೨೩

೦೦೦ ಸೂ ಧರಣಿಪತಿ ...{Loading}...

ಸೂ. ಧರಣಿಪತಿ ತಂದಿತ್ತನಾ ದ್ವಿಜ
ನರಣಿಯನು ಬಳಿಕಮಲ ಧರ್ಮದ
ಸರಣಿಯಿಂದೆತ್ತಿದನು ವನದಲಿ ನಿಜಸಹೋದರರ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ರಾಮಾಯಣವನಾ ಮುನಿ
ಹೇಳಿದನು ಹೂಳಿದನು ಭೂಪನ ಮಾನಸವ್ಯಥೆಯ
ಹೇಳಿದನು ಸಾವಿತ್ರಿಯುನ್ನತ
ಶೀಲವನು ಪತಿಭಕ್ತಿಯಿಂದವೆ
ಕಾಲ ನುಂಗಿದ ಪತಿಯ ಮರಳಿಚಿ ತಂದ ಸಂಗತಿಯ ॥1॥

೦೦೨ ಪತಿ ಭಕುತಿಯುನ್ನತಿಕೆಯಲಿ ...{Loading}...

ಪತಿ ಭಕುತಿಯುನ್ನತಿಕೆಯಲಿ ನಿ
ಷ್ಠತೆಯಲಾ ಸಾವಿತ್ರಿಯಾಕೆಯ
ನುತ ಚರಿತ್ರದವೋಲು ನಿಮ್ಮಯ ದ್ರೌಪದಾದೇವಿ
ಹಿತವನಾಚರಿಪವಳು ವಂಶೋ
ನ್ನತಿಯನುದ್ಧರಿಸುವಳು ನಿಮಗುಪ
ಹತಿಯದೆಲ್ಲಿಯದೆಂದು ಮಾರ್ಕಂಡೇಯ ಮುನಿ ನುಡಿದ ॥2॥

೦೦೩ ಮಾನನಿಧಿ ಸಾವಿತ್ರಿಯೌಪಾ ...{Loading}...

ಮಾನನಿಧಿ ಸಾವಿತ್ರಿಯೌಪಾ
ಖ್ಯಾನವನು ಕೇಳಿದನು ಚಿತ್ತ
ಗ್ಲಾನಿಯನು ಬೀಳ್ಕೊಟ್ಟನಮಳೋತ್ಸಾಹ ಭಾವದಲಿ
ಕಾನನಾನುಭವಕ್ಕೆ ಕಡೆಯಿ
ನ್ನೇನು ನಮಗೆನುತತುಳ ಹರುಷಾ
ನೂನ ಕುಂತೀತನಯರಿದ್ದರು ಪರ್ಣಶಾಲೆಯಲಿ ॥3॥

೦೦೪ ಹಿಙ್ಗಿದವು ಹನ್ನೊನ್ದುವರೆ ...{Loading}...

ಹಿಂಗಿದವು ಹನ್ನೊಂದುವರೆ ವರು
ಷಂಗಳಟವೀ ತಟದೊಳಿರಲರು
ದಿಂಗಳೊಳಗೊಂದಾದುದಾಪತ್ತಾ ಮಹೀಶರಿಗೆ
ತುಂಗ ವಿಕ್ರಮನಾ ಮುನೀಶ್ವರ
ಸಂಗತಿಯ ಸೊಗಸಿನಲಿ ಬಹು ದಿವ
ಸಂಗಳನು ನೂಕಿದನು ನೃಪತಿ ಪಲಾಶ ಶಾಲೆಯಲಿ ॥4॥

೦೦೫ ವಿಮಲ ವಾನಪ್ರಸ್ಥ ...{Loading}...

ವಿಮಲ ವಾನಪ್ರಸ್ಥ ಜನದಾ
ಶ್ರಮದೊಳಗೆ ಸಾರಂಗ ಮೃಗವಿಳೆ
ಯಮರನೌಪಾಸನದ ಸಾಧನದರಣಿಯನು ಕೊಂಡು
ಕಮಲಸಖನುದಯದಲಿ ಸಂಧ್ಯಾ
ರಮಣಿಯಭಿವಂದನೆಗೆ ಸನ್ಮುನಿ
ಸಮಿತಿ ಹಿಂಗಿದ ಹಿಂದೆ ಕೊಂಡೋಡಿತು ವನಾಂತರಕೆ ॥5॥

೦೦೬ ಎಲೆಲೆ ಮೃಗವರಣಿಯನು ...{Loading}...

ಎಲೆಲೆ ಮೃಗವರಣಿಯನು ವಂಚಿಸಿ
ಕಳೆದುದೋ ಕಾಳಾಯ್ತೆನುತ ತ
ಲ್ಲಣಿಸಿದಳು ನಿಜಪತಿಯ ಭಯದಲಿ ಮುನಿಯ ವಧುವಂದು
ಹೊಳೆಯ ಸಂಧ್ಯಾಸಾಧುಗಳು ಕಳ
ವಳಿಸಲಾ ದ್ವಿಜನರಿದು ಪಾರ್ಥಿವ
ರಿಳೆಯ ಬಿಟ್ಟರಲಾಯೆನುತ ಹರಿತಂದನಾಶ್ರಮಕೆ ॥6॥

೦೦೭ ಎಲೆ ಯುಧಿಷ್ಠಿರ ...{Loading}...

