೦೮

೦೦೦ ಸೂ ಪೃಥಿವಿಪತಿ ...{Loading}...

ಸೂ. ಪೃಥಿವಿಪತಿ ಮಾದ್ರೇಶನನು ಸಾ
ರಥಿಯ ಮಾಡಿದನೊಲವು ಮಿಗಲತಿ
ರಥ ಭಯಂಕರ ಭಾನುಸುತನಾಹವಕೆ ನಡೆತಂದ

೦೦೧ ಹರನ ಬೀಳ್ಕೊಣ್ಡಖಿಳ ...{Loading}...

ಹರನ ಬೀಳ್ಕೊಂಡಖಿಳ ದಿವಿಜರು
ಹರೆದುದೀ ಪರಿ ಕಮಲಭವನೀ
ಶ್ವರನ ಸಾರಥಿಯಾಗೆ ಸಾರಿದುದಮರರಭ್ಯುದಯ
ಹರಿಯ ಸಾರಥಿತನದಿ ಜಯವಂ
ಕುರಿಸಿತವರಿಗೆ ನಿಮ್ಮ ಕೃಪೆಯಲಿ
ಕುರುಬಲಕೆ ಗೆಲವಾದಡೊಳ್ಳಿತು ಮಾವ ಕೇಳ್ ಎಂದ ॥1॥

೦೦೨ ಹರನು ಬಿಲುವಿದ್ಯವನು ...{Loading}...

ಹರನು ಬಿಲುವಿದ್ಯವನು ಕೊಡುತವೆ
ಪರಶುರಾಮಂಗೆಂದನಧಮರಿ
ಗೊರೆಯದಿರು ಸತ್ಪಾತ್ರಕಿದನಾದರಿಸಿ ಕಲಿಸೆಂದ
ಸುರರ ಮೆಚ್ಚದ ರಾಮನೀತನ
ಕರೆದು ಗರುಡಿಯ ಹೊಗಿಸಿದನು ಕಡು
ಗರುವನೀ ರಾಧೇಯನಧಮನೆ ಮಾವ ಕೇಳ್ ಎಂದ ॥2॥

೦೦೩ ಸೂತಕುಲಸಮ್ಭವನೆ ಭುವನ ...{Loading}...

ಸೂತಕುಲಸಂಭವನೆ ಭುವನ
ಖ್ಯಾತಕರ್ಣನು ಸಾಕಿದಾತನು
ಸೂತನಾದಡೆ ಮಾವ ಕೇಳನ್ವಯಕೆ ಹಳಿವುಂಟೆ
ಸ್ವಾತಿಯುದಕದೊಳಾದ ಮೌಕ್ತಿಕ
ವ್ರಾತಕಯ್ಯನೆ ಚಿಪ್ಪು ನಿಮಗಿ
ನ್ನೇತಕೀ ಸಂದೇಹ ರವಿಸುತ ಸೂತನಲ್ಲೆಂದ ॥3॥

೦೦೪ ಈ ದುರಾಗ್ರಹ ...{Loading}...

ಈ ದುರಾಗ್ರಹ ನಿನ್ನ ಚಿತ್ತದೊ
ಳಾದುದೇ ತಪ್ಪೇನು ಕೋಗಿಲೆ
ಯಾದರಿಸಿದಡೆ ಬೇವು ಮಾವಹುದಾದಡೆಮಗೇನು
ಕಾದಿ ಗೆಲುವುದು ಭಾರಿ ಗುರು ಭೀ
ಷ್ಮಾದಿಭಟರೇನಾದರೈ ತಾ
ನಾದುದಾಗಲಿ ನಾವು ಸಾರಥಿಯಾದೆವೇಳೆಂದ ॥4॥

೦೦೫ ನಿಮ್ಮ ವಿಜಯಶ್ರೀಯ ...{Loading}...

ನಿಮ್ಮ ವಿಜಯಶ್ರೀಯ ಕಡೆಗ
ಣ್ಣೆಮ್ಮ ಮುಖದಲಿ ಮುರಿದುದಾದಡೆ
ನಮ್ಮ ಕೊರತೆಯದೇಕೆ ಕರಸೈ ಸೂತನಂದನನ
ನಮ್ಮ ಹೇಳಿಕೆ ಯಾವುದದನೀ
ತಮ್ಮ ಮೀರಿದು ನಡೆದನಾದಡೆ
ನಮ್ಮ ವಾಘೆಯ ಬೀಳುಕೊಡುವೆವು ರಾಯ ಕೇಳ್ ಎಂದ ॥5॥

೦೦೬ ಹೊತ್ತ ದುಗುಡವ ...{Loading}...

