೦೦೦ ಸೂ ರಾಯ ...{Loading}...
ಸೂ. ರಾಯ ಕಟಕ ಪಿತಾಮಹನ ತರು
ವಾಯಲಭಿಷೇಕವನು ಕೌರವ
ರಾಯ ಮಾಡಿಸಿ ಪತಿಕರಿಸಿದನು ಕುಂಭಸಂಭವನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕುರುಕ್ಷೇತ್ರದ ಯುದ್ಧದಲ್ಲಿ ಭೀಷ್ಮಾಚಾರ್ಯರು ಶಸ್ತ್ರಸನ್ಯಾಸವನ್ನು ಕೈಗೊಂಡು ರಣರಂಗದಿಂದ ನಿರ್ಗಮಿಸಿದ ಮೇಲೆ ಕೌರವ ರಾಯನು ಪಾಂಡವ-ಕೌರವರಿಗೆ ಧನುರ್ವಿದ್ಯೆಯನ್ನು ಕಲಿಸಿದ ದ್ರೋಣಾಚಾರ್ಯರನ್ನು ಸೇನಾ ನಾಯಕರನ್ನಾಗಿ ನೇಮಿಸಿ ಪಟ್ಟಾಭಿಷೇಕವನ್ನು ಮಾಡಿದನು.
ಪದಾರ್ಥ (ಕ.ಗ.ಪ)
ಕಟಕ-ಸೈನ್ಯ, ಪತಿಕರಿಸು-ಗೌರವಿಸು, ಕುಂಭಸಂಭವ-ದ್ರೋಣ.
ಮೂಲ ...{Loading}...
ಸೂ. ರಾಯ ಕಟಕ ಪಿತಾಮಹನ ತರು
ವಾಯಲಭಿಷೇಕವನು ಕೌರವ
ರಾಯ ಮಾಡಿಸಿ ಪತಿಕರಿಸಿದನು ಕುಂಭಸಂಭವನ
೦೦೧ ಸೋಲಿಸಿತೆ ಕರ್ಣಾಮೃತದ ...{Loading}...
ಸೋಲಿಸಿತೆ ಕರ್ಣಾಮೃತದ ಮಳೆ
ಗಾಲ ನಿನ್ನಯ ಕಿವಿಗಳನು ನೆರೆ
ಕೇಳಿದೈ ಕೌರವನ ಕದನದ ಬಾಲಕೇಳಿಗಳ
ಹೇಳುವುದು ತಾನೇನು ಕೆಂಗರಿ
ಗೋಲ ಮಂಚದ ಮಹಿಮನಿರವನು
ಮೇಲುಪೋಗಿನ ಕಥೆಯನವಧಾನದಲಿ ಕೇಳ್ ಎಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಕದನದ ಬಾಲಕೇಳಿಗಳ ವಿವರಣೆಯು ನಿನ್ನ ಕಿವಿಗಳಿಗೆ ಆನಂದ ತಂದಿರಬೇಕಲ್ಲವೆ? ಕೆಂಪಾದ ಗರಿಗಳನ್ನು ಹೊಂದಿರುವ ಬಾಣಗಳನ್ನೇ ಮಂಚವನ್ನಾಗಿ ಮಾಡಿಕೊಂಡು ಮಲಗಿದ ಭೀಷ್ಮನ ಸ್ಥಿತಿಯನ್ನು ಏನೆಂದು ಹೇಳುವುದು? ಮುಂದೆ ನಡೆಯುವ ಏಳಿಗೆಯ ನಾ±ದ ಕಥೆಯನ್ನು ತಾಳ್ಮೆಯಿಂದ ಕೇಳು ಎಂದು ಸಂಜಯನು ವ್ಯಂಗ್ಯವಾಗಿ ನುಡಿದನು.
ಪದಾರ್ಥ (ಕ.ಗ.ಪ)
ನೆರೆ-ಚೆನ್ನಾಗಿ, ಕದನ-ಯುದ್ಧ, ಕೇಳಿ-ಆಟ, ಕೆಂಗರಿಗೋಲ-ಕೆಂಪಾದ ಗರಿಗಳನ್ನು ಹೊಂದಿರುವ ಬಾಣ, ಕೆಂಗರಿಗೋಲ ಮಂಚದ ಮಹಿಮನು-ಭೀಷ್ಮ, ಇರವನು-ಇರುವಿಕೆಯನ್ನು, ಮೇಲುಪೋಗಿನ-ಏಳಿಗೆಯ ನಾಶ, ಅಳಿವು
ಮೂಲ ...{Loading}...
ಸೋಲಿಸಿತೆ ಕರ್ಣಾಮೃತದ ಮಳೆ
ಗಾಲ ನಿನ್ನಯ ಕಿವಿಗಳನು ನೆರೆ
ಕೇಳಿದೈ ಕೌರವನ ಕದನದ ಬಾಲಕೇಳಿಗಳ
ಹೇಳುವುದು ತಾನೇನು ಕೆಂಗರಿ
ಗೋಲ ಮಂಚದ ಮಹಿಮನಿರವನು
ಮೇಲುಪೋಗಿನ ಕಥೆಯನವಧಾನದಲಿ ಕೇಳೆಂದ ॥1॥
೦೦೨ ಬತ್ತಿತಮ್ಬುಧಿ ನಿನ್ನ ...{Loading}...
ಬತ್ತಿತಂಬುಧಿ ನಿನ್ನ ಮಗ ಹೊಗು
ವತ್ತ ಕಾದುದು ನೆಲನು ನೃಪ ತಲೆ
ಗುತ್ತಿ ಹೊಗಲೊಳಕೊಳ್ಳದಂಬರವೇನನುಸುರುವೆನು
ಮೃತ್ಯು ನಿನಗೊಲಿದಿಹಳು ಬಳಿಕಿ
ನ್ನುತ್ತರೋತ್ತರವೆಲ್ಲಿಯದು ನೆರೆ
ಚಿತ್ತವಿಸುವುದು ಜೀಯ ದ್ರೋಣಂಗಾಯ್ತು ಹರಿವೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಕಾಲಿಟ್ಟ ಕಡೆಗೆ ಸಾವು, ನೋವುಗಳೇ ವಿನಾ ಜಯ ದೊರಕದು; ನಿನ್ನ ಮಗನಾದ ದುರ್ಯೋಧನನು ಹೋದ ಕಡೆಗೆ ಸಮುದ್ರವೇ ಒಣಗಿ ಹೋಗುತ್ತದೆ. ಭೂಮಿ ಬಿಸಿಯಾಗುತ್ತದೆ. ಆಕಾಶದ ಕಡೆಗೆ ಹೋಗಬೇಕೆಂದರೆ ಅದು ಅವಕಾಶ ಕೊಡುವುದಿಲ್ಲ. ಏನೆಂದು ತಾನೆ ಹೇಳಲಿ? ಮೃತ್ಯು ದೇವತೆ ನಿನಗೆ ಒಲಿದಿದ್ದಾಳೆ, ಮುಂದೆ ಅಭಿವೃದ್ಧಿ ಎಲ್ಲಿರುತ್ತದೆ? ದಿನಗಳೆದಂತೆ ದುಃಖ ಪರಂಪರೆಯೇ ಉಂಟಾಗುತ್ತಿರುತ್ತದೆ; ಈಗ ಮನಸ್ಸಿಟ್ಟು ಕೇಳು, ದ್ರೋಣಾಚಾರ್ಯರಿಗೆ ಸೇನಾ ನಾಯಕ ಪದವಿ ಉಂಟಾಗಿದೆ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಅಂಬುಧಿ-ಸಮುದ್ರ, ಹೊಗುವತ್ತ-ಹೋದ ಕಡೆಗೆ, ನೃಪ-ರಾಜ, ತಲೆಗುತ್ತಿ-ತಲೆಯನ್ನು ತಗ್ಗಿಸಿ, ಒಳಕೊಳ್ಳದು-ಅವಕಾಶ ಕೊಡುವುದಿಲ್ಲ, ಉತ್ತರೋತ್ತರ-ಭವಿಷ್ಯ, ನೆರೆ-ಚೆನ್ನಾಗಿ, ಚಿತ್ತವಿಸುವುದು-ಮನಸ್ಸಿಟ್ಟು ಕೇಳುವುದು, ಜೀಯ-ರಾಜನೆ, ಹರಿವು-ಅವಕಾಶ
ಮೂಲ ...{Loading}...
ಬತ್ತಿತಂಬುಧಿ ನಿನ್ನ ಮಗ ಹೊಗು
ವತ್ತ ಕಾದುದು ನೆಲನು ನೃಪ ತಲೆ
ಗುತ್ತಿ ಹೊಗಲೊಳಕೊಳ್ಳದಂಬರವೇನನುಸುರುವೆನು
ಮೃತ್ಯು ನಿನಗೊಲಿದಿಹಳು ಬಳಿಕಿ
ನ್ನುತ್ತರೋತ್ತರವೆಲ್ಲಿಯದು ನೆರೆ
ಚಿತ್ತವಿಸುವುದು ಜೀಯ ದ್ರೋಣಂಗಾಯ್ತು ಹರಿವೆಂದ ॥2॥
೦೦೩ ಐದು ದಿವಸದೊಳಹಿತ ...{Loading}...
ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರರ ನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐದು ದಿನಗಳವರೆಗೆ ಪಾಂಡವ ಶತ್ರು ಸೇನೆಯ ಮೇಲೆ ಬಿದ್ದು ಸೇನೆಯನ್ನು ಹುಡಿಗಟ್ಟಿ ದ್ರೋಣರು ತಮ್ಮ ಶಕ್ತಿಯನ್ನು ಮೆರೆದರು. ಭುಜಬಲ ಪರಾಕ್ರಮವನ್ನು ಮೆರೆದರು. ಶಸ್ತ್ರಾಸ್ತ್ರ ನಿಪುಣರಿಗೆಲ್ಲ ಗುರುವೆನಿಸಿದ ದ್ರೋಣರು ದೇವಲೋಕಕ್ಕೆ ಹೋದರೆಂದು ಸಂಜಯನು ಹೇಳಿದಾಗ ಧೃತರಾಷ್ಟ್ರನ ಹೊಟ್ಟೆಯಲ್ಲಿ ಉರಿಯು ಆವರಿಸಿಕೊಂಡಿತು.
ಪದಾರ್ಥ (ಕ.ಗ.ಪ)
ಅಹಿತ-ಶತ್ರು, ಬಲ-ಸೈನ್ಯ, ರಿಪು-ಶತ್ರು, ಐದೆ-ಚೆನ್ನಾಗಿ, ಇರಿದು-ಕೊಂದು, ಕೈದು-ಶಸ್ತ್ರ-ಆಯುಧ, ಕೈದುಕಾರ-ಕೈದುಕಾರರ ಗುರು-ದ್ರೋಣ, ಛಡಾಳಿಸಿ-ಅತಿಶಯವಾಗಿ, ಮೈದೆಗೆದು-ದೇಹವನ್ನು ಬಿಟ್ಟು, ನಿರ್ಜರರ-ದೇವತೆಗಳ, ಹಾಯ್ದನು-ನುಗ್ಗಿದನು, ಮೋಹರಿಸಿತು-ಆವರಿಸಿತು.
ಮೂಲ ...{Loading}...
ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರರ ನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ ॥3॥
೦೦೪ ಶಿವಶಿವಾ ಭೀಷ್ಮಾವಸಾನ ...{Loading}...
ಶಿವಶಿವಾ ಭೀಷ್ಮಾವಸಾನ
ಶ್ರವಣ ವಿಷವಿದೆ ಮತ್ತೆ ಕಳಶೋ
ದ್ಭವನ ದೇಹವ್ಯಥೆಯ ಕೇಳ್ದೆನೆ ಪೂತು ವಿಧಿಯೆನುತ
ಅವನಿಪತಿ ದುಗುಡದಲಿ ಮೋರೆಯ
ಲವುಚಿದನು ಕರತಳವ ಚಿತ್ತದ
ಬವಣಿಗೆಯ ಭಾರಣೆಯ ಕಡುಶೋಕದಲಿ ಮೈಮರೆದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನು ಭೀಷ್ಮಾಚಾರ್ಯರು ಯುದ್ಧದಿಂದ ನಿರ್ಗಮಿಸಿದ ಕಥೆಯೇ ನನ್ನ ಕಿವಿಗಳಿಗೆ ವಿಷವಾರ್ತೆ ಎನಿಸಿತ್ತು. ಈಗಾಗಲೇ ಕತ್ತಿಗೆ ಸಿಕ್ಕಿ ದ್ರೋಣನು ಸತ್ತ ವಿಚಾರವನ್ನು ಕೇಳಿದೆನೆ ? ಹಾ ! ವಿಧಿಯೇ ! ಎಂದುಕೊಂಡನು. ನಂತರ ಧೃತರಾಷ್ಟ್ರನ ಮುಖ ದುಃಖದಿಂದ ಕಿವುಚಿ ಹೋಯಿತು. ಅವನು ಕೈಯನ್ನು ಮುಖದ ಮೇಲಿಟ್ಟುಕೊಂಡು ಮನಸ್ಸಿನಲ್ಲಿ ಉಂಟಾದ ದುಃಖದ ಭಾರದಿಂದ ಮೂರ್ಛಾಕ್ರಾಂತನಾದನು.
ಪದಾರ್ಥ (ಕ.ಗ.ಪ)
ಅವಸಾನ-ಕೊನೆ-ಸಾವು, ಕಳಶೋದ್ಭವ-ದ್ರೋಣಾಚಾರ್ಯ, ಪೂತು-ಅಯ್ಯೋ, ಬವಣಿಗೆ-ನೋವು, ಭಾರಣೆ-ಅತಿಶಯತೆ,
ಮೂಲ ...{Loading}...
ಶಿವಶಿವಾ ಭೀಷ್ಮಾವಸಾನ
ಶ್ರವಣ ವಿಷವಿದೆ ಮತ್ತೆ ಕಳಶೋ
ದ್ಭವನ ದೇಹವ್ಯಥೆಯ ಕೇಳ್ದೆನೆ ಪೂತು ವಿಧಿಯೆನುತ
ಅವನಿಪತಿ ದುಗುಡದಲಿ ಮೋರೆಯ
ಲವುಚಿದನು ಕರತಳವ ಚಿತ್ತದ
ಬವಣಿಗೆಯ ಭಾರಣೆಯ ಕಡುಶೋಕದಲಿ ಮೈಮರೆದ ॥4॥
೦೦೫ ಶೋಕವೇತಕೆ ಜೀಯ ...{Loading}...
ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯನು “ವೃಥಾ ದುಃಖವನ್ನೇಕೆ ಪಡುತ್ತೀಯೆ? ನೀನು ಅವಿವೇಕದಿಂದ ಮಗನಾದ ದುರ್ಯೋಧನನ ಮೇಲೆ ಮಿತಿಮೀರಿದ ಮೋಹವನ್ನು ಹೊಂದಿ ಸರಿಯಾದ ರೀತಿಯಲ್ಲಿ ಸಾಕಲಿಲ್ಲ, ಅವನಿಗೆ ನೀನು ಕಲಿಸಿದ್ದು ಮೋಸ ಮಾಡುವುದು ಮೊದಲಾದ ಕೆಟ್ಟ ವಿದ್ಯೆಗಳನ್ನು. ನಿಮ್ಮ ಕಡೆ ಮಹಾವೀರರು, ಜವಾಬ್ದಾರಿಯುತ ವಿವೇಕಿಗಳಿಗೆ ನಿಮ್ಮ ಬಳಿ ಸ್ಥಳವಿಲ್ಲ. ಈ ಮಾತು ಇಲ್ಲಿಗೆ ಸಾಕು. ಈ ದುಃಖವನ್ನು ಹೇಗಾದರೂ ತಾಳಿಕೊ” ಎಂದು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಹೊರಿಗೆ-ಜವಾಬ್ದಾರಿ, ಸೈರಿಸು-ತಾಳಿಕೊ
ಮೂಲ ...{Loading}...
ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ ॥5॥
೦೦೬ ಆರು ಕುಹಕಿಗಳಾರು ...{Loading}...
ಆರು ಕುಹಕಿಗಳಾರು ದುರ್ಜನ
ರಾರು ಖುಲ್ಲರು ನೀತಿ ಬಾಹಿರ
ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು
ಆರು ಹಿತವರು ನೀತಿ ಕೋವಿದ
ರಾರು ಸುಜನರು ಬಹು ಪರಾಕ್ರಮ
ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಪ್ರಪಂಚದಲ್ಲಿ ಯಾರು ಅತ್ಯಂತ ಕುಹಕಿಗಳೋ, ಯಾರು ದುಷ್ಟರೋ, ಯಾರು ಕೆಟ್ಟವರೋ, ಯಾರು ನೀತಿಯನ್ನು ಕೈಬಿಟ್ಟಿರುವರೋ, ಯಾರು ದೌರ್ಬಲ್ಯಗಳನ್ನು ಹೊಂದಿರುವರೋ ಅವರು ನಿನ್ನ ಅರಮನೆಯಲ್ಲಿ ಮಂತ್ರಿಗಳಾಗಿದ್ದಾರೆ. ಯಾರು ಇಂದಿಗೂ, ಮುಂದಿಗೂ ಹಿತವನ್ನು ಹೇಳುವರೋ, ನೀತಿಯನ್ನು ನುಡಿಯುವರೋ, ಒಳ್ಳೆಯ ಜನರೆನಿಸಿಕೊಂಡಿದ್ದಾರೋ, ಬಹು ಪರಾಕ್ರಮಿಗಳೆನಿಸಿಕೊಂಡಿರುವರೋ ಅವರನ್ನು ಹೊರಗೆ ಹಾಕುವುದು ನಿನ್ನ ನೀತಿಯಾಗಿದೆ" ಎಂದು ಸಂಜಯನು ಟೀಕಿಸಿದನು.
ಪದಾರ್ಥ (ಕ.ಗ.ಪ)
ಖುಲ್ಲರು-ಕೆಟ್ಟವರು, ಕುಹಕಿ-ವ್ಯಂಗ್ಯವಾಗಿ ಮಾತನಾಡುವವನು, ಕೋವಿದ-ಪಂಡಿತ, ಸುಜನರು-ಒಳ್ಳೆಯವರು, ಕಾಬುದು-ಕಾಣುವುದು, ಮತ-ನೀತಿ
ಮೂಲ ...{Loading}...
ಆರು ಕುಹಕಿಗಳಾರು ದುರ್ಜನ
ರಾರು ಖುಲ್ಲರು ನೀತಿ ಬಾಹಿರ
ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು
ಆರು ಹಿತವರು ನೀತಿ ಕೋವಿದ
ರಾರು ಸುಜನರು ಬಹು ಪರಾಕ್ರಮ
ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ ॥6॥
೦೦೭ ಹರಿದುದೈ ಕುರುಸೇನೆ ...{Loading}...
ಹರಿದುದೈ ಕುರುಸೇನೆ ಬತ್ತಿದ
ಕೆರೆಯೊಳಗೆ ಬಲೆಯೇಕೆ ಹಗೆ ಹೊ
ಕ್ಕಿರಿವರಿನ್ನಾರಡ್ಡಬೀಳ್ವರು ನಿನ್ನ ಮಕ್ಕಳಿಗೆ
ಬರಿದೆ ಮನ ನೋಯದಿರು ಸಾಕೆ
ಚ್ಚರುವುದೆನೆ ತನ್ನೊಳಗೆ ಹದುಳಿಸಿ
ಸರಿಹೃದಯನೀ ಮಾತನೆಂದನು ಮತ್ತೆ ಸಂಜಯಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ , ಕೌರವರ ಸೈನ್ಯ ನಾಶವಾಗಿದೆ. ಒಣಗಿ ಹೋದ ಕೆರೆಯಲ್ಲಿ ಮೀನುಗಳನ್ನು ಹಿಡಿಯಲೆಂದು ಬಲೆಯನ್ನು ಬೀಸುವುದು ವ್ಯರ್ಥವಲ್ಲವೆ ? ಶಕ್ತಿವಂತರಾದ ಪಾಂಡವರು ಮುನ್ನುಗ್ಗಿ ನಿನ್ನ ಮಕ್ಕಳನ್ನು ಕೊಲ್ಲಲಾರಂಭಿಸಿದರೆ ಯಾರು ತಾನೆ ಅಡ್ಡ ನಿಲ್ಲಲು ಸಾಧ್ಯ ? ವೃಥಾ ಮನಸ್ಸಿನಲ್ಲಿ ಕೊರಗಬೇಡ ವಿವೇಕದಿಂದ ವರ್ತಿಸು ಎಂದು ಸಂಜಯನು ಹೇಳಿದಾಗ ಧೃತರಾಷ್ಟ್ರನು ತನ್ನನ್ನು ತಾನೇ ಸಮಾಧಾನ ಮಾಡಿಕೊಂಡು ಸಂಜಯನಿಗೆ ಮುಂದಿನ ಮಾತುಗಳನ್ನು ಹೇಳಿದನು.
ಪದಾರ್ಥ (ಕ.ಗ.ಪ)
ಹರಿದುದೈ-ನಾಶವಾಯಿತು, ಹಗೆ-ಶತ್ರು, ಎಚ್ಚರುವುದು-ಎಚ್ಚರವಾಗಿರುವುದು, ಹದುಳಿಸಿ-ಸಮಾಧಾನಪಟ್ಟುಕೊಂಡು, ಸರಿಹೃದಯನು-ಸಮಾನಹೃದಯನು, ಒಳ್ಳೆಯಮನಸ್ಸಿನವನು.
ಮೂಲ ...{Loading}...
ಹರಿದುದೈ ಕುರುಸೇನೆ ಬತ್ತಿದ
ಕೆರೆಯೊಳಗೆ ಬಲೆಯೇಕೆ ಹಗೆ ಹೊ
ಕ್ಕಿರಿವರಿನ್ನಾರಡ್ಡಬೀಳ್ವರು ನಿನ್ನ ಮಕ್ಕಳಿಗೆ
ಬರಿದೆ ಮನ ನೋಯದಿರು ಸಾಕೆ
ಚ್ಚರುವುದೆನೆ ತನ್ನೊಳಗೆ ಹದುಳಿಸಿ
ಸರಿಹೃದಯನೀ ಮಾತನೆಂದನು ಮತ್ತೆ ಸಂಜಯಗೆ ॥7॥
೦೦೮ ಘಾಸಿಯಾದೆನು ಮಗನ ...{Loading}...
ಘಾಸಿಯಾದೆನು ಮಗನ ಮೇಲಿ
ನ್ನಾಸೆ ಬೀತುದು ಬೆಂದ ಹುಣ್ಣಲಿ
ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ
ಏಸು ಬಲುಹುಂಟಾದರೆಯು ಹಗೆ
ವಾಸುದೇವನ ಹರಿಬವೆಂದಾ
ನೇಸನೊರಲಿದೆನೇನ ಮಾಡುವೆನೆಂದನಂಧ ನೃಪ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಂಜಯ, ನನ್ನ ಮನಸ್ಸಿಗೆ ತುಂಬ ನೋವಾಗಿದೆ. ನನ್ನ ಮಗನ ಮೇಲಿನ ಆಸೆ ಹೊರಟುಹೋಗಿದೆ. ಮೊದಲೇ ಸುಟ್ಟ ಗಾಯಕ್ಕೆ ಸಾಸಿವೆಯನ್ನು ಬಳಿಯಬೇಡ. ಸಂಜಯ ನಿನಗೆ ನನ್ನ ಮೇಲೆ ಕರುಣೆ ಇಲ್ಲ. ನಮ್ಮ ಕೌರವ ಸೇನೆಗೆ ಎಷ್ಟೇ ಶಕ್ತಿ ಇದ್ದರೂ ಶತ್ರುವಾಗಿರುವ ಶ್ರೀಕೃಷ್ಣನಿರುವ ಕಡೆಗೆ ಜಯ ಉಂಟಾಗುತ್ತದೆ ಎಂಬುದನ್ನು ನಾನು ಹಲವು ರೀತಿಗಳಲ್ಲಿ ದುರ್ಯೋಧನನಿಗೆ ಹೇಳಿದೆನು. ನಾನೇನು ಮಾಡಲಿ?” ಎಂದು ಕುರುಡನಾದ ಧೃತರಾಷ್ಟ್ರನು ನುಡಿದನು.
ಪದಾರ್ಥ (ಕ.ಗ.ಪ)
ಘಾಸಿಯಾದೆನು-ಏಟನ್ನು ತಿಂದಿದ್ದೇನೆ, ಬೀತುದು-ಒಣಗಿಹೋಗಿದೆ, ಏಸು-ಎಷ್ಟು, ಬಲುಹು-ಶಕ್ತಿ, ಹರಿಬ-ಆಶ್ರಯ, ರಕ್ಷಣೆ, ಹೊಣೆ, ಒರಲಿದೆ-ಒಂದೇ ಸಮನಾಗಿ ಹೇಳಿದೆ, ಅಂಧನೃಪ-ಕುರುಡರಾಜ-ಧೃತರಾಷ್ಟ್ರ
ಮೂಲ ...{Loading}...
ಘಾಸಿಯಾದೆನು ಮಗನ ಮೇಲಿ
ನ್ನಾಸೆ ಬೀತುದು ಬೆಂದ ಹುಣ್ಣಲಿ
ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ
ಏಸು ಬಲುಹುಂಟಾದರೆಯು ಹಗೆ
ವಾಸುದೇವನ ಹರಿಬವೆಂದಾ
ನೇಸನೊರಲಿದೆನೇನ ಮಾಡುವೆನೆಂದನಂಧ ನೃಪ ॥8॥
೦೦೯ ಬೇಡ ಮಗನೇ ...{Loading}...
ಬೇಡ ಮಗನೇ ಪಾಂಡುಸುತರಲಿ
ಮಾಡು ಸಂಧಿಯನಸುರ ರಿಪುವಿನ
ಕೂಡೆ ವಿಗ್ರಹವೊಳ್ಳಿತೇ ಹಗೆ ಹೊಲ್ಲ ದೈವದಲಿ
ಪಾಡು ತಪ್ಪಿದ ಬಳಿಕ ವಿನಯವ
ಮಾಡಿ ಮೆರೆವುದು ಬಂಧು ವರ್ಗದ
ಕೂಡೆ ವಾಸಿಗಳೇತಕೆನ್ನೆನೆ ನಿನ್ನ ಮನವರಿಯೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡುವಿನ ಮಕ್ಕಳೊಡನೆ ಯುದ್ಧ ಮಾಡಬೇಡ; ಸಂಧಿಯನ್ನು ಮಾಡಿಕೊ ಶ್ರೀಕೃಷ್ಣನ ವಿರುದ್ಧ ಯುದ್ಧವನ್ನು ಮಾಡುವುದು ಸರಿಯಲ್ಲ. ದೈವದ ವಿರುದ್ಧದ ಹಗೆ ವಿನಾಶಕಾರಿ. ನಮ್ಮ ಪಾಡು ಕೆಟ್ಟ ಮೇಲೆ ವಿನಯವಂತಿಕೆಯನ್ನು ಮೆರೆಯಬೇಕು. ಬಂಧು ವರ್ಗದೊಡನೆ ಸ್ಪರ್ಧೆ ಏತಕ್ಕೆ ಎಂದು ಹೇಳಿದೆನು. ಈ ವಿಚಾರವು ನಿನಗೂ ಗೊತ್ತಲ್ಲವೇ ? " ಎಂದು ಧೃತರಾಷ್ಟ್ರನು ಸಂಜಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಅಸುರ ರಿಪು-ರಾಕ್ಷಸರ ಶತ್ರು-ಕೃಷ್ಣ, ವಿಗ್ರಹ-ಯುದ್ಧ, ವಾಸಿ-ಸ್ಪರ್ಧೆ, ಮೇಲಾಟ
ಮೂಲ ...{Loading}...
