೦೦೦ ಸೂಚನೆ ನಗರ ...{Loading}...
ಸೂಚನೆ: ನಗರ ಮೂರರ ದೂರುಕಾರರ
ದುಗುಡವನು ಪರಿಹರಿಸಿ ಕರುಣಾ
ಳುಗಳರಸ ಶಿವ ಸಂತವಿಟ್ಟನು ಸುರ ಕದಂಬಕವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ. ಕರುಣಾಳುಗಳ ಅರಸನಾದ ಶಿವನು ಮೂರು ನಗರಗಳ ಬಗ್ಗೆ ದೂರು ನೀಡಿದ ದೇವತೆಗಳ ದುಃಖವನ್ನು ಪರಿಹರಿಸಿ, ಅವರ ಸಮೂಹವನ್ನು ಸಂತೋಷಪಡಿಸಿದನು.
ಪದಾರ್ಥ (ಕ.ಗ.ಪ)
ಕದಂಬಕ- ಸಮೂಹ
ಮೂಲ ...{Loading}...
ಸೂಚನೆ: ನಗರ ಮೂರರ ದೂರುಕಾರರ
ದುಗುಡವನು ಪರಿಹರಿಸಿ ಕರುಣಾ
ಳುಗಳರಸ ಶಿವ ಸಂತವಿಟ್ಟನು ಸುರ ಕದಂಬಕವ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ನೃಪತಿ ಶಲ್ಯಗೆ
ಹೇಳಿದನು ಸಾರಥ್ಯ ಸಂಯೋಜನ ಸಮಾಹಿತವ
ಲೋಲನಾಪರಿಕರ್ಮತರು ನಿ
ರ್ಮೂಲನೈಕಕ್ಷಮ ಸುಧಾಕರ
ಮೌಳಿ ಕೇಳೀ ಕಲಿತ ವಿಸ್ತರ ವರ ಕಥಾಂತರವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರಿತ್ರೀಪಾಲನಾದ ಜನಮೇಜಯನೇ ಕೇಳು; ಸಂಸಾರವೆಂಬ ವೃಕ್ಷದ ಬೇರನ್ನು ಕತ್ತರಿಸುವ ಸಾಮಥ್ರ್ಯ ಉಳ್ಳ , ಚಂದ್ರನನ್ನು ಧರಿಸಿರುವ, ಲೀಲೆಯಿಂದ ಕೂಡಿದ ಶಿವನ ರಥದ ಸಾರಥ್ಯದ ವಿವರವನ್ನು ಕುರಿತ ಶ್ರೇಷ್ಠವಾದ ಕಥಾಂತರವನ್ನು ಕೌರವ ನೃಪತಿಯು ಶಲ್ಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಲೋಲನಾಪರಿಕರ್ಮತರು- ಸಂಸಾರವೆಂಬ ವೃಕ್ಷ
ಕೇಳೀ ಕಲಿತ - ಲೀಲೆಯಿಂದ ಕೂಡಿದ.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ನೃಪತಿ ಶಲ್ಯಗೆ
ಹೇಳಿದನು ಸಾರಥ್ಯ ಸಂಯೋಜನ ಸಮಾಹಿತವ
ಲೋಲನಾಪರಿಕರ್ಮತರು ನಿ
ರ್ಮೂಲನೈಕಕ್ಷಮ ಸುಧಾಕರ
ಮೌಳಿ ಕೇಳೀ ಕಲಿತ ವಿಸ್ತರ ವರ ಕಥಾಂತರವ ॥1॥
೦೦೨ ತಾರಕನ ಮಕ್ಕಳುಗಳೆನಿಸುವ ...{Loading}...
ತಾರಕನ ಮಕ್ಕಳುಗಳೆನಿಸುವ
ತಾರಕಾಕ್ಷನು ಕಮಳಲೋಚನ
ವೀರ ವಿದ್ಯುನ್ಮಾಲಿಯೆಂಬೀ ಮೂವರತಿಬಳರು
ಘೋರತರ ಸುತಪಃಪ್ರಭಾವಿ
ಸ್ತಾರಿಗಳಸಂಖ್ಯಾತಯುಗದಲಿ
ವಾರಿಜೋದ್ಭವನನು ವಶೀಕರಿಸಿದರು ಭಕುತಿಯಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾರಕನ ಮಕ್ಕಳಾದ ತಾರಕಾಕ್ಷ, ಕಮಲಲೋಚನ ಮತ್ತು ವೀರನಾದ ವಿದ್ಯುನ್ಮಾಲಿ ಎಂಬ ಮೂವರು ಅತಿಪರಾಕ್ರಮಿಗಳು, ಎಣಿಸಲಾದಷ್ಟು ಯುಗಗಳ ಕಾಲ ಘೋರತರವಾದ ಉತ್ತಮ ತಪಸ್ಸನ್ನು ಮಾಡಿ ಅದರ ಪ್ರಭೆಯನ್ನು ವಿಸ್ತರಿಸಿ ಬ್ರಹ್ಮನನ್ನು ಭಕ್ತಿಯಿಂದ ಒಲಿಸಿಕೊಂಡರು.
ಮೂಲ ...{Loading}...
ತಾರಕನ ಮಕ್ಕಳುಗಳೆನಿಸುವ
ತಾರಕಾಕ್ಷನು ಕಮಳಲೋಚನ
ವೀರ ವಿದ್ಯುನ್ಮಾಲಿಯೆಂಬೀ ಮೂವರತಿಬಳರು
ಘೋರತರ ಸುತಪಃಪ್ರಭಾವಿ
ಸ್ತಾರಿಗಳಸಂಖ್ಯಾತಯುಗದಲಿ
ವಾರಿಜೋದ್ಭವನನು ವಶೀಕರಿಸಿದರು ಭಕುತಿಯಲಿ ॥2॥
೦೦೩ ಬನ್ದು ಕಮಲಜನಿವದಿರಿದಿರಲಿ ...{Loading}...
ಬಂದು ಕಮಲಜನಿವದಿರಿದಿರಲಿ
ನಿಂದನೆಲೆ ಋಷಿಗಳಿರ ಸಾಕಿ
ನ್ನೆಂದು ಪರಿಯಂತೀ ತಪೋನುಷ್ಠಾನದಾಯಾಸ
ನಿಂದು ಬೇಡುವುದೊಲಿದುದನು ನಾ
ವಿಂದು ಸಲಿಸುವೆವೆನಲು ನಿಮಿಷಕೆ
ಕಂದೆರೆದು ಕಮಳಾಸನಂಗೆರಗಿದರು ಭಕ್ತಿಯಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಹ್ಮನು ಬಂದು ಅವರ ಎದುರಿನಲ್ಲಿ ನಿಂತು, ‘ಎಲೆ ಋಷಿಗಳಿರಾ, ಇನ್ನು ಸಾಕು. ಎಲ್ಲಿಯವರೆಗೆ ಈ ತಪೋನುಷ್ಠಾನದ ಆಯಾಸ? ಇದನ್ನು ನಿಲ್ಲಿಸಿ. ನಿಮಗೆ ಬೇಕಾದುದನ್ನು ಬೇಡಿರಿ. ನಾನು ಅದನ್ನು ಪ್ರೀತಿಯಿಂದ ಈಡೇರಿಸುತ್ತೇನೆ’ ಎಂದು ಹೇಳಲು ಅವರು ಕೂಡಲೇ ಕಣ್ಣುಗಳನ್ನು ತೆರೆದು ಅವನಿಗೆ ಭಕ್ತಿಯಿಂದ ನಮಸ್ಕರಿಸಿದರು.
ಮೂಲ ...{Loading}...
ಬಂದು ಕಮಲಜನಿವದಿರಿದಿರಲಿ
ನಿಂದನೆಲೆ ಋಷಿಗಳಿರ ಸಾಕಿ
ನ್ನೆಂದು ಪರಿಯಂತೀ ತಪೋನುಷ್ಠಾನದಾಯಾಸ
ನಿಂದು ಬೇಡುವುದೊಲಿದುದನು ನಾ
ವಿಂದು ಸಲಿಸುವೆವೆನಲು ನಿಮಿಷಕೆ
ಕಂದೆರೆದು ಕಮಳಾಸನಂಗೆರಗಿದರು ಭಕ್ತಿಯಲಿ ॥3॥
೦೦೪ ಎನಿತನೊಲಿದಡೆ ಏನಹುದು ...{Loading}...
ಎನಿತನೊಲಿದಡೆ ಏನಹುದು ದು
ರ್ಜನರು ಪುರುಷಾರ್ಥಿಗಳೆ ಹಾವಿಂ
ಗನಿಲವೇ ಆಹಾರವಾದಡೆ ಬಿಟ್ಟುದೇ ವಿಷವ
ದನುಜರದ್ಭುತ ತಪವ ಮಾಡಿದ
ರನಿಮಿಷಾವಳಿ ಬೇಂಟೆಯಾಡಲು
ನೆನೆದು ಬಿನ್ನೈಸಿದರು ಕಮಲಭವಂಗೆ ನಿಜಮತವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದುರ್ಜನರಿಗೆ ಎಷ್ಟು ಕೃಪೆ ಮಾಡಿದರೆ ಪ್ರಯೋಜನವೇನು? ಅವರು ಪುರುಷಾರ್ಥಿಗಳಾಗುತ್ತಾರೆಯೆ? ಹಾವಿಗೆ ಗಾಳಿಯೇ ಆಹಾರವಾದರೂ ಅದು ತನ್ನ ವಿಷವನ್ನು ಬಿಡುತ್ತದೆಯೆ? ರಾಕ್ಷಸರು ಅದ್ಭುತ ತಪಸ್ಸನ್ನು ಮಾಡಿದರೂ, ಅವರು ದೇವತೆಗಳನ್ನು ಬೇಟೆಯಾಡಲು ಉದ್ದೇಶಿಸಿದ್ದಾರೆ. " ಎಂದು ತಮ್ಮ ಅಭಿಪ್ರಾಯವನ್ನು ಬ್ರಹ್ಮನಲ್ಲಿ ವಿಜ್ಞಾಪಿಸಿದರು
ಮೂಲ ...{Loading}...
ಎನಿತನೊಲಿದಡೆ ಏನಹುದು ದು
ರ್ಜನರು ಪುರುಷಾರ್ಥಿಗಳೆ ಹಾವಿಂ
ಗನಿಲವೇ ಆಹಾರವಾದಡೆ ಬಿಟ್ಟುದೇ ವಿಷವ
ದನುಜರದ್ಭುತ ತಪವ ಮಾಡಿದ
ರನಿಮಿಷಾವಳಿ ಬೇಂಟೆಯಾಡಲು
ನೆನೆದು ಬಿನ್ನೈಸಿದರು ಕಮಲಭವಂಗೆ ನಿಜಮತವ ॥4॥
೦೦೫ ರಚಿಸುವೆವು ಪುರಮೂರನಗ್ಗದ ...{Loading}...
