೦೭

೦೦೦ ಸೂ ಅರಿ ...{Loading}...

ಸೂ. ಅರಿ ಮಹೇಶನುದಾರವೀರನು
ವರ ಕಿರೀಟಿಕುಮಾರ ಧೀರನು
ಸುರರ ನಗರಿಗೆ ನಡೆಯೆ ಹಲುಬಿದನಂದು ಯಮಸೂನು

೦೦೧ ತೆಗೆದುದರಿ ಪರಿವಾರ ...{Loading}...

ತೆಗೆದುದರಿ ಪರಿವಾರ ಕಹಳಾ
ದಿಗಳ ಸನ್ನೆಯಲುಭಯ ಬಲ ಕಾ
ಳೆಗವನುಳಿದುದು ಬಂದು ಹೊಕ್ಕರು ತಮ್ಮ ಪಾಳಯವ
ಮಗನು ರಣದಲಿ ಮಡಿದ ಹದ ಬೀ
ಡುಗಳೊಳಾದುದು ವಾರ್ತೆ ದೂತರು
ದುಗುಡ ಭರದಲಿ ಬಂದು ಹೊಕ್ಕರು ರಾಜ ಮಂದಿರವ ॥1॥

೦೦೨ ಅವನಿಪನ ಖಣ್ಡೆಯವ ...{Loading}...

ಅವನಿಪನ ಖಂಡೆಯವ ನಕುಲನ
ಪವನಸುತನ ಕಠಾರಿಯನು ನೃಪ
ನಿವಹದಾಯುಧ ತತಿಯನೊಯ್ಯನೆ ತೆಗೆದು ಬೈಚಿಟ್ಟು
ಬವರದಲಿ ಸುತನಳಿದನೋ ಕೌ
ರವರ ಕೈವಶವಾದನೋ ಸಂ
ಭವಿಪ ಹದನೇನೆಂಬ ನೃಪತಿಯ ಕಂಡರೈತಂದು ॥2॥

೦೦೩ ಅವನಿಪಾಲ ಕುಮಾರ ...{Loading}...

ಅವನಿಪಾಲ ಕುಮಾರ ಕಂಠೀ
ರವನು ರಣದಲಿ ಬೀದಿವರಿದು
ತ್ಸವದಲಹಿತರನಿರಿದು ಕೌರವ ರಾಯ ನಂದನರ
ಜವನ ನಗರಿಗೆ ಕಳುಹಿ ತಾ ವಾ
ಸವನ ಸಿಂಹಾಸನವನಡರುವ
ತವಕದಲಿ ಜಾರಿದನೆನಲು ಶಿವ ಎನುತ ಬಸವಳಿದ ॥3॥

೦೦೪ ಕುಲಿಶ ಹತಿಯಲಿ ...{Loading}...

ಕುಲಿಶ ಹತಿಯಲಿ ಕುಲ ಶಿಲೋಚ್ಚಯ
ವಿಳೆಗೆ ಕೆಡೆವಂದದಲಿ ನಿಜಸುತ
ನಳಿದ ವಾರ್ತಾ ವಚನದುಪಟಳಕವನಿಪಾಲಕನು
ಮಲಗಿದನು ಮೈಮರೆದು ಮಹಿ ಮಂ
ಡಳಿಕರೊಳು ಗುಜುಗುಜಿನೊಳಿರೆ ಕಳ
ವಳಿಕೆ ಮೊಳೆತುದು ಕಟಕದಲಿ ದುಮ್ಮಾನಮಯವಾಯ್ತು ॥4॥

೦೦೫ ಅರಮನೆಯ ಗಜಬಜದ ...{Loading}...