ಬೇಡ ಮಗನೇ ಪಾಂಡುಸುತರಲಿ
ಮಾಡು ಸಂಧಿಯನಸುರ ರಿಪುವಿನ
ಕೂಡೆ ವಿಗ್ರಹವೊಳ್ಳಿತೇ ಹಗೆ ಹೊಲ್ಲ ದೈವದಲಿ
ಪಾಡು ತಪ್ಪಿದ ಬಳಿಕ ವಿನಯವ
ಮಾಡಿ ಮೆರೆವುದು ಬಂಧು ವರ್ಗದ
ಕೂಡೆ ವಾಸಿಗಳೇತಕೆನ್ನೆನೆ ನಿನ್ನ ಮನವರಿಯೆ ॥9॥
೦೧೦ ಹೋಗಲಿನ್ನಾ ಮಾತು ...{Loading}...
ಹೋಗಲಿನ್ನಾ ಮಾತು ಖೂಳರು
ತಾಗಿ ಬಾಗರು ಸುಕೃತ ದುಷ್ಕೃತ
ಭೋಗವದು ಮಾಡಿದರಿಗಪ್ಪುದು ಖೇದ ನಮಗೇಕೆ
ಈಗಲೀ ಕದನದಲಿ ವಜ್ರಕೆ
ಬೇಗಡೆಯ ಮಾಡಿದನದಾವನು
ತಾಗಿ ದ್ರೋಣನ ಮುರಿದ ಪರಿಯನು ರಚಿಸಿ ಹೇಳೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನು, ಹೋಗಲಿ ಇನ್ನು ಆ ಮಾತೇಕೆ?, ದುಷ್ಟರಾದವರು ತಗ್ಗಿ ಬಗ್ಗಿ ನಡೆಯುವುದಿಲ್ಲ; ಅವರವರು ಮಾಡಿದ ಪುಣ್ಯ-ಪಾಪಗಳಿಗೆ ತಕ್ಕುದಾದುದನ್ನು ಅವರವರು ಅನುಭವಿಸುತ್ತಾರೆ; ಇದಕ್ಕೆ ದು:ಖ ನಮಗೇಕೆ ? ಈಗ ಈ ಯುದ್ಧದಲ್ಲಿ ದ್ರೋಣನ ಶಕ್ತಿಯನ್ನು ಯಾರು ಹೇಗೆ ಮುರಿದವರೆಂಬುದನ್ನು ವಿವರಿಸಿ ತಿಳಿಸಬೇಕೆಂದು ಸಂಜಯನಿಗೆ ಹೇಳಿದನು. ಯುದ್ಧವೆಂಬ ವಜ್ರಕ್ಕೆ ತೂತು ಕೊರೆದ ವೀರನಾರೆಂಬುದನ್ನು ತಿಳಿಸಲು ಕೋರಿದನು.
ಪದಾರ್ಥ (ಕ.ಗ.ಪ)
ಭೋಗ-ಅನುಭವಿಸುವುದು, ಅಪ್ಪುದು-ಆಗುತ್ತದೆ, ಖೇದ-ದುಃಖ, ಬೇಗಡೆ-ತೂತು, ರಂಧ್ರ
ಮೂಲ ...{Loading}...
ಹೋಗಲಿನ್ನಾ ಮಾತು ಖೂಳರು
ತಾಗಿ ಬಾಗರು ಸುಕೃತ ದುಷ್ಕೃತ
ಭೋಗವದು ಮಾಡಿದರಿಗಪ್ಪುದು ಖೇದ ನಮಗೇಕೆ
ಈಗಲೀ ಕದನದಲಿ ವಜ್ರಕೆ
ಬೇಗಡೆಯ ಮಾಡಿದನದಾವನು
ತಾಗಿ ದ್ರೋಣನ ಮುರಿದ ಪರಿಯನು ರಚಿಸಿ ಹೇಳೆಂದ ॥10॥
೦೧೧ ಚಿತ್ತವಿಸು ಧೃತರಾಷ್ಟ್ರ ...{Loading}...
ಚಿತ್ತವಿಸು ಧೃತರಾಷ್ಟ್ರ ಮಲಗಿದ
ಮುತ್ತಯನ ಬೀಳ್ಕೊಂಡು ಕೌರವ
ರಿತ್ತ ಸರಿದರು ಪಾಂಡುನಂದನರತ್ತ ತಿರುಗಿದರು
ಹೊತ್ತ ಮೋನದ ವಿವಿಧ ವಾದ್ಯದ
ಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೋರೆಯ ಮಹೀಪತಿ ಹೊಕ್ಕನರಮನೆಯ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯನು “ಧೃತರಾಷ್ಟ್ರ, ಮನಸ್ಸಿಟ್ಟು ಕೇಳು, ಶರಮಂಚದ ಮೇಲೆ ಮಲಗಿದ ತಾತನನ್ನು ಬೀಳ್ಕೊಂಡು ಕೌರವರು ಹೋದ ಮೇಲೆ ಪಾಂಡವರು ತಮ್ಮ ಪಾಳೆಯದ ಕಡೆಗೆ ಹಿಂದಿರುಗಿದರು. ಕೌರವ ಮೌನದಿಂದಲೇ ಬಾಯಿಗೆ ಕೈಯಿಕ್ಕಿಕೊಂಡು ಹೆಜ್ಜೆ ಹಾಕುತ್ತ ಅರಮನೆಗೆ ಬಂದ. ಅವನ ವಂದಿಮಾಗಧರ ಬಾಯಿಂದ ಸ್ವರ ಹೊರಡುತ್ತಿರಲಿಲ್ಲ. ಎಲ್ಲಾ ವಾದ್ಯಗಳೂ ಮೂಕವಾಗಿದ್ದುವು.”
ಪದಾರ್ಥ (ಕ.ಗ.ಪ)
ಚಿತ್ತವಿಸು-ಮನಸ್ಸಿಟ್ಟು ಕೇಳು, ಮುತ್ತಯ-ತಾತ-ಭೀಷ್ಮ, ಮೋನ-ಮೌನ, ಮೋರೆ-ಮುಖ,
ಮೂಲ ...{Loading}...
ಚಿತ್ತವಿಸು ಧೃತರಾಷ್ಟ್ರ ಮಲಗಿದ
ಮುತ್ತಯನ ಬೀಳ್ಕೊಂಡು ಕೌರವ
ರಿತ್ತ ಸರಿದರು ಪಾಂಡುನಂದನರತ್ತ ತಿರುಗಿದರು
ಹೊತ್ತ ಮೋನದ ವಿವಿಧ ವಾದ್ಯದ
ಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೋರೆಯ ಮಹೀಪತಿ ಹೊಕ್ಕನರಮನೆಯ ॥11॥
೦೧೨ ಗಾಹು ಕೊಳ್ಳದ ...{Loading}...
ಗಾಹು ಕೊಳ್ಳದ ಭೀಮ ಪಾರ್ಥರ
ಸಾಹಸವನೆಣಿಸುತ ಕಠಾರಿಯ
ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ
ಊಹೆದೆಗಹಿನ ಕಂಬನಿಯ ತನಿ
ಮೋಹರದ ಘನ ಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಶತ್ರುಗಳು ಎದುರಿಸಲಾರದಂತಹ ಪರಾಕ್ರಮದಿಂದ ಭೀಮ ಮತ್ತು ಅರ್ಜುನರು ಮಾಡಿದ ಮಹಾ ಸಾಹಸ ಕಾರ್ಯಗಳನ್ನು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾ ಕಠಾರಿಯ ಹಿಡಿಯ ಮೇಲೆ ಗಲ್ಲವನ್ನಿಟ್ಟುಕೊಂಡು, ತಲೆಯನ್ನು ಆ ಕಡೆ- ಈ ಕಡೆಗಳಿಗೆ ಅಲ್ಲಾಡಿಸುತ್ತಿರುವಾಗ ದುರ್ಯೋಧನನ ಕಿರೀಟವೂ ಅತ್ತಿತ್ತ ತೂಗುತ್ತಿತ್ತು, ಮುಂದಾಗಬಹುದಾದ ಪ್ರಸಂಗಗಳನ್ನು ಲೆಕ್ಕ ಹಾಕುತ್ತಿದ್ದಂತೆ ದುರ್ಯೋಧನನ ಕಣ್ಣುಗಳಿಂದ ನೀರು ದಳದಳನೆ ಹರಿಯುತ್ತಿತ್ತು. ಅವನ ಅಂತರಂಗವೆಂಬ ಹುಲ್ಲುಗಾವಲಿನಲ್ಲಿ ದುಃಖವೆಂಬ ಬೆಂಕಿಯು ದಹಿಸುತ್ತಿತ್ತು. ಇಂತಹ ಮನಸ್ಥಿತಿಯಲ್ಲಿಯೇ ದುರ್ಯೋಧನನು ಸಭೆಯನ್ನು ನಡೆಸಲು ಸಿದ್ಧನಾದನು.
ಪದಾರ್ಥ (ಕ.ಗ.ಪ)
ಗಾಹುಕೊಳ್ಳದ- ಎದುರಿಸಲಾರದಂತಹ, ಮೋಹಳ-ಹಿಡಿಕೆ, ಮಕುಟ-ಕಿರೀಟ, ತೆಗಹು-ಅವಕಾಶ, ಮೋಹರ-ಗುಂಪು, ವಹ್ನಿ-ಬೆಂಕಿ, ಮೇಹುಗಾಡಿನ-ಹುಲ್ಲುಗಾವಲಿನ, ಓಲಗ-ಸಭೆ, ಊಹೆರೆನಹು-ಊಹೆಯೂ ಹಿಂಜರಿಯುವಷ್ಟು ಪ್ರಮಾಣ,
ಮೂಲ ...{Loading}...
ಗಾಹು ಕೊಳ್ಳದ ಭೀಮ ಪಾರ್ಥರ
ಸಾಹಸವನೆಣಿಸುತ ಕಠಾರಿಯ
ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ
ಊಹೆದೆಗಹಿನ ಕಂಬನಿಯ ತನಿ
ಮೋಹರದ ಘನ ಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ ॥12॥
೦೧೩ ಗುರುತನುಜ ವೃಷಸೇನ ...{Loading}...
ಗುರುತನುಜ ವೃಷಸೇನ ಮಾದ್ರೇ
ಶ್ವರ ಕಳಿಂಗ ವಿಕರ್ಣ ದುಸ್ಸಹ
ದುರುಳ ಶಕುನಿ ಸುಕೇತು ಭೂರಿಶ್ರವ ಜಯದ್ರಥರು
ವರ ಸುಲೋಚನ ವಿಂದ್ಯ ಯವನೇ
ಶ್ವರರು ಕೃಪ ಕೃತವರ್ಮ ಭಗದ
ತ್ತರು ಮಹಾಮಂತ್ರಿಗಳು ಬಂದರು ರಾಯನೋಲಗಕೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ದ್ರೋಣಾಚಾರ್ಯರ ಸೇನಾನಾಯಕತ್ವದಲ್ಲಿ ಎದುರಾಳಿ ಸೈನ್ಯದೊಡನೆ ಯುದ್ಧ ಮಾಡಬೇಕಾದ ರೀತಿ ನೀತಿಗಳ ಬಗ್ಗೆ ಸಮಾಲೋಚಿಸಲು ಏರ್ಪಡಿಸಿದ ಸಭೆಗೆ ಅಶ್ವತ್ಥಾಮ, ವೃಷಸೇನ, ಶಲ್ಯ, ಕಳಿಂಗರಾಜ, ವಿಕರ್ಣ, ಶಕುನಿ, ಸುಕೇತು, ಭೂರಿಶ್ರವ, ಜಯದ್ರಥ, ವಿಂದ್ಯ, ಯವನರಾಜರು, ಕೃಪ, ಕೃತವರ್ಮ, ಭಗದತ್ತ ಹಾಗೂ ಇತರ ಮಂತ್ರಿಗಳು ಬಂದರು.
ಮೂಲ ...{Loading}...
ಗುರುತನುಜ ವೃಷಸೇನ ಮಾದ್ರೇ
ಶ್ವರ ಕಳಿಂಗ ವಿಕರ್ಣ ದುಸ್ಸಹ
ದುರುಳ ಶಕುನಿ ಸುಕೇತು ಭೂರಿಶ್ರವ ಜಯದ್ರಥರು
ವರ ಸುಲೋಚನ ವಿಂದ್ಯ ಯವನೇ
ಶ್ವರರು ಕೃಪ ಕೃತವರ್ಮ ಭಗದ
ತ್ತರು ಮಹಾಮಂತ್ರಿಗಳು ಬಂದರು ರಾಯನೋಲಗಕೆ ॥13॥
೦೧೪ ತೊಡರ ಝಣಝಣ ...{Loading}...
ತೊಡರ ಝಣಝಣ ರವದ ಹೆಗಲಲಿ
ಜಡಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮಿಗೆ ಹೊಳೆವ ಹೀರಾವಳಿಯ ಕೊರಳುಗಳ
ಕಡುಮನದ ಕಲಿ ರಾಜಪುತ್ರರ
ನಡುವೆ ಮೈಪರಿಮಳದಿ ದೆಸೆ ಕಂ
ಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಧರಿಸಿದ ನಾನಾ ಆಭರಣಗಳ ಧ್ವನಿಯು ಅವನು ನಡೆದು ಬರುವಾಗ ನಿನದಿಸುತ್ತಿತ್ತು. ಹಿರಿಯುಬ್ಬಣವೆಂಬ ಆಯುಧಗಳಿಂದ ಕೂಡಿದ ಅವನ ಹೆಗಲು ಉಬ್ಬಿದಂತಿತ್ತು. ಅವನು ಕೊರಳಿನಲ್ಲಿ ಧರಿಸಿದ ವಜ್ರದ ಹಾರಗಳಿಂದ ಕಿರಣಗಳು ಪ್ರತಿಫಲಿಸುತ್ತಿದ್ದವು. ಮಹಾ ವೀರನಾದ ಕರ್ಣನು ರಾಜಪುತ್ರರ ನಡುವೆ ಬರುತ್ತಿರುವಾಗ ದೇಹದ ಸುವಾಸನೆ ಎಲ್ಲೆಡೆಯಲ್ಲಿಯೂ ಹರಡುತ್ತಿತ್ತು. ಕರ್ಣನು ಠೀವಿಯಿಂದ ಸಭೆಯೊಳಗೆ ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ತೊಡರ-ತೊಟ್ಟ ಆಭರಣಗಳ, ರವದ-ಧ್ವನಿಯಿಂದ, ಜಡಿವ-ತುಂಬಿದ, ಮುಡುಹು-ಹೆಗಲು, ಹೀರಾವಳಿ-ವಜ್ರಸಮೂಹ, ಕಡುಮನ-ದೃಢ ನಿಶ್ಚಯದ, ಕಂಪಿಡಲು-ಸುವಾಸನೆಯು ಹರಡಲು, ಭಾರವಣೆ-ಸಾಂದ್ರತೆ, ಓಲಗ-ಸಭೆ
ಮೂಲ ...{Loading}...
ತೊಡರ ಝಣಝಣ ರವದ ಹೆಗಲಲಿ
ಜಡಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮಿಗೆ ಹೊಳೆವ ಹೀರಾವಳಿಯ ಕೊರಳುಗಳ
ಕಡುಮನದ ಕಲಿ ರಾಜಪುತ್ರರ
ನಡುವೆ ಮೈಪರಿಮಳದಿ ದೆಸೆ ಕಂ
ಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ ॥14॥
೦೧೫ ಇತ್ತ ಬಾರೈ ...{Loading}...
ಇತ್ತ ಬಾರೈ ಕರ್ಣ ಕುರುಕುಲ
ಮತ್ತವಾರಣ ಕುಳ್ಳಿರೈ ಬಾ
ಯಿತ್ತ ಬಾ ತನ್ನಾಣೆಯೆನುತವೆ ಸೆರಗ ಹಿಡಿದೆಳೆದು
ಹತ್ತಿರಾತನ ನಿಲಿಸಿ ಬಟ್ಟಲ
ಲಿತ್ತು ವೀಳೆಯವನು ಸುಯೋಧನ
ಕೆತ್ತುಕೊಂಡಿರೆ ನುಡಿಸಿದನು ಕಲಿ ಕರ್ಣನವನಿಪನ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕರ್ಣ, ಈ ಕಡೆಗೆ ಬಾ, ನೀನು ಕೌರವ ವಂಶಕ್ಕೆ ಆನೆಯ ಬಲವನ್ನು ತಂದಿರುವವನು; ಬಾ ಇಲ್ಲಿ ಕುಳಿತುಕೋ;” ಎಂದು ಕರ್ಣನು ಹೊದೆದ ವಸ್ತ್ರದ ತುದಿಯನ್ನು ಎಳೆದು ತನ್ನ ಹತ್ತಿರ ಬಂದು ನಿಲ್ಲುವ ಹಾಗೆ ಮಾಡಿದನು. ಕರ್ಣನಿಗೆ ಬಟ್ಟಲಿನಲ್ಲಿ ವೀಳೆಯವನ್ನು ಕೊಟ್ಟನು. ಕರ್ಣನು ದುಗುಡದಿಂದಿದ್ದ ಸುರ್ಯೋಧನನ್ನು ನೋಡಿ ಮಾತನಾಡಿಸಿದನು.
ಪದಾರ್ಥ (ಕ.ಗ.ಪ)
ಮತ್ತವಾರಣ-ಮದ್ದಾನೆ, ಕೆತ್ತುಕೊಂಡಿರೆ-ದುಗುಡದಿಂದ ಕೂಡಿರಲು, ಅವನಿಪನ-ರಾಜನ-ದುರ್ಯೋಧನನ, ಸೆರಗ-ವಸ್ತ್ರದ ತುದಿ.
ಮೂಲ ...{Loading}...
ಇತ್ತ ಬಾರೈ ಕರ್ಣ ಕುರುಕುಲ
ಮತ್ತವಾರಣ ಕುಳ್ಳಿರೈ ಬಾ
ಯಿತ್ತ ಬಾ ತನ್ನಾಣೆಯೆನುತವೆ ಸೆರಗ ಹಿಡಿದೆಳೆದು
ಹತ್ತಿರಾತನ ನಿಲಿಸಿ ಬಟ್ಟಲ
ಲಿತ್ತು ವೀಳೆಯವನು ಸುಯೋಧನ
ಕೆತ್ತುಕೊಂಡಿರೆ ನುಡಿಸಿದನು ಕಲಿ ಕರ್ಣನವನಿಪನ ॥15॥
೦೧೬ ಜೀಯ ದುಗುಡವಿದೇಕೆ ...{Loading}...
ಜೀಯ ದುಗುಡವಿದೇಕೆ ಬಿಡು ಗಾಂ
ಗೇಯನಳುಕಿದರೇನು ಕಾಣಿಯ
ಬೀಯದಲಿ ಬಡವಹುದೆ ಕನಕಾಚಲ ನಿಧಾನಿಸಲು
ರಾಯ ಜಗಜಟ್ಟಿಗಳು ರಣದೊಳ
ಜೇಯರಿದೆ ಪರಿವಾರವನು ನಿ
ರ್ದಾಯದಲಿ ದಣಿಸುವೆನು ರಿಪುಗಳ ಸಿರಿಯ ಸೂರೆಯಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಾ ದುರ್ಯೋಧನಾ, ದುಃಖವೇಕೆ ? ಚಿಂತೆಯನ್ನು ಬಿಡು; ಗಂಗಾಪುತ್ರನಾದ ಭೀಷ್ಮನು ಸೋತರೇನು ? ಬಂಗಾರದ ಪರ್ವತದಲ್ಲಿ ಒಂದು ಕಿರುನಾಣ್ಯವನ್ನು ತೆಗೆದರೆ ಆ ಕನಕಪರ್ವತ ಬಡವಾದೀತೆ ? ಯೋಚಿಸಿ ನೋಡಿದರೆ ನಿನ್ನ ಕಡೆ ವೀರಾಧಿವೀರರಾದ, ಜಗಜಟ್ಟಿಗಳು , ಅಜೇಯರು ಅಸಂಖ್ಯಾತರಾಗಿದ್ದಾರೆ; ಶತ್ರುಗಳ ಸಂಪತ್ತನ್ನು ಸಂಪೂರ್ಣವಾಗಿ ದೋಚಿ ನಮ್ಮ ಪರಿವಾರದವರಿಗೆ ತೃಪ್ತಿಯಾಗುವಂತೆ ಮಾಡುತ್ತೇನೆ ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಜೀಯ-ಸ್ವಾಮಿ-ರಾಜ, ದುಗುಡ-ದುಃಖ, ಅಳುಕು-ಸೋಲು, ಕಾಣಿ-ಚಿಕ್ಕನಾಣ್ಯ ‘ಪಣ’ದಲ್ಲಿ 1/64 ಭಾಗ, ಬೀಯ-ಖರ್ಚು, ಕನಕಾಚಲ-ಬಂಗಾರದ ಪರ್ವತ, ನಿಧಾನಿಸಲು-ಯೋಚಿಸಲು, ಅಜೇಯ-ಜಯಿಸಲಾಗದವರು, ನಿರ್ದಾಯ-ಸಂಪೂರ್ಣ, ದಣಿಸು-ತೃಪ್ತಿಗೊಂಡು
ಮೂಲ ...{Loading}...
ಜೀಯ ದುಗುಡವಿದೇಕೆ ಬಿಡು ಗಾಂ
ಗೇಯನಳುಕಿದರೇನು ಕಾಣಿಯ
ಬೀಯದಲಿ ಬಡವಹುದೆ ಕನಕಾಚಲ ನಿಧಾನಿಸಲು
ರಾಯ ಜಗಜಟ್ಟಿಗಳು ರಣದೊಳ
ಜೇಯರಿದೆ ಪರಿವಾರವನು ನಿ
ರ್ದಾಯದಲಿ ದಣಿಸುವೆನು ರಿಪುಗಳ ಸಿರಿಯ ಸೂರೆಯಲಿ ॥16॥
೦೧೭ ಕರ್ಣ ಕರ್ಣಕಠೋರ ...{Loading}...
ಕರ್ಣ ಕರ್ಣಕಠೋರ ಸಾಹಸ
ನಿರ್ಣಯಿಸು ಪರಸೈನ್ಯ ಸುಭಟ ಮ
ಹಾರ್ಣವಕೆ ಬಿಡು ನಿನ್ನ ವಿಕ್ರಮಬಾಡಬಾನಳನ
ಪೂರ್ಣಕಾಮನು ನೀನು ಕುರುಬಲ
ಕರ್ಣಧಾರನು ನೀನು ವಿಶ್ವವಿ
ಕರ್ಣ ನೀನೇ ರಕ್ಷಿಸೆಂದುದು ನಿಖಿಳ ಪರಿವಾರ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರ್ಣ ನೀನು ಅತ್ಯಂತ ಕಠೋರವಾದ ಸಾಹಸವನ್ನು ತೋರಿಸು; ಶತ್ರು ಸೈನ್ಯದ ವೀರರೆಂಬ ಮಹಾ ಸಮುದ್ರಕ್ಕೆ ನಿನ್ನ ಪರಾಕ್ರಮವೆಂಬ ಬಡಬಾಗ್ನಿಯನ್ನು ನುಗ್ಗಿಸು, ನೀನು ಯಾವಾಗಲೂ ನಿನ್ನ ಆಸೆಯನ್ನು ಈಡೇರಿಸಿಕೊಳ್ಳುವವನು; ಕೌರವರ ಸೈನ್ಯವೆಂಬ ಹಡಗಿಗೆ ನೀನು ಚುಕ್ಕಾಣಿಯಂತಿರುವವನು; ವಿಶ್ವವಿಖ್ಯಾತನಾದವನು, ನೀನೆ ಕೌರವರ ಸೈನ್ಯವನ್ನು ಕಾಪಾಡಬೇಕು” ಎಂದು ಸಭೆಯಲ್ಲಿದ್ದ ಎಲ್ಲರೂ ಒಟ್ಟಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಸುಭಟ-ಮಹಾವೀರ, ಮಹಾರ್ಣವ-ಮಹಾಸಮುದ್ರ, ಬಾಡಬಾನಳ-ಬಡಬಾಗ್ನಿ-ಸಮುದ್ರದೊಳಗೆ ಇರುವ ಬೆಂಕಿ, ಪೂರ್ಣಕಾಮ-ಆಸೆಯನ್ನು ಪೂರ್ಣವಾಗಿ ಈಡೇರಿಸಿಕೊಳ್ಳುವವನು, ಕರ್ಣಧಾರ-ಹಡಗಿನ ಚುಕ್ಕಾಣಿಯನ್ನು ಹಿಡಿಯುವವನು, ವಿಶ್ವವಿಕರ್ಣ-ವಿಶ್ವವಿಖ್ಯಾತ.
ಮೂಲ ...{Loading}...
ಕರ್ಣ ಕರ್ಣಕಠೋರ ಸಾಹಸ
ನಿರ್ಣಯಿಸು ಪರಸೈನ್ಯ ಸುಭಟ ಮ
ಹಾರ್ಣವಕೆ ಬಿಡು ನಿನ್ನ ವಿಕ್ರಮಬಾಡಬಾನಳನ
ಪೂರ್ಣಕಾಮನು ನೀನು ಕುರುಬಲ
ಕರ್ಣಧಾರನು ನೀನು ವಿಶ್ವವಿ
ಕರ್ಣ ನೀನೇ ರಕ್ಷಿಸೆಂದುದು ನಿಖಿಳ ಪರಿವಾರ ॥17॥
೦೧೮ ಕಾದುವೆನು ರಿಪುಭಟರ ...{Loading}...
