೦೭

೦೦೦ ಸೂ ಕದನ ...{Loading}...

ಸೂ. ಕದನ ಚೌಪಟಮಲ್ಲ ಪರ ಬಲ
ಮದನ ಮದಹರ ರುದ್ರನಹಿತರ
ಸದೆದು ಮರಳಿಚಿದನು ವಿರಾಟನ ನಿಖಿಳ ಗೋಕುಲವ

೦೦೧ ಭಯವು ಭಾರವಿಸಿತ್ತು ...{Loading}...

ಭಯವು ಭಾರವಿಸಿತ್ತು ಜನಮೇ
ಜಯ ಮಹೀಪತಿ ಕೇಳು ಕುರು ಸೇ
ನೆಯಲಿ ಭೀಷ್ಮ ದ್ರೋಣರರಿದರು ಪಾರ್ಥನೆಂಬುದನು
ಜಯವು ಜೋಡಿಸಲರಿಯದಿದು ಸಂ
ಶಯದ ಸುಳಿವುತ್ಪಾತ ಶತವಿದು
ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ ॥1॥

೦೦೨ ಸುರಿಸುತಿವೆ ಕಮ್ಬನಿಗಳನು ...{Loading}...

ಸುರಿಸುತಿವೆ ಕಂಬನಿಗಳನು ಗಜ
ತುರಗಚಯವೊರೆಯುಗಿದಡಾಯುಧ
ಮುರಿದು ಬಿದ್ದುದು ಬೀಸುತಿದೆ ಬಿರುಗಾಳಿ ಬಲ ಬೆದರೆ
ಹರಿವುತಿವೆ ತಾರಕಿಗಳಭ್ರದೊ
ಳರುಣಮಯ ಜಲ ಧಾರೆಯಿದೆ ತರ
ತರದಲಿದೆ ಪಡಿಸೂರ್ಯಮಂಡಲವೆಂದನಾ ದ್ರೋಣ ॥2॥

೦೦೩ ಇದೆ ಬಹಳ ...{Loading}...

ಇದೆ ಬಹಳ ಭೂಕಂಪವದುಭುತ
ವಿದೆ ದಿಶಾವಳಿ ಧೂಮಕೇತುಗ
ಳಿದೆ ಪತಾಕಾಭಂಗವಿದೆ ವಿಪರೀತ ಪರಿವೇಷ
ಇದು ಸಮಾಹಿತವಲ್ಲ ರಾಜಾ
ಭ್ಯುದಯಕರವೇ ಭೀಷ್ಮ ನಮ್ಮನು
ಸದೆಯದಿಹನೇ ಸುರಪನಂದನನೆಂದನಾ ದ್ರೋಣ ॥3॥

೦೦೪ ಬಿರಿಯಲಬುಜಭವಾಣ್ಡವಿದೆ ಕಪಿ ...{Loading}...

ಬಿರಿಯಲಬುಜಭವಾಂಡವಿದೆ ಕಪಿ
ವರನ ಕಳಕಳ ದೇವದತ್ತದ
ಧರಧುರದ ದೆಖ್ಖಾಳವಿದೆ ಗಾಂಡಿವದ ಬೊಬ್ಬೆಯಿದೆ
ನರನ ನಿಷ್ಠುರ ಸಿಂಹ ರವವಿದೆ
ತುರಗ ದಳ್ಳುರಿ ಸಾರುತಿದೆ ಸಂ
ಗರಕೆ ಸಾಹಸ ಮಲ್ಲ ಮೊಳಗಿದನೆಂದನಾ ದ್ರೋಣ ॥4॥

೦೦೫ ಬಲವ ಬೆದರಿಸಿ ...{Loading}...

ಬಲವ ಬೆದರಿಸಿ ಹಗೆಯ ಭುಜದ
ಗ್ಗಳಿಕೆಯನೆ ಕೊಂಡಾಡಿ ಸ್ವಾಮಿಯ
ನಿಳಿಕೆಗಾಬಿರಿ ನಿಮ್ಮ ಪೈಕಕೆ ಖುಲ್ಲತನ ಸಹಜ
ಫಲುಗುಣನೆಯಾಗಲಿ ಸುರೇಂದ್ರನೆ
ನಿಲಲಿ ಭಾರ್ಗವ ರಾಮನಾಗಲಿ
ಗೆಲಿದು ಕೊಡುವೆನು ನಿಮಿಷಕೆಂದನು ಖಾತಿಯಲಿ ಕರ್ಣ ॥5॥

೦೦೬ ನರನು ನರನೆನ್ದನವರತ ...{Loading}...

ನರನು ನರನೆಂದನವರತ ತಲೆ
ಬಿರಿಯೆ ಹೊಗಳುವಿರಾನಿರಲು ಸಂ
ಗರಕೆ ತಲೆದೋರಿದೊಡೆ ತರಿವೆನು ಲೋಕಪಾಲಕರ
ನರನ ತೆತ್ತಿಗರಹಿರಿ ತತ್ತರೆ
ಪುರದೊಳಗೆ ಕೌರವನವರು ದು
ಶ್ಚರಿತರೆರಡಿಟ್ಟಿಹಿರಿ ಖೂಳರು ನಿಮ್ಮೊಳೇನೆಂದ ॥6॥

೦೦೭ ಹೊಕ್ಕು ತಾ ...{Loading}...

