಾನದಲಿ ಸಾತ್ಯಕಿ
ಯಿರಲಿ ಧೃಷ್ಟದ್ಯುಮ್ನ ಭೀಮಾ
ದ್ಯರ ನಿರೀಕ್ಷಿಸ ಹೇಳೆನುತ ತಾಗಿದನು ಕಲಿಪಾರ್ಥ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನ ಬಾಣಪ್ರಯೋಗ, ದ್ರೋಣನ ಬಾಣಗಳ ಚಮತ್ಕಾರ, ಕರ್ಣನ ಬಾಣಗಳ ವಿಸ್ತಾರ, ಈ ಎಲ್ಲದರ ಸಾರವೂ ಶಲ್ಯನ ಬಾಣಗಳ ಸೋನೆಮಳೆಯಲ್ಲಿ ಸೇರಿದಂತಿತ್ತು. ಧರ್ಮಜನ ರಕ್ಷಣೆಗೆ ಸಾತ್ಯಕಿಯಿರಲಿ. ಧೃಷ್ಟದ್ಯುಮ್ನ ಭೀಮ ಮುಂತಾದವರು ಯುದ್ಧದ ವೈಖರಿಯನ್ನು ನೋಡಲು ಹೇಳಿ ಎನ್ನುತ್ತಾ ಅರ್ಜುನ ಯುದ್ಧಕ್ಕೆ ಪ್ರಾರಂಭಿಸಿದ.
ಪದಾರ್ಥ (ಕ.ಗ.ಪ)
ಸುಯ್ದಾನ-ರಕ್ಷಣೆ
ಮೂಲ ...{Loading}...
ಸುರನದೀಸುತನೆಸುಗೆ ದ್ರೋಣನ
ಶರಚಮತ್ಕೃತಿ ಕರ್ಣನಂಬಿನ
ಹರಹು ಹೇರಿತು ದಳಪತಿಯ ಶರಸೋನೆ ಸಾರವಲಾ
ದೊರೆಯ ಸುಯ್ದಾನದಲಿ ಸಾತ್ಯಕಿ
ಯಿರಲಿ ಧೃಷ್ಟದ್ಯುಮ್ನ ಭೀಮಾ
ದ್ಯರ ನಿರೀಕ್ಷಿಸ ಹೇಳೆನುತ ತಾಗಿದನು ಕಲಿಪಾರ್ಥ ॥47॥
೦೪೮ ಅರಸ ಕೇಳೈ ...{Loading}...
ಅರಸ ಕೇಳೈ ಶಲ್ಯ ಪಾರ್ಥರ
ಶರ ವಿಧಾನವನವರ ಬಾಣೋ
ತ್ಕರವನವರಂಬುಗಳ ಬಹಳಾಡಂಬರಧ್ವನಿಯ
ನಿರುಪಮಾಸ್ತ್ರಪ್ರೌಢಿಯನು ದು
ರ್ಧರ ಶಿಳೀಮುಖ ಸರ್ಗಬಂಧ
ಸ್ಫುರಣವನು ಹಿಂದೀಸು ದಿನ ಕಾಣೆನು ರಣಾಗ್ರದಲಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯ-ಅರ್ಜುನರ ಬಾಣ ಪ್ರಯೋಗದ ಕ್ರಮವನ್ನು, ಅವರ ಬಾಣಗಳ ಸಮೂಹಗಳನ್ನು, ಅವುಗಳ ಆಡಂಬರದ ಧ್ವನಿಯನ್ನು, ಹೋಲಿಕೆಯಿಲ್ಲದ ವಿಶೇಷ ಬಾಣ ಪ್ರಯೋಗಗಳ ಹಿರಿಮೆಯನ್ನು, ಧೃತರಾಷ್ಟ್ರ ಕೇಳು! ಸಹಿಸಲಸಾಧ್ಯವಾದ ಬಾಣಗಳು ಸ್ವರ್ಗವನ್ನೇ ಕಂಪನಗೊಳಿಸುತ್ತಿದ್ದವು. ಇಂತಹ ಬಾಣಪ್ರಯೋಗವನ್ನು ಇಷ್ಟುದಿನಗಳ ಯುದ್ಧದಲ್ಲಿ ನಾನು ಕಾಣಲಿಲ್ಲ.
ಪದಾರ್ಥ (ಕ.ಗ.ಪ)
ಬಾಣೋತ್ಕರ-ಬಾಣಗಳ ಸಮೂಹ, ದುರ್ಧರ-ಸಹಿಸಲುಸಾಧ್ಯವಾದ, ಶಿಳೀಮುಖ-ಬಾಣ
ಮೂಲ ...{Loading}...
ಅರಸ ಕೇಳೈ ಶಲ್ಯ ಪಾರ್ಥರ
ಶರ ವಿಧಾನವನವರ ಬಾಣೋ
ತ್ಕರವನವರಂಬುಗಳ ಬಹಳಾಡಂಬರಧ್ವನಿಯ
ನಿರುಪಮಾಸ್ತ್ರಪ್ರೌಢಿಯನು ದು
ರ್ಧರ ಶಿಳೀಮುಖ ಸರ್ಗಬಂಧ
ಸ್ಫುರಣವನು ಹಿಂದೀಸು ದಿನ ಕಾಣೆನು ರಣಾಗ್ರದಲಿ ॥48॥
೦೪೯ ಎಸುವನರ್ಜುನನರ್ಜುನಾಸ್ತ್ರವ ...{Loading}...
ಎಸುವನರ್ಜುನನರ್ಜುನಾಸ್ತ್ರವ
ಕುಸುರಿದರಿವನು ಶಲ್ಯ ಶಲ್ಯನ
ವಿಶಿಖವನು ಮುರಿವನು ಧನಂಜಯನಾ ಧನಂಜಯನ
ಮಸಕವನು ಮಾದ್ರೇಶನುರೆ ಝೊಂ
ಪಿಸುವನಾ ಮಾದ್ರೇಶನಂಬಿನ
ಹಸರವನು ಹರೆಗಡಿವನರ್ಜುನನಗಣಿತಾಸ್ತ್ರದಲಿ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಬಾಣ ಪ್ರಯೋಗ ಮಾಡಿದರೆ, ಅವುಗಳನ್ನು ಶಲ್ಯ ತುಂಡುತುಂಡಾಗಿ ಕತ್ತರಿಸುವನು. ಶಲ್ಯನ ಬಾಣಗಳನ್ನು ಅರ್ಜುನ ಕತ್ತರಿಸುವನು. ಅರ್ಜುನನ ಉಪಾಯಗಳನ್ನು ಶಲ್ಯ ಎದುರಿಸುತ್ತಾನೆ. ಶಲ್ಯನ ಬಾಣಗಳ ವಿಸ್ತಾರವನ್ನು ಅರ್ಜುನನು ಲೆಕ್ಕವಿಲ್ಲದಷ್ಟು ಬಾಣಗಳಿಂದ ಕತ್ತರಿಸಿ ಹಾಕುತ್ತಾನೆ.