ಕಾದುವೆನು ರಿಪುಭಟರ ಜೀವವ
ಸೇದುವೆನು ಸಮರಂಗ ಭೂಮಿಯ
ನಾದುವೆನು ನೆಣಗೊಬ್ಬಿನಹಿತರ ಗೋಣ ರಕುತದಲಿ
ಹೋದ ದಿವಸಂಗಳಲಿ ಕಾಳೆಗ
ಮಾದುದಂದಿನ ಭೀಷ್ಮರೊಡನೆ ವಿ
ವಾದ ಕಾರಣ ಬೇಡಿಕೊಳಬೇಹುದು ನದೀಸುತನ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಮಹೋತ್ಸಾಹದಿಂದ ಶತ್ರುವೀರರ ಜೀವವನ್ನು ಸೆಳೆದುಹಾಕುತ್ತೇನೆ ; ರಣ ಭೂಮಿಯನ್ನು ಶತ್ರು ಸೈನಿಕರ ಕೊಬ್ಬು ರಕ್ತಗಳಿಂದ ನಾದುತ್ತೇನೆ; ಶತ್ರುಗಳ ಕೊರಳುಗಳು ರಕ್ತದಿಂದ ತೊಯ್ಯುವ ಹಾಗೆ ಮಾಡುತ್ತೇನೆ; ಭೀಷ್ಮರ ಜೊತೆ ವಿವಾದ ಉಂಟಾದ ನಿಮಿತ್ತ ಹಿಂದಿನ ದಿವಸಗಳಲ್ಲಿ ನಾನು ಯುದ್ಧ ಮಾಡುವುದು ನಿಂತು ಹೋಗಿತ್ತು. ಆದ್ದರಿಂದ ಭೀಷ್ಮಾಚಾರ್ಯರಲ್ಲಿ ಕ್ಷಮೆಯನ್ನು ಬೇಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಸೇದು-ಎಳೆ,
ಸಮರಂಗಭೂಮಿ-ಯುದ್ಧಭೂಮಿ,
ನಾದುವೆನು-ತೀಡುತ್ತೇನೆ,
ನೆಣ-ಕೊಬ್ಬು,
ಮಾದುದು-ನಿಂತಿತ್ತು,
ಮೂಲ ...{Loading}...
ಕಾದುವೆನು ರಿಪುಭಟರ ಜೀವವ
ಸೇದುವೆನು ಸಮರಂಗ ಭೂಮಿಯ
ನಾದುವೆನು ನೆಣಗೊಬ್ಬಿನಹಿತರ ಗೋಣ ರಕುತದಲಿ
ಹೋದ ದಿವಸಂಗಳಲಿ ಕಾಳೆಗ
ಮಾದುದಂದಿನ ಭೀಷ್ಮರೊಡನೆ ವಿ
ವಾದ ಕಾರಣ ಬೇಡಿಕೊಳಬೇಹುದು ನದೀಸುತನ ॥18॥
೦೧೯ ಎನ್ದು ನೃಪತಿಯ ...{Loading}...
ಎಂದು ನೃಪತಿಯ ಬೀಳುಕೊಂಡಿನ
ನಂದನನು ಬೊಂಬಾಳ ದೀಪದ
ಸಂದಣಿಗಳಲಿ ಸೆಳೆದಡಾಯ್ದದ ಭಟರ ಮುತ್ತಿಗೆಯ
ಮುಂದೆ ಪಾಯವಧಾರು ರಿಪುನೃಪ
ಬಂದಿಕಾರವಧಾರು ಧಿರುಪಯ
ವೆಂದು ಕಳಕಳ ಗಜರು ಮಿಗೆ ಕುರು ಭೂಮಿಗೈತಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನಿಂದ ಬೀಳ್ಕೊಂಡು ಉರಿಯುತ್ತಿರುವ ದೀಪಸ್ತಂಭಗಳ ಬೆಳಕಿನಲ್ಲಿ, ಒರೆಯಿಂದ ಹೊರತೆಗೆದು ಕತ್ತಿಯನ್ನು ಮೇಲೆತ್ತಿ ಹಿಡಿದು ನಿಂತಿರುವ ವೀರರ ನಡುವೆ ಮುಂದೆ ಮುಂದೆ ನಡೆಯುತ್ತಾ ಇರುವಾಗ “ಹಾದಿ ಬಿಡಿ; ಶತ್ರುರಾಜರನ್ನು ಬಂಧಿಸುವುದರಲ್ಲಿ ನಿಸ್ಸೀಮನಾದ ಕರ್ಣನು ಬರುತ್ತಿದ್ದಾನೆ” ಎಂಬ ಘೋಷಣೆಯ ನಡುವೆ ಸೂರ್ಯಪುತ್ರನಾದ ಕರ್ಣನು ಕುರುಕ್ಷೇತ್ರಕ್ಕೆ ನಡೆದು ಬಂದನು.
ಪದಾರ್ಥ (ಕ.ಗ.ಪ)
ನೃಪತಿ-ರಾಜ, ಇನನಂದನ-ಸೂರ್ಯನ ಪುತ್ರ-ಕರ್ಣ, ಬೊಂಬಾಳ ದೀಪ-ಕಂಬಗಳಿಗೆ ಹಾಕಿರುವ ಬೊಗಸೆಯಾಕಾರದ ದೀಪ, ಸಂದಣಿ-ಗುಂಪು, ಅಡಾಯುಧ-ಖಡ್ಗ ಅವಧಾರು-ಕೇಳಿ, ಕಳಕಳ-ಗಜಬಜ, ಮಿಗೆ-ಹೆಚ್ಚಲು
ಮೂಲ ...{Loading}...
ಎಂದು ನೃಪತಿಯ ಬೀಳುಕೊಂಡಿನ
ನಂದನನು ಬೊಂಬಾಳ ದೀಪದ
ಸಂದಣಿಗಳಲಿ ಸೆಳೆದಡಾಯ್ದದ ಭಟರ ಮುತ್ತಿಗೆಯ
ಮುಂದೆ ಪಾಯವಧಾರು ರಿಪುನೃಪ
ಬಂದಿಕಾರವಧಾರು ಧಿರುಪಯ
ವೆಂದು ಕಳಕಳ ಗಜರು ಮಿಗೆ ಕುರು ಭೂಮಿಗೈತಂದ ॥19॥
೦೨೦ ಹಾಯಿದವು ನರಿ ...{Loading}...
ಹಾಯಿದವು ನರಿ ನಾಯಿಗಳು ಕಟ
ವಾಯಲೆಳಲುವ ಕರುಳಿನಲಿ ಬಸಿ
ವಾಯ ರಕುತದಲೋಡಿದವು ರಣ ಭೂತ ದೆಸೆದೆಸೆಗೆ
ಆಯುಧದ ಹರಹುಗಳ ತಲೆಗಳ
ಡೋಯಿಗೆಯ ಕಡಿ ಖಂಡಮಯದ ಮ
ಹಾಯತದ ರಣದೊಳಗೆ ಬಂದನು ಭೀಷ್ಮನಿದ್ದೆಡೆಗೆ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಕುರುಕ್ಷೇತ್ರದ ರಣಾಂಗಣದಲ್ಲಿ ನಡೆದು ಬರುತ್ತಿರುವಾಗ ಜೋಲಾಡುವ ಕರುಳುಗಳನ್ನು ಬಾಯ ತುದಿಯಲ್ಲಿರಿಸಿಕೊಂಡಿದ್ದ ನರಿ ನಾಯಿಗಳು, ರಕ್ತವನ್ನು ಕುಡಿಯುತ್ತಿದ್ದ ರಣರಂಗದ ಭೂತಪ್ರೇತಗಳು ದಿಕ್ಕಾಪಾಲಾಗಿ ಓಡಿದವು, ಮುರಿದ ಆಯುಧಗಳ, ಒಡೆದು ಹೋದ ತಲೆಗಳ ಚಿಪ್ಪುಗಳ, ತುಂಡು ತುಂಡಾದ ಮಾಂಸ ಖಂಡಗಳ ರಾಶಿಯನ್ನು ದಾಟಿಕೊಂಡು ಕರ್ಣನು ಭೀಷ್ಮನಿದ್ದ ಕಡೆಗೆ ನಡೆದನು.
ಪದಾರ್ಥ (ಕ.ಗ.ಪ)
ಕಟವಾಯ-ಬಾಯ ತುದಿಯ, ಎಳಲುವ-ಜೋತಾಡುವ, ಬಸಿವ-ಸುರಿಯುವ, ದೆಸೆ-ದಿಕ್ಕು, ಹರಹು-ವಿಸ್ತಾರ, ಖಂಡ-ಮಾಂಸಖಂಡ, ಮಹಾಯತದ-ವಿಸ್ತಾರದ, ಡೋಯಿಗೆ-ತಲೆಯ ಚಿಪ್ಪು,
ಮೂಲ ...{Loading}...
ಹಾಯಿದವು ನರಿ ನಾಯಿಗಳು ಕಟ
ವಾಯಲೆಳಲುವ ಕರುಳಿನಲಿ ಬಸಿ
ವಾಯ ರಕುತದಲೋಡಿದವು ರಣ ಭೂತ ದೆಸೆದೆಸೆಗೆ
ಆಯುಧದ ಹರಹುಗಳ ತಲೆಗಳ
ಡೋಯಿಗೆಯ ಕಡಿ ಖಂಡಮಯದ ಮ
ಹಾಯತದ ರಣದೊಳಗೆ ಬಂದನು ಭೀಷ್ಮನಿದ್ದೆಡೆಗೆ ॥20॥
೦೨೧ ಸರಳ ಮಞ್ಚವ ...{Loading}...
ಸರಳ ಮಂಚವ ಹೊದ್ದಿ ಭೀಷ್ಮನ
ಚರಣಕಮಲವ ಹಿಡಿದು ನೊಸಲಿನೊ
ಳೊರಸಿಕೊಂಡನು ನಾದಿದನು ಕಂಬನಿಯೊಳಂಘ್ರಿಗಳ
ಕರುಣಿಸೈ ಗಾಂಗೇಯ ಕರುಣಾ
ಶರಧಿಯೈ ಖಳತಿಲಕ ಕರ್ಣನ
ದುರುಳತನವನು ಮರೆದು ಮೆರೆವುದು ನಿಮ್ಮ ಸದ್ಗುಣವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಭೀಷ್ಮಾಚಾರ್ಯರು ಮಲಗಿದ್ದ ಶರಮಂಚದ ಬಳಿಗೆ ಬಂದು, ಭೀಷ್ಮರ ಪಾದ ಕಮಲಗಳನ್ನು ಮುಟ್ಟಿ ಹಣೆಗೊತ್ತಿಕೊಂಡು, ಕಣ್ಣೀರಧಾರೆಯಿಂದ ಭೀಷ್ಮರ ಪಾದಗಳನ್ನು ತೊಳೆದನು. “ಗಂಗಾಪುತ್ರರಾದ ಭೀಷ್ಮಾಚಾರ್ಯರೆ, ಕರುಣಾ ಸಮುದ್ರದಂತಿರುವ ತಾವು ದುಷ್ಟರಲ್ಲಿ ತಿಲಕಪ್ರಾಯವೆನಿಸಿದ್ದ ಈ ಕರ್ಣನ ಕೆಟ್ಟತನವನ್ನು ಮರೆತು ನಿಮ್ಮ ಒಳ್ಳೆಯ ಗುಣವನ್ನು ಮೆರೆಯಬೇಕು” ಎಂದು ಕೇಳಿಕೊಂಡನು.
ಪದಾರ್ಥ (ಕ.ಗ.ಪ)
ಹೊದ್ದಿ-ಸಮೀಪಿಸಿ, ನೊಸಲಿನೊಳ್-ಹಣೆಯಲ್ಲಿ,
ಮೂಲ ...{Loading}...
ಸರಳ ಮಂಚವ ಹೊದ್ದಿ ಭೀಷ್ಮನ
ಚರಣಕಮಲವ ಹಿಡಿದು ನೊಸಲಿನೊ
ಳೊರಸಿಕೊಂಡನು ನಾದಿದನು ಕಂಬನಿಯೊಳಂಘ್ರಿಗಳ
ಕರುಣಿಸೈ ಗಾಂಗೇಯ ಕರುಣಾ
ಶರಧಿಯೈ ಖಳತಿಲಕ ಕರ್ಣನ
ದುರುಳತನವನು ಮರೆದು ಮೆರೆವುದು ನಿಮ್ಮ ಸದ್ಗುಣವ ॥21॥
೦೨೨ ಎನಲು ಹೃದಯಾಮ್ಬುಜದ ...{Loading}...
ಎನಲು ಹೃದಯಾಂಬುಜದ ಪೀಠದ
ವನಜನಾಭಧ್ಯಾನಸುಧೆಯಲಿ
ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
ತನುಪುಳಕ ತಲೆದೋರೆ ರೋಮಾಂ
ಚನದ ಬಿಗುಹಡಗಿತ್ತು ಕಂಗಳ
ನನೆಗಳರಳಿದವಾಯ್ತು ಭೀಷ್ಮಂಗಿತ್ತಣವಧಾನ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು ಹೃದಯವೆಂಬ ಕಮಲ ಪೀಠದ ಮೇಲೆ ಪದ್ಮನಾಭನೆನಿಸಿದ ವಿಷ್ಣುವನ್ನು ಕೂಡಿಸಿ ಧ್ಯಾನವೆಂಬ ಅಮೃತದಲ್ಲಿ ನೆನೆದು ಎಲ್ಲ ಇಂದ್ರಿಯಗಳಲ್ಲಿ ಆನಂದವನ್ನು ಹೊಂದಿದ್ದರು. ಕರ್ಣನ ಮಾತುಗಳಿಂದ ಭೀಷ್ಮರ ರೋಮಾಂಚನ ತಗ್ಗಿತು. ಭಗವಂತನ ಧ್ಯಾನ ಪುಳಕ ಹಿಂದೆ ಸರಿದಂತೆ ಭೀಷ್ಮರ ಕಣ್ಣುಗಳೆಂಬ ಮೊಗ್ಗು ತೆರೆದಂತಾಯಿತು. ಅವರ ಗಮನ ಕರ್ಣನ ಕಡೆಗೆ ಹರಿಯಿತು.
ಪದಾರ್ಥ (ಕ.ಗ.ಪ)
ಹೊಂಗಿದ-ಉಬ್ಬಿದ, ಕರಣ-ಇಂದ್ರಿಯ, ಹೊರೆಯೇರು-ಆನಂದವನ್ನು ಹೊಂದು, ಬಿಗುಹು-ಬಿಗಿಯಾದ ಸ್ಥಿತಿ, ನನೆ-ಮೊಗ್ಗು, ಅವಧಾನ-ಲಕ್ಷ್ಯ,
ಮೂಲ ...{Loading}...
ಎನಲು ಹೃದಯಾಂಬುಜದ ಪೀಠದ
ವನಜನಾಭಧ್ಯಾನಸುಧೆಯಲಿ
ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
ತನುಪುಳಕ ತಲೆದೋರೆ ರೋಮಾಂ
ಚನದ ಬಿಗುಹಡಗಿತ್ತು ಕಂಗಳ
ನನೆಗಳರಳಿದವಾಯ್ತು ಭೀಷ್ಮಂಗಿತ್ತಣವಧಾನ ॥22॥
೦೨೩ ಅಳಲದಿರು ಬಾ ...{Loading}...
ಅಳಲದಿರು ಬಾ ಮಗನೆ ಕುರುಕುಲ
ತಿಲಕನವಸರದಾನೆ ರಿಪು ಮಂ
ಡಳಿಕಮಸ್ತಕಶೂಲ ಬಾರೈ ಕರ್ಣ ಬಾಯೆನುತ
ತುಳುಕಿದನು ಕಂಬನಿಯ ಕೋಮಳ
ತಳದಿ ಮೈದಡವಿದನು ಕೌರವ
ನುಳಿವು ನಿನ್ನದು ಕಂದ ಕದನವ ಜಯಿಸು ಹೋಗೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಗನೆ, ದುಃಖಿಸಬೇಡ; ಹತ್ತಿರ ಬಾ, ನೀನು ಕುರುಕುಲಕ್ಕೆ ತಿಲಕದಂತಿರುವ ದುರ್ಯೋಧನನ ಸಮಯಕ್ಕೆ-ಒದಗುವ ಬಂಟನಾಗಿದ್ದೀಯೆ. ಕೌರವನ ಶತ್ರು ಮಾಂಡಳಿಕರ ತಲೆಗೆ ಶೂಲದಂತಿರುವವನು ನೀನು;” ಎಂದು ಹೇಳುತ್ತಾ ಆನಂದ ಬಾಷ್ಪವನ್ನು ಸುರಿಸುತ್ತಾ ಕೋಮಲವಾದ ಕೈಗಳಿಂದ ಕರ್ಣನ ಮೈಯನ್ನು ಪ್ರೀತಿಯಿಂದ ಸವರುತ್ತಾ “ಕೌರವನ ಉಳಿವು ನಿನ್ನ ಕೈಯಲ್ಲಿದೆ; ನೀನು ಯುದ್ಧವನ್ನು ಮಾಡಿ ಜಯವನ್ನು ಸಾಧಿಸು” ಎಂದು ಭೀಷ್ಮರು ಆಶೀರ್ವದಿಸಿದರು.
ಪದಾರ್ಥ (ಕ.ಗ.ಪ)
ಅಳಲು-ದುಃಖ, ಅವಸರದಾನೆ-ಸಮಯಕ್ಕೆ ಒದಗುವ ಬಂಟ, ಅವಸರದಾನೆ-ತುರ್ತು ಸಮಯಕ್ಕೆ ಅಗತ್ಯವಾಗಿ ಒದಗುವ ಆನೆಯಷ್ಟು ಬಲವುಳ್ಳ ಸಹಾಯಕ
ಮೂಲ ...{Loading}...
ಅಳಲದಿರು ಬಾ ಮಗನೆ ಕುರುಕುಲ
ತಿಲಕನವಸರದಾನೆ ರಿಪು ಮಂ
ಡಳಿಕಮಸ್ತಕಶೂಲ ಬಾರೈ ಕರ್ಣ ಬಾಯೆನುತ
ತುಳುಕಿದನು ಕಂಬನಿಯ ಕೋಮಳ
ತಳದಿ ಮೈದಡವಿದನು ಕೌರವ
ನುಳಿವು ನಿನ್ನದು ಕಂದ ಕದನವ ಜಯಿಸು ಹೋಗೆಂದ ॥23॥
೦೨೪ ಗಾರುಗೆಡೆದೆನು ನಿಮ್ಮನೋಲೆಯ ...{Loading}...
ಗಾರುಗೆಡೆದೆನು ನಿಮ್ಮನೋಲೆಯ
ಕಾರತನದುಬ್ಬಿನಲಿ ತನಿ ಮದ
ವೇರಿ ನಿಮ್ಮಲಿ ಸೆಣಸಿದೆನು ಸೇನಾಧಿಪತ್ಯದಲಿ
ದೂರ ಹೊತ್ತೆನು ರಣದ ಮೀಸಲಿ
ನೇರು ತಪ್ಪಿತು ನೀಲಮಣಿ ತಲೆ
ಗೇರಿಸಿದ ತೃಣವದಕೆ ಸರಿಯೇ ಭೀಷ್ಮ ಹೇಳೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ಮನಸ್ಸನ್ನು ಗಾಸಿಗೊಳಿಸಿದೆ. ದುರ್ಯೋಧನನ ಆಪ್ತ ಸೇವಕನೆಂಬ ಮತ್ತು ಶೌರ್ಯದ ಮದದಿಂದ ಸೇನಾಪತ್ಯದ ಕುರಿತು ನಿಮ್ಮೊಂದಿಗೆ ಸ್ಪರ್ಧಿಸಿದೆ. ಯುದ್ಧದಿಂದ ದೂರವಿದ್ದೆ. ಅಪಖ್ಯಾತಿಯನ್ನು ಹೊಂದಿದೆ. ರಣರಂಗದಲ್ಲಿ ಏರುಪೇರಾಯಿತು. ನೀವು ನವರತ್ನವಿದ್ದ ಹಾಗೆ. ನಾನೋ ತೃಣಸಮಾನನು. ನಿಮ್ಮೊಂದಿಗೆ ಹೇಗೆ ಸರಿಸಮಾನನಾದೇನು? ಭೀಷ್ಮನೇ ಹೇಳು ಎಂದು ಕರ್ಣನು ಭೀಷ್ಮನನ್ನು ಕೇಳಿದನು.
ಪದಾರ್ಥ (ಕ.ಗ.ಪ)
ಗಾರುಗೆಡೆ-ಧಿಕ್ಕರಿಸಿ ಮಾತನಾಡು, ಓಲೆಯಕಾರತನ-ಸೇವಕತನ, ತನಿಮದ-ಪೂರ್ಣವಾದ ಅಹಂಕಾರ, ಉಬ್ಬಿನಲಿ-ಗರ್ವದಲ್ಲಿ
ಮೂಲ ...{Loading}...
ಗಾರುಗೆಡೆದೆನು ನಿಮ್ಮನೋಲೆಯ
ಕಾರತನದುಬ್ಬಿನಲಿ ತನಿ ಮದ
ವೇರಿ ನಿಮ್ಮಲಿ ಸೆಣಸಿದೆನು ಸೇನಾಧಿಪತ್ಯದಲಿ
ದೂರ ಹೊತ್ತೆನು ರಣದ ಮೀಸಲಿ
ನೇರು ತಪ್ಪಿತು ನೀಲಮಣಿ ತಲೆ
ಗೇರಿಸಿದ ತೃಣವದಕೆ ಸರಿಯೇ ಭೀಷ್ಮ ಹೇಳೆಂದ ॥24॥
೦೨೫ ತನುಜ ತಪ್ಪೇನದಕೆ ...{Loading}...
ತನುಜ ತಪ್ಪೇನದಕೆ ಕಾಳೆಗ
ವೆನಗೆ ತನಗೆನಬೇಕು ವೀರರು
ಮನದ ಕಲಿತನದುಬ್ಬುಗೊಬ್ಬಿನಲೆಂಬರಿದಕೇನು
ಮನದೊಳಗೆ ಖತಿಯಿಲ್ಲ ದುರಿಯೋ
ಧನ ನೃಪತಿಯೋಪಾದಿ ನೀ ಬೇ
ರೆನಗೆ ಲೋಗನೆ ಕಂದ ಕದನವ ಜಯಿಸು ಹೋಗೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಗನೆ, ಅದರಲ್ಲಿ ತಪ್ಪೇನು? ನೀನು ಸೇನಾಪತಿಯಾಗಬೇಕೆಂಬ ಆಸೆಯಿಂದ ಆಡಿದ ಮಾತುಗಳು ಸಹಜವೇ ಸರಿ, ಅದರಿಂದ ನನಗೆ ನಿನ್ನ ಮೇಲೆ ಕೋಪವಿಲ್ಲ; ನನಗೆ ದುರ್ಯೋಧನನು ಹಾಗೆಯೇ ನೀನೂ ಬಂಧುವಾಗಿದ್ದೀಯೆ. ನೀನು ಬೇರೆ ಎಂಬ ಭಾವನೆ ನನಗಿಲ್ಲ. ನೀನು ಹೋಗಿ ಯುದ್ಧದಲ್ಲಿ ಜಯವನ್ನು ಸಾಧಿಸು” ಎಂದು ಭೀಷ್ಮರು ಕರ್ಣನಿಗೆ ಹೇಳಿದರು.
ಮೂಲ ...{Loading}...
ತನುಜ ತಪ್ಪೇನದಕೆ ಕಾಳೆಗ
ವೆನಗೆ ತನಗೆನಬೇಕು ವೀರರು
ಮನದ ಕಲಿತನದುಬ್ಬುಗೊಬ್ಬಿನಲೆಂಬರಿದಕೇನು
ಮನದೊಳಗೆ ಖತಿಯಿಲ್ಲ ದುರಿಯೋ
ಧನ ನೃಪತಿಯೋಪಾದಿ ನೀ ಬೇ
ರೆನಗೆ ಲೋಗನೆ ಕಂದ ಕದನವ ಜಯಿಸು ಹೋಗೆಂದ ॥25॥
೦೨೬ ಆಳುತನದ ದೊಠಾರತನ ...{Loading}...
ಆಳುತನದ ದೊಠಾರತನ ಸರಿ
ಯಾಳಿನಲಿ ಸೆಣಸಾದೊಡೊಳ್ಳಿತು
ಮೇಳವೇ ಗುರು ದೈವದಲಿ ಕಟ್ಟುವರೆ ಬಿರುದುಗಳ
ಹಾಳಿ ಹಸುಗೆಯನರಿಯದಾ ಹೀ
ಹಾಳಿಗೆಡಿಸಿದೆನಂದು ಸಭೆಯಲಿ
ಖೂಳನವಗುಣ ಶತವ ನೋಡದೆ ನಿಮ್ಮ ಮೆರೆಯೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರನಾದರೆ ಸಮಾನಸ್ಕಂಧರೊಡನೆ ಹೋರಾಡುವುದು ಒಳ್ಳೆಯದು. ಆದರೆ ಗುರು ದೈವಗಳ ಜೊತೆ ಸವಾಲು ಸರಿಯೇ?. - ಅಂದು ನಡವಳಿಕೆಯ ಕ್ರಮವರಿಯದೆ ನಿಮಗೆ ಸೇನಾ ನಾಯಕ ಪಟ್ಟವನ್ನು ಕಟ್ಟಿದ ದಿನ ಹೀನಾಯವಾದ ಮಾತುಗಳನ್ನಾಡಿ ಅವಮಾನ ಮಾಡಿದೆ. ಅಂತಹ ನನ್ನ ನೂರು ಅವಗುಣಗಳನ್ನೂ ಗಣಿಸದೆ ನಿಮ್ಮ ದೊಡ್ಡತನವನ್ನು ಮೆರೆಯಬೇಕು ಎಂದು ಕರ್ಣನು ಭೀಷ್ಮರಲ್ಲಿ ಬೇಡಿಕೊಂಡನು.
ಪದಾರ್ಥ (ಕ.ಗ.ಪ)
ದೊಠಾರತನ- ಶೌರ್ಯ, ಹಾಳಿ-ಪಾಳಿ, ಹಸುಗೆ-ಪಸುಗೆ ಹಂಚಿಕೆ, ಸೆಣಸು-ಹೋರಾಟ-ಸ್ಪರ್ಧೆ, ಹೀಹಾಳಿ-ನಿಂದೆ; ತುಚ್ಛ, ??್ಟ
ಮೂಲ ...{Loading}...
ಆಳುತನದ ದೊಠಾರತನ ಸರಿ
ಯಾಳಿನಲಿ ಸೆಣಸಾದೊಡೊಳ್ಳಿತು
ಮೇಳವೇ ಗುರು ದೈವದಲಿ ಕಟ್ಟುವರೆ ಬಿರುದುಗಳ
ಹಾಳಿ ಹಸುಗೆಯನರಿಯದಾ ಹೀ
ಹಾಳಿಗೆಡಿಸಿದೆನಂದು ಸಭೆಯಲಿ
ಖೂಳನವಗುಣ ಶತವ ನೋಡದೆ ನಿಮ್ಮ ಮೆರೆಯೆಂದ ॥26॥
೦೨೭ ನೋವು ಮನದೊಳಗುಳ್ಳಡಾ ...{Loading}...
