೦೦೦ ಕವಿದು ಹಳಚಿದುದುಭಯಬಲ ...{Loading}...
ಕವಿದು ಹಳಚಿದುದುಭಯಬಲ ಶಿವ
ಶಿವ ಮಹಾದೇವಮಮ ಪದರಜ
ರವಿಯ ತಿವಿದುದು ದಿನವನಳಿದುದು ನಳಿದನಹಿರಾಯ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಕೌರವ ಪಾಂಡವ ಸೇನೆಗಳು ಪರಸ್ಪರ ಮೇಲೆ ಬಿದ್ದು ಹೋರಾಡಿದವು ಶಿವಶಿವ ! ಮಹಾದೇವ ಅಮಮ ! ಆ ಸೇನೆಯ ಹೋರಾಟದಿಂದ ಮೇಲೆದ್ದ ಧೂಳು ಆಕಾಶದಲ್ಲಿ ಸೂರ್ಯನವರೆಗೆ ವ್ಯಾಪಿಸಿತು. ಆದಿಶೇಷನು ಕುಸಿದನು.
ಪದಾರ್ಥ (ಕ.ಗ.ಪ)
ನಳಿದನು-ಕೆಳಕ್ಕೆ ಕುಸಿದನು, ಪದರಜ-ಧೂಳು, ದಿವ-ಆಕಾಶ, ಕವಿದು-ಮೇಲೆ ಬಿದ್ದು, ಹಳಚಿದುದು-ಹೋರಾಡಿದವು.
ಮೂಲ ...{Loading}...
ಕವಿದು ಹಳಚಿದುದುಭಯಬಲ ಶಿವ
ಶಿವ ಮಹಾದೇವಮಮ ಪದರಜ
ರವಿಯ ತಿವಿದುದು ದಿನವನಳಿದುದು ನಳಿದನಹಿರಾಯ
೦೦೧ ಅವಧರಿಸು ಧೃತರಾಷ್ಟ್ರ ...{Loading}...
ಅವಧರಿಸು ಧೃತರಾಷ್ಟ್ರ ಗಂಗಾ
ಭವನ ಸುಯಿಧಾನದಲಿ ಕುರುಬಲ
ನಿವಹ ಧೃಷ್ಟದ್ಯುಮ್ನನಾರೈಕೆಯಲಿ ರಿಪುಸೇನೆ
ತವಕ ಮಿಗೆ ಮೋಹರಿಸಿ ಕೈವೀ
ಸುವ ಮಹೀಶರನೀಕ್ಷಿಸುತಲಾ
ಹವ ಮಹೋದ್ಯೋಗಕ್ಕೆ ಬೆರಗಾಯಿತ್ತು ಸುರಕಟಕ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಆಲಿಸು, ಭೀಷ್ಮನ ಮೇಲ್ವಿಚಾರಣೆಯಲ್ಲಿ ಕುರುಸೇನೆ, ಧೃಷ್ಟದ್ಯುಮ್ನನ ರಕ್ಷಣೆಯಲ್ಲಿ ಪಾಂಡವ ಸೇನೆ ಉತ್ಸಾಹ ಮೀರಿ ಒಗ್ಗೂಡಿತು. ಆ ಯುದ್ಧದಲ್ಲಿ ಕೈಬೀಸಿ ಯುದ್ಧಕ್ಕೆ ಅಪ್ಪಣೆ ನೀಡುವ ರಾಜರನ್ನು ಕಂಡು ದೇವತೆಗಳೆಲ್ಲರು ಬೆರಗಾದರು.
ಪದಾರ್ಥ (ಕ.ಗ.ಪ)
ಸುಯಿಧಾನ-ಮೇಲ್ವಿಚಾರಣೆ, ಮೋಹರಿಸಿ-ಒಗ್ಗೂಡಿ,
ಮೂಲ ...{Loading}...
ಅವಧರಿಸು ಧೃತರಾಷ್ಟ್ರ ಗಂಗಾ
ಭವನ ಸುಯಿಧಾನದಲಿ ಕುರುಬಲ
ನಿವಹ ಧೃಷ್ಟದ್ಯುಮ್ನನಾರೈಕೆಯಲಿ ರಿಪುಸೇನೆ
ತವಕ ಮಿಗೆ ಮೋಹರಿಸಿ ಕೈವೀ
ಸುವ ಮಹೀಶರನೀಕ್ಷಿಸುತಲಾ
ಹವ ಮಹೋದ್ಯೋಗಕ್ಕೆ ಬೆರಗಾಯಿತ್ತು ಸುರಕಟಕ ॥1॥
೦೦೨ ಎರಡು ಬಲ ...{Loading}...
ಎರಡು ಬಲ ಕೈಲಾಗನೀಕ್ಷಿಸು
ತಿರೆ ಕೃತಾಂತಾಲಯಕೆ ವಾಹಿನಿ
ಸರಿವುದೆಂಬಂದದಲಿ ಕೈವೀಸಿದರು ಭೂಭುಜರು
ಅರರೆ ಮೂಡಣ ಶರಧಿ ಪಡುವಣ
ಶರಧಿಗಾಂತುದೊ ರಣಚಮತ್ಕೃತಿ
ಸುರರ ನಯನಾಂಗಣಕೆ ಕವಿಸಿತು ಕೌತುಕಾಂಬುಧಿಯ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡು ಕಡೆಯ ಸೈನ್ಯವೂ ಅಪ್ಪಣೆ ಕೊಡುವುದನ್ನು ನಿರೀಕ್ಷಿಸುತ್ತಿರಲು ಯಮಪುರಿಗೆ ಶತ್ರುಸೇನೆ ಸೇರಬೇಕು ಎಂದು ತಿಳಿಸುವ ರೀತಿಯಲ್ಲಿ ರಾಜರು ಕೈಬೀಸಿ ಸನ್ನೆ ಮಾಡಿದರು. ಎಲಲಾ ! ಪೂರ್ವ ಸಮುದ್ರ ಪಶ್ಚಿಮ ಸಮುದ್ರವನ್ನು ಹಾಯಿತೋ ಎಂಬಂತೆ ಆ ಎರಡು ಸೇನೆಗಳ ರಣ ಸಾಹಸ ಪ್ರದರ್ಶನ ದೇವತೆಗಳ ಕಣ್ಗಳಿಗೆ ಕುತೂಹಲವನ್ನು ಉಂಟು ಮಾಡಿತು.
ಪದಾರ್ಥ (ಕ.ಗ.ಪ)
ಕೈಲಾಗನು-ಕೈಚಳಕವನ್ನು, ವಾಹಿನಿ-ಸೇನೆ, ರಣಚಮತ್ಕೃತಿ-ರಣಸಾಹಸ,
ಮೂಲ ...{Loading}...
ಎರಡು ಬಲ ಕೈಲಾಗನೀಕ್ಷಿಸು
ತಿರೆ ಕೃತಾಂತಾಲಯಕೆ ವಾಹಿನಿ
ಸರಿವುದೆಂಬಂದದಲಿ ಕೈವೀಸಿದರು ಭೂಭುಜರು
ಅರರೆ ಮೂಡಣ ಶರಧಿ ಪಡುವಣ
ಶರಧಿಗಾಂತುದೊ ರಣಚಮತ್ಕೃತಿ
ಸುರರ ನಯನಾಂಗಣಕೆ ಕವಿಸಿತು ಕೌತುಕಾಂಬುಧಿಯ ॥2॥
೦೦೩ ಎಲೆಲೆ ಕವಿಕವಿ ...{Loading}...
ಎಲೆಲೆ ಕವಿಕವಿ ಬೆರಸುಬೆರಸಿ
ಟ್ಟಳಿಸು ತಿವಿತಿವಿ ಭಲರೆ ಭಲರತಿ
ಬಲರೆ ಹಿಂಚದಿರಿನ್ನು ಹೊಯ್ ಹೊಯ್ ಚೂಣಿಗರನೆನುತ
ಬಲಜಲಧಿ ಮುಕ್ಕುಳಿಸಿ ಮಿಗೆ ಹೆ
ಕ್ಕಳಿಸಿ ಕವಿದುದು ಗಿರಿ ಬೆಸುಗೆಯು
ಕಳಚಿತಹಿಪನ ಕೊರಳು ಕುಸಿದವು ಕಮಠನೆದೆ ಬಿರಿದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಎಲೆ, ಸೈನಿಕರೆ ಮುತ್ತಿಗೆ ಹಾಕಿ ನುಗ್ಗಿರಿ, ನುಗ್ಗಿರಿ, ಗುಂಪಾಗಿ ತಿವಿಯಿರಿ, ಭಲರೆ ! ಭಲರೆ ! ಅತಿ ಭಲರೆ ಹಿಂದಕ್ಕೆ ಸರಿಯದಿರಿ, ಇನ್ನೂ ನುಗ್ಗಿ ಹೊಡೆದಾಡಿ, ಎಂದು ಮುಂದಿದ್ದ ಸೈನಿಕರನ್ನು ಹುರಿದುಂಬಿಸುತ್ತಿರಲು, ಸೇನಾಸಾಗರ ಆವೇಶದಿಂದ ಅಧಿಕವಾಗಿ ಹೊರಹೊಮ್ಮಿ ಗರ್ವದಿಂದ ಬೀಗುತ್ತಾ ಮುನ್ನುಗ್ಗಿತು. ಆ ಒತ್ತಡಕ್ಕೆ ಒಟ್ಟಾಗಿದ್ದ ಸಪ್ತಗಿರಿಗಳು ಬೇರ್ಪಟ್ಟವು. ಆದಿಶೇಷನ ಕೊರಳು ಭಾರದಿಂದ ಜಗ್ಗಿತು. ಕೂರ್ಮನ ಎದೆಯೊಡೆಯಿತು.
ಪದಾರ್ಥ (ಕ.ಗ.ಪ)
ಕಮಠ-ಕೂರ್ಮ, ಹೆಕ್ಕಳಿಸಿ-ಗರ್ವದಿಂದ ಬೀಗಿ, ಚೂಣಿಗರು-ಸೇನೆಯ ಮುಂದಿದ್ದ ಸೈನಿಕರು
ಪಾಠಾನ್ತರ (ಕ.ಗ.ಪ)
ಚೂಣೆಗರನೆನುತ –> ಚೂಣಿಗರನೆನುತ
ಚೂಣೆ ಎಂಬ ಪಾಠಕ್ಕೆ ಪರ್ಯಾಯವಾಗಿ ಮೈ.ವಿ.ವಿ.ಇಂದ ಪ್ರಕಟವಾಗಿರುವ ಭೀಷ್ಮಪರ್ವದಲ್ಲಿ ಚೂಣಿ ಎನ್ನುವ ಪಠವನ್ನು ಇರಿಸಿಕೊಂಡಿದ್ದಾರೆ. ಇಲ್ಲಿಯೂ ಚೂಣಿ ಎಂಬ ಪಾಠವನ್ನು ಸ್ವೀಕರಿಸಲಾಗಿದೆ.
ಮೂಲ ...{Loading}...
ಎಲೆಲೆ ಕವಿಕವಿ ಬೆರಸುಬೆರಸಿ
ಟ್ಟಳಿಸು ತಿವಿತಿವಿ ಭಲರೆ ಭಲರತಿ
ಬಲರೆ ಹಿಂಚದಿರಿನ್ನು ಹೊಯ್ ಹೊಯ್ ಚೂಣಿಗರನೆನುತ
ಬಲಜಲಧಿ ಮುಕ್ಕುಳಿಸಿ ಮಿಗೆ ಹೆ
ಕ್ಕಳಿಸಿ ಕವಿದುದು ಗಿರಿ ಬೆಸುಗೆಯು
ಕಳಚಿತಹಿಪನ ಕೊರಳು ಕುಸಿದವು ಕಮಠನೆದೆ ಬಿರಿದ ॥3॥
೦೦೪ ಒದರಿ ಬಲನೊಡನೊಡನೆ ...{Loading}...
ಒದರಿ ಬಲನೊಡನೊಡನೆ ಹಳಚಿದೊ
ಡದಿರೆ ನೆಲನವ್ವಳಿಸಿ ದಿಕ್ಕರಿ
ಮದವಡಗಿದವು ಕುಣಿದು ಮೆಟ್ಟಿದರಹಿಪನೊಡಲೊಳಗೆ
ಹೊದರುದಲೆ ಹೊಕ್ಕಾಳೆ ಬೆರಳಿನ
ತುದಿಯ ತುಟಿಯಲಿ ಬೊಬ್ಬಿರಿದಡಿನ
ನದಿರೆ ದಳವುಳಿಸಿದುದು ಕೌರವಪಾಂಡವರ ಸೇನೆ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆರೆದ ಸೇನೆಗಳು ಗರ್ಜಿಸಿ ಒಬ್ಬರಿಗೊಬ್ಬರು ಬಡಿದಾಡಿದಾಗ ಭೂಮಿ ನಡುಗಿತು. ದಿಗ್ಗಜಗಳು ಹಾರಿಬಿದ್ದು ಅವುಗಳ ಮದ ಅಡಗಿತು. ಸೇನೆಗಳು ಕುಣಿದು ಮೆಟ್ಟಿದಾಗ ಆದಿಶೇಷನ ಉದರದಲ್ಲಿ ಆತನ ಕೆದರಿದ ತಲೆ ಹೊಕ್ಕಿತು. (ಆದಿಶೇಷನು ಮುದುಡಿದನು). ಆಗ ಸೈನ್ಯವೆಲ್ಲ ತುದಿ ಬೆರಳನ್ನು ತುಟಿಗಿಟ್ಟು ಬೊಬ್ಬೆ ಇಟ್ಟಾಗ ಆ ಅಚ್ಚರಿಯ ಆರ್ಭಟಕ್ಕೆ ಸೂರ್ಯನು ತತ್ತರಿಸಿದನು. (ಹೀಗೆ) ಕೌರವ ಪಾಂಡವ ಸೇನೆಗಳೆರಡೂ ಪರಸ್ಪರ ಘೋರಾಕ್ರಮಣ ಮಾಡಿದವು.
ಪದಾರ್ಥ (ಕ.ಗ.ಪ)
ದಳವುಳಿಸು-ಘೋರಾಕ್ರಮಣ ಮಾಡು, ಅದಿರೆ-ತತ್ತರಿಸಲು, ಅಪ್ಪಳಿಸಿ-ಹಾರಿಬಿದ್ದು, ದಿಕ್ಕರಿ-ದಿಗ್ಗಜಗಳು, ಹಳಚಿದೊಡೆ-ಬಡಿದಾಡಿದಾಗ
ಮೂಲ ...{Loading}...
ಒದರಿ ಬಲನೊಡನೊಡನೆ ಹಳಚಿದೊ
ಡದಿರೆ ನೆಲನವ್ವಳಿಸಿ ದಿಕ್ಕರಿ
ಮದವಡಗಿದವು ಕುಣಿದು ಮೆಟ್ಟಿದರಹಿಪನೊಡಲೊಳಗೆ
ಹೊದರುದಲೆ ಹೊಕ್ಕಾಳೆ ಬೆರಳಿನ
ತುದಿಯ ತುಟಿಯಲಿ ಬೊಬ್ಬಿರಿದಡಿನ
ನದಿರೆ ದಳವುಳಿಸಿದುದು ಕೌರವಪಾಂಡವರ ಸೇನೆ ॥4॥
೦೦೫ ರಣದೊಳಾದುದು ಬೋನವಾರೋ ...{Loading}...
ರಣದೊಳಾದುದು ಬೋನವಾರೋ
ಗಣೆಗೆ ಬಿಜಯಂಗೈವುದನುಚರ
ಗಣಸಹಿತವೆಂದತಿಬಲರು ಕಾಲಂಗೆ ದೂತರನು
ಅಣಿಯೊಳಟ್ಟಿದರೆನಲು ಪಡೆಯುರ
ವಣೆಯ ಪದಹತಧೂಳಿ ಗಗನಾಂ
ಗಣಕೆ ಕವಿದುದು ಬಳಿಕಲಬುಜಭವಾಂಡಮಂಡಲವ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಣರಂಗದಲ್ಲಿ ಅಡಿಗೆ ಸಿದ್ಧವಾಗಿದೆ, ಭೋಜನಕ್ಕೆ ಸಹಚರರೊಂದಿಗೆ ದಯ ಮಾಡಿಸಬೇಕು ಎಂದು ಪ್ರಾರ್ಥಿಸಿ ವೀರಾಧಿವೀರರು ಯಮನಿಗೆ ತಮ್ಮ ದೂತರನ್ನು ಸಾಲು ಸಾಲಾಗಿ ಕಳಿಸಿದರೋ ಎನ್ನುವಂತೆ ಮುನ್ನುಗ್ಗುವಾಗ ಸೈನ್ಯದ ಕಾಲ್ತುಳಿತದಿಂದ ಮೇಲೆದ್ದ ಧೂಳು ಆಕಾಶಕ್ಕೆಲ್ಲಾ, ಅನಂತರ ಬ್ರಹ್ಮಾಂಡಕ್ಕೆಲ್ಲಾ ಆವರಿಸಿತು.
ಪದಾರ್ಥ (ಕ.ಗ.ಪ)
ಬೋನ-ಅಡಿಗೆ, ಆರೋಗಣೆ-ಭೋಜನ, ಅನುಚರಗಣ-ಸಹಚರರ ಗುಂಪು, ಅತಿಬಲರು-ವೀರಾಧಿವೀರರು, ಅಣಿಯೊಳು -ಸಾಲುಸಾಲಾಗಿ, ಉರವಣೆ-ಮುನ್ನುಗ್ಗುವುದು, ಪದಹತಧೂಳಿ-ಕಾಲ್ದುಳಿತದಿಂದ ಮೇಲೆದ್ದ ಧೂಳಿ, ಅಬುಜಭವಾಂಡಮಂಡಲ-ಬ್ರಹ್ಮಾಂಡ, ಕವಿಯಿತು-ಆವರಿಸಿತು
ಮೂಲ ...{Loading}...
ರಣದೊಳಾದುದು ಬೋನವಾರೋ
ಗಣೆಗೆ ಬಿಜಯಂಗೈವುದನುಚರ
ಗಣಸಹಿತವೆಂದತಿಬಲರು ಕಾಲಂಗೆ ದೂತರನು
ಅಣಿಯೊಳಟ್ಟಿದರೆನಲು ಪಡೆಯುರ
ವಣೆಯ ಪದಹತಧೂಳಿ ಗಗನಾಂ
ಗಣಕೆ ಕವಿದುದು ಬಳಿಕಲಬುಜಭವಾಂಡಮಂಡಲವ ॥5॥
೦೦೬ ಚಲನದಿನ್ದುದಯಿಸಿದ ಶೂದ್ರತೆ ...{Loading}...
ಚಲನದಿಂದುದಯಿಸಿದ ಶೂದ್ರತೆ
ಗಲಸಿ ಸುರಗಂಗೆಯಲಿ ಮಿಂದು
ಚ್ಚಳಿಸಿ ರಜತಾದ್ರಿಯಲಿ ಶೂಲಿಯ ಪದಯುಗವ ಭಜಿಸಿ
ಬಳಿಕ ನಾಕವನೈದಿ ಸುಮನೋ
ಲಲನೆಯರ ಕುಂತಳಕೆ ಹಾಯ್ದುದು
ಬಲದ ಪದಹತಧೂಳಿ ಗೆಲಿದುದು ವಾಜಪೇಯಿಗಳ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆಯ ಕಾಲ್ ತುಳಿತದಿಂದ ಮೇಲೆದ್ದ ಧೂಳು, ಸೇನೆಯ ಸಂಚಾರದಿಂದ ಉದಿಸಿದ್ದರಿಂದ ತನಗೆ ಬಂದ ಮೈಲಿಗೆಗೆ ಬೇಸತ್ತು, ಆ ದೋಷ ನಿವಾರಣೆಗಾಗಿ ಗಂಗಾನದಿಯಲ್ಲಿ ಸ್ನಾನ ಮಾಡಿ, ಅಲ್ಲಿಂದ ಹಾರಿ ಕೈಲಾಸದಲ್ಲಿ ಶಿವನ ಪದದ್ವಯವನ್ನು ಆರಾಧಿಸಿ, ಅನಂತರ ಸ್ವರ್ಗವನ್ನು ಸೇರಿ ದೇವತೆಗಳ ಮುಂಗುರುಳಿಗೆ ಧಾವಿಸಿ. ವಾಜಪೇಯಿಗಳಿಗೂ ಲಭ್ಯವಾಗದ ಮೋಕ್ಷವನ್ನು ಪಡೆಯಿತು.
ಪದಾರ್ಥ (ಕ.ಗ.ಪ)
ಅಲಸಿ-ಬೇಸರಗೊಂಡು, ಶೂದ್ರತೆಗೆ-ಮೈಲಿಗೆಗೆ, ಸುರಗಂಗೆ-ದೇವಗಂಗಾನದಿ, ವಾಜಪೇಯಿ-ಒಂದು ಬಗೆಯ ಯಾಗ ಮಾಡಿದವನು
ಮೂಲ ...{Loading}...
ಚಲನದಿಂದುದಯಿಸಿದ ಶೂದ್ರತೆ
ಗಲಸಿ ಸುರಗಂಗೆಯಲಿ ಮಿಂದು
ಚ್ಚಳಿಸಿ ರಜತಾದ್ರಿಯಲಿ ಶೂಲಿಯ ಪದಯುಗವ ಭಜಿಸಿ
ಬಳಿಕ ನಾಕವನೈದಿ ಸುಮನೋ
ಲಲನೆಯರ ಕುಂತಳಕೆ ಹಾಯ್ದುದು
ಬಲದ ಪದಹತಧೂಳಿ ಗೆಲಿದುದು ವಾಜಪೇಯಿಗಳ ॥6॥
೦೦೭ ಹರಿಗೆ ಕೆಮ್ಪಿನ ...{Loading}...
ಹರಿಗೆ ಕೆಂಪಿನ ಝಗೆ ಸುರಾಂಗನೆ
ಯರಿಗೆ ಸುಭಟವ್ರಜಕೆ ಕುಂಟಣಿ
ವರ ದಿಗಂಗನೆಯರಿಗೆ ಬೈತಲೆಗೆಸೆವ ಸಿಂಧೂರ
ಸುರಪನನಿಮಿಷತನಕೆ ರಿಪುವೆನ
ಲುರವಣಿಸಿ ಕೆಂದೂಳಿ ನಭಕು
ಪ್ಪರಿಸೆ ಹೊಯ್ದಾಡಿದರುಭಯ ಚತುರಂಗಬಲ ಹಳಚಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಹರಿಗೆ ಹೊನ್ನಿನ ಕಾಂತಿಯಾಗಿ, ದೇವತೆಗಳಿಗೆ, ವೀರರ ಸಮೂಹಕ್ಕೂ ದೇವವನಿತೆಯರಿಗೂ ಸಂಬಂಧ ಕಲ್ಪಿಸುವ ಮಧ್ಯಸ್ಥ ವೀರರಿಗೆ, ದಿಗ್ದೇವತೆಗಳಿಗೆ ಇವರೆಲ್ಲರ ಬೈತಲೆಯಲ್ಲಿ ಕಂಗೊಳಿಸುವ ಸಿಂಧೂರವಾಗಿ ದೇವೇಂದ್ರನ ಕಣ್ಣು ಪಿಳುಕಿಸದ ಗುಣಕ್ಕೆ ಶತ್ರುವೆಂಬಂತೆ ಕೆಂದೂಳು ಆಕಾಶದಲ್ಲಿ ವ್ಯಾಪಿಸುವಂತೆ ಕೌರವ ಮತ್ತು ಪಾಂಡವರ ಕಡೆಯ ಚತುರಂಗ ಸೇನೆ ತಾಗಿ ಹೊಡಿದಾಡಿದರು.
ಪದಾರ್ಥ (ಕ.ಗ.ಪ)
ಹರಿಗೆ-ಶ್ರೀಹರಿಗೆ, ಝಗೆ-ಕಾಂತಿ, ಸುರಾಂಗನೆಯರು-ದೇವತೆಗಳು, ಕುಂಟಣಿ-ತಲೆಹಿಡುಕಿ, ದಿಗಂಗನೆ-ದಿಗ್ದೇವತೆ, ಅನಿಮಿಷತನ-ಕಣ್ಣು ರೆಪ್ಪೆ ಮುಚ್ಚದಿರುವುದು ಬಿಡುಗಣ್ಣತನ, ಉರವಣಿಸು-ಆವರಿಸು, ಹಳಚಿ-ತಾಗಿ
ಮೂಲ ...{Loading}...
ಹರಿಗೆ ಕೆಂಪಿನ ಝಗೆ ಸುರಾಂಗನೆ
ಯರಿಗೆ ಸುಭಟವ್ರಜಕೆ ಕುಂಟಣಿ
ವರ ದಿಗಂಗನೆಯರಿಗೆ ಬೈತಲೆಗೆಸೆವ ಸಿಂಧೂರ
ಸುರಪನನಿಮಿಷತನಕೆ ರಿಪುವೆನ
ಲುರವಣಿಸಿ ಕೆಂದೂಳಿ ನಭಕು
ಪ್ಪರಿಸೆ ಹೊಯ್ದಾಡಿದರುಭಯ ಚತುರಂಗಬಲ ಹಳಚಿ ॥7॥
೦೦೮ ಝಡಿವ ಕೈದುಗಳುರಿಯ ...{Loading}...
ಝಡಿವ ಕೈದುಗಳುರಿಯ ಕೆಚ್ಚುವ
ನಡಸಿ ಕಾರಿದವಲಗು ಖಣಿಖಟೆ
ವಿಡುವ ದನಿ ಮಿಗೆ ತುಂಬಿತಂಬುಜಬಂಧುವಾಲಯವ
ಕಡುಗಿ ಹೊಯಿದಾಡಿದರು ಡಾವಣೆ
ವಿಡಿದು ಜೋಲುವ ಕರುಳ ಹಿಣಿಳೊಳು
ತೊಡಕಿ ತೋಟಿಯ ಭಟರು ತುಱುಬಿದರಂತಕನ ಪುರಿಗೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಝಳಪಿಸುವ ಆಯುಧಗಳಿಂದ ಬೆಂಕಿಯ ಕಿಡಿಗಳು ದಟ್ಟವಾಗಿ ಸೂಸಿದವು. ಕತ್ತಿಗಳ ಖಣಿ ಖಟಿಲ್ ಎಂಬ ದನಿ ಅಧಿಕವಾಗಿ ವ್ಯಾಪಿಸಿ ಬ್ರಹ್ಮಾಂಡವನ್ನು ಆವರಿಸಿತು. ಗುಂಪುಗೂಡಿ ರೋಷಾವೇಶದಿಂದ ಹೋರಾಡಿ, ಜೋಲು ಬಿದ್ದ ಕರುಳ ಗೊಂಡೆಗಳನ್ನು ಕೂಡಿಕೊಂಡು ಯಮಲೋಕಕ್ಕೆ ಶತ್ರುಗಳನ್ನು ಅಟ್ಟಿದರು.
ಪದಾರ್ಥ (ಕ.ಗ.ಪ)
ಕೆಚ್ಚುವನು-ಕಿಡಿಗಳನು, ಅಡಸಿ-ದಟ್ಟವಾಗಿ, ಡಾವಣೆವಿಡಿದು-ಗುಂಪುಗೂಡಿ,
ಮೂಲ ...{Loading}...
ಝಡಿವ ಕೈದುಗಳುರಿಯ ಕೆಚ್ಚುವ
ನಡಸಿ ಕಾರಿದವಲಗು ಖಣಿಖಟೆ
ವಿಡುವ ದನಿ ಮಿಗೆ ತುಂಬಿತಂಬುಜಬಂಧುವಾಲಯವ
ಕಡುಗಿ ಹೊಯಿದಾಡಿದರು ಡಾವಣೆ
ವಿಡಿದು ಜೋಲುವ ಕರುಳ ಹಿಣಿಳೊಳು
ತೊಡಕಿ ತೋಟಿಯ ಭಟರು ತುಱುಬಿದರಂತಕನ ಪುರಿಗೆ ॥8॥
೦೦೯ ಬಿಡದೆ ಕಡಿದಾಡಿದರು ...{Loading}...
ಬಿಡದೆ ಕಡಿದಾಡಿದರು ಸೇನಾ
ಗಡಲು ರಕುತದ ಕಡಲನುಗುಳಿತು
ಬಿಡದೆ ಸುಂಟರುಗಾಳಿ ವಿಲಯದ ಮಳೆಯ ಪಡೆದಂತೆ
ಒಡೆದು ನಾನಾ ಥಟ್ಟುಗಳ ಮೈ
ವಿಡಿದು ವಾರಿಡುವರುಣಜಲದಲಿ
ಕಡಿಕುಗಳು ಬೆಂಡೇಳೆ ದಂತಿಗಳಟ್ಟೆ ಕೊಡೆನೆಗೆಯೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಕಡೆಯ ಸೈನಿಕರು ಒಂದೇ ಸಮನೆ ಒಬ್ಬರನ್ನೊಬ್ಬರು ಕೊಲ್ಲುತ್ತಾ ಹೋರಾಡಿದರು. ಸೇನಾ ಸಾಗರದಿಂದ ರಕ್ತದ ಸಾಗರ ಹೊಮ್ಮಿತು. ಸುಂಟರಗಾಳಿ ಒಂದೇ ಸಮನೆ ಪ್ರಳಯ ಕಾಲದ ಮಳೆ ಜತೆ ಒಗ್ಗೂಡಿದಂತಾಯಿತು. ನಾನಾ ದಳಗಳ ಮೈಯೊಡೆದು ಪ್ರವಾಹವಾಗಿ ಹರಿಯುವ ರಕ್ತಧಾರೆಯಲ್ಲಿ ಕಡಿಖಂಡಗಳು (ಕತ್ತರಿಸಿದ ದೇಹಭಾಗಗಳು) ತೇಲಿದವು. ಆನೆಗಳ ಮುಂಡಗಳು ಚಿಮ್ಮಿ ಹಾರಿದವು.
ಪದಾರ್ಥ (ಕ.ಗ.ಪ)
ವಿಲಯದ ಮಳೆ-ಪ್ರಳಯಕಾಲದ ಮಳೆ, ಥಟ್ಟು-ದಳ, ವಾರಿಡುವ-ಪ್ರವಾಹವಾಗಿ ಹರಿಯುವ, ಅರುಣಜಲ-ರಕುತ, ಕಡಿಕುಗಳು-ಮಾಂಸಖಂಡಗಳ ಚೂರುಗಳು, ಬೆಂಡೇಳು-ತೇಲು, ಅಟ್ಟೆ-ಮುಂಡ, ಕೊಡೆನೆಗೆಯೆ-ಚಿಮ್ಮಿ ಹಾರಿತು,
ಮೂಲ ...{Loading}...
ಬಿಡದೆ ಕಡಿದಾಡಿದರು ಸೇನಾ
ಗಡಲು ರಕುತದ ಕಡಲನುಗುಳಿತು
ಬಿಡದೆ ಸುಂಟರುಗಾಳಿ ವಿಲಯದ ಮಳೆಯ ಪಡೆದಂತೆ
ಒಡೆದು ನಾನಾ ಥಟ್ಟುಗಳ ಮೈ
ವಿಡಿದು ವಾರಿಡುವರುಣಜಲದಲಿ
ಕಡಿಕುಗಳು ಬೆಂಡೇಳೆ ದಂತಿಗಳಟ್ಟೆ ಕೊಡೆನೆಗೆಯೆ ॥9॥
೦೧೦ ಲಗ್ಗೆ ಮಸಗಿತು ...{Loading}...
ಲಗ್ಗೆ ಮಸಗಿತು ಸೂಳುವೊಯಿಲಿನ
ಬೊಗ್ಗಿನಲಿ ಮುಂಕೊಂಡು ಮೋಹರ
ವೊಗ್ಗೊಡೆದು ಹೆಣಗಿದುದು ಕೇಶಾಕೇಶಿ ಯುದ್ಧದಲಿ
ಮೊಗ್ಗರವ ಕೆದರಿದರು ಹೊಯ್ದುರೆ
ಮಗ್ಗಿದರು ಕಡಲಿಡುವ ರಕುತದ
ಸುಗ್ಗಿ ಶಾಕಿನಿಯರಿಗೆ ಸೇರಿತು ಭೂಪ ಕೇಳ್ ಎಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಲು ಸಾಲಾಗಿ ಊದುವ ಹೆಗ್ಗಾಳೆಗಳ ಮೊಳಗಿನಿಂದ ದಾಳಿ ಹೆಚ್ಚಿತು. ಆಗ ಮುನ್ನುಗ್ಗಿ ತಾಗಿ ಸೇನೆಯ ಭಟರು ಕೇಶಾಕೇಶಿ ಹೋರಾಟದಲ್ಲಿ ಕೈಮಾಡಿ ಒದ್ದಾಡಿ ಸೇನೆಯನ್ನು ಚದುರಿಸಿದರು. ದಾಳಿ ಮಾಡಿ ಚೆನ್ನಾಗಿ ಬಗ್ಗು ಬಡಿದರು. ಪ್ರವಾಹವಾಗಿ ಹರಿದ ರಕ್ತದ ಸಮೃದ್ಧಿ ಶಾಕಿನಿಯರಿಗೆ ಸಂತೃಪ್ತಿ ತಂದಿತು.
ಪದಾರ್ಥ (ಕ.ಗ.ಪ)
ಬೊಗ್ಗು-ಹೆಗ್ಗಾಳೆ, ಹೊಯಿಲಿನ-ಶಬ್ದದ, ಲಗ್ಗೆ ಮಸಗಿತು-ದಾಳಿ ಹೆಚ್ಚಿತು, ಮುಂಕೊಂಡು-ಮುನ್ನುಗ್ಗಿ, ಮೋಹರ-ಸೇನೆ, ಮೊಗ್ಗರ-ಸೇನೆ, ಕೆದರು-ಚೆದರು, ಮಗ್ಗಿದರು-ಬಗ್ಗು ಬಡಿದರು
ಮೂಲ ...{Loading}...
ಲಗ್ಗೆ ಮಸಗಿತು ಸೂಳುವೊಯಿಲಿನ
ಬೊಗ್ಗಿನಲಿ ಮುಂಕೊಂಡು ಮೋಹರ
ವೊಗ್ಗೊಡೆದು ಹೆಣಗಿದುದು ಕೇಶಾಕೇಶಿ ಯುದ್ಧದಲಿ
ಮೊಗ್ಗರವ ಕೆದರಿದರು ಹೊಯ್ದುರೆ
ಮಗ್ಗಿದರು ಕಡಲಿಡುವ ರಕುತದ
ಸುಗ್ಗಿ ಶಾಕಿನಿಯರಿಗೆ ಸೇರಿತು ಭೂಪ ಕೇಳೆಂದ ॥10॥
೦೧೧ ತೆಗೆದುದುಬ್ಬಿದ ಧೂಳಿ ...{Loading}...
ತೆಗೆದುದುಬ್ಬಿದ ಧೂಳಿ ಹೆಣಸಾ
ಲುಗಳು ಹರೆದವು ರಕುತದರೆವೊನ
ಲುಗಳು ಹರಿದವು ಹೊರೆದನಂತಕನುರುಪರಿಗ್ರಹವ
ಅಗಿದು ಮಗ್ಗಿತು ಚೂಣಿ ಬಲುಕಾ
ಳೆಗವನೊಯ್ಯಾರಿಸುತ ರಾಯರು
ತೆಗೆಸಿದರು ಸೇನೆಯನು ನೂಕಿದರಂದು ಬಿಲ್ಲವರ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಬ್ಬಿ ಹಬ್ಬಿದ ಧೂಳು ಅಡಗಿ ಹೋಯಿತು. ಹೆಣದ ಸಾಲುಗಳು ಇಟ್ಟಾಡಿದವು. ರಕ್ತದ ಪ್ರವಾಹ ಹರಿಯಿತು. ಯಮನು ತನ್ನ ದೊಡ್ಡ ಪರಿವಾರವನ್ನು ಹೊರೆದನು. ಮುಂಚೂಣಿ ಸೇನೆ ಹಿಮ್ಮಟ್ಟಿ ನವೆಯಿತು. ಘೋರ ಕಾಳಗವನ್ನು ಸರಿಪಡಿಸುತ್ತ ರಾಜರುಗಳು ಸೇನೆಯನ್ನು ಹಿಂದೆಗೆಸಿ, ಬಿಲ್ಲಿನವರನ್ನು ಮುಂದಕ್ಕೆ ಬಿಟ್ಟರು.
ಪದಾರ್ಥ (ಕ.ಗ.ಪ)
ತೆಗೆದುದು-ಅಡಗಿಹೋಯಿತು, ಹರೆದವು-ಚೆದರಿದವು, ಉರುಪರಿಗ್ರಹ-ದೊಡ್ಡ ಪರಿವಾರ, ಅಂತಕ-ಯಮ, ಅಗಿದು-ಹಿಮ್ಮೆಟ್ಟಿ, ಮಗ್ಗಿತು-ನವೆಯಿತು, ಒಯ್ಯಾರಿಸಿತು-ಸರಿಪಡಿಸಿತು, ನೂಕಿದರು-ಮುಂದೆ ಬಿಟ್ಟರು
ಮೂಲ ...{Loading}...
ತೆಗೆದುದುಬ್ಬಿದ ಧೂಳಿ ಹೆಣಸಾ
ಲುಗಳು ಹರೆದವು ರಕುತದರೆವೊನ
ಲುಗಳು ಹರಿದವು ಹೊರೆದನಂತಕನುರುಪರಿಗ್ರಹವ
ಅಗಿದು ಮಗ್ಗಿತು ಚೂಣಿ ಬಲುಕಾ
ಳೆಗವನೊಯ್ಯಾರಿಸುತ ರಾಯರು
ತೆಗೆಸಿದರು ಸೇನೆಯನು ನೂಕಿದರಂದು ಬಿಲ್ಲವರ ॥11॥
೦೧೨ ಪುಲಿದೊಗಲ ಸೀಸಕದ ...{Loading}...
ಪುಲಿದೊಗಲ ಸೀಸಕದ ಕಿಗ್ಗ
ಟ್ಟೊಲೆವ ಸುರಗಿಯ ಕಾಂಚದೊಳರೆ
ಬಲಿದ ಬಿಲ್ಲಿಂ ಬಿಗಿದ ತಿರುವಿನ ಬೆರಳ ಕೋಲುಗಳ
ಬಲಿದ ಮುಂಗೈಹೊದೆಯ ಬಿರುದಿನೊ
ಳುಲಿವ ಘಂಟೆಯ ಬೆನ್ನಲೆವ ಬ
ತ್ತಳಿಕೆಗಳಲೈದಿತ್ತು ಬಿಲ್ಲಾಳುಭಯಸೇನೆಯಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊದೆದ ಹುಲಿಚರ್ಮ, ಶಿರಸ್ತ್ರಾಣದ ಕೆಳಪಟ್ಟಿಯಲ್ಲಿ ತೂಗಾಡುವ ಕತ್ತಿ, ಅರ್ಧಭಾಗ ಏರಿಸಿದ ಬಿಲ್ಲನ್ನು ಬಿಗಿದು ಕಟ್ಟಿದ ಬಿಲ್ಲಹುರಿ, ಬೆರಳುಗಳಿಂದ ಹಿಡಿದ ಬಾಣಗಳು, ಬಲಿಷ್ಠವಾದ ಮುಂಗೈಗೆ ಕಟ್ಟಿರುವ ((ಕೈಗವಸುಗಳು) ಬಿರುದುಗಳೊಡನೆ ಸದ್ದು ಮಾಡುತ್ತಿರುವ ಘಂಟೆಗಳು, ಬೆನ್ನ ಮೇಲೆ ತೂಗಾಡುವ ಬತ್ತಳಿಕೆಗಳ ಬಿಲ್ಗಾರರ ಪಡೆ ಉಭಯ ಸೇನೆಗಳಲ್ಲೂ ಕಾಳೆಗಕ್ಕೆ ಹೊರಟವು.
ಪದಾರ್ಥ (ಕ.ಗ.ಪ)
ಸೀಸಕದ ಕಿಗ್ಗಟ್ಟು-ಶಿರಸ್ತ್ರಾಣದ ಕೆಳಪಟ್ಟಿ, ಒಲೆವ ಸುರಗಿ-ತೂಗಾಡುವ ಕತ್ತಿ, ಕಾಂಚ-ಕತ್ತಿಯ ಒರೆ?, ತಿರುವು-ಹೆದೆ, ಕೋಲು-ಬಾಣ, ಬೆನ್ನಲೆವ-ಬೆನ್ನಲಿ ತೂಗಾಡುವ, ಬತ್ತಳಿಕೆ-ಬಾಣದ ಚೀಲ, ಹೊದೆ-ಕೈಗವಸು
ಟಿಪ್ಪನೀ (ಕ.ಗ.ಪ)
ಕಾಂಚದೊಳು (?) ಈ ಪದಕ್ಕೆ ಅರ್ಥ ಸ್ಪಷ್ಟವಿಲ್ಲ. ಆದರೆ ಸಂದರ್ಭಾನುಸಾರವಾಗಿ ಸೊಂಟದ ಸುತ್ತ ಕಟ್ಟಿರುವ ಪಟ್ಟಿಯಂತಹ ಒಂದು ಸಾಧನ ಎಂದು ಊಹಿಸಬಹುದು.
ಮೂಲ ...{Loading}...
ಪುಲಿದೊಗಲ ಸೀಸಕದ ಕಿಗ್ಗ
ಟ್ಟೊಲೆವ ಸುರಗಿಯ ಕಾಂಚದೊಳರೆ
ಬಲಿದ ಬಿಲ್ಲಿಂ ಬಿಗಿದ ತಿರುವಿನ ಬೆರಳ ಕೋಲುಗಳ
ಬಲಿದ ಮುಂಗೈಹೊದೆಯ ಬಿರುದಿನೊ
ಳುಲಿವ ಘಂಟೆಯ ಬೆನ್ನಲೆವ ಬ
ತ್ತಳಿಕೆಗಳಲೈದಿತ್ತು ಬಿಲ್ಲಾಳುಭಯಸೇನೆಯಲಿ ॥12॥
೦೧೩ ಬೊಬ್ಬಿರಿದು ಮೊಳಕಾಲನೂರಿದ ...{Loading}...
