೦೦೦ ಸೂ ಚಣ್ಡಬಲ ...{Loading}...
ಸೂ. ಚಂಡಬಲ ಕುರುಪತಿಗೆ ಮಲೆವರ
ಗಂಡನಿರುಳಿನ ಕಾಳೆಗದೊಳು
ದ್ದಂಡಭಟ ಕಲಿಕರ್ಣ ಕೊಂದನು ಭೀಮನಂದನನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಪರಾಕ್ರಮಿಯಾದ, ಕುರುಪತಿಯನ್ನು ಪ್ರತಿಭಟಿಸುವ ಶೂರನಾದ ಭೀಮನಂದನ ಘಟೋತ್ಕಚನನ್ನು ರಾತ್ರಿಯ ಯುದ್ಧದಲ್ಲಿ ಉದ್ದಾಮ ಭಟ ಶೂರ ಕರ್ಣನು ಕೊಂದನು.
ಮೂಲ ...{Loading}...
ಸೂ. ಚಂಡಬಲ ಕುರುಪತಿಗೆ ಮಲೆವರ
ಗಂಡನಿರುಳಿನ ಕಾಳೆಗದೊಳು
ದ್ದಂಡಭಟ ಕಲಿಕರ್ಣ ಕೊಂದನು ಭೀಮನಂದನನ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ದೊರೆ
ಯಾಳನರಸುತ ಹೊಕ್ಕು ಸೂಠಿಯೊ
ಳಾಳುಕುದುರೆಯ ಥಟ್ಟನಿಬ್ಬಗಿಮಾಡಿ ದಳವುಳಿಸಿ
ಕೋಲ ತೊಡಚೈ ಕರ್ಣ ಕುರುಭೂ
ಪಾಲ ಕೈದುವ ಹಿಡಿ ಕೃಪಾದಿಗ
ಳೇಳಿ ಸಮ್ಮುಖವಾಗೆನುತ ಕೈಮಾಡಿ ಬೊಬ್ಬಿರಿದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನಾದ ಧೃತರಾಷ್ಟ್ರನೇ ಕೇಳು. “ಘಟೋತ್ಕಚನು ಸರಿಸಮಾನರಾದ ಭಟರನ್ನು ಹುಡುಕುತ್ತಾ ಕುದುರೆ ಸೈನ್ಯವು ಎರಡು ಭಾಗವಾಗುವಂತೆ ರಭಸದಿಂದ ನುಗ್ಗಿ, ‘ಬಾಣ ಬಿಡು ಕರ್ಣ, ಕುರುಭೂಪಾಲನೇ ಆಯುಧವನ್ನು ಹಿಡಿ, ಕೃಪಾದಿಗಳೇ ಏಳಿ, ಎದುರಾಗಿ’ ಎನ್ನುತ್ತಾ ಸನ್ನೆ ಮಾಡಿ ಕರೆದು ಬೊಬ್ಬೆ ಹಾಕಿದನು.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ದಳವುಳಿಸಿ -ರಭಸದಿಂದ ನುಗ್ಗಿ
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ದೊರೆ
ಯಾಳನರಸುತ ಹೊಕ್ಕು ಸೂಠಿಯೊ
ಳಾಳುಕುದುರೆಯ ಥಟ್ಟನಿಬ್ಬಗಿಮಾಡಿ ದಳವುಳಿಸಿ
ಕೋಲ ತೊಡಚೈ ಕರ್ಣ ಕುರುಭೂ
ಪಾಲ ಕೈದುವ ಹಿಡಿ ಕೃಪಾದಿಗ
ಳೇಳಿ ಸಮ್ಮುಖವಾಗೆನುತ ಕೈಮಾಡಿ ಬೊಬ್ಬಿರಿದ ॥1॥
೦೦೨ ಚೆಲ್ಲಿತರಿಬಲಜಲಧಿ ಭಟರ ...{Loading}...
ಚೆಲ್ಲಿತರಿಬಲಜಲಧಿ ಭಟರ
ಲ್ಲಲ್ಲಿ ಮುಕ್ಕುರುಕಿದರು ಸಬಳದ
ಸೆಲ್ಲೆಹದ ತೋಮರದ ಚಕ್ರದ ಸರಿಯ ಸೈಗರೆದು
ಘಲ್ಲಿಸಿದವಾನೆಗಳು ತೇರಿನ
ಬಿಲ್ಲವರು ತುಡುಕಿದರು ಕಂಬುಗೆ
ಯಲ್ಲಿ ಖುರ ಕುಣಿದಾಡೆ ಹೊಕ್ಕರು ರಾಯರಾವುತರು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಸೇನಾ ಸಮುದ್ರ ವ್ಯಾಪಿಸಿತು. ಭಟರು ಅಲ್ಲಲ್ಲಿ ಒಟ್ಟುಗೂಡಿದರು. ಒಂದೇಸಮನೆ ಕತ್ತಿ, ಶಲ್ಯ, ಕಬ್ಬಿಣದ ಗದೆ, ಚಕ್ರದ ರಾಶಿಗಳ ಮಳೆಯನ್ನು ಸುರಿಸಿದರು. ಆನೆಗಳು ಮೇಲೆ ಬಿದ್ದವು. ರಥದಲ್ಲಿ ಕುಳಿತ ಬಿಲ್ಲುಗಾರರು ಆತುರದಿಂದ ಆಯುಧಗಳು ತುಂಬಿರುವ ಜಾಗಕ್ಕೆ ಕೈಹಾಕಿದರು. ಗೊರಸಿನ ಶಬ್ದವಾಗುವಂತೆ ಕುದುರೆಗಳು ಕುಣಿದಾಡಲು ರಾಯನ ಕುದುರೆ ಸವಾರರು ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ಸೈಗರೆ-ಒಂದೇ ಸಮನೆ ಸುರಿವ ,
ಕಂಬುಗೆ- ಆಯುಧಗಳನ್ನು ತುಂಬುವ ರಥದ ಒಂದು ಭಾಗ. ಖುರ-ಕುದುರೆ, ಗೊರಸು
ಮೂಲ ...{Loading}...
ಚೆಲ್ಲಿತರಿಬಲಜಲಧಿ ಭಟರ
ಲ್ಲಲ್ಲಿ ಮುಕ್ಕುರುಕಿದರು ಸಬಳದ
ಸೆಲ್ಲೆಹದ ತೋಮರದ ಚಕ್ರದ ಸರಿಯ ಸೈಗರೆದು
ಘಲ್ಲಿಸಿದವಾನೆಗಳು ತೇರಿನ
ಬಿಲ್ಲವರು ತುಡುಕಿದರು ಕಂಬುಗೆ
ಯಲ್ಲಿ ಖುರ ಕುಣಿದಾಡೆ ಹೊಕ್ಕರು ರಾಯರಾವುತರು ॥2॥
೦೦೩ ಎಡಬಲದಿ ಹಿನ್ದಿದಿರಿನಲಿ ...{Loading}...
ಎಡಬಲದಿ ಹಿಂದಿದಿರಿನಲಿ ಕೆಲ
ಕಡೆಯ ದಿಕ್ಕಿನೊಳೌಕಿದರು ಬಲು
ಗಡಲ ಕಡೆಹದ ಗಿರಿಯನಬುಧಿಯ ತೆರೆಗಳೊದೆವಂತೆ
ಕೊಡಹಿದರೆ ಕಟ್ಟಿರುಹೆಗಳು ಬೆಂ
ಬಿಡದೆ ಭುಜಗನನಳಲಿಸುವವೋ
ಲಡಸಿ ತಲೆಯೊತ್ತಿದರು ಬೀಳುವ ಹೆಣನನೊಡಮೆಟ್ಟಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಡಬಲಗಳಲ್ಲಿ, ಹಿಂದೆ ಹಾಗೂ ಮುಂದೆ, ಅಕ್ಕಪಕ್ಕದ ದಿಕ್ಕುಗಳಲ್ಲಿ ಒತ್ತಿ ಬಂದರು. ದೊಡ್ಡ ಸಮುದ್ರದ ಮಥನ ಮಾಡಿದ ಬೆಟ್ಟವನ್ನು ಸಮುದ್ರದ ತೆರೆಗಳು ಒದೆಯುವಂತೆ ಒತ್ತಿ ಬಂದರು. ಕೊಡಹಿದರೆ ಕಟ್ಟಿರುವೆಗಳು ಬೆನ್ನು ಬಿಡದೆ ಸರ್ಪವನ್ನು ಗೋಳಾಡಿಸುವಂತೆ ಮೇಲೆ ಬಿದ್ದು, ಹೆಣವನ್ನು ಮೆಟ್ಟಿ ತುಳಿದು ಯುದ್ಧ ಮಾಡಿದರು.
ಪದಾರ್ಥ (ಕ.ಗ.ಪ)
ಕಡೆಹ-ಮಥನ, ಕಡೆಯುವುದು,
ತಲೆಯೊತ್ತು-ಯುದ್ಧಮಾಡು
ಮೂಲ ...{Loading}...
ಎಡಬಲದಿ ಹಿಂದಿದಿರಿನಲಿ ಕೆಲ
ಕಡೆಯ ದಿಕ್ಕಿನೊಳೌಕಿದರು ಬಲು
ಗಡಲ ಕಡೆಹದ ಗಿರಿಯನಬುಧಿಯ ತೆರೆಗಳೊದೆವಂತೆ
ಕೊಡಹಿದರೆ ಕಟ್ಟಿರುಹೆಗಳು ಬೆಂ
ಬಿಡದೆ ಭುಜಗನನಳಲಿಸುವವೋ
ಲಡಸಿ ತಲೆಯೊತ್ತಿದರು ಬೀಳುವ ಹೆಣನನೊಡಮೆಟ್ಟಿ ॥3॥
೦೦೪ ಹೊಕ್ಕ ಸುಭಟರು ...{Loading}...
ಹೊಕ್ಕ ಸುಭಟರು ಮರಳದಿರಿ ಖಳ
ಸಿಕ್ಕಿದನು ಸಿಕ್ಕಿದನು ಚಲಿಸುವ
ಚುಕ್ಕಿಗರ ಹೊಯ್ ಬೀಳಗುತ್ತೆನುತರಸನುಬ್ಬರಿಸೆ
ಹೊಕ್ಕು ತಿವಿದರು ನೀಡಿ ಹರಿಗೆಯ
ನಿಕ್ಕಿ ನಿಂದರು ತಮತಮಗೆ ಮೇ
ಲಿಕ್ಕಿದರು ತೆರೆ ಮುರಿಯೆ ಬಳಿದೆರೆ ಮಸಗಿ ಕವಿವಂತೆ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನ್ನುಗ್ಗಿದ ಸುಭಟರು ಹಿಂದಿರುಗದಿರಿ. ನೀಚ ಸಿಕ್ಕಿದನು. ಓಡಾಡುವ ಹೇಡಿಗಳನ್ನು ಬೀಳುವಂತೆ ಹೊಡೆಯಿರಿ ಎನ್ನುತ್ತಾ ಅರಸನು ಅಬ್ಬರಿಸಲಾಗಿ ಮುನ್ನುಗ್ಗಿ ತಿವಿದರು. ಢಾಲನ್ನು ಬೀಸಿ ನಿಂತರು. ಸಮುದ್ರದ ಒಂದು ತೆರೆ ಹಿಂದೆ ಸರಿದರೆ ಮತ್ತೊಂದು ತೆರೆ ಆವರಿಸುವಂತೆ ತಮ್ಮತಮ್ಮಲ್ಲೇ ಮುನ್ನುಗ್ಗಿ ಹೋರಾಡಿದರು.
ಪದಾರ್ಥ (ಕ.ಗ.ಪ)
ಚುಕ್ಕಿಗರು-ಚಂಚಲರು, ತೀಡು-ಬೀಸು, ಹರಿಗೆ-ಢಾಲು
ಮೂಲ ...{Loading}...
ಹೊಕ್ಕ ಸುಭಟರು ಮರಳದಿರಿ ಖಳ
ಸಿಕ್ಕಿದನು ಸಿಕ್ಕಿದನು ಚಲಿಸುವ
ಚುಕ್ಕಿಗರ ಹೊಯ್ ಬೀಳಗುತ್ತೆನುತರಸನುಬ್ಬರಿಸೆ
ಹೊಕ್ಕು ತಿವಿದರು ನೀಡಿ ಹರಿಗೆಯ
ನಿಕ್ಕಿ ನಿಂದರು ತಮತಮಗೆ ಮೇ
ಲಿಕ್ಕಿದರು ತೆರೆ ಮುರಿಯೆ ಬಳಿದೆರೆ ಮಸಗಿ ಕವಿವಂತೆ ॥4॥
೦೦೫ ಅಗಡು ದಾನವನಿವನು ...{Loading}...
ಅಗಡು ದಾನವನಿವನು ಕಡ್ಡಿಗೆ
ಬಗೆವನೇ ಸಾಗರವನರವ
ಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು
ಹೊಗೆದುದೈ ಹೆಚ್ಚಾಳುಗಳ ನಗೆ
ಮೊಗವು ಮೋಡಾಮೋಡಿಯಲಿ ಕೈ
ಮಗುಚಿ ಕಳೆದನು ನಿಮಿಷದಲಿ ಹೇರಾಳ ರಾಶಿಗಳ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಾಕ್ರಮಿ ಹಾಗೂ ಒರಟ ರಾಕ್ಷಸನಿವನು. ವೈರಿಗಳನ್ನು ಕಡ್ಡಿಗಳೆಂದೂ ಸಹ ಬಗೆವವನಲ್ಲ. (ಇವನಿಗೆ ಶತ್ರುಗಳು ತೃಣಕ್ಕಿಂತಲೂ ಸುಲಭರು) ಸಾಗರವನ್ನು ಅರವಟ್ಟಿಗೆಯಾಗಿಟ್ಟರೆ ಬಡಬಾಗ್ನಿಯೇ ಅಲ್ಲವೇ ನೀರು ಕುಡಿಯುವುದು ? ದ್ವೇಷ, ಸಿಟ್ಟು, ಮದದಿಂದ ಕೂಡಿದ ಶೂರರ ನಗೆಮೊಗವು ಬಾಡುವಂತೆ ಮಾಡಿದನು. ಮಾಯಾ ಮಂತ್ರದ ಕುಶಲತೆಯಿಂದ ನಿಮಿಷದಲ್ಲಿ ಭಾರಿ ಸಂಖ್ಯೆಯ ಶೂರರನ್ನು ಎತ್ತಿ ಬಿಸಾಡಿ ಸಂಹರಿಸಿದನು.
ಮೂಲ ...{Loading}...
ಅಗಡು ದಾನವನಿವನು ಕಡ್ಡಿಗೆ
ಬಗೆವನೇ ಸಾಗರವನರವ
ಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು
ಹೊಗೆದುದೈ ಹೆಚ್ಚಾಳುಗಳ ನಗೆ
ಮೊಗವು ಮೋಡಾಮೋಡಿಯಲಿ ಕೈ
ಮಗುಚಿ ಕಳೆದನು ನಿಮಿಷದಲಿ ಹೇರಾಳ ರಾಶಿಗಳ ॥5॥
೦೦೬ ಕೆಲರ ನುಙ್ಗಿದನೊದೆದು ...{Loading}...
ಕೆಲರ ನುಂಗಿದನೊದೆದು ಕೊಂದನು
ಕೆಲಬರನು ಹೊರಕೈಯ್ಯ ಹೊಯಿಲಲಿ
ಕೆಲಬರನು ಧನುವಿನಲಿ ಗದೆಯಲಿ ಹೊಯ್ದು ಕೆಲಕೆಲರ
ಕಲಕಿದನು ಬಲಜಲಧಿಯನು ಮೇ
ಲುಲಿದು ಕವಿದುದು ಮತ್ತೆ ಹೆಣನನು
ತುಳಿದು ಮುಗ್ಗಿತು ಮೇಲೆ ಬಿದ್ದುದು ಮುಸುಕಿತರಿಭಟನ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರನ್ನು ನುಂಗಿದನು. ಕೆಲವರನ್ನು ಒದ್ದುಕೊಂದನು. ಹೊರಕೈಯ ಹೊಡೆತದಲ್ಲಿ, ಕೆಲವರನ್ನು ಧನುವಿನಲ್ಲಿ ಗದೆಯಲ್ಲಿ ಹೊಡೆದು ಅಪ್ಪಳಿಸಿ, ಗಟ್ಟಿಯಾಗಿ ಕಿರಿಚಿ ಸೇನಾಸಾಗರವನ್ನು ಕಲಕಿದನು. ಕುರು ಸೈನ್ಯದ ಯೋಧರು ಹೆಣಗಳನ್ನು ತುಳಿದು ಅಪ್ಪಳಿಸಿ, ಪುನಃ ಘಟೋತ್ಕಚನನ್ನು ಮುತ್ತಿದರು.
ಮೂಲ ...{Loading}...
ಕೆಲರ ನುಂಗಿದನೊದೆದು ಕೊಂದನು
ಕೆಲಬರನು ಹೊರಕೈಯ್ಯ ಹೊಯಿಲಲಿ
ಕೆಲಬರನು ಧನುವಿನಲಿ ಗದೆಯಲಿ ಹೊಯ್ದು ಕೆಲಕೆಲರ
ಕಲಕಿದನು ಬಲಜಲಧಿಯನು ಮೇ
ಲುಲಿದು ಕವಿದುದು ಮತ್ತೆ ಹೆಣನನು
ತುಳಿದು ಮುಗ್ಗಿತು ಮೇಲೆ ಬಿದ್ದುದು ಮುಸುಕಿತರಿಭಟನ ॥6॥
೦೦೭ ಪೂತುರೇ ಕುರುಸೈನಿಕವಸಂ ...{Loading}...
ಪೂತುರೇ ಕುರುಸೈನಿಕವಸಂ
ಖ್ಯಾತವೆಂದಿಗೆ ಸವೆವುದೋ ಕೈ
ಸೋತವೇ ಹರ ಕೊಲುವೆನೆನುತಮರಾರಿ ಚಿಂತಿಸಿದ
ಈತಗಳಿಗಿದು ಮದ್ದೆನುತ ಮಾ
ಯಾತಿಶಯ ಯುದ್ಧದಲಿ ಬಲಸಂ
ಘಾತವನು ಬೆದರಿಸಿದನದನೇವಣ್ಣಿಸುವೆನೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಲೆ-ಕುರುಸೇನೆ ಅಸಂಖ್ಯವಾಗಿದೆ ಎಂದಿಗೆ ನಾಶವಾಗುವುದೋ ? ನನ್ನ ಕೈಸೋಲುತ್ತಿವೆಯೇ? ಇವರನ್ನು ಹೇಗೆ ಸಂಹರಿಸುವೆನೋ” ಎಂದು ರಾಕ್ಷಸ ಘಟೋತ್ಕಚ ಚಿಂತಿಸಿದ ಇವರುಗಳಿಗೆ ಇದೇ ಔಷಧಿ ಎನ್ನುತ್ತಾ ಅತಿಶಯವಾದ ಮಾಯಾಯುದ್ಧದಲ್ಲಿ ಸೇನಾ ಸಮೂಹವನ್ನು ಬೆದರಿಸಿದನು. ಅದನ್ನು ಏನೆಂದು ವರ್ಣಿಸಲಿ ? ಎಂದು ಸಂಜಯನು ಹೇಳಿದನು.