ಅರಮನೆಯ ಗಜಬಜದ ಹದನರಿ
ದರಸನಪಗತನೆಂದು ಪಾಳಯ
ದಿರುಳು ನಡುಗಿತು ತೊಡಗಿದವು ಕೈಸೂರೆ ಕೆಲಕಡೆಯ
ನೆರವಿ ಮಸಗಿತು ಕೆತ್ತುವಂಗಡಿ
ದುರುಳರಬ್ಬರಿಸಿದರು ಮುಸುಕಿನ
ಸುರಗಿ ಕೆತ್ತವು ಮಂದಿ ದಳವುಳವಾಯ್ತು ನಿಮಿಷದಲಿ ॥5॥

೦೦೬ ಹೊಳಲು ತಲೆಕೆಳಕಾಯ್ತು ...{Loading}...

ಹೊಳಲು ತಲೆಕೆಳಕಾಯ್ತು ಹುಯ್ಯಲು
ತಳಿತುದೊಳತೋಟಿಯಲಿ ಕೆತ್ತವು
ನಿಳಯ ನಿಳಯ ಕವಾಟವುದ್ರೇಕಿಗಳ ಮಯವಾಯ್ತು
ಎಲೆಲೆ ಕೆಟ್ಟುದು ಕಟಕವೆಂದು
ಮ್ಮಳಿಸಿದರು ಸಚಿವರು ಮಹೀಪತಿ
ಯುಳಿವನರಿಯಲು ನಾಸಿಕದಲಾರೈದರುಸುರುಗಳ ॥6॥

೦೦೭ ಉರಿಯ ಚೂಣಿಯಲುಸುರು ...{Loading}...

ಉರಿಯ ಚೂಣಿಯಲುಸುರು ಮೂಗಿನ
ಲುರವಣಿಸುತಿದೆ ಧರಣಿಪತಿ ಸು
ಸ್ಥಿರನು ಹೊಯ್ ಹೊಯ್ ಹೊಳಲ ಬೆದರಿಸಿ ಸುಲಿವ ಬಣಗುಗಳ
ಹರಿಯೆನಲು ಹೊರವಂಟು ಹೊಯ್ದರು
ತುರಗ ಗಜಘಟೆ ಬೀದಿವರಿದವು
ನೆರವಿದೊಳಸಿನ ಮನ್ನೆಯರ ಸೆಣಸಿದರು ಶೂಲದಲಿ ॥7॥

೦೦೮ ಹೊಳಲ ಗಜಬಜವಡಗಿತರಮನೆ ...{Loading}...

ಹೊಳಲ ಗಜಬಜವಡಗಿತರಮನೆ
ಯೊಳಗೆ ಪಸರಿಸಿತತುಳ ಶೋಕದ
ಜಲಧಿ ಭೂಪಾಲಕನ ಸೈರಣೆಗಾಯ್ತು ಮಹನವಮಿ
ಒಳಗುರಿವ ಹಸಿಮರದ ತುದಿಯಲಿ
ಜಲವೊಗುವವೊಲು ಹೃದಯ ಶಿಖಿಯುರೆ
ತಳಿತು ಲೋಚನವಾರಿ ತುಳುಕಿತು ಪವನಜಾದಿಗಳ ॥8॥

೦೦೯ ಮರೆವುತೆಚ್ಚರುತವನಿಪತಿ ಕರೆ ...{Loading}...

ಮರೆವುತೆಚ್ಚರುತವನಿಪತಿ ಕರೆ
ತರುಣನಾವೆಡೆ ರಾಯಗಜ ಕೇ
ಸರಿಯದಾವೆಡೆ ಕಂದ ಬಾಯೆನುತಪ್ಪಿದನು ಬಯಲ
ಹೊರಳಿದನು ಹುಡಿಯೊಳಗೆ ಸಲೆ ಕಾ
ತರಸಿದನು ಮೋಹಾಂಧಕಾರಕೆ
ಕರಣವನು ಕೈಸೂರೆಗೊಟ್ಟನು ನಿಜದೊಳೆಚ್ಚರದೆ ॥9॥

೦೧೦ ಬನ್ದು ಫಲುಗುಣನೆನ್ನ ...{Loading}...