ಬೊಬ್ಬಿರಿದು ಮೊಳಕಾಲನೂರಿದ
ರುಬ್ಬಟೆಯಲಿದಿರಾಂತು ಕಾಲನ
ಹೆಬ್ಬೆಳಸು ಹುಲಿಸಾಯ್ತು ಬರಹೇಳೆಂಬವೋಲೊದರಿ
ಹಬ್ಬುಗೆಯ ಜೇವೊಡೆಯ ಝಾಡಿಯ
ತೆಬ್ಬುಗಳ ತೆಗೆವೆರಳುಗೋಲಿನ
ಕೊಬ್ಬಿನಾಳೆಚ್ಚಾಡಿತಿಕ್ಕಿದ ಮಂಡಿ ಚಂಡಿಸದೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆವೇಶದಿಂದ ಪ್ರತಿಭಟಿಸಿ ಗರ್ಜಿಸುತ್ತಾ ಬಾಣಹೂಡಲು ಮೊಳಕಾಲನ್ನು ನೆಲಕ್ಕೆ ಊರಿದರು. ಯಮನ ಹಿರಿದಾದ ಬೆಳೆ ಹುಲುಸಾಗಿದೆ. ಶತ್ರುಗಳನ್ನು, ನಿಮ್ಮ ಕಡೆಯ ಧೀರರನ್ನು ಬರಹೇಳಿ ಎಂದು ಹೇಳುತ್ತಿದ್ದಾರೋ ಎಂಬಂತೆ ಗರ್ಜಿಸಿ, ಬಿಲ್ಲನ್ನು ಠೇಂಕಾರಗೊಳಿಸಿದ ರಭಸದ ದನಿ ಹಬ್ಬಿ ಹರಿಯುತ್ತಿರಲು, ತೆಗೆತೆಗೆದು ಹೂಡಿದ ಬಾಣಗಳು ಚಿಮ್ಮಿ ಹಾರುತ್ತಿರಲು ಬಲಿಷ್ಠರಾದ ವೀರರು ಊರಿದ ಮೊಣಕಾಲು ಕದಲಿಸದೆ ಬಾಣಗಳನ್ನು ಎಸೆದಾಡಿದರು.
ಪದಾರ್ಥ (ಕ.ಗ.ಪ)
ಹುಲಿಸಾಯ್ತು-ಹುಲುಸಾಗಿದೆ, ಬೊಬ್ಬಿರಿದು-ಗರ್ಜಿಸಿ, ಜೇವೊಡೆಯ-ಬಿಲ್ಲನ್ನು ಠೇಂಕಾರಗೊಳಿಸಿದ, ಕೊಬ್ಬಿನಾಳು-ಬಲಿಷ್ಠವೀರ, ಚಂಡಿಸದೆ-?
ಮೂಲ ...{Loading}...
ಬೊಬ್ಬಿರಿದು ಮೊಳಕಾಲನೂರಿದ
ರುಬ್ಬಟೆಯಲಿದಿರಾಂತು ಕಾಲನ
ಹೆಬ್ಬೆಳಸು ಹುಲಿಸಾಯ್ತು ಬರಹೇಳೆಂಬವೋಲೊದರಿ
ಹಬ್ಬುಗೆಯ ಜೇವೊಡೆಯ ಝಾಡಿಯ
ತೆಬ್ಬುಗಳ ತೆಗೆವೆರಳುಗೋಲಿನ
ಕೊಬ್ಬಿನಾಳೆಚ್ಚಾಡಿತಿಕ್ಕಿದ ಮಂಡಿ ಚಂಡಿಸದೆ ॥13॥
೦೧೪ ಬೆರಳ ಶರಸನ್ಧಾನ ...{Loading}...
ಬೆರಳ ಶರಸಂಧಾನ ದೃಷ್ಟಿಯ
ಮುರಿದ ಮುಷ್ಟಿಯ ಕುಂಡಲಿತ ಕಿವಿ
ವರೆಯ ತೆಗೆಹಿನ ತೋಳ ವೀರರು ತೂಳಿದರು ಕಣೆಯ
ಅರರೆ ಕವಿಕವಿದಂಬು ಕಡಿದವು
ಕೊರಳನುಗಿದವು ಜೋಡನೊಡಲೊಳು
ಹೊರಳಿದವು ಹೊಡೆಗೆಡಹಿದವು ಹೊಕ್ಕೆಸೆವ ಹೂಣಿಗರ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆರಳಿನಿಂದ ಬಿಲ್ಲಿನಲ್ಲಿ ಬಾಣ ಹೂಡುವುದರ ಮೇಲೇ ನೋಟವನ್ನು ನೆಟ್ಟ , ಆಭರಣ ಧರಿಸಿದ ಕಿವಿಯವರೆಗೆ ಮಡಚಿದ ಹಿಡಿಯ ಸೆಳೆದ ತೋಳಿನ ವೀರರು ಒಂದೇ ಸಮನೆ ಬಾಣಗಳ ಮಳೆ ಸುರಿಸಿದರು. ಅರರೆ ! ಬಾಣಗಳು ಮತ್ತೆ ಮತ್ತೆ ಆವರಿಸಿ ಶತ್ರುಗಳ ಕಂಠಗಳನ್ನು ಕತ್ತರಿಸಿದವು. ಮೈಕವಚಗಳನ್ನು ಸೀಳಿದವು. ಹೊಟ್ಟೆಗಳಲ್ಲಿ ನಾಟಿದವು. ಮುನ್ನುಗ್ಗುತ್ತಾ ಬಿಡುತ್ತಿದ್ದ ಬಾಣಗಳು ಶಪಥ ವೀರರನ್ನು ಹೊಕ್ಕು ಕೆಳಗೆ ಬೀಳಿಸಿದವು.
ಪದಾರ್ಥ (ಕ.ಗ.ಪ)
ಕುಂಡಲಿತ-ಕಿವಿಯಾಭರಣ ಧರಿಸಿದ, ತೆಗಹಿನ ತೋಳ-ಸೆಳೆದ ತೋಳಿನ, ತೂಳಿದರು-ಸುರಿಸಿದರು, ಜೋಡನು-ಮೈಕವಚವನ್ನು, ಹೂಣಿಗರ-ಶಪಥ ವೀರರ, ಹೊಡೆಗೆಡೆದವು-ಕೆಳಕ್ಕೆ ಬೀಳಿಸಿದವು,
ಮೂಲ ...{Loading}...
ಬೆರಳ ಶರಸಂಧಾನ ದೃಷ್ಟಿಯ
ಮುರಿದ ಮುಷ್ಟಿಯ ಕುಂಡಲಿತ ಕಿವಿ
ವರೆಯ ತೆಗೆಹಿನ ತೋಳ ವೀರರು ತೂಳಿದರು ಕಣೆಯ
ಅರರೆ ಕವಿಕವಿದಂಬು ಕಡಿದವು
ಕೊರಳನುಗಿದವು ಜೋಡನೊಡಲೊಳು
ಹೊರಳಿದವು ಹೊಡೆಗೆಡಹಿದವು ಹೊಕ್ಕೆಸೆವ ಹೂಣಿಗರ ॥14॥
೦೧೫ ಕಣೆ ಕಣೆಯ ...{Loading}...
ಕಣೆ ಕಣೆಯ ಹಳಚಿದವು ಮಾರ್ಗಣೆ
ಕಣೆಯ ಕಡಿದವು ಕವಿವ ಕಣೆ ಕಿರು
ಗಣೆಯ ಮುಕ್ಕುಳಿಸಿದವು ಹೆಕ್ಕಳಿಸಿದವು ಹಂದೆಗರ
ಖಣಿಖಟಿಲು ನಿರಿನಿಳಿಲು ಘರಿಘರಿ
ಘಣಿಲು ದೊಪ್ಪನೆ ಕೊಯ್ವ ಸೀಳುವ
ಹೆಣಗೆಡಹುವಬ್ಬರಕೆ ಮಿಗಿಲೊದಗಿದರು ಬಿಲ್ಲವರು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣ ಬಾಣವನ್ನು ತಾಗಿದವು. ಎದುರಾಗಿ ಬಂದ ಬಾಣಗಳು ಬಿಟ್ಟ ಬಾಣಗಳನ್ನು ಕತ್ತರಿಸಿದವು. ದಟ್ಟವಾಗಿ ಬಂದ ಬಾಣಗಳು ಚಿಕ್ಕ ಬಾಣಗಳನ್ನು ನಾಶಗೈದವು. ಹೇಡಿಗಳನ್ನು ಅಂಜಿಸಿದವು. ಖಣಿ ಖಟಿಲು ಕೊಯ್ಯುವ, ನಿರಿನಿಳಿಲು ಸೀಳುವ, ಘರಿಘರಿ ಘಣಿಲು ದೊಪ್ಪನೆ, ಕೊಲ್ಲುವ ಬಿಲ್ಲುಗಾರರು ಅತಿಶಯವಾಗಿ ಹೋರಾಡಿದರು.
ಪದಾರ್ಥ (ಕ.ಗ.ಪ)
ಖಣಿಖಟಿಲು, ನಿರಿನಿಳಿಲು ಘರಿಘರಿಘಣಿಲು ದೊಪ್ಪನೆ, ಇವು ಬಾಣಗಳ ಸದ್ದುಗಳ ಅನುಕರಣಾವ್ಯಯಗಳು, ಬಿಲ್ಲವರು-ಬಿಲ್ಲುಗಾರರು,
ಪಾಠಾನ್ತರ (ಕ.ಗ.ಪ)
ಕವಿಯ- ಕವಿವ
ಮೈ.ವಿ.ವಿ.
ಮೂಲ ...{Loading}...
ಕಣೆ ಕಣೆಯ ಹಳಚಿದವು ಮಾರ್ಗಣೆ
ಕಣೆಯ ಕಡಿದವು ಕವಿವ ಕಣೆ ಕಿರು
ಗಣೆಯ ಮುಕ್ಕುಳಿಸಿದವು ಹೆಕ್ಕಳಿಸಿದವು ಹಂದೆಗರ
ಖಣಿಖಟಿಲು ನಿರಿನಿಳಿಲು ಘರಿಘರಿ
ಘಣಿಲು ದೊಪ್ಪನೆ ಕೊಯ್ವ ಸೀಳುವ
ಹೆಣಗೆಡಹುವಬ್ಬರಕೆ ಮಿಗಿಲೊದಗಿದರು ಬಿಲ್ಲವರು ॥15॥
೦೧೬ ಉರಗಬಲದುರವಣೆಯೊ ವಾರಿದ ...{Loading}...
ಉರಗಬಲದುರವಣೆಯೊ ವಾರಿದ
ತರುಗಳುಪಶಾಖೆಗಳೊ ಕಾಲನ
ಹರವರಿಯೊ ಹೆಬ್ಬೆಳೆಸ ಮುತ್ತುವ ವಿಹಗಸಂತತಿಯೊ
ತರಣಿ ತಲ್ಲಣಿಸಿದನು ಹೊಗರಲ
ಗುರವಣಿಸಿ ಹೊದರೆದ್ದು ಹಿಳುಕ
ಬ್ಬರಿಸಿ ಗಬ್ಬರಿಸಿದುವು ದಿಗುತಟವನು ಶರವ್ರಾತ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ಪ ಸಮೂಹದ ದಾಳಿಯೊ, ಮೇಘದ ಮರಗಳ ಉಪಶಾಖೆಗಳೋ, ಯಮನ ವಿಹಾರವೋ, ಸಮೃದ್ಧವಾದ ಫಸಲನ್ನು ಮುತ್ತುವ ಪಕ್ಷಿಸಂಕುಲವೋ ಎಂಬಂತೆ ಬಾಣಗಳ ಕಾಂತಿ ಹಬ್ಬಿ ಸೂರ್ಯನು ತತ್ತರಿಸಿದನು, ಬಾಣದ ತುದಿಗಳು ದಟ್ಟೈಸಿ ಅಬ್ಬರಿಸುತ್ತಾ ದಿಕ್ಕುಗಳನ್ನು ತುಂಬಿಕೊಂಡವು.
ಪದಾರ್ಥ (ಕ.ಗ.ಪ)
ಅಲಗು ಹೊಗರ-ಬಾಣಗಳ ಕಾಂತಿ, ತರಣಿ-ಸೂರ್ಯ, ಹೆಬ್ಬೆಳಸು-ಸಮೃದ್ಧ ಫಸಲು, ವಿಹಗಸಂತತಿ-ಪಕ್ಷಿ ಸಂಕುಲ, ಹರವರಿ-ವಿಹಾರ, ವಾರಿದತರು-ಮಳೆಮರ
ಮೂಲ ...{Loading}...
ಉರಗಬಲದುರವಣೆಯೊ ವಾರಿದ
ತರುಗಳುಪಶಾಖೆಗಳೊ ಕಾಲನ
ಹರವರಿಯೊ ಹೆಬ್ಬೆಳೆಸ ಮುತ್ತುವ ವಿಹಗಸಂತತಿಯೊ
ತರಣಿ ತಲ್ಲಣಿಸಿದನು ಹೊಗರಲ
ಗುರವಣಿಸಿ ಹೊದರೆದ್ದು ಹಿಳುಕ
ಬ್ಬರಿಸಿ ಗಬ್ಬರಿಸಿದುವು ದಿಗುತಟವನು ಶರವ್ರಾತ ॥16॥
೦೧೭ ಹೆಣಗಿ ಹಿಣಿಲಿರಿದಭ್ರದಲಿ ...{Loading}...
ಹೆಣಗಿ ಹಿಣಿಲಿರಿದಭ್ರದಲಿ ಸಂ
ದಣಿಸಿ ಕಣೆ ಕೈಕೊಂಡವಂಬರ
ಮಣೆಗೆ ನಡೆದುದೊ ತಿಮಿರರಾಜನ ದಂಡು ಮಂಡಳಿಸಿ
ಮಣಿಮಕುಟದಿಳೆಗೊಯ್ಲ ನೆಲದಾ
ವಣಿಯೊ ಗಗನಾರ್ಣವದ ವಾಡಬ
ಗಣವೊ ಕೌತುಕವೆನಿಸಲೆಚ್ಚಾಡಿದರು ಬಿಲ್ಲವರು ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲು ವಿದ್ಯಾ ವಿಶಾರದರು ಬಿಟ್ಟ ಬಾಣಗಣಗಳು ಗಗನದಲ್ಲಿ ನುಗ್ಗಿ ಹೆಣಗಿ ಗುಂಪು ಗುಂಪನ್ನು ಇರಿದು ಸಂದಣಿಸಿ ತಾಗಿದವು. ಕತ್ತಲೆಯ ದಂಡು ಗುಂಪುಗೂಡಿ ಸೂರ್ಯನ ಮೇಲೆ ದಾಳಿಯಿಟ್ಟವೊ ಎಂಬಂತಾಯಿತು. ರತ್ನದ ಕಿರೀಟಗಳನ್ನು ಧರಿಸಿದ ತಲೆಗಳೆಂಬ ಫಸಲನ್ನು ಕೊಯ್ದು ನೆಲದ ಮೇಲೆ ಹಾಸಿದ ಹಾಸೋ, ಗಗನ ಸಾಗರದಲ್ಲಿ ಅಡಗಿದ ಪ್ರಳಯಕಾಲದ ಬಡಬಾನಲವೊ, ಎಂಬಂತೆ ಬಾಣಗಳು ಸುಳಿದಾಡಿದವೊ ಎಂಬ ರೀತಿಯಲ್ಲಿ ಕುತೂಹಲವುಂಟಾಗುವ ಹಾಗೆ ಬಿಲ್ಗಾರರು ಬಾಣಗಳನ್ನು ಎಸೆದಾಡಿದರು.
ಪದಾರ್ಥ (ಕ.ಗ.ಪ)
ತಿಮಿರರಾಜ-ಕತ್ತಲೆ, ಅಂಬರಮಣಿ-ಸೂರ್ಯ, ಇಳೆಕೊಯ್ಲ್ಲು-ಫಸಲು, ನೆಲದಾವಣಿ-ನೆಲದ ಮೇಲೆ ಹಾಸಿದ ಹಾಸು, ವಾಡಬ-ಬಡಬಾನಲ
ಮೂಲ ...{Loading}...
ಹೆಣಗಿ ಹಿಣಿಲಿರಿದಭ್ರದಲಿ ಸಂ
ದಣಿಸಿ ಕಣೆ ಕೈಕೊಂಡವಂಬರ
ಮಣೆಗೆ ನಡೆದುದೊ ತಿಮಿರರಾಜನ ದಂಡು ಮಂಡಳಿಸಿ
ಮಣಿಮಕುಟದಿಳೆಗೊಯ್ಲ ನೆಲದಾ
ವಣಿಯೊ ಗಗನಾರ್ಣವದ ವಾಡಬ
ಗಣವೊ ಕೌತುಕವೆನಿಸಲೆಚ್ಚಾಡಿದರು ಬಿಲ್ಲವರು ॥17॥
೦೧೮ ರೇಣು ಹತ್ತಿದ ...{Loading}...
ರೇಣು ಹತ್ತಿದ ರವಿಯ ಮಸೆಯಲು
ಸಾಣೆಗಿಕ್ಕಿತೊ ಭಗಣರತ್ನವ
ನಾಣಿಗಳೆಯಲು ಕಮಲಭವ ಸೃಜಿಸಿದ ಸಲಾಕೆಗಳೊ
ಕಾಣೆನಭ್ರವನಮಮ ದಿಕ್ಕುಗ
ಳೇಣು ಮುರಿಯಲು ಹೊಕ್ಕೆಸುವ ಬಿಲು
ಜಾಣರುರವಣೆ ಲಜ್ಜಿಸಿತು ಲೋಕದ ಧನುರ್ಧರರ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೂಳು ಹತ್ತಿದ ಸೂರ್ಯಬಿಂಬವನ್ನು ಉಜ್ಜಿ ಹೊಳಪುಗೊಳಿಸಲು ಸಾಣೆ ಹಿಡಿಯಲು, ನಕ್ಷತ್ರಗಳಿಗೆ ತೂತುಕೊರೆಯಲು( ?) ಬ್ರಹ್ಮನು ಸೃಷ್ಟಿಸಿದ ಕಂಬಿಗಳೋ ಎನುವಂತೆ ಬಿಲ್ಗಾರರು ಬಿಡುತ್ತಿದ್ದ ಬಾಣಗಳು ಕಂಡವು. ಅರರೆ ! ಆಕಾಶವೇ ಕಾಣಿಸುತ್ತಿಲ್ಲ. ದಿಕ್ಕುಗಳ ಎಣನ್ನು ಮುರಿಯುವಂತೆ ಬಾಣ ಪ್ರಯೋಗ ಮಾಡುತ್ತಿದ್ದ ಬಿಲ್ಗಾರರ ಆರ್ಭಟ ಲೋಕದ ಪ್ರಸಿದ್ಧ ಬಿಲ್ಲುಗಾರರು ನಾಚುವಂತೆ ಮಾಡಿತು.
ಪದಾರ್ಥ (ಕ.ಗ.ಪ)
ಭಗಣರತ್ನ-ತಾರಾರತ್ನ, ಸಲಾಕೆ-ತೆಳುಕಂಬಿ, ಏಣು-ವ್ಯಾಪ್ತಿ (ಅಂಚು), ಉರವಣೆ-ಸಾಹಸ, ಲಜ್ಜಿಸು-ನಾಚಿಕೆಗೊಳಿಸು ಆಣಿಗಳೆ- ರಂಧ್ರ ಮಾಡು ?
ಮೂಲ ...{Loading}...
ರೇಣು ಹತ್ತಿದ ರವಿಯ ಮಸೆಯಲು
ಸಾಣೆಗಿಕ್ಕಿತೊ ಭಗಣರತ್ನವ
ನಾಣಿಗಳೆಯಲು ಕಮಲಭವ ಸೃಜಿಸಿದ ಸಲಾಕೆಗಳೊ
ಕಾಣೆನಭ್ರವನಮಮ ದಿಕ್ಕುಗ
ಳೇಣು ಮುರಿಯಲು ಹೊಕ್ಕೆಸುವ ಬಿಲು
ಜಾಣರುರವಣೆ ಲಜ್ಜಿಸಿತು ಲೋಕದ ಧನುರ್ಧರರ ॥18॥
೦೧೯ ವೀರ ಧಣುಧಣು ...{Loading}...
ವೀರ ಧಣುಧಣು ಪೂತುರೇ ಬಿಲು
ಗಾರ ಮಝರೇ ಚಾಪತಂತ್ರವಿ
ಶಾರದಾ ಎನುತೊಬ್ಬರೊಬ್ಬರ ಬಿರುದ ಮೂದಲಿಸಿ
ಓರಣದ ಕಣೆಗಳಲಿ ತಲೆಗಳ
ತೋರಣವ ಕಟ್ಟಿದರು ಸೇನಾ
ಮಾರಣಾಧ್ವರವೆಸೆದುದರುಣಜಲಾಜ್ಯಧಾರೆಯಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರಾ ಭಲೆ ಭಲೆ, ಶಬ್ಬಾಸ್ ! ಬಿಲ್ಗಾರಾ ! ಮಝರೇ ! ಬಿಲ್ವಿದ್ಯಾಚತುರಾ ! ಎಂಬುದಾಗಿ ಒಬ್ಬರೊಬ್ಬರ ಬಿರುದುಗಳನ್ನು ಅವಹೇಳನಗೈಯುತ್ತಾ ತಮ್ಮ ಬಾಣಗಳ ತುದಿಗಳಲ್ಲಿ (ನಿರಂತರವಾಗಿ) ಶತ್ರುರಾಜರ ತಲೆಗಳನ್ನು ತೋರಣ ಕಟ್ಟಿದರು. (ಕೊಂದರು). ರಕ್ತವೆಂಬ ತುಪ್ಪದ ಧಾರೆಯಲ್ಲಿ ಶತ್ರುಸೇನೆಗಳ ನಾಶವೆಂಬ ಮಾರಣಹೋಮ ಚೆನ್ನಾಗಿ ನಡೆಯಿತು.
ಪದಾರ್ಥ (ಕ.ಗ.ಪ)
ಧಣುಧಣು, ಪೂತುರೇ ಮಝರೆ-ಇವು ಮರಾಠಿ ಭಾಷೆಯಲ್ಲಿ ಮೆಚ್ಚುಗೆಯ ನುಡಿಗಳು, ಅರುಣಜಲ-ರಕ್ತ ಆಜ್ಯ-ತುಪ್ಪ, ಮಾರಣಾಧ್ವರ-ಶತ್ರುನಾಶಕ್ಕೆ ಮಾಡುವ ಘೋರ ಯಾಗ
ಮೂಲ ...{Loading}...
ವೀರ ಧಣುಧಣು ಪೂತುರೇ ಬಿಲು
ಗಾರ ಮಝರೇ ಚಾಪತಂತ್ರವಿ
ಶಾರದಾ ಎನುತೊಬ್ಬರೊಬ್ಬರ ಬಿರುದ ಮೂದಲಿಸಿ
ಓರಣದ ಕಣೆಗಳಲಿ ತಲೆಗಳ
ತೋರಣವ ಕಟ್ಟಿದರು ಸೇನಾ
ಮಾರಣಾಧ್ವರವೆಸೆದುದರುಣಜಲಾಜ್ಯಧಾರೆಯಲಿ ॥19॥
೦೨೦ ಪ್ರಳಯದಿವಸದ ಪಟುಪವನನೀ ...{Loading}...
ಪ್ರಳಯದಿವಸದ ಪಟುಪವನನೀ
ಹಿಳುಕುಗಾಳಿಯೊಳುದಿಸಿದುದೊ ಮಿಗೆ
ಮೊಳಗಿ ಮೋದುವ ಸಿಡಿಲ್ಗಳಂಬಿನ ಮೊನೆಯೊಳುದಿಸಿದುದೊ
ಜಲಧಿಯಲಿ ಜಂಗುಳಿಸಿ ಕುಧರಕೆ
ಕುಲಿಶಭೀತಿಯ ಬೀರಿ ಕಣೆ ಬಳಿ
ಸಲಿಸಿ ಹರಿದಾಡಿದವು ಸುಭಟರ ಗೋಣ ಗುರಿಮಾಡಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಳಯಕಾಲದ ಬಿರುಗಾಳಿ ಈ ಬಾಣಗಳ ಹಿಳುಕುಗಳ ಗರಿಗಳಿಂದ ಹುಟ್ಟಿ ಬಂತೋ ಅಥವಾ ಬಲವಾಗಿ ಗರ್ಜಿಸಿ ಮೇಲೆರಗುವ ಸಿಡಿಲುಗಳು ಬಾಣಗಳ ತುದಿಗಳಿಂದ ಜನಿಸಿದವೊ, ಭಟರು ಬೀರಿದ ಬಾಣಗಳು ಸಾಗರದಲ್ಲಿ ಮುಳುಗಾಡಿ ಅದರೊಳಗೆ ಅಡಗಿದ ಪರ್ವತಕ್ಕೆ ವಜ್ರಾಯುಧದ ಭೀತಿಯನ್ನುಂಟುಮಾಡಿದವೊ ಎಂಬಂತೆ ಸುಭಟರ ಕಂಠಗಳನ್ನು ಗುರಿಯಾಗಿರಿಸಿಕೊಂಡು ಬಾಣಗಳು ಸಂಚರಿಸಿದವು.
ಪದಾರ್ಥ (ಕ.ಗ.ಪ)
ಪಟುಪವನ-ಬಿರುಗಾಳಿ, ಹಿಳುಕುಗಳು-ಬಾಣದ ಹಿಂಬದಿಯ ಗರಿಗಳು, ಜಂಗುಳಿಸಿ-ಮುಳುಗಾಡಿ, ಕುಧರ-ಪರ್ವತ,
ಮೂಲ ...{Loading}...
ಪ್ರಳಯದಿವಸದ ಪಟುಪವನನೀ
ಹಿಳುಕುಗಾಳಿಯೊಳುದಿಸಿದುದೊ ಮಿಗೆ
ಮೊಳಗಿ ಮೋದುವ ಸಿಡಿಲ್ಗಳಂಬಿನ ಮೊನೆಯೊಳುದಿಸಿದುದೊ
ಜಲಧಿಯಲಿ ಜಂಗುಳಿಸಿ ಕುಧರಕೆ
ಕುಲಿಶಭೀತಿಯ ಬೀರಿ ಕಣೆ ಬಳಿ
ಸಲಿಸಿ ಹರಿದಾಡಿದವು ಸುಭಟರ ಗೋಣ ಗುರಿಮಾಡಿ ॥20॥
೦೨೧ ಕುಣಿದೆಸುವ ಕುಕಿಲಿರಿವ ...{Loading}...
ಕುಣಿದೆಸುವ ಕುಕಿಲಿರಿವ ಬಿರುದರ
ನಣಕಿಸುವ ಬಲುಬಿಲ್ಲನೊದರಿಸಿ
ಹಣುಗಿ ಕಣು ನಟ್ಟಾಲಿಗೊಳೆ ತಳಮಂಡಿ ಮರನಾಗೆ
ಹೊಣಕಿಗರು ರಣದವಕಿಗರು ಬಿರು
ಗಣೆ ಸವೆಯಲೆಚ್ಚಾಡಿದರು ಮಿಗೆ
ಮಣಿಯದದಟರು ಸುರಗಿಗಳನುಗಿದೊಡನೆ ಹಳಚಿದರು ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಣಿದು ಕುಪ್ಪಳಿಸಿ ಅಂಬೆಸೆದರು. ಎಸೆದು ನಲಿವಿಂದ ಕುಕಿಲಿರಿಯುವರು (ಸಂತೋಷದಿಂದ ಕೇಕೆ ಹಾಕುವರು). ಬಿರುದಾಂಕಿತ ವೀರರನ್ನು ಹಂಗಿಸುವರು ಭಾರಿ ಬಿಲ್ಲನ್ನು ಒದರಿಸಿ (ಠೇಂಕಾರ ಮಾಡಿ) ಬಾಗಿಸಿ ನೆಟ್ಟ ಕಣ್ಣಿನಿಂದ ನೋಡುತ್ತಿರಲು ತಳ ಮಂಡಿ ಮರಗಟ್ಟುವಂತೆ ರಣತವಕಿಗಳಾದ ಆ ಹೋರಾಟಗಾರರು ತೀಕ್ಷ್ಮ ಬಾಣಗಳನ್ನು ಸವೆಸುತ್ತಾ ಯುದ್ಧ ಮಾಡಿದರು. ಯಾರಿಗೂ ಬಾಗದ ವೀರರು ಕತ್ತಿಗಳನ್ನು ಹಿರಿದೆತ್ತಿಕೊಂಡು ಒಡನೊಡನೆ ತಾಗಿದರು.
ಪದಾರ್ಥ (ಕ.ಗ.ಪ)
ಕುಕಿಲ್-ಕೇಕೆ, ಹಣಗಿ-ಬಾಗಿ, ಹೊಣಕಿಗರು-ಹೋರಾಟಗಾರರು, ಎಚ್ಚಾಡು-ಯುದ್ಧಮಾಡಿದರು, ಸುರಗಿ-ಕತ್ತಿ,
ಮೂಲ ...{Loading}...
ಕುಣಿದೆಸುವ ಕುಕಿಲಿರಿವ ಬಿರುದರ
ನಣಕಿಸುವ ಬಲುಬಿಲ್ಲನೊದರಿಸಿ
ಹಣುಗಿ ಕಣು ನಟ್ಟಾಲಿಗೊಳೆ ತಳಮಂಡಿ ಮರನಾಗೆ
ಹೊಣಕಿಗರು ರಣದವಕಿಗರು ಬಿರು
ಗಣೆ ಸವೆಯಲೆಚ್ಚಾಡಿದರು ಮಿಗೆ
ಮಣಿಯದದಟರು ಸುರಗಿಗಳನುಗಿದೊಡನೆ ಹಳಚಿದರು ॥21॥
೦೨೨ ಅಹಿಯ ನಾಲಗೆ ...{Loading}...
ಅಹಿಯ ನಾಲಗೆ ಮೃತ್ಯುವಿನ ಹಲು
ಗುಹೆಗಳನು ಕಳೆದಂತೆ ಸಿಡಿಲಿನ
ಬಹಳ ಧೃತಿಗೆಡೆದಂತೆ ಕುಲಿಶದ ತಿರುಳ ಮಸೆದಂತೆ
ಮಹಿಯದಿರಲಿದಿರಾಂತು ಸುರಗಿಯೊ
ಳಹಮಿನದಟರು ಬಿರುದುಗೆದರು
ತ್ತಹಿತರಿರಿದಾಡಿದರು ಪಡೆದರು ರೌದ್ರರಂಜನೆಯ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದಿಶೇಷನ ನಾಲಗೆ ಅಂತಕನ ಹಲ್ಲಿನ ಗುಹೆಗಳನ್ನು ನಾಶಮಾಡಿದಂತೆ, ಸಿಡಿಲಿನ ದಿಟ್ಟತನವನ್ನು ಕಳೆದಂತೆ, ವಜ್ರಾಯುಧದ ಸತ್ವವನ್ನು ನಾಶಮಾಡಿದಂತೆ, ಭೂಮಿ ನಡುಗುವಂತೆ ಸ್ಪರ್ಧಿಸುತ್ತಾ ಶೌರ್ಯದಿಂದ ಗರ್ವಿತರಾದ ಶೂರರು ತಮ್ಮ ಸಾಹಸ ಪ್ರದರ್ಶಿಸುತ್ತಾ, ಶತ್ರುಗಳನ್ನು ಕತ್ತಿಗಳಿಂದ ಇರಿದುಕೊಂದರು. ಈ ರೀತಿಯಾಗಿ ಘೋರ ಮನೋರಂಜನೆ ಹೊಂದಿದರು.
ಪದಾರ್ಥ (ಕ.ಗ.ಪ)
ಹಲು-ಹಲ್ಲು, ಧೃತಿಗೆಡೆದಂತೆ-ದಿಟ್ಟತನ ಕಳೆಯದಂತೆ, ಮಸೆ-ನಾಶಮಾಡು, ಇದಿರಾಂತು-ಸ್ಪರ್ಧಿಸುತ್ತಾ, ಅಹಮಿನದಟರು-ಗರ್ವಿಷ್ಠ ವೀರರು, ರೌದ್ರರಂಜನೆ-ಘೋರಮನರಂಜನೆ.
ಮೂಲ ...{Loading}...
ಅಹಿಯ ನಾಲಗೆ ಮೃತ್ಯುವಿನ ಹಲು
ಗುಹೆಗಳನು ಕಳೆದಂತೆ ಸಿಡಿಲಿನ
ಬಹಳ ಧೃತಿಗೆಡೆದಂತೆ ಕುಲಿಶದ ತಿರುಳ ಮಸೆದಂತೆ
ಮಹಿಯದಿರಲಿದಿರಾಂತು ಸುರಗಿಯೊ
ಳಹಮಿನದಟರು ಬಿರುದುಗೆದರು
ತ್ತಹಿತರಿರಿದಾಡಿದರು ಪಡೆದರು ರೌದ್ರರಂಜನೆಯ ॥22॥
೦೨೩ ಮೀರಿ ತಳಸಞ್ಚದೊಳು ...{Loading}...
ಮೀರಿ ತಳಸಂಚದೊಳು ಮೊನೆಯನು
ತೋರಿ ತಿರುಪಿನೊಳಣೆದು ಕಳಚುವ
ರೇರುಗಾಣದೆ ಮಧ್ಯಸಂಚಕೆ ಸಿಲುಕಿ ಕೈಮಾಡಿ
ಜಾರಿ ಸುರಗಿಯೊಳಣೆವರಳುಕದೆ
ಮೀರಿದುಪ್ಪರಸಂಚದಲಿ ಕೈ
ದೋರಿ ದಂಡೆಯನೆತ್ತಿ ಕಾದಿತು ಸುರಗಿಯತಿಬಲರು ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಿಯುದ್ಧದ ವೀರಾಧಿವೀರರು ಅತಿಶಯ ರೀತಿಯಲ್ಲಿ ಕತ್ತಿಯನ್ನು ತಳಭಾಗದಲ್ಲಿ ಬೀಸುವ ವರಸೆಯಿಂದ ಸಾಹಸ ತೋರಿಸುತ್ತ, ಸುತ್ತ ತಿವಿಯುತ್ತ ಬೇರ್ಪಟ್ಟರು. ಏಟು ಬೀಳದೆಯೆ ಮಧ್ಯಭಾಗದ ಹೊಡೆತಕ್ಕೆ ಸಿಲುಕಿದಾಗ ಕತ್ತಿ ಬೀಸಿ ತಪ್ಪಿಸಿಕೊಳ್ಳುತ್ತ ಕತ್ತಿಯಿಂದ ಹೋರಾಡಿದರು. ಅಂಜದೆ ಎತ್ತರದಲ್ಲಿ ಕತ್ತಿವರಸೆಯಲ್ಲಿ ಕೈಮಾಡುತ್ತ, ವರಸೆಯಲ್ಲಿ ಕತ್ತಿ ಬೀಸುತ್ತ, ಕತ್ತಿ ವೀರರು ಹೋರಾಡಿದರು.
ಪದಾರ್ಥ (ಕ.ಗ.ಪ)
ತಿರುಪಿನಲಿ ಅಣೆದು-ಸುತ್ತುತ್ತ ತಿವಿಯುತ್ತಾ, ಕಳಚು-ಬೇರ್ಪಡು
ಟಿಪ್ಪನೀ (ಕ.ಗ.ಪ)
ತಳಸಂಚ-ತಳಭಾಗದಲ್ಲಿ (ಕಾಲಕೆಳಗೆ) ಕತ್ತಿ ಬೀಸುವ ವರಸೆ
ಮಧ್ಯಸಂಚ-ನಡುಭಾಗದಲ್ಲಿ ಕತ್ತಿ ಬೀಸುವ ವರಸೆ
ಉಪ್ಪರ ಸಂಚ-ಮೇಲ್ಭಾಗದಲ್ಲಿ (ತಲೆ ಮೇಲೆ) ಕತ್ತಿ ಬೀಸುವ ವರಸೆ
ಮೂಲ ...{Loading}...
ಮೀರಿ ತಳಸಂಚದೊಳು ಮೊನೆಯನು
ತೋರಿ ತಿರುಪಿನೊಳಣೆದು ಕಳಚುವ
ರೇರುಗಾಣದೆ ಮಧ್ಯಸಂಚಕೆ ಸಿಲುಕಿ ಕೈಮಾಡಿ
ಜಾರಿ ಸುರಗಿಯೊಳಣೆವರಳುಕದೆ
ಮೀರಿದುಪ್ಪರಸಂಚದಲಿ ಕೈ
ದೋರಿ ದಂಡೆಯನೆತ್ತಿ ಕಾದಿತು ಸುರಗಿಯತಿಬಲರು ॥23॥
೦೨೪ ಅಣೆದರೌಕುವ ಸೋಙ್ಕಿ ...{Loading}...
ಅಣೆದರೌಕುವ ಸೋಂಕಿ ತಿವಿದರೆ
ಹೆಣನ ತೋರುವ ಹಜ್ಜೆದೆಗೆದರೆ
ಜುಣಗಲೀಯದೆ ಮೇಲೆ ಕವಿಸುವ ಮೀರಿ ಕೈಮಾಡಿ
ಕೆಣಕಿದರೆ ಝಂಕಿಸುವ ನಿಟ್ಟಿಸಿ
ಹಣುಗಿ ಮೊನೆಗೊಡೆ ದಂಡೆಯೊಳು ಖಣಿ
ಖಣಿಲು ರವವೆಸೆಯಲ್ಕೆ ಕಾದಿತು ಸುರಗಿಯತಿಬಲರು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇಲೆಬಿದ್ದರೆ ಹಿಡಿದು ಅದುಮುವ, ತಾಗಿ ಹೋರಾಡಿದರೆ ಸಾವಿಗೀಡು ಮಾಡುವ, ಹಿಂದಕ್ಕೆ ಸರಿಯ ತೊಡಗಿದರೆ ಜಾರಲು ಅವಕಾಶವೀಯದೆ ಮೇಲೆ ಬೀಳುವ, ಅಧಿಕಕೋಪದಿಂದ ಹೋರಾಡಿ ಕೆರಳಿಸಿದರೆ ಬೆದರಿಸಿ ಕಂಗೆಡಿಸುವ, ದುರುಗುಟ್ಟುಗೊಂಡು ಹೋರಾಡುವ, ಆಯುಧ ಝಳಪಿಸಿದರೆ ವರಸೆಯಲ್ಲಿ ಕತ್ತಿ ಬೀಸುತ್ತಾ, ವ್ಯೂಹದಲ್ಲಿ ಹೋರಾಡುತ್ತಾ, ಖಣಿ ಖಣಿಲು ಶಬ್ದವುಂಟಾಗುವ ಹಾಗೆ ಅತಿಬಲರಾದ ಖಡ್ಗವೀರರು ಹೋರಾಡಿದರು.
ಪದಾರ್ಥ (ಕ.ಗ.ಪ)
ಜುಣುಗಲು-ಜಾರಲು, ಝಂಕಿಸು-ಬೆದರಿಸು, ದಂಡೆ-ವರಸೆ, ಮೊನೆಗೊಡು-ಹೋರಾಡು, ಸುರಗಿಯತಿಬಲರು-ಅತಿಬಲರಾದ ಖಡ್ಗವೀರರು.
ಮೂಲ ...{Loading}...
ಅಣೆದರೌಕುವ ಸೋಂಕಿ ತಿವಿದರೆ
ಹೆಣನ ತೋರುವ ಹಜ್ಜೆದೆಗೆದರೆ
ಜುಣಗಲೀಯದೆ ಮೇಲೆ ಕವಿಸುವ ಮೀರಿ ಕೈಮಾಡಿ
ಕೆಣಕಿದರೆ ಝಂಕಿಸುವ ನಿಟ್ಟಿಸಿ
ಹಣುಗಿ ಮೊನೆಗೊಡೆ ದಂಡೆಯೊಳು ಖಣಿ
ಖಣಿಲು ರವವೆಸೆಯಲ್ಕೆ ಕಾದಿತು ಸುರಗಿಯತಿಬಲರು ॥24॥
೦೨೫ ಬೀಯವಾದರು ಬಿಲ್ಲವರು ...{Loading}...
ಬೀಯವಾದರು ಬಿಲ್ಲವರು ಖ
ಳ್ಗಾಯುಧರು ಕೈಕೊಳಲಿ ದಿವಿಜ
ಶ್ರೀಯು ತಪ್ಪದು ಸಮರಮುಖದಲಿ ಮಡಿದ ವೀರರಿಗೆ
ರಾಯ ಮೆಚ್ಚಲು ರಣದೊಳೊದಗುವ
ರಾಯತಿಕೆಯಂತೆನುತ ಸೇನಾ
ನಾಯಕರು ನೂಕಿದರು ಖಂಡೆಯಕಾರ ಮೋಹರವ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲುಗಾರರೆಲ್ಲ ನಾಶವಾದರು. ಖಡ್ಗ ವೀರರೇ ಮುನ್ನುಗ್ಗಿರಿ, ರಣರಂಗದಲ್ಲಿ ಹೋರಾಡಿ ಮಡಿದ ವೀರರಿಗೆ ಸ್ವರ್ಗಸಿರಿ ಸುಖ ತಪ್ಪುವುದಿಲ್ಲ. ತನ್ನೊಡೆಯ ಮೆಚ್ಚುವ ಹಾಗೆ ರಣರಂಗದಲ್ಲಿ ಹೋರುವವರ ಮಹಿಮೆ ಎಷ್ಟೆಂದು ಹೇಳೋಣ ಎನ್ನುತ್ತ ಸೇನಾಧಿಪತಿಗಳು ಖಡ್ಗವೀರರ ಸೇನೆಯನ್ನು ರಣರಂಗದಲ್ಲಿ ಮುನ್ನುಗ್ಗಿಸಿದರು.
ಪದಾರ್ಥ (ಕ.ಗ.ಪ)
ಖಳ್ಗಾಯುಧರು-ಖಂಡೆಯಕಾರರು-ಕತ್ತಿ ಸೈನಿಕರು, ದಿವಿಜಶ್ರೀ-ಸ್ವರ್ಗಸಿರಿ, ಆಯತಿಕೆ-ಸಾಮಥ್ರ್ಯ, ಮೋಹರ-ಸೇನೆ, ನೂಕಿದರು-ಮುನ್ನುಗ್ಗಿಸಿದರು,
ಮೂಲ ...{Loading}...
ಬೀಯವಾದರು ಬಿಲ್ಲವರು ಖ
ಳ್ಗಾಯುಧರು ಕೈಕೊಳಲಿ ದಿವಿಜ
ಶ್ರೀಯು ತಪ್ಪದು ಸಮರಮುಖದಲಿ ಮಡಿದ ವೀರರಿಗೆ
ರಾಯ ಮೆಚ್ಚಲು ರಣದೊಳೊದಗುವ
ರಾಯತಿಕೆಯಂತೆನುತ ಸೇನಾ
ನಾಯಕರು ನೂಕಿದರು ಖಂಡೆಯಕಾರ ಮೋಹರವ ॥25॥
೦೨೬ ತಾಟಿಸಿದರೊಡನೊಡನೆ ಕುಲಗಿರಿ ...{Loading}...