ಪದಾರ್ಥ (ಕ.ಗ.ಪ)
ಕುಸುರಿದರಿ-ಸಣ್ಣಗೆ ಕೊಚ್ಚು, ವಿಶಿಖ-ಬಾಣ, ಹಸರ-ಪ್ರಸರ, ಪ್ರಸಾರಣ
ಮೂಲ ...{Loading}...
ಎಸುವನರ್ಜುನನರ್ಜುನಾಸ್ತ್ರವ
ಕುಸುರಿದರಿವನು ಶಲ್ಯ ಶಲ್ಯನ
ವಿಶಿಖವನು ಮುರಿವನು ಧನಂಜಯನಾ ಧನಂಜಯನ
ಮಸಕವನು ಮಾದ್ರೇಶನುರೆ ಝೊಂ
ಪಿಸುವನಾ ಮಾದ್ರೇಶನಂಬಿನ
ಹಸರವನು ಹರೆಗಡಿವನರ್ಜುನನಗಣಿತಾಸ್ತ್ರದಲಿ ॥49॥
೦೫೦ ಕಣ್ಡನೀ ಶಲ್ಯಾರ್ಜುನರ ...{Loading}...
ಕಂಡನೀ ಶಲ್ಯಾರ್ಜುನರ ಕೋ
ದಂಡಸಾರಶ್ರುತಿರಹಸ್ಯದ
ದಂಡಿಯನು ಕುರುರಾಯ ಕೈವೀಸಿದನು ತನ್ನವರ
ಗಂಡುಗಲಿಗಳೊ ವೀರಸಿರಿಯುಳಿ
ಮಿಂಡರೋ ತನಿನಗೆಯ ಬಿರುದಿನ
ಭಂಡರೋ ನೀವಾರೆನುತ ಮೂದಲಿಸಿದನು ಭಟರ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯ ಮತ್ತು ಅರ್ಜುನರ ಬಿಲ್ವಿದ್ಯಾವೇದರಹಸ್ಯದ ಸಾರದ ಸಾಮಥ್ರ್ಯವನ್ನು ಕಂಡ ದುರ್ಯೋಧನ ತನ್ನ ಬಲದ ಕಡೆಗೆ ಕೈಬೀಸಿ, ನೀವೇನು ವೀರರೋ ಅಥವ ವೀರಲಕ್ಷ್ಮಿಯು ಉಳಿಸಿರುವ ಅವಳ ಮಿಂಡರೋ, ಮೆಲುನಗೆ ನಗುತ್ತಿರುವ ಕೇವಲ ಬಿರುದುಗಳನ್ನು ಹೊತ್ತ ಭಂಡರೋ, ನೀವಾರು ಎನ್ನುತ್ತ ಮೂದಲಿಸಿದ.
ಪದಾರ್ಥ (ಕ.ಗ.ಪ)
ದಂಡಿ-ಸಾಮಥ್ರ್ಯ, ಗೌರವ, ಘನತೆ, ಉಳಿಮಿಂಡರು-ಉಳಿದಿರುವ ಜಾರರು
ಮೂಲ ...{Loading}...
ಕಂಡನೀ ಶಲ್ಯಾರ್ಜುನರ ಕೋ
ದಂಡಸಾರಶ್ರುತಿರಹಸ್ಯದ
ದಂಡಿಯನು ಕುರುರಾಯ ಕೈವೀಸಿದನು ತನ್ನವರ
ಗಂಡುಗಲಿಗಳೊ ವೀರಸಿರಿಯುಳಿ
ಮಿಂಡರೋ ತನಿನಗೆಯ ಬಿರುದಿನ
ಭಂಡರೋ ನೀವಾರೆನುತ ಮೂದಲಿಸಿದನು ಭಟರ ॥50॥
೦೫೧ ದಳವ ಕರೆ ...{Loading}...
ದಳವ ಕರೆ ದಳಪತಿಗೆ ಕಾಳೆಗ
ಬಲುಹು ಪಾರ್ಥನ ಕೂಡೆ ಗುರುಸುತ
ನಳವಿಗೊಡಲಿ ಸುಶರ್ಮ ತಾಗಲಿ ಭೋಜ ಗೌತಮರು
ನಿಲಲಿ ಸುಭಟರು ಜೋಡಿಯಲಿ ಪರ
ಬಲಕೆ ಜಾರುವ ಜಯಸಿರಿಯ ಮುಂ
ದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು ಕುರುರಾಯ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯವನ್ನು ಕರೆ, ಸೇನಾಪತಿಯಾದ ಶಲ್ಯನಿಗೆ ಈ ಕಾಳಗ ಬಲುದೊಡ್ಡದಾಗಿದೆ, ಅರ್ಜುನನ ಎದುರಾಗಿ ಅಶ್ವತ್ಥಾಮ ಯುದ್ಧಮಾಡಲಿ, ಸುಶರ್ಮ ಯುದ್ಧಕ್ಕೆ ತೊಡಗಲಿ, ಭೋಜ ಗೌತಮರು ಎದುರು ನಿಲ್ಲಲಿ, ಸುಭಟರಾದವರು ಜೊತೆಜೊತೆಯಾಗಿ ಹೋಗಿ ಶತ್ರುಸೈನ್ಯದ ಕಡೆಗೆ ಜಾರುತ್ತಿರುವ ಜಯಶ್ರೀಯ ಮುಂದಲೆಯನ್ನು ಹಿಡಿಯಲಿ-ಎನ್ನುತ್ತಾ ದುರ್ಯೋಧನ ಅಹಂಕಾರದಿಂದ ಮಾತನಾಡಿದ.
ಪದಾರ್ಥ (ಕ.ಗ.ಪ)
ಅಳವಿಗೊಡು-ಎದುರಿಸಿ ಯುದ್ಧಮಾಡು,
ಹೆಕ್ಕಳಿಸು-ದರ್ಪ, ಅಹಂಕಾರಗಳಿಂದ ಮಾತನಾಡು
ಟಿಪ್ಪನೀ (ಕ.ಗ.ಪ)
ಸುಶರ್ಮ-ತ್ರಿಗರ್ತದೇಶದ ಅರಸು
ಭೋಜ-ಭೋಜ ದೇಶದ ಅರಸನಾದ ಕೃತವರ್ಮ
ಗೌತಮ-ಗೌತಮಗೋತ್ರದಲ್ಲಿ ಜನಿಸಿದ ಕೃಪಾಚಾರ್ಯ
ಮೂಲ ...{Loading}...
