೧೦

೦೦೦ ಸೂ ಕುಲಕಮಲ ...{Loading}...

ಸೂ. ಕುಲಕಮಲ ಖರಕಿರಣ ಪಾಂಡವ
ಬಲಕೆ ಶರಣಾಗತ ಜಲಧಿ ವರ
ನಿಲಯವೆನೆ ರಂಜಿಸಿತು ಗಂಗಾಸುತನ ಶರಶಯನ

೦೦೧ ಕಣ್ಡನರ್ಜುನನೌಕಿ ಕವಿವ ...{Loading}...

ಕಂಡನರ್ಜುನನೌಕಿ ಕವಿವ ಶಿ
ಖಂಡಿಯನು ಮಝ ಪೂತು ಪಾಯಕು
ಗಂಡುಗಲಿಯಹೆ ಚಾಗು ತೊಟ್ಟೆಸು ಭೀಷ್ಮನವಯವವ
ಕೊಂಡು ನಡೆ ನೀನಂಜದಿರು ಕೈ
ಕೊಂಡು ನಿಲುವೆನೆನುತ್ತ ಫಲುಗುಣ
ಮಂಡಿಸಿದನಾಲಿದನು ಸೆಳೆದನು ಬೋಳೆಯಂಬುಗಳ ॥1॥

೦೦೨ ಒದರಿ ಜೇವಡೆಗೈದು ...{Loading}...

ಒದರಿ ಜೇವಡೆಗೈದು ಬಾಣವ
ಕೆದರಿದನು ಥಟ್ಟೈಸಿ ಚಾಪವ
ನೊದೆದು ಹಾಯ್ದವು ತೋದವಂಬುಗಳರಿಯ ನೆತ್ತರಲಿ
ಇದಿರೊಳುಲಿದು ಶಿಖಂಡಿ ಶರ ಸಂ
ಘದಲಿ ಹೂಳಿದನಾಗ ಭೀಷ್ಮನ
ಹೃದಯದಲಿ ವೈರಾಗ್ಯ ಮನೆಗಟ್ಟಿತ್ತು ನಿಮಿಷದಲಿ ॥2॥

೦೦೩ ಎಲೆ ಮಹಾದೇವೀನಪುಂಸಕ ...{Loading}...

ಎಲೆ ಮಹಾದೇವೀನಪುಂಸಕ
ನಲಿ ನಿರಂತರವೆಮಗೆ ಸಮರವೆ
ಗೆಲವಿದೊಳ್ಳಿತೆ ಸುಡು ಶಿಖಂಡಿಯ ಕೂಡೆ ಬಿಲುವಿಡಿದು
ಅಳುಕದೆಚ್ಚನಲಾ ದುರಾತ್ಮನ
ನಿಲವ ತೆಗೆ ತೆಗೆಯೆನುತ ಚಾಪವ
ನಿಳುಹಿದನು ರಥದೊಳಗೆ ಗಂಗಾಸೂನು ವಹಿಲದಲಿ ॥3॥

೦೦೪ ನರನ ಸರಳಿಗೆ ...{Loading}...

ನರನ ಸರಳಿಗೆ ಮೈಯ ಕೊಟ್ಟರೆ
ಮುರಿದು ರಥದಲಿ ನಿಂದು ನಿಜ ಮೋ
ಹರವ ನೋಡುತ ಶಲ್ಯ ಗುರು ಕೃಪ ಕೌರವಾನುಜರ
ಕರೆದು ನುಡಿದನು ಪಾರ್ಥನಂಬಿನ
ಹೊರಳಿ ಹೊಳ್ಳಿಸುತಿದೆ ಮದಂತಃ
ಕರಣ ಕುಂದಿತು ಕಾಯಲಾಪರೆ ಬನ್ನಿ ನೀವೆಂದ ॥4॥

೦೦೫ ಇವು ಶಿಖಣ್ಡಿಯ ...{Loading}...

ಇವು ಶಿಖಂಡಿಯ ಬಾಣವೆವಾ
ಸವನ ಮಗನಂಬುಗಳು ವಿಲಯದ
ಶಿವನ ಶೂಲದ ಗಾಯಕಿವು ಮಿಗಿಲೇನನುಸುರುವೆನು
ಇವನು ಸೈರಿಸಲಾರೆನಿಂದ್ರನ
ಪವಿಯ ಹೊಯ್ಲನು ಹೊರುವೆನಂತ್ಯದ
ಜವನ ದಂಡದ ಹತಿಗೆ ಹೆದರೆನು ಕೇಳಿ ನೀವೆಂದ ॥5॥

೦೦೬ ಪರಶುರಾಮನ ಕೊಡಲಿ ...{Loading}...