ಬಂದು ಫಲುಗುಣನೆನ್ನ ಮೋಹದ
ಕಂದನಾವೆಡೆಯೆಂದಡಾನೇ
ನೆಂದು ಮಾರುತ್ತರವ ಕೊಡುವೆನು ವೈರಿ ನಾಯಕರು
ಕೊಂದರೆಂಬೆನೊ ಮೇಣು ನಾನೇ
ಕೊಂದೆನೆಂಬೆನೊ ಶಿವ ಮಹಾ ದೇ
ವೆಂದು ಪುತ್ರಸ್ನೇಹ ಸೌರಂಭದಲಿ ಹಲುಬಿದನು ॥10॥

೦೧೧ ಅರಮನೆಯ ಗಜಬಜವ ...{Loading}...

ಅರಮನೆಯ ಗಜಬಜವ ಕೇಳಿದು
ದೊರೆಯೊಳಾವವನಳಿದನಕಟೆಂ
ದರಸಿಯರು ಬೆಸಗೊಳಲು ದ್ರೌಪದಿಗರುಹಿದರು ಹದನ
ಉರಿವ ಡಾವರವೆಳೆಯ ಬಾಳೆಯ
ಬೆರಸುವಂತಿರೆ ರಾಯ ಕುವರನ
ಮರಣ ವಾರ್ತೆಯನಾ ಸುಭದ್ರಾ ದೇವಿ ಕೇಳಿದಳು ॥11॥

೦೧೨ ತೆಳುವಸುರ ಬಿರುವೊಯ್ಲ ...{Loading}...

ತೆಳುವಸುರ ಬಿರುವೊಯ್ಲ ಮುರಜದ
ಬಳಲ ಮುಡಿಯರಳುಗಳ ಮುತ್ತಿಗೆ
ಯಳಿ ರವದ ಭಾರಣೆಯ ಹಾಹಾರವದ ಕಾಯದಲಿ
ಲಲನೆ ಬರೆ ಚೆಲುವಾಯ್ತು ಧರ್ಮಜ
ನಳಲು ಮಿಗೆ ಕೊಂಡಿರಲು ನಾಟ್ಯದ
ಕಳನ ಗೆಲದಿರಳೆನಲು ಬಂದಳು ದ್ರೌಪದಾದೇವಿ ॥12॥

೦೧೩ ಅಳಲ ಶಿಖಿಯಲಿ ...{Loading}...

ಅಳಲ ಶಿಖಿಯಲಿ ಬಾಡಿದಾನನ
ಜಲರುಹದ ಕಡುವೇದನೆಯ ಕಳ
ಕಳದ ಹಾಹಾ ರವದ ರೌದ್ರೆ ಸುಭದ್ರೆ ನಡೆತಂದು
ನೆಲಕೆ ಧೊಪ್ಪನೆ ಕೆಡೆದು ಸಭೆಯಲಿ
ಹಲುಬಿದಳು ಕೊಳುಗುಳಕೆ ಕಂದನ
ಕಳುಹಿದವರಿಗೆ ಸಂದುದೇ ಪರಿಣಾಮವೆಂದೆನುತ ॥13॥

೦೧೪ ಎಲೆ ಯುಧಿಷ್ಠಿರದೇವ ...{Loading}...

ಎಲೆ ಯುಧಿಷ್ಠಿರದೇವ ಸಾಲದೆ
ಕೆಲನ ಮೆಚ್ಚಿಸುವಳಲು ಲೋಚನ
ಜಲವ ತೊಡೆಯೈ ಭೀಮ ಬಲ್ಲೆನು ನಿಮ್ಮ ನೆನಹುಗಳ
ಅಳಲದಿರಿ ಸಹದೇವ ನಕುಳರು
ನಿಲಿಸಿರೈ ನಿಮ್ಮಿಷ್ಟ ಸಿದ್ಧಿಯ
ಬೆಳಸು ಫಲವಾಯ್ತೇಕೆ ನೋವಿನ್ನೆಂದಳಿಂದುಮುಖಿ ॥14॥

೦೧೫ ಮಗನು ಪಞ್ಚದ್ರೌಪದೇಯರ ...{Loading}...

