೦೦೦ ಸೂ ಭಜಿಸಿದನು ...{Loading}...
ಸೂ. ಭಜಿಸಿದನು ನರನಿಂದ್ರಕೀಲದೊ
ಳಜ ಸುರಾರ್ಚಿತ ಚರಣ ಕಮಲನ
ತ್ರಿಜಗದಧಿಪತಿಯನು ಮಹಾ ನಟರಾಯಧೂರ್ಜಟಿಯ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಬ್ರಹ್ಮನಿಂದಲೂ, ದೇವತೆಗಳಿಂದಲೂ ಪೂಜಿತನಾದ ನಟರಾಜನೆನಿಸಿದ ಪರಮೇಶ್ವರನನ್ನು ಇಂದ್ರಕೀಲದಲ್ಲಿ ಅರ್ಜುನನು ಪ್ರಾರ್ಥಿಸಿದನು.
ಪದಾರ್ಥ (ಕ.ಗ.ಪ)
ಧೂರ್ಜಟಿ - ಈಶ್ವರ
ಮೂಲ ...{Loading}...
ಸೂ. ಭಜಿಸಿದನು ನರನಿಂದ್ರಕೀಲದೊ
ಳಜ ಸುರಾರ್ಚಿತ ಚರಣ ಕಮಲನ
ತ್ರಿಜಗದಧಿಪತಿಯನು ಮಹಾ ನಟರಾಯಧೂರ್ಜಟಿಯ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡುಕುಮಾರರಟವಿಯ
ಪಾಳಿಯಲಿ ಪರುಠವಿಸಿದರು ಪದಯುಗ ಪರಿಭ್ರಮವ
ಲೋಲಲೋಚನೆ ಸಹಿತ ತತ್ಕುಲ
ಶೈಲದಲಿ ತದ್ವಿಪಿನದಲಿ ತ
ತ್ಕೂಲವತಿಗಳ ತೀರದಲಿ ತೊಳಲಿದರು ಬೇಸರದೆ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೆ ಕೇಳು. ಭೂಪಾಲಕರಾದ ಪಾಂಡವರು ಕಾಡುಮೇಡುಗಳಲ್ಲಿ ಸಂಚರಿಸುತ್ತಾ, ಪತ್ನಿಯಾದ ದ್ರೌಪದಿಯೊಂದಿಗೆ ಬೆಟ್ಟ, ನದೀತೀರಗಳಲ್ಲಿ ಬೇಸರವಿಲ್ಲದೆ ನಡೆದಾಡಿದರು.
ಪದಾರ್ಥ (ಕ.ಗ.ಪ)
ಪರುಠವಿಸು - ಸಂಚರಿಸು
ಪದಯುಗ ಪರಿಭ್ರಮ - ಕಾಲ್ನಡಿಗೆ
ಕೂಲವತಿ - ನದಿ
ತೊಳಲು - ಸುತ್ತಾಡು
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡುಕುಮಾರರಟವಿಯ
ಪಾಳಿಯಲಿ ಪರುಠವಿಸಿದರು ಪದಯುಗ ಪರಿಭ್ರಮವ
ಲೋಲಲೋಚನೆ ಸಹಿತ ತತ್ಕುಲ
ಶೈಲದಲಿ ತದ್ವಿಪಿನದಲಿ ತ
ತ್ಕೂಲವತಿಗಳ ತೀರದಲಿ ತೊಳಲಿದರು ಬೇಸರದೆ ॥1॥
೦೦೨ ಫಳ ಮೃಗಾವಳಿ ...{Loading}...
ಫಳ ಮೃಗಾವಳಿ ಸವೆದುದಿನ್ನೀ
ಹಳುವು ಸಾಕಿನ್ನೊಂದರಣ್ಯ
ಸ್ಥಳವ ನೋಡಲಿ ಕಟಕ ನಡೆಯಲಿ ವಿಪ್ರಸಂಕುಲದ
ಸುಲಭವೀ ವನವೆಂದು ತಮ್ಮೊಳು
ತಿಳಿದು ಪಾರ್ಥ ಯುಧಿಷ್ಠಿರರು ಮುನಿ
ಕುಲ ಸಹಿತ ನಲವಿಂದ ಹೊಕ್ಕರು ದ್ವೈತಕಾನನವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಲ್ಲಿ ಹಣ್ಣುಹಂಪಲು, ಮೃಗಗಳು ಮುಗಿದು ಹೋದವು. ಈ ಕಾಡು ಸಾಕು, ಇನ್ನೊಂದು ಅರಣ್ಯಪ್ರದೇಶಕ್ಕೆ ಹೊರಡೋಣವೆಂದು, ಬ್ರಾಹ್ಮಣವರ್ಗಕ್ಕೆ ತಿಳಿಸಿ, ಅರ್ಜುನ, ಯುಧಿಷ್ಠಿರಾದಿಗಳು ಮುನಿಸಂಕುಲ ಸಹಿತ ದ್ವೈತವನವನ್ನು ಸಂತೋಷದಿಂದ ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ಕಟಕ - ಗುಂಪು , ಸಮೂಹ
ಮೂಲ ...{Loading}...
ಫಳ ಮೃಗಾವಳಿ ಸವೆದುದಿನ್ನೀ
ಹಳುವು ಸಾಕಿನ್ನೊಂದರಣ್ಯ
ಸ್ಥಳವ ನೋಡಲಿ ಕಟಕ ನಡೆಯಲಿ ವಿಪ್ರಸಂಕುಲದ
ಸುಲಭವೀ ವನವೆಂದು ತಮ್ಮೊಳು
ತಿಳಿದು ಪಾರ್ಥ ಯುಧಿಷ್ಠಿರರು ಮುನಿ
ಕುಲ ಸಹಿತ ನಲವಿಂದ ಹೊಕ್ಕರು ದ್ವೈತಕಾನನವ ॥2॥
೦೦೩ ಅರಸ ಕಳುಹಿದ ...{Loading}...
ಅರಸ ಕಳುಹಿದ ದೂತನಾ ಗಜ
ಪುರವ ಹೊಕ್ಕು ತದೀಯ ವಾರ್ತಾ
ಭರದ ವಿವರವನರಿದು ಬಂದನು ಕಂಡನವನಿಪನ
ಕುರುನೃಪಾಲನ ಮದವನಾತನ
ಸಿರಿಯನಾತನ ಬಲುಹನಾತನ
ಪರಿಯನರುಹಿದನಬುಜಮುಖಿ ಪವನಜರು ಕಳವಳಿಸೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಕಳುಹಿಸಿದ ಗೂಢಚರನೊಬ್ಬನು ಹಸ್ತಿನಾಪುರಕ್ಕೆ ಹೋಗಿ ಬಂದು, ಕೌರವನ ಮದ, ಸಂಪತ್ತು, ಸಾಹಸ ಸಂಗತಿಗಳೆಲ್ಲವನ್ನೂ ವಿವರಿಸಿದನು. ಈ ವಾರ್ತೆಯನ್ನು ಕೇಳಿ ದ್ರೌಪದಿ-ಭೀಮರಿಗೆ ಕಳವಳ ಉಂಟಾಯಿತು.
ಪದಾರ್ಥ (ಕ.ಗ.ಪ)
ತದೀಯ - ಅದರ (ಇಲ್ಲಿ ಹಸ್ತಿನಾಪುರದ)
ಮೂಲ ...{Loading}...
ಅರಸ ಕಳುಹಿದ ದೂತನಾ ಗಜ
ಪುರವ ಹೊಕ್ಕು ತದೀಯ ವಾರ್ತಾ
ಭರದ ವಿವರವನರಿದು ಬಂದನು ಕಂಡನವನಿಪನ
ಕುರುನೃಪಾಲನ ಮದವನಾತನ
ಸಿರಿಯನಾತನ ಬಲುಹನಾತನ
ಪರಿಯನರುಹಿದನಬುಜಮುಖಿ ಪವನಜರು ಕಳವಳಿಸೆ ॥3॥
೦೦೪ ಮೂದಲಿಸಿದಳು ದ್ರುಪದ ...{Loading}...
ಮೂದಲಿಸಿದಳು ದ್ರುಪದ ತನುಜೆ ವೃ
ಕೋದರನನರ್ಜುನನವನಿಪ
ನಾದಿಯಾದೈವರನು ಕೌರವನೃಪನ ಪತಿಕರಿಸಿ
ಆದೊಡಿದೆ ಕುರುರಾಜವಂಶ
ಚ್ಛೇದ ಧೀರ ಕುಠಾರವೆನುತ ವೃ
ಕೋದರನು ತೂಗಿದನು ಗದೆಯನು ಗಾಢಕೋಪದಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನನ್ನು ಹೊಗಳುತ್ತಾ ದ್ರೌಪದಿಯು ಧರ್ಮರಾಜನನ್ನೂ, ಭೀಮಾರ್ಜುನ ನಕುಲ ಸಹದೇವರನ್ನೂ, ಮೂದಲಿಸಿದಳು. ಆಗ ಭೀಮಸೇನನು ‘ಇದೋ, ಕುರುವಂಶಕ್ಕೆ ನಾಶಪ್ರಾಯವಾದ ಗದೆ’ ಎಂದು ಕೋಪೋದ್ರೇಕದಿಂದ ಅದನ್ನು ತೂಗಿದನು.
ಪದಾರ್ಥ (ಕ.ಗ.ಪ)
ಪತಿಕರಿಸು - ಹೊಗಳು
ಮೂಲ ...{Loading}...
ಮೂದಲಿಸಿದಳು ದ್ರುಪದ ತನುಜೆ ವೃ
ಕೋದರನನರ್ಜುನನವನಿಪ
ನಾದಿಯಾದೈವರನು ಕೌರವನೃಪನ ಪತಿಕರಿಸಿ
ಆದೊಡಿದೆ ಕುರುರಾಜವಂಶ
ಚ್ಛೇದ ಧೀರ ಕುಠಾರವೆನುತ ವೃ
ಕೋದರನು ತೂಗಿದನು ಗದೆಯನು ಗಾಢಕೋಪದಲಿ ॥4॥
೦೦೫ ಏಕಿದೇಕೆ ವೃಥಾ ...{Loading}...
ಏಕಿದೇಕೆ ವೃಥಾ ನಿಶಾಟ
ವ್ಯಾಕರಣ ಪಾಂಡಿತ್ಯವಕಟ ವಿ
ವೇಕ ರಹಿತನೆ ನೀ ವೃಕೋದರ ದ್ರುಪದ ಸುತೆಯಂತೆ
ಸಾಕು ಸಾಕೈ ತಮ್ಮ ಸತ್ಯವೆ
ಸಾಕು ನಮಗೆ ಮದೀಯ ಪುಣ್ಯ
ಶ್ಲೋಕತೆಯನುಳುಹೆಂದು ಗಲ್ಲವ ಹಿಡಿದನನಿಲಜನ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಾಕೆ ಈ ವೃಥಾ ಹಲುಬಾಟ ? ದ್ರುಪದ ಸುತೆಯಂತೆ ನೀನೂ ವಿವೇಕಶೂನ್ಯನಾಗಿ ಹೀಗೆ ಮಾತನಾಡಬೇಡ. ನಮ್ಮ ಸತ್ಯವೆ ನಮಗೆ ಸಾಕು. ಪ್ರಸಿದ್ಧವಾದ ನಮ್ಮ ಧರ್ಮನಿಷ್ಠೆಯನ್ನು ಉಳಿಸು’ ಎಂದು ಭೀಮಸೇನನ ಗಲ್ಲವನ್ನು ಹಿಡಿದು ಯುಧಿಷ್ಠಿರನು ಸಮಾಧಾನ ಮಾಡಿದನು.
ಪದಾರ್ಥ (ಕ.ಗ.ಪ)
ನಿಶಾಟ ವ್ಯಾಕರಣ ಪಾಂಡಿತ್ಯ - ಒರಟು ನಡವಳಿಕೆ
ಮೂಲ ...{Loading}...
ಏಕಿದೇಕೆ ವೃಥಾ ನಿಶಾಟ
ವ್ಯಾಕರಣ ಪಾಂಡಿತ್ಯವಕಟ ವಿ
ವೇಕ ರಹಿತನೆ ನೀ ವೃಕೋದರ ದ್ರುಪದ ಸುತೆಯಂತೆ
ಸಾಕು ಸಾಕೈ ತಮ್ಮ ಸತ್ಯವೆ
ಸಾಕು ನಮಗೆ ಮದೀಯ ಪುಣ್ಯ
ಶ್ಲೋಕತೆಯನುಳುಹೆಂದು ಗಲ್ಲವ ಹಿಡಿದನನಿಲಜನ ॥5॥
೦೦೬ ಅರಸಿ ನಿನ್ನಯ ...{Loading}...
ಅರಸಿ ನಿನ್ನಯ ಶೋಕವಹ್ನಿಯೊ
ಳುರಿವುದರಿನೃಪಜಲಧಿ ಕೇಳಂ
ಬುರುಹಲೋಚನೆ ನಿನ್ನ ಲೋಚನವಾರಿ ಪೂರದಲಿ
ಕುರುನೃಪಾಲನ ಸತಿಯ ಶೋಕ
ಸ್ಫುರದನಲನುಜ್ವಲಿಸುವುದು ರಿಪು
ವಿರಚಿತದ ವಿಪರೀತಕಿದು ವಿಪರೀತವಹುದೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ, ನಿನ್ನ ಶೋಕವೆಂಬ ವಡವಾನಲದಿಂದ ಶತ್ರುರಾಜರ ಸಮುದ್ರವೇ ಸುಟ್ಟು ಹೋಗುತ್ತದೆ. ನಿನ್ನ ಕಣ್ಣೀರಿನಿಂದ ಕೌರವರ ಸತಿಯರ ದುಃಖವೆಂಬ ಬೆಂಕಿ ಪ್ರಜ್ವಲಿಸುತ್ತದೆ. ವೈರಿಗಳು ಮಾಡಿದ ವಿಪರೀತಕ್ಕೆ (ಅನ್ಯಾಯ)ಇದು ಮತ್ತೊಂದು ವಿಪರೀತವೆನಿಸುತ್ತದೆ.( ತಕ್ಕ ಫಲ ದೊರೆಯುತ್ತದೆ)
ಪದಾರ್ಥ (ಕ.ಗ.ಪ)
ವಹ್ನಿ - ಬೆಂಕಿ
ಪಾಠಾನ್ತರ (ಕ.ಗ.ಪ)
ಸಿರಿಯ ಶೋಕ - ಸತಿಯ ಶೋಕ
ಅರಣ್ಯಪರ್ವ , ಮೈಸೂರು ವಿ.ವಿ.
ಮೂಲ ...{Loading}...