ಹೊತ್ತ ದುಗುಡವ ಹಾಯ್ಕಿ ಕೈವಿಡಿ
ದೆತ್ತಿ ಕರ್ಣನ ಕೊಟ್ಟು ಮೈಗಳ
ಲೆತ್ತು ಗುಡಿಗಳ ರೋಮ ಪುಳಕದ ಪೂರ್ಣ ಹರುಷದಲಿ
ಬತ್ತಿತಂತಸ್ತಾಪಜಲನಿಧಿ
ಚಿತ್ತದುರು ಸಂದೇಹ ತರುವಿನ
ಬಿತ್ತು ಕರಿಮೊಳೆವೋಯ್ತು ನಿನ್ನ ಮಗಂಗೆ ನಿಮಿಷದಲಿ ॥6॥

೦೦೭ ಬೀಳುಕೊಣ್ಡನು ಶಲ್ಯನನು ...{Loading}...

ಬೀಳುಕೊಂಡನು ಶಲ್ಯನನು ಭೂ
ಪಾಲನಿತ್ತಲು ಕರ್ಣನಾಯುಧ
ಶಾಲೆಯಲಿ ಶುಚಿಯಾಗಿ ಶಸ್ತ್ರಾಸ್ತ್ರವನು ಪೂಜಿಸಿದ
ಸಾಲದೀವಿಗೆಗಳನು ಶಸ್ತ್ರ
ಜ್ವಾಲೆ ಮಿಕ್ಕವು ತೀಕ್ಷ ್ಣಧಾರಾ
ಭೀಳವಿಕ್ರಮ ವಿಸ್ಫುಲಿಂಗಿತವಾದವಡಿಗಡಿಗೆ ॥7॥

೦೦೮ ಕುರಿಯ ಹಣಿದದ ...{Loading}...

ಕುರಿಯ ಹಣಿದದ ಕೋಳಿ ಕೋಣನ
ಮುರಿದಲೆಯ ಮೀಸಲಿನ ರಕುತದ
ದುರುದುರಿಪ ದಂಡೆಯಲಿ ಕಲಸಿದ ಕೂಳ ಮುದ್ದೆಗಳ
ಹೊರಗೆ ಬಡಿಸಿದ ಭೂತಬಲಿ ಬೊ
ಬ್ಬಿರಿತದೊಡನುಬ್ಬೇಳ್ವ ಲಗ್ಗೆಯ
ಹರೆಗಳಬ್ಬರವಾಯ್ತು ಕರ್ಣನ ಶಸ್ತ್ರಪೂಜೆಯಲಿ ॥8॥

೦೦೯ ವಿರಚಿಸಿತು ಶಸ್ತ್ರಾಸ್ತ್ರ ...{Loading}...

ವಿರಚಿಸಿತು ಶಸ್ತ್ರಾಸ್ತ್ರ ಪೂಜಾ
ಪರಿಸರಣ ರವಿಸೂನು ದರ್ಭಾಂ
ಕುರದ ಶಯನಸ್ಥಾನದಲಿ ಮಾಡಿದನು ಜಾಗರವ
ಕುರು ನೃಪಾಲನ ಪಾಳೆಯದೊಳಾ
ಯ್ತಿರುಳು ಮನೆಮನೆಗಳಲಿ ಶಸ್ತ್ರೋ
ತ್ಕರ ಸಮಾರಾಧನೆಯೊಳಿರ್ದುದು ಕೂಡೆ ನೃಪಕಟಕ ॥9॥

೦೧೦ ಸವೆದುದಿರುಳರುಣೋದಯದಲಾ ಹವದ ...{Loading}...

ಸವೆದುದಿರುಳರುಣೋದಯದಲಾ
ಹವದ ಸಂಭ್ರಮರಭಸವೆದ್ದುದು
ವಿವಿಧ ಬಲ ಭಾರಣೆಯ ಭುಲ್ಲವಣೆಯ ಛಡಾಳದಲಿ
ತವಕಿಸುತ ಬಿಗಿ ವಾರುವನ ತಾ
ಸವಗವನು ಬಲ್ಲೆಹವ ಸೀಸಕ
ಕವಚಗಳನೆಂಬಬ್ಬರಣೆ ರಂಜಿಸಿತು ರಾವ್ತರಲಿ ॥10॥

೦೧೧ ಬಿಡು ಗಜವ ...{Loading}...

