೦೦೦ ಸೂ ರಾಯಪರಬಲಮಥನ ...{Loading}...
ಸೂ. ರಾಯಪರಬಲಮಥನ ಕೌರವ
ರಾಯ ಧರಣಿ ವರಾಹ ಕಲಿರಾ
ಧೇಯನೆಚ್ಚನು ರೌದ್ರದರ್ಪದ ಸರ್ಪಬಾಣದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ವಿರೋಧಿ ರಾಜರ ಸೈನ್ಯವನ್ನು ಮಥಿಸುವವನೂ, ಕೌರವರಾಯನಿಗೆ ಭೂಮಿಯನ್ನು ಉದ್ಧರಿಸಿ ಕೊಡುವ ವರಾಹ ಮೂರ್ತಿಯಂತಿರುವವನೂ, ಆದ ವೀರ ಕರ್ಣನು, ಭಯಂಕರವಾದ ದರ್ಪದ ಸರ್ಪಾಸ್ತ್ರವನ್ನು ಪ್ರಯೋಗಿಸಿದನು.
ಮೂಲ ...{Loading}...
ಸೂ. ರಾಯಪರಬಲಮಥನ ಕೌರವ
ರಾಯ ಧರಣಿ ವರಾಹ ಕಲಿರಾ
ಧೇಯನೆಚ್ಚನು ರೌದ್ರದರ್ಪದ ಸರ್ಪಬಾಣದಲಿ
೦೦೧ ಹೇಳು ಸಞ್ಜಯ ...{Loading}...
ಹೇಳು ಸಂಜಯ ಹಗೆಗೆ ಬಿದ್ದ ವಿ
ತಾಳವಾವುದು ಕಿವಿಗಳೈದವು
ನಾಲಗೆಯನೊಡ್ಡುವೆನು ವಚನಾಮೃತದ ಸವಿ ಹಿರಿದೆ
ಜಾಳಿಸಿತೆ ಹಗೆ ಕರ್ಣ ಗೆಲಿದನೆ
ಕಾಳೆಗವನೀ ಮಾತುಗಳನೇ
ಹೇಳುತಿರು ಸಾಕೆಂದು ನುಡಿದನು ನಗುತ ಜನನಾಥ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಂಜಯನೇ ಹೇಳು, ಶತ್ರುವಿಗೆ ಒದಗಿದ ಅಪಾಯ ಯಾವುದು? ಅದನ್ನು ಕೇಳಲು ನನ್ನ ಕಿವಿಗಳು ಸಾಲವು. ನಿನ್ನ ಅಮೃತದಂತಹ ಮಾತಿನ ರುಚಿ ಹಿರಿದಾದುದು. ನಾನೂ ಮಾತಿನ ಮೂಲಕವೇ ಅದನ್ನು ಸವಿಯುತ್ತೇನೆ. ಶತ್ರುಗಳು ಹೆದರಿದರೇ, ಕರ್ಣನು ಯುದ್ಧದಲ್ಲಿ ಗೆದ್ದನೇ. ಈ ಮಾತುಗಳನ್ನೇ ಹೇಳುತ್ತಿರು “ಎಂದು ನಗುತ್ತಾ ಧೃತರಾಷ್ಟ್ರನು ಹೇಳಿದ.
ಪದಾರ್ಥ (ಕ.ಗ.ಪ)
ವಿತಾಳ-ಅಪಾಯ, ಜಾಳಿಸು-ಅಲುಗಾಡು
ಮೂಲ ...{Loading}...
ಹೇಳು ಸಂಜಯ ಹಗೆಗೆ ಬಿದ್ದ ವಿ
ತಾಳವಾವುದು ಕಿವಿಗಳೈದವು
ನಾಲಗೆಯನೊಡ್ಡುವೆನು ವಚನಾಮೃತದ ಸವಿ ಹಿರಿದೆ
ಜಾಳಿಸಿತೆ ಹಗೆ ಕರ್ಣ ಗೆಲಿದನೆ
ಕಾಳೆಗವನೀ ಮಾತುಗಳನೇ
ಹೇಳುತಿರು ಸಾಕೆಂದು ನುಡಿದನು ನಗುತ ಜನನಾಥ ॥1॥
೦೦೨ ಅವನಿಪತಿ ಕೇಳುವಡೆ ...{Loading}...
ಅವನಿಪತಿ ಕೇಳುವಡೆ ಸಾವಿರ
ಕಿವಿಗಳೈದವು ನಿಮ್ಮ ಕರ್ಣನ
ಬವರದಲಿ ರೂಢಿಸಿದ ರೌದ್ರದ ರಾಜಕಾರಿಯವ
ಸವಡಿವೆರಳಿನ ಸೇದುವಂಬಿನ
ತವಕಿಗನ ತಗ್ಗಿಸುವೆ ನಿಲ್ಲೆನು
ತವಗಡದ ಕೋಪದಲಿ ಕಿಡಿಕಿಡಿವೋದನಾ ಕರ್ಣ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ, ನಿಮ್ಮ ಕರ್ಣನು ಯುದ್ಧದಲ್ಲಿ ನೆರವೇರಿಸಿದ ಭಯಂಕರವಾದ ರಾಜಕಾರ್ಯವನ್ನು ಕೇಳಿಸಿಕೊಳ್ಳುವುದಕ್ಕೆ ಸಾವಿರ ಕಿವಿಗಳು ಸಾಲುವುದಿಲ್ಲ. ‘ಎರಡು ಬೆರಳುಗಳಿಂದ ಬಾಣ ಪ್ರಯೋಗಿಸುತ್ತಿರುವ, ತವಕದ ಅರ್ಜುನನ ರಭಸವನ್ನು ಕಡಿಮೆ ಮಾಡುತ್ತೇನೆ, ನಿಲ್ಲು’ " ಎನ್ನುತ್ತಾ ಕರ್ಣನು ಕೋಪದಿಂದ ಕಿಡಿಕಿಡಿಯಾದನು” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಸವಡಿ-ಎರಡು, ಸೇದು-ಮೇಲೆ ಎಳೆ, ಪ್ರಯೋಗಿಸು
ಮೂಲ ...{Loading}...
ಅವನಿಪತಿ ಕೇಳುವಡೆ ಸಾವಿರ
ಕಿವಿಗಳೈದವು ನಿಮ್ಮ ಕರ್ಣನ
ಬವರದಲಿ ರೂಢಿಸಿದ ರೌದ್ರದ ರಾಜಕಾರಿಯವ
ಸವಡಿವೆರಳಿನ ಸೇದುವಂಬಿನ
ತವಕಿಗನ ತಗ್ಗಿಸುವೆ ನಿಲ್ಲೆನು
ತವಗಡದ ಕೋಪದಲಿ ಕಿಡಿಕಿಡಿವೋದನಾ ಕರ್ಣ ॥2॥
೦೦೩ ಮೀರಿತುರಿ ಸುಯ್ಲಿನಲಿ ...{Loading}...
ಮೀರಿತುರಿ ಸುಯ್ಲಿನಲಿ ಕಂಗಳು
ಹೇರಿದವು ಕಡುಗೆಂಪನೊಗಡಿಸಿ
ಕಾರಿದವು ರೋಮಾಳಿ ರೋಷಸ್ವೇದಬಿಂದುಗಳ
ಕೌರಿದವು ಕುಡಿಮೀಸೆ ಕಾದುದು
ಮೋರೆ ಬದ್ದಭ್ರುಕಟಿಯಲಿ ಹುರಿ
ಯೇರಿತಧಿಕಕ್ರೋಧತಾಮಸ ನಿಮ್ಮ ದಳಪತಿಯ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ದಳಪತಿಯಾದ ಕರ್ಣನ ಉಸಿರಿನಲ್ಲಿ ಬಿಸಿ ಹೆಚ್ಚಾಯಿತು. ಕಣ್ಣುಗಳು ಭಾರವಾಗಿ ಕಡುಕೆಂಪನ್ನು ಉಗುಳಿದವು. ದೇಹದ ಮೇಲಿನ ಕೂದಲುಗಳು ಕೋಪದ ಬೆವರಿನ ಹನಿಗಳನ್ನು ಕಾರಿದವು. ಕುಡಿಮೀಸೆಗಳು ಕೆಂಪಾದವು. ಹುಬ್ಬುಗಂಟಿನಿಂದ ಮುಖ ಕಾದು ಹೋಯಿತು. ವಿಪರೀತವಾದ ತಾಮಸ ಕೋಪ ಬಲವಾಯಿತು.
ಪದಾರ್ಥ (ಕ.ಗ.ಪ)
ಕೌರು-ಸುಟ್ಟು ಕೆಂಪಾಗು , ಹುರಿಯೇರು-ಹೆಚ್ಚಾಗು/ಬಲವಾಗ
ಮೂಲ ...{Loading}...
ಮೀರಿತುರಿ ಸುಯ್ಲಿನಲಿ ಕಂಗಳು
ಹೇರಿದವು ಕಡುಗೆಂಪನೊಗಡಿಸಿ
ಕಾರಿದವು ರೋಮಾಳಿ ರೋಷಸ್ವೇದಬಿಂದುಗಳ
ಕೌರಿದವು ಕುಡಿಮೀಸೆ ಕಾದುದು
ಮೋರೆ ಬದ್ದಭ್ರುಕಟಿಯಲಿ ಹುರಿ
ಯೇರಿತಧಿಕಕ್ರೋಧತಾಮಸ ನಿಮ್ಮ ದಳಪತಿಯ ॥3॥
೦೦೪ ಉಗಿದನುರಗಾಸ್ತ್ರವನು ಹೊಮ್ಮೂ ...{Loading}...
ಉಗಿದನುರಗಾಸ್ತ್ರವನು ಹೊಮ್ಮೂ
ಡಿಗೆಯೊಳಗೆ ಹೊರಕಯ್ಯ ಗಾಳಿಗೆ
ಹೊಗೆಯ ಹೊದರಿನ ಹೊರಳಿ ಹಬ್ಬಿತು ಕೂಡೆ ಕಿವಿಯಿಡುತ
ಗಗನ ಗಮನದ ನಿಖಿಳ ವಿಹಗಾ
ಳಿಗಳು ಬೆಂದವು ಗಾಢ ಗರಳದ
ಸೊಗಡ ಸೋಹಿಗೆ ಕಂಠಣಿಸಿತೆರಡೊಡ್ಡು ಕಳವಳಿಸಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ತನ್ನ ಚಿನ್ನದ ಬತ್ತಳಿಕೆಯಿಂದ ಸರ್ಪಾಸ್ತ್ರವನ್ನು ಹೊರಕ್ಕೆ ತೆಗೆದನು. ಅದನ್ನು ಹೊರಕ್ಕೆ ತೆಗೆಯುತ್ತಿದ್ದಾಗಲೇ ಬೀಸಿದ ಗಾಳಿಗೆ ಕಿಡಿಯನ್ನು ಸೂಸುತ್ತಿದ್ದ ದಟ್ಟವಾದ ಹೊಗೆಯು ಹಬ್ಬಿತು. ಆಕಾಶದಲ್ಲಿ ಹಾರಾಡುತ್ತಿದ್ದ ಎಲ್ಲಾ ಪಕ್ಷಗಳೂ ಬೆಂದು ಹೋದವು. ತೀವ್ರವಾದ ವಿಷದ ವಾಸನೆಯ ಪ್ರಭಾವವಲಯಕ್ಕೆ ಎರಡೂ ಕಡೆಯ ಸೈನ್ಯ ಕಳವಳಗೊಂಡು ಹಲುಬಿತು.
ಪದಾರ್ಥ (ಕ.ಗ.ಪ)
ಕಂಠಣಿಸು-ಹಲುಬು
ಮೂಲ ...{Loading}...
ಉಗಿದನುರಗಾಸ್ತ್ರವನು ಹೊಮ್ಮೂ
ಡಿಗೆಯೊಳಗೆ ಹೊರಕಯ್ಯ ಗಾಳಿಗೆ
ಹೊಗೆಯ ಹೊದರಿನ ಹೊರಳಿ ಹಬ್ಬಿತು ಕೂಡೆ ಕಿವಿಯಿಡುತ
ಗಗನ ಗಮನದ ನಿಖಿಳ ವಿಹಗಾ
ಳಿಗಳು ಬೆಂದವು ಗಾಢ ಗರಳದ
ಸೊಗಡ ಸೋಹಿಗೆ ಕಂಠಣಿಸಿತೆರಡೊಡ್ಡು ಕಳವಳಿಸಿ ॥4॥
೦೦೫ ಬೆರಳಲಮ್ಬನು ತೂಗಲುರಿ ...{Loading}...
ಬೆರಳಲಂಬನು ತೂಗಲುರಿ ಫೂ
ತ್ಕರಣೆಯಲಿ ಪಂಠಿಸಿತು ಸುಯ್ಲಿನ
ಧರಧುರದ ಬೆಳುನೊರೆಯ ಲಹರಿಯ ವಿಷದ ಲೋಳೆಗಳ
ಉರವಣಿಸಿದವು ಗರಳ ರಸದ
ಬ್ಬರದ ಬೊಬ್ಬುಳಿಕೆಗಳು ಮುಸುಕಿತು
ಹೊರಳಿಗಿಡಿಗಳ ಛಟಛಟಧ್ವನಿ ಮಸಗಿತಡಿಗಡಿಗೆ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ತನ್ನ ಬೆರಳಿನಲ್ಲಿ ಸರ್ಪಾಸ್ತ್ರವನ್ನು ತೂಗಾಡಿದಾಗ, ಅದು ಉರಿಯನ್ನು ಕಾರುತ್ತಾ ಫೂತ್ಕಾರ ಮಾಡುತ್ತಾ ಉಸಿರನ್ನು ಜೋರಾಗಿ ಬಿಡುತ್ತಾ ಬಿಳಿ ನೊರೆಯ ಅಲೆಗಳನ್ನು ಎಬ್ಬಿಸುತ್ತಾ ವಿಷದ ಜೊಲ್ಲನ್ನು ಸುರಿಸುತ್ತಾ ವ್ಯಾಪಿಸಿತು. ಅದರ ವಿಷ ರಸದ ನೀರುಗುಳ್ಳೆಗಳ ಆರ್ಭಟ ಹೆಚ್ಚಾದವು. ಹೆಚ್ಚಾಗುತ್ತಿದ್ದ ಕಿಡಿಗಳ ಛಟಛಟಧ್ವನಿ ಆವರಿಸಿತು. ಅದು ಮತ್ತೆ ಮತ್ತೆ ವಿಜೃಂಭಿಸಿತು.
ಪದಾರ್ಥ (ಕ.ಗ.ಪ)
ಪಂಠಿಸು-ವ್ಯಾಪಿಸು, ಧರಧುರ-ಆರ್ಭಟ, ಲೋಳೆ-ಜೊಲ್ಲು
ಮೂಲ ...{Loading}...
ಬೆರಳಲಂಬನು ತೂಗಲುರಿ ಫೂ
ತ್ಕರಣೆಯಲಿ ಪಂಠಿಸಿತು ಸುಯ್ಲಿನ
ಧರಧುರದ ಬೆಳುನೊರೆಯ ಲಹರಿಯ ವಿಷದ ಲೋಳೆಗಳ
ಉರವಣಿಸಿದವು ಗರಳ ರಸದ
ಬ್ಬರದ ಬೊಬ್ಬುಳಿಕೆಗಳು ಮುಸುಕಿತು
ಹೊರಳಿಗಿಡಿಗಳ ಛಟಛಟಧ್ವನಿ ಮಸಗಿತಡಿಗಡಿಗೆ ॥5॥
೦೦೬ ಹೊರೆಯವರು ಮರನಾದರಾ ...{Loading}...
