೧೯

೦೦೦ ಸೂ ರಾಯಕಟಕವ ...{Loading}...

ಸೂ. ರಾಯಕಟಕವ ಬೆದರಿಸಿದ ನಾ
ರಾಯಣಾಸ್ತ್ರದ ಬಾಧೆಯನು ಕಮ
ಲಾಯತಾಂಬಕ ನಿಲಿಸಿ ಸಂತೈಸಿದನು ಪಾಂಡವರ

೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...

ಕೇಳು ಧೃತರಾಷ್ಟ್ರಾವನಿಪ ಗುರು
ಬೀಳುಕೊಟ್ಟನು ದೇಹವನು ನ
ಮ್ಮಾಳ ವಿಧಿಯೇನಪಜಯದ ತವನಿಧಿಯಲೇ ನಮಗೆ
ಮೇಲೆ ಬಂದುದು ಕಷ್ಟವರಿ ಭೂ
ಪಾಲರಿಗೆ ಕೇಳಿದನು ಖಳ ಪಾಂ
ಚಾಲಸುತನೈತಂದನಲ್ಲಿಗೆ ಜಡಿವಡಾಯುಧದಿ ॥1॥

೦೦೨ ಐದಿ ಮುನ್ದಲೆವಿಡಿದು ...{Loading}...

ಐದಿ ಮುಂದಲೆವಿಡಿದು ಬಾಗಿಸಿ
ಕೊಯ್ದನಾತನ ಕೊರಳನೆಡದಲಿ
ಹೊಯ್ದು ಮುರಿದನು ಬರಿಯಲಪ್ಪಳಿಸಿದನು ಬೆನ್ನೆಲುವ
ಕೈದಣಿಯೆ ಕಡಿಖಂಡಮಯವೆನೆ
ಹೊಯ್ದು ರಥದಲಿ ಕೆದರಿ ಜಡಿದನ
ಡಾಯ್ದವನು ಕಡುಗೋಪದಲಿ ನೋಡಿದನು ರಿಪುಶಿರವ ॥2॥

೦೦೩ ಎಲೆಲೆ ಪಾತಕಿ ...{Loading}...

ಎಲೆಲೆ ಪಾತಕಿ ಹೆಣನ ಹೊಯ್ದರೆ
ಬಲುಗಡಿಯ ನೀನೆಂಬರೇ ಸುಡು
ಹೊಲೆಯರಿದಕಂಗೈಸುವರೆ ತಾ ರಾಜಸೂನು ಗಡ
ಅಳಿದನಾದರೆ ನಿನ್ನ ಭಾಗ್ಯವು
ಉಳಿದಡೀತನ ಮಗನು ನಿನ್ನಯ
ಕುಲದ ತಲೆ ಚೆಂಡಾಡಿದಲ್ಲದೆ ಬರಿದೆ ಬಿಡನೆಂದ ॥3॥

೦೦೪ ಎನ್ದ ಸೂತನ ...{Loading}...

ಎಂದ ಸೂತನ ಬಾಯ ಹೊರಕ
ಯ್ಯಿಂದ ಹೊಯ್ದನು ಹಡಪದವರನು
ಹಿಂದಣಾಪ್ತರನಖಿಳ ಚಮರಚ್ಛತ್ರಧಾರಿಗಳ
ಮುಂದುವರಿದೊಡೆ ತಿವಿದು ಮುರಿದನು
ಮಂದಮತಿ ಬಳಿಕವನ ಸುಡು ಸುಡ
ಲೆಂದು ಧೃಷ್ಟದ್ಯುಮ್ನನನು ನೆರೆ ಬೈದುದಖಿಳಜನ ॥4॥

೦೦೫ ಕಡಿಕುಗಳನಾಯ್ದರಸಿ ರಥದೊಳು ...{Loading}...

ಕಡಿಕುಗಳನಾಯ್ದರಸಿ ರಥದೊಳು
ಗುಡಿಸಿ ಸಿಂಧವನೆತ್ತಿ ಸಾರಥಿ
ತುಡುಕಿ ವಾಘೆಯ ಮುರುಹಿ ಮರಳಿಚಿ ರಥದ ಕುದುರೆಗಳ
ತಡೆಯದಶ್ವತ್ಥಾಮನಲ್ಲಿಗೆ
ನಡೆದು ಬರುತಿರೆ ಕಂಡು ಮನದಲಿ
ಕಡು ನಿರೋಧವ ಹಿಡಿದು ಚಿಂತಿಸುತಿರ್ದನಾ ದ್ರೌಣಿ ॥5॥

೦೦೬ ಏನಿದಚ್ಚರಿ ಕೌರವೇನ್ದ್ರನ ...{Loading}...

ಏನಿದಚ್ಚರಿ ಕೌರವೇಂದ್ರನ
ಸೇನೆ ತಲೆಕೆಳಗಾಗುತಿದೆ ರಿಪು
ಸೇನೆ ಬೊಬ್ಬಿರಿದಾರುತಿದೆ ಮಡಿದಾತನಾವವನೊ
ಸೇನೆಗೊಡೆಯನು ಬೊಪ್ಪನಿದು ತಾ
ನೇನು ರಥವೇ ಬರಿದೆ ಬರುತಿದೆ
ಹಾನಿ ಜನಕಂಗಾಯ್ತೊ ಶಿವ ಶಿವ ಎಂದನಾ ದ್ರೌಣಿ ॥6॥

೦೦೭ ತನ್ದು ಸಾರಥಿ ...{Loading}...