ರಚಿಸುವೆವು ಪುರಮೂರನಗ್ಗದ
ಖಚರ ಕಿನ್ನರ ಸಿದ್ಧ ನಿರ್ಜರ
ನಿಚಯವೆಮಗೋಲೈಸಿ ಹೋಗಲಿ ಹಲವುಮಾತೇನು
ಉಚಿತದಲಿ ನಿಮ್ಮಡಿಗಳನು ಪರಿ
ರಚಿಸಲಾವೋಲೈಸುವೆವು ವರ
ವಚನ ನಿಮ್ಮದು ಕರುಣಿಸುವುದಮರತ್ವವನು ನಮಗೆ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಪಸ್ಸನ್ನು ಮಾಡಿದ ರಾಕ್ಷಸರು ‘ಶ್ರೇಷ್ಠವಾದ ಮೂರು ಪುರಗಳನ್ನು ರಚಿಸುತ್ತೇವೆ. ಆಕಾಶಗಾಮಿಗಳು, ಕಿನ್ನರರು, ಸಿದ್ಧರು ಹಾಗೂ ದೇವತೆಗಳ ಸಮೂಹಗಳು ನಮ್ಮನ್ನು ಓಲೈಸಬೇಕು. ಹಲವು ಮಾತೇನು. ಕ್ರಮವಾಗಿ ನಿಮ್ಮನ್ನು ಪ್ರಾರ್ಥಿಸಿದರೆ ನೀವು ಓಲೈಸುವುದಾಗಿ ವಚನ ನೀಡಿದ್ದೀರಿ. ನಮಗೆ ಅಮರತ್ವವನ್ನು ಕರುಣಿಸಬೇಕು’. ಎಂದು ಬ್ರಹ್ಮನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ನಿಚಯ- ಸಮೂಹ
ಮೂಲ ...{Loading}...
ರಚಿಸುವೆವು ಪುರಮೂರನಗ್ಗದ
ಖಚರ ಕಿನ್ನರ ಸಿದ್ಧ ನಿರ್ಜರ
ನಿಚಯವೆಮಗೋಲೈಸಿ ಹೋಗಲಿ ಹಲವುಮಾತೇನು
ಉಚಿತದಲಿ ನಿಮ್ಮಡಿಗಳನು ಪರಿ
ರಚಿಸಲಾವೋಲೈಸುವೆವು ವರ
ವಚನ ನಿಮ್ಮದು ಕರುಣಿಸುವುದಮರತ್ವವನು ನಮಗೆ ॥5॥
೦೦೬ ಹಾ ಮಹಾದೇವೀ ...{Loading}...
ಹಾ ಮಹಾದೇವೀ ಕುಠಾರರ
ತಾಮಸದ ನೆನಹಿದ್ದ ಪರಿಯಿಂ
ತೀ ಮಹಾನುಷ್ಠಾನವಿದರಲಿ ಶಾಂತಿ ಲವವಿಲ್ಲ
ಕಾಮಿತವನಿವದಿರಿಗೆ ಕೊಟ್ಟರೆ
ಕಾಮಹರ ಕಮಳಾಕ್ಷರಿಗೆ ಸಂ
ಗ್ರಾಮದಲಿ ಜಯವಾಗದೆಂದಡಿಗಡಿಗೆ ಬೆರಗಾದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಾ ಮಹಾದೇವ, ಈ ಒರಟರ ತಮೋಗುಣದ ಯೋಚನೆಯ ಕ್ರಮ ಹೀಗೆ. ಅದಕ್ಕೆ ಈ ಮಹಾ ತಪಸ್ಸು. ಇದರಲ್ಲಿ ಶಾಂತಿಯು ಸ್ವಲ್ಪವೂ ಇಲ್ಲ. ಇವರು ಬಯಸುತ್ತಿರುವುzನ್ನು ಕೊಟ್ಟುಬಿಟ್ಟರೆ ಯುದ್ಧದಲ್ಲಿ ಶಿವ, ವಿಷ್ಣು ಅವರಿಗೆ ಜಯವಾಗುವುದಿಲ್ಲ " ಎಂದು ಬ್ರಹ್ಮನು ಹೆಜ್ಜೆ ಹೆಜ್ಜೆಗೆ ಬೆರಗಾದನು.
ಪದಾರ್ಥ (ಕ.ಗ.ಪ)
ಕುಠಾರ- ನಾಶ ಮಾಡುವª.
ಮೂಲ ...{Loading}...
ಹಾ ಮಹಾದೇವೀ ಕುಠಾರರ
ತಾಮಸದ ನೆನಹಿದ್ದ ಪರಿಯಿಂ
ತೀ ಮಹಾನುಷ್ಠಾನವಿದರಲಿ ಶಾಂತಿ ಲವವಿಲ್ಲ
ಕಾಮಿತವನಿವದಿರಿಗೆ ಕೊಟ್ಟರೆ
ಕಾಮಹರ ಕಮಳಾಕ್ಷರಿಗೆ ಸಂ
ಗ್ರಾಮದಲಿ ಜಯವಾಗದೆಂದಡಿಗಡಿಗೆ ಬೆರಗಾದ ॥6॥
೦೦೭ ಹುಲಿಗೆ ಧೈರ್ಯವನೆರಕೆಗಳನಹಿ ...{Loading}...
ಹುಲಿಗೆ ಧೈರ್ಯವನೆರಕೆಗಳನಹಿ
ಗಳಿಗೆ ಖಳರಿಗೆ ಲಕ್ಷ್ಮಿಯನು ಕ
ತ್ತಲೆಗೆ ಕಾಠಿಣ್ಯವನು ಚೈತನ್ಯವನು ಗಿರಿಗಳಿಗೆ
ಕೊಲೆಗಡಿಕರಿಗೆ ನಿತ್ಯದೇಹವ
ನೊಲಿದು ಕೊಟ್ಟರೆ ಲೇಸು ಬಳಿಕೇ
ನೆಲೆ ಮಹಾದೇವೇನ ನೆನೆದರೊ ಶಿವಶಿವಾ ಎಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹುಲಿಗೆ ಧೈರ್ಯವನ್ನು, ಹಾವುಗಳಿಗೆ ರೆಕ್ಕೆಗಳನ್ನು, ದುಷ್ಟರಿಗೆ ಲಕ್ಷ್ಮಿಯನ್ನು, ಕತ್ತಲೆಗೆ ಕಠಿಣತೆಯನ್ನು, ಬೆಟ್ಟಗಳಿಗೆ ಚೈತನ್ಯವನ್ನು, ಕೊಲೆಗಡುಕರಿಗೆ ಅಮರತ್ವವನ್ನು ಪ್ರೀತಿಯಿಂದಲೇ ಕೊಟ್ಟರೂ ಆಮೇಲೆ ಯಾವ ಒಳ್ಳೆಯದು ಉಳಿಯಲು ಸಾಧ್ಯ? ಎಲೆ ಮಹಾದೇವ, ಇವರು ಏನನ್ನು ಯೋಚಿಸಿದ್ದಾರೆಯೊ! ಶಿವಶಿವಾ! ಎಂದು ಬ್ರಹ್ಮನು ಎಂದುಕೊಂಡನು.
ಪದಾರ್ಥ (ಕ.ಗ.ಪ)
ಎರಕೆ- ರೆಕ್ಕೆ.
ನಿತ್ಯದೇಹ- ಅಮರತ್ವ.
ಮೂಲ ...{Loading}...
ಹುಲಿಗೆ ಧೈರ್ಯವನೆರಕೆಗಳನಹಿ
ಗಳಿಗೆ ಖಳರಿಗೆ ಲಕ್ಷ್ಮಿಯನು ಕ
ತ್ತಲೆಗೆ ಕಾಠಿಣ್ಯವನು ಚೈತನ್ಯವನು ಗಿರಿಗಳಿಗೆ
ಕೊಲೆಗಡಿಕರಿಗೆ ನಿತ್ಯದೇಹವ
ನೊಲಿದು ಕೊಟ್ಟರೆ ಲೇಸು ಬಳಿಕೇ
ನೆಲೆ ಮಹಾದೇವೇನ ನೆನೆದರೊ ಶಿವಶಿವಾ ಎಂದ ॥7॥
೦೦೮ ಪುರವ ವಿರಚಿಸಿ ...{Loading}...
ಪುರವ ವಿರಚಿಸಿ ದಿವ್ಯ ಸಾಸಿರ
ವರುಷ ಕೈಗೂಡಿದರೆ ಒಂದೇ
ಸರಳಲಾವವನೆಚ್ಚಡಾಗಳೆ ನಿಮಗೆ ಕಡೆಗಾಲ
ಬರಲಿ ಬಳಿಕಿಂದ್ರಾದಿ ನಿರ್ಜರ
ನೊರಜುಗಳ ನೀವ್ ಸದೆಯಿ ಹೋಗೆಂ
ದರಸ ಕೇಳೈ ಕೊಟ್ಟನವರಿಗೆ ಕಮಲಭವ ವರವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನೇ ಕೇಳು ‘ಪುರವನ್ನು ವಿರಚಿಸಿ ದೇವಲೋಕದ ಸಾವಿರ ವರ್ಷಗಳು ತುಂಬಿದಾಗ, ಯಾರಾದರೂ ಒಂದೇ ಬಾಣದಲ್ಲಿ ನಿಮ್ಮನ್ನು ಹೊಡೆದಾಗ ಮಾತ್ರ ನಿಮಗೆ ಕಡೆಗಾಲ ಬರಲಿ. ಪುರವನ್ನು ರಚಿಸಿದ ಬಳಿಕ ಇಂದ್ರ ಮೊದಲಾದ ಅಲ್ಪ ದೇವತೆಗಳನ್ನು ನೀವು ಸದೆಬಡಿಯಿರಿ, ಹೋಗಿ’ ಎಂದು ಅವರಿಗೆ ಬ್ರಹ್ಮನು ವರವನ್ನು ಕೊಟ್ಟನು.” ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ನೊರಜು- ಸೊಳ್ಳೆ. ಅಲ್ಪಜೀವಿ.
ಮೂಲ ...{Loading}...
ಪುರವ ವಿರಚಿಸಿ ದಿವ್ಯ ಸಾಸಿರ
ವರುಷ ಕೈಗೂಡಿದರೆ ಒಂದೇ
ಸರಳಲಾವವನೆಚ್ಚಡಾಗಳೆ ನಿಮಗೆ ಕಡೆಗಾಲ
ಬರಲಿ ಬಳಿಕಿಂದ್ರಾದಿ ನಿರ್ಜರ
ನೊರಜುಗಳ ನೀವ್ ಸದೆಯಿ ಹೋಗೆಂ
ದರಸ ಕೇಳೈ ಕೊಟ್ಟನವರಿಗೆ ಕಮಲಭವ ವರವ ॥8॥
೦೦೯ ಕರುಣವಿನಿತೇ ಸಾಕು ...{Loading}...
