೦೦೦ ಸೂ ರಾಯದನುಜಘರಟ್ಟ ...{Loading}...
ಸೂ. ರಾಯದನುಜಘರಟ್ಟ ಪಾಂಡವ
ರಾಯ ಜಂಗಮಜೀವ ನಿರ್ಜಿತ
ಮಾಯ ನಿಜವನು ತೋರಿ ಪಾರ್ಥನನೊಲಿದು ಬೋಧಿಸಿದ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಅಸುರರಾಜರನ್ನು ಪುಡಿಗುಟ್ಟುವಂತಹವನೂ ಜೀವಕೋಟಿಗೆ ಪ್ರಾಣ ಸ್ವರೂಪನೂ, ಮಾಯೆಯನ್ನು ಗೆದ್ದವನೂ ಆದ ಶ್ರೀಕೃಷ್ಣನು ಅರ್ಜುನನಿಗೆ ತನ್ನ ನಿಜಸ್ವರೂಪ ತೋರಿ ಪ್ರೀತಿಯಿಂದ ಗೀತೋಪದೇಶವನ್ನು ಅನುಗ್ರಹಿಸಿದನು.
ಪದಾರ್ಥ (ಕ.ಗ.ಪ)
ಘರಟ್ಟ-ಬೀಸುವ ಕಲ್ಲು, ಜಂಗಮಜೀವ-ಜೀವಕೋಟಿಗೆ ಪ್ರಾಣಸ್ವರೂಪನು, ನಿರ್ಜಿತಮಾಯ-ಮಾಯೆಯನ್ನು ಗೆಲಿದವನು, ನಿಜವನು-ತನ್ನ ನಿಜಸ್ವರೂಪವನ್ನು, ಒಲಿದು-ಪ್ರೀತಿಯಿಂದ, ಬೋಧಿಸಿದ-ಗೀತೋಪದೇಶ ಮಾಡಿದನು.
ಮೂಲ ...{Loading}...
ಸೂ. ರಾಯದನುಜಘರಟ್ಟ ಪಾಂಡವ
ರಾಯ ಜಂಗಮಜೀವ ನಿರ್ಜಿತ
ಮಾಯ ನಿಜವನು ತೋರಿ ಪಾರ್ಥನನೊಲಿದು ಬೋಧಿಸಿದ
೦೦೧ ಹಳಚಲನುವಾಯ್ತುಭಯಸೇನಾ ಜಲಧಿ ...{Loading}...
ಹಳಚಲನುವಾಯ್ತುಭಯಸೇನಾ
ಜಲಧಿ ಕಳಕಳ ಮಿಗಲು ಮಾರುತಿ
ಮೊಳಗಿದನು ಪೌಂಡ್ರಕವ ಭೂಪನನಂತವಿಜಯವನು
ಇಳೆ ಹಿಳೆಯೆ ಮಣಿಪುಷ್ಪಕದ ನಿ
ರ್ಮಲ ಸುಘೋಷದೊಳಮಮ ಕೋಳಾ
ಹಳಿಸಿದುದು ಸಹದೇವ ನಕುಲರು ಸಮರಕನುವಾಯ್ತು ॥1॥
ಕೇಳು ಜನಮೇಜಯ ಧರಿತ್ರೀ
ಪಾಳ ಹಿಮಕರಕುಲಲಲಾಮರು
ಕಾಳೆಗಕೆ ಕೈದಟ್ಟಿ ಹರಿದುದು ಕಳನ ಚೌಕದಲಿ
ಆಳು ಗಜಬಜಿಸಿತ್ತು ರಾವುತ
ರೋಳಿ ಸೇರಿತು ಸರಸದಲಿ ದೆ
ಖ್ಖಾಳಿಸಿದುದಿಭರಥನಿಕಾಯದ ಬೆರಳ ಬೊಬ್ಬೆಯಲಿ ॥1 ಅ॥
ಹಿಂಡೊಡೆದು ಮುಂಗುಡಿಯ ತಾ ಕಯಿ
ಕೊಂಡು ದೂವಾಳಿಯಲಿ ರಥವನು
ಮಂಡಳಿಸಿ ಕೆಲ್ಲಯಿಸಿ ಲುಳಿಯಲಿ ಲಲಿತಪೇರಯವ
ಚಂಡಗತಿಚಾಳನೆಯಲುಬ್ಬಟೆ
ಗೊಂಡಿಸದೆ ವೇಡೆಯವ ಕೊಳ್ಳದೆ
ಗಾಂಡಿವಿಯ ಕೈಮನದ ಲಾಗನು ಪಡೆದನಸುರಾರಿ ॥1 ಆ॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಕಡೆಯ ಸೇನಾ ಸಮೂಹಗಳು ಹೋರಾಡಲು ಅಣಿಯಾದವು. ಸೇನೆಗಳ ಘೋಷಣೆಗಳ ಗದ್ದಲ ಹೆಚ್ಚಾಗಲು ಭೀಮಸೇನನು ಪೌಂಡ್ರಕ ಎಂಬ ಹೆಸರಿನ ಶಂಖವನ್ನು ಊದಿದನು. ಧರ್ಮರಾಜನು ಅನಂತವಿಜಯವೆಂಬ ಶಂಖವನ್ನು, ಸಹದೇವ ಮಣಿಪುಷ್ಪಕವನ್ನು, ನಕುಲ ಸುಘೋಷವೆಂಬ ಶಂಖವನ್ನು, ಭೂಮಿ ಬಿರಿಯುವ ಹಾಗೆ ಧ್ವನಿಮಾಡಿದರು. ಆಗ ಯುದ್ಧ ಪ್ರಾರಂಭಿಸಲು ಸೇನೆಗಳು ಸಜ್ಜುಗೊಂಡವು.
1 ಅ. ಜನಮೇಜಯ ರಾಯನೇ ಕೇಳು ಚಂದ್ರವಂಶದ ರಾಜಶ್ರೇಷ್ಠರೆಲ್ಲ ರಣರಂಗದ ಸ್ಥಳದಲ್ಲಿ ಯುದ್ಧ ಮಾಡಲು ಕೈತಟ್ಟುತ್ತಾ ಸಂಭ್ರಮದಿಂದ ಸಾಗಿದರು. ಕಾಲಾಳುಗಳು ಗಜಿಬಿಜಿ ಮಾಡುತ್ತಿದ್ದರು. ಉತ್ಸಾಹದಲ್ಲಿ ಕುದುರೆ ಸವಾರರ ಸಮೂಹ ಸಂದಣಿಸಿತು. ಆನೆ ಮತ್ತು ರಥ ಪಡೆಗಳ ಮಾವುತರ ಮತ್ತು ಸಾರಥಿಗಳ ಸಂಜ್ಞೆಗಳ ಹಾಹಾಕಾರದಲ್ಲಿ ಸೇನೆಗಳು ಸಂಭ್ರಮಗೊಂಡವು. 1 ಆ. ಸೇನೆಯನ್ನು ಭೇದಿಸಿ ಸೇನಾ ಮುಂಭಾಗವನ್ನು ಆಕ್ರಮಿಸಿ ರಥವನ್ನು ವೇಗವಾಗಿ ತೆಗೆದುಕೊಂಡು ಸಾಗಿ, ಮೃದು ಪದಗತಿಯನ್ನು ಚುರುಕಿನಲ್ಲಿ, ಕೆರಳಿಸುತ್ತ ಹಾಗೆ ತೀವ್ರಗತಿಯ ಓಟದಲ್ಲಿ ಕುದುರೆಗಳನ್ನು ಆವೇಶಗೊಳಿಸದೆ ಸುತ್ತುವರಿಸದೆ ಕೃಷ್ಣನು ಅರ್ಜುನನ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯದ ಕೌಶಲವನ್ನು ಬಳಸಿಕೊಳ್ಳಲು ಸಿದ್ಧನಾದನು.
ಪದಾರ್ಥ (ಕ.ಗ.ಪ)
- ಹಳಚಲು-ಹೋರಾಡಲು, ಅನುವಾಯ್ತು-ಅಣಿಯಾದವು, ಕಳಕಳ-ಗದ್ದಲ, ಮಾರುತಿ-ಭೀಮಸೇನ, ಇಳೆ ಹಿಳಿಯೆ-ಭೂಮಿ ಬಿರಿಯುವಂತೆ, ಕೋಳಾಹಳಿಸಿದರು-ಧ್ವನಿಮಾಡಿದರು
- ಅ.
ಧರಿತ್ರೀಪಾಳ-ದೊರೆ, ಹಿಮಕರಕುಲಲಲಾಮ-ಚಂದ್ರ ವಂಶದ ರಾಜಶ್ರೇಷ್ಠರು, ಕಳನ ಚೌಕ-ರಣರಂಗದ ಸ್ಥಳದಲ್ಲಿ, ಕೈದಟ್ಟಿ-ಕೈತಟ್ಟುತ್ತಾ, ಗಜಬಜಿಸಿತ್ತು-ಗೊಂದಲವುಂಟು ಮಾಡಿತು, ರಾಹುತರು-ಕುದುರೆ ಸವಾರರು, ಇಭ-ಆನೆ, ದೆಖ್ಖಾಳಿಸಿದುದು-ಸಂಭ್ರಮಗೊಂಡವು - ಆ
ಕೈಮನ-ದೈಹಿಕ ಮತ್ತು ಮಾನಸಿಕ, ಲಾಗನು-ಕೌಶಲ, ತೀವ್ರತೆ, ಸುಲಭ, ವೇಡೆಯವ-ಸುತ್ತುವರಿ ಉಬ್ಬಟೆಗೊಂಡಿಸಲು - ? ಲುಳಿಯಲಿ-ಚುರುಕಿನಲ್ಲಿ, ವೇಗದಲ್ಲಿ, ಮಂಡಳಿಸಿ-ಸುತ್ತಿಸಿ, ದೂವಾಳಿ-ಮುನ್ನುಗ್ಗು, ಮುಂಗುಡಿ-ಮುಂಭಾಗ, ಕೆಲ್ಲಯಿಸಿ-ಚೆದರಿಸಿ, ಕೆರಳಿಸಿ, ಲಲಿತ ಪೇರಯವ-ಮೃದು ಪದಗತಿಯನ್ನು(?)
ಟಿಪ್ಪನೀ (ಕ.ಗ.ಪ)
1958ರ ಜನಪ್ರಿಯ ಆವೃತ್ತಿಯಲ್ಲಿ ಈ ಸಂಧಿಯ ಮೊದಲ ಪದ್ಯದ ಜೊತೆಗೆ ಇನ್ನೆರಡು ಪದ್ಯಗಳನ್ನು ರೋಮನ್ ಅಂಕೆಯಲ್ಲಿ ನಮೂದಿಸಿ ಕೊಟ್ಟಿದ್ದಾರೆ. ಪದ್ಯಸಂಖ್ಯೆಗಳನ್ನು ಅಲ್ಲಿ ಇರುವ ಹಾಗೇ ಇರಿಸಿಕೊಳ್ಳುವ ಉದ್ದೇಶದಿಂದ ಅವನ್ನು ಮೊದಲನೆಯ ಪದ್ಯದ ಜೊತೆಗೇ ನೀಡಲಾಗಿದೆ.
ಪೌಂಡ್ರಂ ದಧ್ಮೌ ಮಹಾಶಂಖಂ ಅನಂತವಿಜಯಂ ರಾಜಾಕುಂತೀ ಪುತ್ರೋಯುಧಿಷ್ಠಿರಃ ನಕುಲ ಸಹದೇವಶ್ಚ ಸುಘೋಷ ಮಣಿಪುಷ್ಪಕ (ಗೀತೆ 1-16) ಈ ಮಾತಿನ ಅಳವಡಿಕೆ ಇಲ್ಲಿದೆ.
ಮೂಲ ...{Loading}...
ಹಳಚಲನುವಾಯ್ತುಭಯಸೇನಾ
ಜಲಧಿ ಕಳಕಳ ಮಿಗಲು ಮಾರುತಿ
ಮೊಳಗಿದನು ಪೌಂಡ್ರಕವ ಭೂಪನನಂತವಿಜಯವನು
ಇಳೆ ಹಿಳೆಯೆ ಮಣಿಪುಷ್ಪಕದ ನಿ
ರ್ಮಲ ಸುಘೋಷದೊಳಮಮ ಕೋಳಾ
ಹಳಿಸಿದುದು ಸಹದೇವ ನಕುಲರು ಸಮರಕನುವಾಯ್ತು ॥1॥
ಕೇಳು ಜನಮೇಜಯ ಧರಿತ್ರೀ
ಪಾಳ ಹಿಮಕರಕುಲಲಲಾಮರು
ಕಾಳೆಗಕೆ ಕೈದಟ್ಟಿ ಹರಿದುದು ಕಳನ ಚೌಕದಲಿ
ಆಳು ಗಜಬಜಿಸಿತ್ತು ರಾವುತ
ರೋಳಿ ಸೇರಿತು ಸರಸದಲಿ ದೆ
ಖ್ಖಾಳಿಸಿದುದಿಭರಥನಿಕಾಯದ ಬೆರಳ ಬೊಬ್ಬೆಯಲಿ ॥1 ಅ॥
ಹಿಂಡೊಡೆದು ಮುಂಗುಡಿಯ ತಾ ಕಯಿ
ಕೊಂಡು ದೂವಾಳಿಯಲಿ ರಥವನು
ಮಂಡಳಿಸಿ ಕೆಲ್ಲಯಿಸಿ ಲುಳಿಯಲಿ ಲಲಿತಪೇರಯವ
ಚಂಡಗತಿಚಾಳನೆಯಲುಬ್ಬಟೆ
ಗೊಂಡಿಸದೆ ವೇಡೆಯವ ಕೊಳ್ಳದೆ
ಗಾಂಡಿವಿಯ ಕೈಮನದ ಲಾಗನು ಪಡೆದನಸುರಾರಿ ॥1 ಆ॥
೦೦೨ ಮುರವಿಜಯ ನಿಜಪಾಞ್ಚಜನ್ಯವ ...{Loading}...
ಮುರವಿಜಯ ನಿಜಪಾಂಚಜನ್ಯವ
ನಿರದೆ ಫಲುಗುಣ ದೇವದತ್ತ
ಸ್ಫುರಿತರವವನು ರಚಿಸಿದನು ಮೂಲೋಕ ಮೈಮರೆಯೆ
ತುರಗವನು ಬೋಳಯಿಸಿ ವಾಘೆಯ
ತಿರುಹಿ ಚಮ್ಮಟಿಗೆಯಲಿ ತೇಜಿಯ
ಬರಿಯ ಬೆದರಿಸಿ ಕೃಷ್ಣ ಪಾರ್ಥನ ರಥವ ಲುಳಿವಡೆದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ತನ್ನ ಪಾಂಚಜನ್ಯ ಶಂಖದಿಂದ, ಅರ್ಜುನನು ದೇವದತ್ತ ಶಂಖದಿಂದ ಮೂರು ಲೋಕಗಳು ಪರವಶವಾಗುವಂತೆ ಅದ್ಭುತ ಧ್ವನಿಯನ್ನು ಉಂಟು ಮಾಡಿದರು. ಕುದುರೆಗಳನ್ನು ಮೈದಡವಿ / ಚಪ್ಪರಿಸಿ ಲಗಾಮುಗಳನ್ನು ತಿರುವಿ ಚಾವಟಿಯಿಂದ ಪಕ್ಕೆಯನ್ನು ತಿವಿದು ಬೆದರಿಸಿ ಕೃಷ್ಣನು ಅರ್ಜುನನ ರಥವನ್ನು ವೇಗವಾಗಿ ಚಲಿಸಿದನು.
ಪದಾರ್ಥ (ಕ.ಗ.ಪ)
ಲುಳಿವಡೆದ-ವೇಗ ಪಡೆದುಕೊಂಡ , ಬರಿ-ಪಕ್ಕೆ, ಚಮ್ಮಟಿಗೆ-ಚಾವಟಿ, ವಾಘೆ-ಲಗಾಮು, ಬೋಳಯಿಸಿ-ಚಪ್ಪರಿಸಿ, ಸ್ಫುರಿತರವ-ಹೊರಹೊರಟ ಧ್ವನಿ, ರಚಿಸಿದನು-ಉಂಟು ಮಾಡಿದನು.
ಟಿಪ್ಪನೀ (ಕ.ಗ.ಪ)
ಪಾಂಚಜನ್ಯಂ ಹೃಷಿಕೇಶೋ ದೇವದತ್ತಂ ಧನಂಜಯಃ (ಗೀತೆ 1-16)
ಮೂಲ ...{Loading}...
ಮುರವಿಜಯ ನಿಜಪಾಂಚಜನ್ಯವ
ನಿರದೆ ಫಲುಗುಣ ದೇವದತ್ತ
ಸ್ಫುರಿತರವವನು ರಚಿಸಿದನು ಮೂಲೋಕ ಮೈಮರೆಯೆ
ತುರಗವನು ಬೋಳಯಿಸಿ ವಾಘೆಯ
ತಿರುಹಿ ಚಮ್ಮಟಿಗೆಯಲಿ ತೇಜಿಯ
ಬರಿಯ ಬೆದರಿಸಿ ಕೃಷ್ಣ ಪಾರ್ಥನ ರಥವ ಲುಳಿವಡೆದ ॥2॥
೦೦೩ ಚಟುಳ ಹಯಖುರ ...{Loading}...
ಚಟುಳ ಹಯಖುರ ಖಂಡಿತೋರ್ವೀ
ನಿಟಿಲ ನಿರ್ಗತ ಬಹಳ ಧೂಳೀ
ಪಟಲ ಧೂಸರ ಸಕಲ ಜಗದಸುರಾರಿ ನಲವಿನಲಿ
ಪಟುಗತಿಯ ಗರುವಾಯಿಯಲಿ ಸಂ
ಘಟಿಸಿ ಹಯವನು ಸುಳಿಸಿದನು ಚೌ
ಪಟದೊಳೊಯ್ಯಾರಿಸುತ ಬೋಳಯಿಸಿದನು ಕಂಧರವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು, ಕುದುರೆಗಳ ಕುತ್ತಿಗೆಯನ್ನು ನೇವರಿಸಿ, ಅವುಗಳ ನಡಿಗೆಯ ವೇಗವನ್ನು ಚುರುಕುಗೊಳಿಸಿದನು. ಕುದುರೆಗಳ ಗೊರಸಿನ ವೇಗದಿಂದ ಮೇಲೆದ್ದ ಧೂಳು ಸಕಲ ಜಗದಲ್ಲಿಯೂ ವ್ಯಾಪಿಸಿರಲು, ನಾಲ್ಕು ದಿಕ್ಕುಗಳಲ್ಲಿ ಕುದುರೆಗಳನ್ನು ಬೆಡಗಿನಿಂದ ಮುನ್ನಡೆಸಿದನು.
ಪದಾರ್ಥ (ಕ.ಗ.ಪ)
ಚಟುಲ-ಚುರುಕು, ಖಂಡಿತ-ಹೊಡೆತದಿಂದ, ನಿರ್ಗತ-ಹೊರಬಿದ್ದ, ಧೂಳೀಪಟಲಧೂಸರ-ಮೇಲೆದ್ದು ಹೊರಬಿದ್ದ ಧೂಳು, ಪಟುಗತಿ-ತೀವ್ರಗತಿ, ಚುರುಕುಗತಿ, ಸಂಘಟಿಸಿ-ನಿಯೋಜಿಸಿ, ಚೌಪಟದೊಳು-ನಾಲ್ಕು ದಿಕ್ಕಿನಲ್ಲಿ, ಸುಳಿಸಿದನು-ಮುನ್ನಡೆಸಿದನು, ಬೋಳಯಿಸಿದನು-ಮೈಸವರಿದನು.
ಮೂಲ ...{Loading}...
ಚಟುಳ ಹಯಖುರ ಖಂಡಿತೋರ್ವೀ
ನಿಟಿಲ ನಿರ್ಗತ ಬಹಳ ಧೂಳೀ
ಪಟಲ ಧೂಸರ ಸಕಲ ಜಗದಸುರಾರಿ ನಲವಿನಲಿ
ಪಟುಗತಿಯ ಗರುವಾಯಿಯಲಿ ಸಂ
ಘಟಿಸಿ ಹಯವನು ಸುಳಿಸಿದನು ಚೌ
ಪಟದೊಳೊಯ್ಯಾರಿಸುತ ಬೋಳಯಿಸಿದನು ಕಂಧರವ ॥3॥
೦೦೪ ಗತಿಗೆ ಕುಣಿದವು ...{Loading}...
ಗತಿಗೆ ಕುಣಿದವು ನಾಸಿಕದ ಹೂಂ
ಕೃತಿಯ ಫೇನೋನ್ನತಿಯ ಬಳಿಯವ
ಗತಿಯ ಕಬ್ಬಿಯ ಕೊಂಡಿಗಳ ಘಣಘಣಿತ ನಿಸ್ವನದ
ವಿರತ ಸೃಕ್ವದ ಲೋಳಿಗಳ ಸಂ
ಸೃತ ಜಠರಜ ಸ್ವೇದಜಲ ಲಾ
ಲಿತ ಹಯಾವಳಿ ಕಳನ ಗೆಲಿದವು ಹರಿಯ ನೇಮದಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತನ್ನು ನೇವರಿಸಿದಾಗ ಉತ್ಸಾಹವುಂಟಾಗಿ ಕುದುರೆಗಳು ಕುಣಿಯುತ್ತಾ ನಡೆದವು. ಮೂಗಿನಿಂದ ಹೂಂಕಾರ ಹೊರಡುತ್ತಿರಲು ಬಾಯ ಬಳಿಯ ನೊರೆ ಅಧಿಕವಾಗಿ ಸುರಿಯುತ್ತಿರಲು, ಕಡಿವಾಣದ ಕೊಂಡಿಗಳು ಘಣಘಣ ಧ್ವನಿ ಮಾಡುತ್ತಿರಲು ಕಟವಾಯಿಯಿಂದ ಅಧಿಕ ಲೋಳೆ ಹೊಟ್ಟೆಯ ಮೇಲಿನಿಂದ ಬೆವರು ಇಳಿಯುತ್ತಿರಲು, ಕುದುರೆಗಳು ಶ್ರೀಕೃಷ್ಣನ ಅಪ್ಪಣೆಯಂತೆ ರಣರಂಗದಲ್ಲಿ ಗೆಲುವು ಸಾಧಿಸಿದವು.
ಪದಾರ್ಥ (ಕ.ಗ.ಪ)
ನಾಸಿಕ-ಮೂಗು, ಫೇನೋನ್ನತಿ- ಅಧಿಕವಾದ ನೊರೆ , ಕಬ್ಬಿ-ಕಡಿವಾಣ, ಸೃಕ್ವ-ಕಟವಾಯಿ, ಜಠgಜ-ಹೊಟ್ಟೆ,? ಸ್ವೇದಜಲ-ಬೆವರು, ಹಯಾವಳಿ-ಕುದುರೆಗಳು, ನೇಮ-ಅಪ್ಪಣೆ, ಕಳನ ಗೆಲಿದವು-ರಣರಂಗದಲ್ಲಿ ಮೆರೆದವು.
ಮೂಲ ...{Loading}...
ಗತಿಗೆ ಕುಣಿದವು ನಾಸಿಕದ ಹೂಂ
ಕೃತಿಯ ಫೇನೋನ್ನತಿಯ ಬಳಿಯವ
ಗತಿಯ ಕಬ್ಬಿಯ ಕೊಂಡಿಗಳ ಘಣಘಣಿತ ನಿಸ್ವನದ
ವಿರತ ಸೃಕ್ವದ ಲೋಳಿಗಳ ಸಂ
ಸೃತ ಜಠರಜ ಸ್ವೇದಜಲ ಲಾ
ಲಿತ ಹಯಾವಳಿ ಕಳನ ಗೆಲಿದವು ಹರಿಯ ನೇಮದಲಿ ॥4॥
೦೦೫ ನಿಲಿಸಿದನು ಫಲುಗುಣನ ...{Loading}...
ನಿಲಿಸಿದನು ಫಲುಗುಣನ ರಥವನು
ತಳಪಟದೊಳೇನೈ ಮಹಾರಥ
ರಳವಿಗೊಡ್ಡಿದೆ ನಿನ್ನೊಳುಂಟೇ ಕೈಮನದ ಕಡುಹು
ಲುಳಿಯ ಬಿಲುವಿದ್ಯಾಚಮತ್ಕೃತಿ
ಯಳವು ಗರುಡಿಯೊಳಲ್ಲದೀ ರಿಪು
ಬಲಕೆ ತೋರಿಸಬಹುದೆ ಹೇಳೆಂದರ್ಜುನನ ಜರೆದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಅರ್ಜುನನ ರಥವನ್ನು ತಂದು ಉಭಯಸೇನೆಗಳ ನಡುವೆ ರಣರಂಗದ ಬಯಲಿನಲ್ಲಿ ನಿಲ್ಲಿಸಿದನು. “ಏನಯ್ಯಾ ಅರ್ಜುನ ಮಹಾರಥರಾದ ವೀರರು ತಮ್ಮ ಸಾಮಥ್ರ್ಯವನ್ನು ಸವಾಲಾಗಿ ನಿನಗೆ ಒಡ್ಡಿದ್ದಾರೆ. ಅದನ್ನು ಎದುರಿಸುವ, ಪರಾಕ್ರಮ ತೋರಿಸುವ ಸಾಮಥ್ರ್ಯ ನಿನ್ನಲ್ಲಿ ಇದೆಯೇ ? ಗರುಡಿ ಮನೆಯಲ್ಲಿ ಬಲುಕೈ ಚಳಕದ ಬಿಲ್ವಿದ್ಯೆಯ ಚಮತ್ಕಾರ ಪ್ರದರ್ಶಿಸುವ ಸಾಮಥ್ರ್ಯವನ್ನು ಇಲ್ಲಿ ಈ ಶತ್ರು ಸೇನೆಯ ಎದುರು ಪ್ರದರ್ಶಿಸಲು ಸಾಧ್ಯವೆ ? " ಎಂದು ಅರ್ಜುನನನ್ನು ಛೇಡಿಸಿದನು.
ಪದಾರ್ಥ (ಕ.ಗ.ಪ)
ತಳಪಟ-ರಣರಂಗದ ಬಯಲು, ಕೈಮನದ ಕಡುಹು-ದೈಹಿಕ ಮತ್ತು ಮಾನಸಿಕ ಸಾಮಥ್ರ್ಯ,
ಟಿಪ್ಪನೀ (ಕ.ಗ.ಪ)
ಸೇನೆಯೋರುಭಯೋರ್ಮಧ್ಯೇ ಸ್ಥಾಪಯಮೇ„ಚ್ಯುತ (ಗೀತೆ 1-21)
ಗೀತೆಯಲ್ಲಿ (ನಮ್ಮ ಮತ್ತು ಕೌರವರ ದಂಡುಗಳ ನಡುವೆ ನನ್ನ ರಥವನ್ನು ನಿಲ್ಲಿಸು ಕೃಷ್ಣ) ನಿಂದು ಅರ್ಜುನನು ಹೇಳುವುದರಿಂದ ರಣರಂಗದ ಮಧ್ಯದ ಬಯಲಿನಲ್ಲಿ ರಥವನ್ನು ಕೃಷ್ಣ ನಿಲ್ಲಿಸಿದ್ದಾನೆ. ಆದ್ದರಿಂದ ತಳಪಟ ಎಂದರೆ ರಣರಂಗದ ಮಧ್ಯದ ಬಯಲು ಎನ್ನಬಹುದು.
ಮೂಲ ...{Loading}...
ನಿಲಿಸಿದನು ಫಲುಗುಣನ ರಥವನು
ತಳಪಟದೊಳೇನೈ ಮಹಾರಥ
ರಳವಿಗೊಡ್ಡಿದೆ ನಿನ್ನೊಳುಂಟೇ ಕೈಮನದ ಕಡುಹು
ಲುಳಿಯ ಬಿಲುವಿದ್ಯಾಚಮತ್ಕೃತಿ
ಯಳವು ಗರುಡಿಯೊಳಲ್ಲದೀ ರಿಪು
ಬಲಕೆ ತೋರಿಸಬಹುದೆ ಹೇಳೆಂದರ್ಜುನನ ಜರೆದ ॥5॥
೦೦೬ ಸಹಸವೇನದು ಜೀಯ ...{Loading}...
ಸಹಸವೇನದು ಜೀಯ ನೆರೆದಿ
ರ್ದಹಿತಬಲವೆನಗಾವ ಘನ ಬಿ
ನ್ನಹವ ಕೇಳೈ ಕೃಷ್ಣ ಕೌರವರಾಯರೊಡ್ಡಿನಲಿ
ಬಹಳ ಬಲರಿವರಾರು ಸೇನಾನಿ
ವಹದಲಿ ನಾಯಕರ ವಿವರಿಸ
ಬಹರೆ ಬೆಸಸೆನೆ ಕೃಷ್ಣ ನುಡಿದನು ನಗೆಯ ಮೊಳೆ ಮಿನುಗೆ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದೇನು ಮಹಾ ಸಾಹಸವೇ ? ಇಲ್ಲಿ ಸಂದಣಿಸಿರುವ ಶತ್ರು ಸೇನೆ ನನಗೆ ಯಾವ ಲೆಕ್ಕ ? ಏನು ಮಹಾದೊಡ್ಡದು ? ಏನು ಕೃಷ್ಣನೇ ನನ್ನ ನಿವೇದನೆಯನ್ನು ಸ್ವಲ್ಪ ಆಲಿಸು. ಕೌರವರ ಸೇನೆಯಲ್ಲಿ ಬಹಳ ಬಲಶಾಲಿಗಳಾಗಿರುವವರು ಯಾರಿದ್ದಾರೆ ? ಸೇನಾ ಸಮೂಹದಲ್ಲಿ ಸಮರ್ಥ ನಾಯಕರನ್ನು ಹೆಸರಿಸಬಲ್ಲೆಯಾದರೆ ತಿಳಿಸು ಎಂದು ಕೇಳಿದಾಗ, ಕೃಷ್ಣನ ಮುಖದಲ್ಲಿ ನಗೆಯ ಕುಡಿ ಮಿಂಚಲು, ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಅಹಿತಬಲ-ಶತ್ರುಸೇನೆ, ಒಡ್ಡು-ಸೇನೆ, ನಿವಹ-ಸಮೂಹ,
ಮೂಲ ...{Loading}...
ಸಹಸವೇನದು ಜೀಯ ನೆರೆದಿ
ರ್ದಹಿತಬಲವೆನಗಾವ ಘನ ಬಿ
ನ್ನಹವ ಕೇಳೈ ಕೃಷ್ಣ ಕೌರವರಾಯರೊಡ್ಡಿನಲಿ
ಬಹಳ ಬಲರಿವರಾರು ಸೇನಾನಿ
ವಹದಲಿ ನಾಯಕರ ವಿವರಿಸ
ಬಹರೆ ಬೆಸಸೆನೆ ಕೃಷ್ಣ ನುಡಿದನು ನಗೆಯ ಮೊಳೆ ಮಿನುಗೆ ॥6॥
೦೦೭ ಆದಡರ್ಜುನ ನೋಡು ...{Loading}...
ಆದಡರ್ಜುನ ನೋಡು ಸೈನ್ಯ ಮ
ಹೋದಧಿಯ ಮಧ್ಯದಲಿ ಮೆರೆವವ
ನಾ ದುರಂತ ಪರಾಕ್ರಮನು ಗಂಗಾಕುಮಾರಕನು
ಕಾದಲರಿದಪನಖಿಲಬಲ ವಿಭು
ವಾದನಿವನತಿಬಲನು ಕಾಲನ
ಸಾಧಿಸಿದ ಛಲದಂಕಮಲ್ಲನು ಭೀಷ್ಮ ನೋಡೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಾಗಿದ್ದರೆ ಅರ್ಜುನ ಕೌರವ ಸೇನೆಯತ್ತ ನೋಡು, ಸೇನಾ ಸಾಗರದ ನಡುವೆ ಶತ್ರುಗಳನ್ನು ಆಘಾತಗೊಳಿಸುವ ಸಾಹಸಿ ಆದ ಗಂಗಾಪುತ್ರನು ವಿರಾಜಿಸುತ್ತಿರುವವನು. ಇವನು ಯುದ್ಧ ಪರಿಣತನಾದವನು, ಸಮಸ್ತ ಸೇನೆಗೆ ಒಡೆಯನಾದವನು, ಮಹಾಪರಾಕ್ರಮಶಾಲಿಯಾದವನು, ಇಚ್ಛಾಮರಣಿಯಾದ ಛಲದಂಕ ‘ಮಲ್ಲ’ನು ಈ ಭೀಷ್ಮನು ನೋಡು” ಎಂದನು.
ಪದಾರ್ಥ (ಕ.ಗ.ಪ)
ಮಹೋದಧಿ-ಮಹಾಸಾಗರ, ದುರಂತ-ಅಪಘಾತ, ಆಘಾತ, ಕಾದಲು ಅರಿದವನು-ಹೋರಾಡಲು ತಿಳಿದವನು (ಪರಿಣಿತ) ವಿಭು-ಒಡೆಯ, ಅತಿಬಲ-ಮಹಾವೀರ
ಮೂಲ ...{Loading}...
ಆದಡರ್ಜುನ ನೋಡು ಸೈನ್ಯ ಮ
ಹೋದಧಿಯ ಮಧ್ಯದಲಿ ಮೆರೆವವ
ನಾ ದುರಂತ ಪರಾಕ್ರಮನು ಗಂಗಾಕುಮಾರಕನು
ಕಾದಲರಿದಪನಖಿಲಬಲ ವಿಭು
ವಾದನಿವನತಿಬಲನು ಕಾಲನ
ಸಾಧಿಸಿದ ಛಲದಂಕಮಲ್ಲನು ಭೀಷ್ಮ ನೋಡೆಂದ ॥7॥
೦೦೮ ಮಿಸುಪ ತುದಿವೆರಳಮ್ಬುಗೊಲೆಗೇ ...{Loading}...
ಮಿಸುಪ ತುದಿವೆರಳಂಬುಗೊಲೆಗೇ
ರಿಸಿದ ಬಿಲು ಮಣಿಮಯದ ಗದ್ದುಗೆ
ರಸುಮೆಗಳ ಜೋಡಿನಲಿ ಹೊಂದೇರಿನ ವಿಡಾಯಿಯಲಿ
ಮಸೆಗಣೆಯ ಬತ್ತಳಿಕೆ ತಿಗುರೇ
ರಿಸಿದ ಮೈ ಕತ್ತುರಿಯ ತಿಲಕದ
ನೊಸಲಿನಾತನ ನೋಡು ಗರುಡಿಯ ಜಾಣ ದ್ರೋಣನನು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲಿಗೆ ಹೂಡಿದ ಬಾಣವನ್ನು ತುದಿಬೆರಳಿನಲ್ಲಿ ಹಿಡಿದುಕೊಂಡಿರುವ, ರತ್ನಮಯ ಆಸನದಲ್ಲಿ ಕುಳಿತಿರುವ, ಕಾಂತಿಯುಕ್ತವಾದ ಕವಚಗಳನ್ನು ಧರಿಸಿರುವ, ಹರಿತವಾದ ಬಾಣಗಳ ಚೀಲವನ್ನು ಹೊಂದಿರುವ, ಸುಗಂಧ ದ್ರವ್ಯ ಪೂಸಿದ ಶರೀರವುಳ್ಳವನಾಗಿ ಕಸ್ತೂರಿ ತಿಲಕವನ್ನು ಹಣೆಯಲ್ಲಿ ಧರಿಸಿರುವ, ಚಿನ್ನದ ರಥದಲ್ಲಿ ಮೆರೆಯುತ್ತಲಿರುವ ಮಲ್ಲ ವಿದ್ಯಾ ಪರಿಣತನಾದ ದ್ರೋಣಾಚಾರ್ಯರನ್ನು ನೋಡು.
ಪದಾರ್ಥ (ಕ.ಗ.ಪ)
ಗರುಡಿಯ ಜಾಣ-ಮಲ್ಲ ವಿದ್ಯಾ ಪರಿಣತ, ನೊಸಲು-ಹಣೆ, ತಿಗುರು ಏರಿದ-ಸುಗಂಧದ್ರವ್ಯ ಬಳಿದ, ಹೊಂದೇರು-ಚಿನ್ನದ ರಥ, ವಿಡಾಯಿ-ವೈಭವ, ಮೆರೆತ, ರಸುಮೆ-ಕಾಂತಿ, ಜೋಡು-ಕವಚ, ಗದ್ದುಗೆ-ಆಸನ, ಗೊಲೆ-ಕೊಪ್ಪಿಗೆ, ಅಂಬು-ಬಾಣ.
ಮೂಲ ...{Loading}...
ಮಿಸುಪ ತುದಿವೆರಳಂಬುಗೊಲೆಗೇ
ರಿಸಿದ ಬಿಲು ಮಣಿಮಯದ ಗದ್ದುಗೆ
ರಸುಮೆಗಳ ಜೋಡಿನಲಿ ಹೊಂದೇರಿನ ವಿಡಾಯಿಯಲಿ
ಮಸೆಗಣೆಯ ಬತ್ತಳಿಕೆ ತಿಗುರೇ
ರಿಸಿದ ಮೈ ಕತ್ತುರಿಯ ತಿಲಕದ
ನೊಸಲಿನಾತನ ನೋಡು ಗರುಡಿಯ ಜಾಣ ದ್ರೋಣನನು ॥8॥
೦೦೯ ರಾಯನಾತನ ಬಳಿಯಲಾ ...{Loading}...
ರಾಯನಾತನ ಬಳಿಯಲಾ ಕ
ರ್ಣಾಯತಾಸ್ತ್ರರು ಕಾರ್ಮುಕದ ಸ್ವಾ
ಧ್ಯಾಯಸಿದ್ಧರು ಹತ್ತುಸಾವಿರ ಮಕುಟವರ್ಧನರು
ಸಾಯಲಂಜದ ಸಿತಗರದೆ ತ
ನ್ನಾಯತದೊಳಪ್ರತಿಮ ರೌದ್ರದ
ನಾಯಕರ ನೆರವಿಯೊಳು ಶಲ್ಯನೃಪಾಲ ನೋಡೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಲ್ಲಿ ನೋಡು ದುರ್ಯೋಧನನಿದ್ದಾನೆ. ಆತನ ಬಳಿಯಲ್ಲೇ ಬಿಲ್ಲಿಗೆ ಬಾಣವನ್ನು ಹೂಡಿ ಸಿದ್ಧರಾಗಿರುವ ಬಿಲ್ವಿದ್ಯಾ ಪಾರಂಗತರನ್ನು, ಸ್ವಯಂ ಕಲಿಕೆಯಲ್ಲಿ ಪರಿಣತರಾದವರನ್ನು, ಸಾವಿಗೆ ಅಂಜದೆ ಹೋರಾಡಲು ಸಿದ್ಧರಾದ ಹತ್ತು ಸಾವಿರ ಮಂದಿ ಬಲಿಷ್ಠ ರಾಜರುಗಳನ್ನು ತನ್ನ ವಶದಲ್ಲಿಟ್ಟು ಕೊಂಡಿರುವ ಶಲ್ಯರಾಜನು ಆ ರೌದ್ರನಾಯಕರ ನಡುವೆ ಇದ್ದಾನೆ ನೋಡು” ಎಂದನು.
ಪದಾರ್ಥ (ಕ.ಗ.ಪ)
ಆಕರ್ಣಾಯತ-ಕಿವಿವರೆಗೆ ಎಳೆದು ಹಿಡಿದಿರುವ, ಸ್ವಾಧ್ಯಾಯ-ಸ್ವತಂತ್ರ ಕಲಿಕೆ, ಸ್ವಯಂಕಲಿಕೆ, ಸಿತಗರು-ಬಲಿಷ್ಠರು, ಆಯತ-ವಶ, ನೆರವಿ-ಸಮೂಹ
ಮೂಲ ...{Loading}...
