೦೧

೦೦೦ ಸೂ ನಮ್ಬಿದವರಿಗೆ ...{Loading}...

ಸೂ. ನಂಬಿದವರಿಗೆ ತನ್ನ ತೆತ್ತಿಹ
ನೆಂಬ ಬಿರುದನು ಮೆರೆದು ಭಕ್ತ ಕು
ಟುಂಬಿ ಸಾರಥಿಯಾದನೊಲಿದರ್ಜುನಗೆ ಮುರವೈರಿ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀತನಯರುನ್ನತ
ದೇಳಿಗೆಯನೇನೆಂಬೆನೈ ಕಾರುಣ್ಯ ಸಿಂಧುವಲ
ಶ್ರೀಲತಾಂಗಿಯ ರಮಣನಿನಿಬರೊ
ಳಾಳೊಡೆಯನೆಂದೆಂಬ ಭೇದವ
ಬೀಳುಕೊಟ್ಟೇ ನಡೆಸುತಿರ್ದನು ತನ್ನ ಮೈದುನರ ॥1॥

೦೦೨ ಹೋಲಿಕೆಗೆ ಬಾಯ್ವಿಡುವ ...{Loading}...

ಹೋಲಿಕೆಗೆ ಬಾಯ್ವಿಡುವ ವೇದದ
ತಾಳಿಗೆಗಳೊಣಗಿದವು ಘನತೆಯ
ಮೇಲೆ ತನ್ನದು ಘನತೆಯೆಂಬುದನತ್ತ ಬೇರಿರಿಸಿ
ಕಾಲಿಗೆರಗುವನಾ ಯುಧಿಷ್ಠಿರ
ನೇಳಲೊಡನೇಳುವನು ಕೃಷ್ಣನ
ಲೀಲೆಯನುಪಮವೆಂದು ವೈಶಂಪಾಯಮುನಿ ನುಡಿದ ॥2॥

೦೦೩ ಒನ್ದು ದಿನ ...{Loading}...

ಒಂದು ದಿನ ವೊಡ್ಡೋಲಗಕ್ಕೆ ೈ
ತಂದನಖಿಳಾವನಿಯ ರಾಯರ
ಮಂದಿಯಲಿ ಮುರವೈರಿ ನುಡಿದನು ರಾಜಮಂತ್ರವನು
ಹಿಂದೆ ಜೂಜಿನ ವಿಲಗದಲಿ ಮನ
ನೊಂದರಿವರಡವಿಯಲಿ ಧರೆಗಿ
ನ್ನೆಂದು ಸೇರುವರೇನು ಹದನೀ ಪಾಂಡುತನಯರಿಗೆ ॥3॥

೦೦೪ ದೇವ ನೀನೇ ...{Loading}...

ದೇವ ನೀನೇ ಬಲ್ಲೆ ನಿಮ್ಮಯ
ಭಾವನೀ ಧರ್ಮಜನ ಬಹುಮಾ
ನಾವಮಾನದ ಹೊರಿಗೆ ನಿನ್ನದು ಹರಣ ಭರಣವನು
ನೀವು ಬಲ್ಲಿರಿ ಕಾಲಲೊದೆದುದ
ನೋವಿ ತಲೆಯಲಿ ಹೊತ್ತು ನಡೆಸುವ
ಡಾವು ಬಲ್ಲೆವು ಜೀಯಯೆಂದನು ದ್ರುಪದ ಭೂಪಾಲ ॥4॥

೦೦೫ ಕಳುಹುವುದು ಶಿಷ್ಟರನು ...{Loading}...

ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ
ತಿಳಿವುದಾತನ ನೆಲೆಯನಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ ॥5॥

೦೦೬ ಎಲೆ ಮರುಳೆ ...{Loading}...

ಎಲೆ ಮರುಳೆ ಮುರವೈರಿ ಕೌರವ
ರೊಲಿಯರೀ ಹದನನು ಯುಧಿಷ್ಠಿರ
ನಿಳೆಯ ಸೋತನು ಜೂಜುಗಾರರ ಮೇರೆ ಮಾರ್ಗದಲಿ
ನೆಲನನೊಡ್ಡಲಿ ಮತ್ತೆ ಗೆಲಿದೇ
ಕೊಳಲಿ ಮೇಣ್ ಕಾದಲಿ ಸುಯೋಧನ
ನೊಳಗೆ ತಪ್ಪಿಲ್ಲೆಂದು ನುಡಿದನು ನಗುತ ಬಲರಾಮ ॥6॥

೦೦೭ ಲೇಸನಾಡಿದೆ ರಾಮ ...{Loading}...