ಎಲೆ ಯುಧಿಷ್ಠಿರ ದೋಷವಿದು ನಿ
ನ್ನಳವಿಗೈದುವುದರಣಿಯನು ಮೃಗ
ವೆಳೆದು ಕೊಂಡೀ ಹೊದರ ಹೊಕ್ಕುದು ಬಹಳ ಕಾನನದ
ಅಳಿದುದನ್ವಾಧಾನವಿತರರ
ಹಳಿವಿಗಾನೊಳಗಾದೆನೆನೆ ಮುನಿ
ತಿಲಕನೌಪದ್ರವವನರಿದವನೀಶ ಹೊರವಂಟ ॥7॥

೦೦೮ ಜಾಳಿಸಿದ ಹದವಿಲ್ಲು ...{Loading}...

ಜಾಳಿಸಿದ ಹದವಿಲ್ಲು ಮುಮ್ಮೊನೆ
ಬೋಳೆಗಳ ನಿಡುಗುಂಡುಗಳ ಬಡಿ
ಕೋಲುಗಳನೆಕ್ಕಡವನುರು ಪಾರಿವದ ಕುಪ್ಪಸವ
ಮೇಳವಿಸಿ ಹೊರವಂಟನವನೀ
ಪಾಲ ಬೇಂಟೆಗೆ ಮೃಗದ ಹೆಜ್ಜೆಯ
ಮೇಲೆ ಹೆಜ್ಜೆಯ ನಡೆಸುವನು ತನ್ನನುಜರೊಡಗೂಡಿ ॥8॥

೦೦೯ ತರಣಿಯನ್ವಯನನ್ದು ಮಾಯಾ ...{Loading}...

ತರಣಿಯನ್ವಯನಂದು ಮಾಯಾ
ಹರಿಣನನು ಬೆಂಬತ್ತಿ ವಿಹ್ವಲ
ಕರಣನಾದಂದದಲಿ ಮಹದಾರಣ್ಯ ವಾಸದಲಿ
ಧರಣಿಪತಿ ಬಳಿಸಲಿಸಿ ಮುನಿಪತಿ
ಯರಣಿಯನು ಕೊಂಡೊಯ್ದ ಹುಲು ಮೃಗ
ಸರಣಿಯಲಿ ಸೈವರಿದರಂದಾಕರ್ಣ ಮಾರ್ಗಣರು ॥9॥

೦೧೦ ಇರುಬಿನೊಳಗದೆ ಕುತ್ತು ...{Loading}...

ಇರುಬಿನೊಳಗದೆ ಕುತ್ತು ಹೆಮ್ಮರ
ದುರುಗಳೊಳಗದೆ ತೊಡಚು ಬಾಣವ
ನೆರಗಿ ತಿವಿ ತೋಡಿಟ್ಟೆಯಲಿ ಸಿಡಿವಲೆಯವೊಡ್ಡೆನುತ
ಅರಸಿದರು ನಟ್ಟಡವಿಯಲಿ ಮುಂ
ದುರುಬಿದರು ಬೆಳ್ಳಾರ ಬಲೆಗಳ
ಹರಹಿ ಸೊಪ್ಪಿನ ತೋಹಿನಲಿ ಸಿಲುಕಿಸಿದರಾ ಮೃಗವ ॥10॥

೦೧೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಹಿಮಾಂಶು ವಿ
ಶಾಲ ವಂಶಜರಡವಿಯಲಿ ಮುನಿ
ಪಾಲನರಣಿಯನೊಯ್ದ ಮೃಗವನು ಹಿಡಿದರೊಳಬಿದ್ದು
ಮೇಲೆ ತೋರಿತು ಢಗೆ ಮಹೀಶರ
ತಾಳಿಗೆಗಳೊಣಗಿದವು ಬಳಲಿಕೆ
ಯೇಳಿಗೆಯಲಾಸನ್ನ ಲತೆಯಿರುಬಿನಲಿ ಮಲಗಿದರು ॥11॥

೦೧೨ ದೂರವಾದುದು ನಿಳಯವೀ ...{Loading}...

ದೂರವಾದುದು ನಿಳಯವೀ ಕಾಂ
ತಾರ ನಿರ್ಜಲವೈದಲಂಘ್ರಿಗೆ
ಭಾರ ಪಥವಿನ್ನೇನು ಹದನೆಂದರಸನಳವಳಿದು
ನೀರ ತಾರೈ ಹೋಗು ನಕುಲ ಸ
ರೋರುಹದ ಪತ್ರದಲಿ ಪೊಟ್ಟಣ
ವಾರಿಯನು ಕಟ್ಟೆಂದು ಕುಂತೀಸೂನು ನೇಮಿಸಿದ ॥12॥

೦೧೩ ಬಗೆದನೇ ಬಳಲಿಕೆಯನತಿ ...{Loading}...

ಬಗೆದನೇ ಬಳಲಿಕೆಯನತಿ ಸಹ
ಸಿಗಳ ದೇವನು ಹಿರಿಯನಾಜ್ಞೆಯ
ನುಗುಳಲಮ್ಮದೆ ಧನುವ ಕೊಂಡನು ನಡೆದನತಿ ಪಥವ
ದೃಗುಮನೋಮಂಜುಳದ ಕಂಜಾ
ಳಿಗಳ ಕಡು ಪರಿಮಳದ ಪಸರದ
ಸೊಗಸು ತೀವಿತು ವಿಮಳ ಪದ್ಮಾಕರದ ಪವಮಾನ ॥13॥

೦೧೪ ಹಿತವನೈ ಹಿರಿಯಯ್ಯನೆನಗೆಂ ...{Loading}...

