೦೦೦ ಸೂ ಧರಣಿಪತಿ ...{Loading}...
ಸೂ. ಧರಣಿಪತಿ ತಂದಿತ್ತನಾ ದ್ವಿಜ
ನರಣಿಯನು ಬಳಿಕಮಲ ಧರ್ಮದ
ಸರಣಿಯಿಂದೆತ್ತಿದನು ವನದಲಿ ನಿಜಸಹೋದರರ
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಧರ್ಮರಾಜನು ಬ್ರಾಹ್ಮಣನಿಗೆ ಅರಣಿಯನ್ನು ತಂದು ಕೊಟ್ಟನು. ಅನಂತರ ಧರ್ಮಜಿಜ್ಞಾಸೆಯ ಮೂಲಕ ಸರೋವರದಿಂದ ತಮ್ಮಂದಿರನ್ನು ಮೇಲೆತ್ತಿದನು.
ಪದಾರ್ಥ (ಕ.ಗ.ಪ)
ಅರಣಿ - ಬನ್ನಿ ಮರದ ಅಥವಾ ಅರಳಿ ಮರದ ಕೊರಡು
ಮೂಲ ...{Loading}...
ಸೂ. ಧರಣಿಪತಿ ತಂದಿತ್ತನಾ ದ್ವಿಜ
ನರಣಿಯನು ಬಳಿಕಮಲ ಧರ್ಮದ
ಸರಣಿಯಿಂದೆತ್ತಿದನು ವನದಲಿ ನಿಜಸಹೋದರರ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ರಾಮಾಯಣವನಾ ಮುನಿ
ಹೇಳಿದನು ಹೂಳಿದನು ಭೂಪನ ಮಾನಸವ್ಯಥೆಯ
ಹೇಳಿದನು ಸಾವಿತ್ರಿಯುನ್ನತ
ಶೀಲವನು ಪತಿಭಕ್ತಿಯಿಂದವೆ
ಕಾಲ ನುಂಗಿದ ಪತಿಯ ಮರಳಿಚಿ ತಂದ ಸಂಗತಿಯ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು ಮಾರ್ಕಂಡೇಯ ಮುನಿಯು ರಾಮಾಯಣವನ್ನು ಹೇಳಿ ಧರ್ಮಜನ ಮಾನಸಿಕ ವ್ಯಥೆಯನ್ನು ಕಳೆದನು. ಹಾಗೆಯೇ ಸಾವಿತ್ರಿಯು ಪತಿಭಕ್ತಿಯಿಂದ ಮರಣ ಹೊಂದಿದ ಗಂಡನನ್ನು ಮರಳಿ ತಂದ ಸಂಗತಿಯನ್ನೂ ಹೇಳಿದನು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ರಾಮಾಯಣವನಾ ಮುನಿ
ಹೇಳಿದನು ಹೂಳಿದನು ಭೂಪನ ಮಾನಸವ್ಯಥೆಯ
ಹೇಳಿದನು ಸಾವಿತ್ರಿಯುನ್ನತ
ಶೀಲವನು ಪತಿಭಕ್ತಿಯಿಂದವೆ
ಕಾಲ ನುಂಗಿದ ಪತಿಯ ಮರಳಿಚಿ ತಂದ ಸಂಗತಿಯ ॥1॥
೦೦೨ ಪತಿ ಭಕುತಿಯುನ್ನತಿಕೆಯಲಿ ...{Loading}...
ಪತಿ ಭಕುತಿಯುನ್ನತಿಕೆಯಲಿ ನಿ
ಷ್ಠತೆಯಲಾ ಸಾವಿತ್ರಿಯಾಕೆಯ
ನುತ ಚರಿತ್ರದವೋಲು ನಿಮ್ಮಯ ದ್ರೌಪದಾದೇವಿ
ಹಿತವನಾಚರಿಪವಳು ವಂಶೋ
ನ್ನತಿಯನುದ್ಧರಿಸುವಳು ನಿಮಗುಪ
ಹತಿಯದೆಲ್ಲಿಯದೆಂದು ಮಾರ್ಕಂಡೇಯ ಮುನಿ ನುಡಿದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸಾವಿತ್ರಿಯು ಪತಿವ್ರತಾಪರಾಯಣೆಯಾಗಿದ್ದಳು. ಅದೇ ರೀತಿ ನಿಮ್ಮ ದ್ರೌಪದಿಯೂ ಕೂಡಾ ಶೀಲಸಂಪನ್ನೆಯಾಗಿದ್ದಾಳೆ. ಇವಳು ನಿಮಗೆ ಹಿತವನ್ನುಂಟುಮಾಡಿ ಕುಲವನ್ನು ಉದ್ಧರಿಸುತ್ತಾಳೆ. ನಿಮಗೆ ಯಾವುದೇ ಕಷ್ಟವಿಲ್ಲ’ ಎಂದನು.
ಟಿಪ್ಪನೀ (ಕ.ಗ.ಪ)
ಸಾವಿತ್ರಿ - ಸಂಕಲ್ಪಶಕ್ತಿಯಿಂದ ದೃಢಚಿತ್ರದಿಂದ ನಿರತರ ಪರಿಶ್ರಮದಿಂದ ಹೆಣ್ಣು ಎಂತ ಕಠಿಣ ಪರಿಸ್ಥಿತಿಯನ್ನೂ ಮಾರ್ಪಡಿಸಿಕೊಳ್ಳಬಲ್ಲಳು ಎಂಬುದಕ್ಕೆ ಸಾವಿತ್ರಿ ಸತ್ಯವಾನದ ಹಳೆಯ ಕಥೆ ಸಾಕ್ಷಿಯಾಗುತ್ತದೆ. ತುಂಬ ಪ್ರಾಚೀನವಾದ ಈ ಕಥೆಯನ್ನು ಅರಣ್ಯಪರ್ವದಲ್ಲಿ ತೀರ್ಥಯಾತ್ರೆ ಮಾಡುತ್ತಿದ್ದ ಧರ್ಮರಾಯನಿಗೆ ಮಾರ್ಕಂಡೇಯರು ಹೇಳುತ್ತಾರೆ.
‘‘ಪತಿವ್ರತಾಯಾ ಮಹಾತ್ಮ್ಯಂ ಸಾವಿತ್ರ್ಯಾಃ’’ ಎಂಬ ಮಾತು ಪ್ರಸಿದ್ಧವಾಗಿದೆ. ಅರವಿಂದರು ಈಕೆಯ ಬಗೆಗೆ ಒಂದು ಮಹಾಕಾವ್ಯವನ್ನೇ ರಚಿಸಿದ್ದಾರೆ.
ಮಾದ್ರದೇಶದ ರಾಜನಾದ ಅಶ್ವಪತಿ ಮಾಲವರಾಜಕುಮಾರಿ ಸತ್ಯವತಿಯನ್ನು ಮದುವೆಯಾಗಿದ್ದ. ಈಕೆಗೆ ಮಾಲವಿ ಎಂಬ ಹೆಸರೂ ಇತು. ಆದರೆ ಈ ದಂಪತಿಗಳಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ತುಂಬ ಶ್ರದ್ಧೆಯಿಂದ ಹದಿನೆಂಟು ವರ್ಷಗಳಷ್ಟು ದೀರ್ಘಕಾಲ ಸಾವಿತ್ರೀದೇವಿಯ ಆರಾಧನೆ ಮಾಡಿದರು. ರಾಜನು ಒಂದು ಲಕ್ಷ ಆಹುತಿಗಳಿಂದ ಹೋಮಮಾಡಿ ಸಾವಿತ್ರಿದೇವಿಯನ್ನು ಒಲಿಸಿಕೊಂಡ. ಅವಳು ಪ್ರಸನ್ನಳಾಗಿ ಹೇಳಿದಳು: ‘‘ರಾಜ! ನಿನಗೆ ತೇಜಸ್ವಿನಿಯಾದ ಒಬ್ಬಳು ಮಗಳು ಹುಟ್ಟಿ ವಂಶಕ್ಕೇ ಹೆಸರು ತರುತ್ತಾಳೆ.’’
ಹಾಗೆ ಹುಟ್ಟಿದ ಮಗಳಿಗೂ ತಂದೆ ಸಾವಿತ್ರಿ ಎಂದೇ ಹೆಸರಿಟ್ಟ. ಆ ರಾಜಪುತ್ರಿ ಮಹಾಸುಂದರಿಯಾಗಿದ್ದರೂ ಅವಳನ್ನು ಮದುವೆಯಾಗಲು ಯಾವ ರಾಜಪುತ್ರನೂ ಮುಂದೆ ಬರಲಿಲ್ಲ. (ಬಹುಶಃ ಒಂದು ವರ್ಷಕ್ಕೆ ಪತಿವಿಯೋಗ ಎಂದು ಯಾರೋ ಜೋಯಿಸರು ಹೇಳಿದ್ದರೋ ಏನೋ!) ಆಗ ರಾಜನು ಒಬ್ಬ ಮಂತ್ರಿಯನ್ನು ಜೊತೆ ಮಾಡಿಕೊಟ್ಟು, ಒಂದು ಸುವರ್ಣ ರಥದಲ್ಲಿ ಆಕೆಯನ್ನು ಕುಳ್ಳಿರಿಸಿ ‘‘ನಿನ್ನ ಪತಿಯನ್ನು ನೀನೇ ಆಯ್ದುಕೊಂಡು ಬಾ’’ ಎಂದು ಹೇಳಿದ. ಅವಳು ರಥದಲ್ಲಿ ವರಾನ್ವೇಷಣೆ ಮಾಡುತ್ತಾ ಹಲವಾರು ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಊರಿಗೆ ಹಿಂದಿರುಗಿದಳು. ಸತ್ಯವಾನನನ್ನು ವರನಾಗಿ ಆಯ್ದುಕೊಂಡಿರುವ ವಿಷಯ ತಿಳಿಸಿದಳು. ವಾಸ್ತವವಾಗಿ ಅವನೂ ರಾಜಕುಮಾರ. ಆದರೆ ಅವನ ತಂದೆ ಕುರುಡನಾಗಿದ್ದರಿಂದ ಪಕ್ಕದ ಸೀಮೆಯ ರಾಜನು ರಾಜ್ಯವನ್ನು ಕಿತ್ತುಕೊಂಡು ಇವರನ್ನೆಲ್ಲ ಕಾಡಿಗೆ ಓಡಿಸಿದ್ದನಂತೆ. ಇಂಥವನಿಗೆ ಹೇಗೆ ಮಗಳನ್ನು ಕೊಡುವುದು ಎಂಬ ಚಿಂತೆ ಕಾಡಿದರೂ ಮಗಳ ಸಂಕಲ್ಪವನ್ನು ಕಂಡು ತಂದೆ ಒಪ್ಪಿ ಮದುವೆ ಮಾಡಿಕೊಟ್ಟ.. ಸತ್ಯವಾನನ ಆಯುಷ್ಯವು ಇನ್ನು ಒಂದೇ ವರ್ಷ ಎಂದು ನಾರದರು ತಿಳಿಸಿದರೂ ಸಾವಿತ್ರಿ ತನ್ನ ನಿಶ್ಚಯವನ್ನು ಬದಲಿಸಲಿಲ್ಲವಾದ್ದರಿಂದ ಅಶ್ವಪತಿಗೆ ಮಗಳನ್ನು ಸತ್ಯವಾನನಿಗೆ ಮದುವೆ ಮಡಿಕೊಡದೆ ಬೇರೆ ದಾರಿ ಇರಲಿಲ್ಲ.
ಸತ್ಯವಾನ ಮೇಧಾವಿ, ಅಶ್ವಪ್ರಿಯ ಮಣ್ಣಿನಲ್ಲೂ ಕುದುರೆಗಳನ್ನು ಸೃಷ್ಟಿಸುವ ಶಕ್ತಿ ಅವನಿಗಿದ್ದುದರಿಂದ ಅವನನ್ನು ಚಿತ್ರಾಶ್ವ ಎಂದರೂ ಕರೆಯುತ್ತಿದ್ದರು.
ಕಾಡಿನಲ್ಲಿ ಅಚ್ಚುಕಟ್ಟಾಗಿ ಅತ್ತೆ ಮಾವಂದಿರ ಸೇವೆ ಮಾಡಿಕೊಂಡಿದ್ದ ಸಾವಿತ್ರಿ ಸತ್ಯವಾನನ ಸಾವಿನ ದಿನ ಅವನನ್ನು ಕಾಡಿಗೆ ಹಿಂಬಾಲಿಸಿದಳು. ಸೌದೆ ಒಡೆಯುತ್ತ ಆಯಾಸದಿಂದ ಸಾವಿತ್ರಿಯ ತೊಡೆಯಮೇಲೆ ಮಲಗಿದ ಸತ್ಯವಾನನ ಪಕ್ಕದಲ್ಲಿ ಯಮರಾಜ ನಿಂತಿದ್ದ. ಸತ್ಯವಾನನು ಮಹಿಮಾವಂತನಾಗಿದ್ದುದರಿಂದ ಜೀವವನ್ನು ಕೊಂಡೊಯ್ಯಲು ಸೇವಕರನ್ನು ಕಳಿಸದೆ ಸ್ವಯಂ ಯಮನೇ ಬಂದಿದ್ದ.
ಸಾವಿತ್ರಿ ಯಮನನ್ನು ಹಿಂಬಾಲಿಸಿದ್ದು, ಯಮನಿಗೂ ಅವಳಿಗೂ ನಡೆದ ಸಚಿವಾದ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಯಮನಿಂದ ನಾಲ್ಕು ವರಗಳನ್ನು ಪಡೆದ ಸಾವಿತ್ರಿ ತನ್ನ ಮಾವನಿಗೆ ದೃಷ್ಟಿ ಶಕ್ತಿ ಹಿಂದಕ್ಕೆ ಬರಲಿ, ರಾಜ್ಯ ಮರಳಿ ಲಭಿಸಲಿ, ತನ್ನ ತಂದೆಗೆ ಮತ್ತೆ ಸಂತಾನವಾಗಲಿ, ನನಗೂ ಒಂದು ಮಗುವಾಗಲಿ ಎಂಬ ನಾಲ್ಕು ಬೇಡಿಕೆಗಳನ್ನು ಮುಂದಿರಿಸಿದಳು. ಸತ್ಯವಾನನ ಪ್ರಾಣವೊಂದನ್ನು ಬಿಟ್ಟು ಏನು ಬೇಕಾದರೂ ಕೇಳು ಕೊಡುತ್ತೇನೆ ಎಂದು ಮಾತುಕೊಟ್ಟಿದ್ದ ಯಮ ಒಂದಲ್ಲ ನಿನಗೆ ನೂರು ಮಕ್ಕಳಾಗಲಿ ಉತ್ಸಾಹದಲ್ಲಿ ಹೇಳಿ ಕೊನೆಗೆ ತನ್ನ ಮಾತಿಗೇ ತಾನೇ ಸಿಕ್ಕಿಕೊಂಡು ಸತ್ಯವಾನನನ್ನು ಬದುಕಿಸಬೇಕಾಯಿತು. ಯಮಸರ್ಪಕ್ಕೆ ಅವಳು ಜೀರ್ಣಿಸಿಕೊಳ್ಳಲಾಗದ ಕಪ್ಪೆಯಾದಳು.
‘ನಂಬು, ನಿನ್ನನೆ ನಂಬು,
ಮಂತ್ರ ದೀಕ್ಷತೆಗೆ ಗುರಿ ತಪ್ಪದೆಂದೂ’
ಎಂಬ ಕುವೆಂಪು ಮಾತಿಗೆ ಭಾಷ್ಯ ಬರದಂತಿದೆ ಸಾವಿತ್ರಿಯ ಜೀವನ.
ಮೂಲ ...{Loading}...
ಪತಿ ಭಕುತಿಯುನ್ನತಿಕೆಯಲಿ ನಿ
ಷ್ಠತೆಯಲಾ ಸಾವಿತ್ರಿಯಾಕೆಯ
ನುತ ಚರಿತ್ರದವೋಲು ನಿಮ್ಮಯ ದ್ರೌಪದಾದೇವಿ
ಹಿತವನಾಚರಿಪವಳು ವಂಶೋ
ನ್ನತಿಯನುದ್ಧರಿಸುವಳು ನಿಮಗುಪ
ಹತಿಯದೆಲ್ಲಿಯದೆಂದು ಮಾರ್ಕಂಡೇಯ ಮುನಿ ನುಡಿದ ॥2॥
೦೦೩ ಮಾನನಿಧಿ ಸಾವಿತ್ರಿಯೌಪಾ ...{Loading}...
ಮಾನನಿಧಿ ಸಾವಿತ್ರಿಯೌಪಾ
ಖ್ಯಾನವನು ಕೇಳಿದನು ಚಿತ್ತ
ಗ್ಲಾನಿಯನು ಬೀಳ್ಕೊಟ್ಟನಮಳೋತ್ಸಾಹ ಭಾವದಲಿ
ಕಾನನಾನುಭವಕ್ಕೆ ಕಡೆಯಿ
ನ್ನೇನು ನಮಗೆನುತತುಳ ಹರುಷಾ
ನೂನ ಕುಂತೀತನಯರಿದ್ದರು ಪರ್ಣಶಾಲೆಯಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಮಾನವಂತೆಯಾದ ಸಾವಿತ್ರೀ ಉಪಾಖ್ಯಾನವನ್ನು ಕೇಳಿ ಚಿತ್ತಗ್ಲಾನಿಯನ್ನು ಕಳೆದು ಉತ್ಸಾಹದಿಂದಿದ್ದರು. ಇನ್ನೇನು ಅರಣ್ಯವಾಸ ಮುಗಿಯಿತು ಎಂಬ ಅತಿಶಯವಾದ ಸಂತೋಷದಲ್ಲಿ ಇದ್ದರು.