ಲೇಸನಾಡಿದೆ ರಾಮ ಬಳಿಕೇ
ನಾ ಸುಯೋಧನನಧಮನೇ ನೀ
ನೀಸನೇರಿಸಿಕೊಂಡು ನುಡಿವಾ ಮತ್ತೆ ಕೆಲಬರಲಿ
ಆಸುರದ ಕತ್ತಲೆಯ ಬೀಡು ಮ
ಹಾ ಸಹಾಯವು ಗೂಗೆಗಳಿಗುಪ
ಹಾಸವೇ ದಿಟವೆಂದು ಸಾತ್ಯಕಿ ನಗುತ ಖತಿಗೊಂಡ ॥7॥

೦೦೮ ಬಲನ ಮಾತೇನಿವರ ...{Loading}...

ಬಲನ ಮಾತೇನಿವರ ಭಾಗ್ಯದ
ನೆಲೆಯೆ ಫಡ ಕೌರವರ ಶತಕದ
ತಲೆಗೆ ತಾ ವೀಳೆಯವನೆಲೆ ಕುಂತೀಕುಮಾರಕನೆ
ನೆಲನನಲಗಿನ ಮೊನೆಯಲಲ್ಲದೆ
ಮೆಲುನುಡಿಯ ಸಾಮದಲಿ ಗೀಮದ
ಲಿಳೆಯ ಕೊಂಬರೆ ಧರೆಯೊಳಧಿಕ ಕ್ಷತ್ರಿಯಾತ್ಮಜರು ॥8॥

೦೦೯ ಕಾದಿ ಸಾವುದು ...{Loading}...

ಕಾದಿ ಸಾವುದು ಮೇಣು ರಿಪು ಭಟ
ನಾದವನ ನೆತ್ತಿಯಲಿ ಸಬಳವ
ಕೋದು ಕೊಂಬುದು ನೆಲನನಿದು ಕ್ಷತ್ರಿಯರ ಮಕ್ಕಳಿಗೆ
ಮೇದಿನಿಯ ಬೇಡುವೊಡೆ ಮಟ್ಟಿಯ
ತೇದು ಹಣೆಯಲಿ ಬಡಿದು ದರ್ಭೆಯ
ಕೋದು ಸ್ವಸ್ತಿಯ ಹಾಕುವುದು ಹಾರುವರ ಮಕ್ಕಳಿಗೆ ॥9॥

೦೧೦ ಎನಲು ನಕ್ಕನು ...{Loading}...

ಎನಲು ನಕ್ಕನು ದ್ರುಪದನಿದು ನ
ಮ್ಮನುಮತವು ಕಾಳಗದೊಳಲಗಿನ
ಮೊನೆಯೊಳಲ್ಲದೆ ಮಹಿಯ ಕೊಡುವನೆ ಕೌರವೇಶ್ವರನು
ವಿನುತ ಸಾತ್ಯಕಿ ಕೇಳು ನೆಲೆಯಿದು
ಜನಪನಲ್ಲಿಗೆ ಒಬ್ಬ ದೂತನ
ವಿನಯದಲಿ ಕಳುಹುವುದು ಸಾಮವ ಬಳಸಿ ನೋಡುವುದು ॥10॥

೦೧೧ ವಿಹಿತವಿದು ಪಾಞ್ಚಾಲಕನ ...{Loading}...

ವಿಹಿತವಿದು ಪಾಂಚಾಲಕನ ಮತ
ವಹುದು ರಾಯರಿಗಟ್ಟುವುದು ವಿ
ಗ್ರಹವ ಸೂಚಿಸಿ ಕರೆದುಕೊಂಬುದು ಬೇಹ ಭೂಭುಜರ
ಬಹಳ ಸಂವರಣೆಯಲಿ ರಣ ಸ
ನ್ನಿಹಿತವಾಗಿಹುದಿತ್ತಲತ್ತಲು
ಮಹಿಯ ಬೇಡಿಸ ಕಳುಹುವುದು ತೆರನೆಂದನಸುರಾರಿ ॥11॥

೦೧೨ ಮದುವೆಗೋಸುಗ ಬನ್ದೆವಾವಿ ...{Loading}...