ಅರಸಿ ನಿನ್ನಯ ಶೋಕವಹ್ನಿಯೊ
ಳುರಿವುದರಿನೃಪಜಲಧಿ ಕೇಳಂ
ಬುರುಹಲೋಚನೆ ನಿನ್ನ ಲೋಚನವಾರಿ ಪೂರದಲಿ
ಕುರುನೃಪಾಲನ ಸತಿಯ ಶೋಕ
ಸ್ಫುರದನಲನುಜ್ವಲಿಸುವುದು ರಿಪು
ವಿರಚಿತದ ವಿಪರೀತಕಿದು ವಿಪರೀತವಹುದೆಂದ ॥6॥
೦೦೭ ಆ ಸಮಯದಲಿ ...{Loading}...
ಆ ಸಮಯದಲಿ ಬಂದನಗ್ಗದ
ಭೂಸುರ ಶ್ರೀಕಂಠನೋ ಪ
ದ್ಮಾಸನನ ಪಲ್ಲಟವೊ ಕಮಲಾಂಬಕನ ಚುಂಬಕವೊ
ಭಾಸುರ ಕ್ರತುಶತದ ರೂಪ ವಿ
ಳಾಸವೋ ಶ್ರುತಿಕೋಟಿಕನ್ಯಾ
ವಾಸಭವನವೊ ದೇವ ವೇದವ್ಯಾಸ ಮುನಿರಾಯ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಹೊತ್ತಿನಲ್ಲಿ, ವಿಪ್ರರೂಪಿ ರುದ್ರನೋ, ಅಭಿನವ ಬ್ರಹ್ಮನೋ ವಿಷ್ಣುವಿನ ಮಾಯಾರೂಪವೋ ಎಂಬಂತೆ ಇಂದ್ರನ ತೇಜಸ್ಸಿನ , ಕೋಟಿಸಂಖ್ಯೆಯ ಶ್ರುತಿಗಳಿಗೆ ಆವಾಸ ಸ್ಥಾನವಾಗಿದ್ದಾನೋ ಎಂಬಂತಿರುವ ವೇದವ್ಯಾಸ ಮಹಿರ್ಷಿಯು ಅಲ್ಲಿಗೆ ಆಗಮಿಸಿದನು.
ಪದಾರ್ಥ (ಕ.ಗ.ಪ)
ಚುಂಬಕ-ಮಾಯಾರೂಪ , ಮೋಸ
ಶತಕ್ರತು - ಇಂದ್ರ
ಮೂಲ ...{Loading}...
ಆ ಸಮಯದಲಿ ಬಂದನಗ್ಗದ
ಭೂಸುರ ಶ್ರೀಕಂಠನೋ ಪ
ದ್ಮಾಸನನ ಪಲ್ಲಟವೊ ಕಮಲಾಂಬಕನ ಚುಂಬಕವೊ
ಭಾಸುರ ಕ್ರತುಶತದ ರೂಪ ವಿ
ಳಾಸವೋ ಶ್ರುತಿಕೋಟಿಕನ್ಯಾ
ವಾಸಭವನವೊ ದೇವ ವೇದವ್ಯಾಸ ಮುನಿರಾಯ ॥7॥
೦೦೮ ಹಾ ಮಹಾದೇವಾಯಿದಾರು ...{Loading}...
ಹಾ ಮಹಾದೇವಾಯಿದಾರು ಮ
ಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು ಧರ್ಮನಂದನನವರಿಗಿದಿರಾಗಿ
ಪ್ರೇಮ ಪುಳಕದ ನಯನ ಸಲಿಲದ
ರೋಮಹರ್ಷದ ಸತ್ಯಭಾವದ
ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಹಾ ! ಇದಾವ ಮಹಾಮುನಿ, ಶಿವಶಿವಾ ! ಎಂದು ಸಮಸ್ತ ಮುನಿ ಗಡಣವು ನಿಂತುಕೊಂಡಿತು. ಆಗ ಧರ್ಮರಾಯನು ಪ್ರೀತಿಯ ಭಾವಾಧಿಕ್ಯದಿಂದ ಹರ್ಷಾಂಬುಗರೆಯುತ್ತಾ ರೋಮಾಂಚನದಿಂದ ಆ ಮುನಿಯ ಪದಕಮಲಗಳಿಗೆ ಸಾಷ್ಟಾಂಗ ನಮಸ್ಕರಿಸಿದನು.
ಪದಾರ್ಥ (ಕ.ಗ.ಪ)
ಸ್ತೋಮ - ಗುಂಪು , ಸಮೂಹ
ಮೂಲ ...{Loading}...
ಹಾ ಮಹಾದೇವಾಯಿದಾರು ಮ
ಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು ಧರ್ಮನಂದನನವರಿಗಿದಿರಾಗಿ
ಪ್ರೇಮ ಪುಳಕದ ನಯನ ಸಲಿಲದ
ರೋಮಹರ್ಷದ ಸತ್ಯಭಾವದ
ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ ॥8॥
೦೦೯ ವಿವಿಧ ಮುನಿಗಳ ...{Loading}...
ವಿವಿಧ ಮುನಿಗಳ ಗೋತ್ರನಾಮ
ಪ್ರವರ ಸಹಿತಭಿವಾದ ಕರ್ಮೋ
ತ್ಸವವ ಕೈಕೊಳುತನಿಬರನು ಮನ್ನಿಸಿದನುಚಿತದಲಿ
ಯುವತಿ ಪದಕೆರಗಿದೊಡೆ ಭೂಯಾತ್
ತವ ಮನೋರಥವೆನುತ ನಸುನಗು
ತವನಿಪಾಲನ ಪರ್ಣಶಾಲೆಗೆ ಮುನಿಪನೈತಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮ ತಮ್ಮ ಗೋತ್ರ - ನಾಮ - ಪ್ರವರದಿಂದ ಮುನಿಗಡಣ ಅಭಿವಂದಿಸಲು, ವ್ಯಾಸನು ಅವರನ್ನೆಲ್ಲಾ ಉಚಿತ ರೀತಿಯಿಂದ ಮನ್ನಿಸಿದನು. ನಮಸ್ಕಾರ ಮಾಡಿದ ದ್ರೌಪದಿಗೆ ಇಷ್ಟಾರ್ಥ ಈಡೇರಲಿ ಎಂದು ಹರಸಿ, ಧರ್ಮರಾಯನ ಪರ್ಣಕುಟೀರಕ್ಕೆ ವೇದವ್ಯಾಸನು ಆಗಮಿಸಿದನು.
ಪದಾರ್ಥ (ಕ.ಗ.ಪ)
ಭಿವಾದ - ನಮಸ್ಕಾರ
ಕೈಕೊಳು - ಸ್ವೀಕರಿಸು
ಭೂಯತ್ ತವ ಮನೋರಥ - ನಿನ್ನ ಇಷ್ಟಾರ್ಥವು ಸಿದ್ದಿಸಲಿ
ಮೂಲ ...{Loading}...
ವಿವಿಧ ಮುನಿಗಳ ಗೋತ್ರನಾಮ
ಪ್ರವರ ಸಹಿತಭಿವಾದ ಕರ್ಮೋ
ತ್ಸವವ ಕೈಕೊಳುತನಿಬರನು ಮನ್ನಿಸಿದನುಚಿತದಲಿ
ಯುವತಿ ಪದಕೆರಗಿದೊಡೆ ಭೂಯಾತ್
ತವ ಮನೋರಥವೆನುತ ನಸುನಗು
ತವನಿಪಾಲನ ಪರ್ಣಶಾಲೆಗೆ ಮುನಿಪನೈತಂದ ॥9॥
೦೧೦ ಇದೆ ಪವಿತ್ರ ...{Loading}...
ಇದೆ ಪವಿತ್ರ ಪಲಾಶ ಪತ್ರದ
ಲುದಕವಘ್ರ್ಯಾಚಮನ ಪಾದ್ಯ
ಕ್ಕಿದೆ ವಿಮಳ ದರ್ಭೋಪರಚಿತಾಸನ ವಿಳಾಸದಲಿ
ಇದನು ಕಾಂಚನ ಪಾತ್ರಜಲವೆಂ
ದಿದು ವರಾಸನವೆಂದು ಕೈಕೊಂ
ಬುದು ಯಥಾಸಂಭವದಲೆಂದನು ಧರ್ಮನಂದನನು ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಘ್ರ್ಯ ಪಾದ್ಯ ಆಚಮನಾದಿಗಳಿಗೆ ಪವಿತ್ರವಾದ ಮುತ್ತುಗದ ಎಲೆಗಳನ್ನಿತ್ತ್ತು, ಇವುಗಳನ್ನೇ ಸುವರ್ಣಪಾತ್ರೆ ಎಂದೂ, ಕುಳಿತುಕೊಳ್ಳಲು ದರ್ಭಾಸನವನ್ನು ನೀಡುತ್ತಾ ಇದನ್ನೇ ಶ್ರೇಷ್ಠವಾದ ಆಸನವೆಂದೂ ಗ್ರಹಿಸಬೇಕು’ ಎಂದು ಧರ್ಮರಾಯನು ಪ್ರಾರ್ಥಿಸಿಕೊಂಡನು.
ಪದಾರ್ಥ (ಕ.ಗ.ಪ)
ಪಲಾಶ - ಮುತ್ತುಗ
ಪಾದ್ಯ - ಕಾಲು ತೊಳೆದುಕೊಳ್ಳಲು ಕೊಡುವ ನೀರು.
ಮೂಲ ...{Loading}...
ಇದೆ ಪವಿತ್ರ ಪಲಾಶ ಪತ್ರದ
ಲುದಕವಘ್ರ್ಯಾಚಮನ ಪಾದ್ಯ
ಕ್ಕಿದೆ ವಿಮಳ ದರ್ಭೋಪರಚಿತಾಸನ ವಿಳಾಸದಲಿ
ಇದನು ಕಾಂಚನ ಪಾತ್ರಜಲವೆಂ
ದಿದು ವರಾಸನವೆಂದು ಕೈಕೊಂ
ಬುದು ಯಥಾಸಂಭವದಲೆಂದನು ಧರ್ಮನಂದನನು ॥10॥
೦೧೧ ಈ ಪವಿತ್ರೋದಕವಲೇ ...{Loading}...
ಈ ಪವಿತ್ರೋದಕವಲೇ ದೋ
ಷಾಪಹರ ದರ್ಭಾಸನದಲಿಂ
ದೀ ಪೃಥಿವಿ ಸರ್ವಾಧಿಪತ್ಯವು ಸೇರುವುದು ನಿನಗೆ
ಭೂಪಕೇಳೈ ಜೇನುನೊಣದ ಮ
ಧೂಪಚಯವವಕಿಲ್ಲವೇ ಸ
ರ್ವಾಪಹಾರವು ಪರರಿಗಾ ಕೌರವನ ಸಿರಿಯೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಪವಿತ್ರವಾದ ನೀರು, ದೋಷವಿಲ್ಲದ ದರ್ಭಾಸನಗಳಿಂದ ನಿನಗೆ ಭೂಮಿಯೊಡೆತನವು ಪ್ರಾಪ್ತಿಯಾಗುತ್ತದೆ. ಜೇನುನೊಣ ಮಧುವನ್ನು ಸಂಗ್ರಹಿಸಿ ಇಟ್ಟುಕೊಂಡರೂ ಬಳಿಕ ಅದು ಬೇರೆಯವರಿಗೆ ದೊರಕುವುದಲ್ಲವೇ ? ಹಾಗೆಯೇ ಕೌರವನ ಸಂಪತ್ತು ಎಂದು ಮುನಿಯು ಹೇಳಿದನು.
ಪದಾರ್ಥ (ಕ.ಗ.ಪ)
ಮಧು - ಜೇನುತುಪ್ಪ
ಉಪಚಯ - ಸಂಗ್ರಹ
ಮೂಲ ...{Loading}...
ಈ ಪವಿತ್ರೋದಕವಲೇ ದೋ
ಷಾಪಹರ ದರ್ಭಾಸನದಲಿಂ
ದೀ ಪೃಥಿವಿ ಸರ್ವಾಧಿಪತ್ಯವು ಸೇರುವುದು ನಿನಗೆ
ಭೂಪಕೇಳೈ ಜೇನುನೊಣದ ಮ
ಧೂಪಚಯವವಕಿಲ್ಲವೇ ಸ
ರ್ವಾಪಹಾರವು ಪರರಿಗಾ ಕೌರವನ ಸಿರಿಯೆಂದ ॥11॥
೦೧೨ ಒಡಲು ಬೀಳಲಿ ...{Loading}...
ಒಡಲು ಬೀಳಲಿ ಮೇಣು ತಮ್ಮದಿ
ರಡವಿಯಲಿ ಹಾಯಿಕ್ಕಿ ಹೋಗಲಿ
ಮಡದಿ ಮುನಿಯಲಿ ಬಸಿದು ಬೀಳಲಿ ಧರಣಿ ಕುರುಪತಿಗೆ
ಎಡೆಯಲುಳಿವಿವರಾಗು ಹೋಗಿನ
ಗೊಡವೆಯೆನಗಿಲ್ಲೆನ್ನ ಸತ್ಯದ
ನುಡಿಗೆ ಹಾದರವಿಲ್ಲದಂತಿರೆ ಕರುಣಿಸುವುದೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೇಹ ಸಾಯಲಿ, ತಮ್ಮಂದಿರು ವನದಲ್ಲಿ ಬೀಳಲಿ, ಹೆಂಡತಿ ಸಿಟ್ಟಾಗಲಿ, ಸಾಮ್ರಾಜ್ಯ ಕೌರವನಿಗೇ ಸಿಗಲಿ, ಇವುಗಳ ನಡುವಿನ ಆಗುಹೋಗುಗಳ ಗೊಡವೆಯೇ ನನಗಿಲ್ಲ. ನನ್ನ ಸತ್ಯವಾಕ್ಯದ ನೇಮವು ತಪ್ಪದಂತೆ ನೀವು ಅನುಗ್ರಹಿಸಬೇಕು’ ಎಂದನು ಧರ್ಮರಾಯ.
ಮೂಲ ...{Loading}...
ಒಡಲು ಬೀಳಲಿ ಮೇಣು ತಮ್ಮದಿ
ರಡವಿಯಲಿ ಹಾಯಿಕ್ಕಿ ಹೋಗಲಿ
ಮಡದಿ ಮುನಿಯಲಿ ಬಸಿದು ಬೀಳಲಿ ಧರಣಿ ಕುರುಪತಿಗೆ
ಎಡೆಯಲುಳಿವಿವರಾಗು ಹೋಗಿನ
ಗೊಡವೆಯೆನಗಿಲ್ಲೆನ್ನ ಸತ್ಯದ
ನುಡಿಗೆ ಹಾದರವಿಲ್ಲದಂತಿರೆ ಕರುಣಿಸುವುದೆಂದ ॥12॥
೦೧೩ ಬಾಧೆಯುಣ್ಟೇ ನಿನ್ನ ...{Loading}...