ತಂದು ಸಾರಥಿ ರಥವನೀತನ
ಮುಂದೆ ನಿಲಿಸಿದ ಬಿದ್ದನಂಘ್ರಿಯೊ
ಳಂದು ಗೋಳಿಟ್ಟೊರಲಿದುದು ಕಳಶಜನ ಪರಿವಾರ
ತಂದೆಯೈದನೆ ಚಾಪವೇದ ಮು
ಕುಂದನೈದನೆ ನಿನ್ನ ಕಾಣಲು
ಬಂದನಯ್ಯನನಪ್ಪಿಕೊಳು ಮಾತಾಡಿ ನೋಡೆಂದ ॥7॥

೦೦೮ ಕೂಡೆ ಹರಿಹಞ್ಚಾದ ...{Loading}...

ಕೂಡೆ ಹರಿಹಂಚಾದ ತಂದೆಯ
ಗೂಡ ನೋಡದ ಮುನ್ನ ಕಂಬನಿ
ಮೂಡಿ ಮುಳುಗಿದವಾಲಿ ಕಾಣವು ಪಿತೃಕಳೇವರವ
ನೋಡಲೆಳಸದ ಮುನ್ನ ಕಿಡಿಗಳ
ಝಾಡಿಯನು ಕಣ್ಣುಗುಳಿದವು ಮಿಗೆ
ನೋಡಿದಶ್ವತ್ಥಾಮ ಕಾಣನು ಮುಂದೆ ಪರಬಲವ ॥8॥

೦೦೯ ಅದ್ದನಳಲಿನ ಜಲಧಿಯೊಳು ...{Loading}...

ಅದ್ದನಳಲಿನ ಜಲಧಿಯೊಳು ಮುರಿ
ದೆದ್ದು ಕೋಪಾನಳನ ಝಳದಲಿ
ಬಿದ್ದು ನನೆದನು ನೀರಿನಲಿ ಕಾಹೇರಿ ಕಿಚ್ಚಿನಲಿ
ಗೆದ್ದುದುದಕವನನಲನನಲನ
ನದ್ದಿತುದಕವದೊಂದನೊಂದನು
ಕದ್ದುವೆರಡರ ಹೋರಟೆಗೆ ಗುರುಸೂನು ಬೆಂಡಾದ ॥9॥

೦೧೦ ಕೆದರಿ ಹೊರಳುವ ...{Loading}...

ಕೆದರಿ ಹೊರಳುವ ಸಾರಥಿಯನೆ
ತ್ತಿದನು ರಣವೃತ್ತಾಂತವನು ಕೇ
ಳಿದನು ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ
ಒದೆದನಳಲನು ರೋಮ ಹರುಷವ
ಹೊದೆದು ಹೊರೆ ಹೆಚ್ಚಿದನು ಕಾಹೇ
ರಿದನು ಕಲಿ ಮನವಳುಕಿ ತಗ್ಗಿತು ರೋಷಭಾವದಲಿ ॥10॥

೦೧೧ ಚಟುಳಕೋಪಾಗ್ನಿಯಲಿ ನಾಸಾ ...{Loading}...

ಚಟುಳಕೋಪಾಗ್ನಿಯಲಿ ನಾಸಾ
ಪುಟದ ಸುಯ್ಲಲಿ ವಿಸ್ಫುಲಿಂಗೋ
ತ್ಕಟಸಮಾಧಿಗಳಿದ್ದಿಲಲಿ ನಿಗ್ರಹಕಟಾಹದಲಿ
ಪಟುತರದ ಬಾಹುಪ್ರತಾಪದ
ಪುಟವನೆತ್ತದೆ ಮಾಣನೆನಲು
ತ್ಕಟಿಸುತಿರ್ದುದು ರೌದ್ರವೀರಾಭ್ಯುದಯ ಸನ್ನಾಹ ॥11॥

೦೧೨ ನೊನ್ದ ಜವನೋ ...{Loading}...

ನೊಂದ ಜವನೋ ಜಗವನುರುಹಲು
ಬಂದ ಶಿವನೋ ಕಂಬದಿಂದೊಗೆ
ತಂದ ರೌದ್ರಾಟೋಪ ಮಾನವರೂಪ ಕೇಸರಿಯೊ
ತಂದೆಯಳಲಿಗನಿರವು ವಿಶ್ವವ
ನೊಂದು ನಿಮಿಷಕೆ ಸುಡುವುದೋ ಹಾ
ಯೆಂದುದಮರಾನೀಕವೆಲೆ ಭೂಪಾಲ ಕೇಳ್ ಎಂದ ॥12॥

೦೧೩ ಮುರುಹಿದನು ಮೀಸೆಯನು ...{Loading}...

ಮುರುಹಿದನು ಮೀಸೆಯನು ಕಣ್ಣುಗ
ಳರಳಿದವು ಹೊಗೆ ಸುತ್ತಿ ಸುಯ್ಲಲಿ
ಸುರಿದುದುರಿ ಹುಬ್ಬುಗಳನುರೆ ಬಿಗಿದೌಡನೊಡೆಯೊತ್ತಿ
ಬೆರಳ ತುದಿಯಲಿ ಬೊಬ್ಬಿರಿದು ಹರಿ
ಶರಕೆ ಕೈನೀಡಿದನು ಕಲ್ಪದ
ಹರನವೊಲು ಹರರೂಪ ಹೊಂಗಿದನಧಿಕ ರೋಷದಲಿ ॥13॥

೦೧೪ ದನುಜಹರ ಮನ್ತ್ರವನು ...{Loading}...

ದನುಜಹರ ಮಂತ್ರವನು ಮನದಲಿ
ನೆನೆದು ಕೈನೀಡಿದನು ತುದಿಯಂ
ಬಿನಲಿ ತುರುಗಿದ ಕಿಡಿಯ ಬಿರುಕೇಸರಿಯ ಧಾಳಿಗಳ
ತನಿವೊಗರ ಬಲುವೊಗೆಯ ಹೊರಳಿಯ
ಕನಕರಸ ರೇಖಾವಳಿಯ ಮೈ
ಮಿನುಗುಗಳ ಹೊಂಗರಿಯ ನಾರಾಯಣ ಮಹಾಶರಕೆ ॥14॥

೦೧೫ ಪ್ರಳಯ ಮೇಘವನೊಡೆವ ...{Loading}...