ರಾಯನಾತನ ಬಳಿಯಲಾ ಕ
ರ್ಣಾಯತಾಸ್ತ್ರರು ಕಾರ್ಮುಕದ ಸ್ವಾ
ಧ್ಯಾಯಸಿದ್ಧರು ಹತ್ತುಸಾವಿರ ಮಕುಟವರ್ಧನರು
ಸಾಯಲಂಜದ ಸಿತಗರದೆ ತ
ನ್ನಾಯತದೊಳಪ್ರತಿಮ ರೌದ್ರದ
ನಾಯಕರ ನೆರವಿಯೊಳು ಶಲ್ಯನೃಪಾಲ ನೋಡೆಂದ ॥9॥
೦೧೦ ಗಣನೆಗೈದದ ಹೆಗಲ ...{Loading}...
ಗಣನೆಗೈದದ ಹೆಗಲ ಹಿರಿಯು
ಬ್ಬಣದ ಕನಕದ ಝಗೆಯ ತಲೆಗ
ಡ್ಡಣೆಯ ನೇಣಿನ ಹೊಗರ ಮೋರೆಯ ಕೆಂಪಿನಾಲಿಗಳ
ಮಣಿಮಯದ ತೇರುಗಳಲಾ ಸಂ
ದಣಿಯವರು ಮಾದ್ರೇಶನದು ಫಲು
ಗುಣ ನಿರೀಕ್ಷಿಪುದಿತ್ತಲೊಂದಕ್ಷೋಹಿಣೀ ಬಲವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾರನ್ನೂ ಲೆಕ್ಕಿಸದ, ಹೆಗಲ ಮೇಲೆ ದೊಡ್ಡ ಆಯುಧಗಳನ್ನು ಹೊತ್ತಿರುವ, ಚಿನ್ನದ ಕಾಂತಿ ಹೊರಹೊಮ್ಮಿಸುತ್ತಿರುವ ಶಿರಸ್ತ್ರಾಣಗಳನ್ನು ಹೊಂದಿ, ಕಾಂತಿಯುಕ್ತ ಸರಪಳಿಗಳಿಂದ ಕೂಡಿ, ಕೆಂಡ ಕಾರುತ್ತಿರುವ ಕಣ್ಣುಗಳನ್ನು ಹೊಂದಿರುವ (ಉರಿ) ಮುಖವುಳ್ಳವರಾಗಿ ಗುಂಪು ಗುಂಪಾದ ರಥಗಳಲ್ಲಿ ಗುಂಪು ಕೂಡಿರುವ ಅವರೆಲ್ಲರೂ ಮಾದ್ರೇಶನ ಕಡೆಯವರು, ಇತ್ತ ಸೇರಿರುವ ಒಂದು ಅಕ್ಷೋಹಿಣಿ, ಸೇನೆಯನ್ನು ಗಮನಿಸು, ಅರ್ಜುನಾ”.
ಪದಾರ್ಥ (ಕ.ಗ.ಪ)
ಕೆಂಪಿನಾಲಿಗಳು-ಕೆಂಪಾದ ಕಣ್ಣುಗುಡ್ಡೆಗಳು, ನೇಣು-ಸರಪಳಿ
ಮೂಲ ...{Loading}...
ಗಣನೆಗೈದದ ಹೆಗಲ ಹಿರಿಯು
ಬ್ಬಣದ ಕನಕದ ಝಗೆಯ ತಲೆಗ
ಡ್ಡಣೆಯ ನೇಣಿನ ಹೊಗರ ಮೋರೆಯ ಕೆಂಪಿನಾಲಿಗಳ
ಮಣಿಮಯದ ತೇರುಗಳಲಾ ಸಂ
ದಣಿಯವರು ಮಾದ್ರೇಶನದು ಫಲು
ಗುಣ ನಿರೀಕ್ಷಿಪುದಿತ್ತಲೊಂದಕ್ಷೋಹಿಣೀ ಬಲವ ॥10॥
೦೧೧ ಕಳಶ ಸಿನ್ಧದ ...{Loading}...
ಕಳಶ ಸಿಂಧದ ಥಟ್ಟು ಸಮ್ಮುಖ
ದಳವಿಯಲಿ ವಿಕ್ರಮ ದವಾಗ್ನಿಯ
ಝಳದೊಳುರೆ ಕಾಹೇರಿದಾಲಿಯ ಬಿಗಿದ ಹುಬ್ಬುಗಳ
ಹಿಳುಕನವುಕಿದ ತುದಿವೆರಳ ನಡು
ಗಳದ ಕಪ್ಪಿನ ನೊಸಲ ನಯನದ
ಬಲುಭುಜನ ನೋಡಾತನಶ್ವತ್ಥಾಮ ನಿಸ್ಸೀಮ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನ ಸೇನಾ ಸಮೂಹದ ಎದುರಿಗೆ ಸಾಹಸದ ಕಾಳ್ಗಿಚ್ಚಿನ ಉರಿಯಲ್ಲಿ ಕಾವೇರಿ ಕೆಂಪಾದ ಕಣ್ಣು ಗುಡ್ಡೆಗಳಿಂದಲೂ, ಗಂಟಿಕ್ಕಿದ ಹುಬ್ಬುಗಳಿಂದಲೂ, ಬಾಣದ ಹಿಳುಕುಗಳನ್ನು ಅವುಕಿ ಹಿಡಿದ ತುದಿ ಬೆರಳುಗಳಿಂದಲೂ, ನಡುಕುತ್ತಿಗೆಯಲ್ಲಿ ಒಪ್ಪುವ ಕಪ್ಪಿನಿಂದಲೂ, ಹಣೆಯಲ್ಲಿ ಕೆಂಪಾದ ಕಣ್ಣಿನಿಂದಲೂ ಬಲಿಷ್ಠವಾದ ಭುಜಗಳಿಂದಲೂ ಮೆರೆಯುತ್ತಿರುವವನೇ ಎದುರಿಲ್ಲದ ಅಶ್ವತ್ಥಾಮ. ಅವನನ್ನು ವೀಕ್ಷಿಸು.
ಪದಾರ್ಥ (ಕ.ಗ.ಪ)
ಸಮ್ಮುಖದ ಅಳವಿ-ಎದುರಿಗೆ ಸಮೀಪದಲ್ಲಿರುವ ನಿಂತಿರುವ, ಝಳ-ಉರಿ, ದವಾಗ್ನಿ-ಕಾಳ್ಗಿಚ್ಚು, ಕಾಹೇರಿದ-ಕಾವೇರಿದ, ಆಲಿ-ಕಣ್ಣುಗುಡ್ಡೆ, ಬಿಗಿದ-ಗಂಟಿಕ್ಕಿದ, ನೊಸಲ-ಹಣೆಯ,
ಮೂಲ ...{Loading}...
ಕಳಶ ಸಿಂಧದ ಥಟ್ಟು ಸಮ್ಮುಖ
ದಳವಿಯಲಿ ವಿಕ್ರಮ ದವಾಗ್ನಿಯ
ಝಳದೊಳುರೆ ಕಾಹೇರಿದಾಲಿಯ ಬಿಗಿದ ಹುಬ್ಬುಗಳ
ಹಿಳುಕನವುಕಿದ ತುದಿವೆರಳ ನಡು
ಗಳದ ಕಪ್ಪಿನ ನೊಸಲ ನಯನದ
ಬಲುಭುಜನ ನೋಡಾತನಶ್ವತ್ಥಾಮ ನಿಸ್ಸೀಮ ॥11॥
೦೧೨ ಈತನೊಡ್ಡಿನ ಸಾರೆ ...{Loading}...
ಈತನೊಡ್ಡಿನ ಸಾರೆ ಸಂಗರ
ಕಾತು ಕೊಂಡದೆ ಕೃಪನ ದಳಸಂ
ಘಾತವೊಂದಕ್ಷೋಣಿ ಸುಭಟರ ಸಾಲ ಮಧ್ಯದಲಿ
ಆತ ಗೌತಮನವನ ಬಳಿಯಲ
ಭೀತ ಬಾಹ್ಲಿಕ ವಿಂಧ್ಯರದೆ ವಿ
ಖ್ಯಾತರೊಂದಕ್ಷೋಣಿ ಕೌರವ ಸೈನ್ಯಶರಧಿಯಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನ ಸೈನ್ಯದ ಬಳಿಯಲ್ಲೇ ಯುದ್ಧಕ್ಕಾಗಿ ಕೃಪನ ಒಂದಕ್ಷೋಣಿ ಸೇನಾ ಸಮೂಹವು ಇದೆ. ಆ ಸುಭಟರ ಸಾಲಿನ ಮಧ್ಯದಲ್ಲಿ ಇರುವಾತನೇ ಗೌತಮನು. ಆತನ ಬಳಿಯಲ್ಲಿ ನಿರ್ಭೀತರಾದ ಬಾಹ್ಲಿಕರು, ವಿಂಧ್ಯರು ಇದ್ದಾರೆ. ಅವರ ಪ್ರಖ್ಯಾತವಾದ ಒಂದು ಅಕ್ಷೋಣಿ ಸೈನ್ಯ, ಕೌರವ ಸೇನಾ ಸಮೂಹದ ನಡುವೆ ಇದೆ.
ಪದಾರ್ಥ (ಕ.ಗ.ಪ)
ಸಂಘಾತ-ಸಮೂಹ, ಆತುಕೊಂಡಿದೆ-ಜತೆಗೇ ಇದೆ, ಅಭೀತ-ನಿರ್ಭೀತ, ಹೆದರಿಕೆಯಿಲ್ಲದ
ಟಿಪ್ಪನೀ (ಕ.ಗ.ಪ)
ಗೌತಮ, (ಅನುಬಂಧ ನೋಡಿ)
ಬಾಹ್ಲಿಕ-ಬಾಹ್ಲಿಕ ದೇಶದವರು,
ವಿಂಧ್ಯ-ವಿಂಧ್ಯ ದೇಶದವರು
ಮೂಲ ...{Loading}...
ಈತನೊಡ್ಡಿನ ಸಾರೆ ಸಂಗರ
ಕಾತು ಕೊಂಡದೆ ಕೃಪನ ದಳಸಂ
ಘಾತವೊಂದಕ್ಷೋಣಿ ಸುಭಟರ ಸಾಲ ಮಧ್ಯದಲಿ
ಆತ ಗೌತಮನವನ ಬಳಿಯಲ
ಭೀತ ಬಾಹ್ಲಿಕ ವಿಂಧ್ಯರದೆ ವಿ
ಖ್ಯಾತರೊಂದಕ್ಷೋಣಿ ಕೌರವ ಸೈನ್ಯಶರಧಿಯಲಿ ॥12॥
೦೧೩ ಈತ ಮಾಳವನೀತ ...{Loading}...
ಈತ ಮಾಳವನೀತ ಕೊಂಕಣ
ನೀತ ಗುಜ್ಜರನೀತ ಬರ್ಬರ
ನೀತ ಕೋಸಲನೀತ ಖೇಟಕನೀತ ಹಮ್ಮೀರ
ಈತ ಕೇರಳನೀತ ಸಿಂಹಳ
ನೀತ ಬೋಟಕನೀತ ಚೀನಕ
ನೀತ ಮಾಗಧನೀತ ದ್ರಾವಿಡನೀತ ಗೌಳನೃಪ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನು ಮಾಳವದೇಶದ ದೊರೆ, ಇವನು ಕೊಂಕಣ ದೇಶದ ದೊರೆ, ಇವನು ಗುಜರಾತಿ ದೇಶದ ದೊರೆ, ಇವನು ಬರ್ಬರ ದೇಶದ ದೊರೆ, ಇವನು ಕೋಸಲ ದೇಶದ ದೊರೆ, ಇವನು ಖೇಟಕ ದೇಶದ ದೊರೆ, ಇವನು ಹಮ್ಮೀರ ದೇಶದ ದೊರೆ, ಇವನು ಕೇರಳ ದೇಶದ ದೊರೆ, ಇವನು ಸಿಂಹಳ ದೇಶದ ದೊರೆ, ಇವನು ಬೋಟಕ ದೇಶದ ದೊರೆ, ಇವನು ಚೀನಾದೇಶದ ದೊರೆ, ಇವನು ಮಾಗಧ ದೇಶದ ದೊರೆ, ಇವನು ದ್ರಾವಿಡ (ದಕ್ಷಿಣ ದೇಶದ) ದೇಶದ ದೊರೆ, ಇವನು ಗೌಳ (ಬಂಗಾಳದ) ದೊರೆ.
ಮೂಲ ...{Loading}...
ಈತ ಮಾಳವನೀತ ಕೊಂಕಣ
ನೀತ ಗುಜ್ಜರನೀತ ಬರ್ಬರ
ನೀತ ಕೋಸಲನೀತ ಖೇಟಕನೀತ ಹಮ್ಮೀರ
ಈತ ಕೇರಳನೀತ ಸಿಂಹಳ
ನೀತ ಬೋಟಕನೀತ ಚೀನಕ
ನೀತ ಮಾಗಧನೀತ ದ್ರಾವಿಡನೀತ ಗೌಳನೃಪ ॥13॥
೦೧೪ ಆಳುಗೆಲಸಕೆ ಕೆಲಬರರಸನ ...{Loading}...
ಆಳುಗೆಲಸಕೆ ಕೆಲಬರರಸನ
ಖೇಳಮೇಳಕೆ ಕೆಲರು ಕೆಲಬರು
ಬಾಲೆಯರ ಕೊಳುಕೊಡೆಯ ಬಳಗದ ಬಂಧುಕೃತ್ಯದಲಿ
ತೋಳ ಬಲುಹೊರೆಗಲಸಿ ಕೆಲಬರು
ಮೇಲೆ ನಮ್ಮಯ ಹಗೆಗೆ ಕೆಲಬರು
ಕಾಳಗದ ಕಾರ್ಮುಕ ನೃಪಾಲರ ನೆರವಿಯದೆಯೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರು ಆಳು ಕೆಲಸಕ್ಕೆ ಬಂದಿದ್ದಾರೆ. ಅರಸನ ಸ್ನೇಹ ಬಾಂಧವ್ಯ ನಿಮಿತ್ತ ಕೆಲವರು ಬಂದಿದ್ದಾರೆ. ಕೆಲವರು ಹೆಣ್ಣು ಮಕ್ಕಳನ್ನು ಕೊಟ್ಟು ಅಥವಾ ತೆಗೆದುಕೊಂಡು ಬಂಧುತ್ವ ಬೆಳೆಸಿದವರು ಬಂದಿದ್ದಾರೆ. ಕೆಲವರು ತಮ್ಮ ತೋಳ್ಬಲ ಬೆಳಸಿಕೊಂಡು ಸುಮ್ಮನಿರಲು ಬೇಸರವಾಗಿ ಯುದ್ಧ ಮಾಡಲು ಬಂದಿದ್ದಾರೆ. ಅಲ್ಲದೆ ನಮ್ಮ ಮೇಲಿನ ದ್ವೇಷದ ಕಾರಣದಿಂದ ಅವರ ಕಡೆ ಸೇರಿ ಯುದ್ಧ ಮಾಡಲು ಬಂದಿದ್ದಾರೆ. ಒಟ್ಟಿನಲ್ಲಿ ಇಲ್ಲಿ ಬಂದಿರುವ ಇವರೆಲ್ಲ ಬಿಲ್ಗಾರರ ಸೇನೆಯ ರಾಜರ ಪಡೆಗಳು.
ಪದಾರ್ಥ (ಕ.ಗ.ಪ)
ಖೇಳಮೇಳ-ಸ್ನೇಹ ಬಾಂಧವ್ಯ, ಬಂಧುಕೃತ್ಯ-ಬಾಂಧವ್ಯ ಬೆಳಸುವ ಕಾರ್ಯ, ಬಲುಹೊರೆ-ಬಲುಭಾರವಾಗಿ, ಅಲಸಿ-ಆಯಾಸಗೊಂಡು ಹೊರಡು, ಕಾರ್ಮುಕ-ಬಿಲ್ಲು,
ಮೂಲ ...{Loading}...
ಆಳುಗೆಲಸಕೆ ಕೆಲಬರರಸನ
ಖೇಳಮೇಳಕೆ ಕೆಲರು ಕೆಲಬರು
ಬಾಲೆಯರ ಕೊಳುಕೊಡೆಯ ಬಳಗದ ಬಂಧುಕೃತ್ಯದಲಿ
ತೋಳ ಬಲುಹೊರೆಗಲಸಿ ಕೆಲಬರು
ಮೇಲೆ ನಮ್ಮಯ ಹಗೆಗೆ ಕೆಲಬರು
ಕಾಳಗದ ಕಾರ್ಮುಕ ನೃಪಾಲರ ನೆರವಿಯದೆಯೆಂದ ॥14॥
೦೧೫ ತಳಿತ ಪಲ್ಲವ ...{Loading}...
ತಳಿತ ಪಲ್ಲವ ಸತ್ತಿಗೆಯ ಹೊಳ
ಹೊಳೆವ ಮೌಳಿಯ ರತುನ ಲಹರಿಯ
ಚಲಿಸಿ ಚಿಮ್ಮುವ ಚಮರಿ ಸೀಗುರಿಗಳ ವಿಡಾಯಿಯಲಿ
ಹಲಗೆಯಲಿ ತೆತ್ತಿಸಿದ ಹಾವಿನ
ಹಳವಿಗೆಯ ಹೊಂದೇರ ನೃಪಮಂ
ಡಳಿಯ ಮಧ್ಯದೊಳಾತ ದುರ್ಯೋಧನ ಮಹೀಪಾಲ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಡಿರುವ ಬೆಳ್ಗೊಡೆ, ರತ್ನಗಳ ಸಮೂಹದಿಂದ ಪ್ರಕಾಶಿಸುತ್ತಿರುವ ಕಿರೀಟ, ಅತ್ತ ಇತ್ತ ಮೇಲೆ ಕೆಳಗೆ ಚಲಿಸುತ್ತ ಚಿಮ್ಮುತ್ತಿರುವ ಚಾಮರ ಸೀಗುರಿಗಳ ವೈಭವದಿಂದ ಕೂಡಿ, ಮೇಲ್ಭಾಗದ ಫಲಕದಲ್ಲಿ ಹೊಂದಿಸಿರುವ ಹಾವಿನ ಧ್ವಜವನ್ನುಳ್ಳ ಚಿನ್ನದ ರಥದಲ್ಲಿ, ರಾಜ ಪರಿವಾರದ ಮಧ್ಯದಲ್ಲಿ ಇರುವಾತನೇ ದುರ್ಯೋಧನ ಮಹಾರಾಜ.
ಪದಾರ್ಥ (ಕ.ಗ.ಪ)
ಮಹೀಪಾಲ-ದೊರೆ, ನೃಪಮಂಡಳಿ-ರಾಜಸಮೂಹ, ಹಾವಿನ ಹಳವಿಗೆ-ಸರ್ಪಧ್ವಜ, ಹಲಗೆ-ಫಲಕ, ಹೊಂದೇರು-ಚಿನ್ನದ ರಥ, ಚಮರಿ-ಬೀಸುವ ಚಾಮರ, ಸೀಗುರಿ-ಬೀಸುವ ಸೀಗುರಿ, ಮೌಳಿ-ಕಿರೀಟ, ಪಲ್ಲವ-ಚಿಗುರು, ಸತ್ತಿಗೆ-ಕೊಡೆ
ಮೂಲ ...{Loading}...
ತಳಿತ ಪಲ್ಲವ ಸತ್ತಿಗೆಯ ಹೊಳ
ಹೊಳೆವ ಮೌಳಿಯ ರತುನ ಲಹರಿಯ
ಚಲಿಸಿ ಚಿಮ್ಮುವ ಚಮರಿ ಸೀಗುರಿಗಳ ವಿಡಾಯಿಯಲಿ
ಹಲಗೆಯಲಿ ತೆತ್ತಿಸಿದ ಹಾವಿನ
ಹಳವಿಗೆಯ ಹೊಂದೇರ ನೃಪಮಂ
ಡಳಿಯ ಮಧ್ಯದೊಳಾತ ದುರ್ಯೋಧನ ಮಹೀಪಾಲ ॥15॥
೦೧೬ ಅಳಲಿದುರಗನ ನೆರವಿ ...{Loading}...
ಅಳಲಿದುರಗನ ನೆರವಿ ಟೊಪ್ಪಿಗೆ
ಗಳೆದ ಸಾಳ್ವನ ಹಿಂಡು ಹಸಿದ
ವ್ವಳಿಪ ಸಿಂಹದ ಹಂತಿ ಕುಪಿತ ಕೃತಾಂತನೊಡ್ಡವಣೆ
ಕೊಲೆಗೆಲಸಕುಬ್ಬೆದ್ದ ರುದ್ರನ
ಬಲವಿದೆನೆ ಹರಹರ ಮಹಾರಥ
ರಳವಿಗೊಟ್ಟಿದೆ ನೋಡು ದುರ್ಯೋಧನ ಸಹೋದರರ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೋವುಂಡ ಸರ್ಪಗಳ ಸಮೂಹದಂತೆ, ತಲೆಕವಚ ಕಳಚಿದ ಗಿಡುಗನ ಹಿಂಡಿನಂತೆ, ಹಸಿದು ಅಪ್ಪಳಿಸುವ ಸಿಂಹಗಳ ಗುಂಪಿನಂತೆ. ಕ್ರೋಧಗೊಂಡ ಯಮನ ಪರಿವಾರದಂತೆ, ಕೊಲೆಕಾರ್ಯಕ್ಕೆ ಆವೇಶ ತಾಳಿದ ರುದ್ರನ ಸೇನೆಯೋ ಇದು ಎನ್ನುವಂತೆ ಹರಹರಾ ! ಮಹಾರಥರಾದ ದುರ್ಯೋಧನನ ಸಹೋದರರು ಯುದ್ಧಕ್ಕೆ ಸಿದ್ಧರಾಗಿ ನಿಂತಿದ್ದಾರೆ ನೋಡು.
ಪದಾರ್ಥ (ಕ.ಗ.ಪ)
ಅಳಲಿದ-ನೋವುಂಡ, ಟೊಪ್ಪಿಗೆ-ತಲೆಕವಚ, ಸಾಳ್ವ-ಗಿಡುಗ, ಅವ್ವಳಿಪ-ಅಪ್ಪಳಿಸುವ, ಹಂತಿ-ಸಾಲು, ಒಡ್ಡವಣೆ-ಪರಿವಾರ, ಉಬ್ಬೆದ್ದ-ಆವೇಶ ತಾಳಿದ
ಮೂಲ ...{Loading}...
ಅಳಲಿದುರಗನ ನೆರವಿ ಟೊಪ್ಪಿಗೆ
ಗಳೆದ ಸಾಳ್ವನ ಹಿಂಡು ಹಸಿದ
ವ್ವಳಿಪ ಸಿಂಹದ ಹಂತಿ ಕುಪಿತ ಕೃತಾಂತನೊಡ್ಡವಣೆ
ಕೊಲೆಗೆಲಸಕುಬ್ಬೆದ್ದ ರುದ್ರನ
ಬಲವಿದೆನೆ ಹರಹರ ಮಹಾರಥ
ರಳವಿಗೊಟ್ಟಿದೆ ನೋಡು ದುರ್ಯೋಧನ ಸಹೋದರರ ॥16॥
೦೧೭ ಲುಳಿಯ ಮಿಞ್ಚಿನ ...{Loading}...
ಲುಳಿಯ ಮಿಂಚಿನ ಮಂದೆ ಸುಗತಿಯ
ಝಳಕದನಿಲನ ಥಟ್ಟು ಬೀದಿಯ
ಬಳಿಗೆ ಪುರುಷಾಮೃಗದ ಗಾವಳಿಯೆನೆ ವಿಲಾಸದಲಿ
ಹೊಳೆವ ಚಮರಿಯ ಸುತ್ತು ಝಲ್ಲಿಯ
ನೆಲಕುಗಿವ ಜೋಡುಗಳ ತೇಜಿಯ
ದಳವ ನೋಡೈ ಪಾರ್ಥ ಬಳಸಿದೆ ಕಲಿಜಯದ್ರಥನ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲುಚುರುಕಿನಿಂದ ಚಲಿಸುವ ಮಿಂಚಿನ ಪರಿವಾರವೋ, ಸರಾಗದಲ್ಲಿ ಪ್ರವಾಹದಂತೆ ಸಾಗುವ ಗಾಳಿಯ ಸಮೂಹವೋ ಬೀದಿಯಲ್ಲಿ ಸಂಚರಿಸುವ ಪುರುಷಾಮೃಗದ ಗುಂಪೋ ಎನ್ನುವಂತೆ ವಿಲಾಸದಲಿ ಶೋಭಿಸುತ್ತಿರುವ ಚಾಮರಗಳ ದುಂಡು ಗೊಂಚಲುಗಳು, ನೆಲಕ್ಕೆ ಜೋತು ಬೀಳುತ್ತಿರುವ ಅಂಗರಕ್ಷೆಗಳನ್ನು ಒಳಗೊಂಡ ಅಶ್ವದಳದ ಪಡೆಯು ವೀರಜಯದ್ರಥನನ್ನು ಸುತ್ತುವರಿದಿರುವುದನ್ನು ಗಮನಿಸು ಪಾರ್ಥಾ.
ಪದಾರ್ಥ (ಕ.ಗ.ಪ)
ಲುಳಿ-ಬಲು ಚುರುಕಿನಿಂದ, ಝಳಕದ-ಪ್ರವಾಹದಂತೆ ಸಾಗುವ, ಅನಿಲನ ಥಟ್ಟು-ಗಾಳಿಯ ಪರಿವಾರ, ಗಾವಳಿ-ಗುಂಪು, ಝಲ್ಲಿ-ಗೊಂಡೆ, ಜೋಡು-ಅಂಗರಕ್ಷೆ,
ಮೂಲ ...{Loading}...
ಲುಳಿಯ ಮಿಂಚಿನ ಮಂದೆ ಸುಗತಿಯ
ಝಳಕದನಿಲನ ಥಟ್ಟು ಬೀದಿಯ
ಬಳಿಗೆ ಪುರುಷಾಮೃಗದ ಗಾವಳಿಯೆನೆ ವಿಲಾಸದಲಿ
ಹೊಳೆವ ಚಮರಿಯ ಸುತ್ತು ಝಲ್ಲಿಯ
ನೆಲಕುಗಿವ ಜೋಡುಗಳ ತೇಜಿಯ
ದಳವ ನೋಡೈ ಪಾರ್ಥ ಬಳಸಿದೆ ಕಲಿಜಯದ್ರಥನ ॥17॥
೦೧೮ ತೋರದಲಿ ಕುಲಗಿರಿಯ ...{Loading}...
ತೋರದಲಿ ಕುಲಗಿರಿಯ ಸತ್ವದ
ಸಾರದಲಿ ವಜ್ರವನು ದನಿಯಲಿ
ಕಾರ ಬರಸಿಡಿಲಂದವಿದನುಗಿದೊಂದುಮಾಡಿದನು
ವಾರಿಜೋದ್ಭವನೆನಲು ಝಾಡಿಯ
ಭಾರಿ ರೆಂಚೆಯ ಕೈಯ ಖಡ್ಗದ
ವಾರಣದ ಮಧ್ಯದಲಿಹನು ಭಗದತ್ತ ನೋಡೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಾರದಲ್ಲಿ ಮಂದರ ಪರ್ವತವನ್ನು, ಶಕ್ತಿ ಘನೀಭೂತವಾಗುವಂತೆ ವಜ್ರಾಯುಧವನ್ನು, ಶಬ್ದದಲ್ಲಿ ಮಳೆಗಾಲದ ಬರಸಿಡಿಲ ಶಕ್ತಿಯ ವಿನ್ಯಾಸವನ್ನು ತೆಗೆದು ಒಂದುಗೂಡಿಸಿ ಬ್ರಹ್ಮ ಇದನ್ನು ಸೃಷ್ಟಿ ಮಾಡಿದನೋ ಎಂಬಂತೆ ದಟ್ಟವಾದ ಭಾರಿ ರಕ್ಷಾ ಕವಚಗಳನ್ನು ಹೊಂದಿರುವ ಆನೆಯ ಸೇನೆಯ ಮಧ್ಯದಲ್ಲಿ ಕೈಯಲ್ಲಿ ಖಡ್ಗ ಹಿಡಿದಿರುವ ಭಗದತ್ತನು ಇದ್ದಾನೆ ವೀಕ್ಷಿಸು ಎಂದನು.
ಪದಾರ್ಥ (ಕ.ಗ.ಪ)
ವಾರಿಜೋದ್ಭವ-ಬ್ರಹ್ಮ, ತೋರ-ದಪ್ಪ, ಕುಲಗಿರಿ-ಮಂದರಪರ್ವತ, ಸತ್ವದಸಾರ-ಶಕ್ತಿ ಘನೀಭೂತವಾದ, ವಜ್ರ-ವಜ್ರಾಯುಧ, ಕಾರ ಬರಸಿಡಿಲ-ಮಳೆಗಾಲದಲ್ಲಿ ಬಡಿವ ಘೋರ ಸಿಡಿಲು, ಉಗಿದು-ತೆಗೆದು ಒಂದುಗೂಡಿಸಿ, ಝಾಡಿ-ದಟ್ಟವಾದ, ರೆಂಚೆ-ಪಕ್ಕರೆಕ್ಕೆ (ಮೈಕವಚ)
ಟಿಪ್ಪನೀ (ಕ.ಗ.ಪ)
ಭಗದತ್ತ :
ಭಗದತ್ತ ಒಬ್ಬ ಕಿರಾತದೊರೆ. ತುಂಬ ವಯಸ್ಸಾಗಿದ್ದವನು. ಪಾಂಡುವಿನ ಆಪ್ತಮಿತ್ರ. ‘ಭಗದತ್ತೋ ಮಹಾರಾಜಃ… ಶಕ್ರ ಮನೋ ಯುಧಿಃ
ಸುಪ್ರತೀಕೇನ ನಾಗೆನ ಸಹಿ ಶಾಂತಃ ಕಿರೀಟಿನಾ’ ಎಂದು ಅಂಶಾವತಾರಪರ್ವ ಈತನ ಬಗೆಗೆ ಸಂಗ್ರಹವಾಗಿ ಹೇಳುತ್ತದೆ. ಪ್ರಾಗ್ಜೋತಿಷಪುರ ಈತನ ರಾಜಧಾನಿಯಾಗಿತ್ತು. ಈತ ಶೂರನಾಗಿದ್ದ. ಮ್ಲೇಚ್ಛಾಧಿಪತಿಯಾಗಿದ್ದ, ಮಹಾರಥಿ ಎನಿಸಿಕೊಂಡಿದ್ದ. ಜರಾಸಂಧನ ಸ್ನೇಹಿತನಾಗಿದ್ದರೂ ಈತ ಪಾಂಡವರ ಪಕ್ಷಪಾತಿಯಾಗಿದ್ದ. ರಾಕ್ಷಸ ಬಾಷ್ಕಲನ ಅವತಾರವಾಗಿದ್ದರೂ ಸದ್ಗುಣಿಯಾಗಿದ್ದ. ಪ್ರತಾಪವಾನ್, ಗಜಾಂಕುಶಧರ, ಶ್ರೇಷ್ಠಃ ರಥೇಚೈವ ವಿಶಾರದಃ ಎಂದು ಮಹಾಭಾರತ ಈತನನ್ನು ಪ್ರಶಂಶಿಸಿದೆ. ಒಂದು ಅಕ್ಷೋಹಿಣೀ ಸೇನೆಯೊಂದಿಗೆ ಕೌರವನ ಪಕ್ಷಕ್ಕೆ ಸೇರಿ ಹೋರಾಡಿದ್ದು ವಿಚಿತ್ರವಾಗಿ ಕಾಣುತ್ತದೆ. ಏಕೆಂದರೆ ಇವನಿಗೆ ಧರ್ಮರಾಯನ ಬಗ್ಗೆ ವಿಶೇಷ ಮಮತೆಯಿತ್ತು. ಬಹುಶಃ ಇವನು ನರಕಾಸುರನ ಸಂತತಿಯವನೆಂದು ಕಾಣುತ್ತದೆ. ನರಕಾಸುರನು ಸತ್ತಮೇಲೆ ಅವನ ಮೂಳೆಯನ್ನು ವೈಷ್ಣವಾಸ್ತ್ರವನ್ನಾಗಿ ಮಾಡಿ ವಿಷ್ಣುವು ಅದನ್ನು ಭೂದೇವಿಗೆ ಕೊಟ್ಟಿದ್ದ. ಅದು ಭೂದೇವಿಯ ಮಗ ನರಕಾಸುರ ಕೈಯಲ್ಲಿತ್ತು. ಈಗ ಅದು ಭಗದತ್ತನಿಗೆ ಬಳುವಳಿಯಾಗಿ ಬಂದಿತ್ತು.
ಭಗದತ್ತನ ಬಳಿ ಇದ್ದ ಸುಪ್ರತೀಕ ಗಜ ಮಹಾಭಾರತದಲ್ಲಿ ಪ್ರಸಿದ್ಧವಾಗಿದೆ. ಅವನ ಆನೆ ಪಾಂಡವ ಸೇನೆಯ ಮೇಲೆ ಮಾಡಿದ ಧಾಳಿ ದ್ರೋಣಪರ್ವದಲ್ಲಿ ದೀರ್ಘವಾಗಿ ಚರ್ಚಿತವಾಗಿದೆ. ಎಲ್ಲ ಪಾಂಡವ ವೀರರ ಮೇಲೂ ಧಾಳಿ ಮಾಡಿದ ಭಗದತ್ತನ ಆನೆ ಕೊನೆಗೆ ಅರ್ಜುನನೆದುರು ಸೆಣಸಿತು. ಕೆರಳಿದ ಭಗದತ್ತನ ಒಂದು ಘಟ್ಟದಲ್ಲಿ ತನ್ನಲ್ಲಿದ್ದ ಅಂಕುಶವನ್ನು ಅರ್ಜುನನ ಮೇಲೆ ಬಿಟ್ಟ. ಅದು ಮಹಾಪ್ರಬಲ ವೈಷ್ಣವಾಸ್ತ್ರವಲ್ಲವೆ? ಅರ್ಜುನನ ಆಯುಸ್ಸು ಅಂತ್ಯಗೊಂಡಿತು ಎಂದೇ ಭಾವಿಸಿದ ಪಾಂಡವ ವೀರರ ರಕ್ತ ಗಡ್ಡೆ ಕಟ್ಟಿತಂತೆ. ಆದರೆ ಶ್ರೀಕೃಷ್ಣ ತಾನೇ ಅದರ ಎದುರಿಗೇ ಎದೆ ಕೊಟ್ಟು ನಿಂತ. ಕೌಸ್ತುಭದಿಂದ ಅಲಂಕೃತವಾಗಿದ್ದ ಅವನ ಎದೆಯನ್ನು ಹೊಕ್ಕ ಕೂಡಲೇ ಅದು ಒಂದು ಪುಷ್ಪಮಾಲೆಯಾಯಿತು. ಶಕ್ತಿ ಉಡುಗಿದ ಮೇಲೆ ಭಗದತ್ತನ ಸತ್ವ ಕುಗ್ಗುತ್ತದೆ. ಆನೆಯೂ ಆಯಾಸಗೊಂಡಿರುತ್ತದೆ. ಆಗ ಶ್ರೀ ಕೃಷ್ಣನ ಸಲಹೆಯಂತೆ ಅರ್ಜುನನು ಮೊದಲು ಆನೆಯನ್ನು ಅನಂತರ ವೃದ್ದ ಭಗದತ್ತನನ್ನು ಕೊಂದ. ಅನಂತರ ಅರ್ಜುನ ರಥದಿಂದ ಇಳಿದು ಬಂದು ಭಗದತ್ತನ ಕಳೇಬರಕ್ಕೆ ಪ್ರದಕ್ಷಿಣೆ ನಮಸ್ಕಾರ ಹಾಕಿ ಗೌರವದ ಶ್ರದ್ಧಾಂಜಲಿಯನ್ನು ಅರ್ಪಿಸಿದನೆಂದ ಮೇಲೆ ಈ ರಾಜನು ಶತ್ರುಗಳಿಂದಲೂ ಹೊಗಳಿಸಿಕೊಳ್ಳುವಷ್ಟು ವೀರನಾಗಿದ್ದನೆಂಬ ಅಂಶ ಸ್ಪಷ್ಟವಾಗುತ್ತದೆ.
ಮೂಲ ...{Loading}...
ತೋರದಲಿ ಕುಲಗಿರಿಯ ಸತ್ವದ
ಸಾರದಲಿ ವಜ್ರವನು ದನಿಯಲಿ
ಕಾರ ಬರಸಿಡಿಲಂದವಿದನುಗಿದೊಂದುಮಾಡಿದನು
ವಾರಿಜೋದ್ಭವನೆನಲು ಝಾಡಿಯ
ಭಾರಿ ರೆಂಚೆಯ ಕೈಯ ಖಡ್ಗದ
ವಾರಣದ ಮಧ್ಯದಲಿಹನು ಭಗದತ್ತ ನೋಡೆಂದ ॥18॥
೦೧೯ ಹೊಗರೊಗುವ ಸೂನಿಗೆಯ ...{Loading}...
ಹೊಗರೊಗುವ ಸೂನಿಗೆಯ ಸುಪತಾ
ಕೆಗಳ ಸಿಂಧದ ಹೊಳೆವ ಹೊಂಗಂ
ಬುಗೆಯ ಹೂಡಿದ ಹಯದ ಸೂತರ ಗಳದ ಗರ್ಜನೆಯ
ಅಗಿವ ಚೀತ್ಕಾರದ ಛಡಾಳದ
ವಿಗಡ ರಥಿಕರ ರಹಿಯ ರಥವಾ
ಜಿಗಳ ನೋಡೈ ಪಾರ್ಥ ಭೂರಿಶ್ರವನ ಸೈನ್ಯವಿದು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಕಾಶವನ್ನು ಹೊರಸೂಸುತ್ತಿರುವ ಕತ್ತಿಗಳು, ಕೈಬಾವುಟ, ದಂಡ ಮತ್ತು ಧ್ವಜಗಳು, ಕಾಂತಿಯುಕ್ತವಾದ ಚಿನ್ನದ ರಥಗಳು, ಅವುಗಳ ಹಿಂಭಾಗದಲ್ಲಿ ಆಯುಧಗಳನ್ನು ತುಂಬಿದ ಚಿನ್ನದ ಬಂಡಿಗಳು, ಅವಕ್ಕೆ ಕಟ್ಟಿದ ಕುದುರೆಗಳ ಮತ್ತು ಗಂಟಲು ಹರಿವಂತೆ ಕೂಗುತ್ತಿದ್ದ ರಥಿಕರ ಚೀತ್ಕಾರಗಳು, ರಥಗಳು ಚಲಿಸುತ್ತಿರುವ ಸದ್ದು, ಶೂರರಾದ ರಥಿಕರಿಂದಲೂ ಅತಿವೇಗದ ರಥಾಶ್ವಗಳಿಂದಲೂ ಕೂಡಿದ ಭೂರಿಶ್ರವನ ಸೇನೆ ಇಲ್ಲಿದೆ ನೋಡು.
ಪದಾರ್ಥ (ಕ.ಗ.ಪ)
ಕಂಬುಗೆ-ಆಯುಧಗಳನ್ನಿಡುವ ರಥದ ಹಿಂಭಾಗ, ವಿಗಡ-ಶೂರ, ರಥಿಕ-ರಥಕಾರ, ಅಗಿವ-ಗರ್ಜಿಸುವ, ಛಡಾಳ-ಅತೀವ, ಸಿಂಧ-ದಂಡ ಧ್ವಜ, ಸೂನಿಗೆ-ಒಂದು ಬಗೆ ಕತ್ತಿ,
ಟಿಪ್ಪನೀ (ಕ.ಗ.ಪ)
ಭೂರಿಶ್ರವ - ಕೌರವನ ಬಳಿಗೆ ಒಂದು ಅಕ್ಷೋಹಿಣಿ ಸೇನೆಯೊದಿಗೆ ಬಂದು ಮಹಾಭಾರತ ಯುದ್ಧದಲ್ಲಿ ಉಗ್ರವಾಗಿ ಹೋರಾಡಿದ ವ್ಯಕ್ತಿ ಭೂರಿಶ್ರವ. ಇವನು ಕುರುವಂಶದವನೇ. ಇವನಿಗೆ ಕೌರವ, ದಾಯಾದ, ಕುರುಪುಂಗವ, ಕುರೂದ್ವಹ ಎಂಬ ಹೆಸರುಗಳೂ ಇವೆ. ಅವುಗಳಲ್ಲಿ ‘ಭೂರಿ ದಕ್ಷಿಣ’ ಒಂದು ಅನ್ವರ್ಥನಾಮವಾಗಿದೆ. ಯಜ್ಞ ಸಂದರ್ಭದಲ್ಲಿ ಹೇರಳವಾಗಿ ದಾನ ಮಾಡುತ್ತಿದ್ದುದಕ್ಕೆ ಬಂದ ಹೆಸರು ಇದು. ಕೌರವ-ಪಾಂಡವರ ಪಕ್ಷಗಳ ವೀರರೆಲ್ಲ ಈತನ ಬಗ್ಗೆ ಅಪಾರ ಗೌರವ ಹೊಂದಿದ್ದರು.