ಹೊಕ್ಕು ತಾ ಬಳಿಸಲಿಸಿದೊಡೆ ಹಿಂ
ದಿಕ್ಕಿ ಕೊಂಬವರಾರು ಹಗೆವನ
ಸಿಕ್ಕಿದುರಗವ ಸೆಳೆವನಾವನು ಗರುಡ ತುಂಡದಲಿ
ಎಕ್ಕತುಳದಲಿ ವೈರಿ ಪಾರ್ಥನ
ನೊಕ್ಕಲಿಕ್ಕುವೆನರಸ ನಿನ್ನೀ
ಚುಕ್ಕಿಗಳ ಚಾಪಲವ ಕೇಳದಿರೆಂದನಾ ಕರ್ಣ ॥7॥

೦೦೮ ಎನಲು ಭುಗಿಲೆನ್ದನು ...{Loading}...

ಎನಲು ಭುಗಿಲೆಂದನು ಕೃಪಾಚಾ
ರ್ಯನು ಸುಯೋಧನ ಕೇಳು ರಾಧಾ
ತನಯನಿವ ಬೊಗುಳಿದೊಡೆ ನಿಶ್ಚಯವೆಂದು ನಂಬದಿರು
ಅನುವರದೊಳರ್ಜುನನ ಗೆಲುವೊಡೆ
ಯೆನಗೆ ನಿನಗೀತಂಗೆ ಕೆಲಬರಿ
ಗನಿಮಿಷರಿಗಳವಲ್ಲ ಬಲ್ಲೈ ಪಾರ್ಥನದಟುಗಳ ॥8॥

೦೦೯ ಮಾಡಿದನು ಹರನೊಡನೆ ...{Loading}...

ಮಾಡಿದನು ಹರನೊಡನೆ ಖಾಡಾ
ಖಾಡಿಯನು ಸುರಪತಿಯ ತೋಟವ
ಬೇಡಿದೊಡೆ ಬೇಳಿದನು ವಹ್ನಿಗೆ ರಾಜಸೂಯದಲಿ
ರೂಢಿಗುತ್ತರ ಕುರುಗಳರ್ಥವ
ಹೂಡಿಸಿದನರಮನೆಗೆ ದೈತ್ಯರ
ಬೀಡ ಬರಿಗೈದನು ಹಿರಣ್ಯಕಪುರ ನಿವಾಸಿಗಳ ॥9॥

೦೧೦ ಬಾಗಿಸಿದ ಬಿಲ್ಲಿನಲಿ ...{Loading}...

ಬಾಗಿಸಿದ ಬಿಲ್ಲಿನಲಿ ರಾಯರ
ಮೂಗ ಕೊಯ್ದನು ಮದುವೆಯಲಿ ನೀ
ನೀಗಳೊದರುವೆ ಕೌರವೇಂದ್ರನನಂದು ಬಿಡಿಸಿದೆಲ
ಆ ಗರುವ ಸೈಂಧವನ ಮುಡಿಯ ವಿ
ಭಾಗಿಸಿದ ಭಟನಾರು ಪಾರ್ಥನ
ಲಾಗುವೇಗವನಾರು ಬಲ್ಲರು ಕರ್ಣ ಕೇಳ್ ಎಂದ ॥10॥

೦೧೧ ಮರುಳ ಕಣ್ಣಿಗೆ ...{Loading}...

ಮರುಳ ಕಣ್ಣಿಗೆ ಕೊಡನ ತೋರದ
ಲಿರದೆ ಸಾಸವೆ ನಿಮ್ಮ ಕಣ್ಣಿಗೆ
ನರನು ದೊಡ್ಡಿತು ಉಳಿದ ವೀರರ ಕಣ್ಗೆ ತುಸು ಮಾತ್ರ
ಮರುಳು ಹಾರುವ ಗದ್ಯಪದ್ಯದ
ಸರಸ ವಿದ್ಯಗಳಲ್ಲದೀ ಸಂ
ಗರದ ಕರ್ಕಶ ವಿದ್ಯೆ ನಿಮಗೇಕೆಂದನಾ ಕರ್ಣ ॥11॥

೦೧೨ ಹಣೆಗೆ ಮಟ್ಟಿಯ ...{Loading}...

ಹಣೆಗೆ ಮಟ್ಟಿಯ ಬಡಿದು ದರ್ಭೆಯ
ಹಣಿದು ಬೆರಳಲಿ ಸೆಕ್ಕಿ ಧೋತ್ರದ
ದಣಿಬವನು ನಿರಿವಿಡಿದು ಮಹಳದ ಮನೆಯ ಚೌಕದಲಿ
ಮಣೆಗೆ ಮಂಡಿಸಿ ಕುಳ್ಳಿತುಂಬೌ
ತಣದ ವಿದ್ಯ ಬಲ್ಲಿರಲ್ಲದೆ
ರಣ ವಿಚಾರದ ವಿದ್ಯೆ ನಿಮಗೇಕೆಂದನಾ ಕರ್ಣ ॥12॥

೦೧೩ ಇನ್ದು ಪಿತೃದಿನವಿನ್ದು ...{Loading}...

ಇಂದು ಪಿತೃದಿನವಿಂದು ಸಂಕ್ರಮ
ಣಿಂದು ಸೂರ್ಯಗ್ರಹಣ ಹರಿದಿನ
ವಿಂದು ಯಜ್ಞಾರಂಭ ದಿನ ವಡ್ಡಂತಿ ಲೇಸೆಂದು
ಬಂದು ನಾನಾ ಮುಖದ ದಾನಕೆ
ತಂದ ವಸ್ತುವ ಬಾಚಿ ಹೊಳ್ಳಿಸಿ
ತಿಂದು ಕೊಬ್ಬಿದ ನಿಮಗೆ ಸುಭಟರ ಮಾತದೇಕೆಂದ ॥13॥

೦೧೪ ಬಲ್ಲಿರೈ ಕೌರವನ ...{Loading}...