ಮೂಲ ...{Loading}...
ಪೂತುರೇ ಕುರುಸೈನಿಕವಸಂ
ಖ್ಯಾತವೆಂದಿಗೆ ಸವೆವುದೋ ಕೈ
ಸೋತವೇ ಹರ ಕೊಲುವೆನೆನುತಮರಾರಿ ಚಿಂತಿಸಿದ
ಈತಗಳಿಗಿದು ಮದ್ದೆನುತ ಮಾ
ಯಾತಿಶಯ ಯುದ್ಧದಲಿ ಬಲಸಂ
ಘಾತವನು ಬೆದರಿಸಿದನದನೇವಣ್ಣಿಸುವೆನೆಂದ ॥7॥
೦೦೮ ಮಾಯದಲಿ ಹುಲಿಯಾಗಿ ...{Loading}...
ಮಾಯದಲಿ ಹುಲಿಯಾಗಿ ಗರ್ಜಿಸಿ
ಹಾಯಿದನು ಕಲಿಸಿಂಹವಾಗಿ ಗ
ದಾಯುಧದಲಪ್ಪಳಿಸಿದನು ಭೈರವನ ರೂಪಾಗಿ
ಬಾಯಲಡಸಿದನಹಿತರನು ದಂ
ಡಾಯುಧದ ನಿಲವಿನಲಿ ಸುಭಟರ
ದಾಯಗೆಡಿಸಿದನೊಂದುನಿಮಿಷದೊಳೊರಸಿದನು ಬಲವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾಯದಲ್ಲಿ ಹುಲಿಯಾಗಿ ಗರ್ಜಿಸುತ್ತಾ ಮೇಲೆ ಬಿದ್ದನು. ಕಲಿಸಿಂಹವಾಗಿ ಗದೆಯಲ್ಲಿ ಅಪ್ಪಳಿಸಿದನು. ಭೈರವನ ರೂಪ ಧರಿಸಿ ಕೆಲ ಶತ್ರುಗಳನ್ನು ಬಾಯಲ್ಲಿ ನುಂಗಿದನು. ದಂಡಾಯುಧದ ಪ್ರಯೋಗದಿಂದ ಸುಭಟರನ್ನು ದಾರಿಗೆಡಿಸಿದನು. ಒಂದೇ ನಿಮಿಷದಲ್ಲಿ ಸೈನ್ಯವನ್ನು ನಾಶಗೊಳಿಸಿದನು.
ಮೂಲ ...{Loading}...
ಮಾಯದಲಿ ಹುಲಿಯಾಗಿ ಗರ್ಜಿಸಿ
ಹಾಯಿದನು ಕಲಿಸಿಂಹವಾಗಿ ಗ
ದಾಯುಧದಲಪ್ಪಳಿಸಿದನು ಭೈರವನ ರೂಪಾಗಿ
ಬಾಯಲಡಸಿದನಹಿತರನು ದಂ
ಡಾಯುಧದ ನಿಲವಿನಲಿ ಸುಭಟರ
ದಾಯಗೆಡಿಸಿದನೊಂದುನಿಮಿಷದೊಳೊರಸಿದನು ಬಲವ ॥8॥
೦೦೯ ಬೀಳಹೊಯ್ದನು ಬಿರುದರನು ...{Loading}...
ಬೀಳಹೊಯ್ದನು ಬಿರುದರನು ಬಿರು
ಗಾಳಿಯಾಗಿ ವರೂಥಚಯವನು
ಕಾಳುಕಿಚ್ಚಾಗುರುಹಿದನು ಫಣಿಯಾಗಿ ತುಡುಕಿದನು
ಮೇಲುಗವಿದನು ಜಲಧಿಯಾಗಿ ನೃ
ಪಾಲನಿಕರದೊಳುರುಳಿದನು ಗಿರಿ
ಜಾಳವಾಗಿ ಘಟೋತ್ಕಚನು ಘಲ್ಲಿಸಿದನತಿರಥರ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿರುಗಾಳಿಯಾಗಿ ಬೀಸಿ ವೀರರನ್ನು ಬೀಳಿಸಿದನು. ರಥಸಮೂಹವನ್ನು ಕಾಳ್ಗಿಚ್ಚಾಗಿ ಸುಟ್ಟು ಭಸ್ಮ ಮಾಡಿದನು. ಸರ್ಪವಾಗಿ ರಭಸದಿಂದ ಮೇಲೆ ಬಿದ್ದನು. ಸಾಗರವಾಗಿ ಮೇಲೆ ಕವಿದನು. ಬೆಟ್ಟದಂತೆ ಮೇಲೆ ಬಿದ್ದದು ರಾಜರ ಸಮೂಹದಲ್ಲಿ ಉರುಳಿದನು. ಹೀಗೆ ಘಟೋತ್ಕಚನು ಅತಿರಥರನ್ನು ಪೀಡಿಸಿದನು.
ಮೂಲ ...{Loading}...
ಬೀಳಹೊಯ್ದನು ಬಿರುದರನು ಬಿರು
ಗಾಳಿಯಾಗಿ ವರೂಥಚಯವನು
ಕಾಳುಕಿಚ್ಚಾಗುರುಹಿದನು ಫಣಿಯಾಗಿ ತುಡುಕಿದನು
ಮೇಲುಗವಿದನು ಜಲಧಿಯಾಗಿ ನೃ
ಪಾಲನಿಕರದೊಳುರುಳಿದನು ಗಿರಿ
ಜಾಳವಾಗಿ ಘಟೋತ್ಕಚನು ಘಲ್ಲಿಸಿದನತಿರಥರ ॥9॥
೦೧೦ ಎರಗಿದನು ಸಿಡಿಲಾಗಿ ...{Loading}...
ಎರಗಿದನು ಸಿಡಿಲಾಗಿ ಕಂಗಳೊ
ಳಿರುಕಿದನು ಮಿಂಚಾಗಿ ಮಳೆಯನು
ಕರೆದು ನಾದಿದನಾತಪತ್ರ ತನುತ್ರ ಸೀಸಕವ
ತುರುಕಿದನು ಹೊಗೆಯಾಗಿ ಮಿಗೆ ಬೊ
ಬ್ಬಿರಿದನೊಂದೆಡೆಯಲ್ಲಿ ಸುಭಟರ
ನೊರಲಿಸಿದನೊಂದೆಡೆಯಲೇನೆಂಬೆನು ಮಹಾರಣವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಡಿಲಾಗಿ ಎರಗಿದನು ಮಿಂಚಾಗಿ ಕಣ್ಣುಗಳಲ್ಲಿ ಶತ್ರುಗಳನ್ನು ಹಿಸುಕಿ ಹಿಡಿದನು. ಮಳೆಯನ್ನು ರಭಸವಾಗಿ ಸುರಿಸಿ ಕೊಡೆ, ಕವಚ, ಶಿರಸ್ತ್ರಾಣಗಳನ್ನು ನಾದಿದನು. ಹೊಗೆಯಾಗಿ ತುಂಬಿಕೊಂಡನು. ಒಂದು ಕಡೆ, ವಿಶೇಷವಾಗಿ ಗರ್ಜಿಸಿ, ಇನ್ನೊಂದೆಡೆಯಲ್ಲಿ ಸುಭಟರನ್ನು ಒರಲಿಸಿದನು. ಆ ಮಹಾಯುದ್ಧವನ್ನು ಏನೆಂದು ಹೇಳಲಿ ?
ಪದಾರ್ಥ (ಕ.ಗ.ಪ)
ತನುತ್ರ-ಕವಚ,
ಮೂಲ ...{Loading}...
ಎರಗಿದನು ಸಿಡಿಲಾಗಿ ಕಂಗಳೊ
ಳಿರುಕಿದನು ಮಿಂಚಾಗಿ ಮಳೆಯನು
ಕರೆದು ನಾದಿದನಾತಪತ್ರ ತನುತ್ರ ಸೀಸಕವ
ತುರುಕಿದನು ಹೊಗೆಯಾಗಿ ಮಿಗೆ ಬೊ
ಬ್ಬಿರಿದನೊಂದೆಡೆಯಲ್ಲಿ ಸುಭಟರ
ನೊರಲಿಸಿದನೊಂದೆಡೆಯಲೇನೆಂಬೆನು ಮಹಾರಣವ ॥10॥
೦೧೧ ಸುರಿದ ಕರುಳ್ಗಳ ...{Loading}...
ಸುರಿದ ಕರುಳ್ಗಳ ಸಿಡಿದ ಹಲುಗಳ
ಜರಿದ ತಲೆಗಳ ಹಾಯ್ದ ಮೂಳೆಯ
ಹರಿದ ನರವಿನ ಬಿಗಿದ ಹುಬ್ಬಿನ ಬಿಟ್ಟ ಕಣ್ಣುಗಳ
ಮುರಿದ ಗೋಣಿನ ಬಸಿವ ತೊರಳೆಯ
ಹರಿವ ರಕುತದ ತಳಿತ ಖಂಡದ
ಬಿರಿದ ಬಸುರಿನ ರೌರವದ ರಣಭೂಮಿ ರಂಜಿಸಿತು ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೆಲ್ಲಾಪಿಲ್ಲಿಯಾಗಿ ಸುರಿದ ಕರುಳುಗಳ, ಸಿಡಿದ ಹಲ್ಲುಗಳ, ಜಾರಿದ ತಲೆಗಳ, ಬಿದ್ದ ಮೂಳೆಯ, ಕತ್ತರಿಸಿದ ನರಗಳ, ಬಿಗಿದ ಹುಬ್ಬಿನ, ಬಿಟ್ಟ ಕಣ್ಣುಗಳ ಮುರಿದಿರುವ ಕುತ್ತಿUಯ, ಬಸಿವ ಪಿತ್ತಕೋಶದ, ಮಾಂಸಖಂಡಗಳಿಂದ ಹರಿವ ರಕ್ತದ, ಹೆಚ್ಚಾಗಿ ಬಿದ್ದ ಮಾಂಸದ, ಬಿರಿದಿರುವ ಹೊಟ್ಟೆಯ- ಹೀಗೆ ವಿವಿಧ ಅವಯವಗಳಿಂದ ರಣಭೂಮಿ ಭಯಂಕರವಾಗಿ ರಂಜಿಸಿತು.
ಪದಾರ್ಥ (ಕ.ಗ.ಪ)
ತೊರಳೆ-ಪಿತ್ತಕೋಶ,
ಮೂಲ ...{Loading}...
ಸುರಿದ ಕರುಳ್ಗಳ ಸಿಡಿದ ಹಲುಗಳ
ಜರಿದ ತಲೆಗಳ ಹಾಯ್ದ ಮೂಳೆಯ
ಹರಿದ ನರವಿನ ಬಿಗಿದ ಹುಬ್ಬಿನ ಬಿಟ್ಟ ಕಣ್ಣುಗಳ
ಮುರಿದ ಗೋಣಿನ ಬಸಿವ ತೊರಳೆಯ
ಹರಿವ ರಕುತದ ತಳಿತ ಖಂಡದ
ಬಿರಿದ ಬಸುರಿನ ರೌರವದ ರಣಭೂಮಿ ರಂಜಿಸಿತು ॥11॥
೦೧೨ ಗರುಡನುಬ್ಬಟೆಗಹಿ ನಿಕರ ...{Loading}...
ಗರುಡನುಬ್ಬಟೆಗಹಿ ನಿಕರ ಜ
ಜ್ಝರಿತವಾದವೊಲಿವನ ಕಡು ನಿ
ಬ್ಬರದ ಧಾಳಿಗೆ ಧೈರ್ಯಗೆಟ್ಟುದು ಕೂಡೆ ಕುರುಸೇನೆ
ಹೊರಳಿಯೊಡೆದರು ಭಟರು ಸಿಡಿದರು
ಜರುಗಿದರು ಜವಗುಂದಿದರು ಮಡ
ಮುರಿದು ಬಿರುದರು ತಣಿದುದೈ ಪರಿಭವದ ಸೂರೆಯಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗರುಡನ ಆರ್ಭಟಕ್ಕೆ ಸರ್ಪ ಸಮೂಹ ಜರ್ಜರಿತವಾದ ಹಾಗೆ ಇವನ ಹೆಚ್ಚಾದ ವೇಗದ ಧಾಳಿಗೆ ಕುರುಸೇನೆ ತಕ್ಷಣ ಧೈರ್ಯಗೆಟ್ಟಿತು. ಭಟರು ಹಿಮ್ಮೆಟ್ಟಿದರು. ಸಿಡಿದು ದೂರಾದರು. ಜಾಗ ಖಾಲಿ ಮಾಡಿದರು. ಶಕ್ತಿ ಗುಂದಿದರು. ವೀರರು ನಾಶವಾದರು. ಯೋಧರು ಸೋಲು, ಅವಮಾನಗಳಿಂದ ದಣಿದರು.
ಪದಾರ್ಥ (ಕ.ಗ.ಪ)
ನಿಬ್ಬರ-ವೇಗ, ಜವಗುಂದು-ಶಕ್ತಿಗುಂದು, ಮಡಮುರಿ-ನಾಶ,
ಮೂಲ ...{Loading}...
ಗರುಡನುಬ್ಬಟೆಗಹಿ ನಿಕರ ಜ
ಜ್ಝರಿತವಾದವೊಲಿವನ ಕಡು ನಿ
ಬ್ಬರದ ಧಾಳಿಗೆ ಧೈರ್ಯಗೆಟ್ಟುದು ಕೂಡೆ ಕುರುಸೇನೆ
ಹೊರಳಿಯೊಡೆದರು ಭಟರು ಸಿಡಿದರು
ಜರುಗಿದರು ಜವಗುಂದಿದರು ಮಡ
ಮುರಿದು ಬಿರುದರು ತಣಿದುದೈ ಪರಿಭವದ ಸೂರೆಯಲಿ ॥12॥
೦೧೩ ಧಾತುಗೆಟ್ಟುದು ...{Loading}...
ಧಾತುಗೆಟ್ಟುದು ದೊದ್ದೆಯೆಂದೇ
ಭೂತಳಾಧಿಪ ಬಗೆಯದಿರು ತೆಗೆ
ಮಾತು ಹುಸಿ ಮರಳಿದರು ನಿನ್ನಯ ಪಟ್ಟದಾನೆಗಳು
ಭೀತಿಗೊಂಡನು ದ್ರೋಣ ಸೋಲಕೆ
ಕೇತುವಾದನು ಶಲ್ಯನಪಜಯ
ಮಾತೃಕಾಕ್ಷರನಾದನಶ್ವತ್ಥಾಮನಿಂದಿನಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೇನೆ ಮಾತ್ರ ಶಕ್ತಿಗುಂದಿತು ಎಂದೇ ಬಗೆಯದಿರು. ರಾಜನೇ…. ಬಿಡು. ಆ ಮಾತು ಸುಳ್ಳು. ನಿನ್ನಯ ಪಟ್ಟದಾನೆಗಳು ಹಿಂತಿರುಗಿ ಬಂದವು. ಇಂದಿನ ಯುದ್ಧದಲ್ಲಿ ದ್ರೋಣನು ಭೀತಿಗೊಂಡನು. ಸೋಲಿಗೆ ಶಲ್ಯನು ಲಾಂಛನವಾದನು. ಅಶ್ವತ್ಥಾಮನು ಅಪಜಯವೆಂಬ ಮಾತಿಗೆ ಮೊದಲನೆಯವನಾದನು.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ದೊದ್ದೆ-ಗುಂಪು, ಸೇನೆ,
ಕೇತು-ಧ್ವಜ,ಲಾಂಛನ, ಗುರುತು.
ಮೂಲ ...{Loading}...
ಧಾತುಗೆಟ್ಟುದು ದೊದ್ದೆಯೆಂದೇ
ಭೂತಳಾಧಿಪ ಬಗೆಯದಿರು ತೆಗೆ
ಮಾತು ಹುಸಿ ಮರಳಿದರು ನಿನ್ನಯ ಪಟ್ಟದಾನೆಗಳು
ಭೀತಿಗೊಂಡನು ದ್ರೋಣ ಸೋಲಕೆ
ಕೇತುವಾದನು ಶಲ್ಯನಪಜಯ
ಮಾತೃಕಾಕ್ಷರನಾದನಶ್ವತ್ಥಾಮನಿಂದಿನಲಿ ॥13॥
೦೧೪ ಇವನ ಧಾಳಿಯನಿವನ ...{Loading}...
ಇವನ ಧಾಳಿಯನಿವನ ಧೈರ್ಯವ
ನಿವನ ಹೂಣಿಗತನವನಿವನಾ
ಹವದ ಹೊರಿಗೆಯನಿವನ ಭಾರಿಯ ವೆಗ್ಗಳೆಯತನವ
ದಿವಿಜರಾನಲು ನೂಕದಿದು ನ
ಮ್ಮವರ ಪಾಡೇನೈ ಪಲಾಯನ
ತವನಿಧಿಯಲೇ ನಿಮ್ಮ ಬಲ ಧೃತರಾಷ್ಟ್ರ ಕೇಳ್ ಎಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವನ ಆಕ್ರಮಣದ ರೀತಿಯನ್ನು, ಇವನ ಧೈರ್ಯವನ್ನು, ಇವನ ಶಪಥದ ರೀತಿಯನ್ನು, ಇವನ ಯುದ್ಧದ ಹೋರಾಟವನ್ನು, ಇವನ ವಿಖ್ಯಾತಿಯನ್ನು ದೇವತೆಗಳೂ ಸಹ ತಡೆದುಕೊಳ್ಳಲು ಸಾಧ್ಯವಿಲ್ಲ. ನಮ್ಮವರ ಪಾಡೇನು ? ಕೌರವ ಬಲವು ಪಲಾಯನದ ತವನಿಧಿಯಾಯಿತು. ಧೃತರಾಷ್ಟ್ರನೇ ಕೇಳು” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಹೂಣಿಗತನ-ಶಪಥ ಮಾಡುವ ರೀತಿ,
ಹೊರಿಗೆ-ಹೋರಾಟ,
ತವನಿಧಿ-ತೀರದ ನಿಧಿ
ಮೂಲ ...{Loading}...