ಪರಶುರಾಮನ ಕೊಡಲಿ ಕಡಿತವ
ಧರಿಸಲಾಪೆನು ವಿಲಯ ಭೈರವ
ನಿರಿದಡಂಜೆನು ಸಿಡಿಲು ಹೊಡೆದರೆ ರೋಮ ಕಂಪಿಸದು
ಹರನ ಪಾಶುಪತಾಸ್ತ್ರ ಬಾದಣ
ಗೊರೆದರೆಯು ಲೆಕ್ಕಿಸೆನು ಪಾರ್ಥನ
ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ ॥6॥

೦೦೭ ಹರಿಯ ಕೌಮೋದಕಿಯ ...{Loading}...

ಹರಿಯ ಕೌಮೋದಕಿಯ ಹೊಯ್ಲನು
ಬೆರಳಲಾನುವೆನಖಿಲ ಕುಲಗಿರಿ
ಜರಿದು ಬೀಳುವಡಾನಲಾಪೆನು ನಖದ ಕೊನೆಗಳಲಿ
ಭರದಲಾದಿವರಾಹ ದಾಡೆಯ
ಲಿರಿದಡೆಯು ನರಸಿಂಹ ನಖದಲಿ
ಕೆರೆದಡೆಯು ಸೈರಿಸುವೆನಂಜುವೆನರ್ಜುನನ ಶರಕೆ ॥7॥

೦೦೮ ಒಡಲನೊಚ್ಚತಗೊಣ್ಡವಮ್ಬಿನ ...{Loading}...

ಒಡಲನೊಚ್ಚತಗೊಂಡವಂಬಿನ
ಕುಡಿಗೆ ನೆರೆಯದು ರಕ್ತಜಲ ಬಳಿ
ವಿಡಿದು ಕವಿವಂಬುಗಳು ಬಂಬಲ್ಗರುಳ ಸೇದಿದವು
ಉಡಿದವೆಲು ಬಾಣಂಗಳೆಲುವಾ
ಗಡಸಿದುವು ತನಿರಕುತ ಮಾಂಸವ
ನುಡುಗಿದವು ಶರವಿವು ಶಿಖಂಡಿಯ ಬಾಣವಲ್ಲೆಂದ ॥8॥

೦೦೯ ಚೇಳ ಬೆನ್ನಿನೊಳೊಡೆದು ...{Loading}...

ಚೇಳ ಬೆನ್ನಿನೊಳೊಡೆದು ಮೂಡುವ
ಬಾಲ ವೃಶ್ಚಿಕದಂತೆ ಮಸೆದಿಹ
ಬೋಳೆಯಂಬುಗಳೊಡೆದು ಮೊನೆದೋರಿದವು ಬೆನ್ನಿನೊಳು
ಕೋಲು ಪಾರ್ಥನವಿವು ಶಿಖಂಡಿಯ
ಕೋಲುಗಳು ತಾನಲ್ಲ ನಿಂದುದು
ಕಾಳೆಗವು ನಮಗೆನುತ ಮೆಲ್ಲನೆ ಮಲಗಿದನು ಭೀಷ್ಮ ॥9॥

೦೧೦ ವೀರಭಟ ಭಾಳಾಕ್ಷ ...{Loading}...

ವೀರಭಟ ಭಾಳಾಕ್ಷ ಭೀಷ್ಮನು
ಸಾರಿದನು ಧಾರುಣಿಯನಕಟಾ
ಕೌರವನ ಸಿರಿ ಸೂರೆಯೋದುದೆ ಹಗೆಗೆ ಗೆಲವಾಯ್ತೆ
ಆರನಾವಂಗದಲಿ ಬರಿಸದು
ಘೋರ ವಿಧಿ ಶಿವಶಿವ ಎನುತ್ತಾ
ಸಾರಥಿಯು ಕಡುಖೇದದಲಿ ತುಂಬಿದನು ಕಂಬನಿಯ ॥10॥

೦೧೧ ಹೂಳಿ ಹೋಯಿತು ...{Loading}...