ಪ್ರಳಯ ಮೇಘವನೊಡೆವ ರವಿಮಂ
ಡಲ ಸಹಸ್ರದ ರಶ್ಮಿಯೋ ಜಗ
ದಳವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ
ಮುಳಿದ ನರಕೇಸರಿಯ ದಾಡೆಯ
ಥಳಥಳತ್ಕಾರವೊ ಮಹಾಸ್ತ್ರದ
ಬೆಳಗೊ ಹೆಸರಿಡಲಾರು ಬಲ್ಲರು ಭೂಪ ಕೇಳ್ ಎಂದ ॥15॥

೦೧೬ ಸರಳ ಚೂಳಿಯ ...{Loading}...

ಸರಳ ಚೂಳಿಯ ಝಳದೊಳಗೆ ಸಾ
ವಿರ ನಿದಾಘದ ಸೂರ್ಯರುಬ್ಬಟೆ
ಕರಗಿ ಹೋಯಿತು ಬಾಯಿಧಾರೆಯ ಕಿಡಿಯ ಧಾಳಿಯಲಿ
ಬರಸಿಡಿಲ ಶತಕೋಟಿ ಸೀದವು
ನಿರಿವೊಗರ ಕಬ್ಬೊಗೆಯ ಕಿಡಿಯಲಿ
ನೆರೆದವಂತ್ಯದ ಮೇಘವೆನೆ ಝಗಝಗಿಸಿತಮಳಾಸ್ತ್ರ ॥16॥

೦೧೭ ಒಳಗೆ ಜಲಚರವೊದರೆ ...{Loading}...

ಒಳಗೆ ಜಲಚರವೊದರೆ ಕುದಿದುದು
ಜಲಧಿ ಕಾದುದು ಧರಣಿ ಸೀದುದು
ಕುಲಗಿರಿಗಳುರೆ ಸಿಡಿದು ಸೀಕರಿವೋಯ್ತು ವನನಿಕರ
ನೆಲಕೆ ದಾಡೆಯ ಕೊಟ್ಟು ಕುಂಭ
ಸ್ಥಳವ ತೆಗೆದವು ದಿಗಿಭತತಿ ಹೆಡೆ
ನೆಳಿಯೆ ಮಣಿಗಳಲಾಂತನವನಿಯನುರಗಪತಿಯಂದು ॥17॥

೦೧೮ ಗುಳವ ಕೊಯ್ದಿಳುಹಿದರು ...{Loading}...

ಗುಳವ ಕೊಯ್ದಿಳುಹಿದರು ಕರಿ ಸಂ
ಕುಳದಲಾರೋಹಕರು ಜೋಡನು
ಕಳಚಿ ಬಿಸುಟರು ರಾವುತರು ಹಕ್ಕರಿಕೆಗಳು ಸಹಿತ
ಝಳದ ಝಾಡಿಗೆ ಬೆವರಿ ವಸನಾಂ
ಚಲವ ಗಾಳಿಗೆ ಮೊಗವನೆತ್ತಿದ
ರಳುಕಿ ಕಣ್ ಕೋರೈಸಿ ಮಮ್ಮಲ ಮರುಗಿತುಭಯಬಲ ॥18॥

೦೧೯ ಮೇಲ ಜಗವೇಳೋಡಿದವು ...{Loading}...

ಮೇಲ ಜಗವೇಳೋಡಿದವು ಧ್ರುವ
ನಾಲಯಕೆ ನೆಲೆದಪ್ಪಿದಂದು ಗ್ರಹ
ಮಾಲೆ ತಾರಾರಾಸಿ ಜೋಯಿಸರೋದು ಹುಸಿಯಾಯ್ತು
ಧಾಳಿಡುವ ಸೆಗಳಿಯಲಿ ತಳ ಪಾ
ತಾಳಕದ್ದುದು ಕಮಲಜಾಂಡದ
ಮೇಲಣಾವರಣಾಂಬು ಕುದಿದುದು ಹೇಳಲೇನೆಂದ ॥19॥

೦೨೦ ಒಡೆಯರಿಲ್ಲಾ ಜಗಕೆ ...{Loading}...

ಒಡೆಯರಿಲ್ಲಾ ಜಗಕೆ ಲೋಗರ
ಸುಡುವರೊಪ್ಪಿಸಿ ಕೊಡುವರೇ ನಾ
ನೊಡೆಯ ಫಡ ತಾನೊಡೆಯರೆಂಬರು ಮೂವರೀ ಜಗಕೆ
ನುಡಿಯರೀ ಹೊತ್ತಿನಲಿ ನಮಗಿ
ನ್ನೊಡೆಯರಾರಿನ್ನಾರ ಬಸುರೊಳ
ಗಡಗುವೆವು ಶಿವ ಶಿವ ಎನುತ ತಲ್ಲಣಿಸಿತಮರಗಣ ॥20॥

೦೨೧ ಕವಿದ ಕೌರವ ...{Loading}...

ಕವಿದ ಕೌರವ ಬಲದ ಸುಮ್ಮಾ
ನವನು ತಮ್ಮಂಜಿಕೆಯನಾ ಭೈ
ರವನ ಭಾರಿಯ ಸರಳ ಸೊಗಡಿಗೆ ಬೇವ ಮೂಜಗವ
ಅವರು ಕಂಡರು ಖಾತಿಯಲಿ ಪಾಂ
ಡವರು ಧೃಷ್ಟದ್ಯುಮ್ನನನು ತವ
ತವಗೆ ಬೈದರು ಪಾಪಿ ಲೋಕವ ಕೊಂದೆ ನೀನೆನುತ ॥21॥

೦೨೨ ಅಕಟ ಗುರುಹತ್ಯಾ ...{Loading}...