ನೋವು ಮನದೊಳಗುಳ್ಳಡಾ ರಾ
ಜೀವಲೋಚನನಾಣೆ ಮಗನೇ
ಜೀವ ಕೌರವನಲ್ಲಿ ಕರಗುವುದೇನ ಹೇಳುವೆನು
ಆವನಾತನ ಬಂಧುವಾತನೆ
ಜೀವವೆನ್ನಯ ದೆಸೆಯ ಭಯ ಬೇ
ಡಾವ ಪರಿಯಿಂದವನನುಳುಹುವ ಹದನ ಮಾಡೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಲಲೋಚನನಾದ ವಿಷ್ಣುವಿನ ಮೇಲೆ ಆಣೆ ಇಟ್ಟು ಹೇಳುತ್ತಿದ್ದೇನೆ; ನನ್ನ ಮನಸ್ಸಿನಲ್ಲಿ ಕರ್ಣನಾದ ನಿನ್ನ ಮೇಲೆ ಕೋಪವಿಲ್ಲ. ನನ್ನ ಮನಸ್ಸು ದುರ್ಯೋಧನನ ಬಗ್ಗೆ ಕರಗುತ್ತದೆ; ಯಾರು ದುರ್ಯೋಧನನ ನಿಜವಾದ ಬಂಧುಗಳೋ ಅವರು ಅವನ ಜೀವ. ನನ್ನಿಂದ ನಿನಗೆ ಯಾವ ಭಯವೂ ಬೇಡ. ಹೇಗಾದರೂ ಮಾಡಿ ನೀನು ದುರ್ಯೋಧನನನ್ನು ಉಳಿಸುವ ಬಗೆಯ ಬಗ್ಗೆ ಚಿಂತಿಸು. ಎಂದು ಕರ್ಣನಿಗೆ ಭೀಷ್ಮನು ಹೇಳಿದನು.
ಪದಾರ್ಥ (ಕ.ಗ.ಪ)
ರಾಜೀವ-ಕಮಲ, ಲೋಚನ-ಕಣ್ಣು, ಹದನ-ರೀತಿ, ಉಳುಹು-ಬದುಕಿಸು, ಉಳುಹು-ಬದುಕಿಸು
ಮೂಲ ...{Loading}...
ನೋವು ಮನದೊಳಗುಳ್ಳಡಾ ರಾ
ಜೀವಲೋಚನನಾಣೆ ಮಗನೇ
ಜೀವ ಕೌರವನಲ್ಲಿ ಕರಗುವುದೇನ ಹೇಳುವೆನು
ಆವನಾತನ ಬಂಧುವಾತನೆ
ಜೀವವೆನ್ನಯ ದೆಸೆಯ ಭಯ ಬೇ
ಡಾವ ಪರಿಯಿಂದವನನುಳುಹುವ ಹದನ ಮಾಡೆಂದ ॥27॥
೦೨೮ ಎನ್ನ ಹವಣೇ ...{Loading}...
ಎನ್ನ ಹವಣೇ ಹಗೆಯ ಗೆಲುವಡೆ
ನಿನ್ನ ವಂದಿಗರಿರಲು ನೂಕದು
ತನ್ನ ಸಾಹಸವೆಲ್ಲಿಪರಿಯಂತಹುದು ಕದನದಲಿ
ಗನ್ನಕಾರನು ಕೃಷ್ಣನವರಿಗೆ
ತನ್ನನೊಚ್ಚತಗೊಟ್ಟನಹಿತರ
ನಿನ್ನು ಗೆಲುವವರಾರು ಜಯವೆಲ್ಲಿಯದು ನಮಗೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಮ್ಮಂತಹ ಬಲಾಢ್ಯರಿಗೆ ಪಾಂಡವರನ್ನು ಜಯಿಸಲು ಸಾಧ್ಯವಾಗಲಿಲ್ಲವೆಂದ ಮೇಲೆ ನನಗೆ ಜಯಿಸಲು ಸಾಧ್ಯವಾಗುವುದೆ? ಯುದ್ಧದಲ್ಲಿ ನನ್ನ ಸಾಹಸದ ಪರಿ ಎಲ್ಲಿಯವರೆಗಿನದು? ಮೋಸಗಾರನಾದ ಕೃಷ್ಣನು ಪಾಂಡವರಿಗೆ ತನ್ನನ್ನೇ ಸಮರ್ಪಿಸಿಕೊಂಡಿದ್ದಾನೆಂದ ಮೇಲೆ ಶತ್ರುಗಳನ್ನು ಹೇಗೆ ತಾನೆ ಗೆಲ್ಲಲು ಸಾಧ್ಯವಾಗುತ್ತದೆ ? ಎಂದು ಕರ್ಣನು ಹತಾಶೆಯ ಮಾತುಗಳನ್ನಾಡಿದನು.
ಪದಾರ್ಥ (ಕ.ಗ.ಪ)
ನಿನ್ನವಂದಿಗರು-ನಿನ್ನಂತಹವರು, ನೂಕದು-ಸಾಧ್ಯವಾಗದ್ದು , ಗನ್ನಕಾರ-ಮೋಸಗಾರ, ಒಚ್ಚತಗೊಟ್ಟನು-ಮೀಸಲಿಟ್ಟನು, ಅಹಿತರು-ಶತ್ರುಗಳು
ಮೂಲ ...{Loading}...
ಎನ್ನ ಹವಣೇ ಹಗೆಯ ಗೆಲುವಡೆ
ನಿನ್ನ ವಂದಿಗರಿರಲು ನೂಕದು
ತನ್ನ ಸಾಹಸವೆಲ್ಲಿಪರಿಯಂತಹುದು ಕದನದಲಿ
ಗನ್ನಕಾರನು ಕೃಷ್ಣನವರಿಗೆ
ತನ್ನನೊಚ್ಚತಗೊಟ್ಟನಹಿತರ
ನಿನ್ನು ಗೆಲುವವರಾರು ಜಯವೆಲ್ಲಿಯದು ನಮಗೆಂದ ॥28॥
೦೨೯ ಆಲವಟ್ಟದ ಗಾಳಿಯಲಿ ...{Loading}...
ಆಲವಟ್ಟದ ಗಾಳಿಯಲಿ ಮೇ
ಘಾಳಿ ಮುರಿವುದೆ ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು ಜೀಯ ಚಿತ್ತೈಸು
ಸೀಳಬಹುದೇ ಸೀಸದುಳಿಯಲಿ
ಶೈಲವನು ಹರಿಯೊಲಿದ ಮನುಜರ
ಮೇಲೆ ಮುನಿದೇಗುವರು ಕೆಲಬರು ಭೀಷ್ಮ ಹೇಳೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೀಸಣಿಕೆಯ ಗಾಳಿಯಿಂದ ಮೋಡಗಳ ಸಮೂಹವನ್ನು ಓಡಿಸಲು ಸಾಧ್ಯವೆ ? ಮಿಂಚು ಹುಳುವಿನಿಂದ ಕತ್ತಲೆಯ ಸಮೂಹವನ್ನು ನಿವಾರಿಸಲು ಸಾಧ್ಯವೆ ? ಸೀಸದ ಉಳಿಯಿಂದ ಪರ್ವತವನ್ನು ಸೀಳಲು ಸಾಧ್ಯವೆ ? ಕೃಷ್ಣನು ಒಲಿದ ಮನುಷ್ಯರ ಮೇಲೆ ಕೆಲವರು ಕೋಪಿಸಿಕೊಂಡು ಯುದ್ಧ ಮಾಡಿ ಏನನ್ನು ಸಾಧಿಸಲು ಸಾಧ್ಯ. ಎಂದು ಕರ್ಣನು ಭೀಷ್ಮನಲ್ಲಿ ಹೇಳಿದನು.
ಪದಾರ್ಥ (ಕ.ಗ.ಪ)
ಆಲವಟ್ಟ-ಬೀಸಣಿಕೆ, ಮೇಘಾಳಿ-ಮೋಡಗಳ ಸಮೂಹ, ಮುರಿವುದೆ-ಓಡಿಸಬಹುದೆ, ಮಿಂಚು ಬುಳು-ಮಿಂಚುಹುಳು, ಕಟಕ-ಸೈನ್ಯ, ಹರಿ-ಕೃಷ್ಣ, ಮನುಜ-ಮನುಷ್ಯ, ಮುನಿದು-ಕೋಪಿಸಿಕೊಂಡು, ಏಗುವರು-ಯುದ್ಧಮಾಡುವರು.
ಮೂಲ ...{Loading}...
ಆಲವಟ್ಟದ ಗಾಳಿಯಲಿ ಮೇ
ಘಾಳಿ ಮುರಿವುದೆ ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು ಜೀಯ ಚಿತ್ತೈಸು
ಸೀಳಬಹುದೇ ಸೀಸದುಳಿಯಲಿ
ಶೈಲವನು ಹರಿಯೊಲಿದ ಮನುಜರ
ಮೇಲೆ ಮುನಿದೇಗುವರು ಕೆಲಬರು ಭೀಷ್ಮ ಹೇಳೆಂದ ॥29॥
೦೩೦ ಲೇಸನಾಡಿದೆ ಕರ್ಣ ...{Loading}...
ಲೇಸನಾಡಿದೆ ಕರ್ಣ ದಿಟ ನೀ
ನೀಸು ಸಮ್ಯಜ್ಞಾನಿಯೆಂಬುದ
ನೀಸು ದಿನ ನಾವರಿಯೆವೈ ನೀ ಸತ್ಕುಲೀನನಲ
ಆ ಸುಯೋಧನಗರುಹಿ ಸಂಧಿಯ
ನೀ ಸಮಯದಲಿ ಘಟಿಸು ನೀನೆನ
ಲೈಸೆ ಮೀರನು ಪಾಂಡವರ ಸಂಪ್ರತಿಯ ಮಾಡೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ’ ಕರ್ಣ, ನೀನು ಹೇಳುತ್ತಿರುವುದು ಒಳ್ಳೆಯದೇ ಆಗಿದೆ. ನೀನು ಇಷ್ಟು ಜ್ಞಾನಿಯಾಗಿರುವೆ ಎಂಬುದು ನನಗೆ ಇಲ್ಲಿಯವರೆಗೆ ತಿಳಿದಿರಲಿಲ್ಲ. ನೀನು ಉತ್ತಮ ವಂಶದಲ್ಲಿ ಹುಟ್ಟಿ ಬಂದಿರುವವನಲ್ಲವೆ? ಈ ವಿಚಾರವನ್ನು ನಿನ್ನ ಪರಮ ಮಿತ್ರನಾದ ದುರ್ಯೋಧನನಿಗೆ ಹೇಳಿ ಈ ಸಮಯದಲ್ಲಾದರೂ ಪಾಂಡವರ ಜೊತೆ ಸಂಧಿಯಾಗುವ ಹಾಗೆ ಮಾಡು;ನಿನ್ನ ಮಾತನ್ನು ದುರ್ಯೋಧನ ಮೀರುವುದಿಲ್ಲ’ ಎಂದು ಭೀಷ್ಮರು ಹೇಳಿದರು.
ಪದಾರ್ಥ (ಕ.ಗ.ಪ)
ಸಮ್ಯಜ್ಞಾನಿ-ಸರಿಯಾದ ಜ್ಞಾನ ಉಳ್ಳವನು, ಸಂಪ್ರತಿ-ಸಂಧಿ
ಮೂಲ ...{Loading}...
ಲೇಸನಾಡಿದೆ ಕರ್ಣ ದಿಟ ನೀ
ನೀಸು ಸಮ್ಯಜ್ಞಾನಿಯೆಂಬುದ
ನೀಸು ದಿನ ನಾವರಿಯೆವೈ ನೀ ಸತ್ಕುಲೀನನಲ
ಆ ಸುಯೋಧನಗರುಹಿ ಸಂಧಿಯ
ನೀ ಸಮಯದಲಿ ಘಟಿಸು ನೀನೆನ
ಲೈಸೆ ಮೀರನು ಪಾಂಡವರ ಸಂಪ್ರತಿಯ ಮಾಡೆಂದ ॥30॥
೦೩೧ ಜೀಯ ಮನ್ತ್ರದ ...{Loading}...
ಜೀಯ ಮಂತ್ರದ ಮಾತು ರಾವುತ
ಪಾಯಕರಿಗೊಪ್ಪುವುದೆ ಅವರವ
ರಾಯತದಲೋಲೈಸಬೇಹುದು ಮೇರೆ ಮಾರ್ಗದಲಿ
ರಾಯನೊಲಿದುದ ಹಿಡಿವೆನೊಲ್ಲದ
ದಾಯವನು ಬಿಡುವೆನು ನಿಜಾಭಿ
ಪ್ರಾಯವಿದು ಸಂಪ್ರತಿಯ ನುಡಿ ತನಗಂಗವಲ್ಲೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮಾಚಾರ್ಯರು ಸಂಧಿ ಕಾರ್ಯವನ್ನು ನೆರವೇರಿಸಬೇಕೆಂದು ಕರ್ಣನಿಗೆ ಹೇಳಿದಾಗ ಕರ್ಣನು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಸಂಧಿಕಾರ್ಯದ ಮಂತ್ರವನ್ನು ವೀರನಾದ ತಾನು ರಾಜನಿಗೆ ಶಿಫಾರಸು ಮಾಡಲಾಗದು; ಅಲ್ಲದೆ ಪ್ರತಿಯೊಬ್ಬರೂ ತಮ್ಮ ತಮ್ಮ ಮಿತಿಯನ್ನರಿತು ಮಾತಾಡುವ, ಕೆಲಸ ಮಾಡುವ ಕಾರ್ಯವನ್ನು ನಿರ್ವಹಿಸಬೇಕಾಗಿರುತ್ತದೆ. ರಾಜನಾದ ದುರ್ಯೋಧನನು ಯಾವುದನ್ನು ಮಾಡಬೇಕೆನ್ನುವನೋ ಅದನ್ನು ಮಾಡುವುದು, ಬೇಡ ಎಂದುದನ್ನು ಬಿಡುವುದು ತನ್ನ ಅಭಿಪ್ರಾಯವಾಗಿದೆ; ಸಂಧಿಯನ್ನು ಮಾಡಿಕೊಳ್ಳಬೇಕೆಂದು ರಾಜನಿಗೆ ಸಲಹೆ ನೀಡುವುದು ತನ್ನ ಮಿತಿಗೆ ಮೀರಿದ ವಿಷಯವೆಂದು ಕರ್ಣನು ಭೀಷ್ಮರಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಆಯತ-ಚೌಕಟ್ಟು,-ಮಿತಿ, ದಾಯ-ಕಾರ್ಯ, ನಿಜ-ತನ್ನ, ಸಂಪ್ರತಿ-ಸಂಧಿ, ಅಂಗವಲ್ಲ-ನನ್ನ ವಿಭಾಗಕ್ಕೆ ಸೇರುವುದಿಲ್ಲ
ಮೂಲ ...{Loading}...
ಜೀಯ ಮಂತ್ರದ ಮಾತು ರಾವುತ
ಪಾಯಕರಿಗೊಪ್ಪುವುದೆ ಅವರವ
ರಾಯತದಲೋಲೈಸಬೇಹುದು ಮೇರೆ ಮಾರ್ಗದಲಿ
ರಾಯನೊಲಿದುದ ಹಿಡಿವೆನೊಲ್ಲದ
ದಾಯವನು ಬಿಡುವೆನು ನಿಜಾಭಿ
ಪ್ರಾಯವಿದು ಸಂಪ್ರತಿಯ ನುಡಿ ತನಗಂಗವಲ್ಲೆಂದ ॥31॥
೦೩೨ ಭಾನುಸನ್ನಿಭ ಮರಳು ...{Loading}...
ಭಾನುಸನ್ನಿಭ ಮರಳು ಭೂಪನ
ಹಾನಿ ವೃದ್ಧಿಗಳೆಲ್ಲ ನಿನ್ನದು
ನೀನು ಪಂಥದ ಜಾಣನಲ್ಲಾ ವಿಜಯನಾಗೆನಲು
ಆ ನದೀಸುತನಡಿಗೆರಗಿ ರವಿ
ಸೂನು ಕಳುಹಿಸಿಕೊಂಡು ಬಹಳ ಮ
ನೋನುರಾಗದಲೈದಿದನು ಕುರುರಾಯನೋಲಗವ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನಿಗೆ ಹೊರಡಬಹುದೆಂದು ಹೇಳುತ್ತಾ, ದುರ್ಯೋಧನನ ಏಳಿಗೆ ಹಾಗೂ ನಾಶಗಳೆರಡೂ ನಿನ್ನ ಕೈಯಲ್ಲಿದೆ ಎಂದೂ, ಮಾತಿನಂತೆ ನಡೆಯುವವನಾದ ನಿನಗೆ ವಿಜಯವಾಗಲೆಂದು ಭೀಷ್ಮರು ಆಶೀರ್ವದಿಸಿದರು, ಕರ್ಣನು ಗಂಗಾಪುತ್ರರೆನಿಸಿದ ಭೀಷ್ಮಾಚಾರ್ಯರ ಪಾದಗಳಿಗೆ ವಂದಿಸಿ, ಅವರಿಂದ ಬಿಡುಗಡೆಯನ್ನು ಪಡೆದು ಹೆಚ್ಚಿನ ಮನೋಲ್ಲಾಸದಿಂದ ಕೌರವನ ಸಭೆಗೆ ತೆರಳಿದನು.
ಪದಾರ್ಥ (ಕ.ಗ.ಪ)
ಭಾನು ಸನ್ನಿಭ-ಸೂರ್ಯನಿಗೆ ಸಮನಾದವನು, ಪಂಥದ ಜಾಣ-ನುಡಿದಂತೆ ನಡೆಯುವವನು,
ಮೂಲ ...{Loading}...
ಭಾನುಸನ್ನಿಭ ಮರಳು ಭೂಪನ
ಹಾನಿ ವೃದ್ಧಿಗಳೆಲ್ಲ ನಿನ್ನದು
ನೀನು ಪಂಥದ ಜಾಣನಲ್ಲಾ ವಿಜಯನಾಗೆನಲು
ಆ ನದೀಸುತನಡಿಗೆರಗಿ ರವಿ
ಸೂನು ಕಳುಹಿಸಿಕೊಂಡು ಬಹಳ ಮ
ನೋನುರಾಗದಲೈದಿದನು ಕುರುರಾಯನೋಲಗವ ॥32॥
೦೩೩ ಭಾನುಸುತ ಕುಳ್ಳಿರು ...{Loading}...
ಭಾನುಸುತ ಕುಳ್ಳಿರು ನದೀಸುತ
ನೇನನೆಂದನು ತನ್ನ ಚಿತ್ತ
ಗ್ಲಾನಿಯನು ಬಿಸುಟೇನ ನುಡಿದನು ಭಾವಶುದ್ಧಿಯಲಿ
ಏನನೆಂಬೆನು ಜೀಯ ಬಹಳ ಕೃ
ಪಾನಿಧಿಯಲಾ ಭೀಷ್ಮನನುಸಂ
ಧಾನವಿಲ್ಲದೆ ಬೆಸಸಿ ಕಳುಹಿದನೆಂದನಾ ಕರ್ಣ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ತನ್ನಲ್ಲಿಗೆ ಬಂದ ಕರ್ಣನನ್ನು ಸ್ವಾಗತಿಸಿ, ಕುಳಿತು ಕೊಳ್ಳಲು ಹೇಳಿ, ಗಂಗಾಪುತ್ರರಾದ ಭೀಷ್ಮಾಚಾರ್ಯರು ಏನೆಂದು ಹೇಳಿದರು ? ಭೀಷ್ಮರು ತಮ್ಮ ಮನಸ್ಸಿನಲ್ಲಿರುವ ಎಲ್ಲ ಚಿಂತೆಗಳನ್ನು ಮರೆತು ಶುದ್ಧಭಾವದಲ್ಲಿ ಏನೆಂದು ನುಡಿದರು ? ಎಂದು ಪ್ರಶ್ನಿಸಿದಾಗ ಕರ್ಣನು ಏನು ಹೇಳಲಿ ಜೀಯಾ, ಭೀಷ್ಮರು ತುಂಬ ದಯಾವಂತರು; ನನ್ನೊಡನೆ ಚೆನ್ನಾಗಿ ಮಾತಾಡಿ ನಮ್ಮೆಲ್ಲರನ್ನು ಆಶೀರ್ವದಿಸಿರುವುದಾಗಿ ಹೇಳಿದನು.
ಪದಾರ್ಥ (ಕ.ಗ.ಪ)
ಭಾನು-ಸೂರ್ಯ, ಸುತ-ಮಗ, ಚಿತ್ತ-ಮನಸ್ಸು, ಗ್ಲಾನಿ-ತೊಂದರೆ-ಚಿಂತೆ, ಭಾವಶುದ್ಧಿ-ಶುಚಿಯಾದ ಚಿಂತನೆ, ಅನುಸಂಧಾನ-ಮನಸ್ಸನ್ನು ದೇವರಲ್ಲಿ ನಿಲ್ಲಿಸುವುದು, ಬೆಸಸಿ-ಹೇಳಿ.
ಮೂಲ ...{Loading}...
ಭಾನುಸುತ ಕುಳ್ಳಿರು ನದೀಸುತ
ನೇನನೆಂದನು ತನ್ನ ಚಿತ್ತ
ಗ್ಲಾನಿಯನು ಬಿಸುಟೇನ ನುಡಿದನು ಭಾವಶುದ್ಧಿಯಲಿ
ಏನನೆಂಬೆನು ಜೀಯ ಬಹಳ ಕೃ
ಪಾನಿಧಿಯಲಾ ಭೀಷ್ಮನನುಸಂ
ಧಾನವಿಲ್ಲದೆ ಬೆಸಸಿ ಕಳುಹಿದನೆಂದನಾ ಕರ್ಣ ॥33॥
೦೩೪ ಇನ್ನು ಸೇನಾಪತಿಯದಾರೈ ...{Loading}...
ಇನ್ನು ಸೇನಾಪತಿಯದಾರೈ
ನಿನ್ನ ಮತವೇನುದಯವಾಗದ
ಮುನ್ನ ಬವರವ ಹಿಡಿಯಬೇಹುದು ವೈರಿ ರಾಯರಲಿ
ಎನ್ನು ನಿನ್ನಭಿಮತವನೆನೆ ಸಂ
ಪನ್ನಭುಜಬಲ ದ್ರೋಣನಿರಲಾ
ರಿನ್ನು ಸೇನಾಪತಿಗಳೆಂದನು ಭೂಪತಿಗೆ ಕರ್ಣ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನು ಸೂರ್ಯೋದಯಕ್ಕೆ ಮುಂಚೆ ಶತ್ರುಗಳೊಡನೆ ಯುದ್ಧಕ್ಕೆ ತೊಡಗಬೇಕಾಗಿದೆ. ಯಾರು ಸೇನಾಪತಿಗಳಾಗಬೇಕು ? ನಿನ್ನ ಅಭಿಪ್ರಾಯವನ್ನು ಹೇಳು ಎಂದು ದುರ್ಯೋಧನನು ಕರ್ಣನನ್ನು ಕೇಳಿದನು. ಅಮಿತವಾದ ಭುಜಬಲ ಪರಾಕ್ರಮವನ್ನು ಹೊಂದಿರುವ ದ್ರೋಣಾಚಾರ್ಯರಿದ್ದ ಮೇಲೆ ಬೇರೆ ಯಾರು ಸೇನಾಪತಿಗಳಾಗಬಲ್ಲರು ಎಂದು ಕರ್ಣನು ನುಡಿದನು.
ಮೂಲ ...{Loading}...
ಇನ್ನು ಸೇನಾಪತಿಯದಾರೈ
ನಿನ್ನ ಮತವೇನುದಯವಾಗದ
ಮುನ್ನ ಬವರವ ಹಿಡಿಯಬೇಹುದು ವೈರಿ ರಾಯರಲಿ
ಎನ್ನು ನಿನ್ನಭಿಮತವನೆನೆ ಸಂ
ಪನ್ನಭುಜಬಲ ದ್ರೋಣನಿರಲಾ
ರಿನ್ನು ಸೇನಾಪತಿಗಳೆಂದನು ಭೂಪತಿಗೆ ಕರ್ಣ ॥34॥
೦೩೫ ಪ್ರಭೆಯದಾರಿಗೆ ...{Loading}...
ಪ್ರಭೆಯದಾರಿಗೆ ಸೂರ್ಯನಿದಿರಿನೊ
ಳಭವನಿರೆ ತಾನಾರು ಭುವನಕೆ
ವಿಭುಗಳೈ ವೈಕುಂಠನಿದಿರಿನೊಳಾರು ದೇವತೆಯೈ
ವಿಭವ ನದಿಗಳಿಗುಂಟೆ ಜಲಧಿಯ
ರಭಸದಿದಿರಲಿ ನಮ್ಮ ಬಲದಲಿ
ಸುಭಟರಾರೈ ದ್ರೋಣನಿರುತಿರಲೆಂದನಾ ಕರ್ಣ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನನ್ನು ಬಿಟ್ಟರೆ ಬೆಳಕಿಗಾಗಿ ಬೇರೆ ಯಾರಿದ್ದಾರೆ ? ಎದುರಿಗೆ ಶಿವನೇ ಇದ್ದಾಗ ಲೋಕಕ್ಕೆ ಪ್ರಭು ಬೇರೆ ಯಾರಿದ್ದಾರೆ ? ಹಾಗೆಯೇ ವಿಷ್ಣುವಿನ ಎದುರಿಗೆ ಯಾವ ದೇವತೆಗಳಿದ್ದಾರೆ ? ಸಮುದ್ರದ ಮುಂದೆ ಲೋಕದ ಯಾವ ನದಿಯೂ ತನ್ನ ವೈಭವವನ್ನು ಮೆರೆಯಲಾರದು. ಇದರಂತೆ ದ್ರೋಣಾಚಾರ್ಯರ ಪರಾಕ್ರಮವನ್ನು ಮೀರಿಸುವ ವ್ಯಕ್ತಿ ತಮ್ಮ ಸೈನ್ಯದಲ್ಲಿಲ್ಲವೆಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಪ್ರಭೆ-ಕಾಂತಿ, ಅಭವ-ಶಿವ, ವಿಭು-ರಾಜ,
ಮೂಲ ...{Loading}...
ಪ್ರಭೆಯದಾರಿಗೆ ಸೂರ್ಯನಿದಿರಿನೊ
ಳಭವನಿರೆ ತಾನಾರು ಭುವನಕೆ
ವಿಭುಗಳೈ ವೈಕುಂಠನಿದಿರಿನೊಳಾರು ದೇವತೆಯೈ
ವಿಭವ ನದಿಗಳಿಗುಂಟೆ ಜಲಧಿಯ
ರಭಸದಿದಿರಲಿ ನಮ್ಮ ಬಲದಲಿ
ಸುಭಟರಾರೈ ದ್ರೋಣನಿರುತಿರಲೆಂದನಾ ಕರ್ಣ ॥35॥
೦೩೬ ಜಾಗು ಜಾಗುರೆ ...{Loading}...