ಬಾಧೆಯುಂಟೇ ನಿನ್ನ ಸತ್ಯಕೆ
ಸಾಧಿಸುವುದವಧಿಯನು ನಿನ್ನ ವಿ
ರೋಧಿಗಳಿಗೆ ನಿವಾಸವಹುದು ಕೃತಾಂತಲೋಕದಲಿ
ಆಧಿಪತ್ಯ ಭ್ರಮಿತರಲಿ ರಾ
ಜ್ಯಾದಿಯಲಿ ಕಡೆಗೊಂಡಿರಖಿಲ ನಿ
ರೋಧವನು ಕಡನನು ಸವೃದ್ಧಿಕವಾಗಿ ಕೊಡಿಯೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಅಧಿಕಾರ ಮೋಹವುಳ್ಳವರಲ್ಲಿ ರಾಜ್ಯ ಭ್ರಷ್ಟರಾಗಿ ವಿರೋಧವನ್ನು ಕಟ್ಟಿಕೊಂಡಿರಿ. ಆದರೆ ಅವಧಿ ಪೂರ್ಣವಾಗುವವರೆಗೆ (ಛಲವನ್ನು) ಕಾಯ್ದುಕೊಂಡಿರಿ. ನಂತರ ಈ ಸಾಲವನ್ನು ಬಡ್ಡಿ ಸಮೇತ ಹಿಂತಿರುಗಿಸಿ ನಿನ್ನ ವೈರಿಗಳಿಗೆ ಯಮಲೋಕವೇ ಮನೆಯಾಗುತ್ತದೆ’ ಎಂದನು.
ಪದಾರ್ಥ (ಕ.ಗ.ಪ)
ಸಾಧಿಸು - ಛಲವನ್ನು ಕಾಯ್ದಿಟ್ಟುಕೊಂಡಿರು
ಮೂಲ ...{Loading}...
ಬಾಧೆಯುಂಟೇ ನಿನ್ನ ಸತ್ಯಕೆ
ಸಾಧಿಸುವುದವಧಿಯನು ನಿನ್ನ ವಿ
ರೋಧಿಗಳಿಗೆ ನಿವಾಸವಹುದು ಕೃತಾಂತಲೋಕದಲಿ
ಆಧಿಪತ್ಯ ಭ್ರಮಿತರಲಿ ರಾ
ಜ್ಯಾದಿಯಲಿ ಕಡೆಗೊಂಡಿರಖಿಲ ನಿ
ರೋಧವನು ಕಡನನು ಸವೃದ್ಧಿಕವಾಗಿ ಕೊಡಿಯೆಂದ ॥13॥
೦೧೪ ಆವುದರಿದಿವರಿಗೆ ಭವತ್ಕರು ...{Loading}...
ಆವುದರಿದಿವರಿಗೆ ಭವತ್ಕರು
ಣಾವಲೋಕನವುಂಟು ಪುನರಪಿ
ದೇವಕೀ ನಂದನನಲೊದಗುವ ಮೇಲುನೋಟದಲಿ
ಈ ವಿಪತ್ತೇಸರದು ಪಾಂಡವ
ಜೀವಿಗಳು ನೀವಿಬ್ಬರಿರಲೆಂ
ದಾ ವಿಭಾಂಡಕ ಶೌನಕಾದಿಗಳೆಂದರಾ ಮುನಿಗೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ದಯೆ ಇರುವಾಗ ಹಾಗೂ ಕೃಷ್ಣನ ಕೃಪಾ ಕಟಾಕ್ಷವಿರುವಾಗ ಇವರಿಗೆ ಯಾವುದು ಎದುರು ? ನೀವಿಬ್ಬರೂ ಇರುವಾಗ ಪಾಂಡವರಿಗೆ ಈ ವಿಪತ್ತು ಎಷ್ಟರದು ? ಎಂದು ವಿಭಾಂಡಕ ಶೌನಕಾದಿ ಮುನಿಗಳು ವೇದವ್ಯಾಸರಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಭವತ್ - ನಿಮ್ಮ
ಏಸರದು - ಎಷ್ಟರದು
ಮೂಲ ...{Loading}...
ಆವುದರಿದಿವರಿಗೆ ಭವತ್ಕರು
ಣಾವಲೋಕನವುಂಟು ಪುನರಪಿ
ದೇವಕೀ ನಂದನನಲೊದಗುವ ಮೇಲುನೋಟದಲಿ
ಈ ವಿಪತ್ತೇಸರದು ಪಾಂಡವ
ಜೀವಿಗಳು ನೀವಿಬ್ಬರಿರಲೆಂ
ದಾ ವಿಭಾಂಡಕ ಶೌನಕಾದಿಗಳೆಂದರಾ ಮುನಿಗೆ ॥14॥
೦೧೫ ಕರೆಸಿ ದ್ರುಪದಾತ್ಮಜೆಯ ...{Loading}...
ಕರೆಸಿ ದ್ರುಪದಾತ್ಮಜೆಯ ಕಂಬನಿ
ಯೊರತೆಯಾರಲು ನುಡಿದನಾಕೆಯ
ಕರಣದಲಿ ಕಿವಿಗೊಂಡ ಕಳಕಳವನು ವಿಭಾಡಿಸಿದ
ಧರಣಿಪತಿಗೇಕಾಂತ ಭವನದೊ
ಳೊರೆದನೀಶ್ವರ ವಿಷಯ ಮಂತ್ರಾ
ಕ್ಷರವನಂಗೋಪಾಂಗ ಮುದ್ರಾಶಕ್ತಿಗಳು ಸಹಿತ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯನ್ನು ಕರೆಸಿ, ಅವಳ ಕಣ್ಣೀರು ನಿಲ್ಲುವಂತೆ ನುಡಿದು, ಅವಳ ಕಳವಳವನ್ನು ನಿವಾರಿಸಿದ. ಅನಂತರ ಧರ್ಮರಾಯನಿಗೆ ಏಕಾಂತ ಮಂದಿರದಲ್ಲಿ ಶಿವಮಂತ್ರಾಕ್ಷರವನ್ನೂ, ಮುದ್ರಾಶಕ್ತಿಗಳನ್ನೂ ಸಾಂಗೋಪಾಂಗವಾಗಿ ಉಪದೇಶಿಸಿದ.
ಪದಾರ್ಥ (ಕ.ಗ.ಪ)
ವಿಭಾಡಿಸು - ನಾಶಮಾಡು, ನಿವಾರಿಸು
ಮೂಲ ...{Loading}...
ಕರೆಸಿ ದ್ರುಪದಾತ್ಮಜೆಯ ಕಂಬನಿ
ಯೊರತೆಯಾರಲು ನುಡಿದನಾಕೆಯ
ಕರಣದಲಿ ಕಿವಿಗೊಂಡ ಕಳಕಳವನು ವಿಭಾಡಿಸಿದ
ಧರಣಿಪತಿಗೇಕಾಂತ ಭವನದೊ
ಳೊರೆದನೀಶ್ವರ ವಿಷಯ ಮಂತ್ರಾ
ಕ್ಷರವನಂಗೋಪಾಂಗ ಮುದ್ರಾಶಕ್ತಿಗಳು ಸಹಿತ ॥15॥
೦೧೬ ಇದು ಮಹೀಶರ ...{Loading}...
ಇದು ಮಹೀಶರ ಶೋಕಹರವಿಂ
ತಿದು ವಿರೋಧಿಬಲ ಪ್ರಭಂಜನ
ವಿದು ಸಕಲ ಪುರುಷಾರ್ಥ ಸಾಧನವಖಿಳ ದುರಿತಹರ
ಇದು ಮಹಾಧಿವ್ಯಾಧಿಹರವಿಂ
ತಿದನು ನೀ ಕೊಳ್ಳರ್ಜುನಂಗೊರೆ
ವುದು ರಹಸ್ಯದೊಳೆಂದು ಮುನಿ ಕರುಣಿಸದನರಸಂಗೆ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಂತ್ರವು ರಾಜರ ದುಃಖನಾಶಕವೂ, ಶತ್ರುಬಲಹಾರಕವೂ, ಸಕಲ ಪುರುಷಾರ್ಥ ಸಾಧಕವೂ, ಅಧಿವ್ಯಾಧಿಹರವೂ, ಮಂಗಳಪ್ರದವೂ ಆಗಿದೆ, ಇದನ್ನು ಅರ್ಜುನನಿಗೆ ರಹಸ್ಯವಾಗಿ ಉಪದೇಶಿಸು ಎಂದು ಧರ್ಮರಾಯನಿಗೆ ಮಂತ್ರವೊಂದನ್ನು ಅನುಗ್ರಹಿಸಿದನು.
ಪದಾರ್ಥ (ಕ.ಗ.ಪ)
ಅಧಿವ್ಯಾಧಿ - ಮಹಾರೋಗ
ಮೂಲ ...{Loading}...
ಇದು ಮಹೀಶರ ಶೋಕಹರವಿಂ
ತಿದು ವಿರೋಧಿಬಲ ಪ್ರಭಂಜನ
ವಿದು ಸಕಲ ಪುರುಷಾರ್ಥ ಸಾಧನವಖಿಳ ದುರಿತಹರ
ಇದು ಮಹಾಧಿವ್ಯಾಧಿಹರವಿಂ
ತಿದನು ನೀ ಕೊಳ್ಳರ್ಜುನಂಗೊರೆ
ವುದು ರಹಸ್ಯದೊಳೆಂದು ಮುನಿ ಕರುಣಿಸದನರಸಂಗೆ ॥16॥
೦೧೭ ಪಾರ್ಥನೈದುವುದಿನ್ದ್ರಕೀಲದೊ ...{Loading}...
ಪಾರ್ಥನೈದುವುದಿಂದ್ರಕೀಲದೊ
ಳರ್ಥಿಸಲಿ ಶಂಕರನನಖಿಳ
ಸ್ವಾರ್ಥ ಸಿದ್ಧಿಗೆ ಬೀಜವಿದು ಬೇರೊಂದು ಬಯಸದಿರು
ವ್ಯರ್ಥರವದಿರು ನಿನ್ನ ಹಗೆಯ ಕ
ದರ್ಥನದೊಳಿನ್ನೇನು ಜಗಕೆ ಸ
ಮರ್ಥನೊಬ್ಬನೆ ಶಂಭು ಕೃಪೆ ಮಾಡುವನು ನಿನಗೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಇಂದ್ರಕೀಲಕ್ಕೆ ಹೋಗಿ ಪರಮೇಶ್ವರನನ್ನು ಪೂಜಿಸಲಿ. ಇದರಿಂದ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ. ಬೇರೇನನ್ನೂ ಬಯಸಬೇಡ. ನಿನ್ನ ವೈರಿಗಳು ನಿಷ್ಪ್ರಯೋಜಕರು. ಅವರ ಅವಹೇಳನವನ್ನು ಪರಿಗಣಿಸಬೇಕಿಲ್ಲ. ನಿನ್ನ ವೈರಿಯನ್ನು ಸಂಹರಿಸುವ ಶಕ್ತಿಯನ್ನು ಜಗದೀಶ್ವರನಾದ ಪರಶಿವನು ನಿನಗೆ ಅನುಗ್ರಹಿಸುತ್ತಾನೆ.
ಪದಾರ್ಥ (ಕ.ಗ.ಪ)
ಕದರ್ಥನ - ಹೀಯಾಳಿಕೆ
ಮೂಲ ...{Loading}...
ಪಾರ್ಥನೈದುವುದಿಂದ್ರಕೀಲದೊ
ಳರ್ಥಿಸಲಿ ಶಂಕರನನಖಿಳ
ಸ್ವಾರ್ಥ ಸಿದ್ಧಿಗೆ ಬೀಜವಿದು ಬೇರೊಂದು ಬಯಸದಿರು
ವ್ಯರ್ಥರವದಿರು ನಿನ್ನ ಹಗೆಯ ಕ
ದರ್ಥನದೊಳಿನ್ನೇನು ಜಗಕೆ ಸ
ಮರ್ಥನೊಬ್ಬನೆ ಶಂಭು ಕೃಪೆ ಮಾಡುವನು ನಿನಗೆಂದ ॥17॥
೦೧೮ ಇನ್ದುಮುಖಿಯನು ಭೀಮನನು ...{Loading}...
ಇಂದುಮುಖಿಯನು ಭೀಮನನು ಯಮ
ನಂದನನನರ್ಜುನನ ಯಮಳರ
ನಂದು ಕೊಂಡಾಡಿದನು ಮೈದಡವಿದನು ಮೋಹದಲಿ
ಬಂದು ಸಂದಣಿಸಿದ ಮುನಿ ದ್ವಿಜ
ವೃಂದವನು ಮನ್ನಿಸಿ ನಿಜಾಶ್ರಮ
ಮಂದಿರಕೆ ಮುದದಿಂದ ಬಿಜಯಂಗೈದನಾ ಮುನಿಪ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ, ಯುಧಿಷ್ಠಿರ, ಭೀಮಸೇನ, ಅರ್ಜುನ, ನಕುಲ ಸಹದೇವರನ್ನು ಮೈದಡವಿ, ಪ್ರೀತಿಯಿಂದ ಕೊಂಡಾಡಿದನು. ಬಂದು ಸೇರಿದ ಮುನಿಗಳು ಮತ್ತು ಬ್ರಾಹ್ಮಣರನ್ನೆಲ್ಲಾ ಮನ್ನಿಸಿ, ವೇದವ್ಯಾಸ ಮಹಾಮುನಿ ತನ್ನ ಆಶ್ರಮಕ್ಕೆ ಹಿಂದಿರುಗಿದನು.
ಪದಾರ್ಥ (ಕ.ಗ.ಪ)
ಸಂದಣಿಸು - ಒಟ್ಟಾಗಿ ಬರು
ಮೂಲ ...{Loading}...
ಇಂದುಮುಖಿಯನು ಭೀಮನನು ಯಮ
ನಂದನನನರ್ಜುನನ ಯಮಳರ
ನಂದು ಕೊಂಡಾಡಿದನು ಮೈದಡವಿದನು ಮೋಹದಲಿ
ಬಂದು ಸಂದಣಿಸಿದ ಮುನಿ ದ್ವಿಜ
ವೃಂದವನು ಮನ್ನಿಸಿ ನಿಜಾಶ್ರಮ
ಮಂದಿರಕೆ ಮುದದಿಂದ ಬಿಜಯಂಗೈದನಾ ಮುನಿಪ ॥18॥
೦೧೯ ಅರಸ ಕೇಳೈ ...{Loading}...