ತಾಟಿಸಿದರೊಡನೊಡನೆ ಕುಲಗಿರಿ
ದೂಟಿ ಬಿದ್ದವು ಚಿತ್ರದಲಿ ನಡೆ
ಗೋಟೆಯೆನೆ ಮಂಡಳಿಸಿ ಬಲಿದರು ತೆಕ್ಕೆವರಿಗೆಗಳ
ನೋಟದಮರರ ನಯನಗಳಿಗ
ಲ್ಲಾಟವೆನೆ ಪಯಚಕ್ರಗತಿಗಳ
ತೋಟಿಕಾರರು ಹೊಕ್ಕು ತಾಗಿದರುಭಯ ಸೇನೆಯಲಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನಿಕರು ಪರಸ್ಪರ ಒಬ್ಬರನ್ನೊಬ್ಬರು ತಾಗಿದರು. ಸಪ್ತ ಪರ್ವತಗಳು ಹಾರಿಬಿದ್ದಂತೆ ಆದವು. ಅಚ್ಚರಿಗೊಳಿಸುವಂತೆ ಸೈನ್ಯ ರಚಿಸಿದ ರಕ್ಷಣಾ ವ್ಯೂಹದೊಡನೆ ಗುಂಪು ಗೂಡಿ ವಿಶಿಷ್ಟ ರೀತಿಯ ಗುರಾಣಿಗಳನ್ನು ಧರಿಸಿದ ಶೂರರು ಶತ್ರುಗಳನ್ನು ಬಲಿಹಾಕಿದರು. ಇವರ ಸಾಹಸಗಳನ್ನು ವೀಕ್ಷಿಸುತ್ತಿದ್ದ ದೇವತೆಗಳ ಕಣ್ಣಿಗೆ ಆಕರ್ಷಕವಾಗುವಂತೆ ಕಾಳಗದ ನಡೆಗತಿಯ ಯುದ್ಧವೀರರು ಎರಡೂ ಸೇನೆಗಳಲ್ಲಿ ನುಗ್ಗಿ ಹೋರಾಡಿದರು.
ಪದಾರ್ಥ (ಕ.ಗ.ಪ)
ನಡೆಗೋಟೆ-ಸೈನಿಕರ ಕೋಟೆ, ದೂಟು-ಹಾರು, ಚಿಮ್ಮು, ತೆಕ್ಕೆವರಿಗೆ-ಒಂದು ಬಗೆ ಗುರಾಣಿ, ಗುರಾಣಿಗಳ ಸಾಲು, ತೋಟಿಕಾರರು-ಯುದ್ಧ ವೀರರು, ಅಲ್ಲಾಟ-ಚಂಚಲತೆ, ಆಕರ್ಷಣೆ
ಮೂಲ ...{Loading}...
ತಾಟಿಸಿದರೊಡನೊಡನೆ ಕುಲಗಿರಿ
ದೂಟಿ ಬಿದ್ದವು ಚಿತ್ರದಲಿ ನಡೆ
ಗೋಟೆಯೆನೆ ಮಂಡಳಿಸಿ ಬಲಿದರು ತೆಕ್ಕೆವರಿಗೆಗಳ
ನೋಟದಮರರ ನಯನಗಳಿಗ
ಲ್ಲಾಟವೆನೆ ಪಯಚಕ್ರಗತಿಗಳ
ತೋಟಿಕಾರರು ಹೊಕ್ಕು ತಾಗಿದರುಭಯ ಸೇನೆಯಲಿ ॥26॥
೦೨೭ ಬಲಸಮುದ್ರದ ಬುದ್ಬದಙ್ಗಳೊ ...{Loading}...
ಬಲಸಮುದ್ರದ ಬುದ್ಬದಂಗಳೊ
ತಿಳಿಯಲರಿದೆನೆ ಹರಿಗೆ ಮುಸುಕಿತು
ಬಿಳಿಯ ಚೌರಿಗಳುಲಿವ ಘಂಟೆಯ ಬಿರುದಿನುಬ್ಬಟೆಯ
ತಲಪಟದೊಳೌಕಿದರು ತೊಡೆಸಂ
ಕಲೆಯ ತೊಲಗದ ಕಂಭದಪ್ರತಿ
ಬಲರು ಹಾಣಾಹಾಣಿಯಲಿ ಹೊಯಿದಾಡಿದರು ಕಡುಗಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನಾ ಸಾಗರದ ನೊರೆಗುಳ್ಳೆಗಳೊ ಏನೋ ತಿಳಿಯುವುದು ಕಷ್ಟ ಎಂಬಂತೆ ಗುರಾಣಿಗಳು (ಢಾಲುಗಳು) ಮುಸುಕಿದವು. ಬಿಳಿಯ ಚಾಮರಗಳನ್ನೂ, ಸದ್ದು ಮಾಡುವ ಗಂಟೆಗಳನ್ನೂ ಕೂಡಿಕೊಂಡ ಬಿರುದುಗಳ ಘೋಷಣೆಯೊಂದಿಗೆ ರಣಭೂಮಿಯಲ್ಲಿ ಸೈನಿಕರು ಆಕ್ರಮಣಶಾಲಿಗಳಾಗಿ ನುಗ್ಗಿದರು. ತೊಡೆ ಸರಪಳಿಗಳನ್ನು ಧರಿಸಿದ ಕಂಬದಂತೆ ಸ್ಥಿರವಾಗಿ ನಿಂತು ಅಪ್ರತಿಮ ಶೂರರು ಸಾಹಸದಿಂದ ವಿಜೃಂಭಿಸಿ ಒಬ್ಬರನ್ನೊಬ್ಬರು ನೇರವಾಗಿ ತಾಗುತ್ತ (ಹಾಣಾಹಣಿಯಲ್ಲಿ) ಹೋರಾಡಿದರು.
ಪದಾರ್ಥ (ಕ.ಗ.ಪ)
ಹರಿಗೆ-ಢಾಲು, ತಳಪಟ-ರಣಭೂಮಿ, ಉಬ್ಬಟೆ-ಘೋಷಣೆ, ಚೌರಿ-ಚಾಮರ, ಅಪ್ರತಿಬಲರು-ಅಪ್ರತಿಮ ಶೂರರು, ಹಾಣಾಹಾಣಿ-ಹಣಾಹಣಿ, ಒಬ್ಬರನ್ನೊಬ್ಬರು ನೇರವಾಗಿ ತಾಗುತ್ತಾ
ಮೂಲ ...{Loading}...
ಬಲಸಮುದ್ರದ ಬುದ್ಬದಂಗಳೊ
ತಿಳಿಯಲರಿದೆನೆ ಹರಿಗೆ ಮುಸುಕಿತು
ಬಿಳಿಯ ಚೌರಿಗಳುಲಿವ ಘಂಟೆಯ ಬಿರುದಿನುಬ್ಬಟೆಯ
ತಲಪಟದೊಳೌಕಿದರು ತೊಡೆಸಂ
ಕಲೆಯ ತೊಲಗದ ಕಂಭದಪ್ರತಿ
ಬಲರು ಹಾಣಾಹಾಣಿಯಲಿ ಹೊಯಿದಾಡಿದರು ಕಡುಗಿ ॥27॥
೦೨೮ ಸಿಡಿಲ ಹೆತ್ತುದೊ ...{Loading}...
ಸಿಡಿಲ ಹೆತ್ತುದೊ ಜಡಿವ ನಿಸ್ವನ
ಕಡುಹೊಗರು ಬೆಸಲಾಯ್ತೊ ನಭವನು
ಹೊಡೆಗೊಳಿಸಲುಚ್ಚಳಿಪ ಕಿಡಿ ವಡಬಂಗೆ ಪಿತನೆನಲು
ಕುಡಿಮೊನೆಯೊಳಹಿಪತಿಯ ನಾಲಗೆ
ಗಡಣವುದಿಸಿದವೆನೆ ಕೃಪಾಣದ
ಕಡುಹು ಕೌತುಕವಾಯ್ತು ಖಂಡೆಯಕಾರ ಮೋಹರದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಿಗೆ ಕತ್ತಿ ತಾಕಿ ಏಳುವ ಸದ್ದಿನಿಂದ ಹೊರಡುವ ಕಿಡಿಗಳ ಪ್ರಜ್ವಲಕಾಂತಿಯೇ ಸಿಡಿಲನ್ನು ಹೆತ್ತಿತೊ ಆಕಾಶವನ್ನು ಅಪ್ಪಳಿಸುವ ಬಡಬಾನಲನಿಗೆ ತಂದೆಯೋ ಎಂಬ ಹಾಗೆ ಕತ್ತಿಗಳ ತಾಕಲಾಟದಿಂದ ಚಿಮ್ಮಿದ ಕಿಡಿಗಳು ಹುಟ್ಟಿದವೋ, ಚೂಪಾದ ಕತ್ತಿಯ ತುದಿಗಳಲ್ಲಿ ಆದಿಶೇಷನ ನಾಲಗೆಗಳು ಹುಟ್ಟಿಕೊಂಡವೋ ಎಂಬಂತೆ ಖಡ್ಗವೀರರ ಸೇನೆಯು ಕತ್ತಿಗಳ ಸಾಮಥ್ರ್ಯ ಪ್ರದರ್ಶಿಸಿ ಕುತೂಹಲಕ್ಕೆ ಎಡೆಗೊಟ್ಟಿತು.
ಪದಾರ್ಥ (ಕ.ಗ.ಪ)
ವಡಬ-ಬಡಬಾನಲ, ನಿಸ್ವನ-ಸದ್ದು, ಹೊಡೆಗೊಳಿಸಲು-ಅಪ್ಪಳಿಸಲು, ಕಡುಹೊಗರು-ಪ್ರಜ್ವಲಕಾಂತಿ, ಕುಡಿಮೊನೆ-ಚೂಪಾದಕತ್ತಿ ತುದಿ, ಕೃಪಾಣ-ಕತ್ತಿ
ಮೂಲ ...{Loading}...
ಸಿಡಿಲ ಹೆತ್ತುದೊ ಜಡಿವ ನಿಸ್ವನ
ಕಡುಹೊಗರು ಬೆಸಲಾಯ್ತೊ ನಭವನು
ಹೊಡೆಗೊಳಿಸಲುಚ್ಚಳಿಪ ಕಿಡಿ ವಡಬಂಗೆ ಪಿತನೆನಲು
ಕುಡಿಮೊನೆಯೊಳಹಿಪತಿಯ ನಾಲಗೆ
ಗಡಣವುದಿಸಿದವೆನೆ ಕೃಪಾಣದ
ಕಡುಹು ಕೌತುಕವಾಯ್ತು ಖಂಡೆಯಕಾರ ಮೋಹರದ ॥28॥
೦೨೯ ಕರೆಕರೆದು ಮೂದಲಿಸಿ ...{Loading}...
ಕರೆಕರೆದು ಮೂದಲಿಸಿ ಕಡುಹಿನ
ದುರುಳರುಬ್ಬಿನ ಮೇಲೆ ಹೊಕ್ಕ
ಬ್ಬರಿಸಿ ಹೊಯಿದರು ಕಾದಿ ಕೊಂಡರು ಕಾಲನರಮನೆಯ
ಕರುಳುಗಿಯೆ ತಲೆ ಸಿಡಿಯೆ ನಿಟ್ಟೆಲು
ಮುರಿಯೆ ಮೂಳೆಗಳುದಿರೆ ಶೋಣಿತ
ಸುರಿಯೆ ಕಾಳಿಜ ಕೆದರೆ ತುಂಡಿಸಿ ಖಂಡ ಬೆಂಡೇಳೆ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮ ಪರಾಕ್ರಮದಿಂದ ಕೊಬ್ಬಿದ ವೀರರು ಎದುರಾಳಿಗಳನ್ನು ಕರೆಕರೆದು ಹಂಗಿಸಿ ಗರ್ವದಿಂದ ಅವರ ಮೇಲೆ ಬಿದ್ದು ಆರ್ಭಟಿಸುತ್ತಾ ಶತ್ರುಗಳನ್ನು ಕತ್ತರಿಸಿದರು. ಕಾಳಗದಲ್ಲಿ ಶತ್ರುಗಳ ಕರುಳುಗಳು ಹೊರಗೆ ಚಿಮ್ಮುವಂತೆ, ಮೂಳೆಗಳು ಮುರಿದು ಬೀಳುವಂತೆ, ತಲೆಗಳು ಸಿಡಿದು ಮೇಲಕ್ಕೆ ಹಾರುವಂತೆ, ರಕ್ತವು ಸುರಿಯುವಂತೆ, ಯಕೃತ್ತುಗಳು ಚೆಲ್ಲಾಡುವಂತೆ, ಮಾಂಸ ಖಂಡಗಳು ನಿಸ್ಸಾರವಾಗುವಂತೆ ಕತ್ತರಿಸಿ ಸಾಹಸ ಮೆರೆದರು. ಈ ಹೋರಾಟದಿಂದ ಮಡಿದ ವೀರರು ಯಮನ ಅರಮನೆ ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ಮೂದಲಿಸಿ-ಹಂಗಿಸಿ, ಶೋಣಿತ-ರಕುತ, ಕಾಳಿಜ-ಯಕೃತ್ತು, ಬೆಂಡೇಳೆ-ನಿಸ್ಸಾರವಾಗುವಂತೆ
ಮೂಲ ...{Loading}...
ಕರೆಕರೆದು ಮೂದಲಿಸಿ ಕಡುಹಿನ
ದುರುಳರುಬ್ಬಿನ ಮೇಲೆ ಹೊಕ್ಕ
ಬ್ಬರಿಸಿ ಹೊಯಿದರು ಕಾದಿ ಕೊಂಡರು ಕಾಲನರಮನೆಯ
ಕರುಳುಗಿಯೆ ತಲೆ ಸಿಡಿಯೆ ನಿಟ್ಟೆಲು
ಮುರಿಯೆ ಮೂಳೆಗಳುದಿರೆ ಶೋಣಿತ
ಸುರಿಯೆ ಕಾಳಿಜ ಕೆದರೆ ತುಂಡಿಸಿ ಖಂಡ ಬೆಂಡೇಳೆ ॥29॥
೦೩೦ ಅಡಸಿ ಕಿಡಿಗಳ ...{Loading}...
ಅಡಸಿ ಕಿಡಿಗಳ ಕಾರೆ ಲೋಹದ
ಕಡಿಕು ಸಿಡಿಲುಗ್ಗಡದಲಡ್ಡಣ
ವೊಡೆದು ಕೈಬಂದಿಗೆಯನೆತ್ತಿದಡಿಕ್ಕಲಿಸಿ ಬೀಳೆ
ಫಡ ಸುಖಾಯವ ಬಿಡದಿರಿಮ್ಮೊನೆ
ಗೊಡದಿರುಪ್ಪರದಲ್ಲಿ ಕೈಯನು
ಕೊಡದಿರಾ ಮಿಡುಕದಿರು ಮಂಡಿಯನೆನುತ ಹಳಚಿದರು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿಬಲರು ಹರಿಗೆಗಳನ್ನೊಡ್ಡಿ ಎದುರಿಸಿದಾಗ, ಲೋಹದ ಛಿದ್ರಭಾಗಗಳು ಸಿಡಿಲಿನ ಅಬ್ಬರದಂತೆ ಸದ್ದು ಮಾಡಿ ಕಿಡಿಗಳನ್ನು ಕಾರಲು ಗುರಾಣಿ ಸೀಳಿ ಕೈಹಿಡಿಯನ್ನು ಮೇಲಕ್ಕೆ ಎತ್ತಿದರೆ ಒಡನೆಯೆ ಇಬ್ಭಾಗವಾಗಿ ಕೆಳಕ್ಕೆ ಬಿದ್ದಿತು. ಫಡ ! ಅನುಕೂಲಕರವಾದ ನಿಲುವನ್ನು ಬಿಡದಿರು. ಏಕಮುಖವಾಗಿ ಹೋರಾಡು ಎತ್ತರದಲ್ಲಿ ಕೈ ತಡೆಯಬೇಡ ಮೊಣಕಾಲೂರಿದ್ದನ್ನು ಚಲಿಸಬೇಡ ಎನ್ನುತ್ತ ಹೋರಾಡಿದರು.
ಪದಾರ್ಥ (ಕ.ಗ.ಪ)
ಸುಖಾಯ-ಯೋಗ್ಯ ಪ್ರಮಾಣ (?) (ಕನ್ನಡ ನಿಘಂಟುಗಳಲ್ಲಿ ಈ ಪದ ಇಲ್ಲ ಕುವ್ಯಾನಿಘಂಟು ಎನ್. ಕೆಯಲ್ಲಿ ಮಾತ್ರ ಈ ಅರ್ಥವಿದೆ), ಕೈಬಂದಿಗೆ-ಕೈಪಿಡಿ, ಇಮ್ಮೊನೆಗೊಡದಿರು-ಏಕಮುಖವಾಗಿ ಹೋರಾಡು
ಮೂಲ ...{Loading}...
ಅಡಸಿ ಕಿಡಿಗಳ ಕಾರೆ ಲೋಹದ
ಕಡಿಕು ಸಿಡಿಲುಗ್ಗಡದಲಡ್ಡಣ
ವೊಡೆದು ಕೈಬಂದಿಗೆಯನೆತ್ತಿದಡಿಕ್ಕಲಿಸಿ ಬೀಳೆ
ಫಡ ಸುಖಾಯವ ಬಿಡದಿರಿಮ್ಮೊನೆ
ಗೊಡದಿರುಪ್ಪರದಲ್ಲಿ ಕೈಯನು
ಕೊಡದಿರಾ ಮಿಡುಕದಿರು ಮಂಡಿಯನೆನುತ ಹಳಚಿದರು ॥30॥
೦೩೧ ಕಾಲು ಖಣ್ಡಿಸಿ ...{Loading}...
ಕಾಲು ಖಂಡಿಸಿ ಬೀಳೆ ಕರುಳಿನ
ಮಾಲೆಯೊಳು ತೊಡಕಿದುವು ಹಣಿದದ
ಬಾಳೆಯಂದದೊಳುಡಿಯೆ ತೊಡೆ ನಡು ಮುರಿಯೆ ಕಟಿ ಕೆದರೆ
ತೋಳ ಕೊರೆದರು ನೆಲಕೆ ತಲೆಯನು
ಬೀಳಿಕಿದರೆರಡಾಗಿ ತನುವನು
ಸೀಳುಹೊಯಿದರು ಬೈದು ತಾಗಿತು ಹರಿಗೆಯತಿಬಲರು ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲುಗಳನ್ನು ಕತ್ತರಿಸಿ ಬೀಳಿಸಿದಾಗ ಅವು ಕರುಳಿನ ಜೊಂಪೆಗಳಲ್ಲಿ ಸಿಲುಕಿದವು. ಕತ್ತರಿಸಿದ ಬಾಳೆ ಗಿಡದಂತೆ ತುಂಡಾಗಿ ಬಿದ್ದವು. ಶತ್ರುಗಳನ್ನು ಕತ್ತರಿಸಿದಾಗ ತೊಡೆ, ನಡುಗಳ ಭಾಗಗಳನ್ನು ತುಂಡುಗಳಾಗಿ ಬೇರ್ಪಡುವಂತೆ, ನಡುವಿನ ಭಾಗ ಚೆಲ್ಲಾಪಿಲ್ಲಿಯಾಗಿಸಿದರು. ತೋಳುಗಳನ್ನು ಕತ್ತರಿಸಿದರು. ನೆಲಕ್ಕೆ ತಲೆಯನ್ನು ಉರುಳಿಸಿದರು. ದೇಹವನ್ನು ಎರಡುಭಾಗವಾಗಿ ಸೀಳಿ ಛೇದಿಸಿದರು. ಹರಿಗೆಯ ವೀರರು ಹೀಗೆ ಒಬ್ಬರನ್ನೊಬ್ಬರು ನಿಂದಿಸುತ್ತಾ ಹೋರಾಡಿದರು.
ಪದಾರ್ಥ (ಕ.ಗ.ಪ)
ಮುರಿ-ತುಂಡು, ಹೊಯಿ-ಹೊಡಿ,
ಮೂಲ ...{Loading}...
ಕಾಲು ಖಂಡಿಸಿ ಬೀಳೆ ಕರುಳಿನ
ಮಾಲೆಯೊಳು ತೊಡಕಿದುವು ಹಣಿದದ
ಬಾಳೆಯಂದದೊಳುಡಿಯೆ ತೊಡೆ ನಡು ಮುರಿಯೆ ಕಟಿ ಕೆದರೆ
ತೋಳ ಕೊರೆದರು ನೆಲಕೆ ತಲೆಯನು
ಬೀಳಿಕಿದರೆರಡಾಗಿ ತನುವನು
ಸೀಳುಹೊಯಿದರು ಬೈದು ತಾಗಿತು ಹರಿಗೆಯತಿಬಲರು ॥31॥
೦೩೨ ನಿಲುಕಲಿಟ್ಟೆಡೆಯಾದ ಹೆಣನನು ...{Loading}...
ನಿಲುಕಲಿಟ್ಟೆಡೆಯಾದ ಹೆಣನನು
ತುಳಿದು ರಣದಲಿ ಕುಣಿವ ಮುಂಡವ
ನೆಳೆದು ರುಧಿರದೊಳೌಕಿ ಮೆಟ್ಟುವ ಮುಂದೆ ನಡೆನಡೆದು
ತಲೆಮಿದುಳ ಜೊಂಡಿನಲಿ ಜಾರುವ
ಕಲಹಕಾತರರಿಪುಭಟರನ
ಪ್ಪಳಿಸಿ ಘಾಯಂಬಡೆದು ಮಗ್ಗಿದರುಭಯಸೇನೆಯಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡು ಸೇನೆಗಳಲ್ಲೂ ಶೂರ ಭಟರು ಕೈಗೆ ಎಟುಕಲೂ ಸಾಧ್ಯವಾಗದಷ್ಟು ಎತ್ತರವಾಗಿ ಬಿದ್ದಿದ್ದ ಹೆಣದ ರಾಶಿಯನ್ನು ತುಳಿಯುತ್ತಾ ರಣರಂಗದಲ್ಲಿ ರುಂಡವಿಲ್ಲದಿದ್ದರೂ ಕುಣಿದಾಡುತ್ತಿದ್ದ ಮುಂಡಗಳನ್ನು ಈಚೆಗೆಳೆದು ರಕ್ತ ಪ್ರವಾಹದಲ್ಲಿ ಅದುಮಿ, ಮುಂದಕ್ಕೆ ಸಾಗುತ್ತಾ, ಕಾಲಿಗೆ ಸಿಕ್ಕಿ ತುಳಿಯುತ್ತಿದ್ದ ತಲೆ ಮಿದುಳ ಜೊಂಡಿನಲ್ಲಿ ಜಾರುತ್ತಿದ್ದ ಕಲಹ ಕುತೂಹಲರಾದ ಶತ್ರು ಯೋಧರನ್ನು ಅಪ್ಪಳಿಸಿ ಗಾಯಹೊಂದಿ ದಣಿಯುತ್ತಿದ್ದರು.
ಪದಾರ್ಥ (ಕ.ಗ.ಪ)
ಮಗ್ಗಿದರು-ದಣಿದರು,
ಮೂಲ ...{Loading}...
ನಿಲುಕಲಿಟ್ಟೆಡೆಯಾದ ಹೆಣನನು
ತುಳಿದು ರಣದಲಿ ಕುಣಿವ ಮುಂಡವ
ನೆಳೆದು ರುಧಿರದೊಳೌಕಿ ಮೆಟ್ಟುವ ಮುಂದೆ ನಡೆನಡೆದು
ತಲೆಮಿದುಳ ಜೊಂಡಿನಲಿ ಜಾರುವ
ಕಲಹಕಾತರರಿಪುಭಟರನ
ಪ್ಪಳಿಸಿ ಘಾಯಂಬಡೆದು ಮಗ್ಗಿದರುಭಯಸೇನೆಯಲಿ ॥32॥
೦೩೩ ಉರುಳಿ ಬೀಳುವ ...{Loading}...
ಉರುಳಿ ಬೀಳುವ ತಮ್ಮ ತಲೆಗಳ
ತಿರುಹಿ ರಿಪುಗಳನಿಡುವ ಸಡಿಲಿದ
ಶಿರವನರಿಯದೆ ಮುಂಡದಿದಿರಲಿ ಬೀದಿವರಿವರಿವ
ಹರಿಗೆ ಹೊಳ್ಳಿಸೆ ಖಡುಗ ಖಂಡಿಸೆ
ಕೊರಳರಿಯೆ ದೆಸೆದೆಸೆಯ ಸೇನೆಯೊ
ಳುರವಣಿಸಿ ತಿವಿದರು ಕಬಂಧದೊಳತುಳಭುಜಬಲರು ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉರುಳಿ ಬೀಳುವ ತಮ್ಮ ತಲೆಗಳನ್ನೇ ತಿರುಗಿಸಿಕೊಂಡು, ಶತ್ರುಗಳನ್ನು ಸದೆಬಡೆವ ತಮ್ಮ ತಲೆಗಳು ಸಡಿಲುಗೊಂಡಿದ್ದನ್ನು ಲೆಕ್ಕಿಸದೆ, ಶತ್ರುಗಳ ಎದುರಿನಲ್ಲಿ ಬೀದಿ ಬೀದಿಯಲ್ಲಿ ಮುಂಡದಿಂದ ಹರಿದಾಡುತ್ತ ಢಾಲನ್ನು ಹೊರಳಿಸುತ್ತ, ಕತ್ತಿಯನ್ನು ಝಳಪಿಸುತ್ತ ಕತ್ತುಗಳನ್ನು ಕತ್ತರಿಸುತ್ತ ದಿಕ್ಕು ದಿಕ್ಕುಗಳನ್ನು ಹಬ್ಬಿದ ಶತ್ರುಸೇನೆಗಳ ಮೇಲೆ ಬಿದ್ದು ಅತುಳ ಭುಜಬಲ ವೀರರು ತಿವಿದು ಕೊಲ್ಲುತ್ತಿದ್ದರು.
ಪದಾರ್ಥ (ಕ.ಗ.ಪ)
ಉರವಣಿಸಿ-ಮೇಲೆ ಬಿದ್ದು, ಕಬಂಧ-ಮುಂಡ, ತಲೆಯಿಲ್ಲದ ದೇಹ, ಹೊಳ್ಳಿಸೆ-ಹೊರಳಿಸುತ್ತ, ಬೀದಿವರಿವರಿವ-ಹರಿದಾಡುತ್ತ
ಮೂಲ ...{Loading}...
ಉರುಳಿ ಬೀಳುವ ತಮ್ಮ ತಲೆಗಳ
ತಿರುಹಿ ರಿಪುಗಳನಿಡುವ ಸಡಿಲಿದ
ಶಿರವನರಿಯದೆ ಮುಂಡದಿದಿರಲಿ ಬೀದಿವರಿವರಿವ
ಹರಿಗೆ ಹೊಳ್ಳಿಸೆ ಖಡುಗ ಖಂಡಿಸೆ
ಕೊರಳರಿಯೆ ದೆಸೆದೆಸೆಯ ಸೇನೆಯೊ
ಳುರವಣಿಸಿ ತಿವಿದರು ಕಬಂಧದೊಳತುಳಭುಜಬಲರು ॥33॥
೦೩೪ ನೆಲಕೆ ನಿಗುರುವ ...{Loading}...
ನೆಲಕೆ ನಿಗುರುವ ಗಂಗೆವಾಳದ
ಬಿಳಿಯ ಚೌರಿಗಳುಲಿವ ಗಂಟೆಯ
ತೊಳಪ ಬದ್ದುಗೆ ದಾರ ಕಾಂಚನಮಯದ ಗೊಂಡೆಯದ
ಉಲಿವ ಗೆಜ್ಜೆಯ ಚೆಲ್ಲಣದ ಹೊಂ
ಬಳಿದ ಹರಿಗೆಯ ಹೊಳೆವ ಕಡಿತಲೆ
ಗಳ ವಿಲಾಸದೊಳಂದು ಹೊಕ್ಕುದು ತುಳುವ ಪಡೆ ಕಡುಗಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆಲದಿಂದ ಚಿಮ್ಮುತ್ತಿರುವ ಗಂಗೆವಾಳವೆಂಬ ಕುದುರೆ, ಬಿಳಿಯ ಚಮರೀಮೃಗದ ಕೂದಲ ಕುಚ್ಚು, ಸದ್ದು ಮಾಡುವ ಗಂಟೆಗಳ, ಹೊಳೆಯುವ ಅಂಚಿನದಾರದ (ಸೆರಗಿನದಾರ) ಚಿನ್ನದ ಕಾಂತಿಯ ಕುಚ್ಚುಗಳ, ಸದ್ದುಮಾಡುವ ಗೆಜ್ಜೆಗಳಿರುವ ಚಲ್ಲಣಗಳನ್ನು ಧರಿಸಿದ ಚಿನ್ನದ ಗುರಾಣಿಗಳನ್ನು ಹಿಡಿದ ಕಾಂತಿಯುಕ್ತ ಕತ್ತಿಯೆಂಬ ಹರಿತ ಆಯುಧಗಳನ್ನು ಹಿಡಿದು ಸಂತಸದಿಂದ ತುಳು ಸೇನೆ ಉತ್ಸಾಹದಿಂದ ಮುನ್ನುಗ್ಗಿತು.
ಪದಾರ್ಥ (ಕ.ಗ.ಪ)
ಚೌರಿ-ಚಾಮರ,
ಬದ್ದುಗೆದಾರ-ಹೆಣೆಯದ ಅಂಚಿನದಾರ (ಸೆರಗಿನದಾರ),
ಗೊಂಡೆಯ-ಕುಚ್ಚು,
ಚಲ್ಲಣ-ಚಡ್ಡಿ,
ಹರಿಗೆ-ಗುರಾಣಿ,
ಕಡಿತಲೆ-ಹರಿತ ಆಯುಧ,ರೂಢಿಯಲ್ಲಿ ಚಪ್ಪೆಗೊಡಲಿ ಎಂಬರ್ಥದಲ್ಲಿದೆ ಆದರೆ ಇಲ್ಲಿ ಕತ್ತಿ ಎಂಬರ್ಥ ಬಳಸಿದೆ.
ಕಡುಗಿ-ಉತ್ಸಾಹದಲ್ಲಿ,
ಹೊಕ್ಕುದು-ಮುನ್ನುಗ್ಗಿತು,
ಗಂಗೆವಾಳ- ಒಂದು ಬಗೆಯ ಕುದುರೆ,
ಟಿಪ್ಪನೀ (ಕ.ಗ.ಪ)
ಗಂಗೆವಾಳ - ಒಂದು ಬಗೆಯ ಕುದುರೆ
ಅಭಿನವ ಚಂದ್ರನ ಅಶ್ವಶಾಸ್ತ್ರ ಎರಡನೆಯ ಅಧ್ಯಾಯ , 25ನೆಯ ಪದ್ಯ , ಪ್ರಕಟಣೆ ಮೈಸೂರು ವಿಶ್ವವಿದ್ಯಾನಿಲಯ,
ಪದ್ಯ ಹೀಗಿದೆ.
ಖುರ ನಯನ ವಾಜಿಮುಖಕೇ
ಸರವಾಳ ಕಪೋಲ ಕಕ್ಷವಕ್ಷಂಗಳ್ ಪಾಂ
ಡುರಮಾಗಿರೆ ಮೆಯ್ಗಂಗೆಯ
ನೊರೆಯಂ ಪೋಲ್ತೆಸೆಯೆ ಗಂಗೆವಾಳಿಯೆನಿಕ್ಕುಂ ||25 ||
ಮೂಲ ...{Loading}...
ನೆಲಕೆ ನಿಗುರುವ ಗಂಗೆವಾಳದ
ಬಿಳಿಯ ಚೌರಿಗಳುಲಿವ ಗಂಟೆಯ
ತೊಳಪ ಬದ್ದುಗೆ ದಾರ ಕಾಂಚನಮಯದ ಗೊಂಡೆಯದ
ಉಲಿವ ಗೆಜ್ಜೆಯ ಚೆಲ್ಲಣದ ಹೊಂ
ಬಳಿದ ಹರಿಗೆಯ ಹೊಳೆವ ಕಡಿತಲೆ
ಗಳ ವಿಲಾಸದೊಳಂದು ಹೊಕ್ಕುದು ತುಳುವ ಪಡೆ ಕಡುಗಿ ॥34॥
೦೩೫ ಉರುಬಿದರೆ ವಡಬಾನಲನ ...{Loading}...
ಉರುಬಿದರೆ ವಡಬಾನಲನ ಮುಖ
ದಿರವು ಮೊನೆದೋರಿದರೆ ಭುಜಗನ
ಬಿರುಬು ಸಾಲಗೆ ಹಲಗೆಯಣೆದರೆ ಸಿಡಿಲ ಸಡಗರಣೆ
ಮೆರೆವ ಹಜ್ಜೆಯ ದಂಡೆವಲಗೆಯ
ಮರೆಯ ಕೈದಂಡೆಗಳ ಜುಣುಗಿಸಿ
ತರುಬಿ ನಿಂದರು ಸಂದ ಕಡಿತಲೆಗಾರರುಭಯದಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಭಸದಿಂದ ಮುನ್ನುಗ್ಗಿದಾಗ ಪ್ರಳಯಾಗ್ನಿಯಂತೆ ಅವರ ಮುಖ ಕಾಣುತ್ತಿತ್ತು. ಶೌರ್ಯ ತೋರಿದಾಗ ಆದಿಶೇಷನ ಉಗ್ರತೆ ಕಾಣುತ್ತಿತ್ತು. ಗುಂಪಾಗಿ ಗುರಾಣಿಗಳನ್ನು ತಿವಿದರೆ ಸಿಡಿಲ ಸಂಭ್ರಮ ಉಂಟಾಗುತ್ತಿತ್ತು. ಹೆಜ್ಜೆ ಹಾಕುತ್ತಾ ದಂಡ ಹಲಗೆ ಮರೆಯಲ್ಲಿ ಕೈಕೋಲುಗಳನ್ನು ತೋರಿ ಮರೆಯಾಗುವ, ಮಿಂಚಿ ಮಾಯವಾಗುವ ಪ್ರಸಿದ್ಧ ಕಡಿತಲೆ ಆಯುಧ ಹಿಡಿದವರು ಅಟ್ಟಿಸಿಕೊಂಡು ಬಂದು ನಿಂದರು.
ಪದಾರ್ಥ (ಕ.ಗ.ಪ)
ಉರುಬು-ರಭಸದಿಂದ ಮುನ್ನುಗ್ಗು, ಮೊನೆದೋರು-ಶೌರ್ಯದೋರು, ಬಿರುದು-ಉಗ್ರತೆ, ಸಾಲಗೆ-ಗುಂಪಾಗಿ, ಅಣೆ-ತಿವಿ, ಸಡಗರಣೆ-ಸಂಭ್ರಮ, ದಂಡವಲಗೆ-ಒಂದು ಬಗೆ ಗುರಾಣಿ, ಕೈದಂಡೆ-ಕೈಕೋಲು, ಜುಣುಗು-ಮಿಂಚಿ ಮರೆಯಾಗು, ಸರಿದ-ಪ್ರಸಿದ್ಧ ತರುಬು-ಅಡ್ಡ ಹಾಕು
ಮೂಲ ...{Loading}...
ಉರುಬಿದರೆ ವಡಬಾನಲನ ಮುಖ
ದಿರವು ಮೊನೆದೋರಿದರೆ ಭುಜಗನ
ಬಿರುಬು ಸಾಲಗೆ ಹಲಗೆಯಣೆದರೆ ಸಿಡಿಲ ಸಡಗರಣೆ
ಮೆರೆವ ಹಜ್ಜೆಯ ದಂಡೆವಲಗೆಯ
ಮರೆಯ ಕೈದಂಡೆಗಳ ಜುಣುಗಿಸಿ
ತರುಬಿ ನಿಂದರು ಸಂದ ಕಡಿತಲೆಗಾರರುಭಯದಲಿ ॥35॥
೦೩೬ ಹಳಚಿದರು ತಗರನ್ತೆ ...{Loading}...
ಹಳಚಿದರು ತಗರಂತೆ ಗಜದವೊ
ಲೊಲೆದು ನಿಂದರು ಹಾವಿನಂತಿರೆ
ನಿಲುಕಿದರು ಸೂಕರನವೊಲು ಕೋಡೆತ್ತಿ ಹಾಯ್ಕಿದರು
ಬಲಿದ ಚರಣಾಯುಧದವೊಲು ಪರ
ರಳವನೀಕ್ಷಿಸಿ ಕಪಿಯವೊಲು ಮೈ
ವಳಿಯ ಹತ್ತಿದರಂದು ಕಡಿತಲೆಗಾರರುಭಯದಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಉಭಯ ಸೇನೆಯಲ್ಲಿದ್ದ ಕಡಿತಲೆ ಆಯುಧದ ಯೋಧರು ಟಗರುಗಳ ಹಾಗೆ ಕಾದಾಡಿದರು. ಆನೆಗಳಂತೆ ತೂಗಾಡುತ್ತಾ ಸ್ಪರ್ಧಿಸಿದರು. ಬುಸುಗುಟ್ಟುವ ಹಾವಿನಂತೆ ನಿಂತರು. ಹಂದಿಯ ಹಾಗೆ ನುಗ್ಗಿದರು. ಬಲಿಷ್ಠವಾದ ಹುಂಜಗಳಂತೆ ಪರರ ಸಾಮಥ್ರ್ಯವನ್ನು ವೀಕ್ಷಿಸುತ್ತ ಕಪಿಯ ಹಾಗೆ ಹಿಂಬಾಲಿಸತೊಡಗಿದರು.
ಪದಾರ್ಥ (ಕ.ಗ.ಪ)
ಕೋಡು-ಕೋರೆದಾಡೆ, ನಿಲುಕು-ಸೆಟೆದುನಿಲ್ಲು, ಒಲೆದು-ತೂಗಾಡುತ್ತಾ, ಹಳಚು-ಕಾದಾಡು, ಚರಣಾಯುಧ-ಹುಂಜ, ಮೈವಳಿ-ಹಿಂಬಾಲಿಸು, ಅಳವು-ಸಾಮಥ್ರ್ಯ
ಮೂಲ ...{Loading}...
ಹಳಚಿದರು ತಗರಂತೆ ಗಜದವೊ
ಲೊಲೆದು ನಿಂದರು ಹಾವಿನಂತಿರೆ
ನಿಲುಕಿದರು ಸೂಕರನವೊಲು ಕೋಡೆತ್ತಿ ಹಾಯ್ಕಿದರು
ಬಲಿದ ಚರಣಾಯುಧದವೊಲು ಪರ
ರಳವನೀಕ್ಷಿಸಿ ಕಪಿಯವೊಲು ಮೈ
ವಳಿಯ ಹತ್ತಿದರಂದು ಕಡಿತಲೆಗಾರರುಭಯದಲಿ ॥36॥
೦೩೭ ಕಡಿತಲೆಯ ಮಿಞ್ಚುಗಳ ...{Loading}...
ಕಡಿತಲೆಯ ಮಿಂಚುಗಳ ಹೊಯ್ಲಿನ
ಸಿಡಿಲುಗಳ ರಕ್ತಪ್ರವಾಹದ
ಕಡುವಳೆಯ ನೃತ್ಯತ್ಕಬಂಧದ ಸೋಗೆನವಿಲುಗಳ
ಬಿಡುಮಿದುಳ ಹೊರಳಿಗಳ ಹಂಸೆಯ
ನಡಹುಗಳ ನವಖಂಡದೊಳು ಹೆಣ
ನಡವಿ ತಳಿತಿರೆ ಮೆರೆದುದೈ ಸಂಗ್ರಾಮಕಾರ್ಗಾಲ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಡಿತಲೆ ಆಯುಧಗಳ ಹೊಳಪೇ ಮಿಂಚುಗಳಾಗಿ, ಆಯುಧಗಳ ಪ್ರಹಾರಗಳೇ ಸಿಡಿಲುಗಳಾಗಿ, ಆಗ ಪೆಟ್ಟಿನಿಂದ ಕತ್ತರಿಸಲ್ಪಟ್ಟ ದೇಹಗಳಿಂದ ಮುಂಡಗಳೇ ಉದ್ದನೆಗರಿಗಳ ಗಂಡು ನವಿಲುಗಳಾಗಿ ಚಿಮ್ಮಿದ ರಕ್ತಧಾರೆಯೇ ಭಾರಿ ಮಳೆಯಾಗಿ, ಬಿಡುವಿನ ಮಿದುಳುಗಳ ರಾಶಿಯೆಂಬ ಹಂಸೆಗಳ ನಡಿಗೆಯಿಂದ, ಆಗತಾನೇ ಛಿದ್ರವಾದ ಮಾಂಸಖಂಡಗಳೆಂಬ ಹೆಣಗಳ ರಾಶಿಯೆಂಬ ಕಾಡು ಚಿಗುರಿದಂತಾಗಿ ಯುದ್ಧವೆಂಬ ಮಳೆಗಾಲ ಶೋಭಿಸಿತು.
ಪದಾರ್ಥ (ಕ.ಗ.ಪ)
ಕಡಿತಲೆ-ಕೊಡಲಿಯಾಕಾರದ ಆಯುಧ (ಚಪ್ಪೆಕೊಡಲಿ), ಹೊಯ್ಲಿನ-ಪ್ರಹಾರದ, ಕಡುಮಳೆ-ಭಾರಿಮಳೆ, ನೃತ್ಯತ್ಕಬಂಧ-ಕುಣಿಯುತ್ತಿರುವ ಮುಂಡಗಳು, ನಡಹು-ನಡಿಗೆ, ಕಾರ್ಗಾಲ-ಮಳೆಗಾಲ, ಸೋಗೆನವಿಲು-ಉದ್ದನೆಗರಿಗಳ ಗಂಡುನವಿಲು
ಮೂಲ ...{Loading}...
ಕಡಿತಲೆಯ ಮಿಂಚುಗಳ ಹೊಯ್ಲಿನ
ಸಿಡಿಲುಗಳ ರಕ್ತಪ್ರವಾಹದ
ಕಡುವಳೆಯ ನೃತ್ಯತ್ಕಬಂಧದ ಸೋಗೆನವಿಲುಗಳ
ಬಿಡುಮಿದುಳ ಹೊರಳಿಗಳ ಹಂಸೆಯ
ನಡಹುಗಳ ನವಖಂಡದೊಳು ಹೆಣ
ನಡವಿ ತಳಿತಿರೆ ಮೆರೆದುದೈ ಸಂಗ್ರಾಮಕಾರ್ಗಾಲ ॥37॥
೦೩೮ ಪಡಿತಳವ ಬೀಸಿದರೆ ...{Loading}...
ಪಡಿತಳವ ಬೀಸಿದರೆ ಕಾಲಿ
ಕ್ಕಡಿ ನಡುವ ತಾಗಿದರೆ ಮಂಡಲ
ವುಡಿದು ಬಿದ್ದುದು ನಿಲುಕಿನುಪ್ಪರ ಶಿರವ ಮನ್ನಿಸದು
ಮಡವ ಮೀರುವ ಕಚ್ಚಿಮಂಡಿಯ
ಪಡಿದೊಡೆಯ ತಲೆಮರೆಯ ಹರಿಗೆಯ
ಕಡಿತಲೆಯ ಕಲಿತುಳುವಪಡೆ ಹೊಯ್ದಾಡಿತಿಳೆ ಹಿಳಿಯೆ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂಚೂಣಿಯಲ್ಲಿ ನಿಂತು ಕತ್ತಿ ಬೀಸಿದರೆ ಶತ್ರುಗಳ ಕಾಲುಗಳು ಎರಡು ತುಂಡಾಗುತ್ತಿದ್ದವು. ಸೇನೆಯ ಮಧ್ಯಭಾಗಕ್ಕೆ ನುಗ್ಗಿದರೆ ನಡುವಣ ಗುಂಪು ಛಿದ್ರವಾಗಿ ಬೀಳುತ್ತಿತ್ತು. ತಲೆಯೆತ್ತಿ ನಿಂತವರನ್ನು ಉಳಿಸುತ್ತಿರಲಿಲ್ಲ. ಹಿಮ್ಮಡಿ ಮೀಟುವ, ಕಚ್ಚಿಮಂಡಿಯ ಪಡಿತೊಡೆಯ, ತಲೆಮರೆ ಮಾಡಿದ ಗುರಾಣಿಗಳ, ಕತ್ತಿಗಳನ್ನು ಧರಿಸಿದ ವೀರ ತುಳುವ ಪಡೆ ಭೂಮಿಯೇ ಬಿರಿಯುವಂತೆ ಹೋರಾಡಿತು.