ಜಾಗು ಜಾಗುರೆ ಕರ್ಣ ಪರರ ಗು
ಣಾಗಮವ ಪತಿಕರಿಸಿ ನುಡಿವವ
ನೀಗಳಿನ ಯುಗದಾತನೇ ಮಝ ಪೂತು ಭಾಪೆನುತ
ತೂಗುವೆರಳಿನ ಮಕುಟದೊಲಹಿನೊ
ಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ ಮಸಗಿತಾಸ್ಥಾನ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲೇ ಭಲೇ, ಕರ್ಣಾ, ನೀನೂ ಸಹ ಅನ್ಯರ ಗುಣಗಳನ್ನು ಗುರುತಿಸಿ ಬಾಯ್ತುಂಬ ಪ್ರಶಂಸೆ ಮಾಡುತ್ತಿದ್ದೀಯೆ, ನೀನು ಮಾಡಿರುವ ಪ್ರಶಂಸೆಯನ್ನು ಪರಾಮರ್ಶಿಸಿದರೆ ನೀನು ಈ ಯುಗದವನೆಯೋ ? ಎನ್ನುತ್ತಾ ವೀರರೆಲ್ಲರೂ ತಮ್ಮ ಬೆರಳುಗಳನ್ನು ಆಡಿಸುತ್ತ ಕಿರೀಟ ಸಹಿತವಾದ ತಲೆಯನ್ನು ಪ್ರಶಂಸಾ ಸೂಚಕವಾಗಿ ಅಲ್ಲಾಡಿಸಿದರು. ಹರ್ಷದ ಧ್ವನಿ ಗೈದರು. ಸಭಾ ಜನರ ಆನಂದದ ಉದ್ಗಾರ ಸಾಗರದಲ್ಲಿ ಸಭೆ ಶೋಭಿಸಿತು.
ಪದಾರ್ಥ (ಕ.ಗ.ಪ)
ಜಾಗು-ಭಲೆ, ಒಲಹು-ಅಲುಗಾಡು, ಗರುವ-ಹಿರಿಯ-ಶ್ರೇಷ್ಠ, ಭಟ-ವೀರ, ಉಲಿಯೆ-ಧ್ವನಿ ಮಾಡಲು, ಸೌರಂಭ-ಸಂಭ್ರಮ, ಮಸಗಿತು-ಶೋಭಿಸಿತು
ಮೂಲ ...{Loading}...
ಜಾಗು ಜಾಗುರೆ ಕರ್ಣ ಪರರ ಗು
ಣಾಗಮವ ಪತಿಕರಿಸಿ ನುಡಿವವ
ನೀಗಳಿನ ಯುಗದಾತನೇ ಮಝ ಪೂತು ಭಾಪೆನುತ
ತೂಗುವೆರಳಿನ ಮಕುಟದೊಲಹಿನೊ
ಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ ಮಸಗಿತಾಸ್ಥಾನ ॥36॥
೦೩೭ ನುಡಿಸು ನಿಸ್ಸಾಳವನು ...{Loading}...
ನುಡಿಸು ನಿಸ್ಸಾಳವನು ಕರೆ ಹೊಂ
ಗೊಡನ ಹಿಡಿದೈತರಲಿ ನಾರಿಯ
ರೆಡ ಬಲನು ತೆರಹಾಗಲಿಕ್ಕಲಿ ಸಿಂಹವಿಷ್ಟರವ
ತಡವು ಬೇಡೆನೆ ಕೌರವೇಂದ್ರನ
ನುಡಿಗೆ ಮುನ್ನನುವಾಯ್ತು ವಿಪ್ರರ
ಗಡಣ ಬಂದುದು ರಚಿಸಿದರು ಮೂರ್ಧಾಭಿಷೇಚನವ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಈ ರೀತಿ ಮುಕ್ತ ಕಂಠದಿಂದ ದ್ರೋಣಾಚಾರ್ಯರನ್ನು ಸೇನಾನಾಯಕರನ್ನಾಗಿ ನೇಮಿಸಬಹುದೆಂದು ಘೋಷಿಸಿದ ಮೇಲೆ ದುರ್ಯೋಧನನು ಪರಮ ಸಂತೋಷದಿಂದ ದ್ರೋಣರಿಗೆ ಸೇನಾನಾಯಕ ಪಟ್ಟವನ್ನು ಕಟ್ಟಲು ಅಗತ್ಯವಾದ ಆದೇಶವನ್ನು ಹೊರಡಿಸಿದನು. ಮಂಗಳ ವಾದ್ಯವನ್ನು ಮೊಳಗಿಸಲು ಸೂಚಿಸಿ, ಸ್ತ್ರೀಯರು ಬಂಗಾರದ ಕೊಡಗಳಲ್ಲಿ ಪವಿತ್ರವಾದ ನದಿಗಳ ನೀರನ್ನು ತರುವಂತೆಯೂ, ಸಿಂಹಾಸನವನ್ನು ಸಭಾ ಮಧ್ಯದಲ್ಲಿ ಹಾಕಿಸಿ ಎಡಬಲಗಳಲ್ಲಿ ಮುಖ್ಯರಾದವರು ಪೀಠಗಳನ್ನು ಅಲಂಕರಿಸುವಂತೆಯೂ ಮಾಡಬೇಕೆಂದು ದುರ್ಯೋಧನನು ಹೇಳಿದಾಕ್ಷಣ ಎಲ್ಲರೂ ಪಟ್ಟಾಭಿಷೇಕಕ್ಕೆ ಅಗತ್ಯವಾದುದೆಲ್ಲವನ್ನು ಸಿದ್ಧಗೊಳಿಸಿದರು. ಬ್ರಾಹ್ಮಣ ಸಮೂಹ ಈ ಮಂಗಳ ಕಾರ್ಯವನ್ನು ನೆರವೇರಿಸಿದರು.
ಪದಾರ್ಥ (ಕ.ಗ.ಪ)
ನಿಸ್ಸಾಳ-ಭೇರಿವಾದ್ಯ, ಹೊಂಗೊಡ-ಬಂಗಾರದ ಕೊಡ, ಐತರಲಿ-ಬರಲಿ, ತೆರಹು-ಅವಕಾಶ, ಸಿಂಹವಿಷ್ಟರ-ಸಿಂಹಾಸನ, ಮೂರ್ಧಾಭಿಷೇಚನ-ನೆತ್ತಿಯ ಭಾಗದಿಂದ ಮಾಡುವ ಅಭಿಷೇಕ,
ಮೂಲ ...{Loading}...
ನುಡಿಸು ನಿಸ್ಸಾಳವನು ಕರೆ ಹೊಂ
ಗೊಡನ ಹಿಡಿದೈತರಲಿ ನಾರಿಯ
ರೆಡ ಬಲನು ತೆರಹಾಗಲಿಕ್ಕಲಿ ಸಿಂಹವಿಷ್ಟರವ
ತಡವು ಬೇಡೆನೆ ಕೌರವೇಂದ್ರನ
ನುಡಿಗೆ ಮುನ್ನನುವಾಯ್ತು ವಿಪ್ರರ
ಗಡಣ ಬಂದುದು ರಚಿಸಿದರು ಮೂರ್ಧಾಭಿಷೇಚನವ ॥37॥
೦೩೮ ಸಕಲ ಸಾವನ್ತರು ...{Loading}...
ಸಕಲ ಸಾವಂತರು ಮಹೀಪಾ
ಲಕರು ಬಂದುದು ಚರಣದಲಿ ಕಾ
ಣಿಕೆಯನಿಕ್ಕಿತು ಕೈಯ ಮುಗಿದುದು ನಿಖಿಳ ಪರಿವಾರ
ಮಕುಟರತ್ನದ ಲಹರಿ ಖಡುಗದ
ವಿಕಟ ಧಾರಾರಶ್ಮಿ ದೀಪ
ಪ್ರಕರದಲಿ ಥಳಥಳಿಸೆ ರವಿಯವೊಲೆಸೆದನಾ ದ್ರೋಣ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಎಲ್ಲ ಮಾಂಡಲಿಕರು, ಸಾಮಂತರಾಜರು, ಮಹಾರಾಜರು, ಆಗಮಿಸಿ ನೋಡಿ ಸಂತೋಷಪಟ್ಟು ದ್ರೋಣರಿಗೆ ಉಡುಗೊರೆಯನ್ನು ಸಮರ್ಪಿಸಿ ನಮಸ್ಕರಿಸಿದರು. ಆಗ ಆ ಸಭೆಯಲ್ಲಿ ಎಲ್ಲರ ಕಿರೀಟಗಳಲ್ಲಿದ್ದ ರತ್ನಗಳಿಂದ ಕಿರಣರಾಶಿ ರಾರಾಜಿಸಿತು; ವೀರರ ಖಡ್ಗಗಳ ತುದಿಯ ಹೊಳಪು ಪ್ರಕಾಶಮಾನವಾದ ದೀಪಗಳ ಬೆಳಕಿನಲ್ಲಿ ಥಳಥಳಿಸಿತು, ದ್ರೋಣಾಚಾರ್ಯರು ಸೂರ್ಯನಂತೆ ಶೋಭಿಸಿದರು.
ಮೂಲ ...{Loading}...
ಸಕಲ ಸಾವಂತರು ಮಹೀಪಾ
ಲಕರು ಬಂದುದು ಚರಣದಲಿ ಕಾ
ಣಿಕೆಯನಿಕ್ಕಿತು ಕೈಯ ಮುಗಿದುದು ನಿಖಿಳ ಪರಿವಾರ
ಮಕುಟರತ್ನದ ಲಹರಿ ಖಡುಗದ
ವಿಕಟ ಧಾರಾರಶ್ಮಿ ದೀಪ
ಪ್ರಕರದಲಿ ಥಳಥಳಿಸೆ ರವಿಯವೊಲೆಸೆದನಾ ದ್ರೋಣ ॥38॥
೦೩೯ ಅರಸ ಬೇಡೈ ...{Loading}...
ಅರಸ ಬೇಡೈ ವರವನೆನ್ನನು
ಕರೆದು ಮಿಗೆ ಪತಿಕರಿಸೆ ಬಳಿಕಾ
ಬರಿದೆ ಹೋಹೆನೆ ಮೆಚ್ಚಿದುದ ನುಡಿ ಖೇಡತನವೇಕೆ
ಹೊರೆ ಹೊಗದೆ ಹೇಳೆನಲು ನಗೆಮೊಗ
ವರಳಿ ಹೊಂಪುಳಿಯೋಗಿ ಕೌರವ
ರರಸ ನುಡಿದನು ಕಟ್ಟಿಕೊಡಿ ಧರ್ಮಜನ ತನಗೆಂದು ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರು ದುರ್ಯೋಧನನಿಗೆ “ರಾಜನೆ, ನೀನು ನಿನಗೆ ಬೇಕಾದ ವರವನ್ನು ಕೇಳು; ಭಯ ಬೇಡ. ನೀನು ನನ್ನನ್ನು ಗೌರವಿಸಿದ್ದೀಯೆ, ಹಾಗಿರುವಾಗ ನಾನು ಸುಮ್ಮನಿರಲೆ? ಸಂಕೋಚವೇಕೆ? ನೀನು ಮೆಚ್ಚುವ ಕಾರ್ಯವನ್ನು ನಾನು ಮಾಡುತ್ತೇನೆ” ಎಂದಾಗ ಕೌರವೇಶ್ವರನಿಗೆ ರೋಮಾಂಚನವಾಗಿ ಧರ್ಮರಾಜನನ್ನು ಸೆರೆ ಹಿಡಿದು ಒಪ್ಪಿಸಬೇಕೆಂದು ಕೇಳಿಕೊಂಡನು.
ಪದಾರ್ಥ (ಕ.ಗ.ಪ)
ಪತಿಕರಿಸಿ-ಗೌರವಿಸಿ, ಖೇಡತನ-ಭಯ, ಹೊಂಪುಳಿ-ರೋಮಾಂಚನ, ಹೊರೆಹೊಗದೆ-ದಾಕ್ಷಿಣ್ಯವಿಲ್ಲದೆ, ಸಂಕೋಚಪಡದೆ,
ಮೂಲ ...{Loading}...
ಅರಸ ಬೇಡೈ ವರವನೆನ್ನನು
ಕರೆದು ಮಿಗೆ ಪತಿಕರಿಸೆ ಬಳಿಕಾ
ಬರಿದೆ ಹೋಹೆನೆ ಮೆಚ್ಚಿದುದ ನುಡಿ ಖೇಡತನವೇಕೆ
ಹೊರೆ ಹೊಗದೆ ಹೇಳೆನಲು ನಗೆಮೊಗ
ವರಳಿ ಹೊಂಪುಳಿಯೋಗಿ ಕೌರವ
ರರಸ ನುಡಿದನು ಕಟ್ಟಿಕೊಡಿ ಧರ್ಮಜನ ತನಗೆಂದು ॥39॥
೦೪೦ ಮರಣ ಮನ್ತ್ರಾನುಗ್ರಹವನವ ...{Loading}...
ಮರಣ ಮಂತ್ರಾನುಗ್ರಹವನವ
ಧರಿಸಬಹುದೇ ಮಗನೆ ಪಾರ್ಥನ
ಪರಿಯನರಿಯಾ ಹಿಡಿಯಲೀವನೆ ಧರ್ಮನಂದನನ
ಅರಿದ ಬೇಡಿದೆ ತನಗೆ ನೂಕದ
ವರವ ವಚನಿಸಿ ಮಾಡದಿಹ ಬಾ
ಹಿರರು ನಾವಲ್ಲೆನಲು ಕೌರವರಾಯನಿಂತೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ದುರ್ಯೋಧನನೇ ಮರಣದ ಮಂತ್ರಾನುಗ್ರಹವನ್ನು ಕೇಳಬಹುದೇ? ಅರ್ಜುನನ ಪರಾಕ್ರಮ ಎಂತಹುದೆಂಬುದು ತಿಳಿದಿಲ್ಲವೆ ? ಅವನು ಯಮಧರ್ಮನ ಮಗನಾದ ಧರ್ಮರಾಯನು ಸೆರೆಯಾಗುವುದಕ್ಕೆ ಅವಕಾಶವನ್ನು ಕೊಡುತ್ತಾನೆಯೆ ? ನಾನು ಮಾತನ್ನು ಕೊಟ್ಟ ಮೇಲೆ ಅದನ್ನು ಮೀರಲು ಸಾಧ್ಯವಿಲ್ಲ. ನೀನು ಅಸಾಧ್ಯವಾದುದನ್ನು ಬೇಡಿದ್ದೀಯೆ, ಈ ಕಾರ್ಯವನ್ನು ನೆರವೇರಿಸಬಹುದೆಂಬ ಭರವಸೆಯನ್ನು ಹೊಂದಿಲ್ಲ” ಎಂದು ದ್ರೋಣರು ದುರ್ಯೋಧನನಿಗೆ ಹೇಳಿದರು. ಆಗ ಕೌರವನು ಹೀಗೆಂದನು.
ಪದಾರ್ಥ (ಕ.ಗ.ಪ)
ಅವಧರಿಸಬಹುದೆ-ಕೇಳಬಹುದೆ , ಅರಿದ-ಅಸಾಧ್ಯವಾದುದನ್ನು
ಮೂಲ ...{Loading}...
ಮರಣ ಮಂತ್ರಾನುಗ್ರಹವನವ
ಧರಿಸಬಹುದೇ ಮಗನೆ ಪಾರ್ಥನ
ಪರಿಯನರಿಯಾ ಹಿಡಿಯಲೀವನೆ ಧರ್ಮನಂದನನ
ಅರಿದ ಬೇಡಿದೆ ತನಗೆ ನೂಕದ
ವರವ ವಚನಿಸಿ ಮಾಡದಿಹ ಬಾ
ಹಿರರು ನಾವಲ್ಲೆನಲು ಕೌರವರಾಯನಿಂತೆಂದ ॥40॥
೦೪೧ ಕೊಡುವಡಿದು ವರವಲ್ಲದಿದ್ದರೆ ...{Loading}...
ಕೊಡುವಡಿದು ವರವಲ್ಲದಿದ್ದರೆ
ನುಡಿಗೆ ಮೊಳೆ ಹೊಮ್ಮುವರೆ ನಿಮ್ಮಯ
ತೊಡಕನೊಲುವವನಲ್ಲ ನೀವೇ ಬಲ್ಲಿರೆನೆ ನಗುತ
ಹಿಡಿದು ಬಿಗಿವೆನು ಪಾರ್ಥನನು ಕೆಲ
ಕಡೆಗೆ ತಪ್ಪಿಸಿ ಧರ್ಮಪುತ್ರನ
ಬಿಡೆನು ನಿನ್ನಯ ಪುಣ್ಯದಳತೆಯನರಿಯಬಹುದೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಕೊಟ್ಟರೆ ಈ ವರವನ್ನು ನೀಡಿ. ಅಕಸ್ಮಾತ್ ಸಾಧ್ಯವಾಗದಿದ್ದರೆ ಏನು ಮಾಡಲಾಗುತ್ತದೆ? ಮಾತಿಗೆ ಹಾನಿ ಉಂಟು ಮಾಡುವರೆ? ನಿಮಗಿರುವ ತೊಡಕುಗಳನ್ನು ನಾನು ಗಮನಿಸುವವನಲ್ಲ. ಅವನ್ನು ಹೇಗೆ ಪರಿಹರಿಸಿಕೊಳ್ಳುವುದೆಂಬುದು ನಿಮಗೇ ಗೊತ್ತು. “. ಎಂದು ದುರ್ಯೋಧನನು ನಗುತ್ತಾ ಹೇಳಿದಾಗ ದ್ರೋಣರು " ಅರ್ಜುನನು ದೂರವಿರುವ ಹಾಗೆ ಮಾಡು. ಆಗ ನಾನು ಧರ್ಮರಾಯನನ್ನು ಹಿಡಿಯದೆ ಬಿಡುವುದಿಲ್ಲ. ನಿನ್ನ ಪುಣ್ಯ ಎಷ್ಟಿದೆ ಎಂಬುದನ್ನು ಆಗ ತಿಳಿಯಬಹುದು” ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ನುಡಿಗೆ-ಮಾತಿಗೆ, ಮೊಳೆ ಹೊಮ್ಮುವರೆ-ಹಾನಿ ಉಂಟುಮಾಡುವರೆ
ಮೂಲ ...{Loading}...
ಕೊಡುವಡಿದು ವರವಲ್ಲದಿದ್ದರೆ
ನುಡಿಗೆ ಮೊಳೆ ಹೊಮ್ಮುವರೆ ನಿಮ್ಮಯ
ತೊಡಕನೊಲುವವನಲ್ಲ ನೀವೇ ಬಲ್ಲಿರೆನೆ ನಗುತ
ಹಿಡಿದು ಬಿಗಿವೆನು ಪಾರ್ಥನನು ಕೆಲ
ಕಡೆಗೆ ತಪ್ಪಿಸಿ ಧರ್ಮಪುತ್ರನ
ಬಿಡೆನು ನಿನ್ನಯ ಪುಣ್ಯದಳತೆಯನರಿಯಬಹುದೆಂದ ॥41॥
೦೪೨ ಸಾಕಿದೊಳ್ಳಿತು ಚಾಪತನ್ತ್ರ ...{Loading}...
ಸಾಕಿದೊಳ್ಳಿತು ಚಾಪತಂತ್ರ ಪಿ
ನಾಕಿಯೇರಿಸಿ ನುಡಿದ ನುಡಿಗಳು
ಕಾಕಹುದೆ ಕೈಕೊಂಡೆವೆನುತವನೀಶ ಹರುಷದಲಿ
ಆ ಕೃಪಾದಿ ಮಹಾಪ್ರಧಾನಾ
ನೀಕವನು ಕಳುಹಿದನು ಮನೆಗೆ ದಿ
ವಾಕರನು ಹೆಡತಲೆಗೆ ಹಗರಿಕ್ಕಿದನು ಚಂದ್ರಮನ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರನ್ನು ಮೊದಲಿನಿಂದ ಪೋಷಿಸಿದ್ದು ಒಳ್ಳೆಯದಾಯಿತು, ಶಿವನ ಅವತಾರವಾದ ದ್ರೋಣಾಚಾರ್ಯರು ಉತ್ಸಾಹದಿಂದ ಆಡಿದ ಮಾತುಗಳು ಸುಳ್ಳಾಗುವುದಿಲ್ಲ , ಅವರು ಹೇಳಿದ ಕೆಲಸವನ್ನು ಮಾಡುವೆವು ಎಂದುಕೊಂಡು ದುರ್ಯೋಧನನು ಸಂತೋಷವನ್ನು ಹೊಂದಿದನು. ಅನಂತರ ಕೃಪಾಚಾರ್ಯರೇ ಮೊದಲಾದ ಮಹಾಪ್ರಧಾನರ ಗುಂಪನ್ನು ಮನೆಗೆ ಕಳುಹಿಸಿಕೊಟ್ಟನು. ಆಗ ಸೂರ್ಯನು ಚಂದ್ರನ ತಲೆಯ ಹಿಂಭಾಗಕ್ಕೆ ಕಿರಣಗಳನ್ನು ಸೂಸಲಾರಂಭಿಸಿದನು.(ಸೂರ್ಯೋದಯವಾಯಿತು)
ಪದಾರ್ಥ (ಕ.ಗ.ಪ)
ಚಾಪ-ಬಿಲ್ಲು, ಪಿನಾಕಿ-ಈಶ್ವರ, ಕಾಕಹುದೆ-ವ್ಯರ್ಥವಾಗುವುದೆ, ಅವನೀಶ-ರಾಜ-ದುರ್ಯೋಧನ, ಅನೀಕ-ಗುಂಪು, ದಿವಾಕರ-ಸೂರ್ಯ, ಹೆಡತಲೆ-ತಲೆಯ ಹಿಂಭಾಗ, ಹಗರು-ಹುರುಪು
ಮೂಲ ...{Loading}...
ಸಾಕಿದೊಳ್ಳಿತು ಚಾಪತಂತ್ರ ಪಿ
ನಾಕಿಯೇರಿಸಿ ನುಡಿದ ನುಡಿಗಳು
ಕಾಕಹುದೆ ಕೈಕೊಂಡೆವೆನುತವನೀಶ ಹರುಷದಲಿ
ಆ ಕೃಪಾದಿ ಮಹಾಪ್ರಧಾನಾ
ನೀಕವನು ಕಳುಹಿದನು ಮನೆಗೆ ದಿ
ವಾಕರನು ಹೆಡತಲೆಗೆ ಹಗರಿಕ್ಕಿದನು ಚಂದ್ರಮನ ॥42॥
೦೪೩ ಜಗವರಾಜಕವಾಯ್ತು ಕುಮುದಾ ...{Loading}...
ಜಗವರಾಜಕವಾಯ್ತು ಕುಮುದಾ
ಳಿಗಳ ಬಾಗಿಲು ಹೂಡಿದವು ಸೂ
ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ
ಉಗಿದವಂಬರವನು ಮಯೂಖಾ
ಳಿಗಳು ಭುವನದ ಜನದ ಕಂಗಳ
ತಗಹು ತೆಗೆದುದು ಸೆರೆಯ ಬಿಟ್ಟರು ಜಕ್ಕವಕ್ಕಿಗಳ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾತ್ರಿ ಮುಗಿದ ಮೇಲೆ ನೈದಿಲೆಯ ಹೂಗಳು ಮುಚ್ಚಿಕೊಂಡವು. ರಾತ್ರಿಯ ಚಂದ್ರನ ರಾಜ್ಯಭಾರ ಮುಗಿಯಿತು. ಸೂರೆ ಮಾಡುವ ದುಂಬಿಗಳು ಸಿರಿವಂತರ ಮನೆಯನ್ನು ಮುತ್ತಿದವು. ಆಕಾಶದಲ್ಲಿ ನಕ್ಷತ್ರಗಳು ಸೂಸುತ್ತಿದ್ದ ಕಿರಣಗಳು ಮಾಯವಾದವು. ಲೋಕದ ಜನರು ಕಣ್ಣುಗಳನ್ನು ತೆರೆದು ದಿನದ ಚಟುವಟಿಕೆಗಳಿಗೆ ಸಿದ್ಧರಾದರು. ಚಕ್ರವಾಕ ಪಕ್ಷಿಗಳು ಸೆರೆಯಿಂದ ಬಿಡುಗಡೆಯನ್ನು ಪಡೆದವು.
ಪದಾರ್ಥ (ಕ.ಗ.ಪ)
ಅರಾಜಕ-ರಾಜನಿಲ್ಲದ ಸ್ಥಿತಿ, ಕುಮುದಾಳಿ-ನೈದಿಲೆಯ ಹೂಗಳ ಗುಂಪು, ಉಗಿದವು-ಬಿಟ್ಟವು, ಮಯೂಖಾಳಿ-ಕಿರಣರಾಶಿ, ಭುವನದ-ಲೋಕದ, ತಗಹು-ತಡೆ, ಜಕ್ಕವಕ್ಕಿ-ಚಕ್ರವಾಕಪಕ್ಷಿ
ಮೂಲ ...{Loading}...
ಜಗವರಾಜಕವಾಯ್ತು ಕುಮುದಾ
ಳಿಗಳ ಬಾಗಿಲು ಹೂಡಿದವು ಸೂ
ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ
ಉಗಿದವಂಬರವನು ಮಯೂಖಾ
ಳಿಗಳು ಭುವನದ ಜನದ ಕಂಗಳ
ತಗಹು ತೆಗೆದುದು ಸೆರೆಯ ಬಿಟ್ಟರು ಜಕ್ಕವಕ್ಕಿಗಳ ॥43॥
೦೪೪ ಸೂಳವಿಸಿ ಬೊಬ್ಬಿರಿದವುರು ...{Loading}...
ಸೂಳವಿಸಿ ಬೊಬ್ಬಿರಿದವುರು ನಿ
ಸ್ಸಾಳಚಯವದ್ರಿಗಳ ಹೆಡತಲೆ
ಸೀಳೆ ಸಿಡಿಲೇಳಿಗೆಯಲೆದ್ದವು ವಿವಿಧ ವಾದ್ಯರವ
ಆಳು ನೆರೆದುದು ನೆಲ ಕುಸಿಯೆ ರಥ
ಜಾಲ ಜಡಿದುದು ಹಣ್ಣಿದಾನೆಯ
ಸಾಲು ಮೆರೆದುವು ಕುಣಿವುತಿದ್ದುವು ಕೂಡೆ ವಾಜಿಗಳು ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದಾದಮೇಲೊಂದರಂತೆ ಭೇರಿವಾದ್ಯಗಳು ಧ್ವನಿಗೈಯಲಾರಂಭಿಸಿದವು. ಅವುಗಳ ಧ್ವನಿಯಿಂದ ಬೆಟ್ಟಗಳ ಮೇಲ್ಭಾಗವು ಒಡೆದು ಚೂರಾಗಲಾರಂಭಿಸಿತು. ಇತರ ವಾದ್ಯಗಳ ಧ್ವನಿಯು ಸಿಡಿಲಿನ ಧ್ವನಿಯನ್ನು ಮೀರಿಸುವಂತಿತ್ತು, ಉಭಯ ಪಕ್ಷಗಳಲ್ಲಿಯೂ ಸೈನಿಕರು ಯುದ್ಧಕ್ಕೆ ಸಿದ್ಧರಾದರು. ರಥಗಳ ಗುಂಪು ಸೇರಿದ್ದರಿಂದ ನೆಲ ಕುಸಿಯುವಂತಾಯಿತು. ಸಜ್ಜಾದ ಗಜ ಸೈನ್ಯವು ಮೆರೆಯಿತು.
