೦೦೦ ಸೂ ಇರುಳು ...{Loading}...
ಸೂ. ಇರುಳು ಸಮರದಲುಭಯರಾಯರ
ಗುರು ವಿರೋಧಿ ಮಹೀಶ ಸೇನಾ
ಶರಧಿಯನು ಕಲಕಿದನು ಗೆಲಿದನು ಮಕುಟವರ್ಧನರ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ರಾತ್ರಿ ಯುದ್ಧದಲ್ಲಿ ಎರಡೂ ಪಕ್ಷದ ರಾಯರ ಗುರು ದ್ರೋಣರು ಶತ್ರುರಾಜನ ಸೇನಾಸಾಗರವನ್ನು ಕಲಕಿದರು. ಕಿರೀಟಧಾರಿಗಳಾದ ರಾಜರುಗಳನ್ನು ಗೆದ್ದರು.
ಮೂಲ ...{Loading}...
ಸೂ. ಇರುಳು ಸಮರದಲುಭಯರಾಯರ
ಗುರು ವಿರೋಧಿ ಮಹೀಶ ಸೇನಾ
ಶರಧಿಯನು ಕಲಕಿದನು ಗೆಲಿದನು ಮಕುಟವರ್ಧನರ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ಮ್ಮಾಳನವರಾಳನು ವಿಭಾಡಿಸಿ
ನೀಲಗಿರಿಯೆಡೆವೊಕ್ಕುದೆನೆ ಖಳನೊಡಲು ನಿಡುಗೆಡೆಯೆ
ಕಾಳೆಗದ ಕೈಚಳಕದವನು
ಬ್ಬಾಳುತನವಕ್ಕುಡಿಸೆಯಿಕ್ಕೆಲ
ದಾಳು ತೆಗೆದುದು ಬಿಗಿದ ಕತ್ತಲೆ ಮೊಗೆದುದಂಬರವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಮಹಾರಾಜನೇ ಕೇಳು - ನಿಮ್ಮ ಕಡೆಯ ಯೋಧರನ್ನು ಹಾಗೂ ಅವರ ಕಡೆಯ ಯೋಧರನ್ನು ನಾಶ ಮಾಡಿ, ನೀಲಪರ್ವತವೇ ಮಧ್ಯೆ ಪ್ರವೇಶ ಪಡೆಯಿತೋ ಎನ್ನುವಂತೆ ರಾಕ್ಷಸನ ಶರೀರ ನೀಳವಾಗಿ ಕೆಳಗೆ ಬೀಳಲು, ಕಾಳಗದಲ್ಲಿ ಕೈಚಳುಕವನ್ನುಳ್ಳ ರಾಕ್ಷಸನ ಶೌರ್ಯ, ಆವೇಶ ನಾಶವಾದವು. ಎರಡೂ ಕಡೆಯ ಸೇನೆಯ ವೀರರು ಹಿಮ್ಮೆಟ್ಟಿ ಹಿಂಜರಿದರು. ದಟ್ಟವಾದ ಕತ್ತಲೆ ಆಕಾಶವನ್ನು ವ್ಯಾಪಿಸಿತು.
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ಮ್ಮಾಳನವರಾಳನು ವಿಭಾಡಿಸಿ
ನೀಲಗಿರಿಯೆಡೆವೊಕ್ಕುದೆನೆ ಖಳನೊಡಲು ನಿಡುಗೆಡೆಯೆ
ಕಾಳೆಗದ ಕೈಚಳಕದವನು
ಬ್ಬಾಳುತನವಕ್ಕುಡಿಸೆಯಿಕ್ಕೆಲ
ದಾಳು ತೆಗೆದುದು ಬಿಗಿದ ಕತ್ತಲೆ ಮೊಗೆದುದಂಬರವ ॥1॥
೦೦೨ ಇನ್ನು ಬದುಕಿದೆವಮಮ ...{Loading}...
ಇನ್ನು ಬದುಕಿದೆವಮಮ ರಕ್ಕಸ
ಕುನ್ನಿಯೂಳಿಗವಡಗಿತೆಂದೇ
ನಿನ್ನವರ ಸುಮ್ಮಾನವುಕ್ಕಿತು ಸುಕ್ಕಿತತಿಭೀತಿ
ಇನ್ನು ಫಡಫಡ ಸೂತತನುಜನ
ಬೆನ್ನಲುಗಿವೆವು ಕರುಳನಾಹವ
ಕೆನ್ನ ಬಿಡುಬಿಡು ಎನುತ ಗರ್ಜಿಸಿ ಹೊಕ್ಕುದರಿಸೇನೆ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನು ಬದುಕಿದೆವು, ಆಹಾ…. ರಾಕ್ಷಸ ಕುನ್ನಿಯ ಸೇವೆ ಮುಗಿಯಿತು ಎಂದು ನಿನ್ನ ಪಕ್ಷದವರ ಅತಿ ಭೀತಿ ಮುದುಡಿತು, ಸಂತೋಷ ಹೆಚ್ಚಿತು. ಶತ್ರುಸೇನೆಯು “ಫಡ, ಫಡ ಇನ್ನು ಸೂತತನುಜ ಕರ್ಣನ ಕರುಳನ್ನು ಬೆನ್ನಲ್ಲಿ ಹೊರಸೆಳೆಯುತ್ತೇವೆ, ಯುದ್ಧಕ್ಕೆ ನನ್ನನ್ನು ಬಿಡು, ಬಿಡು” ಎನ್ನುತ್ತಾ ಗರ್ಜಿಸಿ ಪ್ರವೇಶಿಸಿತು.
ಮೂಲ ...{Loading}...
ಇನ್ನು ಬದುಕಿದೆವಮಮ ರಕ್ಕಸ
ಕುನ್ನಿಯೂಳಿಗವಡಗಿತೆಂದೇ
ನಿನ್ನವರ ಸುಮ್ಮಾನವುಕ್ಕಿತು ಸುಕ್ಕಿತತಿಭೀತಿ
ಇನ್ನು ಫಡಫಡ ಸೂತತನುಜನ
ಬೆನ್ನಲುಗಿವೆವು ಕರುಳನಾಹವ
ಕೆನ್ನ ಬಿಡುಬಿಡು ಎನುತ ಗರ್ಜಿಸಿ ಹೊಕ್ಕುದರಿಸೇನೆ ॥2॥
೦೦೩ ಅಙ್ಗವಣೆ ಮನದಲ್ಲಿ ...{Loading}...
ಅಂಗವಣೆ ಮನದಲ್ಲಿ ಪದದಲಿ
ಮುಂಗುಡಿಯ ದುವ್ವಾಳಿ ಕಯ್ಯಲಿ
ಸಿಂಗದಾಯತ ಸವೆಯದೆರಡೊಡ್ಡಿನಲಿ ಸುಭಟರಿಗೆ
ಕಂಗಳನು ಕಾರಿರುಳು ರಕ್ಕಸಿ
ನುಂಗಿದಳು ನಾನೇನನುಸುರುವೆ
ನಂಗವಿಸಿ ಕಡುಗಲಿಗಳಿರಿದಾಡಿದರು ತಮ್ಮೊಳಗೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನದಲ್ಲಿ ಸಾಹಸ, ಗೆಲ್ಲಬೇಕೆಂಬ ಬಯಕೆ ಇದ್ದರೂ, ಹೆಜ್ಜೆಯ ಗತಿ ನೋಡಿದರೆ ಸೇನೆಯ ಮುಂಭಾಗದಲ್ಲಿ ಸೈನಿಕರ ನಾಗಾಲೋಟ ತೋರುತ್ತಿದೆ. ಎರಡೂ ಪಕ್ಷದ ಸೈನಿಕರಿಗೆ ಹೋರಾಟದಲ್ಲಿ ಸಿಂಹದಂತಹ ಪರಾಕ್ರಮ ಕ್ಷೀಣಿಸಲಿಲ್ಲ. ಆದರೆ ಕಪ್ಪಾದ ಕತ್ತಲಿನ ರಾತ್ರಿಯೆಂಬ ರಕ್ಕಸಿ ಅವರ ಕಣ್ಣುಗಳನ್ನು ನುಂಗಿದಳು. ಅದನ್ನು ನಾನು ಏನೆಂದು ಹೇಳಲಿ ? ಶೂರರು ಆವೇಶದಿಂದ ತಮ್ಮ ತಮ್ಮೊಳಗೆ ಇರಿದಾಡಿದರು.
ಮೂಲ ...{Loading}...
ಅಂಗವಣೆ ಮನದಲ್ಲಿ ಪದದಲಿ
ಮುಂಗುಡಿಯ ದುವ್ವಾಳಿ ಕಯ್ಯಲಿ
ಸಿಂಗದಾಯತ ಸವೆಯದೆರಡೊಡ್ಡಿನಲಿ ಸುಭಟರಿಗೆ
ಕಂಗಳನು ಕಾರಿರುಳು ರಕ್ಕಸಿ
ನುಂಗಿದಳು ನಾನೇನನುಸುರುವೆ
ನಂಗವಿಸಿ ಕಡುಗಲಿಗಳಿರಿದಾಡಿದರು ತಮ್ಮೊಳಗೆ ॥3॥
೦೦೪ ಒಳಗೊಳಗೆ ಹೊಯಿದಾಡಿ ...{Loading}...
ಒಳಗೊಳಗೆ ಹೊಯಿದಾಡಿ ಹೊರಳುವ
ಬಲುಭಟರನಗಿದೊಗುವ ಬಲುಗ
ತ್ತಲೆಯ ಕೋಳಾಹಳವನುಭಯ ಚಾತುರಂಗದಲಿ
ಬಲಿದ ತೂಕಡಿಕೆಗಳ ನಸು ಬೆದ
ರೊಲಹುಗಳ ಜವವೆದ್ದ ಝೊಮ್ಮಿನ
ಬಲೆಗೆ ಸಿಲುಕಿದ ಬಲವನರ್ಜುನದೇವನೀಕ್ಷಿಸಿದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳಗೊಳಗೆ ಹೊಡೆದಾಡಿ ಹೊರಳುವ ವೀರಭಟರನ್ನು ನುಂಗುವ ದಟ್ಟ ಕತ್ತಲೆಯಿಂದ ಎರಡೂ ಪಕ್ಷದ ಚತುರಂಗ ಸೇನೆಯಲ್ಲಿ ಕೋಲಾಹಲ ಉಂಟಾಯಿತು. ತೂಕಡಿಕೆಯ ಬಲೆಗೆ ಸಿಲುಕಿ, ಸ್ವಲ್ಪ ಹೆದರಿ ಝೋಂಪಿನಿಂದ ಜೋಲಾಡುತ್ತಿದ್ದ ಸೇನೆಯನ್ನು ಅರ್ಜುನದೇವನು ನೋಡಿದನು.
ಮೂಲ ...{Loading}...
ಒಳಗೊಳಗೆ ಹೊಯಿದಾಡಿ ಹೊರಳುವ
ಬಲುಭಟರನಗಿದೊಗುವ ಬಲುಗ
ತ್ತಲೆಯ ಕೋಳಾಹಳವನುಭಯ ಚಾತುರಂಗದಲಿ
ಬಲಿದ ತೂಕಡಿಕೆಗಳ ನಸು ಬೆದ
ರೊಲಹುಗಳ ಜವವೆದ್ದ ಝೊಮ್ಮಿನ
ಬಲೆಗೆ ಸಿಲುಕಿದ ಬಲವನರ್ಜುನದೇವನೀಕ್ಷಿಸಿದ ॥4॥
೦೦೫ ಶಿವಶಿವಾ ಬಳಲಿದುದು ...{Loading}...
ಶಿವಶಿವಾ ಬಳಲಿದುದು ಬಲವಗಿ
ದವಗಡಿಸಿದುದು ನಿದ್ದೆ ನೂಕದು
ಬವರವುಬ್ಬಿದ ತಿಮಿರವಳಿಯಲಿ ಸಾಕು ರಣವೆನುತ
ದಿವಿಜಪತಿಸುತನೆದ್ದು ಸೇನಾ
ನಿವಹದಲಿ ಸಾರಿದನು ಲಗ್ಗೆಯ
ರವವ ನಿಲಿಸಿದನಖಿಳ ಘನಗಂಭೀರನಾದದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವ ಶಿವಾ ಸೇನೆ ಆಯಾಸಗೊಂಡಿತು. ನಿದ್ರೆಯು ಆಕ್ರಮಿಸಿ ತೊಂದರೆಯನ್ನುಂಟುಮಾಡಿತು. ಯುದ್ಧವು ಮುಂದುವರಿಯಲು ಸಾಧ್ಯವಿಲ್ಲ. ಹೆಚ್ಚಾದ ಕತ್ತಲೆಯು ಕರಗಲಿ, ಯುದ್ಧ ಸಾಕು ಎನ್ನುತ್ತಾ ಅರ್ಜುನನು ಎದ್ದು ಸೇನಾ ಸಮೂಹವನ್ನು ಸಮೀಪಿಸಿದನು. ಸಕಲ ಘನ ಘಂಭೀರನಾದದಲ್ಲಿ ಯುದ್ಧ ನಿಲ್ಲಲಿ ಎಂದು ಘೋಷಿಸಿದನು.
ಮೂಲ ...{Loading}...
ಶಿವಶಿವಾ ಬಳಲಿದುದು ಬಲವಗಿ
ದವಗಡಿಸಿದುದು ನಿದ್ದೆ ನೂಕದು
ಬವರವುಬ್ಬಿದ ತಿಮಿರವಳಿಯಲಿ ಸಾಕು ರಣವೆನುತ
ದಿವಿಜಪತಿಸುತನೆದ್ದು ಸೇನಾ
ನಿವಹದಲಿ ಸಾರಿದನು ಲಗ್ಗೆಯ
ರವವ ನಿಲಿಸಿದನಖಿಳ ಘನಗಂಭೀರನಾದದಲಿ ॥5॥
೦೦೬ ಬಳಲಿದಿರಿ ಹಗಲಿರುಳಕಾಳೆಗ ...{Loading}...
ಬಳಲಿದಿರಿ ಹಗಲಿರುಳಕಾಳೆಗ
ದೊಳಗೆ ಕೈಮಾಡಿದಿರಿ ಕಗ್ಗತ್ತಲೆಯ
ಬಲುಬಂದಿಯಲಿ ಸಿಲುಕಿತು ಕಂಗಳಂಗವಣೆ
ನಳಿನರಿಪುವುದಿಸಲಿ ಬೆಳುದಿಂ
ಗಳಲಿ ಕೈದುವ ಕೊಳ್ಳಿ ನಿದ್ರೆಯ
ನಿಳಿಯಬಿಡಬೇಡೆಂದು ಸೇನೆಗೆ ಸಾರಿದನು ಪಾರ್ಥ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
6." ಹಗಲು ರಾತ್ರಿ ಕಾಳಗದಲ್ಲಿ ಆಯಾಸಗೊಂಡಿರಿ. ದಟ್ಟವಾದ ಕತ್ತಲೆಯಲ್ಲಿ ಬಲು ಸಾಮಥ್ರ್ಯದಿಂದ ಹೋರಾಡಿದಿರಿ. ಕಣ್ಣುಗಳು ಕತ್ತಲೆಯ ಸೆರೆಯಲ್ಲಿ ಸಿಲುಕಿವೆ. ಚಂದ್ರ ಉದಯವಾಗಲಿ, ಬೆಳದಿಂಗಳಿನಲ್ಲಿ ಆಯುಧವನ್ನು ಹಿಡಿಯಿರಿ. ನಿದ್ರೆ ಆವರಿಸಿಕೊಳ್ಳಲು ಬಿಡಬೇಡಿ." ಎಂದು ಪಾರ್ಥನು ಸೇನೆಗೆ ಸಾರಿ ಹೇಳಿದನು.
