೧೨

೦೦೦ ಸೂ ರಾಯಸೇನಾ ...{Loading}...

ಸೂ. ರಾಯಸೇನಾ ಸೂರೆಕಾರನ
ಜೇಯ ಮಾರುತ ಸುತನು ಕೌರವ
ರಾಯನನುಜರ ಸೀಳಿದನು ಕಳಶಜನ ಪರಿಹರಿಸಿ

೦೦೧ ದೃಗುಯುಗಳ ನೀರೇರಿದವು ...{Loading}...

ದೃಗುಯುಗಳ ನೀರೇರಿದವು ಸೆರೆ
ಬಿಗಿದು ಹಲುಬಿದನಕಟ ಕಡು ದೇ
ಸಿಗನು ತಾ ತನ್ನೊಡನೆ ಫಲುಗುಣನೇಕೆ ಜನಿಸಿದನೊ
ಹಗೆಯ ಹರಿವಿಂಗೊಪ್ಪುಗೊಟ್ಟೆನು
ಮಗನಳಲು ಮಿಗೆ ಹೂಣೆ ಹೊಕ್ಕನು
ಮಗುಳಲರಿಯನು ತಮ್ಮನೆನುತವನೀಶ ಚಿಂತಿಸಿದ ॥1॥

೦೦೨ ಕಳುಹಲತ್ತಲು ಹೋಗಿ ...{Loading}...

ಕಳುಹಲತ್ತಲು ಹೋಗಿ ಸಾತ್ಯಕಿ
ತಿಳಿದು ಮರಳಿದುದಿಲ್ಲ ಫಲುಗುಣ
ನಳಿದನೋ ಮೇಣುಳಿದನೋ ಶರಹತಿಗೆ ಬಳಲಿದನೊ
ತಿಳಿದು ಹೇಳುವರಾರು ಪಟುಭಟ
ರೊಳಗೆ ಮಕುಟದ ಮಹಿಮರೆನುತಳ
ವಳಿದು ಭೀಮನ ವದನವನು ನೋಡಿದನು ಭೂಪಾಲ ॥2॥

೦೦೩ ಎಲೆ ವೃಕೋದರ ...{Loading}...

ಎಲೆ ವೃಕೋದರ ವೈರಿಮೋಹರ
ದೊಳಗೆ ಸಿಲುಕಿದನೋ ಕಿರೀಟಿಗೆ
ನೆಲದ ಋಣಸಂಬಂಧ ಸವೆದುದೊ ಮೇಣು ಸಮರದಲಿ
ತಿಳಿಯಲಟ್ಟಿದ ಸಾತ್ಯಕಿಗೆ ಕೊಳು
ಗುಳದ ಭಾರಣೆಯಾಯ್ತು ಫಲುಗುಣ
ನಳಬಳವನರಿದಲ್ಲದೆನ್ನಸು ಸೈರಿಸದು ತನುವ ॥3॥

೦೦೪ ಮುರವಿರೋಧಿಯ ಪಾಞ್ಚಜನ್ಯದ ...{Loading}...

ಮುರವಿರೋಧಿಯ ಪಾಂಚಜನ್ಯದ
ಪರಮ ರವ ಪಾರ್ಥನ ಪತಾಕೆಯ
ವರ ಕಪೀಂದ್ರನ ರಭಸವೇ ತುಂಬಿತು ಜಗತ್ರಯವ
ನರನ ಧನುವಿನ ದನಿಯ ಕೇಳೆನು
ಕರಗಿತಂತಃಕರಣವರ್ಜುನ
ನಿರವ ಕಾಣಿಸಿ ಬಾಯೆನಲು ಕೈಕೊಂಡನಾ ಭೀಮ ॥4॥

೦೦೫ ಅರನೆಲೆಯ ಸುಯ್ದಾನ ...{Loading}...