ಮೂಲ ...{Loading}...
ಮಾನನಿಧಿ ಸಾವಿತ್ರಿಯೌಪಾ
ಖ್ಯಾನವನು ಕೇಳಿದನು ಚಿತ್ತ
ಗ್ಲಾನಿಯನು ಬೀಳ್ಕೊಟ್ಟನಮಳೋತ್ಸಾಹ ಭಾವದಲಿ
ಕಾನನಾನುಭವಕ್ಕೆ ಕಡೆಯಿ
ನ್ನೇನು ನಮಗೆನುತತುಳ ಹರುಷಾ
ನೂನ ಕುಂತೀತನಯರಿದ್ದರು ಪರ್ಣಶಾಲೆಯಲಿ ॥3॥
೦೦೪ ಹಿಙ್ಗಿದವು ಹನ್ನೊನ್ದುವರೆ ...{Loading}...
ಹಿಂಗಿದವು ಹನ್ನೊಂದುವರೆ ವರು
ಷಂಗಳಟವೀ ತಟದೊಳಿರಲರು
ದಿಂಗಳೊಳಗೊಂದಾದುದಾಪತ್ತಾ ಮಹೀಶರಿಗೆ
ತುಂಗ ವಿಕ್ರಮನಾ ಮುನೀಶ್ವರ
ಸಂಗತಿಯ ಸೊಗಸಿನಲಿ ಬಹು ದಿವ
ಸಂಗಳನು ನೂಕಿದನು ನೃಪತಿ ಪಲಾಶ ಶಾಲೆಯಲಿ ॥4॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ವನವಾಸದಲ್ಲಿ ಹನ್ನೊಂದೂವರೆ ವರ್ಷ ಕಳೆಯಿತು. ಹದಿನೈದು ದಿನದೊಳಗೆ ಮತ್ತೊಂದು ಆಪತ್ತು ಸಂಭವಿಸಿತು. ಧರ್ಮರಾಜನು ಮುನಿಯು ಹೇಳಿದ ಕಥನಗಳನ್ನು ಸ್ಮರಿಸುತ್ತಾ ಅನೇಕ ದಿನಗಳನ್ನು ಪರ್ಣಶಾಲೆಯಲ್ಲಿ ಕಳೆದನು.
ಮೂಲ ...{Loading}...
ಹಿಂಗಿದವು ಹನ್ನೊಂದುವರೆ ವರು
ಷಂಗಳಟವೀ ತಟದೊಳಿರಲರು
ದಿಂಗಳೊಳಗೊಂದಾದುದಾಪತ್ತಾ ಮಹೀಶರಿಗೆ
ತುಂಗ ವಿಕ್ರಮನಾ ಮುನೀಶ್ವರ
ಸಂಗತಿಯ ಸೊಗಸಿನಲಿ ಬಹು ದಿವ
ಸಂಗಳನು ನೂಕಿದನು ನೃಪತಿ ಪಲಾಶ ಶಾಲೆಯಲಿ ॥4॥
೦೦೫ ವಿಮಲ ವಾನಪ್ರಸ್ಥ ...{Loading}...
ವಿಮಲ ವಾನಪ್ರಸ್ಥ ಜನದಾ
ಶ್ರಮದೊಳಗೆ ಸಾರಂಗ ಮೃಗವಿಳೆ
ಯಮರನೌಪಾಸನದ ಸಾಧನದರಣಿಯನು ಕೊಂಡು
ಕಮಲಸಖನುದಯದಲಿ ಸಂಧ್ಯಾ
ರಮಣಿಯಭಿವಂದನೆಗೆ ಸನ್ಮುನಿ
ಸಮಿತಿ ಹಿಂಗಿದ ಹಿಂದೆ ಕೊಂಡೋಡಿತು ವನಾಂತರಕೆ ॥5॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠವಾದ ವಾನಪ್ರಸ್ಥರು ಇದ್ದ ಆಶ್ರಮದಲ್ಲಿ ಸೂರ್ಯೋದಯದ ಹೊತ್ತಿನಲ್ಲಿ ಸಂಧ್ಯಾವಂದನೆಗೆಂದು ಮುನಿಗಳು ಸಿದ್ಧರಾದಾಗ, ಜಿಂಕೆಯೊಂದು ಬಂದು, ಬ್ರಾಹ್ಮಣನೋರ್ವನು ಉಪಾಸನೆಗೆ ತಂದಿಟ್ಟ ಅರಣಿಯನ್ನು ಎತ್ತಿಕೊಂಡು ಕಾಡಿನೊಳಗೆ ಓಡಿತು.
ಮೂಲ ...{Loading}...
ವಿಮಲ ವಾನಪ್ರಸ್ಥ ಜನದಾ
ಶ್ರಮದೊಳಗೆ ಸಾರಂಗ ಮೃಗವಿಳೆ
ಯಮರನೌಪಾಸನದ ಸಾಧನದರಣಿಯನು ಕೊಂಡು
ಕಮಲಸಖನುದಯದಲಿ ಸಂಧ್ಯಾ
ರಮಣಿಯಭಿವಂದನೆಗೆ ಸನ್ಮುನಿ
ಸಮಿತಿ ಹಿಂಗಿದ ಹಿಂದೆ ಕೊಂಡೋಡಿತು ವನಾಂತರಕೆ ॥5॥
೦೦೬ ಎಲೆಲೆ ಮೃಗವರಣಿಯನು ...{Loading}...
ಎಲೆಲೆ ಮೃಗವರಣಿಯನು ವಂಚಿಸಿ
ಕಳೆದುದೋ ಕಾಳಾಯ್ತೆನುತ ತ
ಲ್ಲಣಿಸಿದಳು ನಿಜಪತಿಯ ಭಯದಲಿ ಮುನಿಯ ವಧುವಂದು
ಹೊಳೆಯ ಸಂಧ್ಯಾಸಾಧುಗಳು ಕಳ
ವಳಿಸಲಾ ದ್ವಿಜನರಿದು ಪಾರ್ಥಿವ
ರಿಳೆಯ ಬಿಟ್ಟರಲಾಯೆನುತ ಹರಿತಂದನಾಶ್ರಮಕೆ ॥6॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಬ್ರಾಹ್ಮಣನ ಹೆಂಡತಿಯು - ‘ಎಲಾ, ಜಿಂಕೆಯು ಅರಣಿಯನ್ನು ಕೊಂಡೋಡಿತಲ್ಲಾ ! ಅನ್ಯಾಯವಾಯಿತಲ್ಲಾ ?’ ಎಂದುಕೊಂಡು ಪತಿಯು ಬೈಯ್ಯುವನೇನೋ ಎಂಬ ಭೀತಿಯಿಂದ ತಲ್ಲಣಗೊಂಡಳು. ನದೀ ಸ್ನಾನದಲ್ಲಿದ್ದ ಮುನಿಗಳೆಲ್ಲಾ ಕಳವಳಗೊಂಡರು. ಇದನ್ನು ತಿಳಿದ ಬ್ರಾಹ್ಮಣನು - ‘ಕ್ಷತ್ರಿಯರು ಭೂಮಿಯನ್ನು ಪಾಲಿಸುತ್ತಿಲ್ಲವೇ ?’ ಎಂದು ಆಶ್ರಮಕ್ಕೆ ಓಡಿ ಬಂದನು.
ಮೂಲ ...{Loading}...
ಎಲೆಲೆ ಮೃಗವರಣಿಯನು ವಂಚಿಸಿ
ಕಳೆದುದೋ ಕಾಳಾಯ್ತೆನುತ ತ
ಲ್ಲಣಿಸಿದಳು ನಿಜಪತಿಯ ಭಯದಲಿ ಮುನಿಯ ವಧುವಂದು
ಹೊಳೆಯ ಸಂಧ್ಯಾಸಾಧುಗಳು ಕಳ
ವಳಿಸಲಾ ದ್ವಿಜನರಿದು ಪಾರ್ಥಿವ
ರಿಳೆಯ ಬಿಟ್ಟರಲಾಯೆನುತ ಹರಿತಂದನಾಶ್ರಮಕೆ ॥6॥
೦೦೭ ಎಲೆ ಯುಧಿಷ್ಠಿರ ...{Loading}...
ಎಲೆ ಯುಧಿಷ್ಠಿರ ದೋಷವಿದು ನಿ
ನ್ನಳವಿಗೈದುವುದರಣಿಯನು ಮೃಗ
ವೆಳೆದು ಕೊಂಡೀ ಹೊದರ ಹೊಕ್ಕುದು ಬಹಳ ಕಾನನದ
ಅಳಿದುದನ್ವಾಧಾನವಿತರರ
ಹಳಿವಿಗಾನೊಳಗಾದೆನೆನೆ ಮುನಿ
ತಿಲಕನೌಪದ್ರವವನರಿದವನೀಶ ಹೊರವಂಟ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಧರ್ಮರಾಜ, ನಿನ್ನ ಸಾಮಥ್ರ್ಯಕ್ಕೆ ಕುಂದುಂಟಾಗುತ್ತಿದೆ. ಜಿಂಕೆಯು ಅರಣಿಯನ್ನು ಹೊತ್ತುಕೊಂಡು ಕಾಡಿನೊಳಗೆ ಓಡಿದುದರಿಂದ ನಮ್ಮ ಯಾಗದ ಅನ್ವಾಧಾನ ವಿಧಿ ಕೆಟ್ಟುಹೋಯಿತು. ಬೇರೆಯವರ ನಿಂದೆಗೆ ನಾನೊಳಗಾದೆ’ ಎಂದು ಮುನಿಯು ಹೇಳಲು ಅವನ ತೊಂದರೆಯನ್ನು ತಿಳಿದು ನೃಪತಿ ಹೊರಟನು.
ಪದಾರ್ಥ (ಕ.ಗ.ಪ)
ಅಳವಿ-ಸಾಮಥ್ರ್ಯ
ಅನ್ವಾಧಾನ - ಅಗ್ನಿ ಸಂಧಾನ
ಮೂಲ ...{Loading}...
ಎಲೆ ಯುಧಿಷ್ಠಿರ ದೋಷವಿದು ನಿ
ನ್ನಳವಿಗೈದುವುದರಣಿಯನು ಮೃಗ
ವೆಳೆದು ಕೊಂಡೀ ಹೊದರ ಹೊಕ್ಕುದು ಬಹಳ ಕಾನನದ
ಅಳಿದುದನ್ವಾಧಾನವಿತರರ
ಹಳಿವಿಗಾನೊಳಗಾದೆನೆನೆ ಮುನಿ
ತಿಲಕನೌಪದ್ರವವನರಿದವನೀಶ ಹೊರವಂಟ ॥7॥
೦೦೮ ಜಾಳಿಸಿದ ಹದವಿಲ್ಲು ...{Loading}...
ಜಾಳಿಸಿದ ಹದವಿಲ್ಲು ಮುಮ್ಮೊನೆ
ಬೋಳೆಗಳ ನಿಡುಗುಂಡುಗಳ ಬಡಿ
ಕೋಲುಗಳನೆಕ್ಕಡವನುರು ಪಾರಿವದ ಕುಪ್ಪಸವ
ಮೇಳವಿಸಿ ಹೊರವಂಟನವನೀ
ಪಾಲ ಬೇಂಟೆಗೆ ಮೃಗದ ಹೆಜ್ಜೆಯ
ಮೇಲೆ ಹೆಜ್ಜೆಯ ನಡೆಸುವನು ತನ್ನನುಜರೊಡಗೂಡಿ ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲು ಬಾಣಗಳು, ಗುಂಡು, ಬಡಿಗೆಕೋಲು, ಮುಂತಾದ ಆಯುಧಗಳನ್ನೂ ಎಕ್ಕಡ, ಪಾರಿವಾಳದ ಪುಕ್ಕಗಳ ಬಟ್ಟೆಯನ್ನೂ ಧರಿಸಿ ಸೋದರರೊಂದಿಗೆ ಧರ್ಮಜನು ಜಿಂಕೆಯನ್ನು ಅರಸುತ್ತಾ ಬೇಟೆಯಾಡುತ್ತಾ ಹೊರಟನು.
ಪದಾರ್ಥ (ಕ.ಗ.ಪ)
ಪಾರಿಯ - ಬಣ್ಣದ ಬಟ್ಟೆ ( ಹಸಿರು)- ಪಾರಿವ
ಪಾಠಾನ್ತರ (ಕ.ಗ.ಪ)
ಪಾರಿಯ - ಪಾರಿವ ಪ್ರಯೋಗ ಪಂಪ :
ಅರಣ್ಯ ಪರ್ವ ಸಂಧಿ - 5, ಪದ್ಯ 28
ಮೂಲ ...{Loading}...
ಜಾಳಿಸಿದ ಹದವಿಲ್ಲು ಮುಮ್ಮೊನೆ
ಬೋಳೆಗಳ ನಿಡುಗುಂಡುಗಳ ಬಡಿ
ಕೋಲುಗಳನೆಕ್ಕಡವನುರು ಪಾರಿವದ ಕುಪ್ಪಸವ
ಮೇಳವಿಸಿ ಹೊರವಂಟನವನೀ
ಪಾಲ ಬೇಂಟೆಗೆ ಮೃಗದ ಹೆಜ್ಜೆಯ
ಮೇಲೆ ಹೆಜ್ಜೆಯ ನಡೆಸುವನು ತನ್ನನುಜರೊಡಗೂಡಿ ॥8॥
೦೦೯ ತರಣಿಯನ್ವಯನನ್ದು ಮಾಯಾ ...{Loading}...
ತರಣಿಯನ್ವಯನಂದು ಮಾಯಾ
ಹರಿಣನನು ಬೆಂಬತ್ತಿ ವಿಹ್ವಲ
ಕರಣನಾದಂದದಲಿ ಮಹದಾರಣ್ಯ ವಾಸದಲಿ
ಧರಣಿಪತಿ ಬಳಿಸಲಿಸಿ ಮುನಿಪತಿ
ಯರಣಿಯನು ಕೊಂಡೊಯ್ದ ಹುಲು ಮೃಗ
ಸರಣಿಯಲಿ ಸೈವರಿದರಂದಾಕರ್ಣ ಮಾರ್ಗಣರು ॥9॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀರಾಮಚಂದ್ರನು ಮಾಯಾಜಿಂಕೆಯನ್ನು ಬೆನ್ನಟ್ಟಿ ಬಸವಳಿದಂತೆ, ಧರ್ಮರಾಜನೂ ಅರಣ್ಯದೊಳಗೆ ಮುನಿಯ ಅರಣಿಯನ್ನು ಕೊಂಡೊಯ್ದ ಜಿಂಕೆಯನ್ನು ಹುಡುಕುತ್ತಾ ಹೋದನು. ಆಕರ್ಣಾಂತವಾಗಿ ಬಾಣವನ್ನು ಬಿಡಬಲ್ಲ ಯೋಧರು ಮೃಗಗಳನ್ನು ಹುಡುಕಿದರು.
ಪದಾರ್ಥ (ಕ.ಗ.ಪ)
ತರಣಿಯನ್ವಯ - ಸೂರ್ಯವಂಶದ - ಶ್ರೀರಾಮ
ಮೂಲ ...{Loading}...
ತರಣಿಯನ್ವಯನಂದು ಮಾಯಾ
ಹರಿಣನನು ಬೆಂಬತ್ತಿ ವಿಹ್ವಲ
ಕರಣನಾದಂದದಲಿ ಮಹದಾರಣ್ಯ ವಾಸದಲಿ
ಧರಣಿಪತಿ ಬಳಿಸಲಿಸಿ ಮುನಿಪತಿ
ಯರಣಿಯನು ಕೊಂಡೊಯ್ದ ಹುಲು ಮೃಗ
ಸರಣಿಯಲಿ ಸೈವರಿದರಂದಾಕರ್ಣ ಮಾರ್ಗಣರು ॥9॥
೦೧೦ ಇರುಬಿನೊಳಗದೆ ಕುತ್ತು ...{Loading}...
ಇರುಬಿನೊಳಗದೆ ಕುತ್ತು ಹೆಮ್ಮರ
ದುರುಗಳೊಳಗದೆ ತೊಡಚು ಬಾಣವ
ನೆರಗಿ ತಿವಿ ತೋಡಿಟ್ಟೆಯಲಿ ಸಿಡಿವಲೆಯವೊಡ್ಡೆನುತ
ಅರಸಿದರು ನಟ್ಟಡವಿಯಲಿ ಮುಂ
ದುರುಬಿದರು ಬೆಳ್ಳಾರ ಬಲೆಗಳ
ಹರಹಿ ಸೊಪ್ಪಿನ ತೋಹಿನಲಿ ಸಿಲುಕಿಸಿದರಾ ಮೃಗವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಇಕ್ಕಟ್ಟಾದ ಜಾಗದಲ್ಲಿದೆ. ಹೊಡೆ. ಹೆಮ್ಮರದ ಮರೆಯಲ್ಲಿದೆ ತೋಡಿಟ್ಟೆಯಲ್ಲಿ ತಿವಿ. ಬಾಣ ತೊಡು. ಸಿಡಿವಲೆಯನ್ನು ಬೀಸು. ಎನ್ನುತ್ತಾ ಅಡವಿಯ ಮಧ್ಯೆ ಹುಡುಕುತ್ತಾ, ವಿವಿಧ ಬಲೆಗಳನ್ನು ಹರಡಿ, ಎಲೆಗಳ ತೋಟದಲ್ಲಿ ಆ ಜಿಂಕೆಯನ್ನು ಹಿಡಿದರು.