ಅರಸ ಕೇಳೈ ಮುನಿಪನತ್ತಲು
ಸರಿದನಿತ್ತಲು ಪಾರ್ಥನನು ನೃಪ
ಕರೆದು ವೇದವ್ಯಾಸನಿತ್ತುಪದೇಶ ವಿಸ್ತರವ
ಅರುಹಿದನು ಕೈಲಾಸ ಸೀಮಾ
ವರುಷದಲ್ಲಿಹುದಿಂದ್ರ ಕೀಲದ
ಗಿರಿ ಮಹೇಶ ಕ್ಷೇತ್ರವಲ್ಲಿಗೆ ಹೋಗು ನೀನೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದವ್ಯಾಸನು ತೆರಳಲು, ಇತ್ತ ಧರ್ಮರಾಯನು ಅರ್ಜುನನನ್ನು ಕರೆದು, ಮುನಿಯು ತಿಳಿಸಿದ ಮಂತ್ರವನ್ನು ಅರ್ಜುನನಿಗೆ ಉಪದೇಶಿಸಿ ಮಂತ್ರದ ಕುರಿತು ಹೇಳುತ್ತಾ ‘ಕೈಲಾಸಪರ್ವತದ ತಪ್ಪಲಲ್ಲಿರುವ ಇಂದ್ರಕೀಲವೆಂಬ ಶಿವಕ್ಷೇತ್ರಕ್ಕೆ ಹೋಗು’ ಎಂದು ತಿಳಿಸಿದನು.
ಮೂಲ ...{Loading}...
ಅರಸ ಕೇಳೈ ಮುನಿಪನತ್ತಲು
ಸರಿದನಿತ್ತಲು ಪಾರ್ಥನನು ನೃಪ
ಕರೆದು ವೇದವ್ಯಾಸನಿತ್ತುಪದೇಶ ವಿಸ್ತರವ
ಅರುಹಿದನು ಕೈಲಾಸ ಸೀಮಾ
ವರುಷದಲ್ಲಿಹುದಿಂದ್ರ ಕೀಲದ
ಗಿರಿ ಮಹೇಶ ಕ್ಷೇತ್ರವಲ್ಲಿಗೆ ಹೋಗು ನೀನೆಂದ ॥19॥
೦೨೦ ಅಲ್ಲಿ ಭಜಿಸುವದಮಳ ...{Loading}...
ಅಲ್ಲಿ ಭಜಿಸುವದಮಳ ಗಿರಿಜಾ
ವಲ್ಲಭನನಾಮ್ನಾಯ ಜಿಹ್ವೆಗೆ
ದುರ್ಲಭನನಧಿದೈವವನು ಬ್ರಹ್ಮೇಂದ್ರ ಭಾಸ್ಕರರ
ಬಲ್ಲೆನೆಂಬರ ಬಹಳ ಗರ್ವವ
ಘಲ್ಲಿಸುವ ಗಡ ತನ್ನ ಭಕ್ತರು
ಬಲ್ಲಿದರು ತನಗೆಂಬ ಬೋಳೆಯರರಸನಿಹನೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆ ಸ್ಥಳದಲ್ಲಿ ನಿಗಮಕ್ಕೆ ನಿಲುಕದ, ಬ್ರಹ್ಮ ಇಂದ್ರ ಸೂರ್ಯಾದಿಗಳ ಅಧಿದೈವವೆನಿಸಿದ, ನಾನು ಬಲ್ಲೆ ಎಂಬುವರ ಗರ್ವವನ್ನು ನಿಗ್ರಹಿಸುವ, ಭಕ್ತರೇ ಬಲ್ಲಿದರೆಂದು ಭಾವಿಸಿದ ಮುಗ್ಧತೆಯ ಗಿರಿಜಾವಲ್ಲಭನಾದ ಪರಶಿವನು ಇದ್ದಾನೆ ಅವನನ್ನು ನೀನು ಭಜಿಸು’ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಆಮ್ನಾಯಜಿಹ್ವೆ - ವೇದಗಳ ನಾಲಿಗೆ
ಘಲ್ಲಿಸು - ನಿಗ್ರಹಿಸು
ಬೋಳೆಯ - ಮುಗ್ಧ
ಮೂಲ ...{Loading}...
ಅಲ್ಲಿ ಭಜಿಸುವದಮಳ ಗಿರಿಜಾ
ವಲ್ಲಭನನಾಮ್ನಾಯ ಜಿಹ್ವೆಗೆ
ದುರ್ಲಭನನಧಿದೈವವನು ಬ್ರಹ್ಮೇಂದ್ರ ಭಾಸ್ಕರರ
ಬಲ್ಲೆನೆಂಬರ ಬಹಳ ಗರ್ವವ
ಘಲ್ಲಿಸುವ ಗಡ ತನ್ನ ಭಕ್ತರು
ಬಲ್ಲಿದರು ತನಗೆಂಬ ಬೋಳೆಯರರಸನಿಹನೆಂದ ॥20॥
೦೨೧ ಏಳು ನೀ ...{Loading}...
ಏಳು ನೀ ಪ್ರತ್ಯೂಷದಲಿ ಶಶಿ
ಮೌಳಿ ಮೈದೋರಲಿ ತದೀಯ ಶ
ರಾಳಿಗಳು ಸಿದ್ಧಿಸಲಿ ಸೇರಲಿ ಶಿವನ ಕೃಪೆ ನಿನಗೆ
ಸೋಲದಿರು ಸುರಸತಿಯರಿಗೆ ಸ
ಮ್ಮೇಳವಾಗದಿರವರೊಡನೆ ಕೈ
ಮೇಳವಿಸುವುದು ಕಾಮವೈರಿಯ ಚರಣಕಮಲದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬೆಳಗ್ಗೆ ಬೇಗನೇ ಎದ್ದು ಶಿವನನ್ನು ಭಜಿಸು. ನಿನಗೆ ಅವನ ಸಾಕ್ಷಾತ್ಕಾರವಾಗಲಿ. ಅವನ ಶಸ್ತ್ರಗಳು ನಿನಗೆ ಸಿದ್ಧಿಸಲಿ, ಶಿವನ ಕೃಪೆ ನಿನಗಾಗಲಿ. ಅಪ್ಸರೆಯರಿಗೆ ಮರುಳಾಗದೆ, ಅವರೊಡನೆ ಸೇರದೆ, ಕಾಮಾರಿಯ ಪಾದಸೇವಾಸಕ್ತನಾಗು’ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ತದೀಯ - ಅವನ
ಪ್ರತ್ಯೂಷ - ಬೆಳಗಿನ ಜಾವ, ಮುಂಜಾವು
ಮೂಲ ...{Loading}...
ಏಳು ನೀ ಪ್ರತ್ಯೂಷದಲಿ ಶಶಿ
ಮೌಳಿ ಮೈದೋರಲಿ ತದೀಯ ಶ
ರಾಳಿಗಳು ಸಿದ್ಧಿಸಲಿ ಸೇರಲಿ ಶಿವನ ಕೃಪೆ ನಿನಗೆ
ಸೋಲದಿರು ಸುರಸತಿಯರಿಗೆ ಸ
ಮ್ಮೇಳವಾಗದಿರವರೊಡನೆ ಕೈ
ಮೇಳವಿಸುವುದು ಕಾಮವೈರಿಯ ಚರಣಕಮಲದಲಿ ॥21॥
೦೨೨ ಮುಗ್ಗದಿರು ಮಾಯೆಯಲಿ ...{Loading}...
ಮುಗ್ಗದಿರು ಮಾಯೆಯಲಿ ಮದದಲಿ
ನೆಗ್ಗದಿರು ರೋಷದ ವಿಡಂಬದ
ಲಗ್ಗಳೆಯತನದಿಂದಹಂಕೃತಿ ಭರದಿ ಮೆರೆಯದಿರು
ಅಗ್ಗಿಸದಿರಾತ್ಮನನು ಲೋಭದೊ
ಳೊಗ್ಗದಿರು ಲಘುವಾಗದಿರು ಮಿಗೆ
ಹಿಗ್ಗದಿರು ಹೊಗಳಿಕೆಗೆ ಮನದಲಿ ಪಾರ್ಥ ಕೇಳ್ ಎಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾಯೆಗೆ ಒಳಗಾಗಬೇಡ, ಮದದಿಂದ ಕುಂದಬೇಡ. ರೋಷಾವೇಶಕ್ಕೆ ಒಳಗಾಗಿ ಅಹಂಕಾರದಿಂದ ಬೀಗಬೇಡ. ಆತ್ಮಶಕ್ತಿಯನ್ನು ಕಳೆದುಕೊಳ್ಳದೆ, ಕೀಳರಿಮೆಗೆ ಪಕ್ಕಾಗದೆ, ಹೊಗಳಿಕೆಗೆ ಹಿಗ್ಗದೆ ಇರು ಎಂದು ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಮುಗ್ಗು - ಕೆಡು , ನಾಶವಾಗು
ನೆಗ್ಗು - ಕುಂದು
ಅಗ್ಗಿಸು - ಕಡೆಗಣಿಸು
ಮೂಲ ...{Loading}...
ಮುಗ್ಗದಿರು ಮಾಯೆಯಲಿ ಮದದಲಿ
ನೆಗ್ಗದಿರು ರೋಷದ ವಿಡಂಬದ
ಲಗ್ಗಳೆಯತನದಿಂದಹಂಕೃತಿ ಭರದಿ ಮೆರೆಯದಿರು
ಅಗ್ಗಿಸದಿರಾತ್ಮನನು ಲೋಭದೊ
ಳೊಗ್ಗದಿರು ಲಘುವಾಗದಿರು ಮಿಗೆ
ಹಿಗ್ಗದಿರು ಹೊಗಳಿಕೆಗೆ ಮನದಲಿ ಪಾರ್ಥ ಕೇಳೆಂದ ॥22॥
೦೨೩ ಆಡದಿರಸತ್ಯವನು ಕಪಟವ ...{Loading}...
ಆಡದಿರಸತ್ಯವನು ಕಪಟವ
ಮಾಡದಿರು ನಾಸ್ತಿಕರೊಡನೆ ಮಾ
ತಾಡದಿರು ಕೆಳೆಗೊಳ್ಳದಿರು ವಿಶ್ವಾಸಘಾತಕರ
ಖೋಡಿಗಳೆಯದಿರಾರುವನು ಮೈ
ಗೂಡದಿರು ಪರವಧುವಿನಲಿ ರಣ
ಖೇಡನಾಗದಿರೆಂದು ನುಡಿದನು ನೃಪತಿಯರ್ಜುನಗೆ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸುಳ್ಳು ಹೇಳಬೇಡ, ಕುತಂತ್ರ ಮಾಡಬೇಡ. ನಾಸ್ತಿಕರೊಡನೆ ಮಾತನಾಡಬೇಡ. ವಿಶ್ವಾಸಘಾತಕರ ಸ್ನೇಹ ಮಾಡಬೇಡ. ಯಾರನ್ನೂ ಧಿಕ್ಕರಿಸಬೇಡ. ಪರಸ್ತ್ರೀಯರನ್ನು ಕೂಡಬೇಡ. ರಣ ಹೇಡಿಯೂ ಆಗಬೇಡ’ ಎಂದು ಧರ್ಮರಾಯ ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಖೊಡಿಗಳೆ - ಧಿಕ್ಕರಿಸು
ರಣಖೇಡ - ರಣಹೇಡಿ
ಮೂಲ ...{Loading}...
ಆಡದಿರಸತ್ಯವನು ಕಪಟವ
ಮಾಡದಿರು ನಾಸ್ತಿಕರೊಡನೆ ಮಾ
ತಾಡದಿರು ಕೆಳೆಗೊಳ್ಳದಿರು ವಿಶ್ವಾಸಘಾತಕರ
ಖೋಡಿಗಳೆಯದಿರಾರುವನು ಮೈ
ಗೂಡದಿರು ಪರವಧುವಿನಲಿ ರಣ
ಖೇಡನಾಗದಿರೆಂದು ನುಡಿದನು ನೃಪತಿಯರ್ಜುನಗೆ ॥23॥
೦೨೪ ಕ್ರೂರರಿಗೆ ಶಠರಿಗೆ ...{Loading}...
ಕ್ರೂರರಿಗೆ ಶಠರಿಗೆ ವೃಥಾಹಂ
ಕಾರಿಗಳಿಗತಿ ಕುಟಿಲರಿಗೆಯುಪ
ಕಾರಿಯಪಘಾತರಿಗೆ ಭೂತದ್ರೋಹಿ ಜೀವರಿಗೆ
ಜಾರರಿಗೆ ಜಡರಿಗೆ ನಿಕೃಷ್ಟಾ
ಚಾರರಿಗೆ ಪಿಸುಣರಿಗೆ ಧರ್ಮವಿ
ದೂರರಿಗೆ ಕಲಿಪಾರ್ಥ ಕೇಳ್ ಪರಲೋಕವಿಲ್ಲೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕ್ರೂರಿಗಳಿಗೆ, ಸೇಡಿನ ಮನೋಭಾವದವರಿಗೆ, ಅಹಂಕಾರಿಗಳಿಗೆ, ಮೋಸಗಾರರಿಗೆ, ಉಪಕಾರ ಮಾಡಿದವರಿಗೆ ಎರಡು ಬಗೆಯುವವರಿಗೆ, ಜೀವಕೋಟಿಗಳಿಗೆ ದ್ರೋಹ ಬಗೆಯುವವರಿಗೆ, ಲಂಪಟರಿಗೆ, ಸೋಮಾರಿಗಳಿಗೆ, ಹೀನಾಚಾರವುಳ್ಳವರಿಗೆ ಚಾಡಿಕೋರರಿಗೆ ಅಧರ್ಮಿಗಳಿಗೆ ಸದ್ಗತಿ ದೊರೆಯುವುದಿಲ್ಲ’ ಎಂದು ಪಾರ್ಥನಿಗೆ ಧರ್ಮರಾಯನು ಹೇಳಿದನು.
ಪದಾರ್ಥ (ಕ.ಗ.ಪ)
ಕುಟಿಲ - ಮೋಸಗಾರ
ಪಿಸುಣ - ಚಾಡಿಕೋರ
ಭೂತದ್ರೋಹಿ - ಪರಪೀಡನೆ ಮಾಡುವವನು
ಮೂಲ ...{Loading}...
ಕ್ರೂರರಿಗೆ ಶಠರಿಗೆ ವೃಥಾಹಂ
ಕಾರಿಗಳಿಗತಿ ಕುಟಿಲರಿಗೆಯುಪ
ಕಾರಿಯಪಘಾತರಿಗೆ ಭೂತದ್ರೋಹಿ ಜೀವರಿಗೆ
ಜಾರರಿಗೆ ಜಡರಿಗೆ ನಿಕೃಷ್ಟಾ
ಚಾರರಿಗೆ ಪಿಸುಣರಿಗೆ ಧರ್ಮವಿ
ದೂರರಿಗೆ ಕಲಿಪಾರ್ಥ ಕೇಳ್ ಪರಲೋಕವಿಲ್ಲೆಂದ ॥24॥
೦೨೫ ಭ್ರಾತೃ ಮಿತ್ರ ...{Loading}...