ಹೊರೆಯವರು ಮರನಾದರಾ ರಥ
ತುರಗತತಿ ಲಟಕಟಿಸಿದವು ನಿ
ಬ್ಬರದ ಬೆರಗಿನೊಳದ್ದು ಹೋದನು ಶಲ್ಯ ನಿಮಿಷದಲಿ
ಉರಿ ಛಡಾಳಿಸಿ ಪೂತ್ಕೃತಿಯ ಪಂ
ಜರದೊಳಗೆ ಪಲ್ಲವಿಸಿತುಬ್ಬಿದ
ಹೊರಳಿಹೊಗೆಯಂಬರವ ತುಂಬಿತು ಭೂಪ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆ ಸರ್ಪಾಸ್ತ್ರದ ಬಗೆಯನ್ನು ಕಂಡ ಅಕ್ಕಪಕ್ಕದವರು ಭಯದಿಂದ ಮರಗಟ್ಟಿ ಹೋದರು. ರಥದ ಕುದುರೆಗಳು ಬಳಲಿದವು. ಒಂದು ನಿಮಿಷದಲ್ಲಿ ಶಲ್ಯನು ಅತ್ಯಾಶ್ಚರ್ಯದಲ್ಲಿ ಮುಳುಗಿದನು. ಉರಿ ಹೆಚ್ಚಾಗಿ ಫೂತ್ಕಾರದ ಪಂಜರದೊಳಗೆ ಇನ್ನಷ್ಟು ಬೆಳೆಯಿತು. ಹಬ್ಬುತ್ತಿದ್ದ ಹೊಗೆಯ ಸಮೂಹ ಆಕಾಶವನ್ನೆಲ್ಲಾ ತುಂಬಿ ಹೋಯಿತು’. ದೊರೆಯೇ ಕೇಳು ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಲಟಕಟಿಸು-ಬಳಲು
ಮೂಲ ...{Loading}...
ಹೊರೆಯವರು ಮರನಾದರಾ ರಥ
ತುರಗತತಿ ಲಟಕಟಿಸಿದವು ನಿ
ಬ್ಬರದ ಬೆರಗಿನೊಳದ್ದು ಹೋದನು ಶಲ್ಯ ನಿಮಿಷದಲಿ
ಉರಿ ಛಡಾಳಿಸಿ ಪೂತ್ಕೃತಿಯ ಪಂ
ಜರದೊಳಗೆ ಪಲ್ಲವಿಸಿತುಬ್ಬಿದ
ಹೊರಳಿಹೊಗೆಯಂಬರವ ತುಂಬಿತು ಭೂಪ ಕೇಳೆಂದ ॥6॥
೦೦೭ ಆವರಿಸಿದವು ಪುಷ್ಕಳಾವ ...{Loading}...
ಆವರಿಸಿದವು ಪುಷ್ಕಳಾವ
ರ್ತಾವಳಿಗಳೆನೆ ಬಹಳವಿಷಧೂ
ಮಾವಳಿಯಲೇ ಧಾತುಗೆಟ್ಟುದು ಸಕಳಭುವನಜನ
ದೇವತತಿ ಬೆಂಡಾಯ್ತು ಮೊದಲಿನ
ದೇವರುಬ್ಬಿದರುರಗಪತಿಯ ಫ
ಣಾವಳಿಯ ಗುಡಿಯೆತ್ತಿದವು ಪಾತಾಳಲೋಕದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿಶಯವಾದ ನೀರನ್ನು ಸುರಿಸುವಂತಹ ಮೋಡಗಳೋ ಎನ್ನುವಂತೆ ಮಹಾ ವಿಷಕಾರಿಯಾದ ಹೊಗೆಯ ಸಮೂಹದಲ್ಲಿ ಭೂಮಿಯ ಜನರೆಲ್ಲಾ ಶಕ್ತಿಗುಂದಿದರು. ದೇವತೆಗಳೇ ಹೆದರಿದರು. ರಾಕ್ಷಸರು ಉಬ್ಬಿದರು. ಪಾತಾಳ ಲೋಕದಲ್ಲಿ ಆದಿಶೇಷನಿಗೆ ತನ್ನ ಹೆಡೆಗಳನ್ನು ಧ್ವಜಗಳಂತೆ ಎತ್ತಿ ಹಿಡಿಯುವಂತಹ ಸಂತೋಷವಾಯಿತು.
ಪದಾರ್ಥ (ಕ.ಗ.ಪ)
ಪುಷ್ಕಲಾವರ್ತ - ಅತಿಯಾಗಿ ನೀರನ್ನು ಸುರಿಸುವಂತಹ ಮೋಡಗಳ ಸಮೂಹ
ಮೊದಲಿನ ದೇವರು - ಪೂರ್ವದೇವಾಃ - ರಾಕ್ಷಸರು
ಮೂಲ ...{Loading}...
ಆವರಿಸಿದವು ಪುಷ್ಕಳಾವ
ರ್ತಾವಳಿಗಳೆನೆ ಬಹಳವಿಷಧೂ
ಮಾವಳಿಯಲೇ ಧಾತುಗೆಟ್ಟುದು ಸಕಳಭುವನಜನ
ದೇವತತಿ ಬೆಂಡಾಯ್ತು ಮೊದಲಿನ
ದೇವರುಬ್ಬಿದರುರಗಪತಿಯ ಫ
ಣಾವಳಿಯ ಗುಡಿಯೆತ್ತಿದವು ಪಾತಾಳಲೋಕದಲಿ ॥7॥
೦೦೮ ಭುಜವ ಹೊಯ್ದರು ...{Loading}...
ಭುಜವ ಹೊಯ್ದರು ಸೂರ್ಯತಕ್ಷಕ
ರಜನ ಸಭೆಯಲಿ ಭಯದಿ ಸುರಪತಿ
ಭಜಿಸಿದನು ಗರುಡನನು ನಿರ್ವಿಷಮಸ್ತು ನರಗೆನುತ
ಗಜರಿದವು ನಿಸ್ಸಾಳವಾದ್ಯ
ವ್ರಜದ ಕಹಳೆಯ ಭಟರ ಬೊಬ್ಬೆಯ
ಗಜಬಜಿಕೆ ಘಾಡಿಸಿತು ಕೌರವಸೈನ್ಯಶರಧಿಯಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಹ್ಮನ ಸಭೆಯಲ್ಲಿದ್ದ ಸೂರ್ಯ, ತಕ್ಷಕರು ತಮ್ಮ ಭುಜಗಳನ್ನು ತಟ್ಟಿಕೊಂಡು ಸಂತೋಷಪಟ್ಟರು. ಭಯದಿಂದ ಇಂದ್ರನು, ಗರುಡನನ್ನು ಸ್ಮರಿಸಿ, ಅರ್ಜುನನಿಗೆ ವಿಷ ತಾಗದೇ ಇರಲಿ ಎಂದು ಪ್ರಾರ್ಥಿಸಿದನು. ನಿಸ್ಸಾಳ ಮೊದಲಾದ ವಾದ್ಯಗಳ, ಕಹಳೆಯ ಭಟರ ಶಬ್ದಗಳು ಹೆದರಿಕೆಯನ್ನು ಹುಟ್ಟಿಸುವಂತಿದ್ದವು. ಕೌರವನ ಸೇನಾ ಸಮುದ್ರದಲ್ಲಿ ಗಜಬಜ ಶಬ್ದ ಹೆಚ್ಚಾಯಿತು.
ಮೂಲ ...{Loading}...
ಭುಜವ ಹೊಯ್ದರು ಸೂರ್ಯತಕ್ಷಕ
ರಜನ ಸಭೆಯಲಿ ಭಯದಿ ಸುರಪತಿ
ಭಜಿಸಿದನು ಗರುಡನನು ನಿರ್ವಿಷಮಸ್ತು ನರಗೆನುತ
ಗಜರಿದವು ನಿಸ್ಸಾಳವಾದ್ಯ
ವ್ರಜದ ಕಹಳೆಯ ಭಟರ ಬೊಬ್ಬೆಯ
ಗಜಬಜಿಕೆ ಘಾಡಿಸಿತು ಕೌರವಸೈನ್ಯಶರಧಿಯಲಿ ॥8॥
೦೦೯ ಹಣುಗಿದರು ಭೀಮಾದಿಗಳು ...{Loading}...
ಹಣುಗಿದರು ಭೀಮಾದಿಗಳು ಕ
ಟ್ಟೊಣಗಿಲಾದವು ಭಟರ ಮೋರೆಗ
ಳೆಣಿಸುತಿರ್ದರು ಜಪವನರ್ಜುನ ಕೃಷ್ಣನೆಂಬವರು
ಸೆಣಸುವನು ಗಡ ಕೌರವನೊಳಿ
ನ್ನುಣಲಿ ಧರೆಯನು ಧರ್ಮಸುತನೆಂ
ದಣಕವಾಡಿತು ನಿನ್ನ ದುಷ್ಪರಿವಾರ ಹರುಷದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ಮೊದಲಾದವರು, ಯುದ್ಧ ಮಾಡಲು ಹಿಂದೆಗೆದರು. ಸೈನಿಕರ ಮುಖಗಳು ಒಣಗಿ ಹೋದವು. ಅರ್ಜುನ - ಕೃಷ್ಣ ಎಂಬ ಪ್ರಸಿದ್ಧರೂ ಹೆದರಿಕೆಯಿಂದ ಜಪ ಮಾಡುವಂತಾಯಿತು. ನಿನ್ನ ದುಷ್ಟ ಪರಿವಾರದವರು ‘ಈ ಧರ್ಮರಾಯನು ಕೌರವನ ಜೊತೆಯಲ್ಲಿ ಸೆಣಸಾಟದ ಯುದ್ಧ ಮಾಡುತ್ತಾನೆಯೋ? ಭೂಮಿಯನ್ನು ಅವನು ಅನುಭವಿಸಿದಂತೆಯೇ’ ಎಂದು ಅಣಗಿಸಿದರು.
ಪದಾರ್ಥ (ಕ.ಗ.ಪ)
ಹಣುಗು-ಹಿಂದೆಗೆ
ಮೂಲ ...{Loading}...
ಹಣುಗಿದರು ಭೀಮಾದಿಗಳು ಕ
ಟ್ಟೊಣಗಿಲಾದವು ಭಟರ ಮೋರೆಗ
ಳೆಣಿಸುತಿರ್ದರು ಜಪವನರ್ಜುನ ಕೃಷ್ಣನೆಂಬವರು
ಸೆಣಸುವನು ಗಡ ಕೌರವನೊಳಿ
ನ್ನುಣಲಿ ಧರೆಯನು ಧರ್ಮಸುತನೆಂ
ದಣಕವಾಡಿತು ನಿನ್ನ ದುಷ್ಪರಿವಾರ ಹರುಷದಲಿ ॥9॥
೦೧೦ ಮೂಡಿಗೆಯೊಳಮ್ಬುಗಿದು ...{Loading}...
ಮೂಡಿಗೆಯೊಳಂಬುಗಿದು ತಿರುವಿಗೆ
ಹೂಡಲೀ ಹದನಾಯ್ತು ಚಾಪದೊ
ಳೋಡಿಸಿದಡೇನಹುದು ಹರಹರ ಹರ ಮಹಾಸ್ತ್ರವಲೆ
ನೋಡಿರೈ ಗುರುಸುತಕೃಪಾದಿಗ
ಳೋಡದಿರಿ ನೀವೆನುತ ಪುಳಕದ
ಬೀಡಿನಲಿ ಮೈಮುಳುಗಿ ತೂಗಾಡಿದನು ಕುರುರಾಯ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬತ್ತಳಿಕೆಯಿಂದ ಬಾಣವನ್ನು ಈಚೆಗೆ ತೆಗೆದು, ಬಿಲ್ಲಿನ ತಿರುವಿಗೆ ಹೂಡಿದುದರಿಂದಲೇ ಇಷ್ಟೊಂದು ಅನಾಹುತವಾಯಿತು. ಅದನ್ನು ಬಿಲ್ಲಿನಿಂದ ಪ್ರಯೋಗಿಸಿದರೆ ಇನ್ನೇನು ನಡೆಯುತ್ತದೆಯೋ, ಅಯ್ಯೋ ಶಿವನೇ ಇದೊಂದು ಮಹಾಸ್ತ್ರ” ಎಂದು ಮೆಚ್ಚಿಕೊಳ್ಳುತ್ತಾ ತನಗೆ ಉಂಟಾದ ರೋಮಾಂಚನದಲ್ಲಿ ಮುಳುಗಿ, ದುರ್ಯೋಧನನು “ನೋಡಿರಯ್ಯಾ, ಅಶ್ವತ್ಥಾಮ ಕೃಪ ಮೊದಲಾದ ವೀರರೇ ನೀವು ಧೈರ್ಯ ತೆಗೆದುಕೊಳ್ಳಿ, ಓಡಬೇಡಿ” ಎಂದು ಹೇಳಿದನು.
ಮೂಲ ...{Loading}...
ಮೂಡಿಗೆಯೊಳಂಬುಗಿದು ತಿರುವಿಗೆ
ಹೂಡಲೀ ಹದನಾಯ್ತು ಚಾಪದೊ
ಳೋಡಿಸಿದಡೇನಹುದು ಹರಹರ ಹರ ಮಹಾಸ್ತ್ರವಲೆ
ನೋಡಿರೈ ಗುರುಸುತಕೃಪಾದಿಗ
ಳೋಡದಿರಿ ನೀವೆನುತ ಪುಳಕದ
ಬೀಡಿನಲಿ ಮೈಮುಳುಗಿ ತೂಗಾಡಿದನು ಕುರುರಾಯ ॥10॥
೦೧೧ ಉರಿಯ ಜೀರ್ಕೊಳವಿಗಳವೊಲು ...{Loading}...
ಉರಿಯ ಜೀರ್ಕೊಳವಿಗಳವೊಲು ಪೂ
ತ್ಕರಿಸಿದವು ಫಣಿ ವದನದಲಿ ದ
ಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
ಹೊರಳಿಗಿಡಿಗಳ ಕರ್ಬೊಗೆಯ ಕಾ
ಹುರದ ಸುಯ್ಲಿನ ಝಳವ ಗರಳಾ
ಕ್ಷರದ ಜಿಗಿಯಲಿ ಮಾತು ತೋರಿತು ಬೆಸಸು ಬೆಸಸೆನುತ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಅಸ್ತ್ರದಿಂದ ಹೊರಬಂದ ಸರ್ಪಗಳು ಉರಿಯ ಜೀರ್ಕೋಳವಿಗಳಂತೆ ಹಾವಿನ ಮುಖದಿಂದ ಫೂತ್ಕಾರ ಮಾಡಿದವು. ಸಿಮಿಸಿಮಿ ಎಂದು ದಳ್ಳುರಿಯನ್ನು ಎಬ್ಬಿಸಿದವು. ಕಿಡಿಯ ತುಂತುರಿನ ಹನಿಗಳನ್ನು ಚೆದರಿದವು. ಕಿಡಿಗಳು ಹೊರಳಾಡಿ ಕರಿಯ ಹೊಗೆ, ಬಿಸಿಯಾದ ಉಸಿರು, ಬಿಸಿ ಹೊಡೆಯುತ್ತಿರುವ ವಿಷದಿಂದಲೇ ಮಾತುಗಳನ್ನಾಡುತ್ತಾ “ಅಪ್ಪಣೆ ಏನು ?“ಎಂದು ಕೇಳಿದವು.
