೨೦

೦೦೦ ಸೂ ರಾಯ ...{Loading}...

ಸೂ. ರಾಯ ದಳವನು ಮುರಿದು ಕೌರವ
ರಾಯನನು ಕೊಂಡೊಯ್ದ ಖೇಚರ
ರಾಯನನು ತಾಗಿದನು ಮರಳಿಚಿ ತಂದನಾ ಪಾರ್ಥ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಸಿಕ್ಕಿದನತ್ತ ಕುರು ಭೂ
ಪಾಲನದನೇವೇಳುವೆನು ಪಾಳಯದ ಗಜಬಜವ
ಆಳು ನಡೆದುದು ಕಂಡ ಮುಖದಲಿ
ಕೀಳು ಮೇಲೊಂದಾಯ್ತು ಧನಿಕರ
ಪೀಳಿಗೆಯ ಧನ ಸೂರೆಯೋದುದು ಕೇರಿ ಕೇರಿಯಲಿ ॥1॥

೦೦೨ ಕುದುರೆ ಹಾಯ್ದವು ...{Loading}...

ಕುದುರೆ ಹಾಯ್ದವು ಕಂಡ ಮುಖದಲಿ
ಮದಗಜಾವಳಿಯೋಡಿದವು ರಥ
ಕೆದರಿದವು ಕಾಲಾಳು ಹಾಯ್ದರು ಬಿಟ್ಟ ಮಂಡೆಯಲಿ
ಕದಡಿದುದು ಜನಜಲಧಿ ಜಾಡಿಸಿ
ಬೆದರಿದವು ಕೇರಿಗಳು ರಾಯನ
ಹದನದೇನೇನೆನುತ ಹರಿದರು ಹರದರಗಲದಲಿ ॥2॥

೦೦೩ ಗಾಳಿಯರಿಯದು ರವಿಯ ...{Loading}...

ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ ದಡ್ಡಿಯ
ಮೇಲು ಬೀಯಗದಂಗರಕ್ಷೆಯ ಕಂಚುಕೀಜನದ
ಮೇಳವವದೇನಾಯ್ತೊ ಬೀದಿಯ
ಗಾಳು ಮಂದಿಯ ನಡುವೆ ಕುರು ಭೂ
ಪಾಲನರಸಿಯರಳುತ ಹರಿದರು ಬಿಟ್ಟ ಮಂಡೆಯಲಿ ॥3॥

೦೦೪ ಕುರುಪತಿಯ ದುಶ್ಯಾಸನಾದಿಗ ...{Loading}...

ಕುರುಪತಿಯ ದುಶ್ಯಾಸನಾದಿಗ
ಳರಸಿಯರು ಭಟ ಭಟರೊಳೊದರಿದ
ರರಸನುಪಹತಿಗೊಪ್ಪುಗೊಟ್ಟರೆ ಕರ್ಣ ಶಕುನಿಗಳು
ಗುರು ನದೀಸುತರಿದ್ದರೀ ಪರಿ
ಪರಿಭವಕೆ ಪಾಡಹುದೆ ಪಾಂಡವ
ರರಸನಿಹ ವನವಾವುದೆಂದರಸಿದಳು ಭಾನುಮತಿ ॥4॥

೦೦೫ ಅರಸಿಯರು ಸಖಿಯರು ...{Loading}...

ಅರಸಿಯರು ಸಖಿಯರು ಕುಮಾರಕ
ರರಸನನುಜರ ಹೆಂಡಿರನಿಬರು
ವೆರಸಿ ಬಂದಳು ಭಾನುಮತಿ ಯಮತನುಜನಾಶ್ರಮಕೆ
ಕರುಣಿ ರಕ್ಷಿಸು ಸೋಮ ವಂಶೋ
ದ್ಧರಣ ರಕ್ಷಿಸು ಸತ್ಯ ಧರ್ಮದ
ಸಿರಿಯೆ ರಕ್ಷಿಸೆನುತ್ತ ಧೊಪ್ಪನೆ ಬಿದ್ದಳಂಘ್ರಿಯಲಿ ॥5॥

೦೦೬ ನಾದಿದಳು ನೃಪನಙ್ಘ್ರಿಯನು ...{Loading}...