ಇವನ ಧಾಳಿಯನಿವನ ಧೈರ್ಯವ
ನಿವನ ಹೂಣಿಗತನವನಿವನಾ
ಹವದ ಹೊರಿಗೆಯನಿವನ ಭಾರಿಯ ವೆಗ್ಗಳೆಯತನವ
ದಿವಿಜರಾನಲು ನೂಕದಿದು ನ
ಮ್ಮವರ ಪಾಡೇನೈ ಪಲಾಯನ
ತವನಿಧಿಯಲೇ ನಿಮ್ಮ ಬಲ ಧೃತರಾಷ್ಟ್ರ ಕೇಳೆಂದ ॥14॥
೦೧೫ ಹಾಯಿಕಲಿ ಟೆಕ್ಕೆಯವ ...{Loading}...
ಹಾಯಿಕಲಿ ಟೆಕ್ಕೆಯವ ಭಟ್ಟರ
ಬಾಯ ಹೊಯ್ ಗಡಬಡೆಯ ಹೊತ್ತ
ಲ್ಲಾಯುಧವನೀಡಾಡು ಕೊಯ್ ಕೊಯ್ ಜೋಡು ಹೊಲಿಗೆಗಳ
ರಾಯ ಕೊಂದರೆ ಕೊಲಲಿ ಸುಕೃತವು
ಬೀಯವಾಗಲಿ ನಾವು ರಕ್ಕಸ
ನಾಯ ಕಯ್ಯಲಿ ಸಾಯೆವೆನುತೊಡೆಮುರಿದರತಿರಥರು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾವುಟವನ್ನು ಕೆಳಗೆ ಹಾಕಲಿ. ಭಟರ ಬಾಯಿ ಬಡಿಯಲಿ. ಗಡಿಬಿಡಿಯ ಸಮಯದಲ್ಲಿ ಆಯುಧವನ್ನು ಬಿಸಾಡು. ಕವಚದ ಹೊಲಿಗೆಗಳನ್ನು ಕತ್ತರಿಸು. ರಾಜನು ಕೊಂದರೆ ಕೊಲ್ಲಲಿ ಪುಣ್ಯವು ನಷ್ಟವಾಗಲಿ. ನಾವು ಈ ರಕ್ಕಸ ನಾಯಿಯ ಕೈಯಲ್ಲಿ ಸಾಯುವುದಿಲ್ಲ ಎನ್ನುತ್ತಾ ಅತಿರಥರು ಹಿಮ್ಮೆಟ್ಟಿದರು.
ಪದಾರ್ಥ (ಕ.ಗ.ಪ)
ಟೆಕ್ಕೆಯ-ಬಾವುಟ, ಧ್ವಜ,
ಮೂಲ ...{Loading}...
ಹಾಯಿಕಲಿ ಟೆಕ್ಕೆಯವ ಭಟ್ಟರ
ಬಾಯ ಹೊಯ್ ಗಡಬಡೆಯ ಹೊತ್ತ
ಲ್ಲಾಯುಧವನೀಡಾಡು ಕೊಯ್ ಕೊಯ್ ಜೋಡು ಹೊಲಿಗೆಗಳ
ರಾಯ ಕೊಂದರೆ ಕೊಲಲಿ ಸುಕೃತವು
ಬೀಯವಾಗಲಿ ನಾವು ರಕ್ಕಸ
ನಾಯ ಕಯ್ಯಲಿ ಸಾಯೆವೆನುತೊಡೆಮುರಿದರತಿರಥರು ॥15॥
೦೧೬ ಇಳಿದ ಕುದುರೆಗೆ ...{Loading}...
ಇಳಿದ ಕುದುರೆಗೆ ಬಿಸುಟ ರಥಸಂ
ಕುಳಕೆ ಹಾಯ್ಕಿದ ಟೆಕ್ಕೆಯಕೆ ಕೈ
ಬಳಿಚಿದಾಯುಧತತಿಗೆ ನೂಕಿದ ಜೋಡು ಸೀಸಕಕೆ
ಕಳಚಿದಾಭರಣಾತಪತ್ರಾ
ವಳಿಗೆ ಕಾಣೆನು ಕಡೆಯನೀ ಪರಿ
ಕೊಲೆಗೆ ಭಂಗಕೆ ನಿನ್ನ ಬಿರುದರು ಬಂದುದಿಲ್ಲೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಳಿದ ಕುದುರೆಗೆ, ಬಿಸಾಡಿದ ರಥ ಸಮೂಹಕ್ಕೆ ಬೀಳಿಸಿದ ಧ್ವಜಕ್ಕೆ, ಕೈಯಿಂದ ಜಾರಿಸಿದ ಆಯುಧ ಸಮೂಹಕ್ಕೆ ತಳ್ಳಿದ ಕವಚ, ಶಿರಸ್ತ್ರಾಣಕ್ಕೆ ಕಳಚಿದ ಆಭರಣ, ಬಿಳಿಯ ಕೊಡೆಗಳು ಮೊದಲಾದವುಗಳಿಗೆ ಕೊನೆಯನ್ನು ಕಾಣೆನು. ಈ ರೀತಿಯ ಕೊಲೆಗೆ, ಅವಮಾನಕ್ಕೆ ನಿನ್ನ ವೀರರು ಹಿಂದೆ ಗುರಿಯಾದುದಿಲ್ಲ ಎಂದ
ಪದಾರ್ಥ (ಕ.ಗ.ಪ)
ಬಳಚು-ಜಾರು, ನುಣುಚಿಕೊಳ್ಳು
ಮೂಲ ...{Loading}...
ಇಳಿದ ಕುದುರೆಗೆ ಬಿಸುಟ ರಥಸಂ
ಕುಳಕೆ ಹಾಯ್ಕಿದ ಟೆಕ್ಕೆಯಕೆ ಕೈ
ಬಳಿಚಿದಾಯುಧತತಿಗೆ ನೂಕಿದ ಜೋಡು ಸೀಸಕಕೆ
ಕಳಚಿದಾಭರಣಾತಪತ್ರಾ
ವಳಿಗೆ ಕಾಣೆನು ಕಡೆಯನೀ ಪರಿ
ಕೊಲೆಗೆ ಭಂಗಕೆ ನಿನ್ನ ಬಿರುದರು ಬಂದುದಿಲ್ಲೆಂದ ॥16॥
೦೧೭ ಸಿಡಿವ ತಲೆಗಳ ...{Loading}...
ಸಿಡಿವ ತಲೆಗಳ ಬಳಿವಿಡಿದು ಧಾ
ರಿಡುವ ರಕುತದಲೆರಡು ಬಲದಲಿ
ಹಿಡಿದ ದೀವಿಗೆ ನಂದಿದವು ಕುಂದಿದುದು ಚತುರಂಗ
ಮಡಮುರಿಯ ಮಯವಾಯ್ತು ಸುಭಟರ
ನಿಡು ಮುಸುಕು ಮೋಹಿಸಿತು ಮುರುಹಿನ
ಕಡುಹುಕಾರರು ಕೇಣಿಗೊಂಡರು ಬಹಳ ದುಷ್ಕೃತವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಡಿಯುವ ತಲೆಗಳಿಂದ ಧಾರೆಯಾಗಿ ಹರಿಯುವ ರಕ್ತದಿಂದ ಎರಡೂ ಸೇನೆಗಳಲ್ಲಿ ಹಿಡಿದ ದೀವಿಗೆಗಳು ಆರಿಹೋದವು. ಚತುರಂಗ ಸೇನೆ ಕ್ಷೇಣಿಸಿತು. ರಣಭೂಮಿ ಹಿಮ್ಮೆಟ್ಟುವ ಯೋಧರುಗಳಿಂದ ತುಂಬಿತು. ಸುಭಟರು ದೊಡ್ಡದಾದ ಮುಸುಕು ಹಾಕಿಕೊಂಡು ಹಿಂತಿರುಗಿದರು. ಹಾಗೆ ಹಿಮ್ಮೆಟ್ಟಿದ ವೀರರು ಬಹಳವಾಗಿ ದುಷ್ಕೃತಕ್ಕೆ ಒಳಗಾದರು.
ಪದಾರ್ಥ (ಕ.ಗ.ಪ)
ಮಡಮುರಿ-ಹಿಮ್ಮೆಟ್ಟು
ಮೂಲ ...{Loading}...
ಸಿಡಿವ ತಲೆಗಳ ಬಳಿವಿಡಿದು ಧಾ
ರಿಡುವ ರಕುತದಲೆರಡು ಬಲದಲಿ
ಹಿಡಿದ ದೀವಿಗೆ ನಂದಿದವು ಕುಂದಿದುದು ಚತುರಂಗ
ಮಡಮುರಿಯ ಮಯವಾಯ್ತು ಸುಭಟರ
ನಿಡು ಮುಸುಕು ಮೋಹಿಸಿತು ಮುರುಹಿನ
ಕಡುಹುಕಾರರು ಕೇಣಿಗೊಂಡರು ಬಹಳ ದುಷ್ಕೃತವ ॥17॥
೦೧೮ ದ್ರೋಣನೆಮ್ಬರೆ ಮುನ್ನವೇ ...{Loading}...
ದ್ರೋಣನೆಂಬರೆ ಮುನ್ನವೇ ನಿ
ರ್ಯಾಣದೀಕ್ಷಿತನಾದನಾತನ
ಕಾಣೆವೈ ಗುರುಸುತನದೃಶ್ಯಾಂಜನವೆ ಸಿದ್ಧಿಸಿತು
ಹೂಣಿಗರು ಮತ್ತಾರು ಶಲ್ಯ
ಕ್ಷೋಣಿಪತಿ ಕೃತವರ್ಮ ಕೃಪನತಿ
ಜಾಣರೋಟದ ವಿದ್ಯೆಗೆನುತಿರ್ದುದು ಭಟಸ್ತೋಮ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೋಣನಿಗೆ ಹೇಳೋಣವೆಂದರೆ, ಅವನು ಮೊದಲೇ ಪಲಾಯನವಾದಿಯಾಗಿದ್ದಾನೆ. ಆತನು ಕಾಣುತ್ತಿಲ್ಲ. ಗುರುಸುತನಿಗೂ ಸಹ ಅದೃಶ್ಯನಾಗುವ ಮದ್ದೇ ಸಿದ್ಧಿಸಿತು. ಶೂರರು ಮತ್ತೆ ಯಾರಿದ್ದಾರೆ ? ಶಲ್ಯ ಮಹಾರಾಜ, ಕೃತವರ್ಮ, ಕೃಪ - ಮೊದಲಾದವರು ಓಟದ ವಿದ್ಯೆಯಲ್ಲಿ ಅತಿ ಜಾಣರು.” ಎಂದು ಭಟಸ್ತೋಮ ಹೇಳುತ್ತಿತ್ತು.
ಪದಾರ್ಥ (ಕ.ಗ.ಪ)
ಅದೃಶ್ಯಾಂಜನ-ಮಾಯವಾಗಿಸುವ ಅಂಜನ
ಮೂಲ ...{Loading}...
ದ್ರೋಣನೆಂಬರೆ ಮುನ್ನವೇ ನಿ
ರ್ಯಾಣದೀಕ್ಷಿತನಾದನಾತನ
ಕಾಣೆವೈ ಗುರುಸುತನದೃಶ್ಯಾಂಜನವೆ ಸಿದ್ಧಿಸಿತು
ಹೂಣಿಗರು ಮತ್ತಾರು ಶಲ್ಯ
ಕ್ಷೋಣಿಪತಿ ಕೃತವರ್ಮ ಕೃಪನತಿ
ಜಾಣರೋಟದ ವಿದ್ಯೆಗೆನುತಿರ್ದುದು ಭಟಸ್ತೋಮ ॥18॥
೦೧೯ ಏನ ಹೇಳುವೆನಮಮ ...{Loading}...
ಏನ ಹೇಳುವೆನಮಮ ಬಹಳಾಂ
ಭೋನಿಧಿಯ ವಿಷದುರಿಯ ಧಾಳಿಗೆ
ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
ದಾನವಾಚಳ ಮಥಿತ ಸೇನಾಂ
ಭೋನಿಧಿಯ ಪರಿಭವದ ವಿಷದುರಿ
ಗಾ ನರೇಂದ್ರ ನಿಕಾಯ ಹೊಕ್ಕುದು ರವಿಸುತನ ಮರೆಯ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನ ಹೇಳಲಿ ? ಅಯ್ಯೋ…… ಸಮುದ್ರದಿಂದ ಹೊಮ್ಮಿದ ಸಂಪತ್ತುಗಳಲ್ಲಿ ಒಂದಾದ ವಿಷದುರಿಯ ಧಾಳಿಗೆ ರಾಕ್ಷಸರು ದೇವತೆಗಳು ಚಂದ್ರಮೌಳಿಯಾದ ಶಿವನನ್ನು ಮೊರೆ ಹೊಕ್ಕಂತೆ, ರಾಕ್ಷಸನೆಂಬ ಪರ್ವತದಿಂದ ಕಡೆಯಲ್ಪಟ್ಟ ಸೇನಾ ಸಮುದ್ರದಿಂದ ಹೊಮ್ಮಿದ ಸೋಲೆಂಬ ವಿಷದ ಉರಿಯ ನಿವಾರಣೆಗೆ ಆ ರಾಜಸಮೂಹ ಕರ್ಣನ ಆಶ್ರಯವನ್ನು ಬಯಸಿತು.
ಮೂಲ ...{Loading}...
ಏನ ಹೇಳುವೆನಮಮ ಬಹಳಾಂ
ಭೋನಿಧಿಯ ವಿಷದುರಿಯ ಧಾಳಿಗೆ
ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
ದಾನವಾಚಳ ಮಥಿತ ಸೇನಾಂ
ಭೋನಿಧಿಯ ಪರಿಭವದ ವಿಷದುರಿ
ಗಾ ನರೇಂದ್ರ ನಿಕಾಯ ಹೊಕ್ಕುದು ರವಿಸುತನ ಮರೆಯ ॥19॥
೦೨೦ ಶರಣು ಹೊಕ್ಕುದು ...{Loading}...
ಶರಣು ಹೊಕ್ಕುದು ಬಂದು ಮಕುಟದ
ಗರುವರವನೀಪಾಲಕರು ಮೋ
ಹರಕೆ ತೋರ್ಪಟ್ಟವರು ಭಾರಿಯ ಬಿರುದಿನತಿಬಳರು
ದುರುಳ ದೈತ್ಯನ ಬಾಧೆ ಘನ ಪರಿ
ಹರಿಸಲರಿಯೆವು ಕರ್ಣ ನೀನೇ
ಮರಳಿ ಸೇನೆಯ ರಕ್ಷಿಸೆಂದುದು ನಿಖಿಳಪರಿವಾರ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಿರೀಟ ಧಾರಿಗಳಾದ ಹಿರಿಯರು, ರಾಜರುಗಳು, ಯುದ್ಧದಲ್ಲಿ ತಮ್ಮನ್ನು ಒಡ್ಡಿಕೊಂಡವರು, ಭಾರಿಯ ಬಿರುದಿನ ಶೂರರು, ಸಕಲ ಪರಿವಾರದವರು ಕರ್ಣನ ಬಳಿ ಬಂದು “ದುಷ್ಟ ರಾಕ್ಷಸನ ಬಾಧೆ ಹೆಚ್ಚಾಗಿದೆ. ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಕರ್ಣ… ನೀನೇ ಹಿಂತಿರುಗಿ ಬಂದು ಸೇನೆಯನ್ನು ರಕ್ಷಿಸು” ಎಂದು ಆತನಿಗೆ ಶರಣಾದರು.
ಮೂಲ ...{Loading}...
ಶರಣು ಹೊಕ್ಕುದು ಬಂದು ಮಕುಟದ
ಗರುವರವನೀಪಾಲಕರು ಮೋ
ಹರಕೆ ತೋರ್ಪಟ್ಟವರು ಭಾರಿಯ ಬಿರುದಿನತಿಬಳರು
ದುರುಳ ದೈತ್ಯನ ಬಾಧೆ ಘನ ಪರಿ
ಹರಿಸಲರಿಯೆವು ಕರ್ಣ ನೀನೇ
ಮರಳಿ ಸೇನೆಯ ರಕ್ಷಿಸೆಂದುದು ನಿಖಿಳಪರಿವಾರ ॥20॥
೦೨೧ ತಳಿತ ಮುಸುಕಿನ ...{Loading}...
ತಳಿತ ಮುಸುಕಿನ ಬೆರಳ ಮೂಗಿನ
ನೆಲನ ನೋಟದ ಮೆಯ್ಯ ತೂಕದ
ಝಳದ ಸುಯ್ಲಿನ ಮುಖದ ಮೋನದ ನಸಿದ ನೆನಹುಗಳ
ಕಳಿದ ಕಡುಹಿನ ಬೀತ ಬಿರುದಿನ
ಬಲಿದ ಭಂಗದ ನೃಪತಿಗಳನ
ಗ್ಗಳೆಯ ರವಿಸುತ ಕಂಡು ಹೊಗಳಿದನಾ ಘಟೋತ್ಕಚನ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಃಖವೆಂಬ ಮುಸುಕನ್ನು ಧರಿಸಿದ, ಬೆರಳನ್ನು ಮೂಗಿನ ಮೇಲೆ ಇರಿಸಿದ, ನೆಲದ ಮೇಲಿನ ದೃಷ್ಟಿಯುಳ್ಳ , ಮೈಭಾರಗೊಂಡಿರುವ, ನಿಟ್ಟುಸಿರಿನ ಧ್ವನಿಯ, ಮೌನಪೂರ್ಣ ಮುಖದ, ಕೊರಗಿದ ನೆನಪುಗಳ, ಬತ್ತಿದ ಪರಾಕ್ರಮದ, ವ್ಯರ್ಥವಾದ ಬಿರುದಿನ, ಹೆಚ್ಚು ಅವಮಾನಿತರಾದ ರಾಜರುಗಳನ್ನು ಶ್ರೇಷ್ಠ ಕರ್ಣನು ಕಂಡು ಘಟೋತ್ಕಚನ ಪರಾಕ್ರಮವನ್ನು ಹೊಗಳಿದನು.