ಪಾಠಾನ್ತರ (ಕ.ಗ.ಪ)
ಬಲುಗಂಡಿಯಲಿ -ಬಲುಬಂದಿಯಲಿ
ಮೈ.ವಿ.ವಿ. ದ್ರೋಣಪರ್ವ
ಮೂಲ ...{Loading}...
ಬಳಲಿದಿರಿ ಹಗಲಿರುಳಕಾಳೆಗ
ದೊಳಗೆ ಕೈಮಾಡಿದಿರಿ ಕಗ್ಗತ್ತಲೆಯ
ಬಲುಬಂದಿಯಲಿ ಸಿಲುಕಿತು ಕಂಗಳಂಗವಣೆ
ನಳಿನರಿಪುವುದಿಸಲಿ ಬೆಳುದಿಂ
ಗಳಲಿ ಕೈದುವ ಕೊಳ್ಳಿ ನಿದ್ರೆಯ
ನಿಳಿಯಬಿಡಬೇಡೆಂದು ಸೇನೆಗೆ ಸಾರಿದನು ಪಾರ್ಥ ॥6॥
೦೦೭ ನರನ ಮಾತಿಮ್ ...{Loading}...
ನರನ ಮಾತಿಂ ಮುನ್ನ ನಿದ್ರಾ
ಭರದ ಭಾರಿಯ ಹೊರೆಯ ಭಟರಿ
ತ್ತರದಲೊಲೆದರು ಸಡಿಲಿದವು ಕೈದುಗಳು ಕರಗಳಲಿ
ನೆರೆದುಸುರ ವೈಹಾಳಿಗಳ ನಿ
ಬ್ಬರದ ಮೊರಹಿನ ಮುರಿದಗೋಣಿನ
ಕರದ ತಲೆಗಿಂಬುಗಳ ಕಾಲಾಳೊರಗಿತವನಿಯಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಮಾತಿಗಿಂತ ಮೊದಲೇ ನಿದ್ರಾಭಾರದ ಹೊರೆ ಕಣ್ಣಿನ ಮೇಲೆ ಬಿದ್ದಿರಲು ಎರಡೂ ಕಡೆ ಭಟರು ತೂಗಾಡಿದರು. ಕೈಗಳಿಂದ ಆಯುಧಗಳು ಜಾರಿ ಕೆಳಗೆ ಬಿದ್ದವು. ಸೈನಿಕರ ಉಸಿರಿನ ಸಂಚಾರ ಮೇಲೆ ಕೆಳಗೆ ಸವಾರಿ ಮಾಡುತ್ತಿರುವಂತೆ ತೋರುತ್ತಿತ್ತು. ಭಾರಿ ನಿದ್ರೆಯಿಂದ ಅವರ ಗೊರಕೆಯ ಧ್ವನಿ ಮೊರೆಯುತಿತ್ತು. ಕುತ್ತಿಗೆಗಳು ಜೋಲು ಬಿದ್ದಿದ್ದವು. ತಮ್ಮ ತೋಳುಗಳನ್ನೇ ತಲೆದಿಂಬು ಮಾಡಿಕೊಂಡಿರುವ ಕಾಲಾಳುಗಳು ಭೂಮಿಯ ಮೇಲೆ ಒರಗಿ ನಿದ್ರಿಸುತ್ತಿದ್ದರು.
ಮೂಲ ...{Loading}...
ನರನ ಮಾತಿಂ ಮುನ್ನ ನಿದ್ರಾ
ಭರದ ಭಾರಿಯ ಹೊರೆಯ ಭಟರಿ
ತ್ತರದಲೊಲೆದರು ಸಡಿಲಿದವು ಕೈದುಗಳು ಕರಗಳಲಿ
ನೆರೆದುಸುರ ವೈಹಾಳಿಗಳ ನಿ
ಬ್ಬರದ ಮೊರಹಿನ ಮುರಿದಗೋಣಿನ
ಕರದ ತಲೆಗಿಂಬುಗಳ ಕಾಲಾಳೊರಗಿತವನಿಯಲಿ ॥7॥
೦೦೮ ಒಲೆದ ಒಡಲನು ...{Loading}...
ಒಲೆದ ಒಡಲನು ಮುರಿದು ಬರಿಕೈ
ಗಳನು ದಾಡೆಯೊಳಿಟ್ಟು ಪೂತ್ಕೃತಿ
ಬಲಿದ ನಾಸಾಪುಟದ ಜೋಲಿದ ಕರ್ಣಪಲ್ಲವದ
ತಳಿತ ನಿದ್ರಾರಸವನರೆ ಮು
ಕ್ಕುಳಿಸಿದಕ್ಷಿಯೊಳೆರಡು ಗಲ್ಲದ
ಲುಲಿವ ತುಂಬಿಯ ರವದ ದಂತಿಗಳೆಸೆದವೊಗ್ಗಿನಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳು ನಿದ್ರೆಯಿಂದ ಬಳಲಿ ತೂಗಾಡುತ್ತ ಮೈಮುರಿಯುತ್ತಿದ್ದುವು. ದೇಹವನ್ನು ತಿರುಗಿಸಿಕೊಂಡು, ನೀಳವಾದ ಸೊಂಡಿಲುಗಳನ್ನು ಬಾಗಿಸಿ ದಾಡೆಯೊಳಗೆ ಇಟ್ಟುಕೊಂಡು, ದೊಡ್ಡ ಮೂಗಿನ ಹೊಳ್ಳೆಗಳಿಂದ ಉಸಿರಾಟದ ಶಬ್ದದ ಆರ್ಭಟವನ್ನು ಹೆಚ್ಚಾಗಿಸಿದ್ದವು. ಕಿವಿಗಳು ಜೋತಾಡುತ್ತಿದ್ದವು. ಹೆಚ್ಚಾದ ನಿದ್ರಾರಸವನ್ನು ಅರೆ ಮುಕ್ಕುಳಿಸಿದ್ದರಿಂದ ಅರ್ಧ ತೆರೆದ ಕಣ್ಣುಗಳಿಂದ ಕೂಡಿದ್ದವು. ಎರಡೂ ಕಪೋಲಗಳಲ್ಲಿ ಸುರಿಯುತ್ತಿದ್ದ ಮದರಸದ ಧಾರೆಗಳನ್ನು ಹೀರಲು ದುಂಬಿಗಳು ಝೇಂಕರಿಸುತ್ತಿರಲು ಆನೆಗಳು ನಿದ್ರೆಗೆ ಒಳಗಾಗಿ ಗುಂಪಾಗಿ ನಿಂತಿದ್ದುವು.
ಮೂಲ ...{Loading}...
ಒಲೆದ ಒಡಲನು ಮುರಿದು ಬರಿಕೈ
ಗಳನು ದಾಡೆಯೊಳಿಟ್ಟು ಪೂತ್ಕೃತಿ
ಬಲಿದ ನಾಸಾಪುಟದ ಜೋಲಿದ ಕರ್ಣಪಲ್ಲವದ
ತಳಿತ ನಿದ್ರಾರಸವನರೆ ಮು
ಕ್ಕುಳಿಸಿದಕ್ಷಿಯೊಳೆರಡು ಗಲ್ಲದ
ಲುಲಿವ ತುಂಬಿಯ ರವದ ದಂತಿಗಳೆಸೆದವೊಗ್ಗಿನಲಿ ॥8॥
೦೦೯ ಬಾಯ ಲೋಳೆಗಳಿಳಿಯೆ ...{Loading}...
ಬಾಯ ಲೋಳೆಗಳಿಳಿಯೆ ಮೈಹಳು
ವಾಯಿ ಮಿಗೆ ತುದಿ ಖುರವನೂರಿ ನ
ವಾಯಿ ಮಿಗಲರೆನೋಟದಾಲಿಯ ಮಿಡುಕದವಿಲಣದ
ಲಾಯದಲಿ ಲಂಬಿಸಿದವೊಲು ವಾ
ನಾಯುಜದ ಸಾಲೆಸೆದುದೊರಗಿದ
ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳೂ ಆಯಾಸಗೊಂಡು ನಿದ್ರಾವಶವಾಗಿವೆ. ಆಯಾಸಗೊಂಡ ಕುದುರೆಗಳ ಬಾಯಿಂದ ಜೊಲ್ಲುರಸ ಸುರಿಯುತ್ತಿದೆ. ಮೈ ಹಗುರವಾಗಿದೆ. ತುದಿಗಾಲುಗಳನ್ನು ನೆಲಕ್ಕೆ ಊರಿ ಉತ್ಸಾಹ ಹೆಚ್ಚಿ. ಅರೆತೆರೆದ ಕಣ್ಣುಗಳಿಂದ ಕೂಡಿ ಬಾಯಿಯಲ್ಲಿರುವ ಕಡಿವಾಣಗಳು ಅಳ್ಳಾಡದಂತೆ ಲಾಯದಲ್ಲಿ ಸಾಲುಗಟ್ಟಿ ನಿಂತಿರುವಂತೆಯೇ ನಿಂತು ನಿದ್ರಿಸುತ್ತಿರುವ ಕುದುರೆಗಳ ಸಾಲುಗಳು ಶೋಭಿಸುತ್ತಿವೆ. ಕುದುರೆ ಸವಾರರು ತಮ್ಮ ಶಿರಸ್ತ್ರಾಣಗಳನ್ನು ಅಥವಾ ರತ್ನಖಚಿತ ಕಿರೀಟಗಳನ್ನು ಮರದ ಕೋಡುಗಳಿಗೆ ಒರಗಿಸಿ ನಿದ್ರೆ ಮಾಡುತ್ತಿದ್ದರು.
ಪದಾರ್ಥ (ಕ.ಗ.ಪ)
ವಿಲಣದ-ಕಡಿವಾಣ
ವಾನಾಯುಜ-ಕುದುರೆಗಳ ಸಾಲು,
ಮೂಲ ...{Loading}...
ಬಾಯ ಲೋಳೆಗಳಿಳಿಯೆ ಮೈಹಳು
ವಾಯಿ ಮಿಗೆ ತುದಿ ಖುರವನೂರಿ ನ
ವಾಯಿ ಮಿಗಲರೆನೋಟದಾಲಿಯ ಮಿಡುಕದವಿಲಣದ
ಲಾಯದಲಿ ಲಂಬಿಸಿದವೊಲು ವಾ
ನಾಯುಜದ ಸಾಲೆಸೆದುದೊರಗಿದ
ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ ॥9॥
೦೧೦ ಒಲಿದ ಕಾನ್ತೆಯ ...{Loading}...
ಒಲಿದ ಕಾಂತೆಯ ಕೂಡೆ ಮನುಮಥ
ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು ರಜನಿಯಲಿ
ಒಲಿದ ಸಮರಶ್ರಮದಲತಿವೆ
ಗ್ಗಳ ಗಜಾರೋಹಕರು ಕುಂಭ
ಸ್ಥಳದ ಮೇಲೊರಗಿದರು ನಿದ್ರಾ ಮುದ್ರಿತೇಕ್ಷಣರು ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರೀತಿಸಿದ ಕಾಂತೆಯ ಪ್ರೇಮ ಮನುಮಥ ಕಲಹದಲ್ಲಿ ಬೆಂಡಾದ ಪ್ರಿಯಕರನು ಅವರ ಕುಂಭದಂತಿರುವ ವಕ್ಷ ಸ್ಥಳದ ಮೇಲೆ ಮಲಗುವ ಹಾಗೆ ರಾತ್ರಿಯಲ್ಲಿ ಸಮರ ಶ್ರಮ ಹೆಚ್ಚಾಗಲಾಗಿ ಆ ಶ್ರೇಷ್ಠ ಗಜಾರೋಹಕರು ನಿದ್ರೆಯಿಂದ ಮುಚ್ಚಿದ ಕಣ್ಣುಗಳುಳ್ಳವರಾಗಿ ಆನೆಯ ಮೇಲೆ ಕುಳಿತಿರುವಂತೆಯೇ ಅದರ ಕುಂಭ ಸ್ಥಳದ ಮೇಲೆ ತಲೆಯಿಟ್ಟು ಮಲಗಿದರು.
ಮೂಲ ...{Loading}...
ಒಲಿದ ಕಾಂತೆಯ ಕೂಡೆ ಮನುಮಥ
ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು ರಜನಿಯಲಿ
ಒಲಿದ ಸಮರಶ್ರಮದಲತಿವೆ
ಗ್ಗಳ ಗಜಾರೋಹಕರು ಕುಂಭ
ಸ್ಥಳದ ಮೇಲೊರಗಿದರು ನಿದ್ರಾ ಮುದ್ರಿತೇಕ್ಷಣರು ॥10॥
೦೧೧ ಕಲಹವನು ಕನಸಿನಲಿ ...{Loading}...
ಕಲಹವನು ಕನಸಿನಲಿ ಕಂಡ
ವ್ವಳಿಸಿ ಹಳುಹಳು ಪೂತು ಸಾರಥಿ
ಭಲರೆ ಸಾರಥಿ ಜಾಗುರೆನುತಿರ್ದುದು ಮಹಾರಥರು
ತೊಲಗದಿರಿ ತಿನ್ನಡಗನಹಿತನ
ತಿಳಿರಕುತವನು ಸುರಿಯೆನುತ ಕಳ
ವಳಿಸುತಿರ್ದರು ವೀರರೆರಡೊಡ್ಡಿನಲಿ ರಭಸದಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಭಯ ಸೇನೆಯ ಮಹಾರಥರು ಕಲಹದ ಕನಸನ್ನು ಕಂಡು ಅದರಲ್ಲಿ ಶತ್ರುಗಳನ್ನು ಆಕ್ರಮಿಸುತ್ತಾರೆ. ಹಳುಹಳು , ಪೂತು, ಭಲರೆ, ಜಾಗುರೆ ಎಂದು ಸಾರಥಿಗಳನ್ನು ಹುರಿದುಂಬಿಸುತ್ತಿದ್ದರು. ಕೆಲವರು ತಮ್ಮ ವೀರ ಸೈನಿಕರನ್ನುದ್ದೇಶಿಸಿ ರಭಸದಿಂದ “ಹಿಂದಿರುಗಬೇಡಿ, ಶತ್ರುವಿನ ಮಾಂಸವನ್ನು ತಿನ್ನಿ. ತಿಳಿಯಾದ ರಕ್ತವನ್ನು ಸುರಿಸಿರಿ” ಎನ್ನುತ್ತಾ ವೀರಸೈನ್ಯದಲ್ಲಿ ಕನವರಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಅವ್ವಳಿಸಿ-ಗಾಬರಿಯಾಗಿ, ಹೆದರಿ, ಹಳೂಹಳು-ಮೆಚ್ಚುಗೆ ಸೂಚಿಸುವ ಒಂದು ಪದ ,
ಮೂಲ ...{Loading}...