ನಾದಿದಳು ನೃಪನಂಘ್ರಿಯನು ನಯ
ನೋದಕದ ಧಾರೆಯಲಿ ಭಾಳವ
ತೇದು ತಿಲಕದ ಗಂಧದಲಿ ಬೈತಲೆಯ ಮುತ್ತುಗಳ
ಆದರಿಸಿ ನವ ಕುಸುಮದಲಿ ಘನ
ರೋದನ ಧ್ವನಿ ಮಂತ್ರದಲಿ ನೃಪ
ಪಾದ ಪೂಜೆಯ ರಚಿಸುವವೊಲೊಪ್ಪಿದಳು ಭಾನುಮತಿ ॥6॥

೦೦೭ ಖಳರು ಕೌರವರಿನ್ದು ...{Loading}...

ಖಳರು ಕೌರವರಿಂದು ಸಜ್ಜನ
ಕುಲ ಶಿರೋಮಣಿ ನೀನು ಕರುಣಾ
ಜಲಧಿ ನಿನಗಪರಾಧಿಗಳು ನಾವಹೆವು ಜಗವರಿಯೆ
ಹುಳಿಗೆ ಹಾಲಳುಕಿದರೆ ಹಾಲಿನ
ಜಲಧಿ ಕೆಡುವುದೆ ಜೀಯ ನಿನ್ನವ
ರೆಳಸಿ ಕೊಂಡರು ಕಾಯಬೇಕೆಂದೊರಲಿದಳು ತರಳೆ ॥7॥

೦೦೮ ರಾಯರಿಗೆ ಬಿನ್ನಹವ ...{Loading}...

ರಾಯರಿಗೆ ಬಿನ್ನಹವ ಮಾಡೌ
ತಾಯೆ ದುರುಪದಿ ದೇವಿಯೇ ಹಿರಿ
ದಾಯಸವಬಡಿಸಿದನು ಕುರುಪತಿ ನಿನ್ನ ಮೈದುನನು
ನೋಯಿಸಲು ಸಿರಿಖಂಡ ನಿಜ ಗುಣ
ದಾಯತವ ಬಿಡದಂತೆ ನೀವೇ
ಕಾಯಬೇಹುದು ಪತಿಯನೆಂದೊರಲಿದಳು ಭಾನುಮತಿ ॥8॥

೦೦೯ ಚುಮ್ಬಿಸಿತು ಕಡುಶೋಕ ...{Loading}...

ಚುಂಬಿಸಿತು ಕಡುಶೋಕ ಮಿಡಿದನು
ಕಂಬನಿಯನುಗುರಿನಲಿ ಘನ ಕರು
ಣಾಂಬುನಿಧಿ ಸೀಗುರಿಸಿ ಮೈಗೂಡಿರಿದ ರೋಮದಲಿ
ಹಂಬಲಿಸಬೇಡಕಟ ಕುರುಪತಿ
ಯೆಂಬನಾರೌ ಬೊಪ್ಪನವರೇ
ನೆಂಬರೇಳೌ ತಾಯೆಯೆನುತೆತ್ತಿದನು ಭಾಮಿನಿಯ ॥9॥

೦೧೦ ಭೀಮ ಬಾ ...{Loading}...

ಭೀಮ ಬಾ ಕುರುರಾಜಕುಲ ಚೂ
ಡಾಮಣಿಯ ತಾ ಹೋಗು ಕದನೋ
ದ್ದಾಮ ದರ್ಪನ ತಾ ನಿಜಾನ್ವಯ ಕುಮುದ ಚಂದ್ರಮನ
ತಾ ಮನೋವ್ಯಥೆ ಬೇಡ ನೃಪ ಚಿಂ
ತಾಮಣಿಯ ತಾಯೆನಲು ಕರಯುಗ
ತಾಮರಸವನು ಮುಗಿದು ಬಿನ್ನಹ ಮಾಡಿದನು ಭೀಮ ॥10॥

೦೧೧ ಬೆಸಸಬೇಹುದು ನೀತಿಶಾಸ್ತ್ರದ ...{Loading}...