ದಳವ ಕರೆ ದಳಪತಿಗೆ ಕಾಳೆಗ
ಬಲುಹು ಪಾರ್ಥನ ಕೂಡೆ ಗುರುಸುತ
ನಳವಿಗೊಡಲಿ ಸುಶರ್ಮ ತಾಗಲಿ ಭೋಜ ಗೌತಮರು
ನಿಲಲಿ ಸುಭಟರು ಜೋಡಿಯಲಿ ಪರ
ಬಲಕೆ ಜಾರುವ ಜಯಸಿರಿಯ ಮುಂ
ದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು ಕುರುರಾಯ ॥51॥
೦೫೨ ನೂಕಿದರು ಶಲ್ಯಙ್ಗೆ ...{Loading}...
ನೂಕಿದರು ಶಲ್ಯಂಗೆ ಪಡಿಬಲ
ದಾಕೆವಾಳರು ಗುರುಸುತಾದ್ಯರು
ಪರಿಹರಿಸು ಶರಜಾಳವ ರ್ಜುನನಂಬಿನಂಬುಧಿಯ
ಬೀಕಲಿನ ಭಟರುಬ್ಬಿದರೆ ಸು
ವ್ಯಾಕುಲರು ತುಬ್ಬಿದರೆ ತಪ್ಪೇ
ನೀ ಕಳಂಬವ ಕಾಯ್ದು ಕೊಳ್ಳೆನುತೆಚ್ಚನಾ ಪಾರ್ಥ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಸೈನ್ಯದ ಸುಭಟರು ಶಲ್ಯನ ಎದುರಿನಲ್ಲಿ ತಮ್ಮ ಸೈನ್ಯವನ್ನು ನೂಕಿದರು. ಅಶ್ವತ್ಥಾಮಾದಿಗಳು ಅರ್ಜುನನ ಬಾಣಗಳೆಂಬ ಸಮುದ್ರದ ಎದುರಾಗಿ ಬಾಣಪ್ರಯೋಗ ಮಾಡಿದರು. ಸುರುಟಿ ಮುರುಟಿ ಹೋದ ಅಳಿದುಳಿದ ಭಟರುಗಳು ಉತ್ಸಾಹದಿಂದ ಉಬ್ಬಿದರೆ, ವ್ಯಾಕುಲಗೊಂಡವರು ತಾವು ವೀರರೆಂದು ತಮ್ಮ ಗುರುತುಗಳನ್ನು ಪತ್ತೆಹಚ್ಚಿಕೊಂಡರೆ ತಪ್ಪೇನು, ಈ ಬಾಣವನ್ನು ಕಾಪಾಡಿಕೊಳ್ಳಿ ಎನ್ನುತ್ತಾ ಅರ್ಜುನ ಬಾಣಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಆಕೆವಾಳ-ಶೂರ,
ತೋಕು-ಎಸೆ, ಹೊಡೆ
ಬೀಕಲಿನ-ಸುರುಟಿದ, ಬಾಗಿದ,
ತುಬ್ಬು-ಪತ್ತೆಹಚ್ಚು, ಗುರುತಿಸು,
ಕಳಂಬ-ಬಾಣ
ಮೂಲ ...{Loading}...
ನೂಕಿದರು ಶಲ್ಯಂಗೆ ಪಡಿಬಲ
ದಾಕೆವಾಳರು ಗುರುಸುತಾದ್ಯರು
ಪರಿಹರಿಸು ಶರಜಾಳವ ರ್ಜುನನಂಬಿನಂಬುಧಿಯ
ಬೀಕಲಿನ ಭಟರುಬ್ಬಿದರೆ ಸು
ವ್ಯಾಕುಲರು ತುಬ್ಬಿದರೆ ತಪ್ಪೇ
ನೀ ಕಳಂಬವ ಕಾಯ್ದು ಕೊಳ್ಳೆನುತೆಚ್ಚನಾ ಪಾರ್ಥ ॥52॥
೦೫೩ ಮುರಿಯೆಸುತ ಮಾದ್ರೇಶ್ವರನ ...{Loading}...
ಮುರಿಯೆಸುತ ಮಾದ್ರೇಶ್ವರನ ಹೊ
ಕ್ಕುರುಬಿದನು ಗುರುಸುತನ ಸೂತನ
ನಿರಿದು ಸಮಸಪ್ತಕರ ಸೋಲಿಸಿ ಕೃಪನನಡಹಾಯ್ಸಿ
ತರುಬಿದನು ಕುರುಪತಿಯನರ್ಜುನ
ನೊರಲಿಸಿದನೀ ಸೈನ್ಯ ಸುಭಟರ
ನೆರವಣಿಗೆ ನಿಪ್ಪಸರದಲಿ ಮುಸುಕಿತು ಧನಂಜಯನ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಬಾಣ ಪ್ರಯೋಗಿಸಿ ಶಲ್ಯನನ್ನು ಹಿಂದಿರುಗಿಸುತ್ತಾ, ಸೈನ್ಯದೊಳಕ್ಕೆ ಹೊಕ್ಕು ಶತ್ರುಗಳನ್ನು ಊದಿ ತೂರಿದ, ಅಶ್ವತ್ಥಾಮನ ಸಾರಥಿಯನ್ನು ಇರಿದನು, ಸಮಸಪ್ತಕರನ್ನು ಸೋಲಿಸಿ, ಕೃಪಾಚಾರ್ಯನ ಮೇಲೆ ಬಿದ್ದು ಅವನನ್ನು ಅಟ್ಟಿಸಿಕೊಂಡು ಹೋದನು. ದುರ್ಯೋಧನನ ಸೈನ್ಯದ ವೀರಭಟರ ಸಮೂಹವು ನಿಷ್ಠುರತೆಯಿಂದ ಧನಂಜಯನನ್ನು ಮುತ್ತಿತು.