ಕರುಣವಿನಿತೇ ಸಾಕು ನಮಗೇ
ನುರದಲೊಗೆದವೆ ಮೊಲೆಗಳೆಮ್ಮಯ
ಪುರವನೊಂದಂಬಿನಲಿ ಗೆಲುವನ ತಾಯಿ ಹುಸಿಯೆನುತ
ದುರುಳರೀತನ ಬೀಳುಕೊಂಡು
ಬ್ಬರದ ಹರುಷದಿ ಹೆಚ್ಚಿ ಮಯನನು
ಕರಸಿ ಮಾಡಿಸಿದರು ಮಹಾ ವಿಭವದಲಿ ನಗರಗಳ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇಷ್ಟು ಕರುಣೆಯೇ ಸಾಕು. ನಾವೇನು ಹೇಡಿಗಳೇ ? ನಮ್ಮ ಪುರªನ್ನು ಒಂದು ಬಾಣದಲ್ಲಿ ಗೆಲುವವನು ಈ ಭೂಮಿಯಲ್ಲಿ ಹುಟ್ಟುವುದೇ ಸುಳ್ಳು’ ಎನ್ನುತ್ತ ಆ ದುರುಳರು ಬ್ರಹ್ಮನನ್ನು ಬೀಳುಕೊಂಡು ಹೆಚ್ಚಾದ ಹರ್ಷದಿಂದ ದೇವಶಲ್ಪಿ ಮಯನನ್ನು ಕರಸಿ ಮಹಾ ವೈಭವದಿಂದ ನಗರಗಳನ್ನು ನಿರ್ಮಿಸಿದರು.
ಪದಾರ್ಥ (ಕ.ಗ.ಪ)
ಉಬ್ಬರ- ಹೆಚ್ಚು.
ಮೂಲ ...{Loading}...
ಕರುಣವಿನಿತೇ ಸಾಕು ನಮಗೇ
ನುರದಲೊಗೆದವೆ ಮೊಲೆಗಳೆಮ್ಮಯ
ಪುರವನೊಂದಂಬಿನಲಿ ಗೆಲುವನ ತಾಯಿ ಹುಸಿಯೆನುತ
ದುರುಳರೀತನ ಬೀಳುಕೊಂಡು
ಬ್ಬರದ ಹರುಷದಿ ಹೆಚ್ಚಿ ಮಯನನು
ಕರಸಿ ಮಾಡಿಸಿದರು ಮಹಾ ವಿಭವದಲಿ ನಗರಗಳ ॥9॥
೦೧೦ ಕನಕದಲಿ ರಜತದಲಿ ...{Loading}...
ಕನಕದಲಿ ರಜತದಲಿ ಬಲುಗ
ಬ್ಬುನದಲೊಂದೊಂದಕ್ಕೆ ಶತ ಯೋ
ಜನದ ತೆರಹುಗಳೆಡೆಗೆ ಹಬ್ಬಿಸುವಮಳ ತೋರಣದ
ವಿನುತ ನಗರಿಗಳಾದುವಲ್ಲಿಯ
ದನುಜರೆರೆಗಳ ಹಾಯ್ಕಿ ಗಾಣದ
ಲನಿಮಿಷರನೀಡಾಡಿಕೊಂಡರು ದುರ್ಗವನು ಸುರರ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಗರಗಳ ನಡುವೆ ನೂರು ಯೋಜನಗಳ ಅಂತರವಿರುವಂತೆ ನಿರ್ಮಲವಾದ ತೋರಣವಿರುವ ಚಿನ್ನ, ಬೆಳ್ಳಿ ಮತ್ತು ಕಬ್ಬಿಣಗಳ ಪ್ರಸಿದ್ಧವಾದ ನಗರಗಳು ನಿರ್ಮಾಣವಾದವು. ರಾಕ್ಷಸರು ದೇವತೆಗಳನ್ನು ಗಾಣದಲ್ಲಿ ಎರೆಹುಳುಗಳಂತೆ ಒಡ್ಡಿ ಚೆಲ್ಲಾಡಿ ಅವರ ದುರ್ಗವನ್ನು ವಶಪಡಿಸಿಕೊಂಡರು.
ಪದಾರ್ಥ (ಕ.ಗ.ಪ)
ಎರೆ- ಎರೆಹುಳು.
ಮೂಲ ...{Loading}...
ಕನಕದಲಿ ರಜತದಲಿ ಬಲುಗ
ಬ್ಬುನದಲೊಂದೊಂದಕ್ಕೆ ಶತ ಯೋ
ಜನದ ತೆರಹುಗಳೆಡೆಗೆ ಹಬ್ಬಿಸುವಮಳ ತೋರಣದ
ವಿನುತ ನಗರಿಗಳಾದುವಲ್ಲಿಯ
ದನುಜರೆರೆಗಳ ಹಾಯ್ಕಿ ಗಾಣದ
ಲನಿಮಿಷರನೀಡಾಡಿಕೊಂಡರು ದುರ್ಗವನು ಸುರರ ॥10॥
೦೧೧ ಸೂರೆವೋಯಿತು ಸುರಪತಿಯ ...{Loading}...
ಸೂರೆವೋಯಿತು ಸುರಪತಿಯ ಭಂ
ಡಾರ ಹೆಂಡಿರುಸಹಿತ ನಿರ್ಜರ
ನಾರಿಯರು ತೊತ್ತಾದರಮರಾರಿಗಳ ಮನೆಗಳಿಗೆ
ಮೂರು ಭುವನದೊಳಿವದಿರಾಣೆಯ
ಮೀರಿ ಬದುಕುವರಿಲ್ಲ ಕಡೆಯಲಿ
ತಾರಕನ ಮಕ್ಕಳಿಗೆ ಕೈವರ್ತಿಸಿತು ಜಗವೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇವೇಂದ್ರನ ಭಂಡಾರವು ಅವನ ಹೆಂಡಿರುಸಹಿತ ಸೂರೆಹೋಯಿತು. ದೇವತಾಸ್ತ್ರೀಯರು ರಾಕ್ಷಸರ ಮನೆಗಳ ಆಳುಗಳಾದರು. ಮೂರು ಲೋಕಗಳಲ್ಲಿ ಇವರ ಆಜ್ಞೆಯನ್ನು ಮೀರಿ ಬದುಕುವರಿರಲಿಲ್ಲ. ಕೊನೆಗೆ ಇಡೀ ಜಗತ್ತು ತಾರಕನ ಮಕ್ಕಳಿಗೆ ಕೈವಶವಾಯಿತು” ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಕೈವರ್ತಿಸು- ಕೈವಶವಾಗು.
ಮೂಲ ...{Loading}...
ಸೂರೆವೋಯಿತು ಸುರಪತಿಯ ಭಂ
ಡಾರ ಹೆಂಡಿರುಸಹಿತ ನಿರ್ಜರ
ನಾರಿಯರು ತೊತ್ತಾದರಮರಾರಿಗಳ ಮನೆಗಳಿಗೆ
ಮೂರು ಭುವನದೊಳಿವದಿರಾಣೆಯ
ಮೀರಿ ಬದುಕುವರಿಲ್ಲ ಕಡೆಯಲಿ
ತಾರಕನ ಮಕ್ಕಳಿಗೆ ಕೈವರ್ತಿಸಿತು ಜಗವೆಂದ ॥11॥
೦೧೨ ನೆರೆದುದಮರರು ಹಾಳು ...{Loading}...
ನೆರೆದುದಮರರು ಹಾಳು ಹರಿ ಸಾ
ಗರದ ಕಡೆಯಲಿ ರೂಹುಗಳೆದು
ಟ್ಟರುವೆಗಳ ಕಾಳಿಕೆಯ ಮೋರೆಯ ತಾರಿದೊಡಲುಗಳ
ಹುರಿದ ಧೈರ್ಯದ ತಳ್ಳವಾರುವ
ತರಳ ಹೃದಯದ ದೇವರಿಂದ್ರನ
ನರಸಿ ಕಂಡರು ತಮ್ಮೊಳಾಳೋಚನೆಯ ಮಾಡಿದರು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಳುಬಿದ್ದ ಸಾಗರದ ಕಡೆಯಲ್ಲಿ ಆಕಾರಗೆಟ್ಟ ಬಟ್ಟೆಗಳನ್ನು ಉಟ್ಟಿರುವ ಕಪ್ಪಿಟ್ಟ ಮುಖದ ಒಣಗಿದ ದೇಹಗಳ ಹುರಿದ ಧೈರ್ಯದ, ಶಕ್ತಿಗುಂದಿದ, ಗಾಬರಿಯ ಹೃದಯದ, ದೇವತೆಗಳು ಇಂದ್ರನನ್ನು ಹುಡುಕಿ ಕಂಡರು. ತಮ್ಮೊಳಗೆ ಆಲೋಚನೆಯನ್ನು ಮಾಡಿದರು.
ಪದಾರ್ಥ (ಕ.ಗ.ಪ)
ತಾರು- ಒಣಗು.
ತಳ್ಳವಾರು- ಶಕ್ತಿಗುಂದು
ಮೂಲ ...{Loading}...
ನೆರೆದುದಮರರು ಹಾಳು ಹರಿ ಸಾ
ಗರದ ಕಡೆಯಲಿ ರೂಹುಗಳೆದು
ಟ್ಟರುವೆಗಳ ಕಾಳಿಕೆಯ ಮೋರೆಯ ತಾರಿದೊಡಲುಗಳ
ಹುರಿದ ಧೈರ್ಯದ ತಳ್ಳವಾರುವ
ತರಳ ಹೃದಯದ ದೇವರಿಂದ್ರನ
ನರಸಿ ಕಂಡರು ತಮ್ಮೊಳಾಳೋಚನೆಯ ಮಾಡಿದರು ॥12॥
೦೧೩ ತಾರಕನ ಮಕ್ಕಳುಗಳೇ ...{Loading}...
ತಾರಕನ ಮಕ್ಕಳುಗಳೇ ಹಿಂ
ದಾರ ಗೆಲಿದರು ತಪವ ಮಾಡಿ ವಿ
ಕಾರಿಗಳು ಬ್ರಹ್ಮಂಗೆ ಬಂದಿಯನಿಕ್ಕಿದರು ಬಳಿಕ
ವಾರಿಜೋದ್ಭವ ಮೇಲನರಿಯ ಕು
ಠಾರ ನಾಯ್ಗಳ ಹೆಚ್ಚಿಸಿದನಿದ
ನಾರಿಗರುಪುವುವೆವೆಂದು ಸುಯ್ದರು ಬಯ್ದು ಕಮಲಜನ ॥ 13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾರಕನ ಮಕ್ಕಳು ಹಿಂದೆ ಯಾರನ್ನು ಗೆದ್ದಿದ್ದರು? ಈ ವಿಕಾರಿಗಳು ತಪಸ್ಸು ಮಾಡಿ ಬ್ರಹ್ಮನಿಗೆ ನಿರ್ಬಂಧ ಹೇರಿದ್ದಾರೆ. ಒಳ್ಳೆಯದು ಯಾವುದು ಎಂಬುದನ್ನು ತಿಳಿಯದ ಬ್ರಹ್ಮನು ಈ ಒರಟು ನಾಯಿಗಳನ್ನು ಹೆಚ್ಚಿಸಿದ್ದಾನೆ. ಇದನ್ನು ಯಾರಿಗೆ ಅರಿಕೆಮಾಡೋಣ” ಎಂದು ಅವರು ಬ್ರಹ್ಮನನ್ನು ಬಯ್ದು ನಿಟ್ಟ್ಟುಸಿರಿಟ್ಟರು.