ಪದಾರ್ಥ (ಕ.ಗ.ಪ)
ನಸಿದ-ಕೊರಗಿದ, ನಶಿಸಿದ,
ಕಳಿದ-ಬತ್ತಿದ
ಮೂಲ ...{Loading}...
ತಳಿತ ಮುಸುಕಿನ ಬೆರಳ ಮೂಗಿನ
ನೆಲನ ನೋಟದ ಮೆಯ್ಯ ತೂಕದ
ಝಳದ ಸುಯ್ಲಿನ ಮುಖದ ಮೋನದ ನಸಿದ ನೆನಹುಗಳ
ಕಳಿದ ಕಡುಹಿನ ಬೀತ ಬಿರುದಿನ
ಬಲಿದ ಭಂಗದ ನೃಪತಿಗಳನ
ಗ್ಗಳೆಯ ರವಿಸುತ ಕಂಡು ಹೊಗಳಿದನಾ ಘಟೋತ್ಕಚನ ॥21॥
೦೨೨ ಶಿವಶಿವಾ ಕೌರವನ ...{Loading}...
ಶಿವಶಿವಾ ಕೌರವನ ಸುಭಟರು
ದಿವಿಜರಿಗೆ ವೆಗ್ಗಳರು ನಿನಗಿಂ
ದಿವರು ಸೋತರು ಪೂತು ದಾನವ ನೀ ಕೃತಾರ್ಥನಲ
ಇವನ ಪಾಡಿನ ಸುಭಟರೇ ನ
ಮ್ಮವರು ಗೆಲವೇನಿವನದೇ ಮಾ
ಧವನ ಸೂತ್ರದಯಂತ್ರವಿದು ಲಯಕಾಲ ನಮಗೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಿವ ಶಿವಾ… ಕೌರವನ ಸೈನಿಕರು ದೇವತೆಗಳಿಗಿಂತಲೂ ಶ್ರೇಷ್ಠರು. ನಿನಗೆ ಇಂದು ಇವರು ಸೋತರು. ಭಲೆ, ರಾಕ್ಷಸನೇ, ನೀನು ಕೃತಾರ್ಥನಾದೆ. ಇವನ ರೀತಿಗೆ ಸಮರಾದ ಸುಭಟರೇ ನಮ್ಮವರು ? ಗೆಲುವೇನು ಇವನದೇ ? ಮಾಧವನ ಸೂತ್ರದ ಯಂತ್ರವಿದು. ಇದು ನಮಗೆ ನಾಶದ ಕಾಲ " ಎಂದು ಕರ್ಣನು ಹೇಳಿದನು.
ಮೂಲ ...{Loading}...
ಶಿವಶಿವಾ ಕೌರವನ ಸುಭಟರು
ದಿವಿಜರಿಗೆ ವೆಗ್ಗಳರು ನಿನಗಿಂ
ದಿವರು ಸೋತರು ಪೂತು ದಾನವ ನೀ ಕೃತಾರ್ಥನಲ
ಇವನ ಪಾಡಿನ ಸುಭಟರೇ ನ
ಮ್ಮವರು ಗೆಲವೇನಿವನದೇ ಮಾ
ಧವನ ಸೂತ್ರದಯಂತ್ರವಿದು ಲಯಕಾಲ ನಮಗೆಂದ ॥22॥
೦೨೩ ಸಾಕು ದೈತ್ಯನ ...{Loading}...
ಸಾಕು ದೈತ್ಯನ ಕೆಡಹು ಸೇನೆಯ
ಸಾಕು ಸುಭಟರು ಬಾಯಬಿಡುತಿದೆ
ನೂಕು ನೂಕಮರಾರಿಯನು ತಡೆ ತಡವುಮಾಡದಿರು
ಆಕೆವಾಳರು ವಿಗಡ ವೀರಾ
ನೀಕವಿದೆ ತಲ್ಲಣದ ತಗಹಿನ
ಲೇಕೆ ಕಾಲಕ್ಷೇಪವೆಂದನು ಕೌರವರರಾಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೊಗಳಿಕೆ ಸಾಕು. ರಾಕ್ಷಸನನ್ನು ಕೆಡಹು. ಸೇನೆಯನ್ನು ರಕ್ಷಿಸು. ಸುಭಟರು ಬಾಯಿ ಬಿಡುತ್ತಿದ್ದಾರೆ. ನೂಕು, ನೂಕು ದೇವತೆಗಳ ಶತ್ರು ಘಟೋತ್ಕಚನನ್ನು . ರಾಕ್ಷಸನನ್ನು ತಡೆ. ತಡಮಾಡಬೇಡ. ಆಕ್ರಮಣಕ್ಕೆ ಶೂರ ವೀರರ ಸಮೂಹವಿದೆ. ದುಃಖದ ಮುಸುಕಿನಲ್ಲಿ ಕಾಲಹರಣ ಬೇಡ” ಎಂದನು ಕೌರವರಾಯ.
ಪದಾರ್ಥ (ಕ.ಗ.ಪ)
ತಗಹು-ಮುಸುಕು, ಅಡ್ಡಿ
ಮೂಲ ...{Loading}...
ಸಾಕು ದೈತ್ಯನ ಕೆಡಹು ಸೇನೆಯ
ಸಾಕು ಸುಭಟರು ಬಾಯಬಿಡುತಿದೆ
ನೂಕು ನೂಕಮರಾರಿಯನು ತಡೆ ತಡವುಮಾಡದಿರು
ಆಕೆವಾಳರು ವಿಗಡ ವೀರಾ
ನೀಕವಿದೆ ತಲ್ಲಣದ ತಗಹಿನ
ಲೇಕೆ ಕಾಲಕ್ಷೇಪವೆಂದನು ಕೌರವರರಾಯ ॥23॥
೦೨೪ ದುಗುಡವೋ ಮೇಣ್ ...{Loading}...
ದುಗುಡವೋ ಮೇಣ್ ವಿಕ್ರಮಾಗ್ನಿಯ
ತಗಹುಗಳ ತನಿಹೊಗೆಯೊ ರಾಯರ
ಮೊಗವ ನೋಡೈ ಕೀರ್ತಿಕೌಮುದಿ ಕಳಿದ ಕತ್ತಲೆಯೊ
ಬಿಗಿದ ಭೀತಿಯ ಸೂರೆಗಳೊ ಮೋ
ರೆಗಳೊ ಸವಿವಾತುಗಳ ಸೋನೆಯ
ಸೊಗಸುಕಾರರು ನಿಂದ ನಿಲವನು ಕರ್ಣ ನೋಡೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
24.” ದುಗುಡವೋ ಅಥವಾ ಪರಾಕ್ರಮವೆಂಬ ಬೆಂಕಿಯ ಮುಸುಕಿನ ದಟ್ಟವಾದ ಹೊಗೆಯೋ ? ರಾಯರ ಮೊಗವನ್ನು ನೋಡು. ಅಲ್ಲಿ ಕೀರ್ತಿಯೆಂಬ ಬೆಳುದಿಂಗಳು ಕಳೆದು ಕತ್ತಲೆ ಆವರಿಸಿದೆಯೋ ? ಅವರ ಮುಖದಲ್ಲಿ ಭೀತಿಯು ಮನೆ ಮಾಡಿದೆ. ಅವರ ಮೋರೆಗಳೋ ? ಸವಿ ಮಾತುಗಳನ್ನು ಸುರಿಸುವ ಸೊಗಸುಗಾರರು ತಲುಪಿರುವ ಸ್ಥಿತಿಯನ್ನು ನೋಡು ಕರ್ಣ" ಎಂದು ದುರ್ಯೋಧನನು ಹೇಳಿದನು..
ಮೂಲ ...{Loading}...
ದುಗುಡವೋ ಮೇಣ್ ವಿಕ್ರಮಾಗ್ನಿಯ
ತಗಹುಗಳ ತನಿಹೊಗೆಯೊ ರಾಯರ
ಮೊಗವ ನೋಡೈ ಕೀರ್ತಿಕೌಮುದಿ ಕಳಿದ ಕತ್ತಲೆಯೊ
ಬಿಗಿದ ಭೀತಿಯ ಸೂರೆಗಳೊ ಮೋ
ರೆಗಳೊ ಸವಿವಾತುಗಳ ಸೋನೆಯ
ಸೊಗಸುಕಾರರು ನಿಂದ ನಿಲವನು ಕರ್ಣ ನೋಡೆಂದ ॥24॥
೦೨೫ ವಿಗಡತನವನು ವಹಿಲದಲಿ ...{Loading}...
ವಿಗಡತನವನು ವಹಿಲದಲಿ ಕೈ
ಮಗುಚಿ ಕಳೆದರು ಹೂಸಿಕದ ಹೂ
ಣಿಗತನವ ಸೊನ್ನಾರವಿದ್ಯೆಯ ಸಾಹಸೋನ್ನತಿಯ
ಸೊಗಸ ಹುಟ್ಟಿಸಿ ಸುಲಿವ ರಸವಾ
ದಿಗಳನಿವರ ವಿಡಾಯಿಗಳ ನಂ
ಬುಗೆಯ ಕೇವಣ ಪಾಡುಕಾರರ ಕರ್ಣ ನೋಡೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪರಾಕ್ರಮವನ್ನು ಶೀಘ್ರವಾಗಿ ಕೈಮಗುಚಿ ಕಳೆದರು. ತೋರಿಕೆಯ ಶೌರ್ಯವನ್ನು ಕೈಬಿಟ್ಟರು. ಅಲ್ಪ ಲೋಹವನ್ನು ಚಿನ್ನವಾಗಿಸುವ ರಸ ವಿದ್ಯೆಯಲ್ಲಿ ಆಸೆ ಹುಟ್ಟಿಸಿ, ಸುಲಿವ ರಸವಾದಿಗಳನ್ನು, ಹೆಮ್ಮೆ, ನಂಬಿಕೆ ಹುಟ್ಟಿಸುವ ರೀತಿಯಲ್ಲಿ ಹುಸಿ ಪ್ರತಿಜ್ಞೆ ಮಾಡುವ ಬಡಾಯಿ ಕೋರರನ್ನು ಕರ್ಣನೇ ನೋಡು” ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಹೂಸಿಕ-ಆಡಂಬರ ,
ಸೊನ್ನಾರವಿದ್ಯೆ-ಅಕ್ಕಸಾಲಿಗ ವಿದ್ಯೆ,
ಕೇವಣ-ಕೂಡಿಸುವುದು,
ಪಾಡು- ಪ್ರತಿಜ್ಞೆ
ಮೂಲ ...{Loading}...
ವಿಗಡತನವನು ವಹಿಲದಲಿ ಕೈ
ಮಗುಚಿ ಕಳೆದರು ಹೂಸಿಕದ ಹೂ
ಣಿಗತನವ ಸೊನ್ನಾರವಿದ್ಯೆಯ ಸಾಹಸೋನ್ನತಿಯ
ಸೊಗಸ ಹುಟ್ಟಿಸಿ ಸುಲಿವ ರಸವಾ
ದಿಗಳನಿವರ ವಿಡಾಯಿಗಳ ನಂ
ಬುಗೆಯ ಕೇವಣ ಪಾಡುಕಾರರ ಕರ್ಣ ನೋಡೆಂದ ॥25॥
೦೨೬ ನಡೆವುತೆಡಹಿದ ಪಟ್ಟದಾನೆಯ ...{Loading}...
ನಡೆವುತೆಡಹಿದ ಪಟ್ಟದಾನೆಯ
ಮಿಡಿಯ ಹೊಯ್ವರೆ ಜೀಯ ರಣವವ
ಗಡವು ನಮಗಿದು ರಾತ್ರಿ ದೈತ್ಯರಿಗಿದುವೆ ನಡುಹಗಲು
ಮೃಡನನೊಂದವಸರಕೆ ಬಗೆಯದ
ಕಡುಹುಕಾರರು ನಿನ್ನವರು ಕೆಡೆ
ನುಡಿದು ನೋಯಿಸಲೇತಕೆಂದನು ಕರ್ಣನರಸಂಗೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಡೆಯುತ್ತಾ ಎಡವಿದ ಪಟ್ಟದಾನೆಯನ್ನು ಚುರುಕುಗೊಳಿಸಲು ಹೊಡೆಯುವರೆ ? ಸ್ವಾಮಿ….. ಈ ರಾತ್ರಿಯ ಯುದ್ಧ ನಮ್ಮ ಪಾಲಿಗೆ ಕಷ್ಟದ್ದು. ರಾಕ್ಷಸರಿಗೆ ಇದೇ ನಡುಹಗಲು. ಯಾವುದೇ ಸಮಯದಲ್ಲಿ ಶಿವನನ್ನೂ ಗಣಿಸದ ಪರಾಕ್ರಮಿಗಳು ನಿನ್ನವರು. ಕೆಟ್ಟ ಮಾತುಗಳನ್ನಾಡಿ ನೋಯಿಸಲೇತಕ್ಕೆ ?” ಎಂದು ಕರ್ಣನು ರಾಜನಾದ ದುರ್ಯೋಧನನಿಗೆ ಹೇಳಿದನು.
ಮೂಲ ...{Loading}...
ನಡೆವುತೆಡಹಿದ ಪಟ್ಟದಾನೆಯ
ಮಿಡಿಯ ಹೊಯ್ವರೆ ಜೀಯ ರಣವವ
ಗಡವು ನಮಗಿದು ರಾತ್ರಿ ದೈತ್ಯರಿಗಿದುವೆ ನಡುಹಗಲು
ಮೃಡನನೊಂದವಸರಕೆ ಬಗೆಯದ
ಕಡುಹುಕಾರರು ನಿನ್ನವರು ಕೆಡೆ
ನುಡಿದು ನೋಯಿಸಲೇತಕೆಂದನು ಕರ್ಣನರಸಂಗೆ ॥26॥
೦೨೭ ತಾಗಿ ವಜ್ರವ ...{Loading}...
ತಾಗಿ ವಜ್ರವ ಮುಕ್ಕುಗಳೆವಡೆ
ಸಾಗರವ ಹೊಗಲೇಕೆ ಗಿರಿಗಳು
ಹೋಗಲಿನ್ನಾ ಮಾತು ಮೀರಿದ ದೈತ್ಯನುಪಟಳವ
ಈಗ ಮಾಣಿಸು ನಮ್ಮ ಸುಭಟರು
ಯೋಗಿಗಳವೊಲು ದಂಡಹೀನರು
ಬೇಗ ಮಾಡಿನ್ನಮರವೈರಿಯ ತರಿದು ಬಿಸುಡೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬೆಟ್ಟಗಳು ವಜ್ರಾಯುಧವನ್ನು ಎದುರಿಸಿ (ತಾಗಿ) ತುಂಡು ತುಂಡು ಮಾಡಲು ಶಕ್ತವಾಗಿದ್ದರೆ ಸಮುದ್ರದಲ್ಲಿ ಏಕೆ ಮುಳುಗುತ್ತಿದ್ದುವು? ಹೋಗಲಿ ಇನ್ನು ಆ ಮಾತು. ಮಿತಿಮೀರಿದ ಈ ದೈತ್ಯನ ಉಪಟಳವನ್ನು ಈಗ ತಡೆ. ನಮ್ಮ ಸುಭಟರು ಯೋಗಿಗಳ ಹಾಗೆ ಅಹಿಂಸಾಪರರು. ತ್ವರೆ ಮಾಡು. ಈ ಅಮರ ವೈರಿಯನ್ನು ಕತ್ತರಿಸಿ ಬಿಸಾಡು.” ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ದಂಡಹೀನ-ಅಹಿಂಸಾಪರ,
ಮೂಲ ...{Loading}...
ತಾಗಿ ವಜ್ರವ ಮುಕ್ಕುಗಳೆವಡೆ
ಸಾಗರವ ಹೊಗಲೇಕೆ ಗಿರಿಗಳು
ಹೋಗಲಿನ್ನಾ ಮಾತು ಮೀರಿದ ದೈತ್ಯನುಪಟಳವ
ಈಗ ಮಾಣಿಸು ನಮ್ಮ ಸುಭಟರು
ಯೋಗಿಗಳವೊಲು ದಂಡಹೀನರು
ಬೇಗ ಮಾಡಿನ್ನಮರವೈರಿಯ ತರಿದು ಬಿಸುಡೆಂದ ॥27॥
೦೨೮ ಕಳೆದ ಮೀಸಲ ...{Loading}...
ಕಳೆದ ಮೀಸಲ ಶಕ್ತಿ ಪಾರ್ಥನ
ತಲೆಗೆ ಬೈಚಿಟ್ಟಿಹುದನೀಗಳು
ಸೆಳೆದೆನಾದರೆ ಮುಂದೆ ಫಲುಗುಣನೆನ್ನ ಲೆಕ್ಕಿಸನು
ಉಳಿದ ಬಾಣಂಗಳಲಿ ದೈತ್ಯನ
ಗೆಲುವುದರಿದಿದಕಾವ ಹದನೋ
ತಿಳಿಯಲರಿಯೆನು ಜೀಯಯೆಂದನು ಕುರುಪತಿಗೆ ಕರ್ಣ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥನ ತಲೆಗಾಗಿ ಮೀಸಲಾಗಿಟ್ಟಿರುವ ಶಕ್ತಿಯೊಂದನ್ನು ಗುಪ್ತವಾಗಿ ಇರಿಸಿದ್ದೇನೆ. ಅದನ್ನು ಈಗಲೇ ಮೇಲೆ ಸೆಳೆದನಾದರೆ ಮುಂದೆ ಅರ್ಜುನನು ನನ್ನನ್ನು ಲೆಕ್ಕಿಸುವುದಿಲ್ಲ. ಆದರೆ ಉಳಿದ ಬಾಣಗಳಿಂದ ಈ ರಾಕ್ಷಸನನ್ನು ಗೆಲ್ಲುವುದು ಅಸಾಧ್ಯವು. ಇದಕ್ಕೆ ಯಾವ ಉಪಾಯವಿದೆಯೋ ತಿಳಿಯಲು ಸಾಧ್ಯವಿಲ್ಲ. ಜೀಯ, ಏನು ಮಾಡಲಿ ? ಎಂದು ಕರ್ಣನು ಕುರುಪತಿಯನ್ನು ಕೇಳಿದನು.
ಮೂಲ ...{Loading}...
ಕಳೆದ ಮೀಸಲ ಶಕ್ತಿ ಪಾರ್ಥನ
ತಲೆಗೆ ಬೈಚಿಟ್ಟಿಹುದನೀಗಳು
ಸೆಳೆದೆನಾದರೆ ಮುಂದೆ ಫಲುಗುಣನೆನ್ನ ಲೆಕ್ಕಿಸನು
ಉಳಿದ ಬಾಣಂಗಳಲಿ ದೈತ್ಯನ
ಗೆಲುವುದರಿದಿದಕಾವ ಹದನೋ
ತಿಳಿಯಲರಿಯೆನು ಜೀಯಯೆಂದನು ಕುರುಪತಿಗೆ ಕರ್ಣ ॥28॥
೦೨೯ ಈಗಳೀ ದಾನವನ ...{Loading}...