ಮಗನು ಪಂಚದ್ರೌಪದೇಯರ
ಬಗೆಯನೆನ್ನವನಿರಲು ರಾಜ್ಯವ
ಹೊಗಿಸಲನುವಿಲ್ಲೆಂದು ಕಂದನ ರಣಕೆ ನೂಕಿದಿರಿ
ಬಗೆಯೊಲವು ಫಲವಾಯ್ತಲಾ ಕಾ
ಳೆಗವ ಗೆಲಿದೈವರು ಕುಮಾರರ
ಹೊಗಿಸಿರೈ ಗಜಪುರವನೆಂದು ಸುಭದ್ರೆ ಹಲುಬಿದಳು ॥15॥

೦೧೬ ಅಕಟ ಮಗನೇ ...{Loading}...

ಅಕಟ ಮಗನೇ ಬಹಳ ಪಾಪಾ
ತ್ಮಕರ ಬಸುರಲಿ ಬಹುದರಿಂದೀ
ನಕುಳನುದರದಲಾಗಲೀ ಧರ್ಮಜನ ಜಠರದಲಿ
ಸುಕೃತಿ ನೀನುದಯಿಸಲು ಬಹು ಕಂ
ಟಕರು ಬಳಿಕಾರುಂಟು ಕಡುಪಾ
ತಕಿಯಲಾ ನಿಮ್ಮಯ್ಯನೆಂದಳು ಫಲುಗುಣನ ರಾಣಿ ॥16॥

೦೧೭ ಧುರವ ಹೊಗತಕ್ಕವನೆ ...{Loading}...

ಧುರವ ಹೊಗತಕ್ಕವನೆ ಚಿಕ್ಕವ
ನಿರಿಯಲಾಪನೆ ಬಹನೆ ಮರಳಿದು
ಧರೆಯ ವೈಭವಕಳುಪಿ ಕಳುಹಿದಿರೆನ್ನ ಕಂದನನು
ವರ ಯುಧಿಷ್ಠಿರ ಜನಪ ಲೋಕದ
ಕರುಣಿಯೆಂಬರು ಕುನ್ನಿಗಳು ಮರೆ
ಗೊರಳುಗೊಯ್ಕನನರಿಯರೆಂದಳು ಫಲುಗುಣನ ರಾಣಿ ॥17॥

೦೧೮ ಶೋಕವಿಮ್ಮಡಿಸಿತ್ತು ಚಿತ್ತ ...{Loading}...

ಶೋಕವಿಮ್ಮಡಿಸಿತ್ತು ಚಿತ್ತ
ವ್ಯಾಕುಳತೆಯಾ ಸತಿಯ ನುಡಿಗಳ
ನೇಕ ಸಾಣೆಯ ಸರಳು ಮುರಿದವು ನೃಪನ ಹೃದಯದಲಿ
ಆ ಕುಮಾರ ವಿಯೋಗವಹ್ನಿಗೆ
ಯೀಕೆಯಳಲು ಸಮೀರನಾಯ್ತು ದಿ
ವೌಕಸರ ಸಮ್ಮೇಳವೇ ಪುರುಷಾರ್ಥ ತನಗೆಂದ ॥18॥

೦೧೯ ಎಲೆ ವೃಕೋದರ ...{Loading}...

ಎಲೆ ವೃಕೋದರ ನಕುಳ ಸಾತ್ಯಕಿ
ನಿಲಿಸಿರೈ ತಂಗಿಯನು ತನ್ನಯ
ಕೊಲೆಗೆ ಮಗನಳಿವೊಂದು ಸಾಲದೆ ತನ್ನ ನುಡಿಯೇಕೆ
ನಳಿನನಾಭನ ಕರುಣದೊರತೆಯು
ಕಳಿದರಾರೇಗುವರು ಶಿವ ಶಿವ
ನೆಲನೊಳೆನ್ನವೊಲಾರು ಪಾಪಿಗಳೆಂದು ಬಿಸುಸುಯ್ದ ॥19॥

೦೨೦ ಧರಣಿಪನ ಶೋಕಾತಿಶಯವನು ...{Loading}...