ಮೂಲ ...{Loading}...
ತಾರಕನ ಮಕ್ಕಳುಗಳೇ ಹಿಂ
ದಾರ ಗೆಲಿದರು ತಪವ ಮಾಡಿ ವಿ
ಕಾರಿಗಳು ಬ್ರಹ್ಮಂಗೆ ಬಂದಿಯನಿಕ್ಕಿದರು ಬಳಿಕ
ವಾರಿಜೋದ್ಭವ ಮೇಲನರಿಯ ಕು
ಠಾರ ನಾಯ್ಗಳ ಹೆಚ್ಚಿಸಿದನಿದ
ನಾರಿಗರುಪುವುವೆವೆಂದು ಸುಯ್ದರು ಬಯ್ದು ಕಮಲಜನ ॥ 13॥
೦೧೪ ಆದರೆಯು ನಮಗಾತನೇ ...{Loading}...
ಆದರೆಯು ನಮಗಾತನೇ ಗತಿ
ಯೀ ದುರಾತ್ಮರಿಗೆಂದು ಹರಿವೆಂ
ದಾದರಿಸಿ ಕೇಳುವೆವೆನುತ ಕಮಲಜನ ಹೊರೆಗೈದಿ
ಖೇದವನುಸುರಿದರು ಪಿತಾಮಹ
ನಾ ದಿವಿಜಗಣ ಸಹಿತ ಬಂದನು
ವೇದಸಿದ್ಧ ವಿಶುದ್ಧ ದೈವವ ಕಾಬ ತವಕದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೂ, ‘ನಮಗೆ ಆತನೇ ಗತಿ. ಈ ದುರಾತ್ಮರ ನಾಶ ಯಾವಾಗ ಎಂದು ಆದರಿಸಿ ಕೇಳುತ್ತೇವೆ’ ಎನ್ನುತ್ತ ಬ್ರಹ್ಮನ ಬಳಿ ಹೋಗಿ ತಮ್ಮ ಸಂಕಟವನ್ನು ಹೇಳಿಕೊಂಡರು. ಬ್ರಹ್ಮನು, ವೇದಸಿದ್ಧ ವಿಶುದ್ಧ ದೈವವಾದ ಶಿವನನ್ನು ಕಾಣುವ ತವಕದಿಂದ ದೇವತೆಗಳನ್ನೊಡಗೂಡಿ ಕೈಲಾಸಕ್ಕೆ ಬಂದನು.
ಪದಾರ್ಥ (ಕ.ಗ.ಪ)
ಹರಿವು- ನಾಶ.
ಮೂಲ ...{Loading}...
ಆದರೆಯು ನಮಗಾತನೇ ಗತಿ
ಯೀ ದುರಾತ್ಮರಿಗೆಂದು ಹರಿವೆಂ
ದಾದರಿಸಿ ಕೇಳುವೆವೆನುತ ಕಮಲಜನ ಹೊರೆಗೈದಿ
ಖೇದವನುಸುರಿದರು ಪಿತಾಮಹ
ನಾ ದಿವಿಜಗಣ ಸಹಿತ ಬಂದನು
ವೇದಸಿದ್ಧ ವಿಶುದ್ಧ ದೈವವ ಕಾಬ ತವಕದಲಿ ॥14॥
೦೧೫ ಬನ್ದು ಕೈಲಾಸಾದ್ರಿಯಲಿ ...{Loading}...
ಬಂದು ಕೈಲಾಸಾದ್ರಿಯಲಿ ಗಿರಿ
ನಂದನಾವಕ್ಷೋಜ ಘುಸೃಣ
ಸ್ಕಂಧತನು ಚಿನ್ಮಯ ನಿರಂಜನ ಭೂರಿ ಪಂಜರನ
ವಂದ್ಯಮಾನ ಸುರಾಸುರೋರಗ
ವೃಂದ ಮಣಿಮಕುಟ ಪ್ರಭಾ ನಿ
ಷ್ಯಂದ ಭೂಯಸ್ತಿಮಿತಕಾಯನ ಕಂಡನಬುಜಭವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೈಲಾಸ ಪರ್ವತಕ್ಕೆ ಬಂದ ಬ್ರಹ್ಮನು, ಗಿರಿಜೆಯ ಎದೆಯ ಮೇಲಿನ ಕುಂಕುಮಕೇಸರಿಯು ಅಂಟಿರುವ ದೇಹವುಳ್ಳವನೂ ಚಿನ್ಮಯನೂ ನಿರಂಜನನೂ ರುಂಡಮಾಲೆಗಳನ್ನು ಧರಿಸಿರುವವನೂ ವಂದನಾರ್ಹನೂ ದೇವತೆ, ರಾಕ್ಷಸ ಮತ್ತು ಉರಗಗಳ ಸಮೂಹದ ಕಿರೀಟಗಳ ಮಣಿಗಳ ಕಾಂತಿಯ ಧಾರೆಯಿಂದ ಪ್ರಕಾಶಿತನಾದ ದೊಡ್ಡ ಕಾಯವುಳ್ಳ ಶಿವನನ್ನು ಕಂಡನು.
ಪದಾರ್ಥ (ಕ.ಗ.ಪ)
ಘುಸೃಣ- ಕುಂಕುಮಕೇಸರಿ
ಭೂರಿಪಂಜರ- ದೊಡ್ಡ ಅಸ್ತಿ ಪಂಜರ , ಇಲ್ಲಿ ರುಂಡ
ನಿಷ್ಯಂದ- ಧಾರೆ, ಪ್ರವಾಹ
ಭೂಯಸ್ತಿಮಿತ- ದೊಡ್ಡಗಾತ್ರ
ಮೂಲ ...{Loading}...
ಬಂದು ಕೈಲಾಸಾದ್ರಿಯಲಿ ಗಿರಿ
ನಂದನಾವಕ್ಷೋಜ ಘುಸೃಣ
ಸ್ಕಂಧತನು ಚಿನ್ಮಯ ನಿರಂಜನ ಭೂರಿ ಪಂಜರನ
ವಂದ್ಯಮಾನ ಸುರಾಸುರೋರಗ
ವೃಂದ ಮಣಿಮಕುಟ ಪ್ರಭಾ ನಿ
ಷ್ಯಂದ ಭೂಯಸ್ತಿಮಿತಕಾಯನ ಕಂಡನಬುಜಭವ ॥15॥
೦೧೬ ಕೊರಳ ಕಪ್ಪಿನ ...{Loading}...
ಕೊರಳ ಕಪ್ಪಿನ ಚಾರು ಚಂದ್ರಾ
ಭರಣ ಮೂರ್ಧದ ಭಾಳನಯನದ
ಭರಿತ ಪರಿಮಳದಂಗವಟ್ಟದ ಜಡಿದ ಕೆಂಜೆಡೆಯ
ಕರಗಿ ಕಾಸಿದವಿದ್ಯೆಯನು ಬೇ
ರಿರಿಸಿ ಶುದ್ಧಬ್ರಹ್ಮವನು ಕಂ
ಡರಿಸಿದಂತಿರಲೆಸೆವ ಶಿವನನು ಕಂಡನಬುಜಭವ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಪ್ಪಾದ ಕೊರಳಿನ, ಸುಂದರವಾದ ಚಂದ್ರನನ್ನು ಧರಿಸಿರುವ ತಲೆಯ, ಹಣೆಗಣ್ಣಿನ, ಪರಿಮಳ ತುಂಬಿರುವ ಶರೀರದ, ಕಟ್ಟಿದ ಕೆಂಪು ಜಟೆಯ, ಕರಗಿ ಕಾಯಿಸಿದ, ಅವಿದ್ಯೆಯಿಂದ ಬೇರೆಯಾದ , ಕೆತ್ತಿಟ್ಟ ಶುದ್ಧಬ್ರಹ್ಮದಂತೆ ಶೋಭಿಸುತ್ತಿದ್ದ ಶಿವನನ್ನು ಬ್ರಹ್ಮನು ಕಂಡನು.
ಪದಾರ್ಥ (ಕ.ಗ.ಪ)
ಅಂಗವಟ್ಟ- ಶರೀರ.
ಕಂಡರಿಸು- ಕೆತ್ತು, ಶಿಲ್ಪಮಾಡು.
ಮೂಲ ...{Loading}...
ಕೊರಳ ಕಪ್ಪಿನ ಚಾರು ಚಂದ್ರಾ
ಭರಣ ಮೂರ್ಧದ ಭಾಳನಯನದ
ಭರಿತ ಪರಿಮಳದಂಗವಟ್ಟದ ಜಡಿದ ಕೆಂಜೆಡೆಯ
ಕರಗಿ ಕಾಸಿದವಿದ್ಯೆಯನು ಬೇ
ರಿರಿಸಿ ಶುದ್ಧಬ್ರಹ್ಮವನು ಕಂ
ಡರಿಸಿದಂತಿರಲೆಸೆವ ಶಿವನನು ಕಂಡನಬುಜಭವ ॥16॥
೦೧೭ ವೇದವರಿಯದ ತರ್ಕವಿದ್ಯಾ ...{Loading}...
ವೇದವರಿಯದ ತರ್ಕವಿದ್ಯಾ
ವಾದ ನಿಲುಕದ ಬುಧರ ಮತಿ ಸಂ
ಪಾದನೆಗೆ ಮುಖಗೊಡದ ವಾಚ್ಯಾಯನರ ಚೇತನಕೆ
ಹೋದ ಹೊಲಬಳವಡದ ಬ್ರಹ್ಮೇಂ
ದ್ರಾದಿ ಸುರರುಬ್ಬಟೆಗೆ ಸೋಲದ
ನಾದಿ ದೇವರದೇವ ಶಿವನನು ಕಂಡನಬುಜಭವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದವು ತಿಳಿಯದ, ತರ್ಕವಿದ್ಯಾವಾದಗಳಿಗೆ ನಿಲುಕದ, ಬುಧರ ಮತಿಸಂಪಾದನೆಗೆ ಮತ್ತು ವಾಚ್ಯ ಸಿದ್ಧಾಂತದ ಅನುಯಾಯಿಗಳಿಗೂ ಗೋಚರಿಸದ, ಹೋದ ದಾರಿ ತಿಳಿಯದ, ಬ್ರಹ್ಮ ಇಂದ್ರ ಮೊದಲಾದ ದೇವತೆಗಳ ಸಾಹಸಗಳಿಗೆ ಸೋಲದ ಅದಿ ಇಲ್ಲದ ದೇವರದೇವ ಶಿವನನ್ನು ಬ್ರಹ್ಮನು ಕಂಡನು.