ಪದಾರ್ಥ (ಕ.ಗ.ಪ)
ಕಾಹುರ-ಉಷ್ಣ
ಮೂಲ ...{Loading}...
ಉರಿಯ ಜೀರ್ಕೊಳವಿಗಳವೊಲು ಪೂ
ತ್ಕರಿಸಿದವು ಫಣಿ ವದನದಲಿ ದ
ಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
ಹೊರಳಿಗಿಡಿಗಳ ಕರ್ಬೊಗೆಯ ಕಾ
ಹುರದ ಸುಯ್ಲಿನ ಝಳವ ಗರಳಾ
ಕ್ಷರದ ಜಿಗಿಯಲಿ ಮಾತು ತೋರಿತು ಬೆಸಸು ಬೆಸಸೆನುತ ॥11॥
೦೧೨ ಹೂಡಿದನು ತಿರುವಿನಲಿ ...{Loading}...
ಹೂಡಿದನು ತಿರುವಿನಲಿ ಬಾಣದ
ಝಾಡಿಯುರಿನಾಲಗೆಯ ನಿರುತವ
ನೋಡಿ ಪಾರ್ಥನ ಗಳಕೆ ಸಂಧಾನವ ನಿಧಾನಿಸುತ
ನೋಡಿದನು ಶಲ್ಯನನು ಮಿಗೆ ತೂ
ಗಾಡಿದನು ಕೌರವನ ಪುಣ್ಯದ
ಬೀಡು ಬಿಡುವಡೆ ಕಾಣಲಹುದಿಂದೆಂದನಾ ಕರ್ಣ ॥12॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಬಾಣದ ಬಲವಾದ ಉರಿಯ ನಾಲಗೆಯನ್ನು ಒಂದೇ ಸಮನಾಗಿ ನೋಡುತ್ತಾ ಕರ್ಣನು ಅದನ್ನು ಬಿಲ್ಲಿನ ಹೆದೆಯಲ್ಲಿ ಹೂಡಿದನು. ಅರ್ಜುನನ ಕುತ್ತಿಗೆಗೆ ಗುರಿಯಿಟ್ಟನು. ಶಲ್ಯನನ್ನು ನೋಡುತ್ತಾ ತನಗೆ ತಾನೇ ಮೆಚ್ಚಿಕೊಳ್ಳುತ್ತಾ ‘ಕೌರವನಿಗೆ ಪುಣ್ಯಕ್ಕೆ ನೆಲೆ ಸಿಗುವುದನ್ನು ಇಂದು ಕಾಣಬಹುದು’ ಎಂದನು.
ಮೂಲ ...{Loading}...
ಹೂಡಿದನು ತಿರುವಿನಲಿ ಬಾಣದ
ಝಾಡಿಯುರಿನಾಲಗೆಯ ನಿರುತವ
ನೋಡಿ ಪಾರ್ಥನ ಗಳಕೆ ಸಂಧಾನವ ನಿಧಾನಿಸುತ
ನೋಡಿದನು ಶಲ್ಯನನು ಮಿಗೆ ತೂ
ಗಾಡಿದನು ಕೌರವನ ಪುಣ್ಯದ
ಬೀಡು ಬಿಡುವಡೆ ಕಾಣಲಹುದಿಂದೆಂದನಾ ಕರ್ಣ ॥12॥
೦೧೩ ಏನು ಸಾರಥಿ ...{Loading}...
ಏನು ಸಾರಥಿ ಸರಳು ಪಾಂಡವ
ಸೇನೆಯನು ಗೆಲಲಹುದೆ ಪಾರ್ಥನ
ಮಾನಿನಿಗೆ ವೈಧವ್ಯದೀಕ್ಷಾವಿಧಿಯ ಕೊಡಲಹುದೆ
ಆನಲಮ್ಮುವರುಂಟೆ ನಿನಗಿದು
ಸಾನುರಾಗವೆ ಹೇಳೆನಲು ರವಿ
ಸೂನುವಿನ ರೌದ್ರಾಸ್ತ್ರವನು ಹೊಗಳಿದನು ಮಾದ್ರೇಶ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾತನ್ನು ಮುಂದುವರಿಸಿ, ‘ಏನು ಸಾರಥಿ ಈ ಬಾಣ ಪಾಂಡವರ ಸೈನ್ಯವನ್ನು ಗೆಲ್ಲುತ್ತದೆಯೇ. ಪಾರ್ಥನ ಹೆಂಡತಿಗೆ ವೈಧವ್ಯದ ದೀಕ್ಷೆಯನ್ನು ಕೊಡಲು ಸಾಧ್ಯವಾಗುತ್ತದೆಯೇ. ಈ ಬಾಣವನ್ನು ಎದುರಿಸಲು ಸಾಮಥ್ರ್ಯವುಳ್ಳವರು ಇದ್ದಾರೆಯೇ. ನಿನಗೆ ನನ್ನ ಕಾರ್ಯದಿಂದ ಮೆಚ್ಚಿಗೆಯಾಗಿದೆಯೇ ಹೇಳು’ ಎಂದು ಕೇಳಿದನು ಕರ್ಣ. ಆಗ ಮಾದ್ರೇಶನಾದ ಶಲ್ಯನು ಕರ್ಣನ ರೌದ್ರಾಸ್ತ್ರವನ್ನು ಹೊಗಳಿದನು.
ಮೂಲ ...{Loading}...
ಏನು ಸಾರಥಿ ಸರಳು ಪಾಂಡವ
ಸೇನೆಯನು ಗೆಲಲಹುದೆ ಪಾರ್ಥನ
ಮಾನಿನಿಗೆ ವೈಧವ್ಯದೀಕ್ಷಾವಿಧಿಯ ಕೊಡಲಹುದೆ
ಆನಲಮ್ಮುವರುಂಟೆ ನಿನಗಿದು
ಸಾನುರಾಗವೆ ಹೇಳೆನಲು ರವಿ
ಸೂನುವಿನ ರೌದ್ರಾಸ್ತ್ರವನು ಹೊಗಳಿದನು ಮಾದ್ರೇಶ ॥13॥
೦೧೪ ಲೇಸುಮಾಡಿದೆ ಕರ್ಣ ...{Loading}...
ಲೇಸುಮಾಡಿದೆ ಕರ್ಣ ಕೌರವ
ನೀಸುದಿನ ಸಾಕಿದ ಫಲವ ನೀ
ನೈಸಲೇ ತೋರಿದವನೀ ನೃಪಸೈನ್ಯಶರಧಿಯಲಿ
ಈಸು ಕಾಳೆಗವಾದುದೀ ಕ
ಟ್ಟಾಸುರದ ಸರಳೆಲ್ಲಿ ಗುಪ್ತಾ
ವಾಸವಾದುದು ಪೂತುರೆಂದನು ಶಲ್ಯನಿನಸುತನ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕರ್ಣನೇ, ಒಳ್ಳೆಯ ಕೆಲಸ ಮಾಡಿದೆ. ಇಷ್ಟು ದಿನ ಕೌರವನು ನಿನ್ನನ್ನು ಸಾಕಿದ್ದಕ್ಕೆ ಯೋಗ್ಯವಾದ ಪ್ರತಿಫಲವನ್ನು ನೀಡುತ್ತಿದ್ದೀಯೆ. ಇಷ್ಟೊಂದು ಯುದ್ಧವಾದರೂ ಈ ರಾಜಸೇನಾ ಸಮುದ್ರದಲ್ಲಿ ಭಯಂಕರವಾದ ಬಾಣವನ್ನು ಎಲ್ಲಿ ಬಚ್ಚಿಟ್ಟಿದ್ದೆ. ಭೇಷ್’ ಎಂದು ಕರ್ಣನನ್ನು ಹೊಗಳಿದನು.
ಮೂಲ ...{Loading}...
ಲೇಸುಮಾಡಿದೆ ಕರ್ಣ ಕೌರವ
ನೀಸುದಿನ ಸಾಕಿದ ಫಲವ ನೀ
ನೈಸಲೇ ತೋರಿದವನೀ ನೃಪಸೈನ್ಯಶರಧಿಯಲಿ
ಈಸು ಕಾಳೆಗವಾದುದೀ ಕ
ಟ್ಟಾಸುರದ ಸರಳೆಲ್ಲಿ ಗುಪ್ತಾ
ವಾಸವಾದುದು ಪೂತುರೆಂದನು ಶಲ್ಯನಿನಸುತನ ॥14॥
೦೧೫ ಆಯಿತಿದು ಸರಳೊಳ್ಳಿತೈ ...{Loading}...
ಆಯಿತಿದು ಸರಳೊಳ್ಳಿತೈ ಕುರು
ರಾಯನಭ್ಯುದಯ ಪ್ರಪಂಚವಿ
ದಾಯಿತೌ ಸಂಧಾನವೊಡಬಡದೆನ್ನ ಚಿತ್ತದಲಿ
ಸಾಯಕವ ನೀ ತಿರುಗಿ ತೊಡು ನಿ
ರ್ದಾಯದಲಿ ನೆಲನಹುದಲಾ ರಾ
ಧೇಯ ಎಂದನು ಶಲ್ಯನವನೀಪಾಲ ಕೇಳ್ ಎಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಈ ಬಾಣವೇನೋ ಸರಿ. ಇದರಿಂದ ದುರ್ಯೋಧನನಿಗೆ ಅಭ್ಯುದಯವೂ ಆಗುತ್ತದೆ. ಆದರೆ ನೀನು ಇಟ್ಟಿರುವ ಗುರಿ ನನ್ನ ಮನಸ್ಸಿಗೆ ಬರಲಿಲ್ಲ. ಬಾಣವನ್ನು ಮತ್ತೆ ನೀನು ಬೇರೆ ಗುರಿ ಇಡು. ಅದರಿಂದ ಕೌರವನಿಗೆ ಸಂಪೂರ್ಣ ರಾಜ್ಯ ದೊರೆಯುತ್ತದೆ.” ಎಂದು ಶಲ್ಯ ಹೇಳಿದ, ದೊರೆಯೇ ಕೇಳು ಎಂದು ಸಂಜಯನು ಹೇಳಿದನು
ಪದಾರ್ಥ (ಕ.ಗ.ಪ)
ನಿರ್ದಾಯ-ಸಂಪೂರ್ಣ
ಮೂಲ ...{Loading}...
ಆಯಿತಿದು ಸರಳೊಳ್ಳಿತೈ ಕುರು
ರಾಯನಭ್ಯುದಯ ಪ್ರಪಂಚವಿ
ದಾಯಿತೌ ಸಂಧಾನವೊಡಬಡದೆನ್ನ ಚಿತ್ತದಲಿ
ಸಾಯಕವ ನೀ ತಿರುಗಿ ತೊಡು ನಿ
ರ್ದಾಯದಲಿ ನೆಲನಹುದಲಾ ರಾ
ಧೇಯ ಎಂದನು ಶಲ್ಯನವನೀಪಾಲ ಕೇಳೆಂದ ॥15॥
೦೧೬ ಕೊರಳಿಗೊಡ್ಡಲು ಹೊಳ್ಳುವಾರಿದ ...{Loading}...
ಕೊರಳಿಗೊಡ್ಡಲು ಹೊಳ್ಳುವಾರಿದ
ಸರಳು ಮಕುಟವ ತಾಗುವುದು ಮೇ
ಣುರಕೆ ತೊಟ್ಟರೆ ಕೊಯ್ವುದೀಗಳೆ ಕೊರಳನರ್ಜುನನ
ಮರಳಿ ತೊಡು ತೊಡು ಬೇಗ ಕೌರವ
ನರಸುತನವುಳಿವುದು ಕಣಾ ಹೇ
ವರಿಸದಿರು ಹೇಳುವುದು ಪಥ್ಯವಿದೆಂದನಾ ಶಲ್ಯ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
16.” ಬಾಣವನ್ನು ಕೊರಳಿಗೆ ಒಡ್ಡಿದರೆ, ಒಂದೊಂದು ಸಮಯದಲ್ಲಿ ಕಿರೀಟವನ್ನು ತಾಗಿ ಅಪ್ರಯೋಜಕವಾಗಬಹುದು. ಆದರೆ ಎದೆಗೆ ಗುರಿಯಿಟ್ಟರೆ, ತಪ್ಪಿದರೂ ಅರ್ಜುನನ ಕೊರಳನ್ನೇ ಕೊಯ್ಯುತ್ತದೆ. ಆದ್ದರಿಂದ ಬಾಣವನ್ನು ತಿರುಗಿಸಿ ಬೇರೆ ಬೇಗ ಗುರಿ ಇಡು. ಅದರಿಂದ ಕೌರವನ ಅರಸುತನ ಉಳಿಯುತ್ತದೆ. ಇದಕ್ಕೆ ಹಿಂಜರಿಯಬೇಡ. ನಾನು ಹೇಳುವುದು ಒಳ್ಳೆಯದಕ್ಕಾಗಿ " ಎಂದನು ಶಲ್ಯ.
ಪದಾರ್ಥ (ಕ.ಗ.ಪ)
ಹೊಳ್ಳುವಾರು-ಅಪ್ರಯೋಜಕ, ಹೇವರಿಸು-ಹಿಂಜರಿ
ಮೂಲ ...{Loading}...
ಕೊರಳಿಗೊಡ್ಡಲು ಹೊಳ್ಳುವಾರಿದ
ಸರಳು ಮಕುಟವ ತಾಗುವುದು ಮೇ
ಣುರಕೆ ತೊಟ್ಟರೆ ಕೊಯ್ವುದೀಗಳೆ ಕೊರಳನರ್ಜುನನ
ಮರಳಿ ತೊಡು ತೊಡು ಬೇಗ ಕೌರವ
ನರಸುತನವುಳಿವುದು ಕಣಾ ಹೇ
ವರಿಸದಿರು ಹೇಳುವುದು ಪಥ್ಯವಿದೆಂದನಾ ಶಲ್ಯ ॥16॥
೦೧೭ ಒನ್ದು ಶರಸನ್ಧಾನ ...{Loading}...