ಈಗಳೀ ದಾನವನ ಬಲೆಯಲಿ
ತಾಗಿ ಸಿಲುಕಿತು ನಮ್ಮ ಮೋಹರ
ಮೇಲೆ ಫಲುಗುಣನಾರ ಕೊಲುವನು ಮರಣ ನಮಗಾಗೆ
ನೀಗಿ ಕಳೆ ಕೊಲೆಗಡಿಗನನು ಜಯ
ವಾಗಲೀಗಳೆ ಮುಂದೆ ನರನು
ದ್ಯೋಗಕಾರೈವೆವು ಚಿಕಿತ್ಸೆಯನೆಂದನಾ ಭೂಪ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈಗ ಈ ರಾಕ್ಷಸನ ಬಲೆಯಲ್ಲಿ ಸಿಕ್ಕಿ ನಮ್ಮ ಸೈನ್ಯ ಸರ್ವನಾಶವಾಗುತ್ತಿದೆ. ಈ ದಾನವನಿಂದಲೇ ನಾವೆಲ್ಲಾ ನಾಶವಾದರೆ ಅರ್ಜುನನು ಯಾರನ್ನು ಕೊಲ್ಲುವನು ? ಆದ್ದರಿಂದ ಈಗಲೇ ಈ ಕೊಲೆಗಡುಕನನ್ನು ನೀಗಿ ಕಳೆ. ಈಗಲೇ ಜಯವಾಗಲಿ. ಮುಂದೆ ಅರ್ಜುನನನ್ನು ಕೊಲ್ಲುವ ಕಾರ್ಯಕ್ಕೆ ಉಪಾಯವನ್ನು ಹುಡುಕೋಣ” ಎಂದು ದುರ್ಯೋಧನನು ಹೇಳಿದನು.
ಮೂಲ ...{Loading}...
ಈಗಳೀ ದಾನವನ ಬಲೆಯಲಿ
ತಾಗಿ ಸಿಲುಕಿತು ನಮ್ಮ ಮೋಹರ
ಮೇಲೆ ಫಲುಗುಣನಾರ ಕೊಲುವನು ಮರಣ ನಮಗಾಗೆ
ನೀಗಿ ಕಳೆ ಕೊಲೆಗಡಿಗನನು ಜಯ
ವಾಗಲೀಗಳೆ ಮುಂದೆ ನರನು
ದ್ಯೋಗಕಾರೈವೆವು ಚಿಕಿತ್ಸೆಯನೆಂದನಾ ಭೂಪ ॥29॥
೦೩೦ ಆದಡಮರವಿರೋಧಿಯಸುವನು ...{Loading}...
ಆದಡಮರವಿರೋಧಿಯಸುವನು
ಸೇದುವೆನು ಸರಿಸದಲಿ ನಿಂದರೆ
ನಾದುವೆನು ನಿಟ್ಟೊಡಲ ರಕುತದಲಖಿಳ ದಿಗುತಟವ
ಕಾದುವೆನು ನಮ್ಮವರು ಕಳಚಿದ
ಕೈದುವನು ಕೈವಶವಮಾಡಿ ವಿ
ನೋದವನು ನೀವ್ ನೋಡಿ ಎಂದನು ಕರ್ಣನರಸಂಗೆ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಾಗಾದರೆ, ಆ ರಾಕ್ಷಸನ ಪ್ರಾಣವನ್ನು ನೀಗುವೆನು. ಅವನು ಇದಿರಾದರೆ ಅವನ ನೀಳವಾದ ದೇಹ ಹಾಗೂ ಸಕಲ ದಿಕ್ಕುಗಳನ್ನು ರಕ್ತದಲ್ಲಿ ತೋಯಿಸುವೆನು. ನಮ್ಮವರು ತ್ಯಜಿಸಿರುವ ಅಸ್ತ್ರವನ್ನು ವಶಪಡಿಸಿಕೊಂಡು ಕಾದುವೆನು. ನೀವು ವಿನೋದವನ್ನು ನೋಡಿರಿ” ಎಂದು ಕರ್ಣನು ಅರಸನಿಗೆ ಹೇಳಿದನು.
ಮೂಲ ...{Loading}...
ಆದಡಮರವಿರೋಧಿಯಸುವನು
ಸೇದುವೆನು ಸರಿಸದಲಿ ನಿಂದರೆ
ನಾದುವೆನು ನಿಟ್ಟೊಡಲ ರಕುತದಲಖಿಳ ದಿಗುತಟವ
ಕಾದುವೆನು ನಮ್ಮವರು ಕಳಚಿದ
ಕೈದುವನು ಕೈವಶವಮಾಡಿ ವಿ
ನೋದವನು ನೀವ್ ನೋಡಿ ಎಂದನು ಕರ್ಣನರಸಂಗೆ ॥30॥
೦೩೧ ಇತ್ತಲೈ ದನುಜೇನ್ದ್ರ ...{Loading}...
ಇತ್ತಲೈ ದನುಜೇಂದ್ರ ಕದನವ
ದಿತ್ತಲಿತ್ತಲು ಗಮನ ಸುಭಟರ
ಕತ್ತಲೆಯೊಳೋಡಿಸಿದ ಕಡುಹನು ತೋರು ನಮ್ಮೊಡನೆ
ಮೃತ್ಯು ನಿನಗಾನೆನ್ನೊಡನೆ ತಲೆ
ಯೊತ್ತಿನೋಡೆಂದೆನುತ ಬೊಬ್ಬಿರಿ
ವುತ್ತ ದೈತ್ಯನ ತರುಬಿದನು ಬಲವೆಲ್ಲ ಬೆರಗಾಗೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಕಡೆ ನೋಡು. ರಾಕ್ಷಸರಿಗೆ ಒಡೆಯನಾದ ಘಟೋತ್ಕಚನ ಕದನವು ಇಲ್ಲಲ್ಲವೇ? ಈ ಕಡೆ ಗಮನ ಕೊಡು. ಸುಭಟರನ್ನು ಕತ್ತಲೆಯಲ್ಲಿ ಓಡಿಸಿದ ಪರಾಕ್ರಮವನ್ನು ನಮ್ಮೊಡನೆ ತೋರು. ನಾನೇ ನಿನಗೆ ಮೃತ್ಯು. ನನ್ನೊಡನೆ ಹೋರಾಡಿ ನೋಡು " ಎಂದು ಬೊಬ್ಬಿರಿಯುತ್ತಾ ಕರ್ಣನು ಸೈನ್ಯವೆಲ್ಲಾ ಬೆರಗಾಗುವಂತೆ ರಾಕ್ಷಸನನ್ನು ಮುತ್ತಿದನು.
ಮೂಲ ...{Loading}...
ಇತ್ತಲೈ ದನುಜೇಂದ್ರ ಕದನವ
ದಿತ್ತಲಿತ್ತಲು ಗಮನ ಸುಭಟರ
ಕತ್ತಲೆಯೊಳೋಡಿಸಿದ ಕಡುಹನು ತೋರು ನಮ್ಮೊಡನೆ
ಮೃತ್ಯು ನಿನಗಾನೆನ್ನೊಡನೆ ತಲೆ
ಯೊತ್ತಿನೋಡೆಂದೆನುತ ಬೊಬ್ಬಿರಿ
ವುತ್ತ ದೈತ್ಯನ ತರುಬಿದನು ಬಲವೆಲ್ಲ ಬೆರಗಾಗೆ ॥31॥
೦೩೨ ಎಲವೊ ನೆರೆ ...{Loading}...
ಎಲವೊ ನೆರೆ ಗಂಡಹೆ ಕಣಾ ನೀ
ಮಲೆತು ನಿಂದುದು ಸಾಲದೇ ಸುರ
ರೊಳಗೆ ಸಿತಗರ ಸೀಳುವೆನು ಮಾನವರ ಪಾಡೇನು
ಕಲಿತನಕೆ ಮೆಚ್ಚಿದೆನು ಸತ್ತರೆ
ಮೊಳೆಯದಿಹುದೇ ಕೀರ್ತಿ ರಿಪುಬಲ
ದೊಳಗೆ ದಿಟ್ಟನು ಕರ್ಣ ನೀನೆನುತಸುರ ಮಾರಾಂತ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲವೋ…. ನೀನು ಶೂರನಲ್ಲವೇ ? ನನ್ನನ್ನು ಪ್ರತಿಭಟಿಸಿ ನಿಂತಿರುವುದೇ ಸಾಲದೇ ? ದೇವತೆಗಳಲ್ಲಿ ಧೂರ್ತರನ್ನು ಸೀಳುವೆನು. ಮನುಷ್ಯರ ಪಾಡೇನು ? ನಿನ್ನ ಶೌರ್ಯವನ್ನು ಮೆಚ್ಚಿದೆ. ಒಂದು ವೇಳೆ ಯುದ್ಧದಲ್ಲಿ ಸತ್ತರೆ ಕೀರ್ತಿ ಚಿಗುರದೆ ಇರುತ್ತದೆಯೇ? ಶತ್ರು ಸೇನೆಯಲ್ಲಿ, ಕರ್ಣಾ, ನೀನೇ ಧೀರನು” ಎನ್ನುತ್ತಾ ರಾಕ್ಷಸನು ಪ್ರತಿಯಾಗಿ ಬಾಣಬಿಟ್ಟನು.
ಪದಾರ್ಥ (ಕ.ಗ.ಪ)
ಸಿತಗರು-ಧೂರ್ತರು.
ಮೂಲ ...{Loading}...
ಎಲವೊ ನೆರೆ ಗಂಡಹೆ ಕಣಾ ನೀ
ಮಲೆತು ನಿಂದುದು ಸಾಲದೇ ಸುರ
ರೊಳಗೆ ಸಿತಗರ ಸೀಳುವೆನು ಮಾನವರ ಪಾಡೇನು
ಕಲಿತನಕೆ ಮೆಚ್ಚಿದೆನು ಸತ್ತರೆ
ಮೊಳೆಯದಿಹುದೇ ಕೀರ್ತಿ ರಿಪುಬಲ
ದೊಳಗೆ ದಿಟ್ಟನು ಕರ್ಣ ನೀನೆನುತಸುರ ಮಾರಾಂತ ॥32॥
೦೩೩ ತಾನೆ ತನ್ನನೆ ...{Loading}...
ತಾನೆ ತನ್ನನೆ ಹೊಗಳಿಕೊಂಬರೆ
ಮಾನನಿಧಿಯಾದವರು ಸಾಕೀ
ದಾನವರ ಗರುವಾಯಿ ಭಾರಿಯ ಭಂಡವಿದ್ಯೆಗಳು
ಏನು ಹೊಸತೆಂತೆಂತು ಶರಸಂ
ಧಾನವುಳಿದಗ್ಗಳಿಕೆಗಳ ಮಾ
ತೇನು ಬಲ್ಲರೆ ಬಿಲ್ಲ ಹಿಡಿ ಹಿಡಿ ಕಾಣಲಹುದೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಾನನಿಧಿಯಾದವರು ತನ್ನನ್ನು ತಾನೇ ಹೊಗಳಿ ಕೊಳ್ಳುವರೇ ? ಈ ರಾಕ್ಷಸರ ಹಿರಿತನ, ಭಾರಿಯ ಭಂಡವಿದ್ಯೆಗಳು ಸಾಕು. ಹೊಸದೇನಿದೆ ? ಹೇಗೆ ಹೇಗೆ ಶರಸಂಧಾನ ಮಾಡುವೆ ? ಉಳಿದ ಹಿರಿತನದ ಮಾತೇನು ? ಸಾಮಥ್ರ್ಯವಿದ್ದರೆ ಬಿಲ್ಲನ್ನು ಹಿಡಿ. ನಿನ್ನ ಶೌರ್ಯವನ್ನು ಆಗ ಕಾಣಬಹುದು” ಎಂದು ಕರ್ಣನು ಹೇಳಿದನು.
ಮೂಲ ...{Loading}...
ತಾನೆ ತನ್ನನೆ ಹೊಗಳಿಕೊಂಬರೆ
ಮಾನನಿಧಿಯಾದವರು ಸಾಕೀ
ದಾನವರ ಗರುವಾಯಿ ಭಾರಿಯ ಭಂಡವಿದ್ಯೆಗಳು
ಏನು ಹೊಸತೆಂತೆಂತು ಶರಸಂ
ಧಾನವುಳಿದಗ್ಗಳಿಕೆಗಳ ಮಾ
ತೇನು ಬಲ್ಲರೆ ಬಿಲ್ಲ ಹಿಡಿ ಹಿಡಿ ಕಾಣಲಹುದೆಂದ ॥33॥
೦೩೪ ಫಡ ದೊಠಾರಿಸಿ ...{Loading}...
ಫಡ ದೊಠಾರಿಸಿ ನುಡಿದ ಜಿಹ್ವೆಯ
ಹೆಡತಲೆಯಲುಗಿವೆನು ಕಣಾ ಕೇಳ್
ತೊಡಕಿ ತನ್ನಲಿ ಬದುಕುವವರಾರಿಂದ್ರ ಯಮರೊಳಗೆ
ಕಡುಹುಕಾರರ ಗರ್ವವಿಷಗಾ
ರುಡವನೆನ್ನಲಿ ನೋಡು ನೋಡೆನು
ತೊಡನೊಡನೆ ಶರವಳೆಯ ಕರೆದನು ಪವನಸುತಸೂನು ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಲೆ, ಸೊಕ್ಕಿ ನುಡಿದ ನಾಲಿಗೆಯ ತುದಿಯನ್ನು ಸೀಳುವೆನು-ಕಣಾ… ಕೇಳು ತನ್ನನ್ನು ಕೆಣಕಿ ಇಂದ್ರ ಯಮರುಗಳಲ್ಲಿ ಬದುಕುವವರಾರು ? ಪರಾಕ್ರಮಿಗಳ ಗರ್ವವನ್ನು ಇಳಿಸುವ ವಿಷಗಾರುಡವನ್ನು ನನ್ನಲ್ಲಿ ನೋಡು, ನೋಡು” ಎನ್ನುತ್ತಾ ಭೀಮಸುತ ಘಟೋತ್ಕಚನು ಒಂದೇ ಸಮನೆ ಬಾಣಗಳ ಮಳೆ ಕರೆದನು.
ಮೂಲ ...{Loading}...
ಫಡ ದೊಠಾರಿಸಿ ನುಡಿದ ಜಿಹ್ವೆಯ
ಹೆಡತಲೆಯಲುಗಿವೆನು ಕಣಾ ಕೇಳ್
ತೊಡಕಿ ತನ್ನಲಿ ಬದುಕುವವರಾರಿಂದ್ರ ಯಮರೊಳಗೆ
ಕಡುಹುಕಾರರ ಗರ್ವವಿಷಗಾ
ರುಡವನೆನ್ನಲಿ ನೋಡು ನೋಡೆನು
ತೊಡನೊಡನೆ ಶರವಳೆಯ ಕರೆದನು ಪವನಸುತಸೂನು ॥34॥
೦೩೫ ದಾನವರು ದಕ್ಕಡರು ...{Loading}...
ದಾನವರು ದಕ್ಕಡರು ಧೈರ್ಯೋ
ದ್ದಾನಶೀಲರು ಘಾಯವನು ಗಿರಿ
ಯಾನಬಾರದು ಮುಷಿ ್ಟಬಲವೆಗ್ಗಳರು ಸತ್ವದಲಿ
ಈ ನಿರಂತರ ಬಾಣ ರಚನಾ
ನೂನ ಧನುರಭ್ಯಾಸದನುವನ
ದೇನ ಹೇಳುವೆ ಲೇಸೆನುತ ಕಲಿಕರ್ಣ ತೆಗೆದೆಚ್ಚ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಕ್ಷಸರು, ಗಟ್ಟಿಗರು, ಧೈರ್ಯದಿಂದ ಕೆಲಸ ಮಾಡುವವರು ಮುಷ್ಠಿ ಬಲ ಶ್ರೇಷ್ಠರು, ಸತ್ವ ನಿಷ್ಠರಾಗಿದ್ದು ಘಾಯಕ್ಕೆ ಲೆಕ್ಕಿಸದೆ ಬೆಟ್ಟದಷ್ಟೇ ಅಚಲರಾಗಿರಬೇಕು. ಈ ನಿರಂತರವಾದ ಬಾಣ ಪ್ರಯೋಗವು ಹೊಸದಾಗಿದೆ. ಇಂತಹ ಯಾವುದೇ ಊನವಿಲ್ಲದ ಧನುಸ್ಸಿನ ಅಭ್ಯಾಸದ ರೀತಿಯನ್ನು ಏನು ಹೇಳಲಿ ? ಒಳ್ಳೆಯದು” ಎನ್ನುತ್ತಾ ಶೂರ ಕರ್ಣನು ಬಾಣವನ್ನು ಸೆಳೆದು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ದಕ್ಕಡರು-ಗಟ್ಟಿಗರು, ಧೈರ್ಯಶಾಲಿಗಳು, ಅನೂನ-ಊನವಿಲ್ಲದ, ಕೊರತೆಯಿಲ್ಲದ
ಮೂಲ ...{Loading}...
ದಾನವರು ದಕ್ಕಡರು ಧೈರ್ಯೋ
ದ್ದಾನಶೀಲರು ಘಾಯವನು ಗಿರಿ
ಯಾನಬಾರದು ಮುಷಿ ್ಟಬಲವೆಗ್ಗಳರು ಸತ್ವದಲಿ
ಈ ನಿರಂತರ ಬಾಣ ರಚನಾ
ನೂನ ಧನುರಭ್ಯಾಸದನುವನ
ದೇನ ಹೇಳುವೆ ಲೇಸೆನುತ ಕಲಿಕರ್ಣ ತೆಗೆದೆಚ್ಚ ॥35॥
೦೩೬ ಹಾರಿದವು ಗರಿಸಹಿತ ...{Loading}...