ಕಲಹವನು ಕನಸಿನಲಿ ಕಂಡ
ವ್ವಳಿಸಿ ಹಳುಹಳು ಪೂತು ಸಾರಥಿ
ಭಲರೆ ಸಾರಥಿ ಜಾಗುರೆನುತಿರ್ದುದು ಮಹಾರಥರು
ತೊಲಗದಿರಿ ತಿನ್ನಡಗನಹಿತನ
ತಿಳಿರಕುತವನು ಸುರಿಯೆನುತ ಕಳ
ವಳಿಸುತಿರ್ದರು ವೀರರೆರಡೊಡ್ಡಿನಲಿ ರಭಸದಲಿ ॥11॥
೦೧೨ ಎಲೆಮಿಡುಕದೆರಡೊಡ್ಡು ಲೆಪ್ಪದ ...{Loading}...
ಎಲೆಮಿಡುಕದೆರಡೊಡ್ಡು ಲೆಪ್ಪದ
ಬಲದವೊಲು ನಿದ್ರಾ ಸಮುದ್ರವ
ಮುಳುಗಿ ಝೊಮ್ಮಿನ ಝಾಡಿಯಲಿ ಝೊಂಪಿಸಿದುದರೆಜಾವ
ತಳಿತ ಮರವೆಯ ಪಾಳೆಯದ ಕ
ಗ್ಗೊಲೆಗೆ ಕವಿವ ಗುರೂಪದೇಶಾ
ವಳಿಯವೊಲು ಮೈದೋರಿದವು ಹಿಮರುಚಿಯ ರಶ್ಮಿಗಳು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಲ್ಪವೂ ಅಲ್ಲಾಡದ, ಎರಡೂ ಸೈನ್ಯದವರು ಎರಕವಿಟ್ಟ ಗೊಂಬೆಗಳಂತೆ ಸ್ತಬ್ಧರಾದರು. (ಗೋಡೆಯ ಮೇಲಿನ ಚಿತ್ರದ ಹಾಗೆ ಕಾಣಿಸಿದರು) ನಿದ್ರಾ ಸಮುದ್ರದ ಝೊಮ್ಮಿನ ಗಾಢತೆಯಲ್ಲಿ ಕೆಲ ಕಾಲ ಮುಳುಗಿದರು. ನಿದ್ರೆಯೆಂಬ ವಿಸ್ಮೃತಿಯಿಂದ ಕಗ್ಗೊಲೆಗೆ ಒಳಗಾದ ಸೇನೆಯವರನ್ನು ಎಚ್ಚರಿಸುವ ಗುರೂಪದೇಶದಂತೆ ಚಂದ್ರನ ಮನೋಹರವಾದ ರಶ್ಮಿಗಳು ಕಾಣಿಸಿಕೊಂಡುವು.
ಪದಾರ್ಥ (ಕ.ಗ.ಪ)
ಲೆಪ್ಪದ ಬಲ-ಎರಕವಿಟ್ಟ ಗೊಂಬೆಗಳಂತಿರುವ ಸೈನ್ಯ, ಝಾಡಿ-ಗಾಢತೆ
ಮೂಲ ...{Loading}...
ಎಲೆಮಿಡುಕದೆರಡೊಡ್ಡು ಲೆಪ್ಪದ
ಬಲದವೊಲು ನಿದ್ರಾ ಸಮುದ್ರವ
ಮುಳುಗಿ ಝೊಮ್ಮಿನ ಝಾಡಿಯಲಿ ಝೊಂಪಿಸಿದುದರೆಜಾವ
ತಳಿತ ಮರವೆಯ ಪಾಳೆಯದ ಕ
ಗ್ಗೊಲೆಗೆ ಕವಿವ ಗುರೂಪದೇಶಾ
ವಳಿಯವೊಲು ಮೈದೋರಿದವು ಹಿಮರುಚಿಯ ರಶ್ಮಿಗಳು ॥12॥
೦೧೩ ತಣಿದುದನ್ತಃಕರಣ ನಿದ್ರಾ ...{Loading}...
ತಣಿದುದಂತಃಕರಣ ನಿದ್ರಾ
ಗಣಿಕೆಯರ ರತಿಯಲ್ಲಿ ರಿಂಗಣ
ಗುಣಿವ ಮನ ಹದುಳಿಸಿತು ತಿಳಿದುದು ಝೊಮ್ಮಿನುಮ್ಮೋಹ
ರಣವನೀಗಳೆ ಕಾಣಬಹುದೆಂ
ಬಣಕಿಗರನೆಬ್ಬಿಸುವವೊಲು ಸುಳಿ
ದಣೆದು ಹೊದರೆದ್ದುದು ಸುಧಾದೀಧಿತಿಯ ಕರನಿಕರ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂತಃಕರಣ ತೃಪ್ತಿಗೊಂಡಿತು. ನಿದ್ರಾಗಣಿಕೆಯರ ಒಡನಾಟದಲ್ಲಿ ಹರ್ಷಿಸುವ ಮನಸ್ಸು ನೆಮ್ಮದಿಗೊಂಡಿತು. ನಿದ್ರೆಯ ಝೊಮ್ಮಿನಿಂದ ಎಚ್ಚರಗೊಂಡಿತು. ಯುದ್ಧವನ್ನು ಈಗಲೇ ಕಾಣಬಹುದೆಂಬ ಅಣಕಿಗರನ್ನು ಎಬ್ಬಿಸುವ ಹಾಗೆ ಚಂದ್ರೋದಯದ ಕಿರಣಗಳ ಪ್ರಕಾಶ ದಟ್ಟವಾಗಿ ಬೆಳದಿಂಗಳು ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಸುಧಾದೀಧಿತಿ-ಚಂದ್ರನ ದೀಪ್ತಿ, ಬೆಳುದಿಂಗಳು,
ಮೂಲ ...{Loading}...
ತಣಿದುದಂತಃಕರಣ ನಿದ್ರಾ
ಗಣಿಕೆಯರ ರತಿಯಲ್ಲಿ ರಿಂಗಣ
ಗುಣಿವ ಮನ ಹದುಳಿಸಿತು ತಿಳಿದುದು ಝೊಮ್ಮಿನುಮ್ಮೋಹ
ರಣವನೀಗಳೆ ಕಾಣಬಹುದೆಂ
ಬಣಕಿಗರನೆಬ್ಬಿಸುವವೊಲು ಸುಳಿ
ದಣೆದು ಹೊದರೆದ್ದುದು ಸುಧಾದೀಧಿತಿಯ ಕರನಿಕರ ॥13॥
೦೧೪ ಬಾಡಿದವು ತಾವರೆಗಳುರೆ ...{Loading}...
ಬಾಡಿದವು ತಾವರೆಗಳುರೆ ಝಳ
ವೋಡಿದವು ನೈದಿಲುಗಳಂಬುಧಿ
ಝಾಡಿ ಮಾಡಲು ಬೆರಸಿದವು ಝಷ ಮಕರ ಕರ್ಕಟಕ
ತೋಡಿದವು ಮುಖದಲ್ಲಿ ತುಂಡದ
ಲೀಡಿರಿದು ಕುಡಿಕುಡಿದು ಬೊಬ್ಬಿ
ಟ್ಟಾಡುತಿರ್ದವು ಸಾಂದ್ರಚಂದ್ರಿಕೆಯಲಿ ಚಕೋರಿಗಳು ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾವರೆಗಳು ಬಾಡಿಹೋದವು. ನೈದಿಲೆಗಳು ಅರಳಿದವು. ಸಮುದ್ರವು ಕದಡುವಂತೆ ಮೀನು, ಮೊಸಳೆ, ಏಡಿಗಳು ಚೆಲ್ಲಾಪಿಲ್ಲಿಯಾಗಿ ಚಲಿಸಿದವು. ಚಕೋರಿಗಳು ವೇಗದಿಂದ ಬಂದು ತಮ್ಮ ಚೂಪಾದ ಮೂತಿಯಿಂದ ಬೆಳುದಿಂಗಳನ್ನು ಕುಡಿಯುತ್ತ ಕೆಕೆ ಹಾಕುತ್ತಿದ್ದವು.
ಪದಾರ್ಥ (ಕ.ಗ.ಪ)
ತುಂಡ-ಮೂತಿ, ಕೊಕ್ಕು,
ಈಡಿರಿದು-ವೇಗದಿಂದ ಬಂದು,
ಝಷ-ಮೀನು
ಮೂಲ ...{Loading}...
ಬಾಡಿದವು ತಾವರೆಗಳುರೆ ಝಳ
ವೋಡಿದವು ನೈದಿಲುಗಳಂಬುಧಿ
ಝಾಡಿ ಮಾಡಲು ಬೆರಸಿದವು ಝಷ ಮಕರ ಕರ್ಕಟಕ
ತೋಡಿದವು ಮುಖದಲ್ಲಿ ತುಂಡದ
ಲೀಡಿರಿದು ಕುಡಿಕುಡಿದು ಬೊಬ್ಬಿ
ಟ್ಟಾಡುತಿರ್ದವು ಸಾಂದ್ರಚಂದ್ರಿಕೆಯಲಿ ಚಕೋರಿಗಳು ॥14॥
೦೧೫ ನಳಿನದಳದೊಳಗಡಗಿದವು ನೈ ...{Loading}...
ನಳಿನದಳದೊಳಗಡಗಿದವು ನೈ
ದಿಲುಗಳಲಿ ತನಿಮೊರೆವ ತುಂಬಿಯ
ಕಳರವಕೆ ಬೆಚ್ಚಿದವು ಹೊಕ್ಕವು ಬಗಿದು ತಿಳಿಗೊಳನ
ಝಳಕೆ ಸೈರಿಸದೆಳಲತೆಯ ನೆಳ
ಲೊಳಗೆ ನಿಂದವು ಬೇಗೆ ಬಲುಹಿಂ
ದಳುಕಿ ಮಮ್ಮಲುಮರುಗುತಿರ್ದವು ಜಕ್ಕವಕ್ಕಿಗಳು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಕ್ರವಾಕ ಪಕ್ಷಿಗಳು ಕಮಲದ ದಳದೊಳಗೆ ಅಡಗಿದವು. ನೈದಿಲೆಗಳಲ್ಲಿ ಮಧು ಹೀರುವ ತುಂಬಿಯ ಕಲರವಕ್ಕೆ ಬೆಚ್ಚಿದವು. ತಿಳಿಯಾದ ಕೊಳವನ್ನು ಪ್ರವೇಶಿಸಿದುವು. ತಾಪವನ್ನು ಸೈರಿಸದ ಎಳಲತೆಯ ನೆರಳೊಳಗೆ ನಿಂತವು. ಹೆಚ್ಚಾದ ಬೇಗೆಯಿಂದ ಅಳುಕಿ ಅಗಲಿದ ಜಕ್ಕವಕ್ಕಿಗಳು ಮಮ್ಮಲ ಮರುಗುತ್ತಿದ್ದವು.
ಮೂಲ ...{Loading}...
ನಳಿನದಳದೊಳಗಡಗಿದವು ನೈ
ದಿಲುಗಳಲಿ ತನಿಮೊರೆವ ತುಂಬಿಯ
ಕಳರವಕೆ ಬೆಚ್ಚಿದವು ಹೊಕ್ಕವು ಬಗಿದು ತಿಳಿಗೊಳನ
ಝಳಕೆ ಸೈರಿಸದೆಳಲತೆಯ ನೆಳ
ಲೊಳಗೆ ನಿಂದವು ಬೇಗೆ ಬಲುಹಿಂ
ದಳುಕಿ ಮಮ್ಮಲುಮರುಗುತಿರ್ದವು ಜಕ್ಕವಕ್ಕಿಗಳು ॥15॥
೦೧೬ ವಿನುತ ಸುಕವಿಯ ...{Loading}...
ವಿನುತ ಸುಕವಿಯ ಸೂಕ್ತಿ ತಾಗಿದ
ಮುನಿಗಳಂತಃಕರಣದಂತಿರೆ
ಹೊನಲುವರಿದವು ಚಂದ್ರಕಾಂತದ ಸಾಲಶಿಲೆ ಕರಗಿ
ಮನದ ಕತ್ತಲೆ ಗುರುವರನ ವಾ
ಕ್ಕಿನಲಿ ತೊಲಗುವವೋಲು ತುಂಬಿಯ
ತನತನಗೆ ನೂಕಿದವು ವಿಕಸಿತ ಕೈರವಾದಿಗಳು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಸಿದ್ಧ ಕವಿಯ ಸೂಕ್ತಿ ತಾಗಿದ ಮುನಿಗಳ ಅಂತಃಕರಣದಂತೆ ಚಂದ್ರಕಾಂತ ಶಿಲೆಗಳ ಸಾಲು ಕರಗಿ ಹೊನಲಾಗಿ ಹರಿದವು. ಗುರುವರನ ವಾಣಿಯಿಂದ ಮನದ ಕತ್ತಲೆ ತೊಲಗುವ ಹಾಗೆ ಅರಳಿದ ಬಿಳಿಯ ನೈದಿಲೆ ಹೂವುಗಳು, ದುಂಬಿಗಳನ್ನು ಒಂದರ ಹಿಂದೆ ಒಂದರಂತೆ ನೂಕಿದವು.
ಪದಾರ್ಥ (ಕ.ಗ.ಪ)
ಕೈರವ -ಬಿಳಿಯ ನೈದಿಲೆ ಹೂ
ಮೂಲ ...{Loading}...
ವಿನುತ ಸುಕವಿಯ ಸೂಕ್ತಿ ತಾಗಿದ
ಮುನಿಗಳಂತಃಕರಣದಂತಿರೆ
ಹೊನಲುವರಿದವು ಚಂದ್ರಕಾಂತದ ಸಾಲಶಿಲೆ ಕರಗಿ
ಮನದ ಕತ್ತಲೆ ಗುರುವರನ ವಾ
ಕ್ಕಿನಲಿ ತೊಲಗುವವೋಲು ತುಂಬಿಯ
ತನತನಗೆ ನೂಕಿದವು ವಿಕಸಿತ ಕೈರವಾದಿಗಳು ॥16॥
೦೧೭ ವಿರಹಿಜನದೆದೆಗಿಚ್ಚು ಮನುಮಥ ...{Loading}...
ವಿರಹಿಜನದೆದೆಗಿಚ್ಚು ಮನುಮಥ
ನರಸುತನದಭಿಷೇಕಘಟ ತಾ
ವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು
ಹರನ ಹಗೆಯಡ್ಡಣ ವಿಳಾಸಿನಿ
ಯರ ಮನೋರಥಫಲವೆನಲು ಮಿಗೆ
ಮೆರೆದನುದಯಾಚಲದ ಚಾವಡಿಯಲಿ ಸುಧಾಸೂತಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರಹೀ ಜನದ ಎದೆಯ ಕಿಚ್ಚು, ಮನ್ಮಥನ ಅರಸುತನದ ಅಭಿಷೇಕದ ಕುಂಭ, ತಾವರೆಯ ಕಗ್ಗೊಲೆಕಾರನು, ಕನ್ನೈದಿಲೆ ಹೂವಿನ ವನದ ವಿದೂಷಕನು, ಹರನ ಶತ್ರುವಾದ ಮನ್ಮಥನ ಗುರಾಣಿಯಂತೆ, ವಿಲಾಸಿನಿಯರ ಮನಸ್ಸಿನ ಆಸೆಗಳ ಫಲವೆನ್ನುವಂತೆ ಉದಯಾಚಲದ ಸಭಾಮಂಟಪದಲ್ಲಿ ಚಂದ್ರನು ವಿಶೇಷವಾಗಿ ಶೋಭಿಸಿದನು.