ಧರಣಿಪನ ಶೋಕಾತಿಶಯವನು
ವರ ಸಮಾಧಿಯೊಳರಿದು ಮುನಿಪತಿ
ಕರುಣದಲಿ ಕಡುನೊಂದು ಸಕಲ ಜಗಕ್ಕನುಗ್ರಹವ
ಕರುಣಿಸುವವೊಲು ಕರುಣಿತನವನು
ಮೆರೆಯಲೋಸುಗವಿರದೆ ಗಗನೇ
ಚರದ ಗತಿಯಲಿ ಬಂದನೈ ದ್ವೈಪಾಯನವ್ರತಿಪ ॥20॥

೦೨೧ ಬನ್ದು ವೇದವ್ಯಾಸಮುನಿ ...{Loading}...

ಬಂದು ವೇದವ್ಯಾಸಮುನಿ ನೃಪ
ಮಂದಿರವ ಹೊಗಲೆದ್ದು ಪದದಲಿ
ಸಂದಣಿಸಿ ಚಾಚಿದನು ಮಕುಟವನವನಿಪಾಲಕನು
ನೊಂದವರು ಸತ್ಸಂಗತಿಯಲಾ
ನಂದವಡೆವುದೆನುತ್ತ ಮುನಿಪತಿ
ಕಂದು ಮೋರೆಯ ಮಹಿಪತಿಯ ನೆಗಹಿದನು ಕರುಣದಲಿ ॥21॥

೦೨೨ ಎಲೆ ಯುಧಿಷ್ಠಿರ ...{Loading}...

ಎಲೆ ಯುಧಿಷ್ಠಿರ ನೃಪ ಕುಮಾರ
ಪ್ರಳಯದಾಪತ್ತಾಯ್ತೆ ಭೀಮನ
ನಲವಿಗೂಣೆಯವಾಯ್ತೆ ದುಸ್ಥಿತಿಯಾಯ್ತೆ ನಕುಲಂಗೆ
ಬಲು ದುಗುಡ ಸಹದೇವನಲಿ ಸಂ
ಗಳಿಸಿತೇ ದ್ರೌಪದಿ ಸುಭದ್ರಾ
ಲಲನೆಯರಿಗನುಚಿತವು ಘಟಿಸಿತೆ ಎಂದನಾ ಮುನಿಪ ॥22॥

೦೨೩ ಅಡಸಿದಾಪತ್ತಿನಲಿ ಧೈರ್ಯವ ...{Loading}...

ಅಡಸಿದಾಪತ್ತಿನಲಿ ಧೈರ್ಯವ
ಹಿಡಿವುದೇ ಸುಪ್ರೌಢಿ ಸಾಕಿ
ನ್ನೊಡಲು ಕರಗಿದೊಡೇಳಲರಿವನೆ ಹಿಂಗಿದಭಿಮನ್ಯು
ಒಡನೆ ಬಂದವು ಬಿಡವು ಭವದಲಿ
ತೊಡಕಿ ಸುಕೃತವು ದುಷ್ಕೃತಂಗಳು
ಕಡೆಗೆ ತಿಳಿವಿನೊಳಲ್ಲದಿಹಪರ ಸೌಖ್ಯವಿಲ್ಲೆಂದ ॥23॥

೦೨೪ ಎಲ್ಲರೋಪಾದಿಯ ಕುಮಾರಕ ...{Loading}...

ಎಲ್ಲರೋಪಾದಿಯ ಕುಮಾರಕ
ನಲ್ಲ ಕಾಣಿರೆ ವೀರ ವಿತರಣ
ದಲ್ಲಿ ಛಲದಲಿ ಶೀಲದಲಿ ನಾನಾ ಗುಣಂಗಳಲಿ
ಇಲ್ಲ ಸುಕುಮಾರಂಗೆ ಸರಿ ಮಗ
ನಿಲ್ಲದೇಗುವೆನಕಟ ವಚನದ
ಸೆಲ್ಲಹದಲಿರಿಯದಿರೆನುತ ಹಲುಬಿದನು ಭೂಪಾಲ ॥24॥

೦೨೫ ಜನನವೇ ಲಯಬೀಜ ...{Loading}...