ಹಿತವನೈ ಹಿರಿಯಯ್ಯನೆನಗೆಂ
ದತುಳಬಲ ಪರಿತೋಷದಲಿ ಮಾ
ರುತನ ಬಳಿವಿಡಿದೈದಿದನು ನಕುಲಾಂಕನಾ ಕೊಳನ
ಹತಿಯಹುದು ನಿನಗೊಮ್ಮೆ ತಪ್ಪದು
ಹಿತವು ಬಳಿಕೆಂಬಂತೆ ಖಗ ಸಂ
ತತಿಗಳುಲಿದೊಪ್ಪಿದವು ಪದ್ಮಾಕರದ ತೀರದಲಿ ॥14॥

೦೧೫ ಇರವಿನಲಿ ರಚನೆಯಲಿ ...{Loading}...

ಇರವಿನಲಿ ರಚನೆಯಲಿ ಮಧುರೋ
ತ್ತರವ ನೆರೆ ಬೀರುತ್ತಲಂತಃ
ಕರಣದಲಿ ಕತ್ತರಿಸಿ ಕೊಂಡಿಹ ಕುಜನರಂದದಲಿ
ಪರಿಮಳದ ಪಸರದಲಿ ಶೈತ್ಯೋ
ತ್ಕರುಷದಲಿ ಲೇಸೆನಿಸಿ ಕುಡಿದೊಡೆ
ಹರಣವನೆ ಹಿಂಗಿಸುವ ಸರಸಿಯ ವಾರಿ ಚೆಲುವಾಯ್ತು ॥15॥

೦೧೬ ಖಳನ ಸತ್ಯದವೋಲು ...{Loading}...

ಖಳನ ಸತ್ಯದವೋಲು ವಂಚಿಸಿ
ಗೆಲಿದುದಾತನ ಮನವ ಮಾಯೆಯ
ಚೆಲುವಿನಂತಿರೆ ಚದುರು ಕೆಡಿಸಿತು ತಿಳಿಯಲರಿದೆನಿಸಿ
ಲಲನೆಯರ ಹೃದಯದವೊಲೀಕ್ಷಿಸೆ
ನೆಲೆಯನೀಯದ ಕೃತಕ ಸರಸಿಯ
ಸುಲಭತೆಗೆ ಸಹದೇವನಣ್ಣನು ಸೋತು ನಡೆತಂದ ॥16॥

೦೧೭ ಇಳಿದು ...{Loading}...

ಇಳಿದು ಮೊನೆಮುಂಜೆರಗನಗ್ರಕೆ
ಬಲಿದು ಹೊಕ್ಕನು ಜಾನುದಘ್ನ
ಸ್ಥಳವನಂಜುಳಿಯಿಂದ ತೊಳೆದನು ಚರಣ ವದನವನು
ತುಳುಕಿದನು ವಾರಿಯನು ತನ್ನಯ
ಬಳಲಿಕೆಯನಪಹರಿಸಿ ಭೂಪತಿ
ಗಳಿಗೆ ಬಳಿಕಾನೊಯ್ವೆನೆಂದನು ತನ್ನ ಮನದೊಳಗೆ ॥17॥

೦೧೮ ಜಲವನಞ್ಜುಳಿಯಿನ್ದ ಮೊಗೆದೀಂ ...{Loading}...

ಜಲವನಂಜುಳಿಯಿಂದ ಮೊಗೆದೀಂ
ಟಲು ನೆನೆಯಲಭ್ರದಲಿ ಗುಹ್ಯಕ
ನುಲಿದನೆಲೆ ನಕುಲಾಂಕ ಮಾಣೆನಗುತ್ತರವ ರಚಿಸಿ
ಬಳಿಕ ಸಲಿಲವನೀಂಟು ಮಾತುಗ
ಳೊಳವು ಮರುಳಾಗದಿರೆನಲು ಢಗೆ
ಗಳುಕಿ ಬಳಲಿದು ಮೇಲನಾಲಿಸಿ ಮೀರಿದನು ನುಡಿಯ ॥18॥

೦೧೯ ಜಡಿಯಲೆರಡಳ್ಳೆಗಳು ಕೊರಳಲಿ ...{Loading}...

ಜಡಿಯಲೆರಡಳ್ಳೆಗಳು ಕೊರಳಲಿ
ಕುಡಿದನುದಕವನಬುಜದೆಲೆಯಲಿ
ಹಿಡಿದನನಿಬರಿಗಮಳ ಜಲವನು ಮರಳಿ ನಿಮಿಷದಲಿ
ತಡಿಯನಡರಿದು ಧೊಪ್ಪನವನಿಗೆ
ಕೆಡೆದು ಪರವಶನಾದನಿತ್ತಲು
ತಡೆದನೇಕೆಂದಟ್ಟಿದನು ಸಹದೇವನನು ನೃಪತಿ ॥19॥

೦೨೦ ತವಕ ಮಿಗೆ ...{Loading}...