ಬಿಡು ಗಜವ ಬಿಗಿ ರೆಂಚೆಗಳ ತೆಗೆ
ದಡಿಯ ಹಾಯಿಕು ಗುಳವ ತಾ ಮೊಗ
ವಡವ ಕೊಡು ಪಟ್ಟೆಯವ ಕೈಯಲಿ ಬೀಸು ಚೌರಿಗಳ
ತಡವಿದೇನೋ ಸಾಯಿ ಫಡಿ ಫಡ
ಕೆಡೆಯೆನುತ ತಮ್ಮೊಬ್ಬರೊಬ್ಬರ
ಜಡಿಯಲಬ್ಬರವಾದುದಾರೋಹಕರ ಕೇರಿಯಲಿ ॥11॥

೦೧೨ ಕೀಲ ತೆಗೆಯಚ್ಚುಗಳ ...{Loading}...

ಕೀಲ ತೆಗೆಯಚ್ಚುಗಳ ಹೆರೆ ಬಲು
ಗಾಲಿಗಳ ಜೋಡಿಸು ಪತಾಕಾ
ಜಾಲವನು ನಿಲಿಸೀಸ ಬಲಿ ಬಲುಮಿಣಿಯ ಬಿಗಿಯೆನುತ
ಮೇಲೆ ಮೇಲಬ್ಬರದ ಘೋಳಾ
ಘೋಳಿ ಘಲ್ಲಿಸೆ ದೆಸೆಯಲತಿರಥ
ಜಾಲ ಕವಿದುದು ಕದನಕೌತೂಹಲರ ಕೇರಿಯಲಿ ॥12॥

೦೧೩ ನೀಡು ಬಿಲುಬತ್ತಳಿಕೆಯನು ...{Loading}...

ನೀಡು ಬಿಲುಬತ್ತಳಿಕೆಯನು ನಡೆ
ಜೋಡ ತೆಗೆ ತಾ ಸವಳವನು ರಣ
ಖೇಡನೇ ಫಡ ಘಾಯವನು ಬಿಗಿ ಮದ್ದನರೆಯೆನುತ
ಕೂಡೆ ತಮತಮಗಾಹವದ ಖಯ
ಖೋಡಿಯಿಲ್ಲದೆ ಸುಭಟರಬ್ಬರ
ಝಾಡಿ ಮಸಗಿತು ಕದನದಲಿ ಕಾಲಾಳ ಕೇರಿಯಲಿ ॥13॥

೦೧೪ ಬಿರಿದುದಬುಜಭವಾಣ್ಡವೆನೆ ಭೋಂ ...{Loading}...

ಬಿರಿದುದಬುಜಭವಾಂಡವೆನೆ ಭೋಂ
ಕರಿಸಿದವು ನಿಸ್ಸಾಳತತಿ ನಿ
ಬ್ಬರದ ಬಿರುದನು ಬೀರುತಿರ್ದವು ಗೌರುಗಹಳೆಗಳು
ಎರಲು ಸುಳಿದುದು ದೀಪಶಿಖಿ ಪರಿ
ಹರಿಸಿದತಿಬಲದಬ್ಬರದ ನಿ
ಷ್ಠುರತೆಗಂಜದೆ ಮಾಣದೆನೆ ಹೆರಹಿಂಗಿತಾ ರಜನಿ ॥14॥

೦೧೫ ಅರಸ ಕೇಳಭ್ಯುದಿತವಾದುದು ...{Loading}...

ಅರಸ ಕೇಳಭ್ಯುದಿತವಾದುದು
ಸರಸಕೈರವ ರಾಜಿ ಕೋಮಲ
ಸರಸಿರುಹವನವಾದುದಾಕ್ಷಣ ಸುರಭಿ ನಿರ್ಮುಕ್ತ
ಕಿರಣ ತೋಮರ ದಕ್ಷಿಣೋರು
ಸ್ಫುರಣ ತಿಮಿರ ಮೃಗೀಕದಂಬಕ
ತರಣಿ ನೂಕಿದನುದಯಶೈಲಕೆ ರತುನಮಯ ರಥವ ॥15॥

೦೧೬ ಉಲಿವ ಮಙ್ಗಳಪಾಠಕರ ...{Loading}...