ಮದುವೆಗೋಸುಗ ಬಂದೆವಾವಿ
ನ್ನಿದರ ಮೇಲಣ ರಾಜಕಾರ್ಯದ
ಹದನನಟ್ಟುವುದರುಹುವುದು ಬಹೆವಾವು ಕರೆಸಿದೊಡೆ
ಹದುಳವಿಹುದೆಂದಸುರರಿಪು ಕರು
ಣದಲಿ ಕುಂತೀಸುತರನಾ ದ್ರೌ
ಪದಿಯನಭಿಮನ್ಯುವ ಸುಭದ್ರೆಯ ಹರಸಿ ಬೀಳ್ಕೊಂಡ ॥12॥

೦೧೩ ಕೂಡಿಕೊಣ್ಡಿಹುದಿವರ ಮಕ್ಕಳ ...{Loading}...

ಕೂಡಿಕೊಂಡಿಹುದಿವರ ಮಕ್ಕಳ
ನೋಡಲಾಗದು ಹೆಚ್ಚು ಕುಂದನು
ನಾಡ ಬೇಡಲು ಬುದ್ಧಿವಂತರನಲ್ಲಿಗಟ್ಟುವುದು
ಕೂಡೆ ಶೋಧಿಸಿ ಸೆಜ್ಜೆಯಲಿ ಮೈ
ಗೂಡಿಯಾರೋಗಣೆಗಳಲಿ ಕೈ
ಮಾಡಿ ಬೆರೆಸಿಹುದೆಂದು ದ್ರುಪದ ವಿರಾಟರಿಗೆ ನುಡಿದ ॥13॥

೦೧೪ ಎನ್ದು ಕಳುಹಿಸಿಕೊಣ್ಡು ...{Loading}...

ಎಂದು ಕಳುಹಿಸಿಕೊಂಡು ನಾರೀ
ವೃಂದ ಯದುಕುಲ ಸಹಿತ ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದ್ವಾರಕಾಪುರವ
ಒಂದು ದಿನದಾಲೋಚನೆಯ ನೆಲೆ
ಯಿಂದ ಕರೆದು ಪುರೋಹಿತನ ನಲ
ವಿಂದ ಕಳುಹಿದ ದ್ರುಪದನಾ ಕೌರವನ ಪಟ್ಟಣಕೆ ॥14॥

೦೧೫ ಓಲೆಯುಡುಗೊರೆ ಸಹಿತ ...{Loading}...

ಓಲೆಯುಡುಗೊರೆ ಸಹಿತ ಧರಣೀ
ಪಾಲರಿಗೆ ಪಾಂಡವರು ಶಿಷ್ಟರು
ಕಾಳಗಕೆ ನೆರವಾಗಲೋಸುಗ ಕರೆದರಲ್ಲಲ್ಲಿ
ಆಳು ಕುದುರೆಯ ಕೂಡಿ ದೆಸೆಗಳ
ಮೂಲೆಯರಸುಗಳೆಲ್ಲ ಕುರು ಭೂ
ಪಾಲನಲ್ಲಿಗೆ ಕೆಲರು ಕೆಲಬರು ಪಾಂಡು ತನಯರಿಗೆ ॥15॥

೦೧೬ ಧರಣಿಯೆಡೆಗೆಡೆ ರಾಯ ...{Loading}...

ಧರಣಿಯೆಡೆಗೆಡೆ ರಾಯ ಮೋಹರ
ತೆರಳಿತಿಬ್ಬರು ರಾಯರಿಗೆ ಕೈ
ನೆರವುದೋರಲು ಕವಿದು ಬಂದುದು ಕಾಣೆನಳತೆಗಳ
ಅರಿಗಳತಿ ಹೆಚ್ಚಿದರು ಮೈಮರೆ
ದಿರಲು ಧರಣಿಗಮಾನ್ಯವಹುದಿ
ನ್ನುರುವಣಿಸಬೇಕೆಂದು ದುರ್ಯೋಧನನು ಚಿಂತಿಸಿದ ॥16॥

೦೧೭ ಹದನನಾಪ್ತರಿಗರುಹಿದನು ಗು ...{Loading}...

ಹದನನಾಪ್ತರಿಗರುಹಿದನು ಗು
ಪ್ತದಲಿ ಕೃಷ್ಣನನೊಳಗು ಮಾಡುವ
ಮುದದಿ ಬಂದನು ಕೌರವೇಂದ್ರನು ದ್ವಾರಕಾಪುರಿಗೆ
ಇದನು ಭೇದಿಸಿ ಬೇಹಿನವರರು
ಹಿದರು ಕುಂತೀ ಸುತರಿಗತಿ ವೇ
ಗದಲಿ ಧರ್ಮಜನಳುಕಿ ಕಳುಹಿದನಿಂದ್ರ ನಂದನನ ॥17॥

೦೧೮ ಬೀಳುಕೊಣ್ಡರ್ಜುನನು ಲಕ್ಷಿ ...{Loading}...