ತವಕ ಮಿಗೆ ನಡೆತಂದು ಮೈಮರೆ
ದವನ ಕಂಡನು ಬಹಳ ಢಗೆ ಪರಿ
ಭವಿಸಲುದಕವ ಕುಡಿದು ಬಳಿಕಾರೈವೆನಿದನೆನುತ
ಲವಲವಿಸಿ ತಾಳಿಗೆಯ ತಲ್ಲಣ
ದವನು ಹೊಕ್ಕನು ಕೊಳವನಮಳಾಂ
ಬುವನು ಮೊಗೆದನು ಮೊಗಕೆ ಮೋಹಲು ಮೇಲೆ ದನಿಯಾಯ್ತು ॥20॥

೦೨೧ ಬಿಡು ಬಿಡೆಲೆ ...{Loading}...

ಬಿಡು ಬಿಡೆಲೆ ಸಹದೇವಯೆನ್ನಯ
ನುಡಿಗೆ ಮಾರುತ್ತರವ ಕೊಡು ಮುಂ
ಗೆಡದೆ ಮುಂದಣ ನಿನ್ನವನ ಕಂಡಿಂತು ಮರುಳಹರೆ
ಮಡಿಯಲೆಳಸದಿರೆನಲು ಢಗೆಯವ
ಗಡಿಸೆ ಸೈರಿಸಲರಿಯದುತ್ತರ
ಗೊಡದೆ ಜಲವೀಂಟಿದನು ದಾಂಟಿದುದಸು ಕಳೇಬರವ ॥21॥

೦೨೨ ಈತನತಿ ಮೈಮರೆದನತ್ತಲು ...{Loading}...

ಈತನತಿ ಮೈಮರೆದನತ್ತಲು
ಕಾತರಿಸಿದನು ಭೂಪನಿಬ್ಬರ
ಮಾತು ಮುಖದಿರುಹಿತ್ತು ಶಿಶುಗಳಿಗಾವ ಹದನಾಯ್ತೊ
ತಾತ ಹೋಗೈ ಪಾರ್ಥ ಬಾಲಕ
ರೇತಕತ್ತಲೆ ತಡೆದರೆಂಬುದ
ನೀ ತಿಳಿದು ತಾ ಜಲವನೆನೆ ಕೈಗೊಂಡು ನಡೆತಂದ ॥22॥

೦೨೩ ಹಿಮದ ಗಾಳಿಯ ...{Loading}...

ಹಿಮದ ಗಾಳಿಯ ಪಥವಿಡಿದು ಮ
ಧ್ಯಮದ ಪಾಂಡವನೈತರುತ ಮುಂ
ದಮಲ ಸರಸಿಯ ತೀರದಲಿ ಕೀಲಿಸಿದ ಮಗ್ಗುಲಲಿ
ಯಮಳರೊರಗಿರೆ ಕಂಡು ಮನದಲಿ
ತಮವ ಹಿಡಿದನು ನೀರುಗುಡಿದೀ
ಮಮತೆ ಮಿಗಲಾರೈವೆನೆನುತಿಳಿದನು ಸರೋವರವ ॥23॥

೦೨೪ ಚರಣ ವದನವ ...{Loading}...

ಚರಣ ವದನವ ತೊಳೆದು ಢಗೆ ಡಾ
ವರಿಸಲಕ್ಷಮನಾಗಿ ಕರದಲಿ
ತೆರೆಗಳನು ತೆಗೆನೂಕಿ ಮೊಗೆದನು ಗರಳಮಯ ಜಲವ
ಮರುಳೆ ನೀ ಕೌಂತೇಯ ಮಾದ್ರೇ
ಯರನು ನೋಡುವುದಿತ್ತ ನನಗು
ತ್ತರವನಿತ್ತುದಕವನು ಕುಡಿಯೆಂದುದು ನಭೋವಚನ ॥24॥

೦೨೫ ಮೇಲನಾರೈವನೆ ಸುತೃಷ್ಣಾ ...{Loading}...

ಮೇಲನಾರೈವನೆ ಸುತೃಷ್ಣಾ
ಲೋಲಚಿತ್ತನು ಕಾಮಿ ಮೃಗಯಾ
ಕೇಳಿ ಲಂಪಟನರ್ಥ ಲಾಭ ದ್ಯೂತಲೋಲುಪನು
ಕೇಳು ಜನಮೇಜಯ ತಟಾಕದ
ಕಾಳಕೂಟವ ಕುಡಿದನರ್ಜುನ
ಕಾಲಿಡುತ ಡೆಂಡಣಿಸಿ ಮೈಮರೆದವರ ಕೂಡಿದನು ॥25॥

೦೨೬ ತಡೆದರತ್ತಲು ಮೂವರನುಜರು ...{Loading}...

ತಡೆದರತ್ತಲು ಮೂವರನುಜರು
ಮಡಿದರೇನೋ ಚಿತ್ರವಾಯಿತು
ನಡೆ ಸಮೀರಕುಮಾರ ನೀ ಹೋಗತ್ತ ತಳುವದಿರು
ತಡೆಯದೈತಹುದೆನೆ ಹಸಾದವ
ನುಡಿಯನಾನುತ್ತೈದಿ ಹೆಜ್ಜೆಯ
ಹಿಡಿದು ಬಳಿಸಲಿಸಿದನು ಬರೆ ಬರೆ ಕಂಡನದ್ಭುತವ ॥26॥

೦೨೭ ಥಟ್ಟುಗೆಡೆದಸುಗಳೆದ ತನ್ನೊಡ ...{Loading}...