ಭ್ರಾತೃ ಮಿತ್ರ ವಿರೋಧಕಗೆ ಪಿತೃ
ಮಾತೃಘಾತಿಗೆ ಖಳನಿಗುತ್ತಮ
ಜಾತಿನಾಶಕನಿಂಗೆ ವರ್ಣಾಶ್ರಮ ವಿದೂಷಕಗೆ
ಜಾತಿಸಂಕರಕಾರಗಾ ಕ್ರೋ
ಧಾತಿರೇಕಗೆ ಗಾಢ ಗರ್ವಿಗೆ
ಭೂತವೈರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸೋದರ ವಿರೋಧಿಗೆ, ಮಿತ್ರದ್ರೋಹಿಗೆ, ತಂದೆ ತಾಯಿಗಳನ್ನು ಕೊಂದವರಿಗೆ, ದುಷ್ಟನಿಗೆ, ವಿಪ್ರನಾಶಕನಿಗೆ, ವರ್ಣಾಶ್ರಮವನ್ನು ಹಳಿಯುವವನಿಗೆ, ಜಾತಿಸಂಕರ ಮಾಡುವವನಿಗೆ, ಕೋಪಿಷ್ಠನಿಗೆ, ಗರ್ವಿಷ್ಠನಿಗೆ, ಜೀವವಿರೋಧಿಗೆ ಸದ್ಗತಿ ದೊರೆಯುವುದಿಲ್ಲ’ ಎಂದು ಹೇಳಿದನು.
ಮೂಲ ...{Loading}...
ಭ್ರಾತೃ ಮಿತ್ರ ವಿರೋಧಕಗೆ ಪಿತೃ
ಮಾತೃಘಾತಿಗೆ ಖಳನಿಗುತ್ತಮ
ಜಾತಿನಾಶಕನಿಂಗೆ ವರ್ಣಾಶ್ರಮ ವಿದೂಷಕಗೆ
ಜಾತಿಸಂಕರಕಾರಗಾ ಕ್ರೋ
ಧಾತಿರೇಕಗೆ ಗಾಢ ಗರ್ವಿಗೆ
ಭೂತವೈರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ॥25॥
೦೨೬ ಸ್ವಾಮಿಕಾರ್ಯ ವಿಘಾತಕಙ್ಗತಿ ...{Loading}...
ಸ್ವಾಮಿಕಾರ್ಯ ವಿಘಾತಕಂಗತಿ
ಕಾಮುಕಗೆ ಮಿಥ್ಯಾಪವಾದಿಗೆ
ಭೂಮಿದೇವ ದ್ವೇಷಿಗತ್ಯಾಶಿಗೆ ಬಕವ್ರತಿಗೆ
ಗ್ರಾಮಣಿಗೆ ಪಾಷಂಡಗಾತ್ಮ ವಿ
ರಾಮಕಾರಿಗೆ ಕೂಟಸಾಕ್ಷಿಗೆ
ನಾಮಧಾರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸ್ವಾಮಿ ಕಾರ್ಯ ಹಾಳುಮಾಡುವವನಿಗೆ, ಕಾಮುಕನಿಗೆ, ಸುಳ್ಳು ಆರೋಪ ಹೊರಿಸುವವನಿಗೆ, ಬ್ರಾಹ್ಮಣ ದ್ವೇಷಿಗೆ, ಅತ್ಯಾಸೆಬುರುಕನಿಗೆ, ಕಪಟ ತಪಸ್ವಿಗೆ, ಕ್ಷೌರಿಕನಿಗೆ, ಪಾಷಂಡಿಗೆ, ಆತ್ಮದ ಚಿಂತೆ ಮಾಡದವನಿಗೆ, ಸುಳ್ಳು ಸಾಕ್ಷಿ ಹೇಳುವವನಿಗೆ ಸೋಗುವೇಷದವನಿಗೆ ಸದ್ಗತಿ ದೊರೆಯುವುದಿಲ್ಲ’ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಗ್ರಾಮಣಿ -ಕ್ಷೌರಿಕ
ನಾಮಧಾರಿ - ಸೋಗುವೇಷದವನು
ಪಾಷಂಡ -ನಾಸ್ತಿಕ
ಮೂಲ ...{Loading}...
ಸ್ವಾಮಿಕಾರ್ಯ ವಿಘಾತಕಂಗತಿ
ಕಾಮುಕಗೆ ಮಿಥ್ಯಾಪವಾದಿಗೆ
ಭೂಮಿದೇವ ದ್ವೇಷಿಗತ್ಯಾಶಿಗೆ ಬಕವ್ರತಿಗೆ
ಗ್ರಾಮಣಿಗೆ ಪಾಷಂಡಗಾತ್ಮ ವಿ
ರಾಮಕಾರಿಗೆ ಕೂಟಸಾಕ್ಷಿಗೆ
ನಾಮಧಾರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ॥26॥
೦೨೭ ಅದರಿನಾವಙ್ಗುಪಹತಿಯ ಮಾ ...{Loading}...
ಅದರಿನಾವಂಗುಪಹತಿಯ ಮಾ
ಡದಿರು ಸಚರಾಚರದ ಚೈತ
ನ್ಯದಲಿ ನಿನ್ನನೆ ಬೆರೆಸಿ ಕಾಬುದು ನಿನ್ನ ತನುವೆಂದು
ಬೆದರದಿರು ಬಲುತಪಕೆ ಶೂಲಿಯ
ಪದಯುಗವ ಮರೆಯದಿರು ಹರಿಯನು
ಹೃದಯದಲಿ ಪಲ್ಲಟಿಸದಿರು ಸುಖಿಯಾಗು ಹೋಗೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆದ್ದರಿಂದ ಯಾರಿಗೂ ತೊಂದರೆ ಕೊಡಬೇಡ. ಪ್ರಕೃತಿಯಲ್ಲಿ ನಿನ್ನನ್ನೂ ಸೇರಿಸಿ ಭೇದ ಮಾಡದೆ ನೋಡು. ತಪಸ್ಸಿಗೆ ಹೆದರಬೇಡ. ಪರಶಿವನ ಚರಣವನ್ನು ಮರೆಯಬೇಡ. ಸದಾ ಶ್ರೀಹರಿಯನ್ನು ಹೃದಯದಲ್ಲಿ ನೆನೆಯುತ್ತಾ ಸುಖಿಯಾಗು, ಹೋಗು’ ಎಂದ.
ಪದಾರ್ಥ (ಕ.ಗ.ಪ)
ಉಪಹತಿ-ತೊಂದರೆ
ಕಾಬುದು - ಕಾಣುವುದು
ಮೂಲ ...{Loading}...
ಅದರಿನಾವಂಗುಪಹತಿಯ ಮಾ
ಡದಿರು ಸಚರಾಚರದ ಚೈತ
ನ್ಯದಲಿ ನಿನ್ನನೆ ಬೆರೆಸಿ ಕಾಬುದು ನಿನ್ನ ತನುವೆಂದು
ಬೆದರದಿರು ಬಲುತಪಕೆ ಶೂಲಿಯ
ಪದಯುಗವ ಮರೆಯದಿರು ಹರಿಯನು
ಹೃದಯದಲಿ ಪಲ್ಲಟಿಸದಿರು ಸುಖಿಯಾಗು ಹೋಗೆಂದ ॥27॥
೦೨೮ ಕರುಣಿಸಲಿ ಕಾಮಾರಿ ...{Loading}...
ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು
ಸುರರು ವಸುಗಳು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ಮನು ಕಿಂ
ಪುರುಷರೀಯಲಿ ನಿನಗೆ ವಿಮಳಸ್ವಸ್ತಿವಾಚನವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಮೇಶ್ವರನು ನಿನಗೆ ಕೃಪೆಯಿಂದ ಮಹಾಸ್ತ್ರವನ್ನಿತ್ತು ಅನುಗ್ರಹಿಸಲಿ. ಇಂದ್ರ, ಯಮ, ಸೂರ್ಯ, ಅಗ್ನಿ, ನಿರುತಿ, ವರುಣ, ಕುಬೇರ, ವಾಯುವೇ ಮುಂತಾದ ದೇವತೆಗಳು, ವಸುಗಳು, ಸಿದ್ಧ ವಿದ್ಯಾಧರ ಉರಗ ಯಕ್ಷ ಮನು ಕಿಂಪುರುಷಾದಿಗಳು ನಿನಗೆ ಶುಭವನ್ನು ಕೋರಲಿ.
ಪದಾರ್ಥ (ಕ.ಗ.ಪ)
ಹುತಾಶ -ಅಗ್ನಿ
ಟಿಪ್ಪನೀ (ಕ.ಗ.ಪ)
ಮನುಗಳು - ಹದಿನಾಲ್ಕು ಜನ ಮಾನವಕು¯ದ ಜನಕರು. ಅವರುಗಳ ವಿವರಣೆಯಲ್ಲಿ ಹಲವು ಬಗೆಗಳಿವೆ. ಒಂದು ಬಗೆಯ ವಿವರಣೆಯನ್ನು ಇಲ್ಲಿ ನೀಡಿದೆ.
- ಸ್ವಯಂಭೂ
- ಸ್ವರೋಚಿತ
- ಉತ್ತಮ
- ತಾಮಸ
- ರೈವತ
- ಚಾಕ್ಷುಷ
- ವೈವಸ್ವತ
- ಸೂರ್ಯಸಾವರ್ಣಿ
- ದಕ್ಷಸಾವರ್ಣಿ
- ಬ್ರಹ್ಮಸಾವರ್ಣಿ
- ರುದ್ರಸಾವರ್ಣಿ
- ದೇವಸಾವರ್ಣಿ(ರೌಚ್ಯ)
- ಇಂದ್ರಸಾವರ್ಣಿ
- ಬ್ರಹ್ಮವೈವರ್ತ
ಮೂಲ ...{Loading}...
ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು
ಸುರರು ವಸುಗಳು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ಮನು ಕಿಂ
ಪುರುಷರೀಯಲಿ ನಿನಗೆ ವಿಮಳಸ್ವಸ್ತಿವಾಚನವ ॥28॥
೦೨೯ ಎನೆ ಹಸಾದವೆನುತ್ತೆ ...{Loading}...
ಎನೆ ಹಸಾದವೆನುತ್ತೆ ಯಮ ನಂ
ದನಗೆ ಭೀಮಂಗೆರಗಿದನು ಮುನಿ
ಜನಕೆ ಮೈಯಿಕ್ಕಿದನು ಮುಳುಗಿದನಕ್ಷತೌಘದಲಿ
ವನಜಮುಖಿ ಮುನಿ ವಧುಗಳಾಶೀ
ರ್ವಿನುತ ದಧಿ ದೂರ್ವಾಕ್ಷತೆಯನು
ಬ್ಬಿನಲಿ ಕೈಕೊಳುತನಿಬರನು ಮನ್ನಿಸಿದನುಚಿತದಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆನ್ನಲು ಇದಕ್ಕೆ ಅರ್ಜುನನು ಒಪ್ಪಿ, ಧರ್ಮಜ ಭೀಮಸೇನರಿಗೆ ನಮಸ್ಕರಿಸಿ, ಮುನಿಗಳಿಗೆ ವಂದಿಸಿ ಅವರ ಆಶೀರ್ವಾದಗಳನ್ನು ಪಡೆದನು. ಮುನಿವಧುಗಳು ನೀಡಿದ ದಧಿ ದೂರ್ವಾಕ್ಷತೆಯನ್ನು ಪಡೆದು ಸಂತೋಷದಿಂದ ಅವರನ್ನೆಲ್ಲಾ ಉಚಿತ ರೀತಿಯಿಂದ ಮನ್ನಿಸಿದನು.
ಪದಾರ್ಥ (ಕ.ಗ.ಪ)
ದಧಿ - ಮೊಸರು
ದೂರ್ವ - ದರ್ಭೆ
ಮೂಲ ...{Loading}...
ಎನೆ ಹಸಾದವೆನುತ್ತೆ ಯಮ ನಂ
ದನಗೆ ಭೀಮಂಗೆರಗಿದನು ಮುನಿ
ಜನಕೆ ಮೈಯಿಕ್ಕಿದನು ಮುಳುಗಿದನಕ್ಷತೌಘದಲಿ
ವನಜಮುಖಿ ಮುನಿ ವಧುಗಳಾಶೀ
ರ್ವಿನುತ ದಧಿ ದೂರ್ವಾಕ್ಷತೆಯನು
ಬ್ಬಿನಲಿ ಕೈಕೊಳುತನಿಬರನು ಮನ್ನಿಸಿದನುಚಿತದಲಿ ॥29॥
೦೩೦ ನೆನೆಯದಿರು ತನುಸುಖವ ...{Loading}...
ನೆನೆಯದಿರು ತನುಸುಖವ ಮನದಲಿ
ನೆನೆ ವಿರೋಧಿಯ ಸಿರಿಯನೆನ್ನಯ
ಘನತರದ ಪರಿಭವವ ನೆನೆ ನಿಮ್ಮಗ್ರಜರ ನುಡಿಯ
ಮುನಿವರನ ಮಂತ್ರೋಪದೇಶವ
ನೆನೆವುದಭವನ ಚರಣ ಕಮಲವ
ನೆನುತ ದುರುಪದಿಯೆರಗಿದಳು ಪಾರ್ಥನ ಪದಾಬ್ಜದಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇಂದ್ರಿಯ ಸುಖವನ್ನು ಸ್ಮರಿಸದಿರು. ಮನದಲ್ಲಿ ಶತ್ರುಗಳ ವೈಭವವನ್ನು ನೆನೆಯುತ್ತಿರು. ನನಗಾದ ಅವಮಾನವನ್ನು ನೆನೆಯುತ್ತಿರು. ‘ನಿನ್ನ ಅಣ್ಣನ ಮಾತನ್ನೂ, ಮುನಿ ವೇದವ್ಯಾಸರ ಮಂತ್ರೋಪದೇಶವನ್ನೂ ಮರೆಯಬೇಡ. ಪರಶಿವನ ಚರಣ ಕಮಲವನ್ನು ನೆನೆ, ಎಂದು ಅರ್ಜುನನ ಕಾಲಿಗೆ ದ್ರೌಪದಿ ನಮಸ್ಕರಿಸಿದಳು.
ಪದಾರ್ಥ (ಕ.ಗ.ಪ)
ಅಭವ - ಹುಟ್ಟಿಲ್ಲದಿರುವವ - ಈಶ್ವರ
ಪರಿಭವ - ಸೋಲು (ಅವಮಾನ)
ಮೂಲ ...{Loading}...
ನೆನೆಯದಿರು ತನುಸುಖವ ಮನದಲಿ
ನೆನೆ ವಿರೋಧಿಯ ಸಿರಿಯನೆನ್ನಯ
ಘನತರದ ಪರಿಭವವ ನೆನೆ ನಿಮ್ಮಗ್ರಜರ ನುಡಿಯ
ಮುನಿವರನ ಮಂತ್ರೋಪದೇಶವ
ನೆನೆವುದಭವನ ಚರಣ ಕಮಲವ
ನೆನುತ ದುರುಪದಿಯೆರಗಿದಳು ಪಾರ್ಥನ ಪದಾಬ್ಜದಲಿ ॥30॥
೦೩೧ ಹರನ ಚರಣವ ...{Loading}...