ಬೀಳುಕೊಂಡರ್ಜುನನು ಲಕ್ಷಿ ್ಮೀ
ಲೋಲನಲ್ಲಿಗೆ ಬರುತ ಕಂಡನು
ಲೀಲೆಯಲಿ ನರ್ತಿಸುವ ನವಿಲನು ಬನದೊಳಡಹಾಯ್ದು
ಮೇಲೆ ಹಂಗನ ಬಲನ ಹರಿಣೀ
ಜಾಲದೆಡನನು ತಿದ್ದುವಳಿಯ ವಿ
ಶಾಲ ಶಕುನವನಾಲಿಸುತ ಹರುಷದಲಿ ನಡೆತಂದ ॥18॥

೦೧೯ ಮೊರೆದು ಮಿಗೆ ...{Loading}...

ಮೊರೆದು ಮಿಗೆ ತಲೆಯೊತ್ತಿ ತೆರೆ ಮೈ
ಮುರಿದು ಘುಳುಘುಳು ಘುಳಿತ ಘನ ನಿ
ಷ್ಠುರ ನಿನಾದದ ಗಜರು ಗಾಢಿಸಿ ಬಹಳ ಲಹರಿಯಲಿ
ತೆರೆ ತೆರೆಯ ತಿವಿದೆದ್ದು ಗಗನವ
ನಿರದೊದೆದು ವಿತಳಕ್ಕೆ ಸುಳಿ ಭೋಂ
ಕರಿಸಿ ಸಾಗರನುಬ್ಬುಗವಳವ ಕೊಂಡವೊಲು ಕುಣಿದ ॥19॥

೦೨೦ ಪೂತು ಮಝ ...{Loading}...

ಪೂತು ಮಝ ಸಾಗರನ ಬಿಗುಹು ಮ
ಹಾತಿಶಯವೈ ಯಿವನನಂಜಿಸ
ಲಾತಗಳು ಮರ್ಮಿಗಳು ಬೆಟ್ಟವನೊಟ್ಟಿ ನೆತ್ತಿಯಲಿ
ಈತ ನಮಗಂಜುವನೆಯೆನುತ ವಿ
ಧೂತರಿಪು ಬಲ ಮುಂದೆ ಕಂಡನು
ಪಾತಕದ ಹೆಡತಲೆಯ ದಡಿಯನು ದ್ವಾರಕಾಪುರವ ॥20॥

೦೨೧ ಅಟ್ಟಿ ಬಳಲಿದ ...{Loading}...

ಅಟ್ಟಿ ಬಳಲಿದ ಶ್ರುತಿಗೆ ಹರಿ ಮೈ
ಗೊಟ್ಟ ಠಾವಿದು ತಾಪಸರು ಜಪ
ಗುಟ್ಟಿ ಜಿನುಗಿದಡವರನುಜ್ಜೀವಿಸಿದ ಠಾವಿದಲ
ಹುಟ್ಟು ಸಾವಿನ ವಿಲಗ ಜೀವರ
ಬಿಟ್ಟ ಠಾವಿದು ಕಾಲ ಕರ್ಮದ
ಥಟ್ಟು ಮುರಿವಡೆದೋಡಿದೆಡೆಯಿದು ಶಿವ ಶಿವಾಯೆಂದ ॥21॥

೦೨೨ ಪರಮ ನಾರಾಯಣ ...{Loading}...

ಪರಮ ನಾರಾಯಣ ಪರಾಯಣ
ನಿರವೆ ಪರತರವೆಂದು ಮುರಹರ
ಬರೆದ ಠಾವಿದು ಮುಕುತಿಯಿದರೊಳು ಕರತಳಾಮಲಕ
ಭರಿತ ಬೊಮ್ಮದ ಸುತ್ತುಗೊಳಸನು
ಸರಿದ ಠಾವೀ ತರ್ಕ ತಂತ್ರದ
ತರದ ಯುಕುತಿಗೆ ತೊಳಸುಗೊಳ್ಳದ ಠಾವಲಾಯೆಂದ ॥22॥

೦೨೩ ಹೊಗಳುತರ್ಜುನನಸುರರಿಪುವಿನ ...{Loading}...