ಭೂರಿಶ್ರವನು ಕುರುವಂಶದ ಸೋಮದ ಎಂಬುವನ ಮಗ. ಯೋಗಶಕ್ತಿ ಉಳ್ಳ ಮಹಾವೀರ. ರಥಿ, ಯೂಥಪತಿ ಎಂದು ಭೀಷ್ಮರು ಈತನನ್ನು ಗುರುತಿಸಿದ್ದಾರೆ. ಪಾಂಡವರೊಡನೆ ಸಂಧಿ ಮಾಡಿಕೊಳ್ಳುವಂತೆ ಭೂರಿಶ್ರವನು ಕೌರವನಿಗೆ ಬುದ್ಧಿವಾದ ಹೇಳಿದನೆಂದು ಮಹಾಭಾರತದ ದಾಕ್ಷಿಣಾತ್ಯ ಪಾಠದಲ್ಲಿ ಹೇಳಲಾಗಿದೆ. ಭೀಷ್ಮರು ರಚಿಸಿದ ಗರುಡವ್ಯೂಹ ಮತ್ತು ಸರ್ವತೋಭದ್ರ ವ್ಯೋಹಗಳಲ್ಲಿ ಈತ ಪ್ರಮುಖ ಸ್ಥಾನದಲ್ಲಿ ನಿಂತಿದ್ದ. ಯುದ್ಧದಲ್ಲಿ ಭೀಮ, ಮಣಿಮಾನ್, ಸಾತ್ಯಕಿ ಮೊದಲಾದವರೊಡನೆ ಯುದ್ಧ ಮಾಡಿದ ವೀರ ಇವನು.
ಸಾತ್ಯಕಿಯ ಮೇಲೆ ಭೂರಿಶ್ರವನಿಗೆ ಇದ್ದದ್ದು ಕುಟುಂಬ ವೈರ ಎನ್ನಬಹುದು. ಸಾತ್ಯಕಿಯ ವಂಶದ ಶಿನಿ ಎಂಬಾತನು ಭೂರಿಶ್ರವನ ತಂದೆಯಾದ ಸೋಮದನ ಜುಟ್ಟು ಹಿಡಿದು ಎದೆಗೆ ಒದ್ದು ಅವಮಾನಿಸಿದ್ದ. ಮಹಾಭಾರತ ಯುದ್ಧದಲ್ಲಿ ಭೂರಿಶ್ರವ ಆ ಸೇಡನ್ನು ತೀರಿಸಿಕೊಳ್ಳಬಯಸಿದ. ಇಬ್ಬರೂ ಹೋರಾಡಿ ರಥ ಕಳೆದುಕೊಂಡರು. ಅನಂತರ ದ್ವಂದ್ವ ಯುದ್ಧ ಮಾಡಿದರು. ಬರುಬರುತ್ತ ಭೂರಿಶ್ರವನ ಕೈಮೇಲಾಯಿತು. ಅವನು ಸಾತ್ಯಕಿಯ ಜುಟ್ಟು ಹಿಡಿದು ನೆಲಕ್ಕೆ ಕೆಡವಿ ಎದೆಯನ್ನು ಮೆಟ್ಟಿ ಕೊಲ್ಲಲು ಹೋದ. ಆಗ ಶ್ರೀ ಕೃಷ್ಣನನ ಸಲಹೆಯಂತೆ ಅರ್ಜುನನು ತನ್ನ ಆಪ್ತಿ ಶಿಷ್ಯನಾದ ಸಾತ್ಯಕಿಯನ್ನು ಉಳಿಸುವುದಕ್ಕಾಗಿ ಭಲ್ಲಾಯುಧವನ್ನು ಬಿಟ್ಟು ಭೂರಿಶ್ರವನ ಕತ್ತಿ ಹಿಡಿದ ಕೈಯನ್ನು ಕತ್ತರಿಸಿ ಹಾಕಿದ.
ಅರ್ಜುನನ ಈ ಧರ್ಮ ವಿರುದ್ದ ನಡವಳಿಕೆಯಿಂದ ಬೇಸತ್ತು ಭೂರಿಶ್ರವ ಯುದ್ಧವನ್ನು ಕೈಬಿಟ್ಟು ದರ್ಭೆಯನ್ನು ನೆಲದ ಮೇಲೆ ಹರಡ ಪ್ರಾಯೋಪವೇಶ ಮಾಡಲು ಕುಳಿತುಕೊಂಡ. ಯೋಗದ ಮೂಲಕ ದೇಹತ್ಯಾಗ ಮಾಡುವುದು ಅವನ ಉದ್ದೇಶ. ಆದರೆ ಭೂರಿಶ್ರವನ ಏಟಿಗೆ ಮೂರ್ಛೆ ಹೋಗಿದ್ದ ಸಾತ್ಯಕಿಯು ಎಚ್ಚೆತ್ತು ಕತ್ತಿ ಹಿಡಿದು ಭೂರಿಶ್ರವನ ಬಳಿಗೆ ಬಂದ. ಕೃಷ್ಣಾರ್ಜುನರು ಬೇಡ ಬೇಡ ಎಂದು ಕೂಗುತ್ತಿದ್ದರೂ ಕೇಳಿಸಿಕೊಳ್ಳದವನಂತೆ ಮುನ್ನುಗ್ಗಿ ಭೂರಿಶ್ರವನನ್ನು ಕೊಂದು ಹಾಕಿದ. ಸಾತ್ಯಕಿಯ ನಿಷ್ಕಳಂಕ ಜೀವನದಲ್ಲಿ ಇದೊಂದು ಕಳವಳಕಾರಿಯಾದ ಅವಮಾನಕರವಾದ ಸಂಗತಿ.ಭೂರಿಶ್ರವ
ಮೂಲ ...{Loading}...
ಹೊಗರೊಗುವ ಸೂನಿಗೆಯ ಸುಪತಾ
ಕೆಗಳ ಸಿಂಧದ ಹೊಳೆವ ಹೊಂಗಂ
ಬುಗೆಯ ಹೂಡಿದ ಹಯದ ಸೂತರ ಗಳದ ಗರ್ಜನೆಯ
ಅಗಿವ ಚೀತ್ಕಾರದ ಛಡಾಳದ
ವಿಗಡ ರಥಿಕರ ರಹಿಯ ರಥವಾ
ಜಿಗಳ ನೋಡೈ ಪಾರ್ಥ ಭೂರಿಶ್ರವನ ಸೈನ್ಯವಿದು ॥19॥
೦೨೦ ಹಲಗೆ ಕಡಿತಲೆ ...{Loading}...
ಹಲಗೆ ಕಡಿತಲೆ ಹರಿಗೆ ಖಂಡೆಯ
ಹೊಳೆವ ಮಡ್ಡು ಕಠಾರಿ ಡೊಂಕಣಿ
ಬಿಲು ಸರಳು ತೋಡಿಟ್ಟಿ ಮುದ್ಗರ ಪಿಂಡಿವಾಳ ಚಯ
ತಲೆಯ ನೇಣಿನ ಕೈಯ ಚೌರಿಯ
ಲುಳಿಯ ಜೋಡಿನ ಕಟಿಯ ಗಂಟೆಯ
ದಳವನೀಕ್ಷಿಸು ಪಾರ್ಥ ದುಶ್ಶಾಸನನ ಪಯದಳವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಢಾಲು, ಕಡಿತಲೆ, ಒಂದು ಬಗೆಯ ಗುರಾಣಿ, ಖಡ್ಗ, ಒಂದು ಬಗೆಯ ಕಠಾರಿ, ಚಿಕ್ಕ ಕತ್ತಿ, ಭರ್ಜಿ, ಬಿಲ್ಲು ಬಾಣ, ಉದ್ದನೆ ಈಟಿ ಗದೆ, ಕವಣೆ ಸಮೂಹ, ತಲೆಗಳನ್ನು ನೇಣು ಹಾಕುವ ಹಗ್ಗಗಳನ್ನು ಹಿಡಿದು, ಕೈಯಲ್ಲಿ ಚಾಮರ ಹಿಡಿದ, ಥಳಿಥಳಿಸುವ ಅಂಗ ಕವಚ ಧರಿಸಿದ, ಸೊಂಟಕ್ಕೆ ಗಂಟೆ ಕಟ್ಟಿದ ಈ ಸೇನೆ ದುಶ್ಶಾಸನನ ಪದಾತಿದಳವಾಗಿದೆ, ಗಮನಿಸು ಪಾರ್ಥ ಎಂದನು.
ಪದಾರ್ಥ (ಕ.ಗ.ಪ)
ಹಲಗೆ-ಢಾಲು,
ಹರಿಗೆ-ಒಂದು ಬಗೆ ಗುರಾಣಿ,
ಮಡ್ಡು-ಒಂದು ಬಗೆಯ ಕಠಾರಿ,
ಭಿಂಡಿವಾಳ-ಕವಣೆ, (ಕೈಯಿಂದ ಎಸೆವ ಚಿಣಿ… ಆಯುಧ)
ಜೋಡು-ಅಂಗಕವಚ,
ನೇಣು-ಹಗ್ಗ,
ಡೊಂಕಣಿ-ಭರ್ಜಿ,
ಕಟಿಗಂಟೆ-ಸೊಂಟದ ಗಂಟೆ,
ಲುಳಿ-ಥಳಥಳಿಸುವ,
ಪದಾತಿ-ಪಯದಳ-ಕಾಲುದಳ.
ಮೂಲ ...{Loading}...
ಹಲಗೆ ಕಡಿತಲೆ ಹರಿಗೆ ಖಂಡೆಯ
ಹೊಳೆವ ಮಡ್ಡು ಕಠಾರಿ ಡೊಂಕಣಿ
ಬಿಲು ಸರಳು ತೋಡಿಟ್ಟಿ ಮುದ್ಗರ ಪಿಂಡಿವಾಳ ಚಯ
ತಲೆಯ ನೇಣಿನ ಕೈಯ ಚೌರಿಯ
ಲುಳಿಯ ಜೋಡಿನ ಕಟಿಯ ಗಂಟೆಯ
ದಳವನೀಕ್ಷಿಸು ಪಾರ್ಥ ದುಶ್ಶಾಸನನ ಪಯದಳವ ॥20॥
೦೨೧ ವೀರನಭಿಮನ್ಯುವಿನವೊಲು ರಣ ...{Loading}...
ವೀರನಭಿಮನ್ಯುವಿನವೊಲು ರಣ
ಧೀರನಾತನ ನೋಡು ಕರ್ಣಕು
ಮಾರಕರು ವೃಷಸೇನನಗ್ಗದ ಚಿತ್ರಸೇನಕರು
ಚಾರುಲಕ್ಷಣರವರು ನೂರು ಕು
ಮಾರರದೆ ದುರ್ಯೋಧನಾತ್ಮಜ
ರಾರುವನು ಕೈಕೊಳ್ಳರವದಿರು ಸುಬಲ ನಂದನರು ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರ ಅಭಿಮನ್ಯುವಿನಂತೆ ರಣಶೂರನಾದ ಈತನನ್ನು ನೋಡು, ಇವನೇ ವೃಷಸೇನ, ಇವನ ಬಳಿ ಇರುವವನು ಶ್ರೇಷ್ಠನಾದ ಚಿತ್ರಸೇನಕ. ಇವರಿಬ್ಬರು ಕರ್ಣನ ಮಕ್ಕಳು. ಸುಂದರರಾದವರು ನೂರು ಜನ ರಾಜಕುಮಾರರು ಇದ್ದಾರಲ್ಲ, ಅವರೆ ದುರ್ಯೋಧನನ ಮಕ್ಕಳು. ಅಲ್ಲಿರುವವರು ಸುಬಲನ ಮಕ್ಕಳು. ಅವರು ಯಾರನ್ನೂ ಲೆಕ್ಕಿಸರು.
ಪದಾರ್ಥ (ಕ.ಗ.ಪ)
ರಣಧೀರ-ರಣಶೂರ, ಅಗ್ಗ-ಶ್ರೇಷ್ಠ, ಚಾರು-ಸುಂದರ, ಆತ್ಮಜರು-ಮಕ್ಕಳು, ನಂದನರು-ಮಕ್ಕಳು, ಆರುವನು-ಯಾರನ್ನೂ, ಕೈಕೊಳ್ಳರು-ಲೆಕ್ಕಿಸರು,
ಮೂಲ ...{Loading}...
ವೀರನಭಿಮನ್ಯುವಿನವೊಲು ರಣ
ಧೀರನಾತನ ನೋಡು ಕರ್ಣಕು
ಮಾರಕರು ವೃಷಸೇನನಗ್ಗದ ಚಿತ್ರಸೇನಕರು
ಚಾರುಲಕ್ಷಣರವರು ನೂರು ಕು
ಮಾರರದೆ ದುರ್ಯೋಧನಾತ್ಮಜ
ರಾರುವನು ಕೈಕೊಳ್ಳರವದಿರು ಸುಬಲ ನಂದನರು ॥21॥
೦೨೨ ರಾಯನಣುಗರ ಗಣ್ಡ ...{Loading}...
ರಾಯನಣುಗರ ಗಂಡ ಕೌರವ
ರಾಯದಳ ಶೃಂಗಾರ ಮಲೆವರಿ
ರಾಯಮರ್ದನನೆಂಬ ಬಿರುದಿನಲುಲಿವ ಕಹಳೆಗಳ
ಜೀಯ ಜಯಜಯಯೆಂಬ ಪಂಡಿತ
ಗಾಯಕರ ಮಧ್ಯದಲಿ ಬೆರಳಲಿ
ಸಾಯಕವ ತಿರುಹುವನು ತಾ ಕಲಿಕರ್ಣ ನೋಡೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನ ಪ್ರೀತಿಗೆ ಪಾತ್ರನಾದ ಶೂರ, ದುರ್ಯೋಧನ ಸೇನೆಗೆ ಭೂಷಣ ಪ್ರಾಯನಾದವನು, ಕೊಬ್ಬಿದ ಶತ್ರುಗಳ ನಾಶಕ, ಮಲೆವ ಅರಿರಾಯರ ಮರ್ದನನು ಎಂಬ ಪ್ರಶಸ್ತಿಗಳನ್ನು ಕಹಳೆಗಳು ಘೋಷಿಸುತ್ತಿರಲು, ಜೀಯ ಜಯ ಜಯ ಎಂದು ಪಂಡಿತರು ಗಾಯಕರು ಹೊಗಳುತ್ತಿರಲು ಅವರ ನಡುವೆ ಬೆರಳಲ್ಲಿ ಬಾಣವನ್ನು ತಿರುಗಿಸುತ್ತಿರುವ ವೀರ ಕಲಿಕರ್ಣನು ನಿಂತಿದ್ದಾನೆ ನೋಡು ಎಂದನು.
ಪದಾರ್ಥ (ಕ.ಗ.ಪ)
ಅಣುಗ-ಪ್ರೀತಿ ಪಾತ್ರ, ಶೃಂಗಾರ-ಭೂಷಣಪ್ರಾಯ, ಮಲೆವ-ಕೊಬ್ಬಿದ, ಸಾಯಕ-ಬಾಣ
ಮೂಲ ...{Loading}...
ರಾಯನಣುಗರ ಗಂಡ ಕೌರವ
ರಾಯದಳ ಶೃಂಗಾರ ಮಲೆವರಿ
ರಾಯಮರ್ದನನೆಂಬ ಬಿರುದಿನಲುಲಿವ ಕಹಳೆಗಳ
ಜೀಯ ಜಯಜಯಯೆಂಬ ಪಂಡಿತ
ಗಾಯಕರ ಮಧ್ಯದಲಿ ಬೆರಳಲಿ
ಸಾಯಕವ ತಿರುಹುವನು ತಾ ಕಲಿಕರ್ಣ ನೋಡೆಂದ ॥22॥
೦೨೩ ಕರಿಘಟೆಯ ಕುರುವದಲಿ ...{Loading}...
ಕರಿಘಟೆಯ ಕುರುವದಲಿ ಹಯಮೋ
ಹರದ ತೆರೆಮಾಲೆಯಲಿ ಬಲುಝ
ಲ್ಲರಿಯ ಬುದ್ಬುದ ತತಿಯಲಸ್ತ್ರದ ಕಿಡಿಯ ವಡಬನಲಿ
ಬಿರುದರಾಯರ ರತುನರಾಜಿಯ
ಲರಿಬಲಾರ್ಣವ ಗಜರು ಮಿಗಿಲ
ಳ್ಳಿರಿಯುತದೆ ಬಹುವಿಧದ ವಾದ್ಯವಿಡಾಯ ರಭಸದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮದ್ದಾನೆಗಳೇ ನಡುಗಡ್ಡೆಯಾಗಿ, ಅಶ್ವದಳಗಳೇ ಅಲೆಗಳ ಮಾಲಿಕೆಯಾಗಿ, ಬೆಳ್ಗೊಡೆಗಳೇ ನೀರಿನ ಗುಳ್ಳೆಗಳಾಗಿ, ಬಿರುದಾಂಕಿತರಾದ ರಾಜರುಗಳೇ ರತ್ನ ಸಮೂಹವಾಗಿ ಕೂಡಿದ ಶತ್ರುಸೇನೆ ಎಂಬ ಸಾಗರವು, ನಾನಾ ವಿಧವಾದ ವಾದ್ಯ ಘೋಷಣೆಯ ರಭಸದಿಂದ ಎದೆ ನಡುಗಿಸುತ್ತಿತ್ತು.
ಪದಾರ್ಥ (ಕ.ಗ.ಪ)
ವಡಬ-ಬಡಬಾನಲ (ಸಮುದ್ರದ ಬೆಂಕಿ), ಕುರುವ-ದ್ವೀಪ, ನಡುಗಡ್ಡೆ, ಬುದ್ಬುದ-ಗುಳ್ಳೆ, ಝಲ್ಲರಿ-ಸತ್ತಿಗೆ, ರತುನರಾಜಿ-ರತ್ನ ಸಮೂಹ
ಮೂಲ ...{Loading}...
ಕರಿಘಟೆಯ ಕುರುವದಲಿ ಹಯಮೋ
ಹರದ ತೆರೆಮಾಲೆಯಲಿ ಬಲುಝ
ಲ್ಲರಿಯ ಬುದ್ಬುದ ತತಿಯಲಸ್ತ್ರದ ಕಿಡಿಯ ವಡಬನಲಿ
ಬಿರುದರಾಯರ ರತುನರಾಜಿಯ
ಲರಿಬಲಾರ್ಣವ ಗಜರು ಮಿಗಿಲ
ಳ್ಳಿರಿಯುತದೆ ಬಹುವಿಧದ ವಾದ್ಯವಿಡಾಯ ರಭಸದಲಿ ॥23॥
೦೨೪ ಆಳಮಯವಖಿಳೋರ್ವಿ ಪದಹತ ...{Loading}...
ಆಳಮಯವಖಿಳೋರ್ವಿ ಪದಹತ
ಧೂಳಿಮಯವಾಕಾಶ ರಥತುರ
ಗಾಳಿಮಯ ದಿಗುಜಾಲವೇನೆಂಬೆನು ಮಹಾದ್ಭುತವ
ಕಾಳೆಗಕೆ ನೀನಲ್ಲದವನಿಯೊ
ಳಾಳ ಕಾಣೆನು ಪಾರ್ಥ ಸಾಕಿ
ನ್ನೇಳು ಬಾಣವ ತೂಗು ಮಾತಾಡಿಸು ಮಹಾಧನುವ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಾಳುಗಳಿಂದ ಇಡೀ ಭೂಮಂಡಲ ಆವೃತವಾಗಿದೆ. ಪದಾತಿಗಳ ಪಾದಗಳ ತುಳಿತದಿಂದ ಮೇಲೆದ್ದ ಧೂಳಿ ಆಕಾಶವನ್ನು ಆವರಿಸಿದೆ. ರಥಸೇನೆ ತುರಗಸೇನೆಗಳು ದಿಕ್ಕುಗಳನ್ನೆಲ್ಲ ಆವರಿಸಿದೆ. ಆ ಅದ್ಭುತ ನೋಟವನ್ನು ಏನೆಂದು ವರ್ಣಿಸಲಿ. ಈ ಕಾಳಗಕ್ಕೆ ಸ್ಪರ್ಧಿಸಲು ಭೂಮಂಡಲದಲ್ಲಿ ನಿನ್ನ ವಿನಾ ಬೇರೆ ಶೂರನನ್ನು ನಾನು ಕಂಡಿಲ್ಲ. ಅರ್ಜುನ, ಇನ್ನು ಸುಮ್ಮನಿದ್ದುದು ಸಾಕು ಎದ್ದೇಳು. ಬಾಣವನ್ನು ಹೆದೆಯೇರಿಸಿ ಹೂಡು, ಮಹಾಧನುಸ್ಸನ್ನು ಮಾತಾಡಿಸು (ಲೀಲಾಜಾಲವಾಗಿ ಬಳಸು) ಎಂದು ಕೃಷ್ಣ ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಪದಹತಿ-ಪಾದಗಳ ತುಳಿತ, ದಿಗುಜಾಲ-ದಿಕ್ಕುಗಳ ಸಮೂಹ, ಆಳು-ಶೂರ, ಬಾಣವ ತೂಗು-ಬಾಣವನ್ನು ಹೆದೆಯೇರಿಸಿ ಹೂಡು, ಧನುವ ಮಾತಾಡಿಸು - ಲೀಲಾಜಾಲವಾಗಿ ಬಿಲ್ಲನ್ನು ಬಳಸು
ಮೂಲ ...{Loading}...
ಆಳಮಯವಖಿಳೋರ್ವಿ ಪದಹತ
ಧೂಳಿಮಯವಾಕಾಶ ರಥತುರ
ಗಾಳಿಮಯ ದಿಗುಜಾಲವೇನೆಂಬೆನು ಮಹಾದ್ಭುತವ
ಕಾಳೆಗಕೆ ನೀನಲ್ಲದವನಿಯೊ
ಳಾಳ ಕಾಣೆನು ಪಾರ್ಥ ಸಾಕಿ
ನ್ನೇಳು ಬಾಣವ ತೂಗು ಮಾತಾಡಿಸು ಮಹಾಧನುವ ॥24॥
೦೨೫ ಎಲೆ ಧನಞ್ಜಯ ...{Loading}...
ಎಲೆ ಧನಂಜಯ ಹಗೆಯ ಹೆಚ್ಚಿದ
ಹಳುವವಿದೆಲಾ ವಜ್ರಿಸುತ ನಿ
ನ್ನಳವಿಯಲಿ ತರುಬಿದೆ ಸುಯೋಧನ ಸೈನ್ಯ ಗಿರಿನಿಕರ
ಎಲೆ ಸಮೀರಜನನುಜ ರಿಪುಬಲ
ವಿಲಯ ಮೇಘ ನಿಕಾಯವಿದೆ ಭುಜ
ಬಲವ ತೋರೈ ತಂದೆ ನೋಡುವೆನೆಂದನಸುರಾರಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೈ ಅರ್ಜುನ ಅಪಾರವಾದ ಶತ್ರುಗಳು ಇರುವ ಅರಣ್ಯವಿದು. ನಿನ್ನ ಕಣ್ಣಳತೆಯಲ್ಲೇ ದುರ್ಯೋಧನನ ಸೈನ್ಯವೆಂಬ ಗಿರಿಸಾಲು ಎದುರಿಗೆ ಬಂದು ನಿಂತಿದೆ. ಅದನ್ನು ನಾಶಮಾಡಲು ವಜ್ರಾಯುಧನ ಮಗನಾದ ನಿನಗೆ ಸಾಧ್ಯ. ಎಲೈ ಭೀಮನ ಸೋದರನೆ, ಶತ್ರುಬಲ ನಾಶನೇ ಶತ್ರು ಸೇನೆಯೆಂಬ ಮೋಡ ಸಮೂಹವನ್ನು ಚೆದುರಿಸಲು ವಾಯುಪುತ್ರನಾದ ಭೀಮನ ತಮ್ಮನಾದ ನಿನಗೆ ಮಾತ್ರ ಸಾಧ್ಯ. ನಿನ್ನ ಪರಾಕ್ರಮವನ್ನು ಪ್ರದರ್ಶಿಸು. ನೋಡಿ ಆನಂದಿಸುವೆ ಎಂಬುದಾಗಿ ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ವಜ್ರಿಸುತ-ವಜ್ರಾಯಧಧಾರಿ ಇಂದ್ರನ ಮಗ ಅರ್ಜುನ, ಸಮೀರಜನನುಜ-ಭೀಮನ ಸೋದರ, ರಿಪು ಬಲವಿಲಯ-ಶತ್ರುಬಲ ನಾಶ ಮಾಡುವವನು, ನಿಕಾಯ-ಸಮೂಹ, ಅಸುರಾರಿ-ಕೃಷ್ಣ,
ಮೂಲ ...{Loading}...
ಎಲೆ ಧನಂಜಯ ಹಗೆಯ ಹೆಚ್ಚಿದ
ಹಳುವವಿದೆಲಾ ವಜ್ರಿಸುತ ನಿ
ನ್ನಳವಿಯಲಿ ತರುಬಿದೆ ಸುಯೋಧನ ಸೈನ್ಯ ಗಿರಿನಿಕರ
ಎಲೆ ಸಮೀರಜನನುಜ ರಿಪುಬಲ
ವಿಲಯ ಮೇಘ ನಿಕಾಯವಿದೆ ಭುಜ
ಬಲವ ತೋರೈ ತಂದೆ ನೋಡುವೆನೆಂದನಸುರಾರಿ ॥25॥
೦೨೬ ಮೆಟ್ಟಿ ನೋಡಿದನಹಿತ ...{Loading}...
ಮೆಟ್ಟಿ ನೋಡಿದನಹಿತ ರಾಯರ
ಥಟ್ಟುಗಳ ತೆರಳಿಕೆಯನುತ್ಸಹ
ಗೆಟ್ಟು ಫಲುಗುಣ ಸೆಡೆದು ಮನದಲಿ ನೊಂದು ತಲೆವಾಗಿ
ಕೆಟ್ಟ ಕಾಯದ ಸುಖಕಳುಪಿ ಒಡ
ಹುಟ್ಟಿದರ ಕೈಯಾರ ಕೊಂದರೆ
ಮುಟ್ಟದೇ ಕಡುಪಾಪ ಘನಪರಿತಾಪ ತನಗೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುರಾಜರ ಸೇನೆಗಳ ಸಮೂಹವನ್ನು ತುದಿಗಾಲ ಮೇಲೆ ನಿಂತು ನೋಡಿದನು. ಆಗ ಅರ್ಜುನನು ಉತ್ಸಾಹ ಕುಂದಿ ಅಳುಕುತ್ತಾ (ಕುಗ್ಗುತ್ತಾ) ಮನಸ್ಸಿನಲ್ಲಿ ದುಃಖಿಸಿ, ತಲೆತಗ್ಗಿಸಿ, ನಶ್ವರ ದೇಹಸುಖಕ್ಕೆ ಆಶಿಸಿ ಒಡಹುಟ್ಟಿದವರನ್ನು ಕೈಯಾರೆ ಕೊಂದರೆ ಘೋರಪಾಪ, ಮಹಾಸಂತಾಪ ನನಗೆ ತಟ್ಟದಿರುವುದೇ ? ಎಂದು ಚಿಂತಿಸಿದನು.
ಪದಾರ್ಥ (ಕ.ಗ.ಪ)
ಉತ್ಸಹಗೆಟ್ಟು-ಉತ್ಸಾಹ ಕುಂದಿ, ಥಟ್ಟುಗಳ ಸಮೂಹ-ಸೇನೆಗಳ ಸಮೂಹ, ಸೆಡೆದು-ಅಳುಕಿ, ಅಳುಪಿ-ಆಶಿಸಿ, ಘನಪರಿತಾಪ-ಮಹಾಸಂತಾಪ, ಮುಟ್ಟದೇ-ತಟ್ಟದಿರಬಹುದೇ
ಮೂಲ ...{Loading}...
ಮೆಟ್ಟಿ ನೋಡಿದನಹಿತ ರಾಯರ
ಥಟ್ಟುಗಳ ತೆರಳಿಕೆಯನುತ್ಸಹ
ಗೆಟ್ಟು ಫಲುಗುಣ ಸೆಡೆದು ಮನದಲಿ ನೊಂದು ತಲೆವಾಗಿ
ಕೆಟ್ಟ ಕಾಯದ ಸುಖಕಳುಪಿ ಒಡ
ಹುಟ್ಟಿದರ ಕೈಯಾರ ಕೊಂದರೆ
ಮುಟ್ಟದೇ ಕಡುಪಾಪ ಘನಪರಿತಾಪ ತನಗೆಂದ ॥26॥
೦೨೭ ಕೆಲಬರೊಡಹುಟ್ಟಿದರು ಗುರುಗಳು ...{Loading}...
ಕೆಲಬರೊಡಹುಟ್ಟಿದರು ಗುರುಗಳು
ಕೆಲರು ಕೆಲಬರು ಮಾವ ಮೈದುನ
ನಳಿಯ ಮಗ ಹಿರಿಯಯ್ಯ ಮುತ್ತಯ ಮೊಮ್ಮನೆನಿಸುವರು
ಕಳದೊಳಿನಿಬರ ಕೊಂದು ಶಿವಶಿವ
ಕೆಲವು ದಿವಸದ ಸಿರಿಗೆ ಸೋಲಿದು
ಮುಳುಗುವೆನೆ ಭವಸಿಂಧುವಿನೊಳಾನೆನುತ ಮನಮುರಿದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಶತ್ರು ಸೇನೆಯಲ್ಲಿರುವವರಲ್ಲಿ ಕೆಲವರು ಒಡಹುಟ್ಟಿದ ಸೋದರರು, ಕೆಲವರು ವಿದ್ಯೆ ಕಲಿಸಿದ ಗುರುಗಳು, ಕೆಲವರು ಮಾವ, ಮೈದುನ, ಅಳಿಯ, ಮಗ, ಹಿರಿಯಯ್ಯ ಮುತ್ತಯ್ಯ ಮೊಮ್ಮಗ ಸಂಬಂಧವುಳ್ಳವರು. ನಶ್ವರದ ರಾಜ್ಯದ ಐಶ್ವರ್ಯಕ್ಕಾಗಿ ಮನಸೋತು, ರಣರಂಗದಲ್ಲಿ ಇವರನ್ನೆಲ್ಲ ಕೊಂದು ಸಂಸಾರ ಸಾಗರದಲ್ಲಿ ನಾನು ಮತ್ತೆ ಮತ್ತೆ ಹುಟ್ಟುತ್ತಾ ಸಾಯುತ್ತಿರಬೇಕೇ ಎಂದು ಚಿಂತಾಕ್ರಾಂತನಾದನು (ಭಗ್ನಮನನಾದನು).
ಪದಾರ್ಥ (ಕ.ಗ.ಪ)
ಕಳ-ರಣರಂಗ, ಭವಸಿಂಧು-ಸಂಸಾರ ಸಾಗರ, ಮನಮುರಿದ-ಭಗ್ನ ಮನನಾದ, ಚಿಂತಾಕ್ರಾಂತನಾದ
ಮೂಲ ...{Loading}...
ಕೆಲಬರೊಡಹುಟ್ಟಿದರು ಗುರುಗಳು
ಕೆಲರು ಕೆಲಬರು ಮಾವ ಮೈದುನ
ನಳಿಯ ಮಗ ಹಿರಿಯಯ್ಯ ಮುತ್ತಯ ಮೊಮ್ಮನೆನಿಸುವರು
ಕಳದೊಳಿನಿಬರ ಕೊಂದು ಶಿವಶಿವ
ಕೆಲವು ದಿವಸದ ಸಿರಿಗೆ ಸೋಲಿದು
ಮುಳುಗುವೆನೆ ಭವಸಿಂಧುವಿನೊಳಾನೆನುತ ಮನಮುರಿದ ॥27॥
೦೨೮ ಇದಿರುಗಾಣದೆ ಕೊಲೆಗೆ ...{Loading}...
ಇದಿರುಗಾಣದೆ ಕೊಲೆಗೆ ನಿರ್ಬಂ
ಧದಲಿ ಬೆಸಸುವ ಕೃಷ್ಣನಕಟಾ
ಮದಮುಖನೊ ದುರ್ಬೋಧಕನೊ ವಂಚಕನೊ ಘಾತಕನೊ
ಯದುಗಳನ್ವಯದೊಳಗೆ ಕರುಣಾ
ಸ್ಪದರು ಜನಿಸರಲಾ ಮುರಾರಿಯ
ಹೃದಯ ಬೆಟ್ಟಿತೆನುತ್ತ ಫಲುಗುಣ ತೂಗಿದನು ಶಿರವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದಾಗುವ ಪರಿಣಾಮವನ್ನು ಚಿಂತಿಸದೆ (ದೂರದೃಷ್ಟಿ ಇಲ್ಲದೆ) ಇವರನ್ನೆಲ್ಲ ಕೊಲ್ಲಲು ಬಲವಂತದಲ್ಲಿ ಅಪ್ಪಣೆ ಮಾಡುತ್ತಿರುವ ಕೃಷ್ಣನು, ಅಯ್ಯೋ ಇವನು ಗರ್ವಿಷ್ಠನೋ ದುರುಪದೇಶಕನೋ ಮೋಸಗಾರನೋ ಕೊಲೆಗಾರನೋ ಏನೆಂದು ಹೇಳಲಿ ! ಯದುವಂಶದೊಳಗೆ ಕರುಣಾಳುಗಳು ಯಾರೂ ಜನಿಸಿಲ್ಲವಲ್ಲಾ ! ಕೃಷ್ಣನ ಹೃದಯ ಕಠಿಣವಾಗಿದೆ (ಕಲ್ಲಾಗಿದೆ) ಎಂದು ಅರ್ಜುನ ಅಚ್ಚರಿಗೊಂಡನು.
ಪದಾರ್ಥ (ಕ.ಗ.ಪ)
ಮದಮುಖ-ಗರ್ವಿಷ್ಠ, ಘಾತಕ-ಕೊಲೆಗಾರ, ಬೆಟ್ಟಿತು-ಕಠಿಣವಾಗಿದೆ (ಕಲ್ಲಾಗಿದೆ)
ಮೂಲ ...{Loading}...
ಇದಿರುಗಾಣದೆ ಕೊಲೆಗೆ ನಿರ್ಬಂ
ಧದಲಿ ಬೆಸಸುವ ಕೃಷ್ಣನಕಟಾ
ಮದಮುಖನೊ ದುರ್ಬೋಧಕನೊ ವಂಚಕನೊ ಘಾತಕನೊ
ಯದುಗಳನ್ವಯದೊಳಗೆ ಕರುಣಾ
ಸ್ಪದರು ಜನಿಸರಲಾ ಮುರಾರಿಯ
ಹೃದಯ ಬೆಟ್ಟಿತೆನುತ್ತ ಫಲುಗುಣ ತೂಗಿದನು ಶಿರವ ॥28॥
೦೨೯ ನರಕಕರ್ಮವ ಮಾಡಿ ...{Loading}...
ನರಕಕರ್ಮವ ಮಾಡಿ ಇಹದೊಳು
ದುರಿತ ಭಾಜನನಾಗಿ ಕಡೆಯಲಿ
ಪರಕೆ ಬಾಹಿರನಾಗಿ ನಾನಾಯೋನಿಯೊಳು ಸುಳಿದು
ಹೊರಳುವನುವನು ಕೃಷ್ಣದೇವನು
ಕರುಣಿಸಿದನೇ ಹಿತವನೇ ಹರ
ಹರ ಮಹಾದೇವೊಂದು ಬೋಳಕೆ ಬದುಕಿದೆನುಯೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಲೋಕದಲ್ಲಿ ಪಾಪಕರ್ಮವನ್ನು ಮಾಡಿ, ದುಷ್ಟ ಕಾರ್ಯನಿರತನಾಗಿ, ಕೊನೆಯಲ್ಲಿ ಮೋಕ್ಷಕ್ಕೆ ದೂರನಾಗಿ, ನಾನಾ ಜನ್ಮಗಳಲ್ಲಿ ಬಂದು ಒದ್ದಾಡುವ ಸ್ಥಿತಿಯನ್ನು ಕೃಷ್ಣನು ಉಂಟು ಮಾಡಿದನಲ್ಲಾ. ಇವನು ನನ್ನ ರಕ್ಷಣೆ ಮಾಡುವವನೇ ? ಅಯ್ಯೋ, ಶಿವಶಿವ ಈ ದುರಂತಕ್ಕಾಗಿ ಬದುಕಬೇಕೇ ಎಂದನು.
ಪದಾರ್ಥ (ಕ.ಗ.ಪ)
ನರಕಕರ್ಮ-ಪಾಪಕರ್ಮ, ದುರಿತಭಾಜನ-ದುಷ್ಟಕಾರ್ಯನಿರತ, ಪರಕೆಬಾಹಿರ-ಮೋಕ್ಷಕ್ಕೆ ದೂರ, ನಾನಾಯೋನಿಗಳಲ್ಲಿ-ನಾನಾ ಜನ್ಮಗಳಲ್ಲಿ, ಅನುವನು-ಕಾರ್ಯವನ್ನು, ಬೋಳ-ಮೃತ್ಯು, ದುರಂತ,
ಪಾಠಾನ್ತರ (ಕ.ಗ.ಪ)
ನರಳುವನುವನು/ಹೊರಳುವನವನು (……)
ಭೀಷ್ಮಪರ್ವ, ಮೈ.ವಿ.ವಿ.
ಮೂಲ ...{Loading}...
ನರಕಕರ್ಮವ ಮಾಡಿ ಇಹದೊಳು
ದುರಿತ ಭಾಜನನಾಗಿ ಕಡೆಯಲಿ
ಪರಕೆ ಬಾಹಿರನಾಗಿ ನಾನಾಯೋನಿಯೊಳು ಸುಳಿದು
ಹೊರಳುವನುವನು ಕೃಷ್ಣದೇವನು
ಕರುಣಿಸಿದನೇ ಹಿತವನೇ ಹರ
ಹರ ಮಹಾದೇವೊಂದು ಬೋಳಕೆ ಬದುಕಿದೆನುಯೆಂದ ॥29॥
೦೩೦ ಮುಳಿಯಲಾಗದು ಕೃಷ್ಣ ...{Loading}...
ಮುಳಿಯಲಾಗದು ಕೃಷ್ಣ ನಿಮ್ಮನು
ತಿಳುಹಲಾನು ಸಮರ್ಥನೇ ಕುಲ
ಕೊಲೆಗೆ ಕೊಕ್ಕರಿಸಿದೆನು ನನೆದೆನು ಕರುಣ ವಾರಿಯಲಿ
ಬಲುಹನೀ ಮುಖದಲ್ಲಿ ತೋರುವ
ಡಳುಕಿದೆನು ಸಾಮ್ರಾಜ್ಯಸಂಪ
ತ್ತಿಳೆಯ ಸಕಲಭ್ರಾಂತಿ ಬೀತುದು ದೇವ ಕೇಳ್ ಎಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನೇ ಕೋಪಿಸಿಕೊಳ್ಳಬೇಡ. ನಿಮಗೆ ತಿಳಿಯ ಹೇಳಲು ನಾನು ಶಕ್ತನೇ ? ಸಾಮ್ರಾಜ್ಯದ ಸಿರಿಯೆಲ್ಲ ನನ್ನದಾಗ ಬೇಕೆಂಬ ಆಸೆಯಲ್ಲಿ, ವಂಶನಾಶಕ್ಕೆ ಹೇಸಿದೆನು. ಕಾರುಣ್ಯ ಭಾವದಲ್ಲಿ ಮುಳುಗಿ ಹೋದೆನು. ಈ ಯುದ್ಧದಲ್ಲಿ ನನ್ನ ಪರಾಕ್ರಮ ತೋರಿಸಲು ಹಿಂದೆಗೆದೆನು. ನನಗಿದ್ದ ಈ ಲೋಕದ ಸಮಸ್ತ ಸುಖಗಳ ಬಯಕೆಯ ಭ್ರಮೆ ಬಿಟ್ಟು ಹೋಗಿದೆ. ಇದನ್ನು ನೀನು ತಿಳಿ ಎಂದನು.