ಪದಾರ್ಥ (ಕ.ಗ.ಪ)
ಸೂಳವಿಸಿ-ಒಂದಾದ ಮೇಲೊಂದರಂತೆ, ನಿಸ್ಸಾಳ-ಭೇರಿ ವಾದ್ಯ, ಚಯ-ಗುಂಪು, ಅದ್ರಿ-ಬೆಟ್ಟ, ಹೆಡತಲೆ-ಶಿಖರ, ರವ-ಧ್ವನಿ,
ಹಣ್ಣಿದ-ಸಜ್ಜಾದ , ವಾಜಿ-ಕುದುರೆ
ಮೂಲ ...{Loading}...
ಸೂಳವಿಸಿ ಬೊಬ್ಬಿರಿದವುರು ನಿ
ಸ್ಸಾಳಚಯವದ್ರಿಗಳ ಹೆಡತಲೆ
ಸೀಳೆ ಸಿಡಿಲೇಳಿಗೆಯಲೆದ್ದವು ವಿವಿಧ ವಾದ್ಯರವ
ಆಳು ನೆರೆದುದು ನೆಲ ಕುಸಿಯೆ ರಥ
ಜಾಲ ಜಡಿದುದು ಹಣ್ಣಿದಾನೆಯ
ಸಾಲು ಮೆರೆದುವು ಕುಣಿವುತಿದ್ದುವು ಕೂಡೆ ವಾಜಿಗಳು ॥44॥
೦೪೫ ತಳಿತ ಝಲ್ಲರಿಗಳಿಗೆ ...{Loading}...
ತಳಿತ ಝಲ್ಲರಿಗಳಿಗೆ ಗಗನದ
ವಳಯವೈದದು ನೆರೆದ ಸೇನೆಗೆ
ನೆಲನಗಲ ನೆರೆಯದು ನಿರೂಢಿಯ ಭಟರ ವಿಕ್ರಮಕೆ
ಅಳವು ಕಿರಿದರಿರಾಯರಿಗೆ ದಿಗು
ವಳಯವಿಟ್ಟೆಡೆಯಾಗೆ ರಥ ಹಯ
ದಳವುಳಕೆ ಕುರುಸೇನೆ ನಡೆದುದು ದೊರೆಯ ನೇಮದಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರ ಸೇನೆಯ ಅಸಂಖ್ಯವಾದ ಅರಳಿದ ಛತ್ರಿಗಳಿಗೆ ಆಕಾಶದ ಸ್ಥಳ ಸಾಲದೆಂಬಂತೆ ತೋರಿತು. ಅಲ್ಲಿ ಸೇರಿದ ಸೇನೆಗೆ ಭೂಮಿಯು ಸಾಲದೆನಿಸಿತು. ವೀರರ ಪರಾಕ್ರಮದ ಪ್ರಕಾಶನಕ್ಕೆ ಈ ಯುದ್ಧದಲ್ಲಿ ಶತ್ರುಗಳ ಸಾಮಥ್ರ್ಯ ಕಿರಿದಾಯಿತು. ಕೌರವನ ಆಜ್ಞೆಯಂತೆ ರಥ ಹಾಗೂ ಕುದುರೆಯ ಸೈನ್ಯ ವಿಸ್ತಾರವಾಗಿ ನಡೆದು ರಣರಂಗಕ್ಕೆ ಧಾವಿಸಿತು.
ಪದಾರ್ಥ (ಕ.ಗ.ಪ)
ತಳಿತ-ಹರಡಿದ, ಝಲ್ಲರಿ-ಛತ್ರಿ, ಐದದು-ಸಾಲದು, ನಿರೂಢಿಯ-ಅಭ್ಯಾಸಗೈದ, ವಿಕ್ರಮ-ಪರಾಕ್ರಮ, ಅಳವು-ಶಕ್ತಿ, ದಿಗ್ವಳಯ-ದಿಕ್ಕಿನ ಭಾಗ, ಇಟ್ಟಿಡೆಯಾಗೆ-ಇಕ್ಕಟ್ಟಾಗಲು
ಮೂಲ ...{Loading}...
ತಳಿತ ಝಲ್ಲರಿಗಳಿಗೆ ಗಗನದ
ವಳಯವೈದದು ನೆರೆದ ಸೇನೆಗೆ
ನೆಲನಗಲ ನೆರೆಯದು ನಿರೂಢಿಯ ಭಟರ ವಿಕ್ರಮಕೆ
ಅಳವು ಕಿರಿದರಿರಾಯರಿಗೆ ದಿಗು
ವಳಯವಿಟ್ಟೆಡೆಯಾಗೆ ರಥ ಹಯ
ದಳವುಳಕೆ ಕುರುಸೇನೆ ನಡೆದುದು ದೊರೆಯ ನೇಮದಲಿ ॥45॥
೦೪೬ ಹರಿಗೆ ಹರಿದವು ...{Loading}...
ಹರಿಗೆ ಹರಿದವು ಮುಂದೆ ಬಿಲ್ಲಾ
ಳುರವಣಿಸಿದರು ಮೋಹರವ ಮಿ
ಕ್ಕುರುಬಿದರು ಸಬಳಿಗರು ಮುಂಚಿತು ರಣಕೆ ಖಡ್ಗಿಗಳು
ತುರಗ ಕವಿದವು ದಂತಿ ಘಟೆಗಳು
ತುರುಗಿದವು ರಥ ರಾಜಿ ಮುಂಗುಡಿ
ವರಿದುದವನೀಪತಿಯ ಚೂಣಿಯ ನೃಪರ ಜೋಕೆಯಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುರಾಣಿಯನ್ನು ಹಿಡಿದ ಪದಾತಿ ಸೈನ್ಯ ಮುಂದೆ ಮುಂದೆ ಹೋದಂತೆ, ಬಿಲ್ಲನ್ನು ಹಿಡಿದು ಯುದ್ಧ ಮಾಡುವ ವೀರರು ಉತ್ಸಾಹದಿಂದ ಮುಂದೆ ನಡೆದರು. ಸಬಳ, ಖಡ್ಗವೇ ಮೊದಲಾದ ಆಯುಧಗಳನ್ನು ಹಿಡಿದು ಯುದ್ಧ ಮಾಡುವ ವೀರರು ಯುದ್ಧಕ್ಕೆ ಸಿದ್ಧರಾಗಿ ಒಟ್ಟಾದರು. ಕುದುರೆ, ಆನೆಗಳ ಸೈನ್ಯ ವ್ಯವಸ್ಥಿತವಾಗಿ ನಿಂತವು. ರಾಜ ಮಹಾರಾಜರ ಸೂಚನೆಯ ಮೇರೆಗೆ ಇತರ ರಾಜರು ಸೈನ್ಯದ ಮುಂಭಾಗದಲ್ಲಿ ನಿಂತು ಯುದ್ಧ ಸನ್ನದ್ಧರಾದರು.
ಮೂಲ ...{Loading}...
ಹರಿಗೆ ಹರಿದವು ಮುಂದೆ ಬಿಲ್ಲಾ
ಳುರವಣಿಸಿದರು ಮೋಹರವ ಮಿ
ಕ್ಕುರುಬಿದರು ಸಬಳಿಗರು ಮುಂಚಿತು ರಣಕೆ ಖಡ್ಗಿಗಳು
ತುರಗ ಕವಿದವು ದಂತಿ ಘಟೆಗಳು
ತುರುಗಿದವು ರಥ ರಾಜಿ ಮುಂಗುಡಿ
ವರಿದುದವನೀಪತಿಯ ಚೂಣಿಯ ನೃಪರ ಜೋಕೆಯಲಿ ॥46॥
೦೪೭ ಸಿಡಿಲ ಕುಡುಹುಗಳಿನ್ದ ...{Loading}...
ಸಿಡಿಲ ಕುಡುಹುಗಳಿಂದ ಕಮಲಜ
ಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲೊದರಿದವು ನಿಸ್ಸಾಳ ಕೋಟಿಗಳು
ತುಡುಕಿದವು ತಂಬಟದ ದನಿ ಜಗ
ದಡಕಿಲನು ಫಡ ಕೌರವೇಂದ್ರನ
ತೊಡಕು ಬೇಡೆಂದೊದರುತಿದ್ದವು ಗೌರುಗಹಳೆಗಳು ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆರಂಭವಾಗಲಿರುವ ಯುದ್ಧವನ್ನು ಸೂಚಿಸಲು ಬಾರಿಸಿದ ಕೋಟಿಕೋಟಿ ಸಂಖ್ಯೆಯ ಭೇರಿವಾದ್ಯಗಳಿಂದುಂಟಾದ ಧ್ವನಿಯು ಸಾಕ್ಷಾತ್ ಬ್ರಹ್ಮನು ಸಿಡಿಲು ಎಂಬ ಕೋಲಿನಿಂದ ಭೇರಿಯನ್ನು ಬಾರಿಸಿದಂತಿತ್ತು. ಅಂದು ಉಂಟಾಗುತ್ತಿದ್ದ ತಮಟೆಯ ಹಾಗೂ ಕಹಳೆಯ ಧ್ವನಿಯು ಪ್ರಪಂಚವನ್ನೆಲ್ಲಾ ವ್ಯಾಪಿಸಿ “ದುರ್ಯೋಧನನೊಂದಿಗೆ ಘರ್ಷಣೆ ಸಾಕು” ಎಂದು ಕರ್ಕಶ ಧ್ವನಿಯಿಂದ ಸೂಚಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಕುಡುಹು-ದೊಣ್ಣೆ, ಕಮಲಜ-ಬ್ರಹ್ಮ, ಅಬುಜಭವಾಂಡ-ಬ್ರಹ್ಮಾಂಡ, ಅಬುಜಭವ-ಬ್ರಹ್ಮ, , ಅಡಕಿಲ-ಒಂದರ ಮೇಲೊಂದು, ಗೌರುಕಹಳೆ-ಕರ್ಕಶ ಧ್ವನಿ ಮಾಡುವ ಕಹಳೆ.
ಮೂಲ ...{Loading}...
ಸಿಡಿಲ ಕುಡುಹುಗಳಿಂದ ಕಮಲಜ
ಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲೊದರಿದವು ನಿಸ್ಸಾಳ ಕೋಟಿಗಳು
ತುಡುಕಿದವು ತಂಬಟದ ದನಿ ಜಗ
ದಡಕಿಲನು ಫಡ ಕೌರವೇಂದ್ರನ
ತೊಡಕು ಬೇಡೆಂದೊದರುತಿದ್ದವು ಗೌರುಗಹಳೆಗಳು ॥47॥
೦೪೮ ಬಿಗಿದ ಝಲ್ಲರಿ ...{Loading}...
ಬಿಗಿದ ಝಲ್ಲರಿ ಮುಗಿಲ ಹೊಸ ಕೈ
ದುಗಳ ಮಿಂಚಿನ ಮಕುಟಮಣಿಕಾಂ
ತಿಗಳ ಸುರಧನುವಿನ ಚತುರ್ಬಲ ರವದ ಸಿಡಿಲುಗಳ
ವಿಗಡ ಕುಂಭಜ ಮೇಘ ಋತು ತನಿ
ಹೊಗರಿರಿದು ಪರಬಲದ ಕಡುವೇ
ಸಗೆಗೆ ಕವಿದುದು ರಾಜಹಂಸ ಪ್ರಕರವೋಸರಿಸೆ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಟ್ಟಿದ ಝಲ್ಲರಿಗಳ ಮೋಡ, ಹೊಸ ಆಯುಧಗಳೆಂಬ ಮಿಂಚು ಕಿರೀಟಗಳ ರತ್ನಗಳ ಕಾಮನಬಿಲ್ಲು ಕಾಲಾಳು, ಕುದುರೆ, ಆನೆ ಹಾಗೂ ರಥಗಳ ಸೈನ್ಯದ ಧ್ವನಿ ಎಂಬ ಸಿಡಿಲುಗಳು, ವೀರನಾದ ದ್ರೋಣಾಚಾರ್ಯನೆಂಬ ವರ್ಷ ಋತು ಇವುಗಳ ಕಣ್ಣಿರಿಯುವ ಕಾಂತಿಯಿಂದ ಶತ್ರು ಸೈನ್ಯದ ಕಡು ಬೇಸಗೆಗೆ, ಮುತ್ತಿಗೆ ಹಾಕಿ, ರಾಜಂಸಗಳನ್ನು ಹಿಮ್ಮೆಟ್ಟಿಸಿತು.
ಪದಾರ್ಥ (ಕ.ಗ.ಪ)
ಝಲ್ಲರಿ-ಕುಚ್ಚು, ಕೈದು-ಆಯುಧ, ಸುರಧನು-ಕಾಮನಬಿಲ್ಲು, ರವ-ಧ್ವನಿ, ವಿಗಡ-ವೀರ, ಕುಂಭಜ-ದ್ರೋಣ, ಹೊಗರು-ಕಾಂತಿ, ಪ್ರಕರ-ಗುಂಪು, ಓಸರಿಸೆ-ಪಕ್ಕಕ್ಕೆ ಸರಿಯಲು.
ಮೂಲ ...{Loading}...
ಬಿಗಿದ ಝಲ್ಲರಿ ಮುಗಿಲ ಹೊಸ ಕೈ
ದುಗಳ ಮಿಂಚಿನ ಮಕುಟಮಣಿಕಾಂ
ತಿಗಳ ಸುರಧನುವಿನ ಚತುರ್ಬಲ ರವದ ಸಿಡಿಲುಗಳ
ವಿಗಡ ಕುಂಭಜ ಮೇಘ ಋತು ತನಿ
ಹೊಗರಿರಿದು ಪರಬಲದ ಕಡುವೇ
ಸಗೆಗೆ ಕವಿದುದು ರಾಜಹಂಸ ಪ್ರಕರವೋಸರಿಸೆ ॥48॥
೦೪೯ ಕಳನ ಗೆಲಿದುದು ...{Loading}...
ಕಳನ ಗೆಲಿದುದು ಬಂದು ಕೌರವ
ಬಲ ಯುಧಿಷ್ಠಿರರಾಯ ದಳ ಮುಂ
ಕೊಳಿಸಿ ಹೊಕ್ಕುದು ಜಯದ ಸುಮ್ಮಾನದ ಸಘಾಡದಲಿ
ಬಲಿದರೊಡ್ಡನು ಮಂಡಳಾಕೃತಿ
ಗೊಳಿಸಿ ಕೌರವರಿವರು ಥಟ್ಟನು
ನಿಲಿಸಿದರು ಚಂದ್ರಾರ್ಧಸದೃಶದಲಖಿಳ ಮೋಹರವ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವ ಹಾಗೂ ಕೌರವರ ಸೈನ್ಯ ಜಯವನ್ನು ಸಾಧಿಸುವ ತವಕದಿಂದ ಮುಂದೆ ಮುಂದೆ ಸರಿದು ಸೈನ್ಯ ಸಾಂದ್ರತೆಯನ್ನು ಹೆಚ್ಚಿಸಿತು. ಪಾಂಡವರು ಸೈನ್ಯವನ್ನು ನಿಲ್ಲಿಸಿರುವ ರೀತಿಯನ್ನು ನೋಡಿದಾಗ ಒಟ್ಟಾಗಿ ಒಂದು ಮಂಡಲದಂತೆ ಕಾಣುತ್ತಿತ್ತು. ಕೌರವರು ತಮ್ಮ ಸೈನ್ಯವನ್ನು ಅರ್ಧ ಚಂದ್ರಾಕೃತಿಯಲ್ಲಿ ನಿಲ್ಲಿಸಿ ಯುದ್ಧಕ್ಕೆ ಸಿದ್ಧರಾದರು.
ಮೂಲ ...{Loading}...
ಕಳನ ಗೆಲಿದುದು ಬಂದು ಕೌರವ
ಬಲ ಯುಧಿಷ್ಠಿರರಾಯ ದಳ ಮುಂ
ಕೊಳಿಸಿ ಹೊಕ್ಕುದು ಜಯದ ಸುಮ್ಮಾನದ ಸಘಾಡದಲಿ
ಬಲಿದರೊಡ್ಡನು ಮಂಡಳಾಕೃತಿ
ಗೊಳಿಸಿ ಕೌರವರಿವರು ಥಟ್ಟನು
ನಿಲಿಸಿದರು ಚಂದ್ರಾರ್ಧಸದೃಶದಲಖಿಳ ಮೋಹರವ ॥49॥
೦೫೦ ಚೌರಿಗಳು ಬಲವೆರಡರೊಳಗೊ ...{Loading}...
ಚೌರಿಗಳು ಬಲವೆರಡರೊಳಗೊ
ಯ್ಯಾರದಲಿ ತೂಗಿದವು ಚೂಣಿಯ
ವೀರರುರವಣೆ ಮಿಗಲು ಹೊಯ್ದರು ಹೊಕ್ಕು ಪರಬಲವ
ಮಾರಿ ಮೊಗವಡದೆರೆದವೊಲು ಜ
ಜ್ಝಾರ ಮಾಸಾಳುಗಳು ನಿಜ ದಾ
ತಾರನವಸರಕೊದಗಿ ಹಣವಿನ ಋಣನ ನೀಗಿದರು ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧಾರಂಭವನ್ನು ಸೂಚಿಸಲು ಚೌರಿಗಳು ಓಲಾಡಲಾರಂಭಿಸಿದವು. ಸೇನೆಯ ಮುಂಭಾಗದಲ್ಲಿದ್ದ ವೀರರು ಅತ್ಯುತ್ಸಾಹದಿಂದ ಶತ್ರು ಸೈನ್ಯದ ಮೇಲೆ ಬಿದ್ದು ಹೋರಾಡುತ್ತಿರುವುದನ್ನು ನೋಡಿದಾಗ ಮಾರಿ ದೇವತೆಯೇ ಸೈನಿಕರ ಮುಖವಾಡವನ್ನು ತೊಟ್ಟು ಬಂದು ಹೋರಾಡುತ್ತಿರುವಂತೆ ತೋರುತ್ತಿತ್ತು. ಸಾಕಿದ ಯಜಮಾನನ ಋಣವನ್ನು ಪೂರ್ಣವಾಗಿ ತೀರಿಸುವ ಛಲದಿಂದ ಸೈನಿಕರು ಹೋರಾಡುತ್ತಿದ್ದರು.
ಪದಾರ್ಥ (ಕ.ಗ.ಪ)
ಚೌರಿ-ಕುಚ್ಚು, ಒಯ್ಯಾರ-ಬಿನ್ನಾಣ, ಬಲ-ಸೈನ್ಯ, ಚೂಣಿಯ-ಮುಂಭಾಗ, ಉರವಣೆ-ಉತ್ಸಾಹ, ಪರಬಲ-ಎದುರು ಸೈನ್ಯ, ಮೊಗ-ಮುಖ, ಮೊಗವಡೆದು-ಮುಖವನ್ನು ಪಡೆದು, ಎರೆದವೊಲು-ಹಾಕಿದಂತೆ-ತೋರುವಂತೆ, ನಿಜ-ತನ್ನ, ಜಜ್ಝಾರ-ಧೀರ, ಮಾಸಾಳು-ಉತ್ಸಾಹಿ, ದಾತಾರನ-ಯಜಮಾನನ, ಅವಸರ-ಸಮಯ, ಹಣವಿನ-ಧನದ
ಮೂಲ ...{Loading}...
ಚೌರಿಗಳು ಬಲವೆರಡರೊಳಗೊ
ಯ್ಯಾರದಲಿ ತೂಗಿದವು ಚೂಣಿಯ
ವೀರರುರವಣೆ ಮಿಗಲು ಹೊಯ್ದರು ಹೊಕ್ಕು ಪರಬಲವ
ಮಾರಿ ಮೊಗವಡದೆರೆದವೊಲು ಜ
ಜ್ಝಾರ ಮಾಸಾಳುಗಳು ನಿಜ ದಾ
ತಾರನವಸರಕೊದಗಿ ಹಣವಿನ ಋಣನ ನೀಗಿದರು ॥50॥
೦೫೧ ಬಿಟ್ಟ ಸೂಠಿಯೊಳೇರಿ ...{Loading}...
ಬಿಟ್ಟ ಸೂಠಿಯೊಳೇರಿ ಕುದುರೆಗ
ಳಟ್ಟಿದುವು ಕಿವಿಗೌಂಕಿದುಂಗುಟ
ವಿಟ್ಟ ಸನ್ನೆಯೊಳೊಲೆದು ಕವಿದವು ಸೊಕ್ಕಿದಾನೆಗಳು
ನಿಟ್ಟುವರಿಯಲು ಕೂಡೆ ರಥ ಸಾ
ಲಿಟ್ಟು ಹರಿದವು ಬಿಡದೆ ಸುಭಟರು
ಮುಟ್ಟಿ ಮೂದಲಿಸುತ್ತ ಹೊಯ್ದರು ಹೊಕ್ಕು ಪರಬಲವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳು ವೇಗದಿಂದ ಶತ್ರುಗಳನ್ನು ಬೆಂಬತ್ತಿದವು. ಅಂಕುಶದಿಂದ ಕಿವಿಯ ಬಳಿ ತಿವಿಸಿಕೊಂಡ ಮದದ ಆನೆಗಳು ಸೂಚನೆಗೆ ತಕ್ಕಂತೆ ಮುನ್ನುಗ್ಗುತ್ತಿದ್ದವು. ರಥಗಳು ಸಾಲಾಗಿ ಚಲಿಸುತ್ತಿದ್ದವು. ಮಹಾವೀರರು ಮೂದಲಿಕೆಯ ಮಾತುಗಳನ್ನಾಡುತ್ತಾ ಶತ್ರು ಸೈನಿಕರನ್ನು ವೀರಾವೇಶದಿಂದ ಸದೆ ಬಡಿಯುತ್ತಿದ್ದರು.
ಪದಾರ್ಥ (ಕ.ಗ.ಪ)
ಸೂಠಿ-ವೇಗ, ಔಂಕಿದ-ಒತ್ತಿದ, ನಿಟ್ಟುವರಿ-ಗುರಿ ಮುಟ್ಟಲು, ಹರಿದವು-ಚಲಿಸಿದವು,
ಮೂಲ ...{Loading}...
ಬಿಟ್ಟ ಸೂಠಿಯೊಳೇರಿ ಕುದುರೆಗ
ಳಟ್ಟಿದುವು ಕಿವಿಗೌಂಕಿದುಂಗುಟ
ವಿಟ್ಟ ಸನ್ನೆಯೊಳೊಲೆದು ಕವಿದವು ಸೊಕ್ಕಿದಾನೆಗಳು
ನಿಟ್ಟುವರಿಯಲು ಕೂಡೆ ರಥ ಸಾ
ಲಿಟ್ಟು ಹರಿದವು ಬಿಡದೆ ಸುಭಟರು
ಮುಟ್ಟಿ ಮೂದಲಿಸುತ್ತ ಹೊಯ್ದರು ಹೊಕ್ಕು ಪರಬಲವ ॥51॥
೦೫೨ ಏರುವಡೆದರು ಹೊಕ್ಕವರು ...{Loading}...
ಏರುವಡೆದರು ಹೊಕ್ಕವರು ಕೈ
ದೋರಿ ಕಳಕಳಕಾರರಸುಗಳ
ಕಾರಿದರು ಕೈಮಾಡಿ ಕೊಂಡರು ಸುರರ ಕೋಟೆಗಳ
ತಾರು ಥಟ್ಟಿನೊಳಟ್ಟಿ ಮೈಮಸೆ
ಸೂರೆಕಾರರು ಮಿದುಳ ಜೊಂಡಿನ
ಜೋರುಗಳ ಬೀರಿದವು ಬೇತಾಳರಿಗೆ ಭಟನಿಕರ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನಿಕರು ಗಾಯಗೊಂಡರು. ಯುದ್ಧದಲ್ಲಿ ಕೋಲಾಹಲ ಮಾಡುತ್ತಿದ್ದ ಯೋಧರು ಸಾವನ್ನಪ್ಪಿದರು. ಅನೇಕರು ಹೊಡೆದಾಡಿ ವೀರಸ್ವರ್ಗವನ್ನು ಪಡೆದರು. ಚಲ್ಲಾಪಿಲ್ಲಿಯಾದ ಸೈನ್ಯದಲ್ಲಿ ಅನೇಕರು ಮಡಿದು ಅವರ ದೇಹದ ಭಾಗಗಳು ಯುದ್ಧರಂಗದಲ್ಲಿದ್ದ ಬೇತಾಳಗಳಿಗೆ ಆಹಾರವಾದವು.
ಪದಾರ್ಥ (ಕ.ಗ.ಪ)
ಏರು-ಗಾಯ, ಕಳಕಳಕಾರರು-ಕೋಲಾಹಲ ಮಾಡುವವರು, ಅಸು-ಪ್ರಾಣ, ತಾರು ಥಟ್ಟು-ಚಲ್ಲಾಪಿಲ್ಲಿ, ಮೈಮಸೆ-ತಿಕ್ಕಾಟ-ಯುದ್ಧ,
ಮೂಲ ...{Loading}...
ಏರುವಡೆದರು ಹೊಕ್ಕವರು ಕೈ
ದೋರಿ ಕಳಕಳಕಾರರಸುಗಳ
ಕಾರಿದರು ಕೈಮಾಡಿ ಕೊಂಡರು ಸುರರ ಕೋಟೆಗಳ
ತಾರು ಥಟ್ಟಿನೊಳಟ್ಟಿ ಮೈಮಸೆ
ಸೂರೆಕಾರರು ಮಿದುಳ ಜೊಂಡಿನ
ಜೋರುಗಳ ಬೀರಿದವು ಬೇತಾಳರಿಗೆ ಭಟನಿಕರ ॥52॥
೦೫೩ ತೆಗೆಸು ...{Loading}...
ತೆಗೆಸು ದೊದ್ದೆಯನುರವಣಿಸದಿರಿ
ವಿಗಡ ಸುಭಟರು ಸಾಹಸದ ತನಿ
ಹೊಗರಿನಾತಗಳೆಲ್ಲಿ ಭೀಮಾರ್ಜುನರ ಬರಹೇಳು
ಹೊಗುವ ಬಿನುಗನು ಹೊಯ್ಯದಿರಿ ತೆಗೆ
ತೆಗೆಯೆನುತ ಸಾವಿರ ಮಹಾರಥ
ರಗಲದಲಿ ಬರಲುರುಬಿ ಹೊಕ್ಕನು ದ್ರೋಣ ಪರಬಲವ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊಂಬಿಯನ್ನು ನಿಲ್ಲಿಸಿ, ವೀರರು ಮುನ್ನಗ್ಗಬೇಡಿ. ಹೊಸಹುರುಪಿನ ಸಾಹಸಿಗಳಾದ ಭೀಮಾರ್ಜುನರನ್ನು ಬರಹೇಳು. ಮುನ್ನುಗ್ಗಿ ಬರುತ್ತಿರುವ ಸಾಮಾನ್ಯ ಯೋಧರನ್ನು ಕೊಲ್ಲಬೇಡಿ ಎನ್ನುತ್ತಾ ಸಾವಿರ ಮಹಾರಥರ ಜೊತೆಯಲ್ಲಿ ಉತ್ಸಾಹದಿಂದ ದ್ರೋಣ ಶತ್ರು ಸೈನ್ಯವನ್ನು ಹೊಕ್ಕನು.