ಹೊಗಳುತರ್ಜುನನಸುರರಿಪುವಿನ
ನಗರಿಗೈತಂದರಮನೆಯ ಹೊಗ
ಲಗಧರನು ಮಂಚದಲಿ ನಿದ್ರಾಂಗನೆಯ ಕೇಳಿಯಲಿ
ಸೊಗಸು ಮಿಗಲರೆದೆರೆದ ಲೋಚನ
ಯುಗಳ ಸಮತಳಿಸಿದ ಸುಷುಪ್ತಿಯ
ಬಿಗುಹಿನಲಿ ಪರಮಾತ್ಮನೆಸೆದನು ಭ್ರಾಂತಿಯೋಗದಲಿ ॥23॥

೦೨೪ ಮುಕುಳಕರಪುಟನಾಗಿ ಭಯಭರ ...{Loading}...

ಮುಕುಳಕರಪುಟನಾಗಿ ಭಯಭರ
ಭಕುತಿಯಲಿ ಕಲಿಪಾರ್ಥನಬುಜಾಂ
ಬಕನನೆಬ್ಬಿಸಲಮ್ಮದೊಯ್ಯನೆ ಚರಣ ಸೀಮೆಯಲಿ
ಅಕುಟಿಲನು ಸಾರಿದನು ಬಳಿಕೀ
ವಿಕಳ ದುರ್ಯೋಧನನು ನಿಗಮ
ಪ್ರಕರ ಮೌಳಿಯ ಮೌಳಿಯತ್ತಲು ಸಾರ್ದು ಮಂಡಿಸಿದ ॥24॥

೦೨೫ ಇರಲು ನಿಮಿಷದೊಳಸುರರಿಪು ...{Loading}...

ಇರಲು ನಿಮಿಷದೊಳಸುರರಿಪು ಮೈ
ಮುರಿದನುಪ್ಪವಡಿಸಿದನಿದಿರಲಿ
ಸುರಪತಿಯ ಸೂನುವನು ಕಂಡನು ನಗೆಯ ಮೊನೆ ಮಿನುಗೆ
ತಿರುಗಿ ನೋಡುತ ತಲೆಯ ದೆಸೆಯಲಿ
ಕುರುಕುಲೇಶನನತಿ ವಿಕಾರತೆ
ಯಿರವ ಕಂಡನಿದೇನಿದೇನೆಂದಸುರರಿಪು ನುಡಿದ ॥25॥

೦೨೬ ವೀಳಯವ ತಾ ...{Loading}...

ವೀಳಯವ ತಾ ಕೊಂಡು ಕುರು ಭೂ
ಪಾಲ ಪಾರ್ಥರಿಗಿತ್ತು ಲಕ್ಷಿ ್ಮೀ
ಲೋಲ ನುಡಿದನು ಉಭಯ ರಾಯರಿಗಿತ್ತ ಬರವೇನು
ಹೇಳಿರೈ ಬರವಘಟಿತವಲಾ
ಮೇಳವೇ ಕಡು ಮಾನ್ಯರೆಮ್ಮೀ
ಯಾಲಯಕೆ ಬರಲೇನೆನಲು ಕುರು ರಾಯನಿಂತೆಂದ ॥26॥

೦೨೭ ಯಾದವರು ಕೌರವರೊಳುಣ್ಟೇ ...{Loading}...

ಯಾದವರು ಕೌರವರೊಳುಂಟೇ
ಭೇದವಾವಯಿತಂದರೆಮ್ಮೊಳ
ಗಾದ ಲಾಘವವೇನು ನಿಮ್ಮವೊಲಾರು ಸಖರೆಮಗೆ
ಸೋದರರ ಮನ ಕದಡಿದವು ದಾ
ಯಾದ ವಿಷಯದಲಿನ್ನು ಧರಣಿಗೆ
ಕಾದುವೆವು ನಮ್ಮಿಬ್ಬರಿಗೆ ಬಲವಾಗ ಬೇಕೆಂದ ॥27॥

೦೨೮ ಕೌರವೇಶ್ವರ ಕೇಳು ...{Loading}...

ಕೌರವೇಶ್ವರ ಕೇಳು ಧರಣೀ
ನಾರಿಯನಿಬರಿಗೊಕ್ಕತನವಿ
ದ್ದಾರ ಮೆಚ್ಚಿದಳಾರ ಸಂಗಡವುರಿಯ ಹಾಯಿದಳು
ಭೂರಿ ಮಮಕಾರದಲಿ ನೃಪರು ವಿ
ಚಾರಿಸದೆ ಧರೆಯೆಮ್ಮದೆಂದೇ
ನಾರಕದ ಸಾಮಾ್ರಜ್ಯಕೈದುವರೆಂದು ಹರಿ ನುಡಿದ ॥28॥

೦೨೯ ನಾಡಿಗೋಸುಗ ಸೋದರರು ...{Loading}...