ಪದಾರ್ಥ (ಕ.ಗ.ಪ)
ಅಡ್ಡಣ-ಗುರಾಣಿ, ಢಾಲು,
ಸುಧಾಸೂತಿ-ಚಂದ್ರ
ಮೂಲ ...{Loading}...
ವಿರಹಿಜನದೆದೆಗಿಚ್ಚು ಮನುಮಥ
ನರಸುತನದಭಿಷೇಕಘಟ ತಾ
ವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು
ಹರನ ಹಗೆಯಡ್ಡಣ ವಿಳಾಸಿನಿ
ಯರ ಮನೋರಥಫಲವೆನಲು ಮಿಗೆ
ಮೆರೆದನುದಯಾಚಲದ ಚಾವಡಿಯಲಿ ಸುಧಾಸೂತಿ ॥17॥
೦೧೮ ತಳಿತ ತಮ್ಪಿನ ...{Loading}...
ತಳಿತ ತಂಪಿನ ತಂಗದಿರ ತೊರೆ
ಯೊಳಗೆ ತೇಕಾಡಿದುದು ಬಲವ
ಗ್ಗಳದ ಬಳಲಿಕೆ ಬೀಳುಕೊಂಡುದು ಬಲಿದುದಂಗವಣೆ
ಒಲೆದು ಬರಿಕೈತೂಗಿ ಕಿವಿಗಳ
ನಲುಗಿದವು ಕರಿನಿಕರವವಿಲಣ
ಘಲಿಲೆನಲು ಕೊಡಹಿದವು ವಳಯವನಖಿಳ ಹಯನಿಕರ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿಗುರಿದ ತಂಪಾದ ಚಂದಿರನ ಬೆಳುದಿಂಗಳ ತೊರೆಯೊಳಗೆ ಸೈನ್ಯವು ತೇಲಾಡಿತು. ಹೆಚ್ಚಿನ ಬಳಲಿಕೆ ನಿವಾರಣೆಯಾಯಿತು. ಶೌರ್ಯ ಹೆಚ್ಚಾಯಿತು. ಆನೆಗಳ ಸಮೂಹ ತಮ್ಮ ಸೊಂಡಿಲನ್ನು ಆಡಿಸುತ್ತಾ ಕಿವಿಗಳನ್ನು ಅಲ್ಲಾಡಿಸಿದುವು. ಕುದುರೆಗಳ ಸಮಸ್ತ ಸಮೂಹವು ಕಡಿವಾಣಗಳ ಘಲಿಲೆಂಬ ಧ್ವನಿ ಉಂಟಾಗುವಂತೆ ಸುತ್ತುವರೆದು ತಮ್ಮ ತಲೆಗಳನ್ನು ಕೊಡಹಿದುವು.
ಪದಾರ್ಥ (ಕ.ಗ.ಪ)
ತಂಗದಿರ- ತಂಪಾದ ಕಿರಣ
ಅವಿಲಣ-ಕಡಿವಾಣದ ತುಂಡು
ಮೂಲ ...{Loading}...
ತಳಿತ ತಂಪಿನ ತಂಗದಿರ ತೊರೆ
ಯೊಳಗೆ ತೇಕಾಡಿದುದು ಬಲವ
ಗ್ಗಳದ ಬಳಲಿಕೆ ಬೀಳುಕೊಂಡುದು ಬಲಿದುದಂಗವಣೆ
ಒಲೆದು ಬರಿಕೈತೂಗಿ ಕಿವಿಗಳ
ನಲುಗಿದವು ಕರಿನಿಕರವವಿಲಣ
ಘಲಿಲೆನಲು ಕೊಡಹಿದವು ವಳಯವನಖಿಳ ಹಯನಿಕರ ॥18॥
೦೧೯ ತುರುಬ ಬಲಿದೊಳಗೌಕಿ ...{Loading}...
ತುರುಬ ಬಲಿದೊಳಗೌಕಿ ಮೊನೆ ಮುಂ
ಜೆರಗನಳವಡೆ ಸೆಕ್ಕಿ ಸುತ್ತಿನೊ
ಳಿರುಕಿ ಬಿಗಿದ ಕಠಾರಿ ದಾರದ ಗೊಂಡೆಯವ ಕೆದರಿ
ಒರಗಿದೆಡಬಲದವರನೆಬ್ಬಿಸಿ
ಜರೆದು ವೀಳೆಯಗೊಂಡು ಕೈದುವ
ತಿರುಹುತಾಯತವಾಯ್ತು ಪಡೆಯೆರಡರಲಿ ಪಾಯದಳ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮ ಶಿಖೆಗಳನ್ನು ಬಲವಾಗಿ ಕಟ್ಟಿ, ಸೆರಗಿನ ಮುಂಭಾಗದ ತುದಿಯನ್ನು ಸರಿಯಾಗಿ ಸೆಕ್ಕಿ, ಸುತ್ತ ಮುತ್ತ ದಟ್ಟವಾಗಿ ಬಿಗಿದಿದ್ದ ಕಠಾರಿ, ದಾರದ ಗೊಂಡೆಯನ್ನು ಕೆದರಿ, ಮಲಗಿದ್ದ ಎಡಬಲದವರನ್ನು ತಟ್ಟಿ ಎಬ್ಬಿಸಿ ವೀಳೆಯವನ್ನು ತೆಗೆದುಕೊಂಡು ಆಯುಧವನ್ನು ತಿರುಗಿಸುತ್ತಾ ಎರಡೂ ಸೇನೆಯ ಕಾಲಾಳುಗಳು ಅತ್ತ ಇತ್ತ ಸಿದ್ಧತೆಯಿಂದ ಸುತ್ತಾಡಿದರು.
ಪದಾರ್ಥ (ಕ.ಗ.ಪ)
ಆಯತ-ಸಿದ್ಧತೆ
ಮೂಲ ...{Loading}...
ತುರುಬ ಬಲಿದೊಳಗೌಕಿ ಮೊನೆ ಮುಂ
ಜೆರಗನಳವಡೆ ಸೆಕ್ಕಿ ಸುತ್ತಿನೊ
ಳಿರುಕಿ ಬಿಗಿದ ಕಠಾರಿ ದಾರದ ಗೊಂಡೆಯವ ಕೆದರಿ
ಒರಗಿದೆಡಬಲದವರನೆಬ್ಬಿಸಿ
ಜರೆದು ವೀಳೆಯಗೊಂಡು ಕೈದುವ
ತಿರುಹುತಾಯತವಾಯ್ತು ಪಡೆಯೆರಡರಲಿ ಪಾಯದಳ ॥19॥
೦೨೦ ಬಿಗುಹನೇರಿಸಿ ಮತ್ತೆ ...{Loading}...
ಬಿಗುಹನೇರಿಸಿ ಮತ್ತೆ ತುರಗಾ
ಳಿಗಳ ಬಿಗಿದರು ರಾವುತರು ಹೊರ
ಜಿಗಳ ಜೋಡಿಸಿ ಜೋದರಾಯತವಾಯ್ತು ಕರಿಗಳಲಿ
ಬಿಗಿದು ಕೀಲಚ್ಚುಗಳ ರಥಿಕಾ
ಳಿಗಳು ಮೇಳೈಸಿದರು ಕೈದುವ
ನುಗಿದು ಕಾಲಾಳೆದ್ದು ನಿಂದುದು ಕದನಕನುವಾಗಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಟ್ಟಿಗಳನ್ನೇರಿಸಿ ಪುನಃ ರಾವುತರು ಕುದುರೆಗಳ ಸಮೂಹವನ್ನು ಸಿದ್ಧಗೊಳಿಸಿದರು. ಆನೆಯ ಕುತ್ತಿಗೆಗೆ ಹಾಕುವ ಹಗ್ಗ ಜೋಡಿಸಿದಾಗ ಆನೆಗಳಲ್ಲಿ ಆಶ್ಚರ್ಯವಾಗುವಂತೆ ಪರಾಕ್ರಮ, ಚೈತನ್ಯ ಉಂಟಾಯಿತು. ಕೀಲು, ಅಚ್ಚುಗಳನ್ನು ಬಿಗಿದು ರಥಿಕರ ಸಮೂಹ ಒಟ್ಟಾಗಿ ಸೇರಿತು. ಆಯುಧವನ್ನು ಸೆಳೆದು ಕಾಲಾಳುಗಳು ಕದನಕ್ಕೆ ಸಿದ್ಧರಾಗಿ ನಿಂತರು.
ಮೂಲ ...{Loading}...
ಬಿಗುಹನೇರಿಸಿ ಮತ್ತೆ ತುರಗಾ
ಳಿಗಳ ಬಿಗಿದರು ರಾವುತರು ಹೊರ
ಜಿಗಳ ಜೋಡಿಸಿ ಜೋದರಾಯತವಾಯ್ತು ಕರಿಗಳಲಿ
ಬಿಗಿದು ಕೀಲಚ್ಚುಗಳ ರಥಿಕಾ
ಳಿಗಳು ಮೇಳೈಸಿದರು ಕೈದುವ
ನುಗಿದು ಕಾಲಾಳೆದ್ದು ನಿಂದುದು ಕದನಕನುವಾಗಿ ॥20॥
೦೨೧ ಕದಡಿದವು ಬಲವೆರಡು ...{Loading}...
ಕದಡಿದವು ಬಲವೆರಡು ಕಲ್ಪದೊ
ಳುದಧಿಯುದಧಿಯನೊದೆವವೊಲು ತಾ
ಗಿದರು ನೀಗಿದರಸುವ ನಸೆಮಸೆಗಕ್ಕುಡಿಸಿದವರು
ಬಿದಿರಿದರು ಕೊಯ್ದಲೆಗಳನು ಕಾ
ರಿದರು ಕರುಳನು ಕುಸುರಿ ಖಂಡದ
ಕದಳಿ ಮೈಗಳ ಚೂಣಿ ಮಲಗಿತು ತಾರು ಥಟ್ಟಿನಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಸೇನೆ ಕದಡಿದವು. ಪ್ರಳಯ ಕಾಲದಲ್ಲಿ ಸಮುದ್ರ, ಸಮುದ್ರವನ್ನು ತಾಗುವಂತೆ ತಾಗಿದರು. ಪ್ರಾಣ ನೀಗಿದರು. ದ್ವೇಷ ಸಾಧನೆಗೆ ಹೋಗಿ ವಿಫಲರಾದವರು ದಿಕ್ಕಾಪಾಲಾದರು. ಕತ್ತರಿಸಿದ ತಲೆಗಳನ್ನು ಚೆಲ್ಲಾಪಿಲ್ಲಿಯಾಗುವಂತೆ ಚೆಂಡಾಡಿದರು. ಕರುಳು ಹೊರಬರುವಂತೆ ಮಾಡಿ, ಮಾಂಸದ ಚೂರುಗಳ ರಾಸಿಯ ಮೇಲೆ ಕತ್ತರಿಸಿದ ಸೈನಿಕರ ಶರೀರಗಳು ಚೆಲ್ಲಾಪಿಲ್ಲಿಯಾಗಿ ಮಲಗಿದವು.
ಪದಾರ್ಥ (ಕ.ಗ.ಪ)
ತಾರುಥಟ್ಟು-ಚೆಲ್ಲಾಪಿಲ್ಲಿ,
ಅಕ್ಕುಡಿಸು-ಕುಸಿ, ನಾಶ,
ಕದಳಿ-ಸಮೂಹ
ಮೂಲ ...{Loading}...
ಕದಡಿದವು ಬಲವೆರಡು ಕಲ್ಪದೊ
ಳುದಧಿಯುದಧಿಯನೊದೆವವೊಲು ತಾ
ಗಿದರು ನೀಗಿದರಸುವ ನಸೆಮಸೆಗಕ್ಕುಡಿಸಿದವರು
ಬಿದಿರಿದರು ಕೊಯ್ದಲೆಗಳನು ಕಾ
ರಿದರು ಕರುಳನು ಕುಸುರಿ ಖಂಡದ
ಕದಳಿ ಮೈಗಳ ಚೂಣಿ ಮಲಗಿತು ತಾರು ಥಟ್ಟಿನಲಿ ॥21॥
೦೨೨ ಚೂಣಿ ತೆಗೆಯಲಿ ...{Loading}...
ಚೂಣಿ ತೆಗೆಯಲಿ ಮಿಸುಕಿದರೆ ನೃಪ
ನಾಣೆ ಬರಿದೇಕಾಳು ಕುದುರೆಯ
ಗೋಣನವರಿಗೆ ಮಾರುವಿರಿ ಕೌರವನ ಥಟ್ಟಿನಲಿ
ದ್ರೋಣನಲ್ಲಾ ರಕ್ಷಕನು ರಣ
ಹೂಣಿಗರು ನಿಲಿ ಭೀಮ ಪಾರ್ಥರ
ಕಾಣಬಹುದೋ ಕರೆಯೆನುತ ಗರ್ಜಿಸಿದನಾಚಾರ್ಯ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೇನೆ ಹಿಂದಿರುಗಲಿ. ಅಲ್ಲಾಡಿದರೆ ರಾಜನ ಮೇಲಾಣೆ, ಸುಮ್ಮನೆ ಏಕೆ ಶೂರರ, ಕುದುರೆಯ ಕುತ್ತಿಗೆಯನ್ನು ಅವರಿಗೆ ಮಾರುವಿರಿ ? ಕೌರವನ ಸೇನೆಯಲ್ಲಿ ದ್ರೋಣನಲ್ಲವೇ ರಕ್ಷಕನು. ರಣ ಪರಾಕ್ರಮಿಗಳು ನಿಲ್ಲಿ. ಭೀಮ ಪಾರ್ಥರನ್ನು ಕಾಣಬಹುದಲ್ಲವೇ ? ಕರೆ " ಎನ್ನುತ್ತಾ ಗುರು ದ್ರೋಣನು ಗರ್ಜಿಸಿದನು,
ಮೂಲ ...{Loading}...
ಚೂಣಿ ತೆಗೆಯಲಿ ಮಿಸುಕಿದರೆ ನೃಪ
ನಾಣೆ ಬರಿದೇಕಾಳು ಕುದುರೆಯ
ಗೋಣನವರಿಗೆ ಮಾರುವಿರಿ ಕೌರವನ ಥಟ್ಟಿನಲಿ
ದ್ರೋಣನಲ್ಲಾ ರಕ್ಷಕನು ರಣ
ಹೂಣಿಗರು ನಿಲಿ ಭೀಮ ಪಾರ್ಥರ
ಕಾಣಬಹುದೋ ಕರೆಯೆನುತ ಗರ್ಜಿಸಿದನಾಚಾರ್ಯ ॥22॥
೦೨೩ ರಥವ ಸಂವರಿಸಿದನು ...{Loading}...