ಉಲಿವ ಮಂಗಳಪಾಠಕರ ಕಳ
ಕಳಿಕೆ ಮೆರೆಯಲು ಹೊಳೆವ ಹೊಂಬ
ಟ್ಟಲಲಿ ಸೂಸಿದನಘ್ರ್ಯಜಲವನು ಜನಕನಿದಿರಿನಲಿ
ಲಲಿತ ಮಂತ್ರಾಕ್ಷತೆಗಳನು ಕರ
ತಳದೊಳಾಂತು ಮಹೀಸುರರಿಗ
ಗ್ಗಳೆಯನಿತ್ತನು ಧೇನುಮಣಿಕನಕಾದಿ ವಸ್ತುಗಳ ॥16॥

೦೧೭ ವರ ನಿಭಾರಿಯ ...{Loading}...

ವರ ನಿಭಾರಿಯ ಬಳವಿನಲಿ ಬಲ
ಮುರಿಯ ಬಿಗಿದನು ಪದಮುಖಕೆ ಮುಂ
ಜೆರಗ ಬಿಟ್ಟನು ಬಿಗಿದ ಬದ್ದುಗೆ ದಾರ ಗೊಂಡೆಯವ
ಕಿರಣ ಲಹರಿಯ ವಜ್ರಮಾಣಿಕ
ಪರಿರಚಿತ ಭುಜಕಂಠಕರ್ಣಾ
ಭರಣ ಚರಣದ ಖಡೆಯದಲಿ ರಂಜಿಸಿದನಾ ಕರ್ಣ ॥17॥

೦೧೮ ದಿನ ಗಣನೆ ...{Loading}...

ದಿನ ಗಣನೆ ಹದಿನೆಂಟು ಕೋಟಿಯ
ಕನಕವಂದಿನ ದಿನದಿ ಚೆಲ್ಲಿದ
ನನುಪಮಿತ ಧನ ರತುನ ಭಂಡಾರವನು ತೆಗೆತೆಗಸಿ
ಮನದಣಿಯೆ ಯಾಚಕರಿಗಿತ್ತುದ
ನೆನಗೆ ಬಣ್ಣಿಸಲಳವೆ ಕೇಳೈ
ಜನಪ ಕರ್ಣನದೇನ ನಿಶ್ಚಯಿಸಿದನೊ ಮನದೊಳಗೆ ॥18॥

೦೧೯ ಹೊಳೆಹೊಳೆದವಾಭರಣ ತಾರಾ ...{Loading}...

ಹೊಳೆಹೊಳೆದವಾಭರಣ ತಾರಾ
ವಳಿಗಳಂತಿರೆ ಪೂರ್ಣಶಶಿಮಂ
ಡಲದವೊಲು ತನುಕಾಂತಿ ತಿವಿದುದು ನಿಖಿಳದಿಗುತಟವ
ತಳಿತ ವಿಕ್ರಮ ಸುಪ್ರತಾಪೋ
ಜ್ವಲಿತಸೂರ್ಯಪ್ರಭೆ ಜಗತ್ರಯ
ದೊಳಗೆ ಝಳಪಿಸೆ ಕರ್ಣನೆಸೆದನು ದಿವ್ಯತೇಜದಲಿ ॥19॥

೦೨೦ ದೇವ ಗುರು ...{Loading}...

ದೇವ ಗುರು ವಿಪ್ರರಿಗೆ ಬಹು ಸಂ
ಭಾವನೆಯ ಮಾಡಿದನು ಶಸ್ತ್ರಾ
ಸ್ತ್ರಾವಳಿಯ ತರಿಸಿದನು ತುಂಬಿಸಿದನು ವರೂಥದಲಿ
ರಾವುತರಿಗಾರೋಹಕರಿಗೆ ಭ
ಟಾವಳಿಗೆ ರಥಿಕರಿಗೆ ಚೆಲ್ಲಿದ
ನಾ ವಿವಿಧ ಸೌಗಂಧಭಾವಿತ ಯಕ್ಷ ಕರ್ದಮವ ॥20॥

೦೨೧ ನಡೆದು ಬನ್ದನು ...{Loading}...