ಹರನ ಚರಣವ ಭಜಿಸುವೆನು ದು
ರ್ಧರ ತಪೋನಿಷ್ಠೆಯಲಿ ಕೇಳೆಲೆ
ತರುಣಿ ಪಾಶುಪತಾಸ್ತ್ರವಾದಿಯ ದಿವ್ಯಮಾರ್ಗಣವ
ಪುರಹರನ ಕೃಪೆಯಿಂದ ಪಡೆದಾ
ನರಿಗಳನು ಸಂಹರಿಸಿ ನಿನ್ನಯ
ಪರಿಭವಾಗ್ನಿಯ ನಂದಿಸುವೆ ನಿಲ್ಲೆಂದನಾ ಪಾರ್ಥ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಶಿವನ ಚರಣಗಳನ್ನು ಭಜಿಸಿ, ತಪಸ್ಸಿನಿಂದ ಅವನನ್ನು ಮೆಚ್ಚಿಸಿ, ಪಾಶುಪತವೇ ಮೊದಲಾದ ದಿವ್ಯಾಸ್ತ್ರವನ್ನು ಸಂಗ್ರಹಿಸಿ, ಶಿವಾನುಗ್ರಹದಿಂದ ವೈರಿಗಳನ್ನು ಕೊಂದು, ನಿನಗೆ ಉಂಟಾದ ಅವಮಾನದ ಬೆಂಕಿಯನ್ನು ಆರಿಸುತ್ತೇನೆ’ ಎಂದು ಪಾರ್ಥನು ದ್ರೌಪದಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ದುರ್ಧರ - ಕಠಿಣ
ಮಾರ್ಗಣ - ಬಾಣ
ಹರಡೆ-ಹರಡೆಹಕ್ಕಿ, ಹಸುಬ-ಹಾರೀತ, ಸರಟ - ಓತಿ, ನಕುಲ - ಮುಂಗುಸಿ, ಕುಕ್ಕುರ-ನಾಯಿ
ಮೂಲ ...{Loading}...
ಹರನ ಚರಣವ ಭಜಿಸುವೆನು ದು
ರ್ಧರ ತಪೋನಿಷ್ಠೆಯಲಿ ಕೇಳೆಲೆ
ತರುಣಿ ಪಾಶುಪತಾಸ್ತ್ರವಾದಿಯ ದಿವ್ಯಮಾರ್ಗಣವ
ಪುರಹರನ ಕೃಪೆಯಿಂದ ಪಡೆದಾ
ನರಿಗಳನು ಸಂಹರಿಸಿ ನಿನ್ನಯ
ಪರಿಭವಾಗ್ನಿಯ ನಂದಿಸುವೆ ನಿಲ್ಲೆಂದನಾ ಪಾರ್ಥ ॥31॥
೦೩೨ ಬಿಗಿದ ಬತ್ತಳಿಕೆಯನು ...{Loading}...
ಬಿಗಿದ ಬತ್ತಳಿಕೆಯನು ಹೊನ್ನಾ
ಯುಗದ ಖಡುಗ ಕಠಾರಿ ಚಾಪವ
ತೆಗೆದನಳವಡೆಗಟ್ಟಿ ಬದ್ದುಗೆದಾರ ಗೊಂಡೆಯವ
ದುಗುಡ ಹರುಷದ ಮುಗಿಲ ತಲೆಯೊ
ತ್ತುಗಳಿಗಿಟ್ಟೆಡೆಯಾಗಿ ಗುಣ ಮೌ
ಳಿಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜಾಗ್ರಜನ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬತ್ತಳಿಕೆಯನ್ನು ಬಿಗಿದು, ಚಿನ್ನದ ಹಿಡಿಯುಳ್ಳ ಖಡ್ಗ, ಕಠಾರಿ, ಬಿಲ್ಲುಗಳನ್ನು ತೆಗೆದುಕೊಂಡು, ಇವುಗಳನ್ನು ಇರಿಸಿಕೊಳ್ಳಲು ಕುಚ್ಚಿನಿಂದ ಕೂಡಿದ ನಡುಪಟ್ಟಿಯನ್ನು ಕಟ್ಟಿ, ಸುಖ ದುಃಖಗಳೆರಡನ್ನೂ ಮನಸ್ಸಿನಲ್ಲಿ ಯೋಚಿಸುತ್ತಾ ಗುಣನಿಧಿಯಾದ ಅರ್ಜುನನು ಅಣ್ಣನಿಂದ ಬೀಳ್ಕೊಂಡನು.
ಪದಾರ್ಥ (ಕ.ಗ.ಪ)
ಬದ್ದುಗೆ - ನಡುಪಟ್ಟಿ
ಗೊಂಡೆಯ -ಕುಚ್ಚು
ಮೂಲ ...{Loading}...
ಬಿಗಿದ ಬತ್ತಳಿಕೆಯನು ಹೊನ್ನಾ
ಯುಗದ ಖಡುಗ ಕಠಾರಿ ಚಾಪವ
ತೆಗೆದನಳವಡೆಗಟ್ಟಿ ಬದ್ದುಗೆದಾರ ಗೊಂಡೆಯವ
ದುಗುಡ ಹರುಷದ ಮುಗಿಲ ತಲೆಯೊ
ತ್ತುಗಳಿಗಿಟ್ಟೆಡೆಯಾಗಿ ಗುಣ ಮೌ
ಳಿಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜಾಗ್ರಜನ ॥32॥
೦೩೩ ಹರಡೆ ವಾಮದೊಳುಲಿಯೆ ...{Loading}...
ಹರಡೆ ವಾಮದೊಳುಲಿಯೆ ಮಧುರ
ಸ್ವರದಲಪಸವ್ಯದಲಿ ಹಸುಬನ
ಸರ ಸಮಾಹಿತಮಾಗೆ ಸೂರ್ಯೋದಯದ ಸಮಯದಲಿ
ಹರಿಣ ಭಾರದ್ವಾಜನುಡಿಕೆಯ
ಸರಟ ನಕುಲನ ತಿದ್ದುಗಳ ಕು
ಕ್ಕುರನ ತಾಳಿನ ಶಕುನವನು ಕೈಕೊಳುತ ನಡೆತಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಡಭಾಗದಲ್ಲಿ ಹರಡೆ ಹಕ್ಕಿಯು ಮಧುರವಾಗಿ ಕೂಗಲು, ಬಲಭಾಗದಲ್ಲಿ ಹಾರೀತ ಹಕ್ಕಿಯ ದನಿಯು ಸೇರಿಕೊಳ್ಳಲು, ಸೂರ್ಯೋದಯದ ಸುಮುಹೂರ್ತದಲ್ಲಿ ಜಿಂಕೆ, ಭಾರದ್ವಾಜ, ಓತಿ, ಮುಂಗುಸಿ, ನಾಯಿಗಳು ಕೂಗಲು ಈ ಶುಭಶಕುನದಲ್ಲಿ ಅರ್ಜುನನು ಹೊರಟನು.
ಮೂಲ ...{Loading}...
ಹರಡೆ ವಾಮದೊಳುಲಿಯೆ ಮಧುರ
ಸ್ವರದಲಪಸವ್ಯದಲಿ ಹಸುಬನ
ಸರ ಸಮಾಹಿತಮಾಗೆ ಸೂರ್ಯೋದಯದ ಸಮಯದಲಿ
ಹರಿಣ ಭಾರದ್ವಾಜನುಡಿಕೆಯ
ಸರಟ ನಕುಲನ ತಿದ್ದುಗಳ ಕು
ಕ್ಕುರನ ತಾಳಿನ ಶಕುನವನು ಕೈಕೊಳುತ ನಡೆತಂದ ॥33॥
೦೩೪ ನೀಲಕಣ್ಠನ ಮನದ ...{Loading}...
ನೀಲಕಂಠನ ಮನದ ಬಯಕೆಗೆ
ನೀಲಕಂಠನೆ ಬಲಕೆ ಬಂದುದು
ಮೇಲುಪೋಗಿನ ಸಿದ್ಧಿ ದೈತ್ಯಾಂತಕನ ಬುದ್ಧಿಯಲಿ
ಕಾಲ ಗತಿಯಲಿ ಮೇಲೆ ಪರರಿಗ
ಕಾಲ ಗತಿಯನು ಕಾಬೆನೈಸಲೆ
ಶೂಲಧರನೇ ಬಲ್ಲನೆನುತೈತಂದನಾ ಪಾರ್ಥ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಮೇಶ್ವರನನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಿರುವಾಗ ಬಲ ಭಾಗದಲ್ಲಿ ನವಿಲೊಂದು ಬಂದಿತು. ಉನ್ನತ ಸಿದ್ಧಿಯನ್ನೂ, ಪರಶಿವನ ದಯೆಯಿಂದ ಮುಂದೆ ಹರಿಕರುಣೆಯ ಭಾವದಿಂದ ಶತ್ರುಗಳ ಅವಸಾನವನ್ನು ಕಾಣುತ್ತೇನೆಂದುಕೊಂಡು ಪಾರ್ಥನು ಬಂದನು.
ಪದಾರ್ಥ (ಕ.ಗ.ಪ)
ನೀಲಕಂಠ-ನವಿಲು , ಶಿವ
ದೈತ್ಯಾಂತಕ - ಕೃಷ್ಣ
ಅಕಾಲಗತಿ - ಅಕಾಲಮರಣ
ಮೂಲ ...{Loading}...
ನೀಲಕಂಠನ ಮನದ ಬಯಕೆಗೆ
ನೀಲಕಂಠನೆ ಬಲಕೆ ಬಂದುದು
ಮೇಲುಪೋಗಿನ ಸಿದ್ಧಿ ದೈತ್ಯಾಂತಕನ ಬುದ್ಧಿಯಲಿ
ಕಾಲ ಗತಿಯಲಿ ಮೇಲೆ ಪರರಿಗ
ಕಾಲ ಗತಿಯನು ಕಾಬೆನೈಸಲೆ
ಶೂಲಧರನೇ ಬಲ್ಲನೆನುತೈತಂದನಾ ಪಾರ್ಥ ॥34॥
೦೩೫ ಅರಸ ಕೇಳೈ ...{Loading}...
ಅರಸ ಕೇಳೈ ಬರುತ ಭಾರತ
ವರುಷವನು ದಾಂಟಿದನು ತಂಪಿನ
ಗಿರಿಯ ತಪ್ಪಲನಿಳಿದನಾ ಹರಿವರುಷ ಸೀಮೆಯಲಿ
ಬೆರಸಿದನು ಬಳಿಕುತ್ತರೋತ್ತರ
ಸರಣಿಯಲಿ ಸೈನಡೆದು ಹೊಕ್ಕನು
ಸುರರ ಸೇವ್ಯವನಿಂದ್ರಕೀಲ ಮಹಾವನಾಂತರವ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಲಾಲಿಸು. ಹೀಗೆ ಮುಂದುವರಿಯುತ್ತಾ ಬಂದ ಅರ್ಜುನ ಭಾರತ ವರ್ಷದ ಸೀಮೆಯನ್ನು ದಾಟಿ, ಹಿಮಾಲಯವನ್ನು ಹತ್ತಿ ಇಳಿದು ಅದರ ಆಚೆಯ ತಪ್ಪಲಿನಲ್ಲಿರುವ ಹರಿವರ್ಷವನ್ನು ಸೇರಿ, ಉತ್ತರಾಭಿಮುಖವಾಗಿ ಪ್ರಯಾಣಿಸುತ್ತಾ ದೇವತೆಗಳು ಸೇವಿಸುವ ಇಂದ್ರಕೀಲ ವನಾಂತರವನ್ನು ಹೊಕ್ಕನು.
ಮೂಲ ...{Loading}...
ಅರಸ ಕೇಳೈ ಬರುತ ಭಾರತ
ವರುಷವನು ದಾಂಟಿದನು ತಂಪಿನ
ಗಿರಿಯ ತಪ್ಪಲನಿಳಿದನಾ ಹರಿವರುಷ ಸೀಮೆಯಲಿ
ಬೆರಸಿದನು ಬಳಿಕುತ್ತರೋತ್ತರ
ಸರಣಿಯಲಿ ಸೈನಡೆದು ಹೊಕ್ಕನು
ಸುರರ ಸೇವ್ಯವನಿಂದ್ರಕೀಲ ಮಹಾವನಾಂತರವ ॥35॥
೦೩೬ ಗಿಳಿಯ ಮೃದು ...{Loading}...
ಗಿಳಿಯ ಮೃದು ಮಾತುಗಳ ಮರಿಗೋ
ಗಿಲೆಯ ಮಧುರ ಧ್ವನಿಯ ಹಂಸೆಯ
ಕಳರವದ ಮರಿನವಿಲ ಕೇಕಾರವದ ನಯಸರದ
ಮೆಲುದನಿಯ ಪಾರಿವದ ತುಂಬಿಯ
ಲಲಿತ ಗೀತದ ವನದ ಸಿರಿ ಬಗೆ
ಗೊಳಿಸಿತೈ ಪೂರ್ವಾಭಿಭಾಷಣದಲಿ ಧನಂಜಯನ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಿಳಿಯ ಮೃದುನುಡಿ, ಮರಿಕೋಗಿಲೆಯ ಮಧುರಧ್ವನಿ, ಹಂಸೆಯ ಕಲರವ, ಮರಿನವಿಲ ಕೇಕೆ, ಪಾರಿವಾಳ ತುಂಬಿಗಳ ಲಲಿತವಾದ ಕೂಗು - ಇವುಗಳಿಂದ ಕೂಡಿದ ವನಸಿರಿಯು ಅರ್ಜುನನ ಮನಸ್ಸಂತೋಷಪಡಿಸಿತು.
ಮೂಲ ...{Loading}...
ಗಿಳಿಯ ಮೃದು ಮಾತುಗಳ ಮರಿಗೋ
ಗಿಲೆಯ ಮಧುರ ಧ್ವನಿಯ ಹಂಸೆಯ
ಕಳರವದ ಮರಿನವಿಲ ಕೇಕಾರವದ ನಯಸರದ
ಮೆಲುದನಿಯ ಪಾರಿವದ ತುಂಬಿಯ
ಲಲಿತ ಗೀತದ ವನದ ಸಿರಿ ಬಗೆ
ಗೊಳಿಸಿತೈ ಪೂರ್ವಾಭಿಭಾಷಣದಲಿ ಧನಂಜಯನ ॥36॥
೦೩೭ ಸೊಮ್ಪೆಸೆವ ಕೋಗಿಲೆಯ ...{Loading}...