ರಥವ ಸಂವರಿಸಿದನು ನಿಜ ಸಾ
ರಥಿಯ ಬೋಳೈಸಿದನು ಬಳಿಕತಿ
ರಥ ಮಹಾರಥ ರಾಜಿಗಿತ್ತನು ರಣಕೆ ವೀಳೆಯವ
ಪೃಥೆಯ ಮಕ್ಕಳ ಕರೆ ಮಹೀಸಂ
ಪ್ರಥಿತಬಲರನು ಕರೆಯೆನುತ ನಿ
ರ್ಮಥಿತ ರಿಪು ಪರಬಲವ ಹೊಕ್ಕನು ಬಿಟ್ಟ ಸೂಟಿಯಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥವನ್ನು ಸಿದ್ಧಪಡಿಸಿಕೊಂಡನು. ತನ್ನ ಸಾರಥಿಯನ್ನು ಸಂತೈಸಿದನು. ಬಳಿಕ ಅತಿರಥ ಮಹಾರಥರ ಸಮೂಹಕ್ಕೆ ಯುದ್ಧಕ್ಕಾಗಿ ವೀಳೆಯವನ್ನು ಕೊಟ್ಟನು. ಕುಂತೀ ಮಕ್ಕಳನ್ನು ಕರೆ. ಅತಿಪ್ರಸಿದ್ಧ ರಾಜರ ಸೇನೆಯನ್ನು ಕೂಡಲೇ ಕರೆಯೆನ್ನುತ್ತಾ ಯಾರಿಂದಲೂ ವಧಿಸಲಾಗದ ದ್ರೋಣನು ಶತ್ರು ಸೇನೆಯನ್ನು ವೇಗವಾಗಿ ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಸಂಪ್ರತಿಥ-ಅತಿಪ್ರಸಿದ್ಧರಾದ, ನಿರ್ಮಥಿತ-ವಧಿಸಲಾಗದ, ವೀಳೆಯ-ಆಹ್ವಾನ,
ಟಿಪ್ಪನೀ (ಕ.ಗ.ಪ)
ಪೃಥೆ-ಕುಂತಿಯ ಹೆಸರು, ಯದುವಂಶದ ಶೂರರಾಜನ ಮಗಳು ಪೃಥೆ, ವಸುದೇವನ ಒಡಹುಟ್ಟಿದವಳು, ಶೂರರಾಜನ ಸೋದರರತ್ತೆಯ ಮಗನಾದ ಕುಂತೀ ಭೋಜ ಕುಂತಿ ದೇಶದಲ್ಲಿ ರಾಜ್ಯಭಾರ ಮಾಡುತ್ತಿದ್ದ. ಇವನಿಗೆ ಮಕ್ಕಳಿರಲಿಲ್ಲವಾದ ಕಾರಣ ಶೂರರಾಜನ ಮಗಳಾದ ಪೃಥೆಯನ್ನು ದತ್ತು ತೆಗೆದುಕೊಂಡನು.
ಮೂಲ ...{Loading}...
ರಥವ ಸಂವರಿಸಿದನು ನಿಜ ಸಾ
ರಥಿಯ ಬೋಳೈಸಿದನು ಬಳಿಕತಿ
ರಥ ಮಹಾರಥ ರಾಜಿಗಿತ್ತನು ರಣಕೆ ವೀಳೆಯವ
ಪೃಥೆಯ ಮಕ್ಕಳ ಕರೆ ಮಹೀಸಂ
ಪ್ರಥಿತಬಲರನು ಕರೆಯೆನುತ ನಿ
ರ್ಮಥಿತ ರಿಪು ಪರಬಲವ ಹೊಕ್ಕನು ಬಿಟ್ಟ ಸೂಟಿಯಲಿ ॥23॥
೦೨೪ ರಾಹುವೆತ್ತಲು ಲಲಿತ ...{Loading}...
ರಾಹುವೆತ್ತಲು ಲಲಿತ ತಾರಾ
ವ್ಯೂಹವೆತ್ತಲು ದಳ್ಳಿಸುವ ದವ
ದಾಹವೆತ್ತಲು ನೀರಸದ ತೃಣರಾಶಿ ತಾನೆತ್ತ
ಗಾಹುಗತಕವನುಳಿದು ಕಾದುವ
ಡಾಹವಕೆ ಗುರು ಭೀಷ್ಮರಿಗೆ ಸರಿ
ಸಾಹಸಿಕರಾರುಂಟು ಮುರಿದುದು ಪಾಂಡುಸುತಸೇನೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಹು ಎಲ್ಲಿ ? ಸೌಮ್ಯವಾದ ನಕ್ಷತ್ರಗಳ ಸಮೂಹ ಎಲ್ಲಿ ? ಸುಡುವ ಕಾಳ್ಗಿಚ್ಚಿನ ದಾಹ ಎಲ್ಲಿ? ಒಣ ಹುಲ್ಲಿನ ರಾಶಿ ಎಲ್ಲಿ ? ಮೋಸ ಬಿಟ್ಟು ಕಾದುವುದಾದರೆ ಯುದ್ಧದಲ್ಲಿ ಗುರು ಹಾಗೂ ಭೀಷ್ಮರಿಗೆ ಸಮಾನರಾದ ಸಾಹಸಿಗಳು ಯಾರುಂಟು ? ಈತನ ಗರ್ಜನೆಗೆ ಪಾಂಡುಸುತ ಸೇನೆ ಹಿಂಜರಿಯಿತು.
ಪದಾರ್ಥ (ಕ.ಗ.ಪ)
ದವದಾಹ-ಕಾಳ್ಗಿಚ್ಚಿನ ದಾಹ, ಗಾಹುಕತನ-ಮೋಸ
ಮೂಲ ...{Loading}...
ರಾಹುವೆತ್ತಲು ಲಲಿತ ತಾರಾ
ವ್ಯೂಹವೆತ್ತಲು ದಳ್ಳಿಸುವ ದವ
ದಾಹವೆತ್ತಲು ನೀರಸದ ತೃಣರಾಶಿ ತಾನೆತ್ತ
ಗಾಹುಗತಕವನುಳಿದು ಕಾದುವ
ಡಾಹವಕೆ ಗುರು ಭೀಷ್ಮರಿಗೆ ಸರಿ
ಸಾಹಸಿಕರಾರುಂಟು ಮುರಿದುದು ಪಾಂಡುಸುತಸೇನೆ ॥24॥
೦೨೫ ಉದಧಿಯುದರದೊಳಿಳಿದು ತೆರೆಗಳ ...{Loading}...
ಉದಧಿಯುದರದೊಳಿಳಿದು ತೆರೆಗಳ
ನೊದೆವ ಮಂದರದಂತೆ ಮದಕರಿ
ಕದಳಿಯಲಿ ಕೈಮಾಡುವಂತಿದೆ ಪರರ ಥಟ್ಟಿನಲಿ
ಹೊದರ ಹರೆಗಡಿದೌಕಿದನು ತೋ
ಕಿದನು ಸುಭಟರ ಜೀವವನು ಹಳೆ
ವಿದಿರ ಮೆಳೆಯಲಿ ಮೊಳಗಿದುರಿಯವೊಲುರುಹಿದನು ದ್ರೋಣ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರದ ಗರ್ಭದೊಳಗೆ ಇಳಿದು ಅಲೆಗಳನ್ನು ಒದೆಯುವ ಮಂದರ ಪರ್ವತದಂತೆ, ಮದಿಸಿದ ಆನೆ ಶತ್ರು ಸೈನ್ಯವೆಂಬ ಬಾಳೆ ತೋಟದಲ್ಲಿ ಕೈಮಾಡುವಂತೆ ಕಾಣಿಸುತ್ತಿದ್ದ ದ್ರೋಣನು ಬಾಣ ಪ್ರಯೋಗದಿಂದ ಶತ್ರು ಸೈನ್ಯವನ್ನು ಸಂಪೂರ್ಣವಾಗಿ ಕಡಿದು ನಾಶಗೊಳಿಸಿದನು. ಸುಭಟರ ಜೀವವನ್ನು ಹಳೆಬಿದಿರ ಮೆಳೆಯಲ್ಲಿ ಉಂಟಾದ ಉರಿಯಂತೆ ಸುಟ್ಟು ಭಸ್ಮ ಮಾಡಿದನು.
ಮೂಲ ...{Loading}...
ಉದಧಿಯುದರದೊಳಿಳಿದು ತೆರೆಗಳ
ನೊದೆವ ಮಂದರದಂತೆ ಮದಕರಿ
ಕದಳಿಯಲಿ ಕೈಮಾಡುವಂತಿದೆ ಪರರ ಥಟ್ಟಿನಲಿ
ಹೊದರ ಹರೆಗಡಿದೌಕಿದನು ತೋ
ಕಿದನು ಸುಭಟರ ಜೀವವನು ಹಳೆ
ವಿದಿರ ಮೆಳೆಯಲಿ ಮೊಳಗಿದುರಿಯವೊಲುರುಹಿದನು ದ್ರೋಣ ॥25॥
೦೨೬ ಹೊಕ್ಕ ಸಾಲರುಣಾಮ್ಬುಮಯ ...{Loading}...
ಹೊಕ್ಕ ಸಾಲರುಣಾಂಬುಮಯ ಕೈ
ಯಿಕ್ಕಿದತ್ತಲು ಖಂಡಮಯ ಮೊಗ
ವಿಕ್ಕಿದತ್ತಲು ಮೊರೆವ ಹೆಣಮಯವೇನನುಸುರುವೆನು
ಇಕ್ಕಡಿಯ ಬಸುರುಚ್ಚುಗಳ ನರ
ಸೊಕ್ಕು ಡೊಳ್ಳಾಸದ ಮಹಾಭಯ
ವೆಕ್ಕಸರದಲಿ ಕಾಣಲಾದುದು ವೈರಿಬಲದೊಳಗೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನೆಂದು ಹೇಳಲಿ ? ದ್ರೋಣ ಪ್ರವೇಶಿಸಿ ಯುದ್ಧ ಮಾಡಿದ ಸಾಲು ರಕ್ತಮಯ. ಕೈಹಾಕಿದ ಕಡೆ ಮಾಂಸಮಯ, ದೃಷ್ಟಿ ಸರಿಸಿದ ಕಡೆ ಗೋಳಿಡುವ ಹೆಣದ ಭಯ. ದ್ರೋಣನ ಒಂದೇ ಒಂದು ಬಾಣದಿಂದ ವೈರಿಸೇನೆಯಲ್ಲಿ ಸೈನಿಕರ ಬಸಿರುಗಳು ಎರಡು ಭಾಗಗಳಾಗಿ ಸೀಳಿಹೋದವು. ಗರ್ವಿಷ್ಠರಾದ, ಆಡಂಬರದ ವೀರರಿಗೆ ಮಹಾಭಯ ಉಂಟಾಯಿತು.
ಮೂಲ ...{Loading}...
ಹೊಕ್ಕ ಸಾಲರುಣಾಂಬುಮಯ ಕೈ
ಯಿಕ್ಕಿದತ್ತಲು ಖಂಡಮಯ ಮೊಗ
ವಿಕ್ಕಿದತ್ತಲು ಮೊರೆವ ಹೆಣಮಯವೇನನುಸುರುವೆನು
ಇಕ್ಕಡಿಯ ಬಸುರುಚ್ಚುಗಳ ನರ
ಸೊಕ್ಕು ಡೊಳ್ಳಾಸದ ಮಹಾಭಯ
ವೆಕ್ಕಸರದಲಿ ಕಾಣಲಾದುದು ವೈರಿಬಲದೊಳಗೆ ॥26॥
೦೨೭ ಹಸಿದ ಹೆಬ್ಬುಲಿ ...{Loading}...
ಹಸಿದ ಹೆಬ್ಬುಲಿ ಮಸಗಿದರೆ ಮೃಗ
ವಿಸರವೇನಹುದರಸ ಕೇಳ್ ನಿ
ಪ್ಪಸರದಲಿ ಪಾಳಿಸಿದನಹಿತರನುಗಿದನುಸುರುಗಳ
ಕುಶಲರೇ ಭೀಮಾರ್ಜುನರು ಪಾ
ಲಿಸುವ ಬಿರುದೇ ಕೃಷ್ಣನದು ಹರಿ
ಹುಸಿಕನೋ ಬೆಸಗೊಂಬೆವೆನುತರೆಯಟ್ಟಿದನು ದ್ರೋಣ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಸಿದ ಹೆಬ್ಬುಲಿ ಗರ್ಜಿಸಿದರೆ ಮೃಗ ಸಮೂಹ ಏನಾಗುವುದು ? ಅರಸನೇ ಕೇಳು. ಆವೇಶದಿಂದ ಶತ್ರುಗಳನ್ನು ಕೊಂದನು. ಶತ್ರುಗಳ ಪ್ರಾಣವನ್ನು ಹೊರತೆಗೆದನು. ‘ಭೀಮಾರ್ಜುನರು ಕುಶಲರೇ ? ಅವರನ್ನು ಕಾಪಾಡುವ ಬಿರುದೇ ಕೃಷ್ಣನದು ? ಹರಿ ಸುಳ್ಳಾಡುವವನೋ ? ಕೇಳುವೆವು’ ಎನ್ನುತ್ತಾ ದ್ರೋಣನು ಬೆನ್ನು ಹತ್ತಿದನು.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಪಾಳಿಸು -ಕೊಲ್ಲು
ಮೂಲ ...{Loading}...
ಹಸಿದ ಹೆಬ್ಬುಲಿ ಮಸಗಿದರೆ ಮೃಗ
ವಿಸರವೇನಹುದರಸ ಕೇಳ್ ನಿ
ಪ್ಪಸರದಲಿ ಪಾಳಿಸಿದನಹಿತರನುಗಿದನುಸುರುಗಳ
ಕುಶಲರೇ ಭೀಮಾರ್ಜುನರು ಪಾ
ಲಿಸುವ ಬಿರುದೇ ಕೃಷ್ಣನದು ಹರಿ
ಹುಸಿಕನೋ ಬೆಸಗೊಂಬೆವೆನುತರೆಯಟ್ಟಿದನು ದ್ರೋಣ ॥27॥
೦೨೮ ಆರು ಸಾವಿರ ...{Loading}...
ಆರು ಸಾವಿರ ಕುದುರೆಯೊಂಬೈ
ನೂರು ಗಜಘಟೆ ಸಾವಿರದ ಮೂ
ನೂರು ರಥವೊಗ್ಗಾಗಿ ಬಿದ್ದುದು ಲಕ್ಷಪಾಯದಳ
ಏರುವಡೆದವರನು ಪಲಾಯನ
ಸೂರೆಕಾರರನವರ ದಳದಲಿ
ತೋರಿ ಹೇಳುವರೆನ್ನ ಹವಣೇ ಭೂಪ ಕೇಳ್ ಎಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಆರು ಸಾವಿರ ಕುದುರೆ, ಒಂಭೈನೂರು ಆನೆಗಳು, ಸಾವಿರದ ಮುನ್ನೂರು ರಥ ಒಟ್ಟಾಗಿ ಲಕ್ಷ ಪದಾತಿ ಸೈನ್ಯ ಬಿದ್ದಿತು. ಗಾಯಗೊಂಡವರನ್ನು ಕೊಳ್ಳೆ ಹೊಡೆಯುವ ಪಲಾಯನವಾದಿಗಳನ್ನು ಅವರ ಸೈನ್ಯದಲ್ಲಿ ತೋರಿಸಿ ಹೇಳಲು ನನಗೆ ಸಾಧ್ಯವೇ ? ರಾಜನೇ ಕೇಳು " ಎಂದು ಸಂಜಯನು ಹೇಳಿದನು.
ಮೂಲ ...{Loading}...