ಬೆಸಸಬೇಹುದು ನೀತಿಶಾಸ್ತ್ರದ
ಬೆಸುಗೆ ತಪ್ಪದೆ ರಾಜ ಧರ್ಮದ
ಮುಸುಡು ಕಂದದೆ ಖೋಡಿವಿಡಿಯದೆ ಕುಶಲರಾದವರು
ಎಸಗುವದು ನಾವಾವ ಕಾರ್ಯದೊ
ಳಸುವನಿಕ್ಕಿ ತದರ್ಥವನು ಪರ
ರೆಸಗಿದೊಡೆ ನಮಗೇನು ಬಾಧಕವೆಂದನಾ ಭೀಮ ॥11॥

೦೧೨ ತಮ್ಮ ಸಙ್ಕಟಕಿವರು ...{Loading}...

ತಮ್ಮ ಸಂಕಟಕಿವರು ವಿನಯವ
ನೆಮ್ಮಿ ಬಿನ್ನಹ ಮಾಡುತಿರ್ದೊಡೆ
ನಿಮ್ಮಡಿಗೆ ಪರಿತೋಷವೇ ಕರ್ತವ್ಯ ವಿಷಯದಲಿ
ಎಮ್ಮ ಮನ ಮುಂಚುವುದು ಕಾರ್ಯದ
ಹಮ್ಮುಗೆಯ ನೀವರಿಯಿರೇ ತಮ
ತಮ್ಮ ದುಷ್ಕೃತ ತಮಗೆ ಫಲಿಸಿದರೇನು ನಿಮಗೆಂದ ॥12॥

೦೧೩ ಅನುಜ ಕೇಳಪಕಾರಿ ...{Loading}...

ಅನುಜ ಕೇಳಪಕಾರಿ ಜನದಲಿ
ನೆನೆವುದುಪಕಾರವನು ಗುಣ ಹೀ
ನನಲಿ ಗುಣವನು ತೋರುವದು ಗರುವರಿಗೆ ತೊಡಿಗೆಯಿದು
ಅನುಜನಲ್ಲಾ ನಮಗೆ ಕೌರವ
ಜನಪನವರಪರಾಧ ಶತವನು
ನೆನೆವೊಡಿದು ಹೊತ್ತೇ ಮಹಾದೇವೆಂದನಾ ಭೂಪ ॥13॥

೦೧೪ ಭರತ ವಂಶದೊಳವರ ...{Loading}...

ಭರತ ವಂಶದೊಳವರ ಭಂಗವೆ
ನಿರುತವೆಮ್ಮದು ನಮ್ಮ ಭಂಗ
ಸ್ಫುರಣವವರದು ತಾವರಿಯರಾವರಿವೆವೀ ಹದನ
ಪರರ ಕಲಹಕೆ ನಾವು ನೂರೈ
ವರುಗಳಂತಃಕಲಹಕದು ನೂ
ರ್ವರು ವಿಚಾರಿಸಲೈವರಾವೆಂದನು ಮಹೀಪಾಲ ॥14॥

೦೧೫ ಆವನಾಗಲಿ ಬೇಡಿದಙ್ಗೊಲಿ ...{Loading}...

ಆವನಾಗಲಿ ಬೇಡಿದಂಗೊಲಿ
ದೀವುದೇ ನೃಪಧರ್ಮ ಹಗೆ ಕೆಳೆ
ಯಾವನಾಗಲಿ ಸೆಣಸಿದೊಡೆ ಕಾದುವದೆ ನೃಪನೀತಿ
ಆವನಾಗಲಿ ಶರಣುವೊಕ್ಕರೆ
ಕಾವುದೇ ಕ್ಷತ್ರಿಯರ ಮತವಿಂ
ತಾವುದುಚಿತವು ಭೀಮ ನೀ ಹೇಳೆಂದನಾ ಭೂಪ ॥15॥

೦೧೬ ಆರಿಗಾರುಪಕಾರಿಗಳು ಮೇ ...{Loading}...