ಬಲ್ಲಿರೈ ಕೌರವನ ಧನವನು
ಹೊಳ್ಳಿಸಲು ಮೃಷ್ಟಾನ್ನದಿಂದವೆ
ಡೊಳ್ಳ ಬೆಳಸಿಯೆ ರಾಜಗುರುತನದಿಂದ ಬೆರತಿಹಿರಿ
ಬಿಲ್ಲ ವಿದ್ಯಾವಿಷಯ ರಿಪುಭಟ
ಮಲ್ಲರೊಡನೆಯ ಕದನವಿದು ಜಡ
ರೆಲ್ಲರಿಗೆ ಸುಲಭವೆ ಜಪಾನುಷ್ಠಾನವಲ್ಲೆಂದ ॥14॥

೦೧೫ ಕೇಳಿದಶ್ವತ್ಥಾಮ ಕಿಡಿಗಳ ...{Loading}...

ಕೇಳಿದಶ್ವತ್ಥಾಮ ಕಿಡಿಗಳ
ನಾಲಿಗಳಲುಗುಳಿದನು ಕೇಳೆಲೆ
ಖೂಳ ಸೂತನ ಮಗನೆ ಸುಭಟಾಂಗದಲಿ ಖರೆಯನಲ
ಕೀಳು ಜಾತಿಗೆ ತಕ್ಕ ನುಡಿಗಳು
ಮೇಳವಿಸಿದವು ಕುಲವ ನಾಲಗೆ
ಹೇಳಿತೆಂಬುದು ತಪ್ಪದಾಯಿತು ಕರ್ಣ ಕೇಳ್ ಎಂದ ॥15॥

೦೧೬ ನಗುವೆ ವಿಪ್ರರನಾವ ...{Loading}...

ನಗುವೆ ವಿಪ್ರರನಾವ ರಾಯರ
ಮಗನು ಹೇಳಾ ದಾನ ಧರ್ಮಾ
ದಿಗಳೊಳರ್ಧವನಾರು ಕೊಂಬರು ದ್ವಿಜರು ಹೊರಗಾಗಿ
ಜಗವ ರಕ್ಷಿಸಲಾವು ಕೊಂಬೆವು
ಮಗುಳೆ ಕೊಡುವೆವು ಕ್ಷತ್ರ ವೈಶ್ಯಾ
ದಿಗಳು ಕೊಡುವರು ತತ್ಪ್ರತಿಗ್ರಹ ಯೋಗ್ಯವಲ್ಲೆಂದ ॥16॥

೦೧೭ ಉಳಿದ ವರ್ಣತ್ರಯಕೆ ...{Loading}...

ಉಳಿದ ವರ್ಣತ್ರಯಕೆ ಬೆಸಕೈ
ವಳತೆಯಲಿ ಶೂದ್ರನು ಕೃತಾರ್ಥನು
ತಿಳಿಯೆ ನೀನಾರಿದರೊಳಗೆ ಕೊಂಬುವೆನೊ ಕೊಡುವವನೊ
ಕುಲವಿಹೀನನ ತಂದು ಕೌರವ
ತಿಲಕ ಪತಿಕರಿಸಿದೊಡೆ ನಾಲಗೆ
ಯುಲಿಯಲಾಯಿತು ಕರ್ಣ ನಿನ್ನಯ ಭವವ ನೆನೆಯೆಂದ ॥17॥

೦೧೮ ಪರರು ಪತಿಕರಿಸಿದೊಡೆ ...{Loading}...

ಪರರು ಪತಿಕರಿಸಿದೊಡೆ ಲಜ್ಜೆಗೆ
ಶಿರವ ನಸುಬಾಗುವರು ಗರುವರು
ದುರುಳ ನೀ ದುರುದುಂಬಿತನದಲಿ ನಿನ್ನ ಹೊಗಳಿದೊಡೆ
ಗರುವ ಮಾನ್ಯರು ಮೆಚ್ಚುವರೆ ಸಸಿ
ನಿರು ಮಹಾತ್ಮರು ನಿನ್ನೊಡನೆ ಉ
ತ್ತರವ ಕೊಡುವರೆ ಗಳಹತನ ನಮ್ಮೊಡನೆ ಬೇಡೆಂದ ॥18॥

೦೧೯ ತೆಗೆದು ತಾಳಿಗೆಗಡಿತನಕ ...{Loading}...

ತೆಗೆದು ತಾಳಿಗೆಗಡಿತನಕ ನಾ
ಲಗೆಯ ಕೀಳ್ವೆನು ಮುನಿದು ತನ್ನೋ
ಲಗವ ತೆಗೆಸಲಿ ಕೌರವನು ನಿನಗೊಲಿದು ಪತಿಕರಿಸಿ
ಅಗಣಿತದ ಗರುವರನು ನಿಂದಿಸಿ
ನಗುವೆ ನಿನ್ನನು ಕೊಲುವೆನೆಂದಾ
ಳುಗಳ ದೇವನು ಸೆಳೆದನಶ್ವತ್ಥಾಮ ಖಂಡೆಯವ ॥19॥

೦೨೦ ಆಳು ಮತ್ಸರದಧಿಕ ...{Loading}...