ಪದಾರ್ಥ (ಕ.ಗ.ಪ)
ದೊದ್ದೆ-ದೊಂಬಿ , ಉರವಣೆ -ಉತ್ಸಾಹ ವಿಗಡ-ಸಾಹಸಿ, ತನಿಹೊಗರು-ಹೊಸ ಹುರುಪು, ಬಿನುಗ-ಸಾಮಾನ್ಯ
ಮೂಲ ...{Loading}...
ತೆಗೆಸು ದೊದ್ದೆಯನುರವಣಿಸದಿರಿ
ವಿಗಡ ಸುಭಟರು ಸಾಹಸದ ತನಿ
ಹೊಗರಿನಾತಗಳೆಲ್ಲಿ ಭೀಮಾರ್ಜುನರ ಬರಹೇಳು
ಹೊಗುವ ಬಿನುಗನು ಹೊಯ್ಯದಿರಿ ತೆಗೆ
ತೆಗೆಯೆನುತ ಸಾವಿರ ಮಹಾರಥ
ರಗಲದಲಿ ಬರಲುರುಬಿ ಹೊಕ್ಕನು ದ್ರೋಣ ಪರಬಲವ ॥53॥
೦೫೪ ಸಾರಿರೈ ಸಾಹಸಿಕರಿರ ...{Loading}...
ಸಾರಿರೈ ಸಾಹಸಿಕರಿರ ಕೆಲ
ಸಾರಿರೈ ಪಾಂಚಾಲ ಮತ್ಸ್ಯರು
ವೀರರಹುದಲ್ಲೆಂಬೆವೇ ಶಿವ ಶಿವ ಮಹಾದೇವ
ಸಾರಿರೈ ನಮ್ಮೊಡನೆ ಕೈ ಮನ
ವಾರೆ ಕಾದುವ ಬಳಿಕ ಮೊದಲೊಳು
ದಾರ ಭೀಮಾರ್ಜುನರ ನೋಡುವೆನೆನುತ ಕೈಕೊಂಡ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
54.ಮತ್ಸ್ಯ ದೇಶ ಹಾಗೂ ಪಾಂಚಾಲ ದೇಶದ ವೀರರೇ, ನೀವು ವೀರರಲ್ಲ ಎಂದು ನಾವು ಹೇಳುತ್ತೇವೆಯೇ? ಶಿವಶಿವಾ ಮಹದೇವ. ನಾವು ನಿಮ್ಮೊಡನೆ ಶಕ್ತಿ, ಮನಸ್ಸುಗಳು ತಣಿಯುವವರೆಗೂ ನಂತರ ಯುದ್ಧ ಮಾಡುತ್ತೇವೆ. ಮೊದಲು ವೀರರಾದ ಭೀಮಾರ್ಜುನರನ್ನು ನೋಡೋಣ, ಪಕ್ಕಕ್ಕೆ ಸರಿಯಿರಿ ಎನ್ನುತ್ತಾ ದ್ರೋಣನು ಯುದ್ಧವನ್ನು ಕೈಗೊಂಡನು.
ಪದಾರ್ಥ (ಕ.ಗ.ಪ)
ಸಾರು -ಸರಿ, ಕೆಲ -ಪಕ್ಕ, ಮನವಾರೆ-ಮನಸ್ಸು ತೃಪ್ತಿಯಾಗುವಷ್ಟು
ಮೂಲ ...{Loading}...
ಸಾರಿರೈ ಸಾಹಸಿಕರಿರ ಕೆಲ
ಸಾರಿರೈ ಪಾಂಚಾಲ ಮತ್ಸ್ಯರು
ವೀರರಹುದಲ್ಲೆಂಬೆವೇ ಶಿವ ಶಿವ ಮಹಾದೇವ
ಸಾರಿರೈ ನಮ್ಮೊಡನೆ ಕೈ ಮನ
ವಾರೆ ಕಾದುವ ಬಳಿಕ ಮೊದಲೊಳು
ದಾರ ಭೀಮಾರ್ಜುನರ ನೋಡುವೆನೆನುತ ಕೈಕೊಂಡ ॥54॥
೦೫೫ ಬಿನುಗು ಹಾರುವ ...{Loading}...
ಬಿನುಗು ಹಾರುವ ನಿನಗೆ ಭೀಮಾ
ರ್ಜುನರ ಪರಿಯಂತೇಕೆಯಂಬಿನ
ಮೊನೆಯಲುಣಲಿಕ್ಕುವೆನು ರಣಭೂತಕ್ಕೆ ನಿನ್ನೊಡಲ
ಎನುತ ಧೃಷ್ಟದ್ಯುಮ್ನನಿದಿರಾ
ದನು ಶರೌಘದ ಸೋನೆಯಲಿ ಮು
ಮ್ಮೊನೆಯ ರಥಿಕರ ಮುರಿದು ದ್ರೋಣನ ರಥಕೆ ಮಾರಾಂತ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕ್ಷುದ್ರ ಬ್ರಾಹ್ಮಣನೇ ನಿನಗೇಕೆ ಭೀಮಾರ್ಜುನರ ಗೊಡವೆ? ನಿನ್ನ ದೇಹವನ್ನು ಬಾಣಗಳ ತುದಿಯಿಂದ ರಣಭೂತಗಳಿಗೆ ಉಣಬಡಿಸುತ್ತೇನೆ ಎನ್ನುತ್ತಾ ಧೃಷ್ಟದ್ಯುಮ್ನ ದ್ರೋಣಾಚಾರ್ಯರ ಮುಂದಿದ್ದ ರಥಿಕರನ್ನು ಭೇದಿಸಿ ದ್ರೋಣರ ರಥಕ್ಕೆ ಎದುರಾಗಿ ನಿಂತನು.
ಮೂಲ ...{Loading}...
ಬಿನುಗು ಹಾರುವ ನಿನಗೆ ಭೀಮಾ
ರ್ಜುನರ ಪರಿಯಂತೇಕೆಯಂಬಿನ
ಮೊನೆಯಲುಣಲಿಕ್ಕುವೆನು ರಣಭೂತಕ್ಕೆ ನಿನ್ನೊಡಲ
ಎನುತ ಧೃಷ್ಟದ್ಯುಮ್ನನಿದಿರಾ
ದನು ಶರೌಘದ ಸೋನೆಯಲಿ ಮು
ಮ್ಮೊನೆಯ ರಥಿಕರ ಮುರಿದು ದ್ರೋಣನ ರಥಕೆ ಮಾರಾಂತ ॥55॥
೦೫೬ ಕಡಗಿದಡೆ ಕೋದಣ್ಡ ...{Loading}...
ಕಡಗಿದಡೆ ಕೋದಂಡ ರುದ್ರನ
ತೊಡಕಿ ಬದುಕುವರಾರು ಸಾರೆಂ
ದೊಡನೊಡನೆ ನಾರಾಚ ಜಾಲದಲರಿಭಟನ ಬಿಗಿದು
ಕಡಿದು ಬಿಸುಟನು ದ್ರುಪದತನಯನು
ಹಿಡಿದ ಬಿಲ್ಲನು ಸಾರಥಿಯನಡೆ
ಗೆಡಹಿದನು ಚಂದ್ರಾರ್ಧಶರದಲಿ ನೊಸಲನೊಡೆಯೆಚ್ಚ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಪದಿಂದ ಯುದ್ಧ ಮಾಡಲು ನಿಂತರೆ ರುದ್ರನಂತಿರುವ ನನ್ನನ್ನು ಎದುರಿಸಿ ಯಾರು ತಾನೆ ಬದುಕಲು ಸಾಧ್ಯ ? ಆಚೆ ಸರಿ. ಎನ್ನುತ್ತಾ ದ್ರೋಣನು ಧೃಷ್ಟ್ಟದ್ಯುಮ್ನನು ಹಿಡಿದಿದ್ದ ಬಿಲ್ಲನ್ನು ಕತ್ತರಿಸಿ ಹಾಕಿ ಅವನ ಸಾರಥಿಯನ್ನು ಕೊಂದು ಅರ್ಧಚಂದ್ರಾಕೃತಿಯ ಬಾಣದಿಂದ ಧೃಷ್ಟದ್ಯಮ್ನನ ಹಣೆಯನ್ನು ಗಾಯಗೊಳಿಸಿದನು.
ಪದಾರ್ಥ (ಕ.ಗ.ಪ)
ಕಡಗಿದಡೆ-ಕೋಪಗೊಂಡರೆ, ಕೋದಂಡ-ಬಿಲ್ಲು, ತೊಡಕಿ-ಎದುರಿಸಿ, ಸಾರು-ಪಕ್ಕಕ್ಕೆ ಹೋಗು, ನಾರಾಚ-ಬಾಣ, ಒಡೆಯೆಚ್ಚ-ಒಡೆಯುವ ಹಾಗೆ ಹೊಡೆದನು.
ಮೂಲ ...{Loading}...
ಕಡಗಿದಡೆ ಕೋದಂಡ ರುದ್ರನ
ತೊಡಕಿ ಬದುಕುವರಾರು ಸಾರೆಂ
ದೊಡನೊಡನೆ ನಾರಾಚ ಜಾಲದಲರಿಭಟನ ಬಿಗಿದು
ಕಡಿದು ಬಿಸುಟನು ದ್ರುಪದತನಯನು
ಹಿಡಿದ ಬಿಲ್ಲನು ಸಾರಥಿಯನಡೆ
ಗೆಡಹಿದನು ಚಂದ್ರಾರ್ಧಶರದಲಿ ನೊಸಲನೊಡೆಯೆಚ್ಚ ॥56॥
೦೫೭ ಎಸಲು ಧೃಷ್ಟದ್ಯುಮ್ನ ...{Loading}...
ಎಸಲು ಧೃಷ್ಟದ್ಯುಮ್ನ ದ್ರೋಣನ
ವಿಶಿಖ ಹತಿಯಲಿ ನೊಂದು ರಥದಲಿ
ಬಸವಳಿಯೆ ಬಳಿ ಸಲಿಸಿದರು ಪಾಂಚಾಲ ನಾಯಕರು
ಮುಸುಡ ಬಿಗುಹಿನ ಸೆಳೆದಡಾಯುಧ
ಹೊಸ ಪರಿಯ ಬಿರುದುಗಳ ಗಜರಥ
ವಿಸರ ಮಧ್ಯದಲೆಂಟು ಸಾವಿರ ರಥಿಕರೌಂಕಿದರು ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣರ ಕ್ರೂರವಾದ ಬಾಣಪ್ರಯೋಗದಿಂದ ಧೃಷ್ಟದ್ಯುಮ್ನನು ನೊಂದು ಬಸವಳಿದು ರಥದಲ್ಲಿ ಕುಸಿದನು. ಆಗ ಪಾಂಚಾಲ ದೇಶದ ಮುಖ್ಯರು ಧೃಷ್ಟದ್ಯುಮ್ನನನ್ನು ಪಕ್ಕಕ್ಕೆ ಕರೆದೊಯ್ದರು. ನಂತರ ಕತ್ತಿ ಹಿರಿದ ಮುಖವನ್ನು ಗಂಟಿಕ್ಕಿಕೊಂಡ, ನೂತನ ಬುರುದುಗಳನ್ನು ಹೊಂದಿದ್ದ ಎಂಟು ಸಾವಿರ ರಥಿಕರು ದ್ರೋಣನನ್ನು ಮುತ್ತಿದರು.
ಮೂಲ ...{Loading}...
ಎಸಲು ಧೃಷ್ಟದ್ಯುಮ್ನ ದ್ರೋಣನ
ವಿಶಿಖ ಹತಿಯಲಿ ನೊಂದು ರಥದಲಿ
ಬಸವಳಿಯೆ ಬಳಿ ಸಲಿಸಿದರು ಪಾಂಚಾಲ ನಾಯಕರು
ಮುಸುಡ ಬಿಗುಹಿನ ಸೆಳೆದಡಾಯುಧ
ಹೊಸ ಪರಿಯ ಬಿರುದುಗಳ ಗಜರಥ
ವಿಸರ ಮಧ್ಯದಲೆಂಟು ಸಾವಿರ ರಥಿಕರೌಂಕಿದರು ॥57॥
೦೫೮ ರಾಯರೊಳು ಪಾಞ್ಚಾಲರುಬ್ಬಟೆ ...{Loading}...
ರಾಯರೊಳು ಪಾಂಚಾಲರುಬ್ಬಟೆ
ಕಾಯಗಟ್ಟಿತು ಪೂತು ಮಝ ಕುರು
ರಾಯನಾಡಿತು ದಿಟವೆನುತ ಹೊಗರಂಬ ಹೊದೆಗೆದರಿ
ನೋಯಿಸಿದನುರವಣಿಸಿ ಹರಿತಹ
ನಾಯಕರನುಬ್ಬೆದ್ದ ಬಿರುದರ
ಬೀಯ ಮಾಡಿದನಹಿತ ರಥಿಕರನೆಂಟು ಸಾವಿರವ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲೆ, ಪಾಂಚಾಲ ರಾಯರ ಉಬ್ಬಟೆ ಗರಿಗಟ್ಟಿ ಕೌರವರಾಯನನ್ನು ಅಣಕಿಸುತ್ತಿದೆ. ನಿಜ ಎಂದು ಹೇಳುತ್ತ ತನ್ನ ಹರಿತವಾದ ಬಾಣಗಳಿಂದ ದ್ರೋಣನು ಮೇಲೆ ಬೀಳುತ್ತಿದ್ದ ನಾಯಕರನ್ನು ನೋಯಿಸಿದ ಮತ್ತು ಹಿರಿದಾದ ಬಿರುದುಗಳನ್ನು ಉಳ್ಳ ಎಂಟು ಸಾವಿರ ರಥಿಕರನ್ನು ನಾಶ ಮಾಡಿದನು.
ಪದಾರ್ಥ (ಕ.ಗ.ಪ)
ಉಬ್ಬಟೆ-ಉತ್ಸಾಹ, ಪೂತು-ಮಝ-ಭಲೆ, ದಿಟ-ಸತ್ಯ, ಹೊಗರಂಬು-ಹೊಳೆಯುವ ಬಾಣ, ಹೊದೆಗೆದರಿ-ಬತ್ತಳಿಕೆಯಿಂದ ಹೊರಬಿದ್ದು, ಉರವಣಿಸಿ-ಮೇಲೆ ಬಿದ್ದು, ಹರಿತಹ-ಮೇಲೇರಿ ಬರುವ, ಉಬ್ಬೆದ್ದ-ಉತ್ಸಾಹದಿಂದ ಮೇಲೇರಿ ಬಂದ, ಬಿರುದು-ಪ್ರಶಸ್ತಿಗಳನ್ನು ಪಡೆದ, ಬೀಯ-ನಾಶ
ಮೂಲ ...{Loading}...
ರಾಯರೊಳು ಪಾಂಚಾಲರುಬ್ಬಟೆ
ಕಾಯಗಟ್ಟಿತು ಪೂತು ಮಝ ಕುರು
ರಾಯನಾಡಿತು ದಿಟವೆನುತ ಹೊಗರಂಬ ಹೊದೆಗೆದರಿ
ನೋಯಿಸಿದನುರವಣಿಸಿ ಹರಿತಹ
ನಾಯಕರನುಬ್ಬೆದ್ದ ಬಿರುದರ
ಬೀಯ ಮಾಡಿದನಹಿತ ರಥಿಕರನೆಂಟು ಸಾವಿರವ ॥58॥
೦೫೯ ಆಳುತನವುಳ್ಳವರ ಕರೆ ...{Loading}...
ಆಳುತನವುಳ್ಳವರ ಕರೆ ಪಾಂ
ಚಾಲರೊಳ್ಳೆಗರವದಿರಂಬಿನ
ಕೋಲ ಕಾಣದ ಮುನ್ನ ಹಮ್ಮೈಸುವರು ಹುರಿಯೊಡೆದು
ಖೂಳರಿವರಂತಿರಲಿ ದೊರೆ ಕ
ಟ್ಟಾಳಹನು ಕರೆ ಧರ್ಮಪುತ್ರನ
ತೋಳ ಬಲುಹನು ನೋಡಬೇಕೆಂದುರುಬಿದನು ದ್ರೋಣ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವೀರಾಧಿವೀರರಾದವರನ್ನು ಮುಂದೆ ಬಂದು ಯುದ್ಧ ಮಾಡಲು ಹೇಳಿರಿ. ಪಾಂಚಾಲ ದೇಶದವರು ದುರ್ಬಲರು. ಅವರು ಬಾಣವನ್ನು ನೋಡುವ ಮೊದಲೇ ಮೂರ್ಛಾಕ್ರಾಂತರಾಗಿ ಬಿದ್ದುಹೋಗುತ್ತಾರೆ. ಈ ಖೂಳರು ಹಾಗಿರಲಿ, ಶೂರನಾದ ನಿಮ್ಮ ದೊರೆ ಯುಧಿಷ್ಠಿರನ್ನು ಕರೆಯಿರಿ. ಅವನ ಬಾಹುಬಲವನ್ನು ನೋಡಬೇಕು ಎಂದು ದ್ರೋಣನು ಅಬ್ಬರಿಸಿದನು.
ಪದಾರ್ಥ (ಕ.ಗ.ಪ)
ಹಮ್ಮೈಸು- ಮೂಛೆ ಹೋಗು,
ಹುರಿ - ಬೆನ್ನ ಹುರಿ
ಮೂಲ ...{Loading}...
ಆಳುತನವುಳ್ಳವರ ಕರೆ ಪಾಂ
ಚಾಲರೊಳ್ಳೆಗರವದಿರಂಬಿನ
ಕೋಲ ಕಾಣದ ಮುನ್ನ ಹಮ್ಮೈಸುವರು ಹುರಿಯೊಡೆದು
ಖೂಳರಿವರಂತಿರಲಿ ದೊರೆ ಕ
ಟ್ಟಾಳಹನು ಕರೆ ಧರ್ಮಪುತ್ರನ
ತೋಳ ಬಲುಹನು ನೋಡಬೇಕೆಂದುರುಬಿದನು ದ್ರೋಣ ॥59॥
೦೬೦ ಸವರಿ ಹೊಕ್ಕನು ...{Loading}...
ಸವರಿ ಹೊಕ್ಕನು ಕೆಲಬಲದ ಪಾಂ
ಡವ ಮಹಾರಥರನು ವಿಭಾಡಿಸಿ
ಪವನಜನ ಮುರಿಯೆಚ್ಚು ನಕುಲನ ರಥವ ಹುಡಿಮಾಡಿ
ಕವಲುಗೋಲಲಿ ದ್ರುಪದ ಮತ್ಸ್ಯರ
ನವಗಡಿಸಿ ಹೈಡಿಂಬನಭಿಮ
ನ್ಯುವನು ಮಸೆಗಾಣಿಸಿ ಮಹೀಶನ ರಥಕೆ ಮಾರಾಂತ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಕ್ಕಪಕ್ಕದಲ್ಲಿದ್ದ ಪಾಂಡವ ಮಹಾರಥರನ್ನು ಸೋಲಿಸಿ, ಎದುರು ಬಿದ್ದವರನ್ನೆಲ್ಲ ನಾಶಪಡಿಸಿ, ಭೀಮನ ಮೇಲೆ ಬಾಣಗಳನ್ನು ಹೊಡೆದು ಗಾಯಗೊಳಿಸಿ, ನಕುಲನ ರಥವನ್ನು ಪುಡಿ ಮಾಡಿ, ದ್ರುಪದರಾಜ, ಮತ್ಸ್ಯದೇಶದ ಅರಸುಗಳನ್ನು ಬಾಣಗಳಿಂದ ಸೋಲಿಸಿ, ಘಟೋತ್ಕಚ ಹಾಗೂ ಅಭಿಮನ್ಯುಗಳನ್ನು ಪರಾಭವಗೊಳಿಸಿ, ದ್ರೋಣರು ಧರ್ಮರಾಜನಿದ್ದ ರಥದ ಎದುರು ಬಂದು ನಿಂತರು.
ಪದಾರ್ಥ (ಕ.ಗ.ಪ)
ವಿಭಾಡಿಸಿ-ಸೋಲಿಸಿ, ಮುರಿಯೆಚ್ಚು-ಸೋಲುವ ಹಾಗೆ ಹೊಡೆದು, ಹುಡಿ-ಪುಡಿ, ಕವಲುಗೋಲು-ಕವಲಿನಂತಿರುವ ಬಾಣ, ಮಸೆಗಾಣಿಸು - ಗಾಯಗೊಳಿಸು.
ಮೂಲ ...{Loading}...
ಸವರಿ ಹೊಕ್ಕನು ಕೆಲಬಲದ ಪಾಂ
ಡವ ಮಹಾರಥರನು ವಿಭಾಡಿಸಿ
ಪವನಜನ ಮುರಿಯೆಚ್ಚು ನಕುಲನ ರಥವ ಹುಡಿಮಾಡಿ
ಕವಲುಗೋಲಲಿ ದ್ರುಪದ ಮತ್ಸ್ಯರ
ನವಗಡಿಸಿ ಹೈಡಿಂಬನಭಿಮ
ನ್ಯುವನು ಮಸೆಗಾಣಿಸಿ ಮಹೀಶನ ರಥಕೆ ಮಾರಾಂತ ॥60॥
೦೬೧ ಅರಸ ಘಡ ...{Loading}...
ಅರಸ ಘಡ ಹೋಗದಿರು ಸಾಮದ
ಸರಸ ಕೊಳ್ಳದು ಬಿಲ್ಲ ಹಿಡಿ ಹಿಡಿ
ಹರನ ಮರೆವೊಗು ನಿನ್ನ ಹಿಡಿವೆನು ಹೋಗು ಹೋಗೆನುತ
ಸರಳ ಮುಷ್ಟಿಯ ಕೆನ್ನೆಯೋರೆಯ
ಗುರು ಛಡಾಳಿಸೆ ಧನುವನೊದರಿಸಿ
ಧರಣಿಪತಿ ಹಳಚಿದನು ಹೂಳಿದನಂಬಿನಲಿ ರಥವ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರು ವೀರಾವೇಶದಿಂದ ಹೋರಾಡುತ್ತಾ “ಎಲೈ ಧರ್ಮರಾಯನೆ, ಈಗ ನೀನು ಎಲ್ಲಿಗೂ ಹೋಗುವಂತಿಲ್ಲ ನಿನ್ನ ಸಾತ್ವಿಕ ವಿಚಾರವಾಗಲೀ, ಸ್ನೇಹವಾಗಲೀ ಬೆಲೆಯನ್ನು ಪಡೆದುಕೊಳ್ಳುವುದಿಲ್ಲ. ಬಿಲ್ಲನ್ನು ಹಿಡಿದು ಯುದ್ಧವನ್ನು ಮಾಡು. ಸಾಕ್ಷಾತ್ ಶಿವನನ್ನು ಮೊರೆ ಹೊಕ್ಕರೂ ನಿನ್ನನ್ನು ಸೆರೆ ಹಿಡಿಯದೆ ಬಿಡುವುದಿಲ್ಲ” ಎನ್ನುತ್ತಾ ಮುಷ್ಟಿಯ ತುಂಬ ಬಾಣಗಳನ್ನು ಸೆಳೆದುಕೊಂಡು ಗುರು ದ್ರೋಣನು ಕೆನ್ನೆಯವರೆಗೂ ಸೆಳೆದು ಬಾಣಗಳನ್ನು ಪ್ರಯೋಗಿಸಿದನು. ಆಗ ಧರ್ಮರಾಯನು ತನ್ನ ಬಿಲ್ಲನ್ನು ಠೇಂಕಾರ ಮಾಡಿ ಬಾಣಗಳನ್ನು ಬಿಟ್ಟು ದ್ರೋಣರ ರಥವನ್ನು ಬಾಣಗಳಿಂದ ಮುಚ್ಚಿದನು.
ಮೂಲ ...{Loading}...
ಅರಸ ಘಡ ಹೋಗದಿರು ಸಾಮದ
ಸರಸ ಕೊಳ್ಳದು ಬಿಲ್ಲ ಹಿಡಿ ಹಿಡಿ
ಹರನ ಮರೆವೊಗು ನಿನ್ನ ಹಿಡಿವೆನು ಹೋಗು ಹೋಗೆನುತ
ಸರಳ ಮುಷ್ಟಿಯ ಕೆನ್ನೆಯೋರೆಯ
ಗುರು ಛಡಾಳಿಸೆ ಧನುವನೊದರಿಸಿ
ಧರಣಿಪತಿ ಹಳಚಿದನು ಹೂಳಿದನಂಬಿನಲಿ ರಥವ ॥61॥
೦೬೨ ಶಿವಶಿವಾ ಬೆಳುದಿಙ್ಗಳಲಿ ...{Loading}...
ಶಿವಶಿವಾ ಬೆಳುದಿಂಗಳಲಿ ಮೈ
ಬೆವರುವುದೆ ಕಲಿ ಧರ್ಮಪುತ್ರನ
ಬವರದಲಿ ಬೆಂಡಹರೆ ವೀರರು ಕಂಡೆವದುಭುತವ
ನಿವಗಿದೆತ್ತಣ ಕೈಮೆ ಕೋಲ್ಗಳ
ಕವಿಸುವಂದವಿದೊಳ್ಳಿತಿದಲೇ
ನವಗಭೀಷ್ಟವೆನುತ್ತ ಕಟ್ಟಳವಿಯಲಿ ಕೈಕೊಂಡ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳುದಿಂಗಳಲ್ಲಿ ಮೈ ಬೆವರುವುತ್ತದೆಯೇ? ಹಾಗೆಯೇ ವೀರನಾದ ಧರ್ಮರಾಯನು ಮಾಡಿದ ಯುದ್ಧದಲ್ಲಿ ಎದುರು ಪಕ್ಷದ ವೀರರು ಬೆರಗಾಗುತ್ತಾರೆಯೇ? ಇಂದು ಅದ್ಭುತವನ್ನು ನೋಡಿದೆವು! ನಿನಗೆ ಬಿಲ್ವಿದ್ಯೆಯಲ್ಲಿ ಈ ರೀತಿಯ ಜಾಣ್ಮೆ ಹೇಗೆ ಕೈಗೂಡಿತು? ನಿಮ್ಮ ಬಾಣ ಪ್ರಯೋಗದ ಕೌಶಲ್ಯ ಚೆನ್ನಾಗಿದೆ. ಇದೇ ನಾವು ಬಯಸುತ್ತಿದ್ದುದು. É’ ಎಂದು ಹೇಳುತ್ತಾ ದ್ರೋಣಾಚಾರ್ಯರು ಮಹಾ ಪರಾಕ್ರಮದ ಪ್ರದರ್ಶನವನ್ನು ತೋರಿದರು.
ಮೂಲ ...{Loading}...
ಶಿವಶಿವಾ ಬೆಳುದಿಂಗಳಲಿ ಮೈ
ಬೆವರುವುದೆ ಕಲಿ ಧರ್ಮಪುತ್ರನ
ಬವರದಲಿ ಬೆಂಡಹರೆ ವೀರರು ಕಂಡೆವದುಭುತವ
ನಿವಗಿದೆತ್ತಣ ಕೈಮೆ ಕೋಲ್ಗಳ
ಕವಿಸುವಂದವಿದೊಳ್ಳಿತಿದಲೇ
ನವಗಭೀಷ್ಟವೆನುತ್ತ ಕಟ್ಟಳವಿಯಲಿ ಕೈಕೊಂಡ ॥62॥
೦೬೩ ಎಲೆಲೆ ದೊರೆ ...{Loading}...