ನಡೆದು ಬಂದನು ರಥಕೆ ದೆಸೆ ಕಂ
ಪಿಡುತ ನೆರೆದ ಮಹಾಪ್ರಧಾನರ
ನಡುವೆ ಚಲಿಸುವ ಚಾತುರಂಗದ ಸುಳಿಯ ಸಂದಣಿಯ
ಒಡನೆ ನೆಲನಳ್ಳಿರಿಯೆ ವಾದ್ಯದ
ಗಡಣ ಮೊರೆದುದು ಪಾಠಕರ ಗಡ
ಬಡಿಯ ಕಳರವ ಬಗಿದುದಬುಜಭವಾಂಡಮಂಡಲವ ॥21॥

೦೨೨ ಅತಿರಭಸದಿನ್ದಾಯ್ತು ಸೇನಾ ...{Loading}...

ಅತಿರಭಸದಿಂದಾಯ್ತು ಸೇನಾ
ಪತಿಯ ಪಯಣವಲಾ ಎನುತ ಗುರು
ಸುತ ಶಕುನಿ ಕೃತವರ್ಮ ಕೃಪ ದುಶ್ಯಾಸನಾದಿಗಳು
ವಿತತಸನ್ನಾಹದಲಿ ಕುರುಭೂ
ಪತಿಸಹಿತ ಹೊರವಂಟು ಭಾಸ್ಕರ
ಸುತನ ಸನ್ನೆಯ ಮೇಲೆ ನಡೆದರು ಮುಂದೆ ಸಂದಣಿಸಿ ॥22॥

೦೨೩ ಬಳಿಯ ನೆಲನುಗ್ಗಡಣೆಗಳ ...{Loading}...

ಬಳಿಯ ನೆಲನುಗ್ಗಡಣೆಗಳ ವೆ
ಗ್ಗಳೆಯ ಸುಭಟರ ಮೇಳದಲಿ ಬಂ
ದಿಳಿದು ದಂಡಿಗೆಯಿಂದ ನಸುನಗುತೇರಿದನು ರಥವ
ಚಳಹಯಂಗಳು ಹುರಿಯ ವಾಘೆಯ
ನಳವಡಿಸೆ ಬಲನೆಡಕೆ ವಾಜಿಯ
ಸುಳಿಸಿ ಸಾರಥಿತನವ ತೋರಿದನಂದು ಕಲಿಶಲ್ಯ ॥23॥

೦೨೪ ಬಳಿಯ ಪಾಯವಧಾರುಗಳ ...{Loading}...

ಬಳಿಯ ಪಾಯವಧಾರುಗಳ ಕಳ
ಕಳದೊಳಗೆ ರಥವೇರಿದನು ನೆಲ
ಹಿಳಿಯೆ ಹೇರಾಳಿಸಿತು ಬಹುವಿಧವಾದ್ಯನಿರ್ಘೋಷ
ತಳಿತವಮಳಚ್ಛತ್ರ ಚಮರಾ
ವಳಿಯ ಝಲ್ಲಿಯ ಪಟ್ಟಿಗಳ ನವ
ಪಳಹರಧ್ವಜ ದಂಡವೆತ್ತಿತು ವರ ರಥಾಗ್ರದಲಿ ॥24॥

೦೨೫ ಇಕ್ಕೆಲದ ರಾವುತರ ...{Loading}...

ಇಕ್ಕೆಲದ ರಾವುತರ ತೇರಿನ
ತೆಕ್ಕೆಗಳ ಗಜಘಟೆಯ ಕಾಲಾ
ಳಕ್ಕಜದ ನಿಸ್ಸಾಳ ಸೂಳಿನ ಲಗ್ಗೆದಂಬಟದ
ಉಕ್ಕಿತೋ ವಿಲಯಾಬ್ಧಿಯೆನೆ ಸಾ
ಲಿಕ್ಕಿ ನಡೆದುದು ಸೇನೆ ರಾಯನ
ಸಿಕ್ಕಿನವಸರದಾನೆ ನಿಜಪಾಳೆಯವ ಬೀಳ್ಕೊಂಡ ॥25॥

೦೨೬ ರಾಯ ಕೇಳೈ ...{Loading}...

ರಾಯ ಕೇಳೈ ಬಳಿಕ ಕಲಿರಾ
ಧೇಯ ಬರುತಿರೆ ತೋರಿದುತ್ಪಾ
ತಾಯತವನೇನೆಂಬೆನೈ ಶಿವಶಿವ ಮಹಾದೇವ
ವಾಯಸದ ತಡೆ ಭೂಮಿಕಂಪ ನಿ
ಜಾಯುಧಂಗಳ ಕಿಡಿ ಗಜಾಶ್ವನಿ
ಕಾಯ ರಥವಾಜಿಗಳ ಕಂಬನಿ ಕಾಣಲಾಯ್ತೆಂದ ॥26॥

೦೨೭ ಒದರಿದವು ನರಿ ...{Loading}...