ಪದಾರ್ಥ (ಕ.ಗ.ಪ)
ಮುಖಗೊಡು- ಗೋಚರಿಸು.
ವಾಚ್ಯಾಯನ- ವಾಚ್ಯ ಋಷಿಯ ಅನುಯಾಯಿ
ಮೂಲ ...{Loading}...
ವೇದವರಿಯದ ತರ್ಕವಿದ್ಯಾ
ವಾದ ನಿಲುಕದ ಬುಧರ ಮತಿ ಸಂ
ಪಾದನೆಗೆ ಮುಖಗೊಡದ ವಾಚ್ಯಾಯನರ ಚೇತನಕೆ
ಹೋದ ಹೊಲಬಳವಡದ ಬ್ರಹ್ಮೇಂ
ದ್ರಾದಿ ಸುರರುಬ್ಬಟೆಗೆ ಸೋಲದ
ನಾದಿ ದೇವರದೇವ ಶಿವನನು ಕಂಡನಬುಜಭವ ॥17॥
೦೧೮ ಕನ್ತುಹರನನು ವಿಮಳನನು ...{Loading}...
ಕಂತುಹರನನು ವಿಮಳನನು ವೇ
ದಾಂತ ವೇದ್ಯನನದ್ವಿತೀಯನ
ಚಿಂತ್ಯ ಮಹಿಮನ ಸಚ್ಚಿದಾನಂದೈಕರಸಮಯನ
ಅಂತ್ಯರಹಿತನನಪ್ರಮೇಯನ
ನಂತರೂಪನನಂಘ್ರಿಭಜಕ ಭ
ವಾಂತಕನನುದ್ದಂಡ ದೈವವ ಕಂಡನಬುಜಭವ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನ್ಮಥನನ್ನು ನಾಶಮಾಡಿದವನನ್ನು, ನಿರ್ಮಲನನ್ನು, ವೇದಾಂತವು ತಿಳಿಯದವನನ್ನು, ಅದ್ವಿತೀಯನನ್ನು, ಅಚಿಂತ್ಯ ಮಹಿಮನನ್ನು, ಸಚ್ಚಿದಾನಂದೈಕ ರಸಮಯನನ್ನು, ಅಂತ್ಯರಹಿತನನ್ನು, ಅಪ್ರಮೇಯನನ್ನು, ಅನಂತರೂಪನನ್ನು, ಪಾದ ಸೇವಕರಿಗೆ ಮುಕ್ತಿಯನ್ನು ಕೊಡುವವನನ್ನು , ಉದ್ದಂಡ ದೈವವನ್ನು, ಬ್ರಹ್ಮನು ಕಂಡನು.
ಮೂಲ ...{Loading}...
ಕಂತುಹರನನು ವಿಮಳನನು ವೇ
ದಾಂತ ವೇದ್ಯನನದ್ವಿತೀಯನ
ಚಿಂತ್ಯ ಮಹಿಮನ ಸಚ್ಚಿದಾನಂದೈಕರಸಮಯನ
ಅಂತ್ಯರಹಿತನನಪ್ರಮೇಯನ
ನಂತರೂಪನನಂಘ್ರಿಭಜಕ ಭ
ವಾಂತಕನನುದ್ದಂಡ ದೈವವ ಕಂಡನಬುಜಭವ ॥18॥
೦೧೯ ಇದ್ದುದಗಣಿತ ರುದ್ರ ...{Loading}...
ಇದ್ದುದಗಣಿತ ರುದ್ರ ಕೋಟಿಗ
ಳಿದ್ದುದನುಪಮ ವಿಷ್ಣು ಕೋಟಿಗ
ಳಿದ್ದುದಂಬುಜಭವ ಸುರೇಂದ್ರಾದಿಗಳು ಶತಕೋಟಿ
ಇದ್ದುದಮಳಾಮ್ನಾಯ ಕೋಟಿಗ
ಳಿದ್ದುದಗಣಿತ ಮಂತ್ರಮಧ್ಯದೊ
ಳಿದ್ದ ನಿರ್ಮಳ ಖಂಡಪರಶುವ ಕಂಡನಬುಜಭವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿ, ಎಣಿಕೆಗೆ ಸಿಗದಷ್ಟು ರುದ್ರ ಸಮೂಹಗಳು ಇದ್ದುವು. ಉಪಮೆಗೆ ನಿಲುಕದ ವಿಷ್ಣು ಸಮೂಹಗಳಿದ್ದುವು. ಬ್ರಹ್ಮ, ದೇವೇಂದ್ರ ಮೊದಲಾದವರು ನೂರು ಕೋಟಿ ಇದ್ದರು. ನಿರ್ಮಲವಾದ ವೇದ ಸಮೂಹಗಳಿದ್ದುವು. ಅಗಣಿತ ಮಂತ್ರಮಧ್ಯದಲ್ಲಿ ಇದ್ದ ನಿರ್ಮಳ ಖಂಡಪರಶುವನ್ನು ಬ್ರಹ್ಮನು ಕಂಡನು.
ಪದಾರ್ಥ (ಕ.ಗ.ಪ)
ಆಮ್ನಾಯ- ವೇದ.
ಖಂಡಪರಶು- ಅರ್ಧಚಂದ್ರಾಕೃತಿಯ ಆಕಾರದಲ್ಲಿರುವ ತೆಳುವಾದ ಕೊಡಲಿಯುಳ್ಳವ, ಶಿವ.
ಮೂಲ ...{Loading}...
ಇದ್ದುದಗಣಿತ ರುದ್ರ ಕೋಟಿಗ
ಳಿದ್ದುದನುಪಮ ವಿಷ್ಣು ಕೋಟಿಗ
ಳಿದ್ದುದಂಬುಜಭವ ಸುರೇಂದ್ರಾದಿಗಳು ಶತಕೋಟಿ
ಇದ್ದುದಮಳಾಮ್ನಾಯ ಕೋಟಿಗ
ಳಿದ್ದುದಗಣಿತ ಮಂತ್ರಮಧ್ಯದೊ
ಳಿದ್ದ ನಿರ್ಮಳ ಖಂಡಪರಶುವ ಕಂಡನಬುಜಭವ ॥19॥
೦೨೦ ಪುಳಕಜಲವುಬ್ಬರಿಸೆ ಕುಸುಮಾಂ ...{Loading}...
ಪುಳಕಜಲವುಬ್ಬರಿಸೆ ಕುಸುಮಾಂ
ಜಳಿಯನಂಘ್ರಿದ್ವಯಕೆ ಹಾಯಿಕಿ
ನಳಿನಭವ ಮೆಯ್ಯಿಕ್ಕಿದನು ಭಯಭರಿತ ಭಕ್ತಿಯಲಿ
ಬಳಿಯಲಮರೇಂದ್ರಾದಿ ದಿವಿಜಾ
ವಳಿಗಳವನಿಗೆ ಮೆಯ್ಯ ಚಾಚಿದ
ರುಲಿವುತಿರ್ದುದು ಜಯಜಯ ಧ್ವಾನದಲಿ ಸುರಕಟಕ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಹ್ಮನಿಗೆ ಪುಳಕಜಲವು ಹೆಚ್ಚಲು, ಅವನು ತನ್ನ ಬೊಗಸೆಯಲ್ಲಿ ತುಂಬಿದ್ದ ಹೂಗಳನ್ನು ಶಿವನ ಎರಡೂ ಪಾದಗಳಿಗೆ ಹಾಕಿ ಭಯಭರಿತ ಭಕ್ತಿಯಲ್ಲಿ ನಮಸ್ಕರಿಸಿದನು. ಅವನ ಪಕ್ಕದಲ್ಲಿ ದೇವೇಂದ್ರ ಮೊದಲಾದ ದೇವತೆಗಳ ಸಮೂಹವು ಶಿವನಿಗೆ ನಮಸ್ಕರಿಸಿದರು. ದೇವತೆಗಳ ಸಮೂಹವು ಜಯಜಯ ಶಬ್ದವನ್ನು ಉಲಿಯುತ್ತಿದ್ದಿತು.
ಪದಾರ್ಥ (ಕ.ಗ.ಪ)
ಉಬ್ಬರಿಸು- ಹೆಚ್ಚಾಗು. ಧ್ವಾನ- ಶಬ್ದ.
ಮೂಲ ...{Loading}...
ಪುಳಕಜಲವುಬ್ಬರಿಸೆ ಕುಸುಮಾಂ
ಜಳಿಯನಂಘ್ರಿದ್ವಯಕೆ ಹಾಯಿಕಿ
ನಳಿನಭವ ಮೆಯ್ಯಿಕ್ಕಿದನು ಭಯಭರಿತ ಭಕ್ತಿಯಲಿ
ಬಳಿಯಲಮರೇಂದ್ರಾದಿ ದಿವಿಜಾ
ವಳಿಗಳವನಿಗೆ ಮೆಯ್ಯ ಚಾಚಿದ
ರುಲಿವುತಿರ್ದುದು ಜಯಜಯ ಧ್ವಾನದಲಿ ಸುರಕಟಕ ॥20॥
೦೨೧ ಪರಮಕರುಣ ಕಟಾಕ್ಷರಸದಲಿ ...{Loading}...
ಪರಮಕರುಣ ಕಟಾಕ್ಷರಸದಲಿ
ಹೊರೆದು ಕಮಳಾಸನನ ಹತ್ತಿರೆ
ಕರೆದು ಮನ್ನಿಸಿ ನಿಖಿಳ ನಿರ್ಜರ ಜನವ ಸಂತೈಸಿ
ಬರವಿದೇನಿದ್ದಂತೆ ವಿಶ್ವಾ
ಮರ ಕದಂಬಕ ಸಹಿತ ಎಂದಂ
ಬುರುಹಭವನನು ನಸುನಗುತ ನುಡಿಸಿದನು ಶಶಿಮೌಳಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಮಕರುಣ ಕಟಾಕ್ಷರಸದಲ್ಲಿ ಬ್ರಹ್ಮನನ್ನು ಹತ್ತಿರಕ್ಕೆ ಕರೆದು ಗೌರವಿಸಿ, ಎಲ್ಲ ದೇವತೆಗಳನ್ನೂ ಸಮಾಧಾನಪಡಿಸಿ ಹೀಗೆ ಇದ್ದಕ್ಕಿದ್ದಂತೆ ಎಲ್ಲ ದೇವತೆಗಳ ಸಹಿತ ಬಂದದ್ದು ಏಕೆ ಎಂದು ಶಶಿಮೌಳಿಯು ನಸುನಗುತ ಬ್ರಹ್ಮನನ್ನು ಕೇಳಿದನು.
ಪದಾರ್ಥ (ಕ.ಗ.ಪ)
ವಿಶ್ವಾಮರ- ಜಗತ್ತಿನ ದೇವತೆ, ಎಲ್ಲ ದೇವತೆಗಳು
ಮೂಲ ...{Loading}...