ನಾಡಿಗೋಸುಗ ಸೋದರರು ಹೊ
ಯಾ್ದಡಿ ಹರಿಹಂಚಾದರೆಂಬುದ
ನಾಡದಿಹುದೇ ಲೋಕ ಕಮಲಜನುಸಿರಿಹನ್ನೆಬರ
ಬೇಡಕಟ ನಿಮ್ಮೊಳಗೆ ನೀವ್ ಕೈ
ಗೂಡಿ ಬದುಕುವುದೊಳ್ಳಿತಾವ್ ನೆರೆ
ನೋಡಿ ಸಂತಸಬಡುವೆವೆಂದನು ರುಕ್ಮಿಣೀರಮಣ ॥29॥

೦೩೦ ತಗರೆರಡ ಖತಿಗೊಳಿಸಿ ...{Loading}...

ತಗರೆರಡ ಖತಿಗೊಳಿಸಿ ಬಲುಗಾ
ಳಗವ ನೋಡುವರಂತೆ ನಿಮ್ಮನು
ತೆಗೆತೆಗೆದು ಕಲಿಮಾಡಿ ಬಿಡುವರು ಖುಲ್ಲರಾದವರು
ನಗುತ ಹೆರೆ ಹಿಂಗುವರು ಪಿಸುಣರು
ಬಗುಳಿದವದಿರು ಬಳಿಕ ಕಡೆಯಲಿ
ಹೊಗುವಿರೈ ನೀವಿಬ್ಬರಪಕೀರಿತಿಯ ಹಾದರಕೆ ॥30॥

೦೩೧ ಅವಧರಿಸು ಮುರವೈರಿ ...{Loading}...

ಅವಧರಿಸು ಮುರವೈರಿ ಧರ್ಮ
ಶ್ರವಣಕೋಸುಗ ಬಾರೆವಾವ್ ಪಾ
ರ್ಥಿವರ ಪಂಥದ ಕದನ ವಿದ್ಯಾಕಾಮವೆಮಗಾಯ್ತು
ನಿವಗೆ ನಾವಿತ್ತಂಡ ಸರಿ ಪಾಂ
ಡವರಿಗೆಯು ಮನದೊಲವಿನಲಿ ಕೌ
ರವರಿಗೆಯು ಬಲವಾಗಬೇಕೆಂದನು ಸುಯೋಧನನು ॥31॥

೦೩೨ ಎನಲು ತಮ್ಬುಲ ...{Loading}...

ಎನಲು ತಂಬುಲ ಸೂಸೆ ನಗುತ
ರ್ಜುನನ ನೋಡಿದನಸುರರಿಪು ನಿ
ನ್ನನುವ ಹೇಳೈ ಪಾರ್ಥಯೆನೆ ತಲೆವಾಗಿ ಕೈಮುಗಿದು
ಎನಗೆ ಮತ ಬೇರೇನು ದುರಿಯೋ
ಧನನ ಮತವೇ ನನ್ನ ಮತ ನಿ
ಮ್ಮನುನಯವೆ ನಯವೆಮ್ಮೊಳೀ ಸ್ವಾತಂತ್ರ ್ಯವಿಲ್ಲೆಂದ ॥32॥

೦೩೩ ಆದಡಾವಿಹೆವೊನ್ದು ಕಡೆಯಲಿ ...{Loading}...

ಆದಡಾವಿಹೆವೊಂದು ಕಡೆಯಲಿ
ಕಾದುವವರಾವಲ್ಲ ಬಲನೊಳು
ಯಾದವರು ಕೃತವರ್ಮ ನಾರಾಯಣ ಮಹಾಸೇನೆ
ಕಾದುವವರಿವರೊಂದು ದೆಸೆಯೆರ
ಡಾದುದಿವರೊಳು ಮೆಚ್ಚಿದುದ ನೀ
ನಾದರಿಸಿ ವರಿಸೆಂದು ಪಾರ್ಥಂಗಸುರರಿಪು ನುಡಿದ ॥33॥

೦೩೪ ಮುರಮಥನ ಚಿತ್ತೈಸು ...{Loading}...

ಮುರಮಥನ ಚಿತ್ತೈಸು ಕೌರವ
ರರಸನತಿ ಸಿರಿವಂತನಿದ ಸಂ
ತರಿಸಲಾಪನು ಬಹಳ ಯಾದವ ಸೈನ್ಯಸಾಗರವ
ಧರೆಯ ಸಂಪದವಿಲ್ಲದಡವಿಯ
ತಿರುಕರಾವಿನಿಬರನು ಸಲೆ ಸಂ
ತರಿಸಲಾಪೆವೆ ಕೃಷ್ಣ ನೀನೇ ಸಾಕು ನಮಗೆಂದ ॥34॥

೦೩೫ ನಾವು ಬಡವರು ...{Loading}...