ಪದಾರ್ಥ (ಕ.ಗ.ಪ)
ಇರುಬು - ಇಕ್ಕಟ್ಟಾದ ಜಾಗ
ತೋಡಿಟ್ಟೆ - ಎರಡು ತುದಿಗಳಿರುವ ಈಟಿ
ಸಿಡಿವಲೆ - ಒಂದು ಬಗೆಯ ಬಲೆ
ಮೂಲ ...{Loading}...
ಇರುಬಿನೊಳಗದೆ ಕುತ್ತು ಹೆಮ್ಮರ
ದುರುಗಳೊಳಗದೆ ತೊಡಚು ಬಾಣವ
ನೆರಗಿ ತಿವಿ ತೋಡಿಟ್ಟೆಯಲಿ ಸಿಡಿವಲೆಯವೊಡ್ಡೆನುತ
ಅರಸಿದರು ನಟ್ಟಡವಿಯಲಿ ಮುಂ
ದುರುಬಿದರು ಬೆಳ್ಳಾರ ಬಲೆಗಳ
ಹರಹಿ ಸೊಪ್ಪಿನ ತೋಹಿನಲಿ ಸಿಲುಕಿಸಿದರಾ ಮೃಗವ ॥10॥
೦೧೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಹಿಮಾಂಶು ವಿ
ಶಾಲ ವಂಶಜರಡವಿಯಲಿ ಮುನಿ
ಪಾಲನರಣಿಯನೊಯ್ದ ಮೃಗವನು ಹಿಡಿದರೊಳಬಿದ್ದು
ಮೇಲೆ ತೋರಿತು ಢಗೆ ಮಹೀಶರ
ತಾಳಿಗೆಗಳೊಣಗಿದವು ಬಳಲಿಕೆ
ಯೇಳಿಗೆಯಲಾಸನ್ನ ಲತೆಯಿರುಬಿನಲಿ ಮಲಗಿದರು ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು ಚಂದ್ರವಂಶಜರಾದ ಪಾಂಡವರು ಕಾಡಿನಲ್ಲಿ ಮುನಿಯ ಅರಣಿಯನ್ನು ಹೊತ್ತೊಯ್ದ ಜಿಂಕೆಯನ್ನು ಹಿಡಿದರು. ಆಮೇಲೆ ಅವರಿಗೆ ಗಂಟಲೊಣಗಿ ಬಾಯಾರಿಕೆಯುಂಟಾಯಿತು. ತುಂಬಾ ಬಳಲಿ ಹತ್ತಿರವಿದ್ದ ಬಳ್ಳಿಗಳ ಮೇಲೆ ಮಲಗಿದರು.
ಪದಾರ್ಥ (ಕ.ಗ.ಪ)
ಢಗೆ - ಬಿಸಿಲು
ಆಸನ್ನ -ಸಮೀಪವಾದ
ಮೂಲ ...{Loading}...
ಕೇಳು ಜನಮೇಜಯ ಹಿಮಾಂಶು ವಿ
ಶಾಲ ವಂಶಜರಡವಿಯಲಿ ಮುನಿ
ಪಾಲನರಣಿಯನೊಯ್ದ ಮೃಗವನು ಹಿಡಿದರೊಳಬಿದ್ದು
ಮೇಲೆ ತೋರಿತು ಢಗೆ ಮಹೀಶರ
ತಾಳಿಗೆಗಳೊಣಗಿದವು ಬಳಲಿಕೆ
ಯೇಳಿಗೆಯಲಾಸನ್ನ ಲತೆಯಿರುಬಿನಲಿ ಮಲಗಿದರು ॥11॥
೦೧೨ ದೂರವಾದುದು ನಿಳಯವೀ ...{Loading}...
ದೂರವಾದುದು ನಿಳಯವೀ ಕಾಂ
ತಾರ ನಿರ್ಜಲವೈದಲಂಘ್ರಿಗೆ
ಭಾರ ಪಥವಿನ್ನೇನು ಹದನೆಂದರಸನಳವಳಿದು
ನೀರ ತಾರೈ ಹೋಗು ನಕುಲ ಸ
ರೋರುಹದ ಪತ್ರದಲಿ ಪೊಟ್ಟಣ
ವಾರಿಯನು ಕಟ್ಟೆಂದು ಕುಂತೀಸೂನು ನೇಮಿಸಿದ ॥12॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮನೆ ದೂರದಲ್ಲಿದೆ. ಕಾಡಿನಲ್ಲಿ ಹತ್ತಿರದಲ್ಲೆಲ್ಲೂ ನೀರು ಕಾಣುತ್ತಿಲ್ಲ. ನಡೆಯೋಣವೆಂದರೆ ಕಾಲುಗಳು ಸೋತಿವೆ. ಇನ್ನೇನು ಮಾಡುವುದು ?’ ಎಂದು ಧರ್ಮಜನು ಯೋಚಿಸಿ, ‘ನಕುಲ, ತಾವರೆಯೆಲೆಯನ್ನು ಪೊಟ್ಟಣಗಟ್ಟಿ ಅದರಲ್ಲಿ ನೀರನ್ನು ತಾ’ ಎಂದು ಸೂಚಿಸಿದನು.
ಮೂಲ ...{Loading}...
ದೂರವಾದುದು ನಿಳಯವೀ ಕಾಂ
ತಾರ ನಿರ್ಜಲವೈದಲಂಘ್ರಿಗೆ
ಭಾರ ಪಥವಿನ್ನೇನು ಹದನೆಂದರಸನಳವಳಿದು
ನೀರ ತಾರೈ ಹೋಗು ನಕುಲ ಸ
ರೋರುಹದ ಪತ್ರದಲಿ ಪೊಟ್ಟಣ
ವಾರಿಯನು ಕಟ್ಟೆಂದು ಕುಂತೀಸೂನು ನೇಮಿಸಿದ ॥12॥
೦೧೩ ಬಗೆದನೇ ಬಳಲಿಕೆಯನತಿ ...{Loading}...
ಬಗೆದನೇ ಬಳಲಿಕೆಯನತಿ ಸಹ
ಸಿಗಳ ದೇವನು ಹಿರಿಯನಾಜ್ಞೆಯ
ನುಗುಳಲಮ್ಮದೆ ಧನುವ ಕೊಂಡನು ನಡೆದನತಿ ಪಥವ
ದೃಗುಮನೋಮಂಜುಳದ ಕಂಜಾ
ಳಿಗಳ ಕಡು ಪರಿಮಳದ ಪಸರದ
ಸೊಗಸು ತೀವಿತು ವಿಮಳ ಪದ್ಮಾಕರದ ಪವಮಾನ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಬಳಲಿಕೆಯನ್ನು ಬಗೆಯದೆ, ಸಾಹಸಿಯಾದ ನಕುಲನು ಅಣ್ಣನಾಜ್ಞೆಯನ್ನು ಒಪ್ಪಿ ಬಿಲ್ಲನ್ನು ಹಿಡಿದು ನಡೆದನು. ಸರೋವರದಲ್ಲಿ ಶೋಭಿಸುವ ತಾವರೆಗಳ ಪರಿಮಳವನ್ನು ಹೊತ್ತು ತಂದ ತಂಗಾಳಿಗೆ ಮನಸೋತನು.
ಮೂಲ ...{Loading}...
ಬಗೆದನೇ ಬಳಲಿಕೆಯನತಿ ಸಹ
ಸಿಗಳ ದೇವನು ಹಿರಿಯನಾಜ್ಞೆಯ
ನುಗುಳಲಮ್ಮದೆ ಧನುವ ಕೊಂಡನು ನಡೆದನತಿ ಪಥವ
ದೃಗುಮನೋಮಂಜುಳದ ಕಂಜಾ
ಳಿಗಳ ಕಡು ಪರಿಮಳದ ಪಸರದ
ಸೊಗಸು ತೀವಿತು ವಿಮಳ ಪದ್ಮಾಕರದ ಪವಮಾನ ॥13॥
೦೧೪ ಹಿತವನೈ ಹಿರಿಯಯ್ಯನೆನಗೆಂ ...{Loading}...
ಹಿತವನೈ ಹಿರಿಯಯ್ಯನೆನಗೆಂ
ದತುಳಬಲ ಪರಿತೋಷದಲಿ ಮಾ
ರುತನ ಬಳಿವಿಡಿದೈದಿದನು ನಕುಲಾಂಕನಾ ಕೊಳನ
ಹತಿಯಹುದು ನಿನಗೊಮ್ಮೆ ತಪ್ಪದು
ಹಿತವು ಬಳಿಕೆಂಬಂತೆ ಖಗ ಸಂ
ತತಿಗಳುಲಿದೊಪ್ಪಿದವು ಪದ್ಮಾಕರದ ತೀರದಲಿ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊಡ್ಡಪ್ಪನಾದ ಮಾರುತನು ನನಗೆ ಹಿತವಾಗಿದ್ದಾನೆ ಎಂದುಕೊಂಡು ಸಂತೋಷದಿಂದ ತಂಗಾಳಿಯ ದಿಕ್ಕನ್ನೇ ಅನುಸರಿಸಿ ನಕುಲನು ಆ ಕೊಳದ ಬಳಿಗೆ ಹೆಜ್ಜೆ ಹಾಕಿದನು. ಆ ಕೊಳದ ತಡಿಯಲ್ಲಿ ‘ನಿನಗೆ ಅಪಾಯವಿದೆ. ಆಮೇಲೆ ಒಳಿತಾಗಬಹುದು’ ಎಂಬಂತೆ ಅಲ್ಲಿರುವ ಪಕ್ಷಿಗಳು ಉಲಿದವು.
ಮೂಲ ...{Loading}...
ಹಿತವನೈ ಹಿರಿಯಯ್ಯನೆನಗೆಂ
ದತುಳಬಲ ಪರಿತೋಷದಲಿ ಮಾ
ರುತನ ಬಳಿವಿಡಿದೈದಿದನು ನಕುಲಾಂಕನಾ ಕೊಳನ
ಹತಿಯಹುದು ನಿನಗೊಮ್ಮೆ ತಪ್ಪದು
ಹಿತವು ಬಳಿಕೆಂಬಂತೆ ಖಗ ಸಂ
ತತಿಗಳುಲಿದೊಪ್ಪಿದವು ಪದ್ಮಾಕರದ ತೀರದಲಿ ॥14॥
೦೧೫ ಇರವಿನಲಿ ರಚನೆಯಲಿ ...{Loading}...
ಇರವಿನಲಿ ರಚನೆಯಲಿ ಮಧುರೋ
ತ್ತರವ ನೆರೆ ಬೀರುತ್ತಲಂತಃ
ಕರಣದಲಿ ಕತ್ತರಿಸಿ ಕೊಂಡಿಹ ಕುಜನರಂದದಲಿ
ಪರಿಮಳದ ಪಸರದಲಿ ಶೈತ್ಯೋ
ತ್ಕರುಷದಲಿ ಲೇಸೆನಿಸಿ ಕುಡಿದೊಡೆ
ಹರಣವನೆ ಹಿಂಗಿಸುವ ಸರಸಿಯ ವಾರಿ ಚೆಲುವಾಯ್ತು ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕೊಳದ ನೀರು ನೋಡಲು ಮಧುರವಾಗಿತ್ತು. ಆದರೆ ಆಂತರ್ಯದಲ್ಲಿ ಕುಜನರಂತೆ ವಿಷವನ್ನು ಅಡಗಿಸಿಕೊಂಡಿತ್ತು. ಪರಿಮಳವನ್ನು ಸೂಸುತ್ತಾ, ತಂಪಾದ ನೀರಿದ್ದರೂ, ಕುಡಿದವರ ಪ್ರಾಣವನ್ನೇ ಕಳೆಯುವ ಹಾಗಿತ್ತು.
ಮೂಲ ...{Loading}...
ಇರವಿನಲಿ ರಚನೆಯಲಿ ಮಧುರೋ
ತ್ತರವ ನೆರೆ ಬೀರುತ್ತಲಂತಃ
ಕರಣದಲಿ ಕತ್ತರಿಸಿ ಕೊಂಡಿಹ ಕುಜನರಂದದಲಿ
ಪರಿಮಳದ ಪಸರದಲಿ ಶೈತ್ಯೋ
ತ್ಕರುಷದಲಿ ಲೇಸೆನಿಸಿ ಕುಡಿದೊಡೆ
ಹರಣವನೆ ಹಿಂಗಿಸುವ ಸರಸಿಯ ವಾರಿ ಚೆಲುವಾಯ್ತು ॥15॥
೦೧೬ ಖಳನ ಸತ್ಯದವೋಲು ...{Loading}...
ಖಳನ ಸತ್ಯದವೋಲು ವಂಚಿಸಿ
ಗೆಲಿದುದಾತನ ಮನವ ಮಾಯೆಯ
ಚೆಲುವಿನಂತಿರೆ ಚದುರು ಕೆಡಿಸಿತು ತಿಳಿಯಲರಿದೆನಿಸಿ
ಲಲನೆಯರ ಹೃದಯದವೊಲೀಕ್ಷಿಸೆ
ನೆಲೆಯನೀಯದ ಕೃತಕ ಸರಸಿಯ
ಸುಲಭತೆಗೆ ಸಹದೇವನಣ್ಣನು ಸೋತು ನಡೆತಂದ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕೊಳವು ದುಷ್ಟರ ಸತ್ಯದಂತೆ ಮೋಸ ಮಾಡಿ ನಕುಲನ ಮನಸ್ಸನ್ನು ಗೆದ್ದಿತು. ತಿಳಿದುಕೊಳ್ಳಲು ಅಸಾಧ್ಯವಾದ ಮಾಯೆಯ ಸೌಂದರ್ಯವು ಅವನ ಬುದ್ಧಿಯನ್ನು ಕೆಡಿಸಿತು. ಸ್ತ್ರೀಯರ ಮನಸ್ಸಿನಂತೆ ಅರ್ಥವಾಗದ ನೆಲೆಯನ್ನು ಹೊಂದಿದ್ದ ಆ ಕೃತಕ ಸರೋವರದ ಸರಳತೆಗೆ ನಕುಲನು ಸೋತು ಹೋದನು.
ಮೂಲ ...{Loading}...
ಖಳನ ಸತ್ಯದವೋಲು ವಂಚಿಸಿ
ಗೆಲಿದುದಾತನ ಮನವ ಮಾಯೆಯ
ಚೆಲುವಿನಂತಿರೆ ಚದುರು ಕೆಡಿಸಿತು ತಿಳಿಯಲರಿದೆನಿಸಿ
ಲಲನೆಯರ ಹೃದಯದವೊಲೀಕ್ಷಿಸೆ
ನೆಲೆಯನೀಯದ ಕೃತಕ ಸರಸಿಯ
ಸುಲಭತೆಗೆ ಸಹದೇವನಣ್ಣನು ಸೋತು ನಡೆತಂದ ॥16॥
೦೧೭ ಇಳಿದು ...{Loading}...
ಇಳಿದು ಮೊನೆಮುಂಜೆರಗನಗ್ರಕೆ
ಬಲಿದು ಹೊಕ್ಕನು ಜಾನುದಘ್ನ
ಸ್ಥಳವನಂಜುಳಿಯಿಂದ ತೊಳೆದನು ಚರಣ ವದನವನು
ತುಳುಕಿದನು ವಾರಿಯನು ತನ್ನಯ
ಬಳಲಿಕೆಯನಪಹರಿಸಿ ಭೂಪತಿ
ಗಳಿಗೆ ಬಳಿಕಾನೊಯ್ವೆನೆಂದನು ತನ್ನ ಮನದೊಳಗೆ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೆರಗಿನ ತುದಿಯನ್ನು ಮೇಲಕ್ಕೆ ಕಟ್ಟಿಕೊಂಡು ಮೊಣಕಾಲಿನವರೆಗೆ ನೀರು ಬರುವಷ್ಟು ಆಳಕ್ಕೆ ಇಳಿದನು. ಬೊಗಸೆನೀರಿಂದ ಕಾಲು ಮುಖಗಳನ್ನು ತೊಳೆದನು. ನೀರನ್ನು ತುಳುಕಿಸಿ ತನ್ನ ತೃಷೆಯನ್ನು ಕಳೆದ ಮೇಲೆ ಅಣ್ಣಂದಿರಿಗೆ ನೀರನ್ನು ಒಯ್ಯುತ್ತೇನೆಂದು ಆಲೋಚಿಸಿದನು.
ಪದಾರ್ಥ (ಕ.ಗ.ಪ)
ಮುಂಜೆರಗು - ಬಟ್ಟೆಯ ಮುಂದಿನ ತುದಿ
ಜಾನುದಘ್ನ - ಮೊಣಕಾಲು ಮುಳುಗುವಷ್ಟು ಆಳ
ಮೂಲ ...{Loading}...