ಎಲೆಲೆ ದೊರೆ ಸಿಕ್ಕಿದನು ಕರೆ ಪಡಿ
ತಳಿಸ ಹೇಳೋ ಸ್ವಾಮಿದ್ರೋಹರು
ದಳದಲಿದ್ದವರೆತ್ತ ಹೋದರು ನಾಯಕಿತ್ತಿಯರು
ಕಳವಳಿಸಿ ಸಾತ್ಯಕಿ ಘಟೋತ್ಕಚ
ರುಲಿದು ಹರಿತರೆ ಕೇಳಿದಾ ಕ್ಷಣ
ದಲಿ ಮುರಾಂತಕ ಸಹಿತ ವಹಿಲದಿ ಬಂದನಾ ಪಾರ್ಥ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ ದೊರೆ ಸರೆಸಿಕ್ಕಿದನು. ಕರೆಯಿರಿ, ಮುನ್ನುಗ್ಗಲು ಹೇಳಿರಿ, ದೊರೆಯನ್ನು ಕಾಪಾಡದಂತಹ ನಪುಂಸಕ ಸ್ವಾಮಿದ್ರೋಹಿಗಳು ಎಲ್ಲಿ ಹೋದರು. ಎಂದು ಹೇಳುತ್ತ ಸಾತ್ಯಕಿ ಘಟೋತ್ಕಚರು ಓಡಿ ಬರಲು ಅದನ್ನು ಕೇಳಿದ ಅರ್ಜುನನು ಕೃಷ್ಣನೊಂದಿಗೆ ಧರ್ಮರಾಯನ ರಥದ ಬಳಿಗೆ ವೇಗವಾಗಿ ಧಾವಿಸಿದನು.
ಪದಾರ್ಥ (ಕ.ಗ.ಪ)
ಪಡಿತಳಿಸು-ಮುನ್ನುಗ್ಗು, ಆಕ್ರಮಿಸು, ನಾಯಕಿತ್ತಿ- ನಾಯಕಿ , ಇಲ್ಲಿ ನಪುಂಸಕ,
ಮೂಲ ...{Loading}...
ಎಲೆಲೆ ದೊರೆ ಸಿಕ್ಕಿದನು ಕರೆ ಪಡಿ
ತಳಿಸ ಹೇಳೋ ಸ್ವಾಮಿದ್ರೋಹರು
ದಳದಲಿದ್ದವರೆತ್ತ ಹೋದರು ನಾಯಕಿತ್ತಿಯರು
ಕಳವಳಿಸಿ ಸಾತ್ಯಕಿ ಘಟೋತ್ಕಚ
ರುಲಿದು ಹರಿತರೆ ಕೇಳಿದಾ ಕ್ಷಣ
ದಲಿ ಮುರಾಂತಕ ಸಹಿತ ವಹಿಲದಿ ಬಂದನಾ ಪಾರ್ಥ ॥63॥
೦೬೪ ಕಾಳಕೂಟದ ಬಹಳ ...{Loading}...
ಕಾಳಕೂಟದ ಬಹಳ ದಾಳಿಗೆ
ಶೂಲಿಯೊಡ್ಡೈಸುವವೊಲವನೀ
ಪಾಲಕನ ಹಿಂದಿಕ್ಕಿ ತಡೆದನು ಕಳಶಜನ ರಥವ
ಆಲಿಯಳುಕಿತು ತಿರುಹಿದಂಬಿನ
ಕೋಲ ಝಳಪಿಸಿ ಪೂತು ಮಝ ಮೇ
ಲಾಳು ಬಂದುದೆ ಅಕಟೆನುತ ಹಲುಮೊರೆದನಾ ದ್ರೋಣ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರವನ್ನು ಕಡೆದಾಗ ಉಕ್ಕಿ ಬಂದ ವಿಷವನ್ನು ಶಿವನು ತಡೆದ ಹಾಗೆ ಅರ್ಜುನನು ಧರ್ಮರಾಜನನ್ನು ತನ್ನ ಹಿಂದೆ ಇರಿಸಿಕೊಂಡು ಮುಂದಕ್ಕೆ ಧಾವಿಸಿ ಬಂದು ದ್ರೋಣನ ರಥವನ್ನು ತಡೆದನು. ಆಗ ದ್ರೋಣನ ಕಣ್ಣುಗಳು ಹೆದರಿದವು. ಬಾಣವನ್ನು ತಿರುಗಿಸುತ್ತಾ ಆಹಾ ಅರ್ಜುನನು ಬಂದುಬಿಟ್ಟನೇ ಎನ್ನುತ್ತಾ ದ್ರೋಣನು ಹಲ್ಲ ಕಡಿದನು.
ಪದಾರ್ಥ (ಕ.ಗ.ಪ)
ಕಾಳಕೂಟ-ಅಮೃತ ಮಥನದ ಕಾಲದಲ್ಲಿ ಹುಟ್ಟಿದ ವಿಷ, ಶೂಲಿ-ಶಿವ, ಅವನೀಪಾಲಕ-ಭೂಪಾಲಕ-ರಾಜ-ಧರ್ಮರಾಯ, ಕಳಶಜ-ದ್ರೋಣ, ಆಲಿ-ಕಣ್ಣು, ಅಳುಕಿತು-ಹೆದರಿತು, ಮೇಲಾಳು-ಮಹಾವೀರ-ಅರ್ಜುನ, ಅಕಟ-ಆಹಾ, ಹಲುಮೊರೆ-ಹಲ್ಲನ್ನು ಕಡಿ
ಮೂಲ ...{Loading}...
ಕಾಳಕೂಟದ ಬಹಳ ದಾಳಿಗೆ
ಶೂಲಿಯೊಡ್ಡೈಸುವವೊಲವನೀ
ಪಾಲಕನ ಹಿಂದಿಕ್ಕಿ ತಡೆದನು ಕಳಶಜನ ರಥವ
ಆಲಿಯಳುಕಿತು ತಿರುಹಿದಂಬಿನ
ಕೋಲ ಝಳಪಿಸಿ ಪೂತು ಮಝ ಮೇ
ಲಾಳು ಬಂದುದೆ ಅಕಟೆನುತ ಹಲುಮೊರೆದನಾ ದ್ರೋಣ ॥64॥
೦೬೫ ಮನ್ದಭಾಗ್ಯನು ಕೌರವನು ...{Loading}...
ಮಂದಭಾಗ್ಯನು ಕೌರವನು ನಾ
ವೆಂದು ಮಾಡುವುದೇನು ನಿಮಿಷವು
ನಿಂದನಾದರೆ ಹಿಡಿವೆನಾಗಳೆ ಧರ್ಮನಂದನನ
ಬಂದು ಫಲಗುಣನಡ್ಡವಿಸಲಿ
ನ್ನಿಂದುಧರ ಮುಳಿದೇನ ಮಾಡುವ
ನೆಂದು ಖಾತಿಯ ಹಿಡಿದು ರಥವನು ತಿರುಹಿದನು ದ್ರೋಣ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ದುರದೃಷ್ಟವಂತನಾಗಿದ್ದಾನೆ, ಹೇಳಿ ಪ್ರಯೋಜನವೇನು? ಒಂದು ನಿಮಿಷ ಅರ್ಜುನನು ತಡವಾಗಿ ಬಂದಿದ್ದರೂ ಧರ್ಮರಾಯನನ್ನು ಸೆರೆ ಹಿಡಿದು ಬಿಡುತ್ತಿದ್ದೆನು. ಈ ಅರ್ಜುನನು ಮುಂದೆ ಬಂದು ಧರ್ಮರಾಯನಿಗೆ ಅಡ್ಡವಾಗಿ ನಿಂತ ಮೇಲೆ ಚಂದ್ರನನ್ನು ಧರಿಸಿದ ಸಾಕ್ಷಾತ್ ಶಿವನೇ ಕೋಪಿಸಿಕೊಂಡು ಯುದ್ಧ ಮಾಡಿದರೂ ಪ್ರಯೋಜನವಾಗುವುದಿಲ್ಲ”. ಎಂದು ದ್ರೋಣಾಚಾರ್ಯರು ನಿರಾಶೆಯಿಂದ ರಥವನ್ನು ಬೇರೆಯ ಕಡೆಗೆ ತಿರುಗಿಸಿದರು.
ಪದಾರ್ಥ (ಕ.ಗ.ಪ)
ಮಂದಭಾಗ್ಯ-ದುರದೃಷ್ಟವಂತ, ಅಡ್ಡವಿಸಲು-ಅಡ್ಡವಾಗಿ ಬರಲು, ಇಂದುಧರ-ಚಂದ್ರನನ್ನು ಧರಿಸಿದವನು-ಶಿವ, ಮುಳಿದು-ಕೋಪಿಸಿಕೊಂಡು, ಖಾತಿ-ದುಃಖ , ಇಲ್ಲಿ ನಿರಾಶೆ
ಮೂಲ ...{Loading}...
ಮಂದಭಾಗ್ಯನು ಕೌರವನು ನಾ
ವೆಂದು ಮಾಡುವುದೇನು ನಿಮಿಷವು
ನಿಂದನಾದರೆ ಹಿಡಿವೆನಾಗಳೆ ಧರ್ಮನಂದನನ
ಬಂದು ಫಲಗುಣನಡ್ಡವಿಸಲಿ
ನ್ನಿಂದುಧರ ಮುಳಿದೇನ ಮಾಡುವ
ನೆಂದು ಖಾತಿಯ ಹಿಡಿದು ರಥವನು ತಿರುಹಿದನು ದ್ರೋಣ ॥65॥
೦೬೬ ಎರಡು ಬಲದಲಿ ...{Loading}...
ಎರಡು ಬಲದಲಿ ವೀರ ನೀ ಮಡ
ಮುರಿಯಲಿವನೇಸರವನಂಧಾ
ಸುರನೊ ತಾರಕನೋ ಹಿರಣ್ಯಾಸುರನೊ ಕೈಟಭನೊ
ಗುರುಗಳಿದಿರಲಿ ವೀರವೇ ಸಾ
ಕಿರಲಿ ಮೂದಲೆಯೆನುತಲಾ ಬಿಲು
ದಿರುವ ಮಿಡಿದೈದಿದರು ನಾಸಾವಿರ ಮಹಾರಥರು ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಎರಡು ಬಲಗಳಲ್ಲಿಯೂ ಮಹಾವೀರ. ನಮ್ಮನನ್ನು ಹಿಮ್ಮೆಟ್ಟುವಂತೆ ಮಾಡಲು ಈ ಅರ್ಜುನನು ಏನು ಮಹಾ ? ಇವನೇನು ಅಂಧಾಸುರನೆ ? ತಾರಕಾಸುರನೆ ? ಹಿರಣ್ಯಾಕ್ಷನೆ ? ಕೈಟಭ ಎಂಬ ರಾಕ್ಷಸನಿಗೆ ಸಮಾನನೆ ? ಗುರುಗಳ ಎದುರಿನಲ್ಲಿ ನಿನ್ನ ಪರಾಕ್ರಮವೇ? ಎಂದುಕೊಳ್ಳುತ್ತಾ ಈ ಮೂದಲಿಕೆಯನ್ನು ನಿಲ್ಲಿಸಿ ಯುದ್ಧ ಮಾಡೋಣವೆಂದು ನಾಕು ಸಾವಿರ ರಥಿಕರು ಬಿಲ್ಲನ್ನು ಮಿಡಿದು ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ಮಡಮುರಿ- ಹಿಮ್ಮೆಟ್ಟು , ಮಿಡಿದು-ಎಳೆದು-ಠೇಂಕಾರಗೈದು, ಐದಿದರು-ಬಂದರು, ನಾ ಸಾವಿರ-ನಾಲ್ಕು ಸಾವಿರ.
ಮೂಲ ...{Loading}...
ಎರಡು ಬಲದಲಿ ವೀರ ನೀ ಮಡ
ಮುರಿಯಲಿವನೇಸರವನಂಧಾ
ಸುರನೊ ತಾರಕನೋ ಹಿರಣ್ಯಾಸುರನೊ ಕೈಟಭನೊ
ಗುರುಗಳಿದಿರಲಿ ವೀರವೇ ಸಾ
ಕಿರಲಿ ಮೂದಲೆಯೆನುತಲಾ ಬಿಲು
ದಿರುವ ಮಿಡಿದೈದಿದರು ನಾಸಾವಿರ ಮಹಾರಥರು ॥66॥
೦೬೭ ಫಡ ಫಡೆಲವೋ ...{Loading}...
ಫಡ ಫಡೆಲವೋ ಪಾರ್ಥ ಭೀಷ್ಮನ
ಕೆಡಹಿದುಬ್ಬಟೆ ನಮ್ಮ ಕೂಡಳ
ವಡದು ತೆಗೆ ತೆಗೆಯೆನುತ ತುಳುಕಿದನಂಬಿನಂಬುಧಿಯ
ಗಡಣವೊಳ್ಳಿತು ಗಾಢ ಮಿಗೆ ಬಿಲು
ವಿಡಿಯ ಬಲ್ಲಿರಿ ಸಮರ ಜಯವಳ
ವಡುವುದಳವಡದಿಹುದು ತಪ್ಪೇನೆನುತ ನರನೆಚ್ಚ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನನ್ನು ಸೋಲಿಸಲು ಬಂದ ಕೌರವನ ಸೇನೆ “ಓಹೋ, ಅರ್ಜುನನೆ, ನೀನು ಭೀಷ್ಮನನ್ನು ಸೋಲಿಸಿದೆ ಎಂಬ ಅಹಂಕಾರದಿಂದ ಕೊಬ್ಬಿರುವೆ ; ನಿನ್ನ ಪರಾಕ್ರಮ ನಮ್ಮ ಬಳಿ ನಡೆಯುವುದಿಲ್ಲ ಎನ್ನುತ್ತಾ ಬಾಣಗಳ ಸಮುದ್ರವನ್ನೇ ಅರ್ಜುನನ ಮೇಲೆ ಸುರಿಸಿದರು. ಆಗ ಅದನ್ನು ಎದುರಿಸಿದ ಅರ್ಜುನನು, “ನಿಮ್ಮ ಗುಂಪು ಬಹಳ ಜೋರಾಗಿಯೇ ಇದೆ. ನಿಮಗೆ ಬಿಲ್ಲನ್ನು ಹೇಗೆ ಹಿಡಿಯುವುದೆಂದು ತಿಳಿದಂತಿದೆ. ಈ ಯುದ್ಧದಲ್ಲಿ ಜಯವು ನಿಮಗೆ ದೊರೆತರೂ ದೊರೆಯಬಹುದು; ದೊರೆಯದೆ ಇರಲೂಬಹುದು. ಅದರಲ್ಲಿ ತಪ್ಪಿಲ್ಲ; ಎಂದು ಬಾಣ ಪ್ರಯೋಗಿಸಿದನು.
ಪಾಠಾನ್ತರ (ಕ.ಗ.ಪ)
ತುಳುಕಿದನಂಬಿನಂಬುಧಿಯ -ತುಳುಕಿದರಂಬಿನಂಬುಧಿಯ , ಅರಾಸೇ
ಮೂಲ ...{Loading}...
ಫಡ ಫಡೆಲವೋ ಪಾರ್ಥ ಭೀಷ್ಮನ
ಕೆಡಹಿದುಬ್ಬಟೆ ನಮ್ಮ ಕೂಡಳ
ವಡದು ತೆಗೆ ತೆಗೆಯೆನುತ ತುಳುಕಿದನಂಬಿನಂಬುಧಿಯ
ಗಡಣವೊಳ್ಳಿತು ಗಾಢ ಮಿಗೆ ಬಿಲು
ವಿಡಿಯ ಬಲ್ಲಿರಿ ಸಮರ ಜಯವಳ
ವಡುವುದಳವಡದಿಹುದು ತಪ್ಪೇನೆನುತ ನರನೆಚ್ಚ ॥67॥
೦೬೮ ಜೋಡು ಜರಿಯದೆ ...{Loading}...
ಜೋಡು ಜರಿಯದೆ ಹುರುಳುಗೆಡದೆ
ಚ್ಚಾಡಿದರು ಫಲುಗುಣನ ರಥದಲಿ
ಹೂಡಿದರು ಹೊಗರಂಬುಗಳನುಬ್ಬೆದ್ದು ತಮತಮಗೆ
ನೋಡಿದನು ಸಾಕಿವದಿರನು ಕೊಂ
ಡಾಡಲೇಕೆನುತನಿಬರಸುಗಳ
ತೋಡಿದನು ಕೂರಂಬಿನಲಿ ಸಾವಿರ ಮಹಾರಥರ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಸೈನಿಕರು ಕವಚವೂ ಹಾನಿಯಾಗದಂತೆ, ಅವರ ಉತ್ಸಾಹವೂ ಕುಂದದಂತೆ ಅರ್ಜುನನೊಡನೆ ಹೋರಾಡಿದರು. ತಮ್ಮ ತಮ್ಮಲ್ಲಿಯೇ ಉತ್ಸಾಹಗೊಂಡು ಅರ್ಜುನನ ರಥದಲ್ಲಿ ಕ್ರೂರವಾದ ಬಾಣಗಳನ್ನು ನಾಟಿದರು. ಇದನ್ನು ಅರ್ಜುನನು ನೋಡಿ, ಇನ್ನು ಇವರನ್ನು ಹೊಗಳುವುದು ಸಾಕು ಎಂದು ಹರಿತವಾದ ಬಾಣಗಳಿಂದ ಎಲ್ಲ ಸಾವಿರ ಮಹಾರಥರ ಪ್ರಾಣಗಳನ್ನೂ ತೆಗೆದನು.
ಮೂಲ ...{Loading}...
ಜೋಡು ಜರಿಯದೆ ಹುರುಳುಗೆಡದೆ
ಚ್ಚಾಡಿದರು ಫಲುಗುಣನ ರಥದಲಿ
ಹೂಡಿದರು ಹೊಗರಂಬುಗಳನುಬ್ಬೆದ್ದು ತಮತಮಗೆ
ನೋಡಿದನು ಸಾಕಿವದಿರನು ಕೊಂ
ಡಾಡಲೇಕೆನುತನಿಬರಸುಗಳ
ತೋಡಿದನು ಕೂರಂಬಿನಲಿ ಸಾವಿರ ಮಹಾರಥರ ॥68॥
೦೬೯ ಮಡಿದು ಕೆಲಬರು ...{Loading}...
ಮಡಿದು ಕೆಲಬರು ಕೊರಳಲಸುಗಳ
ಹಿಡಿದು ಕೆಲಬರು ಘಾಯವಡೆದೆಲು
ವೊಡೆದು ಕೆಲಬರು ಕೈದು ರಥವನು ಬಿಸುಟು ಕೆಲಕೆಲರು
ಹೊಡೆವ ಬಿರುಗಾಳಿಯಲಿ ಮುಗಿಲೊ
ಡ್ಡೊಡೆದವೊಲು ಮೈಮಾರಿಗಳು ಹಿಂ
ಡೊಡೆದುದೈ ಹೇರಾಳದಲಿ ಹೊಕ್ಕೆಚ್ಚನಾ ಪಾರ್ಥ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರು ಸತ್ತರು. ಕೆಲವರು ಜೀವಹಿಡಿದುಕೊಂಡಿದ್ದರು, ಕೆಲವರಿಗೆ ಮೈತುಂಬ ಗಾಯಗಳಾದವು. ಕೆಲವರ ದೇಹದ ಮೂಳೆಗಳೆಲ್ಲ ಪುಡಿ ಪುಡಿಯಾದವು. ಕೆಲವರು ಏಟಿನ ನೋವನ್ನು ತಡೆದುಕೊಳ್ಳಲಾಗದೆ ಶಸ್ತ್ರಾಸ್ತ್ರಗಳನ್ನು ಬಿಸುಟು , ರಥದಿಂದ ಇಳಿದು ಹೊರಟು ಹೋದರು. ಬಿರುಗಾಳಿ ಬಂದಾಗ ಮೋಡಗಳ ರಾಶಿ ಒಡೆದು ಚೂರಾಗಿ ಹಾರಿ ಹೋಗುವಂತೆ, ಸೈನಿಕರ, ವೀರರ ಸಮೂಹ ಗುಂಪಿನಿಂದ ಚೆದುರಿ ಹೋಗುವ ಹಾಗೆ ಅರ್ಜುನನು ರಣರಂಗದೊಳಹೊಕ್ಕು ಯುದ್ಧ ಮಾಡಿದನು.
ಪದಾರ್ಥ (ಕ.ಗ.ಪ)
ಮೈಮಾರಿಗಳು - ಹಣಕ್ಕಾಗಿ ಯುದ್ಧಮಾಡುವವರು
ಮೂಲ ...{Loading}...
ಮಡಿದು ಕೆಲಬರು ಕೊರಳಲಸುಗಳ
ಹಿಡಿದು ಕೆಲಬರು ಘಾಯವಡೆದೆಲು
ವೊಡೆದು ಕೆಲಬರು ಕೈದು ರಥವನು ಬಿಸುಟು ಕೆಲಕೆಲರು
ಹೊಡೆವ ಬಿರುಗಾಳಿಯಲಿ ಮುಗಿಲೊ
ಡ್ಡೊಡೆದವೊಲು ಮೈಮಾರಿಗಳು ಹಿಂ
ಡೊಡೆದುದೈ ಹೇರಾಳದಲಿ ಹೊಕ್ಕೆಚ್ಚನಾ ಪಾರ್ಥ ॥69॥
೦೭೦ ನಿಮಗೆ ಸದರವೆ ...{Loading}...
ನಿಮಗೆ ಸದರವೆ ಪಾರ್ಥನೆಲೆ ವಿ
ಕ್ರಮದರಿದ್ರರಿರಾ ವೃಥಾ ಸಂ
ಭ್ರಮಿತರಿರ ಭಂಡಾಟವೇತಕೆ ರಣಕೆ ಹೆರತೆಗೆಯಿ
ಸಮರವಿಜಯ ತ್ಯಾಗಿಯೇ ತಾ
ನಮರಪತಿ ನಂದನನು ಸಾಕೀ
ಕುಮತಿಗಳ ತಡೆಯದಿರಿ ಹೋಗಲಿ ಎಂದನಾ ದ್ರೋಣ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರು ತಮ್ಮ ಸೈನಿಕರು ಅರ್ಜುನನೊಡನೆ ಸರಿಸಮನಾಗಿ ಹೋರಾಡಲಾಗದಿದ್ದುದನ್ನು ನೋಡಿ ಎಲೆ ಹೇಡಿಗಳೆ, ನಿಮಗೆ ಪಾರ್ಥನೆಂದರೆ ಸದರವೇ ? ಈ ರೀತಿ ಭಂಡಾಟ ಏಕೆ ? ನೀವು ರಣರಂಗದಿಂದ ಹೊರಡಿ ; ಅರ್ಜುನನು ಸಾಕ್ಷಾತ್ ಇಂದ್ರನ ಮಗನಾದ ಅರ್ಜುನನು ಸೋಲುತ್ತಾನೆಯೇ? . ಬುದ್ಧಿ ಇಲ್ಲದ ಈ ಸೈನಿಕರನ್ನು ತಡೆಬೇಡಿ, ಅವರು ಹೋಗಲಿ ಎಂದು ದ್ರೋಣನು ಹೇಳಿದನು.
ಪದಾರ್ಥ (ಕ.ಗ.ಪ)
ಸದರ-ಹಗುರ, ವಿಕ್ರಮದರಿದ್ರ - ಹೇಡಿ, ಸಮರವಿಜಯ ತ್ಯಾಗಿ - ಗೆಲುವನ್ನು ಬಿಟ್ಟುಕೊಡುವವನು
ಮೂಲ ...{Loading}...
ನಿಮಗೆ ಸದರವೆ ಪಾರ್ಥನೆಲೆ ವಿ
ಕ್ರಮದರಿದ್ರರಿರಾ ವೃಥಾ ಸಂ
ಭ್ರಮಿತರಿರ ಭಂಡಾಟವೇತಕೆ ರಣಕೆ ಹೆರತೆಗೆಯಿ
ಸಮರವಿಜಯ ತ್ಯಾಗಿಯೇ ತಾ
ನಮರಪತಿ ನಂದನನು ಸಾಕೀ
ಕುಮತಿಗಳ ತಡೆಯದಿರಿ ಹೋಗಲಿ ಎಂದನಾ ದ್ರೋಣ ॥70॥
೦೭೧ ಸೋಲದಲಿ ಕೌರವನ ...{Loading}...
ಸೋಲದಲಿ ಕೌರವನ ಸೇನಾ
ಜಾಲ ಚೆಲ್ಲಿತು ವೀರ ಪಾರ್ಥನ
ಕೋಲು ಕಾಲನ ದಣಿಸಿದವು ಚತುರಂಗ ಸೇನೆಯಲಿ
ಕೋಲು ಧರಿಸಿದವೆರಕೆಗಳನೆನೆ
ಚಾಳಿಸಿತು ಪಡೆ ರವಿಯ ರಶ್ಮಿಯ
ಗೂಳೆಯವು ತೆಗೆಯಿತ್ತು ಪಡುವಣ ಕಡಲೊಳಿನನಿಳಿದ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂದಿನ ಯುದ್ಧದಲ್ಲಿ ಕೌರವನ ಸೇನೆ ಸೋಲನ್ನು ಅನುಭವಿಸಿತು, ವೀರನಾದ ಅರ್ಜುನನ ಬಾಣಗಳು ಯಮರಾಜನು ತೃಪ್ತಿ ಪಡುವ ಹಾಗೆ ಕೌರವನ ಚತುರಂಗ ಸೇನೆಯನ್ನು ಕೊಂದು ಹಾಕಿತು. ಬಾಣಗಳು ರೆಕ್ಕೆಗಳನ್ನು ಪಡೆದವೋ ಎಂಬಂತೆ ರಣರಂಗದಲ್ಲಿ ಹಾರಾಡಿದವು. ಆ ಹೊತ್ತಿಗೆ ಸೂರ್ಯಕಿರಣಗಳು ಶಿಬಿರವನ್ನು ಖಾಲಿ ಮಾಡಿದಂತೆ ಸೂರ್ಯನು ಪಶ್ಚಿಮ ಸಮುದ್ರದೊಳಗೆ ಮುಳುಗಿದನು.
ಮೂಲ ...{Loading}...
ಸೋಲದಲಿ ಕೌರವನ ಸೇನಾ
ಜಾಲ ಚೆಲ್ಲಿತು ವೀರ ಪಾರ್ಥನ
ಕೋಲು ಕಾಲನ ದಣಿಸಿದವು ಚತುರಂಗ ಸೇನೆಯಲಿ
ಕೋಲು ಧರಿಸಿದವೆರಕೆಗಳನೆನೆ
ಚಾಳಿಸಿತು ಪಡೆ ರವಿಯ ರಶ್ಮಿಯ
ಗೂಳೆಯವು ತೆಗೆಯಿತ್ತು ಪಡುವಣ ಕಡಲೊಳಿನನಿಳಿದ ॥71॥