ಆಳು ಮತ್ಸರದಧಿಕ ರೋಷದ
ಮೇಲುನುಡಿಯಂಕುರಿಸೆ ಕುರು ಭೂ
ಪಾಲನಿಬ್ಬರ ತೆಗದನುಚಿತೋಕ್ತಿಯಲಿ ಸಂತೈಸಿ
ಕಾಳಗಕೆ ತನ್ನವನೊಡನೆ ನಿ
ಮ್ಮಾಳುತನವನು ತೋರಿಯೊಳಗೊಳ
ಗಾಳು ವಾಸಿಯ ತೋಟಿ ಬೇಡೆಂದರಸ ಮಾಣಿಸಿದ ॥20॥

೦೨೧ ಬನ್ದು ಭೀಷ್ಮಙ್ಗೆರಗಿ ...{Loading}...

ಬಂದು ಭೀಷ್ಮಂಗೆರಗಿ ಕೈ ಮುಗಿ
ದೆಂದನೀತನು ಪಾರ್ಥನಾದೊಡೆ
ಹಿಂದಣಂತಿರೆ ನವೆಯಬೇಹುದು ವರುಷ ಹದಿಮೂರ
ಸಂದುದಿಲ್ಲಜ್ಞಾತ ವಾಸಕೆ
ಮುಂದೆ ದಿನವುಂಟೆನ್ನ ಲೆಕ್ಕ
ಕ್ಕೆಂದು ಕುರುಪತಿ ನುಡಿಯೆ ನಗುತಿಂತೆಂದನಾ ಭೀಷ್ಮ ॥21॥

೦೨೨ ಮಗನೆ ಕೇಳೀರೈದು ...{Loading}...

ಮಗನೆ ಕೇಳೀರೈದು ವರುಷಕೆ
ಮಿಗುವವೆರಡೇ ಮಾಸ ಮಾಸಾ
ದಿಗಳನವರನುಭವಿಸಿದರು ಹದಿಮೂರು ವತ್ಸರವ
ಮಿಗುವವಧಿ ಬುಧರರಿಯೆ ನಿನ್ನಿನ
ಹಗಲು ನಿನ್ನದು ಪಾಂಡುತನಯರು
ಹೊಗುವಡಿಂದಿನ ದಿವಸವವರದು ಕಂದ ಕೇಳ್ ಎಂದ ॥22॥

೦೨೩ ಜಲಧಿ ಮೇರೆಯನೊದೆದು ...{Loading}...

ಜಲಧಿ ಮೇರೆಯನೊದೆದು ಹಾಯಲಿ
ನೆಲನನಿಳುಹಲಿ ದಿಗಿಭವಿನಮಂ
ಡಲಕೆ ಕಾಳಿಕೆಯಿಡಲಿ ನಡೆದಾಡಲಿ ಕುಲಾದ್ರಿಗಳು
ಅಳುಪಲರಿವನೆ ಸತ್ಯಭಾಷೆಗೆ
ಕಲಿ ಯುಧಿಷ್ಠಿರ ನೃಪತಿಯನ್ವಯ
ತಿಲಕನಲ್ಲಾ ಕಂದ ಕೌರವಯೆಂದನಾ ಭೀಷ್ಮ ॥23॥

೦೨೪ ಸಾಕದನ್ತಿರಲಿನ್ನು ಕಾಳಗ ...{Loading}...

ಸಾಕದಂತಿರಲಿನ್ನು ಕಾಳಗ
ನೂಕಲರಿಯದು ಪಾರ್ಥ ಕೊಲುವೊಡೆ
ಬೇಕು ಬೇಡೆಂಬವರ ಕಾಣೆನು ಹಲವು ಮಾತೇನು
ಆ ಕುಮಾರರ ಕರೆಸಿ ಸಂಧಿಯ
ನಾಕೆವಾಳರ ಮುಂದೆ ಮಾಡಲು
ಲೋಕದಲಿ ನಿನಗಿಲ್ಲ ಸರಿ ಕುರುರಾಯ ಕೇಳ್ ಎಂದ ॥24॥

೦೨೫ ಕಣ್ಡುದಳವಿ ವಿರೋಧಿಗೆಮಗೆಯು ...{Loading}...

ಕಂಡುದಳವಿ ವಿರೋಧಿಗೆಮಗೆಯು
ಕೊಂಡುದೇ ಬಲುಗೈದು ಮನ ಮುಂ
ಕೊಂಡು ಹೊಕ್ಕುದು ಕಳನದಲ್ಲದೆ ಪಾಂಡು ಸುತರೊಡನೆ
ಉಂಡು ಮೇಣುಟ್ಟೊಲಿದು ಬದುಕುವ
ಭಂಡತನವೆನಗಿಲ್ಲ ವೈರವ
ಕೊಂಡೆಸಗಬೇಕೆಂದು ಬಿನ್ನವಿಸಿದನು ಕುರುರಾಯ ॥25॥

೦೨೬ ಮೇಲೆ ನೆಗಳುವ ...{Loading}...