ಹೂಳಿ ಹೋಯಿತು ಬಾಣದಲಿ ಮೈ
ತೋಳು ತೊಡೆ ಜೊಂಡೆದ್ದು ರಕುತದ
ಸಾಲುಗೊಳಚೆಯ ಕರುಳ ಕುಸುರಿಯ ಬಸಿವ ನೆಣವಸೆಯ
ಮೂಳೆಯೊಟ್ಟಿಲ ನೆಲನ ಮುಟ್ಟದ
ಜಾಳಿಗೆಯ ಹೊಗರೊಗುವ ಕೆಂಗರಿ
ಗೋಲ ಮಂಚದ ಮೇಲೆ ರಣದಲಿ ಭೀಷ್ಮ ಪವಡಿಸಿದ ॥11॥

೦೧೨ ಒರಲಿ ಕೆಡೆದರು ...{Loading}...

ಒರಲಿ ಕೆಡೆದರು ಹಡಪಿಗರು ಸೀ
ಗುರಿಯವರು ಸತ್ತಿಗೆಯವರು ತ
ನ್ನರಮನೆಯ ವಿಶ್ವಾಸಿಗಳು ಬಿಲುಸರಳ ನೀಡುವರು
ಗುರುವಲಾ ಮುತ್ತಯ್ಯ ನಮ್ಮನು
ಹೊರೆದ ತಂದೆಗೆ ತಪ್ಪಿದರು ಕಡು
ನರಕಿಗಳು ಪಾಂಡವರು ಸುಡುಸುಡೆನುತ್ತ ಹೊರಳಿದರು ॥12॥

೦೧೩ ಬೆದರು ತವನಿಧಿಯಾಯ್ತು ...{Loading}...

ಬೆದರು ತವನಿಧಿಯಾಯ್ತು ಪಟು ಭಟ
ರೆದೆಗಳಿಬ್ಬಗಿಯಾಯ್ತು ವೀರಾ
ಭ್ಯುದಯ ಕೈಸೆರೆಯೋಯ್ತು ಸುಕ್ಕಿತು ಮನದ ಸುಮ್ಮಾನ
ಹೊದರೊಡೆದು ಕುರುಸೇನೆ ತೆಗೆದೋ
ಡಿದುದು ಭಯಜಲಧಿಯಲಿ ತೇಕಾ
ಡಿದರು ಕೌರವ ಜನಪರೀ ಭೀಷ್ಮಾವಸಾನದಲಿ ॥13॥

೦೧೪ ಭೀತಿ ಬೀತುದು ...{Loading}...

ಭೀತಿ ಬೀತುದು ಹರುಷವಲ್ಲರಿ
ಹೂತುದವರಿಗೆ ವಿಜಯ ಕಾಮಿನಿ
ದೂತಿಯರ ಕಳುಹಿದನು ತನಿ ಹೊಗರೇರಿತುತ್ಸಾಹ
ಸೋತುದಾಹವ ಚಿಂತೆ ಜರಿದುದು
ಕಾತರತೆ ನುಡಿಗೆಡೆಗುಡದೆ ಭಾ
ವಾತಿಶಯವೊಂದಾಯ್ತು ಪಾಂಡವ ಬಲದ ಸುಭಟರಿಗೆ ॥14॥

೦೧೫ ಮಲಗಿದನು ಕಲಿಭೀಷ್ಮನೆನೆ ...{Loading}...

ಮಲಗಿದನು ಕಲಿಭೀಷ್ಮನೆನೆ ತ
ಲ್ಲಳಿಸಿದನು ಕುರು ರಾಯನುದರದೊ
ಳಿಳಿದುದಾಯಧವೆಂಬ ತೆರದಲಿ ತಳ್ಳುವಾರಿದನು
ಬಲಿದುಸುರ ಬಿಸುಸುಯಿಲ ಹಬ್ಬಿದ
ಕಳಕಳದ ಕಂಬನಿಯ ಕಿಬ್ಬೊನ
ಲಿಳಿವ ಕದಪಿನ ಹೊತ್ತ ದುಗುಡದ ಮುಖದೊಳೈತಂದ ॥15॥

೦೧೬ ಎಡೆ ಮುರಿದುದೈಶ್ವರ್ಯವಿನ್ನೇ ...{Loading}...

ಎಡೆ ಮುರಿದುದೈಶ್ವರ್ಯವಿನ್ನೇ
ನೊಡೆಯ ಭಿತ್ತಿಯ ಚಿತ್ರವಾದನು
ಕಡೆಗೆ ಬಂದುದೆ ಕೌರವಾನ್ವಯ ಶಿವಶಿವಾ ಎನುತ
ಹಿಡಿದ ದುಗುಡದ ಕವಿದ ಮುಸುಕಿನ
ಗಡಣದಲಿ ಗುರು ಕೃಪ ಜಯದ್ರಥ
ರೊಡನೊಡನೆ ಬರುತಿರ್ದುದಖಿಲ ಮಹೀಶ ಪರಿವಾರ ॥16॥

೦೧೭ ಕುದುರೆ ಕಮ್ಬನಿಯಿಕ್ಕಿದವು ...{Loading}...