ಆರಿಗಾರುಪಕಾರಿಗಳು ಮೇ
ಣಾರಿಗಾರಪಕಾರಿಗಳು ತಾ
ನಾರಿಗಾರುಂಟವರವರ ಕೃತಕರ್ಮ ಸಂಸ್ಕಾರ
ಹೋರಿಸುವುದಳಿಸುವುದು ಸೌಖ್ಯಕೆ
ಸೇರಿಸುವುದಿದಕಹಿತ ಹಿತರೆಂ
ದಾರ ಮುರಿವುದು ಮನ್ನಿಸುವದೈ ಭೀಮ ಹೇಳೆಂದ ॥16॥

೦೧೭ ಅದರಿನಾಚೆಯ ಭವದ ...{Loading}...

ಅದರಿನಾಚೆಯ ಭವದ ದುಷ್ಕೃತ
ವೊದಗಿತೀ ಜನ್ಮದಲಿ ವನ ವಾ
ಸದ ಪರಿಕ್ಲೇಶಾನುಭವಕಿವರೇನ ಮಾಡುವರು
ಒದಗಿದುತ್ಸವದಲ್ಲಿ ಪರರ
ಭ್ಯುದಯವನು ಬಯಸುವದು ಪರರಿಗೆ
ಮುದವನಾಚರಿಸುವದು ಧರ್ಮಜ್ಞರಿಗೆ ಗುಣವೆಂದ ॥17॥

೦೧೮ ಎಣಿಸಲೇಕಿನ್ನದನು ಕೌರವ ...{Loading}...

ಎಣಿಸಲೇಕಿನ್ನದನು ಕೌರವ
ಗಣ ಮರಳಿ ಬಂದಲ್ಲದಾರೋ
ಗಣೆಯ ಮಾಡೆನು ಪಾರ್ಥ ನೀ ನುಡಿ ನಿನ್ನ ಹವಣೇನು
ರಣದೊಳರಿಗಳ ಮುರಿದು ಕುರು ಧಾ
ರುಣಿಪತಿಯ ತಹುದುಂಟೆಯೆನೆ ಬಿಲು
ಗಣೆಗಳನು ತಿದ್ದಿದನು ಫಲುಗುಣ ಹೂಡಿದನು ರಥವ ॥18॥

೦೧೯ ಎಮಗೆ ನುಡಿ ...{Loading}...

ಎಮಗೆ ನುಡಿ ಬೇರುಂಟೆ ನೀತಿ
ಭ್ರಮಿತರಾವಲ್ಲನಿಲಸುತನು
ಭ್ರಮಿತನವ ಸೈರಿಸುವುದೈ ಕಾರುಣ್ಯನಿಧಿ ನೀನು
ನಿಮಿಷದಲಿ ಗಂಧರ್ವಕನನಾ
ಕ್ರಮಿಸಿ ಕೌರವಗಣವನೀ ಪದ
ಕಮಲದಿದಿರಲಿ ಕೆಡಹಿ ತೋರುವೆನೆನುತ ಹೊರವಂಟ ॥19॥

೦೨೦ ಮುರಿದು ಚೆಲ್ಲಿದ ...{Loading}...

ಮುರಿದು ಚೆಲ್ಲಿದ ಸಕಲ ಕುರುಬಲ
ನೆರೆದುದರ್ಜುನನೊಡನೆ ಸೂಟಿಯೊ
ಳರಿ ಭಟನ ಬೆಂಬತ್ತಿದನು ಫಡ ನಿಲ್ಲು ನಿಲ್ಲೆನುತ
ಸೆರೆಯ ಬಿಡು ಗಂಧರ್ವ ಲೋಕವ
ನುರುಹುವೆನು ಹಿಂದಿಕ್ಕಿ ಕೊಂಬನ
ಶಿರವ ಚೆಂಡಾಡುವೆನೆನುತ ಕವಿದೆಚ್ಚನಾ ಪಾರ್ಥ ॥20॥

೦೨೧ ಸರಳಿನುಬ್ಬೆಗೆ ಸೆಡೆದು ...{Loading}...