ಅರನೆಲೆಯ ಸುಯ್ದಾನ ಪಾಂಚಾ
ಲರಿಗೆ ನೇಮಿಸಿತನಿಲತನಯನ
ಬೆರಳ ಸನ್ನೆಗೆ ತೀವಿದಂಬಿನ ತೇರ ಚಾಚಿದರು
ಕರೆದು ತನ್ನ ವಿಶೋಕಗಖಿಳಾ
ಭರಣವನು ಕೊಟ್ಟನು ವರೂಥದ
ಹರಿಗೆ ಹೊಡವಂಟಡರಿದನು ನವ ರತುನಮಯ ರಥವ ॥5॥

೦೦೬ ಸೂಳು ಮಿಗಲಳ್ಳರಿದವುರು ...{Loading}...

ಸೂಳು ಮಿಗಲಳ್ಳರಿದವುರು ನಿ
ಸ್ಸಾಳತತಿ ದಿಗುವಳೆಯದಲಿ ಕೈ
ಮೇಳವಿಸಿದವು ತಂಬಟಧ್ವನಿ ಜಡಿವ ಕಹಳೆಗಳು
ಕೀಳ ಬಗೆಯದೆ ಕೆರಳಿ ಹೊಯ್ದವು
ಕಾಲಲಿಳೆಯನು ಕುದುರೆ ಮೋರೆಯ
ತೋಳಿನಲಿ ಮೋದಿದವು ಮಹಿಯನು ಸೊಕ್ಕಿದಾನೆಗಳು ॥6॥

೦೦೭ ಒದಗಿತೆಡಬಲವಙ್ಕದೊಯ್ಯಾ ರದಲಿ ...{Loading}...

ಒದಗಿತೆಡಬಲವಂಕದೊಯ್ಯಾ
ರದಲಿ ರಾವ್ತರು ಮುಂದೆ ತಲೆದೋ
ರಿದರು ಮುಂಗುಡಿಯವರು ಚೂಣಿಯ ಹೊಂತಕಾರಿಗಳು
ಅದಿರ್ವ ಖಡುಗದ ಕಾಂತಿ ಸೂರ್ಯನ
ಹೊದಿಸಿದುದು ಹೊದರೆದ್ದು ಕೊಂತದ
ತುದಿಗಳಿತ್ತವು ರಾಹುಭಯವನು ರವಿಯ ಮಂಡಲಕೆ ॥7॥

೦೦೮ ಕೆಲಕೆ ಹೊಳೆದವು ...{Loading}...

ಕೆಲಕೆ ಹೊಳೆದವು ಕಡುಗುದುರೆ ನೆಲ
ನಳುಕೆ ನಡೆದವು ದಂತಿ ದೆಸೆಗಳ
ಹೊಲಗೆ ಹರಿಯದೆ ಮಾಣವೆನೆ ಹೊಕ್ಕವು ರಥಾನೀಕ
ತಳಪಟವ ತುಂಬಿತ್ತು ಪಯದಳ
ವುಲಿವ ಕಹಳೆಯ ಚೆಂಬುಕನ ಕಳ
ಕಳಿಕೆ ಮಿಗೆ ಕೈಕೊಂಡುದನಿಲಕುಮಾರಕನ ಸೇನೆ ॥8॥

೦೦೯ ಮುಸುಕಿದನು ರವಿ ...{Loading}...

ಮುಸುಕಿದನು ರವಿ ಧೂಳಿಯಲಿ ಹೊಳೆ
ವಸಿ ಮುಸುಂಡಿ ತ್ರಿಶೂಲ ಕೊಂತ
ಪ್ರಸರ ಕಾಂತಿಗಳಿಳುಹಿದವು ಖದ್ಯೋತದೀಧಿತಿಯ
ಬಿಸಜಸಖನಡಗಿದರೆ ನಭದಲಿ
ಮಸಗಿದವು ತಾರೆಗಳೆನಲು ಶೋ
ಭಿಸಿದವವನೀಪಾಲಮೌಳಿಸುರತ್ನ ರಾಜಿಗಳು ॥9॥

೦೧೦ ಎಲೆಲೆ ರಿಪುಸಂವರ್ತನೊಳು ...{Loading}...