ಒದರಿದವು ನರಿ ಮುಂದೆ ಕರ್ಣನ
ಕುದುರೆಗಳು ಮುಗ್ಗಿದವು ಪರಿವೇ
ಷದಲಿ ಸಪ್ತಗ್ರಹದ ವಕ್ರತೆ ಸೂರ್ಯಮಂಡಲಕೆ
ಇದಿರಿನಲಿ ಬಿರುಗಾಳಿ ಧೂಳಿಯ
ಕೆದರಿ ಬೀಸಿತು ನಿಖಿಳಬಲ ಮು
ಚ್ಚಿದುದು ಕಂಗಳನವನಿಪತಿ ಕಂಡನು ಮಹಾದ್ಭುತವ ॥27॥

೦೨೮ ತೃಣಕೆ ಕೊಮ್ಬನೆ ...{Loading}...

ತೃಣಕೆ ಕೊಂಬನೆ ಕರ್ಣನಿದನಾ
ರೆಣಿಸುವರು ದುಷ್ಕರ್ಮಶೇಷದ
ಋಣನಿಬದ್ಧರು ಕಂಡು ಮಾಡುವುದೇನು ಕೌರವರು
ರಣಮನೋರಾಗದಲಿ ದಳಸಂ
ದಣಿಯ ನಿಲಿಸಿದನತಿರಥರ ಲಾ
ವಣಿಗೆಗೊಂಡನು ಕರ್ಣ ಪರಿವಾರಕ್ಕೆ ಕೈಮುಗಿದು ॥28॥

೦೨೯ ನೊನ್ದವರು ನಿಲಿ ...{Loading}...

ನೊಂದವರು ನಿಲಿ ಸ್ವಾಮಿಕಾರ್ಯಕೆ
ಹಿಂದುಗಳೆವರು ಮರಳಿ ಮನೆಗಳ
ಹಿಂದಣಾಸೆಯ ಹೇವಹರುಕರಿಗಿಂದು ಮಹನವಮಿ
ನಿಂದರೊಳ್ಳಿತು ನೃಪನ ದೆಸೆಯಲಿ
ಕಂದು ಕಲೆಯುಳ್ಳವರು ಕಾಳೆಗ
ವಿಂದು ಬೆಟ್ಟಿತು ಬೀಳುಕೊಂಬುದು ಭೀತಿ ಬೇಡೆಂದ ॥29॥

೦೩೦ ಓಡಿ ನಾಚಿಸುವವರು ...{Loading}...

ಓಡಿ ನಾಚಿಸುವವರು ನಿಲಿ ರಣ
ಖೇಡರೀಗಳೆ ಮರಳಿ ಮನವ
ಲ್ಲಾಡಿ ಮರುಗುವರೇಳಿ ಮರಣದಲಾವ ಫಲಸಿದ್ಧಿ
ಕೂಡುಗಲಕರು ನಿಲ್ಲಿ ಇಹಪರ
ಗೇಡಿಗರು ಹೆರಸಾರಿ ಗುಣದಲಿ
ಬೇಡಿಕೊಂಬೆನು ಖಾತಿಗೊಳ್ಳೆನು ಹೋಗಿ ನೀವೆಂದ ॥30॥

೦೩೧ ಸನ್ದ ಸುಭಟರು ...{Loading}...

ಸಂದ ಸುಭಟರು ಬನ್ನಿ ಸ್ವರ್ಗದ
ಬಂದಿಕಾರರು ಬನ್ನಿ ಮನದಿಂ
ಮುಂದೆ ಹಜ್ಜೆಯ ತವಕಿಗರು ಬಹುದೆನ್ನ ಸಂಗಾತ
ನೊಂದಡುಬ್ಬುವರಿತ್ತು ಬನ್ನಿ ಪು
ರಂದರನ ಸರಿಗದ್ದುಗೆಗೆ ಮನ
ಸಂದವರು ಹೊಗಿ ರಣವನೆಂದನು ಕರ್ಣ ನಿಜಬಲಕೆ ॥31॥

೦೩೨ ವೀರ ಭಟರಾಹವವ ...{Loading}...