ಜನನವೇ ಲಯಬೀಜ ಮರಣವೆ
ಜನನ ಬೀಜವು ತೋರಿ ಕೆಡುವೀ
ತನುವಿನಭಿರಂಜನೆಯ ಸೌಖ್ಯಕೆ ಮಾರದಿರು ಮನವ
ಘನಪರಂಜ್ಯೋತಿ ಸ್ವರೂಪದ
ನೆನಹ ಮರೆದೀ ಮೋಹಮಯ ಬಂ
ಧನದೊಳಗೆ ಮರುಳಹರೆ ಮಗನೇ ನಿನ್ನನರಿಯೆಂದ ॥25॥

೦೨೬ ಹರನೊಡನೆ ಹೊಯ್ದಾಡಿದಗ್ಗದ ...{Loading}...

ಹರನೊಡನೆ ಹೊಯ್ದಾಡಿದಗ್ಗದ
ನರನು ತಂದೆ ಸಮಸ್ತ ಭುವನೇ
ಶ್ವರನಲಾ ಮುರವೈರಿ ಮಾವನು ನಿನ್ನ ತನಯನಿಗೆ
ಧುರದೊಳೀ ಹದನಾಯ್ತು ಮಿಕ್ಕಿನ
ನೊರಜುಗಳ ಪಾಡೇನು ಕಾಲನು
ಹರಿಹರ ಬ್ರಹ್ಮಾದಿಗಳ ಕೈಕೊಂಬನಲ್ಲೆಂದ ॥26॥

೦೨೭ ದೇಹ ತಾನಭಿಮನ್ಯುವೋ ...{Loading}...

ದೇಹ ತಾನಭಿಮನ್ಯುವೋ ದಿಟ
ದೇಹಿ ತಾನಭಿಮನ್ಯುವೋ ಜಡ
ದೇಹ ತಾನಭಿಮನ್ಯುವಲ್ಲದು ಕೆಟ್ಟರೇನಾಯ್ತು
ದೇಹವೆಂಬುದನಿತ್ಯ ನಿನ್ನವ
ರಾಹವದೊಳಳಿದವರ ಬಿಡು ಸಂ
ದೇಹವನಹಮ್ಮಮತೆಗಳ ಬೀಳ್ಕೊಟ್ಟು ನೋಡೆಂದ ॥27॥

೦೨೮ ಎನ್ನದಾನೆಮ್ಬೆರಡರಿನ್ದವೆ ...{Loading}...

ಎನ್ನದಾನೆಂಬೆರಡರಿಂದವೆ
ಬನ್ನಬಡುವನು ಜೀವನಲ್ಲದೆ
ಮುನ್ನವಿನ್ನೆಂದೆಂದಿಗಾತ್ಮಂಗಿಲ್ಲ ಭವಬಂಧ
ನಿನ್ನ ನೀನರಿ ಸಾಕು ಮಾಯೆಯ
ಗನ್ನಗತಕವ ಗೆಲುವೆ ಕನಸಿನ
ಪೊನ್ನ ಕಾಣದೆ ದುಃಖಪಡುವರೆ ಭೂಪ ಕೇಳ್ ಎಂದ ॥28॥

೦೨೯ ಉರಗ ನರ ...{Loading}...

ಉರಗ ನರ ದಿವಿಜಾದಿಗಳಿಗಿದು
ಪರಿಹರಿಸಲಳವಲ್ಲ ದೈವದ
ಪರುಠವಣೆ ಮುನ್ನಾದಿಯಲಿ ನಿರ್ಮಿಸಿತು ಮೃತ್ಯುವನು
ಅರಸನಾಗಲಿ ಧನಿಕನಾಗಲಿ
ಹಿರಿಯನಾಗಲಿ ಬಡವನಾಗಲಿ
ಮರಣ ಜನಿಸಿದ ಬಳಿಕ ತಪ್ಪದು ಮಗನೆ ಕೇಳ್ ಎಂದ ॥29॥

೦೩೦ ಇರುಳು ಹಗಲಿನ ...{Loading}...