ಎಲೆಲೆ ರಿಪುಸಂವರ್ತನೊಳು ಕೊಳು
ಗುಳಕೆ ವರ್ತಿಸಲರಿದೆನುತ ತ
ಲ್ಲಳಿಸಿ ತೆತ್ತುದು ಮನವನವನೀಪಾಲ ಸಂದೋಹ
ಹಳವಿನಬ್ಬರಕಂಜದಿರಿ ನಿಜ
ಗಳದ ಹಸುಗೆಯ ಹಾರದಿರಿಯೆಂ
ದಳಿಮನರು ಬೆಂಗೊಟ್ಟು ಹೊಕ್ಕುದು ಕಳಶಜನ ಮರೆಯ ॥10॥

೦೧೧ ಮಿಗೆ ವಿರೋಧಿಯ ...{Loading}...

ಮಿಗೆ ವಿರೋಧಿಯ ಬಸುರನುಗಿ ಕು
ನ್ನಿಗಳ ಕೆಡೆ ಬಡಿ ಸೀಳು ಹೆಣನುಂ
ಗಿಗಳ ಹೊಯ್ ಹೊಯ್ ರಣಕೆ ಹೆದರುವ ಕೌರವಾನುಜರ
ಹಗೆಯ ಶೋಣಿತ ಪಾನದರವ
ಟ್ಟಿಗೆಗೆ ಕರೆ ಭೇತಾಳ ಭೂತಾ
ಳಿಗಳನೆನುತ ಸುಧೈರ್ಯ ನಡೆದನು ಗರುಡಿಯಾಚಾರ್ಯ ॥11॥

೦೧೨ ಏನಿದೆತ್ತಣ ರಭಸವೆಲೆ ...{Loading}...

ಏನಿದೆತ್ತಣ ರಭಸವೆಲೆ ಪವ
ಮಾನಸುತ ಫಡ ಮರಳು ನಿನ್ನನು
ಮಾನವಾವುದು ಗಮನವೆಲ್ಲಿಗೆ ಮಾಡು ಬಿನ್ನಹವ
ಆನಿರಲು ಕೈಕೊಳ್ಳದುರುಬುವ
ದಾನವಾಮರರಿಲ್ಲ ನಿನ್ನಳ
ವೇನು ಸಾಕೊಮ್ಮಿಂಗೆ ಕಾವೆನು ಬೇಡ ಮರಳೆಂದ ॥12॥

೦೧೩ ಎಲೆ ಮರುಳೆ ...{Loading}...

ಎಲೆ ಮರುಳೆ ಗುರುವೆಮಗೆ ನೀ ಹೆ
ಕ್ಕಳಿಸಿ ನುಡಿದರೆ ಮೊದಲಲಂಜುವೆ
ನುಳಿದ ಮಾತಿನಲೇನು ನಿಮ್ಮೊಡನೆನಗೆ ಸಂಗ್ರಾಮ
ಬಳಿಕವೀಗಳು ನಿಮ್ಮ ಮೋಹರ
ದೊಳಗೆ ಕೊಡಿ ಬಟ್ಟೆಯನು ಸಿಲುಕಿದ
ಫಲುಗುಣನ ತಹೆನಣ್ಣದೇವನ ನೇಮ ತನಗೆಂದ ॥13॥

೦೧೪ ಆದರೆಲವೋ ಭೀಮ ...{Loading}...

ಆದರೆಲವೋ ಭೀಮ ಪಾರ್ಥನ
ಹಾದಿಯಲಿ ಗಮಿಸುವರೆ ಸಾತ್ಯಕಿ
ಹೋದವೊಲು ನೀನೆಮಗೆ ವಂದಿಸಿ ಮಾರ್ಗವನು ಪಡೆದು
ಹೋದಡೊಪ್ಪು ವುದಲ್ಲದೇ ಬಿರು
ಸಾದಡಹುದೇ ಬೀಳು ಚರಣಕೆ
ಕಾದುವರೆ ಹಿಡಿ ಧನುವನೆಂದನು ದ್ರೋಣನನಿಲಜನ ॥14॥

೦೧೫ ತರಳರರ್ಜುನ ಸಾತ್ಯಕಿಗಳವ ...{Loading}...