ಪದಾರ್ಥ (ಕ.ಗ.ಪ)
ತಿಳುಹಲು-ತಿಳಿಯ ಹೇಳಲು, ಆನು-ನಾನು, ಕುಲಕೊಲೆ-ವಂಶನಾಶ, ಕೊಕ್ಕರಿಸು-ಹೇಸು, ಈ ಮುಖದಲಿ-ಈ ಯುದ್ಧದಲ್ಲಿ, ಅಳುಕಿದನು-ಹಿಂದೆಗೆದೆನು
ಮೂಲ ...{Loading}...
ಮುಳಿಯಲಾಗದು ಕೃಷ್ಣ ನಿಮ್ಮನು
ತಿಳುಹಲಾನು ಸಮರ್ಥನೇ ಕುಲ
ಕೊಲೆಗೆ ಕೊಕ್ಕರಿಸಿದೆನು ನನೆದೆನು ಕರುಣ ವಾರಿಯಲಿ
ಬಲುಹನೀ ಮುಖದಲ್ಲಿ ತೋರುವ
ಡಳುಕಿದೆನು ಸಾಮ್ರಾಜ್ಯಸಂಪ
ತ್ತಿಳೆಯ ಸಕಲಭ್ರಾಂತಿ ಬೀತುದು ದೇವ ಕೇಳೆಂದ ॥30॥
೦೩೧ ಎಡಹಿದರೆ ರುಜೆಯಾಗಿಯಾಪ ...{Loading}...
ಎಡಹಿದರೆ ರುಜೆಯಾಗಿಯಾಪ
ತ್ತಡಸಿದರೆ ಮೇಣಾವ ತೆರದಿಂ
ದೊಡಲುವಿಡಿದರೆ ಮರಣ ತಪ್ಪದು ಸುರರಿಗೊಳಗಾಗಿ
ಕೆಡುವ ಕಾಯವ ನಚ್ಚಿ ಬಂಧುಗ
ಳೊಡನೆ ವೈರವ ಮಸೆದು ನರಕಕೆ
ಕೆಡೆವೆನೇ ತಾನೆನುತ ರಥದೊಳು ಬಿಲ್ಲನಿಳುಹಿದನು ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಹ ಮುಗ್ಗರಿಸಿದರೆ, ರೋಗ ಬಂದರೆ, ಗಂಡಾಂತರ ಒದಗಿದರೆ ಅಥವಾ ದೇಹ ಧರಿಸಿದ ಮೇಲೆ ಇನ್ನಾವ ರೀತಿಯಲ್ಲಾಗಲಿ ಮರಣ ತಪ್ಪಿದ್ದಲ್ಲ. ದೇವತೆಗಳನ್ನು ಮೊದಲ್ಗೊಂಡು ಯಾರಿಗೂ ಸಾವು ತಪ್ಪಿದ್ದಲ್ಲ. ನಶ್ವರವಾದ ಶರೀರವನ್ನು ನಂಬಿ ಬಂಧುಗಳೊಡನೆ ದ್ವೇಷ ಸಾಧಿಸಿ ನರಕಕ್ಕೆ ನಾನು ಬೀಳಲೇ ? ಎನ್ನುತ್ತ ರಥದಲ್ಲಿ ಬಿಲ್ಲನ್ನು ಕೆಳಗಿಟ್ಟನು.
ಪದಾರ್ಥ (ಕ.ಗ.ಪ)
ಆಪತ್ತು-ಗಂಡಾಂತರ, ರುಜೆ-ರೋಗ, ಎಡವು-ಮುಗ್ಗರಿಸು, ಒಡಲುವಿಡಿ-ಜನ್ಮತಳೆ, ನಚ್ಚಿ-ನಂಬಿ
ಮೂಲ ...{Loading}...
ಎಡಹಿದರೆ ರುಜೆಯಾಗಿಯಾಪ
ತ್ತಡಸಿದರೆ ಮೇಣಾವ ತೆರದಿಂ
ದೊಡಲುವಿಡಿದರೆ ಮರಣ ತಪ್ಪದು ಸುರರಿಗೊಳಗಾಗಿ
ಕೆಡುವ ಕಾಯವ ನಚ್ಚಿ ಬಂಧುಗ
ಳೊಡನೆ ವೈರವ ಮಸೆದು ನರಕಕೆ
ಕೆಡೆವೆನೇ ತಾನೆನುತ ರಥದೊಳು ಬಿಲ್ಲನಿಳುಹಿದನು ॥31॥
೦೩೨ ಕರಗಲನ್ತಃಕರಣ ಚಿನ್ತಾ ...{Loading}...
ಕರಗಲಂತಃಕರಣ ಚಿಂತಾ
ತುರನು ಸಂಗ್ರಾಮದ ವಿರಕ್ತಿಯೊ
ಳಿರಲು ಕಂಡನು ಕಮಲನಾಭನು ನಗುತ ಮನದೊಳಗೆ
ತರಳನಿವನದ್ವೈತಕಲೆಯಲಿ
ಪರಿಣತನು ತಾನಲ್ಲ ನೆವದಿಂ
ನರನ ಬೋಧಿಸಬೇಕೆನುತ ನುಡಿಸಿದನು ಫಲುಗುಣನ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನಸ್ಸು (ಜ್ಞಾನ ಸುಖದುಃಖಗಳನ್ನು ಅನುಭವಿಸುವ ಸಾಧನವಾದದ್ದು) ಕರಗಲು ಯುದ್ಧ ಮಾಡಲು ವಿಮನಸ್ಕನಾಗಿ, ವೈರಾಗ್ಯ ಭಾವ ತಳೆದು ಅರ್ಜುನನು ಚಿಂತಾಮಗ್ನನಾಗಿ ಇರಲು, ಕೃಷ್ಣನು ಮನಸ್ಸಿನಲ್ಲೇ ಅವನ ಅಜ್ಞಾನಕ್ಕಾಗಿ ನಗುತ್ತಾ ನೋಡಿ ಏನೂ ಅರಿಯದ ಮುಗ್ಧನಿವನು. ಪರಬ್ರಹ್ಮತತ್ತ್ವ ಸ್ವರೂಪವನ್ನು ನಿಜವಾದ ಅರ್ಥದಲ್ಲಿ ತಿಳಿದಿಲ್ಲ. ತಿಳಿಯುವುದರಲ್ಲಿ ಪರಿಚಿತನಲ್ಲ. ಇವನಿಗೆ ಇದನ್ನು ಯಾವುದಾದರೂ ನೆವದಲ್ಲಿ ತಿಳಿಸಬೇಕು ಎಂದು ಅವನಿಗೆ ಹೇಳತೊಡಗಿದನು.
ಪದಾರ್ಥ (ಕ.ಗ.ಪ)
ಅಂತಃಕರಣ-ಮನಸ್ಸು (ಜ್ಞಾನ, ಸುಖ ದುಃಖಗಳನ್ನು ಅನುಭವಿಸುವ ಸಾಧನ), ಕಮಲನಾಭ-ಕೃಷ್ಣ, ತರಳ-ಮುಗ್ಧ, ಅದ್ವೈತಕಲೆ-ಪರಬ್ರಹ್ಮತತ್ತ್ವ ಸ್ವರೂಪ ತಿಳಿಯುವ ವಿದ್ಯೆ,
ಮೂಲ ...{Loading}...
ಕರಗಲಂತಃಕರಣ ಚಿಂತಾ
ತುರನು ಸಂಗ್ರಾಮದ ವಿರಕ್ತಿಯೊ
ಳಿರಲು ಕಂಡನು ಕಮಲನಾಭನು ನಗುತ ಮನದೊಳಗೆ
ತರಳನಿವನದ್ವೈತಕಲೆಯಲಿ
ಪರಿಣತನು ತಾನಲ್ಲ ನೆವದಿಂ
ನರನ ಬೋಧಿಸಬೇಕೆನುತ ನುಡಿಸಿದನು ಫಲುಗುಣನ ॥32॥
೦೩೩ ಏನು ಫಲುಗುಣ ...{Loading}...
ಏನು ಫಲುಗುಣ ಸಮರದಲಿ ದು
ಮ್ಮಾನವಾವುದು ಹದನು ಶೌರ್ಯಕೆ
ಹಾನಿಯಲ್ಲಾ ತ್ರಿಜಗಚೌಪಟಮಲ್ಲ ನೀನೆನಿಪ
ಮಾನಗರ್ವವು ಮುರಿಯದೇ ರಿಪು
ಸೇನೆ ನಗದೇ ತೆತ್ತ ಸಮರವ
ನೀನುಪೇಕ್ಷಿಸಿ ನೋಡಲಹುದೇ ಬಿಲ್ಲ ಹಿಡಿಯೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ಅರ್ಜುನಾ, ಯುದ್ಧ ಮಾಡಲು ಕಳವಳಕ್ಕೆ ಕಾರಣವೇನಿದೆ ? ಈ ರೀತಿಯ ಮನಃಸ್ಥಿತಿ ನಿನ್ನ ಪರಾಕ್ರಮಕ್ಕೆ ಧಕ್ಕೆ ತರುವುದಿಲ್ಲವೇ ? ನೀನು ಮೂರು ಲೋಕದಲ್ಲಿ ವೀರ, ಮಹಾ ಪರಾಕ್ರಮಿ (ನಾಲ್ಕು ದಿಕ್ಕಿನಲ್ಲಿ ಹೋರಾಡುವ ವೀರ) ಎಂಬ ಗೌರವ ಪ್ರತಿಷ್ಠೆ ಅಳಿಯುವುದಿಲ್ಲವೇ ? ನಿನ್ನನ್ನು ತೊಡಗಿಸಿಕೊಂಡಿರುವ ಯುದ್ಧವನ್ನು ನೀನು ತಿರಸ್ಕಾರದಿಂದ ನೋಡಲು , ಶತ್ರು ಪಕ್ಷದವರು ಹಾಸ್ಯ ಮಾಡುವುದಿಲ್ಲವೇ ? ಆದುದರಿಂದ ಬಿಲ್ಲನ್ನು ಹಿಡಿದು ಯುದ್ಧಕ್ಕೆ ತೊಡಗು ಎಂದನು.
ಮೂಲ ...{Loading}...
ಏನು ಫಲುಗುಣ ಸಮರದಲಿ ದು
ಮ್ಮಾನವಾವುದು ಹದನು ಶೌರ್ಯಕೆ
ಹಾನಿಯಲ್ಲಾ ತ್ರಿಜಗಚೌಪಟಮಲ್ಲ ನೀನೆನಿಪ
ಮಾನಗರ್ವವು ಮುರಿಯದೇ ರಿಪು
ಸೇನೆ ನಗದೇ ತೆತ್ತ ಸಮರವ
ನೀನುಪೇಕ್ಷಿಸಿ ನೋಡಲಹುದೇ ಬಿಲ್ಲ ಹಿಡಿಯೆಂದ ॥33॥
೦೩೪ ಆವ ನಿನ್ನಯ ...{Loading}...
ಆವ ನಿನ್ನಯ ಕ್ಷತ್ರಧರ್ಮವ
ಭಾವಿಸಿದೆ ಮೇಣಾವ ಶಶಿವಂ
ಶಾವಳಿಯ ನೆಮ್ಮುಗೆಯ ನೆಗಳಿದೆ ತೆತ್ತ ಕಾಳೆಗಕೆ
ಆವ ನಿನ್ನಗ್ಗಳಿಕೆಗುಚಿತವ
ತೀವಿ ಬಳಸಿದೆ ಕದನಮುಖದಲಿ
ಹೇವ ವೀರರೊಳಿಲ್ಲಲಾ ವಿಸ್ಮಯವಿದಕಟೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಕ್ಷತ್ರಿಯ ಧರ್ಮ ಯಾವುದೆಂದು ತಿಳಿದಿರುವೆ ? ಅಥವಾ ಹೂಡಿರುವ ಯುದ್ಧದಲ್ಲಿ ಚಂದ್ರವಂಶದವರು ಅವಲಂಬಿಸಿದ ಯಾವ ಧರ್ಮವನ್ನು ಕೈಗೊಂಡೆ ? ನಿನ್ನ ದೊಡ್ಡಸ್ತಿಕೆಗೆ ತಕ್ಕಂತೆ ಯಾವ ಸೂಕ್ತವಾದ ಕ್ರಮವನ್ನು ಪೂರ್ಣವಾಗಿ ಕೈಗೊಂಡೆ ? ಯುದ್ಧ ಪ್ರಸಂಗದಲ್ಲಿ ವೀರರೆದುರಿನಲ್ಲಿ ನಿನಗೆ ನಾಚಿಕೆ ಇಲ್ಲವಲ್ಲಾ. ಇದು ಹಾ ! ಅಚ್ಚರಿಯ ಸಂಗತಿ ! ಎಂದನು ಕೃಷ್ಣ.
ಪದಾರ್ಥ (ಕ.ಗ.ಪ)
ತೆತ್ತ ಕಾಳಗಕೆ-ಹೂಡಿದ ಯುದ್ಧದಲ್ಲಿ, ನೆಮ್ಮುಗೆಯ ನೆಗಳಿದೆ-ಅವಲಂಬಿಸಿದ ಧರ್ಮ ಕೈಗೊಂಡೆ, ಅಗ್ಗಳಿಕೆ-ಹಿರಿಮೆ, ದೊಡ್ಡಸ್ತಿಕೆಗೆ, ಕದನಮುಖ-ಯುದ್ಧ ಪ್ರಸಂಗದ, ಹೇವ-ನಾಚಿಕೆ,
ಮೂಲ ...{Loading}...
ಆವ ನಿನ್ನಯ ಕ್ಷತ್ರಧರ್ಮವ
ಭಾವಿಸಿದೆ ಮೇಣಾವ ಶಶಿವಂ
ಶಾವಳಿಯ ನೆಮ್ಮುಗೆಯ ನೆಗಳಿದೆ ತೆತ್ತ ಕಾಳೆಗಕೆ
ಆವ ನಿನ್ನಗ್ಗಳಿಕೆಗುಚಿತವ
ತೀವಿ ಬಳಸಿದೆ ಕದನಮುಖದಲಿ
ಹೇವ ವೀರರೊಳಿಲ್ಲಲಾ ವಿಸ್ಮಯವಿದಕಟೆಂದ ॥34॥
೦೩೫ ಅಲಗಿನೊರಸೊರಸಿಲ್ಲ ಕೈಮೈ ...{Loading}...
ಅಲಗಿನೊರಸೊರಸಿಲ್ಲ ಕೈಮೈ
ಗಳಲಿ ಮುಳುಗಿದ ಬಾಣವಿಲ್ಲ
ಗ್ಗಳಿಸಿ ನೊಸಲಲಿ ಮುರಿದ ಭಲ್ಲೆಯವಿಲ್ಲ ನೋಡುವರೆ
ಕಲಹದಲಿ ಪಡಿಮುಖದ ಘಾಯದ
ಚಲರಕುತದೊರವಿಲ್ಲ ನೀ ಮು
ನ್ನಳುಕಿ ಕೈದುವ ಹಾಯ್ಕಿದೈ ಸರಿಯಲ್ಲ ನಿನಗೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯುಧಗಳ ತಿಕ್ಕಾಟವಿಲ್ಲ, ಕೈಮೈಗಳಲ್ಲಿ ನಾಟಿ ಒಳಹೊಕ್ಕ ಬಾಣಗಳಿಲ್ಲ. ಪರೀಕ್ಷಿಸಿ ನೋಡಿದರೆ, ವಿಶೇಷ ರೀತಿಯಲ್ಲಿ ತಾಗಿ ಹಣೆಯಲ್ಲಿ ನಾಟಿದ ಈಟಿಯ ಮೊನೆಗಳಿಲ್ಲ. ಹೋರಾಟ ನಡೆಸಿ ಶತ್ರು ಪಕ್ಷದವರಿಂದ ಆದ ಪೆಟ್ಟಿನಿಂದ ಹರಿದ ರಕುತದ ಒರತೆಯಿಲ್ಲ. ನೀನು ಯುದ್ಧ ಮಾಡುವ ಮೊದಲೇ ಅಂಜಿ ಶಸ್ತ್ರವನ್ನು ಬಿಸಾಡಿದೆ, ಇದು ನಿನಗೆ ತಕ್ಕುದ್ದಲ್ಲ ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಒರಸೊರಸು-ತಿಕ್ಕಾಟ, ಪಡಿಮುಖ-ಶತ್ರುಪಕ್ಷ, ಒರವಿಲ್ಲ-ಒರತೆಯಿಲ್ಲ, ಹಾಯ್ಕಿದೆ-ಬಿಸಾಡಿದೆ, .
ಮೂಲ ...{Loading}...
ಅಲಗಿನೊರಸೊರಸಿಲ್ಲ ಕೈಮೈ
ಗಳಲಿ ಮುಳುಗಿದ ಬಾಣವಿಲ್ಲ
ಗ್ಗಳಿಸಿ ನೊಸಲಲಿ ಮುರಿದ ಭಲ್ಲೆಯವಿಲ್ಲ ನೋಡುವರೆ
ಕಲಹದಲಿ ಪಡಿಮುಖದ ಘಾಯದ
ಚಲರಕುತದೊರವಿಲ್ಲ ನೀ ಮು
ನ್ನಳುಕಿ ಕೈದುವ ಹಾಯ್ಕಿದೈ ಸರಿಯಲ್ಲ ನಿನಗೆಂದ ॥35॥
೦೩೬ ತರುಣಿಯರ ...{Loading}...
ತರುಣಿಯರ ಮುಂದಸ್ತ್ರಶಸ್ತ್ರವ
ತಿರುಹಬಹುದುಬ್ಬೇಳಬಹುದ
ಬ್ಬರಿಸಬಹುದೆನಗಾರು ಸರಿ ನಾ ಧೀರನೆನಬಹುದು
ಕರಿತುರಂಗದ ಬಹಳಶಸ್ತ್ರೋ
ತ್ಕರ ಕೃಪಾಣದ ಹರಹಿನಲಿ ಮೊಗ
ದಿರುಹದಿಹ ಕಲಿಯಾರು ಕುಂತೀಸೂನು ಕೇಳ್ ಎಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುವತಿಯರ ಎದುರಿನಲ್ಲಿ ಶಸ್ತ್ರಾಸ್ತ್ರಗಳನ್ನು ಝಳಪಿಸಬಹುದು ಗರ್ವಿಸಬಹುದು, ಗರ್ಜಿಸಬಹುದು. ನನಗೆ ಶೌರ್ಯದಲ್ಲಿ ಸಮ ಯಾರಿದ್ದಾರೆ ? ನಾನೇ ಅಸಮಾನವೀರ ಎಂದು ಕೊಚ್ಚಿಕೊಳ್ಳಬಹುದು, ಆನೆ, ಕುದುರೆ ಕತ್ತಿ ಮೊದಲಾದ ನಾನಾ ಶಸ್ತ್ರಾವಳಿಗಳ ಕಠಾರಿಗಳ ಸಮೂಹ ಹರಡಿರುವ ರಣದಲ್ಲಿ ಹಿಂದಿರುಗದಿರುವ ಕಲಿಗಳು ಯಾರಿದ್ದಾರೆ ಅರ್ಜುನ, ಹೇಳು ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಉತ್ಕರ-ಸಮೂಹ, ಮೊಗದಿರುಹದಿಹ-ವಿಮುಖನಾದಿರುವ, ಕಲಿ-ವೀರ, ಕುಂತೀಸೂನು-ಅರ್ಜುನ, ಉಬ್ಬೇಳು-ಗರ್ವಿಸು, ಅಬ್ಬರಿಸು-ಗರ್ಜಿಸು
ಮೂಲ ...{Loading}...
ತರುಣಿಯರ ಮುಂದಸ್ತ್ರಶಸ್ತ್ರವ
ತಿರುಹಬಹುದುಬ್ಬೇಳಬಹುದ
ಬ್ಬರಿಸಬಹುದೆನಗಾರು ಸರಿ ನಾ ಧೀರನೆನಬಹುದು
ಕರಿತುರಂಗದ ಬಹಳಶಸ್ತ್ರೋ
ತ್ಕರ ಕೃಪಾಣದ ಹರಹಿನಲಿ ಮೊಗ
ದಿರುಹದಿಹ ಕಲಿಯಾರು ಕುಂತೀಸೂನು ಕೇಳೆಂದ ॥36॥
೦೩೭ ಬನ್ಧುಹನನಕೆ ಮನದರಲು ...{Loading}...
ಬಂಧುಹನನಕೆ ಮನದರಲು ಭವ
ವಿಂಧ್ಯದಲಿ ಬೆಳ್ಳಾಗಿ ರೌರವ
ಸಿಂಧುವಿನೊಳೋಲಾಡದಿಹನೇ ಪರಮಪಾತಕನು
ಸಂಧಿಯಲಿ ನಮ್ಮವನಿ ಋಣಸಂ
ಬಂಧವುಂಟೇ ಬರಲಿ ರಣದಭಿ
ಸಂಧಿ ಸಾಕಿನ್ನೆನುತ ಫಲುಗುಣ ಶಿರವ ಬಾಗಿದನು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಂಧುಗಳ ಹತ್ಯೆಗೆ ಮನಸ್ಸು ಮಾಡಿದರೆ ಸಂಸಾರವೆಂಬ ವಿಂಧ್ಯಾಟವಿಯಲ್ಲಿ ಅವಿವೇಕಿಯಾಗಿ ಘೋರ ನರಕವೆಂಬ ಸಾಗರದಲ್ಲಿ ಆ ಪರಮಪಾತಕನು ಓಡಾಡದೆ ಇರುತ್ತಾನೆಯೇ ? ರಾಜ್ಯ ಬರುವ ಋಣ ನಮ್ಮ ಪಾಲಿಗಿದ್ದರೆ ಸಂಧಿ ಮೂಲಕ ಸಿಗಲಿ, ಯುದ್ಧದ ಪ್ರಸಂಗ ಇನ್ನು ಸಾಕು ಎಂದು ಅರ್ಜುನ ತಲೆಬಾಗಿ ಕುಳಿತನು.
ಪದಾರ್ಥ (ಕ.ಗ.ಪ)
ಬಂಧುಹನನ-ಬಂಧುಗಳ ಹತ್ಯೆ, ಭವವಿಂಧ್ಯ-ಸಂಸಾರವೆಂಬ ವಿಂಧ್ಯಾಟವಿ, ರೌರವಸಿಂಧು-ಘೋರ ನರಕವೆಂಬ ಸಾಗರ, ಪರಮಪಾತಕ-ಪರಮ ಪಾಪಿ, ಅಭಿಸಂಧಿ-ಸಂಚು, ಮೋಸ,
ಮೂಲ ...{Loading}...
ಬಂಧುಹನನಕೆ ಮನದರಲು ಭವ
ವಿಂಧ್ಯದಲಿ ಬೆಳ್ಳಾಗಿ ರೌರವ
ಸಿಂಧುವಿನೊಳೋಲಾಡದಿಹನೇ ಪರಮಪಾತಕನು
ಸಂಧಿಯಲಿ ನಮ್ಮವನಿ ಋಣಸಂ
ಬಂಧವುಂಟೇ ಬರಲಿ ರಣದಭಿ
ಸಂಧಿ ಸಾಕಿನ್ನೆನುತ ಫಲುಗುಣ ಶಿರವ ಬಾಗಿದನು ॥37॥
೦೩೮ ಎಲವೊ ಫಲುಗುಣ ...{Loading}...
ಎಲವೊ ಫಲುಗುಣ ನುಡಿದ ಭಾಷೆಯ
ಸಲಿಸಿ ಕಾನನದೊಳಗೆ ತೊಟ್ಟನೆ
ತೊಳಲಿ ಹದಿಮೂರಬುದ ಬಂದಾಪತ್ತನನುಭವಿಸಿ
ನೆಲನ ಭಾಗವ ಬೇಡಿ ಸಂಧಿಗೆ
ಕಳುಹಿದರೆ ಕೌರವನು ನೂಕಿಸಿ
ಕಳೆದ ನಿಮಗಿನ್ನಾವ ಹೊಲ್ಲೆಹವೆಂದನಸುರಾರಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು, ‘ಅರ್ಜುನ, ಆಡಿದ ಮಾತಿಗೆ ತಪ್ಪದೆ ನಡೆದು, ಅಡವಿಯಲ್ಲಿ ಅಲೆದಲೆದು ಬಳಲಿ ಹದಿಮೂರು ವರುಷಗಳ ಕಾಲ ಒದಗಿ ಬಂದ ಕಷ್ಟಗಳನ್ನು ಅನುಭವಿಸಿ, ರಾಜ್ಯದಲ್ಲಿ ಬರಬೇಕಾದ ಭಾಗವನ್ನು ಕೊಡಿ ಎಂದು ಕೇಳಿ, ಸಂಧಿಗೆ ನನ್ನನ್ನು ಕಳಿಸಿಕೊಟ್ಟರೆ ಕೌರವ ಸಭೆಯಿಂದ ತಳ್ಳಿಸಿ ಕಳಿಸಿದ, ಇಷ್ಟೆಲ್ಲ ಆದ ಮೇಲೂ ನಿಮಗೆ ಯುದ್ಧ ಮಾಡಲು ಏನಡ್ಡಿ ಇದೆ’ ಎಂದನು.
ಪದಾರ್ಥ (ಕ.ಗ.ಪ)
ತೊಟ್ಟನೆ-ಒಂದೇ ಸಮನೆ, ತೊಳಲಿ-ಬಳಲಿ, ಹೊಲ್ಲೆಹ-ದೋಷ, ಅಡ್ಡಿ, À್ಣ
ಮೂಲ ...{Loading}...
ಎಲವೊ ಫಲುಗುಣ ನುಡಿದ ಭಾಷೆಯ
ಸಲಿಸಿ ಕಾನನದೊಳಗೆ ತೊಟ್ಟನೆ
ತೊಳಲಿ ಹದಿಮೂರಬುದ ಬಂದಾಪತ್ತನನುಭವಿಸಿ
ನೆಲನ ಭಾಗವ ಬೇಡಿ ಸಂಧಿಗೆ
ಕಳುಹಿದರೆ ಕೌರವನು ನೂಕಿಸಿ
ಕಳೆದ ನಿಮಗಿನ್ನಾವ ಹೊಲ್ಲೆಹವೆಂದನಸುರಾರಿ ॥38॥
೦೩೯ ಎವಗೆ ನೀನುತ್ತರನ ...{Loading}...
ಎವಗೆ ನೀನುತ್ತರನ ಕಥೆವೇ
ಳುವೆ ನಗುವೆಯಾತನಿಗೆ ನೀನೀ
ಬವರದೊಳು ಗುರುವಾದೆ ಲೋಗರ ನಿಂದೆ ತನಗಹುದು
ಲವಲವಿಕೆಯಲಿ ಕಾದಬೇಕೆ
ಮ್ಮವನಿಯನು ಕೈಕೊಳಲುಬೇಕೆಂ
ಬವಗಡೆಯತನವೆತ್ತಲಡಗಿತು ಪಾರ್ಥ ಹೇಳೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನನಗೆ ನೀನು ಆಗಾಗ ಉತ್ತರ ಕುಮಾರನ ಪೌರುಷದ ಕಥೆಯನ್ನು ಹೇಳುತ್ತಿದ್ದೆ, ನಗುತ್ತಿದ್ದೆ. ಅವನಂತೆ ವರ್ತಿಸಿ ಅವನಿಗೆ ನೀನು ಈ ಸಮರದಲ್ಲಿ ಗುರುವಾಗುತ್ತಿರುವೆ. (ಅವನಿಗಿಂತ ಮಹಾ ಹೇಡಿ ಆಗುತ್ತಿರುವೆ) ನೀನು ಹೀಗೆ ಮಾಡುವುದರಿಂದ ಲೋಕನಿಂದೆ (ಜನಾಪವಾದ) ನನಗೆ ತಟ್ಟುತ್ತದೆ. ಆದ್ದರಿಂದ ಉತ್ಸಾಹದಲ್ಲಿ ನೀವೀಗ ಹೋರಾಡಬೇಕು, ನಮ್ಮ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂಬ ನಿನ್ನ ಪರಾಕ್ರಮ ಎಲ್ಲಿ ಮರೆಯಾಯಿತು’ ಹೇಳು ಪಾರ್ಥ ಎಂದನು ಕೃಷ್ಣ.
ಪದಾರ್ಥ (ಕ.ಗ.ಪ)
ಬವರ-ಯುದ್ಧ, ಲೋಗರನಿಂದೆ-ಜನಾಪವಾದ, ಲವಲವಿಕೆ-ಉತ್ಸಾಹ, ಕೈಕೊಳಲುಬೇಕು -ಸ್ವಾಧೀನ ಪಡಿಸಿಕೊಳ್ಳಬೇಕು, ಅವಗಡೆಯರನ-ಪರಾಕ್ರಮ.
ಮೂಲ ...{Loading}...
ಎವಗೆ ನೀನುತ್ತರನ ಕಥೆವೇ
ಳುವೆ ನಗುವೆಯಾತನಿಗೆ ನೀನೀ
ಬವರದೊಳು ಗುರುವಾದೆ ಲೋಗರ ನಿಂದೆ ತನಗಹುದು
ಲವಲವಿಕೆಯಲಿ ಕಾದಬೇಕೆ
ಮ್ಮವನಿಯನು ಕೈಕೊಳಲುಬೇಕೆಂ
ಬವಗಡೆಯತನವೆತ್ತಲಡಗಿತು ಪಾರ್ಥ ಹೇಳೆಂದ ॥39॥
೦೪೦ ಬಲುಹ ನೀ ...{Loading}...
ಬಲುಹ ನೀ ನೋಡುವರೆ ಪರಮಂ
ಡಳಿಕರನು ತಂದೊಡ್ಡು ಬಳಿಕೆ
ನ್ನಳವನೀಕ್ಷಿಸು ಸೆಡೆದೆನಾದಡೆ ನಿಮ್ಮ ಮೈದುನನೆ
ಕೊಲುವೆನೆಂತೈ ಭೀಷ್ಮರನು ಮನ
ವಳುಕದೆಂತೈ ತಪ್ಪುವೆನು ಗುರು
ಗಳಿಗೆ ಕೃಪಗುರುಸುತರನಿರಿವುದಿದಾವ ನಯವೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನನ್ನ ಪರಾಕ್ರಮ ಏನಾಯಿತು ಎಂದು ಕೇಳುತ್ತಿರುವೆ ಕೃಷ್ಣ, ಕೇಳು, ನನ್ನ ಶೌರ್ಯವನ್ನು ನೀ ಕಾಣಬೇಕಾದರೆ ಶತ್ರು ರಾಜರ ಮುಂದೆ ನನ್ನ ನಿಲ್ಲಿಸು, ಅನಂತರ ನನ್ನ ಸಾಮಥ್ರ್ಯವನ್ನು ಪರೀಕ್ಷಿಸು. ನಾನೇನಾದರೂ ಹಿಮ್ಮೆಟ್ಟಿದರೆ ನಾನು ನಿನ್ನ, ಮೈದುನನಲ್ಲ. ಭೀಷ್ಮರನ್ನು ಹೇಗೆ ತಾನೆ ಕೊಲ್ಲಲಿ ? ದ್ರೋಣರ ವಿಚಾರದಲ್ಲಿ ಯಾವ ರೀತಿಯ ತಪ್ಪು ದಾರಿ ಹಿಡಿಯಲಿ ? ಕೃಪಾಚಾರ್ಯರನ್ನು, ಅಶ್ವತ್ಥಾಮನನ್ನು ಘಾತಿಸುವುದು ಯಾವ ರಾಜನೀತಿ ಹೇಳು’ ಎಂದನು.
ಪದಾರ್ಥ (ಕ.ಗ.ಪ)
ಪರಮಂಡಳಿಕರು-ಶತ್ರುರಾಜರು, ತಂದೊಡ್ಡು-ಅವರನ್ನು ಮುಂದೆ ತಂದು ನಿಲ್ಲಿಸು, ಅಳವು-ಸಾಮಥ್ರ್ಯ, ತಪ್ಪುವೆನು-ತಪ್ಪು ದಾರಿ ಹಿಡಿಯುವುದು, ಇರಿವುದು-ಕೊಲ್ಲುವುದು, ನಯ-ರಾಜನೀತಿ, ಗುರುಸುತ-ಅಶ್ವತ್ಥಾಮ
ಮೂಲ ...{Loading}...
ಬಲುಹ ನೀ ನೋಡುವರೆ ಪರಮಂ
ಡಳಿಕರನು ತಂದೊಡ್ಡು ಬಳಿಕೆ
ನ್ನಳವನೀಕ್ಷಿಸು ಸೆಡೆದೆನಾದಡೆ ನಿಮ್ಮ ಮೈದುನನೆ
ಕೊಲುವೆನೆಂತೈ ಭೀಷ್ಮರನು ಮನ
ವಳುಕದೆಂತೈ ತಪ್ಪುವೆನು ಗುರು
ಗಳಿಗೆ ಕೃಪಗುರುಸುತರನಿರಿವುದಿದಾವ ನಯವೆಂದ ॥40॥
೦೪೧ ಹೊಳೆದು ಹೋಹೈಶ್ವರ್ಯಕೋಸುಗ ...{Loading}...
ಹೊಳೆದು ಹೋಹೈಶ್ವರ್ಯಕೋಸುಗ
ತಲೆಯ ಮಾರಿಯಧರ್ಮ ಕೋಟಿಯ
ಘಳಿಸಿ ಬಳಿಕಾ ಫಲವನಲಸದೆ ಭವಭವಂಗಳಲಿ
ತೊಳಲಿ ಬಳಲುವ ಜೀವಭಾವದೊ
ಳುಳಿವುದಾವುದು ಲಾಗು ಮೂಢರ
ಬಳಕೆಗಾವಂಜುವೆವು ಸಮರಕೆ ಶರಣು ಶರಣೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದುವರೆದು ಅರ್ಜುನನು ‘ಮಿಂಚಿನಂತೆ ಹೊಳೆದು ಮಾಯವಾಗುವ ನಶ್ವರ ಸಿರಿಗಾಗಿ, ವಂಶಪಾರಂಪರ್ಯದಿಂದ ಅಧರ್ಮದಲ್ಲಿ ಅನಂತ ಕೋಟಿ ಗಳಿಸಿ, ಆನಂತರ ಆ ಪಾಪಫಲವನ್ನು ಅಹಸ್ಯಪಡದೆ ಜನ್ಮ ಜನ್ಮಾಂತರಗಳಲ್ಲಿ (ಅಲೆದಾಡಿ) ಒದ್ದಾಡಿ ಅನುಭವಿಸಿ, ಆಯಾಸಗೊಳ್ಳುವ ಜೀವಾತ್ಮನಲ್ಲಿ ಉಳಿದಿರುವುದಾದರೂ ಏನು ? ಕಡು ಮೂರ್ಖರ ವಿಪರೀತ ಅಜ್ಞಾನಿಗಳ ರೀತಿನೀತಿಗಳಿಗೆ ನಾನು ಹೆದರುತ್ತೇನೆ. ಯುದ್ಧ ಮಾಡುವದಕ್ಕೆ ದೊಡ್ಡ ನಮಸ್ಕಾರ ’ ಎಂದನು.
ಪದಾರ್ಥ (ಕ.ಗ.ಪ)
ಲಾಗು-ಕಡು, ಮೂಢ-ಮೂರ್ಖ, ಜೀವಭಾವ-ಜೀವಾತ್ಮ, ಅಲಸದೆ-ಅಸಹ್ಯಪಡದೆ, ತೊಳಲಿ-ಅಲೆದಾಡಿ, ಒದ್ದಾಡಿ
ಮೂಲ ...{Loading}...
ಹೊಳೆದು ಹೋಹೈಶ್ವರ್ಯಕೋಸುಗ
ತಲೆಯ ಮಾರಿಯಧರ್ಮ ಕೋಟಿಯ
ಘಳಿಸಿ ಬಳಿಕಾ ಫಲವನಲಸದೆ ಭವಭವಂಗಳಲಿ
ತೊಳಲಿ ಬಳಲುವ ಜೀವಭಾವದೊ
ಳುಳಿವುದಾವುದು ಲಾಗು ಮೂಢರ
ಬಳಕೆಗಾವಂಜುವೆವು ಸಮರಕೆ ಶರಣು ಶರಣೆಂದ ॥41॥
೦೪೨ ಲಾಲಿಸದೆ ಕುಲಛಲವ ...{Loading}...
ಲಾಲಿಸದೆ ಕುಲಛಲವ ನೀತಿಯ
ಪಾಲಿಸದೆ ಕೊಲೆಗಡುಕತನದೊಳು
ಮೇಲುಗಾಣದೆ ಬಂಧುಗಳ ಗುರುಗಳ ಸಹೋದರರ
ಕೋಲ ಮೊನೆಯಲಿ ಕೊಂದು ನೆತ್ತರ
ಗೂಳನುಂಬವೊಲಖಿಳ ರಾಜ್ಯದ
ಮೇಲೆ ಸೊಗಸುವ ಸಿರಿಯನೊಲ್ಲೆನು ಕೊಲುವನಲ್ಲೆಂದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು, ವಂಶದ ಪ್ರತಿಷ್ಠೆಯನ್ನು ಗಮನಿಸದೆ, ರಾಜನೀತಿಯನ್ನು ಪರಿಪಾಲಿಸದೆ, ಕೊಲ್ಲುವ ಕಾರ್ಯದಲ್ಲಿ ಯಾವ ಶ್ರೇಯಸ್ಸೂ ಕಾಣದೆ, ಬಂಧುಗಳನ್ನು ಗುರುಗಳನ್ನು ಅಣ್ಣ ತಮ್ಮಂದಿರನ್ನು ಬಾಣದ ತುದಿಗಳಿಂದ ಕೊಂದು, ರಕ್ತಭೋಜನವನ್ನು ಮಾಡಿದಂತೆ, ಸಮಸ್ತ ರಾಜ್ಯವನ್ನು ಪಡೆದು ಮೆರೆಯುವ ಐಶ್ವರ್ಯದ ಭಾಗ್ಯವನ್ನು ನಾನೊಲ್ಲೆ. ನಾನು ಯುದ್ಧ ಮಾಡುವವನು ಅಲ್ಲ ಎಂದನು.
ಪದಾರ್ಥ (ಕ.ಗ.ಪ)
ಕುಲಛಲ-ವಂಶ ಪ್ರತಿಷ್ಠೆ, ನೆತ್ತರುಗೂಳು-ರಕ್ತ ಭೋಜನ,
ಮೂಲ ...{Loading}...
ಲಾಲಿಸದೆ ಕುಲಛಲವ ನೀತಿಯ
ಪಾಲಿಸದೆ ಕೊಲೆಗಡುಕತನದೊಳು
ಮೇಲುಗಾಣದೆ ಬಂಧುಗಳ ಗುರುಗಳ ಸಹೋದರರ
ಕೋಲ ಮೊನೆಯಲಿ ಕೊಂದು ನೆತ್ತರ
ಗೂಳನುಂಬವೊಲಖಿಳ ರಾಜ್ಯದ
ಮೇಲೆ ಸೊಗಸುವ ಸಿರಿಯನೊಲ್ಲೆನು ಕೊಲುವನಲ್ಲೆಂದ ॥42॥
೦೪೩ ಆರನೈ ನೀ ...{Loading}...