ಅಕಟ ಗುರುಹತ್ಯಾ ಮಹಾ ಪಾ
ತಕವನೇ ನೆರೆ ಮಾಡಿತಲ್ಲದೆ
ಸಕಲ ಲೋಕದ ಬೇರುಗೊಲೆಗೆಲೆ ಪಾಪಿ ನೀನಾದೈ
ವಿಕಟ ವಿಕ್ರಮ ವಿಸ್ಫುಲಿಂಗ
ಪ್ರಕರದಲಿ ಧಗಧಗಿಸುತಿದೆ ಸಾ
ಯಕವ ನಿಲಿಸಾ ನೀನೆನುತ ಭಂಗಿಸಿತು ಪರಿವಾರ ॥22॥

೦೨೩ ಅವನ ಗುರುತನವೇನು ...{Loading}...

ಅವನ ಗುರುತನವೇನು ವಿಪ್ರಾ
ಧಮನಲಾ ಶಸ್ತ್ರೋಪಜೀವನ
ನಿವನು ಋಷಿಯೇ ದ್ರೋಣವಧೆಯನ್ಯಾಯವೇ ತನಗೆ
ಇವನು ತಮ್ಮಯ್ಯನನು ನೆರೆ ಪರಿ
ಭವಿಸನೇ ಚಿಕ್ಕಂದು ನಿಮಗೇ
ಕಿವನನಿರಿದರೆ ಖಾತಿಯೆಂದನು ದ್ರುಪದಸುತ ಮುಳಿದು ॥23॥

೦೨೪ ಅವಗಡಿಸಲೇಕಗ್ರ ಜನ್ಮ ...{Loading}...

ಅವಗಡಿಸಲೇಕಗ್ರ ಜನ್ಮ
ಬ್ರುವನೆ ಕಟಕಾಚಾರ್ಯನೆಲೆ ನೀ
ನವರಿವರನೆಂಬಂತೆ ನುಡಿವರೆ ಗುರುವಲಾ ನಿನಗೆ
ಇವರಿಗೀ ನುಡಿಯುರಿಸಿತೇನಿದು
ಶಿವ ಶಿವಾ ಗುರುನಿಂದೆಯನು ಕೇ
ಳುವರು ನಾವಲ್ಲೆನುತ ಸಾತ್ಯಕಿ ಮುಚ್ಚಿದನು ಕಿವಿಯ ॥24॥

೦೨೫ ಗುರುವಿಘಾತಕರಾವು ತಾನತಿ ...{Loading}...

ಗುರುವಿಘಾತಕರಾವು ತಾನತಿ
ಗುರುಪದೋಪಾಸಕನು ತನ್ನನು
ಕರೆದರಾರಿದಕೆಂದು ಧೃಷ್ಟದ್ಯುಮ್ನನುರಿದೇಳೆ
ದುರುಳತನವಾರೊಡನೆಯೋ ಬಾ
ಹಿರ ಮಹಾಪಾತಕಿಯನೊದೆದಿ
ಟ್ಟೊರಸುವೆನು ತಾನೆನುತ ಸಾತ್ಯಕಿ ಖಂಡೆಯವನುಗಿದ ॥25॥

೦೨೬ ಎಲೆಲೆ ಹಿಡಿಹಿಡಿ ...{Loading}...

ಎಲೆಲೆ ಹಿಡಿಹಿಡಿ ಸಾತ್ಯಕಿಯನೊಳ
ಗೊಳಗೆ ತೋಟಿಯೆ ಜಾಗು ಕೌರವ
ಬಲದವರ ಬೂತಾಟವಾಯಿತೆ ನಮ್ಮ ಥಟ್ಟಿನಲಿ
ನಿಲಿಸೆನುತ ನೃಪನೊರಲೆ ಕವಿದೆಡೆ
ಗಲಿಸಿ ಹಿಡಿದನು ಭೀಮನೀತನ
ಬಲುಭುಜವನೌಚಿದನು ಕೊಂಡನು ಕಯ್ಯ ಖಂಡೆಯವ ॥26॥

೦೨೭ ಸೆಳೆದನೊರೆಯಲಡಾಯುಧವನ ...{Loading}...

ಸೆಳೆದನೊರೆಯಲಡಾಯುಧವನ
ವ್ವಳಿಸಿದನು ಪಾಂಚಾಲಸುತನೀ
ಗಳಹನನು ಬಿಡು ಭೀಮ ಕೊಡು ಸಾತ್ಯಕಿಯ ಖಂಡೆಯವ
ಎಲವೊ ಸಾತ್ಯಕಿ ಕೃಷ್ಣ ದೇವರಿ
ಗಳುಕಿ ಸೈರಿಸಿದರೆ ದೊಠಾರಿಸಿ
ಗೆಲನುಡಿದೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ ॥27॥

೦೨೮ ತನ್ನೊಳಿದ್ದವಗುಣವ ನೋಡದೆ ...{Loading}...

ತನ್ನೊಳಿದ್ದವಗುಣವ ನೋಡದೆ
ಚುನ್ನವಾಡುವನಿದಿರನೆಲವೋ
ನಿನ್ನ ಹೋಲುವರಾರು ಬಾಹಿರ ಭಂಡರವನಿಯಲಿ
ನಿನ್ನೆ ಶಸ್ತ್ರವ ಬಿಸುಟ ಯೋಗ ವಿ
ಪನ್ನನನು ನೀನೇನ ಮಾಡಿದೆ
ನಿನ್ನ ಶೋಧಿಸಿ ಬಳಿಕ ಪರರನು ಹಳಿವುದೇನೆಂದ ॥28॥

೦೨೯ ಮಿಡುಕಿದನು ಸಾತ್ಯಕಿ ...{Loading}...