ಸರಳಿನುಬ್ಬೆಗೆ ಸೆಡೆದು ಸಮರಕೆ
ತಿರುಗಿ ನಿಂದುದು ಖಚರ ಬಲವು
ಬ್ಬರದ ಬೊಬ್ಬೆಯಲುರುಬಿದುದು ಶರಹತಿಗೆ ಸೈರಿಸುತ
ಉರುಳಿದವು ಗಂಧರ್ವ ಶಿರ ನಭ
ಸರಳಮಯ ದಿಗುಜಾಲವಂಬಿನ
ಹೊರಳಿಯಲಿ ಹೊದಿಸಿದುದೆನಲು ಕವಿದೆಚ್ಚನಾ ಪಾರ್ಥ ॥21॥

೦೨೨ ಮೊರೆವ ಗರಿಗಳ ...{Loading}...

ಮೊರೆವ ಗರಿಗಳ ಮೊನೆಯಲುದುರುವ
ಹೊರಳಿಗಿಡಿಗಳ ಬಾಯ ಧಾರೆಗ
ಳುರಿಯ ಹೊದರಿನ ಹುದಿದ ಹೊಂಬರಹದ ಸುರೇಖೆಗಳ
ಸರಳು ಹೊಕ್ಕವು ಹೆಕ್ಕಿದವು ಖೇ
ಚರ ಬಲವನೊಕ್ಕಿದವು ತೂರಿದ
ವರಿ ಭಟನ ಚುಚ್ಚಿದವು ಹೆಚ್ಚಿದವೆಂಟು ದೆಸೆಗಳಲಿ ॥22॥

೦೨೩ ಕೋಲ ಬಲುವಳೆಗೊಡ್ಡಿ ...{Loading}...

ಕೋಲ ಬಲುವಳೆಗೊಡ್ಡಿ ಹರಿಗೆಯ
ಮೇಳಯವ ಮರೆಗೊಂಡು ಖೇಚರ
ರಾಳು ನಿಂದೆಚ್ಚಿತು ನಿಹಾರದಲರ್ಜುನನ ರಥವ
ಕೋಲುಗಳನಾ ಹರಿಗೆ ಹಲಗೆಯ
ಮೇಳಯವನಾ ಮರೆಯಲುಗಿದೆಸು
ವಾಳನೊಂದಂಬಿನಲಿ ಸಂದಣಿಗೆಡಹಿದನು ಪಾರ್ಥ ॥23॥

೦೨೪ ಮೆಟ್ಟಿ ಹೆಣನನು ...{Loading}...

ಮೆಟ್ಟಿ ಹೆಣನನು ಖಚರಬಲ ಹುರಿ
ಗಟ್ಟಿ ತಲೆವರಿಗೆಯಲಿ ಪಾರ್ಥನ
ಕಟ್ಟಳವಿಯಲಿ ಚೂರಿಸಿದರುಬ್ಬಣದ ಮೊನೆಗಳಲಿ
ದಿಟ್ಟರಹಿರೋ ಕೌರವೇಂದ್ರನ
ಕಟ್ಟಿದಾತನ ಕರೆಯಿ ನಿಮ್ಮನು
ಮುಟ್ಟಿದೊಡೆ ನೃಪನಾಣೆಯೆನುತೊಡ ಹಾಯ್ಸಿದನು ರಥವ ॥24॥

೦೨೫ ಗಜದ ಪದಘಟ್ಟಣೆಯ ...{Loading}...

ಗಜದ ಪದಘಟ್ಟಣೆಯ ಬಹಳಂ
ಬುಜದವೊಲು ರಥಚಕ್ರಹತಿಯಲಿ
ಗಿಜಿಗಿಜಿಯ ಮಾಡಿಸಿದ ಖೇಚರ ಚಟುಲ ಪಟುಭಟರ
ವಿಜಯನಲ್ಲಾ ಸುರಪುರದ ಮೌ
ರಜಿಗನಾವೆಡೆ ಕುರುಬಲದ ಗಜ
ಬಜದ ಗರುವನ ತೋರೆನುತ ತೂಳಿದನು ಕಲಿಪಾರ್ಥ ॥25॥

೦೨೬ ಅಳವಿಯಲಿ ಕೈಮಾಡಿ ...{Loading}...