ಆರನೈ ನೀ ಕೊಲುವೆ ನಿನ್ನಿಂ
ದಾರು ಸಾವರು ದೇಹವನೊ ನಿಜ
ಧೀರನಾತ್ಮನ ಕೊಲುವೆಯೋ ದಿಟ ನಿನ್ನ ಬಗೆಯೇನು
ಚಾರುದೇಹಕೆ ಭೂತ ನಿಕರಕೆ
ವೈರವಿಲ್ಲುಳಿದಂತೆ ವಿಗತವಿ
ಕಾರನಚಲನಗಮ್ಯನದ್ವಯನಾತ್ಮ ನೋಡೆಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾರನ್ನು ನೀ ಕೊಲ್ಲುವೆ ? ನಿನ್ನಿಂದ ಸಾಯುವವರು ಯಾರು ? ನಿಜವಾಗಿ ಧೀರನ ದೇಹವನ್ನು ನಾಶಮಾಡುವೆಯೇ ? ಅಥವಾ ಆತ್ಮವನ್ನು ನಾಶ ಮಾಡುವೆಯೇ ? ನಿಜಕ್ಕೂ ನಿನ್ನ ಮನಸ್ಸಿನಲ್ಲಿರುವುದೇನು ? ಈ ಸುಂದರ ದೇಹಕ್ಕೆ ಮತ್ತು ಪಂಚಭೂತಗಳಿಗೆ ಏನೇನೂ ದ್ವೇಷವಿಲ್ಲ. ಈ ವಿಷಯ ಹೊರತಾಗಿ, ಆತ್ಮನು ಯಾವ ವಿಧವಾದ ಮಾರ್ಪಾಟನ್ನೂ ಹೊಂದದವನು ; ಚಲಿಸದವನು, ಬಳಿ ಸೇರಿಸಲಾಗದವನು. ಎರಡಲ್ಲದವನು ತಿಳಿ ಎಂದನು.
ಪದಾರ್ಥ (ಕ.ಗ.ಪ)
ವಿಗಡವಿಕಾರನು-ಮಾರ್ಪಾಡನ್ನು ಹೊಂದದವನು, ಅದ್ವಯನು-ಎರಡಲ್ಲದವನು
ಮೂಲ ...{Loading}...
ಆರನೈ ನೀ ಕೊಲುವೆ ನಿನ್ನಿಂ
ದಾರು ಸಾವರು ದೇಹವನೊ ನಿಜ
ಧೀರನಾತ್ಮನ ಕೊಲುವೆಯೋ ದಿಟ ನಿನ್ನ ಬಗೆಯೇನು
ಚಾರುದೇಹಕೆ ಭೂತ ನಿಕರಕೆ
ವೈರವಿಲ್ಲುಳಿದಂತೆ ವಿಗತವಿ
ಕಾರನಚಲನಗಮ್ಯನದ್ವಯನಾತ್ಮ ನೋಡೆಂದ ॥43॥
೦೪೪ ತನುವಳಿದ ಬಳಿಕಿನಲಿ ...{Loading}...
ತನುವಳಿದ ಬಳಿಕಿನಲಿ ತನು ಸಂ
ಜನಿಸುಗೆಂಬುದು ಭವವ ಬಳಸುವ
ತನುವಿನಲಿ ಕೌಮಾರ ಯೌವನ ವಾರ್ಧಿಕಂಗಳಲಿ
ತನು ವಿಕಾರಿಸುವದು ಸುಕರ್ಮದ
ವಿನುತ ದುಷ್ಕೃತವೆನಿಪ ಹುಸಿ ಕ
ಲ್ಪನೆ ಶರೀರಕ್ಕಲ್ಲದಾತ್ಮಂಗಿಲ್ಲ ಕೇಳ್ ಎಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಹ ಅಳಿದು ಹೋದ ಮೇಲೆ ಮತ್ತೆ ಬೇರೆ ದೇಹ ಹುಟ್ಟಿ ಬರುತ್ತದೆ ಎಂಬುದು ನಿಜ. ಜನ್ಮಾಂತರಗಳಲ್ಲಿ ಹುಟ್ಟಿಗೆ ಒಳಗಾಗುವ ದೇಹದಲ್ಲಿ ಬಾಲ್ಯ, ಯೌವನ ತಾರುಣ್ಯ ವಾರ್ಧಕ್ಯ (ಮುಪ್ಪಿನಲ್ಲಿ) ಗಳಲ್ಲಿ ದೇಹ ಬದಲಾವಣೆ ಹೊಂದುತ್ತದೆ. ಶ್ರೇಷ್ಠ ಸತ್ಕರ್ಮಗಳು, ಪಾಪದ ದುಷ್ಕರ್ಮಗಳು ಎಂಬ ಹುಸಿ ಕಲ್ಪನೆಗಳು ದೇಹಕ್ಕೆ ಅನ್ವಯಿಸುತ್ತವೆಯೇ ಹೊರತು ಆತ್ಮನಿಗಿಲ್ಲ, ನನ್ನ ಮಾತನ್ನು ನಂಬು ಎಂದನು.
ಮೂಲ ...{Loading}...
ತನುವಳಿದ ಬಳಿಕಿನಲಿ ತನು ಸಂ
ಜನಿಸುಗೆಂಬುದು ಭವವ ಬಳಸುವ
ತನುವಿನಲಿ ಕೌಮಾರ ಯೌವನ ವಾರ್ಧಿಕಂಗಳಲಿ
ತನು ವಿಕಾರಿಸುವದು ಸುಕರ್ಮದ
ವಿನುತ ದುಷ್ಕೃತವೆನಿಪ ಹುಸಿ ಕ
ಲ್ಪನೆ ಶರೀರಕ್ಕಲ್ಲದಾತ್ಮಂಗಿಲ್ಲ ಕೇಳೆಂದ ॥44॥
೦೪೫ ಅಳಿವನಲ್ಲುದಯಿಸುವನಲ್ಲ ...{Loading}...
ಅಳಿವನಲ್ಲುದಯಿಸುವನಲ್ಲ
ಗ್ಗಳಿಸುವವನಲ್ಲಡಗುವವನ
ಲ್ಲಳಿವ ದೇಹದ ಬಗೆಗೆ ಹೊಣೆಯೇ ಸಚ್ಚಿದಾತ್ಮಕನು
ಕಳಚಿದಡೆ ಕಳಚುವುದು ಕಾಯವಿ
ದುಳಿದಡುಳಿವುದು ಚಿನುಮಯಂಗೀ
ಕಳಕಳದ ಕಾಲಾಟ ಕೊಳ್ಳದು ಪಾರ್ಥ ಕೇಳ್ ಎಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಆತ್ಮ ಸಾಯುವವನಲ್ಲ ಹುಟ್ಟುವವನು ಅಲ್ಲ. ಕುಗ್ಗುವವನು ಅಲ್ಲ, ವೃದ್ಧಿಸುವವನೂ ಅಲ್ಲ, ನಶ್ವರವಾದ ನಶಿಸುವ ದೇಹದ ರೀತಿನೀತಿಗಳಿಗೆ ಚಿನ್ಮಯರೂಪಿ ಪರಮಾತ್ಮ ಜವಾಬುದಾರನೇ ? ಈ ದೇಹವನ್ನು ಆತ್ಮನು ಬಿಟ್ಟು ಹೊರಡಬೇಕಾದರೆ ಬಿಡುತ್ತಾನೆ. ದೇಹದಲ್ಲಿ ಇರಬೇಕಾದರೆ ಇರುತ್ತಾನೆ. ಪರಮಾತ್ಮನಿಗೆ ಜನ್ಮಾಂತರದ ಹುಟ್ಟು ಸಾವಿನ ಸಂಬಂಧದ ಜಂಜಾಟ ಇರುವುದಿಲ್ಲ ಅರ್ಜುನನೆ ಕೇಳು ಎಂದನು.
ಪದಾರ್ಥ (ಕ.ಗ.ಪ)
ಅಗ್ಗಳಿಸು-ವೃದ್ಧಿಸು, ಅಡಗು-ಕುಗ್ಗು, ಸಚ್ಚಿದಾತ್ಮಕ-ಚೈತನ್ಯ ಸ್ವರೂಪನಾದ ಆತ್ಮ, ಚಿನ್ಮಯ,
ಮೂಲ ...{Loading}...
ಅಳಿವನಲ್ಲುದಯಿಸುವನಲ್ಲ
ಗ್ಗಳಿಸುವವನಲ್ಲಡಗುವವನ
ಲ್ಲಳಿವ ದೇಹದ ಬಗೆಗೆ ಹೊಣೆಯೇ ಸಚ್ಚಿದಾತ್ಮಕನು
ಕಳಚಿದಡೆ ಕಳಚುವುದು ಕಾಯವಿ
ದುಳಿದಡುಳಿವುದು ಚಿನುಮಯಂಗೀ
ಕಳಕಳದ ಕಾಲಾಟ ಕೊಳ್ಳದು ಪಾರ್ಥ ಕೇಳೆಂದ ॥45॥
೦೪೬ ನಿನಗೆ ಸಾವವನಲ್ಲ ...{Loading}...
ನಿನಗೆ ಸಾವವನಲ್ಲ ನಿನ್ನಂ
ಬಿನಲಿ ನೋವವನಲ್ಲ ದಿಟ ನೀ
ಮುನಿದು ಗಗನಕ್ಕಲಗನುಗಿದಡೆ ಗಗನವಳುಕುವುದೇ
ತನುವಿನೀ ಗುಣಧರ್ಮ ಕರ್ಮದ
ಹೊನಲು ಹೊಗುವುದೆ ನಿತ್ಯನಿರ್ಮಲ
ಚಿನುಮಯಾತ್ಮನನೆಲೆ ವೃಥಾಹಂಕಾರವೇಕೆಂದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಆತ್ಮನು ನಿನ್ನಿಂದ ಸಾಯುವವನಲ್ಲ. ನಿನ್ನ ಬಾಣದ ಪೆಟ್ಟಿನಿಂದ ನೋವನ್ನು ಅನುಭವಿಸುವವನಲ್ಲ. ಇದು ನಿಜ. ನೀನು ಕೋಪಗೊಂಡು ಆಕಾಶಕ್ಕೆ ಕತ್ತಿಯಿಂದ ತಿವಿದರೆ ಆಕಾಶವು ಹೆದರುವುದೇ ? ದೇಹದ ಗುಣಲಕ್ಷಣಗಳಾದ ಕರ್ಮದ ಪ್ರವಾಹ ಆತ್ಮನನ್ನು ಪ್ರವೇಶಿಸುತ್ತದೆಯೇ ? ಇಲ್ಲ ಎಂದ ಮೇಲೆ ಸುಮ್ಮನೆ ನಿನಗೆ ಈ ಹಮ್ಮು ಏಕೆ ?
ಪದಾರ್ಥ (ಕ.ಗ.ಪ)
ಉಗಿ-ತಿವಿ,
ಮೂಲ ...{Loading}...
ನಿನಗೆ ಸಾವವನಲ್ಲ ನಿನ್ನಂ
ಬಿನಲಿ ನೋವವನಲ್ಲ ದಿಟ ನೀ
ಮುನಿದು ಗಗನಕ್ಕಲಗನುಗಿದಡೆ ಗಗನವಳುಕುವುದೇ
ತನುವಿನೀ ಗುಣಧರ್ಮ ಕರ್ಮದ
ಹೊನಲು ಹೊಗುವುದೆ ನಿತ್ಯನಿರ್ಮಲ
ಚಿನುಮಯಾತ್ಮನನೆಲೆ ವೃಥಾಹಂಕಾರವೇಕೆಂದ ॥46॥
೦೪೭ ಆದಡೆಲೆ ಮುರವೈರಿ ...{Loading}...
ಆದಡೆಲೆ ಮುರವೈರಿ ಕೇಳಿದಿ
ರಾದ ಬಾಂಧವರನಿಬರನು
ಕಾದಿ ಕೊಂದನು ಪಾರ್ಥ ಪಾತಕನೆನ್ನದೇ ಲೋಕ
ಈ ದುರಂತಕ್ಕೇನುಗತಿಯಪ
ವಾದವಾವಂಗಾದುದಾತನ
ವೈದಿಕನು ಇಹಪರಕೆ ಬಾಹಿರನೆಂದನಾ ಪಾರ್ಥ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗಿದ್ದರೆ ಎಲೈ ಕೃಷ್ಣನೇ ನನ್ನ ಮಾತನ್ನು ಕೇಳು. ಈ ಅರ್ಜುನ ಪ್ರತಿಭಟಿಸಿದ ಬಂಧುಗಳನ್ನೆಲ್ಲಾ ಹೋರಾಡಿ ಕೊಂದು ಹಾಕಿದನು ಪಾಪಿ ಎಂದು ಜನರು ಕರೆಯುವುದಿಲ್ಲವೇ ? ಈ ಅನಾಹುತಕ್ಕೆ ಯಾರು ಹೊಣೆ ? ಈ ಅಪಕೀರ್ತಿ ಯಾರಿಗೆ ಬರುತ್ತದೆಯೋ ಅವನೇ ಅವೈದಿಕ (ವೇದ ಬಾಹಿರನು, ಉಭಯ ಲೋಕ ಭ್ರಷ್ಟ). ಇಲ್ಲಿಯೂ ಸಲ್ಲದವನು ಅಲ್ಲಿಯೂ ಸಲ್ಲದವನು, ಎಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
್ಟ
ಮೂಲ ...{Loading}...
ಆದಡೆಲೆ ಮುರವೈರಿ ಕೇಳಿದಿ
ರಾದ ಬಾಂಧವರನಿಬರನು
ಕಾದಿ ಕೊಂದನು ಪಾರ್ಥ ಪಾತಕನೆನ್ನದೇ ಲೋಕ
ಈ ದುರಂತಕ್ಕೇನುಗತಿಯಪ
ವಾದವಾವಂಗಾದುದಾತನ
ವೈದಿಕನು ಇಹಪರಕೆ ಬಾಹಿರನೆಂದನಾ ಪಾರ್ಥ ॥47॥
೦೪೮ ಮರುಳೆ ಫಲುಗುಣ ...{Loading}...
ಮರುಳೆ ಫಲುಗುಣ ಕೇಳು ಸೂರ್ಯನ
ಕಿರಣ ಹೊಲೆಯನ ಚರಿಸಿದರೆ ಹೊಲೆ
ಹೊರುವುದೇ ಸ್ನಾನದಲಿ ವಿಧಿಸಲು ಬಹುದೆ ನೋಡಿದನ
ಪರಮತತ್ತ್ವಜ್ಞಾನ ನಿಷ್ಠನ
ಚರಿತವೇ ಸುಚರಿತ್ರವಾತಂ
ಗಿರದು ಕೇಳು ಸುಕರ್ಮದುಷ್ಕರ್ಮಾದಿ ಗುಣಲೇಪ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭ್ರಾಂತನಾದ ಅರ್ಜುನನೇ ಕೇಳು, ಸೂರ್ಯನ ಕಿರಣಗಳು ಅಸ್ಪೃಶ್ಯನಾದವನ ಮೇಲೆ (ಹೀನಕುಲದವನ ಮೇಲೆ) ಬಿದ್ದರೆ ಅದಕ್ಕೆ ಮಲಿನತೆ ಉಂಟಾಗುತ್ತದೆಯೇ ? ಈ ಕಿರಣಗಳನ್ನು ನೋಡಿದವನಿಗೆ ಪ್ರಾಯಶ್ಚಿತ್ತವಾಗಿ ಸ್ನಾನ ಮಾಡಲು ಅಪ್ಪಣೆ ಮಾಡುವುದು ಸರಿಯೇ? ಶ್ರೇಷ್ಠ ತತ್ವಜ್ಞಾನಿ ಆದವನ ನಡೆವಳಿಕೆಯೇ ಸದಾಚಾರವು. ಅಂಥ ಸುಜ್ಞಾನಿಗೆ ಪುಣ್ಯ ಪಾಪಗಳೇ ಮೊದಲಾದ ಗುಣಲಕ್ಷಣಗಳು ತಗುಲುವುದಿಲ್ಲ ತಿಳಿ ಎಂದನು.
ಪದಾರ್ಥ (ಕ.ಗ.ಪ)
ಹೊಲೆಯ-ಅಸ್ಪೃಶ್ಯ, ಹೊಲೆ-ಮಲಿನತೆ, ಸುಕರ್ಮದುಷ್ಕರ್ಮ-ಪುಣ್ಯಪಾಪ,
ಮೂಲ ...{Loading}...
ಮರುಳೆ ಫಲುಗುಣ ಕೇಳು ಸೂರ್ಯನ
ಕಿರಣ ಹೊಲೆಯನ ಚರಿಸಿದರೆ ಹೊಲೆ
ಹೊರುವುದೇ ಸ್ನಾನದಲಿ ವಿಧಿಸಲು ಬಹುದೆ ನೋಡಿದನ
ಪರಮತತ್ತ್ವಜ್ಞಾನ ನಿಷ್ಠನ
ಚರಿತವೇ ಸುಚರಿತ್ರವಾತಂ
ಗಿರದು ಕೇಳು ಸುಕರ್ಮದುಷ್ಕರ್ಮಾದಿ ಗುಣಲೇಪ ॥48॥
೦೪೯ ಕೊನ್ದೆ ನಾನೆನಗಾಯ್ತು ...{Loading}...
ಕೊಂದೆ ನಾನೆನಗಾಯ್ತು ಪಾತಕ
ವೆಂದು ಮನದಲಿ ಮರುಗುವಾತನ
ಬಂದಿಯಲಿ ಹೊಣೆಗೊಂಬವಾಹಂಕಾರ ಮಮಕಾರ
ಕಂದು ಕಲೆ ತನಗೆತ್ತಣದು ನಿ
ದ್ರ್ವಂದ್ವಕನು ಮೃತ ಜಾತ ತಾನ
ಲ್ಲೆಂದು ಕಂಡರವಂಗೆ ಪಾಪವಿಲೇಪವಿಲ್ಲೆಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಂದವನು ನಾನು, ನನಗೆ ಪಾಪ ಬಂದಿತು, ಎಂದು ಮನಸ್ಸಿನಲ್ಲಿ ದುಃಖಿಸುವ, ಮದ ಮೋಹಗಳಿಗೆ ಒಳಗಾಗುವ ವ್ಯಕ್ತಿಯಲ್ಲಿನ ಅಹಂಕಾರ, ಮಮಕಾರಗಳೇ ಅದಕ್ಕೆ ಹೊಣೆಯಾಗುತ್ತವೆ. ಕ್ಷಯ ವೃದ್ಧಿಗಳು ತನಗೆಲ್ಲಿಯದು ? ನಾನು ದ್ವಂದ್ವಾತೀತನು (ಒಳಿತು ಕೆಡುಕುಗಳಿಂದ ದೂರನು) ಜನನ-ಮರಣ ತನಗಿಲ್ಲ ಎಂದು ತಿಳಿದರೆ ಅಂಥವನಿಗೆ ಯಾವ ಪಾಪ ಸ್ಪರ್ಶವೂ ಇಲ್ಲ ಎಂದು ಕೃಷ್ಣನು ತಿಳಿಸುತ್ತಾನೆ.
ಪದಾರ್ಥ (ಕ.ಗ.ಪ)
ಬಂದಿ-ಒಳಗಾಗುವುದು, ಅಹಂಕಾರ-ಮಮಕಾರ-ಮದಮೋಹ, ಕಂದು ಕಲೆ- ಕ್ಷಯ ವೃದ್ಧಿ, ನಿದ್ರ್ವಂದ್ವಕ-ದ್ವಂದ್ವಾತೀತ, ಒಳಿತು ಕೆಡಕುಗಳಿಗೆ ದೂರನು, ಮೃತ ಜಾತ - ಜನನ ಮರಣ ಇರುವವನು , ಪಾಪವಿಲೇಪ-ಪಾಪಸ್ಪರ್ಶ.
ಮೂಲ ...{Loading}...
ಕೊಂದೆ ನಾನೆನಗಾಯ್ತು ಪಾತಕ
ವೆಂದು ಮನದಲಿ ಮರುಗುವಾತನ
ಬಂದಿಯಲಿ ಹೊಣೆಗೊಂಬವಾಹಂಕಾರ ಮಮಕಾರ
ಕಂದು ಕಲೆ ತನಗೆತ್ತಣದು ನಿ
ದ್ರ್ವಂದ್ವಕನು ಮೃತ ಜಾತ ತಾನ
ಲ್ಲೆಂದು ಕಂಡರವಂಗೆ ಪಾಪವಿಲೇಪವಿಲ್ಲೆಂದ ॥49॥
೦೫೦ ಹರಿಯೆ ಚಿತ್ತಯಿಸೈಯಹಿಂಸಾ ...{Loading}...
ಹರಿಯೆ ಚಿತ್ತಯಿಸೈಯಹಿಂಸಾ
ಪರಮಧರ್ಮವು ಎಂಬ ವಾಕ್ಯದ
ಸರಣಿ ಸಾರೋದ್ಧಾರವಲ್ಲಾ ಸಕಲದರುಶನಕೆ
ನೆರವಿಯಿನಿಬರ ತನ್ನವರ ಕೊರ
ಳರಿತದಲಿ ಕೊಕ್ಕರಿಸದಿರ್ದಡೆ
ನರಕದೊಳು ನೂರೊಂದು ಕುಲ ಮುಳುಗಾಡದಿರದೆಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನೇ ಆಲಿಸು, ಅಹಿಂಸೆಯೇ ಶ್ರೇಷ್ಠ ಧರ್ಮವು ಎಂಬ ವಿಚಾರಧಾರೆ ಸಮಸ್ತ ಧರ್ಮ ತತ್ವಗಳ ಮುಖ್ಯ ತತ್ವಸಾರವಾಗಿದೆ ಅಲ್ಲವೇ ? ಆದರೆ, ನೆರೆದಿರುವ ಇಷ್ಟೊಂದು ಜನರ, ಆಪ್ತರ ಕೊಲೆಗೆ ಹೇಸದಿದ್ದರೆ ನನ್ನ ನೂರೊಂದು ತಲೆಮಾರುಗಳು ನರಕದಲ್ಲಿ ಬಿದ್ದು ಒದ್ದಾಡದೆ ಇರುವುದಿಲ್ಲ ಎಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
ಪರಮಧರ್ಮ-ಶ್ರೇಷ್ಠ ಧರ್ಮ, ದರುಶನ-ಧರ್ಮ ತತ್ವ, ಸಾರೋದ್ಧಾರ-ಮುಖ್ಯ ತತ್ತ್ವಸಾರ, ಕೊಕ್ಕರಿಸು-ಹೇಸು, ನೂರೊಂದು ಕುಲ-ನೂರೊಂದು ತಲೆಮಾರು,
ಮೂಲ ...{Loading}...
ಹರಿಯೆ ಚಿತ್ತಯಿಸೈಯಹಿಂಸಾ
ಪರಮಧರ್ಮವು ಎಂಬ ವಾಕ್ಯದ
ಸರಣಿ ಸಾರೋದ್ಧಾರವಲ್ಲಾ ಸಕಲದರುಶನಕೆ
ನೆರವಿಯಿನಿಬರ ತನ್ನವರ ಕೊರ
ಳರಿತದಲಿ ಕೊಕ್ಕರಿಸದಿರ್ದಡೆ
ನರಕದೊಳು ನೂರೊಂದು ಕುಲ ಮುಳುಗಾಡದಿರದೆಂದ ॥50॥
೦೫೧ ನಿರುತವರ್ಜುನ ಕೇಳಹಿಂಸಾ ...{Loading}...
ನಿರುತವರ್ಜುನ ಕೇಳಹಿಂಸಾ
ಪರಮಧರ್ಮದ ತತ್ಸ್ವರೂಪವ
ನೊರೆವೆನಾಲಿಸು ಸಚ್ಚಿದಾನಂದೈಕಘನವೆನಿಪ
ನಿರುಪಮಾತ್ಮನ ನಿಲವನರಿಯದೆ
ನರಕಿ ಜಡನಾಜೀವವೆಂಬೀ
ತರಳತನವೇ ಹಿಂಸೆಯರಿವಡಹಿಂಸೆ ಕೇಳ್ ಎಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠವಾದ ಅಹಿಂಸಾ ಧರ್ಮದ ನಿಜರೂಪವನ್ನು ಹೇಳುತ್ತೇನೆ, ದೃಢ ಮನಸ್ಸಿನಿಂದ ಕೇಳು ಅರ್ಜುನಾ, ಸತ್ಯಸ್ವರೂಪಿಯೂ, ಚಿನ್ಮಯನೂ, ಆನಂದರೂಪಿಯೂ, ಏಕೈಕ ಸ್ಥಿರರೂಪಿಯೂ ಅನುಪಮನೂ ಆದ, ಆತ್ಮನ ಸ್ವರೂಪವನ್ನು ತಿಳಿಯದೆ ನಾನು ಪಾಪಿ (ನರಕಿ) ಜಡ (ದೇಹಿ) ಜೀವ ಜೀವಾತ್ಮ ಎಂದು ತಿಳಿಯುವ ಬಾಲಿಶತನ ಹಿಂಸೆಯ ತತ್ವವಾಗಿದೆ. ಈ ಬಾಲಿಶತನವನ್ನು ತೊರೆದು ಸತ್ಯವನ್ನು ತಿಳಿದರೆ ಅದೇ ಅಹಿಂಸೆ ಎಂದು ತಿಳಿ ಎಂದನು.
ಮೂಲ ...{Loading}...
ನಿರುತವರ್ಜುನ ಕೇಳಹಿಂಸಾ
ಪರಮಧರ್ಮದ ತತ್ಸ್ವರೂಪವ
ನೊರೆವೆನಾಲಿಸು ಸಚ್ಚಿದಾನಂದೈಕಘನವೆನಿಪ
ನಿರುಪಮಾತ್ಮನ ನಿಲವನರಿಯದೆ
ನರಕಿ ಜಡನಾಜೀವವೆಂಬೀ
ತರಳತನವೇ ಹಿಂಸೆಯರಿವಡಹಿಂಸೆ ಕೇಳೆಂದ ॥51॥
೦೫೨ ನೆರವಿ ಬೇರೊನ್ದಿಲ್ಲ ...{Loading}...
ನೆರವಿ ಬೇರೊಂದಿಲ್ಲ ಭೂತದ
ಹರಹು ಕರಣೇಂದ್ರಿಯದ ಸಂದಣಿ
ಮರುತ ಪಂಚಕ ಬುದ್ಧಿ ಕರ್ಮೇಂದ್ರಿಯದ ಕಾಲೆಣಿಕೆ
ನೆರೆಯಲೊಂದಾಗಿಹುದು ಕಲ್ಪನೆ
ಹರೆದು ಜೀವಭ್ರಾಂತಿ ಬೀತಡೆ
ಪರಮ ತಾನಿಹನಲ್ಲಿ ಕೊಲುವರೆ ಸಾವನಲ್ಲೆಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- 5 ಪಂಚಭೂತಗಳ ಸಾತ್ವಿಕಾಂಶದಿಂದ ಕೂಡಿದ 5 ಅಂತಃಕರಣಗಳು (ಕರಣ) 5 ವಾಯುಗಳು (ಮರುತಪಂಚಕ) 5 ಜ್ಞಾನೇಂದ್ರಿಯಗಳು, 5 ಕರ್ಮೇಂದ್ರಿಯಗಳು, 5 ವಿಷಯಗಳು (ಒಂದಾಗಿ ಸೇರಿ ಸೂಕ್ಷ್ಮ ದೇಹವಾಗಿದೆ) ಆದರೆ, ಜೀವಾತ್ಮನನ್ನು ಆವರಿಸಿದ ಮಾಯೆ ಹೋದರೆ ಅಲ್ಲಿ ಶುದ್ಧ ಪರಬ್ರಹ್ಮನು ಇರುತ್ತಾನೆ. ಅವನನ್ನು ಕೊಲ್ಲಲು ಆಗುವುದಿಲ್ಲ ಅವನು ಸಾಯುವನೂ ಅಲ್ಲ ಎಂದನು.
ಟಿಪ್ಪನೀ (ಕ.ಗ.ಪ)
ಟಿಪ್ಪಣಿ : (ಪಂಚಭೂತಗಳು 5 ಪೃಥ್ವಿ, ಅ¥,ï ತೇಜ, ವಾಯು, ಆಕಾಶ,
ಪಂಚ ಕರಣೇಂದ್ರಿಯಗಳು - 5 ಅಂತಃಕರಣ, 1 ಅಂತಃಕರಣ 2 ಮನ, 3 ಬುದ್ಧಿ, 4 ಚಿತ್ತ, 5 ಅಹಂಕಾರ.
ಮರುತಪಂಚಕ 5 : ವ್ಯಾನ, ಸಮಾನ, ಉದಾನ, ಪ್ರಾಣ, ಅಪಾನ ,
ಕರ್ಮೇಂದ್ರಿಯಗಳು 5 : ವಾಚಾ, ಪಾಣಿ, ಪಾದ, ಶಿಶ್ನ, ಗುದ,
ಬುದ್ಧಿಯ ಇಂದ್ರಿಯಗಳು 5 : ಶ್ರೋತ್ರಾ, ತ್ವಚಾ, ಇಕ್ಷು, ಜಿಹ್ವಾ, ಘ್ರಾಣ,
ನೆರೆಯಲು-25 ಸೇರಿ ಒಂದಾಗಿ ಸೂಕ್ಷ್ಮ ದೇಹವಾಗಿದೆ.)
ಆಕರ : ಶಂಕರಾಚಾರ್ಯರ ಪಂಚೀಕರಣ, ಗ್ರಂಥ : ರಘುನಾಥ ಗಂಗಾಧರ ವಾಡೇದ ಅವರ ಗ್ರಂಥದಿಂದ
ಮೂಲ ...{Loading}...
ನೆರವಿ ಬೇರೊಂದಿಲ್ಲ ಭೂತದ
ಹರಹು ಕರಣೇಂದ್ರಿಯದ ಸಂದಣಿ
ಮರುತ ಪಂಚಕ ಬುದ್ಧಿ ಕರ್ಮೇಂದ್ರಿಯದ ಕಾಲೆಣಿಕೆ
ನೆರೆಯಲೊಂದಾಗಿಹುದು ಕಲ್ಪನೆ
ಹರೆದು ಜೀವಭ್ರಾಂತಿ ಬೀತಡೆ
ಪರಮ ತಾನಿಹನಲ್ಲಿ ಕೊಲುವರೆ ಸಾವನಲ್ಲೆಂದ ॥52॥
೦೫೩ ಕರ್ಮವೇ ಹೂಡುವುದು ...{Loading}...
ಕರ್ಮವೇ ಹೂಡುವುದು ತನುವನು
ಕರ್ಮವೇ ಸಲಹುವುದು ಕಡೆಯಲಿ
ಕರ್ಮವೇ ಕಳಚುವುದು ಜೀವಭ್ರಮೆಯ ಬಾಹಿರರ
ಕರ್ಮ ತಾನೇನಾದಡಾಗಲಿ
ನಿರ್ಮಮತೆಯಲಿ ಮಾಡಿ ನಮ್ಮಲಿ
ನಿರ್ಮಿಸಲು ಕಲಿಪಾರ್ಥ ನೀ ನಿರ್ಲೇಪನಹೆಯೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಹವೇ ಜೀವಾತ್ಮ ಎಂಬ ತಪ್ಪು ತಿಳಿವಳಿಕೆಯಿಂದ ದೂರವಾದವನಿಂದ ದೇಹದಲ್ಲಿ ಕರ್ಮಬಂಧವಾಗುವುದು. ಹಾಗೆಂದರೆ ದೇಹ ಮತ್ತು ಜೀವಾತ್ಮ ಬೇರೆ ಎಂದು ತಿಳಿದವನಿಂದ, ದೇಹವೇ ಕರ್ಮಬಂಧನಕ್ಕೆ ಸಾಧನವಾದರೂ, ಕರ್ಮದಿಂದಲೇ ದೇಹ ಪೋಷಣೆ ಮಾಡಿದರೂ, ಕೊನೆಯಲ್ಲಿ ಕರ್ಮದಿಂದಲೇ ದೇಹ ನಶಿಸಿದರೂ, ಕರ್ಮದಿಂದ ಸೃಷ್ಟಿ ಸ್ಥಿತಿ ಲಯ ಯಾವುದೇ ಕಾರ್ಯದಲ್ಲಿ ನೀನು ನಿರತವಾಗಿರಲಿ (ನಿರಹಂಕಾರ) ಆ ಕಾರ್ಯವನ್ನು ನಿರ್ಮೋಹದಿಂದ ಮಾಡಿ ಅದನ್ನು ನನಗೆ ಅರ್ಪಿಸಿದರೆ (ಅರ್ಜುನನೇ) ಆಗ ನೀನು ಮುಕ್ತಾತ್ಮ ಆಗುತ್ತೀಯೆ.
ಪದಾರ್ಥ (ಕ.ಗ.ಪ)
ಜೀವ ಭ್ರಮೆಯ ಬಾಹಿರ-ದೇಹವೇ ಜೀವಾತ್ಮ, ಎಂಬ ತಪ್ಪು ತಿಳಿವಳಿಕೆ ಇಲ್ಲದವನು ಕರ್ಮವೇ ಹೂಡುವುದು-ಕರ್ಮನಿರತನಾಗುವುದು, ಕರ್ಮವೇ ಸಲಹುವುದು-ದೇಹ ಪೋಷಣೆ ಮಾಡುವುದು, ಕರ್ಮವೇ ಕಳಚುವುದು-ದೇಹವನ್ನು ನಶಿಸುವುದು, ನಿರ್ಮಮತೆ-ನಿರ್ಮೋಹ, ನಮ್ಮಲಿ ನಿರ್ಮಿಸಲು- ನನ್ನಲ್ಲಿ ಅರ್ಪಿಸಿದರೆ, ನಿರ್ಲೇಪನಹೆ-ಮುಕ್ತಾತ್ಮನಾಗುವೆ
ಮೂಲ ...{Loading}...
ಕರ್ಮವೇ ಹೂಡುವುದು ತನುವನು
ಕರ್ಮವೇ ಸಲಹುವುದು ಕಡೆಯಲಿ
ಕರ್ಮವೇ ಕಳಚುವುದು ಜೀವಭ್ರಮೆಯ ಬಾಹಿರರ
ಕರ್ಮ ತಾನೇನಾದಡಾಗಲಿ
ನಿರ್ಮಮತೆಯಲಿ ಮಾಡಿ ನಮ್ಮಲಿ
ನಿರ್ಮಿಸಲು ಕಲಿಪಾರ್ಥ ನೀ ನಿರ್ಲೇಪನಹೆಯೆಂದ ॥53॥
೦೫೪ ಅಸುರರಿಪು ಕೇಳಾದಿಯಲಿ ...{Loading}...
ಅಸುರರಿಪು ಕೇಳಾದಿಯಲಿ ಬಂ
ಚಿಸಿದ ಕರ್ಮವು ಜೀವರನು ಬಂ
ಧಿಸಲು ತದ್ಗುಣದೋಷ ಕರ್ತೃವನೇಕೆ ತಾಗುವುದು
ಪಸರಿಸಿತಲಾ ಸ್ಮಾರ್ತ ಮಾರ್ಗ
ಪ್ರಸರ ಕೊಂದಡೆ ಪಾಪ ಪಾವನ
ವೆಸಗೆ ಪುಣ್ಯವೆನಿಪ್ಪ ವಿವರಕ್ಕೇನು ನೆಲೆಯೆಂದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನೇ ಕೇಳು, ಹಿಂದಿನ ಜನ್ಮಗಳಲ್ಲಿ ಗಳಿಸಿದ ಕರ್ಮವು ಜೀವಾತ್ಮನನ್ನು ಬಂಧಿಸಿರುವುದಾದರೆ ಆ ಪಾಪಪುಣ್ಯಗಳು (ಗುಣ ದೋಷಗಳು) ಕರ್ತೃವನ್ನು (ಆತ್ಮನನ್ನು) ಏಕೆ ಬಂಧಿಸುತ್ತವೆ ? ಕೊಲ್ಲುವ ಕಾರ್ಯ ಮಾಡಿದರೆ ಪಾಪ, ಶುಭವಾದ ಕಾರ್ಯ ಮಾಡಿದರೆ ಪುಣ್ಯ ಎಂದು ಸ್ಮೃತಿಗಳಲ್ಲಿ ಹೇಳಿದ ಪ್ರಸಿದ್ಧ ಎನಿಸುವ ವಿಚಾರಗಳಿಗೆ ಏನು ಬೆಲೆಯಿದೆ ಎಂದನು.
ಪದಾರ್ಥ (ಕ.ಗ.ಪ)
ಆದಿಯಲಿ-ಹಿಂದಿನ ಜನ್ಮಗಳಲ್ಲಿ, ತಾಗುವುದು-ಬಾಧಿಸುವುದು, ಸ್ಮಾರ್ತಮಾರ್ಗ-ಸ್ಮೃತಿಗಳಲ್ಲಿ ಹೇಳಿದ್ದು
ಮೂಲ ...{Loading}...
ಅಸುರರಿಪು ಕೇಳಾದಿಯಲಿ ಬಂ
ಚಿಸಿದ ಕರ್ಮವು ಜೀವರನು ಬಂ
ಧಿಸಲು ತದ್ಗುಣದೋಷ ಕರ್ತೃವನೇಕೆ ತಾಗುವುದು
ಪಸರಿಸಿತಲಾ ಸ್ಮಾರ್ತ ಮಾರ್ಗ
ಪ್ರಸರ ಕೊಂದಡೆ ಪಾಪ ಪಾವನ
ವೆಸಗೆ ಪುಣ್ಯವೆನಿಪ್ಪ ವಿವರಕ್ಕೇನು ನೆಲೆಯೆಂದ ॥54॥
೦೫೫ ಸುಕೃತ ದುಷ್ಕೃತವೆಮ್ಬವೇ ...{Loading}...
ಸುಕೃತ ದುಷ್ಕೃತವೆಂಬವೇ ಬಾ
ಧಕವು ಜೀವರಿಗೀಯಹಂಕೃತಿ
ವಿಕಳತೆಗೆ ತಾ ಬೀಜ ಜನ್ಮದ ಚುಟ್ಟುಮುರಿಗಳಿಗೆ
ಸಕಲಕರ್ತೃತ್ವಾದಿ ಭೋಕ್ತೃ
ತ್ವಕವಿದಾತ್ಮಂಗಿಲ್ಲ ಪಿತ್ತಾ
ಧಿಕನು ತಿರುಗುತ ಲೋಕ ತಿರುಗುವುದೆಂಬ ತೆರನಂತೆ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೀವಿಗಳಿಗೆ ಪುಣ್ಯಕಾರ್ಯ - ಪಾಪಕಾರ್ಯಗಳೆಂಬ ಭಾವನೆಯೇ ವಿಘ್ನಕಾರಿಯಾದುದು. ಜನ್ಮಾಂತರಗಳ ಜೂಟಾಟಕ್ಕೆ ಈ ಅಹಂಕಾರ ಗುಣ ಅರೆಕೊರೆಗಳಿಗೆ ಕಾರಣವಾಗುತ್ತದೆ. ಗಿರಿಗಿಟ್ಟಲೆ, ಅಪ್ಪಾಲೆ ತಿಪ್ಪಾಲೆ ಆಟ, ಸಮಸ್ತ ಕರ್ಮಗಳ ಮಾಡುವಿಕೆ ಮೊದಲಾದ ಕರ್ಮಗಳ ಫಲವನ್ನು ಅನುಭವಿಸುವಿಕೆ ಆತ್ಮನಿಗೆ ಇರುವುದಿಲ್ಲ. ಪಿತ್ತ ಏರಿದವನಿಗೆ ತಲೆ ಸುತ್ತು ಬಂದಾಗ ಇಡೀ ಜಗತ್ತು ತಿರುಗುತ್ತಿದೆ ಎಂದು ಭ್ರಮಿಸಿದ ತೆರನಂತೆ ಇದು.
ಪದಾರ್ಥ (ಕ.ಗ.ಪ)
ಚುಟ್ಟು ಮುರಿಯಾಟ-ಚಿಟ್ಟುಮುರಿಯಾಟ-ಮುಟ್ಟಿ ಹಿಡಿಯುವ ಆಟ, ಜೂಟಾಟ (ಕಿಟ್ಟು>ಚಿಟ್ಟು=ಮುಟ್ಟು) ಎಂವಿಸೀ ಕು. ಭಾ ಸಂ. ನೋಡಿ (380)
ಕರ್ತೃತ್ವ-ಕರ್ಮ ಮಾಡುವುದು, ಭೋಕ್ತೃತ್ವ-ಫಲ ಅನುಭವಿಸುವುದು, ವಿಕಳತೆ-ಕೊರತೆ ಲೋಪದೋಷ, ಬೀಜ-ಕಾರಣ, ಪಿತ್ತಾಧಿಕ-ನೆತ್ತಿಗೆ ಪಿತ್ತ ಏರಿದವನು
ಮೂಲ ...{Loading}...