ಇಳಿದು ಮೊನೆಮುಂಜೆರಗನಗ್ರಕೆ
ಬಲಿದು ಹೊಕ್ಕನು ಜಾನುದಘ್ನ
ಸ್ಥಳವನಂಜುಳಿಯಿಂದ ತೊಳೆದನು ಚರಣ ವದನವನು
ತುಳುಕಿದನು ವಾರಿಯನು ತನ್ನಯ
ಬಳಲಿಕೆಯನಪಹರಿಸಿ ಭೂಪತಿ
ಗಳಿಗೆ ಬಳಿಕಾನೊಯ್ವೆನೆಂದನು ತನ್ನ ಮನದೊಳಗೆ ॥17॥
೦೧೮ ಜಲವನಞ್ಜುಳಿಯಿನ್ದ ಮೊಗೆದೀಂ ...{Loading}...
ಜಲವನಂಜುಳಿಯಿಂದ ಮೊಗೆದೀಂ
ಟಲು ನೆನೆಯಲಭ್ರದಲಿ ಗುಹ್ಯಕ
ನುಲಿದನೆಲೆ ನಕುಲಾಂಕ ಮಾಣೆನಗುತ್ತರವ ರಚಿಸಿ
ಬಳಿಕ ಸಲಿಲವನೀಂಟು ಮಾತುಗ
ಳೊಳವು ಮರುಳಾಗದಿರೆನಲು ಢಗೆ
ಗಳುಕಿ ಬಳಲಿದು ಮೇಲನಾಲಿಸಿ ಮೀರಿದನು ನುಡಿಯ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೊಗಸೆಯಲ್ಲಿ ನೀರು ತುಂಬಿ ಕುಡಿಯುತ್ತೇನೆ ಎಂದುಕೊಂಡಾಗ , ಗಗನದಲ್ಲಿ ಯಕ್ಷನೊಬ್ಬನು - ‘ಎಲಾ ನಕುಲ, ನಿಲ್ಲು. ನನಗೆ ನಿನ್ನೊಡನೆ ಮಾತನಾಡಬೇಕಾಗಿದೆ. ಅದಕ್ಕೆ ಉತ್ತರ ನೀಡಿ ಬಳಿಕ ನೀರು ಕುಡಿ. ಮರುಳಾಗಬೇಡ ?’ ಎಂದನು. ಆದರೆ ಬಾಯಾರಿ ಬಳಲಿದ ನಕುಲನು ಆ ಮಾತನ್ನು ಕೇಳಿದರೂ, ಅದನ್ನು ಮೀರಿ ನೀರು ಕುಡಿದನು.
ಪದಾರ್ಥ (ಕ.ಗ.ಪ)
ಒಳವು-ಇದೆ
ಗುಹ್ಯಕ -ಯಕ್ಷ
ಪಾಠಾನ್ತರ (ಕ.ಗ.ಪ)
ಮೇಲೆಯಾಲಿಸಿ -ಮೇಲನಾಲಿಸಿ
ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಜಲವನಂಜುಳಿಯಿಂದ ಮೊಗೆದೀಂ
ಟಲು ನೆನೆಯಲಭ್ರದಲಿ ಗುಹ್ಯಕ
ನುಲಿದನೆಲೆ ನಕುಲಾಂಕ ಮಾಣೆನಗುತ್ತರವ ರಚಿಸಿ
ಬಳಿಕ ಸಲಿಲವನೀಂಟು ಮಾತುಗ
ಳೊಳವು ಮರುಳಾಗದಿರೆನಲು ಢಗೆ
ಗಳುಕಿ ಬಳಲಿದು ಮೇಲನಾಲಿಸಿ ಮೀರಿದನು ನುಡಿಯ ॥18॥
೦೧೯ ಜಡಿಯಲೆರಡಳ್ಳೆಗಳು ಕೊರಳಲಿ ...{Loading}...
ಜಡಿಯಲೆರಡಳ್ಳೆಗಳು ಕೊರಳಲಿ
ಕುಡಿದನುದಕವನಬುಜದೆಲೆಯಲಿ
ಹಿಡಿದನನಿಬರಿಗಮಳ ಜಲವನು ಮರಳಿ ನಿಮಿಷದಲಿ
ತಡಿಯನಡರಿದು ಧೊಪ್ಪನವನಿಗೆ
ಕೆಡೆದು ಪರವಶನಾದನಿತ್ತಲು
ತಡೆದನೇಕೆಂದಟ್ಟಿದನು ಸಹದೇವನನು ನೃಪತಿ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಅಳ್ಳೆಗಳು ನೋಯುತ್ತಿರಲು, ನಕುಲನು ನೀರು ಕುಡಿದನು. ತಾವರೆಯೆಲೆಯಲ್ಲಿ ನೀರನ್ನು ಹಿಡಿದುಕೊಂಡು ಕೂಡಲೇ ಹಿಂತಿರುಗಲೆಂದು ಕೊಳದ ತಡಿಯನ್ನೇರಿ ಬಂದು ನೆಲಕ್ಕೆ ಧೊಪ್ಪನೆ ಬಿದ್ದು ಮೂರ್ಛೆ ಹೋದನು. ಇತ್ತ ನಕುಲನೇಕೆ ತಡಮಾಡಿದನು ಎಂದು ನೋಡಲು ಸಹದೇವನನ್ನು ಧರ್ಮಜ ಕಳಿಸಿದನು.
ಮೂಲ ...{Loading}...
ಜಡಿಯಲೆರಡಳ್ಳೆಗಳು ಕೊರಳಲಿ
ಕುಡಿದನುದಕವನಬುಜದೆಲೆಯಲಿ
ಹಿಡಿದನನಿಬರಿಗಮಳ ಜಲವನು ಮರಳಿ ನಿಮಿಷದಲಿ
ತಡಿಯನಡರಿದು ಧೊಪ್ಪನವನಿಗೆ
ಕೆಡೆದು ಪರವಶನಾದನಿತ್ತಲು
ತಡೆದನೇಕೆಂದಟ್ಟಿದನು ಸಹದೇವನನು ನೃಪತಿ ॥19॥
೦೨೦ ತವಕ ಮಿಗೆ ...{Loading}...
ತವಕ ಮಿಗೆ ನಡೆತಂದು ಮೈಮರೆ
ದವನ ಕಂಡನು ಬಹಳ ಢಗೆ ಪರಿ
ಭವಿಸಲುದಕವ ಕುಡಿದು ಬಳಿಕಾರೈವೆನಿದನೆನುತ
ಲವಲವಿಸಿ ತಾಳಿಗೆಯ ತಲ್ಲಣ
ದವನು ಹೊಕ್ಕನು ಕೊಳವನಮಳಾಂ
ಬುವನು ಮೊಗೆದನು ಮೊಗಕೆ ಮೋಹಲು ಮೇಲೆ ದನಿಯಾಯ್ತು ॥20॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತವಕದಿಂದ ಬಂದ ಸಹದೇವನು ಮೂರ್ಛೆಯಲ್ಲಿ ಬಿದ್ದ ನಕುಲನನ್ನು ಕಂಡನು. ಬಾಯಾರಿಕೆಯನ್ನು ಕಳೆಉದುಕೊಂಡು ಬಳಿಕ ವಿಚಾರಿಸುತ್ತೇನೆ ಎಂದುಕೊಂಡು, ನೀರನ್ನು ಮೊಗೆದು ಕುಡಿಯಲು ಉಪಕ್ರಮಿಸಿದಾಗ ಮೇಲೆ ಧ್ವನಿ ಕೇಳಿತು.
ಮೂಲ ...{Loading}...
ತವಕ ಮಿಗೆ ನಡೆತಂದು ಮೈಮರೆ
ದವನ ಕಂಡನು ಬಹಳ ಢಗೆ ಪರಿ
ಭವಿಸಲುದಕವ ಕುಡಿದು ಬಳಿಕಾರೈವೆನಿದನೆನುತ
ಲವಲವಿಸಿ ತಾಳಿಗೆಯ ತಲ್ಲಣ
ದವನು ಹೊಕ್ಕನು ಕೊಳವನಮಳಾಂ
ಬುವನು ಮೊಗೆದನು ಮೊಗಕೆ ಮೋಹಲು ಮೇಲೆ ದನಿಯಾಯ್ತು ॥20॥
೦೨೧ ಬಿಡು ಬಿಡೆಲೆ ...{Loading}...
ಬಿಡು ಬಿಡೆಲೆ ಸಹದೇವಯೆನ್ನಯ
ನುಡಿಗೆ ಮಾರುತ್ತರವ ಕೊಡು ಮುಂ
ಗೆಡದೆ ಮುಂದಣ ನಿನ್ನವನ ಕಂಡಿಂತು ಮರುಳಹರೆ
ಮಡಿಯಲೆಳಸದಿರೆನಲು ಢಗೆಯವ
ಗಡಿಸೆ ಸೈರಿಸಲರಿಯದುತ್ತರ
ಗೊಡದೆ ಜಲವೀಂಟಿದನು ದಾಂಟಿದುದಸು ಕಳೇಬರವ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವ ನಿಲ್ಲು. ನನ್ನ ಮಾತಿಗೆ ಪ್ರತ್ಯುತ್ತರವನ್ನು ಕೊಡು. ನಿನ್ನ ತಮ್ಮನ ಸ್ಥಿತಿಯನ್ನು ನೋಡಿಯೂ ಹೀಗೆ ಮೂರ್ಖನಾಗುವೆಯಾ? ನೀನು ಸಾಯಲು ಬಯಸಬೇಡ ಎನ್ನಲು ಸಹದೇವನು ಬಾಯಾರಿಕೆಯನ್ನು ಸಹಿಸಲಾರದೆ, ಉತ್ತರವನ್ನೂ ಕೊಡದೆ ನೀರು ಕುಡಿದು ಸತ್ತನು.
ಮೂಲ ...{Loading}...
ಬಿಡು ಬಿಡೆಲೆ ಸಹದೇವಯೆನ್ನಯ
ನುಡಿಗೆ ಮಾರುತ್ತರವ ಕೊಡು ಮುಂ
ಗೆಡದೆ ಮುಂದಣ ನಿನ್ನವನ ಕಂಡಿಂತು ಮರುಳಹರೆ
ಮಡಿಯಲೆಳಸದಿರೆನಲು ಢಗೆಯವ
ಗಡಿಸೆ ಸೈರಿಸಲರಿಯದುತ್ತರ
ಗೊಡದೆ ಜಲವೀಂಟಿದನು ದಾಂಟಿದುದಸು ಕಳೇಬರವ ॥21॥
೦೨೨ ಈತನತಿ ಮೈಮರೆದನತ್ತಲು ...{Loading}...
ಈತನತಿ ಮೈಮರೆದನತ್ತಲು
ಕಾತರಿಸಿದನು ಭೂಪನಿಬ್ಬರ
ಮಾತು ಮುಖದಿರುಹಿತ್ತು ಶಿಶುಗಳಿಗಾವ ಹದನಾಯ್ತೊ
ತಾತ ಹೋಗೈ ಪಾರ್ಥ ಬಾಲಕ
ರೇತಕತ್ತಲೆ ತಡೆದರೆಂಬುದ
ನೀ ತಿಳಿದು ತಾ ಜಲವನೆನೆ ಕೈಗೊಂಡು ನಡೆತಂದ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನೂ ಮೂರ್ಛೆ ತಪ್ಪಿ ಬೀಳಲು, ಅತ್ತ ಧರ್ಮರಾಯನು ಕಳವಳಗೊಂಡನು. ಇಬ್ಬರು ಮಕ್ಕಳಿಗೆ ಏನಾಯಿತೋ ಎಂದು ಚಿಂತಿಸುತ್ತಾ - ‘ಪಾರ್ಥ, ಹೋಗು ಬಾಲಕರು ಏಕೆ ತಡಮಾಡಿದರು ಎಂಬುದನ್ನು ತಿಳಿದು, ನೀರನ್ನು ತಾ’ ಎಂದನು. ಅದನ್ನೊಪ್ಪಿ ಅರ್ಜುನನು ಹೊರಟನು.
ಮೂಲ ...{Loading}...
ಈತನತಿ ಮೈಮರೆದನತ್ತಲು
ಕಾತರಿಸಿದನು ಭೂಪನಿಬ್ಬರ
ಮಾತು ಮುಖದಿರುಹಿತ್ತು ಶಿಶುಗಳಿಗಾವ ಹದನಾಯ್ತೊ
ತಾತ ಹೋಗೈ ಪಾರ್ಥ ಬಾಲಕ
ರೇತಕತ್ತಲೆ ತಡೆದರೆಂಬುದ
ನೀ ತಿಳಿದು ತಾ ಜಲವನೆನೆ ಕೈಗೊಂಡು ನಡೆತಂದ ॥22॥
೦೨೩ ಹಿಮದ ಗಾಳಿಯ ...{Loading}...
ಹಿಮದ ಗಾಳಿಯ ಪಥವಿಡಿದು ಮ
ಧ್ಯಮದ ಪಾಂಡವನೈತರುತ ಮುಂ
ದಮಲ ಸರಸಿಯ ತೀರದಲಿ ಕೀಲಿಸಿದ ಮಗ್ಗುಲಲಿ
ಯಮಳರೊರಗಿರೆ ಕಂಡು ಮನದಲಿ
ತಮವ ಹಿಡಿದನು ನೀರುಗುಡಿದೀ
ಮಮತೆ ಮಿಗಲಾರೈವೆನೆನುತಿಳಿದನು ಸರೋವರವ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂಗಾಳಿಯ ದಾರಿಯಲ್ಲೇ ಬಂದು, ಅರ್ಜುನನು ಸರೋವರದ ದಡದಲ್ಲಿ ನಕುಲ ಸಹದೇವರು ಮಲಗಿರುವುದನ್ನು ಕಂಡನು. ಕಣ್ಣಿಗೆ ಕತ್ತಲೆ ಬಂದಂತಾಗಿ, ಅವನು ಮೊದಲು ನೀರು ಕುಡಿದು ಆ ಬಳಿಕ ಅವರ ಬಗ್ಗೆ ಯೋಚಿಸುತ್ತೇನೆ ಎಂದುಕೊಂಡು ನೀರಿಗಿಳಿದನು.
ಪದಾರ್ಥ (ಕ.ಗ.ಪ)
ಆರೈಯು-ಯೋಚಿಸು, ಚಿಂತಿಸು
ಮೂಲ ...{Loading}...
ಹಿಮದ ಗಾಳಿಯ ಪಥವಿಡಿದು ಮ
ಧ್ಯಮದ ಪಾಂಡವನೈತರುತ ಮುಂ
ದಮಲ ಸರಸಿಯ ತೀರದಲಿ ಕೀಲಿಸಿದ ಮಗ್ಗುಲಲಿ
ಯಮಳರೊರಗಿರೆ ಕಂಡು ಮನದಲಿ
ತಮವ ಹಿಡಿದನು ನೀರುಗುಡಿದೀ
ಮಮತೆ ಮಿಗಲಾರೈವೆನೆನುತಿಳಿದನು ಸರೋವರವ ॥23॥
೦೨೪ ಚರಣ ವದನವ ...{Loading}...
ಚರಣ ವದನವ ತೊಳೆದು ಢಗೆ ಡಾ
ವರಿಸಲಕ್ಷಮನಾಗಿ ಕರದಲಿ
ತೆರೆಗಳನು ತೆಗೆನೂಕಿ ಮೊಗೆದನು ಗರಳಮಯ ಜಲವ
ಮರುಳೆ ನೀ ಕೌಂತೇಯ ಮಾದ್ರೇ
ಯರನು ನೋಡುವುದಿತ್ತ ನನಗು
ತ್ತರವನಿತ್ತುದಕವನು ಕುಡಿಯೆಂದುದು ನಭೋವಚನ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೈಕಾಲುಗಳನ್ನು ತೊಳೆದನು. ಬಾಯಾರಿಕೆ ಹೆಚ್ಚಾಗಲು, ನೀರಿನ ತೆರೆಗಳನ್ನು ತಳ್ಳುತ್ತಾ ಬೊಗಸೆಯಲ್ಲಿ ವಿಷಯುಕ್ತ ಜಲವನ್ನು ಕುಡಿಯಲು ಉಪಕ್ರಮಿಸಿದನು. ಆಗ ಆಕಾಶವಾಣಿಯು ‘ಮರುಳು ಕೌಂತೇಯನೇ, ನೀನು ಮಾದ್ರೀ ಕುಮಾರರನ್ನು ನೋಡು. ನನಗೆ ಉತ್ತರ ಕೊಟ್ಟು ನಂತರ ನೀರನ್ನು ಕುಡಿ’ ಎಂದು ಹೇಳಿತು.
ಮೂಲ ...{Loading}...
ಚರಣ ವದನವ ತೊಳೆದು ಢಗೆ ಡಾ
ವರಿಸಲಕ್ಷಮನಾಗಿ ಕರದಲಿ
ತೆರೆಗಳನು ತೆಗೆನೂಕಿ ಮೊಗೆದನು ಗರಳಮಯ ಜಲವ
ಮರುಳೆ ನೀ ಕೌಂತೇಯ ಮಾದ್ರೇ
ಯರನು ನೋಡುವುದಿತ್ತ ನನಗು
ತ್ತರವನಿತ್ತುದಕವನು ಕುಡಿಯೆಂದುದು ನಭೋವಚನ ॥24॥
೦೨೫ ಮೇಲನಾರೈವನೆ ಸುತೃಷ್ಣಾ ...{Loading}...