ಮಿಡುಕಿದನು ಸಾತ್ಯಕಿ ವೃಕೋದರ
ನೊಡೆಯವಚಿದನು ಮತ್ತೆ ಪವನಜ
ಬಿಡು ನಿನಗೆ ನೃಪನಾಣೆ ಕುಡಿವೆನು ಖಳನ ಶೋಣಿತವ
ಬಿಡು ಬಿಡಕಟಾ ಭೀಮ ಸಾತ್ಯಕಿ
ಹಿಡಿಹಿಡಿಯ ಹಮ್ಮೈಸುವನು ಬಿಡು
ತೊಡಕಿ ನೋಡಲಿಯೆನುತ ಧೃಷ್ಟದ್ಯುಮ್ನನಳ್ಳಿರಿದ ॥29॥

೦೩೦ ಮುಳಿದು ಯಾದವ ...{Loading}...

ಮುಳಿದು ಯಾದವ ಸೇನೆ ಕೈದುವ
ಸೆಳೆದುದಾ ಪಾಂಚಾಲನಾಯಕ
ರುಲಿದು ನಿಂದುದು ಕಂಡನಸುರಧ್ವಂಸಿ ನಸುನಗುತ
ಎಲೆಲೆ ಪಾಪಿಗಳಿರ ವೃಥಾ ತ
ಮ್ಮೊಳಗೆ ತೋಟಿ ಶರಾಗ್ನಿಯಿತ್ತಲು
ಮೊಳಗುತದೆ ಕೆಡೆಬೀಳಹೊಯ್ ಹೊಯ್ ಕುನ್ನಿಗಳನೆಂದ ॥30॥

೦೩೧ ಬೇರೆ ತಮಗೊನ್ದಾಳುತನವುರಿ ...{Loading}...

ಬೇರೆ ತಮಗೊಂದಾಳುತನವುರಿ
ಸೂರೆಗೊಳುತಿದೆ ಜಗವನಿತ್ತಲು
ಕೌರಿಡುವ ಕಾಲಾಗ್ನಿಯಿದೆ ಕಬ್ಬೊಗೆಯ ಕವಚದಲಿ
ತೋರಲಾಪರೆ ಬಾಹು ಸತ್ವವ
ತೋರಿರೈ ದಿಟ ಪಂಥದೋಲೆಯ
ಕಾರರಹಿರೆನುತಸುರರಿಪು ಗಜಬಜವ ನಿಲಿಸಿದನು ॥31॥

೦೩೨ ಇತ್ತ ಲೋಕದ ...{Loading}...

ಇತ್ತ ಲೋಕದ ಕಂಗಳೆವೆಗಳು
ಕೆತ್ತವಳ್ಳಿರಿವುರಿಯ ಜಾಳಿಗೆ
ತೆತ್ತಿಸಿತು ಹರಿದಶ್ವ ಶತವನು ಶಿವ ಮಹಾದೇವ
ಕಿತ್ತು ಶರವನು ತೂಗಿ ಬಿಲ್ಲಿಗೆ
ತೆತ್ತಿಸಿದನುರೆ ಸೇದಿ ತೋರಿಹ
ತುತ್ತು ನಿನಗರಿಸೇನೆ ಹೋಗೆನುತೆಚ್ಚು ಬೊಬ್ಬಿರಿದ ॥32॥

೦೩೩ ಜಗದ ಹುಯ್ಯಲು ...{Loading}...

ಜಗದ ಹುಯ್ಯಲು ಜಡಿಯಲಭ್ರದ
ಲಗಿದು ಕೌರವಸೇನೆ ಹರುಷದ
ಸೊಗಸಿನಲಿ ಮೈಮರೆಯೆ ಕೃಷ್ಣಾದಿಗಳು ಕೈಮರೆಯೆ
ಹೊಗೆಯ ಹೊರಳಿಯ ಕಿಡಿಯ ಥಟ್ಟಿನ
ತಗೆದುರಿಯ ತೆಕ್ಕೆಯಲಿ ಧಗಧಗ
ಧಗಿಸಿ ಧಾಳಿಟ್ಟುದು ಮಹಾಶರವಹಿತ ಮೋಹರಕೆ ॥33॥

೦೩೪ ಹಾ ಮುರಾನ್ತಕ ...{Loading}...

ಹಾ ಮುರಾಂತಕ ಹಾ ಯುಧಿಷ್ಠಿರ
ಹಾ ಮರುತ್ಸುತ ಹಾ ಧನಂಜಯ
ಹಾ ಮಗನೆ ಹಾ ತಂದೆ ಹಾ ಒಡವುಟ್ಟಿದನೆಯೆನುತ
ಭೂಮಿ ತೆರೆಯಳೆ ಬಾಯನಕಟಕ
ಟಾ ಮಹೋದಧಿ ದೂರವಿನ್ನೇ
ನೀ ಮಹಾಸ್ತ್ರಕೆ ಸಿಕ್ಕಿದೆವೆಯೆಂದೊರಲಿತರಿಸೇನೆ ॥34॥

೦೩೫ ಕಳವಳಿಸಿತರಿಸೇನೆ ಚೂಣಿಯ ...{Loading}...