ಆರು ಸಾವಿರ ಕುದುರೆಯೊಂಬೈ
ನೂರು ಗಜಘಟೆ ಸಾವಿರದ ಮೂ
ನೂರು ರಥವೊಗ್ಗಾಗಿ ಬಿದ್ದುದು ಲಕ್ಷಪಾಯದಳ
ಏರುವಡೆದವರನು ಪಲಾಯನ
ಸೂರೆಕಾರರನವರ ದಳದಲಿ
ತೋರಿ ಹೇಳುವರೆನ್ನ ಹವಣೇ ಭೂಪ ಕೇಳೆಂದ ॥28॥
೦೨೯ ಎಲೆಲೆ ದೊದ್ದೆಗರೇಕೆ ...{Loading}...
ಎಲೆಲೆ ದೊದ್ದೆಗರೇಕೆ ಕೊಬ್ಬಿದ
ರಳವನರಿಯದೆ ನುಗ್ಗುಮುರಿದರೆ
ದಳದ ದೊರೆಗದು ಭಂಗವೇ ಬಾಹಿರನ ಹೊಯ್ಯೆನುತ
ಒಳಸರಿವ ನಾಯಕರ ನೆರೆ ಮೂ
ದಲಿಸಿ ಲಗ್ಗೆಯ ಲಹರಿಯಲಿ ಪಡಿ
ತಳಿಸಿದರು ಪಾಂಚಾಲ ಸೃಂಜಯ ಮತ್ಸ್ಯ ಕೇಕೆಯರು ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೆ… ಗುಂಪಿನವರು ಏಕೆ ಕೊಬ್ಬಿದರು ? ತಮ್ಮ ಸಾಮಥ್ರ್ಯವನ್ನು ಗಮನಿಸದೆ ನುಗ್ಗಾಗುವಂತೆ ಮುರಿದರೆ ದಳದ ಮುಖ್ಯಸ್ಥನಿಗೆ ಅವಮಾನವಲ್ಲವೇ ? ನೀಚನನ್ನು ಹೊಡೆ ಎನ್ನುತ್ತಾ ಒಳಸರಿಯುವ ನಾಯಕರನ್ನು ವಿಶೇಷವಾಗಿ ಮೂದಲಿಸಿ ಆಕ್ರಮಣದ ಉತ್ಸಾಹದಲ್ಲಿ ಪಾಂಚಾಲ, ಸೃಂಜಯ, ಮತ್ಸ್ಯ, ಕೇಕೆಯರು ಇದಿರಾದರು.
ಪದಾರ್ಥ (ಕ.ಗ.ಪ)
ದೊದ್ದೆಗರು-ಗುಂಪಿನವರು, ಪಡಿತಳಿಸು-ಇದಿರಾಗು
ಮೂಲ ...{Loading}...
ಎಲೆಲೆ ದೊದ್ದೆಗರೇಕೆ ಕೊಬ್ಬಿದ
ರಳವನರಿಯದೆ ನುಗ್ಗುಮುರಿದರೆ
ದಳದ ದೊರೆಗದು ಭಂಗವೇ ಬಾಹಿರನ ಹೊಯ್ಯೆನುತ
ಒಳಸರಿವ ನಾಯಕರ ನೆರೆ ಮೂ
ದಲಿಸಿ ಲಗ್ಗೆಯ ಲಹರಿಯಲಿ ಪಡಿ
ತಳಿಸಿದರು ಪಾಂಚಾಲ ಸೃಂಜಯ ಮತ್ಸ್ಯ ಕೇಕೆಯರು ॥29॥
೦೩೦ ಬಲವ ಕಲಿಯೇರಿಸಿ ...{Loading}...
ಬಲವ ಕಲಿಯೇರಿಸಿ ಛಡಾಳದೊ
ಳುಲಿವ ಪಟಹ ಮೃದಂಗ ಕಹಳಾ
ವಳಿಯ ಬೊಗ್ಗಿನ ಬೊಬ್ಬಿರಿವ ನಿಸ್ಸಾಳ ಕೋಟಿಗಳ
ತಳಿತ ಝಲ್ಲರಿಗಳ ಪತಾಕಾ
ವಳಿಯ ಬಲಿದು ಪವಾಡಿಗಳ ಕಳ
ಕಳದ ಕೈವಾರದಲಿ ಕವಿದರು ದ್ರೋಣನಿದಿರಿನಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯವನ್ನು ಹುರಿದುಂಬಿಸಿ, ರಭಸದಿಂದ ಮೊಳಗುವ ಪಟಹ, ಮೃದಂಗ, ಕಹಳೆಗಳ ಒಟ್ಟಾಗಿ ಗರ್ಜಿಸುವ ಕೋಟಿ ವಾದ್ಯ ಸಮೂಹದ ಧ್ವನಿಗಳ, ಹರಡಿದ ಛತ್ರಿಗಳ ಧ್ವಜ ಸಮೂಹಗಳ , ರಣರಂಗದ ಸ್ತುತಿ ಪಾಠಕರುಗಳ ಮಧ್ಯೆ ದ್ರೋಣನನ್ನು ಮುತ್ತಿದರು.
ಪದಾರ್ಥ (ಕ.ಗ.ಪ)
ಪವಾಡಿಗ-ಲಾವಣಿ ಹೇಳುವವ,
ಬೊಗ್ಗು-ಕಹಳೆ
ಮೂಲ ...{Loading}...
ಬಲವ ಕಲಿಯೇರಿಸಿ ಛಡಾಳದೊ
ಳುಲಿವ ಪಟಹ ಮೃದಂಗ ಕಹಳಾ
ವಳಿಯ ಬೊಗ್ಗಿನ ಬೊಬ್ಬಿರಿವ ನಿಸ್ಸಾಳ ಕೋಟಿಗಳ
ತಳಿತ ಝಲ್ಲರಿಗಳ ಪತಾಕಾ
ವಳಿಯ ಬಲಿದು ಪವಾಡಿಗಳ ಕಳ
ಕಳದ ಕೈವಾರದಲಿ ಕವಿದರು ದ್ರೋಣನಿದಿರಿನಲಿ ॥30॥
೦೩೧ ಅರಿಬಲದ ಥಟ್ಟಣೆಯ ...{Loading}...
ಅರಿಬಲದ ಥಟ್ಟಣೆಯ ಬಿರುಬಿನ
ಬರವನೀಕ್ಷಿಸಿ ಪೂತು ಪಾಂಚಾ
ಲರ ಸಘಾಡಿಕೆ ಸಾಹಸಿಕರೈ ಹಾ ಮಹಾದೇವ
ದೊರೆಯಲೇ ಬಳಿಕೇನು ಪಾಂಡವ
ರರಸಿಯಯ್ಯನು ದ್ರುಪದನಲ್ಲಾ
ಹರಯೆನುತ ಗಹಗಹಿಸಿ ತಲೆದೂಗಿದನು ಕಲಿದ್ರೋಣ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಸೇನೆಯ ಗುಂಪಿನ ಆವೇಶದ ಬರುವಿಕೆಯನ್ನು ನೋಡಿ. ಭಲೆ-ಪಾಂಚಾಲರ ಪರಾಕ್ರಮ, ಸಾಹಸಿಗರು ನೀವು. ಹಾ ಮಹಾದೇವ - ನೀವು ಸಮಾನರಲ್ಲವೇ ಬಳಿಕ ಇನ್ನೇನು ? ಪಾಂಡವರ ರಾಣಿಯ ತಂದೆಯಲ್ಲವೇ ? ದ್ರುಪದನಲ್ಲವೇ ? ಹರ ಎನ್ನುತ್ತಾ ವ್ಯಂಗ್ಯವಾಗಿ ಗಹಗಹಿಸಿ ನಗುತ್ತಾ ಶೂರದ್ರೋಣನು ತಲೆದೂಗಿದನು.
ಪದಾರ್ಥ (ಕ.ಗ.ಪ)
ಬಿರುಬು-ಆವೇಶ,
ಸಘಾಡಿಕೆ-ಪರಾಕ್ರಮ
ಮೂಲ ...{Loading}...
ಅರಿಬಲದ ಥಟ್ಟಣೆಯ ಬಿರುಬಿನ
ಬರವನೀಕ್ಷಿಸಿ ಪೂತು ಪಾಂಚಾ
ಲರ ಸಘಾಡಿಕೆ ಸಾಹಸಿಕರೈ ಹಾ ಮಹಾದೇವ
ದೊರೆಯಲೇ ಬಳಿಕೇನು ಪಾಂಡವ
ರರಸಿಯಯ್ಯನು ದ್ರುಪದನಲ್ಲಾ
ಹರಯೆನುತ ಗಹಗಹಿಸಿ ತಲೆದೂಗಿದನು ಕಲಿದ್ರೋಣ ॥31॥
೦೩೨ ಇರುಳುಗಳ್ಳನ ಕೂಡೆ ...{Loading}...
ಇರುಳುಗಳ್ಳನ ಕೂಡೆ ಸೇರಿದ
ಮರುಳಿನಂತಿರೆ ನೀವು ರಣದಲಿ
ತರಿಸಿಕೊಂಬಿರಿ ಹಾಯ್ದರವದಿರು ನಿಮ್ಮನೆಡೆಯೊಡ್ಡಿ
ಮರಳಿರೈ ಕೈಕೆಯರು ಮತ್ಸ್ಯರು
ಬಿರುದ ಸೃಂಜಯರಕಟಕಟ ಖೂ
ಳರು ವೃಥಾ ನಿಮಗೇಕೆ ಸಾವೆನುತಿರ್ದನಾ ದ್ರೋಣ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾತ್ರಿಕಳ್ಳನ ಜೊತೆ ಸೇರಿದ ಮೂರ್ಖನ ಹಾಗೆ ನೀವು ರಣದಲ್ಲಿ ಬರುವಂತೆ ಮಾಡಿಕೊಂಡಿರಿ. ನಿಮ್ಮನ್ನು ಆಹಾರವನ್ನಾಗಿ ಒಡ್ಡಿ ಅವರು ದೂರ ಹೋದರು. ಕೈಕೆಯರು, ಮತ್ಸ್ಯರು, ವೀರ ಸೃಂಜಯರು ಹಿಂದಿರುಗಿರಿ, ಅಯ್ಯೋ… ನೀಚರು. ವೃಥಾ ನಿಮಗೇಕೆ ಸಾವು” ಎನ್ನುತ್ತಿದ್ದನು ಆ ದ್ರೋಣ,
ಪದಾರ್ಥ (ಕ.ಗ.ಪ)
ಎಡೆಯೊಡ್ಡು-ಬಲಿಯೊಡ್ಡು
ಮೂಲ ...{Loading}...
ಇರುಳುಗಳ್ಳನ ಕೂಡೆ ಸೇರಿದ
ಮರುಳಿನಂತಿರೆ ನೀವು ರಣದಲಿ
ತರಿಸಿಕೊಂಬಿರಿ ಹಾಯ್ದರವದಿರು ನಿಮ್ಮನೆಡೆಯೊಡ್ಡಿ
ಮರಳಿರೈ ಕೈಕೆಯರು ಮತ್ಸ್ಯರು
ಬಿರುದ ಸೃಂಜಯರಕಟಕಟ ಖೂ
ಳರು ವೃಥಾ ನಿಮಗೇಕೆ ಸಾವೆನುತಿರ್ದನಾ ದ್ರೋಣ ॥32॥
೦೩೩ ಬಿಲ್ಲ ಕೊಪ್ಪಿನ ...{Loading}...
ಬಿಲ್ಲ ಕೊಪ್ಪಿನ ಮೇಲೆ ಚಾಚಿದ
ಗಲ್ಲದುಪಹಾಸದ ನುಡಿಯ ಮೈ
ಭುಲ್ಲಣೆಯ ರೋಮಾಂಚನದ ಚಡ್ಡಣೆಯ ಚೇತನದ
ಗೆಲ್ಲದಲಿ ಘಾಡಿಸಿದ ಚಿತ್ತದ
ಕೆಲ್ಲೆಗಂಗಳ ನಗೆಯ ಚೌಪಟ
ಮಲ್ಲನಿದ್ದನು ರಿಪುಬಲವ ಲೆಕ್ಕಿಸದೆ ಕಲಿದ್ರೋಣ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲಿನ ತುದಿಯ ಮೇಲೆ ಗಲ್ಲವನ್ನು ಚಾಚಿದ್ದ, ಅಪಹಾಸ್ಯದ ಮಾತುಗಳನ್ನಾಡುತ್ತ ಹರ್ಷದಿಂದ ರೋಮಾಂಚನಗೊಂಡು, ಹೆಚ್ಚಿನ ಚಟುವಟಿಕೆಯಿಂದ ಗೆಲುವಿನಲ್ಲಿ ಮನಸ್ಸು ನಾಟಿದ್ದ ಕಣ್ಣುಗಳಿಂದ ಕಿಡಿಗಳನ್ನು ಕಾರುತ್ತಿದ್ದ, ಗೆಲುವಿನ ನಗೆಯ ಮೊಗದ ಚೌಪಟ ಮಲ್ಲನಾದ ಕಲಿ ದ್ರೋಣನು ಶತ್ರುಬಲವನ್ನು ಲೆಕ್ಕಿಸದೆ ಇದ್ದನು.
ಪದಾರ್ಥ (ಕ.ಗ.ಪ)
ಭುಲ್ಲಣೆ-ಹರ್ಷ,
ಚಡ್ಡಣೆಯ-ಏರಿಕೆಯ,
ಗೆಲ್ಲ-ಜಯ, ಗೆಲುವು,
ಕೆಲ್ಲೆಗಂಗಳು-ಕಿಡಿಗಳನ್ನು ಕಾರುವ ಕಣ್ಣುಗಳು,
ಮೂಲ ...{Loading}...
ಬಿಲ್ಲ ಕೊಪ್ಪಿನ ಮೇಲೆ ಚಾಚಿದ
ಗಲ್ಲದುಪಹಾಸದ ನುಡಿಯ ಮೈ
ಭುಲ್ಲಣೆಯ ರೋಮಾಂಚನದ ಚಡ್ಡಣೆಯ ಚೇತನದ
ಗೆಲ್ಲದಲಿ ಘಾಡಿಸಿದ ಚಿತ್ತದ
ಕೆಲ್ಲೆಗಂಗಳ ನಗೆಯ ಚೌಪಟ
ಮಲ್ಲನಿದ್ದನು ರಿಪುಬಲವ ಲೆಕ್ಕಿಸದೆ ಕಲಿದ್ರೋಣ ॥33॥
೦೩೪ ಕೆಣಕಿದರು ಪಾಞ್ಚಾಲ ...{Loading}...