ತರಳರರ್ಜುನ ಸಾತ್ಯಕಿಗಳವ
ದಿರಿಗೆ ಪಂಥವದೇಕೆ ನಿಮ್ಮನು
ಗರುಡಿಯಲಿ ವಂದಿಸುವ ವಂದನೆಯುಂಟೆ ಸಮರದಲಿ
ಮರುಳಲಾ ಮರುಮಾತು ಕಡುವೃ
ದ್ಧರಿಗದೇಕೆಂಬಂತೆ ಚಿತ್ತದ
ಹುರುಳ ಬಲ್ಲೆನು ಪಥವ ಬಿಡಿ ಕೆಲಸಾರಿ ಸಾಕೆಂದ ॥15॥

೦೧೬ ಫಡ ಫಡೆಲವೋ ...{Loading}...

ಫಡ ಫಡೆಲವೋ ಭೀಮ ಬಣಗುಗ
ಳೊಡನೆ ಸರಿಗಂಡೆನ್ನ ಬಗೆಯದೆ
ಕಡುಗುವೈ ಕಾಳೆಗಕೆ ತಪ್ಪೇನಾದಡನುವಾಗು
ಒಡಲನೀವೆನು ವಿನಯದೆಡೆಗವ
ಗಡಿಸಿದರೆ ಕೊಲುವೆನು ರಿಪುವ್ರಜ
ಮೃಡನನರಿಯಾ ದ್ರೋಣ ತಾನೆನುತೆಚ್ಚನನಿಲಜನ ॥16॥

೦೧೭ ಈತನೊಡನಮ್ಬಿನಲಿ ಕಾದಲು ...{Loading}...

ಈತನೊಡನಂಬಿನಲಿ ಕಾದಲು
ಭೂತನಾಥಂಗರಿದು ಸಾರಥಿ
ಪೂತುರೇ ಎನುತಿಳಿದು ರಥವನು ತುಡುಕಿದನು ಗದೆಯ
ಆತನಸ್ತ್ರಕೆ ದಂಡೆಯೊಡ್ಡಿ ಮ
ಹಾತಿಬಳ ಕವಿದನು ವಿರೋಧಿಯ
ಸೂತನನು ಕೆಡೆಹೊಯ್ದು ಕೊಂದನು ರಥದ ಕುದುರೆಗಳ ॥17॥

೦೧೮ ಇದು ನಿಮಗೆ ...{Loading}...

ಇದು ನಿಮಗೆ ವಂದನೆಯೆನುತ ನಿಜ
ಗದೆಯಲಾತನ ರಥವ ಹುಡಿಗು
ಟ್ಟಿದನು ಸುರಗಿಯನುಗಿಯಲಪ್ಪಳಿಸಿದನು ಮೋಹರವ
ಇದಿರಲಿರಲಳವಡದೆ ಗುರು ಹಿಂ
ಗಿದನು ಶಕಟವ್ಯೂಹವನು ಮ
ಧ್ಯದೊಳು ಥಟ್ಟುಗಿದುರವಣಿಸಿ ಪವಮಾನಸುತ ನಡೆದ ॥18॥

೦೧೯ ಹರಿಯ ಕುಲಿಶದ ...{Loading}...

ಹರಿಯ ಕುಲಿಶದ ಧಾಳಿಯಲಿ ಕುಲ
ಗಿರಿಗಳಿಬ್ಬಗಿಯಾದವೊಲು ಮಂ
ದರದ ಘಾರಾಘಾರಿಯಲಿ ಬಾಯ್ವಿಡುವ ಕಡಲಂತೆ
ಅರಿ ವರೂಥಿನಿ ಕೆದರಿ ತಳಿತವು
ತುರಗ ಕರಿ ರಥ ಪಾಯಿದಳ ಬಲ
ಹೊರಳಿಯೊಡೆದುದು ಹೊದರು ತಗ್ಗಿತು ಹೂಣಿಗರ ಮನದ ॥19॥

೦೨೦ ಹೊಸರಥವ ತಾ ...{Loading}...