ಕುದುರೆ ಕಂಬನಿಯಿಕ್ಕಿದವು ಮೈ
ಬಿದಿರಿದವು ದಂತಿಗಳು ಕಾಲಾ
ಳೊದರಿ ಕೆಡೆದವು ಕುಂದಿದವು ಕೈಮನದ ಕಡುಹುಗಳು
ಬೆದರಿ ಬಂದಿಗೆ ಸಿಲುಕಿತವನಿಪ
ನದಟು ವಿಕ್ರಮವಹ್ನಿ ತಂಪೇ
ರಿದುದು ಕಡುದುಮ್ಮಾನ ಕೇಣಿಯ ಹಿಡಿದುದುಭಯಬಲ ॥17॥

೦೧೮ ಬನ್ದು ಭೀಷ್ಮನ ...{Loading}...

ಬಂದು ಭೀಷ್ಮನ ಚರಣ ಸೀಮೆಯ
ಲಂದು ಕಾಯವ ಕೆಡಹಿ ವಿಗತಾ
ನಂದ ಭೂಪತಿ ಹೊರಳಿದನು ಹೇರಾಳ ಶೋಕದಲಿ
ಒಂದು ಮಗ್ಗುಲ ಕೆಲದೊಳಿವರೈ
ತಂದು ನಂದರು ಗುರು ಕೃಪಾದಿಗ
ಳೊಂದು ಮಗ್ಗುಲ ಸಾರಿ ನಿಂದರು ಕೃಷ್ಣ ಪಾಂಡವರು ॥18॥

೦೧೯ ಕವಿದ ಮುಸುಕಿನ ...{Loading}...

ಕವಿದ ಮುಸುಕಿನ ಕಂದಿದಾನನ
ದವನಿಪತಿ ಯಮಸೂನು ಗಂಗಾ
ಭವನ ಮಗ್ಗುಲ ಸಾರಿದನು ಕೈಚಾಚಿ ಕದಪಿನಲಿ
ಪವನಸುತ ಸಹದೇವ ಸಾತ್ಯಕಿ
ದಿವಿಜಪತಿಸುತರಾದಿ ಯಾದವ
ರವಿರಳದ ಶೋಕಾಗ್ನಿ ತಪ್ತರು ಪಂತಿಗಟ್ಟಿದರು ॥19॥

೦೨೦ ಏನ ನೆನೆದಾವುದನೊಡರ್ಚಿದೆ ...{Loading}...

ಏನ ನೆನೆದಾವುದನೊಡರ್ಚಿದೆ
ನೇನ ಹೇಳುವೆನೆನ್ನ ಪುಣ್ಯದ
ಹಾನಿಯನು ಕೈತಪ್ಪ ನೆನೆದೆನು ನಿಮ್ಮ ಸಿರಿಪದಕೆ
ನಾನದಾವುದು ಧರ್ಮತತ್ವ ನಿ
ಧಾನವೆಂದರಿಯದೆ ಕೃತಾಂತಂ
ಗಾನು ಹಂಗಿಗನಾದೆನೆಂದೊರಲಿದನು ಯಮಸೂನು ॥20॥

೦೨೧ ಖೇದವೇಕೆಲೆ ಮಗನೆ ...{Loading}...

ಖೇದವೇಕೆಲೆ ಮಗನೆ ನಿನ್ನೋ
ಪಾದಿಯಲಿ ಸುಚರಿತ್ರನಾವನು
ಮೇದಿನಿಯೊಳಾ ಮಾತು ಸಾಕೈ ಕ್ಷತ್ರಧರ್ಮವನು
ಆದರಿಸುವುದೆ ಧರ್ಮ ನಿನಗಪ
ವಾದ ಪಾತಕವಿಲ್ಲ ಸುಕೃತ
ಕ್ಕೀ ದಯಾಂಬುಧಿ ಕೃಷ್ಣ ಹೊಣೆ ನಿನಗಂಜಲೇಕೆಂದ ॥21॥

೦೨೨ ಮಗನೆ ಕೇಳೈ ...{Loading}...