ಕಳವಳಿಸಿತರಿಸೇನೆ ಚೂಣಿಯ
ಕೊಳುಗಿಡಿಯ ಸೆಖೆ ತಾಗಿ ಸುಭಟಾ
ವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು
ಬಲದ ಸುತ್ತಲು ಕಟ್ಟಿತುರಿ ಕೆಂ
ಬೆಳಗು ಕುಡಿದವು ಕರ್ಬೊಗೆಗಳ
ಗ್ಗಳದ ಬಾಣದ ಬಂದಿಯಲಿ ಸಿಲುಕಿತ್ತು ರಿಪುಸೇನೆ ॥35॥

೦೩೬ ಝಳಕೆ ಘೀಳಿಟ್ಟೊರಲಿದವು ...{Loading}...

ಝಳಕೆ ಘೀಳಿಟ್ಟೊರಲಿದವು ಕರಿ
ಕುಳ ತುರಂಗದ ಥಟ್ಟು ಖುರದಲಿ
ನೆಲನ ಹೊಯ್ದವ್ವಳಿಸಿದವು ರಾವುತರನೀಡಾಡಿ
ಬಲು ರಥವನಸಬಡಿದು ಸೂತನ
ನಿಳುಹಿ ಹಯವೋಡಿದವು ಮು
ಮ್ಮುಳಿಸಿ ತನಿಗುದಿಗುದಿದು ಕೋಟಲೆಗೊಂಡುದರಿಸೇನೆ ॥36॥

೦೩೭ ವಾಯಕಞ್ಜದಿರಞ್ಜದಿರಿ ಫಡ ...{Loading}...

ವಾಯಕಂಜದಿರಂಜದಿರಿ ಫಡ
ಬಾಯ ಬಿಟ್ಟರೆ ಹೋಹುದೇ ನಿ
ಮ್ಮಾಯುಷಕೆ ಹೊಣೆ ತಾನು ಹೇಳಿತ ಮಾಡಿ ಬೇಗದಲಿ
ಆಯುಧಂಗಳ ಬಿಸುಟು ಕರಿ ರಥ
ಜಾಯಿಲಂಗಳನಿಳಿದು ಬದುಕುವು
ಪಾಯವೆಂದಸುರಾರಿ ಸಾರಿದನಂದು ಕೈ ನೆಗಹಿ ॥37॥

೦೩೮ ಕಳಿದ ಹೂವಿನ ...{Loading}...

ಕಳಿದ ಹೂವಿನ ತೊಡಬೆಯೋ ಕುಸಿ
ದಲೆಯ ಬಿಟ್ಟಿಯ ಭಾರವೋ ನಿ
ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ
ನಳಿನನಾಭನ ಮಾತು ಹಿಂಚಿತು
ಕಳಚಿದವು ಕೈದುಗಳು ಕೈಗಳ
ಲುಳಿವುಪಾಯದ ಜೋಡ ತೊಟ್ಟುದು ಪಾಂಡುಸುತಸೇನೆ ॥38॥

೦೩೯ ಬೀತ ಕೈದುಗಳಖಿಳದಳ ...{Loading}...

ಬೀತ ಕೈದುಗಳಖಿಳದಳ ಸಂ
ಘಾತವನು ಬಾಣಾಗ್ನಿ ಬೆರಸಿತು
ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ
ಆತನಾವೆಡೆ ಧರ್ಮಜನು ವಿ
ಖ್ಯಾತನರ್ಜುನನನಿಲಸುತ ಮಾ
ದ್ರೀತನುಜರೆಂದೆನುತ ಹೊಕ್ಕುದು ರಾಜ ಮೋಹರವ ॥39॥

೦೪೦ ಹರಿಯ ಬಯ್ಗುಳು ...{Loading}...

ಹರಿಯ ಬಯ್ಗುಳು ಬೆದರಿಸಲು ನೃಪ
ನಿರೆ ನಿರಾಯುಧನಾಗಿ ಮಾದ್ರೇ
ಯರು ಶಿಖಂಡಿ ಯುಯುತ್ಸು ಸಾತ್ಯಕಿ ಸೃಂಜಯಾದಿಗಳು
ಕರದ ಕದಪಿನ ತಳಿತ ಮುಸುಕಿನ
ಮುರಿದ ಮೋರೆಯ ಮುಂದೆ ಹರಹಿದ
ತರತರದ ಕೈದುಗಳ ಸುಭಟರ ಕಂಡುದಮಳಾಸ್ತ್ರ ॥40॥

೦೪೧ ಏಕೆ ನಾಚಿಕೆ ...{Loading}...

ಏಕೆ ನಾಚಿಕೆ ಧರ್ಮಹಾನಿ
ವ್ಯಾಕುಳತೆಯಿನ್ನೇಕೆ ವೈದಿಕ
ಲೌಕಿಕವದೇಗುವುವು ಜೀವವ್ರಯಕೆ ಕುಲವುಂಟೆ
ಏಕೆ ಭಯ ನಮಗಿನ್ನು ಕೈದುವ
ನೂಕಿದವರನು ಹೆಂಗುಸನು ತಾ
ಸೋಕಿದರೆ ಮುರಹರನ ಪದದಾಣೆಂದುದಮಳಾಸ್ತ್ರ ॥41॥

೦೪೨ ಇವರೊಳುಣ್ಟೇ ಕೈದುವೊತ್ತವ ...{Loading}...

ಇವರೊಳುಂಟೇ ಕೈದುವೊತ್ತವ
ರವರನರಸುವೆನೆನುತ ಬರಲಾ
ಪವನಸುತನನು ಥಟ್ಟಿಸಿದನಾ ದನುಜರಿಪು ಮುಳಿದು
ಆವನಿಗಿಳಿದೀಡಾಡಿ ಕಳೆ ಕೈ
ದುವನು ತಾ ಮೊದಲಾಗಿ ನಿಂದಂ
ದವನು ನೋಡೆನಲನಿಲಸುತ ನಸುನಗುತಲಿಂತೆಂದ ॥42॥

೦೪೩ ದೇಹ ಕೀರ್ತಿಗಳೊಳಗೆ ...{Loading}...