ಪದಾರ್ಥ (ಕ.ಗ.ಪ)
ಮುರಿ-ಹಿಂದಕ್ಕೆ ತಿರುಗು, ಉರುಬು-ಊದು, ತೂರು,
ಅಡಹಾಯ್-ಮೇಲೆಬೀಳು,
ಒರಲಿಸು-ಕೂಗುವಂತೆ ಮಾಡು, ನೆರವಣಿಗೆ-ಸೇರುವುದು, ಸಮೂಹ
ನಿಪ್ಪಸರ-ಉರವಣೆ, ನಿಷ್ಠುರತೆ
ಟಿಪ್ಪನೀ (ಕ.ಗ.ಪ)
ಸಮಸಪ್ತಕರು- ಸಂಶಪ್ತಕರು-ಶಪಥಮಾಡಿ ಯುದ್ಧ ಮಾಡುವವರು, ತ್ರಿಗರ್ತ ರಾಜನಾದ ಸುಶರ್ಮ ಮತ್ತು ಅವನ ತಮ್ಮಂದಿರಾದ ಸತ್ಯೇಷು, ಸತ್ಯಕರ್ಮ, ಸತ್ಯದೇವ, ಸತ್ಯರಥ - ಈ ಐವರಿಗೂ ಈ ಹೆಸರು ಸಲ್ಲುತ್ತದೆ. ದ್ರೋಣಪರ್ವ ಮತ್ತು ಕರ್ಣ ಪರ್ವಗಳನ್ನು ನೋಡಿ.
ಮೂಲ ...{Loading}...
ಮುರಿಯೆಸುತ ಮಾದ್ರೇಶ್ವರನ ಹೊ
ಕ್ಕುರುಬಿದನು ಗುರುಸುತನ ಸೂತನ
ನಿರಿದು ಸಮಸಪ್ತಕರ ಸೋಲಿಸಿ ಕೃಪನನಡಹಾಯ್ಸಿ
ತರುಬಿದನು ಕುರುಪತಿಯನರ್ಜುನ
ನೊರಲಿಸಿದನೀ ಸೈನ್ಯ ಸುಭಟರ
ನೆರವಣಿಗೆ ನಿಪ್ಪಸರದಲಿ ಮುಸುಕಿತು ಧನಂಜಯನ ॥53॥
೦೫೪ ಅರಸ ಕೇಳಿತ್ತಲು ...{Loading}...
ಅರಸ ಕೇಳಿತ್ತಲು ಯುಧಿಷ್ಠಿರ
ನರಪತಿಯನರಸಿದನು ಮಾದ್ರೇ
ಶ್ವರನು ರಾವುಠಿಯೆಸುಗೆಯಲಿ ಮುಸುಕಿದನು ಧರ್ಮಜನ
ಧರೆಗೆ ಕಾಮಿಸಿದೈ ಸುಯೋಧನ
ನರಸಿಯಲ್ಲಾ ಧಾತ್ರಿ ನಿಮ್ಮೆ
ಲ್ಲರಿಗೆ ಹುದುನೆಲನಲ್ಲವೆಂದೆನುತೆಚ್ಚನಾ ಶಲ್ಯ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಕೇಳು, ಇತ್ತ ಶಲ್ಯ ಯುಧಿಷ್ಠಿರ ರಾಜನನ್ನು ಹುಡುಕಿ ಭರ್ಜಿ ಮುಂತಾದ ಆಯುಧಗಳನ್ನು ಎಸೆದು ಅವನನ್ನು ಮುಚ್ಚಿ ಹಾಕಿದ. ಈ ಭೂದೇವಿಗೆ ಆಶೆಪಟ್ಟೆಯಲ್ಲಾ ಧರ್ಮರಾಯ? ಈ ಭೂಮಿ ದುರ್ಯೋಧನನ ಅರಸಿಯಲ್ಲವೆ? ನಿಮ್ಮ ಐವರಿಗೆ ಈ ಭೂದೇವಿಯು ಸ್ನೇಹದಿಂದಿರುವವಳಲ್ಲ, ನಿಮ್ಮೆಲ್ಲರೊಂದಿಗೂ ಕೂಡಿ ಇರುವವಳಲ್ಲ ಎನ್ನುತ್ತಾ ಶಲ್ಯ ಧರ್ಮಜನ ಮೇಲೆ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ರಾವುಠಿ-ಭರ್ಜಿ, ಈಟಿ ಮುಂತಾದ ಆಯುಧಗಳು, ಹುದುನೆಲ-ಪ್ರೀತಿಯ ನೆಲ, ಎಲ್ಲರೊಂದಿಗೂ ಭಾಗಮಾಡಿಕೊಂಡು ಅನುಭವಿಸಬಹುದಾದ ನೆಲ.
ಮೂಲ ...{Loading}...
ಅರಸ ಕೇಳಿತ್ತಲು ಯುಧಿಷ್ಠಿರ
ನರಪತಿಯನರಸಿದನು ಮಾದ್ರೇ
ಶ್ವರನು ರಾವುಠಿಯೆಸುಗೆಯಲಿ ಮುಸುಕಿದನು ಧರ್ಮಜನ
ಧರೆಗೆ ಕಾಮಿಸಿದೈ ಸುಯೋಧನ
ನರಸಿಯಲ್ಲಾ ಧಾತ್ರಿ ನಿಮ್ಮೆ
ಲ್ಲರಿಗೆ ಹುದುನೆಲನಲ್ಲವೆಂದೆನುತೆಚ್ಚನಾ ಶಲ್ಯ ॥54॥
೦೫೫ ಮಾವ ಮಾಯಾಡಮ್ಬರದ ...{Loading}...
ಮಾವ ಮಾಯಾಡಂಬರದ ದು
ರ್ಭಾವವೇತಕೆ ಕೌರವನೊಳೆಮ
ಗೀ ವಸುಧೆ ಹುದುವಲ್ಲ ನೆಲನೇಕಾಧಿಪತ್ಯವಲೆ
ನೀವು ಕೌರವ ಸರ್ವದಳದ ದು
ರಾವಹರಲೇ ಬಾಣಸೃಷ್ಟಿ ಕೃ
ತಾವಧಾನವ ತೋರೆನುತ ನೃಪನೆಚ್ಚು ಬೊಬ್ಬಿರಿದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯಮಾವಾ, ಮಾಯೆಯ ಢಾಂಬಿಕತನವೇಕೆ. (ತಿಳಿದೂ ಸುಳ್ಳು ಹೇಳಬೇಕಾಗಿಲ್ಲ) ದುರ್ಯೋಧನನೊಡನೆ ಈ ನೆಲ ನಮಗೆ ಭಾಗವಲ್ಲ. ನೆಲವೆಂಬುದು ಯಾವಾಗಲೂ ಏಕಾಧಿಪತ್ಯಕ್ಕೆ ಸೇರಿದ್ದಲ್ಲವೇ! ನೀವು ಕೌರವನ ಸಮಸ್ತ ಬಲಕ್ಕೂ ಸೋಲಿಲ್ಲದ ಧೀರರಲ್ಲವೆ? ಬಾಣಗಳನ್ನು ಸೃಷ್ಟಿಮಾಡಿ ವಿವಿಧ ರೀತಿಯಲ್ಲಿ ಪ್ರಯೋಗ ಮಾಡುವ ಅವಧಾನ ಕಲೆಯನ್ನು ತೋರಿಸಿ.