ಮಗನೆ ಕೇಳೈ ಪಾರ್ಥ ಕೂರಂ
ಬುಗಳ ಹಾಸಿಕೆ ಚೆಂದವಾಯಿತು
ಹೊಗರಲಗ ತಲೆಗಿಂಬ ರಚಿಸೆನೆ ಪಾರ್ಥ ಕೈಕೊಂಡು
ಬಿಗಿದ ಬಿಲುಗೊಂಡೆದ್ದು ಮಂಡಿಸಿ
ಹೊಗರ ಕವಲಂಬೈದನೆಚ್ಚನು
ನೆಗಹಿದನು ಮಸ್ತಕವನಾ ಗಂಗಾಕುಮಾರಕನ ॥22॥

೦೨೩ ಹೊಳೆವ ಕಣೆಗಳ ...{Loading}...

ಹೊಳೆವ ಕಣೆಗಳ ಮಂಚ ತಲೆಗಿಂ
ಬಳವಡಿಕೆಯಲಿ ಭೀಷ್ಮ ಸುಖದಲಿ
ಮಲಗಿದನು ಬಹಿರಂಗಭುವನವ್ಯಾಪ್ತಿಗಳ ಮರೆದು
ನಳಿನನಾಭನ ದಿವ್ಯರೂಪನು
ಬಲಿದು ಮನದಲಿ ಹಿಡಿದು ನೋವಿನ
ಕಳಕಳಕೆ ಧೃತಿಗೆಡದೆ ಮೆರೆದನು ಬಾಣಶಯನದಲಿ ॥23॥

೦೨೪ ಒಡಲ ಜಡಿದವು ...{Loading}...

ಒಡಲ ಜಡಿದವು ರೋಮ ರೋಮದೊ
ಳಡಸಿದಂಬುಗಳಂಗ ವೇದನೆ
ತೊಡಕಿತುಬ್ಬರಿಸಿದುದು ಢಗೆ ಗೋನಾಳಿ ನೀರ್ದೆಗೆಯೆ
ನುಡಿಯಲಾರೆನು ಮಕ್ಕಳಿರ ನೀ
ರಡಸಿದೆನು ಹಿರಿದಾಗಿಯೆನೆ ನಡ
ನಡುಗಿ ದುರ್ಯೋಧನನು ದೂತರ ಕರೆದು ನೇಮಿಸಿದ ॥24॥

೦೨೫ ತರಿಸಿದನು ಹಿಮರುಚಿಯ ...{Loading}...

ತರಿಸಿದನು ಹಿಮರುಚಿಯ ಹಿಂಡಿದ
ಪರಮ ಶೀತೋದಕವೊ ತಾನೆನೆ
ಸುರಭಿ ಪರಿಮಳ ಪಾನವನು ಪರಿಪರಿಯ ಕುಡಿನೀರ
ಸರಸ ಬಹುವಿಧ ಭಕ್ಷ್ಯ ಭೋಜ್ಯವ
ನೆರಹಿದನು ಕುಡಿನೀರ ಗಿಂಡಿಯ
ನರಸ ನೀಡಲು ಕಂಡು ನಕ್ಕನು ಭೀಷ್ಮನಿಂತೆಂದ ॥25॥

೦೨೬ ಏರ ನೋವಿನೊಳಾದ ...{Loading}...

ಏರ ನೋವಿನೊಳಾದ ತೃಷ್ಣೆಯ
ನಾರಿಸುವರಿವರಳವೆ ಸಾಕಿವ
ತೋರದಿರು ತೆಗೆ ತೊಲಗು ಮೂಢರ ಪರಮಗುರು ನೀನು
ಆರಿತೈ ಗೋನಾಳಿ ಫಲುಗುಣ
ತೋರು ನಿನ್ನರಿತವನು ಸಲಿಲವ
ಬೀರು ಬೇಗದಿನೆನಲು ಬಿಲುಗೊಂಡೆದ್ದನಾ ಪಾರ್ಥ ॥26॥

೦೨೭ ಸಲಿಲ ಬಾಣದಲಮಲ ...{Loading}...

ಸಲಿಲ ಬಾಣದಲಮಲ ಗಂಗಾ
ಜಲವ ತೆಗೆದನು ತಪ್ತ ಲೋಹದ
ಜಲದವೊಲು ತನಿಹೊಳೆವ ಸಲಿಲದ ಬಹಳ ಧಾರೆಗಳ
ಇಳುಹಿದನು ಸರಳಿಂದ ವದನದ
ಬಳಿಗೆ ಬಿಡೆ ಬಹಳಾರ್ತ ಭೀಷ್ಮನು
ಗೆಲಿದನಂತಸ್ತಾಪವನು ನರನಾಥ ಕೇಳ್ ಎಂದ ॥27॥

೦೨೮ ಸಾಕು ಸಾಕೈ ...{Loading}...