ಪರಮಕರುಣ ಕಟಾಕ್ಷರಸದಲಿ
ಹೊರೆದು ಕಮಳಾಸನನ ಹತ್ತಿರೆ
ಕರೆದು ಮನ್ನಿಸಿ ನಿಖಿಳ ನಿರ್ಜರ ಜನವ ಸಂತೈಸಿ
ಬರವಿದೇನಿದ್ದಂತೆ ವಿಶ್ವಾ
ಮರ ಕದಂಬಕ ಸಹಿತ ಎಂದಂ
ಬುರುಹಭವನನು ನಸುನಗುತ ನುಡಿಸಿದನು ಶಶಿಮೌಳಿ ॥21॥
೦೨೨ ತಾರಕನ ಮಕ್ಕಳುಗಳಿಗೆ ...{Loading}...
ತಾರಕನ ಮಕ್ಕಳುಗಳಿಗೆ ನೆರೆ
ಸೂರೆವೋದುದು ಸುರರ ಸಿರಿ ಮು
ಮ್ಮಾರುವೋದುದು ಸುರರ ಸತಿಯರು ಖಳರ ಮನೆಗಳಿಗೆ
ಚಾರುವೈದಿಕ ಹವ್ಯಕವ್ಯ ವಿ
ಹಾರವೃತ್ತಿಗಳಳಿದವಿದನವ
ಧಾರಿಸೆಂದಬುಜಾಸನನು ಮಾಡಿದನು ಬಿನ್ನಹವ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳ ಸಿರಿಯನ್ನು ತಾರಕನ ಮಕ್ಕಳು ಸೂರೆ ಮಾಡಿದರು. ದೇವತೆಗಳ ಹೆಂಡತಿಯರು ದುಷ್ಟರ ಮನೆಗಳಿಗೆ ತೊತ್ತಾದರು. ಸುಂದರವಾದ ವೈದಿಕ ಹೋಮ ಹವನಗಳ ಆಚರಣೆಗಳು ಅಳಿದವು. ಇದನ್ನು ಮನಸ್ಸಿಟ್ಟು ಕೇಳಬೇಕು ಎಂದು ಬ್ರಹ್ಮನು ಬಿನ್ನಹವನ್ನು ಮಾಡಿದನು.
ಪದಾರ್ಥ (ಕ.ಗ.ಪ)
ಮುಮ್ಮಾರುವೋಗು- ಪರಾಧೀನವಾಗು
ಮೂಲ ...{Loading}...
ತಾರಕನ ಮಕ್ಕಳುಗಳಿಗೆ ನೆರೆ
ಸೂರೆವೋದುದು ಸುರರ ಸಿರಿ ಮು
ಮ್ಮಾರುವೋದುದು ಸುರರ ಸತಿಯರು ಖಳರ ಮನೆಗಳಿಗೆ
ಚಾರುವೈದಿಕ ಹವ್ಯಕವ್ಯ ವಿ
ಹಾರವೃತ್ತಿಗಳಳಿದವಿದನವ
ಧಾರಿಸೆಂದಬುಜಾಸನನು ಮಾಡಿದನು ಬಿನ್ನಹವ ॥22॥
೦೨೩ ನಗೆಯ ಮೊಳೆ ...{Loading}...
ನಗೆಯ ಮೊಳೆ ನಸುಹೊಳೆಯೆ ಬೊಮ್ಮನ
ಮೊಗವ ನೋಡಿದನಭವನೀಶನ
ಬಗೆಯ ಭಾವವನರಿದು ತಲೆಗುತ್ತಿದನು ಕಮಲಭವ
ದುಗುಡವನು ಬಿಡಿ ನಿಖಿಳ ದಿವಿಜಾ
ಳಿಗಳು ಪಶುಗಳಲಾ ವಿರಿಂಚನ
ವಿಗಡತನದಲಿ ಕೆಟ್ಟಿರಕಟಿನ್ನಂಜಬೇಡೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವನ ಮುಖದಲ್ಲಿ ನಗೆಯ ಮೊಳಕೆಯು ಸ್ವಲ್ಪ ಮಿಂಚಲು ಅವನು ಬ್ರಹ್ಮನ ಮುಖವನ್ನು ನೋಡಿದನು. ಈಶ್ವರನ ಮನಸ್ಸಿನ ಭಾವವನ್ನು ಅರಿತು ಬ್ರಹ್ಮನು ತಲೆಯನ್ನು ಕೆಳಗೆ ಹಾಕಿದನು. “ದೇವತೆಗಳೆಲ್ಲರೂ ದುಗುಡವನ್ನು ಬಿಡಿ. ಬ್ರಹ್ಮನ ಆತುರದಿಂದ ನೀವೆಲ್ಲ ಪಶುಗಳಂತೆ ಕೆಟ್ಟಿರಿ ಅಯ್ಯೊ, ಇನ್ನು ಹೆದರುವುದು ಬೇಡ” ಎಂದು ಶಿವನು ಹೆಳಿದನು.
ಪದಾರ್ಥ (ಕ.ಗ.ಪ)
ತಲೆಗುತ್ತು- ತಲೆ ಕೆಳಗೆಹಾಕು.
ಮೂಲ ...{Loading}...
ನಗೆಯ ಮೊಳೆ ನಸುಹೊಳೆಯೆ ಬೊಮ್ಮನ
ಮೊಗವ ನೋಡಿದನಭವನೀಶನ
ಬಗೆಯ ಭಾವವನರಿದು ತಲೆಗುತ್ತಿದನು ಕಮಲಭವ
ದುಗುಡವನು ಬಿಡಿ ನಿಖಿಳ ದಿವಿಜಾ
ಳಿಗಳು ಪಶುಗಳಲಾ ವಿರಿಂಚನ
ವಿಗಡತನದಲಿ ಕೆಟ್ಟಿರಕಟಿನ್ನಂಜಬೇಡೆಂದ ॥23॥
೦೨೪ ಪಶುಪತಿತ್ವವ ನಮಗೆ ...{Loading}...
ಪಶುಪತಿತ್ವವ ನಮಗೆ ಕೊಡಿ ನೀವ್
ಪಶುಗಳಾಗಿರಿ ಪಾಶುಪತ ವರ
ನಿಶಿತ ಶರದಲಿ ದೈತ್ಯ ದುರ್ಗವನುರುಹಿ ತೋರುವೆವು
ದೆಸೆದೆಸೆಗೆ ಹರೆದಖಿಳದೇವ
ಪ್ರಸರವನು ನೀವ್ ನೆರಹಿ ಮೇಲಿ
ನ್ನಸಮಸೆಗೆ ಹೆದರದಿರಿ ಎಂದನು ನಗುತ ಮದನಾರಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀವು ಪಶುಗಳಾಗಿರಿ. ಪಶುಪತಿತ್ವವನ್ನು ನನಗೆ ಕೊಡಿ. ಶ್ರೇಷ್ಠವಾದ ಹರಿತವಾದ ಪಾಶುಪತವೆಂಬ ಬಾಣದಿಂದ ರಾಕ್ಷಸರ ದುರ್ಗವನ್ನು ಸುಟ್ಟು ತೋರಿಸುತ್ತೇನೆ. ನೀವು ದಿಕ್ಕುದಿಕ್ಕಿಗೆ ಹೋಗಿರುವ ಎಲ್ಲ ದೇವತೆಗಳ ಸಮೂಹವನ್ನು ಒಟ್ಟುಗೂಡಿಸಿ. ಆಮೇಲೆ, ಇನ್ನು ಸಣ್ಣಪುಟ್ಟ ತೊಂದರೆಗಳಿಗೆ ಹೆದರಬೇಡಿ” ಎಂದು ಶಿವನು ನಗುತ್ತ ಹೇಳಿದನು.
ಪದಾರ್ಥ (ಕ.ಗ.ಪ)
ಉರುಹು- ಸುಡು.
ಅಸಮಸೆ- ಸಣ್ಣಗಾಯ
ಮೂಲ ...{Loading}...
ಪಶುಪತಿತ್ವವ ನಮಗೆ ಕೊಡಿ ನೀವ್
ಪಶುಗಳಾಗಿರಿ ಪಾಶುಪತ ವರ
ನಿಶಿತ ಶರದಲಿ ದೈತ್ಯ ದುರ್ಗವನುರುಹಿ ತೋರುವೆವು
ದೆಸೆದೆಸೆಗೆ ಹರೆದಖಿಳದೇವ
ಪ್ರಸರವನು ನೀವ್ ನೆರಹಿ ಮೇಲಿ
ನ್ನಸಮಸೆಗೆ ಹೆದರದಿರಿ ಎಂದನು ನಗುತ ಮದನಾರಿ ॥24॥
೦೨೫ ಜಾರಿದುಬ್ಬಿನ ಹೊತ್ತ ...{Loading}...
ಜಾರಿದುಬ್ಬಿನ ಹೊತ್ತ ದುಗುಡದ
ಮೋರೆಗಳ ಮೋನದ ನಿಹಾರದ
ದೂರುಗಂಗಳ ದೇವನಿಕರವ ಕಂಡು ಕರುಣದಲಿ
ಏರುವಡೆದುದು ಮನವವಿದ್ಯೆಗೆ
ಮಾರುವೋದಿರಲಾ ಎನುತ ಶಿವ
ತೋರಿ ನುಡಿದನು ಪಾಶುಪತ್ಯದ ಸಾರ ಸಂಗತಿಯ ॥25|
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ಸಾಹ ಜಾರಿದ, ದುಗುಡ ಹೊತ್ತ, ಮೌನಮುಖದ, ಮಂಜಾಗಿ ಮಬ್ಬಾದ ಕಣ್ಣುಗಳ, ದೇವತೆಗಳ ಸಮೂಹವನ್ನು ಕಂಡು ಶಿವನು ಕರುಣೆಯಿಂದ, ನಿಮ್ಮ ಮನಸ್ಸಿಗೆ ಗಾಯವಾಗಿದೆ. ಅವಿದ್ಯೆಗೆ ಮಾರುಹೋದಿರಲ್ಲಾ! ಎನ್ನುತ್ತ ಅವರಿಗೆ ಪಾಶುಪತ್ಯದ ಸಾರ ಸಂಗತಿಯನ್ನು ತೋರಿಸಿ ನುಡಿದನು.
ಪದಾರ್ಥ (ಕ.ಗ.ಪ)
ಉಬ್ಬು- ಉತ್ಸಾಹ.
ಪಾಶುಪತ್ಯ - ಜೀವನಿಗೂ ಅದರ ಒಡೆಯನಿಗೂ ಇರುವ ಸಂಬಂಧ
ಮೂಲ ...{Loading}...
ಜಾರಿದುಬ್ಬಿನ ಹೊತ್ತ ದುಗುಡದ
ಮೋರೆಗಳ ಮೋನದ ನಿಹಾರದ
ದೂರುಗಂಗಳ ದೇವನಿಕರವ ಕಂಡು ಕರುಣದಲಿ
ಏರುವಡೆದುದು ಮನವವಿದ್ಯೆಗೆ
ಮಾರುವೋದಿರಲಾ ಎನುತ ಶಿವ
ತೋರಿ ನುಡಿದನು ಪಾಶುಪತ್ಯದ ಸಾರ ಸಂಗತಿಯ ॥25|
೦೨೬ ಕರ್ಮಕಿಙ್ಕರರಾಗಿ ಕೃತ ...{Loading}...