ಪದಾರ್ಥ (ಕ.ಗ.ಪ)
ಹುದು-ಭಾಗ ಮಾಡಿಕೊಂಡು ಅನುಭವಿಸುವುದು, ದುರಾಹವ-ಯುದ್ಧದಲ್ಲಿ ಸೋಲಿಸಲು ಅಸಾಧ್ಯನಾದವನು, ಅವಧಾನ-ಒಂದೇ ವೇಳೆಯಲ್ಲಿ ಅನೇಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಪ್ರಯೋಗ ಮಾಡುವ ಕಲೆ.
ಮೂಲ ...{Loading}...
ಮಾವ ಮಾಯಾಡಂಬರದ ದು
ರ್ಭಾವವೇತಕೆ ಕೌರವನೊಳೆಮ
ಗೀ ವಸುಧೆ ಹುದುವಲ್ಲ ನೆಲನೇಕಾಧಿಪತ್ಯವಲೆ
ನೀವು ಕೌರವ ಸರ್ವದಳದ ದು
ರಾವಹರಲೇ ಬಾಣಸೃಷ್ಟಿ ಕೃ
ತಾವಧಾನವ ತೋರೆನುತ ನೃಪನೆಚ್ಚು ಬೊಬ್ಬಿರಿದ ॥55॥
೦೫೬ ಬರಿಯ ಬೊಬ್ಬಾಟವೊ ...{Loading}...
ಬರಿಯ ಬೊಬ್ಬಾಟವೊ ಶರಾವಳಿ
ಯಿರಿಗೆಲಸವೇನುಂಟೊ ಧರಣಿಯ
ಲೆರಕ ನಿಮ್ಮೈವರಿಗೆ ಗಡ ದ್ರೌಪದಿಗೆ ಸಮವಾಗಿ
ಹೊರಗು ಗಡ ಕುರುರಾಯನೀಗಳೊ
ಮರುದಿವಸವೋ ಸಿರಿಮುಡಿಗೆ ನೀ
ರೆರೆವ ಪಟ್ಟವದೆಂದು ನಿಮಗೆನುತೆಚ್ಚನಾ ಶಲ್ಯ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ಧರ್ಮಜ! ಬರಿಯ ಮಾತಿನ ಬೊಬ್ಬಾಟವೋ ಅಥವ ಬಾಣಗಳಿಂದ ಇರಿಯುವ ಕೆಲಸವೇನಾದರೂ ಉಂಟೋ? ನಿಮ್ಮವರಿಗೂ ದ್ರೌಪದಿಯ ಮೇಲಿರುವಂತೆ, ಭೂಮಿಯಮೇಲೂ ಬೇರ್ಪಡಿಸಲಾರದ ಸಂಬಂಧ ಉಂಟೋ? ದುರ್ಯೋಧನ ಈಗಲೋ ಅಥವ ನಾಳೆಯ ದಿನವೋ ಈ ಭೂಮಿಯಿಂದ ಹೊರಗೆ ಹೋಗಿ ಬಿಡುತ್ತಾನೆಂಬುದು ನಿನ್ನ ನಂಬಿಕೆಯೆ! ಹಾಗಿದ್ದಲ್ಲಿ ನಿನ್ನ ಶ್ರೀಮುಡಿಗೆ ಪಟ್ಟದ ನೀರನ್ನು ಎರೆಯುವ ದಿನ ಎಂದು? ಎನ್ನುತ್ತಾ ಶಲ್ಯ ಧರ್ಮಜನನ್ನು ಅಪಹಾಸ್ಯ ಮಾಡುತ್ತಾ ಅವನೆಡೆಗೆ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಎರಕ-ಎರಕ ಹೊಯ್ದಂತಿರುವುದು, ಒಂದನ್ನೊಂದು ಬೇರ್ಪಡಿಸದೆ ಅಂಟಿಕೊಂಡಿರುವುದು.
ಮೂಲ ...{Loading}...
ಬರಿಯ ಬೊಬ್ಬಾಟವೊ ಶರಾವಳಿ
ಯಿರಿಗೆಲಸವೇನುಂಟೊ ಧರಣಿಯ
ಲೆರಕ ನಿಮ್ಮೈವರಿಗೆ ಗಡ ದ್ರೌಪದಿಗೆ ಸಮವಾಗಿ
ಹೊರಗು ಗಡ ಕುರುರಾಯನೀಗಳೊ
ಮರುದಿವಸವೋ ಸಿರಿಮುಡಿಗೆ ನೀ
ರೆರೆವ ಪಟ್ಟವದೆಂದು ನಿಮಗೆನುತೆಚ್ಚನಾ ಶಲ್ಯ ॥56॥
೦೫೭ ಕಡಿದು ಬಿಸುಟನು ...{Loading}...
ಕಡಿದು ಬಿಸುಟನು ಶಲ್ಯನಸ್ತ್ರವ
ನೆಡೆಗೊಡದೆ ಕೂರಂಬುಗಳನಳ
ವಡಿಸಿದನು ನೃಪವರನ ಶರಸಂತತಿಯ ಸಂತೈಸಿ
ಒಡನೊಡನೆ ಕೈಮಾಡಿದನು ಕೈ
ಗಡಿಯನಂಬಿನ ಧಾರೆ ದಳ್ಳಿಸಿ
ಕಿಡಿಗೆದರಿದವು ನೃಪನ ರಥ ಸಾರಥಿ ಹಯಾಳಿಯಲಿ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನ ಬಾಣಗಳನ್ನು ಧರ್ಮಜ ಕಡಿದು ಬೀಸಾಡಿದ. ಸ್ವಲ್ಪವೂ ಸಮಯವನ್ನು ನೀಡದೆ ಹರಿತವಾದ ಬಾಣಗಳನ್ನು ಬಿಲ್ಲಿಗೆ ಅಳವಡಿಸಿದ. ಶಲ್ಯನ ಬಾಣಗಳ ಸಮೂಹವನ್ನು ಸಂತೈಸಿದ (ಅವುಗಳನ್ನು ತುಂಡು ಮಾಡಿದ). ಜೊತೆಜೊತೆಯಲ್ಲಿಯೇ ಶಲ್ಯನ ವಿರುದ್ಧ ಕೈಮಾಡಿ ಕಾದಿದ. ಕೈಗಳನ್ನೇ ಕತ್ತರಿಸುವಂತಹ ಬಾಣಗಳ ಸಮೂಹ ಒಂದಕ್ಕೊಂದು ತಾಗಿ ರಾಜ, ರಥ ಸಾರಥಿ, ಕುದುರೆಗಳ ಮೇಲೆಲ್ಲಾ ಕಿಡಿಗಳನ್ನು ಸೂಸಿದುವು.