ದೇಹ ಕೀರ್ತಿಗಳೊಳಗೆ ನಿಲುವುದು
ದೇಹವೋ ಕೀರ್ತಿಯೊ ಮುರಾಂತಕ
ಬೇಹುದನು ಬೆಸಸಿದಡೆ ಮಾಡೆನು ಬಲ್ಲಿರೆನ್ನನುವ
ಗಾಹುಗತಕದಲುಳಿವ ಧರ್ಮ
ದ್ರೋಹಿ ತಾನಲ್ಲಿನ್ನು ನೋಡಾ
ಸಾಹಸವನೆನುತಿತ್ತ ಮುರಿದನು ಸರಳ ಸಮ್ಮುಖಕೆ ॥43॥

೦೪೪ ಪೂತು ಪಾಯಿಕು ...{Loading}...

ಪೂತು ಪಾಯಿಕು ಭೀಮ ನೆರೆದೀ
ಬೂತು ಬಲದಲಿ ವೀರ ನೀನಹೆ
ಯೇತಕಿವದಿರು ಗಂಡು ಜೋಹದ ಗರುವ ಸೂಳೆಯರು
ಸೋತಡೆಯು ಜಯ ನಿನ್ನದೆನುತ ವಿ
ಧೂತಧೂಮದಿ ಕಿಡಿಯ ಝಾಡಿಗ
ಳೀತನನು ಮುಸುಕಿದವು ಚುಂಬಿಸಿತಂಬು ಪವನಜನ ॥44॥

೦೪೫ ಗಿರಿಯ ಮುತ್ತಿದ ...{Loading}...

ಗಿರಿಯ ಮುತ್ತಿದ ಮುಗಿಲವೊಲು ಹೊಗೆ
ಹೊರಳಿಗಟ್ಟಿತು ಮೇಲೆ ದಳ್ಳುರಿ
ಧರಧುರದಲೊಳಬೀಳುತಿದ್ದವು ಕಿಡಿಯ ಚೂಣಿಯಲಿ
ಉರಿಯೊಳದ್ದೈ ತಮ್ಮ ಹಾಯೆಂ
ದರಸ ಮೊದಲಾದಖಿಳಭೂಪರು
ಕರದ ಬಿರುವೊಯ್ಲುಗಳ ಬಾಯವರೊರಲಿ ಹೊರಳಿದರು ॥45॥

೦೪೬ ವಾಯುಸುತ ಹಾಯೆನುತ ...{Loading}...

ವಾಯುಸುತ ಹಾಯೆನುತ ಫಲುಗುಣ
ಬಾಯಿಬಿಡೆ ಹರಿ ಜರೆದನಳುವನ
ಬಾಯ ನೋಡಾ ಬೇಗ ತೊಡು ತೊಡು ವರುಣ ಮಾರ್ಗಣವ
ಸಾಯಲರಿಯನು ಭೀಮನೆನೆ ನಾ
ರಾಯಣನ ನುಡಿಯಿಂದ ಮುನ್ನ ಜ
ಲಾಯತಾಸ್ತ್ರವನರ್ಜುನನು ಗಾಂಡಿವದಲುಗುಳಿಸಿದ ॥46॥

೦೪೭ ಹೊಗೆಯನೊದೆದೊಳಬಿದ್ದು ...{Loading}...

ಹೊಗೆಯನೊದೆದೊಳಬಿದ್ದು ಕಿಡಿಗಳ
ನುಗಿದು ದಳ್ಳುರಿದುರುಗಲನು ತನಿ
ಬಿಗಿದು ಭೀಮನ ರಥದ ಸುತ್ತಲು ಸೂಸಿ ತೆರೆ ಮಸಗೆ
ಹಗೆಯನೆನಗಿದಿರೊಡ್ಡಿ ಜುಣುಗಲು
ಬಗೆದರೇ ಖಂಡೆಯದ ಮೊನೆಯಲಿ
ಮಗುಳಿಚುವರೇ ತನ್ನನೆನುತುರವಣಿಸಿತಮಳಾಸ್ತ್ರ ॥47॥

೦೪೮ ಉರುಬಿದವು ಕೇಸುರಿಗಳುದಕವ ...{Loading}...

ಉರುಬಿದವು ಕೇಸುರಿಗಳುದಕವ
ಸುರಿದುವೊಣಗಿಲುಗಿಡಿಯ ಹಬ್ಬುಗೆ
ಹೊರಗೆ ಮಸಗಿತು ಮುಸುಕಿತುದಕದ ಬಾಣವಕ್ಕುಡಿಸೆ
ಒರತೆಯಾರಿತು ವರುಣಶರ ಬಾ
ಯರತು ನೀರಡಿಸಿದುದು ಭೀಮನ
ಸೆರಗ ಹಿಡಿದಳು ಮೃತ್ಯುವವನೀಪಾಲ ಕೇಳ್ ಎಂದ ॥48॥

೦೪೯ ಆವ ಶರವಿದ್ದೇಗುವುದು ...{Loading}...

ಆವ ಶರವಿದ್ದೇಗುವುದು ಮೈ
ಗಾವನಸುತರಾಂತಕನಲೈ ತಾ
ನಾವ ವಹಿಲದೊಳುರಿಯೊಳೆಡೆಹಾಯ್ದನಿಲಜನ ತೆಗೆದ
ನಾವರಿಯೆವಾ ಪವನಜನ ಶ
ಸ್ತ್ರಾವಳಿಯನಾ ಫಲುಗುಣನ ಗಾಂ
ಡೀವವನು ಹರಿ ಸೆಳೆದುಕೊಂಡನು ಬಿಸುಟನವನಿಯಲಿ ॥49॥

೦೫೦ ಮುರಿಮುರಿದು ಕಬ್ಬೊಗೆಯ ...{Loading}...