ಸಾಕು ಸಾಕೈ ತಂದೆ ನನ್ನನು
ಸಾಕಿಕೊಂಡೈ ಪಾರ್ಥ ಘನ ತೃ
ಷ್ಣಾಕುಲತೆ ಬೀಳ್ಕೊಂಡುದತಿಶಯ ತೃಪ್ತಿ ನನಗಾಯ್ತು
ಸಾಕೆನುತ ಫಲುಗುಣನ ಪರಮ ವಿ
ವೇಕವನು ಪತಿಕರಿಸಿ ನೆರೆ ಚಿಂ
ತಾಕುಳನ ಮಾಡಿದನು ಕೌರವರಾಯನನು ಭೀಷ್ಮ ॥28॥

೦೨೯ ತನ್ದೆ ಕಣ್ಡೈ ...{Loading}...

ತಂದೆ ಕಂಡೈ ಕೌರವೇಶ ಪು
ರಂದರಾತ್ಮಜನತಿ ಬಳವ ನೀ
ನಿಂದೆ ಕಾಣಲುಬೇಹುದೈ ಹಲವಂಗದಲಿ ನರನ
ಹಿಂದೆ ಬಲ್ಲರು ದ್ರೋಣ ಕೃಪ ಗುರು
ನಂದನಾದಿಗಳೆಲ್ಲ ಕೇಳೈ
ಮಂದಮತಿತನ ಬೇಡವಿನ್ನು ಕೃಪಾಳುವಾಗೆಂದ ॥29॥

೦೩೦ ಅಳಿದರೊಡಹುಟ್ಟಿದರು ಹಲಬರು ...{Loading}...

ಅಳಿದರೊಡಹುಟ್ಟಿದರು ಹಲಬರು
ನೆಲನ ರಾಯರು ಸವೆದರತಿ ಬಲ
ರಳುಕುವರು ನರನೆಂದಡೀ ದ್ರೋಣಾದಿ ನಾಯಕರು
ಅಲಗಿನಂಬಿನ ಹಕ್ಕೆ ನಮಗಾ
ಯ್ತೊಳಜಗಳ ಸಾಕಿನ್ನು ಸೋದರ
ರೊಳಗೆ ಸಂಪ್ರತಿಯಾಗಿ ಬದುಕುವದೆಂದನಾ ಭೀಷ್ಮ ॥30॥

೦೩೧ ನಿನಗರೋಚಕವೆಮ್ಮ ಮಾತುಗ ...{Loading}...

ನಿನಗರೋಚಕವೆಮ್ಮ ಮಾತುಗ
ಳನಿಬರಿಗೆ ಸೊಗಸುವುದು ಪಾಂಡವ
ರನುಮತವು ಬೇರಿಲ್ಲ ನಮ್ಮನುಮತದೊಳಡಗಿಹರು
ತನುಜ ಕದನದ ಕಡ್ಡತನ ಬೇ
ಡೆನಗಿದುಪಕಾರವು ವೃಥಾ ಕುರು
ವನಕೆ ವಹ್ನಿಯ ಬಿತ್ತಬೇಡಕಟೆಂದನಾ ಭೀಷ್ಮ ॥31॥

೦೩೨ ಮಾತು ಕಿವಿಯೊಗದಾನು ...{Loading}...

ಮಾತು ಕಿವಿಯೊಗದಾನು ಸಮರಂ
ಗಾತುರನು ಛಲದಂಕನೆಂಬೀ
ಖ್ಯಾತಿಯನು ಮೆರೆದಾತನಲ್ಲದೆ ರಾಜ್ಯ ಪದವಿಯಲಿ
ಸೋತ ಮನದವನಲ್ಲ ಭುವನ
ಖ್ಯಾತನೆನಿಪೊಂದಾಶೆಯನು ದಿಟ
ನೀತಿಗಳೆದರೆ ಬಳಿಕ ನಿಮ್ಮಯ ಮೊಮ್ಮನಲ್ಲೆಂದ ॥32॥

೦೩೩ ಮೊದಲಲೆನ್ದಿರಿ ನೀವು ...{Loading}...