ಅಳವಿಯಲಿ ಕೈಮಾಡಿ ಖೇಚರ
ರಳಲಿಗರು ಮುಮ್ಮುಳಿತರಾದರು
ಬೆಳಗಿದವು ದಿವ್ಯಾಸ್ತ್ರಧಾರೆಗಳಖಿಳ ದಿಗುತಟವ
ತಳಪಟದೊಳಾ ಸೆರೆ ಸಹಿತ ಕೈ
ಚಳಕದಲಿ ತೆಗೆದೆಸುತ ಸಮರಕೆ
ಮಲೆತು ನಿಂದನು ಚಿತ್ರಸೇನನು ಪಾರ್ಥನಿದಿರಿನಲಿ ॥26॥

೦೨೭ ಬಿಡು ಸೆರೆಯನವಗಡೆಯತನವೆ ...{Loading}...

ಬಿಡು ಸೆರೆಯನವಗಡೆಯತನವೆ
ಮ್ಮೊಡನೆ ಸಲ್ಲದು ಸೂಳೆಯರ ಸುರೆ
ಗುಡುಹಿಗಳ ರಸವಾದಿಗಳ ಸೇರುವೆಯಲೊಪ್ಪುವುದು
ಫಡಯೆನುತ ನಾರಾಚದಲಿ ಬಲ
ನೆಡನ ಕೀಲಿಸಿ ಪಿಂಗುಡಿಯ ಮುಂ
ಗುಡಿಯ ಕಟ್ಟಿದನಂಬಿನಲಿ ಖಚರಾಧಿಪನ ರಥವ ॥27॥

೦೨೮ ನೂಕದಿರಲಾಹವಕೆ ಸಮ್ಮುಖ ...{Loading}...

ನೂಕದಿರಲಾಹವಕೆ ಸಮ್ಮುಖ
ವೇಕೆನುತ ಹತ್ತಿದನು ಗಗನವ
ನಾ ಕಿರೀಟಿಯ ಗೆಲುವೆನೆಂದುಬ್ಬರದ ಬೊಬ್ಬೆಯಲಿ
ನಾಕ ನಿಳಯರ ಮಾರ್ಗದೊಳಗ
ವ್ಯಾಕುಳನು ಭುಲ್ಲೈಸಿದೊಡೆ ಲೋ
ಕೈಕವೀರನಲಾ ಧನಂಜಯನಡರಿದನು ನಭವ ॥28॥

೦೨೯ ಎಲವೊ ಕೌರವ ...{Loading}...

ಎಲವೊ ಕೌರವ ಸಹಿತ ಕಮಠನ
ಕೆಳಗೆ ಧ್ರುವನಿಂ ಮೇಲೆ ಹೊಕ್ಕರೆ
ಕೊಲುವೆನಲ್ಲದೆ ಬಿಡುವೆನೇ ಫಡ ನಿಲ್ಲು ನಿಲ್ಲೆನುತ
ತುಳುಕಿದನು ಕೆಂಗೋಲನಿನ ಮಂ
ಡಲಕೆ ದಿಗ್ಭ್ರಮೆಯಾಯ್ತು ನಭದಲಿ
ಸುಳಿವ ಸುರರ ವಿಮಾನತತಿ ಚೆಲ್ಲಿದವು ದೆಸೆದೆಸೆಗೆ ॥29॥

೦೩೦ ತಿರುಗಿ ನಿನ್ದನು ...{Loading}...

ತಿರುಗಿ ನಿಂದನು ಖಚರಪತಿ ನಿ
ಷ್ಠುರವಿದೇನೈ ಪಾರ್ಥ ನೀ ಕಡು
ಮರುಳೊ ಮೂಢನೊ ಜಡನೊ ಪಿತ್ತಭ್ರಾಂತಿ ವಿಹ್ವಲನೊ
ಧುರದ ಕೌತುಕ ಗರಳ ಮೂರ್ಛಾಂ
ತರಿತ ಹೃದಯನೊ ನಿಲ್ಲು ಚಾಪದ
ಶರವನುಪಸಂಹರಿಸಿ ನಮ್ಮಯ ಮಾತ ಕೇಳ್ ಎಂದ ॥30॥

೦೩೧ ಹುಲಿಯ ಮುರಿದೊತ್ತಿದೊಡೆ ...{Loading}...

ಹುಲಿಯ ಮುರಿದೊತ್ತಿದೊಡೆ ಪಶು ಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದೊಡೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ ॥31॥

೦೩೨ ಹೋದ ಮಾರಿಯ ...{Loading}...