ಮೇಲೆ ನೆಗಳುವ ಹದನನಿಲ್ಲಿಂ
ಮೇಲೆ ನೀನೇ ಬಲ್ಲೆಯೆನುತ ವಿ
ಶಾಲಮತಿ ಬಿಸುಸುಯ್ದು ಕೌರವ ಕೆಟ್ಟನಕಟೆನುತ
ಕಾಳಗವ ನಾವಾನುವೆವು ಪಶು
ಜಾಲ ಸಹಿತಿಭಪುರಿಗೆ ನೀ ಕಿರಿ
ದಾಳೊಡನೆ ನಡೆಯೆಂದು ಸೇನೆಯನೆರಡ ಮಾಡಿಸಿದ ॥26॥

೦೨೭ ಕೌರವೇನ್ದ್ರನ ಕೂಡೆ ...{Loading}...

ಕೌರವೇಂದ್ರನ ಕೂಡೆ ಸೇನಾ
ಭಾರವನು ಪರುಠವಿಸಿ ಕಳುಹಿದ
ನಾರುಭಟೆಯಲಿ ಭೀಷ್ಮ ನಿಂದನು ಥಟ್ಟ ಮೇಳೈಸಿ
ವೀರ ಕರ್ಣ ದ್ರೋಣ ಗೌತಮ
ಭೂರಿಬಲ ಗುರುಸೂನು ಶಕುನಿ ಮ
ಹಾರಥಾದಿಯ ಕೂಡಿಕೊಂಡನು ನರನ ಸಂಗರಕೆ ॥27॥

೦೨೮ ಇತ್ತಲಖಿಳ ಮಹಾರಥಾದಿಯ ...{Loading}...

ಇತ್ತಲಖಿಳ ಮಹಾರಥಾದಿಯ
ನೊತ್ತಲಿಕ್ಕಿ ಸುಯೋಧನನು ಪುರ
ದತ್ತ ಗೋಕುಲ ಸಹಿತ ಹಾಯ್ದನು ಪೂತು ಮಝರೆನುತ
ಮುತ್ತಯನು ಮಾಡಿದ ನಿಯೋಗದ
ತತ್ತವಣೆ ಲೇಸಾಯ್ತು ಬೇಗದೊ
ಳುತ್ತರನೆ ಕೊಳ್ಳೆಡದ ವಾಘೆಯನೆಂದನಾ ಪಾರ್ಥ ॥28॥

೦೨೯ ತುರುಗಳನು ಮರಳಿಚುವದಿದು ...{Loading}...

ತುರುಗಳನು ಮರಳಿಚುವದಿದು ನಮ
ಗುರುವ ಕಾರ್ಯವು ಮಿಕ್ಕ ಕೆಲಸದ
ಹೊರಿಗೆಯನು ನಿರ್ಣೈಸಿ ಬಳಿಕಿನಲಿವರ ಸಾಹಸವ
ಅರಿದು ಕೊಂಬೆನು ಕೊಳ್ಳು ವಾಘೆಯ
ನಿರಿತದೆಡೆಯಲಿ ಭೀತಿಗೊಳ್ಳದೆ
ತರಿದು ತಿರುಗುವ ಲಾಗು ವೇಗವ ನೋಡು ನೀನೆಂದ ॥29॥

೦೩೦ ಎನಲು ಚಪ್ಪರಿಸಿದನು ...{Loading}...

ಎನಲು ಚಪ್ಪರಿಸಿದನು ತೇಜಿಗ
ಳನಿಲ ಜವದಲಿ ನಿಗುರಿದವು ಮುಂ
ಮೊನೆಯವರ ಮನ್ನಿಸದೆ ಬೆಂಬತ್ತಿದನು ಕೌರವನ
ಜನಪ ಬಿಡು ಬಿಡು ತುರುಗಳನು ಫಲು
ಗುಣ ಕಣಾ ಬಂದವನು ಕುರುಕುಲ
ವನ ದವಾನಳನರಿಯೆನುತಲುತ್ತರನು ಬೊಬ್ಬಿರಿದ ॥30॥

೦೩೧ ಎಲೆಲೆ ನರ ...{Loading}...

ಎಲೆಲೆ ನರ ಜಾರಿದನು ರಾಯನ
ಬಳಿಯ ಹತ್ತಿದನಡ್ಡ ಹಾಯ್ದತಿ
ಬಲನ ತೆಗೆ ನಮ್ಮತ್ತಲೆನುತಾ ದ್ರೋಣ ಗೌತಮರು
ಹಿಳುಕ ಕೆನ್ನೆಗೆ ಸೇದಿ ಬೊಬ್ಬೆಯ
ಕಳಕಳದಿಯಡಗಟ್ಟಿದರು ನಿ
ಲ್ಲೆಲವೊ ಫಲುಗುಣ ಕಾದಿ ನೀನೊಟ್ಟೈಸಿ ಹೋಗೆನುತ ॥31॥

೦೩೨ ನಗುತ ಫಲುಗುಣನೆರಡೆರಡು ...{Loading}...

ನಗುತ ಫಲುಗುಣನೆರಡೆರಡು ಕೋ
ಲುಗಳನವರವರಂಘ್ರಿಗೆಚ್ಚನು
ತೆಗೆದು ಹಾಯ್ದನು ಮುಂದೆ ಕೌರವ ರಾಯ ಮೋಹರಕೆ
ಹೊಗರೊಗುವ ಹೊಸ ಕಣೆಯ ದಡ್ಡಿಯ
ಬಿಗಿದನೆಡಬಲನಿದಿರಿನಲಿ ಸೆಗ
ಳಿಗೆಯ ಸಸಿಯಂತಾಯ್ತು ಕೌರವ ಸೇನೆ ನಿಮಿಷದಲಿ ॥32॥

೦೩೩ ಬಿರಿದವಾನೆಗಳರ್ಜುನನ ಬಿಲು ...{Loading}...