ಮೊದಲಲೆಂದಿರಿ ನೀವು ಬಳಿಕೀ
ಯದುಕುಲಾದಿಪ ಕೃಷ್ಣ ನೆರೆ ಹೇ
ಳಿದನು ಋಷಿಗಳು ಬೊಪ್ಪನವರೀ ಹದನ ಸಾರಿದರು
ವಿದುರ ಹೇಳಿದನೆಲ್ಲರಿಗೆ ತಾ
ನಿದುವೆ ಮತವೆನಗೊಬ್ಬಗೆಯು ಬಲು
ಗದನವೇ ಮತವೆಂದು ಹೇಳಿದೆ ಹಿಂದು ನಿಮಗೆಂದ ॥33॥

೦೩೪ ಒನ್ದು ಮತವೆನಗೊನ್ದು ...{Loading}...

ಒಂದು ಮತವೆನಗೊಂದು ನುಡಿ ಮನ
ವೊಂದು ಮತ್ತೊಂದಿಲ್ಲ ಸಾಕಿದ
ನೆಂದು ಫಲವೇನಿನ್ನು ಸಂಧಿಯೆ ಪಾಂಡುತನಯರಲಿ
ಇಂದು ನಿಮಗೀ ಹದನ ನಾನೇ
ತಂದು ಬಳಿಕೆನ್ನೊಡಲ ಸಲಹುವ
ಚೆಂದವೊಳ್ಳಿತು ತಪ್ಪನಾಡಿದಿರೆಂದನವನೀಶ ॥34॥

೦೩೫ ಕಾಯದಲಿ ಕಕ್ಕುಲಿತೆ ...{Loading}...

ಕಾಯದಲಿ ಕಕ್ಕುಲಿತೆ ಯೇಕಿದ
ರಾಯಸವು ತಾನೇಸು ದಿನ ಕ
ಲ್ಪಾಯುಗಳಿಗೊಳಗಾಗಿ ಕಾಲನ ರಾಜಕಾರಿಯವು
ಹೇಯವೀ ಸಿರಿಯಿದರ ಮೈ ವಶ
ದಾಯತಿಕೆ ನಮಗಿಲ್ಲ ಪಾಂಡವ
ರಾಯ ಮಸ್ತಕಶೂಲನೆಂಬೀ ಬಿರುದ ಬಿಡೆನೆಂದ ॥35॥

೦೩೬ ಎಲವೊ ಭೀಷ್ಮರ ...{Loading}...

ಎಲವೊ ಭೀಷ್ಮರ ಮಾತುಗಳ ನೀ
ನೊಲಿವರೆಯು ಸಂಧಾನದಲಿ ನೀ
ನಿಲುವರೆಯು ದೇಹಾಭಿಲಾಷೆಗೆ ಬಲಿವರೆಯು ಮನವ
ಒಲಿದ ಭೀಮನೆ ನಿನ್ನ ಸಂಧಿಯ
ಕಳಚಿ ನಿನ್ನೊಡಹುಟ್ಟಿದೀತನ
ತಿಳಿರಕುತವನು ಸುರಿವನಲ್ಲದೆ ಬಿಡುವನಲ್ಲೆಂದ ॥36॥

೦೩೭ ಹಾ ನುಡಿಯದಿರು ...{Loading}...

ಹಾ ನುಡಿಯದಿರು ನಿಲು ಪಿತಾಮಹ
ನೇನ ಬೆಸಸಿದುದಕೆ ಹಸಾದವು
ನೀನು ನಡೆ ಪಾಳಯಕೆ ಬಿಡುಗುರಿತನವ ಮಾಣೆಯಲ
ಮೌನಮುದ್ರೆಯ ಹಿಡಿಯೆನಲು ಪವ
ಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ ನೋಡಿ ಮೆಲ್ಲನೆ ಸರಿದನಲ್ಲಿಂದ ॥37॥

೦೩೮ ಬೀಳುಕೊಡಿರೇ ಸಾಕು ...{Loading}...

ಬೀಳುಕೊಡಿರೇ ಸಾಕು ಭೀಮನು
ಬಾಲಭಾಷಿತನಾದನೀ ಭೂ
ಪಾಲ ಕೌರವನೆಂಬೆನೇ ಮೊದಲಿಗನು ಮೂರ್ಖರಿಗೆ
ಕಾಳೆಗದೊಳೊಡೆಹಾಯ್ದು ಸಾಯಲಿ
ಬಾಳಲೊಲಿದಂತಾಗಿ ಹೋಗಲಿ
ಹೇಳಿದಿರಿ ನಿಮ್ಮಿಂದ ತಪ್ಪಿಲ್ಲೆಂದನಸುರಾರಿ ॥38॥

೦೩೯ ಮುರಹರನ ಮಾತಹುದು ...{Loading}...