ಕೆಣಕಿದರು ಪಾಂಚಾಲ ನಾಯಕ
ರಣಕಿಗನ ಕೈಕೊಳ್ಳದುರೆ ಸಂ
ದಣಿಸಿದರು ಸಮರಥರು ಕವಿದರು ರಾಯ ರಾವುತರು
ಕಣೆಗೆದರಿ ಹೊದ್ದಿದರು ಜೋದರು
ಕುಣಿದು ಕಾಲಾಳೌಕಿತೊಂದೇ
ಕ್ಷಣದೊಳನಿಬರನೊರಸಿದನು ಬೆರಸಿದನು ದೊರೆಗಳಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಚಾಲ ನಾಯಕರು ಕೆಣಕಿದರು. ದ್ರೋಣನ ವ್ಯಂಗ್ಯದ ಮಾತನ್ನು ಲೆಕ್ಕಿಸದೆ ವಿಶೇಷವಾಗಿ ಸಮರಥರು ಒಟ್ಟಾಗಿ ಸೇರಿದರು. ರಾಯ ರಾವುತರು ಮುತ್ತಿದರು. ಬಾಣಗಳನ್ನು ಕೆದರಿ ಮುನ್ನುಗ್ಗಿದರು. ಯೋಧರು ಕುಣಿದು ಕಾಲಾಳುಗಳು ಮುತ್ತಿದರು. ಆದರೆ ದ್ರೋಣನು ಒಂದೇ ಕ್ಷಣದಲ್ಲಿ ಅಷ್ಟೂ ಜನರನ್ನು ನಾಶಗೊಳಿಸಿದನು. ಸತ್ತ ದೊರೆಗಳ ಜೊತೆ ಅವರನ್ನು ಬೆರೆಸಿದನು.
ಮೂಲ ...{Loading}...
ಕೆಣಕಿದರು ಪಾಂಚಾಲ ನಾಯಕ
ರಣಕಿಗನ ಕೈಕೊಳ್ಳದುರೆ ಸಂ
ದಣಿಸಿದರು ಸಮರಥರು ಕವಿದರು ರಾಯ ರಾವುತರು
ಕಣೆಗೆದರಿ ಹೊದ್ದಿದರು ಜೋದರು
ಕುಣಿದು ಕಾಲಾಳೌಕಿತೊಂದೇ
ಕ್ಷಣದೊಳನಿಬರನೊರಸಿದನು ಬೆರಸಿದನು ದೊರೆಗಳಲಿ ॥34॥
೦೩೫ ಅಡಸಿದರು ಚತುರಙ್ಗ ...{Loading}...
ಅಡಸಿದರು ಚತುರಂಗ ಬಲವನು
ಕಡಿದು ಹರಹಿ ವಿರಾಟನನು ಜವ
ಗಿಡಿಸಿ ದ್ರುಪದನನೆಚ್ಚು ವಿರಥರ ಮಾಡಿ ಕೈಕೆಯರ
ನಡೆದು ಬರೆ ನಿಮಿಷದಲಿ ಬಲವವ
ಗಡಿಸಿ ಹೊಕ್ಕುದು ಮಸಗಿದಂಬುಧಿ
ವಡಬನನು ಮೊಗೆವಂತೆ ಮುತ್ತಿತು ಕಳಶಸಂಭವನ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚತುರಂಗ ಬಲವನ್ನು ಮುತ್ತಿ ಕಡಿದು ಬಿಸಾಡಿ, ವಿರಾಟನನ್ನು ಎಚ್ಚರ ತಪ್ಪುವಂತೆ ಮಾಡಿ, ದ್ರುಪದನ ಮೇಲೆ ಬಾಣ ಪ್ರಯೋಗಿಸಿ, ಕೈಕೆಯರನ್ನು ವಿರಥರನ್ನಾಗಿ ಮಾಡಿ, ದ್ರೋಣನು ನಡೆದು ಬರಲು , ನಿಮಿಷದಲ್ಲಿ ಪಾಂಡವರ ಸೈನ್ಯವು ಪ್ರತಿಭಟಿಸಿ ಮುನ್ನುಗ್ಗಿತು. ಗರ್ಜಿಸುವ ಸಮುದ್ರವು ದಾವಾಗ್ನಿಯನ್ನು ನುಂಗುವಂತೆ ದ್ರೋಣನನ್ನು ಮುತ್ತಿತು.
ಮೂಲ ...{Loading}...
ಅಡಸಿದರು ಚತುರಂಗ ಬಲವನು
ಕಡಿದು ಹರಹಿ ವಿರಾಟನನು ಜವ
ಗಿಡಿಸಿ ದ್ರುಪದನನೆಚ್ಚು ವಿರಥರ ಮಾಡಿ ಕೈಕೆಯರ
ನಡೆದು ಬರೆ ನಿಮಿಷದಲಿ ಬಲವವ
ಗಡಿಸಿ ಹೊಕ್ಕುದು ಮಸಗಿದಂಬುಧಿ
ವಡಬನನು ಮೊಗೆವಂತೆ ಮುತ್ತಿತು ಕಳಶಸಂಭವನ ॥35॥
೦೩೬ ಮತ್ತೆ ಮುರಿದನು ...{Loading}...
ಮತ್ತೆ ಮುರಿದನು ವೈರಿಬಲದಲಿ
ಹತ್ತು ಸಾವಿರ ಕರಿಘಟೆಯನೈ
ವತ್ತು ಸಾವಿರ ಹಯವನಿರ್ಛಾಸಿರ ಮಹಾರಥರ
ಹತ್ತು ಕೋಟಿ ಪದಾತಿಯನು ಕೈ
ವರ್ತಿಸಿದನಂತಕನವರಿಗಿವ
ರತ್ತ ಬಿಟ್ಟನು ರಥವನಾ ದ್ರುಪದಾದಿ ನಾಯಕರ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು ಪುನಃ ವೈರಿಸೇನೆಯಲ್ಲಿ ಹತ್ತು ಸಾವಿರ ಆನೆಗಳನ್ನು ಐವತ್ತು ಸಾವಿರ ಕುದುರೆಗಳನ್ನು ಇಪ್ಪತ್ತು ಸಾವಿರ ಮಹಾರಥರನ್ನೂ ನಾಶಗೊಳಿಸಿದನು. ಹತ್ತು ಕೋಟಿ ಪದಾತಿಯನ್ನು ಅಂತಕನವರಿಗೆ ವಶಪಡಿಸಿದನು. ಅನಂತರ ದ್ರುಪದಾದಿ ನಾಯಕರತ್ತ ರಥವನ್ನು ಬಿಟ್ಟನು.
ಪದಾರ್ಥ (ಕ.ಗ.ಪ)
ಕೈವರ್ತಿಸು-ವಶಪಡಿಸು
ಮೂಲ ...{Loading}...
ಮತ್ತೆ ಮುರಿದನು ವೈರಿಬಲದಲಿ
ಹತ್ತು ಸಾವಿರ ಕರಿಘಟೆಯನೈ
ವತ್ತು ಸಾವಿರ ಹಯವನಿರ್ಛಾಸಿರ ಮಹಾರಥರ
ಹತ್ತು ಕೋಟಿ ಪದಾತಿಯನು ಕೈ
ವರ್ತಿಸಿದನಂತಕನವರಿಗಿವ
ರತ್ತ ಬಿಟ್ಟನು ರಥವನಾ ದ್ರುಪದಾದಿ ನಾಯಕರ ॥36॥
೦೩೭ ಆಳನೊಪ್ಪಿಸಿ ಜಾರದಿರು ...{Loading}...
ಆಳನೊಪ್ಪಿಸಿ ಜಾರದಿರು ಪಾಂ
ಚಾಲಪತಿ ಫಡ ನಿಲ್ಲೆನುತ ಶರ
ಜಾಲದಲಿ ಹೂಳಿದನು ದ್ರುಪದನ ಕೆಲದ ಬಲದವರ
ಖೂಳ ಫಡ ಹಾರುವರು ಬರಿ ಮಾ
ತಾಳಿಗಳು ತಾವೇಕೆ ನಾವೇ
ಕಾಳುತನ ತನಗೆತ್ತಲೆನುತಿದಿರಾದನಾ ದ್ರುಪದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಚಾಲಾಧಿಪತಿಯಾದ ದ್ರುಪದನೇ… ಶೂರರನ್ನು ರಣಕ್ಕೆ ಒಪ್ಪಿಸಿ ಜಾರಿಕೊಳ್ಳಬೇಡ. ಫಡ-ನಿಲ್ಲು " ಎನ್ನುತ್ತಾ ದ್ರುಪದನ ಅಕ್ಕಪಕ್ಕದವರನ್ನು ಬಾಣಗಳ ಜಾಲದಲ್ಲಿ ಸಿಕ್ಕಿಸಿ ಸ್ಮಶಾನಕ್ಕೆ ಕಳಿಸಿದನು. ಆಗ ದ್ರುಪದನು “ನೀಚನೇ, ಬ್ರಾಹ್ಮಣರು ಕೇವಲ ಮಾತನಾಡಲು ಬಲ್ಲರು. ತಾವೇಕೆ ? ನಾವೇಕೆ ? ಪರಾಕ್ರಮ ನಿನಗೆಲ್ಲಿಯದು ?” ಎನ್ನುತ್ತಾ ಇದಿರಾದನು.
ಮೂಲ ...{Loading}...
ಆಳನೊಪ್ಪಿಸಿ ಜಾರದಿರು ಪಾಂ
ಚಾಲಪತಿ ಫಡ ನಿಲ್ಲೆನುತ ಶರ
ಜಾಲದಲಿ ಹೂಳಿದನು ದ್ರುಪದನ ಕೆಲದ ಬಲದವರ
ಖೂಳ ಫಡ ಹಾರುವರು ಬರಿ ಮಾ
ತಾಳಿಗಳು ತಾವೇಕೆ ನಾವೇ
ಕಾಳುತನ ತನಗೆತ್ತಲೆನುತಿದಿರಾದನಾ ದ್ರುಪದ ॥37॥
೦೩೮ ಹಿನ್ದ ನೆನೆಯಾ ...{Loading}...
ಹಿಂದ ನೆನೆಯಾ ಖೂಳ ನಾವಾ
ರೆಂದು ಮರೆದಾ ಸಾಕದಂತಿರ
ಲೊಂದನಲ್ಲದೆ ನಿನ್ನ ತಲೆಗೆರಡಂಬ ತೊಡಚಿದರೆ
ಇಂದು ನಿನ್ನಯ ಬಾಯ ತಂಬುಲ
ತಿಂದವನು ನೋಡೆನುತ ಹೆರೆಯಂ
ಬಿಂದ ಕಡಿದಿಳುಹಿದನು ಪಾಂಚಾಲಾಧಿಪನ ಶಿರವ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದಿನದನ್ನು ನೆನೆಸಿಕೊ, ನೀಚನೇ, ನಾವ್ಯಾರೆಂದು ಮರೆತೆಯಾ ? ಸಾಕು ಅದು ಹಾಗಿರಲಿ, ಒಂದಲ್ಲದೆ ನಿನ್ನ ತಲೆಗೆ ಎರಡು ಬಾಣಗಳನ್ನು ತೊಡುವ ಅಗತ್ಯವಿಲ್ಲ. ಒಂದೇ ಬಾಣ ಸಾಕು. ಅದು ಬಿಟ್ಟು ಎರಡನ್ನು ಪ್ರಯೋಗಿಸಿದೆನಾದರೆ ನಿನ್ನಯ ಬಾಯ ಎಂಜಲನ್ನು ತಿಂದವನಿಗೆ ಸಮನಾಗುತ್ತೇನೆ. ನೋಡು ಎನ್ನುತ್ತಾ ಚಂದ್ರಾಕೃತಿಯ ಬಾಣವನ್ನು ಬಿಟ್ಟು ಪಾಂಚಾಲ ರಾಜನ ತಲೆಯನ್ನು ಕಡಿದು ನೆಲಕ್ಕೆ ಬೀಳಿಸಿದನು.
ಪದಾರ್ಥ (ಕ.ಗ.ಪ)
ಹೆರೆ-ಚಂದ್ರ
ಮೂಲ ...{Loading}...
ಹಿಂದ ನೆನೆಯಾ ಖೂಳ ನಾವಾ
ರೆಂದು ಮರೆದಾ ಸಾಕದಂತಿರ
ಲೊಂದನಲ್ಲದೆ ನಿನ್ನ ತಲೆಗೆರಡಂಬ ತೊಡಚಿದರೆ
ಇಂದು ನಿನ್ನಯ ಬಾಯ ತಂಬುಲ
ತಿಂದವನು ನೋಡೆನುತ ಹೆರೆಯಂ
ಬಿಂದ ಕಡಿದಿಳುಹಿದನು ಪಾಂಚಾಲಾಧಿಪನ ಶಿರವ ॥38॥
೦೩೯ ದೊರೆಯಳಿದನೇ ಸ್ವಾಮಿದ್ರೋಹರು ...{Loading}...
ದೊರೆಯಳಿದನೇ ಸ್ವಾಮಿದ್ರೋಹರು
ತಿರುಗಿಯೆನೆ ಪಾಂಚಾಲರಲಿ ಹ
ನ್ನೆರಡು ಸಾವಿರ ರಾಜಪುತ್ರರು ಜರೆದು ಜೋಡಿಸಿತು
ಹರಿಬವೆಮ್ಮದು ಸಾರಿ ನೀವೆಂ
ದರಸುಮಕ್ಕಳ ನಿಲಿಸಿ ಬಿಲುಗೊಂ
ಡುರವಣಿಸಿ ತಡೆದನು ವಿರಾಟನು ಕಳಶಸಂಭವನ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ’ ದೊರೆ ನಾಶವಾದನೇ ? ಸ್ವಾಮಿದ್ರೋಹರು ಬನ್ನಿ ’ ಎಂದು ದ್ರೋಣನು ಹೇಳಲು ಪಾಂಚಾಲಕರಲ್ಲಿ ಹನ್ನೆರಡು ಸಾವಿರ ರಾಜಪುತ್ರರು ಸರಿದು ಬಂದು ಸೈನ್ಯವನ್ನು ಸೇರಿದರು. ‘ಯುದ್ಧದ ಹೊಣೆ ನಮ್ಮದು. ನೀವು ಪಕ್ಕಕ್ಕೆ ಸರಿಯಿರಿ’ ಎಂದು ರಾಜಕುಮಾರರನ್ನು ತಡೆದು ಬಿಲ್ಲನ್ನು ಹಿಡಿದು ಆತುರದಿಂದ ವಿರಾಟನು ದ್ರೋಣನನ್ನು ಎದುರಿಸಿದನು.
ಮೂಲ ...{Loading}...
ದೊರೆಯಳಿದನೇ ಸ್ವಾಮಿದ್ರೋಹರು
ತಿರುಗಿಯೆನೆ ಪಾಂಚಾಲರಲಿ ಹ
ನ್ನೆರಡು ಸಾವಿರ ರಾಜಪುತ್ರರು ಜರೆದು ಜೋಡಿಸಿತು
ಹರಿಬವೆಮ್ಮದು ಸಾರಿ ನೀವೆಂ
ದರಸುಮಕ್ಕಳ ನಿಲಿಸಿ ಬಿಲುಗೊಂ
ಡುರವಣಿಸಿ ತಡೆದನು ವಿರಾಟನು ಕಳಶಸಂಭವನ ॥39॥
೦೪೦ ಅಡಿಸಿ ಗಿರಿಗಳ ...{Loading}...