ಒಂದು ಶರಸಂಧಾನ ನಾಲಗೆ
ಯೊಂದು ನಮ್ಮಲಿ ಕುಟಿಲವಿದ್ಯವ
ನೆಂದು ಕಂಡೈ ಶಲ್ಯ ನಾವಡಿಯಿಡೆವಧರ್ಮದಲಿ
ಇಂದು ಹೂಡಿದ ಶರವನಿಳುಹುವು
ದಂದವೇ ನೀನರಿಯೆ ಹೆರಸಾ
ರೆಂದು ತಿರುವಿನೊಳಂಬನೊದೆದನು ಕರ್ಣ ಬೊಬ್ಬಿಡುತ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನದು ಒಂದು ಬಾರಿ ಬಾಣವನ್ನು ಗುರಿ ಇಡುವ ಪದ್ಧತಿ. ನನ್ನ ಮಾತೂ ಒಂದೇ. ಇದಲ್ಲದೆ ವಕ್ರ ಬುದ್ಧಿಯನ್ನು ಶಲ್ಯ, ನನ್ನಲ್ಲಿ ನೀನು ಯಾವತ್ತು ಕಂಡಿದ್ದೀಯ. ನಾನು ಅಧರ್ಮದ ಹೆಜ್ಜೆಯನ್ನು ಹಾಕುವುದಿಲ್ಲ. ಈ ದಿನ ಹೂಡಿರುವ ಬಾಣದ ಗುರಿಯನ್ನು ಬದಲಾಯಿಸುವುದು ಸರಿಯೇ? ನಿನಗೆ ಈ ವಿಚಾರಗಳು ತಿಳಿದಿಲ್ಲ. ಪಕ್ಕಕ್ಕೆ ಸರಿ ಎಂದು ಕರ್ಣನು ಬೊಬ್ಬೆ ಹಾಕುತ್ತಾ ಬಿಲ್ಲಿನ ಹೆದೆಯಲ್ಲಿ ಬಾಣವನ್ನು ಬಲವಾಗಿ ಹಿಡಿದು ಪ್ರಯೋಗಿಸಿದನು.
ಮೂಲ ...{Loading}...
ಒಂದು ಶರಸಂಧಾನ ನಾಲಗೆ
ಯೊಂದು ನಮ್ಮಲಿ ಕುಟಿಲವಿದ್ಯವ
ನೆಂದು ಕಂಡೈ ಶಲ್ಯ ನಾವಡಿಯಿಡೆವಧರ್ಮದಲಿ
ಇಂದು ಹೂಡಿದ ಶರವನಿಳುಹುವು
ದಂದವೇ ನೀನರಿಯೆ ಹೆರಸಾ
ರೆಂದು ತಿರುವಿನೊಳಂಬನೊದೆದನು ಕರ್ಣ ಬೊಬ್ಬಿಡುತ ॥17॥
೦೧೮ ಏನ ಹೇಳುವೆ ...{Loading}...
ಏನ ಹೇಳುವೆ ಬಳಿಕ ಭುವನ
ಗ್ಲಾನಿಯನು ತೆಗೆದೋಡಿದರು ವೈ
ಮಾನಿಕರು ವೆಂಠಣಿಸಿತುರಿಯಪ್ಪಳಿಸಿತಂಬರವ
ಕಾನಿಡುವ ಕಬ್ಬೊಗೆಯ ಚೂರಿಸು
ವಾನನದ ಕಟವಾಯ ಲೋಳೆಯ
ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ, ಆಗ ಉಂಟಾದ ಲೋಕದ ಚಿಂತೆಯನ್ನು ಏನೆಂದು ಹೇಳಲಿ? ವೈಮಾನಿಕ ದೇವತೆಗಳು ಹೆದರಿ ಓಡಿ ಹೋದರು. ಬಾಣದಿಂದ ಹೊರಟ ಉರಿ ಆಕಾಶವನ್ನು ಅಪ್ಪಳಿಸಿತು. ದಟ್ಟವಾಗುತ್ತಿದ್ದ ಕರಿಯ ಹೊಗೆ, ಹರಿತವಾದ ಮುಖ, ಕಟವಾಯಿಯ ಜೊಲ್ಲು, ಜೇನಿನ ಹುಟ್ಟಿನಿಂದ ಜಿನುಗುವಂತೆ ಕಾಣುತ್ತಿದ್ದ ವಿಷ ಇವುಗಳಿಂದ ಸರ್ಪಾಸ್ತ್ರ ಮುಂದಕ್ಕೆ ನುಗ್ಗಿತು.
ಪದಾರ್ಥ (ಕ.ಗ.ಪ)
ಕಾನಿಡು-ದಟ್ಟವಾಗು, ಚೂರಿಸು-ಹರಿತವಾಗು
ಮೂಲ ...{Loading}...
ಏನ ಹೇಳುವೆ ಬಳಿಕ ಭುವನ
ಗ್ಲಾನಿಯನು ತೆಗೆದೋಡಿದರು ವೈ
ಮಾನಿಕರು ವೆಂಠಣಿಸಿತುರಿಯಪ್ಪಳಿಸಿತಂಬರವ
ಕಾನಿಡುವ ಕಬ್ಬೊಗೆಯ ಚೂರಿಸು
ವಾನನದ ಕಟವಾಯ ಲೋಳೆಯ
ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ ॥18॥
೦೧೯ ಕಾದಲೆಳಸಿದ ಪಾಣ್ಡವರ ...{Loading}...
ಕಾದಲೆಳಸಿದ ಪಾಂಡವರ ಸಂ
ವಾದ ತೀರಿತು ಕೌರವೇಂದ್ರನು
ಸಾಧಿಸಿದ ಹಗೆ ಸಫಲವಾದುದು ಸಮರಭೂಮಿಯಲಿ
ಹೋದನರ್ಜುನನೀ ಮಹಾಸ್ತ್ರದ
ಬಾಧೆಗಿದಿರಿಲ್ಲೆನುತ ಘನಚಿಂ
ತೋದಧಿಯಲುರೆ ಮುಳುಗಿ ಮರುಗಿತು ಮೇಲೆ ಸುರಕಟಕ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯುದ್ಧ ಮಾಡಲು ಬಯಸಿದ ಪಾಂಡವರ ಯೋಚನೆಗಳು ಇಲ್ಲಿಗೆ ಮುಗಿಯಿತು. ಈ ಯುದ್ಧದಲ್ಲಿ ದುರ್ಯೋಧನನು ಸಾಧಿಸುತ್ತಿದ್ದ ಹಗೆತನ ಸಫಲವಾಯಿತು. ಅರ್ಜುನನ ಕಥೆ ಮುಗಿಯಿತು. ಈ ಮಹಾಸ್ತ್ರ ಕೊಡುವ ಕಾಟಕ್ಕೆ ಎದುರೇ ಇಲ್ಲ “ಎನ್ನುತ್ತಾ ಆಕಾಶದಲ್ಲಿ ನಿಂತು ಕಾಳಗವನ್ನು ನೋಡುತ್ತಿದ್ದ ದೇವತೆಗಳು ಚಿಂತೆಯ ಸಮುದ್ರದಲ್ಲಿ ಮುಳುಗಿದರು.
ಮೂಲ ...{Loading}...
ಕಾದಲೆಳಸಿದ ಪಾಂಡವರ ಸಂ
ವಾದ ತೀರಿತು ಕೌರವೇಂದ್ರನು
ಸಾಧಿಸಿದ ಹಗೆ ಸಫಲವಾದುದು ಸಮರಭೂಮಿಯಲಿ
ಹೋದನರ್ಜುನನೀ ಮಹಾಸ್ತ್ರದ
ಬಾಧೆಗಿದಿರಿಲ್ಲೆನುತ ಘನಚಿಂ
ತೋದಧಿಯಲುರೆ ಮುಳುಗಿ ಮರುಗಿತು ಮೇಲೆ ಸುರಕಟಕ ॥19॥
೦೨೦ ಹಾ ವೃಕೋದರ ...{Loading}...
ಹಾ ವೃಕೋದರ ನಕುಲ ಹಾ ಸಹ
ದೇವ ಹಾ ಧರ್ಮಜ ಧನಂಜಯ
ಹಾವಿನಗ್ನಿಗೆ ಹವಿಗಳಾದಿರೆ ಹಾ ಮಹಾದೇವ
ಸಾವಡೆಯು ಶಸ್ತ್ರಪ್ರಹಾರದ
ಸಾವು ಕ್ಷತ್ರಿಯ ಕುಲಕೆ ಭಂಗವೆ
ಹಾ ವಿಧಿಯೆ ಎಂದೊದರಿ ಮರುಗಿತು ಪಾಂಡುಸುತಸೇನೆ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೈನ್ಯವೆಲ್ಲಾ ‘ಅಯ್ಯೋ ಭೀಮ ನಕುಲ ಸಹದೇವ ಧರ್ಮರಾಯ ಅರ್ಜುನರೇ, ಸರ್ಪಾಸ್ತ್ರದ ಬೆಂಕಿಗೆ ನೀವು ಹವಿಸ್ಸಾಗಿ ಬಲಿಯಾದಿರೇ. ಅಯ್ಯೋ ಶಿವನೇ, ಸತ್ತರೂ ಶಸ್ತ್ರದ ಪೆಟ್ಟಿನಿಂದ ಪಡೆಯುವ ಸಾವು, ಕ್ಷತ್ರಿಯ ಕುಲದವರಿಗೆ ಭೂಷಣ. ಆದರೆ ಹೀಗೆ ಬಲಿಯಾಗುವುದು ವಿಧಿಯ ಲಿಖಿತ’ ಎಂದು ಮರುಗಿತು.
ಮೂಲ ...{Loading}...
ಹಾ ವೃಕೋದರ ನಕುಲ ಹಾ ಸಹ
ದೇವ ಹಾ ಧರ್ಮಜ ಧನಂಜಯ
ಹಾವಿನಗ್ನಿಗೆ ಹವಿಗಳಾದಿರೆ ಹಾ ಮಹಾದೇವ
ಸಾವಡೆಯು ಶಸ್ತ್ರಪ್ರಹಾರದ
ಸಾವು ಕ್ಷತ್ರಿಯ ಕುಲಕೆ ಭಂಗವೆ
ಹಾ ವಿಧಿಯೆ ಎಂದೊದರಿ ಮರುಗಿತು ಪಾಂಡುಸುತಸೇನೆ ॥20॥
೦೨೧ ತುರಗತತಿ ತಲೆಗುತ್ತಿದವು ...{Loading}...
ತುರಗತತಿ ತಲೆಗುತ್ತಿದವು ಮದ
ಕರಿಗಳೊದರಿದವಸವಳಿದು ರಥ
ತುರಗವೆಳೆದವು ರಥವನಾಗಳೆ ವಿಷದ ಝಳಹೊಯ್ದು
ಸುರಿವ ಗರಳದ ಗಾಳಿ ಸೋಂಕಿದ
ನರಗೆ ನಂಜೇರಿತು ಭಯಂಕರ
ತರದ ಭಾರಿಯ ವಿಷಕೆ ಕೊಳ್ಗುದಿಗೊಂಡುದರಿಸೇನೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ಪಾಸ್ತ್ರದ ವಿಷದ ಬಿಸಿ ಹೊಡೆದಾಗ ಕುದುರೆಗಳಿಗೆ ತಲೆ ತಗ್ಗಿಸುವಂತಾಯಿತು. ಮದದಾನೆಗಳು ಶಕ್ತಿಹೀನವಾಗಿ ಕೂಗಿಕೊಂಡವು. ರಥದ ಕುದುರೆಗಳು ರಥವನ್ನು ಎಳೆದಾಡಿದವು. ಸುರಿಯುತ್ತಿದ್ದ ವಿಷದ ಗಾಳಿ ಸೋಂಕಿದ ಅರ್ಜುನನಿಗೆ ವಿಷ ಏರಿತು. ಭಯಂಕರವಾದ ಅತಿಶಯವಾದ ವಿಷಕ್ಕೆ ಶತ್ರು ಸೈನ್ಯವೆಲ್ಲಾ ಕೊತಕೊತ ಎಂದು ಕುದಿದು ಸಂಕಟಪಟ್ಟಿತು.
ಮೂಲ ...{Loading}...
ತುರಗತತಿ ತಲೆಗುತ್ತಿದವು ಮದ
ಕರಿಗಳೊದರಿದವಸವಳಿದು ರಥ
ತುರಗವೆಳೆದವು ರಥವನಾಗಳೆ ವಿಷದ ಝಳಹೊಯ್ದು
ಸುರಿವ ಗರಳದ ಗಾಳಿ ಸೋಂಕಿದ
ನರಗೆ ನಂಜೇರಿತು ಭಯಂಕರ
ತರದ ಭಾರಿಯ ವಿಷಕೆ ಕೊಳ್ಗುದಿಗೊಂಡುದರಿಸೇನೆ ॥21॥
೦೨೨ ಗರುಡಪಞ್ಚಾಕ್ಷರಿಯ ಮನ್ತ್ರೋ ...{Loading}...
ಗರುಡಪಂಚಾಕ್ಷರಿಯ ಮಂತ್ರೋ
ಚ್ಚರಣೆಯಲಿ ಭೂನಾಗಸತ್ವದ
ಬೆರಳ ಮುದ್ರಿಕೆಗಳಲಿ ರಕ್ಷಾಯಂತ್ರಮಂತ್ರದಲಿ
ಮರಕತದ ಘುಟಿಕೆಯಲಿ ವಿಷಸಂ
ಹರಣ ವಿವಿಧೋಪಾಯದಲಿ ನೃಪ
ವರರು ನಿಂದುದು ಭೀಮಸೇನಾದಿಗಳು ದುಗುಡದಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನ ಮೊದಲಾದವರು, ಗರುಡ ಪಂಚಾಕ್ಷರಿ ಮಂತ್ರವನ್ನು ಉಚ್ಚರಿಸುತ್ತಾ, ನಾಗ ಶಕ್ತಿಯ ಪರಿಣಾಮವನ್ನು ದೂರ ಮಾಡುವ ಉಂಗುರಗಳನ್ನು ಧರಿಸಿದರು, ಮಂತ್ರ ಪೂರಿತವಾದ ರಕ್ಷಾಯಂತ್ರಗಳನ್ನು ಕಟ್ಟಿಕೊಂಡರು, ಮರಕತದ ಗುಳಿಗೆಗಳನ್ನು ತೆಗೆದುಕೊಂಡು ವಿಷ ಸಂಹಾರ ಮಾಡುವ ವಿವಿಧ ಉಪಾಯಗಳನ್ನು ಕೈಗೊಂಡು ದುಃಖಿತರಾಗಿ ನಿಂತರು.
ಮೂಲ ...{Loading}...
ಗರುಡಪಂಚಾಕ್ಷರಿಯ ಮಂತ್ರೋ
ಚ್ಚರಣೆಯಲಿ ಭೂನಾಗಸತ್ವದ
ಬೆರಳ ಮುದ್ರಿಕೆಗಳಲಿ ರಕ್ಷಾಯಂತ್ರಮಂತ್ರದಲಿ
ಮರಕತದ ಘುಟಿಕೆಯಲಿ ವಿಷಸಂ
ಹರಣ ವಿವಿಧೋಪಾಯದಲಿ ನೃಪ
ವರರು ನಿಂದುದು ಭೀಮಸೇನಾದಿಗಳು ದುಗುಡದಲಿ ॥22॥
೦೨೩ ಹಿನ್ದೆ ಭಗದತ್ತಾಯುದಧಿ ...{Loading}...