ಹೋದ ಮಾರಿಯ ಕರೆದು ಮನೆಯೊಳ
ಗಾದರಿಸಿದವರುಂಟೆ ನೀರಲಿ
ನಾದ ಕೆಂಡವನುರುಹಿ ಮುಡಿದವರುಂಟೆ ಮಂಡೆಯಲಿ
ಕೈದು ಮುರಿದೊಡೆ ಹಗೆಗೆ ತನ್ನಯ
ಕೈದು ಕೊಟ್ಟವರುಂಟೆ ಕುರುಪತಿ
ತೀದಡೀತನ ಬಿಡಿಸಿಕೊಂಬಿರೆ ಲೇಸು ಲೇಸೆಂದ ॥32॥

೦೩೩ ಜನಪ ನೀತಿಯೊ ...{Loading}...

ಜನಪ ನೀತಿಯೊ ಮೇಣು ಬೋಳೆಯ
ತನವೊ ಬಿಲುಜಾಣಿಕೆಯೊ ಬಿಂಕವೊ
ನಿನಗೆ ಕದನದ ಕಲುಹೆಯೋ ನಾವರಿಯೆವಿದನೀಗ
ಬನಕೆ ಮರಳೈ ಮರುಳೆ ನೀ ಪುದು
ಮನೆಯ ಹಾವನು ಹದ್ದು ಹಿಡಿದರೆ
ಮನಕತವ ಮಾಡುವರೆ ಬಿಜಯಂಗೈಯಿ ನೀವೆಂದ ॥33॥

೦೩೪ ನಟರಲಾ ನೀವ್ ...{Loading}...

ನಟರಲಾ ನೀವ್ ಸುರಪುರ ದಚಾ
ವಟೆಯರೈ ಚತುರೋಕ್ತಿಗಳ ಲಟ
ಮಟಿಸಿದರೆ ನಾ ಮರುಳುವೆನೆ ಬಿಡು ಬಿಡು ಸುಯೋಧನನ
ಕಟು ಮಧುರವುರಿ ಸೀತವತಿ ಸಂ
ಕಟವು ಸುಖ ವಿಷವಮೃತವಾವುದು
ಘಟಿಸಿತಗ್ರಜನಾಜ್ಞೆಯಿದು ನಮಗೆಂದನಾ ಪಾರ್ಥ ॥34॥

೦೩೫ ಧರ್ಮವಾಗಲಿ ಮೇಣು ...{Loading}...

ಧರ್ಮವಾಗಲಿ ಮೇಣು ಜಗದಲ
ಧರ್ಮವಾಗಲಿ ರಾಜಮಂತ್ರದ
ಮರ್ಮವಾಗಲಿ ನೀತಿ ಬಾಹಿರವಾಗಲದು ಮೇಣು
ಧರ್ಮಪುತ್ರನ ಬೆಸನು ವೈದಿಕ
ಧರ್ಮವೆಮಗದು ರಾಜ ಮಂತ್ರದ
ನಿರ್ಮಲಿನ ಮತವೆಮಗೆ ಬೇರೊಂದಿಲ್ಲ ಮತವೆಂದ ॥35॥

೦೩೬ ನುಸುಳುಗಣ್ಡಿಯಿದಲ್ಲ ಕೌರವ ...{Loading}...

ನುಸುಳುಗಂಡಿಯಿದಲ್ಲ ಕೌರವ
ವಸುಮತೀಶನನಕಟ ಬಿಡು ನಿ
ನ್ನುಸುರಿಗುಬ್ಬಸ ಮಾಡೆನಂಘ್ರಿಗಳಾಣೆ ಧರ್ಮಜನ
ಮಸುಗುವರೆ ಹಿಡಿ ಧನುವನೆನುತೆ
ಬ್ಬಿಸಿದನವಿರಳ ಶರವನಾತನ
ಮುಸುಕಿದವು ಮುಕ್ಕುರಿಕಿದವು ರಥ ಸನ್ನಿವೇಶದಲಿ ॥36॥

೦೩೭ ಕೋಲ ಬರಿದೇ ...{Loading}...