ಕರ್ಮಕಿಂಕರರಾಗಿ ಕೃತ ದು
ಷ್ಕರ್ಮವಾಸನೆವಿಡಿದು ತಾನೇ
ಕರ್ಮಕರ್ತನು ಭೋಗಿ ತಾನೇ ದುಃಖಿ ಸುಖಿಯೆಂದು
ನಿರ್ಮಳಾತ್ಮನೊಳೀಯಹಂಕೃತಿ
ಧರ್ಮವನೆ ನೇವರಿಸಿ ಮರುಗುವ
ದುರ್ಮತಿಗಳನು ಪಶುಗಳೆಂದರೆ ಖೇದವೇಕೆಂದ ॥26|
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಮದ ಸೇವಕರಾಗಿ, ಮಾಡಿದ ಕೆಟ್ಟ ಕರ್ಮದ ವಾಸನೆಯನ್ನು ಹಿಡಿದು, ಕರ್ಮಮಾಡುವವನೂ, ಭೋಗಿಸುವವನೂ ದುಃಖಿ-ಸುಖಿಯೂ ಆದ ನಿರ್ಮಲವಾದ ಆತ್ಮನಲ್ಲಿ ಈ ಅಹಂಕಾರದ ಧರ್ಮವನ್ನೇ ಲೇಪಿಸಿ ದುಃಖಕ್ಕೆ ಒಳಗಾಗಿರುವ ದುರ್ಮತಿಗಳು, ನೀವು. ನಿಮ್ಮನ್ನು ಪಶುಗಳು ಎಂದರೆ ಖೇದವೇಕೆ? ಎಂದನು.
ಪದಾರ್ಥ (ಕ.ಗ.ಪ)
ಕಿಂಕರ- ಸೇವಕ.
ಮೂಲ ...{Loading}...
ಕರ್ಮಕಿಂಕರರಾಗಿ ಕೃತ ದು
ಷ್ಕರ್ಮವಾಸನೆವಿಡಿದು ತಾನೇ
ಕರ್ಮಕರ್ತನು ಭೋಗಿ ತಾನೇ ದುಃಖಿ ಸುಖಿಯೆಂದು
ನಿರ್ಮಳಾತ್ಮನೊಳೀಯಹಂಕೃತಿ
ಧರ್ಮವನೆ ನೇವರಿಸಿ ಮರುಗುವ
ದುರ್ಮತಿಗಳನು ಪಶುಗಳೆಂದರೆ ಖೇದವೇಕೆಂದ ॥26|
೦೨೭ ಪಞ್ಚವಿಂಶತಿ ತತ್ವರೂಪದ ...{Loading}...
ಪಂಚವಿಂಶತಿ ತತ್ವರೂಪದ
ಸಂಚವರಿಯದೆ ನೀತಿಮುಖದಲಿ
ರಂಚೆಗಾಣದೆ ಸಗುಣಮಯ ನೀಹಾರದಲಿ ಮುಳುಗಿ
ಮಿಂಚುವೆಳಗಿನ ಬಳಕೆಯಲಿ ಮನ
ಮುಂಚಿ ಮೈಗೊಂಡಳಲುವಾತುಮ
ವಂಚಕರು ನೀವ್ ಪಶುಗಳೆಂದರೆ ಖೇದವೇಕೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಪ್ಪತ್ತೈದು ತತ್ವರೂಪದ ರಹಸ್ಯವನ್ನು ತಿಳಿಯದೆ , ನೀತಿಮುಖದಲ್ಲಿ ರಕ್ಷಣೆ ಪಡೆಯದೆ ಗುಣಮಯವಾದ ಮಂಜಿನಲ್ಲಿ ಮುಳುಗಿ, ಅಶಾಶ್ವತವಾದ ವಿಷಯಗಳ ಬಳಕೆಯಲ್ಲಿ ಮನಸ್ಸು ಮುಂದಾಗಿ ಮೈತಳೆದು ತೊಳಲುವ ಆತ್ಮ ವಂಚಕರು, ನೀವು. ನಿಮ್ಮನ್ನು ಪಶುಗಳೆಂದರೆ ಖೇದವೇಕೆ? ಎಂದು ಈಶ್ವರನು ಹೇಳಿದನು.
ಪದಾರ್ಥ (ಕ.ಗ.ಪ)
ರಂಚೆ- ರಕ್ಷಣೆ
ಱಂಚೆ - ಪಕ್ಕ-ರೆಕ್ಕೆ , ರಕ್ಷಣೆ
ಮೈಗೊಂಡು-ಮೈತಳೆದು.
ಪಾಠಾನ್ತರ (ಕ.ಗ.ಪ)
ರಂಚೆ - ಱಂಚೆ
ಮೈ.ವಿ.ವಿ.
ಮೂಲ ...{Loading}...
ಪಂಚವಿಂಶತಿ ತತ್ವರೂಪದ
ಸಂಚವರಿಯದೆ ನೀತಿಮುಖದಲಿ
ರಂಚೆಗಾಣದೆ ಸಗುಣಮಯ ನೀಹಾರದಲಿ ಮುಳುಗಿ
ಮಿಂಚುವೆಳಗಿನ ಬಳಕೆಯಲಿ ಮನ
ಮುಂಚಿ ಮೈಗೊಂಡಳಲುವಾತುಮ
ವಂಚಕರು ನೀವ್ ಪಶುಗಳೆಂದರೆ ಖೇದವೇಕೆಂದ ॥27॥
೦೨೮ ತೋರುವೀ ಜಗವೆಲ್ಲ ...{Loading}...
ತೋರುವೀ ಜಗವೆಲ್ಲ ಬೊಮ್ಮವೆ
ತೋರುತಿದೆಯೆನಿಪರ್ಥದಲಿ ಸಲೆ
ತೋರುವೀ ಜಗಕೆಲ್ಲ ಪರತತ್ವದಲಿ ಪರಿಣಾಮ
ತೋರುವೀ ತೋರಿಕೆಯೊಳಗೆ ಸಲೆ
ಮೀರಿ ತೋರುವ ನಿಜವನರಿಯದ
ಗಾರುಗಳು ನೀವ್ ಪಶುಗಳೆಂದರೆ ಖೇದವೇಕೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೋರುತ್ತಿರುವ ಈ ಜಗತ್ತೆಲ್ಲವೂ ಬ್ರಹ್ಮವೇ. ತೋರುತ್ತಿದೆ ಎನ್ನುವ ಅರ್ಥದಲ್ಲಿ ಚೆನ್ನಾಗಿ ತೋರುತ್ತಿರುವ ಈ ಜಗತ್ತು ಪರತತ್ವದ ಪರಿಣಾಮವಾಗಿದೆ. ಕಾಣಿಸುವ ಈ ತೋರಿಕೆಯನ್ನು ಹಿಂದೆ ಇರುವ ಸತ್ಯವನ್ನು ಕಾಣದ ಕ್ಷುದ್ರರಾದ ನಿಮ್ಮನ್ನು ಪಶುಗಳೆಂದರೆ ಖೇದವೇಕೆಂದನು.
ಪದಾರ್ಥ (ಕ.ಗ.ಪ)
ಗಾರು- ಕ್ಷುದ್ರವ್ಯಕ್ತಿ
ಮೂಲ ...{Loading}...
ತೋರುವೀ ಜಗವೆಲ್ಲ ಬೊಮ್ಮವೆ
ತೋರುತಿದೆಯೆನಿಪರ್ಥದಲಿ ಸಲೆ
ತೋರುವೀ ಜಗಕೆಲ್ಲ ಪರತತ್ವದಲಿ ಪರಿಣಾಮ
ತೋರುವೀ ತೋರಿಕೆಯೊಳಗೆ ಸಲೆ
ಮೀರಿ ತೋರುವ ನಿಜವನರಿಯದ
ಗಾರುಗಳು ನೀವ್ ಪಶುಗಳೆಂದರೆ ಖೇದವೇಕೆಂದ ॥28॥
೦೨೯ ಆದಿಭೌತಿಕದಿನ್ದ ನೊನ್ದು ...{Loading}...
ಆದಿಭೌತಿಕದಿಂದ ನೊಂದು ವಿ
ರೋಧಿ ಷಡ್ವರ್ಗದ ವಿಕಾರ
ವ್ಯಾಧಿಯಲಿ ಬೆಂಡಾಗಿ ಭವಪಾಶದಲಿ ಬಿಗಿವಡೆದು |
ವಾದ ರಚನೆಯ ಬಲೆಗೆ ಸಿಲುಕಿ ವಿ
ರೋಧಗೊಂಬೀ ಮೋಹವಿದ್ಯಾ
ಸಾಧಕರು ನೀವ್ ಪಶುಗಳೆಂದರೆ ಖೇದವೇಕೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಂಚಭೂತಗಳಿಂದಾ ತೊಂದರೆಗಳಿಂದ ನೊಂದು, ಅರಿಷಡ್ವರ್ಗಗಳ ವಿಕಾರವಾದ ವ್ಯಾಧಿಯಲ್ಲಿ ಬೆಂಡಾಗಿ, ಭವಪಾಶದಲ್ಲಿ ಕಟ್ಟುಬಿದ್ದು, ವಾದದ ವಿವಾದಗಳಲ್ಲಿ ಸಿಲುಕಿ, ಬಳಲುತ್ತಿರುವ ಈ ಮೋಹವಿದ್ಯೆಯ ಸಾಧಕರು, ನೀವು. ನಿಮ್ಮನ್ನು ಪಶುಗಳೆಂದರೆ ಖೇದವೇಕೆ? ಎಂದನು.
ಪದಾರ್ಥ (ಕ.ಗ.ಪ)
ಆಧಿಭೌತಿಕ- ಪಂಚಭೂತಗಳಿಂದ ಆಗುವ ತೊಂದರೆ
ಅರಿಷಡ್ವರ್ಗ- ಆರು ವೈರಿಗಳ ಗುಂಪು.
ಮೂಲ ...{Loading}...
ಆದಿಭೌತಿಕದಿಂದ ನೊಂದು ವಿ
ರೋಧಿ ಷಡ್ವರ್ಗದ ವಿಕಾರ
ವ್ಯಾಧಿಯಲಿ ಬೆಂಡಾಗಿ ಭವಪಾಶದಲಿ ಬಿಗಿವಡೆದು |
ವಾದ ರಚನೆಯ ಬಲೆಗೆ ಸಿಲುಕಿ ವಿ
ರೋಧಗೊಂಬೀ ಮೋಹವಿದ್ಯಾ
ಸಾಧಕರು ನೀವ್ ಪಶುಗಳೆಂದರೆ ಖೇದವೇಕೆಂದ ॥29॥
೦೩೦ ಪಶುಪತಿಯೆ ಪರಮಾತ್ಮ ...{Loading}...