ಪದಾರ್ಥ (ಕ.ಗ.ಪ)
ಇಕ್ಕಡಿ-ಎರಡು ತುಂಡಾಗು, ಉಡಿದು-ಛಿದ್ರವಾಗಿ, ಕಚ್ಚಿಮಂಡಿ-?, ಪಡಿತೊಡೆ-?, ತಲೆಮರೆಯ-ಛತ್ರಿಯಾಕಾರದ ರಕ್ಷಣಾಕವಚ, ಹಿಳಿ-ಬಿರಿ, ಹರಿಗೆಯ-ಗುರಾಣಿಯ
ಮೂಲ ...{Loading}...
ಪಡಿತಳವ ಬೀಸಿದರೆ ಕಾಲಿ
ಕ್ಕಡಿ ನಡುವ ತಾಗಿದರೆ ಮಂಡಲ
ವುಡಿದು ಬಿದ್ದುದು ನಿಲುಕಿನುಪ್ಪರ ಶಿರವ ಮನ್ನಿಸದು
ಮಡವ ಮೀರುವ ಕಚ್ಚಿಮಂಡಿಯ
ಪಡಿದೊಡೆಯ ತಲೆಮರೆಯ ಹರಿಗೆಯ
ಕಡಿತಲೆಯ ಕಲಿತುಳುವಪಡೆ ಹೊಯ್ದಾಡಿತಿಳೆ ಹಿಳಿಯೆ ॥38॥
೦೩೯ ಖಡುಗ ತೋಮರ ...{Loading}...
ಖಡುಗ ತೋಮರ ಪರಶುಗಳ ಕ
ಕ್ಕಡೆಯ ಕುಂತದ ಪಿಂಡಿವಾಳದ
ಕಡುಗಲಿಗಳುರೆ ಮಗ್ಗಿದರು ತಗ್ಗಿದುದು ಯಮಲೋಕ
ಬಿಡದೆ ನಾಯಕವಾಡಿ ಚೂಣಿಯ
ಹಿಡಿದು ಕಾದಿತ್ತುಭಯರಾಯರು
ದಡಿಯಕೈಯವರಿಂದ ಕವಿಸಿದರಂದು ಸಬಳಿಗರ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಿ ಗದೆ ಕೊಡಲಿಗಳ ಕಕ್ಕಡೆ ಭರ್ಜಿ ಈಟಿಗಳ ಕುಂತದ ಪಿಂಡಿವಾಳಗಳನ್ನು ಹಿಡಿದ ವೀರರು ಬಿಡದೆ ಮರಣಿಸಿದರು. ಫಲವಾಗಿ ಯಮಲೋಕ ಭಾರದಿಂದ ಕುಸಿಯಿತು. ಅನಂತರ ಬೆಂಬತ್ತಿ ನಾಯಕವಾಡಿಯ ಜನರು ಮುಂಭಾಗದಲ್ಲಿ ಸೇರಿ ಹೋರಾಡಿದರು. ಎರಡೂ ಸೇನೆಯವರು ದೊಣ್ಣೆಕಾರರಿಂದ ಈಟಿಕಾರರ ಮೇಲೆ ಮುನ್ನುಗ್ಗುವಂತೆ ಮಾಡಿದರು.
ಪದಾರ್ಥ (ಕ.ಗ.ಪ)
ದಡಿಯ ಕೈಯವ-ದೊಣ್ಣೆಕಾರ, ಸಬಳಿಗ-ಈಟಿಗಾರ, ತಗ್ಗಿತು-ಕುಸಿಯಿತು, ಮಗ್ಗಿದರು-ಮರಣಿಸಿದರು, ಪಿಂಡಿವಾಳ-ಒಂದು ಬಗೆ ಆಯುಧ, ಕಕ್ಕಡೆ-ಒಂದು ಬಗೆ ಆಯುಧ
ಮೂಲ ...{Loading}...
ಖಡುಗ ತೋಮರ ಪರಶುಗಳ ಕ
ಕ್ಕಡೆಯ ಕುಂತದ ಪಿಂಡಿವಾಳದ
ಕಡುಗಲಿಗಳುರೆ ಮಗ್ಗಿದರು ತಗ್ಗಿದುದು ಯಮಲೋಕ
ಬಿಡದೆ ನಾಯಕವಾಡಿ ಚೂಣಿಯ
ಹಿಡಿದು ಕಾದಿತ್ತುಭಯರಾಯರು
ದಡಿಯಕೈಯವರಿಂದ ಕವಿಸಿದರಂದು ಸಬಳಿಗರ ॥39॥
೦೪೦ ಕುಣಿವ ತೊಡರಿನ ...{Loading}...
ಕುಣಿವ ತೊಡರಿನ ಪೆಂಡೆಯದ ಡೊಂ
ಕಣಿಯ ಬಿರುದರ ನೂಕುನೂಕೆನೆ
ಹಿಣಿಲ ಬಾವುಲಿಗಾರರಾವೆಡೆ ಭಾಷೆಯತಿಬಳರು
ಹೊಣಕೆಯಿದಲೇ ಹಿಂದ ಹಾರದಿ
ರಣಕಿಸುವ ಮಾತಿಲ್ಲ ದಿವಿಜರ
ಗಣಿಕೆಯರು ಬಯಸುವರು ನೂಕುವದೆಂದು ಸಾರಿದರು ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದ ನಾಯಕರು ಹೀಗೆ ಘೋಷಿಸಿದರು. “ಸದ್ದು ಮಾಡುವ ಬಿರುದಿನ ಗೆಜ್ಜೆ ಕಾಲ್ಗಡಗ, ಡೊಂಕಣಿ (ಈಟಿ) ಮೊದಲಾದವನ್ನು ಕರ್ತವ್ಯ ಪಾಲನೆಗೆ ಪಡೆದ ಬಿರುದುಗಾರರನ್ನು ರಣರಂಗದಲ್ಲಿ ಹೋರಾಡಲು ಮುಂದು ಮುಂದಕ್ಕೆ ನುಗ್ಗಿಸಿ ಎನ್ನುವ ಪಣತೊಟ್ಟು ಹೋರಾಡುವ ಸಾಹಸಿಗಳು ಎಲ್ಲಿದ್ದಾರೆ ? ಇದು ಕಾಳಗ ಕಣಾ ನೆನಪಿರಲಿ, ಹಿಂದೆಗೆಯವ ಮಾತಾಡಬೇಡಿ. ಇದು ನಿಮ್ಮನ್ನು ಹಂಗಿಸುವ ಮಾತಲ್ಲ. ಧೈರ್ಯದಿಂದ ಹೋರಾಡಿ ಮಡಿದರೆ ಸ್ವರ್ಗದ ಸುರಸುಂದರಿಯರು ಸುಸ್ವಾಗತಿಸುತ್ತಾರೆ ಮುನ್ನುಗ್ಗಿರಿ”
ಪದಾರ್ಥ (ಕ.ಗ.ಪ)
ಕುಣಿವ ತೊಡರು-ಸದ್ದು ಮಾಡುವ ಬಿರುದಿನ ಗೆಜ್ಜೆ, ಪೆಂಡೆಯ-ಕಾಲ್ಗಡಗ, ಹೊಣಕೆ-ಕಾಳಗ, ದಿವಿಜರ ಗಣಿಕೆಯರು-ದೇವಲೋಕದ ಸುರಸುಂದರಿಯರು, ಭಾಷೆ ಅತಿಬಳರು-ಪಣತೊಟ್ಟು ಹೋರಾಡುವ ಸಾಹಸಿಗಳು, ಹಿಣಿಲಬಾವುಲಿಗಾರರು-ಶೌರ್ಯದ ಬಿರುದುಗಾರರು.
ಮೂಲ ...{Loading}...
ಕುಣಿವ ತೊಡರಿನ ಪೆಂಡೆಯದ ಡೊಂ
ಕಣಿಯ ಬಿರುದರ ನೂಕುನೂಕೆನೆ
ಹಿಣಿಲ ಬಾವುಲಿಗಾರರಾವೆಡೆ ಭಾಷೆಯತಿಬಳರು
ಹೊಣಕೆಯಿದಲೇ ಹಿಂದ ಹಾರದಿ
ರಣಕಿಸುವ ಮಾತಿಲ್ಲ ದಿವಿಜರ
ಗಣಿಕೆಯರು ಬಯಸುವರು ನೂಕುವದೆಂದು ಸಾರಿದರು ॥40॥
೦೪೧ ತಲೆಯ ಖಡ್ಡಣಿಗೆಯ ...{Loading}...
ತಲೆಯ ಖಡ್ಡಣಿಗೆಯ ಸುರಂಗದ
ಪಳಿಯ ಸೀರೆಯ ಭಾಳಭೂತಿಯ
ಬಿಳಿಯ ಚೌರಿಯ ಝಗೆಯ ಸಬಳದ ಕಾಲ ತೊಡರುಗಳ
ಉಲಿವ ಬಿರುದಿನ ಕಹಳೆಗಳ ಕಳ
ಕಳಿಕೆ ಮಿಗೆ ನಿಶ್ಶಂಕಮಲ್ಲರು
ಕಳನೊಳಗೆ ತಲೆದೋರಿದರು ಡೊಂಕಣಿಯ ಪಟುಭಟರು ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಲೆಯಲ್ಲಿ ಸುಂದರವಾದ ಜಡೆಗಟ್ಟಿದ್ದ, ಆಕರ್ಷಕರಂಗಿನ ಶ್ರೇಷ್ಠ ವಸ್ತ್ರದ ಸೀರೆಗಳನ್ನು ಧರಿಸಿದ , ಹಣೆಯಲ್ಲಿ ವಿಭೂತಿ ಧರಿಸಿದ ಸೇವಕರು ಬಿಳಿಯ ಚಾಮರಗಳನ್ನು ಬೀಸುತ್ತಿರಲು, ಜ್ವಲಿಸುತ್ತಿರುವ ಸಬಳವನ್ನು, ಪೆಂಡೆಯಗಳನ್ನು ಧರಿಸಿದ. ವೀರರಾದ ಡೊಂಕಣಿ ಹಿಡಿದ ಶೂರಭಟರು, ಬಿರುದಾವಳಿಗಳನ್ನು ಅತಿಶಯವಾಗಿ ಉಗ್ಗಡಿಸುತ್ತಿರಲು ರಣರಂಗವನ್ನು ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ಖಡ್ಡಣಿಗೆ-ಜಡೆಗಟ್ಟು, ಸುರಂಗದ-ಆಕರ್ಷಕರಂಗಿನ, ಪಳಿಯ-ಶ್ರೇಷ್ಠರೀತಿಯ ವಸ್ತ್ರ. , ಭಾಳಭೂತಿಯ-ಹಣೆಯಲ್ಲಿ ವಿಭೂತಿ ಧರಿಸಿದ, ಝಗೆಯ-ಜ್ವಲಿಸುತ್ತಿರಲು, ಸಬಳ-ಈಟಿ, ಕಳಕಳಿಕೆ-ಅಭಿಮಾನ, ಆಸಕ್ತಿ, ಕಳ-ರಣರಂಗ
ಟಿಪ್ಪನೀ (ಕ.ಗ.ಪ)
ಸೀರೆ : ಸೀರೆ ಕುಮಾರವ್ಯಾಸನ ಕಾಲದಲ್ಲಿ ಗಂಡಸರು ಹಾಗೂ ಹೆಂಗಸರು ಇಬ್ಬರೂ ಧರಿಸುತ್ತಿದ್ದ ವಸ್ತ್ರರೂಪವಾಗಿತ್ತ್ತೆಂಬುದು ಈ ಪದ್ಯದಿಂದ ತಿಳಿದುಬರುತ್ತದೆ. ನಂತರ ಯಾವಾಗಲೋ ಅದು ಕೇವಲ ಸ್ತ್ರೀಯರು ಉಡುವ ತೊಡಿಗೆ ಎಂದಾಗಿರಬೇಕು.
ಮೂಲ ...{Loading}...
ತಲೆಯ ಖಡ್ಡಣಿಗೆಯ ಸುರಂಗದ
ಪಳಿಯ ಸೀರೆಯ ಭಾಳಭೂತಿಯ
ಬಿಳಿಯ ಚೌರಿಯ ಝಗೆಯ ಸಬಳದ ಕಾಲ ತೊಡರುಗಳ
ಉಲಿವ ಬಿರುದಿನ ಕಹಳೆಗಳ ಕಳ
ಕಳಿಕೆ ಮಿಗೆ ನಿಶ್ಶಂಕಮಲ್ಲರು
ಕಳನೊಳಗೆ ತಲೆದೋರಿದರು ಡೊಂಕಣಿಯ ಪಟುಭಟರು ॥41॥
೦೪೨ ನಡೆವಡವಿಯೋ ಬಲುಭುಜರ ...{Loading}...
ನಡೆವಡವಿಯೋ ಬಲುಭುಜರ ಪಂ
ಗಡವೊ ಸಬಳವೊ ನಭದ ಕಾಲ್ಗಳೊ
ಬಡಬವಹ್ನಿ ಜ್ಜಾಲೆಯೋ ಸೇನಾಮಹಾಂಬುಧಿಯೊ
ಪಡೆಯ ಪದಹತಧೂಳಿ ಸವೆಯಲು
ಪೊಡವಿಪಾತಾಳದ ಫಣಿವ್ರಜ
ವಡರಿದವೊ ರವಿಬಿಂಬಕೆನಲಾದುದು ಕುತೂಹಲಿಕೆ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಟ್ಟವಾದ ಕಾಡೇ ನಡೆದು ಹೋಗುತ್ತಿದೆಯೋ ? ಅಥವಾ ಸಾಹಸಿಗಳ ಗುಂಪೋ ? ಇಡಿ ಸೇನೆ ಕುಣಿದು ಕುಪ್ಪಳಿಸುತ್ತ ಹೋಗುತ್ತಿರುವ ರೀತಿಯೋ ಸಬಳಗಳ (ಈಟಿಗಳ) ಸಮೂಹವೋ ಅಥವಾ ಆಕಾಶದ ಕಾಲ್ಗಳೋ ? ಸಾಗರಾಗ್ನಿಯ ಬೆಂಕಿಯ ಜ್ವಾಲೆಗಳೋ ಅಥವಾ ಸೇನೆಯೆಂಬ ಮಹಾಸಾಗರವೋ ? ಸೇನೆಯ ಕಾಲ್ದುಳಿತದಿಂದ ಎದ್ದ ಧೂಳಿನಿಂದ ಭೂಮಿ ಸವೆದು ಹೋದ ಮೇಲೆ ಪಾತಾಳದ ಸರ್ಪ ಸಮೂಹವು ಮೇಲೆದ್ದು ರವಿ ಬಿಂಬವನ್ನು ಹಿಡಿಯಲೆಂದು ನುಗ್ಗಿದವೋ ಎಂಬಂತಿದ್ದ ಡೊಂಕಣಿಗಳ ಪಟುಭಟರ ಸೇನೆ ಕುತೂಹಲಕ್ಕೆ ಕಾರಣವಾಯಿತು.
ಪದಾರ್ಥ (ಕ.ಗ.ಪ)
ಬಲುಭುಜರು-ಸಾಹಸಿಗಳು, ಸಬಳ-ಈಟಿ, ಬಡಬವಹ್ನಿ-ಸಾಗರಾಗ್ನಿ, ಪದಹತಧೂಳಿ-ಕಾಲ್ದುಳಿತದಿಂದ ಎದ್ದ ಧೂಳಿನ ರಾಶಿ,
ಫಣಿವ್ರಜ-ಸರ್ಪ ಸಮೂಹ, ಅಡರು-ಆವರಿಸು ನುಗ್ಗು
ಮೂಲ ...{Loading}...
ನಡೆವಡವಿಯೋ ಬಲುಭುಜರ ಪಂ
ಗಡವೊ ಸಬಳವೊ ನಭದ ಕಾಲ್ಗಳೊ
ಬಡಬವಹ್ನಿ ಜ್ಜಾಲೆಯೋ ಸೇನಾಮಹಾಂಬುಧಿಯೊ
ಪಡೆಯ ಪದಹತಧೂಳಿ ಸವೆಯಲು
ಪೊಡವಿಪಾತಾಳದ ಫಣಿವ್ರಜ
ವಡರಿದವೊ ರವಿಬಿಂಬಕೆನಲಾದುದು ಕುತೂಹಲಿಕೆ ॥42॥
೦೪೩ ಮಿಕ್ಕು ಚೂರಿಸಲಹಿಯ ...{Loading}...
ಮಿಕ್ಕು ಚೂರಿಸಲಹಿಯ ನಾಲಗೆ
ಜಕ್ಕುಲಿಸಿದಂತಾಯ್ತು ಮೊನೆಗಳ
ತೆಕ್ಕೆಯಲಿ ಕುದಿಗೊಂಡು ಸುರಿದವು ರಕ್ತಧಾರೆಗಳು
ಹೊಕ್ಕವರು ಹೆಣಗಿದರೆ ನಿರಿಗರು
ಳೊಕ್ಕವಡಗುದಿರಿದವು ಮೋಹರ
ಹಕ್ಕಲಾಗಲು ಹರಿದು ಸಬಳಿಗರಿರಿದು ತೋರಿದರು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನಿಕರು ಮುನ್ನುಗ್ಗಿ ಈಟಿಗಳನ್ನು ಝಳಪಿಸುತ್ತಾ ತಿರುಗಿಸುತ್ತಿರಲು ಆದಿಶೇಷನ ನಾಲಗೆ ಚಾಚಿ ಆಡಿಸಿದಂತಾಯಿತು. ಸಬಳಗಳನ್ನು ಹಿಡಿದ ಸೈನಿಕ ಸೇನೆಗಳ ತಿವಿದಾಟದಲ್ಲಿ ಶತ್ರುಗಳ ರಕ್ತಧಾರೆಗಳು ಬಿಸಿಬಿಸಿಯಾಗಿ ಸುರಿಯತೊಡಗಿದವು. ಸಬಳದ ಸೈನಿಕರನ್ನು ಪ್ರತಿಭಟಿಸಿ ಮುನ್ನುಗ್ಗಿದವರು ಸೆಣಸಾಡಿದಾಗ ಅವರ ಕರುಳ ಮಾಲೆ ಹೊರಚಿಮ್ಮಿದವು. ಅವರ ಮಾಂಸಖಂಡಗಳು ಛಿದ್ರ ಛಿದ್ರವಾಗಿ ಹರಿದು ನೆಲದ ಮೇಲೆ ಚೆಲ್ಲಾಡಿತು. ಗುಂಪು ಗುಂಪಾದ ಸೇನೆ ನಾಶವಾಗಿ ರಣರಂಗ ಬಯಲಾಗುವಂತೆ ಈಟಿಗಾರರ ಸೇನೆ ತಿವಿದಾಡಿ ತಮ್ಮ ಸಾಹಸ ತೋರಿದರು.
ಪದಾರ್ಥ (ಕ.ಗ.ಪ)
ಜಕ್ಕುಲಿಸು-ಚಾಚಿ ಆಡಿಸು, ಹಕ್ಕಲಾಗು-ನಿರ್ಜನವಾಗು, ಇರಿದು-ತಿವಿದಾಡಿ, ಅಡಗು-ಮಾಂಸ, ಹೊಕ್ಕವರು-ಮುನ್ನುಗ್ಗಿದವರು, ಮೊನೆಗಳ ತೆಕ್ಕೆ-ಸಬಳದ ಸೇನೆಗಳ ಸಮೂಹ
ಮೂಲ ...{Loading}...
ಮಿಕ್ಕು ಚೂರಿಸಲಹಿಯ ನಾಲಗೆ
ಜಕ್ಕುಲಿಸಿದಂತಾಯ್ತು ಮೊನೆಗಳ
ತೆಕ್ಕೆಯಲಿ ಕುದಿಗೊಂಡು ಸುರಿದವು ರಕ್ತಧಾರೆಗಳು
ಹೊಕ್ಕವರು ಹೆಣಗಿದರೆ ನಿರಿಗರು
ಳೊಕ್ಕವಡಗುದಿರಿದವು ಮೋಹರ
ಹಕ್ಕಲಾಗಲು ಹರಿದು ಸಬಳಿಗರಿರಿದು ತೋರಿದರು ॥43॥
೦೪೪ ನೆಲನ ಗೆಲಿದಬ್ಬರಿಸಿ ...{Loading}...
ನೆಲನ ಗೆಲಿದಬ್ಬರಿಸಿ ಚಾಚಿದ
ತಲೆವರಿಗೆ ತೆರಳದೆ ಸುಘಾಯದ
ಬಲದ ಬೆಳೆಸಿರಿವಂತರನು ಕರೆಕರೆದು ಮೂದಲಿಸಿ
ಥಳಿಥಳಿಲು ಛಟಛಟಿಲು ಖಣಿಕಟಿ
ಲುಲುಹು ಮಿಗೆ ದನಿ ಮೆರೆಯೆ ರಿಪುಗಳ
ಗೆಲುವೆವೆಂದುರವಣಿಸಿ ಹೊಯ್ದಾಡಿದರು ರಣದೊಳಗೆ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆಲವನ್ನು ಆಕ್ರಮಿಸಿ ಗೆದ್ದು ಗರ್ಜಿಸಿ, ಮುಂದೊಡ್ಡಿದ ಗುರಾಣಿಗಳನ್ನು ಹಿಂತೆಗೆಯದೆ ಎದುರಾಳಿಗೆ ಏಟಿನ ಮೇಲೆ ಏಟು ಕೊಟ್ಟು ಬಲವಾದ ಗಾಯಗಳನ್ನು ಮಾಡಿ, ಸಾಹಸವೆಂಬ ಬೆಳೆ ತೆಗೆದ ಸಿರಿವಂತರನ್ನು (ಬಲಗರ್ವಿತರನ್ನು) ಕರೆಕರೆದು ಹಂಗಿಸುತ್ತಾ. ಆಯುಧಗಳ ಬೀಸಾಟದಿಂದ ಥಳಿಥಳಿಲು, ಘಟಿಘಟಿಲು ಖಣಿ ಕಟಿಲು ಎಂಬ ಸದ್ದು ಅತಿಶಯವಾಗಿ ಮೊಳಗಿತು. ಆಗ ಶತ್ರುಗಳನ್ನು ಗೆಲ್ಲುತ್ತೇವೆ ಎಂಬ ಭರವಸೆ ಮೂಡಿ ರಣರಂಗದಲ್ಲಿ ಶತ್ರುಗಳ ಮೇಲೆ ಬಿದ್ದು ಹೋರಾಡಿದರು.
ಪದಾರ್ಥ (ಕ.ಗ.ಪ)
ತಲೆವರಿಗೆ-ಗುರಾಣಿ, ಸುಘಾಯ-ಏಟಿನ ಮೇಲೆ ಏಟು ಬಿದ್ದು ಆದ ಗಾಯ, ಉಲುಹು-ಸದ್ದು, ು
ಮೂಲ ...{Loading}...
ನೆಲನ ಗೆಲಿದಬ್ಬರಿಸಿ ಚಾಚಿದ
ತಲೆವರಿಗೆ ತೆರಳದೆ ಸುಘಾಯದ
ಬಲದ ಬೆಳೆಸಿರಿವಂತರನು ಕರೆಕರೆದು ಮೂದಲಿಸಿ
ಥಳಿಥಳಿಲು ಛಟಛಟಿಲು ಖಣಿಕಟಿ
ಲುಲುಹು ಮಿಗೆ ದನಿ ಮೆರೆಯೆ ರಿಪುಗಳ
ಗೆಲುವೆವೆಂದುರವಣಿಸಿ ಹೊಯ್ದಾಡಿದರು ರಣದೊಳಗೆ ॥44॥
೦೪೫ ಹಲಗೆ ಸೀಸಕ ...{Loading}...
ಹಲಗೆ ಸೀಸಕ ಸಹಿತಲಿಖ್ಖಡಿ
ಗಳೆದರೊಡಲುಪ್ಪರದ ಘಾಯವ
ಕಳಚಿ ಕೈಮಾಡಿದರು ಕೊಂದು ಮುಂದುವರಿವರಿದು
ಹೊಳೆದು ಹೊಯ್ದರು ಮಿಂಚಿನಂತಿರೆ
ಬಲುಹು ಮಿಗೆ ಜವನಂತೆ ಬವರಿಯ
ಲುಳಿಯ ಚೌಪಟ ಮಲ್ಲರೊದಗಿದರುಭಯಸೇನೆಯಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಕಡೆಗಳಲ್ಲಿ ವೀರಾಧಿವೀರರು ಯಮನಂತೆ ಅತಿಶಯ ಸಾಮಥ್ರ್ಯ ತೋರುತ್ತ ಗುರಾಣಿ ಶಿರಸ್ತ್ರಾಣಗಳೆರಡನ್ನು ಎರಡೆರಡು ತುಂಡುಗಳಾಗಿ ಕತ್ತರಿಸಿದರು. ಶರೀರದ ಮೇಲೆ ಗಾಯವನ್ನು ಮೂಡಿಸಿದರು. ದೇಹ ಕತ್ತರಿಸುವ ರೀತಿಯಲ್ಲಿ ಕೈಮಾಡಿ ಕೊಲ್ಲುತ್ತಾ ಮುಂದೆ ಸಾಗಿದರು. ಮಿಂಚಿನ ಹಾಗೆ ಸಂಚರಿಸುತ್ತಾ ಶತ್ರುನಾಶ ಮಾಡಿ. ಯುದ್ಧವನ್ನು ತೀಕ್ಷ್ಣಗತಿಯಲ್ಲಿ ನಡೆಸಿದರು.
ಪದಾರ್ಥ (ಕ.ಗ.ಪ)
ಹಲಗೆ-ಗುರಾಣಿ, ಸೀಸಕ-ಶಿರಸ್ತ್ರಾಣ, ಇಕ್ಖಡಿಕಳೆ-ಎರಡು ತುಂಡಾಗಿ ಕತ್ತರಿಸು, ಉಪ್ಪರದ ಗಾಯ-ಮೇಲಿನ ಗಾಯ, ಕಳಚಿ-ದೇಹ ಕತ್ತರಿಸಿ, ಜವ-ಯಮ, ಬವರಿ-ಯುದ್ಧ, ಲುಳಿ-ತೀಕ್ಷ್ಣತೆ, ಚೌಪಟಮಲ್ಲ-ವೀರಾಧಿವೀರ, ಒದಗಿದರು-ಕಾಳಗ ಮಾಡಿದರು.
ಮೂಲ ...{Loading}...
ಹಲಗೆ ಸೀಸಕ ಸಹಿತಲಿಖ್ಖಡಿ
ಗಳೆದರೊಡಲುಪ್ಪರದ ಘಾಯವ
ಕಳಚಿ ಕೈಮಾಡಿದರು ಕೊಂದು ಮುಂದುವರಿವರಿದು
ಹೊಳೆದು ಹೊಯ್ದರು ಮಿಂಚಿನಂತಿರೆ
ಬಲುಹು ಮಿಗೆ ಜವನಂತೆ ಬವರಿಯ
ಲುಳಿಯ ಚೌಪಟ ಮಲ್ಲರೊದಗಿದರುಭಯಸೇನೆಯಲಿ ॥45॥
೦೪೬ ಬವರಿಯಲಿ ಪೈಸರಿಸಿ ...{Loading}...
ಬವರಿಯಲಿ ಪೈಸರಿಸಿ ಪರಘಾ
ಯವನು ವಂಚಿಸಿ ಭಟರ ಕೊರೆದೆ
ತ್ತುವರು ಕೈಮಾಡಿದರೆ ತಿವಿವರು ಕೋಡಕೈಯವರ
ಕವಿಯಲೌಕುವರೌಕಿದರೆ ತ
ಗ್ಗುವರು ತಗ್ಗಿದರೊಡನೊಡನೆ ಜಾ
ರುವರು ಜುಣುಗುವರೈದೆ ತಿವಿದಾಡಿದರು ಸಬಳಿಗರು ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧರಂಗದಲ್ಲಿ ಎದುರಾಳಿಯ ಏಟನ್ನು ತಪ್ಪಿಸಿಕೊಂಡು ನುಣಚಿಕೊಳ್ಳುವರು. ಶತ್ರುವೀರರನ್ನು ಕತ್ತರಿಸಿ ಅವರ ಶಿರಗಳನ್ನು ಮೇಲೆತ್ತಿ ಹಿಡಿಯುವರು, ಕೊಂಬಿನಾಯುಧದವರು ಮೇಲೇರಿ ಬಂದರೆ ಅದುಮಿ ಅವರನ್ನು ಹಿಡಿಯುವರು, ಶತ್ರುಗಳು ಅದುಮಿ ಹಿಡಿದಾಗ ತಗ್ಗುವರು ತಗ್ಗಿದಾಗ, ಕೂಡಲೆ ಪಕ್ಕನೆ ಅಡಗಿಕೊಳ್ಳುವರು. ಈ ರೀತಿಯಾಗಿ ಈಟಿಗಾರರ ಪಡೆಯವರು ಉಭಯ ಸೇನೆಗಳಲ್ಲಿ ತೀವ್ರವಾಗಿ ತಿವಿದಾಡಿದರು.
ಪದಾರ್ಥ (ಕ.ಗ.ಪ)
ಬವರಿ-ಯುದ್ಧ, ಪೈಸರಿಸಿ-ನುಣಿಚಿಕೊಂಡು, ಪರಘಾಯವನು-ಎದುರಾಳಿ ಏಟನ್ನು, ಕೊರೆದು ಎತ್ತುವರು-ಕತ್ತರಿಸಿ ಶಿರ ಮೇಲೆತ್ತುವರು, ಜಾರು-ಅದುಮು, ಜುಣುಗು-ಪಕ್ಕನೆ ಅಡಗಿಕೊ, ಸಬಳಿಗರು-ಈಟಿಕಾರರ ಪಡೆ
ಮೂಲ ...{Loading}...
ಬವರಿಯಲಿ ಪೈಸರಿಸಿ ಪರಘಾ
ಯವನು ವಂಚಿಸಿ ಭಟರ ಕೊರೆದೆ
ತ್ತುವರು ಕೈಮಾಡಿದರೆ ತಿವಿವರು ಕೋಡಕೈಯವರ
ಕವಿಯಲೌಕುವರೌಕಿದರೆ ತ
ಗ್ಗುವರು ತಗ್ಗಿದರೊಡನೊಡನೆ ಜಾ
ರುವರು ಜುಣುಗುವರೈದೆ ತಿವಿದಾಡಿದರು ಸಬಳಿಗರು ॥46॥
೦೪೭ ಹೆಣನ ಹೋಳಿನ ...{Loading}...
ಹೆಣನ ಹೋಳಿನ ಸಿಡಿದಡಗು ಡೊಂ
ಕಣಿಯೊಳೆಸೆದುವು ಕಾಲನಾರೋ
ಗಣೆಗೆ ಮಿಗೆ ಪಡಿಸಣವ ನೋಡದೆ ಮಾಣವೆಂಬಂತೆ
ಕುಣಿವ ಕುಂತಾಗ್ರದಲಿ ಜೋಲುವ
ಹಿಣಿಲುಗರುಳೊಪ್ಪಿದವು ಜವನೀ
ರಣಕೆ ಬರೆ ಕಟ್ಟಿದವು ಗುಡಿ ತೋರಣವನೆಂಬಂತೆ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಣಗಳನ್ನು ಸೀಳಿ ಹೋಳು ಮಾಡಿದಾಗ ಆ ಹೋಳುಗಳಿಂದ ಸಿಡಿದ ಮಾಂಸ ಖಂಡಗಳು ಡೊಂಕಣಿಗಳಿಗೆ ಅಂಟಿಕೊಂಡು . ಯಮನ ಔತಣಕ್ಕೆ ಪರೀಕ್ಷಿಸಿ ನೋಡುವಂತಿರುವಂತೆ ಕಾಣುತ್ತಿದ್ದವು. ಸೈನಿಕರು ಎತ್ತೆತ್ತಿ ಕುಣಿಸುತ್ತಿದ್ದ ಕುಂತಗಳ ತುದಿಯಲ್ಲಿ ತೂಗಾಡುತ್ತಿದ್ದ ಗೊಂಚಲು ಕರುಳುಗಳು ರಣಭೂಮಿಗೆ ಯಮನು ಆಗಮಿಸುತ್ತಾನೆ ಎಂದು ತಿಳಿಸಲು ಬಾವುಟ ತೋರಣಗಳನ್ನು ಕಟ್ಟಿದ್ದಾರೆ ಎಂಬಂತೆ ಕಂಗೊಳಿಸುತ್ತಿದ್ದವು.
ಪದಾರ್ಥ (ಕ.ಗ.ಪ)
ಡೊಂಕಣಿ-ವಕ್ರಾಯುಧ ಸಬಳ, ಕುಂತಾಗ್ರ-ಈಟಿಯ ತುದಿ, ಹಿಣಿಲು ಕರುಳು-ಗೊಂಚಲು ಕರುಳು, ಜವ-ಯಮ, ಪಡಿಸಣ-ಪರೀಕ್ಷಿಸಿ ನೋಡುವುದು
ಟಿಪ್ಪನೀ (ಕ.ಗ.ಪ)
ಡೊಂಕಣಿ, ಕುಂತಗಳು ಬೇರೆ ಬೇರೆ ಆಯುಧಗಳು. ನಿಘಂಟುಗಳಲ್ಲಿ ಸಮಾನಾರ್ಥಕವಾಗಿ ಕೊಟ್ಟಿದ್ದರೂ ಅವು ಬೇರೆ ಬೇರೆ ಆಯುಧಗಳಾಗಿವೆ.
ಮೂಲ ...{Loading}...
ಹೆಣನ ಹೋಳಿನ ಸಿಡಿದಡಗು ಡೊಂ
ಕಣಿಯೊಳೆಸೆದುವು ಕಾಲನಾರೋ
ಗಣೆಗೆ ಮಿಗೆ ಪಡಿಸಣವ ನೋಡದೆ ಮಾಣವೆಂಬಂತೆ
ಕುಣಿವ ಕುಂತಾಗ್ರದಲಿ ಜೋಲುವ
ಹಿಣಿಲುಗರುಳೊಪ್ಪಿದವು ಜವನೀ
ರಣಕೆ ಬರೆ ಕಟ್ಟಿದವು ಗುಡಿ ತೋರಣವನೆಂಬಂತೆ ॥47॥
೦೪೮ ದೆಸೆದೆಸೆಗೆ ಹರಿಹರಿದು ...{Loading}...
ದೆಸೆದೆಸೆಗೆ ಹರಿಹರಿದು ಮಾಮಸ
ಮಸಗಿ ಬಾದಣಗೊರೆದು ಕೆಡಹುವ
ವಿಷಮವೀರರು ಘಾಡಿಸಿತು ಡೊಂಕಣಿಯ ತುದಿಗಳಲಿ
ಬಸಿವ ಹೊಸ ರುಧಿರಕ್ಕೆ ಜೋಲುವ
ಕುಸುರಿಗರುಳಿಂದುದಿರುವಡಗಿನ
ಬಸೆಗೆ ಬಂದೆರಗಿದವುಲೂಕಧ್ವಾಂಕ್ಷ ಸಂದೋಹ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಿಕ್ಕು ದಿಕ್ಕಿಗೂ ಚಲಿಸಿ ಬಹು ರಭಸದಿಂದ ಮೇಲೆಬಿದ್ದು (ಧಾಳಿ ಮಾಡಿ) ಮೈಯಲ್ಲಿ ಕಂಡಿಕೊರೆದು (ಆಳವಾದ) ಗಾಯಮಾಡಿ ವೀರರನ್ನು ಕೊಲ್ಲುವ ಅಸಮಾನ ವೀರರು ಎಲ್ಲೆಲ್ಲೂ ಹರಡಿದರು. ಡೊಂಕಣಿಯ ತುದಿಗಳಲ್ಲಿ ಸುರಿಯುತ್ತಿದ್ದ ಬಿಸಿರಕ್ತಕ್ಕೆ ಜೋಲುತ್ತಿರುವ ಚೂರುಚೂರಾದ, ಕರುಳಿಂದ ಉದುರುತ್ತಿದ್ದ ಮಾಂಸದ ನೆಣಕ್ಕೆ ಗೂಬೆ, ಕಾಗೆ ಸಮೂಹಗಳು ಬಂದು ಆವರಿಸಿದವು.
ಪದಾರ್ಥ (ಕ.ಗ.ಪ)
ಬಸೆ-ನೆಣ, ಕೊಬ್ಬು, ಉಲೂಕ-ಗೂಬೆ, ಧ್ವಾಂಕ್ಷ-ಕಾಗೆ, ಎರಗಿದವು-ಆವರಿಸಿದವು, ವಿಷಮ-ಉಗ್ರ, ಅಸಮಾನ
ಮೂಲ ...{Loading}...
ದೆಸೆದೆಸೆಗೆ ಹರಿಹರಿದು ಮಾಮಸ
ಮಸಗಿ ಬಾದಣಗೊರೆದು ಕೆಡಹುವ
ವಿಷಮವೀರರು ಘಾಡಿಸಿತು ಡೊಂಕಣಿಯ ತುದಿಗಳಲಿ
ಬಸಿವ ಹೊಸ ರುಧಿರಕ್ಕೆ ಜೋಲುವ
ಕುಸುರಿಗರುಳಿಂದುದಿರುವಡಗಿನ
ಬಸೆಗೆ ಬಂದೆರಗಿದವುಲೂಕಧ್ವಾಂಕ್ಷ ಸಂದೋಹ ॥48॥
೦೪೯ ಧುರದೊಳಗೆ ಬಿಲುಗಾರರೊಗ್ಗಿನ ...{Loading}...
ಧುರದೊಳಗೆ ಬಿಲುಗಾರರೊಗ್ಗಿನ
ಹರಿಗೆಕಾರರು ಹಲಗೆಯವರು
ಬ್ಬರದ ಡೊಂಕಣಿಕಾರರಾಂತು ಕೃತಾಂತನಾಲಯವ
ಥರಥರದಿ ತೀವಿದರು ರುಧಿರದ
ಹರಹು ಹೇರಾಳಿಸಿತು ಚೂಣಿಯೊ
ಳೆರಡು ಬಲದ ಪದಾತಿ ಸವೆದುದು ಕೇಳು ಧೃತರಾಷ್ಪ್ರ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ಆ ಯುದ್ಧದಲ್ಲಿ ಗುಂಪಾಗಿ ಬಿಲ್ಲುಗಾರರು, ಗುರಾಣಿಕಾರರು, ಢಾಲಿನವರು, ಸಾಹಸದಿಂದ ಹೋರಾಡಿ ಬಗೆಬಗೆಯಿಂದ ಶತ್ರುಗಳನ್ನು ಯಮನಗರಿಗೆ ತುಂಬಿದರು. ರಕ್ತದ ಕೋಡಿಗಳು ಧಾರಾಳವಾಗಿ ಹರಡಿದವು. ಮುಂಭಾಗದ ಸೈನ್ಯದಲ್ಲಿದ್ದ ಉಭಯ ಸೇನೆಗಳ ಕಾಲ್ದಳ ನಾಶವಾಯಿತು. ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಒಗ್ಗು-ಗುಂಪು, ಹರಿಗೆ-ಢಾಲು, ಹಲಗೆ-ಗುರಾಣಿ, ರುಧಿರ-ರಕ್ತ, ಹರಹು-ವಿಸ್ತಾರ, ಚೂಣಿ-ಮುಂಭಾಗದ ಸೇನೆ, ಪದಾತಿ-ಕಾಲ್ದಳ, ಆಂತು-ಹೋರಾಡಿ,
ಮೂಲ ...{Loading}...
ಧುರದೊಳಗೆ ಬಿಲುಗಾರರೊಗ್ಗಿನ
ಹರಿಗೆಕಾರರು ಹಲಗೆಯವರು
ಬ್ಬರದ ಡೊಂಕಣಿಕಾರರಾಂತು ಕೃತಾಂತನಾಲಯವ
ಥರಥರದಿ ತೀವಿದರು ರುಧಿರದ
ಹರಹು ಹೇರಾಳಿಸಿತು ಚೂಣಿಯೊ
ಳೆರಡು ಬಲದ ಪದಾತಿ ಸವೆದುದು ಕೇಳು ಧೃತರಾಷ್ಪ್ರ ॥49॥
೦೫೦ ಧುರವನವ ಸಾಗಿಸದಿರೇರಲಿ ...{Loading}...
ಧುರವನವ ಸಾಗಿಸದಿರೇರಲಿ
ತುರಗವಾವೆಡೆ ಪಟ್ಟಸಹಣದ
ಹಿರಿಯ ಸಹಣದ ವಿಮಲಸಹಣಿಗಳವರ ಕರೆಯೆನುತ
ಧುರಧುರಂಧರರೊರಲಿದರು ಮೋ
ಹರಮಹಾಂಭೋನಿಧಿಯ ತೆರೆಯವೊ
ಲುರವಣಿಸಿದವು ಕುದುರೆ ತಾರೆಗಳುದಿರೆ ನೆಲನದಿರೆ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯುದ್ಧವನ್ನು ಮುನ್ನಡೆಸುವ ರಾಜಯೋಗ್ಯ ಕುದುರೆಗಳ ವೀರರೇ, ಹಿರಿಯ ಬಲಶಾಲಿ ಕುದುರೆಗಳ ಶ್ರೇಷ್ಠ ಅಶ್ವವೀರರೇ, ಬನ್ನಿ” ಎಂದು ರಣಶೂರರು ಕರೆಯಿತ್ತರು. ಆಕಾಶದಿಂದ ಉಲ್ಕಾಪಾತವಾದಂತೆ ಭೂಕಂಪವಾದಂತೆ ಸೇನಾ ಸಾಗರದ ಅಲೆಗಳೋ ಎಂಬಂತೆ ಕುದುರೆಗಳ ಸಾಲು ರಭಸದಿಂದ ನುಗ್ಗಿ ಬಂದವು.
ಪದಾರ್ಥ (ಕ.ಗ.ಪ)
ತಾರೆಉದಿರೆ-ಉಲ್ಕಾಪಾತವಾದಂತೆ, ನೆಲನದಿರೆ-ಭೂಕಂಪವಾದಂತೆ, ಉರವಣಿಸು-ರಭಸದಿಂದ ಮುನ್ನುಗ್ಗು
ಮೂಲ ...{Loading}...