ಪದಾರ್ಥ (ಕ.ಗ.ಪ)
ಕೂರಂಬು-ಹರಿತವಾದ ಬಾಣ,
ಶರಸಂತತಿ-ಬಾಣಗಳ ಸಮೂಹ
ಮೂಲ ...{Loading}...
ಕಡಿದು ಬಿಸುಟನು ಶಲ್ಯನಸ್ತ್ರವ
ನೆಡೆಗೊಡದೆ ಕೂರಂಬುಗಳನಳ
ವಡಿಸಿದನು ನೃಪವರನ ಶರಸಂತತಿಯ ಸಂತೈಸಿ
ಒಡನೊಡನೆ ಕೈಮಾಡಿದನು ಕೈ
ಗಡಿಯನಂಬಿನ ಧಾರೆ ದಳ್ಳಿಸಿ
ಕಿಡಿಗೆದರಿದವು ನೃಪನ ರಥ ಸಾರಥಿ ಹಯಾಳಿಯಲಿ ॥57॥
೦೫೮ ಗೆಲಿದನೋ ಮಾದ್ರೇಶನವನಿಪ ...{Loading}...
ಗೆಲಿದನೋ ಮಾದ್ರೇಶನವನಿಪ
ತಿಲಕನನು ಫಡ ಧರ್ಮಸುತನೀ
ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
ಅಳುಕಿದನು ನೃಪನೀ ಬಲಾಧಿಪ
ನುಲುಕನಂಜಿದನೆಂಬ ಲಗ್ಗೆಯ
ಲಳಿ ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಓಹೋ! ಧರ್ಮರಾಜನನ್ನು ಶಲ್ಯ ಗೆದ್ದನೋ! ಎನ್ನುವಷ್ಟರಲ್ಲಿ ಧರ್ಮರಾಯನು ಶಲ್ಯನನ್ನು ಸೋಲೆಂಬ ಸಮುದ್ರದಲ್ಲಿ ಅದ್ದಿದನು! ಈ ರಾಜನು ಅಳುಕಿದನು, ಈ ಬಲಾಧಿಪನಾದ ಶಲ್ಯನು ಕಂಪಿಸಿ ಹೆದರಿದನೆಂಬ ಸುದ್ದಿಯ ಉತ್ಸಾಹವು ಗುಂಪುಗೂಡಿ ಪಾಂಡವರ ಸೈನ್ಯದಲ್ಲಿ ದಾಳಿ ಮಾಡಿತು. (ಪಾಂಡವ ಸೈನ್ಯದಲ್ಲಿ ಉತ್ಸಾಹದ ಸಂಭ್ರಮ ಮೂಡಿತು.)
ಪದಾರ್ಥ (ಕ.ಗ.ಪ)
ಪರಿಭವಮಯ-ಸೋಲಿನಿಂದ ತುಂಬಿದ, ಉಲುಕ-ಕಂಪಿಸುತ್ತಿರುವ, ಲಗ್ಗೆ-ಧಾಳಿ, ಮುತ್ತಿಗೆ
ಲಳಿ-ಉತ್ಸಾಹ, ಸಂದಣಿಸು-ಗುಂಪುಗೂಡು.
ಮೂಲ ...{Loading}...
ಗೆಲಿದನೋ ಮಾದ್ರೇಶನವನಿಪ
ತಿಲಕನನು ಫಡ ಧರ್ಮಸುತನೀ
ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
ಅಳುಕಿದನು ನೃಪನೀ ಬಲಾಧಿಪ
ನುಲುಕನಂಜಿದನೆಂಬ ಲಗ್ಗೆಯ
ಲಳಿ ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ ॥58॥
೦೫೯ ನೆಲ ಬಿರಿಯಲಳ್ಳಿರಿವ ...{Loading}...
ನೆಲ ಬಿರಿಯಲಳ್ಳಿರಿವ ವಾದ್ಯದ
ಕಳಕಳದ ಕೊಲ್ಲಣಿಗೆಯಲಿ ಮುಂ
ಕೊಳಿಸಿದರು ಸಹದೇವ ಸಾತ್ಯಕಿ ನಕುಲ ಸೃಂಜಯರು
ದಳದ ಪದಹತಿಧೂಳಿಯಲಿ ಕ
ತ್ತಲಿಸೆ ದೆಸೆ ಪಾಂಚಾಲಬಲವಿ
ಟ್ಟಳಿಸಿ ನೂಕಿತು ಧರ್ಮಪುತ್ರನ ರಣದ ಚೂಣಿಯಲಿ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆಲವೇ ಬಿರಿದು ಹೋಗುತ್ತೆಂಬಷ್ಟು ಶಬ್ಧದಿಂದ ರಣವಾದ್ಯಗಳು ಭೋರ್ಗರೆಯುತ್ತಿರಲು ವಿನೋದದ ಉತ್ಸಾಹದಲ್ಲಿ ಸಹದೇವ, ಸಾತ್ಯಕಿ, ನಕುಲ, ಸೃಂಜಯರು ಧರ್ಮರಾಯನ ಸೈನ್ಯದ ಮುಂಭಾಗಕ್ಕೆ ಬಂದು ಅವನಿಗೆ ಸಹಾಯಕರಾದರು. ಸೈನ್ಯದ ಕಾಲಧೂಳಿನಿಂದ ದಿಕ್ಕುಗಳಲ್ಲಿ ಕತ್ತಲೆ ತುಂಬಿದಂತಾಯಿತು. ಪಾಂಚಾಲ ಸೈನ್ಯವು ಗುಂಪುಗೂಡಿ ಧರ್ಮಜನ ಯುದ್ಧದ ಮುಂಚೂಣಿಗೆ ಬಂದುವು.
ಪದಾರ್ಥ (ಕ.ಗ.ಪ)
ಕೊಲ್ಲಣಿಗೆ-ವಿನೋದ, ಆಟ ಚೂಣಿ-ಸೈನ್ಯದ ಮುಂಭಾಗ
ಮೂಲ ...{Loading}...