ಹಿಂದೆ ಭಗದತ್ತಾಯುದಧಿ ನೆರೆ
ಬೆಂದು ಬದುಕಿತು ಬಳಿಕಲೀ ಗುರು
ನಂದನನ ನಾರಾಯಣಾಸ್ತ್ರದಿನಾದುದಪಘಾತ
ಅಂದುಪಾಯದಲುಳಿದೆವೀ ಗೋ
ವಿಂದನಿಂದಪಮೃತ್ಯುವಿದನು ಮು
ಕುಂದ ತಾನೇ ಬಲ್ಲನೆನುತಿರ್ದುದು ಭಟಸ್ತೋಮ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡವ ಸೈನ್ಯ ಈ ಹಿಂದೆ ಭಗದತ್ತನ ಆಯುಧದಿಂದ ಸುಟ್ಟು ಬದುಕಿತ್ತು. ಆನಂತರ ಅಶ್ವತ್ಥಾಮನ ನಾರಾಯಣಾಸ್ತ್ರದಿಂದ ಅದಕ್ಕೆ ಅಪಘಾತ ಉಂಟಾಗಿತ್ತು. ಈ ಕೃಷ್ಣನ ಕಾರಣದಿಂದ ಆಗ ಅಪಾಯದಿಂದ ಪಾರಾಗಿದ್ದೆವು. ಈ ಅಪಮೃತ್ಯುವನ್ನು ತಪ್ಪಿಸಲು ಆ ಮುಕುಂದನೇ ಬಲ್ಲ” ಎಂದು ಪಾಂಡವರ ಸೈನಿಕರು ಹೇಳಿಕೊಳ್ಳುತ್ತಿದ್ದರು.
ಮೂಲ ...{Loading}...
ಹಿಂದೆ ಭಗದತ್ತಾಯುದಧಿ ನೆರೆ
ಬೆಂದು ಬದುಕಿತು ಬಳಿಕಲೀ ಗುರು
ನಂದನನ ನಾರಾಯಣಾಸ್ತ್ರದಿನಾದುದಪಘಾತ
ಅಂದುಪಾಯದಲುಳಿದೆವೀ ಗೋ
ವಿಂದನಿಂದಪಮೃತ್ಯುವಿದನು ಮು
ಕುಂದ ತಾನೇ ಬಲ್ಲನೆನುತಿರ್ದುದು ಭಟಸ್ತೋಮ ॥23॥
೦೨೪ ಜನಪ ಕೇಳೈ ...{Loading}...
ಜನಪ ಕೇಳೈ ಬಳಿಕ ಭೀಮಾ
ರ್ಜುನ ನಕುಲ ಸಹದೇವ ಸಾತ್ಯಕಿ
ತನತನಗೆ ದಿವ್ಯಾಸ್ತ್ರನಿಕರದಲೆಚ್ಚರಹಿಶರವ
ಅನಿತು ಶರವನು ನುಂಗಿ ಮಗುಳೆ
ಚ್ಚನಿತನೊಳುಕೊಳುತಾಜ್ಯಧಾರೆಗೆ
ನನೆದ ಹುತವಹನಂತೆ ಹೆಚ್ಚಿತು ತೀವ್ರ ಫಣಿಬಾಣ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಕೇಳು, ಆನಂತರ ಭೀಮ ಅರ್ಜುನ ನಕುಲ ಸಹದೇವ ಸಾತ್ಯಕಿ ಮೊದಲಾದವರು ತಮ್ಮ ತಮ್ಮ ದಿವ್ಯಾಸ್ತ್ರಗಳಿಂದ ಸರ್ಪಾಸ್ತ್ರವನ್ನು ಹೊಡೆದರು. ಅದು ಅಷ್ಟೂ ಅಸ್ತ್ರಗಳನ್ನು ನುಂಗಿಹಾಕಿತು. ಮತ್ತೆ ಪ್ರಯೋಗಿಸಿದ ಬಾಣಗಳನ್ನು ನುಂಗುತ್ತಾ , ತುಪ್ಪದ ಸುರಿಯುವಿಕೆಯಿಂದ ಹೆಚ್ಚಾಗುವ ಬೆಂಕಿಯಂತೆ ಆ ಸರ್ಪಾಸ್ತ್ರ ಮತ್ತಷ್ಟು ಭಯಂಕರವಾಯಿತು.
ಮೂಲ ...{Loading}...
ಜನಪ ಕೇಳೈ ಬಳಿಕ ಭೀಮಾ
ರ್ಜುನ ನಕುಲ ಸಹದೇವ ಸಾತ್ಯಕಿ
ತನತನಗೆ ದಿವ್ಯಾಸ್ತ್ರನಿಕರದಲೆಚ್ಚರಹಿಶರವ
ಅನಿತು ಶರವನು ನುಂಗಿ ಮಗುಳೆ
ಚ್ಚನಿತನೊಳುಕೊಳುತಾಜ್ಯಧಾರೆಗೆ
ನನೆದ ಹುತವಹನಂತೆ ಹೆಚ್ಚಿತು ತೀವ್ರ ಫಣಿಬಾಣ ॥24॥
೦೨೫ ಆರು ನಿಲಿಸುವರಕಟ ...{Loading}...
ಆರು ನಿಲಿಸುವರಕಟ ದುಷ್ಪ್ರತಿ
ಕಾರ ಶರವಿದು ಭೀಮಪಾರ್ಥರ
ಕೂರಲಗುಗಳು ಶಿವಶಿವಾ ಕೆಚ್ಚಾಯ್ತು ಕದಳಿಗಳ
ಕೌರವನ ಜಯವಧುವಿನೊಡೆನೆಯ
ಸೇರುಗೆಯ ಕೂಟಣೆಯೊ ಶರವಿ
ನ್ನಾರಿಗೊರಲುವೆವಕಟೆನುತ ತಲ್ಲಣಿಸಿತರಿಸೇನೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ದುಷ್ಟ ಅಸ್ತ್ರವನ್ನು ಯಾರು ನಿಲ್ಲಿಸುತ್ತಾರೆ. ಭೀಮ ಅರ್ಜುನರ ಹರಿತವಾದ ಅಸ್ತ್ರಗಳೆಲ್ಲಾ, ಅಯ್ಯೋ ಶಿವನೇ ಬಾಳೆಗಿಡದಂತೆ ಮುರಿದು ಹೋದವಲ್ಲಾ. ಇದು ದುರ್ಯೋಧನನನ್ನು ಜಯಲಕ್ಷ್ಮಿ ಒಲಿಯುವಂತೆ ಮಾಡುವ ಕುಂಟಣಿಯಂತಹ ಬಾಣ. ಇನ್ನು ಯಾರ ಬಳಿ ನಮ್ಮ ಸಂಕಟವನ್ನು ಹೇಳಿಕೊಳ್ಳುವುದು, ಅಯ್ಯೋ’ ಎನ್ನುತ್ತಾ ಶತ್ರುಸೈನ್ಯ ನಡುಗಿತು.
ಮೂಲ ...{Loading}...
ಆರು ನಿಲಿಸುವರಕಟ ದುಷ್ಪ್ರತಿ
ಕಾರ ಶರವಿದು ಭೀಮಪಾರ್ಥರ
ಕೂರಲಗುಗಳು ಶಿವಶಿವಾ ಕೆಚ್ಚಾಯ್ತು ಕದಳಿಗಳ
ಕೌರವನ ಜಯವಧುವಿನೊಡೆನೆಯ
ಸೇರುಗೆಯ ಕೂಟಣೆಯೊ ಶರವಿ
ನ್ನಾರಿಗೊರಲುವೆವಕಟೆನುತ ತಲ್ಲಣಿಸಿತರಿಸೇನೆ ॥25॥
೦೨೬ ನಾಲಗೆಯ ಚೂರಣದ ...{Loading}...
ನಾಲಗೆಯ ಚೂರಣದ ದಳ್ಳುರಿ
ಜಾಳಿಗೆಯ ಚಮ್ಮಟದ ಗರಳದ
ಲೋಳೆಗಳ ಚಾರಣದ ಕಿಡಿಗಳ ಖಡುಗ ಪೂರಯದ
ಧೂಳಿಯುಗೆಯಬ್ಬರದ ಬಲುಗೈ
ಯಾಳವೊಲು ಭುಗಿಲೆಂಬ ರವದಲಿ
ಮೇಲುವಾಯ್ದುದು ಕೊರಳ ಸರಿಸಕೆ ಕಲಿಧನಂಜಯನಾ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಲಗೆಯೆಂಬ ಕಿರುಗತ್ತಿ, ದಟ್ಟವಾದ ಉರಿಯ ಬಲೆ, ಚಾವಟಿಯಂತಹ ವಿಷ, ಸುರಿಯುತ್ತಿರುವ ಜೊಲ್ಲು, ಕತ್ತಿಯ ಕಿಡಿಗಳ ಪ್ರವಾಹ, ಹೆಚ್ಚುತ್ತಿರುವ ಧೂಳಿನಿಂದ ಕೂಡಿ ಮುನ್ನುಗ್ಗುವ ಮಹಾವೀರನಂತೆ. ಭುಗಿಲ್ ಎಂದು ಶಬ್ದ ಮಾಡುತ್ತಾ, ಆ ಸರ್ಪಾಸ್ತ್ರ ಮುನ್ನುಗ್ಗುತ್ತಾ ಅರ್ಜುನನ ಕೊರಳಿನ ಸಮೀಪಕ್ಕೆ ಬಂದಿತು.
ಪದಾರ್ಥ (ಕ.ಗ.ಪ)
ಚೂರಣ-ಕಿರುಗತ್ತಿ, ಜಾಳಿಗೆ-ಬಲೆ,
ಮೂಲ ...{Loading}...
ನಾಲಗೆಯ ಚೂರಣದ ದಳ್ಳುರಿ
ಜಾಳಿಗೆಯ ಚಮ್ಮಟದ ಗರಳದ
ಲೋಳೆಗಳ ಚಾರಣದ ಕಿಡಿಗಳ ಖಡುಗ ಪೂರಯದ
ಧೂಳಿಯುಗೆಯಬ್ಬರದ ಬಲುಗೈ
ಯಾಳವೊಲು ಭುಗಿಲೆಂಬ ರವದಲಿ
ಮೇಲುವಾಯ್ದುದು ಕೊರಳ ಸರಿಸಕೆ ಕಲಿಧನಂಜಯನಾ ॥26॥
೦೨೭ ಅರಸ ಕೇಳೇಸೇಸು ...{Loading}...
ಅರಸ ಕೇಳೇಸೇಸು ಬಾರಿಯ
ಕೊರಳಡಾಯುಧ ಕಳಚದೇಸು
ಬ್ಬರದ ಮಾರಿಯ ಬಿಂಕ ಮುರಿಯದು ಪಾಂಡುತನಯರಿಗೆ
ಹರಿಯ ಹರಹಿನ ವಜ್ರಪಂಜರ
ದರಗಿಣಿಯಲೇ ಪಾರ್ಥನಹಿ ಮಂ
ಜರನ ಮರುಕವ ಕೊಂಬುದೇ ಧೃತರಾಷ್ಟ್ರ ಕೇಳ್ ಎಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಕೇಳು, ಎಷ್ಟೊಂದು ಬಾರಿ ಪಾಂಡವರ ಕುತ್ತಿಗೆಯನ್ನು ಕತ್ತರಿಸಲು ಬಂದಿದ್ದ ಅಡಾಯುಧದ ನಿವಾರಣೆಯಾಯಿತು. ಎಷ್ಟೊಂದು ವಿಪರೀತ ಕಷ್ಟಗಳೆಂಬ ಮಾರಿಯ ಅಹಂಕಾರ ದೂರವಾಯಿತು. ಕೃಷ್ಣನ ವಿಸ್ತಾರವಾದ ವಜ್ರ ಪಂಜರದಲ್ಲಿ ರಕ್ಷಿತನಾದ ಅರಗಿಣಿಯಾಗಿದ್ದಾನೆ ಅರ್ಜುನ. ಅಂಥವನ್ನು ಸರ್ಪಾಸ್ತ್ರವೆಂಬ ಬೆಕ್ಕು ಹೆದರಿಸುವುದಕ್ಕೆ ಸಾಧ್ಯವೇ?
ಪದಾರ್ಥ (ಕ.ಗ.ಪ)
ಮಂಜರ-ಬೆಕ್ಕು
ಮೂಲ ...{Loading}...
ಅರಸ ಕೇಳೇಸೇಸು ಬಾರಿಯ
ಕೊರಳಡಾಯುಧ ಕಳಚದೇಸು
ಬ್ಬರದ ಮಾರಿಯ ಬಿಂಕ ಮುರಿಯದು ಪಾಂಡುತನಯರಿಗೆ
ಹರಿಯ ಹರಹಿನ ವಜ್ರಪಂಜರ
ದರಗಿಣಿಯಲೇ ಪಾರ್ಥನಹಿ ಮಂ
ಜರನ ಮರುಕವ ಕೊಂಬುದೇ ಧೃತರಾಷ್ಟ್ರ ಕೇಳೆಂದ ॥27॥
೦೨೮ ನಡುಗುತಿರ್ದುದು ಸುರಕಟಕ ...{Loading}...
ನಡುಗುತಿರ್ದುದು ಸುರಕಟಕ ಬೊ
ಬ್ಬಿಡುತರ್ಲಿದುದು ನಮ್ಮ ಬಲ ಮೊರೆ
ಯಿಡುತಲಿರ್ದುದು ಪಾರ್ಥನಳವಿಗೆ ಪಾಂಡುಸುತಸೇನೆ
ತಡೆಯದೈದಂಗುಲಕೆ ರಥವನು
ನೆಡಿಸಿದನು ಹರಿ ಧರೆಗೆ ಪಾರ್ಥನ
ಮುಡಿಯ ಸರಿಸಕೆ ಬಾಣ ಬಂದುದು ಕೊಲುವ ತವಕದಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳ ಸಮೂಹ ಭಯದಿಂದ ನಡುಗುತ್ತಿತ್ತು, ನಮ್ಮ ಸೈನ್ಯ ಬೊಬ್ಬೆ ಹಾಕುತ್ತಿತ್ತು. ಅರ್ಜುನನಿಗೆ ಉಂಟಾದ ಸಂತಾಪಕ್ಕೆ, ಪಾಂಡವರ ಸೈನ್ಯ ಚೀರುತ್ತಿತ್ತು. ಕೃಷ್ಣನು ನಿಧಾನ ಮಾಡದೆ ಅರ್ಜುನನ ರಥವನ್ನು ಐದು ಅಂಗುಲ ಕೆಳಕ್ಕೆ ಇಳಿಸಿದನು. ಆಗ ಸರ್ಪಾಸ್ತ್ರವು ಅರ್ಜುನನನ್ನು ಕೊಲ್ಲುವ ಆತುರದಲ್ಲಿ ಅವನ ತಲೆಗೂದಲಿನ ಸಮೀಪಕ್ಕೆ ಬಂದಿತು.
ಮೂಲ ...{Loading}...
ನಡುಗುತಿರ್ದುದು ಸುರಕಟಕ ಬೊ
ಬ್ಬಿಡುತರ್ಲಿದುದು ನಮ್ಮ ಬಲ ಮೊರೆ
ಯಿಡುತಲಿರ್ದುದು ಪಾರ್ಥನಳವಿಗೆ ಪಾಂಡುಸುತಸೇನೆ
ತಡೆಯದೈದಂಗುಲಕೆ ರಥವನು
ನೆಡಿಸಿದನು ಹರಿ ಧರೆಗೆ ಪಾರ್ಥನ
ಮುಡಿಯ ಸರಿಸಕೆ ಬಾಣ ಬಂದುದು ಕೊಲುವ ತವಕದಲಿ ॥28॥
೦೨೯ ಅಣೆದುದಹಿ ಮಕುಟವನು ...{Loading}...