ಮೇಲನಾರೈವನೆ ಸುತೃಷ್ಣಾ
ಲೋಲಚಿತ್ತನು ಕಾಮಿ ಮೃಗಯಾ
ಕೇಳಿ ಲಂಪಟನರ್ಥ ಲಾಭ ದ್ಯೂತಲೋಲುಪನು
ಕೇಳು ಜನಮೇಜಯ ತಟಾಕದ
ಕಾಳಕೂಟವ ಕುಡಿದನರ್ಜುನ
ಕಾಲಿಡುತ ಡೆಂಡಣಿಸಿ ಮೈಮರೆದವರ ಕೂಡಿದನು ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಯಾರಿದವನು, ಕಾಮುಕನು, ಮೃಗಯಾವ್ಯಸನವುಳ್ಳವನು, ಜೂಜಿನ ಹಣಕ್ಕೆ ಆಸೆ ಪಡುವವನು ತಾಳ್ಮೆಯಿಂದ ಇರುವನೆ ? ಜನಮೇಜಯನೇ ಕೇಳು. ಅರ್ಜುನನು ಕೊಳದ ವಿಷಜಲವನ್ನು ಕುಡಿದು ದಡಕ್ಕೇರುತ್ತಲೇ ಮೈಮರೆದು ನೆಲಕ್ಕೆ ಬಿದ್ದನು.
ಮೂಲ ...{Loading}...
ಮೇಲನಾರೈವನೆ ಸುತೃಷ್ಣಾ
ಲೋಲಚಿತ್ತನು ಕಾಮಿ ಮೃಗಯಾ
ಕೇಳಿ ಲಂಪಟನರ್ಥ ಲಾಭ ದ್ಯೂತಲೋಲುಪನು
ಕೇಳು ಜನಮೇಜಯ ತಟಾಕದ
ಕಾಳಕೂಟವ ಕುಡಿದನರ್ಜುನ
ಕಾಲಿಡುತ ಡೆಂಡಣಿಸಿ ಮೈಮರೆದವರ ಕೂಡಿದನು ॥25॥
೦೨೬ ತಡೆದರತ್ತಲು ಮೂವರನುಜರು ...{Loading}...
ತಡೆದರತ್ತಲು ಮೂವರನುಜರು
ಮಡಿದರೇನೋ ಚಿತ್ರವಾಯಿತು
ನಡೆ ಸಮೀರಕುಮಾರ ನೀ ಹೋಗತ್ತ ತಳುವದಿರು
ತಡೆಯದೈತಹುದೆನೆ ಹಸಾದವ
ನುಡಿಯನಾನುತ್ತೈದಿ ಹೆಜ್ಜೆಯ
ಹಿಡಿದು ಬಳಿಸಲಿಸಿದನು ಬರೆ ಬರೆ ಕಂಡನದ್ಭುತವ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮೂವರು ತಮ್ಮಂದಿರು ಏಕೆ ಬರಲಿಲ್ಲ ? ಅವರಿಗೆ ಏನು ಅನಾಹುತವಾಯಿತೋ ? ವಿಚಿತ್ರವಾಯಿತಲ್ಲಾ ? ಭೀಮಸೇನ, ನೀನು ತಡಮಾಡದೆ ಹೋಗಿ ಬೇಗ ಬಾ’ ಎಂದು ಧರ್ಮಜ ಹೇಳಲು, ಭೀಮನು ಅಣ್ಣನಾಜ್ಞೆಯನ್ನು ಒಪ್ಪಿ ಹೊರಟು, ಅದ್ಭುತವನ್ನು ಕಂಡನು.
ಮೂಲ ...{Loading}...
ತಡೆದರತ್ತಲು ಮೂವರನುಜರು
ಮಡಿದರೇನೋ ಚಿತ್ರವಾಯಿತು
ನಡೆ ಸಮೀರಕುಮಾರ ನೀ ಹೋಗತ್ತ ತಳುವದಿರು
ತಡೆಯದೈತಹುದೆನೆ ಹಸಾದವ
ನುಡಿಯನಾನುತ್ತೈದಿ ಹೆಜ್ಜೆಯ
ಹಿಡಿದು ಬಳಿಸಲಿಸಿದನು ಬರೆ ಬರೆ ಕಂಡನದ್ಭುತವ ॥26॥
೦೨೭ ಥಟ್ಟುಗೆಡೆದಸುಗಳೆದ ತನ್ನೊಡ ...{Loading}...
ಥಟ್ಟುಗೆಡೆದಸುಗಳೆದ ತನ್ನೊಡ
ಹುಟ್ಟಿದರನೀಕ್ಷಿಸಿದನುಸುರಿನ
ಬಟ್ಟೆಯನು ನೋಡಿದನು ಮೂಗಿನ ಬಳಿಯ ಬೆರಳಿಟ್ಟು
ಮುಟ್ಟಿತಿವರಿಗೆ ಮರಣವಿನ್ನೇ
ನಟ್ಟಿ ಕೊಲುವೆನು ಜವನ ಮೃತ್ಯುವ
ನಿಟ್ಟೆಲವನುದುರಿಸುವೆನೆನುತೊದರಿದನು ಕಲಿಭೀಮ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂರ್ಛೆಹೋದ, ಸಾಲಾಗಿ ಬಿದ್ದು ಪ್ರಾಣಕಳೆದುಕೊಂಡಿರುವ ತಮ್ಮಂದಿರನ್ನು ಕಂಡು ಅವರ ಮೂಗಿನ ಮೇಲೆ ಬೆರಳಿಟ್ಟನು. ಉಸಿರಾಡುವುದಿಲ್ಲವೆಂದು ತಿಳಿದು ಇವರು ಮೃತರಾದರೆಂದು ಕೊಂಡನು. ಇನ್ನು ಯಮನನ್ನೇ ಬೆನ್ನಟ್ಟಿ ಕೊಲ್ಲುತ್ತೇನೆ, ಮೃತ್ಯುವಿನ ಎಲುಬನ್ನೇ ಉದುರಿಸುತ್ತೇನೆಂದು ಭೀಮಸೇನನು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಥಟ್ಟುಗೆಡೆ -ಗುಂಪಾಗಿ ಬೀಳು
ಮೂಲ ...{Loading}...
ಥಟ್ಟುಗೆಡೆದಸುಗಳೆದ ತನ್ನೊಡ
ಹುಟ್ಟಿದರನೀಕ್ಷಿಸಿದನುಸುರಿನ
ಬಟ್ಟೆಯನು ನೋಡಿದನು ಮೂಗಿನ ಬಳಿಯ ಬೆರಳಿಟ್ಟು
ಮುಟ್ಟಿತಿವರಿಗೆ ಮರಣವಿನ್ನೇ
ನಟ್ಟಿ ಕೊಲುವೆನು ಜವನ ಮೃತ್ಯುವ
ನಿಟ್ಟೆಲವನುದುರಿಸುವೆನೆನುತೊದರಿದನು ಕಲಿಭೀಮ ॥27॥
೦೨೮ ಮನ್ನಣೆಗೆ ಹಿರಿಯಯ್ಯನೆನ್ದಾ ...{Loading}...
ಮನ್ನಣೆಗೆ ಹಿರಿಯಯ್ಯನೆಂದಾ
ನಿನ್ನು ಬಗೆವೆನೆ ಜವನ ಗಂಟಲ
ಮುನ್ನ ತಿರುಹುವೆನೆನುತ ಕಿಡಿಕಿಡಿಯೋದನಾ ಭೀಮ
ಇನ್ನೊದರಿ ಫಲವೇನು ಕುಡಿವೆನು
ಮುನ್ನ ಜಲವನು ಬಳಿಕ ನೋಡುವೆ
ನೆನ್ನವರ ಮಾರ್ಗವನೆನುತ ಮೊಗೆದನು ವಿಷೋದಕವ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೊಡ್ಡಪ್ಪನೆಂಬ ಗೌರವವನ್ನು ತೋರಿಸದೆ, ಯಮನ ಗಂಟಲನ್ನೇ ತಿರುಚುತ್ತೇನೆ’ ಎಂದು ಭೀಮನು ಸಿಟ್ಟಿನಿಂದ ಕೆಂಪಾದನು. ‘ಇನ್ನು ಹೇಳಿ ಪ್ರಯೋಜನವಿಲ್ಲ. ಮೊದಲು ನೀರು ಕುಡಿದು, ಆಮೇಲೆ ನನ್ನ ತಮ್ಮಂದಿರನ್ನು ಗಮನಿಸುತ್ತೇನೆ’ ಎಂದು ವಿಷಜಲವನ್ನು ಕುಡಿಯಲು ಉಪಕ್ರಮಿಸಿದನು.
ಮೂಲ ...{Loading}...
ಮನ್ನಣೆಗೆ ಹಿರಿಯಯ್ಯನೆಂದಾ
ನಿನ್ನು ಬಗೆವೆನೆ ಜವನ ಗಂಟಲ
ಮುನ್ನ ತಿರುಹುವೆನೆನುತ ಕಿಡಿಕಿಡಿಯೋದನಾ ಭೀಮ
ಇನ್ನೊದರಿ ಫಲವೇನು ಕುಡಿವೆನು
ಮುನ್ನ ಜಲವನು ಬಳಿಕ ನೋಡುವೆ
ನೆನ್ನವರ ಮಾರ್ಗವನೆನುತ ಮೊಗೆದನು ವಿಷೋದಕವ ॥28॥
೦೨೯ ಮಾಣು ಮಾಣುತ್ತರವ ...{Loading}...
ಮಾಣು ಮಾಣುತ್ತರವ ಕೊಡು ಮುಂ
ಗಾಣಬೇಹುದು ತಂದೆ ತನಗೀ
ಕ್ಷೋಣಿಯಲಿ ಪೂರ್ವದ ಪರಿಗ್ರಹವೀ ಸರೋವರವು
ಜಾಣನಾದೊಡೆ ಜಾರಬಿಡು ಬಿಡು
ಕೇಣವನು ನೀನೆನಲು ಗಗನದ
ವಾಣಿಯನು ಮನ್ನಿಸದೆ ಮಾರುತಿಯೀಂಟಿದನು ಜಲವ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿಲ್ಲು .ಉತ್ತರಕೊಡು. ಮುಂದೆ ನೋಡು. ಲೋಕದಲ್ಲಿ ಈ ಕೊಳವು ಮೊದಲಿನಿಂದಲೂ ನನಗೆ ಸೇರಿದ್ದು. ನೀನು ಬುದ್ಧಿವಂತನಾದರೆ ನೀರು ಕುಡಿಯುವ ಆಲೋಚನೆಯನ್ನು ಬಿಡು’ ಎಂಬ ಅಂಬರವಾಣಿಯನ್ನು ಗಮನಿಸದೆ ಭೀಮನು ನೀರು ಕುಡಿದನು.
ಪದಾರ್ಥ (ಕ.ಗ.ಪ)
ಕೇಣ-ಆಲೋಚನೆ
ಮೂಲ ...{Loading}...
ಮಾಣು ಮಾಣುತ್ತರವ ಕೊಡು ಮುಂ
ಗಾಣಬೇಹುದು ತಂದೆ ತನಗೀ
ಕ್ಷೋಣಿಯಲಿ ಪೂರ್ವದ ಪರಿಗ್ರಹವೀ ಸರೋವರವು
ಜಾಣನಾದೊಡೆ ಜಾರಬಿಡು ಬಿಡು
ಕೇಣವನು ನೀನೆನಲು ಗಗನದ
ವಾಣಿಯನು ಮನ್ನಿಸದೆ ಮಾರುತಿಯೀಂಟಿದನು ಜಲವ ॥29॥
೦೩೦ ದಡದಡಿಸಿ ಕೊಳನಿನ್ದ ...{Loading}...
ದಡದಡಿಸಿ ಕೊಳನಿಂದ ಹೊರಗಡಿ
ಯಿಡುತ ಬಳಲಿದನನಿಲ ಸುತನವ
ರೊಡನೆ ಮೈಯಿಕ್ಕಿದನು ಕಳಚಿದ ನೀಲ ಗಿರಿಯಂತೆ
ಅಡಿಗೆಡೆದನಾ ಭೀಮನಿತ್ತಲು
ಕಡುನಿರೋಧವ ಹಿಡಿದು ತಾನೇ
ನಡೆದು ಬಂದನು ಧರ್ಮಸುತನಾ ಕೊಳನ ಪಥವಿಡಿದು ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಥಟ್ಟಾಡುತ್ತಾ , ನಡುಗುವ ಹೆಜ್ಜೆಯಿಡುತ್ತಾ ಭೀಮನು ಕೊಳದ ತಟಕ್ಕೆ ಬಂದು ಬಳಲಿ, ನೀಲಾಚಲವೇ ಬಿದ್ದಂತೆ ನೆಲಕ್ಕೆ ಉರುಳಿದನು. ಇತ್ತ ಧರ್ಮರಾಯನೇ ತಮ್ಮಂದಿರನ್ನು ಹುಡುಕುತ್ತಾ ಕೊಳದ ದಾರಿಯಲ್ಲಿ ಬಂದನು.
ಮೂಲ ...{Loading}...
ದಡದಡಿಸಿ ಕೊಳನಿಂದ ಹೊರಗಡಿ
ಯಿಡುತ ಬಳಲಿದನನಿಲ ಸುತನವ
ರೊಡನೆ ಮೈಯಿಕ್ಕಿದನು ಕಳಚಿದ ನೀಲ ಗಿರಿಯಂತೆ
ಅಡಿಗೆಡೆದನಾ ಭೀಮನಿತ್ತಲು
ಕಡುನಿರೋಧವ ಹಿಡಿದು ತಾನೇ
ನಡೆದು ಬಂದನು ಧರ್ಮಸುತನಾ ಕೊಳನ ಪಥವಿಡಿದು ॥30॥
೦೩೧ ಮೇಲೆ ಮಗುಳ್ದಾಲಿಗಳ ...{Loading}...
ಮೇಲೆ ಮಗುಳ್ದಾಲಿಗಳ ಚಾಚಿದ
ತೋಳ ಮೇಲಿನ ತಲೆಯ ಸುಯ್ಲಿನ
ಲೀಲೆಯಡಗಿದ ಮುಖದ ಮಸುಳಿದ ಕಾಯಕಾಂತಿಗಳ
ಮೇಲು ಮುಸುಕಿನ ಮಗ್ಗುಲಿನಲಿಹ
ನಾಲುವರನೀಕ್ಷಿಸುತ ಭೂಪತಿ
ಕೋಲು ಮರುಮೊನೆಗೊಂಡವೋಲ್ ಮರುಗಿದನು ಚಿತ್ತದಲಿ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಣ್ಣಾಲಿಗಳು ಮೇಲಕ್ಕೆ ಹೋದ, ತೋಳು ಚಾಚಿದ, ನೆತ್ತಿಯ ಸುಯ್ಲು ಅಡಗಿದ, ಮುಖ ಬಾಡಿದ, ಮೈಕಾಂತಿಯಿಲ್ಲದ ಮುಸುಕು ಹಾಕಿ ಮಗ್ಗುಲಾಗಿ ಮಲಗಿದ ನಾಲ್ಕು ಜನ ತಮ್ಮಂದಿರನ್ನು ನೋಡಿ ಧರ್ಮಜನು ತೀಕ್ಷ್ಣವಾಗಿ ದುಃಖಿಸಿದನು.
ಪದಾರ್ಥ (ಕ.ಗ.ಪ)
ಮೊನೆಗೊಳ್ - ತೀಕ್ಷ್ಣವಾಗು
ಮೂಲ ...{Loading}...
ಮೇಲೆ ಮಗುಳ್ದಾಲಿಗಳ ಚಾಚಿದ
ತೋಳ ಮೇಲಿನ ತಲೆಯ ಸುಯ್ಲಿನ
ಲೀಲೆಯಡಗಿದ ಮುಖದ ಮಸುಳಿದ ಕಾಯಕಾಂತಿಗಳ
ಮೇಲು ಮುಸುಕಿನ ಮಗ್ಗುಲಿನಲಿಹ
ನಾಲುವರನೀಕ್ಷಿಸುತ ಭೂಪತಿ
ಕೋಲು ಮರುಮೊನೆಗೊಂಡವೋಲ್ ಮರುಗಿದನು ಚಿತ್ತದಲಿ ॥31॥
೦೩೨ ಮುಸುಕನರೆದೆರೆದವರವರ ಮೊಗ ...{Loading}...