ಮುರಿಮುರಿದು ಕಬ್ಬೊಗೆಯ ಹೊದರಿನ
ಹೊರಳಿ ಹರೆದುದು ಸೂಸುಗಿಡಿಗಳ
ನೆರವಿ ನಸಿದುದು ನಿಮಿರ್ದ ಹೊಂಗರಿಯಂಬು ಹೊಳೆಹೊಳೆದು
ಮುರಹರನ ಪಾದಾರವಿಂದದ
ಹೊರೆಯೊಳಡಗಿತು ಹೋಯ್ತು ಭಯವು
ಬ್ಬರದೊಳಗೆ ಬೊಬ್ಬಿರಿದವುರು ನಿಸ್ಸಾಳಕೋಟಿಗಳು ॥50॥

೦೫೧ ಜಗದುಸುರು ಪಸರಿಸಿತು ...{Loading}...

ಜಗದುಸುರು ಪಸರಿಸಿತು ಹರುಷದ
ಹೊಗರು ಮಸಗಿತು ರಿಪುನೃಪರ ನಿ
ನ್ನಗಡು ಮಗನುತ್ಸಾಹವದ್ದುದು ಖೇದಪಂಕದಲಿ
ಹೊಗೆವ ಮೋರೆಯ ಕಯ್ಯಗಲ್ಲದ
ಬಿಗಿದ ಬೆರಗಿನ ಖತಿಯೊಳುಸುರುವ
ನಗೆಯೊಳಶ್ವತ್ಥಾಮನಿದ್ದನು ಮೊಗದ ಮೋನದಲಿ ॥51॥

೦೫೨ ಏನು ಮಾಡುವೆನಿನ್ನು ...{Loading}...

ಏನು ಮಾಡುವೆನಿನ್ನು ಭಾಗ್ಯ ವಿ
ಹೀನನಕಟಾ ಕೌರವನು ಸುರ
ಧೇನು ನೆರೆ ಗೊಡ್ಡಾಯ್ತು ಸುರತರು ಕಾಡಮರನಾಯ್ತು
ಹಾನಿಯಿವದಿರಿಗೊಲಿದುದಾರಿ
ದ್ದೇನಹುದು ಪರದೈವದನುಸಂ
ಧಾನವತ್ತಲು ಸುಡಲೆನುತ ತಿರುಗಿದನು ಪಾಳೆಯಕೆ ॥52॥

೦೫೩ ಬನ್ದು ವೇದವ್ಯಾಸಮುನಿ ...{Loading}...

ಬಂದು ವೇದವ್ಯಾಸಮುನಿ ಗುರು
ನಂದನಂಗರುಹಿದನು ಪಾರ್ಥಮು
ಕುಂದರನು ಪೂರ್ವದಲಿ ನರನಾರಾಯಣಾಹ್ವಯದ
ಸಂದ ಋಷಿಗಳು ಭೂಮಿಭಾರವ
ನೊಂದುಪಾಯದಲಪಹರಿಸಲೈ
ತಂದ ಹದನನು ತಿಳುಹಿ ಬಂದನು ಫಲುಗುಣನ ಹೊರೆಗೆ ॥53॥

೦೫೪ ನರನ ಚಿತ್ತಗ್ಲಾನಿಯನು ...{Loading}...

ನರನ ಚಿತ್ತಗ್ಲಾನಿಯನು ಪರಿ
ಹರಿಸಿದನು ಶೂಲದಲಿ ಮುಂಕೊಂ
ಡರಿ ಬಲವನಿರಿದಾತನಾರೆನಲಿಂದುಧರನೆಂದು
ಹರನ ಕರುಣದ ಹದನನೀತಂ
ಗೊರೆದು ಶತರುದ್ರೀಯವನು ವಿ
ಸ್ತರಿಸಿ ಬಿಜಯಂಗೈದನಾ ಮುನಿಪತಿ ನಿಜಾಶ್ರಮಕೆ ॥54॥

೦೫೫ ಬಿಸುಟು ಕೈದುಗಳೆಲ್ಲವನು ...{Loading}...

ಬಿಸುಟು ಕೈದುಗಳೆಲ್ಲವನು ಕೈ
ವಶವ ಮಾಡಿತು ಸೇನೆ ಲಜ್ಜಾ
ರಸಕೆ ಗುರಿಯಾಯ್ತೊಮ್ಮೆ ಮರಳಿದು ಹರುಷಮಯರಸಕೆ
ಮುಸುಕುದಲೆಯಲಿ ಮುರಿದುದದು ಭಯ
ರಸದ ರಹಿಯಲಿ ತಿರುಗಿತಿದು ರವಿ
ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ ॥55॥

೦೫೬ ಆವ ಶರದಲಿ ...{Loading}...

ಆವ ಶರದಲಿ ಕೊರತೆ ನಿನ್ನವ
ರಾವ ಬಲದಲಿ ಕುಂದು ಭುವನದೊ
ಳಾವನೈ ಸಮಜೋಳಿ ನಿನ್ನರಮನೆಯ ಸುಭಟರಿಗೆ
ಆವನಿದ್ದೇನಹುದು ಜಗದಧಿ
ದೈವದಲಿ ಸೆಣಸಿದಿರಿ ಪಾಂಡವ
ಜೀವಿಯೆಂದರಿದರಿದು ಗದುಗಿನ ವೀರನಾರಯಣ ॥56॥

೦೫೭ ಇತಿ ಶ್ರೀಮದಚಿನ್ತ್ಯ ...{Loading}...

ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
sದ್ರೋಣಪರ್ವಂ ಸಮಾಪ್ತಮಾದುದು.

+೧೯ ...{Loading}...