ಅಣೆದುದಹಿ ಮಕುಟವನು ತಾರಾ
ಗಣದ ಮಧ್ಯದ ಚಂದ್ರಮನ ಹೊ
ಯ್ದಣಲೊಳಡಸಿದ ರಾಹುವಿನ ರಹಿಯಾಯ್ತು ನಿಮಿಷದಲಿ
ಕುಣಿಕೆ ಮುರಿದುದು ಮೌಕ್ತಿಕದ ಕೀ
ಲಣದ ವಜ್ರದ ಮಾಣಿಕದ ವರ
ಮಣಿಗಳೊಕ್ಕವು ರಕುತ ಮಿದುಳೊಡಸೂಸಿದಂದದಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ಪಾಸ್ತ್ರ ಅರ್ಜುನನ ಕಿರೀಟವನ್ನು ಹೊಡೆಯಿತು. ಒಂದು ನಿಮಿಷದಲ್ಲಿ ನಕ್ಷತ್ರಗಳ ಸಮೂಹದ ಮಧ್ಯದಲ್ಲಿರುವ ಚಂದ್ರನನ್ನು ಅಪ್ಪಳಿಸಿ, ನುಂಗುವ ರಾಹುವಿನ ರೀತಿಯಾಯಿತು. ಕಿರೀಟಕ್ಕೆ ಹಾಕಿದ್ದ ಮುತ್ತಿನ ಜೋಡಣೆಗಳ ಕುಣಿಕೆಗಳು ಮುರಿದುಹೋದವು. ವಜ್ರಮಾಣಿಕ್ಯ ಮೊದಲಾದ ಶ್ರೇಷ್ಠ ಮಣಿಗಳು, ರಕ್ತ ಮಿದುಳುಗಳು ತಲೆಯಿಂದ ಜೊತೆಜೊತೆಯಾಗಿ ಹೊರಬಂದಂತೆ ಬೇರೆಯಾದವು.
ಮೂಲ ...{Loading}...
ಅಣೆದುದಹಿ ಮಕುಟವನು ತಾರಾ
ಗಣದ ಮಧ್ಯದ ಚಂದ್ರಮನ ಹೊ
ಯ್ದಣಲೊಳಡಸಿದ ರಾಹುವಿನ ರಹಿಯಾಯ್ತು ನಿಮಿಷದಲಿ
ಕುಣಿಕೆ ಮುರಿದುದು ಮೌಕ್ತಿಕದ ಕೀ
ಲಣದ ವಜ್ರದ ಮಾಣಿಕದ ವರ
ಮಣಿಗಳೊಕ್ಕವು ರಕುತ ಮಿದುಳೊಡಸೂಸಿದಂದದಲಿ ॥29॥
೦೩೦ ಬಿದ್ದುದೇ ಫಲುಗುಣನ ...{Loading}...
ಬಿದ್ದುದೇ ಫಲುಗುಣನ ತಲೆಯಡಿ
ಗದ್ದುದೇ ನಮ್ಮಾಟ ಜಯವಧು
ಕದ್ದಳೇ ರಣದೊಸಗೆಗೇಳ್ವಳೆ ದ್ರೌಪದಾದೇವಿ
ಇದ್ದುದೇ ಧರ್ಮಜನ ಸಿರಿ ತಳ
ಕದ್ದುದೇ ನಮ್ಮೊಡಲನಸು ಬಿಡ
ದಿದ್ದುದೇ ಹಾ ಎನುತ ಭೀಮಾದಿಗಳು ಹೊರಳಿದರು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಜವಾಗಿಯೂ ಅರ್ಜುನನ ತಲೆ ಹೋಯಿತು ಎಂದು ಭಾವಿಸಿದ ಭೀಮ ಮೊದಲಾದವರು” ಅರ್ಜುನನ ತಲೆ ನೆಲಕ್ಕೆ ಬಿದ್ದು ಹೋಯಿತೇ. ನಮ್ಮ ಆಟಗಳೆಲ್ಲಾ ಮುಳುಗಿ ಹೋಯಿತೇ, ಜಯವಧು ನಮ್ಮ ಯುದ್ಧದಲ್ಲಿ ಒಳಿತನ್ನು ಮಾಡದೆ ಓಡಿ ಹೋದಳೆ, ದ್ರೌಪದಿಯು ಇದನ್ನು ಹೇಗೆ ಕೇಳಿಸಿಕೊಳ್ಳುತ್ತಾಳೆ? ಧರ್ಮರಾಯನ ಸಂಪತ್ತೇ ಮುಳುಗಿ ಹೋಯಿತಲ್ಲಾ. ಇದನ್ನು ನೋಡಿದ ಮೇಲೂ ನಮ್ಮ ಪ್ರಾಣ ದೇಹವನ್ನು ಇನ್ನೂ ಬಿಡದೇ ಇದೆಯಲ್ಲಾ “ಎಂದು ದುಃಖಿಸಿದರು.
ಮೂಲ ...{Loading}...
ಬಿದ್ದುದೇ ಫಲುಗುಣನ ತಲೆಯಡಿ
ಗದ್ದುದೇ ನಮ್ಮಾಟ ಜಯವಧು
ಕದ್ದಳೇ ರಣದೊಸಗೆಗೇಳ್ವಳೆ ದ್ರೌಪದಾದೇವಿ
ಇದ್ದುದೇ ಧರ್ಮಜನ ಸಿರಿ ತಳ
ಕದ್ದುದೇ ನಮ್ಮೊಡಲನಸು ಬಿಡ
ದಿದ್ದುದೇ ಹಾ ಎನುತ ಭೀಮಾದಿಗಳು ಹೊರಳಿದರು ॥30॥
೦೩೧ ವಿಷವ ತೆಗೆದಳು ...{Loading}...
ವಿಷವ ತೆಗೆದಳು ದ್ರುಪದಸುತೆ ಕೈ
ಮುಸುಕಿನಲಿ ಚೀಲಾಯವುಗಿದನು
ವಸುಮತೀಶ್ವರನಾ ಮುಹೂರ್ತಕೆ ದೂತರೈತಂದು
ಒಸಗೆ ಜೀಯರ್ಜುನನ ಮಕುಟದ
ಬೆಸುಗೆ ಮುರಿದುದು ಹರಿ ವರೂಥವ
ಕುಸಿಯಲೊತ್ತಿದನಿಂದು ತಪ್ಪಿತು ತೀವ್ರ ಫಣಿಬಾಣ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುದ್ದಿಯನ್ನು ಕೇಳಿದ ದ್ರೌಪದಿಯು ವಿಷವನ್ನು ಕುಡಿಯಲು ಸಿದ್ಧಳಾದಳು. ಧರ್ಮರಾಯನು ಮೆಲ್ಲಗೆ ಚಿಕ್ಕ ಕತ್ತಿಯನ್ನು ಒರೆಯಿಂದ ತೆಗೆದನು. ಆ ಸಮಯಕ್ಕೆ ದೂತರು ಬಂದು, ‘ಸ್ವಾಮಿ, ಶುಭ ಸಮಾಚಾರ, ಕೃಷ್ಣನು ರಥವನ್ನು ಕೆಳಕ್ಕೆ ಕುಸಿಯುವಂತೆ ಒತ್ತಿದ. ಅರ್ಜುನನು ಹಾಕಿಕೊಂಡಿದ್ದ ಕಿರೀಟ ಬಿದ್ದು ಹೋಯಿತು ಅಷ್ಟೆ. ಈ ದಿನ ಹರಿತವಾದ ಆ ಸರ್ಪಾಸ್ತ್ರ ಗುರಿ ತಪ್ಪಿತು’ ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ಚೀಲಾಯ-ಸಣ್ಣಕತ್ತಿ
ಮೂಲ ...{Loading}...
ವಿಷವ ತೆಗೆದಳು ದ್ರುಪದಸುತೆ ಕೈ
ಮುಸುಕಿನಲಿ ಚೀಲಾಯವುಗಿದನು
ವಸುಮತೀಶ್ವರನಾ ಮುಹೂರ್ತಕೆ ದೂತರೈತಂದು
ಒಸಗೆ ಜೀಯರ್ಜುನನ ಮಕುಟದ
ಬೆಸುಗೆ ಮುರಿದುದು ಹರಿ ವರೂಥವ
ಕುಸಿಯಲೊತ್ತಿದನಿಂದು ತಪ್ಪಿತು ತೀವ್ರ ಫಣಿಬಾಣ ॥31॥
೦೩೨ ಎನಲು ಸನ್ತೈಸಿತ್ತು ...{Loading}...
ಎನಲು ಸಂತೈಸಿತ್ತು ರಾಯನ
ಮನೆಯವರು ಪಾಂಡವರ ಸೇನಾ
ವನಧಿ ಬಿಡೆ ಗರ್ಜಿಸಿತು ಬಹುವಿಧ ವಾದ್ಯರಭಸದಲಿ
ವಿನುತ ಮಕುಟವ ಕಡಿದು ಕಂಗನೆ
ಕನಲಿತಹಿ ತಲೆ ಬದುಕಿತೇ ಹಾ
ಎನುತ ಹಲುಮೊರೆಯುತ್ತ ಹರಿದುದು ಕರ್ಣನಿದ್ದೆಡೆಗೆ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕೇಳಿದ ಧರ್ಮರಾಯನ ಕಡೆಯವರಿಗೆಲ್ಲಾ ಸಮಾಧಾನವಾಯಿತು. ಪಾಂಡವ ಸೈನ್ಯ ಸಾಗರ ಅನೇಕ ಬಗೆಯ ವಾದ್ಯಗಳನ್ನು ಬಾರಿಸುತ್ತಾ ಗರ್ಜಿಸಿತು. ಚೆನ್ನಾದ ಕಿರೀಟವನ್ನು ಕತ್ತರಿಸಿದ ಸರ್ಪಾಸ್ತ್ರ ಅಧಿಕವಾದ ಕೋಪದಿಂದ, ‘ಅರ್ಜುನನ ತಲೆ ಉಳಿದು ಹೋಯಿತೇ’ ಎಂದು ಹಲ್ಲು ಕಡಿಯುತ್ತಾ ಮತ್ತೆ ಕರ್ಣನ ಬಳಿಗೆ ಓಡಿ ಬಂದಿತು.
ಪದಾರ್ಥ (ಕ.ಗ.ಪ)
ಕಂಗನೆ-ಅಧಿಕ
ಮೂಲ ...{Loading}...
ಎನಲು ಸಂತೈಸಿತ್ತು ರಾಯನ
ಮನೆಯವರು ಪಾಂಡವರ ಸೇನಾ
ವನಧಿ ಬಿಡೆ ಗರ್ಜಿಸಿತು ಬಹುವಿಧ ವಾದ್ಯರಭಸದಲಿ
ವಿನುತ ಮಕುಟವ ಕಡಿದು ಕಂಗನೆ
ಕನಲಿತಹಿ ತಲೆ ಬದುಕಿತೇ ಹಾ
ಎನುತ ಹಲುಮೊರೆಯುತ್ತ ಹರಿದುದು ಕರ್ಣನಿದ್ದೆಡೆಗೆ ॥32॥
೦೩೩ ತೊಡು ತೊಡಿನ್ನೊಮ್ಮೆನ್ನನಕಟಾ ...{Loading}...
ತೊಡು ತೊಡಿನ್ನೊಮ್ಮೆನ್ನನಕಟಾ
ಕೆಡಿಸಿದೆಯಲಾ ರಾಜಕಾರ್ಯವ
ನುಡಿದು ಹೇಳನೆ ನಿನ್ನ ಸಾರಥಿ ಲಕ್ಷ್ಯಭೇದನವ
ಅಡಗಲಿನ್ನೀರೇಳು ಭುವನದೊ
ಳಡಗಿ ತಿಂಬೆನು ನರನನೆಂದವ
ಗಡಿಸಿ ಕರ್ಣನ ಬೆಸನ ಬೇಡಿತು ಮತ್ತೆ ಫಣಿಬಾಣ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇನ್ನೊಮ್ಮೆ ನನ್ನನ್ನು ಪ್ರಯೋಗಿಸು. ಅಯ್ಯೋ ರಾಜಕಾರ್ಯವನ್ನು ಹಾಳುಮಾಡಿದಿಯಲ್ಲಾ. ನಿನ್ನ ಸಾರಥಿಯಾದ ಶಲ್ಯನು, ಗುರಿ ಬದಲಾವಣೆ ಮಾಡಲು ಹೇಳಲಿಲ್ಲವೇ. ಹದಿನಾಲ್ಕು ಲೋಕಗಳಲ್ಲಿ ಅಡಗಿಕೊಂಡರೂ. ನಾನು ಅರ್ಜುನನನ್ನು ತಪ್ಪಿಸಿಕೊಳ್ಳಲು ಬಿಡದೆ ತಿಂದು ಹಾಕುತ್ತೇನೆ’. ಎಂದು ಕರ್ಣನ ಕೆಲಸವನ್ನು ಪ್ರತಿಭಟಿಸುತ್ತಾ ಸರ್ಪಾಸ್ತ್ರ ಮತ್ತೊಮ್ಮೆ ಅಪ್ಪಣೆಯನ್ನು ಬೇಡಿತು.
ಮೂಲ ...{Loading}...
ತೊಡು ತೊಡಿನ್ನೊಮ್ಮೆನ್ನನಕಟಾ
ಕೆಡಿಸಿದೆಯಲಾ ರಾಜಕಾರ್ಯವ
ನುಡಿದು ಹೇಳನೆ ನಿನ್ನ ಸಾರಥಿ ಲಕ್ಷ್ಯಭೇದನವ
ಅಡಗಲಿನ್ನೀರೇಳು ಭುವನದೊ
ಳಡಗಿ ತಿಂಬೆನು ನರನನೆಂದವ
ಗಡಿಸಿ ಕರ್ಣನ ಬೆಸನ ಬೇಡಿತು ಮತ್ತೆ ಫಣಿಬಾಣ ॥33॥
೦೩೪ ಶಿವನ ಮರೆಯನು ...{Loading}...
ಶಿವನ ಮರೆಯನು ಹೊಗಲಿ ಮೇಣ್ ವಾ
ಸವನ ಸೀಮೆಯೊಳಿರಲಿ ಪಾತಾ
ಳವನು ಹೊಗಲಂಬುಧಿಯ ಮುಳುಗಲಿ ಜವನ ಕೆಳೆಗೊಳಲಿ
ಭುವನಕತಿಶಯವಾಗಿ ರಣದಲಿ
ತಿವಿವೆ ಪಾರ್ಥನನೆನಲು ಕೇಳಿದು
ರವಿಯ ಮಗ ಬೆರಗಾಗಿ ಬೆಸಗೊಂಡನು ಶಿಳೀಮುಖವ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಶಿವನ ಆಶ್ರಯಕ್ಕೆ ಹೋಗಲಿ ಅಥವಾ ಇಂದ್ರನ ನಗರ ಪ್ರದೇಶದಲ್ಲಿ ಇರಲಿ, ಪಾತಾಳಕ್ಕೆ ಹೋಗಿರಲಿ, ಸಮುದ್ರದಲ್ಲಿ ಮುಳುಗಿರಲಿ, ಯಮನ ಸ್ನೇಹ ಮಾಡಿಕೊಳ್ಳಲಿ ಪ್ರಪಂಚದಲ್ಲೆಲ್ಲಾ ಅತಿಶಯವಾದ ರೀತಿಯಲ್ಲಿ ಯುದ್ಧದಲ್ಲಿ ಅರ್ಜುನನನ್ನು ತಿವಿಯುತ್ತೇನೆ’ ಎಂದು ಕೇಳಿದ ಸರ್ಪಾಸ್ತ್ರವನ್ನು ಕರ್ಣನು ಆಶ್ಚರ್ಯದಿಂದ ಪ್ರಶ್ನಿಸಿದನು.