ನಾವು ಬಡವರು ಬಡವರಿಗೆ ದಿಟ
ನೀವೆ ಬೆಂಬಲವೆಂಬ ಬಿರುದನು
ದೇವ ಕೇಳಿದು ಬಲ್ಲೆವೆಂದನು ಪಾರ್ಥ ಕೈಮುಗಿದು
ನೀವು ಸುಖದಲಿ ಪಾಂಡವರನು
ಜ್ಜೀವಿಸುವುದೆಮಗುಳಿದ ಯದು ಭೂ
ಪಾವಳಿಯ ಕೃಪೆ ಮಾಡಬೇಕೆಂದನು ಸುಯೋಧನನು ॥35॥

೦೩೬ ಮರೆಯ ಮಾತುಗಳೇಕೆ ...{Loading}...

ಮರೆಯ ಮಾತುಗಳೇಕೆ ಪಾಂಡವ
ರೆರಕ ನಿಮ್ಮಲಿ ಹಿರಿದು ಪಾರ್ಥಗೆ
ಮರುಗುವಿರಿ ಹಿರಿದಾಗಿ ಮನಮೆಚ್ಚುಂಟು ನಿಮ್ಮೊಳಗೆ
ಉರುವ ಕಾರ್ಯಕೆ ಕಡೆಯಲಾವೇ
ಹೊರಗು ಸಾಕಂತಿರಲಿ ನೀ ಹೊ
ಕ್ಕಿರಿಯಲಾಗದು ಕೃಷ್ಣಯೆಂದನು ಕೌರವರ ರಾಯ ॥36॥

೦೩೭ ಮೊಲೆಯನುಮ್ಬನ್ದೊಬ್ಬ ದನುಜೆಯ ...{Loading}...

ಮೊಲೆಯನುಂಬಂದೊಬ್ಬ ದನುಜೆಯ
ಹಿಳಿದೆವೊದೆದೆವು ಶಕಟನನು ತನು
ಗಳೆದೆ ಧೇನುಕವತ್ಸ ನಗ ಹಯ ವೃಷಭ ಭುಜಗರನು
ಬಲುಗಜವ ಮಲ್ಲರನು ಮಾವನ
ನೆಳೆದು ಮಾಗಧ ಬಲವ ಬರಿ ಕೈ
ದಳಿಸಿದೆವು ದಾನವರ ಹಿಂಡಿದೆವಾಹವಾಗ್ರದಲಿ ॥37॥

೦೩೮ ಕಾಲಯವನನ ದನ್ತವಕ್ತ್ರನ ...{Loading}...

ಕಾಲಯವನನ ದಂತವಕ್ತ್ರನ
ಸೀಳಿದೆವು ಮುರ ನರಕ ಕುಂಭನ
ಸಾಲುವನ ಪೌಂಡ್ರಕನ ಡಿಬಿಕನ ಹಂಸ ಮೋಹರವ
ಕಾಳಗದೊಳಿಟ್ಟೊರಸಿ ಬಾಣನ
ತೋಳ ತರಿವಂದಾಯ್ತು ಧಾಳಾ
ಧೂಳಿಯಾಹವವಿಂದುಮೌಳಿಯೊಳೆಮಗೆ ಮುಳಿಸಿನಲಿ ॥38॥

೦೩೯ ಹಸುಳೆತನ ಮೊದಲಾಗಿ ...{Loading}...

ಹಸುಳೆತನ ಮೊದಲಾಗಿ ಬಲು ರ
ಕ್ಕಸರೊಡನೆ ತಲೆಯೊತ್ತಿ ರಣದಾ
ಯಸವ ಸೈರಿಸಿ ಹೊಯ್ದು ಕೊಂದೆವು ಕೋಟಿ ದಾನವರ
ಮಿಸುಕಲಾರೆವು ಚಕ್ರ ಭಂಡಾ
ರಿಸಿತು ಮುನ್ನಿನ ಜವ್ವನದ ಬಲ
ಮುಸುಳಿತಾವುಂಡಾಡಿ ಭಟ್ಟರು ನೃಪತಿ ಕೇಳ್ ಎಂದ ॥39॥

೦೪೦ ಎನಲು ಕರಲೇಸೆನ್ದು ...{Loading}...