ಹೊಸರಥವ ತಾ ಹೋದನೇ ಸಂ
ಧಿಸುವೆನಿನ್ನನಿಲಜನು ಕುಂತಿಯ
ಬಸುರ ಹೊಕ್ಕರೆ ಹೊಗುವೆನೆನುತಾ ದ್ರೋಣ ಗಜಬಜಿಸೆ
ಕುಸುರಿದರಿದನು ಮುಂದೆ ವೈರಿ
ಪ್ರಸರವನು ಸಂವರ್ತ ರುದ್ರನೊ
ಹೊಸಬನಿವನಾರೆಂದು ತಲ್ಲಣಿಸಿತ್ತು ರಿಪುಸೇನೆ ॥20॥

೦೨೧ ಎಚ್ಚನುಚ್ಚಳಿಸುವ ತುರಙ್ಗವ ...{Loading}...

ಎಚ್ಚನುಚ್ಚಳಿಸುವ ತುರಂಗವ
ನೊಚ್ಚತವೆ ಕೊಂದನು ರಥೌಘವ
ನಚ್ಚರಿಯರೊಡನಾಡಿಸಿದನುರವಣಿಪ ಕಾಲಾಳ
ಕಿಚ್ಚುಗಿಡಿಗೆದರುವ ಸಿಳೀಮುಖ
ಕೊಚ್ಚಲಿಭದವಯವವನಮರರಿ
ಗಚ್ಚರಿಯ ತನಿಸೂರೆಬಿಟ್ಟನು ಭೀಮ ಬವರದಲಿ ॥21॥

೦೨೨ ತನತನಗೆ ಮುಙ್ಕೊಣ್ಡು ...{Loading}...

ತನತನಗೆ ಮುಂಕೊಂಡು ಸಂಗರ
ವೆನಗೆ ತನಗೆಂಬಖಿಳವೀರಾ
ವನಿಪರಹಮಿಕೆಯಿಂದ ಹೊಯ್ದರು ಪವನನಂದನನ
ಮೊನೆಯಲಗಿನಂಬುಗಳ ಬಿರುಸರಿ
ಗನಿಬರಂಗವ ತೆತ್ತು ವಾತಾ
ಯನಿತ ವಿಗ್ರಹವಾಯ್ತು ನಿಗ್ರಹದತಿಮಹಾರಥರು ॥22॥

೦೨೩ ಸಿಡಿದ ಕಣ್ಣಾಲಿಗಳ ...{Loading}...

ಸಿಡಿದ ಕಣ್ಣಾಲಿಗಳ ಮೀಂಗಳ
ಕೆಡೆದ ಸತ್ತಿಗೆಯಬುಜಪಂಕ್ತಿಯ
ಬಿಡುಮಿದುಳ ರಾಸಿಗಳ ರಚನೆಯ ರಾಜಹಂಸೆಗಳ
ಬಿಡದೆ ಬೆಂಡೆದ್ದೇಳ್ವ ತಲೆಗಳ
ಗಡಣ ನೀರ್ವಕ್ಕಿಗಳ ಸರಸಿಯ
ನಡುವೆ ನಲಿನಲಿದಾಡುತಿರ್ದುದು ಭೀಮ ವನದಂತಿ ॥23॥

೦೨೪ ಮಕುಟಬದ್ಧ ಮಹೀಶವೇಣು ...{Loading}...