ಧುರವನವ ಸಾಗಿಸದಿರೇರಲಿ
ತುರಗವಾವೆಡೆ ಪಟ್ಟಸಹಣದ
ಹಿರಿಯ ಸಹಣದ ವಿಮಲಸಹಣಿಗಳವರ ಕರೆಯೆನುತ
ಧುರಧುರಂಧರರೊರಲಿದರು ಮೋ
ಹರಮಹಾಂಭೋನಿಧಿಯ ತೆರೆಯವೊ
ಲುರವಣಿಸಿದವು ಕುದುರೆ ತಾರೆಗಳುದಿರೆ ನೆಲನದಿರೆ ॥50॥
೦೫೧ ಬರಿಗಡಗ ಕೀಳ್ಕಮ್ಬಿ ...{Loading}...
ಬರಿಗಡಗ ಕೀಳ್ಕಂಬಿ ದುಕ್ಕುಡಿ
ಯುರುಗುಗಡಿಯಣ ಮೊಗವಡಂಗಳು
ತುರಗವದನದಲೊಪ್ಪಿರಲು ತಾ ಪಣೆಯನಳವಡಿಸಿ
ಕೊರಳ ಕೊಡಕೆಯ ಪಾಶ್ರ್ವಪೇಚಕ
ದೆರಡು ಕಡೆಯಲಿ ಸುತ್ತು ಝಲ್ಲಿಯ
ಪರಿಪರಿಯ ಹಕ್ಕರಿಕೆಯಲಿ ಬೀಸಿದರು ಚೌರಿಗಳ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳಿಗೆ ಪಕ್ಕಗಳ ಸುತ್ತ ಹಾಕುವ ಚರ್ಮದ ಪಟ್ಟಿ, ಕೀಳ್ಕಂಬಿ (ಬಾಯಿ ಕಡಿವಾಣ) ದುಕ್ಕಡಿ (ಲಗಾಮು) ಉರುಗು (ಕಣ್ಪಟ್ಟಿ) ಮೊಗವಡ (ಮುಖವಾಡ) ಇವು ಹಣೆಯಲ್ಲಿ ಅಳವಟ್ಟು ಕಂಗೊಳಿಸಿರಲು ಕುತ್ತಿಗೆಗೆ, ಕಿವಿ, ಪಾಶ್ರ್ವ, ಕುದುರೆಯ ಬಾಲದ ಬುಡದ ಎರಡೂ ಪಕ್ಕಗಳಲ್ಲಿಯೂ ಸುತ್ತು ಝಲ್ಲಿಗಳನ್ನೂ ಬಗೆಬಗೆಯ ಜೀನುಗಳಿಂದ ಅಲಂಕರಿಸಿ ಚೌರಿಗಳನ್ನು ಬೀಸಿದರು.
ಪದಾರ್ಥ (ಕ.ಗ.ಪ)
ಪೇಚಕ - ಬಾಲದ ಬುಡ , ಬರಿಕಡಗ- ಕುದುರೆಯ ಪಕ್ಕಗಳ ಸುತ್ತ ಹಾಕುವ ಚರ್ಮದ ಪಟ್ಟಿ, ಕೀಳ್ಕಂಬಿ-ಬಾಯಿಕಡಿವಾಣ, ದುಕ್ಕಡಿ-ಲಗಾಮು, ಉರುಗು-ಕಣ್ಪಟ್ಟಿ, ಮೊಗವಡ-ಮುಖವಾಡ, ಹಕ್ಕರಿಕೆ-ಕವಚ
ಮೂಲ ...{Loading}...
ಬರಿಗಡಗ ಕೀಳ್ಕಂಬಿ ದುಕ್ಕುಡಿ
ಯುರುಗುಗಡಿಯಣ ಮೊಗವಡಂಗಳು
ತುರಗವದನದಲೊಪ್ಪಿರಲು ತಾ ಪಣೆಯನಳವಡಿಸಿ
ಕೊರಳ ಕೊಡಕೆಯ ಪಾಶ್ರ್ವಪೇಚಕ
ದೆರಡು ಕಡೆಯಲಿ ಸುತ್ತು ಝಲ್ಲಿಯ
ಪರಿಪರಿಯ ಹಕ್ಕರಿಕೆಯಲಿ ಬೀಸಿದರು ಚೌರಿಗಳ ॥51॥
೦೫೨ ಹಳದಿ ಪಾರಿಯ ...{Loading}...
ಹಳದಿ ಪಾರಿಯ ಪಚ್ಚೆ ಜೋನೆಗ
ಪಳಿ ಸುವರ್ಣಾವಳಿಯ ಸಂಧ್ಯಾ
ವಳಿಯುದಯರಾಗದಲಿ ರಚಿಸಿದ ಹಕ್ಕರಿಕ್ಕೆಗಳ
ಕೆಲಬಲದ ಕುಣಿಕೆಗಳ ರಚಿಸಿದ
ರುಲಿವ ಘಂಟೆಯ ಮೊಗದ ಕನ್ನಡಿ
ಗಳ ವಿಲಾಸದಲಂದಲಂಕರಿಸಿದರು ತೇಜಿಗಳ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಳದಿಯ ಅಲಂಕಾರ ವಸ್ತ್ರ, ಪಚ್ಚೆಪಳಿ, ಸಾರಿಯ ಪಳಿ, ಜೋನೆಗಪಳಿ, ಸುವರ್ಣಾಪಳಿ, ಸಂಧ್ಯಾಪಳಿ ಉದಯರಾಗ ಈ ಮೊದಲಾದ ಬಗೆಬಗೆಯ ಬಣ್ಣಗಳಲ್ಲಿ ರಚಿಸಿದ ಬಟ್ಟೆಗಳ ಮೈ ಜೋಡುಗಳನ್ನು ಎಡಬಲದ ಕುಣಿಕೆಗಳನ್ನು ಸಿದ್ಧಪಡಿಸಿದರು. ಅಂದು ಸಂಭ್ರಮದಿಂದ ಸದ್ದು ಮಾಡುವ ಕಿರುಗಂಟೆಗಳು, ಮೊಗಕನ್ನಡಿಗಳು ಮುಂತಾದವುಗಳಿಂದ ಕುದುರೆಗಳನ್ನು ಅಲಂಕರಿಸಿದರು.
ಪದಾರ್ಥ (ಕ.ಗ.ಪ)
ಹಳದಿಯ ಪಾರಿ -ಹಳದಿ ವಸ್ತ್ರ. ಜೋನೆಗಪಳಿ- ಜೋನೆಗದೇಶದಿಂದ ತರಿಸಿದ ವಸ್ತ್ರ, ಸುವರ್ಣಾಪಳಿ-ಹಳದಿ ವಸ್ತ್ರ ಸಂಧ್ಯಾಪಳಿ-ಸಂಜೆಗೆಂಪಿನ ವಸ್ತ್ರ, ಹಕ್ಕರಿಕೆ-ಮೈಜೋಡು, ಉದಯರಾಗ- ಅರುಣವರ್ಣ
ಮೂಲ ...{Loading}...
ಹಳದಿ ಪಾರಿಯ ಪಚ್ಚೆ ಜೋನೆಗ
ಪಳಿ ಸುವರ್ಣಾವಳಿಯ ಸಂಧ್ಯಾ
ವಳಿಯುದಯರಾಗದಲಿ ರಚಿಸಿದ ಹಕ್ಕರಿಕ್ಕೆಗಳ
ಕೆಲಬಲದ ಕುಣಿಕೆಗಳ ರಚಿಸಿದ
ರುಲಿವ ಘಂಟೆಯ ಮೊಗದ ಕನ್ನಡಿ
ಗಳ ವಿಲಾಸದಲಂದಲಂಕರಿಸಿದರು ತೇಜಿಗಳ ॥52॥
೦೫೩ ಸವಗ ಮೊಚ್ಚೆಯ ...{Loading}...
ಸವಗ ಮೊಚ್ಚೆಯ ಬಾಹುರಕ್ಕೆಯ
ವಿವಿಧವಜ್ರಾಂಗಿಗಳ ಸೀಸಕ
ಕವಚಗಳ ತೊಟ್ಟತುಳಬಲರೇರಿದರು ತೇಜಿಗಳ
ಹವಣಿಸಿದ ವಾಘೆಗಳ ರಾಘೆಯ
ಸವಸರಿಯ ಭಾರಾಂಕಲವುಡಿಯ
ಗವಿಯ ಗರುವರು ನೂಕಿದರು ತೇಜಿಗಳನೋಜೆಯಲಿ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೈಜೋಡು, ಪಾದರಕ್ಷೆ, ಭುಜಕೀರ್ತಿ ನಾನಾ ಬಗೆಯ ವಜ್ರಾಂಗಿಗಳು, ಶಿರಸ್ತ್ರಾಣ (ತಲೆಟೊಪ್ಪಿಗೆ), ಉಕ್ಕಿನ ಅಂಗಿಗಳನ್ನು ತೊಟ್ಟು ಅಸಮಾನವೀರರು ಕುದುರೆಗಳನ್ನು ಏರಿದರು. ಸಿದ್ಧವಾದ ಲಗಾಮುಗಳನ್ನು ಹಿಡಿದು ತೂಗಾಡುತ್ತಿದ್ದ ಅಂಕವಣಿಯನ್ನು (ಕಾಲಿಡಲು ಇದ್ದ ಬಳೆಗಳು) ಹತ್ತಿ ಆಕ್ರಮಣಶಾಲಿ ವೀರರು ಅತಿಶಕ್ತರು ಧರಿಸುವ ಆಯುಧ ಹಿಡಿದು ಕುದುರೆಗಳನ್ನು ಸಾಲುಸಾಲಾಗಿ ನುಗ್ಗಿಸಿದರು.
ಪದಾರ್ಥ (ಕ.ಗ.ಪ)
ಓಜೆ-ಸಾಲುಸಾಲಾಗಿ, ನೂಕಿದರು-ನುಗ್ಗಿಸಿದರು, ಸವಗ-ಮೈಜೋಡು, ರಾಘೆ-ಅಂಕವಣಿ (ಕುದುರೆ ಹತ್ತಲು ಮಗ್ಗುಲಲ್ಲಿ ನೇತು ಬಿಟ್ಟಿರುವ ಬಳೆ), ಗವಿ-ಆಕ್ರಮಣ, ಗರುವರು-ವೀರರು, ಭಾರಾಂಕಲವುಡಿ- ಭಾರಿಯ ಕಬ್ಬಿಣದ ಆಯುಧ.
ಮೂಲ ...{Loading}...
ಸವಗ ಮೊಚ್ಚೆಯ ಬಾಹುರಕ್ಕೆಯ
ವಿವಿಧವಜ್ರಾಂಗಿಗಳ ಸೀಸಕ
ಕವಚಗಳ ತೊಟ್ಟತುಳಬಲರೇರಿದರು ತೇಜಿಗಳ
ಹವಣಿಸಿದ ವಾಘೆಗಳ ರಾಘೆಯ
ಸವಸರಿಯ ಭಾರಾಂಕಲವುಡಿಯ
ಗವಿಯ ಗರುವರು ನೂಕಿದರು ತೇಜಿಗಳನೋಜೆಯಲಿ ॥53॥
೦೫೪ ತರುಣಿಯರ ನೊಸಲನ್ತೆ ...{Loading}...
ತರುಣಿಯರ ನೊಸಲಂತೆ ತಿಲಕದ
ಸರಿಸವದು ವೈವಾಹಗೇಹದ
ಸಿರಿಯವೊಲು ಮಂಗಳಮಯವು ಮಲೆಯಾಳ ಜನಪದದ
ಅರಸಿನಂತಿರೆ ಚೇರಮಯವೆನ
ಲುರವಣಿಸಿ ನೂಕಿದರು ನಿಡುವ
ಕ್ಕರಿಕೆಗಳ ಗರುವಾಯಿಗಳ ಘನಮದದ ತೇಜಿಗಳ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುವತಿಯರ ಹಣೆಯಂತೆ ತಿಲಕವು ಒಪ್ಪವಾಗಿತ್ತು. ಅದು ಮದುವೆ ಮನೆಯ ಸಿರಿಯಂತೆ ಶುಭಕರವಾಗಿತ್ತು. ಮಲೆಯಾಳದ ಜನರ ಅರಸನಾದ ಚೇರರಾಜನ ಸೈನಿಕರೇ ಎಲ್ಲಕಡೆಗೂ ಆಕ್ರಮಿಸಿದರೋ ಎನ್ನುವಂತೆ, ದೊಡ್ಡದಾದ ಥಡಿಗಳನ್ನು ಹೊಂದಿದ ಶೂರರು ನಡೆಸುವ ಗರ್ವಿಷ್ಟ ಕುದುರೆಗಳನ್ನು ಸಂಭ್ರಮದಿಂದ ರಣರಂಗಕ್ಕೆ ನುಗ್ಗಿಸಿದರು.
ಪದಾರ್ಥ (ಕ.ಗ.ಪ)
ಚೇರಮಯ-ಚೇರರಾಜನಂತೆ, ನಿಡುವಕ್ಕರಿಕೆ-ಉದ್ದವಾದ ಪಕ್ಕರೆಕ್ಕೆ, ಕವಚ, ಗುರವಾಯಿ-ಶೂರ
ಮೂಲ ...{Loading}...
ತರುಣಿಯರ ನೊಸಲಂತೆ ತಿಲಕದ
ಸರಿಸವದು ವೈವಾಹಗೇಹದ
ಸಿರಿಯವೊಲು ಮಂಗಳಮಯವು ಮಲೆಯಾಳ ಜನಪದದ
ಅರಸಿನಂತಿರೆ ಚೇರಮಯವೆನ
ಲುರವಣಿಸಿ ನೂಕಿದರು ನಿಡುವ
ಕ್ಕರಿಕೆಗಳ ಗರುವಾಯಿಗಳ ಘನಮದದ ತೇಜಿಗಳ ॥54॥
೦೫೫ ನಿಲುಕಿ ಹೊಳೆದವು ...{Loading}...
ನಿಲುಕಿ ಹೊಳೆದವು ನೇಣ ಸಡಿಲಿಸೆ
ಕುಲಗಿರಿಯ ಹೆಡತಲೆಯನಡರಿದ
ವಳುಕಿ ಪಯಸನ್ನೆಗಳೊಳಭ್ರದ ಕುಡಿಯನಡರಿಸುತ
ದಳವುಳಿಸಿದವು ತಾಟಿಸಿದರೊಡೆ
ದುಳಿದವಖಿಳಾವನಿಯನೆನೆ ಮೈ
ಲುಳಿಯ ಮನವೇಗಾಯ್ಲ ವಾಜಿಯ ಥಟ್ಟ ನೂಕಿದರು ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಚಪಲಾಶ್ವಗಳು ಮೈಯನ್ನು ಮುಂದಕ್ಕೆ ನೀಡಿ ನಿಲುಕಿ ಪ್ರಕಾಶಿಸಿದವು. ಲಗಾಮುಗಳನ್ನು ಸಡಿಲ ಬಿಡಲು ಕೂಡಲೇ ಕುಲಗಿರಿಯ ಹಿಂದಲೆಗಳ ಮೇಲೆ ಕಾಲಿಟ್ಟು ಆವರಿಸಿದವು. ಪಾದದ ಸನ್ನೆಗಳನ್ನು ಅರಿತು ಆಕಾಶದ ತುದಿಯನ್ನು ಮುಟ್ಟುತ್ತ, (ಆ ಎತ್ತರಕ್ಕೆ ನೆಗೆಯುತ್ತ) ಮುಂದೆ ನುಗ್ಗಿದವು. ತಾಡಿಸಿದಾಗ ಇಡೀ ಭೂಮಿಯೇ ಒಡೆದು ಹೋಗುವಂತೆ ಮನೋವೇಗದಲ್ಲಿ ಚಲಿಸುವ ಅಶ್ವಸೇನೆಯನ್ನು ಕಾಳಗಕ್ಕೆ ನುಗ್ಗಿಸಿದರು.
ಪದಾರ್ಥ (ಕ.ಗ.ಪ)
ದಳವುಳಿಸು-ಮುನ್ನುಗ್ಗು, ಅಡರಿಸು-ಆವರಿಸು, ಪಯಸನ್ನೆ-ಪಾದಸನ್ನೆ, ಹೆಡತಲೆ-ಹಿಂದಲೆ, ಅಭ್ರದಕುಡಿ-ಆಕಾಶದ ತುದಿ, ನಿಲುಕಿ-ನೀಡಿ, ಮನವೇಗಾಯ್ಲ-ಮನೋವೇಗದ, ತಾಟಿಸಿದರು-ತಾಡಿಸಿದರು
ಮೂಲ ...{Loading}...
ನಿಲುಕಿ ಹೊಳೆದವು ನೇಣ ಸಡಿಲಿಸೆ
ಕುಲಗಿರಿಯ ಹೆಡತಲೆಯನಡರಿದ
ವಳುಕಿ ಪಯಸನ್ನೆಗಳೊಳಭ್ರದ ಕುಡಿಯನಡರಿಸುತ
ದಳವುಳಿಸಿದವು ತಾಟಿಸಿದರೊಡೆ
ದುಳಿದವಖಿಳಾವನಿಯನೆನೆ ಮೈ
ಲುಳಿಯ ಮನವೇಗಾಯ್ಲ ವಾಜಿಯ ಥಟ್ಟ ನೂಕಿದರು ॥55॥
೦೫೬ ಖುರಪುಟದ ಕೆನ್ಧೂಳಿ ...{Loading}...
ಖುರಪುಟದ ಕೆಂಧೂಳಿ ಬಂಧಿಸೆ
ತರಣಿಯನು ಪವಮಾನಮಾರ್ಗವ
ನರರೆ ಕಟ್ಟಿತು ತುಳಿದುದಿಂದ್ರನ ಸಾವಿರಾಲಿಗಳ
ಹರಿಸಬುದ ತನ್ನಗಿಲ್ಲದಿನ್ನೀ
ತರಣಿವಾಯುಸುರೇಂದ್ರರಿಗೆ ಸಂ
ಚರಿಸಲೇಕೆಂಬಂತೆ ನಡೆದವು ಘೋಟಕವ್ರಾತ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳ ಗೊರಸಿನಿಂದ ಮೇಲೆದ್ದ ಕೆಂಪು ಧೂಳು ಸೂರ್ಯ ಮಂಡಲವನ್ನು ಆವರಿಸಿತು. ಗಾಳಿಯ ಸಂಚಾರ ಮಾರ್ಗವನ್ನು ತಡೆಗಟ್ಟಿತಲಾ ! ಇಂದ್ರನ ಸಾವಿರಾರು ಕಣ್ಣುಗಳನ್ನು ಮುಸುಕಿಬಿಟ್ಟಿತು. ಹರಿ (ವಿಷ್ಣು ಎಂಬರ್ಥದಲ್ಲಿ) ಎಂಬ ಮಾತು (ಇನ್ನು ಮುಂದೆ) ತನಗೆ ಸಲ್ಲುವುದೆ ಹೊರತು ಈ ಸೂರ್ಯ, ಗಾಳಿ ಇಂದ್ರ ದೇವತೆಗಳಿಗೆ ಸಲ್ಲ ತಕ್ಕದ್ದಲ್ಲ ಎಂಬಂತೆ ಕುದುರೆಗಳ ಗುಂಪು ಮುನ್ನುಗ್ಗಿತು.
ಪದಾರ್ಥ (ಕ.ಗ.ಪ)
ಘೋಟಕವ್ರಾತ-ಕುದುರೆ ಗುಂಪು, ಹರಿ-ಕುದುರೆ, ವಿಷ್ಣು, ಸಬುದ-ಮಾತು, ಶಬ್ದ, ತರಣಿ-ಸೂರ್ಯ,
ಮೂಲ ...{Loading}...
ಖುರಪುಟದ ಕೆಂಧೂಳಿ ಬಂಧಿಸೆ
ತರಣಿಯನು ಪವಮಾನಮಾರ್ಗವ
ನರರೆ ಕಟ್ಟಿತು ತುಳಿದುದಿಂದ್ರನ ಸಾವಿರಾಲಿಗಳ
ಹರಿಸಬುದ ತನ್ನಗಿಲ್ಲದಿನ್ನೀ
ತರಣಿವಾಯುಸುರೇಂದ್ರರಿಗೆ ಸಂ
ಚರಿಸಲೇಕೆಂಬಂತೆ ನಡೆದವು ಘೋಟಕವ್ರಾತ ॥56॥
೦೫೭ ಖುರದ ಹೊಯಿಲಲಿ ...{Loading}...
ಖುರದ ಹೊಯಿಲಲಿ ನಡುಗಿತಿಳೆ ಫಣಿ
ವರನ ಹೆಡೆಗಳು ನೊಂದವಂಬುಧಿ
ಹೊರಳಿದವು ಹೋಗಾಡಿದವು ಕುಲಗಿರಿಗಳಚಲತೆಯ
ಅರರೆ ಸೂಟಿಯೊಳಟ್ಟಿದರೆ ದಿ
ಕ್ಕರಿಯ ಸೊಕ್ಕಡಗಿದವು ನಿಗುರುವ
ತುರಗದಳವೊಡವೆರಸಿದವು ಕುರುಪಾಂಡುಸೈನ್ಯದಲಿ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕುದುರೆಗಳ ಗೊರಸುಗಳ ರಭಸದ ದನಿಗೆ ಭೂಮಿ ನಡುಗಿತು. ಆದಿಶೇಷನ ಹೆಡೆಗಳು ನೊಂದವು. ಸಾಗರಗಳಲ್ಲಿ ಅಲ್ಲೋಲ ಕಲ್ಲೋಲವಾಯಿತು. ಸಪ್ತಕುಲಗಿರಿಗಳು ಸ್ಥಿರತ್ವವನ್ನು ಕಳೆದುಕೊಂಡವು. ಅರರೆ ! ವೇಗದಲ್ಲಿ ಆ ಅಶ್ವಗಳನ್ನು ದೌಡಾಯಿಸಿದಾಗ ದಿಗ್ಗಜಗಳ ಗರ್ವ ಅಡಗಿತು. (ಅಶ್ವಗಳ ವೇಗದ ಚಲನೆಯಿಂದ ದಿಗ್ಗಜಗಳು ತತ್ತರಿಸಿದವು) ಹೀಗೆ ಕೌರವ-ಪಾಂಡವ ಸೇನೆಗಳಲ್ಲಿ ನೆಗೆದು ಓಡುವ ಅಶ್ವದಳಗಳು ಒಂದನ್ನೊಂದು ಒಡಬೆರೆತು ತಾಗಿದವು.
ಪದಾರ್ಥ (ಕ.ಗ.ಪ)
ಖುರ-ಗೊರಸು, ಇಳೆ-ಭೂಮಿ, ಫಣಿವರ-ಆದಿಶೇಷ, ಅಂಬುಧಿ-ಸಮುದ್ರ, ಸೂಟಿ-ವೇಗ, ದಿಕ್ಕರಿ-ಅಷ್ಟದಿಗ್ಗಜಗಳು, ನಿಗುರುವ-ನೆಗೆದು ಓಡುವ
ಮೂಲ ...{Loading}...
ಖುರದ ಹೊಯಿಲಲಿ ನಡುಗಿತಿಳೆ ಫಣಿ
ವರನ ಹೆಡೆಗಳು ನೊಂದವಂಬುಧಿ
ಹೊರಳಿದವು ಹೋಗಾಡಿದವು ಕುಲಗಿರಿಗಳಚಲತೆಯ
ಅರರೆ ಸೂಟಿಯೊಳಟ್ಟಿದರೆ ದಿ
ಕ್ಕರಿಯ ಸೊಕ್ಕಡಗಿದವು ನಿಗುರುವ
ತುರಗದಳವೊಡವೆರಸಿದವು ಕುರುಪಾಂಡುಸೈನ್ಯದಲಿ ॥57॥
೦೫೮ ಹಿಡಿಯೆ ಜವನಿಕೆ ...{Loading}...
ಹಿಡಿಯೆ ಜವನಿಕೆ ಸಮರ ಮೋನದ
ಬಿಡುದಲೆಯ ಬಿರುದಾವಳಿಯಲು
ಗ್ಗಡಣೆಗಳ ಸೋಲಿಸುತ ತಮ್ಮನ್ವಯವ ಪಾಲಿಸುತ
ಝಡಿವ ದೂಹತ್ತಿಗಳ ಹಾಯಿಕಿ
ಹಿಡಿದ ಲೌಡಿಯ ಹತ್ತಳದ ತನಿ
ಗಡಣಿಗರು ಮೂದಲಿಸಿ ಕವಿದುದು ರಾಯರಾವುತರು ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋರಾಟವು ಮೌನದ ಪರದೆಯನ್ನು ಆವರಿಸಿರಲು, ಆವೇಶಭರಿತ ಬಿಡುತಲೆಯ ಬಿರುದಾವಳಿಗಳ ಉದ್ಘೋಷಗಳಿಂದ ಶತ್ರುಗಳ ಘೋಷಗಳನ್ನು ಹಂಗಿಸುತ್ತ, ತಮ್ಮ ವಂಶದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತ ಇಬ್ಬಾಯಿಯ ಕತ್ತಿಗಳನ್ನು ಝಳಪಿಸುತ್ತಾ, ಲೌಡಿಗಳನ್ನು ಹಿಡಿದು ನುಗ್ಗುತ್ತಾ ಲಗಾಮು ಹಿಡಿದ ಕುದುರೆ ಸವಾರರನ್ನು ಹಂಗಿಸುತ್ತ ರಾಜನ ಅಶ್ವದಳ ವೀರರು ನುಗ್ಗಿದರು.
ಪದಾರ್ಥ (ಕ.ಗ.ಪ)
ಬಿಡುತಲೆ-ಕೆದರಿದ ತಲೆ, ಉಗ್ಗಡಣೆ-ಉದ್ಘೋಷ, ಅನ್ವಯ-ವಂಶ, ಹತ್ತಳ-ಲಗಾಮು, ರಾವುತರು-ಕುದುರೆ ಸವಾರರು, ದೂಹತ್ತಿ-ಇಬ್ಬಾಯಿಕತ್ತಿ
ಮೂಲ ...{Loading}...
ಹಿಡಿಯೆ ಜವನಿಕೆ ಸಮರ ಮೋನದ
ಬಿಡುದಲೆಯ ಬಿರುದಾವಳಿಯಲು
ಗ್ಗಡಣೆಗಳ ಸೋಲಿಸುತ ತಮ್ಮನ್ವಯವ ಪಾಲಿಸುತ
ಝಡಿವ ದೂಹತ್ತಿಗಳ ಹಾಯಿಕಿ
ಹಿಡಿದ ಲೌಡಿಯ ಹತ್ತಳದ ತನಿ
ಗಡಣಿಗರು ಮೂದಲಿಸಿ ಕವಿದುದು ರಾಯರಾವುತರು ॥58॥
೦೫೯ ನೂಲ ಹರಿಗೆಯ ...{Loading}...
ನೂಲ ಹರಿಗೆಯ ಹೆಗಲ ಬಾರಿಯ
ತೋಳ ತೋರಿಯ ಲೌಡಿಗಳ ಕರ
ವಾಳತಳಪದ ಮಿಂಚುಗಳ ತನುಮನದ ಕೆಚ್ಚುಗಳ
ಸಾಲದಾವಣಿದಲೆಯ ಗಂಟಲ
ಗಾಳಗತ್ತರಿಗರಗಸದ ಬಿರು
ದಾಳಿಗಳ ಛಲದಂಕರಾವುತರೊತ್ತಿ ನೂಕಿದರು ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಗಲಿನ ಮೇಲೆ ಚರ್ಮದ ಪಟ್ಟಿಗಳಿದ್ದ, ಸೊಂಟಪಟ್ಟಿಗೆ ಗುರಾಣಿಯನ್ನು ಕಟ್ಟಿದ, ಭಾರಿಯಾದ ತೋಳಿನ, ದೊಡ್ಡದಾದ ಲೌಡಿಗಳ, ಸೊಂಟದ ಬುಡದಲ್ಲಿ ಮಿಂಚುವ ಕರವಾಳಗಳ, ಕೆಚ್ಚೆದೆಯ ತನುಮನದ, ಸಾಲುಸಾಲಾದ ದಾವಣಿತಲೆಗಳ, ದೊಡ್ಡ ಕತ್ತಿಗಳನ್ನು ಧರಿಸಿದ ಗಂಟಲಗಾಳ, ಕತ್ತರಿ, ಗರಗಸಗಳೆಂಬ ಬಿರುದಾವಳಿಗಳನ್ನು ಹೊತ್ತ ಪ್ರತಿಜ್ಞಾ ವೀರರಾದ ರಾವುತರು ಮುನ್ನುಗ್ಗಿ ನಡೆದರು.
ಪದಾರ್ಥ (ಕ.ಗ.ಪ)
ನೂಲಹರಿಗೆ-ಹಗುರವಾದ ಗುರಾಣಿ ?, ಛಲದಂಕರಾವುತರು-ಪ್ರತಿಜ್ಞಾ ವೀರರಾದ ರಾವುತರು. ತೋರಿಯ - ?
ಟಿಪ್ಪನೀ (ಕ.ಗ.ಪ)
ಗಂಟಲಗಾಳ, ಗಂಟಲಗತ್ತರಿ ಗಂಟಲಗರಗಸ ಇವು ಆ ಕಾಲದಲ್ಲಿ ವೀರರ ಸಾಹಸಕ್ಕೆ ನೀಡುತ್ತಿದ್ದ ಬಿರುದುಗಳಾಗಿದ್ದವು.
ಮೂಲ ...{Loading}...
ನೂಲ ಹರಿಗೆಯ ಹೆಗಲ ಬಾರಿಯ
ತೋಳ ತೋರಿಯ ಲೌಡಿಗಳ ಕರ
ವಾಳತಳಪದ ಮಿಂಚುಗಳ ತನುಮನದ ಕೆಚ್ಚುಗಳ
ಸಾಲದಾವಣಿದಲೆಯ ಗಂಟಲ
ಗಾಳಗತ್ತರಿಗರಗಸದ ಬಿರು
ದಾಳಿಗಳ ಛಲದಂಕರಾವುತರೊತ್ತಿ ನೂಕಿದರು ॥59॥
೦೬೦ ಹೊಡೆದು ಚಮ್ಮಟಿಗೆಯೊಳು ...{Loading}...
ಹೊಡೆದು ಚಮ್ಮಟಿಗೆಯೊಳು ದೊರೆಗಳ
ಹಿಡಿವ ಸಮ್ಮುಖದಲಿ ಕಠಾರಿಯ
ನಡಸಿ ತಿವಿವ ಕೃಪಾಣದಲಿ ಕಡಿನಾಲ್ಕ ತೋರಿಸುವ
ಅಡತರದಲವನಿಪರ ಹಯಮುಂ
ಗುಡಿಯ ಮುರಿದು ವಿಘಾತಿಯಲಿ ಥ
ಟ್ಟೊಡೆದು ಹಾಯ್ವತಿಭಾಷೆಗಳ ಬಿರುದಂಕರೇರಿದರು ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಾವಟಿಗಳಲ್ಲಿ ಕುದುರೆಗಳನ್ನು ಹೊಡೆದು ಓಡಿಸುತ್ತ, ದೊರೆಗಳನ್ನು ಸೆರೆ ಹಿಡಿಯುವೆವು ಎಂಬಂತೆ ಎದುರಿನಲ್ಲಿ ನಿಂತು ಕಠಾರಿಯನ್ನು ಶತ್ರು ಎದೆಗಳಲ್ಲಿ ನಾಟಿಸುವ, ಕತ್ತಿಗಳಲ್ಲಿ ತಿವಿಯುವ, ರಾಜರನ್ನು ಅಡ್ಡಗಟ್ಟುತ್ತ ಹಯಸೇನೆಯ ಮುಂದಳವನ್ನು ನಾಶಮಾಡಿ, ವಿಶೇಷ ಧಾಳಿಯಿಂದ ಸೈನ್ಯವನ್ನು ಭೇದಿಸಿ, ಮುನ್ನುಗ್ಗುವ ಘೋರ ಪ್ರತಿಜ್ಞೆಯ ಬಿರುದಾಂಕಿತರಾದ ಅಶ್ವವೀರರು ಮುಂದುವರೆದರು.
ಪದಾರ್ಥ (ಕ.ಗ.ಪ)
ಅತಿಭಾಷೆಗಳ-ಘೋರ ಪ್ರತಿಜ್ಞೆಗಳ, ಅಡತರದಲಿ-ಅಡ್ಡಗಟ್ಟುತಲಿ, ಕೃಪಾಣ-ದೊಡ್ಡ ಕತ್ತಿ, ಕಠಾರಿ-ಚಿಕ್ಕ ಕತ್ತಿ, ಚಮ್ಮಟಿಗೆ-ಚಾವಟಿ, ಥಟ್ಟೊಡೆದು-ಸೈನ್ಯ ಭೇದಿಸಿ, ಬಿರುದಂಕರು-ಅತಿಸಾಹಸಿಗಳು
ಮೂಲ ...{Loading}...
ಹೊಡೆದು ಚಮ್ಮಟಿಗೆಯೊಳು ದೊರೆಗಳ
ಹಿಡಿವ ಸಮ್ಮುಖದಲಿ ಕಠಾರಿಯ
ನಡಸಿ ತಿವಿವ ಕೃಪಾಣದಲಿ ಕಡಿನಾಲ್ಕ ತೋರಿಸುವ
ಅಡತರದಲವನಿಪರ ಹಯಮುಂ
ಗುಡಿಯ ಮುರಿದು ವಿಘಾತಿಯಲಿ ಥ
ಟ್ಟೊಡೆದು ಹಾಯ್ವತಿಭಾಷೆಗಳ ಬಿರುದಂಕರೇರಿದರು ॥60॥
೦೬೧ ಉಲಿವ ಕೈವಾರಿಗಳ ...{Loading}...
ಉಲಿವ ಕೈವಾರಿಗಳ ಲಗ್ಗೆಯ
ಬಲಿವ ತಂಬಟ ಕೋಟಿಗಳ ಭುಜ
ಬಲದ ಬಿರುದರ ಹೊಯ್ಲುಗಳ ನಿಸ್ಸಾಳ ನಿಸ್ವನದ
ಘುಳುಘುಳಿಪ ಬೊಗ್ಗುಗಳ ರಿಪುಗಳ
ಮುಳಿಯಿಸುವ ಕಹಳೆಗಳ ತುರಗಾ
ವಳಿಯ ಗಜರಬ್ಬರಣೆ ಮಿಗೆ ಕೈಕೊಂಡರತಿಬಳರು ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಂದಿಮಾಗಧರು ಘೋಷಣೆ ಮಾಡುತ್ತಿರಲು, ತಮ್ಮಟೆಗಳನ್ನು ಬಲವಾಗಿ ಬಾರಿಸುತ್ತಿರಲು, ನಾನಾ ಪರಿಯಲ್ಲಿ ಲಗ್ಗೆ ಹಾಕುವ, ಭುಜ ಪರಾಕ್ರಮದಲ್ಲಿ ಬಿರುದಿನ ವೀರರನ್ನು ಕುರಿತ ಘೋಷಣೆಯಲ್ಲಿ, ಭೇರಿ ಸದ್ದಿನ ಗದ್ದಲದಲ್ಲಿ, ದೊಡ್ಡದನಿಯಲ್ಲಿ ಮೊರೆಯುತ್ತಿದ್ದ ಹೆಗ್ಗಹಳೆ (ಬೊಗ್ಗು) ಗಳ, ಶತ್ರುಗಳನ್ನು ಕಂಗೆಡಿಸುವ ಕಹಳೆ ದನಿಗಳ ರಾವುತರ ಗರ್ಜನೆ ಘೋಷಣೆಗಳ ಆರ್ಭಟಗಳ ಸದ್ದು ಮಿತಿ ಮೀರುತ್ತಿರಲು ಅತಿಬಲರು ಕದನವನ್ನು ಕೈಗೊಂಡರು.
ಪದಾರ್ಥ (ಕ.ಗ.ಪ)
ಬೊಗ್ಗು-ಹೆಗ್ಗಹಳೆ, ಮುಳಿಯಿಸು-ಕಂಗೆಡಿಸು, ಅತಿಬಳರು-ಅತಿಬಲರಾದ ರಾವುತರು, ಕೈವಾರಿ-ವಂದಿ ಮಾಗಧ, ನಿಸ್ಸಾಳ-ನಗಾರಿ ಭೇರಿ, ತಂಬಟ-ತಮ್ಮಟೆ, ಅಬ್ಬರಣೆ-ಆರ್ಭಟ
ಮೂಲ ...{Loading}...
ಉಲಿವ ಕೈವಾರಿಗಳ ಲಗ್ಗೆಯ
ಬಲಿವ ತಂಬಟ ಕೋಟಿಗಳ ಭುಜ
ಬಲದ ಬಿರುದರ ಹೊಯ್ಲುಗಳ ನಿಸ್ಸಾಳ ನಿಸ್ವನದ
ಘುಳುಘುಳಿಪ ಬೊಗ್ಗುಗಳ ರಿಪುಗಳ
ಮುಳಿಯಿಸುವ ಕಹಳೆಗಳ ತುರಗಾ
ವಳಿಯ ಗಜರಬ್ಬರಣೆ ಮಿಗೆ ಕೈಕೊಂಡರತಿಬಳರು ॥61॥
೦೬೨ ಹೊಡೆವ ದೂಹತ್ತಿಗಳ ...{Loading}...
ಹೊಡೆವ ದೂಹತ್ತಿಗಳ ಘಾಯದ
ಲೊಡೆದು ಸಿಡಿದುವು ಲೋಹ ಸೀಸಕ
ವಡಸಿ ಬಲ್ಲೆಹ ಬಗಿದು ನಟ್ಟುದು ಸರಪಣಿಯ ಝಗೆಯ
ಹೊಡೆವ ಲೌಡಿಗಳೊತ್ತಿ ನೆತ್ತಿಯ
ಬಿಡುಮಿದುಳ ಕೆದರಿದವು ರಕುತದ
ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬಾಯ ಕತ್ತಿಗಳನ್ನು ಬೀಸಿದಾಗ ಬಿದ್ದ ಪೆಟ್ಟುಗಳಿಂದ ಲೋಹದ ಶಿರಸ್ತ್ರಾಣಗಳು ಒಡೆದು ಚೂರಾಗಿ ಹಾರಿದವು. ಬೀಸಿ ಎಸೆದ ಭಲ್ಲೆಗಳು ಸರಪಳಿಯ (ಝಗೆ) ಕವಚಗಳನ್ನು ಸೀಳಿ ನಾಟಿದವು ಕುಕ್ಕಿದ ದೊಣ್ಣೆಯಂಥ ಆಯುಧದಿಂದ ಹೊಡೆದಾಗ (ಲೌಡಿಗಳು) ತಲೆಯಲ್ಲಿ ನಾಟಿ ಹೊರ ಬಂದ ಮಿದುಳು ಎಲ್ಲೆಡೆ ಚೆಲ್ಲಾಡಿತು. ಎರಡೂ ಕಡೆಯ ಕುದುರೆ ಸವಾರರ ಪರಿವಾರಗಳು ರಕ್ತ ಸಾಗರವೊಂದು ಇನ್ನೊಂದು ರಕ್ತ ಸಾಗರವನ್ನು ಸೇರುವ ಹಾಗೆ ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ಲೋಹ ಸೀಸಕ-ಲೋಹದ ಶೀರ್ಷಕ (ತಲೆ ಕವಚ), ಅಡಸಿ-ಬೀಸಿ ಒಗೆದ, ಝಗೆಯ-ಕವಚಗಳನ್ನು, ಲೌಡಿ-ದೊಣ್ಣೆಯುಂಥ ಉಕ್ಕಿನ ಆಯುಧ, ಬಿಡುಮಿದುಳ-ಹೊರಬಂದ ಮಿದುಳು,
ಮೂಲ ...{Loading}...
ಹೊಡೆವ ದೂಹತ್ತಿಗಳ ಘಾಯದ
ಲೊಡೆದು ಸಿಡಿದುವು ಲೋಹ ಸೀಸಕ
ವಡಸಿ ಬಲ್ಲೆಹ ಬಗಿದು ನಟ್ಟುದು ಸರಪಣಿಯ ಝಗೆಯ
ಹೊಡೆವ ಲೌಡಿಗಳೊತ್ತಿ ನೆತ್ತಿಯ
ಬಿಡುಮಿದುಳ ಕೆದರಿದವು ರಕುತದ
ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು ॥62॥
೦೬೩ ಜರೆದು ಸರಿಸದಲೇರಿದರೆ ...{Loading}...
ಜರೆದು ಸರಿಸದಲೇರಿದರೆ ಸಿಡಿ
ಲುರುಬಿದಂತಾಯಿತ್ತು ಘಾಯವ
ನರುಹಿದರೆ ದೂಹತ್ತಿ ರಾವ್ತರ ಮಸ್ತಕದೊಳಿಳಿದು
ಕೊರೆದುದಿಳೆಯನು ಹಯವ ನೂಕಿದ
ಡೊರಲಿದರು ತಳಕಮಠನೆನೆ ತ
ತ್ತರದರಿದು ಹೊಯ್ದಾಡಿದರು ಗುಜ್ಜರದ ರಾವುತರು ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಳಗದಲ್ಲಿ ಒಬ್ಬರನ್ನೊಬ್ಬರು ನಿಂದಿಸುತ್ತ ಎದುರಿಗೆ ಏರಿ ಬಂದರೆ ಸಿಡಿಲು (ಉರುಬಿದಂತೆ) ಬಡಿದಂತೆ ಆಗುತ್ತಿತ್ತು. ಇನ್ನು ಆ ರಾಹುತರಿಗೆ ಆದ ಗಾಯಗಳ ಬಗ್ಗೆ ಹೇಳುವುದಾದರೆ, ಇಬ್ಬಾಯಿ ಕತ್ತಿಗಳು ರಾವುತರ ತಲೆಗಳನ್ನು ಸೀಳಿ ನಾಟಿ ಕೆಳಗೆ ಬಿದ್ದಾಗ ಆ ರಭಸಕ್ಕೆ ಅದು ಭೂಮಿಯನ್ನೇ ಕೊರೆದಿತ್ತು. ಕುದುರೆಗಳನ್ನು ಪುಸಲಾಯಿಸಿ ಮುಂದಕ್ಕೆ ಓಡಿಸಿದಾಗ ಆ ರಭಸಕ್ಕೆ ಭೂಮಿಯನ್ನು ಹೊತ್ತಿದ್ದ ಕೂರ್ಮನು ತತ್ತರಿಸಿದನು ಎಂಬಂತೆ ಗುಜರಾತಿನ (ಗುರ್ಜರ ದೇಶದ) ಕುದುರೆ ಸವಾರರು ಬಿರುಸಿನಿಂದ ತರಿದಾಡುತ್ತ ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ತಳಕಮಠ-ಭೂಮಿಯನ್ನು ಹೊತ್ತ ಕೂರ್ಮನು, ಗುರ್ಜರ-ಗುಜರಾತ್, ರಾವುತ-ಕುದುರೆ ಸವಾರರು, ಉರುಬು-ಬಡಿ, ಸರಿಸದಲಿ-ಎದುರಿಗೆ ಸರಿಸಮಾನರಾಗಿ, ತತ್ತರತರಿದು-ಬಿರುಸಿನಿಂದ ತರಿದಾಡುತ್ತ
ಮೂಲ ...{Loading}...