ಇರುಳು ಹಗಲಿನ ಬೀಜ ನೆರವಿಯೆ
ಹರೆವುದಕೆ ಮೊದಲುನ್ನತೋನ್ನತ
ಮರುಳೆ ಕೇಡಿನ ಕಾಳಕೂಟವೆ ವೀರನಿರ್ವಹಣ
ಸಿರಿ ದರಿದ್ರತೆಗಡಹು ಜನನವೆ
ಮರಣ ಫಲವಿದನರಿದು ಬುಧರಾ
ಚರಿಸುವುದು ಕೇಳ್ ಎಂದು ವೇದವ್ಯಾಸ ಮುನಿ ನುಡಿದ ॥30॥

೦೩೧ ತಿಳಿದು ಧರ್ಮಜ ...{Loading}...

ತಿಳಿದು ಧರ್ಮಜ ಕೇಳು ಕೃತಯುಗ
ದೊಳಗೆ ಕಂಪನನೆಂಬ ಭೂಪನು
ಕುಲತಿಲಕ ಹರಿಯೆಂಬ ಮಗನಾತಂಗೆ ಜನಿಸಿದನು
ಬಳಿಕ ಯೌವನನಾಗಿ ಪರಮಂ
ಡಲಕೆ ನಡೆದನು ವೈರಿ ರಾಯರ
ವಳಿತವನು ತಾನೊತ್ತಿಕೊಂಡನು ರಿಪು ನೃಪರ ಕೆಡಹಿ ॥31॥

೦೩೨ ಮಗನೆ ಕಮ್ಪನನೆಮ್ಬ ...{Loading}...

ಮಗನೆ ಕಂಪನನೆಂಬ ಭೂಪನ
ಮಗನು ಮತ್ತೊಮ್ಮಿನಲಿ ಬಲುಗಾ
ಳೆಗವ ಕಾದಿ ವಿರೋಧಿ ಸೇನೆಯೊಳಾನೆವರಿವರಿದು
ಬಗೆಯೆ ನಿನ್ನಭಿಮನ್ಯುವಿನವೋ
ಲಗಣಿತರನಸಿಯರೆದು ಸುರಪನ
ನಗರಿಗೈದಿದನೆಂದು ಕಂಪನು ಕೇಳಿ ಬಸವಳಿದ ॥32॥

೦೩೩ ನಿನಗೆ ಬನ್ದಾಪತ್ತಿನನ್ತಿರ ...{Loading}...

ನಿನಗೆ ಬಂದಾಪತ್ತಿನಂತಿರ
ಲನಿತು ಬಂದುದು ಕಂಪನೆಂಬಾ
ತನನು ಸಂತೈಸಲ್ಕೆ ನಾರದನವನಿಗೈತಂದು
ಜನಪತಿಯ ಹಿಡಿದೆತ್ತಿದನು ಕಾ
ಲನನು ಮೀರುವರಾರು ಪೌರಾ
ತನ ಕೃತ ಧ್ರುವ ಮೃತ್ಯುವನು ಗೆಲುವಾತನಿಲ್ಲೆಂದ ॥33॥

೦೩೪ ಮೃತ್ಯುವಾರೆನ್ದವನಿಪತಿ ಮುನಿ ...{Loading}...

ಮೃತ್ಯುವಾರೆಂದವನಿಪತಿ ಮುನಿ
ಪೋತ್ತಮನ ಬೆಸಗೊಳಲು ಬ್ರಹ್ಮನ
ಕಿತ್ತಡದ ಕೋಪದಲಿ ಜನಿಸಿದ ರುದ್ರನಿಂ ಬಳಿಕ
ಮೃತ್ಯುವೆಂಬವಳಾದಳಾ ಸತಿ
ಯತ್ತ ಕಂಬನಿ ರುಜೆಗಳಾದವು
ತೆತ್ತಿಗರು ಷಡುವರ್ಗ ಕಾಮಕ್ರೋಧ ಮೊದಲಾಗಿ ॥34॥

೦೩೫ ಜನದ ಕೊಲೆಗೆಲಸದ ...{Loading}...