ಮಕುಟಬದ್ಧ ಮಹೀಶವೇಣು
ಪ್ರಕರದಲಿ ಛಟಛಟಿಸಿ ತುರಗ
ಪ್ರಕರ ಪಲ್ಲವ ಭೂಜರಾಜಿಗಳೊಳಗೆ ಘುಳುಘುಳಿಸಿ
ಸಕಲಗಜ ರಥ ಭೂಧರಾಧಿ
ತ್ಯಕೆಯೊಳಗೆ ಭುಗಿಭುಗಿಸಿ ರಿಪುವನ
ನಿಕರದಲಿ ಸಲೆ ಬೀದಿವರಿದುದು ಭೀಮ ದಾವಾಗ್ನಿ ॥24॥

೦೨೫ ಕಲಕೆ ಚಕ್ರವ್ಯೂಹ ...{Loading}...

ಕಲಕೆ ಚಕ್ರವ್ಯೂಹ ಹಂಸಾ
ವಳಿಗೆ ಹಂಸವ್ಯೂಹ ಹಿಂದಣ
ಬಲದೊಳಾ ಮೋಹರಕೆ ತರಹರವಾಯ್ತು ಪದ್ಮದಲಿ
ಬಳಿಕ ಮಕರವ್ಯೂಹದಲಿ ಮಂ
ಡಳಿಕರಾಂತುದು ಭೀಮಸೇನನ
ಕೊಳುಗುಳಕೆ ಕೈಕೊಂಡರಾ ಕರ್ಣಾದಿ ಪಟುಭಟರು ॥25॥

೦೨೬ ನಿಲಿಸಿದರು ರವಿಸುತನನೀತನ ...{Loading}...

ನಿಲಿಸಿದರು ರವಿಸುತನನೀತನ
ತಲೆಯ ಮೀಸಲು ತಮ್ಮ ಸರಳದು
ಗೆಲವು ನಿಮಗಲ್ಲೆನುತ ಹೊಕ್ಕರು ಕೌರವಾನುಜರ
ಚಲಿಸಿತರನೆಲೆ ಕೋಡಕೈಯಲಿ
ಮೊಳಗಿದವು ನಿಸ್ಸಾಳ ಬಲುಮಂ
ಡಳಿಕರೆಡಬಲವಂಕದಲಿ ನೆರೆದುದು ಕುಮಾರಕರು ॥26॥

೦೨೭ ಸಾಲು ಗೋವಳಿಗಟ್ಟಿಗೆಯ ...{Loading}...

ಸಾಲು ಗೋವಳಿಗಟ್ಟಿಗೆಯ ಕುಂ
ತಾಳಿಗಳ ತೂಗಾಟ ಮಿಗೆ ದು
ವ್ವಾಳಿಗಳ ದೆಖ್ಖಾಳ ಗಜ ರಥ ತುರಗ ಸೇನೆಯಲಿ
ಮೇಲೆ ಹೇಳಿಕೆಯಾಯ್ತು ಕವಿವ ನೃ
ಪಾಲಕರು ಭೀಮಂಗೆ ಹರಣದ
ಸಾಲಿಗರು ಸಂದಣಿಸಿತಬುಜವ್ಯೂಹದಗ್ರದಲಿ ॥27॥

೦೨೮ ದುರುಳರುರವಣಿಸಿದರು ಜವ್ವನ ...{Loading}...

ದುರುಳರುರವಣಿಸಿದರು ಜವ್ವನ
ದುರು ಮದದ ಭರತಾನ್ವಯದ ದು
ರ್ಧರ ಮದದ ಘನಭುಜಮದದ ದಿವ್ಯಾಸ್ತ್ರದರಿಕೆಗಳ
ಭರಮದದ ಮರ್ಕಟವಿಲಾಸರು
ಧುರರಚಿತ ಪರಿಹಾಸರಭಿಜನ
ಕುರುವಿನಾಶರು ತಾವಕರು ಧೃತರಾಷ್ಟ್ರ ಕೇಳ್ ಎಂದ ॥28॥

೦೨೯ ಎಳೆಯ ಬಾಳೆಯ ...{Loading}...