ಥಟ್ಟುಗೆಡೆದಸುಗಳೆದ ತನ್ನೊಡ
ಹುಟ್ಟಿದರನೀಕ್ಷಿಸಿದನುಸುರಿನ
ಬಟ್ಟೆಯನು ನೋಡಿದನು ಮೂಗಿನ ಬಳಿಯ ಬೆರಳಿಟ್ಟು
ಮುಟ್ಟಿತಿವರಿಗೆ ಮರಣವಿನ್ನೇ
ನಟ್ಟಿ ಕೊಲುವೆನು ಜವನ ಮೃತ್ಯುವ
ನಿಟ್ಟೆಲವನುದುರಿಸುವೆನೆನುತೊದರಿದನು ಕಲಿಭೀಮ ॥27॥

೦೨೮ ಮನ್ನಣೆಗೆ ಹಿರಿಯಯ್ಯನೆನ್ದಾ ...{Loading}...

ಮನ್ನಣೆಗೆ ಹಿರಿಯಯ್ಯನೆಂದಾ
ನಿನ್ನು ಬಗೆವೆನೆ ಜವನ ಗಂಟಲ
ಮುನ್ನ ತಿರುಹುವೆನೆನುತ ಕಿಡಿಕಿಡಿಯೋದನಾ ಭೀಮ
ಇನ್ನೊದರಿ ಫಲವೇನು ಕುಡಿವೆನು
ಮುನ್ನ ಜಲವನು ಬಳಿಕ ನೋಡುವೆ
ನೆನ್ನವರ ಮಾರ್ಗವನೆನುತ ಮೊಗೆದನು ವಿಷೋದಕವ ॥28॥

೦೨೯ ಮಾಣು ಮಾಣುತ್ತರವ ...{Loading}...

ಮಾಣು ಮಾಣುತ್ತರವ ಕೊಡು ಮುಂ
ಗಾಣಬೇಹುದು ತಂದೆ ತನಗೀ
ಕ್ಷೋಣಿಯಲಿ ಪೂರ್ವದ ಪರಿಗ್ರಹವೀ ಸರೋವರವು
ಜಾಣನಾದೊಡೆ ಜಾರಬಿಡು ಬಿಡು
ಕೇಣವನು ನೀನೆನಲು ಗಗನದ
ವಾಣಿಯನು ಮನ್ನಿಸದೆ ಮಾರುತಿಯೀಂಟಿದನು ಜಲವ ॥29॥

೦೩೦ ದಡದಡಿಸಿ ಕೊಳನಿನ್ದ ...{Loading}...

ದಡದಡಿಸಿ ಕೊಳನಿಂದ ಹೊರಗಡಿ
ಯಿಡುತ ಬಳಲಿದನನಿಲ ಸುತನವ
ರೊಡನೆ ಮೈಯಿಕ್ಕಿದನು ಕಳಚಿದ ನೀಲ ಗಿರಿಯಂತೆ
ಅಡಿಗೆಡೆದನಾ ಭೀಮನಿತ್ತಲು
ಕಡುನಿರೋಧವ ಹಿಡಿದು ತಾನೇ
ನಡೆದು ಬಂದನು ಧರ್ಮಸುತನಾ ಕೊಳನ ಪಥವಿಡಿದು ॥30॥

೦೩೧ ಮೇಲೆ ಮಗುಳ್ದಾಲಿಗಳ ...{Loading}...

ಮೇಲೆ ಮಗುಳ್ದಾಲಿಗಳ ಚಾಚಿದ
ತೋಳ ಮೇಲಿನ ತಲೆಯ ಸುಯ್ಲಿನ
ಲೀಲೆಯಡಗಿದ ಮುಖದ ಮಸುಳಿದ ಕಾಯಕಾಂತಿಗಳ
ಮೇಲು ಮುಸುಕಿನ ಮಗ್ಗುಲಿನಲಿಹ
ನಾಲುವರನೀಕ್ಷಿಸುತ ಭೂಪತಿ
ಕೋಲು ಮರುಮೊನೆಗೊಂಡವೋಲ್ ಮರುಗಿದನು ಚಿತ್ತದಲಿ ॥31॥

೦೩೨ ಮುಸುಕನರೆದೆರೆದವರವರ ಮೊಗ ...{Loading}...

ಮುಸುಕನರೆದೆರೆದವರವರ ಮೊಗ
ದುಸುರುಗಳನಾಲಿಸಿದನಕಟಾ
ಶಿಶುಗಳಿಗೆ ಕಡು ಹಾನಿಯಾಯಿತೆ ಶಿವ ಮಹಾದೇವ
ನಿಶಿತಶಸ್ತ್ರದ ಗಾಯವಿಲ್ಲು
ಬ್ಬಸದ ಸಾವಿನ್ನಾವುದೋ ನಾ
ನಸುಗಳೆಯದೇಕುಳಿದೆನೆಂದಳಲಿದನು ಯಮಸೂನು ॥32॥

೦೩೩ ಇನ್ದಿನಲಿ ಕಡೆಯಾಯ್ತಲಾ ...{Loading}...

ಇಂದಿನಲಿ ಕಡೆಯಾಯ್ತಲಾ ವಿಮ
ಳೇಂದುವಂಶಕೆ ಕೌರವನ ಛಲ
ಸಂದುದಿನ್ನಹಿತಾವನೀಶರಿಗಾಯ್ತು ಪರಿತೋಷ
ಕೊಂದರಾರಕಟಕಟೆನುತ್ತರ
ವಿಂದನಾಭನ ಕೃಪೆಗೆ ಬಾಹಿರ
ನಿಂದು ತಾನಾದೆನೆ ಮಹಾದೇವೆಂದು ಬಿಸುಸುಯ್ದ ॥33॥

೦೩೪ ಹೋಗಲಿನ್ನೀ ನೀರುಗುಡಿದಿವ ...{Loading}...