ಪಶುಪತಿಯೆ ಪರಮಾತ್ಮ ಜೀವರು
ಪಶುಗಳೀಪರಿ ಜೀವಭಾವದೊ
ಳೆಸಗುವರು ನೀವ್ ಪಶುಗಳೀಗಳು ನಿಮ್ಮ ರಕ್ಷಣವ
ಪಸರಿಸುವ ಪರಮಾತ್ಮ ತಾನೀ
ಘಸಣಿ ನಿಮಗೇಕೆಂದು ದೇವ
ಪ್ರಸರವನು ತಿಳುಹಿದನು ಕಾರುಣ್ಯದಲಿ ಕಾಮಾರಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೀವರು ಪಶುಗಳು. ಪರಮಾತ್ಮನೇ ಪಶುಪತಿ. ಈ ರೀತಿ ಜೀವಭಾವದಲ್ಲಿ ಶೋಭಿಸುವ ನೀವು ಪಶುಗಳು. ಈಗ ನಿಮ್ಮ ರಕ್ಷಣೆಯನ್ನು ಮಾಡುವ ಪರಮಾತ್ಮ ನಾನು. ಈ ಕಷ್ಟ ನಿಮಗೆ ಇನ್ನಿರುವುದಿಲ್ಲ ಎಂದು ಕಾಮಾರಿಯು ಕರುಣೆಯಿಂದ ದೇವ ಸಮೂಹಕ್ಕೆ ತಿಳಿಸಿದನು.
ಪದಾರ್ಥ (ಕ.ಗ.ಪ)
ಘಸಣಿ- ಕಷ್ಟ.
ಮೂಲ ...{Loading}...
ಪಶುಪತಿಯೆ ಪರಮಾತ್ಮ ಜೀವರು
ಪಶುಗಳೀಪರಿ ಜೀವಭಾವದೊ
ಳೆಸಗುವರು ನೀವ್ ಪಶುಗಳೀಗಳು ನಿಮ್ಮ ರಕ್ಷಣವ
ಪಸರಿಸುವ ಪರಮಾತ್ಮ ತಾನೀ
ಘಸಣಿ ನಿಮಗೇಕೆಂದು ದೇವ
ಪ್ರಸರವನು ತಿಳುಹಿದನು ಕಾರುಣ್ಯದಲಿ ಕಾಮಾರಿ ॥30॥
೦೩೧ ತುಬ್ಬಿ ಕೊಟ್ಟುದವಿದ್ಯೆಯನು ...{Loading}...
ತುಬ್ಬಿ ಕೊಟ್ಟುದವಿದ್ಯೆಯನು ಸುಧೆ
ಗೊಬ್ಬುಗಳ ಗಂಡಿಗರ ಗಾಢದ
ಗರ್ಭವನು ಹೊಳ್ಳಿಸಿತು ಗರಳಗ್ರೀವನುಪದೇಶ
ಹುಬ್ಬಿನಲಿ ಮಾತಾಡಿ ತಮ್ಮೊಳ
ಗೊಬ್ಬರೊಬ್ಬರು ತಿಳಿದು ಸಕಳ ಸು
ಪರ್ಬಜನವೆರಗಿದುದು ಜಯಜಯ ಎನುತ ಪಶುಪತಿಗೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವನ ಉಪದೇಶವು ದೇವತೆಗಳಿಗೆ ಅವಿದ್ಯೆಯನ್ನು ಪತ್ತೆಮಾಡಿ ಕೊಟ್ಟಿತು ಹಾಗೂ ಅಮೃತತ್ವದ ಕೊಬ್ಬಿನ ಅಹಂಕಾರದಿಂದ ತುಂಬಿದ್ದ ಅವರ ಪೊಳ್ಳುತನವನ್ನು ತೋರಿಸಿತು. ತಮ್ಮೊಳಗೆ ಒಬ್ಬರೊಬ್ಬರು ಸನ್ನೆಯಲ್ಲಿ ಮಾತನಾಡಿಕೊಂಡು, ಎಲ್ಲ ದೇವತೆಗಳು ಜಯಜಯ ಎನ್ನುತ್ತ ಪಶುಪತಿಗೆ ನಮಸ್ಕರಿಸಿದರು.
ಪದಾರ್ಥ (ಕ.ಗ.ಪ)
ತುಬ್ಬು- ಪತ್ತೆ. ಸುಧೆಗೊಬ್ಬು -ಅಮೃತದ ಕೊಬ್ಬು.
ಗಂಡಿಗ- ಶೂರ. ಗಾಢ ದಟ್ಟವಾದ. ಗರ್ಭ- ಅಂತರಂಗ.
ಹೊಳ್ಳಿಸು- ಪೊಳ್ಳಾಗಿಸು.
ಸುಪರ್ಬ- ದೇವತೆಗಳು.
ಮೂಲ ...{Loading}...
ತುಬ್ಬಿ ಕೊಟ್ಟುದವಿದ್ಯೆಯನು ಸುಧೆ
ಗೊಬ್ಬುಗಳ ಗಂಡಿಗರ ಗಾಢದ
ಗರ್ಭವನು ಹೊಳ್ಳಿಸಿತು ಗರಳಗ್ರೀವನುಪದೇಶ
ಹುಬ್ಬಿನಲಿ ಮಾತಾಡಿ ತಮ್ಮೊಳ
ಗೊಬ್ಬರೊಬ್ಬರು ತಿಳಿದು ಸಕಳ ಸು
ಪರ್ಬಜನವೆರಗಿದುದು ಜಯಜಯ ಎನುತ ಪಶುಪತಿಗೆ ॥31॥
೦೩೨ ಜಗವುಘೇ ಎನ್ದುದು ...{Loading}...
ಜಗವುಘೇ ಎಂದುದು ಜಯಧ್ವನಿ
ಜಗವ ಝೊಂಪಿಸಿತೊಗ್ಗಿನಂಜುಳಿ
ಗಗನದಗಲಕೆ ಕುಣಿವುತಿದ್ದುದು ಸುರರ ಭಾಳದಲಿ
ಬೆಗಡು ಬೀತುದು ಬೇಸರಿನ ಬಲು
ದಗಹು ಸೋತುದು ಶಿವಗೆ ದೈತ್ಯಾ
ರಿಗಳು ಮುದದಲಿ ಮಾಡಿದರು ಮೂರ್ಧಾಭಿಷೇಚನವ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತು ಉಘೇ ಎಂದಿತು. ಜಯಧ್ವನಿ ಜಗತ್ತನ್ನು ಬೆಚ್ಚಿಬೀಳಿಸಿತು. ಮುಗಿದ ಕೈಗಳು ಗಗನದ ಅಗಲಕ್ಕೂ ಕುಣಿಯುತ್ತಿದ್ದುವು. ದೇವತೆಗಳ ಮುಖದಲ್ಲಿದ್ದ ಭಯ ಕೊನೆಯಾಯಿತು. ದುಃಖದ ಒತ್ತಡವು ಕಡಿಮೆಯಾಯಿತು. ದೇವತೆಗಳು ಸಂತೋಷದಿಂದ ಶಿವನಿಗೆ ನೆತ್ತಿಯ ಮೇಲಿನಿಂದ ಅಭಿಷೇಕವನ್ನು ಮಾಡಿದರು.
ಪದಾರ್ಥ (ಕ.ಗ.ಪ)
ಝೊಂಪಿಸು- ಬೆಚ್ಚಿಬೀಳು. ಒಗ್ಗು- ಮುಗಿದ.
ಬೆಗಡು- ಭಯ, ಆಶ್ಚರ್ಯ.
ಬಲುದೆಗಹು - ದುಃಖದ ಒತ್ತಡ
ಮೂಲ ...{Loading}...
ಜಗವುಘೇ ಎಂದುದು ಜಯಧ್ವನಿ
ಜಗವ ಝೊಂಪಿಸಿತೊಗ್ಗಿನಂಜುಳಿ
ಗಗನದಗಲಕೆ ಕುಣಿವುತಿದ್ದುದು ಸುರರ ಭಾಳದಲಿ
ಬೆಗಡು ಬೀತುದು ಬೇಸರಿನ ಬಲು
ದಗಹು ಸೋತುದು ಶಿವಗೆ ದೈತ್ಯಾ
ರಿಗಳು ಮುದದಲಿ ಮಾಡಿದರು ಮೂರ್ಧಾಭಿಷೇಚನವ ॥32॥
೦೩೩ ಪಾಶುಪತ್ಯದ ಪಟ್ಟವಾಯ್ತು ...{Loading}...
ಪಾಶುಪತ್ಯದ ಪಟ್ಟವಾಯ್ತು ಮ
ಹೇಶನಲಿ ಬ್ರಹ್ಮಾದಿ ದೇವರು
ವಾಸಿವಟ್ಟವ ಬಿಟ್ಟರೋಲೈಸಿದರು ಪಶುಪತಿಯ
ಪಾಶುಪತ ಸುವ್ರತವ ಧರಿಸಿದು
ದಾ ಸುಪರ್ವಸ್ತೋಮ ವಿಶ್ವಾ
ಧೀಶನೆಸೆದನು ಕೋಟಿ ಶತಸೂರ್ಯ ಪ್ರಕಾಶದಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳಿಂದ ಮಹೇಶನಿಗೆ ಪಾಶುಪತ್ಯದ ಪಟ್ಟವಾಯಿತು. ಬ್ರಹ್ಮಾದಿ ದೇವತೆಗಳು ತಮ್ಮ ಉತ್ತಮ ಪದವಿಯ ಪ್ರತಿಷ್ಠೆಯನ್ನು ತ್ಯಜಿಸಿ ಪಶುಪತಿಯನ್ನು ಓಲೈಸಿದರು. ದೇವತೆಗಳ ಸಮೂಹವು ಪಾಶುಪತ ಸುವ್ರತವನ್ನು ಧರಿಸಿತು. ವಿಶ್ವದ ಒಡೆಯನಾದ ಶಿವನು ಶತಕೋಟಿ ಸೂರ್ಯ ಪ್ರಕಾಶದಲ್ಲಿ ಶೋಭಿಸಿದನು.
ಪದಾರ್ಥ (ಕ.ಗ.ಪ)
ಪಟ್ಟ- ಪಟ್ಟಾಭಿಷೇಕ
ವಾಸಿವಟ್ಟ- ಉತ್ತಮ ಪದವಿ.
ಮೂಲ ...{Loading}...
ಪಾಶುಪತ್ಯದ ಪಟ್ಟವಾಯ್ತು ಮ
ಹೇಶನಲಿ ಬ್ರಹ್ಮಾದಿ ದೇವರು
ವಾಸಿವಟ್ಟವ ಬಿಟ್ಟರೋಲೈಸಿದರು ಪಶುಪತಿಯ
ಪಾಶುಪತ ಸುವ್ರತವ ಧರಿಸಿದು
ದಾ ಸುಪರ್ವಸ್ತೋಮ ವಿಶ್ವಾ
ಧೀಶನೆಸೆದನು ಕೋಟಿ ಶತಸೂರ್ಯ ಪ್ರಕಾಶದಲಿ ॥33॥