ಜರೆದು ಸರಿಸದಲೇರಿದರೆ ಸಿಡಿ
ಲುರುಬಿದಂತಾಯಿತ್ತು ಘಾಯವ
ನರುಹಿದರೆ ದೂಹತ್ತಿ ರಾವ್ತರ ಮಸ್ತಕದೊಳಿಳಿದು
ಕೊರೆದುದಿಳೆಯನು ಹಯವ ನೂಕಿದ
ಡೊರಲಿದರು ತಳಕಮಠನೆನೆ ತ
ತ್ತರದರಿದು ಹೊಯ್ದಾಡಿದರು ಗುಜ್ಜರದ ರಾವುತರು ॥63॥
೦೬೪ ಎಡನ ಹೊಯಿದರು ...{Loading}...
ಎಡನ ಹೊಯಿದರು ಬಲದವರನಡ
ಗೆಡಹಿದರು ಸಮ್ಮುಖದ ನೃಪರನು
ಸಿಡಿಲ ಹರೆಯವೊಲೆರಗಿದರು ಸೂಟಿಯಲಿ ಸೈವರಿದು
ಅಡುಗುದುಳಿದರು ಮೋಹರವನೊ
ಗ್ಗೊಡೆದು ಚೂಣಿಯ ಗೋಣ ಬನದಲಿ
ಖಡುಗ ನರ್ತಿಸಲೊದಗಿದರು ಮಾಳವದ ರಾವುತರು ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾಳವ ದೇಶದ ಕುದುರೆ ಸವಾರರ ಸಾಹಸ ಪ್ರದರ್ಶನ ಹೀಗಿತ್ತು : ತಮ್ಮ ಎಡಭಾಗದಲ್ಲಿದ್ದ ಸೈನ್ಯವನ್ನು ಚಚ್ಚಿ ಹಾಕಿದರು. ಬಲಭಾಗದಲ್ಲಿದ್ದ ಸೈನ್ಯವನ್ನು ಕೊಂದು ಹಾಕಿದರು. ಎದುರು ಬಿದ್ದ ರಾಜರನ್ನು ಸಿಡಿಲು ಬಡಿದಂತೆ ಮೇಲೆ ಬಿದ್ದು ಎದುರಿಸಿದರು. ಅತಿವೇಗದಿಂದ ಮುನ್ನುಗ್ಗಿ ಶತ್ರುಗಳನ್ನು ಸದೆಬಡಿದು (ಅವರ ಛಿದ್ರ ದೇಹಗಳ ಮಾಂಸ ಖಂಡಗಳ ಮೇಲೆ ಸಾಗಿದರು) ಇಕ್ಕಿ ಮೆಟ್ಟಿದರು. ಶತ್ರು ಸೇನೆಯನ್ನು ಚೆಲ್ಲಾಪಿಲ್ಲಿ ಮಾಡಿ ,ಮುಂಭಾಗದ ಸೇನೆಯೆಂಬ ನವಿಲು ಬನದಲ್ಲಿ ತಮ್ಮ ಖಡ್ಗಗಳೆಂಬ ನವಿಲುಗಳು ಹೊಡೆದಾಟವೆಂಬ ನರ್ತನ ಮಾಡುವುದಕ್ಕೆ ಅವಕಾಶವಿತ್ತರು.
ಪದಾರ್ಥ (ಕ.ಗ.ಪ)
ಚೂಣಿ-ಸೇನೆ, ಒಗ್ಗೊಡೆದು-ಚೆಲ್ಲಾಪಿಲ್ಲಿ ಮಾಡಿ, ಅಡಗತುಳಿ-ಇಕ್ಕಿಮೆಟ್ಟು, ಸಮ್ಮುಖದ-ಎದುರು ಬಿದ್ದ, ಅಡಗೆಡುಹು-ಕೊಂದು ಹಾಕು, ಮಾಳವದ-ಮಾಳವ ದೇಶದ
ಮೂಲ ...{Loading}...
ಎಡನ ಹೊಯಿದರು ಬಲದವರನಡ
ಗೆಡಹಿದರು ಸಮ್ಮುಖದ ನೃಪರನು
ಸಿಡಿಲ ಹರೆಯವೊಲೆರಗಿದರು ಸೂಟಿಯಲಿ ಸೈವರಿದು
ಅಡುಗುದುಳಿದರು ಮೋಹರವನೊ
ಗ್ಗೊಡೆದು ಚೂಣಿಯ ಗೋಣ ಬನದಲಿ
ಖಡುಗ ನರ್ತಿಸಲೊದಗಿದರು ಮಾಳವದ ರಾವುತರು ॥64॥
೦೬೫ ಬೀಸುನೇಣಿನ ಸೆಳೆವ ...{Loading}...
ಬೀಸುನೇಣಿನ ಸೆಳೆವ ನೇಗಿಲ
ಸೂಸುಗಣೆಗಳ ಕಡಿವ ಕೊಡಲಿಯ
ಕೈಸುರಗಿ ಸೂನಗೆಯ ನಾನಾಯುಧದ ಗಡಣೆಗಳ
ಓಸರಣೆಗೊಡದತಿಬಳರು ದಿವ
ದಾಸೆಗಾರರು ವೈರಿಬಲವನು
ಘಾಸಿಮಾಡಿದರೊಗ್ಗಿನಲಿ ಹಮ್ಮೀರರಾವುತರು ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಣರಂಗದಲ್ಲಿ ಹೋರಾಡಿ ಸ್ವರ್ಗ ಸೇರಲು ಇಚ್ಛಿಸಿದ ಶತ್ರು ಬಲದ ಸೈನಿಕರಿಗೆ ಹಮ್ಮೀರ ದೇಶದ (?) ಶೂರ ರಾವುತರು ನೇಣುಗಳನ್ನು ಬಿಗಿದು, ನೇಗಿಲು (ಆಯುಧ)ಗಳನ್ನು ಸೆಳೆದು, ಬಾಣಗಳನ್ನು ಹೊಡೆದು ಕೊಡಲಿಗಳಿಂದ ಕಡಿದು, ಕೈಗತ್ತಿ ಶೂಲ ಮೊದಲಾದ ನಾನಾ ಬಗೆಯ ಆಯುಧ ಸಮೂಹಗಳಿಂದ ಯಾವ ರೀತಿಯಲ್ಲೂ ಕೈತಪ್ಪಿ ಹಿಮ್ಮೆಟ್ಟಿದಂತೆ, ಒಟ್ಟಾಗಿ ಪೆಟ್ಟು ನೀಡಿದರು (ಹಿಂಸಿಸಿದರು).
ಪದಾರ್ಥ (ಕ.ಗ.ಪ)
ಹಮ್ಮೀರ ರಾವುತರ-ಹಮ್ಮೀರ ದೇಶದ ಕುದುರೆ ಸವಾರರ, ನೇಣು-ಹಗ್ಗ, ಕಣೆ-ಬಾಣ, ಕೈಸುರಗಿ-ಕೈಕತ್ತಿ, ಸೂನಗೆ-ಶೂಲದಂಥ ಆಯುಧ, ಓಸರಣೆಗೊಡದ-ಹಿಮ್ಮೆಟ್ಟದಂತೆ (ಕೈತಪ್ಪದ ಹಾಗೆ) ಘಾಸಿ ಮಾಡು-ಹಿಂಸಿಸು, ದಿವದಾಸೆಗಾರರು-ಹೋರಾಡಿ ಸತ್ತು ಸ್ವರ್ಗ ಸೇರುವವರು.
ಮೂಲ ...{Loading}...
ಬೀಸುನೇಣಿನ ಸೆಳೆವ ನೇಗಿಲ
ಸೂಸುಗಣೆಗಳ ಕಡಿವ ಕೊಡಲಿಯ
ಕೈಸುರಗಿ ಸೂನಗೆಯ ನಾನಾಯುಧದ ಗಡಣೆಗಳ
ಓಸರಣೆಗೊಡದತಿಬಳರು ದಿವ
ದಾಸೆಗಾರರು ವೈರಿಬಲವನು
ಘಾಸಿಮಾಡಿದರೊಗ್ಗಿನಲಿ ಹಮ್ಮೀರರಾವುತರು ॥65॥
೦೬೬ ಅರರೆ ಕವಿದರು ...{Loading}...
ಅರರೆ ಕವಿದರು ಕದಳಿಯನು ಮದ
ಕರಿಯ ತೊತ್ತಳದುಳಿದವೊಲು ದಿಂ
ಡುರುಳಿಚಿದರಗಕೋಟಿಯನು ಶತಮನ್ಯುವಂದದಲಿ
ಶಿರವೊಡೆಯೆ ತೊಡೆಯುಡಿಯೆ ಕೈ ಕ
ತ್ತರಿಸೆ ಕೋಳಾಹಳ ಮಹಾಸಂ
ಗರದೊಳಗೆ ಹೊಯ್ದಾಡಿದರು ಕಾಶ್ಮೀರರಾವುತರು ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲಲಾ ! ಬಾಳೆ ತೋಟವನ್ನು ಆನೆಗಳು ನುಗ್ಗಿ ಕಾಲ್ತುಳಿತದಲ್ಲಿ ನಾಶಮಾಡುವ ಹಾಗೆ ದೇವೇಂದ್ರನು ಕೋಟಿ ಪರ್ವತಗಳನ್ನು ಪುಡಿ ಪುಡಿ ಮಾಡುವಂತೆ ಈ ರಾವುತರು ಶತ್ರುಗಳನ್ನು ಕೆಳಕ್ಕೆ ಕೆಡವಿದರು. ಶತ್ರುಗಳ ತಲೆ ಒಡೆಯುತ್ತ, ಕೈಕತ್ತರಿಸುತ್ತ, ತೊಡೆ ಮುರಿಯುತ್ತ, ಕೋಲಾಹಲವುಂಟು ಮಾಡುತ್ತ ಆ ಮಹಾ ಸಮರದಲ್ಲಿ ಕಾಶ್ಮೀರ ರಾವುತರು ಹೊಡೆದಾಡಿದರು.
ಪದಾರ್ಥ (ಕ.ಗ.ಪ)
ಕದಳಿ-ಬಾಳೆ ತೋಟ, ಮದಕರಿ-ಮದ್ದಾನೆ, ತೊತ್ತಳ ತುಳಿ-ಕಾಲಿನಿಂದ ಚೆನ್ನಾಗಿ ತುಳಿ, ಶತಮನ್ಯು-ದೇವೇಂದ್ರ, ದಿಂಡುರುಳಿಸಿದರು-ಕೆಳಕ್ಕೆ ಕೆಡವಿದರು,
ಮೂಲ ...{Loading}...
ಅರರೆ ಕವಿದರು ಕದಳಿಯನು ಮದ
ಕರಿಯ ತೊತ್ತಳದುಳಿದವೊಲು ದಿಂ
ಡುರುಳಿಚಿದರಗಕೋಟಿಯನು ಶತಮನ್ಯುವಂದದಲಿ
ಶಿರವೊಡೆಯೆ ತೊಡೆಯುಡಿಯೆ ಕೈ ಕ
ತ್ತರಿಸೆ ಕೋಳಾಹಳ ಮಹಾಸಂ
ಗರದೊಳಗೆ ಹೊಯ್ದಾಡಿದರು ಕಾಶ್ಮೀರರಾವುತರು ॥66॥
೦೬೭ ಕವಿದು ಮುನ್ದಲೆವಿಡಿದು ...{Loading}...
ಕವಿದು ಮುಂದಲೆವಿಡಿದು ರಾವ್ತರ
ತಿವಿದು ಜೀವವ ಕಳಚಿ ಕೆಲಬಲ
ದವರ ಕೆಡೆಹೊಯ್ದಹಿತಘಾಯವ ನೋಟದೊಡೆಹೊಯ್ದು
ಸವಗ ತುಂಡಿಸೆ ಜೋಡು ಖಂಡಿಸೆ
ನವರುಧಿರದೊರೆವೇಳೆ ಮಹದಾ
ಹವದೊಳೋರಂತೊದಗಿದರು ಗೌಳವದ ರಾವುತರು ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೌಳವ ದೇಶದ ಅಶ್ವ ಸವಾರರು ಹೋರಾಡಿದ ರೀತಿ ಇದು; ಶತ್ರುಗಳ ಮೇಲೆ ಬಿದ್ದು ಅವರ ಮುಂಗೂದಲನ್ನು (ಜುಟ್ಟನ್ನು) ಹಿಡಿದು, ಅಶ್ವಸೈನಿಕರು ಆಯುಧದಿಂದ ತಿವಿದು ಜೀವ ತೆಗೆಯುತ್ತಾ ಅಕ್ಕಪಕ್ಕದಲ್ಲಿದ್ದವರನ್ನೆಲ್ಲಾ (ಕೈಗೆ ಸಿಕ್ಕವರನ್ನೆಲ್ಲ) ಬೀಳ ಹೊಯ್ದರು. ಶತ್ರುಗಳು ಮಾಡಿದ ಗಾಯವನ್ನು ನೋಡಿದ ಕೂಡಲೆ ಅವರನ್ನು ಕತ್ತರಿಸಿದರು. ಒಳ ಕವಚವನ್ನು (ಕಾಪು) ತುಂಡು ಮಾಡಿ, ಅಂಗ ರಕ್ಷೆಯನ್ನು ಕತ್ತರಿಸಿ, ಹೊಸರಕ್ತ ಹರಿದುಹೋಗುವಂತೆ ಆ ಮಹಾ ಸಂಗ್ರಾಮದಲ್ಲಿ ಒಂದೇ ಸಮನೆ ಗೌಳವ ದೇಶದ ಅಶ್ವಸೇನೆ ಶತ್ರುಗಳ ಮೇಲೆ ಬಿದ್ದು ಹೋರಾಡಿದರು.
ಪದಾರ್ಥ (ಕ.ಗ.ಪ)
ನವರುಧಿರ-ಬಿಸಿರಕ್ತ, ಒರೆವೇಳೆ- ಹರಿದುಹೋಗುವಂತೆ , ಸವಗ-ಒಳ ಕವಚ (ಕಾಪು) ಜೋಡು-ಅಂಗರಕ್ಷೆ,
ಮೂಲ ...{Loading}...
ಕವಿದು ಮುಂದಲೆವಿಡಿದು ರಾವ್ತರ
ತಿವಿದು ಜೀವವ ಕಳಚಿ ಕೆಲಬಲ
ದವರ ಕೆಡೆಹೊಯ್ದಹಿತಘಾಯವ ನೋಟದೊಡೆಹೊಯ್ದು
ಸವಗ ತುಂಡಿಸೆ ಜೋಡು ಖಂಡಿಸೆ
ನವರುಧಿರದೊರೆವೇಳೆ ಮಹದಾ
ಹವದೊಳೋರಂತೊದಗಿದರು ಗೌಳವದ ರಾವುತರು ॥67॥
೦೬೮ ಅಳವನರಿಯದೆ ಕೆಣಕಿತಹ ...{Loading}...
ಅಳವನರಿಯದೆ ಕೆಣಕಿತಹ ಮುಂ
ಕೊಳಿಸಿ ಕದನವ ಕೋಡ ಕೈಯವ
ರಳವಿಗೊಟ್ಟರೆ ನೋಡಿ ಸಿಡಿಮಿಡಿಗೊಂಡು ಕೆಲಸಿಡಿವ
ಗೆಲಿದರುತ್ಸಾಹಿಸುವ ಸಿಲುಕಿದ
ರಳುವ ಕೆಟ್ಟೋಡಿದರೆ ಪುರದಲಿ
ನಿಲುವ ನಿರುಪಮವೀರರೊದಗಿತು ತಿಗುಳರಾವುತರು ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿಗುಳ ರಾವುತರು ತಮ್ಮ ಸಾಮಥ್ರ್ಯದ ಇತಿಮಿತಿಯನ್ನು ಅರ್ಥ ಮಾಡಿಕೊಳ್ಳದೆ ಎದುರು ಪಕ್ಷದವರನ್ನು ಕೆರಳಿಸಿದರೆ ಅದರಿಂದ ಕೆರಳಿ ಮುನ್ನುಗ್ಗಿದ ಸೈನಿಕರು ಕೈಯಲ್ಲಿ ಕೊಂತವನ್ನು ಹಿಡಿದು ತಮ್ಮ ಸಾಮಥ್ರ್ಯ ಪ್ರದರ್ಶಿಸಿದಾಗ ಅದನ್ನು ಕಂಡು ಕೋಪಗೊಂಡು ಪಕ್ಕಕ್ಕೆ ಸರಿಯುತ್ತಿದ್ದರು. ಗೆದ್ದಾಗ ನಲಿಯುತ್ತಿದ್ದ, ಸೆರೆ ಸಿಕ್ಕಾಗ ಶೋಕಿಸುತ್ತಿದ್ದ, ಸೋತು ದಿಕ್ಕೆಟ್ಟು ಓಡಿದಾಗ ಊರು ಸೇರುತ್ತಿದ್ದ ಅಸಮಾನವೀರರಾದ ತಮಿಳುನಾಡಿನ ಕುದುರೆ ಸವಾರರ ಸೇನೆ ಕಾಳಗಕ್ಕೆ ಪ್ರವೇಶಿಸಿತು.
ಪದಾರ್ಥ (ಕ.ಗ.ಪ)
ಪುರ-ಊರು ಕಡೆ ಪಲಾಯನ ಮಾಡಿದರು, ಮುರಿಕೊಳಿಸಿ-ಮುನ್ನುಗ್ಗಿ, ಕೋಡಕೈಯವರು-ಕೊಂಬಿನ ಆಯುಧ ಕೈಲಿ ಹಿಡಿದವರು (?) ಕೆಲಸಿಡಿವ-ಪಕ್ಕಕ್ಕೆ ಸರಿವ, ಕೆಟ್ಟೋಡು-ದಿಕ್ಕೆಟ್ಟು ಓಡು, ತಿಗುಳ ರಾವುತರು-ತಮಿಳುನಾಡಿನ ಕುದುರೆ ಸವಾರರು
ಮೂಲ ...{Loading}...
ಅಳವನರಿಯದೆ ಕೆಣಕಿತಹ ಮುಂ
ಕೊಳಿಸಿ ಕದನವ ಕೋಡ ಕೈಯವ
ರಳವಿಗೊಟ್ಟರೆ ನೋಡಿ ಸಿಡಿಮಿಡಿಗೊಂಡು ಕೆಲಸಿಡಿವ
ಗೆಲಿದರುತ್ಸಾಹಿಸುವ ಸಿಲುಕಿದ
ರಳುವ ಕೆಟ್ಟೋಡಿದರೆ ಪುರದಲಿ
ನಿಲುವ ನಿರುಪಮವೀರರೊದಗಿತು ತಿಗುಳರಾವುತರು ॥68॥
೦೬೯ ಬವರ ಸವೆಯದೆ ...{Loading}...
ಬವರ ಸವೆಯದೆ ತೇಜಿಗಳ ಬಲು
ಜವವು ಜಾರದೆ ಬಿಡುವ ತಿವಿದರೆ
ಸವಗವುಚ್ಚಳಿಸುವವು ಕವಿದರೆ ಕಾಲಯಮನಂತೆ
ಕವಿವರವಗಡಿಸಿದರೆ ಹಿಮ್ಮೆ
ಟ್ಟುವರು ಭೂಮಾನದೊಳುಪಾಯದ
ಬವರದೋಜೆಯಲೊದಗಿದರು ಕರ್ಣಾಟರಾವುತರು ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ನಾಟಕ ಸೇನೆಯವರು ಕಾಳಗ ಮುಗಿಸದೆ, ಕುದುರೆಗಳ ಅತಿವೇಗವು ಕುಗ್ಗದೆ, ಅವುಗಳನ್ನು ಮುನ್ನುಗ್ಗಿಸುತ್ತ, ಆಯುಧಗಳಿಂದ ತಿವಿದಾಗ ಶತ್ರುಗಳ ಮೈಜೋಡು ಛಿದ್ರಿಸುತ್ತಿದ್ದರು ಮೇಲೆ ಬಿದ್ದಾಗ ಯಮದೂತರಾಗುತ್ತಿದ್ದರು. (ಸಾವು ತರುತ್ತಿದ್ದರು). ಮೇಲೆ ಬಿದ್ದ ಶತ್ರುಗಳು ಇವರನ್ನು ಭಂಗಿಸಿದಾಗ ಹಿಮ್ಮೆಟ್ಟುತ್ತಿದ್ದರು. ಹೋರಾಟದ ಪ್ರದೇಶದಲ್ಲಿ ತಂತ್ರಗಾರಿಕೆಯ ಯುದ್ಧದ ಕ್ರಮದಲ್ಲಿ ಕರ್ನಾಟಕದ ಕುದುರೆ ಸೇನೆಯವರು ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ಭೂಮಾನ-ಅಖಾಡ, ಕುಸ್ತಿಯ ಕಣ, ಬವರ-ಯುದ್ಧ, ಓಜೆ-ಕ್ರಮ, ಅವಗಡಿಸು-ಭಂಗಿಸು, ಉಚ್ಚಳಿಸು-ಛಿದ್ರಿಸು, ಸವಗ-ಮೈಜೋಡು, ಬಲುಜವ-ಅತಿವೇಗ
ಮೂಲ ...{Loading}...
ಬವರ ಸವೆಯದೆ ತೇಜಿಗಳ ಬಲು
ಜವವು ಜಾರದೆ ಬಿಡುವ ತಿವಿದರೆ
ಸವಗವುಚ್ಚಳಿಸುವವು ಕವಿದರೆ ಕಾಲಯಮನಂತೆ
ಕವಿವರವಗಡಿಸಿದರೆ ಹಿಮ್ಮೆ
ಟ್ಟುವರು ಭೂಮಾನದೊಳುಪಾಯದ
ಬವರದೋಜೆಯಲೊದಗಿದರು ಕರ್ಣಾಟರಾವುತರು ॥69॥
೦೭೦ ಉರುಬಿ ಹೊಯಿದರು ...{Loading}...
ಉರುಬಿ ಹೊಯಿದರು ಕೈದಣಿಯೆ ಹೊ
ಕ್ಕೆರಗಿದರು ನಿಪ್ಪಸರದಲಿ ಮು
ಕ್ಕುರಿಕಿದರು ತಲೆಮಿದುಳ ಜೊಂಡಿನ ಜುರಿತ ಜೋಡುಗಳ
ತರಿದು ಬಿಸುಟರು ಖಗನಿಕರಕಾ
ರ್ದಿರಿದು ಕಾಲನ ಬನಕೆ ರಕುತದ
ಕೆರೆಯ ತೂಬೆತ್ತಿದರು ಸೇವಣ ರಾಯ ರಾವುತರು ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇವಣ ದೇಶದ ರಾಜನ ಅಶ್ವ ಸೇನೆಯವರು ಶತ್ರುಗಳ ಮೇಲೆ ರಭಸದಿಂದ ಧಾಳಿಮಾಡಿ ಕೊಂದರು. ಕೈ ಸೋಲುವಂತೆ ನುಗ್ಗಿ ಹೋರಾಡಿದರು. ನಿರ್ದಯೆಯಿಂದ ಮೇಲೆ ಬಿದ್ದು ಆರ್ಭಟಿಸಿದರು. ತಲೆ ಮಿದುಳು ಜೊಂಪೆಯಿಂದ ಸೋರಿದ ರಕ್ತದಿಂದ ತೊಯ್ದ ಅಂಗರಕ್ಷೆಗಳನ್ನು ಕತ್ತರಿಸಿ ಎಸೆದು. ಹದ್ದು ಕಾಗೆ ಮೊದಲಾದ ಪಕ್ಷಿ ಸಂಕುಲಕ್ಕೆ ತೃಪ್ತಿಯಾಗುವಂತೆ ಶತ್ರುಗಳ ಮಾಂಸವನ್ನು ಎಸೆದು ಬಿಸುಟರು. ಯಮಲೋಕವೆಂಬ ತೋಟಕ್ಕೆ ಶತ್ರುಗಳ ಸಾವಿನಿಂದ ಹರಿದ ರಕ್ತ ಜಲದಿಂದ ತುಂಬಿದ ಕೆರೆಯ ತೂಬನ್ನು ಮೇಲಕ್ಕೆ ಎತ್ತಿದರು.
ಪದಾರ್ಥ (ಕ.ಗ.ಪ)
ಮುಕ್ಕುರಿಕೆ-ಮೇಲೆ ಬಿದ್ದು ಆರ್ಭಟ, ಕಾಲನ ಬನ-ಯಮನ ತೋಟ, ಖಗನಿಕರ-ಪಕ್ಷಿ ಸಂಕುಲ, ಆರ್ದು-ಆರ್ಭಟಿಸಿ, ಜರಿತ-ಸೋರಿದ, ಜೊಂಡು-ಜೊಂಪೆ, ಉರುಬಿ-ರಭಸದಿಂದ ದಾಳಿ ಮಾಡಿ, ನಿಪ್ಪಸರ-ನಿಷ್ಠುರ (ನಿರ್ದಯೆ)
ಮೂಲ ...{Loading}...
ಉರುಬಿ ಹೊಯಿದರು ಕೈದಣಿಯೆ ಹೊ
ಕ್ಕೆರಗಿದರು ನಿಪ್ಪಸರದಲಿ ಮು
ಕ್ಕುರಿಕಿದರು ತಲೆಮಿದುಳ ಜೊಂಡಿನ ಜುರಿತ ಜೋಡುಗಳ
ತರಿದು ಬಿಸುಟರು ಖಗನಿಕರಕಾ
ರ್ದಿರಿದು ಕಾಲನ ಬನಕೆ ರಕುತದ
ಕೆರೆಯ ತೂಬೆತ್ತಿದರು ಸೇವಣ ರಾಯ ರಾವುತರು ॥70॥
೦೭೧ ರಾವುತೋ ಮಝ ...{Loading}...
ರಾವುತೋ ಮಝ ಭಾಪು ರಾವುತು
ದೇವು ರಾವುತು ಭಲರೆ ರಾವುತು
ರಾವುತೋ ನಿಶ್ಶಂಕರಾವುತು ರಾವುತೆಂದೆನುತ
ರಾವು ರಾವುತು ಪೂತುರಾವುತು
ಭಾಪು ರಾವುತು ರಾವುತೋ ಎಂ
ದೋವಿ ಹೊಯಿದಾಡಿದರು ರಣದಲಿ ಲಾಳ ರಾವುತರು ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾವುತು ! ಭಲೆ ಭೇಷ್ ! ಮೆಚ್ಚಿನವರೆ ! ಶ್ರೇಷ್ಠ ರಾವುತು, , ಭಲರೆ ರಾವುತು, ನಿಶ್ಶಂಕರಾವುತು, ನಿರ್ಭೀತ ರಾವುತು, ! ರಾವುತು ಎಂದು ನಾನಾ ಪರಿಯಲ್ಲಿ ಮೆಚ್ಚುಗೆಯ ಮಾತಾಡುತ್ತಾ ರಣರಂಗದಲ್ಲಿ ಲಾಳದೇಶದ ಅಶ್ವ ಸೈನಿಕರು ಹೋರಾಡಿದರು.
ಪದಾರ್ಥ (ಕ.ಗ.ಪ)
ರಾವುತೋ-ಕೊಂಡಾಟದ ನುಡಿ, ಅಶ್ವಸೈನಿಕ, ಓವಿ-ಮೆಚ್ಚುತ್ತ, ಲಾಳರಾವುತ-ಲಾಳದೇಶದ ರಾವುತರು, ಹೊಯಿದಾಡಿದರು-ಹೋರಾಡಿದರು
ಮೂಲ ...{Loading}...
ರಾವುತೋ ಮಝ ಭಾಪು ರಾವುತು
ದೇವು ರಾವುತು ಭಲರೆ ರಾವುತು
ರಾವುತೋ ನಿಶ್ಶಂಕರಾವುತು ರಾವುತೆಂದೆನುತ
ರಾವು ರಾವುತು ಪೂತುರಾವುತು
ಭಾಪು ರಾವುತು ರಾವುತೋ ಎಂ
ದೋವಿ ಹೊಯಿದಾಡಿದರು ರಣದಲಿ ಲಾಳ ರಾವುತರು ॥71॥
೦೭೨ ಗೌಳ ಕೊಙ್ಕ ...{Loading}...
ಗೌಳ ಕೊಂಕ ಕಳಿಂಗ ವರ ನೇ
ಪಾಳಕದ ರಾವುತರು ರಣಭೇ
ತಾಳರಣಲೊಳಗಡಗಿದರು ಕುರುಪಾಂಡು ಸೈನ್ಯದೊಳು
ಹೇಳಲಳವಲ್ಲುಭಯದಲಿ ಹೇ
ರಾಳ ಕಾಳೆಗ ಹಿರಿದು ಕಿರಿದೆನೆ
ಹೇಳುವೆನು ಬವರಕ್ಕೆ ಬಂದುದು ಮತ್ತಗಜಸೇನೆ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೌಳ-ಕೊಂಕಣ-ಕಳಿಂಗ (ಒರಿಸ್ಸಾ) ಮತ್ತು ಶ್ರೇಷ್ಠವಾದ ನೇಪಾಳ ದೇಶಗಳ ಅಶ್ವ ಸೈನಿಕರು ರಣರಂಗದ ಪಿಶಾಚಿಗಳ ಅಂಗುಳೊಳು ಸಿಲುಗಿ ಅಡಗಿದರು (ಮಡಿದರು). ಕೌರವ ಮತ್ತು ಪಾಂಡವ ಸೈನ್ಯಗಳಲ್ಲಿ ಇವರ ಸಾಹಸ ಬಣ್ಣಿಸಲು ಅಸದಳ. ಉಭಯ ಪಕ್ಷಗಳಲ್ಲೂ ಹೇರಳವಾದ ಕಾಳಗ ಬಹಳ ಜೋರಾಗಿ ವಿಸ್ತಾರವಾಗಿ ನಡೆಯಿತು. ಅದನ್ನು ಸಂಕ್ಷಿಪ್ತವಾಗಿ ನಾನು ಹೇಳುತ್ತೇನೆ. ಅನಂತರ ಮದ್ದಾನೆಗಳ ಸೇನೆ ಯುದ್ಧಕ್ಕೆ ಬಂದಿತು.
ಪದಾರ್ಥ (ಕ.ಗ.ಪ)
ಗೌಳ- (ಬಂಗಾಲ), ಕೊಂಕ-ಕೊಂಕಣದೇಶ, ಕಳಿಂಗ-ಒರಿಸ್ಸಾ, ಅಣಲು-ಅಂಗುಳು,
ಪಾಠಾನ್ತರ (ಕ.ಗ.ಪ)
ಗಾಳ - ಗೌಳ
ಮೈ.ವಿ.ವಿ.
ಮೂಲ ...{Loading}...
ಗೌಳ ಕೊಂಕ ಕಳಿಂಗ ವರ ನೇ
ಪಾಳಕದ ರಾವುತರು ರಣಭೇ
ತಾಳರಣಲೊಳಗಡಗಿದರು ಕುರುಪಾಂಡು ಸೈನ್ಯದೊಳು
ಹೇಳಲಳವಲ್ಲುಭಯದಲಿ ಹೇ
ರಾಳ ಕಾಳೆಗ ಹಿರಿದು ಕಿರಿದೆನೆ
ಹೇಳುವೆನು ಬವರಕ್ಕೆ ಬಂದುದು ಮತ್ತಗಜಸೇನೆ ॥72॥
೦೭೩ ಕನಕಗಿರಿಯಲಿ ವಿನ್ಧ್ಯಗಿರಿಯಂ ...{Loading}...
ಕನಕಗಿರಿಯಲಿ ವಿಂಧ್ಯಗಿರಿಯಂ
ಜನಗಿರಿಯ ಮಲಯಾದ್ರಿಯಲಿ ಸಂ
ಜನಿಸಿದಾನೆಯ ಸೇನೆಯಲಿ ಬೀಸಿದರು ಚೌರಿಗಳ
ಕನಕಘಂಟೆಗಳುಲಿಯೆ ಹೊರಜೆಯ
ತನತನಗೆ ಹಿಡಿದಡರಿ ಪೂರ್ವಾ
ಸನವ ವೆಂಠಣಿಸಿದರು ರಾಜಾರೋಹಕವ್ರಾತ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸೇನೆಯಲ್ಲಿ ಕನಕಗಿರಿಯಲ್ಲಿ ವಿಂಧ್ಯ ಗಿರಿಯಲ್ಲಿ ಅಂಜನಗಿರಿಯಲ್ಲಿ ಮಲಯಾಚಲದಲ್ಲಿ ಜನಿಸಿದ ಆನೆಗಳು ಇದ್ದವು. ರಾಜರು ಯುದ್ಧ ಪ್ರಾರಂಭದ ಸಂಕೇತವಾಗಿ ಚೌರಿಗಳನ್ನು ಬೀಸಿದಾಗ, ಆನೆಗಳಿಗೆ ಕಟ್ಟಿದ ಚಿನ್ನದ ಘಂಟೆಗಳು ಮೊಳಗಲು ಮಾವುತರು ತಂತಮ್ಮ ಆನೆಯ ಹಗ್ಗಗಳನ್ನು, ಹಿಡಿದುಕೊಂಡು ಅವುಗಳ ಮೇಲೆ ಹತ್ತಿ ರಾಜ ಸಮೂಹದವರಿಗೆ ಗೊತ್ತಾದ ಪೀಠಗಳನ್ನು ಅಲಂಕರಿಸಿದರು.
ಪದಾರ್ಥ (ಕ.ಗ.ಪ)
ಪೂರ್ವಾಸನ-ಮೊದಲೇ ಗೊತ್ತಾದ ಪೀಠ, ವೆಂಠಣಿಸು-ಸುತ್ತುವರಿ, ಹೊರಜೆ-ಹಗ್ಗ, ಕನಕಘಂಟೆ-ಚಿನ್ನದ (ಸಣ್ಣ) ಗಂಟೆ
ಮೂಲ ...{Loading}...
ಕನಕಗಿರಿಯಲಿ ವಿಂಧ್ಯಗಿರಿಯಂ
ಜನಗಿರಿಯ ಮಲಯಾದ್ರಿಯಲಿ ಸಂ
ಜನಿಸಿದಾನೆಯ ಸೇನೆಯಲಿ ಬೀಸಿದರು ಚೌರಿಗಳ
ಕನಕಘಂಟೆಗಳುಲಿಯೆ ಹೊರಜೆಯ
ತನತನಗೆ ಹಿಡಿದಡರಿ ಪೂರ್ವಾ
ಸನವ ವೆಂಠಣಿಸಿದರು ರಾಜಾರೋಹಕವ್ರಾತ ॥73॥
೦೭೪ ಬಾರ ಸಙ್ಕಲೆ ...{Loading}...
ಬಾರ ಸಂಕಲೆ ಪಕ್ಕ ಘಂಟೆಯ
ಚಾರು ಚಮರದ ಕೊಡತಿಗಳ ಕೈ
ಹಾರೆ ಕೂರಂಕುಶದ ಬಿರುದರು ಹೊದ್ದಿದರು ಗಜವ
ಬಾರ ದೂಹತ್ತಿಗಳ ಗುಂಡನು
ತೋರ ಲೌಡಿಯ ತೊಟ್ಟು ಕೈಯಲಿ
ವಾರಣದ ದೋಹರವ ನೂಕಿದರುಭಯಸೇನೆಯಲಿ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚರ್ಮಪಟ್ಟಿಯ ಸರಪಳಿಗಳಿಂದ, ಪಕ್ಕದಲ್ಲಿ ತೂಗಾಡುವ ಘಂಟೆಗಳಿಂದ, ಸುಂದರವಾದ ಚಾಮರಗಳಿಂದ ಅಲಂಕೃತವಾದ ಆನೆಯ ಬಳಿಯಲ್ಲಿ ಕೊಡಲಿಗಳನ್ನು ಕೈಹಾರೆಗಳನ್ನು ಚೂಪಾದ ಅಂಕುಶಗಳನ್ನು ಹಿಡಿದ ಶೂರರು ಆನೆಯ ಹತ್ತಿರ ಸೇರಿದರು. ಚರ್ಮದ ಪಟ್ಟಿಗೆ ತೂಗು ಹಾಕಿದ ಎರಡು ಅಲುಗಿನ ಕತ್ತಿಗಳನ್ನು ಕಬ್ಬಿಣದ ಗುಂಡುಗಳನ್ನು ದಪ್ಪನಾದ ಲೌಡಿಗಳನ್ನು (ಕಬ್ಬಿಣದ ಆಯುಧವನ್ನು) ಕೈಯಲ್ಲಿ ಹಿಡಿದು ಎರಡು ಸೇನೆಗಳಲ್ಲಿ ಗಜ ಸೇನೆಯವರು ಮುನ್ನಡೆದರು.
ಪದಾರ್ಥ (ಕ.ಗ.ಪ)
ಬಾರಸಂಕಲೆ-ಚರ್ಮದ ಪಟ್ಟಿಯ ಸರಪಳಿಗಳು, ಹೊದ್ದಿದರು-ಬಳಿ ಸಾರಿದರು, ಬಾರದೂ ಹತ್ತಿಗಳ-ಚರ್ಮದ ಪಟ್ಟಿಯಲ್ಲಿ ತೂಗು ಹಾಕಿದ ಇಬ್ಬಾಯ ಕತ್ತಿಗಳನ್ನು, ಲೌಡಿ-ದಪ್ಪವಾದ ಕಬ್ಬಿಣದ ಆಯುಧಗಳು, ವಾರಣದ ಮೋಹರ-ಆನೆ ಸೇನೆ,
ಮೂಲ ...{Loading}...
ಬಾರ ಸಂಕಲೆ ಪಕ್ಕ ಘಂಟೆಯ
ಚಾರು ಚಮರದ ಕೊಡತಿಗಳ ಕೈ
ಹಾರೆ ಕೂರಂಕುಶದ ಬಿರುದರು ಹೊದ್ದಿದರು ಗಜವ
ಬಾರ ದೂಹತ್ತಿಗಳ ಗುಂಡನು
ತೋರ ಲೌಡಿಯ ತೊಟ್ಟು ಕೈಯಲಿ
ವಾರಣದ ದೋಹರವ ನೂಕಿದರುಭಯಸೇನೆಯಲಿ ॥74॥
೦೭೫ ಕಾಲನುಬ್ಬೆಗೆ ಶೀತಳಙ್ಗೊಡು ...{Loading}...
ಕಾಲನುಬ್ಬೆಗೆ ಶೀತಳಂಗೊಡು
ವಾಲವಟ್ಟವೊ ವಿಲಯಕಾಲದ
ಗಾಳಿಯೋ ಮೇಣ್ ಕರ್ಣತಾಳವೊ ಕಿವಿಗೆ ಕೌತುಕವೊ
ಕಾಲುವೆರಸಿದ ನೀಲಗಿರಿಗಳ
ಧಾಳಿಯೋ ಮೇಣಂಜನಾದ್ರಿಯ
ಬೀಳಲೋ ಬರಿಕೈಗಳೋ ನಾವರಿಯೆವಿದನೆಂದ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಮನಿಗೆ ಉಂಟಾದ ಸೆಕೆ ಕಳೆಯಲು ತಂಪಾಗಿಸುವ ಬೀಸಣಿಗೆಯೋ ಪ್ರಳಯಕಾಲದ ಚಂಡ ಮಾರುತವೋ ಅಥವಾ ಬೀಸಣಿಗೆಯಂತಿದ್ದ ಆನೆಗಳ ಕಿವಿಗಳ ತಾಕಲಾಟವೋ, ಅಥವಾ ಅವು ಕಿವಿಯನ್ನು ಕುತೂಹಲಕ್ಕೆ ನಿಮಿರಿಸುತ್ತಿರುವುದರಿಂದ ಉಂಟಾಗುತ್ತಿರುವ ಸದ್ದೋ, ನೀಲಗಿರಿಗೇ ಕಾಲುಗಳು ಬಂದು ಆಕ್ರಮಿಸುತ್ತಿವೆಯೋ, ಅಥವಾ ಅಂಜನಾದ್ರಿಯ ಬಿಳಲುಗಳೋ ಅಥವಾ ಆನೆಗಳ ಸೊಂಡಿಲುಗಳೋ ನಮಗೆ ಏನೆಂದು ತಿಳಿಯುತ್ತಿಲ್ಲವಲ್ಲ ಎಂದು ಶತ್ರುಗಳು ಗಾಬರಿಗೊಂಡರು.
ಪದಾರ್ಥ (ಕ.ಗ.ಪ)
ಆಲವಟ್ಟಿ-ಬೀಸಣಿಗೆ, ಉಬ್ಬೆ-ಸೆಕೆ, ಕರ್ಣತಾಳ- ಬೀಸಣಿಗೆಯಂತಿರುವ ಕಿವಿಗಳು , ನೀಲಗಿರಿ-ನೀಲಗಿರಿ ಪರ್ವತ, ಬೀಳಲು-ಬಿಳಲುಗಳು,
ಮೂಲ ...{Loading}...
ಕಾಲನುಬ್ಬೆಗೆ ಶೀತಳಂಗೊಡು
ವಾಲವಟ್ಟವೊ ವಿಲಯಕಾಲದ
ಗಾಳಿಯೋ ಮೇಣ್ ಕರ್ಣತಾಳವೊ ಕಿವಿಗೆ ಕೌತುಕವೊ
ಕಾಲುವೆರಸಿದ ನೀಲಗಿರಿಗಳ
ಧಾಳಿಯೋ ಮೇಣಂಜನಾದ್ರಿಯ
ಬೀಳಲೋ ಬರಿಕೈಗಳೋ ನಾವರಿಯೆವಿದನೆಂದ ॥75॥
೦೭೬ ಪಡೆಯೊ ಹೀನೇನ್ದುವಿನಿರುಳ ...{Loading}...