ಹೋಗಲಿನ್ನೀ ನೀರುಗುಡಿದಿವ
ರಾಗು ಹೋಗರಸುವೆನೆನುತ ಢಗೆ
ತಾಗಿದವನಿಪನಿಳಿದು ಹೊಕ್ಕನು ವಿಷ ಸರೋವರವ
ಬಾಗಿ ಮೊಗೆದನು ಜಲವನಭ್ರದೊ
ಳಾಗಲಾದುದು ರಭಸವೆಲೆ ಸಕ
ಳಾಗಮಜ್ಞ ಮಹೀಶ ಕೇಳ್ ಎಂದುದು ನಭೋನಿನದ ॥34॥

೦೩೫ ಅನುಜರವಿವೇಕಿಗಳು ಪರಿಣತ ...{Loading}...

ಅನುಜರವಿವೇಕಿಗಳು ಪರಿಣತ
ಜನದಲಧಿಕನು ನೀ ನಿಧಾನಿಸಿ
ನನಗೆ ಮಾರುತ್ತರವನಿತ್ತು ನಿರಂತರಾಯದಲಿ
ತನುವಿಗಾಪ್ಯಾಯನವ ಮಾಡುವು
ದೆನಲು ಕೇಳಿದು ಢಗೆಯ ಸೈರಿಸಿ
ಘನಪಥದ ನುಡಿ ಯಾರದೆಂದವನೀಶನಾಲಿಸಿದ ॥35॥

೦೩೬ ಬಿಸುಟನುದಕವನಾ ನುಡಿಯನಾ ...{Loading}...

ಬಿಸುಟನುದಕವನಾ ನುಡಿಯನಾ
ಲಿಸಿದನಾರೈ ನೀನು ನಿನಗಾ
ಗಸದಲಿರವೇನಸುರನೋ ಕಿನ್ನರನೊ ನಿರ್ಜರನೊ
ಉಸುರೆನಲು ತಾ ಯಕ್ಷನೀ ಸಾ
ರಸವು ನನ್ನದು ನಿನ್ನ ತಮ್ಮದಿ
ರಸುವನೆಳೆದವ ನಾನು ಕೇಳೈ ಧರ್ಮಸುತಯೆಂದ ॥36॥

೦೩೭ ಬಾಲಕರು ನೀವೆನ್ನ ...{Loading}...

ಬಾಲಕರು ನೀವೆನ್ನ ಮಾತನು
ಕೇಳಿ ಉದಕವ ಕುಡಿವುದೆನೆ ಭೂ
ಪಾಲ ನಿನ್ನವರೆನ್ನ ಮಾತನು ಕೇಳಿ ಮನ್ನಿಸದೆ
ಮೇಲುಗಾಣದೆ ನೀರು ಕುಡಿದು ವಿ
ತಾಳಿಸಿದರಿಂದೆನ್ನ ಮಾತನು
ಕೇಳಿ ನೀನುತ್ತರವ ರಚಿಸೆನೆ ನೃಪತಿ ಹೇಳೆಂದ ॥37॥

೦೩೮ ಜಲನಿಧಿಗೆ ಸರಿ ...{Loading}...

ಜಲನಿಧಿಗೆ ಸರಿ ಸರಸಿ ಯಾವುದು
ನೆಲಕೆ ಹಿತವನದಾರು ಮತ್ರ್ಯಾ
ವಳಿಗೆ ಮಾತೆಯದಾರು ಸೂರ್ಯಪ್ರಭೆಗೆ ಸರಿಯೇನು
ತಿಳುಹು ಧರ್ಮಜ ಸಕಲ ಧರ್ಮಾ
ವಳಿಯ ಸಾರವನೆನಲು ಯಕ್ಷನ
ಬಲುಮೆಗವನೀಪಾಲನತಿ ಪರಿತೋಷದಲಿ ನುಡಿದ ॥38॥

೦೩೯ ಗಗನವಬುಧಿಗೆ ಸರಿ ...{Loading}...

ಗಗನವಬುಧಿಗೆ ಸರಿ ಸರೋವರ
ಜಗಕೆ ಹಿತವನು ಶಕ್ರ ಮನುಜಾ
ದಿಗಳ ಮಾತಾರೂಪು ಗೋವುಗಳಿದು ನಿಧಾನಮತ
ಬಗೆಯಲಗ್ಗದ ಸತ್ಯವೆಂಬುದು
ಗಗನಮಣಿಗೆಣೆಯೆನಲು ಚಿತ್ತಕೆ
ಸೊಗಸಿ ತಲೆದೂಗಿದನು ಮಗುಳಿಂತೆಂದನಾ ಖಚರ ॥39॥

೦೪೦ ನಯವಿದನೆ ಕೇಳಾವನೈ ...{Loading}...

ನಯವಿದನೆ ಕೇಳಾವನೈ ಕ್ಷ
ತ್ರಿಯನು ವಿಪ್ರರೊಳಾವನೈ ಶ್ರೋ
ತ್ರಿಯನು ಸುಜನರೊಳಾವನೈ ಮಹಪುರುಷನೆಂಬವನು
ನಿಯತ ಧೀಮನದಾರು ದೇವ
ಪ್ರಿಯನದಾವನು ಕಠಿಣ ಕಷ್ಟಾ
ಶ್ರಯನದಾವನು ಧರ್ಮಸುತ ಹೇಳೆಂದನಾ ಖಚರ ॥40॥

೦೪೧ ಧೃತಿಯುತ ಕ್ಷತ್ರಿಯನು ...{Loading}...