ಬಿರಿದವಾನೆಗಳರ್ಜುನನ ಬಿಲು
ದಿರುವಿನಬ್ಬರಕತಿರಥರ ಬಾ
ಯ್ದೊರಳೆ ಹಾಯ್ದವು ವೀರ ಹನುಮನ ಗಾಢ ಗರ್ಜನೆಗೆ
ಶಿರವೊಡೆದು ಸಿಡಿಯಿತು ಕಿರೀಟಿಯ
ಪರಮ ಶಂಖ ಧ್ವನಿಗೆ ಕುರುಬಲ
ಹೊರಳಿಯೊಡೆದುದು ಹಾರಿ ಬಿದ್ದುದು ಹೆದರಿ ಹಮ್ಮೈಸಿ ॥33॥

೦೩೪ ಎಲೆಲೆ ನರನೋ ...{Loading}...

ಎಲೆಲೆ ನರನೋ ಸುಭಟ ಜೀವನ
ದಳವುಳಿಗನೋ ದಿಟ್ಟ ರಾಯರ
ದಳದ ದಾವಾನಲನೊ ಪಾರ್ಥನೊ ಕಾಲಭೈರವನೊ
ಗೆಲುವರಾವೆಡೆ ಕರ್ಣ ಕೃಪ ಸೌ
ಬಲ ಜಯದ್ರಥರೆಂಬವರ ಹೆಡ
ತಲೆಗೆ ನಾಲಗೆ ಹೋಯಿತೆಂದುದು ಕೂಡೆ ಕುರುಸೇನೆ ॥34॥

೦೩೫ ಮರಳಿ ಹೊಡೆ ...{Loading}...

ಮರಳಿ ಹೊಡೆ ಹಿಂಡಾಕಳನು ಗೋ
ವರನು ಬಿಡು ಹೆಡಗೈಯ ಕೊಯ್ ನ
ಮ್ಮರಸ ನಯದಪ್ಪಿದನು ತುರು ಸೆರೆವಿಡಿವರೇ ನೃಪರು
ಕೊರಳ ಕಡಿತಕೆ ಹೊತ್ತ ಹಗೆವನ
ಸರಳಿಗಸುಗಳ ತೆರೆದಿರೆಂದ
ಬ್ಬರಿಸಿ ಕುರುಬಲ ಬಾಯಬಿಟ್ಟುದು ರಾಯರಿದಿರಿನಲಿ ॥35॥

೦೩೬ ಬೊಬ್ಬಿರಿದು ನರನೆಸಲು ...{Loading}...

ಬೊಬ್ಬಿರಿದು ನರನೆಸಲು ಕಣೆಗಳು
ಹಬ್ಬಿದವು ಹುರಿಗೊಂಡು ಹೂಣಿಗ
ರೊಬ್ಬುಳಿಯ ಹರೆಗಡಿದು ಕರಿಗಳ ಹೊದರ ಮೆದೆಗೆಡಹಿ
ತೆಬ್ಬನೊದೆದುರೆ ಬಳಿಕ ಗರಿ ಮೊರೆ
ದಬ್ಬರಿಸಿ ಕಬ್ಬಕ್ಕಿ ಗಗನವ
ಹಬ್ಬಿದಂತಿರೆ ಮಸಗಿದವು ಫಲುಗುಣನ ಶರಜಾಲ ॥36॥

೦೩೭ ತುಡುಕಿ ಖಣ್ಡವ ...{Loading}...

ತುಡುಕಿ ಖಂಡವ ಕಚ್ಚಿ ಹಾರುವ
ಗಿಡಗನಂತಿರೆ ಭಟರ ಗಂಟಲ
ಕಡಿದು ಹಾಯ್ದಂಬುಗಳು ಬಳಿಯಲಿ ಕೊಂದ ತಲೆಗಳಲಿ
ಅಡಸಿದವು ನಿರಿನಿಟಿಲುಗರೆದೆಲು
ವೊಡೆಯೆ ಥಟ್ಟುಗಿದಾನೆಗಳನಡೆ
ಗೆಡಹಿದವು ಗರಿ ಸಹಿತ ಹಾಯ್ದವು ಹಯದ ಹೊಟ್ಟೆಯಲಿ ॥37॥

೦೩೮ ಕರುಳ ಬಾಯಲಿ ...{Loading}...

ಕರುಳ ಬಾಯಲಿ ಕಾರಿ ಕಾಲಾ
ಳೊರಳಿ ಕೆಡೆದುದು ಬೋಳೆಯಂಬುಗ
ಳರಿಯೆ ಸಮಸೀಳಾಗಿ ಬಿದ್ದುವು ಗಜದ ಹೋಳುಗಳು
ಕೊರಳು ಹರಿದೊರೆವೆದ್ದ ರಕುತದ
ಹೊರಳಿಗಳ ಹೊನಲಿನಲಿ ಮುಳುಗಿತು
ತುರಗರಥದಳರಾಜಿ ಹೊಸ ಕುಮ್ಮರಿಯ ಹೋಲಿಸಿತು ॥38॥

೦೩೯ ಹರಿಗೆ ಖಣ್ಡಿಸಿ ...{Loading}...