ನೆಲ ಬಿರಿಯಲಳ್ಳಿರಿವ ವಾದ್ಯದ
ಕಳಕಳದ ಕೊಲ್ಲಣಿಗೆಯಲಿ ಮುಂ
ಕೊಳಿಸಿದರು ಸಹದೇವ ಸಾತ್ಯಕಿ ನಕುಲ ಸೃಂಜಯರು
ದಳದ ಪದಹತಿಧೂಳಿಯಲಿ ಕ
ತ್ತಲಿಸೆ ದೆಸೆ ಪಾಂಚಾಲಬಲವಿ
ಟ್ಟಳಿಸಿ ನೂಕಿತು ಧರ್ಮಪುತ್ರನ ರಣದ ಚೂಣಿಯಲಿ ॥59॥
೦೬೦ ಸರ್ಬಲಗ್ಗೆಯಲರರೆ ಪಾಣ್ಡವ ...{Loading}...
ಸರ್ಬಲಗ್ಗೆಯಲರರೆ ಪಾಂಡವ
ಸರ್ಬದಳ ದಳಪತಿಯ ಝೊಂಪಿಸ
ಲೊಬ್ಬನೊದಗಿದಡೇನಹುದು ಕವಿ ನೂಕು ನೂಕೆನುತ
ಬೊಬ್ಬಿಡಲು ಕುರುರಾಯನೀಬಲ
ದಬ್ಬರಣೆ ವಾರಿಜಭವಾಂಡವ
ಗಬ್ಬರಿಸೆ ಘಾಡಿಸಿತು ಶಲ್ಯನ ರಥದ ಬಳಸಿನಲಿ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ವ ರೀತಿಯಲ್ಲಿಯೂ ಸೈನ್ಯವು ದಾಳಿಯಿಡಲು, ಪಾಂಡವರ ಸರ್ವಬಲವೂ ದಳಪತಿಯಾದ ಶಲ್ಯನನ್ನು ಮುತ್ತಿಗೆ ಹಾಕಲು, ಅವನು ನಡುಗಿಹೋದ. ಒಬ್ಬನು ಮೇಲೆ ಬಿದ್ದರೇನಾಗುವುದು, ಮತ್ತೆ ಸೈನ್ಯವನ್ನು ನೂಕು- ಎನ್ನುತ್ತಾ ದುರ್ಯೋಧನನು ಬೊಬ್ಬಿಡಲು ಬ್ರಹ್ಮಾಂಡವೇ ಅಬ್ಬರಿಸಿ ಬಿದ್ದಂತೆ ಕುರುಬಲವು ಶಲ್ಯನ ರಥದ ಸುತ್ತಲೂ ಸೇರಿತು.
ಪದಾರ್ಥ (ಕ.ಗ.ಪ)
ಝೊಂಪಿಸು-ನಡುಗು, ನಿದ್ರಿಸು ವಾರಿಜಭವಾಂಡ-ಬ್ರಹ್ಮಾಂಡ (ವಾರಿಜ-ಕಮಲ) ಘಾಡಿಸು-ಒಟ್ಟಾಗು
ಮೂಲ ...{Loading}...
ಸರ್ಬಲಗ್ಗೆಯಲರರೆ ಪಾಂಡವ
ಸರ್ಬದಳ ದಳಪತಿಯ ಝೊಂಪಿಸ
ಲೊಬ್ಬನೊದಗಿದಡೇನಹುದು ಕವಿ ನೂಕು ನೂಕೆನುತ
ಬೊಬ್ಬಿಡಲು ಕುರುರಾಯನೀಬಲ
ದಬ್ಬರಣೆ ವಾರಿಜಭವಾಂಡವ
ಗಬ್ಬರಿಸೆ ಘಾಡಿಸಿತು ಶಲ್ಯನ ರಥದ ಬಳಸಿನಲಿ ॥60॥
೦೬೧ ಸೆಳೆದು ಹೊಯ್ದಾಡಿದುದು ...{Loading}...
ಸೆಳೆದು ಹೊಯ್ದಾಡಿದುದು ಚಾತು
ರ್ಬಲ ಛಡಾಳಿಸಿ ವಿವಿಧ ಶಸ್ತ್ರಾ
ವಳಿಯ ಧಾರಾಸಾರದಲಿ ಹೊನಲೆದ್ದುದರುಣಜಲ
ಉಳಿದರಿಬ್ಬರು ದೊರೆಗಳೆನೆ ಮು
ಮ್ಮುಳಿತವಾದುದು ಸೇನೆ ನೃಪತಿಯ
ಹಳಚಿದನು ಮಾದ್ರೇಶನಾವೆಡೆ ಧರ್ಮಸುತನೆನುತ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚತುರಂಗಬಲಗಳೆಲ್ಲವೂ ಮೇಲೆ ಬಿದ್ದು ಯುದ್ಧ ಮಾಡಿದುವು. ವಿವಿಧ ಆಯುಧಗಳ ಹರಿತವಾದ ಪ್ರಯೋಗಗಳಿಂದ ರಕ್ತವು ಪ್ರವಾಹದಂತಾಯಿತು. ಇಬ್ಬರು ದೊರೆಗಳು ಮಾತ್ರ (ಧರ್ಮಜ ಮತ್ತು ದುರ್ಯೋಧನ) ಉಳಿದರೆಂಬಂತಾಯಿತು. ಅವರೊಂದಿಗಿನ ಸೈನ್ಯ ಸರ್ವನಾಶವಾಯಿತು. ಧರ್ಮರಾಜನೆಲ್ಲಿದ್ದಾನೆಂದು ಶಲ್ಯ ಹುಡುಕಾಡಿದ.
ಪದಾರ್ಥ (ಕ.ಗ.ಪ)
ಛಡಾಳಿಸು-ಭುಗಿಲೆಂದು ಹತ್ತು,
ಅರುಣಜಲ-ಕೆಂಪಾದ ನೀರು-ರಕ್ತ,
ಮುಮ್ಮುಳಿತ-ಸರ್ವನಾಶವಾಗುವುದು,
ಹಳಚು-ಯುದ್ಧಮಾಡು, (ಇಲ್ಲಿ ಹುಡುಕು)
ಮೂಲ ...{Loading}...
ಸೆಳೆದು ಹೊಯ್ದಾಡಿದುದು ಚಾತು
ರ್ಬಲ ಛಡಾಳಿಸಿ ವಿವಿಧ ಶಸ್ತ್ರಾ
ವಳಿಯ ಧಾರಾಸಾರದಲಿ ಹೊನಲೆದ್ದುದರುಣಜಲ
ಉಳಿದರಿಬ್ಬರು ದೊರೆಗಳೆನೆ ಮು
ಮ್ಮುಳಿತವಾದುದು ಸೇನೆ ನೃಪತಿಯ
ಹಳಚಿದನು ಮಾದ್ರೇಶನಾವೆಡೆ ಧರ್ಮಸುತನೆನುತ ॥61॥
೦೬೨ ಮತ್ತೆ ತರುಬಿದನವನಿಪನನಿದು ...{Loading}...