ಜನದ ಕೊಲೆಗೆಲಸದ ನಿರೂಪಕೆ
ಮನವ ತಂದಳು ಮೃತ್ಯು ನಿಜ ಸಾ
ಧನ ಸಹಿತ ಕೈಕೊಂಡ ಕೆಲಸವನಾಗುಮಾಡುವಳು
ಜನಪ ದೃಷ್ಟನ್ನಷ್ಟವೆಂಬುದ
ನನುಕರಿಸಿ ಮೂರ್ತಿ ತ್ರಯಂಗಳ
ತನಗೆ ನೆರೆ ವಶಮಾಡಿಕೊಂಡಿಹಳೆಂದು ಮುನಿ ನುಡಿದ ॥35॥

೦೩೬ ಆ ಮಹಾ ...{Loading}...

ಆ ಮಹಾ ಮೃತ್ಯುವನು ಹುಟ್ಟಿಸಿ
ದಾ ಮಹಾದೇವಾದಿ ದೇವರು
ಕಾಮಿನಿಯ ಕಳುಹಲ್ಕೆ ಬಾರದೆನುತ್ತ ಬೋಧಿಸಲು
ಭೂಮಿಪತಿ ನಿಜಸುತನ ಮೃತಿಯು
ದ್ದಾಮ ತಾಪವ ಕಳೆಯ ಬೇಕೆಂ
ದಾ ಮುನೀಶ್ವರ ಸಂತವಿಟ್ಟನು ಕಂಪಭೂಪತಿಯ ॥36॥

೦೩೭ ಆದರಾ ಮೃತ್ಯುವಿನ ...{Loading}...

ಆದರಾ ಮೃತ್ಯುವಿನ ಕೈವಶ
ವಾದವರನೆನಗರುಹ ಬೇಹುದು
ಮೇದಿನೀಶರೊಳೆಂದು ಬಿನ್ನಹ ಮಾಡಿದನು ನೃಪತಿ
ಆ ದಯಾಳುಗಳರಸನಾ ಶೋ
ಕೋದಧಿಗೆ ವಡಬಾಗ್ನಿ ಸಮನೆನಿ
ಪಾದಿಯಲಿ ಷೋಡಶ ಮಹೀಶರ ಕಥೆಯ ವಿರಚಿಸಿದ ॥37॥

೦೩೮ ಭರತ ಪೃಥು ...{Loading}...

ಭರತ ಪೃಥು ಪೌರವ ಭಗೀರಥ
ವರ ಯಯಾತಿ ಮರುತ್ತ ನಹುಷೇ
ಶ್ವರ ಪುರೂರವ ರಂತಿದೇವ ಗಯಾಂಬರೀಷಕರು
ಪರಶುರಾಮ ದಿಲೀಪ ಮಾಂಧಾ
ತರು ಹರಿಶ್ಚಂದ್ರಾದಿ ಪೃಥ್ವೀ
ಶ್ವರರನಂತರು ಮೃತ್ಯುವಶವರ್ತಿಗಳು ಕೇಳ್ ಎಂದ ॥38॥

೦೩೯ ಎನ್ದು ಷೋಡಶ ...{Loading}...

ಎಂದು ಷೋಡಶ ರಾಯರಾ ಕಥೆ
ಯಿಂದ ನೃಪತಿಯ ಸಂತವಿಟ್ಟನು
ಬಂದು ಧರ್ಮಜನೆರಗಿದನು ಮುನಿರಾಯನಂಘ್ರಿಯಲಿ
ಅಂದು ವೇದವ್ಯಾಸ ಪಾಳಯ
ದಿಂದ ಕಳುಹಿಸಿಕೊಂಡನಿತ್ತ ಮು
ಕುಂದನಭಿಮನ್ಯುವಿನ ಮರಣವನರಿದ ಮನದೊಳಗೆ ॥39॥

+೦೭ ...{Loading}...