ಧೃತಿಯುತ ಕ್ಷತ್ರಿಯನು ವೇದ
ಪ್ರತಿಯುತ ಶ್ರೋತ್ರಿಯನಹಿಂಸಾ
ರತನು ಮಹಪುರುಷನು ಸುಧೀಮನು ಸಾಧುಸೇವಕನು
ಸತತ ಪರರುಪಕಾರಿ ದೇವ
ಪ್ರತತಿ ಪ್ರೀಯನು ಪರರ ಗುಣದು
ನ್ನತಿಯ ಸೈರಿಸದವನು ಕಷ್ಟನು ಯಕ್ಷ ಕೇಳ್ ಎಂದ ॥41॥

೦೪೨ ನಿನ್ದ್ಯನಾವನು ಲೋಕದೊಳಗಭಿ ...{Loading}...

ನಿಂದ್ಯನಾವನು ಲೋಕದೊಳಗಭಿ
ವಂದ್ಯನಾವನು ಜೀವವಿರೆ ಮೃತ
ನೆಂದಡಾವನು ದೇಶಕಳಿವಹುದಾರ ದೆಸೆಯಿಂದ
ಸಂದ ಯಜ್ಞವದೆಂತು ಕೆಡುವುದು
ತಂದೆ ಹೇಳೈ ತನಗೆನಲು ಸಾ
ನಂದದಿಂದವೆ ಕಾಣಿಸಿದನಾ ಖಚರಗುತ್ತರವ ॥42|

೦೪೩ ಕೇಳು ಪರನಿನ್ದಕನೆ ...{Loading}...

ಕೇಳು ಪರನಿಂದಕನೆ ನಿಂದ್ಯನು
ಹೇಳಲೇಂ ಪರಹಿತನೆ ವಂದ್ಯನು
ಹೇಳಿದಿಚ್ಛೆಗೆ ನಡೆವ ನೃಪನಿಂದಳಿವುದಾ ದೇಶ
ಕೇಳು ನಡೆವೆಣನೇ ದರಿದ್ರನು
ಸಾಲದೆನಿಸಿದ ದಕ್ಷಿಣೆಯ ಯ
ಜ್ಞಾಳಿ ನಿಷ್ಫಲವೆಂದು ನುಡಿದನು ರಾಯಕೌಂತೇಯ ॥43॥

೦೪೪ ನರಕಿ ಯಾವನು ...{Loading}...

ನರಕಿ ಯಾವನು ಸುಜನರಲಿ ಬಾ
ಹಿರನದಾವನು ಲೋಕವರಿಯಲು
ಹರಣವಿರೆ ಹೊಂದಿದನದಾವನು ಭೂಮಿಪಾಲರಲಿ
ಮರುಳದಾವನು ಮಾನ ಭಂಗದಿ
ಭರಿತನಾವನು ಹೇಳು ಧರ್ಮಜ
ಸರಸಿಯಲಿ ಬಳಿಕುದಕವನು ಕುಡಿಯೆಂದನಾ ಖಚರ ॥44॥

೦೪೫ ಎನೆ ಕೃತಘ್ನನೆ ...{Loading}...

ಎನೆ ಕೃತಘ್ನನೆ ನರಕಿ ವಿದ್ಯಾ
ಧನ ಮದಾಂಧನೆ ಬಾಹಿರನು ಹೊ
ಕ್ಕನುವರವ ಹಿಂಗುವ ಮಹೀಪತಿ ಜೀವವಿರೆ ಮೃತನು
ವಿನುತ ಗುರುವರಿಯದನೆ ಮರುಳಂ
ಗನೆಯರಲಿ ವಿಶ್ವಾಸಪರನೇ
ಜನವರಿಯಲಭಿಮಾನಹೀನನು ಯಕ್ಷ ಕೇಳ್ ಎಂದ ॥45॥

೦೪೬ ಒಲಿದನೊಡಲನು ಧರ್ಮಸಙ್ಗತಿ ...{Loading}...

ಒಲಿದನೊಡಲನು ಧರ್ಮಸಂಗತಿ
ಗಳ ಸುಸಂವಾದದಲಿ ನಿಜತನು
ಪುಳಕವುಬ್ಬರಿಸಿದುದು ಗಬ್ಬರಿಸಿದುದು ದುಷ್ಕೃತವ
ಎಲೆ ಮಹೀಪತಿ ಮೆಚ್ಚಿದೆನು ಬೇ
ಡಳಿದ ತಮ್ಮಂದಿರಲಿವೊಬ್ಬನ
ತಲೆಯ ಬದುಕಿಸಿ ಕೊಡುವೆನೆನೆ ಯಮತನುಜನಿಂತೆಂದ ॥46॥

೦೪೭ ಅಸುವನಿತ್ತೈ ಖಚರಪತಿ ...{Loading}...