ಪಡೆಯೊ ಹೀನೇಂದುವಿನಿರುಳ ಮುಂ
ಗುಡಿಯೊ ಮುಗಿಲೋ ಮದದ ತುಂಬಿಯೊ
ಬಿಡುಮದದ ವಾರಿಗಳೊ ಹೊಸ ವಾರಾಶಿಯೋ ಮೇಣು
ಅಡಸಿ ಪದಹತಧೂಳಿ ಮದವನು
ಕುಡಿದುದಾ ಮದಧಾರೆ ರೇಣುವ
ನಡಗಿಸಲು ಮದಧೂಳಿಗಳು ಹೆಣಗಿದುವು ತಮ್ಮೊಳಗೆ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಜಗಳ ಪಡೆಯೋ ? ಕ್ಷೀಣ ಚಂದ್ರನ ರಾತ್ರಿಯ ಮುಂಚೂಣಿ ಸೈನ್ಯವೋ, ಮೋಡರಾಶಿಗಳೊ, ಉನ್ಮತ್ತಗೊಂಡ ದುಂಬಿಗಳ ಸಮೂಹವೋ, ಸುರಿಯುವ ಮದ ಧಾರೆಗಳೋ ಅಥವಾ ಹೊಸ ಸಾಗರ ಪ್ರವಾಹವೋ ಎಂಬಂತೆ ಇತ್ತು. ಆ ಗಜ ಸೇನೆ. ಆ ಗಜ ಸೇನೆಯ ಪಾದಾಘಾತದಿಂದ ಮೇಲೆದ್ದ ಧೂಳು ಆವರಿಸಿ ಆನೆಗಳ ಮದ ಧಾರೆಯನ್ನು ಕುಡಿದು ಧೂಳಿನ ರಾಶಿಗಳ ಹುಟ್ಟಡಗಿಸಲು ಪ್ರಯತ್ನಿಸಿದವು. ಈ ರೀತಿ ಪರಸ್ಪರ ಸ್ಪರ್ಧೆಯಿಂದ ಧೂಳು, ಮದ ಧಾರೆಗಳು ಸ್ಪರ್ಧಿಸಿದವು.
ಪದಾರ್ಥ (ಕ.ಗ.ಪ)
ಪದಹತ ಧೂಳಿ-ಆನೆಗಳ ಕಾಲುಗಳ ನಡಿಗೆ ಪೆಟ್ಟಿನಿಂದ ಮೇಲೆದ್ದ ಧೂಳು, ಮದಧಾರೆ-ಆನೆಯ ಮಸ್ತಕದಿಂದ ಸುರಿವ ಮದ ಜಲ, ವಾರಾಶಿ-ಸಮುದ್ರ, ಮುಂಗುಡಿ- ಮುಂಚೂಣಿ ಸೇನೆ, ಹೀನ ಇಂದು-ಶುಕ್ಲ ಬಿದಿಗೆ ಚಂದ್ರ ( ಕ್ಷೀಣವಾಗಿರುವ ಚಂದ್ರ)
ಮೂಲ ...{Loading}...
ಪಡೆಯೊ ಹೀನೇಂದುವಿನಿರುಳ ಮುಂ
ಗುಡಿಯೊ ಮುಗಿಲೋ ಮದದ ತುಂಬಿಯೊ
ಬಿಡುಮದದ ವಾರಿಗಳೊ ಹೊಸ ವಾರಾಶಿಯೋ ಮೇಣು
ಅಡಸಿ ಪದಹತಧೂಳಿ ಮದವನು
ಕುಡಿದುದಾ ಮದಧಾರೆ ರೇಣುವ
ನಡಗಿಸಲು ಮದಧೂಳಿಗಳು ಹೆಣಗಿದುವು ತಮ್ಮೊಳಗೆ ॥76॥
೦೭೭ ಕುಲಗಿರಿಗಳಗ್ರದೊಳು ಕೈಗಳ ...{Loading}...
ಕುಲಗಿರಿಗಳಗ್ರದೊಳು ಕೈಗಳ
ನಿಳುಹಿದನೊ ರವಿಯೆನಲು ಮಿಗೆ ಹೊಳೆ
ಹೊಳೆವ ಕೂರಂಕುಶವನಿಕ್ಕಿದರಿಭದ ಮಸ್ತಕಕೆ
ಉಲಿದವಿದಿರೊಳು ಡೌಡೆ ಬಿರುದಾ
ವಳಿಯ ಕಹಳೆಗಳೂದಿದವು ನೆಲ
ಮೊಳಗಿದಂತಿರಲೊದರಿದವು ನಿಸ್ಸಾಳಕೋಟಿಗಳು ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನು ಸಪ್ತಗಿರಿಗಳ ತುದಿಯಲ್ಲಿ ತನ್ನ ಕಿರಣಗಳನ್ನು ಇಟ್ಟನೋ ಎಂಬಂತೆ ಅತಿಶಯವಾಗಿ ಹೊಳೆಯುತ್ತಿದ್ದ ಚೂಪಾದ ಅಂಕುಶಗಳನ್ನು ಆನೆಗಳ ಶಿರಗಳಲ್ಲಿ ನಾಟಿದರು. ಡಿಂಡಿಮ ಮೊದಲಾದ ವಾದ್ಯಗಳು ಅಬ್ಬರಿಸಿದವು. ಕಹಳೆಕಾರರು ರಾಜರ ಬಿರುದಾವಳಿಗಳನ್ನು ಊದಿದರು. ಸಹಸ್ರಾರು ಭೇರಿಗಳು ನೆಲ ಅದುರುವಂತೆ ಮೊಳಗಿದವು.
ಪದಾರ್ಥ (ಕ.ಗ.ಪ)
ನಿಸ್ಸಾಳ ಕೋಟಿ-ಸಾವಿರಾರು ಭೇರಿಗಳ ಸಮೂಹ, ನೆಲಮೊಳಗಿದಂತೆ-ನೆಲವದುರುವ ಹಾಗೆ, ಡೌಡೆ-ಡಿಂಡಿಮ, ಕೂರಂಕುಶ-ಚೂಪಾದ ಅಂಕುಶ
ಮೂಲ ...{Loading}...
ಕುಲಗಿರಿಗಳಗ್ರದೊಳು ಕೈಗಳ
ನಿಳುಹಿದನೊ ರವಿಯೆನಲು ಮಿಗೆ ಹೊಳೆ
ಹೊಳೆವ ಕೂರಂಕುಶವನಿಕ್ಕಿದರಿಭದ ಮಸ್ತಕಕೆ
ಉಲಿದವಿದಿರೊಳು ಡೌಡೆ ಬಿರುದಾ
ವಳಿಯ ಕಹಳೆಗಳೂದಿದವು ನೆಲ
ಮೊಳಗಿದಂತಿರಲೊದರಿದವು ನಿಸ್ಸಾಳಕೋಟಿಗಳು ॥77॥
೦೭೮ ಹೊಕ್ಕವಾನೆಗಳೆರಡು ಸೇನೆಯೊ ...{Loading}...
ಹೊಕ್ಕವಾನೆಗಳೆರಡು ಸೇನೆಯೊ
ಳೊಕ್ಕಲಿಕ್ಕಿದವೆಸುವ ಜೋದರ
ತೆಕ್ಕೆಗೋಲಿನ ಮಾಲೆ ಮುಕ್ಕುಳಿಸಿದವು ದಿಗುತಟವ
ಉಕ್ಕಿನುರುಳಿಯೊಳಿಡುವ ಖಂಡೆಯ
ದಿಕ್ಕಡಿಯ ಘಾಯಗಳ ಪಟ್ಟೆಯ
ದಕ್ಕಜದ ಹೊಯಿಲೆಸೆಯೆ ಕಾದಿದವಾನೆಯಾನೆಯೊಳು ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ ಪಾಂಡವ ಸೇನೆಗಳಲ್ಲಿ ಇದ್ದ ಗಜ ಸೇನೆಗಳು ಎರಡೂ ರಣರಂಗದಲ್ಲಿ ನುಗ್ಗಿದವು. ಮಾವಟಿಗರು ಪ್ರಯೋಗಿಸಿದ ಜೋಡುಬಾಣಗಳ ಸರಮಾಲೆ ದಿಕ್ಕುಗಳನ್ನೆಲ್ಲ ಮುಕ್ಕುಳಿಸಿದವು (ನುಂಗಿ ಹೊರಹಾಕಿದವು). ಯೋಧರು ಕತ್ತಿಯ ಉಕ್ಕಿನ ಉರುಳಿಯಿಂದ ನೀಡುವ ಪೆಟ್ಟುಗಳು ಮಾಡುವ ಗಾಯಗಳ ಅತಿಶಯವಾದ (ದಂತಗಳಿಗೆ ಕಬ್ಬಿಣದ ಕಟ್ಟಿನ) ಪೆಟ್ಟುಗಳ ಸದ್ದು ಹೆಚ್ಚುತ್ತಿರಲು ಆನೆ ಆನೆಗಳು ಕಾದಾಡಿದವು.
ಪದಾರ್ಥ (ಕ.ಗ.ಪ)
ತೆಕ್ಕೆ ಗೋಲು-ಜೋಡುಬಾಣ, ಮುಕ್ಕುಳಿಸಿ -ನುಂಗಿ ಹೊರಹಾಕು, ಖಂಡೆಯ-ಕತ್ತಿ, ಇಕ್ಕಡಿ-ಇಬ್ಬಾಯಿ ಭರ್ಜಿ, ಪಟ್ಟೆಯ-ಇಬ್ಬಾಯಿ ಕತ್ತಿ, ಅಕ್ಕಜ-ಅತಿಶಯ, ಹೊಯಿಲು-ಪೆಟ್ಟಿನ ದನಿ
ಮೂಲ ...{Loading}...
ಹೊಕ್ಕವಾನೆಗಳೆರಡು ಸೇನೆಯೊ
ಳೊಕ್ಕಲಿಕ್ಕಿದವೆಸುವ ಜೋದರ
ತೆಕ್ಕೆಗೋಲಿನ ಮಾಲೆ ಮುಕ್ಕುಳಿಸಿದವು ದಿಗುತಟವ
ಉಕ್ಕಿನುರುಳಿಯೊಳಿಡುವ ಖಂಡೆಯ
ದಿಕ್ಕಡಿಯ ಘಾಯಗಳ ಪಟ್ಟೆಯ
ದಕ್ಕಜದ ಹೊಯಿಲೆಸೆಯೆ ಕಾದಿದವಾನೆಯಾನೆಯೊಳು ॥78॥
೦೭೯ ತಿವಿಯೆ ಕಳಚುವ ...{Loading}...
ತಿವಿಯೆ ಕಳಚುವ ಕಳಚಲೊತ್ತುವ
ಕವಿದಡಾನುವ ನಿಂದಡೆತ್ತುವ
ಸವೆಯೆ ತುಡುಕುವ ತುಡುಕಿ ಮಿಗೆ ಕೈಕೈಯ ಜೋಡಿಸುವ
ಭುವನ ಭಯಗೊಳಲೊದರುತುರವಣಿ
ಸುವ ವಿಘಾತಿಸಿ ತುಳಿವ ಸೀಳುವ
ನವಮದೇಭದ ಸಮರ ಸೋಲಿಸಿತಮರರಾಲಿಗಳ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿವಿದರೆ ಕಳಚುವುವು; ಕಳಚಿದರೆ ಒತ್ತುವುವು, ಒತ್ತಿದರೆ ಆನುವುವು, ನಿಂತರೆ ಎತ್ತುವುವು, ಸವೆದರೆ ತುಡುಕುವುವು, ತುಡುಕಿದರೆ ಕೈಗೆ ಕೈ ಜೋಡಿಸುವುವು (ಸೊಂಡಿಲಿಗೆ ಸೊಂಡಿಲು). ಹೀಗೆ ಜಗತ್ತು ಭಯಗೊಳ್ಳುವಂತೆ ಕೂಗುತ್ತ ಮೇಲೆ ಬೀಳುವುವು. ಗಾಯಗೊಳಿಸಿ ತುಳಿವುವು. ಸೊಂಡಿಲಿನಿಂದ ಸೀಳುವುವು. ಈ ರೀತಿ ನಡೆದ ಮದ್ದಾನೆಗಳ ಹೋರಾಟ ದೇವತೆಗಳ ಕಣ್ಣುಗಳನ್ನು ತಣಿಸಿದವು.
ಪದಾರ್ಥ (ಕ.ಗ.ಪ)
ಆಲಿಗಳ ಸೋಲಿಸಿತು-ಕಣ್ಣು ತಣಿಸಿದವು., ನವಮಧೇಭ-ಮದ್ದಾನೆಗಳು, ವಿಘಾತಿಸಿ-ಗಾಯಗೊಳಿಸಿ, ಉರವಣಿಸು-ಮೇಲೆ ಬೀಳು
ಮೂಲ ...{Loading}...
ತಿವಿಯೆ ಕಳಚುವ ಕಳಚಲೊತ್ತುವ
ಕವಿದಡಾನುವ ನಿಂದಡೆತ್ತುವ
ಸವೆಯೆ ತುಡುಕುವ ತುಡುಕಿ ಮಿಗೆ ಕೈಕೈಯ ಜೋಡಿಸುವ
ಭುವನ ಭಯಗೊಳಲೊದರುತುರವಣಿ
ಸುವ ವಿಘಾತಿಸಿ ತುಳಿವ ಸೀಳುವ
ನವಮದೇಭದ ಸಮರ ಸೋಲಿಸಿತಮರರಾಲಿಗಳ ॥79॥
೦೮೦ ತಿರುಹಿ ಬಿಸುಟುವು ...{Loading}...
ತಿರುಹಿ ಬಿಸುಟುವು ಕಾಲುಗಾಹಿನ
ತುರಗವನು ಮುಂಬಾರೆಕಾರರ
ಶಿರವನೈದಾರೇಳನಡಸಿದವಣಲ ಹೊಳಲಿನೊಳು
ಅರರೆ ಪಟ್ಟೆಯ ಲೌಡಿ ಖಂಡೆಯ
ದುರವಣೆಯ ಹೊಯಿಲಿನೊಳು ರಿಪುಗಜ
ವುರುಳಿದವು ತೆರಳಿದವು ಜೋದರ ಜೀವವಂಬರಕೆ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಆನೆಗಳು) ಬೆಂಗಾವಲಿನ ಕುದುರೆಗಳನ್ನು ಸೊಂಡಲಿನಲ್ಲಿ ತಿರುಗಿಸಿ ಎಸೆದವು. ಮುಂದಿನ ಸರದಿಯವರ ತಲೆಗಳನ್ನು ಐದಲ್ಲ ಆರಲ್ಲ ಏಳನ್ನು ಅಂಗುಳ ಪ್ರದೇಶದಲ್ಲಿ ಅಳವಡಿಸಿಕೊಂಡವು. (ಗಂಟಲಲ್ಲಿ ತುರುಕಿಕೊಂಡವು) ಎಲಲೆ ! ಪಟ್ಟೆಯ ಆಯುಧ ಲೌಡಿ ಆಯುಧ, ಕಿರು ಕತ್ತಿ ಮೊದಲಾದ ಆಯುಧಗಳ ಪ್ರಹಾರದಲ್ಲಿ ಶತ್ರು ಗಜಗಳು ಸಿಲುಕಿ ನಾಶವಾದವು. ಮಾವುತರ ಪ್ರಾಣ ಸ್ವರ್ಗ ಸೇರಿತು.
ಪದಾರ್ಥ (ಕ.ಗ.ಪ)
ಕಾಲುಗಾಹು-ಬೆಂಗಾವಲು, ಮುಂಬಾರೆಕಾರ-ಮುಂದಿನ ಸರದಿಯವರು, ಪಟ್ಟೆಯ-ಖಡ್ಗದಂಥ ಆಯುಧ, ಲೌಡಿ-ದೊಣ್ಣೆಯಂಥ ಆಯುಧ, ಖಂಡೆಯ-ಕತ್ತಿ, ಜೋಧ-ಮಾವಟಿಗ
ಮೂಲ ...{Loading}...
ತಿರುಹಿ ಬಿಸುಟುವು ಕಾಲುಗಾಹಿನ
ತುರಗವನು ಮುಂಬಾರೆಕಾರರ
ಶಿರವನೈದಾರೇಳನಡಸಿದವಣಲ ಹೊಳಲಿನೊಳು
ಅರರೆ ಪಟ್ಟೆಯ ಲೌಡಿ ಖಂಡೆಯ
ದುರವಣೆಯ ಹೊಯಿಲಿನೊಳು ರಿಪುಗಜ
ವುರುಳಿದವು ತೆರಳಿದವು ಜೋದರ ಜೀವವಂಬರಕೆ ॥80॥
೦೮೧ ಮೆಟ್ಟಿ ಸೀಳಿದುಹಾಯ್ಕಿ ...{Loading}...
ಮೆಟ್ಟಿ ಸೀಳಿದುಹಾಯ್ಕಿ ದಾಡೆಯ
ಕೊಟ್ಟು ಮೋರೆಯನೊಲೆದು ಹರಿದರೆ
ಯಟ್ಟಿ ಹಿಡಿದಪ್ಪಳಿಸಿ ಜೋದರನಂಘ್ರಿಯಿಂದರೆದು
ಇಟ್ಟು ಕೆಡಹಲು ಹೆಣನ ಲೊಟ್ಟಾ
ಲೊಟ್ಟಿ ಮಸಗಿತು ತುರಗ ನರ ರಥ
ವಿಟ್ಟಣಿಸೆ ಸವರಿದವು ದಂತಿವ್ರಾತವುಭಯದೊಳು ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡು ಸೇನೆಗಳಲ್ಲಿ ಗಜ ಸೇನೆಯು ಎದುರು ಪಕ್ಷದ ಯೋಧರನ್ನು ಕಾಲಲ್ಲಿ ಮೆಟ್ಟಿ ತುಳಿದು ಸೀಳಿ ಹಾಕಿದವು. ದಂತದಿಂದ ತಿವಿದು, ಸೊಂಡಿಲನ್ನು ಅಲ್ಲಾಡಿಸುತ್ತಾ, ನುಗ್ಗುತ್ತಾ ಬೆನ್ನಟ್ಟಿ ಶತ್ರುವನ್ನು ಸೊಂಡಿಲಿಂದ ಹಿಡಿದು, (ನೆಲಕ್ಕೆ ಬಡಿದು ಆನೆಯ ಮಾವಟಿಗರನ್ನು) ಕಾಲಿನಿಂದ ತುಳಿದು ಚಪ್ಪಟಗೊಳಿಸಿ ಒಟ್ಟಿದುವು. ಬಡಿದು ಹಾಕಿ ಹೆಣವನ್ನು ರಾಶಿಯಾಗಿ ಮಾಡಿದವು. ಕುದುರೆ ಸೇನೆ, ಕಾಲಾಳು, ರಥಸೇನೆ ಗುಂಪುಗೂಡಿ ಆ ಗಜ ಸೇನೆಯ ಮೇಲೇರಿದಾಗ ಅವುಗಳನ್ನು ಆ ಗಜಸೇನೆ ನಾಶಗೊಳಿಸಿತು.
ಪದಾರ್ಥ (ಕ.ಗ.ಪ)
ಅರೆಯಟ್ಟಿ-ಬೆನ್ನಟ್ಟಿ, ದಂತಿವ್ರಾತ-ಆನೆಸೇನೆ, ಮೋರೆಯನು ಒಲೆದು-ಸೊಂಡಲನ್ನು ತೂಗಾಡಿಸುತ್ತಾ, ಲೊಟ್ಟಾಲೊಟ್ಟಿ-ರಾಶಿರಾಶಿಯಾಗಿ, ಯೋಧ-ಮಾವಟಿಗ
ಮೂಲ ...{Loading}...
ಮೆಟ್ಟಿ ಸೀಳಿದುಹಾಯ್ಕಿ ದಾಡೆಯ
ಕೊಟ್ಟು ಮೋರೆಯನೊಲೆದು ಹರಿದರೆ
ಯಟ್ಟಿ ಹಿಡಿದಪ್ಪಳಿಸಿ ಜೋದರನಂಘ್ರಿಯಿಂದರೆದು
ಇಟ್ಟು ಕೆಡಹಲು ಹೆಣನ ಲೊಟ್ಟಾ
ಲೊಟ್ಟಿ ಮಸಗಿತು ತುರಗ ನರ ರಥ
ವಿಟ್ಟಣಿಸೆ ಸವರಿದವು ದಂತಿವ್ರಾತವುಭಯದೊಳು ॥81॥
೦೮೨ ಕುತ್ತಿ ಹಿಙ್ಗುವ ...{Loading}...
ಕುತ್ತಿ ಹಿಂಗುವ ಭಟರ ದಾಡೆಯೊ
ಳೊತ್ತಿ ನೆಗಹಿದಡೊಗುವ ರಕುತಕೆ
ಮುತ್ತಿ ಬಾಯ್ಗಳನೊಡ್ಡಿ ಕುಡಿದುದು ಶಾಕಿನೀನಿವಹ
ಮಿತ್ತುವಿನ ಗಣವಿಭದ ದಾಡೆಯ
ಸುತ್ತಿ ಜೋಲುವ ಕರುಳ ಹಿಣಿಲನು
ಕುತ್ತಿದವು ತಮ್ಮೊಳಗೆ ಹೆಣಗಿದವಸಮಸಮರದಲಿ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳು ತಮ್ಮ ಬಳಿ ಬಂದ, ತಿವಿದು ಹಿನ್ನೆಗೆಯುವ ಭಟರನ್ನು ದಾಡೆಯಲ್ಲಿ ಒತ್ತಿ ಎತ್ತಿ ಹಿಡಿದಾಗ, ಅವರ ಮೈಯಿಂದ ಸುರಿಯುವ ರಕ್ತಧಾರೆಗೆ ಪಿಶಾಚಗಳ ಪರಿವಾರ ಮುತ್ತಿಗೆ ಹಾಕಿ, ಬಾಯಿಗಳನ್ನು ಒಡ್ಡಿ ರಕ್ತ ಕುಡಿದವು. ಮೃತ್ಯುವಿನ ಗಣವು ಆನೆಗಳ ದಾಡೆಯಲ್ಲಿ ಸುತ್ತಿ ನೇತಾಡುವ ಕರುಳಿನ ಜೊಂಡೆಗಳನ್ನು ತಿನ್ನುತ್ತಿದ್ದವು. ಹೀಗೆ ಆನೆಗಳು ಅಸಮಾನ ಸಂಗ್ರಾಮದಲ್ಲಿ ಹೋರಾಡಿದವು.
ಪದಾರ್ಥ (ಕ.ಗ.ಪ)
ಶಾಕಿನೀ ನಿವಹ-ಪಿಶಾಚ ಪರಿವಾರ, ಹಿಣಿಲು-ಜೊಂಡೆ, ಕುತ್ತಿದವು-ತುತ್ತುಗೊಂಡವು, ಒಗುವ-ಸುರಿಯುವ
ಮೂಲ ...{Loading}...
ಕುತ್ತಿ ಹಿಂಗುವ ಭಟರ ದಾಡೆಯೊ
ಳೊತ್ತಿ ನೆಗಹಿದಡೊಗುವ ರಕುತಕೆ
ಮುತ್ತಿ ಬಾಯ್ಗಳನೊಡ್ಡಿ ಕುಡಿದುದು ಶಾಕಿನೀನಿವಹ
ಮಿತ್ತುವಿನ ಗಣವಿಭದ ದಾಡೆಯ
ಸುತ್ತಿ ಜೋಲುವ ಕರುಳ ಹಿಣಿಲನು
ಕುತ್ತಿದವು ತಮ್ಮೊಳಗೆ ಹೆಣಗಿದವಸಮಸಮರದಲಿ ॥82॥
೦೮೩ ಅರರೆ ಮತ್ಯುವಿನರಕೆಗೌಷಧ ...{Loading}...
ಅರರೆ ಮತ್ಯುವಿನರಕೆಗೌಷಧ
ವರೆವವೊಲು ರಿಪುಬಲವನಸಿಯಿ
ಟ್ಟರೆದವಿಭ ಬರಿಕೈಯ ಭಾರಿಯ ಲಾಳವುಂಡಿಗೆಯ
ಸರಿಸಗುಂಡಿನೊಳೊಂದನೊಂದಿ
ಟ್ಟೊರಸಿದವು ಕೊಡಹಿದವು ಸೀಳಿದು
ಹೊರಳಿಚಿದವೆರಗಿದವು ನಾನಾ ವಿಧದ ಕೊಲೆಗಳಲಿ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೃತ್ಯುವಿನ ಕೊರತೆಗೆ ಔಷಧಿಯನ್ನು ಅರೆಯುವಂತೆ ಶತ್ರು ಸೇನೆಯನ್ನು ಕತ್ತಿಯಿಂದ ಅರೆದವು. ಸೊಂಡಿಲುಗಳಲ್ಲಿ ಭಾರಿಯಾದ ಲಾಳವಿಂಡಿಗೆ, ಸಮೀಪದ ಗುಂಡುಗಳನ್ನು ಹಿಡಿದು ಒಂದನ್ನೊಂದು ಹೊಡೆದು ಕೆಡಹಿದವು ಸೀಳಿದವು, ಕೊಡಹಿದವು, ಹೊರಳಿಸಿದವು. ಈ ರೀತಿ ನಾನಾ ವಿಧದಲ್ಲಿ ಕೊಲ್ಲುತ್ತ ಗಜದಳಗಳು ಧಾಳಿ ಮಾಡಿದವು.
ಪದಾರ್ಥ (ಕ.ಗ.ಪ)
ಅgಕ-ಕೊರತೆ, ಇಭ-ಆನೆ, ಲಾಳವಿಂಡಿಗೆ-ಅಗುಳಿಯ ರೀತಿಯ ಆಯುಧ, ಸರಿಸಗುಂಡು-ಹತ್ತಿರದ ಗುಂಡು (?)
ಮೂಲ ...{Loading}...
ಅರರೆ ಮತ್ಯುವಿನರಕೆಗೌಷಧ
ವರೆವವೊಲು ರಿಪುಬಲವನಸಿಯಿ
ಟ್ಟರೆದವಿಭ ಬರಿಕೈಯ ಭಾರಿಯ ಲಾಳವುಂಡಿಗೆಯ
ಸರಿಸಗುಂಡಿನೊಳೊಂದನೊಂದಿ
ಟ್ಟೊರಸಿದವು ಕೊಡಹಿದವು ಸೀಳಿದು
ಹೊರಳಿಚಿದವೆರಗಿದವು ನಾನಾ ವಿಧದ ಕೊಲೆಗಳಲಿ ॥83॥
೦೮೪ ವ್ರಣದ ಬನ್ಧದ ...{Loading}...
ವ್ರಣದ ಬಂಧದ ಜಿಗಿಯ ದಾಡೆಗೆ
ಕುಣಿದು ಕವಿವ ವಿಹಂಗ ತತಿಗಳಿ
ನಣಲೊಳಡಸಿದ ತಲೆಗೆ ಕೈಗುತ್ತುವ ನಿಶಾಟರಲಿ
ಹೆಣನ ಬೀಸುವ ಕೈಗಳಲಿ ಸಂ
ದಣಿಸುವಸುರರಿನುರು ಕಪಾಲವ
ಕೆಣಕುವಳಿಯಂ ಚಂಡಿಯಾದುವು ಸೊಕ್ಕಿದಾನೆಗಳು ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಾಡೆಗಳಿಂದ ತಿವಿದ ಗಾಯದ ಭಾಗದಲ್ಲಿ ಅಂಟಿದ್ದ ಸುರಿಯುತ್ತಿದ್ದ ದ್ರವಕ್ಕೆ ಹಕ್ಕಿಗಳ ಗುಂಪು ಕುಪ್ಪಳಿಸುತ್ತ ಬಂದು ಆವರಿಸುತ್ತಿದ್ದವು. ಗಂಟಲಿನಲ್ಲಿ ಸಿಲುಕಿಕೊಂಡಿರುವ ತಲೆಯನ್ನು ಸೆಳೆದುಕೊಳ್ಳಲು ನಿಶಾಟರು ಬಾಯೊಳಕ್ಕೆ ಕೈಚಾಚುತ್ತಿದ್ದರು. ಹೆಣವನ್ನೆತ್ತಿ ಬಿಸಾಡುವ ಸೊಂಡಿಲುಗಳಲ್ಲಿ ರಾಕ್ಷಸರು ಕೈಯಿಡಲು ಗುಂಪಾಗುತ್ತಿದ್ದರು. ಮದಧಾರೆಯಿಳಿಯುತ್ತಿದ್ದ ಸೊಗಸಾದ ಕೆನ್ನೆಗಳನ್ನು ಮುತ್ತುತ್ತಿದ್ದ ದುಂಬಿಗಳು ಕೆಣಕುತ್ತಿದ್ದುದರಿಂದ ಕಾಟ ತಡೆಯದೆ ರೋಸಿದ ಮದದಾನೆಗಳು ಮತ್ತಷ್ಟು ಉಗ್ರವಾದವು.
ಪದಾರ್ಥ (ಕ.ಗ.ಪ)
ವ್ರಣ-ಗಾಯ, ವಿಹಂಗತತಿ-ಹಕ್ಕಿಗಳ ಗುಂಪು, ಜಿಗಿ - ಅಂಟು , ಅಣಲು-ಗಂಟಲು, ಕೈಗುತ್ತು-ಬಾಯೊಳಗೆ ಕೈಚಾಚು, ಅಡಸಿದ-ಸಿಲುಕಿದ, ಚಂಡಿಯಾದವು-ಹಠಮಾರಿ ಆದವು, ಅಳಿ-ದುಂಬಿ
ಪಾಠಾನ್ತರ (ಕ.ಗ.ಪ)
ಜಗಿಯ - ಜಿಗಿಯ
ಮೈ.ವಿ.ವಿ.
ಮೂಲ ...{Loading}...
ವ್ರಣದ ಬಂಧದ ಜಿಗಿಯ ದಾಡೆಗೆ
ಕುಣಿದು ಕವಿವ ವಿಹಂಗ ತತಿಗಳಿ
ನಣಲೊಳಡಸಿದ ತಲೆಗೆ ಕೈಗುತ್ತುವ ನಿಶಾಟರಲಿ
ಹೆಣನ ಬೀಸುವ ಕೈಗಳಲಿ ಸಂ
ದಣಿಸುವಸುರರಿನುರು ಕಪಾಲವ
ಕೆಣಕುವಳಿಯಂ ಚಂಡಿಯಾದುವು ಸೊಕ್ಕಿದಾನೆಗಳು ॥84॥
೦೮೫ ಅಡಸಿ ತಲೆಗಳ ...{Loading}...
ಅಡಸಿ ತಲೆಗಳ ಕಿತ್ತು ಸೇನೆಯ
ನಿಡುವ ಬಸುರನು ಬಗಿದು ಕರುಳನು
ಕೊಡಹಿ ಸೂಸುವ ಮಿದುಳ ಮೊಗೆದೆಣ್ದೆಸೆಗೆ ಸಾಲಿಡುವ
ಅಡಗನಾಯಿದು ಕೆದರಿ ರಕುತವ
ತುಡುಕಿ ಚೆಲ್ಲುವ ಕರಿಯ ಬರಿಕೈ
ಬಿಡಿಸಿದವು ಹುಟ್ಟಾಗಿ ಯಮರಾಜನ ಪರಿಗ್ರಹಕೆ ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಲೆಗಳನ್ನು ಕಿತ್ತು ಸೇನೆಯ ಮೇಲೆ ಎಸೆದು ಹೊಡೆಯುತ್ತಾ, ವೀರರ ಹೊಟ್ಟೆಗಳನ್ನು ಸೀಳಿ ಕರುಳುಗಳನ್ನು ಕಿತ್ತು ಹೊರಗೆ ಎಸೆಯುತ್ತಾ, ತಲೆ ಮಿದುಳನ್ನು ಬಾಚುತ್ತ, ಎಂಟು ದಿಕ್ಕುಗಳಿಗೂ ಸಾಲಾಗಿ ಎರಚುತ್ತಾ, ಮಾಂಸಖಂಡವನ್ನು ಆಯ್ದು ಚೆಲ್ಲಾಡುತ್ತಾ, ರಕುತವನ್ನು ಬೊಗಸೆಗಳಲ್ಲಿ ತುಂಬಿಕೊಂಡು ಚೆಲ್ಲಾಡುತ್ತಾ ಆನೆಯ ಸೊಂಡಿಲುಗಳು ಯಮನ ಪರಿವಾರದವರಿಗೆ ಬಡಿಸಲು ಸೌಟುಗಳಾಗಿ ಔತಣ ನೀಡಿದವು.
ಪದಾರ್ಥ (ಕ.ಗ.ಪ)
ಬಸಿರು-ಹೊಟ್ಟೆ, ಕೊಡಹಿ-ಕಿತ್ತೆಸೆಯುತ್ತಾ, ತುಡುಕಿ-ಚೆಲ್ಲಾಡಿ
ಪಾಠಾನ್ತರ (ಕ.ಗ.ಪ)
‘ಕಿರಿಯ ಬರಿಕೈ’ ಎಂಬುದಕ್ಕೆ ಬದಲಾಗಿ ‘ಕರಿಯ ಬರಿಕೈ’ ಪಾಠಾಂತರ ಸ್ವೀಕರಿಸಿದೆ.
ಮೈ.ವಿ.ವಿ.
ಮೂಲ ...{Loading}...
ಅಡಸಿ ತಲೆಗಳ ಕಿತ್ತು ಸೇನೆಯ
ನಿಡುವ ಬಸುರನು ಬಗಿದು ಕರುಳನು
ಕೊಡಹಿ ಸೂಸುವ ಮಿದುಳ ಮೊಗೆದೆಣ್ದೆಸೆಗೆ ಸಾಲಿಡುವ
ಅಡಗನಾಯಿದು ಕೆದರಿ ರಕುತವ
ತುಡುಕಿ ಚೆಲ್ಲುವ ಕರಿಯ ಬರಿಕೈ
ಬಿಡಿಸಿದವು ಹುಟ್ಟಾಗಿ ಯಮರಾಜನ ಪರಿಗ್ರಹಕೆ ॥85॥
೦೮೬ ಕಾಲುಗಳಲೊಡೆತುಳಿವ ಮೋರೆಯ ...{Loading}...
ಕಾಲುಗಳಲೊಡೆತುಳಿವ ಮೋರೆಯ
ತೋಳಿನೊಳು ಬೀಸಿಡುವ ರದನದಿ
ಹೋಳಿಸುವ ಖಾತಿಯಲಿ ನಾನಾವಿಧದ ಕೊಲೆಗಳಲಿ
ಕಾಲನೊಗಡಿಸೆ ಕೊಲುವ ಮದಗಜ
ಜಾಲಗಳೊಳಾರೋಹಕರು ಕೆಂ
ಗೋಲ ಮಳೆಗರೆದಾರಿದರು ನೃಪಸೇನೆಯೆರಡರಲಿ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲುಗಳಲ್ಲಿ ತುಳಿದು ಅಪ್ಪಚ್ಚಿ ಮಾಡುವ, ಸೊಂಡಿಲು ಬೀಸಿ ಮುಖದ ಮೇಲೆ ಹೊಡೆಯುತ್ತಾ, ಕೋರೆದಾಡೆಗಳಿಂದ ತಿವಿದು ಹೋಳು ಮಾಡುತ್ತಾ, ಕೋಪದಿಂದ ನಾನಾ ರೀತಿಗಳಲ್ಲಿ ಕೊಲ್ಲುತ್ತಾ, ಯಮನಿಗೆ ವಾಕರಿಕೆ ಆಗುವಷ್ಟು ಮಟ್ಟಿಗೆ ಸಾವುಂಟುಮಾಡುತ್ತಿದ್ದ ಮದ್ದಾನೆಗಳ ಸಮೂಹಗಳ ಮೇಲೆ ಎರಡೂ ಕಡೆಯ ಸೇನೆಯಲ್ಲಿ ಆನೆಯ ಮೇಲಿದ್ದ ಯೋಧರು ಬಾಣಗಳ ಸುರಿಮಳೆಯಿಂದ ಅಬ್ಬರಿಸಿದರು.
ಪದಾರ್ಥ (ಕ.ಗ.ಪ)
ಆರಿದರು-ಅಬ್ಬರಿಸಿದರು, ಕೆಂಗೋಲು-ಕಿಡಿ ಕಾರುವ ಬಾಣ, ಜಾಲ-ಸಮೂಹ, ಆರೋಹಕರು-ಮಾವಟಿಗರು ಮತ್ತು ಆನೆ ಮೇಲಿದ್ದವರು, ಒಗಡಿಸು-ವಾಕರಿಕೆಗೊಳ್ಳು , ಕಾಲು-ಯಮ, ತೋಳು-ಸೊಂಡಿಲು, ಒಡೆತುಳಿ-ತುಳಿದು ಅಪ್ಪಚ್ಚಿ ಮಾಡು
ಮೂಲ ...{Loading}...
ಕಾಲುಗಳಲೊಡೆತುಳಿವ ಮೋರೆಯ
ತೋಳಿನೊಳು ಬೀಸಿಡುವ ರದನದಿ
ಹೋಳಿಸುವ ಖಾತಿಯಲಿ ನಾನಾವಿಧದ ಕೊಲೆಗಳಲಿ
ಕಾಲನೊಗಡಿಸೆ ಕೊಲುವ ಮದಗಜ
ಜಾಲಗಳೊಳಾರೋಹಕರು ಕೆಂ
ಗೋಲ ಮಳೆಗರೆದಾರಿದರು ನೃಪಸೇನೆಯೆರಡರಲಿ ॥86॥
೦೮೭ ನೀಲಗಿರಿಗಳ ನೆಮ್ಮಿ ...{Loading}...
ನೀಲಗಿರಿಗಳ ನೆಮ್ಮಿ ಘನಮೇ
ಘಾಳಿ ಸುರಿದವೊ ಮಳೆಯನೆನೆ ಬಿರು
ಗೋಲ ಸೈವಳೆಗರೆದರುಭಯದ ಜೋದರವಗಡಿಸಿ
ಮೇಲೆ ತೊಳಲುವ ಖಚರ ನಿಚಯಗ
ಳಾಲಿಯೊಲೆದವು ಧರೆಗೆ ಗಗನಕೆ
ಕಾಳಿಕೆಯ ಪಸರಿಸಿತು ಜೋದರ ಕೋದ ಶರಜಾಲ ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀಲಗಿರಿಯಿಂದ ತಡೆಯಲ್ಪಟ್ಟ ಮೇಘಗಳ ಸಮೂಹ ಮಳೆಯನ್ನು ಸುರಿಸಿದವೋ ಎಂಬಂತೆ ಎರಡೂ ಕಡೆಯ ಮಾವುತರು ಪ್ರತಿಭಟಿಸುತ್ತಾ, ತೀಕ್ಷ್ಣ ಬಾಣಗಳ ಜಡಿಮಳೆಯನ್ನೇ ಸುರಿಸಿದರು. ಆಕಾಶದಲ್ಲಿ ಸಂಚರಿಸುತ್ತಿದ್ದ ಖೇಚರರ ಸಮೂಹದವರ ದೃಷ್ಟಿ ಅತ್ತಿತ್ತ ಓಲಾಡಿದವು. ಮಾವಟಿಗರು ಬಿಲ್ಲಿನಿಂದ ಹೊರಹೊಮ್ಮಿಸಿದ ಬಾಣ ಸಮೂಹ ಭೂಮಿಗೂ ಆಕಾಶಕ್ಕೂ ನಡುವೆ ಹರಡಿಕೊಂಡು ಕತ್ತಲೆಯನ್ನುಂಟುಮಾಡಿತು.
ಪದಾರ್ಥ (ಕ.ಗ.ಪ)
ನೀಲಗಿರಿ-ಒಂದು ಪರ್ವತ, ಘನಮೇಘಾಳಿ-ದೊಡ್ಡ ದೊಡ್ಡ ಮೋಡಗಳ ಗುಂಪು, ಬಿರುಗೋಲು-ತೀಕ್ಷ್ಣವಾದ ಬಾಣ, ಖಚರ-ಆಕಾಶದಲ್ಲಿ ಸಂಚರಿಸುವವನು, ಜೋಧರು-ಮಾವಟಿಗ ಯೋಧ, ಕಾಳಿಕೆ-ಕತ್ತಲೆ
ಟಿಪ್ಪನೀ (ಕ.ಗ.ಪ)
ನೀಲಗಿರಿ ಎಂಬುದು ಒಂದು ಜಾತಿಯ ಆನೆಗಳಿಗೆ ಅನ್ವಯಿಸುವ ಇಲ್ಲಿ ಕಪ್ಪಾದ ಮೋಡಗಳಿಂದ ಕೂಡಿದಪರ್ವತ ಎಂಬರ್ಥವನ್ನು ಶ್ಲೇಷೆಯಿಂದ ಕವಿ ವರ್ಣಿಸಿದ್ದಾನೆ.
ಮೂಲ ...{Loading}...
ನೀಲಗಿರಿಗಳ ನೆಮ್ಮಿ ಘನಮೇ
ಘಾಳಿ ಸುರಿದವೊ ಮಳೆಯನೆನೆ ಬಿರು
ಗೋಲ ಸೈವಳೆಗರೆದರುಭಯದ ಜೋದರವಗಡಿಸಿ
ಮೇಲೆ ತೊಳಲುವ ಖಚರ ನಿಚಯಗ
ಳಾಲಿಯೊಲೆದವು ಧರೆಗೆ ಗಗನಕೆ
ಕಾಳಿಕೆಯ ಪಸರಿಸಿತು ಜೋದರ ಕೋದ ಶರಜಾಲ ॥87॥
೦೮೮ ಎಲೆಲೆ ವಿನ್ಧ್ಯಾಚಲದ ...{Loading}...
ಎಲೆಲೆ ವಿಂಧ್ಯಾಚಲದ ಹರಿಬಕೆ
ಕಳನ ಹೊಕ್ಕವೊ ಕಣೆಗಳೆನುತಾ
ನಳಿನಸಖನಂಜಿದನು ಕೋಪಾಟೋಪಕಭ್ರದಲಿ
ಅಲಗುಗಣೆಗಳೊ ಮೇಘತರುವಿನ
ತಳಿತ ತುದಿಗೊಂಬುಗಳೊ ಬೀಳುವ
ತಲೆಗಳೋ ತತ್ಫಲಸಮೂಹವೊ ಚಿತ್ರವಾಯ್ತೆಂದ ॥88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಾವಟಿಗರ ಕೋಪಾವೇಶವನ್ನು ಕಂಡು ಆಕಾಶದಲ್ಲಿ ಸೂರ್ಯನು ಅರೆರೆ ! ವಿಂಧ್ಯಪರ್ವತದ ರಕ್ಷಣೆಗಾಗಿ ಸಮರದ ಬಾಣಗಳು ಪ್ರವೇಶಿಸಿದವೊ ಎಂದು ಅಂಜಿದನು. ಈ ಬಾಣಗಳ ಸುರಿ ಮಳೆ ಕಂಡರೆ ಕತ್ತಿಗಳೇ ಬಾಣಗಳಾಗಿವೆಯೇ ಅಥವಾ ಮೋಡಗಳೆಂಬ ಮರಗಳ ತುದಿಯಲ್ಲಿ ಚಿಗುರಿರುವ ತುದಿಕೊಂಬೆಗಳಾಗಿವೆಯೋ ಅಥವಾ ಮರಗಳಿಂದ ಉದುರುತ್ತಿರುವ ಫಲಗಳೋ ಅಥವಾ ತಲೆ ಬುರುಡೆಗಳೋ ತಿಳಿಯದೆ ಅಚ್ಚರಿಯ ಸಂಗತಿಯಾಗಿದೆ ಎಂದನು.