ಕೋಲ ಬರಿದೇ ಬೀಯ ಮಾಡದಿ
ರೇಳು ಫಲುಗುಣ ಮರಳು ನೀ ದಿಟ
ಕೇಳುವರೆ ನಾವಿವನ ಕಟ್ಟಿದೆವಿಂದ್ರನಾಜ್ಞೆಯಲಿ
ಪಾಲಿಸಾ ನಿಮ್ಮಯ್ಯ ಬೆಸಸಿದ
ನೇಳಿಸದೆ ಕೇಳೆನಲು ಕೆಂಗರಿ
ಗೋಲ ತೂಗುತ ಪಾರ್ಥ ನುಡಿದನು ಚಿತ್ರಸೇನಂಗೆ ॥37॥

೦೩೮ ಕುರುಪತಿಯ ಕಟ್ಟುವೊಡೆ ...{Loading}...

ಕುರುಪತಿಯ ಕಟ್ಟುವೊಡೆ ಸುರಪತಿ
ಕರೆದು ಬೆಸಸಿದ ನಿನಗೆಯವಗೆ
ಮ್ಮರಸ ನೇಮವ ಕೊಟ್ಟನೀ ಕುರುಪತಿಯ ಬಿಡಿಸೆಂದು
ಸುರಪತಿಗೆ ಕೃತಕಾರ್ಯ ನೀನಾ
ಗಿರಲು ನಾವಕೃತಾರ್ಥರಾಗಿಯೆ
ಮರಳಿ ಭೂಪನ ಕಾಂಬೆವೈಸಲೆ ಜಾಣನಹೆಯೆಂದ ॥38॥

೦೩೯ ಬಿಡುವೆಯಾದರೆ ನೃಪನ ...{Loading}...

ಬಿಡುವೆಯಾದರೆ ನೃಪನ ಸೆರೆಯನು
ಬಿಡಿಸುವೆನು ಮೇಣಲ್ಲದಿರ್ದೊಡೆ
ಬಿಡಿಸುವೆನು ನಿನ್ನುಸುರ ಸೆರೆಯನು ನಿನ್ನ ದೇಹದಲಿ
ನುಡಿಗೆ ತೆರಹಿಲ್ಲೇಳೆನುತ ಕೈ
ಗಡಿಯಲೆಚ್ಚನು ಕಾಲ ಕೂಟದ
ಕಡಲು ಕವಿವಂದದಲಿ ಕವಿದವು ಪಾರ್ಥನಂಬುಗಳು ॥39॥

೦೪೦ ಕಡಿದನರ್ಜುನನಮ್ಬನೀಸವ ...{Loading}...

ಕಡಿದನರ್ಜುನನಂಬನೀಸವ
ಗಡವಿದೇಕೈ ಮರುಳೆ ಕೆಂಡವ
ಮಡಿಲೊಳಿಕ್ಕುವುದರ್ತಿಯೇ ಸಂಧಾನ ನಿಮಗೆಮಗೆ
ಬಿಡುವೆನಿನಿಬರ ಸೆರೆಗಳನು ನಿ
ನ್ನೊಡೆಯನಲ್ಲಿಗೆ ಕೊಂಡು ನಡೆಯೆಂ
ದೊಡನೆ ಬಂದನು ಧರ್ಮರಾಯನ ಬಳಿಗೆ ಖಚರೇಂದ್ರ ॥40॥

೦೪೧ ಸೋಲವೆಮ್ಮದು ನಿಮ್ಮ ...{Loading}...

ಸೋಲವೆಮ್ಮದು ನಿಮ್ಮ ತಮ್ಮನೆ
ಮೇಲುಗೈ ನಿಮ್ಮಡಿಗಳಾಜ್ಞಾ
ಪಾಲಕರು ಭೀಮಾರ್ಜುನರು ಮಾದ್ರೀಕುಮಾರಕರು
ಕಾಳಗದೊಳೆಮ್ಮಖಿಳ ಖಚರರ
ಧೂಳಿಪಟ ಮಾಡಿದನು ಲಕ್ಷ್ಮೀ
ಲೋಲ ನಿಮಗೊಲಿದಿಹನು ಗದುಗಿನ ವೀರ ನಾರಯಣ ॥41॥

+೨೦ ...{Loading}...