ಮುಸುಕನರೆದೆರೆದವರವರ ಮೊಗ
ದುಸುರುಗಳನಾಲಿಸಿದನಕಟಾ
ಶಿಶುಗಳಿಗೆ ಕಡು ಹಾನಿಯಾಯಿತೆ ಶಿವ ಮಹಾದೇವ
ನಿಶಿತಶಸ್ತ್ರದ ಗಾಯವಿಲ್ಲು
ಬ್ಬಸದ ಸಾವಿನ್ನಾವುದೋ ನಾ
ನಸುಗಳೆಯದೇಕುಳಿದೆನೆಂದಳಲಿದನು ಯಮಸೂನು ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರೆಲ್ಲರ ಮುಸುಕನ್ನು ಸರಿಸಿ, ಉಸಿರಾಟವನ್ನು ಪರೀಕ್ಷಿಸಿ, ‘ಅಯ್ಯೋ ಮಕ್ಕಳಿಗೆ ಅಪಾಯವೊದಗಿತಲ್ಲಾ ಶಿವಶಿವಾ, ಯಾವುದೇ ಶಸ್ತ್ರದ ಗಾಯಗಳಿಲ್ಲ. ಯಾವ ಉಬ್ಬಸದಿಂದ ಸಾವು ಬಂದಿತೋ ? ನಾನು ಇನ್ನೂ ಸಾಯದೇ ಏಕೆ ಉಳಿದಿದ್ದೇನೆ ’ ಎಂದು ಧರ್ಮಜನು ಮರುಗಿದನು.
ಮೂಲ ...{Loading}...
ಮುಸುಕನರೆದೆರೆದವರವರ ಮೊಗ
ದುಸುರುಗಳನಾಲಿಸಿದನಕಟಾ
ಶಿಶುಗಳಿಗೆ ಕಡು ಹಾನಿಯಾಯಿತೆ ಶಿವ ಮಹಾದೇವ
ನಿಶಿತಶಸ್ತ್ರದ ಗಾಯವಿಲ್ಲು
ಬ್ಬಸದ ಸಾವಿನ್ನಾವುದೋ ನಾ
ನಸುಗಳೆಯದೇಕುಳಿದೆನೆಂದಳಲಿದನು ಯಮಸೂನು ॥32॥
೦೩೩ ಇನ್ದಿನಲಿ ಕಡೆಯಾಯ್ತಲಾ ...{Loading}...
ಇಂದಿನಲಿ ಕಡೆಯಾಯ್ತಲಾ ವಿಮ
ಳೇಂದುವಂಶಕೆ ಕೌರವನ ಛಲ
ಸಂದುದಿನ್ನಹಿತಾವನೀಶರಿಗಾಯ್ತು ಪರಿತೋಷ
ಕೊಂದರಾರಕಟಕಟೆನುತ್ತರ
ವಿಂದನಾಭನ ಕೃಪೆಗೆ ಬಾಹಿರ
ನಿಂದು ತಾನಾದೆನೆ ಮಹಾದೇವೆಂದು ಬಿಸುಸುಯ್ದ ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಮ್ಮ ಚಂದ್ರವಂಶ ಕೊನೆಯಾಯಿತು. ಕೌರವನ ಛಲವೇ ಗೆದ್ದಿತು. ಶತ್ರುಗಳಿಗೆ ಸಂತೋಷವಾಯಿತು. ತಮ್ಮಂದಿರನ್ನು ಯಾರು ಕೊಂದರು ? ಅಕಟಾ… ಶಿವಶಿವಾ…. ಇಂದು ನಾನು ಶ್ರೀಹರಿಯ ಕೃಪೆಗೆ ಬಾಹಿರನಾದೆನು’ ಎಂದು ಅಳಲಿದನು.
ಮೂಲ ...{Loading}...
ಇಂದಿನಲಿ ಕಡೆಯಾಯ್ತಲಾ ವಿಮ
ಳೇಂದುವಂಶಕೆ ಕೌರವನ ಛಲ
ಸಂದುದಿನ್ನಹಿತಾವನೀಶರಿಗಾಯ್ತು ಪರಿತೋಷ
ಕೊಂದರಾರಕಟಕಟೆನುತ್ತರ
ವಿಂದನಾಭನ ಕೃಪೆಗೆ ಬಾಹಿರ
ನಿಂದು ತಾನಾದೆನೆ ಮಹಾದೇವೆಂದು ಬಿಸುಸುಯ್ದ ॥33॥
೦೩೪ ಹೋಗಲಿನ್ನೀ ನೀರುಗುಡಿದಿವ ...{Loading}...
ಹೋಗಲಿನ್ನೀ ನೀರುಗುಡಿದಿವ
ರಾಗು ಹೋಗರಸುವೆನೆನುತ ಢಗೆ
ತಾಗಿದವನಿಪನಿಳಿದು ಹೊಕ್ಕನು ವಿಷ ಸರೋವರವ
ಬಾಗಿ ಮೊಗೆದನು ಜಲವನಭ್ರದೊ
ಳಾಗಲಾದುದು ರಭಸವೆಲೆ ಸಕ
ಳಾಗಮಜ್ಞ ಮಹೀಶ ಕೇಳ್ ಎಂದುದು ನಭೋನಿನದ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋಗಲಿ, ಈ ನೀರನ್ನು ಕುಡಿದ ಬಳಿಕ ಸೋದರರ ಸಂಗತಿಯನ್ನು ತಿಳಿಯುತ್ತೇನೆ ಎಂದು ಬಾಯಾರಿದ ಅರಸನು ಸರೋವರಕ್ಕೆ ಇಳಿದನು. ವಿಷಜಲವನ್ನು ಬೊಗಸೆಯಲ್ಲಿ ಹಿಡಿದಿರಲು, ಆಕಾಶವಾಣಿಯು - ‘ಸಕಲ ಶಾಸ್ತ್ರವೇತ್ತನಾದ ಅರಸನೇ ಕೇಳು’ ಎಂದು ರಭಸದಿಂದ ನುಡಿಯಿತು.
ಮೂಲ ...{Loading}...
ಹೋಗಲಿನ್ನೀ ನೀರುಗುಡಿದಿವ
ರಾಗು ಹೋಗರಸುವೆನೆನುತ ಢಗೆ
ತಾಗಿದವನಿಪನಿಳಿದು ಹೊಕ್ಕನು ವಿಷ ಸರೋವರವ
ಬಾಗಿ ಮೊಗೆದನು ಜಲವನಭ್ರದೊ
ಳಾಗಲಾದುದು ರಭಸವೆಲೆ ಸಕ
ಳಾಗಮಜ್ಞ ಮಹೀಶ ಕೇಳೆಂದುದು ನಭೋನಿನದ ॥34॥
೦೩೫ ಅನುಜರವಿವೇಕಿಗಳು ಪರಿಣತ ...{Loading}...
ಅನುಜರವಿವೇಕಿಗಳು ಪರಿಣತ
ಜನದಲಧಿಕನು ನೀ ನಿಧಾನಿಸಿ
ನನಗೆ ಮಾರುತ್ತರವನಿತ್ತು ನಿರಂತರಾಯದಲಿ
ತನುವಿಗಾಪ್ಯಾಯನವ ಮಾಡುವು
ದೆನಲು ಕೇಳಿದು ಢಗೆಯ ಸೈರಿಸಿ
ಘನಪಥದ ನುಡಿ ಯಾರದೆಂದವನೀಶನಾಲಿಸಿದ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನ್ನ ತಮ್ಮಂದಿರು ಅವಿವೇಕಿಗಳು. ನೀನಾದರೋ ಪ್ರಾಜ್ಞನು. ನೀನು ನನ್ನ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ನನಗೆ ಸಂತೋಷವನ್ನುಂಟು ಮಾಡು’ ಎಂದೆನ್ನಲು, ಧರ್ಮಜನು ದಾಹವನ್ನು ಸೈರಿಸಿಕೊಂಡು ಆಕಾಶದ ನುಡಿಯು ಯಾರದೆಂದು ಚಿಂತಿಸಿದನು.
ಮೂಲ ...{Loading}...
ಅನುಜರವಿವೇಕಿಗಳು ಪರಿಣತ
ಜನದಲಧಿಕನು ನೀ ನಿಧಾನಿಸಿ
ನನಗೆ ಮಾರುತ್ತರವನಿತ್ತು ನಿರಂತರಾಯದಲಿ
ತನುವಿಗಾಪ್ಯಾಯನವ ಮಾಡುವು
ದೆನಲು ಕೇಳಿದು ಢಗೆಯ ಸೈರಿಸಿ
ಘನಪಥದ ನುಡಿ ಯಾರದೆಂದವನೀಶನಾಲಿಸಿದ ॥35॥
೦೩೬ ಬಿಸುಟನುದಕವನಾ ನುಡಿಯನಾ ...{Loading}...
ಬಿಸುಟನುದಕವನಾ ನುಡಿಯನಾ
ಲಿಸಿದನಾರೈ ನೀನು ನಿನಗಾ
ಗಸದಲಿರವೇನಸುರನೋ ಕಿನ್ನರನೊ ನಿರ್ಜರನೊ
ಉಸುರೆನಲು ತಾ ಯಕ್ಷನೀ ಸಾ
ರಸವು ನನ್ನದು ನಿನ್ನ ತಮ್ಮದಿ
ರಸುವನೆಳೆದವ ನಾನು ಕೇಳೈ ಧರ್ಮಸುತಯೆಂದ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೊಗಸೆಯಲ್ಲಿ ಹಿಡಿದ ನೀರನ್ನು ಚೆಲ್ಲಿ, ಆ ಮಾತನ್ನು ಆಲಿಸಿ ‘ನೀನು ಯಾರು ? ನಿನ್ನ ಸ್ಥಳವು ಆಕಾಶವೆ? ನೀನು ರಾಕ್ಷಸನೋ ಕಿನ್ನರನೊ ಅಥವಾ ದೇವತೆಯೋ? ಹೇಳು ? ಎಂದನು. ಅದಕ್ಕೆ ಅವನು ‘ನಾನು ಯಕ್ಷ. ಈ ಸರೋವರ ನನ್ನದು. ನಿನ್ನ ಸಹೋದರರ ಪ್ರಾಣವನ್ನು ಕಳೆದವನು ನಾನೇ’ ಎಂದನು.
ಮೂಲ ...{Loading}...
ಬಿಸುಟನುದಕವನಾ ನುಡಿಯನಾ
ಲಿಸಿದನಾರೈ ನೀನು ನಿನಗಾ
ಗಸದಲಿರವೇನಸುರನೋ ಕಿನ್ನರನೊ ನಿರ್ಜರನೊ
ಉಸುರೆನಲು ತಾ ಯಕ್ಷನೀ ಸಾ
ರಸವು ನನ್ನದು ನಿನ್ನ ತಮ್ಮದಿ
ರಸುವನೆಳೆದವ ನಾನು ಕೇಳೈ ಧರ್ಮಸುತಯೆಂದ ॥36॥
೦೩೭ ಬಾಲಕರು ನೀವೆನ್ನ ...{Loading}...
ಬಾಲಕರು ನೀವೆನ್ನ ಮಾತನು
ಕೇಳಿ ಉದಕವ ಕುಡಿವುದೆನೆ ಭೂ
ಪಾಲ ನಿನ್ನವರೆನ್ನ ಮಾತನು ಕೇಳಿ ಮನ್ನಿಸದೆ
ಮೇಲುಗಾಣದೆ ನೀರು ಕುಡಿದು ವಿ
ತಾಳಿಸಿದರಿಂದೆನ್ನ ಮಾತನು
ಕೇಳಿ ನೀನುತ್ತರವ ರಚಿಸೆನೆ ನೃಪತಿ ಹೇಳೆಂದ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀವು ಬಾಲಕರು. ನನ್ನ ಮಾತನ್ನು ಕೇಳಿ ಅನಂತರ ನೀರು ಕುಡಿಯಿರಿ ಎಂದು ಹೇಳಿದರೂ ಅವರು ಕೇಳದೆ ನೀರು ಕುಡಿದರು. ಆದುದರಿಂದ ಅವರು ಸತ್ತರು. ನೀನಾದರೂ ನನ್ನ ಮಾತನ್ನು ಕೇಳಿ ಉತ್ತರವನ್ನು ತಿಳಿಸು’ ಎಂದನು. ಆಗ ಧರ್ಮಜನು ಪ್ರಶ್ನೆಯನ್ನು ಕೇಳು ಎಂದನು.
ಟಿಪ್ಪನೀ (ಕ.ಗ.ಪ)
ಯಕ್ಷಪ್ರಶ್ನೆ - ಬಾಯಾರಿ ಕೊಳಕ್ಕೆ ಬಂದು ಯಕ್ಞನ ಎಚ್ಚರಿಕೆಯ ಮಾತನ್ನು ಕೇಳದೆ ನೀರು ಕುಡಿಯಲು ಹೋದ ಸಹದೇವ, ನಕುಲ, ಅರ್ಜುನ ಭೀಮರಿಗೆ ಏನಾಯಿತೆಂಬುದು ಎಲ್ಲರಿಗೂ ಗೊತ್ತಿದೆ. ಯಮಧರ್ಮರಾಯನೇ ಇವರನ್ನೆಲ್ಲ ಪರೀಕ್ಷಿಸಲು ಮಾಡಿದ ತಂತ್ರ ಅದು. ಉಳಿದ ತಮ್ಮಂದಿರಂತೆ ಮಾಡದೆ ಧರ್ಮರಾಯನು ಯಕ್ಷನ ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಿ ಅನಂತರ ನೀರನ್ನು ಕುಡಿಯುವುದು ಲೇಸೆಂದು ಭಾವಿಸುತ್ತಾನೆ. ಯಕ್ಷನ ಪ್ರಶ್ನೆಗಳು ಸಾಕಷ್ಟು ಹ್ರಸ್ವವಾಗಿದ್ದು ಬಹುಮಟ್ಟಿಗೆ ಚುಟುಕಿನ ಉತ್ತರಗಳನ್ನು ಅಪೇಕ್ಷಿಸುತ್ತವೆ. ಈ ಪ್ರಸಿದ್ಧ ಯಕ್ಷಪ್ರಶ್ನೆಗಳ ಸಂಖ್ಯೆ ಭಿನ್ನ ಪಾಠಗಳಲ್ಲಿ ಮೂವತ್ತರಿಂದ ಅರವತ್ತನಾಲ್ಕರವರೆಗೆ ಬೆಳೆದುಬಂದಿದೆ. ಮುಖ್ಯವಾದ ಕೆಲವನ್ನೂ ಧರ್ಮರಾಯನ ಉತ್ತರಗಳನ್ನೂ ಒಟ್ಟಿಗೆ ನೋಡೋಣ. ಸಂಗ್ರಹವಾಗಿ 6 ಪ್ರಶ್ನೆಗಳ ಉತ್ತರಗಳ ಮಾತ್ರ ಇಲ್ಲಿವೆ.
ಮೂಲ ...{Loading}...
ಬಾಲಕರು ನೀವೆನ್ನ ಮಾತನು
ಕೇಳಿ ಉದಕವ ಕುಡಿವುದೆನೆ ಭೂ
ಪಾಲ ನಿನ್ನವರೆನ್ನ ಮಾತನು ಕೇಳಿ ಮನ್ನಿಸದೆ
ಮೇಲುಗಾಣದೆ ನೀರು ಕುಡಿದು ವಿ
ತಾಳಿಸಿದರಿಂದೆನ್ನ ಮಾತನು
ಕೇಳಿ ನೀನುತ್ತರವ ರಚಿಸೆನೆ ನೃಪತಿ ಹೇಳೆಂದ ॥37॥
೦೩೮ ಜಲನಿಧಿಗೆ ಸರಿ ...{Loading}...
ಜಲನಿಧಿಗೆ ಸರಿ ಸರಸಿ ಯಾವುದು
ನೆಲಕೆ ಹಿತವನದಾರು ಮತ್ರ್ಯಾ
ವಳಿಗೆ ಮಾತೆಯದಾರು ಸೂರ್ಯಪ್ರಭೆಗೆ ಸರಿಯೇನು
ತಿಳುಹು ಧರ್ಮಜ ಸಕಲ ಧರ್ಮಾ
ವಳಿಯ ಸಾರವನೆನಲು ಯಕ್ಷನ
ಬಲುಮೆಗವನೀಪಾಲನತಿ ಪರಿತೋಷದಲಿ ನುಡಿದ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರಕ್ಕೆ ಸಮನಾದ ಸರೋವರ ಯಾವುದು ? ಲೋಕಕ್ಕೆ ಹಿತಕಾರಿ ಯಾರು ? ಜೀವಕೋಟಿಗೆ ತಾಯಿ ಯಾರು ? ಸೂರ್ಯ ಪ್ರಕಾಶಕ್ಕೆ ಸಮವಾದುದು ಯಾವುದು ? ಧರ್ಮರಾಯ, ಸರ್ವಧರ್ಮಶಾಸ್ತ್ರಗಳ ಸಾರವನ್ನು ತಿಳಿಸು’ ಎಂದ ಯಕ್ಷ ಪ್ರಶ್ನೆಗೆ ಸಂತಸದಿಂದ ಧರ್ಮಜ ಉತ್ತರಿಸಿದನು.
ಮೂಲ ...{Loading}...
ಜಲನಿಧಿಗೆ ಸರಿ ಸರಸಿ ಯಾವುದು
ನೆಲಕೆ ಹಿತವನದಾರು ಮತ್ರ್ಯಾ
ವಳಿಗೆ ಮಾತೆಯದಾರು ಸೂರ್ಯಪ್ರಭೆಗೆ ಸರಿಯೇನು
ತಿಳುಹು ಧರ್ಮಜ ಸಕಲ ಧರ್ಮಾ
ವಳಿಯ ಸಾರವನೆನಲು ಯಕ್ಷನ
ಬಲುಮೆಗವನೀಪಾಲನತಿ ಪರಿತೋಷದಲಿ ನುಡಿದ ॥38॥
೦೩೯ ಗಗನವಬುಧಿಗೆ ಸರಿ ...{Loading}...