ಸುಕೃತ ದುಷ್ಕೃತವೆಂಬವೇ ಬಾ
ಧಕವು ಜೀವರಿಗೀಯಹಂಕೃತಿ
ವಿಕಳತೆಗೆ ತಾ ಬೀಜ ಜನ್ಮದ ಚುಟ್ಟುಮುರಿಗಳಿಗೆ
ಸಕಲಕರ್ತೃತ್ವಾದಿ ಭೋಕ್ತೃ
ತ್ವಕವಿದಾತ್ಮಂಗಿಲ್ಲ ಪಿತ್ತಾ
ಧಿಕನು ತಿರುಗುತ ಲೋಕ ತಿರುಗುವುದೆಂಬ ತೆರನಂತೆ ॥55॥
೦೫೬ ಮರುಳೆ ಫಲುಗುಣ ...{Loading}...
ಮರುಳೆ ಫಲುಗುಣ ಕೇಳು ಸಚರಾ
ಚರವೆನಿಪ ಜಗವೆನ್ನ ಲೀಲಾ
ಚರಿತದಲಿ ತೋರುವುದು ಹರೆವುದು ನನ್ನ ನೇಮದಲಿ
ನಿರುತ ನೀ ಕೇಳುವರೆ ತಿರ್ಯಙï
ನರಸುರಾದಿಗಳೆಂಬ ಸಚರಾ
ಚರವಿದಾನಲ್ಲದೆ ವಿಚಾರಿಸಲನ್ಯವಿಲ್ಲೆಂದ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭ್ರಾಂತನಾದ ಅರ್ಜುನನೇ ಕೇಳು, ಸ್ಥಾವರ ಜಂಗಮವಾಗಿರುವ ಜಗತ್ತೆಲ್ಲಾ ನನ್ನ ಲೀಲಾ ವಿನೋದದ ಅಂಗವಾಗಿ, ನನ್ನ ಅಪ್ಪಣೆಯಂತೆ ಸೃಷ್ಟಿಯಾಗುತ್ತದೆ, ಅಂತೆಯೇ ನಾಶವಾಗುತ್ತದೆ (ಮರೆಯಾಗುತ್ತದೆ). ಸತ್ಯಸ್ಥಿತಿಯನ್ನು ನೀನು ಕೇಳುವುದಾದರೆ ಪ್ರಾಣಿವರ್ಗ ಮನುಷ್ಯವರ್ಗ ದೇವವರ್ಗ ಮೊದಲಾದ ಸಮಸ್ತ ಸ್ಥಾವರ ಜಂಗಮ ಜಗತ್ತು ನಾನೇ ಆಗಿದ್ದೇನೆ. ವಿಚಾರ ಮಾಡಿ ನೋಡಿದರೆ ನಾನೇ ಹೊರತು ಬೇರೊಂದಿಲ್ಲ. (ನಾನು ಸರ್ಪಾಂತರ್ಯಾಮಿ ಆಗಿದ್ದೇನೆ)
ಪದಾರ್ಥ (ಕ.ಗ.ಪ)
ಸಚರ ಅಚರ-ಜಂಗಮ ಸ್ಥಾವರ, ನಿರುತ-ಸತ್ಯಸ್ಥಿತಿ, ತಿರ್ಯಕ್-ಪ್ರಾಣಿವರ್ಗ,
ಮೂಲ ...{Loading}...
ಮರುಳೆ ಫಲುಗುಣ ಕೇಳು ಸಚರಾ
ಚರವೆನಿಪ ಜಗವೆನ್ನ ಲೀಲಾ
ಚರಿತದಲಿ ತೋರುವುದು ಹರೆವುದು ನನ್ನ ನೇಮದಲಿ
ನಿರುತ ನೀ ಕೇಳುವರೆ ತಿರ್ಯಙï
ನರಸುರಾದಿಗಳೆಂಬ ಸಚರಾ
ಚರವಿದಾನಲ್ಲದೆ ವಿಚಾರಿಸಲನ್ಯವಿಲ್ಲೆಂದ ॥56॥
೦೫೭ ಜಗದೊಳಾನೇ ಚರಿಸುವೆನು ...{Loading}...
ಜಗದೊಳಾನೇ ಚರಿಸುವೆನು ತ
ಜ್ಜಗವಿದೆಲ್ಲವು ನನ್ನ ಮಾಯೆಯೊ
ಳೊಗೆದು ತೋರಿಸಿ ಸುಳಿಸೆ ಸುಳಿವುದು ಹಿಡಿಯಲಡಗುವುದು
ಮಗುವುತನದೊಳು ಕೂಡಿ ಮೆರೆವುದು
ಜಗವದಲ್ಲದೆ ನಿಜವ ಬೆರಸುವ
ವಿಗಡರಿಗೆ ಪರತತ್ವ ಚಿನುಮಯರೂಪ ತಾನೆಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸ್ತ ಲೋಕದಲ್ಲಿ ನಾನೇ ವ್ಯಾಪಿಸಿರುವೆನು. ಈ ಜಗತ್ತೆಲ್ಲ ನನ್ನ ಮಾಯೆಯಿಂದ ಜನಿಸಿದಲ್ಲಿ ಜನಿಸಿ, ಸುಳಿಸಿದಲ್ಲಿ ಸುಳಿಯುತ್ತದೆ. (ಹರಡುತ್ತದೆ) ನಾನು ಅದುಮಿ ಹಿಡಿದರೆ ನನ್ನ ಹಿಡಿಯಲ್ಲಿ ಅಡಗುತ್ತದೆ. ಅಜ್ಞಾನದಲ್ಲಿ ಮುಗ್ಧ ಭಾವದಲ್ಲಿ ಕೂಡಿದಾಗ ಈ ಜಗತ್ತು ವಿಜೃಂಭಿಸುತ್ತದೆ. ಸತ್ಯಾನ್ವೇಷಣೆ ಮಾಡಿ ನನ್ನ ಸೇರುವ ಸಾಹಸಿಗಳಿಗೆ (ಜಾತಕ ರೂಪಿ) ಪರತತ್ವದ ಚಿನ್ಮಯ ರೂಪ ನಾನೇ ಆಗಿರುತ್ತೇನೆ.
ಪದಾರ್ಥ (ಕ.ಗ.ಪ)
ತತ್ಜಗವಿದು-ಆ ಜಗತ್ತು, ಮೊರೆವುದು-ವಿಜೃಂಭಿಸುವುದು, ನಿಜವ ಬೆರಸುವ ವಿಗಡ-ಸತ್ಯ ತಿಳಿದು ಸೇರುವ ಧೀರ, ಪರತತ್ವ-ಪರಬ್ರಹ್ಮಸ್ವರೂಪ, ಚಿನ್ಮಯ-ಚಿತ್ಸ್ವರೂಪಿ (ಜ್ಞಾನರೂಪಿ)
ಮೂಲ ...{Loading}...
ಜಗದೊಳಾನೇ ಚರಿಸುವೆನು ತ
ಜ್ಜಗವಿದೆಲ್ಲವು ನನ್ನ ಮಾಯೆಯೊ
ಳೊಗೆದು ತೋರಿಸಿ ಸುಳಿಸೆ ಸುಳಿವುದು ಹಿಡಿಯಲಡಗುವುದು
ಮಗುವುತನದೊಳು ಕೂಡಿ ಮೆರೆವುದು
ಜಗವದಲ್ಲದೆ ನಿಜವ ಬೆರಸುವ
ವಿಗಡರಿಗೆ ಪರತತ್ವ ಚಿನುಮಯರೂಪ ತಾನೆಂದ ॥57॥
೦೫೮ ಬೀಸಿದರೆ ಸಿಲುಕುವರು ...{Loading}...
ಬೀಸಿದರೆ ಸಿಲುಕುವರು ಮಾಯಾ
ಪಾಶದೊಳಹಂಕಾರಿಗಳು ತ
ದ್ದೇಶಕಾಲಕ್ರಿಯೆಗಳಲಿ ನಿರ್ವಾಹವನು ಬೆದಕಿ
ಬೇಸರುವರಂತಿರಲಿ ಮಾಯಾ
ವೈಸಿಕದ ಸಮ್ಮೋಹನದ ಕಾ
ಳಾಸವರಿವವರೆನ್ನನರಿವರು ಪಾರ್ಥ ಕೇಳ್ ಎಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನು ಮಾಯಾಪಾಶವನ್ನು ಹರಡಿದರೆ ಅದರಲ್ಲಿ ಅಹಂಕಾರಿಗಳು (ಗರ್ವಿಗಳು) ಸಿಕ್ಕ ಹಾಕಿಕೊಳ್ಳುತ್ತಾರೆ. ಆಯಾ ದೇಶ ಕಾಲ ವರ್ತಮಾನಗಳಲ್ಲಿ ನನ್ನ ಪಾಲನೆಯ ಕಾರ್ಯವನ್ನು ಪರಿಕಿಸಿ ಆಯಾಸಗೊಳ್ಳುತ್ತಾರೆ. (ವ್ಯರ್ಥಶ್ರಮ ಹೊಂದುವರು) ಆ ವಿಚಾರ ಒತ್ತಟ್ಟಿಗಿರಲಿ. ಮಾಯಾಜಾಲ ವಿದ್ಯೆಯ ಆಕರ್ಷಣೆಯ ನೃತ್ಯಗತಿಯನ್ನು ಅರಿತವರು ನನ್ನ ಯಥಾರ್ಥ ಸ್ವರೂಪವನ್ನು ತಿಳಿಯುತ್ತಾರೆ. ಪಾರ್ಥ ಇದನ್ನು ತಿಳಿ ಎಂದನು ಕೃಷ್ಣ.
ಪದಾರ್ಥ (ಕ.ಗ.ಪ)
ಕಾಳಾಸ-ನೃತಗತಿ, ವೈಸಿಕ-ವಿದ್ಯೆ, ನಿರ್ವಾಹ-ಪಾಲನೆ, ಬೇಸರು-ವ್ಯರ್ಥಶ್ರಮ, ಬೆದಕಿ-ಪರೀಕ್ಷಿಸಿ
ಮೂಲ ...{Loading}...
ಬೀಸಿದರೆ ಸಿಲುಕುವರು ಮಾಯಾ
ಪಾಶದೊಳಹಂಕಾರಿಗಳು ತ
ದ್ದೇಶಕಾಲಕ್ರಿಯೆಗಳಲಿ ನಿರ್ವಾಹವನು ಬೆದಕಿ
ಬೇಸರುವರಂತಿರಲಿ ಮಾಯಾ
ವೈಸಿಕದ ಸಮ್ಮೋಹನದ ಕಾ
ಳಾಸವರಿವವರೆನ್ನನರಿವರು ಪಾರ್ಥ ಕೇಳೆಂದ ॥58॥
೦೫೯ ಏಕನಾತ್ಮನನನ್ತನಚಲನ ...{Loading}...
ಏಕನಾತ್ಮನನಂತನಚಲನ
ಶೋಕನದ್ವಯನಮಲನಭವನ
ಲೋಕನಿಸ್ಪೃಹನಮಿತನಕ್ರಿಯನಹತನಭ್ರಮನು
ಲೋಕಗತಿ ಮಾಯಾವಿಲಾಸ ವಿ
ವೇಕಿಗಳಿಗಿದು ಬಯಲು ಫಲುಗುಣ
ಸಾಕು ಗರ್ವವ ಬೀಳುಕೊಡು ಸೆಳೆ ಶರವ ಹಿಡಿ ಧನುವ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠನಾದ ಆತ್ಮನು ಒಬ್ಬನೇ. ಅಂತವಿಲ್ಲದವನು ದುಃಖರಹಿತನು, ಎರಡಲ್ಲದವನು, ಪವಿತ್ರನು, ಜನ್ಮರಹಿತನು, ಯಾವ ಲೋಕದಲ್ಲೂ ನಿವಾಸಿ ಅಲ್ಲದವನು, ಆಸೆ ಇಲ್ಲದವನು, ಅಪಾರನು, ಯಾವ ಕ್ರಿಯೆಯನ್ನು ಮಾಡದವನು, ಕೊಲ್ಲಲ್ಪಡದವನು, ಭ್ರಮೆಯಿಲ್ಲದವನು. ಲೋಕದ ಸ್ವರೂಪವೆಲ್ಲವು ಮಾಯೆಯ ವಿಲಾಸವು ಎಂಬ ಅರಿವುಳ್ಳ ಜ್ಞಾನಿಗಳಿಗೆ ಇದು ಕೇವಲ ಶೂನ್ಯ. ಆದ್ದರಿಂದ ಅರ್ಜುನನೇ, ನಿನ್ನ ಅಹಂ ಅನ್ನು ದೂರ ಮಾಡು, ಬತ್ತಳಿಕೆಯಿಂದ ಬಾಣ ತೆಗೆ, ಬಿಲ್ಲು ಹಿಡಿ, ಗುರಿ ಹೂಡು ಎಂದರೆ ಯುದ್ಧಕ್ಕೆ ಸಜ್ಜಾಗು ಎಂದನು.
ಪದಾರ್ಥ (ಕ.ಗ.ಪ)
ನಿಸ್ಪೃಹ-ಆಸೆ ಇಲ್ಲದವನು,
ಮೂಲ ...{Loading}...
ಏಕನಾತ್ಮನನಂತನಚಲನ
ಶೋಕನದ್ವಯನಮಲನಭವನ
ಲೋಕನಿಸ್ಪೃಹನಮಿತನಕ್ರಿಯನಹತನಭ್ರಮನು
ಲೋಕಗತಿ ಮಾಯಾವಿಲಾಸ ವಿ
ವೇಕಿಗಳಿಗಿದು ಬಯಲು ಫಲುಗುಣ
ಸಾಕು ಗರ್ವವ ಬೀಳುಕೊಡು ಸೆಳೆ ಶರವ ಹಿಡಿ ಧನುವ ॥59॥
೦೬೦ ಜಡನಲಾ ನರನೇಸ ...{Loading}...
ಜಡನಲಾ ನರನೇಸ ತಿಳುಹಲು
ಬಿಡ ವಿಕಾರವನೆಂದು ಖಾತಿಯ
ಹಿಡಿಯಲಾಗದು ಸಲುಗೆಗಂಜಿಕೆಯೇಕೆ ಬಿನ್ನಹವು
ಬಿಡು ಜಗೌಘಾನೀಕ ನಿಮ್ಮಡಿ
ಯೊಡಲೊಳಗಣಿತವಿಹವು ಗಡ ಮಿಗೆ
ನುಡಿಯಲಮ್ಮೆನು ತತ್ಸ್ವರೂಪವ ತೋರಬೇಕೆಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕೃಷ್ಣ, ಎಷ್ಟು ಹೇಳಿದರೂ ಈ ಅರ್ಜುನನು ಆಲಸ್ಯ ಭಾವವನ್ನು ಬಿಡಲಾರದವನು, ಇವನು ಮೂಢನೇ ಸರಿ ಎಂದು ನನ್ನ ಮೇಲೆ ಕೋಪ ಮಾಡಿಕೊಳ್ಳಲಾಗದು. ನಿನ್ನೊಡನೆ ಸಲಿಗೆಗೆ ಹೆದರಿಕೆ ಏಕೆ ! ನನ್ನ ಕೋರಿಕೆಯಿದು ಸಮಸ್ತ ಜಗತ್ತುಗಳ ಪರಿವಾರವೇ ನಿಮ್ಮ ಒಡಲಲ್ಲಿ ಅಡಗಿದೆ. ಅವು ಅನಂತವಾಗಿವೆ. ಹೆಚ್ಚಿಗೆ ಹೇಳಲು ಶಕ್ತನಲ್ಲ. ನಿಮ್ಮ ನಿಜ ಸ್ವರೂಪವನ್ನು ತೋರಿಸಬೇಕು’ ಎಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
ಜಗ+ಓಘ+ಅನೀಕ- ಸಮಸ್ತ ಜಗತ್ತುಗಳ ಪರಿವಾರ, ಅಮ್ಮೆನು-ಶಕ್ತನಲ್ಲ, ಜಡವಿಕಾರ-ಆಲಸ್ಯಭಾವ ಜಡ-ಮೂಢ, ಖಾತಿ-ಕೋಪ,
ಮೂಲ ...{Loading}...
ಜಡನಲಾ ನರನೇಸ ತಿಳುಹಲು
ಬಿಡ ವಿಕಾರವನೆಂದು ಖಾತಿಯ
ಹಿಡಿಯಲಾಗದು ಸಲುಗೆಗಂಜಿಕೆಯೇಕೆ ಬಿನ್ನಹವು
ಬಿಡು ಜಗೌಘಾನೀಕ ನಿಮ್ಮಡಿ
ಯೊಡಲೊಳಗಣಿತವಿಹವು ಗಡ ಮಿಗೆ
ನುಡಿಯಲಮ್ಮೆನು ತತ್ಸ್ವರೂಪವ ತೋರಬೇಕೆಂದ ॥60॥
೦೬೧ ಈ ದಿವಿಜರೀ ...{Loading}...
ಈ ದಿವಿಜರೀ ಚಂದ್ರ ಸೂರಿಯ
ರೀ ದಿಶಾವಳಿಯೀ ಗಗನವೀ
ಮೇದಿನೀತಳವೀ ಸಮೀರಣನೀ ಜಲಾನಲರು
ಈ ದನುಜರೀ ಮನುಜರೀ ನೀ
ನಾದಿಯಾಗಿಹ ಹರಹು ನಿನ್ನ ವಿ
ನೋದರೂಪಿನ ನಿರುಗೆಯನು ನೀ ತೋರಬೇಕೆಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದೇವತೆಗಳು, ಈ ಚಂದ್ರ ಸೂರ್ಯರು, ಈ ದಿಕ್ಕುಗಳು, ಈ ಆಕಾಶ, ಈ ಭೂಮಂಡಲ, ಈ ಮಾರುತ, ಈ ನೀರು, ಬೆಂಕಿ, ಈ ರಾಕ್ಷಸರು (ಅಸುರರು) ಈ ಮಾನವರು ಇವರಿಗೆಲ್ಲ ಕಾರಣ ಪುರುಷನಾಗಿರುವ ನಿನ್ನ ವ್ಯಾಪ್ತಿಯ ಮತ್ತು ನಿನ್ನ ಲೀಲಾ ವಿನೋದ ಸ್ವರೂಪದ ಬೆಡಗನ್ನು ನೀನು ತೋರಿಸಬೇಕು ಎಂದನು.
ಪದಾರ್ಥ (ಕ.ಗ.ಪ)
ಹರಹು-ವ್ಯಾಪ್ತಿ, ನಿರುಗೆ-ಬೆಡಗು, ಸಮೀರಣ-ವಾಯು, ಮೇದಿನೀತಲ-ಭೂಮಂಡಲ, ಸೂರಿಯ-ಸೂರ್ಯ, ದಿವಿಜ-ದೇವತೆಗಳು, ದನುಜ-ಅಸುರ, ಆದಿ-ಮೂಲಪುರುಷನಾಗಿರುವ
ಮೂಲ ...{Loading}...
ಈ ದಿವಿಜರೀ ಚಂದ್ರ ಸೂರಿಯ
ರೀ ದಿಶಾವಳಿಯೀ ಗಗನವೀ
ಮೇದಿನೀತಳವೀ ಸಮೀರಣನೀ ಜಲಾನಲರು
ಈ ದನುಜರೀ ಮನುಜರೀ ನೀ
ನಾದಿಯಾಗಿಹ ಹರಹು ನಿನ್ನ ವಿ
ನೋದರೂಪಿನ ನಿರುಗೆಯನು ನೀ ತೋರಬೇಕೆಂದ ॥61॥
೦೬೨ ಹರೆದು ಮೋಹಿಸುವೀ ...{Loading}...
ಹರೆದು ಮೋಹಿಸುವೀ ಚರಾಚರ
ನೆರೆದು ನಿಮ್ಮಯ ರೋಮಕೂಪದ
ಹೊರೆಯೊಳಗೆ ಹೊಳೆದಾಡುತಿಹುದೆಂಬಗ್ಗಳಿಕೆಗಳಿಗೆ
ಹುರುಳೆನಿಪ ಹೇರಾಳದಂಗದ
ಸಿರಿಯ ತೋರೈ ಕೃಷ್ಣ ನಿರ್ಮಲ
ಪರಮತತ್ವವನೊಲ್ಲೆ ನಿಮ್ಮಯ ಭಕ್ತಿ ಸಾಕೆಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಬ್ಬಿ ಹರಡಿ ಹೊಳೆದು ಆಕರ್ಷಿಸುವ ಈ ಜೀವಾಜೀವಗಳು, ನಿಮ್ಮ ರೋಮ ಕೂಪದ ಸಮೀಪದಲ್ಲಿ ಹೊಳೆದಾಡುತ್ತಿರುವುದು ಎಂಬ ಹಿರಿಮೆಗೆ ನೆಲೆಯಾಗಿರುವ, ಅಪಾರವಾದ ಶಾರೀರಕ ವೈಭವದ ಸಿರಿಯನ್ನು ತೋರಿಸು. ಕೃಷ್ಣನೆ, ನಿರಾಕಾರವಾದ ಶುದ್ಧ ಅಧ್ಯಾತ್ಮ ತತ್ವ ಬೇಡ. ನಿನ್ನ ಸಾಕಾರ ರೂಪವಾದ ಭಕ್ತಿ ನನಗೆ ದೊರೆತರೆ ಅಷ್ಟೆ ಸಾಕು ಎಂದ.
ಪದಾರ್ಥ (ಕ.ಗ.ಪ)
ಪರಮತತ್ವ-ಅಧ್ಯಾತ್ಮ ತತ್ವ, ಹುರುಳೆನಿಪ-ನೆಲೆಯಾದ, ಅಂಗದ ಸಿರಿ-ಶಾರೀರಕ ವೈಭವದ ಸಿರಿ, ಅಗ್ಗಳಿಕೆ-ಹಿರಿಮೆ, ಹೊರೆಯೊಳಗೆ-ಸಮೀಪದಲ್ಲಿ
ಮೂಲ ...{Loading}...
ಹರೆದು ಮೋಹಿಸುವೀ ಚರಾಚರ
ನೆರೆದು ನಿಮ್ಮಯ ರೋಮಕೂಪದ
ಹೊರೆಯೊಳಗೆ ಹೊಳೆದಾಡುತಿಹುದೆಂಬಗ್ಗಳಿಕೆಗಳಿಗೆ
ಹುರುಳೆನಿಪ ಹೇರಾಳದಂಗದ
ಸಿರಿಯ ತೋರೈ ಕೃಷ್ಣ ನಿರ್ಮಲ
ಪರಮತತ್ವವನೊಲ್ಲೆ ನಿಮ್ಮಯ ಭಕ್ತಿ ಸಾಕೆಂದ ॥62॥
೦೬೩ ದಾಸನಾನೆನಗಮಲಮೂರ್ತಿವಿ ...{Loading}...
ದಾಸನಾನೆನಗಮಲಮೂರ್ತಿವಿ
ಲಾಸವನು ತೋರುವುದು ಸಲಹುವು
ದೈಸರವನೈ ತಾನು ಸಮ್ಯಗ್ಜ್ಞಾನಭಾಜನಕೆ
ಮೀಸಲಳಿಯದ ಮಿಕ್ಕ ಬಯಕೆಯ
ಪಾಶ ತಾಗದ ನಿನ್ನ ಲೀಲೆಯ
ಭಾಸುರ ಶ್ರೀಮೂರ್ತಿಯನು ಮೈದೋರಬೇಕೆಂದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನಗೆ ನಾನು ಭಕ್ತ. ನನಗೆ ನಿನ್ನ ಶ್ರೇಷ್ಠ ಸ್ವರೂಪದ ಲೀಲೆಯನ್ನು ತೋರಿಸಿ ಕಾಪಾಡುವುದು. ನಾನು ಎಷ್ಟರವನು? ಪರಿಪೂರ್ಣ ಜ್ಞಾನ ತಿಳಿಯಲು ಪವಿತ್ರತೆಗೆ ಭಂಗಬಾರದ ಲೋಕದ ಇತರ ಸಾಂಸಾರಿಕ ಆಸೆಗಳ ಬಂಧನಕ್ಕೆ ಒಳಗಾಗದ ನಿನ್ನ ಜಾಜ್ವಲ್ಯಮಾನ ಮಂಗಳ ಸ್ವರೂಪವನ್ನು ಕಾಣಗೊಡಬೇಕು’ ಎಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
ದಾಸ-ಭಕ್ತ, ಅಮಲಮೂರ್ತಿವಿಲಾಸ-ಶ್ರೇಷ್ಠ ಸ್ವರೂಪ ಲೀಲೆ, ಐಸರವನೈ-ಎಷ್ಟರವನು ? ಸಮ್ಯಕ್ಜ್ಞಾನ-ಪರಿಪೂರ್ಣಜ್ಞಾನ, ಪಾಶ-ಬಂಧನ, ಭಾಸುರ-ಜಾಜ್ವಲ್ಯಮಾನ, ಶ್ರೀಮೂರ್ತಿ-ಮಂಗಳ ಸ್ವರೂಪ, ಮೈದೋರಬೇಕು-ಕಾಣಗೊಡಬೇಕು.
ಮೂಲ ...{Loading}...
ದಾಸನಾನೆನಗಮಲಮೂರ್ತಿವಿ
ಲಾಸವನು ತೋರುವುದು ಸಲಹುವು
ದೈಸರವನೈ ತಾನು ಸಮ್ಯಗ್ಜ್ಞಾನಭಾಜನಕೆ
ಮೀಸಲಳಿಯದ ಮಿಕ್ಕ ಬಯಕೆಯ
ಪಾಶ ತಾಗದ ನಿನ್ನ ಲೀಲೆಯ
ಭಾಸುರ ಶ್ರೀಮೂರ್ತಿಯನು ಮೈದೋರಬೇಕೆಂದ ॥63॥
೦೬೪ ಆದಡರ್ಜುನ ನೋಡೆನುತ ...{Loading}...
ಆದಡರ್ಜುನ ನೋಡೆನುತ ಕಮ
ಲೋದರನು ಕೈಕೊಂಡನಗ್ಗದ
ನಾದಿಪುರುಷ ಶ್ರೀನಿಜವ ವಿಶ್ವಾತ್ಮಕಾಕೃತಿಯ
ವಾದಿಸುವ ಷಟ್ತರ್ಕಗಿರ್ಕದ
ಭೇದ ಕೊಳ್ಳದ ಸಕಲ ಲೋಕದ
ಬೀದಿ ವಿಸಟಂಬರಿವ ವಿಮಲ ವಿರಾಟ ರೂಪವನು ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠ, ಆದಿರಹಿತ, ಮಹಿಮಾನ್ವಿತ ಪುರುಷನಾದ ಕೃಷ್ಣನು, ಮಂಗಳಕರವಾದ ಸತ್ಯ ಸ್ವರೂಪವನ್ನು, ಸಕಲ ವಿಶ್ವಗಳನ್ನು ಒಳಗೊಂಡ ಬ್ರಹ್ಮಾಂಡ ನಾಯಕನ ವಿರಾಟ್ ಸ್ವರೂಪವನ್ನು ಸತ್ಯಾನ್ವೇಷಣೆಗಾಗಿ ಚರ್ಚಿಸುವ ಸಾಂಖ್ಯ, ಯೋಗ, ನ್ಯಾಯ ವೈಶೇಷಿಕ ಮೀಮಾಂಸ, ವೇದಾಂತವೆಂಬ ಆರು ಶಾಸ್ತ್ರಗಳ ವಾದಸರಣಿಯ ವಿಭೇದಕ್ಕೆ ಒಳಗಾಗದ (ಗ್ರಹಿಸಲಾಗದ್ದು) ಎಲ್ಲ ಲೋಕಗಳಲ್ಲೂ ಅಡೆತಡೆಯಿಲ್ಲದೆ ಸ್ವಚ್ಛಂದವಾಗಿ ವಿಹರಿಸುವ (ಸರ್ವಾಂತರ್ಯಾಮಿಯಾದ) ನಿರ್ಮಲ ವಿಶ್ವರೂಪವನ್ನು ಧರಿಸಿದನು.
ಪದಾರ್ಥ (ಕ.ಗ.ಪ)
ಅಗ್ಗದ-ಶ್ರೇಷ್ಠದ, ಅನಾದಿ-ಆದ್ಯಂತ ರಹಿತ ಪುರುಷ, ಶ್ರೀನಿಜವ-ಮಂಗಳಕರ ಸತ್ಯ ಸ್ವರೂಪ, ಷಟ್ತರ್ಕಗಿರ್ಕದ-ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ, ವೇದಾಂತವೆಂಬ 6 ಶಾಸ್ತ್ರಗಳ, ಭೇದಗೊಳದ-ವಾದಸರಣಿಗೆ ಒಳಗಾಗದ, ಬೀದಿವಿಸಟಂಬರಿವ-ಸ್ವಚ್ಚಂದವಾಗಿ ವಿಹರಿಸುವ
ಮೂಲ ...{Loading}...
ಆದಡರ್ಜುನ ನೋಡೆನುತ ಕಮ
ಲೋದರನು ಕೈಕೊಂಡನಗ್ಗದ
ನಾದಿಪುರುಷ ಶ್ರೀನಿಜವ ವಿಶ್ವಾತ್ಮಕಾಕೃತಿಯ
ವಾದಿಸುವ ಷಟ್ತರ್ಕಗಿರ್ಕದ
ಭೇದ ಕೊಳ್ಳದ ಸಕಲ ಲೋಕದ
ಬೀದಿ ವಿಸಟಂಬರಿವ ವಿಮಲ ವಿರಾಟ ರೂಪವನು ॥64॥
೦೬೫ ಬಿಳಿದು ಕರಿದೆಮ್ಬಾರು ...{Loading}...
ಬಿಳಿದು ಕರಿದೆಂಬಾರು ವರ್ಣದ
ಹೊಲಬು ಹೊದ್ದದ ಸೂರ್ಯಕೋಟಿಯ
ಹೊಳಹು ನಖದೀಧಿತಿಯ ಹೋಲದ ನಿಜದ ಹೊಸಪರಿಯ
ಅಳವಿನಳತೆಯ ಜಗದ ವಾರ್ತೆಯ
ಸುಳಿವು ಸೋಂಕದ ಸಕಲ ಲೋಕ
ಪ್ರಳಯ ಕಾರಣ ತೆಗೆದನಗ್ಗದ ವಿಶ್ವರೂಪವನು ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಳಿ, ಕಪ್ಪು, ಹಳದಿ, ಹಸುರು, ಕೆಂಪು, ನೀಲಿ ಎಂಬ ಆರು ಬಣ್ಣಗಳಿಂದ ಕೂಡಿದ ತನ್ನ ನೆಲೆಯನ್ನು ಕಾಣಿಸದ ಕೋಟಿ ಸೂರ್ಯನ ತೇಜಸ್ಸು, ಆತನ ಉಗುರಿನ ಕಾಂತಿಯನ್ನು ಸರಿಗಟ್ಟುತ್ತಿರಲಿಲ್ಲ. ಅವನ ತೇಜಸ್ಸು ನಿಜವಾಗಿ ಹೊಸರೀತಿಯದೇ ಆಗಿತ್ತು. ತನ್ನ ಸಾಮಥ್ರ್ಯದ ಪ್ರಮಾಣವನ್ನು ಅಳತೆಗೆಟುಕಿಸದ, ತನ್ನ ಲೀಲಾ ವಿಲಾಸವನ್ನೂ ಜಗತ್ತಿನ ವ್ಯಾಪಾರದ ಸುಳಿವಿಗೆ ಸಿಲುಕಿಸದ ಸಮಸ್ತ ಲೋಕಗಳ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣಕರ್ತನಾದ ಕೃಷ್ಣನು ತನ್ನ ಶ್ರೇಷ್ಠ ವಿಶ್ವರೂಪವನ್ನು ಹೊರಕಾಣಿಸಿದನು.
ಪದಾರ್ಥ (ಕ.ಗ.ಪ)
ಆರುವರ್ಣ-ಬಿಳಿ, ಕಪ್ಪು, ಹಳದಿ, ಕೆಂಪು, ಹಸಿರು, ನೀಲಿ, ವರ್ಣಗಳು, ಹೊಲಬುಹೊದ್ದದ-ತನ್ನ ನೆಲೆ ಕಾಣಿಸದ, ನಖದೀಧಿತಿ-ಉಗುರಿನ ಕಾಂತಿ, ಅಳವಿನಳತೆ-ಸಾಮಥ್ರ್ಯ ಪ್ರಮಾಣವನ್ನು ಎಟುಕಿದ, ಅಗ್ಗದ-ಶ್ರೇಷ್ಠ
ಮೂಲ ...{Loading}...
ಬಿಳಿದು ಕರಿದೆಂಬಾರು ವರ್ಣದ
ಹೊಲಬು ಹೊದ್ದದ ಸೂರ್ಯಕೋಟಿಯ
ಹೊಳಹು ನಖದೀಧಿತಿಯ ಹೋಲದ ನಿಜದ ಹೊಸಪರಿಯ
ಅಳವಿನಳತೆಯ ಜಗದ ವಾರ್ತೆಯ
ಸುಳಿವು ಸೋಂಕದ ಸಕಲ ಲೋಕ
ಪ್ರಳಯ ಕಾರಣ ತೆಗೆದನಗ್ಗದ ವಿಶ್ವರೂಪವನು ॥65॥
೦೬೬ ಕಾಣರುಳಿದವರೀತನೊಬ್ಬನ ...{Loading}...
ಕಾಣರುಳಿದವರೀತನೊಬ್ಬನ
ಕಾಣಿಕೆಗೆ ಕೌತುಕವ ಕರೆದನು
ಶೋಣಿತಾಮಲಬಹಳತೇಜದ ಹೊದರ ಹೊಯಿಲಿನಲಿ
ಕಾಣಲರಿಯವನಂತವೇದ
ಶ್ರೇಣಿ ಶಿವಶಿವ ರಾಯ ಪಾರ್ಥನ
ಜಾಣತನವೆಂತುಟೊ ವಿರೂಪನ ರೂಪ ಸೆರೆವಿಡಿದ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಳಿದವರು ಯಾರೂ ಕಾಣಲಾಗದಂತೆ, ಅರ್ಜುನನ ಕುತೂಹಲ ತಣಿಸುವಂತೆ, ಕೆಂಪಾದ ನಿರ್ಮಲವಾದ ಅಪಾರ ತೇಜೋರಾಶಿಯನ್ನು ಹರಡಿ, ಅಚ್ಚರಿಯ ನೋಟವನ್ನು ಅರ್ಜುನನೊಬ್ಬನಿಗೆ ತೋರಿಸಿದನು. ಅನಂತ ಕೋಟಿ ವೇದ ಸಮೂಹಗಳು ಆ ಪರಮಾತ್ಮನ ರೂಪವನ್ನು ತಿಳಿಯಲಾರವು. ಅಂಥ ರೂಪರಹಿತನಾದವನನ್ನು ಸಾಕಾರ ರೂಪದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದ ಅರ್ಜುನನ ಕೌಶಲವನ್ನು ಎಷ್ಟೆಂದು ಹೇಳೋಣ !
ಪದಾರ್ಥ (ಕ.ಗ.ಪ)
ಕಾಣಿಕೆಗೆ-ಕಾಣಿಸುವುದಕ್ಕೆ (ದರ್ಶನಕ್ಕಾಗಿ) ಶೋಣಿತ-ಕೆಂಪು, ಹೊದರಹೊಯಿಲಿನಲ್ಲಿ-ಸಮೂಹವನ್ನು ಹರಡಿ, ಕೌತುಕ ಕರೆದನು-ಅಚ್ಚರಿಯ ನೋಟ ತೋರಿದನು, ವಿರೂಪನ-ರೂಪರಹಿತನಾದನವನ್ನು, ರೂಪ ಸೆರೆವಿಡಿದ-ಸಾಕಾರ ರೂಪದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದ, ಎಂತುಟೋ ? -ಎಷ್ಟೆಂದು ಹೇಳೋಣ ?
ಮೂಲ ...{Loading}...
ಕಾಣರುಳಿದವರೀತನೊಬ್ಬನ
ಕಾಣಿಕೆಗೆ ಕೌತುಕವ ಕರೆದನು
ಶೋಣಿತಾಮಲಬಹಳತೇಜದ ಹೊದರ ಹೊಯಿಲಿನಲಿ
ಕಾಣಲರಿಯವನಂತವೇದ
ಶ್ರೇಣಿ ಶಿವಶಿವ ರಾಯ ಪಾರ್ಥನ
ಜಾಣತನವೆಂತುಟೊ ವಿರೂಪನ ರೂಪ ಸೆರೆವಿಡಿದ ॥66॥
೦೬೭ ಉಬ್ಬಿದನು ಹರುಷದಲಿ ...{Loading}...
ಉಬ್ಬಿದನು ಹರುಷದಲಿ ಕಂಗಳ
ಗಬ್ಬ ಮುರಿದುದು ಮದದ ನಿಗುರಿನ
ಹಬ್ಬುಗೆಯ ಹೊಲಬಳಿಯೆ ನಾಲಗೆಯುಡುಗೆ ಹೆಡತಲೆಗೆ
ಸಬ್ಬಗತನೈ ಶಿವಶಿವಾ ಬಲು
ಮಬ್ಬಿನಲಿ ಮುಂದರಿಯದೆನ್ನಯ
ಕೊಬ್ಬನೇವಣ್ಣಿಸುವೆನೆನುತಡಿಗಡಿಗೆ ಬೆರಗಾದ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಶ್ವರೂಪ ಕಂಡ ಕಣ್ಣುಗಳಲ್ಲಿ ಸಂತೋಷ ಉಕ್ಕಿ, ಹಿಗ್ಗಿದನು. ಅಹಂಕಾರದಿಂದ ಬೀಗುತ್ತಿದ್ದ ಅವನ ಗರ್ವ ನಾಶವಾಯಿತು. ನಾಲಗೆಗೆ ಮಾತು ಬಾರದಾಯಿತು. ಸರ್ವಗತನು ನೀನು (ಎಲ್ಲರಲ್ಲೂ ಅಡಗಿರುವ ಸರ್ವಾಂತರ್ಯಾಮಿ) ಅಯ್ಯೋ, ಕೇವಲ ಅಜ್ಞಾನದಲ್ಲಿ ಮುಂದೇನು ಎಂದು ತಿಳಿಯದೆ ಇದ್ದ ನನ್ನ ಅಹಂಕಾರವನ್ನು ಏನೆಂದು ಬಣ್ಣಿಸಲಿ ಎನ್ನುತ ಪದೇ ಪದೇ ಕೃಷ್ಣನ ವಿಶ್ವರೂಪ ಕಾಣುತ್ತ ಅಚ್ಚರಿಗೊಳ್ಳುತ್ತಿದ್ದನು.
ಪದಾರ್ಥ (ಕ.ಗ.ಪ)
ಮದದ ನಿಗುರಿನ-ಅಹಂಕಾರದಿಂದ ಬೀಗುತ್ತಿದ್ದ, ಗಬ್ಬಮುರಿದುದು-(ಗರ್ವನಾಶವಾಯಿತು), ಗಬ್ಬ-ಗರ್ವ, ಅಹಂಕಾರ, ನಾಲಗೆಯುಡುಗೆ-ನಾಲಗೆ ಸೇದಿಹೋಗಲು, ಹೆಡತಲೆ-ಹಿಂದಲೆ, ಸಬ್ಬಗತ-ಸರ್ವಗತ, ಸರ್ವಾಂತರ್ಯಾಮಿ, ಕೊಬ್ಬು-ಅಹಂಕಾರ, ಏವಣ್ಣಿಸುವೆನು-ಏನೆಂದು ಬಣ್ಣಿಸಲಿ
ಮೂಲ ...{Loading}...