ವೀರ ಭಟರಾಹವವ ಹೊಗಿ ಜ
ಝ್ಝಾರರಿತ್ತಲು ನಡಯಿ ಕದನವಿ
ಚಾರಶೀಲರು ಮುಂದೆ ಹೋಗಿ ಮಹಾರಥಾದಿಗಳು
ಆರು ಬಲ್ಲರು ಸಮರ ಯಜ್ಞದ
ಸಾರವನು ಪಾಪಿಗಳಿರಕಟ ಶ
ರೀರವನು ಕೊಡಿ ಪಡೆಯಿ ಮುಕ್ತಿಯನೆಂದನಾ ಕರ್ಣ ॥32॥

೦೩೩ ರಾಯ ಕೇಳೈ ...{Loading}...

ರಾಯ ಕೇಳೈ ಕರ್ಪುರದ ತವ
ಲಾಯಿಗಳನೊಡೆದೊಡೆದು ಭಟರಿಗೆ
ಹಾಯಿಕಿದನಂಜುಳಿಗಳಲಿ ಮೊಗೆಮೊಗೆದು ಬೇಸರದೆ
ಸಾಯದಿಹರೇ ರಣದೊಳಗೆ ರಾ
ಧೇಯನೀ ಮನ್ನಣೆಗೆ ಬದುಕುವ
ನಾಯಿಗಿಹಪರವುಂಟೆ ಎಂದುದು ನಿಖಿಳ ಪರಿವಾರ ॥33॥

೦೩೪ ಕೇಳಿರೈ ಪರಿವಾರವಿನ್ದಿನ ...{Loading}...

ಕೇಳಿರೈ ಪರಿವಾರವಿಂದಿನ
ಕಾಳೆಗವಲೇ ನಮಗೆ ಭೀಷ್ಮರ
ಕೋಲಗುರುವಿನ ಹರಿಬವನು ಮನವಾರೆ ಹೊತ್ತೆವಲ
ಸೋಲವೋ ಕೌರವನ ಭಾಗ್ಯದ
ಕಾಲವೋ ವಿಧಿ ಬಲ್ಲದೆನ್ನಯ
ತೋಳ ಬಲುಹನು ಹಗೆಗೆ ತೋರುವೆನೆಂದನಾ ಕರ್ಣ ॥34॥

೦೩೫ ಆವ ತೋರಿಸಲಾಪನರ್ಜುನ ...{Loading}...

ಆವ ತೋರಿಸಲಾಪನರ್ಜುನ
ದೇವನನು ರಿಪುಬಲದೊಳಾತಂ
ಗೀವೆನೀ ಪದಕವನು ಖಡೆಯವ ವಜ್ರಮಾಣಿಕದ
ಆವನೀ ಫಲುಗುಣನ ತೇರಿನ
ಠಾವಿದೇ ಎಂದವಗೆ ಇದೆ ಮು
ಕ್ತಾವಳಿಯಲಂಕಾರವೆಂದನು ಕರ್ಣ ನಿಜಬಲಕೆ ॥35॥

೦೩೬ ನರನ ತೋರಿಸಿದವಗೆ ...{Loading}...

ನರನ ತೋರಿಸಿದವಗೆ ಶತ ಸಾ
ವಿರದ ಪಟ್ಟಣವರ್ಜುನನ ಮೋ
ಹರವಿದೇ ಎಂದವಗೆ ಕೊಡುವೆನು ಹತ್ತುಸಾವಿರವ
ನರನ ತೆರಳಿಚಿ ತಂದು ತನ್ನೊಡ
ನರುಹಿದಗೆ ನೂರಾನೆ ಹಯ ಸಾ
ವಿರದ ವಳಿತವ ಬರಸಿ ಕೊಡುವೆನು ರಾಯನಾಣೆಂದ ॥36॥

೦೩೭ ತೋರಿರೈ ಫಲುಗುಣನನಿದಿರಲಿ ...{Loading}...

ತೋರಿರೈ ಫಲುಗುಣನನಿದಿರಲಿ
ತೋರಿರೈ ಸಿತಹಯನನಕಟಾ
ತೋರಿರೈ ವಿಜಯನನು ನಿಮಗೆಯು ಸ್ವಾಮಿಕಾರ್ಯವಲ
ತೋರಿ ಪಾರ್ಥನನವನ ನೆತ್ತರ
ಸೂರೆ ಶಾಕಿನಿಯರಿಗೆ ನಿಮಗುರೆ
ಸೂರೆಯೋ ಭಂಡಾರ ಕೌರವ ರಾಯನಾಣೆಂದ ॥37॥

೦೩೮ ನರನ ಶರಹತಿಗೆನ್ನ ...{Loading}...