ಹರಿಗೆ ಖಂಡಿಸಿ ಜೋಡು ಸೀಸಕ
ಜರಿದು ಬಲುದೋಳುಡಿದು ಗೋಣರೆ
ಹರಿದು ನಿಟ್ಟೆಲು ಮುರಿದು ತೊಡೆಯರೆಗಡಿದು ತಲೆಯೊಡೆದು
ನರಹರಿದು ಕರುಳೊಕ್ಕು ನೆಣನು
ಬ್ಬರಿಸಿ ಕಾಳಿಜ ಹಾಯ್ದು ನೆತ್ತರು
ಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ ॥39॥

೦೪೦ ಮುನ್ದೆ ಕವಿವಮ್ಬುಗಳು ...{Loading}...

ಮುಂದೆ ಕವಿವಂಬುಗಳು ಸುಭಟರ
ಕೊಂದು ಬಿದ್ದವು ಮತ್ತೆ ಬಳಿಯಲಿ
ಬಂದವಕೆ ಗುರಿಯಿಲ್ಲ ಹೇಳುವೆನೇನನದ್ಭುತವ
ಒಂದು ಗುರಿಗೆರಡಂಬ ತೊಡಬೇ
ಡೆಂದು ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳೆಲೆ ಜನಮೇಜಯ ಕ್ಷಿತಿಪ ॥40॥

೦೪೧ ಹಿಕ್ಕಿದವು ಹಯಬಲದ ...{Loading}...

ಹಿಕ್ಕಿದವು ಹಯಬಲದ ಸುಭಟರ
ನೊಕ್ಕಿ ತೂರಿದವಾನೆಗಳ ಸಾ
ಲಿಕ್ಕಿ ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ
ಮುಕ್ಕಿದವು ಮಲೆತವರ ಮಾಂಸವ
ನಿಕ್ಕಿದವು ದ್ವಿಜಗಣಕೆ ಛತ್ರವ
ನಿಕ್ಕಿದವು ದಿಗುವಳೆಯದಲಿ ರಣಧೀರನಂಬುಗಳು ॥41॥

೦೪೨ ಒಗ್ಗೊಡೆಯದೌಕಿದ ಮಹೀಶರು ...{Loading}...

ಒಗ್ಗೊಡೆಯದೌಕಿದ ಮಹೀಶರು
ಮುಗ್ಗಿದರು ಮುನ್ನಾಳ ಮೇಳದ
ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರೊಡಲುಗಳ
ನುಗ್ಗುನುಸಿಯಾಯ್ತತಿರಥರು ಗಜ
ಮೊಗ್ಗರದ ಮೊನೆ ಮುರಿದು ಕಾಲನ
ಸಗ್ಗಳೆಯ ಸೆಳೆದಂತೆ ಸುರಿದವು ರಕ್ತ ಧಾರೆಗಳು ॥42॥

೦೪೩ ಕಾಲದಲಿ ಪರಿಪಕ್ವವಾದ ...{Loading}...

ಕಾಲದಲಿ ಪರಿಪಕ್ವವಾದ ವಿ
ಶಾಲಿತ ಸ್ಥಾವರದ ಜಂಗಮ
ಜಾಲವನು ಕಾಲಾಗ್ನಿ ಕವಿಕವಿದಟ್ಟಿ ಸುಡುವಂತೆ
ಮೇಲು ಮೇಲೊಡಗವಿವ ಬಾಣ
ಜ್ವಾಲೆಯಲಿ ಕುರುಸೈನ್ಯ ಕಾನನ
ಮಾಲೆಯನು ಕಲಿಪಾರ್ಥ ಪಾವಕನುರುಹಿದನು ಮುಳಿದು ॥43॥

೦೪೪ ಯಾವ ಬಿಲ್ಲಾಳಾವ ...{Loading}...

ಯಾವ ಬಿಲ್ಲಾಳಾವ ಲಾಘವ
ದಾವ ಗಾಡಿಕೆ ಯಾವ ಚಳಕವ
ದಾವ ಶರ ಸಂಧಾನವಾವ ವಿಹಾರವಾವ ಪರಿ
ರಾವಣನೊಳಿಂದ್ರಾರಿ ರಾಘವ
ದೇವ ಲಕ್ಷ್ಮಣರಲ್ಲಿ ಕಾಣೆನಿ
ದಾವ ಧನು ಶರವಿದ್ಯೆ ಮಝ ಭಾಪೆಂದನಾ ಹನುಮ ॥44॥

೦೪೫ ಕಾಣಬಾರದು ಬಿಡುವ ...{Loading}...

ಕಾಣಬಾರದು ಬಿಡುವ ಹೂಡುವ
ಕೇಣವನು ಪರಮಾಣು ಪುಂಜವ
ಕಾಣವೇ ಕಣ್ಣುಗಳು ನಮ್ಮವು ಮತ್ರ್ಯರಾಲಿಗಳೆ
ಜಾಣಪಣವಿದು ಶಿವ ಸುದರ್ಶನ
ಪಾಣಿಗಳಿಗಹುದಮರಪತಿ ಪದ
ದಾಣೆ ಹುಸಿಯಲ್ಲೆನುತ ಬೆರಗಾಯಿತ್ತು ಸುರಕಟಕ ॥45॥

೦೪೬ ಏರುವಡೆದರು ಕೆಲರು ...{Loading}...