ಸೊಂಪೆಸೆವ ಕೋಗಿಲೆಯ ಸರ ದೆಸೆ
ತಂಪೆಸೆವ ತಂಬೆಲರ ಹುವ್ವಿನ
ಜೊಂಪವನು ಜೊಂಪಿಸುವ ಮರಿದುಂಬಿಗಳ ಮೇಳವದ
ಪೆಂಪೊಗುವ ತಾವರೆಗೊಳಂಗಳ
ತಂಪಿನೊದವಿನ ವನದ ಸೊಗಸಿನ
ಸೊಂಪು ಸೆಳೆದುದು ಮನವನೀತನನರಸ ಕೇಳ್ ಎಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಗಿಲೆಯ ಸ್ವರ, ಬೀಸುವ ತಂಗಾಳಿ, ಹೂಗಳೆಡೆ ಹಾರಿ ಬರುವ ದುಂಬಿಗಳ ಝೇಂಕಾರ, ತಾವರೆಗಳಿಂದ ಶೋಭಿಸುವ ಕೆರೆ ಇವುಗಳಿಂದೊಡಗೂಡಿದ ಆ ವನದ ಸೌಂದರ್ಯವು ಅರ್ಜುನನ ಮನಸ್ಸನ್ನು ಸೆಳೆಯಿತು.
ಪದಾರ್ಥ (ಕ.ಗ.ಪ)
ತಂಪೆಲರು -ತಂಪು ಗಾಳಿ
ಜೊಂಪ - ಗೊಂಚಲು
ಮೂಲ ...{Loading}...
ಸೊಂಪೆಸೆವ ಕೋಗಿಲೆಯ ಸರ ದೆಸೆ
ತಂಪೆಸೆವ ತಂಬೆಲರ ಹುವ್ವಿನ
ಜೊಂಪವನು ಜೊಂಪಿಸುವ ಮರಿದುಂಬಿಗಳ ಮೇಳವದ
ಪೆಂಪೊಗುವ ತಾವರೆಗೊಳಂಗಳ
ತಂಪಿನೊದವಿನ ವನದ ಸೊಗಸಿನ
ಸೊಂಪು ಸೆಳೆದುದು ಮನವನೀತನನರಸ ಕೇಳೆಂದ ॥37॥
೦೩೮ ಚಾರುತರ ಪರಿಪಕ್ವ ...{Loading}...
ಚಾರುತರ ಪರಿಪಕ್ವ ನವ ಖ
ರ್ಜೂರ ರಸಧಾರಾ ಪ್ರವಾಹ ಮ
ನೋರಮೇಕ್ಷು ವಿಭೇದ ವಿದ್ರುಮರಸದ ದಾಳಿಂಬ
ಭೂರಿ ಜಂಬು ಮಧೂಕ ಪನಸ
ಸ್ಫಾರ ರಸಪೂರಾನುಕಲಿತ ವಿ
ಹಾರ ಸುರಮಹಿಳಾಭಿರಂಜಿಸುವಖಿಳ ವನಭೂಮಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ವನದಲ್ಲಿ ಪಕ್ವಗೊಂಡ ಖರ್ಜೂರ, ರಸಧಾರೆಯಿಂದ ಕೂಡಿದ ಕಬ್ಬು, ಕೆಂಪಾದ ರಸಭರಿತ ದಾಳಿಂಬ, ಸವಿಯಾದ ನೇರಳೆ, ಹಿಪ್ಪೆ, ಹಲಸು ಮುಂತಾದ ಫಲಭರಿತವಾದ ಅನೇಕ ವೃಕ್ಷಗಳಿಂದ ಆ ವನಪ್ರದೇಶವು ಶೋಭಿಸಿತು.
ಪದಾರ್ಥ (ಕ.ಗ.ಪ)
ಮಧೂಕ - ಹಿಪ್ಪೆ
ಮೂಲ ...{Loading}...
ಚಾರುತರ ಪರಿಪಕ್ವ ನವ ಖ
ರ್ಜೂರ ರಸಧಾರಾ ಪ್ರವಾಹ ಮ
ನೋರಮೇಕ್ಷು ವಿಭೇದ ವಿದ್ರುಮರಸದ ದಾಳಿಂಬ
ಭೂರಿ ಜಂಬು ಮಧೂಕ ಪನಸ
ಸ್ಫಾರ ರಸಪೂರಾನುಕಲಿತ ವಿ
ಹಾರ ಸುರಮಹಿಳಾಭಿರಂಜಿಸುವಖಿಳ ವನಭೂಮಿ ॥38॥
೦೩೯ ವಿಲಸದಭ್ರದಲಿಹ ಮಹಾತರು ...{Loading}...
ವಿಲಸದಭ್ರದಲಿಹ ಮಹಾತರು
ಕುಲದಿನಮರನದೀಸ್ತನಂಧಯ
ಫಲರಸದ ಸವಿಗಳಲಿ ದಿಕ್ಕೂಲಂಕಷೋನ್ನತಿಯ
ಸುಳಿವ ಪರಿಮಳ ಪವನನಿಂ ಕಂ
ಗೊಳಿಸಿತರ್ಜುನ ಕಾಮ್ಯ ಸಿದ್ಧಿ
ಸ್ಥಳದೊಳಂತರ್ಮಿಥುನ ಕಾನನವರಸ ಕೇಳ್ ಎಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
39.ದೇವಗಂಗೆಯ ಸ್ತನಪಾನವನ್ನು ಮಾಡಿ ಆಕಾಶದೆತ್ತರಕ್ಕೆ ಬೆಳೆದು ನಿಂತ ಮರಗಳಲ್ಲಿ ಶೋಭಿಸುವ ಫಲಗಳಿಂದಾಗಿ, ದಿಕ್ತಟದಿಂದ ತೂರಿಬರುವ ಸುವಾಸನಾಯುಕ್ತವಾದ ಗಾಳಿಯಿಂದಾಗಿ ಅರ್ಜುನನ ಇಷ್ಟ ಕಾಮ್ಯಾರ್ಥವು ಈಡೇರುವಂತಹ ಶಿವಪಾರ್ವತಿಯರು ನೆಲಸಿರುವಂತಹ ಆ ವನವು ಕಂಗೊಳಿಸಿತು.
ಪದಾರ್ಥ (ಕ.ಗ.ಪ)
ಧಯ - ಪಾನ ಮಾಡುತ್ತಿರುವ
ದಿಕ್ಕೂಲಂಕಷೋನ್ನತಿ - ದಿಕ್ತಟವನ್ನು ಸ್ಪರ್ಶಿಸುತ್ತಿರುವ
ಅಂತರ್ಮಿಥುನ - ದಂಪತಿಗಳು ಇರುವ ( ಶಿವಪಾರ್ವತಿಯರು ಇರುವ)
ಮೂಲ ...{Loading}...
ವಿಲಸದಭ್ರದಲಿಹ ಮಹಾತರು
ಕುಲದಿನಮರನದೀಸ್ತನಂಧಯ
ಫಲರಸದ ಸವಿಗಳಲಿ ದಿಕ್ಕೂಲಂಕಷೋನ್ನತಿಯ
ಸುಳಿವ ಪರಿಮಳ ಪವನನಿಂ ಕಂ
ಗೊಳಿಸಿತರ್ಜುನ ಕಾಮ್ಯ ಸಿದ್ಧಿ
ಸ್ಥಳದೊಳಂತರ್ಮಿಥುನ ಕಾನನವರಸ ಕೇಳೆಂದ ॥39॥
೦೪೦ ಇಲ್ಲಿ ನಿಲ್ಲರ್ಜುನ ...{Loading}...
ಇಲ್ಲಿ ನಿಲ್ಲರ್ಜುನ ತಪೋವನ
ಕಿಲ್ಲಿ ನೆಲೆ ಶ್ರುತಿಯುವತಿ ಸೂಸುವ
ಚೆಲ್ಲೆಗಂಗಳ ಮೊನೆಗೆ ಮೀಸಲುಗುಡದ ಮೈಸಿರಿಯ
ದುರ್ಲಲಿತದಷ್ಟಾಂಗ ಯೋಗದ
ಕೊಲ್ಲಣಿಗೆಯಲಿ ಕೂಡದಪ್ರತಿ
ಮಲ್ಲ ಶಿವನ ಕ್ಷೇತ್ರವಿದೆಯೆಂದುದು ನಭೋನಿನದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರ್ಜುನ, ಇಲ್ಲಿ ನಿಲ್ಲು. ವೇದವೆಂಬ ತರುಣಿಯ ಚಂಚಲ ಕಣ್ಣುಗಳ ಕೊನೆಗೆ ಸಿಕ್ಕದೆ, ಕಠಿಣವಾದ ಅಷ್ಟಾಂಗ ಯೋಗದ ಬಲೆಗೆ ಬೀಳದೆ ಇರುವ ಈ ತಪೋವನವು ಅಪ್ರತಿಮಲ್ಲನಾದ ಪರಮೇಶ್ವರನ ಸನ್ನಿಧಾನ’ ಎಂದು ಆಕಾಶವಾಣಿಯು ಹೇಳಿತು.
ಪದಾರ್ಥ (ಕ.ಗ.ಪ)
ಚೆಲ್ಲೆಗಂಗಳು - ಚಂಚಲ ಕಣ್ಣುಗಳು
ದುರ್ಲಲಿತ - ಕಠಿಣವಾದ
ಅಪ್ರತಿಮಲ್ಲ - ಅಸಮಾನನಾದವನು
ಮೂಲ ...{Loading}...
ಇಲ್ಲಿ ನಿಲ್ಲರ್ಜುನ ತಪೋವನ
ಕಿಲ್ಲಿ ನೆಲೆ ಶ್ರುತಿಯುವತಿ ಸೂಸುವ
ಚೆಲ್ಲೆಗಂಗಳ ಮೊನೆಗೆ ಮೀಸಲುಗುಡದ ಮೈಸಿರಿಯ
ದುರ್ಲಲಿತದಷ್ಟಾಂಗ ಯೋಗದ
ಕೊಲ್ಲಣಿಗೆಯಲಿ ಕೂಡದಪ್ರತಿ
ಮಲ್ಲ ಶಿವನ ಕ್ಷೇತ್ರವಿದೆಯೆಂದುದು ನಭೋನಿನದ ॥40॥
೦೪೧ ಧರಣಿಪನ ಬೀಳ್ಕೊಣ್ಡು ...{Loading}...
ಧರಣಿಪನ ಬೀಳ್ಕೊಂಡು ಮಾರ್ಗಾಂ
ತರದೊಳಾರಡಿಗೈದು ಹೊಕ್ಕನು
ಹರನ ಕರುಣಾ ಸಿದ್ಧಿಸಾಧನವೆನಿಪ ಗಿರಿವನವ
ಮರುದಿವಸದುದಯದಲಿ ಮಿಂದನು
ಸರಸಿಯಲಿ ಸಂಧ್ಯಾಭಿಮುಖದಲಿ
ತರಣಿಗಘ್ರ್ಯವನಿತ್ತು ದೇವವ್ರಜಕೆ ಕೈಮುಗಿದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನನ್ನು ಬೀಳ್ಕೊಂಡು ಬಂದ ಅರ್ಜುನನು ಮಾರ್ಗಾಂತರದಲ್ಲಿ ಶಿವನ ಪಾದಕಮಲಗಳಿಗೆ ದುಂಬಿಯಂತೆ ಚಲಿಸಿ ಶಿವನ ಪುಣ್ಯಕ್ಷೇತ್ರವಾದ ಪರ್ವತ ಪ್ರದೇಶವನ್ನು ಪ್ರವೇಶಿಸಿದನು. ಮರುದಿನ ಉದಯ ಕಾಲದಲ್ಲಿ ಸರೋವರದಲ್ಲಿ ಮಿಂದು ಸಂಧ್ಯಾವಂದನೆಯನ್ನು ಮಾಡಿ, ಸೂರ್ಯನಿಗೆ ಅಘ್ರ್ಯವನ್ನು ಕೊಟ್ಟು, ದೇವತೆಗಳಿಗೆ ಕೈಮುಗಿದನು.
ಪದಾರ್ಥ (ಕ.ಗ.ಪ)
ಆರಡಿಗೈ - ದುಂಬಿಯನ್ನಾಗಿ ಮಾಡು, ಭ್ರಮರವಾಗಿಸು
ತರಣಿ - ಸೂರ್ಯ
ಮೂಲ ...{Loading}...
ಧರಣಿಪನ ಬೀಳ್ಕೊಂಡು ಮಾರ್ಗಾಂ
ತರದೊಳಾರಡಿಗೈದು ಹೊಕ್ಕನು
ಹರನ ಕರುಣಾ ಸಿದ್ಧಿಸಾಧನವೆನಿಪ ಗಿರಿವನವ
ಮರುದಿವಸದುದಯದಲಿ ಮಿಂದನು
ಸರಸಿಯಲಿ ಸಂಧ್ಯಾಭಿಮುಖದಲಿ
ತರಣಿಗಘ್ರ್ಯವನಿತ್ತು ದೇವವ್ರಜಕೆ ಕೈಮುಗಿದ ॥41॥
೦೪೨ ವಿನುತ ಶಾಮ್ಭವ ...{Loading}...
ವಿನುತ ಶಾಂಭವ ಮಂತ್ರಜಪ ಸಂ
ಜನಿತ ನಿರ್ಮಲ ಭಾವಶುದ್ಧಿಯ
ಮನದೊಳರ್ಜುನನೆತ್ತಿ ನಿಂದನು ದೀರ್ಘ ಬಾಹುಗಳ
ನೆನಹು ನೆಮ್ಮಿತು ಶಿವನನಿತರದ
ನನೆಕೊನೆಯ ತೆರಳಿಕೆಯ ತೊಡಬೆಯ
ಮನದ ಸಂಚಲವೀಚುವೋದುದು ಕಲಿ ಧನಂಜಯನ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವಮಂತ್ರೋಚ್ಚಾರವನ್ನು ಮಾಡುತ್ತಾ ಭಾವಭಕ್ತಿಯಿಂದ ಅರ್ಜುನನು ಎರಡೂ ತೋಳುಗಳನ್ನು ಎತ್ತಿ ನಿಂತನು. ಅರಳಿದ ಹೂಗೊಂಚಲಂತೆ ಇದ್ದ ಅರ್ಜುನನ ಮನಸ್ಸು ಇತರ ಎಲ್ಲ ವಿಷಯಗಳನ್ನು ಮರೆತುಬಿಟ್ಟಿತು. ಹೀಗೆ ಅರ್ಜುನನು ಪರಶಿವನನ್ನು ಮಾತ್ರ ಧ್ಯಾನಿಸಿದನು.
ಪದಾರ್ಥ (ಕ.ಗ.ಪ)
ನನೆಕೊನೆ - ಹಿಗ್ಗು , ಸಂತೋಷ
ತೊಡಬೆ - ಹೂಗೊಂಚಲು
ವೀಚುವೊಗು - ನಾಶವಾಗು
ತೆರಳಿಕೆ - ಹೆಚ್ಚುವುದು
ಪಾಠಾನ್ತರ (ಕ.ಗ.ಪ)
ತೊಡಚೆ -ತೊಡಬೆ
ಅರಣ್ಯಪರ್ವ, ಮೈ.ವಿ.ವಿ.