ಹಾರಿದವು ಗರಿಸಹಿತ ದೇಹವ
ಡೋರುಗಳೆದಂಬುಗಳು ನೆತ್ತರ
ಜೋರು ಮಸಗಿತು ಕೂಡೆ ಜಾಜಿನ ಗಿರಿಯ ರೌಕುಳದ
ಏರ ಬಾಯ್ಗಳ ತಳಿತಖಂಡದ
ಸೂರೆಗೊಂಡವು ಹಿಂದಣಂಬುಗ
ಳಾರೆನಭಿವರ್ಣಿಸಲು ಕರ್ಣಘಟೋತ್ಕಚಾಹವವ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಬಾಣಗಳು ಗರಿ ಸಹಿತ ಹಾರಿದವು. ರಾಕ್ಷಸನ ದೇಹವನ್ನು ತೂತು ಮಾಡಿದವು. ಕೆಂಪು ಕಲ್ಲಿನ ಪರ್ವತದಿಂದ ಹೆಚ್ಚಾದ ರಕ್ತದ ಕೋಡಿ ಹರಿದು ವ್ಯಾಪಿಸಿತು. ಪ್ರಯೋಗಿಸಿದ ಬಾಣಗಳು ಗಾಯಗಳನ್ನು ಮಾಡಿ, ಮಾಂಸ ಖಂಡಗಳು ಹೊರಗೆ ಬರುವಂತೆ ಮಾಡಿದವು. ಕರ್ಣ ಘಟೋತ್ಕಚರ ಕಾಳಗವನ್ನು ಅಭಿವರ್ಣಿಸಲು ಸಾಧ್ಯವಿಲ್ಲ.
ಪದಾರ್ಥ (ಕ.ಗ.ಪ)
ಡೋರು-ತೂತು,
ರೌಕುಳ-ಆಧಿಕ್ಯ, ಹೆಚ್ಚಳ,
ಜಾಜಿನಗಿರಿ-ಕೆಂಪುಕಲ್ಲಿನ ಪರ್ವತ,
ಏರ-ಗಾಯ, ಪೆಟ್ಟು,
ಮೂಲ ...{Loading}...
ಹಾರಿದವು ಗರಿಸಹಿತ ದೇಹವ
ಡೋರುಗಳೆದಂಬುಗಳು ನೆತ್ತರ
ಜೋರು ಮಸಗಿತು ಕೂಡೆ ಜಾಜಿನ ಗಿರಿಯ ರೌಕುಳದ
ಏರ ಬಾಯ್ಗಳ ತಳಿತಖಂಡದ
ಸೂರೆಗೊಂಡವು ಹಿಂದಣಂಬುಗ
ಳಾರೆನಭಿವರ್ಣಿಸಲು ಕರ್ಣಘಟೋತ್ಕಚಾಹವವ ॥36॥
೦೩೭ ತಾರಕನ ಕೈಟಭನ ...{Loading}...
ತಾರಕನ ಕೈಟಭನ ಮಹಿಷನ
ವೀರಜಂಭನ ಕಾಲನೇಮಿಯ
ತಾರಕಾಕ್ಷನ ಕುಂಭಕರ್ಣನ ಮುರ ಗುಹಾಸುರನ
ಆರುಭಟೆ ರಣದುಬ್ಬಟೆಯ ಜ
ಜ್ಝಾರತನವಿವನೊಬ್ಬನಲಿ ಕೈ
ವಾರವೇ ನೆರೆ ಕಾಣಲಾಯ್ತೆಂದುದು ಸುರಸ್ತೋಮ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾರಕ, ಕೈಟಭ, ಮಹಿಷ, ವೀರಜಂಭ, ಕಾಲನೇಮಿ, ತಾರಕಾಕ್ಷ, ಕುಂಭಕರ್ಣ, ಮುರ, ಗುಹಾಸುರ ಇವರೆಲ್ಲರ ಆರ್ಭಟ, ರಣಾವೇಶದ ಪರಾಕ್ರಮವನ್ನು ಇವನೊಬ್ಬನಲ್ಲಿಯೇ ವಿಶೇಷವಾಗಿ ಕಾಣಲು ಸಾಧ್ಯವಾಯಿತು” ಎಂದು ದೇವ ಸಮೂಹದವರು ಹೊಗಳಿದರು.
ಪದಾರ್ಥ (ಕ.ಗ.ಪ)
ಜಜ್ಝಾರತನ-ಪರಾಕ್ರಮ, ಹೆಮ್ಮೆ, ಹಿರಿತನ,
ಮೂಲ ...{Loading}...
ತಾರಕನ ಕೈಟಭನ ಮಹಿಷನ
ವೀರಜಂಭನ ಕಾಲನೇಮಿಯ
ತಾರಕಾಕ್ಷನ ಕುಂಭಕರ್ಣನ ಮುರ ಗುಹಾಸುರನ
ಆರುಭಟೆ ರಣದುಬ್ಬಟೆಯ ಜ
ಜ್ಝಾರತನವಿವನೊಬ್ಬನಲಿ ಕೈ
ವಾರವೇ ನೆರೆ ಕಾಣಲಾಯ್ತೆಂದುದು ಸುರಸ್ತೋಮ ॥37॥
೦೩೮ ನಿಲುವಡಸುರನ ಮುನ್ದೆ ...{Loading}...
ನಿಲುವಡಸುರನ ಮುಂದೆ ಕರ್ಣನೆ
ನಿಲಲು ಬೇಹುದು ಕರ್ಣನುರುಬೆಗೆ
ನಿಲುವಡೀಯಮರಾರಿಗೊಪ್ಪುವುದೈ ಮಹಾದೇವ
ಉಳಿದ ಭೂರಿಯ ಬಣಗುಗಳು ವೆ
ಗ್ಗಳೆಯವೆಸರಿಗೆ ನೋಂತರೇ ಕುರು
ಬಲದೊಳರಿಬಲದೊಳಗೆ ಸರಿಯಿನ್ನಿವರಿಗಿಲ್ಲೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಲ್ಲುವುದಾದರೆ ರಾಕ್ಷಸನ ಮುಂದೆ ಕರ್ಣನೇ ನಿಲ್ಲಲು ಸಾಧ್ಯ. ಹೇ ಮಹಾದೇವ…. ಕರ್ಣನ ಅತಿಶಯವಾದ ವೇಗವನ್ನು ತಡೆದು ನಿಲ್ಲುವುದಾದರೆ ರಾಕ್ಷಸನಾದ ಘಟೋತ್ಕಚನಿಗೆ ಮಾತ್ರ ಶೋಭಿಸುತ್ತದೆ. ಉಳಿದ ಹೆಚ್ಚಿನ ಜನರು ಶ್ರೇಷ್ಠರೆಂಬ ಹೆಸರು ಗಳಿಸುವಷ್ಟು ಪುಣ್ಯ ಮಾಡಿದ್ದರೇ? ಕುರುಸೇನೆ ಹಾಗೂ ಶತ್ರುಸೇನೆಯೊಳಗೆ ಇವರಿಬ್ಬರಿಗೆ ಸರಿಸಮರು ಇಲ್ಲ” ಎಂದು ಸಂಜಯನು ಹೇಳಿದನು.
ಮೂಲ ...{Loading}...
ನಿಲುವಡಸುರನ ಮುಂದೆ ಕರ್ಣನೆ
ನಿಲಲು ಬೇಹುದು ಕರ್ಣನುರುಬೆಗೆ
ನಿಲುವಡೀಯಮರಾರಿಗೊಪ್ಪುವುದೈ ಮಹಾದೇವ
ಉಳಿದ ಭೂರಿಯ ಬಣಗುಗಳು ವೆ
ಗ್ಗಳೆಯವೆಸರಿಗೆ ನೋಂತರೇ ಕುರು
ಬಲದೊಳರಿಬಲದೊಳಗೆ ಸರಿಯಿನ್ನಿವರಿಗಿಲ್ಲೆಂದ ॥38॥
೦೩೯ ಎರಡು ಬಲವಿವರಿಬ್ಬರಾಹವ ...{Loading}...
ಎರಡು ಬಲವಿವರಿಬ್ಬರಾಹವ
ದುರವಣೆಯನೇ ನೋಡುತಿರ್ದುದು
ಸರಿಮಿಗಿಲ ಕಾದಿದರು ಶಿವ ಶಿವ ಭಾರಿಯಂಕದಲಿ
ಸರಳು ತೀರಲು ತೀರದಸುರನ
ಕೆರಳಿದುರಿ ಕುಡಿಯಿಟ್ಟುದಿವನ
ಬ್ಬರಣೆ ಕೆಡೆಬೀಳೆನುತ ಶೂಲದಲಿಟ್ಟನಿನಸುತನ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಸೇನೆ ಇವರಿಬ್ಬರ ಯುದ್ಧದ ಸಂಭ್ರಮವನ್ನೇ ನೋಡುತ್ತಿತ್ತು. ಶಿವ, ಶಿವ… ಈ ಮಹಾಯುದ್ಧದಲ್ಲಿ ಇಬ್ಬರೂ ಸರಿಮಿಗಿಲೆನಿಸಿ ಕಾದಿದರು. ಬಾಣ ಮುಗಿದರೂ, ರಾಕ್ಷಸನ ಕೆರಳಿದ ಉರಿ ತೀರಲಿಲ್ಲ, ಇವನ ಆರ್ಭಟ ವ್ಯಾಪಿಸಿತು, ಚಿಗುರಿತು. ಕೆಳಗೆ ಬೀಳು ಎನ್ನುತ್ತಾ ಕರ್ಣನ ಮೇಲೆ ಶೂಲವನ್ನು ಪ್ರಯೋಗಿಸಿದನು.
ಮೂಲ ...{Loading}...
ಎರಡು ಬಲವಿವರಿಬ್ಬರಾಹವ
ದುರವಣೆಯನೇ ನೋಡುತಿರ್ದುದು
ಸರಿಮಿಗಿಲ ಕಾದಿದರು ಶಿವ ಶಿವ ಭಾರಿಯಂಕದಲಿ
ಸರಳು ತೀರಲು ತೀರದಸುರನ
ಕೆರಳಿದುರಿ ಕುಡಿಯಿಟ್ಟುದಿವನ
ಬ್ಬರಣೆ ಕೆಡೆಬೀಳೆನುತ ಶೂಲದಲಿಟ್ಟನಿನಸುತನ ॥39॥
೦೪೦ ಹೊಗರುಗಿಡಿಗಳ ಬಾಯಿಧಾರೆಯ ...{Loading}...
ಹೊಗರುಗಿಡಿಗಳ ಬಾಯಿಧಾರೆಯ
ಲೊಗೆವ ಹೊಗೆಗಳ ಹೊದರಿನುರಿ ಜಾ
ಳಿಗೆಯ ಭೋಂಕಾರದ ಭಯಂಕರ ಶೂಲವೈತರಲು
ನಗುತ ಮೂರಂಬಿನಲಿ ಕೈದುವ
ತೆಗೆಸಿದನು ನೆರೆ ಹತ್ತು ಶರವನು
ಹಗೆಯ ಹೇರುರದೊಳಗೆ ಹೂಳಿದು ಕರ್ಣ ಬೊಬ್ಬಿರಿದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಳೆಯುವ ಕಿಡಿಗಳನ್ನು ಚಿಮ್ಮಿಸುತ್ತಾ, ಚೂಪಾದ ತುದಿಯಿಂದ ಹೊಗೆಯನ್ನು ಹೊಮ್ಮಿಸುತ್ತಾ, ವ್ಯಾಪಿಸುವ ಉರಿಯನ್ನು ಹಬ್ಬಿಸುತ್ತಾ, ಆರ್ಭಟದ ಶಬ್ದದಿಂದ ಕೂಡಿದ, ಭಯಂಕರವಾದ ಶೂಲವು ತನ್ನಡೆಗೆ ಬರಲು, ಕರ್ಣನು ನಗುತ್ತಾ ಮೂರು ಬಾಣಗಳಿಂದ ಆ ಆಯುಧವನ್ನು ಕತ್ತರಿಸಿದನು. ನಂತರ ವಿಶೇಷವಾದ ಹತ್ತು ಬಾಣಗಳನ್ನು ಶತ್ರುವಿನ ವಿಶಾಲವಾದ ಎದೆಗೆ ನಾಟುವಂತೆ ಪ್ರಯೋಗಿಸಿ ಬೊಬ್ಬಿರಿದನು.
ಮೂಲ ...{Loading}...
ಹೊಗರುಗಿಡಿಗಳ ಬಾಯಿಧಾರೆಯ
ಲೊಗೆವ ಹೊಗೆಗಳ ಹೊದರಿನುರಿ ಜಾ
ಳಿಗೆಯ ಭೋಂಕಾರದ ಭಯಂಕರ ಶೂಲವೈತರಲು
ನಗುತ ಮೂರಂಬಿನಲಿ ಕೈದುವ
ತೆಗೆಸಿದನು ನೆರೆ ಹತ್ತು ಶರವನು
ಹಗೆಯ ಹೇರುರದೊಳಗೆ ಹೂಳಿದು ಕರ್ಣ ಬೊಬ್ಬಿರಿದ ॥40॥
೦೪೧ ದರಿಗಳೊಳು ದರ್ವೀಕರಾವಳಿ ...{Loading}...
ದರಿಗಳೊಳು ದರ್ವೀಕರಾವಳಿ
ಯುರವಣಿಸಿದರೆ ಬಲ್ಲುದೇ ಕುಲ
ಗಿರಿ ಮಹಾದೇವಾವ ಸತ್ವವೊ ದಾನವೇಶ್ವರಗೆ
ಅರಿಯ ಶರಹತಿಗೊಡಲು ನೆರೆ ಜ
ಜ್ಝರಿತವಾಗಲು ನೊಂದುದಿಲ್ಲ
ಬ್ಬರಿಸಿ ಪರಿಘದಲಿಟ್ಟನಂಬುಜಬಂಧುನಂದನನ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುಹೆ, ಕಣಿವೆ ಪ್ರದೇಶಗಳಲ್ಲಿ ಸರ್ಪಗಳ ಸಮೂಹ ವೇಗವಾಗಿ ಬಂದರೆ ಕುಲಪರ್ವತಕ್ಕೆ ತಿಳಿಯುವುದೇ ? ಮಹಾದೇವ…. ಈ ದಾನವೇಶ್ವರನಿಗೆ ಯಾವ ಸತ್ವವೋ ? ಶತ್ರುವಿನ ಬಾಣಗಳ ಹೊಡೆತಕ್ಕೆ ರಾಕ್ಷಸನ ದೇಹ ಸ್ವಲ್ಪವೂ ಶಿಥಿಲವಾಗಲಿಲ್ಲ, ನೋವು ಗೊತ್ತಾಗಲಿಲ್ಲ. ಆರ್ಭಟಿಸಿ ಪರಿಘವೆಂಬ ಆಯುಧವನ್ನು ಕಮಲಸಖ ಸೂರ್ಯನ ಪುತ್ರ ಕರ್ಣನ ಮೇಲೆ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ದರಿ-ಗುಹೆ, ಗವಿ, ಕಣಿವೆ,
ದರ್ವೀಕರಾವಳಿ-ಸರ್ಪಗಳ ಸಮೂಹ,
ಮೂಲ ...{Loading}...
ದರಿಗಳೊಳು ದರ್ವೀಕರಾವಳಿ
ಯುರವಣಿಸಿದರೆ ಬಲ್ಲುದೇ ಕುಲ
ಗಿರಿ ಮಹಾದೇವಾವ ಸತ್ವವೊ ದಾನವೇಶ್ವರಗೆ
ಅರಿಯ ಶರಹತಿಗೊಡಲು ನೆರೆ ಜ
ಜ್ಝರಿತವಾಗಲು ನೊಂದುದಿಲ್ಲ
ಬ್ಬರಿಸಿ ಪರಿಘದಲಿಟ್ಟನಂಬುಜಬಂಧುನಂದನನ ॥41॥
೦೪೨ ತಿರುಗುತೈತಹ ಪರಿಘ ...{Loading}...
ತಿರುಗುತೈತಹ ಪರಿಘ ಕಾಂತರೆ
ಗಿರಿಗಳಡಿ ಮೇಲಹವು ನಾವಿ
ನ್ನರಸ ಹೇಳುವುದೇನು ಕರ್ಣನ ಬಾಹುವಿಕ್ರಮವ
ಪರಿಘವದು ಪರಮಾಣುಮಯವಾ
ಯ್ತೆರಡುಶರದಲಿ ಸಾರಥಿಯನಿ
ಟ್ಟೊರಸಿದನು ಹದಿನೈದು ಶರದಲಿ ರಥದ ಕುದುರೆಗಳ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿರುಗುತ್ತ ಬರುವ ಪರಿಘಕ್ಕೆ ಒಡ್ಡಿಕೊಂಡರೆ ಗಿರಿಗಳೂ ಅಡಿಮೇಲಾಗಬೇಕು. ಅರಸನೇ, ನಾವು ಹೇಳುವುದೇನು ? ಕರ್ಣನ ಬಾಹು ವಿಕ್ರಮದ ಬಗ್ಗೆ ಹೇಳುವುದೇನಿದೆ ? ಆ ಪರಿಘವು ಪರಮಾಣುಮಯವಾಯ್ತು. ಎರಡು ಬಾಣಗಳಲ್ಲಿ ಸಾರಥಿಯನ್ನು ನಾಶಗೊಳಿಸಿದನು. ಹದಿನೈದು ಬಾಣಗಳಲ್ಲಿ ರಥದ ಕುದುರೆಗಳನ್ನು ನಾಶಗೈದನು.
ಮೂಲ ...{Loading}...
ತಿರುಗುತೈತಹ ಪರಿಘ ಕಾಂತರೆ
ಗಿರಿಗಳಡಿ ಮೇಲಹವು ನಾವಿ
ನ್ನರಸ ಹೇಳುವುದೇನು ಕರ್ಣನ ಬಾಹುವಿಕ್ರಮವ
ಪರಿಘವದು ಪರಮಾಣುಮಯವಾ
ಯ್ತೆರಡುಶರದಲಿ ಸಾರಥಿಯನಿ
ಟ್ಟೊರಸಿದನು ಹದಿನೈದು ಶರದಲಿ ರಥದ ಕುದುರೆಗಳ ॥42॥
೦೪೩ ಸಮರಸಾಧನ ಸವೆಯೆ ...{Loading}...