ಅಸುವನಿತ್ತೈ ಖಚರಪತಿ ಜೀ
ವಿಸಲಿ ನಕುಲನು ಧನ್ಯ ನಾನೆನೆ
ನಸುನಗುತ ಚೇತರಿಸಿ ಮೈ ಮುರಿದೆದ್ದನಾ ನಕುಲ
ನಿಶಿತಮತಿ ಮೆಚ್ಚಿದೆನು ಬೇಡಿ
ನ್ನಸುವನೊಬ್ಬಂಗಿತ್ತೆನೆನೆ ಜೀ
ವಿಸಲಿ ಸಹದೇವಾಂಕನೆಂದನು ಧರ್ಮನಂದನನು ॥47॥

೦೪೮ ಜನಪ ನಿನ್ನಾಳಾಪವೆನ್ನಯ ...{Loading}...

ಜನಪ ನಿನ್ನಾಳಾಪವೆನ್ನಯ
ಮನಕೆ ವಿಸ್ಮಯವಾಯ್ತು ಭೀಮಾ
ರ್ಜುನರು ನಿನ್ನೊಡಹುಟ್ಟಿದರು ನೀನವರಿಗತಿಹಿತನು
ಅನುಜರವರಿರಲೇಕೆ ಮಾದ್ರೀ
ತನುಜರೆಂಬರ ಬಯಸಿದೈ ಹೇ
ಳೆನಲು ನಸುನಗೆ ಮೊಳೆಯೆ ನುಡಿದನು ಧರ್ಮನಂದನನು ॥48॥

೦೪೯ ಸಾವು ಬೊಪ್ಪಙ್ಗಾಗೆ ...{Loading}...

ಸಾವು ಬೊಪ್ಪಂಗಾಗೆ ಮಾದ್ರೀ
ದೇವಿ ತನ್ನನು ಕರೆದು ಶಿಶುಗಳ
ನೋವು ಕೇಡಿದು ನಿನ್ನದಾರೈದಿವರ ಸಲಹುವುದು
ಭಾವ ಭೇದವನಣುವ ಬಗೆಯದೆ
ಕಾವುದೆಲೆ ಮಗನೆಂದು ಬೆಸಸಿದ
ಳಾವ ಪರಿಯಲಿ ಮರೆವೆನೈ ಮಾದ್ರೀಕುಮಾರಕರ ॥49॥

೦೫೦ ಎನಲು ಮೆಚ್ಚಿದನುಳಿದ ...{Loading}...

ಎನಲು ಮೆಚ್ಚಿದನುಳಿದ ಭೀಮಾ
ರ್ಜುನರ ಹರಣವನಿತ್ತು ನಿಜ ನಂ
ದನನನಪ್ಪಿದನೊಲವಿನಲಿ ಯಮರಾಜನೈತಂದು
ತನುಜ ಸಾಕಿನ್ನಾಯ್ತು ನಿಮಗೀ
ವನನಿವಾಸವು ಬೀಳುಗೊಡು ಮುನಿ
ಜನವನಿನ್ನಜ್ಞಾತ ವಾಸಕೆ ಮನವ ಮಾಡೆಂದ ॥50॥

೦೫೧ ನೀವು ಪಾಣ್ಡವರೆನ್ದು ...{Loading}...

ನೀವು ಪಾಂಡವರೆಂದು ನಿಮ್ಮನ
ದಾವ ಮಾನವರರಿಯದಿರಲಿ ಮ
ಹಾ ವಿಭವದಲಿ ಬೆಳಗುವುದು ಬಳಿಕವನಿಮಂಡಲವ
ದೈವಬಲ ನಿಮಗುಂಟು ಮೇಣಿ
ನ್ನಾವುದರಿದಲ್ಲೆಂದು ತನುಜನ
ನೋವಿ ಮನ್ನಿಸಿ ಬೀಳುಗೊಟ್ಟನು ಪಾಂಡುನಂದನರ ॥51॥

೦೫೨ ಅರಣಿಯನು ತನ್ದಿತ್ತು ...{Loading}...

ಅರಣಿಯನು ತಂದಿತ್ತು ಧರಣೀ
ಸುರನ ಮನ್ನಿಸಿ ಮುನಿಗಳನು ಭೂ
ಸುರರ ಸಚಿವರ ಪರಿಕರರ ಧೌಮ್ಯಾದಿ ಮಂತ್ರಿಗಳ
ವರ ಸುಭದ್ರಾದೇವಿ ಪಾಂಚಾ
ಲರನು ಧೃಷ್ಟದ್ಯುಮ್ನ ಮೊದಲಾ
ಗಿರೆ ನಿಜಾಪ್ತರನವರವರ ಮಂದಿರಕೆ ಕಳುಹಿದನು ॥52॥

೦೫೩ ಹರಿ ನಮೋ ...{Loading}...

ಹರಿ ನಮೋ ಜಯ ಭಕ್ತರಘ ಸಂ
ಹರ ನಮೋ ಜಯ ಸಕಲ ಭುವನೇ
ಶ್ವರ ನಮೋ ಜಯ ಕೃಷ್ಣ ಕೇಶವ ವಿಷ್ಣು ವಾಮನನೆ
ಪರಮ ಪುಣ್ಯಶ್ಲೋಕ ಜಯ ಜಗ
ಭರಿತ ನಿರ್ಮಳ ರೂಪ ಜಯ ಜಯ
ಕರುಣಿ ರಕ್ಷಿಸು ರಾಯ ಗದುಗಿನ ವೀರನಾರಯಣ ॥53॥

೦೫೪ ಇತಿ ಶ್ರೀಮದಚಿನ್ತ್ಯ ...{Loading}...

ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಅರಣ್ಯಪರ್ವಂ ಸಮಾಪ್ತಮಾದುದು.

+೨೩ ...{Loading}...