ಉಬ್ಬಿದನು ಹರುಷದಲಿ ಕಂಗಳ
ಗಬ್ಬ ಮುರಿದುದು ಮದದ ನಿಗುರಿನ
ಹಬ್ಬುಗೆಯ ಹೊಲಬಳಿಯೆ ನಾಲಗೆಯುಡುಗೆ ಹೆಡತಲೆಗೆ
ಸಬ್ಬಗತನೈ ಶಿವಶಿವಾ ಬಲು
ಮಬ್ಬಿನಲಿ ಮುಂದರಿಯದೆನ್ನಯ
ಕೊಬ್ಬನೇವಣ್ಣಿಸುವೆನೆನುತಡಿಗಡಿಗೆ ಬೆರಗಾದ ॥67॥
೦೬೮ ಇದೆ ನಿರಞ್ಜನತತ್ವ ...{Loading}...
ಇದೆ ನಿರಂಜನತತ್ವ ಸಾಮ್ರಾ
ಜ್ಯದ ಸಘಾಟಿಕೆ ನಾವು ಕಡು ಮೂ
ರ್ಖದಲಿ ಮೈಮರೆದೆವು ಶರೀರದ ಬಂಧುಕೃತ್ಯದಲಿ
ಯದುಗಳನ್ವಯದಾತ ನಮಗೊ
ಳ್ಳಿದನು ಸೋದರಭಾವನೆಂದೇ
ಮದಮುಖದಿ ಕಡುಗೇಡ ಕೆಟ್ಟೆನು ಶಿವಶಿವಾಯೆಂದ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದೇ ಪರಮಾತ್ಮ ತತ್ವ ಸಾಮ್ರಾಜ್ಯದ ಮಹಿಮೆ (ಅತಿಶಯತೆ) ನಾವು ಅತಿದಡ್ಡತನದಿಂದ, ದೇಹ ಮೋಹದ ಬಂಧು ಪ್ರೇಮದಲ್ಲಿ ಎಚ್ಚರ ತಪ್ಪಿದೆವು. ಯದುವಂಶದಲ್ಲಿ ಜನಿಸಿದ ಕೃಷ್ಣನು ನಮ್ಮ ಪಾಲಿಗೆ ಹಿತಕಾರಿ, ಸೋದರ ಭಾವನು ಎಂಬುದಾಗಿ ತಿಳಿದು ಗರ್ವಿಷ್ಟನಾಗಿ ಅತಿದುಷ್ಟ ಕಾರ್ಯ ಮಾಡಿ ನಾಶವಾದೆನು ಆಕಟಕಟಾ ಎಂದನು.
ಪದಾರ್ಥ (ಕ.ಗ.ಪ)
ಸಘಾಟಿಕೆ-ಅತಿಶಯತೆ, ಮಹಿಮೆ, ಕಡುಮೂರ್ಖದಲಿ-ಅತಿದಡ್ಡತನದಿಂದ, ನಿರಂಜನತತ್ವ-ಪರಮಾತ್ಮ ತತ್ವ, ಬಂಧುಕೃತ್ಯ-ಬಂಧು ಪ್ರೇಮ, ಮೈಮರೆದವು-ಎಚ್ಚರ ತಪ್ಪಿದೆವು, ಯದುಗಳನ್ವಯದಾತ-ಕೃಷ್ಣ, ಸೋದರ ಭಾವನು-ಭಾವ, ಕಡುಗೇಡ ಕೆಟ್ಟನು-ಅತಿ ದುಷ್ಟಕಾರ್ಯದಿಂದ ನಾಶವಾದೆನು.
ಮೂಲ ...{Loading}...
ಇದೆ ನಿರಂಜನತತ್ವ ಸಾಮ್ರಾ
ಜ್ಯದ ಸಘಾಟಿಕೆ ನಾವು ಕಡು ಮೂ
ರ್ಖದಲಿ ಮೈಮರೆದೆವು ಶರೀರದ ಬಂಧುಕೃತ್ಯದಲಿ
ಯದುಗಳನ್ವಯದಾತ ನಮಗೊ
ಳ್ಳಿದನು ಸೋದರಭಾವನೆಂದೇ
ಮದಮುಖದಿ ಕಡುಗೇಡ ಕೆಟ್ಟೆನು ಶಿವಶಿವಾಯೆಂದ ॥68॥
೦೬೯ ಪರುಷ ಕಲ್ಲೆನ್ದಳುಕಿ ...{Loading}...
ಪರುಷ ಕಲ್ಲೆಂದಳುಕಿ ಸುರತರು
ಮರನು ತೆಗೆಯೆಂದಮರಧೇನುವ
ಪರರ ಮನೆಯಲಿ ಮಾರಿ ಚಿಂತಾಮಣಿಗೆ ಕೈದುಡುಕಿ
ಹರಳು ತೆಕ್ಕೆಯಿದೆಂಬ ಪಾಪಿಗೆ
ಪರಮಗುರು ನಾನಾದೆನೈ ಮುರ
ಹರನ ಮೈದುನನೆಂದು ಗರ್ವಿಸಿ ಕೆಟ್ಟೆನಕಟೆಂದ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪರುಷ ಮಣಿಯನ್ನು ಸಾಮಾನ್ಯ ಕಲ್ಲೆಂದು ಉಪೇಕ್ಷಿಸಿ, ಕಲ್ಪವೃಕ್ಷವನ್ನು ಸಾಧಾರಣ ಮರವೆಂದು ತೊರೆದು, ಕಾಮಧೇನುವನ್ನು ಸಾಮಾನ್ಯ ಗೋವೆಂದು ಕಂಡವರಿಗೆ ಮಾರಿ, ಚಿಂತಾಮಣಿ ಎಂಬ ಇಷ್ಟಾರ್ಥ ಸಿದ್ಧಿಯ ಮಣಿಯನ್ನು ವಿಚಾರ ಮಾಡದೆ ಇದು ಕಲ್ಲಿನ ಚೂರು ಎಂದು ಭಾವಿಸಿ, ಪಾಪಿಗಳಲ್ಲಿ ಪರಮ ಪಾಪಿ ನಾನಾದೆನು. ಶ್ರೀ ಕೃಷ್ಣ ಪರಮಾತ್ಮನ ಮೈದುನ (ನಂಟನು) ಎಂಬ ಅಹಂಕಾರದಿಂದ ಅಯ್ಯೋ ಕೆಟ್ಟೆನು’ ಎಂದನು ಅರ್ಜುನ.
ಪದಾರ್ಥ (ಕ.ಗ.ಪ)
ಪರುಷ-ಲೋಹ ಮುಟ್ಟಿಸಿದರೆ ಚಿನ್ನ ಮಾಡುವ ಕಲ್ಲು, ಮೈದುನ-ತಂಗಿ ಸುಭದ್ರೆಯ ಗಂಡ-ಅರ್ಜುನ, ಸುರತರು-ಕಲ್ಪವೃಕ್ಷ, ಅಮರಧೇನು-ಕಾಮಧೇನು, ಚಿಂತಾಮಣಿ-ಇಷ್ಟಾರ್ಥಿಸಿದ್ಧಿಯ ಕಲ್ಲು, ಹರಳುತೆಕ್ಕೆ-ಕಲ್ಲಿನ ಚೂರು, ಮುರಹರ-ಕೃಷ್ಣ
ಮೂಲ ...{Loading}...
ಪರುಷ ಕಲ್ಲೆಂದಳುಕಿ ಸುರತರು
ಮರನು ತೆಗೆಯೆಂದಮರಧೇನುವ
ಪರರ ಮನೆಯಲಿ ಮಾರಿ ಚಿಂತಾಮಣಿಗೆ ಕೈದುಡುಕಿ
ಹರಳು ತೆಕ್ಕೆಯಿದೆಂಬ ಪಾಪಿಗೆ
ಪರಮಗುರು ನಾನಾದೆನೈ ಮುರ
ಹರನ ಮೈದುನನೆಂದು ಗರ್ವಿಸಿ ಕೆಟ್ಟೆನಕಟೆಂದ ॥69॥
೦೭೦ ನೊರಜು ತಾನೆತ್ತಲು ...{Loading}...
ನೊರಜು ತಾನೆತ್ತಲು ಮಹತ್ವದ
ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ
ನರಮೃಗಾಧಮನೆತ್ತಲುನ್ನತ
ಪರಮತತ್ವವಿದೆತ್ತಲಕಟಾ
ಮರುಳು ನನ್ನವಗುಣವದಾವುದ ಕಡೆಗೆ ಹಲುಬುವೆನು ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಣ್ಣಕಲ್ಲಿನ ಚೂರು ಅದು ಎತ್ತ ? ಹಿರಿದಾದ ಬಂಡೆಗಳುಳ್ಳ ಬೆಟ್ಟವದು ಎತ್ತ ? ಮಿಣುಕು ಹುಳುವಿನ ಅಲ್ಪಕಾಂತಿ ಎತ್ತ ? ಕೋಟಿ ಸೂರ್ಯರ ಪ್ರಕಾಶ ಅದೆತ್ತ ? ನರ ಪ್ರಾಣಿಗಳಲ್ಲೇ ನೀಚನಾದವನು ನಾನೆಲ್ಲಿ ? ಅತಿ ಶ್ರೇಷ್ಠ ಪರಮಾತ್ಮ ಸ್ವರೂಪಿ ಆದ ಆತನೆಲ್ಲಿ ? ಅಯ್ಯೋ ನನ್ನ ದುರ್ಗುಣಗಳಲ್ಲಿ ಯಾವಗುಣಕ್ಕಾಗಿ (ದೋಷಕ್ಕಾಗಿ) ಚಿಂತಿಸಲಿ ?
ಪದಾರ್ಥ (ಕ.ಗ.ಪ)
ನೊರಜು-ಸಣ್ಣ ಕಲ್ಲಿನ ಚೂರು, ಮಿಂಚುಬುಳು-ಮಿಣಕುಹುಳು, ನರಮೃಗ-ಹೀನಮಾನವ, ಅವಗುಣ-ದುರ್ಗುಣ
ಮೂಲ ...{Loading}...
ನೊರಜು ತಾನೆತ್ತಲು ಮಹತ್ವದ
ಗಿರಿಯದೆತ್ತಲು ಮಿಂಚುಬುಳುವಿನ
ಕಿರಣವೆತ್ತಲು ಹೊಳಹಿದೆತ್ತಲು ಕೋಟಿಸೂರಿಯರ
ನರಮೃಗಾಧಮನೆತ್ತಲುನ್ನತ
ಪರಮತತ್ವವಿದೆತ್ತಲಕಟಾ
ಮರುಳು ನನ್ನವಗುಣವದಾವುದ ಕಡೆಗೆ ಹಲುಬುವೆನು ॥70॥
೦೭೧ ಮೇಳ ಗಡ ...{Loading}...
ಮೇಳ ಗಡ ನಮಗೀತನಲಿ ಭೂ
ಪಾಲಕರು ಗಡ ನಾವು ಸಾರಥಿ
ಯಾಳು ಗಡ ಹರಿ ನಾವು ವೀರರು ಗಡ ವಿಚಿತ್ರವಲ
ಮೇಲುಗಾಣದ ಪಾರ್ಥನೆಂಬೀ
ಕಾಳುಮೂಳನ ವಿಧಿಯನೇಪರಿ
ವೇಳುವೆನು ಹರಯೆನುತ ಕಂಗಳನೆವೆಗಳಲಿ ಬಿಗಿದ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಮಾನ್ಯರಾದ ನಮಗೆ ಪರಮಾತ್ಮನಾದ ಈತನ ಸರಿಸಾಟಿಯೇ ಅಕಟಾ ! ನಾವು ರಾಜರಂತೆ ಆಹಾ ! ಶ್ರೀ ಹರಿ ಆದ ಕೃಷ್ಣ ನಮ್ಮ ಸೇವಕನಾದ ಸಾರಥಿ ಅಂತೆ ಆಹಾ ! ನಾವು ಕ್ಷತ್ರಿಯರೂ ಶೂರರು ಅಂತೆ ! ಇದು ವಿಚಿತ್ರವಲ್ಲವೇ ? ಸತ್ಯ ಸಂಗತಿ ತಿಳಿಯದ ಅರ್ಜುನನೆಂಬ ಈ ಹೀನ ಮಾನವನಾದ ನನ್ನ ವಿಧಿವಿಲಾಸವನ್ನು ಯಾವ ರೀತಿಯಲ್ಲಿ ಹೇಳಿಕೊಳ್ಳಲಿ ಅಯ್ಯೋ ದೇವರೇ ! ಎನ್ನುತ ರೆಪ್ಪೆಗಳಿಂದ ಕಣ್ಣುಗಳನ್ನು ಮುಚ್ಚಿಕೊಂಡನು.
ಪದಾರ್ಥ (ಕ.ಗ.ಪ)
ಗಡ-ಅಕ್ಕಟಾ, ಅಯ್ಯೋ,
ಕಾಳುಮೂಳ-ಹೀನ ಮಾನವ, ವಿಧಿ-ದುರದೃಷ್ಟ, ಏ ಪರಿ-ಯಾವರೀತಿ
ಮೂಲ ...{Loading}...
ಮೇಳ ಗಡ ನಮಗೀತನಲಿ ಭೂ
ಪಾಲಕರು ಗಡ ನಾವು ಸಾರಥಿ
ಯಾಳು ಗಡ ಹರಿ ನಾವು ವೀರರು ಗಡ ವಿಚಿತ್ರವಲ
ಮೇಲುಗಾಣದ ಪಾರ್ಥನೆಂಬೀ
ಕಾಳುಮೂಳನ ವಿಧಿಯನೇಪರಿ
ವೇಳುವೆನು ಹರಯೆನುತ ಕಂಗಳನೆವೆಗಳಲಿ ಬಿಗಿದ ॥71॥
೦೭೨ ಅಡಿಗಡಿಗೆ ಕಣ್ದೆರೆದು ...{Loading}...
ಅಡಿಗಡಿಗೆ ಕಣ್ದೆರೆದು ಮುಚ್ಚುವ
ನಡಿಗಡಿಗೆ ಮೈಬೆದರಿ ಬೆರಗಹ
ನಡಿಗಡಿಗೆ ಮೆಯ್ಯೊಲೆವನುಬ್ಬಿದ ರೋಮ ಪುಳಕದಲಿ
ಅಡಿಗಡಿಗೆ ಮನನಲಿದು ಹೊಂಗುವ
ನಡಿಗಡಿಗೆ ಭಯಗೊಂಡು ಕರಗುವ
ನೊಡಲನವನಿಗೆ ಹರಹಿ ನಿಡುದೋಳುಗಳ ನೀಡಿದನು ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಮತ್ತೆ ಕಣ್ಣು ಬಿಡುವನು ಮತ್ತೆ ಕಣ್ಣು ಮುಚ್ಚುವನು. ಪದೇ ಪದೇ ಮೈಬೆವರಿ ಅಚ್ಚರಿ ಹೊಂದುವನು. ಪುನಃ ಪುನಃ ಅಧಿಕ ರೋಮಾಂಚನದಲ್ಲಿ ತೂಗಾಡುವನು. ಬಾರಿ ಬಾರಿಗೂ ಮನಸ್ಸಿನಲ್ಲಿ ಹರ್ಷ ಉಕ್ಕಿ ಉಬ್ಬುವನು. ಇನ್ನೊಮ್ಮೆ ಮತ್ತೊಮ್ಮೆ ಭಯದಿಂದ ತತ್ತರಿಸಿ ದೇಹವನ್ನು ಭೂಮಿಗೆ ಚಾಚಿ ಎರಡು ಉದ್ದನೆ ತೋಳುಗಳನ್ನು ನೀಡಿ ಒರಗುವನು. ಹೀಗೆ ವಿಹ್ವಳ ಸ್ಥಿತಿಯಲ್ಲಿ ವಿಕಲಮತಿಯಿಂದ ಅರ್ಜುನ ವರ್ತಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಅಡಿಗಡಿಗೆ-ಪುನಃ ಪುನಃ, ರೋಮಪುಳಕ-ರೋಮಾಂಚನ, ಹರಹಿ-ಚಾಚಿ, ನಿಡುತೋಳು-ಉದ್ದನೆತೋಳು, ಹೊಂಗು-ಹೊಮ್ಮು ಉಬ್ಬು,
ಮೂಲ ...{Loading}...
ಅಡಿಗಡಿಗೆ ಕಣ್ದೆರೆದು ಮುಚ್ಚುವ
ನಡಿಗಡಿಗೆ ಮೈಬೆದರಿ ಬೆರಗಹ
ನಡಿಗಡಿಗೆ ಮೆಯ್ಯೊಲೆವನುಬ್ಬಿದ ರೋಮ ಪುಳಕದಲಿ
ಅಡಿಗಡಿಗೆ ಮನನಲಿದು ಹೊಂಗುವ
ನಡಿಗಡಿಗೆ ಭಯಗೊಂಡು ಕರಗುವ
ನೊಡಲನವನಿಗೆ ಹರಹಿ ನಿಡುದೋಳುಗಳ ನೀಡಿದನು ॥72॥
೦೭೩ ಮುರಹರ ತ್ರಾಯಸ್ವ ...{Loading}...
ಮುರಹರ ತ್ರಾಯಸ್ವ ಕರುಣಾ
ಕರ ಪರಿತ್ರಾಯಸ್ವ ಲಕ್ಷ್ಮೀ
ವರ ಪರಿತ್ರಾಯಸ್ವ ದನುಜಾಂತಕ ಪರಿತ್ರಾಹಿ
ಚರಣಭಜಕ ಕುಟುಂಬಕನೆ ಘನ
ದುರಿತ ವಿಪಿನ ಕೃಶಾನುವೇ ಭವ
ಹರ ನಿರೀಕ್ಷಿಸು ರಕ್ಷಿಸೆನ್ನನೆನುತ್ತ ಹೊರಳಿದನು ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುರರಾಕ್ಷಸನನ್ನು ಕೊಂದವನೆ ರಕ್ಷಿಸು, ದಯಾಮಯನೆ ಕಾಪಾಡು, ಲಕ್ಷ್ಮೀಪತಿಯೆ ಸಲಹು, ರಾಕ್ಷಸ ಸಂಹಾರಕನೇ ಕಾಪಾಡು, ನಿನ್ನ ಪಾದ ಸೇವನೆ ಮಾಡುವ ಭಕ್ತರ ಕುಟುಂಬಕನೇ, ಘೋರ ಪಾಪಗಳೆಂಬ ಕಾಡಿಗೆ ದಾವಾಗ್ನಿ ಆದವನೇ, ಸಂಸಾರ ನಾಶನೇ ನನ್ನತ್ತ ನೋಡು, ನನ್ನ ಕಾಪಾಡು ಎನ್ನುತ್ತ ಕೃಷ್ಣನ ಪಾದಗಳಲ್ಲಿ ಹೊರಳಿದನು.
ಪದಾರ್ಥ (ಕ.ಗ.ಪ)
ತ್ರಾಯಸ್ವ-ಕಾಪಾಡು, ಪರಿತ್ರಾಯಸ್ವ-ರಕ್ಷಿಸು, ದನುಜಾಂತಕ-ರಾಕ್ಷಸಸಂಹಾರಿ, ಕೃಶಾನು-ಬೆಂಕಿ, ದಾವಾನಲ, ವಿಪಿನ-ಕಾಡು, ದುರಿತ-ಪಾಪ, ಚರಣಭಜಕ-ಭಕ್ತ
ಮೂಲ ...{Loading}...
ಮುರಹರ ತ್ರಾಯಸ್ವ ಕರುಣಾ
ಕರ ಪರಿತ್ರಾಯಸ್ವ ಲಕ್ಷ್ಮೀ
ವರ ಪರಿತ್ರಾಯಸ್ವ ದನುಜಾಂತಕ ಪರಿತ್ರಾಹಿ
ಚರಣಭಜಕ ಕುಟುಂಬಕನೆ ಘನ
ದುರಿತ ವಿಪಿನ ಕೃಶಾನುವೇ ಭವ
ಹರ ನಿರೀಕ್ಷಿಸು ರಕ್ಷಿಸೆನ್ನನೆನುತ್ತ ಹೊರಳಿದನು ॥73॥
೦೭೪ ದೇವ ಭಕ್ತಜನಾರ್ತಪಾಲಕ ...{Loading}...
ದೇವ ಭಕ್ತಜನಾರ್ತಪಾಲಕ
ದೇವ ಬಹಳಕೃಪಾಮಹಾರ್ಣವ
ದೇವ ಸರ್ವೇಶ್ವರ ಸದಾತ್ಮಕ ಸಕಲ ನಿಷ್ಕಳನೆ
ಸೇವಕರಲಾರೈವರೇ ಸುಗು
ಣಾವಗುಣವನು ನಿಮ್ಮ ಭೃತ್ಯನ
ಭಾವ ಬೆಚ್ಚಿತು ವಿಶ್ವರೂಪವ ಬೀಳುಕೊಡಿಯೆಂದ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಕ್ತ ಜನರ ದುಃಖ ನಿವಾರಕನಾದ ದೇವನೆ, ಮಹಾಕಾರುಣ್ಯ ಸಾಗರನಾದ ದೇವನೆ, ಸಮಸ್ತದೇವಾಧಿದೇವತೆಗಳ ಒಡೆಯನೆ, ಸರ್ವಾತ್ಮವಾದವನೆ (ಸತ್ಸ್ವರೂಪಿಯೂ ಆತ್ಮ ರೂಪಿಯೂ ಆದವನೆ) ವಿಶ್ವದ ಎಲ್ಲ ಭಾಗಗಳನ್ನೂ ಒಳಗೊಂಡು ಸುಗುಣ ರೂಪನಾದವನೆ, ನಿರ್ಗುಣರೂಪಿ ಆದ ನಿನ್ನನ್ನು ನಿನ್ನ ಸುಗುಣ ಅವಗುಣಗಳನ್ನು ದಾಸರಾದ ನಾವು ವಿಚಾರಿಸಲು ಶಕ್ಯವೆ? ನಿನ್ನ ಸೇವಕನಾದ ನನ್ನ ಮನ ದಿಗ್ಭ್ರಮೆಗೊಂಡಿದೆ. ನಿನ್ನ ವಿಶ್ವರೂಪವನ್ನು ಮರೆಮಾಡು ಎಂದನು.
ಪದಾರ್ಥ (ಕ.ಗ.ಪ)
ಆರ್ತಪಾಲಕ-ದುಃಖನಿವಾರಿಸುವವನು
ಮೂಲ ...{Loading}...
ದೇವ ಭಕ್ತಜನಾರ್ತಪಾಲಕ
ದೇವ ಬಹಳಕೃಪಾಮಹಾರ್ಣವ
ದೇವ ಸರ್ವೇಶ್ವರ ಸದಾತ್ಮಕ ಸಕಲ ನಿಷ್ಕಳನೆ
ಸೇವಕರಲಾರೈವರೇ ಸುಗು
ಣಾವಗುಣವನು ನಿಮ್ಮ ಭೃತ್ಯನ
ಭಾವ ಬೆಚ್ಚಿತು ವಿಶ್ವರೂಪವ ಬೀಳುಕೊಡಿಯೆಂದ ॥74॥
೦೭೫ ಲೋಕವರಿಯಲನನ್ತವೇದವು ...{Loading}...
ಲೋಕವರಿಯಲನಂತವೇದವು
ಮೂಕನಾದವು ಜೀಯ ಜಡನವಿ
ವೇಕಿ ಮಾನವ ಮಶಕವಿದು ನಿಮ್ಮಳತೆಗೈದುವುದೇ
ಸಾಕಿಕೊಳ್ಳೈ ಕೃಷ್ಣ ನೋಡಲು
ನೂಕದೆನ್ನೆವೆ ಸೀವುತಿವೆ ಕರು
ಣಾಕರನೆ ಕೈಗಾವುದೈ ಕೃಪೆಮಾಡಬೇಕೆಂದ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಾಮಿಯೆ ಜಗತ್ತಿಗೆ ತಿಳಿದಿರುವಂತೆ ನಿನ್ನನ್ನು ವೇದ ಕೋಟಿಗಳು ಹೊಗಳಿ ಹಾಡಿ ಸಾಕಾಗಿ ಮೌನವಾದವು. (ವೇದಾತೀತ ನೀನು) ಜಡನಾದ ಅವಿವೇಕಿಯಾದ ಮಾನವನೆಂಬ ಕ್ಷುದ್ರಜೀವಿ ಆದ ನಾನು ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಶಕ್ಯವೆ ? ಕೃಷ್ಣ, ನಿನ್ನ ವಿಶ್ವರೂಪ ನೋಡಲು ಸಾಧ್ಯವಾಗದು. ನನ್ನ ಮಾತನ್ನು ಪರಿಗಣಿಸು. ನನ್ನ ಕಣ್ಣು ರೆಪ್ಪೆಗಳು ಸೀದು ಹೋಗುತ್ತಿವೆ, ದಯಾಮಯನೆ ರಕ್ಷಿಸಬೇಕು, ಅನುಗ್ರಹಿಸಬೇಕು ಎಂದನು.
ಪದಾರ್ಥ (ಕ.ಗ.ಪ)
ಅನಂತವೇದ-ಕೋಟಿವೇದಗಳು, ಮಶಕ-ಸೊಳ್ಳೆ, ನೂಕದು-ಸಾಧ್ಯವಾಗದು, ಎವೆ-ಕಣ್ಣು ರೆಪ್ಪೆ, ಸೀವುತಿವೆ-ಸುಟ್ಟುಕರಕಲಾಗುವುದು, ಕೈಗಾವುದೈ-ರಕ್ಷಿಸಬೇಕು, ಕೃಪೆಮಾಡು-ಅನುಗ್ರಹಿಸು
ಮೂಲ ...{Loading}...
ಲೋಕವರಿಯಲನಂತವೇದವು
ಮೂಕನಾದವು ಜೀಯ ಜಡನವಿ
ವೇಕಿ ಮಾನವ ಮಶಕವಿದು ನಿಮ್ಮಳತೆಗೈದುವುದೇ
ಸಾಕಿಕೊಳ್ಳೈ ಕೃಷ್ಣ ನೋಡಲು
ನೂಕದೆನ್ನೆವೆ ಸೀವುತಿವೆ ಕರು
ಣಾಕರನೆ ಕೈಗಾವುದೈ ಕೃಪೆಮಾಡಬೇಕೆಂದ ॥75॥
೦೭೬ ಎಳನಗೆಯ ಸಿರಿಮೊಗದ ...{Loading}...
ಎಳನಗೆಯ ಸಿರಿಮೊಗದ ಚೆಲುವಿನ
ಹೊಳೆಹೊಳೆವ ನಿಟ್ಟೆಸಳುಗಂಗಳ
ತೊಳಪ ಕದಪಿನ ಮಿಸುಪ ಕಾಂತಿಯ ಮಕರಕುಂಡಲದ
ಲಲಿತಕಂಠದ ಕೌಸ್ತುಭೋರ
ಸ್ಥಳದ ನಿಡುದೋಳುಗಳ ಕೋಮಲ
ತಳಿತ ಪೀತಾಂಬರದ ಮುನ್ನಿನ ರೂಪ ತೋರೆಂದ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಗುಳು ನಗೆಯ, ಸುಂದರ ವದನದ, ಚೆಲುವಾದ ಕಾಂತಿಯುಕ್ತವಾದ ಉದ್ದನೆಯ ಕಮಲದೆಸಳುಗಳಂಥ ಕಣ್ಣುಗಳುಳ್ಳ, ಹೊಳೆವ ಕೆನ್ನೆಯ, ಜ್ವಲಿಸುವ ಮಕರ ಕುಂಡಲವೆಂಬ ಕಿವಿಯಾಭರಣದ, ಸುಂದರ ಕೊರಳ, ಎದೆಯ ಮೇಲೆ ಶೋಭಿಸುವ ಕೌಸ್ತುಭ ರತ್ನದ, ಉದ್ದನೆಯ ತೋಳುಗಳ ಕೋಮಲವಾದ ಲಲಿತ ಪೀತಾಂಬರವನ್ನು ಉಟ್ಟ ನಿನ್ನ ಮೊದಲಿನ ಸ್ವರೂಪ ತೋರಿಸು ಎಂದು ಕೃಷ್ಣನನ್ನು ಅರ್ಜುನ ಕೇಳಿಕೊಂಡನು.
ಪದಾರ್ಥ (ಕ.ಗ.ಪ)
ನಿಟ್ಟೆಸುಳು-ಉದ್ದನೆ ಎಸಳಿನಂಥ, ಕದಪು-ಕೆನ್ನೆ, ಮಿಸುಪ-ಹೊಳೆವ, ಮಕರಕುಂಡಲ-ಕಿವಿಯಾಭರಣ, ಲಲಿತಕಂಠ-ಚೆಲುವಿನ ಕೊರಳು, ಕೌಸ್ತುಭ-ಕೌಸ್ತುಭಮಣಿಹಾರ
ಮೂಲ ...{Loading}...
ಎಳನಗೆಯ ಸಿರಿಮೊಗದ ಚೆಲುವಿನ
ಹೊಳೆಹೊಳೆವ ನಿಟ್ಟೆಸಳುಗಂಗಳ
ತೊಳಪ ಕದಪಿನ ಮಿಸುಪ ಕಾಂತಿಯ ಮಕರಕುಂಡಲದ
ಲಲಿತಕಂಠದ ಕೌಸ್ತುಭೋರ
ಸ್ಥಳದ ನಿಡುದೋಳುಗಳ ಕೋಮಲ
ತಳಿತ ಪೀತಾಂಬರದ ಮುನ್ನಿನ ರೂಪ ತೋರೆಂದ ॥76॥
೦೭೭ ಅಳಕ ನಿಚಯದ ...{Loading}...
ಅಳಕ ನಿಚಯದ ಕುಂಭಿನೊಸಲಿನ
ತಳಿತೆವೆಯ ನಿಡುಹುಬ್ಬುಗಳ ಕೋ
ಮಲ ಸುಮುಕ್ತಾಫಲಕೆ ಸೆಣಸುವ ದಂತಪಂಕ್ತಿಗಳ
ಲಲಿತಚುಬುಕದ ಚಾರುತರ ಕೆಂ
ದಳದ ಸುಳಿನಾಭಿಯ ಸವರ್ತುಳ
ವಿಳಸಿತೋರುದ್ವಯದ ಮುನ್ನಿನ ರೂಪ ತೋರೆಂದ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುಂಪಾದ ಮುಂಗುರುಳಿನ, ಆನೆಯ ಮಸ್ತಕದಂಥ ಹಣೆಯ, ಕಣ್ಣು ರೆಪ್ಪೆಗಳ ಪಲ್ಲವಿಸಿದ ಕೂದಲಿನ, ವಿಶಾಲವಾದ ಹುಬ್ಬುಗಳ, ಮುತ್ತಿನ ಸಾಲುಗಳೊಡನೆ ಸ್ಪರ್ಧಿಸುವ ಹಲ್ಲಿನ ಸಾಲುಗಳ, ಮನೋಹರ ಗಲ್ಲದ, ಸುಂದರವಾದ ತಾವರೆ ಎಸಳಿನಂಥ ಸುಳಿ ಆಕಾರದ ಹೊಕ್ಕಳಿನ, ದುಂಡಾಗಿ ಚೆನ್ನಾಗಿರುವ ತೊಡೆಗಳ ನಿನ್ನ ಮೊದಲ ಸ್ವರೂಪವನ್ನು ತೋರಿಸು ಎಂದನು.
ಪದಾರ್ಥ (ಕ.ಗ.ಪ)
ಕುಂಭಿ-ಆನೆಯಮಸ್ತಕ, ತಳಿತ-ಕೋಮಲ, ಎವೆ-ಕಣ್ಣಿನರೆಪ್ಪೆ , ಸುಮುಕ್ತಾಫಲ -ಮುತ್ತಿನಸಾಲು, ಸೆಣಸು-ಸ್ಪರ್ಧಿಸು, ದಂತಪಂಕ್ತಿ-ಹಲ್ಲಿನಸಾಲು, ಚುಬುಕ-ಗಲ್ಲ, ಸುಳಿನಾಭಿ-ಸುಳಿಯಾಕಾರದ ಹೊಕ್ಕಳು, ಸವರ್ತುಳ-ದುಂಡಾಗಿರುವ, ಊರುದ್ವಯ-ಎರಡು ತೊಡೆಗಳು
ಮೂಲ ...{Loading}...
ಅಳಕ ನಿಚಯದ ಕುಂಭಿನೊಸಲಿನ
ತಳಿತೆವೆಯ ನಿಡುಹುಬ್ಬುಗಳ ಕೋ
ಮಲ ಸುಮುಕ್ತಾಫಲಕೆ ಸೆಣಸುವ ದಂತಪಂಕ್ತಿಗಳ
ಲಲಿತಚುಬುಕದ ಚಾರುತರ ಕೆಂ
ದಳದ ಸುಳಿನಾಭಿಯ ಸವರ್ತುಳ
ವಿಳಸಿತೋರುದ್ವಯದ ಮುನ್ನಿನ ರೂಪ ತೋರೆಂದ ॥77॥
೦೭೮ ಪರಮಚಿನುಮಯ ನೀನು ...{Loading}...
ಪರಮಚಿನುಮಯ ನೀನು ಕರ್ಮದ
ಸರಣಿಯೆನ್ನದು ನೀ ಚರಾಚರ
ಭರಿತ ಭಾರಿಯ ವಿಶ್ವಮಯನವ್ಯಕ್ತನದ್ವಯನು
ನರನ ಮತಿಯಿದು ಮಂದಮತಿ ಗೋ
ಚರಿಸಲರಿವುದೆ ದೇವ ಕರುಣಿಸು
ಕರುಣಿಸೈ ಮೈದೋರು ತನ್ನೊಡನಾಡಿತನದನುವ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಿವ್ಯಜ್ಞಾನ ಸ್ವರೂಪಿ ನೀನು, ಜನ್ಮಾಂತರಗಳನ್ನು ತಳೆಯುವ ಕರ್ಮ ಪರಂಪರೆ ನನ್ನದು, ನೀನು ಚೇತನಾಚೇತನಗಳನ್ನು ಆವರಿಸಿರುವ ಸಮಸ್ತ ಜಗತ್ತನ್ನು ಧರಿಸಿರುವವನು, ನಿರಾಕಾರನು, ಅದ್ವೈತನು, ಈ ಅರ್ಜುನನ ಬುದ್ಧಿ ಮಂದವಾದುದು. ದೇವ ನಿನ್ನನ್ನು ಕಾಣಲು ನನಗೆ ಶಕ್ಯವೇ ? ಅನುಗ್ರಹಿಸು, ಕೃಪೆ ಮಾಡು ನನ್ನ ಸ್ನೇಹದ ಒಡನಾಟದ ರೀತಿಯಲ್ಲೇ ಕಾಣಿಸಿಕೋ ಎಂದು ಪ್ರಾರ್ಥಿಸಿದನು.
ಪದಾರ್ಥ (ಕ.ಗ.ಪ)
ಚಿನ್ಮಯ-ಜ್ಞಾನರೂಪಿ, ಕರ್ಮದ ಸರಣಿ-ಜನ್ಮಾಂತರಗಳ ಕರ್ಮ ಪರಂಪರೆ, ಅದ್ವಯನು-ಅದ್ವೈತನು, ಅವ್ಯಕ್ತ-ನಿರಾಕಾರಿ, ಒಡನಾಡಿತನದ-ಸ್ನೇಹದ ಒಡನಾಟದ
ಮೂಲ ...{Loading}...
ಪರಮಚಿನುಮಯ ನೀನು ಕರ್ಮದ
ಸರಣಿಯೆನ್ನದು ನೀ ಚರಾಚರ
ಭರಿತ ಭಾರಿಯ ವಿಶ್ವಮಯನವ್ಯಕ್ತನದ್ವಯನು
ನರನ ಮತಿಯಿದು ಮಂದಮತಿ ಗೋ
ಚರಿಸಲರಿವುದೆ ದೇವ ಕರುಣಿಸು
ಕರುಣಿಸೈ ಮೈದೋರು ತನ್ನೊಡನಾಡಿತನದನುವ ॥78॥
೦೭೯ ನಳಿನನಾಭ ಮುಕುನ್ದ ...{Loading}...
ನಳಿನನಾಭ ಮುಕುಂದ ಮಂಗಳ
ನಿಳಯ ಭಕ್ತವ್ಯಸನಿ ದೈತ್ಯ
ಪ್ರಳಯ ಪಾವಕ ಭಕ್ತವತ್ಸಲ ಭಕ್ತ ಸುರಧೇನು
ಲಲಿತಮೇಘಶ್ಯಾಮ ಸೇವಕ
ಸುಲಭ ಶೌರಿ ಮುರಾರಿ ಭಕ್ತಾ
ವಳಿ ಕುಟುಂಬಕ ಕೃಷ್ಣ ಕೇಶವ ಕರುಣಿಸೆನಗೆಂದ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪದ್ಮನಾಭ, ಮುರಾರಿ, ಶುಭನಿವಾಸ, ಭಕ್ತಾಸಕ್ತ, ಭಕ್ತರ ಇಷ್ಟಾರ್ಥ ನೆರವೇರಿಸುವ ಕಾಮಧೇನು, ರಾಕ್ಷಸರನ್ನು ಪ್ರಹರಿಸುವ ಪ್ರಳಯಾಗ್ನಿ, ಭಕ್ತಾಭಿಮಾನಿ, ಚೆಲುವ, ಮೇಘದಂತೆ ಶ್ಯಾಮವರ್ಣದವನು, ಭಕ್ತ ಪ್ರಿಯ, ಶ್ರೀ ಕೃಷ್ಣ, ಮುರಧ್ವಂಸಿ, ಭಕ್ತ ಸಮೂಹದ ಸಂಸಾರಿ, ಕೃಷ್ಣ, ಕೇಶವಾ, ಅನುಗ್ರಹಿಸು ಎಂದನು.
ಮೂಲ ...{Loading}...
ನಳಿನನಾಭ ಮುಕುಂದ ಮಂಗಳ
ನಿಳಯ ಭಕ್ತವ್ಯಸನಿ ದೈತ್ಯ
ಪ್ರಳಯ ಪಾವಕ ಭಕ್ತವತ್ಸಲ ಭಕ್ತ ಸುರಧೇನು
ಲಲಿತಮೇಘಶ್ಯಾಮ ಸೇವಕ
ಸುಲಭ ಶೌರಿ ಮುರಾರಿ ಭಕ್ತಾ
ವಳಿ ಕುಟುಂಬಕ ಕೃಷ್ಣ ಕೇಶವ ಕರುಣಿಸೆನಗೆಂದ ॥79॥
೦೮೦ ಪರಮಪುಣ್ಯಶ್ಲೋಕ ಪಾವನ ...{Loading}...
ಪರಮಪುಣ್ಯಶ್ಲೋಕ ಪಾವನ
ಚರಿತ ಚಾರುವಿಲಾಸ ನಿರ್ಮಲ
ವರ ಕಥನ ಲೀಲಾ ಪ್ರಯುಕ್ತ ಪ್ರಕಟಭುವನಶತ
ನಿರವಯವ ನಿದ್ರ್ವಂದ್ವ ನಿಸ್ಪೃಹ
ನಿರುಪಮಿತ ನಿರ್ಮಾಯ ಕರುಣಾ
ಕರ ಮಹಾತ್ಮ ಮನೋಜವಿಗ್ರಹ ಕರುಣಿಸೆನಗೆಂದ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠ ಪುಣ್ಯನಾಮಕನೆ, ಮಂಗಳ ಚರಿತ್ರನೆ, ಸುಂದರಲೀಲಾ ವಿಹಾರಿ, ಪರಿಶುದ್ಧ ಪವಿತ್ರ ಚಾರಿತ್ರ್ಯವುಳ್ಳವನೆ, ನಿನ್ನ ಲೀಲಾ ವಿನೋದದ ಫಲವಾಗಿ ಕಾಣಿಸಿಕೊಂಡ ಶತಭುವನಗಳನ್ನು ಒಳಗೊಂಡವನೆ, ನಿರಾಕಾರಿ, ದ್ವಂದ್ವಾತೀತ, ನಿರ್ಭೀತ, ಅಸಮಾನ, ಮಾಯಾರಹಿತ, ದಯಾಮಯ, ಮಹಾತ್ಮ, ಮನ್ಮಥಾಕಾರ ಎನಗೆ ಅನುಗ್ರಹಿಸು ಎಂದನು.