ಸಮರಸಾಧನ ಸವೆಯೆ ಕೋಪದ
ತಿಮಿರ ಗರಿಗಟ್ಟಿತು ಮಹಾವಿ
ಕ್ರಮನ ಚಳಕವನೇನ ಹೇಳುವೆ ರಥದ ಬಳಸಿನಲಿ
ಸಮತಳಿಸಿ ಕೈದುಗಳ ಮಳೆಯನು
ದ್ಯುಮಣಿತನಯನ ಮೇಲೆ ಕರೆದನು
ನಿಮಿಷಕದ ಪರಿಹರಿಸಿ ದೈತ್ಯನನೆಚ್ಚನಾ ಕರ್ಣ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮರ ಸಾಧನ ಕ್ಷೀಣಿಸಲು ಘಟೋತ್ಕಚನು ಕೋಪಾಂಧನಾದನು. ರಥದ ಸುತ್ತ ಮಹಾಪರಾಕ್ರಮಿಯ ಕೈಚಳಕವನ್ನು ಏನು ಹೇಳಲಿ ? ದೈತ್ಯನು ಸಿದ್ಧನಾಗಿ ಸೂರ್ಯಪುತ್ರ ಕರ್ಣನ ಮೇಲೆ ಆಯುಧಗಳ ಮಳೆಯನ್ನೇ ಕರೆದನು. ಕರ್ಣನು ನಿಮಿಷ ಮಾತ್ರದಲ್ಲಿ ಅದನ್ನು ಪರಿಹರಿಸಿ ರಾಕ್ಷಸನ ಮೇಲೆ ಬಾಣ ಪ್ರಯೋಗ ಮಾಡಿದನು.
ಮೂಲ ...{Loading}...
ಸಮರಸಾಧನ ಸವೆಯೆ ಕೋಪದ
ತಿಮಿರ ಗರಿಗಟ್ಟಿತು ಮಹಾವಿ
ಕ್ರಮನ ಚಳಕವನೇನ ಹೇಳುವೆ ರಥದ ಬಳಸಿನಲಿ
ಸಮತಳಿಸಿ ಕೈದುಗಳ ಮಳೆಯನು
ದ್ಯುಮಣಿತನಯನ ಮೇಲೆ ಕರೆದನು
ನಿಮಿಷಕದ ಪರಿಹರಿಸಿ ದೈತ್ಯನನೆಚ್ಚನಾ ಕರ್ಣ ॥43॥
೦೪೪ ತೂರಿದರೆ ತನಿಹೊಟ್ಟು ...{Loading}...
ತೂರಿದರೆ ತನಿಹೊಟ್ಟು ಗಾಳಿಗೆ
ಹಾರುವುದು ಕುಲಗಿರಿಯ ಬೈಸಿಕೆ
ಜಾರುವುದೆ ಮಝ ಪೂತು ನಮ್ಮೀಯುಭಯ ಕಟಕದಲಿ
ತೋರಲಿಲ್ಲೆಣೆ ಜಗದೊಳೋಲೆಯ
ಕಾರ ನೀನಹೆಯೆನುತ ಸುರರಿರಿ
ಗಾರ ಕವಿದನು ಕರ್ಣನಳವಿಗೆ ಜಡಿವಡಾಯುಧದಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಳಿಗೆ ತೂರಿದರೆ ತನಿಹೊಟ್ಟು ಹಾರುವುದೇ ಹೊರತು ಕುಲಗಿರಿಯ ಬೆಸುಗೆ ಜಾರಿಹೋಗುತ್ತದೆಯೇ ? ಭಲೆ… ನಮ್ಮ ಈ ಎರಡೂ ಸೈನ್ಯದಲ್ಲಿ ನಮ್ಮ ಸರಿಸಮ ಯಾರೂ ಕಾಣಲಿಲ್ಲ. ಜಗತ್ತಿನಲ್ಲಿ ನೀನು ಪರಾಕ್ರಮಿಯಾಗಿದ್ದೀಯೆ. ಎನ್ನುತ್ತಾ ರಾಕ್ಷಸನು ಕರ್ಣನ ಸಾಮಥ್ರ್ಯಕ್ಕೆ ತಕ್ಕ ಅಡಾಯುಧದಿಂದ ಗರ್ಜಿಸುತ್ತ ಮುತ್ತಿದನು.
ಪದಾರ್ಥ (ಕ.ಗ.ಪ)
ಬೈಸಿಕೆ-ಬೆಸುಗೆ,
ಓಲೆಯಕಾರ-ವೀರ
ಸುರರಿರಿಗಾರ -ದೇವತೆಗಳ, ಇರಿಗಾರ ಇಲ್ಲಿ ಘಟೋತ್ಕಚ.
ಮೂಲ ...{Loading}...
ತೂರಿದರೆ ತನಿಹೊಟ್ಟು ಗಾಳಿಗೆ
ಹಾರುವುದು ಕುಲಗಿರಿಯ ಬೈಸಿಕೆ
ಜಾರುವುದೆ ಮಝ ಪೂತು ನಮ್ಮೀಯುಭಯ ಕಟಕದಲಿ
ತೋರಲಿಲ್ಲೆಣೆ ಜಗದೊಳೋಲೆಯ
ಕಾರ ನೀನಹೆಯೆನುತ ಸುರರಿರಿ
ಗಾರ ಕವಿದನು ಕರ್ಣನಳವಿಗೆ ಜಡಿವಡಾಯುಧದಿ ॥44॥
೦೪೫ ಫಡ ದೊಠಾರಿಸಿ ...{Loading}...
ಫಡ ದೊಠಾರಿಸಿ ನಿಂದರೆರಡೇ
ಕಡಿಯ ಮಾಡುವೆನೆಲವೊ ನಿನ್ನಯ
ಗಡಣಿಗರ ಕರೆ ಕಾಯ್ದುಕೊಳಲಿ ಸುಯೋಧನಾದಿಗಳು
ಮಡಮುರಿಯದಿದಿರಾಗು ರಕುತವ
ಕುಡಿಸುವೆನು ಕೂರಸಿಗೆನುತ ಕೊಲೆ
ಗಡಿಗನೌಕಿದಡಿದಿರ ಬಿಟ್ಟನು ಕರ್ಣ ಕೆಲ ಸಿಡಿದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಫಡ… ಸೊಕ್ಕಿ ನಿಂತರೆ ಎರಡು ತುಂಡಾಗಿ ಕತ್ತರಿಸುವೆನು. ಎಲವೋ….. ನಿನ್ನ ಗುಂಪಿನವರನ್ನು ಕರೆ ಸುಯೋಧನನೇ ಮೊದಲಾದವರು ಕಾಪಾಡಿಕೊಳ್ಳಲಿ. ಹಿಮ್ಮೆಟ್ಟದೆ ಎದುರಾಗು. ಹರಿತವಾದ ಕತ್ತಿಗೆ ರಕ್ತವನ್ನು ಕುಡಿಸುವೆನು-ಎನ್ನುತ್ತಾ ಕೊಲೆಗಡಿಕನು ಮುತ್ತಿ ಮೇಲೆ ಬರಲು ಕರ್ಣನು ಇದಿರು ನಿಲ್ಲದೆ ಪಕ್ಕಕ್ಕೆ ಹಾರಿದನು.
ಪದಾರ್ಥ (ಕ.ಗ.ಪ)
ದೊಠಾರಿಸಿ-ಸೊಕ್ಕಿ, ಗರ್ವಸಿ,
ಕಡಿಯ-ತುಂಡು,
ಮೂಲ ...{Loading}...
ಫಡ ದೊಠಾರಿಸಿ ನಿಂದರೆರಡೇ
ಕಡಿಯ ಮಾಡುವೆನೆಲವೊ ನಿನ್ನಯ
ಗಡಣಿಗರ ಕರೆ ಕಾಯ್ದುಕೊಳಲಿ ಸುಯೋಧನಾದಿಗಳು
ಮಡಮುರಿಯದಿದಿರಾಗು ರಕುತವ
ಕುಡಿಸುವೆನು ಕೂರಸಿಗೆನುತ ಕೊಲೆ
ಗಡಿಗನೌಕಿದಡಿದಿರ ಬಿಟ್ಟನು ಕರ್ಣ ಕೆಲ ಸಿಡಿದ ॥45॥
೦೪೬ ಅಹಹ ಶಿವಶಿವ ...{Loading}...
ಅಹಹ ಶಿವಶಿವ ದೈತ್ಯರಾಹು
ಗ್ರಹಣವಾಯಿತು ಕರ್ಣಸೂರ್ಯನ
ಮಹಿಮೆ ಮಸುಳಿತಕಟಕಟಾಯೆನುತಖಿಳಬಲ ಬೆದರೆ
ಅಹಿತನಿಟ್ಟಳಕಳುಕಿ ಕೆಲದಲಿ
ಮಿಹಿರನಂದನನೆಚ್ಚಡಂಬಿನ
ಲಹರಿ ಮಸಗಿತು ಖಳನ ಖಡುಗವ ಕಾಣೆನಾಕ್ಷಣಕೆ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಹಹ…. ಶಿವ ಶಿವ, ಕರ್ಣನೆಂಬ ಸೂರ್ಯನಿಗೆ ದೈತ್ಯನೆಂಬ ರಾಹು ಗ್ರಹಣವಾಯ್ತು. ಕರ್ಣನ ಮಹಿಮೆ ಇಳಿಮುಖವಾಯಿತು ಅಯ್ಯೋ ಎನ್ನುತ್ತಾ ಇಡೀ ಸೈನ್ಯ ಬೆದರಲಾಗಿ, ಶತ್ರುವಾದ ರಾಕ್ಷಸನನ ಹೊಡೆತಕ್ಕೆ ಅಳುಕಿ ಪಕ್ಕದಲ್ಲೇ ಇದ್ದ ಸೂರ್ಯಪುತ್ರನು ಬಾಣ ಪ್ರಯೋಗಿಸಲು ಬಾಣಗಳ ಸಮೂಹವೇ ವ್ಯಾಪಿಸಿ ಆ ಕ್ಷಣದಲ್ಲಿ ದುಷ್ಟನ ಖಡ್ಗವೂ ಕಾಣದಂತಾಯಿತು.
ಪದಾರ್ಥ (ಕ.ಗ.ಪ)
ಮಿಹಿರ-ಸೂರ್ಯ,
ಇಟ್ಟಳ - ಹೊಡೆತ
ಮೂಲ ...{Loading}...
ಅಹಹ ಶಿವಶಿವ ದೈತ್ಯರಾಹು
ಗ್ರಹಣವಾಯಿತು ಕರ್ಣಸೂರ್ಯನ
ಮಹಿಮೆ ಮಸುಳಿತಕಟಕಟಾಯೆನುತಖಿಳಬಲ ಬೆದರೆ
ಅಹಿತನಿಟ್ಟಳಕಳುಕಿ ಕೆಲದಲಿ
ಮಿಹಿರನಂದನನೆಚ್ಚಡಂಬಿನ
ಲಹರಿ ಮಸಗಿತು ಖಳನ ಖಡುಗವ ಕಾಣೆನಾಕ್ಷಣಕೆ ॥46॥
೦೪೭ ಚಾರಿವರಿದನು ದನುಜ ...{Loading}...
ಚಾರಿವರಿದನು ದನುಜ ಮಡ್ಡು ಕ
ಠಾರಿಯಲಿ ಕರ್ಣಾಸ್ತ್ರಧಾರಾ
ಸಾರದಲಿ ಮೈನನೆದು ಹೊನಲಿಡುವರುಣವಾರಿಯಲಿ
ಆರಿವನು ಹೈಡಿಂಬನೀಚೆಯ
ಲಾರು ಭೀಮಜನಿತ್ತಲಾರು ಬ
ಕಾರಿನಂದನನೆನಲು ಬಲವಿರುಳಸುರಮಯವಾಯ್ತು ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಡ್ಡು, ಕಠಾರಿ ಹಿಡಿದು ಕುಣಿಯುತ್ತಾ, ಕರ್ಣನ ಅಸ್ತ್ರದಿಂದ ಘಾಯಗೊಂಡು ಘಟೋತ್ಕಚನು ಮೈಮೇಲೆ ಹರಿಯುತ್ತಿರುವ ರಕ್ತದ ಹೊನಲಿನ ಮಧ್ಯೆಯೆ ಮುಂದೆ ನುಗ್ಗಿದನು. ಇವನು ಯಾರು ? ಹೈಡಿಂಬನು. ಈ ಕಡೆ ಯಾರು ? ಭೀಮಪುತ್ರನು. ಈ ಕಡೆ ಯರು? ಬಕಾಸುರನ ಶತ್ರು ಭೀಮನ ಪುತ್ರ ಘಟೋತ್ಕಚನು ಎನ್ನುವಂತೆ ಸೈನ್ಯವು ಆ ರಾತ್ರಿ ರಾಕ್ಷಸಮಯವಾಯಿತು.
ಪದಾರ್ಥ (ಕ.ಗ.ಪ)
ಮಡ್ಡು-ಒಂದು ಬಗೆಯ ಆಯುಧ
ಮೂಲ ...{Loading}...
ಚಾರಿವರಿದನು ದನುಜ ಮಡ್ಡು ಕ
ಠಾರಿಯಲಿ ಕರ್ಣಾಸ್ತ್ರಧಾರಾ
ಸಾರದಲಿ ಮೈನನೆದು ಹೊನಲಿಡುವರುಣವಾರಿಯಲಿ
ಆರಿವನು ಹೈಡಿಂಬನೀಚೆಯ
ಲಾರು ಭೀಮಜನಿತ್ತಲಾರು ಬ
ಕಾರಿನಂದನನೆನಲು ಬಲವಿರುಳಸುರಮಯವಾಯ್ತು ॥47॥
೦೪೮ ಅಣೆದನಶ್ವತ್ಥಾಮನನು ತ ...{Loading}...
ಅಣೆದನಶ್ವತ್ಥಾಮನನು ತ
ಕ್ಷಣದೊಳರಸನ ತಾಗಿ ದ್ರೋಣನ
ಕೆಣಕಿ ದುಶ್ಯಾಸನನ ಮಸೆಗಾಣಿಸಿ ಕೃಪಾದಿಗಳ
ರಣದೊಳೋಡಿಸಿ ಮುರಿದು ಕರ್ಣನ
ಸೆಣಸಿ ನಿಂದನು ಮತ್ತೆ ಸಮರಾಂ
ಗಣದ ಚೌಪಟಮಲ್ಲನಿತ್ತನು ಪಡೆಗೆ ತಲ್ಲಣವ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನನ್ನು ತಿವಿದನು. ತಕ್ಷಣವೇ ಅರಸನನ್ನು ತಾಗಿ, ದ್ರೋಣನನ್ನು ಕೆಣಕಿ, ದುಶ್ಶಾಸನನನ್ನು ಗಾಯಗೊಳಿಸಿ, ಕೃಪಾದಿಗಳನ್ನು ರಣರಂಗದಿಂದ ಓಡಿಸಿ, ಹಿಂತಿರುಗಿ ಬಂದು ಕರ್ಣನನ್ನು ಎದುರಿಸಿ ನಿಂತನು. ಯುದ್ಧಭೂಮಿಯ ಕುಶಲ ಪರಾಕ್ರಮಿ ಘಟೋತ್ಕಚನು ಸೇನೆಯು ತಲ್ಲಣಗೊಳ್ಳುವಂತೆ ಮಾಡಿದನು.
ಪದಾರ್ಥ (ಕ.ಗ.ಪ)
ಅಣೆ-ತಿವಿ, ಹೊಡೆ,
ಮೂಲ ...{Loading}...
ಅಣೆದನಶ್ವತ್ಥಾಮನನು ತ
ಕ್ಷಣದೊಳರಸನ ತಾಗಿ ದ್ರೋಣನ
ಕೆಣಕಿ ದುಶ್ಯಾಸನನ ಮಸೆಗಾಣಿಸಿ ಕೃಪಾದಿಗಳ
ರಣದೊಳೋಡಿಸಿ ಮುರಿದು ಕರ್ಣನ
ಸೆಣಸಿ ನಿಂದನು ಮತ್ತೆ ಸಮರಾಂ
ಗಣದ ಚೌಪಟಮಲ್ಲನಿತ್ತನು ಪಡೆಗೆ ತಲ್ಲಣವ ॥48॥
೦೪೯ ಬರಿಯ ಕಕ್ಕುಲಿತೆಯಲಿ ...{Loading}...
ಬರಿಯ ಕಕ್ಕುಲಿತೆಯಲಿ ಕರ್ಣನ
ಮರೆಯ ಹೊಕ್ಕೆವು ಕರ್ಣನೀತನ
ತರುಬಿದನಲಾ ಶಕ್ತಿಯಾವೆಡೆಯೆಂದು ಕೆಲಕೆಲರು
ಕರುಬುತನವೇಕಕಟ ಪುಣ್ಯದ
ಕೊರತೆ ನಮ್ಮದು ಕರ್ಣನೇಗುವ
ನಿರಿತಕಂಜಿದ ನಾವೆ ಬಾಹಿರರೆಂದರುಳಿದವರು ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೇವಲ ತವಕದಿಂದ ಕರ್ಣನ ಆಶ್ರಯ ಪಡೆದೆವು. ಕರ್ಣನು ಈತನನ್ನು ಅಡ್ಡಗಟ್ಟಿ ನಿಗ್ರಹಿಸಿದನಲ್ಲಾ… ಯಾರಲ್ಲಿ ಶಕ್ತಿ ಹೆಚ್ಚು ?” ಎಂದು ಕೆಲವರು ಆಡಿಕೊಂಡರು. “ಅಸೂಯೆ ಏಕೆ ? ಅಯ್ಯೋ… ಪುಣ್ಯದ ಕೊರತೆ ನಮ್ಮದು. ಕರ್ಣನು ಏನು ತಾನೇ ಮಾಡಿಯಾನು ? ಘಟೋತ್ಕಚನ ಇರಿತಕ್ಕೆ ಅಂಜಿದ. ನಾವೇ ಅದೃಷ್ಟಭ್ರಷ್ಟರು” ಎಂದರು ಉಳಿದವರು.
ಮೂಲ ...{Loading}...
ಬರಿಯ ಕಕ್ಕುಲಿತೆಯಲಿ ಕರ್ಣನ
ಮರೆಯ ಹೊಕ್ಕೆವು ಕರ್ಣನೀತನ
ತರುಬಿದನಲಾ ಶಕ್ತಿಯಾವೆಡೆಯೆಂದು ಕೆಲಕೆಲರು
ಕರುಬುತನವೇಕಕಟ ಪುಣ್ಯದ
ಕೊರತೆ ನಮ್ಮದು ಕರ್ಣನೇಗುವ
ನಿರಿತಕಂಜಿದ ನಾವೆ ಬಾಹಿರರೆಂದರುಳಿದವರು ॥49॥
೦೫೦ ಕಾರಿಸುವೆನಿವನಸುವನಿವ ಮೈ ...{Loading}...