ಪದಾರ್ಥ (ಕ.ಗ.ಪ)
ಹರಿಬ-ರಕ್ಷಣೆ, ಕಳನಕಣೆ-ಸಮರ ಬಾಣಗಳು, ಅಭ್ರ-ಆಕಾಶ, ನಳಿನಸಖ-ಸೂರ್ಯ, ಮೇಘತರು-ಮೋಡವೆಂಬ ಮರ, ಚಿತ್ರವಾಯ್ತು-ಅಚ್ಚರಿಯಾಯಿತು.
ಮೂಲ ...{Loading}...
ಎಲೆಲೆ ವಿಂಧ್ಯಾಚಲದ ಹರಿಬಕೆ
ಕಳನ ಹೊಕ್ಕವೊ ಕಣೆಗಳೆನುತಾ
ನಳಿನಸಖನಂಜಿದನು ಕೋಪಾಟೋಪಕಭ್ರದಲಿ
ಅಲಗುಗಣೆಗಳೊ ಮೇಘತರುವಿನ
ತಳಿತ ತುದಿಗೊಂಬುಗಳೊ ಬೀಳುವ
ತಲೆಗಳೋ ತತ್ಫಲಸಮೂಹವೊ ಚಿತ್ರವಾಯ್ತೆಂದ ॥88॥
೦೮೯ ಸರಳ ಸರಳೊಳು ...{Loading}...
ಸರಳ ಸರಳೊಳು ಕಡಿವ ಕರಿಗಳ
ಕೊರಳ ಮುರಿಯೆಸುವೋರಣದ ಮೊಗ
ವರಿಗೆಗಳ ಖಂಡಿಸುವ ಮೋರೆಯ ಕರವ ತುಂಡಿಸುವ
ಸರಳು ವದನವ ತಾಗಿ ಪೇಚಕ
ಕುರವಣಿಸೆ ತೆಗೆದೆಸುವ ಜೋದರ
ಧುರಚಮತ್ಕೃತಿ ಬೆರಗನಿತ್ತುದು ದೇವಸಂತತಿಗೆ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣಕ್ಕೆ ಪ್ರತಿಬಾಣ ಬಿಟ್ಟು ಕತ್ತರಿಸುವರು ; ಆನೆಗಳ ಕೊರಳು ಕತ್ತರಿಸಿ ಬೀಳುವಂತೆ ಬಾಣ ಬಿಡುವರು, ಒಪ್ಪವಾಗಿ ಜೋಡಿಸಿದ್ದಂತೆ ಸಾಲಾಗಿ ನಿಂತ ಆನೆಗಳ ಮುಖಕವಚಗಳನ್ನು ಕಡಿಯುವವರು, ಅವುಗಳ ಸೊಂಡಿಲುಗಳನ್ನು ತುಂಡಿಸುವರು. ಬಿಟ್ಟ ಬಾಣಗಳು ಮುಖಕ್ಕೆ ತಾಗಿ ಮುನ್ನುಗ್ಗಿ ಆನೆಯ ಹಿಂಭಾಗದ ಬಾಲದ ಬುಡಕ್ಕೆ ತಾಗುವಂತೆ ಬಾಣ ಬಿಡುವ ಯೋಧರ ಚಮತ್ಕಾರಿಕ ಸಾಹಸಗಳು (ರಣಕೌಶಲ್ಯ) ದೇವಲೋಕದಲ್ಲಿರುವವರಿಗೆ ಅಚ್ಚರಿಯನ್ನು ಉಂಟು ಮಾಡಿತು.
ಪದಾರ್ಥ (ಕ.ಗ.ಪ)
ಮೊಗವರಿಗೆ-ಮುಖಕವಚ, ಸರಳು-ಬಾಣ, ಪೇಚಕ-ಆನೆಯ ಬಾಲದ ಬುಡ, ದೇವಸಂತತಿ-ದೇವಲೋಕದವರು, ಧುರಚಮತ್ಕೃತಿ-ರಣಕೌಶಲ್ಯ
ಮೂಲ ...{Loading}...
ಸರಳ ಸರಳೊಳು ಕಡಿವ ಕರಿಗಳ
ಕೊರಳ ಮುರಿಯೆಸುವೋರಣದ ಮೊಗ
ವರಿಗೆಗಳ ಖಂಡಿಸುವ ಮೋರೆಯ ಕರವ ತುಂಡಿಸುವ
ಸರಳು ವದನವ ತಾಗಿ ಪೇಚಕ
ಕುರವಣಿಸೆ ತೆಗೆದೆಸುವ ಜೋದರ
ಧುರಚಮತ್ಕೃತಿ ಬೆರಗನಿತ್ತುದು ದೇವಸಂತತಿಗೆ ॥89॥
೦೯೦ ಶೂರ ಜೋದರ ...{Loading}...
ಶೂರ ಜೋದರ ಮೇಲುವಾಯಿದು
ವೀರಸಿರಿ ಬಿಗಿಯಪ್ಪೆ ಮುತ್ತಿನ
ಹಾರ ಹರಿಯಲು ಕೆದರಿದವು ದೆಸೆದೆಸೆಗೆ ಮುತ್ತುಗಳು
ವಾರಣದ ಕುಂಭಸ್ಥಳಂಗಳ
ಚಾರುಮೌಕ್ತಿಕನಿಕರವೋ ಮೇಣ್
ಭಾರತಾಹವ ಕೌತುಕೋದಯರಸಕೆ ನೆಲೆಯಾಯ್ತೊ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶೂರರಾದ ಮಾವಟಿಗರು ಸಾಹಸವನ್ನು ಬಲವಾಗಿ ಪ್ರದರ್ಶಿಸಲು ಕೊರಳ ಮುತ್ತಿನ ಹಾರಗಳು ಹರಿದು ಹೋಗಿ, ದಿಕ್ಕು ದಿಕ್ಕುಗಳಿಗೆ ಮುತ್ತುಗಳು ಚೆಲ್ಲಾಡಿದವು. ಅವುಗಳ ದೃಶ್ಯ ಹೇಗಿತ್ತು ಎಂದರೆ ಆನೆಗಳ ತಲೆಗಳಿಂದ ಸುಂದರ ಮುತ್ತಿನ ರಾಶಿಗಳು ಉದುರಿದವೊ ಎಂಬಂತಿತ್ತು. ಈ ರೀತಿ ಭಾರತದ ಯುದ್ಧವು ಅಚ್ಚರಿಗೆ ಕಾರಣವಾಯಿತು.
ಪದಾರ್ಥ (ಕ.ಗ.ಪ)
ವಾರಣ-ಆನೆ, ಕುಂಭಸ್ಥಲ-ತಲೆಯ ಮೇಲ್ಭಾಗ, ಚಾರು-ಸುಂದರ, ಮೌಕ್ತಿಕನಿಕರ-ಮುತ್ತಿನರಾಶಿ,
ಮೂಲ ...{Loading}...
ಶೂರ ಜೋದರ ಮೇಲುವಾಯಿದು
ವೀರಸಿರಿ ಬಿಗಿಯಪ್ಪೆ ಮುತ್ತಿನ
ಹಾರ ಹರಿಯಲು ಕೆದರಿದವು ದೆಸೆದೆಸೆಗೆ ಮುತ್ತುಗಳು
ವಾರಣದ ಕುಂಭಸ್ಥಳಂಗಳ
ಚಾರುಮೌಕ್ತಿಕನಿಕರವೋ ಮೇಣ್
ಭಾರತಾಹವ ಕೌತುಕೋದಯರಸಕೆ ನೆಲೆಯಾಯ್ತೊ ॥90॥
೦೯೧ ಅರರೆ ಶರಸಾಗರದ ...{Loading}...
ಅರರೆ ಶರಸಾಗರದ ಜೋದರ
ಸರಳಹತಿಯಲಿ ಮಂದರಾಚಲ
ಕರಿಯ ಮಸ್ತಕವೊಡೆದು ಕೆದರಿತು ಮೌಕ್ತಿಕವ್ರಾತ
ಹರೆದು ತಾರೆಗೆಯಾದವಭ್ರದೊ
ಳುರುಳೆ ರತ್ನಾಕರನೆನಿಪ್ಪಾ
ಬಿರುದು ಸಂದುದು ಶರನಿಧಿಗೆ ಭೂಪಾಲ ಕೇಳ್ ಎಂದ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲಲಾ ! ಸಾಗರದ ಓಪಾದಿಯಲ್ಲಿ ನುಗ್ಗಿ ಬಂದ ಯೋಧರ ಬಾಣದ ಪೆಟ್ಟುಗಳಿಂದ ಮಂದರಾಚಲವೆಂಬ ಆನೆಯ ತಲೆಯೊಡೆದು ಮುತ್ತಿನ ರಾಶಿ ಚೆಲ್ಲಾಡಿ ಅವೇ ಚಿಮ್ಮಿ ಹರಡಿದ ನಕ್ಷತ್ರಗಳಾದವು. ಕೆಳಕ್ಕೆ ಉರುಳಿ ಸಾಗರ ಸೇರಲು ಸಾಗರಕ್ಕೆ ರತ್ನಾಕರ (ರತ್ನಗಳಿಗೆ ಆಶ್ರಯಸ್ಥಾನ) ಎಂಬ ಬಿರುದು ಸಂದಾಯವಾಯಿತು ಎಂಬುದಾಗಿ ಧೃತರಾಷ್ಟ್ರನಿಗೆ ಸಂಜಯ ಹೇಳಿದನು.
ಪದಾರ್ಥ (ಕ.ಗ.ಪ)
ಜೋಧ-ಮಾವಟಿಗರು, ಕರಿ-ಆನೆ, ಮೌಕ್ತಿಕವ್ರಾತ-ರತ್ನ ರಾಶಿ, ಅಭ್ರ-ಆಕಾಶ, ಹರೆದು-ಡಿಕ್ಕಿ ಹೊಡೆದು, ಉರುಳೆ-ಕೆಳಕ್ಕೆ ಬಿದ್ದು, ಶರನಿಧಿ-ಸಮುದ್ರ, ರತ್ನಾಕರ-ಸಾಗರ
ಮೂಲ ...{Loading}...
ಅರರೆ ಶರಸಾಗರದ ಜೋದರ
ಸರಳಹತಿಯಲಿ ಮಂದರಾಚಲ
ಕರಿಯ ಮಸ್ತಕವೊಡೆದು ಕೆದರಿತು ಮೌಕ್ತಿಕವ್ರಾತ
ಹರೆದು ತಾರೆಗೆಯಾದವಭ್ರದೊ
ಳುರುಳೆ ರತ್ನಾಕರನೆನಿಪ್ಪಾ
ಬಿರುದು ಸಂದುದು ಶರನಿಧಿಗೆ ಭೂಪಾಲ ಕೇಳೆಂದ ॥91॥
೦೯೨ ಧುರದ ಜಯಸಿರಿ ...{Loading}...
ಧುರದ ಜಯಸಿರಿ ವೀರ ಭಟರಿಗೆ
ಸುರಿವ ಲಾಜಾವರುಷದಂತಿರೆ
ಸುರಿದ ಮುತ್ತುಗಳೆಸೆದವಭ್ರವಿಮಾನ ಭಾಗದಲಿ
ಕರಿಶಿರದ ಮುಕ್ತಾಳಿಯೊಪ್ಪಿದ
ವರ ವಿಜಯರೊಡಗೂಡಿ ಜಯವಧು
ವಿರದೆ ಪುಳಕಿತೆಯಾದಳೆನೆ ಚೆಲುವಾಯ್ತು ನಿಮಿಷದಲಿ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಗ್ರಾಮ ಜಯಲಕ್ಷ್ಮಿ ಶೂರಯೋಧರ ಮೇಲೆ ಸುರಿಸುವ ಅರಳಿನ ಮಳೆಯಂತೆ ಆಕಾಶ ಭಾಗದಲ್ಲಿ ಚಿಮ್ಮಿ ಸೇರಿದ ಮುತ್ತುಗಳು ಶೋಭಿಸಿದವು. ಆನೆಗಳ ಕುಂಭ ಸ್ಥಳದಿಂದ ಉದುರಿದ ಮುತ್ತುಗಳು ವಿಜಯ ವೀರರ ಮೇಲೆ ಸುರಿದು ,ಜಯಲಕ್ಷ್ಮಿಯು ಗೆದ್ದವರ ಒಡಗೂಡಿ ಪುಳಕಿತೆಯಾದಳೋ ಎಂಬಂತೆ ಎಂಬಂತೆ ಶೋಭಿಸುತ್ತಿದ್ದಳು.
ಪದಾರ್ಥ (ಕ.ಗ.ಪ)
ಧುರದ ಜಯಸಿರಿ-ಸಂಗ್ರಾಮ ಜಯಲಕ್ಷ್ಮಿ, ಲಾಜಾವರುಷ-ಅರಳಿನ ಮಳೆ, ಅಭ್ರಮಾನ-ಆಕಾಶಭಾಗ, ಕರಿಶಿರ-ಆನೆಗಳ ಕುಂಭಸ್ಥಲ, ಪುಳಕಿತೆ-ರೋಮಾಂಚಿತೆ
ಮೂಲ ...{Loading}...
ಧುರದ ಜಯಸಿರಿ ವೀರ ಭಟರಿಗೆ
ಸುರಿವ ಲಾಜಾವರುಷದಂತಿರೆ
ಸುರಿದ ಮುತ್ತುಗಳೆಸೆದವಭ್ರವಿಮಾನ ಭಾಗದಲಿ
ಕರಿಶಿರದ ಮುಕ್ತಾಳಿಯೊಪ್ಪಿದ
ವರ ವಿಜಯರೊಡಗೂಡಿ ಜಯವಧು
ವಿರದೆ ಪುಳಕಿತೆಯಾದಳೆನೆ ಚೆಲುವಾಯ್ತು ನಿಮಿಷದಲಿ ॥92॥
೦೯೩ ವಿಗ್ರಹದೊಳಿದಿರಾನ್ತ ಕರಿಗಳ ...{Loading}...
ವಿಗ್ರಹದೊಳಿದಿರಾಂತ ಕರಿಗಳ
ವಿಗ್ರಹಂಗಳು ಕೆಡೆಯೆ ಕಾದಿ ಸ
ಮಗ್ರಬಲ ಜೋದಾಳಿ ಕೊಂಡುದು ಸುರರ ಕೋಟೆಗಳ
ಉಗ್ರದಾಹವಭೂತಗಣಕೆ ಸ
ಮಗ್ರಭೋಜನವಾಯ್ತು ಸಂಗರ
ದಗ್ರಿಯರು ಕೈವೀಸಿದರು ತೇರುಗಳ ತಿಂತಿಣಿಯ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಎದುರಾಗಿ ಪ್ರತಿಭಟಿಸಿದ ಆನೆಗಳನ್ನು ನಾಶಗೈದು ಗಜ ಸೇನೆಯ ಯೋಧರು ಹೋರಾಡಿ ತಾವೂ ವೀರಸ್ವರ್ಗವನ್ನು ಪಡೆದರು. ಘೋರ ಯುದ್ಧದಲ್ಲಿ ರಂಗಕ್ಕೆ ಬಂದಿದ್ದ ಭೂತ ಪಿಶಾಚಾದಿಗಳಿಗೆ ಪುಷ್ಕಳ ಭೋಜನ ಉಂಟಾಯಿತು. ಅನಂತರ ಯುದ್ಧದ ನಾಯಕರು ರಥಗಳ ಸಮೂಹಕ್ಕೆ ಯುದ್ಧ ಮಾಡಲು ಅಪ್ಪಣೆಯಿತ್ತರು.
ಪದಾರ್ಥ (ಕ.ಗ.ಪ)
ಕೈಬೀಸು-ಅಪ್ಪಣೆ ಕೊಡು, ತಿಂತಿಣಿ-ಗುಂಪು, ಸಂಗರದ ಅಗ್ರಿಯರು-ಸಂಗ್ರಾಮದ ನಾಯಕರು, ಉಗ್ರ ಆಹವ-ಘೋರ ಯುದ್ಧ, ಜೋದಾಳಿ-ವೀರ ಸಮೂಹ, ವಿಗ್ರಹ-ಯುದ್ಧ, ವಿಗ್ರಹ - ಶರೀರ
ಮೂಲ ...{Loading}...
ವಿಗ್ರಹದೊಳಿದಿರಾಂತ ಕರಿಗಳ
ವಿಗ್ರಹಂಗಳು ಕೆಡೆಯೆ ಕಾದಿ ಸ
ಮಗ್ರಬಲ ಜೋದಾಳಿ ಕೊಂಡುದು ಸುರರ ಕೋಟೆಗಳ
ಉಗ್ರದಾಹವಭೂತಗಣಕೆ ಸ
ಮಗ್ರಭೋಜನವಾಯ್ತು ಸಂಗರ
ದಗ್ರಿಯರು ಕೈವೀಸಿದರು ತೇರುಗಳ ತಿಂತಿಣಿಯ ॥93॥
೦೯೪ ನೊಗನ ಬಿಗುಹಿನ ...{Loading}...
ನೊಗನ ಬಿಗುಹಿನ ಕಂಧದುರು ವಾ
ಜಿಗಳು ಕುಣಿದವು ಪಲ್ಲವದ ಸೆರ
ಗಗಿಯೆ ಟೆಕ್ಕೆಯವೆತ್ತಿದವು ಮುಮ್ಮೊನೆಯ ಸೂನಗೆಯ
ಹೊಗರುಗಳ ತೀಡಿದರು ಕೀಲ
ಚ್ಚುಗಳ ಮೇಳೈಸಿದರು ಬಲು ನಂ
ಬುಗೆಯ ಬದ್ಧರದೊಳಗೆ ತುಂಬಿದರಸ್ತ್ರ ಶಸ್ತ್ರಗಳ ॥94॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಬಳಿಕ ಸಂಗರದ ನಾಯಕರು ತೇರುಗಳ ಸಮೂಹಕ್ಕೆ ಕೈಬೀಸಿದಾಗ) ಕುತ್ತಿಗೆಗೆ ನೊಗ ಪಟ್ಟಿಯನ್ನು ಬಿಗಿಸಿಕೊಂಡ ಶ್ರೇಷ್ಠ ಕುದುರೆಗಳು ಮುನ್ನುಗ್ಗಲು ಉತ್ಸಾಹ ತೋರಿದವು. ಕುದುರೆಗಳ ಆಯಾಲು (ಕುತ್ತಿಗೆ ಮೇಲಿನ ಜೂಲು) ಅಲುಗಾಡುತ್ತಿರಲು ಬಾವುಟಗಳನ್ನು ಎತ್ತಿ ಕಟ್ಟಿದರು. ಶೂಲಗಳನ್ನು ಮೂರು ತುದಿಗಳ ಕಾಂತಿ ಹೆಚ್ಚುವಂತೆ ಉಜ್ಜಿ ಫಳಫಳಗೊಳಿಸಿದರು. ರಥದ ಗಾಲಿಯ ದಿಂಡನ್ನು ಜೋಡಿಸಿದರು. ದೃಢವಾದ ಗಾಡಿಯಲ್ಲಿ ಅಸ್ತ್ರಶಸ್ತ್ರಗಳನ್ನು ಜೋಡಿಸಿದರು.
ಪದಾರ್ಥ (ಕ.ಗ.ಪ)
ಕಂಧ-ಹೆಗಲು , ವಾಜಿ-ಕುದುರೆ, ಅಗಿಯೆ-ಅಲ್ಲಾಡುತ್ತಿರಲು, ಟೆಕ್ಕೆಯ-ಬಾವುಟ, ಮುಮ್ಮೊನೆ-ಮೂರುತದಿಗಳ ಅಲಗಿನ, ಸೂನಗೆ-ಶೂಲದ, ಹೊಗರುತೀಡು-ಫಳಫಳಗೊಳಿಸು, ಮೇಳೈಸು-ಜೋಡಿಸು, ಕೀಲಚ್ಚು-ಗಾಲಿಯ ದಿಂಡು
ಮೂಲ ...{Loading}...
ನೊಗನ ಬಿಗುಹಿನ ಕಂಧದುರು ವಾ
ಜಿಗಳು ಕುಣಿದವು ಪಲ್ಲವದ ಸೆರ
ಗಗಿಯೆ ಟೆಕ್ಕೆಯವೆತ್ತಿದವು ಮುಮ್ಮೊನೆಯ ಸೂನಗೆಯ
ಹೊಗರುಗಳ ತೀಡಿದರು ಕೀಲ
ಚ್ಚುಗಳ ಮೇಳೈಸಿದರು ಬಲು ನಂ
ಬುಗೆಯ ಬದ್ಧರದೊಳಗೆ ತುಂಬಿದರಸ್ತ್ರ ಶಸ್ತ್ರಗಳ ॥94॥
೦೯೫ ಹಯನಿಕರ ಖುರಕಡಿಯ ...{Loading}...
ಹಯನಿಕರ ಖುರಕಡಿಯ ವಜ್ರಾಂ
ಗಿಯನು ಹೊತ್ತುವು ಝಡಿವ ಹೊಂಗಂ
ಟೆಯ ವಿಡಾಯ ವರೂಥವನು ಕರೆಸಿದವು ಚೀತ್ಕೃತಿಯ
ಜಯನಿನದವಳ್ಳಿರಿಯೆ ಸೂತಾ
ಶ್ರಯದಲತಿರಥನಿಕರ ರಥ ಸಂ
ಚಯವ ವೆಂಠಣಿಸಿದರು ತುಳುಕಿದರತುಳ ತೋಮರವ ॥95॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳ ಗೊರಸುಗಳ ಬುಡಕ್ಕೆ ವಜ್ರಾಂಗಿಯನ್ನು ತೊಡಿಸಲಾಯಿತು. ಹೊಳೆವ ಹೊನ್ನಿನ ಗಂಟೆಗಳ ಸೊಗಸು ರಥವನ್ನು ಅಲಂಕರಿಸಿತು. ರಥದ ಚಕ್ರಗಳ ಧ್ವನಿಯನ್ನು ಅವು ಸೊಗಸುಗೊಳಿಸಿದವು. ಜಯಘೋಷಗಳು ಶತ್ರುಗಳ ಎದೆ ಬಿರಿಸಲು ಸಾರಥಿಗಳು ಮೊದಲೇ ಏರಿದ್ದ ರಥಗಳಲ್ಲಿ ವೀರರ ಸಮೂಹ ಸಿದ್ಧರಾದರು. ರಥಗಳನ್ನು ಒಟ್ಟುಗೂಡಿಸಿ ಅಪಾರ ತೋಮರಾಯುಧಗಳನ್ನು ಪ್ರಯೋಗಿಸಲು ಆರಂಭಿಸಿದರು.
ಪದಾರ್ಥ (ಕ.ಗ.ಪ)
ತೋಮರ-ಒಂದು ಬಗೆಯ ಆಯುಧ, ವೆಂಠಣಿಸಿ-ಒಟ್ಟುಗೂಡಿಸಿ, ಸೂತಾಶ್ರಯ-ಸಾರಥಿಗಳು ಏರಿದ್ದ, ವಿಡಾಯಿ-ಸೊಗಸು, ಝಡಿವ-ಹೊಳೆವ, ಖುರಕಡಿ-ಗೊರಸುಗಳ ಬುಡ
ಮೂಲ ...{Loading}...
ಹಯನಿಕರ ಖುರಕಡಿಯ ವಜ್ರಾಂ
ಗಿಯನು ಹೊತ್ತುವು ಝಡಿವ ಹೊಂಗಂ
ಟೆಯ ವಿಡಾಯ ವರೂಥವನು ಕರೆಸಿದವು ಚೀತ್ಕೃತಿಯ
ಜಯನಿನದವಳ್ಳಿರಿಯೆ ಸೂತಾ
ಶ್ರಯದಲತಿರಥನಿಕರ ರಥ ಸಂ
ಚಯವ ವೆಂಠಣಿಸಿದರು ತುಳುಕಿದರತುಳ ತೋಮರವ ॥95॥
೦೯೬ ಪೂತು ಸಾರಥಿ ...{Loading}...
ಪೂತು ಸಾರಥಿ ಭಾಪು ಮಝರೇ
ಸೂತ ಧಿರುಧಿರು ಎನುತ ರಥಿಕ
ವ್ರಾತ ಮಿಗೆ ಬೋಳೈಸಿ ಕೊಂಡರು ಹಯದ ವಾಘೆಗಳ
ಆ ತುರಂಗದ ಖುರಪುಟದ ನವ
ಶಾತಕುಂಭದ ಗಾಲಿಯುರುಬೆಯ
ನಾ ತತುಕ್ಷಣವಾಂಪರಾರೆನೆ ಕವಿದುದುಭಯದೊಳು ॥96॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲೆ ! ಸಾರಥಿ, ಭೇಷ್ ! ಶಹಭಾಸ್ ! ಸೂತನೇ, ಭಾಪು, ಭಾಪು, ಎಂದು ಸಾರಥಿಗಳ ಸಮೂಹ ವಿಶೇಷವಾಗಿ ಪ್ರಶಂಸೆ ಮಾಡುತ್ತ ಕುದುರೆಗಳ ಲಗಾಮುಗಳನ್ನು ಹಿಡಿದರು. ಆ ರಥ ಹಯಗಳ ಗೊರಸಿನ ರಭಸವನ್ನು ಹೊಸ ಹೊನ್ನಿನ ಗಾಲಿಗಳ ಆರ್ಭಟವನ್ನು ತಕ್ಷಣದಲ್ಲಿ ತಡೆದುಕೊಳ್ಳಬಲ್ಲವರು ಯಾರಿದ್ದಾರೆ ? ಬನ್ನಿ ಎಂದು ಎರಡೂ ಸೇನೆಗಳ ರಥಿಕರು ಒಬ್ಬರ ಮೇಲೆ ಒಬ್ಬರು ನುಗ್ಗಿದರು.
ಪದಾರ್ಥ (ಕ.ಗ.ಪ)
ಬೋಳೈಸಿ-ಪ್ರಶಂಸೆ ಮಾಡುತ್ತ, ವಾಘೆ-ಲಗಾಮ, ಖುರಪುಟ-ಗೊರಸು, ನವಶಾಂತಕುಂಭ-ಹೊಸ ಹೊನ್ನಿನ, ಆಂಪರು-ತಡೆದುಕೊಳ್ಳ ಬಲ್ಲವರು, ಕವಿದುದು-ಮುನ್ನುಗ್ಗಿದರು.
ಮೂಲ ...{Loading}...
ಪೂತು ಸಾರಥಿ ಭಾಪು ಮಝರೇ
ಸೂತ ಧಿರುಧಿರು ಎನುತ ರಥಿಕ
ವ್ರಾತ ಮಿಗೆ ಬೋಳೈಸಿ ಕೊಂಡರು ಹಯದ ವಾಘೆಗಳ
ಆ ತುರಂಗದ ಖುರಪುಟದ ನವ
ಶಾತಕುಂಭದ ಗಾಲಿಯುರುಬೆಯ
ನಾ ತತುಕ್ಷಣವಾಂಪರಾರೆನೆ ಕವಿದುದುಭಯದೊಳು ॥96॥
೦೯೭ ಹರಿವ ರಥದುರವಣೆಗೆ ...{Loading}...
ಹರಿವ ರಥದುರವಣೆಗೆ ನೆರೆಯದು
ಧರಣಿಯೆಂದಂಭೋಜಭವನೀ
ಧರೆಯನಿಮ್ಮಡಿಸಿದನೊ ಎನಲಾ ಬಹಳ ಸಮರದೊಳು
ಹರಿವ ರಥಪದಧೂಳಿ ಮಕರಾ
ಕರವ ಕುಡಿದುದು ಚೀತ್ಕೃತಿಯ ಚ
ಪ್ಪರಣೆ ಮಿಗಲುರುಬಿದರು ರಥಿಕರು ಸರಿಸ ವಾಘೆಯಲಿ ॥97॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದಕ್ಕೆ ಸಾಗುತ್ತಿರುವ ರಥದ ರಭಸಕ್ಕೆ ಈ ಭೂಮಿ ಸಾಲದು ಎಂದು ಬ್ರಹ್ಮನು ಈ ಭೂಮಿಯನ್ನು ಎರಡು ಪಟ್ಟು ವಿಸ್ತರಿಸಿದನೋ ಎಂಬಂತೆ ಆ ಮಹಾ ಸಮರದಲ್ಲಿ ರಥ ಚಕ್ರದಿಂದ ಎದ್ದ ಧೂಳು (ಮಕರಾಕರವನು) ಸಮುದ್ರವನ್ನು ಆವರಿಸಿತು. ವೇಗದ ರಥಗಳು ಸಂಚಾರದಿಂದ ಮತ್ತು ರಥಿಕರು ವೇಗವಾಗಿ ಬೀಸಿದ ಲಗಾಮುಗಳನ್ನು ಸಡಿಲಗೊಳಿಸಿ, ಕುದುರೆಗಳ ಬೆನ್ನನ್ನು ಚಪ್ಪರಿಸಿ ಮಿಗಿಲಾದ ಉತ್ಸಾಹ ತಳೆದು ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ಮಕರಾಕರ-ಮೊಸಳೆಗಳ ಆವಾಸಸ್ಥಾನ-ಸಮುದ್ರ, ರಥಪದ ಧೂಳಿ-ರಥ ಚಕ್ರಗಳಿಂದ ಎದ್ದ ಧೂಳು, ಇಮ್ಮಡಿಸು-ಎರಡುಪಟ್ಟು ಹೆಚ್ಚಿಸು, ಅಂಭೋಜಭª-ಬ್ರಹ್ಮ, ನೆರೆಯದು-ಸಾಲದು, ಉರವಣೆ-ರಭಸ
ಮೂಲ ...{Loading}...
ಹರಿವ ರಥದುರವಣೆಗೆ ನೆರೆಯದು
ಧರಣಿಯೆಂದಂಭೋಜಭವನೀ
ಧರೆಯನಿಮ್ಮಡಿಸಿದನೊ ಎನಲಾ ಬಹಳ ಸಮರದೊಳು
ಹರಿವ ರಥಪದಧೂಳಿ ಮಕರಾ
ಕರವ ಕುಡಿದುದು ಚೀತ್ಕೃತಿಯ ಚ
ಪ್ಪರಣೆ ಮಿಗಲುರುಬಿದರು ರಥಿಕರು ಸರಿಸ ವಾಘೆಯಲಿ ॥97॥
೦೯೮ ಘನರಥದ ಚೀತ್ಕಾರ ...{Loading}...
ಘನರಥದ ಚೀತ್ಕಾರ ಗಜರುವ
ಧನುವಿನಬ್ಬರ ಹಯದ ಹೇಷಾ
ನಿನದ ರಥಿಕರ ಬೊಬ್ಬೆ ಸೂತರ ಬಹಳ ಚಪ್ಪರಣೆ
ಅನುವರದೊಳೊದಗಿತ್ತು ವಿಲಯದ
ವಿನುತ ಮೇಘಧ್ವಾನವನು ಸಂ
ಜನಿಸಿತೆನೆ ಹಳಚಿದವು ರಥರಥವೆರಡು ಸೇನೆಯಲಿ ॥98॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಹಾ ರಥಗಳ ಸಂಚಾರದ ಚೀತ್ಕಾರ ದನಿ, ಬಿಲ್ಲುಗಳ ಠೇಂಕಾರದ ಅಬ್ಬರ ಕುದುರೆಗಳ ಕೆನೆಯವ ಸದ್ದು, ರಥಿಕರ ಆವೇಶದ ಕೂಗಾಟ, ಸಾರಥಿಗಳು ಕುದುರೆಗಳ ಬೆನ್ನು ಚಪ್ಪರಿಸುವುದು ಇವೆಲ್ಲ ಒಟ್ಟುಗೂಡಿ ಆ ಮಹಾಸಂಗ್ರಾಮದಲ್ಲಿ ಪ್ರಳಯಕಾಲದ ಮೋಡದ ಗುಡುಗುಗಳೋ ಎಂಬಂತೆ ಕೌರವ ಪಾಂಡವ ಸೇನೆಗಳಲ್ಲಿ ರಥಗಳು ರಥಗಳನ್ನು ಎದುರಿಸಿ ತಾಗಿದವು.
ಪದಾರ್ಥ (ಕ.ಗ.ಪ)
ಹಳಚು-ತಾಗು, ಸಂಜನಿಸು-ಉಂಟಾಗು, ಮೇಘಧ್ವಾನ-ಮೋಡಗಳ ಧ್ವನಿ (ಸಿಡಿಲು ಗುಡುಗು), ಅನುವರ-ಯುದ್ಧ, ಚಪ್ಪರಣೆ-ಬೆನ್ನು ಚಪ್ಪರಿಸು, ಹೇಷಾನಿನದ-ಕೆನೆತ, ಗಜರು-ಗರ್ಜಿಸು, ಠೇಂಕಾರ
ಮೂಲ ...{Loading}...
ಘನರಥದ ಚೀತ್ಕಾರ ಗಜರುವ
ಧನುವಿನಬ್ಬರ ಹಯದ ಹೇಷಾ
ನಿನದ ರಥಿಕರ ಬೊಬ್ಬೆ ಸೂತರ ಬಹಳ ಚಪ್ಪರಣೆ
ಅನುವರದೊಳೊದಗಿತ್ತು ವಿಲಯದ
ವಿನುತ ಮೇಘಧ್ವಾನವನು ಸಂ
ಜನಿಸಿತೆನೆ ಹಳಚಿದವು ರಥರಥವೆರಡು ಸೇನೆಯಲಿ ॥98॥
೦೯೯ ತೆಗೆತೆಗೆದು ತಲೆಮಟ್ಟು ...{Loading}...
ತೆಗೆತೆಗೆದು ತಲೆಮಟ್ಟು ಕರೆದರು
ಬಿಗಿದ ಬಿಲುಗಳಲತಿರಥರು ಕಂ
ಬುಗೆಯ ಮುರಿದರು ಹಯವ ತರಿದರು ಸಾರಥಿಯ ಕೆಡಹಿ
ಹಗಲ ಹೂಳಿದರಮಮ ಬಾಣಾ
ಳಿಗಳಲಸಮ ಮಹಾರಥರು ಕಾ
ಳೆಗದೊಳಹುದೆನಿಸಿದರು ರಣದೊಳು ಸುಳಿವ ಯಮನವರ ॥99॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿರಥರು ಬಿಲ್ಲುಗಳನ್ನು ಬಿಗಿದು ತೆಗೆತೆಗೆದು ಬಾಣಗಳನ್ನು ಬಿಟ್ಟರು. ಆಯುಧಗಳನ್ನು ತುಂಬುವ ರಥದ ಭಾಗವನ್ನು ನಾಶ ಮಾಡಿದರು. ಸಾರಥಿಯನ್ನು ಕೊಂದು ರಥದ ಕುದುರೆಯನ್ನು ನಾಶ ಮಾಡಿದರು. ಬಾಣಗಳ ಸುರಿಮಳೆಯಲ್ಲಿ ಹಗಲನ್ನು ಮರೆಮಾಡಿದರು. (ಅಸಂಖ್ಯಾತ ಬಾಣಗಳು ಆವರಿಸಿ ಕತ್ತಲಾಯಿತು) ಅಸಮಾನ ಮಹಾರಥಿಗಳು ಕಾಳಗದಲ್ಲಿ ರಣರಂಗಕ್ಕೆ ಬಂದ ಯಮನು ಮೆಚ್ಚಿಗೆ ಸೂಸುವಂತೆ ಮಾಡಿದರು. (ಅಸಂಖ್ಯಾತ ಜನರನ್ನು ಕೊಂದರು)
ಪದಾರ್ಥ (ಕ.ಗ.ಪ)
ಕಂಬುಗೆ-ಆಯುಧಗಳನ್ನು ತುಂಬುವ ರಥದ ಭಾಗ, ಹಗಲ ಹೂಳಿದರು-ಬಾಣದ ಮಳೆಯಿಂದ ಕತ್ತಲೆ ಉಂಟು ಮಾಡಿದರು, ತಲೆಮಟ್ಟು-ತಲೆಮಟ್ಟದವರೆಗೆ
ಮೂಲ ...{Loading}...
ತೆಗೆತೆಗೆದು ತಲೆಮಟ್ಟು ಕರೆದರು
ಬಿಗಿದ ಬಿಲುಗಳಲತಿರಥರು ಕಂ
ಬುಗೆಯ ಮುರಿದರು ಹಯವ ತರಿದರು ಸಾರಥಿಯ ಕೆಡಹಿ
ಹಗಲ ಹೂಳಿದರಮಮ ಬಾಣಾ
ಳಿಗಳಲಸಮ ಮಹಾರಥರು ಕಾ
ಳೆಗದೊಳಹುದೆನಿಸಿದರು ರಣದೊಳು ಸುಳಿವ ಯಮನವರ ॥99॥
೧೦೦ ತಿರುಗೆ ...{Loading}...
ತಿರುಗೆ ತಿರುಗಿದರೆಚ್ಚರೆಚ್ಚರು
ಮರಳೆ ಮರಳಿದರೌಕಲೌಕಿದ
ರುರವಣಿಸಲುರವಣಿಸಿದರು ಮಾರ್ತಾಗೆ ತಾಗಿದರು
ಸರಳಿಗಂಬನು ಸೂತ ವಾಜಿಯ
ಶಿರಕೆ ಶಿರವನು ರಥಕೆ ರಥವನು
ಸರಿಗಡಿದು ಕಾದಿದರು ಸಮರಥರಾಹವಾಗ್ರದಲಿ ॥100॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎದುರಾಳಿ ತಿರುಗಿ ಪ್ರತಿಭಟಿಸಿದರೆ ಇವರೂ ತಿರುಗಿ ಪ್ರತಿಭಟಿಸಿದರು. ಅವರು ಬಾಣ ಹೂಡಿದರೆ ಇವರೂ ಬಾಣ ಹೂಡಿದರು. ಅವರು ಹಿಂದಕ್ಕೆ ಸರಿದರೆ ಇವರೂ ಹಿಂದಕ್ಕೆ ಸರಿದರು. ಅವರು ಒತ್ತರಿಸಿದರೆ ಇವರು ಒತ್ತರಿಸಿದರು. ಅವರು ಮೇಲೆ ನುಗ್ಗಿ ಬಂದರೆ ಇವರೂ ಮುನ್ನುಗ್ಗಿದರು. ಮತ್ತೆ ಹೋರಾಡಿದಾಗ ಇವರೂ ಹೋರಾಡಿದರು. ಯುದ್ಧದಲ್ಲಿ ಯೋಧರು ಸೂತನ ಮತ್ತು ಕುದುರೆಯನ್ನು ಕೊಂದರೆ ಪ್ರತಿಯಾಗಿ ಇವರೂ ಎದುರುಪಕ್ಷದ ಸೂತ ಮತ್ತು ಕುದುರೆಗಳನ್ನು ಕೊಂದರು. ಹಾಗೆಯೇ ರಥಕ್ಕೆ ಪ್ರತಿಯಾಗಿ ರಥವನ್ನು ಸರಿಸಮವಾಗಿ ಕತ್ತರಿಸಿ ರಣರಂಗದ ಮುಂಚೂಣಿಯಲ್ಲಿ ಸಮಶೌರ್ಯದ ಶೂರರು ಹೋರಾಡಿದರು.
ಪದಾರ್ಥ (ಕ.ಗ.ಪ)
ಉರವಣಿಸು-ಮೇಲೆ ಬೀಳು, ಸರಿಗಡಿದು-ಸರಿಸಮವಾಗಿ ಕತ್ತರಿಸಿ, ವಾಜಿ-ಕುದುರೆ, ಔಕು-ಒತ್ತರಿಸು, ಸರಳು-ಬಾಣ್ಲ, ಅಂಬು-ಬಾಣ
ಮೂಲ ...{Loading}...
ತಿರುಗೆ ತಿರುಗಿದರೆಚ್ಚರೆಚ್ಚರು
ಮರಳೆ ಮರಳಿದರೌಕಲೌಕಿದ
ರುರವಣಿಸಲುರವಣಿಸಿದರು ಮಾರ್ತಾಗೆ ತಾಗಿದರು
ಸರಳಿಗಂಬನು ಸೂತ ವಾಜಿಯ
ಶಿರಕೆ ಶಿರವನು ರಥಕೆ ರಥವನು
ಸರಿಗಡಿದು ಕಾದಿದರು ಸಮರಥರಾಹವಾಗ್ರದಲಿ ॥100॥
೧೦೧ ರಥವದೊನ್ದೆಸೆ ಹಯವದೊನ್ದೆಸೆ ...{Loading}...
ರಥವದೊಂದೆಸೆ ಹಯವದೊಂದೆಸೆ
ರಥಿಕರೊಂದೆಸೆ ಚಾಪ ಶರ ಸಾ
ರಥಿಗಳೊಂದೆಸೆಯಾಗೆ ಕೊಂದರು ಬಲದೊಳತಿರಥರು
ರಥಿಕರುರವಣೆಯುಭಯ ಬಲದಲಿ
ಕಥೆಯ ಕಡೆಯಾಯಿತ್ತು ಬಳಿಕತಿ
ರಥರು ಹೊಕ್ಕರು ಕೇಳು ಧೃತರಾಷ್ಟ್ರಾವನೀಪಾಲ ॥101॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥವು ಒಂದು ಕಡೆ, ಹಯವು ಒಂದು ಕಡೆ, ರಥಿಕರು ಒಂದು ಕಡೆ ಆಗುವಂತೆ ಎಂದರೆ ಎಲ್ಲಾ ಚೆಲ್ಲಾಪಿಲ್ಲಿ ಆಗುವಂತೆ ಪರಾಕ್ರಮದಿಂದ ಅತಿರಥರು ಶತ್ರುಗಳನ್ನು ಕೊಂದರು. ಎರಡೂ ಸೇನೆಗಳಲ್ಲಿ ರಥಿಕರ ಆರ್ಭಟಗಳು ಕೊನೆಗೊಂಡವು. ಅನಂತರ ಅತಿರಥರು ಕಾಳಗದ ಕಣವನ್ನು ಹೊಕ್ಕರು ಎಂದು ಧೃತರಾಷ್ಟ್ರನಿಗೆ ಸಂಜಯ ಹೇಳಿದನು.
ಪದಾರ್ಥ (ಕ.ಗ.ಪ)
ಉರವಣೆ-ಆರ್ಭಟ, ಕಥೆಯಕಡೆ-ಕಥೆಗೆ ಎಡೆ, ಅವನೀಪಾಲ-ದೊರೆ, ದೆಸೆ-ಕಡೆ, ಉಭಯಬಲ-ಕೌರವ-ಪಾಂಡವ ಸೇನೆ.
ಮೂಲ ...{Loading}...
ರಥವದೊಂದೆಸೆ ಹಯವದೊಂದೆಸೆ
ರಥಿಕರೊಂದೆಸೆ ಚಾಪ ಶರ ಸಾ
ರಥಿಗಳೊಂದೆಸೆಯಾಗೆ ಕೊಂದರು ಬಲದೊಳತಿರಥರು
ರಥಿಕರುರವಣೆಯುಭಯ ಬಲದಲಿ
ಕಥೆಯ ಕಡೆಯಾಯಿತ್ತು ಬಳಿಕತಿ
ರಥರು ಹೊಕ್ಕರು ಕೇಳು ಧೃತರಾಷ್ಟ್ರಾವನೀಪಾಲ ॥101॥