ಅಡಿಸಿ ಗಿರಿಗಳ ನುಂಗುವನ ಬಾಯ್
ಹಿಡಿಯದಿಹುದೇ ಹಣ್ಣು ಹಂಪಲ
ಬಡ ವಿರಾಟನನಾರು ಬಲ್ಲರು ದ್ರೋಣನಿದಿರಿನಲಿ
ನಡೆದು ಬಹುದನು ಕಂಡೆವಾಗಲೆ
ಮಡಿದನೆಂಬುದನರಿಯೆವೈ ಬಿಲು
ದುಡುಕಿ ಕುಂತೀಭೋಜ ಹೊಕ್ಕನು ಮಿಕ್ಕನವರುಗಳ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಟ್ಟಗಳನ್ನೇ ಅಲ್ಲಾಡಿಸಿ ನುಂಗುವ ಬಾಯಿಗೆ ಹಣ್ಣು ಹಂಪಲು ಹಿಡಿಯದೆ ಇರುತ್ತದೆಯೇ? ದ್ರೋಣನೆದುರಿನಲ್ಲಿ ಬಡವಿರಾಟನನ್ನು ಯಾರು ಬಲ್ಲರು ? ಯಾರು ಗುರುತಿಸಬಲ್ಲರು ? ನಡೆಯಬಹುದಾದುದನ್ನು ಆಗಲೇ ಕಂಡೆವು. ಅವನು ಮಡಿದನು ಎಂಬುದನ್ನು ತಿಳಿಯಲೇಬೇಕಾಗಲಿಲ್ಲ. ಒಡನೆಯೇ ಬಿಲ್ಲನ್ನು ಹಿಡಿದು ಪ್ರತಿಭಟಿಸಿದ ಕುಂತೀಭೋಜನೂ ಸಹ ಮಿಕ್ಕವರ ಸ್ಥಿತಿಯನ್ನೇ ತಲುಪಿದನು.
ಮೂಲ ...{Loading}...
ಅಡಿಸಿ ಗಿರಿಗಳ ನುಂಗುವನ ಬಾಯ್
ಹಿಡಿಯದಿಹುದೇ ಹಣ್ಣು ಹಂಪಲ
ಬಡ ವಿರಾಟನನಾರು ಬಲ್ಲರು ದ್ರೋಣನಿದಿರಿನಲಿ
ನಡೆದು ಬಹುದನು ಕಂಡೆವಾಗಲೆ
ಮಡಿದನೆಂಬುದನರಿಯೆವೈ ಬಿಲು
ದುಡುಕಿ ಕುಂತೀಭೋಜ ಹೊಕ್ಕನು ಮಿಕ್ಕನವರುಗಳ ॥40॥
೦೪೧ ಅವರ ಹರಿಬವ ...{Loading}...
ಅವರ ಹರಿಬವ ಬೇಡಿ ಸೃಂಜಯ
ರವಗಡಿಸಿದರು ಕೈಕೆಯರು ನೃಪ
ನಿವಹದಗಣಿತ ಚೈದ್ಯ ಯಾದವ ಮಗಧ ಮಾಳವರು
ವಿವಿಧ ವಾದ್ಯ ನಿನಾದ ಗಜ ಹಯ
ರವ ರಥಧ್ವನಿ ಜಗದ ಜಂತ್ರವ
ತಿವಿದು ಕೆದರೆ ವಿರೋಧಿಬಲ ಕೆಣಕಿದುದು ಕಳಶಜನ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಜೊತೆ ಯುದ್ಧ ಮಾಡಲು ಅವಕಾಶ ಕೋರಿ ಸೃಂಜಯರು, ಕೈಕೆಯರು, ರಾಜಸಮೂಹದ ಅಸಂಖ್ಯ ಚೈದ್ಯ, ಯಾದವ, ಮಗಧ, ಮಾಳವರು ಪ್ರತಿಭಟಿಸಿ ನಿಂತರು. ವಿವಿಧ ವಾದ್ಯಗಳ ಧ್ವನಿ, ಆನೆ, ಕುದುರೆ, ರಥಗಳ ಧ್ವನಿ ಜಗತ್ತಿನ ಯಂತ್ರವನ್ನು ತಿವಿದು ಕೆದರಿದಂತೆ ಶತ್ರು ಸೇನೆ ದ್ರೋಣನನ್ನು ಕೆಣಕಿತು.
ಪದಾರ್ಥ (ಕ.ಗ.ಪ)
ಜಂತ್ರ-ಯಂತ್ರ,
ಮೂಲ ...{Loading}...
ಅವರ ಹರಿಬವ ಬೇಡಿ ಸೃಂಜಯ
ರವಗಡಿಸಿದರು ಕೈಕೆಯರು ನೃಪ
ನಿವಹದಗಣಿತ ಚೈದ್ಯ ಯಾದವ ಮಗಧ ಮಾಳವರು
ವಿವಿಧ ವಾದ್ಯ ನಿನಾದ ಗಜ ಹಯ
ರವ ರಥಧ್ವನಿ ಜಗದ ಜಂತ್ರವ
ತಿವಿದು ಕೆದರೆ ವಿರೋಧಿಬಲ ಕೆಣಕಿದುದು ಕಳಶಜನ ॥41॥
೦೪೨ ಕೇಳಿದೆನು ರಭಸವನು ...{Loading}...
ಕೇಳಿದೆನು ರಭಸವನು ಬಲು ಕೆಂ
ಧೂಳಿಯನು ಕಂಡೆನು ವಿರೋಧಿಗ
ಳಾಳ ಕಂಡೆನು ಕಾಣೆನಿತ್ತಲು ಕಳಶಸಂಭವನ
ಕೇಳಿದೀ ನಿಮಿಷಾರ್ಧದಲಿ ಕೆಂ
ಧೂಳ ಕಾಣೆನು ಕಾಣೆನರಿಭೂ
ಪಾಲರನು ಕೇಳರಸ ಕಂಡೆನು ಚಾಪಧೂರ್ಜಟಿಯ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೆಚ್ಚಾದ ರಭಸದ ಧ್ವನಿಯನ್ನು ಕೇಳಿದೆನು. ಕೆಂಧೂಳಿಯನ್ನು ಕಂಡೆನು. ಶತ್ರು ಸೈನ್ಯದ ವೀರರನ್ನು ಕಂಡೆನು. ಆದರೆ ದ್ರೋಣನನ್ನು ಮಾತ್ರ ಕಾಣಲಾಗುತ್ತಿಲ್ಲ. ಕೇಳಿದ ನಿಮಿಷಾರ್ಧದಲ್ಲಿ ಕೆಂಧೂಳನ್ನು ಕಾಣುತ್ತಿಲ್ಲ. ಶತ್ರುರಾಜರನ್ನೂ ಕಾಣುತ್ತಿಲ್ಲ. ಅರಸನೇ ಕೇಳು ದ್ರೋಣನನ್ನು ಮಾತ್ರ ಕಂಡೆನು.”
ಪದಾರ್ಥ (ಕ.ಗ.ಪ)
ಚಾಪಧೂರ್ಜಟಿ-ಶಸ್ತ್ರ ವಿದ್ಯೆಯಲ್ಲಿ ಶಿವನಿಗೆ ಸಮಾನನಾದವನು, ದ್ರೋಣ,
ಮೂಲ ...{Loading}...
ಕೇಳಿದೆನು ರಭಸವನು ಬಲು ಕೆಂ
ಧೂಳಿಯನು ಕಂಡೆನು ವಿರೋಧಿಗ
ಳಾಳ ಕಂಡೆನು ಕಾಣೆನಿತ್ತಲು ಕಳಶಸಂಭವನ
ಕೇಳಿದೀ ನಿಮಿಷಾರ್ಧದಲಿ ಕೆಂ
ಧೂಳ ಕಾಣೆನು ಕಾಣೆನರಿಭೂ
ಪಾಲರನು ಕೇಳರಸ ಕಂಡೆನು ಚಾಪಧೂರ್ಜಟಿಯ ॥42॥
೦೪೩ ಅರಸುಮಕ್ಕಳು ಮತ್ಸ್ಯ ...{Loading}...
ಅರಸುಮಕ್ಕಳು ಮತ್ಸ್ಯ ಪಾಂಚಾ
ಲರಲಿ ಕೈಕೆಯ ಚೈದ್ಯ ಯಾದವ
ತುರುಕ ಬರ್ಬರ ಗೌಳ ಮಾಗಧ ಪಾರಿಯಾತ್ರರಲಿ
ಉರುಳಿತೊಂದೇ ಲಕ್ಷವುಳಿದೀ
ಕರಿ ವರೂಥ ಪದಾತಿ ತುರಗವ
ನರಸ ಲೆಕ್ಕಿಸಲಾರು ಬಲ್ಲರು ವೈರಿಸೇನೆಯಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸುಮಕ್ಕಳು ಮತ್ಸ್ಯ, ಪಾಂಚಾಲರಲಿ, ಕೈಕೆಯ, ಚೈದ್ಯ, ಯಾದವ, ತುರುಕ, ಬರ್ಬರ, ಗೌಳ, ಮಾಗಧ, ಪಾರಿಯಾತ್ರರಲ್ಲಿ ಎಲ್ಲರೂ ನಾಶವಾಗಿ, ಒಂದೇ ಲಕ್ಷದಷ್ಟು ವೀರರು ಮಾತ್ರ ಉಳಿದರು. ವೈರಿಸೇನೆಯಲ್ಲಿ ಈ ಆನೆ, ರಥ, ಪದಾತಿ, ಕುದುರೆಗಳ ನಾಶವನ್ನು ಲೆಕ್ಕಿಸಲು ಅರಸನೇ ಯಾರು ಬಲ್ಲರು ?” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಅರಸುಮಕ್ಕಳು ಮತ್ಸ್ಯ ಪಾಂಚಾ
ಲರಲಿ ಕೈಕೆಯ ಚೈದ್ಯ ಯಾದವ
ತುರುಕ ಬರ್ಬರ ಗೌಳ ಮಾಗಧ ಪಾರಿಯಾತ್ರರಲಿ
ಉರುಳಿತೊಂದೇ ಲಕ್ಷವುಳಿದೀ
ಕರಿ ವರೂಥ ಪದಾತಿ ತುರಗವ
ನರಸ ಲೆಕ್ಕಿಸಲಾರು ಬಲ್ಲರು ವೈರಿಸೇನೆಯಲಿ ॥43॥
೦೪೪ ಮುರಿದುದಾ ಬಲವಿಳೆಯೊಡೆಯೆ ...{Loading}...
ಮುರಿದುದಾ ಬಲವಿಳೆಯೊಡೆಯೆ ಬೊ
ಬ್ಬಿರಿದುದೀ ಬಲವಪಜಯದ ಮಳೆ
ಗರೆದುದವರಿಗೆ ಹರಿದುದಿವರಿಗೆ ಸರ್ಪರಜ್ಜುಭಯ
ತೆರಳಿತಾಚೆಯ ಥಟ್ಟು ಮುಂದಣಿ
ಗುರವಣಿಸಿತೀಯೊಡ್ಡು ಕೌರವ
ರರಸನುತ್ಸಾಹವನು ಬಣ್ಣಿಸಲರಿಯೆ ನಾನೆಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
44.” ಆ ಸೈನ್ಯ (ಪಾಂಡವರ) ನಾಶವಾಯಿತು. ಈ ಸೈನ್ಯ (ಕೌರವ ಸೇನೆ) ಭೂಮಿ ಒಡೆಯುವಂತೆ ಆರ್ಭಟಿಸಿತು. ಅವರಿಗೆ (ಪಾಂಡವರಿಗೆ) ಅಪಜಯದ ಮಳೆಗರೆಯಿತು. ಇವರಿಗೆ ಸರ್ಪ ಹಗ್ಗಗಳ ಭಯ ನಾಶವಾಯಿತು ಆ ಕಡೆಯ ಸೈನ್ಯ ಹಿಂತಿರುಗಿತು. ಈ ಸೈನ್ಯ ಗೆಲುವಿನ ಉತ್ಸಾಹದಲ್ಲಿ ಸಂಭ್ರಮಿಸಿ ಮುಂದುವರಿಯಿತು. ಕೌರವರ ಅರಸ ದುರ್ಯೋಧನನ ಉತ್ಸಾಹವನ್ನು ಬಣ್ಣಿಸಲು ಸಾಧ್ಯವಿಲ್ಲ” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಮುರಿದುದಾ ಬಲವಿಳೆಯೊಡೆಯೆ ಬೊ
ಬ್ಬಿರಿದುದೀ ಬಲವಪಜಯದ ಮಳೆ
ಗರೆದುದವರಿಗೆ ಹರಿದುದಿವರಿಗೆ ಸರ್ಪರಜ್ಜುಭಯ
ತೆರಳಿತಾಚೆಯ ಥಟ್ಟು ಮುಂದಣಿ
ಗುರವಣಿಸಿತೀಯೊಡ್ಡು ಕೌರವ
ರರಸನುತ್ಸಾಹವನು ಬಣ್ಣಿಸಲರಿಯೆ ನಾನೆಂದ ॥44॥
೦೪೫ ಭೂರಿ ವಿರಹಾಗ್ನಿಯಲಿ ...{Loading}...
ಭೂರಿ ವಿರಹಾಗ್ನಿಯಲಿ ಲೋಚನ
ವಾರಿಯಾಜ್ಯಾಹುತಿಗಳಲಿ ರಿಪು
ಮಾರಣಾಧ್ವರವೆಸೆದುದಿರುಳು ರಥಾಂಗ ದೀಕ್ಷಿತನ
ತಾರಕೆಯ ಮುರಿವುಗಳು ಕುಣಿವ ಸ
ಮೀರಣನ ಶಶಿಯೆಡೆಗೆ ರಜನೀ
ನಾರಿ ತೋಳೆಡೆಗೊಟ್ಟಳಂಬುಜಬಂಧು ಹೊರವಂಟ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಕ್ರವಾಕ ಪಕ್ಷಿಯು ತನ್ನ ಅಪಾರವಾದ ವಿರಹವೆಂಬ ಅಗ್ನಿಯಲ್ಲಿ ಕಣ್ಣೀರೆಂಬ ತುಪ್ಪದ ಆಹುತಿಯನ್ನು (ಆಜ್ಯಾಹುತಿ) ಕೊಟ್ಟು ನಡೆಸಿದ, ರಾತ್ರಿಯೆಂಬ ಶತ್ರುವನ್ನು ಸಂಹರಿಸಲು ಮಾಡಿದ ಯಜ್ಞ ಸೊಗಸಾಗಿ ನಡೆಯಿತು. (ಶತ್ರು ಧ್ವಂಸವೆಂಬ ಯಾಗವು ಶೋಭಿಸಿತು). ಸಮೀರಣ ಕುಣಿ ಕುಣಿದು ಬಂದದ್ದರಿಂದ ತಾರೆಗಳು ತಿರುಗಿದವು. ಶಶಿ ಅಡಗಿದನು. ರಜನೀನಾರಿ ತೋಳಿಗೆ ತಲೆಯಾನಿಸಿದಳು. ಸೂರ್ಯ ಹೊರಟನು. ಸೂರ್ಯೋದಯವಾಯಿತು.
ಮೂಲ ...{Loading}...
ಭೂರಿ ವಿರಹಾಗ್ನಿಯಲಿ ಲೋಚನ
ವಾರಿಯಾಜ್ಯಾಹುತಿಗಳಲಿ ರಿಪು
ಮಾರಣಾಧ್ವರವೆಸೆದುದಿರುಳು ರಥಾಂಗ ದೀಕ್ಷಿತನ
ತಾರಕೆಯ ಮುರಿವುಗಳು ಕುಣಿವ ಸ
ಮೀರಣನ ಶಶಿಯೆಡೆಗೆ ರಜನೀ
ನಾರಿ ತೋಳೆಡೆಗೊಟ್ಟಳಂಬುಜಬಂಧು ಹೊರವಂಟ ॥45॥