ಗಗನವಬುಧಿಗೆ ಸರಿ ಸರೋವರ
ಜಗಕೆ ಹಿತವನು ಶಕ್ರ ಮನುಜಾ
ದಿಗಳ ಮಾತಾರೂಪು ಗೋವುಗಳಿದು ನಿಧಾನಮತ
ಬಗೆಯಲಗ್ಗದ ಸತ್ಯವೆಂಬುದು
ಗಗನಮಣಿಗೆಣೆಯೆನಲು ಚಿತ್ತಕೆ
ಸೊಗಸಿ ತಲೆದೂಗಿದನು ಮಗುಳಿಂತೆಂದನಾ ಖಚರ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರಕ್ಕೆ ಆಕಾಶವೇ ಸರಿ. ಇಂದ್ರನು ಲೋಕಕ್ಕೆ ಹಿತಕಾರಿ. ಮನುಷ್ಯರಿಗೆ ಗೋವೇ ತಾಯಿ. ಸತ್ಯವು ಸೂರ್ಯತೇಜಕ್ಕೆ ಸಮಾನವಾದುದು. ಎಂದು ಉತ್ತರಿಸಲು ಮೆಚ್ಚಿ, ಯಕ್ಷನು ಮತ್ತೆ ಹೀಗೆಂದನು.
ಮೂಲ ...{Loading}...
ಗಗನವಬುಧಿಗೆ ಸರಿ ಸರೋವರ
ಜಗಕೆ ಹಿತವನು ಶಕ್ರ ಮನುಜಾ
ದಿಗಳ ಮಾತಾರೂಪು ಗೋವುಗಳಿದು ನಿಧಾನಮತ
ಬಗೆಯಲಗ್ಗದ ಸತ್ಯವೆಂಬುದು
ಗಗನಮಣಿಗೆಣೆಯೆನಲು ಚಿತ್ತಕೆ
ಸೊಗಸಿ ತಲೆದೂಗಿದನು ಮಗುಳಿಂತೆಂದನಾ ಖಚರ ॥39॥
೦೪೦ ನಯವಿದನೆ ಕೇಳಾವನೈ ...{Loading}...
ನಯವಿದನೆ ಕೇಳಾವನೈ ಕ್ಷ
ತ್ರಿಯನು ವಿಪ್ರರೊಳಾವನೈ ಶ್ರೋ
ತ್ರಿಯನು ಸುಜನರೊಳಾವನೈ ಮಹಪುರುಷನೆಂಬವನು
ನಿಯತ ಧೀಮನದಾರು ದೇವ
ಪ್ರಿಯನದಾವನು ಕಠಿಣ ಕಷ್ಟಾ
ಶ್ರಯನದಾವನು ಧರ್ಮಸುತ ಹೇಳೆಂದನಾ ಖಚರ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿನಯಶೀಲನೇ, ಕ್ಷತ್ರಿಯನು ಯಾರು ? ಬ್ರಾಹ್ಮಣರಲ್ಲಿ ಶ್ರೋತ್ರಿಯನು ಯಾರು ? ಸಜ್ಜನರಲ್ಲಿ ಶ್ರೇಷ್ಠನು ಯಾರು ? ಜಾಣನು ಯಾರು ? ದೇವರಿಗೆ ಪ್ರಿಯನಾದವನು ಯಾರು ? ನೀಚನು ಯಾರು ? ಎಂದು ಯಕ್ಷನು ಕೇಳಿದನು.
ಪದಾರ್ಥ (ಕ.ಗ.ಪ)
ಕಷ್ಟಕಾರಿ -ನೀಚ
ಮೂಲ ...{Loading}...
ನಯವಿದನೆ ಕೇಳಾವನೈ ಕ್ಷ
ತ್ರಿಯನು ವಿಪ್ರರೊಳಾವನೈ ಶ್ರೋ
ತ್ರಿಯನು ಸುಜನರೊಳಾವನೈ ಮಹಪುರುಷನೆಂಬವನು
ನಿಯತ ಧೀಮನದಾರು ದೇವ
ಪ್ರಿಯನದಾವನು ಕಠಿಣ ಕಷ್ಟಾ
ಶ್ರಯನದಾವನು ಧರ್ಮಸುತ ಹೇಳೆಂದನಾ ಖಚರ ॥40॥
೦೪೧ ಧೃತಿಯುತ ಕ್ಷತ್ರಿಯನು ...{Loading}...
ಧೃತಿಯುತ ಕ್ಷತ್ರಿಯನು ವೇದ
ಪ್ರತಿಯುತ ಶ್ರೋತ್ರಿಯನಹಿಂಸಾ
ರತನು ಮಹಪುರುಷನು ಸುಧೀಮನು ಸಾಧುಸೇವಕನು
ಸತತ ಪರರುಪಕಾರಿ ದೇವ
ಪ್ರತತಿ ಪ್ರೀಯನು ಪರರ ಗುಣದು
ನ್ನತಿಯ ಸೈರಿಸದವನು ಕಷ್ಟನು ಯಕ್ಷ ಕೇಳ್ ಎಂದ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತಿಯು ಯಾರಲ್ಲಿದೆಯೋ ಅವನೇ ಕ್ಷತ್ರಿಯನು. ವೇದಪಾರಂಗತನೇ ಶ್ರೋತ್ರಿಯನು. ಅಹಿಂಸಾ ಪಾಲಕನೇ ಮಹಾಪುರುಷನು. ಸಾಧುಗಳ ಸೇವಕನೇ ಧೀಮಂತನು. ಪರೋಪಕಾರಿಯೇ ದೇವರಿಗೆ ಪ್ರಿಯನು. ಇತರರ ಗುಣೋನ್ನತಿಯನ್ನು ಯಾರು ಸಹಿಸುವುದಿಲ್ಲವೋ ಅವನೇ ನೀಚನು’ ಎಂದು ಧರ್ಮಜನು ಉತ್ತರಿಸಿದನು.
ಮೂಲ ...{Loading}...
ಧೃತಿಯುತ ಕ್ಷತ್ರಿಯನು ವೇದ
ಪ್ರತಿಯುತ ಶ್ರೋತ್ರಿಯನಹಿಂಸಾ
ರತನು ಮಹಪುರುಷನು ಸುಧೀಮನು ಸಾಧುಸೇವಕನು
ಸತತ ಪರರುಪಕಾರಿ ದೇವ
ಪ್ರತತಿ ಪ್ರೀಯನು ಪರರ ಗುಣದು
ನ್ನತಿಯ ಸೈರಿಸದವನು ಕಷ್ಟನು ಯಕ್ಷ ಕೇಳೆಂದ ॥41॥
೦೪೨ ನಿನ್ದ್ಯನಾವನು ಲೋಕದೊಳಗಭಿ ...{Loading}...
ನಿಂದ್ಯನಾವನು ಲೋಕದೊಳಗಭಿ
ವಂದ್ಯನಾವನು ಜೀವವಿರೆ ಮೃತ
ನೆಂದಡಾವನು ದೇಶಕಳಿವಹುದಾರ ದೆಸೆಯಿಂದ
ಸಂದ ಯಜ್ಞವದೆಂತು ಕೆಡುವುದು
ತಂದೆ ಹೇಳೈ ತನಗೆನಲು ಸಾ
ನಂದದಿಂದವೆ ಕಾಣಿಸಿದನಾ ಖಚರಗುತ್ತರವ ॥42|
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕದಲ್ಲಿ ನಿಂದ್ಯನೂ ವಂದ್ಯನೂ ಯಾರು ಯಾರು? ಜೀವವಿದ್ದೂ ಸತ್ತವನು ಯಾರು ? ಯಾರಿಂದಾಗಿ ದೇಶವು ಅವನತಿಯನ್ನು ಹೊಂದುತ್ತದೆ ? ಯಾಗಯಜ್ಞವು ಹೇಗೆ ಕೆಡುತ್ತದೆ ? - ಎಂದು ಕೇಳಲು ಧರ್ಮಜನು ಆನಂದದಿಂದ ಅವುಗಳಿಗೆ ಉತ್ತರ ಹೇಳಿದನು.
ಮೂಲ ...{Loading}...
ನಿಂದ್ಯನಾವನು ಲೋಕದೊಳಗಭಿ
ವಂದ್ಯನಾವನು ಜೀವವಿರೆ ಮೃತ
ನೆಂದಡಾವನು ದೇಶಕಳಿವಹುದಾರ ದೆಸೆಯಿಂದ
ಸಂದ ಯಜ್ಞವದೆಂತು ಕೆಡುವುದು
ತಂದೆ ಹೇಳೈ ತನಗೆನಲು ಸಾ
ನಂದದಿಂದವೆ ಕಾಣಿಸಿದನಾ ಖಚರಗುತ್ತರವ ॥42|
೦೪೩ ಕೇಳು ಪರನಿನ್ದಕನೆ ...{Loading}...
ಕೇಳು ಪರನಿಂದಕನೆ ನಿಂದ್ಯನು
ಹೇಳಲೇಂ ಪರಹಿತನೆ ವಂದ್ಯನು
ಹೇಳಿದಿಚ್ಛೆಗೆ ನಡೆವ ನೃಪನಿಂದಳಿವುದಾ ದೇಶ
ಕೇಳು ನಡೆವೆಣನೇ ದರಿದ್ರನು
ಸಾಲದೆನಿಸಿದ ದಕ್ಷಿಣೆಯ ಯ
ಜ್ಞಾಳಿ ನಿಷ್ಫಲವೆಂದು ನುಡಿದನು ರಾಯಕೌಂತೇಯ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರನಿಂದೆಗೈಯುವವನೇ ನಿಂದ್ಯನು. ಪರರಿಗೆ ಹಿತವನ್ನು ಮಾಡುವಾತನೇ ವಂದ್ಯನು. ಬೇರೆಯವರ ಮಾತಿನಂತೆ ನಡೆಯುವ ಅರಸನಿಂದ ದೇಶಕ್ಕೆ ಅವನತಿಯುಂಟಾಗುತ್ತದೆ. ಬಡವನೇ ಇದ್ದೂ ಸತ್ತವನು. ದಕ್ಷಿಣೆಯ ಕೊರತೆಯುಂಟಾದರೆ ಯಜ್ಞವು ನಿಷ್ಫಲವೆನಿಸುತ್ತದೆ ಎಂದನು.
ಮೂಲ ...{Loading}...
ಕೇಳು ಪರನಿಂದಕನೆ ನಿಂದ್ಯನು
ಹೇಳಲೇಂ ಪರಹಿತನೆ ವಂದ್ಯನು
ಹೇಳಿದಿಚ್ಛೆಗೆ ನಡೆವ ನೃಪನಿಂದಳಿವುದಾ ದೇಶ
ಕೇಳು ನಡೆವೆಣನೇ ದರಿದ್ರನು
ಸಾಲದೆನಿಸಿದ ದಕ್ಷಿಣೆಯ ಯ
ಜ್ಞಾಳಿ ನಿಷ್ಫಲವೆಂದು ನುಡಿದನು ರಾಯಕೌಂತೇಯ ॥43॥
೦೪೪ ನರಕಿ ಯಾವನು ...{Loading}...
ನರಕಿ ಯಾವನು ಸುಜನರಲಿ ಬಾ
ಹಿರನದಾವನು ಲೋಕವರಿಯಲು
ಹರಣವಿರೆ ಹೊಂದಿದನದಾವನು ಭೂಮಿಪಾಲರಲಿ
ಮರುಳದಾವನು ಮಾನ ಭಂಗದಿ
ಭರಿತನಾವನು ಹೇಳು ಧರ್ಮಜ
ಸರಸಿಯಲಿ ಬಳಿಕುದಕವನು ಕುಡಿಯೆಂದನಾ ಖಚರ ॥44॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವನು ನರಕವಾಸಿ ? ಯಾವನು ಸಜ್ಜನ ಬಾಹಿರನು ? ಅರಸರಲ್ಲಿ ಪ್ರಾಣವಿದ್ದೂ ಸತ್ತವನು ಯಾರು ? ಹುಚ್ಚನು ಯಾರು? ಮಾನರಹಿತನು ಯಾರು ? ಈ ಪ್ರಶ್ನೆಗಳಿಗೆ ಉತ್ತರ ಹೇಳಿ ನೀನು ನೀರನ್ನು ಕುಡಿಯಬಹುದು ಎಂದು ಯಕ್ಷನು ಹೇಳಿದನು.
ಮೂಲ ...{Loading}...
ನರಕಿ ಯಾವನು ಸುಜನರಲಿ ಬಾ
ಹಿರನದಾವನು ಲೋಕವರಿಯಲು
ಹರಣವಿರೆ ಹೊಂದಿದನದಾವನು ಭೂಮಿಪಾಲರಲಿ
ಮರುಳದಾವನು ಮಾನ ಭಂಗದಿ
ಭರಿತನಾವನು ಹೇಳು ಧರ್ಮಜ
ಸರಸಿಯಲಿ ಬಳಿಕುದಕವನು ಕುಡಿಯೆಂದನಾ ಖಚರ ॥44॥
೦೪೫ ಎನೆ ಕೃತಘ್ನನೆ ...{Loading}...
ಎನೆ ಕೃತಘ್ನನೆ ನರಕಿ ವಿದ್ಯಾ
ಧನ ಮದಾಂಧನೆ ಬಾಹಿರನು ಹೊ
ಕ್ಕನುವರವ ಹಿಂಗುವ ಮಹೀಪತಿ ಜೀವವಿರೆ ಮೃತನು
ವಿನುತ ಗುರುವರಿಯದನೆ ಮರುಳಂ
ಗನೆಯರಲಿ ವಿಶ್ವಾಸಪರನೇ
ಜನವರಿಯಲಭಿಮಾನಹೀನನು ಯಕ್ಷ ಕೇಳ್ ಎಂದ ॥45॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃತಘ್ನನಾದವನೇ ನರಕಿಯು. ವಿದ್ಯೆಯ ಮದ ಉಳ್ಳವನೇ ಬಾಹಿರನು. ರಣರಂಗದಲ್ಲಿ ಹಿಂಜರಿಯುವ ಅರಸನೇ ಬದುಕಿಯೂ ಸತ್ತವನು. ಗುರುವನ್ನು ಅರಿಯದಾತನೇ ಹುಚ್ಚನು. ಸ್ತ್ರೀಯರಲ್ಲಿ ವಿಶ್ವಾಸವಿಡುವವನೇ ಅಭಿಮಾನ ಶೂನ್ಯನು’ ಎಂದು ಉತ್ತರಿಸಿದನು.
ಮೂಲ ...{Loading}...
ಎನೆ ಕೃತಘ್ನನೆ ನರಕಿ ವಿದ್ಯಾ
ಧನ ಮದಾಂಧನೆ ಬಾಹಿರನು ಹೊ
ಕ್ಕನುವರವ ಹಿಂಗುವ ಮಹೀಪತಿ ಜೀವವಿರೆ ಮೃತನು
ವಿನುತ ಗುರುವರಿಯದನೆ ಮರುಳಂ
ಗನೆಯರಲಿ ವಿಶ್ವಾಸಪರನೇ
ಜನವರಿಯಲಭಿಮಾನಹೀನನು ಯಕ್ಷ ಕೇಳೆಂದ ॥45॥
೦೪೬ ಒಲಿದನೊಡಲನು ಧರ್ಮಸಙ್ಗತಿ ...{Loading}...
ಒಲಿದನೊಡಲನು ಧರ್ಮಸಂಗತಿ
ಗಳ ಸುಸಂವಾದದಲಿ ನಿಜತನು
ಪುಳಕವುಬ್ಬರಿಸಿದುದು ಗಬ್ಬರಿಸಿದುದು ದುಷ್ಕೃತವ
ಎಲೆ ಮಹೀಪತಿ ಮೆಚ್ಚಿದೆನು ಬೇ
ಡಳಿದ ತಮ್ಮಂದಿರಲಿವೊಬ್ಬನ
ತಲೆಯ ಬದುಕಿಸಿ ಕೊಡುವೆನೆನೆ ಯಮತನುಜನಿಂತೆಂದ ॥46॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಶಾಸ್ತ್ರ ರಹಸ್ಯಗಳ ಸಂವಾದಕ್ಕೆ ಮೆಚ್ಚಿ ಯಕ್ಷನು ರೋಮಾಂಚನಗೊಂಡು ದುಷ್ಕೃತಗಳನ್ನು ಕಳೆದು ‘ಅರಸನೇ ಮೆಚ್ಚಿದೆ ಸತ್ತುಹೋದ ತಮ್ಮಂದಿರಲ್ಲಿ ಒಬ್ಬನನ್ನು ಬದುಕಿಸಿ ಕೊಡುತ್ತೇನೆ. ಕೇಳಿಕೋ ಎಂದು ಹೇಳಿದನು. ಆಗ ಧರ್ಮರಾಯ ಹೀಗೆಂದನು.
ಮೂಲ ...{Loading}...