ನರನ ಶರಹತಿಗೆನ್ನ ತನು ಜ
ಝ್ಝರಿತವಾಗಲಿ ನನ್ನ ಕಣೆಯಲಿ
ಬಿರಿಯಲಾತನ ದೇಹ ಖಾಡಾಖಾಡಿಯುದ್ಧದಲಿ
ಕರುಳು ಕರುಳಲಿ ತೊಡಕಿ ನೊರೆ ನೆ
ತ್ತರಲಿ ನೆತ್ತರು ಕೂಡಿ ಕಡಿಯಲಿ
ಬೆರಸಿ ಕಡಿ ಪಲ್ಲಟಿಸೆ ಕಾದುವೆನಿಂದು ಹಗೆಯೊಡನೆ ॥38॥

೦೩೯ ಸರಳು ಸರಳಿಙ್ಗೊಮ್ಮೆ ...{Loading}...

ಸರಳು ಸರಳಿಂಗೊಮ್ಮೆ ರೋಮಾಂ
ಕುರದ ಗುಡಿಯಲಿ ರಕ್ತಜಲದಲಿ
ಕರುಳ ಹೂಮಾಲೆಯಲಿ ವೀರರಣಾಭಿಷೇಕವನು
ಧರಿಸಿ ವೈರಿಯ ಘಾಯಘಾಯದ
ಧರಧುರಕೆ ತನಿಹೆಚ್ಚಿ ಮನದು
ಬ್ಬರದಲಿರಿದಾಡಿದರೆ ದಿಟ ಕೃತಕೃತ್ಯ ತಾನೆಂದ ॥39॥

೦೪೦ ಅವನ ಮುನ್ದಲೆ ...{Loading}...

ಅವನ ಮುಂದಲೆ ತನ್ನ ಕೈಯಲಿ
ಅವನ ಕೈಯಲಿ ತನ್ನ ಮುಂದಲೆ
ಅವನ ದೇಹದ ಘಾಯವೆನ್ನಯ ಘಾಯ ಚುಂಬಿಸುತ
ಅವನ ಖಡುಗದಲೆನ್ನ ಮೈ ನಾ
ತಿವಿದ ಖಡ್ಗಕೆ ನರನ ಮೈ ಲವ
ಲವಿಸಲಡಿಮೇಲಾಗಿ ಹೊರಳ್ದರೆ ಧನ್ಯ ತಾನೆಂದ ॥40॥

೦೪೧ ಕೈದಣಿಯೆ ಹೊಯ್ದರಿಯ ...{Loading}...

ಕೈದಣಿಯೆ ಹೊಯ್ದರಿಯ ಸೀಳಿದು
ಬಾಯ್ದಣಿಯೆ ಮೂದಲಿಸಿ ಹೆಚ್ಚಿದ
ಮೈದಣಿಯೆ ರಿಪುಭಟನ ಹೊಯ್ಲಲಿ ಘಾಯವನು ಪಡೆದು
ಹಾಯ್ದ ಕರುಳಿನ ಮಿದುಳ ಜೋರಿನ
ತೊಯ್ದ ರಕ್ತಾಂಬರದಿ ತಾನಿರ
ಲೈದಿ ಕುರುಪತಿ ಕಂಡನಾದರೆ ಧನ್ಯ ತಾನೆಂದ ॥41॥

೦೪೨ ನರನ ರಕುತದ ...{Loading}...

ನರನ ರಕುತದ ಮದ್ಯಪಾನವ
ನೆರೆದು ಶಾಕಿನಿಯರಿಗೆ ಪಾರ್ಥನ
ಕರುಳ ದೊಂಡೆಯ ಕೂಳ ಮುದ್ದೆಯ ಬಡಿಸಿ ದೈತ್ಯರಿಗೆ
ಅರಿಯ ಖಂಡದಿ ಹಸಿಯ ಸುಂಟಿಗೆ
ವೆರಸಿ ಭೂತಾವಳಿಯ ದಣಿಸಿದ
ಡರಸು ಕೌರವನೆನ್ನ ಸಾಕಿತಕಿಂದು ಫಲವೆಂದ ॥42॥

+೦೮ ...{Loading}...