ಪದಾರ್ಥ (ಕ.ಗ.ಪ)
ಶಿಳೀಮುಖ-ಬಾಣ
ಮೂಲ ...{Loading}...
ಶಿವನ ಮರೆಯನು ಹೊಗಲಿ ಮೇಣ್ ವಾ
ಸವನ ಸೀಮೆಯೊಳಿರಲಿ ಪಾತಾ
ಳವನು ಹೊಗಲಂಬುಧಿಯ ಮುಳುಗಲಿ ಜವನ ಕೆಳೆಗೊಳಲಿ
ಭುವನಕತಿಶಯವಾಗಿ ರಣದಲಿ
ತಿವಿವೆ ಪಾರ್ಥನನೆನಲು ಕೇಳಿದು
ರವಿಯ ಮಗ ಬೆರಗಾಗಿ ಬೆಸಗೊಂಡನು ಶಿಳೀಮುಖವ ॥34॥
೦೩೫ ಎಸಲು ಸರಳುಗಳತ್ತಲೇ ...{Loading}...
ಎಸಲು ಸರಳುಗಳತ್ತಲೇ ಕೀ
ಲಿಸುವವಲ್ಲದೆ ಮತ್ತೆ ಮರಳಿದು
ಬೆಸನ ಬೇಡುವ ಬಾಣವೆಂಬುದನರಿಯೆ ನಾ ಕೇಳ್ದು
ವಿಶಿಖ ನೀನಾರೆನಲು ಕಿಡಿಗಳ
ಕುಸುರಿಗಳನುದ್ಗರಿಸಿ ನುಡಿದುದು
ವಿಷಮನರಿಯಾ ಕಾಳಕೂಟ ಕರಂಡ ಕಾನನದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪ್ರಯೋಗಿಸಿದ ತಕ್ಷಣ ಬಾಣಗಳು ಆ ಕಡೆಗೇ ಕೀಲು ಹೊಡೆದಂತೆ ಹೋಗುತ್ತವೆಯೇ ಹೊರತು, ಹಿಂತಿರುಗಿ ಬಂದು ಮತ್ತೆ ಕಾರ್ಯವನ್ನು ಬೇಡುವ ಬಾಣವನ್ನು ನಾನು ತಿಳಿದೂ ಇಲ್ಲ, ಕೇಳೂ ಇಲ್ಲ. ಬಾಣವೇ ನೀನು ಯಾರು’ ಎಂದು ಕರ್ಣನು ಪ್ರಶ್ನಿಸಿದಾಗ, ಆ ಬಾಣ ಕಿಡಿಗಳನ್ನು ಉದುರಿಸುತ್ತಾ ಉದ್ಗಾರ ತೆಗೆದು ಹೇಳಿತು’ ನಾನು ಕಾಳಕೂಟ ಕರಂಡವನದ ವಿಷಸರ್ಪ’.
ಮೂಲ ...{Loading}...
ಎಸಲು ಸರಳುಗಳತ್ತಲೇ ಕೀ
ಲಿಸುವವಲ್ಲದೆ ಮತ್ತೆ ಮರಳಿದು
ಬೆಸನ ಬೇಡುವ ಬಾಣವೆಂಬುದನರಿಯೆ ನಾ ಕೇಳ್ದು
ವಿಶಿಖ ನೀನಾರೆನಲು ಕಿಡಿಗಳ
ಕುಸುರಿಗಳನುದ್ಗರಿಸಿ ನುಡಿದುದು
ವಿಷಮನರಿಯಾ ಕಾಳಕೂಟ ಕರಂಡ ಕಾನನದ ॥35॥
೦೩೬ ಉರಗಪತಿ ತಾನಶ್ವಸೇನನು ...{Loading}...
ಉರಗಪತಿ ತಾನಶ್ವಸೇನನು
ಸುರಪತಿಯ ಖಾಂಡವದೊಳಿಹೆನದ
ನುರುಹುವಂದಿನೊಳೆನ್ನನರೆಗಡಿದೀ ದುರಾತ್ಮಕನ
ಶಿರವನರಿವೆನು ಬೇಗ ತೊಡು ತೊಡು
ಬೆರಗ ಹಾರದಿರೆನಲು ಸತ್ಯದ
ಪರಮಸೀಮೆಗೆ ತಪ್ಪಲಮ್ಮದೆ ಕರ್ಣನಿಂತೆಂದ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾನು ಉರಗಪತಿ. ಅಶ್ವಸೇನನೆಂದು ನನ್ನ ಹೆಸರು. ಇಂದ್ರನ ಖಾಂಡವ ವನವನ್ನು ದಹಿಸಿದಾಗ ಅಲ್ಲಿದ್ದ ನನ್ನನ್ನು ಅರ್ಧ ಕಡಿದು ಹಾಕಿದ ಈ ದುರಾತ್ಮಕನಾದ ಅರ್ಜುನನ ತಲೆಯನ್ನು ಕತ್ತರಿಸುವೆನು. ಬೇಗ ನನ್ನನ್ನು ಪ್ರಯೋಗಿಸು. ಆಶ್ಚರ್ಯ ಪಡಬೇಡ’ ಎಂದು ಆ ಬಾಣವು ಹೇಳಿದಾಗ, ತನ್ನ ಮಾತಿನ ಸತ್ಯದ ಎಲ್ಲೆಯನ್ನು ಮೀರಲು ಒಪ್ಪದ ಕರ್ಣನು ಹೀಗೆ ಹೇಳಿದ.
ಮೂಲ ...{Loading}...
ಉರಗಪತಿ ತಾನಶ್ವಸೇನನು
ಸುರಪತಿಯ ಖಾಂಡವದೊಳಿಹೆನದ
ನುರುಹುವಂದಿನೊಳೆನ್ನನರೆಗಡಿದೀ ದುರಾತ್ಮಕನ
ಶಿರವನರಿವೆನು ಬೇಗ ತೊಡು ತೊಡು
ಬೆರಗ ಹಾರದಿರೆನಲು ಸತ್ಯದ
ಪರಮಸೀಮೆಗೆ ತಪ್ಪಲಮ್ಮದೆ ಕರ್ಣನಿಂತೆಂದ ॥36॥
೦೩೭ ಅರಿಯೆ ನಾ ...{Loading}...
ಅರಿಯೆ ನಾ ನೀನೆಂದು ಲೋಗರ
ಮರೆಯಲರಿಗಳ ಗೆಲುವ ಕರ್ಣನೆ
ಯರಿಯಲಾ ನೀನೆನ್ನ ಹವಣನು ತೊಡುವುದಿಲ್ಲೆನಲು
ಮರುಗಿದನು ಶಲ್ಯನು ನೃಪಾಲನ
ನಿರಿದೆಯೋ ರಾಧೇಯ ನೀನೆಂ
ದುರುಬೆಯಲಿ ಕೋಪಿಸುತ ಕರ್ಣನ ಬಯ್ದು ಗಜರಿದನು ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀನು ಯಾರು ಎಂದು ನಾನು ತಿಳಿದಿರಲಿಲ್ಲ. ಜನಗಳ ಮರೆಯಲ್ಲಿ ನಿಂತು ಕರ್ಣನು ಶತ್ರುಗಳನ್ನು ಗೆಲ್ಲುವವನಲ್ಲ. ನನ್ನ ರೀತಿಯನ್ನು ತಿಳಿದುಕೋ, ನಾನು ನಿನ್ನನ್ನು ಮತ್ತೆ ತೊಡುವುದಿಲ್ಲ’ ಎಂದ ಕರ್ಣನ ಮಾತಿಗೆ ಶಲ್ಯನು ಮರುಗಿದನು. ‘ರಾಧೇಯ ನೀನು ದೊರೆಯನ್ನು ಕೊಲ್ಲುತ್ತಿದ್ದೀಯೆ’ ಎಂದು ಅತಿಯಾಗಿ ಕೋಪಿಸುತ್ತಾ ಕರ್ಣನನ್ನು ಬಯ್ದು ಗದರಿಸಿದನು.
ಮೂಲ ...{Loading}...
ಅರಿಯೆ ನಾ ನೀನೆಂದು ಲೋಗರ
ಮರೆಯಲರಿಗಳ ಗೆಲುವ ಕರ್ಣನೆ
ಯರಿಯಲಾ ನೀನೆನ್ನ ಹವಣನು ತೊಡುವುದಿಲ್ಲೆನಲು
ಮರುಗಿದನು ಶಲ್ಯನು ನೃಪಾಲನ
ನಿರಿದೆಯೋ ರಾಧೇಯ ನೀನೆಂ
ದುರುಬೆಯಲಿ ಕೋಪಿಸುತ ಕರ್ಣನ ಬಯ್ದು ಗಜರಿದನು ॥37॥
೦೩೮ ತೊಡು ತೊಡೆಲವೋ ...{Loading}...
ತೊಡು ತೊಡೆಲವೋ ಶರವು ರಿಪುವನು
ತಡೆಗಡಿವೆನೆಂದೊದರುತದೆ ನೃಪ
ನೊಡೆತನಕೆ ನೀ ಬಯಸಿದಾ ಮತವುಂಟೆ ರಿಪುಗಳಲಿ
ನುಡಿದ ಭಾಷೆಗೆ ನಾವು ಹೇಳಿತ
ನೊಡಬಡುವ ನೀನಲ್ಲ ಕುರುಪತಿ
ಬಿಡದೆ ನಿನ್ನನು ಸಲಹಿತಕ್ಕುಪಕಾರಿ ನೀನೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲವೋ, ಸುಮ್ಮನೆ ಈ ಬಾಣವನ್ನು ಪ್ರಯೋಗಿಸು. ಅದೇ ಬಂದು ಶತ್ರುವನ್ನು ಕತ್ತರಿಸುತ್ತೇನೆಂದು ಒದರುತ್ತಿದೆ. ದುರ್ಯೋಧನನ ಒಡೆತನ ಉಳಿಯಲಿ ಎಂದು ಬಯಸುತ್ತಿದ್ದೀಯೆ, ಶತ್ರುಗಳ ಬಗೆಗೆ ಒಲವು ಮೂಡಿದೆಯೇ. ನೀನು ಹೇಳಿದ್ದೇ ನಡೆಯಬೇಕೇ, ಇನ್ನೊಬ್ಬರು ಹೇಳಿದುದಕ್ಕೆ ನೀನು ಒಪ್ಪಿಕೊಳ್ಳುವವನಲ್ಲ. ಕೌರವನು ನಿನ್ನನ್ನು ಸತತವಾಗಿ ಸಲಹಿದುದಕ್ಕೆ ಒಳ್ಳೆಯ ಉಪಕಾರ ಮಾಡುತ್ತಿರುವೆ’ ಎಂದ ಶಲ್ಯ.
ಮೂಲ ...{Loading}...
ತೊಡು ತೊಡೆಲವೋ ಶರವು ರಿಪುವನು
ತಡೆಗಡಿವೆನೆಂದೊದರುತದೆ ನೃಪ
ನೊಡೆತನಕೆ ನೀ ಬಯಸಿದಾ ಮತವುಂಟೆ ರಿಪುಗಳಲಿ
ನುಡಿದ ಭಾಷೆಗೆ ನಾವು ಹೇಳಿತ
ನೊಡಬಡುವ ನೀನಲ್ಲ ಕುರುಪತಿ
ಬಿಡದೆ ನಿನ್ನನು ಸಲಹಿತಕ್ಕುಪಕಾರಿ ನೀನೆಂದ ॥38॥
೦೩೯ ಎಲವೊ ನಿನ್ನನು ...{Loading}...
ಎಲವೊ ನಿನ್ನನು ಜಗವರಿಯೆ ಕ
ಬ್ಬಿಲನ ಮಗನನು ಮರಸಿ ಕುರುಪತಿ
ಕುಲಜನನು ಮಾಡಿದನಲಾ ಒಡನುಂಡು ಪತಿಕರಿಸಿ
ನೆಲನು ಹೇಸದೆ ನಿನ್ನ ಕೀರ್ತಿಯ
ಬೆಳಗು ಮಾಸದೆ ಬಿಡದೆ ಸಾಕಿದ
ಹೊಲೆಯನವಸರಕೊದಗುವನು ನೀ ಕಷ್ಟ ಹೋಗೆಂದ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೂತಪುತ್ರನಾದ ನಿನ್ನನ್ನು ಆ ಜಾತಿಯನ್ನು ಮರೆಸಿ, ಜಗತ್ತಿಗೆಲ್ಲಾ ತಿಳಿಯುವಂತೆ ಕುಲಜನಂತೆ ಗೌರವವನ್ನು ನೀಡಿ ಜೊತೆಯಲ್ಲಿ ಊಟ ಮಾಡಿದನಲ್ಲವೇ ಕೌರವ. ನಿನ್ನ ಈ ನಡತೆಯಿಂದ ಭೂಮಿಯ ಜನ ಹೇಸಿಕೆ ಪಡುವುದಿಲ್ಲವೇ, ನಿನ್ನ ಕೀರ್ತಿಯ ಶುಭ್ರತೆ ಮಾಸುವುದಿಲ್ಲವೇ, ಸಲಹಿದ ಹೊಲೆಯನೂ ಸಹ ಸಮಯಕ್ಕೆ ಸಹಾಯಕನಾಗುತ್ತಾನೆ. ಆದರೆ ನೀನು ಅದಕ್ಕಿಂತ ಕಡೆ, ಹೋಗು” ಎಂದು ಶಲ್ಯನು ನಿಂದಿಸಿದ.
ಪದಾರ್ಥ (ಕ.ಗ.ಪ)
ಕಬ್ಬಿಲ-ಬೆಸ್ತ
ಮೂಲ ...{Loading}...
ಎಲವೊ ನಿನ್ನನು ಜಗವರಿಯೆ ಕ
ಬ್ಬಿಲನ ಮಗನನು ಮರಸಿ ಕುರುಪತಿ
ಕುಲಜನನು ಮಾಡಿದನಲಾ ಒಡನುಂಡು ಪತಿಕರಿಸಿ
ನೆಲನು ಹೇಸದೆ ನಿನ್ನ ಕೀರ್ತಿಯ
ಬೆಳಗು ಮಾಸದೆ ಬಿಡದೆ ಸಾಕಿದ
ಹೊಲೆಯನವಸರಕೊದಗುವನು ನೀ ಕಷ್ಟ ಹೋಗೆಂದ ॥39॥
೦೪೦ ನಮ್ಬಿ ಹಿಡಿದರೆ ...{Loading}...