ಏರುವಡೆದರು ಕೆಲರು ಕೆಲರಸು
ಸೂರೆಯೋದುದು ಮತ್ತೆ ಕೆಲರೆದೆ
ಡೋರುಗಳ ಪೂರಾಯ ಗಾಯದಲುಸುರ ತೆಗೆಬಗೆಯ
ಕಾರಿದರು ರಕ್ತವನು ಸಗ್ಗಕೆ
ಗೂರು ಮಾರಾಡಿದರು ತಲೆಗಳ
ಹೇರಿದರು ಹರಣವನುವೊಟ್ಟಿಗೆ ಕಾಲನರಮನೆಗೆ ॥46॥

೦೪೭ ಚೆಲ್ಲಿ ಹೋಯಿತು ...{Loading}...

ಚೆಲ್ಲಿ ಹೋಯಿತು ಕೆಲಕೆ ಕೆಲಬರು
ಬಿಲ್ಲ ಬಿರುಕೋಲುಗಳ ಬಿಸುಟರು
ಗೆಲ್ಲಗೆಡೆದರು ಕೆಲರು ಪಾರ್ಥನ ಕೋಲ ತೋಹಿನಲಿ
ಮೆಲ್ಲ ಮೆಲ್ಲನೆ ಸರಿವ ಕೌರವ
ಮಲ್ಲನನು ಕಂಡಟ್ಟಿದನು ತುರು
ಗಳ್ಳ ಹೋಗದಿರೆನುತ ಮೂದಲಿಸಿದನು ಕಲಿಪಾರ್ಥ ॥47॥

೦೪೮ ಕಾಯಲಾಪರೆ ಕರೆಯಿರಾ ...{Loading}...

ಕಾಯಲಾಪರೆ ಕರೆಯಿರಾ ಕ
ರ್ಣಾಯತಾಸ್ತ್ರರನಕಟ ಕೌರವ
ರಾಯ ಸಿಲುಕಿದನೆಲ್ಲಿ ಭೀಷ್ಮ ದ್ರೋಣ ಕೃಪರೆನುತ
ಬಾಯ ಬಿಡೆ ಕುರುಸೇನೆ ಗುರು ಗಾಂ
ಗೇಯ ಶಕುನಿ ವಿಕರ್ಣ ಕೃಪ ರಾ
ಧೇಯ ಸೈಂಧವ ಚಿತ್ರಸೇನಾದಿಗಳು ಜೋಡಿಸಿತು ॥48॥

೦೪೯ ಇತ್ತ ತುರುಗಳ ...{Loading}...

ಇತ್ತ ತುರುಗಳ ಬಿಸುಟು ರಾಯನ
ತೆತ್ತಿಗರು ತಲ್ಲಣಿಸಿ ಹಾಯ್ದರು
ಹೊತ್ತಿದವು ಮುಸುಡುಗಳ ಸಂಗರ ವಿಜಯ ಗರ್ವಿತರ
ಸುತ್ತ ಗೋವರ ಸನ್ನೆಯಲಿ ಪುರ
ದತ್ತ ಮುಂದಾದವು ಪಶುವ್ರಜ
ವುತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ ॥49॥

೦೫೦ ಬಿಗಿದ ಕೆಚ್ಚಲ ...{Loading}...

ಬಿಗಿದ ಕೆಚ್ಚಲ ತೊರೆದೊಗುವ ಹಾ
ಲುಗಳ ಮಿಗೆ ಸೂಳೆದ್ದ ಬಾಲವ
ಮೊಗ ನೆಗಹಿ ದೆಸೆದೆಸೆಯ ನೋಡುತ ಬೆಚ್ಚಿ ಬಿರುವರಿವ
ಅಗಿದು ಸರಳಿಸಿ ನಿಲುವ ಹೊಸಬರ
ಸೊಗಡಿಗವ್ವಳಿಸುತ್ತ ಗೋವರು
ತೆಗೆದ ಪಥದಲಿ ತೆಕ್ಕೆವರಿದವು ಹಿಂಡು ಹಿಂಡಿನಲಿ ॥50॥

೦೫೧ ಕೆಲವು ಕಡೆಗನ್ದಿಗಳು ...{Loading}...

ಕೆಲವು ಕಡೆಗಂದಿಗಳು ಬಾಲದ
ಬಳಿಗೆ ಮೂಗಿಟ್ಟಡಿಗಡಿಗೆ ಮನ
ನಲಿದು ಮೋರೆಯನೆತ್ತಿ ಸುಕ್ಕಿಸಿ ಮತ್ತೆ ಹರಿ ಹರಿದು
ಮಲೆತು ಕಾಲಲಿ ನೆಲನ ಕೆರೆದ
ವ್ವಳಿಸಿ ಮತ್ತೊಂದಿದಿರುವರೆ ಬಲು
ಸಲಗನೀಡಿರಿದಾಡುತಿರ್ದುದು ಹಿಂಡು ಹಿಂಡಿನಲಿ ॥51॥

೦೫೨ ತಿರುಗಿ ಕೆನ್ದೂಳಿಡುತ ...{Loading}...

ತಿರುಗಿ ಕೆಂದೂಳಿಡುತ ತುರುಗಳು
ಪುರಕೆ ಹಾಯ್ದವು ನಲವು ಮಿಗಲು
ತ್ತರ ಕಿರೀಟಿಗಳಾಂತುಕೊಂಡರು ಮತ್ತೆ ಕಾಳಗವ
ಅರಸು ಮೋಹರ ಮುರಿದು ಹರಿಬವ
ಮರಳಿಚುವ ಮಿಡುಕುಳ್ಳ ವೀರರ
ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ ॥52॥

+೦೭ ...{Loading}...