ಕಾರಿಸುವೆನಿವನಸುವನಿವ ಮೈ
ದೋರಿ ನಿಂದರೆ ನಿಮಿಷದಲಿ ಬಾ
ಯಾರದಿರಿ ಕಳ್ಳೇರುಕಾರನ ಕರುಳ ಹರಹುವೆನು
ಜಾರದಿರಿಯೆನುತಭಯಹಸ್ತವ
ತೋರಿ ತುಡುಕಿದನುಗ್ರಧಾರೆಯ
ತೂರುಗಿಡಿಗಳ ತುರುಗಿದುರಿಯ ಮಹಾಸ್ತ್ರವನು ಕರ್ಣ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಕ್ಷಸನು ಮೈಯೊಡ್ಡಿ ನಿಂದರೆ ನಿಮಿಷದಲ್ಲಿ ಅವನ ಕಾಯದಿಂದ ಪ್ರಾಣ ಹೊರಗೆ ಬರುವಂತೆ ಮಾಡುವೆನು. ವ್ಯರ್ಥ ಮಾತುಗಳನ್ನಾಡದಿರಿ. ಈ ಮಾಯಾವಿಯ ಕರುಳನ್ನು ಹೊರತೆಗೆಯುವೆನು, ಜಾರಿಕೊಳ್ಳಬೇಡಿ.” ಎನ್ನುತ್ತಾ ಅಭಯ ಹಸ್ತವನ್ನು ತೋರಿ, ಉಗ್ರಧಾರೆಯ, ಕಿಡಿಯನ್ನು ತೂರುವ, ದಟ್ಟವಾದ ಉರಿಯ ಮಹಾಸ್ತ್ರವನ್ನು ಪ್ರಯೋಗಿಸಲು ಕರ್ಣನು ಮುಂದಾದನು.
ಪದಾರ್ಥ (ಕ.ಗ.ಪ)
ಕಳ್ಳೇರುಕಾರ-ಮಾಯಾವಿ,
ತುರುಗಿದ-ದಟ್ಟವಾದ
ಮೂಲ ...{Loading}...
ಕಾರಿಸುವೆನಿವನಸುವನಿವ ಮೈ
ದೋರಿ ನಿಂದರೆ ನಿಮಿಷದಲಿ ಬಾ
ಯಾರದಿರಿ ಕಳ್ಳೇರುಕಾರನ ಕರುಳ ಹರಹುವೆನು
ಜಾರದಿರಿಯೆನುತಭಯಹಸ್ತವ
ತೋರಿ ತುಡುಕಿದನುಗ್ರಧಾರೆಯ
ತೂರುಗಿಡಿಗಳ ತುರುಗಿದುರಿಯ ಮಹಾಸ್ತ್ರವನು ಕರ್ಣ ॥50॥
೦೫೧ ತಳಿತ ಕಿಡಿಗಳ ...{Loading}...
ತಳಿತ ಕಿಡಿಗಳ ಕೈದುವಿನ ಮೈ
ಝಳದ ಝಾಡಿಯೊಳುಭಯ ಬಲದ
ಗ್ಗಳದ ಹರುಷ ವಿಷಾದ ವಾರಿಧಿ ಕಾಲುಹೊಳೆಯಾಯ್ತು
ಬಿಳಿಯ ಚೌರಿಗಳೆಸೆಯೆ ಘಂಟಾ
ವಳಿಗಳಣಸಿನ ಹೊಗರನುಗುಳುವ
ಹೊಳೆವ ಧಾರೆಯ ಭಾರಿಶಕ್ತಿಯ ತೂಗಿದನು ಕರ್ಣ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಂಟಾದ ಕಿಡಿಗಳ, ಆಯುಧದ ಝಳದ ರಭಸದಲ್ಲಿ ಎರಡೂ ಸೇನೆಯ ಅತಿಶಯವಾದ ಹರ್ಷದುಃಖಗಳ ವಾರಿಧಿ ಕಾಲು ಹೊಳೆಯಾಗಿ ಹರಿಯಿತು. ಬಿಳಿಯ ಕುಚ್ಚುಗಳು ಶೋಭಿಸುತ್ತಿರಲು, ಘಂಟಾವಳಿಗಳ ಅಣಸಿನ ಕಾಂತಿಯ, ಪ್ರಕಾಶವನ್ನು ಸೂಸುವ ಭಾರಿಶಕ್ತಿಯ ಶಕ್ತ್ಯಾಯುಧವನ್ನು ಕರ್ಣನು ಝಳಪಿಸಿದನು .
ಪದಾರ್ಥ (ಕ.ಗ.ಪ)
ಅಣಸು-ಲೋಹದ ಪಟ್ಟಿ
ಮೂಲ ...{Loading}...
ತಳಿತ ಕಿಡಿಗಳ ಕೈದುವಿನ ಮೈ
ಝಳದ ಝಾಡಿಯೊಳುಭಯ ಬಲದ
ಗ್ಗಳದ ಹರುಷ ವಿಷಾದ ವಾರಿಧಿ ಕಾಲುಹೊಳೆಯಾಯ್ತು
ಬಿಳಿಯ ಚೌರಿಗಳೆಸೆಯೆ ಘಂಟಾ
ವಳಿಗಳಣಸಿನ ಹೊಗರನುಗುಳುವ
ಹೊಳೆವ ಧಾರೆಯ ಭಾರಿಶಕ್ತಿಯ ತೂಗಿದನು ಕರ್ಣ ॥51॥
೦೫೨ ಕಾಯಲಾಪರೆ ದನುಜ ...{Loading}...
ಕಾಯಲಾಪರೆ ದನುಜ ಕರೆ ಕಮ
ಲಾಯತಾಕ್ಷನನಿಂದು ಬದುಕುವು
ಪಾಯವುಳ್ಳಡೆ ಬೇಗ ಬೆಸಗೊಳು ಭೀಮ ಫಲುಗುಣರ
ಆಯುಧಕೆ ತೆರವಿಟ್ಟೆನೈ ನಿ
ನ್ನಾಯುಷವ ಹಿಂದಿಕ್ಕಿ ಕೊಂಬನ
ತಾಯೆನುತ ಬೊಬ್ಬಿರಿದು ಶಕ್ತಿಯಲಿಟ್ಟನಾ ಕರ್ಣ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಕ್ಷಸನೇ, ನಿನ್ನನ್ನು ಕಾಪಾಡಲಾಗುವುದಾದರೆ, ಶ್ರೀಕೃಷ್ಣನನ್ನು ಕರೆ. ಇಂದು ಬದುಕುವ ಉಪಾಯ ಬೇಕಿದ್ದರೆ ಬೇಗ ಭೀಮ, ಅರ್ಜುನರ ಸಹಾಯವನ್ನು ಕೇಳು. ನಿನ್ನ ಆಯುಷ್ಯವನ್ನು ನನ್ನ ಆಯುಧಕ್ಕೆ ಮೀಸಲಾಗಿಟ್ಟಿದ್ದೇನೆ. ಇದನ್ನು ಹಿಂದಿರುಗಿಸುವವನನ್ನು ಕರೆಸು” ಎನ್ನುತ್ತಾ ಬೊಬ್ಬಿರಿದು ಕರ್ಣನು ಶಕ್ತ್ಯಾಯುಧವನ್ನು ಪ್ರಯೋಗಿಸಿದನು.
ಮೂಲ ...{Loading}...
ಕಾಯಲಾಪರೆ ದನುಜ ಕರೆ ಕಮ
ಲಾಯತಾಕ್ಷನನಿಂದು ಬದುಕುವು
ಪಾಯವುಳ್ಳಡೆ ಬೇಗ ಬೆಸಗೊಳು ಭೀಮ ಫಲುಗುಣರ
ಆಯುಧಕೆ ತೆರವಿಟ್ಟೆನೈ ನಿ
ನ್ನಾಯುಷವ ಹಿಂದಿಕ್ಕಿ ಕೊಂಬನ
ತಾಯೆನುತ ಬೊಬ್ಬಿರಿದು ಶಕ್ತಿಯಲಿಟ್ಟನಾ ಕರ್ಣ ॥52॥
೦೫೩ ಆರಿದನು ಪರಿಹರಿಸುವರು ...{Loading}...
ಆರಿದನು ಪರಿಹರಿಸುವರು ಜಂ
ಭಾರಿ ಕೊಟ್ಟನು ಕಮಲಭವ ಕಾ
ಮಾರಿಗಳಿಗುಬ್ಬಸದ ಕೈದುವಜೇಯವೆಂದಿದನು
ಧಾರೆಯಲಿ ದಳ್ಳಿಸುವ ಕಿಡಿಗಳ
ಭಾರಿಯಾಯುಧವಸುರನುರವನು
ಡೋರುಗಳೆದುದು ಹಾಯ್ದುಹೋದುದು ವಾಸವನ ಹೊರೆಗೆ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಅಸ್ತ್ರವನ್ನು ಪರಿಹರಿಸಲು ಯಾರಿಗೆ ಸಾಧ್ಯ ? ಬ್ರಹ್ಮ, ಶಿವನಿಗೂ ಉಸಿರುಗಟ್ಟಿಸುವ ಆಯುಧ. ಇದು ಅಜೇಯವು ಎಂದು ಇದನ್ನು ಇಂದ್ರನು ಕರ್ಣನಿಗೆ ಕೊಟ್ಟನು. ಖಡ್ಗದ ಧಾರೆಯಲ್ಲಿ ಕಿಡಿಕಾರುವ ಭಾರಿ ಆಯುಧವು ರಾಕ್ಷಸನ ಹೃದಯವನ್ನು ತೂತು ಮಾಡಿತು. ಅನಂತರ ದೇವೇಂದ್ರನ ಸಮೀಪಕ್ಕೆ ಹಾರಿಹೋಯಿತು.
ಮೂಲ ...{Loading}...
ಆರಿದನು ಪರಿಹರಿಸುವರು ಜಂ
ಭಾರಿ ಕೊಟ್ಟನು ಕಮಲಭವ ಕಾ
ಮಾರಿಗಳಿಗುಬ್ಬಸದ ಕೈದುವಜೇಯವೆಂದಿದನು
ಧಾರೆಯಲಿ ದಳ್ಳಿಸುವ ಕಿಡಿಗಳ
ಭಾರಿಯಾಯುಧವಸುರನುರವನು
ಡೋರುಗಳೆದುದು ಹಾಯ್ದುಹೋದುದು ವಾಸವನ ಹೊರೆಗೆ ॥53॥
೦೫೪ ಆರಿ ಬೊಬ್ಬಿರಿವುತ್ತ ...{Loading}...
ಆರಿ ಬೊಬ್ಬಿರಿವುತ್ತ ಕಂಡುದು
ಪಾರುಖಾಣೆಯನಸುರನಸು ಬಲು
ಭಾರಿಯೊಡಲೊರ್ಗುಡಿಸಿ ಕೆಡೆದುದು ಬಿರಿದ ಗಿರಿಯಂತೆ
ತೇರು ತುರಗ ಪದಾತಿ ಕರಿಘಟೆ
ವೈರಿಬಲದಲಿ ನಮ್ಮ ಬಲದಲಿ
ತೀರಿತೊಂದಕ್ಷೋಣಿ ಸುರರಿಪು ಬಿದ್ದ ಭಾರದಲಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೀರಿ ಬೊಬ್ಬಿರಿವುತ್ತಾ ರಾಕ್ಷಸನ ಪ್ರಾಣವು ಅಂತ್ಯವನ್ನು ಕಂಡಿತು. ಬಲು ಬಲಿಷ್ಠ ದೇಹ ಬಿರಿದ ಗಿರಿಯಂತೆ ವಾಲಿಕೊಂಡು ನೆಲಕ್ಕೆ ಬಿದ್ದಿತು. ರಾಕ್ಷಸನು ಬಿದ್ದ ರಭಸಕ್ಕೆ, ಎರಡೂ ಕಡೆಯಲ್ಲಿನ ರಥ, ಕುದುರೆ, ಪದಾತಿ, ಆನೆ ಮುಂತಾದುವುಗಳು ಒಂದು ಅಕ್ಷೋಹಿಣಿ ಸಂಖ್ಯೆಯಲ್ಲಿ ನಾಶವಾದವು.
ಪದಾರ್ಥ (ಕ.ಗ.ಪ)
ಆರಿ-ಚೀರಿ,
ಪಾರುಖಾಣೆ-ನಾಶ,
ಒರ್ಗುರಿಸಿ - ವಾಲಿ, ಓರೆಯಾಗಿ
ಮೂಲ ...{Loading}...
ಆರಿ ಬೊಬ್ಬಿರಿವುತ್ತ ಕಂಡುದು
ಪಾರುಖಾಣೆಯನಸುರನಸು ಬಲು
ಭಾರಿಯೊಡಲೊರ್ಗುಡಿಸಿ ಕೆಡೆದುದು ಬಿರಿದ ಗಿರಿಯಂತೆ
ತೇರು ತುರಗ ಪದಾತಿ ಕರಿಘಟೆ
ವೈರಿಬಲದಲಿ ನಮ್ಮ ಬಲದಲಿ
ತೀರಿತೊಂದಕ್ಷೋಣಿ ಸುರರಿಪು ಬಿದ್ದ ಭಾರದಲಿ ॥54॥
೦೫೫ ಕುರುಬಲದ ಕಳಕಳದ ...{Loading}...
ಕುರುಬಲದ ಕಳಕಳದ ಹವಣ
ಲ್ಲರಿಬಲದ ಸಂತೋಷವಿದು ಮುರ
ಹರನ ಮಂತ್ರವು ಜೀಯ ಹರಿ ಸೂಳೈಸಿದನು ಭುಜವ
ಗರಳವಿಲ್ಲದ ಕುಪಿತಫಣಿ ಹಲು
ಮೊರೆದು ಮಾಡುವುದೇನು ಕರ್ಣನ
ನೊರಸಿದೆವು ಹೋಗೆಂದು ಸಂತೈಸಿದನು ಪಾಂಡವರ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ ಕುರುಸೇನೆಯ ರಣಭೂಮಿಯಲ್ಲಿ ಸಂತಸಪಡುವ ರೀತಿ ಇದಲ್ಲ. ಶತ್ರುಸೇನೆಯ ಸಂತೋಷವಿದು. ಮುರಹರನ ಯೋಜನೆ ಕೈಗೂಡಿತು. ಹರಿಯು ತನ್ನ ಭುಜವನ್ನು ತಟ್ಟಿಕೊಂಡನು. ‘ಕರ್ಣನು ವಿಷವಿಲ್ಲದ ಕುಪಿತ ಸರ್ಪದಂತಾದನು. ಇನ್ನು ಅವನು ಹಲ್ಲು ಕಡಿದು ಗರ್ಜಿಸಿ ಮಾಡುವುದೇನು ? ಕರ್ಣನನ್ನು ನಾಶಮಾಡಿದೆವು. ಹೋಗಿ’ ಎಂದು ಕೃಷ್ಣನು ಪಾಂಡವರನ್ನು ಸಮಾಧಾನ ಪಡಿಸಿದನು” ಎಂದು ಧೃತರಾಷ್ಟ್ರನಿಗೆ ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಸೂಳೈಸು-ತಟ್ಟು
ಮೂಲ ...{Loading}...
ಕುರುಬಲದ ಕಳಕಳದ ಹವಣ
ಲ್ಲರಿಬಲದ ಸಂತೋಷವಿದು ಮುರ
ಹರನ ಮಂತ್ರವು ಜೀಯ ಹರಿ ಸೂಳೈಸಿದನು ಭುಜವ
ಗರಳವಿಲ್ಲದ ಕುಪಿತಫಣಿ ಹಲು
ಮೊರೆದು ಮಾಡುವುದೇನು ಕರ್ಣನ
ನೊರಸಿದೆವು ಹೋಗೆಂದು ಸಂತೈಸಿದನು ಪಾಂಡವರ ॥55॥
೦೫೬ ಸಾರಿದನು ಶರಮಞ್ಚವನು ...{Loading}...
ಸಾರಿದನು ಶರಮಂಚವನು ಭಾ
ಗೀರಥೀನಂದನನು ಕರ್ಣನು
ಬೇರುಹರಿದಾ ದ್ರುಮದವೊಲು ಗತಶೌರ್ಯನಿನ್ನೇನು
ಭಾರಿಯಾಳೈ ದ್ರೋಣನಾತನು
ತೀರಿದನು ಹಾ ಪಾಂಡುಸುತರಿ
ನ್ನಾರ ಮುರಿಯರು ವೀರನಾರಾಯಣನ ಕರುಣದಲಿ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಗೆಯ ಮಗ ಭೀಷ್ಮನು ಶರಮಂಚವನ್ನು ಏರಿದನು. ಕರ್ಣನು ಬೇರು ಹರಿದ ವೃಕ್ಷದ ಹಾಗೆ ಶೌರ್ಯವನ್ನು ಕಳೆದುಕೊಂಡನು. ಇನ್ನೇನು ? ಭಾರಿ ಶೂರ ದ್ರೋಣನು. ಆತನು ತೀರಿದನು. ಹಾ… ವೀರನಾರಾಯಣನ ಕೃಪೆಯಿರುವಾಗ ಪಾಂಡವರು ಯಾರನ್ನು ತಾನೇ ನಾಶಮಾಡುವುದಿಲ್ಲ.
ಟಿಪ್ಪನೀ (ಕ.ಗ.ಪ)
ಮುಂದೆ ಸಂಭವಿಸಲಿರುವ ದ್ರೋಣನ ಸಾವನ್ನು ಕವಿ ಇಲ್ಲಿಯೇ ಸೂಚಿಸಿದ್ದಾನೆ. ದೈವದ, ಧರ್ಮದ ಬೆಂಬಲವಿಲ್ಲದ ಕೌರವ ಸೇನೆಯ ನಾಯಕರು ಎಷ್ಟೇ ಶೂರರಾದರೂ ಸಹ ಅವರ ಸಾವು ನಿಶ್ಚಿತ ಎಂಬುದನ್ನು ಕವಿ ಇಲ್ಲಿ ಸೂಚಿಸಿದ್ದಾನೆ.
ಮೂಲ ...{Loading}...
ಸಾರಿದನು ಶರಮಂಚವನು ಭಾ
ಗೀರಥೀನಂದನನು ಕರ್ಣನು
ಬೇರುಹರಿದಾ ದ್ರುಮದವೊಲು ಗತಶೌರ್ಯನಿನ್ನೇನು
ಭಾರಿಯಾಳೈ ದ್ರೋಣನಾತನು
ತೀರಿದನು ಹಾ ಪಾಂಡುಸುತರಿ
ನ್ನಾರ ಮುರಿಯರು ವೀರನಾರಾಯಣನ ಕರುಣದಲಿ ॥56॥