ಎನಲು ಕರಲೇಸೆಂದು ದುರಿಯೋ
ಧನನು ಕಳುಹಿಸಿಕೊಂಡು ಬಲರಾ
ಮನನು ಕೃತವರ್ಮನನು ಕಂಡನು ನಿಖಿಳ ಯಾದವರ
ವಿನುತಬಲ ಸಹಿತೊಲವಿನಲಿ ಹ
ಸ್ತಿನಪುರಿಗೆ ಹಾಯಿದನು ಬಳಿಕೀ
ದನುಜರಿಪು ನಸು ನಗುತಲಿಂತೆಂದನು ಧನಂಜಯಗೆ ॥40॥

೦೪೧ ಸುರಗಿಯನು ಬಿಸುಟೊರೆಯನಙ್ಗೀ ...{Loading}...

ಸುರಗಿಯನು ಬಿಸುಟೊರೆಯನಂಗೀ
ಕರಿಸಿದಂದದಲಾಹವದ ಧುರ
ಭರದ ಯಾದವ ಬಲವನೊಲ್ಲದೆ ಮಂದ ಮತಿಯಾಗಿ
ಮರುಳೆ ಕಾದದ ಕಟ್ಟದೆಮ್ಮನು
ಬರಿದೆ ಬಯಸಿದೆಯಿದನು ಕೇಳ್ದೊಡೆ
ಮರುಳುಗುಟ್ಟದೆ ಮಾಣ್ಬರೇ ನಿಮ್ಮಣ್ಣ ತಮ್ಮದಿರು ॥41॥

೦೪೨ ಎನಲು ಗಹಗಹಿಸಿದನಿದಾರಿಗೆ ...{Loading}...

ಎನಲು ಗಹಗಹಿಸಿದನಿದಾರಿಗೆ
ಮನವ ಕದ್ದಾಡುವಿರಿ ನಿಜ ಶಿ
ಷ್ಯನಲಿ ನಾಟಕದಿಂದ್ರಜಾಲವೆ ನಿಮ್ಮ ಗರುಡಿಯಲಿ
ಎನಗೆ ಶ್ರಮವುಂಟದು ನಿಲಲಿ ಯೆ
ನ್ನನುಜರಗ್ರಜರರಿಯರೇ ನಿ
ಮ್ಮನುಪಮಿತ ಮಹಿಮಾವಲಂಬವನೆಂದನಾ ಪಾರ್ಥ ॥42॥

೦೪೩ ನಾವು ಬರಿಗೈಯವರು ...{Loading}...

ನಾವು ಬರಿಗೈಯವರು ಬರಲೆಮ
ಗಾವುದಲ್ಲಿಯ ಕೆಲಸ ಉಂಡುಂ
ಡಾವು ಕುಳ್ಳಿಹರಲ್ಲ ಹಂಗಾಗಿರೆವು ಕದನದಲಿ
ದೇವನೆಂದೇ ನೀವು ಬಗೆವಿರಿ
ದೇವತನ ನಮ್ಮಲ್ಲಿ ಲವವಿ
ಲ್ಲಾವು ಬಲ್ಲೆವು ಬಂದು ಮಾಡುವದೇನು ಹೇಳೆಂದ ॥43॥

೦೪೪ ದೇವ ಮಾತ್ರವೆ ...{Loading}...

ದೇವ ಮಾತ್ರವೆ ನೀವು ದೇವರ
ದೇವರೊಡೆಯರು ಹೊಗಳುವರೆ ವೇ
ದಾವಳಿಗಳಳವಲ್ಲ ಸಾಕಾ ಮಾತದಂತಿರಲಿ
ನಾವು ಭಕುತರು ಭಕುತ ಭೃತ್ಯರು
ನೀವು ಸಾರಥಿಯಾಗಿ ಭೃತ್ಯನ
ಕಾವುದೆಂದರ್ಜುನನು ಹಣೆ ಚಾಚಿದನು ಹರಿಪದಕೆ ॥44॥

೦೪೫ ಎನಲು ನಗುತೆತ್ತಿದನು ...{Loading}...

ಎನಲು ನಗುತೆತ್ತಿದನು ಸಾರಥಿ
ತನವ ಕೈಕೊಂಡನು ಕೃಪಾಳುವಿ
ನನುನಯವ ನಾನೆತ್ತ ಬಲ್ಲೆನು ಭೃತ್ಯವರ್ಗದಲಿ
ತನಗಹಂಕೃತಿಯಿಲ್ಲ ವೈರೋ
ಚನಿಯ ಪಡಿಹಾರಿಕೆ ಕಿರೀಟಿಯ
ಮನೆಯ ಬಂಡಿಯ ಬೋವನಾದನು ವೀರನಾರಯಣ ॥45॥

+೦೧ ...{Loading}...