ಮತ್ತೆ ತರುಬಿದನವನಿಪನನಿದು
ಜೊತ್ತಿನಾಹವವಲ್ಲಲೇ ಮಿಗೆ
ಹೊತ್ತ ಹೊರಿಗೆಯ ನೆರವಣಿಗೆ ಸೇನಾಧಿಪತ್ಯವಲೆ
ತೆತ್ತಿಸಿದನಂಬಿನಲಿ ಜೋಡಿನ
ಹತ್ತರಿಕೆಯಲಿ ಚಿಪ್ಪನೊಡೆದೊಳು
ನೆತ್ತರೋಕುಳಿಯಾಡಿದುವು ಮಾದ್ರೇಶನಂಬುಗಳು ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯ ಮತ್ತೆ ಧರ್ಮರಾಯನನ್ನು ಅಟ್ಟಿಸಿಕೊಂಡು ಹೋದ. ಇದು ಮೋಸದ ಯುದ್ಧವಲ್ಲ ತಾನೇ! ತಾನು ಹೊತ್ತಿರುವ ಹೊಣೆ ಸೇನಾಧಿಪತ್ಯದ್ದಲ್ಲವೇ! ಎನ್ನುತ್ತಾ ಶಲ್ಯ ಬಾಣಗಳನ್ನು ಧರ್ಮಜನ ದೇಹದಲ್ಲಿ ಕೀಲಿಸಿದ. ಶಲ್ಯನ ಬಾಣಗಳು ಧರ್ಮರಾಯನ ಕವಚದ ಮೇಲ್ಭಾಗದ ಚಿಪ್ಪುಗಳನ್ನು ಒಡೆದು ದೇಹದೊಳಗೆ ನೆತ್ತರಿನ ಓಕುಳಿಯಾಡಿದುವು.
ಪದಾರ್ಥ (ಕ.ಗ.ಪ)
ಜೊತ್ತಿನಾಹವ-ಮೋಸದಯುದ್ಧ, ಹೊರಿಗೆ-ಜವಾಬ್ದಾರಿ, ನೆರವಣಿಗೆ-ಒಟ್ಟುಗೂಡಿಸುವುದು, ತೆತ್ತ್ತಿಸು-ಜೋಡಿಸು, ಕೀಲಿಸು, ಜೋಡು-ಕವಚ, ಹತ್ತರಿಕೆ-ಹೊಳಪಾದ ಮೈ.
ಮೂಲ ...{Loading}...
ಮತ್ತೆ ತರುಬಿದನವನಿಪನನಿದು
ಜೊತ್ತಿನಾಹವವಲ್ಲಲೇ ಮಿಗೆ
ಹೊತ್ತ ಹೊರಿಗೆಯ ನೆರವಣಿಗೆ ಸೇನಾಧಿಪತ್ಯವಲೆ
ತೆತ್ತಿಸಿದನಂಬಿನಲಿ ಜೋಡಿನ
ಹತ್ತರಿಕೆಯಲಿ ಚಿಪ್ಪನೊಡೆದೊಳು
ನೆತ್ತರೋಕುಳಿಯಾಡಿದುವು ಮಾದ್ರೇಶನಂಬುಗಳು ॥62॥
೦೬೩ ಏನ ಹೇಳುವೆನರಸ ...{Loading}...
ಏನ ಹೇಳುವೆನರಸ ಕುಂತೀ
ಸೂನುವೇ ಕಿರುಕುಳನೆ ಶಲ್ಯನ
ನೂನ ಶರಜಾಲದಲಿ ನೊಂದನು ಬಹಳ ಧೈರ್ಯದಲಿ
ಭಾನುವಿನ ತಮದೊದವಿದನುಸಂ
ಧಾನದಂತಿರೆಯಹಿತಭಟನ ಸ
ಘಾನತೆಯನೆತ್ತಿದವು ಕುತ್ತಿದವಂಬು ದಳಪತಿಯ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನಹೇಳಲಿ ಧೃತರಾಷ್ಟ್ರ, ಕುಂತೀಸೂನುವಾದ ಧರ್ಮಜನೇನು ಸಣ್ಣ ಜನವೇ? ಶಲ್ಯನ ಅವಿರಳವಾದ ಬಾಣಗಳ ಜಾಲದಲ್ಲಿ ನೊಂದನು, ಆದರೂ ಬಹುಧೈರ್ಯದಿಂದ ಅದನ್ನು ತಾಳಿಕೊಂಡನು. ಸೂರ್ಯ ಮತ್ತು ಕತ್ತಲೆಯೊಂದಿಗೆ ಇರುವ ಹೊಂದಿಕೆಯಂತಿರೆ (ವಿರೋಧಭಾವ) ಶತ್ರುಭಟನಾದ ಶಲ್ಯನ ದರ್ಪವನ್ನು ತೊಡೆದು ಧರ್ಮಜನ ಬಾಣಗಳು ಶಲ್ಯನನ್ನು ಕುತ್ತಿದುವು.
ಪದಾರ್ಥ (ಕ.ಗ.ಪ)
ಕಿರುಕುಳ-ಸಣ್ಣವ, (ಕಡಿಮೆಕಂದಾಯವನ್ನು ಕೊಡುವ ಕುಳ) ಅನೂನ-ತಡೆಯಿಲ್ಲದ, ಅವಿರಳ, ಅನುಸಂಧಾನ-ಹೊಂದಾಣಿಕೆ, ಸಘಾನತೆ-ದರ್ಪ, ಠೀವಿ, ಕುತ್ತು-ಚುಚ್ಚಿಕೊಳ್ಳುವುದು, ನಾಟುವುದು.
ಮೂಲ ...{Loading}...
ಏನ ಹೇಳುವೆನರಸ ಕುಂತೀ
ಸೂನುವೇ ಕಿರುಕುಳನೆ ಶಲ್ಯನ
ನೂನ ಶರಜಾಲದಲಿ ನೊಂದನು ಬಹಳ ಧೈರ್ಯದಲಿ
ಭಾನುವಿನ ತಮದೊದವಿದನುಸಂ
ಧಾನದಂತಿರೆಯಹಿತಭಟನ ಸ
ಘಾನತೆಯನೆತ್ತಿದವು ಕುತ್ತಿದವಂಬು ದಳಪತಿಯ ॥63॥