ಒಲಿದನೊಡಲನು ಧರ್ಮಸಂಗತಿ
ಗಳ ಸುಸಂವಾದದಲಿ ನಿಜತನು
ಪುಳಕವುಬ್ಬರಿಸಿದುದು ಗಬ್ಬರಿಸಿದುದು ದುಷ್ಕೃತವ
ಎಲೆ ಮಹೀಪತಿ ಮೆಚ್ಚಿದೆನು ಬೇ
ಡಳಿದ ತಮ್ಮಂದಿರಲಿವೊಬ್ಬನ
ತಲೆಯ ಬದುಕಿಸಿ ಕೊಡುವೆನೆನೆ ಯಮತನುಜನಿಂತೆಂದ ॥46॥
೦೪೭ ಅಸುವನಿತ್ತೈ ಖಚರಪತಿ ...{Loading}...
ಅಸುವನಿತ್ತೈ ಖಚರಪತಿ ಜೀ
ವಿಸಲಿ ನಕುಲನು ಧನ್ಯ ನಾನೆನೆ
ನಸುನಗುತ ಚೇತರಿಸಿ ಮೈ ಮುರಿದೆದ್ದನಾ ನಕುಲ
ನಿಶಿತಮತಿ ಮೆಚ್ಚಿದೆನು ಬೇಡಿ
ನ್ನಸುವನೊಬ್ಬಂಗಿತ್ತೆನೆನೆ ಜೀ
ವಿಸಲಿ ಸಹದೇವಾಂಕನೆಂದನು ಧರ್ಮನಂದನನು ॥47॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಕ್ಷನೇ, ಪ್ರಾಣವೀಯುವೆಯಾದರೆ ನಕುಲನು ಬದುಕಲಿ. ನಾನು ಧನ್ಯನಾಗುತ್ತೇನೆ. ಎಂದನು. ಆ ಕೂಡಲೇ ನಕುಲನು ನಗುತ್ತಾ ಮೈಮುರಿದು ಎದ್ದು ಕುಳಿತನು. ಆಗ ಯಕ್ಷನು ಮತ್ತೆ - ‘ಜಾಣನೇ, ಮೆಚ್ಚಿದೆ. ಇನ್ನೊಬ್ಬನನ್ನು ಬೇಡು. ಬದುಕಿಸುತ್ತೇನೆ’ ಎಂದನು. ಆಗ ಧರ್ಮರಾಯನು ‘ಸಹದೇವನು ಬದುಕಲಿ’ ಎಂದನು.
ಮೂಲ ...{Loading}...
ಅಸುವನಿತ್ತೈ ಖಚರಪತಿ ಜೀ
ವಿಸಲಿ ನಕುಲನು ಧನ್ಯ ನಾನೆನೆ
ನಸುನಗುತ ಚೇತರಿಸಿ ಮೈ ಮುರಿದೆದ್ದನಾ ನಕುಲ
ನಿಶಿತಮತಿ ಮೆಚ್ಚಿದೆನು ಬೇಡಿ
ನ್ನಸುವನೊಬ್ಬಂಗಿತ್ತೆನೆನೆ ಜೀ
ವಿಸಲಿ ಸಹದೇವಾಂಕನೆಂದನು ಧರ್ಮನಂದನನು ॥47॥
೦೪೮ ಜನಪ ನಿನ್ನಾಳಾಪವೆನ್ನಯ ...{Loading}...
ಜನಪ ನಿನ್ನಾಳಾಪವೆನ್ನಯ
ಮನಕೆ ವಿಸ್ಮಯವಾಯ್ತು ಭೀಮಾ
ರ್ಜುನರು ನಿನ್ನೊಡಹುಟ್ಟಿದರು ನೀನವರಿಗತಿಹಿತನು
ಅನುಜರವರಿರಲೇಕೆ ಮಾದ್ರೀ
ತನುಜರೆಂಬರ ಬಯಸಿದೈ ಹೇ
ಳೆನಲು ನಸುನಗೆ ಮೊಳೆಯೆ ನುಡಿದನು ಧರ್ಮನಂದನನು ॥48॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ, ನಿನ್ನ ಮಾತು ನನಗೆ ಅಚ್ಚರಿಯನ್ನುಂಟು ಮಾಡಿದೆ. ಭೀಮಾರ್ಜುನರು ನಿನ್ನ ಸೋದರರು, ಅಲ್ಲದೆ ಅವರಿಗೆ ನೀನು ತುಂಬಾ ಬೇಕಾದವನು. ಅವರಿರುವಾಗ ನೀನೇಕೆ ಮಾದ್ರೇಯರನ್ನು ಬದುಕಿಸ ಬಯಸಿದೆ ? ಹೇಳು ? ಎಂದು ಯಕ್ಷನು ಕೇಳಲು, ಧರ್ಮರಾಯನು ನಸುನಗುತ್ತಾ ಇಂತೆಂದನು.
ಮೂಲ ...{Loading}...
ಜನಪ ನಿನ್ನಾಳಾಪವೆನ್ನಯ
ಮನಕೆ ವಿಸ್ಮಯವಾಯ್ತು ಭೀಮಾ
ರ್ಜುನರು ನಿನ್ನೊಡಹುಟ್ಟಿದರು ನೀನವರಿಗತಿಹಿತನು
ಅನುಜರವರಿರಲೇಕೆ ಮಾದ್ರೀ
ತನುಜರೆಂಬರ ಬಯಸಿದೈ ಹೇ
ಳೆನಲು ನಸುನಗೆ ಮೊಳೆಯೆ ನುಡಿದನು ಧರ್ಮನಂದನನು ॥48॥
೦೪೯ ಸಾವು ಬೊಪ್ಪಙ್ಗಾಗೆ ...{Loading}...
ಸಾವು ಬೊಪ್ಪಂಗಾಗೆ ಮಾದ್ರೀ
ದೇವಿ ತನ್ನನು ಕರೆದು ಶಿಶುಗಳ
ನೋವು ಕೇಡಿದು ನಿನ್ನದಾರೈದಿವರ ಸಲಹುವುದು
ಭಾವ ಭೇದವನಣುವ ಬಗೆಯದೆ
ಕಾವುದೆಲೆ ಮಗನೆಂದು ಬೆಸಸಿದ
ಳಾವ ಪರಿಯಲಿ ಮರೆವೆನೈ ಮಾದ್ರೀಕುಮಾರಕರ ॥49॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆಯವರು ಮೃತರಾದಾಗ, ಮಾದ್ರೀದೇವಿಯವರು ನನ್ನನ್ನು ಕರೆದು - ‘ಮಕ್ಕಳಾದ ನಕುಲ ಸಹದೇವರ ಸಂಕಟ ನಿನ್ನದೆಂದು ತಿಳಿ. ಅವರನ್ನು ಪ್ರೀತಿಯಿಂದ ಕಾಪಾಡು. ಯಾವುದೇ ಪಕ್ಷಪಾತ ಮಾಡದೆ ನೋಡಿಕೊಳ್ಳು’ ಎಂದು ಹೇಳಿದಳು. ಹಾಗಿರುವಾಗ ಅವರನ್ನು ನಾನು ಹೇಗೆ ಮರೆಯಲಿ ?
ಮೂಲ ...{Loading}...
ಸಾವು ಬೊಪ್ಪಂಗಾಗೆ ಮಾದ್ರೀ
ದೇವಿ ತನ್ನನು ಕರೆದು ಶಿಶುಗಳ
ನೋವು ಕೇಡಿದು ನಿನ್ನದಾರೈದಿವರ ಸಲಹುವುದು
ಭಾವ ಭೇದವನಣುವ ಬಗೆಯದೆ
ಕಾವುದೆಲೆ ಮಗನೆಂದು ಬೆಸಸಿದ
ಳಾವ ಪರಿಯಲಿ ಮರೆವೆನೈ ಮಾದ್ರೀಕುಮಾರಕರ ॥49॥
೦೫೦ ಎನಲು ಮೆಚ್ಚಿದನುಳಿದ ...{Loading}...
ಎನಲು ಮೆಚ್ಚಿದನುಳಿದ ಭೀಮಾ
ರ್ಜುನರ ಹರಣವನಿತ್ತು ನಿಜ ನಂ
ದನನನಪ್ಪಿದನೊಲವಿನಲಿ ಯಮರಾಜನೈತಂದು
ತನುಜ ಸಾಕಿನ್ನಾಯ್ತು ನಿಮಗೀ
ವನನಿವಾಸವು ಬೀಳುಗೊಡು ಮುನಿ
ಜನವನಿನ್ನಜ್ಞಾತ ವಾಸಕೆ ಮನವ ಮಾಡೆಂದ ॥50॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಧರ್ಮಜನು ಹೇಳಲು, ಯಮರಾಜನೇ ಪ್ರತ್ಯಕ್ಷನಾಗಿ ಮೆಚ್ಚುಗೆಯನ್ನು ಸೂಚಿಸುತ್ತಾ ಭೀಮಾರ್ಜುನರನ್ನು ಬದುಕಿಸಿ, ಧರ್ಮಜನನ್ನು ಪ್ರೀತಿಯಿಂದ ಆಲಿಂಗಿಸಿದನು. ‘ಮಗನೇ, ಸಾಕು. ಈ ವನವಾಸವು ಮುಗಿಯಿತು. ಮುಂದೆ ಅಜ್ಞಾತವಾಸಕ್ಕೆ ಸಿದ್ಧನಾಗು’ ಎಂದು ಹೇಳಿದನು.
ಮೂಲ ...{Loading}...
ಎನಲು ಮೆಚ್ಚಿದನುಳಿದ ಭೀಮಾ
ರ್ಜುನರ ಹರಣವನಿತ್ತು ನಿಜ ನಂ
ದನನನಪ್ಪಿದನೊಲವಿನಲಿ ಯಮರಾಜನೈತಂದು
ತನುಜ ಸಾಕಿನ್ನಾಯ್ತು ನಿಮಗೀ
ವನನಿವಾಸವು ಬೀಳುಗೊಡು ಮುನಿ
ಜನವನಿನ್ನಜ್ಞಾತ ವಾಸಕೆ ಮನವ ಮಾಡೆಂದ ॥50॥
೦೫೧ ನೀವು ಪಾಣ್ಡವರೆನ್ದು ...{Loading}...
ನೀವು ಪಾಂಡವರೆಂದು ನಿಮ್ಮನ
ದಾವ ಮಾನವರರಿಯದಿರಲಿ ಮ
ಹಾ ವಿಭವದಲಿ ಬೆಳಗುವುದು ಬಳಿಕವನಿಮಂಡಲವ
ದೈವಬಲ ನಿಮಗುಂಟು ಮೇಣಿ
ನ್ನಾವುದರಿದಲ್ಲೆಂದು ತನುಜನ
ನೋವಿ ಮನ್ನಿಸಿ ಬೀಳುಗೊಟ್ಟನು ಪಾಂಡುನಂದನರ ॥51॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಅವಧಿಯಲ್ಲಿ ನೀವು ಪಾಂಡವರೆಂಬುದನ್ನು ಯಾವ ಮಾನವರೂ ತಿಳಿಯದಿರಲಿ. ಅನಂತರ ಈ ಲೋಕವನ್ನು ವೈಭವದಿಂದ ಪಾಲಿಸಿರಿ. ನಿಮಗೆ ದೈವಬಲವಿದೆ. ಯಾವುದು ಕೂಡಾ ಅಸಾಧ್ಯವಲ್ಲ. ಎಂದು ಮಗನಾದ ಧರ್ಮಜನನ್ನು ಮನ್ನಿಸಿ, ಪಾಂಡುಸುತರನ್ನು ಬೀಳ್ಗೊಟ್ಟನು.
ಮೂಲ ...{Loading}...
ನೀವು ಪಾಂಡವರೆಂದು ನಿಮ್ಮನ
ದಾವ ಮಾನವರರಿಯದಿರಲಿ ಮ
ಹಾ ವಿಭವದಲಿ ಬೆಳಗುವುದು ಬಳಿಕವನಿಮಂಡಲವ
ದೈವಬಲ ನಿಮಗುಂಟು ಮೇಣಿ
ನ್ನಾವುದರಿದಲ್ಲೆಂದು ತನುಜನ
ನೋವಿ ಮನ್ನಿಸಿ ಬೀಳುಗೊಟ್ಟನು ಪಾಂಡುನಂದನರ ॥51॥
೦೫೨ ಅರಣಿಯನು ತನ್ದಿತ್ತು ...{Loading}...
ಅರಣಿಯನು ತಂದಿತ್ತು ಧರಣೀ
ಸುರನ ಮನ್ನಿಸಿ ಮುನಿಗಳನು ಭೂ
ಸುರರ ಸಚಿವರ ಪರಿಕರರ ಧೌಮ್ಯಾದಿ ಮಂತ್ರಿಗಳ
ವರ ಸುಭದ್ರಾದೇವಿ ಪಾಂಚಾ
ಲರನು ಧೃಷ್ಟದ್ಯುಮ್ನ ಮೊದಲಾ
ಗಿರೆ ನಿಜಾಪ್ತರನವರವರ ಮಂದಿರಕೆ ಕಳುಹಿದನು ॥52॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಣಿಯನ್ನು ಬ್ರಾಹ್ಮಣನಿಗೆ ಕೊಟ್ಟು, ಮುನಿಗಳನ್ನು ಉಪಚರಿಸಿ, ಬ್ರಾಹ್ಮಣರು, ಮಂತ್ರಿಗಳು, ಪರಿಚಾರಕರು, ಧೌಮ್ಯಾದಿ ಋಷಿಗಳು, ಸುಭದ್ರೆ, ದ್ರುಪದರಾಜ, ಧೃಷ್ಟದ್ಯುಮ್ನ ಮುಂತಾದ ಎಲ್ಲ ಆಪ್ತ ಬಂಧುಗಳನ್ನು ಅವರವರ ಮನೆಗೆ ಧರ್ಮರಾಯನು ಕಳುಹಿಸಿದನು.
ಮೂಲ ...{Loading}...
ಅರಣಿಯನು ತಂದಿತ್ತು ಧರಣೀ
ಸುರನ ಮನ್ನಿಸಿ ಮುನಿಗಳನು ಭೂ
ಸುರರ ಸಚಿವರ ಪರಿಕರರ ಧೌಮ್ಯಾದಿ ಮಂತ್ರಿಗಳ
ವರ ಸುಭದ್ರಾದೇವಿ ಪಾಂಚಾ
ಲರನು ಧೃಷ್ಟದ್ಯುಮ್ನ ಮೊದಲಾ
ಗಿರೆ ನಿಜಾಪ್ತರನವರವರ ಮಂದಿರಕೆ ಕಳುಹಿದನು ॥52॥
೦೫೩ ಹರಿ ನಮೋ ...{Loading}...
ಹರಿ ನಮೋ ಜಯ ಭಕ್ತರಘ ಸಂ
ಹರ ನಮೋ ಜಯ ಸಕಲ ಭುವನೇ
ಶ್ವರ ನಮೋ ಜಯ ಕೃಷ್ಣ ಕೇಶವ ವಿಷ್ಣು ವಾಮನನೆ
ಪರಮ ಪುಣ್ಯಶ್ಲೋಕ ಜಯ ಜಗ
ಭರಿತ ನಿರ್ಮಳ ರೂಪ ಜಯ ಜಯ
ಕರುಣಿ ರಕ್ಷಿಸು ರಾಯ ಗದುಗಿನ ವೀರನಾರಯಣ ॥53॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಹರಿಗೆ ವಂದನೆ. ಭಕ್ತರ ಪಾಪವನ್ನು ಕಳೆಯುವಾತನಿಗೆ ವಂದನೆ. ಸರ್ವಲೋಕ ಸ್ವಾಮಿಗೆ ನಮಸ್ಕಾರ. ಕೃಷ್ಣ, ಕೇಶವ, ವಿಷ್ಣು, ವಾಮನ ರೂಪಿಗೆ ನಮಸ್ಕಾರ. ಪುಣ್ಯ ಶ್ಲೋಕನೂ ಜಗತ್ತನ್ನೇ ವ್ಯಾಪಿಸಿದ ನಿರ್ಮಲ ರೂಪನೂ ಆದ ಕರುಣಾಮಯಿ ಗದುಗಿನ ವೀರ ನಾರಾಯಣ ಸ್ವಾಮಿಯು ಕಾಪಾಡಲಿ.
ಮೂಲ ...{Loading}...
ಹರಿ ನಮೋ ಜಯ ಭಕ್ತರಘ ಸಂ
ಹರ ನಮೋ ಜಯ ಸಕಲ ಭುವನೇ
ಶ್ವರ ನಮೋ ಜಯ ಕೃಷ್ಣ ಕೇಶವ ವಿಷ್ಣು ವಾಮನನೆ
ಪರಮ ಪುಣ್ಯಶ್ಲೋಕ ಜಯ ಜಗ
ಭರಿತ ನಿರ್ಮಳ ರೂಪ ಜಯ ಜಯ
ಕರುಣಿ ರಕ್ಷಿಸು ರಾಯ ಗದುಗಿನ ವೀರನಾರಯಣ ॥53॥
೦೫೪ ಇತಿ ಶ್ರೀಮದಚಿನ್ತ್ಯ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಅರಣ್ಯಪರ್ವಂ ಸಮಾಪ್ತಮಾದುದು.
ಸರ್ವ-ಟೀಕೆಗಳು ...{Loading}...
ಮೂಲ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಅರಣ್ಯಪರ್ವಂ ಸಮಾಪ್ತಮಾದುದು.