ಮುರಹರನ ಮಾತಹುದು ಸಾಕಿ
ನ್ನರಸ ಧರ್ಮಜ ಹೋಗು ದ್ರುಪದಾ
ದ್ಯರಿಗೆ ನೇಮವು ಪಾರ್ಥ ಮರಳೈ ತಂದೆ ಪಾಳಯಕೆ
ಧರೆಯ ಲೋಲುಪ್ತಿಯಲಿ ಸಲೆ ಕಾ
ತರಿಸಿ ತಪ್ಪಿದೆವೆಮ್ಮೊಳೆಂಬೀ
ಧರಧುರವ ನೆನೆಯದಿರಿ ವಿಜಯಿಗಳಾಗಿ ನೀವೆಂದ ॥39॥

೦೪೦ ಇವರು ಕಳುಹಿಸಿಕೊಣ್ಡರಾ ...{Loading}...

ಇವರು ಕಳುಹಿಸಿಕೊಂಡರಾ ಮಾ
ಧವನ ಮೆಲ್ಲಡಿಗಳನು ಹೃದಯದೊ
ಳವಚಿ ಕಂಗಳು ತುಂಬಿ ದೇವನ ಮೂರ್ತಿಯನು ಹಿಡಿದು
ಸವೆಯದಮಳಾನಂದ ಬಹಳಾ
ರ್ಣವದೊಳಗೆ ಮುಳುಗಾಡಿ ಲಕ್ಷ್ಮೀ
ಧವನ ಕಳುಹಿದನಿತ್ತ ಬೀಳ್ಕೊಟ್ಟನು ಸುಯೋಧನನ ॥40॥

೦೪೧ ಬವರದೊಳಗೌಚಿತ್ಯ ಪರಿಪಾ ...{Loading}...

ಬವರದೊಳಗೌಚಿತ್ಯ ಪರಿಪಾ
ಕವನು ಬಲ್ಲಿರಿ ಕೌರವರ ಪಾಂ
ಡವರ ವೃತ್ತಾಂತದ ರಹಸ್ಯದ ನೆಲೆಯನರಿದಿಹಿರಿ
ನಿವಗೆ ಬೇರೊಂದಿಲ್ಲ ನಾವ್ ಹೇ
ಳುವುದು ಕೃಷ್ಣನ ನೇಮವನು ಮಾ
ಡುವುದೆನುತ ದ್ರೋಣಾದಿ ಸುಭಟರ ಕಳುಹಿದನು ಭೀಷ್ಮ ॥41॥

೦೪೨ ಬೀಳುಕೊಣ್ಡರು ರಾಯರಿಬ್ಬರು ...{Loading}...

ಬೀಳುಕೊಂಡರು ರಾಯರಿಬ್ಬರು
ಪಾಳಯಂಗಳಿಗಿತ್ತ ಪಡುವಣ
ಶೈಲ ವಿಪುಲ ಸ್ತಂಭದೀಪಿಕೆಯಂತೆ ರವಿ ಮೆರೆದ
ಮೇಲುಮುಸುಕಿನ ಮುಖದ ಚಿತ್ತದ
ಕಾಳಿಕೆಯ ದುಮ್ಮಾನಜಲಧಿಯ
ಕಾಲುವೆಗಳೆನೆ ಕೌರವರು ಹೊಕ್ಕರು ನಿಜಾಲಯವ ॥42॥

೦೪೩ ಇವರು ಭೀಷ್ಮನ ...{Loading}...

ಇವರು ಭೀಷ್ಮನ ಬೀಳುಕೊಂಡು
ತ್ಸವದ ಹರುಷದಲೊಮ್ಮೆ ಗಂಗಾ
ಭವಗೆ ತಪ್ಪಿದ ದುಗುಡ ಭಾರದಲೊಮ್ಮೆ ಚಿಂತಿಸುತ
ಕವಲು ಮನದಲಿ ಕಂಪಿಸುತ ಶಿಬಿ
ರವನು ಹೊಕ್ಕರು ನಿಖಿಲ ಸೇನಾ
ನಿವಹ ಸಹಿತವೆ ವೀರ ನಾರಾಯಣನ ಕರುಣದಲಿ ॥43॥

೦೪೪ ಇತಿ ಶ್ರೀಮದಚಿನ್ತ್ಯ ...{Loading}...

ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಭೀಷ್ಮಪರ್ವಂ ಸಮಾಪ್ತಮಾದುದು.

+೧೦ ...{Loading}...