ಎಳೆಯ ಬಾಳೆಯ ಸುಳಿಗೆ ಸೀಗೆಯ
ಮೆಳೆಯೊಡನೆ ಸರಸವೆ ಕುಮಾರರ
ಬಲುಹ ನೋಡು ವಿಶೋಕ ತೊಡಗಿದರೆಮ್ಮೊಡನೆ ರಣವ
ಕಲಹದಲಿ ಮೈದೋರಿದಿವದಿರ
ತಲೆಗಳಿವು ವಾರಕದವಿವನರೆ
ಗಳಿಗೆಯಲಿ ತಾ ಕೊಂಬೆನೆಂದನು ನಗುತ ಕಲಿಭೀಮ ॥29॥

೦೩೦ ಬಿಲುದೆಗಹಿನಾಕರ್ಣಪೂರದ ...{Loading}...

ಬಿಲುದೆಗಹಿನಾಕರ್ಣಪೂರದ
ಹಿಳುಕಿನನಿಲಜನಿರಲು ಸಿಂಹದ
ಹೊಲನ ಹೊಗುವಿಭದಂತೆ ಹೊರಕಾಲ್ಗೊಳುತಲಿರೆ ಕಂಡು
ತೊಲಗದಿರಿ ತಮ್ಮಂದಿರಿರ ಕುರು
ಕುಲಲಲಾಮರು ಜಗದೊಳತಿ ವೆ
ಗ್ಗಳೆಯ ಸುಭಟರು ನೀವೆನುತ ತೆಗೆದೆಚ್ಚನಾ ಭೀಮ ॥30॥

೦೩೧ ಸರಳ ಸೊಮ್ಪಿನ ...{Loading}...

ಸರಳ ಸೊಂಪಿನ ಸೋಹಿನಲಿ ನಿರಿ
ಗರುಳ ದಾವಣಿವಲೆಗಳಲಿ ಸಂ
ಗರದ ಸುಭಟವ್ರಜದ ಮಧ್ಯದ ಗೂಡುವಲೆಗಳಲಿ
ಉರುಗದೆಯ ದಡಿವಲೆಯಲಸಿ ಮು
ದ್ಗರದ ಸಿಡಿವಲೆಗಳಲಿ ಸಮರದೊ
ಳರಿಮೃಗವ್ರಾತವನು ಭೀಮಕಿರಾತ ಕೈಕೊಂಡ ॥31॥

೦೩೨ ವಿನ್ದನನುವಿನ್ದನನು ಚಿತ್ರಕ ...{Loading}...

ವಿಂದನನುವಿಂದನನು ಚಿತ್ರಕ
ನಂದನನ ಚಿತ್ರಾಂಗದನ ಸಾ
ನಂದ ದುಸ್ಸಹ ಶಂಕುಕರ್ಣ ಸುದೀರ್ಘಬಾಹುಕನ
ನಂದ ಚಿತ್ರಾಂಬಕನ ಕುಂತಿಯ
ನಂದನನು ಬರಿಕೈದು ಭಾಸ್ಕರ
ನಂದನಾಶ್ವತ್ಥಾಮರನು ಮೂದಲಿಸಿ ತಾಗಿದನು ॥32॥

೦೩೩ ಕೆಡೆದುದನುಜರು ಕೇಣವಿಲ್ಲದೆ ...{Loading}...

ಕೆಡೆದುದನುಜರು ಕೇಣವಿಲ್ಲದೆ
ತೊಡಗಿದಾಹವದೊಳಗೆ ಕೊಂದವ
ಕೊಡನಮಗನೋ ದೂರುಹೊತ್ತುದು ಬರಿದೆ ಹಗೆಗಳಿಗೆ
ನುಡಿದು ಫಲವೇನಿನ್ನು ಭೀಮನ
ಬಿಡದೆ ಸುಭಟರು ನೂಕಿಯೆಂಬೀ
ನುಡಿಯ ಕೇಳಿದು ಖಾತಿಗೊಂಡನು ಮತ್ತೆ ಕಲಿ ದ್ರೋಣ ॥33॥

+೧೨ ...{Loading}...