ನಂಬಿ ಹಿಡಿದರೆ ನದಿಯ ಮಗ ಹಗೆ
ಯಂಬಿಗಿತ್ತನು ಕಾಯವನು ಮಗ
ನೆಂಬ ನೆವದಲಿ ತನುವ ಬಿಸುಟನು ಗರುಡಿಯಾಚಾರ್ಯ
ಅಂಬು ಬೆಸನನು ಬೇಡಿದಡೆ ನೀ
ನೆಂಬನೀ ವಿಧಿಯಾದೆ ಮೂವರ
ನಂಬಿ ಕೌರವ ಕೆಟ್ಟನಕಟಕಟೆಂದನಾ ಶಲ್ಯ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೀಷ್ಮನನ್ನು ನಂಬಿ ಅಧಿಕಾರವನ್ನು ಕೊಟ್ಟರೆ, ಅವನು ಶತ್ರುವಿನ ಬಾಣಗಳಿಗೆ ತನ್ನ ದೇಹವನ್ನು ಒಪ್ಪಿಸಿದ. ವಿದ್ಯಾಗುರುವಾದ ದ್ರೋಣನೂ, ಮಗನ ನೆಪದಲ್ಲಿ ದೇಹವನ್ನು ಬಿಟ್ಟು ಹೋದ. ಈಗ ಬಾಣವೇ ಬಂದು ನಿನ್ನನ್ನು ಬೇಡಿಕೊಳ್ಳುತ್ತಿದ್ದರೂ ನೀನು ಹೀಗೆ ನಡೆದುಕೊಳ್ಳುತ್ತಿದ್ದೀಯೆ. ಈ ಮೂವರನ್ನು ನಂಬಿ ಕೌರವನ ಹಾಳಾದ"ಎಂದ ಶಲ್ಯ.
ಮೂಲ ...{Loading}...
ನಂಬಿ ಹಿಡಿದರೆ ನದಿಯ ಮಗ ಹಗೆ
ಯಂಬಿಗಿತ್ತನು ಕಾಯವನು ಮಗ
ನೆಂಬ ನೆವದಲಿ ತನುವ ಬಿಸುಟನು ಗರುಡಿಯಾಚಾರ್ಯ
ಅಂಬು ಬೆಸನನು ಬೇಡಿದಡೆ ನೀ
ನೆಂಬನೀ ವಿಧಿಯಾದೆ ಮೂವರ
ನಂಬಿ ಕೌರವ ಕೆಟ್ಟನಕಟಕಟೆಂದನಾ ಶಲ್ಯ ॥40॥
೦೪೧ ಮಾತೆಗಿತ್ತೆನು ಭಾಷೆಯನು ...{Loading}...
ಮಾತೆಗಿತ್ತೆನು ಭಾಷೆಯನು ನಿ
ನ್ನಾತಗಳೊಳೈವರೊಳಗಾರಿದಿ
ರಾತಡೆಯು ತಲೆಗಾದು ಬಿಡುವೆನು ಕೊಲುವುದಿಲ್ಲೆಂದು
ಮಾತುಗಳು ಕವಲಾದ ಬಳಿಕಿ
ನ್ನೇತಕೀ ತನುವಿದನು ಪಾರ್ಥನ
ಖಾತಿಗೊಪ್ಪಿಸಿ ಕಳೆವೆನೆಂದನು ತನ್ನ ಮನದೊಳಗೆ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನ್ನ ಐದು ಜನ ಮಕ್ಕಳಲ್ಲಿ ಯಾರು ಇದಿರಾದರೂ ಅವರನ್ನು ಕೊಲ್ಲುವುದಿಲ್ಲ ರಕ್ಷಿಸುತ್ತೇನೆ ಎಂದು ತಾಯಿಗೆ ಭಾಷೆಯನ್ನು ಕೊಟ್ಟಿದ್ದೇನೆ. ಕೊಟ್ಟ ಮಾತು ತಪ್ಪಿ ಹೋಗುವಂತಾದರೆ, ಈ ದೇಹ ಏತಕ್ಕೆ ಬೇಕು. ಇದನ್ನು ಅರ್ಜುನನ ಕೋಪಕ್ಕೆ ಒಪ್ಪಿಸಿ ಕಳೆದು ಬಿಡುತ್ತೇನೆ’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡನು ಕರ್ಣ.
ಮೂಲ ...{Loading}...
ಮಾತೆಗಿತ್ತೆನು ಭಾಷೆಯನು ನಿ
ನ್ನಾತಗಳೊಳೈವರೊಳಗಾರಿದಿ
ರಾತಡೆಯು ತಲೆಗಾದು ಬಿಡುವೆನು ಕೊಲುವುದಿಲ್ಲೆಂದು
ಮಾತುಗಳು ಕವಲಾದ ಬಳಿಕಿ
ನ್ನೇತಕೀ ತನುವಿದನು ಪಾರ್ಥನ
ಖಾತಿಗೊಪ್ಪಿಸಿ ಕಳೆವೆನೆಂದನು ತನ್ನ ಮನದೊಳಗೆ ॥41॥
೦೪೨ ಮರುಳಲಾ ಮಾದ್ರೇಶ ...{Loading}...
ಮರುಳಲಾ ಮಾದ್ರೇಶ ಮರಳಿದ
ಶರವ ತೊಡುವೆನೆ ಸೈರಿಸೆನೆ ಕಾ
ತರಿಸಿ ವಾಘೆಯ ಬಿಸುಟು ಕಿಡಿಕಿಡಿವೋಗಿ ಖಾತಿಯಲಿ
ಅರಸನೊಲಿದಂತಾಗಲೆನ್ನದು
ಮರುಳುತನ ಕುಲಹೀನನಲಿ ಗುಣ
ವರಸಲೇಕೆಂದೆನುತ ಧುಮ್ಮಿಕ್ಕಿದನು ಧಾರುಣಿಗೆ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲ್ಲೋ ನಿನಗೆ ಹುಚ್ಚು ಶಲ್ಯ. ಹಿಂದಿರುಗಿದ ಬಾಣವನ್ನು ನಾನು ತೊಡುತ್ತೇನೆಯೇ, ಸುಮ್ಮನಿರು’ ಎಂದಾಗ, ಶಲ್ಯನು ಲಗಾಮನ್ನು ಬಿಸಾಡಿ, ಕೋಪದಿಂದ ಕಿಡಿಕಿಡಿಯಾಗಿ, ‘ದೊರೆಯು ಏನಾದರೂ ಹೇಳಲಿ, ಕರ್ಣನಿಗೆ , ನನ್ನ ಮಾತುಗಳು ಹುಚ್ಚುತನವಾಗಿ ಕಾಣುತ್ತದೆ. ಈ ಕುಲಹೀನನಲ್ಲಿ ಗುಣವನ್ನು ಹುಡುಕುವುದೇಕೆ’ ಎನ್ನುತ್ತಾ ರಥದಿಂದ ಭೂಮಿಗೆ ಧುಮುಕಿ ಹೊರಟು ಹೋದನು.
ಮೂಲ ...{Loading}...
ಮರುಳಲಾ ಮಾದ್ರೇಶ ಮರಳಿದ
ಶರವ ತೊಡುವೆನೆ ಸೈರಿಸೆನೆ ಕಾ
ತರಿಸಿ ವಾಘೆಯ ಬಿಸುಟು ಕಿಡಿಕಿಡಿವೋಗಿ ಖಾತಿಯಲಿ
ಅರಸನೊಲಿದಂತಾಗಲೆನ್ನದು
ಮರುಳುತನ ಕುಲಹೀನನಲಿ ಗುಣ
ವರಸಲೇಕೆಂದೆನುತ ಧುಮ್ಮಿಕ್ಕಿದನು ಧಾರುಣಿಗೆ ॥42॥
೦೪೩ ಕಣ್ಡುದೀ ವ್ಯತಿಕರವನೀತನ ...{Loading}...
ಕಂಡುದೀ ವ್ಯತಿಕರವನೀತನ
ನಂಡಲೆದು ಫಲವಿಲ್ಲಲಾ ಕೈ
ಕೊಂಡು ನೋಡುವೆನೆನ್ನ ಸಾಮಥ್ರ್ಯದ ಸಘಾಡದಲಿ
ಚಂಡಿಯಾದೆನು ತಾನೆನುತ ಖತಿ
ಗೊಂಡು ಮರಳಿತು ಸರ್ಪಶರವಾ
ಖಂಡಳಾತ್ಮಜನತ್ತ ಹಾಳಾಹಳದ ಚೂಣಿಯಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ನಡವಳಿಕೆಯ ಈ ವಿಪರೀತವನ್ನು ಸರ್ಪಾಸ್ತ್ರ ನೋಡಿತು. “ಇನ್ನು ಈತನನ್ನು ಪೀಡಿಸಿ ಕೇಳುವುದರಲ್ಲಿ ಫಲವಿಲ್ಲ. ನಾನೇ ನನ್ನ ಸಾಮಥ್ರ್ಯದಿಂದ ಅರ್ಜುನನ್ನು ಎದುರಿಸಿ ನೋಡುತ್ತೇನೆ. ನಾನು ಹಟಮಾರಿಯಾಗಿದ್ದೇನೆ”. ಎನ್ನುತ್ತಾ ಕೋಪದಿಂದ ಸರ್ಪಾಸ್ತ್ರ ಇಂದ್ರನ ಮಗನಾದ ಅರ್ಜುನನ ಕಡೆಗೆ ವಿಷವನ್ನು ಮುಂದೊಡ್ಡುತ್ತಾ ನುಗ್ಗಿತು.
ಪದಾರ್ಥ (ಕ.ಗ.ಪ)
ಆಖಂಡಳಾತ್ಮಜ-ಇಂದ್ರನ ಮಗ
ಮೂಲ ...{Loading}...
ಕಂಡುದೀ ವ್ಯತಿಕರವನೀತನ
ನಂಡಲೆದು ಫಲವಿಲ್ಲಲಾ ಕೈ
ಕೊಂಡು ನೋಡುವೆನೆನ್ನ ಸಾಮಥ್ರ್ಯದ ಸಘಾಡದಲಿ
ಚಂಡಿಯಾದೆನು ತಾನೆನುತ ಖತಿ
ಗೊಂಡು ಮರಳಿತು ಸರ್ಪಶರವಾ
ಖಂಡಳಾತ್ಮಜನತ್ತ ಹಾಳಾಹಳದ ಚೂಣಿಯಲಿ ॥43॥
೦೪೪ ಇವನ ಬಲ್ಲೈ ...{Loading}...
ಇವನ ಬಲ್ಲೈ ಪಾರ್ಥ ಚಕ್ಷು
ಶ್ರವನಿವನು ತಕ್ಷಕನ ಮಗ ಖಾಂ
ಡವದ ಬೇಳಂಬದಲಿ ಬದುಕಿದ ತಲೆಯೊಳಡಹಾಯ್ದು
ಇವನ ಮೂಡಿಗೆಯೊಳಗೆ ಶರವಾ
ಯ್ತಿವನು ತಾನೇ ಮರಳಿದನು ನೀ
ನವಧರಿಸಿಕೊಳ್ಳೆನುತ ನುಡಿದನು ದೈತ್ಯರಿಪು ನಗುತ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನು ನೋಡಿದ ಕೃಷ್ಣನು, ‘ಇವನು ಯಾರು ಎಂದು ತಿಳಿದಿದ್ದೀಯಾ ಅರ್ಜುನ. ಇವನು ತಕ್ಷಕನ ಮಗ ಚಕ್ಷುಶ್ರವ. ಖಾಂಡವ ವನವನ್ನು ದಹಿಸುವಾಗ ತಲೆತಪ್ಪಿಸಿಕೊಂಡು ಓಡಿ ಬಂದು, ಕರ್ಣನ ಬತ್ತಳಿಕೆಯೊಳಗೆ ಬಾಣವಾಗಿದ್ದವನು. ಈಗ ತಾನೇ ಹಿಂತಿರುಗಿ, ಆಕ್ರಮಣ ಮಾಡಲು ಬರುತ್ತಿದ್ದಾನೆ. ನೀನು ನೋಡಿಕೋ’ ಎಂದು ನಗುತ್ತಾ ಹೇಳಿದನು.
ಪದಾರ್ಥ (ಕ.ಗ.ಪ)
ಬೇಳಂಬ-ಸುಡು
ಮೂಲ ...{Loading}...
ಇವನ ಬಲ್ಲೈ ಪಾರ್ಥ ಚಕ್ಷು
ಶ್ರವನಿವನು ತಕ್ಷಕನ ಮಗ ಖಾಂ
ಡವದ ಬೇಳಂಬದಲಿ ಬದುಕಿದ ತಲೆಯೊಳಡಹಾಯ್ದು
ಇವನ ಮೂಡಿಗೆಯೊಳಗೆ ಶರವಾ
ಯ್ತಿವನು ತಾನೇ ಮರಳಿದನು ನೀ
ನವಧರಿಸಿಕೊಳ್ಳೆನುತ ನುಡಿದನು ದೈತ್ಯರಿಪು ನಗುತ ॥44॥
೦೪೫ ಅರಸ ಕೇಳೈ ...{Loading}...
ಅರಸ ಕೇಳೈ ಕರ್ಣಶಕ್ತಿ
ಸ್ಫುರಣಸಹಿತೀ ಬಾಣವತಿದು
ರ್ಧರವದಲ್ಲದೆ ಬರಿಯ ವಿಷದುಬ್ಬರದ ಸಾಹಸವ
ನರನಲೇ ಕೈಕೊಳ್ಳದೀ ಬಹ
ಸರಳನೈದಂಬುಗಳಲೆಡೆಯಲಿ
ತರಿದು ಬಿಸುಟನು ವೀರನಾರಾಯಣನ ನೇಮದಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು, ಕರ್ಣನ ಶಕ್ತಿ ಜೊತೆಗೂಡಿದ್ದಾಗ ಈ ಬಾಣವನ್ನು ಗೆಲ್ಲಲು ಅಸಾಧ್ಯವಾಗಿತ್ತು. ಈಗ ಬರಿಯ ವಿಷದ ಉಬ್ಬಾಟದ ಸಾಹಸದಿಂದ ಕೂಡಿದೆ. ಕೃಷ್ಣನ ಆದೇಶದಂತೆ ಅರ್ಜುನನು ಬರುತ್ತಿದ್ದ ಸರ್ಪಾಸ್ತ್ರವನ್ನು ಲೆಕ್ಕಿಸದೆ, ಐದು ಬಾಣಗಳನ್ನು ಪ್ರಯೋಗಿಸಿ ದಾರಿಯಲ್ಲಿಯೇ ಅದನ್ನು ಕತ್ತರಿಸಿ ಹಾಕಿದನು.” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಅರಸ ಕೇಳೈ ಕರ್ಣಶಕ್ತಿ
ಸ್ಫುರಣಸಹಿತೀ ಬಾಣವತಿದು
ರ್ಧರವದಲ್ಲದೆ ಬರಿಯ ವಿಷದುಬ್ಬರದ ಸಾಹಸವ
ನರನಲೇ ಕೈಕೊಳ್ಳದೀ ಬಹ
ಸರಳನೈದಂಬುಗಳಲೆಡೆಯಲಿ
ತರಿದು ಬಿಸುಟನು ವೀರನಾರಾಯಣನ ನೇಮದಲಿ ॥45॥