ಪದಾರ್ಥ (ಕ.ಗ.ಪ)
ನಿದ್ರ್ವಂದ್ವ-ದ್ವಂದ್ವಾತೀತ, ನಿಸ್ಪೃಹ-ನಿರ್ಭೀತ, ಮನೋಜವಿಗ್ರಹ-ಮನ್ಮಥಾಕಾರ
ಮೂಲ ...{Loading}...
ಪರಮಪುಣ್ಯಶ್ಲೋಕ ಪಾವನ
ಚರಿತ ಚಾರುವಿಲಾಸ ನಿರ್ಮಲ
ವರ ಕಥನ ಲೀಲಾ ಪ್ರಯುಕ್ತ ಪ್ರಕಟಭುವನಶತ
ನಿರವಯವ ನಿದ್ರ್ವಂದ್ವ ನಿಸ್ಪೃಹ
ನಿರುಪಮಿತ ನಿರ್ಮಾಯ ಕರುಣಾ
ಕರ ಮಹಾತ್ಮ ಮನೋಜವಿಗ್ರಹ ಕರುಣಿಸೆನಗೆಂದ ॥80॥
೦೮೧ ದೇವ ಲಕ್ಷ್ಮೀಕಾನ್ತ ...{Loading}...
ದೇವ ಲಕ್ಷ್ಮೀಕಾಂತ ವರರಾ
ಜೀವಲೋಚನ ಭೂತಭಾವನ
ರಾವಣಾಂತಕ ಗೋಪವೇಷ ವಿಲಾಸ ಜಯವಾಸ
ದೇವಕೀನಂದನ ಯಶೋದಾ
ದೇವಿಯುನ್ನತಪುಣ್ಯಫಲ ತಲೆ
ಗಾವುದೈ ತರುವಲಿಗೆ ತೋರೈ ಮುನ್ನಿನಾಕೃತಿಯ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲಕ್ಷ್ಮೀ ಲೋಲನಾದ ಪರಮಾತ್ಮನೆ, ಸುಂದರ ಕಮಲನಯನನೇ, ಸಕಲ ಜೀವಿಗಳೂ ತಾನೇ ಆಗಿರುವವನೆ, ರಾವಣ ಸಂಹಾರಿಯಾದ ರಾಮನೆ, ಗೊಲ್ಲರ ವೇಷಧಾರಿಯಾಗಿ ವಿಹರಿಸಿದವನೆ, ಜಯಲಕ್ಷ್ಮಿಯ ನೆಲೆ, ದೇವಕೀಪುತ್ರ, ಯಶೋದಾ ದೇವಿಯ ಶ್ರೇಷ್ಠ ಪುಣ್ಯದ ಫಲವಾಗಿ ಜನಿಸಿದವನೆ, ನನ್ನನ್ನು ರಕ್ಷಿಸು. ನಿನ್ನ ಮೊದಲಿನ ರೂಪವನ್ನು ಈ ತಬ್ಬಲಿಗೆ ತೋರಿಸು.
ಪದಾರ್ಥ (ಕ.ಗ.ಪ)
ಭೂತಭಾವನ-ಎಲ್ಲ ಪ್ರಾಣಿಗಳಲ್ಲಿ ಅಡಗಿರುವವನು, ರಾವಣಾಂತಕ-ಶ್ರೀರಾಮ, ಜಯವಾಸ-ಜಯಲಕ್ಷ್ಮಿಯನೆಲೆ, ತಲೆಗಾವುದೈ-ರಕ್ಷಿಸು, ತರುವಲಿ-ತಬ್ಬಲಿ,
ಮೂಲ ...{Loading}...
ದೇವ ಲಕ್ಷ್ಮೀಕಾಂತ ವರರಾ
ಜೀವಲೋಚನ ಭೂತಭಾವನ
ರಾವಣಾಂತಕ ಗೋಪವೇಷ ವಿಲಾಸ ಜಯವಾಸ
ದೇವಕೀನಂದನ ಯಶೋದಾ
ದೇವಿಯುನ್ನತಪುಣ್ಯಫಲ ತಲೆ
ಗಾವುದೈ ತರುವಲಿಗೆ ತೋರೈ ಮುನ್ನಿನಾಕೃತಿಯ ॥81॥
೦೮೨ ನಿಗಮನಿಕರವ ಸೆಳೆವ ...{Loading}...
ನಿಗಮನಿಕರವ ಸೆಳೆವ ತಿರುಗುವ
ನಗಕೆ ಬೆನ್ನನು ಕೊಡುವ ಜಲನಿಧಿ
ಮಗುಚೆ ಮಹಿಯನು ಮೊಗೆವ ಮಗುವಿನ ನುಡಿಗೆ ಮೈಗೊಡುವ
ಗಗನಕಂಘ್ರಿಯನಿಡುವ ತಾಯ
ಕ್ಕೆಗಳಿಗಕ್ಕೆಯ ತೋರ್ಪ ರಾಣಿಯ
ಸೊಗಸ ಸಲಿಸುವ ಕೃಪೆಯನೆನ್ನಲಿ ತೋರಬೇಕೆಂದ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದ ಸಮೂಹಗಳನ್ನು ಆಕರ್ಷಿಸುವ (ಮತ್ಸ್ಯಾವತಾರಿ), ಮಂದರ ಪರ್ವತಕ್ಕೆ ಬೆನ್ನು ಕೊಟ್ಟ, (ಕೂರ್ಮಾವತಾರಿ) ಸಮುದ್ರದಲ್ಲಿ ಮುಳುಗಿದ ಭೂಮಿಯನ್ನು ಮೇಲಕ್ಕೆತ್ತಿದ (ವರಾಹಾತಾರಿ), ಮಗುವಿನ ಮಾತಿಗೆ ಅವತಾರತಳೆದ (ನರಸಿಂಹಾವತಾರಿ), ಆಕಾಶಕ್ಕೆ ಪಾದ ಮೆಟ್ಟಿದ (ವಾಮನಾವತಾರಿ), ತಾಯಿಯ ಸಂಕಟಕ್ಕೆ ಪ್ರತಿಯಾಗಿ ತಾನೂ ಸಂಕಟ ಅನುಭವಿಸಿದ (ಪರಶುರಾಮಾವಾತಾರಿ), ರಾಣಿಗೆ ಸಂತೋಷ ತೋರಿದ (ರಾಮಾವತಾರಿ), ಅವರಿಗೆಲ್ಲ ತೋರಿದ ಪರಮಾತ್ಮನೇ ನನಗೂ ಅಂತೆಯೇ ಅನುಗ್ರಹಿಸು ಎಂದ ಅರ್ಜುನ.
ಪದಾರ್ಥ (ಕ.ಗ.ಪ)
ತಿರುಗುವ ನಗಕೆ-ಮಂದರ ಪರ್ವತಕ್ಕೆ, ಮೈಗೊಡುವ-ಮೇಲಕ್ಕೆತ್ತಿದ, ಅಕ್ಕೆಯ-ಅಳಲಿನ,
ಮೂಲ ...{Loading}...
ನಿಗಮನಿಕರವ ಸೆಳೆವ ತಿರುಗುವ
ನಗಕೆ ಬೆನ್ನನು ಕೊಡುವ ಜಲನಿಧಿ
ಮಗುಚೆ ಮಹಿಯನು ಮೊಗೆವ ಮಗುವಿನ ನುಡಿಗೆ ಮೈಗೊಡುವ
ಗಗನಕಂಘ್ರಿಯನಿಡುವ ತಾಯ
ಕ್ಕೆಗಳಿಗಕ್ಕೆಯ ತೋರ್ಪ ರಾಣಿಯ
ಸೊಗಸ ಸಲಿಸುವ ಕೃಪೆಯನೆನ್ನಲಿ ತೋರಬೇಕೆಂದ ॥82॥
೦೮೩ ಮರೆದು ನಾಲಗೆಗೊನೆಗೆ ...{Loading}...
ಮರೆದು ನಾಲಗೆಗೊನೆಗೆ ನಾಮದ
ನಿರುಗೆ ನೆಲೆಗೊಳೆ ನಿನ್ನನೇ ಸಲೆ
ತೆರುವ ಬಿರುದನು ಬಲ್ಲೆನೊರಲಿದು ನಿನ್ನ ಹಲುಬಿದರೆ
ಉರುವ ಹೆಂಗುಸಿನುನ್ನತಿಕೆಯಲಿ
ಸೆರಗು ಬೆಳೆದುದ ಕಂಡೆನೈ ಸೈ
ಗರೆವುದೈ ಕಾರುಣ್ಯವರುಷವನೆನ್ನ ಮೇಲೆಂದ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಪ್ಪಿತಪ್ಪಿ ನಾಲಗೆಯ ತುದಿಯಲ್ಲಿ ನಿನ್ನ ನಾಮೋಚ್ಚಾರ ಉಂಟಾದರೆ ನಿನ್ನನ್ನೇ ನೀನು ಪೂರ್ಣವಾಗಿ ಸಮರ್ಪಿಸಿಕೊಳ್ಳುವೆ ಎಂಬ ಬಿರುದು ನಿನಗಿರುವುದು ನನಗೆ ಗೊತ್ತು. ಕೂಗಿ ಕರೆದು ನಿನಗಾಗಿ ದುಃಖಿಸಿದರೆ ದಿವ್ಯನಾರಿಯಾದ ಪತಿವ್ರತೆಯಾದ, ದ್ರೌಪದಿಯ ಹಿರಿಮೆಯಲ್ಲಿ ಅಕ್ಷಯವಸ್ತ್ರ ಪ್ರದಾನವಾದುದನ್ನು ಕಂಡಿದ್ದೇನೆ. ನಿನ್ನ ಕರುಣಾಧಾರೆಯನ್ನು ನನ್ನ ಮೇಲೆ ಸುರಿಸು’ ಎಂದನು ಅರ್ಜುನ.
ಪದಾರ್ಥ (ಕ.ಗ.ಪ)
ಮರೆದು-ಅಪ್ಪಿತಪ್ಪಿ, ನಾಮದ ನಿರುಗೆ-ನಿನ್ನ ಹೆಸರಿನ ಅಸ್ತಿತ್ವ, ನೆಲೆಗೊಳೆ-ಉಂಟಾದರೆ, ಸೆರೆಗ ಬೆಳೆದುದು-ಅಕ್ಷಯವಸ್ತ್ರ ಪ್ರದಾನವಾದುದು, ಸೈಗೆರೆವುದೈ-ಸುರಿಸು
ಮೂಲ ...{Loading}...
ಮರೆದು ನಾಲಗೆಗೊನೆಗೆ ನಾಮದ
ನಿರುಗೆ ನೆಲೆಗೊಳೆ ನಿನ್ನನೇ ಸಲೆ
ತೆರುವ ಬಿರುದನು ಬಲ್ಲೆನೊರಲಿದು ನಿನ್ನ ಹಲುಬಿದರೆ
ಉರುವ ಹೆಂಗುಸಿನುನ್ನತಿಕೆಯಲಿ
ಸೆರಗು ಬೆಳೆದುದ ಕಂಡೆನೈ ಸೈ
ಗರೆವುದೈ ಕಾರುಣ್ಯವರುಷವನೆನ್ನ ಮೇಲೆಂದ ॥83॥
೦೮೪ ಹಸುಳೆಗಮರಾಚಲದ ಹೊರೆ ...{Loading}...
ಹಸುಳೆಗಮರಾಚಲದ ಹೊರೆ ಸೈ
ರಿಸುವುದೇ ಮರಿಹುಲ್ಲೆ ಸಿಂಹದ
ಮಸಕಕಿದಿರೇ ಲತೆಯ ಎಳಗುಡಿ ಮಾಳಿಗೆಗೆ ತೊಲೆಯೆ
ಸಸಿದರಳೆ ಸಿಡಿಲೆರಗಿದರೆ ಜೀ
ವಿಸುವುದೇ ನಿಮ್ಮಡಿಯ ವಿಶ್ವ
ಪ್ರಸರರೂಪಿಂಗಾನು ಲಕ್ಷ್ಯವೆ ಸಲಹಬೇಕೆಂದ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುಟ್ಟ ಮಗುವಿಗೆ ಮೇರುಪರ್ವತದ ಭಾರ ಸಹಿಸಲಾಗುವುದೇ ? ಜಿಂಕೆಮರಿ ಸಿಂಹದ ರೋಷಕ್ಕೆ ಎದುರಾಗಬಲ್ಲುದೇ ? ಎಳೆಯ ಬಳ್ಳಿಯ ಚಿಗುರು ಮಾಳಿಗೆಗೆ ತೊಲೆ ಆದೀತೇ ? ಸಸಿ ತೆರಳೆಗೆ (ಕ್ಷುದ್ರ ಹುಳು) ಸಿಡಿಲು ಬಡಿದರೆ ಬದುಕುವುದೇ ? ನಿಮ್ಮಯ ವಿಸ್ತಾರವಾದ ವಿಶ್ವರೂಪಕ್ಕೆ ನಾನು ಲೆಕ್ಕವೇ ? ನನ್ನನ್ನು ರಕ್ಷಿಸು ಎಂದನು.
ಪದಾರ್ಥ (ಕ.ಗ.ಪ)
ಅಮರಾಚಲ-ಮೇರುಪರ್ವತ, ಹೊರೆ-ಭಾರ, ಮಸಕಕ್ಕೆ-ರೋಷಕ್ಕೆ, ಎಳಗುಡಿ-ಎಳೆಯಚಿಗುರು, ಮಾಳಿಗೆಗೆ-ಉಪ್ಪರಿಗೆಗೆ, ಸಸಿದೆರಳೆ-ಚಿಕ್ಕ ಕ್ಷುದ್ರ ಹುಳು (ಹಣ್ಣುಗಳಲ್ಲಿರುವ ಹುಳು) ವಿಶ್ವಪ್ರಸರರೂಪಿಂಗೆ-ವಿಸ್ತಾರವಾದ ವಿಶ್ವರೂಪಕ್ಕೆ, ಲಕ್ಷ್ಯ-ಗುರಿ, ಈಡು.
ಮೂಲ ...{Loading}...
ಹಸುಳೆಗಮರಾಚಲದ ಹೊರೆ ಸೈ
ರಿಸುವುದೇ ಮರಿಹುಲ್ಲೆ ಸಿಂಹದ
ಮಸಕಕಿದಿರೇ ಲತೆಯ ಎಳಗುಡಿ ಮಾಳಿಗೆಗೆ ತೊಲೆಯೆ
ಸಸಿದರಳೆ ಸಿಡಿಲೆರಗಿದರೆ ಜೀ
ವಿಸುವುದೇ ನಿಮ್ಮಡಿಯ ವಿಶ್ವ
ಪ್ರಸರರೂಪಿಂಗಾನು ಲಕ್ಷ್ಯವೆ ಸಲಹಬೇಕೆಂದ ॥84॥
೦೮೫ ಅಣಲೊಳಷ್ಟಾದಶ ಮಹಾಕ್ಷೋ ...{Loading}...
ಅಣಲೊಳಷ್ಟಾದಶ ಮಹಾಕ್ಷೋ
ಹಿಣಿಗಳಡಗಿದವೆಂಬುದಿದು ಭೂ
ಷಣವೆ ಜೀಯ ಮುರಾರಿ ನಿನ್ನಯ ರೋಮಕೂಪದಲಿ
ಗಣನೆಗೆಟ್ಟಜರುದ್ರಸುರಸಂ
ದಣಿಗಳಿವೆ ಜಠರದ ಜಗಂಗಳ
ನೆಣಿಸಬಲ್ಲವರಾರು ಸಾಕಿನ್ನೆನ್ನ ಸಲಹೆಂದ ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಅಂಗುಳಲ್ಲಿ (ಬಾಯಿ ತಳಭಾಗ) ಹದಿನೆಂಟು ಅಕ್ಷೋಹಿಣಿ ಸೇನೆಗಳು ಒಳಗೊಂಡಿವೆ ಎಂಬುದು ನಿನಗೆ ಶೋಭಿಸುವ ಸಂಗತಿಯೆ ? ಸ್ವಾಮೀ, ಮುಕುಂದ ನಿನ್ನಯ ರೋಮರಂಧ್ರಗಳಲ್ಲಿ ಅಸಂಖ್ಯಾತ ಬ್ರಹ್ಮ ರುದ್ರಾದಿ ದೇವತಾ ಸಮೂಹವಿದೆ. ಇನ್ನು ಬಸಿರಲ್ಲಿ ಇರುವ ಲೋಕಗಳನ್ನು ಲೆಕ್ಕವಿಡುವರಾರು ? ಸಾಕಿನ್ನು ನನ್ನನ್ನು ಕಾಪಾಡು ಎಂದನು.
ಮೂಲ ...{Loading}...
ಅಣಲೊಳಷ್ಟಾದಶ ಮಹಾಕ್ಷೋ
ಹಿಣಿಗಳಡಗಿದವೆಂಬುದಿದು ಭೂ
ಷಣವೆ ಜೀಯ ಮುರಾರಿ ನಿನ್ನಯ ರೋಮಕೂಪದಲಿ
ಗಣನೆಗೆಟ್ಟಜರುದ್ರಸುರಸಂ
ದಣಿಗಳಿವೆ ಜಠರದ ಜಗಂಗಳ
ನೆಣಿಸಬಲ್ಲವರಾರು ಸಾಕಿನ್ನೆನ್ನ ಸಲಹೆಂದ ॥85॥
೦೮೬ ವಿಶ್ವ ನಿನ್ನಯ ...{Loading}...
ವಿಶ್ವ ನಿನ್ನಯ ಮಾಯೆ ನಿರ್ಮಲ
ವಿಶ್ವರೂಪನು ನೀನು ಬಗೆವಡೆ
ವಿಶ್ವ ನಿನ್ನೊಳು ಸುಳಿವುದಳಿವುದು ಲಲಿತಲೀಲೆಯಲಿ
ವಿಶ್ವವಲ್ಲಭ ನೀನು ನಿನ್ನದು
ವಿಶ್ವಪಾಲನೆ ವಿಶ್ವಚೇಷ್ಟಕ
ವಿಶ್ವದಾಧಾರನೆ ಜಡಾತ್ಮನ ಸಲಹಬೇಕೆಂದ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಬ್ರಹ್ಮಾಂಡ ನಿನ್ನಯ ಮಾಯೆ ಆಗಿದೆ. ನೀನು ಅನಂತರೂಪಿ. ವಿಶ್ವವ್ಯಾಪಿ, ನೀನು ಇಚ್ಛಿಸಿದರೆ ಈ ವಿಶ್ವವು ನಿನ್ನಲ್ಲಿ ಸೃಷ್ಟಿ ಆಗುವುದು, ನೀನು ಇಚ್ಛಿಸಿದರೆ ನಿನ್ನ ಲೀಲಾ ವಿಲಾಸದಲ್ಲಿ ಈ ವಿಶ್ವ ನಾಶವಾಗುವುದು. ನಿನ್ನ ಈ ವಿಶ್ವಕ್ಕೆ ನೀನು ಒಡೆಯ. ಈ ವಿಶ್ವದ ರಕ್ಷಣೆ ನಿನಗೆ ಸೇರಿದ್ದು. ವಿಶ್ವದ ಎಲ್ಲಾ ಕ್ರಿಯೆಗಳು ನಿನ್ನವೆ. ವಿಶ್ವದ ಎಲ್ಲ ಕ್ರಿಯೆಗಳ ಮೂಲ ನೀನು. ಈ ಜಡ ನರನಾದ ನನ್ನನ್ನು ಕಾಪಾಡು ಎಂದನು.
ಪದಾರ್ಥ (ಕ.ಗ.ಪ)
ವಿಶ್ವರೂಪಿ-ಅನಂತರೂಪಿ, ಬಗೆದೊಡೆ-ಇಚ್ಛಿಸಿದರೆ, ಸುಳಿವುದು-ಸೃಷ್ಟಿ ಆಗುವುದು, ಜಡಾತ್ಮ-ಜಡನರ, ಅಲ್ಪಾತ್ಮ
ಮೂಲ ...{Loading}...
ವಿಶ್ವ ನಿನ್ನಯ ಮಾಯೆ ನಿರ್ಮಲ
ವಿಶ್ವರೂಪನು ನೀನು ಬಗೆವಡೆ
ವಿಶ್ವ ನಿನ್ನೊಳು ಸುಳಿವುದಳಿವುದು ಲಲಿತಲೀಲೆಯಲಿ
ವಿಶ್ವವಲ್ಲಭ ನೀನು ನಿನ್ನದು
ವಿಶ್ವಪಾಲನೆ ವಿಶ್ವಚೇಷ್ಟಕ
ವಿಶ್ವದಾಧಾರನೆ ಜಡಾತ್ಮನ ಸಲಹಬೇಕೆಂದ ॥86॥
೦೮೭ ವೀರ ದೈತ್ಯಕುಠಾರ ...{Loading}...
ವೀರ ದೈತ್ಯಕುಠಾರ ಗಳಿತವಿ
ಕಾರ ಗೋಪೀಜಾರ ಲಲಿತವಿ
ಹಾರ ನಿಗಮವಿದೂರ ಸುಖಸಾಕಾರ ಗತಪಾರ
ಧೀರ ಜಗದಾಧಾರ ಲಸದಾ
ಚಾರ ಕಮಲಾಗಾರ ಭುವನಾ
ಧಾರ ನಿರ್ಜಿತಮಾರ ಮುರಹರ ಸಲಹಬೇಕೆಂದ ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರರಾದ ರಾಕ್ಷಸರಿಗೆ ಕ್ರೂರನಾದವನು, ವಿಕಾರರಹಿತನು, ಗೋಪಿ ಜನರ ವಿಲಾಸಿ ಆದವನು, ವೇದಾತೀತನು, ಸುಖದ ಪ್ರತ್ಯಕ್ಷ ಸ್ವರೂಪಿ ಆದವನು, ಸೀಮಾತೀತನು, ಪರಾಕ್ರಮಿ, ಜಗತ್ತಿಗೆ ಆಧಾರನು, ಸದಾಚಾರನು ಕಮಲ ನಿವಾಸನು, ಮೂರು ಲೋಕಗಳಿಗೆ ಆಶ್ರಯದಾತನು, ಮನ್ಮಥ ವಿಜಯಿ ಆದವನು, ಮುರ ರಾಕ್ಷಸನನ್ನು ಕೊಂದವನು ನನ್ನನ್ನು ಕಾಪಾಡಬೇಕು ಎಂದನು.
ಪದಾರ್ಥ (ಕ.ಗ.ಪ)
ಲಸದಾಚಾರ-ಸದಾಚಾರ, ನಿರ್ಜಿತ-ಗೆದ್ದ, ಗಳಿತ-ರಹಿತ, ಕುಠಾರ-ಕ್ರೂರ, ಪಾರ-ಸೀಮಾ, ಮಾರ-ಮನ್ಮಥ
ಮೂಲ ...{Loading}...
ವೀರ ದೈತ್ಯಕುಠಾರ ಗಳಿತವಿ
ಕಾರ ಗೋಪೀಜಾರ ಲಲಿತವಿ
ಹಾರ ನಿಗಮವಿದೂರ ಸುಖಸಾಕಾರ ಗತಪಾರ
ಧೀರ ಜಗದಾಧಾರ ಲಸದಾ
ಚಾರ ಕಮಲಾಗಾರ ಭುವನಾ
ಧಾರ ನಿರ್ಜಿತಮಾರ ಮುರಹರ ಸಲಹಬೇಕೆಂದ ॥87॥
೦೮೮ ಭಯದ ಬಿಗುಹಿನ ...{Loading}...
ಭಯದ ಬಿಗುಹಿನ ಭಾರ ಭಕುತಿಯ
ನಯದ ಬಿನ್ನಹದೋಜೆಯನು ಚಿನು
ಮಯನು ಕೇಳಿದು ಮೆಚ್ಚಿ ಡಿಂಗರಿಗಂಗೆ ನಗುತೆಂದ
ನಿಯತವೇ ನೀನಲ್ಲಲೇ ಸೇ
ನೆಯನು ಕೊಲುವನು ಕಾವವನು ನಿ
ಶ್ಚಯವ ನಿನ್ನೊಳು ತಿಳಿದು ಬಿನ್ನಹ ಮಾಡು ಸಾಕೆಂದ ॥88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಯದ ಹಿಡಿತದಲ್ಲಿ, ದಟ್ಟ ಭಕುತಿಯಿಂದ, ವಿನಯಪೂರ್ವಕವಾಗಿ ವಿಜ್ಞಾಪಿಸಿದ ರೀತಿಯನ್ನು ಕೇಳಿದ ಕೃಷ್ಣನು ಅದನ್ನು ಮೆಚ್ಚಿ ಭಕ್ತನಾದ ಅರ್ಜುನನಿಗೆ ನಗುತ್ತ ಹೀಗೆ ಹೇಳಿದನು: ಇದು ದೃಢ ನಿರ್ಧಾರವೇ ? ಸೇನೆಯನ್ನೆಲ್ಲ ನಾಶಮಾಡುವವನು ಅಥವಾ ಕಾಪಾಡುವವನು ನೀನು ಅಲ್ಲವಲ್ಲಾ ! ನಿನ್ನಲ್ಲಿ ನೀನೇ ವಿಚಾರ ಮಾಡಿ ನಿರ್ಧರಿಸಿ ತಿಳಿದುಕೊಂಡು ನಿನ್ನ ಕೋರಿಕೆಯನ್ನು ತಿಳಿಸು ಸಾಕು".
ಪದಾರ್ಥ (ಕ.ಗ.ಪ)
ಓಜೆ-ರೀತಿ, ಡಿಂಗರಿಗ-ಭಕ್ತ,
ಮೂಲ ...{Loading}...
ಭಯದ ಬಿಗುಹಿನ ಭಾರ ಭಕುತಿಯ
ನಯದ ಬಿನ್ನಹದೋಜೆಯನು ಚಿನು
ಮಯನು ಕೇಳಿದು ಮೆಚ್ಚಿ ಡಿಂಗರಿಗಂಗೆ ನಗುತೆಂದ
ನಿಯತವೇ ನೀನಲ್ಲಲೇ ಸೇ
ನೆಯನು ಕೊಲುವನು ಕಾವವನು ನಿ
ಶ್ಚಯವ ನಿನ್ನೊಳು ತಿಳಿದು ಬಿನ್ನಹ ಮಾಡು ಸಾಕೆಂದ ॥88॥
೦೮೯ ಎನಿತು ಜಗವಡಗಿದವು ...{Loading}...
ಎನಿತು ಜಗವಡಗಿದವು ಕೌರವ
ರೆನಿಬರಡಗಿತು ನೋಡು ಧರ್ಮನ
ತನಯ ಭೀಮಾರ್ಜುನರು ಭೀಷ್ಮದ್ರೋಣ ಮೊದಲಾದ
ಎನಿಬರಡಗಿತು ನೋಡು ಬಾಂಧವ
ಹನನ ನಿನಗುಂಟಾದಡೀಗಳೆ
ನೆನೆದು ಬಿನ್ನಹ ಮಾಡೆನುತ ಪಾರ್ಥಂಗೆ ಹರಿ ನುಡಿದ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಷ್ಟೊಂದು ಜಗತ್ತುಗಳು ಅಡಗಿವೆ ? ಎಷ್ಟೊಂದು ಮಂದಿ ಕೌರವರು ಅಡಕವಾಗಿದ್ದಾರೆ ಎಂಬುದನ್ನು ನೋಡು. ಭೀಮ, ಅರ್ಜುನ, ಭೀಷ್ಮ, ದ್ರೋಣ ಮೊದಲಾದ ಎಷ್ಟೊಂದು ಜನರು ಅಡಗಿರುವುದನ್ನು ನೋಡು. ಬಂಧು ಹತ್ಯೆಯ ದೋಷ ನಿನಗೆ ಉಂಟಾಗುತ್ತಿದ್ದರೆ ಈಗಲೆ ಚೆನ್ನಾಗಿ ಯೋಚಿಸಿ ಬಿನ್ನಹಮಾಡು ಎಂದು ಕೃಷ್ಣ ಅರ್ಜುನನಿಗೆ ಹೇಳಿದನು.
ಮೂಲ ...{Loading}...
ಎನಿತು ಜಗವಡಗಿದವು ಕೌರವ
ರೆನಿಬರಡಗಿತು ನೋಡು ಧರ್ಮನ
ತನಯ ಭೀಮಾರ್ಜುನರು ಭೀಷ್ಮದ್ರೋಣ ಮೊದಲಾದ
ಎನಿಬರಡಗಿತು ನೋಡು ಬಾಂಧವ
ಹನನ ನಿನಗುಂಟಾದಡೀಗಳೆ
ನೆನೆದು ಬಿನ್ನಹ ಮಾಡೆನುತ ಪಾರ್ಥಂಗೆ ಹರಿ ನುಡಿದ ॥89॥
೦೯೦ ಗುರುಗಳಿಗೆ ನಾ ...{Loading}...
ಗುರುಗಳಿಗೆ ನಾ ತಪ್ಪೆನೆಂದೇ
ಮುರಿದಡೆನಗದು ಖಾತಿ ಭೀಷ್ಮನು
ವರಪಿತಾಮಹನೆಂದು ಹೊಳೆದರೆ ಬಳಿಕಸಹ್ಯವದು
ಅರಿಬಲವು ಮುನ್ನುರಿವುದೋ ನೀ
ನರಿವೆಯೋ ಲೇಸಾಗಿ ಎನ್ನೊಳು
ನರ ನಿರೀಕ್ಷಿಸೆನುತ್ತ ನುಡಿದನು ದಾನವಧ್ವಂಸಿ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಗುರುಗಳಿಗೆ ನಾನು ಮಾತು ತಪ್ಪುವುದಿಲ್ಲ ಎಂಬುದಾಗಿ ನೀನು ಹಿಮ್ಮೆಟ್ಟಿದರೆ ಅದು ನನ್ನ ಮುನಿಸಿಗೆ ಕಾರಣವಾಗುತ್ತದೆ. ಭೀಷ್ಮನು ಹಿರಿಯ ಅಜ್ಜ ಎಂದು ನಿನಗೆ ಭಾಸವಾದರೆ ಅದು ನನಗೆ ಸಹಿಸಲಾಗದು. ಶತ್ರುಬಲ ಮೊದಲು ಉರಿದು ನಾಶವಾಗುವುದೊ ಅಥವಾ ವಿಚಾರ ಮಾಡಿ ಅರಿತು ಕೊಳ್ಳುವೆಯೋ ಎಂಬುದನ್ನು ಅರ್ಜುನನೇ ನನ್ನಲ್ಲಿ ಚೆನ್ನಾಗಿ ಗಮನಿಸು’ ಎಂದು ಶ್ರೀಕೃಷ್ಣನು ಹೇಳಿದನು.
ಮೂಲ ...{Loading}...
ಗುರುಗಳಿಗೆ ನಾ ತಪ್ಪೆನೆಂದೇ
ಮುರಿದಡೆನಗದು ಖಾತಿ ಭೀಷ್ಮನು
ವರಪಿತಾಮಹನೆಂದು ಹೊಳೆದರೆ ಬಳಿಕಸಹ್ಯವದು
ಅರಿಬಲವು ಮುನ್ನುರಿವುದೋ ನೀ
ನರಿವೆಯೋ ಲೇಸಾಗಿ ಎನ್ನೊಳು
ನರ ನಿರೀಕ್ಷಿಸೆನುತ್ತ ನುಡಿದನು ದಾನವಧ್ವಂಸಿ ॥90॥
೦೯೧ ನೆನೆದಡಜಕೋಟಿಗಳು ನಿಮ್ಮಯ ...{Loading}...
ನೆನೆದಡಜಕೋಟಿಗಳು ನಿಮ್ಮಯ
ಮನದೊಳಗೆ ಜನಿಸುವರುಪೇಕ್ಷೆಯೊ
ಳನಿತು ಕಮಲಜರಳಿವರೆಂದರೆ ನಿಮ್ಮ ಮಹಿಮೆಯನು
ನೆನೆಯಲಳವೇ ಜೀಯ ಸಾಕಿ
ನ್ನನುವರದೊಳೆನಗೇನ ಬೆಸಸಿದ
ರನಿತ ತಾ ಮುಖದಿರುಹಿದರೆ ಡಿಂಗರಿಗನಲ್ಲೆಂದ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನ್ನ ಮನಸ್ಸಿನಲ್ಲಿ ನೀನು ಸಂಕಲ್ಪಿಸಿದರೆ, ಕೋಟಿ ಬ್ರಹ್ಮರು ಸೃಷ್ಟಿಯಾಗುವರು. ಅಂತೆಯೇ ನಿನ್ನ ಇಚ್ಛಾನುಸಾರ ಅಷ್ಟೂ ಮಂದಿ ಬ್ರಹ್ಮರು ನಾಶವಾಗುವರು ಎಂದ ಮೇಲೆ ನಿನ್ನ ಅಪಾರ ಮಹಿಮಾತಿಶಯವನ್ನು ಅರಿಯಲು ಯಾರಿಗೆ ಶಕ್ಯವಿದೆ ? ಅಯ್ಯಾ ಸಾಕು ಮಾಡು, ಇನ್ನು ಈ ಯುದ್ಧದಲ್ಲಿ ನನಗೆ ನೀನು ಏನು ಅಪ್ಪಣೆ ಮಾಡಿದರೆ ಅದಕ್ಕೆಲ್ಲ ನಾನು ಮುಖ ತಿರುಹಿದರೆ (ಅಪ್ಪಣೆ ಪ್ರಕಾರ ನಡೆಯದಿದ್ದರೆ), ನಾ ನಿನ್ನ ದಾಸನೇ ಅಲ್ಲ ತಿಳಿ’ ಎಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
ಡಿಂಗರಿಗ-ದಾಸ, ಅನುವರ-ಯುದ್ಧ,
ಮೂಲ ...{Loading}...
ನೆನೆದಡಜಕೋಟಿಗಳು ನಿಮ್ಮಯ
ಮನದೊಳಗೆ ಜನಿಸುವರುಪೇಕ್ಷೆಯೊ
ಳನಿತು ಕಮಲಜರಳಿವರೆಂದರೆ ನಿಮ್ಮ ಮಹಿಮೆಯನು
ನೆನೆಯಲಳವೇ ಜೀಯ ಸಾಕಿ
ನ್ನನುವರದೊಳೆನಗೇನ ಬೆಸಸಿದ
ರನಿತ ತಾ ಮುಖದಿರುಹಿದರೆ ಡಿಂಗರಿಗನಲ್ಲೆಂದ ॥91॥
೦೯೨ ಮರಳಿ ಮುನ್ನಿನ ...{Loading}...
ಮರಳಿ ಮುನ್ನಿನ ರೂಪನಂಗೀ
ಕರಿಸಿ ವಾಘೆಯ ಕೊಂಡು ತುರಗವ
ತಿರುಹಿ ಲುಳಿವಡೆಸುತ್ತ ಪಾರ್ಥಗೆ ಮಾಯೆಯನು ಬೀಸಿ
ಶರ ಧನುವ ಕೊಳ್ಳೇಳು ಕೈಕೋ
ಪರಬಲದ ತೋಟಿಯನು ತೋರೈ
ಬಿರುದ ಘಾತಕತನವನೆಂದನು ನಗುತ ಮುರವೈರಿ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಶ್ರೀಕೃಷ್ಣನು ಮೊದಲಿನ ರೂಪವನ್ನು ಧರಿಸಿ ಲಗಾಮುಗಳನ್ನು ಹಿಡಿದುಕೊಂಡು ಕುದುರೆಗಳನ್ನು ತಿರುಗಿಸಿ ಚುರುಕುಗೊಳಿಸುತ್ತ, ಅರ್ಜುನನಿಗೆ ಯುದ್ಧದ ಮೋಹ ಆವರಿಸುವಂತೆ ಮಾಡಿ ಬಿಲ್ಲು ಬಾಣಗಳನ್ನು ಹಿಡಿ, ಏಳು ಶತ್ರುಬಲದೊಡನೆ, ಯುದ್ಧವನ್ನು ಹೂಡು, ಶೌರ್ಯದ ಬಿರುದರನ್ನು ಕೊಲ್ಲುವ ಸಾಹಸವನ್ನು ಪ್ರದರ್ಶಿಸು ಎಂದು ನಸುನಗುತ್ತ ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ತೋಟಿ-ಯುದ್ಧ, ಕೈಕೊ-ಕೈಗೊಳ್ಳು, ಹೂಡು, ಘಾತಕತನ-ಸಾಹಸವನ್ನು,
ಮೂಲ ...{Loading}...
ಮರಳಿ ಮುನ್ನಿನ ರೂಪನಂಗೀ
ಕರಿಸಿ ವಾಘೆಯ ಕೊಂಡು ತುರಗವ
ತಿರುಹಿ ಲುಳಿವಡೆಸುತ್ತ ಪಾರ್ಥಗೆ ಮಾಯೆಯನು ಬೀಸಿ
ಶರ ಧನುವ ಕೊಳ್ಳೇಳು ಕೈಕೋ
ಪರಬಲದ ತೋಟಿಯನು ತೋರೈ
ಬಿರುದ ಘಾತಕತನವನೆಂದನು ನಗುತ ಮುರವೈರಿ ॥92॥
೦೯೩ ಮೋಹ ಮಿಗೆ ...{Loading}...
ಮೋಹ ಮಿಗೆ ಪಾಂಡವ ಮಮ ಪ್ರಾ
ಣಾಹಿಯೆಂಬೀ ಬಿರುದ ಸಲಿಸಲು
ಗಾಹಿನಲಿ ಮೇದಿನಿಯ ತಿಣ್ಣವನಿಳುಹಲೋಸುಗರ
ಆಹವದೊಳರ್ಜುನನ ರಥದೊಳು
ವಾಹಕನು ತಾನಾಗಿ ಶರಣ
ಸ್ನೇಹ ಸಂಸಾರಾನುರಾಗನು ಸುಳಿಸಿದನು ರಥವ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಬಗ್ಗೆ ಮಿಗಿಲಾದ ಮೋಹದಿಂದ ಪಾಂಡವರು ನನ್ನ ಪ್ರಾಣಕ್ಕೆ ಸಮಾನ ಎಂಬ ಬಿರುದನ್ನು ಪರಿಪಾಲಿಸಲು, ತನ್ನ ಪ್ರಭಾವದಿಂದ ಭೂಮಿಯ ಭಾರವನ್ನು ಇಳಿಸುವುದಕ್ಕಾಗಿ, ಯುದ್ಧದಲ್ಲಿ ಅರ್ಜುನನಿಗೆ ರಥ ನಡೆಸುವ ಸಾರಥಿ ಆಗಿ ಭಕ್ತರ ಸ್ನೇಹ ರಸಾಂಬುಧಿಯಲ್ಲಿ ಪ್ರೀತಿಯುಳ್ಳವನಾಗಿ ರಥವನ್ನು ನಡೆಸಿದನು.
ಪದಾರ್ಥ (ಕ.ಗ.ಪ)
ಮೋಹಮಿಗೆ-ಆಸಕ್ತಿ ಹೆಚ್ಚಾಗಲು, ಪಾಂಡವಮಪ್ರಾಣಾಹಿ-ಪಾಂಡವರು ನನ್ನ ಪ್ರಾಣಕ್ಕೆ ಸಮಾನ, ಗಾಹಿನಲಿ-ಪ್ರಭಾವದಿಂದ, ತಿಣ್ಣ-ಭಾರ,
ಮೂಲ ...{Loading}...
ಮೋಹ ಮಿಗೆ ಪಾಂಡವ ಮಮ ಪ್ರಾ
ಣಾಹಿಯೆಂಬೀ ಬಿರುದ ಸಲಿಸಲು
ಗಾಹಿನಲಿ ಮೇದಿನಿಯ ತಿಣ್ಣವನಿಳುಹಲೋಸುಗರ
ಆಹವದೊಳರ್ಜುನನ ರಥದೊಳು
ವಾಹಕನು ತಾನಾಗಿ ಶರಣ
ಸ್ನೇಹ ಸಂಸಾರಾನುರಾಗನು ಸುಳಿಸಿದನು ರಥವ ॥93॥