ಮೂಲ ...{Loading}...
ವಿನುತ ಶಾಂಭವ ಮಂತ್ರಜಪ ಸಂ
ಜನಿತ ನಿರ್ಮಲ ಭಾವಶುದ್ಧಿಯ
ಮನದೊಳರ್ಜುನನೆತ್ತಿ ನಿಂದನು ದೀರ್ಘ ಬಾಹುಗಳ
ನೆನಹು ನೆಮ್ಮಿತು ಶಿವನನಿತರದ
ನನೆಕೊನೆಯ ತೆರಳಿಕೆಯ ತೊಡಬೆಯ
ಮನದ ಸಂಚಲವೀಚುವೋದುದು ಕಲಿ ಧನಂಜಯನ ॥42॥
೦೪೩ ಮುಗುಳುಗಙ್ಗಳ ಮೇಲು ...{Loading}...
ಮುಗುಳುಗಂಗಳ ಮೇಲು ಗುಡಿದೋ
ಳುಗಳ ಮಿಡುಕುವ ತುಟಿಯ ತುದಿಗಾ
ಲುಗಳ ಹೊರಿಗೆಯ ತಪದ ನಿರಿಗೆಯ ನಿಷ್ಪ್ರಕಂಪನದ
ಬಿಗಿದ ಬಿಲ್ಲಿನ ಬೆನ್ನಬತ್ತಳಿ
ಕೆಗಳ ಕಿಗ್ಗಟ್ಟಿನ ಕಠಾರಿಯ
ಹೆಗಲಡಾಯುಧ ಹೊಸ ತಪಸಿ ತೊಡಗಿದನು ಬಲುತಪವ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರೆ ಮುಚ್ಚಿದ ಕಣ್ಣುಗಳು, ಮೇಲೆತ್ತಿದ ಬಾಹುಗಳು, ಮಿಡುಕುತ್ತಿರುವ ತುಟಿಗಳು, ಅಲುಗಾಡದೇ ತುದಿಗಾಲಿನಲ್ಲಿ ನಿಂತ ನಿಲುವು, ಬಿಗಿದ ಬಿಲ್ಲು, ಬೆನ್ನಿನಲ್ಲಿ ಬತ್ತಳಿಕೆ, ಕಿಗ್ಗಟ್ಟಿನಲ್ಲಿ ಕಠಾರಿ, ಹೆಗಲಲ್ಲಿ ಅಡಾಯುಧ ಇವುಗಳನ್ನು ಹೊಂದಿದ್ದ ಹೊಸರೀತಿಯ ತಪಸ್ವಿ ಮಹಾ ತಪಸ್ಸನ್ನು ಆರಂಭಿಸಿದನು.
ಪದಾರ್ಥ (ಕ.ಗ.ಪ)
ಕಿಗ್ಗಟ್ಟು - ಚಿಕ್ಕದಾದ ಸೊಂಟಪಟ್ಟಿ
ನಿಷ್ಪ್ರಕಂಪನ - ಅತ್ತಿತ್ತ ಚಲಿಸದೆ
ಮೂಲ ...{Loading}...
ಮುಗುಳುಗಂಗಳ ಮೇಲು ಗುಡಿದೋ
ಳುಗಳ ಮಿಡುಕುವ ತುಟಿಯ ತುದಿಗಾ
ಲುಗಳ ಹೊರಿಗೆಯ ತಪದ ನಿರಿಗೆಯ ನಿಷ್ಪ್ರಕಂಪನದ
ಬಿಗಿದ ಬಿಲ್ಲಿನ ಬೆನ್ನಬತ್ತಳಿ
ಕೆಗಳ ಕಿಗ್ಗಟ್ಟಿನ ಕಠಾರಿಯ
ಹೆಗಲಡಾಯುಧ ಹೊಸ ತಪಸಿ ತೊಡಗಿದನು ಬಲುತಪವ ॥43॥
೦೪೪ ಅರಸ ಕೇಳೈ ...{Loading}...
ಅರಸ ಕೇಳೈ ವಿಪ್ರವೇಷವ
ಧರಿಸಿ ಧರೆಗಿಳಿದನು ಸುರೇಶ್ವರ
ತರಹರಿಸದೀ ಮಾತನೆಂದನು ನಿಜಕುಮಾರಂಗೆ
ಮರಿಚ ಮೌಕ್ತಿಕ ಲೋಹ ಹೇಮಾ
ಭರಣ ಚರ್ಮ ದುಕೂಲ ಮಿಳಿ ಹಾ
ದರಿಯ ಹೂವಿನ ದಂಡೆಗೇಕನಿವಾಸವೇಕೆಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು. ಅಷ್ಟರಲ್ಲಿ ದೇವೇಂದ್ರನು ಬ್ರಾಹ್ಮಣ ವೇಷ ಧರಿಸಿ ಭೂಮಿಗಿಳಿದು ಬಂದು ತನ್ನ ಮಗನಾದ ಅರ್ಜುನನಿಗೆ - ‘ಮೆಣಸು, ಮುತ್ತು, ಲೋಹ, ಚಿನ್ನಾಭರಣ, ಚರ್ಮದವಸ್ತ್ರ, ರೇಶ್ಮೆ ವಸ್ತ್ರ, ಹಗ್ಗ ,ಪಾದರಿಪುಷ್ಪ ದಂಡೆ ಇವುಗಳೆಲ್ಲಾ ಒಂದೇ ಕಡೆ ಯಾಕೆ ಸೇರಿವೆ ?’ ಎಂದನು .
ಪದಾರ್ಥ (ಕ.ಗ.ಪ)
ಮರಿಚ -ಮೆಣಸು
ಮಿಳಿ - ಚರ್ಮದ ಹಗ್ಗ
ಮೌಕ್ತಿಕ - ಮುತ್ತು
ಲೋಹ - ಕಬ್ಬಿಣ
ದುಕೂಲ - ರೇಶ್ಮೆ ವಸ್ತ್ರ
ಹಾದರಿ - ಪಾದರಿ
ಮೂಲ ...{Loading}...
ಅರಸ ಕೇಳೈ ವಿಪ್ರವೇಷವ
ಧರಿಸಿ ಧರೆಗಿಳಿದನು ಸುರೇಶ್ವರ
ತರಹರಿಸದೀ ಮಾತನೆಂದನು ನಿಜಕುಮಾರಂಗೆ
ಮರಿಚ ಮೌಕ್ತಿಕ ಲೋಹ ಹೇಮಾ
ಭರಣ ಚರ್ಮ ದುಕೂಲ ಮಿಳಿ ಹಾ
ದರಿಯ ಹೂವಿನ ದಂಡೆಗೇಕನಿವಾಸವೇಕೆಂದ ॥44॥
೦೪೫ ಆವ ಸೇರಿಕೆ ...{Loading}...
ಆವ ಸೇರಿಕೆ ಜಪಕೆ ಚಾಪ ಶ
ರಾವಳಿಗೆ ಶಮೆ ದಮೆಗೆ ಖಡ್ಗಕಿ
ದಾವ ಸಮ್ಮೇಳನ ವಿಭೂತಿಗೆ ಕವಚ ಸೀಸಕಕೆ
ಆವುದಿದರಭಿದಾನ ತಪವೋ
ಡಾವರಿಗ ವಿದ್ಯಾ ಸಮಾಧಿಯೊ
ನೀವಿದೆಂತಹ ಋಷಿಗಳೆಂಬುದನರಿಯೆ ನಾನೆಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಜಪತಪಕ್ಕೂ, ಬಿಲ್ಲುಬಾಣಗಳಿಗೂ ಯಾವ ಸಂಬಂಧ ? ಶಮೆದಮೆಗಳಿಗೂ ಖಡ್ಗಕ್ಕೂ ಯಾವ ಸಮ್ಮೇಳನ ? ವಿಭೂತಿಗೂ ಕವಚ ಸೀಸಕಗಳಿಗೂ ಯಾವ ಮೈತ್ರಿ ? ಇದು ತಪಸ್ಸೋ ? ಸೋಗಿನ ವಿದ್ಯಾ ಸಮಾಧಿಯೋ ? ನೀವು ಎಂತಹ ಋಷಿಗಳೆಂದು ನನಗೆ ತಿಳಿಯುವುದಿಲ್ಲ’ ಎಂದು ದೇವೇಂದ್ರನು ಹೇಳಿದನು.
ಪದಾರ್ಥ (ಕ.ಗ.ಪ)
ಡಾವರಿಗ - ಮೋಸ ಮಡುವವನು
ಸೀಸಕ - ಶಿರಸ್ತ್ರಾಣ
ಮೂಲ ...{Loading}...
ಆವ ಸೇರಿಕೆ ಜಪಕೆ ಚಾಪ ಶ
ರಾವಳಿಗೆ ಶಮೆ ದಮೆಗೆ ಖಡ್ಗಕಿ
ದಾವ ಸಮ್ಮೇಳನ ವಿಭೂತಿಗೆ ಕವಚ ಸೀಸಕಕೆ
ಆವುದಿದರಭಿದಾನ ತಪವೋ
ಡಾವರಿಗ ವಿದ್ಯಾ ಸಮಾಧಿಯೊ
ನೀವಿದೆಂತಹ ಋಷಿಗಳೆಂಬುದನರಿಯೆ ನಾನೆಂದ ॥45॥
೦೪೬ ಕನ್ದೆರೆದು ನೋಡಿದನು ...{Loading}...
ಕಂದೆರೆದು ನೋಡಿದನು ನೀವೇ
ನೆಂದರೆಯು ಹೃದಯಾಬ್ಜ ಪೀಠದ
ಲಿಂದುಮೌಳಿಯನಿರಿಸಿ ಮೆಚ್ಚಿಸುವೆನು ಸಮಾಧಿಯಲಿ
ಇಂದಿನೀ ಬಹಿರಂಗ ಚಿಹ್ನೆಯ
ಕುಂದು ಹೆಚ್ಚಿನಲೇನು ಫಲವೆನ
ಲಂದು ತಲೆದೂಗಿದನು ಸುರಪತಿ ತೋರಿದನು ನಿಜವ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಅರ್ಜುನ ಕಣ್ಣು ತೆರೆದು ನೋಡಿ - ‘ನೀವು ಏನು ಹೇಳಿದರೂ ಹೃದಯಪದ್ಮದಲ್ಲಿ ನೆಲೆ ನಿಂತ ಚಂದ್ರಶೇಖರನನ್ನು ಮೆಚ್ಚಿಸಿಯೇ ಮೆಚ್ಚಿಸುತ್ತೇನೆ. ಹೊರಗಿನ ಚಿಹ್ನೆಗಳಿಂದ ಯಾವುದೇ ಕುಂದಿಲ್ಲ’ ಎಂದನು. ಆಗ ದೇವೇಂದ್ರನಿಗೆ ಸಂತೋಷವಾಗಿ ತನ್ನ ನಿಜ ಸ್ವರೂಪವನ್ನು ತೋರಿದನು.
ಮೂಲ ...{Loading}...
ಕಂದೆರೆದು ನೋಡಿದನು ನೀವೇ
ನೆಂದರೆಯು ಹೃದಯಾಬ್ಜ ಪೀಠದ
ಲಿಂದುಮೌಳಿಯನಿರಿಸಿ ಮೆಚ್ಚಿಸುವೆನು ಸಮಾಧಿಯಲಿ
ಇಂದಿನೀ ಬಹಿರಂಗ ಚಿಹ್ನೆಯ
ಕುಂದು ಹೆಚ್ಚಿನಲೇನು ಫಲವೆನ
ಲಂದು ತಲೆದೂಗಿದನು ಸುರಪತಿ ತೋರಿದನು ನಿಜವ ॥46॥
೦೪೭ ಮಗನೆ ನಿನ್ನಯ ...{Loading}...
ಮಗನೆ ನಿನ್ನಯ ಮನದ ನಿಷ್ಠೆಗೆ
ಸೊಗಸಿದೆನು ಪಿರಿದಾಗಿ ಹರನಿ
ಲ್ಲಿಗೆ ಬರಲಿ ಕರುಣಿಸಲಿ ನಿನ್ನ ಮನೋಭಿವಾಂಛಿತವ
ಹಗೆಗೆ ಹರಿವಹುದೆಂದು ಸುರ ಮೌ
ಳಿಗಳ ಮಣಿ ಸರಿದನು ವಿಮಾನದ
ಲಗಧರನ ಮೈದುನನ ಮಹಿಮೆಯನಿನ್ನು ಕೇಳ್ ಎಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮಗನೇ, ನಿನ್ನ ಮನಸ್ಸಿನ ನಿಷ್ಠೆಗೆ ಬಹುವಾಗಿ ಮೆಚ್ಚಿದೆ. ಪರಶಿವನು ನಿನಗೆ ಪ್ರತ್ಯಕ್ಷನಾಗಿ ನಿನ್ನ ಅಭೀಷ್ಟಗಳನ್ನು ಅನುಗ್ರಹಿಸಿಲಿ. ಶತ್ರುಗಳು ನಾಶವಾಗುವರು’ ಎಂದು ಹೇಳಿ ಸುರಪತಿಯು ವಿಮಾನವನ್ನೇರಿ ಹೊರಟು ಹೋದನು. ಇನ್ನು ಗಿರಿಧರನ ಮೈದುನನ ಮಹಿಮೆಯನ್ನು ಕೇಳು ಎಂದು ವೈಶಂಪಾಯನರು ಜನಮೇಜಯನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಸೊಗಸು - ಮೆಚ್ಚು
ಅಭಿವಾಂಛಿತ - ಮನಸ್ಸಿನ ಆಸೆ
ಹರಿವು - ನಾಶ
ಟಿಪ್ಪನೀ (ಕ.ಗ.ಪ)
ಅಗಧರ - (ಗೋವರ್ಧನ ಗಿರಿ ಪ್ರಸಂಗದ) ಶ್ರೀಕೃಷ್ಣ
ಮೂಲ ...{Loading}...
ಮಗನೆ ನಿನ್ನಯ ಮನದ ನಿಷ್ಠೆಗೆ
ಸೊಗಸಿದೆನು ಪಿರಿದಾಗಿ ಹರನಿ
ಲ್ಲಿಗೆ ಬರಲಿ ಕರುಣಿಸಲಿ ನಿನ್ನ ಮನೋಭಿವಾಂಛಿತವ
ಹಗೆಗೆ ಹರಿವಹುದೆಂದು ಸುರ ಮೌ
ಳಿಗಳ ಮಣಿ ಸರಿದನು ವಿಮಾನದ
ಲಗಧರನ ಮೈದುನನ ಮಹಿಮೆಯನಿನ್ನು ಕೇಳೆಂದ ॥47॥